ಶನಿವಾರ, ಜೂನ್ 13, 2020

ವಧು ಬೇಕಾಗಿದ್ದಾಳೆ........

ಹೋಯ್.... ಇವತ್ತು ಒಂದು ಭಯಾನಕ ದಾರುಣ ಘಟನೆ ಸಂಭವಿಸಿರುವುದು ಗೊತ್ತುಂಟಾ ನಿಮಗೆ... ಗೊತ್ತಿಲ್ದಿದ್ರೆ ನಾ ಹೇಳ್ತೆ ಕೇಳಿ....

ಇವತ್ತು.... ನಾವು(ಅಂದ್ರೆ ನಾನು) MBBS (ಮನೆ ಬಿಟ್ಟ್ ಬೀದಿ ಸುತ್ತ್) ಫಿನಿಶ್ ಮಾಡಿ ನಮ್ಮ ಪರ್ಮನೆಂಟ್ ಅಡ್ರೆಸ್ ಒಳಗೆ(ನಮ್ಮನೆ ಒಳಗೆ ಕಣ್ರಪ್ಪಾ) ಕಾಲಿಡ್ತಿದ್ದಂಗೆ ಕಂಡಿತ್ತು ಆ ದಾರುಣ ಹೃದಯ ವಿದ್ರಾವಕ ಸನ್ನಿವೇಶ.....

ಚೊರೆರಾಯನಪುರ ಎಂಬ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದಷ್ಟು ದೊ.....ಡ್ಡ ಊರಿನಲ್ಲಿ ಮಾಮಲ್ಲ(ಬಹಳ ದೊಡ್ಡ) ಕಿರಿಕ್ ಪಾರ್ಟಿ, ಭಯಂಕರ ಪೆಟ್ಟಿಷ್ಟ್, ಅಂಡೆಪಿರ್ಕೀಸು ಎಂದು ವಿಶ್ವವಿಖ್ಯಾತಿ ಪಡೆದ ನಮ್ಮ ಪಿತಾಜಿ ಮ್ಯಾಚ್ ಮೇಕರ್ ಮ್ಯಾರೇಜ್ ಬ್ರೋಕರ್ ಗುಂಡೂರಾಯರು ಲೈಫಲ್ಲಿ ಫಸ್ಟ್ ಟೈಮು ಒಂದು ಕೈಯಲ್ಲಿ ಎಳನೀರಿಗೆ ಗ್ಲೂಕೋಸ್ ಸೇರ್ಸಿಕೊಂಡು, ಪಕ್ಕದಲ್ಲಿ  ಪೌಷ್ಟಿಕ ಆಹಾರ ಅಂಗನವಾಡಿ ಫುಡ್ಡಿನಲ್ಲಿ ತಯಾರಿಸಿದ ಲಡ್ಡು ಹಿಡ್ಕೊಂಡು ಫೀಲಿಂಗಲ್ಲಿ ಸೀಲಿಂಗ್ ನೋಡ್ತಾ ಕೂತಿದ್ರು. 

ಅಯ್ಯೋ ಕರ್ಮವೇ.....!! ಇದೆಂತಹ ಹೃದಯವಿದ್ರಾವಕ ದಾರುಣ ಘಟನೆ ಅಂತ ನೀವು ಕೇಳ್ಬೋದು. ಆದ್ರೆ ಒಂದ್ಸಾರಿ ನಮ್ಮ ಪಿತಾಮಹರ ಹಿಸ್ಟರಿ ಜಿಯಾಗ್ರಫಿ ಗೊತ್ತಾದ್ರೆ ಆ ಪ್ರಶ್ನೆ ಕೇಳಲ್ಲ ನೀವು.

ಐತಿಹಾಸಿಕ ಪ್ರತೀತಗಳ ಪ್ರಕಾರ ನಮ್ಮೂರಿನ ಹೆಸರು ಮುಂಚೆ ಹರಿರಾಯನಪುರ ಅಂತ ಇತ್ತಂತೆ. ಯಾವಾಗ ನಮ್ಮ ಗುಂಡಪ್ಪ ಒಂಬತ್ತನೇ ಮನೆಯ ಶನಿಯಾಗಿ ಭೂಮಿಗೆ ಅಟ್ಕಾಯಿಸ್ಕೊಂಡ್ನೋ ಆಗಿಂದ ಹರಿರಾಯನಪುರ ಚೊರೆರಾಯನಪುರ ಆಯ್ತು ಅಂತ ಪ್ರತೀತಿ. ಈಗ ನೀವೇ ಲೆಕ್ಕ ಹಾಕಿ. ಎಂತಾ ಯದ್ವಾತದ್ವಾ ಗ್ರೇಟ್ ಪೀಸ್ ಅವ್ನು ಅಂತ. ಈ ಪುರಾತತ್ವ ಇಲಾಖೆಯವರು ಚೊರೆ ಅನ್ನೋದು ಮೊದಲು ಹುಟ್ಟಿದ್ದಾ ಇಲ್ಲ ನಮ್ಮ ಜನಕ ಹುಟ್ಟಿದ ಮೇಲೆ ಚೊರೆ ಹುಟ್ಟಿದ್ದಾ ಅಂತ ಇನ್ನೂ ಡಿಸ್ಕವರಿ ಮಾಡ್ತಿದ್ದಾರೆ. ಅದೆಂತಹ ಗಟ್ಟಿ ತಲೆಯ ಮನುಷ್ಯನಾದ್ರೂ ಸರಿಯೇ ನಮ್ಮಪ್ಪ ಕೇವಲ ತನ್ನ ಚೊರೆಯ ಬಲದಿಂದಲೇ ಅವರ ಬುರುಡೆಲೀ ಬೋರ್ವೆಲ್ ಕೊರ್ದು, ಸುರಂಗ ತೋಡಿ, ಪೈಪ್ಲೈನ್ ಹಾಕ್ಬಿಡ್ತಾನೆ.... ಈಗ ಗೊತ್ತಾಯ್ತಲ್ಲ ನಮ್ಮ ಪಿತಾಜಿ ಪವರ್ರು.

ಇಂತಿಪ್ಪ ನಮ್ಮಪ್ಪ ಗುಂಡಪ್ಪ ಹೀಗೆ ಗ್ಲುಕೋಸ್ ಏರ್ಸಿಕೊಂಡ್ರೇ ಅದು ಭಯಂಕರ ದಾರುಣ ಹೃದಯವಿದ್ರಾವಕ ಸಂಗತಿಯೇ ತಾನೇ....?
ನಮ್ಮ ಹಾರ್ಟೂ ಡೈರೀಮಿಲ್ಕ್ ಸಿಲ್ಕ್ ತರ ಮೆಲ್ಟಾಯ್ತು.
"ಏನಾಯ್ತು ತಂದೆ ನಿಮಗೆ" ಅಂತ ಕೇಳ್ದೆ.

"ಅಯ್ಯೋ, ಏನೂಂತ ಹೇಳ್ಲೋ..... ಇವತ್ತು ಬೆಳ್ಳಂಬೆಳಿಗ್ಗೆ ಅದ್ಯಾವ ದರಬೇಸಿ ಮುಸುಡು ನೋಡಿದ್ನೋ..... ನನಗೊಂದು ಹುಡುಗಿ ಹುಡುಕಿಕೊಡಿ ಅಂತ ಒಬ್ಬ ಬಂದಿದ್ದ ಕಣ್ಲಾ..... ಅಯ್ಯೋ ಅಯ್ಯೋ..... ಅವನಿಗ್ ಆಪತ್ತ್ ಬಂದ್ ಚಾಪೆಲ್ ಸುತ್ಕೊಂಡ್ಹೋಗ, ಅವನಿಗೆ ಬರ್ಬಾರ್ದು ಬರ, ನೆಗ್ದ್ ಬಿದ್ದ್ ನೆಲ್ಲಿಕಾಯಾಗೋಗ......" ಅಂತ ಶುರುಹಚ್ಚ್ಕೊಂಡ್ರು ನೋಡಿ ಪಿತಾಜೀ... ಥೂಥೂಥೂಥೂ... ಅದೇನ್ ಬಾಯಾ ಇಲ್ಲ ಬಚ್ಚಲು ಮೋರಿಯಾಂತ ಡೌಟಾಯ್ತು.

ಆದ್ರೂ ನಂಗ್ ಭಯಂಕರ ಕ್ಯೂರಿಯಾಸಿಟಿ ಮಾರಾಯ್ರೇ.... ಅಲ್ಲ ನಮ್ಮಪ್ಪ ಎಂಥಾ ಅಂಡೆದುರ್ಸು.... ಇವನಂಥಾ ಇವ್ನಿಗೇ ಈ ರೇಂಜಿಗೆ ಬೋರ್ವೆಲ್ ಕೊರ್ದಿದ್ದಾನೆ ಅಂದ್ರೆ ಅವ್ನಿನ್ನೆಂತಾ ಹೆಲ್ಮೆಟ್ಟ್ ಪಾರ್ಟಿ ಇರ್ಬಹುದು.

"ಅದೇ ಏನಾಯ್ತು ಪಿತಾಮಹ" ಅಂತ ಸಂದರ್ಭ ಸಹಿತ ವಿವರಣೆ ಕೇಳಿದೆ..

"ಅಲ್ಲಾ ಕಣ್ಲಾ.... ನನಗೆ ಹುಡುಗಿ ಹುಡ್ಕೊಡೀ ಅಂತ ಬಂದ. ನಾನೂ ಕೇಳ್ದೇ. ಎಂತಾ ವಧು ಬೇಕಪ್ಪಾ ನಿಂಗೆ ಬೇಕೂಫಾ ಅಂತ. ನಂದು ಒಂದು ಲಿಸ್ಟಿದೆ. ಆ ಲಿಸ್ಟಲ್ಲಿರೋ ಎಲ್ಲಾ ಗುಣಲಕ್ಷಣಗಳು ಇರೋ ಹುಡುಗಿ ಬೇಕು ಅಂದ. ಅದೇನಪ್ಪಾ ಲಿಸ್ಟೂ ಅಂದೆ. ಅವನ ದೊಡ್ಡ ಚೀಲದಿಂದ ಶೆಟ್ರಂಗಡಿ ಸಾಮಾನಿನ ಲಿಸ್ಟ್ ತರ ಉದ್ದ ಚೀಟಿ ತೆಗ್ದು ಓದೋಕೆ ಶುರು ಮಾಡ್ದಾ ನೋಡು..... ಥೊಕ್...... ಬೆಳಿಗ್ಗೆ ಕುಡ್ದ ಕಾಪಿ ಪವರ್ರೂ ಸಾಲ್ದಷ್ಟು ಮಂಡೆಬೇನೆ ಶುರುವಾತು" ಎಂದ ಗುಂಡಪ್ಪ.

"ಅದೇನು ಅಂತಾ ಕಂಡೀಷನ್ನುಗಳು...." ನಮ್ಮ ಪೂಜ್ಯ ತಂದೆಯವರ ಒಂದು ಹಂಡೆ ಕಾಫಿಗಿಂತ ಪವರ್ಫುಲ್ ತಲೆಬೇನೆ ದಯಪಾಲಿಸಿದ ಲಿಸ್ಟಿನ ಬಗ್ಗೆ ನಾನೂ ಆಸಕ್ತಿಯಿಂದ ಕೇಳಿದೆ.

"ಮೊದಲನೆಯದಾಗಿ ಹುಡುಗಿ ಹಾಲ್ಬಿಳುಪು ಇಲ್ಲಾ ಕೇದಿಗೆಯ ಬಣ್ಣದವಳಾಗಿರಬೇಕು ಅಂದ್ನಪ್ಪ. ನಾನೂ ಚೆನ್ನಾಗಿರೋ ಒಂದಷ್ಟು ಹುಡುಗಿಯರ ಫೋಟೋ ತೋರ್ಸಿದೆ. ಅದ್ನೆಲ್ಲಾ ನೋಡಿ ನಿಮ್ಗೇನ್ ಕಣ್ಣ್ ಐಬಾ ಅಂತ ಕೇಳ್ತಾನೆ ಐನಾತೀ. ಏ ಯಾಕಲಾ ಹೆಂಗೈತೆ ಮೈಗೆ ಅಂತ ಕೇಳ್ದೇ. ಅದಕ್ಕೆ ಅವ್ನ ಬ್ಯಾಗಿಂದ ಒಂದ್ ಪ್ಯಾಕೆಟ್ಟು ನಂದಿನಿ ಹಾಲು ಇನ್ನೊಂದು ಕೇದಿಗೆ ಹೂವಾ ತೆಗ್ದು, ನೋಡ್ರೀ ಮಿಸ್ಟರ್ ಇವ್ರಲ್ಲಿ ಯಾರಾದ್ರೂ ಈ ಎರಡು ಕಲರ್ರಿಗೆ ಮ್ಯಾಚ್ ಆಗ್ತಿದ್ದಾರಾ ಅಂತ ಕೇಳ್ಬಿಡೋದಾ? ಅಯ್ಯೋ ನಿನ್ನ.... ಲೇ ಯಾವ ಹುಡ್ಗಿ ಈ ಬಣ್ಣ ಇರ್ತಾಳಲಾ ಅಂತ ಕೇಳ್ದೆ. ಏ.... ಬಿಡಿ ಸ್ವಾಮಿ, ನಾನೆಷ್ಟು ಪಿಕ್ಚರ್ ನೋಡಿಲ್ಲ, ಎಂತೆಂಥಾ ಕಥೆ ಕಾದಂಬರಿ ಓದಿಲ್ಲಾ. ಎಲ್ಲಾದ್ರಲ್ಲೂ ಹೀರೋಯಿನ್ನು ಹಾಲ್ಬಿಳುಪು ಇಲ್ಲಾ ಕೇದಿಗೆ ಬಣ್ಣನೇ ಇರೋದು ಅಂತ ಲಾಯರ್ ಪಿ.ಎಸ್.ಡಿ(ಸಿ.ಎಸ್.ಪಿ) ತರಾ ವಾದಕ್ಕೇ ನಿಂತ ಕಣ್ಲಾ. ನಂಗೆ ಇವ್ನಾರೋ ತಿಕ್ಕಲು ಅಂತ ಗೊತ್ತಾಗೋಯ್ತು.

ನೋಡಲಾ, ಅದೆಲ್ಲಾ ವ್ಯಾಕರಣದ ಅಲಂಕಾರ. ಉಪಮಾನ, ಉಪಮೇಯ, ರೂಪಕ. ಹಾಲ್ಬಿಳುಪು ಇಲ್ಲಾ ಕೇದಿಗೆ ಬಣ್ಣ ಅಂದ್ರೆ ಹುಡುಗಿ ಬೆಳ್ಳಗೆ ಚೆನ್ನಾಗಿದ್ದಾಳೆ ಅಂತ ಅಷ್ಟೇ. ಈ ಹಾಲಿನ ತರ ಬಿಳಿ ಇದ್ರೆ ಗೋಡೆಗೆ ಸುಣ್ಣ ಬಳ್ದಂಗಿರಲ್ವೇನ್ಲಾ? ನಿಜ ಜೀವನದಲ್ಲೇನಿದ್ರೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮಾತ್ರ ಇರೋದು ಅಂತ  ನಿಧಾನಕ್ಕೆ ಕೂಡಿಸಿ ಅವ್ನಿಗೆ ಅರ್ಥ ಆಗೋಹಾಗೆ ಹೇಳೋಕೆ ನೋಡ್ದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎಲ್ಲಾ ಚಂದನ ಚಾನೆಲ್ನಲ್ಲಿ ಕಾಣೆಯಾದವರ ವಿವರದ್ದು ಅಂದ  ಆಸಾಮಿದು ಒಂದೇ ಹಠ. ಅದೇ ಕಲರ್ ಬೇಕು ಅಂತ. ನನ್ಗೂ ನೋಡಿ ಸಾಕಾಯ್ತು. ನೋಡಪ್ಪಾ,ನಿಂಗೆ ಹಾಲ್ಬಿಳುಪು ಹುಡುಗಿನೇ ಬೇಕು ಅಂದ್ರೆ ಅಮಾಸೆ ರಾತ್ರಿ ಹನ್ನೆರಡು ಗಂಟೆಗೆ ಮಸಾಣಕ್ಕೆ ಹೋಗು. ಮೋಹಿನಿ ಇರ್ತಾಳೆ. ಅವ್ಳು ಕಲರ್ ಪಕ್ಕಾ ಇದೇ ಬಿಳಿ ಇರುತ್ತೆ. ಇನ್ನು ಈ ಕೇದಿಗೆ ಕಲರ್ ಬೇಕು ಅಂದ್ರೆ ಒಂದಾ ನಿನ್ಗೆ ಜಾಂಡೀಸ್ ಬರ್ಬೇಕು ಇಲ್ಲಾ ಅವ್ಳಿಗೆ ಜಾಂಡೀಸ್ ಇರ್ಬೇಕು. ಇಬ್ಬರಿಗೂ ಜಾಂಡೀಸ್ ಇದ್ರೆ ದೇವ್ರು ಮಾಡಿದ ಜೋಡಿ ಆಯ್ತದೆ. ಇನ್ನು ಹಾಲ್ಬಿಳುಪು, ಕೇದಿಗೆ ಎರಡೂ ಕಲರ್ ಇರೋಳ್ನೇ ಮದ್ವೆ ಆಗ್ಬೇಕು ಅಂದ್ರೆ ನೀನು ಬಾಳೆಹಣ್ಣನ್ನ ಮದ್ವೆ ಆಗ್ಬೇಕು. ಸಿಪ್ಪೆ ಕೇದಿಗೆ, ಹಣ್ಣು ಹಾಲ್ಬಿಳುಪು ಇರ್ತದೆ ಅಂದೆ.

ಸರಿ ಸಿವಾ ಮುಂದಿನ ಗುಣಲಕ್ಷಣ ಏನಪ್ಪಾ ಅಂದೆ. ಅವಳ ಮುಖ ಹುಣ್ಣಿಮೆ ಚಂದ್ರನಂತೆ ಇರ್ಬೇಕು ಅಂದ. ಅಂದ್ರೆ ಅವ್ಳು ತಿಂಗಳಲ್ಲಿ ಒಂದೆ ಸಲ ಕಾಣಿಸ್ಕೋಬೇಕಾ, ಇಲ್ಲಾ ಅವ್ಳ ಮುಖದಲ್ಲಿ ಕಲೆ ಇರ್ಬೇಕಾ, ಇಲ್ಲಾ ಮುಖ ಚಂದ್ರನಷ್ಟು ಗುಂಡಗಿರ್ಬೇಕಾ ಅಂತ ಕೇಳ್ದೆ. ಸಿಕ್ಕಾಕ್ಕೊಂಡ ಕಳ್ಳ. ಅವ್ನಿಗೆ ಡೌಟಾಯ್ತು. ಮೂರರಲ್ಲಿ ಯಾವ್ದು ಅಂತ‌. ಸರಿ ಅದು ಬಿಡಿ ಆಮೇಲೆ ನೋಡುವ ಮುಂದಿನದ್ದು ಕೇಳಿ ಅಂದ. ಅದೇನೇನ್ ಇದೆ ಎಲ್ಲಾ ಒದರಿ ಸಾಯಿ ಅಂದೆ. ಲಿಸ್ಟು ಹೇಳ್ದಾ ನೋಡ್ಲಾ...... ಬಿಲ್ಲಿನಂತೆ ಹುಬ್ಬು, ಕಮಲದ ಎಸಳಿನ ಕಣ್ಣು, ಸಂಪಿಗೆ ಮೂಗು, ದಾಳಿಂಬೆ ಹಲ್ಲು, ಶಂಖದ ಕಿವಿ, ಹವಳದ ತುಟಿ, ಬಾದಾಮಿ ಗಲ್ಲ.... ಅಬ್ಬಾ ಅಬ್ಬಾ... ಅದೇನು ಲಿಸ್ಟಾ... ದಾಳಿಂಬೆ ಹಲ್ಲು ಕೆಂಪು ಕಲರ್ ಇರ್ಬೇಕಾ? ಅಂತ ಕೇಳ್ದೆ. ದಾಳಿಂಬೆನೇ ಹಲ್ಲಾಗಿರ್ಬೇಕು ಅಂದ. ನಿನ್ಗೆ ಹಿಡಿಂಬೆಯೇ ಆಗ್ಬೇಕಪ್ಪಾ, ಮುಗಿತಲ್ಲಪ್ಪ ನಿನ್ನ ಲಿಸ್ಟು ಅಂದೆ. ಇನ್ನೊಂಚೂರು ಉಂಟು ಅಂದ. ಇನ್ನೆಂತ ಸಾವು ಉಳ್ದಿರೋದು ಅಂದೆ. ಮತ್ತೆ ಹುಡುಗಿ ಪುಟ್ಟ್ಗೌರಿ ತರ ಹುಲಿ ಜೊತೆ ಫೈಟ್ ಮಾಡೋ ಧೈರ್ಯಸ್ಥೆ, ಮಂಗಳಗೌರಿ ತರ ದೇವಸ್ಥಾನದ ಕಂಬಕ್ಕೆ ತಲೆ ಚಚ್ಚಿಕೊಂಡು ಗಂಡನ ಪ್ರಾಣ ಉಳಿಸೋ ದೇವತೆ, ಸನ್ನಿಧಿ ತರ ಮನೆಯವ್ರಿಗೆಲ್ಲಾ ಕಾಫಿ,ಟೀ ಸಪ್ಲೈ ಮಾಡಿ, ಮನೆಯವರ ಬಟ್ಟೆನೆಲ್ಲಾ ಒಗ್ದು ಇಸ್ತ್ರೀ ಮಾಡಿ, ಚಂದ್ರಿಕಾನಿಂದ ಮನೆಯವ್ರನೆಲ್ಲಾ ಸೇವ್ ಮಾಡೋ ಸದ್ಗೃಹಸ್ತೆ ಆಗಿರ್ಬೇಕು ಅಂದ‌. ನಂಗೆ ನವರಂಧ್ರಗಳಲ್ಲೂ ಉರಿ ಹತ್ಕೊಂಡು, 'ಲೇ ಮೂದೇವಿ, ನಿಂಗೆ ಹುಡುಗಿ ಹುಡ್ಕೋಕೆ ರಾಮ್ ಜೀ ಮತ್ತೆ ಮೈಸೂರ್ ಮಂಜನೇ ಆಗ್ಬೇಕು. ಹೋಗ್ಲಾ ಕಲರ್ಸ್ ಕನ್ನಡ ಆಫೀಸಿಗೆ' ಅಂತ ಒದ್ದು ಕಳ್ಸಿ ಬರೋವಾಗ ಎನರ್ಜಿ ಪೂರಾ ಖಾಲಿಯಾಗಿ ಇಲ್ಲಿ ಪೌಷ್ಟಿಕ ಆಹಾರ ತಿಂತಾ ಕೂತೀನಿ ನೋಡ್ಲಾ." ಎಂದು ತಮ್ಮ ಸುದೀರ್ಘ ಸಂದರ್ಭ ಸಹಿತ ವಿವರಿಸಿ ಮುಗಿಸಿದರು ಪಿತಾಮಹ.

ಇದನ್ನೆಲ್ಲ ಕೇಳಿ ನಂಗೊಂದು ಡೌಟು ಬಂತು.
"ಪಿತ್ತಾಜೀ.....ನಿಮ್ಮ ಆಫೀಸಿಗೆ ಬಂದು ಇಷ್ಟೆಲ್ಲಾ ಲಿಸ್ಟು ಕೊಟ್ಟವನ ಹೆಸರು ವೈಭವ್ ಅಂತಲಾ...."

ಇದು ಕೇಳಿದ್ದೇ ನಮ್ಮಪ್ಪನಿಗೆ ಕುಡೀತಿದ್ದ ಎನರ್ಜಿ ಡ್ರಿಂಕ್ ನೆತ್ತಿಗೆ ಹತ್ತಿ, "ಲೇ ಹೌದು ಕಣ್ಲಾ.. ನಿಂಗೆಂಗೆ ಗೊತ್ತಾಯ್ತು. ಅದೇನೋ ಡಿಟೆಕ್ಟಿವ್ ಬೇರೆ ಅಂತೆ ಅವ್ನು. ಎಲ್ಲಾ ಕಥೆ, ಕಾದಂಬರಿ, ಸಿನಿಮಾದಲ್ಲೂ ಏಕಕಾಲಕ್ಕೆ ಸುತ್ತುತ್ತಿರೋ ಆ ಹಾಲ್ಬಿಳುಪು, ಕೇದಿಗೆ ಬಣ್ಣ, ಬಿಲ್ಲು ಹುಬ್ಬು, ಸಂಪಿಗೆ ಮೂಗು, ಹವಳ ತುಟಿ, ಕಮಲ ಕಣ್ಣು, ಶಂಖ ಕಿವಿ, ಬಾದಾಮಿ ಗಲ್ಲ, ದಾಳಿಂಬೆ ಹಲ್ಲಿನ ಹುಡುಗಿ ಯಾರೂ ಅಂತ ಕಂಡ್ಹಿಡಿ ಅಂತ ಅದ್ಯಾವನೋ ಗುಜುರಿ ಇನ್ಸ್ಪೆಕ್ಟರ್ ಹೇಳಿದ್ನಂತೆ ಅದಕ್ಕೆ ಬಂದಿದ್ದೀನಿ ಅಂದ" ಎಂದರು ಗುಂಡಪ್ಪ.

"ಅಲ್ಲಿಗೆ ಸರಿಹೋಯ್ತು.... ಅಲ್ಲಾ ಪಿತಾಮಹ, ಆ ತ್ರಿಮೂರ್ತಿಗಳೇ ಅವನ ಕಾಟ ತಾಳೋಕಾಗ್ದೇ ತಮ್ಮ ಅಡ್ರೆಸ್ ಚೇಂಜ್ ಮಾಡಿದ್ದಾರೇ. ನೀವು ಹೋಗಿ ಹೋಗಿ ಅವನತ್ರ ತಗ್ಲಾಕ್ಕೊಂಡ್ರಲ್ಲಾ" ಅಂತ ಬಾಯ್ಮಾತಿಗೆ ಹೇಳಿ ನಮ್ಮ ಜನಕನಂತಹ ಜನಕನ ತಲೆಯನ್ನೇ ಎಗ್ ಬುರ್ಜಿ ಮಾಡಿದ ವೈಭವನಿಗೆ ಮನದಲ್ಲೇ ಶಭಾಷ್ಗಿರಿ ಕೊಡುತ್ತಾ ಮಾತಾನ್ನಪೂರ್ಣೆಯನ್ನು ಹುಡುಕಿಹೊರಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ