ಮಂಗಳವಾರ, ಡಿಸೆಂಬರ್ 22, 2020

ಕೆಂಪು ಮಲ್ಲಿಗೆ

ಗಾಢಾಂಧಕಾರವನ್ನೇ ಹಾಸಿಹೊದ್ದ ಕಿರುಹಾದಿಯದು. ಎತ್ತ ಅರಸಿದರೂ ಬೆಳಕಿನ ಹನಿಯಿಲ್ಲ. ಅಕ್ಕಪಕ್ಕ, ಸುತ್ತಮುತ್ತ, ಕಡೆಗೆ ಸಾಗುತ್ತಿರುವ ಹಾದಿಯ ಸುಳಿವೂ ಸಿಗದ ಕತ್ತಲ ಸಾಮ್ರಾಜ್ಯ. ಆ ಹಾದಿಯಾದರೂ ಎಂತಹದ್ದು….? ಎಲ್ಲಿಂದ ಆರಂಭವಾಗಿ ಎಲ್ಲಿಗೆ ತಲುಪಲಿದೆ ಎಂಬ ಗೊತ್ತುಗುರಿಯೇ ಇಲ್ಲದ ಅಪರಿಚಿತ ದಾರಿ. ಕಾರ್ಗತ್ತಲ ನಡುವಿನ ಆ ವಿಲಕ್ಷಣ ಪಥದಲ್ಲಿಏಕಾಂಗಿಯಾಗಿ ಸಾಗುತ್ತಿದೆ ಒಂದು ಮನುಷ್ಯಾಕೃತಿ. ಸುತ್ತಮುತ್ತಲಿನ ಪರಿವಿಲ್ಲದೇ, ತಾನು ಒಬ್ಬಂಟಿಯಾಗಿ ಸಾಗುತ್ತಿರುವೆನೆಂಬ ಭಯವೂ ಇಲ್ಲದೇ ಯಾವುದೋ ಸಮಾಧಿಸ್ಥಿತಿಯಲ್ಲಿ ಆ ಆಕೃತಿ ಚಲಿಸುತ್ತಲೇ ಇದೆ. ಮೊಗದಲ್ಲಿ ಸಂತಸ ತುಂಬಿತುಳುಕುತ್ತಿದೆ.

ಇದ್ದಕ್ಕಿದ್ದಂತೆ ಅಲ್ಲೇನೋ ಕೋಲಾಹಲ….. ನೀರವ ಮೌನದ ಗರ್ಭವನ್ನು ಸೀಳಿಕೊಂಡು ಕೇಳಿ ಬಂದಿತು ರಭಸವಾದ ಹೆಜ್ಜೆಗಳ ಸದ್ದು…… ಇಲ್ಲಿಯವರೆಗೂ ಸಂತೃಪ್ತ ಭಾವದಿಂದ ಚಲಿಸುತ್ತಿದ್ದ ಆಕೃತಿ ಗಲಿಬಿಲಿಯಿಂದ ನಡಿಗೆಯ ವೇಗ ಹೆಚ್ಚಿಸಿತು. ವೇಗದ ನಡಿಗೆ ರಭಸವಾದ ಓಡುವಿಕೆಯಾಯಿತು. ಈಗ ಆ ಮನುಷ್ಯಾಕೃತಿಯ ಮೊಗದ ತುಂಬಾ ಭೀತಿಯೇ ತಾಂಡವವಾಡುತ್ತಿದೆ. ಉಸಿರುಗಟ್ಟಿ ಹಾದಿಗುಂಟ ಓಡುತ್ತಿದ್ದ ವ್ಯಕ್ತಿ ಒಂದೆಡೆ ತಟ್ಟನೆ ನಿಂತುಬಿಟ್ಟಿತು.
ಎದುರಿನಲ್ಲಿ ನಿಂತಿದ್ದಾಳೆ ಅವಳು……

ಶುಭ್ರ ಶ್ವೇತವರ್ಣದ ನಿಲುವಂಗಿ ತೊಟ್ಟ ಬಾಲೆಯ ಕೈಬೊಗಸೆ ತುಂಬಾ ಮಲ್ಲಿಗೆ ಹೂಗಳು……. ಕಾಲು ಮಂಡಿಗಳಲ್ಲಿನ ತರಚು ಗಾಯಗಳಿಗೆ ಮಣ್ಣು ಮೆತ್ತಿಕೊಂಡಿದೆ. ಬಲಹಣೆಯಲ್ಲಿನ ಗಾಯದಿಂದ ಸಣ್ಣಗೆ ಒಸರುತ್ತಿರುವ ನೆತ್ತರು…... ಆ ನೋವಿಗೇನೋ ಎಂಬಂತೆ ಪುಟಾಣಿ ಕಂಗಳು ತುಂಬಿಕೊಂಡಿವೆ. ಆದರೂ ಮುಖದಲ್ಲಿ ಮಾಸದ ಮಂದಹಾಸ.
ಹಠಾತ್ತನೆ ಆಕೆಯ ಸುತ್ತಲೂ ರುಧಿರಧಾರೆ ಚಿಮ್ಮತೊಡಗಿತು. ಕ್ಷಣಗಳ ಅಂತರದಲ್ಲೇ ಆಕೆ ತೊಟ್ಟ ಧವಲ ವಸ್ತ್ರ ರಕ್ತವರ್ಣ ಪಡೆದುಕೊಂಡಿತು. ಬೊಗಸೆಯಲ್ಲಿನ ಮಲ್ಲಿಗೆ ಹೂಗಳೂ ಕಡುಗೆಂಪಿಗೆ ತಿರುಗಿದವು. ನೋಡನೋಡುತ್ತಿದ್ದಂತೆ ಕೆನ್ನೀರಿನ ಪ್ರವಾಹ ಆ ವ್ಯಕ್ತಿಯನ್ನೇ ಆಪೋಶನ ತೆಗೆದುಕೊಳ್ಳಲು ಸನ್ನದ್ಧವಾದಂತೆ ಆವರಿಸತೊಡಗಿತು. ಗರಬಡಿದಂತೆ ನಿಂತಿದ್ದ ವ್ಯಕ್ತಿ ಬಂದ ಹಾದಿಯಲ್ಲೇ ವಾಪಾಸಾಗಲು ತಿರುಗಿದರೆ ಬೆಂಬತ್ತಿ ಬಂದಿದ್ದ ಸಾವಿರಾರು ಆಕೃತಿಗಳು ಆ ವ್ಯಕ್ತಿಯೆಡೆಗೇ ಬರುತ್ತಿವೆ…...

ಹಿಂದಕ್ಕೆ ಹೋಗಲಾಗದು ಮುಂದಕ್ಕೂ ಚಲಿಸಲಾಗದು…..

ಗಹಗಹಿಸುತ್ತಾ ಹಿಂಬಾಲಿಸಿ ಬಂದ ಆಕೃತಿಗಳೆಲ್ಲವೂ ಆ ವ್ಯಕ್ತಿಯೊಳಗೇ ಅಂತರ್ಧಾನವಾದವು. ಭೀತಿಯಿಂದ ಚೀರುತ್ತಿದ್ದ ವ್ಯಕ್ತಿಯನ್ನು ಸೆಳೆದುಕೊಳ್ಳಲು ನೆತ್ತರ ಸಾಗರದ ಆಳೆತ್ತರದ ಅಲೆಗಳು ಮುನ್ನುಗ್ಗಿ ಬರತೊಡಗಿದವು. ಇನ್ನೇನು ಅಲೆಗಳಲ್ಲಿ ಕೊಚ್ಚಿ ಹೋಗುವುದೇ ನಿಶ್ಚಿತ…… ಭಯದಿಂದ ಕಣ್ಮುಚ್ಚಿ ನಿಂತಿತು ಆ ಆಕೃತಿ……

ಯಾರೋ ಭುಜವನ್ನು ಹಿಡಿದಲುಗಿಸಿದಂತಾಗಿ ಥಟ್ಟನೆ ಎಚ್ಚರವಾಯಿತು ಶ್ರೀಧರನಿಗೆ‌. ಮೈಯೆಲ್ಲಾ ಬೆವರಿನಲ್ಲಿ ತೋಯ್ದುಹೋಗಿತ್ತು. ಎದೆಬಡಿತ ಕಿವಿಗೆ ತಲುಪುವಷ್ಟು ಜೋರಾಗಿತ್ತು.

"ಯಾಕಿಷ್ಟು ಹೆದರಿದ್ದೀ ಶ್ರೀ? ಏನಾಯ್ತು? ನಿದ್ದೆಯಲ್ಲೇ ಜೋರುಜೋರಾಗಿ ಕಿರುಚ್ತಿದ್ಯಲ್ಲಾ ಯಾಕೆ? ಕೆಟ್ಟ ಕನಸೇನಾದರೂ ಬಿತ್ತಾ?" ಅವನ ಕೈಗೆ ನೀರಿನ ಲೋಟ ನೀಡುತ್ತಾ ಗಾಬರಿಯಿಂದ ಕೇಳಿದಳು ವೈಜಯಂತಿ. ಅವಳ ಕೈಯಿಂದ ನೀರಿನ ಲೋಟ ಇಸಿದುಕೊಂಡು ಗಂಟಲಿಗೆ ಸುರಿದುಕೊಂಡ ನಂತರ ಕೊಂಚ ಹಾಯೆನಿಸಿತು. ಖಾಲಿಲೋಟವನ್ನು ಮಡದಿಯ ಕೈಗಿತ್ತು ಹಾಗೇ ದಿಂಬಿಗೆ ಒರಗಿ ಸೂರು ದಿಟ್ಟಿಸತೊಡಗಿದ.

"ಏನಾದ್ರೂ ಸಮಸ್ಯೆಯಾಗಿದೆಯಾ ಶ್ರೀ? ಕಳೆದ ಕೆಲವು ದಿನಗಳಿಂದ ನಿನ್ನ ವರ್ತನೆಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಮುಂಚಿನ ಲವಲವಿಕೆ, ಚೈತನ್ಯ ಯಾವುದೂ ನಿನ್ನಲ್ಲಿಲ್ಲ. ಯಾವುದೋ ಬೇಸರದಲ್ಲಿರುವವನಂತೆ ಸದಾ ಏನೋ ಯೋಚನೆಯಲ್ಲಿ ಮುಳುಗಿರ್ತೀಯಾ. ಅದೇನು ಅಂತ ನನ್ನ ಹತ್ರನಾದ್ರೂ ಹೇಳಿಕೊಳ್ಬಾರ್ದಾ?" ಗಂಡನ ಪಕ್ಕಬಂದು ಕುಳಿತು ಅವನ ತಲೆಗೂದಲಲ್ಲಿ ಕೈಯಾಡಿಸುತ್ತಾ ಅವನ ಸಮಸ್ಯೆಯ ಮೂಲವನ್ನು ಅರಿಯಲು ಪ್ರಯತ್ನಿಸುತ್ತಿದ್ದಳು ವೈಜಯಂತಿ. ಆದರೆ ಶ್ರೀಧರನಿಗೆ ಅವಳ ಮಾತಿನ ಕಡೆ ಗಮನವೇ ಇರಲಿಲ್ಲ. ಅವನು ಯಾವುದೋ ಭಾವಸಮಾಧಿಯಲ್ಲಿ ಮೈಮರೆತಿದ್ದ.

ತಾನು ಎಷ್ಟೋ ಹೊತ್ತಿನಿಂದ ಪ್ರಶ್ನಿಸುತ್ತಿದ್ದರೂ ಮೌನವಾಗಿ ಶೂನ್ಯದಲ್ಲಿ ನೋಟನೆಟ್ಟಿರುವ ಗಂಡನ ಬಗ್ಗೆ ನಿಜಕ್ಕೂ ಕಳವಳವಾಯಿತು ಅವಳಿಗೆ. ಮತ್ತೊಮ್ಮೆ ಅವನ ಹೆಗಲು ಹಿಡಿದು ಅಲುಗಾಡಿಸಿದಾಗ ಅದೇ ತಾನೇ ಎಚ್ಚರಗೊಂಡವನಂತೆ ಮಡದಿಯತ್ತ ಶುಷ್ಕನೋಟ ಬೀರಿದ.

"ಶ್ರೀಧರ್…... ಯಾಕೆ ಹೀಗಾಡ್ತಿದ್ದೀ? ನಿನ್ನ ಪರಿಸ್ಥಿತಿ ನೋಡಿದ್ರೆ ಭಯ ಆಗುತ್ತೆ ನನಗೆ. ಒಂದು ಕ್ಷಣ ಸುಮ್ಮನಿರದಂತೆ ಮಾತಾಡ್ತಿದ್ದೋನು ಈಗ ಹತ್ತುಪ್ರಶ್ನೆ ಕೇಳಿದ್ರೆ ಒಂದಕ್ಕೂ ಉತ್ತರಿಸೋಲ್ಲ. ಏನಾಗಿದೆ ಅಂತಹ ಸಮಸ್ಯೆ ಅನ್ನೋದನ್ನಾದ್ರೂ ಹೇಳು. ಆಗ ಮನೀಷಾ ವಿಚಾರದಲ್ಲಿ ನಮಗೆ ತೀರದ ನೋವಿದ್ದಾಗಲೂ ನೀನು ಧೈರ್ಯ ಕಳ್ಕೊಂಡಿರ್ಲಿಲ್ಲ.ಈಗ ಕೈ ಬಿಟ್ಟೇಹೋದ್ಲು ಅಂದ್ಕೊಂಡಿದ್ದ ಮನೀಷಾ ನಮಗೆ ದಕ್ಕಿದ್ದಾಳೆ. ಹಾಗಿರುವಾಗ ಎಷ್ಟೊಂದು ಖುಷಿಯಾಗಿರ್ಬೇಕು ನೀನು. ಆದ್ರೆ ನಿನ್ನ ಅವಸ್ಥೆ ನೋಡು…... ನೀನು ನೆಮ್ಮದಿಯಿಂದ ನಿದ್ರೆ ಮಾಡದೇ ತಿಂಗಳುಗಳೇ ಕಳೆದಿವೆ. ನನ್ನನ್ನು ಬಿಡು……. ಮನೀಷಾ ಹುಷಾರಾದ್ಮೇಲಿಂದ ಅವಳ ಹತ್ರಾನೂ ಸರಿಯಾಗಿ ಮಾತಾಡ್ತಿಲ್ಲ ನೀನು. ಅವ್ಳೇ ಹತ್ತಿರ ಬಂದಾಗ್ಲೂ ಮುಖ ತಪ್ಪಿಸ್ತೀಯಾ. ಏನಿದೆಲ್ಲಾ ಶ್ರೀಧರ್?" ಅತೀವ ಬೇಸರದಲ್ಲೇ ಕೇಳಿದಳು ವೈಜಯಂತಿ.

ಅವಳ ಯಾವೊಂದು ಪ್ರಶ್ನೆಗೂ ಉತ್ತರಿಸದೆ, "ನನಗೆ ನಿದ್ರೆ ಬರ್ತಿಲ್ಲ. ಹಜಾರದಲ್ಲಿ ಒಂದಿಷ್ಟು ಓಡಾಡ್ತೀನಿ. ನೀನು ಮಲಗು" ಎಂದವ ಕೋಣೆಯಿಂದ ಹೊರಗೆ ಹೊರಟ ಶ್ರೀಧರ. ಇತ್ತೀಚೆಗೆ ಇದೇ ನಿತ್ಯದ ಪರಿಪಾಠವಾಗಿಹೋಗಿತ್ತು. ಇವನಿಗೇನಾಗಿದೆ ಎಂಬ ಯೋಚನೆಯಲ್ಲಿ ಮುಳುಗಿದಳು ವೈಜಯಂತಿ.

***************************************

ಮಗಳಿಂದ ಮುಖತಪ್ಪಿಸಿ ಓಡಾಡ್ತಿದ್ದೀಯಾ ಎಂದು ಆರೋಪಿಸಿದ್ದಳು ಮಡದಿ. 'ಮನೀಷೆಯೆದುರು ಮುಖಕ್ಕೆ ಮುಖಕೊಟ್ಟು ಮಾತನಾಡಲು ನಿನ್ನಿಂದ ಸಾಧ್ಯವೇ…..?' ಒಳಗಿನಿಂದ ಯಾವುದೋ ಧ್ವನಿ ಪ್ರಶ್ನಿಸಿದಂತಾಯಿತು. ಆ ಪ್ರಶ್ನೆಗೆ ಉತ್ತರಿಸುವ ಧೈರ್ಯ ಅವನಲ್ಲಿರಲಿಲ್ಲ. ತಮ್ಮ ಕೋಣೆಯನ್ನು ಬಳಸಿದಂತೆಯೇ ಇದ್ದ ಮಗಳ ಕೋಣೆಯೆದುರು ನಿಂತ. ಕನಸಿನಲ್ಲಿ ಕಂಡ ಬಿಳಿನಿಲುವಂಗಿಯ ಬಾಲೆ ಎದುರುನಿಂತು ನಕ್ಕಂತೆ ಭಾಸವಾಯಿತು.
ತಲೆಕೊಡವಿ ಸದ್ದಾಗದಂತೆ ಕೋಣೆಯ ಬಾಗಿಲನ್ನು ಅರೆತೆರೆದು ಇಣುಕಿದ. ಏಳು ವರ್ಷದ ಮನೀಷಾ ನೆಮ್ಮದಿಯಿಂದ ಮಲಗಿದ್ದಳು. ಇಂತಹ ನಿರಾಳತೆ ಅವಳ ಮುಖದಲ್ಲಿ ಕಳೆದೊಂದು ತಿಂಗಳಿನಿಂದ ಕಂಡಿದ್ದು. ಅದಕ್ಕೂ ಮೊದಲು ಬರೀ ನರಳಾಟವೇ. ಹಳೆಯ ದಿನಗಳೆಲ್ಲಾ ಒಮ್ಮೆ ಸ್ಮೃತಿಪಟಲದ ಮೇಲೆ ಹಾದುಹೋದಂತಾಗಿ ನಿಟ್ಟುಸಿರೊಂದು ಹೊರಬಿತ್ತು. ಅಂತೂ ಆ ನರಕದಿಂದ ಮನೀಷೆಗೆ ಹಾಗೂ ನಮಗೂ ಮುಕ್ತಿ ಸಿಕ್ಕಿತಲ್ಲ ಎಂಬ ಯೋಚನೆಯಿಂದ ಮನಸ್ಸಿಗೆ ಸಂತಸವಾಯಿತು. ಅರೆಘಳಿಗೆಯಷ್ಟೇ……...

'ಹೌದೇ…? ಮುಕ್ತಿ ಸಿಕ್ಕಿತೇ…..? ಮತ್ತೆ ಈ ಮುಕ್ತಿಗಾಗಿ ತೆತ್ತ ಬೆಲೆ….? ಅದರಿಂದ ಮುಕ್ತಿಯುಂಟೇ ನಿನಗೆ……?' ಮತ್ತೆ ಒಳಗಿನಿಂದ ಕೇಳಿ ಬಂದಿತೊಂದು ಕಟುಧ್ವನಿ. ಕತ್ತಿಯಲುಗಿನಂತಹ ಹರಿತವಾದ ಪ್ರಶ್ನೆಗೆ ಬವಳಿ ಬಂದಂತಾಯಿತು. ಮಗಳತ್ತ ದಿಟ್ಟಿಸಿದ. ಕೆಂಪನೆಯ ನಿಲುವಂಗಿ ತೊಟ್ಟಿದ್ದಾಳೆ ಮನೀಷೆ......

ಕೆಂಪನೆಯ ನಿಲುವಂಗಿ…... ಬೊಗಸೆಯ ತುಂಬಾ ಕೆಂಪುಮಲ್ಲಿಗೆ ಹೂ…..!!

ನಡುಗುವ ಕೈಗಳಿಂದ ಮುಖದ ಬೆವರೊರಿಸಿಕೊಳ್ಳಲು ಹವಣಿಸಿದ ಶ್ರೀಧರ್. ಆದರೆ…… ಅಂಗೈ ಪೂರಾ ರಕ್ತಮಯ…..!! ತಟ್ಟನೆ ಮಗಳ ಕೋಣೆಯ ಬಾಗಿಲೆಳೆದುಕೊಂಡ. ಚಿಲಕದ ಮೇಲೆ ನೆತ್ತರ ಛಾಪು ಕಂಡಿತು. ಬಾಗಿಲು, ಕಿಟಕಿ, ಗೋಡೆಗಳೆಲ್ಲಾ ಕಡುಗೆಂಪು….. ನೆಲದ ಮೇಲೆಲ್ಲಾ ಕೆಂಪುಮಲ್ಲಿಗೆ ಹೂಗಳ ರಾಶಿ…… ಬೆನ್ನಹುರಿಯಿಂದ ಆರಂಭವಾದ ಭೀತಿಯ ಛಳಕು ದೇಹದ ಕಣಕಣಗಳಲ್ಲೂ ಅಧಿಪತ್ಯವನ್ನು ಸ್ಥಾಪಿಸತೊಡಗಿತು. ಬಲಭಾಗದಲ್ಲಿದ್ದ ಕನ್ನಡಿಯತ್ತ ಅವನ ದೃಷ್ಟಿ ಹರಿಯಿತು.

ಕನ್ನಡಿಯಲ್ಲಿ ತನ್ನದೇ ಅಗಣಿತ ಪ್ರತಿಬಿಂಬಗಳು…….!

ತುಸುಹೊತ್ತಿನ ಮುಂಚೆ ಕಂಡ ವಿಲಕ್ಷಣ ಕನಸು ನೆನಪಾಯಿತು ಅವನಿಗೆ. ಆ ಕನಸಿನಲ್ಲಿದ್ದ ಏಕಾಂಗಿ ವ್ಯಕ್ತಿ ತಾನೇ. ತನ್ನನ್ನು ಸಾವಿರಾರು ಸಂಖ್ಯೆಯಲ್ಲಿ ಹಿಂಬಾಲಿಸಿಕೊಂಡುಬರುತ್ತಿದ್ದ ಆಕೃತಿಗಳೂ ತನ್ನವೇ…… ತನ್ನ ಛಾಯೆಗಳೇ ತನ್ನನ್ನು ಬೆಂಬತ್ತಿದ ಕನಸಿನಂತೆಯೇ ಕನ್ನಡಿಯಲ್ಲಿನ ಬಿಂಬಗಳೆಲ್ಲಾ ತನ್ನನ್ನು ನುಂಗಲು ಹವಣಿಸಿ ಹೊರಬರುತ್ತಿರುವಂತೆ ತೋರಿತು ಶ್ರೀಧರನಿಗೆ. ಇನ್ನೇನು ಅವು ಕನ್ನಡಿಯನ್ನೇ ಒಡೆದು ಹೊರಬರುತ್ತವೆ ಎನಿಸಿದಾಗ ಬೆಚ್ಚಿ ಒಂದು ಹೆಜ್ಜೆ ಹಿಂದೆಸರಿದ.

ಅವನು ಹಿಂದೆ ಸರಿದೊಡನೆ ಬಿಂಬಗಳು ದರ್ಪಣದಾಳಕ್ಕೆ ಒಳಸರಿಯತೊಡಗಿದವು. ಅವನು ಗಾಢವಾಗಿ ಕನ್ನಡಿಯನ್ನೇ ದಿಟ್ಟಿಸಿದ. ಬಿಂಬಗಳ ನಡುವೆ ಬಿಳಿನಿಲುವಂಗಿಯ ಬಾಲೆ ಕಂಡಳು…… ಅವಳ ಕೈಗಳಲ್ಲಿ ಕೆಂಪುಮಲ್ಲಿಗೆ……! ಕನ್ನಡಿಯೊಳಗಿನ ಬಿಂಬಗಳೆಲ್ಲ ತಮ್ಮ ಕಬಂಧಬಾಹುಗಳನ್ನು ಚಾಚಿ ಅವಳ ಕತ್ತುಹಿಸುಕುತ್ತಿವೆ…..

'ಅಪ್ಪಾ…. ನೋವಾಗುತ್ತೆ………!'

ಅರೇ……! ಮನೀಷಾಳ ಧ್ವನಿಯಿದು…!
ಹೌದು….. ಅದು ಮನೀಷೆಯೇ….. 

ಮಗಳನ್ನು ಅಲ್ಲಿಂದ ಹೊರಗೆಳೆದುಕೊಳ್ಳಲು ಧಾವಿಸಿದ. ಕನ್ನಡಿಯ ನುಣುಪು ಮೇಲ್ಮೈ ಅಡ್ಡಿಯಾದಾಗ ಕ್ರೋಧದಿಂದ ದಿಟ್ಟಿಸಿದ. ಕನ್ನಡಿಯಲ್ಲಿಅವನ ಪ್ರತಿಬಿಂಬದ ಹೊರತು ಬೇರೇನೂ ಕಾಣಲಿಲ್ಲ. ಸುತ್ತಲೂ ನೋಟಹರಿಸಿದ. ಬಾಗಿಲು, ಕಿಟಕಿ, ಚಿಲಕ, ತಿಳಿನೀಲಿ ಗೋಡೆ, ಬಿಳಿಹಾಸಿನ ನೆಲ ಎಲ್ಲವೂ ಎಂದಿನಂತೆಯೇ ಇತ್ತು. ಅಂಗೈಗಳನ್ನು ಪರಿಶೀಲನಾತ್ಮಕವಾಗಿ ನೋಡಿಕೊಂಡ. ರಕ್ತದ ಸಣ್ಣಬಿಂದು ಕೂಡಾ ಕಾಣಲಿಲ್ಲ. ಏನೊಂದೂ ತೋಚದೇ ಕನ್ನಡಿಯನ್ನೇ ದೃಷ್ಟಿಸಿದ. ಕನ್ನಡಿಯಲ್ಲಿನ ಪರಿಚಿತ ಬಿಂಬವೂ ತೀರಾ ಅಪರಿಚಿತವೆನಿಸಿದಾಗ ವ್ಯಾಕುಲಗೊಂಡ.

***********************************

"ನೋಡಿ ಮಿಸ್ಸೆಸ್ ವೈಜಯಂತಿ, ಶ್ರೀಧರ್ ಮನಸ್ಸಲ್ಲಿ ಏನಿದೆ ಅನ್ನೋದನ್ನು ನಿಖರವಾಗಿ ಗ್ರಹಿಸೋದು ತುಂಬಾ ಕಷ್ಟ. ಖುದ್ದು ಪರಿಣಿತ ವೈದ್ಯನಾಗಿರೋ ಅವನಿಗೆ ವೈದ್ಯಕೀಯ ಕ್ಷೇತ್ರದ ಎಲ್ಲಾ ವಿಭಾಗಗಳ ಬಗ್ಗೆಯೂ ಒಳ್ಳೆಯ ಜ್ಞಾನ ಇದೆ. ಅದರಲ್ಲೂ ನನಗೆ ತಿಳಿದಂತೆ ಮನಃಶಾಸ್ತ್ರದ ಬಗ್ಗೆ ವೈಯಕ್ತಿಕವಾಗಿ ತುಸುಹೆಚ್ಚೇ ಆಸಕ್ತಿ ಇದೆ. ನೀವು ಅವನನ್ನು ನನ್ನ ಹತ್ರ ಕರೆತಂದಿರೋ ಉದ್ದೇಶ ಏನು ಅನ್ನೋದು ಸ್ಪಷ್ಟವಾಗಿಯೇ ಗೊತ್ತಿದೆ ಅವನಿಗೆ. ಈಗಾಗಲೇ ನಾಲ್ಕನೇ ಕೌನ್ಸಿಲಿಂಗ್ ಸೆಷನ್ ಇದು. ಕಳೆದ ಮೂರು ಸೆಷನ್ಗಳಲ್ಲಿ ಅವನನ್ನು ಕಾಡುತ್ತಿರುವ ಸಮಸ್ಯೆಯೇನು ಅನ್ನೋದನ್ನು ಬಾಯ್ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೀನಿ ನಾನು. ಹಲವಾರು ರೀತಿಯ ಥೆರಪಿಗಳನ್ನು ಪ್ರಯತ್ನಿಸಿ ನೋಡಿದ್ದೀನಿ. ಅದರ ಹೊರತಾಗಿ ಸ್ನೇಹಿತ, ಸಹೋದ್ಯೋಗಿ ಅನ್ನುವ ಸಲುಗೆಯಿಂದಲೂ ಅವನ ಮನದೊಳಗೆ ಇಣುಕುವ ಪ್ರಯತ್ನ ಮಾಡಿದ್ದೀನಿ. ಫಲಿತಾಂಶ ಮಾತ್ರ ಶೂನ್ಯ. ಈ ಸಲವಂತೂ ನನ್ನೊಂದಿಗೆ ಬಹಳ ಒರಟಾಗಿ ವ್ಯವಹರಿಸಿದ. ಇದನ್ನೆಲ್ಲಾ ಗಮನಿಸಿದರೆ ಅವನು ಯಾವುದಕ್ಕೂ ಸಹಕರಿಸದಿರುವ ನಿರ್ಧಾರ ಮಾಡಿಕೊಂಡಿರುವಂತೆ ತೋರುತ್ತಿದೆ. ಪ್ರಾಯಶಃ ಜಗತ್ತಿಗೆ ಅಜ್ಞಾತವಾದ ಸತ್ಯವೊಂದನ್ನು ತನ್ನೊಳಗೇ ಸಮಾಧಿಯಾಗಿಸುವ ನಿಶ್ಚಯ ಅವನದಿರಬಹುದು"

ಹಲವು ವಾರಗಳಿಂದ ಶ್ರೀಧರನಿಗೆ ಕೌನ್ಸಿಲಿಂಗ್ ಮಾಡುತ್ತಿದ್ದ ನರೇನ್ ಅಹುಜಾ ಅವರು ವೈಜಯಂತಿಗೆ ವಿವರಿಸುತ್ತಿದ್ದರು. ಅವರಿಂದ ಅನತಿದೂರದಲ್ಲಿ ಗಾಜಿನಗೋಡೆಯ ಆಚೆಗಿನ ಸೋಫಾ ಮೇಲೆ ಕುಳಿತಿದ್ದ ಶ್ರೀಧರ್ ಮಾತ್ರ ಇವರ ಮಾತಿಗೂ ತನಗೂ ಸಂಬಂಧವೇ ಇಲ್ಲದಂತೆ ನಿಯತಕಾಲಿಕೆಯೊಂದನ್ನು ಹಿಡಿದು ಕುಳಿತಿದ್ದ. ಬರುಬರುತ್ತಾ ಶ್ರೀಧರನ ಮನೋವ್ಯಾಧಿ ತೀವ್ರಸ್ವರೂಪ ಪಡೆದುಕೊಂಡಿತ್ತು. ಹಗಲುರಾತ್ರಿಗಳೆಲ್ಲಾ ಒಂದೇ ಆಗಿಹೋಗಿತ್ತು. ಸದಾ ಯಾವುದೋ ದುಗುಡದಲ್ಲಿ ಮುಳುಗಿರುತ್ತಿದ್ದವ ಅರೆಘಳಿಗೆ ಕಣ್ಮುಚ್ಚಿದರೆ ದುಃಸ್ವಪ್ನಗಳ ದಾಳಿಗೆ ಕಂಗೆಟ್ಟು ಎದ್ದು ಕೂರುತ್ತಿದ್ದ.

ಶ್ರೀಧರ್ ವೃತ್ತಿವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಅವನಿಗೆ ತನ್ನ ವೃತ್ತಿಯ ಬಗ್ಗೆ ಅಪಾರ ಆಸ್ಥೆ, ಅಭಿಮಾನವಿತ್ತು. ಮುಂಚೆಲ್ಲಾ ಹಗಲಿರುಳೆನ್ನದೇ ಯಾವುದೇ ಸಮಯದಲ್ಲೂ ಆಸ್ಪತ್ರೆಗೆ ಹಾಜರಾಗಲು ತಯಾರಿರುತ್ತಿದ್ದವನು ಕಳೆದೆರಡು ತಿಂಗಳಿನಿಂದ ಆಸ್ಪತ್ರೆಗೆ ಬರಲೇ ಹಿಂತೆಗೆಯುತ್ತಿದ್ದ. ಮೊದಮೊದಲು ವೈಜಯಂತಿ ಹಾಗೂ ತನ್ನ ಸಹೋದ್ಯೋಗಿಗಳ ಒತ್ತಾಯಕ್ಕೆ ಮಣಿದು ಆಸ್ಪತ್ರೆಗೆ ಹೋಗಿ ಒಂದಿಷ್ಟು ಸಮಯ ಕಳೆದುಬರುತ್ತಿದ್ದವನು ನಂತರದ ದಿನಗಳಲ್ಲಿಅದನ್ನೂ ನಿಲ್ಲಿಸಿದ್ದ‌. ಮನೀಷಾಳೊಂದಿಗೆ ಮಾತುಕತೆ ಹಾಗಿರಲೀ…... ಆಕೆಗೆ ಎದಿರಾಗುವುದನ್ನೇ ತಪ್ಪಿಸುತ್ತಿದ್ದ. ಮಗಳ ಭೇಟಿಯನ್ನು ತಪ್ಪಿಸಲೆಂದೇ ಊಟತಿಂಡಿಗಳ ಪರಿವೆಯಿಲ್ಲದೆ ಗೃಹಬಂಧನದಲ್ಲಿರುವವನಂತೆ ತನ್ನ ವ್ಯಾಸಂಗಕೊಠಡಿಯಲ್ಲಿ ಕುಳಿತಿರುತ್ತಿದ್ದ. ಇತ್ತೀಚೆಗೆ ಶಸ್ತ್ರಚಿಕಿತ್ಸಾ ಸಲಕರಣೆಗಳನ್ನು ನೆಟ್ಟನೋಟದಿಂದ ದಿಟ್ಟಿಸುವುದು, ಅವುಗಳನ್ನು ಹಿಡಿದು ಕೋಣೆಯೊಳಗೆ ಶತಪಥ ತಿರುಗುವುದು ಮೊದಲಾದ ವಿಚಿತ್ರಚರ್ಯೆಗಳು ಆತನಲ್ಲಿ ಕಂಡಿದ್ದವು. ಹಾಗಾಗಿಯೇ ವೈಜಯಂತಿ ಅಹುಜಾರ ಬಳಿ ಕೌನ್ಸಿಲಿಂಗ್ ಮಾಡಿಸಲು ಆರಂಭಿಸಿದ್ದಳು. ಆದರೆ ಆ ಯತ್ನಕ್ಕೂ ಶ್ರೀಧರನ ಅಸಹಕಾರ ತಡೆಯಾಗಿತ್ತು.

"ನೋಡಿ ಮಿಸ್ಸೆಸ್ ಶ್ರೀಧರ್, ನನ್ನ ಊಹೆಯ ಪ್ರಕಾರ ಯಾವುದೋ ಪಾಪಪ್ರಜ್ಞೆ ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದೇ ಮನಸ್ಸಿನಾಳದಲ್ಲಿ ಬಲವಾಗಿ ನಿಂತು ಅವನ ವರ್ತನೆಗಳನ್ನು ನಿಯಂತ್ರಿಸುತ್ತಿದೆ. ಬಹುಶಃ ಈ ವಿಚಾರ ನಿಮ್ಮ ಮಗಳು ಮನೀಷಾಳಿಗೆ ಸಂಬಂಧಿಸಿದೆ. ಒಟ್ಟಿನಲ್ಲಿ ಅವನೊಳಗೊಂದು ವ್ಯಕ್ತಪಡಿಸಲಾಗದ ವಿಷಾದವಿದೆ. ಆ ವ್ಯಥೆಯೇ ಬೇರೆಬೇರೆ ರೂಪತಾಳಿ ಅವನನ್ನು ಬೆದರಿಸ್ತಿದೆ ಅನ್ನೋದು ನನ್ನ ಅನಿಸಿಕೆ. ಎನಿ ಹೌ…… ನಾನೊಮ್ಮೆ ಡಾ. ಪೂರ್ಣೇಂದು ಚಟರ್ಜಿ ಅವರೊಂದಿಗೆ ಈ ಕೇಸ್ ಬಗ್ಗೆ ಚರ್ಚಿಸ್ತೀನಿ. ಹಿ ಈಸ್ ಒನ್ ಆಫ್ ದಿ ಬೆಸ್ಟ್ ಸೈಕೋಥೆರಪಿಸ್ಟ್. ಅವರಿಂದ ಏನಾದರೂ ಪ್ರಯೋಜನ ಆಗಬಹುದೇನೋ…... ಆದ್ರೆ ಒಂದು ವಿಚಾರ ಈಗ್ಲೇ ಹೇಳ್ತೀನಿ ಮಿಸ್ಸೆಸ್ ಶ್ರೀಧರ್. ಯಾರೊಂದಿಗೂ ಹೇಳಿಕೊಳ್ಳಲಾಗದಂತಹ ತುಂಬಾ ಆಳವಾದ ಯಾವುದೋ ಗಿಲ್ಟ್ ಇದೆ ಅವನೊಳಗೆ. ಸಧ್ಯ ಅವನಿರೋ ಪರಿಸ್ಥಿತಿಯಲ್ಲಿ ಒತ್ತಾಯಪೂರ್ವಕವಾಗಿ ಅವನ ಬಾಯಿಬಿಡಿಸಲು ಪ್ರಯತ್ನಿಸೋದು ತೀರಾ ಅಪಾಯಕಾರಿ. ಹಾಗೆ ಮಾಡಲು ಹೋದ್ರೆ ಅವನು ತನ್ನ ಜೀವಕ್ಕೇ ಕುತ್ತು ತಂದ್ಕೋತಾನೇನೋ ಅನ್ನೋ ಅನುಮಾನ ಇದೆ ನನಗೆ. ಹೋಪ್ ಯು ಅಂಡರ್ಸ್ಟಾಂಡ್….." 
ವೈಜಯಂತಿಯಿಂದ ಶ್ರೀಧರನ ನಡವಳಿಕೆಯ ಸಣ್ಣಪುಟ್ಟ ಬದಲಾವಣೆಯ ಬಗ್ಗೆಯೂ ಮಾಹಿತಿಪಡೆದು, ಕೌನ್ಸಿಲಿಂಗ್ ಸಮಯದಲ್ಲಿ ತನ್ನೊಂದಿಗಿನ ಅವನ ವರ್ತನೆಯನ್ನೂ ಸೂಕ್ಷ್ಮವಾಗಿ ಚಿಂತಿಸಿ, ತರ್ಕಿಸಿ ಅಹುಜಾ ತಮ್ಮ ಅಭಿಪ್ರಾಯ ತಿಳಿಸಿದ್ದರು.

ಇವರಿಬ್ಬರ ಮಾತುಕತೆ ಮುಗಿದು ವೈಜಯಂತಿ ಅಹುಜಾರ ಕ್ಯಾಬಿನ್ನಿನಿಂದ ಹೊರಬಂದು ಅವನನ್ನು ಕರೆಯುವವರೆಗೂ ಶ್ರೀಧರ್ ತನ್ನ ಕೈಯಲ್ಲಿನ ನಿಯತಕಾಲಿಕೆಯನ್ನೇ ದಿಟ್ಟಿಸುತ್ತಿದ್ದ. ಅವರಿಬ್ಬರೂ ಹೊರಹೋಗುವುದನ್ನೇ ಗಮನಿಸುತ್ತಾ ಯೋಚನಾಮಗ್ನರಾಗಿದ್ದ ಅಹುಜಾ ತುಸುಸಮಯದ ನಂತರ ಏನೋ ಹೊಳೆದವರಂತೆ ತಮ್ಮ ಕ್ಯಾಬಿನ್ನಿನಿಂದ ಹೊರಬಂದು ಇಷ್ಟುಹೊತ್ತೂ ಶ್ರೀಧರ್ ಹಿಡಿದಿದ್ದ ನಿಯತಕಾಲಿಕೆಯನ್ನು ಕೈಗೆತ್ತಿಕೊಂಡು ಪರೀಕ್ಷಿಸಿದರು. ಗಾಳಿಯಲ್ಲಿ ಪುಟಗಳನ್ನು ಮಗಚುವಾಗ ಒಂದು ಪುಟ ತಾನೇತಾನಾಗಿ ತೆರೆದುಕೊಂಡಿತು. ಬಹುಶಃ ಶ್ರೀಧರ್ ಬಹಳ ಹೊತ್ತಿನಿಂದ ಆ ಪುಟವನ್ನೇ ನೋಡುತ್ತಿದ್ದರಿಂದ ಈಗ ಅದೇ ಪುಟ ತೆರೆದುಕೊಂಡಿದೆ ಎಂದು ಊಹಿಸಿದರು. ಕುತೂಹಲದಿಂದ ಆ ಪುಟವನ್ನು ಗಮನಿಸಿದರು.

ಪುಟದ ಒಂದು ಬದಿಯಲ್ಲಿ ಯಾವುದೋ ಔಷಧಿಯ ಜಾಹೀರಾತಿತ್ತು. ಇನ್ನೊಂದು ಮಗ್ಗುಲಲ್ಲಿ ಒಂದು ಚಿತ್ರವಿತ್ತು……. 
ಬಿಳುಪುಛಾಯೆಯ ಮನುಷ್ಯಾಕೃತಿಯೊಂದು ತನ್ನ ಹೃದಯಭಾಗದಲ್ಲಿನ ಪಂಜರವನ್ನು ತನ್ನೆರಡೂ ಕೈಗಳಿಂದ ಮುಚ್ಚಿಡಲು ಯತ್ನಿಸುತ್ತಿದ್ದರೆ ಆ ಪಂಜರದೊಳಗಿನ ಕಡುಗಪ್ಪು ಮನುಷ್ಯಾಕೃತಿ ಅಲ್ಲಿಂದ ಹೊರಬರಲು ಹವಣಿಸುತ್ತಿರುವಂತೆ ಬಿಂಬಿಸುವ ಚಿತ್ರವದು……..

********************************************

ವರಾಂಡದಲ್ಲಿನ ತೂಗುಯ್ಯಾಲೆಯಲ್ಲಿ ಒರಗಿದ್ದವನ ದೃಷ್ಟಿಯೆಲ್ಲಾ ಎದುರಿಗಿದ್ದ ಎತ್ತರದ ಕಮಾನಿಗೆ ಹಬ್ಬಿಕೊಂಡು ರಾಶಿಮೊಗ್ಗುಗಳಿಂದ ಕಂಗೊಳಿಸುತ್ತಿದ್ದ ಮಲ್ಲಿಗೆಬಳ್ಳಿಯ ಮೇಲಿತ್ತು.

"ಜಯಂತಾಂಟಿ ಜಯಂತಾಂಟಿ ….. ನಾನು ಆ ಮಲ್ಲಿಗೆಮೊಗ್ಗು ಬಿಡಿಸ್ಕೊಂಡು ಮಾಲೆ ಮಾಡ್ಲಾ? ಉದ್ದಮಾಲೆ ಮಾಡ್ತೀನಿ. ನಿಮ್ಗೆ, ಮನೀಷಂಗೆ ಮತ್ತೆ ಉಳಿದಿದ್ದು ನಂಗೆ. ಬಿಡಿಸ್ಲಾ ಆಂಟಿ…..?"

ಅತ್ಯುತ್ಸಾಹದಿಂದ ಮೊಗ್ಗುಗಳನ್ನೆಲ್ಲಾ ಬಿಡಿಸುತ್ತಿದ್ದ ಬಾಲೆಯ ಮೊಗದಲ್ಲಿ ಅದೆಂತಹಾ ಅದಮ್ಯ ಸಂತಸ. ಇದ್ದಕ್ಕಿದ್ದಂತೆ ದೊಪ್ಪನೆ ಕೆಳಕ್ಕುರುಳಿದಳಾಕೆ…… ಆಸೆಯಿಂದ ಬಿಡಿಸಿದ ಮಲ್ಲಿಗೆಮೊಗ್ಗುಗಳೆಲ್ಲಾ ಸುತ್ತ ಚದುರಿವೆ. ಹಣೆಯಿಂದ ಸಣ್ಣಗೆ ನೆತ್ತರು ಚಿಮ್ಮುತ್ತಿದೆ. ದಡಬಡಿಸಿ ಎದ್ದು ಅತ್ತಧಾವಿಸಿದ ಶ್ರೀಧರ ಕಮಾನಿನಡಿಗೆ ಬಂದುನಿಂತ.

ಅರಳಿ ನೆಲಕ್ಕೆ ಉದುರಿದ ಮಲ್ಲಿಗೆ ಹೂಗಳ ಹೊರತು ಬೇರೇನೂ ಇಲ್ಲ……..

ಒಮ್ಮೆ ತಲೆ ಮೇಲಕ್ಕೆತ್ತಿ ಕಮಾನಿನ ತುಂಬಾ ಹಬ್ಬಿದ್ದ ಮಲ್ಲಿಗೆಬಳ್ಳಿಯನ್ನೇ ದಿಟ್ಟಿಸಿದ. ಎಲೆಗಳನ್ನೂ ಮುಚ್ಚುವಂತೆ ಎಲ್ಲೆಡೆ ನಳನಳಿಸುತ್ತಿದ್ದ ಹೂಗಳಲ್ಲಿ ಅವಳದ್ದೇ ನಗುಮೊಗ ಪ್ರತಿಫಲಿಸಿದಂತಾಗಿ ನೆಲದತ್ತ ನೋಟಹರಿಸಿದ. ಅವನ ಹೆಜ್ಜೆಯಡಿ ಸಿಲುಕಿದ ಮಲ್ಲಿಗೆಹೂಗಳು ಕೆಂಪಾಗಿ ನೆಲಕ್ಕಂಟಿ ನರಳಿದಂತೆ ಭಾಸವಾಯ್ತು.

“ತೋರಾ ಮನ್ ದರ್ಪಣ್ ಕೆಹಲಾಯೇ
ಭಲೇ ಬುರೇ ಸಾರೇ ಕರ್ಮೋಂಕೋ
ದೇಖೇ ಔರ್ ದಿಖಾಯೇ……”
ಟ್ರಾನ್ಸಿಸ್ಟರ್ನಿಂದ ತೇಲಿಬರುತ್ತಿದ್ದ ಸಾಲುಗಳು ಅವನ ಮನಃಪಟಲದ ಮೇಲೆ ಅಚ್ಚಾಗತೊಡಗಿದವು.

************************************

"ಡ್ಯಾಡಿ……… ಹೋಗು ನಾನು ಕೋಪ ನಿನ್ಹತ್ರ. ನಾನಂದ್ರೆ ಇಷ್ಟನೇ ಇಲ್ಲ ನಿಂಗೆ. ನನ್ನ ನೋಡಿದ್ರೂ ನೋಡದ ಹಾಗೆ ಹೋಗ್ತೀಯಾ. ನನ್ಹತ್ರ ಮಾತೂ ಆಡೋಲ್ಲ ನಂಜೊತೆ ಆಟನೂ ಆಡಲ್ಲ. ಟೂ ಟೂ ನಿನ್ಹತ್ರ…….." ಮುಖ ದುಮ್ಮಿಸಿಕೊಂಡು ಕುಳಿತಿದ್ದ ಮನೀಷಾಳ ಮೊಗವನ್ನು ದಿಟ್ಟಿಸುವ ಸಾಹಸಮಾಡಿದ. ಒಂದು ಕ್ಷಣವಷ್ಟೇ…… ತಾನೇತಾನಾಗಿ ನೋಟ ನೆಲಕ್ಕಿಳಿಯಿತು.

"ಡ್ಯಾಡಿಗೆ ತುಂಬಾ ಕೆಲಸ ಇದೆ ನಿಶಾ ಪುಟ್ಟಾ. ಅವರನ್ನ ಡಿಸ್ಟರ್ಬ್ ಮಾಡಬಾರ್ದು. ನಾನು ನೀನು ಆಟ ಆಡೋಣ ಆಯ್ತಾ. ನನ್ನ ಜಾಣಮರಿ ಅಲ್ವಾ ನೀನು……" ಅವನೆಡೆಗೆ ಆಕ್ಷೇಪಾರ್ಹ ನೋಟಬೀರುತ್ತಲೇ ಮಗಳನ್ನು ಸಮಾಧಾನಿಸುತ್ತಾ ಕೋಣೆಯಿಂದ ಹೊರಗೆ ಕರೆದೊಯ್ದಳು ಮಡದಿ.

"ಇಲ್ನೋಡು, ನನ್ನ ಜಾಣಮರಿ ಅಲ್ವಾ ನೀನು. ನಮ್ಮ ವೈಷೂ ಪುಟ್ಟಿ ಸ್ಟ್ರಾಂಗ್ ಗರ್ಲ್ ಅಲ್ವಾ? ಹೆದರ್ಕೋಬಾರದು. ಏನಾಗಲ್ಲ ಪುಟ್ಟಾ. ಶ್ರೀಧರ್ ಅಂಕಲ್ ಎಲ್ಲಾ ಸರಿಮಾಡ್ತಾರೆ ಆಯ್ತಾ. ಸಂಜೆಯಾಗುವಷ್ಟರಲ್ಲಿ ಗಾಯ ಎಲ್ಲಾ ಮಾಯ ಆಗಿರುತ್ತೆ. ಆಮೇಲೆ ನಾವಿಬ್ರೂ ಸೇರಿ ಮಲ್ಲಿಗೆಹೂ ಬಿಡಿಸೋಣ…….."

"ತುಂಬಾ ನೋವಾಗ್ತಿದೆ ಜಯಂತಾಂಟಿ…. ನನ್ಗೆ ಹೆದ್ರಿಕೆ ಆಗ್ತಿದೆ. ಸೂಜಿ ಚುಚ್ತಾರಾ…? ಅಮ್ಮ ಬೇಕು ನಂಗೆ….."

"ಏನಾಗಲ್ಲ ವೈಷೂ….... ನೀನು ಒಳಗೆ ಹೋಗಿ ಹೊರಗೆ ಬರುವಷ್ಟ್ರಲ್ಲಿ ಅಮ್ಮ ಬಂದಿರ್ತಾರೆ. ಒಳಗೆ ಶ್ರೀಧರ್ ಅಂಕಲ್ಲೇ ಬರ್ತಾರೆ ನಿಂಗೆ ಮದ್ದುಹಚ್ಚೋಕೆ ಆಯ್ತಾ. ಏನಾಗಲ್ಲ ಪುಟ್ಟಮ್ಮಾ…..."

"ಶ್ರೀಧರ್ ಅಂಕಲ್..... ಪ್ರಾಮಿಸ್ ನೀವೇ ಬರ್ತೀರಾ ಅಲ್ವಾ…."

ವೈಜಯಂತಿಯ ಕೈಹಿಡಿದ ಪುಟ್ಟ ವೈಷೂ ಸ್ಟ್ರೆಚರ್ ಮೇಲಿನಿಂದಲೇ ಪ್ರಶ್ನಿಸುತ್ತಿರುವಂತೆ ಅನಿಸಿ ಉಸಿರುಭಾರವಾಯಿತು. ಕೋಣೆಯಲ್ಲಿ ಕುಳಿತಿರಲಾಗದೇ ಎದ್ದು ಹೊರಬಂದ. ಕಾಲುಗಳು ಅಪ್ರಯತ್ನವಾಗಿ ಮಲ್ಲಿಗೆ ಬಳ್ಳಿಯತ್ತಲೇ ಸಾಗಿದವು. ಕಮಾನಿಗೆ ಒರಗಿ ನಿಂತವನ ಗಮನ ರಸ್ತೆಯ ಆಚೆ ಬದಿಗಿದ್ದ ತಾತ್ಕಾಲಿಕ ಜೋಪಡಿಗಳತ್ತ ಹರಿಯಿತು. ಮಲ್ಲಿಗೆಬಳ್ಳಿಯನ್ನೇ ಶೂನ್ಯಭಾವದಿಂದ ದಿಟ್ಟಿಸುತ್ತಿದ್ದ ಲೀಲಕ್ಕನನ್ನು ಕಂಡಿದ್ದೇ ಇನ್ನಷ್ಟು ಪ್ರಕ್ಷುಬ್ಧಗೊಂಡಿತು ಮನ.

"ಶ್ರೀಧರಪ್ಪಾ….. ನನ್ನ ಮಗೀಗೆ ಏನಾಗಕಿಲ್ಲ ಅಲ್ವಾ? ಏಟೊಂದು ನೆತ್ರ ಸುರ್ದೈತೆ. ನಂಗಂತ ಇರೋದು ಅದೊಂದೇ ಜೀವ. ಅದಕ್ಕೇನಾರ ಆದ್ರೆ ನಾ ಉಳಿಯಾಕಿಲ್ಲ ಶ್ರೀಧರಪ್ಪ….."

"ಮಗೂಗೆ ಏನೂ ಆಗಿಲ್ಲ ಲೀಲಕ್ಕ…ಒಂದಿಷ್ಟು ರಕ್ತ ಹೋಗಿದೆ. ಬಿದ್ದ ಆಘಾತಕ್ಕೆ ಗಾಬರಿಯಾಗಿದ್ದಾಳಷ್ಟೇ. ಮತ್ತೇನೂ ಆಗಿಲ್ಲ……"

"ಡಾಕ್ಟರ್….. ಮಗುದು ಎಬಿ ನೆಗೆಟಿವ್ ಬ್ಲಡ್ ಗ್ರೂಪ್. ನಮ್ಮಲ್ಲಿ ಸ್ಟಾಕ್ ಇಲ್ಲ. ಇನ್ನೊಂದುಗಂಟೆಯಲ್ಲಿ ಅರೇಂಜ್ ಮಾಡ್ತೀವಿ ಅಂದಿದ್ದಾರೆ….."

"ಎಬಿ ನೆಗೆಟಿವಾ……?"

"ಹೌದು ಸರ್. ಅದಕ್ಕೇ ಡೋನರ್ ಸಿಗೋದು ಕಷ್ಟಆಗ್ತಿದೆ"

"ಸರ್…..?"

"ಸರಿ…. ಒಂ….. ಒಂದು…... ಒಂದ್ಕೆಲಸ ಮಾಡು. ಬ್ಲಡ್ ಅರೇಂಜ್ ಆಗೋದ್ರೊಳಗೆ ನೀನು ಓಟಿ ತಯಾರಿಡು ಹೋಗು….."

ರಭಸವಾಗಿ ಬೀಸಿದ ಗಾಳಿಗೆ ರಾಶಿಹೂಗಳು ಮೈಮೇಲೆ ಉದುರಿದಾಗ ಇಹಕ್ಕಿಳಿದ ಶ್ರೀಧರ ಮತ್ತೆ ಲೀಲಕ್ಕನತ್ತ ಕಡೆಗಣ್ಣಿನಲ್ಲೂ ನೋಡದೇ ನಿಟ್ಟುಸಿರಿಟ್ಟು ಕೋಣೆಗೆ ಹಿಂದಿರುಗಿದ.

**************************************

"ವಾಟ್ಸ್ ರಾಂಗ್ ವಿತ್ ಯೂ ಶ್ರೀ? ನಿನ್ಗೆ ಗೊತ್ತುತಾನೇ ಮನೀಷಾ ಬಗ್ಗೆ? ಹುಟ್ಟಿದಂದಿನಿಂದ ಇಲ್ಲಿಯವರೆಗೆ ಬರೀ ಹಿಂಸೆಯೇ ಅವಳ ಪಾಲಿಗಿದ್ದದ್ದು. ಸಣ್ಣಮಗುವಾಗಿದ್ದಾಗಿಂದ ಏನೇನೆಲ್ಲಾ ಟ್ರೀಟ್ಮೆಂಟ್ ಕೊಡಿಸಿದ್ರೂ ಸುಧಾರಿಸದೇ ನಮ್ಮ ಕೈಜಾರಿಯೇ ಹೋದ್ಲು ಅನ್ನೋ ತನಕ ಆಗಿತ್ತು ಪರಿಸ್ಥಿತಿ. ಉಸಿರುತೆಗೆಯೋಕೆ ಆಗದೇ ಅವಳು ನರಳುವಾಗ ಅದೆಷ್ಟು ಯಾತನೆ ಅನುಭವಿಸಿದ್ದೀವಿ ನಾವು. ಮರೆಯುವಂತಹ ನೋವಾ ಅದು? ಅವಳದ್ದು ಬೇರೆ ರೇರೆಸ್ಟ್ ಬ್ಲಡ್ ಗ್ರೂಪ್. ಡೋನರ್ ಸಿಗೋದೇ ಇಲ್ಲಅಂತ ಅವಳ ಮೇಲಿನ ಆಸೆನೇ ಕೈಬಿಟ್ಟಾಗಿತ್ತು ನಾವು. ಏನೋ ನಮ್ಮ ಅದೃಷ್ಟ. ಭಗವಂತ ನಮ್ಮ ಕೈಬಿಡ್ಲಿಲ್ಲ. ಸರಿಯಾದ ಸಮಯಕ್ಕೆ ಅವ್ಳಿಗೆ ಹೊಂದುವಂತಹ ಡೋನರ್ ಸಿಕ್ಕಿ ಮನೀಷಾ ನಮ್ಮ ಪಾಲಿಗೆ ಉಳಿದ್ಲು. ಈ ಏಳುವರ್ಷಗಳ ಯಮಯಾತನೆಗೊಂದು ಮುಕ್ತಿ ಸಿಕ್ಕಿತು. ಇಂತಹ ನಿರಾಳತೆಯ ಸಮಯದಲ್ಲಿ ಇದೆಂತಹಾ ವಿಚಿತ್ರ ವರ್ತನೆ ನಿನ್ದು? ಆ ಮಗು ಅಷ್ಟು ಆಸೆಯಿಂದ ನಿನ್ನ ಹಿಂದೆಮುಂದೆ ಸುತ್ತುತ್ತಿದ್ರೆ ನೀನು ಅವಳ ಮುಖ ಕೂಡಾ ನೋಡದಂತೆ ಓಡಾಡ್ತಿಯಲ್ಲ? ಎಷ್ಟು ಬೇಜಾರ್ ಮಾಡ್ಕೊಂಡಿದ್ದಾಳೆ ಅವ್ಳು. ನೋಡು ಶ್ರೀ….... ನೀನು ನನ್ನ ಜೊತೆ ಸರಿಯಾಗಿ ಮಾತಾಡ್ದೇ ಇದ್ರೂ ತೊಂದ್ರೆ ಇಲ್ಲ ಆದ್ರೆ ಯಾವುದೇ ಕಾರಣಕ್ಕೂ ಮನೀಷಾ ಮನಸ್ಸನ್ನು ನೋಯಿಸ್ಬೇಡ. ಅಷ್ಟೇ ಕೇಳೋದು ನಾನು ನಿನ್ಹತ್ರ…..…." ವೈಜಯಂತಿಯ ಮಾತುಗಳಲ್ಲಿ ಅಡಗಿದ್ದ ನೋವು ಅವನಿಗೆ ತಿಳಿಯದ್ದೇನಲ್ಲ. ಅವನೂ ಅದೇ ನೋವಲ್ಲಿ ಮುಳುಗೆದ್ದವನೇ. ಆದರೆ ಅದನ್ನೂ ಮೀರಿದ ಅವ್ಯಕ್ತ ವೇದನೆಯೊಂದು ಅವನ ಆಂತರ್ಯದಲ್ಲಿ ಮಿಸುಕಾಡುತ್ತಿತ್ತು.

*************************************

ಮಲ್ಲಿಗೆಬಳ್ಳಿಯ ಕಮಾನಿಗೆ ಆತುಕೊಂಡು ಕುಳಿತಿದ್ದ ಶ್ರೀಧರ. ಹೂಗಳಿಲ್ಲದ ಮಲ್ಲಿಗೆಬಳ್ಳಿ ಬಾಡಿ ತನ್ನಂದಕಳೆದುಕೊಂಡಿತ್ತು. ಎದುರಿನ ಜೋಪಡಿಯೆದುರು ಯಾರೋ ಮಕ್ಕಳು ಆಡಿಕೊಳ್ಳುತ್ತಿದ್ದರು.

"ಲೀಲಕ್ಕ ಹೋಗ್ಬಿಟ್ರಂತೆ ಶ್ರೀ…. ತುಂಬಾ ಒಳ್ಳೆ ಹೆಂಗಸು. ಒಬ್ಬಂಟಿಯಾಗೇ ಬದುಕನ್ನು ಎದುರಿಸಿದ ಗಟ್ಟಿಗಿತ್ತಿ. ಇದ್ದೊಬ್ಬ ಮಗಳ ಮೇಲೆ ಪ್ರಾಣನೇ ಇಟ್ಕೊಂಡಿದ್ರು ಪಾಪ. ಅವಳಂತೂ ಎಷ್ಟು ಮುದ್ದಾಗಿದ್ಲು. ಜಯಂತಾಂಟಿ ಜಯಂತಾಂಟಿ ಅಂತ ನನ್ನ ಹಿಂದೆಮುಂದೆ ಸುತ್ತೋಳು. ನಮ್ಮ ಮನೀಷಾನೇ ಮನೆತುಂಬಾ ಓಡಾಡ್ಕೊಂಡಿದ್ದಾಳೆ ಅನ್ನಿಸ್ತಿತ್ತು ನನ್ಗೆ. ಮನೀಷಾ ಕೂಡಾ ತುಂಬಾ ಹಚ್ಕೊಂಡಿದ್ಲು ವೈಷೂನ. ಆ ಮಲ್ಲಿಗೆಹೂವಂದ್ರೆ ಅದೆಷ್ಟು ಆಸೆನೇನೋ ಅವ್ಳಿಗೆ. ದುರಾದೃಷ್ಟ ನೋಡು…….. ಅದೇ ಮಲ್ಲಿಗೆಹೂ ಬಿಡಿಸೋಕೆ ಹೋಗಿ ಬಿದ್ದಿದ್ದೇ ನೆಪವಾಗಿಹೋಯ್ತು. ವಿಪರ್ಯಾಸವೆಂದರೆ ನಮ್ಮ ಮನೀಷಾ ಪುಟ್ಟಿಗೆ ಡೋನರ್ ಸಿಕ್ಕಿ ಹಾರ್ಟ್ ಸರ್ಜರಿ ಆದ ದಿನವೇ ಆ ಮಗು ನಮ್ಮನ್ನು ಬಿಟ್ಟುಹೋಯ್ತು. ಅದನ್ನು ನೆನಸ್ಕೊಂಡ್ರೂ ಬೇಜಾರಾಗುತ್ತೆ. ನಮಗಾದ್ರೋ ಮನೀಷಾ ಹುಷಾರಾಗಿ ಓಡಾಡ್ಕೊಂಡು ಇರೋದ್ರಿಂದ ವೈಷೂ ಇಲ್ಲದ ಬೇಸರ ಅಷ್ಟೊಂದು ಕಾಡ್ಲಿಲ್ಲ. ಆದ್ರೆ ಪಾಪ ಲೀಲಕ್ಕ…. ಅವರನ್ನು ನೋಡೋಕಾಗ್ತಿರ್ಲಿಲ್ಲ ಅವ್ಳು ಹೋದ್ಮೇಲೆ. ಬದುಕಿನ ಮೇಲೆ ಆಸಕ್ತಿನೇ ಕಳ್ಕೊಂಡಿದ್ರು. ಕೊನೆಗೆ ಮಗಳನ್ನೇ ಹಿಂಬಾಲಿಸಿದ್ರು ಪಾಪ‌….."

ಹೆಂಡತಿಯ ಮಾತುಗಳೇ ಮನದಲ್ಲಿ ಮಾರ್ದನಿಸುತ್ತಿದ್ದವು. ಹಾಗೆಯೇ ಕಣ್ಮುಚ್ಚಿದ…….

"ಶ್ರೀಧರ್, ಐ ಕ್ಯಾನ್ ಅಂಡರ್ಸ್ಟಾಂಡ್ ಯುವರ್ ಫೀಲಿಂಗ್ಸ್. ಆದ್ರೇನು ಮಾಡೋದು? ಶೀ ಹ್ಯಾಸ್ ಕಂಜನಿಟಲ್ ಹಾರ್ಟ್ ಡಿಸೀಸ್. ಎಲ್ಲಾ ತರದ ಮೆಡಿಸಿನ್ ಟ್ರೈ ಮಾಡಿ ಆಗಿದೆ. ನೋ ಯೂಸ್. ವಿ ಹ್ಯಾವ್ ಟು ಗೋ ಫಾರ್ ಹಾರ್ಟ್ ಟ್ರಾನ್ಸಪ್ಲಾನ್ಟೇಷನ್. ಅದೇ ಲಾಸ್ಟ್ ಆಪ್ಷನ್ ಇರೋದು. ಆದ್ರೆ ಅವಳ ಬ್ಲಡ್ ಗ್ರೂಪೇ ದೊಡ್ಡ ಸಮಸ್ಯೆ. ಡೋನರ್ ಸಿಗೋದು ಅನುಮಾನವೇ….."

“ಡಾಕ್ಟರ್ ಮಗುದೂ ಎಬಿ ನೆಗೆಟಿವ್ ಬ್ಲಡ್ ಗ್ರೂಪ್…”

“ಸರಿ…. ಒಂದು….. ಒಂದ್ಕೆಲಸ ಮಾಡು. ಬ್ಲಡ್ ಅರೇಂಜ್ ಆಗೋದ್ರೊಳಗೆ ನೀನು ಓಟಿ ತಯಾರಿಡು ಹೋಗು…..”

"ಶ್ರೀಧರ್ ಅಂಕಲ್, ಪ್ರಾಮಿಸ್ ನೀವೇ ಬರ್ತೀರಾ ಅಲ್ವಾ? ನಂಗೆ ನೋವಾಗ್ತಿದೆ. ರಕ್ತ ಬರ್ತಿದೆ…...."

"ಶ್ರೀಧರಪ್ಪಾ…. ನನ್ಮಗೀಗೆ ಏನಾಗಕಿಲ್ಲ ಅಲ್ವಾ?"

"ಲೀಲಕ್ಕ ಹೋಗ್ಬಿಟ್ರಂತೆ ಶ್ರೀ…."

"ನಮ್ಮ ಮನೀಷಾನೇ ಮನೆ ತುಂಬಾ ಓಡಾಡ್ಕೊಂಡಿದ್ದಾಳೇನೋ ಅನ್ನಿಸ್ತಿತ್ತು ನನ್ಗೆ…….."

"ಆ ಮಲ್ಲಿಗೆಹೂವಂದ್ರೆ ಅದೆಷ್ಟು ಆಸೆನೇನೋ ಅವ್ಳಿಗೆ. ದುರಾದೃಷ್ಟ ನೋಡು….... ಅದೇ ಮಲ್ಲಿಗೆಹೂ ಬಿಡಿಸೋಕೆ ಹೋಗಿ ಬಿದ್ದಿದ್ದೇ ನೆಪವಾಗಿಹೋಯ್ತು"

"ನಂಗೆ ಭಯ ಆಗ್ತಿದೆ ಶ್ರೀಧರ್ ಅಂಕಲ್……"

ಬೆಚ್ಚಿ ಕಣ್ತೆರೆದ…….

"ಸುಖ್ ಕಿ ಕಲಿಯಾ ದುಃಖ್ ಕೇ ಕಾಂಟೇ ಮನ್ ಸಬ್ ಕಾ ಆಧಾರ್
ಮನ್ ಸೆ ಕೋಯೀ ಬಾತ್ ಛುಪೇ ನಾ ಮನ್ ಕೆ ನೈನ್ ಹಜಾ಼ರ್
ಜಗ್ ಸೆ ಚಾಹೇ ಭಾಗ್ ಲೇ ಕೋಯೀ
ಮನ್ ಸೇ ಭಾಗ್ ನ ಪಾಯೇ..…"

ಟ್ರಾನ್ಸಿಸ್ಟರ್ನಿಂದ ಹೊರಹೊಮ್ಮುತ್ತಿದ್ದ ಸಾಲುಗಳು ತನ್ನಂತರಂಗವನ್ನೇ ಬಗೆಯುತ್ತಿವೆಯೇನೋ ಎಂಬ ಭೀತಿಯಾವರಿಸಿತು ಅವನಿಗೆ.

ಬಾಡಿದ ಮಲ್ಲಿಗೆಬಳ್ಳಿಯ ತುಂಬಾ ಕೆಂಬಣ್ಣದ ಮಲ್ಲಿಗೆಹೂಗಳು ಅರಳಿ ನಿಂತಂತೆ ಕಂಡಿತು. ಪ್ರತೀ ಹೂವಿನಲ್ಲೂ ಕೆಂಪುನಿಲುವಂಗಿಯ ಬಾಲೆಯೇ ನಕ್ಕಂತೆ ಭಾಸವಾಗತೊಡಗಿತು.

ಅದಾರು….…..?

ವೈಷೂವೇ…...? ಹೌದು…. ಅದು ವೈಷ್ಣವಿಯೇ…..

ಇಲ್ಲ ಇಲ್ಲ…….. ಅದು ಮನೀಷಾ…….!!

ವೈಷೂ……. ಮನೀಷೆ…….
ಮನೀಷೆ……. ವೈಷೂ…….
ಇಲ್ಲಾ….. ಲೀಲಕ್ಕ……!!

ಎರಡೂ ಕೈಗಳಲ್ಲಿ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಶ್ರೀಧರ. ಕೂದಲನ್ನೆಲ್ಲಾ ಕಿತ್ತು ಹಾಕಬೇಕೆನಿಸಿತು.

ಸಾವಿರಾರು ಕೆಂಪುಮಲ್ಲಿಗೆ ಹೂಗಳು…..
ಸಾವಿರಾರು ವೈಷ್ಣವಿಯರು, ಮನೀಷೆಯರು, ಲೀಲಕ್ಕರು……

ಸಾವಿರಾರು ಶ್ರೀಧರರು…… 
ರಕ್ತಪಿಪಾಸುಗಳು…… 
ಸಂಭಾವಿತ ಕೊಲೆಗಾರರು……..
ಕೆಂಪುಮಲ್ಲಿಗೆ……..

"ಬೇಡ ಬೇಡ…. ಹತ್ತಿರ ಬರಬೇಡಿ….. " ಎನ್ನುತ್ತಲೇ ಮಲ್ಲಿಗೆಬಳ್ಳಿಯಿಂದ ದೂರದೂರ ಓಡತೊಡಗಿದ ಶ್ರೀಧರ…….. ಹಿಂಬಾಲಿಸಿ ಬರುತ್ತಿದ್ದ ಶ್ರೀಧರರಿಂದ ದೂರದೂರಕ್ಕೆ ಓಡುತ್ತಲೇ ಇದ್ದ……..!!


ಮುಕ್ತಾಯ

ಶುಕ್ರವಾರ, ಅಕ್ಟೋಬರ್ 2, 2020

ಅವಲೋಕನ

ಪ್ರಕಟವಾಗದೇ ಉಳಿದ ಅವ್ಯಕ್ತ ಭಾವಗಳಿಗೆ ಮನವೇ
ತುರಂಗ 

ಜಗವೇ ಮರೆತ ಪುಟಗಳ ನಡುವೆಲ್ಲೋ ಅವುಗಳ ಮೌನ ತರಂಗ

ಶುಷ್ಕ ಸಂಬಂಧಗಳು ಕಿಸುರಿನೊರೆಯಾಗಿರೆ ನುಡಿಗಳಿಂದಲೇ ಹನನ ಭಾವಗಳ ಅವಸಾನ

ಗಂಟಲ ಸೆರೆಯುಬ್ಬಿಸುವ ನೀರವ ಏಕಾಂತದೊಳಗೊಂದು ಆತ್ಮಾನುಸಂಧಾನ 

ಬರಡಾಗಿದೆ ಅಂತರಂಗದ ಒರತೆ ಬಿರುಕೊಡೆದ ಮನೋಭೂಮಿಯೊಳು ಭಾವಗಳ ದಹನ

ಸಂವೇದನಾರಹಿತ ಸ್ತರ ತಲುಪಿದೆ ಹೃದಯ ಆಗಬೇಕಿದೆ ಚಿತ್ತವೃತ್ತಿಯ ಪುನರಾವಲೋಕನ

ಘಾಸಿಗೊಂಡ ಮನವೇ.... ಸಾಕಿನ್ನು ಭಾವಾವಲಂಬನೆಯ ಹಂಗಿನ ಅನುಭವ

ನಡೆಯೆ ಅಂತರಾತ್ಮನ ದಿವ್ಯ ಚಿಂತನಾಪಥದೊಳು ಅದುವೇ ಸಾಕ್ಷಾತ್ಕಾರದ ಅನುಭಾವ

ಗುರುವಾರ, ಸೆಪ್ಟೆಂಬರ್ 17, 2020

ಅಗ್ನಿ ತರಂಗಿಣಿ 12

ಟೂಟ್ ಕೆ ಬಿಖರ್ ಗಯಾ ವೋ ಚಮಕ್ತಾ ಸಿತಾರಾ….

ದೇವೇಂದ್ರ ಬಧೌರಿಯಾ……. ಭೈರೋನ್ ನ ಅನಭಿಷಿಕ್ತ ಸಾಮ್ರಾಟ. ಮುಕುಟವಿಲ್ಲದ ಮಹಾರಾಜ…… 

ಪ್ರಜಾಪ್ರಭುತ್ವ, ಸಮಾನತೆ, ಉಳುವವನೇ ಭೂಮಿಯ ಒಡೆಯ ಎಂಬ ಮಹಾನ್ ಪರಿಕಲ್ಪನೆಗಳೆಲ್ಲವೂ ಕೇವಲ ಪುಸ್ತಕಗಳಿಗೆ, ಸರ್ಕಾರಿ ದಸ್ತಾವೇಜುಗಳಿಗೆ ಸೀಮಿತವಾಗಿರುವ ಆದರ್ಶದ ಮುಖವಾಡಗಳು. ವಾಸ್ತವದಲ್ಲಿ ಹಣ, ಅಧಿಕಾರವುಳ್ಳ ದೇವೇಂದ್ರ ಬಧೌರಿಯಾನಂತಹವರದ್ದೇ ಪ್ರಭುತ್ವ……. ಅವನೇ ದೈವಾಂಶ ಸಂಭೂತ ಅವನೇ ಧರಣಿಗೊಡೆಯ. ಹೆಣ್ಣು ಹೊನ್ನು, ಮಣ್ಣೆಲ್ಲವೂ ಅವನ ಪದತಲಕ್ಕೇ ಸಮರ್ಪಿತ. ನನ್ನ ಬಾಪೂವಿನಂತಹ ಸ್ಥಿತಿವಂತರು 'ನೀನೇ ಇಂದ್ರ ನೀನೇ ಚಂದ್ರ' ಎಂದು ಬಹುಪರಾಕ್ ನುಡಿಯುತ್ತಾ ಅವನ ಆಸ್ಥಾನದಲ್ಲಿ ಆಯಕಟ್ಟಿನ ಪದವಿಗಳನ್ನು ಪಡೆದು ಸುಖ ವಿಲಾಸದಲ್ಲಿ ತೇಲುತ್ತಾರೆ. ಇನ್ನುಳಿದ ಬಡ ಪರಿಜನರು ಅರಸ ಮತ್ತವನ ವಂದಿಮಾಗಧರ ಊಳಿಗ ಮಾಡುತ್ತಲೇ ಸವೆದು ಹೋಗುತ್ತಾರೆ. ಇದು ಕೇವಲ ಭೈರೋನ್ ಗ್ರಾಮದ ಕಥೆಯಲ್ಲ……. ಇದು ಈ ದೇಶದ ಪ್ರಜಾಪ್ರಭುತ್ವದ ಹಕೀಕತ್ತು….. ಇಲ್ಲಿನ ಸಾಮಾನ್ಯ ಪ್ರಜೆಗಳ ವ್ಯಥೆಯ ಕಥೆ……..

ದೇವೇಂದ್ರ ಬಧೌರಿಯಾ ಭೈರೋನ್ ಗ್ರಾಮದ ಸರಪಂಚ. ನಮ್ಮದು ಶಾಮ್ಲಿ ಖಾಪ್ ಪಂಚಾಯತ್ ಅಧೀನದಲ್ಲಿ ಬರುವ ಪಂಚಾಯತ್. ಸರ್ಕಾರಿ ಪಂಚಾಯತಿಗಳು ಅಸ್ತಿತ್ವಕ್ಕೆ ಬಂದಿದ್ದರೂ ಕೂಡಾ ನಮ್ಮ ಭಾಗದಲ್ಲಿ ಖಾಪ್ ಪಂಚಾಯತ್ ಹೊಂದಿರುವ ಹಿಡಿತವೇ ಬೇರೆಯದ್ದು. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊತ್ತ ಈ ಖಾಪ್ ಪಂಚಾಯತ್ ನ ರೀತಿ, ನೀತಿಗಳ ಬಗ್ಗೆ ಏನೆಂದು ಹೇಳಲಿ? ಖಾಪ್ ಆಡಳಿತ ವರ್ಗದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಅವೆಲ್ಲವೂ ಪುರುಷರಿಗೆ ಮಾತ್ರವೇ ಮೀಸಲು. ಕೆಲವು ಖಾಪ್ ಗಳಲ್ಲಂತೂ ಮಹಿಳೆಯ ಭಾಗವಹಿಸುವಿಕೆಯೂ ನಿಷಿದ್ಧ. ಅವರ ಪ್ರತಿನಿಧಿಗಳಾಗಿ ಸಂಬಂಧಿತ ಪುರುಷರು ಭಾಗವಹಿಸುತ್ತಾರೆ. ವಿಪರ್ಯಾಸವೆಂದರೆ ಈ ಖಾಪ್ ಪಂಚಾಯತ್ ತೆಗೆದುಕೊಳ್ಳುವ ಮುಕ್ಕಾಲು ಪಾಲು ನಿರ್ಧಾರಗಳು, ನೀಡುವ 'ನ್ಯಾಯ' ತೀರ್ಪುಗಳು ಮಹಿಳೆಯರಿಗೆ ಸಂಬಂಧಪಟ್ಟವು. ಎಷ್ಟೆಂದರೂ ದೌರ್ಜನ್ಯಕ್ಕೆ ಒಳಗಾಗುವವಳು, ಸಂತ್ರಸ್ತೆಯಾಗಿಯೂ ಅಪನಿಂದೆಯ ಬಲಿಪಶುವಾಗುವವಳು ಅವಳೆ ತಾನೇ……? ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ ಸಂಬಂಧಿತ ವ್ಯಾಜ್ಯಗಳ ಕುರಿತಾಗಿ ಚರ್ಚೆ ನಡೆಯುವಾಗಲೂ ಪಂಚರ ಗುಂಪಿನಲ್ಲಿ ಮಹಿಳಾ ಸದಸ್ಯರಿರುವುದಿಲ್ಲ. ಆದರೆ ಅಲ್ಲಿಂದ ಹೊರಡುವ ಫರ್ಮಾನುಗಳು, ಕಾನೂನುಗಳು ಲಾಗೂ ಆಗುವುದು ಮಾತ್ರ ಅವಳ ಮೇಲೆಯೇ…….

ಇಂತಹ ನಿರಂಕುಶ ಸ್ವರೂಪದ ಪಂಚಾಯತ್ ನ ಸರಪಂಚನೆಂದ ಮೇಲೆ ಕೇಳಬೇಕೇ? ಭೈರೋನ್ ನಲ್ಲಿ ಅವನದ್ದು ಪ್ರಶ್ನಾತೀತ ಅಧಿಪತ್ಯ. ಭೈರೋನ್ ಮಾತ್ರವಲ್ಲದೇ ಶಾಮ್ಲಿ ಹಾಗೂ ಮುಜ್ಜಫರ್ ನಗರದಲ್ಲೂ ಅವನಿಗೆ ಬೇಕಾದಷ್ಟು ಆಸ್ತಿಪಾಸ್ತಿಗಳಿವೆ. ಅವನಿಗೋ ಶ್ರೀಮಂತಿಕೆಯ ಹಮ್ಮಿನೊಂದಿಗೆ ಅಧಿಕಾರದ ಅಮಲು ನೆತ್ತಿಯಲ್ಲಿತ್ತು. ಸರಪಂಚ ಪದವಿಯನ್ನು ತನ್ನ ವೈಯಕ್ತಿಕ ಹಿತಾಸಕ್ತಿಗಳ ಈಡೇರಿಕೆಗಾಗಿ ಆತ ಬಳಸುತ್ತಾನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ ಅವನೆದುರು ನಿಂತು ಪ್ರಶ್ನಿಸುವ ಧೈರ್ಯವಾದರೂ ಯಾರಿಗಿತ್ತು? ಇಷ್ಟಕ್ಕೂ ಇಲ್ಲಿ ಪ್ರಶ್ನಿಸಲು ಬೇಕಾಗಿರುವುದು ಧೈರ್ಯವೂ ಅಲ್ಲ….. ಹಣ, ಅಂತಸ್ತುಗಳಿದ್ದರೆ ಸಾಕು. ಪ್ರಶ್ನಿಸುವ ಸಾಧ್ಯತೆಯುಳ್ಳ ನನ್ನ ಬಾಪುವಿನಂತಹ ಸ್ಥಿತಿವಂತರು ಬಧೌರಿಯಾನ ಆಪ್ತವಲಯದಲ್ಲಿ ಗುರುತಿಸಿಕೊಂಡು ಸಹಕಾರ ಗಳಿಸಿಕೊಳ್ಳುವ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವನ ಕೃಪಾಕಟಾಕ್ಷಕ್ಕಾಗಿ ಕಾಯುವವರು ಅವನನ್ನು ಪ್ರಶ್ನಿಸಿಯಾರೇ? ಇನ್ನು ಉಳಿದ ಜನರು…... ಉಸಿರಾಡಲೂ ಅವನ ಅನುಮತಿ ಬೇಕಿರುವಾಗ ಅವನೆದುರು ನಿಲ್ಲುವ ಯೋಚನೆಯಾದರೂ ಬರುವುದೆಂದು? ಎಲ್ಲವೂ ಸೇರಿ ದೇವೇಂದ್ರ ಬಧೌರಿಯಾ ತನ್ನನ್ನು ತಾನೇ ಇಂದ್ರನೆಂದು ಭ್ರಮಿಸಿ ಭೈರೋನ್ ಗ್ರಾಮವನ್ನೇ ತನ್ನ ಅಮರಾಮತಿಯಾಗಿಸಿಕೊಂಡಿದ್ದ.

ಈ ದೇವೇಂದ್ರನ ಕುಲಪುತ್ರನೇ ಸೂರಜ್ ಬಧೌರಿಯಾ. ಹೆಸರು ಸೂರಜ್ ಎಂದಾದರೂ ಅವನನ್ನು ಎಲ್ಲರೂ ಕರೆಯುತ್ತಿದ್ದದ್ದು ಬಬ್ಲೂ ಎಂದು. ಅಗತ್ಯಕ್ಕೂ ಮೀರಿದ ಹಣದ ದೌಲತ್ತು, ಅಧಿಕಾರದ ಮದ ಎರಡೂ ಬಾಲ್ಯದಿಂದಲೇ ಅವನ ಹಾದಿ ತಪ್ಪಿಸಿದ್ದವು. ಸದಾ ಸಿಗರೇಟು, ಕುಡಿತದ ನಶೆಯಲ್ಲಿ ತೇಲುತ್ತಾ ಅಂಕೆ ಮೀರಿದ ಸ್ವೇಚ್ಛೆ, ಪುಂಡಾಟಿಕೆಗಳಲ್ಲೇ ಅವನ ದಿನ ಸಾಗುತ್ತಿದ್ದದ್ದು. ಅದಕ್ಕೆ ಸರಿಯಾಗಿ ಬೆನ್ನು ಬಿದ್ದು ತಿರುಗುವ ನಾಲ್ವರು ಅಪಾಪೋಲಿಗಳ ಸಹವಾಸ ಸಿಕ್ಕಿದ್ದು ಅವನ ಹಾರಾಟವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಖೂಳ ಗುಂಪಿನ ನಾಯಕನಾಗಿ ಮೆರೆಯುತ್ತಾ ಎಲ್ಲರನ್ನೂ ಅದರಲ್ಲೂ ವಿಶೇಷವಾಗಿ ಹೆಣ್ಮಕ್ಕಳನ್ನು ಕೆಣಕುವುದೇ ಚಟವಾಗಿತ್ತು ಅವನಿಗೆ. ತನ್ನ ಕಣ್ಣಳತೆಗೆ ಬರುವ ಹೆಣ್ಣುಗಳನ್ನೆಲ್ಲಾ ಅಶ್ಲೀಲ ಮಾತುಗಳಿಂದ ಛೇಡಿಸುವುದು, ಮೈ ಕೈ ಸವರುವುದು….... ಈ ಐವರು ಸಾರ್ವಜನಿಕವಾಗಿ ಇಂತಹ ಕೆಲಸಗಳಲ್ಲೇ ವ್ಯಸ್ತರಾಗಿರುವ ಬಗ್ಗೆ ಊರಿನವರಿಗೆ ತಿಳಿದಿಲ್ಲವೆಂದೇನಲ್ಲ. ಆದರೂ ಯಾರೂ ಪ್ರಶ್ನಿಸರು…... ಅದು ದೇವೇಂದ್ರನ ಬಗೆಗಿನ ಭಯವೋ ಇಲ್ಲಾ ಗಂಡಸರು ಹೆಣ್ಮಕ್ಕಳನ್ನು ಛೇಡಿಸಿದರೆ ತಪ್ಪೇನು ಎಂಬ ಯೋಚನೆಯೋ ನನಗಂತೂ ತಿಳಿದಿಲ್ಲ. ಒಮ್ಮೆ ಹೊಲದಿಂದ ಮನೆಗೆ ವಾಪಾಸಾಗುವ ಹಾದಿಯಲ್ಲಿ ಅಡ್ಡಗಟ್ಟಿದವರಿಗೆ ಕೈಯಲ್ಲಿದ್ದ ಹನ್ಸುವಾ (ಕುಡುಗೋಲು) ತೋರಿಸಿ ಓಡಿಸಿದ್ದು ನೆನಪಿದೆ ನನಗೆ. ಆ ನಂತರದಲ್ಲಿ ನನ್ನ ಕಂಡರೂ ಕಾಣದವನಂತೆ ಮಾಡಿ ಹೋಗುವುದರ ಹಿಂದಿನ ಕಾರಣ ನನ್ನ ಬಗ್ಗೆ ಊರಲ್ಲಿ ಬೆಳೆದಿದ್ದ ಊಹಾಪೋಹಗಳೇ ಇರಬೇಕು. 

ಅದ್ಯಾವ ದುರ್ಘಳಿಗೆಯಲ್ಲಿ ಬೇಲಾ ಸೂರಜ್ ನ ಕಣ್ಣಿಗೆ ಬಿದ್ದಳೋ ಅವಳ ಬದುಕಿಗೆ ಗ್ರಹಣ ಬಡಿದಂತಾಯ್ತು. ಅವನದಂತೂ ಒಂದಿನಿತೂ ನಾಚಿಕೆಯೇ ಇಲ್ಲದ ಜಿಗುಟು ಸ್ವಭಾವ. ಒಮ್ಮೆ ಹಿಂದೆ ಬಿದ್ದನೆಂದರೆ ಬೆನ್ನತ್ತಿದ ಬೇತಾಳದಂತೆಯೇ. ಅದರಲ್ಲೂ ಬೇಲಾಳದ್ದು ಬಲು ಸೌಮ್ಯ ಪ್ರವೃತ್ತಿ. ಅವಳ ಸಾತ್ವಿಕ ಮೌನ ಅವನಿಗೆ ಇನ್ನಷ್ಟು ಸದರವಾಯಿತು. ದಿನಂಪ್ರತಿ ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಗಟ್ಟಿ ಅಸಭ್ಯವಾಗಿ ಮಾತನಾಡುವುದು, ಹಿಂದೆ ಹಿಂದೆ ಸುತ್ತುವುದೇ ಆಟವಾಯಿತು. ಮೊದಲೇ ಸೂಕ್ಷ್ಮ ಮನದ ಹೆಣ್ಣು ಕಂಗಾಲಾಗಿರಬೇಕು…... ಇಂತಹ ವಿಚಾರವನ್ನು ತಂದೆಯ ಬಳಿ ಹೇಗೆ ಹೇಳಲಿ ಎಂಬ ಹಿಂಜರಿಕೆಯೋ ಇಲ್ಲಾ ಅಧಿಕಾರಬಲ ಹೊಂದಿರುವ ಸೂರಜ್ ಮತ್ತವನ ಅಪ್ಪನಿಂದ ತನ್ನ ತಂದೆಗೆ ಏನಾದರೂ ತೊಂದರೆಯಾಗಬಹುದೆಂದು ಬಗೆದಳೋ ಒಟ್ಟಿನಲ್ಲಿ ಈ ವಿಚಾರವನ್ನು ಕೇಶವ್ ಚಾಚರ ತನಕ ಕೊಂಡೊಯ್ಯಲಿಲ್ಲ ಅವಳು. ಈ ಒಂದು ತಪ್ಪು ನಿರ್ಧಾರ ಅವಳಿಂದ ವಸೂಲಿ ಮಾಡಿದ ಸುಂಕ ಅಪಾರ. ತಂದೆಯ ಬಳಿ ತನಗಾಗುತ್ತಿರುವ ಹಿಂಸೆಯನ್ನು ಹೇಳಿಕೊಳ್ಳುವ ಬದಲಿಗೆ ಮನೆಯಿಂದ ಹೊರಗೆ ಕಾಲಿಡುವುದನ್ನೇ ಆದಷ್ಟು ಕಡಿಮೆ ಮಾಡಿಬಿಟ್ಟಳು. ಕೇಶವ್ ಚಾಚಾ ಬೆಳಿಗ್ಗೆ ಶಾಲೆಗೆ ಹೊರಟರೆಂದರೆ ಸಂಜೆಯೇ ಹಿಂದಿರುಗುತ್ತಿದ್ದುದ್ದು. ಅವರಿಗೆ ಮಗಳಿಗಾಗುತ್ತಿರುವ ಸಮಸ್ಯೆಯ ಸುಳಿವೇ ಹತ್ತಲಿಲ್ಲ. 

ಸದಾ ಮಂದಹಾಸ ಸೂಸುತ್ತಿದ್ದ ಅವಳ ಮೊಗ ಬರಬರುತ್ತಾ ಚಿಂತೆಯ ಮೂಟೆಯೇ ಹೆಗಲೇರಿದಂತೆ ನಿರ್ಜೀವವಾದಾಗಲೇ ನನಗೆ ಅವಳಲ್ಲಿನ ಬದಲಾವಣೆ ಸಣ್ಣದಾಗಿ ಗೋಚರಿಸತೊಡಗಿದ್ದು. ಸದಾ ಲವಲವಿಕೆಯಿಂದಿರುವ ಬೇಲಾ ಇತ್ತೀಚಿಗೆ ಮನೆಯ ಕೆಲಸಕಾರ್ಯಗಳಲ್ಲಿ, ಪಾಠದಲ್ಲಿ ಮುಂಚಿನಷ್ಟು ಆಸಕ್ತಿವಹಿಸುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬರುವ ವೇಳೆಗಾಗಲೇ ಆಕೆ ಮಾನಸಿಕವಾಗಿ ಬಹಳ ಜರ್ಜರಿತಳಾಗಿದ್ದಳೆನಿಸುತ್ತದೆ. ನಾನು ಅದೆಷ್ಟೋ ಬಗೆಯಲ್ಲಿ ಕೇಳಿದೆನಾದರೂ ಆಕೆ ತನ್ನ ಮೌನ ಮುರಿಯಲಿಲ್ಲ. ತನಗೆ ಹೀಗೆಲ್ಲಾ ಸಮಸ್ಯೆಯಾಗುತ್ತಿದೆ ಎಂದು ತೋಡಿಕೊಳ್ಳಲಿಲ್ಲ. ನನಗಾದರೂ ಬೇಲಾಳಿಗೆ ಸೂರಜ್ ಮತ್ತವನ ಸಂಗಡಿಗರಿಂದ ಸಮಸ್ಯೆಯಾಗಿರಬಹುದೆಂಬ ಯೋಚನೆ ಹೇಗೆ ಬಂದೀತು? ಒಂದು ಮಾತು ನನ್ನೊಂದಿಗೆ ಇಲ್ಲಾ ಚಾಚಾನೊಂದಿಗೆ ಹೇಳಿಕೊಂಡಿದ್ದರೆ ನಮ್ಮಿಬ್ಬರ ಬದುಕು ಬೇರೆಯೇ ಆಗಿರುತ್ತಿತ್ತೇನೋ….... ಆದರೆ ಆ ವಿಧಾತನೆಂಬುವವನಿಗೆ ನಮ್ಮ ಮೇಲೆ ಯಾವುದೋ ತೀರದ ಕ್ರೋಧವಿತ್ತಲ್ಲ….…….

ಕೊನೆಕೊನೆಗೆ ಪರಿಸ್ಥಿತಿ ಎಲ್ಲಿಯತನಕ ಹೋಯಿತೆಂದರೆ ನನ್ನೊಂದಿಗೆ ಯಮುನೆಯ ತೀರಕ್ಕೆ ಬರುವುದನ್ನೂ ಅವಳು ನಿಲ್ಲಿಸಿಬಿಟ್ಟಳು. ತನಗೆ ತಾನೇ ಗೃಹಬಂಧನವನ್ನು ವಿಧಿಸಿಕೊಂಡಂತಿತ್ತು ಅವಳ ನಡವಳಿಕೆ. ಇದ್ಯಾಕೋ ತೀರಾ ವಿಪರೀತಕ್ಕೆ ಹೋಗುತ್ತಿದೆ ಎನಿಸಿದಾಗ ಕೇಶವ್ ಚಾಚಾರಿಗೆ ತಿಳಿಸಬೇಕೆನಿಸಿತು. ಆಗಲೇ ಮಂಗಳವಾರ. ಚಾಚಾರೊಂದಿಗೆ ಒಂದಿಷ್ಟು ವಿರಾಮವಾಗಿ ಮಾತನಾಡಲು ಭಾನುವಾರ ಮಾತ್ರವೇ ಸಾಧ್ಯ. ಹಾಗಾಗಿಯೇ ಭಾನುವಾರದ ಪ್ರತೀಕ್ಷೆಯಲ್ಲಿ ನಾನಿದ್ದೆ. 

ಆದರೆ…… ಆ ಭಾನುವಾರದಂದು ಮಾತನಾಡಲು ಏನೂ ಉಳಿಯಲೇ ಇಲ್ಲ…..
ಸಾಮಾನ್ಯವಾಗಿ ಶುಕ್ರವಾರದಂದು ಯಮುನೆಯ ತಟದಲ್ಲಿರುವ ಸಂತೋಷಿ ಮಾತೆಯ ಗುಡಿಗೆ ಬರುವುದು ಬೇಲಾಳ ರೂಢಿ. ಯಮುನೆಯ ಪಾತ್ರದಲ್ಲಿ ಕೂರುವುದು ನನ್ನ ದಿನಚರಿ. ಅವಳ ಪರಿಚಯವಾದನಂತರ ಅವಳು ಗುಡಿಗೆ ಹೋಗಿ ಬರುವತನಕ ಕಾದಿದ್ದು ನಂತರ ಅವಳೊಂದಿಗೆ ವಾಪಾಸಾಗುವ ಹವ್ಯಾಸ ಬೆಳೆದಿತ್ತು. ಅಂತೆಯೇ ಆ ಶುಕ್ರವಾರ ಯಮುನೆಯ ತಟದಲ್ಲಿ ಅವಳಿಗಾಗಿಯೇ ಕಾಯುತ್ತಾ ಕುಳಿತಿದ್ದೆ. ಹೊತ್ತು ಸರಿದು ಸೂರ್ಯ ನೆತ್ತಿಗೇರುತ್ತಾ ಬಂದರೂ ಬೇಲಾಳ ಸುಳಿವಿಲ್ಲ. ಮನವೇಕೋ ಯಾವುದೋ ಕೇಡನ್ನು ಶಂಕಿಸಿದಂತೆ ತಳಮಳಗೊಳ್ಳುತಿತ್ತು. ಎದ್ದು ಕೇಶವ್ ಚಾಚಾರ ಮನೆಯೆಡೆಗೆ ಹೊರಟೆ. ದಾರಿಯುದ್ದಕ್ಕೂ ಇತ್ತೀಚಿನ ಬೇಲಾಳ ಬದಲಾದ ವರ್ತನೆಗಳೇ ಮನಸ್ಸನ್ನು ಮುತ್ತಿ ಕಾಡುತ್ತಿದ್ದವು. ಮನೆ ಕಣ್ಣಳತೆಗೆ ಕಾಣುವಾಗಲೇ ಮನೆಯ ಸಮೀಪ ನಿಂತಿದ್ದ ಕಡು ಹಸಿರು ಬಣ್ಣದ ಓಪನ್ ಜೀಪ್ ಗಮನ ಸೆಳೆಯಿತು……. ಅನುಮಾನವೇ ಉಳಿಯಲಿಲ್ಲ….. ಇಡೀ ಭೈರೋನ್ ನಲ್ಲಿ ಇಂತಹ ಜೀಪಿರುವುದು ಸೂರಜನ ಬಳಿ ಮಾತ್ರವೇ. ಆ ಕ್ಷಣದಲ್ಲೇ ಬೇಲಾಳ ಸಮಸ್ಯೆಯ ಮೂಲ ತಿಳಿದುಹೋಯಿತು ನನಗೆ. ಆದರೆ ಅದಕ್ಕಿಂತ ಹೆಚ್ಚಾಗಿ ಅವಳ ಸಧ್ಯದ ಪರಿಸ್ಥಿತಿಯ ಬಗ್ಗೆ ನೆನೆದು ದಿಗಿಲಾಯಿತು. 

ಒಂದೇ ಉಸಿರಿನಲ್ಲಿ ಮನೆಯತ್ತ ಧಾವಿಸುವಾಗಲೇ ಬೇಲಾಳ ಚೀರಾಟ ಕಿವಿಗೆ ಬೀಳತೊಡಗಿತು. ರಸೋಯಿ ಬಳಿಯ ಬಾಗಿಲಿನಿಂದ ದಟ್ಟವಾದ ಹೊಗೆ…...‌‌.. ಪ್ರಾಣಾಂತಿಕ ಯಾತನೆಯಲ್ಲಿ ಅದ್ದಿ ತೆಗೆದಂತಹ ಆ ಚೀತ್ಕಾರ ಕೇಳಿಯೇ ಎದೆಬಡಿತ ನಿಂತಂತಾಯಿತು ನನಗೆ. ಅಂಗಳ ದಾಟಿ ಮುಂಬಾಗಿಲ ಬಳಿ ಬಂದೆನಾದರೂ ಅದು ಒಳಗಿನಿಂದ ಮುಚ್ಚಿತ್ತು. "ಚೂತಿಯಾ ಸಾಲೀ….. ಮುಝೇ ಜುತ್ತೀ ದಿಖಾಯೇಗಿ? ಮುಝೇ…..?? ಅಬ್ ನತೀಜಾ ಬುಗತ್ ಸಸುರೀ…." ಎನ್ನುವ ಮಾತುಗಳು ಅಸ್ಪಷ್ಟವಾಗಿ ಅವಳ ಚೀರಾಟದ ಮಧ್ಯೆ ಕಿವಿಗೆ ತಾಕುತ್ತಿದ್ದವು. ನನಗೆ ಏನೊಂದೂ ತೋಚದಂತಾಗಿತ್ತು. ಇಡೀ ದೇಹದ ಚೇತನವೆಲ್ಲಾ ಕಾಲಬುಡದಲ್ಲಿ ಸೋರಿಹೋದಂತೆ ಜೀವ ನಿಷ್ಕ್ರಿಯವಾಗಿತ್ತು. ಸಾವರಿಸಿಕೊಂಡು ಹಿಂಬಾಗಿಲ ಬಳಿ ಸಾಗಬೇಕೆನ್ನುವಾಗಲೇ ಬಾಗಿಲು ತೆರೆದುಕೊಂಡಿತು. ಒಳಗಿನಿಂದ ಸೂರಜ್ ಮತ್ತವನ ನಾಲ್ವರು ಜೊತೆಗಾರರು ಗಡಿಬಿಡಿಯಲ್ಲಿ ಹೊರಬಂದರು. ಅವರಲ್ಲಿಬ್ಬರ ಕೈಯಲ್ಲಿ ಕಪ್ಪನೆಯ ಗಾಜಿನ ಶೀಷೆಗಳಿದ್ದರೆ ಇನ್ನಿಬ್ಬರು ದೊಡ್ಡವೆರಡು ಕ್ಯಾನುಗಳನ್ನು ಹಿಡಿದಿದ್ದರು. ನನ್ನನ್ನು ಅಲ್ಲಿ ನಿರೀಕ್ಷಿಸಿರದ ಕಾರಣ ಅವರ ಮೊಗದಲ್ಲಿ ಒಂದಿಷ್ಟು ಗಲಿಬಿಲಿ ಕಂಡಿತು. ಆ ಕ್ಷಣದಲ್ಲಿ ಅವರನ್ನು ಕನಿಷ್ಠ ತಡೆಯಲು ಪ್ರಯತ್ನಿಸಬೇಕೆಂಬುದೂ ನನಗೆ ತೋಚಲಿಲ್ಲ. ಅರೆಕ್ಷಣದಲ್ಲಿ ನನ್ನನ್ನು ಬದಿಗೆ ನೂಕಿ ನಾನು ಸಾವರಿಸಿಕೊಳ್ಳುವುದರೊಳಗಾಗಿ ಐವರೂ ಸರಸರನೇ ಜೀಪನ್ನೇರಿ ಮಾಯವಾದರು. ನಾನು ನೋಡುತ್ತಲೇ ಉಳಿದೆ.

ಒಳಗಿನ ಬೇಲಾಳ ಚೀರಾಟ ನನ್ನನ್ನು ಪ್ರಜ್ಞಾವಸ್ಥೆಗೆ ಕರೆತಂದಿತು. ಕೂಡಲೇ ಮನೆಯೊಳಕ್ಕೆ ಧಾವಿಸಿದೆ. ಮನೆಯ ತುಂಬಾ ತುಂಬಿದ್ದ ಎಂಥದೋ ವಿಚಿತ್ರ ವಾಸನೆ….. ಪೆಟ್ರೋಲ್ ಘಾಟಿನೊಂದಿಗೆ ಸುಟ್ಟ ಕಮಟು ವಾಸನೆ ಮೂಗಿಗೆ ಅಡರಿತು ….. ಅವರ ಕೈಯಲ್ಲಿದ್ದ ಸೀಸೆಗಳ ನೆನಪಾಯಿತು. ಆಸಿಡ್ ಎನ್ನುವುದರ ಬಗ್ಗೆ ಕೇಳಿದ್ದು, ಓದಿದ್ದು ನೆನಪಾಗಿ ತಲೆ ಸುತ್ತುವಂತಾಯಿತು. ಅವಳ ಧ್ವನಿಯ ಜಾಡು ಹಿಡಿದು ರಸೋಯಿಯೆಡೆಗೆ ಧಾವಿಸಿದೆ. ತುಂಬಿಕೊಂಡಿದ್ದ ಹೊಗೆ, ಘಾಟಿನ ನಡುವೆ ಉಸಿರೆಳೆದುಕೊಳ್ಳುವುದೂ ದುಸ್ತರವಾಗಿತ್ತು. ನೆಲದಲ್ಲಿ ಬಿದ್ದು ಒದ್ದಾಡುತ್ತಿರುವ ಅವಳ ಚೀರಾಟ, ಹೊತ್ತಿ ಉರಿಯುತ್ತಿದ್ದ ಬೆಂಕಿ…….. ತುಂಬಿದ್ದ ಹೊಗೆಯ ಮಧ್ಯೆ ಎಲ್ಲವೂ ಅಸ್ಪಷ್ಟ….. ಆಸಿಡ್ ಎರಚಿಯೂ ಸಮಾಧಾನವಾಗದೇ ಬೆಂಕಿ ಹಚ್ಚಿದರಾ…….?? ಹೇಗೋ ತಡಕಾಡಿಕೊಂಡು ರಸೋಯಿಯ ಹಿಂಬದಿಯ ಬಾಗಿಲನ್ನು ತೆರೆದೆ.

ನನ್ನಾಗಮನದ ಅರಿವಾಯಿತೇನೋ….. ನನ್ನ ಹೆಸರನ್ನು ಕೂಗುತ್ತಲೇ ಒದ್ದಾಡತೊಡಗಿದಳು. ಒಳಕೋಣೆಗೆ ಓಡಿ ನಾಲ್ಕೈದು ಚಾದರ್ ಗಳನ್ನು ಎಳೆದುಕೊಂಡು ಬಂದು ಅವಳ ಮೇಲೆ ಹಾಕುವ ವೇಳೆಗೆ ಅವಳ ಚೀರಾಟದ ಸದ್ದು ಕೇಳಿ ಜನರು ಜಮಾಯಿಸತೊಡಗಿದ್ದರು. ಹೇಗೋ ಎಲ್ಲಾ ಸೇರಿ ಬೆಂಕಿಯನ್ನು ಆರಿಸಿ ಒಂದೇ ಸಮನೆ ಅರಚುತ್ತಿದ್ದವಳನ್ನು ಚಾದರವೊಂದರಲ್ಲಿ ಸುತ್ತಿ ಹೊರಗಿನ ಅಂಗಳಕ್ಕೆ ಹೊತ್ತು ತಂದು ಮಲಗಿಸಿದರು. ಕುಲ್ಜೀತ್ ಡಾಕ್ಟರನ್ನು ಕರೆತರಲು ಓಡಿದರೆ ಕುಲ್ದೀಪ್ ತನ್ನ ಮೋಟಾರ್ ಸೈಕಲ್ಲಿನಲ್ಲಿ ಮಖೇಡಾಕ್ಕೆ ತೆರಳಿದ ಚಾಚಾರನ್ನು ಕರೆತರಲು.

ಅಂಗಳದ ಬದಿಯಲ್ಲಿದ್ದ ಸೆಣಬಿನ ನಾರಿನ ಮಂಚದ ಮೇಲೆ ಬಿದ್ದುಕೊಂಡಿರುವ ಮಾನವ ದೇಹವೆಂದೂ ಗುರ್ತಿಸಲಸಾಧ್ಯವಾದ ಆಕೃತಿಯೇ ನನ್ನ ಬೇಲಾಳೇ……? ಕೆಂಪು ಬೊಟ್ಟಿನ ಮೆರುಗು ಪಡೆಯುತ್ತಿದ್ದ ಆ ಅಗಲವಾದ ನೊಸಲು, ಅವಳ ಮೌನದೊಳಗಿನ ಮಾತುಗಳನ್ನು ವೇದ್ಯಗೊಳಿಸುತ್ತಿದ್ದ ಆ ಭಾವಪೂರ್ಣ ಕಂಗಳು, ಒಂಟಿಹರಳಿನ ನಥ್ನಿಯಿಂದ ಹೊಳೆಯುತ್ತಿದ್ದ ನಾಸಿಕ, ಸದಾ ಮುಗುಳ್ನಗೆಯ ಆಭರಣದಿಂದ ಶೋಭಿಸುತ್ತಿದ್ದ ಅಧರಗಳು…….. ಆ ಸುಲಕ್ಷಣವಾದ ವದನ…….. ಎಲ್ಲಾ ಎಲ್ಲಿ ಹೋದವು? ಹಣೆ, ರೆಪ್ಪೆ, ಕಣ್ಣು, ಮೂಗು, ಬಾಯಿಗಳೆಲ್ಲವನ್ನೂ ಕರಗಿಸಿ ಕಲಸಿ ಮೆತ್ತಿದಂತೆ ಬಿದ್ದಿರುವ ಈ ಕರಟಿದ ಮಾಂಸದ ಮುದ್ದೆ ಬೇಲಾಳೇ……..? ಸತ್ಯವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ…… ಆದರೆ ಅದನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವೇ…….? ನಿನ್ನೆಯಷ್ಟೇ ಇದೇ ಅಂಗಳದ ತುದಿಯವರೆಗೂ ಬಂದು 'ಚಲೋ….... ತೋ ಫಿರ್ ಕಲ್ ಮಿಲೇಂಗೇ' ಎಂದು ನಸುನಗುತ್ತಾ ನನ್ನನ್ನು ಬಿಳ್ಕೊಟ್ಟಿದ್ದಾಕೆಯನ್ನು ಇಂದು ಅದೇ ಅಂಗಳದಲ್ಲಿ ಹೀಗೆ ಭೇಟಿಯಾಗುವುದನ್ನು ನಂಬುವುದಾದರೂ ಎಂತು…...? ಇಲ್ಲ…… ಇವಳು ನನ್ನ ಗೆಳತಿ ಬೇಲಾಳಂತು ಅಲ್ಲವೇ ಅಲ್ಲ……

ಇಷ್ಟೊಂದು ಹಿಂಸೆಯಾಗುತ್ತಿದ್ದರೂ ಒಮ್ಮೆಯೂ ನನ್ನೊಂದಿಗೆ ಇಲ್ಲಾ ಚಾಚಾನೊಂದಿಗೆ ಹೇಳಿಕೊಳ್ಳಬೇಕೆಂದು ನಿನಗೆ ಅನಿಸಲಿಲ್ಲವೇ? ಒಂದು ಮಾತು ಹೇಳಿದ್ದರೆ ಪರಿಸ್ಥಿತಿ ಇಲ್ಲಿಯತನಕ ಹೋಗುತ್ತಿತ್ತೇ……? ಅವಳ ರಟ್ಟೆ ಹಿಡಿದೆಬ್ಬಿಸಿ ಕೇಳಬೇಕೆನಿಸುತ್ತಿದೆ. ಆದರೆ ಹಿಡಿದೆತ್ತಲು ರಟ್ಟೆಯಾದರೂ ಉಳಿದಿದೆಯೇ…..? ಕರಟಿ ಬೆಂದ ತೊಗಲು ಮಾಂಸದಡಿಯಲ್ಲಿನ ಮೂಳೆಗಳನ್ನೇ ಹಿಡಿದೆತ್ತಲೇ……? ಯಾವ ತಪ್ಪಿಗಾಗಿ ಈ ಪರಿಯ ಘೋರ ಶಿಕ್ಷೆ? ಅವಳಿಂದ ಯಾವ ಮಹಾಪರಾಧವಾಯಿತೆಂದು ಭೂಲೋಕದಲ್ಲೇ ನರಕಸದೃಶ ಯಾತನೆ…….?

ನನ್ನ ಮನಸ್ಸು ಹುಚ್ಚಾಗಿ ಅಲೆಯುತ್ತಿದ್ದಾಗಲೇ ಕ್ಷೀಣಿಸುತ್ತಿದ್ದ ದನಿಯಲ್ಲಿ ನನ್ನನ್ನು ಕೂಗಿದ್ದಳವಳು. ಅವಳ ಬಳಿ ಸಾರಿದೆ. ಇನ್ನಷ್ಟು ಹತ್ತಿರ ಬರುವಂತೆ ಸನ್ನೆ ಮಾಡಿದಳು. ಅವಳು ಏನೋ ಹೇಳಲು ತವಕಿಸುತ್ತಿದ್ದಳು. ಆದರೆ ಸ್ವಾಧೀನ ಕಳೆದುಕೊಂಡು ನೋವಿನಲ್ಲೇ ಮುಳುಗಿದ ದೇಹ ಸಹಕರಿಸುತ್ತಿರಲಿಲ್ಲ. ನಾನಾದರೂ ಅವಳ ಬಾಯಿಯ ಬಳಿಗೆ ಕಿವಿ ಕೊಂಡೊಯ್ಯೋಣವೆಂದರೆ ಎಲ್ಲಿ ಹುಡುಕಲಿ ಬಾಯಿಯನ್ನು? ಶತಪ್ರಯತ್ನದಿಂದ ಅಕ್ಷರಗಳನ್ನು ವಕ್ರವಕ್ರವಾಗಿ ಜೋಡಿಸಿ ಅವಳು ನುಡಿದ ಪದಗಳ ಒಟ್ಟು ಸಾರಾಂಶವೇನೆಂದರೆ……

ಹಿಂದಿನ ದಿನ ಮಧ್ಯಾಹ್ನ ಈ ಸೂರಜ್ ಮತ್ತವನ ಸ್ನೇಹಿತರು ಮನೆಗೇ ನುಗ್ಗಿ ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ಮೇವು ಹಾಕುತ್ತಿದ್ದ ಬೇಲಾಳ ಕೈಹಿಡಿದು ಎಳೆದಾಡಿದ್ದರಂತೆ. ಅಸಭ್ಯ ಮಾತುಗಳಿಂದ ದೇವೇಂದ್ರ ಬಧೌರಿಯಾನ ಒಡೆತನದ ತೋಟದಲ್ಲಿದ್ದ ಅವರ ಹಳೇ ಮನೆಗೆ ಬರುವಂತೆ ಒತ್ತಾಯಿಸತೊಡಗಿದಾಗ ಇವಳು ಕೋಪಗೊಂಡು ಕಾಲಿನಲ್ಲಿದ್ದ ಚಪ್ಪಲಿ ತೆಗೆದು ತೋರಿಸಿದಳಂತೆ. ಅವರು ಮೇಲೇರಿ ಬಂದಾಗ ಅಲ್ಲೇ ಇದ್ದ ಧಾನ್ಯ ಕುಟ್ಟುವ ಬಡಿಗೆ ಕೈಗೆ ತೆಗೆದುಕೊಂಡಳಂತೆ. ಬಡಿಗೆಯಿಂದ ತಲೆ ಒಡೆದಾಳೆಂದು ಭಯ ಬಿದ್ದು ವಾಪಾಸಾಗಿರಬೇಕು. ಹೋಗುವಾಗ ಸೂರಜ್ ಹಿಂದಕ್ಕೆ ತಿರುಗಿ ತನಗೇ ಚಪ್ಪಲಿ ತೋರಿಸಿದ ನಿನಗೊಂದು ಗತಿ ಕಾಣಿಸದೇ ಬಿಡುವುದಿಲ್ಲ ಎಂದಿದ್ದನಂತೆ. ಆ ಭಯದಲ್ಲೇ ಇಂದು ಗುಡಿಗೂ ಬಾರದೇ ಮನೆಯಲ್ಲೇ ಉಳಿದಿದ್ದಳು ಅವಳು. ಬೆಳಿಗ್ಗೆ ಚಾಚಾ ಮನೆಯಿಂದ ತೆರಳಿ ಸುಮಾರು ಸಮಯದ ನಂತರ ಆ ಐವರೂ ತೆರೆದಿದ್ದ ಅಡುಗೆ ಕೋಣೆಯ ಬಾಗಿಲಿಂದ ಒಳಗೆ ಬಂದರಂತೆ. ಏನೊಂದೂ ಮಾತಾಡದೇ ಅವರಲ್ಲಿಬ್ಬರು ಮುಖದ ಮೇಲೆ ಅವರೇ ತಂದಿದ್ದ ಶೀಷೆಯಲ್ಲಿದ್ದ ದ್ರಾವಣವನ್ನು ಎರಚಿದ್ದರು. ಇಡೀ ಮುಖವನ್ನೇ ಕುದಿಯುವ ಎಣ್ಣೆಯಲ್ಲಿ ಅದ್ದಿದಂತಾಗಿ ಇವಳು ಕಿರುಚಾಡಲಾರಂಭಿಸುವ ಮೊದಲೇ ಅವರಲ್ಲೇ ಯಾರೋ ಮೈಮೇಲೆ ಪೆಟ್ರೋಲ್ ಸುರಿದು ಉರಿಯುತ್ತಿದ್ದ ಒಲೆಯ ಮೇಲೆ ದೂಡಿದ್ದಾರೆ. ಆಮೇಲೆ ಏನಾಯಿತು ಏನೊಂದೂ ತನಗೆ ತಿಳಿಯಲಿಲ್ಲ. ಮೈಯನ್ನೆಲ್ಲಾ ದಹಿಸಿ ದಹಿಸಿ ಧಗಧಗಿಸುತ್ತಿದ್ದ ಉರಿಯ ಹೊರತು ಮತ್ತೇನೂ ಗೊತ್ತಾಗಲಿಲ್ಲ…...‌‌
ಅತೀ ಕಷ್ಟದಿಂದ ಇಷ್ಟನ್ನು ಹೇಳಿದಳು. ಬೇರೆ ಏನನ್ನೂ ಕೇಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ, ಹೇಳುವಷ್ಟು ಚೈತನ್ಯವೂ ಅವಳಿಗಿರಲಿಲ್ಲ. ಅವಳಾಗಲೇ ಪ್ರಜ್ಞಾಶೂನ್ಯಳಾಗುವ ಹಂತದಲ್ಲಿದ್ದಳು. ಆದರೂ ಇನ್ನೂ ಏನೋ ಹೇಳಲು ಬಾಕಿ ಉಳಿದಂತಿತ್ತು ಅವಳಿಗೆ. ಇನ್ನಷ್ಟು ಹತ್ತಿರ ಸರಿದು ಮೊಗ(?)ದ ಸನಿಹ ಬಾಗಿದೆ. ಅವಳ ಉಸಿರೆಳೆಯುತ್ತಿತ್ತು. ಬಹಳ ಹೆಣಗಾಟದ ನಂತರ, 'ಬಾಬಾ ಕಾ….. ಖಯಾಲ್ ರಖ್ನಾ ಸಿಯಾ….. ಮೇರೇ…… ಸಿವಾ….' ಇನ್ನೇನು ಹೇಳಲಿತ್ತೋ ಆದರೆ ಇಷ್ಟನ್ನು ತೊದಲುತ್ತಲೇ ಪ್ರಜ್ಞಾಶೂನ್ಯಳಾದಳು ಬೇಲಾ. ತಾನಿನ್ನು ಉಳಿಯಲಾರೆ ಎಂದು ಅದಾಗಲೇ ನಿರ್ಧರಿಸಿಬಿಟ್ಟಿದ್ದಳಾ….? ಬದುಕಿನ ಅರ್ಧ ಹಾದಿಯಲ್ಲೇ ತಂದೆಯನ್ನು ಬಿಟ್ಟು ಹೊರಡುತ್ತಿದ್ದೇನೆಂಬ ಖೇದವಿತ್ತು ಅವಳ ಮಾತುಗಳಲ್ಲಿ.

ಊರಿನ ವೈದ್ಯರು ಬಂದು ಒಮ್ಮೆ ಕೂಲಂಕಷವಾಗಿ ಪರೀಕ್ಷಿಸಿದವರೇ ತೊಂಬತ್ತು ಪ್ರತಿಶತ ದೇಹ ಸುಟ್ಟಿರುವುದರಿಂದ ಉಳಿಯುವ ಯಾವ ಭರವಸೆಯೂ ಇಲ್ಲ ಜೊತೆಗೆ ಚಿಕಿತ್ಸೆಯೂ ಇಲ್ಲಿ ಸಾಧ್ಯವಿಲ್ಲ ಎಂದರು. ಅವಳು ಬದುಕಲಾರಳು ಎನ್ನುವುದು ನನ್ನ ಮನಕ್ಕೆ ವೇದ್ಯವಾಗಿತ್ತು. ಅಷ್ಟರಲ್ಲಾಗಲೇ ಭೈರೋನಿನ ಅಧಿಪತಿಯ ಸವಾರಿಯೂ ಚಿತ್ತೈಸಿತ್ತು. ಮೊಸಳೆ ಕಣ್ಣೀರು ಸುರಿಸುತ್ತಾ ಗಡಿಬಿಡಿಯಿಂದ ಅತ್ತಿತ್ತ ಓಡಾಡಿ ನೆರೆದಿದ್ದ ಜನರೊಂದಿಗೆ ಮಾತನಾಡಿದ. ಬಹುಶಃ ತನ್ನ ಔರಸ ಪುತ್ರನೇ ಇದನ್ನೆಲ್ಲಾ ಮಾಡಿದ್ದಾನೆಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಗಳು ಯಾರಾದರೂ ಇದ್ದಾರೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದನೇನೋ…….. ಮಗನನ್ನು ಅವನ 'ಗೌರವಾನ್ವಿತ' ಗೆಳೆಯರನ್ನು ಯಾವ ಬಿಲದಲ್ಲಿ ಬಚ್ಚಿಟ್ಟು ಬಂದಿರುವನೋ….. ಬಚ್ಚಿಡುವ ಅಗತ್ಯವಾದರೂ ಏನಿದೆ? ನ್ಯಾಯಾಧೀಶನೇ ಇವನಲ್ಲವೇ ಇಲ್ಲಿ? ನ್ಯಾಯದೇವತೆಯ ಕೈಯಲ್ಲಿನ ತರಾಜೂ಼ವಿನಲ್ಲಿ(ತಕ್ಕಡಿ) ನ್ಯಾಯ ಅನ್ಯಾಯಗಳನ್ನು ತನ್ನಿಷ್ಟದಂತೆ ತೂಗುತ್ತಾನೆ. ಅವನು ಕೊಟ್ಟಿದ್ದೇ ತೀರ್ಪು, ಅವನ ಹೇಳಿದ್ದೇ ನ್ಯಾಯ…… ಮರ್ಜೀ಼ ಕಾ ಮಾಲೀಕ್ ನಿಗೆ ಕಡಿವಾಣ ಹಾಕುವವರ್ಯಾರು? 

ಅಷ್ಟರಲ್ಲೇ ಕುಲ್ದೀಪನೊಂದಿಗೆ ಕೇಶವ್ ಚಾಚಾ ಬಂದರು. ಬಹುಶಃ ಅವರಿಗೆ ಸತ್ಯ ವಿಚಾರ ಹೇಳದೇ ಕರೆತಂದಿದ್ದ ಅವನು. ಅವರ ಮುಖದಲ್ಲಿ ಸಣ್ಣ ಕಳವಳವಿತ್ತಷ್ಟೇ. ಆದರೆ ತಮ್ಮ ಮನೆಯ ಮುಂದಿನ ಜನಸಂದಣಿ ಕಾಣುತ್ತಲೇ ಅವರ ಮೊಗದಲ್ಲಿ ಗಾಬರಿಯೊಡೆಯಿತು. ಗೇಟಿನಿಂದ ಒಳಕ್ಕೆ ಬರುತ್ತಲೇ ದೇವೇಂದ್ರ ಬಧೌರಿಯಾನೇ ಖುದ್ದು ಅವರನ್ನು ಎದುರುಗೊಂಡು ಸಮಾಧಾನಿಸುತ್ತಾ ನಮ್ಮ ಬಳಿ ಕರೆತಂದ. ಚಾಚಾ ಮಾತ್ರ ಸುತ್ತಮುತ್ತ ಎಲ್ಲಾ ಕಡೆ ತಮ್ಮ ಗಾಬರಿಯ ನೋಟ ಹರಿಸುತ್ತಾ ಹುಡುಕುತ್ತಿದ್ದರು. ತಮ್ಮ ಮಗಳು ಎಲ್ಲೂ ಕಾಣುತ್ತಿಲ್ಲವೆಂಬ ಆತಂಕವದು. ಹುಟ್ಟಿದಾಗಿನಿಂದ ತಾನೇ ತಾಯಿಯಾಗಿ ತನ್ನ ಕಣ್ಣ ಮಣಿಯಂತೆ ಜತನದಿಂದ ಬೆಳೆಸಿದ ಅಚ್ಚೆಯ ಮಗಳು ಹೀಗೆ ಗುರುತಿಸಲೂ ಸಾಧ್ಯವಿಲ್ಲದಷ್ಟು ವಿರೂಪಗೊಂಡು ಮಲಗಿರುವಳೆಂದು ಆ ತಂದೆಗೆ ಅರಿವಾಗುವುದಾದರೂ ಹೇಗೆ? 

ಅವರ ನೋಟ ನನ್ನ ಮೇಲೆ ಸ್ಥಿರವಾದ ಕ್ಷಣ ನಾನು ಏನೊಂದೂ ತೋಚದೇ ನನ್ನ ನೋಟವನ್ನು ನೆಲದತ್ತ ಬಾಗಿಸಿದೆ. 

ಬಹುಶಃ ನನ್ನ ಪಕ್ಕವೇ ಇದ್ದ ಚಾದರದಲ್ಲಿ ಸುತ್ತಿದ್ದ ಆರಿದ ಮಸಿಕೆಂಡದಂತಹ ದೇಹ ಕಣ್ಣಿಗೆ ಬಿದ್ದಿರಬೇಕು…… 

ಅಪನಂಬಿಕೆಯಿಂದಲೇ ಅವಳತ್ತ ಸರಿದರು. ಮತಿಭ್ರಮಣೆಗೊಳಗಾದವರಂತೆ ಮಗಳ ಮೊಗ ಕೈ ಕಾಲುಗಳನ್ನೆಲ್ಲಾ ಸವರಿದರು. ಅವರ ಕೈ ಬೆರಳುಗಳು ಅವಳ ನೆತ್ತಿಯ ಮೇಲಿದ್ದ ಸೊಂಪಾದ ಕುರುಳನ್ನು ಅರಸಿ ಅರಸಿ ಸರಿದಾಡಿದವು. ಅವು ಎಂದಿಗಾದರೂ ಸಿಗಬಲ್ಲವೇ? ಆ ಬೆಂದ ದೇಹವನ್ನು ತಮ್ಮ ಮಡಿಲಿನಲ್ಲಿ ಹುದುಗಿಸಿಕೊಳ್ಳಲು ಹವಣಿಸಿದರು….. ಈ ದುರುಳ ಜನರಿಂದ ದೂರ ನನ್ನೊಡಲಲ್ಲಿ ನಿನ್ನನ್ನು ಸುರಕ್ಷಿತವಾಗಿರಿಸಿಕೊಳ್ಳುವೆ ಎಂಬ ಭಾವವಿತ್ತೇನೋ ಅವರ ಆ ಚರ್ಯೆಯಲ್ಲಿ……. 

ಪದೇ ಪದೇ ಗುರುತೇ ಸಿಗದ ಮೊಗದ ಮೇಲೆಲ್ಲಾ ಕೈಯಾಡಿಸುತ್ತಾ ಅವಳನ್ನು ಎಬ್ಬಿಸಲು ಪ್ರಯತ್ನಿಸಿದರು. ದೀನ ಕಂಗಳಿಂದ ನನ್ನೆಡೆಗೆ ನೋಡಿದರು. ಆ ನೋಟ ಕಸಾಯಿಖಾನೆ ಪಾಲಾದ ತನ್ನ ಕರುವನ್ನು ನೆನೆಯುವ ಹಸುವಿನಂತಿತ್ತು…… 

ಬೇಲಾಳನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ಕುಲ್ಜೀತ್ ನನ್ನನ್ನು ಎಚ್ಚರಿಸಿದ. ಶಾಮ್ಲಿಯ ಆಸ್ಪತ್ರೆಗೇ ಕರೆದೊಯ್ಯುವುದು ಸೂಕ್ತವೆಂದರು ವೈದ್ಯರು. ಈ ಪರಿಸ್ಥಿತಿಯಲ್ಲಿ ಅಷ್ಟು ದೂರ ಕರೆದೊಯ್ಯುವುದು ಹೇಗೆಂಬ ಯೋಚನೆಯಾಯಿತು. ದೇವೇಂದ್ರ ಬಹಳ ಕಾಳಜಿಯುಳ್ಳವನಂತೆ ತನ್ನದೇ ಸ್ವಂತ ವಾಹನದಲ್ಲಿ ಕರೆದೊಯ್ಯೋಣವೆಂದ. 

ಮಗ ಒಂದು ವಾಹನದ ತುಂಬಾ ಆಸಿಡ್, ಪೆಟ್ರೋಲ್ ಹೊತ್ತು ತಂದು ದೇಹವನ್ನು ದಹಿಸಿದ‌…. ಈಗ ಅಪ್ಪ ತನ್ನ ವಾಹನದಲ್ಲಿ ತನ್ನ ಪ್ರಭಾವವುಳ್ಳ ಆಸ್ಪತ್ರೆಗೆ ಸಾಗಿಸಿ ಕ್ಷೀಣವಾಗಿರುವ ಉಸಿರನ್ನು ಶಾಶ್ವತವಾಗಿ ನಿಲ್ಲಿಸಿ ಚಿತೆಯ ಮೇಲೆ ಇನ್ನೊಮ್ಮೆ ಅವಳನ್ನು ಶಾಸ್ತ್ರೋಕ್ತವಾಗಿ ಬೇಯಿಸಲು ತಯಾರಾಗಿ ನಿಂತಿರುವನಷ್ಟೇ…….. ಪ್ರತೀ ದಿನ ಅದೆಷ್ಟು ಬೇಲಾರ ದಹನವಾಗುತ್ತಿದೆಯೋ ಈ ದೇಶದಲ್ಲಿ…... 

ಬೇಲಾಳ ಆತ್ಮವೂ ಇದನ್ನೇ ಯೋಚಿಸಿ ಈ ಅಪ್ಪ ಮಕ್ಕಳ ಹಂಗೇ ಬೇಡವೆಂದು ನಿರ್ಧರಿಸಿತೇನೋ…… ಈ ಕ್ರೂರ ಜನರ ಸಹವಾಸವೇ ಬೇಡವೆಂದು ಅವಳ ದೇಹವನ್ನು ತೊರೆದು ನಡೆದುಬಿಟ್ಟಿತದು…... 

ಬೇಲಾ ಎಂಬ ಹೂಮನದ ಹೆಣ್ಣು ವಯಸ್ಸಿಗೆ ಮಾಗಿ ಬಾಡುವ ಮೊದಲೇ ಅರಳಿದಲ್ಲೇ ಸುಟ್ಟು ಕರಕಲಾಗಿಹೋದಳು…..

वो नाज़ुक सी कमसिन कली, बड़ी नाझों से पली, 
जो थी सबसे प्यारी, जो थी अपने बाबुल की दुल्हारी। 

मुस्कुराता चेहरा 
आँखें, जो बोलते थे अनकही बातें 
जिसे वो लफ्झों में बयान ना कर पाती थी, 
अपने ही धुन में खोयी हुई, सपनों को संझौती हुई, 
उड़ने चली थी आसमान में                           

पड़ी उस पे एक अमानुष की नज़र 
जो मिटा दिया उसे बड़ी बेरेहमी से चंद छीटें उड़ा के। 
इस से भी मन नहीं भरा उस ज़ालिम का, 
जो धकेल दिया उसे सुलगते आग में, 
वो रोती रही, बिलकती रही, 
कोई नहीं था उसे सुन ने वाला, 
वो देखती रही अपने सपनों को टूट के बिखरते हुए, 
जो संझौये थे उसने बड़े प्यार से

जो था एक चमकता सितारा अब चुप गयी है अंधेरों में, क्या गलती थी उसकी?? कोई नहीं जानता

ये है उसकी कहानी था जिसका नाम बेला।।
वो नाज़ुक सी कमसिन कली बड़ी नाझों से पली, 
ये थी उसकी कहानी खामोश ज़िन्दगानी .....    

ಸಶೇಷ

ಶೀರ್ಷಿಕೆ ಹಾಗೂ ಹಿಂದಿ ಕವಿತೆಯ ಕೃಪೆ: ರೂಪಾ ಮಂಜುನಾಥ್


ಭಾನುವಾರ, ಸೆಪ್ಟೆಂಬರ್ 13, 2020

ಅಗ್ನಿ ತರಂಗಿಣಿ 11

ಯಾದೋಂ ಕಿ ಬಾರಾತ್

ಬೇಲಾ........

ನನ್ನ ಬದುಕಿನ ಪಥವನ್ನೇ ಬದಲಿಸಿದ ಈ ಎರಡಕ್ಷರವನ್ನು ಎಂದಿಗಾದರೂ ಮರೆಯಲುಂಟೆ ನಾನು? ಹಾಗೆ ಮರೆತುಬಿಡುವಂತಹ ಹೆಣ್ಣೂ ಅಲ್ಲ ಅವಳು. ಒಮ್ಮೆ ನೋಡಿದವರು ಮತ್ತೆ ಮತ್ತೆ ತಿರುಗಿ ನೋಡುವಷ್ಟು ರೂಪವತಿ ಎನ್ನುವುದು ಎಷ್ಟು ನಿಜವೋ ಒಮ್ಮೆ ಅವಳ ಸ್ವಭಾವವನ್ನು ಅರಿತವರು ಮರೆತೂ ಮರೆಯಲಾರದಂತಹ ವ್ಯಕ್ತಿತ್ವ ಅವಳದ್ದು ಎನ್ನುವುದೂ ಅಷ್ಟೇ ನಿಜ. ಯಮುನೆಯ ತಟದಲ್ಲಿ ಕುಳಿತು ದಿಗಂತದಂಚನ್ನು ಭಾವಶೂನ್ಯ ನೋಟದಿಂದ ದಿಟ್ಟಿಸಿ ನೋಡುವಾಗಲೆಲ್ಲಾ ಆ ನಿರಭ್ರ ಬಾನಿನ ಭಿತ್ತಿಯಲ್ಲಿ ಅವಳ ನಗುಮೊಗವೇ ಪ್ರತಿಫಲಿಸುತ್ತಿದೆಯೇನೋ ಎನ್ನಿಸಿಬಿಡುತ್ತದೆ. ನನ್ನ ಮೈ ಮನಸ್ಸು ಪ್ರಫುಲ್ಲಿತವಾಗಿ ಸಂತಸದ ‌ಊಟೆ ಚಿಮ್ಮುತ್ತದೆ. ಅದು ಅರೆಘಳಿಗೆಯಷ್ಟೇ..... ಮರುಘಳಿಗೆ......!? ಮರುಘಳಿಗೆಯಲ್ಲಿ ಮುಡಿಯಲ್ಲಿ ಮೇಘಮಾಲೆ ಧರಿಸಿ ನೀಲಿ ಪತ್ತಲ ಭೂಷಿತೆಯಾಗಿ ನಲಿವ ಆ ಅಂಬರೆಯೇ ಸುಟ್ಟು ಕರಕಲಾದಂತೆ ಭಾಸವಾಗಿ ನಾಭಿಯಾಳದಿಂದ ಸಂಕಟವೊಂದು ಉದ್ಭವಿಸಿ ನನ್ನನ್ನೇ ಆಪೋಶನ ತೆಗೆದುಕೊಳ್ಳಲು ಹವಣಿಸಿದಂತೆ ದಿಗಿಲಾಗುತ್ತದೆ. ಬೇಲಾಳ ನೆನಪೆಂದರೆ ಹೀಗೆಯೇ...... ಪರಸ್ಪರ ವೈರುಧ್ಯ ಭಾವಗಳನ್ನು ಒಟ್ಟಾಗಿ ಹೊತ್ತು ತರುವ ಸ್ಮೃತಿಯದು.

ನೆಮ್ಮದಿಯ ಬದುಕು ಬರಡಾಗಲು ಎಷ್ಟು ಸಮಯ ಬೇಕು? ಸಂತಸ ಸಂತಾಪವಾಗಲು, ಬೆಳಕು ಆರಿ ಕತ್ತಲಾವರಿಸಲು, ತುಟಿಯಂಚಿನ ಮಂದಹಾಸ ಮಾಸಿ ಕಣ್ಣಂಚಿನ ಹನಿಗಳು ಹೊನಲಾಗಲು ತಗಲುವ ಅವಧಿಯೆಷ್ಟು....?

ದಿನ? ತಿಂಗಳು? ವರ್ಷ ಅಥವಾ ದಶಕಗಳು....??

ಕಣ್ಮುಚ್ಚಿ ತೆರೆಯುವ ಒಂದು ಕ್ಷಣ ಸಾಕಲ್ಲವೇ....!!?

ಕೇವಲ ಚಿಟಿಕೆ ಹೊಡೆಯುವ ಅಂತರದಲ್ಲಿ ಬದುಕು ಬದಲಾಗುತ್ತದೆ. ಆಹ್ಲಾದಕರ ಹಚ್ಚ ಹಸಿರ ವನಸಿರಿ ಧಗೆಯ ಬೆಂಗಾಡಾಗಿ ಮಾರ್ಪಾಡಾಗುತ್ತದೆ. ಬದುಕೆಂಬ ರಣಭೂಮಿಯಲ್ಲಿ ಸಮರಾನಂತರ ಅಳಿದುಳಿದ ಅವಶೇಷಗಳಂತೆ ಒಡೆದ ಸ್ವಪ್ನಗುಚ್ಛದ ಮೊನಚಾದ ಚೂರುಗಳು ಉಳಿಯುತ್ತವಷ್ಟೇ. ಆ ಕುಟುಕು ಜೀವದ ಚೂರುಗಳನ್ನೂ ಬಿಡದೇ ಹರಿದು ತಿನ್ನುವ ನರರೂಪದ ರಣಹದ್ದುಗಳಿಗೇನೂ ಕೊರತೆಯಿಲ್ಲ ಈ ಜಗದಲ್ಲಿ. ಬದುಕಿನ ಈ ಯಾನದ ಕೊನೆಯಲ್ಲಿ ಉಳಿಯುವುದು ನಿರಾಸೆಗಳ ನಿಟ್ಟುಸಿರಿನಿಂದ ಆವಿರ್ಭವಿಸುವ ನೀರವ ಮೌನವೊಂದೇ.......

ಆದರೆ ಅದೇ ಬರಡಾದ ಬಾಳಿಗೆ ಮತ್ತೆ ಸಂತಸದ ರಂಗನ್ನು ತುಂಬಲು ಮಾತ್ರ ಸಂಪೂರ್ಣ ಆಯುಷ್ಯವೂ ಸಾಲದೇ ಹೋಗುತ್ತದೆ. ಕಹಿನೆನಪುಗಳ ಜಿದ್ಮ ಶರಗಳು ಬಿಟ್ಟೂ ಬಿಡದೆ ಮನಃಪಟಲವನ್ನು ಛಿದ್ರಗೊಳಿಸಿ ಅಟ್ಟಹಾಸಗೈಯುವಾಗ ನರಳುವ ಮನದ ಮೇಲೆ ಮರೆವಿನ ಮುಸುಕೆಳೆದು ಮೊಗದ ಮೇಲೆ ನಗುವಿನ ಬಣ್ಣ ಬಳಿದು ನಟಿಸದೇ ಗತ್ಯಂತರವಿಲ್ಲ. ಹೇಗೋ ಎಂತೋ….. ಸಾವು ದೇಹದ ಬಾಗಿಲು ತಟ್ಟುವವರೆಗೆ ಬದುಕಲೇಬೇಕಲ್ಲವೇ….? ಹಾಗೆ ಬದುಕುವುದಕ್ಕೊಂದು ಕಾರಣ ಬೇಡವೇ? ವಿಸ್ಮರಣಕ್ಕಿಂತ ಉತ್ತಮ ಕಾರಣ ಬೇರಾವುದು? ಎಲ್ಲವನ್ನೂ ಮರೆತುಬಿಟ್ಟಿದ್ದೇವೆ ಅಂದುಕೊಂಡರೆ ಬದುಕು ಅಬೋಧ ಹಸುಳೆಯಂತೆ ಎಷ್ಟೊಂದು ಶಾಂತ….!! ಆದರೆ ಮರೆವಿನ ವರ ಪಡೆವುದು ಸುಲಭ ಸಾಧ್ಯವೇ? ಆಗಿ ಹೋದ ಕರಾಳ ಅಧ್ಯಾಯಗಳು ಹಗಲಿರುಳು ದುಃಸ್ವಪ್ನವಾಗಿ ಕಾಡುವಾಗ ಎಲ್ಲ ಮರೆತು ಮುಂದೆಸಾಗುತ್ತೇವೆಂಬುದು ಕೇವಲ ನಮ್ಮ ಭ್ರಮೆಯಷ್ಟೇ. ನಾವು ಏನನ್ನೂ ಮರೆಯುವುದಿಲ್ಲ. ಕೇವಲ ಮರೆತಂತೆ ತೋರಿಸಿಕೊಳ್ಳುತ್ತೇವೆ.

ಬೇಲಾ ಎಂದರೆ ಅಂತಹುದೇ ಒಂದು ಮರೆತಂತೆ ನಟಿಸುವ ವಾಸ್ತವದಲ್ಲಿ ಮರೆತೂ ಮರೆಯಲಾಗದ ನೆನಪು‌….

ಬೇಲಾ ಎಂದರೆ ಬದುಕನ್ನು ಬದಲಾಯಿಸುವ 'ಆ ಒಂದು ಕ್ಷಣ'ವಾಗಿ ಈ ಸಿಯಾ ಎಂಬ ಹತಭಾಗ್ಯೆಯ ಬದುಕಿನ ಪುಟದಲ್ಲಿ ದಾಖಲಾದ ನತದೃಷ್ಟೆ……

ಬೇಲಾ ಎಂದರೆ ಹೊರಗೆ ಸಭ್ಯಸ್ಥರೆಂಬ ಡೌಲು ತೋರಿಸಿಕೊಂಡು ಮೆರೆವವರ ಅಂತರಂಗದ ಕುರೂಪತೆಗೆ ಹಿಡಿದ ಕೈಗನ್ನಡಿ……

ಬೇಲಾ ಎಂದರೆ………. 'ಹೀಗೇಕೆ?' ಎಂಬ ಉತ್ತರ ಸಿಗದ ಪ್ರಶ್ನೆಗಳ ಸಂಪುಟ……!!

ಇದು ಹೀಗೇ ನಡೆಯಬೇಕೆಂಬುದು ನಿಯತಿಯ ನಿಯಮವಿತ್ತೇ? ಇಲ್ಲವಾದರೆ ಮೊದಲೇ ಗೋಜಲಾಗಿದ್ದ ನನ್ನ ಬದುಕಿನ ಎಳೆಗಳು ಬಿಡಿಸಲಾಗದ ಕಗ್ಗಂಟಾಗಲು ಬೇಲಾ ಏಕೆ ನಿಮಿತ್ತವಾಗಬೇಕಿತ್ತು? ಇಷ್ಟಕ್ಕೂ ಬೇಲಾಳ ಆಗಮನದ ನಂತರ ನಾನು ನತದೃಷ್ಟೆಯಾದುದೇನಲ್ಲ. ಹೆಣ್ಣೆಂಬ ಅಸ್ತಿತ್ವದೊಂದಿಗೆ ಎಂದು ಮಾಯಿಯ ಒಡಲಿಗೆ ಬಿದ್ದೆನೋ ಆ ಘಳಿಗೆಯಲ್ಲೇ ಅದೃಷ್ಟವೆಂಬುದು ನನ್ನ ಕೈ ಬಿಟ್ಟಿತ್ತು. ನನ್ನ ಜೀವನವೆಲ್ಲಾ ನನ್ನ ಸ್ವಂತ ಹೋರಾಟದ ಫಲವಿತ್ತೇ ಹೊರತು ಯಾವ ಭಾಗ್ಯವೂ ನನ್ನನ್ನು ಕಾದಿರಲಿಲ್ಲ. ಆದರೆ ಇಲ್ಲಿಯವರೆಗಿನ ನನ್ನ ಜೀವನದ ಸೂತ್ರ ನನ್ನ ಕೈಯಲ್ಲಿತ್ತು. ಭಾಗ್ಯವೋ, ದೌರ್ಭಾಗ್ಯವೋ ಎರಡೂ ನನ್ನ ನಿರ್ಣಯಗಳ ಸರಹದ್ದಿನ ಮಿತಿಯೊಳಗೇ ಇತ್ತು.

ಆದರೆ ಬೇಲಾಳಿಂದಾಗಿ ಬದುಕಿನ ಕಡಿವಾಣ ನನ್ನ ಕೈತಪ್ಪಿ ಹೋಯಿತು. ನನ್ನ ಜೀವನ ಸೂತ್ರ ಹರಿದ ಪಟದಂತಾಯಿತು. ಏನೇನೆಲ್ಲಾ ಘಟಿಸಿಹೋಯಿತು ನನ್ನ ಬದುಕಿನಲ್ಲಿ…..!! ಈ ಸಿಯಾಳನ್ನು ಎಂತಹ ಅಗ್ನಿಪರೀಕ್ಷೆಗೆ ಗುರಿಮಾಡಿತು ಈ ಸಮಾಜ…. ಇಂತಹ ಬದುಕನ್ನು ಬದುಕುವುದಕ್ಕಿಂತ ಸಾವೇ ಮಿಗಿಲ್ಲಲ್ಲವೇ ಎಂದು ಲೆಕ್ಕವಿಲ್ಲದಷ್ಟು ಬಾರಿ ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ. ಅತ್ತ ಬದುಕಿನ ಹೋರಾಟ ನಡೆಸಲೂ ತ್ರಾಣವಿಲ್ಲದೇ,
ಇತ್ತ ಮನದ ಬಡಬಾಗ್ನಿಯ ತಾಪ ಸಾಯಲೂ ಅನುಮತಿಸದೇ ರೌರವ ಅಸಹಾಯಕತೆಯನ್ನೇ ಉಸಿರಾಡಿದ್ದೇನೆ. ಇದೆಲ್ಲವೂ ಆರಂಭವಾಗಿದ್ದು ಅದೊಂದೇ ಘಟನೆಯಿಂದ…... ಬೇಲಾಳಿಂದ …..

ಬೇಲಾ ಪರ್ಮಾರ್……

ಅದೇ ಭೈರೋನ್ ಗ್ರಾಮದವಳು. ನನ್ನದೇ ಓರಗೆಯವಳು. ಆದರೆ ಗುಣ ಸ್ವಭಾವದಲ್ಲಿ ನಾವಿಬ್ಬರೂ ವಿರುದ್ಧ ಧ್ರುವಗಳು. ಸದಾ ಗಂಭೀರವಾಗಿರುವ ನಾನು ಚಾಚಿ ಸತ್ತ ಬಳಿಕ ನಗುವನ್ನೇ ಮರೆತಿದ್ದೆನೆಂದರೆ ಅತಿಶಯೋಕ್ತಿಯಲ್ಲ. ಆದರೆ ಬೇಲಾ ಹಾಗಲ್ಲ. ಎಂದಿಗೂ ಮಾಸದ ಮಂದಹಾಸವೊಂದು ಅವಳ ತುಟಿಯಂಚಿನಲ್ಲೇ ಕುಳಿತಿರುತ್ತಿತ್ತು. ಹೆಚ್ಚಿನ ಸಮಯ ಮೌನವಾಗಿರುವೆನಾದರೂ ಬಾಯ್ತೆರೆದರೆ ಎದುರಿರುವವರು ಮೌನವಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಸುವಂತಹ ಹರಿತವಾದ ಮಾತಿನ ಒಡತಿ ನಾನು. ಆದರೆ ಮೌನದಲ್ಲೂ ಸ್ಪಷ್ಟವಾಗಿ ಕೇಳಲಾರದಷ್ಟು ಮೆದು ಮಾತಿನವಳು ಬೇಲಾ. ಅವಳ ಮಾತಿಗೂ ಮೌನಕ್ಕೂ ಅಂತಹ ವ್ಯತ್ಯಾಸವಿರಲಿಲ್ಲ. ಹೆಚ್ಚು ಮೌನವನ್ನೇ ಆಶ್ರಯಿಸಿದ್ದ ಆ ಮಿತಭಾಷಿ ಹೆಣ್ಣಿನ ಭಾವಪೂರ್ಣ ಕಂಗಳೇ ಬಹಳಷ್ಟು ಮಾತನಾಡುತ್ತಿದ್ದದ್ದು ಸುಳ್ಳಲ್ಲ.

ನಿಸ್ಸಂಶಯವಾಗಿ ಬೇಲಾ ಭೈರೋನ್ ಗ್ರಾಮದಲ್ಲೇ ಅತ್ಯಂತ ಭಾಗ್ಯಶಾಲಿ ಹೆಣ್ಣುಮಗಳಾಗಿದ್ದಳು. ಅದು ಹಣ, ಹೊನ್ನಿನ ಸಿರಿವಂತಿಕೆಯ ಭಾಗ್ಯವಲ್ಲ. ಅವೆಲ್ಲಕ್ಕೂ ಮಿಗಿಲಾದ ಅದೃಷ್ಟ, ಇಲ್ಲಿನ ಯಾವೊಬ್ಬ ಹೆಣ್ಮಗಳೂ ಕನಸಲ್ಲೂ ಕಾಣಲಾಗದ ಭಾಗ್ಯ........ ಹೆತ್ತವರ ಮಮತೆ, ಅಕ್ಕರೆಯ ಆರೈಕೆಯಲ್ಲಿ ಅವರ ಕಣ್ಮಣಿಯಾಗಿ ಬೆಳೆಯುವ ಮಹಾ ಅದೃಷ್ಟವದು. ನನ್ನಂತಹ ಸಾವಿರಾರು ಲಾಲಿಯರನ್ನು ಕಾಡಿ ಕಂಗೆಡಿಸುತ್ತಿದ್ದ 'ಯಾಕಾದರೂ ಹೆಣ್ಣಾಗಿ ಹುಟ್ಟಿದೆನೋ' ಎಂಬ ಪ್ರಶ್ನೆ ಎಂದಿಗೂ ಅವಳ ಸಮೀಪವೂ ಸುಳಿದಿರಲಿಲ್ಲ. ಭೈರೋನ್ ಸಮೀಪದ ಮಖೇಡಾ ಗ್ರಾಮದಲ್ಲಿ ಉಪಾಧ್ಯಾಯರಾಗಿದ್ದ ಕೇಶವ್ ಪರ್ಮಾರರ ಏಕ ಮಾತ್ರ ಸಂತಾನ ಬೇಲಾ. ಬೇಲಾಳಿಗೆ ಐದಾರು ವರ್ಷವಾಗಿದ್ದಾಗಲೇ ಅವಳ ಮಾಯಿ ಅನಾರೋಗ್ಯದಿಂದ ಮರಣಿಸಿದ್ದರು. ಬದುಕಿದ್ದಾಗಲೂ ಅವರ ಆರೋಗ್ಯ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ ಬೇಲಾಳ ಪಾಲನೆ ಪೋಷಣೆಯ ಸಂಪೂರ್ಣ ಜವಾಬ್ದಾರಿ ಕೇಶವ್ ಚಾಚಾರದ್ದೇ ಆಗಿತ್ತು. ಹೆಂಡತಿಯ ಮರಣಾನಂತರ ಮನಸ್ಸು ಮಾಡಿದ್ದರೆ ಕೇಶವ್ ಚಾಚಾ ಮರುಮದುವೆಯಾಗಬಹುದಿತ್ತು. ಎಷ್ಟೆಂದರೂ ತಮ್ಮ ಮನೆಯ ಹೆಣ್ಣನ್ನು ಯಾರದಾದರೂ ತಲೆಗೆ ಕಟ್ಟಿ ಕೈತೊಳೆದುಕೊಳ್ಳಲು ಹಪಹಪಿಸುವ ಜನರಿಗೇನೂ ಕೊರತೆಯಿರಲಿಲ್ಲ ನಮ್ಮಲ್ಲಿ. ಅದರಲ್ಲೂ ಚಾಚಾ ಸರ್ಕಾರಿ ಉದ್ಯೋಗದಲ್ಲಿದ್ದರೆಂದ ಮೇಲೆ ಕೇಳಬೇಕೇ? ಅವರ ಮುಂದೆ ಬೇಕಾದಷ್ಟು ಆಯ್ಕೆಗಳಿದ್ದವು. ಆದರೆ ಚಾಚಾ ಆ ಬಗ್ಗೆ ಕನಿಷ್ಠ ಯೋಚನೆಯನ್ನೂ ಕೂಡಾ ಮಾಡಲಿಲ್ಲ. ಅವರ ಬದುಕಿನ ಏಕೈಕ ಲಕ್ಷ್ಯ ಬೇಲಾ ಮಾತ್ರವಾಗಿದ್ದಳು. ಶಾಲೆ, ಮನೆ, ಮಗಳು ಇಷ್ಟೇ ಅವರ ಪ್ರಪಂಚವಾಗಿತ್ತು.

ಕೇಶವ್ ಚಾಚಾರನ್ನು ಕಾಣುವಾಗಲೆಲ್ಲಾ ಅರಿವಿಲ್ಲದೇ ನನ್ನ ಮನಸ್ಸು ಅವರೊಂದಿಗೆ ನನ್ನ ಬಾಪುವನ್ನು ಹೋಲಿಸಲು ತೊಡಗಿಬಿಡುತ್ತಿತ್ತು. ಗಟ್ಟಿಮುಟ್ಟಾಗಿ ಹತ್ತಾಳಿನ ಕೆಲಸ ಒಬ್ಬಳೇ ಮಾಡುತ್ತಿದ್ದ ಮಾಯಿಯನ್ನು ದನಕ್ಕೆ ಬಡಿದಂತೆ ಬಡಿಯುತ್ತಿದ್ದ ಬಾಪು. ವರ್ಷಗಳ ಕಾಲ ಹಾಸಿಗೆ ಹಿಡಿದ ಪತ್ನಿಯನ್ನು ಮಗುವಿನಂತೆ ನೋಡಿಕೊಂಡಿದ್ದರು ಕೇಶವ್ ಚಾಚಾ. ನನ್ನ ಮಾಯಿ ಜೀವಂತವಿದ್ದಾಗಲೇ ಇನ್ನೊಂದು ಬಿಹಾ ಮಾಡಿಕೊಂಡು ಹೊಸ ಲುಗಾಯಿಯನ್ನು ಮನೆಗೆ ತಂದಿದ್ದ ಬಾಪು. ಹೆಂಡತಿ ಸತ್ತ ಮೇಲೆಯೂ ಇನ್ನೊಂದು ಮದುವೆಯಾಗದೇ ಮಗಳಿಗಾಗಿಯೇ ತಮ್ಮ ಬದುಕನ್ನು ಮುಡುಪಿಟ್ಟವರು ಕೇಶವ್ ಚಾಚಾ. ಇದು ಶಿಕ್ಷಣದಿಂದ ಸಿಕ್ಕ ಸಂಸ್ಕಾರವಿತ್ತೋ ಇಲ್ಲಾ ಸ್ವಭಾವತಃ ಕೇಶವ್ ಚಾಚಾ ಸಂಸ್ಕಾರವಂತರಿದ್ದರೋ ಹೇಳುವುದು ಕಷ್ಟವಿತ್ತು. ಆದರೂ ಅವರ ಇಂತಹ ವಿಶಾಲ ಯೋಚನೆಗಳಲ್ಲಿ ಅವರು ಪಡೆದ ಶಿಕ್ಷಣದ ಪ್ರಭಾವ ಬಹಳವಿತ್ತು ಎಂದು ಬಲವಾಗಿ ಅನ್ನಿಸುತ್ತದೆ ನನಗೆ. ಬಹುಶಃ ಸಹೃದಯರಾಗಿದ್ದ ಅವರ ವ್ಯಕ್ತಿತ್ವಕ್ಕೆ ಶಿಕ್ಷಣ ಇನ್ನಷ್ಟು ಮೆರುಗು ನೀಡಿ ವಿವೇಚನೆಯ ಹೊನ್ನ ಚೌಕಟ್ಟು ಒದಗಿಸಿತ್ತು.

ಸ್ವತಃ ಉಪಾಧ್ಯಾಯರಾಗಿದ್ದ ಕೇಶವ್ ಚಾಚಾರಿಗೆ ಬೇಲಾಳನ್ನು ಶಾಲೆಗೆ ಕಳಿಸಲು ಬಹಳ ಮನವಿತ್ತು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರೂ ಕೂಡಾ. ಆವತ್ತು ನಡೆದ ಪಂಚಾಯತ್ ದೊಂಬರಾಟ ಇಂದಿಗೂ ನನ್ನ ಕಣ್ಮುಂದಿದೆ. ಈ ವಿಚಾರ ಕಿವಿಗೆ ಬಿದ್ದೊಡನೆ ಯಾವುದೋ ಮಹಾನ್ ಆಪತ್ತು ಬಂದೊದಗಿದಂತೆ, ಇನ್ನೇನು ಪ್ರಳಯವೇ ಸಂಭವಿಸಿ ಜಗತ್ತು ನಾಶವಾಗಲಿದೆ ಎನ್ನುವಂತಹ ಭೀತಿಯಿಂದ ಊರಿನ ಮುಕ್ಕಾಲು ಪ್ರತಿಶತ ಜನರು ಜಾತಿ, ಧರ್ಮ, ಲಿಂಗ ಭೇದವಿಲ್ಲದೇ ಯಾವುದೋ ಉದಾತ್ತ ವಿಚಾರಕ್ಕಾಗಿ ಹೋರಾಡುವ ಮಹಾನ್ ಸಾಧಕರಂತೆ ಒಟ್ಟಾಗಿ ಕೇಶವ್ ಚಾಚಾರನ್ನು ವಿರೋಧಿಸಿದ್ದರು. ಊರಿಡೀ ಡಂಗುರ ಸಾರಿ ಲಗುಬಗೆಯ ಪಂಚಾಯತ್ ಬೈಠಕ್ ಕರೆಯಲಾಯಿತು. ಯಾರದೋ ಖೂನಿ ಮಾಡಿ ಸಿಕ್ಕಿಬಿದ್ದವನನ್ನು ಪ್ರಶ್ನಿಸುವಂತಿತ್ತು ಅಂದಿನ ಬೈಠಕ್. ಕೇಶವ್ ಚಾಚಾರಿಗೆ ಕನಿಷ್ಠ ಬಾಯಿ ತೆರೆಯಲೂ ಅವಕಾಶವಿಲ್ಲದಂತೆ ಸಲಹೆ, ಸೂಚನೆ, ಆದೇಶಗಳ ಜಡಿಮಳೆ ಸುರಿದಿತ್ತು ಎಲ್ಲರಿಂದ. 

"ಪಹ್ಲೇ ಥಾರೀ ಚೋರಿ ಕೀ ಲಗಾಮ್ ಸಂಭಾಲ್ ಕೇಸವ್. ಇತ್ನಾ ಢೀಲಾ ಮತ್ ಚೋಡೋ. ಕಹೀ ಕಲ್ ಯೇ ಥಾರೀ ನಾಕ್ ನಾ ಕಟ್ವಾಯೇ...." ಎಂಬ ಸರಪಂಚನ ಕಟ್ಟೆಚ್ಚರಿಕೆಯ ಜೊತೆಗೇ ನೆರೆದಿದ್ದ ಗುಂಪಿನಿಂದ 'ಅರೇ… ಚೋರಿ ಕೋ ಪಡ್ನೇ ಕೀ ಕಾ ಜರೂರತ್ ಹೋವೇ? ಜಾಢೂ - ಪೋಚಾ ಲಗಾನಾ, ಖಾನಾ ಪಕಾನಾ ಏ ಸಬ್ ಸಿಖಾವೋ ಉಸೇ. ಬಡಾ ಆಯಾ ಲಡ್ಕೀ ಕೋ ಇಸ್ಕೂಲ್ ಬೇಜ್ನೇ ವಾಲಾ' ಎಂಬ ಹೀಯಾಳಿಕೆಯ ಮಾತುಗಳೂ ಉಚಿತವಾಗಿ ದೊರೆತಿದ್ದವು. ಈ ವಿರೋಧ ಗಂಡಸರಷ್ಟೇ ಪ್ರಬಲವಾಗಿ ಅಲ್ಲಿ ನೆರೆದಿದ್ದ ಮಹಿಳೆಯರಿಂದಲೂ ಬಂದಿತ್ತು. 'ಹೆಣ್ಣಾಗಿ ಜನಿಸಿದ್ದೇ ತಮ್ಮ ಪೂರ್ವಜನ್ಮದ ಕುಕರ್ಮಗಳ ಫಲ. ಇನ್ನು ಶಾಲೆಗೆ ಹೋಗುವುದೆಂದರೆ, ಗಂಡಸರ ಸರಿಸಮಾನವಾಗಿ ಕಲಿಯುವುದೆಂದರೆ ಏನರ್ಥ? ತಮ್ಮ ಜೀವನವೇನಿದ್ದರೂ ಮನೆಯ ನಾಲ್ಕು ಗೋಡೆಯ ಚೌಕಟ್ಟಿಗಷ್ಟೇ ಸೀಮಿತ' ಎನ್ನುವ ಇವರ ತರ್ಕವೇ ಎಷ್ಟು ವಿಚಿತ್ರ. ಹಿಂದಿನ ಕರ್ಮಗಳ ಫಲವನ್ನು ಈ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ ಅನುಭವಿಸುತ್ತಿದ್ದೇವೆ ಎಂದುಕೊಳ್ಳುವವರಿಗೆ ಈ ಜನ್ಮದಲ್ಲಿನ ಶಿಶುಹತ್ಯೆಯಂತಹ ಘೋರ ಕರ್ಮದ ಪಾಪ ಸುತ್ತಿಕೊಳ್ಳುವುದಿಲ್ಲವೇ? ಪೂರ್ವ ಜನ್ಮದ ಪಾಪಗಳಿಗೆಲ್ಲಾ ಹೆಣ್ಣಾಗಿ ಜನಿಸುವುದೇ ಶಿಕ್ಷೆ ಎಂದಾದರೆ ಸೃಷ್ಟಿಗೆ ಮೂಲವಾದ ಇನ್ನೊಂದು ಜೀವಕ್ಕೆ ಜೀವ ಕೊಡುವ ಮಾತೃತ್ವದ ಭಾಗ್ಯ ಹೆಣ್ಣಿಗೇ ಏಕೆ ದೊರಕಿತು? ಹೆಣ್ಣೇ ಇಲ್ಲದ ಲೋಕವನ್ನು ಊಹಿಸಲಾದೀತೇ? ಸೃಷ್ಟಿಕ್ರಿಯೆಯಲ್ಲಿ ಗಂಡಿನಷ್ಟೇ ಪಾತ್ರ ಹೆಣ್ಣಿನದ್ದೂ ಇದೆಯಲ್ಲವೇ? ಹಾಗಿದ್ದ ಮೇಲೆ ಈ ಪಾಪಪುಣ್ಯಗಳ ಲೆಕ್ಕಾಚಾರ, ಅದೃಷ್ಟ ಅನಿಷ್ಟಗಳ ಹಂಚಿಕೆ ಅದು ಹೇಗಾಯಿತೋ ನಾ ಕಾಣೆ.

ಒಟ್ಟಿನಲ್ಲಿ ಆ ದಿನದ ಬೈಠಕ್ ಬೇಲಾಳಿಗೆ ಔಪಚಾರಿಕ ಶಿಕ್ಷಣ ನೀಡುವ ಚಾಚಾರ ಕನಸಿಗೆ ಕೊಳ್ಳಿ ಇಟ್ಟಿತ್ತು. ಹಾಗೊಂದು ವೇಳೆ ಅವಳನ್ನು ಶಾಲೆಗೆ ಸೇರಿಸಲೇಬೇಕೆಂದರೆ ಚಾಚಾ ಊರಿನ ಜನರ ವಿರೋಧ ಕಟ್ಟಿಕೊಳ್ಳಬೇಕಿತ್ತು. ಹಾಗಾದ ಪಕ್ಷದಲ್ಲಿ ಚಾಚಾ ಹಾಗೂ ಬೇಲಾ ಇಬ್ಬರೂ ಜೀವ ಕಳೆದುಕೊಳ್ಳುವುದು ಖಚಿತವಿತ್ತು. ಯಾವ ತಪ್ಪೂ ಮಾಡದ ನವಜಾತ ಶಿಶುಗಳನ್ನೇ ಬಿಡದ ಈ ರಕ್ಕಸರು ತಮ್ಮ ಮಾತನ್ನು ಧಿಕ್ಕರಿಸುವವರನ್ನು ಬದುಕಲು ಬಿಟ್ಟಾರೇ? ಪಂಚಾಯತಿಯ ನಿರ್ಧಾರ ವಿರೋಧಿಸುವುದೆಂದರೆ ಅಪಾಯಕಾರಿ ಅಲೆಗಳ ವಿರುದ್ಧ ಈಜಲು ನಿರ್ಧರಿಸಿದಂತೆಯೇ ಸೈ. ಆದರೆ ಶಾಂತ ಬದುಕನ್ನು ಬಯಸುತ್ತಿದ್ದ ಕೇಶವ್ ಚಾಚಾರಿಗೆ ಇಂತಹ ಹೋರಾಟ ಬೇಕಿರಲಿಲ್ಲ. ನಾಳೆ ಇದರಿಂದಾಗಿ ಬೇಲಾಳಿಗೆ ಒದಗಬಹುದಾದ ಸಂಭಾವ್ಯ ಆಪತ್ತುಗಳನ್ನು ಪರಿಗಣಿಸಿ ಅವಳನ್ನು ಶಾಲೆಗೆ ಕಳಿಸುವ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದರು ಚಾಚ.

ಆದರೆ ಅವಳ ಕಲಿಕೆ ನಿಲ್ಲಲಿಲ್ಲ. ಬದಲಿಗೆ ಅಂದಿನಿಂದ ಮನೆಯೇ ಬೇಲಾಳಿಗೆ ಪಾಠಶಾಲೆಯಾಯಿತು. ದಿನವೂ ಸಂಜೆಯ ನಂತರ ಹಾಗೂ ನಸುಕಿನಲ್ಲಿ ಚಾಚಾರ ಮಾರ್ಗದರ್ಶನದಲ್ಲಿ ಅವಳ ಕಲಿಕೆ ಸುಗಮವಾಗಿ ಸಾಗಿತ್ತು. ಚಾಚಾರ ಮನೆಯ ತೀರಾ ಸಮೀಪದಲ್ಲಿ ಮತ್ಯಾವ ಮನೆಗಳೂ ಇಲ್ಲದೆ ಕಾರಣ ಈ ಬಗ್ಗೆ ಯಾರಿಗೂ ಅನುಮಾನ ಬರುವ ಸಾಧ್ಯತೆಯೂ ಇರಲಿಲ್ಲ. ನಮ್ಮ ತೋಟದಾಚೆಗಿನ ಕಾಲು ಹಾದಿಯಲ್ಲಿ ಗಾವುದ ದೂರ ನಡೆದರೆ ಬೇಲಾಳ ಮನೆ. ಮೊದಲಿನಿಂದಲೂ ಕೇಶವ್ ಚಾಚಾ ಎಂದರೆ ಅದೇನೋ ಗೌರವ ನನಗೆ. ಪಂಚಾಯಿತಿಯಲ್ಲಿ ಬೇಲಾಳ ಶಾಲೆಯ ವಿಚಾರ ಬಂದ ನಂತರವಂತೂ ಗೌರವದೊಂದಿಗೆ ಅಭಿಮಾನವೂ ಬೆಳೆದಿತ್ತು ಅವರ ಮೇಲೆ. ರಾಕ್ಷಸರ ಲೋಕದೊಳಗೊಬ್ಬ ದೇವಮಾನವನನ್ನು ಕಂಡಂತಾಗಿತ್ತು ನನಗೆ. ಅದರೊಟ್ಟಿಗೇ ನಾನೂ ಬೇಲಾಳೊಂದಿಗೆ ಕಲಿಯುವಂತಿದ್ದರೆ ಎಷ್ಟು ಚೆನ್ನಿತ್ತು ಎಂಬ ಯೋಚನೆಯೂ ಸದಾ ನನ್ನೊಳಗೆ ಸುಳಿಯುತ್ತಿತ್ತು. ಅವರು ಬೇಲಾಳೊಟ್ಟಿಗೆ ನನಗೂ ಪಾಠ ಹೇಳುವರೆಂಬ ವಿಶ್ವಾಸವೇನೋ ಇತ್ತು. ಆದರೆ ಸಂಜೆಯ ನಂತರ ಮನೆಯಿಂದ ಹೊರಗೆ ಕಾಲಿಡಲು ನನಗೆ ಸಾಧ್ಯವಿರಲಿಲ್ಲ. ಇನ್ನು ಬೆಳಗಿನ ಜಾವದಲ್ಲಿ ತೀರದ ಕೆಲಸದ ಹೊರೆ. ಆ ಕೆಲಸಗಳನ್ನು ಉಸಿರುಗಟ್ಟಿ ಮುಗಿಸಿ ಶಾಲೆಯ ಬಳಿ ಹೋಗುವಾಗಲೇ ಸಮಯ ಮೀರಿರುತ್ತಿತ್ತು. ಇನ್ನು ಚಾಚಾರ ಬಳಿ ಹೋಗುವುದೆಂತು? ಹೇಗೋ ಸಮಯ ಹೊಂದಿಸಿಕೊಂಡು ಹೋಗುವಾ ಎಂದುಕೊಂಡೆನಾದರೂ ಈ ಬಗ್ಗೆ ಮನೆಯಲ್ಲಿ ಅಥವಾ ಊರಿನ ಇನ್ಯಾರಿಗಾದರೂ ತಿಳಿದರೆ ಕೇಶವ್ ಚಾಚಾ ಹಾಗೂ ಬೇಲಾ ಇಬ್ಬರೂ ತೊಂದರೆಗೆ ಸಿಲುಕುತ್ತಾರೆ ಎಂಬ ಚಾಚಿಯ ಎಚ್ಚರಿಕೆಯ ಮಾತುಗಳಲ್ಲಿನ ಸತ್ಯ ನನ್ನ ನಿರ್ಧಾರವನ್ನು ಬದಲಿಸುವಂತೆ ಮಾಡಿತ್ತು.

ಆದರೆ ಚಾಚಿಯ ಮರಣಾನಂತರ ನಾನು ಹಿಂದಿನ ಸಿಯಾಳಾಗಿ ಉಳಿಯಲಿಲ್ಲ. ಮೊದಲಿನಿಂದಲೇ ನನ್ನೊಳಗೆ ಹೊಗೆಯಾಡುತ್ತಿದ್ದ ಬಂಡಾಯದ ಮನಸ್ಥಿತಿ ಸಂಪೂರ್ಣ ಜಾಗೃತವಾಗಿತ್ತು. ಜಗತ್ತೇ ವಿರುದ್ಧ ನಿಂತರೂ ನನ್ನ ಹಾದಿ ಕಿಂಚಿತ್ತೂ ಬದಲಿಸಲಾರೆ ಎಂದು ನಿರ್ಧರಿಸಿಬಿಟ್ಟಿದ್ದೆ ನಾನು. ಗೆಲುವೋ ಸೋಲೋ ಯಾವುದಾದರೂ ಸರಿಯೇ ಆದರೆ ಜೀವಚ್ಛವದಂತಹ ಬದುಕಿಗಿಂತ ನರಕವೇ ಮೇಲಲ್ಲವೇ? ಅಲೆಗಳ ವಿರುದ್ಧ ಈಜುವುದೆಂದು ಗಟ್ಟಿ ಮನದಿಂದ ನಿರ್ಧರಿಸಿದ ಮೇಲೆ ನನಗ್ಯಾವ ಭಯವೂ ಇರಲಿಲ್ಲ. ಇವೆಲ್ಲದರ ನಡುವೆ ಚಾಚಿಯ ಸಾವಿನ ನಂತರ ಓದಿನಲ್ಲೂ ನನ್ನ ಆಸಕ್ತಿ ಕುಂದಿತ್ತು. ಹೆಣ್ಣೆಂದರೆ 'ಪೇರೋಂಕಿ ಜುತ್ತಿ' ಎನ್ನುವ ಜನರಿಂದ, ಕೈ ಕಾಲುಗಳಿಗೆ ರೀತಿ-ರಿವಾಜುಗಳ ಸಂಕೋಲೆ ತೊಡಿಸಿ ಕೊಲ್ಲುವ ಈ ಹಾಳು ಬಂಧನದಿಂದ ಮುಕ್ತಳಾಗಿ ಸ್ವಚ್ಛಂದವಾಗಿ ಉಸಿರಾಡಬೇಕು, ನನ್ನಿಷ್ಟದಂತೆ ಬದುಕಬೇಕೆಂಬ ಹಂಬಲವೊಂದೇ ಗಟ್ಟಿಯಾಗಿ ನೆಲೆಯೂರತೊಡಗಿತ್ತು ನನ್ನಲ್ಲಿ. ಹಾಗಾಗಿಯೇ ನನಗೆ ಪಾಠಕ್ಕಾಗಿ ಕೇಶವ್ ಚಾಚಾರ ಬಳಿ ಹೋಗಬೇಕೆನಿಸಲಿಲ್ಲ.

ಆದರೆ ಚಾಚಿಯ ಸಾವಿನ ನಂತರ ಅವರೇ ಬೇಲಾಳೊಂದಿಗೆ ನನ್ನನ್ನು ಅರಸಿ ಬಂದಿದ್ದರು ಯಮುನೆಯ ತಟಕ್ಕೆ. ಆ ವೇಳೆಗಾಗಾಲೇ ನಾನು ಚಾಚಾನ ತಲೆಯೊಡೆದ ವಿಷಯ ಊರಜನರ ಬಾಯಲ್ಲಿ ಹರಿದಾಡತೊಡಗಿತ್ತು. ಎಲ್ಲರೂ ಅವರಿಷ್ಟ ಬಂದಂತೆ ಕಥೆ ಕಟ್ಟಿದ್ದರು. ಆಗಲೇ ಕೇಶವ್ ಚಾಚಾರಿಗೆ ನನ್ನ ಬಗ್ಗೆ ತಿಳಿದದ್ದು. ಅವರಿಗೆ ನನ್ನ ಮನದ ತುಮುಲಗಳನ್ನು ಗ್ರಹಿಸುವಷ್ಟು ಪ್ರಬುದ್ಧತೆಯಿತ್ತು. ನನ್ನ ಕಣ್ಣುಗಳಲ್ಲಿನ ರೋಷದ ಹಿಂದಿನ ನೋವನ್ನು ಗುರುತಿಸಿದ್ದರು ಅವರು. ನಂತರದ ದಿನಗಳಲ್ಲಿ ಅವರಿಬ್ಬರು ನನ್ನೆಡೆಗೆ ವಿಶೇಷ ಆದರವನ್ನು ತೋರಿ ಮುತುವರ್ಜಿ ವಹಿಸತೊಡಗಿದ್ದರು. ನನ್ನ ಕಾರಣದಿಂದಾಗಿ ಅವರಿಬ್ಬರಿಗೂ ಏನಾದರೂ ಸಮಸ್ಯೆಯಾಗಬಹುದೇ ಎಂಬ ಅವ್ಯಕ್ತ ಭಯವೊಂದು ಸದಾ ನನ್ನನ್ನು ಕಾಡುತ್ತಿತ್ತು. ನಾನೇನೋ ಏನಾಗುವುದೋ ನೋಡೇ ಬಿಡುವೆ ಎಂಬ ಧೈರ್ಯದಲ್ಲಿ ಜೀವಿಸುತ್ತಿದ್ದೆ. ಆದರೆ ಕೇಶವ್ ಚಾಚಾ ಹಾಗಲ್ಲ. ಮೊದಲೇ ಈ ಊರಿನ ಜನರಿಗೆ ಸಂಪೂರ್ಣ ವಿರುದ್ಧವಾದ ಮೃದು ಮನಸತ್ವ ಅವರದು. ಗಲಾಟೆ, ಗೊಂದಲಗಳಲ್ಲೇ ಮುಳುಗಿದ ಬದುಕು ಅವರಿಗೆ ಎಂದೂ ಬೇಕಿರಲಿಲ್ಲ. ಅಂತಹವುಗಳನ್ನು ಎದುರಿಸಿ ನಿಲ್ಲುವಂತಹ ಉಗ್ರ ವ್ಯಕ್ತಿತ್ವವೂ ಅವರದಲ್ಲ. ನನ್ನಿಂದಾಗಿ ಅವರಿಗೇನಾದರೂ ತೊಂದರೆಯಾದರೆ ಜೀವನಪರ್ಯಂತ ಆ ಪಾಪಪ್ರಜ್ಞೆ ನನ್ನನ್ನು ದಹಿಸುವುದೆಂದು ನಿಚ್ಚಳವಾಗಿ ತಿಳಿದಿತ್ತು ನನಗೆ. ಈ ಕಾರಣಕ್ಕಾಗಿಯೇ ಆರಂಭದಲ್ಲಿ ಅವರೊಂದಿಗೆ ಹೆಚ್ಚು ಬೆರೆಯದೇ ಅಂತರ ಕಾಯ್ದುಕೊಂಡಿದ್ದೆ ನಾನು. ಕ್ರಮೇಣ ಚಾಚಾರ ಪಿತೃವಾತ್ಸಲ್ಯದಲ್ಲಿ, ಬೇಲಾಳ ಸ್ನೇಹದಲ್ಲಿ ಆ ಭಯ ಕುರುಹಿಲ್ಲದಂತೆ ಕರಗಿ ಹೋಯಿತು.

ಮೊದಮೊದಲು ನನ್ನ ಮನಸ್ಸು ಯಾವುದಕ್ಕೂ ಸ್ಪಂದಿಸದಷ್ಟು ಶುಷ್ಕವಾಗಿತ್ತಾದರೂ ಅವರ ಕಾಳಜಿ ಆಗೀಗ ಚಾಚಿಯನ್ನೇ ನೆನಪಿಸುತ್ತಿದ್ದದ್ದು ಸುಳ್ಳಲ್ಲ. ಕೇಶವ್ ಚಾಚಾ ದಿನವೂ ಬೇಲಾಳೊಂದಿಗೆ ನನಗೂ ಪಾಠ ಹೇಳಲು ತಯಾರಿದ್ದರು. ಬೇಲಾ ಕೂಡಾ ಈ ಬಗ್ಗೆ ಬಹಳ ಒತ್ತಾಯಿಸುತ್ತಿದ್ದಳು ನನ್ನನ್ನು. ಇಬ್ಬರೂ ಸೇರಿ ಬಲು ಕಷ್ಟಪಟ್ಟು ಓದಿಗೆ ಬೆನ್ನು ಮಾಡಿದ್ದ ನನ್ನನ್ನು ಮತ್ತೆ ಅತ್ತ ಕಡೆಗೆ ನಿಧಾನವಾಗಿ ಸೆಳೆದಿದ್ದರು. ಮುಂಚಿನಷ್ಟು ಆಸಕ್ತಿಯಿಂದ ಅಲ್ಲದಿದ್ದರೂ ತಕ್ಕಮಟ್ಟಿಗೆ ಮತ್ತೆ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಈಗ ಚಾಚಾರೇ ನನಗೂ ಗುರುವಾಗಿದ್ದರು. ನನ್ನಲ್ಲಿ ಹಾಗೂ ಬೇಲಾಳಲ್ಲಿ ಯಾವುದೇ ತಾರತಮ್ಯವಿರಲಿಲ್ಲ ಅವರಿಗೆ. ಇಬ್ಬರನ್ನೂ ಒಟ್ಟಿಗೆ ಕೂಡಿಸಿ ಪಠ್ಯದೊಂದಿಗೇ ರಾಮಾಯಣ, ಮಹಾಭಾರತ, ಪಂಚತಂತ್ರ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟ, ಸಮಾಜ ಸುಧಾರಣಾ ಚಳುವಳಿ ಮೊದಲಾದವುಗಳ ಬಗ್ಗೆ ಕೂಡಾ ಹೇಳುತ್ತಿದ್ದರು. ಇವನ್ನೆಲ್ಲಾ ಗ್ರಹಿಸುತ್ತಾ ಹೋದಂತೆ ಶಿಕ್ಷಣದ ಮೂಲಕ ಈ ಬಂಧದಿಂದ ಮುಕ್ತಿ ದೊರಕಬಹುದು ಎನ್ನುವ ತಿಳಿವು ನನ್ನೊಳಗೆ ಮೂಡತೊಡಗಿತು. ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳಬೇಕೆಂದರೆ ಅದಕ್ಕೆ ವಿದ್ಯೆಯೇ ಮೂಲ ಎಂಬ ಅರಿವಾಗತೊಡಗಿತು. ಇನ್ನಷ್ಟು ಗಮನದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡೆ. ಜೊತೆಗೇ ಕೇಶವ್ ಚಾಚಾ ಹಾಗೂ ಬೇಲಾರೊಂದಿಗೆ ಬಹಳ ಆಪ್ತವಾದ ಬಾಂಧವ್ಯವೊಂದು ಬೆಸೆಯತೊಡಗಿತು.

ಕುಲ್ದೀಪ್ ಹಾಗೂ ಕುಲ್ಜೀತ್ ರನ್ನು ಹೊರತುಪಡಿಸಿದರೆ ನನಗೆ ಅತ್ಯಂತ ಆತ್ಮೀಯವಾಗಿದ್ದಿದ್ದು ಬೇಲಾ. ನಮ್ಮಿಬ್ಬರ ಸ್ವಭಾವಗಳಲ್ಲಿನ ವೈರುಧ್ಯದ ನಡುವೆಯೂ ನಮ್ಮಲ್ಲಿ ಗಾಢ ಸ್ನೇಹವಿತ್ತು. ಇಂತಹ ವಿಶಾಲ ಮನೋಭಾವದ ಕೇಶವ್ ಚಾಚಾರ ಮಗಳಾಗಿರುವ ಬೇಲಾ ಅದೆಷ್ಟು ಅದೃಷ್ಟವಂತೆ ಎನ್ನಿಸುತ್ತಿತ್ತು ನನಗೆ. ಅವಳ ಜೀವನ್ಮುಖಿ ಬದುಕಿಗೂ ನನ್ನ ಜೀವಚ್ಛವದಂತಹ ಬದುಕಿಗೂ ಬಾನುಭೂಮಿಯ ಅಂತರವಿತ್ತು. ನಮ್ಯಾರಲ್ಲೂ ಕಾಣಸಿಗದ ಅವಳಲ್ಲಿ ಮಾತ್ರವೇ ನೆಲೆಯಾಗಿದ್ದ ಆ ಜೀವಂತಿಕೆಯ ಲವಲವಿಕೆ ಅವಳಿಗೊಂದು ಪ್ರತ್ಯೇಕ ಮೆರುಗು ನೀಡಿತ್ತು. ವಿಧೇಯತೆ, ಸಂಯಮ, ಸಹನೆಗಳೆಲ್ಲವನ್ನೂ ತಂದೆಯಿಂದಲೇ ಬಳುವಳಿ ಪಡೆದಿದ್ದ ಮೃದು ಹೃದಯಿ. ಇಂತಹ ಬೇಲಾಳನ್ನು ಯಾರಾದರೂ ದ್ವೇಷಿಸಲು ಸಾಧ್ಯವಿತ್ತೇ…..‌‌?
'ಖಂಡಿತಾ ಇಲ್ಲ…. ಯಾರಿಂದಲೂ ಸಾಧ್ಯವಿಲ್ಲ' ಎಂಬ ಸ್ಪಷ್ಟ ಉತ್ತರವನ್ನು ಸದಾ ನನ್ನ ಮನಸ್ಸು ನೀಡುತ್ತಿತ್ತು.

ಆದರೆ……

ಮನುಷ್ಯತ್ವವೇ ಇರದ ಮನುಜರು ವ್ಯರ್ಥ ಕಾಲಹರಣಕ್ಕಾಗಿ ನಡೆಸುವ ಶೋಕಿಗಳು ದ್ವೇಷಕ್ಕೂ ಮೀರಿದ ಕ್ರೌರ್ಯಕ್ಕೆ ನಾಂದಿಯಾಗಬಹುದೆಂದು ಎಂದೂ ಊಹಿಸಿರಲಿಲ್ಲ ನಾನು….. ಬಹುಶಃ ಅವಳೂ…..!!

ಇನ್ನು ಕೇವಲ ಮಗಳ ಹಿತಕ್ಕಾಗಿ ಎಂದಿಗೂ ಅಲೆಗಳ ವಿರುದ್ಧ ಈಜದೇ ಅಲೆಗಳೊಂದಿಗೇ ತೇಲಿದ ಕೇಶವ್ ಚಾಚಾರಂತೂ ತಮ್ಮ ಜೀವನದಲ್ಲಿ ಹೀಗೊಂದು ದಿನ ಬರಬಹುದೆಂದು ಕನಸಿನಲ್ಲೂ ಎಣಿಸಿರಲಿಕ್ಕಿಲ್ಲ.

ಆದರೆ……

ಅಂತಹದ್ದೊಂದು ಕರಾಳ ದಿನ ಬಂದೇ ಬಂತು. ಅಲೆಗಳೊಟ್ಟಿಗೆ ತೇಲಿಯೂ ಬದುಕು ಅವರೆಣಿಸಿದ ತೀರವನ್ನು ತಲುಪದೇ ಹೋಯಿತು. ತೀರ ತಲುಪುವ ಮುನ್ನವೇ ಸುರಿದ ಬೆಂಕಿಯ ಮಳೆಯಲ್ಲಿ ಉಳಿದದ್ದು ಕರಟಿದ ಕನಸುಗಳ ಬೂದಿ ಮಾತ್ರವೇ.

ಸಶೇಷ

ಅಗ್ನಿ ತರಂಗಿಣಿ 10

ಅಭಿನವ ದ್ರೌಪದಿಯರು

ಚಾಚಿಯ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. ಮೇಲಿಂದ ಮೇಲೆ ತಪ್ಪುಗಳನ್ನು ಮಾಡುತ್ತಲೇ ರಾಜಾರೋಷವಾಗಿ ಎದೆಯುಬ್ಬಿಸಿ ತಲೆಯೆತ್ತಿ ಓಡಾಡುವ ನನ್ನ ಸುತ್ತಲಿನ ಜನರ ಬಗ್ಗೆ ತಿರಸ್ಕಾರ ಬೆಳೆಯತೊಡಗಿತು. ಈ ಅನ್ಯಾಯಗಳೆಲ್ಲವನ್ನೂ ಬದಲಾಯಿಸಿಬಿಡಬೇಕೆಂಬ ತವಕ ಅತಿಯಾಗಿ ಅನ್ಯಾಯ, ತಪ್ಪು ಎನಿಸಿದ್ದನ್ನು ಯಾವ ಎಗ್ಗಿಲ್ಲದೇ ನೇರಾನೇರ ವಿರೋಧಿಸುವಷ್ಟು ತೀಕ್ಷ್ಣಳಾಗತೊಡಗಿದೆ. ಹೊರ ಜಗತ್ತಿನ ಪಾಲಿಗೆ ನನ್ನ ಮಾತುಗಳು ಕಠೋರವಾಗತೊಡಗಿದವು. ತಲೆತಲಾಂತರಗಳಿಂದ ನಡೆದುಕೊಂಡು ಬಂದ ತಲೆಬುಡವಿಲ್ಲದ ಹಲವು ನೀತಿ, ನಿಯಮ, ಆಚರಣೆಗಳನ್ನು ಪ್ರಶ್ನಿಸುವ ನನ್ನ ನಡವಳಿಕೆ ನನಗೆ ಸಮಾಜ ವಿರೋಧಿ, ಬಂಡಾಯಗಾರ್ತಿ, ವಿದ್ರೋಹಿಯೆಂಬ ಬಿರುದುಗಳನ್ನು ದಯಪಾಲಿಸಿತು. ಭೈರೋನ್ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ನನ್ನ ಗುರುತು 'ಬಾಗೀ ಸಿಯಾ' ಎಂದು ಬದಲಾಯಿತು‌. ನಾನು ಉದ್ಧಟೆಯಾಗಿ, ಸಮುದಾಯದಿಂದ ಹೊರಗಿನವಳಾಗಿ ಗುರುತಿಸಲ್ಪಡತೊಡಗಿದೆ......

ಆದರೆ ಆ ಬಗ್ಗೆ ಯಾವ ಚಿಂತೆಯಿಲ್ಲ ನನಗೆ. ಚಿಂತಿಸಬೇಕಾದ ಅಗತ್ಯವಾದರೂ ಏನಿತ್ತು? ಇವರ್ಯಾರೂ ಎಂದೂ ಕ್ಷಣಮಾತ್ರಕ್ಕೂ ನನ್ನ ಬಗ್ಗೆ ಚಿಂತಿಸಿದವರಲ್ಲ, ಯೋಚಿಸಿದವರಲ್ಲ.
ಆದರೆ ಚಾಚಿ...........? ನಾನು ಭುವಿಗೆ ಬಿದ್ದ ಕ್ಷಣದಿಂದ ಅವಳು ನನಗಾಗಿಯೇ ಬದುಕಿದವಳು. ಅವಳ ಮುಂಜಾನೆಗಳು ನನ್ನ ಹಿತದ ನಿರೀಕ್ಷೆಯಲ್ಲಿ ಆರಂಭವಾದರೆ, ನನ್ನ ಭವಿಷ್ಯದ ಚಿಂತೆಯಲ್ಲಿ ಅವಳ ಸಂಜೆಗಳು ಜಾರುತ್ತಿದ್ದವು. ನಿದ್ರಾಹೀನ ರಾತ್ರಿಗಳಲ್ಲಿ ಅವಳು ಕಣ್ತೆರೆದೇ ಕಾಣುವ ಕನಸುಗಳೂ ಇರುತ್ತಿದ್ದುದು ನನ್ನ ಬದುಕಿನ ಸುತ್ತವೇ..... 'ನನ್ನ ಸಿಯಾಳ ಕನಸುಗಳೆಲ್ಲಾ ನನಸಾಗಲಿ' ಎಂಬ ಆಶಯದೊಂದಿಗೆ ಮತ್ತೊಂದು ಮುಂಜಾವಿನ ಸ್ವಾಗತಕ್ಕೆ ಸಿದ್ಧಳಾಗುತ್ತಿದ್ದಾಕೆ ನನ್ನ ಚಾಚಿ. ತನಗಾಗಿ ಎಂದೂ ಏನನ್ನೂ ಆಶಿಸಿದ ಜೀವವಲ್ಲ ಅದು.
ಅವಳ ಪ್ರಾರ್ಥನೆ, ಬೇಡಿಕೆ, ಪ್ರತೀಕ್ಷೆ, ನಿರೀಕ್ಷೆಗಳ ಉದ್ದಗಲಕ್ಕೂ ಇದ್ದವಳು ಈ ಬಿಟಿಯಾ ರಾನಿ ಮಾತ್ರವೇ. ಅಂತಹಾ ಚಾಚಿಗೆ ಅದೆಂತಹಾ ಯಾತನಾಮಯ ಸಾವು........ ಅವಳ ನರಳುವಿಕೆಯ ಯಾತನೆ ಇಂದಿಗೂ ನನ್ನ ಕರಣಗಳನ್ನು ತಾಕುತ್ತಿದೆಯೇನೋ ಎನಿಸುತ್ತದೆ. ಅಮ್ಮಂದಿರ ಮಮತೆ ತುಂಬಿದ ಯಾವ ಬೇಡಿಕೆಯನ್ನೂ ಭಗವಂತ ತಿರಸ್ಕರಿಸುವುದಿಲ್ಲ ಎಂದು ಸದಾಕಾಲ ಹೇಳುತ್ತಿದ್ದಳು ಚಾಚಿ. ಸಾವಿನ ಮನೆಗೆ ಪಯಣಿಸುವ ಆ ಕ್ಷಣಗಳಲ್ಲಿ ಆಕೆಯ ನಿಸ್ತೇಜ ಕಣ್ಣುಗಳಲ್ಲಿ 'ಸಿಯಾಳಿಗೋಸ್ಕರವಾದರೂ ನನ್ನನ್ನು ಬದುಕಿಸು ದೇವಾ' ಎಂಬ ಕೋರಿಕೆಯಿತ್ತು. ಆದರೆ ಅದೇಕೋ ಆ ದೇವನಿಗೆ ನನ್ನಮ್ಮನ ಅಳಲು ಕೇಳಲೇ ಇಲ್ಲ...

ಮನೆಯವರಿಗಂತೂ ಅವಳು ಬದುಕಿಗೂ ಸಾವಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಆದರೆ ಆ ದಿನ ಊರ ಜನರಲ್ಲಿ ಕಡೇಪಕ್ಷ ಯಾರಾದರೊಬ್ಬರು ಚಾಚಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳೇನೋ...... ಆಗ ಕನಿಷ್ಠ ಮಾತ್ರದ ಮಾನವೀಯತೆ ತೋರದವರು ಅವಳು ಸತ್ತ ನಂತರ ಸಂತಾಪ ಸೂಚಿಸಿ ತಿಪ್ಪೆ ಸಾರಿಸಲು ದಂಡಿಯಾಗಿ ಆಗಮಿಸಿದರು. ಇಂತಹ ಹೃದಯಹೀನ ಜನ ಬದುಕಿದ್ದೂ ಸತ್ತಂತೆಯೇ ನನ್ನ ಪಾಲಿಗೆ. ಇವರಿಗೆ ನನ್ನ ಬಗ್ಗೆ ಯಾವ ಅಭಿಪ್ರಾಯಗಳಿವೆ ಎಂಬುದು ನನಗೆ ಅನಗತ್ಯವಾಗಿತ್ತು. 

ಈ ಮನುಷ್ಯತ್ವವಿಲ್ಲದ ಅವಕಾಶವಾದಿ ಜನರಿಗೆ ಕರುಣೆ, ದಯೆ ದಾಕ್ಷಿಣ್ಯಗಳೆಂಬುದೇ ಇಲ್ಲ ಎಂಬುದು ಮುಂಚಿನಿಂದಲೂ ತಿಳಿದಿತ್ತಾದರೂ ಚಾಚಿಯ ಸಾವಿನ ಬಳಿಕ ಅದು ಇನ್ನೂ ಸ್ಪಷ್ಟವಾಗತೊಡಗಿತ್ತು. ನಾವು ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಳ್ಳಲು ಯತ್ನಿಸಿದಷ್ಟೂ ಅದನ್ನೇ ನಮ್ಮ ಬಲಹೀನತೆ ಎಂದುಕೊಂಡು ಪಾದದಡಿ ಹೊಸಕಿ ದಮನಿಸುವ ಲೋಕವಿದು. ಅನಾದಿ ಕಾಲದಿಂದ ಮೌನವಾಗಿ ಸಹಿಸಿ ಸಹಿಸಿ ಹೊಂದಿಕೊಂಡು ಬದುಕಿದೆವಲ್ಲಾ ನಾವು...... ಅದರಿಂದ ಸಾಧಿಸಿದ್ದಾದರೂ ಏನು? ನನಗಿಂತ ಮುಂಚಿನ ಎರಡು ಹೆಣ್ಣುಕೂಸುಗಳ ಹನನವನ್ನು ಕಂಡವಳು ನನ್ನ ಮಾಯಿ... ಆದರೂ ಆಕೆ ಪ್ರತಿಭಟಿಸದೇ ಸಹಿಸಿಕೊಂಡಳು. ಆ ಸಹನೆಗೆ ಸಿಕ್ಕ ಬೆಲೆಯೇನು? ಬಾಪೂ ಇನ್ನೊಬ್ಬ ಲುಗಾಯಿಯನ್ನು ಕರೆತಂದ. ಮಾಯಿ ಕೊಟ್ಟಿಗೆ ಪಾಲಾದಳು. ಕೊನೆಗೊಮ್ಮೆ ನನ್ನ ಹೆತ್ತು ಸತ್ತಳು. ಚಾಚಿಯದೂ ಹೆಚ್ಚುಕಡಿಮೆ ಅದೇ ಪುನರಾವರ್ತನೆ. ಬಹುಶಃ ಮಾಯಿ ಹಾಗೂ ಚಾಚಿಯ ಹೆತ್ತಬ್ಬೆಯರದ್ದೂ ಇದೇ ತೆರನಾದ ಕಥೆಯಿರಬಹುದು. ಆದರೂ ಅವರ್ಯಾರೂ ಪ್ರತಿರೋಧ ತೋರಲಿಲ್ಲ. ಎಲ್ಲವನ್ನೂ ಸಹಿಸಿದರು.... ಸಹಿಸಿ ಸಹಿಸಿ ಕೊನೆಗೊಮ್ಮೆ ಅದೇ ಸಹನೆಯೇ ಕತ್ತಿಗೆ ಉರುಳಾಯಿತಷ್ಟೇ ಹೊರತು ಬೇರ್ಯಾವ ಸಾಧನೆಯಾಯಿತು ಸಹನೆಯಿಂದ?

ಇನ್ನು ಗಂಡು ಮಗು ಜನಿಸಿದೊಡನೆ ತಾವೂ ಹೆಂಗಸರೇ ಎಂಬುದನ್ನೂ ಮರೆಯುವ ದಾದಿ, ಚೋಟಿ ಮಾಯಿಯಂತಹವರ ಬಣ್ಣಬದಲಿಸುವ ಗಿರ್ಗಿಟ್(ಗೋಸುಂಬೆ) ತರಹದ ಜೀವನದ ಬಗ್ಗೆಯಂತೂ ನೆನಸಿದರೆ ರೋಷ ಉಕ್ಕುತ್ತದೆ. ಇಲ್ಲಿ ಯಾರೂ ನಂಬಿಕೆಗೆ ಅರ್ಹರಲ್ಲ.

ಒಂದಂತೂ ನನಗೆ ಸ್ಪಷ್ಟವಾಗಿತ್ತು.
ಇದು ನನ್ನ ಬದುಕು...... ನನ್ನ ಹೋರಾಟ....... 
ಇಲ್ಲಿ ಗೆದ್ದರೂ, ಸೋತರೂ, ಸತ್ತರೂ ಅದು ನನಗೆ ಮತ್ತು ಕೇವಲ ನನಗೆ ಮಾತ್ರ ಸಂಬಂಧಿಸಿದ್ದು..... ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ಖಚಿತ ಎಂಬುದು ನಿಜವೇ. ಆದರೆ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಹುಟ್ಟಿದೊಡನೇ ಸಾವು ಖಚಿತ. ಅಂತಹದ್ದರಲ್ಲಿ ನಾನು ಇಷ್ಟು ಸುದೀರ್ಘ ವರ್ಷಗಳು ಬದುಕಿರುವೆನೆಂದರೆ.......!! 

ಹುಟ್ಟಿದೊಡನೇ ಜೀವ ಕಳೆದುಕೊಳ್ಳುವ ಅಸಂಖ್ಯಾತ ಲಾಲಿಯರಿಗಿಂತ ಅದೃಷ್ಟವಂತೆಯಲ್ಲವೇ ನಾನು......? ಎಲ್ಲರ ನಸೀಬಿನಲ್ಲಿರದ ಅದೃಷ್ಟ ನನ್ನ ಪಾಲಿಗೊಲಿದಿರುವಾಗ ಮಾಯಿ, ಚಾಚಿಯರಂತೆ ಮೂಕ ಹಸುವಿನ ಬಾಳ್ವೆ ನಡೆಸಿ ನರಳಿ ನರಳಿ ಸಾಯಬೇಕೇನು? ಎಷ್ಟೇ ಹೊಂದಿಕೊಂಡು ಬದುಕಿದರೂ ನರಳುವಿಕೆ, ಸಾವು ಎರಡೂ ನಿಶ್ಚಿತವೇ ಎಂದ ಮೇಲೆ ಸಹಿಸುವುದೇಕೆ.......?
ರಣಹೇಡಿಯಂತೆ ಅಂಜುತ್ತಾ ಬಾಳಿ ಸಾಯಲೇಕೆ.....? ಏನಾದರಾಗಲಿ..... ಊರಿಗೂರೇ ಗಯ್ಯಾಳಿ, ರೆಬೆಲ್ ಎಂದರೂ ತೊಂದರೆಯಿಲ್ಲ. ತಿರುಗಿಬಿದ್ದು ಹೋರಾಡಿಯೇ ಸಿದ್ಧ ಎಂದು ನಿರ್ಧರಿಸಿಬಿಟ್ಟೆ. ಅಷ್ಟೇ..... ನನ್ನ ಬದುಕು ಬದಲಾಯಿತು.  

ಮುಂಚೆಯಿಂದಲೂ ಸಣ್ಣ ಮಟ್ಟಿಗೆ ನನಗೆ ಇಷ್ಟವಾಗದ್ದನ್ನು ವಿರೋಧಿಸಿ, ಬೇಕಾದ ವಿಚಾರಗಳಿಗೆ ಮೊಂಡು ಹಿಡಿದು ಅಭ್ಯಾಸವಿತ್ತು ನನಗೆ. ಆದರೆ ಅದು ನನ್ನ ಮನೆಯ ನಾಲ್ಕು ಗೋಡೆಗಳ ನಡುವೆ........ ಅದೇ ನಾಲ್ಕು ಗೋಡೆಗಳ ಸಂಕುಚಿತ ಮನಸ್ಥಿತಿ ನಮ್ಮ ಸಮಾಜದ್ದು ಎಂಬುದು ಯಾವಾಗ ಅರಿವಾಗತೊಡಗಿತೋ ಆಗ ನನ್ನ ಬಂಡಾಯ ಮನೆಯ ನಾಲ್ಕು ಗೋಡೆಗಳ ಚೌಕಟ್ಟಿನಿಂದ ಸಮಾಜದ ಗೋಡೆಗಳ ಚೌಕಟ್ಟಿಗೆ ವಿಸ್ತರಿಸಿತು. ಹಾಗಾಗಿಯೇ ಮುಂಚೆ ಮನೆಗೆ ಮಾತ್ರ ಮಾರಿಯಾಗಿದ್ದ ನಾನು ಈಗ ಊರಮಾರಿಯಾಗಿ ಗುರುತಿಸಲ್ಪಡತೊಡಗಿದೆ. ಅಷ್ಟದಿಕ್ಕುಗಳಿಂದಲೂ ಬೈಗುಳದ ಮಂತ್ರಾಕ್ಷತೆಯೇ...... ಬಾಪುವಿಗೆ ದಿನೇದಿನೇ ನನ್ನ ಕುರಿತಾದ ದೂರುಗಳು, 'ಕಿತನೀ ಅಖಡ್ ಹೆ ರೇ ಥಾರೇ ಚೋರಿ ಕೋ? ಕೈಸೀ ಘಟಿಯಾ ಬಾತ್ ಕರ್ತೀ ಹೇ ಬೇಷರಮ್ ಕಹಿಕೀ..... ಏಕ್ ಚೋಕರಿ ಕೋ ಸಮ್ಹಾಲ್ ನಹೀ ಸಕ್ತಾ ತೂ?' ಎಂಬ ಬೈಗುಳಗಳು ಸರ್ವೇಸಾಮಾನ್ಯವಾಯಿತು. ಅವನು ಒಳಗೊಳಗೇ ಕ್ರೋಧದಿಂದ ಕುದಿಯತೊಡಗಿದ. ಆದರೆ ನಾನು ಚಾಚಾನ ತಲೆಯೊಡೆದ ಮೇಲೆ ಮನೆಯವರ ಮನದಲ್ಲಿ ನನ್ನ ಬಗೆಗೊಂದು ದಬಾಯಿಸಿ ಹೇಳಲಾರದಂತ ಭಯ ಮೂಡಿತ್ತು. ಹಾಗಾಗಿಯೇ ಬಾಪು 'ಈ ದರಿದ್ರ ಹೆಣ್ಣನ್ನು ತನ್ನ ಕೈಯಲ್ಲಿ ಹದ್ದುಬಸ್ತಿನಲ್ಲಿಡಲಾರದು' ಎಂದು ಕೈಚೆಲ್ಲಿ ಕೂತಿದ್ದ. 

ಆದಷ್ಟು ಬೇಗ ಯಾವನಿಗಾದರೂ ನನ್ನನ್ನು ಕಟ್ಟಿ ಕೈತೊಳೆದುಕೊಳ್ಳುವ ಯೋಚನೆಯಲ್ಲಿದ್ದರು ದಾದಿ, ಬಾಪು ಹಾಗೂ ಚೋಟಿ ಮಾಯಿ. ಕುಲ್ದೀಪ್ ಹಾಗೂ ಕುಲ್ಜೀತರಿಂದ ಅದು ನನಗೆ ತಿಳಿದಿತ್ತು ಕೂಡಾ....... ಆದರೆ ಆ ಸಮಯ ಬಂದಾಗ ನೋಡಿದರಾಯಿತೆಂದು ನಾನು ಈ ಬಗ್ಗೆ ಲಕ್ಷ್ಯವಹಿಸಲಿಲ್ಲ. ನನ್ನ ಮನಸ್ಸು ಪೂರ್ತಿಯಾಗಿ ಬಂಡಾಯದ ಹಾದಿಯಲ್ಲಿತ್ತು. ಆ ಬಂಡಾಯದಲ್ಲೇ ನನ್ನ ಮನಸ್ಸಿಗಾದ ನೋವಿಗೆ ಪರಿಹಾರ ಕಂಡುಕೊಳ್ಳುವ, ನೋವನ್ನು ಮರೆಯುವ ಯತ್ನ ನನ್ನದು. ನನ್ನ ಮೇಲ್ನೋಟದ ಅರಚಾಟದ ಮಾತುಗಳು, ಎಲ್ಲವನ್ನೂ ಪ್ರಶ್ನಿಸುವ ಕ್ರೋಧ ಪೂರಿತ ವರ್ತನೆಯನ್ನು ಲೋಕ ಗುರುತಿಸಿ ನನ್ನನ್ನು ಬಾಗೀ ಸಿಯಾ ಎಂದು ಹೀಯಾಳಿಸಿತು....

ಆದರೆ ನನ್ನ ಅಂತರಂಗ.....?? ಅದು ಯಾರ ಅರಿವಿಗೂ ಬಾರದೇ ಹೋಯಿತು. ಲೋಕದೆದುರು ರೆಬೆಲ್ ಆಗುತ್ತಾ ಹೋದಂತೆ ಆಂತರ್ಯದಲ್ಲಿ ನಾನು ವಿಪರೀತ ಮೌನಿಯಾದೆ. ನನಗೇ ನಿಭಾಯಿಸಲು ಸಂಕೀರ್ಣ ಎನಿಸುವಷ್ಟು ಏಕಾಂಗಿಯಾದೆ. ಲೋಕದೆದುರು ರಣಚಂಡಿಯಂತೆ ಹೋರಾಟಕ್ಕೆ ನಿಂತವಳು ಮನದೆದುರು ಅಳಲು ತೋಡಿಕೊಳ್ಳಲಾರದ ನಿರ್ಲಿಪ್ತೆಯಾಗಿ ಹೋದೆ. ಯಾಕೋ ಭಾವಗಳೆಲ್ಲಾ ಒಮ್ಮೆಲೇ ಬರಡಾಗಿ ಮನ ಬಂಜರು ಬೆಂಗಾಡು....... 

ಒಮ್ಮೊಮ್ಮೆ ಯಾರೊಂದಿಗೂ ಒಂದು ಮಾತೂ ಬೇಡವೆಂಬ ಭಾವ ಮೂಡಿದರೆ ಮಗದೊಮ್ಮೆ ಮನದ ಭಾವಗಳಿಗೆಲ್ಲಾ ಮಾತಿನ ರೂಪ ಕೊಟ್ಟು ಯಾರದಾದರೂ ಮಡಿಲಿನಲ್ಲಿ ಸಾಂತ್ವನ ಅರಸಬೇಕೆಂಬ ಹಂಬಲ...

ಒಮ್ಮೆ ಕಣ್ಣೀರ ಹನಿಗಳನೆಲ್ಲಾ ಮಂಜಿನಂತೆ ಘನೀಕರಿಸಿ ಹಿಮಪರ್ವತವಾಗಿಸುವ ಮನಸಾದರೆ ಇನ್ನೊಮ್ಮೆ ಕಾಡುವ ನೆನಪುಗಳ ಶಾಖದಲ್ಲಿ ಹೆಪ್ಪುಗಟ್ಟಿದ ನೋವನ್ನು ಕರಗಿಸಿ ಕಂಬನಿಯ ಬಿಂದುಗಳನ್ನು ಬಂಧಮುಕ್ತಗೊಳಿಸುವ ತಪನೆ......

ದ್ವಂದ್ವಗಳಲ್ಲಿ ನರಳುವ ಮನ ಹುಚ್ಚುಕುದುರೆಯ ಮೇಲೆ ಸವಾರಿ ಹೊರಟಿದೆಯೇನೋ ಎನಿಸುತ್ತಿತ್ತು ನನಗೆ. ಈ ಮನೋವೇದನೆಯಿಂದ ಹೊರಬರಲಾಗದಂತೆ ಸಿಲುಕಿದ್ದೆ. ಅದನ್ನು ಅರ್ಥೈಸಿಕೊಳ್ಳುವರಾರಿದ್ದರು? ಕುಲ್ದೀಪ್, ಕುಲ್ಜೀತ್ ಸಾಧ್ಯವಾದಷ್ಟು ನನ್ನನ್ನು ಮಾತಿಗೆಳೆಯುತ್ತಿದ್ದರಾದರೂ ನನಗೇ ಏನೋ ಅಪನಂಬಿಕೆ..... ಇವರಿಬ್ಬರು ಅದೆಷ್ಟು ದಿನ ಇದ್ದಾರು ನನ್ನ ಅಳಲಿಗೆ ಕಿವಿಯಾಗಿ? ನಾನೀಗ ಚಾಚಿಯನ್ನು ಹಚ್ಚಿಕೊಂಡಂತೆ ಇವರಿಬ್ಬರನ್ನು ವಿಪರೀತ ಹಚ್ಚಿಕೊಂಡು ನಾಳೆಯ ದಿನ ದಾದಿ, ಚೋಟಿ ಮಾಯಿ, ಬಾಪೂವಿನಂತೆ ಇವರೂ ಬದಲಾದರೇ.........? ಎಂಬ ಅನಿಶ್ಚಿತ ಭಾವವೊಂದು ಸದಾ ಮಿಸುಕಾಡುತ್ತದೆ ನನ್ನೊಳಗೆ. ಅರಿತೂ ಅರಿತೂ ನೋವಿಗೆ ಆಹ್ವಾನ ನೀಡುವುದೇಕೆ? ಈಗಿನಿಂದಲೇ ಅಂತರ ಕಾಯ್ದುಕೊಂಡರೆ ಒಳಿತಲ್ಲವೇ ಎಂದು ಸುಪ್ತಮನಸ್ಸು ಪದೇ ಪದೇ ಎಚ್ಚರಿಸುತ್ತದೆ. ಹಾಗಾಗಿ ಅವರೊಂದಿಗೂ ಮೌನಿಯೇ ನಾನು. ಆದರೆ ಅವರಿಬ್ಬರು ಬಿಡಲೊಲ್ಲರು. ಬಿಟ್ಟೆನೆಂದರೂ ಬಿಡದೇ ಸುತ್ತ ಸುಳಿಯುವ ಮಾಯೆಯಂತೆ ಸುಳಿಯುತ್ತಾರೆ ಅವರು. ಕುಲ್ದೀಪನಾದರೂ ಕೊಂಚ ಒರಟ. ಆಗೀಗ ನನ್ನ ವರ್ತನೆ ನೋಡಿ ಸಿಟ್ಟಿನಲ್ಲಿ ಬೈಯುತ್ತಾನೆ. ಆದರೆ ಕುಲ್ಜೀತ್ ಹಾಗಲ್ಲ. ಅವನದು ಹೆಂಗರುಳು. ಚಾಚಿಯಷ್ಟೇ ಮೃದು ಮನಸ್ಸಿನವನು. ರೇಗುವುದಿರಲಿ ದನಿಯೆತ್ತಿ ಮಾತನಾಡಿಯೂ ಗೊತ್ತಿಲ್ಲ ಅವನಿಗೆ. ನಾನೆಂದರೆ ಅಪರಿಮಿತ ಪ್ರೀತಿ,ಕಾಳಜಿ. ಅವರಿಬ್ಬರದು ತೋರಿಕೆಯ ನಟನೆಯಲ್ಲ ಎಂಬುದೂ ನನಗೆ ವೇದ್ಯ. ಆದರೆ ಅವರ ಅಕ್ಕರೆಯನ್ನು ಆದರದಿಂದ ಸ್ವೀಕರಿಸಲು ಮನದ ಬೇಲಿಯೊಂದು ಅಡ್ಡಿ. ತಿರಸ್ಕರಿಸಿ ಕಡೆಗಾಣಿಸಲು ಅಂತಃಕರಣ ಬಿಡದು. ಈ ಬಿಡಿಸಲಾರದ ದ್ವಂದ್ವದಲ್ಲಿ ನಿರಂತರ ತೊಳಲಾಟ ನನ್ನದು. ಸಾಧ್ಯವಾದಷ್ಟು ಅವರಿಂದ ದೂರವೇ ಉಳಿಯತೊಡಗಿದ್ದೆ ನಾನು.

ಬಾಪೂವಿನ ಹಂಗಿನ ಅರಮನೆ ಮೊದಲಿನಿಂದಲೂ ನನ್ನ ಪಾಲಿಗೆ ಸೆರೆಮನೆಯೇ. ಚಾಚಿಯ ಕಾಲಾನಂತರದಲ್ಲಿಯಂತೂ ಆ ಮನೆ ಕಸಾಯಿಖಾನೆ ಎನಿಸತೊಡಗಿತ್ತು ನನಗೆ. ಅದಕ್ಕಿಂತ ಊರ ಸರಹದ್ದಿನಲ್ಲಿ ಶಾಂತಳಾಗಿ ಹರಿಯುವ ಯಮುನೆಯ ತಟವೇ ಹಿತವೆನಿಸುತ್ತದೆ. ಚಾಚಿಯ ನಂತರ ನನಗೆ ಸಾಂತ್ವನವೆಂಬುದು ದೊರಕಿದ್ದು ಅವಳ ಮಡಿಲಲ್ಲಿ ಮಾತ್ರವೇ. ಇಡೀ ಜಗದ ಶಾಂತಿಯೆಲ್ಲವೂ ಅವಳ ಪಾತ್ರದಲ್ಲಿ ನೆಲೆನಿಂತ ಭಾವ. ಅವಳಲ್ಲಿ ಯಾವ ತಾರತಮ್ಯಗಳಿಲ್ಲ. ಅವಳೆಂದೂ ಹೆಣ್ಣೆಂದು ನನ್ನ ಜರಿಯುವುದಿಲ್ಲ. ಬಾಗೀ ಎಂದು ಹೀಯಾಳಿಸುವುದಿಲ್ಲ. ಬೆಳಗು ಬೈಗಿನ ದೈವಿಕ ರಮ್ಯತೆಯಲ್ಲಿ ಕಣ್ಮುಚ್ಚಿ ಕುಳಿತು ಯಮುನೆಯ ಹರಿಯುವಿಕೆಯ ನಿನಾದವನ್ನು ಆಲಿಸುವಾಗಲೆಲ್ಲಾ ಅವಳು ನನಗಾಗಿ ಲೋರಿ(ಲಾಲಿ) ಹಾಡುತ್ತಿರುವಳೇನೋ ಎಂಬ ಭಾವ ಮನವನ್ನು ಆವರಿಸಿ ತನ್ಮಯಗೊಳಿಸುತ್ತದೆ.

ಚಾಚಿ ನನಗಾಗಿ ಹಾಡುತ್ತಿದ್ದ ಅದೇ ಲೋರಿ........

ಯಮುನೆಯ ಜುಳುಜುಳು ನಿನಾದದ ಆಳದಿಂದ ಚಾಚಿಯೇ ಹಾಡುತ್ತಿರುವಳೇನೋ ಎಂಬ ಭ್ರಮೆಯನ್ನು ಸೃಷ್ಟಿಸುವ ಲೋರಿ........

ಗುಡಿಯಾ ರಾನಿ ಬಿಟಿಯಾ ರಾನಿ ಪರಿಯೋಂ ಕೇ ನಗರೀ ಸೇ ಇಕ್ ದಿನ್......
ರಾಜ್ ಕುವಂರ್ ಜೀ ಆಯೇಂಗೇ ಮಹಲೋಂ ಮೆ ಲೇ ಜಾಯೇಂಗೇ......

ಆಗೇ ಪೀಛೇ ಘೋಡೇ ಹಾಥೀ ಬೀಚ್ ಮೆ ಹೋಂಗೇ ಸೌ ಬಾರಾತಿ.......
ಇತನೀ ಆಜ್ ಅಕೇಲೀ ಹೋ ತುಮ್ ತೇರೆ ಕಿತನೇ ಹೋಂಗೇ ಸಾಥೀ......
ಕಿತನೀ ಖುಷ್ ಹೂಂ ಮೇ ಮೇರೇ ಆಂಖ್ ಮೇ ಪಾನಿ....

ಗುಡಿಯಾ ರಾನಿ ಬಿಟಿಯಾ ರಾನಿ.......

ತೂ ಮೇರೀ ಚೋಟಿ ಸೀ ಗುಡಿಯಾ ಬನ್ ಜಾಯೇಗೀ ಜಾದೂ ಕೀ ಪುಡಿಯಾ........
ತುಜ್ ಪೇ ಆ ಜಾಯೇಗೀ ಜವಾನಿ ಮೇ ತೋ ಹೋ ಜಾವೂಂಗೀ ಬುಡಿಯಾ.......
ಭೂಲ್ ನ ಜಾನಾ ಪ್ರೀತ್ ಪುರಾನಿ ಗುಡಿಯಾ ರಾನಿ ಬಿಟಿಯಾ ರಾನಿ.........

ಭಾವಪರವಶತೆಯ ತಾಧ್ಯಾತ್ಮದ ಅದ್ಯಾವ ಘಳಿಗೆಯಲ್ಲಿ ನಾನೇ ದನಿಯಾಗಿ ಹಾಡತೊಡಗುತ್ತೇನೋ ಅರಿವಿಗೇ ಬರುವುದಿಲ್ಲ. ಲೋರಿ ಮುಗಿದಾಗ ದಿವ್ಯಮೌನವೊಂದು ಯಮುನೆಯ ತಟದಲ್ಲಿ ನೆಲೆಯಾಗುತ್ತದೆ. ಆ ಮೌನದಲ್ಲಿ ಚಾಚಿ ನೆನಪಾಗುತ್ತಾಳೆ. ಬಾಲ್ಯದ ಅವಳ ಲೋರಿಯ ನೆನಪಿನಿಂದ ಸುಖಾಸುಮ್ಮನೆ ನನ್ನ ತುಟಿಯಂಚಿನಲ್ಲಿ ಮುಗುಳ್ನಗುವೊಂದು ಲಾಸ್ಯವಾಡುತ್ತದೆ. 

ಬಾಲ್ಯದಲ್ಲಿ ನೋವು, ಬೇಸರಗಳೇ ನನ್ನ ಬೆನ್ನಿಗೆಬಿದ್ದ ಜೊತೆಗಾರರು. ಹಾಗೆ ನಾನು ಬೇಸರಗೊಂಡಾಗಲೆಲ್ಲಾ ಈ ಲೋರಿ ಹಾಡುತ್ತಿದ್ದಳು ಚಾಚಿ. ಕುದುರೆಯೇರಿ ಬರುವ ರಾಜಕುಮಾರನೊಬ್ಬ ನನ್ನೆಲ್ಲಾ ಕಷ್ಟಗಳನ್ನು ಪರಿಹರಿಸಿ, ನೋವನ್ನೇ ಕಾಣದ ಊರೊಂದಕ್ಕೆ ನನ್ನ ಕರೆದೊಯ್ಯುವನೆಂದು ರಮಿಸುತ್ತಿದ್ದಳವಳು. ಕಷ್ಟಗಳ ನಿವಾರಿಸುವ ರಾಜಕುಮಾರ, ನೋವೇ ಇಲ್ಲದ ಊರು..... ಅದರದೇ ಕಲ್ಪನೆಯಲ್ಲಿ ನನ್ನ ಬೇಸರ ಮರತೇಹೋಗುತ್ತಿತ್ತು. ಅದೆಷ್ಟು ಚೆಂದವಿತ್ತು ಆ ಕಲ್ಪನೆಗಳು. ಅವುಗಳ ನೆನಪೇ ಮನವನ್ನು ಅರಳಿಸುತ್ತದೆ.

ಆದರೆ....... ಬದುಕು ರಮ್ಯಕಲ್ಪನೆಯಲ್ಲ. ಅದು ಕಲ್ಪನಾತೀತವಾದ ವಾಸ್ತವ. ಕಣ್ಮುಂದಿನ ವಾಸ್ತವ ಬಲು ಕಠೋರ. ಇಲ್ಲಿ ಏಳು ಸಮುದ್ರ ದಾಟಿ ಬಂದು ಕಷ್ಟಗಳನ್ನು ಹರಿಸುವ ರಾಜಕುಮಾರನೂ ಇಲ್ಲ, ಇನ್ನು ನೋವುಗಳು ಸೋಕದ ಊರಂತೂ ಸಾವಿಲ್ಲದ ಮನೆಯ ಸಾಸಿವೆಯೇ ಸೈ. ಇಲ್ಲಿರುವುದು ಮನುಷ್ಯತ್ವದ ಗಂಧಗಾಳಿ ಇಲ್ಲದ ಮುಖವಾಡದ ಮನುಜರು. ಸರಿದ ಸಮಯದೊಂದಿಗೆ ಬಾಲ್ಯದ ರಮ್ಯ ಕಲ್ಪನೆಗಳು ಕರಗಿ ವಾಸ್ತವ ಮುನ್ನೆಲೆಗೆ ಬರಲೇಬೇಕಲ್ಲ.....? 

ಸಮಯ ಸರಿದಿದೆ. ಕಾಲ ಬದಲಾಗಿದೆ. ಕಾಲದೊಂದಿಗೆ ಕ್ರೌರ್ಯದ ಸ್ವರೂಪವೂ ಬದಲಾಗಿದೆ.....

ಮುಂಚೆ ಮುಜ್ಜಫರ್ ನಗರದ ಭಾಗವಾಗಿದ್ದ ಶಾಮ್ಲಿ ಈಗ ಜಿಲ್ಲೆಯ ಸ್ಥಾನಮಾನ ಪಡೆದಿತ್ತು. ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿದ್ದವು. ಹಾಗೆಯೇ ಹೆಣ್ಣು ಮಗುವನ್ನು ಅಮ್ಮನ ಉದರದಲ್ಲೇ ಕೊನೆಗಾಣಿಸಲು ಇನ್ನಷ್ಟು ಹೊಸ ತಂತ್ರಜ್ಞಾನಗಳು ಬಂದಿದ್ದವು. ಭೈರೋನ್ ಗ್ರಾಮದ ಶಾಲೆಯ ಮಗ್ಗುಲಲ್ಲೇ ಸರ್ಕಾರಿ ದವಾಖಾನೆಯೊಂದು ಪ್ರತಿಷ್ಠಾಪಿತವಾಗಿತ್ತು. ರೋಗಗಳನ್ನು ಗುಣಪಡಿಸುವ ಔಷಧೋಪಚಾರಗಳಿಗೆ ಕೊರತೆಯಿದ್ದರೂ ಗರ್ಭಪಾತ ಮಾಡಲು ಬೇಕಾದ ಸಕಲ ಸೌಲಭ್ಯಗಳು ಇಲ್ಲಿ ಲಭ್ಯವಿತ್ತು. ಈಗ ಭೈರೋನ್ ನಲ್ಲಿ ಮಲಾಯಿ ಮಕ್ಕನ್ ಹಾಗೂ ಚಂಚಂ ಮಿಠಾಯಿ ಹಂಚಿಕೆಯದ್ದೇ ಕಾರುಬಾರು.

ಇದರ ಜೊತೆಗೆ ........

ಇನ್ನೊಂದು ಮಹತ್ತರ ಬದಲಾವಣೆಯಾಗಿತ್ತು. ಕಣ್ಣೆದುರಿಗೇ ರಾಚುತ್ತಿದ್ದ ಆದರೆ ಯಾರೂ ಅರ್ಥೈಸಿಕೊಳ್ಳದ ಅಸಹಜ ಬದಲಾವಣೆ. ಹಿಂದಿನಿಂದ ಮಾಡಿಕೊಂಡು ಬಂದ ಕಾರ್ಯಗಳ ಪರಿಣಾಮವಾಗಿ ಉದ್ಭವಿಸಿದ ಘನಘೋರ ಬದಲಾವಣೆ......‌

ವಂಶವನ್ನು ಉದ್ಧರಿಸುವ ಕುಲತಿಲಕರೇನೋ ಊರ ತುಂಬಾ ಇದ್ದರು. ಆದರೆ ವಂಶದ ಭಾರ ಹೊರುವ ವಾಹಕಗಳು........?? ಲಾಲಾ ಹಡೆದಾನೇ ಕುಲದೀಪಕನನ್ನು? ಲಾಲಿಯರು ದುರ್ಬೀನಿನಲ್ಲಿ ಹುಡುಕಿದರೂ ಇಲ್ಲವಲ್ಲಾ......!! ಮದುವೆಯ ವಯಸ್ಸಿಗೆ ಬಂದ ವರನಿಗೆ ವಧುವಿನ ಕೊರತೆ ಉಂಟಾಗತೊಡಗಿತ್ತು. ತಾನು ಸೃಷ್ಟಿಸಿದ ನಿಯಮಗಳ ಕಟ್ಟಳೆಯಲ್ಲಿ ತಾನೇ ಬಂಧಿಯಾಗತೊಡಗಿತ್ತು ಸಮಾಜ. ಪ್ರಕೃತಿಯ ನಿಯಮವನ್ನೇ ಮೀರಿ ತಮ್ಮದೇ ಹುಕುಮ್ಮತ್ತು ಚಲಾಯಿಸಹೊರಟವರು ಉದ್ಧಾರವಾದ ಇತಿಹಾಸವುಂಟೇ? ಭೂತಕಾಲದ ತಪ್ಪು ಕಂದಾಯ ವಸೂಲಿಮಾಡಹೊರಟ್ಟಿತ್ತು. 

ಆದರೆ ಇದನ್ನೂ ಅರ್ಥೈಸಿಕೊಳ್ಳದೇ ಹೋಯಿತು ಈ ಸಮುದಾಯ. ಈಗಲೂ ಬಲಿಪಶುವಾದಳು ಅವಳೇ.........!!

ವಧು ಸಿಗುತ್ತಿಲ್ಲ ಎಂಬ ಸಮಸ್ಯೆಗೆ ಅತೀ ಸುಲಭದ ಪರಿಹಾರ ಕಂಡುಹುಡುಕಿದ್ದರು ಈ ಜನರು. 

ಅಣ್ಣತಮ್ಮಂದಿರಿಗೆಲ್ಲಾ ಒಬ್ಬಳೇ ಹೆಂಡತಿ........!!

ಕಥೆಗಳಲ್ಲಿ, ಶಾಲಾ ಪಾಠದಲ್ಲಿ ಓದಿ, ಕೇಳಿ ತಿಳಿದಿದ್ದೆ ಮಹಾಭಾರತದ ಪಾಂಚಾಲಿಯ ಬಗ್ಗೆ. ಹಸ್ತಿನಾಪುರದ ಸಾಮ್ರಾಜ್ಞಿಯಾದರೂ ಜೀವಿತದ್ದುದ್ದಕ್ಕೂ ಕಷ್ಟ, ನಿಂದನೆ, ಅಪಮಾನಗಳನ್ನು ಸಹಿಸಿದ ಪ್ರಭಾವೀ ವ್ಯಕ್ತಿತ್ವದ ಕೃಷ್ಣೆ ನನ್ನನ್ನು ಬಹುವಾಗಿ ಕಾಡಿದ್ದಳು. ಕಲ್ಪನೆಯಲ್ಲೇ ಅವಳ ಬದುಕನ್ನು ಚಿತ್ರಿಸಲು ಯತ್ನಿಸಿದ್ದೆ ಕೂಡಾ. 

ಇಂದು ಭೈರೋನ್ ಗ್ರಾಮದಲ್ಲಿ, ಶಾಮ್ಲಿಯಲ್ಲಿ, ಮುಜ್ಜಫರ್ ನಗರದಲ್ಲಿ, ಉತ್ತರಪ್ರದೇಶದಲ್ಲಿ, ಸುತ್ತಮುತ್ತಲಿನ ರಾಜ್ಯಗಳ ಹಲವು ಮನೆಗಳಲ್ಲಿ ದ್ರೌಪದಿಯರು ಅವತರಿಸಿದ್ದಾರೆ. ಆದರೆ ಇವರಿಗೂ ಭಾರತದ ದ್ರೌಪದಿಗೂ ಅಜಗಜಾಂತರ ವ್ಯತ್ಯಾಸ.....

ಅಂದಿನ ದ್ರೌಪದಿಗೆ ಒಂದು ವ್ಯಕ್ತಿತ್ವವಿತ್ತು.... ಅಸ್ಮಿತೆಯಿತ್ತು.... ತನ್ನನ್ನು ದ್ಯೂತದಲ್ಲಿ ಪಣಕ್ಕಿಟ್ಟ ಗಂಡಂದಿರನ್ನು, ತನ್ನ ಅಪಮಾನವನ್ನು ತಡೆಯದೇ ನಿಂತ ಸಭಿಕರನ್ನು ಪ್ರಶ್ನಿಸುವ ಅಧಿಕಾರವಿತ್ತು.....
ಇಂದಿನ ದ್ರೌಪದಿಯರು........!!?
ವ್ಯಕ್ತಿತ್ವ, ಅಸ್ಮಿತೆ ಒತ್ತಟ್ಟಿಗಿರಲಿ... ಅವರಿಗೂ ಒಂದು ಜೀವವಿದೆ ಎಂಬುದನ್ನು ಗುರುತಿಸುವವರಿಲ್ಲ. ಇನ್ನು ಮಾತನಾಡುವ ಹಕ್ಕನ್ನೇ ಕಳೆದುಕೊಂಡವರಿಗೆ ಪ್ರಶ್ನಿಸುವ ಅಧಿಕಾರವೆಲ್ಲಿಯದು?
ಅಂದಿನ ದ್ರೌಪದಿಯ ಅಳಲಿಗೆ ಕಿವಿಯಾಗಿ ಶ್ರೀ ಕೃಷ್ಣ ಪರಮಾತ್ಮನಿದ್ದ..... ಇಂದೂ ಎಲ್ಲೋ ಮರೆಯಲ್ಲಿ ಇರುವನೇನೋ....... ಆದರೆ ಇಂದಿನ ದ್ರೌಪದಿಗೆ ತನ್ನ ಅಳಲನ್ನು ತೋಡಿಕೊಳ್ಳಲೂ ಸ್ವರವಿಲ್ಲ.... ಅವಳ ದನಿಯುಡುಗಿ ಯಾವುದೋ ಕಾಲವಾಗಿದೆ. 
ಅವಳೊಂದು ಉಸಿರಾಡುವ ಕಟ್ ಪುಥ್ಲಿ(ಕೈ ಗೊಂಬೆ).......

ಇವರಿಗೆ ಬೇಕಾಗಿರುವುದು ವಂಶವನ್ನು ಮುಂದುವರೆಸಲೊಂದು ಗಂಡು ಸಂತಾನ ಅಷ್ಟೇ. ಅದು ಯಾವ ಮಗನ ಮಗುವಾದರೇನು........? ಊರಲ್ಲಿ ಹೆಣ್ಣು ಸಿಗುತ್ತಿಲ್ಲ. ಎಲ್ಲಿಂದಲಾದರೂ ಒಬ್ಬಳನ್ನು ಖರೀದಿಸಿ ತಂದು ಮನೆಯಲ್ಲಿನ ಪ್ರಾಪ್ತ ವಯಸ್ಕ ವರಮಹಾಶಯರುಗಳೊಂದಿಗೆ ವಿವಾಹ ಮಾಡಿಸಿದರಾಯಿತು. 

ಅವಳೊಬ್ಬಳೇ ಅವರೆಲ್ಲರಿಗೂ ಪತ್ನಿ......!!! 

ಹೆಂಡತಿಯ ಹಂಚಿಕೆ ಮಾಡಿಕೊಂಡರಾಯಿತು, ವಂಶವನ್ನು ಬೆಳೆಸಿದರಾಯಿತು.........!! 
ಆದರೆ...... ಅವಳಿಗೂ ಗಂಡು ಮಗುವೇ ಜನಿಸಬೇಕು. ಹೆಣ್ಣು ಬೇಡವೇ ಬೇಡ.........!!

ಕುಸಿಯುತ್ತಿರುವ ಲಿಂಗಾನುಪಾತ ಈ ಜನರನ್ನು ಎಚ್ಚರಿಸಲಿಲ್ಲ. ಬದಲಿಗೆ ಹೆಂಡತಿಯ ಹಂಚಿಕೆ(wife sharing) ಎಂಬ ಮಹಾನ್ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಅವಳ ಪರಿಸ್ಥಿತಿ ಅರಿಯುವವರು ಯಾರು? ಅವಳ ಅಳಲು ಕೇಳುವವರು ಯಾರು? ಇದು ವಿವಾಹವೇ? ವಿವಾಹದ ಸೋಗಿನ ತಲೆಹಿಡುಕತನವಲ್ಲವೇ ಇದು? ಸಮುದಾಯ ಒಪ್ಪಿತ ವ್ಯಭಿಚಾರ........ ನೈತಿಕತೆಯ ಪರಿಧಿಯೊಳಗಿನ ಅನೈತಿಕತೆ...... ನಾಗರೀಕತೆಯ ಹೆಸರಿನಲ್ಲಿನ ಅನಾಗರೀಕ ಪದ್ಧತಿ...... ಮಾನವೀಯತೆಯ ಮುಖವಾಡದೊಳಗಿನ ಅಮಾನವೀಯ ಸಂಸ್ಕೃತಿ.....!

ಅವಳು ಕಣ್ತೆರೆದು ಈ ಜಗವನ್ನು ಕಾಣದಂತೆ ಸಕಲ ರೀತಿಯಲ್ಲೂ ಯತ್ನಿಸುವ ಈ ಸಮಾಜ ಅವಳು ಹೇಗೋ ಬದುಕುಳಿದರೆ ತಾನು ಯಾಕಾದರೂ ಬದುಕಿದೆನೋ ಎಂದು ಪಶ್ಚಾತಾಪ ಪಡುವಷ್ಟು ಪೈಶಾಚಿಕವಾಗಿ ನಡೆಸಿಕೊಳ್ಳುತ್ತದೆ ಅವಳನ್ನು. ಬಲವಂತದ ಸಾವೂ ನರಕ, ಬದುಕಂತೂ ಸಾವಿಗೂ ಮೀರಿದ ನರಕ......!

ಈಗಂತೂ ಚಾಚಿಯ ಲೋರಿಯಲ್ಲಿನ ರಾಜಕುಮಾರನ ಬಗ್ಗೆ ನೆನೆಯಲೂ ಭಯವೆನಿಸುತ್ತದೆ ನನಗೆ. 'ಆ ರಾಜಕುಮಾರನಿಗೆ ಇನ್ನೆಷ್ಟು ಜನ ಅಣ್ಣ ತಮ್ಮಂದಿರಿದ್ದಾರೋ?' ಎಂಬ ಒಂದೇ ಪ್ರಶ್ನೆ ನಡುಗಿಸುತ್ತದೆ ನನ್ನನ್ನು. ವಿವಾಹವೆಂಬ ವಿಚಾರದಿಂದಲೇ ಮನಸ್ಸು ವಿಮುಖವಾಗಿದೆ. 

ನಾನಂತೂ ಯಾವುದೇ ಕಾರಣಕ್ಕೂ ಆಧುನಿಕ ದ್ರೌಪದಿಯಾಗಲಾರೆ....... ಪ್ರಾಣ ಹೋದರೂ ಸರಿಯೇ ಹಂಚಿಕೆಯ ಹೆಣ್ಣಾಗಲಾರೆ...... ಇದು ನನ್ನ ಬದುಕು. ನನ್ನ ಬದುಕಿನ ನಿರ್ಧಾರಗಳ ಮೇಲೆ ಹಕ್ಕಿರುವುದು ನನಗೆ ಮಾತ್ರ. ನನ್ನ ಬದುಕನ್ನು ನಿಯಂತ್ರಿಸುವ ಹಕ್ಕನ್ನು ಯಾರಿಗೂ ಕೊಡಲಾರೆ.....!!

ಹೀಗೊಂದು ನಿರ್ಧಾರ ನನ್ನೊಳಗೆ ಗಟ್ಟಿಯಾಗಿತ್ತು. ಮೊನಚು ಮಾತುಗಳೊಂದಿಗೆ ತಪ್ಪನ್ನು ಖಂಡಿಸುತ್ತಾ, 'ಮನೆಯವರು' ಎನಿಸಿಕೊಂಡವರ ತಿರಸ್ಕಾರಕ್ಕೆ ನಿರ್ಲಿಪ್ತಳಾಗುತ್ತಾ, ಸಮಾಜದ ಕ್ರೋಧಯುಕ್ತ ನೋಟವನ್ನು ನಿರ್ಲಕ್ಷಿಸುತ್ತಾ, ಅಂತರಂಗದಲ್ಲಿ ಹೆಚ್ಚೆಚ್ಚು ಮೌನಿಯಾಗುತ್ತಾ, ಯಮುನೆಯ ತೀರದಲ್ಲಿ ಯಾವುದೋ ಮರೆತಿರುವ ಸಾಲುಗಳನ್ನು ಗುನುಗುತ್ತಾ........... ಸಮಯ ತೋರುತ್ತಿದ್ದ ಹಾದಿಯಲ್ಲಿ ಸಾಗುತ್ತಿತ್ತು ನನ್ನ ಬದುಕು.

ಆದರೆ..........

ನನ್ನ ಬದುಕಿನ ಸಂಪೂರ್ಣ ಪಥವನ್ನೇ ಬದಲಾಯಿಸಲು ವಿಧಿ ಹೊಂಚು ಹಾಕಿತ್ತು. ಅಪಸವ್ಯಗಳ ಸರಮಾಲೆಯೇ ನನಗಾಗಿ ಕಾದು ಕುಳಿತಿತ್ತು......

ಇವೆಲ್ಲಕ್ಕೂ ನಿಮಿತ್ತವಾಗಿದ್ದು.........  

ಅದೊಂದು ಘಟನೆ ಮತ್ತು ಅವಳು.......

ಅವಳು........ ಬೇಲಾ.......

ಸಶೇಷ

ಅಗ್ನಿ ತರಂಗಿಣಿ 9

ಚಕ್ರವ್ಯೂಹ್

ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಡ್ರಗ್ಸ್ ಸಾಗಾಣಿಕೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೇರಿತ್ತು‌. ಕಾರಣ ನನಗೆ ಈ ಮೊದಲೇ ಈ ಬಗ್ಗೆ ಅನುಭವವಿತ್ತಲ್ಲ......!
ಈ ಮುಂಚೆ ನಾನು ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಹೋಗುತ್ತಿದ್ದ ಸರಕು ಸಾಗಾಣಿಕಾ ವಾಹನಗಳಲ್ಲಿನ ರಟ್ಟಿನ ಸೀಲ್ಡ್ ಪೆಟ್ಟಿಗೆಗಳಲ್ಲಿರುತ್ತಿದ್ದ ರಹಸ್ಯ ಇದೇ ಡ್ರಗ್ಸ್.....!! ಅದನ್ನೇ ಲೋಡಿಂಗ್ ಹಾಗೂ ಅನ್ಲೋಡಿಂಗ್ ಮಾಡುತ್ತಿದ್ದದ್ದು ನಾನು. ಅದರೊಳಗೆ ಏನಿತ್ತು ಎಂಬುದು ತಿಳಿಯದಿದ್ದರೂ ಆ ಕೆಲಸ ನನಗೆ ಪರಿಚಿತವಲ್ಲವೇ? ಹಾಗಾಗಿ ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದ ರಾಕಾ......

ಮುಂಚೆ ಕೂಲಿ ಕಾರ್ಮಿಕನಂತೆ ಸರಂಜಾಮುಗಳೊಂದಿಗೆ ಹಿಂಬದಿಯ ಮೂಲೆಯಲ್ಲಿ ನೇತಾಡುತ್ತಾ ಸರಕು ಸಾಗಾಣಿಕೆ ವಾಹನದಲ್ಲಿ ಬಾಂಗ್ಲಾಕ್ಕೆ ಹೋಗುತ್ತಿದ್ದ ನಾನು ಈಗ ಅದರ ಸಂಪೂರ್ಣ ನಿರ್ವಹಣೆ ಹೊತ್ತು, ಮಾಲೀಕನಂತೆ ಗತ್ತಿನಿಂದ ಮುಂಬದಿಯಲ್ಲಿ ಕುಳಿತು ಎಲ್ಲರಿಗೂ ನಿರ್ದೇಶನವೀಯುತ್ತಿರುವೆ. ರಾಕಾನ ಅತೀ ಪ್ರಮುಖ ವ್ಯವಹಾರವನ್ನು ನೋಡಿಕೊಳ್ಳುತ್ತಿರುವೆ. ಡೆಮೋನ್ ನ ಮೋನ್ಸ್ಟಾರ್ ವೆಬ್ ನಂತಹ ಪ್ರಬಲ ಗುಂಪಿನ ಮಾಲುಗಳನ್ನು ಸುರಕ್ಷಿತವಾಗಿ ಸಾಗಿಸುವ ಬಹುದೊಡ್ಡ ಜವಾಬ್ದಾರಿ ಹೊತ್ತಿರುವೆ........ 
ಅಂದರೆ........ ನಾನು ರಾಕಾನ ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವೆ ಅಲ್ಲವೇ.......? ಅವನಿಗೆ ನನ್ನ ಮೇಲೆ ನಂಬಿಕೆ ಇಲ್ಲವಾಗಿದ್ದರೆ ಇಷ್ಟು ಮಹತ್ವದ ಕೆಲಸಗಳ ಮಾಹಿತಿಯನ್ನು ನನಗೆ ನೀಡಿ, ಈ ಕೆಲಸ ವಹಿಸುತ್ತಿರಲಿಲ್ಲ ತಾನೇ?
ಇದಲ್ಲವೇ ಪ್ರಗತಿ....... ಇದೇ ತಾನೇ ಬೆಳವಣಿಗೆ....... ಮೇರಾ ತರಖ್ಖೀ........!!! ಆ ದಿನಗಳಲ್ಲಿ ಇದೆಲ್ಲವೂ ನನ್ನ ಸಾಧನೆ ಎಂದೇ ಅನಿಸುತ್ತಿತ್ತು. ಆದರೆ ಈ ತರಖ್ಖೀ ಭವಿಷ್ಯದಲ್ಲಿ ನನ್ನಿಂದ ವಸೂಲಿ ಮಾಡಲಿರುವ ಸುಂಕ ಎಂತಹದು ಎಂಬುದರ ಕಿಂಚಿತ್ ಸುಳಿವಿರಲಿಲ್ಲ ನನಗೆ......

ಈಗಿನ ಕಲ್ಕತ್ತಾ ಟು ಢಾಕಾ ಪಯಣ ಹಿಂದಿನ ಪಯಣಕ್ಕಿಂತಲೂ ಬಹಳ ಭಿನ್ನವಾಗಿತ್ತು. ಆಗ ನನ್ನ ಅರಿವಿಗೆ ಬಾರದ ಹಲವು ಒಳಸುಳಿಗಳು, ತಂತ್ರಗಳು ಈಗ ನನ್ನ ಗ್ರಹಿಕೆಗೆ ಸ್ಪಷ್ಟವಾಗಿದ್ದವು. ಅತ್ಯಂತ ವ್ಯವಸ್ಥಿತ ಕಾರ್ಯನಿರ್ವಹಣೆಯ ವ್ಯವಸ್ಥೆಯೊಂದು ನನ್ನ ಕಣ್ಣೆದುರಿಗೆ ತೆರೆದುಕೊಂಡಿತ್ತು. 

ಮುಂಚೆ ಕಲ್ಕತ್ತಾದಿಂದ ಬೋನ್ಗಾ-ಬಾಲೂರ್ಘಾಟ್ ಮಾರ್ಗವಾಗಿ ಈ ವಾಹನಗಳು ಬಾಂಗ್ಲಾದೇಶವನ್ನು ತಲುಪುವ ಈ ಪಯಣಕ್ಕೆ ರಾಕಾ ಕೈಗೊಳ್ಳುವ ಸುರಕ್ಷತಾ ಕ್ರಮಗಳು ನಿಜಕ್ಕೂ ಬೆರಗು ಹುಟ್ಟಿಸುವಂತಿತ್ತು. ಈ ವಾಹನಗಳಿಗೆ ಹೆದ್ದಾರಿಗಳ ಬಳಕೆ ಬಹುಪಾಲು ನಿಷಿದ್ಧ. ಏಕೆಂದರೆ ಗಡಿಭಾಗವಾದ ಕಾರಣ ಇಲ್ಲಿನ ಹೆದ್ದಾರಿಗಳಲ್ಲಿ ಚೆಕ್ ಪೋಸ್ಟುಗಳು, ಪೋಲಿಸ್ ಹಾಗೂ ಮಿಲಿಟರಿ ಕಣ್ಗಾವಲು ವಿಪರೀತ. ಹಾಗಾಗಿಯೇ ಮುರ್ಷಿದಾಬಾದ್, ಉತ್ತರ ಇಪ್ಪತ್ನಾಲ್ಕು ಪರಗಣ, ಮಾಲ್ದಾ ಜಿಲ್ಲೆಗಳ ದಟ್ಟ ಅರಣ್ಯಗಳೊಳಗಿನ ಬಳಸು ಹಾದಿಗಳ ಮೂಲಕ ಬಾಂಗ್ಲಾದೇಶದ ಸೀಮೆಯೊಳಗೆ ತಲುಪುತ್ತವೆ ಈ ವಾಹನಗಳು. ಒಂದು ಹಾದಿಯನ್ನೇ ಹೆಚ್ಚು ಸಮಯ ಬಳಸುವಂತಿಲ್ಲ. ಪದೇ ಪದೇ ಈ ಒಳಹಾದಿಗಳು ಬದಲಾಗುತ್ತಿರುತ್ತವೆ. ಒಮ್ಮೆ ಒಂದು ಹಾದಿಯಲ್ಲಿ ಮಾಲು ಸೀಜ಼್ ಆಯಿತೆಂದರೆ ಮತ್ತೆ ಆ ಹಾದಿಯನ್ನು ಬಳಸುವುದೇ ಇಲ್ಲ. ಬೇರೆ ದಾರಿಗಳನ್ನು ಅನ್ವೇಷಿಸಲಾಗುತ್ತದೆ. ದುರ್ಗಮವಾದ ದಟ್ಟಾರಣ್ಯ, ನದಿಗಳು, ಕಾಲುವೆಗಳು ಹಾಗೂ ಹೆಚ್ಚು ಬಳಕೆಯಲ್ಲಿ ಇಲ್ಲದ ಗಡಿ ಗ್ರಾಮಗಳ ಒಳ ಹಾದಿಗಳಿಗೆ ಸದಾ ಮೊದಲ ಆದ್ಯತೆ. ಇದಕ್ಕಾಗಿಯೇ ಪ್ರತ್ಯೇಕ ತಂಡವೊಂದಿದೆ. ಬೇರೆ ಬೇರೆ ಬದಲೀ ಹಾದಿಗಳನ್ನು ಗುರ್ತಿಸಿ, ಬೇಕಾದ ರಕ್ಷಣಾ ವ್ಯವಸ್ಥೆಗಳು, ಪರೀಕ್ಷಾರ್ಥ ಸಂಚಾರವನ್ನೂ ನಡೆಸಿ ಮಾರ್ಗಕ್ಕೆ ಹಸಿರು ನಿಶಾನೆ ತೋರುವುದೇ ಈ ತಂಡದ ಕೆಲಸ. ಅವರ ಅನುಮತಿಯ ನಂತರವೇ ಡ್ರಗ್ಸ್ ಹೊತ್ತ ವಾಹನಗಳು ಆ ಹಾದಿಯಲ್ಲಿ ಸಂಚರಿಸುವುದು.....

ಅದಲ್ಲದೇ ಡ್ರಗ್ಸ್ ಅನ್ನು ಇಲ್ಲಿಂದ ಅಲ್ಲಿಗೆ ಕೊಂಡೊಯ್ಯಲೂ ಒಂದು ವ್ಯವಸ್ಥೆಯಿದೆ. ದಿನವೂ ಭಾರತದಿಂದ ಹಲವು ದೈನಂದಿನ ಬಳಕೆಯ ವಸ್ತುಗಳು ಬಾಂಗ್ಲಾದೇಶಕ್ಕೆ ಸರಬರಾಜಾಗುತ್ತದೆ. ವಿವಿಧ ಫಲಗಳು, ಮಾಚ್ಚೀರ್(ಮೀನು), ದಿಮ(ಮೊಟ್ಟೆ), ಶಾಖ್ ಶೋಬ್ಜಿ(ತರಕಾರಿಗಳು), ಚಾನೆಲ್(ಅಕ್ಕಿ), ಆಲೂ, ಕಟ್ಹಲ್(ಹಲಸಿನ ಹಣ್ಣು), ಕುಮ್ರೋ(ಸಿಹಿಗುಂಬಳ), ಮಾಂಸ ಮುಂತಾದ ಆಹಾರಪದಾರ್ಥಗಳಲ್ಲದೇ ತೆಂಗಿನ ಚಿಪ್ಪುಗಳು, ಕಾಫಿನೇರ್(ಶವಪೆಟ್ಟಿಗೆ), ಗ್ಯಾಸ್ ಸಿಲಿಂಡರ್, ಆಯಿಲ್ ಕಂಟೈನರ್ ಇತ್ಯಾದಿ ವಸ್ತುಗಳೂ ದಿನಂಪ್ರತಿ ಭಾರತದಿಂದ ಬಾಂಗ್ಲಾಕ್ಕೆ ರವಾನೆಯಾಗುತ್ತವೆ. ಈ ವಸ್ತುಗಳೇ ಡ್ರಗ್ಸ್ ಸಾಗಾಣಿಕೆಯ ಮಾಧ್ಯಮ. ಇಂತಹ ವಾಣಿಜ್ಯ ವಸ್ತುಗಳ ಸೋಗಿನಲ್ಲಿ ಮರೆಮಾಚಿ ಮಾದಕ ಪದಾರ್ಥಗಳು ರವಾನಿಸಲ್ಪಡುತ್ತವೆ. ಈ ಆಹಾರ ಪದಾರ್ಥಗಳೊಳಗೆ ಡ್ರಗ್ಸ್ ಹುದುಗಿರುತ್ತದೆ. ಹಾಗೆಯೇ ಗ್ಯಾಸ್ ಸಿಲಿಂಡರ್, ಆಯಿಲ್ ಕಂಟೈನರ್, ಕಾಫೀನೇರ್ ಮುಂತಾದುವುಗಳ ಖಾಲಿ ಭಾಗಗಳಲ್ಲಿ ಸಣ್ಣ ಸಣ್ಣ ಗುಪ್ತ ಕೋಣೆಗಳನ್ನೂ, ಫಾಲ್ಸ್ ಬಾಟಮ್ಮುಗಳನ್ನೂ ಡ್ರಗ್ಸ್ ಸಾಗಾಣಿಕೆಗಾಗಿಯೇ ವಿನ್ಯಾಸಗೊಳಿಸಲಾಗುತ್ತದೆ. ಮೇಲ್ನೋಟಕ್ಕೆ ವಾಹನಗಳಲ್ಲಿ ಡ್ರಗ್ಸ್ ಇದೆಯೆಂದು ಯಾರೂ ಗುರುತಿಸಲಾಗುವುದಿಲ್ಲ. ಹಾಗಿರುತ್ತದೆ ಅವುಗಳ ರಚನೆ.

ಡ್ರಗ್ಸ್ ಹೊತ್ತ ವಾಹನ ಬಂಗಾಳದಿಂದ ಬಾಂಗ್ಲಾದೇಶದಲ್ಲಿನ ತನ್ನ ಗಮ್ಯ ತಲುಪುವವರೆಗೂ ಅದರ ಪಹರೆ ಕಾಯಲು ಹಾಗೂ ಕ್ಲಿಯರಿಂಗ್ ಸಿಗ್ನಲ್ ನೀಡಲು ಮುಖ್ಯ ವಾಹನದಿಂದ ಕೆಲವು ಕಿಲೋಮೀಟರುಗಳ ಅಂತರದಲ್ಲಿ ಇನ್ನೊಂದು ವಾಹನವಿರುತ್ತಿತ್ತು. ದಾರಿಯಲ್ಲಿ ಯಾವುದೇ ರೀತಿಯ ಅಪಾಯ, ಅಡೆತಡೆಗಳು ಕಂಡುಬಂದಲ್ಲಿ ಈ ಪಹರೆ ವಾಹನಗಳಿಂದ ಮುಖ್ಯ ವಾಹನಕ್ಕೆ ಹಾದಿ ಬದಲಿಸಲು ಸಂದೇಶ ರವಾನೆಯಾಗುತ್ತಿತ್ತು. ಹಾಗಾಗಿ ಚೆಕ್ ಪೋಸ್ಟ್, ಸೀಜ಼್ ಅಂತಹ ಅಪಾಯಕ್ಕೆ ಈ ವಾಹನಗಳು ಸಿಲುಕುವುದೇ ಕಡಿಮೆ. ಅದರಲ್ಲೂ ಹೆಚ್ಚಾಗಿ ರಾತ್ರಿಯ ಹೊತ್ತು, ಮುಖ್ಯ ರಸ್ತೆಗಳು ಹಾಗೂ ಜನವಸತಿಯಿಂದ ಪ್ರತ್ಯೇಕವಾಗಿರುವ ನಿರ್ಜನ ಹಾದಿಗಳಲ್ಲೇ ಈ ವಾಹನಗಳ ಸಂಚಾರ.

ಬಂಗಾಳದ ಗಡಿಯಲ್ಲಿ ಪೋಲಿಸ್ ಹಾಗೂ ಮಿಲಿಟರಿ ಪಹರೆ ತೀರಾ ಹೆಚ್ಚಾಗಿದ್ದು ಎಲ್ಲಾ ಹಾದಿಗಳೂ ಅಪಾಯಕಾರಿ ಎನಿಸಿದಾಗ ಈಶಾನ್ಯ ರಾಜ್ಯಗಳ ಮೂಲಕ ಸಾಗುವ ಸುತ್ತಿನ ಮಾರ್ಗವೂ ಬಳಕೆಯಾಗುತ್ತಿತ್ತು ವಿಲೇವಾರಿಗೆ. ತ್ರಿಪುರಾದ ಅಗರ್ತಲಾ - ಕೋಮಿಲ್ಲಾ - ಬ್ರಾಹ್ಮಣ್ಬರಿಯಾದ ಮುಖಾಂತರ ಢಾಕಾ ತಲುಪುವ ಹಾದಿಯ ಬಳಕೆ ಹೆಚ್ಚು. ಕಾರಣ ಈ ಮಾರ್ಗದಲ್ಲಿರುವ ದಟ್ಟಾರಣ್ಯದ ನಡುವೆ ಸಾಗುವ ಒಳಹಾದಿಗಳ ಲಭ್ಯತೆ. ಇದು ಬಾರ್ಡರ್ ಸೆಕ್ಯುರಿಟಿಯವರ ಕಣ್ತಪ್ಪಿಸಿ ಮಾಲನ್ನು ಸಾಗಾಣಿಕೆ ಮಾಡಲು ಬಹಳ ಅನುಕೂಲಕರವಾಗಿತ್ತು. ಅದರೊಂದಿಗೆ ಗೋಮ್ತಿ ಹಾಗೂ ಟೈಟಸ್ ನದಿಪಾತ್ರಗಳು ಬೋನಸ್. ಭೂಮಾರ್ಗದಲ್ಲಿ ಅಪಾಯದ ಸೂಚನೆ ಕಂಡ ಪಕ್ಷದಲ್ಲಿ ಈ ನದಿಗಳ ಮುಖಾಂತರ ಒಂದಿಷ್ಟು ಹಾದಿ ಕ್ರಮಿಸಿ ನಂತರ ಅರಣ್ಯದ ನಡುವಿನ ಕಾಲುಹಾದಿಗಳನ್ನು ಬಳಸಿ ಸಾಗಾಣಿಕೆ ಮಾಡುವುದು ಸುಲಭ. ಈ ಪ್ರದೇಶಗಳಲ್ಲೂ ರಾಕಾನ ಏಜೆಂಟುಗಳಿದ್ದರು ಕಟ್ಟೆಚ್ಚರದ ಗಮನವಿಡಲು.....

ಹೀಗೆ ಬಾಂಗ್ಲಾದೇಶಕ್ಕೆ ತಲುಪಿದ ಮಾದಕವಸ್ತುಗಳನ್ನು ಒಂದೇ ಪ್ರದೇಶದಲ್ಲಿ ಇರಿಸುತ್ತಿರಲಿಲ್ಲ. ಅದನ್ನು ಬೇರೆ ಬೇರೆ ಪ್ರದೇಶಗಳಲ್ಲಿ ದಾಸ್ತಾನು ಮಾಡಲಾಗುತ್ತಿತ್ತು. ಅಲ್ಲಿಯೂ ಅಷ್ಟೇ.... ಸ್ಮಶಾನದಲ್ಲಿನ ಸಮಾಧಿಗಳು, ನೆಲದಡಿಯ ಭೂಗತ ಕೋಣೆಗಳು, ಗೋಡೆಯೊಳಗಿನ ಕೋಣೆಗಳು, ನೀರಿನ ಟ್ಯಾಂಕುಗಳು, ಕೊಳಗಳು..... ಇಂತಹ ವಿಚಿತ್ರ ಗುಪ್ತ ಸ್ಥಳಗಳಲ್ಲಿ, ಯಾರೂ ಭೇದಿಸಲಾಗದ ಚಕ್ರವ್ಯೂಹದಂತಹ ಸುರಕ್ಷತೆಯಲ್ಲಿ ಈ ಡ್ರಗ್ಸ್ ಶೇಖರಣೆ..... ನನಗಂತೂ ಇವರ ಸಂಘಟಿತ ವ್ಯವಸ್ಥೆಗಳ ಪರಿಯೇ ಸೋಜಿಗ ಹುಟ್ಟಿಸುತ್ತಿತ್ತು‌.

ನಮ್ಮಲ್ಲಿ ಜನರ ಸೇವೆಗಾಗಿ ರೂಪಿಸಿರುವ ಸರ್ಕಾರಿ ಸಂಸ್ಥೆಗಳು ಕೆಲಸ ನಿರ್ವಹಣೆಯ ಶೈಲಿ ನೋಡಿದರೆ ಭಗವಂತನಿಗೇ ಪ್ರೀತಿ. ಅಂತಹದರಲ್ಲಿ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರ ಕಾರ್ಯನಿರ್ವಹಣೆಯ ವೈಖರಿ ಕಂಡು ನಾನು ದಂಗಾಗಿದ್ದೆ. ಅದೆಷ್ಟು ಕರಾರುವಕ್ಕಾದ ರಚನಾತ್ಮಕ ವ್ಯವಸ್ಥೆ ಈ ಜನರ ಪ್ರಾಣ ಬಲಿಪಡೆಯುವ ದಂಧೆಗೆ? ಅದೇ ಜನರ ಕಲ್ಯಾಣವೇ ಗುರಿಯಾಗಿರುವ ಸರ್ಕಾರಿ ಕಛೇರಿಗಳಲ್ಲಿ ಸಹಾಯ ಬಯಸಿ ಬಂದವರನ್ನು ಕೇಳುವವರು ಗತಿಯಿರದಂತಹ ಅವ್ಯವಸ್ಥೆ. ನಮ್ಮಂತಹ ನಿರ್ಗತಿಕರ ಕಲ್ಯಾಣಕ್ಕಾಗಿಯೇ 'ಭಿಕ್ಷುಕರ ಪುನರ್ವಸತಿ ಕೇಂದ್ರ'ಗಳಿವೆ. ಈ ಕೇಂದ್ರಗಳಿಗೆ ಧನಸಹಾಯ ಮಾಡುವ ಉದ್ದೇಶಕ್ಕೆಂದೇ 'ಕೇಂದ್ರ ಪರಿಹಾರ ನಿಧಿ' ಇದೆ. ಜನರಿಂದ ವಸೂಲಿ ಮಾಡುವ ಆಸ್ತಿ ತೆರಿಗೆಯ ಮೇಲೆ 3%ನಷ್ಟು ಭಿಕ್ಷಾಟನಾ ಶುಲ್ಕವನ್ನು ಸರ್ಕಾರ ವಸೂಲಿ ಮಾಡಿ ಅದನ್ನು ಪರಿಹಾರ ನಿಧಿಗೆ ನೀಡುತ್ತದೆ. ಆದರೆ ಇವೆಲ್ಲವೂ ಎಂದೂ ನಮ್ಮನ್ನಂತೂ ತಲುಪಿಲ್ಲ. ಆ ಹಣದಿಂದ ಇಲಾಖೆಯ ಅಧಿಕಾರಿಗಳು ಸಿರಿವಂತರಾಗುತ್ತಿದ್ದಾರಷ್ಟೇ....... ಊರಿನ ತುಂಬೆಲ್ಲ ಬೆಗ್ಗರ್ಸ್ ಕಾಲೋನಿ ಎಂದು ಭಿಕ್ಷುಕ ಪರಿಹಾರ ಕೇಂದ್ರಗಳ ಹೆಸರಿದ್ದರೂ ಆ ಪ್ರದೇಶಗಳಲ್ಲಿ ಇರುವವರೆಲ್ಲಾ ಡಾಲರ್ಸ್ ಕಾಲೋನಿಯವರೇ....... ಇದಕ್ಕೇನು ಹೇಳುವುದು? ಒಂದೆರೆಡು ಬೆಗ್ಗರ್ಸ್ ಕಾಲೋನಿಗಳು ನಮ್ಮಂತವರಿಗೆ ತೆರೆದಿದ್ದರೂ ಅದರೊಳಗೆ ನಮಗೆ ಒಂದಿನಿತೂ ಸ್ವಾತಂತ್ರ್ಯವೇ ಇಲ್ಲ. ಜೈಲಿನಲ್ಲಿ ಖೈದಿಗಳು ಹೇಗೋ ಅದೇ ಸ್ಥಿತಿ ನಮ್ಮದೂ. ಒಂದು ವೇಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ ಮೂರು ತಿಂಗಳ ಸೆರೆವಾಸ ಬೇರೆ....... ಇದು ನಮ್ಮ ಸರ್ಕಾರ ಜನರ ಕಲ್ಯಾಣ ಮಾಡುವ ವೈಖರಿ.......

ಅದೇ ರಾಕಾನಂತಹ ಸಮಾಜ ದ್ರೋಹಿಗಳು ಡ್ರಗ್ಸ್ ಎಂಬ ವಿಷವನ್ನು ರಾಜಾರೋಷವಾಗಿ ದೇಶದಿಂದ ದೇಶಕ್ಕೆ ಸಾಗಿಸಿ ಅಮಾಯಕರ ಪ್ರಾಣ ತೆಗೆಯುತ್ತಾರೆ. ಅವರದು ಒಂದಿನಿತೂ ಲೋಪವಿಲ್ಲದ ಕಾರ್ಪೋರೇಟ್ ಕಾರ್ಯನಿರ್ವಹಣೆ. ಜೊತೆಗೆ ರಾಕಾನಂತಹವರು ಸಮಾಜದ ಅತೀ ಪ್ರತಿಷ್ಠಿತ ಸಂಭಾವಿತ ವ್ಯಕ್ತಿಗಳೆಂಬ ಮುಖವಾಡ ತೊಟ್ಟವರು. ಮುಖವಾಡದ ಹಿಂದಿನ ಅಸಲಿ ಚಹರೆ ಯಾರಿಗೆ ಬೇಕು? ಸಭೆ ಸಮಾರಂಭಗಳಲ್ಲಿ ವೇದಿಕೆ ಏರಿ ಜನಸೇವೆಯ ಬಗ್ಗೆ, ದೇಶವನ್ನು ಉದ್ಧರಿಸುವ ಬಗೆ ಹೇಗೆಂದು ಗಂಟೆಗಟ್ಟಲೆ ಭಾಷಣ ಹೊಡೆಯುವ, ಡ್ರಗ್ಸ್ ಮಾರುವವರನ್ನು ಗಲ್ಲಿಗೇರಿಸಬೇಕು, ಬಡ ನಿರ್ಗತಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂದು ಸಮಾಜದೆದುರು ಉಪದೇಶ ನೀಡುವ ದೀನಬಂಧು ರಾಜನಾಥ್ ಕೀರ್ತನೀಯ ಎಂಬಾತನೇ ದೇಶದ ತುಂಬಾ ಡ್ರಗ್ಸ್ ದಂಧೆ ಮಾಡುವ, ಜನರನ್ನು ಊಳಿಗದ ಆಳುಗಳಂತೆ ಬಳಸಿಕೊಳ್ಳುವ ರಾಕಾ ಎಂಬುದೇ ಅತೀ ದೊಡ್ಡ ದುರಂತ. ಈ ವಿಚಾರ ನಮ್ಮ ಸರ್ಕಾರಕ್ಕೆ, ಸಭ್ಯ ಸಮಾಜಕ್ಕೆ ತಿಳಿದಿಲ್ಲವೇ? ಹಲವರಿಗೆ ಖಂಡಿತಾ ಗೊತ್ತಿದೆ‌. ಆದರೆ ಯಾರೂ ಬಾಯಿ ತೆರೆಯಲಾರರು. ಎಲ್ಲರಿಗೂ ಅವನ ಹಣ ಹಾಗೂ ಉರುಳಬಹುದಾದ ತಮ್ಮ ಹೆಣದ ಭಯ. ಆ ಭಯವನ್ನೇ ತನ್ನ ಅಸ್ತ್ರವನ್ನಾಗಿಸಿ ಜಗತ್ತನ್ನು ಆಳುತ್ತಿದ್ದಾನೆ ರಾಕಾ. 

ಇಷ್ಟಕ್ಕೂ ಭಯೋತ್ಪಾದನೆ ನಿಗ್ರಹಿಸಬೇಕು, ಉಗ್ರಗಾಮಿಗಳ ಹುಟ್ಟಡಗಿಸಬೇಕು ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸುವವರಿಗೆ ತಮ್ಮ ನಡುವಲ್ಲೇ ಸಂಭಾವಿತನಂತೆ ಕುಳಿತು ಇಡೀ ದೇಶದ ರಕ್ಷಣಾ ವ್ಯವಸ್ಥೆಗೇ ಅಪಾಯ ತರುವ ರಾಕಾನಂತಹವರ ಸುಳಿವಾಗುವುದೇ ಇಲ್ಲವಲ್ಲ....... ದೇಶದ ಮೂಲೆಮೂಲೆಯಲ್ಲಿನ ಗಡಿ ಪ್ರದೇಶಗಳ ಮೂಲಕ ಡ್ರಗ್ಸ್ ಸಾಗಿಸಲು ಕಳ್ಳ ಮಾರ್ಗಗಳನ್ನು ಹುಡುಕಿಡುವನಲ್ಲ ಈ ರಾಕಾ....... ಇದೇ ಕಳ್ಳ ಹಾದಿಗಳ ಮೂಲಕ ಅಕ್ರಮ ಶಸ್ತ್ರಾಸ್ತ್ರಗಳೂ ಸಾಗಾಣಿಕೆಯಾಗುವುದಿಲ್ಲವೇ? ಉಗ್ರರೂ ದೇಶದೊಳಗೆ ನುಸುಳಿ ತಮ್ಮ ಹೀನಕಾರ್ಯಗಳನ್ನು ಸಾಧಿಸಲು ಇದೇ ಹಾದಿಗಳನ್ನು ಬಳಸುವುದು ಇವರಿಗೆಲ್ಲಾ ತಿಳಿದಿಲ್ಲವೇ? ಖಂಡಿತಾ ಕೆಲವರಿಗಾದರೂ ತಿಳಿದಿದೆ.... ಆದರೆ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಮಧ್ಯೆ ಇದರ ಬಗ್ಗೆ ಯಾರಿಗೂ ಗಮನವಿಲ್ಲ. ಯಾವಾಗಲಾದರೊಮ್ಮೆ ರೈಡುಗಳು, ಸೀಜ಼್ ಗಳು ಆದಾಗ ರಾಕಾನಂತಹ ಕುತಂತ್ರಿಗಳಿಂದ ಹೇರಳವಾಗಿ ಹಣ ಪಡೆದು ಯಾರೋ ನಾಲ್ಕು ಜನ ಸಣ್ಣಪುಟ್ಟ ಡ್ರಗ್ ಪೆಡ್ಲರುಗಳನ್ನೇ ದೊಡ್ಡ ಡ್ರಗ್ ಡೀಲರುಗಳೆಂಬಂತೆ ಬಿಂಬಿಸಿ ಕಾಟಾಚಾರದ ತನಿಖೆ ಮಾಡಿ ಮುಗಿಸುತ್ತಾರೆ. ಯಾರಾದರೂ ದಿಟ್ಟ ಅಧಿಕಾರಿಗಳು ನಿಯತ್ತಾಗಿ ತನಿಖೆ ನಡೆಸಿದರೆ, ಅವರು ಸಾಕ್ಷಾಧಾರಗಳನ್ನು ಕಲೆಹಾಕುವುದರೊಳಗೆ ಈ ಭೂಮಿಯಿಂದ ಅವರ ಅಸ್ತಿತ್ವವೇ ಅಳಿಸಿಹೋಗಿರುತ್ತದೆ.

ಯೋಚಿಸಿದಷ್ಟೂ ನನ್ನ ತಲೆ ಕಾದ ಹಂಚಿನಂತಾಗುತ್ತಿತ್ತು. ತೀರದ ರೋಷ, ತಡೆಯಲಾರದ ಆವೇಶ...... ಯಾರ ಮೇಲೆ ಎಂಬುದೇ ಅರಿವಾಗುತ್ತಿರಲಿಲ್ಲ ನನಗೆ. ಇಡೀ ಜಗತ್ತೇ ನನಗೆ ಅನ್ಯಾಯಗೈಯುತ್ತಿದೆಯೆಂಬ ಭಾವ...... 
ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಬಿರ್ಜೂ ಚಾಚ ಹಾಗೂ ಅಶ್ರಫ್ ನನ್ನೊಂದಿಗೆ ಮುನಿಸಿಕೊಂಡು ಕೂತಿದ್ದರು. ಬಿರ್ಜು ಚಾಚನೊಂದಿಗೆ ಮಾತನಾಡಲು ಹೋದಾಗಲೆಲ್ಲ ಅವರದು ಒಂದೇ ಮಾತು....... 

"ತೂ ಪಹ್ಲೇ ಉಸ್ ಅಧೋಮ್ ಶೊಯ್ತಾನ್ ಕಾ ಸಂಗ್ ಛೋಡೋ.... ಫಿರ್ ಮೇರೆ ಸೇ ಬಾತ್ ಕರ್ನಾ" 
ಯಾವಾಗಲೂ ಇದೇ ಮಾತು. ಜೊತೆಗೊಂದಿಷ್ಟು ಉಪದೇಶ..... ಧರ್ಮ - ಅಧರ್ಮ, ಮಾನವತ್ವ - ದಾನವತ್ವದ ಬಗ್ಗೆ. ಇನ್ನು ಅಶ್ರಫ್ ಅಂತೂ ನನ್ನ ಮುಖವನ್ನೂ ನೋಡುತ್ತಿರಲಿಲ್ಲ. ನಾನು ಏನಾದರೂ ಹೇಳಹೋದರೆ ಅದನ್ನು ಕೇಳುವಷ್ಟು ವ್ಯವಧಾನವೂ ಇರುತ್ತಿರಲಿಲ್ಲ ಅವನಿಗೆ....... ಒಮ್ಮೆಯಂತೂ 
"ರಾಕಾನೊಂದಿಗೆ ಕೈಜೋಡಿಸಿ ನೀನೂ ಅದೇ ಅನ್ಯಾಯದ ಭಾಗವಾಗಿರುವ ನೀನು ನ್ಯಾಯ ಅನ್ಯಾಯಗಳ ಬಗ್ಗೆ ಮಾತನಾಡುವ ಹಕ್ಕನ್ನು ಕಳೆದುಕೊಂಡಿರುವೆ" ಎಂದುಬಿಟ್ಟಿದ್ದ ಅಶ್ರಫ್. ಇವರಿಬ್ಬರ ಈ ಪರಿ ನನಗೆ ನಿಜಕ್ಕೂ ಯಾತನೆ ತರುತ್ತಿತ್ತು. ಬಿರ್ಜೂ ಚಾಚ ಹಾಗೂ ಅಶ್ರಫ್ ಹೊರತು ನನಗಾಗಿ ಯಾರಿದ್ದರು ಈ ವಿಶಾಲ ಜಗದಲ್ಲಿ? ನನ್ನ ತಂದೆ, ತಾಯಿ, ಸ್ನೇಹಿತ, ಬಂಧು, ಬಳಗ ಎಲ್ಲವೂ ಅವರಿಬ್ಬರೇ..... ಅವರಿಬ್ಬರ ನಿರ್ಲಕ್ಷ್ಯ ನನ್ನನ್ನು ಕೊಲ್ಲುತ್ತಿತ್ತು. ಆದರೆ ರಾಕಾನ ಅಭೇದ್ಯ ಚಕ್ರವ್ಯೂಹದೊಳಗೆ ಹೊಕ್ಕಾಗಿತ್ತು. ಹೊರಬರಬೇಕೆಂದರೂ ಸಾಧ್ಯವಾಗದ ಸ್ಥಿತಿ. ಜೊತೆಗೇ ಅವನ ಬಗ್ಗೆ ತಿಳಿಯಬೇಕಾದದ್ದು ಇನ್ನೂ ಬಹಳವಿದೆಯೆಂಬ ಸತ್ಯವೂ ನನ್ನನ್ನು ಹಿಂತೆಗೆಯುವಂತೆ ಮಾಡುತ್ತಿತ್ತು....

ಒಟ್ಟಿನಲ್ಲಿ ನಾನು ರಾಕಾನ ಸಾಮ್ರಾಜ್ಯ ಹೊಕ್ಕ ಕ್ಷಣವೇ ನನ್ನ ಅತ್ಯಾಪ್ತರಿಬ್ಬರು ನನ್ನಿಂದ ದೂರ ಸರಿದಿದ್ದರು. ಅವರ ಮಾತುಗಳನ್ನು ಕೇಳಿ ರಾಕಾನ ಸಾಮ್ರಾಜ್ಯದಿಂದ ಹೊರಬರಬೇಕೋ ಇಲ್ಲಾ ನನ್ನ ಯೋಚನೆಯಂತೆ ರಾಕಾನ ಸಾಮ್ರಾಜ್ಯದ ಆಳವನ್ನು ಹೊಕ್ಕಬೇಕೋ ಎಂಬ ನಿರ್ಧರಿಸಲಾರದ ದ್ವಂದ್ವದಲ್ಲಿ ತೊಳಲಾಡುತ್ತಿದ್ದೆ.

ಇಂತಹ ಸಮಯದಲ್ಲೇ ನಡೆದಿತ್ತು ಒಂದು ಘಟನೆ.....

ನಾಲ್ಕು ದಿನಗಳ ಢಾಕಾ ಪಯಣ ಮುಗಿಸಿ ಆ ಸಂಜೆಯಷ್ಟೇ ನಾನು ಬಿಡಾರಕ್ಕೆ ವಾಪಾಸಾಗಿದ್ದೆ. ನನಗಾಗಿಯೇ ರಾಕಾ ಪ್ರತ್ಯೇಕ ಕೋಠಿಯೊಂದನ್ನು ನೀಡಿದ್ದನಾದರೂ ಅಲ್ಲಿ ನಿಲ್ಲಲು ಮನಸ್ಸಾಗುತ್ತಿರಲಿಲ್ಲ ನನಗೆ. ಬಿಡಾರಕ್ಕೆ ಬಂದು ಅಶ್ರಫ್ ಹಾಗೂ ಚಾಚಾನ ಮೊಗ ನೋಡದಿದ್ದರೆ, ಮಾತನಾಡಲು ಯತ್ನಿಸದಿದ್ದರೆ ನೆಮ್ಮದಿಯಿರುತ್ತಿರಲಿಲ್ಲ ನನಗೆ. ಹಾಗೆಯೇ ಅಂದೂ ಅವರಿಬ್ಬರನ್ನು ಮಾತನಾಡಿಸುವ ಯತ್ನದಲ್ಲಿ ಸೋತು ಅಲ್ಲೆ ಕಲ್ಲಿನ ಮೇಲೆ ಸುಮ್ಮನೆ ಕುಳಿತ್ತಿದ್ದೆ. ಹುಣ್ಣಿಮೆಯ ರಾತ್ರಿಯ ವಾತಾವರಣ ಹಿತವಿದ್ದ ಕಾರಣ ಬಿಡಾರದ ಸರ್ವರೂ ಹೊರಗೇ ಇದ್ದರು. ಯಾವ್ಯಾವುದೋ ಗುಂಪು ಚರ್ಚೆಗಳು, ತಮ್ಮದೇ ನೋವು ನಲಿವು ನಿಟ್ಟುಸಿರಿನ ಹಂಚಿಕೆ.......

ನನ್ನ ಬದಿಗೆ ಸ್ವಲ್ಪ ದೂರದಲ್ಲಿ ಕುಳಿತ ಹುಡುಗನೊಬ್ಬ ಅವನಷ್ಟಕ್ಕೇ ಅವನೇ ಹಾಡಿಕೊಳ್ಳುತ್ತಿದ್ದ.......

ಮೋನೆ ಪೋರೆ ರೂಬಿ ರಾಯ್.......
ಕೋಬಿತಾಯ್ ತೋಮಾಕೆ
ಏಕ್ದಿನ್ ಕೋತೋ ಕೋರೆ ದೇಖೇಚಿ...
ಆಜ್ ಹಾಯ್ ರೂಬಿ ರಾಯ್
ದೇಖೇ ಬೋಲೋ ಅಮಾಕೇ
ತೊಮಾಕೆ ಕೊತ್ಥಾಯ್ ಜೇನೋ ದೇಖೇಚಿ........

ಅವನ ಹಾಡನ್ನೇ ಕೇಳುತ್ತ ಮೈಮರೆತ್ತಿದ್ದ ನನ್ನನ್ನು, 

"ಎಲ್ಲಾ ಕಡೆಯೂ ಹುಡುಕಿದೆ. ಆದರೆ ರೋಬಿಂದ್ರ ಎಲ್ಲೂ ಕಾಣುತ್ತಿಲ್ಲ" ಎಂಬ ಹೆಣ್ಣೊಬ್ಬಳ ಕೂಗು ಇಹಕ್ಕೆ ಕರೆತಂದಿತ್ತು........

ಸಶೇಷ

ಟಿಪ್ಪಣಿಗಳು:

ದೇಶದ ಗಡಿಸೀಮೆಗಳಲ್ಲಿನ ಡ್ರಗ್ಸ್ ಕಳ್ಳಸಾಗಾಣಿಕೆ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂಬುವುದಕ್ಕೆ ಹಲವು ನಿದರ್ಶನಗಳು ದೊರಕುತ್ತವೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಾಣಿಕೆಗೆ ಬಳಸುವ ಕಳ್ಳ ಮಾರ್ಗಗಳನ್ನೇ ಉಗ್ರರು ದೇಶದೊಳಗೆ ನುಸುಳಲು ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆಗೂ ಬಳಸಲಾಗುತ್ತದೆ ಎಂಬ ತರ್ಕ ಬಹಳ ಹಿಂದಿನಿಂದಲೂ ಚರ್ಚಿತ ವಿಚಾರ. 1993ರ ಮುಂಬೈ ಸರಣಿ ಸ್ಪೋಟದಲ್ಲಿ ಬಳಕೆಯಾದ ಆಯುಧ ಹಾಗೂ ಸ್ಪೋಟಕಗಳನ್ನು 'ಡಿ ಗ್ಯಾಂಗ್'(ದಾವೂದ್ ಇಬ್ರಾಹಿಂ ಗ್ಯಾಂಗ್) ಡ್ರಗ್ಸ್ ಕಳ್ಳಸಾಗಾಣಿಕಾ ಹಾದಿಗಳ ಮೂಲಕವೇ ಭಾರತಕ್ಕೆ ರವಾನಿಸಿತ್ತು ಎಂಬುದಾಗಿ ಹಲವು ತನಿಖಾ ಸಿದ್ಧಾಂತಗಳು ಪ್ರತಿಪಾದಿಸಿವೆ. ಹಾಗೆಯೇ ಇತ್ತೀಚಿನ ಪಠಾಣ್ ಕೋಟ್ ಮೇಲೆ ಭಯೋತ್ಪಾದಕ ದಾಳಿಯ ತನಿಖೆಯೂ ಉಗ್ರರು ಭಾರತ ಪಾಕ್ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಾಣಿಕೆ ಮಾಡುವ ಮಾರ್ಗದಿಂದ ಭಾರತದೊಳಗೆ ಪ್ರವೇಶಿಸಿದ್ದರು ಎಂಬ ಸುಳಿವನ್ನು ನೀಡಿದೆ‌.

ಈ ಅಕ್ರಮ ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಹವಾಲಾ, ನೇಪಾಳದ ಕ್ಯಾಸಿನೋಗಳು, ಬೇನಾಮಿ ಖಾತೆಗಳ(methods of money laundering) ಮೂಲಕ ಈ ಅಕ್ರಮ ಹಣ ವರ್ಗಾವಣೆ ನಡೆಯುತ್ತದೆ. ಶಸ್ತ್ರಾಸ್ತ್ರಗಳು ಹಾಗೂ ಸ್ಪೋಟಕಗಳ ಖರೀದಿಗೆ ಇದೇ ಹಣ ಬಳಕೆಯಾಗುತ್ತದೆ. ಒಂದು ಮೂಲದ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಬಳಕೆಯಾಗುವ ಹಣಕಾಸಿನಲ್ಲಿ ಅಂದಾಜು 15% ಡ್ರಗ್ಸ್ ಮಾರಾಟದಿಂದ ಬರುವುದು. ಇಷ್ಟಲ್ಲದೇ ಅವ್ಯಾಹತವಾಗಿ ಸಾಗಿರುವ ಅಕ್ರಮ ಡ್ರಗ್ಸ್ ದಂಧೆಯಿಂದಾಗಿ ದೇಶದ ಜನತೆ, ಅದರಲ್ಲೂ ಯುವ ವರ್ಗ ನಶೆಯ ಚಟಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಸಂಬಂಧಿ ಅಪರಾಧಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. 

"ಮೋನೆ ಪೋರೆ ರೂಬಿ ರಾಯ್" ಆರ್.ಡಿ. ಬರ್ಮನ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಜನಪ್ರಿಯ ಬೆಂಗಾಲಿ ಗೀತೆ. ಆಶಾ ಭೋಸ್ಲೆ ಅವರೊಂದಿಗೆ ಸ್ವತಃ ಆರ್.ಡಿ ಬರ್ಮನ್ ಅವರೇ ಈ ಹಾಡಿಗೆ ದನಿಯಾಗಿದ್ದಾರೆ. ಹಿಂದಿಯ ಅನಾಮಿಕಾ ಸಿನಿಮಾದ ಕಿಶೋರ್ ಕುಮಾರ್ ಅವರ ಕಂಠ ಸಿರಿಯ ಜನಪ್ರಿಯ "ಮೇರೆ ಭೀಗಿ ಭೀಗಿ ಸೀ‌ ಪಲ್ಕೋ ಪೆ" ಹಾಡಿನ ಮೂಲ ಇದೇ "ಮೋನೆ ಪೋರೆ ರೂಬಿ ರಾಯ್".

ಮಾಹಿತಿ ಮೂಲ:

https://www.unodc.org/unodc/en/data-and-analysis/bulletin/bulletin_1957-01-01_1_page003.html

https://www.wionews.com/south-asia/drug-trafficking-a-challenge-to-national-security-17448/amp#aoh=15740798708692&referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fwww.wionews.com%2Fsouth-asia%2Fdrug-trafficking-a-challenge-to-national-security-17448%2Famp%23aoh%3D15740798708692%26referrer%3Dhttps%253A%252F%252Fwww.google.com%26amp_tf%3DFrom%2520%25251%2524s

https://www.prajavani.net/business/commerce-news/what-hawala-and-why-it-illegal-662637.html

ಅಗ್ನಿ ತರಂಗಿಣಿ 8

ದಂ ಮಾರೋ ದಂ.... ನಶೇ ಮೆ ತೂ ಹೋಜಾ ಗುಮ್......

'ನಶೆ.........!!

ಮೈ ಮೇಲೆ ಪ್ರಜ್ಞೆಯಿಲ್ಲದೇ ತಮ್ಮ ಅಸ್ತಿತ್ವವನ್ನೇ ಮರೆತು ಆಗಸದಲ್ಲೇ ತೇಲಾಡುತ್ತಾ ಸ್ವಪ್ನಲೋಕದಲ್ಲಿ ವಿಹಾರ ನಡೆಸುತ್ತಿದ್ದರೆ....... ಓಹ್...... ಅದೆಂಥಾ ಮಧುರಾನುಭೂತಿ.....

ಈ ಲೋಕದ ರೀತಿ ನೀತಿಗಳ ಹಂಗಿಲ್ಲದ, ಕಷ್ಟ ಕಾರ್ಪಣ್ಯಗಳ ಗುಂಗಿಲ್ಲದ, ನೋವಿನ ಸುಳಿವಿಲ್ಲದ ಆ ನಶೆಯ ಲೋಕ......

ಆಹ್......

ಮೈ ಮನವೆಲ್ಲಾ ಹತ್ತಿಯಷ್ಟೇ ಹಗುರ..... ಗಾಳಿಯಲ್ಲಿ ತೇಲುವಷ್ಟು ಹಗುರ......

ಈ ಬದುಕಿನಲ್ಲಿರುವುದಾದರೂ ಏನು? ಬರೀ ಕಷ್ಟಗಳ ಸರಮಾಲೆ‌...... ಆ ಕಷ್ಟಗಳ ಸರಮಾಲೆಯ ನಡುವಲ್ಲೆಲ್ಲೋ ಇರುವ ಕ್ಷಣಗಳ ಸಂತಸ. ಜೀವನ ಪರ್ಯಂತ ಶ್ರಮ ಹಾಕಿ, ಬೆವರು ಹರಿಸಿ, ಜೀವ ತೇಯ್ದು ದುಡಿಯುತ್ತಲೇ ಇದ್ದರೆ ಸಂತಸ ಪಡುವುದು ಯಾವಾಗ? ಇರುವುದೊಂದೇ ಮೂರು ದಿನದ ಬದುಕು. ಅದನ್ನು ಯಾವುದೇ ಕಷ್ಟಗಳ ಗೋಜಿಲ್ಲದೆ, ಬಿಂದಾಸ್ ಆಗಿ ನಶೆಯಲ್ಲಿ ಜೀವಿಸಿಬಿಡಬೇಕು...... '

ಇಂತಹ ವಿಚಿತ್ರ, ವಿಶಿಷ್ಟ ವಿಚಾರಧಾರೆಗಳ ಹಿಪ್ಪಿ ಕಲ್ಚರ್ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಘಟ್ಟವದು. ಚಿತ್ರವಿಚಿತ್ರ ವೇಷಭೂಷಣಗಳು, ಕೇಶ ವಿನ್ಯಾಸಗಳೊಂದಿಗೆ ಒಂದು ಕೈಯಲ್ಲಿ ಚುಟ್ಟಾ(ಸುಟ್ಟಾ) ಹಿಡಿದು ಸೇದುತ್ತಾ ನಶೆಯ ಲೋಕದಲ್ಲಿ ತೇಲುವ ಒಂದು ವರ್ಗವೇ ಸೃಷ್ಟಿಯಾಗಿತ್ತು. 

दुनिया ने हमको दिया क्या

दुनिया से हमने लिया क्या

हम सब की परवाह करें क्यूँ

सबने हमारा किया क्या

दम मारो दम.....

मिट जाए ग़म......

बोलो सुबह शाम.....

हरे कृष्णा हरे राम...

ಅನ್ನುವುದೇ ಇವರ ಪಾಲಿನ ಧ್ಯೇಯ ಗೀತೆ...... 

ಇಂತಹ ಹಿಪ್ಪಿ ಸಂಸ್ಕೃತಿಯಿಂದ ಪ್ರೇರೇಪಿತರಾಗಿ ನಶೆಯ ಖಯಾಲಿಯನ್ನು ಮೊದಲು ಹಿಡಿಸಿಕೊಂಡಿದ್ದು ಯುವ ವರ್ಗ. 

ಬಾಲ್ಯದ ಸರಹದ್ದನ್ನು ದಾಟಿ ಹರೆಯದ ಸೀಮೆಗೆ ಪ್ರವೇಶಿಸುವ ಕಾಲವಿದೆಯಲ್ಲಾ....... ಅದು ಮನದೊಳಗೆ ಸೃಷ್ಟಿಸುವ ತವಕ ತಲ್ಲಣಗಳು ಅಪಾರ. ಕೆಲವು ತಲ್ಲಣಗಳು ಹಿತವಾದ ಅಲೆಯ ತರಂಗಗಳಂತಾದರೆ ಇನ್ನು ಕೆಲವು ಉನ್ಮಾದವೇ ತುಂಬಿ ಭೋರ್ಗರೆವ ತೂಫಾನು ಸುಳಿಗಳು. ಒಂದು ಸಕಾರಾತ್ಮಕ ಚಿಂತನೆಗಳಿಗೆ ಆದ್ಯತೆ ನೀಡಿ ದಾರಿ ತೋರಿದರೆ ಇನ್ನೊಂದು ನಕಾರಾತ್ಮಕ ಯೋಚನೆಗಳಿಗೆ ಇಂಬುಕೊಟ್ಟು ಬದುಕಿನ ದಿಕ್ಕು ತಪ್ಪಿಸುತ್ತದೆ. ಸಕಾರಾತ್ಮಕತೆಯ ಹಾದಿಯ ಪಯಣ ಕಲ್ಲುಮುಳ್ಳುಗಳಿಂದ ಕೂಡಿದ ಕಷ್ಟದ ಯಾನ. ನ್ಯಾಯವಾದ ಪರಿಶ್ರಮವನ್ನು ಬೇಡುವ ಈ ಪಥದಲ್ಲಿ ಅಡ್ಡಹಾದಿಗಳಿಲ್ಲ. ಸುಲಭದಲ್ಲಿ ಗುರಿ ತಲುಪಲು ಸಾಧ್ಯವಿಲ್ಲ, ಹಂತ ಹಂತವಾಗಿ ಗುರಿಯೆಡೆಗೆ ಪಯಣಿಸಬೇಕು. ಅದೇ ನೇತ್ಯಾತ್ಮಕ ಪಥದಲ್ಲಿ ಗುರಿ ತಲುಪಲು ಅನ್ಯಾಯ ಅಕ್ರಮದ ಅಡ್ಡ ಹಾದಿಗಳು ಹಲವು. ಬಹು ವೇಗದಲ್ಲಿ ಗಮ್ಯವನ್ನು ತಲುಪಲೂಬಹುದು. ಹಾಗಾಗಿ ಈ ಹಾದಿ ಜನರಿಗೆ ಆಕರ್ಷಕವೆನಿಸಿಬಿಡುತ್ತದೆ. 

ಈಗ ನನ್ನ ವಿಚಾರವನ್ನೇ ತೆಗೆದುಕೊಳ್ಳಿ. ನಾನೂ ಬಿರ್ಜೂ ಚಾಚಾನಂತೆ ಸರಿತಪ್ಪುಗಳನ್ನು ವಿಶ್ಲೇಷಿಸಬಹುದಿತ್ತು. ಅಶ್ರಫಿಯಂತೆ ಕಷ್ಟವೋ ಸುಖವೋ ಮೈ ಬಗ್ಗಿಸಿ ದುಡಿಯಬಹುದಿತ್ತು. ರಾಕಾನ ಡೀಲ್ ನಿರಾಕರಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಕಾರಣವೇನು......? ರಾಕಾನ ಸಾಮ್ರಾಜ್ಯದ ಒಳಗುಟ್ಟನ್ನು ಅರಿಯುವುದಷ್ಟೇ ನನ್ನ ಉದ್ದೇಶವೇ? ಇಲ್ಲಾ ಸುಲಭವೆನಿಸುವ ವಾಮಮಾರ್ಗದಲ್ಲಿ ಹಣ, ಪ್ರತಿಷ್ಠೆಗಳನ್ನು ಗಳಿಸಿಕೊಳ್ಳುವ ಆಸೆಗೆ ಬಿದ್ದಿದ್ದೆನಾ ನಾನು?? ಈ ಪ್ರಶ್ನೆಯನ್ನು ಬಾರಿ ಬಾರಿ ಕೇಳುತ್ತಾ ನನ್ನ ಅಂತರಾತ್ಮ ನನ್ನೊಂದಿಗೆ ಕದನಕಿಳಿಯುತ್ತಿತ್ತು. ಅಂತಹ ಸಂದರ್ಭದಲ್ಲೆಲ್ಲಾ ನನ್ನ ಮಹಾತ್ವಾಕಾಂಕ್ಷೆಯನ್ನು ಮುಂದಿಟ್ಟು ಅಂತರಾತ್ಮವನ್ನು ದಮನಿಸಿಬಿಡುತ್ತಿದ್ದೆ...... ಆಗೆಲ್ಲಾ ನಾನು ಮಾಡುತ್ತಿರುವುದು ತಪ್ಪು ಎಂದು ನನಗನಿಸುತ್ತಲೇ ಇರಲಿಲ್ಲ. ರಾಕಾನಂತಹ ದುರುಳನ ವ್ಯವಹಾರಗಳ ಬಗ್ಗೆ ತಿಳಿಯಲು ಅವನೊಂದಿಗೆ ಕೈ ಜೋಡಿಸಿದರೆ ತಪ್ಪಿಲ್ಲ ಎಂದು ಬಲವಾಗಿ ನಂಬಿದ್ದೆ ನಾನು. ಸರಿ ತಪ್ಪು, ನ್ಯಾಯ ಅನ್ಯಾಯಗಳ ಪ್ರಶ್ನೆ ಆಗ ನನ್ನನ್ನೆಂದೂ ಕಾಡಲಿಲ್ಲ.

ಏಕೆಂದರೆ ಈ ಸರಿ ಹಾಗೂ ತಪ್ಪುಗಳ ಹಾದಿಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡಿ ಆಯ್ದುಕೊಳ್ಳಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ನಾವು ಯಾವ ಹಾದಿಯನ್ನು ಆಯ್ದುಕೊಳ್ಳುತ್ತೇವೆಯೋ ಆ ಹಾದಿಯನ್ನು ಸಮರ್ಥಿಸಿಕೊಳ್ಳಲು ಕಾರಣಗಳನ್ನೂ ನಾವೇ ಸೃಷ್ಟಿಸಿಕೊಂಡು ಬಿಡುತ್ತೇವೆ. ಅನ್ಯಾಯ ಅಕ್ರಮದ ಮಾರ್ಗವಾದರೂ ಸರಿಯೇ, ಬುದ್ಧಿ ಅದನ್ನು ಸಮರ್ಥಿಸಲು ಸೂಕ್ತ ಕಾರಣಗಳನ್ನು ನೀಡಿಬಿಡುತ್ತದೆ. ನನ್ನ ವಿಚಾರದಲ್ಲೂ ಅಷ್ಟೇ. 'ನಿನಗೆ ಭಿಕ್ಷುಕನ ಪಟ್ಟ ನೀಡಿ ಅವಮಾನಿಸಿದ ಈ ಸಮಾಜದ ಬಗ್ಗೆ ನೀನೇಕೆ ಯೋಚಿಸುವೆ? ನಿನ್ನ ನೋವು, ಕಷ್ಟಗಳಿಗೆ ಅವರೇನಾದರೂ ಸ್ಪಂದಿಸಿದರೇ? ಇಲ್ಲವಲ್ಲ.... ನೀನು ರಾಕಾನೊಟ್ಟಿಗೆ ಕೈ ಜೋಡಿಸಲೂ ಈ ಸಮಾಜವೇ ಕಾರಣ. ಸಮಾಜ ನಿನ್ನನ್ನು ಗೌರವಿಸಿ ಪೊರೆದಿದ್ದರೆ ನೀನು ಹೀಗಾಗುತ್ತಿರಲಿಲ್ಲ. ಹಾಗಾಗಿ ನೀನು ಮಾಡುತ್ತಿರುವುದೇ ಸರಿ' ಎಂದು ನನ್ನ ವರ್ತನೆಗಳನ್ನು ಬುದ್ಧಿ ಸಮರ್ಥಿಸಿಕೊಂಡುಬಿಟ್ಟಿತು. ನನಗೆ ನನ್ನ ಕೆಲಸಗಳು ತಪ್ಪು ಎನಿಸಲೇ ಇಲ್ಲ.....

ಬಹುಶಃ ಹಾಗೆಯೇ ಈ ಯುವ ಜನಾಂಗದ ಮನಸ್ಥಿತಿಯೇನೋ...... 

ಹರೆಯದ ಬಿಸುಪಿನ ತಾರುಣ್ಯದ ಉನ್ಮಾದತೆ ಬಯಸುವುದು ಬಣ್ಣಗಳಿಂದ ತುಂಬಿದ ವೇಗದ ಬದುಕನ್ನು. ಎಲ್ಲವೂ ಸುಲಭ, ಸರಳವಾಗಿ ಸಿಗಬೇಕೆಂದು ಮನಸ್ಸು ಬಯಸುವ ಕಾಲಘಟ್ಟವಿದು. ಈ ಹಂತದಲ್ಲಿ ಕಷ್ಟಗಳ ಹಂಗಿಲ್ಲದ, ವೈಭೋಗದ ವಿಲಾಸಿ ಜೀವನ ಆಕರ್ಷಕವೆನಿಸುತ್ತದೆ. ಜವಾಬ್ದಾರಿಗಳೇ ತುಂಬಿರುವ ಕಟ್ಟುನಿಟ್ಟಿನ ಜೀವನಕ್ಕಿಂತ ಬೇಜವಾಬ್ದಾರಿಯುತ ಮೋಜು ಮಸ್ತಿಯೇ ಪ್ರಧಾನವಾದ ಹಿಪ್ಪಿ ಜೀವನಶೈಲಿ ಯುವ ಜನಾಂಗವನ್ನು ಬಹಳ ಬೇಗ ಆಕರ್ಷಿಸಿಬಿಟ್ಟಿತ್ತು. 

ಎಷ್ಟೆಂದರೂ ಬದುಕಿನ ಕಷ್ಟಗಳನ್ನು ಎದುರಿಸಿ ನಿಲ್ಲುವುದಕ್ಕಿಂತ ಕಷ್ಟಗಳಿಂದ ಪಲಾಯನ ಮಾಡುವುದೇ ಸುಲಭದ ಆಯ್ಕೆಯಲ್ಲವೇ? ಆ ಪಲಾಯನಕ್ಕೆ ಇವರು ಆಯ್ದುಕೊಂಡ ಹಾದಿಯೇ ನಶೆ........

ಯುವವರ್ಗದಿಂದ ಆರಂಭವಾದ ನಶೆಯ ನಿಶೆ ನೋಡು ನೋಡುತ್ತಲೇ ಸಮೂಹ ಸನ್ನಿಯಂತೆ ಅಬಾಲವೃದ್ಧರಾದಿಯಾಗಿ ಸಕಲರನ್ನೂ ಆದತ್(ಅಭ್ಯಾಸ)ನಂತೆ ಆವರಿಸಿಕೊಂಡಿತ್ತು ಈ ಲತ್ತ್(ಚಟ)......

ಅದಾಗೇ ಆವರಿಸಿಕೊಂಡಿತು ಎನ್ನುವುದಕ್ಕಿಂತ ವ್ಯವಸ್ಥಿತಾಗಿ ಆವರಿಸಿಕೊಳ್ಳುವಂತೆ ಮಾಡಲಾಗುತ್ತದೆ ಎನ್ನುವುದೇ ಸೂಕ್ತ.....

ಹಾಗೆ ನಶೆಯ ಅಲೆಯಲ್ಲಿ ಜನರನ್ನು ತೇಲಿಸಿ ಹಣದ ಹೊಳೆಯಲ್ಲಿ ಮೀಯುತ್ತಿರುವವನು ರಾಕಾ.........!

ಹೌದು.....

ಜನರನ್ನು ಭಿಕ್ಷಾಟನೆಗೆ ತಳ್ಳುವ ಮೂಲಕ ಸಂಪಾದಿಸುತ್ತಿರುವ ಹಣ ರಾಕಾನಿಗೆ ಪಾದದ ಧೂಳಿನಂತೆ ಅಷ್ಟೇ. ಅವನ ಹಣ, ಅಧಿಕಾರದ ನಿಜವಾದ ಮೂಲ ಅವನು ನಡೆಸುವ ಮೂರು ಕಾನೂನುಬಾಹಿರ ದಂಧೆಗಳಲ್ಲಿತ್ತು. ಅದರಲ್ಲಿ ಒಂದು ಈ ಮಾದಕ ವಸ್ತುಗಳ ನಶೆಯ ಜಾಲ. ಮೊದಲಿಗೆ ನಾನು ರಾಕಾನನ್ನು ಸಣ್ಣ ಮಟ್ಟದಲ್ಲಿ ಮಾದಕದ್ರವ್ಯಗಳನ್ನು ಮಾರುವ ಡ್ರಗ್ ಪೆಡ್ಲರ್ ಎಂದುಕೊಂಡಿದ್ದೆ. ಆದರೆ ಆಳಕ್ಕಿಳಿದಷ್ಟೂ ಗೋಚರವಾದ ಸತ್ಯಗಳು ನನ್ನನ್ನು ಸ್ತಂಭೀಭೂತನನ್ನಾಗಿಸಿತ್ತು......

ರಾಕಾ ಕೇವಲ ಡ್ರಗ್ ಪೆಡ್ಲರ್ ಆಗಿರಲಿಲ್ಲ. ಅವನು ಡೆಮೋನ್ ನ ಮೋನ್ಸ್ಟರ್ ವೆಬ್ ನಲ್ಲಿ ಫಾಲ್ಕನ್(falcon) ಆಗಿದ್ದ......!!!! 

ಡೆಮೋನ್........!!

ಡ್ರಗ್ ಮಾಫಿಯಾದ ಅನಭಿಷಿಕ್ತ ದೊರೆಗಳಲ್ಲೊಬ್ಬ..... ಗೋಲ್ಡನ್ ಕ್ರೆಸೆಂಟ್ ನ ಅತ್ಯಂತ ಪ್ರಭಾವೀ ಡ್ರಗ್ ಲಾರ್ಡ್.....!! 

ಗೋಲ್ಡನ್ ಕ್ರೆಸೆಂಟ್(Golden Crescent) ಹಾಗೂ ಗೋಲ್ಡನ್ ಟ್ರಯಾಂಗಲ್(Golden Triangle)......... ಡ್ರಗ್ ಮಾಫಿಯಾದ ಸ್ವರ್ಗಗಳು.....!! ಪ್ರಪಂಚದ  ಮಾದಕದ್ರವ್ಯಗಳ ಮಾರುಕಟ್ಟೆ ಇರುವುದೇ ಈ ಎರಡು ಮಾಫಿಯಾಗಳ ಕಬಂಧ ಹಿಡಿತದಲ್ಲಿ. ಇವುಗಳಲ್ಲಿ ಗೋಲ್ಡನ್ ಟ್ರಯಾಂಗಲ್ ತೀರಾ ಇತ್ತೀಚೆಗೆ ಅಂದರೆ 1980ರ ನಂತರದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿರುವುದು. ಆದರೆ ಗೋಲ್ಡನ್ ಕ್ರೆಸೆಂಟ್ ಹಾಗಲ್ಲ. ಅದು 1950ರ ಸಮಯದಿಂದಲೇ ಡ್ರಗ್ಸ್ ಮಾರುಕಟ್ಟೆಯಲ್ಲಿ ಪಳಗಿದ ವಲಯ. 

ಈ ಗೋಲ್ಡನ್ ಕ್ರೆಸೆಂಟ್ ಅಫ್ಘಾನಿಸ್ತಾನ, ಇರಾನ್ ಹಾಗೂ ಪಾಕಿಸ್ತಾನದ ಭಾಗಗಳನ್ನು ಒಳಗೊಂಡ ವಲಯ. ಹೇಳಿಕೇಳಿ ಜಗತ್ತಿನಲ್ಲೇ ಅತೀ ಹೆಚ್ಚು ಅಫೀಮು ಉತ್ಪಾದಿಸುವ ದೇಶಗಳಲ್ಲಿ ಅಫ್ಘಾನಿಸ್ತಾನವೂ ಒಂದು. ಆ ಕಾಲದಲ್ಲೇ ಅತೀ ಹೆಚ್ಚು ಮಾದಕ ದ್ರವ್ಯಗಳ ವ್ಯವಹಾರ ನಡೆಸುವ ವಲಯವಾಗಿತ್ತು ಅದು. ಈ ಬಗ್ಗೆ ಕೇಳಿ ತಿಳಿದಿತ್ತು ನನಗೆ. ನನ್ನ ಕಲ್ಪನೆಯಲ್ಲಿ ಈ ಡ್ರಗ್ ಮಾಫಿಯಾ ಎಂಬುದೂ ಕೂಡಾ ಭೂಗತ ಲೋಕದಂತೆ ಒಂದಿಷ್ಟು ಪುಡಿ ರೌಡಿಗಳನ್ನು ಹೊಂದಿರುವ ಡಾನ್ ಗಳು ನಡೆಸಿಕೊಂಡು ಹೋಗುವ ವ್ಯವಹಾರ‌. ಈ ಡಾನ್ ತನ್ನ ಚೇಲಾಗಳ ಮೂಲಕ ಡ್ರಗ್ ಪೆಡ್ಲಿಂಗ್ ಕಾರ್ಯವನ್ನು ನಿರ್ವಹಿಸುತ್ತಾನೆ. ಅದರಿಂದ ಬಂದ ಹಣ ಹಂಚಿಕೆಯಾಗುತ್ತದೆ ಎಂದುಕೊಂಡಿದ್ದೆ. ರಾಕಾನ ಸಾಮ್ರಾಜ್ಯದ ಒಳಹೊಕ್ಕುವವರೆಗೆ ಡ್ರಗ್ ಮಾಫಿಯಾದ ಬಗ್ಗೆ ನನಗಿದ್ದ ತಿಳುವಳಿಕೆ ಇಷ್ಟೇ.....

ಆದರೆ ವಾಸ್ತವ ನನ್ನೆಣಿಕೆಗಿಂತ ಸಂಪೂರ್ಣ ಭಿನ್ನವಾಗಿತ್ತು. ಈ ಡ್ರಗ್ ಮಾಫಿಯಾದ ಲೋಕವೇ ಹಾಗೆ..... ಯಾರ ಊಹೆಗೂ ಸಿಗದಷ್ಟು ಸಂಕೀರ್ಣ. ಮಾಫಿಯಾ ಒಂದರ ನಿರ್ವಹಣೆ ಹೀಗೂ ಇರಬಹುದೇ ಎಂದು ಬೆಚ್ಚಿದ್ದೆ ನಾನು.

ಸಂಶ್ಲೇಷಿತ ಮಾದಕವಸ್ತು(Synthetic drugs)ಗಳ ಭರಾಟೆ ಇನ್ನೂ ಆರಂಭವಾಗಿರದ ಕಾಲವದು. ಗಾಂಜಾ(cannabis), ಚರಾಸ್/ಹಶಿಶ್, ಮೆರುವಾನ(marijuana), ಹೆರಾಯಿನ್(heroin) ಹಾಗೂ ಮಾರ್ಫಿನ್(morphine)ಗಳೇ ಡ್ರಗ್ಸ್ ದಂಧೆಯನ್ನು ಆಳುತ್ತಿದ್ದವು. ಈ ಮಾದಕ ಪದಾರ್ಥಗಳ ಉತ್ಪಾದನೆ ಹಾಗೂ ಮಾರುಕಟ್ಟೆ ಕೆಲವೇ ಕೆಲವು ಕೈಗಳ ನಿಯಂತ್ರಣದಲ್ಲಿರುವಂತಹದ್ದು (ಕೆಲಜನ ಸ್ವಾಮ್ಯದ/oligopoly ಮಾರುಕಟ್ಟೆ). ಈ ಕೆಲವೇ ಕೆಲವು ವ್ಯಕ್ತಿಗಳು ಲಾಭ ಹೆಚ್ಚಿಸಿಕೊಳ್ಳಲೋಸುಗ ಒಟ್ಟಾಗಿ ಕೈಜೋಡಿಸಿ ಒಪ್ಪಂದ ಮಾಡಿಕೊಂಡು ಜೊತೆಯಾಗಿ ಕೆಲಸಮಾಡುವುದು ಈ ದಂಧೆಯಲ್ಲಿ ಸಾಮಾನ್ಯ. ಇಂತಹ ಒಪ್ಪಂದಗಳು ಮಾದಕ ಪದಾರ್ಥಗಳ ಮಾರುಕಟ್ಟೆ ನಿಯಂತ್ರಣ ಕೂಟಗಳನ್ನು (drug cartel) ಸೃಷ್ಟಿಸುತ್ತವೆ. ಈ ಡ್ರಗ್ ಕಾರ್ಟೆಲ್ಲುಗಳು ಕೆಲಜನ ಸ್ವಾಮ್ಯ ಮಾರುಕಟ್ಟೆಯನ್ನು ಏಕಸ್ವಾಮ್ಯ ಮಾರುಕಟ್ಟೆ(monopoly) ಆಗಿ ಬದಲಾಯಿಸಿ ಈ ಪಾತಕಿಗಳಿಗೆ ಹಣದ ಹೊಳೆಯನ್ನು ಹರಿಸುತ್ತವೆ. 

ಈ ಕಾರ್ಟೆಲ್ಲುಗಳಾದರೂ ಅಷ್ಟೇ. ಅತೀ ಸೂಕ್ಷ್ಮವಾದ ಅಷ್ಟೇ ರಕ್ಷಣಾತ್ಮಕವಾದ ವಿನ್ಯಾಸವನ್ನು ಹೊಂದಿರುತ್ತವೆ. ಯಾವ ಕಾರ್ಪೋರೇಟ್ ವಲಯಕ್ಕೂ ಕಡಿಮೆ ಇಲ್ಲದಂತೆ ಫಾಲ್ಕನ್(falcons), ಹಿಟ್ಮೆನ್(hitmen), ಲೆಫ್ಟಿನೆಂಟ್(lieutenants) ಹಾಗೂ ಡ್ರಗ್ ಲಾರ್ಡ್(drug lord) ಎಂಬ ನಾಲ್ಕು ಸ್ತರಗಳ ರಚನೆ ಈ ಕಾರ್ಟೆಲ್ಗಳದು.  

ಪೋಲೀಸ್, ಮಿಲಿಟರಿ ಹಾಗೂ ವಿರೋಧಿ ಗುಂಪುಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ ಮೇಲ್ವಿಚಾರಣೆ ನಡೆಸುತ್ತಾ, ಮಾಹಿತಿ ನೀಡುವುದು ಫಾಲ್ಕನ್ ಗಳ ಕೆಲಸ. ಹಾಗಾಗಿಯೇ ಇವರನ್ನು ಗುಂಪಿನ ಕಣ್ಣು ಹಾಗೂ ಕಿವಿ ಎಂದು ಪರಿಗಣಿಸಲಾಗುತ್ತದೆ. ಇದು ಡ್ರಗ್ ಕಾರ್ಟೆಲ್ಲಿನ ಕನಿಷ್ಠ ಸ್ತರ.

ಹಿಟ್ಮನ್  ಎನ್ನುವುದು ಕಾರ್ಟೆಲ್ಲಿನೊಳಗಿನ ಸಶಸ್ತ್ರ ಪಡೆ. ತಮ್ಮ ಒಡೆಯನ ಆಣತಿಯಂತೆ ಕಳ್ಳತನ, ಸುಲಿಗೆ, ಅಪಹರಣ, ಹತ್ಯೆಗಳನ್ನು ಮಾಡುವುದಲ್ಲದೆ ಗುಂಪಿನ ರಕ್ಷಣಾ ಕಾರ್ಯಗಳನ್ನು ನಿಭಾಯಿಸುವುದು, ಮಿಲಿಟರಿ ಹಾಗೂ ವಿರೋಧಿಗಳ ದಾಳಿಯಿಂದ ಕೂಟವನ್ನು ರಕ್ಷಿಸುವುದು ಇವರ ಹೊಣೆ. 

ಲೆಫ್ಟಿನೆಂಟ್  ನೇರವಾಗಿ ಡ್ರಗ್ ಲಾರ್ಡ್ ನ ಸುಪರ್ದಿಗೆ ಬರುತ್ತಾನೆ. ತಮಗೆ ನೀಡಿರುವ ವಲಯದೊಳಗೆ ಬರುವ ಎಲ್ಲಾ ಫಾಲ್ಕನ್ ಹಾಗೂ ಹಿಟ್ಮನ್ ಗಳ ಮೇಲ್ವಿಚಾರಣೆ ಇವರದ್ದು. ತಮ್ಮ ಒಡೆಯನಿಗೆ ಹೇಳದೇ ಕೆಲವು ಕೆಳದರ್ಜೆಯ ಹತ್ಯೆಗಳನ್ನು ನಿರ್ವಹಿಸುವ ಅನುಮತಿ ಇವರಿಗೆ ಇರುತ್ತದೆ.

ಇವರೆಲ್ಲರ ನಂತರದಲ್ಲಿ ಅತ್ಯುನ್ನತ ಸ್ತರದಲ್ಲಿರುವಾತನೇ ಡ್ರಗ್ ಲಾರ್ಡ್. ತನ್ನ ಅಧೀನದಲ್ಲಿರುವ ಸಂಪೂರ್ಣ ಉದ್ಯಮದ ಮೇಲ್ವಿಚಾರಣೆ, ವಲಯವಾರು ನಾಯಕರ ಆಯ್ಕೆ, ಸಭೆಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಹತ್ಯೆಗೆ ಯೋಜನೆ ರೂಪಿಸುವುದೆಲ್ಲಾ ಇವನದೇ ಜವಾಬ್ದಾರಿ. ಅಂತಹುದೇ ಡ್ರಗ್ ಲಾರ್ಡ್ ಈ ಡೆಮೋನ್. (ಈ ನಾಲ್ಕು ಸ್ಥರಗಳ ಜೊತೆಗೆ ಮಾದಕದ್ರವ್ಯ ಉತ್ಪಾದಕರು, ಪೂರೈಕೆದಾರರು, ಹಣಕಾಸು ಒದಗಿಸುವವರು, ಶಸ್ತ್ರಾಸ್ತ್ರ ಪೂರೈಕೆದಾರರು, ಕಪ್ಪು ಹಣದ ಅಕ್ರಮ ವರ್ಗಾವಣೆಗಳೂ ಕೂಡಾ ಇದರ ಭಾಗವೇ)

ಡೆಮೋನ್ ನ ಮೋನ್ಸ್ಟರ್ ವೆಬ್ ಕೂಡಾ ಅಂತಹುದೇ ಡ್ರಗ್ ಕಾರ್ಟೆಲ್. ಗೋಲ್ಡನ್ ಕ್ರೆಸೆಂಟ್ ನ  ಅತ್ಯಂತ ಪ್ರಭಾವಿ ಹಾಗೂ ಅತೀ ಕ್ರೂರ ಕಾರ್ಟೆಲ್. ಕ್ರೆಸೆಂಟಿನ ಮುಕ್ಕಾಲು ಪ್ರತಿಶತ ಮಾರುಕಟ್ಟೆ ಈ ಕೂಟದ ನಿಯಂತ್ರಣದಲ್ಲಿತ್ತು. ಇಂತಹ ಮೋನ್ಸ್ಟರ್ ವೆಬ್ ನ ಏಕೈಕ ಚಕ್ರಾಧಿಪತಿಯೇ ಈ ಡೆಮೋನ್......

ರಾಕಾನಿಗಿಂತಲೂ ದೊಡ್ಡ ರಕ್ಕಸನಾ.........? ಇರಬಹುದೇನೋ. ಡೆಮೋನ್ ಎಂಬುದು ಡ್ರಗ್ ಮಾಫಿಯಾದಲ್ಲಿ ಅವನ ಹೆಸರು. ಅವನ ನಿಜ ನಾಮಧೇಯವೇನೋ ಯಾರಿಗೂ ತಿಳಿದಿಲ್ಲ. ಕೆಲವೇ ಕೆಲವು ಬೆರಳೆಣಿಕೆಯ ಅತ್ಯಾಪ್ತರನ್ನು  ಹೊರತುಪಡಿಸಿದರೆ ಅವನನ್ನು ಕಂಡವರು ಯಾರಿಲ್ಲ. ಮೂಲತಃ ವೆನಿಜು಼ವೆಲಾ ದೇಶದ ಪ್ರಜೆಯಾದ ಡೆಮೋನ್ ಅದು ಹೇಗೆ ಮೋನ್ಸ್ಟರ್ ಕಾರ್ಟೆಲ್ ನ ಲಾರ್ಡ್ ಆದನೋ ಬಲ್ಲವರು ಯಾರಿಲ್ಲ.

ಇಂತಹ ಡೆಮೋನ್ ಎಂಬ ಡ್ರಗ್ ಲಾರ್ಡ್ ನ ಅಧೀನದ ಮೋನ್ಸ್ಟರ್ ವೆಬ್ ನಲ್ಲಿ ಫಾಲ್ಕನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಕಾ....... ಡೆಮೋನ್ ನ ಅತ್ಯಂತ ನಂಬಿಕಸ್ಥ ಲೆಫ್ಟಿನೆಂಟ್ ಬಾದಲ್. ಅವನು ಡೆಮೋನ್ ನ ಬಲಗೈ ಇದ್ದಂತೆ. ಈ ಬಾದಲ್ ಗೆ ರಾಕಾನ ಮೇಲೆ, ಅವನಿಗಿರುವ ಪ್ರಭಾವ ಸಂಪರ್ಕಗಳ ಮೇಲೆ ವಿಪರೀತ ನಂಬಿಕೆ. ಇದರಿಂದಾಗಿ ಮೋನ್ಸ್ಟರ್ ವೆಬ್ ನಲ್ಲಿ ರಾಕಾನಿಗೆ ಒಬ್ಬ ಫಾಲ್ಕನ್ ಗಿಂತಲೂ ಹೆಚ್ಚಿನ ಅಧಿಕಾರ ದಕ್ಕಿಬಿಟ್ಟಿತ್ತು. ಹಾಗೂ ಇದು ಡ್ರಗ್ ಮಾಫಿಯಾದಲ್ಲಿ ಅವನ ಅಸ್ತಿತ್ವವನ್ನೇ ಬದಲಿಸಿತ್ತು. ಅವನಿಗೊಂದು ಬೇರೆಯೇ ವರ್ಚಸ್ಸು ದೊರಕಿತ್ತು ಕೂಡಾ. ಅದಕ್ಕೆ ತಕ್ಕಂತೆ ಅವನ ಜವಾಬ್ದಾರಿಗಳು. ಸಾಮಾನ್ಯವಾಗಿ ಫಾಲ್ಕನ್ಗಳಿಗೆ ಇಂತಿಷ್ಟೇ ಎನ್ನುವ ಕಾರ್ಯಕ್ಷೇತ್ರದ ಮಿತಿಯಿರುತ್ತದೆ. ಅದರೊಳಗೆ ಅವರ ಕೆಲಸ. ಆದರೆ ರಾಕಾನಿಗೆ ಆ ಮಿತಿಯಲ್ಲಿ ವಿನಾಯ್ತಿ ಇತ್ತು. ಆತ ಇಡೀ ಭಾರತ ಮಾತ್ರವಲ್ಲದೇ ಬಾಂಗ್ಲಾದೇಶದಲ್ಲೂ ಮೋನ್ಸ್ಟಾರ್ ವೆಬ್ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ. ಭಾರತದ ಪ್ರತೀ ಮೂಲೆಯಲ್ಲೂ ತನ್ನ ಪ್ರಭಾವ ಹೊಂದಿರುವಾತ ರಾಕಾ. ಅವನಿಗೆ ಕಾನೂನು ರಕ್ಷಕರಿಂದ ಹಿಡಿದು ದೇಶ ಆಳುವವರ ತನಕ ಎಲ್ಲರ ಪರಿಚಯವಿದೆ. ಅವರೆಲ್ಲರೂ ಅವನ ನಿಯಂತ್ರಣದಲ್ಲಿದ್ದಾರೆ. ದೇಶದಾದ್ಯಂತ ತನ್ನ ಹಿಡಿತ ಹೊಂದಿರುವವನಿಗೆ ಎಲ್ಲಾ ಕಡೆಗಳಿಂದ ಪೋಲಿಸ್, ಮಿಲಿಟರಿ ಕಾರ್ಯಾಚರಣೆಗಳ ಮೇಲೆ ಸದಾ ಕಣ್ಣಿಡುವುದು ಕಷ್ಟವೇ........ ‌? ಖಂಡಿತಾ ಇಲ್ಲ ಎನಿಸಿತು ನನಗೆ. ಆದರೆ ನನಗೆ ಅಚ್ಚರಿ ತಂದಿದ್ದು ಬಾಂಗ್ಲಾದೇಶದಲ್ಲೂ ಆತನಿಗಿರುವ ಹಿಡಿತ. ಬಾಂಗ್ಲಾ ದೇಶದ ಮೂಲೆ ಮೂಲೆಗಳಲ್ಲೂ ತನ್ನ ಸಂಪರ್ಕದ ಜನರನ್ನು ಹೊಂದಿದ್ದ ರಾಕಾ. ಎಷ್ಟರ ಮಟ್ಟಿಗೆ ಎಂದರೆ ತನ್ನ ಬಾಂಗ್ಲಾದೇಶಿ ಸಂಪರ್ಕದ ಮೂಲಕ ಗೋಲ್ಡನ್ ಟ್ರಯಾಂಗಲ್ ನ ಕಾರ್ಯಚಟುವಟಿಕೆಗಳ ಮೇಲೂ ಗಮನವಿರಿಸಿದ್ದ ಆತ‌. 

ಗೋಲ್ಡನ್ ಟ್ರಯಾಂಗಲ್ ಡ್ರಗ್ ಮಾಫಿಯಾದಲ್ಲಿ ಹಿಡಿತ ಹೊಂದಿತ್ತಾದರೂ ಅದರ ಬಲ ಗೋಲ್ಡನ್ ಕ್ರೆಸೆಂಟಿನಷ್ಟು ಇರಲಿಲ್ಲ. ಹಾಗಾಗಿ ಅವರು ಸದಾ ಡೆಮೋನ್ ಹಾಗೂ ಮೋನ್ಸ್ಟರ್ ವೆಬ್ ಮೇಲೆ ಕತ್ತಿ ಮಸೆಯುತ್ತಿದ್ದರು. ಅದರಲ್ಲೂ ಸ್ಯಾಮ್ಯುಯೆಲ್ ಎಂಬ ಡ್ರಗ್ ಲಾರ್ಡ್ ಒಡೆತನದ 'ನಟೋರಿಯಸ್ ಬ್ಲಾಕ್' ಅನ್ನುವ ಕಾರ್ಟೆಲ್ ಡೆಮೋನ್ ನ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿತ್ತು. ಈ ನಟೋರಿಯಸ್ ಬ್ಲಾಕ್ ನ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸುತ್ತಿದ್ದುದು ಇದೇ ರಾಕಾನ ಪಡೆ. ಈ ಎಲ್ಲಾ ಕಾರಣಗಳಿಂದಲೇ ಅವನಿಗೆ ಮೋನ್ಸ್ಟರ್ ವೆಬ್ ನಲ್ಲಿ ಸಾಮಾನ್ಯ ಫಾಲ್ಕನ್ಗಿಂತಲೂ ಹೆಚ್ಚಿನ ಸ್ಥಾನ. 

ರಾಕಾ ಫಾಲ್ಕನ್ ಆಗಿ ಭಾರತ, ಬಾಂಗ್ಲಾ ಹಾಗೂ ಗೋಲ್ಡನ್ ಟ್ರಯಾಂಗಲ್ ಸಂಬಂಧಿತ ಮಾಹಿತಿಗಳನ್ನು ರವಾನೆ ಮಾಡುವುದಲ್ಲದೇ ಭಾರತ ಹಾಗೂ ಬಾಂಗ್ಲಾದ ಡ್ರಗ್ಸ್ ದಂಧೆಯನ್ನು ಅನೌಪಚಾರಿಕವಾಗಿ ಬಾದಲ್ ಪರವಾಗಿ ನಿಭಾಯಿಸುತ್ತಿದ್ದ. ಗೋಲ್ಡನ್ ಕ್ರೆಸೆಂಟಿನಲ್ಲಿ ಉತ್ಪಾದನೆಯಾಗುವ ಮಾದಕ ಸರಕುಗಳನ್ನು ಪಾಕಿಸ್ತಾನದ ಮೂಲಕ ಪಂಜಾಬ್ ಗಡಿಯಿಂದ ಅಕ್ರಮವಾಗಿ ಭಾರತದೊಳಕ್ಕೆ ತರಲಾಗುತ್ತಿತ್ತು. ಪಂಜಾಬಿನಲ್ಲಿ ರಾಕಾನ ಒಂದು ಸಶಸ್ತ್ರ ಪಡೆಯೇ ಇತ್ತು. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಸಿಕ್ಕಿಂ, ಮೇಘಾಲಯ, ಮಣಿಪುರದ ಮುಖೇನವೂ ಗೋಲ್ಡನ್ ಟ್ರಯಾಂಗಲ್ ನಿಂದ ಮಾದಕದ್ರವ್ಯಗಳು ದೇಶದೊಳಗೆ ಸರಬರಾಜಾಗುತ್ತಿದ್ದರೂ ಅದರ ಪ್ರಮಾಣ ಕಡಿಮೆ. ಪಂಜಾಬಿನಿಂದಲೇ(ಗೋಲ್ಡನ್ ಕ್ರೆಸೆಂಟ್) ಅತೀ ಹೆಚ್ಚು ಮಾದಕ ದ್ರವ್ಯಗಳು ಭಾರತದ ಸರಹದ್ದನ್ನು ಪ್ರವೇಶಿಸುವುದು. ಹಾಗಾಗಿ ಸುಲಭವಾಗಿ, ಅಧಿಕ ಪ್ರಮಾಣದಲ್ಲಿ ಸಿಗುವ ಡ್ರಗ್ಸ್ ಇಡೀ ಪಂಜಾಬ್ ರಾಜ್ಯವನ್ನೇ ನಶೆಯಲ್ಲಿ ಮುಳುಗಿಸಿ ತೇಲಿಸಿತ್ತು ಎಂದರೆ ತಪ್ಪಿಲ್ಲ. ರಾಕಾನ ಗುಂಪು ಯುವವರ್ಗಕ್ಕೆ ಈ ನಶೆಯ ಹುಚ್ಚನ್ನು ಹತ್ತಿಸಿತ್ತು. ಇವರ ಯೋಜನೆ ಬಹಳ ಸರಳ. ಮೊದಲಿಗೆ ಕಡಿಮೆ ಬೆಲೆಗೆ ಮಾಲು ನೀಡಿ ಅವರನ್ನು ಅದರ ದಾಸರನ್ನಾಗಿಸುವುದು........ ಅವರು ನಶೆಯ ಚಟಕ್ಕೆ ಬಿದ್ದ ನಂತರ ಒಂದೋ ಅವರಿಂದ ಹಣ ಸುಲಿಗೆ ಮಾಡುವುದು, ಇಲ್ಲವೇ ಅವರನ್ನೇ ಪೆಡ್ಲರ್ ಗಳನ್ನಾಗಿಸಿ ದೇಶಾದ್ಯಂತ ಡ್ರಗ್ಸ್ ಸರಬರಾಜು ಮಾಡಲು ಬಳಸಿಕೊಳ್ಳುವುದು. ನಶೆಯ ಬಲೆಗೆ ಬಿದ್ದ ಯುವವರ್ಗವೇ ರಾಕಾನ ಡ್ರಗ್ ಪೆಡ್ಲರ್ ಗಳು. ಇವರ್ಯಾರಿಗೂ ರಾಕಾನ ಬಗ್ಗೆ ಏನೆಂದರೆ ಏನೂ ತಿಳಿದಿರುವುದಿಲ್ಲ. ಅವರಿಗೆ ನಶೆ ಬೇಕಷ್ಟೇ...... ಆ ನಶೆಗಾಗಿ ಯಾವ ಕೆಲಸಕ್ಕಾದರೂ ಸೈ. ಒಂದು ವೇಳೆ ಪೋಲಿಸರ ಕೈಯಲ್ಲಿ ಸಿಕ್ಕಿಬಿದ್ದರೂ ಅವರಿಗೆ ರಾಕಾನ ಕೆಳಹಂತದ ಚೇಲಾಗಳ ಹೊರತು ಬೇರ್ಯಾರ ಬಗ್ಗೆಯೂ ತಿಳಿದಿರುವುದಿಲ್ಲ. ಹೆಚ್ಚಿನ ಸಮಯದಲ್ಲಿ ಹಾಗೆ ಅವರು ಬಾಯ್ಬಿಡುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿರುತ್ತದೆ.........!! ಯಾವುದೇ ಅಡಚಣೆಯಿಲ್ಲದೇ ವ್ಯವಸ್ಥಿತವಾಗಿ ದಂಧೆ ನಿರ್ವಹಿಸುತ್ತಾನೆ ರಾಕಾ. ಆದ್ದರಿಂದಲೇ ಅವನ ಮೇಲೆ ಅಷ್ಟು ನಂಬಿಕೆ ಇಟ್ಟಿರುವುದು ಬಾದಲ್. 

ಪಂಜಾಬಿನಿಂದ ಮೊದಲೇ ಗುರುತಿಸಲ್ಪಟ್ಟ ಅಕ್ರಮ ಹಾದಿಗಳ ಮುಖಾಂತರ ಈ ಡ್ರಗ್ಸ್ ದೇಶಾದ್ಯಂತ ಸರಬರಾಜಾಗುತ್ತಿತ್ತು. ಅದರ ಜೊತೆಗೆ ದಕ್ಷಿಣ ಭಾರತದ ಮದ್ರಾಸ್ ಮೂಲಕ ಸಮುದ್ರ ಮಾರ್ಗವಾಗಿ ಶ್ರೀಲಂಕಾಗೆ ಗೋಲ್ಡನ್ ಕ್ರೆಸೆಂಟಿನ ಡ್ರಗ್ಸ್ ಸಾಗಿಸಲ್ಪಡುತ್ತಿತ್ತು. ಹಾಗೆ ಶ್ರೀಲಂಕಾ ತಲುಪಿದ ಮಾಲನ್ನು ಅಮೇರಿಕಾ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ರವಾನಿಸಲಾಗುತ್ತಿತ್ತು.

ಬಾಂಗ್ಲಾ ದೇಶ ಇವರ ದಂಧೆಯ ಭಾಗವಾದ ಹಿನ್ನೆಲೆಯಲ್ಲೂ ಒಂದು ಕಾರಣವಿದೆ. ಮುಂಚೆ ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದ್ದ ಈ ಅಕ್ರಮ ಸಾಗಾಣಿಕೆಗೆ ತಡೆ ಬಿದ್ದಿದ್ದು ಸರ್ಕಾರದಿಂದ ಮಾದಕ ವಸ್ತುಗಳ ಉತ್ಪಾದನೆ ಹಾಗೂ ಬಳಕೆ ಮೇಲೆ ನಿಯಂತ್ರಣ ಬಿದ್ದಾಗ. ಮಾದಕ ವ್ಯಸನಕ್ಕೆ ಒಳಗಾದವರ ಸಂಖ್ಯೆ ವಿಪರೀತವಾಗತೊಡಗಿದನ್ನು ಕಂಡ ಸರ್ಕಾರ 1985 ಹಾಗೂ 88ರಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಬಳಕೆ ಹಾಗೂ ಮಾರಾಟ ನಿಯಂತ್ರಿಸಲು ಕಾಯಿದೆಗಳೆರಡನ್ನು ಜಾರಿಗೆ ತಂದಿತ್ತು(Narcotic drugs and psychotropic substances act of 1985, prevention of illicit trafficking in narcotic drugs and psychotropic substances act of 1988). ಇದರಿಂದಾಗಿ ಮುಂಚಿನಂತೆ ವ್ಯವಹಾರ ನಡೆಸುವುದು ಕಷ್ಟವಾಗತೊಡಗಿತು. ಅದರಲ್ಲೂ ಮುಖ್ಯವಾಗಿ ಪಂಜಾಬಿನಿಂದ ಮದ್ರಾಸಿಗೆ ಅಧಿಕ ಪ್ರಮಾಣದ ಮಾಲನ್ನು ಕಳಿಸಿ ಶ್ರೀಲಂಕಾಗೆ ರವಾನಿಸುವುದು ಕಷ್ಟವಾಗತೊಡಗಿತು. ಒಂದೆರಡು ಬಾರಿ ಸಣ್ಣಪುಟ್ಟ ಕನ್ಸೈನ್ಮೆಂಟುಗಳು ಪೋಲಿಸರ ವಶವಾದ ನಂತರ ಈ ಸಮಸ್ಯೆಗೊಂದು ಉಪಾಯ ಹುಡುಕುವ ಅನಿವಾರ್ಯತೆ ಸೃಷ್ಟಿಯಾಯಿತು ರಾಕಾನಿಗೆ. ಆಗ ಅವನ ಕಣ್ಣಿಗೆ ಬಿದ್ದಿದ್ದೇ ಬಾಂಗ್ಲಾದೇಶ......

ರಾಕಾ ಇಡೀ ಭಾರತದಾದ್ಯಂತ ತನ್ನ ಹಿಡಿತ ಹೊಂದಿದ್ದರೂ ಪಶ್ಚಿಮ ಬಂಗಾಳದಲ್ಲಿ ಅವನಿಗಿದ್ದ ಹಿಡಿತವೇ ಬೇರೆಯದು. ಬಂಗಾಳದ ಮೂಲೆಮೂಲೆಯ ಪರಿಚಯ, ನೆಲಮಟ್ಟದಿಂದ ಹಿಡಿದು ರಾಜಕೀಯ ವಲಯದ ಗಣ್ಯಾತಿಗಣ್ಯರ ತನಕ ಎಲ್ಲರೂ ಅವನ ಮುಷ್ಟಿಯಲ್ಲಿದ್ದರು. ಹೆಚ್ಚು ಕಡಿಮೆ ಇದೇ ತೆರನಾದ ಪ್ರಭಾವಿ ಸಂಪರ್ಕ ಅವನಿಗೆ ಬಾಂಗ್ಲಾದಲ್ಲೂ ಇತ್ತು.   ಇವನ ಬಳಿ ಇರುವ ಹಣ, ಅಧಿಕಾರಕ್ಕೆ ಬೆದರದವರಾರು?

ಯಾವಾಗ ಮದ್ರಾಸ್ ಮಾರ್ಗವಾಗಿ ಡ್ರಗ್ಸ್ ಸಾಗಾಣಿಕೆ ಕಷ್ಟವೆನಿಸಿತೋ ಅದಕ್ಕೆ ಪರ್ಯಾಯವಾಗಿ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾಕ್ಕೆ ಸಾಗಿಸಿ ಅಲ್ಲಿಂದ ಅಮೇರಿಕಾ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಮಾಲನ್ನು ತಲುಪಿಸುವುದು ಸುಲಭದ ಆಯ್ಕೆ ಎನಿಸಿತು ಅವನಿಗೆ. ಎಷ್ಟಾದರೂ ಬಡರಾಷ್ಟ್ರವದು. ಅಲ್ಲಿನ ಜನ ಕೆಲಸಕ್ಕಾಗಿ ಅಂಡಲೆಯುತ್ತಾರೆ. ಅಂತಹವರನ್ನು ಸುಲಭವಾಗಿ ಅತೀ ಕಡಿಮೆ ದುಡ್ಡಿಗೆ ಪೆಡ್ಲಿಂಗ್ ಕೆಲಸಕ್ಕೆ ಬಳಸಿಕೊಳ್ಳಬಹುದು. ಆರ್ಥಿಕವಾಗಿಯೂ ಬಹಳ ಉತ್ತಮ ಆಯ್ಕೆಯಾಗಿತ್ತದು. ಜೊತೆಗೇ ಬಾಂಗ್ಲಾ ಗೋಲ್ಡನ್ ಟ್ರಯಾಂಗಲ್ ಗೆ ಬಹಳ ಹತ್ತಿರವಿದ್ದ ಕಾರಣ ಅವರ ಚಟುವಟಿಕೆಗಳ ಮೇಲೆ ಕಣ್ಣಿಡುವುದೂ ಸುಲಭವೇ ಅವನಿಗೆ. ಹೀಗೆ ಬಾಂಗ್ಲಾ ದೇಶ ಇವನ ಪಾತಕ ಇರಾದೆಗಳ ಗಮ್ಯವಾಗತೊಡಗಿತು. 

ಈ ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಡ್ರಗ್ಸ್ ಸಾಗಾಣಿಕೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೇರಿತ್ತು‌. ಕಾರಣ ನನಗೆ ಈ ಮೊದಲೇ ಈ ಬಗ್ಗೆ ಅನುಭವವಿತ್ತಲ್ಲ........!!!!

ಅದು ಹೇಗೆ ಎಂದಿರಾ......???

ಅದೇ ನನ್ನ ಕಾಡುತ್ತಿದ್ದ ರಟ್ಟಿನ ಪೆಟ್ಟಿಗೆಗಳು........

ನೆನಪಾಯಿತೇ......?

ಈ ಮುಂಚೆ ನಾನು ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಹೋಗುತ್ತಿದ್ದ ಸರಕು ಸಾಗಾಣಿಕಾ ವಾಹನಗಳಲ್ಲಿನ ರಟ್ಟಿನ ಸೀಲ್ಡ್ ಪೆಟ್ಟಿಗೆಗಳಲ್ಲಿರುತ್ತಿದ್ದ ರಹಸ್ಯ ಇದೇ ಡ್ರಗ್ಸ್.....!! ಅದನ್ನೇ ಲೋಡಿಂಗ್ ಹಾಗೂ ಅನ್ಲೋಡಿಂಗ್ ಮಾಡುತ್ತಿದ್ದದ್ದು ನಾನು. ಅದರೊಳಗೆ ಏನಿತ್ತು ಎಂಬುದು ತಿಳಿಯದಿದ್ದರೂ ಆ ಕೆಲಸ ನನಗೆ ಪರಿಚಿತವಲ್ಲವೇ? ಹಾಗಾಗಿ ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದ ರಾಕಾ......

ಸಶೇಷ

ಟಿಪ್ಪಣಿಗಳು:

ಮಾದಕ ಪದಾರ್ಥಗಳಿಗೆ ಪುರಾತನ ಇತಿಹಾಸವಿದೆ. ಪುರಾಣಗಳಲ್ಲೂ ಇದರ ಉಲ್ಲೇಖವಿರುವ ಬಗ್ಗೆ ನಿಮ್ಮೆಲ್ಲರಿಗೂ ತಿಳಿದಿರುವುದೇ ಅಲ್ಲವೇ? ನಾಗರೀಕತೆಗಳ ಕಾಲದಲ್ಲೂ ಗಾಂಜಾ, ಅಫೀಮುಗಳ ಬಳಕೆಯಿತ್ತು ಎನ್ನುವುದಕ್ಕೂ ಕುರುಹುಗಳಿವೆ. ಹೀಗೆ ಮಾನವನ ಪ್ರತೀ ಬೆಳವಣಿಗೆಗೂ ಸಾಕ್ಷಿಯಾಗಿರುವ ಮಾದಕದ್ರವ್ಯಗಳ ಕಳ್ಳಸಾಗಾಣಿಕೆ ಆರಂಭವಾದದ್ದು 19ನೇ ಶತಮಾನದಲ್ಲಿ ಎನ್ನುತ್ತದೆ ಇತಿಹಾಸ. 

ಮಾದಕವಸ್ತುಗಳ ಅಕ್ರಮ ಸಾಗಾಣಿಕೆ ಹೇಗೆ ಆರಂಭವಾಯಿತು ಎಂದು ಇತಿಹಾಸವನ್ನು ಕೆದಕುತ್ತಾ ಹೋದರೆ ಅದು 18 ಹಾಗೂ 19ನೇ ಶತಮಾನದ ಆರಂಭದ ಚೀನಾ ದೇಶಕ್ಕೆ ಹೋಗಿ ನಿಲ್ಲುತ್ತದೆ. ಚೀನಿಯರು ಆ ಕಾಲದಲ್ಲೇ ಮದಿರೆ ಹಾಗೂ ಅಫೀಮಿನ ನಶೆಯಲ್ಲಿ ದಾಸರಾಗಿದ್ದವರು. ಈ ಅಫೀಮನ್ನು ಗ್ರೇಟ್ ಬ್ರಿಟನ್ ನ ವಸಾಹತು ರಾಷ್ಟ್ರಗಳಿಂದ ಅದರಲ್ಲೂ ಮುಖ್ಯವಾಗಿ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದರಂತೆ. ಈ ಅಫೀಮು ಆಮದಿನಿಂದಾಗಿ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ನಷ್ಟವೇ ಹೆಚ್ಚಾಗಿ ಚೀನಾದ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರತೊಡಗಿತು. ಹಾಗಾಗಿ 1729ರಲ್ಲಿ ಚೀನಾ ಅಫೀಮು ಆಮದು ಹಾಗೂ ಬಳಕೆಯನ್ನೇ ನಿಷೇಧಿಸಿ ಆದೇಶ ಹೊರಡಿಸಿತು. 1799 ಹಾಗೂ 1800ರಲ್ಲಿ ಈ ನಿಷೇಧವನ್ನು ಇನ್ನೂ ಬಲಪಡಿಸಲಾಯಿತು. 

ಚೀನಾದ ಈ ಕ್ರಮದಿಂದಾಗಿ ಅದರ ಅರ್ಥವ್ಯವಸ್ಥೆ ಬಲಗೊಂಡು ವ್ಯಾಪಾರದಲ್ಲಿ ಲಾಭ ವರ್ಧಿಸತೊಡಗಿದರೆ ಅತ್ತ ಈ ಕ್ರಮ ಅಫೀಮು ರಫ್ತಿನಿಂದ ಲಾಭಗಳಿಸುತ್ತಿದ್ದ ಬ್ರಿಟನ್ ದೇಶಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅಫೀಮು ರಫ್ತು ಮಾಡಿ ಹಲವು ಚೀನಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಬ್ರಿಟನ್ ದೇಶದ ಆಮದುಗಳು ಹಾಗೇ ಮುಂದುವರೆದು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. 

ಅಫೀಮು ಆಮದು ಹಾಗೂ ಬಳಕೆ ನಿಷೇಧಿಸಿದ್ದ ಕಾರಣ ತೀರಾ ನಷ್ಟ ಅನುಭವಿಸಿದ ಬ್ರಿಟನ್ ಏರುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ತಂತ್ರವೊಂದನ್ನು ಯೋಚಿಸತೊಡಗಿದಾಗ ಆರಂಭವಾಗಿದ್ದೇ ಈ ಮಾದಕವಸ್ತುಗಳ ಕಳ್ಳಸಾಗಾಣಿಕೆಯ ಪರಿಕಲ್ಪನೆ. ಅದರಂತೆ ಬ್ರಿಟನ್ನಿನ ಅಧೀನದಲ್ಲಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು ಭಾರತದ ಬಂಗಾಳ ಪ್ರಾಂತ್ಯದಲ್ಲಿ(ಈಗಿನ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ) ಅಫೀಮನ್ನು ಬೆಳೆದು ಅದನ್ನು ಬ್ರಿಟೀಷ್ ವರ್ತಕರ ಮೂಲಕ ಅಕ್ರಮವಾಗಿ ಕಳ್ಳಮಾರ್ಗದಲ್ಲಿ ಚೀನಾಕ್ಕೆ ಸಾಗಿಸಿ ಮಾರಲು ಆರಂಭಿಸಿತು. ಅಲ್ಲಿಂದಲೇ ಈ ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಆರಂಭವಾಯಿತು ಎನ್ನಬಹುದು. 

ಬ್ರಿಟನ್ನಿನ ಈ ಕ್ರಮದಿಂದಾಗಿ ಚೀನಾದ ಸಂಪತ್ತು ಬ್ರಿಟನ್ ದೇಶಕ್ಕೆ ಹರಿಯುವುದರೊಂದಿಗೇ ಚೀನಾದ ಜನತೆ ಮಾದಕದ್ರವ್ಯ ವ್ಯಸನದ ದಾಸರಾದರು. ಅಫೀಮು ನಿಷೇಧಿಸಿದ್ದರೂ ಕೂಡಾ ಏರುತ್ತಿರುವ ವ್ಯಸನಿಗಳ ಸಂಖ್ಯೆಯಿಂದ ಕಂಗಾಲಾಗಿ ಅದರ ಹಿನ್ನೆಲೆ ಪರಿಶೀಲನೆಗೆ ತೊಡಗಿದಾಗ ಬ್ರಿಟನ್ನಿನ ಕುತಂತ್ರಗಳು ಹೊರಬಂದವು. ಇದರಿಂದಾಗಿ ಚೀನಾ ಹಾಗೂ ಬ್ರಿಟನ್ ನಡುವೆ ಮೊದಲನೇ ಅಫೀಮು ಯುದ್ಧ(1839-42) ನಡೆಯಿತು. ಹಲವು ವಸಾಹತು ದೇಶಗಳಿಂದಾಗಿ ಬಲಿಷ್ಠ ಸೇನೆ ಹೊಂದಿದ್ದ ಬ್ರಿಟನ್ ಚೀನಾವನ್ನು ಸೋಲಿಸಿತು. ಇದರ ಪರಿಣಾಮ 1842ರಲ್ಲಿ ಚೀನಾ ಅನಿವಾರ್ಯವಾಗಿ ತನಗೆ ಸಂಪೂರ್ಣವಾಗಿ ವಿರುದ್ಧವಿದ್ದ ನ್ಯಾನ್ಕಿಂಗ್ ಒಪ್ಪಂದಕ್ಕೆ (Treaty of Nanking) ಸಹಿ ಹಾಕಬೇಕಾಯಿತು. ಈ ಒಪ್ಪಂದ ಚೀನಾದಲ್ಲಿ ಬ್ರಿಟನ್ನಿನ ಅಫೀಮು ಮಾರಾಟವನ್ನು ಮಾನ್ಯಗೊಳಿಸಿತು. ಅಲ್ಲದೇ ಮಾರಾಟ ಸುಂಕಗಳನ್ನು ಏಕಪಕ್ಷೀಯವಾಗಿ ಬ್ರಿಟನ್ ದೇಶವೇ ನಿರ್ಧರಿಸುವ ಕರಾರಿನಿಂದ ಚೀನಾ ನಷ್ಟ ಅನುಭವಿಸಿತು. ಈ ಎಲ್ಲಾ ಕಾರಣದಿಂದಾಗಿ ಚೀನಾದಲ್ಲಿ ಅರಾಜಕತೆ, ಕ್ರಾಂತಿಗಳು ಉಂಟಾಗಿ ಕೊನೆಗೆ ನ್ಯಾನ್ಕಿಂಗ್ ಒಪ್ಪಂದ ಮುರಿದುಬಿತ್ತು. 

ಇದು ಎರಡನೇ ಅಫೀಮು ಯುದ್ಧ(1956-60)ಕ್ಕೆ ಇಂಬು ಕೊಟ್ಟಿತು. ಈ ಯುದ್ಧದಲ್ಲಿ ಫ್ರೆಂಚರು ಬ್ರಿಟೀಷರೊಡನೆ ಕೈಜೋಡಿಸಿ ಇನ್ನೊಮ್ಮೆ ಚೀನಾವನ್ನು ಸೋಲಿಸಲಾಯಿತು. ಕನ್ವೆನ್ಷನ್ ಆಫ್ ಪೀಕಿಂಗ್/ಬೀಜಿಂಗ್ ನೊಂದಿಗೆ ಟಿಯಾನ್ಜಿನ್ ಒಪ್ಪಂದಕ್ಕೆ ಸಹಿ ಬಿತ್ತು. ಹಣ(ಬೆಳ್ಳಿ ನಾಣ್ಯ) ಸಂದಾಯವಷ್ಟೇ ಅಲ್ಲದೇ ಆ ಮೂಲಕ ಟಿಯಾನ್ಜಿನ್ ಅನ್ನು ವ್ಯಾಪಾರಿ ಬಂದರಾಗಿ ಸರ್ವರಿಗೂ ಮುಕ್ತಗೊಳಿಸಲಾಯಿತು. ಅಲ್ಲದೇ ಚೀನಾದಲ್ಲಿ ಧರ್ಮ ಆಯ್ಕೆಯ ಸ್ವಾತಂತ್ರ್ಯ ನೀಡಲಾಯಿತು.

ಆನಂತರದಲ್ಲಿ ಬ್ರಿಟನ್, ಅಮೇರಿಕಾ, ಐರೋಪ್ಯ ದೇಶಗಳೆಲ್ಲಾ ಮಾದಕದ್ರವ್ಯಗಳಿಂದಾಗುವ ದುಷ್ಪರಿಣಾಮಗಳನ್ನು ಅರಿತು ನಿಧಾನವಾಗಿ ಮಾದಕ ವಸ್ತುಗಳ ಬಳಕೆಯನ್ನು ನಿಷೇಧಿಸತೊಡಗಿದವು. ಆದರೆ ಆ ಹೊತ್ತಿಗಾಗಲೇ ಈ ವ್ಯಸನ ಜನರನ್ನು ಆವರಿಸಿಕೊಂಡಿತ್ತು. ಇದರಿಂದಾಗಿಯೇ ಮಾದಕಸರಕುಗಳ ಕಾನೂನುಬಾಹಿರ ಮಾರಾಟ ಜಾಲ ಮಾಫಿಯಾ ಆಗಿ ಬೆಳೆಯತೊಡಗಿತು.

ಅಮೇರಿಕಾದ ಮೆಕ್ಸಿಕೋ, ಕೊಲಂಬಿಯಾ ಹಾಗೂ ಏಷ್ಯಾದ ಗೋಲ್ಡನ್ ಕ್ರೆಸೆಂಟ್ ಮತ್ತು ಗೋಲ್ಡನ್ ಟ್ರಯಾಂಗಲ್ ಪ್ರಸ್ತುತ ವಿಶ್ವದ ಕುಖ್ಯಾತ ಮಾದಕವಸ್ತು ಅಕ್ರಮ ಮಾರಾಟ ಜಾಲಗಳು.

ಹಿಪ್ಪಿ ಕಲ್ಚರ್: 1960-70ರ ದಶಕದಲ್ಲಿ ಅಮೇರಿಕಾದಲ್ಲಿ ಆರಂಭಗೊಂಡ ಯುವ ಚಳುವಳಿ ಇದು. ಯುವವರ್ಗ ಆಗಿನ ಕಾಲದಲ್ಲಿ ಅಮೇರಿಕಾದ ಮುಖ್ಯವಾಹಿನಿಯಲ್ಲಿ ಅಸ್ತಿತ್ವದಲ್ಲಿದ್ದ ನೀತಿ ನಿಯಮಗಳನ್ನು ವಿರೋಧಿಸಿ ಆರಂಭಿಸಿದ ಈ ಚಳುವಳಿ ವಿಶ್ವದಾದ್ಯಂತ ವ್ಯಾಪಿಸಿತು. ಅದರಲ್ಲೂ ಭಾರತದಲ್ಲಿ ಇದರ ಪ್ರಭಾವ ವಿಪರೀತವಾಗಿತ್ತು. ಶಾಂತಿಯ ಅರಸುವಿಕೆ ಎಂದು ಆರಂಭವಾದ ಈ ಸಂಸ್ಕೃತಿ ಕಾಲಕ್ರಮೇಣ ಮಾದಕಪದಾರ್ಥಗಳ ಹೂರಣವಾಯಿತು. 1970ರ ಕೊನೆಗೆ ವಿಶ್ವದ ಎಲ್ಲೆಡೆ ಈ ಸಂಸ್ಕೃತಿ ಅಂತ್ಯವಾದರೂ ಭಾರತದಲ್ಲಿ ಮಾತ್ರ ಇಂದಿಗೂ ಗೋವಾ, ಗೋಕರ್ಣ ಹಾಗೂ ಇನ್ನೂ ಕೆಲವು ಪ್ರದೇಶಗಳಲ್ಲಿ ಹಿಪ್ಪಿ ಕಲ್ಚರ್ ಜೀವಂತವಾಗಿದೆ. ಹಾಗೆಯೇ ಭಾರತದಲ್ಲಿ ಮಾದಕವ್ಯಸನದ ಬೆಳವಣಿಗೆಯಲ್ಲಿ ಹಿಪ್ಪಿ ಸಂಸ್ಕೃತಿಯ ಪಾತ್ರವನ್ನು ನಿರಾಕರಿಸಲಾಗದು.

ಗೋಲ್ಡನ್ ಕ್ರೆಸೆಂಟ್ ಹಾಗೂ ಗೋಲ್ಡನ್ ಟ್ರಯಾಂಗಲ್

ಪ್ರಪಂಚದ ಅತೀ ದೊಡ್ಡ ಅಫೀಮು ಉತ್ಪಾದನಾ ವಲಯಗಳಿವು. ಈ ಎರಡೂ ಪ್ರದೇಶಗಳಿಗೆ ತಮ್ಮದೇ ಆದ ಕುಖ್ಯಾತ ಇತಿಹಾಸವಿದೆ. ಬಹಳ ಹಿಂದಿನ ಕಾಲದಿಂದಲೂ ಅಫೀಮು ಉತ್ಪನ್ನಗಳ ಕೃಷಿಗೆ ಈ ವಲಯಗಳು ಪ್ರಸಿದ್ಧ. ಸರಿ ಸುಮಾರು 19ನೇ ಶತಮಾನದಿಂದಲೇ ಈ ಪ್ರದೇಶಗಳಲ್ಲಿ ಅಫೀಮು ಬೆಳೆಯಲಾಗುತ್ತಿತ್ತು. 

ಗೋಲ್ಡನ್ ಕ್ರೆಸೆಂಟ್ : 

1950ರ ದಶಕದಿಂದಲೇ ಅಂತಾರಾಷ್ಟ್ರೀಯ ಅಫೀಮು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದ ಗೋಲ್ಡನ್ ಕ್ರೆಸೆಂಟ್ ಆಫ್ರಿಕಾ, ಅಮೇರಿಕಾ, ಮಧ್ಯ ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳ ಮಾದಕ ದ್ರವ್ಯಗಳ ಮಾರುಕಟ್ಟೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ. ಅಫ್ಘಾನಿಸ್ತಾನ್, ಇರಾನ್ ಹಾಗೂ ಪಾಕಿಸ್ತಾನ ದ ಹಲವು ಪ್ರದೇಶಗಳನ್ನು ಒಳಗೊಂಡ ಈ ಪ್ರದೇಶದ ಪರ್ವತಗಳ ಪರಿಧಿಗಳು ಅರ್ಧಚಂದ್ರನಿಗೆ ಹೋಲುತ್ತವೆ. ಹಾಗಾಗಿಯೇ ಅದಕ್ಕೆ ಗೋಲ್ಡನ್ ಕ್ರೆಸೆಂಟ್ ಎಂದು ಹೆಸರು ಬಂದಿದೆ. ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಕೊರಿಯಾಕ್ಕೆ ಅಕ್ರಮ ಮಾದಕದ್ರವ್ಯ ಸಾಗಾಣಿಕೆಯ ಮೂಲವಾಗಿದೆ ಈ ಗೋಲ್ಡನ್ ಕ್ರೆಸೆಂಟ್. ಗೋಲ್ಡನ್ ಕ್ರೆಸೆಂಟಿನ ಹೆಚ್ಚಿನ ಅಫೀಮು ಉತ್ಪನ್ನಗಳು ಅಫ್ಘಾನಿಸ್ತಾನದ ಕಂದಹಾರ್ ಹಾಗೂ ಹೆಲ್ಮಂಡ್ ಪ್ರಾಂತ್ಯದಲ್ಲಿ ಬೆಳೆಯಲ್ಪಡುತ್ತವೆ. ವಿಶ್ವದಲ್ಲೇ ಅತೀ ಹೆಚ್ಚು ಅಫೀಮು ಉತ್ಪಾದಿಸುವ ಪ್ರದೇಶಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನವು ಅಗ್ರಸ್ಥಾನದಲ್ಲಿದೆ(2001ರಿಂದ).

ಗೋಲ್ಡನ್ ಟ್ರಯಾಂಗಲ್

ಬಹಳ ಹಿಂದಿನಿಂದ ಅಸ್ತಿತ್ವದಲ್ಲಿದ್ದರೂ 1980ರ ನಂತರದಲ್ಲಿ ಮಾದಕದ್ರವ್ಯಗಳ ಮಾರುಕಟ್ಟೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ವಲಯ ಇದು. ಥೈಲ್ಯಾಂಡ್, ಲಾವೋಸ್ ಹಾಗೂ ಮಯನ್ಮಾರ್ ಮೂರೂ ದೇಶಗಳ ಗಡಿಗಳು ಸೇರುವ ಪ್ರದೇಶವೇ ಈ ಗೋಲ್ಡನ್ ಟ್ರಯಾಂಗಲ್. 1930ರ ಸಮಯದಲ್ಲಿ ಚೈನೀಸ್ ಕಮ್ಯುನಿಸ್ಟ್ ಪಕ್ಷವು ಚೀನಾದಲ್ಲಿ ಅಫೀಮು ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದಾಗ, ಅಫೀಮು ಉತ್ಪಾದನೆ ಚೀನಾದ ಗಡಿಯ ದಕ್ಷಿಣದಲ್ಲಿರುವ ಈ ವಲಯಕ್ಕೆ ವರ್ಗಾಯಿಸಲ್ಪಟ್ಟಿತು. ಅಂದಿನಿಂದ ಹಂತ ಹಂತವಾಗಿ ಉತ್ಪಾದನೆ ಹೆಚ್ಚಿಸಿಕೊಂಡ ಗೋಲ್ಡನ್ ಟ್ರಯಾಂಗಲ್ 1980ರ ನಂತರದಲ್ಲಿ ತನ್ನ ಜಾಲವನ್ನು ಬಹು ವೇಗವಾಗಿ ವಿಸ್ತರಿಸಿಕೊಂಡಿದೆ. ಈ ಮೂರು ದೇಶಗಳಲ್ಲಿ ಮಯನ್ಮಾರ್ ಅಫೀಮು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ವಿಶ್ವದಲ್ಲೇ ಅತೀ ಹೆಚ್ಚು ಅಫೀಮು ಉತ್ಪಾದಿಸುವ ಪ್ರದೇಶಗಳ ಪಟ್ಟಿಯಲ್ಲಿ  ಮಯನ್ಮಾರ್ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ(2001ಕ್ಕೂ ಮುಂಚೆ ಪ್ರಥಮ ಸ್ಥಾನದಲ್ಲಿತ್ತು). ಮಯನ್ಮಾರ್ ದೇಶದ ಹೆಚ್ಚಿನ ಬುಡಕಟ್ಟು ಜನರು ಅಫೀಮನ್ನು ಬೆಳೆಯುತ್ತಾರೆ. ಮಯನ್ಮಾರಿನಲ್ಲಿ ಬೆಳೆದ ಕಚ್ಚಾ ಅಫೀಮು ಹಾಗೂ ಹೆರಾಯಿನ್ ಅನ್ನು ಸಂಸ್ಕರಿಸಲು ಕುದುರೆ ಹಾಗೂ ಕತ್ತೆಗಳ ಗಾಡಿಯಲ್ಲಿ (ಕಾರವಾನ್) ಥೈಲ್ಯಾಂಡ್ ಗಡಿಗೆ ಕೊಂಡೊಯ್ಯಲಾಗುತ್ತದೆ. ಹಾಗೆ ಸಂಸ್ಕರಿಸಿದ ಸರಕುಗಳಲ್ಲಿ ಸ್ವಲ್ಪ ಉತ್ತರ ಥೈಲ್ಯಾಂಡಿನ ಮಾರುಕಟ್ಟೆಗೆ ಸರಬರಾಜಾದರೆ ಉಳಿದ ದಾಸ್ತಾನು ಸೀದಾ ಬ್ಯಾಂಕಾಕಿಗೆ ರವಾನೆಯಾಗುತ್ತದೆ. ಅಲ್ಲಿಂದ ಅಂತಾರಾಷ್ಟ್ರೀಯ ಡ್ರಗ್ಸ್ ಮಾರುಕಟ್ಟೆಗೆ ಹಂಚಲ್ಪಡುತ್ತದೆ. ಅಮೇರಿಕಾದ ಕ್ಯಾಲಿಫೋರ್ನಿಯಾ ಹಾಗೂ ಹವಾಯಿ ದ್ವೀಪಗಳು ಗೋಲ್ಡನ್ ಟ್ರಯಾಂಗಲ್ ನ ಮುಖ್ಯ ಖರೀದುದಾರರು.

ಡ್ರಗ್ ಕಾರ್ಟೆಲ್: ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ದೊಡ್ಡ ದೊಡ್ಡ ಸಂಸ್ಥೆಗಳು ಸರಕುಗಳು ಉತ್ಪಾದನೆ ಹಾಗೂ ಹಂಚಿಕೆ ಸಂಬಂಧ ಒಪ್ಪಂದವನ್ನು ಮಾಡಿಕೊಂಡಾಗ ಡ್ರಗ್ ಕಾರ್ಟೆಲ್ ಗಳು ಅಸ್ತಿತ್ವಕ್ಕೆ ಬಂದವು. ಒಪ್ಪಂದಗಳು ಮುರಿದು ಬಿದ್ದಾಗ ಕಾರ್ಟೆಲ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. 

ಪ್ರಸ್ತುತ ಅಮೇರಿಕಾದ ಭೂಗತ ಮಾಫಿಯಾದಲ್ಲಿ ಅತೀ ಹೆಚ್ಚು ಸಂಖ್ಯೆಯ ಕಾರ್ಟೆಲ್ಲುಗಳಿವೆ. ಅದನ್ನು ಬಿಟ್ಟರೆ ಗೋಲ್ಡನ್ ಕ್ರೆಸೆಂಟ್ ಹಾಗೂ ಗೋಲ್ಡನ್ ಟ್ರಯಾಂಗಲ್ ನಲ್ಲಿಯೂ ಹಲವು ಕಾರ್ಟೆಲ್ಲುಗಳು ಕಾರ್ಯನಿರ್ವಹಿಸುತ್ತಿವೆ. ದಾವೂದ್ ಇಬ್ರಾಹಿಂ ನ 'ಡಿ ಕಂಪೆನಿ' ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತೀ ದೊಡ್ಡ ಮಾಫಿಯಾ ಕಾರ್ಟೆಲ್ ಎನ್ನುತ್ತವೆ ದಾಖಲೆಗಳು.

ಓದುಗರ ಗಮನಕ್ಕೆ:

ಕಾರ್ಟೆಲ್, ಅವುಗಳ ರಚನೆಯ ಬಗೆಗಿನ ಮಾಹಿತಿ ವಾಸ್ತವಿಕ. ಆದರೆ ಕಾರ್ಟೆಲ್ಲುಗಳಿಗೆ ಹಾಗೂ ಡ್ರಗ್ ಲಾರ್ಡ್ ಗಳಿಗೆ ನೀಡಿರುವ ಹೆಸರುಗಳೆಲ್ಲಾ ನನ್ನ ಊಹೆ ಮಾತ್ರ. ಆ ಹೆಸರಿನ ಯಾವುದೇ ಕಾರ್ಟೆಲ್ ಅಸ್ತಿತ್ವದಲ್ಲಿ ಇಲ್ಲ.

ಮಾದಕ ಪದಾರ್ಥಗಳಿಗೆ ಸಂಬಂಧಿಸಿದ ಮಾಹಿತಿ ನೀಡಿ ಸಹಕರಿಸಿದ್ದಕ್ಕೆ ಅನು ಅವರಿಗೆ ಹಾಗೂ ಹಲವು ಗೊಂದಲಗಳನ್ನು ಪರಿಹರಿಸಿ ನಿರಂತರ ಪ್ರೋತ್ಸಾಹಕ್ಕೆ ಆರಿದ್ರಾ ಅವರಿಗೆ ಅನಂತ ಧನ್ಯವಾದಗಳು.

ಮಾಹಿತಿ ಕೃಪೆ:

https://www.unodc.org>india

https://en.m.wikipedia.org/wiki/Drug_policy_of_India

https://en.m.wikipedia.org/wiki/Golden_Crescent

https://en.m.wikipedia.org/wiki/Golden_Triangle_(Southeast_Asia)

https://www.unodc.org/unodc/en/data-and-analysis/bulletin/bulletin_1957-01-01_1_page003.html

https://en.m.wikipedia.org/wiki/Drug_cartel

https://www.wionews.com/south-asia/drug-trafficking-a-challenge-to-national-security-17448

https://www.thehindubusinessline.com/news/india-a-key-hub-for-illicit-drug-trade-use-of-darknet-cryptos-rampant-un-body/article26440255.ece