ಸೋಮವಾರ, ಜೂನ್ 8, 2020

ವಿಮುಕ್ತೆ

ಪುಸ್ತಕದ ಹೆಸರು : ವಿಮುಕ್ತೆ
ತೆಲುಗು ಮೂಲ : ಓಲ್ಗಾ
ಅನುವಾದ : ಅಜಯ್ ವರ್ಮಾ ಅಲ್ಲೂರಿ
ಪ್ರಕಾಶಕರು : ಪಲ್ಲವ ಪ್ರಕಾಶನ, ಚನ್ನಪಟ್ಟಣ
ಪ್ರಥಮ ಮುದ್ರಣ : 2019
ಪುಟಗಳು : 178
ಬೆಲೆ :150 ರೂ      

ಓಲ್ಗಾ ಎಂದೇ ಖ್ಯಾತರಾದ ಪೋಪೂರಿ ಲಲಿತ ಕುಮಾರಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಕಥಾಸಂಕಲನ 'ವಿಮುಕ್ತ'ದ ಕನ್ನಡಾನುವಾದ ವಿಮುಕ್ತೆ. ಸೀತೆಯ ಜೀವನದ ಏರಿಳಿತಗಳನ್ನೇ ಕೇಂದ್ರವಾಗಿರಿಸಿಕೊಂಡು ರಾಮಾಯಣದ ಕೆಲ ಸ್ತ್ರೀ ಪಾತ್ರಗಳ ಮೂಲಕ ಇಡೀ ಮಹಾಕಾವ್ಯವನ್ನೇ ಹೊಸದೊಂದು ಒಳನೋಟದಲ್ಲಿ ತೆರೆಯುತ್ತಾ ಎಲ್ಲಾ ಅಧಿಕಾರಗಳಿಂದ, ಬಂಧಗಳಿಂದ ಮುಕ್ತಗೊಂಡು ನಮ್ಮನ್ನು ನಾವು ಪಡೆದುಕೊಳ್ಳುವ ಸಂಕೀರ್ಣ ಪ್ರಕ್ರಿಯೆಯನ್ನು ಇಲ್ಲಿನ ಕಥೆಗಳು ಧ್ವನಿಸುತ್ತವೆ. 

ತನ್ನದ್ಯಾವ ತಪ್ಪೂ ಇಲ್ಲದೇ ಘೋರ ನಿಂದನೆ, ಅಪಮಾನಗಳಿಗೆ ಪಾತ್ರಳಾದ ಸೀತೆ ರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿಯ ಆಶ್ರಮದಲ್ಲಿ ಲವ ಕುಶರನ್ನು ಬೆಳೆಸುತ್ತಿದ್ದಾಳೆ. ಸಹಜವಾಗಿಯೇ ತನ್ನ ಭವಿತವ್ಯದ ಬಗ್ಗೆ ಆಕೆ ಚಿಂತಿತಳಾಗಿದ್ದಾಳೆ. ಇಂದಲ್ಲ ನಾಳೆ ಮಕ್ಕಳಿಗೆ ತಾವು ರಘುವಂಶದ ವಾರಸುದಾರರೆಂಬ ಸತ್ಯ ತಿಳಿಯಲೇಬೇಕು. ತಿಳಿದ ನಂತರ ಅವರು ತನ್ನೊಂದಿಗೆ ನಿಲ್ಲುವವರಲ್ಲ. ಆ ನಂತರ ತನ್ನ ಬದುಕೇನು ಎಂಬ ಯೋಚನೆಯಲ್ಲಿರುವ ಸೀತೆಯ ಚಿಂತನೆಗಳಲ್ಲಿ ಅವಳ ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಭೇಟಿಯಾದ ಕೆಲ ಸ್ತ್ರೀಯರು ಮುಖಾಮುಖಿಯಾಗುತ್ತಾರೆ. ಅವರು ಭೇಟಿಯಾದಾಗ ಹೇಳಿದ ಮಾತುಗಳು ಮತ್ತೆ ಮತ್ತೆ ಅವಳಾಂತರ್ಯದಲ್ಲಿ ಅನುರಣಿಸುತ್ತವೆ. ಆಗ ಅರ್ಥವಾಗದ ಪದಗಳ ಹಿಂದಿನ ಭಾವಗಳು, ಮಾತಿನ ಆಳ ವಿಸ್ತಾರಗಳು ಈಗ ಕಾಲನ ಹೊಡೆತಕ್ಕೆ ಮಾಗಿದ ಸೀತೆಯ ಗ್ರಹಿಕೆಗೆ ನಿಲುಕತೊಡಗುತ್ತವೆ. ಆ ಸ್ತ್ರೀಯರ ಮಾತುಗಳೇ ಸೀತೆಗೆ ತನ್ನನ್ನು, ತನ್ನ ಅಸ್ತಿತ್ವವನ್ನು, ತನ್ನ ಅಸ್ಮಿತೆಯನ್ನು ಅನ್ವೇಷಿಸಿಕೊಳ್ಳಲು ಪ್ರೇರಕ ಶಕ್ತಿಯಾಗುತ್ತವೆ. ತನ್ನ ಮೇಲಿನ ಇತರರ ಎಲ್ಲಾ ಅಧಿಕಾರಗಳನ್ನು ವಿಮುಕ್ತಗೊಳಿಸಿಕೊಂಡು ತನ್ನನ್ನು ತಾನು ಗಳಿಸಿಕೊಳ್ಳಲು ದಾರಿದೀಪವಾಗುತ್ತವೆ. ಜನಕ ಪುತ್ರಿ, ಶ್ರೀರಾಮನ ಪಟ್ಟಮಹಿಷಿ, ಲವಕುಶರ ಮಾತೆ ಎಂಬೆಲ್ಲಾ ಗುರುತುಗಳಾಚೆಗೆ ಭೂ ಸಂಜಾತೆ ಸೀತೆಯೆಂಬ ತನ್ನ ಅಸಲೀ ಅಸ್ತಿತ್ವವನ್ನು ಕಂಡುಕೊಳ್ಳುವ ವೈದೇಹಿಯ ಪಯಣವೇ ಈ ವಿಮುಕ್ತೆ. ಈ ಅನ್ವೇಷಣೆಯ ಹಾದಿಯಲ್ಲಿ ಈಗಾಗಲೇ ಬದುಕಿನ ಅರ್ಥವನ್ನು ಕಂಡುಕೊಂಡ ಶೂರ್ಪನಖಿ, ಅಹಲ್ಯೆ, ರೇಣುಕೆ ಹಾಗೂ ಊರ್ಮಿಳೆ ಸೀತೆಯ ಚಿಂತನೆಗಳನ್ನು ಗಟ್ಟಿಗೊಳಿಸಿ ಅವಳಿಗೆ ತನ್ನತನವನ್ನು ಪಡೆದುಕೊಳ್ಳುವ ಹಾದಿಯನ್ನು ತೋರುತ್ತಾರೆ.

'ಮೂಗನ್ನು ಕಳೆದುಕೊಳ್ಳುವುದು ಎಂದರೇನೆಂಬುದು ನನ್ನ ಹೊರತು ಬೇರ್ಯಾರಿಗೂ ಅರ್ಥವಿರುವುದಿಲ್ಲ ಸೀತಾ' ಎನ್ನುತ್ತಲೇ ಪ್ರಕೃತಿಗೆ ರೂಪ, ಕುರೂಪದ ಭೇದಗಳಿಲ್ಲವೆಂದು ಗ್ರಹಿಸಿ ಪ್ರಕೃತಿಯೊಳಗಿನ ಅಣುಅಣುವನ್ನೂ ಶೋಧಿಸಿ ಸೌಂದರ್ಯದ ನಿಜ ಅರ್ಥವನ್ನು ಕಂಡುಕೊಂಡೆ ಎನ್ನುವ ಶೂರ್ಪನಖಿ ಸೀತೆಗೆ ಬದುಕಿನ ಸಾರ್ಥಕತೆಯನ್ನು ತೋರಿಸಿಕೊಡುತ್ತಾಳೆ. 

ವನವಾಸದ ಸಂದರ್ಭದಲ್ಲಿ ಅಹಲ್ಯೆಯನ್ನು ಭೇಟಿಯಾದಾಗ  ಆಕೆ ಕೇಳಿದ್ದ 'ವಿಚಾರಣೆ ಮಾಡುವುದೆಂದರೆ ಏನು ಸೀತಾ? ಅಪನಂಬಿಕೆ ತಾನೆ? ಅದಕ್ಕಿಂತಲೂ ಯಾವುದೋ ಒಂದು ನಂಬಿಕೆಯೇ ಲೇಸಲ್ಲವೇ?" ಎಂಬ ಮಾತಿನ ನಿಜವಾದ ಅರ್ಥ ಶ್ರೀರಾಮಚಂದ್ರ ಶೀಲಪರೀಕ್ಷೆಗೆ ಕೋರಿದ ಸಂದರ್ಭದಲ್ಲಿ ತಿಳಿಯುತ್ತದೆ ಸೀತೆಗೆ. 'ನೀನು ಈ ಇಡೀ ಪ್ರಪಂಚಕ್ಕೆ ಸೇರಿದವಳು, ಒಬ್ಬ ರಾಮನಿಗಷ್ಟೇ ಅಲ್ಲ. ನೀನು ಯಾರೆಂದು ತಿಳಿಯಲು ಪ್ರಯತ್ನಿಸು. ಎಂದೂ ಯಾವ ವಿಚಾರಣೆಗೂ ಒಪ್ಪದಿರು ಸೀತಾ, ಅಧಿಕಾರಕ್ಕೆ ಶರಣಾಗದಿರು' ಎನ್ನುವ ಅಹಲ್ಯೆ ಸೀತೆಯಲ್ಲಿ ಸ್ವಾನ್ವೇಷಣೆಯ ಅಂಕುರ ಬಿತ್ತುತ್ತಾಳೆ.

ಗಂಡಂದಿರ ಕುರಿತು, ಮಕ್ಕಳ ಕುರಿತು ನನಗೆ ಗೊತ್ತಿದ್ದಷ್ಟು ಮತ್ಯಾರಿಗೂ ಗೊತ್ತಿಲ್ಲ ಎಂದು ನಗುನಗುತ್ತಲೇ ಹೇಳುವ ರೇಣುಕೆಯ 'ಮಕ್ಕಳು ತಮ್ಮ ತಂದೆ ಯಾರೆಂದು ಕೇಳುವ ಸಂದರ್ಭ ಅಥವಾ ಗಂಡನೇ ತನ್ನ ಮಕ್ಕಳ ತಂದೆ ಯಾರೆಂದು ಕೇಳುವ ಸಂದರ್ಭ ಕೆಲ ಹೆಂಗಸರ ಬಾಳಿನಲ್ಲಿ ಬಂದೇ ಬರುತ್ತದೆ ಸೀತಾ' ಎಂಬ ಮಾತು ಸೀತೆಯ ಬದುಕಿನಲ್ಲೇ ಸತ್ಯವಾಗುತ್ತದೆ. 'ನಿನಗೆಷ್ಟೋ ಶಕ್ತಿಯಿದೆ ಸೀತಾ. ನಿನ್ನ ಶಕ್ತಿಯೇ ನಿನಗೆ ರಕ್ಷೆ' ಎಂಬ ರೇಣುಕೆಯ ಆಶೀರ್ವಾದ ಭವಿಷ್ಯದಲ್ಲಿ ಸೀತೆಗೆ ಅವಳ ಸ್ವಸಾಮರ್ಥ್ಯದ ಅರಿವನ್ನು ನೀಡಿ ಲವಕುಶರನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ.

'ಎಲ್ಲ ದುಃಖಗಳಿಗೂ ಮೂಲ ಅಧಿಕಾರ. ಈ ಅಧಿಕಾರವನ್ನು ನಾವು ಪಡೆಯಬೇಕು ಬಿಡಬೇಕು.ನಾನು ಯಾರ ಅಧಿಕಾರಕ್ಕೂ ಅಧೀನಳಾಗದೇ, ನನ್ನ ಅಧಿಕಾರದಿಂದ ಯಾರನ್ನೂ ಬಂಧಿಸದೇ ಉಳಿದರೆ ನನ್ನನ್ನು ನಾನು ವಿಮುಕ್ತಳಾಗಿಸಿಕೊಂಡಂತೆ' ಎಂದು ಹದಿನಾಲ್ಕು ವರ್ಷಗಳಲ್ಲಿ ತಾನು ಶೋಧಿಸಿಕೊಂಡ ಸತ್ಯವನ್ನುಸುರುವ ಊರ್ಮಿಳೆ 'ನಿನ್ನ ಮೇಲಿನ ಅಧಿಕಾರವನ್ನು ನೀನೇ ತೆಗೆದುಕೋ, ಇತರರು ಮೇಲಿನ ಅಧಿಕಾರವನ್ನು ಕಳೆದುಕೋ, ಆಗ ನಿನಗೆ ನೀನು ದಕ್ಕುವೆ' ಎನ್ನುವ ಮೂಲಕ ಸೀತೆಗೆ ಅಧಿಕಾರದ ಬಂಧನದಿಂದ ವಿಮುಕ್ತಳಾಗಲು ಮಾರ್ಗದರ್ಶಕಳಾಗುತ್ತಾಳೆ.

ತನ್ನೆಲ್ಲಾ ಸಹೋದರಿಯರ ಸಹಾಯದಿಂದ ಸೀತೆ ಲವಕುಶರನ್ನು ರಾಮನಿಗೊಪ್ಪಿಸಿ ವಿಮುಕ್ತಳಾಗುತ್ತಾಳೆ. ಆದರೆ ರಾಜಧರ್ಮ ಪಾಲನೆ, ರಾಜ್ಯಾಧಿಕಾರದ ನಿರ್ವಹಣೆಯ ಬಂಧನದಲ್ಲಿ ಸಿಲುಕಿದ ರಾಮ ತನ್ನ ಮೇಲಿನ ಅಧಿಕಾರವನ್ನು ಕಳೆದುಕೊಳ್ಳುತ್ತಾನೆ. ಅವನಿಗೆ ಸೀತೆಯ ಮೇಲೆ ಪ್ರೇಮವಿಲ್ಲ ಎಂದಲ್ಲ. ಆದರೆ ಪುರುಷಪ್ರಧಾನ ವ್ಯವಸ್ಥೆಯ ಕರ್ತವ್ಯ ಪಾಲನೆಯ ಸಿಕ್ಕುಗಳು, ಧರ್ಮರಕ್ಷಣೆಯ ಭಾರ ಅವನನ್ನು ಬಿಡಿಸಿಕೊಳ್ಳಲಾರದಂತೆ ಬಂಧಿಸಿವೆ. 'ತಾನು ಸೀತೆಯನ್ನು ತ್ಯಜಿಸಬಲ್ಲ, ಏಕೆಂದರೆ ಸೀತೆ ತನ್ನವಳು. ಆದರೆ ರಾಜ್ಯವನ್ನು ತ್ಯಜಿಸಲಾರ, ಅದು ರಘುವಂಶದ್ದು.' 'ನಾನು ಸೀತೆ ಬೇರೆಬೇರೆಯಲ್ಲ ಲಕ್ಷ್ಮಣಾ. ಅದು ನಿಮಗಾರಿಗೂ ತಿಳಿಯುವುದಿಲ್ಲ' ಎನ್ನುವ ರಾಮನ ಮಾತುಗಳು ರಾಮನ ಪ್ರಕಟಪಡಿಸಲಾಗದ ಭಾವ ತೀವ್ರತೆಗೆ ಸಾಕ್ಷಿಯಂತೆ ತೋರುತ್ತವೆ. ಲವಕುಶರನ್ನು ತನಗೊಪ್ಪಿಸಿ ಒಂದರ್ಥದಲ್ಲಿ ತನಗೂ ವಿಮುಕ್ತಿಯ ಹಾದಿಯನ್ನು ತೆರೆದಿರುವ ಸೀತೆಯೇ ರಾಮನಿಗೆ ನಿಜವಾದ ರಕ್ಷೆ ಎಂಬುದು 'ಶ್ರೀರಾಮ ರಕ್ಷಾ' ಎನ್ನುವ ಲೋಕವಾಸಿಗಳಿಗೆ ಗೊತ್ತಿಲ್ಲ ಎನ್ನುವ ಸಾಲುಗಳು ರಾಮನ ಆಂತರ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಈ ಐದು ಕಥೆಗಳೊಂದಿಗೆ ಇತ್ತೀಚೆಗೆ ವೋಲ್ಗಾ ಅವರು ಮಂಡೋದರಿಯ ಬಗ್ಗೆ ಬರೆದ 'ಅಶೋಕ' ಕಥೆಯೂ ಈ ಸಂಕಲನದಲ್ಲಿ ಸೇರಿದೆ. ರಾವಣನ ಪತ್ನಿ ಮಂಡೋದರಿಯಲ್ಲಿ ಸ್ವತಂತ್ರ ಚಿಂತನೆಯ, ಸ್ತ್ರೀ ಪುರುಷ ಸಮಾನತೆಯನ್ನು ಪ್ರತಿಪಾದಿಸುವ, ಗಟ್ಟಿ ವ್ಯಕ್ತಿತ್ವದ ದ್ರಾವಿಡ ಹೆಣ್ಣೊಬ್ಬಳನ್ನು ಚಿತ್ರಿಸಿದ್ದಾರೆ. 'ನನ್ನನ್ನು ನಾನು ಇಲ್ಲವಾಗಿಸಿಕೊಂಡು ರಾವಣನನ್ನು ಹೇಗೆ ಪ್ರೀತಿಸಬಲ್ಲೆ' ಎಂಬ ಅವಳ ಪ್ರಶ್ನೆ ಸೀತೆಯ ಊಹೆಗೂ ನಿಲುಕದ್ದು. ರಾವಣನ ಎದುರು ನಿಂತು ವಾದಿಸುವ, ಅವನ ತಪ್ಪುಗಳನ್ನು ಪ್ರಶ್ನಿಸುವ ಮಂಡೋದರಿಯ ಮುಖೇನ ಆರ್ಯ ಹಾಗೂ ದ್ರಾವಿಡ ಸಂಸ್ಕೃತಿಗಳಲ್ಲಿ ಸ್ತ್ರೀ ಅಭಿವ್ಯಕ್ತಿಯ ಭಿನ್ನತೆಗಳನ್ನು ಎತ್ತಿ ಹಿಡಿದಿದ್ದಾರೆ ಲೇಖಕಿ.

ಒಟ್ಟಿನಲ್ಲಿ ರಾಮಾಯಣವನ್ನು ಹೆಣ್ಣಿನ ಒಳತೋಟಿಯಿಂದ ಚಿತ್ರಿಸುವ ವಿಮುಕ್ತೆ 'ನಮ್ಮ ಮೇಲೆ ಕೇವಲ ನಮಗೆ ಮಾತ್ರ ಅಧಿಕಾರವಿದೆ. ನಾವು ಕೊಡುವವರೆಗೂ ಬೇರ್ಯಾರೂ ನಮ್ಮ ಮೇಲೆ ಅಧಿಕಾರವನ್ನು ಹೊಂದಲಾರರು. ಆ ಅಧಿಕಾರವನ್ನು ಪಡೆದುಕೊಂಡು ನಾವು ಬಂಧಗಳಿಂದ ಮುಕ್ತರಾಗಬೇಕು ಎಂಬುದನ್ನು ಬಲವಾಗಿ ಧ್ವನಿಸುತ್ತದೆ. ಪುಸ್ತಕದ ಕೊನೆಯಲ್ಲಿರುವ ಓಲ್ಗಾ ಅವರೊಂದಿಗಿನ ಮಾತುಕಥೆ ಅವರ ಚಿಂತನೆಗಳು ಬೆಳೆದು ಬಂದ ಹಾದಿಯನ್ನು, ವಿಮುಕ್ತೆ ಹುಟ್ಟಿಕೊಂಡ ಬಗೆಯನ್ನು ಇನ್ನಷ್ಟು ಸ್ಪಷ್ಟವಾಗಿಸುತ್ತದೆ. ಹಾಗೆಯೇ ಸ್ತ್ರೀವಾದಿ ಸಾಹಿತ್ಯದ ಬಗೆಗಿನ ಸಾಕಷ್ಟು ವಿವರಗಳು ಇಲ್ಲಿವೆ. ಬಿಡಿ ಕಥನಗಳಾದರೂ ಎಲ್ಲಾ ಕಥನಗಳ ಕೇಂದ್ರ ಸೀತೆಯಾದ ಕಾರಣ ಸೀತೆಯ ಭಾವಲಹರಿಯಲ್ಲಿ ರಾಮಾಯಣ ನಿರೂಪಿತವಾದಂತೆ ಭಾಸವಾಗುತ್ತದೆ‌‌.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ