ಪುಸ್ತಕ ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುಸ್ತಕ ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜನವರಿ 1, 2023

ಕಾಲೇಜೆಂಬ ರಂಗಸ್ಥಳ

ಜಗತ್ತೇ ಒಂದು ನಾಟಕರಂಗ - ಷೇಕ್ಸ್ಪಿಯರ್
ಪ್ರಾಧ್ಯಾಪಕನ ಜಗತ್ತೇ ಕಾಲೇಜೆಂಬ ರಂಗಮಂದಿರವಾದ ಕಾರಣ ಷೇಕ್ಸ್ಪಿಯರ್'ನ ಜಗತ್ತೇ ಒಂದು ನಾಟಕರಂಗ ಎಂಬುದನ್ನು ನಾವು 'ಕಾಲೇಜೇ ಒಂದು ನಾಟಕರಂಗ' ಎಂಬುದಾಗಿ ಪರಿಗಣಿಸಿದರೆ ಅದರ ಮುಂದಿನ ಪ್ರಾಸಬದ್ಧ ಸಾಲು 'ನೀನೇ ಅದರೊಳಗೆ ದೊಡ್ಡ ಮಂಗ' ಎಂದಾಗಿರುತ್ತದೆ. (ಇಲ್ಲಿ 'ನೀನೇ' ಎಂಬ ಪದಕ್ಕೆ ನೈತಿಕತೆಯನ್ನು ಇನ್ನೂ ಕೊಂಡುಕೊಳ್ಳದ ಶಿಕ್ಷಕರನ್ನು ಅನ್ವರ್ಥವಾಗಿಸಿಕೊಳ್ಳಬೇಕೆಂದು ಕೋರಿಕೆ)

ಕಾಲೇಜಿನಲ್ಲಿ ತಾವು ಪ್ರಾಂಶುಪಾಲರಾಗಿದ್ದ ಅವಧಿಯ ಸ್ವಾನುಭವಗ(ಗೋ)ಳನ್ನು ಸಂಕಲಿಸಿ ಸ್ವಾಮಿಯವರು ಬರೆದ ಈ ಕೃತಿ ಪ್ರಥಮ ಮುದ್ರಣ ಕಂಡಿದ್ದು 1973ರಲ್ಲಂತೆ. 1973ರ ಅನುಭವಗಳು 2023ಕ್ಕೂ ಅದೆಷ್ಟು ಕರಾರುವಾಕ್ಕಾಗಿ ಹೊಂದಿಕೊಳ್ಳುತ್ತವೆಂದರೆ ಓದುಗನಿಗೆ ಎಲ್ಲೂ ಇದು ಅಂದಿನ ಕಾಲಘಟ್ಟದ ಕಥೆ ವ್ಯಥೆ ಎನಿಸದೇ ಹೋಗುವುದು ಹದೆಗೆಟ್ಟ ಶಿಕ್ಷಣ ವ್ಯವಸ್ಥೆ ಪುನಶ್ಚೇತನವನ್ನು ಕಂಡೇ ಇಲ್ಲ ಎಂಬುದರ ಸ್ಪಷ್ಟ ದ್ಯೋತಕ. ಇನ್ನೂ ಅಂದಿಗಿಂತ ಇಂದು ಪರಿಸ್ಥಿತಿ ಇನ್ನಷ್ಟು ಹೆಚ್ಚು ಹದೆಗೆಟ್ಟಿದೆ ಎಂಬುದು ನಾವು ತಲೆತಗ್ಗಿಸಿ ಒಪ್ಪಿಕೊಳ್ಳಲೇಬೇಕಾದ ಸತ್ಯ. ಸ್ವತಃ ಇದೇ ವ್ಯವಸ್ಥೆಯ ಒಂದು ಭಾಗವಾಗಿರುವ ನನ್ನಂತಹವರ ಪಾಲಿಗೆ ಈ ಕೃತಿ ಶಿಕ್ಷಣ ವ್ಯವಸ್ಥೆ ಉಚ್ಛ್ರಾಯ ಮಟ್ಟದಿಂದ ಅಧೋಗತಿಗೆ ಹೇಗೆ ಹಂತಹಂತವಾಗಿ ಇಳಿದಿರಬಹುದೆಂಬುದರ ಪರಿವಿಡಿ. ವಿದ್ಯಾರ್ಥಿಗಳ ಬದುಕನ್ನು, ದೇಶದ ಭವಿತವ್ಯವನ್ನು ರೂಪಿಸಿಕೊಡಬೇಕಾದ ಪರಮ ಔನ್ನತ್ಯದ ವ್ಯವಸ್ಥೆಯೊಂದು ಜಾತಿ, ವರ್ಗ, ವರ್ಣ, ರಾಜಕೀಯ ಮೊದಲಾದ ವಿಷಸುಳಿಗಳಲ್ಲಿ ಸಿಲುಕಿ ಹೇಗೆ ಅಧಃಪತನಕ್ಕೆ ಜಾರುತ್ತದೆ ಎಂಬುದನ್ನು ತಮ್ಮ ಎಂದಿನ ಲಘುಹಾಸ್ಯದ ಶೈಲಿಯಲ್ಲಿ ಸ್ವಾಮಿ ದಾಟಿಸಿದ್ದಾರೆ. ಬರಹದ ಧಾಟಿ ಹಾಸ್ಯವಾದರೂ ಅದರೊಳಗೆ ಅಂತರ್ಗತವಾಗಿರುವುದು ನೀತಿಗೆಟ್ಟ ವ್ಯವಸ್ಥೆಯ ವಿಂಡಬನೆಯಷ್ಟೇ.

ಬುಧವಾರ, ಅಕ್ಟೋಬರ್ 6, 2021

ಮಿತಿ ಪುಸ್ತಕ ಪರಿಚಯ

ಪುಸ್ತಕದ ಹೆಸರು.       : ಮಿತಿ
ಲೇಖಕರು               : ಧೀರಜ್ ಪೊಯ್ಯೆಕಂಡ
ಪ್ರಕಾಶಕರು             : ದೇವಕಿ ಪ್ರಕಾಶನ, ಬಂಟ್ವಾಳ
ಮೊದಲ ಮುದ್ರಣ     : 2020
ಪುಟಗಳು      :191         ಬೆಲೆ       :180ರೂ

ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೂ ಒಂದು ಪರಿಧಿಯಿರುತ್ತದೆ. ಬದುಕುನುದ್ದಕ್ಕೂ ಅನಿರೀಕ್ಷಿತವಾಗಿ ಒದಗುವ ಹಲವಾರು ಸಂದರ್ಭ ಸನ್ನಿವೇಶಗಳು ನಮ್ಮ ಅನುಭವದ ಪರಿಧಿಯನ್ನು ಹಿಗ್ಗಿಸುತ್ತದೆ. ಅನುಭವದ ಪರಿಧಿ ವಿಸ್ತಾರವಾದಂತೆ ಬದುಕಿನೆಡೆಗೆ ದೃಷ್ಟಿಕೋನವೂ ಬದಲಾಗುತ್ತದೆ. ಈ ಪ್ರಕ್ರಿಯೆ ಪ್ರತಿಯೊಬ್ಬರ ಬದುಕಿನಲ್ಲೂ ನಿರಂತರ. ಈ ಹಾದಿಯಲ್ಲಿನ ಮನೋ ವಿಪ್ಲವಗಳು, ಸಂಬಂಧಗಳ ನಡುವಿನ ಭಾವ ಸಂಘರ್ಷಗಳನ್ನೇ ಜೀವಾಳವಾಗಿಸಿಕೊಂಡಿರುವ ಕಾದಂಬರಿ ಮಿತಿ. ಈ ಕಾದಂಬರಿಯ ಕಥಾವಸ್ತುವೇ ಇದರ ವೈಶಿಷ್ಟ್ಯ. 

ಇಲ್ಲಿ ದೊಡ್ಡ ದೊಡ್ಡ ಆದರ್ಶ ಹೊಂದಿದ ಮಾದರಿ ನಾಯಕ ನಾಯಕಿಯರಿಲ್ಲ. ಕೆಡುಕುಗಳೇ ಮೈವೆತ್ತ ಒಬ್ಬ ಖಳನಾಯಕನಿಲ್ಲ. ನಾಯಕ ನಾಯಕಿಯರ ಉದಾತ್ತತೆಯನ್ನು ತೋರಲು ಸಹಕಾರಿಯಾಗುವ ಪೋಷಕ ಪಾತ್ರಗಳಿಲ್ಲ. ಹಾಗಾದರೆ ಇಲ್ಲಿರುವುದಾದರೂ ಏನು ಎಂದು ಕೇಳಬಹುದು ನೀವು. ಇಲ್ಲಿರುವುದು ನಮ್ಮ ನಿಮ್ಮಂತಹ ಸರ್ವೇ ಸಾಮಾನ್ಯರು. ಅವರೊಳಗೆ ಒಳ್ಳೇತನವಿದೆ. ಅದರ ನಡುವಲ್ಲೇ ಕನಲಿ ಹೊಗೆಯಾಡುವ ಕೆಡುಕಿದೆ. ಇಲ್ಲಿನ ಯಾವೊಂದು ಪಾತ್ರವೂ 'ಪರ್ಫೆಕ್ಟ್' ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿಲ್ಲ. ಆದರೆ ಬದುಕನ್ನು ಹೇಗೆ ನಮ್ಮ ಮಟ್ಟಿಗೆ ಪರಿಪೂರ್ಣವಾಗಿಸಿಕೊಳ್ಳಬಹುದೆಂಬ ಪಾಠವನ್ನು ಇಲ್ಲಿನ ಪಾತ್ರಗಳು ನಮಗೆ ತಿಳಿಸುತ್ತವೆ. ಮನುಷ್ಯ ಸ್ವಭಾವಗಳ ಪ್ರಾಮಾಣಿಕ ಅನಾವರಣದ ಕಾರಣಕ್ಕಾಗಿಯೇ ಈ ಕಾದಂಬರಿ ಬಲು ಆಪ್ತವಾಗುತ್ತದೆ.