ಗುರುವಾರ, ಜೂನ್ 18, 2020

ರೂಪದರ್ಶಿ....

ಪುಸ್ತಕದ ಹೆಸರು       : ರೂಪದರ್ಶಿ

ಲೇಖಕರು               : ಕೆ.ವಿ‌. ಅಯ್ಯರ್

ಪ್ರಕಾಶಕರು             : ಮುರಳಿ ಪ್ರಕಾಶನ,ಬೆಂಗಳೂರು

ಪ್ರಥಮ ಮುದ್ರಣ     : 1950

ಪುಟಗಳು                : VIII+292

ಬೆಲೆ                       :190 ರೂ      


ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳಲ್ಲಿ ಕೆ.ವಿ ಅಯ್ಯರ್ ಕೂಡಾ ಒಬ್ಬರು. ವೃತ್ತಿಯಿಂದ ಒಬ್ಬ ಅತ್ಯುತ್ತಮ ದೇಹದಾರ್ಢ್ಯ ಪಟು, ದೈಹಿಕ ಶಿಕ್ಷಣ ತಜ್ಞರಾಗಿದ್ದ ಅಯ್ಯರ್ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಕಾದಂಬರಿ, ಕಥಾಸಂಕಲನಗಳಷ್ಟೇ ಅಲ್ಲದೇ ಟಿ.ಪಿ ಕೈಲಾಸಂ ಅವರ ಪ್ರಭಾವದಿಂದಾಗಿ ನಾಟಕಗಳಲ್ಲೂ ಆಸಕ್ತಿಬೆಳೆಸಿಕೊಂಡವರು ಅಯ್ಯರ್. 'ಶಾಂತಲಾ', 'ರೂಪದರ್ಶಿ' ಹಾಗೂ  'ಸಮುದ್ಯತಾ' ಕನ್ನಡ ಸಾಹಿತ್ಯದ ಕ್ಲಾಸಿಕ್ ಶ್ರೇಣಿಯ ಕೃತಿಗಳೆಂದರೆ ಅತಿಶಯೋಕ್ತಿಯಲ್ಲ.

'ರೂಪದರ್ಶಿ' ಲೇಖಕರೇ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ 1942ರಲ್ಲಿ 'Reader's Digest' ಎಂಬ ಅಮೇರಿಕನ್ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ 'The face of Judas inscariot' ಎಂಬ ಸಣ್ಣ ಕಥೆಯನ್ನು ಆಧಾರವಾಗಿರಿಸಿಕೊಂಡು ಬೆಳೆಸಿದ ಕಾದಂಬರಿ. ಅದನ್ನು ಓದಿ ಈ ಕಥಾವಸ್ತುವನ್ನು ಎಂಟು ಹತ್ತು ಪುಟಗಳ ಸಣ್ಣ ಕಥೆಯಾಗಿ ಬರೆಯಬಹುದು ಎಂದುಕೊಂಡಿದ್ದರಂತೆ ಅವರು. ಆದರೆ ಬರೆಯಲು ತೊಡಗಿಸಿಕೊಂಡ ನಂತರ ಆ ಮುಕ್ಕಾಲು ಪುಟದ ಕಥೆ ಈ ರೂಪತಾಳಿತು ಎಂದಿದ್ದಾರೆ ಅಯ್ಯರ್. ಹಾಗೆಯೇ 'ನಾನು ಯಾವೊಂದು ಉದ್ದೇಶದಿಂದಲೂ ಈ ಕಥೆಯನ್ನು ಬರೆಯಲಿಲ್ಲ. ಇದು ಏನು ಸಾಧಿಸಬಲ್ಲದೆಂಬುದನ್ನೂ ನಾನು ಅರಿಯೆ.' ಎಂದಿದ್ದಾರೆ. ಆದರೆ ಈ ಕಥೆಯನ್ನು ಓದಿ ಮುಗಿಸಿದ ನಂತರ ನಮ್ಮ ಮನದಲ್ಲಿ ಉಂಟಾಗುವ ತಳಮಳಗಳು, ಮಸ್ತಿಷ್ಕದಲ್ಲಿ ಉದ್ಭವಿಸುವ ಪ್ರಶ್ನೆಗಳಿಂದ ಈ ಕಥೆಯ ಉದ್ದೇಶ ಹಾಗೂ ಅದು ಏನನ್ನು ಸಾಧಿಸಿದೆ ಎಂಬುದು ಓದುಗರಿಗೇ ಸ್ಪಷ್ಟವಾಗುತ್ತದೆ. 

ಅಯ್ಯರ್ ಅವರ ಮೇರುಕೃತಿಗಳಲ್ಲಿ ಒಂದಾದ 'ರೂಪದರ್ಶಿ' ಬದುಕಿನ ವಿವಿಧ ಮುಖಗಳನ್ನು ಹಾಗೂ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಅನ್ವೇಷಿಸುತ್ತಾ ಸಾಗುತ್ತದೆ. ಇಡೀ ಕಥನ ಇಟಲಿಯ ಪರಿಸರದಲ್ಲಿ ನಡೆಯುತ್ತದಾದರೂ ಕಥೆಯೊಳಗಿನ ಪಾತ್ರಗಳು, ಅವುಗಳ ಸಂಘರ್ಷಗಳು ನಮ್ಮದೇ ಎನ್ನಿಸಿಬಿಡುವುದು ಈ ಕೃತಿಯ ವೈಶಿಷ್ಟ್ಯ. ಮುಗ್ಧತೆ, ಪ್ರೀತಿ, ಮಮತೆಯೊಂದಿಗೇ ಕ್ರೌರ್ಯ, ದ್ವೇಷ, ದುರಾಸೆ, ವಂಚನೆ, ಹಣದೊಂದಿಗೆ ಬದಲಾಗುವ ಮನುಜನ ವಿಚಾರಧಾರೆ…. ಹೀಗೆ ಹತ್ತು ಹಲವು ಭಾವಗಳ ಹೂರಣ ಇಲ್ಲಿದೆ.

ಇಟಲಿಯ ಫ್ಲಾರೆನ್ಸ್ ನಗರದಲ್ಲೊಂದು ಭವ್ಯವಾದ ಮನಮೋಹಕ ಕ್ರಿಸ್ತದೇವಾಲಯ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣವಾದ ನಂತರ ಅಲ್ಲಿನ ಧರ್ಮದರ್ಶಿಗಳು ಸಭೆ ಸೇರಿ ಆ ಭವ್ಯ ದೇವಾಲಯದಲ್ಲಿ ಏಸುಕ್ರಿಸ್ತನ ಸಂಪೂರ್ಣ ಜೀವನಚರಿತ್ರೆಯನ್ನು ಸೊಗಸಾಗಿ ಚಿತ್ರಿಸಬೇಕೆಂದು ನಿರ್ಧರಿಸಿ ತಮ್ಮದೇ ಊರಿನ ಜಗದ್ವಿಖ್ಯಾತ ಚಿತ್ರಕಾರ ಮೈಕೆಲ್ ಆಂಜೆಲೋನನ್ನು ಈ ಕಾರ್ಯಕ್ಕಾಗಿ ಆರಿಸುತ್ತಾರೆ. ಪರಮ ದೈವ ಭಕ್ತನಾದ ಮೈಕೆಲ್ ಬಲು ಸಂತೋಷದಿಂದ ಈ ಕಾರ್ಯವನ್ನು ಒಪ್ಪಿಕೊಂಡು ಒಂದಿಷ್ಟು ಒಪ್ಪಂದಗಳ ಆಧಾರದಲ್ಲಿ ತನ್ನ ಕೆಲಸವನ್ನು ಆರಂಭಿಸುತ್ತಾನೆ. ಕ್ರಿಸ್ತನ ಆದಿಪರ್ವಕ್ಕೆ ಸಂಬಂಧಿತ ಮೂರು ಚಿತ್ರಗಳನ್ನು ಅತ್ಯಂತ ಸುಂದರವಾಗಿ ಬರೆದ ನಂತರ ಈಗ ಅವನಿಗೆ ಬಾಲ ಏಸುವನ್ನು ಚಿತ್ರಿಸಬೇಕಿರುತ್ತದೆ. ಏನೇ ಮಾಡಿದರೂ ಅವನ ಮನದಲ್ಲಿ ಮೂಡಿದ ಚಿತ್ರವನ್ನು ಕುಂಚದಲ್ಲಿ ಮೂಡಿಸುವಲ್ಲಿ ಸೋಲುತ್ತಾನೆ ಮೈಕೆಲ್. ಇಂತಹ ಸನ್ನಿವೇಶದಲ್ಲಿ ತನ್ನ ಮನದ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯನ್ನು ಹುಡುಕಿ ಹೊರಡುತ್ತಾನೆ. ಊರೂರು ಅಲೆದ ನಂತರ ಕೊನೆಗೆ ಪೀಸಾ ನಗರದಲ್ಲಿಯ ತನ್ನ ಸ್ನೇಹಿತ ಬೆನೆಟ್ಟೋನನ್ನು ಭೇಟಿಯಾಗಲು ಹೋದಾಗ ಅಲ್ಲಿಯ ಭಿಕಾರಿ ಮಕ್ಕಳ ನಡುವಿವಲ್ಲಿ ಒಬ್ಬ ಬಾಲಕ ಮೈಕೆಲ್ ಕಣ್ಣಿಗೆ ಬೀಳುತ್ತಾನೆ. ಅತೀ ಸೌಮ್ಯ ಮುಖಮುದ್ರೆಯ ಆ ಬಾಲಕನಲ್ಲಿ ಬಾಲಕ್ರಿಸ್ತನಲ್ಲಿ ಇದ್ದಿರಬಹುದಾದ ವರ್ಚಸ್ಸು ಕಾಣುತ್ತದೆ. ಜೊತೆಗೆ ಸ್ವಲ್ಪ ಹೊತ್ತಿನಲ್ಲೇ ಆ ಬಾಲಕನ ಹೃದಯವಂತಿಕೆಯ ಅರಿವೂ ಆಗುತ್ತದೆ. ತನ್ನ ಮನದಲ್ಲಿ ರೂಪುಗೊಂಡಿದ್ದ ಬಾಲಕ್ರಿಸ್ತನೇ ಜೀವಂತವಾಗಿ ತನ್ನೆದುರು ನಿಂತಂತೆ ಎನ್ನಿಸಿ ಮೈಕೆಲ್ ಅವನನ್ನೇ ತನ್ನ ರೂಪದರ್ಶಿಯನ್ನಾಗಿ ಆರಿಸಿಕೊಳ್ಳುತ್ತಾನೆ. ತಂದೆ ತಾಯಿಯಿಲ್ಲದೇ ಅಜ್ಜಿಯ ಆಶ್ರಯದಲ್ಲಿ ಬೆಳೆದ ಆ ಬಾಲಕನೇ ಅರ್ನೆಸ್ಟೋ. ಮೈಕೆಲ್ ಬೆನೆಟ್ಟೋನೊಂದಿಗೆ ಅರ್ನೆಸ್ಟೋನ ಅಜ್ಜಿಯನ್ನು ಭೇಟಿಯಾಗಿ ಅವಳನ್ನು ಒಪ್ಪಿಸಿ ಅವರಿಬ್ಬರನ್ನೂ ಕರೆದುಕೊಂಡು ಫ್ಲಾರೆನ್ಸ್ ನಗರಕ್ಕೆ ವಾಪಾಸಾಗುತ್ತಾನೆ. ಅರ್ನೆಸ್ಟೋನನ್ನು ರೂಪದರ್ಶಿಯಾಗಿಸಿ ಬಾಲಕ್ರಿಸ್ತನ ಐದು ಚಿತ್ರಗಳನ್ನು ಬರೆದು ಪೂರ್ಣವಾಗಿಸುತ್ತಾನೆ. ಬಲು ಸುಂದರವಾಗಿ ಮೂಡಿದ್ದ ಚಿತ್ರಗಳನ್ನು ಕಂಡು ಪ್ರಸನ್ನರಾದ ಧರ್ಮದರ್ಶಿ ಸಂಘದವರು ರೂಪದರ್ಶಿಯಾದ ಅರ್ನೆಸ್ಟೋಗೆ ಬಟ್ಟೆಬರೆ, ಸಾಕಷ್ಟು ಹಣವನ್ನು ಕೊಟ್ಟು ಗೌರವಿಸುತ್ತಾರೆ. ಅರ್ನೆಸ್ಟೋ ಮತ್ತು ಅವನ ಅಜ್ಜಿ ಪೀಸಾ ನಗರಕ್ಕೆ ಹಿಂದಿರುಗುತ್ತಾರೆ. ಅದರೊಂದಿಗೆ ಅವರ ಬಡತನದ ಬದುಕೂ ಬದಲಾಗಿ ಸುಭೀಕ್ಷವಾದ ಜೀವನ ಅವರದಾಗುತ್ತದೆ. ಆದರೆ ಈ ಬದಲಾವಣೆಯಿಂದಾಗಿ ವೃದ್ಧೆಯ ಮನಸ್ಥಿತಿ ಬದಲಾಗುತ್ತದೆ. ಮುಂಚೆ ಬಡತನದಲ್ಲೂ ನೆಮ್ಮದಿಯಿಂದ ಬದುಕಿದಾಕೆಯ ಮನಸ್ಸು ಇಲ್ಲಸಲ್ಲದ ಯೋಚನೆಗಳ ಗೂಡಾಗುತ್ತದೆ. ತುದಿಮೊದಲಿಲ್ಲದ ಆಸೆಗಳ ಗೂಡಾಗುತ್ತದೆ ಆಕೆಯ ಮೆದುಳು. 

ಇತ್ತ ಮೈಕೆಲ್ ಏಸುವಿನ ಜೀವನಸಂಬಂಧಿ ಉಳಿದ ಚಿತ್ರಗಳನ್ನು ರಚಿಸುವಲ್ಲಿ ನಿರತನಾಗುತ್ತಾನೆ. ಹಲವು ಚಿತ್ರಗಳನ್ನು ರಚಿಸಿ ಕ್ರಿಸ್ತನ ಅಂತಿಮ ದಿನಗಳ ಚಿತ್ರರಚನೆಗೆ ಕೈ ಹಾಕುತ್ತಾನೆ. ಇಲ್ಲಿ ಅವನು ಯೇಸುವಿನ ಆಪ್ತಶಿಷ್ಯರಲ್ಲಿ ಒಬ್ಬನಾಗಿದ್ದುಕೊಂಡು ವಿಶ್ವಾಸಘಾತ ಮಾಡಿ ಶತ್ರುಗಳಿಗೆ ಏಸುವನ್ನು ತೋರಿದ 'ಜುದಾಸ'ನ ಚಿತ್ರವನ್ನು ಬರೆಯಬೇಕಾಗಿ ಬರುತ್ತದೆ. ಗುರು ದ್ರೋಹಿ, ಕಪಟಿಯಾದ ಜುದಾಸ ಅದೆಷ್ಟು ಕ್ರೂರವಾಗಿದ್ದಿರಬಹುದು ಎಂಬುದನ್ನು ಊಹಿಸಿ ಚಿತ್ರಿಸುವಲ್ಲಿ ಸೋಲುತ್ತಾನೆ ಮೈಕೆಲ್. ಎಷ್ಟೇ ಪ್ರಯತ್ನಿಸಿದರೂ ಪೈಶಾಚಿಕ ಭಾವದ ಜುದಾಸನ ರೂಪವನ್ನು ಚಿತ್ರಿಸಲಾಗದೇ ಅವನ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯ ಹುಡುಕಾಟಕ್ಕೆ ತೊಡಗುತ್ತಾನೆ. ಆದರೆ ಈ ನಡುವೆ ತನ್ನ ಪರಮಾಪ್ತ ಸ್ನೇಹಿತ ಬೆನೆಟ್ಟೋ ಮರಣದ ವಾರ್ತೆ ತಿಳಿದು ರೋಂ ನಗರಕ್ಕೆ ಧಾವಿಸುತ್ತಾನೆ ಮೈಕೆಲ್. ಬೆನೆಟ್ಟೋನ ಹಿಂದೆಯೇ ಅವನ ಹೆಂಡತಿಯೂ ಇಹಲೋಕ ತ್ಯಜಿಸಿ ಅವರ ಇಬ್ಬರು ಮಕ್ಕಳು ಅನಾಥರಾಗುತ್ತಾರೆ. ಆ ಮಕ್ಕಳ ಭವಿಷ್ಯದ ಬಗ್ಗೆ ಸಕಲ ವ್ಯವಸ್ಥೆ ಮಾಡಲು ವ್ಯಾಟಿಕನ್ ನಗರಕ್ಕೆ ಬಂದೆ ಪೋಪರನ್ನು ಭೇಟಿಯಾಗುತ್ತಾನೆ ಮೈಕೆಲ್. ಅವರ ಬಳಿ ಮಾತನಾಡಿ ಆ ಇಬ್ಬರು ಮಕ್ಕಳ ಜೀವನಕ್ಕೊಂದು ವ್ಯವಸ್ಥೆ ಮಾಡಿ ಇನ್ನೇನು ಫ್ಲಾರೆನ್ಸ್ ಗೆ ಹಿಂದಿರುಗಬೇಕೆನ್ನುವಾಗ ಪೋಪರು ಅವನಿಗೆ ಅಮೃತಶಿಲೆಯ ಸಮಾಧಿ ಹಾಗೂ ಇನ್ನೂ ಬಹಳಷ್ಟು ಚಿತ್ರ, ವಿಗ್ರಹಗಳನ್ನು ರಚಿಸಲು ಹೇಳುತ್ತಾರೆ. ಹಾಗಾಗಿ ಮುಂದಿನ ಹಲವು ವರ್ಷಗಳು ಅದೇ ಕೆಲಸದಲ್ಲಿ ವ್ಯಸ್ತನಾಗುತ್ತಾನೆ ಮೈಕೆಲ್. ಈ ಸಮಯದಲ್ಲಿ ಬೆನೆಟ್ಟೋವಿನ ಮಗ ವಿದ್ಯಾಭ್ಯಾಸ ಮುಗಿಸಿ ವ್ಯಾಟಿಕನ್ನಿನಲ್ಲಿ ಕೆಲಸ ಹಿಡಿದರೆ, ಮಗಳು ಲೀಸಾ ಮದುವೆಯಾಗಿ ತನ್ನ ಗಂಡ ಟಾಯೆಟ್ ನೊಂದಿಗೆ ಕರಾರಾ ನಗರಕ್ಕೆ ಹೊರಟುಹೋಗಿರುತ್ತಾಳೆ. 

ಕೊನೆಗೂ ಮೈಕೆಲ್ ವ್ಯಾಟಿಕನ್ನಿನಲ್ಲಿ ಕೈಗೆತ್ತಿಕೊಂಡ ಕೆಲಸ ಮುಗಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಫ್ಲಾರೆನ್ಸಿನ ಧರ್ಮದರ್ಶಿಗಳು ಇಲ್ಲಿನ ಕೆಲಸ ಸಂಪೂರ್ಣ ಗೊಳಿಸುವಂತೆ ಅವನನ್ನು ಕೇಳಿಕೊಳ್ಳುತ್ತಾರೆ. ವಯಸ್ಸಾಗಿ, ಕಣ್ಣಿನ ದೃಷ್ಟಿ ಮಂದವಾಗಿದ್ದ ಮೈಕೆಲ್ ಸಾವಿರ ಕಾರಣಗಳನ್ನು ಹೇಳಿದರೂ ಕೇಳದೇ ಅವನನ್ನು ಒಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇನ್ನೊಮ್ಮೆ ಮೈಕೆಲ್ ನಿಂದ 'ಜುದಾಸ'ನಿಗಾಗಿ ರೂಪದರ್ಶಿಯ ಹುಡುಕಾಟ ಆರಂಭವಾಗುತ್ತದೆ. ಹೀಗೇ ಹುಡುಕುತ್ತಿರುವಾಗ ಎಂಪೊಲಿ ಎಂಬ ಸಣ್ಣ ಗ್ರಾಮದಲ್ಲಿ ಅತ್ಯಂತ ವಿಕಾರ ರೂಪದ, ಕಡುಕ್ರೂರ ಕಪಟ ಮನಸ್ಥಿತಿಯ ಗ್ಯಾರಿಬಾಲ್ಡಿ ಎಂಬ ವ್ಯಕ್ತಿ ಎದುರಾಗುತ್ತಾನೆ. ಜುದಾಸನ ಚಿತ್ರಕ್ಕೆ ಇವನೇ ಸರಿಯಾದ ರೂಪದರ್ಶಿಯೆಂದು ನಿರ್ಧರಿಸಿ ಬಹಳಷ್ಟು ಪ್ರಯತ್ನ ಹಾಗೂ ಆಮಿಷದ ನಂತರ ಅವನನ್ನು ಒಪ್ಪಿಸಿ ಫ್ಲಾರೆನ್ಸ್ ಕರೆತರುವಲ್ಲಿ ಯಶಸ್ವಿಯಾಗುತ್ತಾನೆ ಮೈಕೆಲ್. 

ಯಾವಾಗ ಗ್ಯಾರಿಬಾಲ್ಡಿ ಫ್ಲಾರೆನ್ಸ್ ನಗರದ ಆ ಕ್ರಿಸ್ತಾಲಯದೊಳಗೆ ಕಾಲಿಟ್ಟು ಅಲ್ಲಿನ ಬಾಲಕ್ರಿಸ್ತನ ಚಿತ್ರಗಳನ್ನು ಕಾಣುತ್ತಾನೋ ಆಗ ಅವನ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಅವನ ಅಸಂಬದ್ಧ ಮಾತುಗಳನ್ನು ಕೇಳಿ ಮೈಕೆಲ್ ಅಚ್ಚರಿಗೊಳ್ಳುತ್ತಾನೆ. ಆದರೆ ಮೈಕೆಲ್ ನಿಗೆ ಆಘಾತವಾಗುವಂತಹ ಸತ್ಯ ಗ್ಯಾರಿಬಾಲ್ಡಿಯ ಬಾಯಿಂದ ಹೊರಬರುತ್ತದೆ. ಅಂದಿನ ಅರ್ನೆಸ್ಟೋವೇ ಇಂದಿನ ಗ್ಯಾರಿಬಾಲ್ಡಿಯಾಗಿರುತ್ತಾನೆ. ಬಾಲಕ್ರಿಸ್ತನ ಅಭೂತಪೂರ್ವ ವರ್ಚಸ್ಸುಳ್ಳ ದಯಾಗುಣದ ಸುಂದರ ಮೂರ್ತಿಯಾಗಿದ್ದ ಅರ್ನೆಸ್ಟೋ ಜುದಾಸನ ಅಪರಾವತಾರದಂತಹ ಕಟುಕ ಗ್ಯಾರಿಬಾಲ್ಡಿಯಾಗಿ ಬದಲಾದುದ್ದಾದರೂ ಏಕೆ ಎಂಬುದನ್ನು ಓದಿಯೇ ತಿಳಿಯಬೇಕು. ವ್ಯಕ್ತಿಯ ಆತ್ಮದ ಮುಗ್ಧತೆಯ ಕೊಲೆಯಾಗಿ ಆತ್ಮವೇ ಇರದ ದೇಹದೊಳಗೆ ದಾನವತ್ವ ಬೆಳೆಯಲು ಸಮಾಜ ಹೇಗೆ ಕಾರಣೀಭೂತವಾಗುತ್ತದೆ ಎಂಬುದನ್ನು ಅರ್ನೆಸ್ಟೋ ಗ್ಯಾರಿಬಾಲ್ಡಿಯಾದ ಪ್ರಕ್ರಿಯೆಯು ವಿವರಿಸುತ್ತದೆ. ಅವನು ಅನುಭವಿಸಿದ ಯಾತನೆಗಳು ಮನಕಲುಕುತ್ತವೆ.

ಇಡೀ ಕಾದಂಬರಿಯಲ್ಲಿ ಮೈಕೆಲ್ ಹಾಗೂ ಅರ್ನೆಸ್ಟೋ/ಗ್ಯಾರಿಬಾಲ್ಡಿ ಪಾತ್ರಗಳನ್ನೇ ಕೇಂದ್ರವಾಗಿಸಿಕೊಂಡರೂ ಮನುಷ್ಯನ ಹಲವು ಮುಖಗಳನ್ನು ಅನಾವರಣಗೊಳಿಸುವ ಪಾತ್ರಗಳು ಕಥೆಯುದ್ದಕ್ಕೂ ಇವೆ. ದುಶ್ಚಟಗಳ ದಾಸನಾದ ಗಂಡನ ದೌರ್ಜನ್ಯಕ್ಕೆ ಸಿಲುಕಿ ನಲುಗಿದರೂ ಅವನನ್ನು ಬದಲಾಯಿಸಲು ಹೆಣಗುವ ಪರಿಶುದ್ಧ ಮನದ ಲೀನಾ, ಮಮತೆಯೇ ಮೈವೆತ್ತ ಲಿಸ್ಸಾತಾಯಿ ಮತ್ತು ನನ್ನೆಟ್ಟಿ, ಬಡತನದಲ್ಲೂ ನೆಮ್ಮದಿಯಿಂದಿದ್ದು ಸಿರಿವಂತಿಕೆ ಬಂದೊಡನೆ ಲೋಭಿಯಾಗತೊಡಗಿದ ಅರ್ನೆಸ್ಟೋನ ಅಜ್ಜಿ,  ವಿಷಯಲಂಪಟ ಟಾಯಿಟ್, ಹೃದಯಹೀನ ಧೂರ್ತ ಜಿಯೋವನಿ ಹೀಗೇ ಹಲವು ಪಾತ್ರಗಳ ಮೂಲಕ ಮನುಷ್ಯನ ಮನದ ಹಲವು ಭಾವಗಳನ್ನು ಕಟ್ಟಿಕೊಟ್ಟಿದ್ದಾರೆ ಲೇಖಕರು. 

'ಪ್ರಪಂಚದ ಬಹುಪಾಲು ಜನರೆಲ್ಲರೂ ಜುದಾಸನಂತಹವರೇ. ವ್ಯತ್ಯಾಸವೆಂದರೆ ಇವರು ಒಳಗೆ ಜುದಾಸರಾಗಿದ್ದರೂ ಹೊರಗೆ ಅದನ್ನು ತೋರ್ಪಡಿಸದೇ ಕುರಿಯ ಚರ್ಮವನ್ನು ಹೊದ್ದ ತೋಳಗಳಂತೆ ಇರುತ್ತಾರೆ' ಎಂಬ ಸಾಲು ಈ ಜಗತ್ತಿನ ವಿಲಕ್ಷಣ ವಾಸ್ತವವನ್ನು ಎತ್ತಿ ಹಿಡಿಯುತ್ತದೆ. 'ನಾಲ್ಕು ಜನರ ಮುಂದೆ ಧೈರ್ಯವಾಗಿ ಮಾಡಲಾಗದ ಕೆಲಸವನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟುಕೊಂಡು ಮಾಡಬಾರದು. ಇದು ಆತ್ಮವಂಚನೆ' ಎಂಬ ಸಾಲುಗಳಲ್ಲಿ ಆತ್ಮಾವಲೋಕನದ ಹಾದಿಯಿದೆ. ಈ ರೀತಿಯ ಹಲವು ಸನ್ನಿವೇಶಗಳು, ಸಾಲುಗಳು ಇಲ್ಲಿವೆ. ಕಾದಂಬರಿಯ ಕೊನೆಯಲ್ಲಿ ಮೈಕೆಲ್ ನಿಗೆ "ಹಣದ ಆಸೆ ತೋರಿಸಿ ನೀನು ನಮ್ಮನ್ನು ಹೆಣವಾಗಿಸಿದೆ" ಎನ್ನುವ ಅರ್ನೆಸ್ಟೋನ ಮಾತು ಓದುಗರಿಗೂ ನಿಜವೆನಿಸಿಬಿಡುತ್ತದೆ. ಒಂದೇ ಜೀವಿತಾವಧಿಯಲ್ಲಿ ಬಾಲಕ್ರಿಸ್ತ ಹಾಗೂ ಜುದಾಸ ಎಂಬ ಎರಡು ತದ್ವಿರುದ್ದ ಭಾವಗಳಿಗೆ ರೂಪದರ್ಶಿಯಾಗಿ ಅರ್ನೆಸ್ಟೋ/ ಗ್ಯಾರಿಬಾಲ್ಡಿಯ ಸಾವಿನೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಆದರೆ ಮನದೊಳಗೆ ಹುಟ್ಟಿಕೊಳ್ಳುವ ಸಾವಿರಾರು ಪ್ರಶ್ನೆಗಳಲ್ಲಿ, ಚಿಂತನೆಗಳಲ್ಲಿ ಅರ್ನೆಸ್ಟೋ ಜೀವತಳೆದಂತೆ ಭಾಸವಾಗುತ್ತದೆ.

ಒಟ್ಟಿನಲ್ಲಿ ಒಮ್ಮೆ ಓದಲೇಬೇಕಾದ ವಿಭಿನ್ನ ಕಥಾಹಂದರದ ವಿಶಿಷ್ಟ ಕೃತಿಯಿದು. ಒಮ್ಮೆ ಓದಿದರೆ ಅದೇ ಮತ್ತೆ ಮತ್ತೆ ಓದಿಸಿಕೊಳ್ಳುವುದು ಸುಳ್ಳಲ್ಲ.

2 ಕಾಮೆಂಟ್‌ಗಳು:

  1. ಚಂದದ ವಿಮರ್ಶೆ ನೀತಾ,ನಿಮ್ಮ ಕಥೆಗಳಂತೆ ಈ ಕೆಲವು ವಿಮರ್ಶೆ ಗಳೆ ನನಗೆ ಇಷ್ಟಾ ನಿಮ್ಮಲ್ಲಿ.
    ರೂಪದರ್ಶಿ ಯಂತೆಯೇ ಅವರ ಸಮುದ್ಯತ ಕೂಡ ಚಂದ ಇದೆ

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಶ್ರುತಿ.ಅಯ್ಯರ್ ಅವರ ಬರಹಗಳೆಲ್ಲವೂ ಕ್ಲಾಸಿಕ್ ಶ್ರೇಣಿಯವೇ.

    ಪ್ರತ್ಯುತ್ತರಅಳಿಸಿ