ಭಾನುವಾರ, ಡಿಸೆಂಬರ್ 24, 2023

The Railway Men - ಸಾಮಾನ್ಯರ ಅಸಾಮಾನ್ಯ ಕಥೆ

One of the best in recent times. Story of real heroes and a tight slap on the face of corrupt system. ಭ್ರಷ್ಟ ವ್ಯವಸ್ಥೆಯ ಹೊಣೆಗೇಡಿತನದ ಪರಮಾವಧಿಯ ನಡುವಲ್ಲೇ ಸಾಮಾನ್ಯರು ಅಸಾಮಾನ್ಯರಾದ, ಸಾವಿರಾರು ಜೀವಗಳ ಪಾಲಿಗೆ ಆಸರೆಯಾದ ವಾಸ್ತವತೆಯನ್ನು ಯಾವುದೇ ಉತ್ಪ್ರೇಕ್ಷೆಯ ಹಂಗಿಲ್ಲದೇ ನಾಲ್ಕು ಸಂಚಿಕೆಗಳಲ್ಲಿ ಕಟ್ಟಿಕೊಡುತ್ತದೆ ಈ ವೆಬ್ ಸರಣಿ. ತಮ್ಮದೇ ಪ್ರಜೆಗಳ ನೋವಿಗೆ ಬೆನ್ನು ತೋರಿಸಿ ಯಾತನೆಗೆ ಮೂಲವಾದವರನ್ನು ಸುರಕ್ಷಿತವಾಗಿ ದೇಶದಿಂದ ಹೊರ ರವಾನಿಸಲು ಟೊಂಕ ಕಟ್ಟಿ ನಿಂತ ಅಮಾನವೀಯ ರಾಜಕೀಯ ವ್ಯವಸ್ಥೆಯ ತಣ್ಣಗಿನ ಕ್ರೌರ್ಯದೆಡೆಗೆ ಹೇವರಿಕೆ ಹುಟ್ಟಿಸುತ್ತಲೇ, ಮಸಣಸದೃಶ ನಗರದಲ್ಲಿ ಮಾನವೀಯತೆಯನ್ನು ಜೀವಂತವಿರಿಸಲು ತಮ್ಮನ್ನೇ ಪಣವಾಗಿಸಿಯೂ ಅನಾಮಧೇಯರಾಗುಳಿದ ಜನಸಾಮಾನ್ಯರ ಬಗೆಗೊಂದು ವ್ಯಕ್ತಪಡಿಸಲಾಗದ ಅಭಿಮಾನ ಸೃಷ್ಟಿಸುವ ಈ ಸರಣಿ ಭೋಪಾಲ್ ದುರಂತವನ್ನು ಬೇರೆಯೇ ದೃಷ್ಟಿಕೋನದಿಂದ ತೆರೆದಿಡುತ್ತದೆ. 
ಕೆ ಕೆ ಮೆನನ್, ಬಾಬಿಲ್ ಖಾನ್, ದಿವ್ಯೇಂದು ಶರ್ಮಾ ಹಾಗೂ ಮಾಧವನ್ 1984ರ ಡಿಸೆಂಬರ್ 2 ಹಾಗೂ 3ರ ಭೋಪಾಲ್ ನಗರದಲ್ಲೇ ಜೀವಿಸಿದಂತೆ ಭಾಸವಾಗುತ್ತದೆ. ಕಂಪನಿಯಲ್ಲಿನ ಸುರಕ್ಷತಾ ಲೋಪಗಳ ಬಗ್ಗೆ ಅರಿವಿದ್ದೂ ಎಲ್ಲವನ್ನೂ ನಿರ್ಲಕ್ಷಿ‌ಸಿ ಹೀಗೊಂದು ದುರಂತಕ್ಕೆ ಮೂಲವಾಗಿ ದೇಶಬಿಟ್ಟು ಪಲಾಯನಗೈದ ವಾರೆನ್ ಆಂಡರ್ಸನ್ ಅವರ ತಪ್ಪು ಹಿರಿದೋ ಇಲ್ಲವೇ ಆತನನ್ನು ವಿಮಾನ ನಿಲ್ದಾಣದ ತನಕ ಸುರಕ್ಷಿತವಾಗಿ ಕಳಿಸಿಕೊಟ್ಟು ವಿಮಾನ ಏರಿಸಿದ ನಮ್ಮ ರಾಜಕೀಯ ವ್ಯವಸ್ಥೆಯ ಭ್ರಷ್ಟತೆ ಹಿರಿದೋ ಎಂಬ ಉತ್ತರ ಸಿಗದ ಪ್ರಶ್ನೆಯೊಂದೇ ಕೊನೆಗೆ ಉಳಿಯುವುದು ಸತ್ಯ.