ಭಾನುವಾರ, ಜೂನ್ 21, 2020

ಸ್ನೇಹ ಪ್ರೇಮ

ಪುಸ್ತಕದ ಹೆಸರು : ಸ್ನೇಹ - ಪ್ರೇಮ                  

ತೆಲುಗು ಮೂಲ : ಯಂಡಮೂರಿ ವೀರೇಂದ್ರನಾಥ್ 

ಅನುವಾದಕರು : ರಾಜಾ ಚೆಂಡೂರ್            

ಪ್ರಕಾಶಕರು : ಹಂಸಧ್ವನಿ ಪ್ರಕಾಶನ, ಬೆಂಗಳೂರು  

ಪ್ರಥಮ ಮುದ್ರಣ : 1986                          

ಪುಟಗಳು : 135

"ಮಾನಸಿಕವಾಗಿ ಕೃಷ್ಣನ ವರಿಸಿದ ರಾಧೆ ಕೆಟ್ಟವಳೇ? ವಿವಾಹವಾಗದೇ ಕರ್ಣನ ಹಡೆದ ಕುಂತಿ ಕೆಟ್ಟವಳೇ?" ಎಂಬೆರಡು ಭಾವ ಸೂಕ್ಷ್ಮ ಪ್ರಶ್ನೆಗಳನ್ನಿಟ್ಟುಕೊಂಡು ನಾಲ್ಕು ವಿಭಿನ್ನ ಮನಸ್ಸತ್ವಗಳ ಮುಖೇನ ಬದುಕಿನ ಪರಿಧಿಯೊಳಗಣ ಸ್ನೇಹ, ಪ್ರೇಮ, ವಾಂಛೆಗಳ ಮೇಲಾಟದ ಬಗ್ಗೆ ವಿಶ್ಲೇಷಿಸುವ ಕಿರು ಕಾದಂಬರಿಯಿದು. 

ಸ್ನೇಹ, ಪ್ರೇಮಕ್ಕೆಲ್ಲಾ ವಿವಾಹವೇ ಮೆಟ್ಟಿಲೆನ್ನುವ ರಾಧಾ, ಪ್ರೇಮವೆನ್ನುವುದಕ್ಕೆ ಅಸ್ತಿತ್ವವೇ ಇಲ್ಲವೆನ್ನುವ ಜಯಾ, ಒಂದು ರಾತ್ರಿಯ ನಿಕಟತ್ವದಿಂದ ಪ್ರೇಮದಲ್ಲಿ ಬೀಳುವ ಪಾರ್ಥಸಾರಥಿ, ಸ್ನೇಹ ಪ್ರೇಮಗಳೆಲ್ಲಾ ಕೇವಲ ದೈಹಿಕ ಸಾಮೀಪ್ಯ ಸಾಧನೆಗಾಗಿ ಎಂಬ ಮನೋಭಾವದ ಕೃಷ್ಣ. ಈ ನಾಲ್ಕು ಪಾತ್ರಗಳ ಭಿನ್ನ ವಿಚಾರಧಾರೆಗಳ ಮೂಲಕ ಗಂಡು ಹೆಣ್ಣಿನ ನಡುವಿನ ಸ್ನೇಹ - ಪ್ರೇಮದ ಮೂಲವೇನು? ದೈಹಿಕ ಸಾಮೀಪ್ಯವೇ ಸ್ನೇಹ/ಪ್ರೇಮದಲ್ಲಿ ಆತ್ಮೀಯತೆಯನ್ನು ಬೆಸೆಯುವ ಸಾಧನವೇ ಎಂಬಂತಹ ಸೂಕ್ಷ್ಮ ಪ್ರಶ್ನೆಗಳಿಗೆ ನೈತಿಕತೆಯ ನೆಲೆಗಟ್ಟಿನಲ್ಲಿ ಉತ್ತರ ನೀಡಲು ಯತ್ನಿಸುತ್ತದೆ ಈ ಕಾದಂಬರಿ. 

ಮದುವೆಗೆ ಮುನ್ನವೇ ದೈಹಿಕ ಸಾಮೀಪ್ಯ ಎನ್ನುವ ಸ್ತ್ರೀ ಮೋಹಿ ಕೃಷ್ಣ ರಾಧಾಳ ಸ್ನೇಹ ಬಯಸುತ್ತಾನೆ. ಸ್ನೇಹ, ಪ್ರೇಮಗಳೆಲ್ಲಾ ವಿವಾಹದ ಚೌಕಟ್ಟಿನಲ್ಲೇ ಎಂಬ ಚಿಂತನೆಯ ರಾಧಾ ಆತನ ಸ್ನೇಹವನ್ನು ನಿರಾಕರಿಸುತ್ತಾಳೆ. ಇದರಿಂದ ಕಂಗೆಡುವ ಕೃಷ್ಣ ಅವಳದೇ ಹಾದಿಯಲ್ಲಿ ಸಾಗಿ ವಿವಾಹದ ನಾಟಕವಾಡಿ ತನ್ನ ಕಾರ್ಯಸಾಧಿಸಿಕೊಂಡು ರಾಧಾಳಿಗೆ ಆಘಾತ ನೀಡುತ್ತಾನೆ. ಶೀಲ, ಪಾವಿತ್ರ್ಯತೆ ಮುಂತಾದ ಪರಿಕಲ್ಪನೆಗಳಿಂದ ಮಾರು ದೂರ ನಿಲ್ಲುವ ಜಯಾಳ ಪ್ರಕಾರ ಪ್ರೇಮವೆಂಬುದು ವಾಂಛೆಯ ಮೇಲೆ ಹೊದಿಸಿದ ನವಿರಾದ ಆತ್ಮವಂಚನೆಯ ಪರದೆಯಷ್ಟೇ. ಆಕೆ ಆ ಪರದೆಯಿಲ್ಲದೇ ನೇರಾನೇರ ತನಗಿಷ್ಟ ಬಂದಂತೆ ಬದುಕುವವಳು. ಹಾಗಾಗಿಯೇ ಪಾರ್ಥಸಾರಥಿಯೊಂದಿಗಿನ ಸಂಬಂಧ ಆಕೆಗೆ ಕ್ಯಾಶುಯಲ್ ಎನ್ನಿಸುತ್ತದೆ. ಆದರೆ ವಯಸ್ಸು ಮೀರುತ್ತಿದ್ದರೂ ಏಕಾಂಗಿಯಾಗಿ ಒಂಟಿತನದ ಬೇಗೆಯಿಂದ ನರಳುವ ಪಾರ್ಥಸಾರಥಿಯವರಿಗೆ ಆಕೆಯ ಸಾಮೀಪ್ಯದಲ್ಲಿ ದೈಹಿಕ ಆನಂದಕ್ಕಿಂತ ಮಾನಸಿಕ ಆಸರೆ ಸಿಕ್ಕಂತೆ ಭಾಸವಾಗುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಹಿನ್ನೆಲೆ ತಿಳಿದಿದ್ದೂ ಆಕೆಯನ್ನು ವಿವಾಹವಾಗಲು ಬಯಸುತ್ತಾರೆ ಅವರು. ಕೃಷ್ಣನಿಂದ ನಂಬಿಕೆದ್ರೋಹಕ್ಕೊಳಗಾದ ರಾಧಾಳ ನಡೆಯೇನು, ಅವರಿಬ್ಬರ 'ವಿವಾಹವಲ್ಲದ' ವಿವಾಹ ಅಸ್ತಿತ್ವ ಕಳೆದುಕೊಂಡಿತೇ, ಜಯಾ ಸಾರಥಿಯವರನ್ನು ವಿವಾಹವಾಗುವಳೇ ಎಂಬುದೇ ಕಥಾ ಸಾರ.

ಟ್ರಬಲ್ ಷಟ್ಟರ್ಸ್ ಸಂಸ್ಥೆಯ ಪ್ರೆಸಿಡೆಂಟ್ ಆಪತ್ಭಾಂದವ ಟಿ.ಎಸ್, ತನ್ನ ಹುಚ್ಚು ವಿಚಾರಧಾರೆಗಳಿಗೆ ಕ್ರಾಂತಿಕಾರಿ ವೇಷ ತೊಡಿಸಿ ಚಿತ್ರವಿಚಿತ್ರ ಯೋಜನೆಗಳನ್ನು ಹೆಣೆಯುವ ಮಾಡಿಸಂ(ಮ್ಯಾಡಿಸಂ) ಸಂಸ್ಥೆಯ ಪರಶುರಾಮ್ ಪಾತ್ರಗಳಿಗೂ ಕೂಡಾ ಕಥೆಯಲ್ಲಿ ಪ್ರಾಮುಖ್ಯತೆಯಿದೆ. ತಮ್ಮ ವಿಚಿತ್ರ ವ್ಯಕ್ತಿತ್ವ, ಲಘು ಹಾಸ್ಯ ಲೇಪಿತ ಮಾತುಗಳಿಂದಾಗಿ ಈ ಎರಡೂ ಪಾತ್ರಗಳು ನೆನಪಿನಲ್ಲುಳಿಯುತ್ತವೆ. ಆಲ್ ಇಂಡಿಯಾ ರೇಡಿಯೋ ಸ್ಥಾಪನೆ, ಅದರ ಕಾರ್ಯನಿರ್ವಹಣೆ, ಅಲ್ಲಿನವರ ಕೆಲಸದ ವೈಖರಿಯ ಬಗೆಗಿನ ಸಂಪೂರ್ಣ ವಿವರಣೆಯೂ ಈ ಕಾದಂಬರಿಯಲ್ಲಿದೆ.

ಪರಸ್ಪರ ವಿರುದ್ಧ ಚಿಂತನೆಗಳ ರಾಧಾ ಹಾಗೂ ಜಯಾರಲ್ಲಿ ಯಾರ ಚಿಂತನೆಗಳು ಸರಿಯಾದುದು ಎಂಬುದನ್ನು ಲೇಖಕರು ಓದುಗರ ತರ್ಕಕ್ಕೇ ಬಿಟ್ಟಿದ್ದಾರೆ. ಯಾವುದೇ ಪೂರ್ವಾಗ್ರಹವಿಲ್ಲದೇ ಯೋಚಿಸಿ ನೋಡಿದರೆ ಬಹುಶಃ ಇಬ್ಬರ ಚಿಂತನೆಗಳೂ ಸಂಪೂರ್ಣ ಸರಿ/ತಪ್ಪಲ್ಲವೇನೋ ಎನ್ನಿಸಿತು. ಮಾಮೂಲಿ ಯಂಡಮೂರಿ ಅವರ ಶೈಲಿಗಿಂತ ಕೊಂಚ ಭಿನ್ನವೆನಿಸುವ ಕಾದಂಬರಿ ಒಮ್ಮೆ ಓದಲಡ್ಡಿಯಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ