ಭಾನುವಾರ, ಜೂನ್ 28, 2020

ಅನೂಹ್ಯ 23

ಸಮನ್ವಿತಾಳ ಗೊಂದಲಭರಿತ ವದನ ಕಂಡು ಸಚ್ಚಿದಾನಂದರು, "ಅಯ್ಯೋ, ಅದ್ಯಾಕಷ್ಟು ಗೊಂದಲ ಮಗು. ನಿನ್ನ ತಂದೆ ನಿನ್ನ ಮತ್ತು ಅಭಿರಾಮ್ ಮದುವೆಯ ಪ್ರಸ್ತಾಪ ತಂದಿದ್ರಲ್ಲ ಅದು ನಮ್ಮೆಲ್ಲರಿಗೂ ಸಂಪೂರ್ಣ ಸಹಮತ ಅಂತ ಹೇಳಿದ್ದು ಅವನು" 

ಅವರು ಮುಂದೆ ಏನು ಮಾತನಾಡಿದರೋ ಅವಳಿಗೊಂದೂ ಕೇಳಲಿಲ್ಲ. ನಿಶ್ಚಲಳಾಗಿ ಕುಳಿತುಬಿಟ್ಟಳು. ಅವಳ ಹೃದಯ ಸ್ಥಬ್ದವಾಗಿತ್ತು. ಸುತ್ತ ಏನಾಗುತ್ತಿದೆ ಎಂಬ ಅರಿವೂ ಅವಳಿಗಿರಲಿಲ್ಲ.

'ಏನು ಹೇಳುತ್ತಿದ್ದಾರೆ ಇವರೆಲ್ಲಾ?' ಸಚ್ಚಿದಾನಂದರ ಮಾತುಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಲು ಪ್ರಯತ್ನಿಸಿದಳು.......

ತನ್ನ ವಿವಾಹ.......!

ಅಭಿರಾಮ್ ಜೊತೆಗೆ......!

ಹೌದು.... ಹಾಗೆಯೇ ಹೇಳಿದರಲ್ಲವೇ ಆತ.

ಈಗ ನೆನಪಾಗುತ್ತಿದೆ. ಅಂದಿನ ಪಾರ್ಟಿಯಲ್ಲಿ ನಾನು ಇರಲೇಬೇಕೆಂಬ ಒತ್ತಾಯ, ಶರ್ಮಾ ಪರಿವಾರದ ಪರಿಚಯ, ರಾವ್ ದಂಪತಿಗಳ ವಿಚಿತ್ರ ನಡವಳಿಕೆ, ನನ್ನ ಬಗೆಗಿನ ತೋರಿಕೆಯ ಪ್ರೀತಿ, ಕಾಳಜಿ, ಚೈತಾಲಿ ಕರೆ ಮಾಡಿ ಬಾಸ್ ಏನೋ ಪ್ಲಾನ್ ಮಾಡ್ತಿದ್ದಾರೆ ಎಂದು ಹೇಳಿದ್ದು....... ಎಲ್ಲಾ ಸರಿಯಾಗಿ ಒಂದಕ್ಕೊಂದು ಹೊಂದಿಕೆಯಾಗತೊಡಗಿತು. ತಾಳೆ ಹಾಕಿ ನೋಡಿದಳು.

ಅದಕ್ಕೇ ಪಾಪ ನಿನ್ನೆ ಅಭಿರಾಮ್ ಕರೆ ಮಾಡಿ ಹಾಗೆ ಮಾತನಾಡಿರಬೇಕು. ಅವನಿಗೇನು ಗೊತ್ತು ನನ್ನ ಪರಿಸ್ಥಿತಿ…..

ಅಂದರೆ ಮಿಸ್ಟರ್ ರಾವ್ ಅವರ ಬಿಸ್ನೆಸ್ ಉದ್ಧಾರಕ್ಕಾಗಿ ಈ ವಿವಾಹವೇ? ಇರಬೇಕು.....

ಯಾರದೋ ಮೂರನೆಯವರ ವಿವಾಹ ನಿಶ್ಚಯವಾದರೂ ತಿಂಗಳ ಮೊದಲೇ ತಿಳಿಯುತ್ತದೆ.

ಈಗಲೂ ವಿವಾಹ ನಿಶ್ಚಯವಾಗಿದೆ..... 

ಯಾರದ್ದೋ ಅಲ್ಲ........ 

ತನ್ನದೇ............. 

ಅದೂ ತನಗೇ ತಿಳಿಯದೇ..........

ಬಲಿಗೆ ಕರೆದೊಯ್ಯುವ ಹರಕೆಯ ಕುರಿಗೂ ಕಡೇಪಕ್ಷ ತನ್ನ ಸುತ್ತಮುತ್ತಲಿನ ಸನ್ನಿವೇಶದಿಂದ ತನ್ನ ತಲೆದಂಡವಾಗುತ್ತಿರುವ ಅರಿವಾಗುವುದೇನೋ.......

ತಾನು ಆ ಹರಕೆಯ ಕುರಿಗಿಂತ ಹೀನಳಾದೆನೇ?

ಈ ಬಗೆಯ ವಿವಾಹಕ್ಕೆ ಏನೆನ್ನಬಹುದು? 

ಇದು ಸ್ವಯಂವರವೇ? ಇಲ್ಲಾ ಗಾಂಧರ್ವ ವಿವಾಹವೇ? ರಾಕ್ಷಸ ವಿವಾಹ? ಊಹೂಂ ಇದ್ಯಾವುದೂ ಅಲ್ಲ........

ಬಹುಶಃ  ಈ ತರದ ವಿವಾಹ ವೇದೋಪನಿಷತ್ತು, ಪುರಾಣಗಳ ಕಾಲಘಟ್ಟದಲ್ಲಿಯೂ ನೆಡೆದಿರಲಿಕ್ಕಿಲ್ಲ.......

ಏನೆಂದು ಕರೆಯಬಹುದು ಇಂತಹ ಅದ್ಬುತ ವಿವಾಹಕ್ಕೆ? ಮಾಹಿತಿಯೇ ಇಲ್ಲದ ವಿವಾಹ ಎನ್ನಬಹುದೇ?

ಇಲ್ಲಾ ಸಾಟಿ ವಿನಿಮಯ ವಿವಾಹ......!?

ಹ್ಮಂ…. ಇದೇ ಸರಿ.....!

ಇದು ಸಾಟಿ ವಿನಿಮಯ ವಿವಾಹವೇ. ಮಗಳನ್ನು ವ್ಯವಹಾರಕ್ಕೆ ಬದಲಾಯಿಸುವ ವಿವಾಹ.....

(ಸಾಟಿ ವಿನಿಮಯ ಪದ್ಧತಿ/barter system ಎಂಬುದು ಹಣ ಅಸ್ತಿತ್ವಕ್ಕೆ ಬರುವ ಮುಂಚೆ ಇದ್ದ ವಿನಿಮಯ ಪದ್ಧತಿ. ಈ ಪದ್ದತಿಯಲ್ಲಿ ವಸ್ತುಗಳನ್ನು ವಸ್ತುಗಳಿಗೆ ಅಥವಾ ವಸ್ತುಗಳನ್ನು ಸೇವೆಗಳಿಗೆ i.e, commodity to commodity or commodity to service ನೇರವಾಗಿ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. )

ಇವರುಗಳು ದೊಡ್ಡ ಮನಸ್ಸು ಮಾಡಿ ಈ ವಿವಾಹಕ್ಕೆ ತಮ್ಮ ಸಮ್ಮತಿಯನ್ನು ನನಗೆ ಹೇಳಬೇಕೆಂಬ ಔದಾರ್ಯವನ್ನು ತೋರಿದ್ದರಿಂದ ಈಗಲಾದರೂ ನನ್ನ ವಿವಾಹದ ಆಮಂತ್ರಣ ಸಿಕ್ಕಿತು. ಒಂದು ವೇಳೆ ಇವರೂ ರಾವ್ ದಂಪತಿಗಳಂತೆ ಯೋಚಿಸಿದ್ದರೆ?

ಆಗ ತಾಳಿ ಕತ್ತಿಗೆ ಬಿದ್ದಾಗ ಮದುವೆಯ ಬಗ್ಗೆ ತಿಳಿಯುತ್ತಿತ್ತೇನೋ…..

ತನ್ನ ಪರಿಸ್ಥಿತಿಯ ಬಗ್ಗೆ ಯೋಚಿಸಿ ಅವಳಿಗೆ ನಗು ಬಂದಿತು. ಅಲ್ಲಿಯವರೆಗೆ ಗರ ಬಡಿದಂತೆ ಕುಳಿತ್ತಿದ್ದವಳು ಇದ್ದಕ್ಕಿದ್ದಂತೆ ಜೋರಾಗಿ ನಗಲಾರಂಭಿಸಿದಳು.

ಉಳಿದ ಮೂವರು ಗಾಬರಿಗೊಂಡರೆ ಅಭಿರಾಮ್ ಮಾತ್ರ ಖೇದಗೊಂಡಿದ್ದ. ಅವನು ಈ ವಿವಾಹಕ್ಕೆ ತನ್ನ ಸಮ್ಮತಿಯನ್ನು ಹೇಳಿದ ಕ್ಷಣದಿಂದ ಅವಳ ಮುಖಚರ್ಯೆಯನ್ನೇ ಗಮನಿಸುತ್ತಿದ್ದ.....

ಮುಖದಲ್ಲಾಗುತ್ತಿದ್ದ ಬದಲಾವಣೆಗಳಲ್ಲಿ ಅವಳ ಮನದ ವಿಪ್ಲವ ಸ್ಪಷ್ಟವಾಗಿ ಗೋಚರಿಸುತ್ತಿತ್ತು.....

ತನ್ನ ಮನದಲ್ಲಿನ ಅನುಮಾನ ನಿಜವೇ ಎಂದು ಅವಳ ವರ್ತನೆಯಿಂದ ಅವನಿಗೆ ಸ್ಪುಟವಾಗತೊಡಗಿತ್ತು......

ಅವಳ ನಗು ಮುಂದುವರೆದಿತ್ತು....ಹಾಗೇ ನಗುನಗುತ್ತಲೇ ಹನಿಗಣ್ಣಾದವಳ ನಯನಗಳಿಂದ ಕಣ್ಣೀರು ಅವ್ಯಾಹತವಾಗಿ ಸುರಿಯತೊಡಗಿತು...... 

ನಗು ನಿಂತಿತು...... 

ಅಲ್ಲೊಂದು ಅಸಹನೀಯ ಮೌನವಿತ್ತು.......

ಒಂದು ಸಣ್ಣ ಸದ್ದಿಲ್ಲದ ಮೌನ......

ಆದರೆ ಆ ಮೌನದೊಳಗೆ ಗಾಢ ವಿಷಾದದಂತೆ ಅವಳ ಕಣ್ಣೀರು ಸದ್ದಿಲ್ಲದೇ ಹರಿದಿತ್ತು........

ಅವಳ ಸ್ಥಿತಿ ನೋಡಿ ಮೃದುಲಾ ಅವರಿಗೆ ತಡೆಯಲಾಗಲಿಲ್ಲ. "ಯಾಕೆ ಹೀಗೆ ಅಳ್ತಾ ಇದ್ದೀಯಾ ಮಗೂ? ದಯವಿಟ್ಟು ಸಮಾಧಾನ ಮಾಡ್ಕೋ. ಏನಾಯ್ತು ಅಂತನಾದ್ರೂ ಹೇಳು. ನೀನು ಹೀಗೆ ಅಳೋದನ್ನ ನೋಡೋಕಾಗಲ್ಲ ಮಗಳೇ...." ಎಂದು ಅವಳನ್ನು ತಮ್ಮ ಮಡಿಲಿಗೆ ಹಾಕಿಕೊಂಡರು. ಅವಳ ಅಳು, ಬಿಕ್ಕುವಿಕೆ ಜೋರಾಯಿತು. ಮೃದುಲಾ ಅವಳ ತಲೆ ಸವರುತ್ತಿದ್ದರೆ ಸಚ್ಚಿದಾನಂದ, ಆಕೃತಿ ಅವಳನ್ನು ಶಾಂತವಾಗಿಸಲು ಶತಪ್ರಯತ್ನ ಮಾಡಿದರು...

ಎಷ್ಟು ಹೊತ್ತು ಹಾಗೆಯೇ ಇದ್ದಳೋ ಇದ್ದಕ್ಕಿದ್ದಂತೆ, "ನಾನು ಮನೆಗೆ ಹೋಗ್ತೀನಿ...." ಎದ್ದೇ ಬಿಟ್ಟಳು.

"ಅಯ್ಯೋ...ಈಗೆಲ್ಲಿಗೆ ಹೊರಟೆ? ಮೊದಲೇ ನಿನ್ನ ಮನಸ್ಥಿತಿ ಸರಿಯಾಗಿಲ್ಲ. ನಿನ್ನ ಈಗೆಲ್ಲೂ ಕಳ್ಸೋಲ್ಲ ನಾನು" ಮೃದುಲಾ ಗಾಬರಿಯಲ್ಲಿ ಹೇಳಿದರು.

"ಹೌದು ಮಗಳೇ, ನೀನು ತುಂಬಾ ನೋವಲ್ಲಿದ್ದೀಯಾ. ಇವತ್ತು ಇಲ್ಲೇ ಇರು. ನಾಳೆ ನಿನ್ನ ಮನಸು ಸಮಾಧಾನ ಆದ್ಮೇಲೆ ಹೋಗುವೆಯಂತೆ" ಸಚ್ಚಿದಾನಂದ್ ಅನುನಯಿಸಿದರು.

"ನಾನು ಹೋಗ್ಲೇಬೇಕು. ಹೋಗ್ತೀನಿ...." ಹಟಹಿಡಿದಳು.

"ನೋಡು ನಾನು ನಿನ್ನ ಅಮ್ಮ ತಾನೇ? ಅಮ್ಮಾ ಹೇಳಿದ್ದು ಮಕ್ಕಳು ಕೇಳ್ಬೇಕು ಅಷ್ಟೇ. ಸುಮ್ನಿರು....."

"ಅಮ್ಮಾ ದಯವಿಟ್ಟು ನನ್ನ ಒತ್ತಾಯ ಮಾಡ್ಬೇಡಿ. ನಾನು ಸ್ವಲ್ಪ ಸಮಯ ಒಂಟಿಯಾಗಿರಬೇಕು. ನಾನು ಹೋಗ್ಬೇಕು. ಪ್ಲೀಸ್ ಬಿಟ್ಬಿಡಿ" ಕೈ ಮುಗಿದಳು. ಅವರು ಇನ್ನೇನು ಹೇಳಲಿದ್ದರೋ,

"ಅಮ್ಮಾ ಅವಳು ಹೋಗ್ಲಿ. ತಡೀಬೇಡ" ಗಂಭೀರವಾಗಿ ಹೇಳಿದ್ದ ಅಭಿರಾಮ್. ಅವರು ಮತ್ತೇನೋ ಹೇಳುವ ಮುನ್ನ ಸುಮ್ಮನಿರುವಂತೆ ಸನ್ನೆ ಮಾಡಿದವನು, "ನೀನು ಹೊರಡು. ನಾನು ನಿನ್ನ ಮನೆಗೆ ಡ್ರಾಪ್ ಮಾಡ್ತೀನಿ" ಕಾರಿನ ಕೀ ಹಿಡಿದು ಹೇಳಿದ.

"ಯಾರೂ ಬರೋದು ಬೇಡ. ನಾನೇ ಹೋಗ್ತೀನಿ"

"ನಿನ್ನ ಮನೆ ಇಲ್ಲಿಂದ ತುಂಬಾ ದೂರದಲ್ಲಿರೋದು. ನೀನು ಆಟೋದಲ್ಲಿ ಬಂದಿದ್ದು, ಕಾರಲ್ಲಿ ಅಲ್ಲ. ಕತ್ತಲಾಗ್ತಾ ಬಂದಿದೆ. ಸುಮ್ಮನೇ ಹಠ ಮಾಡ್ಬೇಡ. ನಾನು ಬಿಡ್ತೀನಿ" ದೃಢವಾಗಿ ಹೇಳಿದ. ಸುಮ್ಮನಾದಳು.

"ನಿಮಗಂತಲೇ ಅಮ್ಮ ಅಡಿಗೆ ಮಾಡಿದ್ದು. ಸ್ವಲ್ಪ ಊಟನಾದ್ರೂ ಮಾಡ್ಕೊಂಡು ಹೋಗಿ" ಆಕೃತಿ ಗೋಗರೆದಳು.

"ಹೊಟ್ಟೆ ತುಂಬಿಹೋಗಿದೆ. ಊಟ ಮಾಡುವ ಮನಸಿಲ್ಲ. ದಯವಿಟ್ಟು ಕ್ಷಮಿಸಿ. ಎಲ್ಲರಿಗೂ ತೊಂದರೆ ಕೊಟ್ಟೆ. ಇನ್ನೊಮ್ಮೆ ಬರ್ತೀನಿ ಊಟ ಮಾಡೋಕೆ. ಬೇಸರ ಮಾಡ್ಕೋಬೇಡಿ" ಸತ್ವಹೀನ ದನಿಯಲ್ಲಿ ನುಡಿದವಳು ಬೇರೇನೂ ಹೇಳದೆ ಹೊಸಿಲು ದಾಟಿ ಹೊರನಡೆದಿದ್ದಳು. ಅಭಿರಾಮ್ ಸುಮ್ಮನೆ ಅವಳನ್ನು ಹಿಂಬಾಲಿಸಿದ......

ಮನೆಯಲ್ಲಿ ಉಳಿದ ಮೂವರು ಸಮನ್ವಿತಾಳಿಗೆ ಇದ್ದಕ್ಕಿದ್ದಂತೆ ಏನಾಯಿತು, ಅಷ್ಟು ಸ್ಥಿತಪ್ರಜ್ಞಳಾದ ಹುಡುಗಿ ಹೀಗೇಕೆ ಮಾಡಿದಳು? ತಮ್ಮಿಂದ ಏನಾದರೂ ತಪ್ಪಾಯಿತೇ? ಎಂಬ ಉತ್ತರವಿಲ್ಲದ ಪ್ರಶ್ನೆಗಳ‌ ನಡುವೆ ನಲುಗಿದರು. ಸಮಯ ದಾಟಿದರೂ ಯಾರಿಗೂ ಊಟ ಮಾಡುವ ಮನಸ್ಸಾಗಲಿಲ್ಲ. ಅವಳಿಗಾಗಿಯೇ ಸಿದ್ದಪಡಿಸಿದ್ದ ಅಡುಗೆ ರುಚಿ ನೋಡುವವರ ಗತಿಯಿಲ್ಲದೇ ಅಡುಗೆ ಕೋಣೆಯಲ್ಲಿ  ಅನಾಥವಾಗಿ ಬಿದ್ದಿತ್ತು…….. 

ಅವಳು‌ ಬಂದು ಹೋಗಿದ್ದಕ್ಕೆ ಸಾಕ್ಷಿ ಎಂಬಂತೆ ಉಳಿದದ್ದು ಖಾಲಿ ಟೀ ಕಪ್ ಮಾತ್ರ.....‌

               *********************

ಕತ್ತಲನ್ನು ಸೀಳಿಕೊಂಡು ಕಾರು ನಿಧಾನವಾಗಿ ಸಾಗುತ್ತಿತ್ತು. ಅವಳ ಬಳಿ ಕೇಳಲು ಅವನಿಗೆ ಸಾವಿರ ವಿಚಾರಗಳಿದ್ದವು..... ಆದರೆ ಅವಳು ಉತ್ತರಿಸುವ ಮನಸ್ಥಿತಿಯಲ್ಲಿರಲಿಲ್ಲ. ಅವಳನ್ನು ಆಳುತ್ತಿದ್ದದ್ದು ಮೌನವಷ್ಟೇ........

ಅವಳತ್ತ ಓರೆ ನೋಟ ಹರಿಸಿದ........

ಅವಳ‌ ಮುಖದಲ್ಲಿ ಬಿರುಗಾಳಿಗೆ ಮುನ್ನಿನ ಶಾಂತತೆ ಇತ್ತೇ…...? 

ಇಲ್ಲಾ ಪ್ರಳಯದ ಮುನ್ಸೂಚನೆ ಇತ್ತೇ…….?

ಅಥವಾ ಮೂರನೇ ಕಣ್ತೆರೆದು ತಾಂಡವಕ್ಕೆ ತಯಾರಾದ ತ್ರಿನೇತ್ರನ ರೌದ್ರವಿತ್ತೇ…….?

ಅವನಿಂದ ಅಳೆಯಲು ಸಾಧ್ಯವಾಗಲಿಲ್ಲ..........

ಅವಳು ನಿಜಕ್ಕೂ ನಿರ್ಲಿಪ್ತಳಾಗಿದ್ದಳು. ಯೋಚಿಸಲು ಉಳಿದಿರುವುದಾದರೂ ಏನು? ಏನನ್ನಾದರೂ ಉಳಿಸಿರುವರೇ ತನ್ನ ಅಪ್ಪ ಅಮ್ಮ? ಖಂಡಿತ ಇಲ್ಲ.......

ಆದರೂ ಕೇಳಬೇಕು ನಾನು.....

ನನ್ನ ಮನದಲ್ಲಿ ವರ್ಷಗಳಿಂದ ಬೇರು ಬಿಟ್ಟಿರುವ, ನನ್ನನ್ನು ಕೊಲ್ಲುತ್ತಿರುವ ಪ್ರಶ್ನೆಗಳಿಗೆ ಉತ್ತರ ಪಡೆಯಲೇ ಬೇಕು......

ಇವತ್ತು ನನ್ನೆಲ್ಲಾ ಪ್ರಶ್ನೆಗಳಿಗೂ ಅವರು ಉತ್ತರಿಸಲೇ ಬೇಕು......

ನನ್ನ ಮೇಲೆ ಏಕಿಂತಾ ದ್ವೇಷ ಎಂದು ತಿಳಿಯಬೇಕಿದೆ ನನಗೆ.......

"ಆರ್ ಯು ಓಕೆ?" ಅವಳ ಮೌನ ಅಸಹನೀಯವೆನಿಸಿ ಕೇಳಿದ. ಅವನ ಪ್ರಶ್ನೆಗೆ ನಗು ತರಿಸಿತವಳಿಗೆ...ಆಮ್ ಐ‌ ಓಕೆ? ಯಾರಿಗೆ ಗೊತ್ತು....? ಅಸಲಿಗೆ ನಾನು ಜೀವಂತವಾಗಿರುವೆನಾ? 

"ನೀನು ತುಂಬಾ ಬೇಸರದಲ್ಲಿದ್ದೀಯಾ ಅಂತ ಗೊತ್ತು ಸಮನ್ವಿತಾ.ನಿನ್ನ ನೋವಿನ ಆಳದ ಕಲ್ಪನೆ ನನಗಿದೆ. ಆದರೂ ಒಂದು ಪ್ರಶ್ನೆ ನಿನ್ನೆಯಿಂದ ನನ್ನ ಹಿಂಸಿಸ್ತಿದೆ. ಕೇಳಲೇಬೇಕು. ದಯವಿಟ್ಟು ಬೇಸರಿಸಬೇಡ. ಒಂದೇ ಒಂದು ಪ್ರಶ್ನೆ..... ನಾನು ನಿನ್ನೆ ನಿನಗೆ ಫೋನ್ ಮಾಡಿದಾಗ ನೀನು ಮಾತನಾಡಿದ ವೈಖರಿಯಿಂದ ಹುಟ್ಟಿದ ಪ್ರಶ್ನೆ. ಇವತ್ತು ನಿನ್ನ  ವರ್ತನೆ ನೋಡಿ ಇನ್ನಷ್ಟು ಬಲಗೊಂಡ ಅನುಮಾನ..... ನಿನ್ನ ತಂದೆ ಮಾಡಿದ ಈ ಪ್ರಸ್ತಾಪದ ಬಗ್ಗೆ ನಿನಗೆ  ಗೊತ್ತಿತ್ತಾ? ನನಗೆ ನಿನ್ನೆಯಿಂದ ಬಲವಾಗಿ ಅನಿಸಿದ ಪ್ರಕಾರ ನಿನಗೆ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅಲ್ವಾ? ನಿಜ ತಾನೇ? ಈಗ ಸ್ವಲ್ಪ ಹೊತ್ತಿಗೆ ಮುಂಚೆ ಡ್ಯಾಡ್ ಹೇಳಿದಾಗಲೇ ನಿನಗೆ ಈ ಬಗ್ಗೆ ಗೊತ್ತಾಗಿದ್ದು ಅಲ್ವಾ?"

ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ ದೋಣಿಯಂತೆ ದಿಕ್ಕಾಪಾಲಾಗಿ ಸಾಗುತ್ತಿದ್ದ ಅವಳ ಯೋಚನೆಯ ಗತಿ ಬದಲಿಸುವಂತೆ ಮಾತನಾಡಿದ್ದ ಅಭಿರಾಮ್. ಅವನಿಗೆ ಅದೇ ಸತ್ಯವೆಂದು ನಿಚ್ಚಳವಾಗಿ ತಿಳಿದಿದ್ದರೂ ಅವಳ ಬಾಯಿಂದಲೇ ಕೇಳುವ ಪ್ರಯತ್ನ ಮಾಡಿದ.

"who cares? ನನಗೆ ಗೊತ್ತಾಗಲೀ, ಗೊತ್ತಾಗದೇ ಇರಲೀ ಅದರಿಂದ ಯಾರಿಗೆ ಏನಾಗ್ಬೇಕಾಗಿದೆ ಮಿಸ್ಟರ್ ಶರ್ಮಾ? ವಿವಾಹಕ್ಕೆ ವಧುವರರ ಹಿನ್ನೆಲೆ, ಕುಲ, ಗೋತ್ರ, ಪರಿವಾರ, ಕೆಲಸ, ಗುಣ, ನಡತೆ ಇತ್ಯಾದಿಗಳ ಅವಲೋಕನ ಅಗತ್ಯ ಎಂದುಕೊಂಡಿದ್ದೆ. ಆದರೆ ಹಣ ಹಾಗೂ ವ್ಯವಹಾರ ಕೂಡಾ ವಿವಾಹವೊಂದಕ್ಕೆ ಮೂಲವಾಗಬಹುದು ಎಂದು ಯಾವತ್ತೂ ಅನಿಸಿರಲಿಲ್ಲ. ನನ್ನ ವಿವಾಹ ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳಲ್ಲಿ ದಾಖಲಾಗಬೇಕಾದುದೇ...... " ನಕ್ಕಳು. ಕಣ್ಣಿಂದ ನೀರ ಹನಿಗಳು ಜಾರಿದವು…..

ಇವಳು ಹೀಗೆ ನಗುವ ಬದಲು ಅತ್ತಿದ್ದರೇ ನಡೆಯುತ್ತಿತ್ತು ಎಂದುಕೊಂಡ.

ಅವನ ಪ್ರಶ್ನೆಗೆ ನೇರವಾಗಿ ಉತ್ತರಿಸದಿದ್ದರೂ ಅವಳ ಮಾತಿನಲ್ಲಿ ಧ್ವನಿಸಿದ ಭಾವವನ್ನು ಅರಿಯದಷ್ಟು ಮೂರ್ಖನಲ್ಲ ಅವನು...

ತಾನು ನೆನಸಿದ್ದೇನು, ಇಲ್ಲಿ ನಡೆದಿರುವುದೇನು?

ಎಂತಹ ನೀಚನಿರಬಹುದು ಈ ಸತ್ಯಂ ರಾವ್?  ಮದುವೆ ಎಂದರೇನು ಮಕ್ಕಳಾಟವೇ? ಮದುವೆಯಾಗಬೇಕಾದವಳಿಗೇ ಏನೂ ತಿಳಿಸದೇ ಎಲ್ಲವನ್ನೂ ತಾವೇ ನಿರ್ಧರಿಸಲು ಅವಳೇನು ಜೀವವಿಲ್ಲದ ಗೊಂಬೆಯೇ? ಅವಳಿಗೂ ಮನಸ್ಸು, ಭಾವನೆಗಳಿಲ್ಲವೇ.......? ಅವುಡುಗಳು ಬಿಗಿದುಕೊಂಡವು. ಅವನಿಗೆ ಬಂದ ಕೋಪಕ್ಕೆ ಸತ್ಯಂ ರಾವ್ ಮನೆಗೇ ಹೋಗಿ ಬಡಿದು ಹಾಕುವಷ್ಟು ರೋಷ ಉಕ್ಕಿತು. ಈಗಲೇ ಹುಡುಕಿ ಅಲ್ಲೇ ಗುಂಡಿತೋಡಿ ಜೀವಂತ ಹುಗಿದು ಹಾಕಿಬಿಡಲೇ ಎನಿಸಿಬಿಟ್ಟಿತು. ಕಷ್ಟಪಟ್ಟು ನಿಯಂತ್ರಿಸಿಕೊಂಡ....

ರಾವ್ ಮ್ಯಾನ್ಶನ್ ತಲುಪುವವರೆಗೂ ಅವನೇನೂ ಮಾತನಾಡಲಿಲ್ಲ. ಮನೆಯೆದುರು ಕಾರು ನಿಂತಾಗ ಅವನೂ ಕೆಳಗಿಳಿದ. ಮನೆಯೊಳಗೆ ಹೋಗಿ ರಾವ್ ಕತ್ತಿನ ಪಟ್ಟಿ ಹಿಡಿದು ಉಸಿರು ನಿಲ್ಲುವಂತೆ ಬಾರಿಸಬೇಕು ಎನಿಸಿತು. ಆದರೆ ಇದು ಸರಿಯಾದ ಸಮಯವಲ್ಲ ಎಂದು ತನ್ನನ್ನು ತಾನು ‌ಸಮಾಧಾನಿಸಿಕೊಂಡ. 

ಇಳಿದ ಸಮನ್ವಿತಾ ಕೀಲು ಕೊಟ್ಟ ಗೊಂಬೆಯಂತೆ ಮನೆಯತ್ತ ನಡೆದಾಗ "ಒಂದು ನಿಮಿಷ ಸಮನ್ವಿತಾ" ಎಂದ. ಅವನ ಕರೆಗೆ ಅವಳು ಪ್ರತಿಕ್ರಿಯಿಸದಾಗ ತಾನೇ ಕೈ ಹಿಡಿದು ನಿಲ್ಲಿಸಿದ....ಎಚ್ಚೆತ್ತುಕೊಂಡವಳು ಏನು ಎಂಬಂತೆ ಅವನತ್ತ ನೋಡಿದಳು.

"ಎಕ್ಟ್ರೀಮ್ಲೀ ಸಾರಿ ಸಮನ್ವಿತಾ. ನಿನ್ನ ಬದುಕಿನ ಬಹುಮುಖ್ಯವಾದ ನಿರ್ಧಾರ ಹೀಗೆ ನಿನ್ನ ಅರಿವಿಗೇ ಬಾರದಂತೆ ಒಡಮೂಡಿರಬಹುದೆಂಬ ಸಣ್ಣ ಕಲ್ಪನೆಯೂ ನಮಗಿರಲಿಲ್ಲ. ಅಂತದ್ದೊಂದು ಸಣ್ಣ ಸುಳಿವು ಸಿಕ್ಕಿದ್ದರೂ ನಿನ್ನ ಮನಸಿಗೆ ಹಿಂಸೆಯಾಗುವಂತಹ ಈ ಮಾತುಕತೆಯ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ನಮ್ಮನ್ನು ಕ್ಷಮಿಸಿಬಿಡು" ಎಂದ.

"ನೀವ್ಯಾಕೆ ಕ್ಷಮೆ ಕೇಳ್ಬೇಕು ಅಭಿರಾಮ್. ಹಾಗೇ ನೋಡಿದ್ರೆ ನಾನೇ ನಿಮ್ಮೆಲ್ಲರ ಕ್ಷಮೆ ಕೇಳಬೇಕು. ನೀವೆಲ್ಲಾ ಅಷ್ಟು ಆತ್ಮೀಯತೆಯಿಂದ ನನಗಾಗಿ ಕಾದಿದ್ರೀ. ಆದರೆ ನಾನು ನಿಮ್ಮೆಲ್ಲರ ಸಂತೋಷವನ್ನು ಹಾಳುಮಾಡಿ, ಎಲ್ಲರಿಗೂ ನೋವುಕೊಟ್ಟು ಬಂದೆ. ಸಾಧ್ಯವಾದ್ರೇ ನನ್ನ ನೀವೆಲ್ಲಾ ಕ್ಷಮಿಸಿಬಿಡಿ. 

ಎಂಡ್ ಥ್ಯಾಂಕ್ಸ್ ಅ ಲಾಟ್ ನನ್ನ ಮನೆಯವರು ಅನ್ನಿಸಿಕೊಂಡ ಜನ ನನ್ನಿಂದ ಮುಚ್ಚಿಟ್ಟ ವಿಷಯನ ನನಗೆ ತಿಳಿಸಿದ್ದಕ್ಕೆ, ಮದುವೆ ಅಂದ್ರೆ ವ್ಯವಹಾರ ಅಲ್ಲ ಅಂತ ಭಾವಿಸಿದ್ದಕ್ಕೆ, ಮದುವೆ ಮಾಡಿಕೊಳ್ಳೋ ಹೆಣ್ಣಿನ ಅಭಿಪ್ರಾಯವೂ ಮುಖ್ಯ ಅಂತ ನಿಮಗೆಲ್ಲಾ ಅನಿಸಿದ್ದಕ್ಕೆ, ಹಣವಂತರೆಲ್ಲ ಸತ್ಯಂ ರಾವ್ ಅವರ ತರಾ ಯೋಚಿಸಲ್ಲ‌ ಅಂತ ತೋರಿಸಿಕೊಟ್ಟಿದ್ದಕ್ಕೆ.... ಎಲ್ಲಕ್ಕೂ ತುಂಬಾ ಥ್ಯಾಂಕ್ಸ್... ನೀವು ಇವತ್ತು ಹೇಳಿರಲಿಲ್ಲ ಅಂದ್ರೆ ತಾಳಿ ಕತ್ತಿಗೆ ಬೀಳೋವರೆಗೂ ನನ್ನ ಮದ್ವೆ ವಿಷ್ಯ ನನಗೇ ಗೊತ್ತಾಗ್ತಿರ್ಲಿಲ್ಲ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಅಭಿರಾಮ್. ಸಾಧ್ಯವಾದಲ್ಲಿ ಕ್ಷಮಿಸಿ. ಬರ್ತೀನಿ. ಬಾಯ್"

ಅವಳು ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದು, ಅವಳು ಮನೆಯೊಳಗೆ ತೆರಳಿದ ನಂತರ ತನ್ನ ಮನೆಯತ್ತ ಹೊರಟವನ ಮನದಲ್ಲಿ ನಿರ್ಧಾರವೊಂದು ದೃಢವಾಗಿತ್ತು......

         *******ಮುಂದುವರೆಯುತ್ತದೆ********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ