ಅಭಿವ್ಯಕ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಭಿವ್ಯಕ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜುಲೈ 7, 2020

ಲೋಕರೀತಿ.....

ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಾಜಪೂತ್ ನಟನೆಯ ಇನ್ನೂ ಬಿಡುಗಡೆಯಾಗಬೇಕಿರುವ ಬಹು ನಿರೀಕ್ಷಿತ(ಆತನ ಸಾವಿನ ಕಾರಣ) 'ದಿಲ್ ಬೇಚಾರಾ' ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಯಿತು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದಿದೆ. ರೆಕಾರ್ಡ್ ಬ್ರೇಕಿಂಗ್ ಫಾಸ್ಟೆಸ್ಟ್ ಮಿಲಿಯನ್ ಲೈಕ್ಸ್, ಲಕ್ಷಾಂತರ ಶೇರ್ ಗಳು, ಹೊಗಳಿಕೆಗಳ ಅಬ್ಬರ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕಣ್ಣಿಗೆ ರಾಚುತ್ತಿದೆ. ಇವನ್ನೆಲ್ಲಾ ನೋಡಿದಾಗ ಬೇಡವೆಂದರೂ ಮನವನ್ನಾವರಿಸಿದ್ದು ಒಂದೇ ಪ್ರಶ್ನೆ........ ಇದೇ ಸುಶಾಂತ್ ಸಿಂಗ್ ರಾಜಪೂತ್ ಎಂಬ ಯಾವುದೇ ಗಾಡ್ ಫಾದರ್ಗಳಿಲ್ಲದ, ಸ್ವಸಾಮರ್ಥ್ಯದಿಂದ ಮೇಲೆ ಬಂದ ಹುಡುಗ ಇಂದು ನಮ್ಮ ನಡುವೆ ಬದುಕಿದ್ದಿದ್ದರೆ ಈ ಟ್ರೇಲರ್ ಇಷ್ಟೊಂದು ಸದ್ದು ಮಾಡುತ್ತಿತ್ತೇ......? 

ಪ್ರಾಯಶಃ ಇಲ್ಲ..... ಇದು ಆತನ ನಟನೆಯ ಕೊನೆಯ ಸಿನಿಮಾ ಎಂಬುದೇ 'ದಿಲ್ ಬೇಚಾರ' ಎಂಬ ಸಿನಿಮಾದ ಟ್ರೇಲರನ್ನು ಟ್ರೆಂಡಿಂಗ್ ಲಿಸ್ಟಿಗೆ ತಲುಪಿಸಿರುವುದು ಅನ್ನುವುದು ಅರಗಿಸಿಕೊಳ್ಳಲು ಕಠಿಣವಾದರೂ ಸತ್ಯ. ಬದುಕಿದ್ದಾಗ ಪ್ರತಿಭೆಗೆ ಸಿಗದ ಬೆಲೆ, ಮನ್ನಣೆ ಸತ್ತ ನಂತರ ಸಿಕ್ಕರೆಷ್ಟು ಬಿಟ್ಟರೆಷ್ಟು? ಈ ಖ್ಯಾತಿ, ಹೊಗಳಿಕೆ, ಆತನ ನಟನೆ ಹಾಗೂ ಹೃದಯವಂತಿಕೆಯ ಬಗೆಗಿನ ಸಾಲು ಸಾಲು ವಿಡಿಯೋ, ಪೋಸ್ಟ್, ಟ್ವೀಟ್ ಇತ್ಯಾದಿಗಳು ಅವನ ಅತ್ಯಾಪ್ತ ವಲಯದಲ್ಲಿ ಆತನ ಸಾವು ಸೃಷ್ಟಿಸಿದ ಖಾಲಿತನವನ್ನು ತುಂಬಬಲ್ಲದೇ? ಆತನ ಅನಿರೀಕ್ಷಿತ ಸಾವಿನ ಹಿನ್ನೆಲೆಯಲ್ಲಿ 'ದಿಲ್ ಬೇಚಾರ' ಸಿನಿಮಾಕ್ಕೆ ಸಿಗುತ್ತಿರುವ ಈ ಖ್ಯಾತಿ ಅದರ ನಿರ್ಮಾಪಕ, ನಿರ್ದೇಶಕ, ವಿತರಕರ ಜೇಬು ತುಂಬಿಸಬಹುದೇ ಹೊರತು ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಆ ತಂದೆಯ ಜೀವನಪರ್ಯಂತದ ನೋವನ್ನು, ತೆರೆಯ ಮೇಲೆ ಮಗನ ಮೊಗ ಕಂಡಾಗಲೆಲ್ಲಾ ಭಾರವಾಗುವ ಮನವನ್ನು ಸಾಂತ್ವನಿಸಬಲ್ಲದೇ? ಇದನ್ನು ಯೋಚಿಸುವಾಗ ಮೀನಾ ಕುಮಾರಿಯವರ ಸಾವಿನ ನಂತರದ 'ಪಾಕೀಜಾ಼' ಚಿತ್ರದ ಅಭೂತಪೂರ್ವ ಯಶಸ್ಸು ನೆನಪಾಗುತ್ತದೆ. 

ಬದುಕಿದ್ದಾಗ ತಿಳಿಯದ ವ್ಯಕ್ತಿಯ ಬೆಲೆ ಆತ ಕಣ್ಮರೆಯಾದ ನಂತರ ಅರಿವಿಗೆ ಬರುವುದು ವಿಪರ್ಯಾಸವಲ್ಲದೆ ಮತ್ತೇನು? ಒಬ್ಬ ವ್ಯಕ್ತಿ ಜೀವಂತವಿದ್ದಾಗಲೇ ಅವನ ಅಸ್ತಿತ್ವವನ್ನು ಮರೆತವರಂತೆ ವರ್ತಿಸಿ ಆತ ಅಳಿದ ಮೇಲೆ ಇಡೀ ಜಗಕ್ಕೆ ತಿಳಿಯುವಂತೆ ಶೋಕಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸುವ ನಮ್ಮ ರೀತಿ ಕನಸುಗಳ ಸಮಾಧಿಯ ಮೇಲೆ ಚಂದದ ಸ್ಮಾರಕ ಕಟ್ಟಿದಂತೆಯೇ ಅಲ್ಲವೇ?