ಲೇಬಲ್ಗಳು
ಸೋಮವಾರ, ಆಗಸ್ಟ್ 8, 2022
ಮುಳುಗಿದ್ದು ಭಾರಂಗಿಯೇ, ಭರವಸೆಯೇ, ಬದುಕೇ....? ಪುನರ್ವಸು
ಭಾನುವಾರ, ಜುಲೈ 26, 2020
ಕಾರ್ಗಿಲ್ ಕಂಪನ
ಶನಿವಾರ, ಜುಲೈ 25, 2020
ಆರ್ತನಾದ - ಪುಸ್ತಕ ಪರಿಚಯ
ಸೋಮವಾರ, ಜುಲೈ 20, 2020
ಚಿತಾದಂತ
ಪುಸ್ತಕದ ಹೆಸರು : ಚಿತಾದಂತ
ಲೇಖಕರು : ಡಾ. ಕೆ.ಎನ್. ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಸ್ತುತ ಮುದ್ರಣ : 2017
ಪುಟಗಳು : 248 ಬೆಲೆ : 150 ರೂ
ಚರಿತ್ರೆ ಎನ್ನುವುದು ಹಲವು ರಹಸ್ಯಗಳ ನಿಗೂಢ ಸಂಪುಟ. ಆ ಸಂಪುಟದೊಳಗಿನ ಪುಟಗಳಲ್ಲಿ ದಾಖಲಾದ ವಿಚಾರಗಳಿಗಿಂತ ಪುಟಗಳ ನಡುವೆ ಅಜ್ಞಾತವಾಗುಳಿದು ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯಗಳೇ ಹೆಚ್ಚು ಎನ್ನುವುದು ಒಪ್ಪಲೇಬೇಕಾದ ಸತ್ಯ. ಭಾರತದ ಮಟ್ಟಿಗೆ ನೋಡುವುದಾದರೆ ಇತಿಹಾಸವನ್ನೇ ತಿರುಚಿ ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಅದನ್ನೇ ನಮ್ಮ ಇತಿಹಾಸವೆಂಬಂತೆ ಬಿಂಬಿಸುವ ಹುನ್ನಾರ ಸ್ವಾತಂತ್ರ್ಯಾನಂತರದಿಂದ ವ್ಯವಸ್ಥಿತವಾಗಿ ನಮ್ಮದೇ ಶಿಕ್ಷಣ ವ್ಯವಸ್ಥೆಯ ಮೂಲಕ ನಡೆದಿದೆ ಎನ್ನುವ ಗಂಭೀರ ಆರೋಪ ಇತ್ತೀಚಿನ ದಿನಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಕೆಲ ಅಪಾತ್ರರನ್ನು ವೈಭವೀಕರಿಸುತ್ತಾ ಅವರನ್ನು ವೀರರಂತೆ, ದೇಶಭಕ್ತರೆಂಬಂತೆ ಬಿಂಬಿಸಿ ಅಸಲೀ ನಾಯಕರನ್ನು ಅಜ್ಞಾತವಾಗಿಯೇ ಉಳಿಸಲಾಗಿದೆ ಎನ್ನುವ ವಾದ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರಹಗಾರರೂ ಕೂಡಾ ಗತದಲ್ಲಿ ಎಲ್ಲೋ ಮರೆಯಾಗಿ ಉಳಿದಿರುವ ಅವ್ಯಕ್ತ ಸತ್ಯಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಭೈರಪ್ಪನವರ 'ಆವರಣ', ವಸುಧೇಂದ್ರರ 'ತೇಜೋ ತುಂಗಭದ್ರಾ' ಮೊದಲಾದವುಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ಅಂತಹದೇ ಐತಿಹಾಸಿಕ ಸತ್ಯಾಸತ್ಯತೆಗಳ ಜೊತೆಗೆ ಕಲ್ಪನೆಯನ್ನು ಬೆರೆಸಿ ಕಟ್ಟಿರುವ ಕಾದಂಬರಿ "ಚಿತಾದಂತ".
ತಮಗೇ ಅರಿವಾಗದಂತೆ ಕಾಲಗರ್ಭದಲ್ಲಿ ಹುದುಗಿದ ಐತಿಹಾಸಿಕ ರಹಸ್ಯವೊಂದರ ಸುಳಿಯಲ್ಲಿ ಸಿಲುಕುವ ಇಬ್ಬರು ಪುರಾತತ್ವಶಾಸ್ತ್ರಜ್ಞೆಯರು ಹೇಗೆ ಆ ಸಿಕ್ಕುಗಳನ್ನು ಬಿಡಿಸಿ ಅದರಿಂದ ಹೊರಬರುತ್ತಾರೆ ಎನ್ನುವುದೇ ಇಲ್ಲಿನ ಕಥೆಯಾದರೂ ಈ ಪ್ರಕ್ರಿಯೆಯಲ್ಲಿ ಅನಾವರಣಗೊಳ್ಳುವ ಇತಿಹಾಸದ ಅನುಕ್ತ ಪುಟಗಳೇ ಈ ಕಾದಂಬರಿಯ ಜೀವಾಳ. ಅಲೆಕ್ಸಾಂಡರ್ ನ ಗುಪ್ತನಿಧಿಯ ಅನ್ವೇಷಣೆ ಕಥೆಯ ಕೇಂದ್ರವೆನಿಸಿದರೂ ಕೂಡಾ ಅಲೆಗ್ಸಾಂಡರನ ದಂಡಯಾತ್ರೆಯಿಂದ ಹಿಡಿದು ನಂದರು, ಮೌರ್ಯರು, ಧಾರ್ಮಿಕ ಒಳಸುಳಿಗಳು, ಕ್ಯಾಂಡಿಯ ಪ್ರಸಿದ್ಧ ಬುದ್ಧದಂತ ಹೀಗೆ ಹಲವು ಐತಿಹಾಸಿಕ ವಿಚಾರಗಳು ಕಥೆಯಲ್ಲಿ ಅಂತರ್ಗತವಾಗಿವೆ. ಅಜೈವಿಕ ಪಂಥ, ಸಿಕಂದರ್, ಅಮಾರ್ತ್ಯ ರಾಕ್ಷಸ, ಚಾಣಕ್ಯ, ಅಶೋಕ ಮೊದಲಾದವರಿಗೆ ಸಂಬಂಧಿಸಿದ ಹಲವು ಸೂಕ್ಷ್ಮ ವಿವರಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಬೌದ್ಧ ಧರ್ಮದ ಉಗಮದಿಂದ ಆರಂಭಿಸಿ ಕಾಲಕ್ರಮೇಣ ಬಾಹ್ಯ ಪ್ರಭಾವದಿಂದ ಅದರಲ್ಲಾದ ಬದಲಾವಣೆಗಳು, ಬುದ್ಧನ ಮೂಲ ತತ್ವಗಳ ಉಳಿವಿಗಾಗಿ ಶ್ರಮಿಸುವ ತೇರವಾದಿಗಳು, ಅವರ ಹಾಗೂ ಮಹಾಯಾನರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಘರ್ಷಣೆಗಳು ಮೊದಲಾದ ಐತಿಹಾಸಿಕ ವಿಚಾರಗಳೊಂದಿಗೆ ಕಲಾಶ್ ಪಂಗಡದ ಬದುಕು ಬವಣೆಗಳು, ನ್ಯೂಟನ್ ಸ್ಟೋನ್, ಭಾಷೆ ಹಾಗೂ ಅದನ್ನು ಬಳಸುವ ಜನಾಂಗದ ನಡುವಿನ ಸಂಬಂಧ, ಪ್ರಾಚ್ಯವಸ್ತು ಮಾಫಿಯಾ ಮುಂತಾದ ವಿವರಗಳೂ ಇದರಲ್ಲಿವೆ.
ಲೇಖಕರು ಪ್ರಸ್ತಾವನೆಯಲ್ಲೇ ಸ್ಪಷ್ಟಪಡಿಸಿರುವಂತೆ ಸತ್ಯ ಮತ್ತು ಕಲ್ಪನೆಗಳನ್ನು ಬೆರೆಸುವಲ್ಲಿ ಅವರು ಯಾವುದೇ ಮಿತಿಯನ್ನು ಇರಿಸಿಕೊಂಡಿಲ್ಲ. ಕಲ್ಪನೆ ಯಾವುದು ಹಾಗೂ ಸತ್ಯ ಘಟನೆಗಳ್ಯಾವುವು ಎಂಬುದನ್ನು ಓದುಗರೇ ವರ್ಗೀಕರಿಸಿಕೊಳ್ಳಬೇಕು. ಹಾಗಂತ ಪುರಾವೆಗಳೊಂದಿಗೆ ನೀಡಿರುವ ವಿಚಾರಗಳು ಮಾತ್ರ ಸತ್ಯ ಉಳಿದವೆಲ್ಲವೂ ಲೇಖಕರ ಕಲ್ಪನೆ ಎಂದು ಸಾರಾಸಗಟಾಗಿ ನಿರ್ಧರಿಸಲೂ ಸಾಧ್ಯವಿಲ್ಲ. ಪುರಾವೆಗಳ ಹೊರತಾಗಿಯೂ ಲೇಖಕರು ಪ್ರಸ್ತುತಪಡಿಸಿರುವ ಹಲವು ಸಿದ್ಧಾಂತಗಳು, ಹಾಗೂ ಅವುಗಳ ಸಮರ್ಥನೆಗೆ ನೀಡಿರುವ ವಿವರಗಳು ಒಪ್ಪುವಂತಹದ್ದು. ಏಕೆಂದರೆ ಗತದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಿಲ್ಲ. ರಾಜರ ಆಸ್ಥಾನ ಕವಿಗಳು ಬರೆದ ಕಾವ್ಯಗಳು, ಸ್ವತಃ ರಾಜರೇ ಕೆತ್ತಿಸಿದ ಶಾಸನಗಳು ಮುಂತಾದವೇ ಚರಿತ್ರೆಯ ಮರುಸೃಷ್ಟಿಗೆ ಆಕರ. ಹಾಗಿರುವಾಗ ಆ ವಿವರಗಳು ಸಂಪೂರ್ಣ ಸತ್ಯ ಎನ್ನುವುದು ಮೂರ್ಖತನವೇ ಸೈ. ಹಾಗಾಗಿ ಚರಿತ್ರೆಯನ್ನು ಬೇರೆ ಬೇರೆ ಆಯಾಮಗಳಿಂದ ಪರಾಮರ್ಶಿಸುವುದು ಅತ್ಯಗತ್ಯ. ಅದನ್ನೇ ಲೇಖಕರು ಇಲ್ಲಿ ಅಳವಡಿಸಿಕೊಂಡಿದ್ದಾರೆ. ಚರಿತ್ರೆಯಲ್ಲಿನ ಹಲವು ಘಟನೆಗಳನ್ನು ಬೆದಕಿ ತೆಗೆದು ಅದನ್ನು ಕಾಲಾನುಕ್ರಮದಲ್ಲಿ ಜೋಡಿಸುವಲ್ಲಿ ಇತಿಹಾಸದ ವಾಸ್ತವಿಕ ಅಂಶಗಳನ್ನು ಪರಿಗಣಿಸಿದ್ದರೆ ಅವುಗಳ ನಡುವೆ ಸಂಪರ್ಕದ ಕೊಂಡಿ ಬೆಸೆಯುವಲ್ಲಿ ಓದುಗರನ್ನು ಅವಲೋಕನಕ್ಕೆ ಒಳಪಡಿಸುವ ಕೆಲವು ಸುಳಿವುಗಳನ್ನು ನೀಡಿದ್ದಾರೆ. ಆ ಮೂಲಕ ಚರಿತ್ರೆಯ ಕೆಲ ಭೂಗತ ಸತ್ಯಗಳತ್ತ ಓದುಗರನ್ನು ಚಿಂತನೆಗೆ ಹಚ್ಚಿದ್ದಾರೆ. ಹಲವು ಚದುರಿದ ಚೂರುಗಳನ್ನು ಕ್ರೋಢೀಕರಿಸಿಕೊಂಡಾಗ ಮೂಡುವ ಚಿತ್ರ ನಾವು ಇದುವರೆಗೆ ಓದಿದ ಚರಿತ್ರೆಗಿಂತ ಭಿನ್ನವಾಗಿ ಕಾಣುತ್ತದೆ ಎಂಬುದು ಗಮನಿಸಬೇಕಾದ ಅಂಶ.
ಇದೆಲ್ಲವನ್ನೂ ಹೊರತುಪಡಿಸಿ ಕಾದಂಬರಿಯ ಬಗ್ಗೆ ಹೇಳುವುದಾದರೆ ಓದುಗರನ್ನು ಭೂತ, ವರ್ತಮಾನಗಳೆರಡರ ನಡುವೆ ಕೊಂಡೊಯ್ಯುತ್ತಾ ಕುತೂಹಲಕಾರಿಯಾಗಿ ಸಾಗುವ ಚಿತಾದಂತ ಒಂದಿಷ್ಟೂ ಬೇಸರಗೊಳಿಸದೆ ಓದಿಸಿಕೊಳ್ಳುತ್ತದೆ. ಸನ್ನಿವೇಶ ಸಂಬಂಧಿತ ನಕ್ಷೆ, ಚಿತ್ರಗಳು, ಬ್ರಾಹ್ಮಿ ಹಾಗೂ ಗ್ರೀಕ್ ಲಿಪಿಯ ಕೋಡ್ ಗಳು ಈ ಪಯಣವನ್ನು ಇನ್ನಷ್ಟು ರೋಚಕವಾಗಿಸುವ ಜೊತೆಗೆ ಪ್ರತೀ ಸನ್ನಿವೇಶವನ್ನೂ ಚಿತ್ರಿಸಿಕೊಳ್ಳಲು ಸಹಕಾರಿಯಾಗಿವೆ. ಇದಕ್ಕಾಗಿ ಲೇಖಕರು ನಡೆಸಿರುವ ಅಧ್ಯಯನ, ತೆಗೆದುಕೊಂಡಿರುವ ಶ್ರಮ ಶ್ಲಾಘನೀಯ. ಒಂದೇ ಗುಟುಕಿಗೆ ಓದಿ ಮುಗಿಸಬಹುದಾದಂತಹ ಕಾದಂಬರಿಯಾದರೂ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪುರಾತತ್ವ ಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ ಮೊದಲಾದವುಗಳಲ್ಲಿ ಆಸಕ್ತಿ ಹೊಂದಿರುವವರು ವಿವರವಾಗಿ ವಿಶ್ಲೇಷಿಸಿ ಅವಲೋಕಿಸುತ್ತಾ ಓದುವಂತಹ ಸಂಗ್ರಹಯೋಗ್ಯ ಪುಸ್ತಕ ಎನಿಸಿತು. ಅಂದು ಹಾಗೆ ಇದು ನಾನೋದಿದ ಗಣೇಶಯ್ಯನವರ ಮೊದಲ ಕಾದಂಬರಿ. ಈವರೆಗೆ ಅದೇಕೆ ಇವರ ಬರಹಗಳನ್ನು ಓದಲಿಲ್ಲ ಎನ್ನುವ ಭಾವ ಕಾಡಿದ್ದು ಸುಳ್ಳಲ್ಲ.
(ಇದು ಪುಸ್ತಕದ ವಿಮರ್ಶೆಯಲ್ಲ. ಪುಸ್ತಕ ಓದಿದ ನಂತರ ನನಗನ್ನಿಸಿದ್ದನ್ನು ಅನಿಸಿಕೆಯಾಗಿ ಬರೆದಿರುವೆನಷ್ಟೇ)
ಶನಿವಾರ, ಜುಲೈ 4, 2020
ಪುಸ್ತಕ ವಿಮರ್ಶೆ - ವೈದೇಹಿಯವರ ಆಯ್ದ ಕಥೆಗಳು
ಭಾನುವಾರ, ಜೂನ್ 21, 2020
ಸ್ನೇಹ ಪ್ರೇಮ
ಪುಸ್ತಕದ ಹೆಸರು : ಸ್ನೇಹ - ಪ್ರೇಮ
ತೆಲುಗು ಮೂಲ : ಯಂಡಮೂರಿ ವೀರೇಂದ್ರನಾಥ್
ಅನುವಾದಕರು : ರಾಜಾ ಚೆಂಡೂರ್
ಪ್ರಕಾಶಕರು : ಹಂಸಧ್ವನಿ ಪ್ರಕಾಶನ, ಬೆಂಗಳೂರು
ಪ್ರಥಮ ಮುದ್ರಣ : 1986
ಪುಟಗಳು : 135
"ಮಾನಸಿಕವಾಗಿ ಕೃಷ್ಣನ ವರಿಸಿದ ರಾಧೆ ಕೆಟ್ಟವಳೇ? ವಿವಾಹವಾಗದೇ ಕರ್ಣನ ಹಡೆದ ಕುಂತಿ ಕೆಟ್ಟವಳೇ?" ಎಂಬೆರಡು ಭಾವ ಸೂಕ್ಷ್ಮ ಪ್ರಶ್ನೆಗಳನ್ನಿಟ್ಟುಕೊಂಡು ನಾಲ್ಕು ವಿಭಿನ್ನ ಮನಸ್ಸತ್ವಗಳ ಮುಖೇನ ಬದುಕಿನ ಪರಿಧಿಯೊಳಗಣ ಸ್ನೇಹ, ಪ್ರೇಮ, ವಾಂಛೆಗಳ ಮೇಲಾಟದ ಬಗ್ಗೆ ವಿಶ್ಲೇಷಿಸುವ ಕಿರು ಕಾದಂಬರಿಯಿದು.
ಸ್ನೇಹ, ಪ್ರೇಮಕ್ಕೆಲ್ಲಾ ವಿವಾಹವೇ ಮೆಟ್ಟಿಲೆನ್ನುವ ರಾಧಾ, ಪ್ರೇಮವೆನ್ನುವುದಕ್ಕೆ ಅಸ್ತಿತ್ವವೇ ಇಲ್ಲವೆನ್ನುವ ಜಯಾ, ಒಂದು ರಾತ್ರಿಯ ನಿಕಟತ್ವದಿಂದ ಪ್ರೇಮದಲ್ಲಿ ಬೀಳುವ ಪಾರ್ಥಸಾರಥಿ, ಸ್ನೇಹ ಪ್ರೇಮಗಳೆಲ್ಲಾ ಕೇವಲ ದೈಹಿಕ ಸಾಮೀಪ್ಯ ಸಾಧನೆಗಾಗಿ ಎಂಬ ಮನೋಭಾವದ ಕೃಷ್ಣ. ಈ ನಾಲ್ಕು ಪಾತ್ರಗಳ ಭಿನ್ನ ವಿಚಾರಧಾರೆಗಳ ಮೂಲಕ ಗಂಡು ಹೆಣ್ಣಿನ ನಡುವಿನ ಸ್ನೇಹ - ಪ್ರೇಮದ ಮೂಲವೇನು? ದೈಹಿಕ ಸಾಮೀಪ್ಯವೇ ಸ್ನೇಹ/ಪ್ರೇಮದಲ್ಲಿ ಆತ್ಮೀಯತೆಯನ್ನು ಬೆಸೆಯುವ ಸಾಧನವೇ ಎಂಬಂತಹ ಸೂಕ್ಷ್ಮ ಪ್ರಶ್ನೆಗಳಿಗೆ ನೈತಿಕತೆಯ ನೆಲೆಗಟ್ಟಿನಲ್ಲಿ ಉತ್ತರ ನೀಡಲು ಯತ್ನಿಸುತ್ತದೆ ಈ ಕಾದಂಬರಿ.
ಮದುವೆಗೆ ಮುನ್ನವೇ ದೈಹಿಕ ಸಾಮೀಪ್ಯ ಎನ್ನುವ ಸ್ತ್ರೀ ಮೋಹಿ ಕೃಷ್ಣ ರಾಧಾಳ ಸ್ನೇಹ ಬಯಸುತ್ತಾನೆ. ಸ್ನೇಹ, ಪ್ರೇಮಗಳೆಲ್ಲಾ ವಿವಾಹದ ಚೌಕಟ್ಟಿನಲ್ಲೇ ಎಂಬ ಚಿಂತನೆಯ ರಾಧಾ ಆತನ ಸ್ನೇಹವನ್ನು ನಿರಾಕರಿಸುತ್ತಾಳೆ. ಇದರಿಂದ ಕಂಗೆಡುವ ಕೃಷ್ಣ ಅವಳದೇ ಹಾದಿಯಲ್ಲಿ ಸಾಗಿ ವಿವಾಹದ ನಾಟಕವಾಡಿ ತನ್ನ ಕಾರ್ಯಸಾಧಿಸಿಕೊಂಡು ರಾಧಾಳಿಗೆ ಆಘಾತ ನೀಡುತ್ತಾನೆ. ಶೀಲ, ಪಾವಿತ್ರ್ಯತೆ ಮುಂತಾದ ಪರಿಕಲ್ಪನೆಗಳಿಂದ ಮಾರು ದೂರ ನಿಲ್ಲುವ ಜಯಾಳ ಪ್ರಕಾರ ಪ್ರೇಮವೆಂಬುದು ವಾಂಛೆಯ ಮೇಲೆ ಹೊದಿಸಿದ ನವಿರಾದ ಆತ್ಮವಂಚನೆಯ ಪರದೆಯಷ್ಟೇ. ಆಕೆ ಆ ಪರದೆಯಿಲ್ಲದೇ ನೇರಾನೇರ ತನಗಿಷ್ಟ ಬಂದಂತೆ ಬದುಕುವವಳು. ಹಾಗಾಗಿಯೇ ಪಾರ್ಥಸಾರಥಿಯೊಂದಿಗಿನ ಸಂಬಂಧ ಆಕೆಗೆ ಕ್ಯಾಶುಯಲ್ ಎನ್ನಿಸುತ್ತದೆ. ಆದರೆ ವಯಸ್ಸು ಮೀರುತ್ತಿದ್ದರೂ ಏಕಾಂಗಿಯಾಗಿ ಒಂಟಿತನದ ಬೇಗೆಯಿಂದ ನರಳುವ ಪಾರ್ಥಸಾರಥಿಯವರಿಗೆ ಆಕೆಯ ಸಾಮೀಪ್ಯದಲ್ಲಿ ದೈಹಿಕ ಆನಂದಕ್ಕಿಂತ ಮಾನಸಿಕ ಆಸರೆ ಸಿಕ್ಕಂತೆ ಭಾಸವಾಗುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಹಿನ್ನೆಲೆ ತಿಳಿದಿದ್ದೂ ಆಕೆಯನ್ನು ವಿವಾಹವಾಗಲು ಬಯಸುತ್ತಾರೆ ಅವರು. ಕೃಷ್ಣನಿಂದ ನಂಬಿಕೆದ್ರೋಹಕ್ಕೊಳಗಾದ ರಾಧಾಳ ನಡೆಯೇನು, ಅವರಿಬ್ಬರ 'ವಿವಾಹವಲ್ಲದ' ವಿವಾಹ ಅಸ್ತಿತ್ವ ಕಳೆದುಕೊಂಡಿತೇ, ಜಯಾ ಸಾರಥಿಯವರನ್ನು ವಿವಾಹವಾಗುವಳೇ ಎಂಬುದೇ ಕಥಾ ಸಾರ.ಟ್ರಬಲ್ ಷಟ್ಟರ್ಸ್ ಸಂಸ್ಥೆಯ ಪ್ರೆಸಿಡೆಂಟ್ ಆಪತ್ಭಾಂದವ ಟಿ.ಎಸ್, ತನ್ನ ಹುಚ್ಚು ವಿಚಾರಧಾರೆಗಳಿಗೆ ಕ್ರಾಂತಿಕಾರಿ ವೇಷ ತೊಡಿಸಿ ಚಿತ್ರವಿಚಿತ್ರ ಯೋಜನೆಗಳನ್ನು ಹೆಣೆಯುವ ಮಾಡಿಸಂ(ಮ್ಯಾಡಿಸಂ) ಸಂಸ್ಥೆಯ ಪರಶುರಾಮ್ ಪಾತ್ರಗಳಿಗೂ ಕೂಡಾ ಕಥೆಯಲ್ಲಿ ಪ್ರಾಮುಖ್ಯತೆಯಿದೆ. ತಮ್ಮ ವಿಚಿತ್ರ ವ್ಯಕ್ತಿತ್ವ, ಲಘು ಹಾಸ್ಯ ಲೇಪಿತ ಮಾತುಗಳಿಂದಾಗಿ ಈ ಎರಡೂ ಪಾತ್ರಗಳು ನೆನಪಿನಲ್ಲುಳಿಯುತ್ತವೆ. ಆಲ್ ಇಂಡಿಯಾ ರೇಡಿಯೋ ಸ್ಥಾಪನೆ, ಅದರ ಕಾರ್ಯನಿರ್ವಹಣೆ, ಅಲ್ಲಿನವರ ಕೆಲಸದ ವೈಖರಿಯ ಬಗೆಗಿನ ಸಂಪೂರ್ಣ ವಿವರಣೆಯೂ ಈ ಕಾದಂಬರಿಯಲ್ಲಿದೆ.
ಪರಸ್ಪರ ವಿರುದ್ಧ ಚಿಂತನೆಗಳ ರಾಧಾ ಹಾಗೂ ಜಯಾರಲ್ಲಿ ಯಾರ ಚಿಂತನೆಗಳು ಸರಿಯಾದುದು ಎಂಬುದನ್ನು ಲೇಖಕರು ಓದುಗರ ತರ್ಕಕ್ಕೇ ಬಿಟ್ಟಿದ್ದಾರೆ. ಯಾವುದೇ ಪೂರ್ವಾಗ್ರಹವಿಲ್ಲದೇ ಯೋಚಿಸಿ ನೋಡಿದರೆ ಬಹುಶಃ ಇಬ್ಬರ ಚಿಂತನೆಗಳೂ ಸಂಪೂರ್ಣ ಸರಿ/ತಪ್ಪಲ್ಲವೇನೋ ಎನ್ನಿಸಿತು. ಮಾಮೂಲಿ ಯಂಡಮೂರಿ ಅವರ ಶೈಲಿಗಿಂತ ಕೊಂಚ ಭಿನ್ನವೆನಿಸುವ ಕಾದಂಬರಿ ಒಮ್ಮೆ ಓದಲಡ್ಡಿಯಿಲ್ಲ.
ಅಕ್ಷರಯಜ್ಞ ೧ & ೨
ಪುಸ್ತಕದ ಹೆಸರು : ಅಕ್ಷರಯಜ್ಞ ಭಾಗ 1 & 2
ತೆಲುಗು ಮೂಲ : ಸೂರ್ಯದೇವರ ರಾಮ್ ಮೋಹನರಾವ್
ಅನುವಾದಕರು : ಶ್ರೀಮತಿ ಸರಿತಾ ಜ್ಞಾನಾನಂದ
ಪ್ರಕಾಶಕರು : ಭಾಗ 1 - ಸ್ನೇಹಾ ಪಬ್ಲಿಷಿಂಗ್ ಹೌಸ್ (2012 ಮುದ್ರಿತ), ಭಾಗ 2 - ಬನಶಂಕರಿ ಪ್ರಿಂಟರ್ಸ್ (1992 ಮುದ್ರಿತ)
ಪುಟಗಳು : 200 + 216
ಬೆಲೆ : 120 + (ಈಗ ಎರಡನೇ ಭಾಗದ ಬೆಲೆ ಕೂಡಾ ಪ್ರಾಯಶಃ 120ರೂಪಾಯಿಗಳೇ ಇರಬೇಕು)
ಸೂರ್ಯದೇವರ ಅವರ ಈ ಕಾದಂಬರಿ ವಿಶ್ವ ಉದ್ಯಮ ವಲಯದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಬಿಸಿನೆಸ್ ಎಂಪೈರ್ ಒಂದು ಎದುರಿಸುವ ಅನಿರೀಕ್ಷಿತ ಸಮಸ್ಯೆ, ಅದರ ಪರಿಣಾಮ, ಸಮಸ್ಯೆಯ ಮೂಲ ಮುಂತಾದವುಗಳನ್ನು ಕೆದಕುತ್ತಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ಜಾಹೀರಾತು ಲೋಕದ ಒಳಸುಳಿಗಳು, ಕೌತುಕಗಳನ್ನು ತೆರೆದಿಡುತ್ತಾ ಸಾಗುತ್ತದೆ. ಎರಡು ಭಾಗಗಳಲ್ಲಿರುವ ಈ ಕಾದಂಬರಿಯ ಮೊದಲ ಭಾಗ ಉದ್ಯಮ ಜಗತ್ತು ಹಾಗೂ ಜಾಹೀರಾತು ವಲಯಕ್ಕಿರುವ ಅವಿನಾಭಾವ ಸಂಬಂಧ, ಇವೆರಡು ಒಂದಕ್ಕೊಂದು ಪೂರಕ/ಮಾರಕವಾಗಿ ಕಾರ್ಯನಿರ್ವಹಿಸುವ ರೀತಿ, ಬ್ರಾಂಡ್ ವಾರ್, ಜಾಹೀರಾತು ಲೋಕಕ್ಕೆ ಅತ್ಯಗತ್ಯವಾದ ಸೃಜನಾತ್ಮಕ ಚಿಂತನೆ ಮೊದಲಾದವುಗಳ ಬಗ್ಗೆ ಸೂಕ್ಷ್ಮವಾಗಿ ಹೇಳಿದರೆ ಎರಡನೇ ಭಾಗದಲ್ಲಿ ಕಥೆಗೆ ಪ್ರಾಧಾನ್ಯತೆ ದೊರಕಿದೆ.
ವಾಣಿಜ್ಯ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರಭಾವಿ ಸಂಸ್ಥೆ ಜೆ.ಜೆ ಬಿಸ್ನೆಸ್ ಎಂಪೈರ್ ನ ಮಾಲೀಕ, ಇಂಡಸ್ಟ್ರಿಯಲ್ ಎಂಪರರ್ ಎನಿಸಿಕೊಂಡಿರುವ ಜೆ.ಜೆ ಸೋಲನ್ನು ಎಂದಿಗೂ ಸಹಿಸದ ವ್ಯಕ್ತಿ. ಗೆಲುವನ್ನೇ ಜೀವನ ಧ್ಯೇಯವನ್ನಾಗಿಸಿಕೊಂಡ ವೃದ್ಧ ಜೆ.ಜೆ ಗೆ ತನ್ನ ಮೊಮ್ಮಗಳಾದ ಮೌನಿಕಾಳನ್ನು ತನ್ನ ಸಾಮ್ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡಿ ತಾನು ವಿಶ್ರಾಂತಿ ಪಡೆಯಬೇಕೆಂಬ ಹಂಬಲ. ಹಾಗಾಗಿಯೇ ಮೌನಿಕಾಳನ್ನು ಜೆ.ಜೆ ಎಂಪೈರಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಿಸಿ ಅವಳಿಗೆ ವ್ಯವಹಾರದ ಒಳ ಹೊರಗುಗಳನ್ನು ಪರಿಚಯಿಸುವ ಕೆಲಸ ಆರಂಭಿಸುತ್ತಾನೆ. ಆದರೆ ಮೌನಿಕಾ ಇ.ಡಿ ಯಾಗಿ ನೇಮಕಗೊಂಡ ತಿಂಗಳೊಳಗೇ ಜೆ.ಜೆ ಕಂಪನಿ ಇಟಲಿಯ ಫಿಯೆಟ್ ಕಂಪನಿಯ ಕೊಲ್ಯಾಬರೇಷನ್ ನಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ವ್ಯಾನ್ ಗಳು ಮಾರಾಟವಾಗದೇ ಗೋಡೌನಿನಲ್ಲಿ ಉಳಿದು ಅನಿರೀಕ್ಷಿತವಾಗಿ ಸೋಲಿನ ರುಚಿ ಕಾಣಬೇಕಾಗುತ್ತದೆ. ಈ ಸೋಲು ತನ್ನ ಅಸ್ತಿತ್ವಕ್ಕೆ, ಕಾರ್ಯಕ್ಷಮತೆಗೆ, ಸಾಮರ್ಥ್ಯಕ್ಕೆ ಸವಾಲೆಸೆಯುವಂತೆ ಕಾಣುತ್ತದೆ ಮೌನಿಕಾಳಿಗೆ. ಹಾಗಾಗಿಯೇ ತಾತನ ಆರು ತಿಂಗಳ ಗಡುವನ್ನು ಒಪ್ಪಿಕೊಂಡು ಈ ಸೋಲಿನ ತಳಬುಡ ಶೋಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಆ ಮೂಲಕ ಸೋಲನ್ನು ಗೆಲುವಾಗಿ ಪರಿವರ್ತಿಸುವ ಪಣ ತೊಡುವಾಕೆ ಜೆ.ಜೆ ಎಂಪೈರಿಗೆ ಅತ್ಯಂತ ನಿಷ್ಠ ಸಲಹೆಗಾರ, ಜೆ.ಜೆಯ ಪರಮಾಪ್ತ ರಮಣಯ್ಯನ ಸಹಕಾರ ಪಡೆಯುತ್ತಾಳೆ.
ರಮಣಯ್ಯನ ಮುಖಾಂತರ ಮಾರ್ಕೆಟಿಂಗ್ ಡೈರೆಕ್ಟರ್ ಸಿಂಘಾನಿಯಾನ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ ಎಂಬುದನ್ನು ಅರಿಯುವ ಮೌನಿಕಾಳಿಗೆ ಮಾರ್ಕೆಟಿಂಗ್ ಸೆಕ್ಷನ್ನಿನಲ್ಲಿ ಮುಂಚೆ ಸೇಲ್ಸ್ ಮ್ಯಾನೇಜರ್ ಆಗಿದ್ದು ಸಿಂಘಾನಿಯಾನ ಕಿರುಕುಳದಿಂದ ರಾಜೀನಾಮೆ ಕೊಟ್ಟು ಹೋದ ಮಾಥುರ್ ಎಂಬ ಪ್ರತಿಭಾನ್ವಿತ ಯುವಕನ ಬಗ್ಗೆ ಮಾಹಿತಿ ದೊರಕುತ್ತದೆ. ತನ್ನ ಸಮಸ್ಯೆಯನ್ನು ಪರಿಹರಿಸಲು ಕೇವಲ ಮಾಥುರ್ ನಿಂದ ಮಾತ್ರ ಸಾಧ್ಯ ಎಂದು ನಿರ್ಧರಿಸಿ ಅವನನ್ನು ಹುಡುಕುವ ಕಾರ್ಯ ಆರಂಭಿಸುತ್ತಾಳೆ.
ರವಿ ಮಾಥುರ್ ಬುದ್ಧಿ, ಪ್ರತಿಭೆ, ಕ್ರಿಯಾತ್ಮಕ ಚಿಂತನೆಗಳೆಲ್ಲವನ್ನೂ ಭರಪೂರ್ಣವಾಗಿ ಹೊಂದಿದ್ದೂ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಭಾರದ್ವಾಜ್, ಅವನ ಮಗಳು ವೀನಸ್ ಹಾಗೂ ತನ್ನ ಅತ್ತಿಗೆ ಪ್ರಮೀಳಾಳ ಕಾರಣ ಹಲವು ತೊಂದರೆ ಅನುಭವಿಸಿ, ಜೆ.ಜೆ ಎಂಪೈರಿನ ಕೆಲಸವನ್ನೂ ಬಿಟ್ಟು ಕುಡಿತದ ದಾಸನಾಗಿ ಬದುಕುತ್ತಿರುವವನು. ಇಂತಹ ಮಾಥುರ್ ಕಠಿಣ ಸನ್ನಿವೇಶವೊಂದರಲ್ಲಿ ತನ್ನ ಜೀವನ ವಿಧಾನವನ್ನು ಬದಲಿಸಿಕೊಂಡು ತಾನೂ ಸಂಪಾದಿಸಬೇಕೆಂಬ ಜಿದ್ದಿಗೆ ಬೀಳುತ್ತಾನೆ. ಹಿಂದೊಮ್ಮೆ ತಾನು ಪ್ರಜ್ಞೆಯೇ ಇಲ್ಲದಂತೆ ಕುಡಿದು ಬಿದ್ದಿದ್ದಾಗ ತನ್ನನ್ನು ಉಪಚರಿಸಿದ ಗಂಗಾಧರರಾಯರ 'ಕಲ್ಪನಾ ಅಡ್ವರ್ಟೈಸರ್ಸ್' ಎಂಬ ಹಾಳುಬಿದ್ದ ಕಂಪನಿಯನ್ನು ಪುನಶ್ಚೇತನಗೊಳಿಸಿ ಆ ಮೂಲಕ ತನ್ನ ವೈರಿ ಭಾರದ್ವಾಜನಿಗೆ ಬುದ್ಧಿ ಕಲಿಸಲು ನಿರ್ಧರಿಸುತ್ತಾನೆ. ಗಂಗಾಧರರಾಯರ ಅಡ್ವರ್ಟೈಸಿಂಗ್ ಏಜೆನ್ಸಿ ಅಧೋಗತಿ ತಲುಪಿದ್ದೂ ಭಾರದ್ವಾಜನಿಂದಲೇ ಎಂಬುದು ತಿಳಿದ ನಂತರವಂತೂ ಅವನ ನಿರ್ಧಾರ ಇನ್ನೂ ಬಲವಾಗುತ್ತದೆ. ಗಂಗಾಧರರಾಯನ ಮಗ ಭಾರ್ಗವ ಮಾಥುರ್ ಗೆ ಒತ್ತಾಸೆಯಾಗಿ ನಿಲ್ಲುತ್ತಾನೆ. ಇವೆಲ್ಲಾ ವಿಚಾರಗಳೂ ಮೌನಿಕಾಳಿಗೆ ತಿಳಿಯುತ್ತದೆ. ಶ್ರೀಮಂತರ ಬಗ್ಗೆ ಅಪಾರ ತಿರಸ್ಕಾರ ಹೊಂದಿರುವ ಮಾಥುರ್ ತಾನು ಯಾರೆಂಬ ಸತ್ಯ ತಿಳಿದರೆ ದಾಸ್ತಾನಿರುವ ವ್ಯಾನುಗಳನ್ನು ಮಾರಲು ಸಹಾಯ ಮಾಡುವುದಿರಲಿ ತನ್ನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ ಎಂಬುದನ್ನು ಗ್ರಹಿಸುವ ಮೌನಿಕಾ ಮಧ್ಯಮ ವರ್ಗದ ನಿರುದ್ಯೋಗಿ ಯುವತಿಯ ಸೋಗಿನಲ್ಲಿ ಮಾಥುರ್ ಆಗಿನ್ನೂ ಆರಂಭಿಸಿದ್ದ 'ಮೆಡಿಸನ್ ಅವೆನ್ಯೂ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಮೂರನೇ ಪಾಲುದಾರಳಾಗಿ ಅವರೊಂದಿಗೆ ಸೇರಿಕೊಳ್ಳುತ್ತಾಳೆ.
ಮಾಥುರ್ ತನ್ನ ಬುದ್ಧಿಮತ್ತೆಯಿಂದ ಹಂತಹಂತವಾಗಿ ಪ್ರಚಾರರಂಗದಲ್ಲಿ ಮೇಲೇರುತ್ತಾ ಹೋಗುತ್ತಾನೆ. ಜೊತೆಗೇ ತನ್ನ ವೈರಿ ಭಾರದ್ವಾಜನಿಗೆ ಏಟು ನೀಡುವ ಯಾವ ಅವಕಾಶವನ್ನೂ ಬಿಡದೇ ಬಳಸಿಕೊಂಡು ನಷ್ಟದ ರುಚಿ ತೋರಿಸುತ್ತಾನೆ. ಇತ್ತ ಜಾಣ್ಮೆಯಲ್ಲಿ ಮಾಥುರನಿಂದ ತನ್ನ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ಮೌನಿಕಾ ರಮಣಯ್ಯನ ನೇತೃತ್ವದಲ್ಲಿ 'ಎಂ.ಎಂ ಅಡ್ವರ್ಟೈಸಿಂಗ್ ಏಜೆನ್ಸಿ' ಸ್ಥಾಪಿಸಿ ಮಾಥುರ್ ನೀಡಿದ ಸೃಜನಾತ್ಮಕ ಉಪಾಯಗಳ ಬಲದಿಂದ ಗೋಡೌನಿನಲ್ಲಿದ್ದ ಎಲ್ಲಾ ವ್ಯಾನುಗಳನ್ನೂ ಮಾರಾಟವಾಗುವಂತೆ ಮಾಡುತ್ತಾಳೆ. ಇದು ಜೆ.ಜೆ ಎಂಪೈರಿನ ಪ್ರಚಾರದ ಹೊಣೆಹೊತ್ತ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಗೆ ಪ್ರಬಲವಾದ ಆಘಾತ ನೀಡುತ್ತದೆ. ಇದರಿಂದಾಗಿ ಕೆಂಡಾಮಂಡಲವಾಗುವ ವೀನಸ್ ತಮ್ಮ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ಮುರಿದ ಬಗ್ಗೆ ಮೌನಿಕಾಳನ್ನು ಪ್ರಶ್ನಿಸುತ್ತಾಳೆ. ಜೆ.ಜೆ ಕಂಪನಿಯ ವ್ಯಾನುಗಳು ಮಾರಾಟವಾಗದೇ ಉಳಿಯಲು ಕ್ವೀನ್ಸ್ ಏಜೆನ್ಸಿಯ ಕಳಪೆ ಪ್ರಚಾರವೇ ಕಾರಣ ಎಂದು ನೇರವಾಗಿ ಆಪಾದಿಸುವ ಮೌನಿಕಾ ಕ್ವೀನ್ಸ್ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ರದ್ದುಪಡಿಸುತ್ತಾಳೆ.
ಆರಂಭದಲ್ಲಿ ಮಾಥುರ್ ನ ಬುದ್ಧಿವಂತಿಕೆ, ದೂರದೃಷ್ಟಿ, ಎಂತಹ ಕ್ಲಿಷ್ಟ ಸಮಸ್ಯೆಯನ್ನಾದರೂ ಕ್ಷಣದೊಳಗೆ ಪರಿಹರಿಸಬಲ್ಲ ಅವನ ಕುಶಾಗ್ರಮತಿಯ ಬಗ್ಗೆ ಗೌರವತಾಳುವ ಮೌನಿಕಾ ಕ್ರಮೇಣ ಅವನಲ್ಲಿ ಅನುರಕ್ತಳಾಗುತ್ತಾಳೆ. ತನ್ನ ಅಸಲೀ ಅಸ್ತಿತ್ವವನ್ನು ಮರೆಮಾಚಿ ಆತನಿಗೆ ಮೋಸಮಾಡುತ್ತಿದ್ದೇನೆಂಬ ಭಾವ ತೀವ್ರವಾಗಿ ಆಕೆಯನ್ನು ಕಾಡತೊಡಗುತ್ತದೆ. ಇತ್ತ ಮಾಥುರ್ ಮನ ಕೂಡಾ ಮೌನಿಕಾಳೆಡೆಗಿದೆ ಎಂಬುದು ಭಾರ್ಗವನಿಗೆ ತಿಳಿದ ವಿಚಾರ. ಆದರೆ ತಾನು ಮಾಥುರ್ ನ ಹೆಂಡತಿಯೆಂದು ಆಗೀಗ ಪ್ರತ್ಯಕ್ಷಳಾಗುವ ವೀನಸ್, ಅವಳ ಮಾತಿಗೆ ವಿರೋಧ ಸೂಚಿಸದೇ ಸುಮ್ಮನಿರುವ ಮಾಥುರ್ ಅವನಿಗೆ ಯಕ್ಷಪ್ರಶ್ನೆ.
ವೀನಸ್ ಹಾಗೂ ಮಾಥುರ್ ಗೆ ವಿವಾಹವಾಗಿತ್ತೇ, ಆಗಿದ್ದರೆ ಅವರಿಬ್ಬರೂ ಏಕೆ ದೂರವಾದರು, ಭಾರದ್ವಾಜನ ಮೇಲೆ ಮಾಥುರನಿಗೆ ಏಕಷ್ಟು ದ್ವೇಷ, ಭಾರದ್ವಾಜನಿಗೇಕೆ ಜೆ.ಜೆ ಎಂಪೈರ್ ಮೇಲೆ ಕಣ್ಣು ಎಂಬೆಲ್ಲಾ ಪ್ರಶ್ನೆಗಳ ಜೊತೆಗೆ ಮೌನಿಕಾ ಜೆ.ಜೆ ಎಂಪೈರಿನ ಉತ್ತರಾಧಿಕಾರಿಯಾಗುವಳೇ, ಅವಳ ಪ್ರೇಮ ಸಫಲವಾಗುವುದೇ ಎಂಬುದನ್ನು ಪುಸ್ತಕ ಓದಿಯೇ ತಿಳಿಯಬೇಕು.
ಮಾಥುರ್ ಎಂಬುದು ಕೇವಲ ಪಾತ್ರವಾಗದೇ ಲೇಖಕರ ಸೃಜನಾತ್ಮಕ ಚಿಂತನೆಗಳ ಮೂರ್ತರೂಪವೆನಿಸುತ್ತದೆ. ಅಷ್ಟು ಚೆನ್ನಾಗಿದೆ ಪಾತ್ರ ಪೋಷಣೆ. ಮೌನಿಕಾ ತನ್ನ ಏಕಾಗ್ರತೆ, ಸಾಧಿಸುವ ಛಲ ಹಾಗೂ ಜೀವನದ ಬಗೆಗಿನ ತನ್ನ ನಿಲುವಿನ ಕಾರಣ ಸದಾ ನೆನಪಿನಲ್ಲಿ ಉಳಿಯುತ್ತಾಳೆ. ಕಥೆಯ ಕೊನೆಯಲ್ಲಿ ಅಜ್ಜ ಹಾಗೂ ಮೊಮ್ಮಗಳ ನಡುವಿನ ಮಾತುಕತೆ ಬಹಳ ಅರ್ಥಪೂರ್ಣವಾಗಿದೆ. ವೀನಸ್ ಪಾತ್ರ ಮುಂದಾಲೋಚನೆಯಿಲ್ಲದ ಜಾಣ್ಮೆ, ಅಹಂಕಾರ, ನಿರ್ಲಕ್ಷ್ಯತನಕ್ಕೆ ಪ್ರತಿರೂಪವೆನಿಸುತ್ತದೆ. ರಮಣಯ್ಯನ ನಿಷ್ಠೆ, ಗಂಗಾಧರರಾಯರ ಸತ್ಯಸಂಧತೆ, ಭಾರ್ಗವನ ಸ್ನೇಹಪರತೆ, ಭಾರದ್ವಾಜನ ಕಪಟ, ಪ್ರಮೀಳಾ ರಾಣಿಯ ದಾಷ್ಟೀಕತೆ ಹೀಗೆ ಪ್ರತೀ ಪಾತ್ರವೂ ಅಚ್ಚಳಿಯದೆ ಮನದಲ್ಲಿ ಉಳಿಯುತ್ತದೆ. ಕಥೆಯ ಕೊನೆಯಲ್ಲಂತೂ ಊಹಾತೀತ ಅಚ್ಚರಿಗಳ ರಾಶಿಯೇ ಇದೆ.
ಈ ಕಾದಂಬರಿಯಲ್ಲಿ ಅಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಜಾಹೀರಾತಿನ ಪ್ರಾಮುಖ್ಯತೆಯನ್ನು ವಿವರಿಸಿರುವ ಪರಿ ನನಗೆ ಬಹಳ ಇಷ್ಟವಾಯಿತು. ಬಹುಜನ ಸ್ವಾಮ್ಯ ಹಾಗೂ ಕೆಲಜನ ಸ್ವಾಮ್ಯ ಮಾರುಕಟ್ಟೆಗಳೇ ಪ್ರಧಾನವಾಗಿರುವ ಇಂದಿನ ಉದ್ಯಮರಂಗದಲ್ಲಿ ಜಾಹೀರಾತು ಸೃಷ್ಟಿಸುವ ಸಂಚಲನವನ್ನು ಬಹಳ ಚೆನ್ನಾಗಿ ಪ್ರಸ್ತುತಪಡಿಸಿದ್ದಾರೆ ಲೇಖಕರು. ಅಡ್ವರ್ಟೈಸಿಂಗ್ ಪರಿಕಲ್ಪನೆಗಳು, ಬ್ರಾಂಡ್ ವಾರ್, ಮೋಡಿ ಮಾಡುವ ಪ್ರಚಾರದ ಸಾಲುಗಳು ಕಾದಂಬರಿಯುದ್ದಕ್ಕೂ ಕಾಣುತ್ತವೆ. ವಾಣಿಜ್ಯ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯವರಿಗೆ ಅಧ್ಯಯನದ ದೃಷ್ಟಿಯಿಂದ ಈ ಪುಸ್ತಕ ಬಹಳ ಖುಷಿ ಕೊಡಬಹುದು. ಈ ಬಗ್ಗೆ ತಿಳಿಯದವರೂ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ಓದಿ ಆನಂದಿಸಬಹುದಾದ ಒಂದು ಉತ್ತಮ ಕಾದಂಬರಿ ಅಕ್ಷರಯಜ್ಞ.
ಸಂಹಾರ - ಪುಸ್ತಕ ವಿಮರ್ಶೆ
ಪುಸ್ತಕದ ಹೆಸರು : ಸಂಹಾರ
ತೆಲುಗು ಮೂಲ : ಯರ್ರಂಶೆಟ್ಟಿಸಾಯಿ
ಅನುವಾದ : ರಾಜಾ ಚೆಂಡೂರ್
ಪ್ರಕಾಶಕರು : ಸ್ನೇಹಾ ಎಂಟರ್ಪ್ರೈಸಸ್,ಬೆಂಗಳೂರು
ಪ್ರಥಮ ಮುದ್ರಣ : 1994
ತೃತೀಯ ಮುದ್ರಣ : 2019
ಪುಟಗಳು : 204
ಬೆಲೆ :150 ರೂ
ತೆಲುಗು ಕಾದಂಬರಿಕಾರರೆಂದೊಡನೆ ತಟ್ಟನೆ ನನ್ನ ತಲೆಗೆ ಬರುವುದು ಯಂಡಮೂರಿ ವೀರೇಂದ್ರನಾಥ್. ಯಂಡಮೂರಿ ಅವರ ಕಾದಂಬರಿಗಳ ಬಗ್ಗೆ ನನ್ನದು ಎಂದಿಗೂ ತೀರದ ಸೆಳೆತ. ಕಾಲೇಜು ದಿನಗಳಲ್ಲಿ ಓದಿದ್ದ ಸೂರ್ಯದೇವರ ರಾಂಮೋಹನ್ ಅವರ ಕೆಲ ಕೃತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ತೆಲುಗು ಲೇಖಕರೂ ಹೆಚ್ಚುಕಡಿಮೆ ಅಪರಿಚಿತರೇ ನನ್ನ ಪಾಲಿಗೆ. ಇತ್ತೀಚಿಗೆ ಗೆಳತಿ ರೂಪಾ ಮಂಜುನಾಥ್ ಅವರಿಂದಾಗಿ ತೆಲುಗು ಅನುವಾದಿತ ಸಾಹಿತ್ಯದೆಡೆಗೆ ಆಸಕ್ತಿ ಮೂಡತೊಡಗಿದ್ದು. ಯಂಡಮೂರಿ, ಸೂರ್ಯದೇವರಾ ಅವರೊಂದಿಗೆ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಚಲ್ಲಾ ಸುಬ್ರಮಣ್ಯಂ ಮೊದಲಾದ ಸಾಹಿತಿಗಳ ಕೃತಿಗಳನ್ನು ಓದಲಾರಂಭಿಸಿದ್ದು.
'ಸಂಹಾರ'... ಇದು ಇನ್ನೊರ್ವ ತೆಲುಗು ಕಾದಂಬರಿಕಾರ ಯರ್ರಂ ಶೆಟ್ಟಿಸಾಯಿ ಅವರ ಕಾದಂಬರಿ. ರಾಜಾ ಚೆಂಡೂರ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನು ಓದಿದ ಯರ್ರಂಶೆಟ್ಟಿಸಾಯಿ ಅವರ ಮೊದಲ ಕಾದಂಬರಿಯಿದು. ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆಯ ಹಲವು ಆಯಾಮಗಳನ್ನು ತೋರುವ ಈ ಕಥೆಯು ಇಂತಹ ಅರಾಜಕತೆ ಸಾಮಾನ್ಯನೊಬ್ಬನ ಬದುಕನ್ನು ನುಚ್ಚುನೂರಾಗಿಸುವ ಪರಿಯನ್ನು ತೆರೆದಿಡುತ್ತದೆ. ವ್ಯವಸ್ಥೆಯ ಪ್ರತೀ ಹಂತದಲ್ಲೂ ಭ್ರಷ್ಟರೇ ತುಂಬಿರುವಾಗ ನಿಷ್ಠಾವಂತ ವ್ಯಕ್ತಿಯೇ ಗುಂಪಿಗೆ ಸೇರದ ಪದವಾಗಿ ಅನುಭವಿಸುವ ಕಷ್ಟನಷ್ಟಗಳನ್ನು ಸಂಹಾರ ಚಿತ್ರಿಸುತ್ತದೆ.
ಐವತ್ತೆರಡು ವರ್ಷದ ಮಧ್ಯಮವರ್ಗೀಯ ರಾಮಚಂದ್ರಮೂರ್ತಿ ಕಥಾನಾಯಕ. ಮಡದಿ ಸೀತಾ ಹಾಗೂ ಅಡುಗೆಯ ನಟರಾಜನೊಂದಿಗೆ ವಾಸ. ತನ್ನ ನೀತಿಯುತ ಸಿದ್ಧಾಂತಗಳ ಕಾರಣದಿಂದಾಗಿ ತನ್ನ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವುದಷ್ಟೇ ಅಲ್ಲದೇ ಲಂಚ ತೆಗೆದುಕೊಂಡ ಆರೋಪದಲ್ಲಿ ಭ್ರಷ್ಟಾಚಾರಿಯ ಪಟ್ಟ ಹೊತ್ತು ಸಸ್ಪೆನ್ಷನ್ ಬಹುಮಾನ ಪಡೆದಿರುವ ವ್ಯಕ್ತಿ. ಈ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಯಂ ನಿವೃತ್ತಿ ತೆಗೆದುಕೊಂಡರೂ ಕೇಸ್ ಮುಗಿಯದೇ ಅವನಿಗೆ ಬರಬೇಕಾದ ಸೆಟಲ್ಮೆಂಟ್ ಹಣ, ಪಿಂಚಣಿ ಎಲ್ಲವೂ ತಡೆಹಿಡಿಯಲ್ಪಟ್ಟಿದೆ. ವರ್ಷಗಳ ಹಿಂದೆಯೇ ಅವನ ಒಬ್ಬಳೇ ಮಗಳು ಸರಿತಾ ಆಸಿಡ್ ದಾಳಿಗೆ ತುತ್ತಾಗಿ ಅಸುನೀಗಿದ್ದಾಳೆ. ಆ ಏರಿಯಾದ ಎಂಎಲ್ಎ ಮಾರ್ತಾಂಡನ ಮಗ ಮಹಿಪಾಲ ತನಗೆ ನೀಡಿದ ಕಿರುಕುಳದ ಬಗ್ಗೆ ಪೋಲೀಸರಿಗೆ ದೂರು ನೀಡಿದಳೆಂಬ ಕಾರಣಕ್ಕೆ ಅವನೇ ತನ್ನ ಗೂಂಡಾ ಸಹಚರರೊಂದಿಗೆ ಸೇರಿ ಸರಿತಾಳ ಮೇಲೆ ಆಸಿಡ್ ಎರಚಿರುವುದು ತಿಳಿದಿದ್ದರೂ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲಾಗದೇ ಸೋತು ಹೋಗಿದ್ದಾನೆ ಮೂರ್ತಿ. ಕಾರಣ ಮಹಿಪಾಲನ ಅಪ್ಪನಿಗಿರುವ ಹಣ ಹಾಗೂ ಜನಬಲ. ಅಧಿಕಾರಬಲದ ಮುಂದೆ ತನ್ನ ಹೋರಾಟ ಸಾಗದೆಂದು ಕೋರ್ಟಿನಲ್ಲಿ ಸಾಕ್ಷಾಧಾರಗಳ ಕೊರತೆಯಿಂದ ಕೇಸು ಬಿದ್ದು ಹೋದಾಗಲೇ ತಿಳಿದುಕೊಂಡಿದ್ದಾನೆ. ಜೀವನ ನಿರ್ವಹಣೆಗಾಗಿ ಮನೆಯಲ್ಲಿನ ವಸ್ತುಗಳನ್ನೇ ಮಾರಬೇಕಾದಂತಹ ದುಸ್ಥಿತಿ. ಸಮಸ್ಯೆಗಳ ನಡುವಲ್ಲೂ ಮೂರ್ತಿ ದಂಪತಿಗಳ ಬದುಕಿನಲ್ಲಿ ನಗುವಿಗೆ ಕೊರತೆಯಿಲ್ಲ ಎಂದರೆ ಅದಕ್ಕೆ ಕಾರಣ ನಟರಾಜನ ಹಾಸ್ಯಪ್ರಜ್ಞೆ. ತನ್ನ ಸ್ವಾರಸ್ಯಕರ ಮಾತಿನ ಲಹರಿಯಿಂದ ಸೀತಮ್ಮನ ಕೋಪವನ್ನೂ ಕರಗಿಸಬಲ್ಲ ಚತುರನವನು.
ಹೀಗೆ ಮನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟಿದ್ದಾಗಲೇ ನಟರಾಜ ಮೂರ್ತಿ ಹಾಗೂ ಸೀತಾರಿಗೆ ಪೇಯಿಂಗ್ ಗೆಸ್ಟ್ ಒಬ್ಬರಿಗೆ ಮನೆಯ ಒಂದು ಭಾಗವನ್ನು ಬಾಡಿಗೆ ಕೊಟ್ಟು ಆ ಮೂಲಕ ಒಂದಿಷ್ಟು ವರಮಾನ ಸಂಪಾದಿಸುವ ಬಗ್ಗೆ ಹೇಳುತ್ತಾನೆ. ಇದು ದಂಪತಿಗಳಿಗೆ ಒಪ್ಪಿಗೆಯಾಗುತ್ತದೆ ಕೂಡಾ. ಮೊದಲಿಗೆ ಸಿನಿಮಾ ನಟ ರೇವಂತ್ ಪೇಯಿಂಗ್ ಗೆಸ್ಟಾಗಿ ಬರುತ್ತಾನಾದರೂ ಅವನ ಕುಡಿತದ ಚಟ ತಂದೊಡ್ಡುವ ಸಮಸ್ಯೆಗಳ ಕಾರಣ ಮೂರ್ತಿ ದಂಪತಿಗಳು ಪೇಚಿಗೆ ಸಿಲುಕುತ್ತಾರೆ. ಅಷ್ಟರಲ್ಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ಅವನು ಮೂರ್ತಿಯ ಮನೆ ಖಾಲಿ ಮಾಡಿ ಹೊರಡುತ್ತಾನೆ. ಆ ನಂತರದಲ್ಲಿ ಪೇಯಿಂಗ್ ಗೆಸ್ಟಾಗಿ ಬರುವವಳೇ ಪತ್ರಕರ್ತೆ ಸರಿತಾ. ಕಾಕತಾಳೀಯವಾಗಿ ಮೂರ್ತಿ ದಂಪತಿಗಳ ಮಗಳು ಸರಿತಾಳಿಗೂ ಈ ಸರಿತಾಳಿಗೂ ಹೆಸರಿನಂತೆಯೇ ಚಹರೆಯಲ್ಲೂ ಬಹಳಷ್ಟು ಸಾಮ್ಯತೆಯಿರುತ್ತದೆ. ತಮ್ಮ ಗತಿಸಿದ ಮಗಳೇ ಮತ್ತೆ ಸಿಕ್ಕಂತೆ ಸಂಭ್ರಮಿಸುವ ಮೂರ್ತಿ ಹಾಗೂ ಗೀತಾ ಸರಿತಾಳೊಂದಿಗೆ ಭಾವನಾತ್ಮಕ ನಂಟನ್ನು ಬೆಳೆಸಿಕೊಳ್ಳುತ್ತಾರೆ. ಅವರ ನೋವಿನ ಹಿನ್ನೆಲೆ ತಿಳಿದ ಸರಿತಾ ಕೂಡಾ ಅವರನ್ನು ಅಕ್ಕರೆಯಿಂದ ಹಚ್ಚಿಕೊಳ್ಳುತ್ತಾಳೆ. ನಟರಾಜ ತನ್ನ ಹಳೆಯ ರಿಕಾರ್ಡ್ ಡ್ಯಾನ್ಸ್ ಕಂಪನಿ ಮತ್ತೆ ಆರಂಭವಾದ ಕಾರಣ ಮೂರ್ತಿಯವರ ಮನೆಯನ್ನು ಬಿಟ್ಟು ಹೊರಡುತ್ತಾನೆ.
ಈ ಸಂದರ್ಭದಲ್ಲೇ ಮೂರ್ತಿಯ ಮನೆಯ ರಸ್ತೆಯ ಸರ್ಕಲ್ಲಿನಲ್ಲಿ ಸರಳ ಎಂಬಾಕೆಯನ್ನು ಕೆಲ ಗೂಂಡಾಗಳು ಪೆಟ್ರೋಲ್ ಹಾಕಿ ಸಜೀವವಾಗಿ ದಹಿಸುತ್ತಾರೆ. ಇದಕ್ಕೆ ಸರಿತಾಳ ಪ್ರಿಯಕರ ಸುಧೀರ್ ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾನೆ. ಇದರ ಹಿನ್ನೆಲೆ ಶೋಧಿಸ ಹೊರಡುವ ಸರಿತಾಳಿಗೆ ಸಹಾಯ ಮಾಡಿದ ಕಾರಣಕ್ಕೆ ಸುಧೀರ್ ಕೊಲ್ಲಲ್ಪಡುತ್ತಾನೆ. ಈ ಎರಡೂ ಕೊಲೆಗಳ ಹಿಂದಿರುವುದು ಮಾರ್ತಾಂಡನ ಮಗ ಡಿಸಿಪಿ ಮಹಿಪಾಲ್ ಎಂಬುದು ಖಚಿತವಾಗುತ್ತದೆ. ಈ ವಿಚಾರ ತಿಳಿದು ಮೂರ್ತಿ ದಂಪತಿಗಳ ಭಯ ಇನ್ನಷ್ಟು ಹೆಚ್ಚುತ್ತದೆ. ಈ ಸರಿತಾಳ ಸ್ಥಿತಿ ಕೂಡಾ ತಮ್ಮ ಮಗಳು ಸರಿತಾಳಂತಾಗಬಾರದೆಂದು ಅವಳಿಗೆ ತಿಳಿಹೇಳಲು ಪ್ರಯತ್ನಿಸುತ್ತಾರೆ. ಆದರೆ ಆಕೆ ಹಿಂದೆಗೆಯುವುದಿಲ್ಲ. ಕಡೆಗೆ ಅವರ ಭಯವೇ ನಿಜವಾಗಿ ಪತ್ರಕರ್ತೆ ಸರಿತಾ ಕೂಡಾ ಆಸಿಡ್ ನಲ್ಲಿ ಸುಟ್ಟು ಕರಕಲಾಗಿ ಕೊನೆಯುಸಿರೆಳೆಯುತ್ತಾಳೆ.
ಅಲ್ಲಿಗೆ ಮೂರ್ತಿಯ ಸಹನೆ ಸಾಯುತ್ತದೆ ಆಕ್ರೋಶ ಭುಗಿಲೇಳುತ್ತದೆ. ಇನ್ನು ತಮಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ, ಕಳೆದುಕೊಂಡ ಬಹುಮೂಲ್ಯ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸ ಮಾತ್ರವೇ ಬಾಕಿ ಉಳಿದಿರುವುದು ಎಂದು ನಿರ್ಧರಿಸಿದ ಘಳಿಗೆ ತನ್ನ ಯೌವ್ವನದ ದಿನಗಳಲ್ಲಿನ ಸಿಟ್ಟು, ಪ್ರತೀಕಾರದ ಛಾಯೆ ಅವನಲ್ಲಿ ಮತ್ತೆ ಜಾಗೃತವಾಗುತ್ತದೆ. ಜಾಣತನ, ಹಣ ಹಾಗೂ ದೈಹಿಕ ಬಲದಿಂದ ಮೂರ್ತಿ ತನ್ನ ಪ್ರತೀಕಾರವನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆಯ ತಿರುಳು.
ಸರಳ ಭಾಷೆಯ ಈ ಸೇಡಿನ ಕಥನದ ವೈಶಿಷ್ಟ್ಯತೆ ಇರುವುದು ನಿರೂಪಣಾ ಶೈಲಿಯಲ್ಲಿ. ಇಡೀ ಕಥೆಯ ಮುಕ್ಕಾಲು ಭಾಗ ಸಂಭಾಷಣೆಯಲ್ಲಿಯೇ ಇದೆ. ಹರಿತವಾದ ಹಾಸ್ಯ ವ್ಯಂಗ್ಯ ಮಿಶ್ರಿತ ಸಂಭಾಷಣೆಯೇ ಈ ಕಾದಂಬರಿಯ ಹೈಲೈಟ್. ಸಂಭಾಷಣಾ ಪ್ರಧಾನವಾದ್ದರಿಂದ ವೇಗವಾಗಿ ಓದಿಸಿಕೊಳ್ಳುತ್ತದೆ ಈ ಕಥೆ. ಅದರಲ್ಲೂ ನಟರಾಜನ ಸಂಭಾಷಣೆಗಳು ನಗುವನ್ನು ಉಕ್ಕಿಸುವುದರೊಂದಿಗೆ ಹಲವೆಡೆ ನಮ್ಮ ವ್ಯವಸ್ಥೆಯ ದೋಷಕ್ಕೆ ಚಾಟಿ ಬೀಸುತ್ತವೆ. ಅದರೊಂದಿಗೆ ಅವಕಾಶವಾದಿ ರೇವಂತ್, ಭ್ರಮೆಗಳನ್ನೇ ನಂಬುವ, ಅದನ್ನೇ ಸತ್ಯವೆನ್ನುವ ವಿಲಕ್ಷಣ ವ್ಯಕ್ತಿತ್ವದ ಶಾಂತಿ, ಸಮಾನತೆಯ ಬಗ್ಗೆ ಚಿಂತಿಸುತ್ತಾ ವರದಕ್ಷಿಣೆ ನೀಡದೇ ಮದುವೆಯಾಗುವ ಕನಸು ಕಾಣುತ್ತಾ ಅತ್ತ ಕನಸೂ ಕೈಗೂಡದೇ ಇತ್ತ ದೈಹಿಕ ಕಾಮನೆಗಳನ್ನೂ ಅದುಮಿಡಲಾಗದೇ ತಳಮಳಿಸುವ ಅವಿವಾಹಿತೆ ಉಮಾದೇವಿ, ಮಸ್ತಾನ್ ಮೊದಲಾದ ಅಲ್ಪಾವಧಿ ಪಾತ್ರಗಳೂ ನೆನಪಿಪಲ್ಲಿ ಉಳಿಯುತ್ತವೆ.
'ಬಾಳೊಂದು ನಂದನ, ಅನುರಾಗ ಬಂಧನ' ಗೀತೆಯಿಂದ ಆರಂಭವಾಗಿ ಅದೇ ಗೀತೆಯೊಂದಿಗೆ ಅಂತ್ಯವಾಗುವ ಕಥೆ ಈ ಅನೀತಿಯ ಲೋಕದಲ್ಲಿ ಕೈ ಮುಗಿದರೆ ಬೆಲೆಯಿಲ್ಲ ಕೈ ಎತ್ತಿದರೆ ಮಾತ್ರವೇ ವ್ಯಕ್ತಿಗೆ ಬೆಲೆ ಎಂದು ಸಾರುತ್ತದೆ.
(ನನ್ನ ಬಳಿಯಿರುವುದು 2019ರಲ್ಲಿ ಮುದ್ರಣಗೊಂಡಿರುವ ಪ್ರತಿ. ಹಳೆಯ ಪ್ರತಿಗಳು ಹೇಗೋ ಎಂತೋ ಆದರೆ ಈ ಪ್ರತಿಯಲ್ಲಿ ಮಾತ್ರ ಮುದ್ರಾರಾಕ್ಷಸನ ಹಾವಳಿ ವಿಪರೀತವಾಗಿದೆ. ಬಹಳಷ್ಟು ಕಡೆಗಳಲ್ಲಿ ಪದಗಳು ಬದಲಾಗಿವೆ. ಹಾಗೆ ಹಲವೆಡೆ ಪದಗಳು, ಕೆಲವೆಡೆ ಸಂಪೂರ್ಣ ವಾಕ್ಯಗಳೇ ಮಾಯವಾಗಿವೆ. ಓದುವಾಗ ಅಡಚಣೆ ಎನ್ನಿಸಿದ್ದು ಸುಳ್ಳಲ್ಲ)
ಗುರುವಾರ, ಜೂನ್ 18, 2020
ರೂಪದರ್ಶಿ....
ಪುಸ್ತಕದ ಹೆಸರು : ರೂಪದರ್ಶಿ
ಲೇಖಕರು : ಕೆ.ವಿ. ಅಯ್ಯರ್
ಪ್ರಕಾಶಕರು : ಮುರಳಿ ಪ್ರಕಾಶನ,ಬೆಂಗಳೂರು
ಪ್ರಥಮ ಮುದ್ರಣ : 1950
ಪುಟಗಳು : VIII+292
ಬೆಲೆ :190 ರೂ
ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳಲ್ಲಿ ಕೆ.ವಿ ಅಯ್ಯರ್ ಕೂಡಾ ಒಬ್ಬರು. ವೃತ್ತಿಯಿಂದ ಒಬ್ಬ ಅತ್ಯುತ್ತಮ ದೇಹದಾರ್ಢ್ಯ ಪಟು, ದೈಹಿಕ ಶಿಕ್ಷಣ ತಜ್ಞರಾಗಿದ್ದ ಅಯ್ಯರ್ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಕಾದಂಬರಿ, ಕಥಾಸಂಕಲನಗಳಷ್ಟೇ ಅಲ್ಲದೇ ಟಿ.ಪಿ ಕೈಲಾಸಂ ಅವರ ಪ್ರಭಾವದಿಂದಾಗಿ ನಾಟಕಗಳಲ್ಲೂ ಆಸಕ್ತಿಬೆಳೆಸಿಕೊಂಡವರು ಅಯ್ಯರ್. 'ಶಾಂತಲಾ', 'ರೂಪದರ್ಶಿ' ಹಾಗೂ 'ಸಮುದ್ಯತಾ' ಕನ್ನಡ ಸಾಹಿತ್ಯದ ಕ್ಲಾಸಿಕ್ ಶ್ರೇಣಿಯ ಕೃತಿಗಳೆಂದರೆ ಅತಿಶಯೋಕ್ತಿಯಲ್ಲ.
'ರೂಪದರ್ಶಿ' ಲೇಖಕರೇ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ 1942ರಲ್ಲಿ 'Reader's Digest' ಎಂಬ ಅಮೇರಿಕನ್ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ 'The face of Judas inscariot' ಎಂಬ ಸಣ್ಣ ಕಥೆಯನ್ನು ಆಧಾರವಾಗಿರಿಸಿಕೊಂಡು ಬೆಳೆಸಿದ ಕಾದಂಬರಿ. ಅದನ್ನು ಓದಿ ಈ ಕಥಾವಸ್ತುವನ್ನು ಎಂಟು ಹತ್ತು ಪುಟಗಳ ಸಣ್ಣ ಕಥೆಯಾಗಿ ಬರೆಯಬಹುದು ಎಂದುಕೊಂಡಿದ್ದರಂತೆ ಅವರು. ಆದರೆ ಬರೆಯಲು ತೊಡಗಿಸಿಕೊಂಡ ನಂತರ ಆ ಮುಕ್ಕಾಲು ಪುಟದ ಕಥೆ ಈ ರೂಪತಾಳಿತು ಎಂದಿದ್ದಾರೆ ಅಯ್ಯರ್. ಹಾಗೆಯೇ 'ನಾನು ಯಾವೊಂದು ಉದ್ದೇಶದಿಂದಲೂ ಈ ಕಥೆಯನ್ನು ಬರೆಯಲಿಲ್ಲ. ಇದು ಏನು ಸಾಧಿಸಬಲ್ಲದೆಂಬುದನ್ನೂ ನಾನು ಅರಿಯೆ.' ಎಂದಿದ್ದಾರೆ. ಆದರೆ ಈ ಕಥೆಯನ್ನು ಓದಿ ಮುಗಿಸಿದ ನಂತರ ನಮ್ಮ ಮನದಲ್ಲಿ ಉಂಟಾಗುವ ತಳಮಳಗಳು, ಮಸ್ತಿಷ್ಕದಲ್ಲಿ ಉದ್ಭವಿಸುವ ಪ್ರಶ್ನೆಗಳಿಂದ ಈ ಕಥೆಯ ಉದ್ದೇಶ ಹಾಗೂ ಅದು ಏನನ್ನು ಸಾಧಿಸಿದೆ ಎಂಬುದು ಓದುಗರಿಗೇ ಸ್ಪಷ್ಟವಾಗುತ್ತದೆ.
ಅಯ್ಯರ್ ಅವರ ಮೇರುಕೃತಿಗಳಲ್ಲಿ ಒಂದಾದ 'ರೂಪದರ್ಶಿ' ಬದುಕಿನ ವಿವಿಧ ಮುಖಗಳನ್ನು ಹಾಗೂ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಅನ್ವೇಷಿಸುತ್ತಾ ಸಾಗುತ್ತದೆ. ಇಡೀ ಕಥನ ಇಟಲಿಯ ಪರಿಸರದಲ್ಲಿ ನಡೆಯುತ್ತದಾದರೂ ಕಥೆಯೊಳಗಿನ ಪಾತ್ರಗಳು, ಅವುಗಳ ಸಂಘರ್ಷಗಳು ನಮ್ಮದೇ ಎನ್ನಿಸಿಬಿಡುವುದು ಈ ಕೃತಿಯ ವೈಶಿಷ್ಟ್ಯ. ಮುಗ್ಧತೆ, ಪ್ರೀತಿ, ಮಮತೆಯೊಂದಿಗೇ ಕ್ರೌರ್ಯ, ದ್ವೇಷ, ದುರಾಸೆ, ವಂಚನೆ, ಹಣದೊಂದಿಗೆ ಬದಲಾಗುವ ಮನುಜನ ವಿಚಾರಧಾರೆ…. ಹೀಗೆ ಹತ್ತು ಹಲವು ಭಾವಗಳ ಹೂರಣ ಇಲ್ಲಿದೆ.
ಇಟಲಿಯ ಫ್ಲಾರೆನ್ಸ್ ನಗರದಲ್ಲೊಂದು ಭವ್ಯವಾದ ಮನಮೋಹಕ ಕ್ರಿಸ್ತದೇವಾಲಯ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣವಾದ ನಂತರ ಅಲ್ಲಿನ ಧರ್ಮದರ್ಶಿಗಳು ಸಭೆ ಸೇರಿ ಆ ಭವ್ಯ ದೇವಾಲಯದಲ್ಲಿ ಏಸುಕ್ರಿಸ್ತನ ಸಂಪೂರ್ಣ ಜೀವನಚರಿತ್ರೆಯನ್ನು ಸೊಗಸಾಗಿ ಚಿತ್ರಿಸಬೇಕೆಂದು ನಿರ್ಧರಿಸಿ ತಮ್ಮದೇ ಊರಿನ ಜಗದ್ವಿಖ್ಯಾತ ಚಿತ್ರಕಾರ ಮೈಕೆಲ್ ಆಂಜೆಲೋನನ್ನು ಈ ಕಾರ್ಯಕ್ಕಾಗಿ ಆರಿಸುತ್ತಾರೆ. ಪರಮ ದೈವ ಭಕ್ತನಾದ ಮೈಕೆಲ್ ಬಲು ಸಂತೋಷದಿಂದ ಈ ಕಾರ್ಯವನ್ನು ಒಪ್ಪಿಕೊಂಡು ಒಂದಿಷ್ಟು ಒಪ್ಪಂದಗಳ ಆಧಾರದಲ್ಲಿ ತನ್ನ ಕೆಲಸವನ್ನು ಆರಂಭಿಸುತ್ತಾನೆ. ಕ್ರಿಸ್ತನ ಆದಿಪರ್ವಕ್ಕೆ ಸಂಬಂಧಿತ ಮೂರು ಚಿತ್ರಗಳನ್ನು ಅತ್ಯಂತ ಸುಂದರವಾಗಿ ಬರೆದ ನಂತರ ಈಗ ಅವನಿಗೆ ಬಾಲ ಏಸುವನ್ನು ಚಿತ್ರಿಸಬೇಕಿರುತ್ತದೆ. ಏನೇ ಮಾಡಿದರೂ ಅವನ ಮನದಲ್ಲಿ ಮೂಡಿದ ಚಿತ್ರವನ್ನು ಕುಂಚದಲ್ಲಿ ಮೂಡಿಸುವಲ್ಲಿ ಸೋಲುತ್ತಾನೆ ಮೈಕೆಲ್. ಇಂತಹ ಸನ್ನಿವೇಶದಲ್ಲಿ ತನ್ನ ಮನದ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯನ್ನು ಹುಡುಕಿ ಹೊರಡುತ್ತಾನೆ. ಊರೂರು ಅಲೆದ ನಂತರ ಕೊನೆಗೆ ಪೀಸಾ ನಗರದಲ್ಲಿಯ ತನ್ನ ಸ್ನೇಹಿತ ಬೆನೆಟ್ಟೋನನ್ನು ಭೇಟಿಯಾಗಲು ಹೋದಾಗ ಅಲ್ಲಿಯ ಭಿಕಾರಿ ಮಕ್ಕಳ ನಡುವಿವಲ್ಲಿ ಒಬ್ಬ ಬಾಲಕ ಮೈಕೆಲ್ ಕಣ್ಣಿಗೆ ಬೀಳುತ್ತಾನೆ. ಅತೀ ಸೌಮ್ಯ ಮುಖಮುದ್ರೆಯ ಆ ಬಾಲಕನಲ್ಲಿ ಬಾಲಕ್ರಿಸ್ತನಲ್ಲಿ ಇದ್ದಿರಬಹುದಾದ ವರ್ಚಸ್ಸು ಕಾಣುತ್ತದೆ. ಜೊತೆಗೆ ಸ್ವಲ್ಪ ಹೊತ್ತಿನಲ್ಲೇ ಆ ಬಾಲಕನ ಹೃದಯವಂತಿಕೆಯ ಅರಿವೂ ಆಗುತ್ತದೆ. ತನ್ನ ಮನದಲ್ಲಿ ರೂಪುಗೊಂಡಿದ್ದ ಬಾಲಕ್ರಿಸ್ತನೇ ಜೀವಂತವಾಗಿ ತನ್ನೆದುರು ನಿಂತಂತೆ ಎನ್ನಿಸಿ ಮೈಕೆಲ್ ಅವನನ್ನೇ ತನ್ನ ರೂಪದರ್ಶಿಯನ್ನಾಗಿ ಆರಿಸಿಕೊಳ್ಳುತ್ತಾನೆ. ತಂದೆ ತಾಯಿಯಿಲ್ಲದೇ ಅಜ್ಜಿಯ ಆಶ್ರಯದಲ್ಲಿ ಬೆಳೆದ ಆ ಬಾಲಕನೇ ಅರ್ನೆಸ್ಟೋ. ಮೈಕೆಲ್ ಬೆನೆಟ್ಟೋನೊಂದಿಗೆ ಅರ್ನೆಸ್ಟೋನ ಅಜ್ಜಿಯನ್ನು ಭೇಟಿಯಾಗಿ ಅವಳನ್ನು ಒಪ್ಪಿಸಿ ಅವರಿಬ್ಬರನ್ನೂ ಕರೆದುಕೊಂಡು ಫ್ಲಾರೆನ್ಸ್ ನಗರಕ್ಕೆ ವಾಪಾಸಾಗುತ್ತಾನೆ. ಅರ್ನೆಸ್ಟೋನನ್ನು ರೂಪದರ್ಶಿಯಾಗಿಸಿ ಬಾಲಕ್ರಿಸ್ತನ ಐದು ಚಿತ್ರಗಳನ್ನು ಬರೆದು ಪೂರ್ಣವಾಗಿಸುತ್ತಾನೆ. ಬಲು ಸುಂದರವಾಗಿ ಮೂಡಿದ್ದ ಚಿತ್ರಗಳನ್ನು ಕಂಡು ಪ್ರಸನ್ನರಾದ ಧರ್ಮದರ್ಶಿ ಸಂಘದವರು ರೂಪದರ್ಶಿಯಾದ ಅರ್ನೆಸ್ಟೋಗೆ ಬಟ್ಟೆಬರೆ, ಸಾಕಷ್ಟು ಹಣವನ್ನು ಕೊಟ್ಟು ಗೌರವಿಸುತ್ತಾರೆ. ಅರ್ನೆಸ್ಟೋ ಮತ್ತು ಅವನ ಅಜ್ಜಿ ಪೀಸಾ ನಗರಕ್ಕೆ ಹಿಂದಿರುಗುತ್ತಾರೆ. ಅದರೊಂದಿಗೆ ಅವರ ಬಡತನದ ಬದುಕೂ ಬದಲಾಗಿ ಸುಭೀಕ್ಷವಾದ ಜೀವನ ಅವರದಾಗುತ್ತದೆ. ಆದರೆ ಈ ಬದಲಾವಣೆಯಿಂದಾಗಿ ವೃದ್ಧೆಯ ಮನಸ್ಥಿತಿ ಬದಲಾಗುತ್ತದೆ. ಮುಂಚೆ ಬಡತನದಲ್ಲೂ ನೆಮ್ಮದಿಯಿಂದ ಬದುಕಿದಾಕೆಯ ಮನಸ್ಸು ಇಲ್ಲಸಲ್ಲದ ಯೋಚನೆಗಳ ಗೂಡಾಗುತ್ತದೆ. ತುದಿಮೊದಲಿಲ್ಲದ ಆಸೆಗಳ ಗೂಡಾಗುತ್ತದೆ ಆಕೆಯ ಮೆದುಳು.
ಇತ್ತ ಮೈಕೆಲ್ ಏಸುವಿನ ಜೀವನಸಂಬಂಧಿ ಉಳಿದ ಚಿತ್ರಗಳನ್ನು ರಚಿಸುವಲ್ಲಿ ನಿರತನಾಗುತ್ತಾನೆ. ಹಲವು ಚಿತ್ರಗಳನ್ನು ರಚಿಸಿ ಕ್ರಿಸ್ತನ ಅಂತಿಮ ದಿನಗಳ ಚಿತ್ರರಚನೆಗೆ ಕೈ ಹಾಕುತ್ತಾನೆ. ಇಲ್ಲಿ ಅವನು ಯೇಸುವಿನ ಆಪ್ತಶಿಷ್ಯರಲ್ಲಿ ಒಬ್ಬನಾಗಿದ್ದುಕೊಂಡು ವಿಶ್ವಾಸಘಾತ ಮಾಡಿ ಶತ್ರುಗಳಿಗೆ ಏಸುವನ್ನು ತೋರಿದ 'ಜುದಾಸ'ನ ಚಿತ್ರವನ್ನು ಬರೆಯಬೇಕಾಗಿ ಬರುತ್ತದೆ. ಗುರು ದ್ರೋಹಿ, ಕಪಟಿಯಾದ ಜುದಾಸ ಅದೆಷ್ಟು ಕ್ರೂರವಾಗಿದ್ದಿರಬಹುದು ಎಂಬುದನ್ನು ಊಹಿಸಿ ಚಿತ್ರಿಸುವಲ್ಲಿ ಸೋಲುತ್ತಾನೆ ಮೈಕೆಲ್. ಎಷ್ಟೇ ಪ್ರಯತ್ನಿಸಿದರೂ ಪೈಶಾಚಿಕ ಭಾವದ ಜುದಾಸನ ರೂಪವನ್ನು ಚಿತ್ರಿಸಲಾಗದೇ ಅವನ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯ ಹುಡುಕಾಟಕ್ಕೆ ತೊಡಗುತ್ತಾನೆ. ಆದರೆ ಈ ನಡುವೆ ತನ್ನ ಪರಮಾಪ್ತ ಸ್ನೇಹಿತ ಬೆನೆಟ್ಟೋ ಮರಣದ ವಾರ್ತೆ ತಿಳಿದು ರೋಂ ನಗರಕ್ಕೆ ಧಾವಿಸುತ್ತಾನೆ ಮೈಕೆಲ್. ಬೆನೆಟ್ಟೋನ ಹಿಂದೆಯೇ ಅವನ ಹೆಂಡತಿಯೂ ಇಹಲೋಕ ತ್ಯಜಿಸಿ ಅವರ ಇಬ್ಬರು ಮಕ್ಕಳು ಅನಾಥರಾಗುತ್ತಾರೆ. ಆ ಮಕ್ಕಳ ಭವಿಷ್ಯದ ಬಗ್ಗೆ ಸಕಲ ವ್ಯವಸ್ಥೆ ಮಾಡಲು ವ್ಯಾಟಿಕನ್ ನಗರಕ್ಕೆ ಬಂದೆ ಪೋಪರನ್ನು ಭೇಟಿಯಾಗುತ್ತಾನೆ ಮೈಕೆಲ್. ಅವರ ಬಳಿ ಮಾತನಾಡಿ ಆ ಇಬ್ಬರು ಮಕ್ಕಳ ಜೀವನಕ್ಕೊಂದು ವ್ಯವಸ್ಥೆ ಮಾಡಿ ಇನ್ನೇನು ಫ್ಲಾರೆನ್ಸ್ ಗೆ ಹಿಂದಿರುಗಬೇಕೆನ್ನುವಾಗ ಪೋಪರು ಅವನಿಗೆ ಅಮೃತಶಿಲೆಯ ಸಮಾಧಿ ಹಾಗೂ ಇನ್ನೂ ಬಹಳಷ್ಟು ಚಿತ್ರ, ವಿಗ್ರಹಗಳನ್ನು ರಚಿಸಲು ಹೇಳುತ್ತಾರೆ. ಹಾಗಾಗಿ ಮುಂದಿನ ಹಲವು ವರ್ಷಗಳು ಅದೇ ಕೆಲಸದಲ್ಲಿ ವ್ಯಸ್ತನಾಗುತ್ತಾನೆ ಮೈಕೆಲ್. ಈ ಸಮಯದಲ್ಲಿ ಬೆನೆಟ್ಟೋವಿನ ಮಗ ವಿದ್ಯಾಭ್ಯಾಸ ಮುಗಿಸಿ ವ್ಯಾಟಿಕನ್ನಿನಲ್ಲಿ ಕೆಲಸ ಹಿಡಿದರೆ, ಮಗಳು ಲೀಸಾ ಮದುವೆಯಾಗಿ ತನ್ನ ಗಂಡ ಟಾಯೆಟ್ ನೊಂದಿಗೆ ಕರಾರಾ ನಗರಕ್ಕೆ ಹೊರಟುಹೋಗಿರುತ್ತಾಳೆ.
ಕೊನೆಗೂ ಮೈಕೆಲ್ ವ್ಯಾಟಿಕನ್ನಿನಲ್ಲಿ ಕೈಗೆತ್ತಿಕೊಂಡ ಕೆಲಸ ಮುಗಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಫ್ಲಾರೆನ್ಸಿನ ಧರ್ಮದರ್ಶಿಗಳು ಇಲ್ಲಿನ ಕೆಲಸ ಸಂಪೂರ್ಣ ಗೊಳಿಸುವಂತೆ ಅವನನ್ನು ಕೇಳಿಕೊಳ್ಳುತ್ತಾರೆ. ವಯಸ್ಸಾಗಿ, ಕಣ್ಣಿನ ದೃಷ್ಟಿ ಮಂದವಾಗಿದ್ದ ಮೈಕೆಲ್ ಸಾವಿರ ಕಾರಣಗಳನ್ನು ಹೇಳಿದರೂ ಕೇಳದೇ ಅವನನ್ನು ಒಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇನ್ನೊಮ್ಮೆ ಮೈಕೆಲ್ ನಿಂದ 'ಜುದಾಸ'ನಿಗಾಗಿ ರೂಪದರ್ಶಿಯ ಹುಡುಕಾಟ ಆರಂಭವಾಗುತ್ತದೆ. ಹೀಗೇ ಹುಡುಕುತ್ತಿರುವಾಗ ಎಂಪೊಲಿ ಎಂಬ ಸಣ್ಣ ಗ್ರಾಮದಲ್ಲಿ ಅತ್ಯಂತ ವಿಕಾರ ರೂಪದ, ಕಡುಕ್ರೂರ ಕಪಟ ಮನಸ್ಥಿತಿಯ ಗ್ಯಾರಿಬಾಲ್ಡಿ ಎಂಬ ವ್ಯಕ್ತಿ ಎದುರಾಗುತ್ತಾನೆ. ಜುದಾಸನ ಚಿತ್ರಕ್ಕೆ ಇವನೇ ಸರಿಯಾದ ರೂಪದರ್ಶಿಯೆಂದು ನಿರ್ಧರಿಸಿ ಬಹಳಷ್ಟು ಪ್ರಯತ್ನ ಹಾಗೂ ಆಮಿಷದ ನಂತರ ಅವನನ್ನು ಒಪ್ಪಿಸಿ ಫ್ಲಾರೆನ್ಸ್ ಕರೆತರುವಲ್ಲಿ ಯಶಸ್ವಿಯಾಗುತ್ತಾನೆ ಮೈಕೆಲ್.
ಯಾವಾಗ ಗ್ಯಾರಿಬಾಲ್ಡಿ ಫ್ಲಾರೆನ್ಸ್ ನಗರದ ಆ ಕ್ರಿಸ್ತಾಲಯದೊಳಗೆ ಕಾಲಿಟ್ಟು ಅಲ್ಲಿನ ಬಾಲಕ್ರಿಸ್ತನ ಚಿತ್ರಗಳನ್ನು ಕಾಣುತ್ತಾನೋ ಆಗ ಅವನ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಅವನ ಅಸಂಬದ್ಧ ಮಾತುಗಳನ್ನು ಕೇಳಿ ಮೈಕೆಲ್ ಅಚ್ಚರಿಗೊಳ್ಳುತ್ತಾನೆ. ಆದರೆ ಮೈಕೆಲ್ ನಿಗೆ ಆಘಾತವಾಗುವಂತಹ ಸತ್ಯ ಗ್ಯಾರಿಬಾಲ್ಡಿಯ ಬಾಯಿಂದ ಹೊರಬರುತ್ತದೆ. ಅಂದಿನ ಅರ್ನೆಸ್ಟೋವೇ ಇಂದಿನ ಗ್ಯಾರಿಬಾಲ್ಡಿಯಾಗಿರುತ್ತಾನೆ. ಬಾಲಕ್ರಿಸ್ತನ ಅಭೂತಪೂರ್ವ ವರ್ಚಸ್ಸುಳ್ಳ ದಯಾಗುಣದ ಸುಂದರ ಮೂರ್ತಿಯಾಗಿದ್ದ ಅರ್ನೆಸ್ಟೋ ಜುದಾಸನ ಅಪರಾವತಾರದಂತಹ ಕಟುಕ ಗ್ಯಾರಿಬಾಲ್ಡಿಯಾಗಿ ಬದಲಾದುದ್ದಾದರೂ ಏಕೆ ಎಂಬುದನ್ನು ಓದಿಯೇ ತಿಳಿಯಬೇಕು. ವ್ಯಕ್ತಿಯ ಆತ್ಮದ ಮುಗ್ಧತೆಯ ಕೊಲೆಯಾಗಿ ಆತ್ಮವೇ ಇರದ ದೇಹದೊಳಗೆ ದಾನವತ್ವ ಬೆಳೆಯಲು ಸಮಾಜ ಹೇಗೆ ಕಾರಣೀಭೂತವಾಗುತ್ತದೆ ಎಂಬುದನ್ನು ಅರ್ನೆಸ್ಟೋ ಗ್ಯಾರಿಬಾಲ್ಡಿಯಾದ ಪ್ರಕ್ರಿಯೆಯು ವಿವರಿಸುತ್ತದೆ. ಅವನು ಅನುಭವಿಸಿದ ಯಾತನೆಗಳು ಮನಕಲುಕುತ್ತವೆ.
ಇಡೀ ಕಾದಂಬರಿಯಲ್ಲಿ ಮೈಕೆಲ್ ಹಾಗೂ ಅರ್ನೆಸ್ಟೋ/ಗ್ಯಾರಿಬಾಲ್ಡಿ ಪಾತ್ರಗಳನ್ನೇ ಕೇಂದ್ರವಾಗಿಸಿಕೊಂಡರೂ ಮನುಷ್ಯನ ಹಲವು ಮುಖಗಳನ್ನು ಅನಾವರಣಗೊಳಿಸುವ ಪಾತ್ರಗಳು ಕಥೆಯುದ್ದಕ್ಕೂ ಇವೆ. ದುಶ್ಚಟಗಳ ದಾಸನಾದ ಗಂಡನ ದೌರ್ಜನ್ಯಕ್ಕೆ ಸಿಲುಕಿ ನಲುಗಿದರೂ ಅವನನ್ನು ಬದಲಾಯಿಸಲು ಹೆಣಗುವ ಪರಿಶುದ್ಧ ಮನದ ಲೀನಾ, ಮಮತೆಯೇ ಮೈವೆತ್ತ ಲಿಸ್ಸಾತಾಯಿ ಮತ್ತು ನನ್ನೆಟ್ಟಿ, ಬಡತನದಲ್ಲೂ ನೆಮ್ಮದಿಯಿಂದಿದ್ದು ಸಿರಿವಂತಿಕೆ ಬಂದೊಡನೆ ಲೋಭಿಯಾಗತೊಡಗಿದ ಅರ್ನೆಸ್ಟೋನ ಅಜ್ಜಿ, ವಿಷಯಲಂಪಟ ಟಾಯಿಟ್, ಹೃದಯಹೀನ ಧೂರ್ತ ಜಿಯೋವನಿ ಹೀಗೇ ಹಲವು ಪಾತ್ರಗಳ ಮೂಲಕ ಮನುಷ್ಯನ ಮನದ ಹಲವು ಭಾವಗಳನ್ನು ಕಟ್ಟಿಕೊಟ್ಟಿದ್ದಾರೆ ಲೇಖಕರು.
'ಪ್ರಪಂಚದ ಬಹುಪಾಲು ಜನರೆಲ್ಲರೂ ಜುದಾಸನಂತಹವರೇ. ವ್ಯತ್ಯಾಸವೆಂದರೆ ಇವರು ಒಳಗೆ ಜುದಾಸರಾಗಿದ್ದರೂ ಹೊರಗೆ ಅದನ್ನು ತೋರ್ಪಡಿಸದೇ ಕುರಿಯ ಚರ್ಮವನ್ನು ಹೊದ್ದ ತೋಳಗಳಂತೆ ಇರುತ್ತಾರೆ' ಎಂಬ ಸಾಲು ಈ ಜಗತ್ತಿನ ವಿಲಕ್ಷಣ ವಾಸ್ತವವನ್ನು ಎತ್ತಿ ಹಿಡಿಯುತ್ತದೆ. 'ನಾಲ್ಕು ಜನರ ಮುಂದೆ ಧೈರ್ಯವಾಗಿ ಮಾಡಲಾಗದ ಕೆಲಸವನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟುಕೊಂಡು ಮಾಡಬಾರದು. ಇದು ಆತ್ಮವಂಚನೆ' ಎಂಬ ಸಾಲುಗಳಲ್ಲಿ ಆತ್ಮಾವಲೋಕನದ ಹಾದಿಯಿದೆ. ಈ ರೀತಿಯ ಹಲವು ಸನ್ನಿವೇಶಗಳು, ಸಾಲುಗಳು ಇಲ್ಲಿವೆ. ಕಾದಂಬರಿಯ ಕೊನೆಯಲ್ಲಿ ಮೈಕೆಲ್ ನಿಗೆ "ಹಣದ ಆಸೆ ತೋರಿಸಿ ನೀನು ನಮ್ಮನ್ನು ಹೆಣವಾಗಿಸಿದೆ" ಎನ್ನುವ ಅರ್ನೆಸ್ಟೋನ ಮಾತು ಓದುಗರಿಗೂ ನಿಜವೆನಿಸಿಬಿಡುತ್ತದೆ. ಒಂದೇ ಜೀವಿತಾವಧಿಯಲ್ಲಿ ಬಾಲಕ್ರಿಸ್ತ ಹಾಗೂ ಜುದಾಸ ಎಂಬ ಎರಡು ತದ್ವಿರುದ್ದ ಭಾವಗಳಿಗೆ ರೂಪದರ್ಶಿಯಾಗಿ ಅರ್ನೆಸ್ಟೋ/ ಗ್ಯಾರಿಬಾಲ್ಡಿಯ ಸಾವಿನೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಆದರೆ ಮನದೊಳಗೆ ಹುಟ್ಟಿಕೊಳ್ಳುವ ಸಾವಿರಾರು ಪ್ರಶ್ನೆಗಳಲ್ಲಿ, ಚಿಂತನೆಗಳಲ್ಲಿ ಅರ್ನೆಸ್ಟೋ ಜೀವತಳೆದಂತೆ ಭಾಸವಾಗುತ್ತದೆ.
ಒಟ್ಟಿನಲ್ಲಿ ಒಮ್ಮೆ ಓದಲೇಬೇಕಾದ ವಿಭಿನ್ನ ಕಥಾಹಂದರದ ವಿಶಿಷ್ಟ ಕೃತಿಯಿದು. ಒಮ್ಮೆ ಓದಿದರೆ ಅದೇ ಮತ್ತೆ ಮತ್ತೆ ಓದಿಸಿಕೊಳ್ಳುವುದು ಸುಳ್ಳಲ್ಲ.