ಮಂಗಳವಾರ, ಜೂನ್ 23, 2020

ಅನೂಹ್ಯ 18

ಮಾಲಿನಿ ಎರಡು ಗ್ಲಾಸ್ ಗಳಲ್ಲಿ ವಿಸ್ಕಿ ಸುರಿದುಕೊಂಡು ಪತಿಯಿದ್ದಲ್ಲಿಗೆ ಆಗಮಿಸಿದಾಗ ರಾವ್ ಬಾಲ್ಕನಿಯಲ್ಲಿ ಕುಳಿತು ಗಹನವಾದ ಆಲೋಚನೆಯಲ್ಲಿ ಮುಳುಗಿದ್ದರು.

"ಸತ್ಯ, ಟೇಕ್ ದಿಸ್" ಒಂದು ಗ್ಲಾಸ್ ಅವರೆಡೆ ಚಾಚಿದಾಗ, ಗ್ಲಾಸ್ ತೆಗೆದುಕೊಂಡು ತುಟಿಗಿರಿಸಿದವರು,

"ನಿನ್ನೆ ಪ್ಲಾನ್ ನಾವಂದುಕೊಂಡಿದ್ದಕ್ಕಿಂತ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ನಿನ್ನ ಮಗಳಿಗೊಂದು ಥ್ಯಾಂಕ್ಸ್ ಹೇಳಲೇಬೇಕು ನೋಡು. ಲೈಫಲ್ಲಿ ಫಸ್ಟ್ ಟೈಮ್ ಒಂದು ನೆಟ್ಟಗಿರೋ ಕೆಲ್ಸ ಮಾಡಿರೋದು" ಎಂದರು.

"ನನಗಂತೂ ಅವಳ್ದೇ ಭಯ ಆಗಿತ್ತು. ಎಲ್ಲಿ ಏನು ಮಾಡ್ತಾಳೋ ಅಂತ. ಬಟ್ ಥ್ಯಾಂಕ್ ಗಾಡ್.... ಹಾಗೇನೂ ಮಾಡಿಲ್ಲ. ಇನ್ ಫ್ಯಾಕ್ಟ್ ಶರ್ಮಾಸ್ ತುಂಬಾ ಇಂಪ್ರೆಸ್ ಆದ್ರೂ ಸಮನ್ವಿತಾನ ನೋಡಿ. ಅವರು ಮಾತಾಡಿದ್ದು ನೋಡಿದ್ರಲ್ಲಾ. ವಾಟ್ ನೆಕ್ಸ್ಟ್?" ಕೇಳಿದರು ಮಾಲಿನಿ.

"ಆದಷ್ಟು ಬೇಗ ಮುಂದಿನ ಕೆಲಸ ಮಾಡಬೇಕು. ಆದ್ರೆ ಅದು ಸಮನ್ವಿತಾಗೆ ಎಟ್ ಎನೀ ಕಾಸ್ಟ್ ಗೊತ್ತಾಗಬಾರದು. ಅವಳು ನಿನ್ನೆ ಅವರತ್ರ ಚೆನ್ನಾಗಿ ಮಾತಾಡಿರಬಹುದು. ಆದರೆ ಅವಳು ನಾವು ಹೇಳಿದ್ದು ಒಪ್ತಾಳೆ‌ ಅನ್ಸೋಲ್ಲ ನಂಗೆ. ಅವಳಿಗೆ ಗೊತ್ತಾದ್ರೆ ಅದೇ ಎಲ್ಲದಕ್ಕೂ ದೊಡ್ಡ ಪ್ರಾಬ್ಲಮ್ ಆಗಬಹುದು. ಸೋ ಹೇಗೆ ಮಾಡೋದು ಅಂತ ಯೋಚಿಸ್ತಿದ್ದೀನಿ" 

"ಅವಳು ಒಪ್ಪೋದಿಲ್ಲ ಅಂತ ಯಾಕೆ ಅನ್ಸುತ್ತೆ ನಿಂಗೆ. ಇಷ್ಟೊಳ್ಳೆ ಆಫರ್ ಇನ್ನೆಲ್ಲಿ ಸಿಗುತ್ತೆ. ಶರ್ಮಾಸ್ ಸ್ಟೇಟಸ್, ಹಣ ಎಲ್ಲದರಲ್ಲೂ ನಮಗಿಂತ ಮೇಲಿದ್ದಾರೆ. ದೆನ್ ವಾಟ್ಸ್ ದಿ ಪ್ರಾಬ್ಲಮ್?" 

"ಮಾಲಿನಿ, ಅದು ನೀನಲ್ಲ. ಶಿ ಈಸ್ ಸಮನ್ವಿತಾ. ಅವಳು ಯೋಚನೆ ಮಾಡೋದೇ ಬೇರೆ ತರ. ಲೆಟ್ ಮೀ ಥಿಂಕ್" 

ತಮ್ಮ ಯೋಜನೆಯ ಯಶಸ್ಸಿನ ಬಗ್ಗೆ ಯೋಚಿಸುತ್ತಿದ್ದ ದಂಪತಿಗಳಿಗೆ ಈ ಪ್ಲಾನ್ ಎರಡು ಜೀವಗಳ ಬದುಕಿಗೆ ಸಂಬಂಧಿಸಿದ್ದು ಹಾಗೂ ಆ ಇಬ್ಬರಲ್ಲಿ ಒಬ್ಬಳು ತಮ್ಮದೇ ರಕ್ತ ಹಂಚಿಕೊಂಡಿರುವ ಮಗಳು ಎಂಬುದರ ಯೋಚನೆಯೇ ಇರಲಿಲ್ಲ….. ತಮ್ಮ ಯೋಜನೆ ಮಗಳಿಗೆ ತಿಳಿದಾಗ ಆ ಜೀವ ಎಷ್ಟು ಸಂಕಟಪಡಬಹುದೆಂಬ ಕಲ್ಪನೆಯೂ ಅವರಿಗೆ ಬರಲು ಸಾಧ್ಯವಿಲ್ಲ. ಅವರ ತಲೆಯಲ್ಲಿರುವುದು ಬಿಸ್ನೆಸ್ ಹಾಗೂ ಹಣ.....ಹಣ..... ಮತ್ತಷ್ಟು ಹಣ........ ಎಣಿಕೆಗೆ ಸಿಗದಷ್ಟು ಹಣ......

"ಮೇ ಐ ಕಮ್ ಇನ್ ಸರ್" ಚೈತಾಲಿ ಕೇಳಿದಾಗ, "ಯಾ ಗೆಟ್ ಇನ್" ಎಂದರು ಮಾಲಿನಿ.

"ಗುಡ್ ಈವ್ನಿಂಗ್ ಸರ್ ಎಂಡ್ ಮ್ಯಾಮ್. ಸರ್, ಸಮನ್ವಿತಾ ಮ್ಯಾಮ್ ಬೆಳಗ್ಗಿನಿಂದ ನಾಲ್ಕು ಸಲ ಬಂದಿದ್ರು. ನಿಮ್ಮ ಹತ್ರ ಮಾತಾಡ್ಬೇಕು ಅಂತ" ಚೈತಾಲಿ ಹೇಳಿದಾಗ ಗಂಡ-ಹೆಂಡತಿ ಗಾಬರಿಬಿದ್ದರು. ಎಲ್ಲಾ ಸರಿಯಾಗಿ ಹೋಗ್ತಿರುವಾಗ ಇನ್ನೇನಪ್ಪಾ ಎಂದುಕೊಂಡು, " ಚೈತಾಲಿ ಅವಳು ಬಂದಾಗಲೇ ಒಳಗೆ ಕಳ್ಸೋದು ತಾನೇ?" ಕೆಂಗಣ್ಣಿನಿಂದ ಗದರಿದರು ರಾವ್.

"ಸರ್...... ಸರ್.. ಅದೂ.... ಮತ್ತೆ.. ಅದು.. ನೀವು ಇನ್ನೂ ಎದ್ದಿರಲಿಲ್ಲ" ಹೇಳಲೋ ಬೇಡವೋ ಎಂಬಂತೆ ಹೇಳಿದಳು. ಹಿಂದಿನ ರಾತ್ರಿಯ ಪಾರ್ಟಿಯಲ್ಲಿ ಎಲ್ಲಾ ಅವರಂದುಕೊಂಡಂತೆ ನಡೆದ ಖುಷಿಗೆ ಕುಡಿದು, ಕುಣಿದು ಕುಪ್ಪಳಿಸಿ ಮಲಗಿದ್ದವರಿಗೆ ಎಚ್ಚರವಾದಾಗ ಮಧ್ಯಾಹ್ನ ಮೂರು ಗಂಟೆ. ಈಗ ನಾಲ್ಕು ಗಂಟೆ.  ಚೈತಾಲಿ ಹೇಳಿದ್ದು ನಿಜವೇ ಎನಿಸಿದಾಗ ಇಬ್ಬರೂ ಸುಮ್ಮನಾದರು.

"ಸರಿ ಈಗ್ಲೇ ಕಳಿಸು ಹೋಗು" ಎಂದರು ಮಾಲಿನಿ. ಚೈತಾಲಿ ಅವಳನ್ನು ಕರೆಯಲು ಹೋದರೆ ಇಬ್ಬರಿಗೂ ಕುಡಿದು ನಶೆಯೆಲ್ಲ ಇಳಿದಿತ್ತು. ಬೆಳಗ್ಗಿನಿಂದ ನಾಲ್ಕು ಬಾರಿ ಬಂದುಹೋಗಿರುವಳೆಂದರೆ ಏನೋ ಗಹನವಾದ ವಿಚಾರವೇ ಇರಬೇಕು ಎನಿಸಿತು.

"ಸತ್ಯ, ಮೋಸ್ಟಲೀ ಅವಳೇ ನಾನು ಅಭಿರಾಮ್ ನ ಮದ್ವೆ ಆಗ್ತೀನಿ ಅಂತ ಹೇಳೋಕೆ ಬಂದಿರ್ಬಹುದೇನೋ. ಅವಳಿಗೆ‌ ಇಷ್ಟ ಆಗಿರಬಹುದು ಅವನು" ಮೇರೆ ಮೀರಿದ ಸಂತಸದಿಂದ ಹೇಳಿದರು ಮಾಲಿನಿ.

"ಜಸ್ಟ್ ಶಟ್ ಅಪ್ ಮಾಲಿನಿ. ನಾನಾಗ್ಲೇ ಹೇಳಿದ್ದೀನಿ ಅದು ನೀನಲ್ಲ. ಸುಮ್ನಿರು ಅವಳು ಕೇಳಿಸ್ಕೊಂಡ್ರೆ ಕಷ್ಟ" ಸುಮ್ಮನಾಗಿಸಿ, "ಮೊದ್ಲು ಈ ಗ್ಲಾಸ್ಗಳನ್ನು ಎತ್ತಿಡು" ಆಳನ್ನು ಕರೆದು ಗದರಿದರು.

ಐದು ನಿಮಿಷಗಳಲ್ಲಿ "ಮೇ ಐ ಗೆಟ್ ಇನ್ ಡ್ಯಾಡ್" ಸಮನ್ವಿತಾಳ ದನಿ. ದನಿಯ ಹಿಂದೆಯೇ ಒಳಬಂದಳು ಕೂಡಾ.

"ಚೈತಾಲಿ ಯಾರು ಬಂದ್ರೂ ಒಳಗೆ ಬಿಡಬೇಡ" ಎಂದು ಅವಳನ್ನು ಹೊರಗೆ ಕಳಿಸಿ, "ಸಾರಿ ಬೇಬಿ, ರಾತ್ರಿ ಏನೋ ಇಂಪಾರ್ಟೆಂಟ್ ಡಿಸ್ಕಷನ್. ಮಲಗುವಾಗ ಲೇಟಾಗಿತ್ತು. ಸೋ ಎದ್ದಿದ್ದೂ ಲೇಟ್. ನೀನು ಮೂರ್ನಾಲ್ಕು ಸಲ ಬಂದು ಹೋದ್ಯಂತೆ" ಕೇಳಿದರು ರಾವ್.

ಅವರ ಇಂಪಾರ್ಟೆಂಟ್ ಡಿಸ್ಕಷನ್ ಏನಿರಬಹುದೆಂಬ ಕಲ್ಪನೆ ಅವಳಿಗಿತ್ತು. ಹಾಗಾಗಿ ಅವಳೇನು ಪ್ರಶ್ನಿಸಲು ಹೋಗಲಿಲ್ಲ. "ಹೌದು ಡ್ಯಾಡ್, ಸ್ವಲ್ಪ ಮಾತಾಡೋದಿತ್ತು. ಅದಕ್ಕೆ ಬಂದಿದ್ದೆ" ಎಂದಳು

"ಹೇಳು ಬೇಬಿ. ಏನು ವಿಷ್ಯ. ಡು ಯು ನೀಡ್ ಎನಿ ಹೆಲ್ಪ್?" ಕೇಳಿದರು.

"ಹೆಲ್ಪ್ ಏನೂ ಬೇಡ. ನಾನು ಏನೋ ಹೇಳ್ಬೇಕಿತ್ತು." ಎಂದಳು ಅನುಮಾನಿಸುತ್ತಾ. ರಾವ್ ದಂಪತಿಗಳು ಏನು ಎಂಬಂತೆ ನೋಡಿದರು.

"ಡ್ಯಾಡ್ ಮಾಮ್, ನಾನು ಹಾಸ್ಪಿಟಲ್ ಕ್ವಾಟ್ರಸ್ ಗೆ ಶಿಫ್ಟ್ ಆಗ್ತಿದ್ದೀನಿ. ನಿನ್ನೆಯಿಂದ ಹೇಳ್ಬೇಕು ಅಂದ್ಕೊಂಡೆ ಬಟ್ ನೀವು ಸಿಗ್ಲಿಲ್ಲ." ಎಂದಳು.

ಅವಳು ಹೇಳಿದ ವಿಷಯ ಕೇಳಿ ರಾವ್ ದಂಪತಿಗಳಿಗೆ ನಿರಾಳವಾಯಿತು. ರಾವ್ ಅವರು ಅರೆಘಳಿಗೆ ಯೋಚಿಸದೆ, "ನೀನು ಹೇಳೋದು ಸರಿಯೇ. ನಿನ್ನ ಕೆಲಸದಲ್ಲಿ ಹೊತ್ತು ಗೊತ್ತು ಇರೋಲ್ಲ. ನೈಟ್ ಡ್ಯೂಟಿ ಎಲ್ಲಾ ಇರುತ್ತೆ. ನೀನು ಶಿಫ್ಟ್ ಆಗು. ನಾನು ಶಿಫ್ಟಿಂಗ್ ವ್ಯವಸ್ಥೆ ಎಲ್ಲಾ ಮಾಡಿಸ್ತೀನಿ" ಎಂದುಬಿಟ್ಟರು…..!

"ನೋ ಥ್ಯಾಂಕ್ಸ್ ಡ್ಯಾಡ್. ಶಿಫ್ಟಿಂಗ್ ಆಗಿದೆ. ನಿಮಗೆ ಹೇಳ್ಬೇಕಿತ್ತಷ್ಟೇ. ಯು ಕ್ಯಾರಿ ಆನ್" ಎಂದವಳೇ, ಕಣ್ಣ ಹನಿ ಕೆಳಗಿಳಿಯುವ ಮೊದಲು ಹೊರಬಂದು ತನ್ನ ಕೋಣೆಯತ್ತ ನಡೆದಿದ್ದಳು.

ಕೋಣೆಗೆ ಬಂದವಳ ಕಣ್ಣಿಂದ ಕಂಬನಿ ಧಾರಾಕಾರವಾಗಿ ಸುರಿಯುತ್ತಿತ್ತು. ಪ್ರೀತಿ, ವಿಶ್ವಾಸ, ಮಮತೆಗಳಂತೂ ಎಂದಿಗೂ ಮರೀಚಿಕೆಯೇ….. ಕೊನೆಪಕ್ಷ ಮನೆಬಿಟ್ಟು ಹೋಗುತ್ತಿರುವೆನೆಂದು ಮಗಳು ಹೇಳುತ್ತಿರುವಾಗ ಒಂದು ಬಾರಿ........ ಒಂದೇ ಒಂದು ಬಾರಿ….... ಬಾಯ್ಮಾತಿಗಾದರೂ ಒಂದು ಬಾರಿ ತಾಯ್ತಂದೆಯರು "ಹೋಗಬೇಡ" ಎನ್ನಬಹುದು ಎಂಬ ನಿರೀಕ್ಷೆಯಿತ್ತು ಅವಳಿಗೆ....ಅದಕ್ಕೂ ತಿಲಾಂಜಲಿ ಇಟ್ಟಿದ್ದರು ಅವಳ ಹೆತ್ತವರು ಎನಿಸಿಕೊಂಡ ಜನ.

ಅವಳೆಂದೂ ಹೆತ್ತವರಿಗೆ ಹತ್ತಿರವಾಗಿರಲೇ ಇಲ್ಲ. ಅವರಿಗೆ ತನ್ನ ಬಗ್ಗೆ ಯಾವುದೇ ಭಾವನೆಗಳಿಲ್ಲ ಎಂದು ಅವರ ವರ್ತನೆ ಅವಳಿಗೆ ತಿಳಿಸುತ್ತಿತ್ತು. ಆದರೆ ಮನಸ್ಸು ಕೇಳಬೇಕಲ್ಲ..... ಭ್ರಮನಿರಸನ ಖಚಿತವೆಂದು ತಿಳಿದಿದ್ದರೂ ನಿರೀಕ್ಷೆ ಮಾಡುತ್ತದೆ. ನಿರೀಕ್ಷೆಗಳಿಲ್ಲದೇ ಜೀವಿಸಲು ಸಾಧ್ಯವೇ? ಬದುಕಲು ಯಾವುದೇ ಲಕ್ಷ್ಯ ಇಲ್ಲದಾಗಲೂ, ಪರಿಸ್ಥಿತಿ ಸಂಪೂರ್ಣ ವಿಷಮವಾಗಿದ್ದಾಗಲೂ ಮನುಷ್ಯ ಜೀವಿಸುತ್ತಾನೆ. ಏಕೆ? ಇಂದು ಹೇಗೇ ಇರಲಿ ನಾಳೆ ಎಲ್ಲವೂ ಸರಿಯಾಗುವುದೆಂಬ ನಿರೀಕ್ಷೆಯಲ್ಲಿ ಅಲ್ಲವೇ? ಆ ನಿರೀಕ್ಷೆಯನ್ನೇ ಕೊಂದುಕೊಂಡು ಬದುಕುವ ಬಗೆಯೆಂತು? 

ಇದೆಂಥಾ ಬದುಕು ತನ್ನದು. ಒಂದು ಸಣ್ಣ ನಿರೀಕ್ಷೆಯನ್ನು ಇರಿಸಿಕೊಳ್ಳಲು ತನಗೆ ಹಕ್ಕಿಲ್ಲವೇ? ಈ ಭಾಗ್ಯಕ್ಕೆ ಕುಟುಂಬ, ಪರಿವಾರ, ಸಂಬಂಧಗಳು ಏಕೆ ಬೇಕು? ಒಂದು ಕ್ಷಣ ಯೋಚಿಸದೆ 'ಸರಿ ಹೋಗು' ಎಂದರಲ್ಲ ತನ್ನ ಹೆತ್ತವರು.... ಅವರಿಗೆ ಇಲ್ಲದ ಯೋಚನೆ ತನಗೇಕೆ? 'Expectations always hurts ' ಎನ್ನುತ್ತಾರಲ್ಲವೇ. ಅವರಿಂದ ನಿರೀಕ್ಷಿಸಿದ್ದು ತನ್ನದೇ ತಪ್ಪು. ಇಷ್ಟಕ್ಕೂ ತಾನೇಕೆ ಅಳುತ್ತಿದ್ದೇನೆ? ಹೇಗಿದ್ದರೂ ಮನೆಯಿಂದ ಹೊರಹೋಗುವುದೆಂದು ಮೊದಲೇ ನಿರ್ಧರಿಸಿದ್ದೆ. ಅವರು 'ಹೋಗು' ಎಂದರೂ 'ಬೇಡ' ಎಂದರೂ ತನ್ನ ನಿರ್ಧಾರ ಅಚಲವಿತ್ತು. ಮತ್ತೇಕೆ ಈ ಕಣ್ಣೀರು? ಅವರ ನಿರ್ಧಾರ ತನಗೆ ಒಳ್ಳೆಯದೇ ಆಯಿತಲ್ಲವೇ?

ಹುಚ್ಚು ಖೋಡಿ ಮನಸ್ಸು.... ಮನವೆಂಬುದು ಒಂಥರಾ ನಾಯಿ ಬಾಲದಂತೆ.... ಎಷ್ಟೇ ನೇರವಾಗಿ ಯೋಚಿಸೆಂದರೂ ಮತ್ತೆಮತ್ತೆ ಬೇಡದ್ದನ್ನೇ ಯೋಚಿಸಿ ಹೈರಾಣಾಗುತ್ತದೆ. ಅಳಬಾರದು ತಾನು ಎಂದು ಕಣ್ಣೊರೆಸಿಕೊಂಡು ಎದ್ದಾಗ ಎದುರಿಗೆ ಚೈತಾಲಿ ನಿಂತಿದ್ದಳು…..

"ಯಾಕೆ‌ ಚೈತಾಲಿ ಅಲ್ಲೇ ನಿಂತೆ ಒಳಗೆ ಬಾ" ತುಟಿಯಲ್ಲಿ ನಗುವರಳಿಸಿ ನುಡಿದಳು.

"ಸಾರಿ ಮ್ಯಾಮ್, ನಾನು... ಡೋರ್...."

"ಇಟ್ಸ್ ಓಕೆ ಚೈತಾಲಿ. ನಾನು ಕ್ವಾಟ್ರಸ್ ಗೆ ಶಿಫ್ಟ್ ಆಗ್ತಿದ್ದೀನಿ. ನಿನ್ನ ತುಂಬಾ ಮಿಸ್ ಮಾಡ್ಕೋತೀನಿ. ಸ್ಪೆಷಲೀ ನಿನ್ನ 'ಮ್ಯಾಮ್' ಅನ್ನೋ ಕರೆನ ಮಿಸ್ ಮಾಡ್ಕೋತೀನಿ" ಎಂದು ಅವಳನ್ನಪ್ಪಿದಳು.

ಚೈತಾಲಿಗೆ ಗಾಬರಿ. ಈ ಮನೆಯಲ್ಲಿ ಇಂತಹವು ನಿಷಿದ್ಧ. 'ಬಾಸ್ ನೋಡಿದ್ರೆ ಬೈತಾರೆ' ಮಿದುಳು ಎಚ್ಚರಿಸಿತಾದರೂ  ಮೊದಲೇ ಬೇಸರದಲ್ಲಿದ್ದ  ಸಮನ್ವಿತಾಳಿಗೆ ಸ್ವಲ್ಪವಾದರೂ ಸಾಂತ್ವನ ದೊರೆಯಲಿ ಎಂದು ಸುಮ್ಮನಾದಳು.

"ಆಗಾಗ ಬರ್ತಿರು. ನೀನೂ ನನ್ನ ಮರ್ತು ಬಿಡಬೇಡ" ಎಂದವಳನ್ನು ನೋಡಿ,

"ನಿಮ್ಮ ಬಗ್ಗೆ ಸರಿಯಾಗಿ ತಿಳಿದಿರೋ ಯಾರೂ ನಿಮ್ಮನ್ನ ಮರೆಯೋಲ್ಲ ಮ್ಯಾಮ್. ನೀವು ಬರ್ಬೇಡ ಅಂದ್ರೂ ನಾನು ಬಂದೇ ಬರ್ತೀನಿ ನಿಮ್ಮನ್ನು ಭೇಟಿಯಾಗೋಕೆ" ಎಂದವಳಿಗೆ ಅದೇನೆನಿಸಿತೋ…. "ನೀವು ತುಂಬಾ ಒಳ್ಳೆಯವರು ಮ್ಯಾಮ್. ನಿಮ್ಮಪ್ಪ ಅಮ್ಮಂಗೆ ನಿಮ್ಮಂಥಾ ಮಗಳ ಜೊತೆ ಇರೋ ಅದೃಷ್ಟ ಇಲ್ಲ ಅಷ್ಟೇ. ಅವರಿಗೋಸ್ಕರ ನೀವು ಅಳ್ಬೇಡಿ. ನಿಮ್ಮ ಕಣ್ಣೀರಿಗೆ ಅವರು ಯೋಗ್ಯರಲ್ಲ" ಎಂದು ಬಿಟ್ಟಳು.

"ಯಾರಿಗೆ ಅದೃಷ್ಟ ಇಲ್ವೋ, ಯಾರಿಗೆ ಯೋಗ್ಯತೆ ಇಲ್ವೋ ಗೊತ್ತಿಲ್ಲ. ಆದ್ರೆ ಇನ್ನು ಸ್ವಲ್ಪ ದಿನ ಇಲ್ಲಿದ್ರೆ ನನಗೆ ಹುಚ್ಚು ಹಿಡಿಯೋದಂತು ಸತ್ಯ. ಅದಕ್ಕೆ ಮುಂಚೆ ಇಲ್ಲಿಂದ ಹೊರಟು ಬಿಡ್ತೀನಿ" ಎಂದವಳು ತನ್ನ ಕಬೋರ್ಡಿನಿಂದ ಸೀರೆಯೊಂದನ್ನು ಹೊರಗೆಳೆದಳು. ಹೊಸ ಸೀರೆ…. ಇನ್ನೂ ಕಟ್ಟು ಬಿಚ್ಚಿರಲಿಲ್ಲ.....

ಕಾಂಚೀಪುರಂ ಗೆ ಒಮ್ಮೆ ಅಲ್ಲಿನ ನೇಕಾರರ ಪರಿಸ್ಥಿತಿ ಹೇಗಿರಬಹುದು ಎಂದು ನೋಡುವ ಕುತೂಹಲದಿಂದ ಹೋಗಿದ್ದಳು. ಅಲ್ಲಿ ನೇರವಾಗಿ ನೇಕಾರರೊಬ್ಬರಿಂದ ಖರೀದಿಸಿದ ಸೀರೆಯದು. ಅವಳು ಖರೀದಿಸಿದ್ದು ತಾಯಿಗೆಂದು. ಆದರೆ ಎಂದೂ ಮಾಲಿನಿಯವರಿಗೆ ಅದನ್ನು ಕೊಡುವ ಮನಸ್ಸಾಗಲಿಲ್ಲ. ಇಂದಾದರೂ ಹೋಗುವ ಮುನ್ನ ಕೊಡುವ ಎಂದುಕೊಂಡಿದ್ದಳು..... ಈಗ ಬೇಡವೆಂದಿತು ಮನ‌........ ಅವರಂತೂ ಉಡಲಾರರು.......

ಅದನ್ನು ಆಪ್ಯಾಯಮಾನತೆಯಿಂದ ಒಮ್ಮೆ ಸವರಿ ಎದೆಗೆತ್ತಿಕೊಂಡಳು.......

ಚೈತಾಲಿಯೆಡೆ ತಿರುಗಿ,

"ತಗೋ ಚೈತಾಲಿ, ಇದನ್ನು ನಿನ್ನ ತಾಯಿಗೆ ಕೊಡು" ಅವಳ ಕೈಗಿತ್ತಳು.

"ಅದೂ... ಮ್ಯಾಮ್..."

"ಬೇರೇನೂ ಹೇಳ್ಬೇಡ. ನಾನು ನಿನಗಲ್ಲ ಕೊಡ್ತಿರೋದು ಅಮ್ಮನಿಗೆ. ಇದು ನಿನ್ನ ಬಾಸ್ ದುಡ್ಡಿನಿಂದ ತಗೊಂಡದ್ದಲ್ಲ. ಇದು ನನ್ನ ಸ್ವಂತ ಹಣದಿಂದ ಕೊಂಡದ್ದು. ನಿನ್ನ ಅಮ್ಮ ಕೇಳಿದ್ರೆ 'ಯಾರೋ ಒಬ್ಬ ನತದೃಷ್ಟ ಮಗಳು ಅಮ್ಮನಿಗೆ ಅಂತ ತಂದೂ ಕೊಡಲಾಗದೆ ಉಳಿದದ್ದು' ಅಂತ ಹೇಳು" ಎಂದವಳ ಮಾತಿಗೆ ಮರುನುಡಿಯದೇ ತಗೆದುಕೊಂಡಳು ಚೈತಾಲಿ.

ಮತ್ತೊಂದು ಮಾತನಾಡದೆ ತನ್ನ ಬ್ಯಾಗ್ ಹಾಗೂ ಮೊಬೈಲ್ ಹಿಡಿದು ರೂಮಿಂದ ಹೊರಬಿದ್ದವಳು, ಮತ್ತೊಮ್ಮೆ ಯಾರಿಗೂ ಹೇಳುವ ಗೋಜಿಗೆ ಹೋಗದೆ ಮನೆಯಿಂದ ಹಾಗೆ ಆ ಸಂಜೆ ಹೊರಬಿದ್ದಿದ್ದಳು. ಅವಳ ಕಾರು ಅನಾಥವಾಗಿ ಕಾಂಪೌಂಡಿನಲ್ಲಿ ನಿಂತಿತ್ತು. ಬಾಗಿಲಿಗೆ ಬಂದ ಚೈತಾಲಿ ಸಮನ್ವಿತಾ ಕೊಟ್ಟ ಸೀರೆಯನ್ನು ಎದೆಗವಚಿಕೊಂಡು ಅವಳು ಕಣ್ಮರೆಯಾಗುವಷ್ಟು ಹೊತ್ತು ಅಲ್ಲೇ ನಿಂತಿದ್ದಳು ಮಂಜು ಕವಿದ ಕಣ್ಣುಗಳಲ್ಲಿ.......

 *********ಮುಂದುವರೆಯುತ್ತದೆ***********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ