ಸೋಮವಾರ, ಅಕ್ಟೋಬರ್ 31, 2022

ಜ್ಞಾನಪೀಠದಲ್ಲಿ ಕನ್ನಡದ ಮೆರುಗು

'ಸಕಲ ಲಿಪಿಗಳ ರಾಣಿ' ಎಂದು ವಿನೋಬಾ ಭಾವೆ ಅವರಿಂದ ಹೊಗಳಿಸಿಕೊಳಲ್ಪಟ್ಟ ಭಾರತದ ಅತೀ ಪುರಾತನ ಭಾಷೆಗಳಲ್ಲೊಂದು ನಮ್ಮ ಕನ್ನಡ. ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಮಾತನಾಡುವ ಭಾಷೆಗಳ ಸಾಲಿನಲ್ಲಿ ೨೯ನೇ ಸ್ಥಾನದಲ್ಲಿರುವ ಅಭಿಜಾತ ಭಾಷೆ ನಮ್ಮೀ ಚೆನ್ನುಡಿ. ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡದ ಮೊದಲ ಕನ್ನಡ - ಆಂಗ್ಲ ನಿಘಂಟನ್ನು ರಚಿಸಿದವರು. ಸಾಹಿತ್ಯಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಕನ್ನಡಮ್ಮನ ಕಿರೀಟದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳ ಗರಿಯಿದೆ. ರಾಷ್ಟ್ರೀಯ ಭಾಷೆ ಹಿಂದಿಯನ್ನು ಹೊರತುಪಡಿಸಿದರೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಭಾಷೆ ಕನ್ನಡ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಎಂಟು ಮಹನೀಯರು ಮತ್ತು ಪುರಸ್ಕೃತ ಕೃತಿಗಳ ಕಿರು ಪರಿಚಯ ಇಲ್ಲಿದೆ. 

 ೧. ಕುವೆಂಪು - ಶ್ರೀ ರಾಮಾಯಣ ದರ್ಶನಂ - ೧೯೬೭:
ಕುವೆಂಪು ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಪದ್ಮವಿಭೂಷಣ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಅಗ್ರಪಂಕ್ತಿಯ ಸಾಹಿತಿಗಳು. ಮಲೆನಾಡಿನ ಪ್ರಕೃತಿ ಸೌಂದರ್ಯವನ್ನೂ, ನವರಸಗಳನ್ನು ತಮ್ಮ ಕೃತಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ರಸಋಷಿ ಕುವೆಂಪು. 'ಮಲೆಗಳಲ್ಲಿ ಮದುಮಗಳು' ಹಾಗೂ 'ಕಾನೂರು ಹೆಗ್ಗಡತಿ' ಕುವೆಂಪು ಅವರು ರಚಿಸಿದ ಎರಡು ಬೃಹತ್ ಕಾದಂಬರಿಗಳು. ರಕ್ತಾಕ್ಷಿ, ಬೆರಳ್ಗೆ ಕೊರಳ್, ಮಹಾರಾತ್ರಿ, ಚಂದ್ರಹಾಸ, ಬಲಿದಾನ, ಶೂದ್ರ ತಪಸ್ವಿ ಮೊದಲಾದವು ಅವರ ಪ್ರಮುಖ ನಾಟಕಗಳು. ನೆನಪಿನ ದೋಣಿಯಲಿ ಇವರ ಆತ್ಮಕಥೆ. 'ಮನುಷ್ಯ ಜಾತಿ ತಾನೊಂದೇ ವಲಂ', 'ಮನುಜ ಮತ, ವಿಶ್ವ ಪಥ', 'ಓ ನನ್ನ ಚೇತನ, ಆಗು ನೀ ಅನಿಕೇತನ' ಎಂದು ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು. ತಮ್ಮ 'ಶ್ರೀ ರಾಮಾಯಣ ದರ್ಶನಂ' ಕೃತಿಯ ಮೂಲಕ ಅವರು ಕನ್ನಡಕ್ಕೆ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟರು. 'ಶ್ರೀ ರಾಮಾಯಣ ದರ್ಶನಂ' ಹಿಂದೂ ಮಹಾಕಾವ್ಯವಾದ ರಾಮಾಯಣವನ್ನು ಆಧರಿಸಿದ ಕೃತಿ. ಹಳೆಯ ಕಥೆ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರ ಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆ‌. ಇದು ಜ್ಞಾನಪೀಠ ಪ್ರಶಸ್ತಿಯೊಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೂ ಭಾಜನವಾಗಿದೆ. ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾ ಸಂಪುಟಂ, ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳನ್ನು ಈ ಮಹಾಕಾವ್ಯ ಒಳಗೊಂಡಿದೆ.
ಅಗ್ನಿ ಪರೀಕ್ಷೆಯ ಸನ್ನಿವೇಶದಲ್ಲಿ ಕುವೆಂಪು ವಾಲ್ಮೀಕಿ ರಾಮಾಯಣದಿಂದ ಅಚ್ಚರಿಯ ವಿಚಲನವನ್ನು ಮಾಡಿದ್ದಾರೆ. ಸೀತೆ ಅಗ್ನಿ ಪರೀಕ್ಷೆಗೆ ಗುರಿಯಾಗಿ ಅಗ್ನಿಗೆ ತನ್ನನ್ನು ಅರ್ಪಿಸಿಕೊಳ್ಳುವ ಕ್ಷಣದಲ್ಲಿ ರಾಮನೂ ಅವಳೊಂದಿಗೆ ಅಗ್ನಿಯನ್ನು ಪ್ರವೇಶಿಸುವ ಸನ್ನಿವೇಶ ಸೃಷ್ಟಿಸುವ ಮೂಲಕ ಮೂಲ ರಾಮಾಯಣಕ್ಕೆ ಭಿನ್ನವಾದ ಆಯಾಮವೊಂದನ್ನು ಒದಗಿಸಿದ್ದಾರೆ ಕುವೆಂಪು. ತನ್ನ ಬಲಗೈಯಲ್ಲಿ ಸೀತೆಯ ಹಸ್ತವನ್ನು ಹಿಡಿದು ರಾಮನು ಅಗ್ನಿ ಕುಂಡದಿಂದ ಹೊರಬರುವ ಮೂಲಕ ಸೀತೆಯ ಪಾವಿತ್ರತೆಯೊಂದಿಗೆ ರಾಮನ ನಿಷ್ಠೆ ಹಾಗೂ ಅವರಿಬ್ಬರ ಪ್ರೇಮವನ್ನೂ ಬಹಿರಂಗಪಡಿಸಿರುವುದು ಈ ಕೃತಿಯ ವೈಶಿಷ್ಟ್ಯಗಳಲ್ಲೊಂದು. ಜ್ಞಾನಪೀಠ ಪ್ರಶಸ್ತಿ ಸಮಿತಿ ಉಲ್ಲೇಖ: "ಕುವೆಂಪು ಅವರು ಸಾಹಿತ್ಯದ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೊಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು. ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ".

೨. ದ.ರಾ.ಬೇಂದ್ರೆ - ನಾಕುತಂತಿ - ೧೯೭೩
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂಬ ಸರಳ ವಾಕ್ಯಗಳಲ್ಲಿ ಇಡೀ ಜೀವನದ ಪಾಠವನ್ನೇ ಬೋಧಿಸಿದವರು 'ಧಾರವಾಡದ ಅಜ್ಜ' ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಮೊದಲ ಕವಿತೆ 'ಬೆಳಗು' (ಮೂಡಣ ಮನೆಯಾ ಮುತ್ತಿನ ನೀರಿನ ಎರಕವಾ ಹೊಯ್ದಾ) ವಿನಿಂದ ಹಿಡಿದು 'ಇಳಿದು ಬಾ ತಾಯೆ ಇಳಿದು ಬಾ', 'ಬಾರೋ ಬಾರೋ ಸಾಧನ ಕೇರಿಗೆ', 'ನಾನು ಬಡವಿ, ಅಂತ ಬಡವ, ಒಲವೇ ನಮ್ಮ ಬದುಕು', ' ನೀ ಹಿಂಗ ನೋಡಬ್ಯಾಡ ನನ್ನ', 'ಪಾತರಗಿತ್ತಿ ಪಕ್ಕ ನೋಡಿದ್ಯೇನೆ ಅಕ್ಕಾ'...... ಹೀಗೆ ಬರೆದಷ್ಟು ಮುಗಿಯಲಾರದು ಇವರ ಕವನಗಳ ಪಟ್ಟಿ. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪರಿಚಿತರಾದ ಬೇಂದ್ರೆಯವರು 'ನಾಕುತಂತಿ' ಕವನದ ಮೂಲಕ ಕನ್ನಡಕ್ಕೆ ಎರಡನೇ ಜ್ಞಾನಪೀಠದ ಗರಿಯನ್ನು ತಂದವರು. ನಾಲ್ಕು ಭಾಗಗಳಲ್ಲಿರುವ ’ನಾಕು ತಂತಿ’ ಕವನ ಕಾರ್ಣಿಕದ ಒಡಪಿನ ರೂಪದಲ್ಲಿದೆ. ಅವರು ಬರೆದ ಅಡಿಟಿಪ್ಪಣಿಯ ಮೂಲಕ ಈ ಕಾರ್ಣಿಕದ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಕವನದ ನಾಲ್ಕು ಭಾಗಗಳೂ ಅವರೇ ಹೇಳುವಂತೆ ಒಂದೇ ಭಾಗದ ನಾಲ್ಕು ಮಗ್ಗಲುಗಳು. ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ. ಮೂರನೆಯ ಭಾಗದಲ್ಲಿ ಒಂದು ’ಸವಾಲ್-ಜವಾಬ್’ ಇದೆ. ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ವಿವರಿಸಿ ಹೇಳುತ್ತದೆ.
ಬೇಂದ್ರೆಯವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವೀಣೆ. ಆ ವೀಣೆಯ ನಾಲ್ಕು ತಂತಿಗಳೆಂದರೆ 'ನಾನು', 'ನೀನು', 'ಆನು' , 'ತಾನು'. 'ನಾನು' ಎಂದರೆ ಪುರುಷ. ಆತ ಅಹಂ ಹಾಗೂ ತನ್ನತನದ ಪ್ರತೀಕ , 'ನೀನು' ಎಂಬುದು ಪ್ರಕೃತಿ (ಸ್ತ್ರೀ). ಆಕೆ ಕರುಣೆ, ಔದಾರ್ಯದ ಪ್ರತಿಮೆ. ಅವರ ಮಿಲನದ ಫಲವಾದ ಸಂತಾನವೇ ಈ 'ಆನು' ಎಂಬ ತತ್ವ. ಇದು ನಾನು ಎಂಬ ಅಹಂ ಹಾಗೂ ನೀನು ಎಂಬ ಔದಾರ್ಯಗಳ ಎರಕ, ಸಮಾಜದ ಬೇಕು ಬೇಡಗಳ ಪ್ರತಿಬಿಂಬ. ವಿಶ್ವವೆಂಬ ವೀಣೆಯ ನಾಲ್ಕನೇ ತಂತಿ 'ತಾನು'. 'ತಾನು' ಎಂದರೆ ಸೃಷ್ಟಿಕರ್ತ. ನಾನು, ನೀನು ಮತ್ತು ಆನುಗಳ ಮೂಲ. ಆತನಿಂದಲೇ ಸರ್ವವೂ ಸೃಷ್ಟಿಯಾಯಿತು ಮತ್ತು ಆತನಲ್ಲಿಯೇ ಸರ್ವವೂ ಅಡಗಿದೆ ಎಂಬುದನ್ನು ಈ ಕವನ ವಿವರಿಸುತ್ತದೆ. 

೩. ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೮:
ಕಡಲತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶ ಡಾ.ಶಿವರಾಮ ಕಾರಂತ ರ ಬರವಣಿಗೆಯ ಶೈಲಿಗೆ ಮನಸೋಲದವರುಂಟೇ? 'ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ಸಾಹಿತ್ಯ ಪ್ರಕಾರವಿಲ್ಲ' ಅನ್ನುವಷ್ಟು ಮಟ್ಟಿಗಿನ ಕ್ರಿಯಾಶೀಲ ಸಾಹಿತ್ಯ ಕೃಷಿ ಅವರದ್ದು. ಸಾಹಿತ್ಯವಷ್ಟೇ ಅಲ್ಲದೇ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದಲ್ಲೂ ಹಲವು ಪ್ರಯೋಗಗಳನ್ನು ಮಾಡಿದವರು ಕಾರಂತಜ್ಜ. ಚಲನಚಿತ್ರ ರಂಗದಲ್ಲೂ ಆಸಕ್ತಿ ಹೊಂದಿದ್ದ, ತಮ್ಮ ಹಲವು ಕೃತಿಗಳಿಗೆ ತಾವೇ ಮುಖಪುಟವನ್ನೂ ರಚಿಸಿದ ಬಹುಮುಖ ಪ್ರತಿಭೆಯ ಸಾಹಿತಿ ಇವರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಕೇಂದ್ರ ಸರ್ಕಾರ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ವಾಪಾಸು ಮಾಡಿದ್ದರು ಕಾರಂತರು. ನಾಟಕ, ವಿಜ್ಞಾನ, ಸಾಹಿತ್ಯ, ಚಲನಚಿತ್ರ, ಯಕ್ಷಗಾನ, ರಂಗಭೂಮಿ, ಚಿತ್ರಕಲೆ, ಸಂಗೀತ, ಶಿಕ್ಷಣ.... ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಹಲವಾರು ಕೃತಿಗಳನ್ನು ರಚಿಸಿರುವ ಕಾರಂತರ ಕೆಲವು ಪ್ರಮುಖ ಕೃತಿಗಳೆಂದರೆ, ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ, ಚೋಮನ ದುಡಿ, ಚಿಗುರಿದ ಕನಸು, ಬೆಟ್ಟದ ಜೀವ, ಸರಸಮ್ಮನ ಸಮಾಧಿ, ಮೈ ಮನಗಳ ಸುಳಿಯಲ್ಲಿ, ಅಳಿದ ಮೇಲೆ ಮುಂತಾದುವು. "ಹುಚ್ಚು ಮನಸ್ಸಿನ ಹತ್ತು ಮುಖಗಳು" ಅವರ ಆತ್ಮಕಥೆ. ಕಾರಂತರ 'ಮೂಕಜ್ಜಿಯ ಕನಸುಗಳು' ಕೃತಿ ಕನ್ನಡಕ್ಕೆ ಇನ್ನೊಂದು ಜ್ಞಾನಪೀಠದ ಗರಿಯನ್ನು ಏರಿಸಿದೆ. ಈ ಕೃತಿ ಅಜ್ಜಿ ಮತ್ತು ಮೊಮ್ಮಗನ ನಡುವಿನ ಸಂಭಾಷಣೆಯ ಮೂಲಕವೇ ಹಲವು ವಿಚಾರಗಳಿಗೆ ಕನ್ನಡಿ ಹಿಡಿಯುತ್ತಾ ಸಾಗುತ್ತದೆ. ಕಾದಂಬರಿಯ ಮುಖ್ಯ ಪಾತ್ರವಾದ ಮೂಕಜ್ಜಿಗೆ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುವ ಒಂದು ವಿಸ್ಮಯವಾದ ಶಕ್ತಿ‌. ಹೊರಗಿನ ಜನಕ್ಕೆ ಮುಪ್ಪಿನ ಮರುಳಾಗಿ ಕಾಣಿಸುವ ಅವಳ ಬಡಬಡಿಕೆಯನ್ನು ಅದ್ಭುತಾತಿಶಯ ಶಕ್ತಿಯೆಂದು ಗ್ರಹಿಸುವುದು ಕೇವಲ ಮೊಮ್ಮಗ ಸುಬ್ರಾಯ ಮಾತ್ರ. ನಾಲ್ಕೈದು ಸಾವಿರ ವರ್ಷಗಳಿಂದ ಹರಿದುಬಂದಿರುವ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಲು ಯತ್ನಿಸುವ ಅವಾಸ್ತವಿಕತೆಯ ಪ್ರತೀಕವೆನಿಸುವ ಅಜ್ಜಿ ಮತ್ತು ವಾಸ್ತವದ ಪ್ರತಿನಿಧಿಯಾಗುವ ಮೊಮ್ಮಗ ಇಲ್ಲಿನ ಕೇಂದ್ರಬಿಂದು. ಜತೆಗೆ ಪಾತ್ರಧಾರಿಗಾಗಿ ಬರುವ ನಾಗಿ, ರಾಮಣ್ಣ, ಜನ್ನ ಮತ್ತಿತರರು ಆ ಮಂಥನದ ಭಾಗವಾಗುತ್ತಾರೆ.
"ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ", "ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು" ಎಂಬ ಮುನ್ನುಡಿಯ ಸಾಲುಗಳು ಇಡೀ ಕಥೆಯ ಸಾರಾಂಶ ಹಾಗೂ ಆಶಯವನ್ನು ತಿಳಿಸುತ್ತವೆ. 

೪. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕವೀರ ರಾಜೇಂದ್ರ - ೧೯೮೩
ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 'ಮಾಸ್ತಿ ಕನ್ನಡದ ಆಸ್ತಿ' ಎಂದೇ ಖ್ಯಾತರಾದವರು. ತೀರಾ ಬಡತನದಲ್ಲಿ ಬೆಳೆದು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ ಮಾಸ್ತಿ ಅವರು .ಸಿವಿಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ವೃತ್ತಿ ಜೀವನ ಆರಂಭಿಸಿದ ಇವರು ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಇವರು ಕಣ್ಣಿಗೆ ಕಟ್ಟುವಂತೆ ಕಥೆ ಬರೆಯುವಲ್ಲಿ ನಿಸ್ಸೀಮರಾಗಿದ್ದರು. ಮಾಸ್ತಿಯವರ ಹಲವು ಕಥೆಗಳು ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಹಾಗೆಯೇ ಮಾಸ್ತಿ ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀ ರಾಮ ಪಟ್ಟಾಭಿಷೇಕ, ಚಿಕವೀರ ರಾಜೇಂದ್ರ, ಚನ್ನಬಸವ ನಾಯಕ, ಕಾಕನಕೋಟೆ ಇವರ ಕೆಲ ಪ್ರಮುಖ ಕೃತಿಗಳು. 'ಭಾವ' ಮಾಸ್ತಿಯವರ ಆತ್ಮ ಕಥೆ. 

ಇವರ ಐತಿಹಾಸಿಕ ಕಾದಂಬರಿ ಚಿಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅದು ಕೊಡಗಿನ ಕೊನೆಯ ಅರಸ ಚಿಕವೀರ ರಾಜೇಂದ್ರನ ಕುರಿತಾದ ಕಾದಂಬರಿ. ಇಕ್ಕೇರಿಯ ರಾಜ ಮನೆತನದ ಕೊಂಡಿಯಿಂದ ಕೊಡಗಿಗೆ ಬಂದು ನೆಲೆನಿಂತ ಪಲೆರಿ ರಾಜ ಮನೆತನ ಹೈದರನನ್ನೂ, ಟಿಪ್ಪೂವನ್ನೂ ಸಮರ್ಥವಾಗಿ ಎದುರಿಸಿ ನಿಲ್ಲುತ್ತಾರೆ. ಆದರೆ ಗಂಡು ಸಂತಾನವಿಲ್ಲದ ಅರಸ ದೊಡ್ಡವೀರ ರಾಜ, ತನ್ನ ಮಗಳು ದೇವಮ್ಮಾಜಿ ರಾಜ್ಯವಾಳಬೇಕೆಂದು ಬಯಸಿ ಅವಳನ್ನು ಅರಸಿಯನ್ನಾಗಿಸುತ್ತಾನೆ. ಆದರೆ ದೊಡ್ಡವೀರ ರಾಜನ ತಮ್ಮ, ಲಿಂಗರಾಜ(ಚಿಕವೀರ ರಾಜೇಂದ್ರನ ತಂದೆ)ನಿಂಗೆ ಈ ನಿರ್ಧಾರ ಹಿಡಿಸುವುದಿಲ್ಲ. ದೇವಮ್ಮಾಜಿಗೆ ದಿವಾನನಾಗಿ ಇದ್ದುಕೊಂಡು ಅವಳ ವಿರುದ್ಧವೇ ಷಡ್ಯಂತ್ರ ರಚಿಸಿ, ಆಕೆಯನ್ನು ಬಂಧಿಸಿಟ್ಟು ತಾನೇ ರಾಜನಾಗುತ್ತಾನೆ. ಒಂಭತ್ತು ವರ್ಷ ಆಳ್ವಿಕೆ ನಡೆಸಿ ಆತ ಕಾಲವಾದ ನಂತರ ಅವನ ಮಗ ಚಿಕವೀರ ರಾಜ ಅರಸನಾಗುತ್ತಾನೆ. ಕೊಡಗಿನ ವಂಶದ ಕೊನೆಯ ಅರಸನಾದ ಇವನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಕೊಡಗು ಸಂಸ್ಥಾನ ಬ್ರಿಟಿಷರ ವಶವಾಗುತ್ತದೆ. ವೈಯಕ್ತಿಕವಾಗಿ ಬಹಳ ಅಸಹಜ, ಅಸಭ್ಯ ಮತ್ತು ವಿಲಕ್ಷಣ ವ್ಯಕ್ತಿಯಾಗಿದ್ದ ಚಿಕವೀರ ರಾಜ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ವಿಫಲನಾಗುತ್ತಾನೆ. ಈ ಕಾದಂಬರಿಯು ಆತನ ಕ್ರೌರ್ಯ ಮತ್ತು ದುಷ್ಕೃತ್ಯದ ವಿವರಗಳನ್ನೊಳಗೊಂಡಿದೆ.
ಮೂಲಕಥೆಯ ನಂತರ, ಅದಕ್ಕೆ ಹೊರತಾದ ಐತಿಹಾಸಿಕ ವಿಷಯವನ್ನು ಸಮಾರೋಪದಲ್ಲಿ ದಾಖಲಿಸಿರುವುದು ಈ ಕಾದಂಬರಿಯ ಒಂದು ವಿಶೇಷ. ಚಿಕವೀರ ರಾಜೇಂದ್ರನ ಮಗಳು ಗೌರಮ್ಮ(ಪುಟ್ಟಮ್ಮ) ಅವರು ಕ್ರೈಸ್ತಮತಕ್ಕೆ ಸೇರಿದ ಬಗ್ಗೆ, ಗೌರಮ್ಮ ಅವರ ಪತಿ ಕ್ಯಾಪ್ನನ್ ಕ್ಯಾಂಬೆಲ್ ಹಾಗೂ ಅವರ ಮಗಳು ಎಡಿತ್ ಸಾತು ಅವರನ್ನು ಇಂಗ್ಲೆಂಡಿನಲ್ಲಿ ಮಾಸ್ತಿಯವರ ಮಿತ್ರರು ಭೇಟಿಯಾದ ವಿಚಾರವನ್ನು ಬರೆದಿದ್ದಾರೆ. 
 
೫. ವಿ. ಕೃ. ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ವಿನಾಯಕ ಕೃಷ್ಣ ಗೋಕಾಕ ಅವರು ಕನ್ನಡದ ಪ್ರತಿಭಾವಂತ ಸಾಹಿತಿ‌. ವಿದ್ಯಾಭ್ಯಾಸದ ಸಲುವಾಗಿ ಧಾರವಾಡದಲ್ಲಿದ್ದಾಗ ವರಕವಿ ಬೇಂದ್ರೆಯವರ ಸಂಪರ್ಕಕ್ಕೆ ಬಂದ ಗೋಕಾಕರಿಗೆ ಸ್ಪೂರ್ತಿ, ಗುರು, ಮಾರ್ಗದರ್ಶಕ ಎಲ್ಲವೂ ಬೇಂದ್ರೆಯವರೇ. ಇಂಗ್ಲೀಷಿನಲ್ಲಿ ಎಂ. ಎ ಮುಗಿದ ತಕ್ಷಣವೇ ಪುಣೆಯ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ. ನಂತರ ಕಾಲೇಜಿನ ವತಿಯಿಂದಲೇ ಉನ್ನತ ವ್ಯಾಸಾಂಗಕ್ಕೆಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಯಿತು. ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿ ಇವರದ್ದು. ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲಾ ಪ್ರಸಿದ್ಧಿಗಳನ್ನು ಪಡೆದ ಸಾಹಿತಿಯಾದ ಇವರು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ಗೋಕಾಕರ ಬರಹ ತುಂಬ ವಿಪುಲ ಹಾಗೂ ವ್ಯಾಪಕವಾದುದು. ಹಲವು ಕವನ ಸಂಕಲನಗಳು, ವಿಮರ್ಶೆಗಳಲ್ಲದೇ‌, ಸಮರಸವೇ ಜೀವನ, ಇಜ್ಜೋಡು, ಏರಿಳಿತ, ಸಮುದ್ರಯಾನ ಮೊದಲಾದ ಕಾದಂಬರಿಗಳನ್ನು ಬರೆದಿದ್ದಾರೆ. ಗೋಕಾಕರು ಭಾರತ ಸಿಂಧು ರಶ್ಮಿ ಎಂಬ ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳುಳ್ಳ ಮಹಾಕಾವ್ಯ ರಚಿಸಿದ್ದಾರೆ. ಋಗ್ವೇದ ಕಾಲದ ಜನಜೀವನದ ಕುರಿತಾಗಿ ಈ ಕೃತಿ ರಚಿತಗೊಂಡಿದೆ. ಕನ್ನಡ ಸಾಹಿತ್ಯಕ್ಕೆ ಇವರ ಅನನ್ಯ ಕೊಡುಗೆ ಗಮನಿಸಿ ಜ್ಞಾನಪೀಠ ಪುರಸ್ಕಾರ ನೀಡಿ ಗೌರವಿಸಲಾಗಿದೆ. 
 
೬. ಡಾ|| ಯು. ಆರ್. ಅನಂತಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
ಪದ್ಮಭೂಷಣ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿ, ಚಿಂತಕ ಹಾಗೂ ವಿಮರ್ಶಕ. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಅನಂತಮೂರ್ತಿ ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ್ದಾರೆ. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹಲವಾರು ದೇಶಿ ಹಾಗೂ ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸಂಸ್ಕಾರ, ಭಾರತೀಪುರ, ಅವಸ್ಥೆ, ಭಾವ, ದಿವ್ಯ ಹಾಗೂ 'ಪ್ರೀತಿ ಮೃತ್ಯು ಮತ್ತು ಭಯ' ಇವರ ಕಾದಂಬರಿಗಳು. ಘಟಶ್ರಾದ್ಧ, ಮೌನಿ, ಸೂರ್ಯನ ಕುದುರೆ, ಎಂದೆಂದೂ ಮುಗಿಯದ ಕಥೆ, ಪ್ರಶ್ನೆ.... ಇನ್ನೂ ಹಲವು ಕಥೆಗಳನ್ನೂ ಇವರು ಬರೆದಿದ್ದಾರೆ. ಅಲ್ಲದೇ ವಿಮರ್ಶೆಗಳು, ನಾಟಕ, ಕವನ ಸಂಕಲನಗಳನ್ನೂ ರಚಿಸಿರುವ ಇವರ ಹಲವು ಕೃತಿಗಳು ಚಲನಚಿತ್ರವಾಗಿಯೂ ಜನಮನ್ನಣೆ ಗಳಿಸಿವೆ. ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿದ ಚಲನಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ. 'ಸುರಗಿ ' ಇವರ ಆತ್ಮ ಕಥನ. ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ 'ಪ್ರೀತಿ ಮೃತ್ಯು ಮತ್ತು ಭಯ' ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.
ಸಂಸ್ಕಾರ, ಘಟಶ್ರಾದ್ಧ ಮೊದಲಾದ ವಿಶಿಷ್ಟ ಕಥೆಗಳ ಮೂಲಕ ಹಾಗೂ ಧಾರ್ಮಿಕ, ರಾಜಕೀಯ ವಿಚಾರಗಳಲ್ಲಿ ತಮ್ಮ ಕ್ರಾಂತಿಕಾರಿ ನಿಲುವುಗಳ ಮೂಲಕ ಎಡಪಂಥೀಯ ಚಿಂತಕರೆಂಬ ಹಣೆಪಟ್ಟಿ ಹೊತ್ತುಕೊಂಡವರು ಅನಂತಮೂರ್ತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿರುವ ಅನಂತಮೂರ್ತಿ ಕನ್ನಡ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು. ೨೦೧೩ರಲ್ಲಿ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಕೂಡಾ ಇವರು ನಾಮನಿರ್ದೇಶಗೊಂಡಿದ್ದರು. 

೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮:
ಪದ್ಮಭೂಷಣ ಗಿರೀಶ್ ರಘುನಾಥ್ ಕಾರ್ನಾಡ್ ಕನ್ನಡದ ಖ್ಯಾತ ಸಾಹಿತಿ, ನಾಟಕಕಾರ, ರಂಗಕರ್ಮಿ, ಸಿನಿಮಾನಟ, ನಿರ್ದೇಶಕ, ಚಿಂತಕ ಹಾಗೂ ಪ್ರಗತಿಪರ ಹೋರಾಟಗಾರಾಗಿ ಗುರುತಿಸಿಕೊಂಡವರು. ತಮ್ಮ ನೇರ ನುಡಿ ಹಾಗೂ ವಿಚಾರಧಾರೆಗಳಿಂದ ಎಡಪಂಥೀಯ ಚಿಂತಕ ಎನಿಸಿಕೊಂಡವರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಹೋರ್ಡ್ಸ್ ಸ್ಕಾಲರ್ಷಿಪ್ ಪಡೆದುಕೊಂಡು ಹೆಚ್ಚಿನ ವ್ಯಾಸಂಗಕ್ಕೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ್ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್. ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಬುದ್ಧಿಜೀವಿ ಕಾರ್ನಾಡ್ ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾದರು.
ನಾಟಕ ರಚನೆಯಲ್ಲಿ ಪಳಗಿದ ಕೈ ಹೊಂದಿದ್ದ ಕಾರ್ನಾಡರ ಯಯಾತಿ, ಹಯವದನ, ತುಘಲಕ್, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು ಮೊದಲಾದ ನಾಟಕಗಳು ಸುಪ್ರಸಿದ್ಧ. 'ಆಡಾಡತ ಆಯುಷ್ಯ' ಇವರ ಆತ್ಮಕಥನ.
ಅನಂತಮೂರ್ತಿಯವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರಕ್ಕೆ ಚಿತ್ರಕಥೆ ಬರೆದು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಕಾರ್ನಾಡರು, ಭೈರಪ್ಪ ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಉತ್ಸವ್(ಹಿಂದಿ), ಗೋಧೂಳಿ (ಹಿಂದಿ) ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು (ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ) ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೂ ಕಾರ್ನಾಡ್ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಪ್ರಮುಖವಾಗಿ ನಾಟಕ ಪ್ರಕಾರಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. 

೮. ಚಂದ್ರಶೇಖರ ಕಂಬಾರ - ಸಮಗ್ರ ಸಾಹಿತ್ಯ - ೨೦೧೧:
ಡಾ. ಚಂದ್ರಶೇಖರ ಕಂಬಾರ ಅವರು ಕಾದಂಬರಿಕಾರರು ಹಾಗೂ ನಾಟಕಕಾರರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು ಹಾಗೆಯೇ ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಚಿಕಾಗೊ,ನ್ಯೂಯಾರ್ಕ್,ಬರ್ಲಿನ್,ಮಾಸ್ಕೋ,ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು. ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದಾಗ ಅದ್ಯಕ್ಷತೆ ವಹಿಸಿದ್ದ ಖ್ಯಾತ ಕವಿಗಳೊಬ್ಬರು 'ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ' ಎಂದು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರಂತೆ. ಅಂದೇ ಕಂಬಾರರು ಕಾವ್ಯವನ್ನು ಪಳಗಿಸಿಕೊಳ್ಳುವತ್ತ ದೃಢಸಂಕಲ್ಪ ಕೈಗೊಂಡಿದ್ದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಗಳಲ್ಲಿ ಹಾಸುಹೊಕ್ಕಾಗಿಸುವ ಚಂದ್ರಶೇಖರ ಕಂಬಾರರು ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ ಹಾಗೆಯೇ ರಾಜಕಾರಣಿಯೂ ಕೂಡಾ ಹೌದು.
ತಮ್ಮ ಊರಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು.ಡಾ.ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು. ಅವರ ಸಾಹಿತ್ಯದಲ್ಲಿ ಅಲ್ಲಿನ ಗ್ರಾಮ್ಯ ಭಾಷೆಯ ಸೊಗಡು ಢಾಳಾಗಿ ಕಾಣಸಿಗುತ್ತದೆ. 

ಕರಿಮಾಯಿ, ಕಾಡುಕುದುರೆ, ಸಿಂಗಾರೆವ್ವ ಮತ್ತು ಅರಮನೆ ಕಂಬಾರರ ಪ್ರಖ್ಯಾತ ಕೃತಿಗಳು. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳನ್ನಾಗಿಸಿದರು‌. 'ಕರಿಮಾಯಿ' , 'ಸಂಗೀತಾ' , 'ಕಾಡುಕುದುರೆ', 'ಸಿಂಗಾರವ್ವ ಮತ್ತು ಅರಮನೆ' ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಈ ಚಿತ್ರಗಳಿಗೆ ತಾವೇ ಸಂಗೀತವನ್ನೂ ನೀಡಿದ್ದಾರೆ. ಕಾಡುಕುದುರೆ ಚಿತ್ರದ ಶೀರ್ಷಿಕೆ ಗೀತೆ 'ಕಾಡು ಕುದುರೆ ಓಡಿಬಂದಿತ್ತಾ.....' ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕವೂ ದೊರಕಿದೆ. 'ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಸ್ವತಃ ಉತ್ತಮ ಹಾಡುಗಾರರೂ ಆಗಿರುವ ಕಂಬಾರರು ತಮ್ಮ ಜಾನಪದ ಶೈಲಿಯ ಹಾಡುಗಳಿಗಾಗಿ ಜನಪ್ರಿಯರು.
ಹಲವು ಕಾವ್ಯಗಳು, ನಾಟಕಗಳು, ಸಂಶೋಧನಾ ಗ್ರಂಥಗಳು ಹಾಗೂ ಕಾದಂಬರಿಗಳನ್ನು ಬರೆದಿರುವ ಕಂಬಾರರ ಪ್ರಮುಖ ಕೃತಿಗಳು; ಜೋಕುಮಾರ ಸ್ವಾಮಿ, ಸಂಗ್ಯಾ ಬಾಳ್ಯಾ, ಕಾಡುಕುದುರೆ, ಹರಕೆಯ ಕುರಿ, ಸಿರಿಸಂಪಿಗೆ, ಮಹಾಮಾಯಿ, ಚಕೋರಿ(ಮಹಾಕಾವ್ಯ), ಕರಿಮಾಯಿ, ಜಿ.ಕೆ ಮಾ‌ಸ್ತರ್ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ ಪ್ರಮುಖವಾದುವು. ಇವುಗಳಲ್ಲಿ ಹೆಚ್ಚಿನವು ಚಲನಚಿತ್ರಗಳಾಗಿ ರಾಷ್ಟ್ರೀಯ ಮನ್ನಣೆ ಗಳಿಸಿವೆ ಎಂಬುದು ಗಮನಾರ್ಹ ಸಂಗತಿ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವಿಶೇಷವಾಗಿ ಜಾನಪದ ಸಾಹಿತ್ಯದ ತಮ್ಮ ಕೊಡುಗೆಗಾಗಿ ಕಂಬಾರರು ೨೦೧೧ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಇವರಲ್ಲದೇ ಇನ್ನೂ ಹಲವು ಶ್ರೇಷ್ಠ ಸಾಹಿತಿಗಳು ನಮ್ಮಲ್ಲಿದ್ದಾರೆ. ಕನ್ನಡ ನಾಡು ನುಡಿಯ ಔನತ್ಯವನ್ನೂ, ಕೀರ್ತಿಯನ್ನು ಜಗತ್ತಿನ್ನೆಲ್ಲೆಡೆ ಪಸರಿಸುತ್ತಿರುವ ಸಾಹಿತಿಗಳೆಲ್ಲರಿಗೂ ಗೌರವಪೂರ್ಣ ವಂದನೆಗಳು. ಈ ನಾಡು-ನುಡಿಯ ಸೇವೆ, ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ. ಕನ್ನಡಾಂಬೆಯ ಮಕುಟಕ್ಕೆ ಇನ್ನಷ್ಟು ಸಮ್ಮಾನದ ಗರಿಗಳು ಅಲಂಕೃತವಾಗಲಿ ಎಂಬ ಹಾರೈಕೆಯೊಂದಿಗೆ..... 

 ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.....

ಶನಿವಾರ, ಅಕ್ಟೋಬರ್ 8, 2022

ಅಜ್ಜಿಯೆಂಬ ಮಧುರ ಸ್ಮೃತಿ

बातें भलू जाती हैं
यादें याद आती हैं

ಆನಂದ್ ಭಕ್ಷಿಯವರ ಈ ಸಾಲುಗಳಲ್ಲಿ ಬದುಕಿನ ಸಾರವೇ ಅಡಗಿದೆಯಲ್ಲವೇ? ಮಾತುಗಳು ಬಂದು ಹೋಗುತ್ತವೆ. ಆದರೆ ಕಾಡುವ ನೆನಪುಗಳು ನೀಡುವ ನೋವು ಅಪಾರ. ಕಳೆದ ಮೌಲ್ಯಯುತ ಕ್ಷಣಗಳು ಸಿಹಿಕಹಿ ನೆನಪಿನ ರೂಪದಲ್ಲಿ ಮನದ ಕಣಜದಲ್ಲಿ ದಾಸ್ತಾನಾಗಿ ಪರಿವರ್ತಿತವಾಗಿ ನಮ್ಮ ಕೊನೆಯುಸಿರಿನವರೆಗೂ ಶಾಶ್ವತವಾಗಿ ಉಳಿದುಬಿಡುತ್ತದೆ. 

ಪ್ರತಿಯೊಬ್ಬರ ಜೀವನದಲ್ಲೂ ಕೆಲವು ಅತೀ ಪ್ರಮುಖ ಎನಿಸುವಂತಹ ವ್ಯಕ್ತಿಗಳಿರುತ್ತಾರೆ. ಅಂತಹವರ ಅಗಲಿಕೆ ಸೃಷ್ಟಿಸುವ ಖಾಲಿತನ ಬದುಕಿನುದ್ದಕ್ಕೂ ಹಾಗೆಯೇ ಉಳಿದುಬಿಡುತ್ತದೆ. ಅದನ್ನು ಬೇರೆ ಯಾರೂ ತುಂಬಲು ಸಾಧ್ಯವೇ ಇಲ್ಲ. ಅವರೊಂದಿಗೆ ಕಳೆದ ಕ್ಷಣಗಳನ್ನೇ ಮೆಲುಕು ಹಾಕುತ್ತಾ ನಮ್ಮ ಸರದಿ ಬರುವವರೆಗೆ ಬಾಳಬಂಡಿ ಎಳೆಯಬೇಕಷ್ಟೇ. ನನ್ನ ಬದುಕಿನಲ್ಲಿನ ಅಂತಹದ್ದೇ ಜೀವನಾಡಿ ನನ್ನಜ್ಜಿ. 


ಆಗಾಗ ಅವರೇ ಹೇಳುತ್ತಿದ್ದಂತೆ ಓದಿದ್ದು ಮೂರನೇ ತರಗತಿವರೆಗಂತೆ. ಆದರೆ ಆಕೆಗಿದ್ದ ವಿವೇಚನೆ ಹಾಗೂ ಅರಿವಿನ ಜ್ಞಾನ ಡಬಲ್, ತ್ರಿಬಲ್ ಡಿಗ್ರಿಗಳನ್ನು ಗಳಿಸಿರುವ ನಮಗೂ ಇರಲಿಲ್ಲ ಎನ್ನುವುದು ಆಕೆಯನ್ನು ಬಲ್ಲ ಯಾರಾದರೂ ಚರ್ಚೆಯಿಲ್ಲದೇ ಒಪ್ಪುವ ಮಾತು. ಅಮ್ಮ ಸರ್ಕಾರಿ ನೌಕರಿಯಲ್ಲಿ ಪರವೂರಿನಲ್ಲಿದ್ದುದರಿಂದ ನಾನು 'ಅಜ್ಜಿಪುಲ್ಲಿ'ಯಾಗಿಯೇ ಬೆಳೆದಿದ್ದು. ನನ್ನನ್ನು ಸೊಂಟದ ಮೇಲೆ ಹೊತ್ತು ಇಡೀ ಊರಿನ ತುಂಬಾ ಅಂಬಾರಿ ಮೆರವಣಿಗೆ ಮಾಡಿಸುತ್ತಿದ್ದ ದಿನಗಳು ಇಂದಿಗೂ ನೆನಪಿನಾಳದಲ್ಲಿ ಹಚ್ಚಹಸಿರು. ನಂತರದ ದಿನಗಳಲ್ಲಿ ಅಮ್ಮನಿಗೆ ವರ್ಗಾವಣೆಯಾಗಿ ನಮ್ಮೂರಿನ ಸಮೀಪದ ಶಾಲೆಗೇ ಬಂದರಾದರೂ ಅವರ ಕೆಲಸದ ಹೊರೆಯೇ ವಿಪರೀತವಿತ್ತು. ಬೆಳಿಗ್ಗೆ ಒಂಬತ್ತಕ್ಕೆಲ್ಲಾ ಮನೆಬಿಟ್ಟು ಸಂಜೆ ಐದರ ನಂತರ ಮನೆ ಸೇರುತ್ತಿದ್ದವರಿಗೆ ಕೆಲಸದ ಒತ್ತಡ ವಿಪರೀತವೇ. ಹಾಗಾಗಿ ನಾನು ಮತ್ತು ತಮ್ಮ ಅಜ್ಜಿಗೆ ಅಂಟಿಕೊಂಡಿದ್ದೇನೂ ಅತಿಶಯವಲ್ಲ. ಅಜ್ಜಿಯ ಪ್ರೀತಿಗೆಲ್ಲ ಏಕೈಕ ವಾರಸುದಾರಿಣಿಯಂತೆ ಮೆರೆಯುತ್ತಿದ್ದ ನನಗೆ ಭಯಂಕರ ಅಸೂಯೆ ಕಾಡಿದ್ದು ತಮ್ಮ ಹುಟ್ಟಿದಾಗ. ಅವ ಹುಟ್ಟಿದ ಮೇಲೆ ಅಜ್ಜಿಯ ಪ್ರೀತಿ ಇಬ್ಬರ ನಡುವೆ ಹಂಚಿಹೋದದ್ದು ನನಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತಾ ಅನುಭವ ಕೊಟ್ಟಿತ್ತು. ಆ ಕಾಲದ ಎಲ್ಲಾ ಅಜ್ಜಿಯಂದಿರಂತೆ ನಮ್ಮಜ್ಜಿಗೂ ಮೊಮ್ಮಗನ ಮೇಲೆ ಕೊಂಚ ಹೆಚ್ಚು ಪ್ರೀತಿ...... ಅದೇ ನನ್ನ ಉದರಕ್ಕೆ ಕಿಚ್ಚು ಹಚ್ಚುತ್ತಿದ್ದುದು. ಅವನು ಹದಿಮೂರು ದಿನದ ಮಗುವಾಗಿದ್ದಾಗ ಬಾವು(ಕುರು) ಎದ್ದು ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ಇದ್ದಾಗ, ಅದೆಷ್ಟೋ ಕಷ್ಟಪಟ್ಟು ಉಳಿಸಿಕೊಂಡಿದ್ದು. ಹಾಗಾಗಿ ಅವನ ಮೇಲಿನ ಕಾಳಜಿ ಮತ್ತಷ್ಟು ಜಾಸ್ತಿ. ಅದು ಸಣ್ಣವಳಾಗಿದ್ದ ನನ್ನ ಕಣ್ಣಿಗೆ ತಾರತಮ್ಯದಂತೆ ತೋರಿದ್ದ ದಿನಗಳೂ ಇವೆ. 

ಆದರೆ ಸಮಯ ಸರಿದಂತೆ ಆಕೆಯ ಪ್ರೀತಿಯ ಆಳದ ಅರಿವು ಆಗಿದ್ದೂ ಅಷ್ಟೇ ನಿಜ. ಬೆಳಿಗ್ಗೆ ಎದ್ದಕೂಡಲೇ ಒಂದು ಕೊಳಗ ಕಾಫಿ ಸರಬರಾಜಿನಿಂದ ಹಿಡಿದು, ಮಧ್ಯಾನ್ಹದ ಟಿಫಿನ್ ಬಾಕ್ಸಿನೊಳಗೆ ಗಮ್ಮನೆ ಕುಳಿತಿರುತ್ತಿದ್ದ ಕೆನೆ ಮೊಸರು, ಸಂಜೆ ಶಾಲೆಯ ಮಣಭಾರದ ಬ್ಯಾಗಿನೊಂದಿಗೆ ಕಿಕ್ಕಿರಿದು ತುಂಬಿದ ಬಸ್ಸಿಳಿದು ಮನೆಯೊಳಗೆ ಕಾಲಿಟ್ಟ ಕ್ಷಣದಲ್ಲಿ ಕಣ್ಮುಂದೆ ಹಾಜರಿರುತ್ತಿದ್ದ ಬಿಸಿ ಕಾಫಿ ಹಾಗೂ ಲಘು ಉಪಹಾರದ ಸ್ವಾದವನ್ನು ಈ ಜಿಹ್ವೆ ಎಂದಾದರೂ ಮರೆಯುವುದುಂಟೇ? 

ಬಹಳ ಕಷ್ಟದಲ್ಲಿ ಜೀವನ ನಡೆಸಿ, ಮೂವರು ಮಕ್ಕಳನ್ನು ಸಲಹಿ ಪೋಷಿಸಿದ ಜೀವವದು. ಗದ್ದೆ ಕೆಲಸ ಮುಗಿಸಿ, ಒರಳಿನಲ್ಲಿ ಭತ್ತ ಕುಟ್ಟಿ, ಅಕ್ಕಿ ಮಾಡಿ ಅದರಿಂದ ಅನ್ನಬೇ ಯಿಸಿ ಹೊಟ್ಟೆ ಹೊರೆಯುತ್ತಿದ್ದ ದಿನಗಳ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು ಅಜ್ಜಿ. ಅನ್ನಕ್ಕೆ ಅಕ್ಕಿ ಹಾಕಿ, ಅದು ಬೇಯುವುದರೊಳಗೆ ಇಡೀ ಊರನ್ನೇ ಒಂದು ಸಲ ಸುತ್ತು ಹಾಕಿ ಬರುತ್ತಿದ್ದ ಗಟ್ಟಿಗಿತ್ತಿ ಜೀವವದು. ದಿನಾ ಬೆಳಿಗ್ಗೆ ಎದ್ದು ಹೂ ಕೊಯ್ದು, ಕಟ್ಟಿ ಮಾಲೆಯಾಗಿಸಿ, ಎರಡು ಬಸದಿ, ಒಂದು ದೇವಸ್ಥಾನಕ್ಕೆ ಸುತ್ತು ಹಾಕದೇ ತಿಂಡಿಯನ್ನು ಬಾಯಿಗಿಡುತ್ತಿರಲಿಲ್ಲ. ಊರಿನಲ್ಲಿ ಇವರ ಪರಿಚಯವಿಲ್ಲದ ಒಂದೇ ಒಂದು ನರಪಿಳ್ಳೆಯೂ ಇಲ್ಲ. ಎಲ್ಲರಿಗೂ ಬೇಕಾದಾಕೆ, ಎಲ್ಲರ ಕಷ್ಟಸುಖಗಳಲ್ಲಿ ಪಾಲುದಾರೆ, ಎಲ್ಲರ ನೋವಿಗೂ ಮಿಡಿಯುವಂತಹ ಹಿರಿತಲೆ..... 

ಚಿನ್ಹೆ ಮಾತ್ರೆ(ಬಾಲಾಗ್ರಹ ಕುಟಿಕೆ), ಆಟಿ ಮದ್ದು, ಕಹಿ ಕಷಾಯಗಳನ್ನು ಮೂಗು ಹಿಡಿದು ಬಾಯೊಳಗೆ ಸುರಿಯುತ್ತಿದ್ದಾಗ 'ನಿನ್ನಂತಹ ಅಜ್ಜಿ ಯಾರಿಗೂ ಇರ್ಬಾರ್ದು ' ಅಂತ ಸಿಟ್ಟಿನಲ್ಲಿ ಒದರಾಡಿದ್ದೇನೆ. ಅವರು ಕೈ ಯ್ಯಾರೆ ತಯಾರಿಸುತ್ತಿದ್ದ ಸಿಹಿ ಸೊರೆದೋಸೆ, ಕಜ್ಜಾಯ, ಪತ್ರೋಡೆ, ಶ್ಯಾವಿಗೆ ತಿಂದು, 'ಅಜ್ಜಿ ನಿನ್ನಷ್ಟು ಒಳ್ಳೆಯವರು ಪ್ರಪಂಚದಲ್ಲೇ ಯಾರೂ ಇಲ್ಲ' ಅಂತ ಪ್ರಶಸ್ತಿಯನ್ನೂ ಕೊಟ್ಟಿದ್ದೇನೆ. ತೀರಾ ಇತ್ತೀಚೆಗೆ ಕೆಸುವಿನ ಸೊಪ್ಪಿನ ಚಟ್ನಿಯ ರೆಸಿಪಿ ಕೇಳಿ, ಅದರ ಸ್ವಾದ ಅವರ ಕೈ ರುಚಿಯಂತೆ ಇರದಿದ್ದದ್ದು ಕಂಡು, 'ನೀವು ಮಾಡಿದ ರೀತಿ ನಾನು ಮಾಡ್ಬಾರ್ದು ಅಂತ ತಪ್ಪು ರೆಸಿಪಿ ಹೇಳಿಕೊಟ್ಟಿದ್ರಲ್ಲಾ' ಅಂತ ಫೋನಿನಲ್ಲೇ ಸಣ್ಣಕಲಹ ನಡೆಸಿದ್ದೆ. 

ಇಷ್ಟೆಲ್ಲದರ ನಡುವೆಯೂ ಬದಲಾಗದೇ ಉಳಿದದ್ದು ಅವರ ಅಕ್ಕರೆ...... 'ಎಂತ ಮಾಡ್ತಿ ಮಗಾ? ಬಾಲೆ(ನನ್ನ ಮಗಳು) ಎಂತ ಮಾಡ್ತಾಳೆ? ಊಟ ಮಾಡಿದ್ಯಾ ? ಇನ್ನೂ ಮಾಡಿಲ್ಲಾ? ಹೀಗೆ ಮಾಡಿ ಆರೋಗ್ಯ ಹಾಳ್ ಮಾಡ್ಕೋ ನೀನು... ಹೇಳಿದ ಮಾತು ಅರ್ಥ ಆಗಲ್ಲ ನಿಂಗೆ... ಎಂತ ಸಾಂಬಾರು ಮಾಡಿದ್ದೇ?, ಆ ತಲೆ ನೋಡು ಚಪ್ಪರ ಮಾಡ್ಕೊಂಡಿದ್ದೀ... ಸಮಾ ಎಣ್ಣೆ ಹಾಕಿ ಚೆಂದ ಬಾಚಿ ಜಡೆ ಹಾಕ್ಕೊಳ್ಳೋಕೆ ಆಗಲ್ಲೇನು? ಇಗಾ, ಇದು ದೇವಸ್ಥಾನದಿಂದ ತಂದಿದ್ದು ಹೂವು, ಮುಡ್ಕ ಮಗ..... ಅದಂತ ಪ್ಯಾಷನ್ನೇನಾ, ಬೋಳು ಕೈ , ಬೋಳು ಹಣೆ ಇಟ್ಕೊಂಡು ತಿರ್ಗದು, ಒಂದೆರಡು ಮಣ್ಣಿನ ಬಳೆ(ಗಾಜಿನ ಬಳೆ) ಇಟ್ಟು, ಹಣೆಗೆ ಬೊಟ್ಟಿಡಕೆ ಆಗಲ್ವಾ ? ಅದೆಷ್ಟು ಸಣ್ಣಬೊಟ್ಟು? ಕಣ್ಣಿಗೆ ಕಾಣ್ತಿಲ್ಲ....., ಏ ಒಂಚೂರು ಬಾಲೆ ಮುಖ ತೋರ್ಸೇ ....'  ಫೋನಿನಲ್ಲಿನ ಇಂತಹ ಸಾವಿರ ಮಾತುಕತೆಗಳಲ್ಲಿ ಇಣುಕುತ್ತಿದ್ದದ್ದು ಶುದ್ಧ ಅಕ್ಕರೆಯಷ್ಟೇ.
ನಾನು ಪದವಿ ಓದಿನ ನಿಮಿತ್ತ ಊರುಬಿಟ್ಟು ಹಾಸ್ಟೆಲ್ ವಾಸಿಯಾದ ದಿನಗಳಲ್ಲಿಯೂ ನನಗಾಗಿ ಊರಜಾತ್ರೆಯಲ್ಲಿ ಐಸ್ ಕ್ರೀಂ ಖರೀದಿಸಿ ನನ್ನ ತಮ್ಮನ ಚೇಷ್ಟೆಗೆ ತಲೆಕೊಟ್ಟಿದ್ದನ್ನು ಮರೆಯಲಾದೀತೇ?

ಮನೆಗೆ ಯಾರೇ ಬಂದರೂ ಊಟ, ತಿಂಡಿ ಆಗದೇ ಕಳಿಸುವ ಮಾತೇ ಇರಲಿಲ್ಲ ಅಜ್ಜಿಯಲ್ಲಿ. ಯಾರಾದರೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸದೆ ಮದುವೆ ಮಾಡಿದರೆ ಅಥವಾ ಕೂಲಿ ಕೆಲಸಕ್ಕೆ ಕಳಿಸಿದ್ದು ತಿಳಿದರೆ, 'ಅದೆಂತಕ್ಕೆ ಓದು ವಯಸ್ಸಲ್ಲಿ ಇಂತದ್ದೆಲ್ಲ? ಗಂಡೋ , ಹೆಣ್ಣೋ ಮಕ್ಕಳನ್ನು ಓದಿಸ್ಬೇಕು' ಅಂತ ಅಜ್ಜಿ ಅವರ ಮನೆಯವರಿಗೆ ಹೇಳುವಾಗೆಲ್ಲಾ ಹೇಳಲಾರದಂತಹ ಹೆಮ್ಮೆಯ ಭಾವವೊಂದನ್ನು ಅಂತರಾಳದಿಂದ ಅನುಭವಿಸಿದ್ದೇನೆ...

ಡಿಕ್ಲೇಷನ್(ಡಿಕ್ಲರೇಷನ್), ಗಾಡೇಜ್(ಗಾಡ್ರೇಜ್), ಟಿಬಿ(ಟಿವಿ) ಎಂಬಿತ್ಯಾದಿ ಅವರ ಇಂಗ್ಲೀಷಿನ ಪಾಂಡಿತ್ಯ, ಪ್ರೌಢಿಮೆಯನ್ನು ಹೊಗಳಿ ಕಿಂಡಲ್ ಮಾಡಿರುವುದಕ್ಕೆ ಲೆಕ್ಕವಿಲ್ಲ. ಕಿನ್ನರಿಯಿಂದ ಆರಂಭವಾಗಿ ಕುಲವಧು, ಪುಟ್ಟಗೌರಿ, ಲಕ್ಷ್ಮೀ ಬಾರಮ್ಮ, ಅಗ್ನಿಸಾಕ್ಷಿಯ ತನಕ ಕಲರ್ಸ್ ಕನ್ನಡದ ಸಕಲ ನಾಯಕಿಯರ ಸಂಸಾರದ ಗೋಳಾಟಕ್ಕೆ ಕಿವಿಯಾಗಿ, 'ಹಂಗೇ ಆಗ್ಬೇಕು ಕೇಡಿ ನಿಂಗೆ, ಪಾಪ ಆ ಹುಡುಗಿಗೆ ಎಷ್ಟು ಗೋಳು ಕೊಡೋದು ನೀನು' ಅಂತ ಅಜ್ಜಿ ಅವಲತ್ತುಕೊಳ್ಳುವಾಗಲೆಲ್ಲಾ ಅಜ್ಜಿಯನ್ಯಾಕೆ ಕಲರ್ಸ್ ಕನ್ನಡದವರು ಬ್ರಾಂಡ್ ಅಂಬಾಸಿಡರ್ ಮಾಡ್ಕೋಬಾರ್ದು ಅಂತ ನಾನು, ತಮ್ಮ ತೀವ್ರತರವಾದ ಚರ್ಚೆ ನಡೆಸಿದ್ದೇವೆ. ಅವರಷ್ಟು ವಿಶಿಷ್ಟವಾಗಿ ಧಾರಾವಾಹಿ ನೋಡುವ ಇನ್ನೊಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಧಾರಾವಾಹಿ ಬರುವಾಗ ಕುರ್ಚಿಯಲ್ಲೇ ಕಣ್ಣು ಕುಗುರಿಸಿಕೊಂಡು ಮಲಗಿ ಅಡ್ವರ್ಟೈಸ್ ಬರುವಾಗ ತಟಕ್ಕನೆ ಎದ್ದು ಟಿವಿ ನೋಡುವ ಸ್ಪೆಷಲ್ ಕ್ಯಾಂಡಿಡೇಟ್ ನಮ್ಮಜ್ಜಿ. ಮೂರು ಸರ್ತಿ ಅಡ್ವರ್ಟೈಸ್ಮೆಂಟ್ ಬರದೇ ಧಾರಾವಾಹಿ ಮುಗಿಯದು ಎಂಬ ಘನಘೋರ ಲೆಕ್ಕಾಚಾರ ಪ್ರವೀಣೆಯೆದುರು ವಾದ ಹೂಡಲಾಗದೇ ಶಸ್ತ್ರ ತ್ಯಾಗ ಮಾಡಿದ ದಿನಗಳಿಗೆ ಲೆಕ್ಕವಿಲ್ಲ.  ಅದಕ್ಕಿಂತಲೂ ಕಠೋರ ಪರಿಸ್ಥಿತಿ ಎಂದರೆ ಧಾರಾವಾಹಿ ಮುಗಿದು ಅರ್ಧ ಗಂಟೆ ಕಳೆದರೂ 'ಇಲ್ಲ, ಧಾರಾವಾಹಿ ಮುಗಿದಿಲ್ಲ, ನೀನೇ ಚಾನೆಲ್ ಬದಲಾಯಿಸಿದ್ದೀಯಾ' ಅನ್ನೋ ಗುರುತರ ದೋಷಾರೋಪಣೆ. ತಮ್ಮನ ಕ್ರಿಕೆಟ್ ಪ್ರೇಮಕ್ಕೆ ಅವರ ಧಾರಾವಾಹಿಗಳ ಬಲಿಯಾದಾಗಲೂ ಬೇಸರಿಸದೇ ಅವನ ಕ್ರಿಕೆಟ್ಟನ್ನೇ ಧಾರವಾಹಿಯಂತೆ ನೋಡಿದ ಧೀಮಂತೆ ನಮ್ಮಜ್ಜಿ. ಕ್ರಿಕೆಟ್ ನೋಡಲು ಗ್ಯಾಲರಿಯಲ್ಲಿ ಕುಳಿತ ಜನಸ್ತೋಮವನ್ನು ನೋಡಿ, 'ಇವರೆಲ್ಲಾ ಕಾಪಿ ಎಸ್ಟೇಟಲ್ಲಿ ಕೆಲಸ ಮಾಡೋಕೆ ಬಂದಿದ್ದಾರಾ?' ಅಂತ ಕೇಳಿದ್ದಾಕೆ ನನ್ನಜ್ಜಿ. ಗೋಲ್ಡನ್ ಸ್ಟಾರ್ ಗಣೇಶ್ ಟಿವಿಯಲ್ಲಿ ಕಂಡಾಗಲೆಲ್ಲಾ, 'ಅಗಳೇ, ಇವ ಮುಂಚೆ ನಮಸ್ಕಾರ, ನಮಸ್ಕಾರ, ನಮಸ್ಕಾರ ಅಂತ ಬರ್ತಿದ್ದ' ಎಂದು ಕಾಮಿಡಿ ಟೈಂ ಅನ್ನು ನೆನಪಿಸಿಕೊಳ್ಳುತ್ತಿದ್ದ ಅಜ್ಜಿಗೆ ಸಾಟಿಯುಂಟೇ. 

ವಯೋಸಹಜ ತೊಂದರೆಗಳಿಂದ ಕೊಂಚ ಬಳಲಿದಂತಾಗಿದ್ದು ತೀರಾ ಇತ್ತೀಚೆಗೆ. ಸರಿಸುಮಾರು ಎರಡು ವರ್ಷಗಳಿಂದ ದೈನಂದಿನ ದೇವರ ದರ್ಶನದ ಕಾರ್ಯಕ್ರಮ ನಿಂತಿತ್ತಾದರೂ ಹೂ ಕೊಯ್ದು ಮಾಲೆ ಕಟ್ಟಿ ದಿನವೂ ದೇವಸ್ಥಾನಕ್ಕೆ ಕಳಿಸುವುದು ತಪ್ಪಿಸಿರಲಿಲ್ಲ. ಎಷ್ಟೇ ಸುಸ್ತಾದರೂ ಅರೆಘಳಿಗೆ ಮಲಗಿ, ಏಳುತ್ತಿದ್ದರೇ ಹೊರತು ಮನೆಯೊಳಗಿನ ಓಡಾಟ, ಕೆಲಸ, ಬೊಗಸೆ ನಿಲ್ಲಿಸಿರಲಿಲ್ಲ. ಮೊನ್ನೆ ಅಷ್ಟಮಿಯ ದಿನ ತಮ್ಮನ ಹತ್ತಿರ ವಿಡಿಯೋ ಕಾಲ್ ಮಾಡಿಸಿ ಮೊಮ್ಮಗಳ ಮುಖ ನೋಡಿ ಮಾತನಾಡಿಸಿದ್ದರು. ಎಂಟನೇ ತಾರೀಕು ವಿಜಯದಶಮಿಯ ದಿನ ಬೆಳ್ಳಂಬೆಳಗ್ಗೆ ಅಮ್ಮನಿಗೆ ಕರೆ ಮಾಡಿ ಮಾತನಾಡಿದಾಗಲೂ ಖುಷಿಯಾಗಿದ್ದವರು ಅದೇ ಸಂಜೆಗೆ ಇನ್ನಿಲ್ಲವಾದರು ಎಂದರೆ ನಂಬುವುದು ಹೇಗೆ? ಅವರಾಸೆಯಂತೆಯೇ ಕೈ ಕಾಲು ಬಿದ್ದು ಹಾಸಿಗೆ ಹಿಡಿಯುವ ಮೊದಲೇ ಇಹಯಾತ್ರೆ ಮುಗಿಸಿದರು. ಅದೂ ವಿಜಯದಶಮಿಯ ದಿನ, ಅವರ ನೆಚ್ಚಿನ ಮನೆಯಲ್ಲೇ, ಅತೀ ಪ್ರೀತಿಪಾತ್ರ ಮೊಮ್ಮಗನ ಕೈಗಳಲ್ಲಿಯೇ...... ಒಂದಿನಿತೂ ನೋವಿಲ್ಲದ ಸುಖಮರಣ.... 

ಅದೆಷ್ಟು ಲಗುಬಗೆಯಿಂದ ಹೊರಟು ಬಂದರೂ ಕೊನೆಯ ಬಾರಿಗೊಮ್ಮೆ ಅವರ ಮುಖ ನೋಡುವ ಅವಕಾಶವೂ ಸಿಗಲೇ ಇಲ್ಲ ನನಗೆ.... ಆ ಬೇಸರ, ದುಃಖ ಸಾಯುವವರೆಗೂ ಮನದಾಳದಲ್ಲೆಲ್ಲೋ ಚುಚ್ಚುತ್ತಲೇ ಇರುತ್ತದೆ. 

ಮನೆ, ಅವರ ಕೋಣೆ, ಮಲಗುತ್ತಿದ್ದ ಮಂಚ, ಬಳಸುತ್ತಿದ್ದ ವಸ್ತುಗಳು, ಬೆಳಿಗ್ಗೆ ಪೂಜೆ ಮಾಡಿ ದೇವರಿಗೇರಿಸಿದ ಹೂವು ಎಲ್ಲವೂ ಇದ್ದಲ್ಲೇ ಇವೆ. ಅಂಗಳದ ಬದಿಯಲ್ಲಿನ ಕಾಕಡ, ಗೊರಟೆ, ದಾಸವಾಳ, ನಿತ್ಯಪುಷ್ಪ, ಗುಲಾಬಿ ಹೂಗೊಂಚಲುಗಳು ಗಾಳಿಗೆ ಆಡುತ್ತಾ ನಿಂತಿವೆ. 

ಆದರೆ ಅವುಗಳಿಗೆಲ್ಲಾ ಜೀವ ತುಂಬುತ್ತಿದ್ದ ತೊಂಬತ್ತೆರಡರ ಹರೆಯದ ನನ್ನಜ್ಜಿ ಇನ್ನು ನೆನಪು ಮಾತ್ರ.... 

ಆ ಅಕ್ಕರೆಯ ಮಾತುಗಳು, ನಿಸ್ವಾರ್ಥ ಪ್ರೀತಿ, ಮಮತೆ ಎಲ್ಲವೂ ಇನ್ನು ನೆನಪಿನ ಬುತ್ತಿಯೊಳಗೆ ಮಾತ್ರ. ಬಾಲ್ಯದಲ್ಲಿ ನನ್ನನ್ನು ಸೊಂಟದ ಮೇಲೆ ಹೊತ್ತು ಮೆರೆಸುತ್ತಿದ್ದ ದಿನಗಳಿಂದ ಹಿಡಿದು, ಮೊನ್ನೆಯ ಜಂಗಮವಾಣಿಯ ಕರೆಗಳ ತನಕ ಪ್ರತೀ ಕ್ಷಣಗಳೂ ಮತ್ತೆ ಮತ್ತೆ ಕಾಡಿ ಕಣ್ಣೀರಾಗುತ್ತಿರುವ ಈ ಸಮಯದಲ್ಲಿ ನೆನಪಾಗುತ್ತಿರುವುದು ಆನಂದ ಭಕ್ಷಿಯವರ ಅದೇ ಸಾಲುಗಳು...... 

ಅಜ್ಜಿಯೊಂದಿಗೆ ಕಳೆದ ಕ್ಷಣಗಳು ಮತ್ತೆ ಮತ್ತೆ ನೆನಪಾಗಿ ಕಾಡುತ್ತಲೇ ಇರುತ್ತವೆ.....

Miss you ಸಚ್ಚಿ 💔💔

(ಮೂರು ವರ್ಷಗಳ ಹಿಂದಿನ ಬರಹ)