ಸೋಮವಾರ, ಆಗಸ್ಟ್ 29, 2022

ಲಹರಿ ೨

ಹಿಂದೆಂದೋ ನವೋಲ್ಲಾಸದಿ ಕಣ್ಣರಳಿಸಿ ಆಸ್ವಾದಿಸಿದ ಚಿರಪರಿಚಿತ ಹಾದಿ.....
ಸ್ವಾನ್ವೇಷಣೆಯಲಿ ಎನಗೇ ತಿಳಿವಿರದ ಎನ್ನೊಳಗಿನ ಎನ್ನಾವಿಷ್ಕಾರಕೆ ನಿಮಿತ್ತವಾದ ಸಾದಿ.....
ಎನ್ನಂತಾರ್ಯದೊಳಗಣ ಸಾಸಿರ ಭಾವಗಳ ಅಭಿವ್ಯಕ್ತಿಗೆ ಭಿತ್ತಿಯಾದ ಪಥ....
ಇಂದೇಕೋ ಬರಡುಭೂಮಿ ಉತ್ಸವಮೂರ್ತಿಯಿರದೇ ಬರಿದಾದ ರಥ.... 

ಮನದೊಳಗಣ ಕಡುಮೌನ ಭರಿಸಲಸಾಧ್ಯ ಈ ಭಾವಾಂತರ್ಧಾನ
ಧಾವಂತದ ಜಗದೊಳು ಗಳಿಕೆಯ ಲೆಕ್ಕಾಚಾರವೇ ಪ್ರಧಾನ
ಮೌನದಿ ನಿಟ್ಟುಸಿರಿಡುವ ಮನದ ಅಳಲ ಕೇಳಲು ಯಾರಿಗಿದೆ ವ್ಯವಧಾನ?

ಸೋಮವಾರ, ಆಗಸ್ಟ್ 22, 2022

ಮಳೆಮಲೆಗಳಲ್ಲಿನ ಮದುಮಗಳು

ಮೂರು ಬಾರಿ ಓದಲೆಂದು ಹಿಡಿದು ಇಪ್ಪತ್ತು, ಐವತ್ತು, ಎಪ್ಪತ್ತು ಪುಟಗಳ ನಡುವೆಯೇ ಗಿರಕಿ ಹೊಡೆದು ಏನೆಂದರೂ ಮುಂದೆ ಓದಲಾಗದು ಎಂದು ಕೈಬಿಟ್ಟಿದ್ದ ಹೊತ್ತಿಗೆಯನ್ನು ಅಮೋಘ ನಾಲ್ಕನೇ ಬಾರಿಗೆ ಹಿಡಿಯಲು ಹೊರಟಾಗ ಈ ಬಾರಿ ಪುಟಗಳ ಲೆಕ್ಕಾಚಾರದಲ್ಲಿ ಕನಿಷ್ಟ ಶತಕ ಸಂಭ್ರಮ ಪೂರೈಸಿಯೇನೆಂಬ ನಂಬುಗೆಯೂ ಇರಲಿಲ್ಲ (ಒಮ್ಮೊಮ್ಮೆ ಓದಲೇಬೇಕೆಂದು ಹಠದಲ್ಲಿ ಶೀರ್ಷಾಸನ ಹಾಕಿ ಕೂತರೂ ಕೆಲವು ಹೊತ್ತಿಗೆಗಳ ಹೊತ್ತು ಮುಂದೆ ಸಾಗಲಾಗುವುದಿಲ್ಲ ನನಗೆ). ಆದರೂ ಗೆಳತಿ ಜಯಾ ಹಲವು ಬಾರಿ " ನೀತಾ, ಒಮ್ಮೆ ಮೊದಲ ನೂರು ನೂರಿಪ್ಪತ್ತು ಪುಟ ದಾಟಿ. ಆಮೇಲೆ ನೀವು ಪುಸ್ತಕ ಮುಗಿಸದೇ ಕೆಳಗಿಟ್ಟರೆ ಕೇಳಿ" ಎಂದು ಒತ್ತಾಸೆ ನೀಡಿದ್ದನ್ನು ಸ್ಮರಿಸಿ ಅದೂ ಒಂದು ಕೈ ನೋಡೇ ಬಿಡುವಾ ಎಂದು ಚತುರ್ಥ ಯಾತ್ರೆ ಆರಂಭಿಸಿದ್ದು. ಎಪ್ಪತ್ತು ದಾಟಿ, ಎಂಬತ್ತು ಕಳೆದು, ತೊಂಬತ್ತು ಬಂದು ತೊಂಬತ್ತೊಂಬತ್ತಾಗಿ ನೂರನೇ ಪುಟಕ್ಕೆ ಬರುವಾಗ ಗುತ್ತಿಯ ಹುಲಿಯ, ಹುಲಿಯನ ಗುತ್ತಿಯ ಜೊತೆ ನಾನೇ ಹುಲಿಕಲ್ಲು ನೆತ್ತಿಯ ಮೇಲೇರಿದಷ್ಟು ಸಂಭ್ರಮ..... 
ಆದರೆ ಆ ತರುವಾಯ ಈ ಜಡಿಮಳೆಯ ದಟ್ಟ ಮಲೆಗಳಲ್ಲಿನ ಮದ್ಗೋಳು ಕಟ್ಟಿಕೊಟ್ಟ ರಸಾನುಭವ ಅನಿರ್ವಚನೀಯ. ಮುಕುಂದಯ್ಯ - ಚಿನ್ನಕ್ಕನ ಪ್ರೇಮ, ಐತ - ಪೀಂಚಲುವಿನ ದಾಂಪತ್ಯ, ಗುತ್ತಿ-ತಿಮ್ಮಿ ಹಾಗೂ ಹುಲಿಯನ 'ಓಡಿಸಿಕೊಂಡು' ಹೋಗುವ ಸಾಹಸ, ದೇವಯ್ಯನೆಂಬ ನವನಾಗರೀಕನ ಕಿಲಿಸ್ತಗಿರಿಯ ಪ್ರಹಸನ, ಮನುಷ್ಯನೆಂಬ ಪದಕ್ಕೇ ಅವಮಾನ ತರುವಷ್ಟು ಅಮಾನುಷ ಚೀಂಕ್ರ, ನೆನಪಿನಲ್ಲುಳಿವ ನಾಗಕ್ಕ ಮತ್ತು ಧರ್ಮು, ಮತಪ್ರಚಾರಕ್ಕಾಗಿ ಯಾವ ಹಂತಕ್ಕೂ ತಲುಪಬಲ್ಲ ಉಪದೇಶಿ ಜೀವರತ್ನಯ್ಯ, ಸ್ವಾಮಿ ವಿವೇಕಾನಂದರ ವಾಣಿಯನ್ನು ಪಸರಿಸುವ ಗಡ್ಡದಯ್ಯ, ಹೊನ್ನಳ್ಳಿ ಹೊಡ್ತದ ಸಾಬರ ಗುಂಪು, ದೇಯಿ, ಅಂತಕ್ಕ ಸೆಡ್ತಿ, ಕಾವೇರಿ,ಅಕ್ಕಣಿ, ಪಿಜಿನ......... ಹೀಗೆ ಮುಂಬರಿಯುವ ಅಗಣಿತ ಪಾತ್ರಗಳು ಜೀವ ಮೇಳೈಸಿ ಹರಿದಿರುವುದು ಆ ಮಲೆನಾಡಿನ ಸೊಬಗನ್ನು ಪದಗಳಲ್ಲಿ ಪೋಣಿಸಿ ಹೆಣೆದ ವೈಖರಿಯಲ್ಲಿ. ಅಂದಿನ ಕಾಲದ ಪುರುಷ ಪ್ರಧಾನ ವ್ಯವಸ್ಥೆ, ಮಹಿಳೆಯರ ಬದುಕು ಬವಣೆ, ಸಂಸ್ಕೃತಿ ಆಚರಣೆ ನಂಬಿಕೆಗಳು, ವರ್ಣಾಧಾರಿತ ಜಾತಿ ಪದ್ಧತಿ, ಮತಾಂತರ ಮೊದಲಾದ ಸಂಗತಿಗಳೊಂದಿಗೆ ಸಾಗುವ ಕಾದಂಬರಿಯೊಳಗೆ ಆ ಮಲೆಗಳು, ತರಹೇವಾರಿ ಮರಮಟ್ಟುಗಳು, ಪ್ರಾಣಿ ಪಕ್ಷಿಗಳು, ನಿಲ್ಲದೆ ಸುರಿವ ದನಗೋಳು ಮಳೆಗೆ ಸಾಥು ಕೊಡುವ ಕಪ್ಪೆ, ಜೀರುಂಡೆ, ಬೀರ್ಲಕ್ಕಿಗಳು ರಸಋಷಿಯ ಲೇಖನಿಯಲ್ಲಿ ಹೊಮ್ಮಿದ ಪರಿಗೆ ಅಂದಿನ ಮಲೆನಾಡು ಬದುಕು ಓದುಗನಿಗೆ ದೃಗ್ಗೋಚರವಾಗುಷ್ಟು ಸ್ಪಷ್ಟ. ಮೊದಲ ಕೆಲ ಅಧ್ಯಾಯಗಳು ಕಾರ್ಯಕಾರಣ ಸಂಬಂಧ ಸಿಗದೇ ಎತ್ತೆತ್ತಲೋ ಓಡಿದಂತೆ ಅನಿಸಿದರೂ ನಂತರದಲ್ಲಿ ಓದಿ ಮುಗಿಸದೇ ಕೆಳಗಿಡಲಾರದ ಮದುವಣಗಿತ್ತಿ ಇವಳು........ 

#ರಸಋಷಿಯರಸಕಾವ್ಯ

The Prestige

THE PRESTIGE....... 
Esteem, Rivalry and Sacrifices 

ಬೆರಗಿನ ಇಂದ್ರಜಾಲ ಸೃಷ್ಟಿಸುವ ಸಮಾನ ಸಾಮರ್ಥ್ಯವುಳ್ಳ ಇಬ್ಬರು ಜಾದೂಗಾರ ನಡುವಿನ ಶತೃತ್ವ, ಪ್ರತಿಷ್ಠೆ, ತಾನೇ ಸರ್ವಶ್ರೇಷ್ಠನೆಂಬ ಗರಿಮೆ ಗಳಿಕೆಯ ಹಾದಿಯಲ್ಲಿನ ತ್ಯಾಗಗಳು, ಸ್ಪರ್ಧಾ ಪರಾಕಾಷ್ಠೆ ತಂದೊಡ್ಡುವ ದುರಂತಗಳು.........
ಕ್ರಿಸ್ಟೋಫರ್ ನೋಲನ್ ಎಂಬ ಜಾದೂಗಾರನ ಅತ್ಯದ್ಭುತ ಕೈಚಳಕವನ್ನು ಮೆಚ್ಚದೇ ಉಳಿಯಲು ಸಾಧ್ಯವಿಲ್ಲ. ಆಂಜಿಯರ್ ಹಾಗೂ ಬೋರ್ಡನ್ ವೀಕ್ಷಕನ ಮನದೊಳಗೆಬ್ಬಿಸುವ ಅಸಾಧ್ಯ ಕೋಲಾಹಲಕ್ಕೆ ಸಾಟಿಯಿಲ್ಲ. ಪ್ರತಿ ಹಂತದಲ್ಲೂ ಭ್ರಮೆ ವಾಸ್ತವಗಳ ನಡುವೆ ಸತ್ಯ ಮಿಥ್ಯಗಳ ಪರಿಧಿಯಲ್ಲಿ ತೇಲುವಂತೆ ಮಾಡುವ ಸಿನಿಮಾದ ಸನ್ನಿವೇಶಗಳು ನಮ್ಮೊಳಗೆ ಹಲವಾರು ತೆರೆದ ಕಲ್ಪನೆಗಳನ್ನು ಸೃಷ್ಟಿಸುವುದು ಸುಳ್ಳಲ್ಲ. ಕಥಾ ಹೆಣಿಗೆ ಹಾಗೂ ನಿರೂಪಣಾ ತಂತ್ರಗಾರಿಕೆ ಇಡೀ ಸಿನಿಮಾದ ಹೈಲೈಟ್. ಆಂಜಿಯರ್ ಹಾಗೂ ಬೋರ್ಡನ್ ಪಾತ್ರದಲ್ಲಿ ಹ್ಯೂ ಜಾಕ್ಮನ್ ಮತ್ತು ಕ್ರಿಸ್ಚಿಯನ್ ಬೇಲ್ ಮಾಯಾಜಾಲಕ್ಕೆ ಮಾರುಹೋಗದೇ ವಿಧಿಯಿಲ್ಲವಾದರೂ ಕಣ್ಣಿನಲ್ಲೇ ಸಾವಿರ ಭಾವ ತುಳುಕಿಸುವ ಮೈಕೆಲ್ ಕೇನ್ ಕಾಡುತ್ತಾರೆ. ನೋಲನ್ ಅವರ ಅಸಾಮಾನ್ಯ ಕಲ್ಪನಾಶಕ್ತಿಗೆ ಇನ್ನೊಂದು ಜ್ವಲಂತ ಉದಾಹರಣೆ "ದಿ ಪ್ರೆಸ್ಟೀಜ್".

ಸೋಮವಾರ, ಆಗಸ್ಟ್ 8, 2022

ಮುಳುಗಿದ್ದು ಭಾರಂಗಿಯೇ, ಭರವಸೆಯೇ, ಬದುಕೇ....? ಪುನರ್ವಸು


ಆತ್ಮೀಯ ಸಹೋದರ ವೀರೇಂದ್ರ 'ನೀವು ಓದಲೇಬೇಕು' ಎಂದು ಒತ್ತಾಯಿಸಿದ್ದಲ್ಲದೇ ತಾನೆ ಉಡುಗೊರೆಯಾಗಿ ಕಳಿಸಿಕೊಟ್ಟ ಗಜಾನನ ಶರ್ಮರ 'ಪುನರ್ವಸು' ಕಾದಂಬರಿಯ ಕೊನೆಯ ಪುಟವನ್ನು ಮುಗಿಸಿ ಕೆಳಗಿಟ್ಟ ಈ ಘಳಿಗೆ ಬಾಲ್ಯದ ದಿನಗಳು ಪದೇಪದೇ ಕಣ್ಮುಂದೆ ಹಾಯುತ್ತಿವೆ. ನನ್ನ ತಂದೆಯ ಊರು ಹಾಗೂ ಅಮ್ಮನ ತವರು ಎರಡೂ ಮಲೆನಾಡು ಪ್ರದೇಶಗಳೇ. ತಂದೆಯ ಊರಾದ ಕಳಸ ಸಮೀಪದ ದಟ್ಟಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ನನಗೆ ಅಲ್ಲಿಗೂ ಅಮ್ಮನ ತವರಾದ ಹೊಸನಗರದ ಕೊಡಚಾದ್ರಿ ತಪ್ಪಲಿನ ಹಳ್ಳಿಗೂ ಹೇಳಿಕೊಳ್ಳುವಂತಹ ದೊಡ್ಡ ವ್ಯತ್ಯಾಸವಿದೆಯೆಂದು ಎಂದೂ ಅನಿಸಿದ್ದಿಲ್ಲ. ಮಳೆಗಾಲದಲ್ಲಿ ಅಪರೂಪಕ್ಕೊಮ್ಮೆ ಮಳೆ ಬಿಡುವು ಕೊಟ್ಟರೆ ಬಗಲಿನಲ್ಲಿದ್ದವರೂ ಕಾಣದಂತೆ ಕವಿಯುವ ಮೈಂದು ಹಾಗೂ ತಲೆತನಕ ಏರುವ ಉಂಬಳಗಳ ಹಾವಳಿ ಹೊರತು ಪಡಿಸಿದರೆ ಎರಡೂ ಪ್ರದೇಶಗಳೂ ಹೆಚ್ಚುಕಡಿಮೆ ಒಂದೇ. ಆದರೂ ದಸರಾ ರಜೆ, ಬೇಸಿಗೆ ರಜೆ ಬಂತೆಂದರೆ ಸಾಕು..... ತಮ್ಮ ಮತ್ತು ನಾನು ತುದಿಗಾಲಲ್ಲಿ ಬಕಪಕ್ಷಿಗಳಂತೆ ಅಜ್ಜನ(ಅಮ್ಮನ ತಂದೆ) ಬರುವಿಕೆಗೆ ಕಾಯುತ್ತಿದ್ದೆವು. ಬಸ್ ಹಾರನ್ ಶಬ್ದ ಕಿವಿಗೆ ಬಿದ್ದೊಡನೆ ತಡಬೆಯ ಬಳಿ ಓಡಿ ಅದರ ಮೇಲೇರಿ ರಸ್ತೆಯತ್ತ ನೋಟವಿಟ್ಟು ನಿಲ್ಲುವುದೇ ಸಂಭ್ರಮ. ಅಜ್ಜ ಬಂದರೆಂದರೆ ನಾಲ್ಕುದಿನ ಮನೆಯಲ್ಲಿ ನಿಲ್ಲಲು ಬಿಡದೇ ವಾಪಾಸ್ ಹೊರಡಿಸಿ ಬಿಡುವಷ್ಟು ಆತುರ ನಮಗೆ ಅಜ್ಜಿ ಮನೆಗೆ ಹೋಗಲು. ದೊಡ್ಡಮ್ಮ ಚಿಕ್ಕಮ್ಮಂದಿರ ಮಕ್ಕಳೆಲ್ಲಾ ಅಲ್ಲಿ ಒಟ್ಟಾಗುವುದು ನಮ್ಮ ಉಮೇದಿಗೆ ಮುಖ್ಯ ಕಾರಣವಾದರೂ ಅದನ್ನು ಮೀರಿದ ಇನ್ನೊಂದು ಸೆಳೆತವಿತ್ತು ನಮಗಲ್ಲಿ. ಅದೇ ಮನೆಯಿಂದ ಕೂಗಳತೆ ದೂರದಲ್ಲಿ ಆವರಿಸಿಕೊಂಡ ಅಗಾಧ ಜಲರಾಶಿ....... ನೀರೆಂದರೆ ಸಾಮಾನ್ಯ ನೀರಲ್ಲ ಅದು. ಸಮುದ್ರದೋಪಾದಿಯಲ್ಲಿ ವಿಶಾಲವಾಗಿ ಆವರಿಸಿಕೊಂಡ ನೀಲ ಜಲರಾಶಿ. ಕುದುರೆಮುಖದ ತಪ್ಪಲಿನ ನಾವು ನದಿ, ನೀರು 
ಕಾಣದವರೇನಲ್ಲವಾದರೂ ಆ ಪರಿ ವಿಶಾಲವಾಗಿ ಚಲನೆಯಿಲ್ಲದೇ ನಿಂತ ನೀರು, ಅದರ ನಡುನಡುವಲ್ಲೇ ಕರ್ರಗೆ ರೆಂಬೆಚಾಚಿ ನಿಂತ ಬೋಳು ಮರಗಳನ್ನು ನಮ್ಮೂರಲ್ಲಿ ಎಂದೂ ಕಾಣದ ಅಚ್ಚರಿ ನಮಗೆ. ಅಜ್ಜಿಮನೆಯಲ್ಲಿದ್ದಷ್ಟೂ ದಿನ ನಮ್ಮ ಬೆಳಗುಬೈಗುಗಳ ನಿತ್ಯಸಾಥಿ ಆ ನೀರದಂಡೆಯಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಮಳೆಗಾಲದಲ್ಲಿ ತೋಟದ ತನಕ ಏರುತಿದ್ದ ನೀರು ಬೇಸಿಗೆಯಲ್ಲಿ ಸಂಪೂರ್ಣ ಇಳಿದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗುತ್ತಿತ್ತು. ಕೆಲವೆಡೆ ಗದ್ದೆಯಂತೆ ಕಾಣುವ ಸಮತಟ್ಟು ಬಯಲು, ಇನ್ನು ಕೆಲವೆಡೆ ಹಳ್ಳ ದಿಣ್ಣೆಗಳು, ಒಂದೆರಡುಕಡೆ ಒಡೆದಿದ್ದರೂ ಉಳಿದಂತೆ ಗಟ್ಟಿಮುಟ್ಟಾದ ಒಂದು ಉದ್ದದ ರಸ್ತೆ, ಒಂದೆಡೆ ಸಾಲು ಕಲ್ಲುಗುಡ್ಡಗಳು, ಅದರ ಮೇಲಿನ ಯಾವುದೋ ದೇವಾಲಯದ ಅವಶೇಷಗಳು.......... ಮಳೆಗಾಲದಲ್ಲಿ ನೀಲಸಮುದ್ರದಂತೆ ಕಾಣುವ ಈ ಜಾಗ ಬೇಸಿಗೆಯಲ್ಲಿ ಇಂತಹದ್ದೊಂದು ಅವತಾರ ಎತ್ತುವ ಪರಿ ಸೋಜಿಗ ಹುಟ್ಟಿಸುತ್ತಿತ್ತು. ಬೇಸಿಗೆಯಲ್ಲಿ ಅಲ್ಲಿನ ಸಮತಟ್ಟು ಬಯಲುಗಳಲ್ಲಿ ಭತ್ತದ ಗದ್ದೆಯೊಂದಿಗೆ ಸವ್ತೇಕಾಯಿ, ಬೀನ್ಸ್ ಮೊದಲಾಗಿ ತರಕಾರಿಗಳನ್ನು ಬೆಳೆಯುತ್ತಿದ್ದ ನೆನಪು. ಬೆಳಗ್ಗೆ ಅಲ್ಲಿಗೆ ದಾಳಿಯಿಟ್ಟು ಎಳೆಸವತೆ ಮೆದ್ದು ಒಂದಿಷ್ಟು ಹಾರಾಟ ನಡೆಸಿ ವಾಪಾಸಾದರೆ ಮತ್ತೆ ಸಂಜೆ ನಾಲ್ಕರ ನಂತರ ಪೇರಲೆ ಗಿಡಗಳ ಮೇಲೆ ದಂಡೆತ್ತಿ ಹೋಗಿ ನಂತರ ಆರು ಗಂಟೆಯ ತನಕವೂ ಅಲ್ಲೇ ಸುತ್ತಮುತ್ತಲಿನ ದಿಬ್ಬ ಹಳ್ಳಗಳನ್ನೆಲ್ಲಾ ಸುತ್ತುವುದೇ ದೈನಂದಿನ ಕಾಯಕ ಆಗ. 

ನಂತರದ ದಿನಗಳಲ್ಲಿ ಓದು, ಹಾಸ್ಟೆಲ್, ಉದ್ಯೋಗ, ಮದುವೆ, ಸಂಸಾರ ಎಂಬ ಹಲವು ಜಂಜಡಗಳಲ್ಲಿ ಅಜ್ಜಿಮನೆಯ ಭೇಟಿ ವಿರಳವಾದರೂ ಇಂದಿಗೂ ಹೋದಾಗಲೆಲ್ಲಾ ಒಮ್ಮೆ ಹಿನ್ನೀರಿನ ದಡದಲ್ಲಿ ಕುಳಿತು ಬರದಿದ್ದರೆ ಏನೋ ಕಳೆದುಕೊಂಡ ಭಾವ ಕಾಡುವುದು ಸುಳ್ಳಲ್ಲ. ಮೊದಮೊದಲು ವಿಸ್ಮಯದ ತಾಣವಾಗಿ ಕಾಣುತ್ತಿದ್ದ ಆ ಜಲರಾಶಿ ಬುದ್ಧಿ ಬೆಳೆದಂತೆಲ್ಲಾ ಮುಳುಗಡೆ ಸಂತ್ರಸ್ತರ ಚದುರಿ ಚೂರಾದ ಬದುಕಿನ ಪ್ರತಿಬಿಂಬದಂತೆ ಅನ್ನಿಸತೊಡಗಿದ್ದು ನಿಜವೇ ಆದರೂ ಆ ಭಾವ ಮನಕಲಕುವಷ್ಟು ಗಾಢವಾಗಿ ಕಾಡಿದ್ದು 'ಪುನರ್ವಸು'ವಿನಿಂದ. 'ಜೋಗ ಪಟ್ಣ ಆಗ್ತು' ಅನ್ನುವಾಗಿನಿಂದಲೇ ನಾಭಿಯಾಳದಲ್ಲಿ ಶುರುವಾದ ವಿಷಾದ ಕಾದಂಬರಿ ಮುಗಿಯುವ ಹೊತ್ತಿಗೆ ಇಡೀ ಜೀವವನ್ನೇ ವ್ಯಾಪಿಸಿ ಮುಳುಗಿಸಿದಂತಿದೆ. ಅಜ್ಜಿಮನೆಯ ಹಿನ್ನೀರಲ್ಲಿ ಬೇಸಿಗೆಯಲ್ಲಿ ಗೋಚರವಾಗುವ ಆ ರಸ್ತೆ ವಿನಾಕಾರಣ ನೆನಪಾಗುತ್ತಿದೆ. ಆ ಜಾಗವೂ ಜೀವಚಟುವಟಿಕೆಯ ಚಿಲುಮೆಯಾಗಿದ್ದ ಒಂದು ಕಾಲದಲ್ಲಿ ದತ್ತಪ್ಪ ಹೆಗಡೆಯವರೋ, ತುಂಗಕ್ಕಯ್ಯನೋ, ಶರಾವತಿಯೋ, ಮುರಾರಿಯೋ ಆ ರಸ್ತೆಗುಂಟ ಸಾಗಿದ್ದಿರಬಹುದೇ.......? ಎಲ್ಲವನ್ನೂ ಆಪೋಶನ ತೆಗೆದುಕೊಂಡು ಅಚಲವಾಗಿ ನಿಂತಿರುವ ಆ ನೀರಿನಾಳದ ನೆಲದಲ್ಲಿ ದೋಣಿಗಣಪ, ನ್ಯಾಮಯ್ಯ, ಮಾಣಿಚಿಕ್ಕಯ್ಯ, ಭವಾನಕ್ಕ, ಚೆನ್ನಮ್ಮ, ರತ್ನಕ್ಕನಂತಹವರ ಹೆಜ್ಜೆಗುರುತುಗಳ ಸುಳಿವಿರಬಹುದೇ.......?  ಜಗತ್ತಿಗೆ ಬೆಳಕನ್ನೀಯಲು ಕತ್ತಲಲ್ಲಿ ಕರಗಿಹೋದವರ ಕಣ್ಬೆಳಕು ರಾತ್ರಿಯ ನೀರವದಲ್ಲಿ ಮಿನುಗುತ್ತಿರಬಹುದೇ........? ಈ ಕ್ಷಣವೇ ಅಲ್ಲಿಗೆ ಹಾರಿ ಆ ಕುರುಹುಗಳನ್ನು ಅರಸಬಯಸುತ್ತಿದೆ ಮನ......

ಲಹರಿ..... ೧

ಕೆಲವೊಂದು ನೆನಪುಗಳು ಸದಾ ಮನಕ್ಕೆ ಹಿತಕರ. ಎಂತದ್ದೇ ಸನ್ನಿವೇಶದಲ್ಲಿಯೂ ಮನವನ್ನು ಪ್ರಪುಲ್ಲಗೊಳಿಸಿ ತುಟಿಯಂಚಿನಲ್ಲೊಂದು ಮುಗುಳ್ನಗೆಯನ್ನು ಹರಡಿಸಿಬಿಡುತ್ತವೆ. ಗತದ ಪುಟಗಳಲ್ಲಡಗಿದ ಸವಿಕ್ಷಣಗಳನ್ನು ಮತ್ತೆ ಮತ್ತೆ ಮೆಲುಕುಹಾಕುವಂತಾಗುವ ಘಳಿಗೆಗಳಿವು. 

ಹೀಗೇ ಯಾವುದೋ ಪುಸ್ತಕವನ್ನು ಹುಡುಕುತ್ತಿದ್ದೆ. ಹಾಗೆ ಹುಡುಕುವಾಗಲೇ ಅಚಾನಕ್ಕಾಗಿ ಎಲ್ಲಾ ಪುಸ್ತಕಗಳಿಂದ ಪ್ರತ್ಯೇಕವಾಗಿ ಕಟ್ಟಿಟ್ಟಿದ್ದ ಪುಸ್ತಕಗಳ ಸಣ್ಣಅಟ್ಟಿ ಗಮನಸೆಳೆಯಿತು. ಏನಿರಬಹುದೆಂಬ ಕುತೂಹಲದಿಂದ ಕೈಗೆತ್ತಿಕೊಂಡೆ. ನೆನಪುಗಳ ಪೆಟಾರಿಯ ಕೀಲಿಕೈ ದೊರೆತಂತಾಯಿತು. ಒಂದು ದಶಕಕ್ಕೂ ಹಿಂದಿನ ನನ್ನ ಪದವಿ ತರಗತಿಗಳ ಕನ್ನಡ ಹಾಗೂ ಇಂಗ್ಲೀಷ್ ಪಠ್ಯಪುಸ್ತಕಗಳವು..... ಆ ದಿನಗಳು ಯಾಕೋ ಬಹಳಷ್ಟು ಕಾಡತೊಡಗಿವೆ. 

ಪದವಿಪೂರ್ವ ಶಿಕ್ಷಣ ಮುಗಿಸಿ ಪದವಿ ಓದಿಗಾಗಿ ಮಲೆನಾಡನ್ನು ಬಿಟ್ಟು ಕರಾವಳಿಯೆಡೆಗೆ ಪಯಣಿಸಿದ್ದೆ. ಅದುವರೆಗೂ ಮನೆಯನ್ನು ಬಿಟ್ಟಿರದಿದ್ದವಳಿಗೆ ಹಾಸ್ಟೆಲ್ ವಾಸದ ಅನುಭವ ಹಾಗೆ ಇಲ್ಲಿಯವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದವಳಿಗೆ ಇನ್ನು ಮುಂದೆ ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂಬ ಸವಾಲು.... ಒಟ್ಟಾರೆ ಭಯಂಕರ ದಿಗಿಲು ನನ್ನನ್ನು ಆವರಿಸಿತ್ತು. ಮೊದಲ ಎರಡ್ಮೂರು ವಾರಗಳಂತೂ ಬಹಳ ಬೇಸರದವು. ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳೂ ತುಳು ಹಿನ್ನೆಲೆಯವರು ಜೊತೆಗೆ ಅವರ ನಾಜೂಕಿನ ಗ್ರಾಂಥಿಕ ಕನ್ನಡದ ವೈಖರಿ ನನಗೋ ತೀರಾ ಅಪರಿಚಿತ. ಒಟ್ಟಾರೆ ನಾನು ಗುಂಪಿಗೆ ಸೇರದ ಪದವೇನೋ ಅನ್ನುವ ಭಾವ ನನ್ನೊಳಗೇ ಆವರಿಸಿತ್ತು. ಹೀಗಿರುವಾಗಲೇ ಮೊದಲ ಕಿರುಪರೀಕ್ಷೆ ಬಂದಿತ್ತು. ಪರೀಕ್ಷೆಯನ್ನು ತಕ್ಕ ಮಟ್ಟಿಗೆ ಬರೆದಿದ್ದೆನಾದರೂ ಅದೇನೋ ಅಳುಕು. ಮೌಲ್ಯಮಾಪನ ಮುಗಿದು ಒಳ್ಳೆಯ ಅಂಕಗಳೇ ಸಿಕ್ಕಾಗ ಏನೋ ನೆಮ್ಮದಿ.  ಅದಕ್ಕೆ ಸಾವಿರ ಆನೆಯ ಬಲ ಬಂದಿದ್ದು ಇಂಗ್ಲೀಷ್ ಉಪನ್ಯಾಸಕಿ ಶ್ರೀಮತಿ ಪದ್ಮಜಾ ರಾವ್ ಅವರಿಂದ. ಇಂಗ್ಲೀಷ್ ಪೇಪರ್ ತಿದ್ದಿ ಹಂಚುವಾಗ ನನ್ನ ಉತ್ತರ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರವರು. ಆ ಒಂದು ಮೆಚ್ಚುಗೆಯ ಮಾತು ನನಗೆ ನೀಡಿದ ಭರವಸೆ ಅಪಾರ. ಜೊತೆಗೆ ಪ್ರಯತ್ನಪಟ್ಟರೆ ನಾನೆಣಿಸಿದಷ್ಟು ಕಷ್ಟವಿಲ್ಲ ಆಂಗ್ಲ ಮಾಧ್ಯಮದ ಓದು ಅನ್ನುವ ಸ್ಥೈರ್ಯವೂ ಮೂಡಿತು. ಆನಂತರದಲ್ಲಿ ನಾನೆಂದೂ ತಿರುಗಿ ನೋಡಿದ್ದಿಲ್ಲ. ಪರಕೀಯತೆ ಮರೆಯಾಗಿ ಗೆಳೆಯರ ಬಳಗ ಹಿಗ್ಗಿತು. ಸಪ್ಪೆ ಮೋರೆಯಲ್ಲಿ ನಗು ಚಿಮ್ಮತೊಡಗಿತು. ಕರಾವಳಿಯೂ ಮಲೆನಾಡಿನಷ್ಟೇ ಆಪ್ತವಾಯಿತು. ನನ್ನ ಪಕ್ಕಾ ಮಲ್ನಾಡ್ ಕನ್ನಡ ಮೂಡುಬಿದಿರೆಯ ಲಾಲಿತ್ಯದ ಅರಿವೆ ತೊಟ್ಟಿತು. ತುಳುಭಾಷೆಯೂ ನಿಧಾನವಾಗಿ ಮನದೊಳಗೆ ಜಾಗ ಪಡೆದುಕೊಂಡಿತು. ಅಂದು ಆರಂಭವಾದ ಕರಾವಳಿಯ ನಂಟು ಇಂದಿನವರೆಗೂ ಮುಂದುವರೆದಿದೆ. ಗಣಪಯ್ಯ ಭಟ್ ಸರ್, ವಾಸುದೇವ ಭಟ್ ಸರ್, ಸುದರ್ಶನ್ ಸರ್, ಗೋಪಾಲ್ ಸರ್, ಸ್ನೇಹಲತಾ ಮೇಡಂ, ರಾಘವೇಂದ್ರ ಸರ್, ಲತಾ ಮೇಡಂ....... ಎಲ್ಲರ ಸ್ವರಗಳು, ಅವರ ಪಾಠದ ವೈಖರಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. 

ಅದರಲ್ಲೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ ನನಗೆ ಕನ್ನಡ ಮತ್ತು ಇಂಗ್ಲೀಷ್ ತರಗತಿಗಳು ಅವಿಸ್ಮರಣೀಯ. ಐಚ್ಚಿಕ ಕನ್ನಡ, ಇಂಗ್ಲೀಷ್ ವಿದ್ಯಾರ್ಥಿನಿಯಲ್ಲವಾದರೂ ಪದವಿಯ ಎರಡು ವರ್ಷಗಳಲ್ಲಿನ ಭಾಷಾ ತರಗತಿಗಳು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಅಜಿತ್ ಸರ್ ತಮ್ಮ ಕಂಚಿನ ಕಂಠದಲ್ಲಿ ನವರಸಗಳ ಸಮೇತ ವರ್ಣಿಸುತ್ತಿದ್ದ ಆ ಹಳಗನ್ನಡ ಪದ್ಯ ಗದ್ಯಗಳ ಸೊಗಸನ್ನು ಮರೆಯುವುದುಂಟೇ? ಪಂಪ, ರನ್ನ, ನಾಗಚಂದ್ರ, ರಾಘವಾಂಕ, ಕುಮಾರವ್ಯಾಸ,ಲಕ್ಮೀಶರಿಂದ ಹಿಡಿದು ದಾಸರು, ವಚನಕಾರರು, ನವ್ಯ ಪ್ರಗತಿಶೀಲ ಕವಿಗಳ ತನಕ, ವಡ್ಡಾರಾಧನೆಯಿಂದ ಹಿಡಿದು ಪಂಚತಂತ್ರದ ತನಕ, ಪ್ರಬಂಧಗಳಿಂದ ಹಿಡಿದು ಸಣ್ಣಕಥೆಗಳ ತನಕ ಅದೆಷ್ಟು ವೈವಿಧ್ಯಮಯವಾದ ಸಾಹಿತ್ಯ ಪ್ರಬೇಧಗಳು....... ಅದರಲ್ಲೂ ವಿಶೇಷವಾಗಿ ಅತ್ಯುತ್ತಮ ಸಣ್ಣ ಕಥೆಗಳ ಸಂಗ್ರಹವಾದ 'ಬದುಕು-ಭಾವದ ಕತೆಗಳು' ನನ್ನ ಇಂದಿನ ಬರವಣಿಗೆಯ ಹವ್ಯಾಸದ ಬೆನ್ನೆಲುಬು. ಈ ಪುಸ್ತಕದ ಕಥೆಗಳ ಮೇಲೆ ನಾವು ವಿದ್ಯಾರ್ಥಿಗಳೇ ನೀಡಿದ ಸೆಮಿನಾರ್, ಪ್ರಶ್ನೋತ್ತರ ಕಲಾಪ ಇವತ್ತು ನಿನ್ನೆ ನಡೆದಂತಿದೆ. 

ಇಂಗ್ಲೀಷ್ ಆದರೂ ಅಷ್ಟೇ.... ಷೇಕ್ಸ್ಪಿಯರ್ ನ sonnetಗಳು, E M Forster ಅವರ My Wood, Robert Payne ಅವರ The Great Trial, A.K Ramanujan ಅವರ Obituary, Gabriel Okara ಅವರ Once Upon a Time ಎಲ್ಲವನ್ನೂ ವಿವರಿಸುತ್ತಿದ್ದ ಪದ್ಮಜಾ ಮೇಡಂ ತರಗತಿಯಲ್ಲಿ ತೆಗೆದುಕೊಂಡ ಕ್ಲಾಸ್ ಪಾಯಿಂಟುಗಳ ನೆನಪಾಗುತ್ತದೆ. Saki ಅವರ Dusk ಕಥೆಯ ನಾರ್ಮನ್ ಗೋಟ್ಸ್ಬೈ ಆದಿಯಾಗಿ John Galsworthy ಅವರ The silver boxನ ಬಾರ್ತಿಕ್ ಕುಟುಂಬ, ಮಿಸ್ಸೆಸ್ ಜೋನ್ಸ್, ಬೆಳ್ಳಿಯ ಸಿಗರೇಟ್ ಕೇಸ್ ಎಲ್ಲವೂ ಅಚ್ಚಳಿಯದ ದೃಶ್ಯಗಳಂತೆ ಇಂದಿಗೂ ಕಣ್ಮುಂದಿವೆ. 

ಇಂದು ಈ ಪುಸ್ತಕಗಳನ್ನು ನೋಡಿದಾಗ ಎಲ್ಲವೂ ಮತ್ತೆ ಕಣ್ಮುಂದೆ ಹಾದುಹೋದವು. ಮಾರ್ಕ್ಸ್, ರ್ಯಾಂಕ್ ಮೊದಲಾದವುಗಳ ಧಾವಂತಗಳಿಲ್ಲದ ಆ ದಿನಗಳ ಚೆಂದದ ನೆನಪಿನ ಜೊತೆಗೇ ಆ ದಿನಗಳಿಗೆ ಮತ್ತೆ ಹೋಗುವಂತಿರಬೇಕಿತ್ತು ಎನ್ನುವ ಭಾವವೂ ಕಾಡುತ್ತಿರುವುದು ಸುಳ್ಳಲ್ಲ.