ಭಾನುವಾರ, ಜೂನ್ 28, 2020

ಅನೂಹ್ಯ 30

ಅಭಿರಾಮನ ಮಾತುಗಳಿಂದ ವ್ಯಾಕುಲಗೊಂಡಿದ್ದಳು ಸಮನ್ವಿತಾ. ಅವನ ಮಾತಿನಲ್ಲಿದ್ದ ಭಾವನೆಯನ್ನು ಗ್ರಹಿಸಲಿಲ್ಲ ಅವಳು. ಈಗವಳಿಗೆ ನೆನಪಾದದ್ದು ತಂದೆ ಎನಿಸಿಕೊಂಡಾತ ಮಾಡಿದ್ದ ಮದುವೆ ಪ್ರಸ್ತಾಪ.

ಅದಕ್ಕೇ ಅಭಿರಾಮ್ ಹೀಗೆ ಮಾತನಾಡುತ್ತಿದ್ದಾನೆ. ಏನೆಂದು ಉತ್ತರಿಸುವುದು? ತನಗೇ ತಿಳಿಯದೇ ತನ್ನ ಮದುವೆಯ ನಿಶ್ಚಯಿಸಿದ್ದಾರೆ ತನ್ನ ಸ್ವಾರ್ಥಿ ತಂದೆ ಎಂದಿವನಿಗೆ‌ ಹೇಗೆ ವಿವರಿಸಲಿ?

ಸಪ್ಪಗಾದಳು ಹುಡುಗಿ.......

ಇದು ಹೀಗೇ ಮುಂದುವರೆದರೆ ಯಾರಿಗೂ ನೆಮ್ಮದಿಯಿಲ್ಲದಂತಾಗುವುದೆಂದು ಗ್ರಹಿಸಿದವಳೇ ಇಂದೇ ಎಲ್ಲಾ ತೀರ್ಮಾನವಾಗಿಬಿಡಲಿ ಎಂದು ನಿರ್ಧರಿಸಿಬಿಟ್ಟಳು.

ಮಲಗಿದ್ದವಳು ಎದ್ದು ಕೂರಲು ಪ್ರಯತ್ನಿಸಿದಳು. ಸಾಧ್ಯವಾಗಲಿಲ್ಲ. ಅಭಿರಾಮನೆಡೆಗೆ ನೋಟ ಹರಿಸಿದಳು. ಬೆಡ್ ನ ಹ್ಯಾಂಡಲ್ ಮೇಲೆತ್ತಿ ಅವಳಿಗೆ ಕುಳಿತುಕೊಳ್ಳಲು ಆರಾಮಾಗುವಂತೆ ಹೊಂದಿಸಿ ಬಂದು ಅವಳೆದುರು ಕುಳಿತು ಅವಳು ಹಸ್ತದೆಡೆಗೆ ನೋಡಿದ. ತಟ್ಟನೆ ಅವಳು ಬಲಗೈ ತೆಗೆದು ಉದರದ ಮೇಲಿರಿಸಿಕೊಂಡದ್ದು ನೋಡಿ ನಕ್ಕ.

"ಏನು ಡಾಕ್ಟರ್ ಮೇಡಂ, ಕೈ ಕೊಡೋ ಯೋಚನೆನಾ? ಅಷ್ಟು ಸುಲಭದಲ್ಲಿ ನಾನು ಹಿಡಿದ ಕೈ ಬಿಡೋಲ್ಲ" ಎಂದವನ ಮಾತು ಅವಳಿಗೆ ಕಸಿವಿಸಿಯಾಯಿತು. ಜೊತೆಗೆ ತನ್ನಿಂದ ಅತ್ತಿತ್ತ ಸರಿಯದ ಅವನ ಆ ನೋಟ…….

"ಮಿಸ್ಟರ್ ಶರ್ಮಾ, ನಿಮ್ಮ ಹತ್ತಿರ ಒಂದು ಮುಖ್ಯವಾದ ವಿಚಾರ ಮಾತಾಡೋದಿದೆ"

"ಮಾತನಾಡೋಣ. ಅದಕ್ಕೇನಂತೆ? ಮೊದ್ಲು ಹುಷಾರಾಗಿ ಬಿಡು. ಆಮೇಲೆ ಕುತ್ಕೊಂಡು ಮಾತಾಡೋಣ."

"ಇಲ್ಲಾ. ತುಂಬಾ ಜರೂರಾಗಿ ಮಾತಾಡಬೇಕಿರೋ ವಿಷಯ. ಈಗಾಗ್ಲೇ ನಿಮಗೆ ಗೊತ್ತಿರ್ಬೇಕಿತ್ತು ಇದೆಲ್ಲಾ. ಇನ್ನೂ ಹೇಳ್ದಿದ್ರೆ ತಪ್ಪಾಗುತ್ತೆ" 

"ಅಂತೂ ನೀನು ಹೇಳಿದ್ದೇ ಆಗ್ಬೇಕಲ್ಲ? ಅದ್ಯಾರು ಡಾಕ್ಟರ್ ಮಾಡಿದ್ರೋ ನಿನ್ನ. ಚಿಕ್ಕ ಮಕ್ಕಳ ತರ ಹಠ ಮಾಡ್ತೀಯಾ. ಸರಿ…… ದೇವರ ಮೇಲೆ ಭಾರ ಹಾಕಿ ನನ್ನೆರಡೂ ಕಿವಿಗಳನ್ನು ನಿನ್ನ ಸುಪರ್ದಿಗೆ ವಹಿಸ್ತಿದ್ದೀನಿ. ಅದೇನು ಹೇಳ್ಬೇಕು ಅಂತಿದ್ದೀಯೋ ಎಲ್ಲಾ ಹೇಳ್ಬಿಡು. ಆದ್ರೆ ನನ್ನ ಕಿವಿ ಜಾಗ್ರತೆ" ತಮಾಷೆಯಾಗಿ ಹೇಳಿದ.

"ಅದೂ.... ಈ ಮದುವೆ..... ನನ್ನ ತಂದೆ......" 

"ನಿನ್ನ ತಂದೆ ಮಾಡಿದ ಮದುವೆ ಪ್ರಸ್ತಾಪದ ಬಗ್ಗೆ ನೀನು ಮಾತಾಡ್ಬೇಕು ಅಂತ ಯೋಚಿಸಿದ್ದರೆ ಅದನ್ನು ತಲೆಯಿಂದ ತೆಗೆದುಹಾಕು ಸಮನ್ವಿತಾ. ನನಗೆ ಆ ಬಗ್ಗೆ ಯಾವುದೇ ಮಾತುಕತೆಯ ಅಗತ್ಯವಿಲ್ಲ."

ಅವಳು ವಿಷಯ ಹೇಗೆ ಹೇಳುವುದೆಂದು ಯೋಚನೆಯಲ್ಲಿದ್ದಾಗಲೇ ಅಭಿರಾಮ್ ಸ್ಪಷ್ಟವಾಗಿ ಹೇಳಿಯೇಬಿಟ್ಟ..

"ಹಾಗೆ ಹೇಳ್ಬೇಡಿ ಅಭಿರಾಮ್. ಈ ಬಗ್ಗೆ ನಿಮಗೆ ಗೊತ್ತಾಗಲೇ ಬೇಕಾದ ಅನಿವಾರ್ಯತೆ ಇದೆ. ನೀವು, ನಿಮ್ಮ ಮನೆಯವರು ಅಂದ್ಕೊಂಡಿರೋದೇ ಬೇರೆ ವಾಸ್ತವವೇ ಬೇರೆ."

"ಆಗ್ಲೇ ಹೇಳಿದ್ನಲ್ಲ ಸಮನ್ವಿತಾ. ಈ ಬಗ್ಗೆ ಇನ್ಯಾವ ಡಿಸ್ಕಷನ್ ಬೇಡ…...." ಅವನದು ಖಡಾಖಂಡಿತ ವಿರೋಧ‌.

"ನನ್ನ ಬಗ್ಗೆ ಬಿಡಿ, ಈ ಮದುವೆ ನಿಮಗೆ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ ಅಭಿರಾಮ್. ನಿಮಗೆ ನನ್ನ ತಂದೆ ಬಗ್ಗೆ…...."

"ನನಗೆ ನಿನ್ನ ತಂದೆ ಬಗ್ಗೆ, ಅವರ ಯೋಜನೆಯ ಬಗ್ಗೆ ನಿನಗಿಂತ ಚೆನ್ನಾಗಿ ತಿಳಿದಿದೆ ಸಮನ್ವಿತಾ…..." ಗಂಭೀರವಾಗಿ ಹೇಳಿದ ಅಭಿಯನ್ನೇ ಅಚ್ಚರಿಯಿಂದ ದಿಟ್ಟಿಸಿದಳು ಅವಳು.

"ಎಲ್ಲಾ ಗೊತ್ತಿದ್ದೂ ಈ ಮದುವೆಗೆ…...?" ಪ್ರಶ್ನಾರ್ಥಕವಾಗಿ ಕೇಳಿದಳು...

ಅವನು ಮೌನವಾಗಿದ್ದ. ಕುಳಿತಲ್ಲಿಂದ ಎದ್ದು ಕಿಟಕಿಯ ಬಳಿ ಹೋಗಿ ಹೊರಗೆ ನೋಡತೊಡಗಿದ. ಅವಳಿಗೆ ಆ ಮೌನ ಉಸಿರುಗಟ್ಟಿಸುವಂತಾಯಿತು.

"ಮಿಸ್ಟರ್ ಶರ್ಮಾ, ಆಮ್ ಆಸ್ಕಿಂಗ್ ವಿಥ್ ಯು. ಏನಾದ್ರೂ ಮಾತಾಡಿ. ಇಷ್ಟು ಹೊತ್ತು ಎಷ್ಟೊಂದು ಮಾತಾಡ್ತಿದ್ರಿ. ಈಗ್ಯಾಕೆ ಇಷ್ಟು ಮೌನ? ನನ್ನ ಪ್ರಶ್ನೆಯಲ್ಲಿ ಏನಾದ್ರೂ ತಪ್ಪಿದ್ದೀಯಾ?" 

ಕಿಟಕಿಯಿಂದ ಸುಮ್ಮನೆ ಹೊರ ನೋಡುತ್ತಿದ್ದವನು ಅವಳೆಡೆ ತಿರುಗಿ ನಸುನಕ್ಕು ಇಲ್ಲವೆಂದು ತಲೆಯಾಡಿಸಿದ. ಅವಳ ಕಣ್ಣುಗಳಲ್ಲಿ ಪ್ರಶ್ನೆಯಿತ್ತು. ಆ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಅವನಲ್ಲಿತ್ತು. ಆದರೆ ಈಗಲೇ ಹೇಳಬೇಕೇ? ಎಂಬ ಜಿಜ್ಞಾಸೆ ಅವನದು. 

"ಅಭಿರಾಮ್?" ಅವಳಲ್ಲಿ ಉತ್ತರ ಪಡೆಯಲೇಬೇಕೆಂಬ ಹಠ.

ನಿಧಾನವಾಗಿ ಅವಳೆದುರು ಬಂದು ಕುಳಿತವನು, "ಈಗ್ಲೇ ಹೇಳ್ಬೇಕೇನು? ನೀನು ಹುಷಾರಾದ ಮೇಲೆ ಹೇಳಿದರಾಗದೇ?" ಕೇಳಿದ.

"ಪ್ಲೀಸ್ ಅಭಿರಾಮ್, ಈ ವಿಷಯ ಆಲ್ರೆಡಿ ನನಗೆ ತುಂಬಾ ಹಿಂಸೆ ಕೊಡ್ತಿದೆ. ಇನ್ನಷ್ಟು ದಿನ ಇದನ್ನೇ ತಲೆಯಲ್ಲಿ ತುಂಬ್ಕೊಂಡು ಯೋಚಿಸೋದ್ಯಾಕೆ? ಅದೇನೇ ಇರಲಿ ಹೇಳ್ಬಿಡಿ."

ಮೊಗವನ್ನು ಮೇಲೆತ್ತಿ ನಿಡಿದಾದ ಉಸಿರು ದಬ್ಬಿದ.

"ನಿನ್ನ ತಂದೆ, ಅವರ ಸ್ವಭಾವ ನನಗೇನು ಹೊಸದಲ್ಲ. ನಾನು ಓದು ಮುಗಿಸಿ ನಮ್ಮ ಬಿಸ್ನೆಸಲ್ಲಿ ಅಪ್ಪನೊಂದಿಗೆ ಕೈ ಜೋಡಿಸಿದಾಗಿಂದ ಸತ್ಯಂ ರಾವ್ ಅವರನ್ನು ಗಮನಿಸ್ಕೊಂಡೇ ಬಂದಿದ್ದೀನಿ. ಆದ್ರೆ ವೈಯಕ್ತಿಕವಾಗಿ ನಾವೆಂದೂ ಭೇಟಿಯಾಗಿರಲಿಲ್ಲ. ಯಾಕೆಂದರೆ ನಮ್ಮ ಸಿದ್ಧಾಂತಗಳು ಹಾಗೂ ರಾವ್ ಅವರ ಸಿದ್ಧಾಂತಗಳು ಪರಸ್ಪರ ವಿರುದ್ಧವಾದುದು. ಸಂಬಂಧಕ್ಕೂ, ವ್ಯವಹಾರಕ್ಕೂ ಸ್ಪಷ್ಟ ಅಂತರವಿದೆ ನಮ್ಮಲ್ಲಿ. ಹಣದಿಂದಲೇ ಎಲ್ಲವನ್ನೂ ಅಳೆಯೋರು ನಾವಲ್ಲ. ಇಂದಿಗೂ ನಮ್ಮನೆಯಲ್ಲಿ ಬಾಂಧವ್ಯಕ್ಕಿರೋ ಪ್ರಾಮುಖ್ಯತೆ ಹಣಕ್ಕಿಲ್ಲ. ಚಿಕ್ಕಂದಿನಿಂದಲೂ ನನಗೆ, ಆಕೃತಿಗೆ ಮನೆಯಲ್ಲಿ ಇದನ್ನೇ ಕಲಿಸಿ ಬೆಳೆಸಿದ್ದು. ಎಷ್ಟೇ ಹಣ, ಶ್ರೀಮಂತಿಕೆ ಇದ್ದರೂ ಅದು ನೆತ್ತಿಗೇರದಂತೆ, ದರ್ಪ, ಅಹಂಕಾರ ನಮ್ಮ ಬಳಿ ಸುಳಿಯದಂತೆ ಯಾವಾಗ್ಲೂ ಎಚ್ಚರವಹಿಸಿದ್ರು ಅಪ್ಪ ಅಮ್ಮ. ಹಾಗಾಗಿ ಸೋಗಿನ, ತೋರಿಕೆಯ ಜನರಿಂದ ನಾವು ಬಹಳ ದೂರವೇ. ಅಂತಹವರಲ್ಲಿ ಒಬ್ಬರು ಸತ್ಯಂ ರಾವ್. ನನಗೆ ಮುಂಚಿನಿಂದಲೂ ಇಷ್ಟವಿಲ್ಲದ ವ್ಯಕ್ತಿ. ಅವರೊಂದಿಗೆ ನಮ್ಮ ಕಂಪನಿಯ ಯಾವುದೇ ವ್ಯವಹಾರ ಇರ್ಲಿಲ್ಲ. ಹಾಗಾಗೀ ಯಾವತ್ತೂ ಭೇಟಿಯಾಗುವ ಪ್ರಮೇಯವೇ ಬರಲಿಲ್ಲ. ಯಾವುದಾದರೂ ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ ಒಂದೆರಡು ಸಲ ನೋಡಿದ್ರೂ ನಾನಂತೂ ಎಂದೂ ಮಾತನಾಡಿಸಲೂ ಹೋಗಿರ್ಲಿಲ್ಲ. ಅಂತಹ ವ್ಯಕ್ತಿ ನನ್ನ ಬದುಕಿನಲ್ಲಿ ನೇರವಾಗಿ ಮಧ್ಯಪ್ರವೇಶಿಸಿಬಿಟ್ಟರು. ತಿಂಗಳ ಹಿಂದೆ ರಾವ್ ಅವರು ಪಾರ್ಟಿಗೆ ಕರೆದಾಗಲೇ ನನ್ನೊಳಗೆ ಒಂದು ಕಸಿವಿಸಿ ಸುಳಿದಾಡಿತ್ತು. ಅವತ್ತೇ ಡ್ಯಾಡಿಗೆ ಹೇಳಿದ್ದೆ 'ಏನೋ ಪ್ಲಾನ್ ಮಾಡ್ತಿದ್ದಾರೆ, ಈ ಪಾರ್ಟಿ ಅಟೆಂಡ್ ಆಗೋದು ಬೇಡ' ಅಂತ. ಆದ್ರೆ ಡ್ಯಾಡ್ ಕೇಳ್ಲಿಲ್ಲ. 'ರಾವ್ ಅವರನ್ನು ಎದುರು ಹಾಕ್ಕೊಳ್ಳೋದು ಒಳ್ಳೇದಲ್ಲ. ಕರ್ದಿದ್ದಾರೆ. ಹೋಗಿ ಬಂದ್ರಾಯ್ತು' ಎಂದುಬಿಟ್ಟರು. ಆಮೇಲೆ ಪಾರ್ಟಿಯಲ್ಲಿ ನಿನ್ನ ಪರಿಚಯವಾಯಿತು. ನಮ್ಮನೆಯವರಿಗೆಲ್ಲಾ ನಿನ್ನ ಗುಣಸ್ವಭಾವ ಬಹಳ ಹಿಡಿಸಿತ್ತು. ಆಮೇಲೆಲ್ಲಾ ಮನೆತುಂಬಾ ನಿಂದೇ ಮಾತುಗಳು. ಈ ಮಧ್ಯೆ ಅಗ್ರಿಮೆಂಟ್ ಒಂದನ್ನು ಫೈನಲೈಸ್ ಮಾಡೋಕೆ ಅಂತ ನಾನು ವಾರಗಳ ಮಟ್ಟಿಗೆ ಜರ್ಮನಿಗೆ ಹೋಗಿದ್ದೆ. ನಾನು ಹೋಗಿ ಬರೋದ್ರೊಳಗೆ.........

ನನ್ನ ಊಹೆಗೂ ಮೀರಿದ ಪರಿಸ್ಥಿತಿ ನಿರ್ಮಾಣ ಆಗಿತ್ತು ಮನೆಯಲ್ಲಿ. ರಾವ್ ಅವರು ನನ್ನ, ನಿನ್ನ ಮದುವೆ ಬಗ್ಗೆ ಮಾತಾಡಿದ್ದಾರೆ ಅಂದಾಗಲೇ ನನಗೆ ಗಾಬರಿಯಾಯಿತು. ಅದ್ರ ಮೇಲೆ ಅಪ್ಪ, ಅಮ್ಮ, ಆಕೃತಿನೂ ನಮಗೆಲ್ಲಾ ಒಪ್ಪಿಗೆ ಇದೆ. ನೀನೂ ಒಪ್ಪಿಕೊಂಡ್ಬಿಡು ಅಂದಾಗ ನಂಗೆ ತಲೆಕೆಟ್ಟು ಹೋಯ್ತು. ರಾವ್ ಅವರ ಪ್ಲಾನ್ ನನಗೆ ಆಗ ಅರ್ಥವಾಯಿತು. ಆ ಪಾರ್ಟಿ ನಮಗೋಸ್ಕರನೇ ಅರೇಂಜ್ ಆಗಿತ್ತು ಅನ್ನೋದು ಸ್ಪಷ್ಟವಾಯ್ತು. ಖೆಡ್ಡಾ ತೋಡಿ ಬೀಳ್ಸಿದ್ದಾರೆ ಅಂತ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ನಾನು ಇದು ಸಾಧ್ಯವೇ ಇಲ್ಲ ಅಂತ ಪಟ್ಟು ಹಿಡಿದೆ. ರಾವ್ ಅವರ ಕಂಪನಿ ಶೇರ್ ವ್ಯಾಲ್ಯೂ ಬಿದ್ದಿದೆ. ಈ ಮದುವೆ ನೆಪದಲ್ಲಿ ನಮ್ಮ ಗುಡ್ ವಿಲ್ ಮತ್ತು ಪ್ರಭಾವ ಬಳಸಿಕೊಂಡು ಅವರ ಬಿಸ್ನೆಸ್ ಮೇಲೆತ್ತಲು ಯೋಜನೆ ಮಾಡಿದ್ದಾರೆ ಅಂತ ವಾದಿಸಿದೆ. ಅದು ಸತ್ಯ ಅಂತ ಅಪ್ಪ ಒಪ್ಪಿದ್ರು. ಆದರೆ ಹಾಗೆ ಸಹಾಯ ಮಾಡೋದ್ರಲ್ಲಿ ತಪ್ಪೇನಿಲ್ಲ, ಸಮನ್ವಿತಾ ಈ ಮನೆಗೆ ಸೊಸೆಯಾಗಿ ಬರ್ತಾಳಂದ್ರೆ ಅಷ್ಟು ಮಾತ್ರದ ಸಹಾಯ ಮಾಡಿದರಾಯ್ತು ಅಂದು ಬಿಟ್ಟರು. 'ನೀನು ರಾವ್ ಬಗ್ಗೆ ಯಾಕೆ ಯೋಚ್ನೆ ಮಾಡ್ತಾ ಇದ್ದೀಯಾ. ಮದ್ವೆ ಆಗ್ಬೇಕಿರೋದು ಅವರ ಮಗಳ ಜೊತೆ. ಬಿಸ್ನೆಸ್ ಮತ್ತೆ ಸಂಬಂಧನ ಒಂದಕ್ಕೊಂದು ಗಂಟು ಹಾಕ್ಬೇಡ…' ಅಪ್ಪ, ಅಮ್ಮ, ಆಕೃತಿ ಮೂವರದೂ ಇದೇ ಮಾತು. ಅವರ ಮಾತಿನಲ್ಲಿ ನ್ಯಾಯವಿದೆ ಅನಿಸಿತಾದರೂ ನನಗೆ ರಾವ್ ಜೊತೆ ಬಿಸ್ನೆಸ್, ಸಂಬಂಧ ಯಾವುದೂ ಬೇಡವಾಗಿತ್ತು. ಮನೆಯವರೂ ಪಟ್ಟು ಸಡಿಲಿಸಲಿಲ್ಲ ನಾನೂ ಗೊಂದಲದಲ್ಲಿದ್ದೆ. ಆಗ ನನಗೆ ಹೊಳೆದ ಉಪಾಯವೇ ಇದು……. ನೇರವಾಗಿ ನಿನ್ನ ಹತ್ರನೇ ಮಾತಾಡಿ ಎಲ್ಲಾ ನೇರಾನೇರ ಕೇಳಿಬಿಡೋದು ಅಂತ ಡಿಸೈಡ್ ಮಾಡಿಬಿಟ್ಟೆ. ಅದನ್ನು ಹೇಳೋಕಂತಲೇ ಮೊನ್ನೆ ಕಾಲ್ ಮಾಡಿದಾಗ ನೀನು ಕೊಟ್ಟ ರಿಯಾಕ್ಷನ್……. ನಿನಗ್ಯಾವ ವಿಷಯವೂ ಗೊತ್ತಿಲ್ಲವೇನೋ ಅನ್ನೋ ರೀತಿಯಲ್ಲಿ ಮಾತಾಡಿದಾಗಲೇ ನನ್ನ ತಲೆಯಲ್ಲೊಂದು ಅನುಮಾನ ಮೊಳಕೆಯೊಡೆದಿತ್ತು. ರಾವ್ ಅವರು ಮಗಳಿಗೇ ಹೇಳದೇ ಇದ್ನೆಲ್ಲಾ ಮಾಡಿರಬಹುದಾ ಅಂತ ಅನಿಸಿತಾದರೂ ಸುಲಭವಾಗಿ ತಳ್ಳಿಹಾಕಿದೆ……..

ಯಾಕಂದ್ರೆ …......." 

ಮಾತು ನಿಲ್ಲಿಸಿ ಅವಳನ್ನು ನೋಡಿದ. ಅವಳಲ್ಲಿ ಯಾವುದೇ ರೀತಿಯ ಭಾವತೀವ್ರತೆಯಿರಲಿಲ್ಲ. ತಂದೆಯ ಬಗ್ಗೆ ಚೆನ್ನಾಗಿ ತಿಳಿದಿತ್ತು ಅವಳಿಗೆ. ಅವಳಲ್ಲೊಂದು ದಿವ್ಯ ಮೌನವಿತ್ತು. ನಿರ್ಲಿಪ್ತಳಾಗಿದ್ದಳು. ಅವನ ನಿರೀಕ್ಷೆಯೂ ಅದೇ…... ಆದರೆ ಅಲ್ಲಿಂದ ಮುಂದೆ ಮಾತನಾಡುವುದು ಕೊಂಚ ಕಷ್ಟವೆನಿಸಿತು ಅವನಿಗೆ. ಅವಳೇನು ಅಂದುಕೊಳ್ಳಲಾರಳು ಎಂಬುದು ತಿಳಿದಿದ್ದರೂ ತಾನು ಮುಂಚೆ ಕಲ್ಪಿಸಿಕೊಂಡಿದ್ದ ಅವಳ ಚಿತ್ರದ ಬಗ್ಗೆ ಅವನಿಗೇ ಖೇದವಿತ್ತು.

"ಯಾಕೆ ನಿಲ್ಲಿಸಿಬಿಟ್ರಿ? ಹೇಳೋಕೇ ಕಷ್ಟವೆನಿಸ್ತಿದೆಯಾ?" ಅವನ ಮನಸ್ಸು ಅರಿತವಳಂತೆ ಕೇಳಿದಾಗ ಉತ್ತರ ಬರಲಿಲ್ಲ ಅವನಿಂದ.

"ನಾನೇ ಹೇಳ್ಲಾ ಯಾಕೆಂತ? ಯಾಕಂದ್ರೆ ಸತ್ಯಂ ರಾವ್ ಮಗಳು ಅಂದ್ರೆ ಅಪ್ಪನ ತರಾನೇ ಇರ್ತಾಳೆ, ಅದೇ ನಾಟಕ, ತೋರಿಕೆ, ಅಹಂಕಾರ ಎಲ್ಲವೂ ಇರುತ್ತೆ. ಅದಕ್ಕೆ ಫೋನಲ್ಲಿ ಹೀಗೆ ಮಾತಾಡಿದ್ದಾಳೆ ಅಂದ್ಕೊಂಡ್ರಿ ಅಲ್ವಾ? ನಿಮ್ಮ ಯೋಚನೆಯಲ್ಲಿ ತಪ್ಪೇನೂ ಇಲ್ಲ ಬಿಡಿ…... ನನ್ನ ಬಗ್ಗೆ ತಿಳಿದಿರೋರನ್ನು ಬಿಟ್ಟು ಉಳಿದವರೆಲ್ಲ ನನ್ನನ್ನು ಸತ್ಯಂ ರಾವ್ ಅನ್ನೋ ವ್ಯಕ್ತಿಯ ವ್ಯಕ್ತಿತ್ವದಿಂದಲೇ‌ ಅಳೆಯೋದು" ಸಣ್ಣಗೆ ನಕ್ಕಳು.

"ಇರಬಹುದೇನೋ ಸಮನ್ವಿತಾ........ ಟು ಬಿ ವೆರಿ ಫ್ರಾಂಕ್ ವಿಥ್ ಯು, ಅವತ್ತು ಪಾರ್ಟಿಯಲ್ಲಿ ನಿನ್ನ ನೋಡೋವರೆಗೆ ರಾವ್ ಅವರಿಗೊಬ್ಬ ಮಗಳಿದ್ದಾಳೆ ಅನ್ನೋ ವಿಷಯವೇ ನನಗೆ ತಿಳಿದಿರಲಿಲ್ಲ. ಇನ್ನು ಅವತ್ತು ನಾನು ನನ್ನದೇ ಯೋಚನೆಯಲ್ಲಿ ಮುಳುಗಿದ್ದೆ. ಸೋ ನಿನ್ನ ಬಿಹೇವಿಯರ್ ಏನು ಎತ್ತ ಯಾವುದೂ ಗಮನಿಸಲಿಲ್ಲ. ಬಟ್ ಅವತ್ತು ಮನೆಗೆ ವಾಪಾಸಾಗೋವಾಗ ದಾರಿ ತುಂಬಾ ಕಾರಲ್ಲಿ ನಿನ್ನದೇ ಮಾತು. ಆಮೇಲಿಂದ ಮನೆಯಲ್ಲಿ ದಿನಾ ನಿನ್ನ ಬಗ್ಗೆ ಒಂದೆರಡು ಗಂಟೆಗಳಾದ್ರೂ ಮಾತಾಡ್ತಿದ್ರು ಡ್ಯಾಡ್, ಮಮ್ಮಿ ಮತ್ತೆ ಆಕೃತಿ. ಅವರ ಮಾತುಗಳಲ್ಲಿ ಅಡಗಿದ್ದ ನಿನ್ನ ವ್ಯಕ್ತಿತ್ವವನ್ನು ನನ್ನ ಮನದ ಭಿತ್ತಿಯಲ್ಲಿ ಚಿತ್ರಿಸಿದ್ದೆ. ಯಾಕೆ? ಗೊತ್ತಿಲ್ಲ...... ಆದರೆ ಆ ಚಿತ್ರ ಅತ್ಯಂತ ಅಪ್ಯಾಯಮಾನವಾಗಿತ್ತು. ನಾನೂ ಆರಾಮಾಗಿದ್ದೆ. ರಾವ್ ಅವರು ಮದುವೆ ಪ್ರಸ್ತಾಪ ಮಾಡುವ ತನಕ.......... ಆ ಪ್ರಸ್ತಾಪ ನನ್ನ ಯೋಚನೆಗಳ ಹಳಿ ತಪ್ಪಿಸಿತು. ನಾನು ಚಿತ್ರಿಸಿದ ಚಿತ್ರಕ್ಕೆ ಮಂಕುಬಡಿದು ರಾವ್ ಅವರ ಪ್ರಭಾವಳಿಯೇ ಕಣ್ಮುಂದೆ ಕವಿಯತೊಡಗಿತು. ಅಂದಿನ ಸಂತೋಷಕೂಟ ಈ ಪ್ರಸ್ತಾಪಕ್ಕೆ ನಾಂದಿ ಹಾಡಲೆಂದೇ ಮಾಡಿದ ಸೋಗಿನ ಉಪಾಯ ಎಂದು ನಂಬಿಕೆ ಬಂದಿತ್ತು. 'ಸಂತೋಷಕೂಟವೇ ನಕಲಿ ಎಂದ ಮೇಲೆ ಅಲ್ಲಿದ್ದ ಪಾತ್ರಗಳ ನಡತೆಯೂ ನಾಟಕದ್ದೇ ಅಲ್ಲವೇ?' ಎನ್ನುವ ತರ್ಕವನ್ನು ಬುದ್ಧಿ ಒಪ್ಪಿಬಿಟ್ಟಿತು. ವಿವೇಚನೆಯ ಅಗತ್ಯವೇ ಬರಲಿಲ್ಲ. ನಿನ್ನ ಸ್ವಭಾವದ ಬಗ್ಗೆ ಕೊಂಚ ತಿಳಿದಿದ್ದರೂ ಬಹುಶಃ ಹೀಗಾಗುತ್ತಿರಲಿಲ್ಲವೇನೋ. ಅಸಲಿಗೆ ನೀನೊಬ್ಬ ಡಾಕ್ಟರ್ ಎಂಬುದೂ ನಿನ್ನೆಯೇ ನಮಗೆ ತಿಳಿದಿದ್ದು. ರಾವ್ ಅವರೊಂದಿಗೆ ಬಿಸ್ನೆಸ್ ಸಂಭಾಳಿಸುತ್ತೀಯಾ ಅಂತಲೇ ಎಂದುಕೊಂಡಿದ್ದೆವು. ಹಾಗಾಗಿಯೇ ನಾನು ಮೊನ್ನೆ ಫೋನಿನಲ್ಲಿ ಮಾತಾಡಿದ್ದು ನಿನಗೆ ವಿಚಿತ್ರವೆನಿಸಿದೆ….. ಎಂಡ್ ಅಫ್ಕೋರ್ಸ್..... ನೀನು ಎಲ್ಲಾ ತಿಳಿದೂ ಉದ್ಧಟತನದ ಮಾತಾಡಿದೆ ಅನ್ನಿಸ್ತು ನನಗೆ. ಆದರೂ ಎಲ್ಲೋ ಏನೋ ಸರಿಯಾಗಿಲ್ಲ ಎಂಬ ಭಾವ. ಮನಸ್ಸು ನಿನ್ನನ್ನು ರಾವ್ ಅವರಂತೆಯೇ ಎಂದುಕೊಳ್ಳಲು ಒಪ್ಪುತ್ತಲೇ ಇರಲಿಲ್ಲ. ಏನಾದರಾಗಲೀ ನೇರಾನೇರ ಮಾತನಾಡಿಬಿಡೋಣ ಎಂದುಕೊಂಡೇ ಮನೆಗೆ ಕರೆದದ್ದು. ನೀನು ಆಟೋದಲ್ಲಿ ಬಂದಿಳಿದಾಗ ಮತ್ತೆ ಅನಿಸಿತು ನನ್ನೆಣಿಕೆ ತಪ್ಪಾಗಿದೆಯೇನೋ ಎಂದು. ಆಮೇಲೆ ತಿಳಿದದ್ದು ನೀನು ಧನ್ವಂತರಿಯಲ್ಲಿ ಕೆಲಸಮಾಡುವೆಯೆಂದು. ನಿನ್ನ ನೇರ ಮಾತುಗಳು, ದೃಢಚಿತ್ತ ನನ್ನೆಲ್ಲಾ ಯೋಚನೆಗಳನ್ನೂ ಬುಡಮೇಲು ಮಾಡಿತು. ಈ ಮದುವೆಯ ಔಚಿತ್ಯ ಹಾಗೂ ಅದರಿಂದ ನಿಮಗಾಗುವ ಲಾಭದ ಬಗ್ಗೆ ಕೇಳಬೇಕೆಂದು ನಿನ್ನ ಮನೆಗೆ ಕರೆದಿದ್ದೆ. ಆದರೆ ಯಾವಾಗ ನೀನು 'ನಾನು ಸಂಬಳಕ್ಕೆಂದಲ್ಲ…. ನೆಮ್ಮದಿ, ಆತ್ಮತೃಪ್ತಿಗೋಸ್ಕರ ಕೆಲಸ ಮಾಡ್ತೀನಿ. ನನ್ನ ಅವಶ್ಯಕತೆಗಳು ಬಹಳ ಕಡಿಮೆ. ಸತ್ಯಂ ರಾವ್ ಅವರ ಸಂಪಾದನೆ ಅವರಿಗೆ ಸಂಬಂಧಿಸಿದ್ದು. ಅದಕ್ಕೂ ನನಗೂ ಸಂಬಂಧವಿಲ್ಲ' ಎಂದೆಯೋ ಆಗ ನನ್ನ ಯೋಚನೆಯ ಬಗ್ಗೆ ನನಗೇ ನಾಚಿಕೆಯೆನಿಸಿತು. ಬಹಳ ಹೆಮ್ಮೆಯೆನಿಸಿತು ನಿನ್ನ ಬಗ್ಗೆ. ಬೇರೆನನ್ನೂ ಕೇಳಬೇಕೆನಿಸದೇ ನೇರ ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿಬಿಟ್ಟೆ. ರಾವ್ ಅವರೇ ತಂದ ಪ್ರಸ್ತಾಪ…. ನಿನಗೇ ಗೊತ್ತಿಲ್ಲದೇ…..... ನಿನ್ನ ಮದುವೆ ಮಾಡಿಸಬಹುದೆಂದು........ 

ನನಗೆ ಅನುಮಾನವಿತ್ತು. ಆದರೂ....... ಇಷ್ಟು ಕೆಳ ಮಟ್ಟಕ್ಕೆ….... ರಾವ್ ಅವರು ಕುತಂತ್ರಿ ಎಂಬ ಅರಿವಿತ್ತಾದರೂ ತಮ್ಮ ಸ್ವಂತ ಮಗಳ ವಿವಾಹವನ್ನು ಹೀಗೆ ಅವಳ ಅರಿವಿಗೇ ಬಾರದಂತೆ........

ನನ್ನ ಸಮ್ಮತಿ ತಿಳಿಸಿದ ನಂತರ ನಿನ್ನ ಮುಖದಲ್ಲಾದ ಬದಲಾವಣೆ, ಗೊಂದಲ, ಕಸಿವಿಸಿ……. ನನ್ನ ಅನುಮಾನ ನಿಜವಾಗಿತ್ತು.ಆಮೇಲಿನ ವಿಷಯ ನಿನಗೇ ಗೊತ್ತಲ್ಲ. ಬಟ್ ಎಕ್ಸಟ್ರೀಮ್ಲೀ ಸಾರಿ. ನಮಗೆ ವಿಷಯ ಹೀಗಿರಬಹುದು ಅನ್ನೋ ಕಲ್ಪನೆಯೂ ಇರಲಿಲ್ಲ" ದೀರ್ಘವಾಗಿ ವಿವರಿಸಿ ಸುಮ್ಮನಾದ.

"ನೋ ಅಭಿರಾಮ್, ಡೋಂಟ್ ಬಿ ಸಾರಿ, ಆಕ್ಚುಲಿ ನಾನು ನಿಮ್ಗೆ ಥ್ಯಾಂಕ್ಸ್ ಹೇಳ್ಬೇಕು. ನೀವು ಈ ಬಗ್ಗೆ ಮಾತಾಡಿಲ್ಲ ಅಂದಿದ್ರೆ ನನಗೆ ವಿಷಯನೇ ಗೊತ್ತಾಗ್ತಾ ಇರ್ಲಿಲ್ಲ. ಆಮೇಲೆ ನನ್ನ ಮದುವೆ ಗಿನ್ನಿಸ್ ದಾಖಲೆಗೆ ಸೇರಿರೋದೇನೋ.... ವಿಚಿತ್ರ ಮದುವೆ ಅಂತ….." ಅವನು ಬದಲಾಡಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವಳೇ ಮಾತು ಮುಂದುವರೆಸಿದಳು.

"ಯು ಆರ್ ವೆರಿ ಲಕ್ಕಿ ಅಭಿರಾಮ್. ನಿಮ್ಮ ಅಪ್ಪ ಅಮ್ಮ ನಿಮ್ಮ ಬೆನ್ನಿಗಿದ್ದಾರೆ. ನಿಮ್ಮ ಬೆಳವಣಿಗೆಯ ಪ್ರತೀ ಹಂತದಲ್ಲೂ ಸರಿ ತಪ್ಪುಗಳನ್ನು ತೋರಿಸಿ ತಿದ್ದಿದ್ದಾರೆ. ಕೈ ಹಿಡಿದು ನಡೆಸಿದ್ದಾರೆ. ನಿಮ್ಮ ಬಾಲ್ಯವನ್ನು ಚೆಂದದ ನೆನಪಾಗಿಸಿದ್ದಾರೆ. ಬದುಕಿನ ಪ್ರತೀ ನಿರ್ಧಾರದಲ್ಲೂ ನಿಮ್ಮ ಆಸೆ, ಆಕಾಂಕ್ಷೆಗಳಿಗೆ ಬೆಲೆಕೊಟ್ಟು ನಿಮ್ಮೊಂದಿಗೆ ನಿಲ್ಲುತ್ತಾರೆ. ಯಾವ ಸಂದರ್ಭದಲ್ಲೂ ನೀವು ಒಬ್ಬಂಟಿ ಅನ್ನೋ ಭಾವ ನಿಮ್ಮನ್ನು ಕಾಡೋಲ್ಲ.‌ ಇಂಥಾ ಅದೃಷ್ಟ ಎಲ್ಲರ ಹಣೇಲಿರೋಲ್ಲ. ಈ ಒಬ್ಬಂಟಿ ಅನ್ನೋ ಭಾವನೆ ಇದ್ಯಲ್ಲ ಅದು ತುಂಬಾ ಹೆದರಿಕೆ ಹುಟ್ಟಿಸುತ್ತೆ ಅಭಿರಾಮ್. ಅದು ಮನುಷ್ಯನನ್ನು ಮಾನಸಿಕವಾಗಿ ದುರ್ಬಲನನ್ನಾಗಿಸುತ್ತದೆ. ಬದುಕೇ ಖಾಲಿ ಖಾಲಿ ಅನ್ಸುತ್ತೆ. ಹುಟ್ಟಿನಿಂದಲೇ ಅನಾಥರಾಗಿರೋದು ಒಂದು ತರ. ಆದರೆ ಎಲ್ಲಾ ಇದ್ದೂ ಅಂತರಂಗದಲ್ಲಿ ಅನಾಥರಾಗಿರ್ತಾರಲ್ಲ…. ಅವರ ಮನೋವಿಪ್ಲವವೇ ಬೇರೆ. ಬೇಸರ ಆದ್ರೂ, ಸಂತೋಷ ಆದ್ರೂ ಹಂಚ್ಕೊಳ್ಳೋಕೆ ಎಲ್ಲಾ ಇದ್ದೂ ಯಾರೂ ಇಲ್ಲದ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ನಾವೇ ಅತ್ತು ನಾವೇ ಸಮಾಧಾನ ಮಾಡ್ಕೊಳ್ಳೋದು ತುಂಬಾ ಕಷ್ಟ…… ಬಟ್ ಥ್ಯಾಂಕ್ ಗಾಡ್. ಸ್ಟಿಲ್ ಐ ಹ್ಯಾವ್ ಫ್ಯೂ ಪೀಪಲ್ ಬೈ ಮೈ ಸೈಡ್……." ತಣ್ಣಗೆ ನಕ್ಕಳು. ಹೀಗೇ ಬಿಟ್ಟರೆ ಮತ್ತೆ ಅಳುತ್ತಾಳೆಂಬುದು ಖಚಿತವಾಯಿತು ಅವನಿಗೆ.

"ಐ ಅಗ್ರೀ, ನಾನು ತುಂಬಾ ಲಕ್ಕಿ. ಅಪ್ಪ, ಅಮ್ಮ, ಆಕೃತಿ…… ಎಲ್ಲಾ ವಿಷಯದಲ್ಲೂ. ಬಟ್ ಅದೆಲ್ಲಕ್ಕಿಂತಲೂ ದೊಡ್ಡ ಅದೃಷ್ಟದ ಖಜಾನೆಯೊಂದು ನನಗೆ ಸಿಕ್ಕಿದೆ. ನನಗೆ ಮಾತ್ರವಲ್ಲ ನಮ್ಮೆಲ್ಲರಿಗೂ. ಬಹಳ ಪುಣ್ಯ ಸಂಪಾದನೆ ಮಾಡಿದವರ‌ ನಸೀಬಲ್ಲಿ ಮಾತ್ರ ಇರುವಂತಹದ್ದು…..." ಎಂದ.

"ಹೌದಾ? ಏನದು?" ಕುತೂಹಲದಿಂದ ಕೇಳಿದಳು.

"ನೀನು" 

"ನಾ……." ಅವಳೇನೋ ಕೇಳಬೇಕೆನ್ನುವ ಮುನ್ನ ಅವಳನ್ನು ತಡೆದ.

"ಶೂ….... ಮಾತಾಡ್ಬೇಡ. ನಾನ ಹೇಳೋದು ಸುಮ್ನೆ ಕೇಳು. ರಾವ್ ಅವರ ಮೇಲೆ ವಿಪರೀತ ಸಿಟ್ಟಿದೆ ನನಗೆ. ಬಟ್ ಐ ಆಲ್ವೇಸ್ ಬಿ ಗ್ರೇಟ್ಫುಲ್ ಟು ಹಿಮ್ ಬಿಕಾಸ್ ಅವರಿಂದಾಗಿಯೇ ನೀನು ನನಗೆ ಸಿಕ್ಕಿದ್ದು. ಅವರಿಲ್ಲದಿದ್ರೂ ನೀನು ನನ್ನೆದುರು ಬರ್ತಿದ್ಯಾ? ನಂಗೊತ್ತಿಲ್ಲ. ಬಟ್ ಈಗ ಅವರಿಂದಲೇ ಸಿಕ್ಕಿದ್ಯಾ. ಇನ್ನು ಮಾತ್ರ ನಿನ್ನ ಬಿಡೋ ಮಾತೇ ಇಲ್ಲ."

ಅವನು ಇನ್ನೇನೋ ಹೇಳಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನವ್ಯಾಳ ದನಿ ಕೇಳಿತ್ತು.

"ಅಬ್ಬಾ ಎಚ್ಚರ ಆಯ್ತಲ್ಲ. ನನಗಂತೂ ಗಾಬರಿ ಆಗೋಗಿತ್ತು" ಖುಷಿಯಲ್ಲಿ ಒಳಬಂದಳು. ಹಿಂದೆಯೇ ಕಿಶೋರನೂ ಊಟ ಹಿಡಿದು ಬಂದ.

"ಎಷ್ಟೊತ್ತಿಗೆ ಎದ್ಲು ಸರ್" ಕೇಳಿದ ಅಭಿರಾಮನಲ್ಲಿ.

"ಹೇ ಪ್ಲೀಸ್, ಸರ್ ಗಿರ್ ಅಂತೆಲ್ಲಾ ಕರೀಬೇಡಿ. ಅಭಿರಾಮ್ ಅನ್ನಿ ಇಲ್ಲ ಅಭಿ ಅಂದ್ರೂ ಓಕೆ. ನೀವು ಹೋಗಿ ಸ್ವಲ್ಪ ಹೊತ್ತಿಗೆ ಎಚ್ಚರ ಆಯ್ತು" ಎಂದ.

ಅವನಿಗೆ ಅವಳಲ್ಲಿ ಇನ್ನೂ ಮಾತನಾಡಲಿತ್ತು. ನಾಳೆಯೇ ಮಾತನಾಡಿಬಿಡಬೇಕು ಎಂದುಕೊಂಡ.

"ಸರಿ ನಾನಿನ್ನು ಹೊರಡ್ತೀನಿ. ಲೇಟಾಯ್ತು. ನಾಳೆ ಬರ್ತೀನಿ ಎಲ್ಲರ ಜೊತೆ" ಹೊರಡಲನುವಾದ.

"ಅಭಿರಾಮ್ ಊಟ ಮಾಡ್ಕೊಂಡು ಹೋಗಿ" ಕಿಶೋರನ ಒತ್ತಾಯಿಸಿದ. ಆದರೆ ಅವನಿಗೆ ಊಟ ಮಾಡುವ ಮನಸ್ಸಿರಲಿಲ್ಲ. 

"ಇಲ್ಲ ಮನೇಲೀ ಎಲ್ಲಾ ಕಾಯ್ತಿರ್ತಾರೆ. ಅಲ್ಲೇ ತಗೋತೀನಿ. ಯು ಕ್ಯಾರಿ ಆನ್. ಹಾಗೇ ನಮ್ಮ ಡಾಕ್ಟ್ರ ಮೇಲೆ ಸ್ವಲ್ಪ ಜಾಸ್ತಿನೇ ಗಮನ ಇರ್ಲಿ. ಏನೇನೋ ಯೋಚನೆ ಮಾಡ್ಕೊಂಡು ಕೂತಿರುತ್ತಾರೆ" ಅವನ ಮಾತಿಗೆ ಕಿಶೋರ್, ನವ್ಯಾ ಇಬ್ಬರೂ ನಕ್ಕರು. ಆದರೆ ಸಮನ್ವಿತಾ ಮಾತ್ರ ಅವರ ಮಾತಿನ ಪರಿವೆಯೇ ಇಲ್ಲದೆ ಅವನ ಮಾತಿನ ಅರ್ಥ ತಿಳಿಯಲು ಹೆಣಗುತ್ತಿದ್ದಳು. ಅವಳ ಬಳಿ ಹೋದವನು, "ನಾಳೆ ಸಪರಿವಾರ ಸಮೇತ ಬರ್ತೀನಿ ಡಾಕ್ಟ್ರೇ. ಅಷ್ಟರೊಳಗೆ ಈ ಡ್ರಿಪ್ಸ್ ಎಲ್ಲಾ ತೆಗೆಸಿಕೊಂಡಿರಿ. ಇನ್ನುಳಿದದ್ದು ನಾಳೆ ಮಾತಾಡೋಣ. ಓಕೆ ನಾ?" ಅವಳ ಕೆನ್ನೆ ತಟ್ಟಿ ನಿರಾಳವಾಗಿ ಹೊರನೆಡೆದ.

ಅವನು ಹೋದ ದಿಕ್ಕನ್ನೇ ನೋಡುತ್ತಾ ಕುಳಿತವಳ ಮನ ಮಾತ್ರ ನಿರಾಳವಾಗಿರಲಿಲ್ಲ...

         ***** ಮುಂದುವರೆಯುತ್ತದೆ *****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ