ಎಲ್ಲಾ ತಾವೆಣಿಸಿದ್ದಕ್ಕಿಂತ ವೇಗವಾಗಿ, ತಮಗೆ ಬೇಕಾದಂತೆ ನಡೆಯುತ್ತಿರುವುದು ಅವರಿಗೆ ರೆಕ್ಕೆ ಮೂಡಿಸಿತ್ತು. ಅದೇ ಖುಷಿಯಲ್ಲಿ ತಮ್ಮ ಹೈ ಸೊಸೈಟಿಯ ಕೆಲವು ಹೈ ಫೈ ಜನರ ಮುಂದೆ ತಾವು ಶೀಘ್ರದಲ್ಲೇ ಶರ್ಮಾ ಅವರ ಸಂಬಂಧಿಗಳಾಗುತ್ತಿರುವುದಾಗಿ ನಾಲಿಗೆ ಹರಿಯಬಿಟ್ಟಿದ್ದರು. ಅದಕ್ಕೂ ಕಾರಣವಿತ್ತು. ಕಳೆದೊಂದು ವಾರದಲ್ಲಿ ಅವರ ಕಂಪನಿಯ ಷೇರು ಮೌಲ್ಯದ ಪತನ ತೀವ್ರ ವೇಗ ಪಡೆದಿತ್ತು. ಹೂಡಿಕೆದಾರರು ತಮ್ಮ ಪಾಲನ್ನು ಹಿಂತೆಗೆದುಕೊಳ್ಳುವ ಬೆದರಿಕೆ ಒಡ್ಡಿದ್ದರು. ಹಾಗಾಗಿ ಅವರೇ ಈ ವಿವಾಹದ ವಿಷಯದ ಗಾಳಿಸುದ್ದಿ ಹಬ್ಬಿಸಿದ್ದರು ಎಲ್ಲಾ ನಿರ್ಧಾರವಾಗುವ ಮೊದಲೇ.
ಶರ್ಮಾ ದಂಪತಿಗಳಿಗೆ ಸಮನ್ವಿತಾ ಬಹಳ ಹಿಡಿಸಿದ್ದು ಇವರಿಗೆ ಜಾಕ್ ಪಾಟ್ ಹೊಡೆದಂತಾಗಿತ್ತು.ಒಂದು ವೇಳೆ ಅಭಿರಾಮ್ ಒಪ್ಪದಿದ್ದರೂ ಅವನನ್ನು ಅವನ ಮನೆಯವರ ಮೂಲಕ ಮಣಿಸುವ ವಿಧಾನ ಹುಡುಕಿದ್ದರು. ಏನೇ ಆದರೂ ಮೃದುಲಾ ಮಗನನ್ನು ಒಪ್ಪಿಸಿಯೇ ತೀರುತ್ತಾರೆಂದು ಗ್ರಹಿಸಿಬಿಟ್ಟಿದ್ದರು ರಾವ್.
ರಾವ್ ದಂಪತಿಗಳಿಗೆ ಇಡೀ ಜಗತ್ತನ್ನೇ ತಮ್ಮ ಕುಯೋಜನೆಗಳಿಂದ ಮಣಿಸುವ ತಾಕತ್ತಿದೆ. ಯಾರನ್ನಾದರೂ ಕಿರು ಬೆರಳಿನಲ್ಲಿ ಕುಣಿಸಬಲ್ಲೆವೆಂಬ ಹಮ್ಮಿದೆ. ಒಬ್ಬಳನ್ನು ಹೊರತುಪಡಿಸಿ.......
ಸಮನ್ವಿತಾ......
ಮಗಳ ನೇರ ಧೀರ ನೋಟ ಎದುರಿಸುವ ಚೈತನ್ಯವಿಲ್ಲ ಅವರಲ್ಲಿ. ಪ್ರತೀ ಹಂತದಲ್ಲೂ ಅವರ ವಿರುದ್ಧ ನಿಲ್ಲುತ್ತಿದ್ದವಳು ಆಕೆಯೊಬ್ಬಳೇ. ಅವರು ಬೇಡವೆಂದಿದ್ದೆಲ್ಲಾ ಅವಳಿಗೆ ಬೇಕೇಬೇಕು. ಅವಳ ಈ ವರ್ತನೆಗೆ ನೇರವಾಗಿ ತಾವೇ ಹೊಣೆ ಎಂಬುದನ್ನು ಮಾತ್ರ ಅವರು ಒಪ್ಪುವುದಿಲ್ಲ. ಅವಳ ಹಿಂದೆ ಹೇಗೇ ಇದ್ದರೂ ಅವಳೆದುರು ಮಾತನಾಡಲು ಭಯವಿತ್ತು ಅವರಿಗೆ. ಅವಳಲ್ಲಿನ ನೈತಿಕ ಮೌಲ್ಯಗಳು ಅವರಲ್ಲಿ ಇಲ್ಲದಿರುವುದೇ ಅದಕ್ಕೆ ಕಾರಣವೇನೋ.
ಅದಕ್ಕಾಗಿಯೇ ಅವಳ ಸುತ್ತ ಯೋಜನೆ ಹೆಣೆದರೂ ಅವಳಿಗೆ ಅದರ ಸುಳಿವೇ ಸಿಗದಂತೆ ಎಚ್ಚರವಹಿಸಿದ್ದರು. ಅವಳು ಮನೆಬಿಟ್ಟು ಹೊರಟಾಗ ತಡೆದಿರಲಿಲ್ಲ. ಎಲ್ಲವೂ ಎಣಿಕೆಯಂತೆಯೇ ನಡೆದಿತ್ತು.
ಆದರೆ........
ಇಷ್ಟೆಲ್ಲಾ ಎಚ್ಚರಿಕೆಯಿಂದ ಇದ್ದರೂ ಅವರ ಗಮನಕ್ಕೆ ಬಾರದಂತೆ ವಿಧಿ ತನ್ನ ದಾಳ ಉರುಳಿಸಿತ್ತು. ಮಗಳಿಗೆ ಇವರ ಪೂರ್ಣ ಯೋಜನೆ ತಿಳಿದುಹೋಗಿತ್ತು. ಅದೂ ಅಭಿರಾಮ್ ಮತ್ತವನ ಮನೆಯವರಿಂದಲೇ. ಅವಳು ತಿರುಗಿ ಬಿದ್ದಿದ್ದಳು. ಅದು ನಿಶ್ಚಿತವಾದುದೇ.
ಆದರೆ ಹೀಗೊಂದು ಸನ್ನಿವೇಶ ಎದುರಾಗಬಹುದೆಂಬ ಸಣ್ಣ ಕಲ್ಪನೆಯೂ ಅವರಿಗಿರಲಿಲ್ಲ.
ಈಗ ತಾವು ಹಬ್ಬಿಸಿದ್ದ ಅದೇ ಗಾಳಿಸುದ್ದಿ ಕುತ್ತಿಗೆಗೆ ಸುತ್ತಿ ಕೊಳ್ಳುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿ ಗೋಚರಿಸತೊಡಗಿದ್ದವು. ಈ ಗಾಳಿಸುದ್ದಿ ಕೇಳಿದ ಹೂಡಿಕೆದಾರರು ಆದಷ್ಟು ಬೇಗ ಈ ವಿವಾಹ ಮುಗಿಸಲು ಒತ್ತಾಯಿಸಿದ್ದಲ್ಲದೇ ಒಂದು ವಾರಗಳ ಗಡುವು ನೀಡಿದ್ದರು. ಬ್ಯಾಂಕುಗಳಿಂದ ನೋಟಿಸ್ ಮೇಲೆ ನೋಟಿಸ್. ಒಟ್ಟಿನಲ್ಲಿ ಪರಿಸ್ಥಿತಿ ಸಂಪೂರ್ಣ ಹದೆಗೆಟ್ಟಿತ್ತು. ರಾವ್ ದಂಪತಿಗಳ ತಲೆ ಕೆಟ್ಟಿತ್ತು.
ಇಡೀ ದಿನ ಮನೆಯಿಂದ ಹೊರಗೆ ಕಾಲಿಟ್ಟಿರಲಿಲ್ಲ ದಂಪತಿಗಳು. ಹೊರಗೆ ಹೋದರೆ ಸಾಲಗಾರರು, ಹೂಡಿಕೆದಾರರ ಕಾಟ ವಿಪರೀತ. ಯಾರನ್ನೂ ಒಳ ಬಿಡಬಾರದೆಂದು ನೌಕರರಿಗೆ ಕಟ್ಟಪ್ಪಣೆ ಜಾರಿಯಾಗಿತ್ತು. ಆದರೆ ಇವರು ಹೊರ ಹೋಗದೇ ಮನೆಯಲ್ಲಿ ಕುಳಿತುಕೊಂಡ ಮಾತ್ರಕ್ಕೆ ಸಾಲಗಾರರು ಸುಮ್ಮನೆ ಬಿಟ್ಟಾರೇ? ಜಂಗಮವಾಣಿ ಬೆಳಗ್ಗಿನಿಂದ ಬಿಡುವಿಲ್ಲದೇ ಬಡಿದುಕೊಳ್ಳುತ್ತಿತ್ತು. ಮಾತನಾಡಿ, ಸಮಜಾಯಿಷಿ ನೀಡಿ ಸಾಕಾಗಿ ಮಧ್ಯಾಹ್ನಕ್ಕೆ ಅದನ್ನೂ ಸ್ಥಗಿತಗೊಳಿಸಿದ್ದಾಗಿತ್ತು.
ಮಧ್ಯಾಹ್ನದಿಂದ ಒಂದೇ ಸಮನೆ ಪೆಗ್ ಮೇಲೆ ಪೆಗ್ ಏರಿಸಿ ಸ್ಥಿಮಿತ ಕಳೆದುಕೊಂಡು ಬಾಯಿಗೆ ಬಂದಂತೆ ಒದರಾಡುತ್ತಿದ್ದರು ಸತ್ಯಂ ರಾವ್. ಮಾಲಿನಿಯವರೂ ರಂಗಾಗಿದ್ದರೂ ಹಿಡಿತ ತಪ್ಪಿರಲಿಲ್ಲ. ಹಾಗಂತ ಯಾವಾಗಲೂ ಆಕೆ ಕಡಿಮೆ ಕುಡಿಯುತ್ತಾಳೆಂದಲ್ಲ. ಗಂಡನಿಗಿಂತ ತಾನೇನೂ ಕಡಿಮೆ ಇಲ್ಲವೆಂಬಂತೆ, ಸ್ಪರ್ಧೆ ನೀಡುವಂತೆ ಕುಡಿಯುತ್ತಾರೆ ಆಕೆ. ಎಷ್ಟೆಂದರೂ ಗಂಡು ಹೆಣ್ಣು ಸಮಾನರಲ್ಲವೇ. ಅದರಲ್ಲೂ ಮಾಲಿನಿ ಸಾಮಾನ್ಯದವರಲ್ಲ. ಆಕೆ ಈ ಶತಮಾನದ ಮಾದರಿ ಹೆಣ್ಣು, ಮಹಿಳಾ ಸಬಲೀಕರಣದ ಹರಿಕಾರ್ತಿ, ಬಡ ಹಾಗೂ ಅನಾಥ ಮಕ್ಕಳ ಮಾತೆ, ಗಂಡಸಿನಿಂದ ಶೋಷಣೆಗೊಳಗಾದ ಹೆಂಗಸರ ಧ್ವನಿ......
ಇದನ್ನೆಲ್ಲ ಕೇಳಿದವರು ಹೇಳಬಹುದು. ಸಮನ್ವಿತಾಳೂ ಅವಳಮ್ಮನಂತೆಯೇ ಆದರ್ಶವಾದಿ ಎಂದು.
ಭಾಗಶಃ ನಿಜವೇ.... ಆದರೆ ಅರ್ಧಸತ್ಯ.....
ಮಾಲಿನಿ ತಾವು ಹೀಗೆಲ್ಲಾ ಸಮಾಜಸೇವೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು, ಪೇಪರಿನಲ್ಲಿ ಫೋಟೋ ಹಾಕಿಸಿ, ಪ್ರಚಾರ ಪಡೆದು, ಕಾರಿನಲ್ಲಿ ತಿರುಗುತ್ತಾರೆ. ಆದರೆ ಸಮನ್ವಿತಾ ಅಗತ್ಯವುಳ್ಳವರಿಗೆ ಸಹಾಯ ಮಾಡುತ್ತಾಳಷ್ಟೇ. ಹೇಳಿಕೊಳ್ಳುವುದಿಲ್ಲ. ಅವಳಿಗೆ ಪ್ರಚಾರದ ಹಂಗಿಲ್ಲ.
ಇಂತಹ ಮಾಲಿನಿ ಇಂದು ತಮ್ಮ ಸಧ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಚಿಂತಿತರಾಗಿದ್ದರು. ನೀರಿನಂತೆ ಹಣ ಖರ್ಚು ಮಾಡುತ್ತಿದ್ದವರು….... ಈಗ ಕೈ ಹಿಡಿತ ಮಾಡುವುದೆಂದರೆ ಸಾಧ್ಯವಿಲ್ಲದ ಮಾತು. ಅದೇ ಯೋಚನೆಯಲ್ಲೇ ಕಡಿಮೆ ಕುಡಿದಿದ್ದರಷ್ಟೇ.
ಅಂಕೆ ಮೀರಿ ಕುಡಿಯುತ್ತಿರುವ ಗಂಡನನ್ನು ಕಂಡು ಗಾಬರಿ ಬಿದ್ದವರು, "ಸತ್ಯಂ, ಜಸ್ಟ್ ಸ್ಟಾಪ್. ಆಲ್ರೆಡಿ ನೀನು ಕುಡಿದದ್ದು ವಿಪರೀತವಾಗಿದೆ" ಎಂದು ಅವರ ಕೈಯಿಂದ ಗ್ಲಾಸ್ ತೆಗೆದುಕೊಳ್ಳಲು ಹೋದರು. ಸಿಟ್ಟಿನಿಂದ ಹೆಂಡತಿಯನ್ನು ದೂಡಿ ತೂರಾಡುತ್ತಾ ಎದ್ದು ನಿಂತರು...
"ಯು ಬ್ಲಡೀ ಬಿಚ್. ಆಹಾ....ಹಾ.. ಅದೆಂ...ಎಂತಾ ಮಗ... ಮಗಳನ್ನು ಹೆತ್ತು ಬಿಟ್ಯೇ? ಯಾವಾ...ಗ ನೋಡಿದ್ರೂ ನನ್ನ ಮೇಲೆ ಕತ್ತಿ ಮಸೀ..ತಾ ಇರ್ತಾಳೆ.... ನಾನೇ... ನ್ ಬೀದಿ ಭಿಕ್... ಬೀದಿ ಭಿಕಾರಿ ಜೊತೆಗಾ ಮದ್ವೇ ಮಾಡ್ಸ್... ಅವ...ನು... ನಮಗಿನ ಶ್ರೀ.... ಶ್ರೀಮಂತ..ಏನೋ ಅವಳ್...ಗೆ ಹೇಳ್ದೇ ಮಾ....ಡಿ..ದ್ವಿ.... ಅದ್...ಕೇ ಏ...ನೋ ದೊಡ್ಡ ಅ....ನ್ಯಾಯ ಮಾಡಿರೋ ತರ್... ತರಾ ನಮಗೆ ಹೇಗೆ ಉಲ್.... ಉಲ್ಟಾ ಮಾತಾ...ಡೀ ಹೋದ್ಲು.... ನೋಡೂ..ಸಂ ಸಂ...ಬಂ.ಧ ಇಲ್ವಂತೆ ಅದ್ಏನೋ ಸಂಬಂಧ ಕಡ್..ಕೋತಾಳಂ..ತೆ ಮೈ ಫು...ಟ್....." ಬಾಯಿಂದ ಪದಗಳು ತೊದಲಾಗಿ ಹೊರಳಿ ಹೊರಳಿ ಬಂದವು.
"ಜಸ್ಟ್ ಶಟ್ ಅಪ್. ಹೀಗೆ ಕುಡ್ಯೋದು ಬಿಟ್ಟು ಸ್ವಲ್ಪ ಮುಂದೇನು ಮಾಡೋದು ಅಂತ ಯೋಚನೆ ಮಾಡು. ವಿ ಆರ್ ಸಿಂಕಿಂಗ್ ಸತ್ಯಂ. ಹೀಗೇ ಆದ್ರೆ ಇನ್ನೊಂದೆರಡು ತಿಂಗಳಲ್ಲಿ ನಾವು ಬ್ಯಾಂಕ್ರಪ್ಟ್ ಆಗ್ತೀವಿ. ಏನು ಮಾಡ್ತೀಯ ನೋಡು" ಪರಿಸ್ಥಿತಿ ಅರ್ಥೈಸಲು ಪ್ರಯತ್ನಿಸಿದರು ಮಾಲಿನಿ.
ಆದರೆ ಮದಿರಾ ಲೋಕದಲ್ಲಿ ತೇಲುತ್ತಿದ್ದ ರಾವ್ ಅವರಿಗೆ ಹೆಂಡತಿಯ ಮಾತುಗಳು ಕೇಳಬೇಕಲ್ಲ. ಅವರ ಬಾಯಿಂದ ಪುಂಖಾನುಪುಂಖವಾಗಿ ಅಶ್ಲೀಲ ಪದಪುಂಜಗಳು ಹೊರಬೀಳತೊಡಗಿದಾಗ ಬಾತ್ ರೂಮಿಗೆ ಎಳೆದೊಯ್ದು ತಲೆಯ ಮೇಲೆ ನಾಲ್ಕು ಬಕೆಟ್ ತಣ್ಣೀರು ಸುರಿದರು.
ತಲೆ ಮೇಲೆ ತಣ್ಣೀರು ಬಿದ್ದಂತೆ ನಶೆ ಇಳಿಯತೊಡಗಿತು. ಸಿಟ್ಟು ನೆತ್ತಿಗೇರಿ ಹೆಂಡತಿಗೆ ಬಾರಿಸಲು ಕೈಯೆತ್ತಿದರು. ಅಷ್ಟೇ…… ಮಾಲಿನಿಯ ಉರಿನೋಟ ಕಂಡು ಕೈ ಇಳಿಯಿತು.
"ಮಿಸ್ಟರ್ ಸತ್ಯಂ ರಾವ್…. ಹೌ ಡೇರ್ ಟು ಕಾಲ್ ಮೀ ಅ ಬಿಚ್? ನಿನ್ನ ಬಿಸ್ನೆಸ್ ಆಲ್ಮೋಸ್ಟ್ ಮುಳುಗಿದೆ. ಹೇಗೆ ಸರಿಮಾಡ್ತಿಯೋ ನೋಡು. ಆಗ್ಲಿಲ್ಲ ಅಂದ್ರೆ ಇನ್ನೊಂದು ಲೋನ್ ತಗೊಂಡು ನನಗೆ ಡಿವೋರ್ಸ್ ಅಲ್ಮೋನಿ ಅಮೌಂಟ್ ಕೊಡೋಕೆ ರೆಡಿಯಾಗು. ಗಾಟ್ ಇಟ್?" ದಬಾಯಿಸಿದಾಗ ಅಳಿದುಳಿದ ನಶೆಯೆಲ್ಲಾ ದಿಕ್ಕಾಪಾಲು. ಇವಳು ಹೇಳಿದ್ದನ್ನು ಮಾಡುವವಳೇ…... ತಾನೇ ರೋಡಲ್ಲಿ ನಿಂತಿರುವಾಗ ಇವಳಿಗೆ ವಿಚ್ಚೇದನ ಪರಿಹಾರ ಎಲ್ಲಿಂದ ಕೊಡಲೀ? ಸತ್ಯಂ ರಾವ್ ಅವರ ತಲೆ ಕಾದ ಕಾವಲಿಯಾಗಿತ್ತು.
ಅಷ್ಟರಲ್ಲಿ ಸರ್ವೆಂಟ್ ಕಾರ್ಡ್ ಲೆಸ್ ಫೋನ್ ಹಿಡಿದು ಬಂದ. ಫೋನ್ ಕಾಟ ಬೇಡವೆಂದು ಮೊಬೈಲ್ ಸ್ವಿಚ್ ಆಫ್ ಮಾಡಿರುವಾಗ ಕಾರ್ಡ್ ಲೆಸ್ ಹಿಡಿದು ಬಂದವನನ್ನು ನೋಡಿ ವಾಚಾಮಗೋಚರವಾಗಿ ಬೈಯತೊಡಗಿದರು.
"ಸಾರಿ ಸರ್……. ಅದು….... ಪೀಟರ್ ಸರ್ ಫೋನ್ ಮಾಡಿದ್ದು. ತುಂಬಾ ಇಂಪಾರ್ಟೆಂಟ್. ನಿಮ್ಹತ್ರ ಮಾತಾಡ್ಲೇ ಬೇಕು ಅಂದ್ರು" ನಡುಗುತ್ತಲೇ ನುಡಿದವನ ಕೈಯಿಂದ ಫೋನ್ ಕಿತ್ತುಕೊಂಡರು. "ಗೆಟ್ ಔಟ್" ಅರಚಿದಾಗ ಇವತ್ತು ಬೆಳಿಗ್ಗೆ ಯಾರ ಮುಖ ನೋಡಿದ್ನೋ ಎಂದು ಶಪಿಸಿಕೊಳ್ಳುತ್ತಾ ನಡೆದ ಸರ್ವೆಂಟ್...
ಸಿಟ್ಟಿನಿಂದಲೇ ಫೋನಲ್ಲಿ ಮಾತಿಗಾರಂಭಿಸಿದವರು ಮಾತುಕತೆ ಮುಂದುವರೆದಂತೆ ಶಾಂತರಾದರು. ಮುಖದಲ್ಲಿ ಕೃತ್ರಿಮ ನಗುವೊಂದು ಹರಡತೊಡಗಿತು. ಪೀಟರ್ ಹೇಳಿದ ವಿಷಯವೇ ಅಂತಹದ್ದಾಗಿತ್ತು. ಪೀಟರ್ ರಾವ್ ಅವರ ನಂಬಿಕಸ್ಥ ಬಂಟ. ಹಣಕ್ಕಾಗಿ ಏನು ಮಾಡಲೂ ತಯಾರು. ವಿಷಯ ತಿಳಿದ ನಂತರ ಜಗಳವಾಡಿ ಹೊರಟ ಮಗಳ ಮುಂದಿನ ನಡೆಯ ಬಗ್ಗೆ ತಿಳಿಯಲು ಪೀಟರ್ ನನ್ನು ನಿಯೋಜಿಸಿದ್ದರು ರಾವ್. ಆ ಬಗ್ಗೆ ತಿಳಿಸಲು ಫೋನ್ ಮಾಡಿದ್ದ ಪೀಟರ್. ಅವನಿಂದ ಸಮನ್ವಿತಾ ಆಸ್ಪತ್ರೆ ಸೇರಿದ ಬಗ್ಗೆ, ಅಲ್ಲಿ ಅಭಿರಾಮ್ ಅವಳನ್ನು ಭೇಟಿಯಾದ ಬಗ್ಗೆ ತಿಳಿದವರಿಗೆ ಹೋದ ಜೀವ ಮತ್ತೆ ಬಂದಂತಾಯಿತು. ಮಗಳು ಎಲ್ಲಾ ವಿಚಾರವನ್ನು ಶರ್ಮಾ ಅವರಿಗೆ ಹೇಳಿ ಮದುವೆ ಪ್ರಸ್ತಾಪವನ್ನು ಮುರಿಯುತ್ತಾಳೆ ಎಂದುಕೊಂಡಿದ್ದವರಿಗೆ, ಅಭಿರಾಮ್ ಆಸ್ಪತ್ರೆಗೆ ಬಂದಿದ್ದು ತಿಳಿದು ಹಾಲು ಕುಡಿದಷ್ಟು ಸಂತೋಷವಾಗಿತ್ತು. 'ಅಂದರೆ ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ. ಬಹುಶಃ ಅವಳು ಈ ವಿಚಾರವನ್ನು ಅವರಿಗೆ ಹೇಳಿಲ್ಲ. ಒಳ್ಳೆಯದಾಯಿತು. ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು' ಎಂದು ನಿರ್ಧರಿಸಿಬಿಟ್ಟರು.
ಫೋನಿಟ್ಟವರು ಹೆಂಡತಿಯತ್ತ ತಿರುಗಿ ವಿಜಯದ ನಗೆ ನಕ್ಕರು. ಗಂಡನಿಂದ ಎಲ್ಲಾ ವಿಚಾರ ತಿಳಿದ ಮಾಲಿನಿಯೂ ಸಮಾಧಾನಗೊಂಡರು. ಇಬ್ಬರೂ ಕುಳಿತು ಮುಂದಿನ ನಡೆಯ ಬಗ್ಗೆ ಚರ್ಚಿಸಿದರು. ಹೇಗಾದರೂ ಆದಷ್ಟು ಬೇಗ ಈ ಮದುವೆ ಮಾಡಿ ಮುಗಿಸುವ ದಿಕ್ಕಿನಲ್ಲಿ ಯೋಜನೆಗಳನ್ನು ರೂಪಿಸತೊಡಗಿದರು. ನಾಳೆಯೇ ಆಸ್ಪತ್ರೆಗೆ ಹೋಗಿ ಮಗಳನ್ನು ಮನೆಗೆ ಕರೆದುಕೊಂಡು ಬರುವುದೆಂದು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನವಾಯಿತು....
ಅವರ ಮನದಲ್ಲಿ ಆಸ್ಪತ್ರೆಯಲ್ಲಿ ಅಭಿರಾಮ್ ಸಮನ್ವಿತಾಳನ್ನು ಭೇಟಿಯಾಗಿದ್ದಾನೆ, ನಮ್ಮ ಪ್ಲಾನ್ ಈಗಲೂ ಕೆಲಸಮಾಡುತ್ತಿದೆ ಎಂಬ ಖುಷಿಯಿತ್ತೇ ಹೊರತು, ಮಗಳು ಆಸ್ಪತ್ರೆ ಸೇರಿದ್ದಾಳೆಂಬ ಬೇಸರ, ಯಾಕೆ ಆಸ್ಪತ್ರೆಗೆ ಸೇರಿದಳೆಂಬ ಕಳವಳ, ಈಗ ಹೇಗಿರುವಳೋ ಎಂಬ ಕಾಳಜಿಯ ಲವಲೇಶವೂ ಇರಲಿಲ್ಲ.....!
*****************************
ಆಸ್ಪತ್ರೆಯ ಕಿಟಕಿಯಿಂದ ಒಳಬರುತ್ತಿದ್ದ ಸೂರ್ಯನ ಕಿರಣಗಳು ಮೊಗವನ್ನು ಸವರತೊಡಗಿದಾಗ ನಿಧಾನವಾಗಿ ಕಣ್ತೆರೆದಳು ಸಮನ್ವಿತಾ. ಪೂರ್ಣ ಬೆಳಕಾಗಿತ್ತು. ಇಷ್ಟು ಹೊತ್ತು ಮಲಗಿದೆನಾ? ಆಶ್ಚರ್ಯವೆನಿಸಿತು ಅವಳಿಗೆ. ಇಷ್ಟು ಸೊಂಪಾದ ನಿದಿರೆ ಎಂದೂ ಮಾಡಿರಲಿಲ್ಲವೇನೋ ಅವಳು. ಮೈ ಮನಸ್ಸು ಹಗುರಾಗಿತ್ತು. ಅದೇನೋ ಉಲ್ಲಾಸ. ತಿಳಿನಗುವೊಂದು ಕಾರಣವಿಲ್ಲದೇ ತುಟಿಯಂಚನ್ನು ಸವರಿ ಹೋಯಿತು. ಡ್ರಿಪ್ಸ್ ಹಾಕಿದ್ದ ಎಡಗೈ ನಿಧಾನವಾಗಿ ಆಡಿಸಿದಳು. ನಿನ್ನೆಯಂತೆ ನೋವಿರಲಿಲ್ಲ. ಇವತ್ತು ಹೇಗಾದರೂ ಡಿಸ್ಚಾರ್ಜ್ ಮಾಡಿಸಿಕೊಳ್ಳಲೇಬೇಕು ಎಂದುಕೊಂಡವಳಿಗೆ ನಗು ಬಂದಿತು. ಅದೇ ಸಮಯಕ್ಕೆ ಕಿಶೋರ್ ಕಾಫಿ ಫ್ಲಾಸ್ಕ್ ಹಿಡಿದು ಒಳಬಂದಿದ್ದ.
"ಓಹೋ ಏನಮ್ಮಾ? ನಿನ್ನೆಯಿಂದ ಈ ಮುಖದ ನಗು ತುಂಬಾ ಜಾಸ್ತಿಯಾಗಿದೆ. ಈ ಕಿರು ನಗೆಯ ಹಿಂದಿನ ಕಾರಣವೇನೋ?"
"ಏನಿಲ್ಲಾ ಕಿಶೋರ್, ಯಾವಾಗ್ಲೂ ಪೇಷೆಂಟ್ಸ್ 'ಡಾಕ್ಟ್ರೇ ಆದಷ್ಟು ಬೇಗ ಡಿಸ್ಚಾರ್ಜ್ ಮಾಡಿ' ಅಂತ ಗೋಗರೆದಾಗ ಅವರ ಕಷ್ಟ ಏನು ಅಂತ ಗೊತ್ತಾಗ್ತಿರ್ಲಿಲ್ಲ. ಈಗ ನಾನೇ ಪೇಷೆಂಟ್. ಒಂದ್ಸಲ ಇಲ್ಲಿಂದ ಡಿಸ್ಚಾರ್ಜ್ ಆಗಿ ಹೋದ್ರೆ ಸಾಕು ಅನ್ನಿಸ್ತಿದೆ. 'ಮೀರಾ ಮೇಡಂ ಕಾಲ್ಹಿಡಿದಾದ್ರೂ ಡಿಸ್ಚಾರ್ಜ್ ಮಾಡ್ಸಿಕೋಬೇಕು' ಅಂದುಕೊಂಡೆ. ಅದನ್ನೇ ನೆನೆಸಿ ನಗುಬಂತು" ಮತ್ತೆ ನಕ್ಕಳು.
"ಅದು ನಿಜ ಬಿಡು. ಆದ್ರೂ ನೀನಿವತ್ತು ಬಹಳ ಖುಷಿಯಾಗಿದ್ದೀಯ. ಇಷ್ಟು ವರ್ಷಗಳಲ್ಲಿ ನೀನು ಇಷ್ಟು ಸಂತೋಷವಾಗಿದ್ದಿದ್ದನ್ನ ನಾನ್ಯಾವತ್ತೂ ನೋಡಿಲ್ಲ. ಈ ಖುಷಿಗೆ ಕಾರಣ ಯಾರು?" ಛೇಡಿಸಿದ.
"ನಾನು ಯಾವತ್ತಿನ ಹಾಗೆಯೇ ಇದ್ದೀನಿ. ನಿನಗೇ ಏನೋ ಆಗಿದೆ" ಮುಖ ಊದಿಸಿ ನುಡಿದಳು.
"ನನಗೇನೂ ಆಗಿಲ್ಲ. ಆದ್ರೆ ನಿಂಗೆ ತುಂಬಾ ಖುಷಿಯಾಗಿದೆ. ಆ ಖುಷಿ ಈ ಚೆಂದದ ಮುಖದ ತುಂಬಾ ಹರಡಿದೆ. ಹಾಗೇ ಈ ಖುಷಿಗೆ ಕಾರಣ ಏನು ಅಂತಾನೂ ನಂಗೊತ್ತು….... ಹೇಳ್ಲಾ? ಈ ಖುಷಿಗೆ ಕಾರಣ ಅಭಿರಾಮ್........ ರೈಟ್?"
"ಬೇಡ ಕಿಶೋರ್ ನಂಗೆ ಸಿಟ್ಟು ಬರಿಸಬೇಡ. ಗಂಡ ಹೆಂಡತಿ ಇಬ್ರೂ ಸರಿ ಇದ್ದೀರಾ. ಹೋಗು ಮಾತಾಡಲ್ಲ ನಿನ್ನ ಹತ್ರ ನಾನು" ಮುಖ ತಿರುಗಿಸಿದಳು ತನ್ನ ಮುಖದ ಕೆಂಪನ್ನು ಅವನಿಂದ ಮರೆಮಾಚಲು. ಪಕ್ಕದ ಬೆಡ್ಡಿನಲ್ಲಿ ಮಲಗಿದ್ದ ನವ್ಯಾ ಕಣ್ಣಿಗೆ ಬಿದ್ದಾಗ ಅಚ್ಚರಿಯಾಯಿತು.
"ಅರೇ, ಇದೇನು ಇವ್ಳಿನ್ನೂ ಎದ್ದಿಲ್ಲ? ಇಷ್ಟೊತ್ತು ಮಲಗೋದಿಲ್ವಲ್ಲ ಇವ್ಳು. ಹುಷಾರಾಗಿಲ್ವೇನೋ?" ಕೇಳಿದಳು ಗಾಬರಿಯಲ್ಲಿ.
"ಆರಾಮಾಗಿದ್ದಾಳೆ. ರಾತ್ರಿ ಮಲಗಿದ್ದು ಲೇಟಾಗಿತ್ತಲ್ವ. ಹಾಗಾಗಿ. ಇನ್ನು ಸ್ವಲ್ಪ ಹೊತ್ತು ಮಲಗಿರ್ಲಿ ಅಂತ ಎಬ್ಬಿಸಲಿಲ್ಲ ನಾನು" ಕಾಫಿ ಕಪ್ ಅವಳ ಕೈಗಿಡುತ್ತಾ ನುಡಿದ. ಆದರೆ ಅವಳು ಕಪ್ ತೆಗೆದುಕೊಳ್ಳಲಿಲ್ಲ. ಅವಳ ಗಮನವೆಲ್ಲಾ ನವ್ಯಾಳ ಮೇಲೆಯೇ ಕೇಂದ್ರೀಕೃತವಾಗಿತ್ತು.
"ಏಯ್, ಏನು ನೋಡ್ತಿದ್ದೀ? ಕಾಫಿ ತಗೋಳೇ."
"ಕಿಶೋರ್, ನವ್ಯಾನ ನೋಡು" ಅವಳ ಗಾಬರಿಯ ದನಿ ಕೇಳಿ ಮಡದಿಯತ್ತ ತಿರುಗಿದ. ನವ್ಯಾ ನಿದ್ರೆಯಲ್ಲೇ ಚಡಪಡಿಸುತ್ತಿದ್ದಳು. ವಿಪರೀತ ಭಯಗೊಂಡವಳಂತೆ ಕಂಡಳು. ಕಿಶೋರ್ ಅವಳನ್ನು ಹಿಡಿದು ಅಲುಗಿಸಿದ. ತಟ್ಟನೆ ಎದ್ದು ಕುಳಿತವಳ ಮುಖ ಮೈಯೆಲ್ಲಾ ಬೆವರಿನಿಂದ ತೋಯ್ದು ಹೋಗಿತ್ತು.
ಮತ್ತದೇ ಕನಸು....
ಅವಳಿಗೆ ಇತ್ತೀಚಿಗೆ ಯಾಕಾದರೂ ನಿದ್ರೆ ಬರುತ್ತದೇನೋ ಅನಿಸಿಬಿಟ್ಟಿತ್ತು. ಅವಳ ಮನದ ಅವ್ಯಕ್ತ ಭಯ ಕನಸಿನಲ್ಲೂ ಕಾಡಲು ಶುರುವಿಟ್ಟಿತ್ತು. ಬದುಕೇ ದುರ್ಭರ ಎನಿಸತೊಡಗಿತ್ತು. ಅತ್ತೆ ಮಾವ ಮನೆಗೆ ಬಂದೊಡನೆ ನನ್ನ ಅತೀತದ ಬಗ್ಗೆ ಪ್ರಶ್ನಿಸುತ್ತಾರೆಂಬ ಅನುಮಾನ ಅವಳನ್ನು ಇಂಚಿಂಚಾಗಿ ಕೊಲ್ಲತೊಡಗಿತ್ತು.
"ನವ್ಯಾ, ಯಾಕಿಷ್ಟು ಹೆದರಿದ್ದೀ? ಏನಾಯ್ತು?" ಸಮನ್ವಿತಾ ಇನ್ನೂ ಗಾಬರಿಯಲ್ಲೇ ಇದ್ದಳು.
"ಏನಾಯ್ತು ನವ್ಯಾ? ಮತ್ತೆ ಕೆಟ್ಟ ಕನಸಾ?" ಅವಳ ಕೈ ಹಿಡಿದು ಮೃದುವಾಗಿ ಕೇಳಿದ. ಹೌದೆಂದು ತಲೆಯಾಡಿಸಿದವಳ ಮುಖ ಬಿಳುಚಿಕೊಂಡಿತ್ತು.
"ಕನಸಾ? ಏನು ಕನಸು?" ವಿಷಯ ತಿಳಿಯುವ ಕಾತರ ಸಮನ್ವಿತಾಳಿಗೆ.
"ಏನಿಲ್ಲಾ ಸಮಾ, ಏನೋ ಕೆಟ್ಟ ಕನಸಷ್ಟೇ. ನೀನು ಹೇಗಿದ್ದೀ? ಕೈ ಬಾತಿರೋದು ಕಡಿಮೆ ಆಗಿದೆ. ನೋವಿದ್ಯಾ?" ಮಾತು ಬದಲಾಯಿಸಿಬಿಟ್ಟಳು ನವ್ಯಾ. ಈಗ ಆ ಬಗ್ಗೆ ಮಾತು ಬೇಕಿರಲಿಲ್ಲ ಅವಳಿಗೆ.
"ಏನೋ ನನ್ನಿಂದ ಮುಚ್ಚಿಡ್ತಿದ್ದೀಯಾ. ಏನದು?" ಅವಳು ಸುಲಭವಾಗಿ ಪಟ್ಟು ಸಡಿಲಿಸಲಿಲ್ಲ.
"ಏನೋ ಅರ್ಥ ಇಲ್ಲದ ಕೆಟ್ಟ ಕನಸು ಕಣೇ. ನಂಗೇ ನೆನಪಾಗ್ತಿಲ್ಲ ಸರಿಯಾಗಿ. ಅಷ್ಟೇ. ಈಗ ಸುಮ್ನೆ ಕಾಫಿ ಕುಡಿ ತಗೋ" ಅವಳ ಬಾಯಿ ಮುಚ್ಚಿಸಿದಳು. 'ಇದು ನಿಜವೇ' ಕೇಳಿತು ಕಿಶೋರ್ ನೋಟ. ಅವನ ನೋಟ ತಪ್ಪಿಸಿ ಬಾತ್ ರೂಮಿನತ್ತ ನಡೆದಳು.
"ನಿಜ ಹೇಳು ಕಿಶೋರ್, ಏನಾಗಿದೆ ಇವಳಿಗೆ?" ಅವನೇನಾದರೂ ಹೇಳುವ ಮುನ್ನವೇ ಮೃದುಲಾ, ಆಕೃತಿ ಒಳ ಬಂದಿದ್ದರಿಂದ ಆ ಮಾತುಕತೆ ಅಲ್ಲಿಗೆ ನಿಂತಿತು.
"ಅಂತೂ ಎಚ್ಚರ ಆಯ್ತಲ್ಲ. ನಿನ್ನೆ ಬಂದಾಗ ಪ್ರಜ್ಞೆಯೇ ಇರಲಿಲ್ಲ. ಈಗ ಹೇಗಿದ್ದೀಯಾ ಪುಟ್ಟ? ಜ್ವರ ಕಡಿಮೆ ಆಯ್ತಾ? ಕೈ ನೋವಿದ್ಯಾ?" ಮೃದುಲಾರ ಅಕ್ಕರೆಯ ಮಾತುಗಳು ಅವಳ ಬೆಂದ ಮನಸ್ಸಿಗೆ ಅಮೃತ ಸಿಂಚನದಂತಿತ್ತು. ಬುದ್ದಿ ಬಂದಲ್ಲಿನಿಂದ ಅವಳು ಮನದಲ್ಲಿ ಚಿತ್ರಿಸಿದ್ದ ಅಮ್ಮನ ರೂಪ ಮೃದುಲಾರಲ್ಲಿ ಕಾಣುತ್ತಿತ್ತು ಅವಳಿಗೆ. ಮೊದಲ ಬಾರಿಗೆ ಅವರನ್ನು ಕಂಡಾಗ ಅವಳ ಕಲ್ಪನೆಯ ಅಮ್ಮ ಜೀವತಳೆದು ಕಣ್ಮುಂದೆ ನಿಂತಂತೆ ಭಾಸವಾಗಿತ್ತು. ತನ್ನವರ ನಡುವಿರುವೆನೆಂಬ ಅರಿಯದ ತನ್ನತನದ ಸುರಕ್ಷಿತ ಭಾವ. ಅದಕ್ಕೇ ಪ್ರಾಯಶಃ ಅವಳು ಶರ್ಮಾ ಪರಿವಾರದೊಂದಿಗೆ ಅಷ್ಟು ಆತ್ಮೀಯವಾಗಿ ಬೆರೆತದ್ದು.
ಅನಾಯಾಸವಾಗಿ ನಗುವರಳಿತು ಅವಳ ಮುಖದ ಮೇಲೆ. "ಈಗ ಆರಾಮಾಗಿದ್ದೀನಿ. ಮೀರಾ ಮೇಡಂ ಹೂಂ ಅಂದ್ರೆ ಇವಾಗ್ಲೇ ಡಿಸ್ಚಾರ್ಜ್ ಆಗೋಕೂ ರೆಡಿ" ಎಂದಳು.
"ಹೂಂ, ಬಿಟ್ರೆ ಈಗ್ಲೇ ಡ್ರಿಪ್ಸ್ ಕಿತ್ತುಹಾಕಿ ಆಪರೇಶನ್ ಮಾಡೋಕೂ ರೆಡೀನೇ…....." ಕಿಶೋರ್ ತಮಾಷೆಯಾಗಿ ಹೇಳಿದ. ಅಷ್ಟರಲ್ಲಿ ಬಾತ್ ರೂಮಿನಿಂದ ನವ್ಯಾಳೂ ಹೊರಬಂದಳು. ಮೃದುಲಾ, ಆಕೃತಿಯೊಂದಿಗೆ ಉಭಯ ಕುಶಲೋಪರಿ ವಿಚಾರಿಸುತ್ತಾ ಕಾಫಿ ಕೊಟ್ಟು ತಾನೊಂದು ಕಪ್ ಹಿಡಿದಳು. ಇವರು ಕಾಫಿ ಕುಡಿಯುವಾಗ ಸಚ್ಚಿದಾನಂದ್ ಟಿಫಿನ್ ಕ್ಯಾರಿಯರ್ ಹಿಡಿದು ಒಳಬಂದರು. ಹಿಂದೆಯೇ ಅಭಿರಾಮ್…....
"ಅಮ್ಮ, ಮಗಳು ಏನು ನನ್ನ ಮತ್ತೆ ಡ್ಯಾಡಿನ ಸರ್ವೆಂಟ್ ಅಂದ್ಕೊಂಡಿದ್ದೀರಾ ಹೇಗೆ? ಅಲ್ಲಾ ಕಾರಿಳಿದವರೆ ಓಡ್ಕೊಂಡು ಬಂದು ಇಲ್ಲಿ ಕಾಫಿ ಕುಡಿತಾ ಕೂತಿದ್ದೀರಲ್ಲಾ, ಕರ್ಟೆಸಿಗಾದ್ರೂ ಟಿಫಿನ್ ಬಾಕ್ಸ್ ತಗೊಂಡು ಹೋಗ್ಬೇಕಾ ಅಂತ ಒಂದು ಮಾತು ಕೇಳಿದ್ರಾ? ಥೂ ಎಂತಾ ಲೈಫಪ್ಪಾ ನಮ್ಮದು. ನಾನೊಬ್ಬ ಡ್ರೈವರ್, ಡ್ಯಾಡ್ ಒಬ್ಬ ಸರ್ವೆಂಟ್…..... ಸಾಕಾಗೋಗಿದೆ. ಜೀವನದಲ್ಲಿ ಜೀಗುಜ್ಜೆ ಬಂದಿದೆ ನಂಗಂತು" ಪೆಚ್ಚು ಮೋರೆ ಹಾಕಿ ನುಡಿದ.
"ಜೀಗುಜ್ಜೆ ಬಂದಿದ್ರೆ ಅದ್ರಲ್ಲಿ ಬೋಂಡಾ ಮಾಡ್ಕೊಂಡು ತಿನ್ನು" ಅಣಕಿಸಿದಳು ಆಕೃತಿ.
"ಅಯ್ಯೋ, ನೋಡು.... ನಿನ್ನ ನೋಡೋ ಆತುರದಲ್ಲಿ ಟಿಫಿನ್ ಕ್ಯಾರಿಯರ್ ಮರ್ತೇ ಬಿಟ್ಟಿದ್ದೆ" ತಮ್ಮ ಮರೆವನ್ನು ಶಪಿಸಿಕೊಂಡವರು, "ಏನ್ರೀ? ಈ ಕ್ಯಾರಿಯರ್ ತರೋಕೆ ಆಗ್ದೇ ಇರೋವಷ್ಟು ನಿಶ್ಯಕ್ತಿ ಆಗಿದ್ಯಾ ನಿಮಗೆ? ಹಾಗಿದ್ರೆ ಇರಿ. ಹೇಗೂ ಪಕ್ಕದ ಬೆಡ್ ಖಾಲಿ ಇದೆ. ನಿಮಗೂ ಡ್ರಿಪ್ಸ್ ಹಾಕ್ಸಿಬಿಡೋಣ" ತೀರ್ಮಾನಿಸಿ ಹೇಳಿದರು ಮೃದುಲಾ.
"ನಾನೇನಾದ್ರೂ ಮಾತಾಡಿದ್ನಾ ಈಗ. ಈ ಸಂಸಾರದ ಭಾರನೇ ಹೊರ್ತಿದ್ದೀನೀ ಇನ್ನು ಈ ಟಿಫಿನ್ ಬಾಕ್ಸ್ ಯಾವ ಲೆಕ್ಕ. ನಿನ್ನ ಮಗನದೇ ರೋಧನೆ, ವೇದನೆ ಎಲ್ಲಾ. ಅವನನ್ನೇ ಕೇಳು" ಅವನ ಮೇಲೆ ಎತ್ತಾಕಿದವರು, "ಹೇಗಿದ್ದೀ ಮಗಳೇ?" ಎಂದು ಸಮನ್ವಿತಾಳ ಆರೋಗ್ಯ ವಿಚಾರಣೆಯಲ್ಲಿ ತೊಡಗಿದರು.
"ಡ್ಯಾಡ್? ಏನೋ ಪಾಪ ಹೆಲ್ಪ್ ಮಾಡೋಣ ಅಂತ ಬಂದ್ರೆ ನನಗೇ ಕೈ ಕೊಟ್ರಲ್ಲ. ಈ ಹಾಳು ರಾಜಕೀಯ ನೋಡಿ ನೋಡಿ ಎಲ್ಲಾ ಪಕ್ಷಾಂತರಿಗಳಾಗ್ಬಿಟ್ರಿ. ಇರ್ಲಿ ಇರ್ಲೀ.... ಅಪ್ನಾ ಟೈಂ ಆಯೇಗಾ...." ಗೊಣಗಿದವನನ್ನು ನೋಡಿ ಎಲ್ಲರೂ ನಕ್ಕರು.
"ಓಹ್, ಪರವಾಗಿಲ್ಲ ಡಾಕ್ಟ್ರಿಗೆ ನಗೋಕು ಬರುತ್ತೆ. ನಾನೇನೋ ಬರೀ ಮೇಧಾವಿ, ತತ್ವಜ್ಞಾನಿಗಳ ರೀತಿ ಯೋಚ್ಸೋಕೆ ಮಾತ್ರ ಬರುತ್ತೆ ಅಂದ್ಕೊಂಡಿದ್ದೆ" ಛೇಡಿಸಿದ.
"ಸಧ್ಯ ಸ್ವಲ್ಪ ಸುಮ್ನಿರು. ಮೊದ್ಲು ತಿಂಡಿ ತಿನ್ಲಿ ಅವಳು" ಎಂದು ಟಿಫಿನ್ ಕ್ಯಾರಿಯರ್ ತೆರೆದರು ಮೃದುಲಾ. ಕ್ಯಾಂಟಿನಿಗೆ ಹೊರಟ ನವ್ಯಾ ಮತ್ತು ಕಿಶೋರನನ್ನೂ ಅಲ್ಲೇ ತಡೆದರು. "ಮೂರು ಜನಕ್ಕೂ ಸೇರಿಯೇ ತಂದಿದ್ದು" ಆಕೃತಿ ಹೇಳಿದಾಗ ಸುಮ್ಮನಾಗಲೇ ಬೇಕಾಯಿತು.
"ಮೊನ್ನೆ ಊಟಕ್ಕೆ ಅಂತ ಬಂದು ಊಟನೇ ಮಾಡದೇ ಹೋದ್ರಿ, ಸೋ ಇವತ್ತು ಪನಿಶ್ಮೆಂಟ್. ನಾವು ಹಾಕಿದ್ದೆಲ್ಲಾ ತಿನ್ನಲೇಬೇಕು" ಸಮನ್ವಿತಾಳನ್ನು ಉದ್ದೇಶಿಸಿ ಹೇಳಿದಳು ಆಕೃತಿ. ಪ್ರತಿಯಾಗಿ ನಕ್ಕು ಸರಿಯೆಂದು ತಲೆಯಾಡಿಸಿದಳು.
"ಸರಿ ಅಂತ ತಲೆಯಾಡಿಸೋ ಮುಂಚೆ ಯೋಚ್ನೆ ಮಾಡಿ ಡಾಕ್ಟ್ರೇ, ಇವಳು ಕೋತಿ. ಏನು ತಿನ್ನಿಸ್ತಾಳೆ ಅಂತ ಹೇಳೋಕಾಗಲ್ಲ" ಎಚ್ಚರಿಕೆ ನೀಡುವಂತೆ ನುಡಿದ ಅಣ್ಣನನ್ನು ಗುರಾಯಿಸಿದಳು.
"ಅಮ್ಮಾ..., ನಿಮ್ಮೆಲ್ಲರಿಗೂ?" ಕೇಳಿದಳು ಸಮನ್ವಿತಾ.
"ನಾವು ಮನೆಯಲ್ಲಿ ತಗೋತೀವಿ ಮಗಳೇ" ಸಚ್ಚಿದಾನಂದ್ ಉತ್ತರಿಸಿದರು.
"ಹೌದು ಡಾಕ್ಟ್ರೇ, ಈ ಆಕೃತಿ ತಿನ್ನೋದ್ನ ನೋಡಿದ್ರೆ ಹುಷಾರಾಗ್ತಿರೋ ನೀವು ಐ.ಸಿ.ಯುಗೆ ಶಿಫ್ಟ್ ಆಗ್ಬೇಕಾಗುತ್ತೆ. ಆ ರಿಸ್ಕ್ ತಗೊಳ್ಳೋಕೆ ನಾನು ರೆಡಿ ಇಲ್ಲ. ಹತ್ತು ಜನ ಬಕಾಸುರರು ಸತ್ತು ಒಬ್ಬ ಆಕೃತಿ ಹುಟ್ಟಿರೋದು…..." ಈ ಬಾರಿ ಆಕೃತಿ ಯುದ್ಧಕ್ಕೆ ತಯಾರಾದಳು. ಕೈಗೆ ಏನು ಸಿಗಬಹುದೆಂದು ಸುತ್ತಲೂ ನೋಟ ಹರಿಸಿದವಳಿಗೆ ಖಾಲಿಯಾಗಿದ್ದ ನೀರಿನ ಜಗ್ ಕಂಡಿತು. ಆಯುಧ ಧಾರಣೆ ಮಾಡಿಯೇಬಿಟ್ಟಳು....
"ಲೇ ಕೋತಿ, ಅದು ಸ್ಟೀಲ್ ಜಗ್ ಕಣೇ... ನೋವಾಗುತ್ತೆ" ತಪ್ಪಿಸಿಕೊಳ್ಳಲು ಬಾಗಿಲತ್ತ ಓಡಿದ.
ಅಷ್ಟರಲ್ಲಿ ಗ್ರಹಗತಿ ಸರಿಯಿಲ್ಲದ, ರಾಹು,ಯಮಗಂಡ ಕಾಲದ ಮಿಶ್ರಣದಲ್ಲಿ , ಕಂಪ್ಲೀಟ್ ರಾಂಗ್ ಟೈಮಲ್ಲಿ ರಂಗಪ್ರವೇಶಿಸಿ ಮಧ್ಯಪ್ರವೇಶಿಸಿದ್ದು.......
ಡಿಟೆಕ್ಟಿವ್ ವೈಭವ್.........
ಬಾಗಿಲಿಗೆ ಬಂದ ಅಭಿ ಎದುರು ಸಿಕ್ಕ ಪತ್ತೇದಾರನನ್ನು ತನ್ನ ಮುಂದೆ ರಕ್ಷಾ ಕವಚದಂತೆ ಹಿಡಿಯೋದಕ್ಕೂ....
ನಮ್ಮ ಪತ್ತೇದಾರರು ತಮ್ಮ ಅರ್ಧ ಮುಖ ಮುಚ್ಚೋ ಹ್ಯಾಟನ್ನು ಸ್ಟೈಲಾಗಿ ತೆಗ್ಯೋದಕ್ಕೂ…....
ಆಕೃತಿ ಗುರಿ ಇಟ್ಟು ಜಗ್ ಎಸಿಯೋದಕ್ಕೂ.......
ಆ ಜಗ್ ಪತ್ತೇದಾರರ ಬುರುಡೆ ಬಿಚ್ಚೋದಕ್ಕೂ........
ಟೈಮು ಫುಲ್ ಸಿಂಕ್.........
********ಮುಂದುವರೆಯುತ್ತದೆ********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ