ಭಾನುವಾರ, ಜೂನ್ 21, 2020

ಒಳನೋಟ

ಕಡು ಮೌನದ ಗರ್ಭದಲೂ 

ಹುಟ್ಟುವುದು ಮಾತುಗಳು

ಅದ ಆಲಿಸುವ ತನ್ಮಯತೆ 

ಇರಬೇಕಷ್ಟೇ ನಿನ್ನ ಕರಣಗಳಿಗೆ.....


ಗಾಡಾಂಧಕಾರದ ನಡುವಲ್ಲೂ 

ಭರವಸೆಯ ಆಶಾಕಿರಣಗಳಿವೆ

ಅದ ಕಾಣಲು ತೆರೆದಿರಬೇಕಷ್ಟೇ

ನಿನ್ನ ಮನದ ಅಕ್ಷಿಪಟಲ.....


ಹರಡಿರುವ ದುರ್ಗಂಧದ ಆಳದಲೆಲ್ಲೋ

ಅಡಗಿಹುದು ಪರಿಮಳದ ಸುಗಂಧ

ಅದ‌ ಆಘ್ರಾಣಿಸುವ ಕ್ಷಮತೆ

ಇರಬೇಕಷ್ಟೇ ನಿನ್ನ ನಾಸಿಕಕೆ......


ಮುರಿದ ಸಂಬಂಧಗಳ ಆಂತರ್ಯದಲೂ

ಮಿಡಿಯುವವು ಮನಸು ಹೃದಯ

ಅದ ಗ್ರಹಿಸಿ ಮಾತುಗಳ ಹಾರ

ಪೋಣಿಸಬೇಕಷ್ಟೇ ನಿನ್ನ ಅಂತಃಕರಣ....


ನಿರಾಸೆ ಹತಾಶೆಗಳ ಮಧ್ಯದಲೇ ಇವೆ

ಕನಸ ನನಸಾಗಿಸುವ ಸಾವಿರ ಹಾದಿಗಳು

ಬೆಂಬಿಡದೆ ಬೆನ್ನತ್ತಿ ಕಾಡುವ ಸೋಲುಗಳೇ

ಬದಲಾಗುವವು ಸಾಧನೆಯ ಮೆಟ್ಟಿಲಾಗಿ


ಇದ ಅರಿತು ಎದೆಗುಂದದೆ ಛಲದಲಿ

ಮುನ್ನುಗ್ಗಬೇಕಷ್ಟೇ ನೀನು ಆತ್ಮಸ್ಥೈರ್ಯದಿಂದ....

ಪರಿಶ್ರಮದ ಬೆವರ ಹನಿ ಎಂದೂ ವ್ಯರ್ಥವಾಗದು

ಅದ ವ್ಯಯಿಸಬೇಕಷ್ಟೇ ನೀನು ಚಿಂತನೆಯಿಂದ....



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ