ಭಾನುವಾರ, ಜೂನ್ 28, 2020

ಅನೂಹ್ಯ 24

ಬಾಗಿಲ ಕರೆಗಂಟೆಯ‌ ಸದ್ದಿಗೆ ಓಡಿಕೊಂಡೇ ಬಂದು ಬಾಗಿಲು ತೆರೆದ ಚೈತಾಲಿ ಎದುರು ನಿಂತಿದ್ದವಳನ್ನು ಕಂಡು ಒಂದು ಕ್ಷಣ ದಂಗಾದಳು. ಅವಳನ್ನು ದಾಟಿಕೊಂಡು ಬಿರುಗಾಳಿಯಂತೆ ಮನೆಯೊಳಗೆ ಸಾಗಿದಳು. ಚೈತಾಲಿ ಸಾವರಿಸಿಕೊಂಡು ಅವಳ ಹಿಂದೆಯೇ "ಮ್ಯಾಮ್ ನೀವಾ? ಇಷ್ಟೊತ್ತಿನಲ್ಲಿ? ಹೇಗೆ ಬಂದ್ರಿ? ಯಾಕೊಂಥರಾ ಇದ್ದೀರಿ? ಮೈ ಹುಷಾರಿಲ್ವೇ?" ಎಂದು ಒಂದೇ ಸಮನೆ ಪ್ರಶ್ನೆಗಳ ಜಡಿಮಳೆ ಸುರಿಸುತ್ತಾ ಸಾಗಿದಳು. ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ರಾವ್ ಅವರ ಕೋಣೆಯತ್ತ ನಡೆದು ಒಳಬರಲೇ ಎಂದೂ ಕೇಳದೇ ಬಾಗಿಲನ್ನು ದೂಡಿ ಸೀದಾ ಒಳಹೊಕ್ಕಳು.

ಅಪಾಯಿಂಟ್ಮೆಂಟ್ ಇಲ್ಲದೇ, ಡೋರ್ ನಾ಼ಕ್ ಮಾಡುವ ಕಷ್ಟ ತೆಗೆದುಕೊಳ್ಳದೇ, 'ಮೇ ಐ ಗೆಟ್ ಇನ್' ಎಂದು ಸಂಸ್ಕಾರಯುತವಾಗಿ ಕೇಳುವ ವ್ಯವಧಾನವೂ ಇಲ್ಲದೇ ತಮ್ಮ ರೂಮಿಗೆ ನುಗ್ಗಿದ ಅನಾಗರೀಕರಿಗೆ ಸಭ್ಯತೆ ಕಲಿಸುತ್ತೇನೆಂದು ಉರಿಗಣ್ಣಿನಿಂದ ಬಾಗಿಲೆಡೆ ತಿರುಗಿದ ಸತ್ಯಂ ರಾವ್ ಎದುರು ನಿಂತವಳನ್ನು ಕಂಡು ಕಕ್ಕಾಬಿಕ್ಕಿಯಾಗಿ ಕೈಯಲ್ಲಿದ್ದ ಗ್ಲಾಸ್ ಬದಿಗಿಟ್ಟು ಹಲ್ಕಿರಿದರು.

"ಓ…. ನೀನಾ..... ನಾನು ಇದ್ಯಾರಪ್ಪ ಇಷ್ಟೊತ್ತಲ್ಲಿ ಪರ್ಮೀಷನ್ ಕೇಳ್ದೇ ಒಳಬರ್ತಿರೋದು ಅಂದ್ಕೊಂಡೇ. ಅದೇನು ಬೇಬಿ ಈ ರಾತ್ರಿಲೀ. ಹೇಗೆ ಬಂದೆ? ಕಾರು ಇಲ್ಲೇ ಬಿಟ್ಹೋಗಿದ್ಯಲ್ಲ" ಬಹಳ ನಾಜೂಕಾಗಿ ಅಕ್ಕರಾಸ್ಥೆಯಿಂದ ಕೇಳಿದರು ಹಲ್ಲುಗಿಂಜುತ್ತಾ. 

ಅವರು 'ಬೇಬಿ' ಎಂದೊಡನೆ ಬಂದಿರುವಾಕೆ ಯಾರೆಂದು ಅರಿವಾಗಿ ಮುಖಕ್ಕೆ ಫೇಸ್ ಪ್ಯಾಕ್ ಹಾಕಿ, ಸಾಕ್ಷಾತ್ ಪ್ರೇತದಂತೆ ಕಂಗೊಳಿಸುತ್ತಿದ್ದ ಮಾಲಿನಿ ಧಡಕ್ಕನೆ ಎದ್ದು ಕುಳಿತಿದ್ದರು. ಆ ರಭಸಕ್ಕೆ ಅವರ ಕಣ್ಣುಗಳ ಮೇಲೆ ಕುಳಿತಿದ್ದ ಸವತೆಕಾಯಿ ಎಸಳುಗಳು ಉದುರಿ ಬಿದ್ದವು. 

ಮಾಲಿನಿಯವರ ಅವತಾರವನ್ನೇ ನೋಡುತ್ತಾ, "ಇಲ್ಲ ಮಿಸ್ಟರ್ ರಾವ್, ಈ ಅಪರಾತ್ರಿಲೀ ನಾನೊಬ್ಳೇ ಹೇಗೆ ಬರಲೀ? ನಾನು ಮನೆಗೆ ಹೋಗಬೇಕು ಅಂದಿದ್ದೇ ತಡ. ನಿಮ್ಮ 'ಭಾವಿ ಅಳಿಯ' ತಾನೇ ಕಾರು ಡ್ರೈವ್ ಮಾಡಿಕೊಂಡು ಬಂದು ನನ್ನ ಡ್ರಾಪ್ ಮಾಡಿ ಹೋದ. ನಿಮ್ಮನ್ನು ತುಂಬಾ ಕೇಳಿದೆ ಅಂತ ಹೇಳು‌ ಅಂದಿದ್ದಾನೆ" ಎಂದಳು ವ್ಯಂಗ್ಯವಾಗಿ.

ಭಾವಿ ಅಳಿಯ ಎಂಬ ಶಬ್ದ ಕೇಳಿದ್ದೇ ಮಾಲಿನಿಯವರ ಫೇಸ್ ಪ್ಯಾಕ್ ಹಾಕಿದ್ದ ಫೇಸ್ ಬ್ಲೀಚಿಂಗ್ ಪೌಡರ್ ಹಾಕಿದಂತೆ ಬಿಳಚಿಕೊಂಡರೆ, ಸತ್ಯಂ ರಾವ್ ಅವರು ಕುಡಿದ ನಶೆಯೆಲ್ಲ ಒಂದೇ ಏಟಿಗೆ ಕಾಲ ಬುಡದಲ್ಲಿ ಸೋರಿ ಹೋಯಿತು……!! 'ಅಯ್ಯೋ ದರಿದ್ರದವಳು... ನಾವಿಲ್ಲಿ ಆ ಶರ್ಮಾ ಎಂಪೈರ್ ಗೆ ಇವಳನ್ನು ಸೇರಿಸಿ ಲೈಫ್ ಸೆಟಲ್ ಮಾಡ್ಕೋಬೇಕು ಅಂತಿದ್ರೆ, ಇವಳು ಅಳಿಯ ಅಂತೆಲ್ಲ ಮಾತಾಡ್ತಿದ್ದಾಳಲ್ಲ.... ಎಲ್ಲಾ ಸರಿಯಾಗಿ ನಡೀತಿರುವಾಗ ಇವಳೇನು ಮಾಡೋಕೆ ಹೊರಟಿದ್ದಾಳೆ' ಎಂದುಕೊಂಡ ರಾವ್ ಅವರಿಗೆ ಕೋಪ ನೆತ್ತಿಗೇರಿತು.

ನಖಶಿಖಾಂತ ಕೋಪದಿಂದ "ಸಮನ್ವಿತಾ….. ಏನು ಮಾತಾಡ್ತಿದ್ದೀಯಾ ಅನ್ನೋ ಜ್ಞಾನ ಇದೆಯಾ? ಯಾವನವನು ಭಾವಿ ಅಳಿಯ? ಏನು ಲವ್ವಾ? ಇಲ್ಲಿಯವರೆಗೆ ನಾವು ಹೇಳಿದ್ದಕ್ಕೆಲ್ಲಾ ಉಲ್ಟಾ ಹೊಡೆದ್ರು ನಾವು ಸುಮ್ನಿದ್ದೀವಿ ಅಂತ ಈಗ ಯಾವನೋ ಭಾವಿ ಅಳಿಯ ಅಂತ ಶುರುಮಾಡಿದ್ಯಾ? ಇದೆಲ್ಲಾ ಚೆನ್ನಾಗಿರೋಲ್ಲ. ಹಾಗೇನಾದ್ರೂ ಮಾಡಿದ್ಯೋ ಈ ರಾವ್ ಅಂದ್ರೆ ಯಾರು ಅಂತ ತೋರಿಸಬೇಕಾಗುತ್ತೆ ಹುಷಾರ್......" ಹಿಂದು ಮುಂದು ಯೋಚಿಸದೆ ಬಾಯಿಗೆ ಬಂದದ್ದು ಬೊಗಳಿ ಸಮನ್ವಿತಾಳನ್ನು ಮತ್ತಷ್ಟು ಕೆರಳಿಸಿದರು.

"ಆಮ್ ಆಲ್ಸೋ ಕ್ಯೂರಿಯಸ್ ಟು ನೋ ಮಿಸ್ಟರ್ ರಾವ್. ಹೇಳಿ ಏನು ರಾವ್ ಅಂದ್ರೆ? ಎಷ್ಟು ಮುಖಗಳಿವೆ ನಿಮಗೆ? ಅಷ್ಟು ಮುಖಗಳ ನಡುವೆ ನಿಮ್ಮ ಅಸಲಿ ಮುಖ ಯಾವುದು?"

"ನನ್ನ ಮುಖ ಹಾಗಿರ್ಲಿ. ನೀನು ಮೊದ್ಲು ಅವನ್ಯಾವನೋ ಹೇಳು. ಅಳಿಯ ಅಂತೆ ಅಳಿಯ. ನಮಗೇ ಗೊತ್ತಿಲ್ಲದೇ ಅಳಿಯನ ಪೋಸ್ಟಿಗೆ ಬಂದ ಆ ಭಿಕಾರಿ ಯಾರು? " ಕನಲಿದರು.

"ನನಗೇ ಗೊತ್ತಿಲ್ಲದೇ ನನ್ನ ಗಂಡನ ಪೋಸ್ಟಿಗೆ ಸೆಲೆಕ್ಟ್ ಮಾಡಿದ್ರಲ್ಲ ಅವನೇ...." ಅವಳೂ ಅಷ್ಟೇ ರೋಷದಲ್ಲಿ ಚೀರಿದಳು.

ಎಸೆದ ಬಾಣ ಹೋದಷ್ಟೇ ವೇಗದಲ್ಲಿ ಹಿಂತಿರುಗಿ ತಮ್ಮ ಎದೆಯನ್ನೇ ಬಗೆದಂತಾಯಿತು ರಾವ್ ಅವರ ಪರಿಸ್ಥಿತಿ. 'ಅಂದ್ರೆ...... ಇವಳು ಯಾರ ಬಗ್ಗೆ ಮಾತಾಡ್ತಿರೋದು? ಇವಳಿಗೇನಾದರೂ ವಿಷಯ ಗೊತ್ತಾಗಿದೆಯಾ? ಹೇಗೆ ಕೇಳೋದು ಇವಳತ್ರ?' ಎಂಬ ಯೋಚನೆಯಲ್ಲಿ ಧರ್ಮಪತ್ನಿಯೆಡೆಗೆ ನೋಡಿದರು ಧರ್ಮಸಂಕಟದಿಂದ ಪಾರುಮಾಡು ಎಂಬಂತೆ.......

ತಮ್ಮ ಪತಿ ಪರಮೇಶ್ವರನ ಸಂಜ್ಞೆ ಅರ್ಥಮಾಡಿಕೊಂಡ ಮಾಲಿನಿ ನಿಧಾನವಾಗಿ, "ಹಾಗಂದ್ರೆ ಏನು ಪುಟ್ಟಾ? ಸರಿಯಾಗಿ ಬಿಡಿಸಿ ಹೇಳು" ಎಂದರು ಮೆದುವಾಗಿ.

"ಯಾಕೆ ನಿಮ್ಮಿಬ್ರಿಗೆ ಶಾರ್ಟ್ ಟರ್ಮ್ ಮೆಮೋರಿ ಲಾಸ್ ಪ್ರಾಬ್ಲಮ್ ಏನಾದ್ರೂ ಇದೆಯಾ? ನೀವೇ ತಾನೇ ಅಭಿರಾಮ್ ಶರ್ಮಾನ ಹೆಂಡತಿ ಪೋಸ್ಟಿಗೆ ನನ್ನ ಅಪಾಯಿಂಟ್ ಮಾಡ್ಕೊಳ್ಳೋಕೆ ಸಚ್ಚಿದಾನಂದ ಮತ್ತು ಮೃದುಲಾ ಅವರಿಗೆ ರೆಕಮಂಡ್ ಮಾಡಿದ್ದು? ನಾನು ಅವನ ಹೆಂಡತಿ ಆದ್ರೆ ಅವನು ನಿಮಗೆ ಅಳಿಯನೇ ತಾನೇ?" ಅವಳು ಕೇಳಿದ ವೈಖರಿಗೆ ಗಂಡ-ಹೆಂಡತಿಯರ ಮುಖ ಹರಳೆಣ್ಣೆ ಕುಡಿದಂತಾಯಿತು. 

'ಓಹ್ ಗಾಡ್!!! ಯಾವುದು ಆಗಬಾರದು ಎಂದುಕೊಂಡಿದ್ವೋ ಅದೇ‌ ಆಗ್ತಿದೆ. ಮದುವೆಯ ದಿನದವರೆಗೂ ಇವಳಿಗೆ ಗೊತ್ತಾಗಬಾರದು ಎಂದುಕೊಂಡದ್ದು…. ಇದು ಇವಳಿಗೆ ಹೇಗೆ ಗೊತ್ತಾಯ್ತು? ಅಭಿರಾಮ್ ಇವಳನ್ನು ಹೇಗೆ‌, ಯಾಕೆ ಭೇಟಿಯಾದ? ಛೇ…. ಹಿಂದುಮುಂದು ಯೋಚಿಸದೆ ಬಾಯಿಗೆ ಬಂದದ್ದು ಮಾತಾಡಿ ಬಿಟ್ಟೆ. ಈಗೇನು ಹೇಳೋದು ಇವಳಿಗೆ. ಹೇಗೆ‌ ಸಮಾಧಾನಿಸೋದು!! ಯಾವುದಾದ್ರೂ ಪಾರ್ಟಿ ಇದ್ದು ನಾವು ಮನೆಯಲಿಲ್ಲದಿದ್ರೆ‌ ಸರಿಯಿರೋದು' ರಾವ್ ದಂಪತಿಗಳು ತಮ್ಮ ದುರಾದೃಷ್ಟಕ್ಕೆ ಹಳಿದುಕೊಳ್ಳುತ್ತಾ ಯೋಚಿಸುತ್ತಿದ್ದರು.

"ಏನು ಬಾಯಿ ಬಿದ್ದೋಗಿದ್ಯಾ? ಇಲ್ಲಾ ಲಕ್ವಾ ಹೊಡೀತಾ? ನಾನು ಕೇಳ್ತಿದ್ದೀನಿ ಉತ್ತರ ಕೊಡಿ. ಉತ್ತರ ಸಿಗದೇ ನಾನಿಲ್ಲಿಂದ ಹೋಗೋಲ್ಲ. ಸ್ಪೀಕ್ ಅಪ್ ಡ್ಯಾಮಿಡ್....." ಕ್ಷಣಕ್ಷಣಕ್ಕೂ ಅವಳ ಆವೇಶ ಹೆಚ್ಚುತ್ತಿತ್ತು.

'ಈ ಮದುವೆ ನಡೆಯಲೇಬೇಕು. ಅಭಿರಾಮ್ ಇವಳನ್ನು ಡ್ರಾಪ್ ಮಾಡಿರುವನೆಂದರೆ…... ಎಲ್ಲಾ ಸೆಟ್ ಆದಂತೆಯೇ ಲೆಕ್ಕ. ಈಗ ಬಿಡಬಾರದು. ಏನಾದರೂ ಮಾಡಿ ಇವಳೊಂದಿಗೆ ರಾಜಿಯಾಗಿ ಇವಳನ್ನು ಒಪ್ಪಿಸಲೇಬೇಕು. ಇಲ್ಲದಿದ್ದರೆ ಕಷ್ಟ' ಎನಿಸಿದ್ದೇ ನಯವಾಗಿ ಮಾತನಾಡಲು ಶುರುವಿಟ್ಟರು ರಾವ್.

"ಸಾರಿ ಸಮನ್ವಿತಾ ಬೇಬಿ. ಅದು.... ಅದು.... ಏನೋ 

ಸ್ವಲ್ಪ ಆಫೀಸ್ ಟೆನ್ಷನ್. ಬಿ.ಪಿ ಜಾಸ್ತಿ. ಅದ್ಕೇ ಏನೇನೋ ಮಾತಾಡ್ದೇ. ಬೇಜಾರು ಮಾಡ್ಕೋಬೇಡ. ಇನ್ನು ಅಭಿರಾಮ್ ವಿಚಾರ…. ಅವ್ನು ನಾನು ಮತ್ತೆ ನಿನ್ನ ಮಮ್ಮಿ ನಿನಗೋಸ್ಕರ ಚೂಸ್ ಮಾಡಿರೋ ಹುಡುಗ. ಹಿ ಈಸ್ ಜೆಮ್ ಆಫ್ ಅ ಪರ್ಸನ್. ನಾವು ಎಲ್ಲಾ ಫಿಕ್ಸ್ ಆದ್ಮೇಲೆ ನಿನಗೆ ಸರ್ಪ್ರೈಸ್ ಕೊಡೋಣ ಅಂದ್ಕೊಂಡ್ವಿ. ಬಟ್ ನಿನಗೆ ಗೊತ್ತಾಯ್ತು. ಇಟ್ಸ್ ಒಕೆ..... ಅಭಿರಾಮ್ ನಿನ್ನ ಡ್ರಾಪ್ ಮಾಡಿದ್ನಾ? ಮತ್ತೆ ಒಳಗೆ ಕರೆಯೋದು ತಾನೇ?" ಎಂದರು.

"ಒಹೋ ಸರ್ಪ್ರೈಸ್….. ನನಗೆ…..? ವಾವ್ ಮಿಸ್ಟರ್ ರಾವ್….. ಜೀವನದಲ್ಲಿ ನನಗೆ ಒಂದು ಹಿಡಿ ಪ್ರೀತಿ ಕೊಡೋ ದಯೆ ತೋರದವರು ಅದೇನು ಸಡನ್ನಾಗಿ ಸರ್ಪ್ರೈಸ್ ಕೊಡೋಣ ಅಂದ್ಕೊಂಡದ್ದು? ಅದು ಬಿಡಿ. ಈ ಸರ್ಪ್ರೈಸ್ ಯಾವಾಗ ಕೊಡಬೇಕು ಅಂತಿದ್ರೀ? ತಾಳಿ ಕಟ್ಟೋವಾಗಲೋ? ಅದು ಹೋಗ್ಲೀ..... ನನ್ನ ಮದ್ವೆಯ ಬಗ್ಗೆ ನನ್ನ ಹತ್ರ ಒಂದು ಮಾತು ಕೇಳದೇ, ನನ್ನ ಅಭಿಪ್ರಾಯಕ್ಕೆ ಆಸ್ಪದ ಕೊಡದೇ ಹೇಗೆ, ಯಾವ ಆಧಾರದಲ್ಲಿ ನಿರ್ಧಾರ ತಗೊಂಡ್ರೀ? ಎಂಥೆಂಥ ಮಹಾಪರಾಧಗಳನ್ನು ಮಾಡಿ ಗಲ್ಲು ಶಿಕ್ಷೆಗೆ ಗುರಿಯಾದ ಹೀನ ಖೈದಿಗಳಿಗೂ ಸಾಯೋಕೆ ಮುಂಚೆ ಕೊನೆ ಆಸೆ ಏನೂಂತ ಕೇಳ್ತಾರೆ. ಅಂತದ್ರಲ್ಲಿ ನನ್ನ ಬದುಕಿನ ಮಹತ್ವದ ನಿರ್ಧಾರ ನನ್ನ ಕೇಳದೇ ಹೇಗೆ ತಗೊಂಡ್ರೀ? ನಾನು ಒಪ್ಪಿಕೊಳ್ತೀನಿ ಅಂತ ಹೇಗೆ ಅಂದುಕೊಂಡ್ರಿ.....?" ಸಮನ್ವಿತಾಳ ಸ್ವರ ತಾರಕಕ್ಕೇರಿತ್ತು. ಅವಳು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಳು. ಕೋಪ ನೆತ್ತಿಗೇರಿತ್ತು.

"ಡೋಂಟ್ ಬಿ ಫೂಲಿಶ್ ಸಮನ್ವಿತಾ. ನಾವೇನು ಬೀದಿಲೀ ಹೋಗೋ ಭಿಕಾರಿ ಜೊತೆ ನಿನ್ನ ಮದ್ವೆ ಫಿಕ್ಸ್ ಮಾಡಿಲ್ಲ. ಅಭಿರಾಮ್ ಈಸ್ ಸೋಲ್ ಓನರ್ ಆಫ್ ಶರ್ಮಾ ಎಂಪೈರ್. ಶರ್ಮಾ ಎಂಪೈರ್ ಗೊತ್ತಲ್ಲ ನಿನಗೆ. ಅವರ ಶ್ರೀಮಂತಿಕೆ ಲೆಕ್ಕಕ್ಕೆ ಸಿಗಲ್ಲ. ಅವರ ಮುಂದೆ ನಮ್ಮ ಶ್ರೀಮಂತಿಕೆ ಏನೂ ಅಲ್ಲ. ನೀನು ರಾಣಿ ತರಾ ಇರ್ತೀಯ. ಜೊತೆಗೆ ಇದರಿಂದ ನಮ್ಮ ಬಿಸ್ನೆಸ್ ಕೂಡಾ ತುಂಬಾ ಇಂಪ್ರೂವ್ ‌ಆಗುತ್ತೆ" ಮಾಲಿನಿ ತಮ್ಮ ವ್ಯವಹಾರ ಬುದ್ಧಿವಂತಿಕೆ ಪ್ರದರ್ಶಿಸಿದರು.

"ಒಹೋ ನಿಮ್ಮ ಬಿಸ್ನೆಸ್ ಇಂಪ್ರೂವ್ ಆಗೋಕೆ ನಾನು ಮದ್ವೆ ಆಗ್ಬೇಕಲ್ವೇ. ನನ್ನನ್ನೇನು ನಿಮ್ಮ ಕಂಪನಿಲಿ ತಯಾರಾಗೋ ಪ್ರೊಡಕ್ಟ್ ಅಂದ್ಕೊಂಡಿದ್ದೀರಾ ನಿಮಗೆ ಬೇಕಾದಂತೆ ಬಳಸೋಕೆ " ಕನಲಿದಳು.

"ನಿನ್ನ ಮಮ್ಮಿ ಸರಿಯಾಗೇ ಹೇಳಿದ್ದಾಳೆ ಬೇಬಿ. ನೋಡು ನೀನು ಅವರೆಲ್ಲರಿಗೂ ಇಷ್ಟ ಆಗಿದ್ದೀ. ಈ ಮದುವೆಯಿಂದ ನೀನೂ ಸುಖವಾಗಿರಬಹುದು. ಅವರ ಸಂಬಂಧದಿಂದ ನಮ್ಮ ಸ್ಟೇಟಸ್ ಮತ್ತಷ್ಟು ಏರುತ್ತದೆ. ಯಾವ ರೀತಿಯಿಂದ ನೋಡಿದರೂ ಇಟ್ಸ್ ಪ್ರಾಫಿಟೇಬಲ್" ಹೆಂಡತಿಯ ಮಾತಿಗೆ ಸಮರ್ಥನೆಯ ಮುದ್ರೆ ಒತ್ತಿದರು ರಾವ್.

ಅವರ ಮಾತು ಕೇಳಿ ಸಮನ್ವಿತಾಳ ತಲೆ ಧೀಂ ಎಂದಿತು. "ಇಟ್ಸ್ ಪ್ರಾಫಿಟೇಬಲ್……!!" ಲಾಭದಾಯಕ......!! ನಿಜಕ್ಕೂ ನಾನು ಇವರ ಕಂಪನಿಯ ಒಂದು ವಸ್ತು ಎಂದುಕೊಂಡಿದ್ದಾರೆಯೇ........? 

ಜೋರಾಗಿ ಚಪ್ಪಾಳೆ ತಟ್ಟಿದಳು ಸಮನ್ವಿತಾ.

"ವಾವ್ ಮಿಸ್ಟರ್ ಸತ್ಯಂ ರಾವ್, ಹ್ಯಾಟ್ಸ್ ಆಫ್ ಟು ಯು. ಮದುವೆ ಅಂದರೆ ದಿವಿನಾದ ಸಂಬಂಧ ನೋಡೋದು, ವರ ವಧು‌ ಸಾಮ್ಯ, ಮನೆತನ, ಹಿನ್ನೆಲೆ ಒಳ್ಳೆಯದಾ ಅಂತ ವಿಚಾರಿಸೋದು ಗೊತ್ತಿತ್ತು. ಆದರೆ 'ಲಾಭದಾಯಕ ಸಂಬಂಧ' ಅನ್ನೋ ಪರಿಕಲ್ಪನೆ ನಿಮ್ಮಂತಹವರಿಗೆ ಮಾತ್ರ ಬರೋಕೆ ಸಾಧ್ಯ….. ಅಂದಹಾಗೆ ಈ ಮದುವೆ ಕಾಂಟ್ರಾಕ್ಟ್ ಎಷ್ಟು ಸಮಯದ ತನಕ ಅಸ್ತಿತ್ವದಲ್ಲಿರುತ್ತೆ? ಒಂದು ತಿಂಗಳು, ಎರಡು? ಆರು ಇಲ್ಲ ವರ್ಷ? ಪ್ರೋಬೇಷನರಿ ಪಿರಿಯಡ್ ಎಷ್ಟು?"

"ವಾಟ್ ಆರ್ ಯು ಟಾಕಿಂಗ್? ಡೋಂಟ್ ಗೆಟ್ ಕನ್ಪ್ಯೂಸ್ಡ್. ಇದು ಕಾಂಟ್ರಾಕ್ಟ್ ಅಲ್ಲ ಇಟ್ಸ್ ರಿಯಲ್ ಮ್ಯಾರೇಜ್. ಇನ್ನು ಹತ್ತು ತಲೆಮಾರು ಕೂತು ತಿಂದ್ರೂ ಕರಗದಷ್ಟು ಆಸ್ತಿ ಇರೋರು ಅವರು. ಸುಮ್ನೆ ಮದುವೆ ಆಗು. ಎಲ್ಲರ ಲೈಫ್ ಸೆಟಲ್.."

"ಲಿಸನ್ ಸತ್ಯಂ ರಾವ್….... ಮದುವೆ ಯಾಕೆ? ಇನ್ನೂ ಒಂದು ಪ್ರಾಫಿಟೇಬಲ್ ಆಯ್ಕೆ ಇದೆ. ಒಂದು ವರ್ಷಕ್ಕೆ ಅಗ್ರಿಮೆಂಟ್ ಮಾಡ್ಕೋಳ್ಳಿ.... ಯಾರಿಗೊತ್ತು ಒಂದು ವರ್ಷದ ಮೇಲೆ ಇವನಿಗಿಂತನೂ ಹೆಚ್ಚು ಆಸ್ತಿ, ದುಡ್ಡು ಇರೋನು ಸಿಗಬಹುದು. ಆಗ ಅವನಿಗೆ ಇದೇ ತರ ಮದುವೆ ಆಫರ್ ಕೊಡಬಹುದು!" ಎಂದು ಬಿಟ್ಟಳು ಸಮನ್ವಿತಾ.

ಒಂದು ಕ್ಷಣ ದಂಗಾದರೂ ತೋರಿಸಿಕೊಳ್ಳದೇ, "ನೋಡು ಸಮನ್ವಿತಾ, ಈ ತರದ ಪ್ರವಚನಗಳೆಲ್ಲಾ ಮಾತಿಗೆ‌ ಸರಿ ಅಷ್ಟೇ. ನಾವೇನು ಶಿಲಾಯುಗದಲ್ಲಿ ಜೀವಿಸುತ್ತಿಲ್ಲ. ಇದು ಕಲಿಗಾಲ. ಕಂಪ್ಯೂಟರ್ ಯುಗ. ಇಲ್ಲಿ ದುಡ್ಡೇ ದೊಡ್ಡಪ್ಪ. ಹಣ, ಸ್ಟೇಟಸ್ ಇಲ್ಲಾ ಅಂದ್ರೆ ನಾಯೀನೂ ಮೂಸಲ್ಲ. ಸಂಬಂಧ, ಅನುಬಂಧ ಎಲ್ಲಾ ಕಾಲಡಿಯ ಕಸ ಅಷ್ಟೇ...." ಎಂದರು ರಾವ್.

"ಆ ಹಣ, ಸ್ಟೇಟಸ್ ಗೋಸ್ಕರ, ನಿಮ್ಮ ವ್ಯವಹಾರಕ್ಕೋಸ್ಕರ ಮಗಳನ್ನು ಅವರಿಗೆ‌ ಮಾರಾಟ ಮಾಡ್ತಿದ್ದೀರ ಅಷ್ಟೇ ಅಲ್ವಾ? ಹಾಗಾದ್ರೆ ಹಣಕ್ಕಾಗಿ ಹೆಣ್ಣುಗಳನ್ನು ಮಾರೋ ತಲೆಹಿಡುಕರಿಗೂ ನಿಮಗೂ ಏನು ವ್ಯತ್ಯಾಸ…..? ಹೇಳಿ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್. ಉತ್ತರ ಇದೆಯಾ?" ಅವಳ ಧ್ವನಿ ನಡುಗುತ್ತಿತ್ತು.

ರಾವ್ ದಂಪತಿಗಳು ಉತ್ತರಿಸಲಿಲ್ಲ. ಉತ್ತರ ಸಿಗಲಿಲ್ಲವೋ ಇಲ್ಲಾ ಮತ್ತೇನೋ…….

ಅವಳೇ ಮಾತು ಮುಂದುವರೆಸಿದ್ದಳು.....

"ನನಗೆ ಬುದ್ಧಿ ಬಂದಾಗಿನಿಂದ ಒಂದು ಪ್ರಶ್ನೆ ನನ್ನ ಮನಸ್ಸನ್ನು ಕೊರೆಯುತ್ತಿದೆ. ನನ್ನ ಎಲ್ಲಿಂದ ಎತ್ಕೊಂಡು ಬಂದ್ರಿ ನೀವು? ಅನಾಥಾಶ್ರಮದಿಂದಲಾ? ಇಲ್ಲಾ ಎಲ್ಲೋ ದಾರಿ ಬದಿಯಲ್ಲಿ ಸಿಕ್ಕಿದ್ನಾ? ಹೇಳಿ ಪ್ಲೀಸ್. ನಾನು ಖಂಡಿತಾ ನಿಮ್ಮ ಸ್ವಂತ ಮಗಳಲ್ಲ. ಹಾಗಾಗಿದ್ರೆ ಈ ತರ ಅನ್ಯಾಯ ಮಾಡ್ತಿರ್ಲಿಲ್ಲ ನನಗೆ. ನಾನು ನಿಮಗೆ ಬೇಡ ಅಂದಿದ್ರೆ‌ ಯಾವುದೋ ಅನಾಥಾಶ್ರಮಕ್ಕೆ ಕೊಟ್ಟುಬಿಡ್ಬೇಕಿತ್ತು. ಹೀಗೆ ಇಷ್ಟು ವರ್ಷ ಎಲ್ಲಾ ಇದ್ದೂ ಅನಾಥೆಯಂತೆ ಬದುಕೋ ಶಿಕ್ಷೆ ಯಾಕೇ? ಯಾಕೆ ನನ್ನ ಮೇಲೆ ಈ ತರ ದ್ವೇಷ. ಚಿಕ್ಕ ವಯಸ್ಸಿನಲ್ಲೇ ವಿದೇಶದಲ್ಲಿ ಬಿಟ್ಟಿರಿ. ಅಲ್ಲಿ ನಾನು ಇದ್ದ ಅಷ್ಟು ದೀರ್ಘ ಸಮಯದಲ್ಲಿ ಎಷ್ಟು ಸರಿ ನೋಡೋಕೆ ಬಂದಿದ್ದೀರಿ? ನಾನು ಅಲ್ಲಿ ಏನೆಲ್ಲಾ ಸಮಸ್ಯೆ, ಹಿಂಸೆ ಅನುಭವಿಸಿದ್ದೀನಿ ಗೊತ್ತಾ ನಿಮಗೆ? ಡು ಯು ನೋ ಐ ಹ್ಯಾವ್ Agoraphobia? (ಹೊಸ ಜಾಗಗಳಿಗೆ ಹೊಂದಿಕೊಳ್ಳಲು ಭಯವಾಗುವ ಕಾಯಿಲೆ). ನನಗೆ ಹೊಸ ಜಾಗಗಳಿಗೆ ಹೊಂದಿಕೊಳ್ಳೋಕೆ ಆಗ್ತಿರ್ಲಿಲ್ಲ. ರಾತ್ರಿಯಿಂದ ಬೆಳಗಿನವರೆಗೆ ಕಣ್ಣೆವೆ ಮುಚ್ಚದೇ ಕುಳಿತ್ತಿದ್ದ ದಿನಗಳಿಗೆ ಲೆಕ್ಕವಿಲ್ಲ. ಐ ವಾಸ್ ಆಲ್ವೇಸ್ ಅನ್ ಸೆಕ್ಯೂರ್ಡ್. ಯಾರ ಜೊತೆಗೂ ಮಿಂಗಲ್ ಆಗ್ತಿರ್ಲಿಲ್ಲ ನಾನು. ನನಗೆ ಇಂದಿಗೂ ಅಲ್ಲಿ ಒಬ್ಬೇ ಒಬ್ಬ ಸ್ನೇಹಿತರಿಲ್ಲ.  ನಾನು ಹದಿನೈದು ವರ್ಷದವಳಿದ್ದಾಗ ಈ ಹಿಂಸೆ, ಡಿಪ್ರೆಶನ್ ತಾಳೋಕಾಗ್ದೇ ಆತ್ಮಹತ್ಯೆ ಪ್ರಯತ್ನ ಮಾಡಿದ್ದೆ. ಅದು ಗೊತ್ತಾ ನಿಮಗೆ? ಇಲ್ಲಾ. ವಾರ್ಡನ್ ಫೋನ್ ಮಾಡಿದಾಗಲೂ ಹಣಕಳಿಸಿದ್ರೇ ಹೊರತು ನೀವು ಬರ್ಲಿಲ್ಲ. ವೆಕೇಷನ್ ಸಮಯದಲ್ಲಿ ಎಲ್ಲಾ ಮಕ್ಕಳೂ ಮನೆಗೆ ಹೋದಾಗ ನನ್ನ ಪರಿಸ್ಥಿತಿ ಹೇಗಿರ್ತಿತ್ತು ಗೊತ್ತಾ? ಇಲ್ಲ... ಇಲ್ಲ.... ನಿಮಗೇನೂ ಗೊತ್ತಿಲ್ಲ. ನಿಮ್ಗೆ ಗೊತ್ತಿರೋದು ಒಂದೇ…... ದುಡ್ಡು ಕಳಿಸಿದ್ದೀವಿ, ಫಾರಿನ್ನಲ್ಲಿ ಬೆಸ್ಟ್ ಎಜುಕೇಶನ್ ಕೊಡ್ಸಿದ್ದೀವಿ. ಅಷ್ಟೇ ನಿಮಗೊತ್ತಿರೋದು. ಬಟ್ ದುಡ್ಡಿಂದ ಎಲ್ಲಾ ಖರೀದಿಸೋಕಾಗಲ್ಲ. ಅಂಡರ್ಸ್ಟಾಂಡ್ ದಟ್. ದುಡ್ಡು ಲೈಫ್ ಹಾಳ್ ಮಾಡುತ್ತೆ ಅಷ್ಟೇ. ಸತ್ಯ ಏನ್ಗೊತ್ತಾ? ಓದೆಲ್ಲಾ ಮುಗಿದು ಭಾರತಕ್ಕೆ ಬಂದಾಗ ನಾನು ನನ್ನ ಪರಿಚಯಿಸ್ಕೊಂಡೆ ನಿಮ್ಮ ಮಗಳು ಅಂತ. ಹಾಗಾಗಿ ನಾನೇ ಸಮನ್ವಿತಾ ಅಂತ ಗೊತ್ತಾಯ್ತು ನಿಮಗೆ…… ಒಂದು ವೇಳೆ ಬೇರೆ ಯಾರನ್ನಾದ್ರೂ ಸಮನ್ವಿತಾ ಅಂತ ಕಳ್ಸಿದ್ರೇ ನೀವು ಅವಳನ್ನೇ ನಿಮ್ಮ ಮಗಳು ಅಂತ ಒಪ್ಪಿಕೊಳ್ತಿದ್ರೀ. ಫಾರಿನ್ ಬಿಡಿ….. ಇಲ್ಲಿಗೆ ಬಂದು ಎಷ್ಟೋ ಸಮಯವಾಗಿದೆ. ಈಗ್ಲೂ ನನ್ನ ಬಗ್ಗೆ ಏನು ಗೊತ್ತು ನಿಮ್ಗೆ? ನನ್ನ ಇಷ್ಟ, ಕಷ್ಟ ….? ಊಹ್ಮೂಂ.... ಏನಿಲ್ಲ....... ಏನೇನೂ ಇಲ್ಲ….. " 

ಅವಳ ಮಾತು ಅವ್ಯಾಹತವಾಗಿ ಹತಾಶೆಯ ನಡುವೆ ಸಾಗಿತ್ತು. ಆದರೆ ಅವಳ‌ ಯಾವ ಪ್ರಶ್ನೆಗಳಿಗೂ ಅವರಲ್ಲಿ ಉತ್ತರವಿಲ್ಲ. ಅಸಲಿಗೆ ಅವಳ ನೋವೇ‌ ಅವರಿಗೆ ಅರ್ಥವಾಗಲಿಲ್ಲ. ಇನ್ನು ಏನುತ್ತರ ಕೊಟ್ಟಾರು……

ಎಷ್ಟೋ ಹೊತ್ತಿನ ಮೇಲೆ ತನ್ನ ಮನಸ್ಸಿನ ಭಾರ ಅಷ್ಟೂ ಹೊರಹಾಕಿ ಅವಳೇ ಸಮಾಧಾನಗೊಂಡು ಕಣ್ಣೊರೆಸಿಕೊಂಡು ಎದ್ದು ಹೊರಟವಳು ಮತ್ತೆ ನಿಂತು ಅವರೆಡೆ ತಿರುಗಿ, "ಇವತ್ತಿನವರೆಗೆ ನನ್ನ ಸಾಕಿದ್ದಕ್ಕೆ ಅನಂತಾನಂತ ಧನ್ಯವಾದಗಳು. ಇವತ್ತಿಗೆ ನನ್ನ ನಿಮ್ಮ ಸಂಬಂಧ ಮುಗೀತು. ನನ್ನ ಬದುಕಲ್ಲಿ ಹೆತ್ತವರು ಇಲ್ಲ ಅಂದ್ಕೋತೀನಿ. ನಿಮಗೆ ಮಗಳಿಲ್ಲ ಅಂದ್ಕೋಳ್ಳೋದು ಕಷ್ಟವೇನಲ್ಲ. ದಯವಿಟ್ಟು ನನ್ನ ಬಿಟ್ಟುಬಿಡಿ. ನನ್ನ ಬದುಕಿನ ಬಗ್ಗೆ ಚಿಂತಿಸೋ ಅಗತ್ಯವಿಲ್ಲ. ಪ್ಲೀಸ್ ಲೀವ್ ಮಿ" ಕೈ ಮುಗಿದು ಹೊರನಡೆದಳು.

ರೂಮಿನ ಹೊರಗೆ ನಿಂತು ಸಮನ್ವಿತಾಳ ನೋವಿಗೆ ದೇವರನ್ನು ಹಳಿಯುತ್ತಾ, ಬೇಡವೆಂದರೂ ಕಿವಿಗೆ ಬೀಳುತ್ತಿದ್ದ ಮಾತುಗಳನ್ನು ಅಲ್ಲಿಯವರೆಗೂ ದುಗುಡದಲ್ಲಿ ಕೇಳುತ್ತ ನಿಂತಿದ್ದ ಚೈತಾಲಿ, ಅವಳು ಹೊರಗೆ ಬಂದೊಡನೆ, "ಒಂದು ನಿಮಿಷ ಮ್ಯಾಮ್, ಪ್ಲೀಸ್ ಒಂದೇ ನಿಮಿಷ ನಿಲ್ಲಿ" ಎಂದು ಒಳಗೆ ಓಡಿದವಳು ರಾವ್ ಅವರ ಮುಂದೆ ನಿಂತು, 

"ಮಿಸ್ಟರ್ ರಾವ್, ನಾನು ನಾಳೆಯಿಂದ ನಿಮ್ಮ ಹತ್ರ ಕೆಲಸ ಮಾಡಲ್ಲ. ಒಂದು ತಿಂಗಳು ಪ್ರಿಯರ್ ನೋಟಿಸ್ ಕೊಡ್ಬೇಕಿತ್ತು, ಆಗ್ಲಿಲ್ಲ. ನನ್ನ ಈ ಮಂತ್ ಸ್ಯಾಲರಿ ನೀವೇ ಇಟ್ಕೊಳ್ಳಿ. ಫಾರ್ಮಾಲಿಟೀಸ್ ಏನಾದ್ರೂ ಇದ್ರೆ ಹೇಳಿ… ಬರ್ತೀನಿ. ಇಲ್ಲಾಂದ್ರೆ ಇನ್ಯಾವತ್ತೂ ಬರೋಲ್ಲ. ಗುಡ್ ಬೈ" ಎಂದವಳೇ ಅವರ ಉತ್ತರಕ್ಕೂ ಕಾಯದೇ ಹೊರಬಂದಳು.

ಸಮನ್ವಿತಾ ಆಗಲೇ ಮನೆಯಿಂದ ಹೊರಹೋಗಿದ್ದಳು. ಚೈತಾಲಿಯ ತಮ್ಮ ಅಕ್ಕನ ಹಾದಿ ಕಾಯುತ್ತಿದ್ದ. ಓಡಿಕೊಂಡೇ ಹೋಗಿ ಅವಳನ್ನು ಹಿಡಿದವಳು, "ಇರೀ ಮ್ಯಾಮ್ ರಾತ್ರಿಯಾಗಿದೆ. ಕ್ಯಾಬ್ ಬುಕ್ ಮಾಡ್ತೀನಿ" ಎಂದಳು.

"ಮನುಷ್ಯರಿಗಿಂತ ಕತ್ತಲೇ ವಾಸಿ ಚೈತಾಲೀ" ಭಾರವಾದ ದನಿಯಲ್ಲಿ ಅಂದಳು. ತಮ್ಮನಿಗೆ ಹೇಳಿ ಕ್ಯಾಬ್ ಬುಕ್ ಮಾಡಿಸಿ ಅವಳನ್ನು ಕ್ಯಾಬ್ ಹತ್ತಿಸಿದಾಗ, 

"ಥ್ಯಾಂಕ್ಸ್ ಚೈತಾಲೀ. ಥ್ಯಾಂಕ್ಯೂ ಫಾರ್ ಎವ್ವೆರಿ ಥಿಂಗ್" ಎಂದು ಕೈ ಬೀಸಿದಳು. 

ಅಲ್ಲಿಗೆ ಒಂದು ಬಂಧ ಬೆಸೆಯದೇ ಕಳಚಿತ್ತು........!

ಚೈತಾಲೀ ತಾನೂ ಕೈ ಬೀಸಿ ತಮ್ಮನೊಂದಿಗೆ ಮನೆಯತ್ತ ಹೆಜ್ಜೆ ಹಾಕಿದಳು ಬೇರೆ ಕೆಲಸ ಹುಡುಕಬೇಕೆಂದು.

ಎಲ್ಲಾ ನೋಡುತ್ತಿದ್ದ ವಾಚ್ಮನ್ ತಲೆಕೆರೆದುಕೊಂಡ ಏನೂ ಅರ್ಥವಾಗದೇ.

ಇಲ್ಲಿಯತನಕ ಅಲ್ಲೇ ನಿಂತಿದ್ದ ಕಾರೊಂದು ಸಮನ್ವಿತಾ ಕ್ಯಾಬ್ ಹತ್ತಿದಾಕ್ಷಣ ಅದನ್ನು ಹಿಂಬಾಲಿಸಿತು. ಅವಳು ತನ್ನ ಕ್ವಾಟ್ರಸ್ ಮುಂದೆ ಇಳಿದು ಒಳ ಹೋದ ಮೇಲೆ ಹಿಂಬಾಲಿಸಿಕೊಂಡು ಬಂದಿದ್ದ ಕಾರಿನಲ್ಲಿದ್ದ ವ್ಯಕ್ತಿ ತನ್ನ ಫೋನ್ ತೆಗೆದು ಅಭಿರಾಮ್ ಗೆ ಕರೆ ಮಾಡಿದ.

           ******ಮುಂದುವರೆಯುತ್ತದೆ*******



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ