ಭಾನುವಾರ, ಜೂನ್ 28, 2020

ಅನೂಹ್ಯ 25

ಸಮನ್ವಿತಾ ಕ್ಯಾಬ್ ಹತ್ತಿದಾಕ್ಷಣ ಅದನ್ನು ಕಾರೊಂದು ಹಿಂಬಾಲಿಸಿತು. ಅವಳು ತನ್ನ ಕ್ವಾಟ್ರಸ್ ಮುಂದೆ ಇಳಿದು ಒಳ ಹೋದ ಮೇಲೆ ಹಿಂಬಾಲಿಸಿಕೊಂಡು ಬಂದ ಕಾರಿನಲ್ಲಿದ್ದ ವ್ಯಕ್ತಿ ಮುಕ್ಕಾಲು ಮುಖ ಮುಚ್ಚಿದ್ದ ತನ್ನ ಟೋಪಿಯ ಕೆಳಗಿದ್ದ ಬಾಯಿಗೆ ಸಿಗಾರ್ ಸಿಕ್ಕಿಸಿ ಹೊಗೆ ಬಿಡುತ್ತಾ ತನ್ನ ಫೋನ್ ತೆಗೆದು ಅಭಿರಾಮ್ ಗೆ ಕರೆ ಮಾಡಿದ.

ಕಥೆಯಲ್ಲಿ ಮುಂದೆ ಸಾಗುವ ಮುನ್ನ ಈ ಕಾರಿನಲ್ಲಿನ ವ್ಯಕ್ತಿಯ ಬಗ್ಗೆ ನಿಮಗೆ ಹೇಳಲೇಬೇಕು. ಅಂಥಾ ಯದ್ವಾತದ್ವಾ ಗ್ರೇಟ್ ವ್ಯಕ್ತಿ ಇವ್ನು.

ಇವನ ನಾಮಧೇಯ ವೈಭವ್. ಇವನ ಬಗ್ಗೆ ಹೇಳಬೇಕೆಂದರೆ ಇವನೊಂಥರಾ ಮ್ಯೂಸಿಯಂ ಪೀಸ್. ದೇವ್ರು ಪೂರಾ ಕನ್ಫ್ಯೂಷನಲ್ಲಿ ತಲೆಬಿಸಿಯಾಗಿ ಸೃಷ್ಟಿಸಿರೋ ಮಾಸ್ಟರ್ ಪೀಸ್ ಈ ವೈಭವ್. ಪ್ರಪಂಚದಲ್ಲಿ ಇವನ ತರ ವೇಸ್ಟ್ ಬಾಡಿ ಇನ್ನೊಬ್ಬರು ಇರ್ಲಿಕ್ಕೆ ಸಾಧ್ಯವೇ ಇಲ್ಲ ಅನ್ನೋದು ಇವನ ಅಪ್ಪನ ಅಂಬೋಣ.(ಅಪ್ಪನ ಬಗ್ಗೆ ಇವನ ಅಭಿಪ್ರಾಯವೂ ಡಿಟ್ಟೋ ಸೇಮ್)

ವೈಭವ್ ಅಭಿರಾಮ್ ನ ಚಡ್ಡಿದೋಸ್ತ್. ಮೊದಲಿನಿಂದಲೂ ಒಟ್ಟಿಗೆ ಆಡಿ ಬೆಳೆದವರು. ಅವರಿಬ್ಬರ ಆಸಕ್ತಿ, ಅಭಿರುಚಿ ಎಲ್ಲಾ ವಿಭಿನ್ನವಾದರೂ ಗೆಳೆತನಕ್ಕೆ ಇದ್ಯಾವುದೂ ಅಡ್ಡಿಯಾಗಿರಲಿಲ್ಲ. ವೈಭವ್ ತಂದೆ ನಗರದ ಹೆಸರಾಂತ ಕ್ರಿಮಿನಲ್ ಲಾಯರ್ ಶೇಷಗಿರಿ.

ಹೆಚ್ಚು ಆದಾಯ ಕೊಡುತ್ತೇ ಅಂತ ಶ್ರೀಗಂಧದ ಮರ ನೆಡೋ ಬದಲು, ಅಪ್ಪ ಹಾಕಿದ ಆಲದ ಮರಕ್ಕೇ ನೇಣು ಹಾಕ್ಕೊಳ್ಳೋದು ಒಳ್ಳೇದು ಎಂಬ ಅಭಿಪ್ರಾಯ ಹೊಂದಿದ ವೈಭವ್ ಲಾ ಕಾಲೇಜು ಸೇರಿದ್ದ. ಅಪ್ಪನ ವೃತ್ತಿ. ತಾನೂ ಲಾ ಓದಿ, ಅಪ್ಪ ಒಪ್ಪಿದ್ರೆ ಅವರ ಆಫೀಸ್ ಟೇಕ್ ಓವರ್ ಮಾಡೋದು, ಒಪ್ಪಿಲ್ಲ ಅಂದ್ರೆ ಹೈಜಾಕ್ ಮಾಡಿದ್ರಾಯ್ತು, ಆಮೇಲೆ ಲೈಫ್ ಜಿಂಗಾಲಾಲಾ ಅಂತ ವೈಭವೋಪೇತ ಯೋಜನೆ ಹಾಕಿ ವೈಭವ್ ಕಾನೂನು ಕಾಲೇಜಿಗೆ ಬಲಗಾಲಿಟ್ಟು ಎಂಟ್ರಿ ಕೊಟ್ಟ.

ಲಾ ಓದಲು ಕಾಲೇಜು ಸೇರಿದ್ದು ಹೌದಾದರೂ ಕ್ಲಾಸ್ ರೂಮಿನಲ್ಲಿ ಕುಳಿತು ಕೇಸ್ ಸ್ಟಡಿ ಮಾಡಿದ್ದಕ್ಕಿಂತ ಕ್ಯಾಂಪಸ್ ಕಾರಿಡಾರಿನಲ್ಲಿ ಹುಡುಗೀರಿಗೆ ಕಾಳು ಹಾಕ್ಕೊಂಡು ಹೆಣ್ಮಕ್ಕಳ ಕಣ್ಣೋಟದ ಅನಾಲಿಸಿಸ್ ಮಾಡಿದ್ದೇ ಜಾಸ್ತಿ ಎನ್ನಬಹುದು. ಹಾಗಂತ ಅವನೇನು ದಡ್ಡನಲ್ಲ. ಒಮ್ಮೆ ಗಮನವಿಟ್ಟು ಕೇಳಿದರೆ ಮತ್ತೆಂದೂ ಅದನ್ನು ಮರೆಯದ ಕುಶಾಗ್ರಮತಿ. 

ಆದರೆ ಪಾಠ ಕೇಳಲು ನಮ್ಮ ಕೃಷ್ಣನಿಗೆ ಮನಸ್ಸಿಲ್ಲ. ಅವನಿಗೆ ಭಗವದ್ಗೀತೆಯ ಅಧ್ಯಾಯದಂತಹ  IPC ಸೆಕ್ಷನ್ ಗಳಿಗಿಂತ, ಬೃಂದಾವನದಂತಹ ಕಾಲೇಜು ಕ್ಯಾಂಪಸಿನ ಚೆಂದ ಚೆಂದದ ಗೋಪಿಕೆರ ಸಂಗವೇ ಪ್ರಿಯ.

ಅಂತೂ ಇಂತೂ ಲಾ ಮುಗಿಸಿ ಅಪ್ಪನ ಆಲದಮರದ ನೆರಳಿನಲ್ಲಿ ಇರುವ ಎಂದುಕೊಂಡು ಅವರ ಆಫೀಸ್ ಹೊಕ್ಕಿದ್ದ. ಹೇಗೂ ನಮ್ಮಪ್ಪನದೇ ಆಫೀಸ್ ನಾನೇ ಭಾವಿ ಓನರ್. ಅಪ್ಪನ ಛೇಂಬರ್ ನ ಪಕ್ಕ ನನಗೊಂದು ಕ್ಯಾಬಿನ್ ಪಕ್ಕಾ ಎನ್ನುವ ಆಸೆಯಲ್ಲಿ ಬಂದ ಹುಡುಗನಿಗೆ ಅಪ್ಪ ಶಾಕ್ ಕೊಡೋದಾ?

ಕ್ಯಾಬಿನ್ ಹೋಗಲಿ ಕುಳಿತುಕೊಳ್ಳಲು ಸರಿಯಾದ ಛೇರ್ ಕೂಡಾ ಇಲ್ಲದಂತಹಾ ಒಂದು ಪೋಸ್ಟ್ ಅವನಿಗಾಗಿಯೇ ಕ್ರಿಯೇಟ್ ಮಾಡಿ ಕೊಟ್ಟಿದ್ದರು ಅವನಪ್ಪ.  ಅವರ ಆಫೀಸಿನಲ್ಲೇ ಅತೀ ಹೆಚ್ಚು ಸ್ಟ್ರಿಕ್ಟ್ ಆಗಿದ್ದ ರಾಮಲಿಂಗ ಅವರ ಜೂನಿಯರ್ ಪೆದಂ ಪರಂಧಾಮನ (ಹೇಳಿದ್ದಕ್ಕೆಲ್ಲಾ ಉಲ್ಟಾ ಮಾತಾಡುವುದನ್ನು ತುಳುವಿನಲ್ಲಿ ಪೆದಂ ಎನ್ನುತ್ತಾರೆ)  ಅಸಿಸ್ಟೆಂಟ್ ಆಗಿ ವೈಭವ್ ಅಪಾಯಿಂಟ್ ಆಗಿದ್ದ. ರಾಮಲಿಂಗ ಹಳೆತಲೆ. ತುಂಬಾ ಸ್ಟ್ರಿಕ್ಟ್. ಅದು ಸಾಲದು ಅಂತ ಚೊರೆ ಪಾರ್ಟಿ ಪರಂಧಾಮ ಬೇರೆ. ತಾನು ಹೇಳಿದ್ದೇ ಸರಿ ಎಂಬ ಪೆದಂ ವಾದಿ. ವೈಭವ್ ನ ಸಾಹಸಗಾಥೆಗಳನ್ನು ಕೇಳಿ ಕೇಳಿ, ಬಿ.ಪಿ ಏರಿಸಿಕೊಂಡಿದ್ದ ಶೇಷಗಿರಿ, ತನ್ನ ಮಗ ಅನ್ನುವ ಯಾವ ಕನ್ಸೀಷನ್ ಕೂಡಾ ತೋರಿಸ್ಬೇಡಿ ಅಂತ ಖುದ್ದಾಗಿ ಹೇಳಿಬಿಟ್ಟಿದ್ದರು. ಹಾಗಾಗಿ ‌ವೈಭವ್ ನ ಪರಿಸ್ಥಿತಿ ರುಬ್ಬುಗುಂಡಿನಲ್ಲಿ ಅಪ್ಪಚ್ಚಿಯಾದ ತೆಂಗಿನತುರಿಯಂತಾಗಿತ್ತು. ಇವರ ಜೊತೆ ಏಗುತ್ತಾ ವೈಭವ್ ಗೆ ಈ ಆಲದಮರಕ್ಕಿಂತ ಗಂಧದ ಕೊರಡೇ ವಾಸಿ ಎನಿಸಿಬಿಟ್ಟಿತ್ತು. 

ಇದೇ ಟೆನ್ಷನಿನ್ನಲ್ಲಿ ಒಂದು ದಿನ ಬೆಳಿಗ್ಗೆ ಕನ್ನಡಿ ನೋಡುತ್ತಾ ತಲೆಬಾಚುತ್ತಿದ್ದವನಿಗೆ ಹಾರ್ಟ್ ಅಟ್ಯಾಕ್ ಅಗುವುದೊಂದು ಬಾಕಿ….. ಮಿರಿಮಿರಿ ಮಿಂಚುವ ಕಪ್ಪು ಕೇಶರಾಶಿಯ ನಡುವೆ ಒಂದು ತೆಳು ಬೆಳ್ಳಿ ರೇಖೆ!

ಒಂದು ಬಿಳಿ ಕೂದಲು ಕಂಡದ್ದೇ ಅವನ ರೋಧನೆ, ವೇದನೆ ಮಿತಿಮೀರಿ ಸ್ವರ್ಗ ನರಕಗಳ ಬಾಗಿಲು ಸೀಳಿ ತ್ರಿಮೂರ್ತಿಗಳಿಗೂ, ಯಮಧರ್ಮನಿಗೂ ಕಿವಿಯಲ್ಲಿ ರಕ್ತಬರುವಂತಾಯಿತು.

ನಾಲ್ವರೂ ಒಟ್ಟಿಗೆ ಅವನ ಕನಸಿನಲ್ಲಿ ಪ್ರತ್ಯಕ್ಷರಾಗಿ, "change the job dude" ಎಂದರಂತೆ. ಹಾಗಾಗಿ ಲಾಯರ್ ಗಿರಿಗೆ ಗುಡ್ ಬೈ ಹೇಳಿದ್ದ. ಶೇಷಗಿರಿ ಅವರಿಗೆ ತಮ್ಮ ಹೆಗಲೇರಿ ಪವಡಿಸಿದ್ದ ಶನಿ ಎದ್ದುಹೋಯಿತೆಂಬ ಖುಷಿಗೆ ಏರುತ್ತಿದ್ದ ಬಿ.ಪಿ, ಶುಗರ್ ಫುಲ್ ಕಂಟ್ರೋಲಿಗೆ ಬರುವಂತಾಯಿತು.

ಮುಂದೇನು ಅಂತ ಯೋಚಿಸುತ್ತಾ ಟೈಮ್ ಪಾಸಿಗೆಂದು ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳನ್ನು ನೋಡುವ ಅಭ್ಯಾಸ ಬೆಳೆಸಿಕೊಂಡರೆ ಈ ಚಟ ಅವನ ನೆತ್ತಿಗೇರಿದ್ದಲ್ಲಾ ಮಾರ್ರೇ?

ಕವಲು ದಾರಿ, ಯು ಟರ್ನ್, ಕವಚ, ವಿಸ್ಮಯ, ಬೀರ್ ಬಲ್,  ತುಪಾರಿವಾಲನ್, ಇಮೈಕಾ ನೋಡಿಗಳ್, ರಾತ್ಸಸನ್ ಈ ತರ ಚಲನಚಿತ್ರಗಳನ್ನು ನೋಡಿದ್ದೇ ತನ್ನನ್ನೇ ಶೆರ್ಲಾಕ್ ಹೋಮ್ಸ್ ಎಂದು ಎಣಿಸತೊಡಗಿದ. ತಾನು ಹುಟ್ಟಿದ್ದೇ ಡಿಟೆಕ್ಟಿವ್ ಆಗಲು, ಕ್ರಿಮಿನಾಲಜಿ ಓದೋ ಬದ್ಲು ಲಾ ಓದಿ ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ಹಾಲ್ ನ ಸೀಲಿಂಗಿನಲ್ಲಿ ತಿರುಗುತ್ತಿದ್ದ ಉಷಾ ಫ್ಯಾನಿನ ಕೆಳಗೆ ಅವನಿಗೆ ಜ್ಞಾನೋದಯವಾಗತೊಡಗಿತು. ಬೆಲ್ ಬಾಟಮ್ ಚಿತ್ರ ನೋಡಿದ್ದೇ ತಡ, ಡಿಟೆಕ್ಟಿವ್ ದಿವಾಕರನಂತೆ ನಾನೂ ಡಿಟೆಕ್ಟಿವ್ ವೈಭವ್ ಆಗೇ ತೀರುವೆನೆಂದು ಡಿಸೈಡ್ ಮಾಡಿಬಿಟ್ಟ....

ಡಿಸೈಡ್ ಮಾಡಿದ ನಂತರ ಮೊದಲು ಮಾಡಿದ ಕೆಲಸ ಒಂದು ಉದ್ದದ ಕಪ್ಪನೆಯ ಕೋಟು, ಮುಕ್ಕಾಲು ಮುಖ ಮುಚ್ಚುವ ಹ್ಯಾಟು ಹಾಗೂ ಒಂದು ಸಿಗಾರ್ ಖರೀದಿಸಿದ್ದು. ಎಷ್ಟು ಫಿಲಂ ನೋಡಿಲ್ಲ? ಈ ಕಾಸ್ಟ್ಯೂಮ್ ಇಲ್ಲಾ ಅಂದ್ರೆ ಅವ್ನು ಡಿಟೆಕ್ಟಿವೇ ಅಲ್ಲ ಎಂದುಕೊಂಡವನು, ಕಾಸ್ಟ್ಯೂಮ್ ಧರಿಸಿ ಮನೆಗೆ ಬಂದಾಗ ಅವನಮ್ಮ ಯಾರೋ ಕಿಡ್ನಾಪರ್ ಬಂದಿದ್ದಾನೆ ಅಂತ ಎಣಿಸಿ ಹಿಡಿಸುಡಿ ಹಿಡಿದು ಅಟ್ಟಾಡಿಸಿದ್ದೊಂದೇ ಭಾಗ್ಯ.

ಇವರಿಗೆಲ್ಲಾ ಏನು ಗೊತ್ತಾಗುತ್ತೆ ನನ್ನ ಬೆಲೆ ಎಂದವನೇ ತನ್ನ ಸಾಮರ್ಥ್ಯವನ್ನು ಬಾಲ್ಯ ಸ್ನೇಹಿತನಲ್ಲದೇ ಬೇರ್ಯಾರೂ ಅರಿಯಲಾರರು ಎಂದೆಣಿಸಿ ಅಭಿರಾಮ್ ಆಫೀಸಿಗೆ ಹಾಜರಾಗಿದ್ದ. ಇವನನ್ನು ನೋಡಿದ್ದೇ ಅಭಿರಾಮ್ ನಗು ಕಂಟ್ರೋಲ್ ಮಾಡಿಕೊಳ್ಳಲಾಗದೇ ಬಿದ್ದು ಬಿದ್ದು ನಗತೊಡಗಿದ್ದ. 

"ಲೋ, ಏನೋ ಇದು? ಯಾವ ಸ್ಕೂಲ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಅಟೆಂಡ್ ಆಗ್ತಿದ್ದೀಯಾ. ಅದು ಈ ಶರ್ಲಾಕ್ ಹೋಮ್ಸ್ ಗೆಟಪ್ಪಿನಲ್ಲಿ" ನಗುವಿನ ಮಧ್ಯೆ ಕೇಳಿದಾಗ ನಮ್ಮ ಡಿಟೆಕ್ಟಿವ್ ವೈಭವ್ ಗೆ ಸಂತೋಷವೋ ಸಂತೋಷ.

"ಮಚ್ಚಾ, ಇಡೀ ಪ್ರಪಂಚದಲ್ಲಿ ನನ್ನ ಬುದ್ಧಿಯನ್ನು ಅಳೆಯೋ ಸಾಮರ್ಥ್ಯ ಇರೋದು ನಿನಗೊಬ್ಬನಿಗೇ ನೋಡೋ. ಎಷ್ಟು ಕರೆಕ್ಟಾಗಿ ಗೆಸ್ ಮಾಡಿದೆ. ಇವತ್ತಿನಿಂದ ನಾನು ಇಂಡಿಯನ್ ಶೆರ್ಲಾಕ್ ಹೋಮ್ಸ್, ಈ ದೇಶದ ಏಕೈಕ ಹೋಪ್ಸ್... ಡಿಟೆಕ್ಟಿವ್ ವೈಭವ್. ಏನಾದ್ರೂ ಕೇಸಿದ್ರೆ ಕೊಡೋ, ಚಿಟ್ಕಿ ಚಿಟ್ಕಿ ಹೊಡೆಯೋದರೊಳಗೆ ಸಾಲ್ವ್ ಮಾಡ್ತೀನಿ" ಎಂದು ದುಂಬಾಲು ಬಿದ್ದ.

ಅಭಿರಾಮ್ ನಿಗೆ ಹೋದಲ್ಲಿ ಬಂದಲ್ಲಿ ಇವನ ಕಾಟ ಜಾಸ್ತಿಯಾದಾಗ, "ಅಯ್ಯಾ ಪ್ರಾರಬ್ಧವೇ ,ನಿನ್ನ ಬುದ್ಧಿಮತ್ತೆ ಪರೀಕ್ಷಿಸುವಂತಹ ದೊಡ್ಡ ಕೇಸು ಯಾವುದೂ ಸಧ್ಯಕ್ಕೆ ನನ್ನ ಬಳಿ ಇಲ್ಲ. ಒಂದುವೇಳೆ ಅಂಥ ಪರಿಸ್ಥಿತಿ ಬಂದ್ರೆ ಖಂಡಿತ ನಿನ್ನೇ ಕಾಂಟ್ಯಾಕ್ಟ್ ಮಾಡ್ತೀನಿ" ಎಂದು ಅವನನ್ನು ಸಾಗಹಾಕಿದ್ದ.

ಇಂದು ಸಮನ್ವಿತಾಳ ಪರಿಸ್ಥಿತಿ ಕಂಡು ಅವನಿಗೆ ಹಿಂಸೆಯೆನಿಸಿತ್ತು. ಅವಳ ನೋವಿಗೇ ತಾನೂ ಪರೋಕ್ಷವಾಗಿ ಕಾರಣ ಎನಿಸಿದ್ದೇ ಈ ಇಡೀ ಪ್ರಕರಣವನ್ನು, ಇದರ ಒಳಸುಳಿಗಳನ್ನು ತಿಳಿಯಬೇಕೆಂದು ಬಲವಾಗಿ ಅನಿಸತೊಡಗಿತ್ತು. ಈ ಕೆಲಸ ತಾನೇ ಸ್ವತಃ ಮಾಡಲು ಕಷ್ಟ ಯಾರದ್ದಾದರೂ ಸಹಾಯ ಬೇಕೆನಿಸಿದಾಗ ತಟ್ಟನೇ ನೆನಪಿಗೆ ಬಂದವ ನಮ್ಮ ಡಿಟೆಕ್ಟಿವ್ ವೈಭವ್......

ಮಾನಿನಿಯರ ಸೌಂದರ್ಯೋಪಾಸಕ ಹಾಗೂ ಫಿಲಂ ನೋಡಿ ನೋಡಿ  ಸ್ವಲ್ಪ (ಸ್ವಲ್ಪಕ್ಕಿಂತ ಚೂರು ಜಾಸ್ತಿ) ಓವರ್ ಆಕ್ಟಿಂಗ್ ಮಾಡ್ತಾನೆ ಅನ್ನೋದು ಬಿಟ್ರೆ ಹೇಳಿದ ಕೆಲಸ ಪಕ್ಕಾ ನೀಟಾಗಿ ಮಾಡುತ್ತಾನೆ ವೈಭವ್. ಜೊತೆಗೆ ಬೆರಳು ತೋರಿದರೆ ಹಸ್ತ ನುಂಗುವ ಕುಶಾಗ್ರಮತಿ.

ಹಾಗಾಗಿಯೆ ಅವನಿಗೆ ಈ ಕೆಲಸ‌ ಒಪ್ಪಿಸಿದ್ದ ಅಭಿರಾಮ್.

                     ***************

ಫೋನ್ ರಿಂಗಣಿಸಿ ಸ್ಕ್ರೀನಲ್ಲಿ 'ಅಂಡೆ ಪಿರ್ಕಿ' (ತುಳುವಿನಲ್ಲಿ ಮೆಂಟಲ್ ಅಥವಾ ಎಡವಟ್ಟುರಾಯ ಅಂತ) ಎಂದು ಡಿಸ್ಪ್ಲೇ ಆದಾಗ ಆ ಕರೆಗಾಗಿಯೇ ಕಾದಿದ್ದವನಂತೆ ಅಭಿರಾಮ್ ತಟ್ಟನೇ ಫೋನೆತ್ತಿದ.

"ಹೇಳೋ ಏನಾಯ್ತು?" ಕಾತರದಿಂದ ಕೇಳಿದ.

"ಬೀರ್, ನೀನು ಹೇಳಿದಾಗೆ‌ ರಾವ್ ಮ್ಯಾನ್ಶನ್ ಹೊರಗೆ ಕಾಯ್ತಿದ್ದೆ. ನೀನು ಹೇಳಿದ ಹುಡುಗಿ ಈಗ ಒಂದು ಅರ್ಧ ಗಂಟೆಗೆ ಮುಂಚೆ ಮನೆಯಿಂದ ಹೊರಗೆ ಬಂದ್ಲು. ತುಂಬಾ ಡಿಪ್ರೆಸ್ ಆಗಿದ್ದಂತೆ ಕಂಡಿತು. ಅವಳ ಹಿಂದೆನೇ‌ ಇನ್ನೊಬ್ಳು ಓಡ್ಕೊಂಡು ಬಂದ್ಲು. ಕುಳ್ಳಿ, ಡುಮ್ಮಿ ಆದ್ರೂ ಕೆಂಪಗೆ ನೋಡೋಕೆ ಟೊಮೇಟೊ ತರ ಸೂಪರ್ ಆಗಿದ್ಲು ಮಚ್ಚಾ. ಬಾದಾಮ್ ತರ ಕಣ್ಣು, ಗಿಳಿ ಮೂಗು, ದಾಳಿಂಬೆ ಹಲ್ಲು….. ವಾವ್ ವಾವ್... ಆದರೆ ನಾನ್ ಸ್ಟಾಪ್ ವಟರ್ ವಟರ್ ಅಂತಿದ್ಲು ಥೇಟ್ ಕಪ್ಪೆನೇ....."(ಈ ಬೀರ್ ಯಾರು ಅಂತ ಗೊಂದಲ ಆಯ್ತಾ?ಎಲ್ಲರಿಗಿಂತ ವಿಭಿನ್ನವಾಗಿ ತನ್ನ ಆಪ್ತಮಿತ್ರನನ್ನು ಕೂಗಬೇಕೆಂಬ ವೈಭವನ ಚಟದಿಂದಾಗಿ ಅಭಿರಾಮ್ ಇವನ ಬಾಯಲ್ಲಿ "ಬೀರ್" ಎಂಬ ನಾಮಧೇಯದಿಂದ ಕರೆಯಲ್ಪಡುತ್ತಾನೆ. ಅಭಿರಾಮನ ಹೆಸರಿನ ಮಧ್ಯದ ಎರಡು ಅಕ್ಷರಗಳಾದ "ಭಿ ಹಾಗೂ ರಾ" ಎರಡನ್ನೂ ಸೇರಿಸಿ ಅದಕ್ಕೊಂಚೂರು ಫ್ಯಾನ್ಸಿ ಲುಕ್ ಕೊಟ್ಟು ಬೀರ್ ಅಂತ ಕರೀತಾನೆ ನಮ್ಮ ಎ.ಪಿ)

ವೈಭವ್ ವರ್ಣನೆ ಮುಂದುವರೆಯುತ್ತಿದ್ದಂತೆ ಅಭಿರಾಮ್ ಅವಡುಗಚ್ಚಿ, "ಹೌದಾ, ಹಾಗಿದ್ರೆ ನನಗ್ಯಾಕೋ ಫೋನ್ ಮಾಡ್ದೇ? ಅವಳನ್ನ ಫಾಲೋ ಮಾಡಿ ಅವಳ ಮನೆಗೆ ಹೋಗಿ , ನಿನ್ನ ಅತ್ತೆ ಮಾವನ ಕಾಲು ಹಿಡಿದು ಅವಳಿಗೆ ತಾಳಿ ಕಟ್ಟೋದು ತಾನೆ ಈಡಿಯಟ್?" ಸಿಟ್ಟಿನಲ್ಲಿ ಕನಲಿದ.

"ಹಾಗೇ ಮಾಡೋಣ ಅಂದ್ಕೊಂಡೆ ಕಣೋ, ಆದ್ರೆ ಬಡ್ಡಿಮಗಂದ್ ಅವಳ ಜೊತೆ ಒಬ್ಬ ಹುಡುಗ ಇದ್ದ.  ಮೋಸ್ಟಲೀ ನನ್ನ ಭಾಮೈದ ಇರ್ಬೇಕು. ಅವನನ್ನ ನೋಡಿ ಭಯ ಆಯ್ತೋ...." 

"ಮಗನೇ... ನಾನು ನಿನ್ಗೆ ಹೇಳಿದ್ದೇನು, ನೀನು ಮಾಡಿರೋದೇನು? ನನ್ಗೆ ಬರ್ತಿರೋ ಕೋಪಕ್ಕೆ ನಿನ್ನ ಹುಡುಕಿ ಹಳೇ ಕೆರ ಕಿತ್ತೋಗೋ ತರ ಹಾಕ್ತೀನಿ ನೋಡು….. ಹೋಗಿ ಹೋಗಿ ನಿನ್ನಂಥ ಎಡವಟ್ಟು ರಾಯಂಗೆ ಕೆಲಸ ಕೊಟ್ಟೆ ನೋಡು... ನಾನು ಹೋಗಿ ಯಾವ್ದಾದ್ರೂ ಹಾಳು ಬಾವಿಗೆ ಹಾರ್ಬೇಕು"

"ಮಚ್ಚಾ, ಹುಡುಕ್ಲಾ?"

"ಏನನ್ನ?"

"ಅದೇ ಹಾಳು ಬಾವಿ ಹುಡುಕ್ಲಾ? ಹಾರೋಕೆ…."

"ಯಪ್ಪಾ ಪ್ರಳಯಾಂತಕ, ಕಳ್ದೊಗಿರೋ ನಿನ್ನ ಮೆದುಳು ಹುಡ್ಕೋ ಸಾಕು ಕತ್ತೆ ಕಿರುಬ. ಮೊದ್ಲು ಮರ್ಯಾದೆಯಿಂದ ಫೋನಿಟ್ಟು ಸಾಯಿ."

"ಹೇ ಹೇ ಬೀರ್...... ಸಾರಿ ಕಣೋ. ಈ ಹಾಳಾದ್ದು ಕಣ್ಣು, ಎಷ್ಟು ಬೇಡ ಅಂದ್ರೂ ಆ ಕುಳ್ಳಿ ಹಿಂದೆನೇ ಹೋಗ್ತಿತ್ತು. ಅದಕ್ಕೆ ಫ್ಲೋ ಅಲ್ಲಿ ಅವಳ ಬಗ್ಗೆ ಸ್ವಲ್ಪ ಜಾಸ್ತಿ ಹೇಳ್ಬಿಟ್ಟೆ. ಅದು ಬಿಡು. ಇದು ನನ್ನ ಮೊದಲ ಕೇಸ್. ಹೊಗೆ ಹಾಕ್ಸೋ ಮಾತೇ ಇಲ್ಲ. ನಾನು ಸಮನ್ವಿತಾನ್ನ ಫಾಲೋ ಮಾಡಿದ್ನಪ್ಪ. ಅವಳು ರಾವ್ ಮ್ಯಾನ್ಶನ್ ಇಂದ ಹೊರಟು ಸೀದಾ ಧನ್ವಂತರಿ ಆಸ್ಪತ್ರೆ ಸ್ಟಾಫ್ ಕ್ವಾಟ್ರಸ್ ಗೆ ಬಂದ್ಲು. ನಾನು ಆ ಕ್ವಾಟ್ರಸ್ ಎದುರೇ ಇದ್ದೀನಿ. ಈಗೇನು ಮಾಡೋದು" 

"ಅಬ್ಬಾ ಸಧ್ಯ, ಹೇಳಿದ ಕೆಲಸ ಹಾಗೋ ಹೀಗೋ ಮಾಡಿದ್ಯಲ್ಲ. ನನ್ನ ಪೂರ್ವಜನ್ಮದ ಸುಕೃತ. ಬಹುಶಃ ಅವಳ ಕೊಲೀಗ್ಸ್ ಯಾರದ್ದಾದ್ರೂ ಕ್ವಾಟ್ರಸ್ ಇರಬಹುದಾ?" ಯೋಚಿಸುತ್ತಾ ಕೇಳಿದ ಅಭಿರಾಮ್.

ಈಗ ನಮ್ಮ ಜೇಮ್ಸ್ ಬಾಂಡ್ ಅವರ ತಲೆ ವೇಗವಾಗಿ ಓಡತೊಡಗಿತು. " ಇಲ್ಲಾ ಬೀರ್, ಐ ಥಿಂಕ್ ಅದು ಅವಳದೇ ಕ್ವಾಟ್ರಸ್ ಇರಬೇಕು. ಯಾಕಂದ್ರೆ ಅದು ಲಾಕ್ ಆಗಿತ್ತು. ಅವಳೇ ಲಾಕ್ ಓಪನ್ ಮಾಡಿ ಒಳಗೆ ಹೋಗಿದ್ದು" ಹೇಳಿದ.

ಅಭಿರಾಮ್ ಏನೂ ಅರ್ಥವಾಗದೆ ಕುಳಿತ. ಹೇಗಾದರೂ ಮಾಡಿ ಅವನ ಎಲ್ಲಾ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಿತ್ತು. ಮುಖ್ಯವಾಗಿ ರಾವ್ ಬಂಗಲೆಯಲ್ಲಿ ಅಪ್ಪ ಮಗಳ ನಡುವೆ ಏನು ಮಾತುಕತೆಯಾಗಿದೆಯೆಂದು ತಿಳಿಯಬೇಕಿತ್ತು ಅವನಿಗೆ. ರಾವ್ ದಂಪತಿಗಳ ಅಸಲೀ ಮುಖ, ಸಮನ್ವಿತಾಳ ಅಂತರಾಳ ಎರಡೂ ಅವರ ಇಂದಿನ ಮಾತುಕತೆಯಲ್ಲಿ ಸ್ಪಷ್ಟವಾಗಿರುತ್ತದೆ. ಆದರೆ ತಿಳಿಯುವುದು ಹೇಗೆ? ಅವನಿಗೆ ಅರ್ಥವಾಗಲಿಲ್ಲ.

"ಏನು ಯೋಚಿಸ್ತಿದ್ದೀ ಬೀರ್?" ಲೈನಿನಲ್ಲಿದ್ದ ವೈಭವ್ ಎಚ್ಚರಿಸಿದಾಗ, ಎಲ್ಲಾ ವಿಷಯವನ್ನು ವೈಭವನೊಂದಿಗೆ ಹಂಚಿಕೊಂಡು ಪರಿಹಾರ ಕೇಳುವುದು ಸೂಕ್ತ ಎನಿಸಿತು ಅವನಿಗೆ. ಸತ್ಯಂ ರಾವ್ ಅವರ ಪಾರ್ಟಿಯಲ್ಲಿ  ಸಮನ್ವಿತಾಳನ್ನು ಮೊದಲು ಕಂಡದ್ದು, ರಾವ್ ಅವರು ತಮ್ಮಿಬ್ಬರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದು, ತನ್ನ ನಿರಾಕರಣೆ, ಮನೆಯವರ ಒತ್ತಾಯ, ಅವಳೊಂದಿಗೆ ನೇರವಾಗಿ ಮಾತನಾಡಿ ವಿಷಯ ತಿಳಿಯಲು ಮನೆಗೆ ಆಹ್ವಾನಿಸಿದ್ದು, ವಿವಾಹದ ವಿಷಯ ಕೇಳಿದ ನಂತರದ ಅವಳ ವಿಚಿತ್ರ ವರ್ತನೆ, ತನ್ನ ಅನುಮಾನ ಎಲ್ಲವನ್ನೂ ವೈಭವನಿಗೆ ಸಂಕ್ಷಿಪ್ತವಾಗಿ ಹೇಳಿದ.

ತಾನು ಅವಳನ್ನು ಈ ಹಿಂದೆಲ್ಲೋ ನೋಡಿದ್ದೇನೆ ಎನ್ನುವುದೊಂದನ್ನು ಹೊರತು….. ಅದು ಸಧ್ಯಕ್ಕೆ ಅಷ್ಟು ಮುಖ್ಯವಲ್ಲ ಎನಿಸಿತು ಅವನಿಗೆ. ಜೊತೆಗೆ ಅದನ್ನು ತಾನೇ ನೆನಪಿಸಿಕೊಳ್ಳಬೇಕು ಯಾರ ಸಹಾಯವೂ ಇಲ್ಲದೆ ಎಂಬುದು ಅವನ ಬಲವಾದ ಆಸೆ‌....... ಯಾಕೆ?

ಅವನಿಗೂ ತಿಳಿದಿಲ್ಲ…….

ಎಲ್ಲಾ ಕೇಳಿ ವೈಭವ್, "ಅಂದ್ರೆ? ಏನು ನಿನ್ನ ಅನುಮಾನ? ಅವಳ ಅಪ್ಪ ಅವಳಿಗೇ ಗೊತ್ತಿಲ್ಲದೇ ಈ ಮದ್ವೆ ಮಾಡೋಕೆ ಹೊರಟಿದ್ದಾನೆ ಅಂತಾನಾ? ಆರ್ ಯು ಸೀರಿಯಸ್ ಡ್ಯೂಡ್? ಐ ಮೀನ್, ಯಾವ ಅಪ್ಪ ಅಮ್ಮ ಈ ತರ ಮಾಡ್ತಾರೆ? ನನ್ನ ನೋಡಿದ್ರೆ ಮೈ ಮೇಲೆ ತುರ್ಕೆ ಸೊಪ್ಪು ಬಿದ್ಹಾಗೆ ಆಡೋ ನಮ್ಮಪ್ಪನೇ ನನ್ನ ಕೇಳ್ದೆ ನನ್ನ ಮದ್ವೆ ಮಾಡಲ್ಲ. ಇನ್ನು ಆ ಹುಡುಗಿ ನೋಡಿದ್ರೆ ಅಷ್ಟು ಡಿಸೆಂಟಾಗಿದ್ದಾಳೆ. ನೀನು ಮಿಸ್ ಅಂಡರ್ಸ್ಟಾಂಡ್ ಮಾಡ್ಕೊಂಡಿದ್ದಿ ಅನ್ಸುತ್ತೆ" ಎಂದ.

"ಇಲ್ಲ ವೈಭವ್. ಇದು ನನ್ನ ಅನುಮಾನ ಅಲ್ಲ

ಇದೇ ನಿಜ. ಆಮ್ ಡ್ಯಾಮ್ ಶ್ಯೂರ್. ಅವಳಿಗೆ ನಾವು ಹೇಳೋ ಕ್ಷಣದವರೆಗೂ ಈ ಕಲ್ಪನೆಯೇ ಇರಲಿಲ್ಲ. ಆದ್ರೆ ನನಗೆ ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೋಬೇಕು. ರಾವ್ ಮ್ಯಾನ್ಶನ್ ಅಲ್ಲಿ ರಾವ್ ಮತ್ತೆ ಸಮನ್ವಿತಾ ಮಧ್ಯೆ‌ ಏನು ನಡೀತು ಅಂತ ಗೊತ್ತಾದ್ರೆ ಎಲ್ಲಾ ವಿಷಯ ಆಲ್ಮೋಸ್ಟ್ ಕ್ಲಿಯರ್ ಆಗುತ್ತೆ. ಆದ್ರೆ ಹೇಗೆ ಅಂತ ಗೊತ್ತಾಗ್ತಿಲ್ಲ."

ಅಭಿರಾಮ್ ಮಾತು ವೈಭವನಿಗೂ ಸರಿ ಎನಿಸಿತು ‌ಆದರೆ ಹೇಗೆ? ಸಡನ್ನಾಗಿ ವೈಭವ್, "ಯುರೇಕಾ ಯುರೇಕಾ" ಎಂದು ಕಿರುಚಿದ.

"ಲೋ, ಯಾಕೋ ಹೀಗಾಡ್ತೀ. ನನ್ಗೆ ಹಾರ್ಟ್ ಅಟ್ಯಾಕ್ ಆಗೋವರೆಗೂ ಬಿಡಲ್ಲ ಅನ್ಸುತ್ತೆ" ಗೊಣಗಿದ ಅಭಿರಾಮ್

"ಅಲ್ಲಾ ಬೀರ್ ನಾವ್ಯಾಕೆ ಇಷ್ಟು ಯೋಚಿಸ್ತಿರೋದು? ಅಂಗೈಯಲ್ಲಿ ಪಿಜ್ಜಾ಼ ಹಿಡ್ಕೊಂಡು ಊಟಕ್ಕೆ ಊರು ಸುತ್ತಿದಂಗಾಯ್ತು. ನಮ್ಮ ಕುಳ್ಳಿ ಡಾರ್ಲಿಂಗ್ ಇದ್ದಾಳಲ್ಲ. ಅವಳನ್ನೇ ಕೇಳಿದ್ರಾಯ್ತು. ಅವಳು ಸಮನ್ವಿತಾ ಜೊತೆಗೇ ಮನೆಯಿಂದ ಹೊರಗೆ ಬಂದಿದ್ದು. ಸೋ ಅಲ್ಲೇನಾಯ್ತು ಅಂತ ಅವ್ಳಿಗೆ ಪಕ್ಕಾ ಗೊತ್ತಿರುತ್ತೆ" ಸಂತೋಷದಿಂದ ಹೇಳಿದ ವೈಭವ್.

"ಪರವಾಗಿಲ್ಲ ಕಣೋ, ನಿನ್ನ ತಲೆನೂ ಒಮ್ಮೊಮ್ಮೆ ಕೆಲಸ ಮಾಡುತ್ತೆ" ಅಭಿರಾಮ್ ಮಾತಿಗೆ, "ಮತ್ತೆ ನಾನ್ಯಾರು? ಡಿಟೆಕ್ಟಿವ್ ವೈಭವ್. ನಾನೀಗ ಆ ರಾವ್ ಮ್ಯಾನ್ಶನ್ ಹತ್ರ ಹೋಗಿ ಅಲ್ಲೊಬ್ಬ ವಾಚ್ ಮ್ಯಾನ್ ಇದ್ದಾನೆ, ಅವನ ಹತ್ರ ಆ ಕುಳ್ಳಿ ಜಾತಕ ಕಲೆಕ್ಟ್ ಮಾಡ್ತೀನಿ. ನಾಳೆ ಅವಳ ಮನೆಗೆ ಹೋಗೋದೇ. ಸ್ವಾಮಿ ಕಾರ್ಯ, ಸ್ವ ಕಾರ್ಯ ಎರಡೂ ಆಗುತ್ತೆ"  ಹಲ್ಕಿರಿದ.

"ಅಪ್ಪಾ ತಂದೆ, ತಮಗೊಂದು ಉದ್ದಂಡ ನಮಸ್ಕಾರ. ನೀನು ಅವಳ ಅಡ್ರೆಸ್ ಕಲೆಕ್ಟ್ ಮಾಡಿ ನನಗೆ ಮೆಸೇಜ್ ಮಾಡಿ ನಿಮ್ಮನೆಗೆ  ಹೋಗಿ ದಬ್ಬಾಕ್ಕೋ. ನಾನು ನಾಳೆ ಹೋಗಿ ಆ ಹುಡುಗಿ ಹತ್ರ ಮಾತಾಡ್ತೀನಿ" ಹೇಳಿದ.

"ಅದೆಲ್ಲಾ ಆಗಲ್ಲಪ್ಪ, ಇದು ನನ್ನ ಫಸ್ಟ್ ಕೇಸ್. ಅರ್ಧದಲ್ಲೇ ಬಿಡ್ತೀನಾ? ಅಡ್ರೆಸ್ ತಗೋತೀನಿ. ನಾಳೆ ಇಬ್ರೂ ಒಟ್ಟಿಗೆ ಹೋಗೋಣ ನಮ್ಮತ್ತೆ ಮನೆಗೆ" ವೈಭವನ ಮಾತಿಗೆ ಇವನನ್ನು ರಿಪೇರಿ ಮಾಡೋಕಾಗಲ್ಲ ಎಂದುಕೊಂಡು ಸಹಮತಿ ಸೂಚಿಸಿ ಕರೆಕಡಿತಗೊಳಿಸಿದ.

ಹಾಗೇ ಸೋಫಾಕ್ಕೆ ಒರಗಿ ಸೀಲಿಂಗ್ ದಿಟ್ಟಿಸತೊಡಗಿದ. ಸಂಜೆಯಿಂದ ವಿಪರೀತ ಸಂಕಟ ಅವನಿಗೆ. ತಾನು ಸಮನ್ವಿತಾಳನ್ನು ಮಾತನಾಡಲು ಕರೆಯಬಾರದಿತ್ತು ಎಂದು ಒಮ್ಮೆ ಅನಿಸಿದರೆ, ಮರುಕ್ಷಣ, ಹಾಗೆ ಕರೆಯದಿರುತ್ತಿದ್ದರೆ ಈಗಲೂ ಅವಳಿಗೆ ವಿಷಯ ತಿಳಿಯುತ್ತಿರಲಿಲ್ಲ ಎನಿಸುತ್ತಿತ್ತು. ಸತ್ಯಂ ರಾವ್ ಬಗ್ಗೆ ಅಸಹ್ಯವೆನಿಸಿತ್ತು. ಏನಾದರೂ ಈ ಇಡೀ ಪ್ರಕರಣದ ತಲೆಬುಡ ಶೋಧಿಸಬೇಕೆಂಬ ದೃಢನಿಶ್ಚಯಕ್ಕೆ ಬಂದಿದ್ದ. ಮನೆಯಲ್ಲಿ ಯಾರಿಗೂ ಈ ಬಗ್ಗೆ ಏನೂ ತಿಳಿಸಿರಲಿಲ್ಲ. ಮೊದಲು ತನಗೊಂದು ಸ್ಪಷ್ಟತೆ ಸಿಗಲಿ ಆಮೇಲೆ ಹೇಳೋಣ ಎಂಬ ನಿರ್ಧಾರ ಮಾಡಿದ್ದ.

ಆದರೆ ಇದೆಲ್ಲದರ ನಡುವೆ ಸಮನ್ವಿತಾಳ ಬಗ್ಗೆ ಅವನ ಮನೆಯವರ ಅಭಿಪ್ರಾಯ ನಿಜವಾಗಿದ್ದು ಅವನಿಗೆ ಸಂತಸ ತಂದಿತ್ತು. ಅವನ ಮನ ಯಾವಾಗಲೂ ಬಯಸಿದ್ದು ಅದನ್ನೇ. ಅವಳು ರಾವ್ ಅವರಂತಿರಲು ಸಾಧ್ಯವೇ ಇಲ್ಲ ಎಂದು ಅವನ ಮನ ಮೊದಲಿನಿಂದಲೂ ವಾದಿಸಿತ್ತು. ಈಗ ಆ ಬಗ್ಗೆ ನಿರಾಳ…... ಇನ್ನು ನಾಳೆ ವೈಭವ್ ಹೇಳಿದ ಹುಡುಗಿಯನ್ನು ಭೇಟಿಯಾಗಿ ಮಾಹಿತಿ ಪಡೆಯಬೇಕು. ಹಾಗೆಯೇ ಡಾ. ಮೀರಾ ಅವರೊಂದಿಗೂ ಮಾತನಾಡಬೇಕು. ಬಹಳ ಸಮಯದಿಂದ ಅವರಲ್ಲಿ ಕೆಲಸ ಮಾಡುತ್ತಿರುವಳೆಂದರೆ ಅವರಿಗೆ ಅವಳ ಬಗ್ಗೆ ಚೆನ್ನಾಗಿ ತಿಳಿದಿರಬಹುದು.

ಮೀರಾ..... ಧನ್ವಂತರಿ ಆಸ್ಪತ್ರೆ.....

ತಾನು ಸಮನ್ವಿತಾಳನ್ನು ಧನ್ವಂತರಿಯಲ್ಲಿ ನೋಡಿರಬಹುದೇ? ಆಗಾಗ ಅಲ್ಲಿಗೆ ಭೇಟಿ ಕೊಟ್ಟಿದ್ದಿದೆ. ಆಗೆಲ್ಲಾದರೂ‌ ಕಂಡಿರಬಹುದೇ ಇವಳನ್ನು? ಇರಬಹುದೇನೋ. ಆದರೂ ಮನವೇಕೋ ಒಪ್ಪದು.

ಬೇರೆಲ್ಲೋ ನೋಡಿರುವೆನಾ?

ಬರೀ ಗೊಂದಲವೇ ಹೊರತು ಏನೂ ಸ್ಪಷ್ಟವಾಗದು....

ಆದರೆ ತಾನು ಅವಳನ್ನು ಯಾವುದೋ ವಿಶಿಷ್ಟ ಸಂದರ್ಭದಲ್ಲಿ ಭೇಟಿಯಾಗಿದ್ದೇನೆ. ಆ ಸನ್ನಿವೇಶವೇ ಅವಳನ್ನು ಇನ್ನೂ ನನ್ನ ನೆನಪಿನಲ್ಲಿ ಜೀವಂತವಾಗಿ ಉಳಿಸಿದೆ. ಬಹುಶಃ ಅಂದಿನಿಂದ ನನ್ನ ಮನಸ್ಸು ನನಗೇ ತಿಳಿಯದೇ ಸುಪ್ತವಾಗಿ ಅವಳನ್ನು ಅರಸಿದೆ.

ಆದರೆ ಎಲ್ಲಿ?

ಹೀಗೆ ಸಮನ್ವಿತಾಳನ್ನು ಹಿಂದೆ ಎಲ್ಲಿ ನೋಡಿರುವೆನೆಂದು ಅಭಿರಾಮ್ ತಲೆಕೆಡಿಸಿಕೊಂಡಿದ್ದರೇ, ಆ ಪ್ರಶ್ನೆಯ ಉತ್ತರ ಅವನಿಗಾಗಿಯೇ ಕಾಯುತ್ತಿತ್ತು.

ಅತೀ ಶೀಘ್ರದಲ್ಲಿ ಈ ಪ್ರಶ್ನೆಯ ಉತ್ತರ ಅವನ ಕಣ್ಮುಂದೆ ಬರಲಿತ್ತು. ಅವನು ಅಷ್ಟು ಆಸ್ಥೆಯಿಂದ ನೆನಪಿಸಿಕೊಳ್ಳಲು ಹೆಣಗುತ್ತಿದ್ದ ಆ ಘಟನೆ ಅಪ್ರಯತ್ನವಾಗಿ ಅವನ ನೆನಪಿನಾಳದಿಂದ ಧೂಳುಕೊಡವಿ ಮೇಲೇಳಲಿತ್ತು.....

       ********ಮುಂದುವರೆಯುತ್ತದೆ**********




.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ