ಚಲನಚಿತ್ರ ವಿಮರ್ಶೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಲನಚಿತ್ರ ವಿಮರ್ಶೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 26, 2020

ಭಿನ್ನ...... the broken are different

#spoiler_alert 


ಜೂಲಿಯಸ್ ಸೀಜ಼ರ್ ನ Vini vidi vici…… ಅನ್ನುವ ಪ್ರಖ್ಯಾತ ಲ್ಯಾಟಿನ್ ಉಕ್ತಿಯನ್ನು ಕನ್ನಡಿಗರ ನಾಲಿಗೆತುದಿಯಲ್ಲಿ ಮೆರೆಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ 'ಶರಪಂಜರ'. ಕಲ್ಪನಾ ಎಂದರೆ 'ನಾ ಬಂದೆ, ನಾ ನೋಡ್ದೆ, ನಾ ಗೆದ್ದೇ' ಎಂದು ಉನ್ಮಾದದಿಂದ ಬಡಬಡಿಸುವ ಕಾವೇರಿಯೇ ಮೊದಲು ನೆನಪಾಗುವುದು. ಅಂತಹ ಕ್ಲಾಸಿಕ್ ಚಿತ್ರದ ಮೂಲ ಎಳೆಯಿಂದ ಸ್ಪೂರ್ತಿ ಪಡೆದು ಅದಕ್ಕೊಂದು ಬೇರೆಯದೇ ಆಯಾಮವನ್ನು ನೀಡಿರುವ ಸಿನಿಮಾ 'ಭಿನ್ನ'. 

'The broken are different' ಎಂಬ ವಿಶಿಷ್ಟ ಅಡಿಬರವನ್ನು ಹೊಂದಿರುವ 'ಭಿನ್ನ' ಹೆಸರಿನಷ್ಟೇ ವಿಭಿನ್ನವಾದ ಸಿನಿಮಾ. ತಮ್ಮ ಮೊದಲ ಚಿತ್ರದಲ್ಲಿ ವಾಸ್ತವಿಕ ಘಟನೆಗಳನ್ನು ಸಮಯದ ಸೂತ್ರದಲ್ಲಿ ಪೋಣಿಸಿ ಕುತೂಹಲ ಕೆರಳಿಸಿದ್ದ ನಿರ್ದೇಶಕರು ಈ  ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನೋಡುಗರನ್ನು ಭಯಗೊಳಿಸಿ ಬೆಚ್ಚಿಬೀಳಿಸುತ್ತಲೇ ನಮ್ಮ ಕಲ್ಪನೆಯ ಪಕ್ಷಿಗೆ ರೆಕ್ಕೆ ತೊಡಿಸಿದ್ದಾರೆ.

ಮೇಲ್ನೋಟಕ್ಕೆ ತನ್ನ ಬದುಕಿನಲ್ಲಿ ಘಟಿಸಿದ ಘಟನೆಗಳಿಂದ ಖಿನ್ನತೆಯ ಕೂಪಕ್ಕೆ ಜಾರಿ, ವಾಸ್ತವ ಹಾಗೂ ಭ್ರಮೆಯ ನಡುವಿನ ಅಂತರ ಗುರುತಿಸಲಾಗದೇ ತೊಳಲಾಡುವ ಮಹಿಳೆಯೊಬ್ಬಳ ಮನೋವಲಯವನ್ನು ಕೇಂದ್ರವಾಗಿಸಿಕೊಂಡ ಕಾಣುವ ಈ ಸಿನಿಮಾದ ಆಂತರ್ಯ ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದುದು. ಈ ಸಂಕೀರ್ಣತೆಗೆ ಮುಖ್ಯ ಕಾರಣ ಚಿತ್ರದ ನಿರೂಪಣೆ. ಇಡೀ ಚಿತ್ರದಲ್ಲಿ ವಾಚ್ಯವಾಗದೇ ಸೂಚ್ಯವಾಗಿಯೇ ಉಳಿದ ಹಲವು ವಿಚಾರಗಳಿವೆ. ಆ ಸಂಗತಿಗಳ ಬಗ್ಗೆ ಒಂದಿಷ್ಟು ಸುಳಿವುಗಳನ್ನು ಮಾತ್ರ ಬಿಟ್ಟುಕೊಟ್ಟು ನಿರ್ಧಾರವನ್ನು ವೀಕ್ಷಕರಿಗೇ ಬಿಟ್ಟಿದ್ದಾರೆ. ಆ ಕಾರಣದಿಂದಲೇ ಸಾಮಾನ್ಯವಾಗಿ ಎಲ್ಲವನ್ನೂ ವಾಚ್ಯವಾಗಿಯೇ ನೋಡಿ ಅಭ್ಯಾಸವಿರುವ ನೋಡುಗರಿಗೆ 'ಭಿನ್ನ' ಅಸಂಪೂರ್ಣ ಎನಿಸಲೂಬಹುದು. ಸಣ್ಣಪುಟ್ಟ ಸಂಗತಿಗಳನ್ನೂ ನಿರ್ಲಕ್ಷಿಸದೇ ಸಂಪೂರ್ಣ ಗಮನದಿಂದ ಚಿತ್ರವನ್ನು ನೋಡಿ ಸನ್ನಿವೇಶಗಳನ್ನು ಒಂದಕ್ಕೊಂದು ಹೊಂದಿಸಿಕೊಂಡರೆ ಮಾತ್ರವೇ 'ಒಡೆದ ಚೂರುಗಳು ಭಿನ್ನ ಏಕೆ' ಎನ್ನುವ ಪ್ರಶ್ನೆಗೆ ಸಮರ್ಪಕವಾದ ಉತ್ತರ ದೊರಕುತ್ತದೆ‌.

ಸ್ಕ್ರಿಜೋಫೇನಿಯಾದಿಂದ ಬಳಲುತ್ತಿದ್ದ ಕಾವೇರಿ ಆತ್ಮಹತ್ಯೆಯ ಪ್ರಯತ್ನ ಮಾಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅವಳಿಗೆ ಆರಂಭಿಕ ಚಿಕಿತ್ಸೆ ನೀಡುವ ವೈದ್ಯರು ಇದು ಆತ್ಮಹತ್ಯೆ ಯತ್ನವಾದ ಕಾರಣ ಪೋಲಿಸರಿಗೆ ವಿಚಾರ ತಿಳಿಸಿ ನಿಯಮಗಳನ್ನು ಆಕೆಯನ್ನು ಸರ್ಕಾರಿ ನಿಯೋಜಿತ ಮನೋವೈದ್ಯರ ಬಳಿಗೆ ಕಳಿಸುತ್ತಾರೆ. ಆ ಮನೋವೈದ್ಯರು ಅವಳ ಪತಿ ಸತೀಶನ ಬಳಿ ಕಾವೇರಿಯನ್ನು ಭೇಟಿಯಾಗುವ ಮೊದಲು ಅವಳ ಬಗ್ಗೆ ಚೆನ್ನಾಗಿ ತಿಳಿದಿರುವ, ಅವಳಿಗೆ ಆಪ್ತರಾಗಿದ್ದ ಕೆಲ ವ್ಯಕ್ತಿಗಳೊಂದಿಗೆ ಮಾತನಾಡಬೇಕೆಂಬ ಬೇಡಿಕೆಯನ್ನಿಡುತ್ತಾರೆ. ಹಾಗೆ ಅವರನ್ನು ಭೇಟಿಯಾಗುವ ಮೋಹನ್ - ವಿಮಲಾ ದಂಪತಿ ಹಾಗೂ ಖುದ್ದು ಸತೀಶ್ ವೈದ್ಯರಿಗೆ ಕಾವೇರಿಯ ಬದುಕಿನ ಬಗ್ಗೆ ಹೇಳುವ ಮೂಲಕ ನೋಡುಗರೆದುರು ಅವಳ ಸಂಕ್ಷಿಪ್ತ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅವಳ ಶೋಷಿತ ಬಾಲ್ಯ, ಅವಳೆಡೆಗಿನ ಸತೀಶನ ನಿರ್ಲಕ್ಷ್ಯ, ಗರ್ಭಪಾತದ ನಂತರ ಅವಳನ್ನಾವರಿಸುವ ಖಿನ್ನತೆ, ವಿಮಲಾಳೊಂದಿಗಿನ ಸತೀಶನ ವಿವಾಹೇತರ ಸಂಬಂಧ, ಮೋಹನ್ ಹಾಗೂ ಕಾವೇರಿಯ ನಡುವಿನ ಸಂಬಂಧ….. ಹೀಗೆ ಕಾವೇರಿಯ ಬದುಕಿನ ಹಲವು ಚದುರಿದ ಅಸ್ಪಷ್ಟ ಚಿತ್ರಗಳನ್ನು ಈ ಆರಂಭಿಕ ಸನ್ನಿವೇಶದಲ್ಲಿ ಸುಳಿವಿನಂತೆ ನೀಡುವ ಮೂಲಕ ಚಿತ್ರ ನೋಡುಗರನ್ನೂ ತನ್ನೊಳಗೆ ಸೆಳೆದುಕೊಳ್ಳಲು ತಯಾರಾಗುತ್ತದೆ. ಇತ್ತ ವಿಶುವಲ್ ಸೈಕೋ ಡ್ರಾಮಾ ಥೆರಪಿಯೊಂದಿಗೆ ಕಾವೇರಿಗೆ ಚಿಕಿತ್ಸೆ ಆರಂಭವಾಗುವುದರೊಟ್ಟಿಗೆ ಕಥೆ ಕಾವೇರಿಯ ಕೆಲ ಸಮಯದ ಹಿಂದಿನ ಬದುಕಿನೊಳಗೆ ಸಾಗುತ್ತದೆ.


ಕಾವೇರಿ ಮೆಥೆಡ್ ಆಕ್ಟಿಂಗ್ ಬಗ್ಗೆ ವಿಶೇಷ ಒಲವುಳ್ಳ ಉದಯೋನ್ಮುಖ ನಟಿ. ಬದುಕಿನ ಜಂಜಡಗಳಿಂದ ಬೇಸತ್ತಾಗ ಬೈಕಿನಲ್ಲಿ ಸೋಲೋ ರೈಡ್ ಹೋಗುವುದು ಅವಳ ಹವ್ಯಾಸ. ತನ್ನ ಮುಂದಿನ ಚಿತ್ರದ ನಿರ್ದೇಶಕರಿಂದ ತನ್ನ ಪಾತ್ರದ ಸ್ಕ್ರಿಪ್ಟ್ ಪಡೆದುಕೊಳ್ಳುವ ಕಾವೇರಿ ಅದನ್ನೋದಿ ಪಾತ್ರಕ್ಕೆ ತಯಾರಿ ನಡೆಸಲು ಸೋಲೋ ಟ್ರಿಪ್ ಗೆ ಹೊರಡುತ್ತಾಳೆ. ನಗರದ ಬಿಡುವಿರದ ಗೌಜಿನಿಂದ ದೂರ ಪ್ರಕೃತಿಯ ಮಡಿಲಲ್ಲಿನ ಒಂದು ಮನೆಯಲ್ಲಿ ಉಳಿದುಕೊಳ್ಳುವ ಅವಳು ಸ್ಕ್ರಿಪ್ಟ್ ಅನ್ನು ಓದಲು ತೊಡಗುತ್ತಾಳೆ. ಈ ಹಂತದಿಂದ ಚಿತ್ರದ ಗತಿ ಬದಲಾಗುತ್ತದೆ. 

ಸ್ಕ್ರಿಪ್ಟ್ ಓದತೊಡಗಿದಂತೆ ಕಾವೇರಿಗೆ ಅದರಲ್ಲಿನ ಕಥೆಗೂ ತನ್ನ ನೈಜ ಬದುಕಿಗೂ ಸಾಮ್ಯತೆ ಕಾಣುತ್ತದೆ. ಕ್ರಮೇಣ ತನ್ನನ್ನೇ ಕಥೆಯೊಳಗಿನ ಮುಖ್ಯಪಾತ್ರ ದೇವಕಿಯಾಗಿ, ಸತೀಶ್, ಮೋಹನ್ ಹಾಗೂ ವಿಮಲಾರನ್ನು ಉಳಿದ ಮೂರು ಪಾತ್ರಗಳಾಗಿ ಭ್ರಮಿಸತೊಡಗುವ ಕಾವೇರಿಯೊಂದಿಗೆ ನಾವೂ ಕೂಡಾ ಯಾವುದು ಭ್ರಮೆ ಯಾವುದು ವಾಸ್ತವ ಎಂಬುದನ್ನು ಗುರುತಿಸಲಾಗದೇ ಹೋಗುತ್ತಿದ್ದೇವೆ ಎನ್ನಿಸತೊಡಗುತ್ತದೆ. ಕಾವೇರಿ ಉಳಿದುಕೊಂಡಿರುವ ಮನೆ ಹಾಗೂ ಸ್ಕ್ರಿಪ್ಟಿನೊಳಗಣ ಕಥೆ ನಡೆಯುವ ಮೋಹನನ ಮನೆಯ ನಡುವೆ ಹಠಾತ್ತನೆ ಬದಲಾಗುವ ದೃಶ್ಯಗಳು, ಹಾಗೆ ಬದಲಾದ ದೃಶ್ಯಗಳಲ್ಲಿರುವ ಕಂಟಿನ್ಯೂಯಿಟಿ ನಿಜಕ್ಕೂ ನಮ್ಮನ್ನು ಗೊಂದಲದಲ್ಲಿ ಬೀಳಿಸುತ್ತದೆ. ಹೀಗೆ ಪ್ರತೀ ಹಂತದಲ್ಲೂ ಭಯ, ಗೊಂದಲಗಳನ್ನು ಸೃಷ್ಟಿಸುತ್ತಾ ಸಮಾನಾಂತರವಾಗಿ ಸಾಗುವ ಎರಡು  ಕಥೆಗಳು ಕೊನೆಗೊಮ್ಮೆ ಮುಖಾಮುಖಿಯಾಗುತ್ತದೆ. ಅಲ್ಲೊಂದು ರೋಚಕ ಅಂತ್ಯವಿದೆ. ಆ ನಂತರದಲ್ಲಿ ಕಾವೇರಿಯ ಮಾನಸಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟು ಆಕೆ ಆತ್ಮಹತ್ಯೆ ಪ್ರಯತ್ನ ಮಾಡಿಕೊಳ್ಳುವ ಮೂಲಕ ಮತ್ತೆ ಕಥೆ ಆರಂಭದ ಸನ್ನಿವೇಶಕ್ಕೆ ಮರಳುತ್ತದೆ.

ಹದಿನಾಲ್ಕು ವಾರಗಳ ಥೆರಪಿಯ ನಂತರವೂ ಕಾವೇರಿಯ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ಅವಳನ್ನು ಮನೆಗೆ ಕರೆದೊಯ್ಯುವೆನೆಂಬ ಸತೀಶನ ಬೇಡಿಕೆಗೆ ವೈದ್ಯರಿಂದ ಸಹಮತಿ ಸಿಗುವುದಿಲ್ಲ. ಕಾವೇರಿಯ ಆಸ್ಪತ್ರೆ ವಾಸ ಅನಿರ್ದಿಷ್ಟಾವಧಿಗೆ ಮುಂದುವರೆಯುತ್ತದೆ. ಆದರೆ ಇಡೀ ಚಿತ್ರದ ಅಸಲಿ ತಾತ್ಪರ್ಯವಿರುವುದು ಕೊನೆಯ ಸನ್ನಿವೇಶದಲ್ಲಿ.

ಕಾವೇರಿಯ ಇಂದಿನ ಸ್ಥಿತಿಗೆ ತಾನೇ ಕಾರಣ ಎಂಬ ಪಶ್ಚಾತಾಪದಲ್ಲಿ ದಗ್ಧನಾಗಿ ದೀನ ನೋಟದಿಂದ ಚಿಕಿತ್ಸಾ ಕೇಂದ್ರದೊಳಗೆ ಸಾಗುವ ಕಾವೇರಿಯನ್ನೇ ಸತೀಶ್ ದಿಟ್ಟಿಸುತ್ತಿರುವಂತೆಯೇ ಅಲ್ಲಿನ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ತನ್ನ ವಾರ್ಡಿನಲ್ಲಿ ಕುಳಿತ ಕಾವೇರಿ ತನ್ನ ಕೈಯಲ್ಲಿ ಗ್ಲಾಸ್ ಇರುವಂತೆ, ತಾನು ಅದರೊಳಗಿನ ಪೇಯವನ್ನು ಆಘ್ರಾಣಿಸಿ ಕುಡಿಯುವಂತೆ ನಟಿಸುತ್ತಾ ನಗು ಬೀರುತ್ತಾಳೆ. ಬಾಗಿಲಿನ ಹೊರಗಿರುವ ಸತೀಶ ಪಶ್ಚಾತಾಪದ ಪಂಜರದೊಳಗೆ ಜೀವನ ಪರ್ಯಂತ ಬಂಧಿಯಾದರೆ, ಒಳಗಿರುವ ಕಾವೇರಿಯ ವಿಜಯದ ನಗುವಿನಲ್ಲಿ ತನಗೆ ದ್ರೋಹ ಬಗೆದ ಸತೀಶನ ಮೇಲೆ ಹಗೆ ತೀರಿಸಿಕೊಂಡ ಭಾವ ನಿಚ್ಚಳವಾಗಿದೆ. ಮೆಥೆಡ್ ಆಕ್ಟಿಂಗ್ ಪರಿಣಿತಳಾದ ಕಾವೇರಿ ಸ್ಕ್ರಿಜೋಫೇನಿಯಾ ರೋಗಿಯಾಗಿ ನಟಿಸಿ ಯಾರೊಬ್ಬರಿಗೂ ಅರಿವಾಗದಂತೆ ತನ್ನ ದ್ವೇಷವನ್ನು ತೀರಿಸಿಕೊಳ್ಳುತ್ತಾಳೆ. ಚಿತ್ರದ ಪೋಸ್ಟರಿನಲ್ಲಿರುವ 'vini vidi vici' ಯನ್ನು ಸೋತಂತೆ ಕಂಡರೂ ಗೆದ್ದವಳು ಕಾವೇರಿಯೇ ಎಂದು ಅರ್ಥೈಸಿಕೊಳ್ಳಬಹುದು. ಇದನ್ನು ಧ್ವನಿಸುವ ಹಲವು ಪ್ರತಿಮೆಗಳನ್ನು ಚಿತ್ರದುದ್ದಕ್ಕೂ ಕಾಣಬಹುದು(ವರ್ಣಚಿತ್ರ, ವಾಲ್ ಕ್ಲಾಕ್, ಪಂಜರದೊಳಗಿನ ಪಕ್ಷಿಯ ಶೋ ಪೀಸ್, ಕೊನೆಯಲ್ಲಿ ಕಾವೇರಿ ಮಾಡಿರುವ ಡ್ರಾಯಿಂಗ್ ಇತ್ಯಾದಿ).

ಈ ಚಿತ್ರದ ವೈಶಿಷ್ಟ್ಯತೆ ಎಂದರೆ ಇಡೀ ಚಿತ್ರ ಯಾವ ಸಂಗತಿಯನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ಉತ್ತರವಿಲ್ಲದ ಹಲವು ಪ್ರಶ್ನೆಗಳು ಇಲ್ಲಿವೆ. ನಡೆಯುವ ಘಟನೆಗಳು, ಅಸ್ಪಷ್ಟ ಮಾಹಿತಿಗಳನ್ನು ಊಹೆಗೆ‌ ತಕ್ಕಂತೆ ಜೋಡಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ನೋಡುಗರಿಗೇ ನೀಡಿದ್ದಾರೆ ನಿರ್ದೇಶಕರು. ಸ್ಕ್ರಿಪ್ಟ್ ಓದುತ್ತಿರುವ ಕಾವೇರಿಗಾಗುವ ವಿಚಿತ್ರ ಅನುಭವಗಳಿಗೂ ಹಾಗೂ ಸ್ಕ್ರಿಪ್ಟಿನೊಳಗಣ ಕಥೆಯಲ್ಲಿ ಘಟಿಸುವ ಘಟನೆಗಳಿಗೂ ಸಂಬಂಧ ಕಲ್ಪಿಸಲು ಅನುವಾಗುವಂತೆ ದೊರಕುವ ಸುಳಿವುಗಳು ವೀಕ್ಷಕರಿಗೆ ತಾವೇ ವಾಸ್ತವ ಹಾಗೂ ಭ್ರಮೆಯ ಜಾಲದೊಳಗೆ ಸಿಲುಕಿದ್ದೇವೇನೋ ಎನ್ನುವ ಭಾವನೆ ಹುಟ್ಟಿಸುವಷ್ಟು ಟ್ರಿಕ್ಕಿಯಾಗಿವೆ. ಖಂಡಿತವಾಗಿಯೂ ಒಂದೇ ವೀಕ್ಷಣೆಗೆ ದಕ್ಕುವ ಸಿನಿಮಾ ಇದಲ್ಲ. ಕಥೆಯ ಹೊಳಹುಗಳನ್ನು ಅರ್ಥೈಸಿಕೊಂಡು ಕಥೆಯ ಸಾರವನ್ನು ಗ್ರಹಿಸಲು ಹಲವು ಬಾರಿ ಸಿನಿಮಾವನ್ನು ನೋಡಬೇಕು.

ಶರಪಂಜರ ಸಿನಿಮಾಕ್ಕೊಂದು ಭಿನ್ನ ಆಯಾಮ ನೀಡಿರುವ ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಉಲ್ಲೇಖ ಒಂದಿಲ್ಲೊಂದು ರೂಪದಲ್ಲಿ ಹಲವೆಡೆ ಇದೆ. ಕಥಾನಾಯಕ ಹಾಗೂ ನಾಯಕಿಯ ಹೆಸರೂ ಶರಪಂಜರವನ್ನೇ ಧ್ವನಿಸುತ್ತದೆ. ಕಾವೇರಿಯ ಬೈಕಿನ ನಂಬರ್ ಪ್ಲೇಟ್, ಮೈಲಿಕಲ್ಲು, ಹಿನ್ನೆಲೆಯಲ್ಲಿನ ಹಾಡುಗಳು…..ಹೀಗೆ ಪುಟ್ಟಣ್ಣನವರನ್ನು ನೆನಪಿಸುವ ಹಲವು ಸಂಗತಿಗಳು ಚಿತ್ರದುದ್ದಕ್ಕೂ ಇವೆ.

ನೋಡುಗರ ಕಲ್ಪನೆಗೆ ಸಂಪೂರ್ಣ ಅವಕಾಶವಿರುವ ಕಾರಣ ಕ್ಲೈಮ್ಯಾಕ್ಸ್‌ ಹೊರತುಪಡಿಸಿ ಉಳಿದಿಡೀ ಚಿತ್ರವನ್ನು ಮೆಥೆಡ್ ಆಕ್ಟಿಂಗ್ ಪರಿಕಲ್ಪನೆಯ ಆಯಾಮದಿಂದಲೂ ಗ್ರಹಿಸಬಹುದು ಎನ್ನುವುದು ಈ ಸಿನಿಮಾದ ಇನ್ನೊಂದು ಹೆಚ್ಚುಗಾರಿಕೆ. 

ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರು ತಮ್ಮ ಎರಡನೇ ಚಿತ್ರದಲ್ಲೂ ಪ್ರಯೋಗಾತ್ಮಕ ಮಹಿಳಾ ಕೇಂದ್ರಿತ ವಿಚಾರವನ್ನೇ ಆಯ್ದುಕೊಂಡಿದ್ದಾರೆ. ಆದರೆ 'ಶುದ್ಧಿ' ಹಾಗೂ 'ಭಿನ್ನ' ಎರಡನ್ನು ಹೋಲಿಸಲಾಗದು. ಇಡೀ ಸಮಾಜದ ಭಾಗವಾಗಿ ಮಹಿಳೆಯರ ಕಥನವನ್ನು ವಿವರಿಸಿದ್ದ 'ಶುದ್ಧಿ' ಸಿನಿಮಾದ ವ್ಯಾಪ್ತಿ ಬಹಳ ವಿಶಾಲವಾದುದು. ಆದರೆ 'ಭಿನ್ನ' ಕೌಟುಂಬಿಕ ಚೌಕಟ್ಟಿನೊಳಗೆ ಮಹಿಳೆ ಎದುರಿಸುವ ಹಲವು ಸಮಸ್ಯೆಗಳ ಮೇಲೆ, ಆಕೆಯ ಮನೋವಲಯದ ಮೇಲೆ ಕೇಂದ್ರಿತವಾದ ಭಾವತೀವ್ರತೆಯ ಸಿನಿಮಾ. ಕುಟುಂಬದೊಳಗಿನ ಸೂಕ್ಷ್ಮ ಸಮಸ್ಯೆಗಳಾದ ಲೈಂಗಿಕ ದೌರ್ಜನ್ಯ, ದಾಂಪತ್ಯದ್ರೋಹ, ಮಾನಸಿಕ ತೊಳಲಾಟ ಮುಂತಾದವುಗಳ ಬಗೆಗೆ ಒಳನೋಟ ನೀಡುವ ಚಿತ್ರವಿದು.

ಇಡೀ ಚಿತ್ರದಲ್ಲಿರುವುದು ಏಳೆಂಟು ಪಾತ್ರಗಳು ಮಾತ್ರ. ಅದರಲ್ಲೂ ಮುನ್ನೆಲೆಯಲ್ಲಿರುವುದು ಕೇವಲ ನಾಲ್ಕೇ ಪಾತ್ರಗಳು. ಕಾವೇರಿ/ದೇವಕಿಯಾಗಿ ನಟಿಸಿರುವ ಪಾಯಲ್ ರಾಧಾಕೃಷ್ಣ ಅವರ ನಟನೆ ಇಡೀ ಚಿತ್ರದ ಜೀವಾಳ. ಒಮ್ಮೆ ಸೂತ್ರಧಾರಿಯಂತೆ ಇನ್ನೊಮ್ಮೆ ಪೀಡಿತೆಯಂತೆ ಕಾಣುವ ಎರಡು ಛಾಯೆಗಳ ಪಾತ್ರವನ್ನು ಅತ್ಯಂತ ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ. ಸಿದ್ಧಾರ್ಥ್ ಮಾಧ್ಯಮಿಕ, ಸೌಮ್ಯ ಜಗನ್ ಹಾಗೂ ಶಶಾಂಕ್ ಪುರುಷೋತ್ತಮ್ ಅವರು ಸತೀಶ್, ವಿಮಲಾ, ಮೋಹನ್ ಆಗಿ ಕಾಣಿಸಿಕೊಂಡಿದ್ದಾರೆ. ಮೂವರಲ್ಲಿ ಸೌಮ್ಯ ಉಳಿದಿಬ್ಬರಿಗಿಂತ ಹೆಚ್ಚು ಗಮನಸೆಳೆಯುತ್ತಾರೆ. ಜೆಸ್ಸಿ ಕ್ಲಿಂಟನ್ ಅವರ ಸಂಗೀತ ಹಾಗೂ ಆಂಡ್ರೀವ್ ಅಯಿಲೋ ಅವರ ಛಾಯಾಗ್ರಹಣ ನೋಡುಗರನ್ನು ಬೆಚ್ಚಿಬೀಳಿಸುತ್ತಾ ಸಿನಿಮಾಕ್ಕೆ ಹಾರರ್ ಅಂಶವನ್ನು ಅಳವಡಿಸುವಲ್ಲಿ ಸಮರ್ಥವಾಗಿದೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿ ಹಾಡಿರುವ ಶೀರ್ಷಿಕೆ ಗೀತೆ ಇಡೀ ಕಥೆಯ ಪರಿಭಾಷೆಯಂತಿದೆ.

'ನಾ ಮುರಿದ ಕನ್ನಡಿ ಚೂರಿನಂತೆ, ನಾ ಕಾಣೋ ಲೋಕ ನೂರರಂತೆ……' ಅನ್ನುವ ಸಾಲಿನಂತೆ ಒಡೆದ ಮನದ ನೂರು ಬಿಂಬಗಳ ಅಮೂರ್ತ ಯಾನವೇ ಭಿನ್ನ. 




ಭಾನುವಾರ, ಜೂನ್ 21, 2020

ಕೆನ್ನೆ ಮೇಲೊಂದು ಸಿಹಿ ಮುತ್ತು

ಇಂದು ತಾಯಂದಿರ ದಿನದ ಸಂಭ್ರಮ. ನಮ್ಮೆಲ್ಲಾ ದಿನಗಳೂ ಅವಳದೇ ಉಡುಗೊರೆಯಾದ ಕಾರಣ ಅವಳಿಗೊಂದು ದಿನದ ಚೌಕಟ್ಟು ಸಮುದ್ರಕ್ಕೆ ಅಣೆಕಟ್ಟು ಕಟ್ಟಿದಂತೆಯೇ ಸೈ. ಹಾಗಿದ್ದೂ ಅವಳಿಗಾಗಿ ಮೀಸಲಾದ ಈ ದಿನದಂದು ನನ್ನನ್ನು ಸದಾ ಕಾಡುವ ಚಲನಚಿತ್ರವೊಂದರ ಕುರಿತು ಒಂದಿಷ್ಟು ಅನಿಸಿಕೆ ಹಂಚಿಕೊಳ್ಳಬೇಕೆನಿಸುತ್ತಿದೆ.

ಚಿತ್ರ ಮಾಂತ್ರಿಕ ಮಣಿರತ್ನಂ, ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಕಾಂಬಿನೇಷನ್ ನಲ್ಲಿ 2002ರಲ್ಲಿ ತೆರೆಗೆ ಬಂದ ಈ ತಮಿಳು ಚಿತ್ರವೇ 'ಕನ್ನತ್ತಿಲ್ ಮುತ್ತಮಿಟ್ಟಾಲ್'. ಕಾಡಿ ಕಂಗೆಡಿಸುವ ಕಥಾಹಂದರ, ಮನವನ್ನು ಆರ್ದ್ರಗೊಳಿಸುವ ಸಹಜ ನಟನೆ, ಕಣ್ಣಂಚಿನಲ್ಲಿ ಹನಿಗಳನ್ನು ಸಾಂದ್ರಗೊಳಿಸುವ ಸಾಹಿತ್ಯ, ಭಾವಗಳೇ ಮೇಳೈಸಿದ ಸಂಗೀತ....... ಇವೆಲ್ಲವುಗಳ ಸಂಕಲಿತ ಸಂಪುಟ ಕನ್ನತ್ತಿಲ್ ಮುತ್ತಮಿಟ್ಟಾಲ್.

'ಸುಜಾತಾ' ಎಂಬ ಕಾವ್ಯನಾಮದಿಂದಲೇ ಖ್ಯಾತರಾದ ಸಾಹಿತಿ ಎಸ್. ರಂಗರಾಜನ್ ಅವರ 'ಅಮುದಾವುಂ ಅವನುಂ' ಎಂಬ ಸಣ್ಣ ಕಥೆ ಆಧಾರಿತವಾದ ಈ ಚಿತ್ರ ತಾನು ದತ್ತು ಪುತ್ರಿಯೆಂಬ ಸತ್ಯ ತಿಳಿದು ತನ್ನ ಹೆತ್ತಮ್ಮನನ್ನು ಹುಡುಕಿಹೊರಡುವ ಅಮುದಾ ಎಂಬ ಒಂಬತ್ತು ವರ್ಷದ ಶ್ರೀಲಂಕನ್ ತಮಿಳು ಬಾಲಕಿಯ ಕಥೆಯನ್ನು ಶ್ರೀಲಂಕಾ ಆಂತರಿಕ ಯುದ್ಧದ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. 

ಚಿತ್ರ ಆರಂಭವಾಗುವುದು ತಮಿಳರ ಪ್ರಾಬಲ್ಯದ ಶ್ರೀಲಂಕಾದ ಮಾಂಗುಳಂ ಗ್ರಾಮದ ಶ್ಯಾಮಾ ಹಾಗೂ ದೀಲೀಪನ್ ಅವರ ವಿವಾಹದಿಂದ. ದೀಲೀಪನ್ ಆ ಗ್ರಾಮದ ಇತರ ಯುವಕರೊಂದಿಗೆ ತಮಿಳರ ಸ್ವಾತಂತ್ರಕ್ಕಾಗಿ ಹೋರಾಡುವ ಗುಂಪಿನಲ್ಲಿ ಸಕ್ರಿಯನಾಗಿರುವಾತ. ಶ್ಯಾಮಾಳ ಸಾಂಸಾರಿಕ ಜೀವನ ಸುಗಮವಾಗಿ ಸಾಗುತ್ತಿದ್ದಾಗಲೇ ಶ್ರೀಲಂಕಾ ಸೇನೆಯು ಮಾಂಗುಳಂನಲ್ಲಿ ಕಾರ್ಯಾಚರಣೆಗೆ ಬಂದಿರುವುದು ತಿಳಿದು ದೀಲೀಪನ್ ದಟ್ಟ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ತಮಿಳರ ಪ್ರಾಂತ್ಯದ ಮೇಲೆ ಸೇನಾ ಕಾರ್ಯಾಚರಣೆ ತೀವ್ರವಾಗತೊಡಗಿ ಹೆಚ್ಚಿನ ತಮಿಳರು ಸುರಕ್ಷಿತ ತಾಣ ಅರಸಿ ಭಾರತದತ್ತ ವಲಸೆ ಹೊರಡುತ್ತಾರೆ. ಗರ್ಭಿಣಿ ಶ್ಯಾಮಾ ಇತ್ತ ದೀಲೀಪನ್ ಬಗ್ಗೆ ಸುದ್ದಿಯೂ ತಿಳಿಯದೇ ಅತ್ತ ಭಾರತಕ್ಕೂ ಹೋಗುವ ಮನವಿಲ್ಲದೇ ತೊಳಲಾಡುವಾಗ ಅವಳ ಮನೆಯವರು, ಸಂಬಂಧಿಕರು ಮಗುವಿನ ಭವಿಷ್ಯದ ದೃಷ್ಟಿಯಿಂದ ವಲಸೆ ಹೋಗುವುದೇ ಸೂಕ್ತವೆಂದು ಅವಳನ್ನು ಒಪ್ಪಿಸುತ್ತಾರೆ. ಹಲವರೊಂದಿಗೆ ರಾಮೇಶ್ವರಂಗೆ ತೆರಳುವ ಶ್ಯಾಮಾಳಿಗೆ ಪ್ರಯಾಣ ಮಧ್ಯದಲ್ಲಿ ದೀಲೀಪನ್ ಕಾಡಿನಲ್ಲಿ ಗುಂಡೇಟಿನಿಂದ ಗಾಯಗೊಂಡಿರುವನೆಂದು ತಿಳಿಯುತ್ತದೆ. ರಾಮೇಶ್ವರಂನ ನಿರಾಶ್ರಿತ ಶಿಬಿರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡುವ ಶ್ಯಾಮಾ ತನ್ನ ಪತಿ ಹಾಗೂ ತನ್ನ ಜನರ ಹೋರಾಟದಲ್ಲಿ ಜೊತೆಯಾಗುವ ಉದ್ದೇಶದಿಂದ ಮಗುವನ್ನು ಶಿಬಿರದಲ್ಲೇ ತೊರೆದು ತನ್ನ ತಾಯ್ನೆಲಕ್ಕೆ ವಾಪಾಸಾಗುತ್ತಾಳೆ.

ಇದೆಲ್ಲಾ ನಡೆದು ಒಂಬತ್ತು ವರ್ಷಗಳ ತರುವಾಯ ಕಥೆ ಚೆನ್ನೈಗೆ ಹೊರಳುತ್ತದೆ. 'ಇಂದಿರಾ' ಎಂಬ ಕಾವ್ಯನಾಮದಲ್ಲಿ ಬರೆಯುವ ಖ್ಯಾತ ಲೇಖಕ ತಿರುಸೆಲ್ವನ್ ಹಾಗೂ ಇಂದಿರಾ ದಂಪತಿಗಳ ಮುದ್ದಿನ ಮಗಳು ಅಮುದಾ. ಅಪ್ಪ, ಅಮ್ಮ, ಇಬ್ಬರು ತಮ್ಮಂದಿರು, ಅಜ್ಜ ಇವರೆಲ್ಲರ ತುಂಬು ಪ್ರೀತಿ, ಮಮತೆಯಲ್ಲಿ ನಲಿಯುವ ಅಮುದಾಳ ಒಂಬತ್ತನೇಯ ಹುಟ್ಟುಹಬ್ಬ ಅವಳ ಈ ಸುಂದರ ಪ್ರಪಂಚದ ಬುನಾದಿಯನ್ನೇ ಕೆಡವುವ ಸತ್ಯವೊಂದಕ್ಕೆ ಅವಳನ್ನು ಮುಖಾಮುಖಿಯಾಗಿಸುತ್ತದೆ. ಈ ಮುಂಚೆಯೇ ನಿರ್ಧರಿಸಿದಂತೆ ಜನ್ಮದಿನದ ಸಂತಸದಲ್ಲಿ ಮುಳುಗಿರುವ ಮಗಳಿಗೆ ಅವಳು ತಮ್ಮ ಸ್ವಂತ ಮಗಳಲ್ಲ, ತಾವಾಕೆಯನ್ನು ರಾಮೇಶ್ವರಂನ ನಿರಾಶ್ರಿತ ಶಿಬಿರದಿಂದ ದತ್ತು ತೆಗೆದುಕೊಂಡು ಸಾಕಿದೆವೆಂಬ ಸತ್ಯವನ್ನು ತಿಳಿಸುತ್ತಾನೆ ತಿರು. ತಂದೆಯ ಮಾತುಗಳು ಅಮುದಾಳ ಎಳೆಯ ಮನವನ್ನು ವಿಪರೀತ ಘಾಸಿಗೊಳಿಸುತ್ತವೆ. 

ತನ್ನ ಹೆತ್ತ ತಾಯಿ ಯಾರು, ಎಲ್ಲಿದ್ದಾಳೆ ಎಂದು ಮನೆಯವರನ್ನೆಲ್ಲಾ ಪ್ರಶ್ನಿಸತೊಡಗುತ್ತಾಳೆ ಅಮುದಾ. ಆಗ ಅವಳಿಗೆ ಒಂಬತ್ತು ವರ್ಷಗಳ ಹಿಂದಿನ ಕಥೆ ತಿಳಿಯುತ್ತದೆ. ರಾಮೇಶ್ವರಂನಲ್ಲಿ ತನ್ನಕ್ಕನೊಂದಿಗೆ ವಾಸಿಸುವ ತಿರು ಆಗಿನ್ನೂ ಲೇಖಕನಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಅವನ ಪಕ್ಕದ ಮನೆಯಲ್ಲಿ ವಾಸಿಸುವ ಇಂದಿರಾಳಿಗೆ ಅವನ ಮೇಲೆ ಒಲವು. ತಿರು ಅಲ್ಲಿನ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿ ಅಲ್ಲಿರುವ ಜನರನ್ನು ಮಾತನಾಡಿಸಿ ಅವರ ಬದುಕು ಬವಣೆಗಳಿಗೆ ಅಕ್ಷರ ರೂಪ ನೀಡುವ ಹವ್ಯಾಸ ಉಳ್ಳವನು. ಇಂತಹದೇ ಒಂದು ಭೇಟಿಯಲ್ಲಿ ಆತ ಶ್ಯಾಮಾ ತೊರೆದು ಹೋದ ಹಸುಗೂಸನ್ನು ಕಂಡು ಆ ಮಗುವಿನ ಮೇಲೆ ಒಂದು ಕಥೆಯನ್ನು ಬರೆಯುತ್ತಾನೆ. ಆ ಕಥೆಯನ್ನು ಓದಿ ಮಗುವನ್ನು ನೋಡಬೇಕೆಂದು ಹಠ ಹಿಡಿದು ಅವನೊಂದಿಗೆ ಶಿಬಿರಕ್ಕೆ ಬರುವ ಇಂದಿರಾ ಆ ಮಗುವಿಗೆ ಅಮುದಾ ಎಂಬ ಹೆಸರನ್ನಿಡುವುದಲ್ಲದೇ ಅವನ ಮನದಲ್ಲಿ ಆ ಮಗುವನ್ನು ದತ್ತು ಪಡೆಯಬೇಕೆಂಬ ಭಾವದ ಉಗಮಕ್ಕೆ ಕಾರಣರಾಗುತ್ತಾಳೆ. ಮಗುವನ್ನು ದತ್ತು ಪಡೆಯಲು ಆತ ನಿರ್ಧರಿಸಿ ಆ ಬಗ್ಗೆ ಶಿಬಿರದಲ್ಲಿ ವಿಚಾರಿಸಿದಾಗ ಅವಿವಾಹಿತರಿಗೆ ಮಗುವನ್ನು ದತ್ತು ನೀಡುವುದಿಲ್ಲ ಎಂಬ ವಿಚಾರ ಆತನಿಗೆ ತಿಳಿಯುತ್ತದೆ. ಬೇರೆ ದಾರಿ ಕಾಣದೆ ಮಗುವನ್ನು ದತ್ತು ಪಡೆಯುವ ಉದ್ದೇಶದಿಂದ ಇಂದಿರಾಳೊಂದಿಗೆ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ ತಿರು. ತಿರುವಿನ ಮೇಲಿನ ಪ್ರೇಮದೊಂದಿಗೆ ಅಮುದಾಳ ಮೇಲೂ ಮಮಕಾರವುಳ್ಳ ಇಂದಿರಾ ತಿರುವಿನ ಪ್ರಸ್ತಾಪವನ್ನು ಒಪ್ಪುವುದರೊಂದಿಗೆ ಇಬ್ಬರೂ ವಿವಾಹವಾಗಿ ಅಮುದಾಳನ್ನು ದತ್ತು ಪಡೆಯುತ್ತಾರೆ.

ಈ ವಿಚಾರ ತಿಳಿದ ನಂತರವೂ ಅಮುದಾಳ ಮನಸ್ಸು ಶಾಂತವಾಗುವುದಿಲ್ಲ. ಇಷ್ಟು ವರ್ಷ ತಾನು ತನ್ನದೆಂದುಕೊಂಡ ಬಂಧಗಳ್ಯಾವವೂ ತನ್ನವಲ್ಲ ಎಂಬ ಸತ್ಯವನ್ನು ‌ಹೇಗೆ ನಿಭಾಯಿಸುವುದೆಂದು ಅರಿಯದ ಆ ಪುಟ್ಟ ಜೀವ ಕೋಪವನ್ನೇ ಆಸರೆಯಾಗಿಸಿಕೊಂಡು ಇಷ್ಟು ದಿನ ತನ್ನವರೆಂದುಕೊಂಡವರಿಂದ ಅದರಲ್ಲೂ ಮುಖ್ಯವಾಗಿ ತಾಯಿ ಇಂದಿರಾಳಿಂದ ಅಂತರ ಕಾಯ್ದುಕೊಳ್ಳತೊಡಗುತ್ತದೆ.  ಅಪ್ಪನೊಂದಿಗೆ ಮಾಮೂಲಾಗಿಯೇ ವರ್ತಿಸುವ ಅಮುದಾಳ ಮನ ಅದೇಕೋ ಅಮ್ಮನೊಂದಿಗೆ ಅದೇ ತೆರನಾದ ಬಾಂಧವ್ಯವನ್ನು ಹಿಂದಿನಂತೆಯೇ ಮುಂದುವರೆಸಲು ಒಂಡಂಬಡುವುದಿಲ್ಲ. ಇಂದಿರಾಳ ಮೇಲೆ ಹೇಳಲಾರದ ಕೋಪ,  ಕಾರಣವಿಲ್ಲದ ಸಿಡಿಮಿಡಿಯನ್ನು ವ್ಯಕ್ತಪಡಿಸತೊಡಗುತ್ತಾಳೆ. ತನ್ನೀ ವರ್ತನೆಯಿಂದ ತನ್ನಮ್ಮನ ಮನಸ್ಸಿಗೆಷ್ಟು ನೋವಾಗುತ್ತಿದೆ, ಆಕೆ ಒಳಗೊಳಗೇ ಅದೆಷ್ಟು ಯಾತನೆಯನ್ನು ಅನುಭವಿಸುತ್ತಿದ್ದಾಳೆಂಬುದನ್ನು ಗ್ರಹಿಸುವಷ್ಟು ಪ್ರಬುದ್ಧ ವಯಸ್ಸಲ್ಲ ಆಕೆಯದ್ದು. ಆಕೆಯ ಮನದ ತುಂಬಾ ಇರುವುದು ಒಂದೇ ವಿಚಾರ. ಆದಷ್ಟು ಬೇಗ ತನ್ನ ಹೆತ್ತಮ್ಮನನ್ನು ಕಾಣಬೇಕು, ಆಗಿನ್ನೂ ಕಣ್ತೆರೆದು ಜಗ ಕಾಣುತ್ತಿದ್ದ ತನ್ನನ್ನು ತೊರೆದು ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತೆಂದು ಆಕೆಯನ್ನು ಪ್ರಶ್ನಿಸಬೇಕು ಎಂಬುದಷ್ಟೇ ಆಕೆಯ ಗುರಿ.

ಹೆತ್ತವಳನ್ನು ಕಾಣಬೇಕೆಂಬ ಆಸೆ ದಿನೇ ದಿನೇ ಅಮುದಾಳಲ್ಲಿ ಬಲವಾಗತೊಡಗುತ್ತದೆ. ಒಮ್ಮೆ ಇದೇ ಉದ್ದೇಶದಿಂದ ಮನೆಯವರಿಗೆ ತಿಳಿಯದಂತೆ ತನಗಿಂತ ಕೊಂಚ ಹಿರಿಯನಾದ ಅತ್ತೆಯ ಮಗನೊಂದಿಗೆ ರಾಮೇಶ್ವರಂಗೆ ಪ್ರಯಾಣಬೆಳೆಸಿ ಅಲ್ಲಿನ ಅನಾಥಾಲಯದಲ್ಲಿ ತನ್ನಮ್ಮನ ಬಗೆಗಿನ ಮಾಹಿತಿ ಕಲೆಹಾಕಲು ಯತ್ನಿಸುತ್ತಾಳೆ‌. ಮಕ್ಕಳಿಬ್ಬರೂ ರಾಮೇಶ್ವರಂನಲ್ಲಿರುವ ವಿಚಾರ ತಿಳಿದು ಅವರನ್ನು ಹಿಂಬಾಲಿಸಿ ಬರುವ ಮನೆಯವರನ್ನು ಅಮುದಾಳ ಹಠ ಕಂಗಾಲಾಗಿಸುತ್ತದೆ. ಬೇರೆ ದಾರಿ ಕಾಣದ ತಿರು ಅಮುದಾಳ ಹೆತ್ತಮ್ಮನನ್ನು ಹುಡುಕಿ ಅವಳನ್ನು ಭೇಟಿಮಾಡಿಸಲು ಶ್ರೀಲಂಕಾಕ್ಕೆ ಹೊರಡಲು ನಿರ್ಧರಿಸುತ್ತಾನೆ. ಉಳಿದಿಬ್ಬರು ಮಕ್ಕಳನ್ನು ತಾತನ ಸುಪರ್ದಿನಲ್ಲಿ ಬಿಟ್ಟು ಪತ್ನಿ ಹಾಗೂ ಮಗಳೊಂದಿಗೆ ಶ್ರೀಲಂಕೆಗೆ ಬರುವ ತಿರುಸೆಲ್ವನ್ ಗೆ ಅಲ್ಲಿ ತಂಗುವ ವ್ಯವಸ್ಥೆಗೆ ಹಾಗೂ ಈ ಹುಡುಕಾಟಕ್ಕೆ ಅವನ ಸಿಂಹಳೀ ಸ್ನೇಹಿತ ಡಾ. ಹೆರಾಲ್ಡ್ ವಿಕ್ರಮಸಿಂಘೆ ನೆರವಾಗುತ್ತಾನೆ. ಶ್ರೀಲಂಕಾಕ್ಕೆ ಬಂದ ನಂತರದಲ್ಲಂತೂ ಇಂದಿರಾಳೆಡೆಗಿನ ಅಮುದಾಳ ವರ್ತನೆ ಬಹಳಷ್ಟು ಕಠೋರವಾಗುತ್ತದೆ. ಆಕೆಯ ಪ್ರತೀ ಮಾತನ್ನು ವಿರೋಧಿಸುವುದನ್ನು ರೂಢಿಸಿಕೊಳ್ಳುತ್ತಾಳೆ. ತನ್ನನ್ನು ವೈರಿಯೆಂಬಂತೆ ಕಾಣುವ ಮಗಳ ನಡವಳಿಕೆ ಇಂದಿರಾಳಲ್ಲಿ ಹೇಳತೀರದ ಸಂಕಟವನ್ನುಂಟುಮಾಡುತ್ತದೆ. 


ಆದರೆ ಇಲ್ಲಿಯವರೆಗೆ ಶಾಂತಿ, ನೆಮ್ಮದಿಗಳ ಪರಿಧಿಯಲ್ಲೇ ಜೀವಿಸಿದ್ದ ಪುಟ್ಟ ಅಮುದಾ ತನ್ನಮ್ಮನನ್ನು ಅರಸುವ ಈ ಪಯಣದಲ್ಲಿ ಯುದ್ಧದ ಭೀಕರತೆಗೆ ಸಾಕ್ಷಿಯಾಗುತ್ತಾಳೆ. ತನ್ನೊಂದಿಗೆ ಮಾತಾನಾಡುತ್ತಾ ಕುಳಿತ್ತಿದ್ದ ವ್ಯಕ್ತಿ ತನ್ನ ಕಣ್ಣೆದುರೇ ಮಾನವ ಬಾಂಬರ್ ಆಗಿ ಬಾಂಬ್ ಸ್ಪೋಟಿಸಿಕೊಳ್ಳುವ ಸನ್ನಿವೇಶ ಆಕೆಯೊಳಗೆ ವಿಚಿತ್ರ ದಿಗಿಲನ್ನು ಸೃಷ್ಟಿಸುತ್ತದೆ. ಅಮುದಾಳ ಹೆತ್ತ ತಾಯಿಯ ಹೆಸರು ಶ್ಯಾಮಾ ಹಾಗೂ ಅವಳ ಊರು ಮಾಂಗುಳಂ ಎಂಬ ಮಾಹಿತಿಯನ್ನೇ ಆಧಾರವಾಗಿಸಿಕೊಂಡು ಮಾಂಗುಳಂ ಎಂಬ ಹೆಸರಿನ ಎರಡು ಹಳ್ಳಿಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಶ್ರೀಲಂಕಾದ ತಮಿಳಿರ ಬವಣೆಗಳ ಪ್ರತ್ಯಕ್ಷ ದರ್ಶನವಾಗುತ್ತದೆ. ಹೀಗೇ ಒಮ್ಮೆ ತಿರು ಹಾಗೂ ವಿಕ್ರಮಸಿಂಘೆ ಸಮೀಪದ ಕಾಡೊಂದರ ಬಳಿ ವಿಹಾರಕ್ಕೆಂದು ತೆರಳಿದಾಗ LTTEನ ಬಂಡಾಯಗಾರರ ಕೈಯಲ್ಲಿ ಸಿಕ್ಕಿಬೀಳುತ್ತಾರೆ. ತಿರುಸೆಲ್ವನ್ ಆ ಕೂಡಲೇ ಒಂದು ತಮಿಳು ಕವಿತೆ ಹೇಳುತ್ತಾನೆ. ಆಗ ಆ ಗುಂಪಿನ ನಾಯಕ ಪಸುಪತಿ ಅವನನ್ನು ಇಂದಿರಾ ಎಂದು ಗುರ್ತಿಸುತ್ತಾನೆ. ಶ್ಯಾಮಾಳ ಬಗ್ಗೆ ಅವರಿಗೆ ತಿಳಿದಿರಬಹುದೆಂಬ ಆಸೆಯಿಂದ ತಿರು ತಾವು ಶ್ರೀಲಂಕಾಕ್ಕೆ ಬಂದ ಉದ್ದೇಶವನ್ನು ವಿವರಿಸುತ್ತಾನೆ. ವಾಸ್ತವದಲ್ಲಿ ಶ್ಯಾಮಾಳ ಸಹೋದರನಾದ ಪಸುಪತಿ ತಾನು ಮರುದಿನ ಶ್ಯಾಮಾಳನ್ನು ಅಮುದಾಳ ಭೇಟಿಗೆ ಕರೆತರುವುದಾಗಿ ಭರವಸೆ ನೀಡುತ್ತಾನೆ.  

ಮರುದಿನ ನಾಲ್ವರೂ ಪಸುಪತಿ ಹೇಳಿದ ಸ್ಥಳದಲ್ಲಿ ಶ್ಯಾಮಾಳ ಭೇಟಿಗೆ ಕಾದಿರುವಾಗಲೇ ಆ ಪ್ರದೇಶದಲ್ಲೇ ಅವಿತಿದ್ದ ಬಂಡುಕೋರರು ಹಾಗೂ ಸೈನ್ಯದ ನಡುವೆ ಹೋರಾಟವೇರ್ಪಟ್ಟು ಬಾಂಬ್ ಹಾಗೂ ಗುಂಡುಗಳ ಅವಿರತ ಮೊರೆತ ಆರಂಭವಾಗುತ್ತದೆ. ಕಣ್ಣೆದುರೇ ಹೊತ್ತಿ ಉರಿಯುತ್ತಿರುವ ಕಟ್ಟಡ, ನಿರ್ಜೀವವಾಗುತ್ತಿರುವ ಮನುಜರು, ಗುಂಡಿನ ಮೊರೆತ ಪುಟ್ಟ ಅಮುದಳ ಕಣ್ಣಲ್ಲಿ ಅಚ್ಚಳಿಯದಂತೆ ಮೂಡತೊಡಗುತ್ತದೆ. ಇದೇ ಸಂದರ್ಭದಲ್ಲಿ ಅವಳೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಇಂದಿರಾಳ ತೋಳಿಗೆ ಗುಂಡು ತಗಲುತ್ತದೆ. ಹೇಗೋ ನಾಲ್ವರೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ತನ್ನ ಹಠದಿಂದಲೇ ಅಮ್ಮನಿಗೆ ಹೀಗಾಯಿತು ಎಂದರಿತ ಅಮುದಾ ಇಂದಿರಾಳಲ್ಲಿ ತನ್ನೆಲ್ಲಾ ವರ್ತನೆಗಳಿಗೂ ಸೇರಿಯೋ ಎಂಬಂತೆ ಕ್ಷಮೆ ಕೋರುತ್ತಾಳೆ. ಯುದ್ಧದ ಕ್ರೌರ್ಯದಲ್ಲಿ ಬದುಕಿನ ಇನ್ನೊಂದು ಮುಖವನ್ನು ಕಂಡು ಘಾಸಿಗೊಂಡ ಮಗುವಿನ ಮನ ಚೆನ್ನೈನಲ್ಲಿಯ ಶಾಂತ ನೆಲೆಗೆ, ಮನುಜನೇ ಮನುಜನನ್ನು ಕೊಲ್ಲುವ ಜಾಗದಿಂದ ಸಮುದ್ರದ ಪ್ರಶಾಂತ ತೀರಕ್ಕೆ ಹಿಂದಿರುಗಲು ಬಯಸುತ್ತದೆ. ಮನೆಗೆ ವಾಪಾಸಾಗೋಣ ಎಂದು ಅವಳೇ ಅಪ್ಪ ಅಮ್ಮನನ್ನು ಹೊರಡಿಸುತ್ತಾಳೆ. ಮರುದಿನ ಮೂವರೂ ವಿಕ್ರಮಸಿಂಘೆಯೊಂದಿಗೆ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪಸುಪತಿ ಭೇಟಿಯಾಗಲು ಹೇಳಿದ್ದ ಪ್ರದೇಶದ ರಸ್ತೆಯಲ್ಲೇ ಹೋಗಲು ಸೂಚಿಸುವ ಇಂದಿರಾ ಈ ದಿನವಾದರೂ ಶ್ಯಾಮಾ ಬರಬಹುದೆಂಬ ಆಸೆಯಿಂದ ಆ ಜಾಗದಲ್ಲಿ ಕೆಲವು ಕ್ಷಣ ಕಾಯೋಣವೆಂದು ಸೂಚಿಸುತ್ತಾಳೆ. ಅವಳ ನಿರೀಕ್ಷೆಯಂತೇ ಶ್ಯಾಮಾ ಬರುತ್ತಾಳೆ. 

ತನ್ನ ಹೆತ್ತಮ್ಮನನ್ನು ಕಂಡಾಗ ಅವಳೊಡನೆ ಏನೆಲ್ಲಾ ಪ್ರಶ್ನೆ ಕೇಳಬೇಕೆಂದು ಎಷ್ಟೋ ತಯಾರಿ ಮಾಡಿಕೊಂಡಿದ್ದ ಅಮುದಾ ಶ್ಯಾಮಾ ಎದುರಾದಾಗ ಮಾತನಾಡುವಲ್ಲಿ ಸೋಲುತ್ತಾಳೆ. ನಡೆದ ಎಲ್ಲಾ ಘಟನೆಗಳಿಂದ ಜರ್ಝರಿತವಾದ ಆಕೆ ಹಿಂಜರಿಕೆಯಿಂದ ಇಂದಿರಾಳ ಮಡಿಲಿನಲ್ಲಿ ಹುದುಗಿಕೊಳ್ಳುತ್ತಾಳೆ. ಕಡೆಗೆ ಇಂದಿರಾಳೇ ಆಕೆಯನ್ನು ಸಂತೈಸಿ ಅವಳು ತಯಾರಿಸಿದ್ದ ಇಪ್ಪತ್ತು ಪ್ರಶ್ನೆಗಳನ್ನು ಕೇಳುವಂತೆ ಓಲೈಸುತ್ತಾಳೆ. ಮಗು ಪ್ರಶ್ನೆಗಳನ್ನು ಕೇಳುತ್ತಾ ಹೋದಂತೆ ಹನಿಗಣ್ಣಾಗುವುದರ ಹೊರತು ಬೇರ್ಯಾವ ಉತ್ತರವನ್ನೂ ಕೊಡಲಾರದೇ ಹೋಗುತ್ತಾಳೆ ಶ್ಯಾಮಾ. ತನ್ಯಾವ ಪ್ರಶ್ನೆಗಳಿಗೂ ಹೆತ್ತಮ್ಮ ಉತ್ತರವನ್ನು ಕೊಡಲಾರಳೆಂಬುದನ್ನು ಅರಿತ ಅಮುದಾ ಪ್ರಶ್ನೆಗಳನ್ನು ನಿಲ್ಲಿಸುತ್ತಾಳೆ. ಭೇಟಿ ಮುಗಿದು ಹೊರಟು ನಿಂತಾಗ 'ನೀನೂ ನಮ್ಮೊಂದಿಗೆ ಈ ಕ್ರೌರ್ಯ ತುಂಬಿದ ಜಾಗದಿಂದ ನಮ್ಮ ಶಾಂತಿಯೇ ಮೈವೆತ್ತ ಸುಂದರ ಊರಿಗೆ ಬಾ' ಎಂದು ಅಕ್ಕರೆಯಿಂದ ಕರೆಯುವ ಮಗಳ ಮಾತಿಗೆ ದ್ರವಿಸುವ ತಾಯಿ 'ನಾನು ಜನಿಸಿದ ಈ ನೆಲದ ಪ್ರತಿಯಾಗಿ ತನ್ನ ಕರ್ತವ್ಯವಿನ್ನೂ ಮುಗಿದಿಲ್ಲ. ಮುಂದೊಮ್ಮೆ ಇಲ್ಲೂ ಶಾಂತಿ ನೆಲೆಯೂರುತ್ತದೆ. ಆ ದಿನ ನೀನು ಇಲ್ಲಿಗೇ ವಾಪಾಸಾಗುವೆಯಂತೆ' ಎಂದುತ್ತರಿಸಿ ಆರ್ದ್ರ ಮನದೊಂದಿಗೆ ತೆರಳುವುದರೊಂದಿಗೆ ಚಿತ್ರ ಮುಗಿಯುತ್ತದೆ. ಆದರೆ ಚಿತ್ರ ಸೃಷ್ಟಿಸುವ ಭಾವಗಳು ಮನದಲ್ಲಿ ಚಿರಸ್ಥಾಯಿಯಾದಂತೆ ಭಾಸವಾಗುತ್ತದೆ. ಕೇವಲ ಚಿತ್ರವನ್ನು ನೋಡಿಯೇ ಅನುಭವಿಸಬಹುದಾದ ಹಲವು ಸನ್ನಿವೇಶಗಳು ಸದಾ ಕಾಡುತ್ತವೆ.

ತಿರು, ಇಂದಿರಾ ಹಾಗೂ ಅಮುದಾ ಆಗಿ ಮಾಧವನ್, ಸಿಮ್ರನ್ ಹಾಗೂ ಬೇಬಿ ಕೀರ್ತನಾ ಪಾತ್ರವನ್ನೇ ಜೀವಿಸಿದ್ದಾರೆ. ಅದರಲ್ಲೂ ಸಿಮ್ರನ್ ಹಾಗೂ ಕೀರ್ತನಾ ಇಬ್ಬರಿಗಾಗಿಯೇ ಈ ಪಾತ್ರಗಳನ್ನು ರಚಿಸಿದಂತಿದೆ. ಮಾತಿಗಿಂತ ಹೆಚ್ಚಾಗಿ ಕಣ್ಣು ಹಾಗೂ ದೇಹಭಾಷೆಯಲ್ಲೇ ಭಾವನೆಗಳನ್ನು ಅಭಿವ್ಯಕ್ತಿಸಿರುವ ಕೀರ್ತನಾ ಈ ಚಿತ್ರದಲ್ಲಿನ ನಟನೆಗಾಗಿ 2003ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಶ್ಯಾಮಾ ಆಗಿ ನಂದಿತಾ ದಾಸ್ ಹಾಗೂ ವಿಕ್ರಮಸಿಂಘೆಯಾಗಿ ಪ್ರಕಾಶ್ ರಾಜ್ ಅವರದ್ದೂ ಮನೋಜ್ಞ ಅಭಿನಯ. 

ಭಾವಗಳ ಕಡಲಿನಂತಹ ಸಂಗೀತ, ಸದಾ ಕಾಡುವ ಸಾಲುಗಳು ಈ ಚಿತ್ರದ ಇನ್ನೊಂದು ಹೈಲೈಟ್. ಮಗಳಿಂದ ಪರಿತ್ಯಕ್ತಳಾಗುವ ಭಯದಲ್ಲಿರುವ ತಾಯಿಯೊಬ್ಬಳ ಮನದ ತಾಕಲಾಟಗಳಿಗೆ ಕನ್ನಡಿ ಹಿಡಿಯುವ 'ಒರು ದೈವಂ ತಂದ ಪೂವೇ ಕಣ್ಣಿಲ್ ತೇಡಲ್ ಎನ್ನ ತಾಯೇ', ಶಾಂತಿಯೇ ಮೈವೆತ್ತಂತಹ 'ವೆಳ್ಳೈ ಪೂಕ್ಕಳ್ ಉಲಗಂ ಎಂಗುಂ ಮಲರುಮೇ', ಸಿಂಹಳೀ ಸಾಹಿತ್ಯದ 'ಸಿನ್ಯೋರೇ', ನಿರಾಶ್ರಿತರ ಮನದ ದನಿಯಂತಿರುವ 'ವಿಡೆ ಕೊಡು ಎಂಗಳ್ ನಾಡೇ'..... ಹೀಗೆ ಪ್ರತೀ ಗೀತೆ, ಅದರ ಸಾಹಿತ್ಯ ಚಲನಚಿತ್ರದಷ್ಟೇ ಕಾಡುತ್ತದೆ. ಚಿತ್ರವನ್ನು ಇನ್ನಷ್ಟು ಭಾವಪೂರ್ಣಗೊಳಿಸುವಲ್ಲಿ ಈ ಹಾಡುಗಳು ಬಹುಮುಖ್ಯ ಪಾತ್ರ ವಹಿಸಿವೆ. 

ಅತ್ಯುತ್ತಮ ತಮಿಳು ಚಿತ್ರ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಗೀತ ಸಾಹಿತ್ಯ ಸೇರಿದಂತೆ ಒಟ್ಟು ಆರು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಚಿತ್ರ ಆರು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಿಗೂ ಭಾಜನವಾಗಿದೆ. 

ಒಟ್ಟಿನಲ್ಲಿ ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ ಅರ್ಥಪೂರ್ಣ ಸಿನಿಮಾ ಕನ್ನತ್ತಿಲ್ ಮುತ್ತಮಿಟ್ಟಾಲ್. ಅಮೆಜಾನ್ ಪ್ರೈಮ್ ಹಾಗೂ ಯೂ ಟ್ಯೂಬ್ ನಲ್ಲಿಯೂ ಲಭ್ಯವಿದೆ. ಸಮಯ ಸಿಕ್ಕಾಗ ಒಮ್ಮೆ ನೋಡಿ. ಖಂಡಿತಾ ನಿಮಗೂ ಇಷ್ಟವಾಗುತ್ತದೆ. (ಈ ಚಿತ್ರ 'ಅಮೃತಾ' ಎಂಬ ಹೆಸರಿನಲ್ಲಿ ತೆಲುಗಿಗೂ ಡಬ್ ಆಗಿದೆ.)

ಧನ್ಯವಾದಗಳು 😊☺️🙏



ಗುರುವಾರ, ಜೂನ್ 11, 2020

ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ....

ಹೆಣ್ಣಿನ ಶೋಷಣೆಗೆ ಎಷ್ಟು ಮುಖಗಳು.....?
ಒಂದು? ಹತ್ತು? ಸಾವಿರ........?
ಬಹುಶಃ ಈ ಪ್ರಶ್ನೆಗೆ ಸಮರ್ಪಕ ಉತ್ತರ ಎಂದೂ ದೊರಕದು. ಏಕೆಂದರೆ ಸ್ತ್ರೀ ಶೋಷಣೆಗೆ ಅಗಣಿತ ಮುಖಗಳು, ಅಸಂಖ್ಯ ಆಯಾಮಗಳಿವೆ. ಮಹಾಕಾವ್ಯಗಳಿಂದ ಹಿಡಿದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ, ದಾಖಲಾಗದೇ ಉಳಿದ ಹೆಣ್ಣಿನ ಕಣ್ಣೀರು, ನೋವಿನ ನಿಟ್ಟುಸಿರುಗಳನ್ನು ಲೆಕ್ಕ ಇಟ್ಟವರ್ಯಾರು? ಸ್ತ್ರೀ ಶೋಷಣೆ ಎಂಬುದು ಅನಾದಿಕಾಲದಿಂದ ನಮ್ಮ ಸಮಾಜದಲ್ಲಿ ಬೇರು ಬಿಟ್ಟು ಭ್ರಷ್ಟ ವ್ಯವಸ್ಥೆಯಿಂದ ಪೋಷಣೆ ಪಡೆದು ಬಲಿಷ್ಠವಾಗಿ ಬೆಳೆದು ರೆಂಬೆ ಕೊಂಬೆಗಳಾಗಿ ಟಿಸಿಲೊಡೆದಿರುವ ವಿಷವೃಕ್ಷ. ಇನ್ನು ವರ್ತಮಾನದಲ್ಲಂತೂ ಟಿವಿಯ ಬ್ರೇಕಿಂಗ್ ನ್ಯೂಸಿನಿಂದ ಹಿಡಿದು ವೃತ್ತ ಪತ್ರಿಕೆಯ ತಲೆಬರಹದ ತನಕ ಕಣ್ಣಿಗೆ ರಾಚುವ ಬಹುಪಾಲು ಸುದ್ದಿಗಳು ಇದಕ್ಕೆ ಸಂಬಂಧಪಟ್ಟಿದ್ದೇ. ಇಂತಹ ಸುದ್ದಿಗಳ ಪುನರಾವರ್ತನೆಯಾಗದಿರಲಿ ಎಂಬ ಆಶಯದಲ್ಲಿ ನಮ್ಮ ಚಿಂತನೆಗಳನ್ನು ಶುದ್ಧೀಕರಿಸುವ ಪ್ರಾಮಾಣಿಕ ಪ್ರಯತ್ನ ಈ 'ಶುದ್ಧಿ'.


ಹಾಗೆ ನೋಡಿದರೆ ಈ ಸಿನಿಮಾದಲ್ಲಿ ಇದುವರೆಗೂ ಯಾರೂ ಹೇಳದಂತಹ ನವೀನ ವಿಚಾರವೇನೂ ಇಲ್ಲ. ಸ್ತ್ರೀಯರ ಮೇಲಿನ ದೌರ್ಜನ್ಯವನ್ನೇ ತಿರುಳಾಗಿಸಿಕೊಂಡ ಪ್ರತೀಕಾರದ ಹಲವು ಸಿನಿಮಾಗಳು ಈಗಾಗಲೇ ಬಂದಿವೆ. ಜೊತೆಗೆ ಈ ಸಿನಿಮಾದ ಕಥೆಯಲ್ಲಿನ ಹೆಚ್ಚಿನ ಅಂಶಗಳು ನಮ್ಮ ದೇಶದಲ್ಲಿ ನಡೆದ ಹಲವು ನೈಜ ಘಟನೆಗಳ ಮರುಸೃಷ್ಟಿಯಷ್ಟೇ. 2012ರಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯ ಪ್ರಕರಣ ಹಾಗೂ ಅದರ ನಂತರ ವಿಪರೀತ ಚರ್ಚೆಗೆ ಗ್ರಾಸವಾದ ಬಾಲ ನ್ಯಾಯಿಕ ಕಾಯಿದೆ (juvenile justice act), 2013ರ ಬೆಂಗಳೂರಿನ ಎಟಿಎಂ ಹಲ್ಲೆ ಪ್ರಕರಣ, ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಕರಾವಳಿಯಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ನೈತಿಕ ಪೋಲಿಸ್ ಗಿರಿ, ಮಾದಕ ದ್ರವ್ಯದ ಚಟಕ್ಕೆ ಬಿದ್ದು ನಶೆಯಲ್ಲಿ ತೇಲುತ್ತಿರುವ ಯುವವರ್ಗ, ಸಣ್ಣಪುಟ್ಟ ಗಲ್ಲಿಗಳಲ್ಲೂ ದೊರಕುವ ಅಕ್ರಮ ಶಸ್ತ್ರಾಸ್ತ್ರಗಳು, ತಪ್ಪಿತಸ್ಥರನ್ನು ಶಿಕ್ಷೆಯಿಂದ ಬಚಾವು ಮಾಡಲು ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರುವ ವ್ಯವಸ್ಥೆ, ಮಿತಿಮೀರುತ್ತಿರುವ ಕ್ರೌರ್ಯ, ಅವಸಾನವಾಗುತ್ತಿರುವ ಮಾನವೀಯ ಮೌಲ್ಯಗಳು...... ಇಂತಹ ಹತ್ತು ಹಲವು ವಾಸ್ತವಿಕ ಘಟನೆಗಳೇ ಈ ಸಿನಿಮಾದ ಹೂರಣ.

ಒಂದು ಕೊಲೆಯ ತನಿಖೆಯ ಮೂಲಕ ಆರಂಭವಾಗುವ ಸಿನಿಮಾ ನಂತರದಲ್ಲಿ ಆಗಷ್ಟೇ ವಿದೇಶದಿಂದ ಭಾರತಕ್ಕೆ ಆಗಮಿಸಿದ ಕ್ಯಾರೋಲಿನ್ ಸ್ಮಿತ್ ಎಂಬ ಮಹಿಳೆಯ ಮೇಲೆ ಕೇಂದ್ರೀಕೃತವಾಗುತ್ತದೆ. ಆಕೆಯ ನಿಗೂಢ ನಡೆಗಳು, ಭೇಟಿ ನೀಡುವ ಪ್ರದೇಶಗಳು/ಭೇಟಿಯಾಗುವ ವ್ಯಕ್ತಿಗಳು, ಅವಳಿಗೆ ಬರುವ ಅಜ್ಞಾತ ಕರೆಗಳು, ದುಃಸ್ವಪ್ನವಾಗಿ ಕಾಡುವ ಅಸ್ಪಷ್ಟ ಚಹರೆಗಳು ಅವಳ ಬಗೆಗೊಂದು ಸಂಶಯವನ್ನು ಸೃಷ್ಟಿಸಿದರೆ ಆಕೆಯ ಮುಖದಲ್ಲಿ ಹೆಪ್ಪುಗಟ್ಟಿರುವ ಗುರುತಿಸಲಾಗದ ಭಾವಗಳು ವೀಕ್ಷಕರ ಮನದಲ್ಲಿ ವಿಪ್ಲವವನ್ನೆಬ್ಬಿಸುತ್ತವೆ. ಆ ಭಾವವನ್ನು ಗ್ರಹಿಸಿ ಏನನ್ನೋ ಕಲ್ಪಿಸುವ ಹೊತ್ತಿಗೆ ಮತ್ತೆ ಕಥೆ ಬೇರೊಂದು ಮಜಲಿಗೆ ಹೊರಳುತ್ತದೆ. ಮಹಿಳಾ ಶೋಷಣೆಯ ವಿರುದ್ಧ ದನಿಯೆತ್ತಿ ಬೀದಿ ನಾಟಕಗಳ ಮುಖೇನ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಜ್ಯೋತಿ ಹಾಗೂ ದಿವ್ಯ ಎಂಬ ಇಬ್ಬರು ಯುವ ಪತ್ರಕರ್ತೆಯರ ಸಾಮಾಜಿಕ ಕಾಳಜಿಗೆ ಚಿತ್ರ ತೆರೆದುಕೊಳ್ಳುತ್ತದೆ. ಹೀಗೆ ಪದೇ ಪದೇ ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಘಟನೆಗಳೊಂದಿಗೆ ಸಾಗುವ ಕಥೆ ನೋಡುಗನನ್ನು ಆಗೀಗ ಗೊಂದಲಕ್ಕೆ ಕೆಡವುತ್ತದೆ. ಹಾಗೆ ಗೊಂದಲ ಸೃಷ್ಟಿಸುತ್ತಲೇ ನಮ್ಮಲ್ಲಿ ಒಂದು ಕುತೂಹಲವನ್ನು ಸೃಷ್ಟಿಸುತ್ತದೆ. ಇವೆಲ್ಲಾ ಕುತೂಹಲಗಳಿಗೆ ಉತ್ತರ ಸಿಗುವುದು, ಗೊಂದಲಗಳು ಸಂಪೂರ್ಣ ಪರಿಹಾರವಾಗುವುದು ಕೊನೆಯ ಹತ್ತು ನಿಮಿಷಗಳಲ್ಲಿ.

ಈ ಸಿನಿಮಾ ನೋಡುಗರನ್ನು ಆವರಿಸಿಕೊಳ್ಳುವುದು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಘಟನೆಗಳಿಗೆ ಸಂಬಂಧ ಕಲ್ಪಿಸಿರುವ ರೀತಿ ಹಾಗೂ ಅದನ್ನು ಚಿತ್ರಕಥೆಯ ಸೂತ್ರಕ್ಕೆ ಅಳವಡಿಸಿರುವ ಶೈಲಿಯಿಂದ. ಎಲ್ಲರಿಗೂ ತಿಳಿದಿರುವ ವಿಚಾರಗಳನ್ನು ಹೇಳುತ್ತಲೇ ಚಿತ್ರದ ಕೇಂದ್ರದಲ್ಲೊಂದು ಕೌತುಕವನ್ನಿಟ್ಟು, ಪ್ರತೀ ಹಂತದಲ್ಲೂ ವೀಕ್ಷಕರೊಳಗೆ ಆ ಬಗ್ಗೆ ಒಂದು ಗೊಂದಲವನ್ನು ಸೃಷ್ಟಿಸುತ್ತ ಇಡೀ ಚಿತ್ರವನ್ನು ನಿರೂಪಿಸಿರುವ ಪರಿಯನ್ನು ಮೆಚ್ಚಲೇಬೇಕು. ಚಿತ್ರದ ಅಂತಿಮ ಘಟ್ಟದವರೆಗೂ ಯಾರು ಯಾರಿಗಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ, ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಸುಳಿವು ದೊರಕುವುದಿಲ್ಲ. ಕೊನೆಯವರೆಗೂ ನಮ್ಮ ಊಹೆಗಳಿಗೆ ಸ್ಥಾನಕಲ್ಪಿಸಿ ಕ್ಲೈಮ್ಯಾಕ್ಸ್ ನಲ್ಲಿ ನಮ್ಮೆಲ್ಲಾ ಕಲ್ಪನೆಗಳನ್ನು ತಿರುವುಮುರುವಾಗಿಸಿ ಚಿತ್ರ ಕೊನೆಗೊಳ್ಳುತ್ತದೆ. ಈ ಇಡೀ ಸಸ್ಪೆನ್ಸ್ ಸೃಷ್ಟಿಯಾಗಿರುವುದು ಕೇವಲ ಚಿತ್ರದ ಘಟನಾವಳಿಗಳ ಕಾಲಕ್ರಮದ ಮೇಲೆ ಎಂಬುದು ಗಮನಾರ್ಹ ಸಂಗತಿ. 

ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಬೀದಿ ನಾಟಕದ ರೂಪದಲ್ಲಿ ಕಥೆಯೊಳಗೆ ತೋರಿಸಿದ್ದಾರೆ ನಿರ್ದೇಶಕರು. ಕೆಲವೇ ಕೆಲವು ಕ್ಷಣಗಳಲ್ಲಿ ಹಲವು ವಿಚಾರಗಳನ್ನು ನೋಡುಗರಿಗೆ ದಾಟಿಸುವ ಬೀದಿ ನಾಟಕಗಳ ಸಾಮರ್ಥ್ಯವನ್ನೂ ಈ ಸಣ್ಣ ಚುಟುಕು ದೃಶ್ಯಗಳು ತೋರುತ್ತವೆ. ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರು ರಂಗಭೂಮಿ ಹಾಗೂ ಕಿರುತೆರೆಯ ಹಿನ್ನೆಲೆಯವರು. ಕ್ಯಾರೋಲಿನ್, ಜ್ಯೋತಿ ಹಾಗೂ ದಿವ್ಯಾ ಪಾತ್ರದಲ್ಲಿ ಲಾರೆನ್ ಸ್ಪಾರ್ಟಾನೋ, ನಿವೇದಿತಾ ಹಾಗೂ ಅಮೃತಾ ಕರಗಡ ನೆನಪಿನಲ್ಲುಳಿಯುತ್ತಾರೆ. ಇವರೊಂದಿಗೆ ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ್ ಮಾಧ್ಯಮಿಕ, ಸಂಚಾರಿ ವಿಜಯ್, ಅಜಯ್ ರಾಜ್, ನಾಗಾರ್ಜುನ ರಾಜಶೇಖರ್ ಮುಂತಾದವರು ಪೋಷಕ ಪಾತ್ರದಲ್ಲಿದ್ದಾರೆ. ವಾಸುಕಿ ವೈಭವ್ ಕೂಡಾ ಒಂದು ದೃಶ್ಯದಲ್ಲಿ ಮುಖ ತೋರಿ ಮರೆಯಾಗುತ್ತಾರೆ.

ಈ ಚಿತ್ರದ ನಿರ್ದೇಶಕ ಆದರ್ಶ್ ಈಶ್ವರಪ್ಪ ಹಾಲಿವುಡ್ ಗರಡಿಯಲ್ಲಿ ಪಳಗಿರುವವರು ಎಂಬುದಕ್ಕೆ ಶುದ್ಧಿಯ ತಂತ್ರಗಾರಿಕೆಯೇ ನಿದರ್ಶನ. ಒಂದಕ್ಕೊಂದು ತಾಳೆಯಾಗದ ನಾನ್ ಲೀನಿಯರ್ ನಿರೂಪಣೆ, ಇಡೀ ಕಥೆ ನಮ್ಮ ಸಮ್ಮುಖದಲ್ಲೇ ನಡೆಯುತ್ತಿದೆ ಎನ್ನುವಷ್ಟು ನೈಜತೆಯಿಂದ ನೋಡುಗನನ್ನು ಒಳಗೊಳ್ಳುವ ಛಾಯಾಗ್ರಹಣದಿಂದಾಗಿ ಹಾಲಿವುಡ್ ಚಿತ್ರವನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಕತ್ತಲಿನ ಗಾಢತೆಯ ಮೂಲಕವೇ ಕಥೆಯ ಹೊಳಹುಗಳನ್ನು ಕೆದಕುವ ಆಂಡ್ರಿಯೋ ಅವರ ಛಾಯಾಗ್ರಹಣ, ನಿಶ್ಯಬ್ದತೆಯ ಅಂತರಾಳವನ್ನು ಕಲುಕುತ್ತಲೇ ಸನ್ನಿವೇಶಗಳ ತೀವ್ರತೆಯನ್ನು ನೋಡುಗರ ಮನಸ್ಸಿಗೆ ದಾಟಿಸುವಂತಹ ಜೆಸ್ಸಿ ಕ್ಲಿಂಟನ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾವನ್ನು ತಾಂತ್ರಿಕವಾಗಿ ಸಶಕ್ತಗೊಳಿಸಿದೆ.

ಸ್ತ್ರೀ ಶೋಷಣೆಯ ಹತ್ತು ಹಲವು ಆಯಾಮಗಳನ್ನು ತೋರುತ್ತಲೇ ನೋಡುಗನ ಚಿಂತನೆಗಳನ್ನು ಕೆಣಕುತ್ತಾ, ಪದೇ ಪದೇ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾ ಯೋಚನೆಗೆ ತಳ್ಳುವ ಸಿನಿಮಾ ಇದು. ಇದೇ ಅಂತರಂಗ ಶುದ್ಧಿ ಇದುವೇ ಬಹಿರಂಗ ಶುದ್ಧಿ ಎಂಬಂತೆ ಯಾವುದನ್ನೂ ವೈಭವೀಕರಿಸದೇ ನಿಶ್ಯಬ್ದವಾಗಿಯೇ ಮನಶುದ್ಧಿ ಹಾಗೂ ಆತ್ಮಶುದ್ಧಿಗೆ ಮೂಲವಾದ ಚಿಂತನೆಗಳ ಶುದ್ಧೀಕರಣಕ್ಕೆ ಇಂಬು ಕೊಡುವ ಈ ಸಿನಿಮಾ Netflixನಲ್ಲಿ ಲಭ್ಯವಿದೆ. ವ್ಯವಸ್ಥೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸುವ ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ ಸಿನಿಮಾ ಇದು.

ಗುರುವಾರ, ಜೂನ್ 4, 2020

Where's your ಮುಂದಿನ ನಿಲ್ದಾಣ.....!!

ಬಿಡುಗಡೆಯಾದಾಗಲೇ ಚಿತ್ರಮಂದಿರದಲ್ಲಿ ನೋಡಬೇಕೆಂದುಕೊಂಡಿದ್ದ ಸಿನಿಮಾ ಇದು. ಕಾರಣಾಂತರಗಳಿಂದ ಆರಂಭದಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಹೋಗಲು ಸಮಯ ಹೊಂದಿಸಿಕೊಳ್ಳುವ ವೇಳೆಗೆ ಚಿತ್ರ ಥಿಯೇಟರ್ ಗಳಲ್ಲಿ ಇರಲೇ ಇಲ್ಲ. ಸ್ಟಾರ್ ನಟರಿಲ್ಲದ ಹೊಸ ಪ್ರತಿಭೆಗಳ ಪ್ರಯೋಗಾತ್ಮಕ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಸರ್ವೇ ಸಾಮಾನ್ಯವಾಗಿರುವ ಸಂಗತಿ. ಹಾಗಾಗಿ ಈ ಸಿನಿಮಾ ನೋಡುವ ಆಸೆ ಈಡೇರಿರಲಿಲ್ಲ. ಕೊನೆಗೂ ಅಮೆಜಾನ್ ಪ್ರೈಮ್ ದಯೆಯಿಂದ ಈ ಸಿನಿಮಾ ನೋಡುವ ಭಾಗ್ಯ ಲಭಿಸಿತು.


ಚಿತ್ರದ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಒಂದು ವಿಚಾರ ಸ್ಪಷ್ಟಪಡಿಸಿಬಿಡುವೆ. ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಸಿನಿಮಾ ಅಲ್ಲ. ನೀವು ಕಮರ್ಷಿಯಲ್ ಅಂಶಗಳನ್ನು, ಭರಪೂರ ಹಾಸ್ಯವನ್ನು ಎಲ್ಲಕ್ಕಿಂತ ಮುಖ್ಯವಾಗಿ ವೇಗವಾಗಿ ಸಾಗುವ ಕಥೆಯನ್ನು ನಿರೀಕ್ಷಿಸುವವರಾದರೆ ಪ್ರಾಯಶಃ ಈ ಸಿನಿಮಾ ನಿಮಗಲ್ಲ. ಸ್ಲೋ ಪೇಸ್ ಚಿತ್ರಗಳನ್ನು ಪಾತ್ರಗಳೊಂದಿಗೆ ಬೆಸೆದುಕೊಂಡು ಆಸ್ವಾದಿಸುವ ಮನಸ್ಥಿತಿ ನಿಮಗಿದ್ದರೆ ಮುಂದಿನ ನಿಲ್ದಾಣ ನಿಮಗೆ ಖಂಡಿತಾ ಇಷ್ಟವಾಗುತ್ತದೆ.

ಚಿತ್ರತಂಡವೇ ಹೇಳಿಕೊಂಡಂತೆ ಇದು ಹೊಸಕಾಲದ ಯುವಮನಸ್ಸುಗಳ ಕಥನ. ಕಥಾನಾಯಕ ಪಾರ್ಥನ ನಿರೂಪಣೆಯಲ್ಲಿ ಫ್ಲಾಶ್ ಬ್ಯಾಕ್ ತಂತ್ರದ ಮೂಲಕ ತೆರೆದುಕೊಳ್ಳುವ ಅವನ ಬದುಕಿನ ಯಾನವೇ ಮುಂದಿನ ನಿಲ್ದಾಣ. ಈ ಯಾನದ ಬೇರೆ ಬೇರೆ ಹಂತಗಳಲ್ಲಿ ಅವನ ಬದುಕನ್ನು ಪ್ರವೇಶಿಸಿ ಪಯಣದ ಹಾದಿಯನ್ನು ಸಿಹಿ ಕಹಿ ನೆನಪುಗಳ ಘಮಲಿನಿಂದ ತುಂಬಿಸುವವರು ಮೀರಾ ಹಾಗೂ ಅಹನಾ. ಬದುಕಿನ ಬಗ್ಗೆ ಸಂಪೂರ್ಣ ಭಿನ್ನ ನಿಲುವನ್ನು ಹೊಂದಿರುವ ಈ ಮೂರು ವ್ಯಕ್ತಿತ್ವಗಳ ಮುಖೇನ 'ಬದುಕು ಸಾಗುತ್ತಲೇ ಇರಬೇಕು' ಎಂಬ ಸಂದೇಶವನ್ನು ಬಲು ಸೂಕ್ಷ್ಮವಾಗಿ ದಾಟಿಸುತ್ತದೆ ಈ ಸಿನಿಮಾ.

ಕಥಾನಾಯಕ ಪಾರ್ಥ ಶ್ರೀವಾಸ್ತವ್ ವೃತ್ತಿಯಿಂದ ಸಾಫ್ಟವೇರ್ ಇಂಜಿನಿಯರ್. ದಿನವೂ ಸಮಯದೊಂದಿಗೆ ಬಡಿದಾಡುವ ಒಂದೇ ರೀತಿಯ ಯಾಂತ್ರಿಕ ಬದುಕಿನಿಂದ ಬೇಸತ್ತವನು. ಫೋಟೋಗ್ರಫಿಯಲ್ಲಿ ಅದಮ್ಯ ಆಸಕ್ತಿಯಿದ್ದರೂ ಕೂಡಾ ಅದನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿಸಿಕೊಳ್ಳಲು ಭವಿಷ್ಯದ ಜೀವನ ನಿರ್ವಹಣೆಯ ಭಯ. ಅತ್ತ ಮಾಡುತ್ತಿರುವ ವೃತ್ತಿಯಲ್ಲೂ ಆತ್ಮತೃಪ್ತಿಯಿಲ್ಲದ ಇತ್ತ ಕನಸುಗಳ ಹಿಂದೆಯೂ ಹೋಗಲಾರದ ತೊಳಲಾಟ ಅವನದು. 

ಮೀರಾ ಶರ್ಮಾ ಆರ್ಟ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ವಾವಲಂಬಿ ಯುವತಿ. ಬದುಕಿನ ಬಗೆಗೆ ಕೆಲ ಸ್ಪಷ್ಟ ನಿಲುವುಗಳುಳ್ಳ ಮೀರಾ ಏಕಾಂಗಿ. ತನ್ನೊಳಗಿನ ಆ ಖಾಲಿತನವನ್ನು ತುಂಬಲು ಆಕೆಗೊಂದು ಭಾವುಕ ಆಸರೆ ಬೇಕಿದೆ. ವಿವಾಹದ ಮುಖೇನ ತನ್ನ ಜೀವನ ಸಂಗಾತಿಯ ರೂಪದಲ್ಲಿ ಏಕಾಂಗಿತನದಿಂದ ಮುಕ್ತಿ ಪಡೆಯುವ ಹವಣಿಕೆ ಅವಳದ್ದು. 

ಅಹನಾ ಕಶ್ಯಪ್ ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಬೇಕೆಂಬ ಮಹದಾಸೆಯುಳ್ಳ ವೈದ್ಯಕೀಯ ವಿದ್ಯಾರ್ಥಿನಿ. ತಾನು ಆಯ್ದುಕೊಂಡಿರುವ ಓದು, ವೃತ್ತಿ ಅವಳ ಪಾಲಿಗೆ passion ಕೂಡಾ. ಬಹಳ ಜೀವನ್ಮುಖಿಯಾದ ಲವಲವಿಕೆಯ ಹುಡುಗಿ ಆಕೆ.

ಈ ಮೂವರ ಹಾದಿಗಳು ಪರಸ್ಪರ ಸಂಧಿಸಿದಾಗ ಅವರ ಬದುಕಿನ ಪಯಣ ತೆಗೆದುಕೊಳ್ಳುವ ತಿರುವುಗಳನ್ನು ಬಹಳ ಸಾವಧಾನವಾಗಿ ನಿರೂಪಿಸಿದ್ದಾರೆ ನಿರ್ದೇಶಕ ವಿನಯ್ ಭಾರದ್ವಾಜ್. ಸಂಬಂಧಗಳ ಸೂಕ್ಷ್ಮತೆ, ಪ್ರೀತಿ, ಸ್ನೇಹ, ನಂಬಿಕೆ, ವೃತ್ತಿ, ಪ್ರವೃತ್ತಿ, ಆಸಕ್ತಿ, ಆದ್ಯತೆ ಇವೆಲ್ಲವನ್ನೂ ಇಂದಿನ ಯುವವರ್ಗದ ಜೀವನಶೈಲಿ ಹಾಗೂ ಅವರ ತವಕ ತಲ್ಲಣಗಳ ಮುಖೇನ ಕಟ್ಟಿಕೊಟ್ಟಿರುವ ಪರಿ ಇಷ್ಟವಾಗುತ್ತದೆ. ಈ ಚಿತ್ರದ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿನ ಮೂರು ಪ್ರಮುಖ ಪಾತ್ರಗಳು ತೆಗೆದುಕೊಳ್ಳುವ ನಿರ್ಧಾರಗಳು ಸರಿಯೋ ತಪ್ಪು ಎಂದು ವಿಮರ್ಶಿಸಲೇ ಸಾಧ್ಯವಿಲ್ಲ. ಒಂದು ಕ್ಷಣಕ್ಕೆ ಸರಿಯೆನಿಸಿದರೆ ಮತ್ತೊಮ್ಮೆ ಈ ನಿರ್ಧಾರ ತಪ್ಪಿತ್ತೇನೋ ಎನ್ನಿಸುತ್ತದೆ. 

ಪಾರ್ಥ, ಮೀರಾ ಹಾಗೂ ಅಹನಾ ಪಾತ್ರಗಳಿಗೆ ಪ್ರವೀಣ್ ತೇಜ್, ರಾಧಿಕಾ ಚೇತನ್ ಹಾಗೂ ಅನನ್ಯಾ ಕಶ್ಯಪ್ ಜೀವ ತುಂಬಿದ್ದಾರೆ. ದತ್ತಣ್ಣನವರದ್ದು ಸಣ್ಣ ಪಾತ್ರವಾದರೂ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚು ಇಷ್ಟವಾಗಿದ್ದು ಪಾರ್ಥನ ಸ್ನೇಹಿತ ಏಕಲವ್ಯ(ಏಕಾ)ನಾಗಿ ನಟಿಸಿರುವ ಅಜಯ್ ರಾಜ್. ಕೊಂಚ ತುಂಟತನ, ಲಘುಹಾಸ್ಯ, ಒಂದಿಷ್ಟು ಸಲಹೆ ಮತ್ತು ಸ್ನೇಹಿತನೆಡೆಗೆ ಅಗಾಧ ಕಾಳಜಿ ಹೊಂದಿರುವ ಏಕಾ ತುಂಬಾ ಆಪ್ತನಾಗುತ್ತಾನೆ. 

ಇನ್ನು ಈ ಇಡೀ ಸಿನಿಮಾಕ್ಕೆ ಆಹ್ಲಾದಕಾರಿ ತಾಜಾತನದ ಪ್ರಭಾವಳಿ ನೀಡಿರುವುದು ಛಾಯಾಗ್ರಹಣ ಹಾಗೂ ಸಂಗೀತ. ಅಭಿಮನ್ಯು ಸದಾನಂದನ್ ಅವರ ಕ್ಯಾಮೆರಾ ಕೈಚಳಕ ಈ ನಿಧಾನ ಗತಿಯ ಸಿನಿಮಾಕ್ಕೆ ಚೇತೋಹಾರಿ ರಂಗಿನ ಚೌಕಟ್ಟನ್ನು ಒದಗಿಸಿದೆ. ಏಳು ಭಿನ್ನ ಸಂಗೀತ ನಿರ್ದೇಶಕರು ಸಂಯೋಜಿಸಿರುವ ಏಳು ಗೀತೆಗಳು ಈ ಚಿತ್ರದ ಸೊಬಗನ್ನು ಇನ್ನಷ್ಟು ಹೆಚ್ಚಿಸಿವೆ. ಜಾನಪದ ಸೊಗಡಿನಿಂದ ಹಿಡಿದು ಎಲ್ಲಾ ಪ್ರಕಾರದ ಹಾಡುಗಳಿರುವುದು ಮುಂದಿನ ನಿಲ್ದಾಣದ ಹೆಗ್ಗಳಿಕೆ. ವಾಸುಕಿ ವೈಭವ್ ಅವರು ಸಂಗೀತ ಸಂಯೋಜಿಸಿ ಹಾಡಿರುವ 'ಇನ್ನೂನು ಬೇಕಾಗಿದೆ' ಗೀತೆ ಈಗಾಗಲೇ ಬಹಳಷ್ಟು ಜನಪ್ರಿಯ. ಅದರೊಂದಿಗೆ ಮಸಾಲಾ ಕಾಫಿ ಬ್ಯಾಂಡ್ ಸಂಯೋಜನೆಯ 'ಮನಸೇ ಮಾಯ', ಜಿಮ್ ಸತ್ಯ ಸಂಗೀತ ಸಂಯೋಜಿಸಿರುವ 'ನಗುವ ಕಲಿಸು ಒಂದು ಬಾರಿ', ಮತ್ತು ಆದಿಲ್ ನದಾಫ್ ಸಂಯೋಜನೆಯ ಶೀರ್ಷಿಕೆ ಗೀತೆ ಸೊಗಸಾಗಿವೆ.

ಬದುಕೆಂಬ ಪಯಣಕ್ಕೆ ಹಲವು ನಿಲ್ದಾಣಗಳು. ಆದರೆ ಸಾವೆಂಬ ಅಂತಿಮ ನಿಲ್ದಾಣದ ಹೊರತು ಬೇರ್ಯಾವ ನಿಲ್ದಾಣದಲ್ಲೂ ಬದುಕು ಶಾಶ್ವತವಾಗಿ ನಿಲ್ಲುವುದಿಲ್ಲ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸಾಗುವ ಹಾದಿಯಲ್ಲಿ ಹಲವು ಅನಾಮಿಕರು ಎದುರಾಗುತ್ತಾರೆ. ಹಲವರು ಪರಿಚಿತರಾದರೆ ಕೆಲವರು ನಮ್ಮ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸುತ್ತಾರೆ. ಈ ಪಯಣವನ್ನು ಆನಂದಿಸಿ ಕಹಿ ನೆನಪುಗಳನ್ನು ಹಿಂದೆ ಬಿಟ್ಟು ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದೆ ಸಾಗಬೇಕು ಎಂಬ ಆಶಯವನ್ನು ಮುಂದಿನ ನಿಲ್ದಾಣ ಧ್ವನಿಸುತ್ತದೆ. 

ನಿಧಾನವಾಗಿ ಸಾಗುವ ಕಥೆಯನ್ನು ಆಸ್ವಾದಿಸುವ ಮನಸ್ಸಿದ್ದರೆ ಖಂಡಿತಾ ಒಮ್ಮೆ ನೋಡಬಹುದಾದ, ನೋಡಬೇಕಾದ ಚಿತ್ರವಿದು.

ಬುಧವಾರ, ಮೇ 27, 2020

ಲೈಫ್ ಈಸ್ ಬ್ಯೂಟಿಫುಲ್


ಕಣ್ಣೆದುರಿಗಿರುವ ಸಾವನ್ನು ಪ್ರತೀ ಘಳಿಗೆ ಕಾಣುತ್ತಾ ಬದುಕುವುದು ಅದೆಷ್ಟು ಘೋರ....? ಸಾವನ್ನು ಕಣ್ಣೆದುರಿಗಿಟ್ಟುಕೊಂಡೂ ನಗುನಗುತ್ತಾ ದಕ್ಕಿದಷ್ಟು ಬದುಕನ್ನು ಸುಂದರವಾಗಿಸಿಕೊಳ್ಳುವವರ ಸಂಖ್ಯೆ ಎಷ್ಟಿರಬಹುದು? ಬಲು ಕಠಿಣವಲ್ಲವೇ ಈ ಹಾದಿ...?

ಈ ಜಗತ್ತು ಕಂಡ ಅತೀ ಭೀಭತ್ಸ ರಕ್ತಚರಿತ್ರೆಗಳಲ್ಲಿ ಒಂದು ಹಿಟ್ಲರ್ ಅವಧಿಯಲ್ಲಿನ ಯಹೂದಿಗಳ ನರಮೇಧ‌. ಅವನ 'ಡೆತ್ ಕ್ಯಾಂಪ್'ಗಳು ಅದೆಷ್ಟು ಜೀವಗಳ ಯಾತನಾಮಯ ನಿಟ್ಟುಸಿರ ಶಾಪವನ್ನು ಕಂಡಿವೆಯೋ ಬಲ್ಲವರಾರು? ಈ ರಕ್ತಸಿಕ್ತ ಅಧ್ಯಾಯ ದೇಶಭಾಷೆಗಳ ಹಂಗಿಲ್ಲದೇ ಹತ್ತುಹಲವು ಕಥೆ, ಕಾದಂಬರಿ, ಚಲನಚಿತ್ರಗಳಿಗೆ ಪ್ರೇರಣೆಯಾಗಿರುವುದು ಎಲ್ಲರಿಗೂ ತಿಳಿದ ಸತ್ಯ.  ಅಂತಹ ಪ್ರತಿಯೊಂದು ಕೃತಿಯೂ ಹಿಟ್ಲರ್ ಅವಧಿಯಲ್ಲಿ ಯಹೂದಿಗಳು ಅನುಭವಿಸಿದ ನರಕ ಸದೃಶ ಬವಣೆಯ ಹಲವು ಆಯಾಮಗಳನ್ನು, ವಿಭಿನ್ನ ಮಜಲುಗಳನ್ನೂ ಅನಾವರಣಗೊಳಿಸುತ್ತವೆ. ಆದರೆ ಇಂತಹ ಕೃತಿಗಳಲ್ಲಿ ನಾಜಿ಼ಗಳ ಕೌರ್ಯ ಹಾಗೂ ಯಹೂದಿಗಳ ನಿಸ್ಸಾಹಯಕತೆಯ ಚಿತ್ರಣವೇ ಹೆಚ್ಚು. ಅದು ಆ ಕೃತಿಗಳ ಬಲದೊಂದಿಗೆ ಮಿತಿಯೂ ಕೂಡಾ ಹೌದು. ಕೆಲವೇ ಕೆಲವು ಅತ್ಯುತ್ಕೃಷ್ಟ ಕೃತಿಗಳು ಮಾತ್ರವೇ ಈ ಮಿತಿಗಳೆಲ್ಲವನ್ನೂ ಮೀರಿ ಬೇರೆನನ್ನೋ ಹೇಳುತ್ತವೆ. ಅಂತಹ ಕೃತಿಗಳ ಸಾಲಿಗೆ ಸೇರುವುದು 1997 ರ ಇಟಾಲಿಯನ್ ಸಿನಿಮಾ ಲೈಫ್ ಈಸ್ ಬ್ಯೂಟಿಫುಲ್ (ಇಟಾಲಿಯನ್ ಭಾಷೆಯಲ್ಲಿ "La vita è bella").

ರೊಬೆರ್ಟೋ ಬೆನಿನಿ(Roberto Benigni) ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಲನಚಿತ್ರ ಡೆತ್ ಕ್ಯಾಂಪಿನೊಳಗಿದ್ದು, ಪ್ರತಿಕ್ಷಣ ಹಿಂಸೆ ಹಾಗೂ ಜೀವಭಯದೊಂದಿಗೆ ಬದುಕುತ್ತಿದ್ದರೂ ಜೀವನ ಪ್ರೀತಿ ಕಳೆದುಕೊಳ್ಳದೇ ತನ್ನೊಳಗಿರುವ ಅದ್ಬುತ ಕಲ್ಪನಾ ಶಕ್ತಿಯನ್ನು ಬಳಸಿ ತನ್ನ ಮಗನಿಗೆ ಸೆರೆಶಿಬಿರದ ನರಕಯಾತನೆ ಹಾಗೂ ಬಂಧನದ ಭೀಕರತೆಗಳ ಅರಿವಾಗದಂತೆ ಕಾಯ್ದುಕೊಳ್ಳುವ ತಂದೆಯೊಬ್ಬನ ಅನನ್ಯ ಕಥೆಯನ್ನು ಹೇಳುತ್ತದೆ.

ರುಬಿನೋ ರೋಮಿಯೋ ಸಾಲ್ಮೋನೆ ಅವರು ಬರೆದ "ಇನ್ ದಿ ಎಂಡ್, ಐ ಬೀಟ್ ಹಿಟ್ಲರ್" ಕೃತಿಯಿಂದ ಭಾಗಶಃ ಸ್ಪೂರ್ತಿ ಪಡೆದಿರುವ ಈ ಚಿತ್ರ, ಖುದ್ದು ನಿರ್ದೇಶಕ ಬೆನಿನಿಯವರ ತಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಕಾರ್ಮಿಕ ಶಿಬಿರದಲ್ಲಿ ಕಳೆದ ಎರಡು ವರ್ಷಗಳ  ಸ್ವಾನುಭವದಿಂದಲೂ ಪ್ರೇರಣೆ ಪಡೆದಿದೆ.

ಚಿತ್ರದ ಕಥೆಯ ವಿಚಾರಕ್ಕೆ ಬರುವುದಾದರೆ ಲೈಫ್ ಈಸ್ ಬ್ಯೂಟಿಫುಲ್ ಚಿತ್ರವು 1939ರ ಕಾಲಘಟ್ಟದ ಇಟಲಿ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಗೈಡೋ ಓರೆಫೈಸ್ ಎಂಬ ಯಹೂದಿ ಯುವಕನ ಬದುಕಿನ ಏರಿಳಿತಗಳನ್ನು ದಾಖಲಿಸುತ್ತದೆ. ಗೈಡೋ ಬದುಕಿನ ಪ್ರತಿ ಕ್ಷಣವನ್ನೂ ಸಕಾರಾತ್ಮಕವಾಗಿ ಆಸ್ವಾದಿಸುವ, ತನ್ನ ಸುತ್ತಲಿರುವ ಎಲ್ಲರನ್ನೂ ಸಂತೋಷವಾಗಿರಿಸಿಕೊಳ್ಳುವ ಕಲೆ ಅರಿತ, ಅತ್ಯದ್ಬುತ ಕಲ್ಪನೆಗಳ ಹೆಣೆಯಬಲ್ಲ ಲವಲವಿಕೆಯ ಯುವಕ. ತನ್ನ ಚಿಕ್ಕಪ್ಪ ಎಲಿಸಿಯೋ ಅವರ ರೆಸ್ಟೋರೆಂಟಿನಲ್ಲಿ ಕೆಲಸಮಾಡಲು ಅರೇಝೋ಼ ನಗರಕ್ಕೆ ಆಗಮಿಸುವ ಗೈಡೋ ಆಕಸ್ಮಿಕವಾಗಿ ಭೇಟಿಯಾಗುವ ದೋರಾ ಎಂಬ ಶಿಕ್ಷಕಿಯ ಪ್ರೇಮ ಪಾಶದಲ್ಲಿ ಸಿಲುಕುತ್ತಾನೆ. ಈಗಾಗಲೇ ಅಹಂಕಾರಿ ಸಿರಿವಂತ ವ್ಯಕ್ತಿಯೋರ್ವನೊಂದಿಗೆ ವಿವಾಹ ನಿಷ್ಕರ್ಷೆಯಾಗಿರುವ ದೋರಾಳಿಗೆ ತನ್ನ ಪ್ರೇಮವನ್ನು ಅರಿಕೆ ಮಾಡಲು ಗೈಡೋ ಹಲವಾರು ಕಸರತ್ತುಗಳನ್ನು ನಡೆಸುತ್ತಾನೆ. ತಾಯಿಯ ಒತ್ತಾಯದ ಮೇರೆಗೆ ಇಷ್ಟವಿಲ್ಲದ ಸಂಬಂಧದಲ್ಲಿ ಸಿಲುಕಿ ಅಸಂತುಷ್ಟಳಾಗಿದ್ದ ದೋರಾ, ಗೈಡೋನ ನೈಜ ಪ್ರೀತಿಗೆ ಮನಸೋಲುತ್ತಾಳೆ. ಅವಳ ನಿಶ್ಚಿತಾರ್ಥದ ಔತಣಕೂಟದ ದಿನವೇ  ಅವಳ ಅನುಮತಿಯೊಂದಿಗೆ ಗೈಡೋ ದೋರಾಳನ್ನು ಅಪಹರಿಸಿ ವಿವಾಹವಾಗುತ್ತಾನೆ. ದಂಪತಿಗಳು ಪುಸ್ತಕದ ಮಳಿಗೆಯೊಂದನ್ನು ಆರಂಭಿಸುತ್ತಾರೆ. ಅವರಿಗೆ ಗಿಯೋಸುಕ್(ಜೋಶುವಾ) ಎಂಬ ಮಗನೂ ಜನಿಸುತ್ತಾನೆ.  ಮಡದಿ, ಮಗ ಹಾಗೂ ಪುಸ್ತಕದ ಮಳಿಗೆಯೊಂದಿಗೆ ಸುಲಲಿತವಾಗಿ ಗೈಡೋನ ಬದುಕು ಸಾಗುತ್ತಿರುವಾಗಲೇ ಎರಡನೇ ಮಹಾಯುದ್ಧ ಆರಂಭವಾಗುತ್ತದೆ.

ಇಟಲಿ ಸಾಮ್ರಾಜ್ಯವನ್ನು ಆಕ್ರಮಿಸಿಕೊಳ್ಳುವ ಹಿಟ್ಲರ್ ಇಟಲಿಯಲ್ಲಿರುವ ಯಹೂದಿಗಳ ಮಾರಣಹೋಮಕ್ಕೆ ಆದೇಶ ಹೊರಡಿಸುತ್ತಾನೆ. ಇಟಲಿಯಲ್ಲಿನ ಯಹೂದ್ಯರನ್ನು ಹುಡುಕಿ ಅವರನ್ನು ಬಲವಂತವಾಗಿ ರೈಲುಗಳಲ್ಲಿ ತುಂಬಿ ಸೆರೆಶಿಬಿರಗಳಿಗೆ ಒಯ್ಯಲಾರಂಭಿಸುತ್ತಾರೆ.

ಜೋಶುವಾನ ಐದನೇ ಜನ್ಮದಿನದಂದೇ ಗೈಡೋ, ಅವನ ಚಿಕ್ಕಪ್ಪ ಎಲಿಸಿಯೋ ಹಾಗೂ ಜೋಶುವಾನನ್ನು ವಶಪಡಿಸಿಕೊಂಡು ಸೆರೆಶಿಬಿರಕ್ಕೆ ಒಯ್ಯಲಾಗುತ್ತದೆ. ಅವರನ್ನು ಅರಸಿ ಬರುವ ದೋರಾಳಿಗೆ ಯಹೂದ್ಯಳಲ್ಲದ ಕಾರಣ ಸೆರೆಶಿಬಿರದಿಂದ ವಿನಾಯಿತಿ ಸಿಗುತ್ತದೆ. ಆದರೆ ಗೈಡೋ ಹಾಗೂ ಜೋಶುವಾನನ್ನು ಅಗಲಿರಲು ಬಯಸದ ದೋರಾ ಸ್ವ ಇಚ್ಛೆಯಿಂದ ತಾನೂ ರೈಲನ್ನೇರಿ ಸೆರೆಶಿಬಿರಕ್ಕೆ ಪ್ರಯಾಣಿಸುತ್ತಾಳೆ‌. ಸೆರೆಶಿಬಿರದಲ್ಲಿ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ ಶಿಬಿರಗಳಲ್ಲಿ ಇರಿಸುವುದರಿಂದ ಗೈಡೋ ಮತ್ತು ಜೋಶುವಾ ದೋರಾಳಿಂದ ಬೇರಾಗುತ್ತಾರೆ. ಹಾಗಿದ್ದೂ ಶಿಬಿರದ ಧ್ವನಿವರ್ಧಕಗಳ ಸಹಾಯದಿಂದ ಗೈಡೋ ಮತ್ತು ಜೋಶುವಾ ದೋರಾಳಿಗೆ ಕ್ಷೇಮ ಸಂದೇಶ ಕಳಿಸುತ್ತಿರುತ್ತಾರೆ.

ಸೆರೆಶಿಬಿರದ ನಿಯಮಗಳ ಪ್ರಕಾರ ದುಡಿಯುವ ಸಾಮರ್ಥ್ಯ ಇಲ್ಲದವರನ್ನು (ವಯಸ್ಸಾದವರು ಹಾಗೂ ಮಕ್ಕಳು) ಶಿಬಿರಕ್ಕೆ ಕರೆತಂದ ತಕ್ಷಣವೇ ಕೊಲ್ಲಬೇಕು. ಅದರಂತೆ ವಯಸ್ಸಾದ ಎಲಿಸಿಯೋ ಶಿಬಿರಕ್ಕೆ ಬಂದು ಸ್ವಲ್ಪ ಸಮಯದ ತರುವಾಯ ಗ್ಯಾಸ್ ಛೇಂಬರಿನಲ್ಲಿ ಕೊಲ್ಲಲ್ಪಡುತ್ತಾರೆ. ಈಗ ಮಕ್ಕಳ ಸರದಿ. ಸ್ನಾನ ಮಾಡಿಸುವ ನೆಪದಲ್ಲಿ ಗ್ಯಾಸ್ ಛೇಂಬರಿಗೆ ಮಕ್ಕಳನ್ನು ಕರೆದೊಯ್ಯುತ್ತಾರೆ ಜರ್ಮನ್ ಕಾವಲುಗಾರರು. ಆದರೆ ಸ್ನಾನ ಮಾಡುವುದನ್ನು ದ್ವೇಷಿಸುವ ಜೋಶುವಾ ಉಳಿದ ಮಕ್ಕಳೊಂದಿಗೆ ಹೋಗದೇ ಬದುಕುಳಿಯುತ್ತಾನೆ.

ಗಾಳಿ ಬೆಳಕು ಸರಿಯಾಗಿ ಬರದ ಗೂಡಿನಂತಹ ಸೆರೆಶಿಬಿರದ ವಾತಾವರಣನ್ನೂ, ತಾಯಿಯಿಂದ ದೂರವಿರುವುದನ್ನೂ ಸಹಿಸಲಾರದ ಜೋಶುವಾ ಅಲ್ಲಿಂದ ಹೊರಹೋಗುವಾ ಎಂದು ಗೈಡೋಗೆ ದುಂಬಾಲು ಬೀಳುತ್ತಾನೆ. ಅಂತಹ ಯಾವುದೇ ಸಾಧ್ಯತೆಗಳೂ ಕನಸಿನಲ್ಲೂ ಸಾಧ್ಯವಿಲ್ಲದಂತಹ ದುಃಸ್ಥಿತಿ ಅವರದು.
ಆದರೆ ಆಶಾವಾದಿ ಗೈಡೋ ಶಿಬಿರದ ನರಕಯಾತನೆಗಳನ್ನು, ತಮ್ಮ ಹೀನ ಸ್ಥಿತಿಯನ್ನು ಮಗನಿಂದ ಮುಚ್ಚಿಡಲು ತನ್ನ ಅದ್ಬುತ ಕಲ್ಪನಾಶಕ್ತಿಯ ಸಹಾಯವನ್ನು ಪಡೆದು ಮಗನ ಆಲೋಚನೆಯಲ್ಲಿ  ಸೆರೆಶಿಬಿರಕ್ಕೆ ಭಿನ್ನ ಆಯಾಮವೊಂದನ್ನು ಸೃಷ್ಟಿಸುತ್ತಾನೆ. 

ಇಡೀ ಶಿಬಿರವನ್ನು ಒಂದು ಸಂಕೀರ್ಣವಾದ ಆಟ ಎಂದು ಮಗನಿಗೆ ವಿವರಿಸುವ ಗೈಡೋ 'ಈ ಆಟದಲ್ಲಿ ಪ್ರತಿಯೊಬ್ಬರಿಗೂ ಹಲವು ಕಠಿಣವಾದ ಚಟುವಟಿಕೆಗಳನ್ನು ನೀಡಿರುತ್ತಾರೆ. ಆ ಚಟುವಟಿಕೆಗಳು ಅದೆಷ್ಟೇ ಕಠೋರ ಹಾಗೂ ಹಿಂಸೆ ನೀಡುವಂತಹದ್ದಾಗಿದ್ದರೂ ಅದನ್ನು ನಿರ್ವಹಿಸದೇಬಿಡುವಂತಿಲ್ಲ. ಅಂತಹ ಪ್ರತಿಯೊಂದು ಚಟುವಟಿಕೆಗಳಿಗೂ ಅಂಕಗಳಿದ್ದು ಯಶಸ್ವಿಯಾಗಿ ಅದನ್ನು ಮುಗಿಸುವವರು ಅಂಕಗಳನ್ನು ಪಡೆಯುತ್ತಾರೆ. ಯಾರು ಮೊದಲು 1000 ಅಂಕಗಳನ್ನು ಪಡೆಯುತ್ತಾರೋ ಅವರಿಗೆ ಒಂದು ನೈಜವಾದ ಯುದ್ಧ ಟ್ಯಾಂಕರ್ ಅನ್ನು ಬಹುಮಾನವಾಗಿ ನೀಡಲಾಗುತ್ತದೆ. ಆದರೆ ಯಾರು ಅಮ್ಮನನ್ನು ನೋಡಬೇಕೆಂದು ಬಯಸಿ ಅಳುತ್ತಾರೋ ಹಾಗೂ ಹಸಿವೆಯಾಗುತ್ತದೆ ಎಂದು ಹಠ ಮಾಡುತ್ತಾರೋ ಅವರು ತಮ್ಮ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಅದೇ ರೀತಿ ಶಿಬಿರದ ಕಾವಲುಗಾರರಿಂದ ಅವಿತುಕೊಳ್ಳುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ' ಎಂದು ಇಡೀ ಸೆರೆಶಿಬಿರದ ದಿನಚರಿಯನ್ನು ಒಂದು ಆಟದ ಚೌಕಟ್ಟಿನಲ್ಲಿ ನಿರೂಪಿಸಿ ಜೋಶುವಾನ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ ಗೈಡೋ.

ಜೀವಹಿಂಡುವ ನಾಜಿ಼ ಡೆತ್ ಕ್ಯಾಂಪಿನ ಹಿಂಸೆಗಳನ್ನು, ತನ್ನೆಲ್ಲಾ ಯಾತನೆಗಳನ್ನು ಆಟದ ಭಾಗವೆಂಬಂತೆ ಮಗನ ಕಣ್ಣಿಗೆ ಅರಿಕೆ ಮಾಡಿಸುವಲ್ಲಿ ಯಶಸ್ವಿಯಾಗುವ ಗೈಡೋ ತಾನು ಸಾವಿಗೆ ಅತೀ ಸನಿಹದಲ್ಲಿರುವೆ ಎಂಬ ಸತ್ಯ ಜೋಶುವಾನ ಅರಿವಿಗೇ ಬಾರದಂತೆ ಅವನ ಮನಸ್ಸನ್ನು ಆಟದಲ್ಲೇ ಕೇಂದ್ರಿಕರಿಸುವಲ್ಲಿ ಗೆಲ್ಲುತ್ತಾನೆ.

ಮಹಾಯುದ್ಧದಲ್ಲಿ ಅಮೇರಿಕಾ ಮುಂದಾಳತ್ವದ ಮಿತ್ರಪಕ್ಷಗಳ ಕೈ ಮೇಲಾಗಿ ಹಿಟ್ಲರ್ ಹಾಗೂ ಮುಸಲೋನಿಯ ಶತ್ರುಪಕ್ಷಗಳ ಸೋಲು ಖಚಿತವಾಗುತ್ತದೆ. ಅಮೇರಿಕನ್ ಸೇನಾಪಡೆಗಳು ಆಗಮಿಸುವ ಮುನ್ನವೇ ಸೆರೆಶಿಬಿರಗಳನ್ನ ಖಾಲಿಯಾಗಿಸುವ ಗಡಿಬಿಡಿಯಲ್ಲಿ ಅಲ್ಲಿರುವವರನ್ನೆಲ್ಲಾ ಬೇರೆಡೆಗೆ ಸಾಗಿಸಲು ಆರಂಭಿಸಲಾಗುತ್ತದೆ. ಈ ಸಂದರ್ಭದಲ್ಲಿ ಜೋಶುವಾನನ್ನು ರಸ್ತೆ ಬದಿಯ ಮುಚ್ಚಿದ ಪೆಟ್ಟಿಗೆಯೊಂದರಲ್ಲಿ ಕುಳ್ಳಿರಿಸಿ 'ಹೊರಗಿನ ಸದ್ದೆಲ್ಲಾ ಅಡಗಿ ಸಂಪೂರ್ಣ ಶಾಂತತೆ ನೆಲೆಸುವವರೆಗೂ ಆ ಪೆಟ್ಟಿಗೆಯಿಂದ ಹೊರಬರದೇ ಕುಳಿತರೆ 1000 ಅಂಕಗಳಿಸಿ ನೀನೇ ಈ ಆಟದಲ್ಲಿ ವಿಜೇತನಾಗುತ್ತೀಯಾ' ಎಂದು ಮಗನನ್ನು ನಂಬಿಸಿ ಯಾವುದೇ ಕಾರಣಕ್ಕೂ ಆತ ಗಲಭೆ ಶಾಂತವಾಗುವವರೆಗೆ ಹೊರಬಾರದಂತೆ ಮನವೊಲಿಸಿ ತಾನು ದೋರಾಳನ್ನು ಅರಸಿ ಹೊರಡುತ್ತಾನೆ ಗೈಡೋ.

ಆದರೆ ಹಾಗೆ ಹೊರಟ ಗೈಡೋ ಜರ್ಮನ್ ಸೈನಿಕರ ಕೈಯಲ್ಲಿ ಸಿಕ್ಕಿಬೀಳುತ್ತಾನೆ ಹಾಗೂ ಜರ್ಮನ್ ಅಧಿಕಾರಿ ಅವನನ್ನು ಕೊಲ್ಲಲ್ಲೆಂದು ಕರೆದೊಯ್ಯುತ್ತಾನೆ. ಹಾಗೆ ಹೋಗುವಾಗ ಗೈಡೋ ಜೋಶುವಾ ಅವಿತಿರುವ ಪೆಟ್ಟಿಗೆಯ ಮುಂಭಾಗದಿಂದಲೇ ಹಾದು ಹೋಗುತ್ತಾನೆ. ಪೆಟ್ಟಿಗೆಯ ಕಿಂಡಿಯಿಂದ ತನ್ನನ್ನೇ ನೋಡುತ್ತಿದ್ದ ಮಗನಿಗೆ ಕಣ್ಣು ಮಿಟುಕಿಸಿ ತಾನು ಆ ಸೈನಿಕರು ಹಾಗೂ ಅಧಿಕಾರಿಗಳಿಗೆ ಆದೇಶ ನೀಡುವವನಂತೆ ನಟಿಸುತ್ತಾ ಮಗನಿಗೆ ತನ್ನ ಸ್ಥಿತಿ ಅರಿವಾಗದಂತೆ, ಅವನ ಆತ್ಮಸ್ಥೈರ್ಯ ಕುಗ್ಗದಂತೆ ನಟಿಸುತ್ತಾನೆ. ನಂತರದಲ್ಲಿ ಗೈಡೋನನ್ನು ಕೊಲ್ಲಲಾಗುತ್ತದೆ.

ತಂದೆಯ ಮಾತಿನಂತೆ ಎಲ್ಲಾ ಶಾಂತವಾಗುವವರೆಗೂ ಪೆಟ್ಟಿಗೆಯೊಳಗೇ ಕುಳಿತ ಜೋಶುವಾ ಮರುದಿನ ಬೆಳಗ್ಗೆ ಎಲ್ಲೆಡೆ ನೀರವತೆ ಆವರಿಸಿ, ಅವಿತ್ತಿದ್ದ ಯಹೂದಿಗಳೆಲ್ಲಾ ನಿಧಾನವಾಗಿ ಹೊರಬರುವಾಗ ತಾನೂ ಪೆಟ್ಟಿಗೆಯಿಂದ ಹೊರಬರುತ್ತಾನೆ. ಏನು ಮಾಡಬೇಕೆಂದು ಅರಿವಾಗದೇ ಸುತ್ತಮುತ್ತ ನೋಟ ಹರಿಸುತ್ತಾ ರಸ್ತೆ ಮಧ್ಯೆ ನಿಂತವನನ್ನು ಒಂದು ಶಬ್ದ ಎಚ್ಚರಿಸುತ್ತದೆ. ಶಬ್ದ ಬಂದತ್ತ ನೋಟ ಹರಿಸುವವನಿಗೆ ಅಮೇರಿಕಾದ ಸೈನಿಕ ಚಲಾಯಿಸಿಕೊಂಡು ಬರುತ್ತಿದ್ದ ಶೆರ್ಮನ್ ಟ್ಯಾಂಕರ್ ಕಣ್ಣಿಗೆ ಬೀಳುತ್ತದೆ‌. ಅದನ್ನು ಕಂಡೊಂಡನೆ ತಂದೆ ಹೇಳಿದ ಬಹುಮಾನದ ಟ್ಯಾಂಕರ್ ತನಗೆ ದೊರಕಿತೆಂದು ಸಂತಸಪಡುವ ಪುಟ್ಟ ಜೋಶುವಾನಿಗೆ ತಂದೆ ಸತ್ತಿರುವನೆಂಬುದು ಅರಿವಾಗುವುದಿಲ್ಲ. ಅಮೇರಿಕನ್ ಸೈನಿಕ ಜೋಶುವಾನನ್ನು ಟ್ಯಾಂಕರ್ ಸವಾರಿಗೆ ಆಹ್ವಾನಿಸಿದಾಗ ಖುಷಿಯಿಂದ ಟ್ಯಾಂಕರ್ ಮೇಲೇರುವ ಜೋಶುವಾ ಅಕ್ಕಪಕ್ಕ ಸಾಗುತ್ತಿದ್ದ ಜನರನ್ನು ನೋಡತೊಡಗುತ್ತಾನೆ. ಶೀಘ್ರದಲ್ಲೇ ಆ ಗುಂಪಿನಲ್ಲಿ ತಾಯಿಯನ್ನು ಕಾಣುವ ಜೋಶುವಾ ಟ್ಯಾಂಕರಿನಿಂದ ಇಳಿದು ದೋರಾಳ ಬಳಿಗೋಡುತ್ತಾನೆ. ಅಮ್ಮನ ಬಳಿ ಅತೀವ ಸಂತೋಷದಿಂದ "ಅಮ್ಮಾ, ನಾನು ಗೆದ್ದೆ" ಎನ್ನುವ ಜೋಶುವಾನನ್ನು ಅಪ್ಪಿ ದೋರಾಳೂ ಮಗನನ್ನು ಅಪ್ಪಿ, "ಹೌದು ಮಗೂ, ನಾವು ಗೆದ್ದೆವು" ಎನ್ನುತ್ತಾಳೆ.

ತಂದೆಯ ಕಲ್ಪನಾಶಕ್ತಿಯ ಸಹಾಯದಿಂದ ಹೇಗೆ ಕೊನೆಯವರೆಗೂ ತಾನು ಸೆರೆಶಿಬಿರದ ಕಠೋರತೆಯ ಅರಿವೇ ಆಗದಂತೆ ಅಲ್ಲಿ ದಿನಗಳನ್ನು ಕಳೆದೆ ಎಂದು ತನ್ನ ತಂದೆಯ ತ್ಯಾಗದ ಕಥನವನ್ನು ವಯಸ್ಕ ಜೋಶುವಾ ಸ್ವಗತದಲ್ಲಿ ನೆನಪಿಸಿಕೊಳ್ಳುವುದರೊಂದಿಗೆ ಚಿತ್ರ ಮುಗಿಯುತ್ತದೆ.

ಪ್ರಥಮಾರ್ಧದಲ್ಲಿ ಕೊಂಚ ಬೋರಿಂಗ್ ಎನಿಸುವ ಕಥೆ ದ್ವಿತಿಯಾರ್ಧದಲ್ಲಿ ಮಾತ್ರ ನೋಡುಗರ ಮನಸ್ಸನ್ನು ಅಲುಗಾಡಿಸುತ್ತದೆ. ಮಕ್ಕಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಅವರ ಅನುಮಾನಗಳನ್ನು ತೊಡೆಯುವುದು ಇಡೀ ಪ್ರಪಂಚದಲ್ಲಿ ಅತೀ ಕಠಿಣವಾದ ಕೆಲಸ. ಒಂದು ಪ್ರಶ್ನೆಗೆ ಉತ್ತರಿಸುವುದರೊಳಗೆ ಇನ್ನೊಂದು ಅನುಮಾನ ಅವರ ಪುಟ್ಟ ಮೆದುಳಿನೊಳಗೆ ತಯಾರಾಗಿರುತ್ತದೆ. ಅಂತಹುದೇ ಐದು ವರ್ಷದ ಮಗುವಿಗೆ ಇಡೀ ಸೆರೆಶಿಬಿರವನ್ನು ಒಂದು ಆಟದ ರೂಪದಲ್ಲಿ ಸಮರ್ಪಕವಾಗಿ ನಿರೂಪಿಸಿರುವ ರೀತಿ ಎಂತಹವರ ಮನಸ್ಸಿಗಾದರೂ ನಾಟದೇ ಬಿಡದು. ಈ ಒಂದು ಅಂಶದಿಂದಾಗಿಯೇ ಈ ಸಿನಿಮಾ ಹಿಟ್ಲರ್ ಇತಿಹಾಸ ಆಧಾರಿತ ಬೇರೆಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಇಡೀ ಚಿತ್ರದುದ್ದಕ್ಕೂ ನಾಜಿ಼ ಕ್ರೌರ್ಯದ ಕರಿಛಾಯೆ ಕಾಣಸಿಗುತ್ತದಾದರೂ ಅದನ್ನೂ ಮೀರಿದ ಜೀವನ ಪ್ರೀತಿ, ಸಕರಾತ್ಮಕತೆ, ಆಶಾವಾದ ಚಿತ್ರವನ್ನು ಮೇರುಕೃತಿಯನ್ನಾಗಿಸಿದೆ‌.

ರಾಬರ್ಟೋ ಬೆನಿನಿ, ನಿಕೋಲೆಟ್ಟಾ ಬ್ರಾಸ್ಚಿ, ಜಾರ್ಜಿಯೋ ಕ್ಯಾನ್ತರಿನಿ ಅವರು ಕ್ರಮವಾಗಿ ಗೈಡೋ ಓರೆಫೈಸ್, ದೋರಾ ಓರೆಫೈಸ್ ಹಾಗೂ ಜೋಶುವಾ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇಟಲಿಯಾದ್ಯಂತ ಅತ್ಯಂತ ಯಶಸ್ವಿಯಾಯಿತು. ಬೆನಿನಿ ಅವರಿಗೆ ಇಟಲಿಯ ನ್ಯಾಷನಲ್ ಹೀರೋ ಇಮೇಜ್ ತಂದುಕೊಟ್ಟ ಸಿನಿಮಾ ಇದು. ಪೋಪ್ ಜಾನ್ ಪಾಲ್ II ಅವರು ಈ ಚಿತ್ರವನ್ನು ತಮ್ಮ ಅತೀ ಇಷ್ಟದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ಒಂದು ಎಂದು ಹೆಸರಿಸಿದ್ದಾರೆ.

1998ರ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಗ್ರಾಂಡ್ ಪ್ರಿಕ್ಸ್  ಪ್ರಶಸ್ತಿಯಿಂದ ಪುರಸ್ಕೃತವಾಗಿರುವ ಲೈಫ್ ಈಸ್ ಬ್ಯೂಟಿಫುಲ್, 71ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಬೆನಿನಿಯವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಮೇತ, ಅತ್ಯುತ್ತಮ ಮೂಲ ಸಂಗೀತ ಹಾಗೂ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 1998ರ ಟೊರೆಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜನರ ಆಯ್ಕೆಯ ಪ್ರಶಸ್ತಿಯೊಂದಿಗೆ ಇನ್ನೂ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ.

ಚಿತ್ರ ಬಿಡುಗಡೆಯಾದ ನಂತರ ಯಹೂದಿಗಳ ಹತ್ಯಾಕಾಂಡವನ್ನು ಹಾಸ್ಯಾಸ್ಪದವಾಗಿ ತೋರಿಸಿ ಪೀಡಿತರ ನೋವನ್ನು ಹಗುರವಾಗಿ ಕಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತಾದರೂ ಕಠಿಣ ಸಂದರ್ಭಗಳಲ್ಲಿ ಕಲ್ಪನಾಶಕ್ತಿಯನ್ನು ಬಳಸಿಕೊಂಡು ನಕರಾತ್ಮಕತೆಯಲ್ಲಿಯೂ ಹೇಗೆ ಸಕರಾತ್ಮಕತೆಯನ್ನು ಕಾಣಬಹುದು ಎಂಬುದಕ್ಕೆ ಭಾಷ್ಯದಂತಿದೆ ಈ ಚಿತ್ರ. ನಮ್ಮ ಕೈ ಮೀರಿ ಎದುರಾಗುವ, ನಾವು ಪರಿಹರಿಸಲಾಗದ ಸಮಸ್ಯೆಗಳ ಬಗ್ಗೆಯೇ ಯೋಚಿಸುತ್ತಾ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬಾರದು ಎಂಬುದನ್ನು ಅತ್ಯಂತ ಸಕಾರಾತ್ಮಕವಾಗಿ ಹೇಳುವ ಈ ಚಿತ್ರ ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಇಂಗ್ಲೀಷ್ ಅಡಿಬರಹದೊಂದಿಗೆ ಹಾಗೂ ಇಂಗ್ಲೀಷ್ ಭಾಷೆಯಲ್ಲೂ ಲಭ್ಯವಿರುವ ಈ ಚಿತ್ರವನ್ನು ಆಸಕ್ತರು ಯೂ ಟ್ಯೂಬಿನಲ್ಲಿ ವೀಕ್ಷಿಸಬಹುದು.