ಶನಿವಾರ, ಡಿಸೆಂಬರ್ 24, 2022

Chup - Revange of the Artist


ವರ್ಷದ ಹಿಂದಿನ ಮಾತು. ಆಗಷ್ಟೇ ನೋಡಿದ್ದ ಆದರ್ಶ್ ಈಶ್ವರಪ್ಪ ಅವರ ಶುದ್ಧಿ ಸಿನಿಮಾ ವಿಪರೀತ ಮೋಡಿ ಮಾಡಿತ್ತು. ಸಿನಿಮಾ ಕಟ್ಟಿಕೊಟ್ಟ ಭಾವಗಳನ್ನೆಲ್ಲಾ ಪದರೂಪಕ್ಕೆ ಬಸಿದು ಅನಿಸಿಕೆಯೊಂದನ್ನು ಬರೆದಿದ್ದೆ. ಪ್ರತಿಲಿಪಿಯಲ್ಲಿ ಪರಿಚಿತರಾಗಿದ್ದ ಸಿನಿಮಾ ಪ್ರೇಮಿ ಸ್ನೇಹಿತೆಯೊಬ್ಬರೊಡನೆ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾಗ ಆದರ್ಶ್ ಅವರ ಕಸಿನ್ ಎಂಬುದು ತಿಳಿಯಿತು. ನೇರವಾಗಿ ಅವರಿಗೇ ನಿಮ್ಮ ಅನಿಸಿಕೆ ತಿಳಿಸಿ ಎಂದು ಆಕೆ ಸಜೆಸ್ಟ್ ಮಾಡಿದ್ದರಿಂದ ಫೇಸ್ಬುಕ್ನಲ್ಲಿ ಆಕೆಯ ಸಹಾಯದಿಂದಲೇ ಆದರ್ಶ್ ಅವರಿಗೆ ನನ್ನ ಅನಿಸಿಕೆ ರೂಪದ ಬರಹವನ್ನು ಕಳಿಸಿದ್ದೆ. ಆ ನಂತರದಲ್ಲಿ ಆದರ್ಶ್ ನನ್ನ ಅನಿಸಿಕೆ ಓದಿ ಧನ್ಯವಾದ ತಿಳಿಸುವುದರೊಂದಿಗೆ ಆಗಿನ್ನೂ ಓಟಿಟಿಯಲ್ಲಿ ಬಿಡುಗಡೆಯಾಗಿದ್ದ ತಮ್ಮ ಇನ್ನೊಂದು ಸಿನಿಮಾ 'ಭಿನ್ನ'ವನ್ನೂ ಕೂಡಾ ನೋಡಿ ಅನಿಸಿಕೆ ಹೇಳಬೇಕೆಂದು ವಿನಂತಿಸಿದ್ದರು. ಅಷ್ಟಲ್ಲದೇ ತಾವೇ ಆ ಸಿನಿಮಾದ ಡ್ರೈವ್ ಲಿಂಕ್ ಶೇರ್ ಮಾಡಿ 'ನೋಡಿ ನಿಮ್ಮ ಇಂಟರ್ಪ್ರಿಟೇಷನ್ ಹೇಳಿ' ಎಂದಾಗ ನಿಜಕ್ಕೂ ಆ ಸಿನಿಮಾ ಬಗ್ಗೆ ಒಂದು ಕುತೂಹಲ ಹುಟ್ಟಿತ್ತು. 
ಸಾಮಾನ್ಯವಾಗಿ ಸಿನಿಮಾ ನೋಡುವ ಮುನ್ನ ಒಂದಿಷ್ಟು ರಿವ್ಯೂ ಓದುವ ಹವ್ಯಾಸ ನನ್ನದು. ಅದರಲ್ಲೂ ನಾನು ಎಲ್ಲಾ ರಿವ್ಯೂಗಳನ್ನೂ ನೋಡುವುದಿಲ್ಲ. ನನ್ನ ಅಭಿರುಚಿಗೆ ತಕ್ಕಂತಹ, ನನ್ನ ವಿಮರ್ಶಾ ಶೈಲಿಗೆ ಹೊಂದುವ ಕೆಲವೇ ಕೆಲವು ರಿವ್ಯೂಗಳನ್ನು ನಾನು ನೋಡುವುದು. ಪ್ರಜಾವಾಣಿಯ ರಿವ್ಯೂ(ಅದರಲ್ಲೂ ವಿಶಾಖ ಅವರದ್ದು) ಮತ್ತು ದಿ ನ್ಯೂಸ್ ಮಿನಿಟ್ ರಿವ್ಯೂ ನಾನು ಅತೀ ಹೆಚ್ಚು ಫಾಲೋ ಮಾಡುವಂತಹವು. ಪ್ರಜಾವಾಣಿ ರಿವ್ಯೂ ಲಭ್ಯವಿಲ್ಲದ ಕಾರಣ ದಿ ನ್ಯೂಸ್ ಮಿನಿಟ್ ರಿವ್ಯೂ ನನ್ನ ಮುಂದಿನ ಏಕಮೇವ ಆಯ್ಕೆಯಾಗಿತ್ತು. TNM ರಿವ್ಯೂ ಓದಿ ಮುಗಿಸಿದಾಗ ಮನದಲ್ಲೆದ್ದ ಏಕಮೇವ ಪ್ರಶ್ನೆ ......'ಈ ಸಿನಿಮಾ ನೋಡಬೇಕೇ?' ಎಂಬುದು. ಏಕೆಂದರೆ Insensitive climax ಎಂಬ ನೇರಾನೇರ ಆರೋಪವಿತ್ತು ಈ ಸಿನಿಮಾ ಮೇಲೆ. ನಂತರ ಸುಮ್ಮನೆ ಇತರೆ ರಿವ್ಯೂಗಳನ್ನು ಕಂಡಾಗಲೂ ಒಂದೊಂದೆಡೆ ಒಂದೊಂದು ರೀತಿಯ ವಿಮರ್ಶೆ ಕಂಡು ತಲೆಕೆಟ್ಟದ್ದು ಸುಳ್ಳಲ್ಲ. ನೋಡುವುದೇ ಬೇಡವೇನೋ ಅನ್ನುವ ಭಾವನೆ ಕಾಡಿದರೂ ಆದರ್ಶ್ ಅವರೇ ಖುದ್ದಾಗಿ ತಮ್ಮ ಡ್ರೈವ್ ಲಿಂಕ್ ಮೂಲಕ ಸಿನಿಮಾ ಶೇರ್ ಮಾಡಿದ್ದರಿಂದ ಒಂದು ಬಗೆಯ ದಾಕ್ಷಿಣ್ಯಕ್ಕೆ ಸಿಲುಕಿ ಏನಾದರಾಗಲೀ ಸಿನಿಮಾ ನೋಡೇ ಬಿಡೋಣ ಅನ್ನುವ ನಿರ್ಧಾರಕ್ಕೆ ಬಂದಾಯಿತು. 

The Broken are Different ಅನ್ನುವ ಅಡಿಬರಹ ಹೊಂದಿದ್ದ ಸಿನಿಮಾ ನೋಡಿ ಮುಗಿಸಿದ ನಂತರ ನನಗನಿಸಿದ್ದು 'ಸಿನಿಮಾ ಡೀಕೋಡಿಂಗ್ ಕೂಡಾ ಒಂದು ಕಲೆ ಮತ್ತು ಅದು ಎಲ್ಲರಿಗೂ ಒಲಿಯುವುದಿಲ್ಲ' ಅಂತ. ಕಾರಣ ಆಗಲೇ ಆನ್ಲೈನ್ನಲ್ಲಿ ಲಭ್ಯವಿದ್ದ ಸಿನಿಮಾದ ರಿವ್ಯೂಗಳಿಗೂ ಹಾಗೂ ನಾನು ಒಬ್ಬ ವೀಕ್ಷಕಳಾಗಿ ಸಿನಿಮಾವನ್ನು ಅರ್ಥೈಸಿಕೊಂಡ ರೀತಿಗೂ ಅಂತರವಿತ್ತು. ನನ್ನ ಕಣ್ಣಿಗೆ, ಗ್ರಹಿಕೆಗೆ ಭಿನ್ನ ನಿಜಕ್ಕೂ ಭಿನ್ನವಾಗಿಯೇ ದಕ್ಕಿತ್ತು. ಆದರ್ಶ್ ಅವರೊಂದಿಗೆ ಈ ಬಗ್ಗೆ ಮಾತನಾಡಿದಾಗ ನಾನು ಅರ್ಥೈಸಿಕೊಂಡಿದ್ದು ಸರಿಯಿದೆ ಅನ್ನಿಸಿತು ನನಗೆ. ಹೆಚ್ಚು ಕಡಿಮೆ ಇಡೀ ಸಿನಿಮಾವೇ ಸೂಚ್ಯವಾಗಿ ಅಮೂರ್ತ ಸ್ವರೂಪದಲ್ಲಿದ್ದ ಕಾರಣ ಇಡೀ ಸಿನಿಮಾವನ್ನು ಓದುಗರೇ ಡೀಕೋಡ್ ಮಾಡಿಕೊಳ್ಳಬೇಕಿರುವುದು ಭಿನ್ನದ ವೈಶಿಷ್ಟ್ಯತೆ. ನನಗೆ ಈ ಸಿನಿಮಾದಲ್ಲಿ ಅತಿಯಾಗಿ ಹಿಡಿಸಿದ್ದೇ ಈ ಕಥಾತಂತ್ರ. ಆದರೆ ದುರದೃಷ್ಟವಶಾತ್ ನಮ್ಮ ಮೀಡಿಯಾದ ಮಂದಿ ತಮ್ಮ ತಲೆಗೆ ತೋಚಿದ್ದೇ ಸತ್ಯ ಎಂದು ಘೋಷಿಸಿ, ಇಡೀ ಸಿನಿಮಾದ ಅರ್ಥವನ್ನೇ ಅನರ್ಥವಾಗಿಸಿ ತೀರ್ಪು ಬರೆದುಬಿಟ್ಟಿದ್ದನ್ನು ಕಂಡಾಗ ನಿಜಕ್ಕೂ ಅಚ್ಚರಿಯೆನಿಸಿತ್ತು ನನಗೆ. 

ಇಂದು ಭಾಲ್ಕಿಯವರ 'ಚುಪ್' ಸಿನಿಮಾ ನೋಡಿದಾಗ ತಟ್ಟನೆ ತಲೆಯೊಳಗೆ ಸುಳಿದದ್ದು ಅದೇ ಭಿನ್ನ ಸಿನಿಮಾದ ರಿವ್ಯೂಗಳು. ಆ ರಿವ್ಯೂಗಳನ್ನು ಕಂಡಾಗ ಒಂದು ಒಳ್ಳೆ ಸಿನಿಮಾವನ್ನು ಕಾಯುವುದು ಕೊಲ್ಲುವುದು ಎರಡೂ ಈ ವಿಮರ್ಶಕರ ಕೈಯಲ್ಲಿದೆಯಲ್ಲಪ್ಪಾ ಅಂದುಕೊಂಡಿದ್ದೆ ನಾನು. ಅದನ್ನೇ ಇಷ್ಟು ದಿವಿನಾಗಿ ಸಿನಿಮಾ ಮಾಡಿಬಿಟ್ಟಿದ್ದಾರಲ್ಲಪ್ಪಾ ಅನ್ನುವ ಭಾವದೊಂದಿಗೆ ನೋಡಿ ಮುಗಿಸಿದ ಸಿನಿಮಾ ಇದು. ಯೋಚನಾರ್ಹ ಸಂಗತಿಯೊಂದನ್ನು ಕೇಂದ್ರದಲ್ಲಿಟ್ಟುಕೊಂಡು, ಗುರುದತ್ ಅವರಿಗೊಂದು ಔಟ್ ಆಫ್ ದಿ ವರ್ಲ್ಡ್ ಟ್ರಿಬ್ಯೂಟ್ ರೀತಿಯಲ್ಲಿ ಹೆಣೆದಿರುವ ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದ ಜೀವಾಳ ದುಲ್ಕರ್ ಸಲ್ಮಾನ್. ಮುಗ್ದತೆ, ಸಿಟ್ಟು, ಸೆಡವು, ಪ್ರೀತಿ, ಪ್ರೇಮ, ತಣ್ಣನೆಯ ಕ್ರೌರ್ಯ ಎಲ್ಲವನ್ನೂ ಕಣ್ಣಲ್ಲೇ ದಾಟಿಸಬಲ್ಲ ಸಾಮರ್ಥ್ಯವುಳ್ಳ ದುಲ್ಕರ್ ಹಾಗೂ ಬೆಳಗಿನ ಮಂದಾನಿಲದಂತೆ ಸುಳಿಯುವ ಶ್ರೇಯಾ ಇಬ್ಬರಿದ್ದೂ ಕೂಡಾ ಯಾಕೋ ಮೊದಮೊದಲಿನ ಹಿಡಿತ ಸಿನಿಮಾ ಅಂತ್ಯಕ್ಕೆ ಬಂದಾಗ ಕೈಜಾರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆರಂಭದ ಲವಲವಿಕೆ, ಹಿಡಿತ ಕೊನೆಕೊನೆಗೆ ಜಾಳಾಗುತ್ತಾ ಸಾಗಿರುವುದರಿಂದ ಎಲ್ಲೋ ಸಿನಿಮಾದ ಒಟ್ಟಾರೆ ಪರಿಣಾಮ ಕಡಿಮೆಯಾಗಿರುವುದು ನಿಜವಾದರೂ ಸಿನಿಮಾದ ಒಟ್ಟು ಥೀಮ್ ಮನಮುಟ್ಟುವಂತಿದೆ. ಗುರುದತ್ ಅವರ ಪ್ಯಾಸಾ, ಕಾಗಜ್ ಕೇ ಫೂಲ್ ಸಿನಿಮಾಗಳ ಉಪಮೆ, ರೂಪಕಗಳು, ಹಮ್ಮಿಂಗ್ ಗಳು ಸೋನೇ ಪೆ ಸುಹಾಗಾ. ಹಾಗೇ ಸಣ್ಣ ಪಾತ್ರವಾದರೂ ಹಿರಿಯ ನಟಿ ಶರಣ್ಯಾ ಪೊನ್ವಣ್ಣನ್ ತಮ್ಮ ಲವಲವಿಕೆಯ ಚೈತನ್ಯದಿಂದ ಮನಸೆಳೆಯುತ್ತಾರೆ.

ಫಿಲ್ಮ್ ಕ್ರಿಟಿಕ್'ಗಳು ಅವಶ್ಯವಾಗಿ ನೋಡಲೇಬೇಕಾದ ಸಿನಿಮಾ ಇದು ಅನ್ನುವುದು ಮಾತ್ರ ಸತ್ಯ. 

ನಾಮಧೇಯ ಪುರಾಣ

ಹೋಯ್......

ನಮಸ್ಕಾರ ಮಾರಾಯ್ರೇ...

ಮುಂಚೆಯೆಲ್ಲಾ ನಮ್ಮ ಭಾರತೀಯ ವಾಯುಗುಣದಲ್ಲಿ ಮೂರು ಕಾಲಗಳಿದ್ವು . ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಅಂತ. ಇದು ನಿಮಗೂ ತಿಳಿದ ವಿಚಾರವೇ . ಆದರೆ ಯೋಗಗಳ ಸಾಮ್ರಾಟ ಭಟ್ರು 'ಇಂಡಿಯಾನೇ ಫಾರಿನ್ನಾಗ್ಲಿ' ಅಂತ ಅದ್ಯಾವ ಘಳಿಗೆಲೀ ಹೇಳಿದ್ರೇನೋ. ಇಂಡಿಯಾ ಫಾರಿನ್ನಾಗೇ ಹೋಗಿದೆ....!! ಬಿರುಬೇಸಿಗೆಯ ಮಾರ್ಚ್, ಏಪ್ರಿಲ್ನಲ್ಲಿ ಮಳೆ ಬರುತ್ತೆ. ಮಳೆ ಕಾರಣ
ಶಾಲೆಗೆ ರಜೆ ಸಿಗ್ತಿದ್ದ ಜೂನ್, ಜುಲೈಯಲ್ಲಿ ರಣಬಿಸಿಲು.....

ಸೋ ...... ಈ ಮೇಲಿನ ಸಾಕ್ಷಾಧಾರ ಪುರಾವೆಗಳನ್ನು ಪರಿಗಣಿಸಿ ನಾವು ಏನು ಹೇಳ್ಬೋದ್ದಪ್ಪಾ ಅಂದ್ರೆ.......... ಮೂರುಕಾಲಗಳು ಲೋಪ ಸಂಧಿಯಾಗಿ ಒಂದೇ ಕಾಲ ಆಗಮ ಸಂಧಿಯಾಗಿದೆ. ಹಾಗೆ ಆಗಮಾದೇಶವಾಗಿರುವ ಕಾಲವೇ ಪೋಪಿಕಾಲ......

ಈ ಪೋಪಿಕಾಲ ಅನ್ನೋದು ತುಳುನಾಡಿನಲ್ಲಿ ಸ್ಟೇಟ್ ಬ್ಯಾಂಕಿನಲ್ಲಿ ಮೀನು ಸಿಕ್ಕುವಷ್ಟೇ ಸಾಮಾನ್ಯವಾಗಿ ಕೇಳ್ಲಿಕ್ಕೆ ಸಿಗುವ ಪದ. ಈ ಪೋಪಿಕಾಲ ಎಂಬ ಹೋಗುವ ಕಾಲವನ್ನು ಪರಂಧಾಮಕ್ಕೆ ಹೋಗುವ ಕಾಲ ಅಂತ ಅರ್ಥೈಸಿಕೊಳ್ಳಬಹುದು ನೀವು. ಇಂತಹ
ಪೋಪಿಕಾಲ ಆಗಮಿಸಿರುವ ಈ ಸಂದರ್ಭದಲ್ಲಿ ವೈರಸ್ಸು , ಬ್ಯಾಕ್ಟೀರಿಯಾಗಳ ಹಾವಳಿ ವಿಪರೀತವಾಗಿ ಜನ ಏನೇನೋ ಕಾಯಿಲೆಗಳಿಗೆ ತುತ್ತಾಗ್ತಿರೋದು ನಿಮಗೆ ಗೊತ್ತಿರುವ ಸಂಗತಿಯಷ್ಟೇ. ಅಂತಹದೇ ಒಂದು ಪೋಪಿಕಾಲದ ವೈರಸ್ಸಿನ ಬಗ್ಗೆ ನಿಮಗೆ ಮಾಹಿತಿ ನೀಡ್ಬೇಕಿತ್ತು ನೋಡಿ. ಈ ನಿಫಾ, ಕಫಾ, ಕೆಎಫ್ಡಿ, ಚಿಕುನ್ ಗುನ್ಯಾ , ಕೋಳಿ ಜ್ವರ, ಹಂದಿ ಜ್ವರ, ಡೆಂಗ್ಯೂ ಇತ್ಯಾದಿ ವೈರಸ್ಸುಗಳ ಗುಂಪಿಗೆ ಸೇರದ ಹೊಸ ತಳಿಯ
ವೈರಸ್ಸಿನ ಹಾವಳಿ ಇತ್ತೀಚಿಗೆ ಭಾರತದಲ್ಲಿ ಭಯಂಕರವಾಗಿದೆಯಂತೆ. 

'ಇದ್ಯಾವ ವೈರಸ್ಸಪ್ಪಾ ?' ಅಂದ್ರಾ....??

ಅದೇ 'ಆಂಟಿ' ವೈರಸ್......!!

ಖಂಡಿತಾ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿಲ್ಲ.

ನಾನು ಹೇಳ್ತಿರೋದು aunty ವೈರಸ್ಸೇ..... anti ವೈರಸ್ಸಲ್ಲಾ....

ನಾವು ಭಾರತೀಯರು ಮುಂಚಿನಿಂದಲೂ ಕೂಡು ಕುಟುಂಬದಲ್ಲಿ ಬಾಳಿದವರು. ಈಗೀಗ ಪೋಪಿಕಾಲದ ಆಟೋಪಟೋಟದಿಂದ ವಿಭಕ್ತಕುಟುಂಬಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಂಬಂಧಗಳ ಬೇರು ಸಂಪೂರ್ಣ ಸಡಿಲವಾಗಿಲ್ಲ. ಯಾವುದೇ ಭಾರತೀಯ
ಭಾಷೆಯನ್ನಾದರೂ ಗಮನಿಸಿ. ಅದೆಷ್ಟು ಸಂಬಂಧ ಸೂಚಕ ಸರ್ವ ನಾಮಗಳಿವೆ ನಮ್ಮಲ್ಲಿ. ಕುಟುಂಬದ ಹಿರಿತಲೆಗಳಿಂದ ಹಿಡಿದು ಪುಟಾಣಿ, ಪಾವು, ಸೇರು, ಚಟಾಕು, ಪಟಾಕು ತನಕ ಎಲ್ಲಕ್ಕೂ ಪ್ರತ್ಯೇಕ ಸರ್ವನಾಮಗಳಿವೆ. ಅದೇ ಈ ಇಂಗ್ಲೀಷಿನ ಕಥೆ ನೋಡಿ. ಈಜಿಪ್ಟಿಯನ್ ಮಮ್ಮಿ , ಮೋಯಿನ್ ಅಲಿ ದಾಡಿ ಅನ್ನೋದು ಬಿಟ್ರೆ ಅದೇನೋ ಗ್ರಾನಿ, ಗ್ರಾಂಡ್
ಪಾ, ಮತ್ತೇನೋ ಕಾನೂನಾತ್ಮಕ 'ಫಾದರ್ರು , ಮದರ್ರು , ಬ್ರದರ್ರು , ಸಿಸ್ಟರ್ರು' ಇನ್ ಲಾಗಳು, ನೀಸು, ನೇಫ್ಯೂ. ಇಷ್ಟನ್ನು ಹೊರತುಪಡಿಸಿ ಉಳಿಯುವ ಏಕೈಕ, ಭಯಂಕರ ಸರ್ವನಾಮಗಳೇ ಅಂಕಲ್ಲು ಮತ್ತೆ ಆಂಟಿ.

ಬೆಳಗ್ಗೆ ಹಾಲು ಪೇಪರ್ ಹಾಕೋರಿಂದ ಹಿಡಿದು ರಾತ್ರಿ ಗೇಟ್ ಕಾಯೋ ವಾಚ್ಮೆನ್ ತನಕ ಎಲ್ಲಾ ಅಂಕಲ್ಲೂ ಆಂಟಿದೀರೆ ನೋಡಿ. ಇದರಲ್ಲಿ ಅಂಕಲ್ಲುಗಳ ವಿಚಾರ ಸ್ವಲ್ಪ ಪಕ್ಕಕಿರಿಸೋಣ. ಯಾಕೆಂದ್ರೆ ಈ ಗಣ್ಮಕ್ಕಳಿಗೆ ಅಂಕಲ್ ಅನ್ನಿ, ಅಜ್ಜ ಅನ್ನಿ, ಇಲ್ಲಾ ಮುತ್ತಜ್ಜ ಅಂತಾದರೂ ಹೇಳಿ. ಅವರೇನೂ ಬೇಜಾರು ಮಾಡ್ಕೊಳ್ಳಲ್ಲ. ಅವರೊಂಥರಾ ಫಿಕರ್ ನಾಟ್ ಕೆಟಗರಿವರು. 

ಆದ್ರೆ ನಾವು ಮಹಿಳಾಮಣಿಗಳು. ಬಲು ಭಾವುಕ ಜೀವಿಗಳು..... ನಮಗೆ ಅವರಷ್ಟು ಕೇರ್ ಫ್ರೀ ಆಗಿ ಇರೋಕಾಗುತ್ತಾ? ಯಾರಾದ್ರೂ ಆಂಟಿ ಅಂದ್ರೆ ನಮ್ಮ ಮುಖ ಒಣಶುಂಠಿಯಂತೆ ಆಗೋದಂತು ಸತ್ಯ. ಈಗ ಈ ಆಂಟಿ ವೈರಸ್ಸು ವಿಚಾರ ಇಷ್ಟು ಪ್ರಾಮುಖ್ಯತೆ ತಗೋಳಕ್ಕೆ ಏನು ಕಾರಣ ಅನ್ನೋ ಪ್ರಶ್ನೆ ನಿಮ್ಮ ತಲೆ ತುಂಬಾ ಪಿ.ಟಿ
ಉಷಾ ರೇಂಜಲ್ಲಿ ಓಡ್ತಿರುತ್ತೆ. ಅದೇ ಪ್ರಶ್ನೆಗೆ ಉಸೇನ್ ಬೋಲ್ಟಷ್ಟೇ ಫಾಸ್ಟ್ ಎಂಡ್ ಫ್ಯೂರಿಯಸ್ ಆಗಿ ಒಂದು ಉತ್ತರನೂ ನಿಮ್ಮ ತಲೆಗೇ ಬಂದಿರುತ್ತೆ......

'ಓ..., ಮೋಸ್ಟ್ಲೀ ಇವಳನ್ನ ಯಾರೋ ಆಂಟಿ ಅಂತ ಕರ್ದಿರ್ಬೇಕು. ಅದಕ್ಕೇ ಈ ಪೀಠಿಕೆ, ಈ ಸಂಚಿಕೆ' ಅಂತ.
ಆದರೆ ವಿಷಯ ಅದಲ್ಲ. ಇಷ್ಟಕ್ಕೂ ಈ 'ಆಂಟಿ' ಅನ್ನೋ ಪದ ನನಗೆ ಹೊಸದಲ್ಲ. ಬಾಲ್ಯದಲ್ಲೇ ತಲೆಕೂದ್ಲು ಬಿಳಿಯಾಗಿ ಬಾಲನೆರೆ ಆದಂಗೆ ನಾನು ಕಾಲೇಜಿಗೆ ಹೋಗ್ತಿದ್ದ ಟೈಮಲ್ಲೇ ಈ 'ಆಂಟಿ' ವೈರಸ್ ಅಟ್ಯಾಕ್ ಆಗಿತ್ತು ನನಗೆ. 'ಏನಪ್ಪಾ ಇವಳು ಹೀಗಂತಾಳೆ?' ಅಂದ್ರಾ. ಹೌದು ನೋಡಿ. ನಾನು ಬಿ.ಎಡ್ ಓದುವಾಗ ಸೀರೆಯೇ ನಮ್ಮ ಉಡುಗೆ. ಸೀರೆ ಉಟ್ಟ ನೀರೆಯರೆಲ್ಲಾ ಆಂಟಿಯರೇ ಎಂಬ ಸಾರ್ವತ್ರಿಕ ತಪ್ಪು ಕಲ್ಪನೆಯಿಂದಾಗಿ ಆ ಕಾಲದಲ್ಲೇ ಎಲ್ಲರ ಬಾಯಲ್ಲೂ ನಾವು ಆಂಟಿಗಳಾದದ್ದು ಈಗ ಇತಿಹಾಸ. ಆಗಲೇ ಆಂಟಿ ಅನ್ನಿಸಿಕೊಂಡ ನಮಗೆಲ್ಲಾ ಈಗ ಯಾರಾದ್ರೂ 'ಓಯ್ ಅಜ್ಜಮ್ಮಾ' ಅಂತ ಕರೆದ್ರೂ ಏನೂ ಫೀಲ್ ಆಗೋಲ್ಲ. ಆ ರೇಂಜಿಗೆ ಎಮ್ಮೆ ಚರ್ಮದವಳಾಗಿದ್ದೀನಿ ನಾನು. ಅದು ಬಿಡಿ. ಈಗ ನನಗೆ ಈ ಆಂಟಿ ವೈರಸ್ ಬಗ್ಗೆ ಯೋಚನೆ ಯಾಕೆ ಬಂತು ಅಂತ ಹೇಳ್ತೀನಿ ಕೇಳಿ.

ಮೊನ್ನೆ ಸಂಜೆ ಮಗಳನ್ನ ವಾಕಿಂಗ್ ಅಂತ ಪಕ್ಕದ ಪಾರ್ಕಿಗೆ ಕರ್ಕೊಂಡು ಹೋಗಿದ್ದೆ. ಹೇಳಿ ಕೇಳಿ ಪಾರ್ಕು. ಸಂಜೆ ಹೊತ್ತು ಬೇರೆ. ಆಟವಾಡಲು ಬರೋ ಪಾವು, ಸೇರು, ಚಟಾಕು, ಪಟಾಕು, ಪಿಳ್ಳೆಗಳದು ಒಂದು ಗುಂಪಾದರೆ ಟ್ರಿಪಲ್, ಡಬಲ್ ಎಕ್ಸ್ ಎಲ್ ಸೈಜನ್ನು ಒಗೆದು, ಹಿಂಡಿ, ಕರಗಿಸಿ ಜೀರೋ ಸೈಜ್ ಆಗಲು ದೇಹ ದಂಡಿಸುವ ಡುಮ್ಮು , ಡ್ರಮ್ಮು , ಮರಿ ಸಿಂಟೆಕ್ಸ್ , ಸಿಂಟೆಕ್ಸ್ ಗಾತ್ರದ ಬೃಹತ್ ಬಾಲಿಕೆಯರದು (ನನ್ನಂಥವರು) ಇನ್ನೊಂದು ಹಿಂಡು. ಇವೆರಡು ಹಿಂಡುಗಳ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಗಂಡಸರ ಗುಂಪೊಂದು ಎಲ್ಲೋ ಮೂಲೆಯಲ್ಲಿ ಕಲ್ಲು ಬೆಂಚಿನ ಮೇಲೆ ಹರಟೆಯಲ್ಲಿ ತೊಡಗಿರುತ್ತದೆನ್ನಿ.

ಮೊನ್ನೆಯೂ ಹೀಗೇ ಎಲ್ಲವನ್ನೂ 'ಕಣ್ತುಂಬಿಕೊಳ್ಳುತ್ತಾ' ಮಗಳನ್ನು ಕರ್ಕೊಂಡು ಸುತ್ತರಿತಿರೋವಾಗಲೇ ನನ್ನ ಪಕ್ಕದಿಂದ ಒಬ್ಬಾಕೆ ಅತ್ತ ನಡಿಗೆಯೂ ಅಲ್ಲ, ಇತ್ತ ಓಟವೂ ಅಲ್ಲ ಅನ್ನೋ ವಿಧದ ನಡಿಗೆಯಲ್ಲಿ ಸರಿದುಹೋದರು. ಹಾಗೆ ಹೋಗುವ ಭರಾಟೆಯಲ್ಲಿ ಅವರ ಕೈಲಿದ್ದ ಕರವಸ್ತ್ರ ಕೆಳಗೆ ಬಿತ್ತು. ನಾನು ಅವರನ್ನು ಕರೀಬೇಕು ಅನ್ನುವಷ್ಟರಲ್ಲಿ ಅಲ್ಲೇ ಆಟವಾಡುತ್ತಿದ್ದ ಹುಡುಗನೊಬ್ಬ,

"ಆಂಟೀ...... ನಿಮ್ಮ ಕರ್ಚೀಫು" ಅಂದ್ನಪ್ಪ........!!

ಅಷ್ಟೇ ಹೇಳಿದ್ದು ಅವನು.....!!!

"ಏ ಯಾರೋ ಆಂಟಿ? ನಾನು ನಿನ್ನ ಕಣ್ಣಿಗೆ ಆಂಟಿ ತರ ಕಾಣ್ತೀನಾ" ಅಂತ ಆ ಲೇಡಿ ಆ ಅಬೋಧ ಬಾಲಕನ ಮೇಲೆ ಜಗಳಕ್ಕೇ ಬರೋದಾ.....!!  
ಪಾಪದ ಹುಡುಗ ಅವರ ಆರ್ಭಟಕ್ಕೆ ಬೆದರಿ ಓಟಕಿತ್ತ. ಆ ಮಹಾತಾಯಿ ಮಾತ್ರ ಆಮೇಲೂ ಇಂಗ್ಲೀಷಲ್ಲಿ ಅವನಿಗೆ ಸಂಸ್ಕಾರ ಇಲ್ಲ ಅಂತ ಬೈತಿದ್ರು. ಆದರೂ ಅವರನ್ನು ಸರಿಯಾಗಿ ಗಮನಿಸಿದ ಮೇಲೆ ನನಗೂ ಅವರ ಮಾತಿನಲ್ಲಿ
ಹುರುಳಿದೆ ಅನ್ನಿಸ್ತು ನೋಡಿ.(ಆಕ್ಚುಲಿ ಅವರು ಆಂಟಿ ಅಲ್ಲಾ ಅಜ್ಜಿ ತರ ಇದ್ರು. ಬಹುಶಃ ಅದಕ್ಕೆ ಹಾಗೆ ಹೇಳಿರ್ಬೇಕು) ಆದ್ರೂ ಈಕೆ ವಾಸಿ. 'ಆಂಟಿ' ಅಂತ ಕರೆದಿದ್ದು ಕೇಳಿ ಶಸ್ತ್ರಾಸ್ತ್ರ ಸಮೇತ ಯುದ್ಧಕ್ಕೆ ನಿಂತ್ರು. 'ಆಂಟಿ' ಅನ್ನೋ ಪದ ಕೇಳಿದ್ದೇ 'ಕರೆದರೂ ಕೇಳದೇ, ತಿರುಗಿಯೂ ನೋಡದೇ' ರಾಕೆಟ್ ಸ್ಪೀಡಲ್ಲಿ ಓಡಿ ಮಾಯವಾಗುವವರೂ ಇದ್ದಾರೆ.

ನಮ್ಮ ಬೀದಿ ಮೂಲೆಯಲ್ಲಿರೋ ಅಂಗಡಿಯ ಮಾಲಕಿ ನನಗಿಂತ ಹಿರಿಯಳು.....😁 (ಅದಕ್ಯಾಕೆ ಈ ದಂತ ಪ್ರದರ್ಶನ ಅಂದ್ರಾ? ಯಾರಾದರೂ ನಮಗಿಂತ ಹಿರಿಯರು, ನಾವು ಅವರಿಗಿಂತ ಚಿಕ್ಕವರು ಅಂತ ಹೇಳ್ಕೊಳ್ಳೋಕೆ ಹೆಣ್ಮಕ್ಕಳಿಗೊಂತರಾ ಖುಷಿ ಕಣ್ರಪ್ಪಾ..... It's a psychological fact you know....😉) ಮೊದಲಬಾರಿಗೆ ಅವರ ಅಂಗಡಿಗೆ ಹೋಗಿದ್ದೆ ತರಕಾರಿ ಕೊಳ್ಳಲು. "ಟೊಮ್ಯಾಟೋ ಕೆಜಿಗೆ ಎಷ್ಟು ಆಂಟಿ...." ಅಂತ ಇನ್ನೇನು ಕೇಳ್ಬೇಕು. ಅಷ್ಟರೊಳಗೆ ನನ್ನ ಪುಣ್ಯಕ್ಕೆ ಒಬ್ಬಳು ಕಾಲೇಜು ಕನ್ಯೆ ಬಂದು, "ಆಂಟಿ, ಹಾಫ್ ಲೀಟರ್ ಮೊಸರು ಕೊಡಿ" ಅಂದಿದ್ದೇ ತಡ! "ಅಯ್ಯೋ, ನನಗೇನಮ್ಮಾ ಅಂಥಾ ವಯಸ್ಸಾಗಿರೋದು. ಏನೋ ನಿನಗಿಂತ ಒಂಚೂರು (????) ದೊಡ್ಡವಳಷ್ಟೇ. ಆಂಟಿ ಅನ್ಬೇಡಾ ಅಕ್ಕಾ ಅನ್ನು" ಅಂದ್ಬಿಡೋದಾ?

ಹದಿನೆಂಟರ ಬಾಲಕಿ ಹತ್ತಿರವೇ ಈ ರೀತಿ ಕೇಳಿದ ಆ ಆಂಟಿನ......ಅಲ್ಲಲ್ಲಾ ... ಸಾರಿ...... ಅಕ್ಕನ್ನ ನಾನೆಲ್ಲಾದ್ರೂ ಆಂಟಿ ಅಂದಿದ್ರೆ ಏನು ಕಥೆ ಆಗ್ತಿತ್ತು ನಂದು? ಮೊದಲೇ ಘಟವಾಣಿ ಬಾಯಿ ಅವ್ರದ್ದು. ಪಕ್ಕಾ ಭಾರತದ ಮೇಲೆ ಘಜ್ನಿ, ಘೋರಿ ದಂಡೆತ್ತಿ ಬಂದಂಗೆ ನನ್ನ ಮಾನ ಮರ್ವಾದೆ ಮೂರ್ಕಾಸಿಗೆ ಹರಾಜಾಕ್ತಿರ್ಲಿಲ್ವಾ ಆ ಅಕ್ಕ??
ಆ ಹುಡುಗಿ ಮೊಸರು ತಗೊಂಡು ಹೋಗಿದ್ದೇ 'ಯಕ್ಕಾ ನೀನೇ ದೇವ್ರು, ಯಕ್ಕಾ ತುಮ್ಹೀ ಹೋಂ ಬಂಧು ಸಖೀ ತುಮ್ಹೀ' ಅಂತ ಅವಳಿಗೆ ಮನದಲ್ಲೇ ನೂರೆಂಟು ಪ್ರದಕ್ಷಿಣೆ ಹಾಕಿ, "ಅಕ್ಕಾ ..... ಟೊಮ್ಯಾಟೋ ಕೆಜಿಗೆ ಎಷ್ಟು?" ಅಂತ ಮೂವತ್ತೆರಡು ಹಲ್ಲು ಕಿಸಿದು ಕೇಳಿ ಬಚಾವಾಗಿದ್ದೆ. ಅವತ್ತಿಂದ ಹಿಡಿದು ಇವತ್ತಿನ ತನಕ ಯಾವಾಗ ಅಕ್ಕಯ್ಯನ ಅಂಗಡಿಗೆ ಹೋಗೋದಾದ್ರೂ ಗೇಟು ದಾಟುವಾಗಿಂದ್ಲೇ ಮೈಂಡಿಗೆ ಟ್ರೈನಿಂಗ್ ಕೊಡ್ತೀನಿ...... 'ನೋಡು
ಅಂಗಡಿಗೆ ಹೋಗಿ ಅಕ್ಕಾ ಅನ್ಬೇಕು. ಅಪ್ಪಿತಪ್ಪಿಯೂ ಆಂಟಿ ಅಂದು ಮರ್ಯಾದೆ ಕಳೀಬೇಡ' ಅಂತ. ಇಂತಹ ಮಾನ ಮರ್ಯಾದೆ ತೆಗೆಯೋ ಭಯಂಕರ ಖತರ್ನಾಕ್ ವೈರಸ್ಸು ನೋಡಿ ಈ ಆಂಟಿ ವೈರಸ್ಸು ....

ಈ ಆಂಟಿ ವೈರಸ್ಸಿನ ಸಹವಾಸವೇ ಬೇಡ, ಹೆಸರಿಡಿದೇ ಕರೆದುಬಿಡುವ ಅಂದರೆ ಈ ಹೆಸರುಗಳದ್ದೋ ಇನ್ನೊಂದು ಬಗೆಯ ಅದ್ವಾನ. ನಮ್ಮಲ್ಲಿ ಒಂದೊಂದು ಕಿಲೋಮೀಟರ್ ದಾಟಿದ ಕೂಡಲೇ ಭಾಷೆ, ಮಾತಿನ ಶೈಲಿ, ಸೊಗಡು ಎಲ್ಲಾ ಬದಲಾಗುತ್ತೆ ನೋಡಿ. ಹಾಗೆ ಬದಲಾಗೋ ಶೈಲಿಯೊಂದಿಗೆ ಹೆಸರನ್ನೂ ಕೂಡಾ ಅವರಿಗೆ ಬೇಕಾದಂತೆ ಬದಲಾಯಿಸಿ ಕರ್ಯೋದು ನ್ಯಾಯವೇ? ಈಗ ನನ್ನ ಹೆಸರು ಯಾರ್ಯಾರ ಬಾಯಲ್ಲಿ ಏನೇನಾಗುತ್ತೆ ಅಂತ ಹೇಳೋಕಾಗಲ್ಲ. ನೀತಾ ಅನ್ನೋ ಎರಡಕ್ಷರದ ಸೀದಾಸಾದಾ ಹೆಸರನ್ನು ನೀತ, ನೀತು, ನೀತಿ,
ನಿತ್ಯಾ , ನೇತ್ಯಾ , ನೈತ್ಯಾ....... ಹೀಗೆ ಏನೇನೋ ಕರೀತಾರೆ. ಹಿಂಗೆಲ್ಲಾ ಮಾಡಿದ್ರೆ ಇವರು ಕರೀತಿರೋದು ನನ್ನನ್ನೇ ಅಂತ ನನಗೆ ಗೊತ್ತಾಗೋದಾದರೂ ಹೇಗೆ ನೀವೇ ಹೇಳಿ.....?

ನಾನು ಮಾಸ್ಟರ್ಸ್ ಮಾಡ್ತಿದ್ದಾಗ ಇನ್ಶುರೆನ್ಸ್ ಮ್ಯಾನೇಜ್ಮೆಂಟ್ ಸಬ್ಜೆಕ್ಟಿಗೆ ಒಬ್ಬರು ಮೇಡಂ ಇದ್ದರು. ಎಮಿಲ್ ಮ್ಯಾಥ್ಯೂಸ್ ಅಂತ ಆಕೆಯ ಹೆಸರು. ನಮಗೆಲ್ಲಾ ಅವರ ಹೆಸರು ಒಂಥರಾ ಕ್ವೀನ್ ಎಲಿಜಬೆತ್ ತರ. (ಅವರಿಗೂ ಬಹುಶಃ ನಮ್ಮ ಹೆಸರುಗಳು ಪಜ಼ಲ್
ತರ ಅನ್ನಿಸ್ತಿತ್ತೇನೋ). ಆ ಹೆಸರು ಹೇಳುವಾಗ ಕ್ಲಿಯೋಪಾತ್ರಳ ಹೆಸರನ್ನು ಕೂಗಿದಷ್ಟೇ ಸಂತಸ. ಪಾಪ ಆಕೆ ಮಲೆಯಾಳಿ. 'ತ' ಕಾರ ಯಾವಾಗಲೂ 'ದ' ಕಾರವೇ ಅವರಿಗೆ. ಜೊತೆಗೆ ಅದೇಕೋ ಭಾರತೀಯ ಹೆಸರುಗಳ ಉಚ್ಛಾರಣೆ ಬಲು ತೊಂದರೆ ಅವರಿಗೆ. ಇಂತಿಪ್ಪ ಎಮಿಲ್ ಮ್ಯಾಮ್ ಅಟೆಂಡೆನ್ಸ್ ಕರೆಯೋಕೆ ಶುರುಮಾಡಿದ್ರು ಅಂದ್ರೆ ಅಲ್ಲಿಗೆ ಕಥೆ ಮುಗೀತಂತ್ಲೇ ಲೆಕ್ಕ. ಬಾಲಕ್ಕೆ ಬಿದ್ದ ಬೆಂಕಿಯಿಂದ ಲಂಕೆ ಸುಟ್ಟ ಹನುಮಂತನಂತಾಗುತ್ತಿತ್ತು ತರಗತಿ. 'ನೀತಾ' ಅನ್ನೋದು ಅವರ ಉಚ್ಛಾರಣೆಯಲ್ಲಿ 'ನೀದಾ' ಆಗಿ 'ನೀನ್ ದಾನ್' ಅಂತ ತಮಿಳಲ್ಲಿ ಕೇಳಿದಂತಾಗ್ತಿತ್ತು ನನಗೆ. 'ಪ್ರೆಸೆಂಟ್ ಮ್ಯಾಮ್' ಅನ್ನುವಾಗೆಲ್ಲಾ 'ಆಮ, ಅದ್ ನಾನ್ ದಾನ್' ಅಂತ ಉತ್ತರ ಕೊಟ್ಟ ಫೀಲಿಂಗೇ ಬರ್ತಿದ್ದಿದ್ದು. ಗೆಳತಿ 'ಚೇತನಾ'ಳ ನಾಮಧೇಯ 'ಚೇದನಾ' ಆದ ನಂತರ ಅವಳನ್ನು ಇಡೀ ಕ್ಲಾಸಿನವರೆಲ್ಲಾ 'ಏನೇ ದನಾ' ಅಂತ್ಲೇ ರೇಗಿಸ್ತಿದ್ದಿದ್ದು. 'ಗಣೇಶ್' ಅನ್ನೋದ್ನ 'ಗೆನೇಶ್' ಅನ್ನೋರು.

ಆದರೆ ಇವೆಲ್ಲಕ್ಕಿಂತ ಸ್ವಾರಸ್ಯಕರ ಸಂಗತಿ ಅಂದ್ರೆ ನಮ್ಮ ಕ್ಲಾಸಿನಲ್ಲಿ 'ದರ್ಶನ್ ಕರುಂಬಯ್ಯ ತಿರುನೆಲ್ಲಿಮಾದ' ಎಂಬೋ ಹೆಸರಿನ ಕೊಡವ ಒಬ್ಬನಿದ್ದ.....!! ಪ್ಲೇನ್ ದೋಸೆ
ತರ ಇರೋ ಎರಡಕ್ಷರದ ನನ್ನ ಹೆಸರೇ ಮೇಡಂ ಬಾಯಲ್ಲಿ ಚಿತ್ರಾನ್ನ ಆಗ್ತಿತ್ತು. ಇನ್ನು ಸುರುಳಿ ಸುತ್ತಿದ ಜಿಲೇಬಿಯ ತೆರನಾದ ಕರುಂಬಯ್ಯನ ಹೆಸರಿನ ಮೊಸರಾಗದೇ ಇದ್ದೀತೇ ಅಂದ್ಕೊಂಡ್ರಾ.....? ಖಂಡಿತಾ ಹಾಗಾಗ್ಲಿಲ್ಲ. ಅವರು 'ಕರ್ ರುಮ್' 'ಕರುಮ್' 'ಕುರುಮ್'
ಅಂತ ದಿನಾ ಹಾಜರಿ ಕರೆಯುವಾಗ ಪ್ರಯತ್ನಿಸಿದ್ದು ಬಂತೇ ಹೊರತು ಜಪ್ಪಯ್ಯಾ ಅಂದ್ರು ನಮ್ಮ ಎಮಿಲ್ ಮ್ಯಾಮ್ ನಾಲಿಗೆಗೆ ಕರುಂಬಯ್ಯ ಕೊನೆಗೂ ದಕ್ಕಲೇ ಇಲ್ಲ. ಇಷ್ಟಾಗುವಾಗ ಇದನ್ನು ಹೀಗೇ ಬಿಟ್ರೆ ಮೇಡಂ ಬಾಯಲ್ಲಿ ನಾನು ಕುರುಕ್ಲು ತಿಂಡಿ ಆಗೋಗ್ತೀನಿ ಅಂತ ಕರುಂಬಯ್ಯನಿಗೆ ಕನ್ಫರ್ಮ್ ಆಗೋಯ್ತು. ಹಾಗಾಗಿ ಅವರು ಹಾಜರಿ ಕರೆಯುವಾಗ ಅವನ ಹೆಸರಿಗೆ ಬಂದು
ಇನ್ನೇನು 'ಕ...' ಅಂತ ಆರಂಭಿಸಿದೊಡನೆ 'ಪ್ರೆಸೆಂಟ್ ಮ್ಯಾಮ್' ಅಂದುಬಿಡುತ್ತಿದ್ದ. ಇದರಿಂದಾಗಿ ಅವನ ಹೆಸರು ಹಾಗೂ ಮೇಡಂ ನಾಲಿಗೆ ಇಬ್ಬರೂ ಬಚಾವಾದ್ರು ಅನ್ನಿ.

ತುಳು ಭಾಷೆಯ ಅರಿವಿಲ್ಲದವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಊರಿನ ಹೆಸರುಗಳೂ ಹಲವು ಸಂಕಟಗಳನ್ನು ತಂದೊಡ್ಡುವುದು ಸುಳ್ಳಲ್ಲ. ಊರಿಗೆ ಅಧಿಕೃತವಾಗಿರುವ ಹೆಸರಿನೊಂದಿಗೇ ತಮ್ಮ ಭಾಷೆಯಲ್ಲಿಯೂ ಪ್ರೀತಿಯಿಂದ ಅಡ್ಡಹೆಸರಿಡುವ ರೂಢಿ ದಕ್ಷಿಣ ಕನ್ನಡದಲ್ಲಿದೆ. ಹೆಚ್ಚಿನ ಕಡೆ ಅಧಿಕೃತ ಹೆಸರಿಗಿಂತ ರೂಢಿಗತ ಹೆಸರಿನ ಬಳಕೆಯೇ ಹೆಚ್ಚು. ನಾನು ಓದಿಗಾಗಿ ಮೊದಲ ಬಾರಿಗೆ
ಮಲೆನಾಡಿನಿಂದ ಕರಾವಳಿಗೆ ಪಯಣ ಬೆಳೆಸಿದಾಗ ನನಗೆ ತುಳುವಿನ ಗಂಧಗಾಳಿಯೂ ತಿಳಿದಿರಲಿಲ್ಲ. ಕಾರ್ಕಳ ತಲುಪುತ್ತಿದ್ದಂತೆ ಕಂಡಕ್ಟರ್ 'ಕಾರ್ಲ , ಕಾರ್ಲ ....' ಅಂತ ಕಿರುಚಿದಾಗ 'ಕಾರ್ಕಳನ ಕಾಲರ ತರ ಏನೋ ಹೇಳ್ತಿದ್ದಾನಲ್ಲ.... ಇವನಿಗೇನಪ್ಪಾ ಆಯ್ತು' ಅನ್ನೋ ಸೋಜಿಗ ನನಗೆ. ಆಮೇಲೆ ನೋಡಿದ್ರೆ ಮೂಡುಬಿದಿರೆಗೆ 'ಬೆದ್ರ, ಬೆದ್ರ....' ಅಂದಾಗ 'ಪಕ್ಕಾ ಪುಣ್ಯಾತ್ಮನಿಗೆ ನಟ್ಟು
ಬೋಲ್ಟು ಲೂಸಾಗಿದೆ' ಅಂತ ನಿರ್ಧರಿಸಿಬಿಟ್ಟಿದ್ದೆ. ಕುಡುಪು, ಕೈಕಂಬ, ಪಿಲಿಕುಲ, ವಾಮಂಜೂರು, ಕುಲಶೇಖರ, ನಂತೂರು ಅಂತ ಮಂಗಳೂರಿನ ಹತ್ತಿರತ್ತಿರದ ಪ್ರದೇಶಗಳು ಬರುತ್ತಾ ಹೋದ್ವೇ ಹೊರತು ಕಂಡಕ್ಟರ್ ಬಾಯಲ್ಲಿ ಮಂಗಳೂರು ಅಂತ ಬರ್ತಾನೆ ಇಲ್ಲ
ಅನ್ನೋ ತಲೆಬಿಸಿ ನನಗೆ. ಕಡೆಗೊಮ್ಮೆ ಲಾಸ್ಟ್ ಸ್ಟಾಪ್ ಅಂತ ನಿಲ್ಲಿಸಿ 'ಕುಡ್ಲ, ಕುಡ್ಲ.... ಲಾಸ್ಟ್ ಸ್ಟಾಪ್' ಅಂದ ಕಂಡಕ್ಟರ್ ನೋಡಿ ನಾನು ಕಕ್ಕಾಬಿಕ್ಕಿ . ಟಿಕೆಟ್ ತಗೊಂಡಿರೋದು ಮಂಗಳೂರಿಗೆ, ಇವನ್ಯಾವ 'ಕುಡ್ಲ'ದಲ್ಲಿ ಇಳಿಸ್ತಿದ್ದಾನೆ ಅಂತ. ಬಸ್ಸಿನಲ್ಲಿರೋ ಎಲ್ಲರೂ ಅವರ ಪಾಡಿಗವರು ಇಳಿದು ಹೋಗ್ತಿದ್ದಿದ್ದು ಬೇರೆ ನೋಡಿ ನನಗೆ ಅನುಮಾನ ಬಂದು ಹೊರಗೆ ಅಂಗಡಿಗಳ ಬೋರ್ಡ್ ನೋಡಿದ್ರೆ
ಎಲ್ಲದರಲ್ಲೂ 'ಮಂಗಳೂರು' ಅಂತಿದೆ.....!! ಇನ್ನು ತಾಳಲಾರೆ ಈ ವೇದನೆ ಅಂತ ಅಪ್ಪನತ್ರ ಕೇಳೇಬಿಟ್ಟೆ ಎಂತಪ್ಪಾ ಇದು ಅಂತ. ಆಗ ಗೊತ್ತಾಯ್ತು ನನಗೆ ತುಳುವಲ್ಲಿ ಕಾರ್ಕಳನ 'ಕಾರ್ಲ' , ಮೂಡುಬಿದಿರೆಗೆ 'ಬೆದ್ರ' , ಮಂಗಳೂರಿಗೆ 'ಕುಡ್ಲ' ಅಂತ ಕರೀತಾರೆ ಅಂತ. ಬೇಕಾ ನನ್ನ ಅವಸ್ಥೆ.

ನನ್ನ ಮದುವೆಯಾದ ನಂತರ ಒಮ್ಮೆ ನಮ್ಮೆಜಮಾನರ ಅಜ್ಜಿ ಮನೆಗೆ ಹೋಗಲೆಂದು ಬೆಂಗಳೂರಿನಿಂದ ಹೊರಟೆವು. ಉಪ್ಪಿನಂಗಡಿ ಬರುವಾಗ ನನಗೆ ಮತ್ತದೇ ಪುರಾತನ ಸಮಸ್ಯೆ....... ಆದರೆ ಈ ಬಾರಿ ಮಾತ್ರ ಭಯಂಕರ ಆಶ್ಚರ್ಯವಾಗಿತ್ತು ನನಗೆ. 'ಉಬರ್, ಉಬರ್....' ಅಂತ ಬಡ್ಕೊಂಡ ಕಂಡಕ್ಟರ್ ಕಂಡು ಯಾರಿಗೆ ಅಚ್ಚರಿಯಾಗದು ನೀವೇ ಹೇಳಿ? ಬೆಂಗಳೂರಲ್ಲೇ
ಓಲಾ, ಉಬರ್ ಸಿಗುವುದು ಕಷ್ಟವಾಗಿರುವ ಕಾಲದಲ್ಲಿ ಉಪ್ಪಿನಂಗಡಿಯಲ್ಲಿ ಉಬರ್ ಕಂಡರೆ ಹೇಗಾಗಬೇಡ? ನನ್ನ ತಲೆಕೆಟ್ಟು ಗೊಬ್ಬರವಾಗದೇ ಇದ್ದೀತೇ? ಉರಿಯೋ ಬೆಂಕಿಗೆ ತುಪ್ಪ ಸುರಿಯುವಂತೆ ನನ್ನ ಈ ಭಯಂಕರ ಅನುಮಾನ ಕೇಳಿ ನನ್ನ ಗಂಡ ನಗಬೇಕಾ??? ಕೋಪದಿಂದ ತಾರಾಮಾರ ಆದ ನನ್ನನ್ನು ಕಂಡು ಇನ್ನಷ್ಟು ಜೋರಾಗಿ ನಗುತ್ತಾ, "ಮಾರಾಯ್ತೀ, ಮರ್ಯಾದೆ ತೆಗೀತೀಯಾ ನೀನು. ಅದು ಉಬರ್ ಅಲ್ವೇ. ಉಪ್ಪಿನಂಗಡಿಗೆ ಇಲ್ಲೆಲ್ಲಾ 'ಉಬ್ಬಾರ್' ಅಂತಾರೆ. ಈ ಕಂಡಕ್ಟರುಗಳು ಫ್ಲೋ ಅಲ್ಲಿ
ಹೇಳ್ತಾ 'ಉಬ್ಬಾರ್' ಅನ್ನೋದು 'ಉಬರ್' ತರ ಕೇಳಿಸುತ್ತಷ್ಟೇ" ಅಂದಾಗ ನನ್ನ ಮುಸುಡಿ ಸುಟ್ಟ ಬದನೆಕಾಯಂತೆ ಆದದ್ದು ಸುಳ್ಳಲ್ಲ.

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಇಷ್ಟೆಲ್ಲಾ ಹಗರಣಗಳ ನಂತರ ಈಗ ಯಾವ ಜಾಗದ ಯಾವ ಊರಿನ ಹೆಸರನ್ನಾಗಲೀ ಅಂಗಡಿ ಮುಂಗಟ್ಟುಗಳ ಬೋರ್ಡನ್ನ ನೋಡಿಯೇ ಕನ್ಫರ್ಮ್ ಮಾಡ್ಕೊಳ್ಳೋದು ನಾನು. ಹೀಗಿರುವಾಗ 'ಹೆಸರಲ್ಲಿ ಏನಿದೆ? ಏನೋ ಒಂದು ಕರೆದ್ರಾಯ್ತು' ಅಂತ ಹೇಳೋಕಾಗುತ್ತಾ ನೀವೇ ಹೇಳಿ.....?

'ಆಂಟಿ' ಅಂದ್ರೆ ಅನ್ನಿಸಿಕೊಂಡವರಿಗೆ ಕೋಪ........

ಹೆಸರಿಡಿದು ಕರೆಯುವಾಗ ಹೆಸರು ಆಚೀಚೆ ಆದರೆ ಕರೆಯುವವರಿಗೆ ಶಾಪ.........

ಅಬ್ಬಬ್ಬಾ 'ನಾಮ(ಧೇಯ)' ಪುರಾಣದಲ್ಲಿ ಅದೆಷ್ಟು ಲೋಪ ......!!!

ಸೋಮವಾರ, ಅಕ್ಟೋಬರ್ 31, 2022

ಜ್ಞಾನಪೀಠದಲ್ಲಿ ಕನ್ನಡದ ಮೆರುಗು

'ಸಕಲ ಲಿಪಿಗಳ ರಾಣಿ' ಎಂದು ವಿನೋಬಾ ಭಾವೆ ಅವರಿಂದ ಹೊಗಳಿಸಿಕೊಳಲ್ಪಟ್ಟ ಭಾರತದ ಅತೀ ಪುರಾತನ ಭಾಷೆಗಳಲ್ಲೊಂದು ನಮ್ಮ ಕನ್ನಡ. ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಮಾತನಾಡುವ ಭಾಷೆಗಳ ಸಾಲಿನಲ್ಲಿ ೨೯ನೇ ಸ್ಥಾನದಲ್ಲಿರುವ ಅಭಿಜಾತ ಭಾಷೆ ನಮ್ಮೀ ಚೆನ್ನುಡಿ. ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡದ ಮೊದಲ ಕನ್ನಡ - ಆಂಗ್ಲ ನಿಘಂಟನ್ನು ರಚಿಸಿದವರು. ಸಾಹಿತ್ಯಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಕನ್ನಡಮ್ಮನ ಕಿರೀಟದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳ ಗರಿಯಿದೆ. ರಾಷ್ಟ್ರೀಯ ಭಾಷೆ ಹಿಂದಿಯನ್ನು ಹೊರತುಪಡಿಸಿದರೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಭಾಷೆ ಕನ್ನಡ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಎಂಟು ಮಹನೀಯರು ಮತ್ತು ಪುರಸ್ಕೃತ ಕೃತಿಗಳ ಕಿರು ಪರಿಚಯ ಇಲ್ಲಿದೆ. 

 ೧. ಕುವೆಂಪು - ಶ್ರೀ ರಾಮಾಯಣ ದರ್ಶನಂ - ೧೯೬೭:
ಕುವೆಂಪು ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಪದ್ಮವಿಭೂಷಣ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಅಗ್ರಪಂಕ್ತಿಯ ಸಾಹಿತಿಗಳು. ಮಲೆನಾಡಿನ ಪ್ರಕೃತಿ ಸೌಂದರ್ಯವನ್ನೂ, ನವರಸಗಳನ್ನು ತಮ್ಮ ಕೃತಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ರಸಋಷಿ ಕುವೆಂಪು. 'ಮಲೆಗಳಲ್ಲಿ ಮದುಮಗಳು' ಹಾಗೂ 'ಕಾನೂರು ಹೆಗ್ಗಡತಿ' ಕುವೆಂಪು ಅವರು ರಚಿಸಿದ ಎರಡು ಬೃಹತ್ ಕಾದಂಬರಿಗಳು. ರಕ್ತಾಕ್ಷಿ, ಬೆರಳ್ಗೆ ಕೊರಳ್, ಮಹಾರಾತ್ರಿ, ಚಂದ್ರಹಾಸ, ಬಲಿದಾನ, ಶೂದ್ರ ತಪಸ್ವಿ ಮೊದಲಾದವು ಅವರ ಪ್ರಮುಖ ನಾಟಕಗಳು. ನೆನಪಿನ ದೋಣಿಯಲಿ ಇವರ ಆತ್ಮಕಥೆ. 'ಮನುಷ್ಯ ಜಾತಿ ತಾನೊಂದೇ ವಲಂ', 'ಮನುಜ ಮತ, ವಿಶ್ವ ಪಥ', 'ಓ ನನ್ನ ಚೇತನ, ಆಗು ನೀ ಅನಿಕೇತನ' ಎಂದು ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು. ತಮ್ಮ 'ಶ್ರೀ ರಾಮಾಯಣ ದರ್ಶನಂ' ಕೃತಿಯ ಮೂಲಕ ಅವರು ಕನ್ನಡಕ್ಕೆ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟರು. 'ಶ್ರೀ ರಾಮಾಯಣ ದರ್ಶನಂ' ಹಿಂದೂ ಮಹಾಕಾವ್ಯವಾದ ರಾಮಾಯಣವನ್ನು ಆಧರಿಸಿದ ಕೃತಿ. ಹಳೆಯ ಕಥೆ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರ ಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆ‌. ಇದು ಜ್ಞಾನಪೀಠ ಪ್ರಶಸ್ತಿಯೊಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೂ ಭಾಜನವಾಗಿದೆ. ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾ ಸಂಪುಟಂ, ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳನ್ನು ಈ ಮಹಾಕಾವ್ಯ ಒಳಗೊಂಡಿದೆ.
ಅಗ್ನಿ ಪರೀಕ್ಷೆಯ ಸನ್ನಿವೇಶದಲ್ಲಿ ಕುವೆಂಪು ವಾಲ್ಮೀಕಿ ರಾಮಾಯಣದಿಂದ ಅಚ್ಚರಿಯ ವಿಚಲನವನ್ನು ಮಾಡಿದ್ದಾರೆ. ಸೀತೆ ಅಗ್ನಿ ಪರೀಕ್ಷೆಗೆ ಗುರಿಯಾಗಿ ಅಗ್ನಿಗೆ ತನ್ನನ್ನು ಅರ್ಪಿಸಿಕೊಳ್ಳುವ ಕ್ಷಣದಲ್ಲಿ ರಾಮನೂ ಅವಳೊಂದಿಗೆ ಅಗ್ನಿಯನ್ನು ಪ್ರವೇಶಿಸುವ ಸನ್ನಿವೇಶ ಸೃಷ್ಟಿಸುವ ಮೂಲಕ ಮೂಲ ರಾಮಾಯಣಕ್ಕೆ ಭಿನ್ನವಾದ ಆಯಾಮವೊಂದನ್ನು ಒದಗಿಸಿದ್ದಾರೆ ಕುವೆಂಪು. ತನ್ನ ಬಲಗೈಯಲ್ಲಿ ಸೀತೆಯ ಹಸ್ತವನ್ನು ಹಿಡಿದು ರಾಮನು ಅಗ್ನಿ ಕುಂಡದಿಂದ ಹೊರಬರುವ ಮೂಲಕ ಸೀತೆಯ ಪಾವಿತ್ರತೆಯೊಂದಿಗೆ ರಾಮನ ನಿಷ್ಠೆ ಹಾಗೂ ಅವರಿಬ್ಬರ ಪ್ರೇಮವನ್ನೂ ಬಹಿರಂಗಪಡಿಸಿರುವುದು ಈ ಕೃತಿಯ ವೈಶಿಷ್ಟ್ಯಗಳಲ್ಲೊಂದು. ಜ್ಞಾನಪೀಠ ಪ್ರಶಸ್ತಿ ಸಮಿತಿ ಉಲ್ಲೇಖ: "ಕುವೆಂಪು ಅವರು ಸಾಹಿತ್ಯದ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೊಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು. ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ".

೨. ದ.ರಾ.ಬೇಂದ್ರೆ - ನಾಕುತಂತಿ - ೧೯೭೩
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂಬ ಸರಳ ವಾಕ್ಯಗಳಲ್ಲಿ ಇಡೀ ಜೀವನದ ಪಾಠವನ್ನೇ ಬೋಧಿಸಿದವರು 'ಧಾರವಾಡದ ಅಜ್ಜ' ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಮೊದಲ ಕವಿತೆ 'ಬೆಳಗು' (ಮೂಡಣ ಮನೆಯಾ ಮುತ್ತಿನ ನೀರಿನ ಎರಕವಾ ಹೊಯ್ದಾ) ವಿನಿಂದ ಹಿಡಿದು 'ಇಳಿದು ಬಾ ತಾಯೆ ಇಳಿದು ಬಾ', 'ಬಾರೋ ಬಾರೋ ಸಾಧನ ಕೇರಿಗೆ', 'ನಾನು ಬಡವಿ, ಅಂತ ಬಡವ, ಒಲವೇ ನಮ್ಮ ಬದುಕು', ' ನೀ ಹಿಂಗ ನೋಡಬ್ಯಾಡ ನನ್ನ', 'ಪಾತರಗಿತ್ತಿ ಪಕ್ಕ ನೋಡಿದ್ಯೇನೆ ಅಕ್ಕಾ'...... ಹೀಗೆ ಬರೆದಷ್ಟು ಮುಗಿಯಲಾರದು ಇವರ ಕವನಗಳ ಪಟ್ಟಿ. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪರಿಚಿತರಾದ ಬೇಂದ್ರೆಯವರು 'ನಾಕುತಂತಿ' ಕವನದ ಮೂಲಕ ಕನ್ನಡಕ್ಕೆ ಎರಡನೇ ಜ್ಞಾನಪೀಠದ ಗರಿಯನ್ನು ತಂದವರು. ನಾಲ್ಕು ಭಾಗಗಳಲ್ಲಿರುವ ’ನಾಕು ತಂತಿ’ ಕವನ ಕಾರ್ಣಿಕದ ಒಡಪಿನ ರೂಪದಲ್ಲಿದೆ. ಅವರು ಬರೆದ ಅಡಿಟಿಪ್ಪಣಿಯ ಮೂಲಕ ಈ ಕಾರ್ಣಿಕದ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಕವನದ ನಾಲ್ಕು ಭಾಗಗಳೂ ಅವರೇ ಹೇಳುವಂತೆ ಒಂದೇ ಭಾಗದ ನಾಲ್ಕು ಮಗ್ಗಲುಗಳು. ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ. ಮೂರನೆಯ ಭಾಗದಲ್ಲಿ ಒಂದು ’ಸವಾಲ್-ಜವಾಬ್’ ಇದೆ. ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ವಿವರಿಸಿ ಹೇಳುತ್ತದೆ.
ಬೇಂದ್ರೆಯವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವೀಣೆ. ಆ ವೀಣೆಯ ನಾಲ್ಕು ತಂತಿಗಳೆಂದರೆ 'ನಾನು', 'ನೀನು', 'ಆನು' , 'ತಾನು'. 'ನಾನು' ಎಂದರೆ ಪುರುಷ. ಆತ ಅಹಂ ಹಾಗೂ ತನ್ನತನದ ಪ್ರತೀಕ , 'ನೀನು' ಎಂಬುದು ಪ್ರಕೃತಿ (ಸ್ತ್ರೀ). ಆಕೆ ಕರುಣೆ, ಔದಾರ್ಯದ ಪ್ರತಿಮೆ. ಅವರ ಮಿಲನದ ಫಲವಾದ ಸಂತಾನವೇ ಈ 'ಆನು' ಎಂಬ ತತ್ವ. ಇದು ನಾನು ಎಂಬ ಅಹಂ ಹಾಗೂ ನೀನು ಎಂಬ ಔದಾರ್ಯಗಳ ಎರಕ, ಸಮಾಜದ ಬೇಕು ಬೇಡಗಳ ಪ್ರತಿಬಿಂಬ. ವಿಶ್ವವೆಂಬ ವೀಣೆಯ ನಾಲ್ಕನೇ ತಂತಿ 'ತಾನು'. 'ತಾನು' ಎಂದರೆ ಸೃಷ್ಟಿಕರ್ತ. ನಾನು, ನೀನು ಮತ್ತು ಆನುಗಳ ಮೂಲ. ಆತನಿಂದಲೇ ಸರ್ವವೂ ಸೃಷ್ಟಿಯಾಯಿತು ಮತ್ತು ಆತನಲ್ಲಿಯೇ ಸರ್ವವೂ ಅಡಗಿದೆ ಎಂಬುದನ್ನು ಈ ಕವನ ವಿವರಿಸುತ್ತದೆ. 

೩. ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೮:
ಕಡಲತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶ ಡಾ.ಶಿವರಾಮ ಕಾರಂತ ರ ಬರವಣಿಗೆಯ ಶೈಲಿಗೆ ಮನಸೋಲದವರುಂಟೇ? 'ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ಸಾಹಿತ್ಯ ಪ್ರಕಾರವಿಲ್ಲ' ಅನ್ನುವಷ್ಟು ಮಟ್ಟಿಗಿನ ಕ್ರಿಯಾಶೀಲ ಸಾಹಿತ್ಯ ಕೃಷಿ ಅವರದ್ದು. ಸಾಹಿತ್ಯವಷ್ಟೇ ಅಲ್ಲದೇ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದಲ್ಲೂ ಹಲವು ಪ್ರಯೋಗಗಳನ್ನು ಮಾಡಿದವರು ಕಾರಂತಜ್ಜ. ಚಲನಚಿತ್ರ ರಂಗದಲ್ಲೂ ಆಸಕ್ತಿ ಹೊಂದಿದ್ದ, ತಮ್ಮ ಹಲವು ಕೃತಿಗಳಿಗೆ ತಾವೇ ಮುಖಪುಟವನ್ನೂ ರಚಿಸಿದ ಬಹುಮುಖ ಪ್ರತಿಭೆಯ ಸಾಹಿತಿ ಇವರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಕೇಂದ್ರ ಸರ್ಕಾರ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ವಾಪಾಸು ಮಾಡಿದ್ದರು ಕಾರಂತರು. ನಾಟಕ, ವಿಜ್ಞಾನ, ಸಾಹಿತ್ಯ, ಚಲನಚಿತ್ರ, ಯಕ್ಷಗಾನ, ರಂಗಭೂಮಿ, ಚಿತ್ರಕಲೆ, ಸಂಗೀತ, ಶಿಕ್ಷಣ.... ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಹಲವಾರು ಕೃತಿಗಳನ್ನು ರಚಿಸಿರುವ ಕಾರಂತರ ಕೆಲವು ಪ್ರಮುಖ ಕೃತಿಗಳೆಂದರೆ, ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ, ಚೋಮನ ದುಡಿ, ಚಿಗುರಿದ ಕನಸು, ಬೆಟ್ಟದ ಜೀವ, ಸರಸಮ್ಮನ ಸಮಾಧಿ, ಮೈ ಮನಗಳ ಸುಳಿಯಲ್ಲಿ, ಅಳಿದ ಮೇಲೆ ಮುಂತಾದುವು. "ಹುಚ್ಚು ಮನಸ್ಸಿನ ಹತ್ತು ಮುಖಗಳು" ಅವರ ಆತ್ಮಕಥೆ. ಕಾರಂತರ 'ಮೂಕಜ್ಜಿಯ ಕನಸುಗಳು' ಕೃತಿ ಕನ್ನಡಕ್ಕೆ ಇನ್ನೊಂದು ಜ್ಞಾನಪೀಠದ ಗರಿಯನ್ನು ಏರಿಸಿದೆ. ಈ ಕೃತಿ ಅಜ್ಜಿ ಮತ್ತು ಮೊಮ್ಮಗನ ನಡುವಿನ ಸಂಭಾಷಣೆಯ ಮೂಲಕವೇ ಹಲವು ವಿಚಾರಗಳಿಗೆ ಕನ್ನಡಿ ಹಿಡಿಯುತ್ತಾ ಸಾಗುತ್ತದೆ. ಕಾದಂಬರಿಯ ಮುಖ್ಯ ಪಾತ್ರವಾದ ಮೂಕಜ್ಜಿಗೆ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುವ ಒಂದು ವಿಸ್ಮಯವಾದ ಶಕ್ತಿ‌. ಹೊರಗಿನ ಜನಕ್ಕೆ ಮುಪ್ಪಿನ ಮರುಳಾಗಿ ಕಾಣಿಸುವ ಅವಳ ಬಡಬಡಿಕೆಯನ್ನು ಅದ್ಭುತಾತಿಶಯ ಶಕ್ತಿಯೆಂದು ಗ್ರಹಿಸುವುದು ಕೇವಲ ಮೊಮ್ಮಗ ಸುಬ್ರಾಯ ಮಾತ್ರ. ನಾಲ್ಕೈದು ಸಾವಿರ ವರ್ಷಗಳಿಂದ ಹರಿದುಬಂದಿರುವ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಲು ಯತ್ನಿಸುವ ಅವಾಸ್ತವಿಕತೆಯ ಪ್ರತೀಕವೆನಿಸುವ ಅಜ್ಜಿ ಮತ್ತು ವಾಸ್ತವದ ಪ್ರತಿನಿಧಿಯಾಗುವ ಮೊಮ್ಮಗ ಇಲ್ಲಿನ ಕೇಂದ್ರಬಿಂದು. ಜತೆಗೆ ಪಾತ್ರಧಾರಿಗಾಗಿ ಬರುವ ನಾಗಿ, ರಾಮಣ್ಣ, ಜನ್ನ ಮತ್ತಿತರರು ಆ ಮಂಥನದ ಭಾಗವಾಗುತ್ತಾರೆ.
"ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ", "ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು" ಎಂಬ ಮುನ್ನುಡಿಯ ಸಾಲುಗಳು ಇಡೀ ಕಥೆಯ ಸಾರಾಂಶ ಹಾಗೂ ಆಶಯವನ್ನು ತಿಳಿಸುತ್ತವೆ. 

೪. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕವೀರ ರಾಜೇಂದ್ರ - ೧೯೮೩
ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 'ಮಾಸ್ತಿ ಕನ್ನಡದ ಆಸ್ತಿ' ಎಂದೇ ಖ್ಯಾತರಾದವರು. ತೀರಾ ಬಡತನದಲ್ಲಿ ಬೆಳೆದು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ ಮಾಸ್ತಿ ಅವರು .ಸಿವಿಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ವೃತ್ತಿ ಜೀವನ ಆರಂಭಿಸಿದ ಇವರು ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಇವರು ಕಣ್ಣಿಗೆ ಕಟ್ಟುವಂತೆ ಕಥೆ ಬರೆಯುವಲ್ಲಿ ನಿಸ್ಸೀಮರಾಗಿದ್ದರು. ಮಾಸ್ತಿಯವರ ಹಲವು ಕಥೆಗಳು ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಹಾಗೆಯೇ ಮಾಸ್ತಿ ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀ ರಾಮ ಪಟ್ಟಾಭಿಷೇಕ, ಚಿಕವೀರ ರಾಜೇಂದ್ರ, ಚನ್ನಬಸವ ನಾಯಕ, ಕಾಕನಕೋಟೆ ಇವರ ಕೆಲ ಪ್ರಮುಖ ಕೃತಿಗಳು. 'ಭಾವ' ಮಾಸ್ತಿಯವರ ಆತ್ಮ ಕಥೆ. 

ಇವರ ಐತಿಹಾಸಿಕ ಕಾದಂಬರಿ ಚಿಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅದು ಕೊಡಗಿನ ಕೊನೆಯ ಅರಸ ಚಿಕವೀರ ರಾಜೇಂದ್ರನ ಕುರಿತಾದ ಕಾದಂಬರಿ. ಇಕ್ಕೇರಿಯ ರಾಜ ಮನೆತನದ ಕೊಂಡಿಯಿಂದ ಕೊಡಗಿಗೆ ಬಂದು ನೆಲೆನಿಂತ ಪಲೆರಿ ರಾಜ ಮನೆತನ ಹೈದರನನ್ನೂ, ಟಿಪ್ಪೂವನ್ನೂ ಸಮರ್ಥವಾಗಿ ಎದುರಿಸಿ ನಿಲ್ಲುತ್ತಾರೆ. ಆದರೆ ಗಂಡು ಸಂತಾನವಿಲ್ಲದ ಅರಸ ದೊಡ್ಡವೀರ ರಾಜ, ತನ್ನ ಮಗಳು ದೇವಮ್ಮಾಜಿ ರಾಜ್ಯವಾಳಬೇಕೆಂದು ಬಯಸಿ ಅವಳನ್ನು ಅರಸಿಯನ್ನಾಗಿಸುತ್ತಾನೆ. ಆದರೆ ದೊಡ್ಡವೀರ ರಾಜನ ತಮ್ಮ, ಲಿಂಗರಾಜ(ಚಿಕವೀರ ರಾಜೇಂದ್ರನ ತಂದೆ)ನಿಂಗೆ ಈ ನಿರ್ಧಾರ ಹಿಡಿಸುವುದಿಲ್ಲ. ದೇವಮ್ಮಾಜಿಗೆ ದಿವಾನನಾಗಿ ಇದ್ದುಕೊಂಡು ಅವಳ ವಿರುದ್ಧವೇ ಷಡ್ಯಂತ್ರ ರಚಿಸಿ, ಆಕೆಯನ್ನು ಬಂಧಿಸಿಟ್ಟು ತಾನೇ ರಾಜನಾಗುತ್ತಾನೆ. ಒಂಭತ್ತು ವರ್ಷ ಆಳ್ವಿಕೆ ನಡೆಸಿ ಆತ ಕಾಲವಾದ ನಂತರ ಅವನ ಮಗ ಚಿಕವೀರ ರಾಜ ಅರಸನಾಗುತ್ತಾನೆ. ಕೊಡಗಿನ ವಂಶದ ಕೊನೆಯ ಅರಸನಾದ ಇವನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಕೊಡಗು ಸಂಸ್ಥಾನ ಬ್ರಿಟಿಷರ ವಶವಾಗುತ್ತದೆ. ವೈಯಕ್ತಿಕವಾಗಿ ಬಹಳ ಅಸಹಜ, ಅಸಭ್ಯ ಮತ್ತು ವಿಲಕ್ಷಣ ವ್ಯಕ್ತಿಯಾಗಿದ್ದ ಚಿಕವೀರ ರಾಜ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ವಿಫಲನಾಗುತ್ತಾನೆ. ಈ ಕಾದಂಬರಿಯು ಆತನ ಕ್ರೌರ್ಯ ಮತ್ತು ದುಷ್ಕೃತ್ಯದ ವಿವರಗಳನ್ನೊಳಗೊಂಡಿದೆ.
ಮೂಲಕಥೆಯ ನಂತರ, ಅದಕ್ಕೆ ಹೊರತಾದ ಐತಿಹಾಸಿಕ ವಿಷಯವನ್ನು ಸಮಾರೋಪದಲ್ಲಿ ದಾಖಲಿಸಿರುವುದು ಈ ಕಾದಂಬರಿಯ ಒಂದು ವಿಶೇಷ. ಚಿಕವೀರ ರಾಜೇಂದ್ರನ ಮಗಳು ಗೌರಮ್ಮ(ಪುಟ್ಟಮ್ಮ) ಅವರು ಕ್ರೈಸ್ತಮತಕ್ಕೆ ಸೇರಿದ ಬಗ್ಗೆ, ಗೌರಮ್ಮ ಅವರ ಪತಿ ಕ್ಯಾಪ್ನನ್ ಕ್ಯಾಂಬೆಲ್ ಹಾಗೂ ಅವರ ಮಗಳು ಎಡಿತ್ ಸಾತು ಅವರನ್ನು ಇಂಗ್ಲೆಂಡಿನಲ್ಲಿ ಮಾಸ್ತಿಯವರ ಮಿತ್ರರು ಭೇಟಿಯಾದ ವಿಚಾರವನ್ನು ಬರೆದಿದ್ದಾರೆ. 
 
೫. ವಿ. ಕೃ. ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ವಿನಾಯಕ ಕೃಷ್ಣ ಗೋಕಾಕ ಅವರು ಕನ್ನಡದ ಪ್ರತಿಭಾವಂತ ಸಾಹಿತಿ‌. ವಿದ್ಯಾಭ್ಯಾಸದ ಸಲುವಾಗಿ ಧಾರವಾಡದಲ್ಲಿದ್ದಾಗ ವರಕವಿ ಬೇಂದ್ರೆಯವರ ಸಂಪರ್ಕಕ್ಕೆ ಬಂದ ಗೋಕಾಕರಿಗೆ ಸ್ಪೂರ್ತಿ, ಗುರು, ಮಾರ್ಗದರ್ಶಕ ಎಲ್ಲವೂ ಬೇಂದ್ರೆಯವರೇ. ಇಂಗ್ಲೀಷಿನಲ್ಲಿ ಎಂ. ಎ ಮುಗಿದ ತಕ್ಷಣವೇ ಪುಣೆಯ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ. ನಂತರ ಕಾಲೇಜಿನ ವತಿಯಿಂದಲೇ ಉನ್ನತ ವ್ಯಾಸಾಂಗಕ್ಕೆಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಯಿತು. ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿ ಇವರದ್ದು. ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲಾ ಪ್ರಸಿದ್ಧಿಗಳನ್ನು ಪಡೆದ ಸಾಹಿತಿಯಾದ ಇವರು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ಗೋಕಾಕರ ಬರಹ ತುಂಬ ವಿಪುಲ ಹಾಗೂ ವ್ಯಾಪಕವಾದುದು. ಹಲವು ಕವನ ಸಂಕಲನಗಳು, ವಿಮರ್ಶೆಗಳಲ್ಲದೇ‌, ಸಮರಸವೇ ಜೀವನ, ಇಜ್ಜೋಡು, ಏರಿಳಿತ, ಸಮುದ್ರಯಾನ ಮೊದಲಾದ ಕಾದಂಬರಿಗಳನ್ನು ಬರೆದಿದ್ದಾರೆ. ಗೋಕಾಕರು ಭಾರತ ಸಿಂಧು ರಶ್ಮಿ ಎಂಬ ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳುಳ್ಳ ಮಹಾಕಾವ್ಯ ರಚಿಸಿದ್ದಾರೆ. ಋಗ್ವೇದ ಕಾಲದ ಜನಜೀವನದ ಕುರಿತಾಗಿ ಈ ಕೃತಿ ರಚಿತಗೊಂಡಿದೆ. ಕನ್ನಡ ಸಾಹಿತ್ಯಕ್ಕೆ ಇವರ ಅನನ್ಯ ಕೊಡುಗೆ ಗಮನಿಸಿ ಜ್ಞಾನಪೀಠ ಪುರಸ್ಕಾರ ನೀಡಿ ಗೌರವಿಸಲಾಗಿದೆ. 
 
೬. ಡಾ|| ಯು. ಆರ್. ಅನಂತಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
ಪದ್ಮಭೂಷಣ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿ, ಚಿಂತಕ ಹಾಗೂ ವಿಮರ್ಶಕ. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಅನಂತಮೂರ್ತಿ ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ್ದಾರೆ. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹಲವಾರು ದೇಶಿ ಹಾಗೂ ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸಂಸ್ಕಾರ, ಭಾರತೀಪುರ, ಅವಸ್ಥೆ, ಭಾವ, ದಿವ್ಯ ಹಾಗೂ 'ಪ್ರೀತಿ ಮೃತ್ಯು ಮತ್ತು ಭಯ' ಇವರ ಕಾದಂಬರಿಗಳು. ಘಟಶ್ರಾದ್ಧ, ಮೌನಿ, ಸೂರ್ಯನ ಕುದುರೆ, ಎಂದೆಂದೂ ಮುಗಿಯದ ಕಥೆ, ಪ್ರಶ್ನೆ.... ಇನ್ನೂ ಹಲವು ಕಥೆಗಳನ್ನೂ ಇವರು ಬರೆದಿದ್ದಾರೆ. ಅಲ್ಲದೇ ವಿಮರ್ಶೆಗಳು, ನಾಟಕ, ಕವನ ಸಂಕಲನಗಳನ್ನೂ ರಚಿಸಿರುವ ಇವರ ಹಲವು ಕೃತಿಗಳು ಚಲನಚಿತ್ರವಾಗಿಯೂ ಜನಮನ್ನಣೆ ಗಳಿಸಿವೆ. ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿದ ಚಲನಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ. 'ಸುರಗಿ ' ಇವರ ಆತ್ಮ ಕಥನ. ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ 'ಪ್ರೀತಿ ಮೃತ್ಯು ಮತ್ತು ಭಯ' ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.
ಸಂಸ್ಕಾರ, ಘಟಶ್ರಾದ್ಧ ಮೊದಲಾದ ವಿಶಿಷ್ಟ ಕಥೆಗಳ ಮೂಲಕ ಹಾಗೂ ಧಾರ್ಮಿಕ, ರಾಜಕೀಯ ವಿಚಾರಗಳಲ್ಲಿ ತಮ್ಮ ಕ್ರಾಂತಿಕಾರಿ ನಿಲುವುಗಳ ಮೂಲಕ ಎಡಪಂಥೀಯ ಚಿಂತಕರೆಂಬ ಹಣೆಪಟ್ಟಿ ಹೊತ್ತುಕೊಂಡವರು ಅನಂತಮೂರ್ತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿರುವ ಅನಂತಮೂರ್ತಿ ಕನ್ನಡ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು. ೨೦೧೩ರಲ್ಲಿ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಕೂಡಾ ಇವರು ನಾಮನಿರ್ದೇಶಗೊಂಡಿದ್ದರು. 

೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮:
ಪದ್ಮಭೂಷಣ ಗಿರೀಶ್ ರಘುನಾಥ್ ಕಾರ್ನಾಡ್ ಕನ್ನಡದ ಖ್ಯಾತ ಸಾಹಿತಿ, ನಾಟಕಕಾರ, ರಂಗಕರ್ಮಿ, ಸಿನಿಮಾನಟ, ನಿರ್ದೇಶಕ, ಚಿಂತಕ ಹಾಗೂ ಪ್ರಗತಿಪರ ಹೋರಾಟಗಾರಾಗಿ ಗುರುತಿಸಿಕೊಂಡವರು. ತಮ್ಮ ನೇರ ನುಡಿ ಹಾಗೂ ವಿಚಾರಧಾರೆಗಳಿಂದ ಎಡಪಂಥೀಯ ಚಿಂತಕ ಎನಿಸಿಕೊಂಡವರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಹೋರ್ಡ್ಸ್ ಸ್ಕಾಲರ್ಷಿಪ್ ಪಡೆದುಕೊಂಡು ಹೆಚ್ಚಿನ ವ್ಯಾಸಂಗಕ್ಕೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ್ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್. ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಬುದ್ಧಿಜೀವಿ ಕಾರ್ನಾಡ್ ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾದರು.
ನಾಟಕ ರಚನೆಯಲ್ಲಿ ಪಳಗಿದ ಕೈ ಹೊಂದಿದ್ದ ಕಾರ್ನಾಡರ ಯಯಾತಿ, ಹಯವದನ, ತುಘಲಕ್, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು ಮೊದಲಾದ ನಾಟಕಗಳು ಸುಪ್ರಸಿದ್ಧ. 'ಆಡಾಡತ ಆಯುಷ್ಯ' ಇವರ ಆತ್ಮಕಥನ.
ಅನಂತಮೂರ್ತಿಯವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರಕ್ಕೆ ಚಿತ್ರಕಥೆ ಬರೆದು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಕಾರ್ನಾಡರು, ಭೈರಪ್ಪ ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಉತ್ಸವ್(ಹಿಂದಿ), ಗೋಧೂಳಿ (ಹಿಂದಿ) ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು (ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ) ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೂ ಕಾರ್ನಾಡ್ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಪ್ರಮುಖವಾಗಿ ನಾಟಕ ಪ್ರಕಾರಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. 

೮. ಚಂದ್ರಶೇಖರ ಕಂಬಾರ - ಸಮಗ್ರ ಸಾಹಿತ್ಯ - ೨೦೧೧:
ಡಾ. ಚಂದ್ರಶೇಖರ ಕಂಬಾರ ಅವರು ಕಾದಂಬರಿಕಾರರು ಹಾಗೂ ನಾಟಕಕಾರರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು ಹಾಗೆಯೇ ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಚಿಕಾಗೊ,ನ್ಯೂಯಾರ್ಕ್,ಬರ್ಲಿನ್,ಮಾಸ್ಕೋ,ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು. ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದಾಗ ಅದ್ಯಕ್ಷತೆ ವಹಿಸಿದ್ದ ಖ್ಯಾತ ಕವಿಗಳೊಬ್ಬರು 'ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ' ಎಂದು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರಂತೆ. ಅಂದೇ ಕಂಬಾರರು ಕಾವ್ಯವನ್ನು ಪಳಗಿಸಿಕೊಳ್ಳುವತ್ತ ದೃಢಸಂಕಲ್ಪ ಕೈಗೊಂಡಿದ್ದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಗಳಲ್ಲಿ ಹಾಸುಹೊಕ್ಕಾಗಿಸುವ ಚಂದ್ರಶೇಖರ ಕಂಬಾರರು ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ ಹಾಗೆಯೇ ರಾಜಕಾರಣಿಯೂ ಕೂಡಾ ಹೌದು.
ತಮ್ಮ ಊರಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು.ಡಾ.ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು. ಅವರ ಸಾಹಿತ್ಯದಲ್ಲಿ ಅಲ್ಲಿನ ಗ್ರಾಮ್ಯ ಭಾಷೆಯ ಸೊಗಡು ಢಾಳಾಗಿ ಕಾಣಸಿಗುತ್ತದೆ. 

ಕರಿಮಾಯಿ, ಕಾಡುಕುದುರೆ, ಸಿಂಗಾರೆವ್ವ ಮತ್ತು ಅರಮನೆ ಕಂಬಾರರ ಪ್ರಖ್ಯಾತ ಕೃತಿಗಳು. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳನ್ನಾಗಿಸಿದರು‌. 'ಕರಿಮಾಯಿ' , 'ಸಂಗೀತಾ' , 'ಕಾಡುಕುದುರೆ', 'ಸಿಂಗಾರವ್ವ ಮತ್ತು ಅರಮನೆ' ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಈ ಚಿತ್ರಗಳಿಗೆ ತಾವೇ ಸಂಗೀತವನ್ನೂ ನೀಡಿದ್ದಾರೆ. ಕಾಡುಕುದುರೆ ಚಿತ್ರದ ಶೀರ್ಷಿಕೆ ಗೀತೆ 'ಕಾಡು ಕುದುರೆ ಓಡಿಬಂದಿತ್ತಾ.....' ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕವೂ ದೊರಕಿದೆ. 'ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಸ್ವತಃ ಉತ್ತಮ ಹಾಡುಗಾರರೂ ಆಗಿರುವ ಕಂಬಾರರು ತಮ್ಮ ಜಾನಪದ ಶೈಲಿಯ ಹಾಡುಗಳಿಗಾಗಿ ಜನಪ್ರಿಯರು.
ಹಲವು ಕಾವ್ಯಗಳು, ನಾಟಕಗಳು, ಸಂಶೋಧನಾ ಗ್ರಂಥಗಳು ಹಾಗೂ ಕಾದಂಬರಿಗಳನ್ನು ಬರೆದಿರುವ ಕಂಬಾರರ ಪ್ರಮುಖ ಕೃತಿಗಳು; ಜೋಕುಮಾರ ಸ್ವಾಮಿ, ಸಂಗ್ಯಾ ಬಾಳ್ಯಾ, ಕಾಡುಕುದುರೆ, ಹರಕೆಯ ಕುರಿ, ಸಿರಿಸಂಪಿಗೆ, ಮಹಾಮಾಯಿ, ಚಕೋರಿ(ಮಹಾಕಾವ್ಯ), ಕರಿಮಾಯಿ, ಜಿ.ಕೆ ಮಾ‌ಸ್ತರ್ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ ಪ್ರಮುಖವಾದುವು. ಇವುಗಳಲ್ಲಿ ಹೆಚ್ಚಿನವು ಚಲನಚಿತ್ರಗಳಾಗಿ ರಾಷ್ಟ್ರೀಯ ಮನ್ನಣೆ ಗಳಿಸಿವೆ ಎಂಬುದು ಗಮನಾರ್ಹ ಸಂಗತಿ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವಿಶೇಷವಾಗಿ ಜಾನಪದ ಸಾಹಿತ್ಯದ ತಮ್ಮ ಕೊಡುಗೆಗಾಗಿ ಕಂಬಾರರು ೨೦೧೧ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಇವರಲ್ಲದೇ ಇನ್ನೂ ಹಲವು ಶ್ರೇಷ್ಠ ಸಾಹಿತಿಗಳು ನಮ್ಮಲ್ಲಿದ್ದಾರೆ. ಕನ್ನಡ ನಾಡು ನುಡಿಯ ಔನತ್ಯವನ್ನೂ, ಕೀರ್ತಿಯನ್ನು ಜಗತ್ತಿನ್ನೆಲ್ಲೆಡೆ ಪಸರಿಸುತ್ತಿರುವ ಸಾಹಿತಿಗಳೆಲ್ಲರಿಗೂ ಗೌರವಪೂರ್ಣ ವಂದನೆಗಳು. ಈ ನಾಡು-ನುಡಿಯ ಸೇವೆ, ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ. ಕನ್ನಡಾಂಬೆಯ ಮಕುಟಕ್ಕೆ ಇನ್ನಷ್ಟು ಸಮ್ಮಾನದ ಗರಿಗಳು ಅಲಂಕೃತವಾಗಲಿ ಎಂಬ ಹಾರೈಕೆಯೊಂದಿಗೆ..... 

 ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.....

ಶನಿವಾರ, ಅಕ್ಟೋಬರ್ 8, 2022

ಅಜ್ಜಿಯೆಂಬ ಮಧುರ ಸ್ಮೃತಿ

बातें भलू जाती हैं
यादें याद आती हैं

ಆನಂದ್ ಭಕ್ಷಿಯವರ ಈ ಸಾಲುಗಳಲ್ಲಿ ಬದುಕಿನ ಸಾರವೇ ಅಡಗಿದೆಯಲ್ಲವೇ? ಮಾತುಗಳು ಬಂದು ಹೋಗುತ್ತವೆ. ಆದರೆ ಕಾಡುವ ನೆನಪುಗಳು ನೀಡುವ ನೋವು ಅಪಾರ. ಕಳೆದ ಮೌಲ್ಯಯುತ ಕ್ಷಣಗಳು ಸಿಹಿಕಹಿ ನೆನಪಿನ ರೂಪದಲ್ಲಿ ಮನದ ಕಣಜದಲ್ಲಿ ದಾಸ್ತಾನಾಗಿ ಪರಿವರ್ತಿತವಾಗಿ ನಮ್ಮ ಕೊನೆಯುಸಿರಿನವರೆಗೂ ಶಾಶ್ವತವಾಗಿ ಉಳಿದುಬಿಡುತ್ತದೆ. 

ಪ್ರತಿಯೊಬ್ಬರ ಜೀವನದಲ್ಲೂ ಕೆಲವು ಅತೀ ಪ್ರಮುಖ ಎನಿಸುವಂತಹ ವ್ಯಕ್ತಿಗಳಿರುತ್ತಾರೆ. ಅಂತಹವರ ಅಗಲಿಕೆ ಸೃಷ್ಟಿಸುವ ಖಾಲಿತನ ಬದುಕಿನುದ್ದಕ್ಕೂ ಹಾಗೆಯೇ ಉಳಿದುಬಿಡುತ್ತದೆ. ಅದನ್ನು ಬೇರೆ ಯಾರೂ ತುಂಬಲು ಸಾಧ್ಯವೇ ಇಲ್ಲ. ಅವರೊಂದಿಗೆ ಕಳೆದ ಕ್ಷಣಗಳನ್ನೇ ಮೆಲುಕು ಹಾಕುತ್ತಾ ನಮ್ಮ ಸರದಿ ಬರುವವರೆಗೆ ಬಾಳಬಂಡಿ ಎಳೆಯಬೇಕಷ್ಟೇ. ನನ್ನ ಬದುಕಿನಲ್ಲಿನ ಅಂತಹದ್ದೇ ಜೀವನಾಡಿ ನನ್ನಜ್ಜಿ. 


ಆಗಾಗ ಅವರೇ ಹೇಳುತ್ತಿದ್ದಂತೆ ಓದಿದ್ದು ಮೂರನೇ ತರಗತಿವರೆಗಂತೆ. ಆದರೆ ಆಕೆಗಿದ್ದ ವಿವೇಚನೆ ಹಾಗೂ ಅರಿವಿನ ಜ್ಞಾನ ಡಬಲ್, ತ್ರಿಬಲ್ ಡಿಗ್ರಿಗಳನ್ನು ಗಳಿಸಿರುವ ನಮಗೂ ಇರಲಿಲ್ಲ ಎನ್ನುವುದು ಆಕೆಯನ್ನು ಬಲ್ಲ ಯಾರಾದರೂ ಚರ್ಚೆಯಿಲ್ಲದೇ ಒಪ್ಪುವ ಮಾತು. ಅಮ್ಮ ಸರ್ಕಾರಿ ನೌಕರಿಯಲ್ಲಿ ಪರವೂರಿನಲ್ಲಿದ್ದುದರಿಂದ ನಾನು 'ಅಜ್ಜಿಪುಲ್ಲಿ'ಯಾಗಿಯೇ ಬೆಳೆದಿದ್ದು. ನನ್ನನ್ನು ಸೊಂಟದ ಮೇಲೆ ಹೊತ್ತು ಇಡೀ ಊರಿನ ತುಂಬಾ ಅಂಬಾರಿ ಮೆರವಣಿಗೆ ಮಾಡಿಸುತ್ತಿದ್ದ ದಿನಗಳು ಇಂದಿಗೂ ನೆನಪಿನಾಳದಲ್ಲಿ ಹಚ್ಚಹಸಿರು. ನಂತರದ ದಿನಗಳಲ್ಲಿ ಅಮ್ಮನಿಗೆ ವರ್ಗಾವಣೆಯಾಗಿ ನಮ್ಮೂರಿನ ಸಮೀಪದ ಶಾಲೆಗೇ ಬಂದರಾದರೂ ಅವರ ಕೆಲಸದ ಹೊರೆಯೇ ವಿಪರೀತವಿತ್ತು. ಬೆಳಿಗ್ಗೆ ಒಂಬತ್ತಕ್ಕೆಲ್ಲಾ ಮನೆಬಿಟ್ಟು ಸಂಜೆ ಐದರ ನಂತರ ಮನೆ ಸೇರುತ್ತಿದ್ದವರಿಗೆ ಕೆಲಸದ ಒತ್ತಡ ವಿಪರೀತವೇ. ಹಾಗಾಗಿ ನಾನು ಮತ್ತು ತಮ್ಮ ಅಜ್ಜಿಗೆ ಅಂಟಿಕೊಂಡಿದ್ದೇನೂ ಅತಿಶಯವಲ್ಲ. ಅಜ್ಜಿಯ ಪ್ರೀತಿಗೆಲ್ಲ ಏಕೈಕ ವಾರಸುದಾರಿಣಿಯಂತೆ ಮೆರೆಯುತ್ತಿದ್ದ ನನಗೆ ಭಯಂಕರ ಅಸೂಯೆ ಕಾಡಿದ್ದು ತಮ್ಮ ಹುಟ್ಟಿದಾಗ. ಅವ ಹುಟ್ಟಿದ ಮೇಲೆ ಅಜ್ಜಿಯ ಪ್ರೀತಿ ಇಬ್ಬರ ನಡುವೆ ಹಂಚಿಹೋದದ್ದು ನನಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತಾ ಅನುಭವ ಕೊಟ್ಟಿತ್ತು. ಆ ಕಾಲದ ಎಲ್ಲಾ ಅಜ್ಜಿಯಂದಿರಂತೆ ನಮ್ಮಜ್ಜಿಗೂ ಮೊಮ್ಮಗನ ಮೇಲೆ ಕೊಂಚ ಹೆಚ್ಚು ಪ್ರೀತಿ...... ಅದೇ ನನ್ನ ಉದರಕ್ಕೆ ಕಿಚ್ಚು ಹಚ್ಚುತ್ತಿದ್ದುದು. ಅವನು ಹದಿಮೂರು ದಿನದ ಮಗುವಾಗಿದ್ದಾಗ ಬಾವು(ಕುರು) ಎದ್ದು ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ಇದ್ದಾಗ, ಅದೆಷ್ಟೋ ಕಷ್ಟಪಟ್ಟು ಉಳಿಸಿಕೊಂಡಿದ್ದು. ಹಾಗಾಗಿ ಅವನ ಮೇಲಿನ ಕಾಳಜಿ ಮತ್ತಷ್ಟು ಜಾಸ್ತಿ. ಅದು ಸಣ್ಣವಳಾಗಿದ್ದ ನನ್ನ ಕಣ್ಣಿಗೆ ತಾರತಮ್ಯದಂತೆ ತೋರಿದ್ದ ದಿನಗಳೂ ಇವೆ. 

ಆದರೆ ಸಮಯ ಸರಿದಂತೆ ಆಕೆಯ ಪ್ರೀತಿಯ ಆಳದ ಅರಿವು ಆಗಿದ್ದೂ ಅಷ್ಟೇ ನಿಜ. ಬೆಳಿಗ್ಗೆ ಎದ್ದಕೂಡಲೇ ಒಂದು ಕೊಳಗ ಕಾಫಿ ಸರಬರಾಜಿನಿಂದ ಹಿಡಿದು, ಮಧ್ಯಾನ್ಹದ ಟಿಫಿನ್ ಬಾಕ್ಸಿನೊಳಗೆ ಗಮ್ಮನೆ ಕುಳಿತಿರುತ್ತಿದ್ದ ಕೆನೆ ಮೊಸರು, ಸಂಜೆ ಶಾಲೆಯ ಮಣಭಾರದ ಬ್ಯಾಗಿನೊಂದಿಗೆ ಕಿಕ್ಕಿರಿದು ತುಂಬಿದ ಬಸ್ಸಿಳಿದು ಮನೆಯೊಳಗೆ ಕಾಲಿಟ್ಟ ಕ್ಷಣದಲ್ಲಿ ಕಣ್ಮುಂದೆ ಹಾಜರಿರುತ್ತಿದ್ದ ಬಿಸಿ ಕಾಫಿ ಹಾಗೂ ಲಘು ಉಪಹಾರದ ಸ್ವಾದವನ್ನು ಈ ಜಿಹ್ವೆ ಎಂದಾದರೂ ಮರೆಯುವುದುಂಟೇ? 

ಬಹಳ ಕಷ್ಟದಲ್ಲಿ ಜೀವನ ನಡೆಸಿ, ಮೂವರು ಮಕ್ಕಳನ್ನು ಸಲಹಿ ಪೋಷಿಸಿದ ಜೀವವದು. ಗದ್ದೆ ಕೆಲಸ ಮುಗಿಸಿ, ಒರಳಿನಲ್ಲಿ ಭತ್ತ ಕುಟ್ಟಿ, ಅಕ್ಕಿ ಮಾಡಿ ಅದರಿಂದ ಅನ್ನಬೇ ಯಿಸಿ ಹೊಟ್ಟೆ ಹೊರೆಯುತ್ತಿದ್ದ ದಿನಗಳ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು ಅಜ್ಜಿ. ಅನ್ನಕ್ಕೆ ಅಕ್ಕಿ ಹಾಕಿ, ಅದು ಬೇಯುವುದರೊಳಗೆ ಇಡೀ ಊರನ್ನೇ ಒಂದು ಸಲ ಸುತ್ತು ಹಾಕಿ ಬರುತ್ತಿದ್ದ ಗಟ್ಟಿಗಿತ್ತಿ ಜೀವವದು. ದಿನಾ ಬೆಳಿಗ್ಗೆ ಎದ್ದು ಹೂ ಕೊಯ್ದು, ಕಟ್ಟಿ ಮಾಲೆಯಾಗಿಸಿ, ಎರಡು ಬಸದಿ, ಒಂದು ದೇವಸ್ಥಾನಕ್ಕೆ ಸುತ್ತು ಹಾಕದೇ ತಿಂಡಿಯನ್ನು ಬಾಯಿಗಿಡುತ್ತಿರಲಿಲ್ಲ. ಊರಿನಲ್ಲಿ ಇವರ ಪರಿಚಯವಿಲ್ಲದ ಒಂದೇ ಒಂದು ನರಪಿಳ್ಳೆಯೂ ಇಲ್ಲ. ಎಲ್ಲರಿಗೂ ಬೇಕಾದಾಕೆ, ಎಲ್ಲರ ಕಷ್ಟಸುಖಗಳಲ್ಲಿ ಪಾಲುದಾರೆ, ಎಲ್ಲರ ನೋವಿಗೂ ಮಿಡಿಯುವಂತಹ ಹಿರಿತಲೆ..... 

ಚಿನ್ಹೆ ಮಾತ್ರೆ(ಬಾಲಾಗ್ರಹ ಕುಟಿಕೆ), ಆಟಿ ಮದ್ದು, ಕಹಿ ಕಷಾಯಗಳನ್ನು ಮೂಗು ಹಿಡಿದು ಬಾಯೊಳಗೆ ಸುರಿಯುತ್ತಿದ್ದಾಗ 'ನಿನ್ನಂತಹ ಅಜ್ಜಿ ಯಾರಿಗೂ ಇರ್ಬಾರ್ದು ' ಅಂತ ಸಿಟ್ಟಿನಲ್ಲಿ ಒದರಾಡಿದ್ದೇನೆ. ಅವರು ಕೈ ಯ್ಯಾರೆ ತಯಾರಿಸುತ್ತಿದ್ದ ಸಿಹಿ ಸೊರೆದೋಸೆ, ಕಜ್ಜಾಯ, ಪತ್ರೋಡೆ, ಶ್ಯಾವಿಗೆ ತಿಂದು, 'ಅಜ್ಜಿ ನಿನ್ನಷ್ಟು ಒಳ್ಳೆಯವರು ಪ್ರಪಂಚದಲ್ಲೇ ಯಾರೂ ಇಲ್ಲ' ಅಂತ ಪ್ರಶಸ್ತಿಯನ್ನೂ ಕೊಟ್ಟಿದ್ದೇನೆ. ತೀರಾ ಇತ್ತೀಚೆಗೆ ಕೆಸುವಿನ ಸೊಪ್ಪಿನ ಚಟ್ನಿಯ ರೆಸಿಪಿ ಕೇಳಿ, ಅದರ ಸ್ವಾದ ಅವರ ಕೈ ರುಚಿಯಂತೆ ಇರದಿದ್ದದ್ದು ಕಂಡು, 'ನೀವು ಮಾಡಿದ ರೀತಿ ನಾನು ಮಾಡ್ಬಾರ್ದು ಅಂತ ತಪ್ಪು ರೆಸಿಪಿ ಹೇಳಿಕೊಟ್ಟಿದ್ರಲ್ಲಾ' ಅಂತ ಫೋನಿನಲ್ಲೇ ಸಣ್ಣಕಲಹ ನಡೆಸಿದ್ದೆ. 

ಇಷ್ಟೆಲ್ಲದರ ನಡುವೆಯೂ ಬದಲಾಗದೇ ಉಳಿದದ್ದು ಅವರ ಅಕ್ಕರೆ...... 'ಎಂತ ಮಾಡ್ತಿ ಮಗಾ? ಬಾಲೆ(ನನ್ನ ಮಗಳು) ಎಂತ ಮಾಡ್ತಾಳೆ? ಊಟ ಮಾಡಿದ್ಯಾ ? ಇನ್ನೂ ಮಾಡಿಲ್ಲಾ? ಹೀಗೆ ಮಾಡಿ ಆರೋಗ್ಯ ಹಾಳ್ ಮಾಡ್ಕೋ ನೀನು... ಹೇಳಿದ ಮಾತು ಅರ್ಥ ಆಗಲ್ಲ ನಿಂಗೆ... ಎಂತ ಸಾಂಬಾರು ಮಾಡಿದ್ದೇ?, ಆ ತಲೆ ನೋಡು ಚಪ್ಪರ ಮಾಡ್ಕೊಂಡಿದ್ದೀ... ಸಮಾ ಎಣ್ಣೆ ಹಾಕಿ ಚೆಂದ ಬಾಚಿ ಜಡೆ ಹಾಕ್ಕೊಳ್ಳೋಕೆ ಆಗಲ್ಲೇನು? ಇಗಾ, ಇದು ದೇವಸ್ಥಾನದಿಂದ ತಂದಿದ್ದು ಹೂವು, ಮುಡ್ಕ ಮಗ..... ಅದಂತ ಪ್ಯಾಷನ್ನೇನಾ, ಬೋಳು ಕೈ , ಬೋಳು ಹಣೆ ಇಟ್ಕೊಂಡು ತಿರ್ಗದು, ಒಂದೆರಡು ಮಣ್ಣಿನ ಬಳೆ(ಗಾಜಿನ ಬಳೆ) ಇಟ್ಟು, ಹಣೆಗೆ ಬೊಟ್ಟಿಡಕೆ ಆಗಲ್ವಾ ? ಅದೆಷ್ಟು ಸಣ್ಣಬೊಟ್ಟು? ಕಣ್ಣಿಗೆ ಕಾಣ್ತಿಲ್ಲ....., ಏ ಒಂಚೂರು ಬಾಲೆ ಮುಖ ತೋರ್ಸೇ ....'  ಫೋನಿನಲ್ಲಿನ ಇಂತಹ ಸಾವಿರ ಮಾತುಕತೆಗಳಲ್ಲಿ ಇಣುಕುತ್ತಿದ್ದದ್ದು ಶುದ್ಧ ಅಕ್ಕರೆಯಷ್ಟೇ.
ನಾನು ಪದವಿ ಓದಿನ ನಿಮಿತ್ತ ಊರುಬಿಟ್ಟು ಹಾಸ್ಟೆಲ್ ವಾಸಿಯಾದ ದಿನಗಳಲ್ಲಿಯೂ ನನಗಾಗಿ ಊರಜಾತ್ರೆಯಲ್ಲಿ ಐಸ್ ಕ್ರೀಂ ಖರೀದಿಸಿ ನನ್ನ ತಮ್ಮನ ಚೇಷ್ಟೆಗೆ ತಲೆಕೊಟ್ಟಿದ್ದನ್ನು ಮರೆಯಲಾದೀತೇ?

ಮನೆಗೆ ಯಾರೇ ಬಂದರೂ ಊಟ, ತಿಂಡಿ ಆಗದೇ ಕಳಿಸುವ ಮಾತೇ ಇರಲಿಲ್ಲ ಅಜ್ಜಿಯಲ್ಲಿ. ಯಾರಾದರೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸದೆ ಮದುವೆ ಮಾಡಿದರೆ ಅಥವಾ ಕೂಲಿ ಕೆಲಸಕ್ಕೆ ಕಳಿಸಿದ್ದು ತಿಳಿದರೆ, 'ಅದೆಂತಕ್ಕೆ ಓದು ವಯಸ್ಸಲ್ಲಿ ಇಂತದ್ದೆಲ್ಲ? ಗಂಡೋ , ಹೆಣ್ಣೋ ಮಕ್ಕಳನ್ನು ಓದಿಸ್ಬೇಕು' ಅಂತ ಅಜ್ಜಿ ಅವರ ಮನೆಯವರಿಗೆ ಹೇಳುವಾಗೆಲ್ಲಾ ಹೇಳಲಾರದಂತಹ ಹೆಮ್ಮೆಯ ಭಾವವೊಂದನ್ನು ಅಂತರಾಳದಿಂದ ಅನುಭವಿಸಿದ್ದೇನೆ...

ಡಿಕ್ಲೇಷನ್(ಡಿಕ್ಲರೇಷನ್), ಗಾಡೇಜ್(ಗಾಡ್ರೇಜ್), ಟಿಬಿ(ಟಿವಿ) ಎಂಬಿತ್ಯಾದಿ ಅವರ ಇಂಗ್ಲೀಷಿನ ಪಾಂಡಿತ್ಯ, ಪ್ರೌಢಿಮೆಯನ್ನು ಹೊಗಳಿ ಕಿಂಡಲ್ ಮಾಡಿರುವುದಕ್ಕೆ ಲೆಕ್ಕವಿಲ್ಲ. ಕಿನ್ನರಿಯಿಂದ ಆರಂಭವಾಗಿ ಕುಲವಧು, ಪುಟ್ಟಗೌರಿ, ಲಕ್ಷ್ಮೀ ಬಾರಮ್ಮ, ಅಗ್ನಿಸಾಕ್ಷಿಯ ತನಕ ಕಲರ್ಸ್ ಕನ್ನಡದ ಸಕಲ ನಾಯಕಿಯರ ಸಂಸಾರದ ಗೋಳಾಟಕ್ಕೆ ಕಿವಿಯಾಗಿ, 'ಹಂಗೇ ಆಗ್ಬೇಕು ಕೇಡಿ ನಿಂಗೆ, ಪಾಪ ಆ ಹುಡುಗಿಗೆ ಎಷ್ಟು ಗೋಳು ಕೊಡೋದು ನೀನು' ಅಂತ ಅಜ್ಜಿ ಅವಲತ್ತುಕೊಳ್ಳುವಾಗಲೆಲ್ಲಾ ಅಜ್ಜಿಯನ್ಯಾಕೆ ಕಲರ್ಸ್ ಕನ್ನಡದವರು ಬ್ರಾಂಡ್ ಅಂಬಾಸಿಡರ್ ಮಾಡ್ಕೋಬಾರ್ದು ಅಂತ ನಾನು, ತಮ್ಮ ತೀವ್ರತರವಾದ ಚರ್ಚೆ ನಡೆಸಿದ್ದೇವೆ. ಅವರಷ್ಟು ವಿಶಿಷ್ಟವಾಗಿ ಧಾರಾವಾಹಿ ನೋಡುವ ಇನ್ನೊಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಧಾರಾವಾಹಿ ಬರುವಾಗ ಕುರ್ಚಿಯಲ್ಲೇ ಕಣ್ಣು ಕುಗುರಿಸಿಕೊಂಡು ಮಲಗಿ ಅಡ್ವರ್ಟೈಸ್ ಬರುವಾಗ ತಟಕ್ಕನೆ ಎದ್ದು ಟಿವಿ ನೋಡುವ ಸ್ಪೆಷಲ್ ಕ್ಯಾಂಡಿಡೇಟ್ ನಮ್ಮಜ್ಜಿ. ಮೂರು ಸರ್ತಿ ಅಡ್ವರ್ಟೈಸ್ಮೆಂಟ್ ಬರದೇ ಧಾರಾವಾಹಿ ಮುಗಿಯದು ಎಂಬ ಘನಘೋರ ಲೆಕ್ಕಾಚಾರ ಪ್ರವೀಣೆಯೆದುರು ವಾದ ಹೂಡಲಾಗದೇ ಶಸ್ತ್ರ ತ್ಯಾಗ ಮಾಡಿದ ದಿನಗಳಿಗೆ ಲೆಕ್ಕವಿಲ್ಲ.  ಅದಕ್ಕಿಂತಲೂ ಕಠೋರ ಪರಿಸ್ಥಿತಿ ಎಂದರೆ ಧಾರಾವಾಹಿ ಮುಗಿದು ಅರ್ಧ ಗಂಟೆ ಕಳೆದರೂ 'ಇಲ್ಲ, ಧಾರಾವಾಹಿ ಮುಗಿದಿಲ್ಲ, ನೀನೇ ಚಾನೆಲ್ ಬದಲಾಯಿಸಿದ್ದೀಯಾ' ಅನ್ನೋ ಗುರುತರ ದೋಷಾರೋಪಣೆ. ತಮ್ಮನ ಕ್ರಿಕೆಟ್ ಪ್ರೇಮಕ್ಕೆ ಅವರ ಧಾರಾವಾಹಿಗಳ ಬಲಿಯಾದಾಗಲೂ ಬೇಸರಿಸದೇ ಅವನ ಕ್ರಿಕೆಟ್ಟನ್ನೇ ಧಾರವಾಹಿಯಂತೆ ನೋಡಿದ ಧೀಮಂತೆ ನಮ್ಮಜ್ಜಿ. ಕ್ರಿಕೆಟ್ ನೋಡಲು ಗ್ಯಾಲರಿಯಲ್ಲಿ ಕುಳಿತ ಜನಸ್ತೋಮವನ್ನು ನೋಡಿ, 'ಇವರೆಲ್ಲಾ ಕಾಪಿ ಎಸ್ಟೇಟಲ್ಲಿ ಕೆಲಸ ಮಾಡೋಕೆ ಬಂದಿದ್ದಾರಾ?' ಅಂತ ಕೇಳಿದ್ದಾಕೆ ನನ್ನಜ್ಜಿ. ಗೋಲ್ಡನ್ ಸ್ಟಾರ್ ಗಣೇಶ್ ಟಿವಿಯಲ್ಲಿ ಕಂಡಾಗಲೆಲ್ಲಾ, 'ಅಗಳೇ, ಇವ ಮುಂಚೆ ನಮಸ್ಕಾರ, ನಮಸ್ಕಾರ, ನಮಸ್ಕಾರ ಅಂತ ಬರ್ತಿದ್ದ' ಎಂದು ಕಾಮಿಡಿ ಟೈಂ ಅನ್ನು ನೆನಪಿಸಿಕೊಳ್ಳುತ್ತಿದ್ದ ಅಜ್ಜಿಗೆ ಸಾಟಿಯುಂಟೇ. 

ವಯೋಸಹಜ ತೊಂದರೆಗಳಿಂದ ಕೊಂಚ ಬಳಲಿದಂತಾಗಿದ್ದು ತೀರಾ ಇತ್ತೀಚೆಗೆ. ಸರಿಸುಮಾರು ಎರಡು ವರ್ಷಗಳಿಂದ ದೈನಂದಿನ ದೇವರ ದರ್ಶನದ ಕಾರ್ಯಕ್ರಮ ನಿಂತಿತ್ತಾದರೂ ಹೂ ಕೊಯ್ದು ಮಾಲೆ ಕಟ್ಟಿ ದಿನವೂ ದೇವಸ್ಥಾನಕ್ಕೆ ಕಳಿಸುವುದು ತಪ್ಪಿಸಿರಲಿಲ್ಲ. ಎಷ್ಟೇ ಸುಸ್ತಾದರೂ ಅರೆಘಳಿಗೆ ಮಲಗಿ, ಏಳುತ್ತಿದ್ದರೇ ಹೊರತು ಮನೆಯೊಳಗಿನ ಓಡಾಟ, ಕೆಲಸ, ಬೊಗಸೆ ನಿಲ್ಲಿಸಿರಲಿಲ್ಲ. ಮೊನ್ನೆ ಅಷ್ಟಮಿಯ ದಿನ ತಮ್ಮನ ಹತ್ತಿರ ವಿಡಿಯೋ ಕಾಲ್ ಮಾಡಿಸಿ ಮೊಮ್ಮಗಳ ಮುಖ ನೋಡಿ ಮಾತನಾಡಿಸಿದ್ದರು. ಎಂಟನೇ ತಾರೀಕು ವಿಜಯದಶಮಿಯ ದಿನ ಬೆಳ್ಳಂಬೆಳಗ್ಗೆ ಅಮ್ಮನಿಗೆ ಕರೆ ಮಾಡಿ ಮಾತನಾಡಿದಾಗಲೂ ಖುಷಿಯಾಗಿದ್ದವರು ಅದೇ ಸಂಜೆಗೆ ಇನ್ನಿಲ್ಲವಾದರು ಎಂದರೆ ನಂಬುವುದು ಹೇಗೆ? ಅವರಾಸೆಯಂತೆಯೇ ಕೈ ಕಾಲು ಬಿದ್ದು ಹಾಸಿಗೆ ಹಿಡಿಯುವ ಮೊದಲೇ ಇಹಯಾತ್ರೆ ಮುಗಿಸಿದರು. ಅದೂ ವಿಜಯದಶಮಿಯ ದಿನ, ಅವರ ನೆಚ್ಚಿನ ಮನೆಯಲ್ಲೇ, ಅತೀ ಪ್ರೀತಿಪಾತ್ರ ಮೊಮ್ಮಗನ ಕೈಗಳಲ್ಲಿಯೇ...... ಒಂದಿನಿತೂ ನೋವಿಲ್ಲದ ಸುಖಮರಣ.... 

ಅದೆಷ್ಟು ಲಗುಬಗೆಯಿಂದ ಹೊರಟು ಬಂದರೂ ಕೊನೆಯ ಬಾರಿಗೊಮ್ಮೆ ಅವರ ಮುಖ ನೋಡುವ ಅವಕಾಶವೂ ಸಿಗಲೇ ಇಲ್ಲ ನನಗೆ.... ಆ ಬೇಸರ, ದುಃಖ ಸಾಯುವವರೆಗೂ ಮನದಾಳದಲ್ಲೆಲ್ಲೋ ಚುಚ್ಚುತ್ತಲೇ ಇರುತ್ತದೆ. 

ಮನೆ, ಅವರ ಕೋಣೆ, ಮಲಗುತ್ತಿದ್ದ ಮಂಚ, ಬಳಸುತ್ತಿದ್ದ ವಸ್ತುಗಳು, ಬೆಳಿಗ್ಗೆ ಪೂಜೆ ಮಾಡಿ ದೇವರಿಗೇರಿಸಿದ ಹೂವು ಎಲ್ಲವೂ ಇದ್ದಲ್ಲೇ ಇವೆ. ಅಂಗಳದ ಬದಿಯಲ್ಲಿನ ಕಾಕಡ, ಗೊರಟೆ, ದಾಸವಾಳ, ನಿತ್ಯಪುಷ್ಪ, ಗುಲಾಬಿ ಹೂಗೊಂಚಲುಗಳು ಗಾಳಿಗೆ ಆಡುತ್ತಾ ನಿಂತಿವೆ. 

ಆದರೆ ಅವುಗಳಿಗೆಲ್ಲಾ ಜೀವ ತುಂಬುತ್ತಿದ್ದ ತೊಂಬತ್ತೆರಡರ ಹರೆಯದ ನನ್ನಜ್ಜಿ ಇನ್ನು ನೆನಪು ಮಾತ್ರ.... 

ಆ ಅಕ್ಕರೆಯ ಮಾತುಗಳು, ನಿಸ್ವಾರ್ಥ ಪ್ರೀತಿ, ಮಮತೆ ಎಲ್ಲವೂ ಇನ್ನು ನೆನಪಿನ ಬುತ್ತಿಯೊಳಗೆ ಮಾತ್ರ. ಬಾಲ್ಯದಲ್ಲಿ ನನ್ನನ್ನು ಸೊಂಟದ ಮೇಲೆ ಹೊತ್ತು ಮೆರೆಸುತ್ತಿದ್ದ ದಿನಗಳಿಂದ ಹಿಡಿದು, ಮೊನ್ನೆಯ ಜಂಗಮವಾಣಿಯ ಕರೆಗಳ ತನಕ ಪ್ರತೀ ಕ್ಷಣಗಳೂ ಮತ್ತೆ ಮತ್ತೆ ಕಾಡಿ ಕಣ್ಣೀರಾಗುತ್ತಿರುವ ಈ ಸಮಯದಲ್ಲಿ ನೆನಪಾಗುತ್ತಿರುವುದು ಆನಂದ ಭಕ್ಷಿಯವರ ಅದೇ ಸಾಲುಗಳು...... 

ಅಜ್ಜಿಯೊಂದಿಗೆ ಕಳೆದ ಕ್ಷಣಗಳು ಮತ್ತೆ ಮತ್ತೆ ನೆನಪಾಗಿ ಕಾಡುತ್ತಲೇ ಇರುತ್ತವೆ.....

Miss you ಸಚ್ಚಿ 💔💔

(ಮೂರು ವರ್ಷಗಳ ಹಿಂದಿನ ಬರಹ)

ಸೋಮವಾರ, ಸೆಪ್ಟೆಂಬರ್ 5, 2022

ಲಹರಿ ೩

"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಇಲ್ಲಿ 'ಗುಲಾಮ' ಎನ್ನುವ ಪದಕ್ಕೆ ದಾಸರು ಕಲ್ಪಿಸಿರುವ ಅರ್ಥ ದಾಸ್ಯತ್ವದ್ದಲ್ಲ. 'ಗುರು' ಎಂಬುದು ಗುರುತರವಾದ ಜವಾಬ್ದಾರಿ. ಶಿಷ್ಯವೃಂದದಿಂದ ಅಭಿವಂದನೆ ಸ್ವೀಕರಿಸಿ, ಅವರುಗಳು ಹಾಕುವ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ವಾಟ್ಸಾಪ್ ಸ್ಟೇಟಸ್ ಹಂಚಿಕೊಳ್ಳುವಲ್ಲಿಗೆ ಮುಗಿಯುವುದಲ್ಲ ಗುರುವೆಂಬ ಪದವಿ. ಇರುವ ಅರೆಬರೆ ಜ್ಞಾನವನ್ನೇ ಅತಿರೇಕದಲ್ಲಿ ಪ್ರದರ್ಶಿಸುತ್ತಾ, ತಾನೇ ಸರ್ವಜ್ಞನೆಂಬ ಅಹಮ್ಮಿಕೆಯಲ್ಲಿ ಮೆರೆಯುವವರು ಸದಾ ನೆನಪಿನಲ್ಲಿಡಬೇಕಾದ ಸಂಗತಿ......... ಗುರುವಿನ ಕಲಿಕೆ ಮಣ್ಣಿಗೆ ಸೇರುವ ತನಕ ನಿರಂತರ. ತನ್ನ ಕಲಿಕೆಗೆ ಪೂರ್ಣವಿರಾಮ ಹಾಕಿಕೊಂಡ ಗುರು ವಿದ್ಯಾರ್ಥಿಯ ಭವಿಷ್ಯ ರೂಪಿಸಲಾರ. ಗುರುವಿನ ಅಹಮ್ಮಿಕೆ, ಗುರುವಿನ ಒಂದು ಸಣ್ಣ ತಪ್ಪು ಶಿಷ್ಯನ ಉಜ್ವಲ ಭವಿತವ್ಯವನ್ನು ಕಸಿಯದಿರಲಿ. ಶಿಷ್ಯಂದಿರ ಸಂದೇಶಗಳನ್ನು, ಹೊಗಳಿಕೆಗಳನ್ನು ಪ್ರದರ್ಶಿಸುವಾಗ ಇರುವಷ್ಟೇ ಹೆಮ್ಮೆ ಕರ್ತವ್ಯಕ್ಕೆ ನ್ಯಾಯ ಒದಗಿಸುವಾಗಲೂ ಇರಲಿ. ಕರ್ತವ್ಯಕ್ಕೆ ವಿಮುಖರಾಗಿ ಹೊಗಳಿಕೆಗೆ ಮಾತ್ರ ಸುಮುಖರಾಗುವ ಗುರುಗಳಿಗೆ ಧಿಕ್ಕಾರವಿರಲಿ.......

ಹೊಗಳಿಕೆಯಲ್ಲೇ ಮೈಮರೆಯದ, ಕರ್ತವ್ಯದಿಂದ ವಿಮುಖರಾಗದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 

#ಅರಿಯೋಗುರುವೇಶಿಷ್ಯನಂತರಂಗವಾ

ಶನಿವಾರ, ಸೆಪ್ಟೆಂಬರ್ 3, 2022

ಛೇದ

ನಟನಾರಂಗದಲ್ಲಿ "method acting" ಎನ್ನುವ ಒಂದು ಪರಿಕಲ್ಪನೆಯಿದೆ. ಪರಕಾಯ ಪ್ರವೇಶವನ್ನು ಬಯಸುವಂತಹ ಸಂಕೀರ್ಣ ಪಾತ್ರಗಳನ್ನು ನಿಭಾಯಿಸುವಾಗ ಆ ಪಾತ್ರದ ಆಂತರಿಕ ಒಳತೋಟಿಗಳು, ಭಾವ ಸಂಘರ್ಷಗಳನ್ನು ಅನುಭವಿಸುವ ಮೂಲಕ ಆ ಪಾತ್ರದೊಂದಿಗೆ ನಟ ತನ್ನನ್ನೇ ಗುರುತಿಸಿಕೊಳ್ಳುವ ಕಲೆಯೇ method acting. ಇಲ್ಲಿ ಪಾತ್ರದ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ವಿಶ್ಲೇಷಿಸಿ ಅದರಿಂದ ಪಾತ್ರದ ನಡವಳಿಕೆಯನ್ನು ನಟ ಅಭ್ಯಸಿಸುತ್ತಾನೆ ಹಾಗೂ ತನ್ಮೂಲಕ ಆದಿಯಿಂದ ಅಂತ್ಯದ ತನಕ ಆ ಪಾತ್ರವನ್ನೇ ಆತ ಜೀವಿಸುತ್ತಾನೆ. ಇದೇ ರೀತಿ ಸಾಹಿತ್ಯಲೋಕದಲ್ಲಿ "method writing" ಅನ್ನುವ ಪರಿಕಲ್ಪನೆಯಿದೆ. ಇಲ್ಲಿ ಬರಹಗಾರ ತಾನು ಸೃಷ್ಟಿಸುವ ಪಾತ್ರಗಳ ಮನೋವಲಯವನ್ನು ಪ್ರವೇಶಿಸಿ ವಿಭಿನ್ನ ಸನ್ನಿವೇಶಗಳಲ್ಲಿ ಅವುಗಳ ನಡವಳಿಕೆಯನ್ನು ಗ್ರಹಿಸುತ್ತಾನೆ. ಬಹುಶಃ ಇವೆರಡನ್ನೂ ಒಟ್ಟಿಗೆ ಎರಕ ಹೊಯ್ದರೆ ಅದು ಯಶವಂತ ಚಿತ್ತಾಲರ ಬರವಣಿಗೆಯಾಗಬಹುದೇನೋ....... 

'ಈ ಮಟ್ಟಿಗೆ ಇನ್ನೊಬ್ಬರ ಮನದೊಳಗೆ ಇಳಿದು ಭಾವಗಳನ್ನು ಅಕ್ಷರಕ್ಕಿಳಿಸಲು ಹೇಗೆ ಸಾಧ್ಯ? ಅದೂ ಓದುಗನ ಅಂತರಾಳವನ್ನು ಬಗೆಯುವಷ್ಟು ಭಾವತೀವ್ರತೆಯಿಂದ?' - "ಶಿಕಾರಿ" ಕಾದಂಬರಿಯ ಪ್ರತಿ ಪುಟವನ್ನು ಮಗಚುವಾಗಲೂ ಮನದೊಳಗೆ ಮೂಡಿದ ಇಂತದೊಂದು ಪ್ರಶ್ನೆಗೆ "ಛೇದ" ಎನ್ನುವ ನೂರಿಪ್ಪತ್ತು ಪುಟಗಳ ಕಿರುಹೊತ್ತಿಗೆಯನ್ನು ಮುಗಿಸುವ ಹೊತ್ತಿಗೆ ದೊರೆತ ಉತ್ತರವಿದು. ಚಿತ್ತಾಲರು ಖಂಡಿತಾ ಲೇಖನಿ ಹಿಡಿದು ಹಾಳೆಯ ಮೇಲೆ ಬರೆದ ಲೇಖಕರಲ್ಲ. ಮನುಜನ ಯೋಚನೆಗಳ ದಿಕ್ಕು ದಾರಿಯ ಜಾಡು ಹಿಡಿದು ಅದನ್ನು ಓದುಗರ ಮನೋಭಿತ್ತಿಯಲ್ಲಿ ಚಿತ್ರಿಸಿದವರು. ಇವರ ಬರವಣಿಗೆ ಆದಿಯಿಂದ ಅಂತ್ಯದ ತನಕ ನಮ್ಮೊಂದಿಗೆ ಸಂವಾದಿಸುತ್ತದೆ, ಅಂತರ್ಮಥನಕ್ಕೆ ಕಡಗೋಲಾಗುತ್ತದೆ. ಓದುಗನಿಗೆ ಈ ಮಟ್ಟದ Introspection Theropy ನಾ ಕಂಡಿದ್ದು ಚಿತ್ತಾಲರ ಬರವಣಿಗೆಯಲ್ಲೇ. 
ಕೊಲೆಯೊಂದರಿಂದ ತೆರೆದುಕೊಳ್ಳುವ ಈ ಕಥನ ನಮ್ಮೊಳಗಿನ ಭಾವಸಂಘರ್ಷಗಳು, ಸಂಕೀರ್ಣ ಸ್ವರೂಪದ ಮಾನವ ಸಂಬಂಧಗಳು, ನಮ್ಮ ಬದುಕಿನ ಪರಿಧಿಯೊಳಗಿನ ವ್ಯಕ್ತಿಗಳ ಬಗ್ಗೆ ನಾವೇ ನಿರ್ಮಿಸಿಕೊಳ್ಳುವ ಹಾಗೂ ಪದೇಪದೇ ಬದಲಾಗುವ ಅಭಿಪ್ರಾಯಗಳು, ಹೇಳಲೇಬೇಕೆಂದುಕೊಂಡು ಮನದೊಳಗೇ ಉಳಿಸಿಕೊಳ್ಳುವ ಸಾವಿರ ಮಾತುಗಳು, ಹೇಳಬಾರದೆಂದುಕೊಂಡೂ ಅರಿವಿಗೆ ಬರುವ ಮುನ್ನವೇ ಮಾತಾಗುವ ಪದಗಳು, ಏನೋ ಹೇಳಬೇಕೆಂದು ಹೊರಟು ಇನ್ನೇನನ್ನೋ ಹೇಳಿ ಮುಗಿಸುವ ರೀತಿ .......... ಹೀಗೆ ನಮ್ಮದೆ ಹಲವು ಪ್ರತಿಬಿಂಬಗಳಿಗೆ ಕನ್ನಡಿ ಹಿಡಿಯುತ್ತದೆ. 

ಪ್ರತಿ ಪಾತ್ರದ ಮನಸ್ಸು ಹೊಕ್ಕಂತೆ ಆ ಪಾತ್ರದ ಭಾವಲೋಕದ ಕದ ತೆರೆಯುವ ಚಿತ್ತಾಲರ ಬರವಣಿಗೆಯಲ್ಲಿ ಬೆಹರಾಮ್ ಮತ್ತು ಅಗರ್ವಾಲ್ ನಡುವಿನ ಭಾವಸೂಕ್ಷ್ಮ ಹಾಗೂ ಸಂಕೀರ್ಣ ಬಾಂಧವ್ಯ ಅನಾವರಣವಾಗಲು ಕರುಣಾಕರನ್ ಮತ್ತು ವಾಸುದೇವನ್ ಮೆಟ್ಟಿಲುಗಳಾಗುತ್ತಾರೆ. ಶಿರೀನ್ ಮತ್ತು ಆಕೆಯ ತಾಯಿ ಅನಪೇಕ್ಷಿತವಾಗಿ ಸೃಷ್ಟಿಯಾಗುವ ಸನ್ನಿವೇಶದ ಇತರೆ ಸಾಧ್ಯತೆಗಳ ಅವಲೋಕನಕ್ಕೆ ದಾರಿಯಾದರೆ ಪಾರ್ವತಿಯ ನಡೆನುಡಿ ಒಂದು ಬಗೆಯ ಗೌಪ್ಯತೆಯನ್ನು ಕಾಯುತ್ತದೆ. ಕೊನೆಯಲ್ಲಿ ಅಗರ್ವಾಲನೊಡನೆ ಫೋನಿನಲ್ಲಿ ಸಂಭಾಷಿಸಿ ತನ್ನ ಮನದೊಳಗೆ ಹೆಪ್ಪುಗಟ್ಟಿದ್ದ ವರ್ಷಗಳ ಬೇಗುದಿಯನ್ನೆಲ್ಲಾ ಕಕ್ಕಲು ಬೆಳಕನ್ನು ಆರಿಸಿ ಕತ್ತಲನ್ನು ಆಶ್ರಯಿಸುವ ಬೆಹರಾಮನ ವರ್ತನೆ ಅಷ್ಟೂ ವರ್ಷಗಳು ಅವನು ಕತ್ತಲಿನಲ್ಲೇ ಇದ್ದನೆಂಬ ಸತ್ಯಕ್ಕೆ ಸಮರ್ಥ ರೂಪಕವಾಗಿದೆ. 

ಒಟ್ಟಿನಲ್ಲಿ ಬರಹಗಾರನೊಬ್ಬನ method writing ಓದುಗನ ಮನಃಪಟಲದಲ್ಲಿ method acting ಕೌಶಲ್ಯದಲ್ಲಿ ಬಿತ್ತರವಾಗುವ ರೀತಿಗೆ ಸಮರ್ಥ ಉದಾಹರಣೆ "ಛೇದ".



ಸೋಮವಾರ, ಆಗಸ್ಟ್ 29, 2022

ಲಹರಿ ೨

ಹಿಂದೆಂದೋ ನವೋಲ್ಲಾಸದಿ ಕಣ್ಣರಳಿಸಿ ಆಸ್ವಾದಿಸಿದ ಚಿರಪರಿಚಿತ ಹಾದಿ.....
ಸ್ವಾನ್ವೇಷಣೆಯಲಿ ಎನಗೇ ತಿಳಿವಿರದ ಎನ್ನೊಳಗಿನ ಎನ್ನಾವಿಷ್ಕಾರಕೆ ನಿಮಿತ್ತವಾದ ಸಾದಿ.....
ಎನ್ನಂತಾರ್ಯದೊಳಗಣ ಸಾಸಿರ ಭಾವಗಳ ಅಭಿವ್ಯಕ್ತಿಗೆ ಭಿತ್ತಿಯಾದ ಪಥ....
ಇಂದೇಕೋ ಬರಡುಭೂಮಿ ಉತ್ಸವಮೂರ್ತಿಯಿರದೇ ಬರಿದಾದ ರಥ.... 

ಮನದೊಳಗಣ ಕಡುಮೌನ ಭರಿಸಲಸಾಧ್ಯ ಈ ಭಾವಾಂತರ್ಧಾನ
ಧಾವಂತದ ಜಗದೊಳು ಗಳಿಕೆಯ ಲೆಕ್ಕಾಚಾರವೇ ಪ್ರಧಾನ
ಮೌನದಿ ನಿಟ್ಟುಸಿರಿಡುವ ಮನದ ಅಳಲ ಕೇಳಲು ಯಾರಿಗಿದೆ ವ್ಯವಧಾನ?

ಸೋಮವಾರ, ಆಗಸ್ಟ್ 22, 2022

ಮಳೆಮಲೆಗಳಲ್ಲಿನ ಮದುಮಗಳು

ಮೂರು ಬಾರಿ ಓದಲೆಂದು ಹಿಡಿದು ಇಪ್ಪತ್ತು, ಐವತ್ತು, ಎಪ್ಪತ್ತು ಪುಟಗಳ ನಡುವೆಯೇ ಗಿರಕಿ ಹೊಡೆದು ಏನೆಂದರೂ ಮುಂದೆ ಓದಲಾಗದು ಎಂದು ಕೈಬಿಟ್ಟಿದ್ದ ಹೊತ್ತಿಗೆಯನ್ನು ಅಮೋಘ ನಾಲ್ಕನೇ ಬಾರಿಗೆ ಹಿಡಿಯಲು ಹೊರಟಾಗ ಈ ಬಾರಿ ಪುಟಗಳ ಲೆಕ್ಕಾಚಾರದಲ್ಲಿ ಕನಿಷ್ಟ ಶತಕ ಸಂಭ್ರಮ ಪೂರೈಸಿಯೇನೆಂಬ ನಂಬುಗೆಯೂ ಇರಲಿಲ್ಲ (ಒಮ್ಮೊಮ್ಮೆ ಓದಲೇಬೇಕೆಂದು ಹಠದಲ್ಲಿ ಶೀರ್ಷಾಸನ ಹಾಕಿ ಕೂತರೂ ಕೆಲವು ಹೊತ್ತಿಗೆಗಳ ಹೊತ್ತು ಮುಂದೆ ಸಾಗಲಾಗುವುದಿಲ್ಲ ನನಗೆ). ಆದರೂ ಗೆಳತಿ ಜಯಾ ಹಲವು ಬಾರಿ " ನೀತಾ, ಒಮ್ಮೆ ಮೊದಲ ನೂರು ನೂರಿಪ್ಪತ್ತು ಪುಟ ದಾಟಿ. ಆಮೇಲೆ ನೀವು ಪುಸ್ತಕ ಮುಗಿಸದೇ ಕೆಳಗಿಟ್ಟರೆ ಕೇಳಿ" ಎಂದು ಒತ್ತಾಸೆ ನೀಡಿದ್ದನ್ನು ಸ್ಮರಿಸಿ ಅದೂ ಒಂದು ಕೈ ನೋಡೇ ಬಿಡುವಾ ಎಂದು ಚತುರ್ಥ ಯಾತ್ರೆ ಆರಂಭಿಸಿದ್ದು. ಎಪ್ಪತ್ತು ದಾಟಿ, ಎಂಬತ್ತು ಕಳೆದು, ತೊಂಬತ್ತು ಬಂದು ತೊಂಬತ್ತೊಂಬತ್ತಾಗಿ ನೂರನೇ ಪುಟಕ್ಕೆ ಬರುವಾಗ ಗುತ್ತಿಯ ಹುಲಿಯ, ಹುಲಿಯನ ಗುತ್ತಿಯ ಜೊತೆ ನಾನೇ ಹುಲಿಕಲ್ಲು ನೆತ್ತಿಯ ಮೇಲೇರಿದಷ್ಟು ಸಂಭ್ರಮ..... 
ಆದರೆ ಆ ತರುವಾಯ ಈ ಜಡಿಮಳೆಯ ದಟ್ಟ ಮಲೆಗಳಲ್ಲಿನ ಮದ್ಗೋಳು ಕಟ್ಟಿಕೊಟ್ಟ ರಸಾನುಭವ ಅನಿರ್ವಚನೀಯ. ಮುಕುಂದಯ್ಯ - ಚಿನ್ನಕ್ಕನ ಪ್ರೇಮ, ಐತ - ಪೀಂಚಲುವಿನ ದಾಂಪತ್ಯ, ಗುತ್ತಿ-ತಿಮ್ಮಿ ಹಾಗೂ ಹುಲಿಯನ 'ಓಡಿಸಿಕೊಂಡು' ಹೋಗುವ ಸಾಹಸ, ದೇವಯ್ಯನೆಂಬ ನವನಾಗರೀಕನ ಕಿಲಿಸ್ತಗಿರಿಯ ಪ್ರಹಸನ, ಮನುಷ್ಯನೆಂಬ ಪದಕ್ಕೇ ಅವಮಾನ ತರುವಷ್ಟು ಅಮಾನುಷ ಚೀಂಕ್ರ, ನೆನಪಿನಲ್ಲುಳಿವ ನಾಗಕ್ಕ ಮತ್ತು ಧರ್ಮು, ಮತಪ್ರಚಾರಕ್ಕಾಗಿ ಯಾವ ಹಂತಕ್ಕೂ ತಲುಪಬಲ್ಲ ಉಪದೇಶಿ ಜೀವರತ್ನಯ್ಯ, ಸ್ವಾಮಿ ವಿವೇಕಾನಂದರ ವಾಣಿಯನ್ನು ಪಸರಿಸುವ ಗಡ್ಡದಯ್ಯ, ಹೊನ್ನಳ್ಳಿ ಹೊಡ್ತದ ಸಾಬರ ಗುಂಪು, ದೇಯಿ, ಅಂತಕ್ಕ ಸೆಡ್ತಿ, ಕಾವೇರಿ,ಅಕ್ಕಣಿ, ಪಿಜಿನ......... ಹೀಗೆ ಮುಂಬರಿಯುವ ಅಗಣಿತ ಪಾತ್ರಗಳು ಜೀವ ಮೇಳೈಸಿ ಹರಿದಿರುವುದು ಆ ಮಲೆನಾಡಿನ ಸೊಬಗನ್ನು ಪದಗಳಲ್ಲಿ ಪೋಣಿಸಿ ಹೆಣೆದ ವೈಖರಿಯಲ್ಲಿ. ಅಂದಿನ ಕಾಲದ ಪುರುಷ ಪ್ರಧಾನ ವ್ಯವಸ್ಥೆ, ಮಹಿಳೆಯರ ಬದುಕು ಬವಣೆ, ಸಂಸ್ಕೃತಿ ಆಚರಣೆ ನಂಬಿಕೆಗಳು, ವರ್ಣಾಧಾರಿತ ಜಾತಿ ಪದ್ಧತಿ, ಮತಾಂತರ ಮೊದಲಾದ ಸಂಗತಿಗಳೊಂದಿಗೆ ಸಾಗುವ ಕಾದಂಬರಿಯೊಳಗೆ ಆ ಮಲೆಗಳು, ತರಹೇವಾರಿ ಮರಮಟ್ಟುಗಳು, ಪ್ರಾಣಿ ಪಕ್ಷಿಗಳು, ನಿಲ್ಲದೆ ಸುರಿವ ದನಗೋಳು ಮಳೆಗೆ ಸಾಥು ಕೊಡುವ ಕಪ್ಪೆ, ಜೀರುಂಡೆ, ಬೀರ್ಲಕ್ಕಿಗಳು ರಸಋಷಿಯ ಲೇಖನಿಯಲ್ಲಿ ಹೊಮ್ಮಿದ ಪರಿಗೆ ಅಂದಿನ ಮಲೆನಾಡು ಬದುಕು ಓದುಗನಿಗೆ ದೃಗ್ಗೋಚರವಾಗುಷ್ಟು ಸ್ಪಷ್ಟ. ಮೊದಲ ಕೆಲ ಅಧ್ಯಾಯಗಳು ಕಾರ್ಯಕಾರಣ ಸಂಬಂಧ ಸಿಗದೇ ಎತ್ತೆತ್ತಲೋ ಓಡಿದಂತೆ ಅನಿಸಿದರೂ ನಂತರದಲ್ಲಿ ಓದಿ ಮುಗಿಸದೇ ಕೆಳಗಿಡಲಾರದ ಮದುವಣಗಿತ್ತಿ ಇವಳು........ 

#ರಸಋಷಿಯರಸಕಾವ್ಯ

The Prestige

THE PRESTIGE....... 
Esteem, Rivalry and Sacrifices 

ಬೆರಗಿನ ಇಂದ್ರಜಾಲ ಸೃಷ್ಟಿಸುವ ಸಮಾನ ಸಾಮರ್ಥ್ಯವುಳ್ಳ ಇಬ್ಬರು ಜಾದೂಗಾರ ನಡುವಿನ ಶತೃತ್ವ, ಪ್ರತಿಷ್ಠೆ, ತಾನೇ ಸರ್ವಶ್ರೇಷ್ಠನೆಂಬ ಗರಿಮೆ ಗಳಿಕೆಯ ಹಾದಿಯಲ್ಲಿನ ತ್ಯಾಗಗಳು, ಸ್ಪರ್ಧಾ ಪರಾಕಾಷ್ಠೆ ತಂದೊಡ್ಡುವ ದುರಂತಗಳು.........
ಕ್ರಿಸ್ಟೋಫರ್ ನೋಲನ್ ಎಂಬ ಜಾದೂಗಾರನ ಅತ್ಯದ್ಭುತ ಕೈಚಳಕವನ್ನು ಮೆಚ್ಚದೇ ಉಳಿಯಲು ಸಾಧ್ಯವಿಲ್ಲ. ಆಂಜಿಯರ್ ಹಾಗೂ ಬೋರ್ಡನ್ ವೀಕ್ಷಕನ ಮನದೊಳಗೆಬ್ಬಿಸುವ ಅಸಾಧ್ಯ ಕೋಲಾಹಲಕ್ಕೆ ಸಾಟಿಯಿಲ್ಲ. ಪ್ರತಿ ಹಂತದಲ್ಲೂ ಭ್ರಮೆ ವಾಸ್ತವಗಳ ನಡುವೆ ಸತ್ಯ ಮಿಥ್ಯಗಳ ಪರಿಧಿಯಲ್ಲಿ ತೇಲುವಂತೆ ಮಾಡುವ ಸಿನಿಮಾದ ಸನ್ನಿವೇಶಗಳು ನಮ್ಮೊಳಗೆ ಹಲವಾರು ತೆರೆದ ಕಲ್ಪನೆಗಳನ್ನು ಸೃಷ್ಟಿಸುವುದು ಸುಳ್ಳಲ್ಲ. ಕಥಾ ಹೆಣಿಗೆ ಹಾಗೂ ನಿರೂಪಣಾ ತಂತ್ರಗಾರಿಕೆ ಇಡೀ ಸಿನಿಮಾದ ಹೈಲೈಟ್. ಆಂಜಿಯರ್ ಹಾಗೂ ಬೋರ್ಡನ್ ಪಾತ್ರದಲ್ಲಿ ಹ್ಯೂ ಜಾಕ್ಮನ್ ಮತ್ತು ಕ್ರಿಸ್ಚಿಯನ್ ಬೇಲ್ ಮಾಯಾಜಾಲಕ್ಕೆ ಮಾರುಹೋಗದೇ ವಿಧಿಯಿಲ್ಲವಾದರೂ ಕಣ್ಣಿನಲ್ಲೇ ಸಾವಿರ ಭಾವ ತುಳುಕಿಸುವ ಮೈಕೆಲ್ ಕೇನ್ ಕಾಡುತ್ತಾರೆ. ನೋಲನ್ ಅವರ ಅಸಾಮಾನ್ಯ ಕಲ್ಪನಾಶಕ್ತಿಗೆ ಇನ್ನೊಂದು ಜ್ವಲಂತ ಉದಾಹರಣೆ "ದಿ ಪ್ರೆಸ್ಟೀಜ್".

ಸೋಮವಾರ, ಆಗಸ್ಟ್ 8, 2022

ಮುಳುಗಿದ್ದು ಭಾರಂಗಿಯೇ, ಭರವಸೆಯೇ, ಬದುಕೇ....? ಪುನರ್ವಸು


ಆತ್ಮೀಯ ಸಹೋದರ ವೀರೇಂದ್ರ 'ನೀವು ಓದಲೇಬೇಕು' ಎಂದು ಒತ್ತಾಯಿಸಿದ್ದಲ್ಲದೇ ತಾನೆ ಉಡುಗೊರೆಯಾಗಿ ಕಳಿಸಿಕೊಟ್ಟ ಗಜಾನನ ಶರ್ಮರ 'ಪುನರ್ವಸು' ಕಾದಂಬರಿಯ ಕೊನೆಯ ಪುಟವನ್ನು ಮುಗಿಸಿ ಕೆಳಗಿಟ್ಟ ಈ ಘಳಿಗೆ ಬಾಲ್ಯದ ದಿನಗಳು ಪದೇಪದೇ ಕಣ್ಮುಂದೆ ಹಾಯುತ್ತಿವೆ. ನನ್ನ ತಂದೆಯ ಊರು ಹಾಗೂ ಅಮ್ಮನ ತವರು ಎರಡೂ ಮಲೆನಾಡು ಪ್ರದೇಶಗಳೇ. ತಂದೆಯ ಊರಾದ ಕಳಸ ಸಮೀಪದ ದಟ್ಟಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ನನಗೆ ಅಲ್ಲಿಗೂ ಅಮ್ಮನ ತವರಾದ ಹೊಸನಗರದ ಕೊಡಚಾದ್ರಿ ತಪ್ಪಲಿನ ಹಳ್ಳಿಗೂ ಹೇಳಿಕೊಳ್ಳುವಂತಹ ದೊಡ್ಡ ವ್ಯತ್ಯಾಸವಿದೆಯೆಂದು ಎಂದೂ ಅನಿಸಿದ್ದಿಲ್ಲ. ಮಳೆಗಾಲದಲ್ಲಿ ಅಪರೂಪಕ್ಕೊಮ್ಮೆ ಮಳೆ ಬಿಡುವು ಕೊಟ್ಟರೆ ಬಗಲಿನಲ್ಲಿದ್ದವರೂ ಕಾಣದಂತೆ ಕವಿಯುವ ಮೈಂದು ಹಾಗೂ ತಲೆತನಕ ಏರುವ ಉಂಬಳಗಳ ಹಾವಳಿ ಹೊರತು ಪಡಿಸಿದರೆ ಎರಡೂ ಪ್ರದೇಶಗಳೂ ಹೆಚ್ಚುಕಡಿಮೆ ಒಂದೇ. ಆದರೂ ದಸರಾ ರಜೆ, ಬೇಸಿಗೆ ರಜೆ ಬಂತೆಂದರೆ ಸಾಕು..... ತಮ್ಮ ಮತ್ತು ನಾನು ತುದಿಗಾಲಲ್ಲಿ ಬಕಪಕ್ಷಿಗಳಂತೆ ಅಜ್ಜನ(ಅಮ್ಮನ ತಂದೆ) ಬರುವಿಕೆಗೆ ಕಾಯುತ್ತಿದ್ದೆವು. ಬಸ್ ಹಾರನ್ ಶಬ್ದ ಕಿವಿಗೆ ಬಿದ್ದೊಡನೆ ತಡಬೆಯ ಬಳಿ ಓಡಿ ಅದರ ಮೇಲೇರಿ ರಸ್ತೆಯತ್ತ ನೋಟವಿಟ್ಟು ನಿಲ್ಲುವುದೇ ಸಂಭ್ರಮ. ಅಜ್ಜ ಬಂದರೆಂದರೆ ನಾಲ್ಕುದಿನ ಮನೆಯಲ್ಲಿ ನಿಲ್ಲಲು ಬಿಡದೇ ವಾಪಾಸ್ ಹೊರಡಿಸಿ ಬಿಡುವಷ್ಟು ಆತುರ ನಮಗೆ ಅಜ್ಜಿ ಮನೆಗೆ ಹೋಗಲು. ದೊಡ್ಡಮ್ಮ ಚಿಕ್ಕಮ್ಮಂದಿರ ಮಕ್ಕಳೆಲ್ಲಾ ಅಲ್ಲಿ ಒಟ್ಟಾಗುವುದು ನಮ್ಮ ಉಮೇದಿಗೆ ಮುಖ್ಯ ಕಾರಣವಾದರೂ ಅದನ್ನು ಮೀರಿದ ಇನ್ನೊಂದು ಸೆಳೆತವಿತ್ತು ನಮಗಲ್ಲಿ. ಅದೇ ಮನೆಯಿಂದ ಕೂಗಳತೆ ದೂರದಲ್ಲಿ ಆವರಿಸಿಕೊಂಡ ಅಗಾಧ ಜಲರಾಶಿ....... ನೀರೆಂದರೆ ಸಾಮಾನ್ಯ ನೀರಲ್ಲ ಅದು. ಸಮುದ್ರದೋಪಾದಿಯಲ್ಲಿ ವಿಶಾಲವಾಗಿ ಆವರಿಸಿಕೊಂಡ ನೀಲ ಜಲರಾಶಿ. ಕುದುರೆಮುಖದ ತಪ್ಪಲಿನ ನಾವು ನದಿ, ನೀರು 
ಕಾಣದವರೇನಲ್ಲವಾದರೂ ಆ ಪರಿ ವಿಶಾಲವಾಗಿ ಚಲನೆಯಿಲ್ಲದೇ ನಿಂತ ನೀರು, ಅದರ ನಡುನಡುವಲ್ಲೇ ಕರ್ರಗೆ ರೆಂಬೆಚಾಚಿ ನಿಂತ ಬೋಳು ಮರಗಳನ್ನು ನಮ್ಮೂರಲ್ಲಿ ಎಂದೂ ಕಾಣದ ಅಚ್ಚರಿ ನಮಗೆ. ಅಜ್ಜಿಮನೆಯಲ್ಲಿದ್ದಷ್ಟೂ ದಿನ ನಮ್ಮ ಬೆಳಗುಬೈಗುಗಳ ನಿತ್ಯಸಾಥಿ ಆ ನೀರದಂಡೆಯಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಮಳೆಗಾಲದಲ್ಲಿ ತೋಟದ ತನಕ ಏರುತಿದ್ದ ನೀರು ಬೇಸಿಗೆಯಲ್ಲಿ ಸಂಪೂರ್ಣ ಇಳಿದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗುತ್ತಿತ್ತು. ಕೆಲವೆಡೆ ಗದ್ದೆಯಂತೆ ಕಾಣುವ ಸಮತಟ್ಟು ಬಯಲು, ಇನ್ನು ಕೆಲವೆಡೆ ಹಳ್ಳ ದಿಣ್ಣೆಗಳು, ಒಂದೆರಡುಕಡೆ ಒಡೆದಿದ್ದರೂ ಉಳಿದಂತೆ ಗಟ್ಟಿಮುಟ್ಟಾದ ಒಂದು ಉದ್ದದ ರಸ್ತೆ, ಒಂದೆಡೆ ಸಾಲು ಕಲ್ಲುಗುಡ್ಡಗಳು, ಅದರ ಮೇಲಿನ ಯಾವುದೋ ದೇವಾಲಯದ ಅವಶೇಷಗಳು.......... ಮಳೆಗಾಲದಲ್ಲಿ ನೀಲಸಮುದ್ರದಂತೆ ಕಾಣುವ ಈ ಜಾಗ ಬೇಸಿಗೆಯಲ್ಲಿ ಇಂತಹದ್ದೊಂದು ಅವತಾರ ಎತ್ತುವ ಪರಿ ಸೋಜಿಗ ಹುಟ್ಟಿಸುತ್ತಿತ್ತು. ಬೇಸಿಗೆಯಲ್ಲಿ ಅಲ್ಲಿನ ಸಮತಟ್ಟು ಬಯಲುಗಳಲ್ಲಿ ಭತ್ತದ ಗದ್ದೆಯೊಂದಿಗೆ ಸವ್ತೇಕಾಯಿ, ಬೀನ್ಸ್ ಮೊದಲಾಗಿ ತರಕಾರಿಗಳನ್ನು ಬೆಳೆಯುತ್ತಿದ್ದ ನೆನಪು. ಬೆಳಗ್ಗೆ ಅಲ್ಲಿಗೆ ದಾಳಿಯಿಟ್ಟು ಎಳೆಸವತೆ ಮೆದ್ದು ಒಂದಿಷ್ಟು ಹಾರಾಟ ನಡೆಸಿ ವಾಪಾಸಾದರೆ ಮತ್ತೆ ಸಂಜೆ ನಾಲ್ಕರ ನಂತರ ಪೇರಲೆ ಗಿಡಗಳ ಮೇಲೆ ದಂಡೆತ್ತಿ ಹೋಗಿ ನಂತರ ಆರು ಗಂಟೆಯ ತನಕವೂ ಅಲ್ಲೇ ಸುತ್ತಮುತ್ತಲಿನ ದಿಬ್ಬ ಹಳ್ಳಗಳನ್ನೆಲ್ಲಾ ಸುತ್ತುವುದೇ ದೈನಂದಿನ ಕಾಯಕ ಆಗ. 

ನಂತರದ ದಿನಗಳಲ್ಲಿ ಓದು, ಹಾಸ್ಟೆಲ್, ಉದ್ಯೋಗ, ಮದುವೆ, ಸಂಸಾರ ಎಂಬ ಹಲವು ಜಂಜಡಗಳಲ್ಲಿ ಅಜ್ಜಿಮನೆಯ ಭೇಟಿ ವಿರಳವಾದರೂ ಇಂದಿಗೂ ಹೋದಾಗಲೆಲ್ಲಾ ಒಮ್ಮೆ ಹಿನ್ನೀರಿನ ದಡದಲ್ಲಿ ಕುಳಿತು ಬರದಿದ್ದರೆ ಏನೋ ಕಳೆದುಕೊಂಡ ಭಾವ ಕಾಡುವುದು ಸುಳ್ಳಲ್ಲ. ಮೊದಮೊದಲು ವಿಸ್ಮಯದ ತಾಣವಾಗಿ ಕಾಣುತ್ತಿದ್ದ ಆ ಜಲರಾಶಿ ಬುದ್ಧಿ ಬೆಳೆದಂತೆಲ್ಲಾ ಮುಳುಗಡೆ ಸಂತ್ರಸ್ತರ ಚದುರಿ ಚೂರಾದ ಬದುಕಿನ ಪ್ರತಿಬಿಂಬದಂತೆ ಅನ್ನಿಸತೊಡಗಿದ್ದು ನಿಜವೇ ಆದರೂ ಆ ಭಾವ ಮನಕಲಕುವಷ್ಟು ಗಾಢವಾಗಿ ಕಾಡಿದ್ದು 'ಪುನರ್ವಸು'ವಿನಿಂದ. 'ಜೋಗ ಪಟ್ಣ ಆಗ್ತು' ಅನ್ನುವಾಗಿನಿಂದಲೇ ನಾಭಿಯಾಳದಲ್ಲಿ ಶುರುವಾದ ವಿಷಾದ ಕಾದಂಬರಿ ಮುಗಿಯುವ ಹೊತ್ತಿಗೆ ಇಡೀ ಜೀವವನ್ನೇ ವ್ಯಾಪಿಸಿ ಮುಳುಗಿಸಿದಂತಿದೆ. ಅಜ್ಜಿಮನೆಯ ಹಿನ್ನೀರಲ್ಲಿ ಬೇಸಿಗೆಯಲ್ಲಿ ಗೋಚರವಾಗುವ ಆ ರಸ್ತೆ ವಿನಾಕಾರಣ ನೆನಪಾಗುತ್ತಿದೆ. ಆ ಜಾಗವೂ ಜೀವಚಟುವಟಿಕೆಯ ಚಿಲುಮೆಯಾಗಿದ್ದ ಒಂದು ಕಾಲದಲ್ಲಿ ದತ್ತಪ್ಪ ಹೆಗಡೆಯವರೋ, ತುಂಗಕ್ಕಯ್ಯನೋ, ಶರಾವತಿಯೋ, ಮುರಾರಿಯೋ ಆ ರಸ್ತೆಗುಂಟ ಸಾಗಿದ್ದಿರಬಹುದೇ.......? ಎಲ್ಲವನ್ನೂ ಆಪೋಶನ ತೆಗೆದುಕೊಂಡು ಅಚಲವಾಗಿ ನಿಂತಿರುವ ಆ ನೀರಿನಾಳದ ನೆಲದಲ್ಲಿ ದೋಣಿಗಣಪ, ನ್ಯಾಮಯ್ಯ, ಮಾಣಿಚಿಕ್ಕಯ್ಯ, ಭವಾನಕ್ಕ, ಚೆನ್ನಮ್ಮ, ರತ್ನಕ್ಕನಂತಹವರ ಹೆಜ್ಜೆಗುರುತುಗಳ ಸುಳಿವಿರಬಹುದೇ.......?  ಜಗತ್ತಿಗೆ ಬೆಳಕನ್ನೀಯಲು ಕತ್ತಲಲ್ಲಿ ಕರಗಿಹೋದವರ ಕಣ್ಬೆಳಕು ರಾತ್ರಿಯ ನೀರವದಲ್ಲಿ ಮಿನುಗುತ್ತಿರಬಹುದೇ........? ಈ ಕ್ಷಣವೇ ಅಲ್ಲಿಗೆ ಹಾರಿ ಆ ಕುರುಹುಗಳನ್ನು ಅರಸಬಯಸುತ್ತಿದೆ ಮನ......

ಲಹರಿ..... ೧

ಕೆಲವೊಂದು ನೆನಪುಗಳು ಸದಾ ಮನಕ್ಕೆ ಹಿತಕರ. ಎಂತದ್ದೇ ಸನ್ನಿವೇಶದಲ್ಲಿಯೂ ಮನವನ್ನು ಪ್ರಪುಲ್ಲಗೊಳಿಸಿ ತುಟಿಯಂಚಿನಲ್ಲೊಂದು ಮುಗುಳ್ನಗೆಯನ್ನು ಹರಡಿಸಿಬಿಡುತ್ತವೆ. ಗತದ ಪುಟಗಳಲ್ಲಡಗಿದ ಸವಿಕ್ಷಣಗಳನ್ನು ಮತ್ತೆ ಮತ್ತೆ ಮೆಲುಕುಹಾಕುವಂತಾಗುವ ಘಳಿಗೆಗಳಿವು. 

ಹೀಗೇ ಯಾವುದೋ ಪುಸ್ತಕವನ್ನು ಹುಡುಕುತ್ತಿದ್ದೆ. ಹಾಗೆ ಹುಡುಕುವಾಗಲೇ ಅಚಾನಕ್ಕಾಗಿ ಎಲ್ಲಾ ಪುಸ್ತಕಗಳಿಂದ ಪ್ರತ್ಯೇಕವಾಗಿ ಕಟ್ಟಿಟ್ಟಿದ್ದ ಪುಸ್ತಕಗಳ ಸಣ್ಣಅಟ್ಟಿ ಗಮನಸೆಳೆಯಿತು. ಏನಿರಬಹುದೆಂಬ ಕುತೂಹಲದಿಂದ ಕೈಗೆತ್ತಿಕೊಂಡೆ. ನೆನಪುಗಳ ಪೆಟಾರಿಯ ಕೀಲಿಕೈ ದೊರೆತಂತಾಯಿತು. ಒಂದು ದಶಕಕ್ಕೂ ಹಿಂದಿನ ನನ್ನ ಪದವಿ ತರಗತಿಗಳ ಕನ್ನಡ ಹಾಗೂ ಇಂಗ್ಲೀಷ್ ಪಠ್ಯಪುಸ್ತಕಗಳವು..... ಆ ದಿನಗಳು ಯಾಕೋ ಬಹಳಷ್ಟು ಕಾಡತೊಡಗಿವೆ. 

ಪದವಿಪೂರ್ವ ಶಿಕ್ಷಣ ಮುಗಿಸಿ ಪದವಿ ಓದಿಗಾಗಿ ಮಲೆನಾಡನ್ನು ಬಿಟ್ಟು ಕರಾವಳಿಯೆಡೆಗೆ ಪಯಣಿಸಿದ್ದೆ. ಅದುವರೆಗೂ ಮನೆಯನ್ನು ಬಿಟ್ಟಿರದಿದ್ದವಳಿಗೆ ಹಾಸ್ಟೆಲ್ ವಾಸದ ಅನುಭವ ಹಾಗೆ ಇಲ್ಲಿಯವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದವಳಿಗೆ ಇನ್ನು ಮುಂದೆ ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂಬ ಸವಾಲು.... ಒಟ್ಟಾರೆ ಭಯಂಕರ ದಿಗಿಲು ನನ್ನನ್ನು ಆವರಿಸಿತ್ತು. ಮೊದಲ ಎರಡ್ಮೂರು ವಾರಗಳಂತೂ ಬಹಳ ಬೇಸರದವು. ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳೂ ತುಳು ಹಿನ್ನೆಲೆಯವರು ಜೊತೆಗೆ ಅವರ ನಾಜೂಕಿನ ಗ್ರಾಂಥಿಕ ಕನ್ನಡದ ವೈಖರಿ ನನಗೋ ತೀರಾ ಅಪರಿಚಿತ. ಒಟ್ಟಾರೆ ನಾನು ಗುಂಪಿಗೆ ಸೇರದ ಪದವೇನೋ ಅನ್ನುವ ಭಾವ ನನ್ನೊಳಗೇ ಆವರಿಸಿತ್ತು. ಹೀಗಿರುವಾಗಲೇ ಮೊದಲ ಕಿರುಪರೀಕ್ಷೆ ಬಂದಿತ್ತು. ಪರೀಕ್ಷೆಯನ್ನು ತಕ್ಕ ಮಟ್ಟಿಗೆ ಬರೆದಿದ್ದೆನಾದರೂ ಅದೇನೋ ಅಳುಕು. ಮೌಲ್ಯಮಾಪನ ಮುಗಿದು ಒಳ್ಳೆಯ ಅಂಕಗಳೇ ಸಿಕ್ಕಾಗ ಏನೋ ನೆಮ್ಮದಿ.  ಅದಕ್ಕೆ ಸಾವಿರ ಆನೆಯ ಬಲ ಬಂದಿದ್ದು ಇಂಗ್ಲೀಷ್ ಉಪನ್ಯಾಸಕಿ ಶ್ರೀಮತಿ ಪದ್ಮಜಾ ರಾವ್ ಅವರಿಂದ. ಇಂಗ್ಲೀಷ್ ಪೇಪರ್ ತಿದ್ದಿ ಹಂಚುವಾಗ ನನ್ನ ಉತ್ತರ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರವರು. ಆ ಒಂದು ಮೆಚ್ಚುಗೆಯ ಮಾತು ನನಗೆ ನೀಡಿದ ಭರವಸೆ ಅಪಾರ. ಜೊತೆಗೆ ಪ್ರಯತ್ನಪಟ್ಟರೆ ನಾನೆಣಿಸಿದಷ್ಟು ಕಷ್ಟವಿಲ್ಲ ಆಂಗ್ಲ ಮಾಧ್ಯಮದ ಓದು ಅನ್ನುವ ಸ್ಥೈರ್ಯವೂ ಮೂಡಿತು. ಆನಂತರದಲ್ಲಿ ನಾನೆಂದೂ ತಿರುಗಿ ನೋಡಿದ್ದಿಲ್ಲ. ಪರಕೀಯತೆ ಮರೆಯಾಗಿ ಗೆಳೆಯರ ಬಳಗ ಹಿಗ್ಗಿತು. ಸಪ್ಪೆ ಮೋರೆಯಲ್ಲಿ ನಗು ಚಿಮ್ಮತೊಡಗಿತು. ಕರಾವಳಿಯೂ ಮಲೆನಾಡಿನಷ್ಟೇ ಆಪ್ತವಾಯಿತು. ನನ್ನ ಪಕ್ಕಾ ಮಲ್ನಾಡ್ ಕನ್ನಡ ಮೂಡುಬಿದಿರೆಯ ಲಾಲಿತ್ಯದ ಅರಿವೆ ತೊಟ್ಟಿತು. ತುಳುಭಾಷೆಯೂ ನಿಧಾನವಾಗಿ ಮನದೊಳಗೆ ಜಾಗ ಪಡೆದುಕೊಂಡಿತು. ಅಂದು ಆರಂಭವಾದ ಕರಾವಳಿಯ ನಂಟು ಇಂದಿನವರೆಗೂ ಮುಂದುವರೆದಿದೆ. ಗಣಪಯ್ಯ ಭಟ್ ಸರ್, ವಾಸುದೇವ ಭಟ್ ಸರ್, ಸುದರ್ಶನ್ ಸರ್, ಗೋಪಾಲ್ ಸರ್, ಸ್ನೇಹಲತಾ ಮೇಡಂ, ರಾಘವೇಂದ್ರ ಸರ್, ಲತಾ ಮೇಡಂ....... ಎಲ್ಲರ ಸ್ವರಗಳು, ಅವರ ಪಾಠದ ವೈಖರಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. 

ಅದರಲ್ಲೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ ನನಗೆ ಕನ್ನಡ ಮತ್ತು ಇಂಗ್ಲೀಷ್ ತರಗತಿಗಳು ಅವಿಸ್ಮರಣೀಯ. ಐಚ್ಚಿಕ ಕನ್ನಡ, ಇಂಗ್ಲೀಷ್ ವಿದ್ಯಾರ್ಥಿನಿಯಲ್ಲವಾದರೂ ಪದವಿಯ ಎರಡು ವರ್ಷಗಳಲ್ಲಿನ ಭಾಷಾ ತರಗತಿಗಳು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಅಜಿತ್ ಸರ್ ತಮ್ಮ ಕಂಚಿನ ಕಂಠದಲ್ಲಿ ನವರಸಗಳ ಸಮೇತ ವರ್ಣಿಸುತ್ತಿದ್ದ ಆ ಹಳಗನ್ನಡ ಪದ್ಯ ಗದ್ಯಗಳ ಸೊಗಸನ್ನು ಮರೆಯುವುದುಂಟೇ? ಪಂಪ, ರನ್ನ, ನಾಗಚಂದ್ರ, ರಾಘವಾಂಕ, ಕುಮಾರವ್ಯಾಸ,ಲಕ್ಮೀಶರಿಂದ ಹಿಡಿದು ದಾಸರು, ವಚನಕಾರರು, ನವ್ಯ ಪ್ರಗತಿಶೀಲ ಕವಿಗಳ ತನಕ, ವಡ್ಡಾರಾಧನೆಯಿಂದ ಹಿಡಿದು ಪಂಚತಂತ್ರದ ತನಕ, ಪ್ರಬಂಧಗಳಿಂದ ಹಿಡಿದು ಸಣ್ಣಕಥೆಗಳ ತನಕ ಅದೆಷ್ಟು ವೈವಿಧ್ಯಮಯವಾದ ಸಾಹಿತ್ಯ ಪ್ರಬೇಧಗಳು....... ಅದರಲ್ಲೂ ವಿಶೇಷವಾಗಿ ಅತ್ಯುತ್ತಮ ಸಣ್ಣ ಕಥೆಗಳ ಸಂಗ್ರಹವಾದ 'ಬದುಕು-ಭಾವದ ಕತೆಗಳು' ನನ್ನ ಇಂದಿನ ಬರವಣಿಗೆಯ ಹವ್ಯಾಸದ ಬೆನ್ನೆಲುಬು. ಈ ಪುಸ್ತಕದ ಕಥೆಗಳ ಮೇಲೆ ನಾವು ವಿದ್ಯಾರ್ಥಿಗಳೇ ನೀಡಿದ ಸೆಮಿನಾರ್, ಪ್ರಶ್ನೋತ್ತರ ಕಲಾಪ ಇವತ್ತು ನಿನ್ನೆ ನಡೆದಂತಿದೆ. 

ಇಂಗ್ಲೀಷ್ ಆದರೂ ಅಷ್ಟೇ.... ಷೇಕ್ಸ್ಪಿಯರ್ ನ sonnetಗಳು, E M Forster ಅವರ My Wood, Robert Payne ಅವರ The Great Trial, A.K Ramanujan ಅವರ Obituary, Gabriel Okara ಅವರ Once Upon a Time ಎಲ್ಲವನ್ನೂ ವಿವರಿಸುತ್ತಿದ್ದ ಪದ್ಮಜಾ ಮೇಡಂ ತರಗತಿಯಲ್ಲಿ ತೆಗೆದುಕೊಂಡ ಕ್ಲಾಸ್ ಪಾಯಿಂಟುಗಳ ನೆನಪಾಗುತ್ತದೆ. Saki ಅವರ Dusk ಕಥೆಯ ನಾರ್ಮನ್ ಗೋಟ್ಸ್ಬೈ ಆದಿಯಾಗಿ John Galsworthy ಅವರ The silver boxನ ಬಾರ್ತಿಕ್ ಕುಟುಂಬ, ಮಿಸ್ಸೆಸ್ ಜೋನ್ಸ್, ಬೆಳ್ಳಿಯ ಸಿಗರೇಟ್ ಕೇಸ್ ಎಲ್ಲವೂ ಅಚ್ಚಳಿಯದ ದೃಶ್ಯಗಳಂತೆ ಇಂದಿಗೂ ಕಣ್ಮುಂದಿವೆ. 

ಇಂದು ಈ ಪುಸ್ತಕಗಳನ್ನು ನೋಡಿದಾಗ ಎಲ್ಲವೂ ಮತ್ತೆ ಕಣ್ಮುಂದೆ ಹಾದುಹೋದವು. ಮಾರ್ಕ್ಸ್, ರ್ಯಾಂಕ್ ಮೊದಲಾದವುಗಳ ಧಾವಂತಗಳಿಲ್ಲದ ಆ ದಿನಗಳ ಚೆಂದದ ನೆನಪಿನ ಜೊತೆಗೇ ಆ ದಿನಗಳಿಗೆ ಮತ್ತೆ ಹೋಗುವಂತಿರಬೇಕಿತ್ತು ಎನ್ನುವ ಭಾವವೂ ಕಾಡುತ್ತಿರುವುದು ಸುಳ್ಳಲ್ಲ.