ಅನುವಾದಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅನುವಾದಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜೂನ್ 21, 2020

ತಿದ್ದಿ ಬರೆದ ತೀರ್ಪುಗಳು

ವೈರಮುತ್ತು ರಾಮಸಾಮಿ ಅವರು ತಮಿಳಿನ ಪ್ರಖ್ಯಾತ ಕವಿ, ಗೀತ ರಚನೆಕಾರ ಹಾಗೂ ಕಾದಂಬರಿಕಾರ. ಇವರ ಕೃತಿಗಳು, ಚಲನಚಿತ್ರ ಗೀತೆಗಳು ಅತ್ಯಂತ ಅರ್ಥಗರ್ಭಿತವಾಗಿರುತ್ತವೆ. ಎಷ್ಟು ಹರಿತವಾಗಿ ಬರೆಯುತ್ತಾರೋ ಅಷ್ಟೇ ವಿವಾದಾತ್ಮಕ ವ್ಯಕ್ತಿ...

ತೊಂಬತ್ತರ ದಶಕದಲ್ಲಿ ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಇವರ ಒಂದು ಕವಿತೆಗೆ ಹಲವು ನಾಯಕ ನಟಿಯರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ೧೯೮೬ರಲ್ಲಿ ಇಳೆಯರಾಜ ಅವರೊಂದಿಗಿನ ಬೇರ್ಪಡಿಕೆಯೂ ಹಲವು ಸಿದ್ಧಾಂತಗಳನ್ನು ಹುಟ್ಟುಹಾಕಿದ್ದಿದೆ. ಪತ್ರಿಕೆಯೊಂದರಲ್ಲಿ ಆಂಡಾಳ್ ದೇವಿಯ ಬಗ್ಗೆ ಮಾತನಾಡಿ ತೀವ್ರ ವಿರೋಧ ಎದುರಿಸಿದ್ದರು.

ತೀರಾ ಇತ್ತೀಚೆಗೆ 'ಮೀ ಟೂ' ಅಭಿಯಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಸೇರಿದಂತೆ ಹಲವರು ಇವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವನ್ನೂ ಮಾಡಿದ್ದಾರೆ. ಅದನ್ನು ಇವರು ನಿರಾಕರಿಸುತ್ತಲೇ ಬಂದಿದ್ದಾರೆ. ಅದರ ಸತ್ಯಾಸತ್ಯತೆಗಳು ಇನ್ನೂ ಹೊರಬರಬೇಕಿದೆ. 

ವೈರಮುತ್ತು ಅವರು ೧೯೭೫ರಲ್ಲಿ ಬರೆದ ಕವಿತೆ "ತಿರುತ್ತಿ ಎಳುದಿಯ ತೀರ್ಪುಗಳ್". ಹಲವು ವರ್ಷಗಳ ಹಿಂದೆ ಇದರ ಕನ್ನಡಾನುವಾದವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಓದಿದ್ದೆ. ಆ ವಾಕ್ಯಗಳು, ಅದರಲ್ಲಿನ ಹರಿತ ಬಹಳವಾಗಿ ಕಾಡಿತ್ತು. ಅದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ.

ಈಗಿನ ರಾಜಕೀಯದ ದೊಂಬರಾಟ, ನಾಲಿಗೆಯ ಮೇಲೆ ಹಿಡಿತವಿಲ್ಲದಂತಹ ಹುಚ್ಚು ಹೇಳಿಕೆಗಳು, ತೋರಿಕೆಯ ಪ್ರದರ್ಶನಗಳು, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಮರೆತ ಮಾಧ್ಯಮಗಳು ಎಲ್ಲವನ್ನೂ ನೋಡಿದಾಗ ಆ ಕವಿತೆಯ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ...

ಹಾಗಾಗಿಯೇ ಅದನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ. ಆ ಸಾಲುಗಳು ಹೀಗಿವೆ.....


ನಿಮ್ಮದೇ ವೇದಿಕೆ

ನಿಮ್ಮದೇ ನಾಲಿಗೆ

ಏನು ಬೇಕಾದರೂ ಮಾತನಾಡಿ!


ನಿಮ್ಮದೇ ಲೇಖನಿ 

ನಿಮ್ಮದೇ ಪ್ರೆಸ್

ಏನು ಬೇಕಾದರೂ ಬರೆಯಿರಿ!


ನಿಮ್ಮದೇ ತಕ್ಕಡಿ

ನಿಮ್ಮದೇ ಬಟ್ಟು

ಏನು ಬೇಕಾದರೂ ವಿಮರ್ಶಿಸಿ!


ನಿಮ್ಮದೇ ವಾದ್ಯ

ನಿಮ್ಮದೇ ಕಛೇರಿ 

ಏನು ಬೇಕಾದರೂ ನುಡಿಸಿ!


ನಿಮ್ಮದೇ ಕುಂಚ

ನಿಮ್ಮದೇ ಬಣ್ಣ

ಏನು ಬೇಕಾದರೂ ಚಿತ್ರಿಸಿ!


ಆದರೆ.....

ನಾಳಿನ....

ಕಾಲದ ವಿಮರ್ಶೆ

ನಿಮ್ಮ ಹೆಣಗಳನ್ನು ಕೂಡ

ಅಗೆದು ತೆಗೆದುಕೊಂಡು ಬಂದು

ನೇಣಿಗೆ ಹಾಕುತ್ತೆ

ಎಂಬುದು ಮಾತ್ರ ನೆನಪಿರಲಿ

ಎಷ್ಟು ಸತ್ಯವಲ್ಲವೇ? ಎಷ್ಟೇ ಸುಳ್ಳಾಡಿ, ಹಾರಾಡಿ ಮೆರೆದರೂ ಒಂದಲ್ಲಾ ಒಂದು ದಿನ ಕಾಲದ ಚಕ್ರ ತಿರುಗಿದಾಗ ಪ್ರತಿಯೊಂದಕ್ಕೂ ತಕ್ಕ ಬೆಲೆ ತೆರಲೇಬೇಕಲ್ಲವೇ????

ಅದನ್ನೇಕೆ ಮರೆಯುತ್ತೇವೆ ನಾವು?