ಮಂಗಳವಾರ, ಜೂನ್ 30, 2020

ಅನೂಹ್ಯ ಪಯಣ

ಇದು ನನ್ನ ಮೊದಲ ಕಾದಂಬರಿ. ನಾನೆಂದಿಗೂ ಕಾಲೇಜು ಅಸೈನ್ಮೆಂಟುಗಳನ್ನು ಬಿಟ್ಟು ಬೇರೇನನ್ನೂ ಬರೆದವಳಲ್ಲ. ಓದುವ ಹುಚ್ಚು ಬಹಳವಾದರೂ ಎಂದೂ ಬರೆಯುವ ಬಗ್ಗೆ ಯೋಚಿಸಿರಲಿಲ್ಲ. ಸುಮ್ಮನೆ ಮನೆಯಲ್ಲಿ ಕುಳಿತು ವ್ಯರ್ಥ ಕಾಲಹರಣ ಮಾಡುವ ಬದಲು ಏನಾದರೂ ಬರೆಯಬಹುದಲ್ಲಾ ಅನ್ನುವ ಯೋಚನೆ ಬಂದಾಗ ಬರೆಯಲಾರಂಭಿಸಿದ ಕಥೆ ಅನೂಹ್ಯ.

ಏನು ಬರೆಯಲಿ ಎಂದು ಯೋಚಿಸಿದಾಗ ಮೊದಲು ತಲೆಗೆ ಬಂದ ವಿಷಯವಿದು.... ಒಂದು ಪುಟ್ಟ ಕಥೆ, ಕವನ ಏನೋ ಗೀಚುವ ಬದಲು ಇಂತಹ ವಿಷಯವನ್ನಿಟ್ಟುಕೊಂಡು ಕಾದಂಬರಿ ಬರೆಯಬೇಕು ಎಂದು ಅದೇಕೆ ಅನಿಸಿತೋ ನನಗೂ ತಿಳಿಯದು. ಒಮ್ಮೊಮ್ಮೆ ನನಗೇ ಹುಚ್ಚು ಎನಿಸಿದ್ದಿದೆ. ಮೊದಲ ಪ್ರಯತ್ನಕ್ಕೆ ಇಂತಹ ವಿಷಯ, ವಿಸ್ತಾರವಾದ ಪರಿಕಲ್ಪನೆ ಬೇಕಾ ಅಂತ. ಆದರೆ ನನ್ನ ಮನಸ್ಸು ಕೇಳಲೇ ಇಲ್ಲ. ಇದರ ನಡುವಿನಲ್ಲೇ ಕೆಲವು ಸಣ್ಣ ಕಥೆ, ಕವನ, ಹಾಸ್ಯ ಬರಹಗಳನ್ನು ಬರೆದಿರುವೆನಾದರೂ ಒಟ್ಟಾರೆಯಾಗಿ ನನ್ನ ಮೊದಲ ಬರಹ ಅನೂಹ್ಯ.

ಬರವಣಿಗೆಯ ಬಗ್ಗೆ ಏನೇನೂ ಅನುಭವವಿರಲಿಲ್ಲ. ಹತ್ತು ಸಂಚಿಕೆಗಳಲ್ಲಿ ಮುಗಿಯಬಹುದು ಅಂದುಕೊಂಡಿದ್ದೆ. ಈಗ ಹಿಂತಿರುಗಿ ನೋಡಿದರೆ ನನಗೇ ಅಚ್ಚರಿಯಾಗುತ್ತದೆ.

ಇನ್ನು ಕಥೆಯ ವಿಷಯಕ್ಕೆ ಬರುವುದಾದರೇ, ಬರವಣಿಗೆ ಓದುಗರ ಚಿಂತನೆಗಳನ್ನು ಓರೆಗೆ ಹಚ್ಚಬೇಕು ಎಂದು ಆಶಿಸುವವಳು ನಾನು. ಹಾಗಾಗಿಯೇ ನನ್ನ ಸುತ್ತಮುತ್ತಲಿನ ಸಮಾಜದಲ್ಲಿ ನಾನು ಕಂಡ ವಿಶಿಷ್ಟ ವ್ಯಕ್ತಿತ್ವಗಳನ್ನು ಆಯ್ದುಕೊಂಡು ಈ ಕಥೆ ರಚಿಸಿದ್ದು.‌ ಇದರಲ್ಲಿಯ ಎಲ್ಲಾ ಪಾತ್ರಗಳೂ ನಮ್ಮ ನಡುವಿನವೇ (ವೈಭವ್ ಹೊರತುಪಡಿಸಿ). ಬಹಳವಾಗಿ ಕಾಡಿದಂತಹ ಕೆಲ ವ್ಯಕ್ತಿತ್ವಗಳು, ಕೇಳಿದ ಕೆಲವೊಂದು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಅದಕ್ಕೊಂದಿಷ್ಟು ಕಲ್ಪನೆ, ಆಶಯ ಬೆರೆಸಿ ಹೆಣೆದ ಕಥೆಯಿದು. ಕಥೆಯಲ್ಲಿ ವೇದನೆ, ವಾಸ್ತವದ ಕ್ರೌರ್ಯತೆಯೇ ಮೇಲಾಗಿದ್ದಾಗ ಅದಕ್ಕೊಂದಿಷ್ಟು ವಿರಾಮ ನೀಡಲು ಪೂರ್ವಯೋಜನೆ ಇಲ್ಲದೇ ಸೃಷ್ಟಿಸಿದ ಪಾತ್ರ ವೈಭವನದು.

ಕೊನೆಯದಾಗಿ ಹಾಗೂ ಬಹಳ ಮುಖ್ಯವಾಗಿ……. ಈ ಕಥೆಯ ಮುಕ್ತಾಯ ಸುಖಾಂತ್ಯವಾಗಿದ್ದು ಹಲವರಿಗೆ ಇಷ್ಟವಾದರೂ ಕೆಲವರಿಗೆ ವಾಸ್ತವಕ್ಕೆ ದೂರ ಎನ್ನಿಸಬಹುದು. ಅದಕ್ಕೆ ನನ್ನದೊಂದು ಸಣ್ಣ ಸ್ಪಷ್ಟೀಕರಣ.

ಹೌದು…. ವಾಸ್ತವದಲ್ಲಿ ನವ್ಯಾಳ ಪರಿಸ್ಥಿತಿಯಲ್ಲಿರುವ ಹೆಣ್ಣುಮಕ್ಕಳನ್ನು ಕುಟುಂಬ, ಸಮಾಜ ಎರಡೂ ಧಿಕ್ಕರಿಸುವುದು ನೂರಕ್ಕೆ ತೊಂಬತ್ತು ಪ್ರತಿಶತ ಸತ್ಯ. ಎಲ್ಲೋ ಲಕ್ಷಕ್ಕೊಬ್ಬರು ಆ ಹೆಣ್ಣಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಸಿಗಬಹುದು. ಇನ್ನು ಲೋಕದ ಜನರ ಮಾತಂತೂ ಬೇಡವೇ ಬೇಡ. ಹೊಲಸು ನಾಲಿಗೆಯನ್ನು ಮನಬಂದಂತೆ ಹರಿಯಬಿಡುತ್ತಾರೆ.

ಆದರೆ ನಾನು ಈ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ಆದರೂ ಬದಲಾವಣೆಯ ಆಶಯದೊಂದಿಗೆ ಬರೆದಿರುವೆ. ಈ ವಾಸ್ತವ ಬದಲಾಗಲೀ, ಅಂತಹ ನೊಂದ ಹೆಣ್ಣುಮಕ್ಕಳ ಬಾಳೂ ಬೆಳಗಲಿ ಎಂಬ ಆಶಯ ನನ್ನದು. ತಮ್ಮದಲ್ಲದ ತಪ್ಪಿಗೆ ಜೀವಂತವಾಗಿಯೇ ನರಕ ದರ್ಶನ ಮಾಡಿದ್ದಾರೆ ಇಂತಹ ಹೆಣ್ಣುಮಕ್ಕಳು. ಅವರನ್ನು ಸಾಂತ್ವನಿಸಬೇಕಲ್ಲವೇ ನಾವು…..? ಸಾಂತ್ವನಿಸದಿದ್ದರೂ ಚಿಂತೆಯಿಲ್ಲ ಕಡೇಪಕ್ಷ ಅವರ ಬಗ್ಗೆ ಕೇವಲವಾಗಿ ಮಾತನಾಡದೇ ಸುಮ್ಮನಿರಬಹುದಲ್ಲವೇ? ನಮ್ಮಂತೆಯೇ ಗೌರವಯುತವಾಗಿ ಬಾಳುವ ಹಕ್ಕು ಅವರಿಗೂ ಇದೆ ಎಂಬುದನ್ನೇಕೆ ಅರ್ಥೈಸಿಕೊಳ್ಳುವುದಿಲ್ಲ ನಾವುಗಳು…..?

ಇದನ್ನೆಲ್ಲ ಅರಿತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಒಟ್ಟಾಗಿ ಪ್ರಯತ್ನಿಸೋಣ ಎಂಬ ಆಶಯದಿಂದ ಬರೆದ ಕಥೆಯಿದು. ಹಾಗಾಗಿ ವಾಸ್ತವದಲ್ಲಿ ಕಷ್ಟಸಾಧ್ಯವಾದ ಅಂತ್ಯವನ್ನು ನಾನು ಕಥೆಯಲ್ಲಿ ಸಾಧ್ಯವಾಗಿಸಿದ್ದೇನೆ ಮುಂದೊಂದು ದಿನ ಈ ಕಥೆಯ ಅಂತ್ಯವೇ ವಾಸ್ತವವಾಗಲೀ ಎಂಬ ಆಶಯದಿಂದ.

ಈ ಕಥೆಯ ಓದುಗರಿಗೆ ಧನ್ಯವಾದಗಳೊಂದಿಗೆ ಒಂದು ಸಣ್ಣ ಕೋರಿಕೆ…... ಇದನ್ನು ಕಥೆಯೆಂದು ಓದಿ ಇಲ್ಲಿಗೇ ಮರೆತುಬಿಡಬೇಡಿ. ಇಲ್ಲಿ ಪ್ರಸ್ತಾಪವಾಗಿರುವ ವಿಚಾರದ ಬಗ್ಗೆ ಚಿಂತಿಸಿ, ಸಾಧ್ಯವಾದರೆ ಕೆಟ್ಟದ್ದನ್ನು ಬದಲಿಸಿ, ಒಳ್ಳೆಯ ವಿಚಾರ ಯೋಚನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಷ್ಟು ವೈಶಾಲ್ಯತೆಯನ್ನು ತೋರೋಣ. ಈ ಕಥೆಯನ್ನು ಓದಿ ಕಡೆಯ ಪಕ್ಷ ಒಬ್ಬ ವ್ಯಕ್ತಿಯಾದರೂ ತನ್ನ ಚಿಂತನಾ ವಿಧಾನವನ್ನು ಬದಲಾಯಿಸಿಕೊಂಡರೆ ನನ್ನ ಬರವಣಿಗೆ ಸಾರ್ಥಕವಾದಂತೆ. ಈ ಬಗ್ಗೆ ಯೋಚಿಸುವಿರಲ್ಲ.......?

ಇನ್ನೇನು ಹೇಳಲಿ.... ಇಲ್ಲಿಗೆ ಭಾವನೆಗಳನ್ನು ಬಸಿದು ಕೊಂಚ ಹಗುರವಾದ, ಈ ಪಯಣ ಮುಗಿಯಿತು ಎಂದು ಒಂದಿಷ್ಟು ಭಾರವಾದ ಮನದಿಂದ ಈ ಕಥೆಗೆ ವಿದಾಯ ಹೇಳುತ್ತಿರುವೆ. ನನ್ನೀ ಪ್ರಯತ್ನವನ್ನು ಮೆಚ್ಚಿ ಆಶೀರ್ವದಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.


ಬದಲಾವಣೆಯ ಆಶಯದೊಂದಿಗೆ......

ನೀತಾ ಸುಧೀರ್😊☺️



ಅನೂಹ್ಯ 43

ನವ್ಯಾಳ ಧೈರ್ಯದಿಂದಾಗಿ ಸತ್ಯ ಹೊರಬಿದ್ದಿತ್ತು. ತಪ್ಪು ಕಲ್ಪನೆಗಳು ದೂರಾಗಿತ್ತು. ಸಂಬಂಧಗಳ ಬೆಸುಗೆ ಇನ್ನಷ್ಟು ಗಟ್ಟಿಯಾಗಿತ್ತು. 

ನವ್ಯಾ ಬದುಕಿನ ಅತೀ ದೊಡ್ಡ ಹಾಗೂ ನಿರ್ಣಾಯಕ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಳು........

ನವ್ಯಾಳ ಬದುಕನ್ನು ಹಸನಾಗಿ ಕಟ್ಟಿಕೊಡುವ ಸಮನ್ವಿತಾಳ ಆಸೆ ಕೊನೆಗೂ ಈಡೇರಿತ್ತು.....

ಈಗ ಪ್ರಶ್ನೆಯಿದ್ದುದು ಸಮಾಜದ ಬಗ್ಗೆ......

"ನವ್ಯಾ….. ಇನ್ನು ನೀನು ನೋಯುವ, ಹೆದರುವ ಅಗತ್ಯವಿಲ್ಲ. ನೀನು ಗಟ್ಟಿಯಾಗಿರಬೇಕು. ನೀನೊಬ್ಬಳೇ ಅಲ್ಲ….. ನಾವೆಲ್ಲರೂ ಈ ಸಮಾಜವನ್ನೆದುರಿಸಲು ಸನ್ನದ್ಧರಾಗಿರಬೇಕು. ನನಗನಿಸಿದಂತೆ ಈ ವಿಷಯ ಹೊರಗೆ ತಿಳಿಯುವ ಸಾಧ್ಯತೆ ಕಡಿಮೆ. ಒಂದು ವೇಳೆ ನವ್ಯಾಳ ಹಿನ್ನೆಲೆ ತಿಳಿದ ವಿಘ್ನಸಂತೋಷಿ ಕಿಡಿಗೇಡಿಗಳ್ಯಾರಾದರೂ ಆ ಬಗ್ಗೆ ಕೆದಕಿ ವದಂತಿ ಹಬ್ಬಿಸಿದರೇ ಮಾತ್ರವೇ ವಿಷಯ ಬಹಿರಂಗವಾಗುವುದು. ಹಾಗಾಗದಿರಲೀ ಎಂದೇ ಆಶಿಸೋಣ…… ಒಂದು ವೇಳೆ ಹಾಗೆ ನಡೆದರೇ...... ಆಗ ಮುಂದಿನ ಸನ್ನಿವೇಶಗಳನ್ನು ಎದುರಿಸಲು ನಾವು ಒಗ್ಗಟ್ಟಾಗಿ ತಯಾರಿರಬೇಕು. ಹೆಚ್ಚೇನಿಲ್ಲ..... ಯಾರು ಏನೇ ಕೊಂಕಾಡಿದರೂ, ಕುಹಕ ಮಾಡಿದರೂ, ನಮ್ಮ ಚಾರಿತ್ರ್ಯ ವಧೆ ಮಾಡಿದರೂ ಅದನ್ನು ತಲೆಗೆ ಹಾಕಿಕೊಳ್ಳದಷ್ಟು ಸ್ಥಿತಪ್ರಜ್ಞರಾಗಿರಬೇಕು. ನವ್ಯಾಳ ಬಗ್ಗೆ ಬಲ್ಲವರು ಅವಳ ಬಗ್ಗೆ ಎಂದೂ ಸದರವಾಗಿ ಮಾತನಾಡಲಾರರು. ಆದರೂ ಆಡುವ ಜನರ ಬಾಯಿ ಮುಚ್ಚಿಸಲಾಗದು. ನಾವು ಹೇಗೇ ಬದುಕಿದರೂ ಆಡಿಕೊಳ್ಳುವವರು, ಟೀಕಿಸುವವರೂ ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಪಾಡಿಗೆ ನಾವಿರಬೇಕು. ಇದು ಕಷ್ಟವಾದರೂ ಅಸಾಧ್ಯವೇನಲ್ಲ. ನಾವೇನೆಂಬುದು ನಮಗೆ ತಿಳಿದಿದ್ದರೆ ಸಾಕು. ಅದನ್ನು ಲೋಕದೆದರು ರುಜುವಾತು ಪಡಿಸುವ ಅಗತ್ಯವಿಲ್ಲ. ನಮ್ಮ ಆತ್ಮಸಾಕ್ಷಿಗೆ ನಾವು ನಿಷ್ಠರಾಗಿರಬೇಕಷ್ಟೇ..... " ರಾತ್ರಿ ಪೂರಾ ಯೋಚಿಸಿ ನಿರ್ಧರಿಸಿದ್ದನ್ನು ಮನೆಯವರಿಗೆ ಮುಖ್ಯವಾಗಿ ನವ್ಯಾಳಿಗೆ ತಿಳಿಸಿ ಹೇಳಿದರು ಸತ್ಯನಾರಾಯಣ. 

ಅವರ ಮಾತುಗಳು ಎಲ್ಲರಿಗೂ ಸರಿಯೆನಿಸಿತು. ನವ್ಯಾಳತ್ತ ನೋಡಿ,

"ನಮ್ಮೆಲ್ಲರಿಗಿಂತಲೂ ಮುಖ್ಯವಾಗಿ ನೀನು ಬದಲಾಗಬೇಕು ಮಗೂ.... ನೀನು ಗಟ್ಟಿಗಿತ್ತಿಯಾಗಬೇಕು. ಹೆದರಕೂಡದು. ಸಮಯ ಬಂದರೆ ಎಲ್ಲರನ್ನು ಎದುರಿಸಲು ಸಿದ್ಧವಾಗಿರಬೇಕು. ಎರಡು ವಿಷಯಗಳು ಯಾವತ್ತೂ ನಿನ್ನ ತಲೆಯಲ್ಲಿರಲಿ. ಒಂದು ನಡೆದುಹೋದದ್ದರಲ್ಲಿ ನಿನ್ನದೇನೂ ತಪ್ಪಿಲ್ಲ. ಎರಡನೇಯದಾಗಿ ನಿನ್ನ ಕುಟುಂಬ ನಿನ್ನ ಜೊತೆಗಿದೆ. ಇದರ ಹೊರತು ಬೇರೇನನ್ನೂ ಯೋಚಿಸಬೇಡ…..." ಅವಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಹೇಳಿದರು. ಅವಳೊಬ್ಬಳು ಸಮಸ್ಯೆಯನ್ನು ಎದುರಿಸಿ ನಿಂತರೆ ಉಳಿದಿದ್ದು ಹೇಗೋ ಸಂಭಾಳಿಸಬಹುದೆಂಬ ಅನಿಸಿಕೆ ಅವರದು.

ಆದರೆ ನವ್ಯಾಳ ಉತ್ತರ ಅವರೆಣಿಕೆಗೂ ಮೀರಿತ್ತು. ಅವರ ಮಾತುಗಳನ್ನು ಕೇಳಿ ನಕ್ಕಳು ಹುಡುಗಿ…... ಆ ನಗುವಿನಲ್ಲಿ ಇದ್ದಿದ್ದು ಅಸಹ್ಯವೋ, ಕುಹಕವೋ, ಇಲ್ಲಾ ಹೃದಯಹೀನ ಲೋಕದ ಬಗೆಗಿನ ತಿರಸ್ಕಾರವೋ ಹೇಳುವುದು ಕಷ್ಟ.

"ಈ ಬಗ್ಗೆ ಚಿಂತಿಸಬೇಡಿ ಅಪ್ಪಾ. ಈ ಲೋಕ ನನ್ನ ಬಗ್ಗೆ ಏನಂದುಕೊಳ್ಳುತ್ತೇ? ಜನ ನನ್ನ ಬಗ್ಗೆ ಏನು ಮಾತಾಡ್ತಾರೆ? ಅನ್ನೋದು ನನಗ್ಯಾವತ್ತೂ ಮುಖ್ಯವಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ನಾನು ನನ್ನ ಸಂಬಂಧಿಯಿಂದಲೇ ಮೋಸಹೋಗಿ ಮಾರಾಟವಾದಾಗ ಈ ಜನರ್ಯಾರೂ ನನ್ನ ಸಹಾಯಕ್ಕೆ ಬರ್ಲಿಲ್ಲ. ಎಷ್ಟು ಜನರ ಕೈ ಕಾಲು ಹಿಡಿದಿದ್ದೆ ಅಂದು? ಆ ನರಕದಲ್ಲಿ ಇವರೂ ನಮ್ಮಂತೆ ಜೀವವಿರುವ ಮನುಷ್ಯರು ಎಂಬ ಕನಿಕರವೂ ಇಲ್ಲದೇ ಮೃಗಗಳಿಗಿಂತ ಕಡೆಯಾಗಿ ಮೈಮೇಲೆ ಎರಗುತ್ತಿದ್ದ ನರರೂಪಿ ರಾಕ್ಷಸರಿಂದ ಬಿಡಿಸಿ ಎಂದು ಚೀತ್ಕರಿಸಿ ಬೊಬ್ಬಿಡುವಾಗಲೂ ಈ ಪ್ರಜ್ಞಾವಂತ ಜನರ ಸಮಾಜ ಸಹಾಯಹಸ್ತ ಚಾಚಲಿಲ್ಲ. ಅಷ್ಟೇಕೆ? ಅಲ್ಲಿ ಬರುವ ಗಿರಾಕಿಗಳಲ್ಲಿ  ಹಲವು ಮಂದಿ ಈ ಸಮಾಜದ ಗಣ್ಯಾತಿಗಣ್ಯರು….... ಇಂತಹವರ ಮುಖವಾಡದ ಹಿಂದಿನ ಅಸಲಿ ಮುಖವನ್ನು, ಆ ಮುಖದ ಹಿಂದಿರುವ ಕ್ರೌರ್ಯವನ್ನು ನಾನು ಕಂಡಿದ್ದೇನೆ. ಸಮಾಜದ ಸ್ವಾಸ್ಥ್ಯ ಕಾಪಾಡುವ, ನ್ಯಾಯವನ್ನು ಕಾಯುವ, ಜನರನ್ನು ರಕ್ಷಿಸುವ ಹೊಣೆ ಹೊತ್ತ ಹಲವರು ಕತ್ತಲು ಕವಿದೊಡನೇ ತಮ್ಮ ಮುಖವಾಡ ಕಳಚಿ ಅದೇ ವೇಶ್ಯಾಗೃಹಗಳಿಗೆ ಬಂದು ಅಮಾಯಕ ಹೆಣ್ಣುಗಳ ಮೇಲೆರಗಿ ಹೊರಳಾಡುತ್ತಾರೆ. ಇನ್ನು ಜನಸೇವೆಯೇ ಜನಾರ್ಧನ ಸೇವೆ ಎಂದು ಪ್ರಜಾಸೇವೆಯ ಕೈಂಕರ್ಯದಲ್ಲಿ ತೊಡಗಿಕೊಳ್ಳುವ ಹಲವು ಪುಢಾರಿಗಳು, ಪ್ರಖ್ಯಾತ ಉದ್ಯಮಿಗಳು, ಅತೀ ಸಿರಿವಂತರು ಬೆಲೆವೆಣ್ಣುಗಳನ್ನು ತಮ್ಮ‌ ಖಾಸಗಿ ಗೆಸ್ಟ್ ಹೌಸುಗಳಿಗೆ ಕರೆಸಿಕೊಂಡು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಾರೆ. ಕೆಲವೊಮ್ಮೆಯಂತೂ ಅವರುಗಳ ವಿಕೃತಿಗಳಿಗೆ ಮೇರೆಯೇ ಇರುವುದಿಲ್ಲ. ಹತ್ತು, ಹದಿನೈದು ಜನರು ಒಟ್ಟಿಗೇ ಹುಚ್ಚುನಾಯಿಗಳಂತೆ ಮೈಮೇಲೆ ಎರಗುವುದೂ ಇದೆ. ಒಮ್ಮೊಮ್ಮೆ ಹೀಗೆ ಗೆಸ್ಟ್ ಹೌಸುಗಳಿಗೆ ಹೋದ ಹೆಣ್ಣುಗಳು ಜೀವಂತ ಮರಳುವುದೇ ಇಲ್ಲ….... 

ಹೌದು.......

ಆಕೆ ಬೆಲೆವೆಣ್ಣೇ ಇರಬಹುದು....... 

ಮೈ ಮಾರಿ ಹೊಟ್ಟೆ ಹೊರೆಯುವುದು ಅವಳ ವೃತ್ತಿಯೇ ಆಗಿರಬಹುದು…... 

ಆದರೆ ಅವಳಿಗೂ ಒಂದು ಮನಸ್ಸಿಲ್ಲವೇ? ಒಂದು ಹೃದಯವಿಲ್ಲವೇ? ಆಕೆಗೂ ನಿಮ್ಮಂತೆ ಜೀವವಿಲ್ಲವೇ…...? ತಮ್ಮ ಮನೆಯ ಸಾಕುನಾಯಿ ಕಳೆದುಹೋದರೆ ಕಂಪ್ಲೈಂಟ್ ಮಾಡುವ, ಹುಡುಕಿಕೊಡಿ ಎಂದು ಮಾಧ್ಯಮಗಳಲ್ಲಿ ಗೋಗರೆಯುವ, ಹುಡುಕಿಕೊಟ್ಟರೆ ಸಾವಿರಾರು ರೂಪಾಯಿ ಬಹುಮಾನ ಘೋಷಿಸುವ ಜನರಿದ್ದಾರೆ ಇಲ್ಲಿ. ಅದೇ ತಮ್ಮಂತೆ ಜೀವವಿರುವ, ಭಾವನೆಗಳಿರುವ ಹೆಣ್ಣೊಬ್ಬಳು ರಾತ್ರೋರಾತ್ರಿ ಕಣ್ಮುಚ್ಚಿ ತೆರೆಯುವುದರೊಳಗೆ ಈ ಲೋಕವನ್ನೇ ತೊರೆದರೂ ಕನಿಷ್ಠ ಅದರ ಸುಳಿವೂ ಸಿಗುವುದಿಲ್ಲ ಯಾರಿಗೂ.

ಒಬ್ಬ ಹುಡುಗಿ ಕಾಣೆಯಾಗಿದ್ದಾಳೆ, ಬಹುಶಃ ಬದುಕಿಯೇ ಇಲ್ಲವೇನೋ...... ಆದರೆ ಆ ಬಗ್ಗೆ ಯಾರಿಗೂ ಏನೂ ಚಿಂತೆಯಿಲ್ಲ ಎಂದರೆ ಅಮಾನವೀಯವಲ್ಲವೇ......? ಈ ಜಗಕ್ಕೆ ಆ ವೇದನೆಯ ಅರಿವಿಲ್ಲದಿರಬಹುದು. ಆದರೆ ನನಗಿದೆ. ನಾನದನ್ನು ಅನುಭವಿಸಿದ್ದೇನೆ. ನನ್ನ ಜೊತೆಗಿದ್ದ ಹಲವು ಹುಡುಗಿಯರು ಹೀಗೆ ಹೇಳಹೆಸರಿಲ್ಲದೇ ಅದೃಶ್ಯರಾಗಿದ್ದನ್ನು ಕಂಡಿದ್ದೇನೆ. ಹಿಂದಿನ ದಿನದವರೆಗೆ ಅವರು ಬದುಕಿದ್ದರೆಂಬ ಅಸ್ತಿತ್ವವೂ ಇಲ್ಲದಂತೆ, ಇಂತಹ‌ ಹೆಣ್ಣೊಬ್ಬಳು ಎಂದೋ ಒಂದು ಕಾಲದಲ್ಲಿ ಈ ಭೂಮಿಯಲ್ಲಿ ಜೀವಿತವಿದ್ದಳು ಎಂಬ ಕುರುಹೂ ಸಿಗದಂತೆ ಆಕೆ ಮಾಯವಾದಾಗ ಅವಳ ಬಗ್ಗೆ ವಿಚಾರಿಸಲು ಈ ಸಮಾಜ ಬರಲಿಲ್ಲ. ಅಂದಿಗೇ ನನ್ನ ಹಾಗೂ ಈ ಸಮಾಜದ ಋಣ ತೀರಿತು. ಈಗ ನನ್ನ ಪಾಲಿಗೆ ಈ ಸಮಾಜ ಅಸ್ತಿತ್ವದಲ್ಲಿಲ್ಲ. ನಾನಲ್ಲಿ ಅನುಭವಿಸಿದ ನರಕದೆದುರು ಈ ಜನ, ಇವರ ಚುಚ್ಚುನುಡಿಗಳು ತೃಣ ಸಮಾನ.

ಅದರಲ್ಲೂ ಈ ಚಾರಿತ್ರ್ಯ ಹರಣ ಮಾಡುವ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವವರು ಹೆಂಗಸರು ಎಂಬುದು ದೊಡ್ಡ ವಿಪರ್ಯಾಸ. ಒಬ್ಬ ಹೆಣ್ಣಾಗಿ ಆಕೆಯೇ ಇನ್ನೊಬ್ಬಳ ನೋವಿನಾಳವನ್ನು ಅರಿಯದೇ ಹೋಗುತ್ತಾಳೆ... 'ನೀನು ವೇಶ್ಯೆ ಅಂತ ಊರಲ್ಲಿರೋ ಗಂಡಸರೆಲ್ಲಾ ಆಡಿಕೊಳ್ಳುತ್ತಿದ್ದಾರೆ' ಎಂದು ಹಂಗಿಸುವವರು 'ಅವಳು ವೇಶ್ಯೆಯೆಂದು ನಿನಗೆ ಹೇಗೆ ಗೊತ್ತು? ನೀನೂ ಅವಳ ಗಿರಾಕಿಯೇನು?' ಎಂಬ ಪ್ರಶ್ನೆಯನ್ನು ಗಂಡಸರಿಗೆ ಎಂದೂ ಕೇಳುವುದಿಲ್ಲ‌ ಯಾಕೆ? 'ಅವನು ಏನು ಬೇಕಾದರೂ ಮಾಡ್ತಾನೆ. ಎಷ್ಟು ಹೆಂಗಸರೊಂದಿಗೆ ಬೇಕಾದರೂ ಸಂಬಂಧ ಇಟ್ಕೋತಾನೆ. ಏಕೆಂದರೆ ಅವನು ಗಂಡಸು. ಆದ್ರೆ ನೀನು ಹೆಂಗಸು….. ಹೆಂಗಸಾಗಿ ಇಂತಹ ಜಾರಿಣಿಯ ಕೆಲಸ ಮಾಡಲು ನಾಚಿಕೆ ಆಗೋಲ್ವಾ ನಿನಗೆ' ಎಂಬ ಉತ್ತರ ಈ ಸಮಾಜದ್ದಾಗಿದ್ದರೆ ನನ್ನ ಧಿಕ್ಕಾರವಿರಲೀ ಈ ಸಮಾಜಕ್ಕೆ...... ಧಿಕ್ಕಾರವಿರಲಿ ನಿಮ್ಮ ಕೀಳು ಯೋಚನೆಗೆ....... ಇಂತಹ ತುಚ್ಛ ಯೋಚನೆಯುಳ್ಳ ಜನರ ಬಗ್ಗೆ, ಜಗದ ಬಗ್ಗೆ ನಾನೆಂದೂ ಚಿಂತಿಸಲಾರೆ. ಇವರಿಗೆ ನನ್ನ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. 

ನನ್ನ ಬಗ್ಗೆ ಮಾತಾಡಲು, ಬೈಯಲು ಅಧಿಕಾರ ಇರುವುದು ಸಮನ್ವಿತಾಳಿಗೆ ಮತ್ತು ಈ ಮನೆಯವರಿಗೆ ಮಾತ್ರ. ಏಕೆಂದರೆ ಇಷ್ಟು ವಿಶಾಲ ಪ್ರಪಂಚದಲ್ಲಿ ನನ್ನನ್ನು ಅಕ್ಕರೆಯಿಂದ ಆದರಿಸಿ ಪ್ರೀತಿ ತೋರಿದವರು ನೀವುಗಳು ಮಾತ್ರವೇ. ನಿಮ್ಮ ಋಣ ಹಿರಿದಾಗಿದೆ ನನ್ನ ಮೇಲೆ. ನಿಮ್ಮ ಕಣ್ಣುಗಳಲ್ಲಿ ನನ್ನ ಬಗ್ಗೆ ಅಸಹ್ಯ, ಬೇಸರ,ತಿರಸ್ಕಾರ ಕಂಡರೆ ಮಾತ್ರ ನಾನು ಸಹಿಸಲಾರೆ. ನೀವು ನನ್ನನ್ನು ಕ್ಷಮಿಸಿ ಒಪ್ಪಿದಿರಲ್ಲ. ನನಗಷ್ಟೇ ಸಾಕು...... ಇನ್ಯಾರಿಗೂ ಹೆದರಲಾರೆ ನಾನು......" ದೃಢವಾಗಿತ್ತು ಅವಳ ನಿಲುವು.

ಅವಳೇ ಅಷ್ಟು ಧೈರ್ಯವಾಗಿದ್ದು ಕಂಡು ಮನೆಯವರಿಗೆ ನೆಮ್ಮದಿ ಎನಿಸಿತು‌. ಅವರೂ ನಿರಾಳ....

"ಆದರೆ ಕಾರ್ತಿಕ್.....?"  ಅನುಮಾನದಿಂದ ಕೇಳಿದಳು ಸಮನ್ವಿತಾ.

"ಇನ್ನು ಈ ಮನೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಬೇಡ. ಇಂದು ಇಲ್ಲಿ ನಡೆದದ್ದು ನಮ್ಮ ನಡುವೆಯಷ್ಟೇ ಇರುತ್ತದೆ. ಹಾಗೆ ಈ ಮಾತುಕತೆಯನ್ನು ನಾವು ಇಂದು ಇಲ್ಲಿಯೇ ಮರೆಯುತ್ತೇವೆ ಕೂಡಾ. ಈ ಬಗ್ಗೆ ಕಾರ್ತೀಯನ್ನೂ ಒಳಗೊಂಡು ಇನ್ಯಾರಿಗೂ ಏನನ್ನೂ ಹೇಳುವ, ಸಮಜಾಯಿಷಿ ನೀಡುವ ಅಗತ್ಯವಿಲ್ಲ. ಅಷ್ಟು ಪ್ರಮುಖವಾದ ವಿಚಾರವೂ ಇದಲ್ಲ. ನವ್ಯಾ ನಮ್ಮ ಮಗಳಷ್ಟೇ….. ಇನ್ನೆಂದೂ ಈ ವಿಚಾರ ಪ್ರಸ್ತಾಪವಾಗಬಾರದು" ಕಟ್ಟುನಿಟ್ಟಾಗಿ ನುಡಿದರು ಮಂಗಳಾ. ಸತ್ಯನಾರಾಯಣರು ಸಹ ಮಡದಿಯ ಮಾತನ್ನು ಅನುಮೋದಿಸಿ, "ಹೌದು. ಕಾರ್ತೀಗೆ ಹೇಳುವ ಅಗತ್ಯವಿಲ್ಲ. ಮುಂದೆಂದಾದರೂ ತಿಳಿದರೆ ಅವನ ನಿರ್ಧಾರವೂ ನಮ್ಮಂತೆಯೇ ಇರುತ್ತೆ ಅನ್ನೋ ಭರವಸೆ ನನಗಿದೆ" ಎಂದರು.

ಈ ಕರಾರು ಎಲ್ಲರಿಗೂ ಒಪ್ಪಿಗೆಯಾಯಿತು ಕೂಡಾ.

ನವ್ಯಾಳ ಇಷ್ಟು ವರ್ಷಗಳ ಹೋರಾಟದ ಬದುಕಿಗೆ ಇಂದು ನಿಜ ಅರ್ಥದಲ್ಲಿ ಗೆಲುವು ಸಿಕ್ಕಿತ್ತು. ಆ ಸಂತೋಷವನ್ನು ಅವಳಿಗಿಂತಲೂ ಹೆಚ್ಚಾಗಿ ಅನುಭವಿಸಿದ್ದು ಸಮನ್ವಿತಾ. ಗೆಳತಿಯ ಸಂತೋಷ ಕಂಡು ತಾನೂ ಸಂಭ್ರಮಿಸಿದಳು. ಅವಳನ್ನು ಆಲಂಗಿಸಿಕೊಂಡವಳು, "ದಯವಿಟ್ಟು ಇನ್ನಾದರೂ ನಗೋದನ್ನು ಕಲಿ.... ಇಷ್ಟು ವರ್ಷ ನಿನ್ನ ಕಳಾಹೀನ ಮುಖ ನೋಡಿದಾಗಲೆಲ್ಲಾ ನಿನಗೊಂದು ಒಳ್ಳೆಯ ಬದುಕನ್ನು ಕಟ್ಟಿಕೊಡಬೇಕೆಂಬ ನನ್ನ ಪ್ರಯತ್ನಕ್ಕೆ ಯಾಕೆ ಯಶಸ್ಸು ಸಿಗ್ತಾನೇ ಇಲ್ಲ ಅಂತ ಬೇಜಾರಾಗೋದು. ಇವತ್ತು ನಿನ್ನ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಕ್ಕಿದೆ. ಈಗ ಸಂತೋಷ ತಾನೇ? ಇನ್ನು ಜನರಿಗೆ ಗೊತ್ತಾದ್ರೆ ಹಾಗೆ ಮಾತಾಡ್ತಾರೆ, ಹೀಗೆ ಚುಚ್ಚಿ ಮಾತಾಡ್ತಾರೆ ಅಂತ ಯೋಚಿಸ್ಕೊಂಡು ಕೂತ್ಕೋಳ್ಳಲ್ಲ ಅಲ್ವಾ?" ಕೇಳಿದಳು.

"ಖಂಡಿತಾ ಇಲ್ಲಾ ಸಮಾ..... ಇನ್ಯಾವ ಬೇಸರವೂ ಇಲ್ಲ, ನೋವೂ ಇಲ್ಲ. ಸಮಾ..... ಥ್ಯಾಂಕ್ಯೂ ಫಾರ್ ಎವ್ವೆರಿಥಿಂಗ್....... ಥ್ಯಾಂಕ್ಸ್ ಅನ್ನೋದು ಬಹಳ ಚಿಕ್ಕ ಪದ. ನೀನು ಯಾರು? ನನ್ನ ಬದುಕಲ್ಲಿ ನೀನ್ಯಾಕೆ ಬಂದೆ? ನಿನಗ್ಯಾಕೆ ನನ್ನ ಮೇಲೆ ಈ ಪರಿಯ ಅಕ್ಕರೆ….? ಊಹ್ಮೂಂ...... ನಂಗೊತ್ತಿಲ್ಲ. ಆದ್ರೆ ನನ್ನ ಈ ಬದುಕು ನೀನು ನೀಡಿದ ಕಾಣಿಕೆ ಅನ್ನೋದು ಮಾತ್ರ ನನಗೆ ಗೊತ್ತು. ನೀನು ನನಗೆ ಸಿಕ್ಕಿರಲಿಲ್ಲ ಅಂದ್ರೇ ಅದೇ ನರಕದಲ್ಲಿ ಹೆಣಗಿ ಅಸ್ತಿತ್ವವಿಲ್ಲದ ಅನಾಥ ಶವವಾಗಿರ್ತಿದ್ದೆನೇನೋ...... ಅಂತಹ ಹೀನ ಸ್ಥಿತಿಗೆ ತಲುಪದಂತೆ ತಡೆದು ಚೆಂದದ ಬದುಕೊಂದನ್ನು ನನಗಾಗಿ ರೂಪಿಸಿಕೊಟ್ಟಿದ್ದಕ್ಕೆ ಉಸಿರಿರುವವರೆಗೂ ನಿನಗೆ ಅಭಾರಿ ಕಣೇ…..." ಗದ್ಗದಿತಳಾಗಿ ನುಡಿದಳು.

"ಇಂತಹ ಹುಡುಗಿನ ನನ್ನ ಜೊತೆಗಾತಿಯಾಗಿ ದಯಪಾಲಿಸಿದ್ದಕ್ಕೆ ನಾನೂ ನಿನಗೆ ಅಭಾರಿ......." ಕಿಶೋರನೂ ಮಡದಿಯೊಂದಿಗೆ ದನಿಗೂಡಿಸಿದ.

"ನಾವಿಬ್ರೂ ಕೂಡಾ ನಿನಗೆ ಚಿರ ಋಣಿಗಳೇ ಸಮನ್ವಿತಾ....." ಮಂಗಳಮ್ಮ ಪತಿಯನ್ನು ಒಡಗೂಡಿಸಿಕೊಂಡು ನುಡಿದರು.

"ಆದ್ರೆ ಇಷ್ಟೊಳ್ಳೆಯ ಮಾಣಿಕ್ಯಗಳನ್ನು ನಮಗಾಗಿ ದಯಪಾಲಿಸಿದ್ದಕ್ಕೆ ಆ ಭಗವಂತನಿಗೆ ನಾನು, ನೀನು ಎಷ್ಟು ಋಣಿಯಾಗಿದ್ರೂ ಸಾಲದು ಮಂಗಳಾ.  ನಿಜಕ್ಕೂ ಈ ದಿನ ಬಲು ಶುಭದಾಯಕ…... ಎಲ್ಲ ಸಮಸ್ಯೆಗಳು ನಮ್ಮ ಮಟ್ಟಿಗೆ ಬಗೆಹರಿದು, ಮನಗಳು ತಿಳಿಯಾಗಿರುವ ಖುಷಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರೋಣ. ಇನ್ನು ಮುಂದೆ ಯಾವುದೇ ವಿಘ್ನಗಳೂ ಬರದಿರಲಿ ಅಂತ ಭಗವಂತನಲ್ಲಿ ಬೇಡಿಕೊಂಡು ಹೊರಗೇ ತಿಂಡಿ ಮುಗಿಸಿಕೊಂಡು ಬರೋಣ. ಸಮನ್ವಿತಾ ನೀನು ಇವತ್ತು ರಜೆ ತಗೋ ಮಗಳೇ…..." ಸತ್ಯನಾರಾಯಣರು ಹೇಳಿದರು‌.

ಹಾಗೆ ತಿಳಿಯಾದ ಮನದೊಂದಿಗೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಟರು ಎಲ್ಲರೂ ಹೊಸ ಬದುಕಿನ ಹೊಸ್ತಿಲಲ್ಲಿ ಭಗವಂತನ ಅನುಗ್ರಹವನ್ನು ಆಶಿಸಿ...... 

             ***************************

ಮೇಲಿನ ಬಾಲ್ಕನಿಯಲ್ಲಿ ನಿಂತು ಎದುರಿನ ಉದ್ಯಾನವನ್ನೇ ದಿಟ್ಟಿಸುತ್ತಿದ್ದಳು ಸಮನ್ವಿತಾ….... ಅವನು ಅಷ್ಟೇ ತದೇಕಚಿತ್ತದಿಂದ ಅವಳನ್ನೇ ದಿಟ್ಟಿಸುತ್ತಿದ್ದ........

ಅವಳೊಂದು ಮುಗಿಯದ ಸೋಜಿಗ ಅವನ ಪಾಲಿಗೆ. ನೋಡಿದಷ್ಟೂ ತೀರದ ಗುಂಗು ಅವಳದು.....

ತುಸು ಸಮಯದ ನಂತರ ಅವನೆಡೆ ನೋಟ ಹರಿಸಿದವಳು ಅವನ ನೋಟ ತನ್ನಲ್ಲೇ ಇರುವುದು ಕಂಡು ನಸುನಕ್ಕಳು.

"ಏನು ಮಿಸ್ಟರ್ ಶರ್ಮಾ? ಹಾಗೆ ನೋಡ್ತಿದ್ದೀರಾ? ನನ್ನ ಚಿತ್ರ ಬರೆಯುವ ಯೋಚನೆ ಏನಾದ್ರೂ ಇದೆಯಾ ಹೇಗೆ?" ತಮಾಷೆಯಾಗಿ ಕೇಳಿದಳು.

ಅವನೇನೂ ಉತ್ತರಿಸಲಿಲ್ಲ.

ಸುಂದರ ಆಹ್ಲಾದಕರ ಸಂಜೆಯದು. ಹಕ್ಕಿಗಳ ಚಿಲಿಪಿಲಿ ಇಂಚರದ ಕಲರವ ಹಿತವಾಗಿತ್ತು.

ಆದರೆ ಅವನಿಗೆ ಅವಳ ಸಾಮೀಪ್ಯ ಎಲ್ಲಕ್ಕಿಂತಲೂ ಹೆಚ್ಚು ಹಿತವಾಗಿತ್ತು......

ಆ ದಿನ ಬೆಳಿಗ್ಗೆಯೇ ಅವಳನ್ನು ಮನೆಗೆ ಕರೆತಂದಿದ್ದ. ಅವಳಿಗೂ ಅವನ ಬಳಿ ಮನೆಯಲ್ಲಿ ನಡೆದಿದ್ದನೆಲ್ಲಾ ವಿಶದವಾಗಿ ವಿವರಿಸಬೇಕಿದ್ದರಿಂದ ಕರೆದ ಕೂಡಲೇ ಬರಲೊಪ್ಪಿದ್ದಳು. ಆದರೆ ಅವಳಿಗೆ ತಿಳಿದಿರದ ವಿಷಯ……. ಕಿಶೋರ್ ಮತ್ತು ನವ್ಯಾ ಹಿಂದಿನ ದಿನವೇ ಅವನಿಗೆ ಕರೆ ಮಾಡಿ ಈ ಮೀಟಿಂಗಿಗೆ ಅಡಿಪಾಯ ಹಾಕಿರುವುದು ಎಂದು. ಹೇಳಿದ ಮಾತು ಕೇಳದ ವೈದ್ಯೆಯನ್ನು ದಾರಿಗೆ ತರಬೇಕಿತ್ತಲ್ಲ‌.....

ಅವನೇ ಹೋಗಿ ಅವಳನ್ನು ಕರೆತಂದಿದ್ದರೂ ಬೆಳಗ್ಗಿನಿಂದ ಅವಳು, ಮೃದುಲಾ ಹಾಗೂ ಆಕೃತಿಯ ಮಾತಿನ ನಡುವೆ ಅಪ್ಪ ಮಗ ಮೂಕ ಪ್ರೇಕ್ಷಕರಾಗಿದ್ದು ವಿಧಿ ವಿಲಾಸವೇ ಸರಿ. ಸಂಜೆಯ ತನಕ ಇವರ ಬಿಡುವಿಲ್ಲದ ಹರಟೆಯಿಂದ ಬೇಸತ್ತವನು, "ಅಲ್ಲಾ, ಇಷ್ಟು ದಿನ ಆದ್ಮೇಲೆ ಏನೋ ದೇವರ ದಯೆಯಿಂದ ಒಂದು ದಿನ ಫ್ರೀಯಾಗಿ ಸಿಕ್ಕಿದ್ದಾರೆ ನಮ್ಮ ಡಾಕ್ಟ್ರು. ಒಂದಿಷ್ಟು ಮಾತಾಡೋಣ ಅಂತ ಕರ್ಕೊಂಡು ಬಂದ್ರೆ…. ಅಬ್ಬಬ್ಬಾ, ನೀವಿಬ್ಬರೂ ಅಮ್ಮ ಮಗಳು ಅದೇನು 24/7 ನ್ಯೂಸ್ ಚಾನೆಲ್ ತರ ನಾನ್ ಸ್ಟಾಪ್ ಬಡ್ಕೋತ ಇದ್ದೀರಲ್ಲ…... ಅದೇನು ಬಾಯಾ ಇಲ್ಲಾ ಬೊಂಬಾಯಾ.....? ಈಗೇನು ನಮ್ಮ ಡಾಕ್ಟ್ರನ್ನ ಬಿಡ್ತೀರಾ ಇಲ್ಲಾ ನಾನೇ ಅವರನ್ನು ಮನೆಯಿಂದ ಹೊರಗೆ ಕರ್ಕೊಂಡು ಹೋಗ್ಲಾ......?" ಧಮ್ಕಿ ಹಾಕಿ ಕೇಳಿದ.

"ಅಬ್ಬಬ್ಬಾ.... ಅಮ್ಮಾ.... ಸಮ್ ಒನ್ ಈಸ್ ಜಲಸ್. ಇರ್ಲೀ ಇರ್ಲೀ.... ನಡೀಲೀ. ನೋಡೋಣ. ಎಲ್ಲಿತನಕ ನಡಿಯುತ್ತೇ ಅಂತ..... " ಎಂದು ಅಣಕಿಸಿ ಎದ್ದು ಹೋದಳು ಆಕೃತಿ.

"ನೀನುಂಟು, ನಿನ್ನ ಡಾಕ್ಟ್ರುಂಟು….. ಕರ್ಕೊಂಡು ಹೋಗಪ್ಪಾ ಮಗನೇ......." ಕೈ ಮುಗಿದು ರೂಮಿಗೆ ಹೊರಟರು ಮೃದುಲಾ.

"ನೋಡಪ್ಪಾ, ಅಂತೂ ಇಂತೂ ಈಗ ಬಿಡುಗಡೆ ಕೊಟ್ಟಿದ್ದಾರೆ. ಅವರಿಬ್ಬರೂ ಮತ್ತೆ ದಂಡೆತ್ತಿ ಬರೋದ್ರೊಳಗೆ ಮಾತನಾಡಿ ಮುಗಿಸು…...." ಬೆನ್ನುತಟ್ಟಿ ಕಿವಿಮಾತು ಹೇಳಿದರು ಸಚ್ಚಿದಾನಂದ್.

ಅಪ್ಪನಿಗೆ ಧನ್ಯವಾದ ಸಲ್ಲಿಸಿ ಅವಳ ಕೈ ಹಿಡಿದು ಟೆರೇಸಿಗೆ ಕರೆತಂದಿದ್ದ. ಕರೆತಂದಿದ್ದು ಮಾತನಾಡಲೆಂದಾದರೂ ಬಂದಲ್ಲಿಂದ ಒಂದಕ್ಷರ ಮಾತನಾಡಿರಲಿಲ್ಲ ಅವನು…. 

"ಈಗೇನು? ಹೀಗೇ ಸ್ಟಾಚ್ಯೂ ಆಗಿರ್ತೀರಾ? ಸರಿ ಹಾಗಿದ್ರೆ ನಾನು ಕೆಳಗೆ ಹೋಗ್ತೀನಿ...." ಹೊರಟವಳ ಕೈ ಹಿಡಿದು ತನ್ನೆದುರು ಕೂಡಿಸಿಕೊಂಡ.

"ನಿನ್ನ ನೋಡ್ತಾ ಇದ್ರೆ ಮಾತಾಡ್ಬೇಕು ಅಂತ ಅನ್ನಿಸೋಲ್ಲ. ಸುಮ್ಮನೆ ಹೀಗೆ ನೋಡ್ತಾ ಕುತ್ಕೊಂಡು ಬಿಡೋಣ ಅನ್ಸುತ್ತೆ ಹುಡುಗಿ…..." ಬೀಸುತ್ತಿದ್ದ ಕುಳಿರ್ಗಾಳಿಗೆ ಹಾರಾಡುತ್ತಿದ್ದ ಅವಳ ಮುಂಗುರುಳನ್ನು ಕಿವಿಯ ಹಿಂಬದಿ ಸರಿಸುತ್ತಾ ನುಡಿದವನು,

"ನೀನಿವತ್ತು ತುಂಬಾ ಅಂದ್ರೆ ತುಂಬಾ……... ಖುಷಿಯಾಗಿದ್ದೀ. ಅದಕ್ಕೇ ಸಂತೋಷದಿಂದ ಹೊಳೆಯುತ್ತಿರೋ ಈ ನಿನ್ನ ಮುಖವನ್ನೇ ನೋಡುತ್ತಿದ್ದೆ. 'ನವ್ಯಾಳ ಸಮಸ್ಯೆ ಪರಿಹಾರ ಆಯ್ತು , ಹೇಗೆ ಏನು ಅಂತ ಆಮೇಲೆ ಹೇಳ್ತೀನಿ' ಅಂತ ಮೆಸೇಜ್ ಹಾಕಿದ್ದೆ. ಈಗ ಹೇಳು. ನೀನಿಷ್ಟು ಖುಷಿಯಾಗಿರುವಂತಹದ್ದು ಏನಾಯ್ತು ಅಂತ" ಸರಿಯಾಗಿ ಕುಳಿತು ಕೇಳಿದ.

ಅವಳು ಎಲ್ಲವನ್ನೂ ವಿವರಿಸುತ್ತಾ ಹೋದಂತೆ ಅವನ ಮೊಗದಲ್ಲಿ ನಿರಾಳತೆಯ ನಗು ಹರಡತೊಡಗಿತು. ಎದೆಯ ಮೇಲಿದ್ದ ಭಾರ ಇಳಿದಂತಹ ಭಾವ…..

"ದಟ್ಸ್ ರಿಯಲೀ ಗ್ರೇಟ್ ನ್ಯೂಸ್. ಈಗ ನವ್ಯಾಳ ಮನಸ್ಸಿಗೆ ಸಮಾಧಾನವಾಗಿರುತ್ತೆ‌. ಯಾವುದೇ ಕೆಲಸವನ್ನು ಒಳ್ಳೆಯ ಉದ್ದೇಶದಿಂದ, ಒಳ್ಳೆಯ ಮನಸ್ಸಿನಿಂದ ಮಾಡಿದರೆ ಅದಕ್ಕೆ ಯಶಸ್ಸು ಸಿಕ್ಕೇ ಸಿಗುತ್ತದೆ ಸಮನ್ವಿತಾ. ಸ್ವಲ್ಪ ತಡವಾಗಬಹುದು, ಒಂದಿಷ್ಟು ಗೊಂದಲ ಗೋಜಲುಗಳಾಗಬಹುದು. ಆದರೆ ಅಂತಿಮವಾಗಿ ಎಲ್ಲವೂ ಒಳ್ಳೆಯದಾಗುತ್ತದೆ. ನೀನು ಅಷ್ಟು ಅಕ್ಕರೆ ಆಸಕ್ತಿಯಿಂದ ನವ್ಯಾಳ ಬದುಕನ್ನು ರೂಪಿಸಲು ಪ್ರಯತ್ನಿಸಿದ್ದಕ್ಕೆ, ನವ್ಯಾಳ ನೋವಿಗೆ, ತೊಳಲಾಟಕ್ಕೆ….. ಎಲ್ಲಕ್ಕೂ ಇವತ್ತು ಸಾರ್ಥಕ್ಯ ಸಿಕ್ಕಿತು ನೋಡು. ಆಮ್ ರಿಯಲೀ ಹ್ಯಾಪಿ ಎಂಡ್ ಆಮ್ ಪ್ರೌಡ್ ಆಫ್ ಯು ಡಿಯರ್....." ಮನದುಂಬಿ ಹೇಳಿದ.

"ನನಗೂ ತುಂಬಾ ಸಂತೋಷವಾಗಿದೆ ಅಭಿ. ಇದೆಲ್ಲಾ ಇಲ್ಲಿಗೆ ಮುಗಿಯಲೀ ಅನ್ನೋ ಹಾರೈಕೆಯೊಂದೇ ಈಗ. ಮುಂದೆಂದಾದರೂ ಈ ವಿಚಾರ ಹೊರಲೋಕಕ್ಕೆ ಗೊತ್ತಾದರೂ ಅದನ್ನು ಎದುರಿಸುವೆ ಅನ್ನೋ ಧೈರ್ಯ ಇದೆ ಅವಳಲ್ಲಿ…... ಆದರೆ ಅಂತಹ ಸಂದರ್ಭ ಎಂದಿಗೂ ಬಾರದಿರಲೀ ಅನ್ನೋದೇ ನನ್ನಾಸೆ....." 

ಅವಳ ಮಾತುಗಳಿಗೆ ನಸುನಕ್ಕವನು ಅಲ್ಲಿಂದ ಎದ್ದು ಬಾಲ್ಕನಿಯ ಅಂಚಿಗೆ ಎರಡೂ ಕೈಯೂರಿ ಆಗಸವನ್ನು ದಿಟ್ಟಿಸತೊಡಗಿದ. ಅವಳೂ ಅವನನ್ನು ಹಿಂಬಾಲಿಸಿ ಬಂದು ಅಲ್ಲೇ ಕಟ್ಟೆಗೊರಗಿ ನಿಂತಳು. ತುಸು ಮೌನದ ನಂತರ ಮಾತನಾಡಿದ ಅವನು.

"ಹಾಗೆಯೇ ಆಶಿಸೋಣ ಸಮಾ.... ಒಂದು ವೇಳೆ ಗೊತ್ತಾದರೂ ಏನೀಗ? ಯಾರಿಗೆ, ಯಾಕಾಗಿ ಭಯಪಡಬೇಕು ಸಮನ್ವಿತಾ...? ಈ ಸಮಾಜ, ಕಟ್ಟುಪಾಡುಗಳು, ನೀತಿ ನಿಯಮಗಳಿಗಾ? ಇವುಗಳಿಗೇಕೆ ಹೆದರಬೇಕು? ಇವ್ಯಾವೂ ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿ ಮಾನವ ಮಾತ್ರ. ಉಳಿದವುಗಳೆಲ್ಲವೂ ನಮ್ಮದೇ‌ ಸೃಷ್ಟಿ. ನಮ್ಮನ್ನು ಒಂದು ನೈತಿಕತೆಯ ಚೌಕಟ್ಟಿನೊಳಗೆ ನಿರ್ಬಂಧಿಸಿಕೊಳ್ಳಲು ನಾವೇ‌ ಸೃಷ್ಟಿಸಿಕೊಂಡ ನಿಯಮಗಳು ಇವು. ಆದರೆ ಕಾಲಕ್ರಮೇಣ ಅವು ನಮ್ಮ ಬದುಕನ್ನೇ ಹಾಳುಗೆಡವುವ ಅಸ್ತ್ರಗಳಾಗಿದ್ದು ಕೆಲವು ಹೊಣೆಗೇಡಿ, ಅನುಕೂಲಸಿಂಧು ಹಿತಾಸಕ್ತಗಳ ಕೈಚಳಕದಿಂದಾಗಿ. ಅವರು ತಮ್ಮ ಆಸಕ್ತಿಗೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡರು. ಬೇಕಾದವರನ್ನು ಬಚಾಯಿಸಿ, ದುರ್ಬಲರನ್ನು ದಮನಿಸಿ ಕಾಲಡಿಗೆ ಹಾಕಿಕೊಂಡರಷ್ಟೇ. ಅದೆಷ್ಟೋ ಕೊಲೆ, ಸುಲಿಗೆಗಳನ್ನೂ, ಅನಾಚಾರಗಳನ್ನು ಮಾಡಿದ ಪಾಪಿಗಳು ಒಂದಿನಿತೂ ಪಾಪಪ್ರಜ್ಞೆಯಿಲ್ಲದೇ ಗಣ್ಯವ್ಯಕ್ತಿಗಳಾಗಿ ನಮ್ಮ ಸಮಾಜವನ್ನೇ ಆಳುತ್ತಿಲ್ಲವೇ…...? ಈ ನೀತಿ ನಿಯಮಗಳಿರುವುದು ಪಾಪದವರಿಗೆ ಮಾತ್ರ. ಇಂತಹ ಮಾನವನಿರ್ಮಿತ ಪಕ್ಷಪಾತಿ ನಿಯಮ, ಕಟ್ಟುಪಾಡುಗಳಿಂದ ನಮ್ಮ ಬದುಕುಗಳೇ ಹಾಳಾಗುತ್ತಿವೆ ಎಂದಾಗ ಅದನ್ನು ಮುರಿದರೇನು ತಪ್ಪು? ತಪ್ಪಿಲ್ಲ ಸಮಾ…… ಅಂತಹ ಬದಲಾವಣೆ ಒಳ್ಳೆಯದು ಹಾಗೂ ಆ ಬದಲಾವಣೆ ನಮ್ಮಿಂದಲೇ ಮೊದಲು ಆರಂಭವಾಗಬೇಕು. ಅಕ್ಕಪಕ್ಕದವರು, ಸಮಾಜ ಎಷ್ಟು ಬದಲಾಗಿದೆ ಎಂದು ಭಾಷಣ ಬಿಗಿಯುವ ಮೊದಲು ನಾವು ಬದಲಾಗಬೇಕು. ಬದಲಾವಣೆ ಆರಂಭವಾಗುವುದೇ 'ನನ್ನಿಂದ'. ನಾನು ಬದಲಾದರೆ ನನ್ನ ಮಕ್ಕಳಿಗೂ ಆ ಬದಲಾವಣೆ ಹರಡುತ್ತದೆಯಲ್ಲವೇ…..? ಆ ಮೂಲಕ ಮುಂದಿನ ಪೀಳಿಗೆಯ ಯೋಚನೆ, ಚಿಂತನೆಗಳು ಬದಲಾಗುವುದಿಲ್ಲವೇ?  ನಿಧಾನವಾಗಿಯಾದರೂ ಸಮಾಜವೂ ಬದಲಾಗುತ್ತದೆಯಲ್ಲವೇ......? ಯಾವ ನೀತಿ, ನಿಯಮ, ಕಟ್ಟುಪಾಡುಗಳೂ ಮಾನವೀಯ ಮೌಲ್ಯಗಳಿಗಿಂತ ಹಿರಿದಾದುದಲ್ಲ. ಎಲ್ಲಕ್ಕಿಂತಲೂ ಮಿಗಿಲಾದುದು ಮಾನವೀಯತೆಯಲ್ಲವೇ? ಆ ಮಾನವೀಯ ಮೌಲ್ಯಗಳ ಉಳಿಕೆಗಾಗಿ ಇಂದು ನಾವು ಬದಲಾವಣೆಯೆಡೆಗೆ ಹೆಜ್ಜೆಯಿಟ್ಟರೆ ನಾಳೆ‌ ನಮ್ಮ ಮುಂದಿನ ಪೀಳಿಗೆಗಾದರೂ ಸಮಾಜ ಬದಲಾಗುತ್ತದೆ ಸಮಾ......." 

ಅವನ ಮಾತುಗಳನ್ನೇ ಮೋಡಿಗೊಳಗಾದಂತೆ ಕೇಳುತ್ತಿದ್ದಳು ಸಮನ್ವಿತಾ. 'ಮಾನವೀಯತೆಗಿಂತ ಮಿಗಿಲಾದುದು ಏನಿದೆ ಜಗದಲ್ಲಿ' ಎಷ್ಟು ಸತ್ಯವಾದ ಮಾತು. ಆದರೂ ನಾವೇಕೆ ಅದನ್ನು ಅರಿತುಕೊಂಡು 'ಜೀವಿಸು, ಜೀವಿಸಲು ಬಿಡು' ಎಂಬ ತತ್ವವನ್ನು ಅಳವಡಿಸಿಕೊಳ್ಳುವುದಿಲ್ಲ…..? ಅದೇಕೆ ನಾವು 'ನಾನು, ನನ್ನದು' ಎಂಬ ಸಂಕುಚಿತ ಯೋಚನೆಯಿಂದ 'ನಾವು, ನಮ್ಮದು' ಎಂಬ ವಿಶ್ವಮಾನವತ್ವದ ಕಲ್ಪನೆಗೆ ಬದಲಾಯಿಸುವುದಿಲ್ಲ......? ಆದರೂ ಅಭಿ ಹೇಳಿದಂತೆ ನಾವು ಬದಲಾಗಿ, ನಮ್ಮ ಮಕ್ಕಳ ಯೋಚನಾ ಶೈಲಿಯನ್ನು ಬದಲಾಯಿಸಿದರೆ ಬಹುಶಃ ಮುಂದಿನ ಪೀಳಿಗೆಗಾದರೂ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ....? ಈಗ ಅಭಿ, ಕಿಶೋರ, ಮಂಗಳಮ್ಮ, ಸತ್ಯನಾರಾಯಣರಂತಹವರು ಸಮಾಜದ ಹಂಗನ್ನು ಮೀರಿ ಯೋಚಿಸುತ್ತಿಲ್ಲವೇ? ಇಂತಹ ಹಲವರು ನಮ್ಮ ನಡುವೆ ಇದ್ದಾರಲ್ಲವೇ…...? ಹಾಗೆಯೇ ಮುಂದೊಮ್ಮೆ ಸಮಾಜದ ಚಿಂತನಾ ಶೈಲಿ ಅನುಕೂಲಸಿಂಧುತ್ವದಿಂದ ಮಾನವೀಯತೆಯೆಡೆಗೆ ಬದಲಾಗಬಹುದು ಎನಿಸಿತವಳಿಗೆ.

ಎಷ್ಟೋ ಹೊತ್ತು ಹಾಗೆಯೇ ನಿಂತಿದ್ದರು ಇಬ್ಬರೂ ಮೌನವಾಗಿ. ಆದರೆ ಆ ಮೌನದಲ್ಲೂ ಹಲವು ಮಾತುಗಳಿದ್ದವು…….. ಅವರಿಬ್ಬರಿಗೆ ಮಾತ್ರ ವೇದ್ಯವಾಗುವಂತಹದ್ದು.....

ಬಹಳ ಸಮಯದ ನಂತರ ನಿಧಾನವಾಗಿ ಅವಳ ಬಳಿ ಸಾರಿದವನು ಹಿಂದಿನಿಂದ ಅವಳ ನಡು ಬಳಸಿ ಭುಜಕ್ಕೆ ತನ್ನ ಗದ್ದವನ್ನೊತ್ತಿದ. ಈ ಚರ್ಯೆಗೆ ನಕ್ಕು ಅವನ ತಲೆಗೂದಲನ್ನು ಕೆದರಿದಳು ಹುಡುಗಿ.....

"ಯು ನೋ? ಮೊದಲು ನಿನ್ನನ್ನು ಪೋಲಿಸ್ ಸ್ಟೇಷನಲ್ಲಿ ನೋಡಿದಾಗ, ನಿನ್ನ ಬಗ್ಗೆ ತಿಳಿದಾಗ ಆಶ್ಚರ್ಯ ಆಗಿತ್ತು. ಆಮೇಲೆ ಹಲವು ತಿಂಗಳು ಯಾವುದೇ ಸ್ಪಷ್ಟ ಉದ್ದೇಶವಿಲ್ಲದೇ ಮನಸ್ಸು ನಿನ್ನ ಹುಡುಕುವ ಪಣ ತೊಟ್ಟಾಗ ಅದ್ಯಾಕೆ ಇಂತಹ ಹುಚ್ಚು ಸೆಳೆತ ನಿನ್ನ ಮೇಲೆ ಅಂತ ತುಂಬಾ ಸಲ ಅನ್ನಿಸಿದೆ. ಅದಕ್ಕೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿನ್ನ ಹುಡುಕೋದು ನಿಲ್ಲಿಸಿಬಿಟ್ಟೆ. ಬಟ್…… ಸೀ ದಿ ಡೆಸ್ಟಿನೀ..........ನೀನೆ ನನ್ನೆದುರು ಬಂದೆ. ಊಹೆಗೂ ಮೀರಿ ವಿಧಿ ನಮ್ಮಿಬ್ಬರನ್ನು ಅನೂಹ್ಯವಾಗಿ ಬೆಸೆಯಿತು‌. ಎಂಡ್ ಫೈನಲೀ....... ಯು ಆರ್ ಮೈನ್ ಎಂಡ್ ಆಮ್ ಆಲ್ ಯುವರ್ಸ್. ವೆರಿ ಫಾರ್ಚುನೇಟ್ ಟು ಹ್ಯಾವ್ ಯು ಬೈ ಮೈ ಸೈಡ್ ಸಮಾ…..." ಅವನ ಮಾತಿಗೆ ನಕ್ಕಳು.

"ನಾನೂ ಬಹಳ ಅದೃಷ್ಟವಂತೆಯೇ ಅಂತ ತೀರಾ ಇತ್ತೀಚೆಗೆ ಅನ್ನಿಸೋಕೆ ಶುರುವಾಗಿದೆ ಅಭಿ. ಕಿಶೋರ್ ನಂತಹ ಒಳ್ಳೆಯ ಗೆಳೆಯ, ನವ್ಯಾಳಂತಹ ಗೆಳತಿ, ನನ್ನ ಸ್ವಂತ ಮಗಳ ಹಾಗೆ ನೋಡೋ ಅವನ ಹೆತ್ತವರು, ಕಾರ್ತೀಯಂತಹ ಪುಟ್ಟ ತಮ್ಮ....... ಜೊತೆಗೆ ನಿಮ್ಮ ಅಪ್ಪ, ಅಮ್ಮ, ಆಕೃತಿ........ ಎಂಡ್ ಮೋಸ್ಟ್ ಇಂಪಾರ್ಟೆಂಟ್, ನೀವು........ ನನಗೆ ಯಾವತ್ತೂ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್ ಅವರನ್ನು ನೋಡಿ ಭಯ ಆಗೋದು. ಇವರಂತಹ ಮೌಲ್ಯಗಳೇ ಇಲ್ಲದ ಹಣದ ಆಧಾರದ ಬದುಕು ನನ್ನದೂ ಆಗುತ್ತೇನೋ ಅಂತ. ಮದುವೆ ಅಂದ್ರೆನೇ ಭಯ ಅನ್ನಿಸಿದ್ದು ಇದೆ.ಬ ಬಟ್...... ಮೇ ಬೀ ಮಿಸ್ಟರ್ ರಾವ್ ಅವರು ನನ್ನ ತಂದೆ ಅನ್ನಿಸಿಕೊಂಡಿದ್ದಕ್ಕೆ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಅಂದ್ರೆ ತಮ್ಮ ಸ್ವಾರ್ಥಕ್ಕಾಗಿ ಈ ಮದುವೆಯ ಪ್ಲಾನ್ ಮಾಡಿದ್ದು. ಅವರ ಸ್ವಾರ್ಥವೇ ಮುಖ್ಯವಾಗಿದ್ದರೂ ಇಟ್ ಬ್ರಾಟ್ ಮಿ ಟು ಯೂ....... ನೀವು, ನಿಮ್ಮನೆಯವರನ್ನು ನೋಡಿದ ಮೇಲೆಯೇ ಹಣವಂತರು ಹೀಗೂ ಇರ್ತಾರೆ ಅಂತ ನನಗೆ ತಿಳಿದಿದ್ದು. ಯು ಆರ್ ದಿ ಬೆಸ್ಟ್ ಥಿಂಗ್ ಎವರ್ ಹ್ಯಾಪನ್ಡ್ ಟು ಮೀ......" ಹಾಗೇ ಅವನ ಎದೆಗೊರಗಿದಳು ಸಮನ್ವಿತಾ.

ಆಗಸದ ತುಂಬಾ ಜೋತ್ಸ್ನೆ ತಂಬೆಳರು ಸುರಿದು ಆ ಜೋಡಿಗೆ ಶುಭ ಹಾರೈಸಿದಳು. ನೀನು ಬಾಲ್ಯದಿಂದ  ಕಳೆದುಕೊಂಡು, ಹಂಬಲಿಸಿದ ಹಿಡಿಪ್ರೀತಿಯನ್ನು ಅನಂತವಾಗಿಸಿ ನಿನ್ನ ಮಡಿಲಿಗೆ ಸುರಿದ್ದಿದ್ದೇನೆಂದು ಆ ಭಗವಂತ ಆಶೀರ್ವದಿಸಿದನಾ.......? ತಿಳಿಯದು.

          *****************************

ಇದೆಲ್ಲವೂ ಘಟಿಸಿ ವರ್ಷಗಳೇ ಉರುಳಿವೆ. ನವ್ಯಾ ಈಗ ಆತ್ಮವಿಶ್ವಾಸದ ಖನಿ. ಅವಳ ನಡೆ ನುಡಿಗಳಲ್ಲಿ ಸಂತೋಷ, ಆತ್ಮಸ್ಥೈರ್ಯ ತುಂಬಿತುಳುಕುತ್ತದೆ. ಆ ಮನೆಯನ್ನೆಲ್ಲಾ ಜೀವಸೆಲೆಯಂತೆ ಆವರಿಸಿಕೊಂಡಿದ್ದಾಳೆ ಅವಳು. ಅವಳ ಹಾಗೂ ಕಿಶೋರನ ದಾಂಪತ್ಯ ಲತೆಯೂ ಕುಡಿಯೊಡೆದಿದೆ. ಪುಟ್ಟ ಸೌಪರ್ಣಿಕಾ ತನ್ನ ಪುಟಾಣಿ ಹೆಜ್ಜೆಗಳಿಂದ ಆ ಇಡೀ ಮನೆಯನ್ನೇ ನಂದನವಾಗಿಸಿದ್ದಾಳೆ......

ಮಂಗಳಾ ಹಾಗೂ ಸತ್ಯನಾರಾಯಣರಿಗೆ ಮೊಮ್ಮಗಳನ್ನು ಆಡಿಸಲು ಇಪ್ಪತ್ನಾಲ್ಕು ಗಂಟೆಯೂ ಸಾಲುವುದಿಲ್ಲ. ಕಾರ್ತಿಕನಿಗಂತೂ ಅತ್ತಿಗೆಯೊಂದಿಗೆ ಪುಟ್ಟ ಸೌಪರ್ಣಿಕಾಳ ಕಂಪನಿಯೂ ಸಿಕ್ಕಿದೆ. ಅವನು ಓದು ಮುಗಿಸಿ ನೌಕರಿ ಗಿಟ್ಟಿಸಿದ್ದಾನೆ ಎಂಬುದು ಅತೀ ಸಂತೋಷದ ಹಾಗೂ ತಲೆಬಿಸಿ ಕಡಿಮೆ ಮಾಡುವ ವಿಷಯ ಮಂಗಳಮ್ಮನಿಗೆ. ಜೊತೆಗೆ ಇವನಿಗೂ ಕೆಲಸ ಕೊಡುವವರು ಭೂಲೋಕದಲ್ಲಿ ಇದ್ದಾರಾ ಎಂಬ ಅಚ್ಚರಿಯೂ......

ಹಾಗೆಯೇ ನವ್ಯಾಳ ಬಗ್ಗೆ ಈವರೆಗೂ ಯಾರ ಕೊಂಕು ನುಡಿಗಳೂ ಬಂದಿಲ್ಲ. ಅದು ಹಾಗೆ ಇರಲಿ ಎಂದು ಆಶಿಸೋಣ......

ಡಾಕ್ಟರ್ ಸಮನ್ವಿತಾ ಈಗ ಅಧಿಕೃತವಾಗಿ ಸಮನ್ವಿತಾ ಶರ್ಮಾ ಆಗಿದ್ದಾರೆ. ಸಚ್ಚಿದಾನಂದ ಹಾಗೂ ಮೃದುಲಾರ ಮುದ್ದಿನ ಮಗಳಾಗಿ, ಆಕೃತಿಯ ಅಕ್ಕರೆಯ ಒಡನಾಟದಲ್ಲಿ, ಅಭಿಯ ಪ್ರೀತಿಯ ಸಾಂಗತ್ಯದಲ್ಲಿ ಬಾಲ್ಯದಿಂದ ಹಪಹಪಿಸಿದ ಕುಟುಂಬದ ಪ್ರೀತಿಯಲ್ಲಿ ಸಂಪೂರ್ಣ ಸುಖಿ ಅವಳು. ಇವರ ನಡುವೆ ನಾನೇ ಮನೆ ಅಳಿಯನಂತಾಗಿರುವೆ ಎಂಬ ಅಳಲು ಅಭಿಯದ್ದು. ಅವನದೆಲ್ಲಾ ನಾಟಕವೇ ಬಿಡಿ....... ಅಣ್ಣ ಅಪ್ಪನನ್ನು ಮೀರಿಸುವ ಅಮ್ಮಾವ್ರ ಗಂಡ ಆಗಿದ್ದಾನೆ ಎಂದು ಅಣಕಿಸುತ್ತಾಳೆ ಆಕೃತಿ. 'ನಮ್ಮ ಡಾಕ್ಟ್ರು ಅಷ್ಟು ಜೋರಿಲ್ಲ' ಅನ್ನೋ ಜಾಣ ಸಮಜಾಯಿಷಿ ಕಲಾವಿದನದ್ದು‌‌.‌

ಮೀರಾ ಅವರು ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡು ಸಂಜೀವಿನಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದ್ದಾರೆ. 

ಮಾಲಿನಿ ರಾವ್ ಸತ್ಯಂ ಅವರಿಂದ ಡೈವೋರ್ಸ್ ಪಡೆದು ಅಣ್ಣನ ಮನೆಗೆ ಹೋಗಿ ನೆಲೆಸಿದ್ದಾರೆ. ಸತ್ಯಂ ಹೆಂಡತಿಗೆ ಪರಿಹಾರ ಕೊಟ್ಟ ನಂತರ ಅಳಿದುಳಿದ ಚೂರು ಪಾರು ಹಣದಲ್ಲಿ ಅವರ ಅಂದಕಾಲತ್ತಿಲ್ ವೈಭವದ ಪ್ರತೀಕದಂತಿರುವ ರಾವ್ ಮ್ಯಾನ್ಶನಲ್ಲಿ ಒಬ್ಬರೇ ಕೂತು ಕುಡಿಯುತ್ತಾರೆ. ಇಷ್ಟಾದರೂ ಅವರ ಅಹಂಕಾರವೇನೂ ಇಳಿದಿಲ್ಲ. ಅವರೆಂದೂ ಬದಲಾಗರು ಬಿಡಿ…...

ಇನ್ನು ಚೈತಾಲಿ ಅಭಿಯ ಆಫೀಸಿನ ಕೆಲಸದಲ್ಲಿ ಸಂತೋಷವಾಗಿ ತೊಡಗಿಕೊಂಡು ವೈಯಿಂದ ಒಂದು ಕಿಲೋಮೀಟರ್ ಡಿಸ್ಟೆನ್ಸಿನಲ್ಲಿ ಇದ್ದಾಳೆ. ನಮ್ಮ ವೈ ಚೈ ಸಿಗೋಲ್ಲ ಅಂತ ಖಚಿತವಾಗಿ ದೇವದಾಸ್ ಆಗಿ ಹಾಡ್ತಾ ಇರ್ತಾನೆ. ಆಗಾಗ ಅಭಿಯ ಮನೆಗೂ ಹಾಜರಿ ಹಾಕಿ ಕುಕ್ಕರಿನಲ್ಲಿ ಮೂರು ವಿಶಲ್ ಹಾಕಿಸಿ ಟೀ ಮಾಡ್ತಾ ಇರ್ತಾನೇ...... ಆದರೆ ಅದನ್ನು ಕುಡಿಯುವ ಧೈರ್ಯವನ್ನು ಇದುವರೆಗೂ ಯಾರೂ ಮಾಡಿಲ್ಲವೆನ್ನಿ.

ವಾರಕ್ಕೊಮ್ಮೆ ಶರ್ಮಾ ಪರಿವಾರ ಕಿಶೋರನ ಮನೆಗೆ ಹೋಗುವುದು, ಇಲ್ಲಾ ಅವರು ಇಲ್ಲಿಗೆ ಬರುವುದು ಪರಿಪಾಠವಾಗಿದೆ. ಆಗ ಇಡೀ ಜಗತ್ತಿನ ಕಾಡು ಹರಟೆಗೆಲ್ಲಾ ಪ್ರಾಮುಖ್ಯತೆ ಸಿಗುತ್ತದೆ. ಭಯಂಕರ ಕಾದಾಟಗಳಾಗುವುದೂ ಉಂಟು. ಮುಖ್ಯವಾಗಿ ಅಭಿ ಮತ್ತು ಆಕೃತಿಯ ನಡುವೆ….. ಅಭಿಗೆ ನವ್ಯಾಳ ರೂಪದಲ್ಲಿ ಇನ್ನೊಬ್ಬ ತಂಗಿ ದೊರಕಿದ್ದಾಳಲ್ಲ ಈಗ…. ಆಕೃತಿಯೊಂದಿಗೆ ಜಗಳವಾದಾಗಲೆಲ್ಲಾ ಹೊಸ ತಂಗಿ ಅಣ್ಣನ ಪಕ್ಷ ವಹಿಸಿ ಎಲ್ಲರ ಬಾಯಿ ಮುಚ್ಚಿಸುತ್ತಾಳೆ. ಅದಕ್ಕೆ ನವ್ಯಾಳೆಂದರೇ ವಿಶೇಷ ಪ್ರೀತಿ ಅವನಿಗೆ.......

ಕೊನೆಯದಾಗಿ ಒಂದು ಮಾತು......

ನಿಮಗೂ ದಿನನಿತ್ಯದ ಬದುಕಿನಲ್ಲಿ ನವ್ಯಾ ಹಾಗೂ ಸಮನ್ವಿತಾಳಂತಹ ಹಲವು ಹೆಣ್ಣುಮಕ್ಕಳು ಸಿಗಬಹುದು.

ನವ್ಯಾಳಂತಹವರು ಎದುರು ಸಿಕ್ಕರೆ ಅವಳ ಹಿನ್ನೆಲೆ ಕೆದಕಿ ಅವಮಾನಿಸಬೇಡಿ. ಕುಹಕವಾಡಿ ನೋಯಿಸಬೇಡಿ...... ಸಾಧ್ಯವಾದರೆ ಅವರ ಹೋರಾಟಕ್ಕೊಂದು ಮೆಚ್ಚುಗೆ ನೀಡಿ, ಅವರ ಆತ್ಮಸ್ಥೈರ್ಯಕ್ಕೊಂದು ಸಲಾಂ ಹೇಳಿ. ಇಲ್ಲವಾದರೇ ಸುಮ್ಮನಿದ್ದುಬಿಡಿ.

ಸಮನ್ವಿತಾಳಂತಹವರು ಸಿಕ್ಕರೆ ಊರಿನ ಚಿಂತೆ ನಿಮಗೇಕೆ ಎಂದು ಜರಿಯಬೇಡಿ…... ಸಾಧ್ಯವಾದರೆ ಅವರಿಂದ ಒಂದಿಷ್ಟು ಕಲಿಯಿರಿ. ಅವರ ಜೊತೆ ಕೈಜೋಡಿಸಿ. ಇಲ್ಲವಾದರೇ ಸುಮ್ಮನಿದ್ದುಬಿಡಿ.

ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ

ಧನ್ಯವಾದಗಳೊಂದಿಗೆ🙏🙏🙏

                           ಮುಕ್ತಾಯ



ಅನೂಹ್ಯ 42

ಪತಿಯ ಹರಿತವಾದ ಮಾತುಗಳು ಮಂಗಳಾರ ವಿವೇಕವನ್ನು ಜಾಗೃತಗೊಳಿಸಿತ್ತು. ಮನಸ್ಸು ಆತ್ಮವಿಮರ್ಶೆಗೆ ಇಳಿದಿತ್ತು. ಆಳವಾಗಿ ಯೋಚಿಸಿದಷ್ಟೂ ನನ್ನ ಮನೆ, ನನ್ನ ಕುಟುಂಬ ಎಂದು ಸದಾ ತಮ್ಮ ಒಳಿತನ್ನೇ ಬಯಸುವ ಸೊಸೆಯ ಎದುರು, ಮಗನ ಉದಾತ್ತ ಯೋಚನೆಯೆದುರು, ಸಮನ್ವಿತಾಳ ನೈತಿಕ ಮೌಲ್ಯಗಳೆದುರು, ಪರಿಸ್ಥಿತಿ ಅರ್ಥೈಸಿಕೊಂಡ ಗಂಡನೆದುರು ತಾವು ತೀರಾ ಕುಬ್ಜರಾದಂತೆ ಎನಿಸಿತು. 

ಹೆತ್ತವರಿಂದ ಮಗನನ್ನು ದೂರ ಮಾಡಬಾರದೆಂಬ ಕಾರಣಕ್ಕೆ ಹಿಂದೂ ಮುಂದೂ ಯೋಚಿಸದೇ ಸತ್ಯ ನುಡಿದುಬಿಟ್ಟಳೆಂದರೆ ಅದೆಷ್ಟು ಪ್ರೀತಿ ವಿಶ್ವಾಸವಿರಬೇಕು ಅವಳಿಗೆ ನಮ್ಮ ಮೇಲೆ....?  ಅವಳೆಂದೂ ನನ್ನನ್ನು ಅತ್ತೆಯ ರೀತಿ ಕಾಣಲೂ ಇಲ್ಲ ಹಾಗೆ ಸಂಬೋಧಿಸಲೂ ಇಲ್ಲ. 'ಅಮ್ಮಾ' ಎಂದೇ ಕರೆಯುತ್ತಿದ್ದುದು. ಮಗಳಿಗೆ ಅಮ್ಮನ ಮೇಲಿರುವಂತಹ ಕಾಳಜಿ, ಅಕ್ಕರೆ ಅವಳಿಗೆ ನನ್ನ ಮೇಲೆ….. 

ಇಂತಹ ಪ್ರೀತ್ಯಾದರಕ್ಕೆ ತಾನು ಯೋಗ್ಯಳೇ?

ಅವರ ಅಂತರಾತ್ಮ ಗಹಗಹಿಸಿತು....

'ನೀನೆಂತಹಾ ಯೋಗ್ಯೆ...?

ಎಂತಹ ಗಟ್ಟಿ ಗುಂಡಿಗೆಯವರಾದರೂ ಹೇಳಲು ಸಾವಿರ ಬಾರಿ ಯೋಚಿಸಿ ಹೆದರುವಂತಹ ಸತ್ಯವನ್ನು ಅರೆಘಳಿಗೆ ಯೋಚಿಸದೇ ನುಡಿದವಳನ್ನು ಹೇಗೆ ನಡೆಸಿಕೊಂಡೆ? ನೀನು ಮಾತನಾಡಿ, ಬೈದಿದ್ದರೂ ಸಹಿಸುತ್ತಿತ್ತು ಆ ನೊಂದ ಜೀವ…... ಆದರೆ ನೀನು….? ಮೌನವೆಂಬ ಕಡು ಕ್ರೂರ ಶಿಕ್ಷೆ ವಿಧಿಸಿರುವೆ ಆ ಬಸವಳಿದ ಮನಕ್ಕೆ. ಆಡಿದ ಮಾತುಗಳು, ಬೈಗುಳಗಳು ಕಾಲಕ್ರಮೇಣ ಮನದ ಭಿತ್ತಿಯಿಂದ ಮರೆಯಾಗಬಹುದೇನೋ..... ಈ ಜಗದಲ್ಲಿಯೇ ಸಹಿಸಲಸಾಧ್ಯವಾದ ಶಿಕ್ಷೆ ಎಂದರೆ ನಮ್ಮ ಪ್ರೀತಿಪಾತ್ರರ ಕಡು ಮೌನವಲ್ಲವೇ.....? ಅದು ನಮ್ಮನ್ನು ಕುಗ್ಗಿಸಿ ಆತ್ಮಬಲವನ್ನೇ ಕಸಿಯುವುದಿಲ್ಲವೇ? ಅಂತಹ ಶಿಕ್ಷೆಯನ್ನು ನೀನು ನವ್ಯಾಳಿಗೆ ವಿಧಿಸಿಲ್ಲವೇ?

'ನೀನು ನನ್ನ ಮಗಳಂತೆ' ಅನ್ನುತ್ತಲೇ ಅವಳನ್ನು ಕ್ಷಣಾರ್ಧದಲ್ಲಿ ಪರಕೀಯಳನ್ನಾಗಿಸಿಬಿಟ್ಟೆಯಲ್ಲ…..? ಇನ್ನೆಂದೂ ಅವಳನ್ನು ಮಗಳೆಂದು ಕರೆಯಬೇಡ. ಆ ಯೋಗ್ಯತೆ ನಿನಗಿಲ್ಲ. 'ಅಕ್ಕಪಕ್ಕದವರು ಏನೆನ್ನುವರೋ? ಲೋಕ ಎಷ್ಟು ಆಡಿಕೊಳ್ಳುವುದೋ? ಸಂಪಾದಿಸಿದ ಗೌರವಕ್ಕೆ ಎಲ್ಲಿ ಕುಂದಾಗುವುದೋ?' ಎಂದೆಲ್ಲಾ ಯೋಚಿಸಿದ ನಿನಗೆ ಇಷ್ಟು ವರ್ಷ ಜೊತೆಗಿದ್ದ 'ಮಗಳಂತಹ' ಸೊಸೆಯ ಎದೆಯಲ್ಲಿ ಎಂತಹ ಜ್ವಾಲಾಮುಖಿ ಸ್ಫೋಟಗೊಂಡಿದೆ? ಅವಳು ಬದುಕಲ್ಲಿ ಎಷ್ಟು ನೊಂದಿದ್ದಾಳೆ? ಅವಳಿಗೆ ಈಗ ನಿನ್ನ ಅಗತ್ಯ ಎಷ್ಟಿದೆ ಎಂಬ ಯೋಚನೆಗಳೇ ಬರಲಿಲ್ಲವಲ್ಲ....... ಅದಕ್ಕೇ ತಾನೇ ಹೇಳುವುದು, ಮಗಳು ಮಗಳೇ, ಸೊಸೆ ಸೊಸೆಯೇ ಎಂದು.....?

ಪುಣ್ಯ...... ದೇವರು ನಿನಗೆ ಮಗಳ ಭಾಗ್ಯವನ್ನು ದಯಪಾಲಿಸಲಿಲ್ಲ. ಅದೃಷ್ಟವಂತರಿಗೆ ಮಾತ್ರವೇ ಹೆಣ್ಣು ಮಗಳು ಜನಿಸುವುದು. ಆ ಅದೃಷ್ಟದ ಮಾತು ಬಿಡು. ನಿನಗೆ ಹೆಣ್ಣು ಮಗಳ ತಾಯಿಯಾಗುವ ಯೋಗ್ಯತೆಯಿಲ್ಲ. ಇನ್ನು ಮುಂದೆ ಪರರ ಭಾವನೆಗಳನ್ನು ಅರಿಯುವ ಸೂಕ್ಷ್ಮ, ಉದಾತ್ತ ಚಿಂತನೆಯ ಮನಸ್ಸು ನನ್ನದೆಂದು ಯಾರಲ್ಲೂ ಹೇಳಬೇಡ........ ಮೇಲ್ನೋಟಕ್ಕೆ ಹಾಗೆ ತೋರಿಸಿಕೊಂಡರೂ ಆಂತರ್ಯದಲ್ಲಿ ನೀನೂ ಇತರರಂತೆ ಸಂಕುಚಿತ ಮನೋಭಾವದ ಸ್ವಾರ್ಥಿಯೇ.....‌...

ನಿನ್ನ ಗಂಡನನ್ನು ನೋಡು…..... ಅವರು ನವ್ಯಾಳನ್ನು ಮಗಳೆಂದು ಕರೆದದ್ದು ಮನಸ್ಸಿನಿಂದ. ಹಾಗಾಗಿಯೇ ಈಗ ಮಗಳ ಕಷ್ಟ ಕಾಲದಲ್ಲಿ ಅವಳಿಗೆ ಒತ್ತಾಸೆಯಾಗಿ ನಿಂತು ಅವಳ ನೋವಿನ ಬಗ್ಗೆ, ಅದನ್ನು ಶಮನಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಅದೇ ನೀನು….....? ಸೊಸೆಯನ್ನು ಕೇವಲ ಬಾಯ್ಮಾತಿಗೆ ಮಗಳೆಂದು ಕರೆದೆಯೇ ಹೊರತು ಅವಳನ್ನೆಂದೂ ಮಗಳನ್ನಾಗಿ ಸ್ವೀಕರಿಸಲೇ ಇಲ್ಲ ನೀನು. 

ಅದೇ ನಿನಗೊಬ್ಬ ಮಗಳಿದ್ದು, ಆಕೆಯನ್ನು ಯಾರೋ ಇಂತಹ ನರಕ ಕೂಪಕ್ಕೆ ತಳ್ಳಿದ್ದರೇ….....? ಆಕೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಮಡಿಲಿನಾಸರೆಗಾಗಿ ಓಡಿ ಬಂದಿದ್ದರೇ…...? ಆಗಲೂ ಹೀಗೇ ಜನರ ಕುಹಕ, ಸಮಾಜ, ಮಾನ ಮರ್ಯಾದೆ, ಗೌರವವೆಂದು ಮಗಳೊಂದಿಗೆ ವ್ಯವಹರಿಸುತ್ತಿದ್ದೆಯಾ?' 

ದಿಗ್ಗನೆದ್ದು ಕೂತರು ಮಂಗಳಮ್ಮ. ಪತಿಯ ಕಟು ನುಡಿಗಳಿಗಿಂತಲೂ ಹೆಚ್ಚು ಘಾಸಿಗೊಳಿಸಿತು ಅಂತರಾತ್ಮದ ಪ್ರಶ್ನೆ. ತಾನು ಹೆತ್ತ ಮಗಳು ನವ್ಯಾಳ ಸ್ಥಿತಿಯಲ್ಲಿದ್ದರೆ….... ಅವಳನ್ನೂ ಹೀಗೇ ನಡೆಸಿಕೊಳ್ಳುತ್ತಿದ್ದೆನೇ…....?

ಖಂಡಿತಾ ಇಲ್ಲಾ……. ಆಗ ಈ ಸಮಾಜ, ಜನರ ಕಿಡಿನೋಟ, ಕುಹಕ, ಬಹಿಷ್ಕಾರದ ಭಯ ಯಾವುದೂ ತಡೆಯುತ್ತಿರಲಿಲ್ಲ ನನ್ನನ್ನು. ಅಷ್ಟೆಲ್ಲಾ ವೇದನೆ ಅನುಭವಿಸಿ ಒಮ್ಮೆ ಹೊಕ್ಕರೆ ಹೊರಬರಲಾರದ ನರಕದಿಂದ ಹೇಗೋ ಹೊರಬಂದ ಮಗಳನ್ನು ಇಡೀ ಜಗತ್ತನ್ನೇ ಎದುರು ಹಾಕಿಕೊಂಡಾದರೂ ಕಣ್ರೆಪ್ಪೆಯಂತೆ ಜೋಪಾನ ಮಾಡುತ್ತಿದ್ದೆ. ಅವಳ ಸ್ಥಿತಿಗೆ ಕಾರಣರಾದ ನೀಚರು ಸಿಕ್ಕರೆ ಕೈಯಾರೆ ಕೊಂದುಬಿಡುತ್ತಿದ್ದೆ. 

'ಅಲ್ಲಿಗೆ ಒಪ್ಪಿದೆಯಲ್ಲಾ... ನವ್ಯಾ ಮಗಳಲ್ಲವೆಂದು? ಕಡು ಸ್ವಾರ್ಥಿ…...' ಅಂತರಾತ್ಮ ಪಾತಾಳಕ್ಕೆ ನೂಕಿ ಗುಡುಗಿತು.

ಅಯ್ಯೋ…… ಖಂಡಿತಾ ಇಲ್ಲಾ. ಅವಳು ನನ್ನ ಮಗಳೇ.....! ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತಲೂ ಹೆಚ್ಚು. ಏಕೆ ಹೀಗೆ ಮಾಡಿಬಿಟ್ಟೆ ನಾನು? ಪಾಪ…. ನವ್ಯಾಳ ಮನಸ್ಥಿತಿ ಏನಾಗಿರಬಹುದು? ನೆನಸಲೂ ಭಯವಾಗುತ್ತಿದೆಯಲ್ಲಾ.......  ಇಲ್ಲ ಇಲ್ಲಾ..... ಇನ್ನೆಂದೂ ನಿನ್ನನ್ನು ಒಂಟಿಯಾಗಿಸಲಾರೆ. ಈ ಸಮಾಜ, ಜನರೆಲ್ಲಾ ಹಾಳಾಗಲೀ. ಅವರ್ಯಾರೂ ನಿನಗಿಂತಲೂ ಮುಖ್ಯವಲ್ಲ ನನಗೆ. ಮಗಳ ಬದುಕಿಗಿಂತ ಹೆಚ್ಚು ಯಾವುದಿದೆ? ನೀನೇ ಮುಖ್ಯ ನನಗೆ….‌

ತಮ್ಮ ಸ್ಪಂದನರಹಿತ ಯೋಚನಾಶೈಲಿಗೆ ಅಂತರಾತ್ಮ ನೀಡಿದ ವಜ್ರಾಘಾತಕ್ಕೆ ತತ್ತರಿಸಿದರು. ಉಕ್ಕಿ ಬಂದ ಕಣ್ಣೀರನ್ನು ತಡೆಯಲೂ ಪ್ರಯತ್ನಿಸದೇ ಕೋಣೆಯಿಂದ ಹೊರಬಂದರು. ಅವರ ತಲೆಯಲ್ಲಿದ್ದುದ್ದು ಒಂದೇ...... ನವ್ಯಾ......!

ಹಜಾರದ ಸೋಫಾದಲ್ಲಿ ದೀರ್ಘಾಲೋಚನೆಯಲ್ಲಿ ಮುಳುಗಿದ್ದರು ಸತ್ಯನಾರಾಯಣ. ಮಹಡಿಗೆ ಸಾಗುವ ಮೆಟ್ಟಿಲಿನ ಬದಿಯಲ್ಲಿ ಸುಮ್ಮನೆ ಗೋಡೆ ನೋಡುತ್ತಾ ಕುಳಿತ ಸಮನ್ವಿತಾಳ ಮಡಿಲಿನಲ್ಲಿ ಮುದುರಿ ಮಲಗಿದ್ದ 'ಮಗಳು' ಕಂಡಳು. ಇನ್ನೂ ಬಿಕ್ಕುತ್ತಲೇ ಇದ್ದಳೆಂಬುದು ಅವಳ ಉಸಿರ ಏರಿಳಿತಗಳಿಂದಲೇ ಸ್ಪಷ್ಟವಾಗಿತ್ತು.

ಅವರಿಬ್ಬರ ಬಳಿ ಸಾಗಿದವರು ಬೇರೇನೂ ಯೋಚಿಸದೇ ಸಮನ್ವಿತಾಳ ಮಡಿಲಿನಲ್ಲಿದ್ದ ನವ್ಯಾಳನ್ನು ಎಬ್ಬಿಸಿ ತಮ್ಮ ಎದೆಗಾನಿಸಿಕೊಂಡರು. ಅಷ್ಟೇ ಸಾಕಾಯ್ತು ಅವಳ ಮನದ ಬೇಗುದಿ ಶಮನವಾಗಲು…... ಅವರನ್ನು ಗಟ್ಟಿಯಾಗಿ ತಬ್ಬಿ ಮಧ್ಯಾಹ್ನದಿಂದ ತಾನು ಅನುಭವಿಸಿದ ಯಾತನೆಯನ್ನೆಲ್ಲಾ ವಿವರಿಸುವಂತೆ ಮತ್ತೆ ಅಳತೊಡಗಿದಳು. 

ಅವಳ ಕಣ್ಣಿನ ಪ್ರತೀ ಹನಿಯ ಹಿಂದಿನ ಭಾವವೂ ಅರಿವಾಗದೇ ಆ ತಾಯಿ ಹೃದಯಕ್ಕೆ.....? ಅವರ ಹಸ್ತದ ಆ ಅಮೃತ ಸ್ಪರ್ಶ ಮಗಳ ಇಷ್ಟು ವರ್ಷಗಳ ಒಡಲುರಿಗೆ ತಂಪೆರೆಯದೇ.....? ಇಬ್ಬರಿಗೂ ಮಾತು ಬೇಡವಾಗಿತ್ತು. ಅಮ್ಮನ ಭದ್ರತೆಯ ಅಪ್ಪುಗೆಯಲ್ಲಿನ ಸಾಂತ್ವನ ಮಗಳಿಗೆ ಹರುಷ ತಂದರೆ, ಮಗಳು ನನ್ನ ಮಮತೆಯ ಆಸರೆಯಲ್ಲಿ ಭದ್ರವಾಗಿದ್ದಾಳೆ ಎಂಬ ನೆಮ್ಮದಿ ತಾಯಿಗೆ......

ತಮ್ಮ ಮಾತುಗಳನ್ನು ಬಹಳ ಬೇಗನೆ ಅರ್ಥೈಸಿಕೊಂಡು ಆಗುತ್ತಿದ್ದ ತಪ್ಪನ್ನು ತಿದ್ದಿಕೊಂಡ ಮಡದಿಯ ಬಗ್ಗೆ ಹೆಮ್ಮೆಯಾಯಿತು ಸತ್ಯನಾರಾಯಣರಿಗೆ. ಅವರ ಮೇಲಿದ್ದ ಅಲ್ಪಸ್ವಲ್ಪ ಅಸಮಾಧಾನ ಹೇಳಹೆಸರಿಲ್ಲದಂತೆ ಮಾಯವಾಯಿತು. ಈಗ ಸಮಾಜಕ್ಕೆ ಏನೆಂದು ಉತ್ತರಿಸುವುದೆಂಬ ಚಿಂತೆ ಅಷ್ಟಾಗಿ ಕಾಡಲಿಲ್ಲ ಅವರನ್ನು. ಬದುಕಿನಲ್ಲಿ ನೆಮ್ಮದಿಯೆಂಬುದು ಕೌಟುಂಬಿಕ ಸಂಬಂಧಗಳ ಮೇಲೆ ನಿಂತಿರುತ್ತದೆ. ಸಂಬಂಧಗಳಲ್ಲಿ ಪರಸ್ಪರ ಗೌರವ, ಪ್ರೀತಿ, ನಂಬಿಕೆಗಳಿದ್ದರೆ ಬದುಕೇ ನಂದನ. ಅದರ ಮುಂದೆ ಅಕ್ಕಪಕ್ಕದವರು, ಜನ, ಲೋಕದ ನಿಂದನೆಗಳೆಲ್ಲವೂ ಗೌಣವೇ.

ಸಮನ್ವಿತಾ ಕಾಣದ ದೇವರಿಗೆ ಅದೆಷ್ಟು ವಂದಿಸಿದಳೋ...... ಇಂದು ನವ್ಯಾಳ‌ ಬದುಕನ್ನು ಸರಿಯಾದ ದಡಕ್ಕೆ ತಲುಪಿಸಿದೆ ಅನ್ನುವ ನಿರಾಳ ಭಾವ ಆವರಿಸಿತು ಅವಳನ್ನು. ಒಂದು ವೇಳೆ ಈ ಮನೆ ನವ್ಯಾಳನ್ನು ಸ್ವೀಕರಿಸದಿದ್ದರೆ ತಾನೇ ಅವಳ ಜವಾಬ್ದಾರಿ ವಹಿಸಿಕೊಳ್ಳುವೆನೆಂದು ನಿರ್ಧರಿಸಿದ್ದಳಾದರೂ ಆಗ ನವ್ಯಾ ಸಂತೋಷವಾಗಿರುತ್ತಿರಲಿಲ್ಲ ಎಂಬುದು ಸಮಾಳಿಗೆ ತಿಳಿದ ವಿಷಯ. ಅಂತಹ ಸ್ಥಿತಿ ಎದುರಾದರೆ ಭಾವನೆಗಳನ್ನೇ ತನ್ನ ಸುತ್ತ ಬೇಲಿಯಾಗಿಸಿಕೊಂಡು ಅದರೊಳಗೆ ಅವಳೊಂದು ದ್ವೀಪವಾಗಿಬಿಡುವ ಭಯ ಸಮನ್ವಿತಾಳನ್ನು ಕಾಡತೊಡಗಿತ್ತು. ಆದರೆ ನವ್ಯಾಳ ಬಾಳನ್ನು ಹಸನಾಗಿಸಬೇಕೆಂಬ ಇವಳ ಛಲಕ್ಕೆ, ಕಿಶೋರನ ಒಲುಮೆಗೆ, ನವ್ಯಾಳ ನಿಷ್ಕಲ್ಮಶ ಮನಸ್ಸಿಗೆ ವಿಧಾತನೂ ತಲೆಬಾಗಿ ಹರಸಿದನೇನೋ..... 

ಸಮನ್ವಿತಾಳ ಕಣ್ಣಿಂದ ಹನಿಯೊಂದು ಬಿಡುಗಡೆ ಪಡೆದು ಭೂಶಾಯಿಯಾಯಿತು. ಎಲ್ಲಾ ತಲ್ಲಣಗಳಿಂದ ಅವಳನ್ನು ಮುಕ್ತಗೊಳಿಸುವಂತೆ...... ಹಿಂದಿನಿಂದ ಕೈಯೊಂದು ಭುಜ ಬಳಸಿದಾಗ ತಿರುಗಿದಳು. ಸತ್ಯನಾರಾಯಣರು….. ಕಂಬನಿದುಂಬಿದ ಅಕ್ಷಿಗಳೊಂದಿಗೆ ಅವರ ಭುಜಕ್ಕೊರಗಿದಳು. ಅವಳನ್ನು ಸಮಾಧಾನಿಸುವಂತೆ ತಲೆದಡವಿದವರು, "ನಿನ್ನ ನೋಡಿದರೆ ಹೆಮ್ಮೆ ಎನಿಸುತ್ತೆ ಮಗಳೇ….. ನಿನ್ನಂತಹ ಮಗಳನ್ನು ಪಡೆದ ಹೆತ್ತವರು ಜಗತ್ತಿನಲ್ಲೇ ಅತೀ ಪುಣ್ಯವಂತರು..." ಎಂದರು.

ಅವರ ಮಾತಿಗೆ ಕಣ್ಣೀರಿನ ನಡುವೆಯೇ ನಕ್ಕಳವಳು. "ಅವರು ಪುಣ್ಯವಂತರೋ ಇಲ್ಲಾ ನಾನೇ ಅದೃಷ್ಟಹೀನಳೋ ಹೇಳೋದು ಕಷ್ಟ ಅಪ್ಪ….." ಎಂದಳು.

"ಎರಡೂ ಅಲ್ಲ. ನಿನ್ನಪ್ಪ ಅಮ್ಮ ಕೈ ಚೆಲ್ಲಿದ ಭಾಗ್ಯದಿಂದಾಗಿ ನಾನು, ಮಂಗಳಾ ಹಾಗೇ ಶರ್ಮಾ ದಂಪತಿಗಳು ಅದೃಷ್ಟಶಾಲಿಗಳಾದ್ವಿ....." ನಕ್ಕು ನುಡಿದವರ ಎದೆಗೊರಗಿ ಮತ್ತೆ ಕಣ್ಣೀರಾದಳು ಹುಡುಗಿ.

ಹಾಗೆ ಆ ನಸುಕಿನಲ್ಲಿ ಇಬ್ಬರು ಬಂಗಾರದಂತಹ ಹೆಣ್ಣು ಮಕ್ಕಳ ಹೆತ್ತವರೆನಿಸಿಕೊಳ್ಳುವ ವರ ಪಡೆದು ಭಾಗ್ಯವಂತರಾದರು ಸತ್ಯನಾರಾಯಣ ಹಾಗೂ ಮಂಗಳಾ.

ನಾಲ್ವರ ಮನದ ಬೇಗುದಿ ಇಳಿದು ಮನಗಳು ಶುಭ್ರ ಆಗಸದಷ್ಟು ಹಗುರಾದ ಸಮಯಕ್ಕೆ....... 

ಜಗತ್ತಿನ ಬೇಗುದಿಯನ್ನೆಲ್ಲಾ ತನ್ನಲ್ಲೇ ಹೊತ್ತು, ಸಂಪೂರ್ಣ ಕದಡಿದ ಚಿತ್ತ ಸ್ವಾಸ್ಥ್ಯದೊಂದಿಗೆ, ದೇಹವನ್ನು ಹೊರಲಾರದಷ್ಟು ನಿಶ್ಯಕ್ತಿ ಆವರಿಸಿದ್ದ ಕಾಲುಗಳನ್ನು ಎಳೆದುಕೊಂಡು, ಇನ್ನೇನು ನಿಂತೇ ಬಿಡುತ್ತೇನೆಂದು ಹಠ ಹಿಡಿಯುತ್ತಿದ್ದ ಎದೆಬಡಿತದೊಂದಿಗೆ ಗುದ್ದಾಡುತ್ತಾ ಮನೆಗೆ ಬಂದಿದ್ದ ಕಿಶೋರ್.

ತೆರೆದ ಬಾಗಿಲಿನಿಂದ ಒಳ ಪ್ರವೇಶಿಸಿದವನು ಸ್ತಂಭೀಭೂತನಾಗಿದ್ದ. ಅರೆಕ್ಷಣ ತಾನು ಕಾಣುತ್ತಿರುವುದು ಕನಸಿರಬಹುದೇನೋ ಎನಿಸಿತು. ಬೇರೆಯವರ ಮನೆಗೆ ಬಂದಿರುವೆನಾ ಎಂಬ ಅನುಮಾನವೂ ಕಾಡದಿರಲಿಲ್ಲ. ಕಣ್ಣುಜ್ಜಿಕೊಂಡು ನೋಡಿದ….. ಇಲ್ಲ...... ಅವನದೇ ಮನೆ. ಇರುವ ನಾಲ್ಕು ಮುಖಗಳೂ ಅವನ ಮನಕ್ಕೆ ಅತ್ಯಂತ ಆಪ್ತವಾದುವು. ಆದರೆ......

ಮನೆಯ ಪರಿಸ್ಥಿತಿ ಅವನೆಣಿಕೆಗೆ ಸಂಪೂರ್ಣ ವಿರುದ್ಧವಾಗಿತ್ತು. 'ಅಪ್ಪ ಅಮ್ಮ ನನ್ನ ಮೇಲೆ ಮುನಿಸಿಕೊಂಡಿರುತ್ತಾರೆ. ಅವರನ್ನು ಸಮಾಧಾನಿಸುವುದೆಂತು? ಅವರು ನವ್ಯಾಳನ್ನು ಬಿಟ್ಟುಬಿಡಲು ಹೇಳಬಹುದು. ಅದು ಅವಳಿಗೂ ಒಪ್ಪಿಗೆಯಿರಬಹುದು. ನಾನು ಮನೆಬಿಟ್ಟು ಅವಳೊಂದಿಗೆ ಇರುವೆನೆಂದರೆ ಅಪ್ಪ ಅಮ್ಮನಿಗಿಂತ ಮೊದಲು ಅವಳೇ ವಿರೋಧಿಸುತ್ತಾಳೆ. ಹೇಗೆ ಸಮಾಧಾನಿಸಲಿ ಎಲ್ಲರನ್ನು? ಎಲ್ಲಕ್ಕೂ ಮಿಗಿಲಾಗಿ ನಾನು ಹೋಗುವವರೆಗೆ ನವ್ಯಾ ಮನೆಯಲ್ಲಿರುವಳಾ?' ಎಂದೆಲ್ಲಾ ಯೋಚಿಸಿ ಹೈರಾಣಾಗಿದ್ದ. 

ಇಲ್ಲಿ ನೋಡಿದರೇ…... ಅಪ್ಪ ಸಮನ್ವಿತಾ ಏನೋ ಮಾತನಾಡುತ್ತಿದ್ದರೇ ಅಮ್ಮ, ಅವರ ಮಡಿಲಲ್ಲಿ ಮಲಗಿದ್ದ ನವ್ಯಾ ಇಬ್ಬರೂ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಬಾಗಿಲ ಬಳಿ ಸದ್ದಾದಾಗ ನಾಲ್ವರೂ ತಿರುಗಿದರು.

ಇವನನ್ನು ನೋಡಿದ್ದೇ ಮಂಗಳಮ್ಮ ಮುಖ ತಿರುಗಿಸಿ ಕುಳಿತುಬಿಟ್ಟರು. ಅಪ್ಪ ಹಾಗೂ ಸಮಾಳ ನಿರಾಳ ಮುಖಭಾವ ಅವನ ಬೆಂದ ಮನಸ್ಸಿಗೆ ಕೊಂಚ ಸಮಾಧಾನ ನೀಡಿತು. ನಿಧಾನವಾಗಿ ಮಡದಿಯ ಬಳಿ ಬಂದಿದ್ದ. ನವ್ಯಾ ಅವನನ್ನು ನೋಡದೇ ನೆಲದತ್ತ ನೋಟ ಹರಿಸಿ,

"ಕ್ಷಮಿಸಿ ಕಿಶೋರ್, ನಿಮ್ಮ ಈ ರೀತಿಯ ನಿರ್ಧಾರ ನಾನು ಊಹಿಸಿರಲಿಲ್ಲ. ಅದು ನನಗೆ ಬೇಕಾಗಿಯೂ ಇರಲಿಲ್ಲ. ಸಮಸ್ಯೆಗೊಂದು ಪರಿಹಾರ ಬೇಕಿತ್ತೇ ಹೊರತು ಸಮಸ್ಯೆಯಿಂದ ದೂರ ಓಡುವುದು ಬೇಕಾಗಿರಲಿಲ್ಲ ನನಗೆ. ಓಡಿದರೂ ಎಷ್ಟು ದೂರ ಓಡಬಹುದಿತ್ತು? ಒಂದಲ್ಲಾ ಒಂದು ದಿನ ಸಮಸ್ಯೆ ನಮ್ಮ ಮುಂದೆಯೇ ಬರ್ತಿತ್ತು ಅಲ್ವಾ? ಅದಕ್ಕೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ನಾನೇ ಕಂಡುಹುಡುಕಲು ನಿರ್ಧರಿಸಿದೆ. ಎಲ್ಲಾ ಹೇಳ್ಬಿಟ್ಟೆ. ಇಷ್ಟು ವರ್ಷಗಳಿಂದ ಮನಸ್ಸು ಸುಡುತ್ತಿದ್ದ ಎಲ್ಲವನ್ನೂ ಹೇಳಿದೆ. ಮತ್ತೆ ನಿಮ್ಗೆ ಗೊತ್ತಾ....... ಅಪ್ಪ, ಅಮ್ಮ ನನಗೆ ಬೈಯಲಿಲ್ಲ. ಮನೆಯಿಂದ ಹೊರಗೂ ಹಾಕ್ಲಿಲ್ಲ. ಅವ್ರು ನನ್ನ ಪರಿಸ್ಥಿತಿನ ಅರ್ಥ ಮಾಡ್ಕೊಂಡ್ರು. ನಾವು ಇನ್ನೆಲ್ಲಿಗೂ ಓಡೋ ಅಗತ್ಯ ಇಲ್ಲ ಕಿಶೋರ್…..." ಅವಳ ಧ್ವನಿಯಲ್ಲಿ ಅವನು ಈವರೆಗೆ ಎಂದೂ ಕೇಳದ ಆನಂದವಿತ್ತು. ಅತ್ತೂ ಅತ್ತು ಕೆಂಪಡರಿದ್ದ ಮುಖವೂ ಅವಳಲ್ಲಿ ಸ್ಪುರಿಸುತ್ತಿದ್ದ ಸಂತೋಷವನ್ನು ಕುಂಠಿತಗೊಳಿಸಿರಲಿಲ್ಲ. ಇಷ್ಟು ವರ್ಷಗಳಲ್ಲಿ ಅವಳ ಇಂತಹ ಸಂಭ್ರಮಕ್ಕೆ ಮೊದಲ ಬಾರಿಗೆ ಸಾಕ್ಷಿಯಾಗಿದ್ದರು ಎಲ್ಲರೂ…...

ಅವಳನ್ನು ಹಗುರವಾಗಿ ತಬ್ಬಿದ ಕಿಶೋರ್, "ನೀನು ನನ್ನ ಕ್ಷಮಿಸು ನವ್ಯಾ. ನಾನು ನಿನ್ನ ಮನದ ಹೊಯ್ದಾಟವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಸತ್ಯ ತಿಳಿದರೆ ಈ ಜಗತ್ತೇ ನಮ್ಮ ವಿರುದ್ಧ ನಿಂತು ನಿನ್ನ ನನ್ನಿಂದ ದೂರ ಮಾಡುತ್ತೆ ಅಂತ ಅನ್ನಿಸಿಬಿಡ್ತು. ನಿನ್ನ ಕಳೆದುಕೊಂಡು ಬದುಕೋ ಶಕ್ತಿ ನನಗಿಲ್ಲ. ಮನೆಯಲ್ಲೂ ಒಪ್ಪಲ್ಲ ಅನ್ನಿಸ್ತು. ಇತ್ತೀಚಿನ ನಿನ್ನ ವರ್ತನೆ, ನೀನು ಇಡೀ ರಾತ್ರಿ ನಿದ್ದೆ ಇಲ್ಲದೇ ಆಕಾಶ ನೋಡ್ತಾ ಸಮಯ ಕಳೆಯುತ್ತಿದ್ದದ್ದು, ಆ ನಿನ್ನ ಕನಸುಗಳು….... ನನ್ನ ಕೈಲಿ ನಿನ್ನ ಸಂಕಟ ನೋಡೋಕಾಗ್ಲಿಲ್ಲ. ಹೀಗೇ ಬಿಟ್ಟರೆ ನೀನು ಮಾನಸಿಕ ರೋಗಿ ಆಗ್ತಿಯೇನೋ ಅನ್ನಿಸೋಕೆ ಶುರುವಾಯ್ತು. ಮನೆಯಲ್ಲಿ ಸತ್ಯ ಹೇಳೋಕೆ ಧೈರ್ಯ ಬರ್ಲಿಲ್ಲ. ಹಾಗೆ ನಿನ್ನ ಹಿಂಸೆನೂ ನೋಡೋಕಾಗ್ಲಿಲ್ಲ. ಅದಕ್ಕೆ ಸ್ವಲ್ಪ ಸಮಯ ಮನೆಯಿಂದಲೇ ನಿನ್ನ ದೂರ ಇಡೋಣ. ಆಮೇಲೆ ಏನು ಮಾಡೋದು ಅಂತ ವಿಚಾರ ಮಾಡೋಣ ಅನ್ನಿಸ್ತು. ಅದಕ್ಕೆ ಹೀಗೆ ಮಾಡಿದೆ. ಆದರೆ ಇದ್ರಿಂದಾಗಿಯೇ ನೀನು ಮನೆಯವರಿಗೆ ಎಲ್ಲಾ ಸತ್ಯ ಹೇಳೋ ರಿಸ್ಕ್ ತಗೋತಿಯಾ ಅಂತ ಅನ್ನಿಸ್ಲಿಲ್ಲಾ….. ಆದ್ರೂ ನಾನು ವಾಪಾಸಾಗೋವರೆಗೂ ಕಾಯೋದು ಬಿಟ್ಟು ಒಬ್ಬಳೇ ಎಲ್ಲಾ ಹೇಳಿದ್ಯಲ್ಲಾ......" ಆಕ್ಷೇಪಿಸುತ್ತಲೇ ಅವಳನ್ನು ಸಮಾಧಾನಿಸಿದ.

ತನ್ನನ್ನು ತಾನು ಸಂಭಾಳಿಸಿಕೊಂಡ ನವ್ಯಾ ಅವನಿಂದ ಬಿಡಿಸಿಕೊಂಡು ಮಂಗಳಾರತ್ತ ಕೈ ತೋರಿದಳು‌ 'ಅಮ್ಮನನ್ನು ಸಮಾಧಾನಿಸಿ' ಎನ್ನುವಂತೆ…...

ಈಗ ಅವನಿಗೆ ನಿಜಕ್ಕೂ ಭಯವಾಯಿತು. ಅಪ್ಪನೊಂದಿಗಾದರೂ ಮಾತನಾಡಿ ವಿವರಿಸಬಲ್ಲನೇನೋ ಆದರೆ ಅಮ್ಮ….... ಇಂತಹ ಗಹನವಾದ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದು ಅವರಿಗೆ ದೊಡ್ಡ ಆಘಾತವನ್ನೇ ನೀಡಿದೆಯೆಂಬ ಅರಿವು ಅವನಿಗಿತ್ತು. ಈಗ ಹೇಗೆ ಅವರನ್ನು ಎದುರಿಸಲೀ ಏನೆಂದು ಸಮಾಧಾನಿಸಲೀ ಎಂಬುದೇ ಅರಿವಾಗಲಿಲ್ಲ ಅವನಿಗೆ.

ಅಪ್ಪನನ್ನು ನೋಡಿದ. 'ಏನೂ ಆಗದು. ನಿಧಾನಕ್ಕೆ ಮಾತನಾಡಿ ವಿವರಿಸು' ಎಂಬಂತಿತ್ತು ಅವರ ಮುಖಭಾವ. "ಅವ್ರು ನಿನ್ನಮ್ಮ ಕಣೋ….. ತಪ್ಪು ಮಾಡಿದ್ದೀ. ಒಪ್ಪಿಕೊಂಡು ಕ್ಷಮೆ ಕೇಳು. ಕ್ಷಮಿಸುತ್ತಾರೆ" ಮೆಲುವಾಗಿ ಹೇಳಿದಳು ಗೆಳತಿ.

ಬೇರೆಡೆ ಮುಖಮಾಡಿ ಕುಳಿತ ಅಮ್ಮನ ಬಳಿಗೆ ಬಂದು ಅವರ ಕಾಲ ಬಳಿಯಲ್ಲಿ ಕುಳಿತು, ಅವರ ಎರಡೂ ಕೈಗಳನ್ನು ಹಿಡಿದು ಎದೆಗೊತ್ತಿಕೊಂಡ.

"ಅಮ್ಮಾ....." ಮೆಲುವಾಗಿ ಕರೆದವನ ಧ್ವನಿ ಆರ್ದ್ರವಾಗಿತ್ತು. ಆದರೆ ಮಂಗಳಮ್ಮ ಪ್ರತಿಕ್ರಿಯಿಸಲಿಲ್ಲ‌.

"ಅಮ್ಮಾ, ನೀನು ನನ್ನಮ್ಮ ಅಲ್ವಾ…...? ನಾನು ಚಿಕ್ಕವನು. ಏನೋ ಗೊತ್ತಿಲ್ದೇ ತಪ್ಪು ಮಾಡ್ತಾ ಇರ್ತೀನಿ. ನೀನು ಎಲ್ಲಾ ತಿಳಿದವಳು. ಮಾಡಿರೋ ತಪ್ಪಿಗೆ ಒಂದೆರಡು ಏಟು ಹಾಕು. ಆ ಅಧಿಕಾರ ನಿನಗಿದೆ. ಆದ್ರೆ ಏಟು ಹಾಕಿದ್ಮೇಲೆ ಕ್ಷಮಿಸಿ ಬಿಡಮ್ಮ. ನಾನು ನೋಡು ಅದೆಷ್ಟು ದಡ್ಡ ಅಂತ….. ನೀನು ಕಲಿಸಿರೋ ವಿದ್ಯೆ, ಬುದ್ಧಿ, ಆದರ್ಶಗಳನ್ನೇ ನಾನು ಅಳವಡಿಸಿಕೊಂಡಿರೋದು. ಚಿಕ್ಕಂದಿನಿಂದಲೂ ನೀನು ನನ್ನಮ್ಮ ಅಂತ ಹೇಳ್ಕೊಳ್ಳೋಕೆ ನಂಗೆ ತುಂಬಾ ಹೆಮ್ಮೆ. ಈ ದೇಹ, ವ್ಯಕ್ತಿತ್ವ ಎರಡೂ ನಿನ್ನದೇ ಪ್ರತಿಬಿಂಬ. ತಾಯಿಯಂತೆ ಮಗು ಅಲ್ವೇನಮ್ಮಾ….. ಮತ್ತೆ ಅದ್ಹೇಗೆ ನೀನು ನವ್ಯಾನ ಒಪ್ಪಲ್ಲ, ಮನೆಯಿಂದ ಹೊರಗೆಹಾಕ್ತೀ ಅಂತೆಲ್ಲಾ ಭ್ರಮಿಸಿದೆ ನಾನು? ತುಂಬಾ ಕೆಟ್ಟದಾಗಿ ಯೋಚಿಸಿಬಿಟ್ಟೆ ಅಮ್ಮಾ. ದಯವಿಟ್ಟು ನನ್ನ ಕ್ಷಮಿಸ್ತೀಯಾ....." ಅವನು ಮುಂದೇನು ಹೇಳಲಿದ್ದನೋ...... ಆದರೆ ಮಂಗಳಮ್ಮ ಅವನ ಮಾತುಗಳನ್ನು ಅಲ್ಲೇ ತಡೆದಿದ್ದರು. ಮಗನ ಮಾತುಗಳು ಮತ್ತೊಮ್ಮೆ ಅವರಿಗೇ ಅವರ ಯೋಚನೆಗಳ ಬಗ್ಗೆ ಅಸಹ್ಯ ಹುಟ್ಟುವಂತೆ ಮಾಡಿದ್ದವು.

"ನಾನಲ್ಲ ಕಿಶೋರಾ, ನೀನೆ ನನ್ನ ಕ್ಷಮಿಸಪ್ಪಾ. ನಾನು ನೀನು ಭ್ರಮಿಸಿದ ಹಾಗೇ ಯೋಚಿಸಿಬಿಟ್ಟೆ ಕಣೋ. ಅದೇನಾಗಿತ್ತೋ ನನ್ನ ಬುದ್ಧಿಗೆ.... ಬಹಳ ಕೆಟ್ಟದಾಗಿ ಯೋಚಿಸಿಬಿಟ್ಟೆ ಮಗೂ. ನಿಮ್ಮಪ್ಪಾಜಿ ನನ್ನ ಯೋಚನೆಗಳ ಹಾದಿ ಬದಲಿಸದಿದ್ದಿದ್ರೆ ಈ ಮಗೂನಾ ಮನೆಯಿಂದಲೇ ಹೊರಹಾಕ್ತಿದ್ದೆನೇನೋ.... ಅಷ್ಟರಲ್ಲಿ ನಿಮ್ಮಪ್ಪ ನನ್ನ ತಪ್ಪನ್ನು ನನಗೆ ಅರಿಕೆ ಮಾಡಿಸಿದರು. ನೀನು ನನ್ನ ಪ್ರತಿಬಿಂಬ ಅಲ್ಲಪ್ಪಾ….. ನಿನ್ನ ಯೋಚನೆಗಳು ಬಹಳ ಎತ್ತರದವು. ನಾನು ಓದಿದ ವಿದ್ಯೆ, ಬುದ್ಧಿ, ಆದರ್ಶಗಳನ್ನು ನಿನಗೆ ಹೇಳಿಕೊಟ್ಟೆನೇ ಹೊರತು ನಾನು ಅವುಗಳನ್ನು ಸರಿಯಾಗಿ ಅರ್ಥೈಸಿ ಅಳವಡಿಸಿಕೊಳ್ಳಲಿಲ್ಲ. ಅದೇ ನೀನು ನಾನು ಹೇಳಿದ್ದವುಗಳನ್ನು ನಿನ್ನ ನಡೆ, ನುಡಿ, ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡೆ ಕಿಶೋರಾ.... ನೀನೇ ನನ್ನ ಕ್ಷಮಿಸು ಮಗೂ. ಹಾಗೆಯೇ ನೀನೂ ಸಾಧ್ಯವಾದರೇ ಈ ಅಮ್ಮನನ್ನು ಕ್ಷಮಿಸಿಬಿಡು ಮಗಳೇ...... ನಿನ್ನನ್ನೂ ಅನುಮಾನಿಸಿದೆ ಸಮನ್ವಿತಾ.... ನಿಮ್ಮಷ್ಟು ಎತ್ತರಕ್ಕೆ ಯೋಚಿಸಲಾರದೇ ಹೋದೆ. ಎಲ್ಲರೂ ಕ್ಷಮಿಸಿ ನನ್ನನ್ನು" ಹನಿಗಣ್ಣಾಗಿ ನುಡಿದರು.

ತಮ್ಮ ಪೂರ್ವಾಗ್ರಹ ಪೀಡಿತ ಯೋಚನೆಯ ಬಗ್ಗೆ ಖೇದದ ಜೊತೆಗೇ ಈಗಿನ ಯುವ ಪೀಳಿಗೆ ತಮ್ಮಂತೆ ಗೊಡ್ಡು ಸಂಪ್ರದಾಯ, ಕಟ್ಟುಪಾಡು, ಕಂದಾಚಾರಗಳಿಗೆ ಸೊಪ್ಪು ಹಾಕದೆ ಸರಿ ತಪ್ಪುಗಳನ್ನು ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುವುದನ್ನು ಕಂಡು ಹೆಮ್ಮೆಯೆನಿಸಿತು ಮಂಗಳಾರಿಗೆ.

"ಅಮ್ಮಾ..... ದಯವಿಟ್ಟು ಹೀಗೆಲ್ಲಾ ಮಾತಾಡ್ಬೇಡಿ" ಅವರ ತೋಳಿಗೊರಗಿ ನವ್ಯಾ ಹೇಳಿದರೆ, ಕಿಶೋರ್ ಅಮ್ಮನ ಮಡಿಲಿಗೆ ತಲೆಯೊರಗಿಸಿದ್ದ. 

"ನಾನು ಅಪ್ಪನ ಮಗಳು....." ಸಮನ್ವಿತಾ ಸತ್ಯನಾರಾಯಣರ ಹೆಗಲಿಗೊರಗಿ ನುಡಿದಾಗ  ಉಳಿದವರೂ ನಕ್ಕರು.

ಅಂದಿನ ನಸುಕು ಆ ಮನೆ ಮನಗಳಲ್ಲಿ ಸಂತೋಷವನ್ನು ಹೊನಲಾಗಿಸಿತ್ತು…...

ತಪ್ಪು ಮಾಡುವುದು ಮನುಜನ ಸಹಜ ಗುಣ. ಆ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ಸಾತ್ವಿಕ ಮನದ ಗುಣ. ತಪ್ಪು ಮಾಡಿದಾಗ ಕ್ಷಮೆ ಕೇಳಿದರೆ ಮನಸ್ಸು ಹಗುರಾಗುತ್ತದೆ. ಕ್ಷಮೆ ಕೇಳಲು ವಯಸ್ಸಿನ ಹಂಗಿಲ್ಲ. 'ನಾವು ಹಿರಿಯರು, ಕಿರಿಯರೆದುರು ಕ್ಷಮೆ ಕೇಳಿದರೆ ಸಣ್ಣವರಾಗುತ್ತೇವೆ' ಎಂಬುದು ತಪ್ಪುಕಲ್ಪನೆಯಷ್ಟೇ. ಕ್ಷಮೆ ಕೇಳಲೂ ಧೈರ್ಯ ಬೇಕು. ಮಾಡಿದ ತಪ್ಪಿಗೆ ಕ್ಷಮೆ ಕೇಳಿ ತಿದ್ದಿಕೊಳ್ಳುವವರು ದೊಡ್ಡವರಾಗುತ್ತಾರೆ. ಹೇಗೆ ಕ್ಷಮಿಸುವವನು ದೊಡ್ಡವನೋ ಹಾಗೆಯೇ ಕ್ಷಮೆ ಕೇಳುವ ಮನಸ್ಸುಳ್ಳವನೂ ಎತ್ತರದ ವ್ಯಕ್ತಿತ್ವದವನಲ್ಲವೇ…..?

ಮಂಗಳಾ ಕೋಪದ ಭರದಲ್ಲಿ ವಿವೇಚನೆ ಮರೆತು ಕೆಟ್ಟದಾಗಿ ಯೋಚಿಸಿದ್ದು ನಿಜವಾದರೂ ಗಂಡನ ಮಾತುಗಳಿಂದ ಎಚ್ಚೆತ್ತುಕೊಂಡರು. ಆತ್ಮವಿಮರ್ಶೆ ಮಾಡಿಕೊಂಡರು. ತಮ್ಮ ಯೋಚನೆ ತಪ್ಪೆನಿಸಿದಾಗ ಯಾವುದೇ ಹಿಂಜರಿಕೆಯಿಲ್ಲದೇ ಕ್ಷಮೆ ಕೇಳಿ ಹಿರಿತನ ಉಳಿಸಿಕೊಂಡರು.

ಸತ್ಯ ಹೊರಬಿದ್ದಿತ್ತು. ತಪ್ಪು ಕಲ್ಪನೆಗಳು ದೂರಾಗಿತ್ತು. ಸಂಬಂಧಗಳ ಬೆಸುಗೆ ಇನ್ನಷ್ಟು ಗಟ್ಟಿಯಾಗಿತ್ತು. 

ನವ್ಯಾ ಬದುಕಿನ ಅತೀ ದೊಡ್ಡ ಹಾಗೂ ನಿರ್ಣಾಯಕ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಳು........

ನವ್ಯಾಳ ಬದುಕನ್ನು ಹಸನಾಗಿ ಕಟ್ಟಿಕೊಡಬೇಕೆಂಬ ಸಮನ್ವಿತಾಳ ಆಸೆ ಕೊನೆಗೂ ಈಡೇರಿತ್ತು........

ಈಗ ಸಭ್ಯ ಸಮಾಜವನ್ನು ಎದುರಿಸುವ ಬಗ್ಗೆ ಒಗ್ಗಟ್ಟಾಗಿ ಯೋಚಿಸಬೇಕಿತ್ತು........

        ********ಮುಂದುವರೆಯುತ್ತದೆ**********



ಅನೂಹ್ಯ 41

ವಿವೇಚನಾರಹಿತ ಯೋಚನೆಗಳ ಹೊಡೆತಕ್ಕೆ ಸಿಕ್ಕಿ ಜರ್ಜರಿತವಾಗಿದ್ದ ಮಂಗಳಾರ ಮನಸ್ಸು ನವ್ಯಾಳನ್ನು ಅಪರಾಧಿಯೆಂದು ನಿರ್ಧರಿಸಿಬಿಟ್ಟಿತ್ತು. ಸೊಸೆಯ ದೆಸೆಯಿಂದ ಅಕ್ಕಪಕ್ಕದವರ ಬಾಯಲ್ಲಿ ಕೇಳಬೇಕಾದ ಬಿರುನುಡಿಗಳನ್ನು, ಸಮಾಜದಲ್ಲಿ ಎದುರಿಸಬೇಕಾದ ಸನ್ನಿವೇಶಗಳನ್ನು ಈಗಿನಿಂದಲೇ ಯೋಚಿಸಿ ಕಂಗೆಟ್ಟಿದ್ದರಾಕೆ. 'ಭವಿಷ್ಯದಲ್ಲಿ ತಮ್ಮನ್ನು ಸಮುದಾಯದಿಂದ ಬಹಿಷ್ಕರಿಸಿದರೇ…...' ಎಂಬ ಯೋಚನೆ ಪದೇಪದೇ ತಲೆಯಲ್ಲಿ ಸುಳಿಯತೊಡಗಿದಾಗ ವಿಹ್ವಲರಾದರು ಆಕೆ. ಇಷ್ಟು ವರುಷಗಳ ಗೌರವ, ಮರ್ಯಾದೆಯೆಲ್ಲಾ ಮಣ್ಣುಪಾಲಾಗುವುದನ್ನು ನೆನೆದಾಗ ಒತ್ತರಿಸಿ ಬಂದ ಕಣ್ಣೀರನ್ನು ತಡೆಯಲಾರದೇ ಕುಳಿತಲ್ಲೇ ನಿಶ್ಯಬ್ದವಾಗಿ ಅಳತೊಡಗಿದರು.

ನವ್ಯಾ ಹಾಗೂ ಕಿಶೋರನ ಸಂಬಂಧದ ಭವಿಷ್ಯವೇನು? ಎಂಬ ಯೋಚನೆಯಲ್ಲಿಯೇ ಮುಳುಗಿದ್ದ ಸತ್ಯನಾರಾಯಣರು ಕೊಂಚ ಸಮಯದ ತರುವಾಯ ಮಡದಿ ಅಳುತ್ತಿರುವುದನ್ನು ಗಮನಿಸಿದ್ದರು. ಮಧ್ಯಾಹ್ನದಿಂದ ಕಲ್ಲಿನಂತೆ ಕುಳಿತಿದ್ದ ಹೆಂಡತಿ ಈಗ ಅತ್ತು ದುಃಖವನ್ನು ಹೊರಹಾಕುತ್ತಿರುವುದು ಒಳ್ಳೆಯದೇ ಎನಿಸಿತು. ಅವರನ್ನು ಹಾಗೆ ಅಳಲು ಬಿಟ್ಟರು... 

ರಾತ್ರಿ ಹನ್ನೊಂದರ ಜಾವ……. ಆದರೂ ಯಾರಿಗೂ ಹಸಿವು, ನಿದ್ರೆಯ ಪರಿವೆಯಿರಲಿಲ್ಲ. 

ಸಮನ್ವಿತಾ ನವ್ಯಾಳನ್ನು ಮಡಿಲಿಗೆ ಹಾಕಿಕೊಂಡು ಸಮಾಧಾನಿಸುತ್ತಿದ್ದಳು. ಆದರೆ ಅವಳ ಬೇಗುದಿ ಶಮನವಾಗುವ ಲಕ್ಷಣಗಳೇನೂ ಇರಲಿಲ್ಲ. ಭಾವರಹಿತವಾಗಿ ಶೂನ್ಯದಲ್ಲಿ ನೋಟ ನೆಟ್ಟಿದ್ದಳಷ್ಟೇ. ನವ್ಯಾಳ ಮನ ಅವಳೊಂದಿಗೆ ಕದನ ಸಾರಿತ್ತು. 'ನೀನು ಕಿಶೋರನನ್ನು ಮದುವೆಯಾಗಲೇಬಾರದಿತ್ತು. ಅದರಿಂದಲೇ ಎಲ್ಲಾ ಸಮಸ್ಯೆಗಳೂ ಉದ್ಭವವಾಗಿದೆ' ಎಂದು ಅಣಕವಾಡುತ್ತಿದ್ದ ಮನಸ್ಸು ಅವಳನ್ನು ದಗ್ಧಗೊಳಿಸುತ್ತಿತ್ತು.

ಸಮನ್ವಿತಾಳ ಮನ ಸರಿ ತಪ್ಪುಗಳ ವಿಶ್ಲೇಷಣೆಗೆ ಬಿದ್ದಿತ್ತು. ಸತ್ಯವನ್ನು ಮುಚ್ಚಿಟ್ಟಿದ್ದು ತಪ್ಪೇ. ಆದರೆ ಆ ತಪ್ಪು ನಡೆದಿದ್ದು ತನ್ನ ಹಾಗೂ ಕಿಶೋರನ ಹಠದಿಂದ. ಕಿಶೋರ್ ಮದುವೆಯ ಮಾತೆತ್ತಿದಲ್ಲಿಂದ ಇಂದಿನವರೆಗೂ ನವ್ಯಾ ಸತ್ಯ ಮುಚ್ಚಿಡುವುದು ಬೇಡಾ ಎಂದೇ ವಾದಿಸಿದ್ದಳಲ್ಲವೇ? ಹಾಗಿದ್ದ ಮೇಲೆ ಅವಳ ತಪ್ಪೇನು? ಏನೇನೂ ತಪ್ಪಿಲ್ಲದೇ ಅವಳೇಕೆ ಆದರಿಸುವ ಪತಿಯಿಂದ, ಮಮತೆ ತೋರುವ ಮನೆಯಿಂದ ದೂರಾಗಬೇಕು? ಅವಳು ಈ ಹಿಂದೆ ವೇಶ್ಯೆಯಾಗಿದ್ದಳೆಂಬ ಕಾರಣಕ್ಕೇ…..? ಅವಳೇನು ಸ್ವಇಚ್ಛೆಯಿಂದ ತಾನು ವೇಶ್ಯೆಯಾಗಲೇಬೇಕೆಂದು ಬಯಸಿ ಆಯ್ದುಕೊಂಡ ವೃತ್ತಿಯೇನು ಅದು? 

ಅಸಲಿಗೆ ಯಾವ ಹೆಣ್ಣು ಸ್ವಇಚ್ಛೆಯಿಂದ ಆಸೆಪಟ್ಟು ಈ ವೃತ್ತಿಯನ್ನು ಆಯ್ದುಕೊಳ್ಳುತ್ತಾಳೆ? ಹೆಚ್ಚಿನ ಪ್ರಕರಣಗಳಲ್ಲಿ ಬದುಕಿನ ಅನಿವಾರ್ಯತೆಗಳೇ ಅವರನ್ನು ಇಂತಹ ಕೂಪಕ್ಕೆ ದಬ್ಬುವುದು. ವೇಶ್ಯಾವಾಟಿಕೆಯಲ್ಲಿರುವ ಬಹುಪಾಲು ಹೆಣ್ಣುಮಕ್ಕಳ ಅಂತರಾಳದಲ್ಲಿ ಈ ಸಮಾಜದ ಕ್ರೌರ್ಯವನ್ನು ಅನಾವರಣಗೊಳಿಸುವ ವ್ಯಥೆಯ ಕಥೆಯೊಂದಿರುತ್ತದೆ. ಪರಿಚಿತರು, ಅಪರಿಚಿತರು, ಸಂಬಂಧಿಗಳು, ಪ್ರೇಮಿ......  ಹೀಗೇ ಯಾರದೋ ಪಗಡೆಯಾಟದಲ್ಲಿ ದಾಳಗಳಾಗಿ ಒಡೆದ ಬದುಕ ಭಿತ್ತಿಯ ಮೇಲೆ ಮನದ ಕುಂಚದಿಂದ ಕನಸ ಬಣ್ಣಗಳನ್ನು ಚಿತ್ರಿಸಲಾಗದೇ, ಹರಿದು ಚಿಂದಿಯಾದ ಬದುಕನ್ನೂ ಸಂಕಲಿಸಲಾಗದೇ ಅನಿವಾರ್ಯವಾಗಿ ವೇಶ್ಯಾವಾಟಿಕೆಯ ನರಕದಲ್ಲಿ ಬಂಧಿಯಾಗುತ್ತಾರೆ. ಒಮ್ಮೆ ಈ ಬಂಧಿಖಾನೆಯನ್ನು ಹೊಕ್ಕರೆ ಮುಗಿಯಿತು. ಅವರ ದೇಹದಲ್ಲಿನ ಯೌವ್ವನದ ಕಸುವು ಕರಗಿ ಮುಪ್ಪಿನ ಗೆರೆಗಳು ಆವರಿಸುವ ತನಕ ಕ್ಷಣಕ್ಷಣವೂ ಗಂಡಸಿನ ದೈಹಿಕ ತೃಷೆ ತಣಿಸುವ ಆಟಿಕೆಯಾಗಿ ಇಂಚಿಂಚಾಗಿ ಸಾಯುತ್ತಾ ಬದುಕುತ್ತಾರೆ. ಮುಪ್ಪಡರಿ ವೃದ್ಧಾಪ್ಯ ಆವರಿಸಿ ದೇಹ ಆಕರ್ಷಣೆ ಕಳೆದುಕೊಂಡಾಗಲೇ ಆ ನರಕದಿಂದ ಮುಕ್ತಿ. ಅದೂ ಅಲ್ಲಿಯವರೆಗೂ ಕುಟುಕು ಜೀವ ಉಳಿದಿದ್ದರೇ..... ಹಾಗೆ ಉಳಿದ ಬದುಕನ್ನು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಾ ಕೊನೆಗೊಮ್ಮೆ ಬೀದಿ ಹೆಣವಾಗಿ ಹೋಗುತ್ತಾರೆ.

ಇಂತಹ ಲಕ್ಷಾಂತರ ಹೆಣ್ಣುಮಕ್ಕಳು ನಮ್ಮ ಸಮಾಜದಲ್ಲಿದ್ದಾರೆ. ಸತ್ತಿರುವರೋ ಇಲ್ಲ ಬದುಕಿರುವರೋ ಎಂದು ಕೇಳುವವರೂ ಗತಿಯಿಲ್ಲದೇ ಬೀದಿನಾಯಿಗಳಿಗಿಂತಲೂ ಹೀನ ಸ್ಥಿತಿಯಲ್ಲಿ ಜೀವಿಸುವವರಿದ್ದಾರೆ. ದಂಧೆಗೆ ಇಳಿಯಲೊಪ್ಪದ ಹುಡುಗಿಯರಿಗೆ ಅನ್ನ ನೀರು ಕೊಡದೆ ಬಡಿದು ಬೆದರಿಸುತ್ತಾರೆ. ಅದಕ್ಕೂ ಮಣಿಯದಿದ್ದರೆ ದಲ್ಲಾಳಿಗಳೋ ಇಲ್ಲಾ ಕೋಠಿಗಳ ಕಾವಲಿಗಿರುವ ಗೂಂಡಾಗಳೋ ಅವರನ್ನು ಸಾಮೂಹಿಕವಾಗಿ ಬಲಾತ್ಕರಿಸಿ ದಂಧೆಗೆ ನೂಕುತ್ತಾರೆ. ಅದಕ್ಕೂ ಬಗ್ಗದ ಇನ್ನೂ ಕೆಲವು ಗಟ್ಟಿಗಿತ್ತಿ ಹೆಣ್ಣುಗಳನ್ನು ಬಡಿದು ಕೊಲ್ಲುವುದೂ ಉಂಟು. ಅವರ ಶವಗಳು ಎಲ್ಲಿ ಮಣ್ಣಾಗುತ್ತವೆಯೆಂಬುದು ಕೂಡಾ ಯಾರೂ ಅರಿಯಲಾರದ ರಹಸ್ಯ…..

ಇವೆಲ್ಲವೂ ಎಲ್ಲೋ ಅನ್ಯಗ್ರಹದಲ್ಲಿ ನಡೆಯುವುದಿಲ್ಲ. ಈ ನಮ್ಮ ಸಭ್ಯ ಸಮಾಜದಲ್ಲಿಯೇ ನಡೆಯುತ್ತದೆ. ಪ್ರತೀ ನಗರಗಳಲ್ಲೂ ಇದಕ್ಕೆಂದೇ ರೈಡ್ ಲೈಟ್ ಏರಿಯಾಗಳಿಲ್ಲವೇ? ಈ ಬಗ್ಗೆ ನಮ್ಮ ಸಮಾಜಕ್ಕೆ ತಿಳಿದಿಲ್ಲವೇ? ಇದೇ ಸಮಾಜದ ಹಲವು ಮಂದಿ ಅದೇ ಏರಿಯಾಗಳಲ್ಲಿ ತಮ್ಮ ರಾತ್ರಿಗಳನ್ನು ರಂಗೀನ್ ಆಗಿಸಿಕೊಳ್ಳುವುದಿಲ್ಲವೇ? ಇದರ ಬಗ್ಗೆ ಕಟುವಾಗಿ ವಿರೋಧ ವ್ಯಕ್ತಪಡಿಸಿ ಎಂದಾದರೂ ಈ ಸಮಾಜ ತಿರುಗಿಬಿದ್ದಿದೆಯೇ? ಈ ಕೋಠಿ ನಡೆಸುವವರನ್ನು, ಅದಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡುವ ವ್ಯಕ್ತಿಗಳನ್ನು, ಹೆಣ್ಣನ್ನು ವಸ್ತುವಿನಂತೆ ಸರಬರಾಜು ಮಾಡುವ ತಲೆಹಿಡುಕ ದಲ್ಲಾಳಿಗಳನ್ನು ಪ್ರಶ್ನಿಸುವ ಧೈರ್ಯ ಸಮಾಜಕ್ಕಿದೆಯೇ? ಖಂಡಿತಾ ಇಲ್ಲಾ....... ಏಕೆಂದರೆ ಈ ದಂಧೆ ನಡೆಸುವವರಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವವರಲ್ಲಿ ಹಲವರು ಸಮಾಜದಲ್ಲಿ ಅತೀ ಗಣ್ಯರೆನಿಸಿಕೊಂಡವರು. ಜನ, ಹಣ ಹಾಗೂ ಅಧಿಕಾರಬಲ ಹೊಂದಿರುವ ಕಾನೂನನ್ನು ಖರೀದಿಸಬಲ್ಲ ಪ್ರಭಾವಿ ವ್ಯಕ್ತಿಗಳು. ಅವರ ಬಗ್ಗೆ ಸೊಲ್ಲೆತ್ತುವ ಧೈರ್ಯ ನಮ್ಮ ಸಮಾಜಕ್ಕೆಲ್ಲಿಯದು? ಅದರ ದಬ್ಬಾಳಿಕೆ ಏನಿದ್ದರೂ ಹೇಳಿದ್ದನ್ನು ಕೇಳುವ ಹಣ ಹಾಗೂ ಅಧಿಕಾರದ ಬಲವಿರದ ದಮನಿತ ವರ್ಗಕ್ಕೆ ಮಾತ್ರ ಸೀಮಿತ. ಅಷ್ಟಕ್ಕೂ ಈ ವೇಶ್ಯಾಗೃಹಗಳು ಅಸ್ತಿತ್ವದಲ್ಲಿರುವುದೇ ಗಿರಾಕಿಗಳಿಗಾಗಿ. ಈ ಗಿರಾಕಿಗಳು ನಮ್ಮ ಮಡಿವಂತ ಸಮಾಜದ ಭಾಗವೇ ಅಲ್ಲವೇ?  ಹಗಲೆಲ್ಲಾ ಮಾನ, ಮರ್ಯಾದೆಗಳ ಬಗ್ಗೆ ಭಾಷಣ ಕೊಚ್ಚುವ ಹಲವರು ರಾತ್ರಿಯಾದರೆ ವೇಶ್ಯಾಗೃಹಗಳಿಗೆ ಎಡತಾಕುವುದು ಸುಳ್ಳೇ?

ಪರಿಸ್ಥಿತಿಯ ಕೈಗೊಂಬೆಯಾಗಿಯೋ ಇಲ್ಲಾ ದುರುಳರ ಕೈಗೆ ಸಿಕ್ಕಿಯೋ ಹೆಣ್ಣೊಬ್ಬಳು ವೇಶ್ಯಾಗೃಹ ಸೇರಿದರೆ ಅವಳನ್ನು ಅಲ್ಲಿಂದ ಬಿಡಿಸಿ ಹೊರತರಲು ಸಮಾಜ ಒಗ್ಗಟ್ಟಾಗಿ ಕೈಜೋಡಿಸುವುದಿಲ್ಲ. ಮೌಲ್ಯಗಳನ್ನು ನೆಚ್ಚಿಕೊಂಡ ಕೆಲವೇ ಕೆಲವು ವ್ಯಕ್ತಿಗಳೋ, ಇಲ್ಲಾ ಸಾಮಾಜಿಕ ಹೊಣೆಗಾರಿಕೆಗೆ ಬದ್ಧವಾದ ಕೆಲವು NGOಗಳೋ ಮಾತ್ರ ಈ ಬಗ್ಗೆ ಹೋರಾಟ ನಡೆಸುತ್ತವೆ. 

ಆದರೆ....... ಅದೇ ಹೆಣ್ಣು ಹೇಗೋ ಅಲ್ಲಿಂದ ಹೊರಬಂದು ಒಂದೊಳ್ಳೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದರೇ ಆಗ ಅವಳ ಹಿನ್ನೆಲೆ ಕೆದಕಲು ಮುಂದಾಗುತ್ತದೆ ಈ ಸಮಾಜ. ಅತೀತದ ಬಗ್ಗೆ ಪ್ರಶ್ನೆಗಳ ಸರಮಾಲೆಗಳು, ಕುಹಕ ಕುಚೋದ್ಯದ ನೋಟಗಳು, ಚುಚ್ಚುನುಡಿಗಳು, ಚಾರಿತ್ರ್ಯ ಹರಣ..... ಅವಳ ಆತ್ಮಬಲವನ್ನು, ಮನೋಸ್ಥೈರ್ಯವನ್ನು ಕುಗ್ಗಿಸಲು ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಮಾಡುತ್ತದೆ. ಅವಳನ್ನು ಸಮಾಜದ ಮುಖ್ಯವಾಹಿನಿಯಿಂದ ಬಹಿಷ್ಕರಿಸಲು ಶಕ್ತಿಮೀರಿ ಪ್ರಯತ್ನಿಸುತ್ತದೆ.

ವಿಪರ್ಯಾಸವೆಂದರೆ ಈ ಕಾರ್ಯದಲ್ಲಿ ಹೆಂಗಸರದ್ದೇ ಮೇಲುಗೈ..‌‌.... ಇನ್ನೊಬ್ಬ ನೊಂದ ಹೆಣ್ಣಿನ ಕಣ್ಣೀರನ್ನು ಒರೆಸುವುದಕ್ಕಿಂತ ಅವಳ ಹಿನ್ನೆಲೆ ಕೆದಕಿ ಆಡಿಕೊಳ್ಳುವುದರಲ್ಲೇ ಅವರಿಗೆ ವಿಕೃತ ಆನಂದ.

ಏಕಿಷ್ಟು ವಿಲಕ್ಷಣ ನಮ್ಮ ಸಮಾಜ......?

ಹೆಣ್ಣು ಹಾಗಿರಬೇಕು, ಹೀಗಿರಬೇಕು, ಇದನ್ನು ಮಾಡಬೇಕು, ಅದನ್ನು ಮಾಡಬಾರದೆಂದು ಸಾವಿರ ಕಟ್ಟಳೆಗಳನ್ನು ವಿಧಿಸುವ ಸಮಾಜ ಗಂಡಸಿಗೂ ಈ ರೀತಿಯ ನಿಯಮಗಳ ಕಟ್ಟಳೆಗಳ ಬೇಲಿಯನ್ನು ಹಾಕುತ್ತದೆಯೇ? ಇಲ್ಲವಲ್ಲ…… ನೀತಿ, ನಿಯಮ, ಕಟ್ಟಳೆಗಳು, ಮಡಿವಂತಿಕೆ ಎಲ್ಲವೂ ಹೆಣ್ಣಿಗೆ ಮಾತ್ರ........

ಹಾಗಂತ ಆ ನಿಯಮಗಳೆಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸುವ ಹೆಣ್ಣಿನ ಮೇಲೆ ಗಂಡಿನ ಕಾಮದ ಕಣ್ಣು ಬೀಳುವುದಿಲ್ಲ ಎಂದರ್ಥವಲ್ಲ.

ಹೆಣ್ಣು............

ಅದು ಓದು ಬರಹ ತಿಳಿದಿಲ್ಲದ ಅನಕ್ಷರಸ್ಥೆ ಇರಲಿ ಇಲ್ಲಾ ಓದಿ ಜ್ಞಾನ ಪಡೆದುಕೊಂಡಿರುವ ಅಕ್ಷರಸ್ಥೆಯಿರಲಿ, ಬಡವಳಿರಲಿ ಇಲ್ಲಾ ಸಿರಿವಂತಳಿರಲಿ, ಪ್ರಪಂಚ ಜ್ಞಾನವಿಲ್ಲದ ಮುಗುದೆ ಇರಲಿ ಇಲ್ಲಾ ಲೋಕ ತಿಳಿದ ಪ್ರಾಜ್ಞೆಯಿರಲಿ, ಅಂದಗಾತಿಯಿರಲಿ ಇಲ್ಲಾ ಕುರೂಪಿಯಾಗಲೀ, ಮನೆಬಿಟ್ಟು ಹೊರಹೋಗದ ಭಯಸ್ಥೆಯಾಗಿರಲೀ ಇಲ್ಲಾ ಗಂಡಿನ ಸಮಾನಕ್ಕೆ ದುಡಿವಾಕೆಯಾಗಿರಲೀ, ಸನಾತನ ವಿಚಾರಗಳ ಸಂಪ್ರದಾಯಸ್ಥೆಯಾಗಿರಲಿ ಇಲ್ಲಾ ಪಾಶ್ಚಾತ್ಯ ವಿಚಾರಧಾರೆಯ ಆಧುನಿಕ ನಾರಿಯಾಗಿರಲೀ.........

ಹೆಣ್ಣಿನ ವ್ಯಕ್ತಿತ್ವದಲ್ಲಿ ಅದೇನೇ ವ್ಯತ್ಯಾಸಗಳಿದ್ದರೂ, ಹೆಣ್ಣು ಭೋಗದ ವಸ್ತುವಲ್ಲ ಎಂದು ಜನಾಭಿಪ್ರಾಯ ಸಂಗ್ರಹಿಸಿದರೂ, ಲಿಂಗ ಸಮಾನತೆಯ ಬಗ್ಗೆ ವರ್ಷಗಟ್ಟಲೆ ಚರ್ಚಿಸಿದರೂ....... 

ಅಂತಿಮವಾಗಿ ಗಂಡಸಿನ ಪಾಲಿಗೆ ಹೆಣ್ಣೆಂದರೆ

ಕೈಚಾಚಿದರೆ ತೋಳು ತುಂಬುವ, ಹಾಸಿಗೆಗೆ ಬರುವ ಅವಳ ದೇಹವಷ್ಟೇ......

ಇದನ್ನು ಮೀರಿ ಯೋಚಿಸಬಲ್ಲ ಗಂಡಸರು ಬೆರಳೆಣಿಕೆಯಷ್ಟು ಮಂದಿ ಇರಬಹುದೇನೋ. ತೀರಾ ಇತ್ತೀಚಿನ ಪೀಳಿಗೆಯಲ್ಲಿ ಅಂತಹ ಗಂಡಸರ ಸಂಖ್ಯೆ ಹೆಚ್ಚುತ್ತಿರುವುದೊಂದು ಒಳ್ಳೆಯ ಬೆಳವಣಿಗೆ ಎನ್ನಬಹುದು.

ನಿದಿರೆ ಹತ್ತಿರ ಸುಳಿಯದ ಸಮನ್ವಿತಾಳ ವಿಚಾರಧಾರೆ ಈ ರೀತಿಯಲ್ಲಿ ಸಾಗಿತ್ತು..... 

              **************************

ಇತ್ತ ಅತ್ತು ಅತ್ತು ಸುಸ್ತಾದ ಮಂಗಳಮ್ಮನವರ ಮನಸ್ಸು ಕೊಂಚ ತಹಬಂದಿಗೆ ಬಂದಿತ್ತು. ಅದನ್ನು ಗ್ರಹಿಸಿದ ಸತ್ಯನಾರಾಯಣರು ಮಾತು ಪ್ರಾರಂಭಿಸಲು ಇದೇ ಸಕಾಲ ಎಂದುಕೊಂಡು ಮಡದಿಯ ಬಳಿ ಬಂದು ಕುಳಿತರು..

"ಏನ್ರೀ ಇದು, ಹೀಗಾಯ್ತಲ್ಲ…..." ಗಂಡ ಪಕ್ಕದಲ್ಲಿ ಕುಳಿತು ಕ್ಷಣಗಳು ಉರುಳಿದ ಮೇಲೆ ನಡುಗುವ ಸಣ್ಣ ದನಿಯಲ್ಲಿ ಕೇಳಿದರು.

"ಇದೇನು? ಯಾಕೆ ಹೀಗಾಯ್ತು? ಎನ್ನುವುದಕ್ಕಿಂತ ಮುಂದೇನು ಅನ್ನುವುದು ಈಗ ಬಹಳ ಮುಖ್ಯವಾದ ಪ್ರಶ್ನೆ ಮಂಗಳಾ. ಘಟಿಸಿಹೋಗಿದ್ದನ್ನು ಈಗ ಬದಲಿಸಲಾಗದು. ಈಗೇನಿದ್ದರೂ ವರ್ತಮಾನಕ್ಕೆ ಬಂದು ಭವಿಷ್ಯತ್ತಿನ ಬಗ್ಗೆ ಚಿಂತಿಸಬೇಕಷ್ಟೇ. ನವ್ಯಾಳ ಬಗ್ಗೆ ಏನು ಯೋಚಿಸಿರುವೆ?" ನೇರವಾಗಿ ವಿಷಯಕ್ಕೆ ಬಂದಿದ್ದರು.

"ನಾನಿಲ್ಲಿ ಕಿಶೋರ್ ಹಾಗೂ ನಮ್ಮ ಬಗ್ಗೆ ಯೋಚನೆಗೆ ಬಿದ್ದಿದ್ದರೆ…... ನಿಮಗೆ ಅವಳ ಚಿಂತೆಯೇ? ಮೊದಲು ಹಳಿತಪ್ಪುತ್ತಿರುವ ನಮ್ಮ ಭವಿಷ್ಯದ ಬಗ್ಗೆ ಯೋಚಿಸಿ" ಸಿಟ್ಟಿನಲ್ಲಿ ಹೇಳಿದರಾಕೆ.

ಮಡದಿಯ ಮಾತುಗಳಿಗೆ ನಗಬೇಕೋ ಅಳಬೇಕೋ ತಿಳಿಯದೇ ತಲೆಯಾಡಿಸಿದವರು, "ನಾನು ನಿನ್ನ ಬಗ್ಗೆ ಏನೇನೋ ಕಲ್ಪಿಸಿಕೊಂಡಿದ್ದೆ. ಕಡೆಗೆ ನೀನೂ ವಾರಗೆಯ ಹೆಂಗಸರಂತೆಯೇ ಎಂಬುದನ್ನು ರುಜುವಾತು ಮಾಡಿದೆ ಮಂಗಳಾ....." ಎಂದುಬಿಟ್ಟರು ಸತ್ಯನಾರಾಯಣ.

ಗಂಡನಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರದ ಮಂಗಳಾರಿಗೆ ಅವರೇನು ಹೇಳುತ್ತಿದ್ದಾರೆಂಬುದೇ ಅರ್ಥವಾಗಲಿಲ್ಲ. ಗಲಿಬಿಲಿಯ ನೋಟಹರಿಸಿದರು ಪತಿಯೆಡೆಗೆ.

"ಇನ್ನೇನು………? ನಾನು ನಿನ್ನನ್ನು ಬಹಳ ತಿಳುವಳಿಕೆಯುಳ್ಳ ಪ್ರಾಜ್ಞೆ ಎಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ನೀನೂ ಎಲ್ಲರಂತೆ ಪೂರ್ವಾಗ್ರಹ ಪೀಡಿತವಾಗಿ ನಿನ್ನ ಮೂಗಿನ ನೇರಕ್ಕೆ ಮಾತ್ರ ಯೋಚಿಸುವಷ್ಟು ಸಂಕುಚಿತ ಮನೋಭಾವದವಳೆಂಬುದು ಸ್ಪಷ್ಟವಾಗುತ್ತಿದೆ. ಇನ್ನು ನಿನ್ನಲ್ಲಿ ಈ ಬಗ್ಗೆ ಮಾತನಾಡುವ ಇಚ್ಛೆ ನನಗಿಲ್ಲ ಬಿಡು" ಎಂದು ಕ್ಷಣ ಮಾತು ನಿಲ್ಲಿಸಿದವರು ಮತ್ತೆ ಮುಂದುವರೆಸುತ್ತಾ,

"ಮಂಗಳಾ ನನ್ನದೊಂದು ಪ್ರಶ್ನೆಯಿದೆ. ಆತ್ಮವಂಚನೆ ಮಾಡಿಕೊಳ್ಳದೇ ಉತ್ತರ ಕೊಡು. ಒಂದು ಕ್ಷಣಕ್ಕೆ ನನ್ನನ್ನು ಕಿಶೋರನೆಂದೂ ನೀನು ನವ್ಯಾಳೆಂದೂ ಕಲ್ಪಿಸಿಕೋ. ಒಂದು ವೇಳೆ ಇಂದಿನ ನವ್ಯಾಳ ಪರಿಸ್ಥಿತಿಯಲ್ಲಿ ನೀನಿದ್ದು, ನಾನು ನಿನಗಾಗಿ ನನ್ನ ಹೆತ್ತವರನ್ನು ತೊರೆದು ಪರವೂರಿಗೆ ನಿನ್ನೊಂದಿಗೆ ಹೊರಡಲು ತಯಾರಾಗಿದ್ದರೆ, ನೀನು ಮನೆಯವರೆದುರು ಸತ್ಯವನ್ನು ಹೇಳುವ ನಿರ್ಧಾರ ಮಾಡುತ್ತಿದ್ದೆಯಾ? ಬದುಕು ಸುಖ ಸಂತೋಷಗಳನ್ನು ನಿನ್ನ ಮಡಿಲಿಗೆ ಸುರಿದು ನೆಮ್ಮದಿಯ ಬದುಕು ನಿನ್ನದಾಗಿರುವಾಗ ಅದೆಲ್ಲವನ್ನೂ ಹಾಳುಗೆಡಹುವ ಕಹಿ ಸತ್ಯವನ್ನು ಹೇಳಲು ತಯಾರಾಗಿರುತ್ತಿದ್ದೆಯಾ ನೀನು? ನಿನ್ನ ಬದುಕನ್ನೇ ಪಣವಾಗಿಟ್ಟು ಅಂತಹಾ ಕಟುಸತ್ಯವನ್ನು ಹೇಳುವ ಸಾಹಸಕ್ಕೆ ‌ಕೈ ಹಾಕುತ್ತಿದ್ದೆಯಾ ನೀನು?"

ಗಂಡನ ಪ್ರಶ್ನೆಗೆ ಮಂಗಳಾರ ಹೃದಯ ಕಂಪಿಸಿತು. 'ನಾನು ನವ್ಯಾಳ ಸ್ಥಾನದಲ್ಲಿ ಇದ್ದಿದ್ದರೇ…....' ಆ ಯೋಚನೆಗೇ ಬೆವರತೊಡಗಿದರು.

ಬಿಟ್ಟ ಬಾಣ ಗುರಿ ತಪ್ಪದೇ ಸರಿಯಾಗಿಯೇ ನಾಟಿತ್ತು. ಆ ಉದ್ದೇಶದಿಂದಲೇ ಉತ್ತರದ ನಿರೀಕ್ಷೆಯಿಲ್ಲದೇ ಕೇಳಿದ ಪ್ರಶ್ನೆಯದು. ಅವರೇನೋ ಪ್ರಶ್ನೆ ಕೇಳಿ ಹೆಂಡತಿಯನ್ನು ಯೋಚಿಸಲು ಬಿಟ್ಟು ಹೋದರು. ಆದರೆ ಮಂಗಳಾ...... ಬಿದ್ದ ಮಾತಿನ ಪೆಟ್ಟಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿ ಹೋದರು.

'ಇವರು ಹೇಳಿದಂತೆ........ ಒಂದು ವೇಳೆ ತಾನು ಅವಳ ಜಾಗದಲ್ಲಿದ್ದಿದ್ದರೇ..... ಸತ್ಯ ಹೇಳಿ ಕಷ್ಟಪಟ್ಟು ಕಟ್ಟಿಕೊಂಡ ಬದುಕನ್ನು ಮಣ್ಣುಪಾಲಾಗಿಸಲು ತಯಾರಾಗಿರುತ್ತಿದ್ದೆನೇ…….??' ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು.

'ಬಹುಶಃ ಇಲ್ಲವೇನೋ.........!' ಬಹಳ ಸಮಯದ ನಂತರ ಮನಃಸಾಕ್ಷಿಗೆ ಸಿಕ್ಕ ಉತ್ತರ.

ಇಂತಹ ಸತ್ಯವೊಂದನ್ನು ಹೇಳಲು ಅದೆಷ್ಟು ಧೈರ್ಯಬೇಕು? ಮುಂದಿನ ಪರಿಣಾಮ ವಿಪರೀತವಾಗಿರುತ್ತದೆ ಎಂಬ ಅರಿವಿರುವಾಗ, ಬದುಕು ಬೀದಿಗೆ ಬೀಳುವುದು ನಿಶ್ಚಿತ ಎಂಬುದನ್ನು ತಿಳಿದೂ ಸತ್ಯ ಹೇಳಲು ಎಂಟೆದೆಯ ಜೊತೆ ತನ್ನ ತಪ್ಪನ್ನು ಒಪ್ಪಿಕೊಳ್ಳುವ ನಿಸ್ವಾರ್ಥ ಯೋಚನೆಯ ಒಳ್ಳೆಯ ಮನವಿರಬೇಕು ಎನಿಸಿತು ಅವರಿಗೆ.

ಈಗ ಅವರ ಮನಸ್ಸು ನಿಧಾನವಾಗಿ ವಿವೇಚನೆಯ ಹಾದಿಗೆ ಮರಳತೊಡಗಿತು. ನವ್ಯಾಳ ಮಾತುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳತೊಡಗಿದರು. ಎಷ್ಟೇ ಯೋಚಿಸಿದರೂ ಅವಳ ಮಾತುಗಳನ್ನು ಸುಳ್ಳು ಎನ್ನಲು ಮನಸ್ಸು ಒಪ್ಪಲಿಲ್ಲ. ಯಾರೂ ಬೇಕಾಗಿ ವೇಶ್ಯೆಯಾಗುವುದಿಲ್ಲ. ಸಮಯ ಸನ್ನಿವೇಶಗಳ ಅನಿವಾರ್ಯತೆ ಅವರನ್ನು ಅಂತಹ ಜಾಲದೊಳಗೆ ನೂಕುತ್ತದೆಯಷ್ಟೇ. ಹೆತ್ತವರನ್ನು ಕಳೆದುಕೊಂಡು ಮೋಸದ ಜಾಲದಲ್ಲಿ ಸಿಲುಕಿ ಅದೆಷ್ಟು ವೇದನೆ ಪಟ್ಟಿರಬೇಕು ಅವಳು…. ಅದಕ್ಕೇ ಇರಬೇಕು ಅವಳ ಕಣ್ಣುಗಳಲ್ಲಿ ಯಾವಾಗಲೂ ಅಗೋಚರ ನೋವಿನ ಎಳೆಯೊಂದು ಆಗಾಗ ಮೂಡಿ ಮರೆಯಾಗುವುದು….

ಎಷ್ಟು ಸರಳ ಸ್ವಭಾವದ ಹುಡುಗಿಯವಳು. ಒಂದು ದಿನಕ್ಕೂ ಒಂದಿನಿತೂ ಕೋಪಿಸಿಕೊಂಡವಳಲ್ಲ. ಅಷ್ಟು ತಾಳ್ಮೆ ಅವಳಿಗೆ. 

ಸತ್ಯ ತಿಳಿದ ಕೂಡಲೇ ಇದೆಲ್ಲವನ್ನೂ ನಾಟಕ ಎಂದು ಭ್ರಮಿಸಿಬಿಟ್ಟೆನಲ್ಲಾ…... ಅದೂ ನವ್ಯಾಳ ನಡವಳಿಕೆಯ ಬಗ್ಗೆ ಅರಿವಿದ್ದೂ…... ಕಿಶೋರನನ್ನು ಬುಟ್ಟಿಗೆ ಹಾಕಿಕೊಂಡುಬಿಟ್ಟಳು ಎನ್ನುವಷ್ಟು ಹೀನವಾಗಿ ಯೋಚಿಸಲು ಮನಸ್ಸು ಹೇಗೆ ಬಂದಿತು ನನಗೆ? ಇಷ್ಟಕ್ಕೂ ಕಿಶೋರನೇ 'ನಾನವಳನ್ನು ಪ್ರೀತಿಸಿದ್ದೇನೆ. ಮದುವೆಯಾದರೆ ಅವಳನ್ನೇ' ಎಂದು ಹಠ ಹಿಡಿದದ್ದು. ಸಮನ್ವಿತಾ ಹೇಳಿದಂತೆಯೇ ನವ್ಯಾಳ ಬಗ್ಗೆ ನಮ್ಮಲ್ಲಿ ಮಾತನಾಡಿದ ದಿನವೂ ಅವನೇನೋ ಹೇಳಲು ಬಹಳ ಪ್ರಯತ್ನಿಸಿದ್ದ. ಅದು ನೆನಪಿದೆ ನನಗೆ. ಹಾಗೆಯೇ ಮದುವೆಗೆ ಮೊದಲು ನವ್ಯಾ ಒಮ್ಮೆ ಮನೆಗೆ ಬಂದಾಗಲೂ ಅವಳ ಕಣ್ಣುಗಳಲ್ಲಿ ಏನೋ ಅವ್ಯಕ್ತ ವೇದನೆಯಿತ್ತಲ್ಲವೇ…..

'ನವ್ಯಾಳಿಗೆ ಸತ್ಯ ಮುಚ್ಚಿಟ್ಟು ಈ ಮದುವೆಯಾಗಲು ಇಷ್ಟವಿರಲಿಲ್ಲ' ಎಂಬ ಸಮನ್ವಿತಾಳ ಮಾತನ್ನೂ ಅನುಮಾನದ ದೃಷ್ಟಿಯಲ್ಲೇ ನೋಡಿಬಿಟ್ಟೆ. ಸಮನ್ವಿತಾ ಸುಳ್ಳಾಡುವ ಹುಡುಗಿಯೇ? ಅವಳನ್ನೂ ಅವಮಾನಿಸಿಬಿಟ್ಟೆ.

ಅಷ್ಟೆಲ್ಲಾ ಏಕೆ…... ಹತ್ತಿರಹತ್ತಿರ ಮೂರು ವರ್ಷಗಳಿಂದ ಈ ಮನೆಯ ಆಗುಹೋಗುಗಳಲ್ಲಿ ಹಾಸುಹೊಕ್ಕಾಗಿ ಸೇರಿ ಹೋಗಿದ್ದಾಳೆ ನವ್ಯಾ. ಅವಳ ನಡೆ, ನುಡಿ, ವರ್ತನೆ, ಮಾತು ಎಲ್ಲವೂ ನನಗೆ ಚಿರಪರಿಚಿತ. ಇಷ್ಟು ವರ್ಷಗಳು ಅವಳು ಮನದಲ್ಲೇ ಏನೋ ಚಿಂತೆಯಿಟ್ಟುಕೊಂಡು ಅತಿಯಾಗಿ ಕೊರಗಿದ್ದಾಳೆ ಎಂಬುದನ್ನು ನನಗಿಂತಲೂ ಚೆನ್ನಾಗಿ ಬಲ್ಲವರ್ಯಾರು? ನಾನೇ ಎಷ್ಟೋ ಬಾರಿ ಮಡಿಲಿಗೆಳೆದುಕೊಂಡು ಸಮಾಧಾನಿಸಲಿಲ್ಲವೇ ಅವಳನ್ನು?  ಕಿಶೋರ ಕಾರ್ತಿಗಿಂತಲೂ ಹೆಚ್ಚಾಗಿ ನನ್ನನ್ನು ಹಚ್ಚಿಕೊಂಡ ಜೀವವದು. ಅದೆಷ್ಟು ಅಕ್ಕರೆ ನನ್ನ ಮೇಲೆ…... ಆಸ್ಪತ್ರೆಯಲ್ಲಿ ಮಲಗಿದ್ದಾಗ ಅದೆಷ್ಟು ಆಸ್ತೆಯಿಂದ ನನ್ನೆಲ್ಲಾ ಕೆಲಸಗಳನ್ನು ಮಾಡಿತ್ತು ಮಗು. ತೀರ್ಥಯಾತ್ರೆಗೆ ಹೋಗುವಾಗಲಂತೂ ಹೋಗಬೇಡಮ್ಮಾ ಎಂದು ದುಂಬಾಲು ಬಿದ್ದಿರಲಿಲ್ಲವೇ…... ಆ ಪ್ರೀತ್ಯಾದರಗಳನ್ನೇ ಅನುಮಾನಿಸಿಬಿಟ್ಟೆನಲ್ಲಾ..... ಛೇ.... ಇಷ್ಟೊಂದು ಕಠೋರ ಮನವಿದೆಯೇ ನನಗೆ....?

ಮಧ್ಯಾಹ್ನದಿಂದ ಒಂದಕ್ಷರ ಮಾತನಾಡದೇ ಹಠ ಸಾಧಿಸಿದೆ. ಏನೆಲ್ಲಾ ಹೇಳಿ ಓಲೈಸಿತು. ಕಡೆಗೆ 'ನಾನು ಈ ಮನೆಯಲ್ಲ. ಊರೇ ಬಿಟ್ಟು ಹೋಗುವೆ, ಒಮ್ಮೆ ಮಾತಾಡಿ' ಎಂದೂ ಗೋಗರೆದಳು. ಅಷ್ಟಾದರೂ ನನ್ನ ಕೆಟ್ಟ ಮನಸ್ಸು ಕರಗದೇ ಹೋಯಿತು.

ಒಂದು ವೇಳೆ ನವ್ಯಾ ಇಂದು ಸತ್ಯ ನುಡಿಯದಿದ್ದರೆ ಈ ವಿಚಾರ ನಮಗೆ ತಿಳಿಯುತ್ತಲೇ ಇರಲಿಲ್ಲವೇನೋ….. ಕಿಶೋರನೇ ಅವಳನ್ನು ಬೇರೆ ಊರಿಗೆ ಕರೆದೊಯ್ಯಲು ಎಲ್ಲಾ ವ್ಯವಸ್ಥೆ ಮಾಡಿದ್ದ. ಆರಾಮವಾಗಿ ಇಲ್ಲಿಂದ ಎದ್ದು ಹೋಗಿಬಿಡಬಹುದಿತ್ತು. ಕಿಶೋರನನ್ನೇ ನಮ್ಮಿಂದ ದೂರಮಾಡಬಹುದಿತ್ತು. ಮೂರನೇ ಬೀದಿಯ ಕಮಲಮ್ಮನವರ ಸೊಸೆ ಅವರ ಮಗನನ್ನು ಮನೆಯಿಂದ ಬೇರಾಗಿಸಿ ಅಲ್ಲೆಲ್ಲೋ ಹೋಗಿ ನೆಲೆಸಿಲ್ಲವೇ…...? ಮೊದಲು ಆಗೊಮ್ಮೆ ಈಗೊಮ್ಮೆಯಾದರೂ ಬರುತ್ತಿದ್ದವನು ಕಳೆದೊಂದು ವರ್ಷದಿಂದ ಈ ಕಡೆ ತಲೆ ಹಾಕಿಲ್ಲ. ವಿಧವೆ ಕಮಲಮ್ಮ ಪಾಪ, ಗಾರ್ಮೆಂಟ್ಸಿನಲ್ಲಿ ಕಷ್ಟಪಟ್ಟು ದುಡಿದು ಮಗನನ್ನು ಸಾಕಿ, ಈಗ ಈ ವಯಸ್ಸಿನಲ್ಲಿ ಸೊಸೆಯ ಚಿತಾವಣೆಯಿಂದ ಮಗನಿಂದ ದೂರಾಗಿ ಕಣ್ಣೀರಿಡುತ್ತಿಲ್ಲವೇ? 

ಆದರೆ ನವ್ಯಾ.....? ಹೆತ್ತವರಿಂದ ಮಗನನ್ನು ದೂರ ಮಾಡಬಾರದೆಂಬ ಕಾರಣಕ್ಕೆ ಹಿಂದೂ ಮುಂದೂ ಯೋಚಿಸದೇ ಸತ್ಯ ನುಡಿದುಬಿಟ್ಟಿತಲ್ಲ ಹುಡುಗಿ…… ಅದೆಷ್ಟು ಪ್ರೀತಿ ವಿಶ್ವಾಸವಿರಬೇಕು ಅವಳಿಗೆ ನಮ್ಮ ಮೇಲೆ.....? ಅದಕ್ಕೇ ನಾನು ಯೋಗ್ಯಳೇ?

ಅವಳೆಂದೂ ನನ್ನನ್ನು ಅತ್ತೆಯ ರೀತಿ ಕಾಣಲೇ ಇಲ್ಲ. ಹಾಗೆ ಸಂಬೋಧಿಸಲೂ ಇಲ್ಲ. 'ಅಮ್ಮಾ' ಎಂದೇ ಕರೆಯುತ್ತಿದ್ದುದು. ಮಗಳಿಗೆ ಅಮ್ಮನ ಮೇಲಿರುವಂತಹ ಕಾಳಜಿ, ಅಕ್ಕರೆ ಅವಳಿಗೆ ನನ್ನ ಮೇಲೆ.

ಆದರೆ ನಾನು.....? 'ಮಗಳಂತೆ' ಅನ್ನುತ್ತಲೇ ಅವಳನ್ನು ಕ್ಷಣಾರ್ಧದಲ್ಲಿ ಪರಕೀಯಳನ್ನಾಗಿಸಿಬಿಟ್ಟೆನಲ್ಲ......

ಮಂಗಳಮ್ಮನವರು ತಮ್ಮ ವರ್ತನೆಗೆ ತಾವೇ‌ ಅಸಹ್ಯಿಸಿಕೊಳ್ಳತೊಡಗಿದ್ದರು. ಮನದ ಕಣ್ಣಿಗೆ ಅಡ್ಡಲಾಗಿದ್ದ ಸಮಾಜ, ಜನ ಎಂಬ ಪೊರೆ ನಿಧಾನವಾಗಿ ಹರಿಯತೊಡಗಿತ್ತು...... 

'ಜನರ ಮಾತಿಗಿಂತ, ಲೋಕದ ನೀತಿಗಿಂತ ಬದುಕು ಅಮೂಲ್ಯವಲ್ಲವೇ......?'  ಮನ ಜಿಜ್ಞಾಸೆಗೆ ಬಿದ್ದಿತ್ತು..... 

     *********ಮುಂದುವರೆಯುತ್ತದೆ*********



ಅನೂಹ್ಯ 40

ಸಮನ್ವಿತಾ ಮನೆಯೊಳಗೆ ಬಂದಾಗ ಮೂವರು ಮೂರು ದಿಕ್ಕುಗಳಲ್ಲಿ ಕುಳಿತು ತಮ್ಮದೇ ಆಲೋಚನಾ ಲಹರಿಯಲ್ಲಿ ಮುಳುಗಿಹೋಗಿದ್ದರು. ಇವಳ ಆಗಮನದ ಅರಿವೂ ಅವರಿಗಾಗಲಿಲ್ಲ‌. ಆಗಲೇ ಅವಳ ಮನ ಏನೋ ಅಹಿತಕರ ಘಟನೆಯನ್ನು ಶಂಕಿಸಿತು.

ಬೆಳಗ್ಗಿನಿಂದಲೂ ಅವಳ ಮನಕ್ಕೆ ಸಮಾಧಾನವಿರಲಿಲ್ಲ. ಆಸ್ಪತ್ರೆಯಲ್ಲಿಯೂ ಸರಿಯಾಗಿ ತೊಡಗಿಕೊಳ್ಳಲು ಆಗಿರಲಿಲ್ಲ. ಏನೋ ಅನಾಹುತದ ಮುನ್ಸೂಚನೆ ದೊರೆತಂತಹ ಚಡಪಡಿಕೆ ವಿಪರೀತ ತಲೆನೋವಿಗೆ ನಾಂದಿಯಾಗಿತ್ತು. ಯಾವ ಕೆಲಸದಲ್ಲೂ ಉತ್ಸಾಹ ಮೂಡದೇ ಸುಮ್ಮನೆ ಕುಳಿತಿದ್ದವಳನ್ನು ಕಂಡು ಮೀರಾ ಲೀವ್ ತೆಗೆದುಕೊಂಡು ಸ್ವಲ್ಪ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಅದನ್ನೇ ಕಾದಿದ್ದವಳಂತೆ ಸರಿಯೆಂದು ತಲೆ ಆಡಿಸಿದ್ದಳು. ಸಂಜೆ ತಾನೇ ಆಸ್ಪತ್ರೆಯಿಂದ ಕರೆದೊಯ್ಯುವೆನೆಂದು ಹೇಳಿದ್ದ ಅಭಿಗೆ ತಾನು ಮನೆಗೆ ಹೋಗುತ್ತಿರುವುದಾಗಿ ಮೆಸೇಜ್ ಹಾಕಿ ಆಟೋ ಹಿಡಿದು ಮನೆಗೆ ಬಂದಿದ್ದಳು.

ಒಳಗೆ ಕಾಲಿಟ್ಟವಳನ್ನು ಉಸಿರುಗಟ್ಟಿಸುವ ಮೌನ ಸ್ವಾಗತಿಸಿತ್ತು. ಮೂರು ದಿಕ್ಕುಗಳಲ್ಲಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಕೂತಿದ್ದ ಮೂವರನ್ನು ನೋಡಿ ಅವ್ಯಕ್ತ ಭೀತಿ ಆವರಿಸಿತು ಅವಳನ್ನು. ಸತ್ಯನಾರಾಯಣರ ಮುಖದ ತುಂಬಾ ಚಿಂತೆಯ ಕಾರ್ಮೋಡಗಳು ಮುಸುಕಿದ್ದವು. ಗೋಡಿಗೊರಗಿ ಕುಳಿತಿದ್ದ ಮಂಗಳಮ್ಮನವರ ನಿರ್ಲಿಪ್ತ ಮುಖಭಾವ ಅವಳನ್ನು ಹೆದರಿಸಿತು.

ಅವರ ಪಕ್ಕದಲ್ಲಿ ನೆಲ ನೋಡುತ್ತಾ ಕೂತಿದ್ದ ನವ್ಯಾ ಕಂಡಳು. ಅತ್ತೂ ಅತ್ತೂ ಕೆಂಪೇರಿದ ಕಣ್ಣುಗಳು, ಬಾಡಿದ ವದನ…... ಅವಳ ಮುಖ ನೋಡಿದ್ದೇ ಸಮಾಳ ಮನ ದ್ರವಿಸಿತು. ಜೊತೆಗೆ ಏನಾಗಿರಬಹುದು ಎಂಬುದರ ಕಲ್ಪನೆಯೂ ಆಯಿತು ಅವಳಿಗೆ.

ನಿಧಾನವಾಗಿ ಒಳಬಂದವಳ ಹೃದಯದ ಬಡಿತ ಅವಳಿಗೇ ಕೇಳುವಷ್ಟು ವೇಗವಾಗಿತ್ತು. ಅವಳ ಹಗುರ ಹೆಜ್ಜೆಗಳ ದನಿಯೂ ಸ್ಪಷ್ಟವಾಗಿ ಕೇಳುವಂತಹ ನೀರವತೆ........

ಮಂಗಳಾರ ಬಳಿ ಹೋಗುವ ಧೈರ್ಯವಾಗಲಿಲ್ಲ ಅವಳಿಗೆ. ನವ್ಯಾಳ ಬಳಿ ಬಂದಳು. 

ಎದುರು ಯಾರೋ ನಿಂತಿರುವಂತೆ ಭಾಸವಾಗಿ ತಲೆಯೆತ್ತಿದಳು ನವ್ಯಾ.

ಕಣ್ಣೆದುರಿಗೆ ಅದೇ ದಾರಿದೀಪ.......

ಗಾಢ ತಿಮಿರವನ್ನು ಬಡಿದೋಡಿಸಿದ ಬೆಳಕಿನ ಸೆಲೆ......

ಗುಡಿಯೊಳಗಿನ ದೇವರೆಂಬ ಶಿಲೆಯೂ ತನ್ನ ಕೈ ಬಿಟ್ಟಾಗ, ಕೈ ಹಿಡಿದು ನಡೆಸಿದಾಕೆ…....

ತನ್ನಂತಹವಳ ಬದುಕಿಗೊಂದು ಭರವಸೆ ನೀಡಿ, ಭದ್ರ ನೆಲೆಕಾಣಿಸಿ, ಬದುಕುವ ದಾರಿ ತೋರಿಸಿದವಳು......

ಸಮನ್ವಿತಾಳನ್ನು ಕಂಡೊಂಡನೆ ಮತ್ತೆ ದುಃಖ ಉಮ್ಮಳಿಸಿ ಬಂತು. ಮಂಗಳಾರತ್ತ ಕೈ ತೋರಿ ಜೋರಾಗಿ ಅಳತೊಡಗಿದಳು. ಅವಳ ಪಕ್ಕ ಕುಳಿತು, "ಎಲ್ಲಾ ಹೇಳ್ಬಿಟ್ಯಾ?" ಎಂದು ಕೇಳಿದಳು ಮೆಲುದನಿಯಲ್ಲಿ. ಹೌದೆಂದು ತಲೆಯಾಡಿಸಿದವಳು, "ಪ್ಲೀಸ್ ಸಮಾ, ಅಮ್ಮನತ್ರ ಮಾತಾಡೋಕೆ ಹೇಳೇ…..‌ ಆಗ್ಲಿಂದ ಒಂದಕ್ಷರ ಮಾತಾಡದೇ ಕಲ್ಲಿನ ತರ ಕೂತಿದ್ದಾರೆ. ನಂಗೆ.... ನಂಗೆ ಭಯ ಆಗ್ತಿದೆ ಕಣೇ....." ಬಿಕ್ಕುತ್ತಾ ನುಡಿದಳು.

ಆದರೆ ಅದಷ್ಟು ಸುಲಭವೇ? ಮಂಗಳಾರಿಗೆ ಆದ ಆಘಾತ ದೊಡ್ಡದು. ಮುಚ್ಚಿಟ್ಟಿದ್ದ ವಿಷಯವೇ ಅಷ್ಟು ಗಂಭೀರವಾದುದಲ್ಲವೇ? ಅದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಸತ್ಯನಾರಾಯಣರೂ ಕೂಡಾ ಅವರನ್ನು ಮಾತನಾಡಿಸುವ ವಿಫಲ ಪ್ರಯತ್ನ ಮಾಡಿ ಕೈಚೆಲ್ಲಿ ಕುಳಿತ್ತಿದ್ದರು. ಈಗ ಸಮನ್ವಿತಾಳ ಸರದಿ........ ಸತ್ಯ ಮುಚ್ಚಿಡುವುದರಲ್ಲಿ ಅವಳ ಪಾಲೂ ಇತ್ತು. ಏನೋ ತಪ್ಪಿತಸ್ಥ ಭಾವ….... ಮಂಗಳಾರ ಮುಖ ನೋಡುವ ಧೈರ್ಯವೂ ಅವಳಿಗಿರಲಿಲ್ಲ. ಇನ್ನು ಅವರೊಂದಿಗೆ ಮಾತನಾಡುವುದಾದರೂ ಹೇಗೆ? ಒಂದು ದಿನಕ್ಕೆ ತನಗೇ ಈ ಪರಿ ಹಿಂಸೆಯಾಗುತ್ತಿರುವಾಗ ಪಾಪ ನವ್ಯಾ....... ಇಷ್ಟು ಸಮಯದಿಂದ ಅವಳ ಮನದಲ್ಲಿ  ದಾವಾನಲವೇ ಹರಿದಿರಬಹುದು ಎನಿಸಿತು.

ಹೇಗೋ ಸಂಭಾಳಿಸಿಕೊಂಡು ಮಂಗಳಮ್ಮನವರ ಬಳಿಗೆ ಬಂದಳು. ಹುಗಿದುಹೋಗಿದ್ದ ಗಂಟಲಿಗೆ ಕಷ್ಟಪಟ್ಟು ಜೀವತುಂಬಿ, "ಅಮ್ಮಾ......." ಎಂದಳು ಮುಂದೆ ಏನು ಹೇಳುವುದೆಂದು ಆಲೋಚಿಸುತ್ತಾ.

ಆದರೆ ಅವಳಿಗೆ  ಆ ಕಷ್ಟವನ್ನೇ ಕೊಡಲಿಲ್ಲ ಅವರು.....

ಅವಳನ್ನು ನೋಡಿದ್ದೇ ತಡ…. ಅವಳನ್ನೇ ಕಾದು ಕುಳಿತಿದ್ದವರಂತೆ ಮಾತನಾಡಿದರು ಮಂಗಳಾ.

"ಬಂದ್ಯಾ.... ಬಾರಮ್ಮಾ. ನಾನೊಂದು ಪ್ರಶ್ನೆ ಕೇಳ್ತೀನಿ. ಸತ್ಯವಾದ ಉತ್ತರ ಹೇಳ್ಬೇಕು ನೀನು. ಕಿಶೋರನಿಗೆ ಎಲ್ಲಾ ವಿಷಯ ಗೊತ್ತಿದೆಯಾ? ಒಂದು ಸುಳ್ಳಿಂದ ಇಷ್ಟೆಲ್ಲಾ ಅವಾಂತರ ಆಗಿದೆ. ಈಗ ಇನ್ನೊಂದು ಸುಳ್ಳು ಹೇಳಿ ವಿಷಯ ಮುಚ್ಚಿಡೋಕೆ ಪ್ರಯತ್ನಿಸಬೇಡ. ಸತ್ಯ ಹೇಳು ಕಿಶೋರನಿಗೆ ಇವಳ ಬಗ್ಗೆ….. ಎಲ್ಲಾ ಗೊತ್ತಿದೆಯಾ......." ಮಂಜಿನಲ್ಲಿ ಅದ್ದಿದಂತಹ ತಣ್ಣಗಿನ ಸ್ವರದಲ್ಲಿ ಕೇಳಿದ್ದರು ಮಂಗಳಾ.

ಸಮನ್ವಿತಾ ಒಮ್ಮೆ ನವ್ಯಾಳ ಮುಖ ನೋಡಿದವಳು ಮಂಗಳಾ ಅವರೆಡೆಗೆ ತಿರುಗಿ ಹೌದೆಂಬಂತೆ ತಲೆಯಾಡಿಸಿದಳು. 

"ಎಷ್ಟು ಸಮಯದಿಂದ ಅವನಿಗೆ ಗೊತ್ತಿತ್ತು?" ಮತ್ತದೇ ತಣ್ಣನೆಯ ಸ್ವರ.

"ಮದುವೆಗೆ ಮುನ್ನವೇ ಅವನಿಗೆಲ್ಲವೂ ತಿಳಿದಿತ್ತು. ಎಲ್ಲಾ ತಿಳಿದೇ ನವ್ಯಾಳನ್ನು ಮದುವೆಗೆ ಒಪ್ಪಿಸೆಂದು ನನ್ನ ದುಂಬಾಲು ಬಿದ್ದಿದ್ದ. ಇವಳು ಸಾಧ್ಯವೇ ಇಲ್ಲವೆಂದು ಹಠ ಹಿಡಿದಿದ್ದಳು. ಕೊನೆಗೆ ಹಾಗೋ ಹೀಗೋ ಮಾಡಿ ಇವಳನ್ನು ಒಪ್ಪಿಸಿದೆವಾದರೂ 'ಮನೆಯವರಿಗೆಲ್ಲ ನನ್ನ ಹಿನ್ನೆಲೆ ತಿಳಿಸಿ. ಅವರು ಒಪ್ಪಿದರೆ ಮದುವೆಯಾಗೋಣ' ಎಂಬ ಷರತ್ತು ಹಾಕಿದ್ದಳು. ನವ್ಯಾ ಹಾಗೂ ತನ್ನ ಪ್ರೀತಿಯ ಬಗ್ಗೆ ಹೇಳುವಾಗಲೇ ಅವಳ ಹಿನ್ನೆಲೆಯನ್ನು ನಿಮಗೆ ಹೇಳಲು ಪ್ರಯತ್ನಿಸಿದ್ದ ಕಿಶೋರ್. ಆದರೆ ಅವಳಿಗೆ ಅಪ್ಪ ಅಮ್ಮ ಇಲ್ಲ ಎಂದಾಗಲಿನ ನಿಮ್ಮ ಪ್ರತಿಕ್ರಿಯೆಯನ್ನು ಕಂಡೇ ಅವನು ಹೆದರಿಬಿಟ್ಟ. ಇನ್ನು ಅವಳ ಹಿನ್ನೆಲೆ ತಿಳಿಸಿದರೇ ನೀವು ಖಡಾಖಂಡಿತವಾಗಿ ಇವಳನ್ನು ನಿರಾಕರಿಸುವಿರಿ ಎಂದುಕೊಂಡು ವಿಷಯ ಮುಚ್ಚಿಡುವ ನಿರ್ಧಾರ ಮಾಡಿದ್ದು....... ನಾವಿಬ್ಬರೂ ಕಲಿತ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ಇವಳನ್ನು ಅತೀ ಕಷ್ಟದಿಂದ ಈ ಮದುವೆಗೆ ಒಪ್ಪಿಸಿಬಿಟ್ಟೆವು‌. ಮುಂದೊಂದು ದಿನ ಇದೇ ವಿಷಯ ಅವಳ ನೆಮ್ಮದಿ ಕಸಿಯುವ ಉರುಳಾಗಬಹುದು ಎಂದೆನಿಸಿರಲಿಲ್ಲ ಆಗ. ಅಮ್ಮಾ….... ಈ ವಿಚಾರದಲ್ಲಿ ಇವಳ ತಪ್ಪಿಲ್ಲ. ಇಲ್ಲಿ ತಪ್ಪಾಗಿರುವುದು ಕಿಶೋರ್ ಹಾಗೂ ನನ್ನಿಂದ. ಇವಳು ಮದುವೆಯ ದಿನದವರೆಗೂ ಸತ್ಯ ಮುಚ್ಚಿಡುವುದು ಬೇಡವೆಂದು ಗೋಗರೆದಿದ್ದಳು. ಬದುಕಿನಲ್ಲಿ ನೋವನ್ನೇ ಉಂಡ ಗೆಳತಿಯ ಬದುಕು ಹಸನಾಗಲಿ ಎಂಬ ಆಸೆಯಲ್ಲಿ ಅವಳನ್ನು ಹಠಹಿಡಿದು ಒಪ್ಪಿಸಿದವಳು ನಾನೇ. ಅವಳನ್ನು ಆ ನರಕದಿಂದ ಹೊರತಂದವಳು ನಾನೇ ಆದ್ದರಿಂದ ನನ್ನ ಮಾತನ್ನು ಧಿಕ್ಕರಿಸಲಾರದೇ ಒಪ್ಪಿದಳಷ್ಟೇ..... ಹಾಗಿದ್ದ ಮೇಲೆ ತಪ್ಪು ನನ್ನದಲ್ಲವೇ? ಮದುವೆಯ ನಂತರವೂ ಸತ್ಯವನ್ನು ಹೇಳೋಣವೆಂದು ಪದೇಪದೇ ನನ್ನನ್ನು ಹಾಗೂ ಕಿಶೋರನನ್ನು ಬೇಡುತ್ತಿದ್ದವಳು ಇವಳೇ. ಅಷ್ಟೆಲ್ಲಾ ಏಕೆ? ನಿಮ್ಮಲ್ಲಿ ಸತ್ಯ ಹೇಳಿದರೆ ಒಂದೋ ಇವಳನ್ನು ಕಳೆದುಕೊಳ್ಳಬೇಕು ಇಲ್ಲಾ ನಿಮ್ಮಿಂದ ದೂರಾಗಬೇಕು… ಒಂದು ವೇಳೆ ಸತ್ಯ ಹೇಳದೇ ಹೋದರೆ ಇವಳು ಕೊರಗಿ ಕೊರಗಿಯೇ ಸಾಯುತ್ತಾಳೆ ಎಂಬ ಭೀತಿಯಲ್ಲಿ ಆಫೀಸಿನಿಂದ ವರ್ಗಾವಣೆ ಕೇಳಿ ಈ ಊರನ್ನೇ ಬಿಟ್ಟು ಅಹಮದಾಬಾದಿಗೆ ಇವಳೊಂದಿಗೆ ಹೋಗಿ ನೆಲೆಸುವ ನಿರ್ಧಾರ ಕೈಗೊಂಡಿದ್ದಾನೆ ಅವನು. ಅದೂ ಇವಳಿಗೂ ತಿಳಿಸದೆಯೇ..... ಅದಕ್ಕಾಗಿಯೇ ಅಹಮದಾಬಾದಿಗೆ ಹೋಗಿರುವುದವನು. ಬಹುಶಃ ಇಂದು ಅವನು ಇವಳಿಗೆ ಕರೆಮಾಡಿ ತಾವಿಬ್ಬರೂ ಅಹಮದಾಬಾದಿನಲ್ಲಿ ನೆಲೆ ನಿಲ್ಲುತ್ತಿರುವ ವಿಷಯ ತಿಳಿಸಿರಬೇಕು. ಅದಕ್ಕೇ ಇವಳೇ ನಿಮ್ಮ ಮುಂದೆ ಸತ್ಯ ಹೇಳುವ ನಿರ್ಧಾರ ಮಾಡಿದ್ದಾಳೆ. ಅಹಮದಾಬಾದಿಗೆ ಹೊರಟು ಕಿಶೋರನನ್ನು ನಿಮ್ಮಿಂದ ದೂರ ಮಾಡುವುದಕ್ಕಿಂತ ಸತ್ಯ ಹೇಳಿ ತಾನೇ ಎಲ್ಲರಿಂದ ದೂರಾಗುವುದೇ ನ್ಯಾಯ ಅನಿಸಿರಬೇಕು ಅವಳಿಗೆ........" ಎಲ್ಲವನ್ನೂ ಹೇಳಿ ಮುಗಿಸಿ ದೀರ್ಘವಾಗಿ ಉಸಿರೆಳೆದುಕೊಂಡಳು. 

ಈ ಬಾರಿ ಏನನ್ನೂ ಮುಚ್ಚಿಡುವ ಪ್ರಯತ್ನವನ್ನೇ ಮಾಡಲಿಲ್ಲ ಅವಳು. ಮುಚ್ಚಿಟ್ಟ ಒಂದು ಸತ್ಯ ಎಷ್ಟೆಲ್ಲಾ ಮನೋವಿಪ್ಲವಗಳಿಗೆ ಕಾರಣವಾಯಿತೆಂಬುದನ್ನು ಕಣ್ಣಾರೆ ಕಂಡಿದ್ದಳು. ಮತ್ತೆ ಅಂತಹದೇ ಸುಳಿಯಲ್ಲಿ ಬದುಕುಗಳು ಸಿಲುಕುವುದು ಬೇಕಾಗಿರಲಿಲ್ಲ. ನವ್ಯಾಳ ನಿರ್ಧಾರ ಎಲ್ಲಾ ನಿಟ್ಟಿನಿಂದಲೂ ಸರಿಯೆನಿಸಿತು. ಈ ನಿರ್ಧಾರದಿಂದಾಗಿ ಅವಳ ಹಾಗೂ ಈ ಮನೆಯವರ ಅನುಬಂಧ ಅನಿಶ್ಚಿತತೆಯ ಬಿರುಗಾಳಿಗೆ ಸಿಲುಕಿರುವುದು ನಿಜವೇ. ಆದರೆ ಸಕಾರಾತ್ಮಕವೋ ನಕಾರಾತ್ಮಕವೋ…. ಇದರಿಂದಾಗಿ ಭವಿಷ್ಯದಲ್ಲಿ ಒಂದು ಸ್ಪಷ್ಟ ಫಲಿತಾಂಶವಂತೂ ಖಚಿತವಾಗಿ ಹೊರಬೀಳುತ್ತದ. ನವ್ಯಾಳ ಪರಿಸ್ಥಿತಿಯನ್ನು ಅವಳ ಸ್ಥಾನದಲ್ಲಿ ನಿಂತು ಅವಲೋಕಿಸಿ ಅರ್ಥೈಸಿಕೊಂಡು ಸ್ವೀಕರಿಸಿದರೆ ಬಾಂದಳದ ತಾರೆ ಕೈಸೇರಿದಷ್ಟೇ ಸಂತೋಷ..... ಒಂದು ವೇಳೆ ಗೊಡ್ಡು ಸಂಪ್ರದಾಯಗಳು, ಹುರುಳಿಲ್ಲದ ನೀತಿ ನಿಯಮಗಳು, ಅರ್ಥಹೀನ ಕಟ್ಟಳೆಗಳ ಸೋಗಿನ ಸೆರಗಲ್ಲಿ ಮಾನವೀಯತೆ ಮರೆತ ಸಮಾಜದ ಭಯಕ್ಕೆ ಹೆದರಿ ಅವಳ ಕೈಬಿಟ್ಟರೆ ಬೇಸರವಿಲ್ಲ ಎನ್ನಲಾರೆ. ಆದರೆ ಅವಳಲ್ಲಾ ನೋವುಗಳಲ್ಲಿ ಪಾಲುದಾರಳಾಗಿ, ಕೈ ಹಿಡಿದು ನಡೆಸಲು ಊರುಗೋಲಾಗಿ ಸದಾ ನಾನಿರುತ್ತೇನೆ. ಎಲ್ಲಾ ವಿಷಯ ತಿಳಿದಿರುವ ಅಭಿ ಕೂಡಾ ಈ ಪಯಣದಲ್ಲಿ ನಮ್ಮ ಜೊತೆಗಿರುತ್ತಾರೆ ಎಂಬ ಧೈರ್ಯ ಅವಳಿಗೆ. ಏನಾದರೂ ಆಗಲಿ, ಬಂದಿದ್ದನ್ನು ಎದುರಿಸುವ ಎಂಬ ನಿಲುವಿಗೆ ಬದ್ಧಳಾಗಿದ್ದಳು ಸಮನ್ವಿತಾ.

ಇವಳ ಮಾತುಗಳನ್ನೆಲ್ಲಾ ಕೇಳಿದ ಮಂಗಳಮ್ಮ ಏನೊಂದೂ ನುಡಿಯದೇ ಅಲ್ಲಿಂದ ಎದ್ದು ಸೀದಾ ತಮ್ಮ ಕೋಣೆಯತ್ತ ನಡೆದಾಗ ಸತ್ಯನಾರಾಯಣರು ಸೊಸೆಯೆಡೆಗೊಂದು ಮಮತೆಯ ನೋಟ ಬೀರಿ ಅವರನ್ನು ಹಿಂಬಾಲಿಸಿದರು.  ನವ್ಯಾ ಅಧೀರಳಾದಳು. ಅವಳು ಸತ್ಯ ನುಡಿದಲ್ಲಿಂದ ಅವಳೊಂದಿಗೆ ಮಾತಿರಲೀ ಅವಳ ಮುಖವನ್ನೂ ಸಹ ನೋಡಿರಲಿಲ್ಲ ಮಂಗಳಮ್ಮ. 'ಅಷ್ಟು ಹೀನಳೇ ನಾನು?' ಪ್ರಶ್ನಿಸಿಕೊಂಡಳು. 'ಹೌದು. ನೀನು ಹೀನಳೇ... ಕಾಲು ಭಾಗದ ಬದುಕನ್ನೇ ವೇಶ್ಯೆಯಾಗಿ ಕಳೆದಾಕೆ ನೀನು. ಇಂತಹ ಸಂಸ್ಕಾರವಂತ ಕುಟುಂಬದ ಕಣ್ಣಿಗೆ ಸುಳ್ಳಿನ ಮಣ್ಣೆರಚಿ ಗರತಿಯಾಗಿ ಮೆರೆಯಲು ಹೊರಟ ನೀನು ಅವಕಾಶವಾದಿಯಲ್ಲವೇ?' ಎಂದು ಚುಚ್ಚಿದ ಅಂತರಾತ್ಮಕ್ಕೆ ಬದಲು ನೀಡಲಾಗದೇ ಮತ್ತೆ ಕಣ್ಣೀರಾದಳು ನವ್ಯಾ.

ಕಣ್ಣೀರ ಮಳೆ ಸುರಿದು ಮನದ ಬಾನು ಕೊಂಚವಾದರೂ ಹಗುರವಾಗಲಿ ಎಂದುಕೊಂಡ ಸಮನ್ವಿತಾ ನವ್ಯಾಳನ್ನು ಅವಳ ಪಾಡಿಗೆ ಬಿಟ್ಟು ಹೊರಗೆ ಬಂದಳು. ಮಾಡಬೇಕಾದ ಬಹುಮುಖ್ಯ ಕೆಲಸವೊಂದಿತ್ತು. ಅಭಿಗೆ ಕರೆ ಮಾಡಲು ಫೋನ್ ತೆಗೆದಾಗ ಅವನ ಹಾಗೂ ಕಿಶೋರನ ಮಿಸ್ ಕಾಲುಗಳು ಕಂಡವು. ಅಭಿರಾಮನಿಗೆ ಫೋನಾಯಿಸಿದಳು. ಇವಳ ಕರೆಗೇ ಕಾದಿದ್ದವನಂತೆ ಒಂದು ರಿಂಗಿಗೆ ಸ್ವೀಕರಿಸಿದ.

"ಈಸ್ ಎವ್ವೆರಿಥಿಂಗ್ ಫೈನ್? ಯಾಕೆ ಹಾಗೆ ಮೆಸೇಜ್ ಹಾಕಿ ಮನೆಗೆ ಹೋದೆ ಸಮನ್ವಿತಾ? ಆಗ್ಲಿಂದ ಫೋನ್ ಮಾಡ್ತಾನೇ ಇದ್ದೀನಿ ತೆಗೀತಿಲ್ಲ ನೀನು. ಏನಾದ್ರೂ ಸಮಸ್ಯೆಯಾ?" ವಿಚಾರಿಸಿದ.

"ಅಭಿ, ನವ್ಯಾ ಮನೆಯಲ್ಲಿ ಎಲ್ಲಾ ವಿಷಯನೂ ಹೇಳ್ಬಿಟ್ಟಿದ್ದಾಳೆ. ಇಲ್ಲಿನ ಪರಿಸ್ಥಿತಿ ಸ್ವಲ್ಪವೂ ಸರಿಯಿಲ್ಲ. ನನಗೊಂದು ಸಹಾಯ ಬೇಕಿತ್ತು. ಕಿಶೋರನಿಗೆ ಫ್ಲೈಟ್ ಟಿಕೆಟ್ ಅರೇಂಜ್ ಮಾಡೋಕೆ ಸಾಧ್ಯವೇ? ಈಗಿನ ಸ್ಥಿತಿಯಲ್ಲಿ ಇಲ್ಲಿ ಅವನಿರುವು ಬಹಳ ಮುಖ್ಯ. ಅದರಲ್ಲೂ ಅಮ್ಮನ ಬಳಿ ಮಾತಾಡಲು ನಮ್ಮಿಂದ ಸಾಧ್ಯವಿಲ್ಲ. ಅವ್ನು ಆದಷ್ಟು ಬೇಗ ಇಲ್ಲಿರಬೇಕು" ಎಂದಳು.

"ಹ್ಮಾಂ, ಐ ವಿಲ್ ಅರೇಂಜ್. ನವ್ಯಾ ಹೇಗಿದ್ದಾಳೆ? ನಾನು ಮನೆಗೆ ಬರ್ಲಾ?" ಕೇಳಿದ

"ಯಾರು ಹೇಗಿದ್ದಾರೆ, ಯಾರ ಮನಸ್ಸಲ್ಲಿ ಎಂತಹ ಬಿರುಗಾಳಿ ಎದ್ದಿದೆ ಏನೊಂದೂ ತಿಳಿಯುತ್ತಿಲ್ಲ. ಆದರೆ ನೀವು ಇಲ್ಲಿಗೆ ಬರಬೇಡಿ. ಈಗಾಗಲೇ ನವ್ಯಾಳ ಸತ್ಯ ತಿಳಿದು ಸಮಾಜವನ್ನು ಹೇಗೆ ಎದುರಿಸುವುದು ಎಂಬ ಭೀತಿಗೆ ಸಿಲುಕಿದ್ದಾರೆ ಮನೆಯವರು. ನಿಮಗೂ ವಿಚಾರ ತಿಳಿದಿದೆ ಅಂತ ಗೊತ್ತಾದರೆ ಹೆದರಿದವರ ಮೇಲೆ ಹಾವು ಎಸೆದಂತಾಗುತ್ತದೆ. ಹಾಗೆಯೇ ಅದು ನವ್ಯಾಳಿಗೂ ಕಸಿವಿಸಿ ಉಂಟುಮಾಡಬಹುದು. ನಿಮಗೆ ಸತ್ಯ ಗೊತ್ತಿದೆ ಅನ್ನುವ ವಿಚಾರ ನಮ್ಮಿಬ್ಬರ ನಡುವೆಯೇ ಉಳಿದುಬಿಡಲಿ. ಕಿಶೋರನಿಗೆ ನಾನೇ ಕರೆ ಮಾಡಿ ವಿಚಾರ ತಿಳಿಸಿ ಕೂಡಲೇ ಹೊರಡುವಂತೆ ಹೇಳುತ್ತೇನೆ. ನೀವು ಟಿಕೆಟ್ ಅರೇಂಜ್ ಮಾಡಿ ಹೇಗಾದರೂ ಅವನಿಗೆ ತಲುಪಿಸಿದರೆ ಸಾಕು" ಅವಳ ಮಾತು ಅವನಿಗೂ ಸರಿಯೆನಿಸಿತು.

"ಸರಿ ನೀನು ಕಿಶೋರನೊಂದಿಗೆ ಮಾತನಾಡುವಷ್ಟರಲ್ಲಿ ನಾನು ಟಿಕೇಟಿಗೆ ವ್ಯವಸ್ಥೆ ಮಾಡುತ್ತೇನೆ. ಹೆಚ್ಚು ಚಿಂತಿಸಬೇಡ. ಎಂದಾದರೂ ಹೊರಬರಲೇ ಬೇಕಿದ್ದ ಸತ್ಯ ಇಂದೇ ಅನಾವರಣವಾದದ್ದು ಒಳ್ಳೆಯದಾಯಿತು ಎಂದುಕೊಳ್ಳೋಣ. ಕಿಶೋರ್ ಮನೆಬಿಡುವುದೂ ತಪ್ಪಿತು ಹಾಗೆಯೇ ನವ್ಯಾಳ ಮನಕ್ಕೂ ತುಸು ನಿರಾಳ. ಸ್ವಲ್ಪ ಸಮಯ ನೀಡಿದರೆ ಎಲ್ಲವೂ ಸರಿಹೋಗಬಹುದು. ಹಾಗೆಯೇ ಆಶಿಸೋಣ‌. ಅದೇನೇ ಆಗಲೀ ನಾನು ನಿನ್ನೊಂದಿಗಿರುವೆ. ಟೇಕ್ ಕೇರ್. ಬೆಳಕು ಹರಿಯುವುದರೊಳಗೆ ಕಿಶೋರ್ ಮನೆಯಲ್ಲಿರುತ್ತಾನೆ. ಅಲ್ಲಿಯವರೆಗೆ ಆದಷ್ಟು ಮೂವರನ್ನು ಸಂಭಾಳಿಸು......" ಎಂದವನು ಕರೆ ಕಡಿತಗೊಳಿಸಿದ.

ಸಮನ್ವಿತಾ ಕೂಡಲೇ ಕಿಶೋರನಿಗೆ ಕರೆ ಮಾಡಿದಳು. ಅವನಾಗಲೇ ಎಲ್ಲರಿಗೂ ಕರೆ ಮಾಡಿ ಯಾರೂ ಕರೆ ಸ್ವೀಕರಿಸದಿದ್ದುದನ್ನು ಕಂಡು ಗಾಬರಿಯಾಗಿ ಮನೆಗೆ ವಾಪಾಸಾಗಲು ಫ್ಲೈಟ್ ಟಿಕೆಟ್ ವಿಚಾರಿಸಲು ಹೊರಟುಬಿಟ್ಟಿದ್ದ. ಅವನ ಮನಸ್ಸಿಗೆ ನವ್ಯಾ ಹೀಗೆ ಏನೋ ಮಾಡಿರಬಹುದೆಂದು ಬಲವಾಗಿ ಅನಿಸತೊಡಗಿತ್ತು. ಫೋನಿನಲ್ಲಿ ಅವಳಿಗೆ ವಿಷಯ ತಿಳಿಸಿದ್ದಕ್ಕೆ ತನ್ನನ್ನು ತಾನೇ ಅದೆಷ್ಟು ಹಳಿದುಕೊಂಡನೋ…….. ಆಗಲೇ ಸಮಾಳ ಕರೆ ಬಂದಿತ್ತು. 

"ಮನೆಲೀ ಎಲ್ಲಾ ವಿಷಯ ಗೊತ್ತಾಯ್ತಾ? ನವ್ಯಾ ಎಲ್ಲಾ ಹೇಳ್ಬಿಟ್ಲಾ?" ಕರೆ ಸ್ವೀಕರಿಸಿದ ಕೂಡಲೇ ಕೇಳಿದ್ದ.

"ಹೌದು ಕಿಶೋರ್. ಇನ್ನು ಮುಚ್ಚಿಡಲು ಏನೂ ಉಳಿದಿಲ್ಲ. ನೀನು ಪರವೂರಿಗೆ ಓಡುವ ಅಗತ್ಯವೂ ಇಲ್ಲ. ಅಭಿರಾಮ್ ನಿನಗೆ ಟಿಕೆಟ್ ಅರೇಂಜ್ ಮಾಡ್ತಾರೆ. ಕೂಡಲೇ ಹೊರಟು ಬಾ. ಅಮ್ಮನ ಮನಸ್ಥಿತಿ ಊಹೆಗೂ ನಿಲುಕುತ್ತಿಲ್ಲ ಕಣೋ. ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಯಾಕೋ ಭಯವಾಗುತ್ತಿದೆ..... ಪ್ಲೀಸ್ ಬೇಗ ಬಾ ಕಿಶೋರ್...." ಸಣ್ಣ ದನಿಯಲ್ಲಿ ಹೇಳಿದಳು. ಕೂಡಲೇ ಹೊರಡುವುದಾಗಿ ಹೇಳಿ ಫೋನಿಟ್ಟ.

ಇವಳು ಒಳಗೆ ಬಂದಾಗ ನವ್ಯಾ ಅಲ್ಲೇ ಮುದುರಿ ಕುಳಿತು ಬಿಕ್ಕುತ್ತಿದ್ದಳು. ಎಬ್ಬಿಸಿ ಕೋಣೆಗೆ ಕರೆದೊಯ್ಯಲು ನೋಡಿದಳಾದರೂ ಅವಳು ಅಲ್ಲಿಂದ ಕದಲಲಿಲ್ಲ. ಕಡೆಗೆ ಸೋತು ಅಲ್ಲೇ ಅವಳೊಂದಿಗೆ ಕುಳಿತಳು. ಮಂಗಳಮ್ಮ ಕೋಣೆಯಲ್ಲಿ ಬಿಮ್ಮನೆ ಕುಳಿತಿದ್ದರು. ಸತ್ಯನಾರಾಯಣರು ಅವರನ್ನು ಮಾತನಾಡಿಸುವ ಪ್ರಯತ್ನ ಯಶಸ್ವಿಯಾಗದೇ ಮುಂದೇನು ಎಂಬ ಯೋಚನೆಯಲ್ಲಿದ್ದರು. ಊಟ ದೂರದ ಮಾತು, ಯಾರೊಬ್ಬರಿಗೂ ಹನಿ ನೀರನ್ನೂ ಸೇವಿಸುವ ಮನವಿರಲಿಲ್ಲ. 

ನವ್ಯಾಳತ್ತ ನೋಟ ಹರಿಸಿದಳು. ಬಿಕ್ಕುವಿಕೆಯೇನೋ ನಿಂತಿತ್ತು. ಆದರೆ ಅವತ್ತು ವೇಶ್ಯಾಗೃಹದಲ್ಲಿ ಮೊದಲಬಾರಿಗೆ ನೋಡಿದಾಗ ಹೇಗೆ ಕಂಡಿದ್ದಳೋ ಇಂದು ವರ್ಷಗಳ ನಂತರ ಮತ್ತೆ ಅದೇ ತೆರನಾದ ಶೂನ್ಯತೆಯ ಭಾವ ನವ್ಯಾಳ ಮುಖದಲ್ಲಿತ್ತು. 'ಇದಕ್ಕಾಗಿ ಇವಳನ್ನು ಬಿಡಿಸಿಕೊಂಡು ಬಂದೆಯಾ? ಇದೇ ಏನು ನೀನು ಇವಳ ಬದುಕನ್ನು ರೂಪಿಸಿದ ರೀತಿ?' ಎಂಬ ಮನದ ಪ್ರಶ್ನೆಗೆ ಉತ್ತರ ಸಿಗದೇ ಹೋಯಿತು.

ಮೊದಲು ಮಂಗಳಮ್ಮ ತಮ್ಮ ಮೌನ ಮುರೀಯಬೇಕು. ಮಂಗಳಾರೊಂದಿಗೆ ಈಗ ಯಾರಾದರೂ ಮಾತನಾಡಬಲ್ಲರೆಂದರೆ ಅದು ಕಿಶೋರ್ ಮಾತ್ರ. ಹಜಾರದಲ್ಲಿ ನವ್ಯಾಳ ಪಕ್ಕ ಕುಳಿತು ಕಿಶೋರನ ಆಗಮನವನ್ನೇ ನಿರೀಕ್ಷಿಸತೊಡಗಿದಳು ಸಮನ್ವಿತಾ. ಅದರ ಹೊರತು ಇನ್ಯಾವ ಆಯ್ಕೆಗಳೂ ಇರಲಿಲ್ಲ ಅವಳಿಗೆ......... 

              ************************

ನವ್ಯಾಳ ಬಾಯಿಂದ ಹೊರಬಿದ್ದ ಮಾತುಗಳನ್ನು ಇನ್ನೂ ನಂಬಲಾಗುತ್ತಿರಲಿಲ್ಲ ಮಂಗಳಮ್ಮನವರಿಗೆ. ಅವರು ಮಾತನಾಡಲಾರದಷ್ಟು ಹೈರಾಣಾಗಿದ್ದರು. ನವ್ಯಾಳ ಮೇಲೆ ವಿಪರೀತ ಸಿಟ್ಟು ಬಂದಿದ್ದೂ ನಿಜವೇ……. ತಮ್ಮ ಮನೆಯ ಶಾಂತಿಯನ್ನೇ ನಾಶಮಾಡಿ, ನಾಲ್ಕು ಜನರೆದುರು ಮರ್ಯಾದೆ ಹರಾಜು ಹಾಕಲು ತಯಾರಾಗಿರುವವಳನ್ನು ಮನೆಯಿಂದ ಹೊರಹಾಕಬೇಕು ಎನಿಸುತ್ತಿತ್ತು ಕೂಡಾ. ಆದರೆ ಯಾಕೋ ಅವರ ಸ್ವರವೇಳುತ್ತಿರಲಿಲ್ಲ……. ಮೊದಲಿನಿಂದಲೂ ತೀರಾ ಸಾತ್ವಿಕ ಸ್ವಭಾವವನ್ನು ಮೈಗೂಡಿಸಿಕೊಂಡವರು. ಸೊಸೆಯ ಮೇಲೆ ದನಿಯೆತ್ತಲು ಮೆದುಳು ಪ್ರೇರೇಪಿಸುತ್ತಿದ್ದರೂ ಯಾಕೋ ಸಾಧ್ಯವಾಗಲೇ ಇಲ್ಲ. ನವ್ಯಾಳ ಮುಖ ನೋಡಿದ ಯಾರಿಗೂ ಅವಳನ್ನು ದಂಡಿಸುವುದಿರಲೀ, ಅವಳಿಗೆ ದನಿಯೆತ್ತಿ ಗದರಲೂ ಸಾಧ್ಯವಾಗದು. ಅಷ್ಟು ಮಗುವಿನಂತಹ ಮುಗ್ಧ ಮೃದು ಭಾವಗಳ ಹುಡುಗಿಯವಳು. 

'ಆ ಮುಗ್ಧ ಮುಖ ನೋಡಿಯೇ ಮೋಸ ಹೋದೆವಾ ನಾವು? ಅದೆಷ್ಟು ಚೆನ್ನಾಗಿ ಇಷ್ಟು ವರ್ಷಗಳು ನಟಿಸಿಬಿಟ್ಟಳು….? ಒಂದಿನಿತೂ ಅನುಮಾನ ಬರಲಿಲ್ಲ ನಮಗೆ. ಇವತ್ತೂ ಅವಳಾಗೇ ಹೇಳದಿದ್ದರೆ ನಮಗೆ ಈ ವಿಚಾರ ತಿಳಿಯುತ್ತಲೇ ಇರಲಿಲ್ಲವೇನೋ. ಎಂತಹ ನಯವಾದ ಮೋಸ......

ಬಾಯ್ತುಂಬಾ 'ಅಮ್ಮಾ' ಎಂದು ಕರೆಯುತ್ತಲೇ ಬೆನ್ನಿಗೆ ಇರಿಯುವ ಕೆಲಸಮಾಡಿಬಿಟ್ಟೆಯಲ್ಲವೇ…... ಆ ಬಗ್ಗೆ ಯೋಚಿಸಿದರೇ ಮೈ ಮೇಲೆ ಮುಳ್ಳುಗಳು ಎದ್ದಂತಾಗುತ್ತೆ. ನೀನು ಮಾಡಿರೋ ಕೆಲಸಕ್ಕೆ ಬಡಿದು ಮನೆಯಿಂದ ಹೊರಹಾಕುವ ಅನ್ನಿಸುತ್ತೆ. ಯಾಕೇ ಹೀಗ್ಮಾಡಿದೆ? ಏನು ಕಡಿಮೆ ಮಾಡಿದ್ವಿ ನಿಂಗೆ? ನನ್ನ ಮಕ್ಕಳಿಗಿಂತ ಹೆಚ್ಚಾಗಿ ಆದರಿಸಿದೆ ನಿನ್ನ. ಇಡೀ ಊರು ತುಂಬಾ ನನ್ನ ಸೊಸೆ ಹಾಗೇ, ನನ್ನ ಸೊಸೆ ಹೀಗೆ, ಚಿನ್ನ, ವಜ್ರ, ವೈಢೂರ್ಯದಂತಹವಳು ಅಂತ ಎಷ್ಟು ಮೆರೆಸಿದ್ದೆ. ಆದ್ರೆ ನೀನು ಮಾಡಿದ್ದೇನು? ನಮ್ಮನೆಯ ಗೌರವವನ್ನೇ ಬೀದಿಗೆ ತಂದು ನಿಲ್ಲಿಸಿಬಿಟ್ಟೆ. ಇಷ್ಟು ವರ್ಷಗಳು ಎಷ್ಟು ಮರ್ಯಾದೆಯಿಂದ ಬಾಳಿದ್ದೀವಿ. ಈಗ ನೀನ್ಯಾರು, ನಿನ್ನ ಕಸುಬೇನು ಅಂತ ನಾಲ್ಕು ಜನಕ್ಕೆ ಗೊತ್ತಾದ್ರೇ ಜನ ನಮ್ಮ ಮುಖಕ್ಕೆ ಉಗಿಯೋಲ್ವಾ? ಇಷ್ಟು ವರ್ಷದಲ್ಲಿ ಒಂದೇ ಒಂದು ಸಲಕ್ಕೂ ನಮಗೆ ಸತ್ಯ ಹೇಳ್ಬೇಕು ಅನ್ನಿಸ್ಲಿಲ್ವಾ ನಿನಗೆ? ಆತ್ಮಸಾಕ್ಷಿ ಅನ್ನೋದೇ ಇಲ್ವಾ…. ಅದೂ ಸರಿಯೇ. ಹುಚ್ಚು ನನಗೆ….. ಹೋಗಿ ಹೋಗಿ ಯಾರ್ಹತ್ರ ಕೇಳ್ತಿದ್ದೀನಿ ನೋಡು.... ಸ್ವಂತ ಮಗಳ ತರ ನೋಡ್ಕೊಂಡೆ ನಿನ್ನ. ನನ್ನ ಹೊಟ್ಟೆ ಉರಿಸುತ್ತಿದ್ದೀಯಲ್ಲೇ.... ನೀನು ಖಂಡಿತಾ ಉದ್ದಾರ ಆಗೋಲ್ಲ ಕಣೇ….. ನಿನ್ನ ಮದುವೆಯ ಆಸೆಗೆ ನನ್ನ ಮಗನೇ ಬೇಕಾಗಿತ್ತಾ? ನಾವು ಮಾನವಂತ ಜನ. ಮರ್ಯಾದೆಗೋಸ್ಕರವೇ ಬದ್ಕೋರು. ನಾಲ್ಕಾರು ಜನಕ್ಕೆ ವಿಷಯ ತಿಳಿದ್ರೇ ನಮ್ಮ ಗತಿ ಏನು? ಇಂತಾ ಹುಡುಗಿನ ಮನೇಲಿ ತಂದಿಟ್ಕೊಂಡು ದಂಧೆ ನಡೆಸ್ತಿದ್ದಾರೆ ಅಂತ ನಮಗೆ ತಲೆಹಿಡುಕರ ಪಟ್ಟ ಕಟ್ತಾರೆ. ಸಮಾಜದಿಂದ ಬಹಿಷ್ಕಾರ ಹಾಕ್ತಾರೆ. ಯಾಕೇ ಹೀಗೆ ಮಾಡ್ಬಿಟ್ಟೆ? ಅದೇನು ಹೇಳಿ ಬಲೆಗೆ ಬೀಳಿಸಿದೆ ನನ್ನ ಮಗನನ್ನು? ಪಾಪದವ್ನು ಅವ್ನು. ಕಷ್ಟ ಅಂದ್ರೇ ಕರಗಿ ಬಿಡ್ತಾನೆ. ಹಿಂದೆಮುಂದೆ ನೋಡ್ದೇ ಸಹಾಯ ಮಾಡೋಕೆ ಓಡುತ್ತಾನೆ. ಅದನ್ನೇ ಅಸ್ತ್ರವಾಗಿ ಬಳಸ್ಕೊಂಡು ನಮ್ಮ ಮನೆಗೆ ಬಂದು ಸೇರ್ಕೊಂಡ್ಯಾ?' ಮಂಗಳಾ ಮನದಲ್ಲಿಯೇ ನವ್ಯಾಳೊಂದಿಗೆ ಜಗಳಕ್ಕಿಳಿದಿದ್ದರು.

ಸತ್ಯ ತಿಳಿದ ಮೇಲೆ ನವ್ಯಾಳ ಪ್ರತೀ ನಡವಳಿಕೆಯೂ ಪ್ರಶ್ನಾರ್ಹವಾಗಿ ಕಾಣತೊಡಗಿತ್ತು. ಅವರು ವಿವೇಚನಾರಹಿತರಾಗಿ ಯೋಚಿಸತೊಡಗಿದ್ದರು.

ಈಗವರಿಗೆ ಸೊಸೆ ವೇಶ್ಯೆಯಾಗಿದ್ದಳು ಎಂಬುದಕ್ಕಿಂತಲೂ ಈ ವಿಷಯ ಹೊರಜಗತ್ತಿಗೆ ತಿಳಿದರೆ ನೆರೆಕರೆಯ ಜನರು, ಈ ಸಮಾಜ ನಮ್ಮನ್ನು ಹೇಗೆ ಕಾಣಬಹುದು ಎಂಬುದೇ ಚಿಂತೆಯಾಗಿಹೋಗಿತ್ತು. 

ಅವರಿಗಿದ್ದುದು ಸಮಾಜದ ಭಯ. ಆ ಭಯವೇ ಈಗ ಅವರ ಯೋಚನೆಗಳನ್ನು ಆಳುತ್ತಿದ್ದುದು. ಇದರಲ್ಲಿ ಅವರ ತಪ್ಪಿದೆ ಎಂದೂ ಹೇಳಲಾಗದು. ತಲೆತಲಾಂತರದಿಂದ ನಾವು ಬದುಕಿರುವುದೇ ಹೀಗಲ್ಲವೇ? ನಮಗೆ ನಮ್ಮ ಹಾಗೂ ನಮ್ಮವರ ಮೇಲಿನ ಪ್ರೀತಿ, ನಂಬಿಕೆಗಿಂತ ಸಮಾಜದ ಮೇಲಿನ 'ಗೌರವ' ಎಂಬ ಭಯವೇ ವಿಪರೀತ. ಎಷ್ಟಾದರೂ ಈ ಲೋಕದಲ್ಲಿ ನಮ್ಮ ಆತ್ಮಸಾಕ್ಷಿಗಿಂತ ಸಮಾಜದ ಕಂದಾಚಾರಗಳಿಗೆ ಬೆಲೆ ಹೆಚ್ಚಲ್ಲವೇ….. ಯೋಚನೆಗಳೇ ಪೂರ್ವಾಗ್ರಹ ಪೀಡಿತವಾಗಿರುವಾಗ ಶಾಂತಿ, ನೆಮ್ಮದಿ ದೊರಕುವುದಾದರೂ ಎಲ್ಲಿಂದ…...?

ಶಾಂತಿ ಮಾಡಿಸಲು ತಣ್ಣಗಾಗುವವು

ರಾಹು ಕೇತು ಮಿಕ್ಕೆಲ್ಲಾ ನವಗ್ರಹ

ಭ್ರಾಂತಿ ಮೂಡಿಸಿ ಬಿಡದೆ 

ಕಾಡುವುದೊಂದೆ ಪೂರ್ವಾಗ್ರಹ!

(ಕೃಪೆ: ಅಂತರ್ಜಾಲ)

ಜಗದಲ್ಲೇ ಅತೀ ಬುದ್ಧಿವಂತ, ಪ್ರಜ್ಞಾವಂತ, ವಿದ್ವತ್ಪೂರ್ಣ ಜೀವಿ ಮಾನವ. ಆದರೆ ಅದೇ ಅವನ ಮಿತಿಯೂ ಹೌದೇನೋ….. ಬೇರ್ಯಾವ ಜೀವಿಗಳಲ್ಲೂ ಇರದ ಪೂರ್ವಾಗ್ರಹ ಪೀಡಿತ ಆಲೋಚನೆಗಳು ಮನುಜನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಅದರಿಂದ ಯಾರು ಉದ್ಧಾರವಾಗದೇ ಹೋದರೂ, ಅದರಿಂದಾಗಿ ಹಾಳಾದ ಮನಸ್ಸುಗಳಿಗೆ ಲೆಕ್ಕವಿಲ್ಲ.

ಅಂತಹದೇ ಪೂರ್ವಾಗ್ರಹ ಪೀಡಿತ ಕಟ್ಟುಪಾಡುಗಳ ಹಂಗಿಗೆ ಬಿದ್ದಿದ್ದರು ಮಂಗಳಮ್ಮ. ಅವರ ಯೋಚನೆಗಳು ಸಮಾಜದ ಸ್ವೀಕೃತಿಯ ಸುತ್ತ ಪರಿಭ್ರಮಿಸತೊಡಗಿದ್ದವು.

     *********ಮುಂದುವರೆಯುತ್ತದೆ**********



ಸೋಮವಾರ, ಜೂನ್ 29, 2020

ಅನೂಹ್ಯ 39

ಅಳುವಿನ ನಡುವಿಂದ ನಡುಗುವ ದನಿಯಲ್ಲಿ ಬಂದ ನವ್ಯಾಳ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದ ಮಂಗಳಾ ಅವಳಾಡಿದ ಕೊನೆಯ ಪದ ಕೇಳಿ ಸ್ಥಬ್ದರಾದರು. ಸೊಸೆಯ ತಲೆಯನ್ನು ಸವರುತ್ತಿದ್ದ ಕೈ ತಟಸ್ಥವಾಯಿತು.

ಮಂಗಳಮ್ಮ, ಸತ್ಯನಾರಾಯಣರಿಬ್ಬರೂ ಅವಳ ಮಾತು ಕೇಳಿ ಗರಬಡಿದವರಂತೆ ಕುಳಿತುಬಿಟ್ಟರು. ಒಂದಿಷ್ಟು ಸಮಯ ಕಳೆದು ತಾವೇ ತಪ್ಪಾಗಿ ಕೇಳಿಸಿಕೊಂಡಿರಬಹುದು ಎಂದುಕೊಂಡವರು, "ಏನ್ ಹೇಳ್ದೇ ನವ್ಯಾ ನೀನು?" ಎಂದು ಮತ್ತೊಮ್ಮೆ ಅಪನಂಬಿಕೆಯಿಂದ ಕೇಳಿದರು ಮಂಗಳಾ.

"ನಾನು ವೇಶ್ಯೆಯಾಗಿದ್ದೆ....." ಬಿಕ್ಕುವಿಕೆಯ ನಡುವೆಯೇ ಈ ಬಾರಿ ಸ್ಪಷ್ಟವಾಗಿ ಹೇಳಿದಳು. 

ಆ ಮಾತು ಕೇಳಿದ್ದೇ ಮಂಗಳಾ ತಟ್ಟನೆ ಎದ್ದರು. ಅವರೆದ್ದ ರಭಸಕ್ಕೆ ಒರಗಿದ್ದ ನವ್ಯಾ ನೆಲಕ್ಕೆ ಬಿದ್ದಳು. 'ಕಟ್ಟಿದ ಬದುಕು ಮಣ್ಣುಪಾಲಾಗುವ ಸೂಚನೆಯಾ?' ಮನ ಶಂಕಿಸಿತು. ಕಣ್ಣೊರೆಸಿಕೊಂಡು ಎದ್ದು ಗೋಡೆಗೊರಗಿ ಮುದುರಿ ಕುಳಿತಳು. ತಲೆಯೆತ್ತಿ ಅತ್ತೆ ಮಾವನ ಮುಖ ನೋಡುವ ಆಸೆ. ಆದರೆ ಧೈರ್ಯ ಸಾಲದಾಗಿತ್ತು. ಎಷ್ಟು ಹೊತ್ತು ಹಾಗೆಯೇ ಬಿಕ್ಕಳಿಸುತ್ತಾ ಕುಳಿತಳೋ ಅವಳಿಗೇ ತಿಳಿಯದು.

ಬಹಳ ಹೊತ್ತಿನ ಮೇಲೆ ಇದ್ದಬದ್ದ ಧೈರ್ಯವನ್ನೆಲ್ಲಾ ಕೂಡಿಸಿ ಕಷ್ಟಪಟ್ಟು ನೆಲದ ಮೇಲಿದ್ದ ದೃಷ್ಟಿಯನ್ನು ನಿಧಾನವಾಗಿ ಮೇಲೇರಿಸಿದಳು.......

ಸತ್ಯನಾರಾಯಣರು ಸೋಫಾದ ಮೇಲೆ ತಲೆಗೆ ಕೈಯೊಡ್ಡಿ ಕುಳಿತಿದ್ದರು. ವೇದನೆಯ ಗೆರೆಯೊಂದು ಸ್ಪಷ್ಟವಾಗಿತ್ತು ಮುಖದಲ್ಲಿ. ಆ ಗೆರೆಗಳ ಆಳದಲ್ಲಿ 'ಏಕೆ ಹೀಗೆ ಮಾಡಿಬಿಟ್ಟೆ' ಎಂಬ ಪ್ರಶ್ನೆಯಿತ್ತಾ? ಅವಳಿಗೆ ಗೊತ್ತಾಗಲಿಲ್ಲ.

ಅಮ್ಮನ ಅರಸಿತು ಅವಳ ಕಣ್ಣು..... ಅವರ ಮನಸ್ಸಿಗೆ ತನ್ನಿಂದ ತುಂಬಾ ಘಾಸಿಯಾಗಿದೆ ಎಂಬ ಅರಿವಿತ್ತು ಅವಳಿಗೆ. ಅದು ಬಹಳವಾಗಿ ಹಿಂಸಿಸಿತು ನವ್ಯಾಳನ್ನು. ತನ್ನ ಆಯಿ ತೀರಿದ ಹಲವು ವರ್ಷಗಳ ನಂತರ ಅವಳ ಬದುಕಿನಲ್ಲಿ ಮತ್ತೆ ಅಮ್ಮನ ಮಮತೆ ಹೊತ್ತು ತಂದಿದ್ದು ಮಂಗಳಮ್ಮ. ಹಾಗೆ ನೋಡಿದರೆ ಅವಳಿಗೆ ಅತ್ತೆಯ ಮೇಲಿನ ಅಕ್ಕರೆ ಗಂಡನ ಮೇಲಿನ ಪ್ರೀತಿಗಿಂತಲೂ ತುಸು ಹೆಚ್ಚೇ. ಅವರಿಗೂ ಅವಳೆಂದರೆ ಕಿಶೋರ್ ಹಾಗೂ ಕಾರ್ತಿಗಿಂತಲೂ ಒಂದು ಕೈ ಮೇಲು.

ಸುತ್ತಲೂ ನೋಟ ಹರಿಸಿದಳು. ದೇವರ ಕೋಣೆಯ ಎದುರಿನ ಗೋಡೆಗೊರಗಿ ಕುಳಿತಾಕೆ ಕಣ್ಣಿಗೆ ಬಿದ್ದರು. 

ಅವರ ಮುಖದಲ್ಲಿ ಏನಿತ್ತು…...? ಅದು ವಿಷಾದವೇ? ಅಸಹ್ಯವೇ? ನೋವೇ?  ಕೋಪವೇ? ದ್ವೇಷವೇ? ಇಲ್ಲ ಇವೆಲ್ಲವೂ ಮಿಳಿತಗೊಂಡ ಭಾವವಾ.......?  ಊಹ್ಮೂಂ...... ಯಾವುದೂ ಅಲ್ಲ…... ಅವರ ಮುಖ ಭಾವಶೂನ್ಯವಾಗಿತ್ತು. ಗಾಢ ನಿರ್ಲಿಪ್ತತೆಯೊಂದು ಅವರನ್ನಪ್ಪಿತ್ತು. ಈಗ ಅವಳಿಗೆ ನಿಜಕ್ಕೂ ಭಯವಾಗತೊಡಗಿತು. 

ಸತ್ಯ ತಿಳಿದಾಗ ಕೋಪಿಸಿಕೊಂಡು ಬೈದು ಕೂಗಾಡಬಹುದು, ಮನೆಯಿಂದ ಹೊರಹಾಕಬಹುದು ಎಂದೆಲ್ಲಾ ನಿರೀಕ್ಷಿಸಿದ್ದಳು ನವ್ಯಾ. ಆದರೆ ಮಂಗಳಾ ಮೌನಿಯಾಗಿದ್ದರು. ಆ ಮೌನವೇ ಮಾತಿಗಿಂತಲೂ ಮೊನಚಾಗಿ ಅವಳನ್ನು ಕೊಲ್ಲತೊಡಗಿತು‌. ಎದ್ದು ಅವರ ಬಳಿ ಬಂದು ಎದುರಿನಲ್ಲಿ ಕುಸಿದು ಕುಳಿತು ಅವರ ಕಾಲನ್ನು ಹಿಡಿದಳು.

"ಅಮ್ಮಾ, ಮಾಡಿದ ತಪ್ಪಿಗೆ ನೀವು ನನ್ನ ಬೈಯಿರಿ, ಹೊಡೀರಿ, ಬೇಕಾದ್ರೇ ನನ್ನ ಕೊಂದೇ ಬಿಡಿ. ಬೇಜಾರಿಲ್ಲ ನಂಗೆ. ಆದ್ರೆ ದಯವಿಟ್ಟು ಏನಾದ್ರೂ ಮಾತಾಡಿ........" ಗೋಗರೆದಳು. ಏನಾದರೂ ಮಾತನಾಡಿದರೆ ಅವರ ಮನದ ಬೇಗೆ ತುಸುವಾದರೂ ನೀಗುತ್ತದೆ ಎಂಬ ಆಸೆ ಅವಳದು. ಆದರವರದು ಅದೇ ಮೌನ. ಪರಿ ಪರಿಯಾಗಿ ಕೇಳಿದಳು. ಯಾವುದಕ್ಕೂ ಕಿಂಚಿತ್ ಪ್ರತಿಕ್ರಿಯೆ ಸಿಗಲಿಲ್ಲ ಆಕೆಯಿಂದ. ಆಕೆ ಶಿಲೆಯಂತೆ ಕುಳಿತುಬಿಟ್ಟಿದ್ದರು. ಅವರ ಮನದಲ್ಲಿ ಏನು ನಡೆಯುತ್ತಿರಬಹುದೆಂದು ಗ್ರಹಿಸಲೂ ಸಾಧ್ಯವಾಗದೇ ತಲ್ಲಣಿಸಿದಳು.

"ಅಮ್ಮಾ….. ಪ್ಲೀಸ್, ಮಾತಾಡಿಮ್ಮ. ಈ ರೀತಿ ಎಲ್ಲಾ ಮನಸ್ಸಲ್ಲಿಟ್ಕೊಂಡು ಕಲ್ಲಿನ ರೀತಿ ಕೂತ್ಕೋಬೇಡಿ. ನಾನು ಇಲ್ಲಿರೋಲ್ಲ‌ ಮನೆ ಬಿಟ್ಹೋಗ್ತೀನಿ. ಮನೆ ಯಾಕೆ, ಈ ಊರೇ ಬಿಟ್ಹೋಗ್ತೀನಿ. ಇನ್ಯಾವತ್ತೂ ನಿಮ್ಮ ಕಣ್ಣಿಗೆ ಕಾಣ್ಸೋಲ್ಲ. ನಂದೇ ತಪ್ಪು. ಹೌದು. ನಾನು ಸಮನ್ವಿತಾ ಸಿಗುವ ಮುಂಚೆ ವೇಶ್ಯಾವಾಟಿಕೆಯ ದಂಧೆಯಲ್ಲಿದ್ದೆ. ಆದ್ರೆ ಸತ್ಯವಾಗ್ಲೂ ನಂದೇನೂ ತಪ್ಪಿಲ್ಲ ಅದ್ರಲ್ಲಿ. ನನ್ನ ಆಯೀ ಬಾಬ ತೀರಿದ ಮೇಲೆ ಸಂಬಂಧಿಕ ಅನ್ನಿಸಿಕೊಂಡವನೊಬ್ಬ ದಿಕ್ಕುದೆಸೆಯಿಲ್ಲದ ನನ್ನನ್ನು ಇಪ್ಪತೈದು ಸಾವಿರದ ಆಸೆಗೆ ಮಾರಿಬಿಟ್ಟ. ಅವ್ನು ನನ್ನ ಮಾರಿದ್ದಾನೆ ಅಂತಲೂ ಆಮೇಲೇ ಗೊತ್ತಾಗಿದ್ದು ನನಗೆ. ಅಲ್ಲಿದ್ದವರೆಲ್ಲಾ ನರರೂಪಿ ರಾಕ್ಷಸರು. ನನ್ನಂತಹವಳು ಅವರನ್ನು ಎದುರಿಸೋಕಾಗುತ್ತಾ? ಆದ್ರೂ ನನ್ನ ಕೈಲಾದಷ್ಟು ಹೋರಾಡಿದೆ. ಅವರ ಹೊಡೆತ ಬಡಿತಗಳನ್ನು ಸಹಿಸಿ ಅನ್ನ, ನೀರು ಬಿಟ್ಟು ಕುಳಿತೆ. ಚಿಕ್ಕೋಳು ನಾನಿನ್ನೂ ಆಗ. ಈ ಲೋಕದ ಕಠೋರತೆಯ ಅರಿವಿರಲಿಲ್ಲ ನನಗೆ. ನಾನು ಹೀಗೆ ಉಪವಾಸ ಮಾಡಿದೊಡನೆ ನನ್ನ ಬಿಟ್ಟು ಕಳಿಸ್ತಾರೆ ಅನ್ನೋ ಮುಗ್ಧ ಯೋಚನೆ ನನ್ನದು. ಆದರೆ ದಿನಾ ನನ್ನಂತಹ ಸಾವಿರಾರು ಹೆಣ್ಣುಗಳನ್ನು ಸರ್ಕಸ್ಸಿನ ಪ್ರಾಣಿಗಳಂತೆ ಪಳಗಿಸೋ ಅವರಿಗೆ ನಾನ್ಯಾವ ಲೆಕ್ಕ. ಅವರೇ ಊಟ, ತಿಂಡಿ ಕೊಡೋದು ನಿಲ್ಲಿಸಿದ್ರು. ಊಟ ಬೇಕೋ ದಂಧೆಗೆ ಇಳಿ ಇಲ್ಲಾ ಹೀಗೆ ಉಪವಾಸ ಸಾಯಿ ಎಂದರು‌. ಇಲ್ಲಿಂದ ಹೊರ ಹೋಗುವುದು ನನ್ನ ಭ್ರಮೆಯಷ್ಟೇ ಅಂತ ಆಗಲೇ ಅನ್ನಿಸತೊಡಗಿತ್ತು. ಆದ್ರೂ ಹಠ ಹಿಡಿದು ಉಪವಾಸ ಮುಂದುವರೆಸಿದೆ. ಜೊತೆಗೆ ದೈನಂದಿನ ಹೊಡೆತಗಳನ್ನು ಬೇರೆ ಸಹಿಸಬೇಕಿತ್ತು..... ಎಷ್ಟು ದಿನ? ಒಂದು, ಎರಡು, ಮೂರು? ನನ್ನ ಮನೆಯಲ್ಲಿ ಬಡತನವಿತ್ತಾದರೂ ಒಪ್ಪತ್ತಿನ ಊಟಕ್ಕೆ ತೊಂದರೆ ಇರಲಿಲ್ಲ. ಆದರೆ ಆ ನರಕದಲ್ಲಿ ಮೊದಲ ಬಾರಿಗೆ ಹಸಿವಿನ ಅಸಲೀ ಮುಖದ ಪರಿಚಯವಾಗಿತ್ತು. ಕೊನೆಗೂ ನಾನು ಸೋತೆ. ಅಗಾಧ ಹಸಿವಿನೆದುರು, ಆ ಅಸಾಧ್ಯ ನೋವಿನೆದುರು....... ಸೋತು ಹೋದೆ. ಅಷ್ಟೇ..... ನಾನು ಆ ನರಕದೊಳಗೆ ಬಂಧಿಯಾದೆ. ಅಲ್ಲಿಂದ ನನ್ನ ಬದುಕಿನ ತುಂಬಾ ರೌರವ ನರಕವೇ. ಉದರದ ಹಸಿವೇನೋ ನೀಗಿತು. ಆದರೆ ಎಂದಿಗೂ ನೀಗದ ಗಂಡಸಿನ ಕಾಮಾಗ್ನಿಯೆಂಬ ಹಸಿವು.....? ಅದರ ಚಿತ್ರವಿಚಿತ್ರ ವಿಕೃತಗಳ ವಿಶ್ವರೂಪ ದರ್ಶನ…. ಬದುಕಿನ ಆಸೆಯನ್ನೇ ಬಿಟ್ಟೆ. ದೇಹವಿತ್ತೇ ಹೊರತು ಅದರೊಳಗೆ ಉಸಿರಿರಲಿಲ್ಲ. ಆ ಜಾಗಕ್ಕೆ ಬೇಕಾದುದು ದೇಹವೇ ಹೊರತು ಜೀವವಲ್ಲ. ಅಲ್ಲೇ ಹಿಂಡಿಹಿಪ್ಪೆಯಾಗಿ ಬೀದಿ ಹೆಣವಾಗುವೆ ಅನ್ನುವ ಭವಿಷ್ಯ ತಿಳಿದಿತ್ತು. ಆದರೆ ವಿಧಿ ಒಂದಿಷ್ಟು ಕರುಣೆ ತೋರಿತು ನನ್ನ ಬಗ್ಗೆ. ಕಗ್ಗತ್ತಲಿನ ಕೂಪದಲ್ಲಿದ್ದ ನನಗಾಗಿ ದಾರಿದೀಪವೊಂದನ್ನು ಕರುಣಿಸಿತು. ಆ ದಾರಿದೀಪ ತನ್ನ ಮಂತ್ರ ದಂಡದ ಚಮತ್ಕಾರವನ್ನು ತೋರಿಸಿತು. ಕಣ್ಮುಚ್ಚಿ ಬಿಡುವುದರೊಳಗೇ ಸಮಾಧಿಯಿಂದ ಎದ್ದು ಬಂದಿದ್ದೆ. ಹೊಸ ಜಗತ್ತಿಗೆ…… ಬೆಳಕಿನ ನಂದನಕ್ಕೆ…..‌ ಇಲ್ಲಿ ಕಿಶೋರ್ ಸಿಕ್ಕರು.... ಈ ಬೃಂದಾವನ ದಕ್ಕಿತು.... ನಿಮ್ಮೆಲ್ಲರಿಗೂ ಮೊದಲೇ ನನ್ನ ಅತೀತದ ಬಗ್ಗೆ ಎಲ್ಲಾ ಹೇಳಬೇಕು ಎಂದುಕೊಂಡೆ. ನಿಮ್ಮ ಪ್ರೀತಿ, ವಿಶ್ವಾಸ, ಅಕ್ಕರೆ ನನ್ನ ಕಟ್ಟಿ ಹಾಕಿತ್ತು ಅಮ್ಮಾ. ನಾನು ತೀರಾ ಸ್ವಾರ್ಥಿಯಾದೆ. ಅಷ್ಟು ವರ್ಷಗಳು ನರಕ ನೋಡಿದವಳು ಈಗ ಸಿಕ್ಕಿರೋ ಸ್ವರ್ಗವನ್ನು ಯಾಕೆ ಬಿಡಬೇಕು? ನನಗೂ ಎಲ್ಲರ ತರ ಬದುಕೋ ಹಕ್ಕಿದೆ ಅಂತ ನನ್ನ ಅಂತರಾತ್ಮದ ಜೊತೆ ವಾದ ಮಾಡಿ ಗೆದ್ದೆ. ಸತ್ಯ ಹೇಳಿ ನಿಮ್ಮನ್ನೆಲ್ಲಾ ಕಳ್ಕೊಳ್ಳಬಾರದು ಅನ್ನೋ ಸ್ವಾರ್ಥಕ್ಕಾಗಿ ಸತ್ಯ ಮುಚ್ಚಿಟ್ಟೆ ಅಮ್ಮಾ. ದೇವರಾಣೆ ಇದನ್ನು ಬಿಟ್ಟು ಬೇರ್ಯಾವ ಉದ್ದೇಶವೂ ಇರಲಿಲ್ಲ ನನಗೆ. ಸುಳ್ಳು ಹೇಳಿದ ಆರಂಭದಲ್ಲಿ ಎಲ್ಲವೂ ಸುಂದರವಾಗಿತ್ತು. ಆದರೆ ಸಮಯ ಕಳೆದಂತೆ ಮುಚ್ಚಿಟ್ಟ ಸತ್ಯ ಸುಡತೊಡಗಿತು. ನನ್ನ ಮುಖವನ್ನು ನಾನೇ ದಿಟ್ಟಿಸಿ ನೋಡಲಾಗದಷ್ಟು ಹೀನ ಸ್ಥಿತಿಗೆ ತಲುಪಿರುವೆ. ಮನಸ್ಸು ಮನಮಂಥನದಲ್ಲಿ ತೊಡಗಿದೆ. ಸಮುದ್ರ ಮಂಥನದಲ್ಲಿ ಅಮೃತದೊಂದಿಗೆ ಹಾಲಾಹಲ ಉಕ್ಕಿದಂತೆ, ಮನಮಂಥಿಸಿದಾಗ ಸಿಹಿನೆನಪುಗಳ ಅಮೃತದೊಂದಿಗೆ ಅತೀತದ ಭೂತವೂ ಉಕ್ಕಿ ನರ್ತಿಸತೊಡಗಿದೆ. ಇನ್ನೂ ಸುಳ್ಳಿನ ಬಂಗಾರದ ಸಿಂಹಾಸನದಲ್ಲಿ ಕುಳಿತು ಮೆರೆಯುವ ಶಕ್ತಿಯಿಲ್ಲ ಅಮ್ಮಾ. ಸತ್ಯ ಶರಶಯ್ಯೆಯಾದರೂ ಸರಿಯೇ.... ನನ್ನ ಅತೀತದ ನರಕಕ್ಕಿಂತ ಭೀಭತ್ಸವೇನಲ್ಲ ಈ ಮುಳ್ಳಿನ ಹಾಸಿಗೆ. ನಾ ಏರಲು ತಯಾರಿರುವೆ. ಮಾಡಿದ ತಪ್ಪನ್ನು ಮನ್ನಿಸಿ ನನ್ನ ಒಪ್ಪಿಕೊಳ್ಳಿ ಎಂದೂ ಕೇಳಲಾರೆ. ಅದು ಮನ್ನಿಸುವಷ್ಟು ಸಣ್ಣ ತಪ್ಪಲ್ಲ. ಖಂಡಿತಾ ನಾನಿಲ್ಲಿಂದ ದೂರ ಹೊರಟುಹೋಗುವೆ. ನಿಮ್ಯಾರ ಕಣ್ಣಿಗೂ ಕಾಣದಷ್ಟು ದೂರ. ಅದಕ್ಕೆ ಮುನ್ನ ಒಂದೇ ಒಂದು ಸಾರಿ ಮಾತಾಡಿ ಅಮ್ಮಾ....." ತನ್ನ ಮನದಲ್ಲಿದ್ದುದ್ದನ್ನೆಲ್ಲಾ ಹೊರಹಾಕಿದಳು ಮಂಗಳಾ ಮಾತನಾಡಲಿ ಎಂದು.

ಆದರೆ ಈಗಲೂ ಒಂದಿಷ್ಟೂ ಬದಲಾವಣೆಯಿಲ್ಲ ಅವರಲ್ಲಿ. ಆ ಮೌನದ ಹೊಡೆತಕ್ಕೆ ತತ್ತರಿಸಿದಳು ಹುಡುಗಿ.

"ಯಾಕಮ್ಮಾ, ನಿಮ್ಮ ಮಾತಿಗೂ ಯೋಗ್ಯಳಲ್ಲವೇ ನಾನು? ಈ ಮೌನ ನನಗೆ ದಿಗಿಲು ಹುಟ್ಟಿಸಿ ಕೊಲ್ಲುತ್ತಿದೆ... ಮಾತಾಡಿ ಅಮ್ಮಾ...."

ಇವಳು ಭಕ್ತೆಯಂತೆ ಗೋಗರೆಯುತ್ತಿದ್ದರೇ ಅವರು ಗರ್ಭಗುಡಿಯೊಳಗಿನ ವಿಗ್ರಹವಾಗಿದ್ದರು.

ನವ್ಯಾಳ ಮಾತುಗಳಷ್ಟನ್ನೂ ಕೇಳಿದ್ದ ಸತ್ಯನಾರಾಯಣರು ಅವಳ ಬಳಿಬಂದು ತಲೆಸವರಿದಾಗ ಅತ್ತೆಯ ಮೇಲಿದ್ದ ನೋಟವನ್ನು ಅವರೆಡೆಗೆ ಸರಿಸಿದಳು. ಕ್ಷಣಗಳಷ್ಟೇ..... ಮತ್ತೆ ತಲೆತಗ್ಗಿಸಿ ಕುಳಿತು ಬಿಟ್ಟಳು.

ಆದರೆ ಆ ನೋಟ........

ಕಸಾಯಿಖಾನೆಯ ಕಟುಕನೆದುರು 'ನನ್ನ ತಲೆ ಕಡಿಯಬೇಡವೋ' ಎಂದು ಬೇಡುವ ಆಡಿನಂತಹ ದೀನ ನೋಟವದು. ಆ ನೋಟದಲ್ಲಿದ್ದ ಭಾವ ಅವರ ಅಂತಃಸತ್ವವನ್ನು ಅಲುಗಾಡಿಸಿತು. ಅವರ ಮನಸ್ಸು ಈ ಮನೆಗೆ ಬಂದಲ್ಲಿನಿಂದ ಇಂದಿನವರೆಗಿನ ನವ್ಯಾಳ ನಡವಳಿಕೆಯನ್ನು ನೆನಪಿಸಿತು. ಒಂದೆರಡು ದಿನ ಒಳ್ಳೆಯತನದ ನಟನೆ ಮಾಡಬಹುದು. ಆದರೆ ವರ್ಷಗಟ್ಟಲೇ ತಾವು ಒಳ್ಳೆಯವರೆಂದು ನಟಿಸಿ ತೋರಲು ಎಂತಹ ಮಹಾನ್ ನಟನಿಂದಲೂ ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿ ಬಲ್ಲವರು ಅವರು. ಅವಳಲ್ಲಿ ಒಳ್ಳೆಯತನದೊಂದಿಗೆ ಒಂದು ಸ್ವಾಭಾವಿಕ ಸಾತ್ವಿಕತೆ ಇತ್ತು. ಆ ಸಾತ್ವಿಕತೆ ಜನ್ಮಜಾತವಾಗಿ ಬರುವಂತಹದ್ದು. ನಟಿಸಿ ಪ್ರದರ್ಶಿಸಲಾಗದು. ಈ ಮನೆಯ ಪ್ರತಿಯೊಬ್ಬ ಸದಸ್ಯನ ಮೇಲೆ ಅವಳಿಗಿದ್ದ ಗೌರವ, ಪ್ರೀತಿ, ಅಕ್ಕರೆ ಪ್ರಶ್ನಾತೀತವಾದುದು. ಅವಳ ಮಾತುಗಳಿಂದಲೇ ಅವಳ ಆಗಿನ ಪರಿಸ್ಥಿತಿ, ಅಲ್ಲಿ ಅವಳು ಅನುಭವಿಸಿರಬಹುದಾದ ಹಿಂಸೆ ಎಲ್ಲವೂ ಅಂದಾಜಾಗಿತ್ತು. ತಾಯ್ತಂದೆಯರನ್ನು ಕಳೆದುಕೊಂಡ ಒಂಟಿ ಹೆಣ್ಣುಮಗಳು….. ತನ್ನ ಸಂಬಂಧಿಯೇ ತಾನೇ ಎಂಬ ನಂಬಿಕೆಯಲ್ಲಿ ಜೊತೆಗೆ ಹೋಗಿದ್ದಾಳೆ. ಆತ ಸಂಬಂಧಕ್ಕೆ ಬೆಲೆ ಕೊಡದೇ ಹಣಕ್ಕೆ ಬಾಯ್ಬಿಟ್ಟರೇ ಇವಳೇನು ಮಾಡಿಯಾಳು? ಇನ್ನು ಆ ವೇಶ್ಯಾಗೃಹವೆಂಬುದಂತೂ ಹೆಣ್ಣುಮಕ್ಕಳ ಕಸಾಯಿಖಾನೆಯೇ ಸರಿ. ಪರಿಚಯಸ್ಥ ಸಂಬಂಧಿಕನೇ ಕನಿಷ್ಟ ಮಾನವೀಯತೆ ಮರೆತು ತಬ್ಬಲೀ ಹೆಣ್ಣನ್ನು ಮಾರಿರುವಾಗ ಇವರೋ ಹುಟ್ಟು ಕಟುಕರು. ಇವರು ಕರುಣೆ ತೋರುವರೇ? ಇದರಲ್ಲಿ ಇವಳ ತಪ್ಪೇನಿದೆ? ಅದೇನೆನು ಅನುಭವಿಸಿದೆಯೋ, ಒಡಲಲ್ಲಿ ಎಂತೆಂತಹಾ ನೋವನ್ನು ಬಚ್ಚಿಟ್ಟುಕೊಂಡಿದೆಯೋ ಹುಡುಗಿ…... ಅದಕ್ಕೇ ಇರಬೇಕು ಭೂಮಿಯಷ್ಟು ಸಹನೆ, ತಾಳ್ಮೆ ಈ ಮಗುವಿಗೆ. ಇಷ್ಟೆಲ್ಲಾ ನೋವುಗಳ ನಂತರ ಒಂದಿನಿತು ನೆಮ್ಮದಿ ಸಿಕ್ಕಿದಾಗ ಅದು ಕೈ ತಪ್ಪದಿರಲಿ ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಅದೂ ಸ್ವಾರ್ಥವೂ ಅಲ್ಲ. ಅದು ಆ ನೋವುಂಡ ಮನ ಬಯಸಿದ ಸಾಂತ್ವನವಷ್ಟೇ. ಆದರೂ ಇಷ್ಟು ವರ್ಷಗಳಿಂದ ಸತ್ಯ ಮುಚ್ಚಿಟ್ಟು ಅವಳೇನೂ ಸುಖವಾಗಿರಲಿಲ್ಲ. ಪ್ರತೀ ಕ್ಷಣವೂ ಸತ್ಯದ ಬೆಂಕಿಯಲ್ಲಿ ಬೆಂದು ಚಡಪಡಿಸಿದೆ ಜೀವ. ಅವಳು ಪಟ್ಟ ವೇದನೆ, ಇತ್ತೀಚೆಗಿನ ಅವಳ ವಿಚಿತ್ರ ನಡವಳಿಕೆ, ಆ ಮಾನಸಿಕ ಖಿನ್ನತೆ….... ಎಲ್ಲಕ್ಕೂ ಇಂದು ಸ್ಪಷ್ಟನೆ ಸಿಕ್ಕಿತ್ತು ಅವರಿಗೆ.

ಎಲ್ಲವೂ ಸತ್ಯವೇ.....

ಆದರೆ ........

ಮುಚ್ಚಿಟ್ಟ ಸತ್ಯ ಬಹಳ ಸೂಕ್ಷ್ಮವಾಗಿತ್ತು. ಈ ಸಮಾಜದ ನೀತಿ ನಿಯಮಗಳು ಕಠೋರ. ಈ ವಿಷಯ ಹೊರಜಗತ್ತಿಗೆ ತಿಳಿದರೆ ತಾವು ಇಷ್ಟು ವರ್ಷ ಈ ಸಮಾಜದಲ್ಲಿ ಸಂಪಾದಿಸಿದ್ದ ಗೌರವ, ಮಾನ ಮರ್ಯಾದೆ ಎಲ್ಲವೂ ಒಂದೇ ಕ್ಷಣದಲ್ಲಿ ಮಣ್ಣುಪಾಲಾಗುತ್ತದೆ ಎಂಬುದು ತಿಳಿದಿತ್ತು ಅವರಿಗೆ. ಈಗ ಅವಳನ್ನು ಒಪ್ಪಿ ಮನ್ನಿಸಿದರೆ ನಾವು ಸಮಾಜವನ್ನು ಎದುರು ಹಾಕಿಕೊಳ್ಳಬೇಕು. ಆ ಹಾದಿ ಕಠಿಣ. ಯಾರ ಸಹಕಾರವೂ ಸಿಗದು. ಬಂದದ್ದನ್ನೆಲ್ಲಾ ಎದುರಿಸಿ ನುಗ್ಗುವ ಛಾತಿ ಬೇಕು. ಅಕ್ಕಪಕ್ಕದವರ ನಿಂದನೆ, ಕೊಂಕು, ಕಟುವಾಣಿಗಳನ್ನು ಸಹಿಸುವ ಧೈರ್ಯವಿರಬೇಕು. ಒಟ್ಟಾರೆಯಾಗಿ ಅಲೆಗಳ ವಿರುದ್ಧ ಈಜಬೇಕು. ಜಯಿಸುವುದು ಅಸಾಧ್ಯದ ಮಾತು. ಜೀವನ ಪರ್ಯಂತ ಆಡಿಕೊಳ್ಳುತ್ತದೆ ಸಮಾಜ. ನಮ್ಮನ್ನು ಬಹಿಷ್ಕರಿಸಬಹುದು. ಇಲ್ಲಾ ಕೊಲ್ಲುವ ಪ್ರಯತ್ನಗಳೂ ನಡೆಯಬಹುದು. ಇದನ್ನೆಲ್ಲಾ ಎದುರಿಸಿ ಬದುಕಬಲ್ಲೆವೇ…....?

ಯೋಚನೆಗೆ ಬಿದ್ದಿದ್ದರು ಸತ್ಯನಾರಾಯಣ.

ಒಂದೇ ಕೋಣೆಯಲ್ಲಿ ಮಾತಿಲ್ಲದೇ ಕುಳಿತಿದ್ದ ಮೂವರದ್ದೂ ಒಂದೊಂದು ಭಾವಲೋಕ........

ಇಡೀ ಕೋಣೆಯಲ್ಲಿ ಉಳಿದಿದ್ದು ಕೇವಲ ಮೌನವಷ್ಟೇ…......

ಮನ್ ಜಂಗಲ್ ಮೆ ಆಂಧೀ ಹಲ್ಚಲ್

ಪತ್ತೇ ಬಿಚ್ಡನ್ ಲಾಗೇ.....

ಲೆಹರ್ ಲೆಹರ್ ಉತ್ಪಾತ್ ನದೀ ಮೆ

ಹೃದಯ್ ಜ್ವಾರ್ ಸಾ ಜಾಗೇ......

ಜೀವನ್ ಶೋರ್ ಆಯೇ ಔರ್ ಜಾಯೇ

ಶಾಶ್ವತ್ ಬಸ್ ಸನ್ನಾಟೆ ರೇ......

(ಮನವೆಂಬ ಕಾನನದೊಳು ಬಿರುಗಾಳಿಯೆದ್ದು ಎಲೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಉದುರತೊಡಗಿವೆ.......

ತರಂಗಗಳ ಏರಿಳಿತದಿಂದ ನದಿಯೇ ಅಸ್ತವ್ಯಸ್ತಗೊಂಡು ಮನ ಅಲೆಯಂತೆ ಎಚ್ಚರಗೊಂಡಿದೆ......

ಬದುಕಿನ ಗದ್ದಲ ಹೀಗೆ ಬಂದು ಹಾಗೆ ಹೋಗುವಂತಹದು......

ನಿಶ್ಯಬ್ಧ ಮೌನವೊಂದೇ ಶಾಶ್ವತವಾದುದು.....)  

ಮೂರು ದಿನಗಳ ಬಾಳ ಪಯಣವನ್ನು ಹಸನಾಗಿಸಿಕೊಳ್ಳಲು ಅದೆಷ್ಟು ಪ್ರಯತ್ನಿಸುತ್ತೇವೆ ನಾವು. ಶಾಶ್ವತವಾಗಿ ಇಲ್ಲೇ ಉಳಿದುಬಿಡುವ ಮೃತ್ಯುಂಜಯರೆಂದು  ಭ್ರಮಿಸುತ್ತೇವೆ. ಕೆಲವೊಮ್ಮೆ ಸರಿ ತಪ್ಪುಗಳ ವಿವೇಚನೆ ಮರೆತು ಜೀವಿಸುತ್ತೇವೆ. ಬದುಕಿನ ನಾಟಕರಂಗದಲ್ಲಿ ವಿವಿಧ ವೇಷ ಧರಿಸಿ ನಲಿಯುತ್ತೇವೆ. ಈ ಗದ್ದಲ, ಗೌಜು ಮೂರು ದಿನದ್ದಷ್ಟೇ….... ಕೊನೆಗೊಮ್ಮೆ ಕಾಲನ ಕೈವಶರಾಗಿ ಎದ್ದು ನಡೆಯಲೇಬೇಕು ಎಲ್ಲರೂ. ಈ ಮೂರು ದಿನಗಳ ಬದುಕಿನಲ್ಲಿ ಸಂಭ್ರಮಿಸುವ ಕ್ಷಣಗಳೆಷ್ಟು? ಬದುಕಿಗಾಗಿ ನಾವು ಪಡುವ ಬವಣೆಗಳೆಷ್ಟು? ಅಷ್ಟು ಬವಣೆಯಲ್ಲಿ ಸಂಪಾದಿಸಿದ್ದೇನಾದರೂ ನಮ್ಮೊಂದಿಗೆ ಶಾಶ್ವತವಾಗಿ ಉಳಿಯುವುದೇ? ಕಡೆಗೆ ಈ ದೇಹವೂ ಮಣ್ಣಿನ ಪಾಲೇ. ಕಡೆಯಲ್ಲಿ ಉಳಿಯುವುದು ಮೌನವೆಂಬ ನಿರ್ವಾತ ಮಾತ್ರವೇ…….

ಹುಲುಮಾನವರಾದ ನಾವು ಶ್ರಮಪಟ್ಟು ಸಿಕ್ಕಿರುವ ಬದುಕನ್ನು ಹಸನಾಗಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಬಹುದು. ಆದರೆ ವಿಧಾತನೆಂಬ ಕಡುಕ್ರೂರಿ ಮನಸ್ಸು ಮಾಡಿದರೆ ನಮ್ಮ ಶ್ರಮವನ್ನೆಲ್ಲಾ ಮಣ್ಣುಪಾಲಾಗಿಸಲು ಎಷ್ಟು ಹೊತ್ತು? ವಿಧಿಯನ್ನು ತಡೆಯುವ ಅಥವಾ ಬದಲಾಯಿಸುವ ಶಕ್ತಿ ಯಾರಿಗಿದೆ?

ನವ್ಯಾ ಬದುಕಲು ಸಿಕ್ಕ ಒಂದು ಅವಕಾಶವನ್ನು ಸಾಧ್ಯವಾದಷ್ಟು ಹಸನಾಗಿಸಿಕೊಂಡಿದ್ದೇನೋ ನಿಜ. ಆದರೆ ಇಂದು ವಿಧಿ ಅತೀತದ ರೂಪದಲ್ಲಿ ಅವಳ ಬದುಕನ್ನು ಅಗ್ನಿಪರೀಕ್ಷೆಗೆ ಗುರಿಮಾಡಿದ್ದಾನೆ. ಅವಳು ಸಮಿತ್ತಿನಂತೆ ಉರಿದು ಬೂದಿಯಾಗುವಳೋ ಇಲ್ಲಾ ಪುಟಕ್ಕಿಟ್ಟ ಚಿನ್ನದಂತೆ ಪ್ರಕಾಶಿಸುವಳೋ ಕಾದು ನೋಡಬೇಕಿತ್ತು.

ಮೂವರು ಮೂರುದಿಕ್ಕಿನಲ್ಲಿ ಮೌನದರಮನೆಯಲ್ಲಿ ಬಂಧಿಯಾಗಿದ್ದರು. ಸಮಯದ ಪರಿವಿರಲಿಲ್ಲ….....

ಹಾಗೆ ತಮ್ಮ ಆಲೋಚನೆಗಳಲ್ಲಿಯೇ ಬಂಧಿಯಾಗಿ ಕಾಷ್ಠ ಮೌನದಲ್ಲಿ ಕಳೆದುಹೋದ ಮೂವರ ನಡುವೆ ನಾಲ್ಕನೆಯವಳಾಗಿ ಪ್ರವೇಶಿಸಿದ್ದಳು ಸಮನ್ವಿತಾ......

      ********ಮುಂದುವರೆಯುತ್ತದೆ********

ಅನೂಹ್ಯ 38

ಅಭಿರಾಮ್ ತಾನವಳನ್ನು ನವ್ಯಾಳೊಂದಿಗೆ ಧನ್ವಂತರಿಯಲ್ಲಿ ನೋಡಿದ್ದಲ್ಲವೆಂದು ಹೇಳಿದಾಗ ಅಚ್ಚರಿಗೊಳಗಾದಳು ಸಮನ್ವಿತಾ. 

"ಮತ್ತೆ ನೀವು ನನ್ನ ಎಲ್ಲಿ ನೋಡಿದ್ದು? ಅದೂ ನವ್ಯಾ ಜೊತೆಯಲ್ಲಿ.....?"

"ಪೋಲಿಸ್ ಸ್ಟೇಷನಲ್ಲಿ. ಸುಮಾರು ನಾಲ್ಕು ವರ್ಷಗಳ ಹಿಂದೆ.... ನೀನು, ನವ್ಯಾ ಜೊತೆಗೆ ಇನ್ನೂ ನಾಲ್ವರು ಹುಡುಗಿಯರಿದ್ದರು..." ನಿಧಾನವಾಗಿ ಅವನು ಹೇಳುತ್ತಿದ್ದರೇ ಸಮನ್ವಿತಾ ಅವನನ್ನೇ ಬೆರಗುಗಣ್ಣಿನಿಂದ ದಿಟ್ಟಿಸುತ್ತಾ ಶಿಲೆಯಿಂತೆ ಕುಳಿತುಬಿಟ್ಟಳು.....

'ನಾಲ್ಕು ವರ್ಷಗಳ ಹಿಂದೆ ಸ್ಟೇಷನ್ನಿನಲ್ಲಿ.....!! ಇನ್ನೂ ನಾಲ್ವರು ಹುಡುಗಿಯರಿದ್ದರು........! ಅಂದರೇ….. ಇವನು ನಮ್ಮಿಬ್ಬರನ್ನು ನೋಡಿರುವುದು…… ನಾನು ನವ್ಯಾಳನ್ನು ಬಿಡಿಸಿಕೊಂಡು ಬಂದಾಗ…...

ಅಂದ.....ರೇ..... ಇವನಿಗೆ ನವ್ಯಾಳ ಬಗ್ಗೆ...... ಎಲ್ಲಾ ಗೊತ್ತಾ!? ಗೊತ್ತಿದ್ದೂ ಸುಮ್ಮನಿದ್ದನಾ? ಹೌದೆಂದಲ್ಲಿ ಇವನ ಉದ್ದೇಶ......? ಇವನನ್ನು ನೋಡಿದರೆ ಯಾರಿಗೂ ಕೆಡುಕನ್ನು ಉಂಟುಮಾಡುವ ಉದ್ದೇಶವಂತೂ ಇದ್ದಂತಿಲ್ಲ.... ಮತ್ತೇಕೇ?' ಅವಳ ಮನಸ್ಸು ಮಂಥನದಲ್ಲಿ ತೊಡಗಿತ್ತು.

ಅದೇ ಯೋಚನೆಯಲ್ಲಿ ಮುಳುಗಿ ಹೋದವಳಿಗೆ ಅವನು ಮೂರ್ನಾಲ್ಕು ಬಾರಿ ಕರೆದರೂ ಅರಿವಾಗಲಿಲ್ಲ. "ಡಾಕ್ಟ್ರೇ…..." ಎಂದು ಅವನು ಭುಜ ಹಿಡಿದು ಅಲುಗಿಸಿದಾಗ ಇಹಕ್ಕೆ ಬಂದವಳ ಮುಖದಲ್ಲಿ ಬರೀ ಪ್ರಶ್ನೆಗಳೇ.

ಹಣೆ ಚಚ್ಚಿಕೊಂಡ ಅಭಿ, "ಏನಮ್ಮಾ ನೀನು, ಯಾವಾಗ ನೋಡಿದ್ರೂ ಯಾವ್ದೋ ಲೋಕದಲ್ಲಿ ಇರ್ತೀಯಾ. ನಿನ್ನಂತಾ ಡಾಕ್ಟ್ರನ್ನ ಇದೇ ಫಸ್ಟ್ ಟೈಮ್ ನೋಡ್ತಿರೋದು ನಾನು. ಈಗೇನಾಯ್ತು ಅಂತ ಇಷ್ಟು ಯೋಚನೆ ಮಾಡ್ತಿದ್ದೀ? ನನ್ನಿಂದ ನವ್ಯಾಗೆ ಏನಾದ್ರೂ ಸಮಸ್ಯೆಯಾಗಬಹುದು ಅಂತಾನಾ? ಇಲ್ಲಾ ಅವಳ ಬಗ್ಗೆ ನನಗೆ ಏನೇನು ಗೊತ್ತು ಅಂತಾನಾ?" ಕೇಳಿದ.

"ನೀವು ಸ್ಟೇಷನ್ನಿನಲ್ಲಿ ನಮ್ಮಿಬ್ಬರನ್ನು ನೋಡಿದ್ದೀರಾ ಅಂದ್ರೇ ನಿಮಗೆ....... ಅದೂ..... ನವ್ಯಾ....." ಯಾಕೋ ಮಾತು ಮುಂದುವರೆಸಲಾರದೇ ಹೋದಳು ಸಮಾ.

"ನನಗೆ ಎಲ್ಲಾ ವಿಷಯ ಗೊತ್ತಿದೆ ಸಮನ್ವಿತಾ. ಐ ಮೀನ್…... ನವ್ಯಾಳ ಹಿನ್ನೆಲೆ ನನಗೆ ಅವತ್ತೇ ಗೊತ್ತಾಗಿತ್ತು" ಅವಳು ಕೇಳಲಾರದೇ ಅರ್ಧದಲ್ಲೇ ನಿಲ್ಲಿಸಿದ ಪ್ರಶ್ನೆಗೆ ಅವನೇ ಉತ್ತರಿಸಿದ. ಅವಳಿಗೆ ಮುಂದೇನು ಮಾತನಾಡಬೇಕೆಂಬುದೇ ತಿಳಿಯಲಿಲ್ಲ. ಸುಮ್ಮನೆ ಕುಳಿತು ಬಿಟ್ಟಳು. 

"ನನ್ನಿಂದ ನವ್ಯಾಗೆ ಏನೆಲ್ಲಾ ಸಮಸ್ಯೆಗಳಾಗಬಹುದು ಅಂತ ಯೋಚಿಸ್ತಿದ್ದೀಯಾ?" ಎಂದವನನ್ನೇ ದೀರ್ಘವಾಗಿ ನೋಡಿದವಳು ಇಲ್ಲವೆಂದು ತಲೆಯಾಡಿಸಿದಳು.

"ಇಲ್ಲಾ ಅಭಿರಾಮ್, ನಿಮ್ಮಿಂದ ಅವಳಿಗೆ ತೊಂದರೆ ಆಗೋಕೆ ಸಾಧ್ಯಾನೇ ಇಲ್ಲ. ಹಾಗೆ ಮಾಡೋರಾಗಿದ್ರೆ ಇಷ್ಟು ದಿನ ಕಾಯೋ ಅಗತ್ಯ ಇರಲಿಲ್ಲ ನಿಮಗೆ. ಮೋರ್ ಓವರ್, ನೀವು ಅಂತಹ ಮನಸ್ಥಿತಿ ಇರೋ ವ್ಯಕ್ತಿಯೇ ಅಲ್ಲ. ನಿಮ್ಗೆ ಬದುಕುವ ಕಲೆ, ಬದುಕಿನ ಬೆಲೆ ಎರಡೂ ಗೊತ್ತಿದೆ. ಇನ್ನೊಬ್ಬರ ಪರಿಸ್ಥಿತಿಯನ್ನು ಅವರ ಜಾಗದಲ್ಲಿ ನಿಂತು ಅವಲೋಕಿಸುವ ಮನಸ್ಸು ಎಲ್ಲರಿಗೂ ಇರೋಲ್ಲ. ಆ ವಿಶಾಲ ಮನೋಭಾವ ನಿಮಗಿದೆ. ಬಹುಶಃ ಅದು ನಿಮ್ಮ ಹೆತ್ತವರಿಂದ ಬಂದ ಬಳುವಳಿಯೇನೋ. ನಿಮ್ಮಲ್ಲಿ ನನಗೆ ಅತೀ ಇಷ್ಟ ಆಗೋ ಗುಣ ಅದು. ಆದರೆ ನಿಮಗೆ ನವ್ಯಾ ವಿಚಾರ ಗೊತ್ತಿರಬಹುದು ಅನ್ನೋ ಸಣ್ಣ ಊಹೆಯೂ ನನಗಿರಲಿಲ್ಲ. ಅದಕ್ಕೇ ಆಶ್ಚರ್ಯ ಆಯ್ತು ಅಷ್ಟೇ. ಎಷ್ಟೋ ಸಲ ನೀವು ಕಿಶೋರ್ ಇಬ್ರೂ ಒಂದೇ ಅನ್ನಿಸಿಬಿಡುತ್ತೆ ನನಗೆ. ಅವನೂ ಡಿಟ್ಟೋ ನಿಮ್ಮ ಹಾಗೆಯೇ ಯೋಚನೆ ಮಾಡ್ತಾನೆ...." ಅವಳ ಮಾತುಗಳನ್ನು ಕೇಳಿ ಕಣ್ಣರಳಿಸಿದ ಅಭಿ.

"ಧನ್ಯೋಸ್ಮಿ .... ಅಂತೂ ನನ್ನಂತಹ ಪಾಮರನನ್ನೂ ಗಮನಿಸಿದ್ದೀರಾ ಅಂತಾಯ್ತು. ನಂಗಂತೂ ಯುದ್ಧ ಗೆದ್ದಷ್ಟು ಖುಷಿ ಆಯ್ತು ಡಾಕ್ಟ್ರೇ. ನಾನು ತುಂಬಾ ಸಲ ನವ್ಯಾ ಬಗ್ಗೆ ಕೇಳೋಣ ಅಂದ್ಕೊಂಡೆ. ಆದ್ರೆ ಕಿಶೋರ್ ಮತ್ತವರ ಮನೆಯವರಿಗೆ ವಿಷಯ ಗೊತ್ತಿಲ್ಲದಿದ್ರೆ ಅಂತ ಅಂದುಕೊಂಡು ಸುಮ್ಮನಾಗ್ತಿದ್ದೆ‌. ಇವತ್ತು ನೀನೇ ಆ ವಿಷಯ ತೆಗೆದು ನನಗೆ ಕೇಳೋಕೆ ಅವಕಾಶ ಸಿಕ್ಕಿತಷ್ಟೇ"

"ಕಿಶೋರನಿಗೆ ಎಲ್ಲವೂ ಗೊತ್ತು. ಅವನೂ ನಿಮ್ಮ ರೀತಿಯೇ ಗೊತ್ತಿದ್ದೂ ಗೊತ್ತಿಲ್ಲದವನ ಹಾಗಿದ್ದ. ಒಮ್ಮೆ ನೇರವಾಗಿ ನನಗೆ ಅವ್ಳಂದ್ರೆ ಇಷ್ಟ. ಮದುವೆಗೆ ಒಪ್ಪಿಸು ಅಂದಾಗ ನನಗೆ ಗಾಬರಿ ಆಗೋಯ್ತು. ನವ್ಯಾ ಆಗೋದೇ ಇಲ್ಲ ಅಂತ ಹಠ ಹಿಡಿದು ಕುಳಿತಾಗ್ಲೇ ಅವನಿಗೆ ಎಲ್ಲಾ ವಿಷಯ ಗೊತ್ತು ಅಂತ ನಮ್ಮಿಬ್ಬರಿಗೆ ಗೊತ್ತಾಗಿದ್ದು. ಆದರೆ ಮನೆಯವರಿಗೆ ವಿಷಯ ಗೊತ್ತಿಲ್ಲ. ಅದೇ ಎಲ್ಲಾ ಸಮಸ್ಯೆಗಳಿಗೂ ಮೂಲ ಆಗಿರೋದು. ಮನೆಯವರಿಗೆ ನಿಜ ಹೇಳೋಣ ಅಂತ ನವ್ಯಾ ಮದುವೆಗೆ ಮುಂಚೆಯೇ ಪಟ್ಟು ಹಿಡಿದಿದ್ಲು. ನಾವಿಬ್ಬರೂ ಏನೇನೋ ಹೇಳಿ, ಹರಸಾಹಸಪಟ್ಟು ಒಪ್ಪಿಸಿದ್ವಿ. ಈಗ ಮನೆಯವರಿಗೆ ಸತ್ಯ ಹೇಳಿದ್ರೆ ಅವರೆಲ್ಲಿ ನವ್ಯಾನ ತನ್ನಿಂದ ದೂರ ಮಾಡ್ತಾರೋ ಅನ್ನೋ ಭಯದಲ್ಲಿ ಕಿಶೋರ್ ಸತ್ಯ ಹೇಳೋಕೆ ತಯಾರಿಲ್ಲ. ಆದರೆ ಸತ್ಯ ಮುಚ್ಚಿಟ್ಟು ಇಷ್ಟು ದಿನ ಮನೆಯವರನ್ನು ಕತ್ತಲಲ್ಲಿಟ್ಟಿದ್ದು ಸಾಕು, ಸತ್ಯ ಹೇಳೋಣ ಅಂತ ನವ್ಯಾ ವಾದ. ಇಬ್ಬರ ಹೇಳಿಕೆಯಲ್ಲೂ ಸತ್ಯವಿದೆ. ಆದರೆ ಎರಡೂ ವಿರುದ್ಧ ದಿಕ್ಕಿನ ಯೋಚನೆಗಳು. ಕಿಶೋರ್ ಅಹಮದಾಬಾದಿಗೆ ವರ್ಗಾವಣೆ ಮಾಡಿಸಿಕೊಂಡು ನವ್ಯಾನ ಸಧ್ಯಕ್ಕೆ ಮನೆಯಿಂದಲೇ ದೂರ ಕರೆದೊಯ್ಯುವ ನಿರ್ಧಾರದಲ್ಲಿದ್ದಾನೆ. ಆದರೆ ಅವನು ನವ್ಯಾ ಮನಸ್ಥಿತಿನ ಅರ್ಥಾನೇ ಮಾಡ್ಕೋತಿಲ್ಲ. ಮುಚ್ಚಿಟ್ಟಿರುವ ಸತ್ಯ ಅವಳನ್ನು ಬೆಂಕಿಯಂತೆ ಸುಡುತ್ತಿದೆ. ಮನೆಯವರ ಅಕ್ಕರೆ, ಮಮತೆ ಕಂಡಾಗಲೆಲ್ಲಾ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ಪ್ರಜ್ವಲಿಸುತ್ತದೆ. ಇತ್ತೀಚೆಗಂತೂ ಅವಳ ವರ್ತನೆ ಭಯ ಹುಟ್ಟಿಸುವಂತಿದೆ. ಒಂದು ವೇಳೆ ಅವಳನ್ನು ಅಹಮದಾಬಾದಿಗೆ ಕರೆದೊಯ್ಯದರೆ ಅವಳು ಮಾನಸಿಕ ರೋಗಿಯಾಗುವುದಂತೂ ಖಚಿತ. ಇದೇ ನನ್ನ ಚಿಂತೆ ಅಭಿ" ಮನಸ್ಸು ಬಿಚ್ಚಿ ಹೇಳಿಕೊಂಡಳು.

"ಇದಕ್ಕೆಲ್ಲಾ ಪರಿಹಾರ ಇರುವ ಸತ್ಯವನ್ನು ಮನೆಯವರಿಗೆ ಹೇಳಿಬಿಡುವುದು. ಕಿಶೋರ್ ಭಯಪಟ್ಟಂತೆ ದೊಡ್ಡ ಗಲಾಟೆಯೇ ನಡೆದು ನವ್ಯಾ ಆ ಮನೆಯಿಂದ ಹೊರಬೀಳಬಹುದು ಅಥವಾ…….. ಕಿಶೋರನ ಮನೆಯವರು ವಿಚಾರವಂತರು. ನವ್ಯಾಳ ಸ್ಥಿತಿಯನ್ನು ಅರ್ಥೈಸಿಕೊಳ್ಳಲಾರರೇ ಸಮಾ?"

"ನನಗಂತೂ ಏನೂ ತೋಚುತ್ತಿಲ್ಲ ಅಭಿ. ಈ ಬಗ್ಗೆ ಯೋಚಿಸಿದಷ್ಟೂ ಸಮಸ್ಯೆ ಉಲ್ಬಣವಾಗುವಂತೆ ಕಾಣುತ್ತಿರುವುದೇ ಹೊರತು ಪರಿಹಾರದ ಲವಲೇಶವೂ ಗೋಚರಿಸುತ್ತಿಲ್ಲ"

"ಈ ಸಮಸ್ಯೆಗೆ ಸತ್ಯದ ಅನಾವರಣವೊಂದೇ ಪರಿಹಾರ ಸಮಾ. ಕಿಶೋರ್ ಈಗ ಅದರಿಂದ ತಪ್ಪಿಸಿಕೊಳ್ಳಲು ಪರ ಊರಿಗೆ ಹೋದರೂ ಮುಂದೊಂದು ದಿನ ಸತ್ಯ ಹೊರಬೀಳುವುದು ಖಚಿತ. ಆಗಲೂ ಪರಿಣಾಮ ಇದೇ. ಎಷ್ಟೇ ಕಾದರೂ ಪರಿಣಾಮವನ್ನು ಬದಲಿಸುವ ಸಾಧ್ಯತೆಯೇ ಇಲ್ಲದಿರುವಾಗ ಸತ್ಯವನ್ನು ಹೇಳಿ ಪರಿಣಾಮವನ್ನು ಎದುರಿಸುವುದೇ ಸರಿಯಾದ ನಿರ್ಧಾರ. ಆಗ ನವ್ಯಾಳ ಬೇಗುದಿಯಾದರೂ ಕಡಿಮೆಯಾಗುತ್ತದೆ. ಕಿಶೋರ್ ನವ್ಯಾಳೊಂದಿಗೆ ಅಹಮದಾಬಾದಿಗೆ ಹೋಗುವ ಮುನ್ನವೇ ನೀನು ಇರುವ ವಿಷಯವನ್ನು ಮನೆಯಲ್ಲಿ ಹೇಳಿಬಿಡು. ಆದದ್ದಾಗಲೀ" ಅಭಿಯ ಮಾತು ಸಮನ್ವಿತಾಳಿಗೆ ಅಕ್ಷರಶಃ ಸರಿಯೆನಿಸಿದರೂ ಅವನ ಪೂರ್ತಿ ಮಾತು ಒಪ್ಪಲಿಲ್ಲ.

"ನೀವು ಹೇಳುವುದು ಸರಿಯೇ. ಆದರೆ ನಾನು ಮನೆಯಲ್ಲಿ ಈ ವಿಷಯ ಹೇಳುವಂತಿಲ್ಲ ಅಭಿ. ಒಂದೋ ಕಿಶೋರ್ ಇಲ್ಲಾ ನವ್ಯಾ ಹೇಳಬೇಕು ಸತ್ಯವನ್ನು. ನಾನು ಹೇಳಿದರೆ ಕೊನೆಗೂ ಮಗ, ಸೊಸೆ ಸತ್ಯ ಹೇಳಲೇ ಇಲ್ಲ ಎಂಬ ಭಾವನೆ ಉದ್ಬವಿಸಿಬಿಡುತ್ತದೆ. ಅದು ಇನ್ನೂ ಅಪಾಯಕಾರಿ. ಅದರಿಂದಾಗಿ ಅಪ್ಪ ಅಮ್ಮ ತಮ್ಮ ಮಗ ಸೊಸೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬಿಡಬಹುದು. ಹಾಗಾಗಕೂಡದು." 

"ಅದೂ ಸರಿ, ನಾನು ಆ ಬಗ್ಗೆ ಯೋಚಿಸಲೇ ಇಲ್ಲ ನೋಡು. ಆದರೆ….... ನವ್ಯಾಳ ಸಧ್ಯದ ಪರಿಸ್ಥಿತಿ ನೋಡಿದರೆ ಅವಳೇ ಎಲ್ಲಾ ವಿಚಾರ ಹೇಳುವಳೇನೋ ಅನಿಸುತ್ತಿದೆ"

"ನನಗೂ ಹಾಗೆಯೇ ಅನಿಸುತ್ತಿದೆ ಅಭೀ. ಏನಾದರಾಗಲೀ,  ಈ ಬಾರಿ ಅವಳನ್ನು ತಡೆಯಲಾರೆ. ಆದರೆ ದೇವರು ಅವಳ ಕೈ ಬಿಡದಿರಲಿ ಅನ್ನುವುದೊಂದೇ ಬೇಡಿಕೆ. ಅಮ್ಮ ಅಪ್ಪ ಅವಳನ್ನು ಅರ್ಥೈಸಿಕೊಂಡರೇ..... ಎಷ್ಟು ಚೆನ್ನಾಗಿರುತ್ತೆ" ಅವಳ ಧ್ವನಿಯಲ್ಲಿ ಸಂತಸದ ಜೊತೆ ಅನುಮಾನವೂ ಮಿಳಿತವಾಗಿತ್ತು.

"ನೀನೇನೂ ಯೋಚಿಸಬೇಡ ಸಮಾ. ನಿನ್ನೆಲ್ಲಾ ನಿರ್ಧಾರಗಳಲ್ಲಿ ನಾನು ನಿನ್ನೊಂದಿಗಿದ್ದೇನೆ. ಅವರು ನವ್ಯಾಳನ್ನು ಒಪ್ಪಿಕೊಳ್ಳುತ್ತಾರೆಂದು ಆಶಿಸೋಣ. ಹಾಗೊಂದು ವೇಳೆ ಒಪ್ಪದಿದ್ದರೆ ನಾವಿರುವೆವಲ್ಲ ಅವಳಿಗೆ. ನನಗೂ ಆಕೃತಿಯೊಂದಿಗೆ ಇನ್ನೊಬ್ಬಳು ತಂಗಿ…….. ಅಣ್ಣನಂತೆ ಬೆನ್ನೆಲುಬಾಗಿ ನಿಂತು ಅವಳ ಬದುಕನ್ನು ರೂಪಿಸುತ್ತೇನೆ. ದಟ್ಸ್ ಮೈ ಪ್ರಾಮಿಸ್ ಟು ಯು ಡಿಯರ್" ಅವನ ಧ್ವನಿಯಲ್ಲಿ ದೃಢತೆಯಿತ್ತು. ಹುಡುಗಿ ಅವನ ಮಾತುಗಳಲ್ಲಿ ಕಳೆದುಹೋಗಿದ್ದಳು.

ನವ್ಯಾಳನ್ನು ಮನೆಯಿಂದ ಹೊರಹಾಕಿದರೆ ಅವಳು ನನ್ನೊಂದಿಗಿರಬಹುದೇ ಎಂದು ಕೇಳಿದ್ದಳು ಸ್ವಲ್ಪ ಮುಂಚೆ. ಅರೆಘಳಿಗೆಗೂ ಯೋಚಿಸದೇ, ಮರುಪ್ರಶ್ನಿಸದೆ ಸರಿ ಎಂದಿದ್ದ. 'ಅಣ್ಣನಂತೆ ನೆರಳಾಗಿ ನಿಲ್ಲುತ್ತೇನೆ. ಆಕೃತಿಯೊಂದಿಗೆ ಇನ್ನೊಬ್ಬಳು ತಂಗಿ…....' ಎಂತಹ ಮಾತು. ಅವಳು ನವ್ಯಾಳನ್ನು ಅವನ ಮನೆಗೆ ಕರೆತರಲು ಒಪ್ಪಿಗೆ ಕೇಳಿದರೆ, ಅವನು ಅದಾಗಲೇ ನವ್ಯಾಳನ್ನೇ ಅವನ ಮನೆಯ ಸದಸ್ಯೆಯಾಗಿ ಸೇರಿಸಿಕೊಂಡಿದ್ದ. ಅವನ ವ್ಯಕ್ತಿತ್ವದ ಎತ್ತರವನ್ನು ಅಳೆಯಲಾರದೇ ಹೋದಳು ಸಮಾ. ಜೀವನದಲ್ಲಿ ಪ್ರಪ್ರಥಮಬಾರಿಗೆ ತಂದೆ ಮಾಡಿದ ಕುಂತತ್ರಿ ಕೆಲಸವೊಂದರ ಬಗ್ಗೆ ಅತಿಯಾದ ಅಪ್ಯಾಯಮಾನತೆ ಮೂಡಿತು. 

ಸದಾ ತನ್ನ ಭಾವನೆಗಳನ್ನು ಒಂದು ಪರಿಧಿಯೊಳಗೇ ಇರಿಸಿ ಅವುಗಳು ತನ್ನನುಮತಿ ಇರದೇ ಹೊರಚೆಲ್ಲದಂತೆ ಬಂಧಿಸಿಡುವ ಹುಡುಗಿ ಅವಳು. ಆದರೆ ಇಂದು ಭಾವನೆಗಳ ಸಾಗರ ಉಕ್ಕೇರಿ ಪರಿಧಿ ದಾಟಿತ್ತು. ಲಯ ತಪ್ಪಿದ ಮನಸ್ಸು ಹುಚ್ಚುಖೋಡಿಯೇ ತಾನೇ...... ಹಿಂದುಮುಂದು ಯೋಚಿಸದೇ ಅವನನ್ನು ಬಿಗಿದಪ್ಪಿದ್ದಳು ಹುಡುಗಿ.

ಅವಳಿಂದ ಒಪ್ಪಿಗೆ, ಅಪ್ಪುಗೆ ಎರಡನ್ನೂ ನಿರೀಕ್ಷಿಸಿ, ಅದಕ್ಕಾಗಿ ಸಾಕಷ್ಟು ಉಪಾಯಗಳನ್ನು ಹೂಡಿ, ಸೋತು, ಅಷ್ಟು ಸುಲಭಕ್ಕೆ ಸಿಗದೆಂದು ಸ್ವಲ್ಪ ನಿರಾಶನಾಗಿದ್ದ ಹುಡುಗ. ಅಂತಹದರಲ್ಲಿ ಅವನು ಏನೂ ಪ್ಲಾನ್ ಮಾಡದೇ, ನಿರೀಕ್ಷೆಯೇ ಮಾಡಿರದ ಸಂದರ್ಭದಲ್ಲಿ ಅವನ ಊಹೆಗೂ ನಿಲುಕದಂತೆ ಹುಡುಗಿ ಅಪ್ಪಿಕೊಂಡುಬಿಟ್ಟಿರೆ……. ಅಭಿಯ ಪರಿಸ್ಥಿತಿ, ಮನಸ್ಥಿತಿ ಎರಡನ್ನೂ ನನಗಿಂತಲೂ ಚೆನ್ನಾಗಿ ನೀವೇ ಊಹಿಸಿರುತ್ತೀರಲ್ಲ….

ಕ್ಯೂನಲ್ಲಿ ನಿಲ್ಲದೇ ಸೀದಾ ತಿರುಪತಿ ತಿಮ್ಮಪ್ಪನ ದರುಶನ ಭಾಗ್ಯ ವಿತ್ ಪ್ರಸಾದ ಲಭಿಸಿದಂತಾಗಿತ್ತು ಹುಡುಗನಿಗೆ. ಸಧ್ಯಕ್ಕೆ ಈ ಅಪ್ಪಿಕೋ ಚಳುವಳಿಗೆ ಕಾರಣಕರ್ತೆಯಾದ ನವ್ಯಾ ಅವನ ಪಾಲಿಗೆ ವೆಂಕಟರಮಣನಿಗಿಂತಲೂ ಒಂದು ಕೈ ಮೇಲು. ಅವಳಿಗೆ ಮನದಲ್ಲೇ ಧನ್ಯವಾದ ಹೇಳುತ್ತಾ ತನ್ನ ಹಿಡಿತ ಬಿಗಿಗೊಳಿಸಿದ. ತನ್ನ ಸುತ್ತ ಅವನ ಹಿಡಿತ ಬಲವಾದಾಗ ಎಚ್ಚೆತ್ತಳು. ತನ್ನ ಹಿಡಿತ ಸಡಿಲಿಸಿ ಅವನನ್ನು ತನ್ನಪ್ಪುಗೆಯಿಂದ ಮುಕ್ತಗೊಳಿಸಿದಳು ಅದನ್ನೇ ಅವನಿಂದ ನಿರೀಕ್ಷಿಸಿ.

ಆದರವನು ಜಾಣ..... ಸಿಕ್ಕ ಅವಕಾಶ ಬಿಡುವುದುಂಟೇ...? ಅವನ ಅಪ್ಪುಗೆ ಇನ್ನೂ ಕೊಂಚ ಬಲವಾಯಿತೇ ಹೊರತು ಸಡಿಲವಾಗುವ ಲಕ್ಷಣವೇ ಕಾಣಲಿಲ್ಲ. ಕೊಸರಿಕೊಂಡು ಅವನಿಂದ ಬಿಡಿಸಿಕೊಳ್ಳಲು ನೋಡಿದಳು. ಅವನ ಬಲದ ಮುಂದೆ ಅದು ಸಾಧ್ಯವಾಗಲಿಲ್ಲ. ಮೈಯ ರಕ್ತವೆಲ್ಲಾ ಮುಖಕ್ಕೆ ನುಗ್ಗಿ ಮೊಗವೆಲ್ಲಾ ರಕ್ತಚಂದನ ಪಸರಿಸಿದಂತೆ ಕೆಂಪಾಯಿತು......

ನಾಚಿ ನೀರಾದವಳ ವದನ ಪ್ರತ್ಯೂಷೆಯೇ.....

"ಅಭಿ ಪ್ಲೀಸ್ ಬಿಡಿ...." ಗೋಗರೆದಳು.

"ನೋಡಿ ಡಾಕ್ಟ್ರೇ, ಮೊದಲು ತಬ್ಬಿಕೊಂಡಿದ್ದು ನೀವು. ಆಗ ನಾನು ಒಳ್ಳೇ ಹುಡುಗನ ತರ ನೀವು ಬಿಡೋವರೆಗೂ ಸುಮ್ಮನಿದ್ದೆ ತಾನೇ? ಈಗ ನೀವೂ ನಾನು ಬಿಡೋವರೆಗೆ ಸುಮ್ಮನೆ ಕೂತಿರ್ಬೇಕಪ್ಪಾ" ಅವನದು ಲಾ ಪಾಯಿಂಟ್.

"ಪ್ಲೀಸ್....." ಮನವಿ ಸಲ್ಲಿಸುವಂತೆ ರಾಗ ಎಳೆದಳು ಅವಳು. ಅವಳ ಹಣೆಯನ್ನೊಮ್ಮೆ ಚುಂಬಿಸಿದವನು ನಿಧಾನವಾಗಿ ಹಿಡಿತ ಸಡಿಲಿಸಿದ. ಅವನು ಬಿಟ್ಟಿದ್ದೇ ಸಾಕೆಂಬಂತೆ ಸರಿದು ಕುಳಿತು ಹೊರಗೆ ನೋಡತೊಡಗಿದಳು. 

"ಏನೋ ಪಾಪ ಇಷ್ಟೊಂದು ರಿಕ್ವೆಸ್ಟ್ ಮಾಡಿದ್ದೀರಾ ಅಂತ ಬಿಟ್ಟಿದ್ದೀನಿ ಡಾಕ್ಟ್ರೇ. ಆದ್ರೂ ನೀವು ಇಷ್ಟು ಅದ್ಭುತವಾದ ಪ್ರತಿಕ್ರಿಯೆ ಕೊಡ್ತೀರಿ ಅಂತ ಗೊತ್ತಿದ್ರೆ ಮೊನ್ನೆ ರಕ್ಷಾಬಂಧನದ ದಿನವೇ ನವ್ಯಾ ಹತ್ರ ರಾಖಿ ಕಟ್ಟಿಸ್ಕೋತಿದ್ದೆ ನಾನು. ಅವತ್ತು ಮಿಸ್ ಆಯ್ತು ಆದ್ರೂ ಪರ್ವಾಗಿಲ್ಲ. ನನ್ನ ತಂಗ್ಯವ್ವನಿಂದಾಗಿ ಇವತ್ತು ಸೂಪರಾಗಿರೋ ಗಿಫ್ಟ್ ಅಂತೂ ಸಿಕ್ಕಿತು. ಆ ಕೋತಿ ಕೃತಿಗಿಂತ ನನ್ನ ಹೊಸ ತಂಗಿ ಗ್ರೇಟ್......" ನವ್ಯಾಳನ್ನು ಹೊಗಳಿದ.

ಕೆಂಪೇರಿದ ವದನವನ್ನು ಅವನಿಗೆ ಅಭಿಮುಖವಾಗಿಸಿ ಹೊರನೋಡುತ್ತಾ ಕುಳಿತವಳು ಮನೆ ತಲುಪುವವರೆಗೂ ಅವನ ಮುಖ ನೋಡುವ ಧೈರ್ಯ ಮಾಡಲಿಲ್ಲ. ಮನೆ ಮುಂದೆ ಕಾರು ನಿಂತಾಗ ಇಳಿದವಳು ಅವನಿಗೆ ಕಣ್ಣಿನಲ್ಲೇ ಧನ್ಯವಾದ ತಿಳಿಸಿ ಅಲ್ಲಿ ನಿಲ್ಲದೇ ಒಳಗೋಡಿದಳು. ನವ್ಯಾ ಬಾಗಿಲಿಗೆ ಬಂದು ನಿಂತಿದ್ದಳು ಅವಳನ್ನು ಎದುರುಗೊಳ್ಳಲು. ಸಮಾ ಒಳಹೋಗುವುದನ್ನೇ ನೋಡುತ್ತಿದ್ದವ ನೋಟ ಬಾಗಿಲಿಗೆ ಒರಗಿದ್ದ ನವ್ಯಾಳತ್ತ ಹರಿಯಿತು. ಇವನನ್ನು ನೋಡಿ ಜೀವವಿಲ್ಲದ ನಗೆಯೊಂದನ್ನು ಅರಳಿಸಿದಳು. ಇವನೂ ನಸುನಕ್ಕ. ಮನೋರೋಗಿಯಾಗುವ ಹಂತದಲ್ಲಿರುವಂತೆ ಕಂಡಳು. ಅಂದು ಪೋಲೀಸ್ ಠಾಣೆಯಲ್ಲಿ ಅವಳನ್ನು ನೋಡಿದ್ದನ್ನು ನೆನಪಿಸಿಕೊಂಡ. ಅವತ್ತೂ ಅವಳ ಬಗ್ಗೆ ತಿಳಿದಾಗ ಆಕೃತಿಯೇ ಅವನಿಗೆ ನೆನಪಾಗಿದ್ದು. 

'ಈ ಮನೆಯವರೊಂದಿಗೆ ಬೆರೆತುಹೋಗಿರುವಾಕೆ ಇಲ್ಲಿಂದ ಹೊರಬಿದ್ದರೆ ಬದುಕಬಲ್ಲಳೇ?' ಎಂಬ ಪ್ರಶ್ನೆ ಕಾಡಿತು ಅವನನ್ನು. ಈ ಮನೆಯಿಂದ ಅವಳನ್ನು ಬೇರ್ಪಡಿಸಬೇಡವೆಂದು ಭಗವಂತನಲ್ಲಿ ಪ್ರಾರ್ಥಿಸಿತು ಅವನ ಮನ. ನಿಟ್ಟುಸಿರಿನೊಂದಿಗೆ ಮನೆಯತ್ತ ಕಾರನ್ನು ಚಲಾಯಿಸಿದ.

ಅವನ ಪ್ರಾರ್ಥನೆಯನ್ನು ಭಗವಂತ ಮನ್ನಿಸುವನೋ ಇಲ್ಲವೋ ಕಾಲವೇ ಉತ್ತರಿಸಬೇಕು…..... 

ಆದರೆ ಮುಚ್ಚಿಟ್ಟ ಸತ್ಯ ಮಾತ್ರಾ ಹೊರಬರಲು ಹವಣಿಸುತ್ತಿತ್ತು........ 

ಸತ್ಯದ ಅನಾವರಣಕ್ಕೆ ರಂಗ ಸಜ್ಜಾಗಿತ್ತು.........

ಅದರ ಮುಹೂರ್ತ ಯಾರೂ ಊಹಿಸದಷ್ಟು ಸನಿಹದಲ್ಲಿತ್ತು.........

          ****************************

ಅಂದು ಮನೆಯಲ್ಲಿ ನಾಲ್ವರೇ.... ಕಾರ್ತಿಕ್ ಪರೀಕ್ಷೆಯನ್ನು ಬರೆದು ಬಿಸಾಕಿದ ಸಂಭ್ರಮವನ್ನು ಆಚರಿಸಲು ತನ್ನ ಸ್ನೇಹಿತರೊಂದಿಗೆ ಹದಿನೈದು ದಿನಗಳ ದೇಶಸಂಚಾರ ಕೈಗೊಂಡಿದ್ದ. ಇನ್ನು ಅಹಮದಾಬಾದಿಗೆ ವರ್ಗಾವಣೆ ಮಾಡಿಸಿಕೊಳ್ಳಲು ದೃಢನಿಶ್ಚಯ ಮಾಡಿದ್ದ ಕಿಶೋರ್ ಅಂದು ಮುಂಜಾನೆಯೇ ಅಲ್ಲಿಗೆ ತೆರಳಿದ್ದ. ಮನೆಯಲ್ಲಿ ಎಲ್ಲರಿಗೂ ಆಫೀಸಿನ ಕೆಲಸದ ಮೇಲೆ ಹೋಗುತ್ತಿರುವೆನೆಂದು ಹೇಳಿದ್ದ. ಸಮನ್ವಿತಾ ಸತ್ಯ ತಿಳಿದೂ ಏನೂ ಮಾಡಲಾಗದೇ ಚಡಪಡಿಸಿದ್ದಳು. ಅವನು ನವ್ಯಾಳಿಗೂ ಸತ್ಯ ತಿಳಿಸದೇ ಅಹಮದಾಬಾದಿನಲ್ಲಿ ವಾಸ್ತವ್ಯ ಹೂಡಲು ತಯಾರಿ ನಡೆಸಿದ್ದು ಅಚ್ಚರಿ ಎನಿಸಿತ್ತು ಅವಳಿಗೆ. ಆದರೆ ವಾಸ್ತವದಲ್ಲಿ ನಡೆದದ್ದೇ ಬೇರೆ. ಕಿಶೋರ್ ನವ್ಯಾಳಿಗೆ ಅಹಮದಾಬಾದಿಗೆ ಹೋಗುವ ವಿಷಯವನ್ನು ತಿಳಿಸಲು ಬಹಳಷ್ಟು ಪ್ರಯತ್ನಿಸಿದ್ದ. ಆದರೆ ಅವಳ ಭಾವಹೀನ ಮುಖವನ್ನು ಕಂಡಾಗಲೆಲ್ಲಾ ಆಡಬೇಕೆಂಬ ಮಾತುಗಳು ಗಂಟಲಲ್ಲೇ ಉಳಿದಿದ್ದವು. ಹಾಗಾಗಿಯೇ ಅವಳಿಗೂ ಆಫೀಸಿನ ಕೆಲಸದ ಮೇಲೆ ಹೋಗುತ್ತಿರುವೆ ಎಂದೇ ಹೇಳಿದ್ದ. ಅಹಮದಾಬಾದ್ ತಲುಪಿ ಇರಲು ಮನೆ ಹುಡುಕಿದ ಮೇಲೆ ಫೋನಿನಲ್ಲಿ ಅವಳಿಗೆ ಸೂಕ್ಷ್ಮವಾಗಿ ವಿಚಾರ ತಿಳಿಸುವ ನಿರ್ಧಾರ ಅವನದು. 

ಆದರೆ ಈ ನಿರ್ಧಾರವೇ ನಾಳೆ ಅವನ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಲಿರುವ ಬಿರುಗಾಳಿ ಎಂಬ ಸುಳಿವೂ ಅವನಿಗಿರಲಿಲ್ಲ.

ಅವನು ಅಹಮದಾಬಾದಿಗೆ ಹೊರಟಾಗಲೇ ಏನೋ ಸರಿಯಿಲ್ಲ ಎಂಬ ಸೂಚನೆ ನವ್ಯಾಳ ಸೂಕ್ಷ್ಮ ಮನಕ್ಕೆ ಸಿಕ್ಕಿಬಿಟ್ಟಿತ್ತು. ಕಿಶೋರನ ತಲೆಯಲ್ಲಿ ಏನೋ ಯೋಜನೆಯಿದೆ ಎಂದು ಗ್ರಹಿಸಿಬಿಟ್ಟಿದ್ದಳು ಅವಳು. ಸ್ಪಷ್ಟತೆ ಸಿಕ್ಕಿರಲಿಲ್ಲ ಅಷ್ಟೇ. ಆದರೆ ಎಲ್ಲೋ ಏನೋ ತಪ್ಪಾಗಲಿದೆ ಎಂದು ಬಲವಾಗಿ ಭಾಸವಾಗತೊಡಗಿತ್ತು. ಅವಳೊಡಲ್ಲಲ್ಲಿದ್ದ ಅತೀತದ ಸತ್ಯಕ್ಕೆ ಮಾಸಗಳು ತುಂಬಿದ್ದವು. ಅಂತರಾಳವನ್ನು ಜಗ್ಗಿ ಎಳೆಯುವ ವೇದನೆಯೆಂಬ ಬೇನೆ ಆರಂಭವಾಗಿತ್ತು. 

ಅದು ಪ್ರಸವ ವೇದನೆಯಾ?

ಸತ್ಯ ಹಡೆಯಲು ಕ್ಷಣಗಣನೆ ಆರಂಭವಾಗಿತ್ತೇ?

ಆ ದಿನ ಹಾಗೇ ಕಳೆದು ಮರುದಿನ ಕಾಲಿಟ್ಟಿತ್ತು. ಅವತ್ತು ಮನೆಯಲ್ಲಿ ಸಮಾಧಾನವಾಗಿದ್ದವರು ಸತ್ಯನಾರಾಯಣ ಹಾಗೂ ಮಂಗಳಾ. 

ಉಳಿದಿಬ್ಬರದ್ದೂ ಒಂದೇ ತೆರನಾದ ಚಡಪಡಿಕೆ. ನವ್ಯಾಳಿಗೆ ಎಂದಿನ ಹಿಂಸೆಯ ಜೊತೆಗೇ ಕಿಶೋರ್ ಏನೋ ತಪ್ಪು ಮಾಡಹೊರಟಿದ್ದಾನೆ ಎಂಬ ಕಳವಳವಾದರೇ, ಅಂದೇಕೋ ಹೇಳಲಾರದಂತಹ ಸಂಕಟ ಶುರುವಾಗಿತ್ತು ಸಮನ್ವಿತಾಳ ಮನದಲ್ಲಿ. ಬೇಡವೆಂದು ದೂರ ದೂರ ಸರಿಸಿದಷ್ಟೂ ವ್ಯಾಕುಲತೆ ಮತ್ತೆ ಮತ್ತೆ ರಚ್ಚೆ ಹಿಡಿದಂತೆ ಬಂದಪ್ಪುತ್ತಿತ್ತು.

ಆಸ್ಪತ್ರೆಗೆ ಹೋಗುವ ಮನಸ್ಸಿರಲಿಲ್ಲ ಅವಳಿಗೆ. ಆದರೆ ಹೋಗಲೇ ಬೇಕಾದ ಅನಿವಾರ್ಯತೆ ಇತ್ತು. ಹೊರಡುವ ಮುನ್ನ ಎಂದೂ ಇಲ್ಲದ್ದು ಇಂದೇಕೋ ನವ್ಯಾಳಿಗೆ, "ಏನೇ ಇದ್ದರೂ ನನಗೊಂದು ಫೋನ್ ಇಲ್ಲಾ ಮೆಸೇಜ್ ಮಾಡೇ" ಎಂದು ಬಾರಿ ಬಾರಿ ಹೇಳಿದ್ದಳು‌. ಅಭಿಗೆ ಕ್ಲೈಂಟ್ ಜೊತೆ ಮುಖ್ಯವಾದ ಮೀಟಿಂಗ್ ಇದ್ದುದರಿಂದ ಆಸ್ಪತ್ರೆಗೆ ಆಟೋ ಹಿಡಿದು ಬಂದಿದ್ದಳು. ಕ್ಯಾಬಿನ್ನಿಗೆ ಬಂದ ಕೂಡಲೇ ಕಣ್ಣಿಗೆ ಬಿದ್ದದ್ದು ರಾಶಿ ಗುಲಾಬಿಗಳನ್ನು ಒಳಗೊಂಡಿದ್ದ ಸುಂದರ ಹೂಗುಚ್ಛ. ಕೈಗೆತ್ತಿಕೊಂಡು ಹೂಗಳನ್ನು ಸವರಿದಳು ಮೃದುವಾಗಿ. ಏನೋ ಬರವಣಿಗೆಯಿದ್ದ ಟ್ಯಾಗ್ ಕಣ್ಣಿಗೆ ಬಿತ್ತು. ತೆಗೆದು ನೋಡಿದಳು.

"To the most beautiful and pure soul I ever met........ love you to the moon and back my love" 

ಓದಿದವಳ ತುಟಿಯಂಚಿನಲ್ಲಿ ನಗು ಅರಳಿತು. ಮತ್ತೊಮ್ಮೆ ಅದನ್ನು ಸವರಿದವಳು, ಟೇಬಲ್ ಮೇಲಿನ ವಾಸ್ ಗೆ ಅದನ್ನು ಸೇರಿಸಿದಳು. ಇಡೀ ಕೋಣೆಯೇ ಸುಂದರವಾಗಿ ಕಂಡಿತು. ಕೆಲ ಹೊತ್ತು ಅದೇ ಗುಂಗಿನಲ್ಲಿದ್ದವಳಿಗೆ ಮತ್ತೆ ನವ್ಯಾಳ ನೆನಪಾಗಿತ್ತು. 

ಅವಳ ನೆನಪಿನೊಂದಿಗೆ ಮತ್ತೆ ಮನಸ್ಸು ನೀರಿಂದ ಹೊರಬಿದ್ದ ಮೀನಿನಂತೆ ಒದ್ದಾಡತೊಡಗಿದಳು. ಯಾವ ಕೆಲಸದಲ್ಲೂ ಏಕಾಗ್ರತೆ ಮೂಡಲಿಲ್ಲ. ಅರ್ಧಗಂಟೆ ಕಳೆಯುವುದರೊಳಗೆ ತಲೆ ಸಿಡಿಯತೊಡಗಿತು.

             ***************************

ಮಧ್ಯಾಹ್ನದ ಊಟ ಮುಗಿಸಿ ಸೋಫಾ ಮೇಲೆ ಸಣ್ಣ ನಿದ್ರೆಗೆ ಜಾರಿದ್ದರು ಸತ್ಯನಾರಾಯಣರು. ಮಂಗಳಮ್ಮ ಅಲ್ಲೇ ನೆಲದಲ್ಲಿ ಕುಳಿತು ಯಾವುದೋ ದೇವರ ನಾಮ ಗುನುಗುತ್ತಾ ರಾಗಿಯನ್ನು ಚೊಕ್ಕಗೊಳಿಸುತ್ತಿದ್ದರು. ನವ್ಯಾ ಅಡುಗೆ ಮನೆಯ ಕೆಲಸ ಮುಗಿಸಿ ಕೋಣೆಗೆ ಬಂದು ಎಂದಿನಂತೆ ತಾರಸಿ ದಿಟ್ಟಿಸುತ್ತಾ, ತನ್ನನ್ನು ತಾನೆ ಹಳಿದುಕೊಂಡು ಕುಳಿತಿದ್ದಳು.

ಆಗ ಬಂದಿತ್ತು ಕಿಶೋರನ ಕರೆ.......

ಉಭಯ ಕುಶಲೋಪರಿ ವಿಚಾರಿಸಿದವನು ಮುಖ್ಯವಾದ ವಿಚಾರಕ್ಕೆ ಬಂದಿದ್ದ. ಕಂಪನಿ ತನ್ನನ್ನು ಅಹಮದಾಬಾದಿಗೆ ವರ್ಗಾವಣೆ ಮಾಡಿದೆಯೆಂದೂ, ಮುಂದಿನ ಎರಡು ವಾರಗಳೊಳಗಾಗಿ ಇಲ್ಲಿ ಡ್ಯೂಟಿಗೆ ಸೇರಬೇಕಾಗಿರುವುದಾಗಿಯೂ ಹೇಳಿದ. ತಾನು ಇಲ್ಲಿ ವಾಸ್ತವ್ಯಕ್ಕೆ ಕೋಣೆಯನ್ನು ಬಾಡಿಗೆಗೆ ಪಡೆದಿರುವೆ ಎಂದವನು ನೀನೂ ಇಲ್ಲಿಗೆ ಬರಲು ತಯಾರಾಗು ಎಂದ.

ಈಗ ಕಿಶೋರನ ಯೋಜನೆಯ ಸಂಪೂರ್ಣ ನೀಲಿನಕ್ಷೆ ಸಿಕ್ಕಿತವಳಿಗೆ. ಇವನೇ ಆಫೀಸಿನಲ್ಲಿ ಕೇಳಿ ಅಹಮದಾಬಾದಿಗೆ ವರ್ಗಾವಣೆ ಪಡೆದಿದ್ದಾನೆಂದು ಅರಿಯದಷ್ಟು ದಡ್ಡಿಯಲ್ಲ ಅವಳು. ಇವಳಿಂದ ಪ್ರತಿಕ್ರಿಯೆ ಸಿಗದ ಕಾರಣ ಅವನು ಆ ಬದಿಯಿಂದ ಫೋನಿನಲ್ಲಿ ಇವಳನ್ನೇ ಕರೆಯುತ್ತಿದ್ದ. ಕೊನೆಗೊಮ್ಮೆ ಅವನ ಕರೆಗೆ ಓಗೊಟ್ಟವಳು,

"ಸಮಸ್ಯೆಗೆ ಪರಿಹಾರ ಕೇಳಿದರೆ ಸಮಸ್ಯೆಯಿಂದ ಪಲಾಯನ ಮಾಡುವ ನಿರ್ಧಾರ ಕೈಗೊಂಡಿರಲ್ಲ ಕಿಶೋರ್…...." ಎಂದಳಷ್ಟೇ. 

ಅವನು ಅವಳನ್ನು ಸಮಾಧಾನಿಸಿ, ಕಂಪನಿಯವರ ಒತ್ತಾಯದಿಂದ ಕಳಿಸಿರುವರೆಂದು ಓಲೈಸಿದ. ಈ ಬಗ್ಗೆ ಯೋಚಿಸು ಎಂದು ಹೇಳಿ ಫೋನಿಟ್ಟಿದ್ದ ಕಿಶೋರ್ ಅವಳು ಈ ಬಗ್ಗೆ ಯೋಚಿಸುವಳು ಎಂಬ ನಂಬಿಕೆಯಲ್ಲಿ……..

ಆದರೆ ಅವಳು ಯೋಚಿಸಲಿಲ್ಲ….....

ಅವಳು ನಿರ್ಧರಿಸಿಬಿಟ್ಟಳು.........!!!!

ಕಾಡುವ ಕನಸುಗಳು, ಸುಡುವ ಸತ್ಯ, ಕಣ್ಮುಂದೆ ಕುಣಿವ ಭವಿಷ್ಯವೆಂಬ ಭೂತ....... ಇವುಗಳ ನಿಲ್ಲದ ಹೊಡೆತದಿಂದ ಜರ್ಜರಿತಳಾಗಿ ಶವಪೆಟ್ಟಿಗೆ ಸೇರಿದ್ದವಳಿಗೆ ಕಿಶೋರನ ನಿರ್ಧಾರ ಕೊನೆಯ ಮೊಳೆಯ ಹೊಡೆತದಂತೆ ಭಾಸವಾಗಿಬಿಟ್ಟಿತು. ಏನನ್ನೂ ಉಳಿಸಿಕೊಳ್ಳುವ ಚೈತನ್ಯ ಉಳಿದಿರಲಿಲ್ಲ ಅವಳಲ್ಲಿ.......

ಸತ್ಯವೆಂಬ ಭ್ರೂಣವನ್ನು ಉದರದಿಂದ ಬಿಡುಗಡೆಗೊಳಿಸಲು ನಿರ್ಧರಿಸಿದಳು ನವ್ಯಾ......!

ಗಂಡನ ಪ್ರೀತಿ, ಮನೆಯವರ ಅಕ್ಕರೆ, ಸಮಾಜದ ಗೌರವ ಕಳೆದುಕೊಳ್ಳಬೇಡವೆಂದು ಕೂಗುತ್ತಿದ್ದ ಮನದ ಆಸೆಯ ಮೇಲೆ ಬಂಡೆಗಲ್ಲನ್ನು ಹೇರಿ ಗಟ್ಟಿಯಾದ ನಿಶ್ಚಯದೊಂದಿಗೆ ಹಜಾರಕ್ಕೆ ಬಂದು ಮಂಗಳಮ್ಮನ ತೊಡೆಯ ಮೇಲೆ ತಲೆಯಿಟ್ಟಳು.

ಒಮ್ಮೆಲೇ ಬಂದು ತೊಡೆಯ ಮೇಲೆ ತಲೆಯಿಟ್ಟ ಸೊಸೆಯ ತಲೆ ಸವರಿದರು ಮಂಗಳಾ. "ಏನಾಯ್ತು ನವ್ಯಾ? ಕಿಶೋರ, ಕಾರ್ತೀ ಇಬ್ಬರೂ ಇಲ್ಲ ಅಂತ ಬೇಜಾರಾಗ್ತಿದೆಯೇನು?" ಕೇಳಿದರು. ಅವಳಿಂದ ಉತ್ತರ ಬರಲಿಲ್ಲ. ಆದರೆ ಅವಳ ಉಸಿರಾಟದ ಏರಿಳಿತ ಅವಳು ಅಳುತ್ತಿದ್ದಾಳೆ ಎಂಬುದನ್ನು ತಿಳಿಸಿತು. ಗಾಬರಿಗೊಂಡು, "ಯಾಕಮ್ಮಾ ಅಳ್ತಿದ್ದೀ? ಏನಾಯ್ತು? ಕಿಶೋರ ಏನಾದ್ರೂ ಅಂದ್ನಾ?" ಅವಳನ್ನು ಮಡಿಲಿಂದ ಎಬ್ಬಿಸಿ ಎದೆಗೊರಗಿಸಿಕೊಂಡು ಕೇಳಿದರು. ಅವಳ ಅಳು ಮತ್ತೂ ಜೋರಾಯಿತು. ಬಿಕ್ಕಳಿಕೆಯ ಸದ್ದಿಗೆ ಸತ್ಯನಾರಾಯಣರಿಗೂ ಎಚ್ಚರವಾಯಿತು. ಇಬ್ಬರೂ ಸಮಾಧಾನಿಸಿದರೂ ಅವಳ ಅಳು ನಿಲ್ಲಲೇ ಇಲ್ಲ.

"ಯಾಕೆ ಅಳ್ತಿದ್ದೀಯಾ ತಾಯಿ, ಅದನ್ನಾದರೂ ಹೇಳು..." ಪದೇ ಪದೇ ಕೇಳಿದರು ಗಂಡ ಹೆಂಡತಿ.

"ಅಮ್ಮ..... ನಾನು ನಿಮ್ಮ ಹತ್ರ ಒಂದು ದೊಡ್ಡ ಸತ್ಯ ಮುಚ್ಚಿಟ್ಟಿದ್ದೀನಿ....." ಕೇವಲ ತನ್ನನ್ನು ಮಾತ್ರ ಒಳಗೊಂಡು ಹೇಳಿದಳು.

"ಎಂತಾ ಸತ್ಯ? ಅಷ್ಟು ಅಳೋವಂತಹದ್ದು ಏನೇ ಅದೂ" ಕೇಳಿದರು ಮಂಗಳಾ. ಇತ್ತೀಚೆಗೆ ತೀರಾ ಮಂಕಾಗಿರುತ್ತಿದ್ದ ಸೊಸೆಯ ಮನದಲ್ಲೇನೋ ನೋವಿದೆ ಎಂಬುದು ಅವರ ಗ್ರಹಿಕೆ.

"ಅಮ್ಮಾ...... ಅ..... ಅಮ್ಮ...... ನಾನು..... ಸಮಾ... ಸಮಾ ನನಗೆ ಪರಿಚಯ ಆಗೋಕೆ ಮುಂಚೆ ನಾನು..... ನಾನು.....ನಾ...... ವೇ...... ವೇಶ್ಯೆಯಾಗಿದ್ದೆ…..." 

ಅಳುವಿನ ನಡುವಿಂದ ನಡುಗುವ ದನಿಯಲ್ಲಿ ಬಂದ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದ ಮಂಗಳಾ ಅವಳಾಡಿದ ಕೊನೆಯ ಪದ ಕೇಳಿ ಸ್ಥಬ್ದರಾದರು. ಸೊಸೆಯ ತಲೆಯನ್ನು ಸವರುತ್ತಿದ್ದ ಕೈ ತಟಸ್ಥವಾಯಿತು.

       *******ಮುಂದುವರೆಯುತ್ತದೆ********



ಅನೂಹ್ಯ 37

"ನಾನು ಆಫೀಸಲ್ಲಿ ಟ್ರಾನ್ಸಫರ್ ರಿಕ್ವೆಸ್ಟ್ ಮಾಡಿದ್ದೀನಿ ಸಮಾ. ಅಹಮದಾಬಾದ್ ಗೆ" ಎಂದುಬಿಟ್ಟ ಕಿಶೋರ್.

ಅವನ ಈ ನಡೆಯ ನಿರೀಕ್ಷೆಯೇ ಇಲ್ಲದ ಸಮನ್ವಿತಾ ಅಚ್ಚರಿಯಿಂದ ಅವನನ್ನೇ ದಿಟ್ಟಿಸಿದಳು. ಅವನ ಮಾತನ್ನು ಅರಗಿಸಿಕೊಳ್ಳಲು ಕೆಲವು ಕ್ಷಣಗಳು ಬೇಕಾಯಿತವಳಿಗೆ. ಇವನಿಗೇನಾದರೂ ತಲೆ ಕೆಟ್ಟಿದೆಯಾ? ಅನುಮಾನ ಕಾಡಿತು.

"ನೀನೇನು ಮಾತಾಡುತ್ತಿದ್ದೀಯಾ ಅನ್ನೋ ಕಲ್ಪನೆಯಾದರೂ ಇದೆಯೋ ಹೇಗೆ? ನಾನು ಕೇಳಿದ್ದೇನು, ನೀನು ಹೇಳ್ತಿರೋದೇನು? ಇದೆಂತಹಾ ಪರಿಹಾರ ನವ್ಯಾಳ ಸಮಸ್ಯೆಗೆ? ಮನೆ, ಜಾಗ ಬದಲಾಯಿಸಿದ್ರೆ ಮನಸ್ಸು ಬದಲಾಗುತ್ತಾ? ಇಲ್ಲಾ ಅದರ ಯೋಚನೆಗಳು, ತವಕತಲ್ಲಣಗಳಿಗೆ ಪರಿಹಾರ ಸಿಗುತ್ತಾ? ಡೋಂಟ್ ಬಿಹೇವ್ ಲೈಕ್ ಅ ಸ್ಟುಪಿಡ್ ಕಿಶೋರ್. ನಿನ್ನೀ ನಿರ್ಧಾರದಿಂದ ಈಗಿರೋ ನೆಮ್ಮದಿಯೂ ಹಾಳಾಗುತ್ತೆ ಅಷ್ಟೇ. ಈ ರೀತಿಯ ನಿರ್ಧಾರ ತಗೊಳ್ಳೋ ಮುಂಚೆ ನಿನ್ನ ಅಪ್ಪ ಅಮ್ಮ ಮತ್ತೆ ತಮ್ಮನ ಬಗ್ಗೆ ಯೋಚನೆ ಮಾಡಿದ್ದೀಯಾ? ಅವ್ರು ನವ್ಯಾನ ಎಷ್ಟು ಹಚ್ಚಿಕೊಂಡಿದ್ದಾರೆ ಅಂತ ಗೊತ್ತಿಲ್ವಾ ನಿನಗೆ? ವಯಸ್ಸಾಗಿದೆ ಕಣೋ ಅಪ್ಪ ಅಮ್ಮನಿಗೆ. ಹೀಗೆ ಹಠಾತ್ತಾಗಿ ನೀನು ಅವಳೊಂದಿಗೆ ಹೊರಟ್ರೆ ಅವರ ಮನಸ್ಸಿಗೆ ಹೇಗನಿಸಬಹುದು? ಶಾಂತ ಸರೋವರದ ಹಾಗಿರೋ ಮನೆಮನಗಳಲ್ಲಿ ಏಳುವ ಪ್ರಶ್ನೆಗಳ ತರಂಗಗಳು ಎಂತಹ ಬಿರುಗಾಳಿಯನ್ನು ಸೃಷ್ಟಿಸಬಹುದು ಅಂತ ಒಮ್ಮೆಯಾದ್ರೂ ಯೋಚಿಸಿದ್ದೀಯಾ? ಅದು ಬಿಡು….. ಇದಕ್ಕೆ ಖುದ್ದು ನವ್ಯಾ ಒಪ್ತಾಳಾ? ಅವಳಿಗೆ ಜನರ ಮೇಲೆ, ಪ್ರಪಂಚದ ಮೇಲೆ ನಂಬಿಕೆ ಅಂತ ಬಂದಿದ್ದೇ ಈ ಮನೆಗೆ ಕಾಲಿಟ್ಟ ಮೇಲೆ. ನಿನ್ನ ಮನೆಯವರೊಂದಿಗೆ ಅವಳಿಗಿರುವ ಸಂಬಂಧ ಮನಸ್ಸು ಹಾಗೂ ಆತ್ಮದ ನಡುವಿನ ಬಂಧದಷ್ಟೇ ಗಾಢವಾದದ್ದು. ಅಮ್ಮನೊಂದಿಗೆ ಮಗುವಿಗೆ, ದೈವದೊಂದಿಗೆ ಭಕ್ತರಿಗೆ ಇರುವಷ್ಟು ಅವಿನಾಭಾವ ಸಂಬಂಧ ಅದು. ನೀನು ಈ ರೀತಿ ಹುಚ್ಚು ನಿರ್ಧಾರಗಳನ್ನು ತೆಗೆದುಕೊಂಡು ಅವಳ ಸಮಸ್ಯೆಯನ್ನು ಇಮ್ಮಡಿಗೊಳಿಸಲು ಹೊರಟಿರುವೆ ಕಿಶೋರ್. ಈ ನಿನ್ನ ನಿರ್ಧಾರಕ್ಕೆ ಕಟುವಾದ ವಿರೋಧ ಅವಳಿಂದಲೇ ಬರುತ್ತೆ ನೆನಪಿರಲಿ. ತಾನು ಮನೆಯವರಿಂದ ವಿಷಯ ಮುಚ್ಚಿಟ್ಟಿರುವೆ ಎಂದು ಪ್ರತಿಕ್ಷಣ ಬೇಯುತ್ತಿರುವವಳನ್ನು ತನ್ನಿಂದಾಗಿ ಒಂದು ಕುಟುಂಬವೇ ಒಡೆಯಿತು ಎಂಬ ಪಶ್ಚಾತ್ತಾಪದ ಕುಲುಮೆಯಲ್ಲಿ ಕುದಿಸಲು ಹೊರಟಿರುವೆಯಲ್ಲಾ...... ನಿನಗೆ ಏನೆನ್ನಲೀ?" ಅವನ ನಿರ್ಧಾರಕ್ಕೆ ತನ್ನ ಸಮ್ಮತಿಯಿಲ್ಲ ಎಂಬುದನ್ನು ಮಾತುಗಳಲ್ಲಿ ಸ್ಪಷ್ಟಪಡಿಸಿದಳು ಸಮನ್ವಿತಾ.

"ಈ ವಿಷಯ ಇನ್ನೂ ಯಾರಿಗೂ ಹೇಳಿಲ್ಲ. ನಿನ್ಗೇ ಫಸ್ಟ್ ಹೇಳ್ತಿರೋದು. ನಾನು ಅವ್ರನ್ನೆಲ್ಲಾ ಒಪ್ಪಿಸೋಕೆ ನಿನ್ನ ಸಹಾಯ ಕೇಳೋಣಾ ಅಂತ ನಿನ್ಹತ್ರ ವಿಷ್ಯ ಹೇಳಿದ್ರೆ, ನೀನು ನನ್ನ ನಿರ್ಧಾರ ಬದಲಾಯಿಸೋಕೆ ನೋಡ್ತಿದ್ಯಲ್ಲಾ. ನೀನೇ ಹೀಗೆ ಹೇಳಿದ್ರೆ ನಾನು ಅವ್ರನ್ನೆಲ್ಲಾ ಹೇಗೆ ಕನ್ವಿನ್ಸ್ ಮಾಡ್ಲೀ ಸಮಾ? ಪ್ಲೀಸ್ ಸಹಾಯ ಮಾಡೇ" ಅವನದು ಅದೇ ವಿನಂತಿ.

"ನೋಡು, ಈ ವಿಷಯ ಇಲ್ಲಿಗೇ ಬಿಟ್ಟುಬಿಡು ಅನ್ನೋದು ನನ್ನ ಆಗ್ರಹ. ಹಾಗೊಂದು ವೇಳೆ ಇದೇ ನಿನ್ನ ಅಂತಿಮ ನಿರ್ಧಾರವಾಗಿದ್ರೆ ಈ ವಿಚಾರದಲ್ಲಿ ನನ್ನನ್ನು ಮಧ್ಯೆ ತರಬೇಡ" ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟಳು.

"ಸಮಾ, ನನಗೆ ಮಾತ್ರ ಈ ಮನೆ, ಅಪ್ಪ, ಅಮ್ಮ, ಕಾರ್ತಿನ ಬಿಟ್ಟು ಹೋಗೋದು ಇಷ್ಟ ಅಂದ್ಕೊಂಡಿದ್ದೀಯಾ? ನನ್ನ ನಾನು ಸಂಭಾಳಿಸಿಕೊಳ್ಳೋಕೆ ಎಷ್ಟು ಕಷ್ಟ ಪಡ್ತಿದ್ದೀನಿ ಅಂತ ನನಗೆ ಮಾತ್ರ ಗೊತ್ತು. ಆದರೆ ಸಧ್ಯಕ್ಕೆ ಬೇರೆ ದಾರಿ ಇಲ್ಲ ನನ್ಹತ್ರ. ಈಗೀಗ ನವ್ಯಾಳ ಪರಿಸ್ಥಿತಿ ನೋಡಿದ್ರೆ ಹೆದರಿಕೆ ಆಗುತ್ತೆ. ಇಡೀ ರಾತ್ರಿ ಏನೇನೋ ಮಾತಾಡ್ಕೊಂಡು ಬೆಚ್ಚೋದು, ಅಳೋದು ಹೀಗೆಲ್ಲಾ ಮಾಡ್ತಾಳೆ. ಕೆಲವೊಮ್ಮೆ ಇಡೀ ರಾತ್ರಿ ನಿದ್ರೆಯಿಲ್ಲದೇ ಕಿಟಕಿಯಿಂದ ಆಕಾಶ ನೋಡ್ತಾ ನಿಂತಿರ್ತಾಳೆ. ಇದು ಹೀಗೇ ಮುಂದುವರೆದರೆ ನಾನೆಲ್ಲಿ ಅವಳನ್ನು ಕಳ್ಕೊಂಡ್ಬಿಡ್ತೀನೋ ಅನ್ನೋ ಭಯ ಶುರುವಾಗಿದೆ ಸಮಾ. ಇಂತಹ ಪರಿಸ್ಥಿತಿಯಲ್ಲಿ ಇರೋ ಸತ್ಯನ ಮನೆಯವರಿಗೆ ಹೇಳಿದ್ರೆ........! ಅದರ ಪರಿಣಾಮನ ಊಹಿಸೋಕೂ ಆಗ್ತಿಲ್ಲ ನನ್ನ ಕೈಲಿ. ಸತ್ಯ ಗೊತ್ತಾದ್ರೆ..... ಅದನ್ನು ಅರಗಿಸಿಕೊಳ್ತಾರಾ? ಎಲ್ಲಾ ಅವಳನ್ನ ದೂರ ಮಾಡ್ತಾರೆ ಅನ್ಸುತ್ತೆ. ಅಕ್ಕಪಕ್ಕದವರು, ಜನರ ಮಾತಿಗೆ ಹೆದರಿ ಒಂದು ವೇಳೆ ನವ್ಯಾನ ಮನೆಯಿಂದ ಹೊರಗೆ ಹಾಕಿದ್ರೆ? 'ನಿನ್ಗೆ ನಾನು ಬೇಕೋ, ಅವ್ಳು ಬೇಕೋ ನಿರ್ಧಾರ ಮಾಡು' ಅಂತ ಅಮ್ಮ ಹೇಳಿದ್ರೆ? ಆಗ ನಾನೇನ್ ಮಾಡ್ಲಿ ಸಮಾ? ನವ್ಯಾ ಬಗ್ಗೆ ನಿನ್ಗೂ ಚೆನ್ನಾಗಿ ಗೊತ್ತು. ಅಂತಹ ಪರಿಸ್ಥಿತಿ ಬಂದ್ರೆ ನನಗೂ ಹೇಳದೇ ಹೊರಟ್ಹೋಗ್ತಾಳೆಯೇ ಹೊರತು, ನಾನು ಅವಳ ಜೊತೆ ಹೋಗೋದನ್ನಂತೂ ಸುತಾರಾಂ ಒಪ್ಪಲ್ಲ ಅವ್ಳು. ಎಲ್ಲರ ಚುಚ್ಚುಮಾತುಗಳು, ನಿಂದನೆಗಳನ್ನ ಒಬ್ಬಳೇ ಎದುರಿಸಬೇಕಾಗುತ್ತೆ. ಇದು ಅನ್ಯಾಯ ಅಲ್ವಾ? ಅವಳೇನು ಮದ್ವೆ ಮಾಡ್ಕೋ ಅಂತ ನನ್ನ ಹಿಂದೆ ಬಿದ್ದಿರ್ಲಿಲ್ಲ. ಬೇಡಾ ಅಂತ ಸಾವಿರ ಸಲ ಹೇಳ್ತಿದ್ದವಳನ್ನು ನಾನೇ ಕನ್ವಿನ್ಸ್ ಮಾಡಿದ್ದು. ಅವಳ ಮಿತಿಗಳ ಅರಿವಿತ್ತು ಅವಳಿಗೆ. ಮದ್ವೆಗೆ ಮೊದಲೇ ಇರೋ ಸತ್ಯ ಎಲ್ಲಾ ಮನೆಯವರಿಗೆ ಹೇಳ್ಲೇಬೇಕು ಅಂತ ಅವ್ಳು ಒತ್ತಾಯ ಮಾಡಿದ್ಲು. ನೀನೂ ಕೂಡಾ ಅದನ್ನೇ ಹೇಳಿದ್ದೆ. ಆದ್ರೆ ವಿಷ್ಯ ಗೊತ್ತಾದ್ರೆ ಮನೆಯಲ್ಲಿ ಬೇಡ ಅಂತಾರೆ ಅನ್ನಿಸಿತ್ತು. ಯಾವ್ದೇ ಕಾರಣಕ್ಕೂ ನವ್ಯಾನ ಬಿಟ್ಟುಕೊಡೋ ಮನಸ್ಸಿರ್ಲಿಲ್ಲ. ಹಾಗಾಗಿ ಆಗ್ಲೂ 'ನಿಧಾನಕ್ಕೆ ಸರಿಯಾದ ಸಮಯ ನೋಡಿ ಮನೆಯಲ್ಲಿ ಹೇಳೋಣ' ಅಂತ ನಾನೇ ನಿಮ್ಮಿಬ್ಬರನ್ನೂ ಒಪ್ಪಿಸಿದ್ದೆ. ಆದ್ರೆ ಇವತ್ತಿನವರೆಗೂ ಸತ್ಯ ಹೇಳೋ ಧೈರ್ಯ ಬರಲೇ ಇಲ್ಲ. ಈಗ್ಲೂ ಅಷ್ಟೇ. ಸತ್ಯ ಹೇಳೋದು ಸುಲಭ. ಆದ್ರೆ ನಂತರದ ಅವರ‌ ಪ್ರತಿಕ್ರಿಯೆ ಇದ್ಯಲ್ಲಾ.... ಅದನ್ನು ಎದುರಿಸೋಕೆ ನಾನು ತಯಾರಿಲ್ಲ ಸಮಾ. ನನ್ಗೆ ಗೊತ್ತು. ಅವ್ರು ಒಪ್ಪೋದಿಲ್ಲ. ಒಂದು ಪಕ್ಷ ಅವರಿಗೆ ಒಪ್ಪೋ ಮನಸಿದ್ರೂ ಜನ ಏನಂತಾರೆ ಅಂತ ಹೆದರ್ತಾರೆ. ಅವರು ಸಮಾಜಕ್ಕೆ ಭಯಪಡುತ್ತಾರೆ.  ಆಗ ನವ್ಯಾ ಕಥೆ....? ನಂಗಾದ್ರೆ ಅಪ್ಪ, ಅಮ್ಮ,ಕಾರ್ತೀ ಇದ್ದಾರೆ.  ಆದ್ರೆ ನವ್ಯಾಗೆ ನಮ್ಮಿಬ್ರನ್ನ ಬಿಟ್ಟು ಬೇರೆ ಯಾರಿದ್ದಾರೆ ಸಮಾ? ಮೇಲಾಗಿ ಈ ವಿಚಾರದಲ್ಲಿ ನಮ್ಮ ಸಮಾಜವೂ ಅವಳ ವಿರುದ್ಧವೇ ನಿಲ್ಲುತ್ತೆ. 'ಅವ್ನು ಏನೋ ಗೊತ್ತಾಗ್ದೇ ಮದ್ವೆ ಮಾಡ್ಕೊಂಡಿದ್ದಾನೆ. ಅದ್ರಲ್ಲಿ ತಪ್ಪೇನು? ಅವ್ನು ಗಂಡಸು. ಇವ್ಳಿಗೆ ತನ್ನ ಕಸುಬು ಹೇಳೋಕೆ ಬಾಯಿ ಇರ್ಲಿಲ್ವಾ?' ಅಂತ ನವ್ಯಾಳನ್ನೇ ಅಪರಾಧಿಯಾಗಿಸುತ್ತೆ. ಅವಳ ಬದುಕು ಮತ್ತೆ ನರಕ ಆಗುತ್ತೆ. ಇದನ್ನೆಲ್ಲ ನೋಡೋ ಶಕ್ತಿ ನಂಗಿಲ್ವೇ. ನೀನೇ ಹೇಳು…… ಅಷ್ಟು ಆಸೆ, ಅಕ್ಕರೆಯಿಂದ ಅವಳನ್ನು ಆ ನರಕದಿಂದ ಬಿಡಿಸ್ಕೊಂಡು ಬಂದ ನೀನು ಅವಳು ಮತ್ತೆ ಅಂತಹದ್ದೇ ಯಾವ್ದೋ ನರಕದಲ್ಲಿ ನರಳೋದನ್ನು ನೆನಸ್ಕೊಳ್ಳೋಕಾಗುತ್ತಾ? ಒಂದು ಸಲ ಅವ್ಳು ಈ ಮನೆಯಿಂದ ಹೊರಬಿದ್ರೆ ಅವಳು ನಮ್ಮಿಬ್ಬರಿಗೂ ಮತ್ತೆ ಸಿಗೋಲ್ಲ ಸಮಾ. ಇಲ್ಲಿಗಂತೂ ಮತ್ತೆ ಕಾಲೇ ಇಡೋಲ್ಲ ಅವಳು ಅಮ್ಮನಿಗೆ ಹಿಂಸೆ ಆಗುತ್ತೆ ಅಂತ. ಇನ್ನು ಉಳಿದಿದ್ದು ನೀನು. ನೀನು ಅಭಿರಾಮ್ ಮಡದಿಯಾಗಬೇಕು ಅನ್ನೋ ಆಸೆ ಹೊತ್ತಿರುವವಳು ನವ್ಯಾ.  ತನ್ನಿಂದಾಗಿ ಶರ್ಮಾ ಪರಿವಾರದಲ್ಲಿ ನಿನ್ನ ಬಗ್ಗೆ ನೂರು ಪ್ರಶ್ನೆಗಳು ಏಳುತ್ತವೆ ಅಂತ ನಿನ್ಹತ್ರನೂ ಬರೋಲ್ಲ ಅವ್ಳು. ಬೀದಿಪಾಲಾಗ್ತಾಳೆ. ಅದನ್ನು ಮಾತ್ರ ಯಾವತ್ತೂ ಸಹಿಸೋಕಾಗದು ನಂಗೆ. ಅದ್ಕೇ ನಾನು ಈ ನಿರ್ಧಾರ ಮಾಡಿರೋದು. ಸ್ವಲ್ಪ ಸಮಯ ಅಲ್ಲಿದ್ದು ಅವಳ ಮನಸ್ಸು ಒಂದಿಷ್ಟು ತಹಬಂದಿಗೆ ಬರಲಿ. ಆಮೇಲೆ ನೋಡೋಣ ಏನ್ಮಾಡೋದು ಅಂತ. ಪ್ಲೀಸ್ ಹೆಲ್ಪ್ ಮೀ ಸಮಾ"

ಅವನ ಮಾತುಗಳಲ್ಲೇ ಕಳೆದುಹೋಗಿದ್ದವಳ ಕಣ್ಣಂಚಿನಲ್ಲಿ ಕಂಬನಿ ಶೇಖರವಾಗಿತ್ತು. ಮೊಗದಲ್ಲಿ ಅವನೆಡೆಗೊಂದು ಹೆಮ್ಮೆಯ, ಮೆಚ್ಚುಗೆಯ ಭಾವ.

"ನಿನ್ನನ್ನು ನನ್ನ ಸ್ನೇಹಿತ ಅಂತ ಹೇಳ್ಕೊಳ್ಳೋಕೆ ನನ್ಗೆ ಹೆಮ್ಮೆಯಾಗುತ್ತೆ ಕಿಶೋರ್. ರಿಯಲೀ.... ನಿನ್ನ ತರಹ ಯೋಚ್ಸೋರು ಲಕ್ಷಕ್ಕೊಬ್ರು ಸಿಗೋಲ್ಲ ಕಣೋ. ಇದೊಂದು ವಿಚಾರದಲ್ಲಿ ದೇವ್ರು ಅವಳ ಕೈ ಬಿಟ್ಟಿಲ್ಲ. ಆದ್ರೂ ನಿನ್ನ ನಿರ್ಧಾರಕ್ಕೆ ನನ್ನೊಪ್ಪಿಗೆ ಇಲ್ಲ. ಯಾಕೆಂದ್ರೆ ನಿನ್ನ ಈ ನಿರ್ಧಾರ ಭವಿಷ್ಯದಲ್ಲಿ ಇನ್ನೂ ಹತ್ತು ಹಲವು ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಮದುವೆಗೆ ಮುನ್ನ ಸತ್ಯ ಹೇಳದೇ ಸೃಷ್ಟಿಯಾಗಿರೋ ಸಮಸ್ಯೆಗಳಿಂದಲೇ ಇನ್ನೂ ಹೊರಬರೋಕಾಗ್ತಿಲ್ಲ. ಇನ್ನು ನೀನು ಈ ರೀತಿ ಮಾಡಿದ್ರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಷ್ಟೇ" ಎಂದು ಅಲ್ಲಿಂದ ಎದ್ದು ರೂಮಿನತ್ತ ಹೊರಟವಳು ಮತ್ತೆ ನಿಂತು ಅವನೆಡೆಗೆ ತಿರುಗಿದಳು.

"ಕಿಶೋರ್, ಒಂದು ಮಾತು ಚೆನ್ನಾಗಿ ನೆನಪಿಟ್ಟುಕೋ. ಮರೆಮಾಚಿದ ಸತ್ಯ ಅನ್ನೋದು ದಹಿಸುವ ಲಾವಾರಸದಂತೆ. ಅದು ಪ್ರತೀ ಕ್ಷಣಕ್ಕೂ ಕುದಿಯುತ್ತಾ, ಸತ್ಯವನ್ನು ಮುಚ್ಚಿಟ್ಟಿರುವ ವ್ಯಕ್ತಿಯ ಒಡಲನ್ನು ದಹಿಸುತ್ತಿರುತ್ತದೆ. ಆ ಉರಿ ಅಂತರಾತ್ಮಕ್ಕೆ ಪದೇಪದೇ ಸತ್ಯವನ್ನು ನೆನಪಿಸುತ್ತಿರುತ್ತದೆ. ಉರಿಕೆಂಡದಂತಹ ಸತ್ಯವನ್ನು ಸೆರಗಲ್ಲಿ ಕಟ್ಟಿಕೊಂಡು ಎಲ್ಲಿಯವರೆಗೆ ಓಡಬಹುದು? ಉದರದೊಳಗಿನ ಭ್ರೂಣವೂ ನವಮಾಸಗಳಷ್ಟೇ ಕಾಯುವುದು..... ಒಂದಲ್ಲಾ ಒಂದು ದಿನ ಲಾವಾ ಉಕ್ಕಿ, ಜ್ವಾಲಾಮುಖಿ ಸಿಡಿಯಲೇ ಬೇಕು. ನವ್ಯಾಳ ಮನದ ದಾವಾಗ್ನಿ ಸಿಡಿಯುವ ಸಮಯ ಸನ್ನಿಹಿತವಾಗಿದೆ ಕಿಶೋರ್. ನೀನೆಷ್ಟೇ ಪ್ರಯತ್ನಿಸಿದರೂ ಅವಳಿನ್ನು ತಡೆಯಲಾರಳು....." ಎಂದವಳೇ ಅವನ ಉತ್ತರಕ್ಕೂ ಕಾಯದೆ ಸ್ನಾನ ಮುಗಿಸಲು ಕೋಣೆಗೆ ನಡೆದುಬಿಟ್ಟಳು.

'ನೀನು ಹೇಳಿದ್ದೆಲ್ಲಾ ನಿಜವೇ ಆದರೂ ಸಧ್ಯದ ನವ್ಯಾಳ ಪರಿಸ್ಥಿತಿಯಲ್ಲಿ ಈ ಸತ್ಯ ಮನೆಯವರಿಗೆ ತಿಳಿಯದಿರುವುದೇ ಒಳಿತು. ಟ್ರಾನ್ಸಫರ್ ಸಿಕ್ಕೇ ಸಿಗುತ್ತದೆ. ಅಮ್ಮ, ಅಪ್ಪಾಜಿ ಮತ್ತು ಕಾರ್ತಿಯನ್ನು ಹೇಗೋ ಒಪ್ಪಿಸಬಲ್ಲೆ. ಆದರೆ ನೀನೆಂದಂತೆ ನವ್ಯಾಳನ್ನು ಒಪ್ಪಿಸುವುದೇ ಕಷ್ಟ. ಕೈ ಕಾಲಿಗೆ ಬಿದ್ದಾದರೂ ಒಪ್ಪಿಸಿಯೇ ಒಪ್ಪಿಸುವೆ. ಕ್ಷಮಿಸು ಸಮಾ, ಈ ಒಂದು ವಿಚಾರದಲ್ಲಿ ನಿನ್ನಷ್ಟೇ ಹಠ ನನಗೂ. ಇವತ್ತೇ ಆಫೀಸಿನಲ್ಲಿ ಟ್ರಾನ್ಸಫರ್ ವಿಚಾರ ಮಾತನಾಡಿ ಫೈನಲೈಸ್ ಮಾಡ್ಬೇಕು.....' ಎಂದುಕೊಂಡವನು ತನ್ನ ಕೋಣೆಯತ್ತ ಹೊರಟ.

ಇತ್ತ ಸ್ನಾನ ಮಾಡಲು ಬಂದವಳ ತಲೆಯಲ್ಲಿ ಕಿಶೋರನ ಮಾತುಗಳದೇ ಪ್ರದಕ್ಷಿಣೆ. 'ಅವನ ಉದ್ದೇಶ ಒಳ್ಳೆಯದಾದರೂ, ಅದರ ಮುಂದಿನ ಪರಿಣಾಮಗಳನ್ನು ಯೋಚಿಸುತ್ತಿಲ್ಲ ಕಿಶೋರ್. ಇದು ಯಾವುದೇ ಕಾರಣಕ್ಕೂ ಆಗಕೂಡದು. ಇದನ್ನು ತಡೆಯುವುದು ಹೇಗೆ?' ಬಿಸಿನೀರು ಮೈ ಮೇಲೆ ಸುರುವಿಕೊಳ್ಳುತ್ತಿದ್ದವಳ ತಲೆ ಕಾದ ಹೆಂಚು. ಹಾಗೆ ಯೋಚಿಸುತ್ತಿದ್ದವಳ ತಲೆಯಲ್ಲಿ ಕಿಶೋರ್ ಈಗ ಸ್ವಲ್ಪ ಹೊತ್ತಿಗೆ ಮುಂಚೆ ಹೇಳಿದ ಮಾತೊಂದು ಪದೇ ಪದೇ ಸುಳಿಯತೊಡಗಿತು. ಹಾಗೆ ಸುಳಿದಾಡುತ್ತಾ ಅದು ಬಹಳ ಪ್ರಾಮುಖ್ಯತೆಯನ್ನು ಪಡೆದುಬಿಟ್ಟಿತು!

'ನವ್ಯಾಳನ್ನು ಈ ಮನೆಯಿಂದ ಒಮ್ಮೆ ಹೊರಹಾಕಿದರೆ ಅವಳು ನಿನ್ನಲ್ಲಿಗೂ ಬರುವುದಿಲ್ಲ ಸಮಾ. ಅವಳ ಅತೀತ ನಿನ್ನ ಹಾಗೂ ಅಭಿರಾಮ್ ಸಂಬಂಧವನ್ನು ಕೊನೆಗಾಣಿಸಬಹುದು. ಶರ್ಮಾ ಪರಿವಾರದಲ್ಲಿ ನಿನ್ನ ನಡತೆಯ ಮೇಲೂ ಪ್ರಶ್ನೆಗಳು ಹುಟ್ಟಬಹುದೆಂದು ಅವಳು ನಿನ್ನಿಂದಲೂ ದೂರವಾಗುತ್ತಾಳೆ' ಎಂಬರ್ಥದ ಮಾತನ್ನಾಡಿದ್ದ ಕಿಶೋರ್.

'ಅರೇ….. ಹೌದಲ್ಲವೇ...... ಅವನ ಮಾತು ಅಕ್ಷರಶಃ ಸತ್ಯ. ಇಲ್ಲಿಂದ ಹೊರಬಿದ್ದರೆ ಈ ಬಾರಿ ನನ್ನ ಬಳಿ ಬರುವುದಿಲ್ಲ ಅವಳು. ನಾನೇಕೆ ಈ ಬಗ್ಗೆ ಮುಂಚೆಯೇ ಯೋಚಿಸಲಿಲ್ಲ? ಸತ್ಯ ತಿಳಿದ ಮೇಲೆ ಈ ಮನೆಯವರು ಏನು ಮಾಡುವರೋ ನನಗೂ ತಿಳಿದಿಲ್ಲ. ಆದರೂ ಒಂದು ವೇಳೆ ಅವರು ನವ್ಯಾಳನ್ನು ತಿರಸ್ಕರಿಸಿದರೇ? ಕಿಶೋರ್ ಈ ಮನೆಬಿಟ್ಟು ಅವಳೊಂದಿಗೆ ಬರಲು ಅವಳೇ ಸಮ್ಮತಿಸಲಾರಳು. ಕಿಶೋರನೆಂದಂತೆ ನನ್ನ ಬಳಿಯೂ ಬರಲಾರಳು ನವ್ಯಾ.....

ಛೇ... ಇಲ್ಲಾ.......

ಹಾಗಾಗಕೂಡದು......

ನವ್ಯಾ ಕೇವಲ ನನ್ನ ಸ್ನೇಹಿತೆಯಲ್ಲ. ನನ್ನ ಒಬ್ಬಂಟಿ ಪಯಣದ ಹಾದಿಯಲ್ಲಿ ಜೊತೆಯಾದವಳು. ನನ್ನ ನೋವುಗಳಿಗೆ ಸಾಂತ್ವನ ನೀಡುವ ಹೆಗಲಾದವಳು. ನನ್ನ ಅಂತರಾಳವನ್ನು ಅರ್ಥೈಸಿಕೊಂಡಿರುವವಳು. ಅಮ್ಮನಂತಹ ಅಕ್ಕರೆ,ಮಮತೆ ಸುರಿಸುವ ಜೀವದ ಗೆಳತಿಯವಳು. ಈ ಮನೆ, ಸಮಾಜ ಅಷ್ಟೇ ಏಕೆ? ಇಡೀ ಜಗತ್ತೇ ಅವಳ ವಿರುದ್ಧವಿದ್ದರೂ ಸರಿಯೇ‌. ನಾನು ಮಾತ್ರ ಯಾವುದೇ ಕಾರಣಕ್ಕೂ ನಡುನೀರಿನಲ್ಲಿ ಅವಳ ಕೈ ಬಿಡಲಾರೆ. ಅಭಿರಾಮ್ ಹಾಗೂ ಅವನ ಮನೆಯವರಿಗೆ ನವ್ಯಾಳಿಂದಾಗಿ ನನ್ನ ನಡತೆಯ ಬಗ್ಗೆ ಪ್ರಶ್ನೆ ಹುಟ್ಟುವಂತಿದ್ದರೆ ನನ್ನ ಬದುಕಿನಲ್ಲಿ ಅವರ ಅಗತ್ಯವಿಲ್ಲ. ಆದರೆ.........

ಅವಳಿದನ್ನು ಎಂದಿಗೂ ಒಪ್ಪಲಾರಳು. ಅವಳಿಗೆ ಬೇಕಾಗಿರುವುದು ಒಂದೇ. ನನ್ನ ಅಭಿರಾಮ್ ವಿವಾಹ‌. ಬಿಟ್ಟರೆ ಇಂದೇ ನಮ್ಮಿಬ್ಬರ ಮದುವೆ ಮಾಡಿಸಲೂ ಸಿದ್ಧ ಅವಳು. ಅಂತಹವಳು ನನ್ನೀ ನಿರ್ಧಾರದ ಬಗ್ಗೆ ತಿಳಿದ ಕ್ಷಣ ಕಿಶೋರನೆಂದಂತೆ ನನ್ನನ್ನು ತೊರೆಯುತ್ತಾಳೆ. ಮತ್ತೇನು ಮಾಡಲಿ?' ಕಿಶೋರ್ ಚರ್ಚೆಯ ಭರದಲ್ಲಿ ಹೇಳಿದ ಮಾತು ಸಮನ್ವಿತಾಳ ತಲೆಯನ್ನು ಗುಂಗಿ ಹುಳುವಿನಂತೆ ಕೊರೆಯತೊಡಗಿತು.

ಅತ್ತ ಕಿಶೋರ್ ಯಾವುದೇ ಕಾರಣಕ್ಕೂ ಸತ್ಯ ಮನೆಯವರಿಗೆ ತಿಳಿಯಬಾರದೆಂಬ ಹುಕಿಗೆ ಬಿದ್ದು ನವ್ಯಾಳನ್ನು ಬೇರೆಡೆ ಕರೆದೊಯ್ಯುವ ಯೋಜನೆಯಲ್ಲಿದ್ದರೆ, ಇತ್ತ ಸಮನ್ವಿತಾ ಸತ್ಯ ಮನೆಯವರಿಗೆ ತಿಳಿದ ನಂತರದ ನವ್ಯಾಳ ಬದುಕಿನ ಬಗ್ಗೆ ಯೋಚನೆಗೆ ಬಿದ್ದಿದ್ದಳು. ಆದರೆ  ಇಬ್ಬರ ಯೋಚನೆಗಳ ಕೇಂದ್ರಬಿಂದುವಾದ ನವ್ಯಾಳ ಮನ ಯೋಚಿಸುವ, ಚಿಂತಿಸುವ ಶಕ್ತಿಯನ್ನೇ ಕಳೆದುಕೊಂಡಂತೆ ಅರೆಜೀವವಾಗಿ ಒದ್ದಾಡುತ್ತಿತ್ತು......

        ********************************

'ರಾವ್ ಮ್ಯಾನ್ಶನ್'ಗೆ ಸಂಪೂರ್ಣ ಮಂಕು ಕವಿದಿತ್ತು. ದಿನನಿತ್ಯ ಪಾರ್ಟಿ, ಗೆಟ್ ಟುಗೆದರ್, ಮೋಜಿನ ಕೂಟಗಳೆಂದು ದೀಪಗಳ ಬೆಳಕಿನಲ್ಲಿ ಜಗಮಗಿಸುತ್ತಿದ್ದ ಅರಮನೆ ಈಗ ಅಲಂಕಾರ ತೆಗೆದ ಅಭಿನೇತ್ರಿಯಂತಾಗಿತ್ತು. ಮನೆಯೊಳಗಿನ ಚಟುವಟಿಕೆಗಳೂ ನೀರಸ. ಹಗಲೆಲ್ಲಾ ಆ ಮನೆ ನೀರವ ಮೌನದೊಳಗೇ ಅವಿತಿರುವುದು ಸಾಮಾನ್ಯವೇ. ಆದರೆ ಈಗೀಗ ಅದು ರಾತ್ರಿಗೂ ವಿಸ್ತರಿಸತೊಡಗಿತ್ತು. ಆ ಮನೆಯ ಪರಿಸರ ಎಂದಿಗೂ ಜೀವಂತವಾಗಿರದಿದ್ದರೂ ಸಮನ್ವಿತಾ ಇದ್ದಾಗ ಎಲ್ಲೋ ಅಲ್ಪಸ್ವಲ್ಪ ಚಟುವಟಿಕೆಗಳಿದ್ದವು. ಈಗ ಅದೂ ನಶಿಸತೊಡಗಿತ್ತು.

ಸತ್ಯಂ ರಾವ್ ಅವರ ರೋಗಗ್ರಸ್ತ ಉದ್ಯಮ ಪತನವಾಗಲು ಕ್ಷಣಗಣನೆ ಶುರುವಾಗಿತ್ತು. ಬ್ಯಾಂಕುಗಳು ಹಾಗೂ ಇತರ ವ್ಯಕ್ತಿಗಳಿಗೆ ಕೊಡಬೇಕಾದ ಸಾಲದ ಅಸಲು - ಬಡ್ಡಿ, ಹೂಡಿಕೆದಾರರು ಹಾಗೂ ಷೇರುದಾರರಿಗೆ ಕೊಡಬೇಕಾದ ಪಾಲು, ಸರ್ಕಾರಕ್ಕೆ ಕಟ್ಟದೇ ಬಾಕಿ ಉಳಿಸಿದ್ದ ತೆರಿಗೆಗಳು ಎಲ್ಲಾ ಸೇರಿ ಬಹುತೇಕ ಸ್ಥಿರ ಚರಾಸ್ತಿಗಳ ಮುಟ್ಟುಗೋಲು ಖಚಿತವೆಂದು ಅವರ ವಕೀಲರು ಹಿಂದಿನ ದಿನವೇ ತಿಳಿಸಿದ್ದರು. ಹೆಚ್ಚೆಂದರೆ ಈ ಮನೆಯೊಂದಿಗೆ ಒಂದು ಮೂರು ನಿವೇಶನಗಳು ಉಳಿಯಬಹುದು ಎಂದು ಲೆಕ್ಕಹಾಕಿ ಅಂದಾಜಿಸಿ ಹೇಳಿದ್ದರಾತ. ಇದರಿಂದ ತಪ್ಪಿಸಿಕೊಳ್ಳಲು ಉಳಿದಿದ್ದ ಏಕೈಕ ಹಾದಿ….. ಮಗಳ ಮದುವೆ. ಆದರೆ ಅಲ್ಲಿ ಇವರ ಲೆಕ್ಕಾಚಾರ ಸಂಪೂರ್ಣ ತಪ್ಪಿತ್ತು. ಸಂಧಾನಕ್ಕೆಂದು ಆಸ್ಪತ್ರೆಗೆ ನೀಡಿದ ಭೇಟಿಯೂ ಫಲಪ್ರದವಾಗಲಿಲ್ಲ.

ಸತ್ಯಂ ಮತ್ತು ಮಾಲಿನಿ ಆಸ್ಪತ್ರೆಯಿಂದ ಮರಳಿದ ಮೇಲೆ ರಾವ್ ಮ್ಯಾನ್ಶನ್ ಬಹಳಷ್ಟು ವಿಚಿತ್ರ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಕೈಗೊಬ್ಬ, ಕಾಲಿಗೊಬ್ಬ ಎಂಬಂತಿದ್ದ ಆಳುಗಳನ್ನು ಕೆಲಸದಿಂದ ತೆಗೆಯಲಾಗಿತ್ತು. 'ತೆಗೆಯುವುದು' ಎನ್ನುವುದಕ್ಕಿಂತ 'ಕಿತ್ತೊಗೆಯಲಾಗಿತ್ತು' ಎನ್ನುವುದು ಸೂಕ್ತವೇನೋ. ಈಗ ಒಬ್ಬ ವಾಚ್ಮನ್ ಸೇರಿ ಐವರು ಮಾತ್ರವೇ ಉಳಿದಿದ್ದು. ಮುಂಚೆ ವಾಚ್ಮನ್ ಗಳೇ ನಾಲ್ವರಿದ್ದರು. ಸಂತೋಷ ಕೂಟಗಳು, ಪಾನಗೋಷ್ಟಿಗಳು ಸಂಪೂರ್ಣ ಬಂದ್. ಯಾವಾಗಲೂ ಮನೆಯಿಂದ ಹೊರಗೇ ತಿರುಗುತ್ತಿದ್ದ ಒಡೆಯ, ಒಡತಿ ಈಗ ಸ್ವ ಇಚ್ಛೆಯಿಂದ ಗೃಹಬಂಧನದಲ್ಲಿದ್ದರು. 

ಇದೆಲ್ಲಕ್ಕಿಂತ ಮುಖ್ಯವಾಗಿ ಆದರ್ಶ ದಂಪತಿಗಳು ಆದರ್ಶ ವೈರಿಗಳಾಗಿ ಬದಲಾಗಿದ್ದರು. ಯಾವತ್ತೂ ಇಬ್ಬರೂ ಸೇರಿ ಪರರ ಮೇಲೆ ಕಿರುಚಾಡುತ್ತಿದಾದರೇ ವಿನಃ ಇಷ್ಟು ವರ್ಷಗಳಲ್ಲಿ ಎಂದೂ ರಾವ್ ದಂಪತಿಗಳ ಕಲಹಕ್ಕೆ ಆ ಬಂಗಲೆ ಸಾಕ್ಷಿಯಾಗಿರಲಿಲ್ಲ. ಅಷ್ಟು ಅನ್ಯೋನ್ಯ ದಾಂಪತ್ಯ ಅವರದು. ಅದಕ್ಕೆ ಇಬ್ಬರ ಅಭಿಪ್ರಾಯ, ಅಭಿರುಚಿಗಳ ಸಾಮ್ಯತೆ ಒಂದು ಪುಟ್ಟ ಕಾರಣವಾದರೆ, ಹಣ ಮತ್ತು ಅಂತಸ್ತಿನ ಪ್ರತಿಷ್ಟೆ ಇವರ ಸುಖಿ ದಾಂಪತ್ಯದ ದಿವ್ಯ ರಹಸ್ಯ. ಇಬ್ಬರೂ ಒಟ್ಟಿಗೆ ಕುಳಿತು ಪೆಗ್ ಮೇಲೆ ಪೆಗ್ ಏರಿಸುವಷ್ಟು ಹೊಂದಾಣಿಕೆ….... ಪಾರ್ಟಿಗಳಲ್ಲಿ ಯಾರದೋ ಹೆಂಡತಿಯೊಂದಿಗೆ ತನ್ನ ಗಂಡ ಕುಣಿದರೂ, ಇನ್ಯಾರದೋ ಗಂಡನೊಂದಿಗೆ ತನ್ನ ಹೆಂಡತಿ ಕುಣಿದರೂ ಅದನ್ನು ಹೈ ಸೊಸೈಟಿ ಕಲ್ಚರ್ ಎಂದು ಹೊಗಳಿಕೊಳ್ಳುವಷ್ಟು ವಿಶಾಲ ಮನೋಭಾವದ ಗಂಡ-ಹೆಂಡತಿ.......

ಇಂತಹ ದಂಪತಿಗಳು ಕಳೆದೆರಡು ದಿನಗಳಿಂದ ಹುಚ್ಚುನಾಯಿಗಳಂತೆ ಕಚ್ಚಾಡಲಾರಂಭಿಸಿದ್ದರು. ಮಾತು ಮಾತಿಗೂ ಕದನ. ರಾವ್ ಸಾಮ್ರಾಜ್ಯ ಹೀಗೆ ಅವಸಾನಗೊಳ್ಳಲು ನೀನೇ ಕಾರಣ ಎಂದು ಪರಸ್ಪರ ಆರೋಪ ಪ್ರತ್ಯಾರೋಪ..... ಇಲ್ಲಿಯವರೆಗೆ 'ನಾವು ನಮ್ಮದು' ಎಂಬ ಪದಗಳು ಬಳಕೆಯಾಗುತ್ತಿದ್ದೆಡೆ ಈಗ 'ನಾನು ನನ್ನದು' , 'ನೀನು ನಿನ್ನದು' ಎಂಬ ಪದಗಳು ಬದಲಿಯಾಗಿ ಬಂದಿದ್ದವು. ಮುಂಚೆ ಒಟ್ಟಿಗೆ ಕುಳಿತು ಕುಡಿಯುತ್ತಿದ್ದವರು ಈಗ ತಮ್ಮ ತಮ್ಮ ಕೋಣೆಗಳಲ್ಲಿ ಒಂಟಿಯಾಗಿ ಕುಡಿಯತೊಡಗಿದ್ದರು. ಮಾಲಿನಿ ಲಗೇಜ್ ಸಮೇತ ಗಂಡನ ಕೋಣೆಯಿಂದ ಅತಿಥಿಗಳ ಕೋಣೆಗೆ ಶಿಫ್ಟ್ ಆಗಿದ್ದರು. ಒಟ್ಟಾರೆ ಇವೆಲ್ಲದರಿಂದ ಇಬ್ಬರಿಗೂ ಕಂಠ ಪೂರ್ತಿ ಕುಡಿಯಲು ಉತ್ತಮ ಕಾರಣ ಸಿಕ್ಕಿದ್ದಷ್ಟೇ ಭಾಗ್ಯ.

ಇಂದು ಆ ಕಲಹ ಚರಮ ಸೀಮೆಯಲ್ಲಿತ್ತು. ವಾರದಿಂದ ಕಾರಣವಿಲ್ಲದೇ ಕಚ್ಚಾಡುತ್ತಿದ್ದವರು ಇಂದು ರಣರಂಗ ಪ್ರವೇಶಿಸಲು ಬಲವಾದ ಕಾರಣವಿತ್ತು.

ಈಗ ಸ್ವಲ್ಪ ಹೊತ್ತಿಗೆ ಮುಂಚೆ ಸತ್ಯಂ ರಾವ್ ಅವರಿಗೆ ಕೋರ್ಟಿನ ನೋಟಿಸ್ ಒಂದು ಬಂದಿತ್ತು. ಯಾರೋ ಸಾಲಗಾರರು ಕಳಿಸಿರಬಹುದೆಂದು ಯೋಚಿಸುತ್ತಾ ತೆರೆದು ನೋಡಿದವರಿಗೆ ಒಳಗಿದ್ದ ನೋಟಿಸ್ ಕಂಡು ಪ್ರಜ್ಞೆ ತಪ್ಪುವುದೊಂದು ಬಾಕಿ. ಏಕೆಂದರೆ ಅದರೊಳಗಿದ್ದದ್ದು ಪ್ರೀತಿಯ ಮಡದಿ ಕಳಿಸಿದ್ದ ವಿವಾಹ ವಿಚ್ಛೇದನ ಕೋರಿದ್ದ ಅರ್ಜಿ. ಇದನ್ನು ನೋಡಿ ಮೊದಲು ಬಿಳುಚಿಕೊಂಡರೂ ನಂತರ ಕೋಪ ಏರಿತ್ತು. ಮಾಲಿನಿಯವರನ್ನು ಕರೆದು ವಾಚಾಮಗೋಚರವಾಗಿ ಬೈಯತೊಡಗಿದ್ದರು. ಆಕೆಯೇನು ಕಡಿಮೆಯೇ? ಕೇಂದ್ರ ಸಚಿವ ಮಹೇಶ್ವರ ಪಾಟೀಲರ ತಂಗಿ. ಆತನೇ ತಂಗಿಗೆ ಡೈವೋರ್ಸ್ ಕೇಳಿ ಆಲ್ಮೋನಿ ಹಣವನ್ನು ತಗೊಂಡು ಬಾ ಎಂಬ ಅತ್ಯದ್ಬುತ ಸಲಹೆ ಕೊಟ್ಟಿದ್ದು. ಗಂಡನ ಪ್ರತೀ ಬೈಗುಳದ ಅಸ್ತ್ರಕ್ಕೂ ಪ್ರತ್ಯಸ್ತ್ರ ಹೂಡುತ್ತಿದ್ದಳಾಕೆ. ಪ್ರಸ್ತುತ ಆ ವಿಷಯವಾಗಿಯೇ ದಂಪತಿಗಳ ಚೀರಾಟ, ಕೂಗಾಟ, ದೊಂಬರಾಟ ನಡೆಯುತ್ತಿತ್ತು. ಅದೂ ಅವರ ರೂಮಿನಲ್ಲಲ್ಲ. ಮನೆಯ ಹಾಲಿನಲ್ಲೇ ಕಚ್ಚಾಟಕ್ಕಿಳಿದಿದ್ದರು ಸತಿಪತಿಗಳು.

ಇಂತಹ‌ ಅಮೋಘ ಸನ್ನಿವೇಶದಲ್ಲಿ ಮನೆಯೊಳಗೆ ಪ್ರವೇಶಿಸಿದ್ದ ಅಭಿರಾಮ್. ಅವನು ಬಂಗಲೆಯ ಗೇಟಿನೆದುರು ಬಂದಾಗ ಗೇಟು ತೆರೆದೇ ಇತ್ತು. ಇದ್ದೊಬ್ಬ ವಾಚ್ ಮನ್ ತನ್ನ ಸ್ಥಾನದಲ್ಲಿ ಇರಲಿಲ್ಲ. ಹಾಗಾಗಿ ಸೀದಾ ಒಳಬಂದಿದ್ದ. ರಾವ್ ದಂಪತಿಗೆ ಜಗಳದಲ್ಲಿ ಪೋರ್ಟಿಕೋದಲ್ಲಿ ಕಾರು ನಿಂತದ್ದೂ ತಿಳಿಯಲಿಲ್ಲ. ಉಳಿದ ನಾಲ್ವರು ಸರ್ವೆಂಟುಗಳು ಅಡುಗೆಮನೆಯಲ್ಲಿ ಹಾಗೂ ಕ್ಲೀನಿಂಗಿನಲ್ಲಿ ನಿರತರಾದ್ದರಿಂದ ಸೀದಾ ಒಳಗೆ ಬಂದಿದ್ದ ಅಭಿರಾಮ್. ಅವನು ಬಂದು ನಿಂತು ನಿಮಿಷಗಳಾದರೂ ಅವನಿರುವಿಕೆಯ ಸೂಚನೆ ಸಿಗಲಿಲ್ಲ ರಾವ್ ಹಾಗೂ ಮಾಲಿನಿಯವರಿಗೆ. ಅವರ ಹಿಡಿತವಿಲ್ಲದ ನಾಲಿಗೆಯ ಅರಚಾಟದಲ್ಲಿಯೇ ಸಂಪೂರ್ಣ ವಿಷಯ ತಿಳಿದುಹೋಗಿತ್ತು ಅವನಿಗೆ. ಅವನು ಈ ಬೆಳವಣಿಗೆಯಿಂದ ದಂಗಾಗಿದ್ದ.

ಹಣ, ಅಧಿಕಾರ, ಅಂತಸ್ತು ಇದ್ದ ಕಾಲದಲ್ಲಿ ಸತ್ಯಂ ರಾವ್ ಮಾತಿಗೆ ಬದಲು ನುಡಿಯುತ್ತಿರಲಿಲ್ಲ ಆಕೆ. ಅವರು ಹೇಳಿದ್ದಕ್ಕೆಲ್ಲಾ ಸಹಮತವೇ. ವ್ಯವಹಾರ ನಿರ್ವಹಣೆಯಲ್ಲಿ ಅವರ ತಾಳಮೇಳದ ಮಿಳಿತ ಅತೀ ಅಪರೂಪದ್ದು. ಅದಕ್ಕಾಗಿಯೇ ಇಡೀ ಉದ್ಯಮ ವಲಯ ಅವರನ್ನು ಅನುರೂಪ ದಾಂಪತ್ಯಕ್ಕೆ ಉದಾಹರಿಸುತ್ತಿದ್ದುದು. ಒಮ್ಮೊಮ್ಮೆ ಅವರ ಹೊಂದಾಣಿಕೆ ಕಂಡು ಅವನೂ ಅಚ್ಚರಿಪಟ್ಟಿದ್ದುಂಟು. ಆದರೆ ಸಚ್ಚಿದಾನಂದ ಶರ್ಮಾ ಯಾವತ್ತೂ ಹೇಳುತ್ತಿದ್ದರು....... 'ಅವರದ್ದು ಅನುರೂಪ ದಾಂಪತ್ಯವಲ್ಲ, ಅದು ವ್ಯವಹಾರಿಕ ದಾಂಪತ್ಯ. ಹಣವೇ ಅವರ ಸಂಬಂಧದ ಬುನಾದಿ...' ಎಂದು.

ಇಂದು ತಂದೆಯ ಮಾತು ಎಷ್ಟು ಸತ್ಯ ಎನಿಸಿಬಿಟ್ಟಿತು. ಯಾಕೋ ವಿಪರೀತ ರೇಜಿಗೆ ಹುಟ್ಟಿತು ಮಾಲಿನಿಯವರ ಮೇಲೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸತ್ಯಂ ರಾವ್ ವ್ಯವಹಾರಿಕ ವಿಚಾರಗಳಲ್ಲಿ, ಮಗಳ ವಿಷಯದಲ್ಲಿ ಎಷ್ಟೇ ಕುತಂತ್ರಿಯಾಗಿದ್ದರೂ ಮಡದಿಯ ವಿಚಾರದಲ್ಲಿ ಆತ ಅತೀ ಧಾರಾಳಿ. ಎಂದೂ ಯಾವುದನ್ನು ಆಕೆಯ ಮೇಲೆ ಹೇರಿದವರಲ್ಲ. ಮಡದಿಯ ಮೇಲೆ ಪ್ರಶ್ನಾತೀತವಾದ ಪ್ರೇಮ, ನಂಬಿಕೆಯಿತ್ತು ಆತನಿಗೆ. ಆದರೆ ಆಕೆ....! ಧನಲಕ್ಷ್ಮಿ ಮನೆಯಿಂದ ಹೊರಹೋಗುವ ಸೂಚನೆ ಸಿಕ್ಕಕೂಡಲೇ ತಾನು ವಿಚ್ಚೇದನ ಹಾಗೂ ಪರಿಹಾರದ ಹಣವನ್ನು ತೆಗೆದುಕೊಂಡು ಇಲ್ಲಿಂದ ನುಣುಚಿಕೊಳ್ಳಲು ಎಲ್ಲಾ ತಯಾರಿ ನಡೆಸಿದ್ದಳು.

ದಂಪತಿಗಳು ಇಹದ ಪರಿವೆಯಿಲ್ಲದೆ ಕಚ್ಚಾಡುತ್ತಿದ್ದರು. ಬಿಟ್ಟಿದ್ದರೆ ಅವರ ಜಗಳ ಮನೆಯ ತಾರಸಿಯನ್ನು ದಾಟಿ ಹೊರಹೋಗುತ್ತಿತ್ತೇನೋ......ಆದರೆ ಅದನ್ನು ಕೇಳುತ್ತಾ ನಿಲ್ಲುವಷ್ಟು ತಾಳ್ಮೆ ಅವನಿಗಿರಲಿಲ್ಲ.

"ಹಲೋ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್, ಮೇ ಐ ಹ್ಯಾವ್ ಯುವರ್ ಅಟೆನ್ಷನ್ ಪ್ಲೀಸ್" ಎಂಬ ಧ್ವನಿ ಬಂದತ್ತ ಬೈಯ್ಯುತ್ತಲೇ ತಿರುಗಿದ ಗಂಡ-ಹೆಂಡತಿ ಎದುರು ನಿಂತಿದ್ದವನನ್ನು ಕಂಡು ಬೆಚ್ಚಿಬಿದ್ದಿದ್ದರು. ಇಬ್ಬರ ಮುಖವೂ ಅರಕ್ತವಾಗಿ ಬಿಳುಪೇರಿತು. ಬೇರೆ ಯಾರಾದರೂ ಆಗಿದ್ದರೆ ಕತ್ತಿಡಿದು ಆಚೆ ದಬ್ಬುತ್ತಿದ್ದರು. ಆದರೆ ಎದುರು ನಿಂತಿದ್ದವನು ಅಭಿರಾಮ್. ಗಂಟಲಿನಿಂದ ಸ್ವರ ಹೊರಡಿಸಲು ಅವರಿಗೆ ನಿಮಿಷಗಳೇ ಬೇಕಾಯಿತು. ಸಾಧ್ಯವಾದಷ್ಟು ಚೇತರಿಸಿಕೊಂಡು ತೊದಲುತ್ತಲೇ ಬಾಯಿ ತೆರೆದರು ಮಾಲಿನಿ.

"ಅರೇ... ವಾಟ್.... ವಾಟ್ ಅ ಸರ್ಪ್ರೈಸ್ ಅಭಿರಾಮ್... ವಿತ್ ಔಟ್ ಇನ್ಫಾರ್ಮೇಷನ್ ಬಂದಿದ್ದೀಯಾ. ಈ ಸರ್ವೆಂಟುಗಳು ಸ್ಟುಪಿಡ್ ಫೆಲೋಸ್.... ಏನೂ ಹೇಳಿಲ್ಲ....." ಎಂದು ಇದ್ದ ನಾಲ್ಕು ಆಳುಗಳು ಮತ್ತು ವಾಚ್ ಮನ್ ಗೆ ಬೈದರು‌. ಸತ್ಯಂ ರಾವ್ ಆದ ಅವಮಾನ ಹಾಗೂ ಹೆಂಡತಿಯ ನಂಬಿಕೆ ದ್ರೋಹದಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ಬೆಪ್ಪಾಗಿ ಸೋಫಾದಲ್ಲಿ ಕೂತಿದ್ದರು.

"ಕಮ್ ಅಭಿ, ಹ್ಯಾವ್ ಯುವರ್ ಸೀಟ್" ಎಂದು ಅತೀ ಆತ್ಮೀಯತೆ ತೋರುತ್ತಾ, ಅಡುಗೆಯವನಿಗೆ ಟೀ ತರಲು ಹೇಳಿದರು. ಆದರೆ ಎರಡನ್ನೂ ನಿರಾಕರಿಸಿದ ಅಭಿ. 

"ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್, ನಿಮ್ಮ ಉಪಚಾರದ ಅಗತ್ಯವಿಲ್ಲ. ನಾನು ಹೇಳೋದನ್ನು ಸರಿಯಾಗಿ ಕೇಳಿಸ್ಕೊಳ್ಳಿ. ನಿಮ್ಮ ವ್ಯವಹಾರವನ್ನು ಸಂಪೂರ್ಣವಾಗಿ ಮುಳುಗಿಸೋದು ನನಗೆ ಚಿಟಿಕೆ ಹೊಡೆಯುವಷ್ಟು ಸುಲಭ. ಆದ್ರೆ ಅದು ನನಗೆ ಬೇಕಾಗಿಲ್ಲ. ಆದರೆ ಒಂದು ವಿಷಯ. ಸಮನ್ವಿತಾನ ಅವಳ ಪಾಡಿಗೆ ಬಿಟ್ಟುಬಿಡಿ. ಮತ್ಯಾವುದೇ ನಾಟಕಗಳು, ಜಾಲಗಳು ಬೇಡ. ಅಪ್ಪಿತಪ್ಪಿ ಅವಳ ಸುದ್ದಿಗೇನಾದರೂ ಹೋದರೆ, ಅದರ ಮರುಘಳಿಗೆ ನೀವು ಬೀದಿಯಲ್ಲಿ ಇರ್ತೀರಿ ಅನ್ನೋದು ಮಾತ್ರ ನೆನಪಿನಲ್ಲಿರಲಿ. ಅದನ್ನೇ ಹೇಳಿಹೋಗೋಣ ಅಂತ ಬಂದೆ" ಎಂದವನು ಇಬ್ಬರ ಮುಖಗಳನ್ನೂ ಬದಲಿಸಿ ಬದಲಿಸಿ ನೋಡಿದ.

" 'ಯಾರ ಪಾಪವನ್ನೂ ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗೆಯೇ ಇನ್ನೊಬ್ಬರ ಪುಣ್ಯ ನಿನಗೆ ಸಿಗುವುದಿಲ್ಲ. ನಾವು ಏನು ಅನುಭವಿಸುತ್ತೇವೆಯೋ ಅದು ನಾವು ಮಾಡಿದ ಕರ್ಮದ ಫಲವಷ್ಟೇ...' ಅಂತ ಗೀತೆಯಲ್ಲಿ ಕೃಷ್ಣ ಒಂದು ಕಡೆ ಹೇಳಿದ್ದಾನೆ. ನಿಮ್ಮಿಬ್ಬರನ್ನೂ ನೋಡಿ ಯಾಕೋ ನೆನಪಾಯ್ತು. ಇದಿನ್ನೂ ಆರಂಭವಷ್ಟೇ. ನೀವಿಬ್ಬರೂ ಮಾಡಿದ ಕರ್ಮದ ಫಲಗಳು ಇನ್ನೂ ಸಿಗಲಿವೆ. ನಾನು ಹೊರಡ್ತೀನಿ. ಹೇಳಿದ ಎಚ್ಚರಿಕೆ ಯಾವತ್ತೂ ನೆನಪಿನಲ್ಲಿರಲಿ. ಹೋಗೋಕೆ ಮುಂಚೆ ಒಂದು ಮಾತು.... ನಿಮ್ಮ ಮಗಳನ್ನು ಹತ್ತಿರದಿಂದ ಬಲ್ಲವರೆಲ್ಲರೂ ಯಾವಾಗ್ಲೂ ಅವಳ ಬಗ್ಗೆ ಹೇಳುವ ಮಾತು. ನಾನೂ ಒಪ್ಪುತ್ತೇನೆ ಅದನ್ನು. ಬಹುಶಃ ಇದೇ ನಮ್ಮ ಕೊನೆಯ ಭೇಟಿಯೇನೋ..... ಹಾಗಾಗಿ ಹೊರ ಹೋಗುವ ಮುನ್ನ....... ನಿಮಗೆ ಸಮನ್ವಿತಾಳ ಅಪ್ಪ ಅಮ್ಮ ಅನ್ನಿಸ್ಕೊಳ್ಳೋ ಯೋಗ್ಯತೆಯೇ ಇಲ್ಲ. ಯು ನೆವರ್ ಎವರ್ ಡಿಸರ್ವ್ ಹರ್" ಎಂದವನೇ ತಿರುಗಿಯೂ ನೋಡದೆ ಹೊರಟುಹೋದ.

ಅಲ್ಲೊಂದು ಗಾಢ ಮೌನವಷ್ಟೇ ಉಳಿದಿತ್ತು. ಅವನ ಮಾತುಗಳ ಗುಂಗಿನಲ್ಲೇ ಕುಳಿತಿದ್ದರು ಇಬ್ಬರೂ. ಆದರೆ ಅವನು ಹೇಳಿದ ಮಾತುಗಳ್ಯಾವುವೂ ಅವರ ಮನಸ್ಸನ್ನು ಮುಟ್ಟಲೇ ಇಲ್ಲ. ವ್ಯವಹಾರದ ಅವಸಾನ ತಡೆಯಲು ಇದ್ದ ಕೊನೆಯ ಅವಕಾಶವನ್ನೂ ಮೂರ್ಖ ಮಗಳು ಹಾಳುಗೆಡವಿದಳು ಎಂಬ ಪರಿತಾಪವೊಂದೇ ಅವರ ಯೋಚನೆಯಲ್ಲಿದ್ದದ್ದು. ಎಷ್ಟೋ ಹೊತ್ತಿನ ಮೇಲೆ, "ಆಯ್ತಲ್ಲಾ ನಿನ್ನ ಪ್ಲಾನಿನ ತಿಥಿ. ಎಲ್ಲಾ ಹಾಳಾಗ್ಲೀ. ಐ ವಾಂಟ್ ಡಿವೋರ್ಸ್. ನಿನ್ನ ಉಳಿದ ಆಸ್ತಿ ಮಾರ್ತೀಯೋ, ಇಲ್ಲಾ ನಿನ್ನೇ ನೀನು ಮಾರ್ಕೋತಿಯೋ, ಅದೇನ್ ಮಾಡ್ತೀಯೋ ಮಾಡು. ಐ ಡೋಂಟ್ ಕೇರ್. ನಾನು ಕೇಳಿದಷ್ಟು ಆಲ್ಮೋನಿ ಅಮೌಂಟ್ ಕೊಡ್ಬೇಕು ಕೊಡ್ತೀಯಾ ಅಷ್ಟೇ. ಅದನ್ನು ತಗೊಂಡು ನಾನು ಅಣ್ಣನ ಮನೆಗೆ ಹೋಗ್ತೀನಿ" ಎಂದು ಕಾಲನಪ್ಪಳಿಸುತ್ತಾ ಕೋಣೆಗೆ ಹೋದರು ಮಾಲಿನಿ. ರಾವ್ ಆಕೆಗೆ ಬೈಗುಳದ ಮಳೆ ಸುರಿಸುತ್ತಾ ಕುಡಿಯತೊಡಗಿದರು.

ಅಷ್ಟಿರದೇ ಸರ್ವಜ್ಞ ಹೇಳಿರುವನೇ......

ಮೂರ್ಖಂಗೆ ಬುದ್ಧಿಯನು 

ನೂರ್ಕಾಲ ಹೇಳಿದರೆ 

ಬೋರ್ಕಲ್ಲ ಮೇಲೆ ಮಳಿಗರಿದರಾ

ಕಲ್ಲು ನೀರ್ಕೊಳ್ಳಬಹುದೆ ಸರ್ವಜ್ಞ...... ಎಂದು?

        ******************************

ದಿನಗಳು ಯಾರ ಅಪ್ಪಣೆಗೂ ಕಾಯದೇ ಉರುಳುತ್ತಿದ್ದವು. ಸಮನ್ವಿತಾ ಮತ್ತೆ ಆಸ್ಪತ್ರೆಗೆ ಹೋಗತೊಡಗಿದ್ದಳು. ಆದರೆ ಮಂಗಳಮ್ಮ, ಮೃದುಲಾ ಇಬ್ಬರೂ ಹಠ ಹಿಡಿದು ಅವಳ ಕ್ವಾಟ್ರಸ್ ವಾಸವನ್ನು ಅಂತ್ಯಗೊಳಿಸಿದ್ದರು. ಅವಳೀಗ ಕಿಶೋರನ ಮನೆಯಿಂದಲೇ ಆಸ್ಪತ್ರೆಗೆ ಹೋಗಿ ಬರುತ್ತಿದ್ದಳು. ಹೋಗುವಾಗ ಕಿಶೋರ್ ಅವಳನ್ನು ಬಿಟ್ಟರೆ, ಬರುವಾಗ ಅಭಿರಾಮ್ ಜೊತೆಯಾಗುತ್ತಾನೆ. ಮದುವೆಗೆ ಸಮ್ಮತಿಯೆಂದು ಇಲ್ಲಿಯವರೆಗೆ ಬಾಯಿಬಿಟ್ಟು ಹೇಳದಿದ್ದರೂ ಅವಳ ಒಪ್ಪಿಗೆ ಮುಖದಲ್ಲಿಯೇ ವೇದ್ಯವಾಗುತ್ತದೆ. ಆದರೂ ಒಮ್ಮೆ ಬಾಯಿ ಬಿಟ್ಟು ಹೇಳಿ ಡಾಕ್ಟ್ರೇ ಎಂಬುದು ಅಭಿಯ ಅಳಲು. ಕಿಶೋರನ ಟ್ರಾನ್ಸಫರ್ ಬಹುತೇಕ ಖಚಿತವಾಗಿದೆ. ಒಂದೆರಡು ಸಹಿಗಳು ಮಾತ್ರ ಬಾಕಿಯಿದೆ. ಎಲ್ಲಾ ಕ್ಲಿಯರ್ ಆಗಿ ಆರ್ಡರ್ ಕೈಗೆ ಬಂದ ಮೇಲೆ ಮನೆಯವರಿಗೆ ಹೇಳುವ ನಿರ್ಧಾರ ಅವನದು. ಅದಕ್ಕೂ ಮುನ್ನವೇ ಒಮ್ಮೆ ಅಹಮದಾಬಾದಿಗೆ ಹೋಗಿ ವ್ಯವಸ್ಥೆಗಳನ್ನು ಮಾಡಿಕೊಂಡು ಬನ್ನಿ ಎಂದಿದ್ದರು ಅವನ ಬಾಸ್. ಹಾಗಾಗಿಯೇ ಈ ವಾರಾಂತ್ಯದಲ್ಲಿ ಅಲ್ಲಿಗೆ ಹೋಗುವ ಯೋಜನೆ ಹಾಕಿದ್ದ. ಹೋಗುವ ಮುನ್ನ ನವ್ಯಾಳಿಗೆ ತಿಳಿಸಿ ಅವಳಿಗೆ ಒಂದಿಷ್ಟು ಯೋಚಿಸಲು ಸಮಯ ನೀಡುವುದು ಸೂಕ್ತ ಎಂಬ ನಿರ್ಧಾರ ಅವನದು. 

ಆದರೆ ನವ್ಯಾ ಮಾತ್ರಾ ಅಂತರ್ಮುಖಿಯಾಗತೊಡಗಿದ್ದಾಳೆ. ನಗು, ಮಾತು ಎಲ್ಲವೂ ಕಡಿಮೆಯಾಗತೊಡಗಿದೆ. ಅದು ಮನೆಯವರೆಲ್ಲರ ಗಮನಕ್ಕೂ ಬಂದಿದೆ. ಅವಳ ಖಿನ್ನತೆಯ ಕಾರಣ ತಿಳಿದ ಇಬ್ಬರು ಒಂದೊಂದು ಬಗೆಯ ಪರಿಹಾರ ಯೋಚಿಸಿದ್ದಾರೆ. ಮಂಗಳಮ್ಮನವರಿಗಂತೂ ಸೊಸೆಯದೇ ಚಿಂತೆಯಾಗಿದೆ.

ಇತ್ತೀಚೆಗೆ ಸಮನ್ವಿತಾ ಯಾವುದೋ ಯೋಚನೆಯಲ್ಲಿ ಮುಳುಗಿರುವುದನ್ನು ಗಮನಿಸಿದ್ದ ಅಭಿರಾಮ್. ನಗುತ್ತಾ ಮಾತನಾಡುತ್ತಿದ್ದಳಾದರೂ ಗಂಭೀರತೆಯ ಒಳಗೆ ಅವಿತಿರುತ್ತಿದ್ದ ಲವಲವಿಕೆ ಮಾಯವಾಗಿತ್ತು. ಏನೋ ಕೊರತೆ. ಇದೇ ರೀತಿಯ ಬದಲಾವಣೆಯನ್ನು ನವ್ಯಾಳಲ್ಲೂ ಗಮನಿಸಿದ್ದ. ಅವಳಂತೂ ಮಾತಿಲ್ಲದ ಮೌನ ಗೌರಿ. ಮಂಗಳಮ್ಮನವರು ಅದನ್ನೇ ದಿನಕ್ಕೆ ನೂರು ಬಾರಿ ಹೇಳುತ್ತಿದ್ದರು ಕೂಡಾ. ಇಬ್ಬರ ಬದಲಾದ ನಡವಳಿಕೆಗಳು ಅವನೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ನವ್ಯಾಳ ಹಿನ್ನೆಲೆಯಿಂದ ಅವಳ ಹಾಗೂ ಕಿಶೋರ್ ನಡುವೆ ಏನಾದರೂ ಸಮಸ್ಯೆ ಉದ್ಭವಿಸಿರಬಹುದೇ....? ಎಂಬ ಗೊಂದಲ ಅವನದು. ಎಷ್ಟೋ ಬಾರಿ ಸಮನ್ವಿತಾಳೊಂದಿಗೆ ಕೇಳಬೇಕು ಎಂದುಕೊಳ್ಳುತ್ತಿದ್ದ. ಆದರೆ ಯಾಕೋ ಮನಸ್ಸು ತಡೆಯುತ್ತಿತ್ತು.

ಇಂದೂ ಅವಳನ್ನು ಆಸ್ಪತ್ರೆಯಿಂದ ಮನೆಯತ್ತ ಕರೆದುಕೊಂಡು ಹೊರಟಿದ್ದ. ಅವಳದು ಅದೇ ದಿವ್ಯ ಮೌನ. ಕಾರಿನ ಗಾಜಿನಿಂದ ಆಚೆ ನೋಡುತ್ತಾ ಕುಳಿತ್ತಿದ್ದವಳ ಮುಖದಲ್ಲಿ ವೇದನೆಯ ಗೆರೆಯೊಂದು ಸ್ಪಷ್ಟವಾಗಿತ್ತು. ಎಂದಿನಂತೆ ಸುಮ್ಮನಿರಲಾಗಲಿಲ್ಲ ಅವನಿಗೆ. ಕಾರು ನಿಲ್ಲಿಸಿದ ಅರಿವಾದಾಗ ಸುತ್ತ ನೋಟ ಹರಿಸಿದಳು. ಇನ್ನೂ ಮನೆ ತಲುಪಿರಲಿಲ್ಲ. ಮಧ್ಯದಲ್ಲೇ ನಿಲ್ಲಿಸಿದ್ದ. ಪ್ರಶ್ನಾರ್ಥಕವಾಗಿ ಅವನೆಡೆಗೆ ನೋಟ ಹರಿಸಿದವಳಿಗೆ ಅವನ ಮುಖದಲ್ಲೂ ಪ್ರಶ್ನೆಯೇ ಕಂಡಿತು. 

"ಸಮನ್ವಿತಾ, ಸುಮಾರು ದಿನದಿಂದ ನೋಡ್ತಿದ್ದೀನಿ. ನೀನು ಏನೋ ಚಿಂತೆಯಲ್ಲಿದ್ದೀಯಾ. ಏನಂತಹಾ ಯೋಚನೆ?" ನೇರವಾಗಿತ್ತು ಅವನ ಪ್ರಶ್ನೆ.

ಅವಳಿಗೂ ಅವನ ಬಳಿ ಎಲ್ಲವನ್ನೂ ಹೇಳಿಕೊಳ್ಳುವ ಮನಸ್ಸು. ಒಂದು ವೇಳೆ ಸತ್ಯ ತಿಳಿದು ನವ್ಯಾಳನ್ನು ಮನೆಯಿಂದ ಹೊರತಳ್ಳಿದರೆ ನಮ್ಮೊಂದಿಗೆ ಅವಳಿರಬಹುದೇ ಎಂದು ಕೇಳುವ ಆಸೆ ಕೂಡಾ… ಅವನು ನವ್ಯಾಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾನೆ ಎಂದು ಮನಸ್ಸು ಹೇಳಿದರೂ ಒಪ್ಪಲಾರದ ಚಡಪಡಿಕೆ. ಅಲ್ಲೂ ಅಡ್ಡಿಯಾಗುತ್ತಿದ್ದುದು ನವ್ಯಾಳ ಅತೀತವೇ. ಅವಳ ಬಗ್ಗೆ ತಿಳಿದು ಇವನೂ ಎಲ್ಲರಂತೆ ಅವಳನ್ನು ತಿರಸ್ಕರಿಸಿ ಆಡಿಕೊಂಡರೇ…? ಅದನ್ನು ತಡೆದುಕೊಳ್ಳುವ ಶಕ್ತಿಯಂತೂ ಅವಳಿಗಿಲ್ಲ. ಆ ಗೊಂದಲದಿಂದಲೇ ಅವಳು ಹೈರಾಣಾಗಿದ್ದಳು.

"ನವ್ಯಾ ಕೂಡಾ ಇತ್ತೀಚಿಗೆ ತುಂಬಾ ಮೌನಿಯಾಗಿದ್ದಾರೆ. ಏನೋ ಸಮಸ್ಯೆ ಇದೆ ಅನಿಸುತ್ತೆ. ನಿನ್ನ ಚಿಂತೆಗೂ ನವ್ಯಾಳ ಸಮಸ್ಯೆನೇ ಕಾರಣನಾ?" ಈ ಬಾರಿ ತನಗೆ ಅನಿಸಿದ್ದನ್ನು ಕೇಳಿದ.

ಅವನೇ ನವ್ಯಾಳ ವಿಷಯ ತೆಗೆದಾಗ ಹೌದೆಂದು ತಲೆಯಾಡಿಸಿದವಳು, "ಅಭಿರಾಮ್, ನಾನೇನೋ ಕೇಳ್ಬೇಕಿತ್ತು ನಿಮ್ಮ ಹತ್ರ. ಮೊನ್ನೆಯಿಂದ ಯೋಚಿಸ್ತಾ ಇದ್ದೀನಿ. ಆದ್ರೆ ಹೇಗೆ ಕೇಳೋದು ಅಂತ ಗೊತ್ತಾಗ್ತಿಲ್ಲ" ಎಂದಳು ಮೆಲ್ಲಗೆ.

ಅವನು ಮೆಲುನಗೆ ನಕ್ಕು ಅವಳ ಕೈ ಹಿಡಿದುಕೊಂಡು, "ನೋಡಮ್ಮಾ, ನೀನು ನನ್ಹತ್ರ ಯಾವ ವಿಷಯನಾದ್ರೂ ಯಾವುದೇ ಸಂಕೋಚ ಇಲ್ಲದೇ ಮಾತಾಡಬಹುದು. ಆದ್ರೆ ದಯವಿಟ್ಟು ಈ ತರ ಯಾವ್ದೊ ಯೋಚನೆಯಲ್ಲಿ, ಚಿಂತೆಯಲ್ಲಿ ಮುಳುಗಿ ಕಳ್ದು ಹೋಗಬೇಡ ಅಷ್ಟೇ. ಒಂದು ವಿಷಯ ನೆನಪಿಡು. ಐ ಟ್ರಸ್ಟ್ ಯು. ನಾನು ನಿನ್ನ ನನಗಿಂತಲೂ ಜಾಸ್ತಿ ನಂಬ್ತೀನಿ. ಈಗ ಹೇಳು ಏನು ವಿಷಯ……." ಅವನ ಮಾತಿನಲ್ಲಿ ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನೊಂದಿಗೆ ಇರುವೆ ಎನ್ನುವ ಭರವಸೆಯಿತ್ತು. ಮತ್ತೇನೂ ಯೋಚಿಸಲಿಲ್ಲ ಅವಳು.

"ಅಭಿ, ಏನೋ ಕಾರಣದಿಂದ ನವ್ಯಾ ಕಿಶೋರನ ಮನೆಯಿಂದ ಹೊರಬರೋ ಪರಿಸ್ಥಿತಿ ಬಂದ್ರೆ, ಯಾವುದೇ ಪ್ರಶ್ನೆಗಳಿಲ್ಲದೇ ಅವಳನ್ನು ನಮ್ಮ ಜೊತೆ ಇರಿಸಿಕೊಳ್ಳೋಕೆ ಒಪ್ತೀರಾ?"

ನವ್ಯಾಳ ಹಿನ್ನೆಲೆ ಕಿಶೋರ್ ಮತ್ತವನ ಮನೆಯವರಿಗೆ ತಿಳಿದಿಲ್ಲ ಎಂಬ ಸಂಶಯ ಸಮನ್ವಿತಾಳ ಬೇಡಿಕೆಯಿಂದ ಬಲವಾಗತೊಡಗಿತು ಅಭಿಯ ಮನದಲ್ಲಿ.

"ಖಂಡಿತಾ. ನಾನೂ ಒಪ್ತೀನಿ, ಮನೆಯಲ್ಲೂ ಸಂತೋಷದಿಂದ ಒಪ್ತಾರೆ. ಆದರೆ ಹಾಗಾಗೋದು ಬೇಡ ಅಂತ ನಾನು ಬಯಸ್ತೀನಿ ಸಮನ್ವಿತಾ....."

ಒಂದೂ ಪ್ರಶ್ನೆ ಕೇಳದೇ ಒಪ್ಪಿದವನ ಬಗ್ಗೆ ಅಕ್ಕರೆಯೆನಿಸಿತು. "ಥ್ಯಾಂಕ್ಯೂ ಸೋ ಮಚ್ ಅಭಿ. ನನ್ನದೂ ಅದೇ ಆಸೆಯೇ. ಆದ್ರೆ…. ಕೆಲವು ಸತ್ಯಗಳು, ಸಮಾಜದ ಕೆಲವು ಕಟ್ಟುಪಾಡುಗಳು...... ಬದುಕನ್ನು ಬಲಿ ತಗೊಳ್ಳುವಷ್ಟು ಕಠೋರವಾಗಿರುತ್ತವೆ" ಎಂದಳು ಖೇದದಲ್ಲಿ.

ತನಗೆ ಸತ್ಯ ತಿಳಿದಿದೆ ಎಂದು ಅವಳಿಗೆ ಹೇಳಲೋ ಬೇಡವೋ ಎಂಬ ಜಿಜ್ಞಾಸೆಗೆ ಬಿದ್ದಿದ್ದ ಅವನು. ಯಾಕೋ ಮುಚ್ಚಿಡುವುದು ಸರಿಕಾಣಲಿಲ್ಲ. ತನ್ನಿಂದ ಏನಾದರೂ ಸಹಾಯವಾಗಬಹುದೇನೋ ಎನಿಸಿತು.

"ಸಮನ್ವಿತಾ......"

ಅವನು ಕರೆದಾಗ ಏನು ಎಂಬಂತೆ ಅವನತ್ತ ನೋಡಿದಳು.

"ನಾನು ನಿನ್ನ ಹಲವು ವರ್ಷಗಳ ಮುಂಚೆ ನವ್ಯಾಳ ಜೊತೆ ನೋಡಿದ್ದೆ ಅಂತ ಅವತ್ತು ಆಸ್ಪತ್ರೆಯಲ್ಲಿ ಹೇಳಿದ್ದೆ ನೆನಪಿದೆಯಾ?" 

ಅವಳು ಹೌದೆಂದು ತಲೆಯಾಡಿಸಿದಳು. ಆದರೂ ಈಗೇಕೆ ಆ ಮಾತು ಎಂಬ ಪ್ರಶ್ನೆಯಿತ್ತು ಅವಳ ಕಣ್ಣುಗಳಲ್ಲಿ.

"ನಾನು ನಿಮ್ಮಿಬ್ಬರನ್ನು ಎಲ್ಲಿ ನೋಡಿದ್ದು ಅಂತ ಕೇಳಲೇ ಇಲ್ಲ ನೀನು?"

"ನೀವೇ ತಾನೆ ಅವತ್ತು ಮತ್ತೇನೂ ಪ್ರಶ್ನೆ ಕೇಳ್ಬೇಡಾ ಅಂದಿದ್ದು. ಆಸ್ಪತ್ರೆಯಲ್ಲಿ ನೋಡಿರ್ಬಹುದು. ಇನ್ನೆಲ್ಲಿ ನೋಡಿರ್ತೀರಾ? ಹೇಗೂ ಆಗಾಗ ಡೊನೇಷನ್ ಕೊಡೋಕೆ ಅಂತ ಅಲ್ಲಿಗೆ ಬರ್ತಾ ಇದ್ರಲ್ಲ" ಎಂದಳು.

"ನಾನು ನಿನ್ನ ಧನ್ವಂತರಿಯಲ್ಲಿ ನೀನು ಅಡ್ಮಿಟ್ ಆದಾಗ್ಲೇ ನೋಡಿದ್ದು. ನೀನಲ್ಲಿ ಕೆಲ್ಸ ಮಾಡ್ತಿದ್ದೆ ಅಂತ ಅವತ್ತು ನೀನು ಹೇಳ್ದಾಗ್ಲೇ ಗೊತ್ತಾಗಿದ್ದು….." ಎಂದಾಗ ಅವಳಿಗೆ ಅಚ್ಚರಿಯಾಯಿತು. ಜೊತೆಗೊಂದು ಸಣ್ಣ ಅನುಮಾನ.

"ಮತ್ತೆ ನೀವು ನನ್ನ ಎಲ್ಲಿ ನೋಡಿದ್ದು? ಅದೂ ನವ್ಯಾ ಜೊತೆಯಲ್ಲಿ…....?"

"ಪೋಲಿಸ್ ಸ್ಟೇಷನಲ್ಲಿ... ಸುಮಾರು ನಾಲ್ಕು ವರ್ಷಗಳ ಹಿಂದೆ. ನೀನು, ನವ್ಯಾ ಜೊತೆಗೆ ಇನ್ನೂ ನಾಲ್ವರು ಹುಡುಗಿಯರಿದ್ದರು…....." ನಿಧಾನವಾಗಿ ಅವನು ಹೇಳುತ್ತಿದ್ದರೇ ಸಮನ್ವಿತಾ ಅವನನ್ನೇ ಬೆರಗುಗಣ್ಣಿನಿಂದ ದಿಟ್ಟಿಸುತ್ತಾ ಶಿಲೆಯಿಂತೆ ಕುಳಿತುಬಿಟ್ಟಳು....

          ******ಮುಂದುವರೆಯುತ್ತದೆ******