ಭಾನುವಾರ, ಜೂನ್ 21, 2020

ಅಕ್ಷರಯಜ್ಞ ೧ & ೨

ಪುಸ್ತಕದ ಹೆಸರು : ಅಕ್ಷರಯಜ್ಞ ಭಾಗ 1 & 2    

ತೆಲುಗು ಮೂಲ : ಸೂರ್ಯದೇವರ ರಾಮ್ ಮೋಹನರಾವ್                                

ಅನುವಾದಕರು : ಶ್ರೀಮತಿ ಸರಿತಾ ಜ್ಞಾನಾನಂದ 

ಪ್ರಕಾಶಕರು : ಭಾಗ 1 - ಸ್ನೇಹಾ ಪಬ್ಲಿಷಿಂಗ್ ಹೌಸ್ (2012 ಮುದ್ರಿತ), ಭಾಗ 2 - ಬನಶಂಕರಿ ಪ್ರಿಂಟರ್ಸ್ (1992 ಮುದ್ರಿತ)                                     

ಪುಟಗಳು : 200 + 216                                  

ಬೆಲೆ : 120 + (ಈಗ ಎರಡನೇ ಭಾಗದ ಬೆಲೆ ಕೂಡಾ ಪ್ರಾಯಶಃ 120ರೂಪಾಯಿಗಳೇ ಇರಬೇಕು)

ಸೂರ್ಯದೇವರ ಅವರ ಈ ಕಾದಂಬರಿ ವಿಶ್ವ ಉದ್ಯಮ ವಲಯದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಬಿಸಿನೆಸ್ ಎಂಪೈರ್ ಒಂದು ಎದುರಿಸುವ ಅನಿರೀಕ್ಷಿತ ಸಮಸ್ಯೆ, ಅದರ ಪರಿಣಾಮ, ಸಮಸ್ಯೆಯ ಮೂಲ ಮುಂತಾದವುಗಳನ್ನು ಕೆದಕುತ್ತಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ಜಾಹೀರಾತು ಲೋಕದ ಒಳಸುಳಿಗಳು, ಕೌತುಕಗಳನ್ನು ತೆರೆದಿಡುತ್ತಾ ಸಾಗುತ್ತದೆ. ಎರಡು ಭಾಗಗಳಲ್ಲಿರುವ ಈ ಕಾದಂಬರಿಯ ಮೊದಲ ಭಾಗ ಉದ್ಯಮ ಜಗತ್ತು ಹಾಗೂ ಜಾಹೀರಾತು ವಲಯಕ್ಕಿರುವ ಅವಿನಾಭಾವ ಸಂಬಂಧ, ಇವೆರಡು ಒಂದಕ್ಕೊಂದು ಪೂರಕ/ಮಾರಕವಾಗಿ ಕಾರ್ಯನಿರ್ವಹಿಸುವ ರೀತಿ, ಬ್ರಾಂಡ್ ವಾರ್, ಜಾಹೀರಾತು ಲೋಕಕ್ಕೆ ಅತ್ಯಗತ್ಯವಾದ ಸೃಜನಾತ್ಮಕ ಚಿಂತನೆ ಮೊದಲಾದವುಗಳ ಬಗ್ಗೆ ಸೂಕ್ಷ್ಮವಾಗಿ ಹೇಳಿದರೆ ಎರಡನೇ ಭಾಗದಲ್ಲಿ ಕಥೆಗೆ ಪ್ರಾಧಾನ್ಯತೆ ದೊರಕಿದೆ. 

ವಾಣಿಜ್ಯ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರಭಾವಿ ಸಂಸ್ಥೆ ಜೆ.ಜೆ ಬಿಸ್ನೆಸ್ ಎಂಪೈರ್ ನ ಮಾಲೀಕ, ಇಂಡಸ್ಟ್ರಿಯಲ್ ಎಂಪರರ್ ಎನಿಸಿಕೊಂಡಿರುವ ಜೆ.ಜೆ ಸೋಲನ್ನು ಎಂದಿಗೂ ಸಹಿಸದ ವ್ಯಕ್ತಿ. ಗೆಲುವನ್ನೇ ಜೀವನ ಧ್ಯೇಯವನ್ನಾಗಿಸಿಕೊಂಡ ವೃದ್ಧ ಜೆ.ಜೆ ಗೆ ತನ್ನ ಮೊಮ್ಮಗಳಾದ ಮೌನಿಕಾಳನ್ನು ತನ್ನ ಸಾಮ್ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡಿ ತಾನು ವಿಶ್ರಾಂತಿ ಪಡೆಯಬೇಕೆಂಬ ಹಂಬಲ. ಹಾಗಾಗಿಯೇ ಮೌನಿಕಾಳನ್ನು ಜೆ.ಜೆ ಎಂಪೈರಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಿಸಿ ಅವಳಿಗೆ ವ್ಯವಹಾರದ ಒಳ ಹೊರಗುಗಳನ್ನು ಪರಿಚಯಿಸುವ ಕೆಲಸ ಆರಂಭಿಸುತ್ತಾನೆ. ಆದರೆ ಮೌನಿಕಾ ಇ.ಡಿ ಯಾಗಿ ನೇಮಕಗೊಂಡ ತಿಂಗಳೊಳಗೇ ಜೆ.ಜೆ ಕಂಪನಿ ಇಟಲಿಯ ಫಿಯೆಟ್ ಕಂಪನಿಯ ಕೊಲ್ಯಾಬರೇಷನ್ ನಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ವ್ಯಾನ್ ಗಳು ಮಾರಾಟವಾಗದೇ ಗೋಡೌನಿನಲ್ಲಿ ಉಳಿದು ಅನಿರೀಕ್ಷಿತವಾಗಿ ಸೋಲಿನ ರುಚಿ ಕಾಣಬೇಕಾಗುತ್ತದೆ. ಈ ಸೋಲು ತನ್ನ ಅಸ್ತಿತ್ವಕ್ಕೆ, ಕಾರ್ಯಕ್ಷಮತೆಗೆ, ಸಾಮರ್ಥ್ಯಕ್ಕೆ ಸವಾಲೆಸೆಯುವಂತೆ ಕಾಣುತ್ತದೆ ಮೌನಿಕಾಳಿಗೆ. ಹಾಗಾಗಿಯೇ ತಾತನ ಆರು ತಿಂಗಳ ಗಡುವನ್ನು ಒಪ್ಪಿಕೊಂಡು ಈ ಸೋಲಿನ ತಳಬುಡ ಶೋಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಆ ಮೂಲಕ ಸೋಲನ್ನು ಗೆಲುವಾಗಿ ಪರಿವರ್ತಿಸುವ ಪಣ ತೊಡುವಾಕೆ ಜೆ.ಜೆ ಎಂಪೈರಿಗೆ ಅತ್ಯಂತ ನಿಷ್ಠ ಸಲಹೆಗಾರ, ಜೆ.ಜೆಯ ಪರಮಾಪ್ತ ರಮಣಯ್ಯನ ಸಹಕಾರ ಪಡೆಯುತ್ತಾಳೆ.

ರಮಣಯ್ಯನ ಮುಖಾಂತರ ಮಾರ್ಕೆಟಿಂಗ್ ಡೈರೆಕ್ಟರ್ ಸಿಂಘಾನಿಯಾನ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ ಎಂಬುದನ್ನು ಅರಿಯುವ ಮೌನಿಕಾಳಿಗೆ ಮಾರ್ಕೆಟಿಂಗ್ ಸೆಕ್ಷನ್ನಿನಲ್ಲಿ ಮುಂಚೆ ಸೇಲ್ಸ್ ಮ್ಯಾನೇಜರ್ ಆಗಿದ್ದು ಸಿಂಘಾನಿಯಾನ ಕಿರುಕುಳದಿಂದ ರಾಜೀನಾಮೆ ಕೊಟ್ಟು ಹೋದ ಮಾಥುರ್ ಎಂಬ ಪ್ರತಿಭಾನ್ವಿತ ಯುವಕನ ಬಗ್ಗೆ ಮಾಹಿತಿ ದೊರಕುತ್ತದೆ. ತನ್ನ ಸಮಸ್ಯೆಯನ್ನು ಪರಿಹರಿಸಲು ಕೇವಲ ಮಾಥುರ್ ನಿಂದ ಮಾತ್ರ ಸಾಧ್ಯ ಎಂದು ನಿರ್ಧರಿಸಿ ಅವನನ್ನು ಹುಡುಕುವ ಕಾರ್ಯ ಆರಂಭಿಸುತ್ತಾಳೆ.

ರವಿ ಮಾಥುರ್ ಬುದ್ಧಿ, ಪ್ರತಿಭೆ, ಕ್ರಿಯಾತ್ಮಕ ಚಿಂತನೆಗಳೆಲ್ಲವನ್ನೂ ಭರಪೂರ್ಣವಾಗಿ ಹೊಂದಿದ್ದೂ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಭಾರದ್ವಾಜ್, ಅವನ ಮಗಳು ವೀನಸ್ ಹಾಗೂ ತನ್ನ ಅತ್ತಿಗೆ ಪ್ರಮೀಳಾಳ ಕಾರಣ ಹಲವು ತೊಂದರೆ ಅನುಭವಿಸಿ, ಜೆ.ಜೆ ಎಂಪೈರಿನ ಕೆಲಸವನ್ನೂ ಬಿಟ್ಟು ಕುಡಿತದ ದಾಸನಾಗಿ ಬದುಕುತ್ತಿರುವವನು. ಇಂತಹ ಮಾಥುರ್ ಕಠಿಣ ಸನ್ನಿವೇಶವೊಂದರಲ್ಲಿ ತನ್ನ ಜೀವನ ವಿಧಾನವನ್ನು ಬದಲಿಸಿಕೊಂಡು ತಾನೂ ಸಂಪಾದಿಸಬೇಕೆಂಬ ಜಿದ್ದಿಗೆ ಬೀಳುತ್ತಾನೆ. ಹಿಂದೊಮ್ಮೆ ತಾನು ಪ್ರಜ್ಞೆಯೇ ಇಲ್ಲದಂತೆ ಕುಡಿದು ಬಿದ್ದಿದ್ದಾಗ ತನ್ನನ್ನು ಉಪಚರಿಸಿದ ಗಂಗಾಧರರಾಯರ 'ಕಲ್ಪನಾ ಅಡ್ವರ್ಟೈಸರ್ಸ್' ಎಂಬ ಹಾಳುಬಿದ್ದ ಕಂಪನಿಯನ್ನು ಪುನಶ್ಚೇತನಗೊಳಿಸಿ ಆ ಮೂಲಕ ತನ್ನ ವೈರಿ ಭಾರದ್ವಾಜನಿಗೆ ಬುದ್ಧಿ ಕಲಿಸಲು ನಿರ್ಧರಿಸುತ್ತಾನೆ. ಗಂಗಾಧರರಾಯರ ಅಡ್ವರ್ಟೈಸಿಂಗ್ ಏಜೆನ್ಸಿ ಅಧೋಗತಿ ತಲುಪಿದ್ದೂ ಭಾರದ್ವಾಜನಿಂದಲೇ ಎಂಬುದು ತಿಳಿದ ನಂತರವಂತೂ ಅವನ ನಿರ್ಧಾರ ಇನ್ನೂ ಬಲವಾಗುತ್ತದೆ. ಗಂಗಾಧರರಾಯನ ಮಗ ಭಾರ್ಗವ ಮಾಥುರ್ ಗೆ ಒತ್ತಾಸೆಯಾಗಿ ನಿಲ್ಲುತ್ತಾನೆ. ಇವೆಲ್ಲಾ ವಿಚಾರಗಳೂ ಮೌನಿಕಾಳಿಗೆ ತಿಳಿಯುತ್ತದೆ. ಶ್ರೀಮಂತರ ಬಗ್ಗೆ ಅಪಾರ ತಿರಸ್ಕಾರ ಹೊಂದಿರುವ ಮಾಥುರ್ ತಾನು ಯಾರೆಂಬ ಸತ್ಯ ತಿಳಿದರೆ ದಾಸ್ತಾನಿರುವ ವ್ಯಾನುಗಳನ್ನು ಮಾರಲು ಸಹಾಯ ಮಾಡುವುದಿರಲಿ ತನ್ನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ ಎಂಬುದನ್ನು ಗ್ರಹಿಸುವ ಮೌನಿಕಾ ಮಧ್ಯಮ ವರ್ಗದ ನಿರುದ್ಯೋಗಿ ಯುವತಿಯ ಸೋಗಿನಲ್ಲಿ ಮಾಥುರ್ ಆಗಿನ್ನೂ ಆರಂಭಿಸಿದ್ದ 'ಮೆಡಿಸನ್ ಅವೆನ್ಯೂ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಮೂರನೇ ಪಾಲುದಾರಳಾಗಿ ಅವರೊಂದಿಗೆ ಸೇರಿಕೊಳ್ಳುತ್ತಾಳೆ.

ಮಾಥುರ್ ತನ್ನ ಬುದ್ಧಿಮತ್ತೆಯಿಂದ ಹಂತಹಂತವಾಗಿ ಪ್ರಚಾರರಂಗದಲ್ಲಿ ಮೇಲೇರುತ್ತಾ ಹೋಗುತ್ತಾನೆ. ಜೊತೆಗೇ ತನ್ನ ವೈರಿ ಭಾರದ್ವಾಜನಿಗೆ ಏಟು ನೀಡುವ ಯಾವ ಅವಕಾಶವನ್ನೂ ಬಿಡದೇ ಬಳಸಿಕೊಂಡು ನಷ್ಟದ ರುಚಿ ತೋರಿಸುತ್ತಾನೆ. ಇತ್ತ ಜಾಣ್ಮೆಯಲ್ಲಿ ಮಾಥುರನಿಂದ ತನ್ನ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ಮೌನಿಕಾ ರಮಣಯ್ಯನ ನೇತೃತ್ವದಲ್ಲಿ 'ಎಂ.ಎಂ ಅಡ್ವರ್ಟೈಸಿಂಗ್ ಏಜೆನ್ಸಿ' ಸ್ಥಾಪಿಸಿ ಮಾಥುರ್ ನೀಡಿದ ಸೃಜನಾತ್ಮಕ ಉಪಾಯಗಳ ಬಲದಿಂದ ಗೋಡೌನಿನಲ್ಲಿದ್ದ ಎಲ್ಲಾ ವ್ಯಾನುಗಳನ್ನೂ ಮಾರಾಟವಾಗುವಂತೆ ಮಾಡುತ್ತಾಳೆ. ಇದು ಜೆ.ಜೆ ಎಂಪೈರಿನ ಪ್ರಚಾರದ ಹೊಣೆಹೊತ್ತ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಗೆ ಪ್ರಬಲವಾದ ಆಘಾತ ನೀಡುತ್ತದೆ. ಇದರಿಂದಾಗಿ ಕೆಂಡಾಮಂಡಲವಾಗುವ ವೀನಸ್ ತಮ್ಮ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ಮುರಿದ ಬಗ್ಗೆ ಮೌನಿಕಾಳನ್ನು ಪ್ರಶ್ನಿಸುತ್ತಾಳೆ. ಜೆ.ಜೆ ಕಂಪನಿಯ ವ್ಯಾನುಗಳು ಮಾರಾಟವಾಗದೇ ಉಳಿಯಲು ಕ್ವೀನ್ಸ್ ಏಜೆನ್ಸಿಯ ಕಳಪೆ ಪ್ರಚಾರವೇ ಕಾರಣ ಎಂದು ನೇರವಾಗಿ ಆಪಾದಿಸುವ ಮೌನಿಕಾ ಕ್ವೀನ್ಸ್ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ರದ್ದುಪಡಿಸುತ್ತಾಳೆ. 


ಆರಂಭದಲ್ಲಿ ಮಾಥುರ್ ನ ಬುದ್ಧಿವಂತಿಕೆ, ದೂರದೃಷ್ಟಿ, ಎಂತಹ ಕ್ಲಿಷ್ಟ ಸಮಸ್ಯೆಯನ್ನಾದರೂ ಕ್ಷಣದೊಳಗೆ ಪರಿಹರಿಸಬಲ್ಲ ಅವನ ಕುಶಾಗ್ರಮತಿಯ ಬಗ್ಗೆ ಗೌರವತಾಳುವ ಮೌನಿಕಾ ಕ್ರಮೇಣ ಅವನಲ್ಲಿ ಅನುರಕ್ತಳಾಗುತ್ತಾಳೆ. ತನ್ನ ಅಸಲೀ ಅಸ್ತಿತ್ವವನ್ನು ಮರೆಮಾಚಿ ಆತನಿಗೆ ಮೋಸಮಾಡುತ್ತಿದ್ದೇನೆಂಬ ಭಾವ ತೀವ್ರವಾಗಿ ಆಕೆಯನ್ನು ಕಾಡತೊಡಗುತ್ತದೆ. ಇತ್ತ ಮಾಥುರ್ ಮನ ಕೂಡಾ ಮೌನಿಕಾಳೆಡೆಗಿದೆ ಎಂಬುದು ಭಾರ್ಗವನಿಗೆ ತಿಳಿದ ವಿಚಾರ. ಆದರೆ ತಾನು ಮಾಥುರ್ ನ ಹೆಂಡತಿಯೆಂದು ಆಗೀಗ ಪ್ರತ್ಯಕ್ಷಳಾಗುವ ವೀನಸ್, ಅವಳ ಮಾತಿಗೆ ವಿರೋಧ ಸೂಚಿಸದೇ ಸುಮ್ಮನಿರುವ ಮಾಥುರ್ ಅವನಿಗೆ ಯಕ್ಷಪ್ರಶ್ನೆ. 

ವೀನಸ್ ಹಾಗೂ ಮಾಥುರ್ ಗೆ ವಿವಾಹವಾಗಿತ್ತೇ, ಆಗಿದ್ದರೆ ಅವರಿಬ್ಬರೂ ಏಕೆ ದೂರವಾದರು, ಭಾರದ್ವಾಜನ ಮೇಲೆ ಮಾಥುರನಿಗೆ ಏಕಷ್ಟು ದ್ವೇಷ, ಭಾರದ್ವಾಜನಿಗೇಕೆ ಜೆ.ಜೆ ಎಂಪೈರ್ ಮೇಲೆ ಕಣ್ಣು ಎಂಬೆಲ್ಲಾ ಪ್ರಶ್ನೆಗಳ ಜೊತೆಗೆ ಮೌನಿಕಾ ಜೆ.ಜೆ ಎಂಪೈರಿನ ಉತ್ತರಾಧಿಕಾರಿಯಾಗುವಳೇ, ಅವಳ ಪ್ರೇಮ ಸಫಲವಾಗುವುದೇ ಎಂಬುದನ್ನು ಪುಸ್ತಕ ಓದಿಯೇ ತಿಳಿಯಬೇಕು.

ಮಾಥುರ್ ಎಂಬುದು ಕೇವಲ ಪಾತ್ರವಾಗದೇ ಲೇಖಕರ ಸೃಜನಾತ್ಮಕ ಚಿಂತನೆಗಳ ಮೂರ್ತರೂಪವೆನಿಸುತ್ತದೆ. ಅಷ್ಟು ಚೆನ್ನಾಗಿದೆ ಪಾತ್ರ ಪೋಷಣೆ. ಮೌನಿಕಾ ತನ್ನ ಏಕಾಗ್ರತೆ, ಸಾಧಿಸುವ ಛಲ ಹಾಗೂ ಜೀವನದ ಬಗೆಗಿನ ತನ್ನ ನಿಲುವಿನ ಕಾರಣ ಸದಾ ನೆನಪಿನಲ್ಲಿ ಉಳಿಯುತ್ತಾಳೆ. ಕಥೆಯ ಕೊನೆಯಲ್ಲಿ ಅಜ್ಜ ಹಾಗೂ ಮೊಮ್ಮಗಳ ನಡುವಿನ ಮಾತುಕತೆ ಬಹಳ ಅರ್ಥಪೂರ್ಣವಾಗಿದೆ. ವೀನಸ್ ಪಾತ್ರ ಮುಂದಾಲೋಚನೆಯಿಲ್ಲದ ಜಾಣ್ಮೆ, ಅಹಂಕಾರ, ನಿರ್ಲಕ್ಷ್ಯತನಕ್ಕೆ ಪ್ರತಿರೂಪವೆನಿಸುತ್ತದೆ. ರಮಣಯ್ಯನ ನಿಷ್ಠೆ, ಗಂಗಾಧರರಾಯರ ಸತ್ಯಸಂಧತೆ, ಭಾರ್ಗವನ ಸ್ನೇಹಪರತೆ, ಭಾರದ್ವಾಜನ ಕಪಟ, ಪ್ರಮೀಳಾ ರಾಣಿಯ ದಾಷ್ಟೀಕತೆ ಹೀಗೆ ಪ್ರತೀ ಪಾತ್ರವೂ ಅಚ್ಚಳಿಯದೆ ಮನದಲ್ಲಿ ಉಳಿಯುತ್ತದೆ. ಕಥೆಯ ಕೊನೆಯಲ್ಲಂತೂ ಊಹಾತೀತ ಅಚ್ಚರಿಗಳ ರಾಶಿಯೇ ಇದೆ.

ಈ ಕಾದಂಬರಿಯಲ್ಲಿ ಅಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಜಾಹೀರಾತಿನ ಪ್ರಾಮುಖ್ಯತೆಯನ್ನು ವಿವರಿಸಿರುವ ಪರಿ ನನಗೆ ಬಹಳ ಇಷ್ಟವಾಯಿತು. ಬಹುಜನ ಸ್ವಾಮ್ಯ ಹಾಗೂ ಕೆಲಜನ ಸ್ವಾಮ್ಯ ಮಾರುಕಟ್ಟೆಗಳೇ ಪ್ರಧಾನವಾಗಿರುವ ಇಂದಿನ ಉದ್ಯಮರಂಗದಲ್ಲಿ ಜಾಹೀರಾತು ಸೃಷ್ಟಿಸುವ ಸಂಚಲನವನ್ನು ಬಹಳ ಚೆನ್ನಾಗಿ ಪ್ರಸ್ತುತಪಡಿಸಿದ್ದಾರೆ ಲೇಖಕರು. ಅಡ್ವರ್ಟೈಸಿಂಗ್ ಪರಿಕಲ್ಪನೆಗಳು, ಬ್ರಾಂಡ್ ವಾರ್, ಮೋಡಿ ಮಾಡುವ ಪ್ರಚಾರದ ಸಾಲುಗಳು ಕಾದಂಬರಿಯುದ್ದಕ್ಕೂ ಕಾಣುತ್ತವೆ. ವಾಣಿಜ್ಯ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯವರಿಗೆ ಅಧ್ಯಯನದ ದೃಷ್ಟಿಯಿಂದ ಈ ಪುಸ್ತಕ ಬಹಳ ಖುಷಿ ಕೊಡಬಹುದು. ಈ ಬಗ್ಗೆ ತಿಳಿಯದವರೂ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ಓದಿ ಆನಂದಿಸಬಹುದಾದ ಒಂದು ಉತ್ತಮ ಕಾದಂಬರಿ ಅಕ್ಷರಯಜ್ಞ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ