ಮಂಗಳವಾರ, ಜೂನ್ 2, 2020

ಯಯಾತಿ

ಪುಸ್ತಕದ ಹೆಸರು     : ಯಯಾತಿ
ಮೂಲ ಲೇಖಕರು  : ವಿ. ಎಸ್. ಖಾಂಡೇಕರ್
ಅನುವಾದ            : ವಿ. ಎಂ. ಇನಾಂದಾರ್
ಪ್ರಕಾಶಕರು           : ಅಂಕಿತ ಪುಸ್ತಕ
ಪುಟಗಳು: ೪೪೦           ಬೆಲೆ : ೨೯೫ ರೂ
ಮೊದಲ ಮುದ್ರಣ       ೧೯೭೭ 
ಒಂಬತ್ತನೇ ಮುದ್ರಣ   ೨೦೧೫

ನಾನು ಬಹಳ ಸಮಯದಿಂದ ಓದಬೇಕೆಂದುಕೊಂಡ ಕಾದಂಬರಿ. ಪೌರಾಣಿಕ ಕಥನಗಳನ್ನು ಪ್ರಸ್ತುತಪಡಿಸುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಕಥನಗಳಲ್ಲಿ ಸಾಮಾನ್ಯವಾಗಿ ಎರಡು ರೀತಿಯ ತೊಡಕುಗಳು. ಎಂದೋ ಯಾವುದೋ ಕಾಲಘಟ್ಟದಲ್ಲಿ ನಡೆದಿರಬಹುದಾದ ಕಥನಗಳ ಸಮಕಾಲೀನ ಔಚಿತ್ಯದ ಪ್ರಶ್ನೆ ಒಂದೆಡೆಯಾದರೆ, ಮೂಲ ಕಥನದ ಸಾರಕ್ಕೆ ಚ್ಯುತಿ ಬಾರದಂತೆ ಬದಲಾದ ಮೌಲ್ಯಗಳೊಂದಿಗೆ ಕಥನವನ್ನು ಪ್ರಸ್ತುತಪಡಿಸುವುದು ಇನ್ನೊಂದು ಸವಾಲು. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿ ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ವಸ್ತುವಿಷಯವನ್ನು ನಿರೂಪಿಸುವ ಕಲೆ ಎಲ್ಲರಿಗೂ ಕರಗತವಾಗಿರುವುದಿಲ್ಲ. ಈ ವಿಚಾರದಲ್ಲಿ ವಿ.ಎಸ್ ಖಾಂಡೇಕರ್ ಅವರ ಯಯಾತಿ ಒಂದು ಪರಿಪೂರ್ಣ ಕೃತಿ. ವೈಯಕ್ತಿಕವಾಗಿ ಶಿವಾಜಿ ಸಾವಂತ್ ಅವರ 'ಮೃತ್ಯುಂಜಯ' ಕೃತಿಯ ನಂತರ ನನ್ನನ್ನು ಅತೀವವಾಗಿ ಕಾಡಿದ ಎರಡನೇಯ ಪೌರಾಣಿಕ ಕಾದಂಬರಿ ಇದು.

ಲೇಖಕರೇ ಸ್ಪಷ್ಟಪಡಿಸಿರುವಂತೆ ಯಯಾತಿ ಒಂದು ಶುದ್ಧ ಪೌರಾಣಿಕ ಕಾದಂಬರಿಯಲ್ಲ. ಮಹಾಭಾರತದ ಒಂದು ಉಪಖ್ಯಾನವನ್ನು ಆಧಾರವಾಗಿಸಿ ಬರೆದ ಸ್ವತಂತ್ರ ಕಾದಂಬರಿ. ಖಾಂಡೇಕರ್ ಅವರ ಯಯಾತಿಯ ಕಥನ ಮೂಲ ಭಾರತದ ಯಯಾತಿಯ ಉಪಖ್ಯಾನಕ್ಕಿಂತ ಬಹಳ ವಿಚಾರಗಳಲ್ಲಿ ಭಿನ್ನವಾಗಿದೆ ಮತ್ತು ಆ ಭಿನ್ನತೆಗಳೇ ಖಾಂಡೇಕರ್ ಅವರ ಯಯಾತಿ ಗೆ ಹೊಸ ಆಯಾಮವನ್ನು ನೀಡಿವೆ ಎಂದರೆ ತಪ್ಪಾಗಲಾರದು.

ಇಡೀ ಕಥೆಯ ಕೇಂದ್ರಬಿಂದು ಹಸ್ತಿನಾಪುರದ ಅರಸ ಯಯಾತಿಯಾದರೂ ಕಥೆ ಮುಂದುವರಿದಂತೆ ದೇವಯಾನಿ, ಕಚ ಹಾಗೂ ಶರ್ಮಿಷ್ಠೆಯ ಪಾತ್ರಗಳು ಯಯಾತಿಗಿಂತಲೂ ಹೆಚ್ಚು ಕಾಡುತ್ತವೆ. ಭೌತಿಕ ವಾಂಛೆಗಳೇ ತುಂಬಿದ ವಿಷಯೋಪಾಸನೆ ಎಂಬ ಕ್ಷಣಿಕ ಸುಖದ ಅಮಲಿನ ಬೆನ್ನು ಬೀಳುವ ಮನುಜ ಹೇಗೆ ಆತ್ಮವಿಹೀನನಾಗಿ ನೈತಿಕ ಅಧಃಪತನದತ್ತ ಜಾರುತ್ತಾನೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸುತ್ತದೆ ಈ ಕಾದಂಬರಿ. ಮೇಲಿನ ನಾಲ್ಕು ಪಾತ್ರಗಳೊಂದಿಗೆ ಯತಿ, ರಾಜಮಾತೆ, ಶುಕ್ರಾಚಾರ್ಯರು, ಅಲಕೆ, ಮುಕುಲಿಕೆ, ಮಾಧವ, ತಾರಿಕೆ, ಮಾಧವಿ, ಮಂದರ, ಪುರು, ಯದು ಮುಂತಾದ ಪಾತ್ರಗಳ ಮೂಲಕ ವಿವಿಧ ವ್ಯಕ್ತಿತ್ವಗಳನ್ನು, ಮನುಜನ ಮನದ ಹಲವು ಭಾವಗಳನ್ನು ಅನಾವರಣಗೊಳಿಸುತ್ತಾ ಸಾಗುವ ಕಥೆ ಬದುಕಿನ ಅಪೂರ್ಣತೆಯನ್ನು, ದೇಹ ಮತ್ತು ಆತ್ಮಗಳ ಸಂಬಂಧವನ್ನು ವಿಶ್ಲೇಷಿಸುತ್ತದೆ.

ಇಲ್ಲಿ ಯಯಾತಿ ಇಂದ್ರಿಯ ನಿಗ್ರಹವಿಲ್ಲದ ಶುದ್ಧ ಲಂಪಟ ಪಲಾಯನವಾದಿ ವ್ಯಕ್ತಿತ್ವದ ಪ್ರತೀಕವಾದರೆ, ದೇವಯಾನಿ ಅಹಂಕಾರ, ದ್ವೇಷ, ಮಾತ್ಸರ್ಯ ಹಾಗೂ ಹಠ ಸ್ವಭಾವದ ಪ್ರತಿರೂಪ. ಇಬ್ಬರೂ ತಮ್ಮ ತಪ್ಪಿಗೆ ಪರಸ್ಪರರನ್ನು ಹೊಣೆಯಾಗಿಸಿಕೊಳ್ಳುತ್ತಾ ಸದಾ ಅಶಾಂತಿ, ಅತೃಪ್ತಿಯಿಂದ ಬೇಯುತ್ತಾರೆ. ಇಲ್ಲಿನ ಶರ್ಮಿಷ್ಠೆ ಅಸೀಮ, ನಿರೀಕ್ಷೆಗಳಿಲ್ಲದ ಒಲವನ್ನು ಉಸಿರಾಗಿಸಿಕೊಂಡಾಕೆ. ತಾಳ್ಮೆ, ತ್ಯಾಗ, ಸಹನೆಯ ಪ್ರತಿರೂಪ. ದೇವಯಾನಿ ಕಚನಂತಹ ಮೇರು ವ್ಯಕ್ತಿತ್ವದ  ಋತ್ವಿಜನ ಸಾನಿಧ್ಯದಲ್ಲಿದ್ದು ಅವನ ಅದಮ್ಯ ಪ್ರೀತಿಗೆ ಪಾತ್ರಳಾದರೂ ಅಸೂಯೆ, ದ್ವೇಷ, ಅಹಂಕಾರ ಮೊದಲಾದ ತಾಮಸ ಗುಣಗಳು ಅವಳಿಂದ ಬೇರ್ಪಡುವುದೇ ಇಲ್ಲ. ಅದೇ ಕಚನ ವಿಚಾರಧಾರೆಗಳಿಂದ ಪ್ರೇರಿತಳಾದ ದಾನವ ರಾಜಕನ್ಯೆ ಶರ್ಮಿಷ್ಠೆ ತನ್ನ ಕುಲ ಬಾಂಧವರ ಒಳಿತಿಗಾಗಿ ದೇವಯಾನಿಯ ದಾಸಿಯಾಗಲು ಹಿಂತೆಗೆಯುವುದಿಲ್ಲ. ಕಚನೊಂದಿಗಿನ ಕೆಲವೇ ಭೇಟಿಗಳಲ್ಲಿ ಅವನ ಆತ್ಮವಿಕಾಸದ ಹಾದಿಯ ಚಿಂತನೆಗಳನ್ನು ಗುರುತಿಸಿ ಅದರಿಂದ ಪ್ರಭಾವಿಳಾಗುತ್ತಾಳೆ ಶರ್ಮಿಷ್ಠೆ.
ಈ ಇಡೀ ಕಥೆಯ ಆತ್ಮದಂತೆ ಶೋಭಿಸುವುದು ಕಚದೇವನ ಪಾತ್ರಪೋಷಣೆ. ಖಾಂಡೇಕರ್ ಅವರು ಕಚನ ಪಾತ್ರವನ್ನು ಮೂಲದಲ್ಲಿ ಇರುವುದಕ್ಕಿಂತಲೂ ಹೆಚ್ಚು ವಿಸ್ತರಿಸಿದ್ದಾರೆ. ಹಾಗೂ ಆ ಪಾತ್ರದ ಮೂಲಕ ಸಮಕಾಲೀನ ಸಮಾಜವನ್ನು ಚಿಂತನೆಗೆ ಹಚ್ಚುವಂತಹ ವಿಚಾರಧಾರೆಗಳನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿಯೇ ಈ ಪೌರಾಣಿಕ ಕಥೆಯಲ್ಲಿ ನಾವು ಒಂದು ಸಮಕಾಲೀನ ಸಾಮಾಜಿಕ ಆಯಾಮವನ್ನೂ ಗುರುತಿಸಬಹುದಾಗಿದೆ. ಯಯಾತಿಯ ವಿಕ್ಷಿಪ್ತ ಮನಸ್ಥಿತಿಯ ಮುಖಾಂತರ ನಮ್ಮ ಸಮಾಜದ ಹುಳುಕುಗಳಿಗೆ ಕನ್ನಡಿ ಹಿಡಿದು ವಾಸ್ತವ ದರ್ಶನ ಮಾಡಿಸಿದಂತೆ ಕಚನ ಮಾತುಗಳ ಮುಖಾಂತರ ಆ ಹುಳುಕುಗಳನ್ನು ಸರಿಪಡಿಸಿ ಆತ್ಮಾನಂದವನ್ನು ಹೊಂದಬಲ್ಲ ಪಾರಮಾರ್ಥಿಕ ಹಾದಿಯ ಬಗ್ಗೆಯೂ ವಿವರಿಸುತ್ತದೆ ಈ ಕಥನ. ಅದೇ ಈ ಕೃತಿಯ ಹೆಗ್ಗಳಿಕೆ. ಕಾದಂಬರಿಯ ಕೊನೆಯಲ್ಲಿ ಲೇಖಕರು ಬರೆದಿರುವ ಹಿನ್ನೆಲೆಯನ್ನು (ಪಾರ್ಶ್ವಭೂಮಿ) ಮೊದಲು ಓದಿ ನಂತರ ಕಥೆಯೊಳಕ್ಕೆ ಇಳಿದರೆ ಇನ್ನಷ್ಟು ಸ್ಪಷ್ಟವಾಗಿ ಯಯಾತಿ, ಕಚ, ಶರ್ಮಿಷ್ಠೆ ಹಾಗೂ ದೇವಯಾನಿಯರು ಅರ್ಥವಾಗುತ್ತಾರೇನೋ ಎಂಬುದು ನನ್ನ ಅನಿಸಿಕೆ. 

ಈ ಕಾದಂಬರಿ ಓದಿದ ನಂತರ ನನ್ನನ್ನು ಬಹುವಾಗಿ ಕಾಡಿದ ಒಂದು ಪ್ರಶ್ನೆ 'ನಹುಷ ಮಹಾರಾಜನ ಮಕ್ಕಳು ಎಂದಿಗೂ ಸುಖವಾಗಿರಲಾರರು' ಎಂಬ ಶಾಪವಿಲ್ಲದೇ ಹೋಗಿದ್ದರೆ ಅಥವಾ ಆ ಶಾಪದ ಬಗ್ಗೆ ಯಯಾತಿಗೆ ಎಂದೂ ತಿಳಿಯದೇ ಹೋಗಿದ್ದರೆ ಆತ ಸಂತೃಪ್ತನಾಗಿರುತ್ತಿದ್ದನೇ ಎಂಬುದು. ನನಗನ್ನಿಸಿದ್ದು ಪ್ರಾಯಶಃ ಆಗಲೂ ಆತ ಅತೃಪ್ತನಾಗಿಯೇ ಉಳಿಯುತ್ತಿದ್ದ. ಕಾರಣ ಆತನ ಅತೃಪ್ತಿಯ ಮೂಲ ಅವನ ಕಡಿವಾಣವಿಲ್ಲದ ವಿಷಯಾಸಕ್ತಿಯೇ ಹೊರತು ಬೇರೇನೂ ಅಲ್ಲ. ಇಲ್ಲವಾದಲ್ಲಿ ತನ್ನ ಸ್ವಂತ ಮಗನ ಯೌವ್ವನದೊಂದಿಗೆ ತನ್ನ ವಾರ್ಧಕ್ಯವನ್ನು ಬದಲಾಯಿಸಿ ಇಂದ್ರಿಯ ಭೋಗವನ್ನು ಅನುಭವಿಸುವ ಯೋಚನೆ ಅವನ ಕನಸಿನಲ್ಲೂ ಕೂಡಾ ಸುಳಿಯುತ್ತಿರಲಿಲ್ಲ. ತಾನೇ ಆಡಿಸಿದ ತಾರಕೆ ಹಾಗೂ ತನ್ನ ಆತ್ಮೀಯ ಗೆಳೆಯನ ವಧು ಮಾಧವಿಯನ್ನೂ ಉಪಭೋಗಿಸುವಷ್ಟು ಮದಿರೆಯೊಳಗೆ ಮೈಮರೆಯುತ್ತಿರಲಿಲ್ಲ ಆತ.
ಒಟ್ಟಿನಲ್ಲಿ ಕ್ಷಣಿಕ ಸುಖ ನೀಡುವ ಭೌತಿಕ ವಿಷಯ ಲೋಲುಪತೆಗೂ ಅನಂತ ಸಂತೃಪ್ತಿ ಪಾಲಿಸುವ ಪಾರಮಾರ್ಥಿಕ ಆತ್ಮಾನಂದಕ್ಕೂ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರ್ಪಡಿಸುವ ಯಯಾತಿ ಆತ್ಮವಿಕಸನದ ದೃಷ್ಟಿಯಿಂದ ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ