ವೈಚಾರಿಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವೈಚಾರಿಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮೇ 26, 2020

ಇವರನ್ನೇನ್ರೀ ಮಾಡೋಣ.....??

ನನಗೆ ಮಗಳು ಹುಟ್ಟಿದಾಗಲೇ ನಿರ್ಧರಿಸಿಬಿಟ್ಟಿದ್ದೆ. ಅವಳು ನನ್ನ ಅಮ್ಮ, ಆಯಿ, ಮಾ, ಮಾಯಿ, ಅಪ್ಪೆ, ಅಬ್ಬೆ, ಅವ್ವ ಏನಾರಾ ಅನ್ಲೀ ಇಲ್ಲಾ ಹೆಸರು ಹಿಡಿದು "ಲೇ ನೀತಾ ಬಾರೇ ಇಲ್ಲಿ" ಅಂತ ಕರೆದ್ರೂ ತೊಂದ್ರೆ ಇಲ್ಲ ಆದ್ರೆ ಅಪ್ಪಿ ತಪ್ಪಿನೂ ಅವಳ ಬಾಯಲ್ಲಿ "ಈಜಿಪ್ಟಿಯನ್ ಮಮ್ಮಿ" ಆಗ್ಬಾರ್ದು ಅಂತ ಪ್ರತಿಜ್ಞೆ ಮಾಡಿದ್ದೆ.

ಹುಟ್ಟಿದಾಗಿನಿಂದ ಇದೇ ಟ್ರೈನಿಂಗು. ಬಾಣಂತನದಲ್ಲಿ ಯಾವೆಲ್ಲ ಐಟಂಗಳು ನಿಷಿದ್ಧವೋ ಆ ಲಿಸ್ಟಿಗೆ ಮಮ್ಮಿ ಅನ್ನೋದ್ನೂ ಸೇರಿಸಿ ಮೂಟೆ ಕಟ್ಟಿ ಅಟ್ಟಕ್ಕೆ ಎಸೆದಾಯ್ತು. ಇನ್ನು ಮನೆಗೆ ಮಗು ನೋಡೋಕೆ ಬರೋ ನೆಂಟ್ರು "ಎಲ್ಲಿ ಮಮ್ಮಿ ಅನ್ನು" ಅಂದಾಗೆಲ್ಲಾ ಅವ್ರನ್ನ ಬಡ್ದು ಬಾಯಿಗ್ ಹಾಕ್ಕೊಂಬಿಡ್ಲಾ ಅನ್ಸೋದು. ನೋಡೋಷ್ಟು ನೋಡ್ದೇ... ಆಮೇಲೆ ನೈಸಾಗಿ ಅವರಿಗೇ ಹೇಳೋಕೆ ಶುರು ಮಾಡ್ದೆ.. "ನೋಡಿ ಅಮ್ಮಾ ಅಂತ ಹೇಳ್ಕೊಡಿ.." ಅಂತ. ಅವಳು ತೊದಲುತ್ತಾ ನುಡಿ ಕಲಿತು "ಅಮ್ಮಾ" ಅನ್ನೋಕೆ ಶುರು ಮಾಡ್ದಾಗ ಯುದ್ಧ ಗೆದ್ದಷ್ಟು ಖುಷಿ.

ಇಷ್ಟೆಲ್ಲಾ ಸಾಹಸ ಮಾಡಿ ಜತನದಿಂದ ಮಗಳನ್ನು "ಮಮ್ಮಿ"ಯಿಂದ ಕಾಪಾಡಿಕೊಂಡಿದ್ದೆ. "ಮಮ್ಮಿ" ವೈರಸ್ ಅಟ್ಯಾಕ್ ಆಗ್ದೇ ಇನ್ನೇನು ಎರಡು ವರ್ಷ ತುಂಬುತ್ತೆ  ಅಂತ ಖುಷಿಯಲ್ಲಿರೋವಾಗ್ಲೇ ನಿನ್ನೆ ಮಟಮಟ ಮಧ್ಯಾಹ್ನ "ಮsssಮ್ಮೀsss" ಅಂತ ರಾಗವಾಗಿ ಹೇಳ್ಕೊಂಡು ಓಡ್ಬಂದಿದ್ದು ನೋಡಿ ನನಗೆ ಹೇಗಾಗ್ಬೇಡ ನೀವೇ ಹೇಳಿ? 

ನನ್ನ ಪ್ರತಿಜ್ಞೆ ನುಚ್ಚು ನೂರಾಗಿ, ನಂಗೆ ತಾರಾಮಾರ ಸಿಟ್ಟು ಬಂದು ಈ ವೈರಸ್ ಎಲ್ಲಿಂದ ಅಟ್ಯಾಕ್ ಆಯ್ತು ಅಂತ ಕಂಡ್ಹಿಡಿಲೇ ಬೇಕು ಅಂತ ಹೊಸ ಪ್ರತಿಜ್ಞೆ ಮಾಡಿದೆ. ನಮ್ಮ ವೈಭವನಿಗಿಂತ ಫಾಸ್ಟ್ ಎಂಡ್ ಪರ್ಫೆಕ್ಟ್ ಆಗಿ ಪತ್ತೇದಾರಿಕೆ ಮಾಡಿ ಹತ್ತೇ ಹತ್ತು ನಿಮಿಷದಲ್ಲಿ ಕಂಡ್ಹಿಡಿದೂ ಬಿಟ್ಟೆ.

ಆ ಸಿಟ್ಟನ್ನು ಹೊರಗೆ ಹಾಕ್ಲಿಕಂತಲೇ ಪೆನ್ನು ಹಿಡಿದು... ಸಾರಿ ಮೊಬೈಲ್ ಹಿಡಿದು ಸ್ಕ್ರೀನ್ ಒಟ್ಟೆಯಾಗಿ ಮೊಬೈಲ್ ಗುಡ್ಸಿ ಗುಂಡಾಂತ್ರ ಆದ್ರೂ ತೊಂದ್ರೆ ಇಲ್ಲ ಅಂತ ಕೀಪ್ಯಾಡ್ ಕುಟ್ಟಿ ಈ ಲೇಖನ ಬರೀತಿದ್ದೀನಿ ಆಯ್ತಾ.

ಇದಿಷ್ಟು ಮುನ್ನುಡಿ. ಈಗ ವಿಷ್ಯಕ್ಕೆ ಬರ್ತೀನಿ.

ನನ್ನ ಮಗಳಿಗೆ ಈ ಮಮ್ಮಿ ವೈರಸ್ ಹತ್ತಿಸಿದೋಳು ಯಾರು ಗೊತ್ತಾ.... 

ಅವಳೇ... ಅವಳೇ..

"ಸಮಯವು ನಿಮ್ಮತ್ತ ಮಂದಹಾಸ ಬೀರುವಂತಾಗಿದೆ...ನಾನು ನಿಮ್ಮವಳೇ ವಿಜೆ ಅಮೈರಾ... 

ಸರಿ ಹೇಳಿದ್ನಾ ಮಮ್ಮಿ?....

ಮಮ್ಮಿ….???

ಮಮ್ಮಿ….???

ಮಮ್ಮಿ…..!!????"

ಈ ಸಂತೂರ್ ಮಮ್ಮಿನೇ ನನ್ನ ಮಗಳಿಗೆ ಮಮ್ಮಿ ವೈರಸ್ ಹತ್ಸಿದ್ದು ನೋಡಿ….

ಅವಳ ಮುಸುಂಟಿಗೆ ನಾಲ್ಕು ಬಡ್ದು ಹಾಕಿರೋ ಮೇಕಪ್ ಅಷ್ಟೂ ಉದ್ರಿಸಿಬಿಡೋಣ ಅನ್ಸಿತ್ತು. ಆದ್ರೆ 20 ರುಪಾಯಿ ಸೋಪಿಗೋಸ್ಕರ ಸಾವ್ರಾರು ರೂಪಾಯಿಯ ಟಿವಿಯನ್ನು ಯಾಕೆ ಒಡ್ಯೋದು ಅಂತ ಸೈಲೆಂಟಾದೆ...

ಮಾಯಾ ಪೆಟ್ಟಿಗೆಯೆಂಬ ಮಾಯಾಂಗನೆಯ ಕೈಯಲ್ಲಿರುವ ಮಂತ್ರದಂಡವೇ ಈ ಜಾಹೀರಾತು... ಇದು ಮಾಡೋ ಅವಾಂತರ ಒಂದಾ ಎರಡಾ? ಈ ಸೋಪಿನ ವಿಷ್ಯನೇ ತಗೋಳಿ... 

'ಮಗಳಿಗಿಂತಲೂ ಚಿಕ್ಕಪಾಪು ಸಂತೂರ್ ಮಮ್ಮಿ

ಗುಲಾಬಿಗಿಂತಲೂ ಒನಪು ಲಕ್ಸ್ ಮಮ್ಮಿ

ಹಾಲಿಗಿಂತ ಬಿಳುಪು ಡವ್ ಮಮ್ಮಿ

ಅಮೃತಶಿಲೆಗಿಂತ ನುಣುಪು ರೆಕ್ಸೋನಾ ಮಮ್ಮಿ

ಎಲ್ಲರಿಗಿಂತಲೂ ಶಾನೇ ಟಾಪು ಪತಂಜಲಿ ಮಮ್ಮಿ...'

ನಮ್ಮನೆ ಹಳೆಯಮ್ಮ(ನನ್ನಜ್ಜಿ)  90+ ವಯಸ್ಸಿನ ಚಿರಯುವತಿ. ಇವ್ರು ಡೈಲೀ ಲಕ್ಸ್ ಮಾರ್ಜಕದಲ್ಲೇ ಮಜ್ಜನ ಮಾಡೋದು. ಅದು ಬಿಟ್ಟು ಬೇರೆ ಬ್ರಾಂಡ್ ಆಗೋಲ್ಲ ನಮ್ಮಜ್ಜಿಗೆ. ಇಂತಹ ನೀಯತ್ತಿರೋ ನಮ್ಮಜ್ಜಿನ ಲಕ್ಸ್ ಮಾರ್ಜಕಕ್ಕೆ ಬ್ರಾಂಡ್ ಮಾಡೆಲ್ ಮಾಡ್ಬಹುದಾ ಅಂತ….? ವಯಸ್ಸಾಗಿದೇ ಅನ್ನೋದೊಂದು ಬಿಟ್ರೆ ನಮ್ಮಜ್ಜಿನೂ ಕರೀನಾ ಕಪೂರೇ…..

ಇನ್ನು ಈ ಮುಸುಡನ್ನು ಗೋಡೆ ಸುಣ್ಣದಷ್ಟು ಬೆಳ್ಳಗಾಗಿಸುವ ಫೇಸ್ ಕ್ರೀಮುಗಳದ್ದೋ ಇನ್ನೊಂದು ವ್ಯಥೆ.

ಇವರ ಪ್ರೋಡಕ್ಟುಗಳ ಮೇಲೆ ಇವರಿಗೇ ನಂಬಿಕೆ ಇರುವುದಿಲ್ಲ. ಕೇಸರಿ, ಚಂದನ, ಲೋಳೆಸರ,ಪಪ್ಪಾಯಿ, ಸ್ಟ್ರಾಬೆರಿ, ಕಲ್ಲಂಗಡಿ, ನಿಂಬೆ, ಜೇನು, ಮಣ್ಣು ಮಸಿ ಅಂತ ದಿನಕ್ಕೊಂದು ಐಟಂ ಹಾಕಿ ರುಬ್ಬಿ ನಮ್ಮ ಮುಖಾರವಿಂದವನ್ನು ಬ್ಲೀಚಿಂಗ್ ಪೌಡರ್ ಹಾಕಿ ತಿಕ್ಕಿರೋ ಬಚ್ಚಲಿನ ತರ ಪಳ್ಗುಟ್ಟಿಸ್ತೀವಿ ಅಂತಾರೇ.

ಈ anti wrinkle ಕ್ರೀಮ್ ಹೇಗೆ ಕೆಲ್ಸ ಮಾಡುತ್ತೆ ಅನ್ನೋ ಜಿದ್ದಿಗೆ ಬಿದ್ದಿದ್ದ ನನ್ನ ಪ್ರಯೋಗಮುಖಿ ತಮ್ಮನ ಕಣ್ಣಿಗೆ ಬಿದ್ದದ್ದು ನಮ್ಮಜ್ಜಿ.. ಅಜ್ಜಿ ಮುಖದ ರಿಂಕಲ್ ಗಳನ್ನೆಲ್ಲಾ ತೆಗೆದು ಅವರ ಮುಖನಾ ರಿಂಗಾ ರಿಂಗಾ ರೋಸಸ್ ತರ ಮಾಡ್ಬೇಕು ಅಂತ ಒಂದು ತಿಂಗ್ಳು ಕ್ರೀಮ್ ಬಳ್ದಿದ್ದೇ ಬಳ್ದಿದ್ದು...ಬುಲ್ ಡಾಗ್ ತರ ಇದ್ದ ಅಜ್ಜಿ ಮುಖ ಲ್ಯಾಬ್ರಡಾರ್  ತರ ಆಗ್ಲೇ ಇಲ್ಲ ನೋಡಿ....

ಈಗ ಅದೇನೋ ಹೊಸದಾಗಿ HD ಗ್ಲೋ ಕ್ರೀಮ್ ಬೇರೇ ಬಂದಿದ್ಯಲ್ಲಾ... ಅದ್ನ ಹಚ್ಕೊಂಡವರು ಬರೀ ಕಣ್ಣಿಗೆ ಕಾಣ್ತಾರಾ ಇಲ್ಲ HD ಗ್ಲಾಸ್  ಹಾಕ್ಕೊಂಡ್ರೆ ಮಾತ್ರಾ ಕಾಣ್ತಾರಾ ಅನ್ನೋದು ನನ್ನ ಹೈ ಡೆಫಿನಿಷನ್ ಡೌಟ್..

ಇವರೆಲ್ಲರಿಗಿಂತ ಭಯಂಕರ ವಿಚಿತ್ರ ನಮ್ಮ ದಾಳಿಂಬೆ ಹಲ್ ಸೆಟ್ಟುಗಳ ರಕ್ಷಣೆಕಾರರದ್ದು. 

ನಿಮ್ಮ ಟೂತ್ಪೇಸ್ಟಿನಲ್ಲಿ......

ಉಪ್ಪು ಇದೆಯೇ?

ಬೇವು ಇದೆಯೇ?

ಲವಂಗ ಇದೆಯೇ?

ಕರ್ಪೂರ ಇದೆಯೇ?....

ಇನ್ನು ಸ್ವಲ್ಪ ದಿನ ಹೋದ್ರೆ ಈ ಪುಣ್ಯಾತ್ಮರು 'ನಿಮ್ಮ ಟೂತ್ಪೇಸ್ಟಿನಲ್ಲಿ ಹಲ್ಲು ಇದೆಯೇ?' ಅಂತಲೇ ಕೇಳ್ತಾರೆ ನೋಡ್ತಿರಿ. ಈ ದಂತಮಂಜಕದ ವರಸೆನೇ ನಂಗೆ ಬೇಜಾರು.

ನಾವು ಭಾರತೀಯರು ಪುರಾತನ ಕಾಲದಿಂದಲೂ ಮರ್ಯಾದೆಯಿಂದ ಒಲೆ ಕೆಂಡದ ಚೂರಲ್ಲಿ ಜೀಂಕ್ ಜೀಂಕ್ ಅಂತ ಹಲ್ ತಿಕ್ಕಿ ಬಿಸಾಕ್ತಿದ್ವಿ. ಈ ಯುವನ ದೇಶದ ಬಿಳಿತಲೆ ಕೆಂಪು ಮುಸುಡಿನ ಮಹಾನುಭಾವರು ಬಂದು ಈ ತರ ಮಾಡ್ಬಾರ್ದು, ಇದು ಅನ್ ಹೈಜೀನಿಕ್ ಕಣ್ರೋ ಅಂತ ಕರಿ ಮಸಿ ಬಿಸಾಡಿ ಶ್ವೇತ ಬಿಳುಪಿನ ಪೇಸ್ಟ್ ಕೈಗಿಟ್ರು. ಅಲ್ಲಿಂದ ತಗೊಳಪ್ಪ ಶುರುವಾಯ್ತು…. ಬ್ರಶ್ ತಗೊಂಡು ಗಸ ಗಸ ಉಜ್ಜಿದ್ದೇ ಉಜ್ಜಿದ್ದು....

ನಿಮ್ಮ ಬ್ರಶ್ ಹಲ್ಲಿನ ಕೋಣೆಗಳನ್ನು ತಲುಪುತ್ತಿಲ್ಲ, ಅದು ಫ್ಲೆಕ್ಸಿಬಲ್ ಇಲ್ಲ, ಸ್ಮೂತ್ ಇಲ್ಲ, ಕ್ರಿಸ್ಕ್ರಾಸ್ ಇಲ್ಲ ಅಂತ ನೂರಾರು ತರದ ಬ್ರಷ್ಗಳು ಬೇರೆ.

ಬೆಳ್ಳಗಿದ್ದ ಪೇಸ್ಟ್ ಕೆಂಪಾಯ್ತು, ನೀಲಿ ಆಯ್ತು, ಬಿಳಿ ನೀಲಿ ಪಟ್ಟಾಪಟ್ಟಿನೂ ಆಯ್ತು ಅರಿಶಿನ, ಚಂದನದ ಬಣ್ಣ ಆಯ್ತು, ಪೇಸ್ಟೊಳಗೆ ಕೂಲಿಂಗ್ ಕ್ರಿಸ್ಟಲ್ಸ್ ಬಂದು ಬೆಳಿಗ್ಗೆ ಬ್ರಷ್ ಬಾಯಿಗೆ ಹೆಟ್ಟಿದ ಕೂಡ್ಲೇ ಶಿಮ್ಲಾ, ಕಾಶ್ಮೀರಕ್ಕೆ ಹೋಗ್ಬಂದ ಫೀಲ್ ತಗೊಂಡು ಆಯ್ತು, ಮೌತ್ ವಾಶ್ ಬಂತು ಬಾಯೆಲ್ಲಾ ಸು'ನಾಥ' ಬರೋ ತರ ಆಯ್ತು. ಈ ಬದಲಾವಣೆಗಳ ಬಗ್ಗೆ ಬೇಜಾರಿಲ್ಲ ನಂಗೆ..... 

ಆದ್ರೆ… ಆದ್ರೆ....

ಇಷ್ಟೆಲ್ಲಾ ಆದ್ಮೇಲೆ ಈಗ..... ಈಗ..... 

ಈ ಡಬ್ಬಾ ನನ್ಮಕ್ಕಳು ಆಕ್ಟೀವೇಟೆಡ್ ಚಾರ್ಕೋಲ್ ಟೂತ್ಪೇಸ್ಟ್ ಬಳಸಿ ಹಲ್ಲನ್ನು ಹೊಳೆಸಿ ಅಂತಿದ್ದಾರಲ್ಲ..,

ಮುಂಚೆ ನಾವ್ ಹಿಡ್ಕೊಂಡಿದ್ದ ಮಸಿಕೆಂಡ ಏನ್ ಸುಟ್ಟ ಗೇರ್ ಬೀಜದ್ಹಾಗೆ ಕಾಣ್ಸಿತ್ತಾ ನಿಮ್ಗೆ????

ಇದೆಲ್ಲಕ್ಕಿಂತ ಹೈಲೀ ಇರಿಟೇಟಿಂಗ್ ಅಂದ್ರೆ.....

ಈ ಟಾಯ್ಲೆಟ್ ಕ್ಲೀನರುಗಳು...

ಏನಾದ್ರೂ ತಿನ್ನೋಣ ಅಂತ ಕೈಗೆ ತಗೊಂಡ್ರೇ ಸಾಕು…. ಕೈ ಬಾಯಿಯ ಸನಿಹವಾಗೋ ಟೈಮಲ್ಲಿ ಠಣ್ ಅಂತ ಪ್ರತ್ಯಕ್ಷವಾಗ್ತಾರೆ ಈ ಕ್ಲೀನರುಗಳು.

ವಾಹ್.... ಏನ್ ಟೈಮಿಂಗೂ ಗುರೂ...

ಯಾರ್ಯಾರ್ದೋ ಮನೆಯ ಶುಭ್ರವಾದ ಟಾಯ್ಲೆಟ್ಟಿಗೆ  ಹೋಗಿ ಕ್ಲೀನ್ ಮಾಡೋದಲ್ದೇ,

"ನಾವು ನಿಮ್ಮ ಮನೆಗೂ ಬರಬೇಕೇ???? ಹಾಗಿದ್ದರೆ ಈ ಕೂಡಲೇ ಮಿಸ್ ಕಾಲ್ ಕೊಡಿ......" ಅಂತ ಚಮಕ್ ಬೇರೆ.

ಇಷ್ಟೆಲ್ಲಾ ಬಿಲ್ಡಪ್ ಕೊಡ್ತೀರಲ್ಲಾ, ಅಷ್ಟು ಧಮ್ ಇದ್ರೆ, ಕೊಳೆತು ಗಬ್ಬು ನಾರುವ ಪಬ್ಲಿಕ್ ಟಾಯ್ಲೆಟ್ಗಳನ್ನು ಒಂದ್ಸಾರಿ ಕ್ಲೀನ್ ಮಾಡಿ ತೋರ್ಸಿಬಿಡಿ ನೋಡುವಾ..

ಅಂದ್ಹಾಗೆ ಈ ಟಾಯ್ಲೆಟ್ ಕ್ಲೀನರ್ ಹಾಗೇ ಫ್ಲೋರ್ ಕ್ಲೀನರ್ ಕಂಪನಿಯವರಿಗೆ ನನ್ನದೊಂದು ಡೌಟ್.

ಅಲ್ಲಾ ಸ್ವಾಮಿ, ನಿಮ್ಮ ಎಲ್ಲಾ ಪ್ರಾಡಕ್ಟ್ಸ 99.9% ಜೆರ್ಮ್ಸ್ ಕಿಲ್ ಮಾಡಿ, ಒಂದು ಕೀಟಾಣುನ ಮಾತ್ರ ಉಳ್ಸಿರುತ್ತಲ್ಲ ಅದ್ಯಾಕೆ? ಅವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಂತಲಾ?? ಇಲ್ಲಾ ಕೀಟಾಣುಗಳ ಸಂತತಿ ಸಂಪೂರ್ಣ ನಶಿಸದಿರಲಿ ಅಂತಲಾ? ನಂಗ್ಯಾಕೋ ಅನುಮಾನ.... 100% ಕೀಟಾಣುಗಳು ಸತ್ರೆ ನಿಮ್ಮ ಪ್ರಾಡಕ್ಟ್ ಯಾರೂ ಪರ್ಚೇಸ್ ಮಾಡಲ್ಲ ಅಂತ್ಹೇಳಿ ಆ .1% ಕೀಟಾಣು ಉಳ್ಸಿದ್ರೇನೋ ಅಂತ.

ಹೀಗೆ ಹೇಳ್ತಾ ಹೋದ್ರೆ ಇವ್ರ ಪುರಾಣ ಇನ್ನೂ ತುಂಬಾ ಇದೆ. ಅದು ಬಿಟ್ಹಾಕಿ. ಈ ಮಂಡೆಕೆಟ್ ಜಾಹೀರಾತುಗಳು ಸಾಲ್ದೂ ಅಂತ ನಮ್ಮನ್ನ ಮಂಗ್ಯ ಮಾಡೋಕೇ ಇವರತ್ರ ಇರೋ ಇನ್ನೆರಡು ಅಸ್ತ್ರಗಳು..... 

ಒಂದು ಡಿಸ್ಕೌಂಟು..... ಇನ್ನೊಂದು ನೋ ಕೌಂಟು.....

ಅರೇ... ಡಿಸ್ಕೌಂಟೇನೋ ಗೊತ್ತಾಯ್ತು, ಇದೇನು ನೋ ಕೌಂಟು ಅಂದ್ರಾ????

ನೌ ಕೌಂಟ್ ಅಂದ್ರೇ.... ಇದು ಕೊಂಡರೆ ಅದು ಸಂಪೂರ್ಣ ಫ್ರೀ..... ಫ್ರೀ...... ಫ್ರೀ..... ಅಂತಾರಲ್ಲ ಅದು.

ಈ ಡಿಸ್ಕೌಂಟ್ ಅನ್ನೋದು ನಮಗೇ ತಿಳಿಯದೇ ನಮ್ಮನ್ನು ಮುಂಡಾಯ್ಸೋ ಸೂಪರ್ ವಿಧಾನ. ಇದ್ರ ಬೇಸ್ ವೆರಿ ಸಿಂಪಲ್. 1 ರೂಪಾಯಿ ಐಟಂನ 10ರೂಪಾಯಿ ಅನ್ನೋದು. ಆಮೇಲೆ ನೀವು ನಿಮ್ಮ ಚೌಕಾಸಿ ಕೌಶಲ್ಯ ಎಲ್ಲಾ ತೋರ್ಸಿ ಮುಗ್ದ ಮೇಲೆ, ಏನೋ ಪಾಪ ನಿಮ್ಗೆ ಅಂತ ಲಾಸ್ಟ್ 5ರೂಪಾಯಿಗೆ ಕೊಡ್ತೀನಿ. ಬೇಕಾದ್ರೇ ತಗೊಳ್ಳಿ ಅನ್ನೋದು.

ಆಗ ನಾವು 10 ರೂಪಾಯಿ ವಸ್ತು 5ರೂಪಾಯಿಗೆ ಬಂತು ಅಂತ ನಮ್ಮ 4ರೂಪಾಯಿ ಮುಂಡಾಮೋಚ್ತು ಅನ್ನೋ ಐಡಿಯಾನೇ‌ ಇಲ್ದೇ  ಜಂಬದ ಕೋಳಿ ಆಗೋದು.

ಇಷ್ಟೇ ಲಾಜಿಕ್. ಈ ಡಿಸ್ಕೌಂಟಿಂಗಿನ ಇನ್ನೊಂದು ಪ್ರಸಿದ್ದ ಸ್ಟ್ರಾಟೆಜಿ "ಡಿಜಿಟ್ಸ್ ಪ್ಲೇ" ಸಂಖ್ಯೆಗಳ ಆಟ. ಒಂಬತ್ತು ಅನ್ನೋದು ಡಿಸ್ಕೌಂಟರ್ ಗಳ ಹಾಟ್ ಫೇವರಿಟ್ ಅಂಕೆ. ಕೇವಲ 99, ಕೇವಲ 999, ಕೇವಲ 9999......

"ಅಯ್ಯೋ ನೋಡೇ, ಈ ಟಾಪ್ ಜಸ್ಟ್ 999 ಗೊತ್ತಾ?" 

"ಹೌದೇನೇ 999 ಅಷ್ಟೇನಾ? ಬರೀ ತ್ರೀ ಡಿಜಿಟ್ಸ್ ಅಮೌಂಟ್" ಅಂತ ಬೀಗೋ ಮುಂಚೆ ಒಮ್ಮೆ ಯೋಚ್ನೆ ಮಾಡಿ...

999+1 =1000....... ಅಂದ್ರೆ... 3 ಡಿಜಿಟ್ಸ್ + 1= 4 ಡಿಜಿಟ್ಸ್

9999+1=10000.......

ಇಟ್ಸ್ ಸಿಂಪಲ್.....

ಇನ್ನು ಒಂದು ಕೊಂಡರೆ ಒಂದು ಉಚಿತದಷ್ಟು ಮರ್ಲ್ ಸ್ಕೀಮ್ ಇನ್ನೊಂದಿಲ್ಲ ನನಗೆ. ಈಗ 'ಪುಳಿಯೋಗರೆ ಪೌಡರ್ ತಗೊಂಡ್ರೆ ಸಾಂಬಾರ್ ಪುಡಿ ಉಚಿತ, ಟೀ ಪುಡಿಯೊಂದಿಗೆ ಗ್ಲಾಸ್ ಉಚಿತ' ಅಂದ್ರೆ ಓಕೆ. ಏನೋ ಒಂದು ಲಿಂಕ್ ಸಿಗುತ್ತೆ.

ಆದ್ರೆ ಈ ಸೋಪು ತಗೊಂಡ್ರೆ ಚಮಚ ಉಚಿತ,

ಶ್ಯಾಂಪುವಿನೊಂದಿಗೆ ಪೆನ್ನು ಉಚಿತ ಅಂತ ಕೊಡ್ತಾರಲ್ಲ… ಅದೇ ನನ್ನ ತಲೆ ಕೆಡ್ಸೋದು. ಸ್ಪೂನ್ ಫ್ರೀ ಕೊಡೋಕೆ ಅದೇನು ಸೋಪಾ ಇಲ್ಲಾ ಟೊಮೇಟೋ ಸೂಪಾ??

ಶ್ಯಾಂಪೂ ಜೊತೆ ಪೆನ್ನು ಫ್ರೀಯಾಗಿ ಕೊಡೋದು ಮಾರಾಯ್ರೇ. ಮೋಸ್ಟ್ ಲೀ ಶ್ಯಾಂಪೂ ಬಳಸೋಕೆ ಶುರು ಮಾಡಿದ್ಮೇಲೆ ತಲೆಕೂದ್ಲು ಎಷ್ಟು ಸೆಂಟಿಮೀಟರ್ ಉದ್ದ ಆಗಿದೆ ಅಂತ ವಾರವಾರ ಅಳತೆ ತೆಗ್ದು ಬರೆದಿಡಿ ಅಂತಿರ್ಬಹುದೇನೋ.

ಎಷ್ಟೋ ಸಲ ಜಾಹೀರಾತು ನೋಡಿ ನಾವು ಕಳ್ದೇ ಹೋಗಿರ್ತೀವಿ. ಆದರೆ ವಾಸ್ತವವೇ ಬೇರೆ ಇರುತ್ತೆ. ನಾನು ITCಯವರ ಕ್ಲಾಸ್ಮೇಟ್ ನೋಟ್ ಬುಕ್ಕಿನ ಜಾಹೀರಾತು ನೋಡಿ ಬಹಳ ಇಂಪ್ರೆಸ್ ಆಗಿದ್ದೆ. ಆ ಪುಸ್ತಕವೂ ಹಾಗೇ. ಚೆಂದದ ಹೊರ ರಟ್ಟು, ಓಪನ್ ಮಾಡಿದೊಡನೇ ಒಳಬದಿಯಲ್ಲಿ 'ಡು ಯು ನೋ' ಅನ್ನೋ ಮಾಹಿತಿಯುಕ್ತ ವಿಚಾರಗಳು, ಕೊನೆಯ ಪೇಜಿನ ಪದಬಂಧ ಎಲ್ಲಾ ನನ್ನನ್ನು ಮಂತ್ರಮುಗ್ಧಳನ್ನಾಗಿಸಿತ್ತು. ಯಾವಾಗಲೂ ಅದೇ ಪುಸ್ತಕ ಬೇಕಿತ್ತು ನನಗೆ. ಒಮ್ಮೆ ಉಗ್ರಕುತೂಹಲದಿಂದ ITC  ಅಂತ ಗೂಗಲ್ ಮಾಡಿದೆ. ITC ವಿಸ್ತೃತ ರೂಪ ನೋಡಿ ನನ್ನ ಕಣ್ಣನ್ನು ನನಗೇ ನಂಬೋಕಾಗ್ಲಿಲ್ಲ…. ITC ಮುಂಚೆ ಇಂಪೀರಿಯಲ್ ಟೊಬ್ಯಾಕೋ ಕಂಪನಿ ಆಗಿದಿದ್ದು ಈಗ ಇಂಡಿಯನ್ ಟೊಬ್ಯಾಕೋ ಕಂಪನಿ ಆಗಿದೆ ಅಂತಿತ್ತು. ಏಷ್ಯಾದ 81% ಬೀಡಿ, ಸಿಗರೇಟ್ ಮಾರಾಟಗಾರರು ಇವರೇ. ಗೋಲ್ಡ್ ಫ್ಲೇಕ್ಸ್ ಸಿಗರೇಟು ಬ್ರಾಂಡ್ ಇವರದ್ದೇ ಅಂತ ಆಗ ಗೊತ್ತಾಯ್ತು ನನಗೆ. ಆಶೀರ್ವಾದ್, ಸನ್ ಫೀಸ್ಟ್, ಬಿಂಗೋ, ಯಿಪ್ಪೀ, ಫಿಯಾಮಾ, ವಿವೆಲ್, ಸ್ಯಾವ್ಲಾನ್ ಎಲ್ಲಾ ಇವ್ರದ್ದೇ ಅಂತ ಅವತ್ತೇ ಗೊತ್ತಾಗಿದ್ದು.

ವಿಮಲ್ ಅಡ್ವರ್ಟೈಸ್ಮೆಂಟ್ ನೋಡಿದ್ರೆ ಅದು ಪಾನ್ ಮಸಾಲನೋ ಇಲ್ಲಾ ಕೇಸರಿ ಪ್ಯಾಕೇಟ್ಟೋ ಅನ್ನೋ ಅನುಮಾನ ಬರೋದು ಸಹಜವೇ. 'ಬಸುರಿ ಹೆಣ್ಣಿಗೆ ಹಾಲಿಗೆ ಒಂದು ಪ್ಯಾಕ್ ವಿಮಲ್ ಬೆರೆಸಿ ಕೊಡಿ. ಕೇಸರಿಯಂತ ಪಾನ್ ಪರಿಮಳದ ಮಗು ಪಡೆಯಿರಿ' ಅನ್ನೋದೊಂದು ಬಾಕಿ ಇದೆ. ಈ ವಾಷಿಂಗ್ ಪೌಡರ್ ಗಳ ಅವತಾರವೋ ದೇವರಿಗೆ ಪ್ರೀತಿ. ಪೋರಪೋ ಅಂತೆ, ಗುಲೆಗುಲೆ ಅಂತೆ ಎಲ್ಲಾ ನೋಡಿ ನಾವು ಕುಲೆಕುಲೆ(ಪ್ರೇತ) ಆಗ್ದಿದ್ರೆ ಸಾಕು.

ತಮಾಷೆಯನ್ನು ಒತ್ತಟ್ಟಿಗಿಟ್ಟು ನೋಡಿದ್ರೂ ಈ ಜಾಹೀರಾತು ಎಂಬ ಮಾಯಾಜಾಲದ ಮಹಿಮೆಯೇ ಅಪಾರ. ಇದು ಇಲ್ಲದ್ದನ್ನು ಇದೆ ಎಂದು ಭ್ರಾಂತಿಗೊಳಿಸುವ‌ ಇಂದ್ರಜಾಲ. ಈ ಇಂದ್ರಜಾಲ ಬೇಡಬೇಡವೆಂದರೂ ನಮ್ಮನ್ನು ಸೆಳೆದು ನಮ್ಮ ದೈನಂದಿನ ವಸ್ತುಗಳ ಆಯ್ಕೆಯಲ್ಲಿ ತನ್ನಿರುವನ್ನು ಸ್ಪಷ್ಟಪಡಿಸುತ್ತದೆ.

ಬೇಡಬೇಡವೆಂದರೂ ಹುಚ್ಚುಚ್ಚು ಜಾಹೀರಾತುಗಳ ಮೂಲಕ ನಮ್ಮನ್ನು ಹಾಳ್ಮಾಡಿದ್ದು ಸಾಲ್ದು ಅಂತ ನನ್ನ ಪ್ರತಿಜ್ಞೆ ಯಕ್ಕುಟ್ಸಿ ನನ್ನ ಮಗಳ ಬಾಯಲ್ಲಿ ನನ್ನ ಈಜಿಪ್ಟಿಯನ್ ಮಮ್ಮಿ ಮಾಡಿದ ಇವರನ್ನೇನ್ರೀ ಮಾಡೋಣ?????

ಅಗೋ ಮತ್ತೆ ಬಂತು ನನ್ನ ಜಾನ್ಸನ್ ಬೇಬಿ….

'ಮಮ್ಮಿsss'....... ಅಂದ್ಕೊಂಡು.

ಥೋ….. ಮೊದ್ಲು ಇವಳ ಮಮ್ಮಿ ವೈರಸ್ ಗೆ ಮದ್ದು ಮಾಡ್ಬೇಕು. ನಾ ಹೊಂಟೆ.

ಹೋಗೋಕೂ ಮುನ್ನ.....

ನೀವೇ ಹೇಳಿ.....

ಇವರನ್ನೇನ್ರೀ ಮಾಡೋಣ???


ಅರ್ಪಣೆ: ಸಂತೂರ್ ಮಮ್ಮಿಗೆ



ಭಾನುವಾರ, ಮೇ 24, 2020

ಹೀಗೊಂದು ಪತ್ರ.....

ಪ್ರಿಯ ಮಾನವನಿಗೆ.........

ಮನುಕುಲವನ್ನು ಸೃಷ್ಟಿಸಿ, ಜಗತ್ತಿನ ಅತ್ಯಂತ ಬುದ್ಧಿಶಾಲಿ ಪ್ರಾಣಿ ಎಂಬ ವಿಶೇಷ ಸ್ಥಾನಮಾನದೊಂದಿಗೆ ಭೂಲೋಕಕ್ಕೆ ನಿನ್ನನ್ನು ನಿವಾಸಿಯಾಗಿಸಿದ ಕ್ಷಣ ಮುಂದೊಮ್ಮೆ ಇದೇ ಬುದ್ಧಿವಂತ ಜೀವಿಗೆ ಬುದ್ಧಿ ಹೇಳಲು ಇಂತಹದೊಂದು ವಿಚಿತ್ರ ಪತ್ರ ಬರೆಯಬೇಕಾದ ಸನ್ನಿವೇಶ ಉದ್ಭವವಾಗಬಹುದೆಂದು ಸ್ವತಃ ಸೃಷ್ಟಿಕರ್ತನಾದ ನಾನೇ ಎಣಿಸಿರಲಿಲ್ಲ. ಆ ಮಟ್ಟಿಗೆ ನನ್ನನ್ನೂ ಮೀರಿಸಿದ ನೀನು 'ಬುದ್ಧಿಶಾಲಿ' ಜೀವಿಯೇ ಬಿಡು.

ನಾನು, ಭೂ ದೇವಿಯ ಸಂಪದ್ಭರಿತ, ಸಮೃದ್ಧ ಒಡಲನ್ನೇ ನಿನಗೆ ಉಡುಗೊರೆಯಾಗಿ ನೀಡಿದ್ದು ಅವಳ ಸಹಕಾರದಿಂದ ನೀನು ಬದುಕನ್ನು ಕಟ್ಟಿಕೋ ಎಂದು. ಆದರೆ ನೀನು ಮಾಡಿದ್ದೇನು? ಅವಳ ಮೇಲೆ ಒಡೆತನ ಸಾಧಿಸಿ ಅವಳನ್ನೇ ಹರಿದು ಭಾಗವಾಗಿಸಿ ಬೇಲಿಗಳನ್ನು ನಿರ್ಮಿಸಿಕೊಂಡಿರುವೆ. ಅವಳ ಒಡಲನ್ನೇ ಬಗೆದು, ಸಾರವ ಮೊಗೆದು, ಆಪೋಶನ ತೆಗೆದುಕೊಂಡಿರುವೆ. ಪ್ರಕೃತಿ ಜವನಿಕೆಯ ಹಚ್ಚಹಸಿರ ಪತ್ತಲವನ್ನೇ ಸೆಳೆದು ಆಕೆಯನ್ನು ಬೆತ್ತಲಾಗಿಸುವ ದುಸ್ಸಾಹಸ ಮಾಡಿದ ನಿನ್ನದು ಅತೀ ಬುದ್ಧಿವಂತಿಕೆಯೋ ಇಲ್ಲಾ ಧೂರ್ತತನದ ಪರಮಾವಧಿಯೋ....?

ನಾನು ಸೃಷ್ಟಿಸಿದ ಅಖಂಡ ಭೂಮಂಡಲದ ನೀಲಿನಕ್ಷೆಯನ್ನು ನಾನೇ ಗುರುತಿಸಲಾರದಂತೆ ಬದಲಾಯಿಸಿ ಖಂಡ, ದೇಶ, ರಾಜ್ಯಗಳೆಂದು ವಿಭಜಿಸಿರುವೆ. ಅದರ ಮೇಲೆ ಜಾತಿ, ಮತ, ವರ್ಣ, ಭಾಷೆ ಎಂಬ ಹತ್ತು ಹಲವು ಪರಿಧಿಗಳನ್ನು ಆದೇಶಿಸಿಕೊಂಡು ಬೇಧವನ್ನು ಆವಾಹಿಸಿಕೊಂಡು ನಿತ್ಯ ಸಂಘರ್ಷದಲ್ಲಿ ಮುಳುಗಿರುವೆ. ಮನುಜತ್ವದ ಮೂಲಗುಣವಾದ ಮಾನವೀಯತೆಯನ್ನೇ ಮರೆತು ಸಂಪತ್ತನ್ನು ಕ್ರೋಢೀಕರಿಸುವುದರಲ್ಲೇ ತಲ್ಲೀನನಾಗಿರುವೆ. ಹಣದ ಮುಂದೆ ಮೌಲ್ಯಗಳೇ ಮರೆಯಾಗುವಷ್ಟು ಗಾಢವಾಗಿ ಧನಕನಕಗಳ ಗುಲಾಮನಾಗಿರುವೆ.

ಹೋಗಲೀ........ ಆ ಸಂಪತ್ತನ್ನಾದರೂ ಸಮವಾಗಿ ಹಂಚಿಕೊಂಡಿರುವೆಯಾ...? ಅದೂ ಇಲ್ಲ. ಕೆಲವೇ ಕೆಲವು ಕೈಗಳಲ್ಲಿ ಹಣ, ಅಧಿಕಾರ ಎಲ್ಲವನ್ನೂ ಕೇಂದ್ರಿಕೃತಗೊಂಡಿದೆ. ನಿನ್ನ ಬಳಿ ಇರುವ ಪೂಂಜಿಯನ್ನು ಪರರೊಂದಿಗೆ ಹಂಚಿಕೊಳ್ಳುವ ಸಣ್ಣ ಉದಾರತೆಯೂ ನಿನಗಿಲ್ಲ. ಸ್ವಾರ್ಥದ ಕಡಲಲ್ಲಿ ತೇಲುತ್ತಾ ಅಹಂಕಾರ ಮೆರೆವ ನಿನ್ನ ಇಂತಹ ಸಣ್ಣತನ ಕಂಡಾಗಲೆಲ್ಲಾ 'ಯಾಕಾದರೂ ಈ ಮನುಜನೆಂಬ ಪ್ರಾಣಿಯನ್ನು ಸೃಷ್ಟಿಸಿದೆನೋ' ಎಂಬ ಯೋಚನೆಯಲ್ಲಿ ಬೀಳುತ್ತೇನೆ.

ಹೋಗಲಿ ಬಿಡು. ನಾನು ಹೇಳಿದೊಡನೆ ತಪ್ಪನ್ನು ತಿದ್ದಿಕೊಂಡು ಬದಲಾಗುವ ಹಂತವನ್ನು ದಾಟಿ ಹೋಗಿದ್ದೀಯಾ ನೀನು. ಇನ್ನು ಹೇಳಿ ಪ್ರಯೋಜನವೇನು?
ನಿನ್ನಿಷ್ಟದಂತೆ ಮಾಡಿಕೋ..... ಆದರೆ ನಿನ್ನ ಸೃಷ್ಟಿಕರ್ತನಾದ ತಪ್ಪಿಗೆ, ನಿನ್ನ ಮುಗಿಯದ ಗೋಳುಗಳ ಪಟ್ಟಿಗೆ ಕಿವಿಯಾಗಬೇಕಾದ ಅನಿವಾರ್ಯ ಬಾಧ್ಯತೆ ನನಗಿರುವುದರಿಂದ ನಿನಗೆ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಬೇಕಿದೆ.  ಅದಕ್ಕಾಗಿಯೇ ಈ ಪತ್ರ. ಗಮನವಿಟ್ಟು ಓದಿಕೋ.....

ಮಂದಿರ, ಇಗರ್ಜಿ, ಮಸೀದಿ ಇತ್ಯಾದಿಗಳಲ್ಲಿ ನಾನು ನೆಲೆಸಿರುವೆನೆಂದೂ, ತೀರ್ಥಯಾತ್ರೆ, ಹಜ್ ಯಾತ್ರೆ ಮತ್ತಿದ್ಯಾದಿಗಳ ಮೂಲಕ ಪುಣ್ಯ ಸಂಪಾದಿಸಿ ಸ್ವರ್ಗ ಪ್ರಾಪ್ತಿಸಿಕೊಳ್ಳಬಹುದೆಂದು ನಿನಗೇಕೆ ಅನಿಸಿತೋ ನನಗಂತೂ ತಿಳಿದಿಲ್ಲ. ಇಂತಹದೊಂದು ವ್ಯವಸ್ಥೆಯನ್ನು ನೀನು ಸೃಷ್ಟಿಸಿಕೊಂಡಿರುವೆಯಷ್ಟೇ ಹೊರತು ನನಗೂ ಇದಕ್ಕೂ ಸಂಬಂಧವಿಲ್ಲ. ನೀನು ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿ, ತೀರ್ಥಯಾತ್ರೆಗಳನ್ನು ಮಾಡಿ ಬೇಡಿಕೊಂಡಿರುವುದೆಲ್ಲಾ ನನಗೆ ಸ್ವೀಕೃತಿ ಎಂಬ ಭ್ರಮೆಯಲ್ಲಿ ನೀನಿದ್ದರೆ ಅದನ್ನು ಈ ಕ್ಷಣವೇ ಮರೆತುಬಿಡು.

ನನ್ನ ಶಿಲೆಯಾಗಿಸಿ ಪಂಚಾಮೃತ, ರಾಶಿ ಫಲ, ಚರುಗಳ ಸಮಾರಾಧನೆ ಮಾಡುವ ನೀನು ದಾರಿಯಲ್ಲಿ ಎದುರಾಗುವ ನಿರ್ಗತಿಕನಿಗೆ ಒಂದು ದಮ್ಮಡಿ ಕಾಸು ಕೊಡಲು ಮಾಡುವ ಯೋಚನೆಯೆಷ್ಟು? ಪಂಚಭಕ್ಷ್ಯ ಪರಮಾನ್ನ ತಯಾರಿಸಿ ನನಗೆ ನೈವೇದ್ಯ ನೀಡುವ ನೀನು ನಿನ್ನದೇ ಅಕ್ಕಪಕ್ಕದಲ್ಲಿರುವ ಒಂದು ಹೊತ್ತಿನ ಕೂಳಿಗೂ ತತ್ವಾರ ಪಡುತ್ತಿರುವ ದೀನರಿಗೆ ಒಂದು ಹಿಡಿ ಆಹಾರ ನೀಡುವ ಮನಸ್ಸು ಮಾಡುವೆಯಾ?

ಇಷ್ಟಕ್ಕೂ ಈ ಧನಕನಕ, ಫಲ, ಪಂಚಭಕ್ಷ್ಯ ಪರಮಾನ್ನಗಳೆಲ್ಲವೂ ನಾನೇ ನಿನಗಿತ್ತ ಭಿಕ್ಷೆ. ನಿನ್ನ ಕೊನೆಗಾಣದ ಬೇಡಿಕೆಗಳಿಗೆ ಕಿವಿಯಾಗುವೆನೇ ಹೊರತು ನಾನು ನಿನ್ನಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ನಿನ್ನ ಉಸಿರಿನ ಸಮೇತ ನಿನ್ನ ಬಳಿಯಿರುವುದೆಲ್ಲವೂ ನನ್ನದೇ ಆಗಿರುವಾಗ, ನನಗೇ ಧನ‌ ಕನಕಗಳ ಕಾಣಿಕೆಯ ಆಮಿಷ ತೋರಿ ನಿನ್ನ ಇಷ್ಟಾರ್ಥಗಳ ಬೇಡುವ ನಿನ್ನದು ಮೂರ್ಖತನವೋ ಇಲ್ಲಾ ಉದ್ಧಟತನವೋ?

ನಿನಗೆ ನಿಜವಾಗಿಯೂ ನನ್ನನ್ನು ತಲುಪುವಂತಹ ಸೇವೆ ಮಾಡಬೇಕೆಂಬ ಮನಸ್ಸಿದ್ದರೆ ನಿನ್ನ ನಡುವೆ ಇರುವ ದೀನದಲಿತರಿಗೆ, ಅಗತ್ಯವುಳ್ಳ ಮನುಜರಿಗೆ ಹೆಗಲಾಗು. ನನಗೆ ನೀಡುವ ಧನಕನಕಗಳನ್ನು ಬಡಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೋ ಇಲ್ಲವೇ ನಿರಾಶ್ರಿತರ ತಲೆ ಮೇಲೆ ಸೂರು ನಿರ್ಮಿಸಲೋ ಬಳಸು. ಅವರ ಸಂತಸದಲ್ಲಿ ನಾನಿರುತ್ತೇನೆ. ನನ್ನ ಹೆಸರಿನ ನೈವೇದ್ಯವನ್ನು ಹೊತ್ತಿನ ಕೂಳಿಗೆ ಪರದಾಡುವ ದೀನರಿಗೆ ಬಡಿಸು. ಅವರ ನೀಗಿದ ಹಸಿವಿನಲ್ಲಿ ನನ್ನ ಉದರ ತುಂಬುತ್ತದೆ. ದೀಪ, ಧೂಪ, ಮೊಂಬತ್ತಿಗಳ ಬೆಳಗಿ ಮಕ್ಕಳ ಭಾಗ್ಯ ಕರುಣಿಸೆಂದು ಬೇಡುವ ಬದಲು ಅನಾಥ ಹಸುಳೆಯ ದತ್ತು ಪಡೆದು ಅದರ ಬಾಳನ್ನು ಬೆಳಗು. ಆ ಮಗುವಿನ ಹಸನಾದ ಬದುಕಿನಲ್ಲಿ ನಾನು ನೆಲೆಸಿರುತ್ತೇನೆ. ದರ್ಗಾದಲ್ಲಿ ಚಾದರ ಹೊದಿಸಿ, ತಾಯತ ಕಟ್ಟಿ ಮನ್ನತ್ ಕೇಳಿಕೊಳ್ಳುವ ಬದಲು ಪರರ ನೋವಿಗೆ ಸ್ಪಂದಿಸು. ನೀ ಅವರಿಗೆ ನೀಡುವ ಸಾಂತ್ವನದಲ್ಲಿ ನಾನು ಹರಸುತ್ತೇನೆ.....

ಇನ್ನಾದರೂ ಕಟ್ಟಡದ ನಾಲ್ಕು ಗೋಡೆಗಳಲ್ಲಿ, ಶಿಲೆಗಳಲ್ಲಿ, ಅರ್ಥವಿಲ್ಲದ ಆಚರಣೆಗಳಲ್ಲಿ ನನ್ನನ್ನು ಅರಸುವುದನ್ನು ಬಿಟ್ಟು ನಿನ್ನ ಹೃದಯದ ಅಂತಃಕರಣದಲ್ಲಿ, ಮನುಷ್ಯತ್ವದಲ್ಲಿ ಅಡಗಿರುವ ನನ್ನನ್ನು ಹುಡುಕಿ ಅರಿತುಕೋ. ನಾನು ನೀಡಿದ ಸಂಪತ್ತನ್ನು ನನಗೇ ಕಾಣಿಕೆಯಾಗಿ ನೀಡುವ ಬದಲು ಇಲ್ಲದವರೊಂದಿಗೆ ಹಂಚಿಕೊಂಡು, ಕೂಡಿ ಬಾಳುವುದನ್ನು ಕಲಿತುಕೋ.....

ಹೇಳಬೇಕಾದುದ್ದನ್ನು ಹೇಳಿರುವೆ. ಅರಿತುಕೊಳ್ಳುವುದು ಬಿಡುವುದು ನಿನ್ನಿಷ್ಟ. ಅರಿತು ತಿದ್ದಿಕೊಂಡರೆ ಸಂತೋಷ. ಇಲ್ಲವಾದರೆ ನಿನ್ನ ಹಣೆಬರಹಕ್ಕೆ ನನ್ನನ್ನು ದೂಷಿಸಲು ಬರಬೇಡ......

ಅಷ್ಟೇ.....

ಇಂತಿ ನಿನ್ನ ಕಲ್ಪನೆಗಿಂತ ಭಿನ್ನ ಯೋಚನೆಯ ಭಗವಂತ......


      ****************


ಮೆ ತೋ ನಹೀ ಹೂ ಇನ್ಸಾನೋಂ ಮೇ
ಬಿಕ್ತಾ ಹೂ ಮೆ ತೋ ಇನ್ ದುಕಾನೋಂ ಮೇ
ದುನಿಯಾ ಬನಾಯಿ ಮೈನೆ ಹಾಥೊಂಸೇ
ಮಿಟ್ಟಿ ಸೇ ನಹೀ ಜಸ್ಬಾತೊಂ ಸೇ
ಫಿರ್ ರಹಾ ಹೂಂ ಢೂಂಡತಾ.....
ಮೇರೆ ನಿಶಾನ್ ಹೇ ಕಹಾಂ.....???

'ಓ ಮೈ ಗಾಡ್' ಹಿಂದಿ ಚಿತ್ರದ ಈ ಸಾಲುಗಳು ಕೇಳಿದಾಗಲೆಲ್ಲ ಅರಿಯದ ಭಾವವೊಂದು ನನ್ನ ಆವರಿಸುತ್ತದೆ. ಅರ್ಥಹೀನ ಆಚರಣೆಗಳನ್ನು ಕಂಡಾಗಲೆಲ್ಲಾ ಮತ್ತೆ ಮತ್ತೆ ಇದೇ ಸಾಲುಗಳು ಮನದೊಳಗೆ ಸುಳಿಯುತ್ತವೆ. 'ಕೇವಲ ಜೀವವಿಲ್ಲದ ಮೂರ್ತಿಯಾಗಿ ಅಂಗಡಿಗಳಲ್ಲಿ ಮಾರಲ್ಪಡುತ್ತಿರುವೆನೇ ಹೊರತು, ಮನುಜರಲ್ಲಿ ನನ್ನ ಅಸ್ತಿತ್ವದ ಕುರುಹೂ ಇಲ್ಲ . ಈ ಜಗತ್ತನ್ನು ಮಣ್ಣಿನಿಂದಲ್ಲ ಭಾವನೆಗಳಿಂದ ಸೃಷ್ಟಿಸಿರುವೆ. ಅಂತಹ ಜಗತ್ತಿನಲ್ಲಿ ನನ್ನ ಕುರುಹನ್ನು(ಮಾನವೀಯ ಮೌಲ್ಯದ ಭಾವಗಳನ್ನು) ಹುಡುಕಿ ಅಲೆಯುವಂತಾಗಿದೆ' ಎಂಬರ್ಥದ ಸಾಲುಗಳು ನಿಜಕ್ಕೂ ಭಗವಂತನ ಸ್ವಗತದ ಭಾವಗಳಿರಬಹುದೇ....?