ಭಾನುವಾರ, ಜೂನ್ 28, 2020

ಅನೂಹ್ಯ 21

ಅಭಿರಾಮ್ ಸಮನ್ವಿತಾಳಿಗೆ ಕರೆ ಮಾಡಿದಾಗ ಅವಳು  ನವ್ಯಾಳೊಂದಿಗೆ ತನ್ನ ಹೊಸ ಮನೆಯನ್ನು ಒಪ್ಪವಾಗಿಸುತ್ತಿದ್ದಳು. ಬೆಳಿಗ್ಗೆಯೇ ಇಬ್ಬರೂ ಸೇರಿ ಮನೆಗೆ ಅಗತ್ಯವಿದ್ದ ವಸ್ತುಗಳನ್ನು ಖರೀದಿಸಿ ತಂದಿದ್ದರು. ಹೊರಗೇ ಊಟ ಮುಗಿಸಿ ಮನೆಗೆ ಬಂದು ಸ್ವಲ್ಪ ವಿಶ್ರಮಿಸಿ ತಂದಿದ್ದ ವಸ್ತುಗಳನ್ನು ಜೋಡಿಸತೊಡಗಿದ್ದರು. ಅಷ್ಟರಲ್ಲಿ  ರಿಂಗಣಿಸತೊಡಗಿದ ಜಂಗಮವಾಣಿಯನ್ನು ಬ್ಯಾಗಿನಿಂದ ತೆರೆದು ನೋಡಿದಳು. ಅಪರಿಚಿತ ಸಂಖ್ಯೆ. ಕಂಪನಿಯ ಕರೆ ಇರಬಹುದೆಂದು ಕಡಿತಗೊಳಿಸಿದಳು. 

ಕರೆ ಮಾಡುತ್ತಿದ್ದ ಅಭಿರಾಮ್ ಹಣೆಯೊತ್ತಿದ. 'ಛೇ, ಇವಳು ಫೋನ್ ಬೇರೆ ರಿಸೀವ್ ಮಾಡ್ತಿಲ್ವಲ್ಲಪ್ಪ, ಏನು ಮಾಡ್ಲೀ' ಎಂದುಕೊಳ್ಳುತ್ತಲೇ ಮತ್ತೆ ಕರೆ ಮಾಡಿದ.

ಮತ್ತೇ ಅದೇ ನಂಬರಿನಿಂದ ಕರೆ ಬಂದಾಗ ಯಾರಾದರೂ ಪೇಷೆಂಟ್ ಕಡೆಯವರಿರಬಹುದೇನೋ ಎನಿಸಿ, ರಿಸೀವ್ ಮಾಡಿ "ಹಲೋ" ಎಂದಳು.

'ಅಬ್ಬಾ, ಅಂತೂ ಫೋನ್ ರಿಸೀವ್ ಮಾಡಿದ್ಲಲ್ಲಪ್ಪ' ಅಂತ ಮನದಲ್ಲೇ ಎಲ್ಲಾ ದೇವರಿಗೂ ಕೈ ಮುಗಿದ.

"ಹಲೋ? ಯಾರು ಮಾತಾಡ್ತಾ ಇರೋದು?" ಕೇಳಿದಳು.

"ಹಲೋ ಸಮನ್ವಿತಾ, ಅಭಿರಾಮ್ ಹಿಯರ್" ಅವನೆಂದಾಗ ಅವಳಿಗೆ ಅಚ್ಚರಿಯಾಯಿತು. ಇವನು ತನಗೇಕೆ ಕರೆ ಮಾಡಿದ? ಮೊನ್ನೆ ಪಾರ್ಟಿಯಲ್ಲಿ ನೋಡಿದ್ದು ಬಿಟ್ಟರೆ ಬೇರೆ ಯಾವ ಪರಿಚಯವೂ ನಮ್ಮ ನಡುವಿಲ್ಲ. ನನ್ನ ನಂಬರ್ ಹೇಗೆ ಸಿಕ್ಕಿತು? 

"ಹಲೋ ಆರ್ ಯು ದೇರ್?" ಅವಳಿಂದ ಪ್ರತಿಕ್ರಿಯೆ ಬರದಿದ್ದಾಗ ಕೇಳಿದ.

"ಯಾ, ಟೆಲ್ ಮಿ ಮಿಸ್ಟರ್ ಶರ್ಮಾ, ಅದೇನು ನನಗೆ ಫೋನ್ ಮಾಡಿದ್ದು?" ನೇರವಾಗಿ ವಿಷಯಕ್ಕೆ ಬಂದಳು.

"ನಿಮ್ಮ ಹತ್ತಿರ ತುಂಬಾ ಮುಖ್ಯವಾದ ವಿಷಯವೊಂದನ್ನು ಮಾತಾಡೋದಿದೆ ಮಿಸ್ ರಾವ್. ಫೋನಿನಲ್ಲಿ ಮಾತಾಡೋಕೆ ಸಾಧ್ಯವಿಲ್ಲ. ನಾಳೆ ಫ್ರೀ ಇದ್ದೀರಾ? ಸಿಗಬಹುದಾ?" ಅವನೂ ನೇರವಾಗಿ ವಿಷಯಕ್ಕೆ ಬಂದ.

ಆದರೆ ಅವನ ಮಾತು ಅವಳನ್ನು ಗೊಂದಲಕ್ಕೆ ಕೆಡವಿತು. ತಮ್ಮಿಬ್ಬರ ನಡುವೆ ಮಾತನಾಡಲು ಮುಖ್ಯವಾದ ವಿಷಯ ಯಾವುದಿದೆ? ಅದೂ ಫೋನಿನಲ್ಲಿ ಹೇಳಲಾಗದ್ದು? ಅವಳಿಗೇನೂ ಅರ್ಥವಾಗಲಿಲ್ಲ. ಪಾಪ, ಅವಳ ಬೆನ್ನ ಹಿಂದೆ ತಂದೆ ಮಾಡಿರುವ ಕೆಲಸ ಅವಳಿಗೆಲ್ಲಿಂದ ತಿಳಿಯಬೇಕು...

"ಮಿಸ್ಟರ್ ಶರ್ಮಾ, ನಮ್ಮಿಬ್ಬರ ಮಧ್ಯೆ ನೇರಾನೇರ ಭೇಟಿಯಾಗಿಯೇ ಮಾತನಾಡಬೇಕಾದಷ್ಟು ಮುಖ್ಯವಾದ ವಿಷಯ ಇದೆ ಅಂತ ನನಗನಿಸುತ್ತಿಲ್ಲ. ನೇರಾನೇರ ಹೋಗಲಿ ಕನಿಷ್ಟ ಫೋನಿನಲ್ಲಿ ಮಾತನಾಡಬಹುದಾದ ವಿಷಯ ಇರುವುದು ಅನುಮಾನವೇ. ಅಂತದ್ದರಲ್ಲಿ ಈ ಭೇಟಿ?"

ಇವಳ ಮಾತು ಕೇಳಿ ಅಭಿರಾಮ್ ತಲೆ ಕೆಡತೊಡಗಿತು. 'ಇವಳೋ ಏನೂ ವಿಷಯನೇ ಗೊತ್ತಿಲ್ಲದಿರುವಂತೆ ಮಾತಾಡ್ತಿದ್ದಳೆ. ಅಂತೂ ಈ ಅಪ್ಪ ಮಗಳಿಬ್ರೂ ಸೇರಿ ನನ್ನ ಲೈಫ್ ನ ಚಿತ್ರಾನ್ನ ಮಾಡೋದು ಗ್ಯಾರಂಟಿ ಅನ್ಸುತ್ತೆ' ಎಂದುಕೊಂಡವ,

"ವಿಷ್ಯ ಇರೋದ್ರಿಂದನೇ ಕರೀತಿರೋದು ಮಿಸ್ ರಾವ್. ಸುಮ್ಮನೆ ನಿಮ್ಮನ್ನ ಇನ್ವೈಟ್ ಮಾಡೋಕೆ ನನಗೇನು ಹುಚ್ಚಾ" ರೇಗಿ ಕೇಳಿದ.

ಅವನ ಮಾತಿನ ಧಾಟಿ ಅವಳಿಗೆ ವಿಚಿತ್ರವೆನಿಸಿತು. "ಮಿಸ್ಟರ್ ಶರ್ಮಾ, ಐ ಥಿಂಕ್ ನನ್ನ ತಂದೆಗೆ ಫೋನ್ ಮಾಡೋಕೆ ಹೋಗಿ ತಪ್ಪಿ ನನಗೆ ಕಾಲ್ ಮಾಡಿರಬೇಕು ನೀವು" ಅವಳೆಂದಾಗ ಅವನಿಗೆ ಬಂಡೆಗೆ ತಲೆ ಚಚ್ಚಿಕೊಳ್ಳಬೇಕೆನಿಸಿತು. ಇನ್ನು ಹೀಗೆ ಮಾತನಾಡಿ ಪ್ರಯೋಜನವಿಲ್ಲವೆಂದು,

"ಮಿಸ್ ಸಮನ್ವಿತಾ, ನಾನು ಸರಿಯಾದ ನಂಬರಿಗೇ ಕಾಲ್ ಮಾಡಿದ್ದೇನೆ. ನಿಮ್ಮ ಹತ್ತಿರವೇ ಮಾತನಾಡಲಿರೋದು. ಸೋ, ಪ್ಲೀಸ್ ಜಾಸ್ತಿ ತಲೆತಿನ್ನದೇ ನಾಳೆ ನಮ್ಮನೆಗೆ ಬಂದ್ರೆ ತುಂಬಾ ಉಪಕಾರವಾಗುತ್ತೆ" ಇನ್ನೇನು ಹೇಳುತ್ತಿದ್ದನೋ, ಆದರೆ ಅಡುಗೆ ಮನೆಯಿಂದ ಅವನ ಮಾತು ಕೇಳಿಸಿಕೊಳ್ಳುತ್ತಿದ್ದ ಮೃದುಲಾ ಅವನ ಕೈಯಿಂದ ಫೋನ್ ಕಿತ್ತುಕೊಂಡರು.

"ಸಮನ್ವಿತಾ ಪುಟ್ಟಾ, ನಾನಮ್ಮ ಮೃದುಲಾ. ನೀನು ಅಭಿ ಮಾತಿಗೆ ಬೇಜಾರು ಮಾಡಿಕೊಳ್ಳಬೇಡಮ್ಮ. ಅವ್ನಿಗೆ ಹೆಣ್ಣು ಮಕ್ಕಳ ಹತ್ರ ಹೇಗೆ ಮಾತಾಡ್ಬೇಕು ಅಂತ ಗೊತ್ತಾಗಲ್ಲ. ನಾವು ನಿಮ್ಮನೆಗೆ ಬಂದ್ವಿ ತಾನೇ? ಈಗ ನೀನು ಬರ್ಬೇಕು. ನಾಳೆ ಬಾರಮ್ಮ. ಊಟಕ್ಕೆ ಇಲ್ಲಿಗೇ ಬರ್ಬೇಕು.ಇಲ್ಲಾ ಅಂದ್ರೆ ನನಗೆ ಬೇಜಾರಾಗುತ್ತೆ ನೋಡು. ಹಾಗೇ ಸ್ವಲ್ಪ ಮಾತಾಡೋದು ಇದೆ. ಎಲ್ಲಾ ಒಟ್ಟಿಗೆ ಆಗುತ್ತೆ" ಒಂದೇ ಉಸಿರಿಗೆ ಎಲ್ಲಾ ತಾವೇ ಹೇಳಿದರು‌.

ಮೃದುಲಾ ಅವರಿಗೆ ಇಲ್ಲವೆನ್ನಲಾಗಲಿಲ್ಲ ಅವಳಿಗೆ. "ಸರಿ ಅಮ್... ಸಾರಿ ಆಂಟಿ ಬರ್ತೀನಿ. ಆದರೆ ಊಟಕ್ಕೆ ಬರೋಕೆ ಆಗೋಲ್ಲ. ಕೆಲಸ ಇದೆ. ಸಂಜೆ ಬರ್ತೀನಿ" ಎಂದಳು.

"ಸರಿ, ಸಂಜೆ ಬಾ, ರಾತ್ರಿ ಊಟ ನಮ್ಮಲ್ಲೇ" ಎಂಬ ಅವರ ಆಮಂತ್ರಣ ಖುಷಿ ತಂದಿತು ಅವಳಿಗೆ. ಮನೆಯಲ್ಲಂತೂ ಯಾರು ಕೂರಿಸಿಕೊಂಡು ಬಡಿಸಲಿಲ್ಲ. ಆದರೂ ಆತ್ಮೀಯವಾಗಿ ಊಟಕ್ಕೆ ಕರೆಯುವ ಹಿತೈಷಿಗಳನ್ನು ದಯಪಾಲಿಸಿದೆಯಲ್ಲ ಭಗವಂತ ಎಂದುಕೊಂಡು ಸರಿ ಬರುವೆನೆಂದಳು.

ಅವಳೊಂದಿಗೆ ಉಭಯಕುಶಲೋಪರಿಯ ನಾಲ್ಕು ಮಾತನಾಡಿ ನಾಳೆ ಸಂಜೆ ಬರಲೇಬೇಕೆಂದು ಮತ್ತೊಮ್ಮೆ ಹೇಳಿ ಕರೆ ಕಡಿತಗೊಳಿಸಿ ಮಗನೆಡೆಗೆ ತಿರುಗಿದಾಗ, ಅವನು ಕೋಪದಲ್ಲಿ ಅವರನ್ನೇ ನೋಡುತ್ತಿದ್ದ...

"ಏನಮ್ಮಾ, ನನಗೆ‌ ಹೆಣ್ಮಕ್ಕಳ ಹತ್ರ ಹೇಗೆ‌ ಮಾತಾಡ್ಬೇಕು ಅಂತ ಗೊತ್ತಾಗಲ್ವಾ?" ಕೇಳಿದ ಕೋಪದಲ್ಲಿ.

"ಗೊತ್ತಿದ್ರೆ ಹೀಗೆ ಮಾತಾಡ್ತಿದ್ಯಾ? ಅಲ್ವೋ ಕುಲಪುತ್ರ. ಅವತ್ತು ಪಾರ್ಟಿಲಿ ಒಂದ್ಸಲ ನೋಡಿರೋದು ಅವಳು ನಿನ್ನ. ಅದೂ ಮಾತುಕತೆ ಇಲ್ವೇ ಇಲ್ಲ. ಅಂತದ್ರಲ್ಲಿ ಒಂದೇ ಏಟಿಗೆ ಫೋನ್ ಮಾಡಿ 'ಮನೆಗೆ ಬನ್ನಿ, ಮುಖ್ಯವಾದ ವಿಷಯ ಮಾತಾಡ್ಲಿಕ್ಕಿದೆ ಅಂದ್ರೆ ಅವಳೇನಂತ ಅರ್ಥ ಮಾಡ್ಕೋಬೇಕು ಹೇಳು?"

"ಅಲ್ಲ ಮಮ್ಮಿ, ಅವಳಿಗೆ ಗೊತ್ತಿದೆ ಮದುವೆ ಪ್ರಸ್ತಾಪದ ಬಗ್ಗೆ. ಹಾಗಿದ್ದಾಗ ಮುಖ್ಯವಾದ ವಿಷಯ ಅದೇ ಅಂತ ಅಷ್ಟೂ ಗೊತ್ತಾಗೋಲ್ವಾ? ಅವಳು ಮಾತಾಡಿದ್ದು ಹೇಗಿತ್ತು ಅಂದ್ರೆ, ಏನೋ ಅವಳಪ್ಪ ಅವಳಿಗೇ ಗೊತ್ತಿಲ್ಲದೇ ಮದುವೆ ಮಾತುಕತೆ ನಡೆಸಿದ್ದಾರೇನೋ ಅನ್ಸೋಹಾಗಿತ್ತು" ಸಿಟ್ಟಿನಲ್ಲಿ ಹೇಳಿದ.

"ಅಭಿ, ಅವಳೇನು ಕೇಳಿದ್ಲೋ ನಿನಗೇನು ಅರ್ಥ ಆಯ್ತೋ ಯಾರಿಗೊತ್ತು. ನೀನು ಮದುವೆ ವಿಚಾರ ನೇರವಾಗಿ ಅವಳ ಹತ್ರ ಮಾತಾಡ್ತೀಯಾ ಅಂತ ಅವಳು ಅಂದುಕೊಂಡಿರೋಲ್ಲಾ ಅನ್ಸುತ್ತೆ. ಸಾಮಾನ್ಯವಾಗಿ ಅರೇಂಜ್ ಮ್ಯಾರೇಜ್ ಗಳಲ್ಲಿ ಇದೆಲ್ಲಾ ಹಿರಿಯರು ಮಾತಾಡ್ಕೊಳ್ಳೋದಲ್ವಾ? ಹಾಗಾಗಿ ಆ ರೀತಿ ಮಾತಾಡಿರಬಹುದು" 

ತಾಯಿಯ ಮಾತು ಸರಿಯೆನಿಸಿತು ಅವನಿಗೆ. ನನ್ನ ಮಾತಿನಿಂದ  ಅವಳಿಗೆ ಬೇಸರವಾಯಿತೇನೋ ಎನಿಸಿತು.

"ಇರಬಹುದೇನೋ. ಸರಿ ಮಮ್ಮಿ. ನಾನು ಆಫೀಸಿಗೆ ಹೊರಟೆ" ಎಂದವ ಸೀದಾ ಆಫೀಸಿನೆಡೆಗೆ ಹೊರಟ. ಆಫೀಸ್ ತಲುಪಿದ ಕೂಡಲೇ, "ಸಾರೀ,ಡೋಂಟ್ ಮೈಂಡ್, ಪ್ಲೀಸ್ ಡೂ ಕಮ್ ಟುಮಾರೋ" ಅಂತ ಅವಳಿಗೊಂದು ಮೆಸೇಜ್ ಹಾಕಿದ.

"ಇಟ್ಸ್ ಓಕೆ. ಐ ವಿಲ್ ಕಮ್" ಎಂಬ ಉತ್ತರ ನೋಡಿ ನೆಮ್ಮದಿಯೆನಿಸಿತು.

'ಹೌದು….. ಅವಳೇನಾದ್ರೂ ಅಂದ್ಕೊಳ್ಳಲಿ ತಮಗೇನು ಸರ್? ಎಷ್ಟೆಂದರೂ ತಮಗೆ ಈ ಮದುವೆ ಇಷ್ಟವಿಲ್ಲ ತಾನೇ?' ಮನಸ್ಸು ಪ್ರಶ್ನಿಸಿತು.

ಹೌದಲ್ಲ..‌... ನಾನ್ಯಾಕೆ ಇವಳ ಬಗ್ಗೆ ಇಷ್ಟು ಮೆದುವಾಗುತ್ತೇನೆ? ತನ್ನನ್ನೇ ಪ್ರಶ್ನಿಸಿಕೊಂಡ. ಉತ್ತರ ದೊರೆಯಲಿಲ್ಲವೋ ಇಲ್ಲಾ ಸಿಕ್ಕ ಉತ್ತರವನ್ನು ಒಪ್ಪಿಕೊಳ್ಳಲು ಹಿಂಜರಿಕೆಯೋ? ತಿಳಿಯಲಿಲ್ಲ.

'ಏನು ಮಿಸ್ಟರ್ ಶರ್ಮಾ? ಲವ್ ಎಟ್ ಫಸ್ಟ್ ‌ಸೈಟಾ?' ಮನ ಛೇಡಿಸಿದಾಗ, 'ಅಲ್ಲಲ್ಲಾ, ಲವ್ ಎಟ್ ಸೆಕೆಂಡ್ ಸೈಟ್. ಇದಕ್ಕೂ ಮುನ್ನ ಅವಳನ್ನು ಎಲ್ಲಿ ನೋಡಿದ್ಯಾ ಅಂತ ನೆನಪಿಸಿಕೋ ಘಜನಿ' ಎಂದು ಮುಖಕ್ಕೆ ಉಗಿಯಿತು ಮೆದುಳು.....

'ಅದೇನೇ ಇರಲಿ, ಇದು ಲವ್ ಎಟ್ ಫಸ್ಟ್ ಸೈಟೇ. ಅದಕ್ಕೇ ಆ ಹುಡುಗಿ ನಿನಗಿನ್ನೂ ನೆನಪಲ್ಲಿರೋದು' ಮನಸ್ಸು ತೊದಲತೊಡಗಿತು.

ತಲೆ ಜಾಡಿಸಿದವನು, 'ಮಿಸ್ಟರ್ ಶರ್ಮಾ, ನೀನು ಹಾಳಾಗೋ ಎಲ್ಲಾ ಲಕ್ಷಣ ಕಾಣಿಸ್ತಾ ಇದೆ. ಮೊದಲು ಮಾಡ್ಬೇಕಾಗಿರೋ ಕೆಲಸ ನೋಡು' ಎಂದುಕೊಂಡವನು

ಮತ್ತೆ, 'ಏನಾದರಾಗಲಿ ನಾಳೆ ಈ ಮುಂಚೆ ಅವಳನ್ನು ಎಲ್ಲಿ ನೋಡಿದ್ದು ಅಂತ ಅವಳನ್ನೇ ಕೇಳಬೇಕು' ಎಂದು ನಿರ್ಧರಿಸಿ ಕೆಲಸದತ್ತ ಗಮನ ಹರಿಸಿದ‌.

                      ***************

ಇತ್ತ ಮೃದುಲಾರೊಂದಿಗೆ ಮಾತನಾಡಿ ಸಮನ್ವಿತಾಳ ಮನ ಉಲ್ಲಾಸಗೊಂಡಿತ್ತು. ಏನೋ ಹಾಯೆನಿಸುವ ಭಾವ....

ಅದರ ಹಿಂದೆ ಅಭಿರಾಮ್ ಮೆಸೇಜ್ ನೋಡಿ ಅವನಿಗೆ ರಿಪ್ಲೈ ಕಳಿಸಿದವಳು, 'ಪ್ರಾಯಶಃ ಅವನು ನಾನು ಹಾಗೂ ಅಪ್ಪ ಒಟ್ಟಾಗಿ ಬಿಸ್ನೆಸ್ ಸಂಭಾಳಿಸುತ್ತೇವೆ ಎಂದುಕೊಂಡಿರಬಹುದೇನೋ. ಅದರ ಬಗ್ಗೆ ಏನಾದರೂ ಮಾತನಾಡಲು ಕರೆದಿರಬಹುದು. ಇರಲಿ ನಾಳೆ ಅವನಿಗೆ ಸ್ಪಷ್ಟವಾಗಿ ಹೇಳಿದರಾಯಿತು' ಎಂದುಕೊಂಡಳು.

ಅವಳ ಮುಖದ ತುಂಬಾ ಹರಡಿದ್ದ ನಸುನಗುವನ್ನು ಕಂಡು "ಏನು ನಮ್ಮ ರಾಜಕುಮಾರಿ ಅವರು ಫೋನಲ್ಲಿ ಮಾತನಾಡಿದ ಮೇಲೆ ಬಹಳ‌ ಆನಂದವಾಗಿದ್ದಾರೆ? ಏನು ವಿಶೇಷ? ಯಾವ್ದಾದ್ರೂ ರಾಜಕುಮಾರನ ಕರೆ ಬಂದಿತ್ತೇ?" ನಗುತ್ತಾ ಛೇಡಿಸಿದಳು ನವ್ಯಾ.

ಅವಳ ನಗುವಿಗೆ ತನ್ನ ನಗುವನ್ನು ಸೇರಿಸುತ್ತಾ, "ಕರೆ ಮಾಡಿದ್ದು ಒಬ್ಬ ರಾಜಕುಮಾರನೇ. ಆದರೆ ನನಗೆ ಆನಂದವಾದದ್ದು ರಾಜಕುಮಾರನಿಂದಲ್ಲ ಸಖೀ, ರಾಜಮಾತೆಯೊಂದಿಗೆ ಸಂಭಾಷಿಸಿದ್ದರಿಂದ" ಮತ್ತಷ್ಟು ನಕ್ಕಳು ತನ್ನ ಸಂಭಾಷಣೆಯ ಪರಿಗೆ.

"ಓಹೋ ಪರವಾಗಿಲ್ಲವೇ, ಎಲ್ಲಾ ಅತ್ತೆ ಮಗನ್ನ ಪಟಾಯಿಸಿದ್ರೆ ತಾವು ಅತ್ತೇನೇ ಒಲಿಸಿಕೊಂಡ್ಬಿಟ್ಟಿದ್ದೀರಾ" ಮತ್ತೆ ತಮಾಷೆ ಮಾಡಿದಳು.

"ಎಲ್ಲಾ ತಮ್ಮ ದಯೆಯಿಂದ ನವ್ಯಾ ಮೇಡಂ. ನೀವು ಮಂಗಳಾ ಅಮ್ಮನ್ನ ಪಟಾಯಿಸಿಲ್ವಾ? ಪಾಪ ಕಿಶೋರ್, 'ಇವಳು ಮನೆಗೆ ಬಂದಮೇಲೆ ನನ್ನ ಗೋಳು ಕೇಳೋರಿಲ್ಲದಂಗೆ ಆಗಿದೆ, ಕೆಲವೊಮ್ಮೆ ಇದು ಅವಳ ಅತ್ತೆ ಮನೆನಾ ಇಲ್ಲಾ ನನ್ನ ಅತ್ತೆ ಮನೇನಾ ಅಂತ ಅನುಮಾನ ಬರುತ್ತೆ' ಅಂತ ಒಂದೇ ಕಣ್ಣಲ್ಲಿ ಅಳ್ತಿರ್ತಾನೆ" ಜೋರಾಗಿ ನಕ್ಕಳು. ಅವಳ‌ ಮಾತಿಗೆ ನವ್ಯಾಳಿಗೂ ನಗು ತಡೆಯಲಾಗಲಿಲ್ಲ.

"ಅದು ಬಿಡು. ಹಳೆ ವಿಷ್ಯ. ಈಗ ನಿನ್ನ ವಿಷಯ ಹೇಳು.  ನಮ್ಮ ರಾಜಕುಮಾರನ ಹೆಸರೇನು?" ಕೇಳಿದಳು. 

"ಅಮ್ಮಾ ತಾಯಿ, ನೀನೇನೋ ಕೇಳ್ದೇ, ನಾನೇನೋ ಹೇಳ್ದೇ. ಅದ್ನೆಲ್ಲಾ ಗಂಭೀರವಾಗಿ ತಗೋಬೇಡ ಮತ್ತೆ" ಕೈ ಮುಗಿದಳು.

"ಮಾತು ಬದಲಿಸಬೇಡ ಸಮಾ. ನಾನೇನು ಮಹಾ ಕೇಳಿದ್ದು? ಹೆಸರೇನು ಅಂದ್ನಪ್ಪ"

"ಫೋನ್ ಮಾಡಿದವರ ಹೆಸರು ಅಭಿರಾಮ್ ಶರ್ಮಾ ‌ಅಂತ. ಆಮೇಲೆ ಮಾತಾಡಿದ್ದು ಅವರ ಅಮ್ಮ ಮೃದುಲಾ. ತುಂಬಾ ಒಳ್ಳೆಯವರು ಮಂಗಳಾ ಅಮ್ಮನ ತರಾನೇ. ಮೊನ್ನೆ ಮನೇಲೀ ಒಂದು ಪಾರ್ಟಿ ಇತ್ತು ಅಂದ್ನಲ್ಲ. ಅಲ್ಲಿ ಪರಿಚಯ ಆಗಿದ್ದು. ಅವರಪ್ಪ, ಮತ್ತೆ ತಂಗಿ ಆಕೃತಿ ಎಲ್ಲಾ ತುಂಬಾ ಹಿಡಿಸಿದರು. ನಾಳೆ ಅವರ ಮನೆಗೆ ಕರೆಯೋಕೆ ಫೋನ್ ಮಾಡಿದ್ರು" ಅಷ್ಟೂ ಹೇಳಿ ಮುಗಿಸಿದಳು.

"ಅಭಿರಾಮ್ ಶರ್ಮಾ.... ಈ ಹೆಸರು ಕೇಳಿದ ಹಾಗಿದೆಯಲ್ವಾ?"

"ನಮ್ಮ ಧನ್ವಂತರಿ ಆಸ್ಪತ್ರೆಗೆ ಇವರೂ ಒಬ್ಬ ಕಾಂಟ್ರಿಬ್ಯೂಟರ್ ಕಣೇ. ಮೀರಾ ಮೇಡಂ ಆವಾಗಾವಾಗ ಹೇಳ್ತಿರ್ತಾರಲ್ಲ ಶರ್ಮಾ ಎಂಪೈರ್ ಅಂತ, ಅದರ ಓನರ್" 

"ಹಾ ಕರೆಕ್ಟ್. ತುಂಬಾ ಒಳ್ಳೆಯ ಜನ ಅಲ್ವಾ"

"ನನಗೆ ಅವ್ರನ್ನ ಮೊನ್ನೆ ಪಾರ್ಟಿಯಲ್ಲಿ ನೋಡಿ ಶ್ರೀಮಂತರು ಹೀಗೂ ಇರ್ತಾರಾ ಅನ್ನಿಸಿಬಿಟ್ಟಿತು. ನಾನು ದುಡ್ಡಿರೋರೆಲ್ಲಾ ನನ್ನಪ್ಪ ಅಮ್ಮನ ಹಾಗೇ ಮಕ್ಕಳನ್ನು ಪರದೇಸಿಗಳನ್ನಾಗಿಸಿ, ಪಾರ್ಟಿ ಮಾಡ್ಕೊಂಡು, ಮೂರ್ಹೊತ್ತೂ ದುಡ್ಡಿಗೋಸ್ಕರ ಸಾಯ್ತಾ ಇರ್ತಾರೆ ಅಂದ್ಕೊಂಡಿದ್ದೆ. ಇವರನ್ನು ನೋಡಿದ ಮೇಲೆ ಗೊತ್ತಾಗಿದ್ದು ದುಡ್ಡಿನ ಜೊತೆ ಸಂಸ್ಕಾರಗಳು ಇರುವಂತ ಸಿರಿವಂತರೂ ಇದ್ದಾರೆ ಅಂತ. ಅವರು ಮಕ್ಕಳನ್ನು ಫ್ರೆಂಡ್ ತರ ನೋಡ್ತಾರೆ ಕಣೇ. ಮಕ್ಕಳ ಎಲ್ಲಾ ಬೇಕು ಬೇಡಗಳು ಗೊತ್ತಿದೆ ಅವರಿಗೆ. ನನ್ನ ಹಣೆಬರಹ ಹೀಗಿದೆ ಅಂತ ಎಲ್ಲಾ ಶ್ರೀಮಂತರ ಮಕ್ಕಳ ಹಣೆಬರಹ ಸರಿ ಇರೋಲ್ಲ ಅಂದ್ಕೊಬಿಟ್ಟಿದ್ದೆ. ಹುಚ್ಚಿ ನಾನು" ಗಂಭೀರವಾಗಿ ಆರಂಭವಾದ ಮಾತು ಮುಗಿಸುವಾಗ ಅವಳ ಕಣ್ಣಲ್ಲಿ ನೀರಿತ್ತು.

ನವ್ಯಾಳಿಗೆ ಸಂಕಟವಾಯಿತು. ಏನು ಹೇಳಬೇಕೆಂದು ತಿಳಿಯದೇ ಅವಳನ್ನು ಮಡಿಲಿಗೆಳೆದುಕೊಂಡು ಸುಮ್ಮನೇ ತಲೆ ನೇವರಿಸತೊಡಗಿದಳು.

ತನ್ನನ್ನು ತಾನೇ ಸಂಭಾಳಿಸಿಕೊಂಡವಳು ಎದ್ದು ಅವಳ ಹೆಗಲ ಮೇಲೆ ತಲೆಯಿಟ್ಟು "ಮೊನ್ನೆ ಅವರನ್ನು ನೋಡಿದಾಗಿನಿಂದ ನನಗೂ ಅವರಂಥ ಅಪ್ಪ ಅಮ್ಮ ಇರ್ಬೇಕಿತ್ತು ಅನ್ನೋ ಆಸೆ ವಿಪರೀತವಾಗಿದೆ ಕಣೇ. ನನಗೇ ಯಾಕೆ ಹೀಗಾಗಿದ್ದು? ನಾನು ಹೋದ ಜನ್ಮದಲ್ಲಿ ಯಾರಿಗೋ ತುಂಬಾ ಅನ್ಯಾಯ ಮಾಡಿದ್ದೆ ಅನ್ಸುತ್ತೆ ಅಲ್ವಾ. ಅದಕ್ಕೇ ನನ್ನ ಹತ್ರ ಎಲ್ಲಾ ಇದ್ರೂ ಏನೂ ಇಲ್ಲ ಅಂತಾಗಿರೋದು. ನವ್ಯಾ ನಾನು ಧನ್ವಂತರಿ ಆಸ್ಪತ್ರೆಯಲ್ಲಿ,ಆಶ್ರಯ ಸಂಸ್ಥೆಯಲ್ಲಿ ಯಾಕೆ ಕೆಲಸ ಮಾಡ್ತೀನಿ ಗೊತ್ತಾ? ನನಗೆ ಈ ಕೆಲಸ ನೆಮ್ಮದಿ ಕೊಡುತ್ತದೆ ಅನ್ನೋದು ಮೂಲ ಕಾರಣ ಹೌದಾದ್ರೂ, ಮನದ ಯಾವುದೋ ಒಂದು ಮೂಲೆಯಲ್ಲಿ ನಾನು ಈ ಜನ್ಮದಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಮುಂದಿನ ಜನ್ಮದಲ್ಲಾದ್ರೂ ನನಗೆ ಒಳ್ಳೆ ಕುಟುಂಬ ಸಿಗುತ್ತೇನೋ ಅನ್ನುವ ಆಸೆಯೂ ಇದೆ. ಇಂಥಾ ಅಪ್ಪ ಅಮ್ಮನೇ ಸಿಗೋದಾದ್ರೆ ನಂಗೆ ಬದುಕೇ ಬೇಡ" ನಿಟ್ಟುಸಿರು ಬಿಟ್ಟಳು.

"ಸಮಾ, ನಾವಿಬ್ರೂ ಮೊದಲು ಭೇಟಿಯಾಗಿದ್ದು ಸರಿಸುಮಾರು ಐದು ವರ್ಷಗಳ ಹಿಂದೆ. ಅವತ್ತಿಂದ ಇವತ್ತಿನವರೆಗೂ ನನ್ನ ಎಲ್ಲಾ ಸಮಸ್ಯೆಗಳನ್ನೂ ನೀನು ಹಂಚಿಕೊಂಡೆ. ನಾನಿವತ್ತು ಹೀಗಿದ್ದೀನಿ ಅಂದ್ರೆ ಇದಕ್ಕೆ ಕಾರಣವೇ ನೀನು. ನೀನು ನನ್ನ ಬದುಕಿನಲ್ಲಿ ಬರದಿದ್ದರೇ ನಾನು ಅದೇ ನರಕದಲ್ಲೇ ನರಳಿ ಯಾವತ್ತೋ ಒಂದು ದಿನ ಸಾಯ್ತಿದ್ದೆ. ನಿನ್ನ ಸ್ವಪ್ರಯತ್ನದಿಂದ ನನ್ನ ಅಲ್ಲಿಂದ ಬಿಡಿಸಿಕೊಂಡೆ. ಕಿಶೋರನಂತಹ ಸಂಗಾತಿಯನ್ನು ನನಗಂತ ಆರಿಸಿಕೊಟ್ಟೆ. ನನ್ನ ಮಾ ಬಾಬಾನ ಪಡಿಯಚ್ಚಿನಂತ ಅಪ್ಪ ಅಮ್ಮ, ತಲೆ ಮೇಲಿಟ್ಟು ಮೆರೆಸೋ ಮೈದುನ…. ಇದೆಲ್ಲಾ ನೀನೇ ಹಾಕಿರೋ ಭಿಕ್ಷೆ. ನನಗಾಗಿ ಇಷ್ಟೆಲ್ಲಾ ಮಾಡಿದವಳು ನಿನ್ನ ಯಾವ ನೋವನ್ನೂ ನನ್ನೊಟ್ಟಿಗೆ ಹಂಚಿಕೊಂಡಿಲ್ಲ. ಯಾಕೆ? ನಾನಷ್ಟು ಹೊರಗಿನವಳಾದೆನಾ ನಿನಗೆ? ಒಂದೇ ಒಂದು ಕ್ಷಣಕ್ಕೂ ನಿನ್ನ ಮನದಲ್ಲಿ ಇಷ್ಟೆಲ್ಲಾ ವೇದನೆ ಇದೆ ಅಂತ ತೋರಿಸ್ಕೊಳ್ಳದೇ ಇರೋಕೆ ಹೇಗೆ ಸಾಧ್ಯ?  ನನ್ನಿಂದಲೂ ಎಲ್ಲಾ ಮುಚ್ಚಿಟ್ಟೆಯಲ್ವೇ?" ಅವಳ ತಲೆದಡವುತ್ತಾ ಕೇಳಿದ್ದಳು.

ಅರೆಘಳಿಗೆ ಮೌನ.......

"ನಿನಗೆ ಗೊತ್ತಾ ನವ್ಯಾ, ವಿದೇಶದಲ್ಲಿದ್ದ ಕಾಲದಲ್ಲಿ ನಾನೆಷ್ಟು ನಿರಾಶಾವಾದಿಯಾಗಿದ್ದೆ ಅಂದ್ರೆ ಮೂರ್ನಾಲ್ಕು ಬಾರಿ ಆತ್ಮಹತ್ಯೆ ಮಾಡ್ಕೊಳ್ಳೋಣ ಅನ್ನಿಸಿದ್ದಿದೆ. ಅಷ್ಟು ದುರ್ಬಲಳಾಗಿದ್ದೆ. ನನ್ನಿಂದ ಬದುಕೋಕೆ ಸಾಧ್ಯವೇ ಇಲ್ಲ ಅನ್ನಿಸ್ತಾ ಇತ್ತು. ಆದ್ರೆ ಸಾಯೋಕೆ ಧೈರ್ಯ ಸಾಲ್ತಿರ್ಲಿಲ್ಲ. ಒಂದು ಸಾರಿ ಆ ಪ್ರಯತ್ನವನ್ನೂ ಮಾಡಿ........ ಯಕ್…... 

ಬೇಡಬಿಡು ನವ್ಯಾ. ನಾನದನ್ನು ನೆನಪಿಸ್ಕೊಳ್ಳೋಕೂ ಇಷ್ಟ ಪಡೋಲ್ಲ. ಸಾಯೋದು ಕಷ್ಟ ಅನ್ಸಿದಾಗ ಎದುರುಬಿದ್ದು ಬದುಕೋಣ ಅಂತ ನಿರ್ಧಾರ ಮಾಡಿದೆ.

ಬದುಕೋಕೆ ಒಂದು ಲಕ್ಷ್ಯ ಬೇಕಿತ್ತು. ಅಪ್ಪ ಅಮ್ಮನ ಮೇಲಿದ್ದ ತೀರದ ಕೋಪವನ್ನೇ ನನ್ನ ಲಕ್ಷ್ಯ ಮಾಡ್ಕೊಂಡೆ. ಅವರ ಎಲ್ಲಾ ಮಾತನ್ನು ವಿರೋಧಿಸೋಕಾದ್ರೂ ನಾನು ಬದುಕಬೇಕು ಅಂದ್ಕೊಂಡೆ. ಅವತ್ತಿಂದ ಅವರೆಲ್ಲಾ ನಿರ್ಧಾರನೂ ವಿರೋಧಿಸಿದೆ. ಲಂಡನಲ್ಲಿ ಇದ್ದು ಜಾಬ್ ಮಾಡು ಅಂದ್ರು, ಬಿಟ್ಟು ಇಲ್ಲಿಗೆ ಬಂದೆ. ಧನ್ವಂತರಿ ಸೇರಬೇಡ ಅಂದ್ರು, ಅಲ್ಲೇ ಕೆಲಸಕ್ಕೆ ಸೇರಿದೆ. ಆಶ್ರಯ ಸಂಸ್ಥೆಗೆ ಹೋಗಲೇಬಾರದು ಅಂದ್ರು, ನಾನು ಅಲ್ಲಿಗೇ ಹೋದೆ. ಒಟ್ಟಲ್ಲಿ ಅವ್ರು ಬೇಡ ಅಂದಿದ್ದೆಲ್ಲಾ ನನಗೆ ಬೇಕಿತ್ತು. ಅದರಿಂದ ನನಗೇನೂ ನಷ್ಟ ಆಗಿಲ್ಲ. ಯಾಕೆಂದ್ರೆ ಅವರ ಮೇಲಿನ ಜಿದ್ದಗೇ ಆದ್ರೂ ನಾನು ಮಾಡಿದ ಕೆಲಸ ಎಲ್ಲಾ ನನಗೆ ಆತ್ಮತೃಪ್ತಿ ಕೊಟ್ಟಿದೆ. ಇಷ್ಟೆಲ್ಲಾ ಆದ್ರೂ ನಾನು ನಿರಾಶಾವಾದಿನೇ ಆಗಿದ್ದೆ. ಬದುಕಿನಲ್ಲಿ ಯಾವ ಆಸಕ್ತಿನೂ ನನಗಿರಲಿಲ್ಲ. ಇಂಥಾ ನಿರರ್ಥಕ ಜೀವನ ನಡೆಸ್ತಾ ಇದ್ದ ನಾನು ಅವತ್ತು ಆ ಮೆಡಿಕಲ್ ಕ್ಯಾಂಪಲ್ಲಿ ನಿನ್ನ ನೋಡಿದ್ದು…... ಅವತ್ತಿಂದ ನನ್ನ ಯೋಚನೆಯ ದಿಕ್ಕೇ ಬದಲಾಯ್ತು ನೋಡು. ನನಗೆ ಸಮಸ್ಯೆಗಳಿತ್ತು ನಿಜ. ಆದರೆ ನಿನ್ನ ಸಮಸ್ಯೆ ಮುಂದೆ ನನಗಿದ್ದಿದ್ದು ಸಮಸ್ಯೆನೇ ಅಲ್ಲ. ನಿನ್ನ ಜೀವನ ಮೂರಾಬಟ್ಟೆಯಾಗಿತ್ತು. ಕನಸಲ್ಲೂ ನೆನಸಿಕೊಳ್ಳಲು ಭಯವಾಗೋ ಬದುಕು.... ಆದರೂ ನೀನು ಎಷ್ಟು ಜೀವನಪ್ರೀತಿ ಇಟ್ಟು ಬದುಕ್ತಿದ್ದೆ ಅನ್ನೋದೇ ಆಶ್ಚರ್ಯ ತಂದಿತ್ತು ನನಗೆ. 'ನನ್ನದಲ್ಲದ ತಪ್ಪಿಗೆ ನಾನ್ಯಾಕೆ ಸಾಯ್ಲಿ' ಅನ್ನೋ ನಿನ್ನ ಮಾತು ನಾನು ಕೇಳಿದ ದಿನ ಹೇಡಿ ಹಾಗೆ ಆತ್ಮಹತ್ಯೆ ಮಾಡ್ಕೋಳ್ಳೋಕೆ ಹೊರಟ್ಟಿದ್ದ ನನ್ನ ಮೇಲೆ ನನಗೇ ಜಿಗುಪ್ಸೆ ಬಂತು. ಹೌದಲ್ಲ….... ತಪ್ಪು ನನ್ನಪ್ಪ ಅಮ್ಮನದೇ ಹೊರತು ನನ್ನದಲ್ಲ. ನಾನ್ಯಾಕೆ ಸಾಯೋಕೆ ಹೊರಟ್ಟಿದ್ದೆ ಅನ್ನಿಸ್ತು. ಅವರ ಮೇಲಿನ ದ್ವೇಷನೇ ಬದುಕಿನ ಲಕ್ಷ್ಯವನ್ನಾಗಿಸಿ ನಿರರ್ಥಕ ಬಾಳು ಬಾಳುತ್ತಿರುವೆನಲ್ಲಾ, ಅವರು ನನ್ನ ಬಗ್ಗೆ ಕ್ಷಣಮಾತ್ರವಾದರೂ ಯೋಚಿಸುತ್ತಿದ್ದಾರಾ? ಇಲ್ಲವಲ್ಲ. ಮತ್ತೇ ನಾನ್ಯಾಕೆ ಹೀಗೆ ಹುಚ್ಚಿಯಂತೆ ಇರುವ ಒಂದು ಬದುಕನ್ನೂ ಹಾಳು ಮಾಡ್ಕೋತಿದ್ದೀನಿ ಅನ್ನಿಸಿತು. ಅಷ್ಟೇ….... ನನ್ನ ಬದುಕು ಬದಲಾಯಿತು. 

ನೀನು ನನ್ನ ಬಾಳಿನ ಲಕ್ಷ್ಯ ಆದೆ ನವ್ಯಾ. ಎಂತಹ ಪರಿಸ್ಥಿತಿಯಲ್ಲೂ ನಿನ್ನೆದುರು ಸೋಲೋದಿಲ್ಲ ಅಂತ ಬದುಕಿಗೆ ಸವಾಲು ಹಾಕಿದ ನಿನ್ನ ಸೋಲೋಕೆ ಬಿಡೋಲ್ಲ ಅಂತ ಪಣತೊಟ್ಟೆ. ನಿನ್ನ ಅಲ್ಲಿಂದ ಹೊರತಂದೆ. ನಿನಗೊಂದು ಸೆಲ್ಫ್ ಐಡೆಂಟಿಟಿ ಕೊಡ್ಬೇಕು ಅಂತ ನಿರ್ಧಾರ ಮಾಡಿ, ನಿನಗೆ ಧನ್ವಂತರಿಯಲ್ಲಿ ಕೆಲಸ ಕೊಡಿಸಿದ್ದು. ನೀನು ಈ ಹಾಳು ಸಮಾಜನ ಎದುರಿಸೋ ಧೈರ್ಯ ಬೆಳೆಸ್ಕೋ ಅಂತ. ಎಲ್ಲಾ ನಾನಂದುಕೊಂಡ ಹಾಗೇನೇ ಆಯ್ತು. ನನ್ನ ಪ್ರಯತ್ನಕ್ಕೆ ದೇವರೂ ಜೊತೆಯಾದನೇನೋ, ಕಿಶೋರ್ ನಿನ್ನ ಮದುವೆ ಆಗ್ತೀನಿ ಅಂತ ಹಟ ಹಿಡಿದು ನಿನ್ನ ಒಪ್ಪಿಸಿದ. ಅದು ನನ್ನ ಬದುಕಿನ ಮರೆಯಲಾರದ ದಿನ. ನಿನಗೆ ಅಪ್ಪ, ಅಮ್ಮ, ತಮ್ಮ ಎಲ್ಲಾ ಸಿಕ್ಕಿದ್ರು. ನಿನ್ನ ಖುಷಿ ನನ್ನ ಬದುಕಿನ ಅಸ್ಥಿತ್ವ ನವ್ಯಾ. ನನ್ನ ಬದುಕಿಗೆ ಸ್ಪೂರ್ತಿ, ಧ್ಯೇಯ, ಲಕ್ಷ್ಯ, ಆದಿ, ಅಂತ್ಯ ಎಲ್ಲಾ ನೀನೇ. ನನ್ನ ಅಮ್ಮ, ಮಗಳು, ಅಕ್ಕ,ತಂಗಿ ಎಲ್ಲಾ ಸಂಬಂಧಗಳೂ ನೀನೆ. ನಿನಗೆ ಬೇಜಾರಾದ್ರೆ ನನಗೆ‌ ತಡ್ಕೊಳ್ಳೋಕ್ಕಾಗಲ್ಲ. ಅದಕ್ಕೆ‌ ನನ್ನ ಸಂತೋಷದಲ್ಲಿ ನಿನಗೆ ಪೂರ್ತಿ ಪಾಲಿದೆ. ಇನ್ನು ನನ್ನ ನೋವು ನಿನ್ನ ಮೇಲೆ ಅವಲಂಬಿತ. ಅಪ್ಪ, ಅಮ್ಮ, ಬಂಧು, ಬಳಗ ಎಲ್ಲಾ ಯಾವತ್ತೋ ಬಿಟ್ಟಾಗಿದೆ. ಆದ್ರೂ ಕೆಲವೊಮ್ಮೆ ಮನದಾಳದಲ್ಲಿ ಯಾವತ್ತೋ ಉಳಿದ ಕಹಿ ಹೀಗೆ ಹೊರಬರುತ್ತೆ ಅಷ್ಟೇ. ಅವರಿಂದ ಯಾವ ನಿರೀಕ್ಷೆಯೂ ಇಲ್ಲ ನನಗೆ. ಆದರೂ ಒಮ್ಮೊಮ್ಮೆ ಮನಸು ಅಂಕೆ ಮೀರುತ್ತೆ ಕಣೇ ಆಗ ನಂಗೇ ಗೊತ್ತಾಗದೇ ಹೀಗೆ ಕಣ್ಣಲ್ಲಿ ನೀರು ಸುರಿಯುತ್ತೆ. ಮೊನ್ನೆ ಶರ್ಮಾ ಫ್ಯಾಮಿಲಿ ನೋಡಿದಲ್ಲಿಂದ ಮನಸ್ಯಾಕೋ ಹಳಿ ತಪ್ಪಿತ್ತು. ಅದು ಹೀಗೆ ಇವತ್ತು ನಿನ್ನೆದುರು ಹೊರಗೆಬಂತಷ್ಟೇ."

ಅವಳ ಮಾತು ಮುಗಿಯುವ ಮುನ್ನವೇ ನವ್ಯಾ ಅವಳನ್ನು ಗಟ್ಟಿಯಾಗಿ ಅಪ್ಪಿದ್ದಳು.

"ನವ್ಯಾ, ನನ್ನ ಮನೆ, ಬಂಧು ಬಳಗ ಇವರಿಗೆಲ್ಲಾ ಏನಾದ್ರೂ ನನಗೇನು ಅನಿಸದು. ಅಷ್ಟರ ಮಟ್ಟಿಗೆ ಅವರ ಬಗ್ಗೆ ನನ್ನ ಮನಸ್ಸು ವಿಮುಖವಾಗಿದೆ. ಆದ್ರೆ ನಿನಗೆ ಏನಾದ್ರೂ ಆದ್ರೆ….... ತಡ್ಕೊಳ್ಳೋಕಾಗಲ್ಲ ನವ್ಯಾ. ನನಗೆ ಗೊತ್ತು. ಮನೆಯಲ್ಲಿ ನೀನು ಹಿಂದೆ ಏನ್ಮಾಡ್ತಿದ್ದೆ ಅಂತ ಗೊತ್ತಾದ್ರೇ ಮುಂದೇನು ಅನ್ನೋ ಭಯ ನಿನಗಿದೆ‌ ಅಂತ. ಬಟ್ ಟ್ರಸ್ಟ್ ಮೀ, ಸಧ್ಯದಲ್ಲೇ ಇದಕ್ಕೊಂದು ಪರಿಹಾರ ಹುಡುಕ್ತೀನಿ. ಆದ್ರೆ ನೀನು ಮಾತ್ರ ಬೇಜಾರಾಗ್ಬೇಡ. ಕಷ್ಟ ಯಾರಿಗಿಲ್ಲ ಹೇಳು? ಅಂತಾ ದೇವರಿಗೂ ಕಷ್ಟ ತಪ್ಲಿಲ್ಲ. ಇನ್ನು ನಾನು, ನೀನು ಯಾವ ಲೆಕ್ಕ? ಕಷ್ಟಗಳು ಇಲ್ಲದೆ ಬದುಕಿಗೆ ಬೆಲೆ ಇಲ್ಲ. ಬದುಕಿನ ಸಾರ್ಥಕತೆ ಇರೋದು ಕಷ್ಟಗಳನ್ನು ಎದುರಿಸಿ ನಿಲ್ಲೋದರಲ್ಲಿ. ಇದನ್ನ ನಂಗೆ ಕಲಿಸಿದ್ದು ನೀನೇ..... " ನಕ್ಕಳು.

"ನಾನು ಆಗ ಹೇಗೆ ಯೋಚಿಸ್ತಿದ್ನೋ ನೀನು ಈಗ ಹಾಗೇ ಯೋಚಿಸ್ತಿದ್ದೀಯ ಸಮನ್ವಿತಾ"

"ಬಟ್ ನೀನು, ನಾನಾಗ ಹೇಗಿದ್ನೋ ಹಾಗಾಗಿದ್ದೀಯ ಈಗ. ಅದಲಿ ಬದಲಿ ಆಗಿದೆ ನಮ್ಮ ಯೋಚನೆಗಳು" ಮತ್ತೆ ಇಬ್ಬರೂ ನಕ್ಕರು.

"ಹೌದು ಅಭಿರಾಮ್ ನೋಡೋಕೆ ಹೇಗಿದ್ದಾರೆ?" ಒಂದು ನವಿರಾದ ಮೌನದ ನಂತರ ತುಂಟ ಧ್ವನಿಯಲ್ಲಿ ಕೇಳಿದಳು ನವ್ಯಾ.

"ಹೇಗಿದ್ದಾರೆ ಅಂದ್ರೆ? ನಾರ್ಮಲ್ ಮನುಷ್ಯರ ಹಾಗೇ ಇದ್ದಾರೆ"

"ಅಂದ್ರೆ? ಸ್ವಲ್ಪ ವಿವರಿಸಿ ಹೇಳ್ತಿಯಾ?" 

"ಅಂದ್ರೆ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇರಬೇಕಾದ ಕಡೆನೇ ಇದೆ ಅಂತ. ಈಗ ಅವರ ವಿವರ ತಗೊಂಡು ಏನು ಮಾಡ್ತೀಯಾ?" ರೇಗಿದಳು.

"ನಂಗ್ಯಾಕೋ ಡೌಟ್"

"ಏನು ನಿನ್ನ ಡೌಟ್?"

"ಅಲ್ಲಾ, ಮನೆಗೆ ಬಾರಮ್ಮ ಅಂತ ರಾಜಮಾತೆ ಹೇಳಿದ್ರೆ ಸಾಕಿತ್ತಪ್ಪ. ರಾಜಕುಮಾರನೇ ಕರೆ ಮಾಡಿ ಮಾತಾಡೋಕಿದೆ ಮನೆಗೆ ಬನ್ನಿ ಅಂತ ಕರ್ದಿದ್ದಾನೆ ಅಂದ್ರೆ......"

"ಅಂದ್ರೆ‌...... ಏನು?"

"ಅದೇ ಏನೂ ಅಂತಾ"

"ಏನೂ ಅಂತೆ ಏನು….. ಏನೂಂದ್ರೆ ಆನೆ ಮನೆ ಗೂನು"

"ನೋಡು ನನಗೆ 100% ಅನ್ಸತ್ತೆ ನಮ್ಮ ರಾಜಕುಮಾರ ತಮ್ಮ ಹೃದಯವನ್ನು ಕಳ್ಕೊಂಡು ನರಳುತ್ತಿರಬಹುದು ಅಂತ. ಅದಕ್ಕೆ……."

"ಅದಕ್ಕೆ.......? ಮುಂದುವರೆಸು"

"ಅದಕ್ಕೆ ತಮ್ಮ ಹೃದಯ ಅಪಹರಿಸಿದ ರಾಜಕುಮಾರಿ ವೈದ್ಯೆಯೂ ಆಗಿರುವುದರಿಂದ ಸ್ವಾಮಿ ಕಾರ್ಯ, ಸ್ವ ಕಾರ್ಯ ಎರಡೂ ಆಗುತ್ತೆ ಅಂತಾ ತಮಗೆ ಕರೆ ಮಾಡಿದ್ದಾರೆ. ಪಾಪ ಅಷ್ಟು ಪ್ರೀತಿಯಿಂದ ಕರೆ ಮಾಡಿದ್ರೇ ನೀನು ಬಾಯಿಗೆ ಬಂದ್ಹಾಗೆ ಮಾತಾಡಿದೆ."

"ನಾನೇನು ಬಾಯಿಗೆ ಬಂದ್ಹಾಗೆ ಮಾತಾಡಿದ್ದು"

"ಮತ್ತೆ? ನಿನ್ನ ಮಾತು ಕೇಳೋಕಾಗ್ದೇ ತಾನೇ ಅಮ್ಮನಿಗೆ ಫೋನ್ ಕೊಟ್ಟಿದ್ದು. ಪಾಪ ಒಂದಷ್ಟು ಸರಸ ಸಲ್ಲಾಪ ಮಾಡೋಣ ಅಂದ್ಕೊಂಡು ಫೋನ್ ಮಾಡಿದ್ದನೇನೋ? ನೀನು ಬರೀ ಪ್ರಲಾಪ ಮಾಡಿ ಫೋನಿಟ್ಟೆ. ಓ..... ಕರೆಕ್ಟ್ ನಾನಿದ್ನಲ್ಲಾ ಶಿವಪೂಜೆಲೀ ಕರಡಿ ತರಾ. ಅದಕ್ಕೇ ಮೇಡಂ ಮೆಸೇಜಲ್ಲಿ ಸಂಭಾಷಿಸಿದ್ದೋ...... ಪ್ರೇಮ ಸಂದೇಶ...... ಆಹಾ… ಅಲ್ನೋಡು ಮುಖವೆಲ್ಲಾ ಎಷ್ಟು ಕೆಂಪಾಯ್ತು"

"ನವ್ಯಾ ...... ಸುಮ್ನಿರು ಬೇಡ" ಸಮನ್ವಿತಾಳ ಕದಪುಗಳು ಕೆಂಪಾಗಿದ್ದಂತೂ ನಿಜ.

"ನಾಚಿಕೆ ಮುಖದ ತುಂಬಾ..... ಅದಕ್ಕೇ ಮೆಸೇಜ್ ನೋಡಿ ಬಹಳ ನಗುಬರ್ತಿತ್ತು ರಾಜಕುಮಾರಿಯವರಿಗೆ......  ಏನು...? ಲವ್ ಎಟ್ ಫಸ್ಟ್ ಸೈಟಾ...."

"ನವ್ಯಾ...." ಮನೆತುಂಬಾ ಅಟ್ಟಿಸಿಕೊಂಡು ಹೋದಳು ಸಮನ್ವಿತಾ. ಹಾಗೂ ಹೀಗೂ ಅಳುವನ್ನು ಮರೆತು ಇಬ್ಬರೂ ನಕ್ಕರು.......

ರಾತ್ರಿ ನವ್ಯಾಳನ್ನು ಮನೆಗೆ ಬಿಟ್ಟು ಅಲ್ಲೊಂದಿಷ್ಟು ಹರಟೆ ಹೊಡೆದು ಮನೆಗೆ ಬಂದು ಮಲಗಿದವಳ ಮನ ಪ್ರಶಾಂತವಾಗಿತ್ತು. ನಾಳೆ ಮಧ್ಯಾಹ್ನ ಮೃದುಲಾ ಅವರ ಮನೆಗೆ ಹೋಗಬೇಕೆಂದು ನೆನಪಿಸಿಕೊಂಡಳು. ನವ್ಯಾಳ ಮಾತುಗಳು ನೆನಪಾಗಿ ತುಟಿಯಂಚಿನಲ್ಲಿ ತಾನೇತಾನಾಗಿ ನಗುವರಳಿದಾಗ ತಲೆಗೊಂದು ಮೊಟಕಿಕೊಂಡು ಮಗ್ಗುಲಾದಳು.

ಇತ್ತ ನವ್ಯಾಳ ತಲೆ ತುಂಬಾ ಅಭಿರಾಮ್ ಇದ್ದ. ಅವಳ ಮನ ಏನೋ ಲೆಕ್ಕಾಚಾರದಲ್ಲಿತ್ತು. ಕಿಶೋರನೊಂದಿಗೆ ಎಲ್ಲಾ ವಿಚಾರ ಹೇಳಿ ತನ್ನ ಯೋಚನೆಯನ್ನೂ ತಿಳಿಸಿದಳು. ಅವನಿಗೂ ಅವಳ ಮಾತಿನಲ್ಲಿ ಅರ್ಥವಿದೆ ಎನಿಸಿತು. ಅಭಿರಾಮ್ ಬಗ್ಗೆ ನಾಳೆಯಿಂದಲೇ ಮಾಹಿತಿ ಸಂಗ್ರಹಿಸಬೇಕೆಂದು ನಿರ್ಧರಿಸಿದ ಹಿತೈಷಿಗಳಿಬ್ಬರ ಮನದಲ್ಲಿ ಹೇಗಾದರೂ ಸಮನ್ವಿತಾಳ ನೋವನ್ನು ತಮ್ಮ ಕೈಲಾದಷ್ಟಾದರೂ ಶಮನಗೊಳಿಸಲೇಬೇಕೆಂಬ ಇಂಗಿತವಿತ್ತು.

‌‌*********ಮುಂದುವರೆಯುತ್ತದೆ************



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ