ಸೋಮವಾರ, ಜೂನ್ 29, 2020

ಅನೂಹ್ಯ 34

ಸಮನ್ವಿತಾ ಇಂದು ಡಿಸ್ಚಾರ್ಜ್ ಆಗಲೇಬೇಕೆಂದು ಪಣತೊಟ್ಟು ಮೀರಾ ಅವರು ವಾರ್ಡಿಗೆ ಬಂದೊಡನೆಯೇ ಅವರ ಬೆನ್ನು ಬಿದ್ದಿದ್ದಳು.

"ಪ್ಲೀಸ್ ಮೀರಾ ಮೇಡಂ, ಡಿಸ್ಚಾರ್ಜ್ ಮಾಡ್ಬಿಡಿ...ನಾನು ಎಲ್ಲಾ ಮೆಡಿಸಿನ್ ಸರಿಯಾಗಿ ತಗೋತೀನಿ. ಮನೇಲೇ ರೆಸ್ಟ್ ಮಾಡ್ತೀನಿ‌. ಹೇಗೂ ಕ್ವಾಟ್ರಸ್ ಪಕ್ಕದಲ್ಲೇ ಇದೆಯಲ್ಲ." ಗೋಗರೆದಳು.

"ನೋ ನೋ ಸಮನ್ವಿತಾ. ಡಾಕ್ಟರಾಗಿ ನೀನೆ ಹೀಗೆ ಮಾಡಿದ್ರೆ ಹೇಗೆ? ಜ್ವರ ಎಲ್ಲಾ ಕಡಿಮೆಯಾಗಿದ್ದರೂ ಸುಸ್ತು, ನಿಶ್ಯಕ್ತಿ ಹಾಗೇ ಇದೆ. ಅದಲ್ಲದೇ ನಿನ್ನ ಬ್ಲಡ್ ರಿಪೋರ್ಟ್ ಬಂದಿದೆ. RBC ಕೌಂಟ್ ತುಂಬಾನೇ ಕಡಿಮೆ ಇದೆ. ಯು ಆರ್ ಅನೀಮಿಕ್. ಇವತ್ತು ಡಿಸ್ಚಾರ್ಜ್ ಆಗೋ ಮಾತೇ ಇಲ್ಲ. ನೀನು ನಾನು ಹೇಳಿದ ಕೇಳಿ, ಕೇರ್ ತಗೊಂಡ್ರೆ ನಾಳೆಗೆ ನೋಡೋಣ. ಇಲ್ಲಾಂದ್ರೆ ನಾಳೆಗೂ ಅನುಮಾನವೇ" ಒಂದೇ ಮಾತಿನಲ್ಲಿ ನಿರಾಕರಿಸಿದರು. ಇನ್ನು ಮಾತನಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದಳು. 

ಮೀರಾ ಅವಳನ್ನು ತಪಾಸಣೆ ಮಾಡಿ, ಮೃದುಲಾ ಹಾಗೂ ಶರ್ಮಾರೊಂದಿಗೆ ಒಂದಿಷ್ಟು ಮಾತನಾಡಿ ವಾರ್ಡಿನಿಂದ ಹೊರಟ ಮೇಲೆ ತಾವೂ ಮನೆಗೆ ಹೊರಡುವುದೆಂದು ಹೇಳಿದರು ಸಚ್ಚಿದಾನಂದ.

"ಅಪ್ಪಾ... ಈ ಅಣ್ಣ ವೈಭವನಿಗೆ ಸಮಾಧಾನ ಮಾಡೋಕೆ ಹೋದೋನು ಎಲ್ಲಿ ಅಂತ?" ಇನ್ನೂ ಬಾರದ ಅಣ್ಣನನ್ನು ಹುಡುಕಿದಳು ಆಕೃತಿ.

"ಹಲೋ, ಅವನಾಗ್ಲೇ ನನ್ನ ಸಮಾಧಾನ ಮಾಡಿ ಹೋಗಿ ತುಂಬಾ ಹೊತ್ತಾಯ್ತು. ಇಷ್ಟು ಹೊತ್ತು ನನ್ನ ಹತ್ರ ಇದ್ರೆ ಅವನು ನನ್ನ ಸಮಾಧಾನ ಅಲ್ಲ ವೈಕುಂಠ ಸಮಾರಾಧನೆ ಮಾಡ್ತಿದ್ದ ಅಷ್ಟೇ" ಒಳಬರುತ್ತಾ ಹೇಳಿದ ವೈಭವ್.

"ನಿನ್ನ ವೈಕುಂಠ ಸಮಾರಾಧನೆ ಮಾಡಿದ್ರೆ ವೈಕುಂಠಾಧಿಪತಿ ವಿಷ್ಣು ವೈಕುಂಠ ಬಿಟ್ಟು ಓಡಬಹುದು ನಿನ್ನ ಕಾಟಕ್ಕೆ" ಅಣಕಿಸಿದಳು. ಅವಳಿಗೆ ವೈಭವನಲ್ಲಿ ಅಣ್ಣನಷ್ಟೇ ಸಲುಗೆ. ಅಭಿಯನ್ನೇ ಬಿಡದವಳು ಇವನನ್ನು ಬಿಟ್ಟಾಳ?

"ನೀನು ಸ್ವಲ್ಪ ಸುಮ್ನಿರ್ತೀಯಾ? ಅಲ್ವೋ ಅವನು ನಿನ್ಹತ್ರ ತಾನೇ ಬಂದಿದ್ದು, ಮತ್ತೆಲ್ಲಿಗೆ ಹೋದ? ಆಗ್ಲಿಂದ ಫೋನ್ ಮಾಡ್ತಿದ್ದೀನಿ…..." ಸಚ್ಚಿದಾನಂದರ ಮಾತು ಮುಗಿಯುವುದರೊಳಗೆ ಕಿಶೋರ್, ಅಭಿರಾಮ್ ಇಬ್ಬರೂ ಹಾಜರಿದ್ದರು.

"ಏ ಮಗನೇ, ಎಷ್ಟು ಫೋನ್ ಮಾಡೋದೋ ನಿಂಗೆ? ಯಾಕೆ ರಿಸೀವ್ ಮಾಡಲಿಲ್ಲ?" ಗದರಿದಂತೆ ಕೇಳಿದರು ಮೃದುಲಾ.

"ಇಲ್ಲಮ್ಮಾ, ಈ ಡಿಟೆಕ್ಟಿವ್ ಸಾಹೇಬ್ರು ಫುಲ್ ಗರಂ ಆಗಿದ್ರು. ಇವನ ತಲೆ ಮೇಲೆ ಐಸ್ ಇಟ್ಟು ಬರೋವಾಗ ಕಿಶೋರ್ ಸಿಕ್ಕಿದ್ರು. ಹಾಗೇ ಇಬ್ರೂ ಮಾತಾಡ್ಕೊಂಡು ಬಂದ್ವಿ" ಸಮಜಾಯಿಷಿ ನೀಡಿದ.

"ಹೌದೋ, ನೀವಿಬ್ರೂ ಅಣ್ಣ ತಂಗಿ ಯಾವಾಗ್ಲೂ ನನ್ನ ಗೋರಿ ಕಟ್ಟೋದ್ರಲ್ಲೇ ಇದ್ರೆ ಇನ್ನೇನ್ ಮಾಡ್ಲಿ ನಾನು?" ಪೆಚ್ಚು ಮೋರೆಯಲ್ಲಿ ಕೇಳಿದ.

"ಅದ್ಸರಿ ನಾನು ಹೊರಗಿರ್ತೀನಿ ಅಂತ ಹೋದವನು ಈಗೇನು ಇಲ್ಲಿ ಪ್ರತ್ಯಕ್ಷ ಆಗ್ಬಿಟ್ಟಿದ್ದಿ?"

"ಮತ್ತಿನ್ನೇನು, ನಾನಾಗ್ಲಿಂದ ಕಾರ್ ಹತ್ರ ಕಾದೂ ಕಾದೂ ಸುಸ್ತಾಯ್ತು. ನೀವ್ಯಾರೂ ಬರೋ ಲಕ್ಷಣ ಕಾಣ್ಲಿಲ್ಲ. ಯಾಕೋ ಗೊತ್ತಿಲ್ಲ ಬೀರ್. ಅಕ್ಕಪಕ್ಕ ಇರೋರೆಲ್ಲಾ ನನ್ನ ಸಂಶಯಾಸ್ಪದವಾಗಿ ನೋಡ್ತಿದ್ರು. ಅದ್ಕೇ ಇಲ್ಲಿಗೆ ಬಂದೆ….." ಸತ್ಯವನ್ನೇ ಹೇಳಿದ.

"ನಿನ್ನ ಅವತಾರ ನೋಡ್ಕೊಂಡಿದ್ದೀಯಾ? ಮಿಸ್ಟರ್ ಬೀನ್ ಗೆ ಶೆರ್ಲಾಕ್ ಹೋಮ್ಸ್ ಬಟ್ಟೆ ಹಾಕ್ದಂಗಿದೆ. ಇರೋದು ಚಿಕ್ಕಣ್ಣನ ತರ, ಸಾಂಗ್ಲಿಯಾನ ರೇಂಜಿಗೆ ಬಿಲ್ಡಪ್ ಬೇಕಾ? ನೀನು ಈ ತರ ಇದ್ರೆ ಜನ ನಿನ್ನ ಸಂಶಯಾಸ್ಪದವಾಗಿ ನೋಡ್ದೇ ಇನ್ನೇನ್ ಮಾಡ್ತಾರೆ?" ಕೇಳಿದಳು ಆಕೃತಿ.

"ನೀನು ನನ್ನ ತುಂಬಾ ಅಂಡರ್ ಎಸ್ಟಿಮೇಟ್ ಮಾಡ್ತಿದ್ದೀ ಕೃತಿಹ..... ನಡೀಲಿ ನಡೀಲಿ, ಆದ್ರೆ ನೆನಪಿಟ್ಕೋ…... ಪ್ರತೀ ನಾಯಿಗೂ ಅದರದ್ದೇ ದಿನ ಬರುತ್ತೆ. ಹಾಗೇ ನನಗೂ ಒಂದಿನ ಬರುತ್ತೆ. ಮೋದಿಜೀ ನನ್ನ ಹೊಗಳಿ ಸನ್ಮಾನ ಮಾಡ್ತಾರಲ್ಲ, ನನ್ ಮಗಂದ್ ಅವತ್ತು.... ಅವತ್ತು... ನಾನು ಮಾತಾಡ್ತೀನಿ" ಕೆಚ್ಚೆದೆಯಿಂದ ಹೇಳಿದ.

"ಲೋ ಡಿಟೆಕ್ಟಿವ್, ಅದ್ಯಾಕೋ ಯಾವಾಗ್ಲೂ ಮೋದಿಯವರಿಂದಲೇ ಸನ್ಮಾನ ಬೇಕು ಅಂತೀಯಾ? ನಮ್ಮ ಕರುನಾಡ ಕುಮಾರರಿಂದ ಸನ್ಮಾನ ಮಾಡ್ಸಿಕೊಳ್ಳೋಕೇನು ದಾಢಿ ನಿನ್ಗೆ?" ಅಭಿಯ ಪ್ರಶ್ನೆಗೆ ವೈಭವ್ ಚಿಂತಾಕ್ರಾಂತ....

"ಇವರ ಸನ್ಮಾನ ಹಾಳಾಗಿ ಹೋಗ್ಲಿ, ಮೊದ್ಲು ಇವರು ಹುಡುಕ್ತಿರೋದೆಲ್ಲಾ ಸಿಕ್ಕಿದ್ರೆ ಸಾಕಾಗಿದೆ. ಇವರೆಲ್ಲ ನನ್ನ ಕಸ್ಟಮರ್ಸ್ ಕಣೋ. ಯಾವಾಗ ನೋಡಿದ್ರೂ ಅದು ಹುಡುಕಿ ಕೊಡಿ, ಇದು ಹುಡುಕಿ ಕೊಡಿ ಅಂತ ಬರ್ತಾರೆ. ಹುಡುಕಿ ಕೊಡುವಂತದ್ದಾದ್ರೂ ಕೇಳ್ತಾರಾ? ಮುಂಡಾ ಮೋಚ್ತು…... ಅದೂ ಇಲ್ಲ. 'ನಿಖಿಲ್ ಎಲ್ಲಿದ್ಯಪ್ಪಾ, ನಿಖಿಲ್ ಎಲ್ಲೂ ಕಾಣ್ತಿಲ್ಲ, ಅವನನ್ನು ಹುಡುಕಿ' ಅಂತಾರೆ, 'ಚೇರಡಿ ಇಡೋಕೆ ನಿಂಬೆ ಕಾಯಿ ಹುಡುಕಿ' ಅಂತಾರೆ, 'ವಿಶ್ವಾಸಮತಕ್ಕೆ ಎಂ.ಎಲ್.ಎಗಳನ್ನು ಹುಡುಕಿ' ಅಂತಾರೆ, 'ಎಂ.ಎಲ್.ಎ ಗಳಿಗೆ ರೆಸಾರ್ಟ್ ಹುಡುಕಿ' ಅಂತಾರೆ, 'ಅಸಲಿ ಸುಮಲತಾನ ಹುಡುಕಿ' ಅಂತಾರೆ, 'ಟೆಂಪಲ್ ರನ್ ಗೆ ದೇವಸ್ಥಾನ ಹುಡುಕಿ' ಅಂತಾರೆ.... ಅಪ್ಪಾ ಸಾಕಾಗೋಗಿದೆ ಇವರ ಸಹವಾಸ. ಮೊದ್ಲು ಇವರ ತಲೆ ಒಳಗೆ ಮೆದುಳು ಹುಡುಕ್ಬೇಕು" ಕೈ ಮುಗಿದವನನ್ನು ನೋಡಿ ಎಲ್ಲರೂ ನಕ್ಕರು.

"ಹೊಡೆತ ಸರಿಯಾಗಿ ಬಿದ್ದಿದೆ. ತುಂಬಾ ನೋವಿದೆಯಾ?" ಅವನ ಊದಿದ ಹಣೆ ಗಮನಿಸಿ ಕೇಳಿದಳು ಸಮನ್ವಿತಾ. ಇಲ್ಲವೆಂದು ತಲೆಯಾಡಿಸಿದ.

"ತಗೋಳಪ್ಪ ಡಾಕ್ಟರ್ ತುಂಬಾ ಜೋರಿದ್ದಾರೆ. ತಾವು ಅಡ್ಮಿಟ್ ಆಗಿದ್ರೂ ಬೇರೆ ಪೇಷೆಂಟುಗಳ ಬಗ್ಗೆ ಕಾಳಜಿ. ವೈಭೂ ಬೇಗ ಇಲ್ಲಿಂದ ಜೂಟ್ ಹೇಳು. ಇಲ್ಲಾಂದ್ರೆ ನಾಲ್ಕು ದಬ್ಬಣ ಸೂಜಿ ಗ್ಯಾರಂಟಿ" ಅಣಕವಾಡಿದ.

"ನೀನು ಸುಮ್ನೆ ಅವಳನ್ನು ಗೋಳುಹೊಯ್ಕೋಬೇಡ. ತುಂಬಾ ಹೊತ್ತಾಯ್ತು. ಮನೆಗೆ ಹೋಗೋಣ" ಎಲ್ಲರನ್ನೂ ಹೊರಡಿಸಿದರು ಮೃದುಲಾ. ಹೇಗೂ ಚೈ ಡಾರ್ಲಿಂಗ್ ಸಂಜೆಗೇ ಬರುವುದೆಂದು ವೈಭವನೂ ಅವರೊಂದಿಗೆ ಹೊರಟ. 

ಅಭಿರಾಮನಿಗೆ ಒಮ್ಮೆ ಸಮನ್ವಿತಾಳೊಂದಿಗೆ ಮಾತನಾಡಬೇಕಿತ್ತು. ಕಿಶೋರನೂ ಅದನ್ನೇ ಹೇಳಿದ್ದ. ಆದರೆ ಈಗಂತೂ ಸಾಧ್ಯವಿರಲಿಲ್ಲ. ಎರಡು ದಿನದಿಂದ  ಆಫೀಸಿನತ್ತ ಸರಿಯಾಗಿ ಗಮನ ಹರಿಸಿರಲಿಲ್ಲ. ಇಂದು ಹೋಗಲೇಬೇಕಿತ್ತು. ಜೊತೆಗೆ ರಾವ್ ಅವರ ಮುಂದಿನ ನಡೆಯ ಬಗ್ಗೆಯೂ ನೋಡಬೇಕಿತ್ತು. ಇಷ್ಟಕ್ಕೇ ಕೈ ಕಟ್ಟಿ ಕೂರುವ ಮನುಷ್ಯ ಆತನಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿದ್ದ. ಬಹುಶಃ ಸಮನ್ವಿತಾಳನ್ನು ಭೇಟಿಯಾಗಿ ಮನವೊಲಿಸಲು ಪ್ರಯತ್ನಿಸಬಹುದು ಎಂದು ಬಲವಾಗಿ ಅನಿಸಿತೊಡಗಿತ್ತು. 

"ಸಮನ್ವಿತಾ, ನಿನ್ಹತ್ರ ಬಹಳ ಮುಖ್ಯವಾದ ವಿಷಯ ಮಾತಾಡೋದು ಇದೆ. ಬಟ್ ಈಗ ಹೋಗಲೇಬೇಕು. ಕೆಲ್ಸ ಇದೆ. ನಾನು ಸಂಜೆ ಬರ್ತೀನಿ. ಅಲ್ಲಿಯವರೆಗೆ ಜೋಪಾನ. ನೀನು ಈಗ ಪೇಷೆಂಟ್, ಡಾಕ್ಟರ್ ಅಲ್ಲಾ ಅನ್ನೋದು ನೆನಪಿರಲಿ. ಅದನ್ನೇನಾದ್ರೂ ಮರೆತರೇ ಮೀರಾ ಅವರಿಗೆ ಹೇಳಿ ಇನ್ನೊಂದು ವಾರ ಇಲ್ಲೇ ಅಡ್ಮಿಟ್ ಮಾಡಿಸ್ತೀವಷ್ಟೇ, ಅಲ್ವಾ ಕಿಶೋರ್?" 

"ಒಂದು ವಾರ ಏನು, ಇವಳು ಹೀಗೆ ಆಡ್ತಿದ್ರೇ ಒಂದು ತಿಂಗಳು ಇಲ್ಲೇ" ನಕ್ಕನು ಕಿಶೋರ್. ಉರಿನೋಟ ಬೀರಿದಳು ಅವನೆಡೆ.

"ಸಂಜೆ ಬರ್ತೀನಿ ಡಾಕ್ಟ್ರೇ" ಎಂದು ಬಾಗಿಲ ತನಕ ಹೋದವನು ತಿರುಗಿ, "ಬಿ ಕೇರ್ ಫುಲ್. ನಿನ್ನ ತಂದೆ ತಾಯಿ ನಿನ್ನ ನೋಡೋಕೆ ಬರಬಹುದು ಅನ್ಸುತ್ತೆ" ಅವನ ಮನಸ್ಸಿಗೆ ಭಾಸವಾದದ್ದನ್ನು ಹೇಳಿದ.

ವಿಷಾದದ ನಗುವೊಂದು ಸುಳಿದು ಮರೆಯಾಯಿತು ಅವಳಲ್ಲಿ.

"ನೋಡಲು, ಮಾತನಾಡಲು ಇನ್ನೇನೂ ಉಳಿದಿಲ್ಲ. ನಾನು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರವೂ ಅವರಲ್ಲಿಲ್ಲ. ನನ್ನ ಮುಖ ನೋಡುವಷ್ಟು ಧೈರ್ಯವೂ ಇಲ್ಲ. ಆದರೂ ನೀವು ಹೇಳಿದಂತೆ ಬರಬಹುದು ಅವರು. ಯಾಕೆ ಬರುವರೆಂಬ ಅಂದಾಜೂ ನನಗಿದೆ. ಐ ವಿಲ್ ಮ್ಯಾನೇಜ್. ಥ್ಯಾಂಕ್ಸ್ ಫಾರ್ ಯುವರ್ ಕನ್ಸರ್ನ್ ಅಭಿರಾಮ್" ದೃಢವಾಗಿ ನುಡಿದಳು.

"ಐ ನೋ ಯು ವಿಲ್ ಮ್ಯಾನೇಜ್. ಎಷ್ಟೆಂದರೂ ಈ ಡಾಕ್ಟರ್ ಗಳಿಗೆ ಧೈರ್ಯ ಜಾಸ್ತಿ ಅಲ್ವಾ. ಅದಕ್ಕೇ ನೋಡಿ ನಿಮ್ಮ ಹತ್ರ ಮಾತಾಡೋಕೆ ಭಯ ಆಗೋದು. ಎಲ್ಲಿ ಹೊಟ್ಟೆ ಕೊಯ್ದು ಕರುಳು ಬಗೀತೀರೋ, ಎಲ್ಲಿ ಸೂಜಿ ತಗೊಂಡು ಬಾಯಿ ಹೊಲಿತೀರೋ ಅನ್ನೋ ಭಯಕ್ಕೆ ಮಾತೇ ಹೊರಡಲ್ಲ ನಂಗೆ" ಅವನ ಮಾತಿಗೆ ನಕ್ಕಳು.

"ಹೀಗೆ ನಗ್ತಾ ಇರು ಸಂಜೆ ತನಕ. ಅಷ್ಟೊತ್ತಿಗೆ ನಾನು ಬಂದ್ಬಿಡ್ತೀನಿ ನಿನ್ನ ತಲೆ ತಿನ್ನೋಕೆ. ಸಧ್ಯಕ್ಕೆ ಬಾಯ್" ಎಂದವನು ಮೂವರಿಗೂ ಕೈ ಬೀಸಿ ಹೊರಟ.

"ನೋಡು, ಎಷ್ಟು ಕೇರ್ ತಗೋತಾನೆ ನಮ್ಮ ರಾಜಕುಮಾರ.ಯ" ಅವಳ ಮೂಗೆಳೆಯುತ್ತಾ ಹೇಳಿದಳು ನವ್ಯಾ. ಕಿಶೋರನೂ ಅವಳೊಂದಿಗೆ ಸೇರಿ ಸಮನ್ವಿತಾಳನ್ನು ಛೇಡಿಸಲಾರಂಭಿಸಿದಾಗ ಸುಮ್ಮನೆ ನಕ್ಕಳಷ್ಟೇ. ಮನಸ್ಸು ಅಭಿರಾಮ್ ವ್ಯಕ್ತಿತ್ವದ ಅವಲೋಕನದಲ್ಲಿ ತೊಡಗಿತ್ತು.

           ‌ *************************

ಮಧ್ಯಾಹ್ನ ಊಟಕ್ಕೊಂದು ವಿರಾಮ ನೀಡಿ ಮತ್ತೆ ಅವ್ಯಾಹತವಾಗಿ ಮುಂದುವರೆದಿತ್ತು ಗೆಳತಿಯರ ಬಿಡುವಿಲ್ಲದ ಹರಟೆ. ನಡುವಲ್ಲಿ ಕಾರ್ತಿಕ್ ಬೇರೆ ಸೇರಿಕೊಂಡಿದ್ದ ತನ್ನ ಕಾಲೇಜಿನ ವಿಚಾರಗಳ ಒಗ್ಗರಣೆ ಹಾಕಲು. ಇವರ ನಡುವೆ ಕಿಶೋರ್ ಆಗೀಗ ಒಂದೊಂದು ಮಾತು ಸೇರಿಸುತ್ತಿದ್ದದ್ದು ಬಿಟ್ಟರೆ ಮೂಕ ಪ್ರೇಕ್ಷಕನೇ ಸರಿ.

ಇಂತಹ ಸುಸಂದರ್ಭವನ್ನು ಇನ್ನಷ್ಟು ಕಳೆಗಟ್ಟಿಸುವಂತೆ ನವ್ಯಾಳ ಜಂಗಮವಾಣಿಯ ಇಂಚರ ಕರೆ ಬಂದಿದೆ ಎಂದು ಸಾರಿ ಸಾರಿ ಹೇಳಿತು. ಫೋನ್ ಕೈಗೆತ್ತಿಕೊಂಡಳು. ಮಂಗಳಾರ ಕರೆ.

ಇಷ್ಟು ಹೊತ್ತು ಉಲ್ಲಾಸದಲ್ಲಿದ್ದವಳಿಗೆ ಒಮ್ಮೆಲೇ ಆತಂಕ ಶುರುವಾಯಿತು. 'ನನ್ನ ಕನಸು ನಿಜವಾದರೆ......' ಭಯದಿಂದ ಬಿಳುಚಿಕೊಂಡತು ಮುಖ. 

"ಏನಾಯ್ತೇ? ಯಾರು ಕಾಲ್ ಮಾಡಿದ್ದು?" ಸುಮ್ಮನೆ ಮೊಬೈಲ್ ಸ್ಕ್ರೀನ್ ನೋಡುತ್ತಾ ಕುಳಿತವಳನ್ನು ಉದ್ದೇಶಿಸಿ ಕೇಳಿದ ಕಿಶೋರ್. ಅವನು ಏನು ಹೇಳಿದನೆಂದು ಕೇಳಿದೆ ಸುಮ್ಮನೆ ಪೆಚ್ಚಾಗಿ ತಲೆಯಾಡಿಸಿದವಳು ಕರೆ ಸ್ವೀಕರಿಸಿದಳು ನಡುಗುವ ಕೈಗಳಿಂದ.

"ಯಾಕಮ್ಮಾ ಇಷ್ಟು ಹೊತ್ತು ಫೋನ್ ತೆಗೆಯೋಕೆ? ಸಮನ್ವಿತಾ ಹುಷಾರಾಗಿದ್ದಾಳೆ ತಾನೇ?" ಅದೇ ಅಕ್ಕರೆಯ ಸ್ವರ. ಹೋದ ಜೀವ ಬಂದಂತಾಯಿತು. 

"ಹೂಂ ಅಮ್ಮಾ, ಅವ್ಳು ಆರಾಮಾಗಿದ್ದಾಳೆ. ಬಹುಶಃ ನಾಳೆಗೆ ಡಿಸ್ಚಾರ್ಜ್ ಮಾಡಬಹುದು. ಕಾರ್ತಿಕ್ ಕೂಡಾ ಬಂದಿದ್ದಾನೆ. ಎಲ್ಲಾ ಮಾತಾಡ್ತಿದ್ವೀ. ಹಾಗಾಗಿ ಫೋನ್ ರಿಸೀವ್ ಮಾಡೋದು ಲೇಟಾಯ್ತು" ಉಸಿರೆಳೆದುಕೊಂಡು ಹೇಳಿದಳು.

"ಸರಿ ಹಾಗಿದ್ರೆ. ನಾವೂ ನಾಳೆ ಬೆಳಿಗ್ಗೆ ಬಂದು ಬಿಡ್ತೀವಿ. ಅವಳನ್ನು ಡಿಸ್ಚಾರ್ಜ್ ಮಾಡ್ಸಿ ನಮ್ಮನೇಗೇ ಕರ್ಕೊಂಡು ಬಂದ್ಬಿಡಿ. ಒಂದು ವಾರ ರಜಾ ಹಾಕಿ ಸುಧಾರಿಸಿಕೊಳ್ಳಲಿ ಮಗು. ನಾವೇ ನೋಡ್ಕೋಳ್ಳೋಣ" ಎಂದರಾಕೆ. ಮಂಗಳಮ್ಮನಿಗೆ ಸಮನ್ವಿತಾಳ ಮನೆಯ ಸ್ಪಷ್ಟ ಪರಿಸ್ಥಿತಿ ಅರಿವಿಲ್ಲದಿದ್ದರೂ ಅಪ್ಪ ಅಮ್ಮ ಎನಿಸಿಕೊಂಡವರಿಗೆ‌ ಅವಳ ಬಗ್ಗೆ ಕಾಳಜಿ ಕಡಿಮೆ ಎಂಬುದರ ಅರಿವಿತ್ತು. ಹಾಗಾಗಿಯೇ ತಾವೇ ನಿಂತು ನೋಡಿಕೊಳ್ಳುವ ತೀರ್ಮಾನ ಮಾಡಿದ್ದರು.

"ಸರಿ ಅಮ್ಮ. ನಾನು ಹೇಳ್ತೀನಿ. ಆದ್ರೆ ಅವಳು ಒಪ್ಪೋದು ಅನುಮಾನವೇ" ಬಡಪೆಟ್ಟಿಗೆ ಒಪ್ಪಲಾರಳು ಎಂಬುದು ಗೊತ್ತಿದ್ದ ವಿಷಯವೇ. "ನೀವೇ ಅವಳ ಹತ್ತಿರ ಮಾತನಾಡಿ ಒಪ್ಪಿಸಿ. ನೀವು ಹೇಳಿದ್ರೆ ಕೇಳ್ತಾಳೆ" ಅತ್ಯುತ್ತಮ ಉಪಾಯ ಹೇಳಿ ಫೋನನ್ನು ಸಮನ್ವಿತಾಳ ಕೈಗೆ ಕೊಟ್ಟಳು. ಕಾರ್ತಿಕ್ ಬಂದು ತುಂಬಾ ಹೊತ್ತಾಗಿದ್ದರಿಂದ ಮೂವರಿಗೂ ಬಾಯ್ ಹೇಳಿ ಮನೆಗೆ ವಾಪಾಸು ಹೊರಟ. ಅವನು ಹೊರಟ ಎನ್ನುವುದಕ್ಕಿಂತ ನವ್ಯಾ ಹೊರಡಿಸಿದಳು ಎನ್ನುವುದೇ ಸೂಕ್ತ. ಅವನು ಅಲ್ಲೇ ಮಾತಲ್ಲೇ ಮನೆ ಕಟ್ಟುತ್ತಾ ಕೂರಲು ತಯಾರಿದ್ದ. ಆದರೆ ಎರಡು ದಿನಗಳಲ್ಲಿ ಆಂತರಿಕ ಪರೀಕ್ಷೆಗಳಿದ್ದುದರಿಂದ ಓದಿಕೋ ಎಂದು ಅವನನ್ನು ಹೊರಡಿಸಿದ್ದಳು.

ಮಂಗಳಾ ಸಮನ್ವಿತಾಳೊಂದಿಗೆ ಮಾತನಾಡಿ ಅವಳನ್ನು ಒಪ್ಪಿಸಿಯೇ ಫೋನಿಟ್ಟಿದ್ದು.

"ಸೊಸೆಗೆ ತಕ್ಕ ಅತ್ತೆ.. ನೀನು ಐಡಿಯಾ ಕೊಡೋದು, ಅವ್ರು ಅದನ್ನ ಜಾರಿಗೆ ತರೋದು. ನೋಡಮ್ಮಾ, ನಾಳೆ ನಿಮ್ಮನೆಗೇ ಬರ್ತೀನಿ. ಒಂದೆರಡು ದಿನ ರಜಾ ತಗೊಂಡು ರೆಸ್ಟ್ ಕೂಡಾ ಮಾಡ್ತೀನಿ. ಆದ್ರೆ ಒಂದು ವಾರ ಎಲ್ಲಾ ಆಗೋಲ್ಲ ಕಣೇ ಪ್ಲೀಸ್‌ ಅರ್ಥ ಮಾಡ್ಕೋ" 

"ನಾಳೆ ಮನೆಗೆ ಹೋಗೋಣ. ಎರಡು ದಿನ ರೆಸ್ಟ್ ಮಾಡು. ಆಮೇಲಿನ ಪರಿಸ್ಥಿತಿ ನೋಡಿ ಮುಂದಿನ ಮಾತು" ಕಟ್ಟುನಿಟ್ಟಾಗಿ ನುಡಿದಳು ನವ್ಯಾ.

"ಹೋಗಿ ಹೋಗಿ ನಿಮ್ಮಿಬ್ಬರ ಕೈಲಿ ಸಿಕ್ಕಿಹಾಕೊಂಡಿದ್ದೀನಲ್ಲ. ಎಲ್ಲಾ ನನ್ನ ಕರ್ಮ ಅನುಭವಿಸಲೇಬೇಕು" 

"ರೈಟ್, ತಯಾರಾಗಿರು. ನಾಳೆಯಿಂದ ಮಂಗಳಾ-ನವ್ಯಾರ ಜುಗಲ್ ಬಂದಿಗೆ. ಇಲ್ಲಾದ್ರೂ ಅಪ್ಪಿತಪ್ಪಿಯಾದ್ರೂ ಮಂಚದಿಂದ ಇಳ್ದಿದ್ದಿಯೇನೋ. ಆದರೆ ನಾಳೆಯಿಂದ ನೆಲಕ್ಕೆ ಕಾಲೂರಿದ್ರೆ ಅಷ್ಟೇ.... ನಾನು ಲಗೇಜೆಲ್ಲಾ ಪ್ಯಾಕ್ ಮಾಡ್ತೀನಿ. ನಾಳೆಯಿಂದ ರಾಜಕುಮಾರಿ ಸಮನ್ವಿತಾ ಅವರ ನಮ್ಮನೆ ವಾಸ ಶುರು" ಕಿಶೋರ್ ಮತ್ತು ನವ್ಯಾರ ಸಂತಸಕ್ಕೆ ಪಾರವೇ ಇರಲಿಲ್ಲ. ಸಮನ್ವಿತಾ ಆಗಾಗ ಮನೆಗೆ ಬಂದು ಹೋಗುತ್ತಿದ್ದಳಾದರೂ ಎಂದೂ ಅವರಲ್ಲಿ ಉಳಿದಿರಲಿಲ್ಲ. ಈಗ ಹುಷಾರಿಲ್ಲದ ನೆಪದಲ್ಲಿಯಾದರೂ ತಮ್ಮ ಮನೆಯಲ್ಲಿ ನಿಲ್ಲುವಳೆಂದು ಅವರಿಬ್ಬರಿಗೂ ಆನಂದವಾಗಿತ್ತು.

ಆದರೆ ಅವರ ಸಂತೋಷದ ಕತ್ತು ಹಿಸುಕುವಂತೆ ಕೇಳಿ ಬಂದಿತ್ತು ಆ ಕರ್ಣ ಕಠೋರ ವಾಣಿ....

"ಹು ದ ಹೆಲ್ ಆರ್ ಯು ಟು ಟೇಕ್ ಕೇರ್ ಆಫ್ ಮೈ ಡಾಟರ್. ನಿನ್ಗೆ ಎಷ್ಟು ಸಲ ಹೇಳೋದು ಸಮನ್ವಿತಾ, ಇಂತ ಡರ್ಟೀ ಚೀಪ್ ಲೋ ಕ್ಲಾಸ್ ಜನರ ಜೊತೆ ಸೇರ್ಬೇಡಾ ಅಂತ. ವೈ ಕಾಂಟ್ ಯು ಅಂಡರ್ಸ್ಟಾಂಡ್?"

ತೀರಾ ಅಪರಿಚಿತರಾಗೇ ಉಳಿದವರ ಚಿರಪರಿಚಿತ ಸ್ವರ….... ಮಿಸ್ಸೆಸ್ ಮಾಲಿನಿ ರಾವ್…. ಅವಳ ಅಮ್ಮ?

ಮೆಲ್ಲನೆ ತಲೆಯೆತ್ತಿ ದನಿ ಬಂದಿತ್ತ ನೋಟ ಹರಿಸಿದಳು.

ಹೌದು. ಆಕೆಯೇ.... ತನ್ನ ತಂಗಿಯಂತೆ ಕಾಣುವ ಹಾಗೆ ಅಲಂಕರಿಸಿಕೊಂಡು ಬಂದಿರುವ ತನ್ನಮ್ಮ.... ಹಿಂದೆಯೇ ಕಾಣಿಸಿದ ಅಪ್ಪನೆಂಬ ದಲ್ಲಾಳಿ.... ಅಸಲಿಗೆ ಆಕೆಯನ್ನು ನೋಡಿದರೆ ಎದೆಯೆತ್ತರಕ್ಕೆ ಬೆಳೆದ ಮಗಳ ತಾಯಿಯೆಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಹಾಗಿತ್ತು ಆಕೆಯ ಗತ್ತು ಗೈರತ್ತು, ಅಲಂಕಾರ, ಆಡಂಬರ, ನಡವಳಿಕೆ. ಇಷ್ಟು ಹೊತ್ತು ಹಗುರಾಗಿದ್ದವಳಿಗೆ ಒಮ್ಮೆಲೇ ಕಾರ್ಕೋಟಕ ಹಾಲಾಹಲದ ಕಡಲಲ್ಲಿ ಮುಳುಗಿದಂತೆ ಭಾಸವಾಯಿತು. ಮೈ ಮನವೆಲ್ಲಾ ಕಹಿ ವಿಷ.

ಅವಳನ್ನು ಎಲ್ಲಕ್ಕಿಂತ ಹೆಚ್ಚು ನೋಯಿಸಿದ್ದು ಅವರು ಕಿಶೋರ್, ನವ್ಯಾಳ ಬಗ್ಗೆ ಆಡಿದ ಮಾತುಗಳು. ಅವಳ ಒಬ್ಬಂಟಿ ಬದುಕಿನ ಪಯಣದಲ್ಲಿ ಅವರಿಬ್ಬರ ಸ್ನೇಹ ಸಂಜೀವಿನಿಯಂತೆ. ಅಂತಹವರ ಬಗ್ಗೆ ಇಂತಹ ಹೀನ ಮಾತುಗಳು..... 

ಅವರಿಬ್ಬರಂತೂ ಈ ಅನಿರೀಕ್ಷಿತ ಮಾತುಗಳಿಂದ ಬೆಪ್ಪಾಗಿದ್ದರು. ರಾವ್ ದಂಪತಿಗಳ ಬಗ್ಗೆ ತಿಳಿದಿತ್ತಾದರೂ ಎಂದೂ ನೇರಾನೇರ ಭೇಟಿಯಾಗಿರಲಿಲ್ಲ. ಅವರು ಇಷ್ಟು ಕೀಳಾಗಿ ನುಡಿಯಬಹುದೆಂದು ಅನಿಸಿಯೂ ಇರಲಿಲ್ಲ.

ತಾವು ಹೊರಹೋಗುವುದೇ ಸೂಕ್ತ ಎನಿಸಿದರೂ, ಈಗಾಗಲೇ ಭೂಮಿಗಿಳಿದು ಹೋಗಿರುವ ಗೆಳತಿಯನ್ನು ಎಲ್ಲಿ ಪಾತಾಳಕ್ಕೆ ತಳ್ಳಿ ಬಿಡುವರೋ ಎಂಬ ಭಯ…... ಅಲ್ಲೇ ಸಪ್ಪೆ ಮೋರೆ ಹಾಕಿ ನಿಂತರು.

"ಅಷ್ಟು ಹೇಳಿದ್ರೂ ಇನ್ನೂ ಇಲ್ಲೇ ನಿಂತಿದ್ದೀರಲ್ಲ. ನಿಮಗೇನು ಮಾನ ಮರ್ಯಾದೆ ಇಲ್ವಾ? ಫ್ಯಾಮಿಲಿ ಮೆಂಬರ್ಸ್ ಮಧ್ಯೆ ನಿಮ್ಮಂತ ಆಳುಗಳಿಗೆ ಏನು ಕೆಲ್ಸ? ಗೆಟ್ ಔಟ್….." ಸತ್ಯಂ ರಾವ್ ಆಜ್ಞಾಪಿಸಿದಾಗ ಹೊರಹೋಗುವುದು ಅನಿವಾರ್ಯವಾಗಿತ್ತು.

ಆದರೆ ಸಮನ್ವಿತಾಳ ರಕ್ತ ಕುದಿಯತೊಡಗಿತು....... ಇಷ್ಟರವರೆಗೆ ಹೇಗೋ ಹರಸಾಹಸ ಪಟ್ಟು ತನ್ನನ್ನು ತಾನು ನಿಯಂತ್ರಿಸಿಕೊಂಡಿದ್ದಳು. ಇನ್ನು ಸಹಿಸಲಸಾಧ್ಯವೆನಿಸಿದ್ದೇ, "ಎಲ್ಲಿಗೆ ಹೊರಟ್ರೀ ನೀವಿಬ್ಬರೂ. ಸುಮ್ನೆ ಬಂದು ಕುತ್ಕೊಳ್ಳಿ ಇಲ್ಲಿ" ಹೊರಗೆ ಹೊರಟ ನವ್ಯಾ, ಕಿಶೋರನನ್ನು ತಡೆದಳು.

ಅವರಿಬ್ಬರೂ ಮುಖ ಮುಖ ನೋಡಿಕೊಂಡರು. "ಸಮಾ….. ನೀವು ಮಾತಾಡಿ, ನಾವಿಲ್ಲೇ ಕ್ಯಾಂಟೀನಿನಲ್ಲಿ ಇರ್ತೀವಿ" ನಿಧಾನಕ್ಕೆ ಹೇಳಿದಳು ನವ್ಯಾ.

"ನವ್ಯಾ, ನೋಡು ನನಗೆ ಸಿಟ್ಟು ಹತ್ತಿಸಬೇಡ. ನನ್ನ ಮಾತಿಗಿಂತ ಯಾರೋ ಗುರುತು ಪರಿಚಯ ಇಲ್ಲದಿರೋರ ಮಾತೇ ಹೆಚ್ಚಾಯ್ತಾ ನಿನ್ಗೆ? ಸುಮ್ನೆ ಇಲ್ಲೇ ಕುತ್ಕೋಳಿ ಅಷ್ಟೇ" ಆಜ್ಞಾಪಿಸಿದಂತೆ ಹೇಳಿದಾಗ ಅವರಿಬ್ಬರೂ ಅಲ್ಲೇ ನಿಲ್ಲುವುದು ಅನಿವಾರ್ಯವಾಯಿತು.

"ವಾಟ್ ರಬ್ಬಿಷ್ ಈಸ್ ದಿಸ್ ಬೇಬೀ? ಆ ಡರ್ಟಿ ಡಾಗ್ಸ್ ಪರ ವಹಿಸಿ ನಮ್ಮ ಮರ್ಯಾದೆ ತೆಗಿತಿದ್ಯಲ್ಲ. ನೋಡು ಇದೆಲ್ಲಾ ಸರಿ ಇರೋಲ್ಲ" ಕಿರುಚಿದರು ಸತ್ಯಂ ರಾವ್.

"ಮಿಸ್ಟರ್….. ನಿಮಗಿಷ್ಟ ಬಂದಂತೆ ಕಿರುಚಾಡೋಕೆ ಇದು ನಿಮ್ಮನೆ ಅಲ್ಲ ಆಸ್ಪತ್ರೆ ಅನ್ನೋದು ತಲೆಯಲ್ಲಿ ಇರ್ಲಿ. ಇವರಿಬ್ರ ಬಗ್ಗೆ ಮಾತಾಡೋಕೆ ನೀವ್ಯಾರು? ಯಾರ್ರೀ ನೀವು?" 

"ಬೇಬಿ, ಮನೆ ಅಂದ್ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ. ಅಷ್ಟಕ್ಕೇ ಯಾರಾದ್ರೂ ಮನೆ ಬಿಟ್ಟು ಬರ್ತಾರಾ? ನಾವು ನಿನ್ನ ಪಪ್ಪ ಮಮ್ಮಿ ಸಮನ್ವಿತಾ. ನಾವೇನೇ ಮಾಡಿದ್ರೂ ನಿನ್ನ ಒಳ್ಳೆದಕ್ಕೇ ಕಣೇ......" ಬೆಣ್ಣೆಯಲ್ಲಿ ಅದ್ದಿ ತೆಗೆದಂತೆ ಮಾತನಾಡಿದರು ಮಾಲಿನಿ. ಶತಾಯಗತಾಯ ಅವಳನ್ನು ಮನೆಗೆ ಕರೆದೊಯ್ಯಲೇ ಬೇಕಿತ್ತು.

"ಪಪ್ಪ ಮಮ್ಮಿ.....? ನಿಮ್ಮಂತ ತಂದೆತಾಯಿಗಳಿಗಿಂತ ಶತ್ರುಗಳೇ ವಾಸಿ. ಅವರಿಗಾದರೂ ಚೂರುಪಾರು ಅಂತಃಕರಣ ಇರುತ್ತೆ. ನೀವಂತೂ ಅವರಿಗಿಂತ ಗ್ರೇಟ್ ಬಿಡಿ. ನಿಮ್ಮ ಬಿಸ್ನೆಸ್ ಉದ್ಧಾರ ಆಗಿ ದುಡ್ಡು ಬರುತ್ತೆ ಅಂದ್ರೆ  ನನ್ನನ್ನೂ ಮಾರ್ತೀರಾ, ನಿಮ್ಮನಿಮ್ಮನ್ನೇ ಬೇಕಾದ್ರೂ ಮಾರ್ಕೋತೀರಾ. ಥೂ….. ಇಂತಾ ಜನ್ಮನೂ ಬೇಕಾ? ನೋಡಿ ನೀವು ಏನಾದ್ರೂ ಮಾಡ್ಕೋಳಿ. ಬಟ್ ನನ್ನ ಸುದ್ದಿಗೆ ಬರ್ಬೇಡಿ ಅಷ್ಟೇ" ಕಟುವಾಗಿ ನುಡಿದಳು.

"ಎಷ್ಟು ರೂಡ್ ಆಗಿ ಮಾತಾಡ್ಬಿಟ್ಟೆ ಬೇಬಿ. ನೀನು ಮನೆಬಿಟ್ಟು ಹೋದಾಗಿಂದ ನಾವೆಷ್ಟು ಬೇಜಾರಾಗಿದ್ದೀವಿ ಅಂತ ನಮ್ಗೆ ಮಾತ್ರ ಗೊತ್ತು. ನಮಗೆ ನಿನ್ನ ಬಿಟ್ಟು ಇನ್ಯಾರಿದ್ದಾರೆ? ನಮ್ಮ ಆಸ್ತಿಗೆಲ್ಲಾ ನೀನೊಬ್ಬಳೇ ವಾರಸುದಾರಿಣಿ. ನಮ್ಮ ಆಸ್ತಿ ನೀನೇ. ಏನೋ ಎಲ್ಲಾ ಫಿಕ್ಸ್ ಮಾಡಿ ನಿನ್ಗೆ ಸರ್ಪ್ರೈಸ್ ಕೊಡೋಣ ಅಂತ ಮದ್ವೆ ವಿಚಾರ ಮುಚ್ಚಿಟ್ರೆ ನೀನು ಅದನ್ನೇ ತಲೆಹೋಗೋ ವಿಷಯ ಅನ್ನೋ ತರ ನಮ್ಮ ಮೇಲೆ ಸಿಟ್ಟಾಗ್ತಿದ್ದೀಯಲ್ಲಾ? ನಿನ್ಗೆ ಹುಷಾರಿಲ್ಲ ಅಂತ ಗೊತ್ತಾದ ಕೂಡ್ಲೇ ಓಡೋಡಿ ಬಂದ್ವಿ ಗೊತ್ತಾ" ಮೊಸಳೆ ಕಣ್ಣೀರು ಸುರಿಸುತ್ತಾ ಹೇಳಿದರು ಮಾಲಿನಿ ರಾವ್. ಸಮನ್ವಿತಾಳ ಕೋಪ ಭುಗಿಲೆದ್ದಿತು.

"ಐದು ವರ್ಷದ ನನ್ನ ಹಿಂದುಮುಂದು ನೋಡ್ದೇ ಲಂಡನ್ನಿನ ಬೋರ್ಡಿಂಗ್ ಸ್ಕೂಲಿಗೆ ಬಿಸಾಕಿದಾಗ ಬೇಜಾರಾಗಿರಲಿಲ್ಲ ನಿಮಗೆ. ಅಲ್ಲಿ ನಾನೇನೂ ಒಂದೆರಡು ವರ್ಷಗಳಲ್ಲ ಇದ್ದಿದ್ದು. ನನ್ನ ಕಾಲು ಬದುಕೇ ಅಲ್ಲಿ ಅನಾಥವಾಗಿ ಕಳೆದಿದೆ. ಆಗ ಒಮ್ಮೆಯೂ ನನ್ನನ್ನು ನೋಡಿಕೊಂಡು ಹೋಗುವಷ್ಟು ಸಮಯ, ಮಮತೆ, ಪ್ರೀತಿ ಇರ್ಲಿಲ್ಲ ನಿಮ್ಗೆ. ಅಷ್ಟೇ ಯಾಕೆ ನಾನು ಮನೆಗೆ ವಾಪಾಸಾದ್ಮೇಲೂ ನಾನು ಬದುಕಿದ್ದೀನಾ ಇಲ್ಲಾ ಸತ್ತೀದ್ದೀನಾ ಅಂತ ಕೇಳೋ ಪುರುಸೊತ್ತು, ಮನಸ್ಸು ಇಲ್ಲದ ನನ್ನ ವ್ಯವಹಾರಿಕ ಅಪ್ಪ ಅಮ್ಮನಿಗೆ ಮಗಳ ಮದುವೆ ವಿಚಾರದಲ್ಲಿ ಮಾತ್ರ ಎಂದೂ ಇಲ್ಲದ ಆಸಕ್ತಿ….. ಯಾಕೆ? ಮಗಳ ಮೇಲಿನ ಮಮಕಾರನಾ? ಬುಲ್ ಶಿಟ್…... ಅದು ಮಗಳ ಮೇಲಿನ ಮಮಕಾರ ಅಲ್ಲ. ಭಾವಿ ಅಳಿಯನಿಂದ ಒದಗಬಹುದಾದ ವ್ಯವಹಾರಿಕ, ಆರ್ಥಿಕ ಅನುಕೂಲಗಳ ಲೆಕ್ಕಾಚಾರ ಅಷ್ಟೇ. ಪ್ರೀತಿಯಂತೆ, ಮಮತೆಯಂತೆ, ಮಗಳೇ ಆಸ್ತಿಯಂತೆ….... ಮೈ ಫುಟ್…....ನಿಮ್ಮಂತವರ ಬಾಯಿಂದ ಇಂತ ಮಾತು ಕೇಳಿದ್ರೆ ಮೈಯೆಲ್ಲಾ ಉರಿಯುತ್ತೆ. ನಿಮ್ಮ ಸತ್ಯ ನನಗೊತ್ತಿಲ್ವಾ? ನಿಮ್ಗೆ ಹೇಗಾದ್ರೂ ಅಭಿರಾಮ್ ಅಳಿಯ ಆಗ್ಬೇಕು. ಇರೋದು ಒಬ್ಳೇ ಮಗಳಾಗಿ ಸಮಸ್ಯೆಯಾಗಿದೆ. ಇಲ್ಲೂ ಅಭಿರಾಮ್ ಮುಖ್ಯ ಅಲ್ಲ ನಿಮಗೆ. ನಿಮ್ಮ ತಲೆಯಲ್ಲಿ ಇರೋದು ಅವನ ಹೆಸರಿನಲ್ಲಿರೋ ಶರ್ಮಾ ಎಂಪೈರ್,  ಔದ್ಯೋಗಿಕ ರಂಗದಲ್ಲಿ ಅವನಿಗಿರುವ ಪ್ರಭಾವ, ಸಮಾಜದಲ್ಲಿ ಅವನಿಗಿರುವ ಪ್ರತಿಷ್ಟೆ……. ಇದೇ ಮೂರು ನಿಮಗೆ ಬೇಕಾಗಿರೋದು. ಈ ಮೂರು ಅವನ ಹತ್ರ ಇರ್ಲಿಲ್ಲ ಅಂದ್ರೆ, ಅಭಿರಾಮ್ ಮತ್ತೆ ಈ ಕಿಶೋರ್ ಇಬ್ರೂ ಒಂದೇ ಆಗಿರ್ತಿದ್ರು ನಿಮ್ಗೆ. ಅವನನ್ನು ಇವನ ಹಾಗೇ ಥರ್ಡ್ ಕ್ಲಾಸ್ ಡರ್ಟಿ ಡಾಗ್ ಅಂತನೇ ಕರೀತಿತ್ತು ನಿಮ್ಮ ಎಲುಬಿಲ್ಲದ ನಾಲಿಗೆ. ಏನದು…...ಏನಂದ್ರೀ? ನನಗೆ ಹುಷಾರಿಲ್ಲ ಅಂತ ಗೊತ್ತಾದ್ ಕೂಡ್ಲೇ ಓಡೋಡಿ ಬಂದ್ರಾ? ಅಷ್ಟೊಂದು ಬೇಜಾರಾಯ್ತಾ ಮಿಸ್ಸೆಸ್ ಮಾಲಿನಿ ರಾವ್? ಒಂದ್ಸಲ ಕನ್ನಡಿಯಲ್ಲಿ ಮುಖ ನೋಡ್ಕೊಳ್ಳಿ. ಒಂದು ಚೂರಾದ್ರೂ ಚಿಂತೆ, ಬೇಸರ ಇದ್ಯಾ ನಿಮ್ಮ ಮುಖದಲ್ಲಿ? ನಿಮ್ಮ ಅವತಾರ ನೋಡಿದ್ರೆ ಮದುವೆ ಮನೆಗೆ ತಯಾರಾಗಿ ಬಂದ್ಹಾಗಿದೆ. ಮೋಸ್ಟ್ ಲೀ ಬ್ಯೂಟಿ ಪಾರ್ಲರ್ ನಿಂದ ನೇರವಾಗಿ ಇಲ್ಲಿಗೆ ಬಂದಿರಬೇಕು ಅಲ್ವಾ? ನೀವು ಲೋ ಕ್ಲಾಸ್ ಡರ್ಟಿ ಪೀಪಲ್ ಅಂತ ಆರಾಮಾಗಿ ಅಂದ್ರಲ್ಲ.ಅವರನ್ನು ನೋಡಿ. ಅವ್ರು ನನ್ನ ಒಡಹುಟ್ಟಿದವರಲ್ಲ, ಸಂಬಂಧಿಕರಲ್ಲ. ಆದ್ರೂ ನಾನು ಇಲ್ಲಿಗೆ ಬಂದಾಗಿನಿಂದ ಮನೆ ಕಡೆ ಮುಖ ಹಾಕಿಲ್ಲ ಅವರಿಬ್ಬರೂ. ಯಾವಾಗ್ಲೋ ಒಂದಿಷ್ಟು ಊಟ ಹೊಟ್ಟೆಗೆ ಹಾಕಿರೋದು ಬಿಟ್ರೆ ನನ್ನ ಪಕ್ಕದಿಂದ ಆಚೀಚೆ ಹೋಗಿಲ್ಲ ಅವ್ರು. ಇಡೀ ರಾತ್ರಿ ಎಚ್ಚರ ಇದ್ದು ನನ್ನ ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡ್ತಾರೆ. ನೀವು ನನ್ನ ಹೆತ್ತವರು, ರಕ್ತ ಸಂಬಂಧಿಗಳು. ಇವತ್ತಲ್ಲ, ಜೀವಮಾನದಲ್ಲಿ ಯಾವತ್ತಾದ್ರೂ ಒಮ್ಮೆ ನನ್ನ ಹಾಗೆ ನೋಡ್ಕೊಂಡಿರೋ ನೆನಪಿದ್ಯಾ? ಖಂಡಿತಾ ಇಲ್ಲ. ಯಾಕೆಂದ್ರೆ ಅಂತಹ ಅದೃಷ್ಟ ನನಗೆಲ್ಲಿಯದು? ನಿಮಗೆ ಕುಡಿತ, ಕುಣಿತ, ಮೋಜು, ಮಸ್ತಿಯ ಪಾರ್ಟಿಗಳಿಂದ ಪುರುಸೊತ್ತಾದ್ರೆ ತಾನೇ? ಅದೆಲ್ಲಾ ಸಾಯ್ಲೀ, ಮೊನ್ನೆ ಆ ಅಪರಾತ್ರಿಯಲ್ಲಿ ಅಷ್ಟು ಬೇಜಾರಿಂದ ಮನೆಬಿಟ್ಟೆ ನಾನು. ಆಗ ನಿಮಗೆ ಹಿಂದೆ ಬಂದು ಸಮಾಧಾನಿಸ್ಬೇಕು ಅನ್ನಿಸ್ಲಿಲ್ಲ. ನಿನ್ನೆ ಇಡೀ ಆಸ್ಪತ್ರೆಯಲ್ಲಿ ಪ್ರಜ್ಞೆ ಇಲ್ಲದೇ ಬಿದ್ದಿದ್ದೆ. ಆಗ್ಲೂ ಬೇಜಾರಾಗಿ ಮನೆ ಬಿಟ್ಟ ಮಗಳಿಗೆ ಏನಾಗಿದ್ಯೋ ಅಂತ ನೋಡ್ಬೇಕು ಅನ್ನಿಸಿಲ್ಲ ನಿಮ್ಗೆ. ಇವತ್ತು ಸಡನ್ನಾಗಿ ಮಗಳು ನೆನಪಾದ್ಲೂ ಯಾಕೆ? ನಾನು ಹೇಳ್ಲಾ ಯಾಕೆ ಅಂತ? ಮಗಳು ಶರ್ಮಾ ಅವರಿಗೆ ಎಲ್ಲಾ ವಿಷ್ಯ ಹೇಳಿ ಈ ಮದ್ವೆ ಕ್ಯಾನ್ಸಲ್ ಮಾಡಿಸಿರ್ತಾಳೆ. ಇನ್ನು ಇವಳಿಂದ ನಮಗ್ಯಾವ ಪ್ರಯೋಜನವೂ ಇಲ್ಲ ಅಂತ ನೀವು ತಲೆ ಮೇಲೆ ಕೈ ಹೊತ್ತು ಕೂತಿದ್ದಾಗ ಮಿಸ್ಟರ್ ಅಭಿರಾಮ್ ಶರ್ಮಾ ಆಸ್ಪತ್ರೆಗೆ ಬಂದು ನನ್ನ ಮಾತಾಡಿಸ್ಕೊಂಡು ಹೋದ್ರೂ ಅಂತ ನಿಮ್ಗೆ ಗೊತ್ತಾಗುತ್ತೆ. ಅವರಿಗೆ ಇನ್ನೂ ನನ್ನ ಮೇಲೆ ಮನಸ್ಸಿದೆ ಅಂತ ತಿಳಿದ ಕಾರಣಕ್ಕೆ ನೀವು ನನ್ನ ಮನೆಗೆ ಕರ್ಕೊಂಡುಹೋಗೋಕೆ ಅಂತ ಇಲ್ಲಿಗೆ ಬಂದಿರೋದು. ಹೇಗಾದ್ರೂ ಮಾಡಿ ನನ್ನ ಒಲಿಸಿ ಈ ಮದ್ವೆ ಮಾಡಿಸೋ ಅಜೆಂಡಾ ನಿಮ್ದು…….." 

ಸಮನ್ವಿತಾಳ ಮಾತುಗಳನ್ನು ಕೇಳುತ್ತಾ ರಾವ್ ದಂಪತಿಗಳ ಮುಖ ವಿವರ್ಣಗೊಂಡಿತು. ಅವಳು ಇಷ್ಟು ಖಚಿತವಾಗಿ ಅವರ ಯೋಜನೆಗಳನ್ನು ಗ್ರಹಿಸಬಹುದೆಂಬ ಕಲ್ಪನೆ ಅವರಿಗಿರಲಿಲ್ಲ. ಅವಳಿಗೆ ಏನು ಹೇಳಬೇಕೆಂದು ತೋಚದೇ ಗಲಿಬಿಲಿಗೊಂಡರು.

"ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್, ಇದೇ ಕೊನೆ. ಇನ್ಯಾವತ್ತೂ ನನ್ನ ಜೀವನದಲ್ಲಿ, ನನ್ನ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನ ಮಾಡ್ಬೇಡಿ. ನನಗೆ ಮುಂಚಿನಿಂದಲೂ ನಿಮ್ಮ ಮೇಲೆ ಕೋಪ, ದ್ವೇಷ, ತಿರಸ್ಕಾರ ಇತ್ತು. ಜೊತೆಗೇ ಒಂದಲ್ಲಾ ಒಂದು ದಿನ ಎಲ್ಲವೂ ಸರಿಯಾಗುತ್ತದೆ ಅನ್ನೋ ಆಶಾವಾದವಿತ್ತು. ಆದರೆ ಯಾವತ್ತು ನೀವು ನಿಮ್ಮ ವ್ಯವಹಾರಕ್ಕೆ ನನ್ನ ಪಣವಾಗಿ ಇಟ್ರೋ ಅವತ್ತಿಗೆ ಎಲ್ಲಾ ಆಸೆ, ಕನಸು, ನಿರೀಕ್ಷೆಗಳೂ ಸುಟ್ಟು ಬೂದಿಯಾಯ್ತು. ನನ್ನದು ಆಶಾವಾದ ಅಲ್ಲ ಅದೊಂದು ಭ್ರಮೆಯಷ್ಟೇ ಅಂತ ಈಗ ಗೊತ್ತಾಗಿದೆ ನನಗೆ. ಭ್ರಮೆ ಅನ್ನೋ ಮನಸಿನ ಮಾಯೆಯ ಪರದೆ ನನ್ನ ಕಣ್ಣುಗಳನ್ನು ಕಟ್ಟಿತ್ತು. ಈಗ ಆ ಪರದೆ ಹರಿದಿದೆ. ಭ್ರಮೆಯೂ ಹರಿದಿದೆ. ಭ್ರಮೆಯ ಪರದೆ ಹರಿದಾಗ ನಮ್ಮವರು ಹಾಗೂ ಪರರ ನಡುವಿನ ವ್ಯತ್ಯಾಸ ಗೋಚರಿಸುತ್ತದೆ. ನನಗೂ ಈಗ ಆ ವ್ಯತ್ಯಾಸ ಸ್ಪಷ್ಟವಾಗಿದೆ.  ನಾನು ನನ್ನ ತಾಳ್ಮೆ ಕಳ್ಕೊಳ್ಳೋ ಮುಂಚೆ ಇಲ್ಲಿಂದ ಹೊರಟು ಬಿಡಿ" ಕತ್ತಿಯಲುಗಿನಷ್ಟೇ ಹರಿತವಾಗಿತ್ತು ಅವಳ ಮಾತು.

ಗಂಡ-ಹೆಂಡತಿ ಮರುಮಾತಾಡದೇ ಅಲ್ಲಿಂದ ಹೊರಬಿದ್ದರು. ಅವರ ಕನಸಿನ ಗೋಪುರ ನೆಲಕಚ್ಚಿದ್ದು ನಿಚ್ಚಳವಾಗತೊಡಗಿತು. ಇನ್ನು ಮಗಳನ್ನು ಒಪ್ಪಿಸಲು ಸಾಧ್ಯವೇ ಇಲ್ಲ ಎಂಬುದು ಖಚಿತವಾಗಿ ಗೊತ್ತಿತ್ತು. ಭಾರವಾದ ಹೆಜ್ಜೆಗಳನ್ನು ಎತ್ತಿಟ್ಟು ಭವಿಷ್ಯದ ಗತಿಯೇನು ಎಂಬ ಯೋಚನೆಯಲ್ಲಿ ಮನೆಯ ಕಡೆ ಹೊರಟರು.

ಅವರು ಹೋದ ದಿಕ್ಕಿಗೆ ಅಭಿಮುಖವಾಗಿ ಕುಳಿತು ನಿಡಿದಾದ ಉಸಿರು ದಬ್ಬಿದಳು ಸಮನ್ವಿತಾ. ನವ್ಯಾ ಕೈಗಿತ್ತ ನೀರನ್ನು ಒಂದೇ ಏಟಿಗೆ ಗಂಟಲಿಗೆ ಸುರಿದುಕೊಂಡಳು. ಸ್ವಲ್ಪ ಹಿತವೆನಿಸಿತು ದೇಹಕ್ಕೆ. ಆದರೆ ಒಡಲುರಿ……..? ಅದು ಶಮನವಾಗುವಂತೆ ಕಾಣಲಿಲ್ಲ. ಮನಸ್ಸು ಕಾದು ಕುಲುಮೆಯಂತಾಗಿತ್ತು. ನಿಧಾನಕ್ಕೆ ದಿಂಬಿಗೊರಗಿದಳು. ಎದುರಿನಲ್ಲಿ ನವ್ಯಾ ಕಿಶೋರ್....... ಕಿರುನಕ್ಕವಳು ಹಾಗೇ ಕಣ್ಮುಚ್ಚಿದಳು. ಅವಳಿಗೀಗ ಯಾರೊಂದಿಗೂ ಮಾತು ಬೇಕಿರಲಿಲ್ಲ. ತನ್ನನ್ನು ತಾನು ಸಮಾಧಾನಿಸಿಕೊಳ್ಳಬೇಕಿತ್ತು. ಚೀರುವ ಮನಸ್ಸನ್ನು ಸಂಭಾಳಿಸಬೇಕಿತ್ತು. ಅದು ಅವರಿಬ್ಬರಿಗೂ ಅರ್ಥವಾಗಿತ್ತು. ಅವಳ ಪಾಡಿಗೆ ಅವಳನ್ನು ಬಿಟ್ಟರು.

ಕೋಪ…... ಕೋಪ….... ಕೆಂಡದಂತಹ ಉರಿ ಉರಿ ಕೋಪ, ಸಿಟ್ಟು ಅವಳನ್ನು ಧಗಧಗಿಸಿ ದಹಿಸತೊಡಗಿತು. ದೀರ್ಘವಾಗಿ ಉಸಿರಾಡತೊಡಗಿದಳು.....

ಗೀತೆಯ ಶ್ಲೋಕಗಳು, ಕಗ್ಗದ ಸಾಲುಗಳು, ವಚನಗಳು....‌…. ಹೀಗೆ ಮನಸ್ಸಿಗೆ ಸಮಾಧಾನವಾಗುವಂತಹ ವಿಚಾರಗಳನ್ನು ನೆನಪಿಸಿಕೊಳ್ಳತೊಡಗಿದಳು.

ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ

ನೆರೆಮನೆಯ ಸುಡದೋ....

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ

ತನಗಾದ ಆಗೇನು ಅವರಿಗಾದ ಕೇಡೇನು (ಛೇಗೇನು)

ತನುವಿನ ಕೋಪ ತನ್ನ ಹಿರಿಯತನದ ಕೇಡು

ಮನದ ಕೋಪ ತನ್ನರಿವಿನ ಕೇಡು ಕೂಡಲಸಂಗಮದೇವ     

ಬಸವಣ್ಣನವರ ವಚನಗಳ ಸಾಲು ಬಿಟ್ಟೂ ಬಿಡದೇ ನೆನಪಾಗತೊಡಗಿತು. ಮತ್ತೆ ಮತ್ತೆ ಅದನ್ನೇ ಮನನ ಮಾಡಿಕೊಂಡಳು.

ಹೌದು. ತಾನೇಕೆ ಕೋಪಿಸಿಕೊಂಡು ತನ್ನ ಮನಃಶಾಂತಿಯನ್ನು ಕದಡಿಕೊಳ್ಳಬೇಕು? ಅವರ ಬದುಕಿನಲ್ಲಿ ತನ್ನ ಅಸ್ತಿತ್ವವೇ ಇಲ್ಲದಿರುವಾಗ ತನ್ನ ಕೋಪ, ದ್ವೇಷಕ್ಕೆ ಅಸ್ತಿತ್ವವೆಲ್ಲಿ? ನನ್ನ ಸಂತೋಷ, ಸಂತಾಪಗಳೆರಡೂ ನನಗೆ ಮಾತ್ರವೇ ಸಂಬಂಧಿಸಿದ್ದು. ಅವರಿಗೆ ಅದರಿಂದ ಆಗಬೇಕಾದ್ದು ಏನೂ ಇಲ್ಲ. ಹಾಗಿದ್ದಲ್ಲಿ ನಾನೇಕೆ ವೃಥಾ ಕೋಪಗೊಳ್ಳುತ್ತಿರುವೆ? ಅವರು ನನ್ನ ಕೋಪಕ್ಕೂ ಅರ್ಹರಲ್ಲ. ನನ್ನ ಕಾಲಿನ ಮೇಲೆ ನಾನೇ ಚಪ್ಪಡಿ ಎಳೆದುಕೊಳ್ಳುವಂತೆ, ನಾನೇ ನನ್ನ ನೆಮ್ಮದಿಯನ್ನು ಕೆಡಿಸಿಕೊಳ್ಳುತ್ತಿದ್ದೇನೆ. ಹಾಗಾಗಕೂಡದು. ನನ್ನ ನೆಮ್ಮದಿ, ಶಾಂತಿಗಳನ್ನು ನನ್ನ ಬಗ್ಗೆ ಕಿಂಚಿತ್ತೂ ಯೋಚಿಸಿದವರ ಕೈಗೊಂಬೆಯಾಗಿಸಲಾರೆ.  ಹೆತ್ತವರಿಗೆ ನಾನು ಬೇಡದವಳಾಗಿರಬಹುದು. ಆದರೆ ನನ್ನನ್ನು ಅತಿಯಾಗಿ ಪ್ರೀತಿಸುವ ಸ್ನೇಹಿತರಿದ್ದಾರೆ. ನನ್ನನ್ನು ಮನೆ ಮಗಳಂತೆ ಕಾಣುವ ವ್ಯಕ್ತಿಗಳಿದ್ದಾರೆ. ನನ್ನ ಬದುಕಿಗೆ ರಂಗು ತುಂಬಲು, ನನ್ನ ಮೊಗದಲ್ಲಿ ನಗುವರಳಿಸಲು, ನನ್ನ ನೋವುಗಳನ್ನು ತಮ್ಮದೆಂದುಕೊಂಡು ಸಾಂತ್ವನಿಸಲು ಮನಸ್ಪೂರ್ತಿಯಾಗಿ ಪ್ರಯತ್ನಿಸುವ ಜೀವಗಳಿವೆ.

ಮತ್ತೇಕೆ ಕೊರಗಬೇಕು ನಾನು?

ಈ ಯೋಚನೆ ಬಂದಿದ್ದೇ ಮನಸ್ಸು ಮುದಗೊಂಡಿತು. ಮಂದಹಾಸದೊಂದಿಗೆ ಕಣ್ತೆರೆದಾಗ ಕಂಡದ್ದು…… ಅವಳನ್ನೇ ನೋಡುತ್ತಿದ್ದ ಎರಡು ಜೊತೆ ಕಂಗಳು…..

"ಈಗ್ಲೇ ಹೋಗೋದಾ ಜಂಬೂಸವಾರಿ ನಿಮ್ಮನೆಗೆ?" ನಗುತ್ತಾ ಕೇಳಿದಳು.

ಅವಳ ನಗುಮುಖ ನೋಡಿ ಅವರಿಬ್ಬರ ಬಿಗಿದ ಕೊರಳು ಸಡಿಲಾಯಿತು. ನವ್ಯಾ ಓಡಿ ಬಂದು ಅವಳನ್ನಪ್ಪಿದರೆ, ಕಿಶೋರ್ ಅವಳ ತಲೆ ಸವರಿ, "ಮೀರಾ ಮೇಡಂ ಒಪ್ಪಿದ್ರೆ ಈಗ್ಲೇ ಹೋಗೋದೇ" ಎಂದ.

ನಿಮಿಷಗಳ ಮೊದಲು ಕೋಣೆಯೊಳಗಿದ್ದ ಅಸಹನೀಯ ಮೌನದ ಗೋಣು ಮುರಿಯುವಂತಹ ಆತ್ಮೀಯ ಮಾತುಕತೆಯ ಆರಂಭದೊಂದಿಗೆ ಸಂಧ್ಯೆ ಶುಭಕರಿಯಾಗಿ ಆಗಮಿಸಿದ್ದಳು.

ಅದೇ ಸಂಧ್ಯೆಯ ಹೊನ್ನಿನ ಬೆಡಗನ್ನು ಆಸ್ವಾದಿಸುತ್ತಾ ತನ್ನ ಆತ್ಮದಂತಹಾ ಗೆಳತಿಗೆ ಪ್ರೇಮ ನಿವೇದಿಸಲು ರಾಶಿ ಕನಸುಗಳ ಚಾದರ ಹೊದ್ದು ಹೊರಟಿದ್ದ ಅಭಿರಾಮ್....

             *****ಮುಂದುವರೆಯುತ್ತದೆ*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ