ಭಾನುವಾರ, ಜೂನ್ 21, 2020

ಸಂಹಾರ - ಪುಸ್ತಕ ವಿಮರ್ಶೆ

ಪುಸ್ತಕದ ಹೆಸರು       : ಸಂಹಾರ                    

ತೆಲುಗು ಮೂಲ        : ಯರ್ರಂಶೆಟ್ಟಿಸಾಯಿ 

ಅನುವಾದ              : ರಾಜಾ ಚೆಂಡೂರ್  

ಪ್ರಕಾಶಕರು             : ಸ್ನೇಹಾ ಎಂಟರ್ಪ್ರೈಸಸ್,ಬೆಂಗಳೂರು                        

ಪ್ರಥಮ ಮುದ್ರಣ     : 1994                        

ತೃತೀಯ ಮುದ್ರಣ    : 2019                    

ಪುಟಗಳು                : 204                              

ಬೆಲೆ                       :150 ರೂ      

ತೆಲುಗು ಕಾದಂಬರಿಕಾರರೆಂದೊಡನೆ ತಟ್ಟನೆ ನನ್ನ ತಲೆಗೆ ಬರುವುದು ಯಂಡಮೂರಿ ವೀರೇಂದ್ರನಾಥ್. ಯಂಡಮೂರಿ ಅವರ ಕಾದಂಬರಿಗಳ ಬಗ್ಗೆ ನನ್ನದು ಎಂದಿಗೂ ತೀರದ ಸೆಳೆತ. ಕಾಲೇಜು ದಿನಗಳಲ್ಲಿ ಓದಿದ್ದ ಸೂರ್ಯದೇವರ ರಾಂಮೋಹನ್ ಅವರ ಕೆಲ ಕೃತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ತೆಲುಗು ಲೇಖಕರೂ ಹೆಚ್ಚುಕಡಿಮೆ ಅಪರಿಚಿತರೇ ನನ್ನ ಪಾಲಿಗೆ. ಇತ್ತೀಚಿಗೆ ಗೆಳತಿ ರೂಪಾ ಮಂಜುನಾಥ್ ಅವರಿಂದಾಗಿ ತೆಲುಗು ಅನುವಾದಿತ ಸಾಹಿತ್ಯದೆಡೆಗೆ ಆಸಕ್ತಿ ಮೂಡತೊಡಗಿದ್ದು. ಯಂಡಮೂರಿ, ಸೂರ್ಯದೇವರಾ ಅವರೊಂದಿಗೆ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಚಲ್ಲಾ ಸುಬ್ರಮಣ್ಯಂ ಮೊದಲಾದ ಸಾಹಿತಿಗಳ ಕೃತಿಗಳನ್ನು ಓದಲಾರಂಭಿಸಿದ್ದು. 


'ಸಂಹಾರ'... ಇದು ಇನ್ನೊರ್ವ ತೆಲುಗು ಕಾದಂಬರಿಕಾರ ಯರ್ರಂ ಶೆಟ್ಟಿಸಾಯಿ ಅವರ ಕಾದಂಬರಿ. ರಾಜಾ ಚೆಂಡೂರ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನು ಓದಿದ ಯರ್ರಂಶೆಟ್ಟಿಸಾಯಿ ಅವರ ಮೊದಲ ಕಾದಂಬರಿಯಿದು. ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆಯ ಹಲವು ಆಯಾಮಗಳನ್ನು ತೋರುವ ಈ ಕಥೆಯು ಇಂತಹ ಅರಾಜಕತೆ ಸಾಮಾನ್ಯನೊಬ್ಬನ ಬದುಕನ್ನು ನುಚ್ಚುನೂರಾಗಿಸುವ ಪರಿಯನ್ನು ತೆರೆದಿಡುತ್ತದೆ. ವ್ಯವಸ್ಥೆಯ ಪ್ರತೀ ಹಂತದಲ್ಲೂ ಭ್ರಷ್ಟರೇ ತುಂಬಿರುವಾಗ ನಿಷ್ಠಾವಂತ ವ್ಯಕ್ತಿಯೇ ಗುಂಪಿಗೆ ಸೇರದ ಪದವಾಗಿ ಅನುಭವಿಸುವ ಕಷ್ಟನಷ್ಟಗಳನ್ನು ಸಂಹಾರ ಚಿತ್ರಿಸುತ್ತದೆ.

ಐವತ್ತೆರಡು ವರ್ಷದ ಮಧ್ಯಮವರ್ಗೀಯ ರಾಮಚಂದ್ರಮೂರ್ತಿ ಕಥಾನಾಯಕ. ಮಡದಿ ಸೀತಾ ಹಾಗೂ ಅಡುಗೆಯ ನಟರಾಜನೊಂದಿಗೆ ವಾಸ. ತನ್ನ ನೀತಿಯುತ ಸಿದ್ಧಾಂತಗಳ ಕಾರಣದಿಂದಾಗಿ ತನ್ನ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವುದಷ್ಟೇ ಅಲ್ಲದೇ ಲಂಚ ತೆಗೆದುಕೊಂಡ ಆರೋಪದಲ್ಲಿ ಭ್ರಷ್ಟಾಚಾರಿಯ ಪಟ್ಟ ಹೊತ್ತು ಸಸ್ಪೆನ್ಷನ್ ಬಹುಮಾನ ಪಡೆದಿರುವ ವ್ಯಕ್ತಿ. ಈ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಯಂ ನಿವೃತ್ತಿ ತೆಗೆದುಕೊಂಡರೂ ಕೇಸ್ ಮುಗಿಯದೇ ಅವನಿಗೆ ಬರಬೇಕಾದ ಸೆಟಲ್ಮೆಂಟ್ ಹಣ, ಪಿಂಚಣಿ ಎಲ್ಲವೂ ತಡೆಹಿಡಿಯಲ್ಪಟ್ಟಿದೆ. ವರ್ಷಗಳ ಹಿಂದೆಯೇ ಅವನ ಒಬ್ಬಳೇ ಮಗಳು ಸರಿತಾ ಆಸಿಡ್ ದಾಳಿಗೆ ತುತ್ತಾಗಿ ಅಸುನೀಗಿದ್ದಾಳೆ.  ಆ ಏರಿಯಾದ ಎಂಎಲ್ಎ ಮಾರ್ತಾಂಡನ ಮಗ ಮಹಿಪಾಲ ತನಗೆ ನೀಡಿದ ಕಿರುಕುಳದ ಬಗ್ಗೆ ಪೋಲೀಸರಿಗೆ ದೂರು ನೀಡಿದಳೆಂಬ ಕಾರಣಕ್ಕೆ ಅವನೇ ತನ್ನ ಗೂಂಡಾ ಸಹಚರರೊಂದಿಗೆ ಸೇರಿ ಸರಿತಾಳ ಮೇಲೆ ಆಸಿಡ್ ಎರಚಿರುವುದು ತಿಳಿದಿದ್ದರೂ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲಾಗದೇ ಸೋತು ಹೋಗಿದ್ದಾನೆ ಮೂರ್ತಿ. ಕಾರಣ ಮಹಿಪಾಲನ ಅಪ್ಪನಿಗಿರುವ ಹಣ ಹಾಗೂ ಜನಬಲ. ಅಧಿಕಾರಬಲದ ಮುಂದೆ ತನ್ನ ಹೋರಾಟ ಸಾಗದೆಂದು ಕೋರ್ಟಿನಲ್ಲಿ ಸಾಕ್ಷಾಧಾರಗಳ ಕೊರತೆಯಿಂದ ಕೇಸು ಬಿದ್ದು ಹೋದಾಗಲೇ ತಿಳಿದುಕೊಂಡಿದ್ದಾನೆ. ಜೀವನ ನಿರ್ವಹಣೆಗಾಗಿ ಮನೆಯಲ್ಲಿನ ವಸ್ತುಗಳನ್ನೇ ಮಾರಬೇಕಾದಂತಹ ದುಸ್ಥಿತಿ. ಸಮಸ್ಯೆಗಳ ನಡುವಲ್ಲೂ ಮೂರ್ತಿ ದಂಪತಿಗಳ ಬದುಕಿನಲ್ಲಿ ನಗುವಿಗೆ ಕೊರತೆಯಿಲ್ಲ ಎಂದರೆ ಅದಕ್ಕೆ ಕಾರಣ ನಟರಾಜನ ಹಾಸ್ಯಪ್ರಜ್ಞೆ. ತನ್ನ ಸ್ವಾರಸ್ಯಕರ ಮಾತಿನ ಲಹರಿಯಿಂದ ಸೀತಮ್ಮನ ಕೋಪವನ್ನೂ ಕರಗಿಸಬಲ್ಲ ಚತುರನವನು. 

ಹೀಗೆ ಮನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟಿದ್ದಾಗಲೇ ನಟರಾಜ ಮೂರ್ತಿ ಹಾಗೂ ಸೀತಾರಿಗೆ ಪೇಯಿಂಗ್ ಗೆಸ್ಟ್ ಒಬ್ಬರಿಗೆ ಮನೆಯ ಒಂದು ಭಾಗವನ್ನು ಬಾಡಿಗೆ ಕೊಟ್ಟು ಆ ಮೂಲಕ ಒಂದಿಷ್ಟು ವರಮಾನ ಸಂಪಾದಿಸುವ ಬಗ್ಗೆ ಹೇಳುತ್ತಾನೆ. ಇದು ದಂಪತಿಗಳಿಗೆ ಒಪ್ಪಿಗೆಯಾಗುತ್ತದೆ ಕೂಡಾ. ಮೊದಲಿಗೆ ಸಿನಿಮಾ ನಟ ರೇವಂತ್ ಪೇಯಿಂಗ್ ಗೆಸ್ಟಾಗಿ ಬರುತ್ತಾನಾದರೂ ಅವನ ಕುಡಿತದ ಚಟ ತಂದೊಡ್ಡುವ ಸಮಸ್ಯೆಗಳ ಕಾರಣ ಮೂರ್ತಿ ದಂಪತಿಗಳು ಪೇಚಿಗೆ ಸಿಲುಕುತ್ತಾರೆ. ಅಷ್ಟರಲ್ಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ಅವನು ಮೂರ್ತಿಯ ಮನೆ ಖಾಲಿ ಮಾಡಿ ಹೊರಡುತ್ತಾನೆ. ಆ ನಂತರದಲ್ಲಿ ಪೇಯಿಂಗ್ ಗೆಸ್ಟಾಗಿ ಬರುವವಳೇ ಪತ್ರಕರ್ತೆ ಸರಿತಾ. ಕಾಕತಾಳೀಯವಾಗಿ ಮೂರ್ತಿ ದಂಪತಿಗಳ ಮಗಳು ಸರಿತಾಳಿಗೂ ಈ ಸರಿತಾಳಿಗೂ ಹೆಸರಿನಂತೆಯೇ ಚಹರೆಯಲ್ಲೂ ಬಹಳಷ್ಟು ಸಾಮ್ಯತೆಯಿರುತ್ತದೆ. ತಮ್ಮ ಗತಿಸಿದ ಮಗಳೇ ಮತ್ತೆ ಸಿಕ್ಕಂತೆ ಸಂಭ್ರಮಿಸುವ ಮೂರ್ತಿ ಹಾಗೂ ಗೀತಾ ಸರಿತಾಳೊಂದಿಗೆ ಭಾವನಾತ್ಮಕ ನಂಟನ್ನು ಬೆಳೆಸಿಕೊಳ್ಳುತ್ತಾರೆ. ಅವರ ನೋವಿನ ಹಿನ್ನೆಲೆ ತಿಳಿದ ಸರಿತಾ ಕೂಡಾ ಅವರನ್ನು ಅಕ್ಕರೆಯಿಂದ ಹಚ್ಚಿಕೊಳ್ಳುತ್ತಾಳೆ. ನಟರಾಜ ತನ್ನ ಹಳೆಯ ರಿಕಾರ್ಡ್ ಡ್ಯಾನ್ಸ್ ಕಂಪನಿ ಮತ್ತೆ ಆರಂಭವಾದ ಕಾರಣ ಮೂರ್ತಿಯವರ ಮನೆಯನ್ನು ಬಿಟ್ಟು ಹೊರಡುತ್ತಾನೆ.

ಈ ಸಂದರ್ಭದಲ್ಲೇ ಮೂರ್ತಿಯ ಮನೆಯ ರಸ್ತೆಯ ಸರ್ಕಲ್ಲಿನಲ್ಲಿ ಸರಳ ಎಂಬಾಕೆಯನ್ನು ಕೆಲ ಗೂಂಡಾಗಳು ಪೆಟ್ರೋಲ್ ಹಾಕಿ ಸಜೀವವಾಗಿ ದಹಿಸುತ್ತಾರೆ. ಇದಕ್ಕೆ ಸರಿತಾಳ ಪ್ರಿಯಕರ ಸುಧೀರ್ ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾನೆ. ಇದರ ಹಿನ್ನೆಲೆ ಶೋಧಿಸ ಹೊರಡುವ ಸರಿತಾಳಿಗೆ ಸಹಾಯ ಮಾಡಿದ ಕಾರಣಕ್ಕೆ ಸುಧೀರ್ ಕೊಲ್ಲಲ್ಪಡುತ್ತಾನೆ. ಈ ಎರಡೂ ಕೊಲೆಗಳ ಹಿಂದಿರುವುದು ಮಾರ್ತಾಂಡನ ಮಗ ಡಿಸಿಪಿ ಮಹಿಪಾಲ್ ಎಂಬುದು ಖಚಿತವಾಗುತ್ತದೆ. ಈ ವಿಚಾರ ತಿಳಿದು ಮೂರ್ತಿ ದಂಪತಿಗಳ ಭಯ ಇನ್ನಷ್ಟು ಹೆಚ್ಚುತ್ತದೆ. ಈ ಸರಿತಾಳ ಸ್ಥಿತಿ ಕೂಡಾ ತಮ್ಮ ಮಗಳು ಸರಿತಾಳಂತಾಗಬಾರದೆಂದು ಅವಳಿಗೆ ತಿಳಿಹೇಳಲು ಪ್ರಯತ್ನಿಸುತ್ತಾರೆ. ಆದರೆ ಆಕೆ ಹಿಂದೆಗೆಯುವುದಿಲ್ಲ. ಕಡೆಗೆ ಅವರ ಭಯವೇ ನಿಜವಾಗಿ ಪತ್ರಕರ್ತೆ ಸರಿತಾ ಕೂಡಾ ಆಸಿಡ್ ನಲ್ಲಿ ಸುಟ್ಟು ಕರಕಲಾಗಿ ಕೊನೆಯುಸಿರೆಳೆಯುತ್ತಾಳೆ. 

ಅಲ್ಲಿಗೆ ಮೂರ್ತಿಯ ಸಹನೆ ಸಾಯುತ್ತದೆ ಆಕ್ರೋಶ ಭುಗಿಲೇಳುತ್ತದೆ. ಇನ್ನು ತಮಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ, ಕಳೆದುಕೊಂಡ ಬಹುಮೂಲ್ಯ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸ ಮಾತ್ರವೇ ಬಾಕಿ ಉಳಿದಿರುವುದು ಎಂದು ನಿರ್ಧರಿಸಿದ ಘಳಿಗೆ ತನ್ನ ಯೌವ್ವನದ ದಿನಗಳಲ್ಲಿನ ಸಿಟ್ಟು, ಪ್ರತೀಕಾರದ ಛಾಯೆ ಅವನಲ್ಲಿ ಮತ್ತೆ ಜಾಗೃತವಾಗುತ್ತದೆ. ಜಾಣತನ, ಹಣ ಹಾಗೂ ದೈಹಿಕ ಬಲದಿಂದ ಮೂರ್ತಿ ತನ್ನ ಪ್ರತೀಕಾರವನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆಯ ತಿರುಳು. 

ಸರಳ ಭಾಷೆಯ ಈ ಸೇಡಿನ ಕಥನದ ವೈಶಿಷ್ಟ್ಯತೆ ಇರುವುದು ನಿರೂಪಣಾ ಶೈಲಿಯಲ್ಲಿ. ಇಡೀ ಕಥೆಯ ಮುಕ್ಕಾಲು ಭಾಗ ಸಂಭಾಷಣೆಯಲ್ಲಿಯೇ ಇದೆ. ಹರಿತವಾದ ಹಾಸ್ಯ ವ್ಯಂಗ್ಯ ಮಿಶ್ರಿತ ಸಂಭಾಷಣೆಯೇ ಈ ಕಾದಂಬರಿಯ ಹೈಲೈಟ್. ಸಂಭಾಷಣಾ ಪ್ರಧಾನವಾದ್ದರಿಂದ ವೇಗವಾಗಿ ಓದಿಸಿಕೊಳ್ಳುತ್ತದೆ ಈ ಕಥೆ. ಅದರಲ್ಲೂ ನಟರಾಜನ ಸಂಭಾಷಣೆಗಳು ನಗುವನ್ನು ಉಕ್ಕಿಸುವುದರೊಂದಿಗೆ ಹಲವೆಡೆ ನಮ್ಮ ವ್ಯವಸ್ಥೆಯ ದೋಷಕ್ಕೆ ಚಾಟಿ ಬೀಸುತ್ತವೆ. ಅದರೊಂದಿಗೆ ಅವಕಾಶವಾದಿ ರೇವಂತ್, ಭ್ರಮೆಗಳನ್ನೇ ನಂಬುವ, ಅದನ್ನೇ ಸತ್ಯವೆನ್ನುವ ವಿಲಕ್ಷಣ ವ್ಯಕ್ತಿತ್ವದ ಶಾಂತಿ, ಸಮಾನತೆಯ ಬಗ್ಗೆ ಚಿಂತಿಸುತ್ತಾ ವರದಕ್ಷಿಣೆ ನೀಡದೇ ಮದುವೆಯಾಗುವ ಕನಸು ಕಾಣುತ್ತಾ ಅತ್ತ ಕನಸೂ ಕೈಗೂಡದೇ ಇತ್ತ ದೈಹಿಕ ಕಾಮನೆಗಳನ್ನೂ ಅದುಮಿಡಲಾಗದೇ ತಳಮಳಿಸುವ ಅವಿವಾಹಿತೆ ಉಮಾದೇವಿ, ಮಸ್ತಾನ್ ಮೊದಲಾದ ಅಲ್ಪಾವಧಿ ಪಾತ್ರಗಳೂ ನೆನಪಿಪಲ್ಲಿ ಉಳಿಯುತ್ತವೆ. 

'ಬಾಳೊಂದು ನಂದನ, ಅನುರಾಗ ಬಂಧನ' ಗೀತೆಯಿಂದ ಆರಂಭವಾಗಿ ಅದೇ ಗೀತೆಯೊಂದಿಗೆ ಅಂತ್ಯವಾಗುವ ಕಥೆ ಈ ಅನೀತಿಯ ಲೋಕದಲ್ಲಿ ಕೈ ಮುಗಿದರೆ ಬೆಲೆಯಿಲ್ಲ ಕೈ ಎತ್ತಿದರೆ ಮಾತ್ರವೇ ವ್ಯಕ್ತಿಗೆ ಬೆಲೆ ಎಂದು ಸಾರುತ್ತದೆ.

(ನನ್ನ ಬಳಿಯಿರುವುದು 2019ರಲ್ಲಿ ಮುದ್ರಣಗೊಂಡಿರುವ ಪ್ರತಿ. ಹಳೆಯ ಪ್ರತಿಗಳು ಹೇಗೋ ಎಂತೋ ಆದರೆ ಈ ಪ್ರತಿಯಲ್ಲಿ ಮಾತ್ರ ಮುದ್ರಾರಾಕ್ಷಸನ ಹಾವಳಿ ವಿಪರೀತವಾಗಿದೆ. ಬಹಳಷ್ಟು ಕಡೆಗಳಲ್ಲಿ ಪದಗಳು ಬದಲಾಗಿವೆ. ಹಾಗೆ ಹಲವೆಡೆ ಪದಗಳು, ಕೆಲವೆಡೆ ಸಂಪೂರ್ಣ ವಾಕ್ಯಗಳೇ ಮಾಯವಾಗಿವೆ. ಓದುವಾಗ ಅಡಚಣೆ ಎನ್ನಿಸಿದ್ದು ಸುಳ್ಳಲ್ಲ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ