ಸೋಮವಾರ, ಆಗಸ್ಟ್ 8, 2022

ಮುಳುಗಿದ್ದು ಭಾರಂಗಿಯೇ, ಭರವಸೆಯೇ, ಬದುಕೇ....? ಪುನರ್ವಸು


ಆತ್ಮೀಯ ಸಹೋದರ ವೀರೇಂದ್ರ 'ನೀವು ಓದಲೇಬೇಕು' ಎಂದು ಒತ್ತಾಯಿಸಿದ್ದಲ್ಲದೇ ತಾನೆ ಉಡುಗೊರೆಯಾಗಿ ಕಳಿಸಿಕೊಟ್ಟ ಗಜಾನನ ಶರ್ಮರ 'ಪುನರ್ವಸು' ಕಾದಂಬರಿಯ ಕೊನೆಯ ಪುಟವನ್ನು ಮುಗಿಸಿ ಕೆಳಗಿಟ್ಟ ಈ ಘಳಿಗೆ ಬಾಲ್ಯದ ದಿನಗಳು ಪದೇಪದೇ ಕಣ್ಮುಂದೆ ಹಾಯುತ್ತಿವೆ. ನನ್ನ ತಂದೆಯ ಊರು ಹಾಗೂ ಅಮ್ಮನ ತವರು ಎರಡೂ ಮಲೆನಾಡು ಪ್ರದೇಶಗಳೇ. ತಂದೆಯ ಊರಾದ ಕಳಸ ಸಮೀಪದ ದಟ್ಟಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ನನಗೆ ಅಲ್ಲಿಗೂ ಅಮ್ಮನ ತವರಾದ ಹೊಸನಗರದ ಕೊಡಚಾದ್ರಿ ತಪ್ಪಲಿನ ಹಳ್ಳಿಗೂ ಹೇಳಿಕೊಳ್ಳುವಂತಹ ದೊಡ್ಡ ವ್ಯತ್ಯಾಸವಿದೆಯೆಂದು ಎಂದೂ ಅನಿಸಿದ್ದಿಲ್ಲ. ಮಳೆಗಾಲದಲ್ಲಿ ಅಪರೂಪಕ್ಕೊಮ್ಮೆ ಮಳೆ ಬಿಡುವು ಕೊಟ್ಟರೆ ಬಗಲಿನಲ್ಲಿದ್ದವರೂ ಕಾಣದಂತೆ ಕವಿಯುವ ಮೈಂದು ಹಾಗೂ ತಲೆತನಕ ಏರುವ ಉಂಬಳಗಳ ಹಾವಳಿ ಹೊರತು ಪಡಿಸಿದರೆ ಎರಡೂ ಪ್ರದೇಶಗಳೂ ಹೆಚ್ಚುಕಡಿಮೆ ಒಂದೇ. ಆದರೂ ದಸರಾ ರಜೆ, ಬೇಸಿಗೆ ರಜೆ ಬಂತೆಂದರೆ ಸಾಕು..... ತಮ್ಮ ಮತ್ತು ನಾನು ತುದಿಗಾಲಲ್ಲಿ ಬಕಪಕ್ಷಿಗಳಂತೆ ಅಜ್ಜನ(ಅಮ್ಮನ ತಂದೆ) ಬರುವಿಕೆಗೆ ಕಾಯುತ್ತಿದ್ದೆವು. ಬಸ್ ಹಾರನ್ ಶಬ್ದ ಕಿವಿಗೆ ಬಿದ್ದೊಡನೆ ತಡಬೆಯ ಬಳಿ ಓಡಿ ಅದರ ಮೇಲೇರಿ ರಸ್ತೆಯತ್ತ ನೋಟವಿಟ್ಟು ನಿಲ್ಲುವುದೇ ಸಂಭ್ರಮ. ಅಜ್ಜ ಬಂದರೆಂದರೆ ನಾಲ್ಕುದಿನ ಮನೆಯಲ್ಲಿ ನಿಲ್ಲಲು ಬಿಡದೇ ವಾಪಾಸ್ ಹೊರಡಿಸಿ ಬಿಡುವಷ್ಟು ಆತುರ ನಮಗೆ ಅಜ್ಜಿ ಮನೆಗೆ ಹೋಗಲು. ದೊಡ್ಡಮ್ಮ ಚಿಕ್ಕಮ್ಮಂದಿರ ಮಕ್ಕಳೆಲ್ಲಾ ಅಲ್ಲಿ ಒಟ್ಟಾಗುವುದು ನಮ್ಮ ಉಮೇದಿಗೆ ಮುಖ್ಯ ಕಾರಣವಾದರೂ ಅದನ್ನು ಮೀರಿದ ಇನ್ನೊಂದು ಸೆಳೆತವಿತ್ತು ನಮಗಲ್ಲಿ. ಅದೇ ಮನೆಯಿಂದ ಕೂಗಳತೆ ದೂರದಲ್ಲಿ ಆವರಿಸಿಕೊಂಡ ಅಗಾಧ ಜಲರಾಶಿ....... ನೀರೆಂದರೆ ಸಾಮಾನ್ಯ ನೀರಲ್ಲ ಅದು. ಸಮುದ್ರದೋಪಾದಿಯಲ್ಲಿ ವಿಶಾಲವಾಗಿ ಆವರಿಸಿಕೊಂಡ ನೀಲ ಜಲರಾಶಿ. ಕುದುರೆಮುಖದ ತಪ್ಪಲಿನ ನಾವು ನದಿ, ನೀರು 
ಕಾಣದವರೇನಲ್ಲವಾದರೂ ಆ ಪರಿ ವಿಶಾಲವಾಗಿ ಚಲನೆಯಿಲ್ಲದೇ ನಿಂತ ನೀರು, ಅದರ ನಡುನಡುವಲ್ಲೇ ಕರ್ರಗೆ ರೆಂಬೆಚಾಚಿ ನಿಂತ ಬೋಳು ಮರಗಳನ್ನು ನಮ್ಮೂರಲ್ಲಿ ಎಂದೂ ಕಾಣದ ಅಚ್ಚರಿ ನಮಗೆ. ಅಜ್ಜಿಮನೆಯಲ್ಲಿದ್ದಷ್ಟೂ ದಿನ ನಮ್ಮ ಬೆಳಗುಬೈಗುಗಳ ನಿತ್ಯಸಾಥಿ ಆ ನೀರದಂಡೆಯಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಮಳೆಗಾಲದಲ್ಲಿ ತೋಟದ ತನಕ ಏರುತಿದ್ದ ನೀರು ಬೇಸಿಗೆಯಲ್ಲಿ ಸಂಪೂರ್ಣ ಇಳಿದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗುತ್ತಿತ್ತು. ಕೆಲವೆಡೆ ಗದ್ದೆಯಂತೆ ಕಾಣುವ ಸಮತಟ್ಟು ಬಯಲು, ಇನ್ನು ಕೆಲವೆಡೆ ಹಳ್ಳ ದಿಣ್ಣೆಗಳು, ಒಂದೆರಡುಕಡೆ ಒಡೆದಿದ್ದರೂ ಉಳಿದಂತೆ ಗಟ್ಟಿಮುಟ್ಟಾದ ಒಂದು ಉದ್ದದ ರಸ್ತೆ, ಒಂದೆಡೆ ಸಾಲು ಕಲ್ಲುಗುಡ್ಡಗಳು, ಅದರ ಮೇಲಿನ ಯಾವುದೋ ದೇವಾಲಯದ ಅವಶೇಷಗಳು.......... ಮಳೆಗಾಲದಲ್ಲಿ ನೀಲಸಮುದ್ರದಂತೆ ಕಾಣುವ ಈ ಜಾಗ ಬೇಸಿಗೆಯಲ್ಲಿ ಇಂತಹದ್ದೊಂದು ಅವತಾರ ಎತ್ತುವ ಪರಿ ಸೋಜಿಗ ಹುಟ್ಟಿಸುತ್ತಿತ್ತು. ಬೇಸಿಗೆಯಲ್ಲಿ ಅಲ್ಲಿನ ಸಮತಟ್ಟು ಬಯಲುಗಳಲ್ಲಿ ಭತ್ತದ ಗದ್ದೆಯೊಂದಿಗೆ ಸವ್ತೇಕಾಯಿ, ಬೀನ್ಸ್ ಮೊದಲಾಗಿ ತರಕಾರಿಗಳನ್ನು ಬೆಳೆಯುತ್ತಿದ್ದ ನೆನಪು. ಬೆಳಗ್ಗೆ ಅಲ್ಲಿಗೆ ದಾಳಿಯಿಟ್ಟು ಎಳೆಸವತೆ ಮೆದ್ದು ಒಂದಿಷ್ಟು ಹಾರಾಟ ನಡೆಸಿ ವಾಪಾಸಾದರೆ ಮತ್ತೆ ಸಂಜೆ ನಾಲ್ಕರ ನಂತರ ಪೇರಲೆ ಗಿಡಗಳ ಮೇಲೆ ದಂಡೆತ್ತಿ ಹೋಗಿ ನಂತರ ಆರು ಗಂಟೆಯ ತನಕವೂ ಅಲ್ಲೇ ಸುತ್ತಮುತ್ತಲಿನ ದಿಬ್ಬ ಹಳ್ಳಗಳನ್ನೆಲ್ಲಾ ಸುತ್ತುವುದೇ ದೈನಂದಿನ ಕಾಯಕ ಆಗ. 

ನಂತರದ ದಿನಗಳಲ್ಲಿ ಓದು, ಹಾಸ್ಟೆಲ್, ಉದ್ಯೋಗ, ಮದುವೆ, ಸಂಸಾರ ಎಂಬ ಹಲವು ಜಂಜಡಗಳಲ್ಲಿ ಅಜ್ಜಿಮನೆಯ ಭೇಟಿ ವಿರಳವಾದರೂ ಇಂದಿಗೂ ಹೋದಾಗಲೆಲ್ಲಾ ಒಮ್ಮೆ ಹಿನ್ನೀರಿನ ದಡದಲ್ಲಿ ಕುಳಿತು ಬರದಿದ್ದರೆ ಏನೋ ಕಳೆದುಕೊಂಡ ಭಾವ ಕಾಡುವುದು ಸುಳ್ಳಲ್ಲ. ಮೊದಮೊದಲು ವಿಸ್ಮಯದ ತಾಣವಾಗಿ ಕಾಣುತ್ತಿದ್ದ ಆ ಜಲರಾಶಿ ಬುದ್ಧಿ ಬೆಳೆದಂತೆಲ್ಲಾ ಮುಳುಗಡೆ ಸಂತ್ರಸ್ತರ ಚದುರಿ ಚೂರಾದ ಬದುಕಿನ ಪ್ರತಿಬಿಂಬದಂತೆ ಅನ್ನಿಸತೊಡಗಿದ್ದು ನಿಜವೇ ಆದರೂ ಆ ಭಾವ ಮನಕಲಕುವಷ್ಟು ಗಾಢವಾಗಿ ಕಾಡಿದ್ದು 'ಪುನರ್ವಸು'ವಿನಿಂದ. 'ಜೋಗ ಪಟ್ಣ ಆಗ್ತು' ಅನ್ನುವಾಗಿನಿಂದಲೇ ನಾಭಿಯಾಳದಲ್ಲಿ ಶುರುವಾದ ವಿಷಾದ ಕಾದಂಬರಿ ಮುಗಿಯುವ ಹೊತ್ತಿಗೆ ಇಡೀ ಜೀವವನ್ನೇ ವ್ಯಾಪಿಸಿ ಮುಳುಗಿಸಿದಂತಿದೆ. ಅಜ್ಜಿಮನೆಯ ಹಿನ್ನೀರಲ್ಲಿ ಬೇಸಿಗೆಯಲ್ಲಿ ಗೋಚರವಾಗುವ ಆ ರಸ್ತೆ ವಿನಾಕಾರಣ ನೆನಪಾಗುತ್ತಿದೆ. ಆ ಜಾಗವೂ ಜೀವಚಟುವಟಿಕೆಯ ಚಿಲುಮೆಯಾಗಿದ್ದ ಒಂದು ಕಾಲದಲ್ಲಿ ದತ್ತಪ್ಪ ಹೆಗಡೆಯವರೋ, ತುಂಗಕ್ಕಯ್ಯನೋ, ಶರಾವತಿಯೋ, ಮುರಾರಿಯೋ ಆ ರಸ್ತೆಗುಂಟ ಸಾಗಿದ್ದಿರಬಹುದೇ.......? ಎಲ್ಲವನ್ನೂ ಆಪೋಶನ ತೆಗೆದುಕೊಂಡು ಅಚಲವಾಗಿ ನಿಂತಿರುವ ಆ ನೀರಿನಾಳದ ನೆಲದಲ್ಲಿ ದೋಣಿಗಣಪ, ನ್ಯಾಮಯ್ಯ, ಮಾಣಿಚಿಕ್ಕಯ್ಯ, ಭವಾನಕ್ಕ, ಚೆನ್ನಮ್ಮ, ರತ್ನಕ್ಕನಂತಹವರ ಹೆಜ್ಜೆಗುರುತುಗಳ ಸುಳಿವಿರಬಹುದೇ.......?  ಜಗತ್ತಿಗೆ ಬೆಳಕನ್ನೀಯಲು ಕತ್ತಲಲ್ಲಿ ಕರಗಿಹೋದವರ ಕಣ್ಬೆಳಕು ರಾತ್ರಿಯ ನೀರವದಲ್ಲಿ ಮಿನುಗುತ್ತಿರಬಹುದೇ........? ಈ ಕ್ಷಣವೇ ಅಲ್ಲಿಗೆ ಹಾರಿ ಆ ಕುರುಹುಗಳನ್ನು ಅರಸಬಯಸುತ್ತಿದೆ ಮನ......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ