ಶನಿವಾರ, ಜುಲೈ 25, 2020

ಆರ್ತನಾದ - ಪುಸ್ತಕ ಪರಿಚಯ

ಪುಸ್ತಕದ ಹೆಸರು         : ಆರ್ತನಾದ
ಮೂಲ ಲೇಖಕರು.      : ಯಂಡಮೂರಿ ವೀರೇಂದ್ರನಾಥ್
ಅನುವಾದಕರು.          : ರಾಜಾ ಚೆಂಡೂರ್
ಪ್ರಕಾಶಕರು.               : ಸೌಮ್ಯ ಎಂ, ಬಸವನಗುಡಿ
ಮುದ್ರಣ.                     : 2004
ಪುಟಗಳು : 180.          ಬೆಲೆ: 80 ರೂಪಾಯಿಗಳು

ನೂರೆಂಬತ್ತು ಪುಟಗಳ ಈ ಪುಟ್ಟ ಕಾದಂಬರಿಯಲ್ಲಿ ಹೆಣ್ಣು ಎಲ್ಲರೆದುರು ಬಹಿರಂಗವಾಗಿ ವ್ಯಕ್ತಪಡಿಸಲಾಗದ/ವ್ಯಕ್ತಪಡಿಸಲು ಹಿಂಜರಿಯುವ ಲೈಂಗಿಕ ದೌರ್ಜನ್ಯದ ವಿವಿಧ ಮುಖಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಯಂಡಮೂರಿಯವರು. ಮನೆಯಿಂದ ಆರಂಭಿಸಿ ದಿನಂಪ್ರತಿ ಸಂಚಾರಕ್ಕೆಂದು ನಾವು ಅವಲಂಬಿಸುವ ಬಸ್ಸುಗಳು, ಕಛೇರಿ, ಶಾಲೆ ಹೀಗೆ ಎಲ್ಲೆಡೆ ವ್ಯಾಪಿಸಿರುವ ಶೋಷಣೆಯನ್ನು, ಅದನ್ನು ವ್ಯಕ್ತಪಡಿಸಲು ಇರುವ ಅಡೆತಡೆಗಳ ಸಮೇತ ತೆರೆದಿಡುತ್ತದೆ ಈ ಕಾದಂಬರಿ. ಗಂಟಲಿನಾಚೆ ಸ್ವರವಾಗಿ ಹೊರಬರದ ದಮನಿತ ದೌರ್ಜನ್ಯಗಳ ಈ ಮೂಕ ಆರ್ತನಾದ ಇಂದಿಗೂ ಪ್ರಸ್ತುತ.

ಅನ್ಯಾಯವನ್ನು ಸಹಿಸದೇ ಪ್ರಶ್ನಿಸುವ ಸ್ವಭಾವದ ಧರಣಿಯ ಬದುಕನ್ನು ಕೇಂದ್ರವಾಗಿಸಿಕೊಂಡು ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಸೂಕ್ಷ್ಮವಾಗಿ ತೋರುತ್ತಲೇ ಸಾಗುವ ಕಥೆ ನಂತರದಲ್ಲಿ ಪುಟ್ಟ ಮಕ್ಕಳ ಮೇಲಿನ ದೌರ್ಜನ್ಯದ ಹೀನ ರೂಪವೊಂದಕ್ಕೆ ನಮ್ಮನ್ನು ಮುಖಾಮುಖಿಯಾಗಿಸುತ್ತದೆ. ಜನರಿಂದ ತುಂಬಿದ ಬಸ್ಸಿನಲ್ಲಿ ಹೆಣ್ಣು ಮಕ್ಕಳ ಮೈ ಕೈ ಸವರುತ್ತಾ ವಿಕೃತ ಆನಂದ ಪಡುವವರಿಂದ ಹಿಡಿದು, ಆಫೀಸಿನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳೆಲ್ಲಾ ತನ್ನ ಕಾಮನೆಗಳನ್ನು ತಣಿಸುವ ಸಾಧನಗಳೆಂದುಕೊಳ್ಳುವ ಮೇಲಾಧಿಕಾರಿ, ಎಲ್ಲಾ ತಪ್ಪಿಗೂ ನೀನೇ ಕಾರಣ ಎನ್ನುವ ಪತಿ, ತಮ್ಮ ಮೇಲಾಗುತ್ತಿರುವ ಶೋಷಣೆ ಎಂತದ್ದು ಎಂಬುದನ್ನೂ ವಿವರಿಸಲು ಬಾರದಂತಹ ಎಳೆಯ ಮಕ್ಕಳ ಮುಗ್ಧತೆಯನ್ನು ಕಸಿಯುವ ಪಿಪಾಸುಗಳು ಹಾಗೂ ಇವೆಲ್ಲವನ್ನೂ ಬಾಯ್ತೆರೆದು ಹೇಳಿಕೊಳ್ಳಲು ಅಡ್ಡಿಯಾಗುವ ಸಂಗತಿಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ. 

ಈ ಕಾದಂಬರಿಯಲ್ಲಿ ಪ್ರಸ್ತಾಪವಾಗಿರುವ ಪ್ರತಿಯೊಂದು ಸಂಗತಿಯೂ ಒಂದಿಲ್ಲೊಂದು ಸಂದರ್ಭದಲ್ಲಿ ಪ್ರತೀ ಮಹಿಳೆಯ ಅನುಭವಕ್ಕೂ ಬಂದಿರುತ್ತದೆ. ಅವುಗಳ ರೂಪ ಬೇರೆ ಬೇರೆ ಇರಬಹುದಷ್ಟೇ. ಒಂದರ್ಥದಲ್ಲಿ ವಾಸ್ತವ ಸ್ಥಿತಿಯನ್ನೇ ಬರಹವಾಗಿಸಿದ್ದಾರೆ ಎನ್ನಬಹುದು. ಅದನ್ನು ಪುಷ್ಠೀಕರಿಸುವಂತೆ ಕೆಲವು ಪ್ರಕರಣಗಳನ್ನು ಲೇಖಕರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ ಕೂಡಾ. ಹಾಗೆಯೇ ಕಥೆಯ ಕ್ಲೈಮ್ಯಾಕ್ಸ್ ನಿಜವಾಗಿ ನಡೆದದ್ದು ಎಂಬುದನ್ನೂ ಉಲ್ಲೇಖಿಸಿದ್ದಾರೆ. ಸಣ್ಣ ಕಾದಂಬರಿಯಾದರೂ ಪ್ರತೀ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಹೆಣ್ಣು ಧರಣಿಯಂತೆ ಇರಬೇಕು ಅನ್ನಿಸುವಷ್ಟು ಪರಿಣಾಮಕಾರಿಯಾಗಿ ಆ ಪಾತ್ರವನ್ನು ಚಿತ್ರಿಸಿದ್ದಾರೆ. ಪತ್ನಿಯ ಮಾತುಗಳನ್ನು ತಾಳ್ಮೆಯಿಂದ ಕೇಳಿ ವಿವೇಚಿಸುವ, ಆಕೆಯನ್ನು ಅರ್ಥೈಸಿಕೊಳ್ಳುವ ಶ್ರೀಧರ್ ಆಪ್ತನೆನಿಸುತ್ತಾನೆ. ವಿಕ್ರಂ, ಜಾನ್ ಅಬ್ರಹಾಂ ಮತ್ತು ಹಾಗೆ ಬಂದು ಹೀಗೆ ಹೋಗುವ ಸುಕುಮಾರಿ ಪಾತ್ರಗಳು ತುಂಬಾ ಇಷ್ಟವಾದವು.

ಇದರ ಮೂಲ ತೆಲುಗು ಕಾದಂಬರಿಯನ್ನು ಯಂಡಮೂರಿಯವರು ಯಾವಾಗ ಬರೆದಿರುವರೋ ನನಗೆ ತಿಳಿದಿಲ್ಲ. ಆದರೆ ನನ್ನ ಬಳಿಯಿರುವ ಈ ಪುಸ್ತಕ ಪ್ರಕಟವಾಗಿರುವುದು 2004ರಲ್ಲಿ. ಅಂದರೆ ಇಂದಿಗೆ ಸರಿಸುಮಾರು ಹದಿನಾರು ವರ್ಷಗಳ ಹಿಂದೆ. ಹದಿನಾರು ವರ್ಷಗಳ ನಂತರವೂ ಈ ಕಾದಂಬರಿಯಲ್ಲಿ ಪ್ರಸ್ತಾಪಿತ ಸಂಗತಿಗಳು ನಮ್ಮ ಸಮಾಜದಲ್ಲಿ ಪ್ರಸ್ತುತವಾಗಿದೆ ಎನ್ನುವುದು ವಿಪರ್ಯಾಸವಲ್ಲದೇ ಮತ್ತೇನು? ಇಂದಿಗೂ ಇದೇ ವಿಚಾರದ ಬಗ್ಗೆ ಬರೆದು, ಸಿನಿಮಾ ಮಾಡಿ ಜನರ ಚಿಂತನೆಗಳನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ನಾಚಿಕೆಗೇಡಿನ ಸಂಗತಿಯಲ್ಲವೇ?
"ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆಂದು ಚಿಕ್ಕಂದಿನಲ್ಲಿ ಓದಿದ್ದೆವು. ಆದರೆ ಆ ದೇವತೆಗಳು ಇಂದು ಇಲ್ಲಿ ಇದ್ದರೆ ಯಾರು ಪೀತಾಂಬರ ಎಳೆಯುತ್ತಾರೋ, ಯಾರು ಇನ್ನೇನು ಮಾಡುತ್ತಾರೋ ಎಂದು ಓಡಿಹೋಗುತ್ತಿದ್ದರು" ಎನ್ನುವ ಧರಣಿಯ ಮಾತಿಗೂ "ಗುಂಪಿನಲ್ಲಿರುವಾಗ ಯಾವ ಗಂಡಸಾದರೂ ಹೆಣ್ಣನ್ನು ತನಗೆ ಬೇಕಾದಾಗ ಬೇಕಾದಂತೆ ಮುಟ್ಟಬಹುದು. ಏಕೆಂದರೆ ಯಾವಾಗ ಹೆಣ್ಣು ಸಾರ್ವಜನಿಕ ಪ್ರದೇಶದಲ್ಲಿರುತ್ತಾಳೋ ಆಗ ಆಕೆ ಸಾರ್ವಜನಿಕ ಆಸ್ತಿಯಾಗಿಬಿಡುತ್ತಾಳೆ" ಎಂಬ ಇತ್ತೀಚಿನ ಮರ್ದಾನಿ 2 ಸಿನಿಮಾದ ಸಂಭಾಷಣೆಗೂ ನಡುವೆ ಸಮಯದ ಹೊರತು ಯಾವ ವ್ಯತ್ಯಾಸವೂ ಕಾಣದು ಅಲ್ಲವೇ? ಎರಡೂ ಕೂಡಾ ಸತ್ಯವೇ...... ಅಂದಿಗೂ ಇಂದಿಗೂ....... ಹೀಗೇ ಮುಂದುವರೆದರೆ ಪ್ರಾಯಶಃ ಎಂದೆಂದಿಗೂ......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ