ಶನಿವಾರ, ಜುಲೈ 4, 2020

ಪುಸ್ತಕ ವಿಮರ್ಶೆ - ವೈದೇಹಿಯವರ ಆಯ್ದ ಕಥೆಗಳು

ಪುಸ್ತಕದ ಹೆಸರು   : ಮೊದಲ ಓದು - ವೈದೇಹಿ       ಅವರ ಆಯ್ದ ಕಥೆಗಳು
ಪ್ರಕಾಶಕರು         : ಅಕ್ಷರ ಪ್ರಕಾಶನ, ಹೆಗ್ಗೋಡು
ಪ್ರಥಮ ಮುದ್ರಣ : 2006
ಪುಟಗಳು     : 108      ಬೆಲೆ    : 75 ರೂ

ಈ ಪುಸ್ತಕವನ್ನು ಪರಿಚಯಿಸುವ ಮೊದಲು 'ಮೊದಲ ಓದು' ಎಂಬ ಅದ್ಭುತ ಪುಸ್ತಕ ಮಾಲೆಯ ಬಗ್ಗೆ ಒಂದಿಷ್ಟು ಹೇಳಬಯಸುತ್ತೇನೆ. ಸಾಮಾನ್ಯವಾಗಿ ಓದುಗರು ತಮ್ಮ ಆಯ್ಕೆ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಆಯ್ದು ಓದುತ್ತಾರೆ. ಎಲ್ಲಾ ಲೇಖಕರು, ಎಲ್ಲಾ ಪ್ರಬೇಧದ ಬರಹಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಲೇಖಕರ ಬರವಣಿಗೆಯ ಶೈಲಿ, ಪ್ರಬೇಧ, ವಸ್ತುವಿಷಯ ಎಲ್ಲವನ್ನೂ ಗಮನಿಸಿ ಪುಸ್ತಕಗಳನ್ನು ಆರಿಸುವುದು ಕೊಂಚ ಕಠಿಣವಾದ ಕೆಲಸ. ಈ ನಿಟ್ಟಿನಲ್ಲಿ ಓದುಗರಿಗೆ ಬಹಳಷ್ಟು ಸಹಾಯ ಮಾಡಬಲ್ಲ ಪುಸ್ತಕ ಸರಣಿ ಈ 'ಮೊದಲ ಓದು'.

ಕರ್ನಾಟಕ ಸಾಹಿತ್ಯ, ರಂಗಭೂಮಿ ಹಾಗೂ ಪ್ರದರ್ಶನ ಕಲೆಗೆ ಅಪಾರ ಕೊಡುಗೆ ನೀಡಿರುವ, ನೀನಾಸಂ ಹಾಗೂ ಅಕ್ಷರ ಪ್ರಕಾಶನ, ಹೆಗ್ಗೋಡು ಸಂಸ್ಥೆಗಳ ಸಂಸ್ಥಾಪಕ ಮಹಾನ್ ಚೇತನ ದಿವಂಗತ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ಹೊರತಂದಿರುವ ಸರಣಿ ಪುಸ್ತಕ ಮಾಲಿಕೆ 'ಮೊದಲ ಓದು'. ಕನ್ನಡ ಸಾಹಿತ್ಯದ ಹೊಸ ಓದುಗರಿಗೆ ಇಲ್ಲಿನ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕೆಂಬುದು ಇದರ ಉದ್ದೇಶ. ಮೊದಲ ಕಂತಿನಲ್ಲಿ ತಲಾ 108 ಪುಟಗಳ 25 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.(ಪ್ರಸ್ತುತ ಈ 'ಮೊದಲ ಓದು' ಸರಣಿಯಲ್ಲಿ ನಲ್ವತ್ತೆಂಟು ಪುಸ್ತಕಗಳು ಪ್ರಕಟಗೊಂಡಿವೆ) ಹಳಗನ್ನಡ ಕಾವ್ಯಗಳಿಂದ ಹಿಡಿದು, ಹೊಸಗನ್ನಡದ ಕವಿತೆ, ಕಥೆ, ಬರಹಗಳು ಇದರಲ್ಲಿ ಸೇರಿವೆ. (ಮೊದಲ ಸರಣಿಯ ಇಪ್ಪತ್ತೈದು ಪುಸ್ತಕಗಳ ಪಟ್ಟಿಯನ್ನು ಫೋಟೋದಲ್ಲಿ ಹಾಕಿರುವೆ). ಆಯಾ ಕವಿ/ಸಾಹಿತಿಗಳ ಬರವಣಿಗೆಯ ಶೈಲಿ, ಪ್ರಕಾರಗಳ ಬಗ್ಗೆ ಅರಿಯಲು ಈ ಪುಸ್ತಕಗಳು ಓದುಗರಿಗೆ ಸಹಾಯ ಮಾಡುತ್ತವೆ. ತಲಾ ಎಪ್ಪತ್ತೈದು ರೂಪಾಯಿ ಬೆಲೆಯುಳ್ಳ ಇವು ನಿಜಕ್ಕೂ ಸಂಗ್ರಹಯೋಗ್ಯ ಪುಸ್ತಕಗಳು(ಹೊಸ ಅವತರಣಿಕೆಗಳ ಬೆಲೆ ನೂರು ರೂಪಾಯಿಗಳು ಇರಬೇಕು.)
ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾದ ಜಾನಕಿ ಶ್ರೀನಿವಾಸ ಮೂರ್ತಿ(ವಾಸಂತಿ) ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲೊಬ್ಬರು. ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಹೆಣ್ಣಿನ ಮನೋಲೋಕದ ಸೂಕ್ಷ್ಮಗಳನ್ನು ಯಾವುದೇ ಉತ್ಪ್ರೇಕ್ಷೆಗಳಿಲ್ಲದೇ ಚಿತ್ರಿಸುವುದರಲ್ಲಿ ಇವರು ಸಿದ್ಧಹಸ್ತರು. ಕುಂದಗನ್ನಡದ ಪ್ರಾದೇಶಿಕ ಸೊಗಡಿನಲ್ಲಿ ನಮ್ಮ ನಡುವಿನ ಅತೀ ಸಾಮಾನ್ಯ ಹೆಣ್ಮಕ್ಕಳ ಬದುಕು ಬವಣೆಗಳನ್ನು ಅತ್ಯಂತ ಸಮರ್ಥವಾಗಿ ಧ್ವನಿಸುತ್ತವೆ ಇವರ ಕಥನಗಳು. 

ಪ್ರಸ್ತುತ ಪುಸ್ತಕ ವೈದೇಹಿ ಅವರ ಎಂಟು ಕಥೆಗಳನ್ನು ಒಳಗೊಂಡಿದೆ (ಅಕ್ಕು, ಅವಲಂಬಿತರು, ಶಕುಂತಲೆಯೊಡನೆ ಕಳೆದ ಅಪರಾಹ್ನ, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಸೌಗಂಧಿಯ ಸ್ವಗತಗಳು, ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿಯೆಂಬ ನೆನಪು). ಈ ಎಂಟೂ ಕಥೆಗಳೂ ಪುರುಷ ಪ್ರಧಾನ ಸಮಾಜದಡಿಯಲ್ಲಿ ಉಡುಗುವ ಹೆಣ್ಣಿನ ದನಿಯನ್ನೂ, ಸಂಪ್ರದಾಯ ಕಟ್ಟಳೆಗಳ ಹೆಸರಿನಲ್ಲಿ ಬಂಧಿಯಾದ ಅವಳ ಒಳತೋಟಿಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ನಮ್ಮ ಕುಟುಂಬ, ನಮ್ಮ ಮನೆಯವರು, ನಮ್ಮ ಬಂಧುಗಳು ಎನ್ನುವ ಸಂಬಂಧಗಳೆಲ್ಲಾ ಒಂದು ಭದ್ರತೆಯ ಸುರಕ್ಷತಾ ಭಾವವನ್ನು ನೀಡುವಂತಹದ್ದು. ಆದರೆ ಆ ಕೌಟುಂಬಿಕ ವ್ಯವಸ್ಥೆಯೊಳಗೇ ಉಸಿರಾಡುವ ತಣ್ಣಗಿನ ಕ್ರೌರ್ಯವನ್ನು ಇಲ್ಲಿನ ಕಥೆಗಳು ತೆರೆದಿಡುವ ಪರಿ ಮೈನಡುಗಿಸುತ್ತದೆ. ಅಂದಿನ ಶಕುಂತಲೆಯಿಂದ ಹಿಡಿದು ಇಂದಿನ ಅಕ್ಕು, ಅಹಲ್ಯ, ಪುಟ್ಟಮ್ಮತ್ತೆ, ಕಮಲಾವತೀ, ಸೌಗಂಧಿ, ಅಮ್ಮಚ್ಚಿಯ ತನಕ ಎಲ್ಲರೂ ತಮ್ಮವರೆನಿಸಿಕೊಂಡವರಿಂದಲೇ ದಮನಿತರಾದವರು. ಕೆಲವರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಇನ್ನು ಕೆಲವರು ಮೌನವಾಗಿ ಸಹಿಸಿ ಹೊಂದಾಣಿಕೆಯನ್ನೇ ಬದುಕಾಗಿಸಿಕೊಂಡವರು. 
ಬಂಡಾಯದ ಧ್ವನಿಯಂತೆ ಕಾಣುವ ಅಕ್ಕುವಿನ ಮಾತುಗಳು ಲೋಕಕ್ಕೆ ಹುಚ್ಚು ಬಡಬಡಿಕೆಯಷ್ಟೇ. ಎಲ್ಲರೂ ಅವಳನ್ನು ಆಡಿಕೊಳ್ಳುವವರೇ. ಅವಳಿಗೆ ಮರುಳಿನ ಬಿರುದು ನೀಡುವ ಮನೆಯವರ ಉದ್ದೇಶ ಅವಳ ಮಾತಿನಲ್ಲಿನ ಸತ್ಯವನ್ನು ಭ್ರಾಂತಿಯ ಸೋಗಿನಲ್ಲಿ ಮುಚ್ಚಿಹಾಕುವುದಷ್ಟೇ ಆಗಿಬಿಡುತ್ತದೆ. 'ಅವಲಂಬಿತರು' ಸಣ್ಣ ವಯಸ್ಸಿನ ಅಹಲ್ಯೆಯ ಕನಸುಗಳನ್ನು ಅವಳ ಸುತ್ತಲಿನ ಜನರು ಚಿವುಟುವ ಪರಿಯನ್ನು ತೆರೆದಿಡುತ್ತಲೇ ಯಾರು ಯಾರ ಮೇಲೆ ಅವಲಂಬಿತರು ಎನ್ನುವ ಜಿಜ್ಞಾಸೆಯನ್ನು ಹುಟ್ಟಿಹಾಕುತ್ತದೆ.

ಸ್ವತಃ ಕೆ.ವಿ ಸುಬ್ಬಣ್ಣನವರೇ ರಚಿಸಿದ "ಲೋಕ ಶಾಕುಂತಲ" ನಾಟಕದಿಂದ ಪ್ರೇರಣೆ ಪಡೆದ 'ಶಕುಂತಲೆಯೊಂದಿಗೆ ಕಳೆದ ಅಪರಾಹ್ನ' ದುಷ್ಯಂತನಿಂದ ತಿರಸ್ಕೃತಳಾದ ಶಕುಂತಲೆಯ ಭಾವಾಂತರಂಗವನ್ನು ನಿರೂಪಿಸುತ್ತದೆ. ಅರಸೊತ್ತಿಗೆಯ ರಾಜಧರ್ಮದ ಹಮ್ಮಿನೊಳಗೆ ನರಳುವ ಹೆಣ್ಮನದ ಸೂಕ್ಷ್ಮಗಳು ಇಲ್ಲಿ ಸಮರ್ಥವಾಗಿ ಅನಾವರಣಗೊಂಡಿವೆ. ಧರ್ಮ, ದ್ವಂದ್ವ, ಶಾಪ ಮೊದಲಾದವುಗಳ ಸೋಗಿನಲ್ಲಿ ಪುರುಷ ಲಂಪಟತ್ವವನ್ನು ಮುಚ್ಚಿಡಲು/ಸಮರ್ಥಿಸಿಕೊಳ್ಳಲು ಹವಣಿಸುವ ಲೋಕರೀತಿಯನ್ನು ಪ್ರಶ್ನಿಸುತ್ತದೆ ಈ ಕಥೆ. 'ಪ್ರಪಂಚ ಇವತ್ತು ಕಾಳಿದಾಸನನ್ನು ನಂಬುವಷ್ಟು ಶಕುಂತಲೆಯನ್ನು ನಂಬುತ್ತದೆಯೇ" ಎನ್ನುವ ಶಕುಂತಲೆಯ ಪ್ರಶ್ನೆಗೆ ಉತ್ತರವಿದೆಯೇ ನಮ್ಮಲ್ಲಿ?

'ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು' ಎರಡು ತಲೆಮಾರಿನ ಜೀವಗಳ ಭಾವ ಸಂಘರ್ಷದೊಂದಿಗೆ ಅಂದಿಗೂ ಇಂದಿಗೂ ಪ್ರಾಯಶಃ ಮುಂದೆಂದಿಗೂ ಬದಲಾಗದೇನೋ ಎನ್ನಿಸುವ ಉಳ್ಳವರ ಕ್ರೌರ್ಯವನ್ನು ತೋರಿಸುತ್ತದೆ. ಪುಟ್ಟಮ್ಮತ್ತೆಯ ತಾಯಿ, ಪುಟ್ಟಮ್ಮತ್ತೆ ಹಾಗೂ ಅವಳ ಮಗಳು ಮೂವರದ್ದೂ ಹೆಚ್ಚು ಕಡಿಮೆ ಒಂದೇ ರೀತಿಯ ಬದುಕು ಹಾಗೂ ಚಿಂತನೆಗಳು. ತಮ್ಮ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಎಸೆದು ಬದುಕಿದವರು. ಶ್ರಮಜೀವಿಗಳಾಗಿಯೂ ಶೋಷಿತರಾದವರು ಆದರೆ ಅದನ್ನು ವಿರೋಧಿಸದೇ ಮೌನವಾಗಿ ಅಲೆಗಳೊಂದಿಗೆ ಈಜಿದವರು. ಆದರೆ ಪುಟ್ಟಮ್ಮತ್ತೆಯ ಮೊಮ್ಮಗಳು ಕಮಲಾವತೀ ಮಾತ್ರ ಇವರಂತಲ್ಲ. ಆಕೆ ಎಲ್ಲವನ್ನೂ ಸಹಿಸುವ ಮನಸ್ಥಿತಿಯವಳಲ್ಲ. ತನ್ನ ಬದುಕಿನ ಬಗ್ಗೆ ಕನಸು ಕಲ್ಪನೆಗಳನ್ನು ಹೆಣೆದವಳು. ಈ ಕಾರಣಕ್ಕೇ ಅವಳು ಎಲ್ಲರಿಗೂ ಆಡಿಕೊಳ್ಳುವ ವಸ್ತು. ಅತ್ತ ಆಸೆ ಆಕಾಂಕ್ಷೆಗಳೊಂದಿಗೆ ರಾಜಿಯಾಗಲೂ ಸಾಧ್ಯವಾಗದೇ ಇತ್ತ ಬದುಕನ್ನು ತನ್ನಿಷ್ಟದಂತೆ ಕಟ್ಟಿಕೊಳ್ಳಲೂ ಸಾಧ್ಯವಾಗದೇ ಕಡೆಗೆ ಉಳ್ಳವರ ಸಂಪತ್ತನ್ನು ವೃದ್ಧಿಸಿಕೊಡುವ ಸಾಧನ ಮಾತ್ರವಾಗುವ ಕಮಲಾವತೀ ಕಾಡುತ್ತಾಳೆ.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನ, ಉಮಾಶ್ರೀ ಹಾಗೂ ಎಂ.ಡಿ ಪಲ್ಲವಿ ಅವರ ಮುಖ್ಯ ಭೂಮಿಕೆಯಲ್ಲಿ 'ಗುಲಾಬಿ ಟಾಕೀಸ್' ಎಂಬ ಹೆಸರಿನಲ್ಲಿ ಸಿನಿಮಾ ಅಗಿರುವ 'ಗುಲಾಬಿ ಟಾಕೀಸು & ಸಣ್ಣ ಅಲೆಗಳು' ಸಂಪ್ರದಾಯದ ಹೆಸರಿನ ನಿಯಮ ಕಟ್ಟಳೆಗಳಲ್ಲಿ ಮುಳುಗಿದ ಪ್ರಾತಿನಿಧಿಕ ಊರೊಂದರಲ್ಲಿ ಹೊಸದಾಗಿ ಆರಂಭವಾಗುವ ಟಾಕೀಸ್ ಒಂದು ಸೃಷ್ಟಿಸುವ ಬದಲಾವಣೆಯ ತರಂಗಗಳನ್ನು ವಿವರಿಸುತ್ತದೆ. ಟಾಕೀಸಿಗೆ ಮಹಿಳೆಯರ ಬದಿಯ ಗೇಟ್ ಕೀಪರ್ ಆಗಿ ಲಿಲ್ಲೀಬಾಯಿ ನೇಮಕವಾಗುವುದರೊಂದಿಗೆ ಊರಿನಲ್ಲುಂಟಾಗುವ ಬದಲಾವಣೆಗಳೊಂದಿಗೇ ಗಂಡಸರೆದುರು ಬಾಯ್ತೆರೆಯಲು ಹೆದರುವ ಮನೆಯಿಂದ ಹೊರಗೆ ಕಾಲಿಡದ ಊರಿನ ಮಹಿಳೆಯರ ಪ್ರಪಂಚದಲ್ಲಾಗುವ ಕ್ರಾಂತಿಯನ್ನು ಬಹಳ ಸೊಗಸಾಗಿ ಈ ಕಥೆ ವಿವರಿಸುತ್ತದೆ.

ಕೌಟುಂಬಿಕ ಕ್ರೌರ್ಯದ ಅತೀ ಸೂಕ್ಷ್ಮ ಪ್ರಕಾರವೊಂದನ್ನು ಹೆಣ್ಣಿನ ಅಂತರಾಳದ ಬಯಕೆಗಳು ಹಾಗೂ ಅವಳನ್ನು ಸಮಾಜಕ್ಕೆ ತೆರೆದುಕೊಳ್ಳಲು ಬಿಡದ ಕಟ್ಟಳೆಗಳ ಸಮೇತ ತೆರೆದಿಡುವ 'ಸೌಗಂಧಿಯ ಸ್ವಗತಗಳು' ಮನವನ್ನು ಆರ್ದ್ರಗೊಳಿಸುತ್ತದೆ. ಮಗಳ ಬದುಕಿನ ಎಲ್ಲಾ ನಿರ್ಧಾರಗಳೂ ತಮ್ಮ ಅಧೀನವೇ ಎಂದುಕೊಳ್ಳುವ ಹೆತ್ತವರ ನಿರ್ಧಾರಗಳಿಗೆ ತಲೆಕೊಟ್ಟ ಸುಗಂಧಿ, ಚಿಕ್ಕಂದಿನಿಂದಲೂ ಒಂದು ಕಟ್ಟಳೆಯೊಳಗೇ ಬಂಧಿಯಾಗಿ ತನ್ನೊಳಗಿನ ತನ್ನನ್ನು ಪಂಜರದೊಳಗೆ ಬಂಧಿಸಿಕೊಂಡಿರುವ ಅವಿವಾಹಿತೆ ಸುಗಂಧಿ, ಈಗ ಬದಲಾಗಬೇಕೆನಿಸಿದರೂ ಸಾಧ್ಯವಾಗದೇ ಒಳಗೊಳಗೇ ಕಾಮನೆಗಳನ್ನು ಕೊಂದುಕೊಂಡು ನರಳುವ ಸುಗಂಧಿ ಅಂತರಂಗವನ್ನು ಕಲುಕುತ್ತಾಳೆ.

ಒಂದು ಮದುವೆ ಮನೆಯಲ್ಲಿ ನೆರೆದ ಹೆಂಗೆಳೆಯರ ಸಂಭಾಷಣೆಗಳ ಸಾರಾಂಶದಂತೆ ತೋರುವ 'ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ' ವಿವಿಧ ವ್ಯಕ್ತಿತ್ವಗಳ ಅನಾವರಣದಂತೆ ಕಾಣುತ್ತದೆ. ಮದುವೆ ಮನೆಯಲ್ಲಿ ಉಪಸ್ಥಿತಳಿದ್ದ ಸಮಾಜಶಾಸ್ತ್ರದ ವಿದ್ಯಾರ್ಥಿನಿಯೊಬ್ಬಳ ನೋಟದಲ್ಲಿ ಅಲ್ಲಿನ ಹೆಂಗಸರ ನಡುವಣ ಮಾತುಕತೆಗಳನ್ನು ವಿಶ್ಲೇಷಿಸುವ ಈ ಕಥೆ ಹತ್ತು ಹಲವು ವಿಚಾರಗಳ ಸುತ್ತ ಗಿರಕಿ ಹೊಡೆಯುತ್ತದೆ.

ಸಂಕಲನದ ಕೊನೆಯ ಕಥೆ 'ಅಮ್ಮಚ್ಚಿಯೆಂಬ ನೆನಪು' ಮಹಾಲಕ್ಷ್ಮಿ ಎಂಬ ಪುಟ್ಟ ಬಾಲೆಯ ಮನದ ಭಿತ್ತಿಯಲ್ಲಿ ಅಚ್ಚಾದ ಅಮ್ಮಚ್ಚಿಯ ಕಥನ. ಸ್ವತಂತ್ರವಾಗಿ ಹಾರಾಡುವ ಸ್ವಚ್ಛಂದ ಮನದ ಅಮ್ಮಚ್ಚಿ, ಮಗಳ ಮನವನ್ನು ಅರಿಯದ ಸೀತತ್ತೆ, ಅವಳನ್ನು ಪಂಜರದಲ್ಲಿ ಬಂಧಿಸಲು ಹವಣಿಸುವ ವೆಂಕಪ್ಪಯ್ಯ ಇಲ್ಲಿನ ಪ್ರಧಾನ ಪಾತ್ರಗಳು. ಅಮ್ಮಚ್ಚಿ ತನ್ನ ಸ್ವತ್ತೆಂಬಂತೆ ವರ್ತಿಸುವ ವೆಂಕಪ್ಪಯ್ಯ, ಅವನ ತಾಳಕ್ಕೆ ತಕ್ಕಂತೆ ಕುಣಿಯುವ ತಾಯಿಯನ್ನು ವಿರೋಧಿಸುವ, ನೋವು ಸಿಟ್ಟು ಸೆಡವನ್ನೆಲ್ಲಾ ಕಣ್ಣ ಹೊಳಪಿನಲ್ಲಿ ಅಡಗಿಸಿ ನಗುವ ಅಮ್ಮಚ್ಚಿ ಕಥೆಯ ಕೊನೆಯಲ್ಲಿ ಸ್ತ್ರೀ ಸ್ವಾತಂತ್ರ್ಯದ ಪ್ರತೀಕವೆನಿಸುತ್ತಾಳೆ. 

ಇಲ್ಲಿನ ಎಲ್ಲಾ ಕಥೆಗಳೂ ಬರೀ ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯವನ್ನಷ್ಟೇ ಧ್ವನಿಸುವುದಿಲ್ಲ. ಅದನ್ನು ಬೆಂಬಲಿಸುವ ಭಾನು, ಶಾರದೆ, ದೊಡ್ಡತ್ತೆ, ಸುಗಂಧಿಯ ತಾಯಿ, ಸೀತತ್ತೆ ಮೊದಲಾದವರ ಮೂಲಕ ಆ ಕ್ರೌರ್ಯದೊಳಗೆ ಪಾಲುದಾರರಾಗಿ ಸ್ವತಃ ಮಹಿಳೆಯರೂ ನಿಂತಿದ್ದಾರೆ ಎಂಬುದನ್ನೂ ತೋರಿಸುತ್ತದೆ. ಇನ್ನು ಕುಂದಗನ್ನಡದ ಭಾಷಾ ಸೊಗಡಿನ ಸ್ವಾದವನ್ನು ಓದಿಯೇ ಸವಿಯಬೇಕು.

(ಇವುಗಳಲ್ಲಿ ಅಮ್ಮಚ್ಚಿಯೆಂಬ ನೆನಪು, ಅಕ್ಕು ಹಾಗೂ ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು ಈ ಮೂರು ಕಥೆಗಳನ್ನು ಸೇರಿಸಿ ಚಂಪಾ ಶೆಟ್ಟಿಯವರು 'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ನಿರ್ದೇಶಿಸಿದ್ದಾರೆ. ವೈಜಯಂತಿ ಅಡಿಗ, ದೀಪಿಕಾ ಆರಾಧ್ಯ, ರಾಧಾಕೃಷ್ಣ ಊರ್ಲ, ರಾಜ್ ಶೆಟ್ಟಿ ಮೊದಲಾದವರು ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾವನ್ನು ಖುದ್ದು ವೈದೇಹಿ ಅವರೇ ನಿರೂಪಿಸಿದ್ದಾರೆ. ಈ ಸಿನಿಮಾ ಕೂಡಾ ಪುಸ್ತಕದಷ್ಟೇ ಸೊಗಸಾಗಿದೆ.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ