ಸೋಮವಾರ, ಜುಲೈ 20, 2020

ಚಿತಾದಂತ

ಪುಸ್ತಕದ ಹೆಸರು          : ಚಿತಾದಂತ

ಲೇಖಕರು                  : ಡಾ. ಕೆ.ಎನ್. ಗಣೇಶಯ್ಯ

ಪ್ರಕಾಶಕರು                : ಅಂಕಿತ ಪುಸ್ತಕ

ಪ್ರಸ್ತುತ ಮುದ್ರಣ         : 2017 

ಪುಟಗಳು : 248          ಬೆಲೆ : 150 ರೂ

ಚರಿತ್ರೆ ಎನ್ನುವುದು ಹಲವು ರಹಸ್ಯಗಳ ನಿಗೂಢ ಸಂಪುಟ. ಆ ಸಂಪುಟದೊಳಗಿನ ಪುಟಗಳಲ್ಲಿ ದಾಖಲಾದ ವಿಚಾರಗಳಿಗಿಂತ ಪುಟಗಳ ನಡುವೆ ಅಜ್ಞಾತವಾಗುಳಿದು ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯಗಳೇ ಹೆಚ್ಚು ಎನ್ನುವುದು  ಒಪ್ಪಲೇಬೇಕಾದ ಸತ್ಯ. ಭಾರತದ ಮಟ್ಟಿಗೆ ನೋಡುವುದಾದರೆ ಇತಿಹಾಸವನ್ನೇ ತಿರುಚಿ ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಅದನ್ನೇ ನಮ್ಮ ಇತಿಹಾಸವೆಂಬಂತೆ ಬಿಂಬಿಸುವ ಹುನ್ನಾರ ಸ್ವಾತಂತ್ರ್ಯಾನಂತರದಿಂದ ವ್ಯವಸ್ಥಿತವಾಗಿ ನಮ್ಮದೇ ಶಿಕ್ಷಣ ವ್ಯವಸ್ಥೆಯ ಮೂಲಕ ನಡೆದಿದೆ ಎನ್ನುವ ಗಂಭೀರ ಆರೋಪ ಇತ್ತೀಚಿನ ದಿನಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಕೆಲ ಅಪಾತ್ರರನ್ನು ವೈಭವೀಕರಿಸುತ್ತಾ ಅವರನ್ನು ವೀರರಂತೆ, ದೇಶಭಕ್ತರೆಂಬಂತೆ ಬಿಂಬಿಸಿ ಅಸಲೀ ನಾಯಕರನ್ನು ಅಜ್ಞಾತವಾಗಿಯೇ ಉಳಿಸಲಾಗಿದೆ ಎನ್ನುವ ವಾದ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರಹಗಾರರೂ ಕೂಡಾ ಗತದಲ್ಲಿ ಎಲ್ಲೋ ಮರೆಯಾಗಿ ಉಳಿದಿರುವ ಅವ್ಯಕ್ತ ಸತ್ಯಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಭೈರಪ್ಪನವರ 'ಆವರಣ', ವಸುಧೇಂದ್ರರ 'ತೇಜೋ ತುಂಗಭದ್ರಾ' ಮೊದಲಾದವುಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ಅಂತಹದೇ ಐತಿಹಾಸಿಕ ಸತ್ಯಾಸತ್ಯತೆಗಳ ಜೊತೆಗೆ ಕಲ್ಪನೆಯನ್ನು ಬೆರೆಸಿ ಕಟ್ಟಿರುವ ಕಾದಂಬರಿ "ಚಿತಾದಂತ".

ತಮಗೇ ಅರಿವಾಗದಂತೆ ಕಾಲಗರ್ಭದಲ್ಲಿ ಹುದುಗಿದ ಐತಿಹಾಸಿಕ ರಹಸ್ಯವೊಂದರ ಸುಳಿಯಲ್ಲಿ ಸಿಲುಕುವ ಇಬ್ಬರು ಪುರಾತತ್ವಶಾಸ್ತ್ರಜ್ಞೆಯರು ಹೇಗೆ ಆ ಸಿಕ್ಕುಗಳನ್ನು ಬಿಡಿಸಿ ಅದರಿಂದ ಹೊರಬರುತ್ತಾರೆ ಎನ್ನುವುದೇ ಇಲ್ಲಿನ ಕಥೆಯಾದರೂ ಈ ಪ್ರಕ್ರಿಯೆಯಲ್ಲಿ ಅನಾವರಣಗೊಳ್ಳುವ ಇತಿಹಾಸದ ಅನುಕ್ತ ಪುಟಗಳೇ ಈ ಕಾದಂಬರಿಯ ಜೀವಾಳ. ಅಲೆಕ್ಸಾಂಡರ್ ನ ಗುಪ್ತನಿಧಿಯ ಅನ್ವೇಷಣೆ ಕಥೆಯ ಕೇಂದ್ರವೆನಿಸಿದರೂ ಕೂಡಾ ಅಲೆಗ್ಸಾಂಡರನ ದಂಡಯಾತ್ರೆಯಿಂದ ಹಿಡಿದು ನಂದರು, ಮೌರ್ಯರು, ಧಾರ್ಮಿಕ ಒಳಸುಳಿಗಳು, ಕ್ಯಾಂಡಿಯ ಪ್ರಸಿದ್ಧ ಬುದ್ಧದಂತ ಹೀಗೆ ಹಲವು ಐತಿಹಾಸಿಕ ವಿಚಾರಗಳು ಕಥೆಯಲ್ಲಿ ಅಂತರ್ಗತವಾಗಿವೆ. ಅಜೈವಿಕ ಪಂಥ, ಸಿಕಂದರ್, ಅಮಾರ್ತ್ಯ ರಾಕ್ಷಸ, ಚಾಣಕ್ಯ, ಅಶೋಕ ಮೊದಲಾದವರಿಗೆ ಸಂಬಂಧಿಸಿದ ಹಲವು ಸೂಕ್ಷ್ಮ ವಿವರಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಬೌದ್ಧ ಧರ್ಮದ ಉಗಮದಿಂದ ಆರಂಭಿಸಿ ಕಾಲಕ್ರಮೇಣ ಬಾಹ್ಯ ಪ್ರಭಾವದಿಂದ ಅದರಲ್ಲಾದ ಬದಲಾವಣೆಗಳು, ಬುದ್ಧನ ಮೂಲ ತತ್ವಗಳ ಉಳಿವಿಗಾಗಿ ಶ್ರಮಿಸುವ ತೇರವಾದಿಗಳು, ಅವರ ಹಾಗೂ ಮಹಾಯಾನರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಘರ್ಷಣೆಗಳು ಮೊದಲಾದ ಐತಿಹಾಸಿಕ ವಿಚಾರಗಳೊಂದಿಗೆ ಕಲಾಶ್ ಪಂಗಡದ ಬದುಕು ಬವಣೆಗಳು, ನ್ಯೂಟನ್ ಸ್ಟೋನ್, ಭಾಷೆ ಹಾಗೂ ಅದನ್ನು ಬಳಸುವ ಜನಾಂಗದ ನಡುವಿನ ಸಂಬಂಧ, ಪ್ರಾಚ್ಯವಸ್ತು ಮಾಫಿಯಾ ಮುಂತಾದ ವಿವರಗಳೂ ಇದರಲ್ಲಿವೆ.

ಲೇಖಕರು ಪ್ರಸ್ತಾವನೆಯಲ್ಲೇ ಸ್ಪಷ್ಟಪಡಿಸಿರುವಂತೆ ಸತ್ಯ ಮತ್ತು ಕಲ್ಪನೆಗಳನ್ನು ಬೆರೆಸುವಲ್ಲಿ ಅವರು ಯಾವುದೇ ಮಿತಿಯನ್ನು ಇರಿಸಿಕೊಂಡಿಲ್ಲ. ಕಲ್ಪನೆ ಯಾವುದು ಹಾಗೂ ಸತ್ಯ ಘಟನೆಗಳ್ಯಾವುವು ಎಂಬುದನ್ನು ಓದುಗರೇ ವರ್ಗೀಕರಿಸಿಕೊಳ್ಳಬೇಕು. ಹಾಗಂತ ಪುರಾವೆಗಳೊಂದಿಗೆ ನೀಡಿರುವ ವಿಚಾರಗಳು ಮಾತ್ರ ಸತ್ಯ ಉಳಿದವೆಲ್ಲವೂ ಲೇಖಕರ ಕಲ್ಪನೆ ಎಂದು ಸಾರಾಸಗಟಾಗಿ ನಿರ್ಧರಿಸಲೂ ಸಾಧ್ಯವಿಲ್ಲ. ಪುರಾವೆಗಳ ಹೊರತಾಗಿಯೂ ಲೇಖಕರು ಪ್ರಸ್ತುತಪಡಿಸಿರುವ ಹಲವು ಸಿದ್ಧಾಂತಗಳು, ಹಾಗೂ ಅವುಗಳ ಸಮರ್ಥನೆಗೆ ನೀಡಿರುವ ವಿವರಗಳು ಒಪ್ಪುವಂತಹದ್ದು. ಏಕೆಂದರೆ ಗತದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಿಲ್ಲ. ರಾಜರ ಆಸ್ಥಾನ ಕವಿಗಳು ಬರೆದ ಕಾವ್ಯಗಳು, ಸ್ವತಃ ರಾಜರೇ ಕೆತ್ತಿಸಿದ ಶಾಸನಗಳು ಮುಂತಾದವೇ ಚರಿತ್ರೆಯ ಮರುಸೃಷ್ಟಿಗೆ ಆಕರ. ಹಾಗಿರುವಾಗ ಆ ವಿವರಗಳು ಸಂಪೂರ್ಣ ಸತ್ಯ ಎನ್ನುವುದು ಮೂರ್ಖತನವೇ ಸೈ. ಹಾಗಾಗಿ ಚರಿತ್ರೆಯನ್ನು ಬೇರೆ ಬೇರೆ ಆಯಾಮಗಳಿಂದ ಪರಾಮರ್ಶಿಸುವುದು ಅತ್ಯಗತ್ಯ. ಅದನ್ನೇ ಲೇಖಕರು ಇಲ್ಲಿ ಅಳವಡಿಸಿಕೊಂಡಿದ್ದಾರೆ. ಚರಿತ್ರೆಯಲ್ಲಿನ ಹಲವು ಘಟನೆಗಳನ್ನು ಬೆದಕಿ ತೆಗೆದು ಅದನ್ನು ಕಾಲಾನುಕ್ರಮದಲ್ಲಿ ಜೋಡಿಸುವಲ್ಲಿ ಇತಿಹಾಸದ ವಾಸ್ತವಿಕ ಅಂಶಗಳನ್ನು ಪರಿಗಣಿಸಿದ್ದರೆ ಅವುಗಳ ನಡುವೆ ಸಂಪರ್ಕದ ಕೊಂಡಿ ಬೆಸೆಯುವಲ್ಲಿ ಓದುಗರನ್ನು ಅವಲೋಕನಕ್ಕೆ ಒಳಪಡಿಸುವ ಕೆಲವು ಸುಳಿವುಗಳನ್ನು ನೀಡಿದ್ದಾರೆ. ಆ ಮೂಲಕ ಚರಿತ್ರೆಯ ಕೆಲ ಭೂಗತ ಸತ್ಯಗಳತ್ತ ಓದುಗರನ್ನು ಚಿಂತನೆಗೆ ಹಚ್ಚಿದ್ದಾರೆ. ಹಲವು ಚದುರಿದ ಚೂರುಗಳನ್ನು ಕ್ರೋಢೀಕರಿಸಿಕೊಂಡಾಗ ಮೂಡುವ ಚಿತ್ರ ನಾವು ಇದುವರೆಗೆ ಓದಿದ ಚರಿತ್ರೆಗಿಂತ ಭಿನ್ನವಾಗಿ ಕಾಣುತ್ತದೆ ಎಂಬುದು ಗಮನಿಸಬೇಕಾದ ಅಂಶ.

ಇದೆಲ್ಲವನ್ನೂ ಹೊರತುಪಡಿಸಿ ಕಾದಂಬರಿಯ ಬಗ್ಗೆ ಹೇಳುವುದಾದರೆ ಓದುಗರನ್ನು ಭೂತ, ವರ್ತಮಾನಗಳೆರಡರ ನಡುವೆ ಕೊಂಡೊಯ್ಯುತ್ತಾ ಕುತೂಹಲಕಾರಿಯಾಗಿ ಸಾಗುವ ಚಿತಾದಂತ ಒಂದಿಷ್ಟೂ ಬೇಸರಗೊಳಿಸದೆ ಓದಿಸಿಕೊಳ್ಳುತ್ತದೆ. ಸನ್ನಿವೇಶ ಸಂಬಂಧಿತ ನಕ್ಷೆ, ಚಿತ್ರಗಳು, ಬ್ರಾಹ್ಮಿ ಹಾಗೂ ಗ್ರೀಕ್ ಲಿಪಿಯ ಕೋಡ್ ಗಳು ಈ ಪಯಣವನ್ನು ಇನ್ನಷ್ಟು ರೋಚಕವಾಗಿಸುವ ಜೊತೆಗೆ ಪ್ರತೀ ಸನ್ನಿವೇಶವನ್ನೂ ಚಿತ್ರಿಸಿಕೊಳ್ಳಲು ಸಹಕಾರಿಯಾಗಿವೆ. ಇದಕ್ಕಾಗಿ ಲೇಖಕರು ನಡೆಸಿರುವ ಅಧ್ಯಯನ, ತೆಗೆದುಕೊಂಡಿರುವ ಶ್ರಮ ಶ್ಲಾಘನೀಯ. ಒಂದೇ ಗುಟುಕಿಗೆ ಓದಿ ಮುಗಿಸಬಹುದಾದಂತಹ ಕಾದಂಬರಿಯಾದರೂ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪುರಾತತ್ವ ಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ ಮೊದಲಾದವುಗಳಲ್ಲಿ ಆಸಕ್ತಿ ಹೊಂದಿರುವವರು ವಿವರವಾಗಿ ವಿಶ್ಲೇಷಿಸಿ ಅವಲೋಕಿಸುತ್ತಾ ಓದುವಂತಹ ಸಂಗ್ರಹಯೋಗ್ಯ ಪುಸ್ತಕ ಎನಿಸಿತು. ಅಂದು ಹಾಗೆ ಇದು ನಾನೋದಿದ ಗಣೇಶಯ್ಯನವರ ಮೊದಲ ಕಾದಂಬರಿ. ಈವರೆಗೆ ಅದೇಕೆ ಇವರ ಬರಹಗಳನ್ನು ಓದಲಿಲ್ಲ ಎನ್ನುವ ಭಾವ ಕಾಡಿದ್ದು ಸುಳ್ಳಲ್ಲ.

(ಇದು ಪುಸ್ತಕದ ವಿಮರ್ಶೆಯಲ್ಲ. ಪುಸ್ತಕ ಓದಿದ ನಂತರ ನನಗನ್ನಿಸಿದ್ದನ್ನು ಅನಿಸಿಕೆಯಾಗಿ ಬರೆದಿರುವೆನಷ್ಟೇ)

3 ಕಾಮೆಂಟ್‌ಗಳು:

  1. ತುಂಬಾ ಚಂದದ ಕಾದಂಬರಿ...ಬೌದ್ಧ ಧರ್ಮದ ಎಳೆಯನ್ನು ಇಟ್ಟುಕೊಂಡು ಕಥೆ ಹೆಣೆದ ರೀತಿ ಅದ್ಭುತ...!! ತೇರವಾದಿಗಳ ಪ್ರತ್ಯೇಕ ಗುಂಪು..!! ಗುಪ್ತವಾದ ನಿಧಿಯ ಹಿಂದೆ ಬೀಳುವ ಜನ..ಕಾದಂಬರಿಯ ಮಧ್ಯೆ ಸಿಕಂದರನ ಸಿರಿಯ ಕಥೆ... ಆ ಎಲ್ಲಾ ಕಥೆಗಳಿಗೂ ಅವರು ಕೊಡುವ ರೆಫರೆನ್ಸ್ ಗಳನ್ನು ಓದುತ್ತಾ ಇದ್ದರೆ... ಒಂದು ಕಥೆಯ ಹಿಂದೆ ಎಷ್ಟೊಂದು ಅಧ್ಯಯನ ಇದೆ ಅನಿಸಿ ಬಿಡುತ್ತೆ...!! ನಿಜಕ್ಕೂ ಇದು ಒಂದು ಸಂಗ್ರಹ ಯೋಗ್ಯ ಕಾದಂಬರಿ...!! ನಾನು ಇತ್ತೀಚೆಗೆ ಓದಿದ್ದು..!! ನಾನು ಓದಿದ ಗಣೇಶಯ್ಯನವರ ಮೊದಲ ಕಾದಂಬರಿ..!! ಚಿತಾದಂತ ಮತ್ತು ಮೂಕಧಾತು ಎರಡು ಕಾದಂಬರಿಗಳನ್ನು ಒಟ್ಟಿಗೆ ತರಿಸಿಕೊಂಡಿದ್ದೆ...!! ಮೂಕಧಾತು ಕಾದಂಬರಿಯಲ್ಲೂ ಕೂಡ ಬೌದ್ಧ ಧರ್ಮದ ಉಲ್ಲೇಖ ಇದೆ...!!ಸ್ವಾರ್ಥದ ಧಾತುವಿನ ಮೇಲೆ ಸಾಗುವ ಕಥೆ ಇದು...!!

    ಪ್ರತ್ಯುತ್ತರಅಳಿಸಿ
  2. ನಾನು ಇದೇ ಮೊದಲು ಗಣೇಶಯ್ಯನವರ ಕಾದಂಬರಿ ಓದಿದ್ದು. ಬಹಳ ಇಷ್ಟವಾಯ್ತು. ಅವರ ಶ್ರಮ ಕಾದಂಬರಿಯುದ್ದಕ್ಕೂ ಕಾಣುತ್ತದೆ. ಒಳ್ಳೆಯ ಮಾಹಿತಿಯುಕ್ತ ಪುಸ್ತಕ ಓದಿದ ಖುಷಿಯಿದೆ.

    ಪ್ರತ್ಯುತ್ತರಅಳಿಸಿ