ಭಾನುವಾರ, ಜುಲೈ 26, 2020

ಕಾರ್ಗಿಲ್ ಕಂಪನ

ಪುಸ್ತಕದ ಹೆಸರು.        : ಕಾರ್ಗಿಲ್ ಕಂಪನ
ಪ್ರಕಾಶಕರು                 : ರಾಷ್ಟ್ರೋತ್ಥಾನ ಸಾಹಿತ್ಯ
ಮೊದಲ ಮುದ್ರಣ       : 1999
ಪುಟಗಳು : 135          ಬೆಲೆ : 30 ರೂಪಾಯಿಗಳು

ಇಂದು ಕಾರ್ಗಿಲ್ ವಿಜಯ ದಿನ. ಇಪ್ಪತ್ತೊಂದು ವರ್ಷಗಳ ಹಿಂದೆ 1999ರ ಫೆಬ್ರವರಿಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ದೆಹಲಿ ಲಾಹೋರ್ ನಡುವಿನ ಬಸ್ ಸೇವೆ ಆರಂಭಿಸಿ ಪಾಕಿಸ್ತಾನದೆಡೆಗೆ ಸ್ನೇಹಹಸ್ತ ಚಾಚಿದ್ದರು. ಯುದ್ಧ, ಜಗಳಗಳಿಲ್ಲದೇ ಸೌಹಾರ್ದಯುತವಾಗಿ ಬಾಳಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ ಕಾಶ್ಮೀರವನ್ನು ತನ್ನೆಲ್ಲಾ ಕುಯುಕ್ತಿಗಳಿಗೆ ದಾಳದಂತೆ ಬಳಸುವ ಪಾಕಿಸ್ತಾನ ವಚನಕ್ಕೆ ಬದ್ಧವಾಗಿ ನಡೆದ ಇತಿಹಾಸವುಂಟೇ? ಪಾಕಿಸ್ತಾನದ ಕುತಂತ್ರಿ ಚಟುವಟಿಕೆಯಿಂದಾಗಿ 1999ರ ಮೇ ಆರಂಭದಿಂದಲೇ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿ ಪರಿಸ್ಥಿತಿ ಹದೆಗೆಟ್ಟಿದ್ದು, ಆ ನಂತರದಲ್ಲಿ ನಿಯಮಗಳನ್ನು ಮೀರಿ ಪಾಕಿಸ್ತಾನಿ ಅತಿಕ್ರಮಣಕಾರರು ಭಾರತದೊಳಕ್ಕೆ ನುಸುಳಿದ್ದು, ಕಡೆಗೆ ಯುದ್ಧದಲ್ಲಿ ಪರ್ಯಾವಸನವಾದದ್ದು ಪ್ರತೀ ಭಾರತೀಯನಿಗೂ ತಿಳಿದಿರುವಂತಹದ್ದೇ. ಕಾರ್ಗಿಲ್ ಎನ್ನುವ ಹೆಸರೇ ಪ್ರತೀ ದೇಶಭಕ್ತನೊಳಗೂ ಒಂದು ರೋಮಾಂಚನವನ್ನು ಸೃಷ್ಟಿಸುತ್ತದೆ. 

ಅಂತಹ ಕಾರ್ಗಿಲ್ ಸಮರದ ಹಿನ್ನೆಲೆ, ಕಾರಣಗಳು, ಯುದ್ಧಭೂಮಿಯಲ್ಲಿ ನಮ್ಮ ವೀರ ಯೋಧರ ಸಾಹಸಗಾಥೆ, ಯುದ್ಧದ ಪರಿಣಾಮಗಳು, ಭವಿಷ್ಯದ ಸವಾಲುಗಳು ಬಗೆಗಿನ ಸಮಗ್ರ ಮಾಹಿತಿಯುಳ್ಳ ಪುಸ್ತಕ "ಕಾರ್ಗಿಲ್ ಕಂಪನ". ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಈ ಪುಸ್ತಕದಲ್ಲಿ 'ಕದನಸರಣಿಯ ಬೀಜ'(ಎಸ್. ಆರ್. ರಾಮಸ್ವಾಮಿ), 'ಕಾರ್ಗಿಲ್ ರಣಾಂಗಣ'(ದು. ಗು. ಲಕ್ಷ್ಮಣ) ಹಾಗೂ 'ಕದನ ವಿರಾಮ - ಮುಂದೇನು'(ಚಂದ್ರಶೇಖರ ಭಂಡಾರಿ) ಎಂಬ ಮೂರು ಭಾಗಗಳಿವೆ.

ಮೊದಲ ಭಾಗದಲ್ಲಿ ದೇಶ ವಿಭಜನೆಯಿಂದ ಹಿಡಿದು ಧರ್ಮದ ಹೆಸರಿನ ಭಯೋತ್ಪಾದನೆ, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಿಕ್ಕ ಅವಕಾಶಗಳನ್ನೆಲ್ಲಾ ಕೈ ಚೆಲ್ಲಿದ ನಾಯಕರು, ನೆಹರು ಅವರ ಸ್ವಕೇಂದ್ರಿತ ನಾಯಕತ್ವದಿಂದಾಗಿ ಅಪಾತ್ರರ ಕೈಗೆ ಸಿಕ್ಕಿದ ರಕ್ಷಣಾ ಖಾತೆ, ತೆಗೆದುಕೊಂಡ ತಪ್ಪು ನಿರ್ಣಯಗಳು, ಚೀನಾದಿಂದ ದೇಶಕ್ಕೆ ಅಪಾಯವಾಗುವ ಸಂಭವವಿದೆಯೆಂದು ಸೇನಾಧಿಕಾರಿಗಳು ಪದೇ ಪದೇ ಎಚ್ಚರಿಸುತ್ತಿದ್ದರೂ ಅದನ್ನು ನಿರ್ಲಕ್ಷಿಸಿ 'ಚೀನಾ ನಮ್ಮ ಮಿತ್ರ ದೇಶ' ಎಂಬ ಭ್ರಮೆಯಲ್ಲೇ ಉಳಿದ ನೆಹರೂ ಹಾಗೂ ರಕ್ಷಣಾ ಸಚಿವ ಕೃಷ್ಣ ಮೆನನ್, ದೂರದರ್ಶಿತ್ವವಿಲ್ಲದ ಕಾಂಗ್ರೆಸ್ ನಾಯಕರು ಸೃಷ್ಟಿಸಿದ ಸಮಸ್ಯೆಗಳು, ಹಿಂದಿನ ಇಂಡೋ ಪಾಕ್ ಹಾಗೂ ಇಂಡೋ ಚೀನಾ ಯುದ್ಧಗಳಲ್ಲಿನ ಅವೈಜ್ಞಾನಿಕ ರಣನೀತಿ ಮೊದಲಾದವೆಲ್ಲಾ ಹೇಗೆ ಪರೋಕ್ಷವಾಗಿ ಕಾರ್ಗಿಲ್ ಸಮರಕ್ಕೆ ಕಾರಣವಾದವು ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.

ಎರಡನೇ ಭಾಗ ಯುದ್ಧಾರಂಭದಿಂದ ಹಿಡಿದು ವಿಜಯ ಸಾಧಿಸಿದಲ್ಲಿಯವರೆಗಿನ ಮಾಹಿತಿಯನ್ನು ಒಳಗೊಂಡಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಅತಿಕ್ರಮಣ, ಕಾರ್ಗಿಲ್ ಬಟಾಲಿಕ್ ಹಾಗೂ ದ್ರಾಸ್ ವಲಯದಲ್ಲಿನ ತೀವ್ರ ಹೋರಾಟ, ಗಡಿನಿಯಂತ್ರಣ ರೇಖೆಯೇ ಅಸ್ಪಷ್ಟವಾಗಿದೆ ಎಂದು ಹೊಸ ಕ್ಯಾತೆ ತೆಗೆದ ಪಾಕಿಸ್ತಾನ, ಕಕ್ಸರ್ ಪ್ರದೇಶದಲ್ಲಿ ಅತಿಕ್ರಮವಾಗಿ ಪ್ರವೇಶಿಸಿದ ಪಾಕ್ ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸಲು ತೆರಳಿದ ಲೆಫ್ಟಿನೆಂಟ್ ಸೌರವ್ ಕಾಲಿಯಾ ನೇತೃತ್ವದ ಆರು ಭಾರತೀಯ ಸೈನಿಕರನ್ನು ಬರ್ಬರವಾಗಿ ಹತ್ಯೆಗೈದ ಪಾಕ್,  ಖುದ್ದು ಯುದ್ಧಭೂಮಿಗೆ ಭೇಟಿಕೊಟ್ಟು ಸೈನ್ಯದಲ್ಲಿ ಉತ್ಸಾಹ, ಹುರುಪು, ಆತ್ಮವಿಶ್ವಾಸ ತುಂಬಿದ ಪ್ರಧಾನಿ ವಾಜಪೇಯಿ, ತೊಲೊಲಿಂಗ್ ಪರ್ವತ ವಿಮೋಚನೆ, ಅಮೇರಿಕಾ ಹಾಗೂ ಜಿ 8 ರಾಷ್ಟ್ರಗಳು ಭಾರತದ ನಿಲುವನ್ನು ಸಮರ್ಥಿಸಿದ್ದರಿಂದ ಜಾಗತಿಕ ಮಟ್ಟದಲ್ಲಿ ಒಂಟಿಯಾದ ಪಾಕಿಸ್ತಾನ, ಟೈಗರ್ ಹಿಲ್ಸ್ ಮರುವಶ, ಪಾಕ್ ಪಲಾಯನ ಹಾಗೂ ಭಾರತದ ಜೈತ್ರಯಾತ್ರೆಯ ವಿವರಗಳು ಇಲ್ಲಿವೆ. ಸಾಹಸಗಾಥೆ ಎನ್ನುವ ಶೀರ್ಷಿಕೆಯಡಿಯಲ್ಲಿರುವ ಆಯ್ದ ಹದಿನೈದು ಹುತಾತ್ಮ ಯೋಧರ ಜೀವನ ಪುಟಗಳು, ಅವರ ಕುಟುಂಬದವರ ನುಡಿಗಳು ಮನವನ್ನು ಆರ್ದ್ರಗೊಳಿಸುತ್ತವೆ. ಜೊತೆಗೆ ಕಾರ್ಗಿಲ್ ಯೋಧರಿಗಾಗಿ ಮಿಡಿದ, ತಮ್ಮ ಕೈಲಾದ ರೀತಿಯಲ್ಲಿ, ಸಾಧ್ಯವಾದಷ್ಟು ಸಹಾಯ ಮಾಡಿದ ಕೆಲ ಜನಸಾಮಾನ್ಯರ ವಿವರಗಳೂ ಇವೆ.

ಮೂರನೇ ಭಾಗ ಸಮರಾನಂತರದ ಪರಿಣಾಮಗಳು, ಬೆಳವಣಿಗೆಗಳ ಜೊತೆಗೆ ಭವಿಷ್ಯದ ಅಪಾಯಗಳು ಹಾಗೂ ಪರಿಹಾರ ಮಾರ್ಗಗಳ ಕುರಿತಾಗಿದೆ. ಭಾರತ ಪಾಕ್ ನಡುವಿನ ಸಮಸ್ಯೆಗೆ ಮೂಲಕಾರಣಗಳಲ್ಲಿ ಒಂದಾದ ಕಾಶ್ಮೀರ ವಿವಾದದ ಹಲವು ಆಯಾಮಗಳ ಬಗ್ಗೆ ಬೆಳಕು ಚೆಲ್ಲಿರುವುದಲ್ಲದೇ ಆ ಸಮಸ್ಯೆಯ ಪರಿಹಾರವಾಗಿ ಕೆಲ ತುರ್ತು ಕ್ರಮಗಳು ಹಾಗೂ ಹಲವು ದೀರ್ಘಕಾಲೀನ ಕ್ರಮಗಳ ಬಗ್ಗೆ ವಿಚಾರಗಳಿವೆ.

ಕಾರ್ಗಿಲ್ ಯುದ್ಧದ ಬಗೆಗಿನ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರತಿಯೊಬ್ಬರೂ ಓದಲೇಬೇಕಾದ ಸಂಗ್ರಹಯೋಗ್ಯ ಪುಸ್ತಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ