ಸೋಮವಾರ, ಸೆಪ್ಟೆಂಬರ್ 7, 2020

ಅರಿಯೋ ಗುರುವೇ ಶಿಷ್ಯನಂತರಂಗವ

ಸಾಮಾನ್ಯವಾಗಿ ಶಾಂತವಾಗಿರುವ ಶಿವಮೊಗ್ಗೆಯ ಡಾ‌.ಸರ್ವಪಳ್ಳಿ ರಾಧಾಕೃಷ್ಣನ್ ಮೆಮೋರಿಯಲ್ ಬಿ.ಎಡ್ ಕಾಲೇಜಿನ ಆವರಣದಲ್ಲಿ ಅಂದು ಆತಂಕದ ಮುಖಹೊತ್ತು ಚರ್ಚಿಸುತ್ತಿದ್ದ ವಿದ್ಯಾರ್ಥಿಗಳದ್ದೇ ಗಜಿಬಿಜಿ. ಹೆಚ್ಚು ಕಮ್ಮಿ ಎಲ್ಲರಲ್ಲೂ ಒಂದಿಷ್ಟು ಅಂಜಿಕೆ, ಅಳುಕು, ಭಯ. ಏನೋ ಗಡಿಬಿಡಿ, ಗಾಬರಿ ಸ್ಪಷ್ಟವಾಗಿ ಕಾಣುತ್ತಿತ್ತು. ಇಂತಹ ವಾತಾವರಣಕ್ಕೆ ಕಾರಣ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದ ಪ್ರಾಕ್ಟೀಸ್ ಟೀಚಿಂಗ್. ಕಳೆದ ಐದು ತಿಂಗಳುಗಳ ಕಾಲ ಕಾಲೇಜಿನಲ್ಲಿ ಕಲಿತ ಎಲ್ಲಾ ತತ್ವ, ಸಿದ್ಧಾಂತಗಳನ್ನೂ ನಾಡಿದ್ದಿನಿಂದ ಪ್ರಾಯೋಗಿಕವಾಗಿ ಹೇಗೆಲ್ಲಾ ಅಳವಡಿಸಿಕೊಳ್ಳಬೇಕು, ಮಕ್ಕಳೆದುರು ಅಧ್ಯಾಪಕರಾಗಿ ನಿಂತು ಹೇಗೆ ತರಗತಿಗಳನ್ನು ತೆಗೆದುಕೊಳ್ಳಬೇಕು ಎಂಬುದೇ ಎಲ್ಲರ ಚರ್ಚೆಯ ಕೇಂದ್ರಬಿಂದು. ಆ ಬಗ್ಗೆಯೇ ಎಲ್ಲರ ವಿಚಾರ ವಿನಿಮಯ ನಡೆದಿತ್ತು. 

ಹಾಗೆ ಗಲಗಲಿಸುತ್ತಿದ್ದ ತರಗತಿ ಪ್ರೊ.ರಾಧಾಕೃಷ್ಣ ಪಟ್ಟಾಭಿ ಅವರ ಆಗಮನದಿಂದ ನಿಶ್ಯಬ್ದವಾಯಿತು. ಪಟ್ಟಾಭಿಯವರು ಆ ಕಾಲೇಜಿನ ಶೈಕ್ಷಣಿಕ ಮನೋವಿಜ್ಞಾನ(educational psychology) ವಿಷಯದ ಉಪನ್ಯಾಸಕರು. ಡೆವಲಪ್ಮೆಂಟಲ್ ಸೈಕಾಲಜಿಯಲ್ಲಿ ಪರಿಣಿತಿಯ ಜೊತೆಗೆ ಮಕ್ಕಳ ಮನೋವಿಕಾಸವನ್ನು ಸೂಕ್ಷ್ಮವಾಗಿ ಅಭ್ಯಸಿಸಿ ಆ ಬಗ್ಗೆ ಹಲವಾರು ಸಂಶೋಧನಾ ಲೇಖನ ಹಾಗೂ ಪುಸ್ತಕಗಳನ್ನೂ ಬರೆದಿದ್ದರು. ತಮ್ಮೆಲ್ಲಾ ಜ್ಞಾನವನ್ನೂ ಭವಿಷ್ಯದ ಅಧ್ಯಾಪಕರಿಗೆ ಧಾರೆಯೆರೆಯಬೇಕೆಂಬ ಉದ್ದೇಶದಿಂದಲೇ ಹಲವು ಲಾಭದಾಯಕ ಅವಕಾಶಗಳನ್ನು ಬಿಟ್ಟು ಈ ವೃತ್ತಿಯನ್ನು ಪಟ್ಟಾಭಿಯವರು ಆಯ್ದುಕೊಂಡಿದ್ದರು. ಅವರ ತರಗತಿಗಳು ಬಿ.ಎಡ್ ವಿದ್ಯಾರ್ಥಿಗಳಿಗೆ ಗೀತೋಪದೇಶದಂತಿರುತ್ತಿತ್ತು. ದೇಶದಾದ್ಯಂತ ಹಲವಾರು ಕಾಲೇಜುಗಳು ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದವು. ಅಂತಹ ಪಟ್ಟಾಭಿಯವರು ಮೇಷ್ಟ್ರಾಗಿರುವ ಕಾಲೇಜು ಎನ್ನುವ ಕಾರಣಕ್ಕಾಗಿಯೇ ಎಲ್ಲಾ ಬಿ.ಎಡ್ ವಿದ್ಯಾರ್ಥಿಗಳು ರಾಧಾಕೃಷ್ಣನ್ ಮೆಮೋರಿಯಲ್ ಕಾಲೇಜಿಗೆ ದಾಖಲಾಗಲು ಬಯಸುತ್ತಿದ್ದರು.

ಪಟ್ಟಾಭಿಯವರಿಗೆ ಇಂದಿನ ದಿನ ತಮ್ಮ ವಿದ್ಯಾರ್ಥಿಗಳ ಮನದಲ್ಲಿರುವ ಅಳುಕು, ಚಿಂತೆಗಳ ಅರಿವಿತ್ತು. ಅದಕ್ಕಾಗಿಯೇ ಅವರಿಗೆ ಒಂದಿಷ್ಟು ಮಾರ್ಗದರ್ಶನ ನೀಡಲು ತರಗತಿಗೆ ಬಂದಿದ್ದರು.‌ ಒಮ್ಮೆ ಎಲ್ಲರನ್ನೂ ಕೂಲಂಕಷವಾಗಿ ಗಮನಿಸಿ ಮಾತಿಗಾರಂಭಿಸಿದರು.

"ಮೈ ಡಿಯರ್ ಸ್ಟೂಡೆಂಟ್ ಟೀಚರ್ಸ್, ಇಂದಿನ ನಿಮ್ಮ ಗೊಂದಲ, ಆತಂಕಭರಿತ ಮನಸ್ಥಿತಿ ಸಹಜವೇ. ನಾಡಿದ್ದಿನಿಂದ ಸಂಪೂರ್ಣ ಹೊಸ ಜಗತ್ತೊಂದಕ್ಕೆ ನೀವು ತೆರೆದುಕೊಳ್ಳುತ್ತೀರಿ. ಅಲ್ಲಿ ನೀವು ಪಾಠ ಮಾಡುವ ವಿದ್ಯಾರ್ಥಿಗಳಿಗೆ ನೀವೇ ಗುರುಗಳು. ಇದು ಬೋಧನಾಭ್ಯಾಸವೇ ಆದರೂ 'ಶಿಕ್ಷಕ' ವೃತ್ತಿಗೆ ನೀವು ನಾಡಿದ್ದಿನಿಂದಲೇ ಕಾಲಿರಿಸುವಿರಿ. ಇದು ನಿಮ್ಮ ವೃತ್ತಿ ಬದುಕಿನ ಆರಂಭ. ಅಲ್ಲಿ ಏನು ಪಾಠ ಮಾಡಬೇಕು, ಹೇಗೆ ಮಾಡಬೇಕು, ಪಾಠಯೋಜನೆ(lesson plan) ತಯಾರಿ ಹಾಗೂ ಅದರ ಅಳವಡಿಕೆ ಹೇಗೆ ಎಂಬುದರ ಬಗ್ಗೆ ಈಗಾಗಲೇ ನಿಮಗೆ ಸಂಪೂರ್ಣ ಮಾಹಿತಿ ಇದೆ. ಕಲಿಕಾ ಕೌಶಲಗಳು, ಪಠ್ಯಕ್ರಮ, ಬ್ಲೂಮ್ ನ ಟ್ಯಾಕ್ಸೋನಮಿ ಮೊದಲಾದವುಗಳೆಲ್ಲವೂ ನಿಮಗೆ ತಿಳಿದಿದೆ. ಈ ಬಗ್ಗೆ ನಾನೇನೂ ಹೇಳುವುದಿಲ್ಲ" ಎನ್ನುತ್ತಲೇ ಒಮ್ಮೆ ಎಲ್ಲರತ್ತ ಕಣ್ಣು ಹಾಯಿಸಿ ತಮ್ಮ  ಮಾತನ್ನು ಮುಂದುವರೆಸಿದರು.

"ಅಧ್ಯಾಪಕ ಹೇಗೆ ಮನಸ್ಸು ಮಾಡಿದರೆ ಒಬ್ಬ ವಿದ್ಯಾರ್ಥಿಯ ಬಾಳಿಗೆ ದೀವಿಗೆಯಾಗಬಹುದೋ ಅಂತೆಯೇ ಅವನ ಒಂದು ತಪ್ಪು ನಡೆ ವಿದ್ಯಾರ್ಥಿಯ ಬದುಕಿನ ಲಕ್ಷ್ಯವನ್ನೇ ಬದಲಿಸಿ ಅಂಧಕಾರದಲ್ಲಿಯೂ ಮುಳುಗಿಸಬಹುದು…… ನಾನಿಂದು ನಿಮಗೆ ಕಥೆಯೊಂದನ್ನು ಹೇಳಬೇಕೆಂದುಕೊಂಡಿರುವೆ. ಕೇಳುವಿರೇನು?" ಎನ್ನುತ್ತಾ ಎಲ್ಲರತ್ತ ನೋಟಹರಿಸಿದರು ಪಟ್ಟಾಭಿ. ಎಲ್ಲರೂ ಸಂಪೂರ್ಣವಾಗಿ ಅವರ ಮಾತಿನಲ್ಲೇ ಲೀನರಾಗಿದ್ದರು. ಕಥೆಯನ್ನು ಕೇಳುವ ಕುತೂಹಲ, ಉತ್ಸಾ‌ಹ ಗರಿಗೆದರಿತ್ತು ಅವರುಗಳಲ್ಲಿ. ನಸುನಕ್ಕು ಕಥೆ ಹೇಳಲು ಉಪಕ್ರಮಿಸಿದರು ಪಟ್ಟಾಭಿ.

"ಒಂದು ಸಣ್ಣ ಪಟ್ಟಣ. ಅಲ್ಲೊಂದು ಶಾಲೆ. ಕಿಟ್ಟಿ ಆ ಶಾಲೆಯಲ್ಲಿ ಏಳನೇಯ ತರಗತಿ ಕಲಿಯುತ್ತಿದ್ದ ಸಾಮಾನ್ಯ ಬುದ್ಧಿಮತ್ತೆಯ ಬಾಲಕ. ತೀರಾ ತರಗತಿಗೆ ಪ್ರಥಮ ಎನ್ನುವಂತಹ ಬುದ್ಧಿವಂತನಲ್ಲದಿದ್ದರೂ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಿದ್ದ ಹುಡುಗನವನು. ಅವನಿಗೆ ಒಂದೇ ಬಾರಿಗೆ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎರಡು ಮೂರು ಬಾರಿ ಅದನ್ನು ಮನನ ಮಾಡಿಕೊಂಡ ನಂತರದಲ್ಲಿ ಪಠ್ಯಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳುತ್ತಿದ್ದ. ಶಾಲೆಯಲ್ಲಿ ಹತ್ತರಲ್ಲಿ ಹನ್ನೊಂದು ಎನ್ನುವಂತಿದ್ದ ಕಿಟ್ಟಿಗೆ ಗಣಿತದಲ್ಲಿ ಅಪರಿಮಿತ ಆಸಕ್ತಿಯಿತ್ತು. ಶಾಲೆಯಲ್ಲಿ ಮೇಷ್ಟ್ರು ಲೆಕ್ಕಗಳನ್ನು ಹಂತ ಹಂತವಾಗಿ ಬಿಡಿಸುವುದನ್ನು ಗಮನವಿಟ್ಟು ನೋಡುತ್ತಿದ್ದ. ನಂತರ ಮನೆಯಲ್ಲಿ ಪುಸ್ಯಕದಲ್ಲಿದ್ದ ಉದಾಹರಣೆಯ ಹಾಗೂ ಅಭ್ಯಾಸದ ಲೆಕ್ಕಗಳನ್ನು ಆಸಕ್ತಿಯಿಂದ ಬಿಡಿಸುತ್ತಿದ್ದ. ಎರಡು ಮೂರು ಬಾರಿ ಪ್ರಯತ್ನಿಸಿ ಸರಿಯಾಗಿ ಲೆಕ್ಕ ಬಿಡಿಸಿದಾಗ ಅವನಿಗೆ ಬಹಳ ಆನಂದವೆನಿಸುತ್ತಿತ್ತು. ಆತನಿಗೆ ತಾನು ಗಣಿತ ವಿಷಯದಲ್ಲೇ ಮುಂದೆ ಪರಿಣಿತಿ ಸಾಧಿಸಬೇಕೆಂಬ ಹಂಬಲವಿತ್ತು. 

ಕಿಟ್ಟಿ ಏಳನೇಯ ತರಗತಿ ತೇರ್ಗಡೆಯಾಗಿ ಎಂಟನೇ ತರಗತಿಗೆ ಬರುವ ಸಮಯದಲ್ಲಿ ಆ ಶಾಲೆಗೆ ಹೊಸ ಗಣಿತ ಮೇಷ್ಟ್ರ ಆಗಮನವಾಯಿತು. ಈ ಹೊಸ ಶಿಕ್ಷಕರ ನೀತಿಗಳೇ ಬೇರೆಯಾಗಿತ್ತು. ಮೊದಲ ಕಿರು ಪರೀಕ್ಷೆಯಲ್ಲೇ ಆತ ಅಂಕಗಳ ಆಧಾರದಲ್ಲಿ ನಾಲ್ಕೈದು ವಿದ್ಯಾರ್ಥಿಗಳನ್ನು ಪ್ರತಿಭಾನ್ವಿತರೆಂದು ತಾನೇ ಗುರುತಿಸಿಕೊಂಡಿದ್ದರು. ಆ ನಂತರದಲ್ಲಿ ಅವರ ಪಾಠ ಕೇವಲ ಆ ಕೆಲವರನ್ನು ಮಾತ್ರವೇ ಕೇಂದ್ರೀಕರಿಸಿತ್ತು. ಲೆಕ್ಕಗಳನ್ನು ಬಿಡಿಸುವುದು, ಪ್ರಶ್ನೆಗಳನ್ನು ಕೇಳುವುದು ಎಲ್ಲವೂ ಅವರಿಗೆ ಮಾತ್ರವೇ ಎನ್ನುವಂತಿತ್ತು ಈ ಹೊಸ ಶಿಕ್ಷಕರ ನಡವಳಿಕೆ. ಕಿಟ್ಟಿಗೆ ಇದು ಬೇಸರವೆನಿಸಿದರೂ ಅವನು ಅದನ್ನು ಹೆಚ್ಚು ತಲೆಗೆ ಹಚ್ಚಿಕೊಳ್ಳಲಿಲ್ಲ.

ಹೀಗೇ ಒಂದು ದಿನ ಆ ಶಿಕ್ಷಕ ಬೀಜೋಕ್ತಿಗಳ ಬಗ್ಗೆ ಪಾಠಪಾಡುತ್ತಿದ್ದರು. ವರ್ಗೀಕೃತ ಸಮೀಕರಣದಲ್ಲಿ 'x'ನ ಮೌಲ್ಯವನ್ನು ಪತ್ತೆ ಮಾಡಿ ಅದನ್ನು ತಾಳೆ ನೋಡುವುದು ಹೇಗೆಂದು ಬಹಳ ಚೆನ್ನಾಗಿ ಎರಡು ಮೂರು ಉದಾಹರಣೆಗಳ ಮೂಲಕ ಬಿಡಿಸಿ ವಿವರಿಸಿದರು. ಅಷ್ಟರಲ್ಲಿ ಸಮಯವಾದ ಕಾರಣ ಆ ಪಾಠದ ಕೊನೆಯಲ್ಲಿದ್ದ ಲೆಕ್ಕಗಳಲ್ಲಿ ಮೊದಲ ಐದನ್ನು ಮನೆಯಲ್ಲಿ ಬಿಡಿಸಿಕೊಂಡು ಬರಲು ಹೇಳಿ ಹೊರಟು ಹೋದರು. ಆ ಸಂಜೆ ಮನೆಗೆ ಬಂದ ಕಿಟ್ಟಿ ಬಟ್ಟೆ ಬದಲಿಸಿ ಕೈ ಕಾಲು ತೊಳೆದು ತಾಯಿ ಕೊಟ್ಟ ಉಪಹಾರ ಸೇವಿಸಿದವನು ಸೀದಾ ಕೋಣೆ ಸೇರಿದ. ಮೊದಲು ಉಳಿದ ವಿಷಯಗಳ ಹೋಂ ವರ್ಕ್ ಮುಗಿಸಿ ಕೊನೆಯಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸಲಾರಂಭಿಸಿದ. ಪ್ರತೀ ಲೆಕ್ಕವನ್ನೂ ಸರಿಯಾಗಿ ಬಿಡಿಸಿ ತಾಳೆ ನೋಡುತ್ತಾ ಹೋದಂತೆ ಅವನೊಳಗೆ ಏನೋ ಸಂತಸ. ಅದೇ ಖುಷಿಯಲ್ಲಿ ತಲ್ಲೀನನಾಗಿ ಅಲ್ಲಿದ್ದ ಹತ್ತೂ ಲೆಕ್ಕಗಳನ್ನೂ ಬಿಡಿಸಿ ಮುಗಿಸಿದ ಮೇಲೆಯೇ ನೆನಪಾಗಿದ್ದು ಮೇಷ್ಟ್ರು ಬರೀ ಐದೇ ಲೆಕ್ಕ ಬಿಡಿಸಲು ಹೇಳಿದ್ದೆಂದು. 

ಮರುದಿನ ಶಾಲೆಗೆ ಬಂದಾಗಿನಿಂದ ಮೂರನೇ ಅವಧಿಯಲ್ಲಿದ್ದ ಗಣಿತ ತರಗತಿಗಾಗಿ ಒಂಟಿ ಕಾಲಿನಲ್ಲಿ ಕಾದಿದ್ದ. ತಾನು ಬಿಡಿಸಿದ ಲೆಕ್ಕಗಳನ್ನು ಮೇಷ್ಟ್ರಿಗೆ ತೋರಿಸಿ ಶಭಾಷಿ ಗಿಟ್ಟಿಸಬೇಕು ಅನ್ನುವ ಕಾತರ ಅವನಿಗೆ. ಕಡೆಗೂ ಗಣಿತದ ಮೇಷ್ಟ್ರು ತರಗತಿಗೆ ಬಂದರು. ಹಿಂದಿನ ದಿನದ ಹೋಂ ವರ್ಕ್ ಬಗ್ಗೆ ಕೇಳಿದಾಗ ಎಲ್ಲರಿಗಿಂತ ಮೊದಲು ಎದ್ದ ಕಿಟ್ಟಿ ತನ್ನ ಪುಸ್ತಕದೊಂದಿಗೆ ಅವರ ಬಳಿ ಧಾವಿಸಿದ. ತಮ್ಮ ಆಯ್ದ ಕೆಲವು ವಿದ್ಯಾರ್ಥಿಗಳತ್ತ ಗಮನವಿದ್ದ ಮೇಷ್ಟ್ರು ಒಂದಿಷ್ಟು ಬೇಸರದಲ್ಲೇ ತಮ್ಮೆದುರು ಬಂದ ಕಿಟ್ಟಿಯ ಪುಸ್ತಕದತ್ತ ನೋಡಿದರು…… ನೋಡಿದರು ಎನ್ನುವುದಕ್ಕಿಂತ ಪುಟ ತಿರುಗಿಸಿದರು ಎನ್ನುವುದು ಸೂಕ್ತವೇನೋ. 

'ಇದನ್ನು ಎಲ್ಲಿಂದ ನಕಲಿಸಿದೆ? ನೀನಂತೂ ಇದನ್ನು ಬಿಡಿಸಿರಲು ಸಾಧ್ಯವಿಲ್ಲ…….' ಅರೆ ಕ್ಷಣ ಕಳೆದು ಅವರ ಬಾಯಿಂದ ಬಂದಿದ್ದು ಇದೆರಡೇ ವಾಕ್ಯ. ಅಷ್ಟೇ…..

ಕಾತರದ ಕಂಗಳಿಂದ ಕಾಯುತ್ತಿದ್ದ ಕಿಟ್ಟಿಯ ಮನಸನ್ನು ಈ ಮಾತುಗಳು ಅದೆಷ್ಟು ಘಾಸಿಗೊಳಿಸಿತೆಂಬುದು ಆ ಮೇಷ್ಟ್ರಿಗೆ ಎಂದೂ ತಿಳಿಯಲಿಲ್ಲ ಬಿಡಿ. ಅವರು ಅವನಿಗೆ ಜೋರಾಗಿ ಗದರಲಿಲ್ಲ, ಹೊಡೆಯಲೂ ಇಲ್ಲ. ಆದರೆ ಅವರು ಅವನ ಪರಿಶ್ರಮವನ್ನು ಅವಹೇಳನ ಮಾಡಿದ್ದರು. ಆ ಕೂಡಲೆ ಪುಸ್ತಕವನ್ನು ಹಿಡಿದುಕೊಂಡು ತನ್ನ ಸ್ಥಾನಕ್ಕೆ ಬಂದು ಕುಳಿತಿದ್ದ ಕಿಟ್ಟಿಗೆ ಬಹುದೊಡ್ಡ ಆಘಾತವಾಗಿತ್ತು. ನಂತರದಲ್ಲಿ ಆ ಮೇಷ್ಟ್ರು ತರಗತಿಯ ಟಾಪರ್ ಆಗಿದ್ದ ವಿದ್ಯಾರ್ಥಿಗಳು ಲೆಕ್ಕ ಬಿಡಿಸಿದ್ದನ್ನು ಪರಿಶೀಲಿಸಿ ಅವರನ್ನು ಹೊಗಳುತ್ತಾ, ಅವರನ್ನು ಕರೆದು ಬೋರ್ಡಿನ ಮೇಲೆ ಅದೇ ಲೆಕ್ಕಗಳನ್ನು ಬಿಡಿಸಲು ಹೇಳಿ ಉಳಿದ ವಿದ್ಯಾರ್ಥಿಗಳಿಗೆ ಅವನ್ನು ತಮ್ಮ ಪುಸ್ತಕದಲ್ಲಿ ನಕಲಿಸಲು ಹೇಳುತ್ತಿದ್ದರು. ಕಿಟ್ಟಿ ಮಾತ್ರ ಸುಮ್ಮನೆ ಕುಳಿತಿದ್ದ. ಇಷ್ಟಕ್ಕೂ ಆತನಿಗೆ ನಕಲಿಸುವ ಅಗತ್ಯವಿರಲಿಲ್ಲ. ಆತ ಲೆಕ್ಕ ಬಿಡಿಸಿದ್ದು ಸರಿಯಾಗಿಯೇ ಇತ್ತು. ಅದನ್ನು ಗಮನಿಸುವ ವ್ಯವಧಾನ ಆ ಶಿಕ್ಷಕರಿಗೆ ಇರಲಿಲ್ಲ.

ಆ ದಿನ ಸಂಜೆ ಮನೆಗೆ ವಾಪಾಸಾದ ಕಿಟ್ಟಿಗೆ ಏನರಲ್ಲೂ ಆಸಕ್ತಿ ಇರಲಿಲ್ಲ. ಯಾವುದೋ ಕಾಟಾಚಾರಕ್ಕೆಂಬಂತೆ ಬೇರೆ ವಿಷಯಗಳ ಹೋಂ ವರ್ಕ್ ಮುಗಿಸಿದನಾದರೂ ಗಣಿತ ಪುಸ್ತಕವನ್ನು ಆತ ತೆಗೆಯಲೇ ಇಲ್ಲ. ಆನಂತರದ ದಿನಗಳಲ್ಲಿ ಅದೆಷ್ಟೇ ಯತ್ನಿಸಿದರೂ ಗಣಿತ ತರಗತಿಯಲ್ಲಿ ಏಕಾಗ್ರತೆ ಸಾಧಿಸುವುದಾಗಲೀ, ಲೆಕ್ಕಗಳನ್ನು ಬಿಡಿಸುವುದಾಗಲೀ ಆತನಿಂದ ಸಾಧ್ಯವಾಗಲಿಲ್ಲ. ಗಣಿತ ವಿಷಯದಲ್ಲೇ ಪರಿಣಿತಿ ಪಡೆಯಬೇಕೆಂದುಕೊಂಡಿದ್ದ ಬಾಲಕ ಗಣಿತ ಎನ್ನುವ ವಿಷಯವನ್ನೇ ದ್ವೇಷಿಸಲಾರಂಭಿಸಿದ……..... ಆ ವರ್ಷವನ್ನು ಹೇಗೋ ಆ ಶಾಲೆಯಲ್ಲಿ ಮುಗಿಸಿದ ಕಿಟ್ಟಿ ನಂತರದಲ್ಲಿ ಶಾಲೆಯನ್ನೇ ಬದಲಾಯಿಸಿದ. ಆದರೆ ಎಷ್ಟೇ ಪ್ರಯತ್ನಿಸಿದರೂ ಗಣಿತದ ಮೇಲೆ ಮುಂಚಿನ ಒಲವು ಮೂಡಲೇ ಇಲ್ಲ. ಹೇಗೋ ಕಷ್ಟಪಟ್ಟು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಗಣಿತದಲ್ಲಿ ತೇರ್ಗಡೆಯಾಗಿ ಆ ವಿಷಯಕ್ಕೇ ತಿಲಾಂಜಲಿ ಇಟ್ಟ……" 

ಎನ್ನುತ್ತಾ ಕಥೆ ನಿಲ್ಲಿಸಿ ಮೌನವಾದರು ಪ್ರೊ. ಪಟ್ಟಾಭಿ. ಅಲ್ಲಿದ್ದ ಪ್ರತೀ ವಿದ್ಯಾರ್ಥಿ ಶಿಕ್ಷಕನ ಮನದಲ್ಲಿಯೂ ವಿಚಾರ ಮಂಥನ ನಡೆದಿತ್ತು. ಈ ಕಥೆಯನ್ನು ಇಂದಿನ ದಿನವೇ ತಮಗೆ ಹೇಳಲು ನಿರ್ಧರಿಸಿರುವುದರ ಹಿಂದೆ ಬಲವಾದ ಕಾರಣವಿದೆ ಎಂಬುದು ಎಲ್ಲರಿಗೂ ಅರಿವಾಗಿತ್ತು. ಪ್ರೊಫೆಸರ್ ಅವರು ತಮಗೆ ಏನನ್ನು ಹೇಳಲು ಬಯಸಿದ್ದಾರೆ ಎನ್ನುವುದರ ಭಾಗಶಃ ಚಿತ್ರಣವೂ ಲಭಿಸಿತ್ತೆನ್ನಿ. ಒಂದಿಷ್ಟು ಸಮಯ ಆ ಕೋಣೆಯೊಳಗೆ ಮೌನವೇ ತುಂಬಿತ್ತು. ಆ ಮೌನವನ್ನು ಒಡೆಯುತ್ತಾ ಪಟ್ಟಾಭಿಯವರು ಮತ್ತೆ ಮಾತನ್ನು ಮುಂದುವರೆಸಿದರು.

"ನೀವೆಲ್ಲರೂ ಬುದ್ಧಿವಂತರು. ನಾನೇನು ಹೇಳ ಹೊರಟಿದ್ದೇನೆ ಎಂಬುದನ್ನು ಈಗಾಗಲೇ ನೀವು ಗ್ರಹಿಸಿದ್ದೀರಿ ಅಲ್ಲವೇ?" ಎಂಬ ಪಟ್ಟಾಭಿಯವರ ಮಾತಿಗೆ ಸಣ್ಣ ಗುಸುಗುಸು ಶುರುವಾಯಿತು ತರಗತಿಯಲ್ಲಿ.

"ಇದು ನಿಜವೇ ಸರ್? ಹೀಗೂ ಆಗುತ್ತದೆಯೇ?" ಎನ್ನುವ ಪ್ರಶ್ನೆಗಳು ಬಂದವು ಸುಮಾರು ಜನರಿಂದ. ಜೊತೆಗೆ "ಸರ್ ಇದು ಕಾಲ್ಪನಿಕ ಕಥೆಯಾ ಅಥವಾ ಹೀಗೆ ನಿಜಕ್ಕೂ ನಡೆದಿತ್ತೇ?" ಎಂದು ಕೇಳಿದರು ಕೆಲವರು. ತಮ್ಮ ಕನ್ನಡಕವನ್ನು ತೆಗೆದು ಮೇಜಿನ ಮೇಲಿರಿಸಿದ ಪ್ರೊ. ಪಟ್ಟಾಭಿಯವರ ಮುಖದಲ್ಲಿ ಅವ್ಯಕ್ತ ಭಾವಗಳಿದ್ದವು. 

"ಇದು ಕಾಲ್ಪನಿಕ ಕಥೆಯಲ್ಲ. ನನಗೆ ತೀರಾ ಆಪ್ತರಾದ ವ್ಯಕ್ತಿಯೊಬ್ಬರ ಬಾಲ್ಯದಲ್ಲಿ ಸಂಭವಿಸಿದ ನೈಜ ಘಟನೆಯಿದು. ಆ ಘಟನೆಗೆ ಆತ ತೀರಾ ಅತಿಯಾಗಿ ಪ್ರತಿಕ್ರಿಯಿಸಿದರೇನೋ ಎಂದು ಒಮ್ಮೊಮ್ಮೆ ಅನ್ನಿಸುವುದುಂಟು. ಅವರ ಜಾಗದಲ್ಲಿ ಬೇರೆಯವರಿದ್ದಿದ್ದರೆ ಅವರೂ ಅದನ್ನು ಹಾಗೆಯೇ ಮನಸ್ಸಿಗೆ ಹಚ್ಚಿಕೊಳ್ಳುತ್ತಿದ್ದರಾ ಎಂಬುದೂ ಗೊತ್ತಿಲ್ಲ. ಆದರೆ ಅದೇಕೋ ಆ ನನ್ನ ಆಪ್ತ ಸ್ನೇಹಿತನಿಗೆ ಅವನಿಷ್ಟದ ವಿಷಯದ ಮೇಲಿನ ಆಸಕ್ತಿಯೇ ಕುಂದಿಹೋಯಿತು. ಇವತ್ತಿಗೂ ಗಣಿತವೆಂದರೆ ಮಾರುದೂರ ನಿಲ್ಲುತ್ತಾನೆ ಆತ….." ಎಂದರು.

"ಸರ್ ಆ ನಿಮ್ಮ ಸ್ನೇಹಿತ ಈಗೇನು ಮಾಡುತ್ತಿದ್ದಾರೆ? ತಾವು ಭವಿಷ್ಯದಲ್ಲಿ ಪರಿಣಿತಿ ಸಾಧಿಸಬೇಕೆಂದು ಕನಸು ಕಂಡಿದ್ದ ವಿಷಯದ ಮೇಲೆ ನಿರಾಸಕ್ತಿ ಮೂಡಿದ ಮೇಲೆ ಅವರು ಏನಾದರು? " ತಟ್ಟನೆ ಒಬ್ಬ ವಿದ್ಯಾರ್ಥಿನಿ ಪ್ರಶ್ನಿಸಿದಳು. 

"ಅದು ಇನ್ನಷ್ಟು ಸ್ವಾರಸ್ಯಕರ ಸಂಗತಿ. ಗಣಿತದ ಮೇಲಿನ ನಿರಾಸಕ್ತಿಯಿಂದ ಪಿಯುಸಿಯಲ್ಲಿ ಕಲಾ ವಿಭಾಗ ಆಯ್ದುಕೊಂಡ ಕಿಟ್ಟಿ ಪದವಿ ಶಿಕ್ಷಣದಲ್ಲಿ ಕೊಂಚ ವಿಭಿನ್ನತೆ ಇರಲೆಂದು ಐಚ್ಚಿಕ ಆಂಗ್ಲ, ಮನಃಶಾಸ್ತ್ರ ಹಾಗೂ ಅಪರಾಧಶಾಸ್ತ್ರ(criminology) ವಿಷಯಗಳನ್ನು ಆಯ್ದುಕೊಂಡ. ಪದವಿಯ ಎರಡನೇ ವರ್ಷದಲ್ಲಿ ಅಪರಾಧಶಾಸ್ತ್ರದ ಪ್ರೊಫೆಸರ್ ಒಬ್ಬೊಬ್ಬರಿಗೆ ಒಂದೊಂದು ವಿಚಾರದ ಮೇಲೆ ಸೆಮಿನಾರ್ ಮಾಡಲು ಹೇಳಿದ್ದರು. ನಾವೇ ಶಿಕ್ಷಕರಂತೆ ಪಾಠ ಮಾಡುವ ಈ ಸೆಮಿನಾರ್ ಪರಿಕಲ್ಪನೆ ಅವನಿಗೆ ಆಸಕ್ತಿಕರವಾಗಿ ಕಂಡಿತು. ಅವನ ಸರದಿ ಬಂದಾಗ ಚೆನ್ನಾಗಿ ತಯಾರಿ ನಡೆಸಿಕೊಂಡು ಹೋಗಿದ್ದ. ಆರಂಭದಲ್ಲಿ ಕೊಂಚ ಅಳುಕೆನಿಸಿರಬಹುದೇನೋ…

ಆದರೆ ವಿಷಯದ ಬಗ್ಗೆ ವಿವರಿಸುತ್ತಾ ಹೋದಂತೆ ಎಲ್ಲವನ್ನೂ ಮರೆತು ಅದರಲ್ಲೇ ತಲ್ಲೀನನಾಗಿಬಿಟ್ಟ. ಎಷ್ಟರಮಟ್ಟಿಗೆ ಅವನು ವಿಷಯ ಮಂಡನೆಯಲ್ಲಿ ಲೀನನಾಗಿದ್ದನೆಂದರೆ ಚಪ್ಪಾಳೆಯ ಸದ್ದು ಕೇಳಿದಾಗಲೇ ಆ ಟ್ರಾನ್ಸ್ ನಿಂದ ಹೊರಬಂದಿದ್ದು. ಪ್ರೊಫೆಸರ್ ಗೆ ಅವನು ವಿಷಯ ಮಂಡನೆಯ ವೈಖರಿ, ವಿಷಯದ ಮೇಲಿನ ಹಿಡಿತ ಬಹಳ ಇಷ್ಟವಾಗಿತ್ತು. 'ಸೆಮಿನಾರ್ ಎಂದರೆ ಹೀಗಿರಬೇಕು. ಇದು ನಾನು ಕಂಡಂತೆ ಇಲ್ಲಿಯವರೆಗಿನ ಅತ್ಯುತ್ತಮ ಸೆಮಿನಾರ್. ಇನ್ನೊಮ್ಮೆ ಈ ಕಾನ್ಸೆಪ್ಟನ್ನು ವಿವರಿಸುವ ಅಗತ್ಯವೇ ಇಲ್ಲದಷ್ಟು ಸ್ಪಷ್ಟವಾಗಿ ವಿಷಯವನ್ನು ಪ್ರಸ್ತುತಪಡಿಸಿದ್ದಾರೆ' ಎಂದು ಮುಕ್ತ ಮನದಿಂದ ಕಿಟ್ಟಿಯನ್ನು ಅಭಿನಂದಿಸಿದ್ದರು. ಹಲವು ವರ್ಷಗಳ ಹಿಂದೆ ಒಬ್ಬ ಮೇಷ್ಟ್ರ ಮಾತಿನಿಂದ ಘಾಸಿಗೊಂಡಿದ್ದ ಅವನ ಮನಸ್ಸಿಗೆ ಈ ಉಪನ್ಯಾಸಕರ ಪ್ರೋತ್ಸಾಹಕರ ನುಡಿಗಳಿಂದ ಹೇಳಲಾರದಷ್ಟು ನೆಮ್ಮದಿ ದೊರಕಿತ್ತು. ಬಹುಶಃ ಆಗಿನಿಂದಲೇ ಅವನೊಳಗೆ ಆ ಉಪನ್ಯಾಸಕರು ಕಲಿಸುವ ಅಪರಾಧಶಾಸ್ತ್ರದ ಮೇಲೆ ವಿಶೇಷ ಒಲವು ಮೂಡಿತೆನಿಸುತ್ತದೆ. ಪದವಿಯ ಕೊನೆಯ ವರ್ಷದಲ್ಲಿ 'ಅಪರಾಧದ ಸಾಮಾಜಿಕ ಆಯಾಮಗಳು' ಅನ್ನುವ ವಿಷಯದ ಮೇಲೆ ಅದೇ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಣ್ಣ ಮಟ್ಟಿಗಿನ ಸಂಶೋಧನಾ ವರದಿ ಸಿದ್ಧಪಡಿಸುವ ಹೊತ್ತಿಗಾಗಲೇ ಅವನು ತನ್ನ ಮುಂದಿನ ಹಾದಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡಿದ್ದ. ಫೋರೆನ್ಸಿಕ್ ಸೈನ್ಸ್ ನಲ್ಲಿ ವಿಶೇಷ ಪರಿಣಿತಿಯೊಂದಿಗೆ ಉನ್ನತ ವ್ಯಾಸಾಂಗ ಮಾಡಿ ಈಗ ಫೋರೆನ್ಸಿಕ್ ಡಿಪಾರ್ಟ್ಮೆಂಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. 

ನಾನು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಪಡೆದು ಮಕ್ಕಳ ಮನೋವಿಕಾಸದ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಈ ನನ್ನ ಸ್ನೇಹಿತನೇ ಕಾರಣ. ಅವನೇಕೆ ಹಾಗೆ ವರ್ತಿಸಿದ ಎನ್ನುವುದನ್ನು ತಿಳಿಯಬೇಕಿತ್ತು ನನಗೆ. ಆ ಉದ್ದೇಶದಿಂದಲೇ ಹಲವಾರು ಪ್ರದೇಶಗಳ ವಿದ್ಯಾರ್ಥಿಗಳನ್ನು ಭೇಟಿಯಾಗಿ ಕೌನ್ಸಿಲಿಂಗ್ ನಡೆಸಿದೆ. ಅವರಿಗೆ ಪಾಠ ಹೇಳುವ ಶಿಕ್ಷಕರನ್ನು ಸಂದರ್ಶಿಸಿದೆ. ಹಲವಾರು ತರಗತಿಗಳಲ್ಲಿ ಕುಳಿತು ಶಿಕ್ಷಕ-ವಿದ್ಯಾರ್ಥಿಗಳ ಸಂವಹನವನ್ನು ಸೂಕ್ಷ್ಮವಾಗಿ ಗಮನಿಸಿ ಟಿಪ್ಪಣಿ ಮಾಡಿಕೊಂಡೆ. ಹೀಗೆ ಈ ಬಗ್ಗೆ ಆಳವಾಗಿ ವಿಶ್ಲೇಷಿಸುತ್ತಾ ಹೋದಂತೆ ಕಿಟ್ಟಿ ಏಕೆ ಒಬ್ಬ ಮೇಷ್ಟ್ರ ಕಾರಣದಿಂದಾಗಿ ತನ್ನಿಷ್ಟದ ವಿಷಯವನ್ನು ದ್ವೇಷಿಸಲಾರಂಭಿಸಿದ, ನಂತರದಲ್ಲಿ ಪ್ರೊಫೆಸರ್ ಅವರ ಒಂದು ಪ್ರೋತ್ಸಾಹಕಾರಿ ನಡವಳಿಕೆ ಹೇಗೆ ಅವನಲ್ಲಿ ಅಪರಾಧಶಾಸ್ತ್ರದ ಬಗ್ಗೆ ಆಸಕ್ತಿಯನ್ನು ಬೆಳೆಸಿತು ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಿತು. ಒಂದು ವಿಷಯದ ಮೇಲಿನ ಆಸಕ್ತಿ ಅದನ್ನು ಕಲಿಸುವವರ ಮೇಲೆ ಗಾಢವಾಗಿ ಅವಲಂಬಿತವಾಗಿರುತ್ತದೆ ಎನ್ನುವುದು ನನ್ನ ಸಂಶೋಧನೆಗಳಿಂದ ಸ್ಪಷ್ಟವಾಯಿತು. ಇವೆಲ್ಲವೂ ನನ್ನನ್ನು ಬಹಳಷ್ಟು ಕಾಡಿದವು. ಇನ್ಯಾವುದೋ ಮಗುವಿಗೆ ನನ್ನ ಸ್ನೇಹಿತನಿಗಾದಂತೆ ಆಗಬಾರದು, ಭಾವೀ ಶಿಕ್ಷಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂಬ ಉದ್ದೇಶದಿಂದಲೇ ನಾನು ಈ ವೃತ್ತಿಯನ್ನು ಆಯ್ದುಕೊಂಡಿದ್ದು…… ಅದಕ್ಕಾಗಿಯೇ ಇಂದು ನಿಮಗೆ ಅವನ ಕಥೆಯನ್ನು ಒಂದಿಷ್ಟು ಬದಲಾವಣೆಗಳೊಂದಿಗೆ ಹೇಳಿದ್ದು" ಎಂದು ನಿಟ್ಟುಸಿರು ಬಿಟ್ಟರು. ಇಡೀ ತರಗತಿ ಮೌನದೊಳಗೆ ಮುಳುಗಿತ್ತು. ಅರೆ ಘಳಿಗೆ ಕಳೆದು ಮತ್ತೊಮ್ಮೆ ನಿಟ್ಟುಸಿರಿನೊಂದಿಗೆ ಮಾತಿಗೆ ತೊಡಗಿದರು ಪಟ್ಟಾಭಿ….

"ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಕರು ಮಕ್ಕಳನ್ನು ಅವರ ಅಂಕಗಳ ಆಧಾರದಲ್ಲಿ ವರ್ಗೀಕರಿಸಿ ಮಕ್ಕಳಲ್ಲಿ ಪಕ್ಷಪಾತ ಮಾಡುತ್ತಾರೆ. ಇದು ಎಷ್ಟರಮಟ್ಟಿಗೆ ಮುಂದುವರೆದಿದೆಯೆಂದರೆ ಮೌಲ್ಯಮಾಪನ ಮಾಡುವಾಗ ಪ್ರತಿಭಾವಂತರೆಂದು ತಾವು ಆಯ್ದ ಕೆಲ ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನೇ ಆಧಾರವಾಗಿಸಿಕೊಂಡು ಉಳಿದ ಮಕ್ಕಳ ಉತ್ತರಪತ್ರಿಕೆಗಳ ವ್ಯಾಲುವೇಷನ್ ಮಾಡುವುದೂ ಇದೆ. ಅಲ್ಲದೆ ಈಗೀಗ ಕೆಲವು ಹೆಸರಾಂತ ಖಾಸಗಿ ಶಾಲೆಗಳು ಮಕ್ಕಳನ್ನು ಅವರ ಐಕ್ಯೂ ಆಧಾರದಲ್ಲಿ ವಿಭಜಿಸಿ ಸೆಕ್ಷನ್ ಗಳನ್ನು ಮಾಡುತ್ತಾರೆ. ಇವೆಲ್ಲವೂ ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ವಿಪರೀತವಾದ ಪರಿಣಾಮಗಳನ್ನು ಉಂಟುಮಾಡುತ್ತವೆ. ಮಕ್ಕಳ ಮನಸ್ಥಿತಿ ಬಹಳ ನಾಜೂಕಾದದ್ದು. ಪ್ರತೀ ಮಗುವಿನ ಮನೋವಲಯವೂ ಭಿನ್ನ. ಇವು ಮಕ್ಕಳ ಗ್ರಹಿಕೆ ಹಾಗೂ ಕಲಿಕಾ ಸಾಮರ್ಥ್ಯದ ಮೇಲೂ ಗಹನವಾದ ಪರಿಣಾಮ ಬೀರುತ್ತದೆ. ಎಲ್ಲಾ ಮಕ್ಕಳ ಗ್ರಹಣ ಶಕ್ತಿ ಒಂದೇ ತೆರನಾಗಿರುವುದಿಲ್ಲ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಅವರ ಕಲಿಕಾ ಸಮಯವಿರುತ್ತದೆ. ಒಂದೇ ತರಗತಿಯಲ್ಲಿ ಎಲ್ಲಾ ರೀತಿಯ ಮಕ್ಕಳೂ ಇರುತ್ತಾರೆ….. ಹಾಗೇ ಇರಬೇಕು ಕೂಡಾ.

ನಾಡಿದ್ದಿನಿಂದ ನೀವೆಲ್ಲಾ ಪ್ರಾಕ್ಟೀಸ್ ಟೀಚಿಂಗಿಗೆ ಹೊರಡುತ್ತಿರುವಿರಿ. ಅಲ್ಲಿ ಬಹಳಷ್ಟು ರೀತಿಯ ಮಕ್ಕಳು ನಿಮಗೆದುರಾಗುತ್ತಾರೆ. ಎಲ್ಲರೂ ನೀವು ಒಮ್ಮೆ ಹೇಳಿದೊಡನೆ ಅರ್ಥೈಸಿಕೊಳ್ಳುತ್ತಾರೆ/ ಅರ್ಥೈಸಿಕೊಳ್ಳಬೇಕು ಎಂದು ಅಪೇಕ್ಷಿಸುವುದು ತಪ್ಪಾಗುತ್ತದೆ. ಕೆಲವರು ನಿಧಾನಗತಿಯಲ್ಲಿ ಕಲಿಯುವವರಾಗಿರಬಹುದು(slow learners). ಕೆಲವು ಮಕ್ಕಳಿಗೆ ಕೆಲವು ವಿಷಯಗಳು ಅರ್ಥವೇ ಆಗದಿರಬಹುದು. ಇನ್ನು ಕೆಲವು ಮಕ್ಕಳಿಗೆ ಬೇರೆಯೇ ತೆರನಾದ ಸಮಸ್ಯೆಗಳಿರಬಹುದು. ಆದರೆ ಅಧ್ಯಾಪಕನಾದವನು ಎಲ್ಲಾ ಮಕ್ಕಳನ್ನೂ ಸಮಾನವಾಗಿ ಕಾಣಬೇಕು. ಮಕ್ಕಳಲ್ಲಿ ಪಕ್ಷಪಾತ ಧೋರಣೆ ಸಲ್ಲದು. ಹಾಗೆಯೇ ಮಗುವಿನ ಪ್ರತೀ ಸರಿಯಾದ ಹೆಜ್ಜೆಯನ್ನೂ ಗುರುತಿಸಿ ಬೆನ್ನು ತಟ್ಟುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಕ್ಕಳು ತಮ್ಮ ಹೆತ್ತವರಿಗಿಂತಲೂ ಹೆಚ್ಚು ಶಿಕ್ಷಕರನ್ನು ನಂಬುತ್ತಾರೆ. ನಿಮ್ಮ ಒಂದು ಸಣ್ಣ ಪ್ರೋತ್ಸಾಹಕಾರಿ ಚರ್ಯೆ ಆ ಮಗುವಿನೊಳಗೆ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಆ ಆತ್ಮವಿಶ್ವಾಸವೇ ಭವಿಷ್ಯದಲ್ಲಿ ದಾರಿದೀಪವಾಗಿ ಅವರ ಬದುಕನ್ನು ನಿರ್ದೇಶಿಸುತ್ತದೆ. ನೀವೆಲ್ಲರೂ ಅಂತಹ ಬೆಳಕಿನ ದೀವಟಿಗೆಗಳಾಗಬೇಕೆಂಬುದೇ ನನ್ನ ಹಾರೈಕೆ. ಈ ಅಧ್ಯಾಪಕ ವೃತ್ತಿ ಎಂಬುದು ಇಡೀ ಮನುಕುಲದ ದಿಕ್ಕನ್ನೇ ಬದಲಾಯಿಸಬಲ್ಲಂತಹ ಶ್ರೇಷ್ಠ ವೃತ್ತಿ. ಯಾವುದೇ ಅಳುಕಿಲ್ಲದೇ ಸಂಪೂರ್ಣ ಮನದಿಂದ ನಿಮ್ಮ ಕಾರ್ಯವನ್ನು ನಿರ್ವಹಿಸಿ. ಆಗ ಖಂಡಿತವಾಗಿಯೂ ನೀವು ಈ ಅಪೂರ್ವವಾದ ವೃತ್ತಿಗೆ ನ್ಯಾಯವನ್ನು ಸಲ್ಲಿಸಿದಂತಾಗುತ್ತದೆ" ಎನ್ನುತ್ತಾ ಎಲ್ಲರಿಗೂ ಶುಭ ಹಾರೈಸಿದ ಪ್ರೊ.ಪಟ್ಟಾಭಿ ಏನಾದರೂ ಅನುಮಾನಗಳಿದ್ದರೆ, ಪ್ರಶ್ನೆಗಳಿದ್ದರೆ ಕೇಳುವಂತೆ ಹೇಳಿದರು. ಪಾಠಯೋಜನೆಯ ಬಗ್ಗೆ ಹಾಗೆಯೇ ನಲ್ವತ್ತೈದು ನಿಮಿಷಗಳ ಅವಧಿಯಲ್ಲಿ ಇಡೀ ಪಾಠಯೋಜನೆಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಎಲ್ಲಾ ಮುಗಿಸಿ ಇನ್ನೇನು ತರಗತಿಯಿಂದ ಹೊರಡಬೇಕೆನ್ನುವಾಗ ಅವರನ್ನು ತಡೆದ ಒಬ್ಬ ವಿದ್ಯಾರ್ಥಿ, 

"ಸರ್, ನೀವು ಆಗಲೇ ಹೇಳಿದ ಕಥೆ ನಿಮ್ಮದೇ ಆಗಿದ್ದು ನೀವು ಕಿಟ್ಟಿಯ ಸ್ಥಾನದಲ್ಲಿದ್ದರೆ ಆ ಘಟನೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ?" ಎಂದು ಕೇಳಿದ. ಎಲ್ಲರೂ ಅವರ ಉತ್ತರ ಕೇಳಲು ಕಾತರರಾಗಿದ್ದರು. ಸುಮಾರು ಸಮಯ ಪ್ರೊಫೆಸರ್ ಏನೂ ಮಾತನಾಡದೇ ಸುಮ್ಮನೆ ನಿಂತರು. ಅವರೊಳಗೆ ಯಾವ ಭಾವವಿತ್ತೋ, ಅವರೇನು ಯೋಚಿಸುತ್ತಿದ್ದರೋ ಯಾರಿಗೂ ತಿಳಿಯಲಿಲ್ಲ. ಹಲವು ನಿಮಿಷಗಳ ನಂತರ ಒಂದು ಸಣ್ಣ ನಗುವಿನೊಂದಿಗೆ, "ಈ ಪ್ರಶ್ನೆಗೆ ಏನೂ ಉತ್ತರ ತೋಚುತ್ತಿಲ್ಲ ನನಗೆ. ಒಮ್ಮೆ ಗಹನವಾಗಿ ಯೋಚಿಸಿ ನೋಡಬೇಕು" ಎಂದರು. 

ಮತ್ತೊಮ್ಮೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ತರಗತಿಯಿಂದ ಹೊರಬಂದ ಪ್ರೊಫೆಸರ್ ಪಟ್ಟಾಭಿಯವರ ಮನಸ್ಸು ಭಾರವಾಗಿತ್ತು. ಯಾಕೋ ಕಾಲೇಜಿನಲ್ಲಿರುವುದು ಕಷ್ಟವೆನಿಸಿ ಅರ್ಧದಿನದ ರಜೆ ಪಡೆದು ಮನೆಗೆ ಬಂದರು. ಮನೆಯ ಹಜಾರದಲ್ಲಿ ಅವರ ತಮ್ಮನ ಮಗ ಅಂಕಗಣಿತದ ಯಾವುದೋ ಲೆಕ್ಕ ಬಿಡಿಸುತ್ತಿದ್ದದ್ದು ಕಣ್ಣಿಗೆ ಬಿತ್ತು. ವ್ಯಕ್ತಪಡಿಸಲಾಗದ ವಿಷಾದವೊಂದು ಬಿಡದಂತೆ ಕಾಡತೊಡಗಿತು. ನೇರ ತಮ್ಮ ವ್ಯಾಸಾಂಗದ ಕೋಣೆಗೆ ತೆರಳಿದವರು ಮನಃಶಾಸ್ತ್ರದ ಪುಸ್ತಕಗಳ ರಾಶಿಯ ಹಿಂದೆ ಮೂಲೆಯ ಕಪಾಟೊಂದರ ಬದಿಯಲ್ಲಿ ಬೆಚ್ಚಗೆ ಕುಳಿತಿದ್ದ ಪುಸ್ತಕವೊಂದನ್ನು ಕೈಗೆ ತೆಗೆದುಕೊಂಡರು. 

ಎಂಟನೇ ತರಗತಿಯ ಗಣಿತ ಪುಸ್ತಕವದು…..!!

ಅದರ ರಟ್ಟಿನ ಮೇಲೆ ಬರೆದಿದ್ದ ರಾಧಾಕೃಷ್ಣ ಪಟ್ಟಾಭಿ ಅನ್ನುವ ಹೆಸರನ್ನೊಮ್ಮೆ ಅಪ್ಯಾಯಮಾನವಾಗಿ ಸವರಿದರು. ಗಣಿತಪ್ರಿಯ ಕಿಟ್ಟಿ ಎಲ್ಲೋ ಆಂತರ್ಯದಲ್ಲಿ ನರಳಿ ಅತ್ತಂತೆ ಭಾಸವಾಯಿತು…..



ಭಾನುವಾರ, ಜುಲೈ 26, 2020

ಕಾರ್ಗಿಲ್ ಕಂಪನ

ಪುಸ್ತಕದ ಹೆಸರು.        : ಕಾರ್ಗಿಲ್ ಕಂಪನ
ಪ್ರಕಾಶಕರು                 : ರಾಷ್ಟ್ರೋತ್ಥಾನ ಸಾಹಿತ್ಯ
ಮೊದಲ ಮುದ್ರಣ       : 1999
ಪುಟಗಳು : 135          ಬೆಲೆ : 30 ರೂಪಾಯಿಗಳು

ಇಂದು ಕಾರ್ಗಿಲ್ ವಿಜಯ ದಿನ. ಇಪ್ಪತ್ತೊಂದು ವರ್ಷಗಳ ಹಿಂದೆ 1999ರ ಫೆಬ್ರವರಿಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ದೆಹಲಿ ಲಾಹೋರ್ ನಡುವಿನ ಬಸ್ ಸೇವೆ ಆರಂಭಿಸಿ ಪಾಕಿಸ್ತಾನದೆಡೆಗೆ ಸ್ನೇಹಹಸ್ತ ಚಾಚಿದ್ದರು. ಯುದ್ಧ, ಜಗಳಗಳಿಲ್ಲದೇ ಸೌಹಾರ್ದಯುತವಾಗಿ ಬಾಳಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ ಕಾಶ್ಮೀರವನ್ನು ತನ್ನೆಲ್ಲಾ ಕುಯುಕ್ತಿಗಳಿಗೆ ದಾಳದಂತೆ ಬಳಸುವ ಪಾಕಿಸ್ತಾನ ವಚನಕ್ಕೆ ಬದ್ಧವಾಗಿ ನಡೆದ ಇತಿಹಾಸವುಂಟೇ? ಪಾಕಿಸ್ತಾನದ ಕುತಂತ್ರಿ ಚಟುವಟಿಕೆಯಿಂದಾಗಿ 1999ರ ಮೇ ಆರಂಭದಿಂದಲೇ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿ ಪರಿಸ್ಥಿತಿ ಹದೆಗೆಟ್ಟಿದ್ದು, ಆ ನಂತರದಲ್ಲಿ ನಿಯಮಗಳನ್ನು ಮೀರಿ ಪಾಕಿಸ್ತಾನಿ ಅತಿಕ್ರಮಣಕಾರರು ಭಾರತದೊಳಕ್ಕೆ ನುಸುಳಿದ್ದು, ಕಡೆಗೆ ಯುದ್ಧದಲ್ಲಿ ಪರ್ಯಾವಸನವಾದದ್ದು ಪ್ರತೀ ಭಾರತೀಯನಿಗೂ ತಿಳಿದಿರುವಂತಹದ್ದೇ. ಕಾರ್ಗಿಲ್ ಎನ್ನುವ ಹೆಸರೇ ಪ್ರತೀ ದೇಶಭಕ್ತನೊಳಗೂ ಒಂದು ರೋಮಾಂಚನವನ್ನು ಸೃಷ್ಟಿಸುತ್ತದೆ. 

ಅಂತಹ ಕಾರ್ಗಿಲ್ ಸಮರದ ಹಿನ್ನೆಲೆ, ಕಾರಣಗಳು, ಯುದ್ಧಭೂಮಿಯಲ್ಲಿ ನಮ್ಮ ವೀರ ಯೋಧರ ಸಾಹಸಗಾಥೆ, ಯುದ್ಧದ ಪರಿಣಾಮಗಳು, ಭವಿಷ್ಯದ ಸವಾಲುಗಳು ಬಗೆಗಿನ ಸಮಗ್ರ ಮಾಹಿತಿಯುಳ್ಳ ಪುಸ್ತಕ "ಕಾರ್ಗಿಲ್ ಕಂಪನ". ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಈ ಪುಸ್ತಕದಲ್ಲಿ 'ಕದನಸರಣಿಯ ಬೀಜ'(ಎಸ್. ಆರ್. ರಾಮಸ್ವಾಮಿ), 'ಕಾರ್ಗಿಲ್ ರಣಾಂಗಣ'(ದು. ಗು. ಲಕ್ಷ್ಮಣ) ಹಾಗೂ 'ಕದನ ವಿರಾಮ - ಮುಂದೇನು'(ಚಂದ್ರಶೇಖರ ಭಂಡಾರಿ) ಎಂಬ ಮೂರು ಭಾಗಗಳಿವೆ.

ಮೊದಲ ಭಾಗದಲ್ಲಿ ದೇಶ ವಿಭಜನೆಯಿಂದ ಹಿಡಿದು ಧರ್ಮದ ಹೆಸರಿನ ಭಯೋತ್ಪಾದನೆ, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಿಕ್ಕ ಅವಕಾಶಗಳನ್ನೆಲ್ಲಾ ಕೈ ಚೆಲ್ಲಿದ ನಾಯಕರು, ನೆಹರು ಅವರ ಸ್ವಕೇಂದ್ರಿತ ನಾಯಕತ್ವದಿಂದಾಗಿ ಅಪಾತ್ರರ ಕೈಗೆ ಸಿಕ್ಕಿದ ರಕ್ಷಣಾ ಖಾತೆ, ತೆಗೆದುಕೊಂಡ ತಪ್ಪು ನಿರ್ಣಯಗಳು, ಚೀನಾದಿಂದ ದೇಶಕ್ಕೆ ಅಪಾಯವಾಗುವ ಸಂಭವವಿದೆಯೆಂದು ಸೇನಾಧಿಕಾರಿಗಳು ಪದೇ ಪದೇ ಎಚ್ಚರಿಸುತ್ತಿದ್ದರೂ ಅದನ್ನು ನಿರ್ಲಕ್ಷಿಸಿ 'ಚೀನಾ ನಮ್ಮ ಮಿತ್ರ ದೇಶ' ಎಂಬ ಭ್ರಮೆಯಲ್ಲೇ ಉಳಿದ ನೆಹರೂ ಹಾಗೂ ರಕ್ಷಣಾ ಸಚಿವ ಕೃಷ್ಣ ಮೆನನ್, ದೂರದರ್ಶಿತ್ವವಿಲ್ಲದ ಕಾಂಗ್ರೆಸ್ ನಾಯಕರು ಸೃಷ್ಟಿಸಿದ ಸಮಸ್ಯೆಗಳು, ಹಿಂದಿನ ಇಂಡೋ ಪಾಕ್ ಹಾಗೂ ಇಂಡೋ ಚೀನಾ ಯುದ್ಧಗಳಲ್ಲಿನ ಅವೈಜ್ಞಾನಿಕ ರಣನೀತಿ ಮೊದಲಾದವೆಲ್ಲಾ ಹೇಗೆ ಪರೋಕ್ಷವಾಗಿ ಕಾರ್ಗಿಲ್ ಸಮರಕ್ಕೆ ಕಾರಣವಾದವು ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.

ಎರಡನೇ ಭಾಗ ಯುದ್ಧಾರಂಭದಿಂದ ಹಿಡಿದು ವಿಜಯ ಸಾಧಿಸಿದಲ್ಲಿಯವರೆಗಿನ ಮಾಹಿತಿಯನ್ನು ಒಳಗೊಂಡಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಅತಿಕ್ರಮಣ, ಕಾರ್ಗಿಲ್ ಬಟಾಲಿಕ್ ಹಾಗೂ ದ್ರಾಸ್ ವಲಯದಲ್ಲಿನ ತೀವ್ರ ಹೋರಾಟ, ಗಡಿನಿಯಂತ್ರಣ ರೇಖೆಯೇ ಅಸ್ಪಷ್ಟವಾಗಿದೆ ಎಂದು ಹೊಸ ಕ್ಯಾತೆ ತೆಗೆದ ಪಾಕಿಸ್ತಾನ, ಕಕ್ಸರ್ ಪ್ರದೇಶದಲ್ಲಿ ಅತಿಕ್ರಮವಾಗಿ ಪ್ರವೇಶಿಸಿದ ಪಾಕ್ ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸಲು ತೆರಳಿದ ಲೆಫ್ಟಿನೆಂಟ್ ಸೌರವ್ ಕಾಲಿಯಾ ನೇತೃತ್ವದ ಆರು ಭಾರತೀಯ ಸೈನಿಕರನ್ನು ಬರ್ಬರವಾಗಿ ಹತ್ಯೆಗೈದ ಪಾಕ್,  ಖುದ್ದು ಯುದ್ಧಭೂಮಿಗೆ ಭೇಟಿಕೊಟ್ಟು ಸೈನ್ಯದಲ್ಲಿ ಉತ್ಸಾಹ, ಹುರುಪು, ಆತ್ಮವಿಶ್ವಾಸ ತುಂಬಿದ ಪ್ರಧಾನಿ ವಾಜಪೇಯಿ, ತೊಲೊಲಿಂಗ್ ಪರ್ವತ ವಿಮೋಚನೆ, ಅಮೇರಿಕಾ ಹಾಗೂ ಜಿ 8 ರಾಷ್ಟ್ರಗಳು ಭಾರತದ ನಿಲುವನ್ನು ಸಮರ್ಥಿಸಿದ್ದರಿಂದ ಜಾಗತಿಕ ಮಟ್ಟದಲ್ಲಿ ಒಂಟಿಯಾದ ಪಾಕಿಸ್ತಾನ, ಟೈಗರ್ ಹಿಲ್ಸ್ ಮರುವಶ, ಪಾಕ್ ಪಲಾಯನ ಹಾಗೂ ಭಾರತದ ಜೈತ್ರಯಾತ್ರೆಯ ವಿವರಗಳು ಇಲ್ಲಿವೆ. ಸಾಹಸಗಾಥೆ ಎನ್ನುವ ಶೀರ್ಷಿಕೆಯಡಿಯಲ್ಲಿರುವ ಆಯ್ದ ಹದಿನೈದು ಹುತಾತ್ಮ ಯೋಧರ ಜೀವನ ಪುಟಗಳು, ಅವರ ಕುಟುಂಬದವರ ನುಡಿಗಳು ಮನವನ್ನು ಆರ್ದ್ರಗೊಳಿಸುತ್ತವೆ. ಜೊತೆಗೆ ಕಾರ್ಗಿಲ್ ಯೋಧರಿಗಾಗಿ ಮಿಡಿದ, ತಮ್ಮ ಕೈಲಾದ ರೀತಿಯಲ್ಲಿ, ಸಾಧ್ಯವಾದಷ್ಟು ಸಹಾಯ ಮಾಡಿದ ಕೆಲ ಜನಸಾಮಾನ್ಯರ ವಿವರಗಳೂ ಇವೆ.

ಮೂರನೇ ಭಾಗ ಸಮರಾನಂತರದ ಪರಿಣಾಮಗಳು, ಬೆಳವಣಿಗೆಗಳ ಜೊತೆಗೆ ಭವಿಷ್ಯದ ಅಪಾಯಗಳು ಹಾಗೂ ಪರಿಹಾರ ಮಾರ್ಗಗಳ ಕುರಿತಾಗಿದೆ. ಭಾರತ ಪಾಕ್ ನಡುವಿನ ಸಮಸ್ಯೆಗೆ ಮೂಲಕಾರಣಗಳಲ್ಲಿ ಒಂದಾದ ಕಾಶ್ಮೀರ ವಿವಾದದ ಹಲವು ಆಯಾಮಗಳ ಬಗ್ಗೆ ಬೆಳಕು ಚೆಲ್ಲಿರುವುದಲ್ಲದೇ ಆ ಸಮಸ್ಯೆಯ ಪರಿಹಾರವಾಗಿ ಕೆಲ ತುರ್ತು ಕ್ರಮಗಳು ಹಾಗೂ ಹಲವು ದೀರ್ಘಕಾಲೀನ ಕ್ರಮಗಳ ಬಗ್ಗೆ ವಿಚಾರಗಳಿವೆ.

ಕಾರ್ಗಿಲ್ ಯುದ್ಧದ ಬಗೆಗಿನ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರತಿಯೊಬ್ಬರೂ ಓದಲೇಬೇಕಾದ ಸಂಗ್ರಹಯೋಗ್ಯ ಪುಸ್ತಕ.

ಶನಿವಾರ, ಜುಲೈ 25, 2020

ಆರ್ತನಾದ - ಪುಸ್ತಕ ಪರಿಚಯ

ಪುಸ್ತಕದ ಹೆಸರು         : ಆರ್ತನಾದ
ಮೂಲ ಲೇಖಕರು.      : ಯಂಡಮೂರಿ ವೀರೇಂದ್ರನಾಥ್
ಅನುವಾದಕರು.          : ರಾಜಾ ಚೆಂಡೂರ್
ಪ್ರಕಾಶಕರು.               : ಸೌಮ್ಯ ಎಂ, ಬಸವನಗುಡಿ
ಮುದ್ರಣ.                     : 2004
ಪುಟಗಳು : 180.          ಬೆಲೆ: 80 ರೂಪಾಯಿಗಳು

ನೂರೆಂಬತ್ತು ಪುಟಗಳ ಈ ಪುಟ್ಟ ಕಾದಂಬರಿಯಲ್ಲಿ ಹೆಣ್ಣು ಎಲ್ಲರೆದುರು ಬಹಿರಂಗವಾಗಿ ವ್ಯಕ್ತಪಡಿಸಲಾಗದ/ವ್ಯಕ್ತಪಡಿಸಲು ಹಿಂಜರಿಯುವ ಲೈಂಗಿಕ ದೌರ್ಜನ್ಯದ ವಿವಿಧ ಮುಖಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಯಂಡಮೂರಿಯವರು. ಮನೆಯಿಂದ ಆರಂಭಿಸಿ ದಿನಂಪ್ರತಿ ಸಂಚಾರಕ್ಕೆಂದು ನಾವು ಅವಲಂಬಿಸುವ ಬಸ್ಸುಗಳು, ಕಛೇರಿ, ಶಾಲೆ ಹೀಗೆ ಎಲ್ಲೆಡೆ ವ್ಯಾಪಿಸಿರುವ ಶೋಷಣೆಯನ್ನು, ಅದನ್ನು ವ್ಯಕ್ತಪಡಿಸಲು ಇರುವ ಅಡೆತಡೆಗಳ ಸಮೇತ ತೆರೆದಿಡುತ್ತದೆ ಈ ಕಾದಂಬರಿ. ಗಂಟಲಿನಾಚೆ ಸ್ವರವಾಗಿ ಹೊರಬರದ ದಮನಿತ ದೌರ್ಜನ್ಯಗಳ ಈ ಮೂಕ ಆರ್ತನಾದ ಇಂದಿಗೂ ಪ್ರಸ್ತುತ.

ಅನ್ಯಾಯವನ್ನು ಸಹಿಸದೇ ಪ್ರಶ್ನಿಸುವ ಸ್ವಭಾವದ ಧರಣಿಯ ಬದುಕನ್ನು ಕೇಂದ್ರವಾಗಿಸಿಕೊಂಡು ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಸೂಕ್ಷ್ಮವಾಗಿ ತೋರುತ್ತಲೇ ಸಾಗುವ ಕಥೆ ನಂತರದಲ್ಲಿ ಪುಟ್ಟ ಮಕ್ಕಳ ಮೇಲಿನ ದೌರ್ಜನ್ಯದ ಹೀನ ರೂಪವೊಂದಕ್ಕೆ ನಮ್ಮನ್ನು ಮುಖಾಮುಖಿಯಾಗಿಸುತ್ತದೆ. ಜನರಿಂದ ತುಂಬಿದ ಬಸ್ಸಿನಲ್ಲಿ ಹೆಣ್ಣು ಮಕ್ಕಳ ಮೈ ಕೈ ಸವರುತ್ತಾ ವಿಕೃತ ಆನಂದ ಪಡುವವರಿಂದ ಹಿಡಿದು, ಆಫೀಸಿನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳೆಲ್ಲಾ ತನ್ನ ಕಾಮನೆಗಳನ್ನು ತಣಿಸುವ ಸಾಧನಗಳೆಂದುಕೊಳ್ಳುವ ಮೇಲಾಧಿಕಾರಿ, ಎಲ್ಲಾ ತಪ್ಪಿಗೂ ನೀನೇ ಕಾರಣ ಎನ್ನುವ ಪತಿ, ತಮ್ಮ ಮೇಲಾಗುತ್ತಿರುವ ಶೋಷಣೆ ಎಂತದ್ದು ಎಂಬುದನ್ನೂ ವಿವರಿಸಲು ಬಾರದಂತಹ ಎಳೆಯ ಮಕ್ಕಳ ಮುಗ್ಧತೆಯನ್ನು ಕಸಿಯುವ ಪಿಪಾಸುಗಳು ಹಾಗೂ ಇವೆಲ್ಲವನ್ನೂ ಬಾಯ್ತೆರೆದು ಹೇಳಿಕೊಳ್ಳಲು ಅಡ್ಡಿಯಾಗುವ ಸಂಗತಿಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ. 

ಈ ಕಾದಂಬರಿಯಲ್ಲಿ ಪ್ರಸ್ತಾಪವಾಗಿರುವ ಪ್ರತಿಯೊಂದು ಸಂಗತಿಯೂ ಒಂದಿಲ್ಲೊಂದು ಸಂದರ್ಭದಲ್ಲಿ ಪ್ರತೀ ಮಹಿಳೆಯ ಅನುಭವಕ್ಕೂ ಬಂದಿರುತ್ತದೆ. ಅವುಗಳ ರೂಪ ಬೇರೆ ಬೇರೆ ಇರಬಹುದಷ್ಟೇ. ಒಂದರ್ಥದಲ್ಲಿ ವಾಸ್ತವ ಸ್ಥಿತಿಯನ್ನೇ ಬರಹವಾಗಿಸಿದ್ದಾರೆ ಎನ್ನಬಹುದು. ಅದನ್ನು ಪುಷ್ಠೀಕರಿಸುವಂತೆ ಕೆಲವು ಪ್ರಕರಣಗಳನ್ನು ಲೇಖಕರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ ಕೂಡಾ. ಹಾಗೆಯೇ ಕಥೆಯ ಕ್ಲೈಮ್ಯಾಕ್ಸ್ ನಿಜವಾಗಿ ನಡೆದದ್ದು ಎಂಬುದನ್ನೂ ಉಲ್ಲೇಖಿಸಿದ್ದಾರೆ. ಸಣ್ಣ ಕಾದಂಬರಿಯಾದರೂ ಪ್ರತೀ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಹೆಣ್ಣು ಧರಣಿಯಂತೆ ಇರಬೇಕು ಅನ್ನಿಸುವಷ್ಟು ಪರಿಣಾಮಕಾರಿಯಾಗಿ ಆ ಪಾತ್ರವನ್ನು ಚಿತ್ರಿಸಿದ್ದಾರೆ. ಪತ್ನಿಯ ಮಾತುಗಳನ್ನು ತಾಳ್ಮೆಯಿಂದ ಕೇಳಿ ವಿವೇಚಿಸುವ, ಆಕೆಯನ್ನು ಅರ್ಥೈಸಿಕೊಳ್ಳುವ ಶ್ರೀಧರ್ ಆಪ್ತನೆನಿಸುತ್ತಾನೆ. ವಿಕ್ರಂ, ಜಾನ್ ಅಬ್ರಹಾಂ ಮತ್ತು ಹಾಗೆ ಬಂದು ಹೀಗೆ ಹೋಗುವ ಸುಕುಮಾರಿ ಪಾತ್ರಗಳು ತುಂಬಾ ಇಷ್ಟವಾದವು.

ಇದರ ಮೂಲ ತೆಲುಗು ಕಾದಂಬರಿಯನ್ನು ಯಂಡಮೂರಿಯವರು ಯಾವಾಗ ಬರೆದಿರುವರೋ ನನಗೆ ತಿಳಿದಿಲ್ಲ. ಆದರೆ ನನ್ನ ಬಳಿಯಿರುವ ಈ ಪುಸ್ತಕ ಪ್ರಕಟವಾಗಿರುವುದು 2004ರಲ್ಲಿ. ಅಂದರೆ ಇಂದಿಗೆ ಸರಿಸುಮಾರು ಹದಿನಾರು ವರ್ಷಗಳ ಹಿಂದೆ. ಹದಿನಾರು ವರ್ಷಗಳ ನಂತರವೂ ಈ ಕಾದಂಬರಿಯಲ್ಲಿ ಪ್ರಸ್ತಾಪಿತ ಸಂಗತಿಗಳು ನಮ್ಮ ಸಮಾಜದಲ್ಲಿ ಪ್ರಸ್ತುತವಾಗಿದೆ ಎನ್ನುವುದು ವಿಪರ್ಯಾಸವಲ್ಲದೇ ಮತ್ತೇನು? ಇಂದಿಗೂ ಇದೇ ವಿಚಾರದ ಬಗ್ಗೆ ಬರೆದು, ಸಿನಿಮಾ ಮಾಡಿ ಜನರ ಚಿಂತನೆಗಳನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ನಾಚಿಕೆಗೇಡಿನ ಸಂಗತಿಯಲ್ಲವೇ?
"ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆಂದು ಚಿಕ್ಕಂದಿನಲ್ಲಿ ಓದಿದ್ದೆವು. ಆದರೆ ಆ ದೇವತೆಗಳು ಇಂದು ಇಲ್ಲಿ ಇದ್ದರೆ ಯಾರು ಪೀತಾಂಬರ ಎಳೆಯುತ್ತಾರೋ, ಯಾರು ಇನ್ನೇನು ಮಾಡುತ್ತಾರೋ ಎಂದು ಓಡಿಹೋಗುತ್ತಿದ್ದರು" ಎನ್ನುವ ಧರಣಿಯ ಮಾತಿಗೂ "ಗುಂಪಿನಲ್ಲಿರುವಾಗ ಯಾವ ಗಂಡಸಾದರೂ ಹೆಣ್ಣನ್ನು ತನಗೆ ಬೇಕಾದಾಗ ಬೇಕಾದಂತೆ ಮುಟ್ಟಬಹುದು. ಏಕೆಂದರೆ ಯಾವಾಗ ಹೆಣ್ಣು ಸಾರ್ವಜನಿಕ ಪ್ರದೇಶದಲ್ಲಿರುತ್ತಾಳೋ ಆಗ ಆಕೆ ಸಾರ್ವಜನಿಕ ಆಸ್ತಿಯಾಗಿಬಿಡುತ್ತಾಳೆ" ಎಂಬ ಇತ್ತೀಚಿನ ಮರ್ದಾನಿ 2 ಸಿನಿಮಾದ ಸಂಭಾಷಣೆಗೂ ನಡುವೆ ಸಮಯದ ಹೊರತು ಯಾವ ವ್ಯತ್ಯಾಸವೂ ಕಾಣದು ಅಲ್ಲವೇ? ಎರಡೂ ಕೂಡಾ ಸತ್ಯವೇ...... ಅಂದಿಗೂ ಇಂದಿಗೂ....... ಹೀಗೇ ಮುಂದುವರೆದರೆ ಪ್ರಾಯಶಃ ಎಂದೆಂದಿಗೂ......

ಸೋಮವಾರ, ಜುಲೈ 20, 2020

ಚಿತಾದಂತ

ಪುಸ್ತಕದ ಹೆಸರು          : ಚಿತಾದಂತ

ಲೇಖಕರು                  : ಡಾ. ಕೆ.ಎನ್. ಗಣೇಶಯ್ಯ

ಪ್ರಕಾಶಕರು                : ಅಂಕಿತ ಪುಸ್ತಕ

ಪ್ರಸ್ತುತ ಮುದ್ರಣ         : 2017 

ಪುಟಗಳು : 248          ಬೆಲೆ : 150 ರೂ

ಚರಿತ್ರೆ ಎನ್ನುವುದು ಹಲವು ರಹಸ್ಯಗಳ ನಿಗೂಢ ಸಂಪುಟ. ಆ ಸಂಪುಟದೊಳಗಿನ ಪುಟಗಳಲ್ಲಿ ದಾಖಲಾದ ವಿಚಾರಗಳಿಗಿಂತ ಪುಟಗಳ ನಡುವೆ ಅಜ್ಞಾತವಾಗುಳಿದು ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯಗಳೇ ಹೆಚ್ಚು ಎನ್ನುವುದು  ಒಪ್ಪಲೇಬೇಕಾದ ಸತ್ಯ. ಭಾರತದ ಮಟ್ಟಿಗೆ ನೋಡುವುದಾದರೆ ಇತಿಹಾಸವನ್ನೇ ತಿರುಚಿ ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಅದನ್ನೇ ನಮ್ಮ ಇತಿಹಾಸವೆಂಬಂತೆ ಬಿಂಬಿಸುವ ಹುನ್ನಾರ ಸ್ವಾತಂತ್ರ್ಯಾನಂತರದಿಂದ ವ್ಯವಸ್ಥಿತವಾಗಿ ನಮ್ಮದೇ ಶಿಕ್ಷಣ ವ್ಯವಸ್ಥೆಯ ಮೂಲಕ ನಡೆದಿದೆ ಎನ್ನುವ ಗಂಭೀರ ಆರೋಪ ಇತ್ತೀಚಿನ ದಿನಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಕೆಲ ಅಪಾತ್ರರನ್ನು ವೈಭವೀಕರಿಸುತ್ತಾ ಅವರನ್ನು ವೀರರಂತೆ, ದೇಶಭಕ್ತರೆಂಬಂತೆ ಬಿಂಬಿಸಿ ಅಸಲೀ ನಾಯಕರನ್ನು ಅಜ್ಞಾತವಾಗಿಯೇ ಉಳಿಸಲಾಗಿದೆ ಎನ್ನುವ ವಾದ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರಹಗಾರರೂ ಕೂಡಾ ಗತದಲ್ಲಿ ಎಲ್ಲೋ ಮರೆಯಾಗಿ ಉಳಿದಿರುವ ಅವ್ಯಕ್ತ ಸತ್ಯಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಭೈರಪ್ಪನವರ 'ಆವರಣ', ವಸುಧೇಂದ್ರರ 'ತೇಜೋ ತುಂಗಭದ್ರಾ' ಮೊದಲಾದವುಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ಅಂತಹದೇ ಐತಿಹಾಸಿಕ ಸತ್ಯಾಸತ್ಯತೆಗಳ ಜೊತೆಗೆ ಕಲ್ಪನೆಯನ್ನು ಬೆರೆಸಿ ಕಟ್ಟಿರುವ ಕಾದಂಬರಿ "ಚಿತಾದಂತ".

ತಮಗೇ ಅರಿವಾಗದಂತೆ ಕಾಲಗರ್ಭದಲ್ಲಿ ಹುದುಗಿದ ಐತಿಹಾಸಿಕ ರಹಸ್ಯವೊಂದರ ಸುಳಿಯಲ್ಲಿ ಸಿಲುಕುವ ಇಬ್ಬರು ಪುರಾತತ್ವಶಾಸ್ತ್ರಜ್ಞೆಯರು ಹೇಗೆ ಆ ಸಿಕ್ಕುಗಳನ್ನು ಬಿಡಿಸಿ ಅದರಿಂದ ಹೊರಬರುತ್ತಾರೆ ಎನ್ನುವುದೇ ಇಲ್ಲಿನ ಕಥೆಯಾದರೂ ಈ ಪ್ರಕ್ರಿಯೆಯಲ್ಲಿ ಅನಾವರಣಗೊಳ್ಳುವ ಇತಿಹಾಸದ ಅನುಕ್ತ ಪುಟಗಳೇ ಈ ಕಾದಂಬರಿಯ ಜೀವಾಳ. ಅಲೆಕ್ಸಾಂಡರ್ ನ ಗುಪ್ತನಿಧಿಯ ಅನ್ವೇಷಣೆ ಕಥೆಯ ಕೇಂದ್ರವೆನಿಸಿದರೂ ಕೂಡಾ ಅಲೆಗ್ಸಾಂಡರನ ದಂಡಯಾತ್ರೆಯಿಂದ ಹಿಡಿದು ನಂದರು, ಮೌರ್ಯರು, ಧಾರ್ಮಿಕ ಒಳಸುಳಿಗಳು, ಕ್ಯಾಂಡಿಯ ಪ್ರಸಿದ್ಧ ಬುದ್ಧದಂತ ಹೀಗೆ ಹಲವು ಐತಿಹಾಸಿಕ ವಿಚಾರಗಳು ಕಥೆಯಲ್ಲಿ ಅಂತರ್ಗತವಾಗಿವೆ. ಅಜೈವಿಕ ಪಂಥ, ಸಿಕಂದರ್, ಅಮಾರ್ತ್ಯ ರಾಕ್ಷಸ, ಚಾಣಕ್ಯ, ಅಶೋಕ ಮೊದಲಾದವರಿಗೆ ಸಂಬಂಧಿಸಿದ ಹಲವು ಸೂಕ್ಷ್ಮ ವಿವರಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಬೌದ್ಧ ಧರ್ಮದ ಉಗಮದಿಂದ ಆರಂಭಿಸಿ ಕಾಲಕ್ರಮೇಣ ಬಾಹ್ಯ ಪ್ರಭಾವದಿಂದ ಅದರಲ್ಲಾದ ಬದಲಾವಣೆಗಳು, ಬುದ್ಧನ ಮೂಲ ತತ್ವಗಳ ಉಳಿವಿಗಾಗಿ ಶ್ರಮಿಸುವ ತೇರವಾದಿಗಳು, ಅವರ ಹಾಗೂ ಮಹಾಯಾನರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಘರ್ಷಣೆಗಳು ಮೊದಲಾದ ಐತಿಹಾಸಿಕ ವಿಚಾರಗಳೊಂದಿಗೆ ಕಲಾಶ್ ಪಂಗಡದ ಬದುಕು ಬವಣೆಗಳು, ನ್ಯೂಟನ್ ಸ್ಟೋನ್, ಭಾಷೆ ಹಾಗೂ ಅದನ್ನು ಬಳಸುವ ಜನಾಂಗದ ನಡುವಿನ ಸಂಬಂಧ, ಪ್ರಾಚ್ಯವಸ್ತು ಮಾಫಿಯಾ ಮುಂತಾದ ವಿವರಗಳೂ ಇದರಲ್ಲಿವೆ.

ಲೇಖಕರು ಪ್ರಸ್ತಾವನೆಯಲ್ಲೇ ಸ್ಪಷ್ಟಪಡಿಸಿರುವಂತೆ ಸತ್ಯ ಮತ್ತು ಕಲ್ಪನೆಗಳನ್ನು ಬೆರೆಸುವಲ್ಲಿ ಅವರು ಯಾವುದೇ ಮಿತಿಯನ್ನು ಇರಿಸಿಕೊಂಡಿಲ್ಲ. ಕಲ್ಪನೆ ಯಾವುದು ಹಾಗೂ ಸತ್ಯ ಘಟನೆಗಳ್ಯಾವುವು ಎಂಬುದನ್ನು ಓದುಗರೇ ವರ್ಗೀಕರಿಸಿಕೊಳ್ಳಬೇಕು. ಹಾಗಂತ ಪುರಾವೆಗಳೊಂದಿಗೆ ನೀಡಿರುವ ವಿಚಾರಗಳು ಮಾತ್ರ ಸತ್ಯ ಉಳಿದವೆಲ್ಲವೂ ಲೇಖಕರ ಕಲ್ಪನೆ ಎಂದು ಸಾರಾಸಗಟಾಗಿ ನಿರ್ಧರಿಸಲೂ ಸಾಧ್ಯವಿಲ್ಲ. ಪುರಾವೆಗಳ ಹೊರತಾಗಿಯೂ ಲೇಖಕರು ಪ್ರಸ್ತುತಪಡಿಸಿರುವ ಹಲವು ಸಿದ್ಧಾಂತಗಳು, ಹಾಗೂ ಅವುಗಳ ಸಮರ್ಥನೆಗೆ ನೀಡಿರುವ ವಿವರಗಳು ಒಪ್ಪುವಂತಹದ್ದು. ಏಕೆಂದರೆ ಗತದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಿಲ್ಲ. ರಾಜರ ಆಸ್ಥಾನ ಕವಿಗಳು ಬರೆದ ಕಾವ್ಯಗಳು, ಸ್ವತಃ ರಾಜರೇ ಕೆತ್ತಿಸಿದ ಶಾಸನಗಳು ಮುಂತಾದವೇ ಚರಿತ್ರೆಯ ಮರುಸೃಷ್ಟಿಗೆ ಆಕರ. ಹಾಗಿರುವಾಗ ಆ ವಿವರಗಳು ಸಂಪೂರ್ಣ ಸತ್ಯ ಎನ್ನುವುದು ಮೂರ್ಖತನವೇ ಸೈ. ಹಾಗಾಗಿ ಚರಿತ್ರೆಯನ್ನು ಬೇರೆ ಬೇರೆ ಆಯಾಮಗಳಿಂದ ಪರಾಮರ್ಶಿಸುವುದು ಅತ್ಯಗತ್ಯ. ಅದನ್ನೇ ಲೇಖಕರು ಇಲ್ಲಿ ಅಳವಡಿಸಿಕೊಂಡಿದ್ದಾರೆ. ಚರಿತ್ರೆಯಲ್ಲಿನ ಹಲವು ಘಟನೆಗಳನ್ನು ಬೆದಕಿ ತೆಗೆದು ಅದನ್ನು ಕಾಲಾನುಕ್ರಮದಲ್ಲಿ ಜೋಡಿಸುವಲ್ಲಿ ಇತಿಹಾಸದ ವಾಸ್ತವಿಕ ಅಂಶಗಳನ್ನು ಪರಿಗಣಿಸಿದ್ದರೆ ಅವುಗಳ ನಡುವೆ ಸಂಪರ್ಕದ ಕೊಂಡಿ ಬೆಸೆಯುವಲ್ಲಿ ಓದುಗರನ್ನು ಅವಲೋಕನಕ್ಕೆ ಒಳಪಡಿಸುವ ಕೆಲವು ಸುಳಿವುಗಳನ್ನು ನೀಡಿದ್ದಾರೆ. ಆ ಮೂಲಕ ಚರಿತ್ರೆಯ ಕೆಲ ಭೂಗತ ಸತ್ಯಗಳತ್ತ ಓದುಗರನ್ನು ಚಿಂತನೆಗೆ ಹಚ್ಚಿದ್ದಾರೆ. ಹಲವು ಚದುರಿದ ಚೂರುಗಳನ್ನು ಕ್ರೋಢೀಕರಿಸಿಕೊಂಡಾಗ ಮೂಡುವ ಚಿತ್ರ ನಾವು ಇದುವರೆಗೆ ಓದಿದ ಚರಿತ್ರೆಗಿಂತ ಭಿನ್ನವಾಗಿ ಕಾಣುತ್ತದೆ ಎಂಬುದು ಗಮನಿಸಬೇಕಾದ ಅಂಶ.

ಇದೆಲ್ಲವನ್ನೂ ಹೊರತುಪಡಿಸಿ ಕಾದಂಬರಿಯ ಬಗ್ಗೆ ಹೇಳುವುದಾದರೆ ಓದುಗರನ್ನು ಭೂತ, ವರ್ತಮಾನಗಳೆರಡರ ನಡುವೆ ಕೊಂಡೊಯ್ಯುತ್ತಾ ಕುತೂಹಲಕಾರಿಯಾಗಿ ಸಾಗುವ ಚಿತಾದಂತ ಒಂದಿಷ್ಟೂ ಬೇಸರಗೊಳಿಸದೆ ಓದಿಸಿಕೊಳ್ಳುತ್ತದೆ. ಸನ್ನಿವೇಶ ಸಂಬಂಧಿತ ನಕ್ಷೆ, ಚಿತ್ರಗಳು, ಬ್ರಾಹ್ಮಿ ಹಾಗೂ ಗ್ರೀಕ್ ಲಿಪಿಯ ಕೋಡ್ ಗಳು ಈ ಪಯಣವನ್ನು ಇನ್ನಷ್ಟು ರೋಚಕವಾಗಿಸುವ ಜೊತೆಗೆ ಪ್ರತೀ ಸನ್ನಿವೇಶವನ್ನೂ ಚಿತ್ರಿಸಿಕೊಳ್ಳಲು ಸಹಕಾರಿಯಾಗಿವೆ. ಇದಕ್ಕಾಗಿ ಲೇಖಕರು ನಡೆಸಿರುವ ಅಧ್ಯಯನ, ತೆಗೆದುಕೊಂಡಿರುವ ಶ್ರಮ ಶ್ಲಾಘನೀಯ. ಒಂದೇ ಗುಟುಕಿಗೆ ಓದಿ ಮುಗಿಸಬಹುದಾದಂತಹ ಕಾದಂಬರಿಯಾದರೂ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪುರಾತತ್ವ ಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ ಮೊದಲಾದವುಗಳಲ್ಲಿ ಆಸಕ್ತಿ ಹೊಂದಿರುವವರು ವಿವರವಾಗಿ ವಿಶ್ಲೇಷಿಸಿ ಅವಲೋಕಿಸುತ್ತಾ ಓದುವಂತಹ ಸಂಗ್ರಹಯೋಗ್ಯ ಪುಸ್ತಕ ಎನಿಸಿತು. ಅಂದು ಹಾಗೆ ಇದು ನಾನೋದಿದ ಗಣೇಶಯ್ಯನವರ ಮೊದಲ ಕಾದಂಬರಿ. ಈವರೆಗೆ ಅದೇಕೆ ಇವರ ಬರಹಗಳನ್ನು ಓದಲಿಲ್ಲ ಎನ್ನುವ ಭಾವ ಕಾಡಿದ್ದು ಸುಳ್ಳಲ್ಲ.

(ಇದು ಪುಸ್ತಕದ ವಿಮರ್ಶೆಯಲ್ಲ. ಪುಸ್ತಕ ಓದಿದ ನಂತರ ನನಗನ್ನಿಸಿದ್ದನ್ನು ಅನಿಸಿಕೆಯಾಗಿ ಬರೆದಿರುವೆನಷ್ಟೇ)

ಮಂಗಳವಾರ, ಜುಲೈ 7, 2020

ಲೋಕರೀತಿ.....

ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಾಜಪೂತ್ ನಟನೆಯ ಇನ್ನೂ ಬಿಡುಗಡೆಯಾಗಬೇಕಿರುವ ಬಹು ನಿರೀಕ್ಷಿತ(ಆತನ ಸಾವಿನ ಕಾರಣ) 'ದಿಲ್ ಬೇಚಾರಾ' ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಯಿತು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದಿದೆ. ರೆಕಾರ್ಡ್ ಬ್ರೇಕಿಂಗ್ ಫಾಸ್ಟೆಸ್ಟ್ ಮಿಲಿಯನ್ ಲೈಕ್ಸ್, ಲಕ್ಷಾಂತರ ಶೇರ್ ಗಳು, ಹೊಗಳಿಕೆಗಳ ಅಬ್ಬರ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕಣ್ಣಿಗೆ ರಾಚುತ್ತಿದೆ. ಇವನ್ನೆಲ್ಲಾ ನೋಡಿದಾಗ ಬೇಡವೆಂದರೂ ಮನವನ್ನಾವರಿಸಿದ್ದು ಒಂದೇ ಪ್ರಶ್ನೆ........ ಇದೇ ಸುಶಾಂತ್ ಸಿಂಗ್ ರಾಜಪೂತ್ ಎಂಬ ಯಾವುದೇ ಗಾಡ್ ಫಾದರ್ಗಳಿಲ್ಲದ, ಸ್ವಸಾಮರ್ಥ್ಯದಿಂದ ಮೇಲೆ ಬಂದ ಹುಡುಗ ಇಂದು ನಮ್ಮ ನಡುವೆ ಬದುಕಿದ್ದಿದ್ದರೆ ಈ ಟ್ರೇಲರ್ ಇಷ್ಟೊಂದು ಸದ್ದು ಮಾಡುತ್ತಿತ್ತೇ......? 

ಪ್ರಾಯಶಃ ಇಲ್ಲ..... ಇದು ಆತನ ನಟನೆಯ ಕೊನೆಯ ಸಿನಿಮಾ ಎಂಬುದೇ 'ದಿಲ್ ಬೇಚಾರ' ಎಂಬ ಸಿನಿಮಾದ ಟ್ರೇಲರನ್ನು ಟ್ರೆಂಡಿಂಗ್ ಲಿಸ್ಟಿಗೆ ತಲುಪಿಸಿರುವುದು ಅನ್ನುವುದು ಅರಗಿಸಿಕೊಳ್ಳಲು ಕಠಿಣವಾದರೂ ಸತ್ಯ. ಬದುಕಿದ್ದಾಗ ಪ್ರತಿಭೆಗೆ ಸಿಗದ ಬೆಲೆ, ಮನ್ನಣೆ ಸತ್ತ ನಂತರ ಸಿಕ್ಕರೆಷ್ಟು ಬಿಟ್ಟರೆಷ್ಟು? ಈ ಖ್ಯಾತಿ, ಹೊಗಳಿಕೆ, ಆತನ ನಟನೆ ಹಾಗೂ ಹೃದಯವಂತಿಕೆಯ ಬಗೆಗಿನ ಸಾಲು ಸಾಲು ವಿಡಿಯೋ, ಪೋಸ್ಟ್, ಟ್ವೀಟ್ ಇತ್ಯಾದಿಗಳು ಅವನ ಅತ್ಯಾಪ್ತ ವಲಯದಲ್ಲಿ ಆತನ ಸಾವು ಸೃಷ್ಟಿಸಿದ ಖಾಲಿತನವನ್ನು ತುಂಬಬಲ್ಲದೇ? ಆತನ ಅನಿರೀಕ್ಷಿತ ಸಾವಿನ ಹಿನ್ನೆಲೆಯಲ್ಲಿ 'ದಿಲ್ ಬೇಚಾರ' ಸಿನಿಮಾಕ್ಕೆ ಸಿಗುತ್ತಿರುವ ಈ ಖ್ಯಾತಿ ಅದರ ನಿರ್ಮಾಪಕ, ನಿರ್ದೇಶಕ, ವಿತರಕರ ಜೇಬು ತುಂಬಿಸಬಹುದೇ ಹೊರತು ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಆ ತಂದೆಯ ಜೀವನಪರ್ಯಂತದ ನೋವನ್ನು, ತೆರೆಯ ಮೇಲೆ ಮಗನ ಮೊಗ ಕಂಡಾಗಲೆಲ್ಲಾ ಭಾರವಾಗುವ ಮನವನ್ನು ಸಾಂತ್ವನಿಸಬಲ್ಲದೇ? ಇದನ್ನು ಯೋಚಿಸುವಾಗ ಮೀನಾ ಕುಮಾರಿಯವರ ಸಾವಿನ ನಂತರದ 'ಪಾಕೀಜಾ಼' ಚಿತ್ರದ ಅಭೂತಪೂರ್ವ ಯಶಸ್ಸು ನೆನಪಾಗುತ್ತದೆ. 

ಬದುಕಿದ್ದಾಗ ತಿಳಿಯದ ವ್ಯಕ್ತಿಯ ಬೆಲೆ ಆತ ಕಣ್ಮರೆಯಾದ ನಂತರ ಅರಿವಿಗೆ ಬರುವುದು ವಿಪರ್ಯಾಸವಲ್ಲದೆ ಮತ್ತೇನು? ಒಬ್ಬ ವ್ಯಕ್ತಿ ಜೀವಂತವಿದ್ದಾಗಲೇ ಅವನ ಅಸ್ತಿತ್ವವನ್ನು ಮರೆತವರಂತೆ ವರ್ತಿಸಿ ಆತ ಅಳಿದ ಮೇಲೆ ಇಡೀ ಜಗಕ್ಕೆ ತಿಳಿಯುವಂತೆ ಶೋಕಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸುವ ನಮ್ಮ ರೀತಿ ಕನಸುಗಳ ಸಮಾಧಿಯ ಮೇಲೆ ಚಂದದ ಸ್ಮಾರಕ ಕಟ್ಟಿದಂತೆಯೇ ಅಲ್ಲವೇ?

ಶನಿವಾರ, ಜುಲೈ 4, 2020

ಪುಸ್ತಕ ವಿಮರ್ಶೆ - ವೈದೇಹಿಯವರ ಆಯ್ದ ಕಥೆಗಳು

ಪುಸ್ತಕದ ಹೆಸರು   : ಮೊದಲ ಓದು - ವೈದೇಹಿ       ಅವರ ಆಯ್ದ ಕಥೆಗಳು
ಪ್ರಕಾಶಕರು         : ಅಕ್ಷರ ಪ್ರಕಾಶನ, ಹೆಗ್ಗೋಡು
ಪ್ರಥಮ ಮುದ್ರಣ : 2006
ಪುಟಗಳು     : 108      ಬೆಲೆ    : 75 ರೂ

ಈ ಪುಸ್ತಕವನ್ನು ಪರಿಚಯಿಸುವ ಮೊದಲು 'ಮೊದಲ ಓದು' ಎಂಬ ಅದ್ಭುತ ಪುಸ್ತಕ ಮಾಲೆಯ ಬಗ್ಗೆ ಒಂದಿಷ್ಟು ಹೇಳಬಯಸುತ್ತೇನೆ. ಸಾಮಾನ್ಯವಾಗಿ ಓದುಗರು ತಮ್ಮ ಆಯ್ಕೆ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಆಯ್ದು ಓದುತ್ತಾರೆ. ಎಲ್ಲಾ ಲೇಖಕರು, ಎಲ್ಲಾ ಪ್ರಬೇಧದ ಬರಹಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಲೇಖಕರ ಬರವಣಿಗೆಯ ಶೈಲಿ, ಪ್ರಬೇಧ, ವಸ್ತುವಿಷಯ ಎಲ್ಲವನ್ನೂ ಗಮನಿಸಿ ಪುಸ್ತಕಗಳನ್ನು ಆರಿಸುವುದು ಕೊಂಚ ಕಠಿಣವಾದ ಕೆಲಸ. ಈ ನಿಟ್ಟಿನಲ್ಲಿ ಓದುಗರಿಗೆ ಬಹಳಷ್ಟು ಸಹಾಯ ಮಾಡಬಲ್ಲ ಪುಸ್ತಕ ಸರಣಿ ಈ 'ಮೊದಲ ಓದು'.

ಕರ್ನಾಟಕ ಸಾಹಿತ್ಯ, ರಂಗಭೂಮಿ ಹಾಗೂ ಪ್ರದರ್ಶನ ಕಲೆಗೆ ಅಪಾರ ಕೊಡುಗೆ ನೀಡಿರುವ, ನೀನಾಸಂ ಹಾಗೂ ಅಕ್ಷರ ಪ್ರಕಾಶನ, ಹೆಗ್ಗೋಡು ಸಂಸ್ಥೆಗಳ ಸಂಸ್ಥಾಪಕ ಮಹಾನ್ ಚೇತನ ದಿವಂಗತ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ಹೊರತಂದಿರುವ ಸರಣಿ ಪುಸ್ತಕ ಮಾಲಿಕೆ 'ಮೊದಲ ಓದು'. ಕನ್ನಡ ಸಾಹಿತ್ಯದ ಹೊಸ ಓದುಗರಿಗೆ ಇಲ್ಲಿನ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕೆಂಬುದು ಇದರ ಉದ್ದೇಶ. ಮೊದಲ ಕಂತಿನಲ್ಲಿ ತಲಾ 108 ಪುಟಗಳ 25 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.(ಪ್ರಸ್ತುತ ಈ 'ಮೊದಲ ಓದು' ಸರಣಿಯಲ್ಲಿ ನಲ್ವತ್ತೆಂಟು ಪುಸ್ತಕಗಳು ಪ್ರಕಟಗೊಂಡಿವೆ) ಹಳಗನ್ನಡ ಕಾವ್ಯಗಳಿಂದ ಹಿಡಿದು, ಹೊಸಗನ್ನಡದ ಕವಿತೆ, ಕಥೆ, ಬರಹಗಳು ಇದರಲ್ಲಿ ಸೇರಿವೆ. (ಮೊದಲ ಸರಣಿಯ ಇಪ್ಪತ್ತೈದು ಪುಸ್ತಕಗಳ ಪಟ್ಟಿಯನ್ನು ಫೋಟೋದಲ್ಲಿ ಹಾಕಿರುವೆ). ಆಯಾ ಕವಿ/ಸಾಹಿತಿಗಳ ಬರವಣಿಗೆಯ ಶೈಲಿ, ಪ್ರಕಾರಗಳ ಬಗ್ಗೆ ಅರಿಯಲು ಈ ಪುಸ್ತಕಗಳು ಓದುಗರಿಗೆ ಸಹಾಯ ಮಾಡುತ್ತವೆ. ತಲಾ ಎಪ್ಪತ್ತೈದು ರೂಪಾಯಿ ಬೆಲೆಯುಳ್ಳ ಇವು ನಿಜಕ್ಕೂ ಸಂಗ್ರಹಯೋಗ್ಯ ಪುಸ್ತಕಗಳು(ಹೊಸ ಅವತರಣಿಕೆಗಳ ಬೆಲೆ ನೂರು ರೂಪಾಯಿಗಳು ಇರಬೇಕು.)
ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾದ ಜಾನಕಿ ಶ್ರೀನಿವಾಸ ಮೂರ್ತಿ(ವಾಸಂತಿ) ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲೊಬ್ಬರು. ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಹೆಣ್ಣಿನ ಮನೋಲೋಕದ ಸೂಕ್ಷ್ಮಗಳನ್ನು ಯಾವುದೇ ಉತ್ಪ್ರೇಕ್ಷೆಗಳಿಲ್ಲದೇ ಚಿತ್ರಿಸುವುದರಲ್ಲಿ ಇವರು ಸಿದ್ಧಹಸ್ತರು. ಕುಂದಗನ್ನಡದ ಪ್ರಾದೇಶಿಕ ಸೊಗಡಿನಲ್ಲಿ ನಮ್ಮ ನಡುವಿನ ಅತೀ ಸಾಮಾನ್ಯ ಹೆಣ್ಮಕ್ಕಳ ಬದುಕು ಬವಣೆಗಳನ್ನು ಅತ್ಯಂತ ಸಮರ್ಥವಾಗಿ ಧ್ವನಿಸುತ್ತವೆ ಇವರ ಕಥನಗಳು. 

ಪ್ರಸ್ತುತ ಪುಸ್ತಕ ವೈದೇಹಿ ಅವರ ಎಂಟು ಕಥೆಗಳನ್ನು ಒಳಗೊಂಡಿದೆ (ಅಕ್ಕು, ಅವಲಂಬಿತರು, ಶಕುಂತಲೆಯೊಡನೆ ಕಳೆದ ಅಪರಾಹ್ನ, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಸೌಗಂಧಿಯ ಸ್ವಗತಗಳು, ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿಯೆಂಬ ನೆನಪು). ಈ ಎಂಟೂ ಕಥೆಗಳೂ ಪುರುಷ ಪ್ರಧಾನ ಸಮಾಜದಡಿಯಲ್ಲಿ ಉಡುಗುವ ಹೆಣ್ಣಿನ ದನಿಯನ್ನೂ, ಸಂಪ್ರದಾಯ ಕಟ್ಟಳೆಗಳ ಹೆಸರಿನಲ್ಲಿ ಬಂಧಿಯಾದ ಅವಳ ಒಳತೋಟಿಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ನಮ್ಮ ಕುಟುಂಬ, ನಮ್ಮ ಮನೆಯವರು, ನಮ್ಮ ಬಂಧುಗಳು ಎನ್ನುವ ಸಂಬಂಧಗಳೆಲ್ಲಾ ಒಂದು ಭದ್ರತೆಯ ಸುರಕ್ಷತಾ ಭಾವವನ್ನು ನೀಡುವಂತಹದ್ದು. ಆದರೆ ಆ ಕೌಟುಂಬಿಕ ವ್ಯವಸ್ಥೆಯೊಳಗೇ ಉಸಿರಾಡುವ ತಣ್ಣಗಿನ ಕ್ರೌರ್ಯವನ್ನು ಇಲ್ಲಿನ ಕಥೆಗಳು ತೆರೆದಿಡುವ ಪರಿ ಮೈನಡುಗಿಸುತ್ತದೆ. ಅಂದಿನ ಶಕುಂತಲೆಯಿಂದ ಹಿಡಿದು ಇಂದಿನ ಅಕ್ಕು, ಅಹಲ್ಯ, ಪುಟ್ಟಮ್ಮತ್ತೆ, ಕಮಲಾವತೀ, ಸೌಗಂಧಿ, ಅಮ್ಮಚ್ಚಿಯ ತನಕ ಎಲ್ಲರೂ ತಮ್ಮವರೆನಿಸಿಕೊಂಡವರಿಂದಲೇ ದಮನಿತರಾದವರು. ಕೆಲವರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಇನ್ನು ಕೆಲವರು ಮೌನವಾಗಿ ಸಹಿಸಿ ಹೊಂದಾಣಿಕೆಯನ್ನೇ ಬದುಕಾಗಿಸಿಕೊಂಡವರು. 
ಬಂಡಾಯದ ಧ್ವನಿಯಂತೆ ಕಾಣುವ ಅಕ್ಕುವಿನ ಮಾತುಗಳು ಲೋಕಕ್ಕೆ ಹುಚ್ಚು ಬಡಬಡಿಕೆಯಷ್ಟೇ. ಎಲ್ಲರೂ ಅವಳನ್ನು ಆಡಿಕೊಳ್ಳುವವರೇ. ಅವಳಿಗೆ ಮರುಳಿನ ಬಿರುದು ನೀಡುವ ಮನೆಯವರ ಉದ್ದೇಶ ಅವಳ ಮಾತಿನಲ್ಲಿನ ಸತ್ಯವನ್ನು ಭ್ರಾಂತಿಯ ಸೋಗಿನಲ್ಲಿ ಮುಚ್ಚಿಹಾಕುವುದಷ್ಟೇ ಆಗಿಬಿಡುತ್ತದೆ. 'ಅವಲಂಬಿತರು' ಸಣ್ಣ ವಯಸ್ಸಿನ ಅಹಲ್ಯೆಯ ಕನಸುಗಳನ್ನು ಅವಳ ಸುತ್ತಲಿನ ಜನರು ಚಿವುಟುವ ಪರಿಯನ್ನು ತೆರೆದಿಡುತ್ತಲೇ ಯಾರು ಯಾರ ಮೇಲೆ ಅವಲಂಬಿತರು ಎನ್ನುವ ಜಿಜ್ಞಾಸೆಯನ್ನು ಹುಟ್ಟಿಹಾಕುತ್ತದೆ.

ಸ್ವತಃ ಕೆ.ವಿ ಸುಬ್ಬಣ್ಣನವರೇ ರಚಿಸಿದ "ಲೋಕ ಶಾಕುಂತಲ" ನಾಟಕದಿಂದ ಪ್ರೇರಣೆ ಪಡೆದ 'ಶಕುಂತಲೆಯೊಂದಿಗೆ ಕಳೆದ ಅಪರಾಹ್ನ' ದುಷ್ಯಂತನಿಂದ ತಿರಸ್ಕೃತಳಾದ ಶಕುಂತಲೆಯ ಭಾವಾಂತರಂಗವನ್ನು ನಿರೂಪಿಸುತ್ತದೆ. ಅರಸೊತ್ತಿಗೆಯ ರಾಜಧರ್ಮದ ಹಮ್ಮಿನೊಳಗೆ ನರಳುವ ಹೆಣ್ಮನದ ಸೂಕ್ಷ್ಮಗಳು ಇಲ್ಲಿ ಸಮರ್ಥವಾಗಿ ಅನಾವರಣಗೊಂಡಿವೆ. ಧರ್ಮ, ದ್ವಂದ್ವ, ಶಾಪ ಮೊದಲಾದವುಗಳ ಸೋಗಿನಲ್ಲಿ ಪುರುಷ ಲಂಪಟತ್ವವನ್ನು ಮುಚ್ಚಿಡಲು/ಸಮರ್ಥಿಸಿಕೊಳ್ಳಲು ಹವಣಿಸುವ ಲೋಕರೀತಿಯನ್ನು ಪ್ರಶ್ನಿಸುತ್ತದೆ ಈ ಕಥೆ. 'ಪ್ರಪಂಚ ಇವತ್ತು ಕಾಳಿದಾಸನನ್ನು ನಂಬುವಷ್ಟು ಶಕುಂತಲೆಯನ್ನು ನಂಬುತ್ತದೆಯೇ" ಎನ್ನುವ ಶಕುಂತಲೆಯ ಪ್ರಶ್ನೆಗೆ ಉತ್ತರವಿದೆಯೇ ನಮ್ಮಲ್ಲಿ?

'ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು' ಎರಡು ತಲೆಮಾರಿನ ಜೀವಗಳ ಭಾವ ಸಂಘರ್ಷದೊಂದಿಗೆ ಅಂದಿಗೂ ಇಂದಿಗೂ ಪ್ರಾಯಶಃ ಮುಂದೆಂದಿಗೂ ಬದಲಾಗದೇನೋ ಎನ್ನಿಸುವ ಉಳ್ಳವರ ಕ್ರೌರ್ಯವನ್ನು ತೋರಿಸುತ್ತದೆ. ಪುಟ್ಟಮ್ಮತ್ತೆಯ ತಾಯಿ, ಪುಟ್ಟಮ್ಮತ್ತೆ ಹಾಗೂ ಅವಳ ಮಗಳು ಮೂವರದ್ದೂ ಹೆಚ್ಚು ಕಡಿಮೆ ಒಂದೇ ರೀತಿಯ ಬದುಕು ಹಾಗೂ ಚಿಂತನೆಗಳು. ತಮ್ಮ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಎಸೆದು ಬದುಕಿದವರು. ಶ್ರಮಜೀವಿಗಳಾಗಿಯೂ ಶೋಷಿತರಾದವರು ಆದರೆ ಅದನ್ನು ವಿರೋಧಿಸದೇ ಮೌನವಾಗಿ ಅಲೆಗಳೊಂದಿಗೆ ಈಜಿದವರು. ಆದರೆ ಪುಟ್ಟಮ್ಮತ್ತೆಯ ಮೊಮ್ಮಗಳು ಕಮಲಾವತೀ ಮಾತ್ರ ಇವರಂತಲ್ಲ. ಆಕೆ ಎಲ್ಲವನ್ನೂ ಸಹಿಸುವ ಮನಸ್ಥಿತಿಯವಳಲ್ಲ. ತನ್ನ ಬದುಕಿನ ಬಗ್ಗೆ ಕನಸು ಕಲ್ಪನೆಗಳನ್ನು ಹೆಣೆದವಳು. ಈ ಕಾರಣಕ್ಕೇ ಅವಳು ಎಲ್ಲರಿಗೂ ಆಡಿಕೊಳ್ಳುವ ವಸ್ತು. ಅತ್ತ ಆಸೆ ಆಕಾಂಕ್ಷೆಗಳೊಂದಿಗೆ ರಾಜಿಯಾಗಲೂ ಸಾಧ್ಯವಾಗದೇ ಇತ್ತ ಬದುಕನ್ನು ತನ್ನಿಷ್ಟದಂತೆ ಕಟ್ಟಿಕೊಳ್ಳಲೂ ಸಾಧ್ಯವಾಗದೇ ಕಡೆಗೆ ಉಳ್ಳವರ ಸಂಪತ್ತನ್ನು ವೃದ್ಧಿಸಿಕೊಡುವ ಸಾಧನ ಮಾತ್ರವಾಗುವ ಕಮಲಾವತೀ ಕಾಡುತ್ತಾಳೆ.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನ, ಉಮಾಶ್ರೀ ಹಾಗೂ ಎಂ.ಡಿ ಪಲ್ಲವಿ ಅವರ ಮುಖ್ಯ ಭೂಮಿಕೆಯಲ್ಲಿ 'ಗುಲಾಬಿ ಟಾಕೀಸ್' ಎಂಬ ಹೆಸರಿನಲ್ಲಿ ಸಿನಿಮಾ ಅಗಿರುವ 'ಗುಲಾಬಿ ಟಾಕೀಸು & ಸಣ್ಣ ಅಲೆಗಳು' ಸಂಪ್ರದಾಯದ ಹೆಸರಿನ ನಿಯಮ ಕಟ್ಟಳೆಗಳಲ್ಲಿ ಮುಳುಗಿದ ಪ್ರಾತಿನಿಧಿಕ ಊರೊಂದರಲ್ಲಿ ಹೊಸದಾಗಿ ಆರಂಭವಾಗುವ ಟಾಕೀಸ್ ಒಂದು ಸೃಷ್ಟಿಸುವ ಬದಲಾವಣೆಯ ತರಂಗಗಳನ್ನು ವಿವರಿಸುತ್ತದೆ. ಟಾಕೀಸಿಗೆ ಮಹಿಳೆಯರ ಬದಿಯ ಗೇಟ್ ಕೀಪರ್ ಆಗಿ ಲಿಲ್ಲೀಬಾಯಿ ನೇಮಕವಾಗುವುದರೊಂದಿಗೆ ಊರಿನಲ್ಲುಂಟಾಗುವ ಬದಲಾವಣೆಗಳೊಂದಿಗೇ ಗಂಡಸರೆದುರು ಬಾಯ್ತೆರೆಯಲು ಹೆದರುವ ಮನೆಯಿಂದ ಹೊರಗೆ ಕಾಲಿಡದ ಊರಿನ ಮಹಿಳೆಯರ ಪ್ರಪಂಚದಲ್ಲಾಗುವ ಕ್ರಾಂತಿಯನ್ನು ಬಹಳ ಸೊಗಸಾಗಿ ಈ ಕಥೆ ವಿವರಿಸುತ್ತದೆ.

ಕೌಟುಂಬಿಕ ಕ್ರೌರ್ಯದ ಅತೀ ಸೂಕ್ಷ್ಮ ಪ್ರಕಾರವೊಂದನ್ನು ಹೆಣ್ಣಿನ ಅಂತರಾಳದ ಬಯಕೆಗಳು ಹಾಗೂ ಅವಳನ್ನು ಸಮಾಜಕ್ಕೆ ತೆರೆದುಕೊಳ್ಳಲು ಬಿಡದ ಕಟ್ಟಳೆಗಳ ಸಮೇತ ತೆರೆದಿಡುವ 'ಸೌಗಂಧಿಯ ಸ್ವಗತಗಳು' ಮನವನ್ನು ಆರ್ದ್ರಗೊಳಿಸುತ್ತದೆ. ಮಗಳ ಬದುಕಿನ ಎಲ್ಲಾ ನಿರ್ಧಾರಗಳೂ ತಮ್ಮ ಅಧೀನವೇ ಎಂದುಕೊಳ್ಳುವ ಹೆತ್ತವರ ನಿರ್ಧಾರಗಳಿಗೆ ತಲೆಕೊಟ್ಟ ಸುಗಂಧಿ, ಚಿಕ್ಕಂದಿನಿಂದಲೂ ಒಂದು ಕಟ್ಟಳೆಯೊಳಗೇ ಬಂಧಿಯಾಗಿ ತನ್ನೊಳಗಿನ ತನ್ನನ್ನು ಪಂಜರದೊಳಗೆ ಬಂಧಿಸಿಕೊಂಡಿರುವ ಅವಿವಾಹಿತೆ ಸುಗಂಧಿ, ಈಗ ಬದಲಾಗಬೇಕೆನಿಸಿದರೂ ಸಾಧ್ಯವಾಗದೇ ಒಳಗೊಳಗೇ ಕಾಮನೆಗಳನ್ನು ಕೊಂದುಕೊಂಡು ನರಳುವ ಸುಗಂಧಿ ಅಂತರಂಗವನ್ನು ಕಲುಕುತ್ತಾಳೆ.

ಒಂದು ಮದುವೆ ಮನೆಯಲ್ಲಿ ನೆರೆದ ಹೆಂಗೆಳೆಯರ ಸಂಭಾಷಣೆಗಳ ಸಾರಾಂಶದಂತೆ ತೋರುವ 'ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ' ವಿವಿಧ ವ್ಯಕ್ತಿತ್ವಗಳ ಅನಾವರಣದಂತೆ ಕಾಣುತ್ತದೆ. ಮದುವೆ ಮನೆಯಲ್ಲಿ ಉಪಸ್ಥಿತಳಿದ್ದ ಸಮಾಜಶಾಸ್ತ್ರದ ವಿದ್ಯಾರ್ಥಿನಿಯೊಬ್ಬಳ ನೋಟದಲ್ಲಿ ಅಲ್ಲಿನ ಹೆಂಗಸರ ನಡುವಣ ಮಾತುಕತೆಗಳನ್ನು ವಿಶ್ಲೇಷಿಸುವ ಈ ಕಥೆ ಹತ್ತು ಹಲವು ವಿಚಾರಗಳ ಸುತ್ತ ಗಿರಕಿ ಹೊಡೆಯುತ್ತದೆ.

ಸಂಕಲನದ ಕೊನೆಯ ಕಥೆ 'ಅಮ್ಮಚ್ಚಿಯೆಂಬ ನೆನಪು' ಮಹಾಲಕ್ಷ್ಮಿ ಎಂಬ ಪುಟ್ಟ ಬಾಲೆಯ ಮನದ ಭಿತ್ತಿಯಲ್ಲಿ ಅಚ್ಚಾದ ಅಮ್ಮಚ್ಚಿಯ ಕಥನ. ಸ್ವತಂತ್ರವಾಗಿ ಹಾರಾಡುವ ಸ್ವಚ್ಛಂದ ಮನದ ಅಮ್ಮಚ್ಚಿ, ಮಗಳ ಮನವನ್ನು ಅರಿಯದ ಸೀತತ್ತೆ, ಅವಳನ್ನು ಪಂಜರದಲ್ಲಿ ಬಂಧಿಸಲು ಹವಣಿಸುವ ವೆಂಕಪ್ಪಯ್ಯ ಇಲ್ಲಿನ ಪ್ರಧಾನ ಪಾತ್ರಗಳು. ಅಮ್ಮಚ್ಚಿ ತನ್ನ ಸ್ವತ್ತೆಂಬಂತೆ ವರ್ತಿಸುವ ವೆಂಕಪ್ಪಯ್ಯ, ಅವನ ತಾಳಕ್ಕೆ ತಕ್ಕಂತೆ ಕುಣಿಯುವ ತಾಯಿಯನ್ನು ವಿರೋಧಿಸುವ, ನೋವು ಸಿಟ್ಟು ಸೆಡವನ್ನೆಲ್ಲಾ ಕಣ್ಣ ಹೊಳಪಿನಲ್ಲಿ ಅಡಗಿಸಿ ನಗುವ ಅಮ್ಮಚ್ಚಿ ಕಥೆಯ ಕೊನೆಯಲ್ಲಿ ಸ್ತ್ರೀ ಸ್ವಾತಂತ್ರ್ಯದ ಪ್ರತೀಕವೆನಿಸುತ್ತಾಳೆ. 

ಇಲ್ಲಿನ ಎಲ್ಲಾ ಕಥೆಗಳೂ ಬರೀ ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯವನ್ನಷ್ಟೇ ಧ್ವನಿಸುವುದಿಲ್ಲ. ಅದನ್ನು ಬೆಂಬಲಿಸುವ ಭಾನು, ಶಾರದೆ, ದೊಡ್ಡತ್ತೆ, ಸುಗಂಧಿಯ ತಾಯಿ, ಸೀತತ್ತೆ ಮೊದಲಾದವರ ಮೂಲಕ ಆ ಕ್ರೌರ್ಯದೊಳಗೆ ಪಾಲುದಾರರಾಗಿ ಸ್ವತಃ ಮಹಿಳೆಯರೂ ನಿಂತಿದ್ದಾರೆ ಎಂಬುದನ್ನೂ ತೋರಿಸುತ್ತದೆ. ಇನ್ನು ಕುಂದಗನ್ನಡದ ಭಾಷಾ ಸೊಗಡಿನ ಸ್ವಾದವನ್ನು ಓದಿಯೇ ಸವಿಯಬೇಕು.

(ಇವುಗಳಲ್ಲಿ ಅಮ್ಮಚ್ಚಿಯೆಂಬ ನೆನಪು, ಅಕ್ಕು ಹಾಗೂ ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು ಈ ಮೂರು ಕಥೆಗಳನ್ನು ಸೇರಿಸಿ ಚಂಪಾ ಶೆಟ್ಟಿಯವರು 'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ನಿರ್ದೇಶಿಸಿದ್ದಾರೆ. ವೈಜಯಂತಿ ಅಡಿಗ, ದೀಪಿಕಾ ಆರಾಧ್ಯ, ರಾಧಾಕೃಷ್ಣ ಊರ್ಲ, ರಾಜ್ ಶೆಟ್ಟಿ ಮೊದಲಾದವರು ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾವನ್ನು ಖುದ್ದು ವೈದೇಹಿ ಅವರೇ ನಿರೂಪಿಸಿದ್ದಾರೆ. ಈ ಸಿನಿಮಾ ಕೂಡಾ ಪುಸ್ತಕದಷ್ಟೇ ಸೊಗಸಾಗಿದೆ.)

ಗುರುವಾರ, ಜುಲೈ 2, 2020

ಅವರೋಹಣ

ಈ ಜಗ ಸೋಜಿಗ ಬಲು ಡಾಂಭಿಕ ಇಲ್ಲಿನ ಲೆಕ್ಕಾಚಾರ

ಮಾತಿಗೂ ಕೃತಿಗೂ ಸಂಬಂಧವಿಲ್ಲದ ಜೀವನವಿದು ಆತ್ಮವಂಚನೆ 

ಎದುರಿಗೊಂದು ನೀತಿ ಬೆನ್ನ ಹಿಂದೆ ಬೇರೆಯದೇ ರೀತಿ ನಯವಂಚನೆ

ಸಕಲವೂ ತೋರಿಕೆ ಭಾವಗಳ ಸೋರಿಕೆ ಬದುಕೇ ಆಡಂಬರದ ಪ್ರದರ್ಶನ

ಅಂಕೆಗಳಲಿನ ಗಳಿಕೆಯೊಂದೇ ಪ್ರಧಾನ ಆತ್ಮವೇ ಬಿಖರಿಯಾದದ್ದು ನಿದರ್ಶನ

ನಾ ಮೇಲು ತಾ ಮೇಲು ಎಂಬ ದೊಂಬರಾಟದೊಳು ಜ್ಞಾನಕ್ಕೂ ಪಕ್ಷಪಾತ

ಅರಿವಿಗೂ ತಾರತಮ್ಯದ ಅರಿವೆ ತೊಡಿಸಿರೆ ಮೌಲ್ಯಗಳ ಉಲ್ಕಾಪಾತ 

ಇದುವೇ ಅಧಃಪತನದ ಹಾದಿ 

ಇದುವೇ ಅವಸಾನಕ್ಕೆ ನಾಂದಿ