ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 7

ರಾಕಾ ಮೀಟ್ಸ್ ಆರ್.ಡಿ......... ರುದ್ರ್‌ ದೇವ್ 

ನಾನು ರಾಕಾನ ದಂಧೆಯ ಆಳಕ್ಕಿಳಿದು ಅವನ ಸಂಪತ್ತು, ಅಧಿಕಾರದ ಮೂಲ ಶೋಧಿಸುವ ಹುಕಿಗೆ ಬಿದ್ದು ಅದಕ್ಕೊಂದು ಹಾದಿಯ ಹುಡುಕಾಟದಲ್ಲಿದ್ದೆ. ಇಂತಹ ಸಂದರ್ಭದಲ್ಲಿ ಅರಸುತ್ತಿದ್ದ ಬಳ್ಳಿ ಕಾಲಿಗೇ ತೊಡರಿದಂತೆ ಅದೊಂದು ಸಂಜೆ ರಾಕಾ ನನ್ನನ್ನು ಭೇಟಿಯಾಗಿದ್ದ.....!!

ಇಲ್ಲಿಯವರೆಗೆ ಯಾರೊಬ್ಬರನ್ನೂ ವೈಯಕ್ತಿಕವಾಗಿ ಭೇಟಿ ಮಾಡದ ರಾಕಾ......
ಇಡೀ ಕಲ್ಕತ್ತೆಯನ್ನು ಕಿರು ಬೆರಳಿನಲ್ಲಿ ಕುಣಿಸಬಲ್ಲ ತಾಕತ್ತಿರುವ ರಾಕಾ......
ಪಶ್ಚಿಮ ಬಂಗಾಳದ ರಾಜಕೀಯದ ನೀಲಿನಕ್ಷೆ ಬದಲಾಯಿಸಬಲ್ಲ ರಾಕಾ......

ದಿ ಗ್ರೇಟ್ ರಾಜನಾಥ್ ಕೀರ್ತನಿಯಾ......

ನನ್ನನ್ನು ಮತ್ತು ಕೇವಲ 'ನನ್ನನ್ನು' ಭೇಟಿಯಾಗಲು ಬಂದಿದ್ದ.....!! 

ಈ ಭೇಟಿ ನನಗೆ ಗುರಿಗೆ ಹತ್ತಿರವಾದ ಸಂತಸದೊಂದಿಗೆ, ಅನುಮಾನವನ್ನೂ ಹೊತ್ತು ತಂದಿತ್ತು. ಏಕೆಂದರೆ ಅವನು ರಾಕಾ.... ಹೆಸರು ರಾಜನಾಥ್ ಆದರೂ ಆತ ರಕ್ಕಸಾಧಿಪತಿ. ದಯೆ, ಕರುಣೆ, ಪ್ರೀತಿ, ಮಾನವೀಯತೆ ಎಂಬ ಪದಗಳು ಅವನ ಪ್ರಪಂಚದಲ್ಲೇ ಇಲ್ಲ. ಅವನ ಜಗವನ್ನು ಆಳುವುದು ಕೇವಲ ಮತ್ತು ಕೇವಲ ಕ್ರೌರ್ಯವೊಂದೇ. ಮನುಜ ರೂಪದಲ್ಲಿ ಇರುವುದೊಂದನ್ನು ಬಿಟ್ಟರೆ ಮನುಜನೆನಿಸಿಕೊಳ್ಳುವ ಯಾವುದೇ ಲಕ್ಷಣಗಳಿಲ್ಲದ ಸೈತಾನ ಅವನು. ಅದಕ್ಕೇ ಅವನ ಸುದ್ದಿಗೆ ಹೋಗಲೇಬೇಡವೆಂದು ಅಶ್ರಫ್ ನನ್ನನ್ನು ಪದೇಪದೇ ಎಚ್ಚರಿಸುವುದು. ಇಂತಹ ರಾಕಾ ನನ್ನನ್ನು ಭೇಟಿಯಾಗಲು ಹುಡುಕಿಕೊಂಡು ಬಂದಿರುವ ಎಂದರೆ ಅನುಮಾನ ಪಡಬೇಕಾದದ್ದೇ ತಾನೇ...?

ಅದೊಂದು ಇಳಿಸಂಜೆಯಲ್ಲಿ ನಮ್ಮ ಬಿಡಾರದಿಂದ ಅನತಿ ದೂರದಲ್ಲಿ ಬಂದು ನಿಂತಿತ್ತು ಕಡುಗಪ್ಪು ಕಾಂಟೆಸ್ಸಾ. ರಾಕಾನ ಅಚ್ಚುಮೆಚ್ಚಿನ ಕಾರದು. ಅದು ಬಂದ ಮೇಲೆ ಅವನ ಅದೃಷ್ಟ ಖುಲಾಯಿಸಿದ್ದಂತೆ, ಅವನು ಮುಟ್ಟಿದ್ದೆಲ್ಲಾ ಚಿನ್ನವೇ ಅಂತೆ..... ಹೀಗೆ ಏನೇನೋ ಅಂತೆ ಕಂತೆಗಳು ಚಾಲ್ತಿಯಲ್ಲಿವೆ ಆ ಕಾರಿನ ಬಗ್ಗೆ....... ಸಿರಿವಂತರಿಗೆ ಕಾರುಗಳೂ ಅದೃಷ್ಟವನ್ನು ಹೊತ್ತುತರುತ್ತವೆ. ಅದರ ಬಗ್ಗೆ ಪ್ರತೀತಿಗಳು ಸೃಷ್ಟಿಯಾಗುತ್ತವೆ. ಆದರೆ ನಿಜವಾಗಿಯೂ ಅದೃಷ್ಟ ಆ ಕಾರಿನದ್ದೇ...? ಖಂಡಿತಾ ಅಲ್ಲ.... ನಮ್ಮಂತಹವರ ರಕ್ತ ಹಿಂಡಿ ಬಸಿದು, ನಮ್ಮನ್ನು ದುರಾದೃಷ್ಟವಂತರನ್ನಾಗಿಸಿ ಪಡೆದ ಅದೃಷ್ಟ ಅದು. ಒಂದರ್ಥದಲ್ಲಿ ಅದು ನಮ್ಮ ಅದೃಷ್ಟ.... ನಮ್ಮಿಂದ ಕಿತ್ತುಕೊಂಡ ನಮ್ಮದೇ ಅದೃಷ್ಟ ಅದು..... ಯೋಚಿಸಿದಷ್ಟೂ ಕೋಪದ ತಾಪಕ್ಕೆ ಮೈ ಬಿಸಿಯೇರುತ್ತದೆ ನನಗೆ. 

ಅವನ ಕಾರು ಕಂಡದ್ದೇ, ಕೊಳೆತ ಕಳೇಬರಕ್ಕೆ ಮುತ್ತಿರುವ ಕ್ರಿಮಿಗಳಂತೆ ರಾಕಾನ ಚೇಲಾಗಳೆಲ್ಲರೂ ಎದುರು ಹಾಜರಾಗಿ ಕೈ ಕಟ್ಟಿ ನಿಂತರು ಅವನಾಜ್ಞೆ ಕಾಯುತ್ತಾ. ಅಷ್ಟರಲ್ಲಿ ಕಾರಿನ ಹಿಂಬದಿಯ ಗಾಜು ಇಳಿಯಿತು. ಅವರಲ್ಲೊಬ್ಬನನ್ನು ಸನ್ನೆಯಿಂದ ಬಳಿಕರೆದು ಅದೇನು ಹೇಳಿ ಕಳಿಸಿದನೋ, ಅವನು ಬಂದು ನನ್ನ ಕರೆದ. ನನಗೇನು ಭಯವೇ?? ಸೀದಾ ಹೋಗಿ ಅವನೆದುರು ನಿಂತು ಅವನನ್ನೇ ದಿಟ್ಟಿಸಿದೆ. ಅಹಂಕಾರ ಬೆರೆತ ಕಣ್ಣುಗಳಲ್ಲಿ ಚಂಚಲತೆ ಬಹಳವಿದೆ ಎನಿಸಿತು ನನಗೆ. 

ಸುತ್ತ ನಿಂತಿದ್ದವರಿಗೆ ಕಣ್ಣಿನಲ್ಲೇ ಅಲ್ಲಿಂದ ತೆರಳುವಂತೆ ಸಂಜ್ಞೆ ನೀಡಿದನೇನೋ, ಡ್ರೈವರ್ ಸಮೇತ ಎಲ್ಲರೂ ಅಲ್ಲಿಂದ ತೆರಳಿದರು. ಕಾರಿನಿಂದ ಕೆಳಗಿಳಿದವನ ಗರಿಮುರಿ ಕೋಟು, ಮಿರಿಮಿಂಚುವ ಬೂಟುಗಳು ಅವನ ದೌಲತ್ತನ್ನು ತೋರಿಸಿಕೊಳ್ಳುವುದಕ್ಕೇನೋ.... ಇಳಿದು ಕಾರಿಗೊರಗಿದವ ಜೇಬಿಂದ ಸಿಗಾರ್ ತೆಗೆದವ ನನ್ನತ್ತ ಚಾಚಿದ. ಬೇಡವೆಂದು ತಲೆಯಾಡಿಸಿ ಸನ್ನೆ ಮಾಡಿದೆ. ನನ್ನನ್ನೇ ನೋಡುತ್ತಾ ಸಿಗಾರ್ ತುಟಿಗಿಟ್ಟು ಲೈಟರ್ ಸೋಕಿಸಿ ಹೊಗೆಯುಗುಳತೊಡಗಿದ. ನನ್ನನ್ನು ಪರಿಶೀಲನಾತ್ಮಕವಾಗಿ ಅಳೆಯುವವನಂತೆ ಕಂಡ. ನಾನಂತೂ ಅವನಿಂದ ನೋಟ ತಪ್ಪಿಸಲಿಲ್ಲ. ನೋಟ ತಪ್ಪಿಸುವ ಅಗತ್ಯವಾದರೂ ಏನು? ಕೊಂಚ ಸಮಯ ಬಿಟ್ಟು,

"ತೋಮಾರ್ ನಾಮ್ ಕೀ?" ಎಂದ.

ಎಲಾ ಇವನಾ.....? 
ಹೆಸರೇ ಗೊತ್ತಿಲ್ಲದೇ ನನ್ನನ್ನೇ ಹುಡುಕಿ ಮಾತಾಡಲು ಬಂದಿರುವನಾ? ಖಂಡಿತಾ ಇಲ್ಲ. ಗೊತ್ತಿದ್ದೂ ಕೇಳುತ್ತಿರುವನು..... ಸಿಟ್ಟು ಏರುತ್ತಲೇ ಇತ್ತು. ಆದರೇನು? ತೋರಿಸಿಕೊಳ್ಳುವಂತಿರಲಿಲ್ಲ. ಕೋಪವನ್ನು ನಿಯಂತ್ರಿಸುತ್ತಲೇ,

"ಆರ್.ಡಿ" ಎಂದೆ.

"ಆರ್.ಡಿ ಬೋಲೇ ತೋ...?" 

"ರುದ್ರ್ ದೇವ್" ಎಂದೆ ದನಿ ಏರಿಸುತ್ತಾ.

"ರುದ್ರ್ ..... ಧಮ್ದಾರ್ ನಾಮ್ ಹೈ. ಸುನಾ ಹೇ ಕೀ ಬಹುತ್ ಗುಸ್ಸೇವಾಲಾ ಹೈ ತೂ?" ಅವನ ಮಾತಿಗೆ ಪ್ರತಿಕ್ರಿಯಿಸಲಿಲ್ಲ ನಾನು. ಹೌದು.... ಕೋಪಿಷ್ಟನೇ ನಾನು. ಮುಂಚಿನಿಂದಲೂ ಇದ್ದ ಕೋಪ, ಸೆಡವು ಈಗೀಗ ಇನ್ನಷ್ಟು ಹೆಚ್ಚಾಗಿತ್ತು. 'ಅದ್ಯಾವ ಘಳಿಗೆಯಲ್ಲಿ ನಿನಗೆ ರುದ್ರನೆಂದು ಹೆಸರಿಟ್ಟೆನೇನೋ.... ಹೆಸರಿಗೂ ಮೀರಿದ ರೌದ್ರತೆ ತೋರುವೆ ನೀನು' ಎಂದು ಬಿರ್ಜೂ ಚಾಚ ಯಾವಾಗಲೂ ಹೇಳುತ್ತಿರುತ್ತಾನೆ. ಆದರೆ ಪರಿಸ್ಥಿತಿಗಳ ಕಾರಣದಿಂದ ಅನಿವಾರ್ಯವಾಗಿ ಶಾಂತನಾಗಿರುವೆ ನಾನು. ಒಮ್ಮೆ ಈ ರಾಕಾನ ವ್ಯವಹಾರಗಳ ಗುಟ್ಟು ತಿಳಿಯಲಿ... ಆಮೇಲೆ ಇವನ ಕಾಂಟೆಸ್ಸಾ ಕಾರಿನ ಅದೃಷ್ಟವೂ ಇವನನ್ನು ಕಾಯಲಾರದು.... ಮುಷ್ಟಿ ಬಿಗಿಯಾಗಿಸಿ ಯೋಚಿಸಿದೆ.

"ಅರೇ ರುದ್ರ್, ಇತನಾ ಗುಸ್ಸಾ ಮತ್ ಕರ್. ದೇಖ್..... ಆಜಾ ಇದರ್. ಯೇ ಮೇರೇ ಲಡ್ಕೋ ಸೇ ಬಹುತ್ ಸುನಾ ಹೈ ತೇರೇ ಬಾರೇ ಮೆ. ತೂ ಶೇರ್ ಹೈ ಶೇರ್...... ಅಗರ್ ತೂ ಮೇರಾ ಬಾತ್ ಮಾನೇಗಾ ತೋ ಆಜ್ಸೇ ತೇರಾ ಸ್ಟಾರ್ ಬದಲೇಗಾ. ಮೈ ತೇರೇ ಸಾಥ್ ಏಕ್ ಡೀಲ್ ಕೇ ಬಾರೆ ಮೇ ಬಾತ್ ಕರನೇ ಆಯಾ ಹೂಂ" ಅವನ ಮಾತು ಕೇಳಿದ್ದೇ ಇವನಿಗೆ ನನ್ನಿಂದ ಏನೋ ಆಗಬೇಕಾಗಿದೆ ಎಂಬುದು ಸ್ಪಷ್ಟವಾಗಿತ್ತು ನನಗೆ‌.

ಅವನೊಂದು ಡೀಲ್ ಹೊತ್ತು ತಂದಿದ್ದ. ಅವನ ಅಡಿಯಲ್ಲಿ ಕೆಲಸಗಾರನಾಗಿರುವ ಬದಲು, ಅವನ ವ್ಯವಹಾರಗಳಲ್ಲಿ ನೇರವಾಗಿ ಕೈಜೋಡಿಸುವ ಡೀಲ್ ಅದು. ನನ್ನ ಬುದ್ಧಿ ಹಾಗೂ ಕುಶಾಗ್ರಮತಿಯಿಂದ ಆಕರ್ಷಿತನಾಗಿದ್ದ ರಾಕಾ. 'ತನ್ನೆಲ್ಲಾ ವ್ಯವಹಾರಗಳಲ್ಲಿ ನೆರವಾಗಿ, ತಾನು ಹೇಳುವ ಎಲ್ಲಾ ಕೆಲಸಗಳನ್ನು ಮರುಪ್ರಶ್ನೆಯಿಲ್ಲದೇ ಮಾಡಬೇಕು, ಆದರೆ ಯಾವುದೇ ವಿಚಾರವನ್ನೂ ಕೆದಕುವಂತಿಲ್ಲ. ಕಣ್ಮುಂದೆ ಕೊಲೆ ನಡೆದರೂ ಕುರುಡನಂತಿರುವಷ್ಟು ಸ್ವಾಮಿನಿಷ್ಠೆ ಇರಬೇಕು. ಈ ಮಾತಿಗೆ ತಪ್ಪಿದರೆ ಸಾವು....' ಎಂಬುದು ಅವನ ಡೀಲ್. 

ಇಂತಹದೊಂದು ಪ್ರಸ್ತಾಪ ತಂದ ರಾಕಾನಿಗೆ ಖಂಡಿತಾ ನನ್ನ ಇರಾದೆಗಳ ಅರಿವಿರಲಿಲ್ಲ. ಅರಿವಿದ್ದಿದ್ದರೆ ಅಶ್ರಫ್ ಹೇಳಿದಂತೆ ಅದೇ ನನ್ನ ಬದುಕಿನ ಕೊನೆಯ ದಿನವಾಗುತ್ತಿತ್ತು. ನನಗೆ ಈ ಡೀಲ್ ನಿರಾಕರಿಸಲು ಕಾರಣವೇ ಇರಲಿಲ್ಲ. ಮರುಮಾತಾಡದೇ ರಾಕಾನೊಂದಿಗೆ ಕೈ ಮಿಲಾಯಿಸಿದ್ದೆ..... ನನ್ನ ಗುರಿ ತಲುಪಲು ನೇರವಾದ ರಾಜಮಾರ್ಗವನ್ನು ತಯಾರಿಸಿ ಕೊಟ್ಟಿರುವ ಅರಿವಿಲ್ಲದೇ 'ಯಾರನ್ನಾದರೂ ಮಣಿಸಬಲ್ಲೆ' ಎಂಬ ಅದೇ ಗರ್ವದ ನಗು ನಕ್ಕಿದ್ದ ರಾಕಾ. ಅವನ ಈ ಒಂದು ನಿರ್ಧಾರ ಸರಿಯಿತ್ತೋ ಇಲ್ಲಾ ಅದೇ ಅವನನ್ನು ಅವಸಾನದೆಡೆಗೆ ಕೊಂಡೊಯ್ಯಲಿತ್ತೋ ಕಾಲವೇ ಉತ್ತರಿಸಬೇಕಿತ್ತು.

ಆದರೆ ನಾನು ಈ ಡೀಲ್ ಒಪ್ಪಿಕೊಂಡಿದ್ದು ಅಶ್ರಫ್ ಹಾಗೂ ಬಿರ್ಜೂ ಚಾಚಾನಿಗೆ ಒಂದಿನಿತೂ ಹಿಡಿಸಲಿಲ್ಲ. ನನ್ನ ಇರಾದೆಗಳ ಸುಳಿವಿದ್ದ ಅಶ್ರಫನಿಗೆ ನನ್ನ ಜೀವದ ಬಗ್ಗೆ ಭಯವಿತ್ತು, ನನ್ನ ಸಲುವಾಗಿ ತೀರದ ಕಾಳಜಿಯಿತ್ತು. ನನಗೆ ತಿಳಿಹೇಳಲು ಪ್ರಯತ್ನಿಸಿದ, ಬೈದು ಗಲಾಟೆ ಮಾಡಿದ, ಕೆಲವು ಸಮಯ ಮಾತನಾಡುವುದನ್ನೂ ನಿಲ್ಲಿಸಿದ. ಅವನ ನೋವು, ಕಾಳಜಿ, ಭಯ ನನಗೆ ಅರಿವಾಗಲಿಲ್ಲವೆಂದಲ್ಲ. ಆದರೆ ಯಾವುದೇ ಕಾರಣಕ್ಕೂ ತಾನಾಗಿ ಅರಸಿಬಂದ ಈ ಅವಕಾಶವನ್ನು ಕೈಚೆಲ್ಲಲು ನಾನು ತಯಾರಿರಲಿಲ್ಲ. ನಿಮಗನಿಸಬಹುದು..... ರಾಕಾನ ದರ್ಪ, ದೌಲತ್ತು, ಅಧಿಕಾರಗಳನ್ನು ಕೈವಶ ಮಾಡಿಕೊಳ್ಳುವ ಹಪಾಹಪಿಗೆ ನಾನು ಹೀಗೆಲ್ಲಾ ಮಾಡುತ್ತಿದ್ದೇನೆ ಎಂದು. ನಿಜವಲ್ಲ ಅದು..... 

ಈ ಜಗದಲ್ಲಿ ಕಣ್ತೆರೆದ ಘಳಿಗೆಯಿಂದ ಹೀಗೇ ಬದುಕಿರುವೆ ನಾನು. ಚಿಲ್ಲರೆ ಕಾಸಿಗಾಗಿ ಕಂಡವರೆದುರು ಕೈಚಾಚುವಾಗ, ತುತ್ತು ಕೂಳಿಗಾಗಿ ರಾಕಾನಂತಹವರ ಮರ್ಜಿ ಕಾಯುವಾಗ ಅದೆಷ್ಟು ಹಿಂಸೆಯಾಗುತ್ತದೆಯೆಂಬ ಅರಿವು ನಿಮಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಅತ್ಯಂತ ಉನ್ನತವಾದುದು ಅವನ ಆತ್ಮಸಮ್ಮಾನ. ಆ ಆತ್ಮಾಭಿಮಾನವನ್ನೇ ಕಳೆದುಕೊಂಡು ಇನ್ನೊಬ್ಬರೆದುರು ಕೈಚಾಚುವಾಗ ಆಂತರ್ಯದಲ್ಲಾಗುವ ನೋವು ಅಪಾರ. ಇಷ್ಟು ವರ್ಷಗಳ ಬದುಕಿನಲ್ಲಿ ನಾನು, ಅಶ್ರಫ್, ಬಿರ್ಜೂಚಾಚ.... ನಮ್ಮಂತಹ ಲಕ್ಷಾಂತರ ಮಂದಿ ಅನುಭವಿಸಿರುವ ಯಾತನೆ ನಮ್ಮ ಗ್ರಹಿಕೆಗೆ ಮಾತ್ರ ಬರುವಂತಹದ್ದು. ಮುಂದೆಯೂ ಹೀಗೇ ಬದುಕುವ ಆಸೆಯಿರಲಿಲ್ಲ ನನಗೆ. ನಮ್ಮ ಬದುಕು ಇದೇ ಬಿಡಾರದಲ್ಲೇ ಕೊನೆಯಾಗಕೂಡದು. ನಾವು ಇಲ್ಲಿಂದ ಹೊರಬೀಳಬೇಕು. ಈ ಪರಿಮಿತಿಗಳನ್ನು ದಾಟಿ ಬದುಕಬೇಕು. ನಾವು ಬೆಳೆಯಬೇಕು. ನಮಗಾಗಿ ಬಾಳಬೇಕು. ಆತ್ಮಸಮ್ಮಾನದಿಂದ ಬದುಕಬೇಕು. ಆತ್ಮಾಭಿಮಾನದಿಂದ ಸಮಾಜದಲ್ಲಿ ತಲೆಎತ್ತಿ ಬದುಕಬೇಕು. 

ಇದೆಲ್ಲಾ ವಿಚಾರಗಳನ್ನು ಹೇಳಿದರೆ ಅಶ್ರಫ್ ನಕ್ಕು ಸುಮ್ಮನಾಗುತ್ತಿದ್ದನಷ್ಟೇ. ಹಾಗಾಗಿ ಅವನ ಕೋಪವನ್ನು ಎದುರಿಸಿಯೂ ನಾನು ಈ ಡೀಲಿನ ವಿಚಾರದಲ್ಲಿ ತಟಸ್ಥನಾಗಿದ್ದೆ. ಅವನೂ ಒಂದಿಷ್ಟು ದಿನ ಎಲ್ಲಾ ವಿಧದಲ್ಲೂ ನನ್ನ ನಿರ್ಧಾರ ಬದಲಿಸಲು ಪ್ರಯತ್ನಿಸಿ ಸುಮ್ಮನಾದ‌. ಆದರೆ ಅದೇಕೋ ಬಿರ್ಜೂ ಚಾಚ ಮಾತ್ರ ಬಹಳ ಖೇದಗೊಂಡಿದ್ದ. "ನಕ್ಕೋ ರುದ್ರ್ ಬೇಟಾ... ಏ ಸಬ್ ಛೋಡ್ ದೋ. ಏ ಲೋಗ್ ಗಲತ್ ಹೈ. ಇನಕೇ ಇರಾದೇ ಭೀ ಗಲತ್. ಭಗವಾನ್ ಪರ್ ಭರೋಸಾ ರಕೋ..." ಎಂಬುದು ಆತನ ನಿತ್ಯದ ಪರಿಪಾಠವಾಯ್ತು. ನನ್ನ ಕಂಡಾಗಲೆಲ್ಲಾ ಇದನ್ನೇ ಹೇಳುತ್ತಿದ್ದ. ನನ್ನ ಮಾತನ್ನು ಒಪ್ಪುತ್ತಲೇ ಇರಲಿಲ್ಲ ಅವನು. 'ನೀನು ಮಾಡುತ್ತಿರುವುದು ಒಂದಿನಿತೂ ಸರಿಯಿಲ್ಲ. ನೀನು ಆಯ್ದುಕೊಂಡಿರುವ ಹಾದಿ ಕೇವಲ ಏಕಮುಖವಾದುದು. ನೀನು ಒಳಹೋಗಬಲ್ಲೆಯಷ್ಟೇ. ಮುಂದೆ ನೀನೆಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಹಿಂದಿರುಗಲಾರೆ. ಇದೊಂದು ಸುಳಿ. ಮೇಲೆ ಬರಲು ಪ್ರಯತ್ನಿಸಿದಷ್ಟೂ ಆಳಕ್ಕೆಳೆದು ನುಂಗುವ ವಿಷವರ್ತುಲ. ಒಂದು ವೇಳೆ ಹೇಗೋ ಶತಪ್ರಯತ್ನ ಮಾಡಿ ಹಿಂದಿರುಗಿದೆ ಎಂದಾದರೂ ಆ ವೇಳೆಗಾಗಲೇ ಈ ಸುಳಿ ನಿನ್ನ ಬದುಕನ್ನು, ಅಸ್ತಿತ್ವವನ್ನೂ ಸರ್ವನಾಶಗೊಳಿಸಿರುತ್ತದೆ. ನಿನ್ನನ್ನು ಈ ಲೋಕ, ಸಮಾಜ ನೋಡುವ ನೋಟವೇ ಬೇರೆ ಇರುತ್ತದೆ.....' ಎಂಬರ್ಥದ ಮಾತುಗಳನ್ನು ಪದೇಪದೇ ಹೇಳುತ್ತಿದ್ದ. ಅಶ್ರಫಿನಂತೆ ಚಾಚಾನ ಪ್ರಯತ್ನಗಳನ್ನು ನಿಲ್ಲಿಸಲಾಗಲಿಲ್ಲ ನನಗೆ. ಕಡೆಗೆ ನಾನೇ ನಿರ್ಲಿಪ್ತನಾದೆ. ಅವನು ಹೇಳಿದ್ದನ್ನೆಲ್ಲಾ ಕೇಳುತ್ತಿದ್ದೆನೇ ಹೊರತು ಆಗ ಅದೆಂದೂ ನನ್ನ ಮನಸ್ಸಿನಾಳಕ್ಕೆ ತಲುಪಲೇ ಇಲ್ಲ...... 

ಆದರೆ ಬದುಕಿನಲ್ಲಿ ಮುಂದೊಂದು ಸಮಯ ಬರುವುದಿತ್ತು. ಚಾಚಾ ಹೇಳಿದ ಮಾತುಗಳೆಲ್ಲವೂ ಆಗ ನನಗೆ ಮನನವಾಗಲಿತ್ತು. ಸಾಗಿಬಂದ ಹಾದಿಯನ್ನು ವಿಮರ್ಶಿಸುವ ಆ ಘಳಿಗೆಯಲ್ಲಿ ಸಮಯ ನನ್ನ ಪಾಲಿಗಿರುವುದಾ??? 

ಗೊತ್ತಿಲ್ಲ.

ಸಧ್ಯದ ಮಟ್ಟಿಗೆ ಈ ಡೀಲ್ ನನ್ನ ಪಾಲಿನ ಜಾಕ್ ಪಾಟ್. ಈ ಒಂದು ಡೀಲ್ ರಾಕಾನ ಸಾಮ್ರಾಜ್ಯದ ಒಳಹೊರಗುಗಳನ್ನು ನನ್ನ ಮುಂದೆ ಎಳೆಎಳೆಯಾಗಿ ತೆರೆದಿಟ್ಟಿತು. ಜನ್ಮದಾರಭ್ಯ ಇದೇ ಪರಿಸರದಲ್ಲಿ ಉಸಿರಾಡಿದವನು ನಾನು. ಈ ಲೋಕದಲ್ಲಿ, ರಾಕಾನಂತಹ ರಕ್ಕಸನ ಸಾಮ್ರಾಜ್ಯದಲ್ಲಿ ಅಸ್ತಿತ್ವವನ್ನು ಗಳಿಸಿಕೊಳ್ಳಲು ಏನು ಮಾಡಬೇಕೆಂದು ನನಗೆ ತಿಳಿಯದೇ....? ನಾನು ಮಾಡಿದ್ದಾದರೂ ಏನು....? ರಾಕಾ ಹೇಳಿದ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದ್ದು. ಅವನ ಎಲ್ಲಾ ಷರತ್ತುಗಳನ್ನು ಒಂದಿನಿಂತೂ ಲೋಪವಿಲ್ಲದಂತೆ ಪಾಲಿಸಿದ್ದು. ಅವನ ಆಜ್ಞೆಗಳನ್ನು ಪ್ರತಿಜ್ಞೆಯಂತೆ ಭಾವಿಸಿ ನಡೆದದ್ದು. ಇದಿಷ್ಟೇ ಸಾಕಾಯ್ತು ರಾಕಾನ ಭರವಸೆ ಗೆಲ್ಲಲು. ಅವನನ್ನು ನಂಬಿಕೆಯ ಕಡಲಲ್ಲಿ ಮುಳುಗಿಸಿದೆ ನಾನು. ಸ್ವಾಮಿನಿಷ್ಠತೆಗೆ ಅನ್ವರ್ಥವೇ ನಾನು ಎಂಬಷ್ಟು ಭರವಸೆಯನ್ನು ಗಳಿಸಿಕೊಂಡುಬಿಟ್ಟೆ. ನಾನು ರಾಕಾನ ವಿಶ್ವಾಸ ಗಳಿಸುತ್ತಾ ಹೋದಂತೆಲ್ಲಾ ನನ್ನ ಮನದ ಪ್ರಶ್ನೆಗಳಿಗೆ ಉತ್ತರಗಳು ತಾನೇ ತಾನಾಗಿ ಅನಾವರಣಗೊಳ್ಳುತ್ತಾ ಹೋದವು. ಹಾಗೇ ರಾಕಾ ಎಂಬ ಸೈತಾನನ ಸಾಮ್ರಾಜ್ಯದ ಒಳಗುಟ್ಟುಗಳೂ......

ಹಾಗೆ ಅನಾವರಣಗೊಂಡ ಸತ್ಯಗಳು ನನ್ನ ಊಹೆಗೂ ಮೀರಿದಷ್ಟು ಭಯಂಕರವಾಗಿದ್ದವು. ಬದುಕಿನ ಬಗ್ಗೆ ಹೇವರಿಕೆ ಹುಟ್ಟಿಸುವಷ್ಟು ಭೀಭತ್ಸವಾಗಿದ್ದವು. ಈ ಲೋಕದಲ್ಲಿ ಪ್ರಾಣಕ್ಕೆ ಬೆಲೆಯೇ ಇರಲಿಲ್ಲ. ಪ್ರಾಣಕ್ಕೇ ಇಲ್ಲದ ಬೆಲೆ ಮಾನಕ್ಕೆಲ್ಲಿಂದ ಬಂದೀತು? ಪ್ರಾಣ, ಮಾನಗಳು ರಾಕಾನ ಅಂಗಡಿಯಲ್ಲಿ ಅತೀ ಹೆಚ್ಚು ಬಿಕರಿಯಾಗುವ ಸರಕುಗಳಾಗಿತ್ತು. ಸುರಿವ ರಕ್ತಕ್ಕೆ, ಹರಿವ ಕಣ್ಣೀರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಜಗತ್ತೊಂದು ನನ್ನ ಕಣ್ಣೆದುರಿಗಿತ್ತು.....

ಮತ್ತು ನಾನು ರಾಕಾನೊಂದಿಗೆ ಕೈ ಮಿಲಾಯಿಸಿ ಆ ಜಗತ್ತಿನ ಪಾಲುದಾರನಾಗಿದ್ದೆ........

ಪ್ರಾಣ, ಮಾನಗಳ ಹರಣಕ್ಕೆ, ಹರಿವ ರುಧಿರ ಧಾರೆಗೆ, ಎದೆಬಿರಿವ ಆಕ್ರಂದನಕ್ಕೆ, ಕಣ್ಣೀರ ಹನಿಗಳ ಪರಿತಾಪಕ್ಕೆ, ಕೊನೆಯಿಲ್ಲದ ನಿಟ್ಟುಸಿರ ಶಾಪಗಳಿಗೆ.........

ನಾನೂ ಎಲ್ಲೋ ಪರೋಕ್ಷವಾಗಿ ಕಾರಣಕರ್ತನಾಗಿದ್ದೆನಲ್ಲವೇ.......?

ಬಿರ್ಜೂ ಚಾಚಾನ ನುಡಿಗಳಲ್ಲಿ ಇದೇ ಸತ್ಯ ಅಂತರ್ಗತವಾಗಿತ್ತೇ......?

ಆಗ ನಾನು ಆ ಬಗ್ಗೆ ಯೋಚಿಸಲಿಲ್ಲ. ಆಗ ನನ್ನ ಲಕ್ಷ್ಯ
ಒಂದೇ..... ರಾಕಾನ ದಂಧೆಗಳ ಒಳಸುಳಿಯ ಬಗ್ಗೆ ತಿಳಿಯಬೇಕು. ಹಾಗೆ ತಿಳಿದುಕೊಂಡ ನಂತರದಲ್ಲಿ ಏನು ಮಾಡಬೇಕೆಂಬ ಬಗ್ಗೆ ನಾನೆಂದೂ ಯೋಚಿಸಿರಲಿಲ್ಲ.... 

ನಾನಾಗ ಕೇವಲ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿ ಮಾತ್ರ ಆಸಕ್ತನಾಗಿದ್ದೆ. ರಾಕಾನ ಜೊತೆ ಕೈ ಜೋಡಿಸಿದ ನಂತರ ನನ್ನ ಪ್ರಶ್ನೆಗಳಿಗೆ ಉತ್ತರಗಳು ಅನಾಯಾಸವಾಗಿಗಿ ದೊರಕುತ್ತಾ ಹೋದವು.....

ನಾನು ಢಾಕಾಕ್ಕೆ ಕೊಂಡೊಯ್ಯುತ್ತಿದ್ದ ರಟ್ಟಿನ ಪೆಟ್ಟಿಗೆಗಳಲ್ಲಿ ಏನಿರುತ್ತಿತ್ತು?, ಗುಂಪಿನಿಂದ ನಾಪತ್ತೆಯಾಗುವ ಜನರು ಎಲ್ಲಿಗೆ ಹೋಗುತ್ತಾರೆ?, ರಾತ್ರಿ ಹೋಗಿ ನಸುಕಿಗೆ ವಾಪಾಸಾಗುವವರ ಅಳಲೇನು?, ಢಾಕಾದಿಂದ ಕರೆತರುವ ಹೆಣ್ಣುಗಳು ಏನಾಗುತ್ತಾರೆ.......?

ಎಲ್ಲಾ ಪ್ರಶ್ನೆಗಳಿಗೂ ಉತ್ತರವೇನೋ ದೊರಕಿತ್ತು...... ಆದರೆ ದೊರೆತ ಉತ್ತರವನ್ನು ಅರಗಿಸಿಕೊಳ್ಳುವ ಚೈತನ್ಯವಿತ್ತೇ ನನ್ನಲ್ಲಿ.......?

ಸಶೇಷ

ಅಗ್ನಿ ತರಂಗಿಣಿ 6

ಕಲ್ಕತ್ತಾ ಟು ಬಾಂಗ್ಲಾದೇಶ್ - ಢಾಕಾ ಡೈರೀಸ್

ಹಾಗೆ ಅಶ್ರಫ್ ಎಂಬ ಗೆಳೆಯ ಹಾಗೂ ಕಲ್ಕತ್ತಾ ಎಂಬ ರೂಪಸಿಯ ಸಾನಿಧ್ಯದಲ್ಲಿ ನನ್ನ ಬಾಲ್ಯ ಕಳೆದು ಯೌವ್ವನದ ದಿನಗಳು ಕಾಲಿಟ್ಟಿತ್ತು. ಈ ಕಾಲಘಟ್ಟ ನನ್ನ ಜೀವನದಲ್ಲಿ, ಯೋಚನೆಗಳಲ್ಲಿ, ಸ್ವಭಾವದಲ್ಲಿ ಹಲವು ಬದಲಾವಣೆಗಳನ್ನು ಹೊತ್ತು ತಂದಿತ್ತು. ಇಲ್ಲಿಯವರೆಗೂ ಹಗುರವಾಗಿ ಕಾಣುತ್ತಿದ್ದ ವಿಚಾರಗಳು ಈಗ ಗಂಭೀರವೆನಿಸತೊಡಗಿದ್ದವು. ಎಲ್ಲವನ್ನೂ ಪ್ರಶ್ನಿಸಬೇಕು, ವಿರೋಧಿಸಬೇಕು, ರಾಕಾನ ಚೇಲಾಗಳಿಗೆ ನಾಲ್ಕು ಬಾರಿಸಬೇಕು, ನನ್ನ ಗುಂಪಿನವರನ್ನೆಲ್ಲಾ ಕಟ್ಟಿಕೊಂಡು ರಾಕಾನ ವಿರುದ್ಧ ಬಂಡೇಳಬೇಕು...... ಹೀಗೆ ಏನೇನೋ ಹುಚ್ಚು ಆಲೋಚನೆಗಳು ನನ್ನನ್ನು ಮುತ್ತಿಗೆ ಹಾಕಿ ರಕ್ತವನ್ನು ಕಾವೇರಿಸುತ್ತಿತ್ತು. 

ಇವೆಲ್ಲವುಗಳ ಆಳದಲ್ಲಿ ರಾಕಾನ ಸಾಮ್ರಾಜ್ಯಕ್ಕೆ ಅಧಿಪತಿಯಾಗಬೇಕೆಂಬ ಸುಪ್ತ ಆಸೆಯೊಂದು ಪ್ರಚೋದನಾತ್ಮಕ ತಂತುವಾಗಿ ಕಾರ್ಯ ನಿರ್ವಹಿಸುತ್ತಿತ್ತಾ..........? 
ರಾಕಾ ಎಂಬ ರಕ್ಕಸನ ಸಿರಿವಂತ ಸಾಮ್ರಾಜ್ಯ, ಸಮಾಜವನ್ನು ತನ್ನ ಕಿರುಬೆರಳಲ್ಲಿ ಕುಣಿಸುವ ಅವನ ಅಧಿಕಾರ, ಜನರ ಕಣ್ಣುಗಳಲ್ಲಿ ಅವನೆಡೆಗೆ ಕಾಣುತ್ತಿದ್ದ ಆ ಭಯಮಿಶ್ರಿತ ಗೌರವ(??) ಇವೆಲ್ಲವೂ ನನ್ನದಾಗಬೇಕು ಎಂಬ ಭಾವನೆ ನನ್ನೊಳಗೆ ಬೇರೂರತೊಡಗಿತ್ತಾ.........? 

ಆ ಕ್ಷಣಕ್ಕೆ ಈ ಪ್ರಶ್ನೆಗಳಿಗೆ ನನ್ನೊಳಗೆ ಉತ್ತರವಿತ್ತೋ, ಇಲ್ಲವೋ ನನಗೇ ತಿಳಿದಿಲ್ಲವೆನ್ನಿ. ನನ್ನ ಪ್ರಕಾರ ನಾನು ಮುಂಚಿನಂತೆಯೇ ಇದ್ದೆ. ಆದರೆ ಉಳಿದವರ ಕಣ್ಣುಗಳು ನನ್ನನ್ನು ಪ್ರಶ್ನಾರ್ಥಕವಾಗಿಯೋ, ಅಚ್ಚರಿಯಿಂದಲೋ ಇಲ್ಲಾ ಇನ್ಯಾವುದೋ ಅರ್ಥವಾಗದ ಭಾವದಿಂದ ದಿಟ್ಟಿಸುವಾಗೆಲ್ಲ 'ನಾನು ನಿಜವಾಗಿಯೂ ಬದಲಾಗಿರುವೆನಾ?' ಎಂಬ ಪ್ರಶ್ನೆ ಒಳಗಿನಿಂದ ಉದ್ಬವಿಸುತ್ತಿತ್ತು. ಆದರೆ ಎಂದಿಗೂ ಈ ಪ್ರಶ್ನೆ ಮಸ್ತಿಷ್ಕವನ್ನು ಕೊರೆಯಲು ಬಿಡಲೇ ಇಲ್ಲ ನಾನು. ನನ್ನ ತಲೆಯ ತುಂಬಾ ಇನ್ನೂ ಉತ್ತರ ಸಿಗದೇ ಗಿರಕಿಹೊಡೆಯುತ್ತಿದ್ದ ಪ್ರಶ್ನೆಗಳಿಗೇನು ಬರವಿತ್ತೇ? 

ಬಾಲ್ಯದಲ್ಲಿ ಮನದ ಭಿತ್ತಿಯಲ್ಲಿ ಒಡಮೂಡಿ ಅಚ್ಚಳಿಯದೇ ಉಳಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂಬ ತುಡಿತ ನನ್ನೊಳಗೆ ಅದಾಗಲೇ ತೀವ್ರವಾಗತೊಡಗಿತ್ತು. ರಾತ್ರೋರಾತ್ರಿ ಗುಂಪಿನಲ್ಲಿ ಪ್ರತ್ಯಕ್ಷವಾಗುವ ಮಕ್ಕಳನ್ನು ಹೇಗೆ, ಎಲ್ಲಿಂದ ಅಪಹರಿಸುತ್ತಾರೆ? ರಾತ್ರಿಗೆ ಬಿಡಾರದಿಂದ ಹೊರಟು ಬೆಳಕು ಹರಿಯುವಾಗ ವಾಪಾಸಾಗುವ ಹೆಣ್ಣುಗಳು ಹೋಗುವುದಾದರೂ ಎಲ್ಲಿಗೆ? ಆಗಾಗ ನಮ್ಮ ಗುಂಪಿನಿಂದ ಹಲವು ಸದಸ್ಯರು ಕಣ್ಮರೆಯಾಗುವ ಹಿಂದಿನ ಮರ್ಮವೇನು? 

ಇದೆಲ್ಲಕ್ಕಿಂತ ಹೆಚ್ಚಾಗಿ ಸದಾ ನನ್ನನ್ನು ಕಾಡುವ ಪ್ರಶ್ನೆ ಈ ರಾಕಾನ ಅಸಲಿ ವ್ಯವಹಾರವಾದರೂ ಏನು? ಕೇವಲ ಒಂದಿಷ್ಟು ಭಿಕ್ಷುಕರ ಗುಂಪಿನ ಲೀಡರ್ ಆಗಿರುವ ವ್ಯಕ್ತಿ ಅವನಲ್ಲ. ಅದಕ್ಕೂ ಮೀರಿದ ಸತ್ಯಗಳು ಹಲವಿವೆ ಎಂಬ ಬಲವಾದ ಶಂಕೆ ನನ್ನೊಳಗೆ ಗಟ್ಟಿಯಾಗಿತ್ತು. ಇಲ್ಲವಾದರೇ ರಾಕಾನಂತಹ ರಕ್ಕಸ ರೌಡಿಗೆ ಸಮಾಜದಲ್ಲಿ ಈ ಪರಿಯ ಮರ್ಯಾದೆಯೇ....? 
ಆ ಮರ್ಯಾದೆಗೆ ಕಾರಣ ಅವನೆಡೆಗಿನ ಗೌರವವಲ್ಲ........ ಅದು ಭಯ........ 
ಅವನನ್ನು ಕಂಡರೆ ಜನ ಭಯ ಬೀಳುತ್ತಾರೆ. ಆ ಭಯವೇ ಅವನಿಗೆ ಸಮಾಜದಲ್ಲಿ ಗೌರವವನ್ನು ದಕ್ಕಿಸುತ್ತಿರುವುದು. ಜೊತೆಗೇ ಇಡೀ ಬಂಗಾಳವನ್ನೇ ಖರೀದಿಸಬಲ್ಲಷ್ಟು ಹಣವಿರಬಹುದು ಅವನಲ್ಲಿ. ಹಣವೆಂದರೆ ಹೆಣ ಕೂಡಾ ಬಾಯ್ಬಿಡುತ್ತಂತೆ.... ಇನ್ನು ಬದುಕಿರುವ ಜನರ್ಯಾವ ಲೆಕ್ಕ ಅಲ್ಲವೇ? ಆ ಹಣ ಹಾಗೂ ಜನರ ಮನದಲ್ಲಿನ ಭಯದಿಂದಲೇ ಸಮಾಜದಲ್ಲಿ ಪ್ರತಿಷ್ಠಿತನೆಂಬ ಬಿರುದು ಪಡೆದು ಮೆರೆಯುತ್ತಿದ್ದಾನೆ ರಾಜನಾಥ್ ಕೀರ್ತನಿಯಾ ಉರುಫ್ ರಾಕಾ.....
ಈ ರಾಕಾನ ವ್ಯವಹಾರಗಳೆಂಬ ಹಣೆಪಟ್ಟಿಯಡಿಗೆ ನಡೆಯುವ ದಂಧೆಗಳು ಹಲವು ಇವೆ. ಹಾಗೂ ಈ ದಂಧೆಗಳು ಪ್ರಾಯಶಃ ಕಾನೂನುಬಾಹಿರವಾಗಿವೆ ಎಂಬ ಅನುಮಾನ ಬಲವಾಗಿ ಕಾಡತೊಡಗಿತ್ತು. 

ನಾನೇನು ದೊಡ್ಡ ಓದು ಕಲಿತ ವಿದ್ಯಾವಂತನಲ್ಲ. ಆದರೆ ನನ್ನ ತಿಳುವಳಿಕೆ ಹಾಗೂ ಅರಿವಿನ ಬಗ್ಗೆ ಅಪಾರ ನಂಬಿಕೆಯಿದೆ ನನಗೆ. ಏಕೆಂದರೆ ಶಾಲೆಯಲ್ಲಿ ಬಾಯಿಪಾಠ ಮಾಡಿ ಕಲಿತ ವಿದ್ಯೆಯಲ್ಲ ಅದು. ಹುಟ್ಟಿದಾಗಿನಿಂದ ಇಂದಿನವರೆಗಿನ ಜೀವನಾನುಭವಗಳ ಮೂಸೆಯಿಂದ ಸಂಪಾದಿಸಿದ ಜ್ಞಾನ. ಬದುಕಿನಲ್ಲಿ ಎದುರಿಸಿದ ಸನ್ನಿವೇಶಗಳು ಕಲಿಸಿದ ಪ್ರಾಯೋಗಿಕ ತಿಳಿವಳಿಕೆಯದು. ಬದುಕು ಕಲಿಸುವ ಪಾಠಗಳು ನೀಡುವ ಅರಿವು ಅಪಾರ. ಅಂತಹ ಅರಿವಿನ ಆಧಾರದಲ್ಲೇ ರಾಕಾನ ನಡವಳಿಕೆಯನ್ನು ಅಂದಾಜಿಸಿದ್ದೇನೆಂದರೆ ಅದು ಸರಿಯೇ ಇರಬಹುದು ಎನ್ನುವ ನಂಬಿಕೆ ನನ್ನದು. ಜೊತೆಗೆ ನಮ್ಮ ಅಶ್ರಫಿ ಸಾಬಿಯೂ ನನ್ನ ಅನುಮಾನ ನಿಜವೇ ಎಂದು ಒಪ್ಪುತ್ತಿದ್ದ. 

ಬಾಲ್ಯದಿಂದಲೂ ಈ ಪ್ರಶ್ನೆಗಳು ನಮ್ಮಿಬ್ಬರ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವಾದರೂ ಯಾವ ಪ್ರಶ್ನೆಗಳಿಗೂ ಆಗ ನಮ್ಮ ಬಳಿ ಉತ್ತರವಿರಲಿಲ್ಲ. ಉತ್ತರವಿರಲಿಲ್ಲ ಅನ್ನುವುದಕ್ಕಿಂತಲೂ ಕಣ್ಮುಂದೆಯೋ ಇಲ್ಲಾ ಆಳದಲ್ಲೋ ಇದ್ದ ಉತ್ತರಗಳನ್ನು ಗ್ರಹಿಸುವ ಶಕ್ತಿ ಆಗ ನಮಗಿರಲಿಲ್ಲ. ಆದರೆ ಈಗೀಗ ಎಲ್ಲವೂ ಕೊಂಚ ಕೊಂಚವೇ ಅರಿವಿಗೆ ಬರತೊಡಗಿತ್ತು. ಮನದ ಎಲ್ಲಾ ಪ್ರಶ್ನೆಗಳಿಗೂ ನಮ್ಮ ಸುತ್ತ ಮುತ್ತ ನಡೆಯುತ್ತಿದ್ದ ಘಟನೆಗಳ ಆಳದಲ್ಲಿ ಉತ್ತರವಿತ್ತು‌. ವಯಸ್ಸು ಬಲಿತಂತೆ ಒಂದಕ್ಕೊಂದು ಬೆಸೆದುಕೊಂಡಂತಿದ್ದ ಘಟನೆಗಳ ಕೊಂಡಿಗಳು ನಿಧಾನವಾಗಿ ಗ್ರಹಿಕೆಗೆ ಸಿಗತೊಡಗಿದವು. 

ರಾಕಾನ ವ್ಯವಹಾರದ ಬಗೆಗಿನ ನನ್ನ ಗ್ರಹಿಕೆ ಸರಿ ಎಂದು ನನಗೆ ಅರಿವಾಗಿದ್ದು ನನ್ನ ಯೌವ್ವನದ ದಿನಗಳಲ್ಲಿ. ನನಗೆ ಅತೀವ ನೋವನ್ನು ತಂದ, ಅಲ್ಲಿಯವರೆಗೆ ಒಟ್ಟಿಗೆ ಭಿಕ್ಷಾಟನೆ ಮಾಡುತ್ತಿದ್ದ ನನ್ನನ್ನು ಹಾಗೂ ಅಶ್ರಫ್ ನನ್ನು ದೂರಾಗಿಸಿದ ಘಟ್ಟವಿದು. 

ಈ ಸಮಯದಲ್ಲಿ ರಾಕಾನ ದಂಧೆಗಳ ವಲಯ ವಿಸ್ತರಿಸಿತ್ತು. ಹಾಗಾಗಿ ಗುಂಪಿನ ಎಲ್ಲರನ್ನೂ ಮುಂಚಿನಂತೆ ಭಿಕ್ಷೆ ಬೇಡಲು ಕಳಿಸುವ ಪರಿಪಾಠ ಇರಲಿಲ್ಲ ಈಗ. ಮಹಿಳೆಯರಿರಲೀ ಇಲ್ಲಾ ಪುರುಷರಾಗಲೀ ದೈಹಿಕವಾಗಿ ತೀರಾ ದುರ್ಬಲ ಹಾಗೂ ನಿಶ್ಯಕ್ತರಾಗಿರುವವರು, ಅಂಗ ಊನಗೊಂಡವರನ್ನು ಮಾತ್ರವೇ ಭಿಕ್ಷಾಟನೆಗೆ ಕಳಿಸುತ್ತಿದ್ದಾರೆ. ಸದೃಢರಾಗಿರುವ ಗಂಡು ಮಕ್ಕಳನ್ನು ಪಟಾಕಿ, ಬಿಂದಿ, ಹೋಟೆಲ್ ಇತ್ಯಾದಿ ಉದ್ಯಮಗಳಲ್ಲಿ ಕೆಲಸಕ್ಕೆ ತೊಡಗಿಸಿದರೆ, ವಯಸ್ಕ ಗಂಡಸರನ್ನು ರಾಕಾನ ಒಡೆತನಕ್ಕೆ ಒಳಪಟ್ಟ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಎರಡೂ ಸಂಬಳವಿಲ್ಲದ ಜೀತವೇ. ನಮ್ಮ ದೇಹದ ಶಕ್ತಿ ಕುಂದುವ ಲಕ್ಷಣಗಳು ಕಂಡಾಗ ಇಲ್ಲವೇ ಯಾವುದೋ ಅವಘಡ ಸಂಭವಿಸಿ ಅಂಗ ಊನವಾದರೆ ಮಾತ್ರವೇ ನಮ್ಮನ್ನು ಮತ್ತೆ ಭಿಕ್ಷಾಟನೆಗೆ ದೂಡಲಾಗುತ್ತದೆ ಎಂಬ ವಿಚಾರವೂ ಆಗ ಮನವರಿಕೆಯಾಗತೊಡಗಿತ್ತು ನನಗೆ. 

ಅಶ್ರಫಿಯನ್ನು ರಾಕಾನ ಒಡೆತನದ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ದುಡಿತಕ್ಕೆ ಹಾಕಲಾಗಿತ್ತು. ಬಹಳಷ್ಟು ಕಠಿಣವಾದ, ಅತಿಯಾದ ದೈಹಿಕ ಶ್ರಮ ಬೇಡುವ, ಅಪಾಯಕಾರಿ ಕೆಲಸಗಳನ್ನು ಒಳಗೊಂಡ ವಲಯವದು. ರಾಕಾ ಮತ್ತವನ ಚೇಲಾಗಳ ರುಂಡ ಚಂಡಾಡುವಷ್ಟು ರೋಷವಿತ್ತು ನನ್ನಲ್ಲಿ. ಆದರೆ ಹಾಗೆ ಅನ್ನಿಸಿದ್ದನ್ನು ಮಾಡುವ ಪರಿಸ್ಥಿತಿ ನನ್ನದಾಗಿರಲಿಲ್ಲ. ಕೋಪವನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ ಇತ್ತು. ಬದುಕು ತೋರುವ ಹಾದಿ ದುರ್ಗಮವಾದರೂ ಪಯಣಿಸಲೇಬೇಕಲ್ಲವೇ...? ಬೆಳಗ್ಗಿನಿಂದ ಸಂಜೆಯವರೆಗೆ ಗಣಿಯಲ್ಲಿದ್ದರೂ ಸಂಜೆ ಬಿಡಾರಕ್ಕೆ ಹಿಂದಿರುಗುವೆನಲ್ಲಾ ಎಂದು ಅಶ್ರಫಿಯೇ ನನ್ನನ್ನು ಸಮಾಧಾನಿಸಿದ್ದ. ನನಗೂ ಸಮಾಧಾನಿಸಿಕೊಳ್ಳದೇ ಬೇರೆ ವಿಧಿ ಇರಲಿಲ್ಲವಲ್ಲ. ಆದರೆ ದಿನವೂ ನಮ್ಮ ಭೇಟಿ ಸಾಧ್ಯವಿರಲಿಲ್ಲ. ಕಾರಣ ನನಗೆ ವಹಿಸಿದ್ದ ಕೆಲಸ.

ನನ್ನನ್ನು ಕಲ್ಕತ್ತೆಯಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಸಾಗಿಸುವ ವಾಹನಗಳಲ್ಲಿ ಲೋಡಿಂಗ್ ಹಾಗೂ ಅನ್ಲೋಡಿಂಗ್ ಕೆಲಸಕ್ಕೆ ಹಾಕಲಾಯಿತು. ಅದೇ ದಿನ ಹೋಗಿ ಅವತ್ತೇ ವಾಪಾಸಾಗುವ ಕೆಲಸವಾಗಿರಲಿಲ್ಲ ಅದು. ಕೆಲವೊಮ್ಮೆ ವಾರಗಟ್ಟಲೇ ಬಾಂಗ್ಲಾದೇಶದಲ್ಲೇ ಉಳಿಯಬೇಕಾಗುತ್ತಿತ್ತು. ಈ ಸಂದರ್ಭದಲ್ಲೇ ನನಗೆ ರಾಕಾನ ದಂಧೆಗಳ ಸುಳಿವು ದೊರಕತೊಡಗಿದ್ದು....

ನಾನು ನಿರಂತರವಾಗಿ ಕಲ್ಕತ್ತಾ ಹಾಗೂ ಢಾಕಾ ನಡುವೆ ಸಂಚರಿಸುತ್ತಿದ್ದೆನಾದರೂ, ಯಾವ ವಿಚಾರವಾಗಿ ಹೋಗುತ್ತಿದ್ದೇನೆ, ಅಲ್ಲೇನು ಏನು ನಡೆಯುತ್ತಿದೆ ಎಂಬ ವಿಚಾರಗಳ ಬಗ್ಗೆ ಸೊಲ್ಲೆತ್ತುವಂತಿರಲಿಲ್ಲ. ಅವನ ಚೇಲಾಗಳು ಹೇಳಿದ ಕೆಲಸಗಳನ್ನು ಮಾಡುವುದಷ್ಟೇ ನನ್ನ ಕೆಲಸ. ಸಾಮಾನ್ಯವಾಗಿ ಮುಚ್ಚಿದ್ದ ರಟ್ಟಿನ ಪೆಟ್ಟಿಗೆಗಳನ್ನು, ಕಟ್ಟಿದ್ದ ಗೋಣಿಚೀಲಗಳನ್ನು ಕಲ್ಕತ್ತೆಯಲ್ಲಿ ವಾಹನಕ್ಕೆ ಲೋಡ್ ಮಾಡುವುದು, ಢಾಕಾದಲ್ಲಿ ಅನ್ಲೋಡ್ ಮಾಡುವುದಷ್ಟೇ ನನ್ನ ಕೆಲಸವಾಗಿತ್ತು. ಬೇರೇನನ್ನೂ ಪ್ರಶ್ನಿಸುವಂತಿರಲಿಲ್ಲ. 

ಆದರೆ ನಿಮಗೇ ತಿಳಿದಿದೆಯಲ್ಲ ನಾನೆಂತಹ ಖದೀಮ ಕಳ್ಳನೆಂದು? ಅವರ ಬಳಿ ಏನನ್ನೂ ಕೇಳುವಂತಿರಲಿಲ್ಲ. ಆದರೆ ನಾನೇ ಬೇಹುಗಾರಿಕೆ ಮಾಡಲು ತೊಂದರೆಯಿರಲಿಲ್ಲವಲ್ಲ.....? ನಾನು ಮೊದಲೇ ರಾಕಾನ ವ್ಯವಹಾರಗಳನ್ನು ತಿಳಿದುಕೊಳ್ಳುವ ಹುಚ್ಚು ಜಿದ್ದಿಗೆ ಬಿದ್ದಿದ್ದೆ. ಅದಕ್ಕೆ ಸರಿಯಾಗಿ ಸಿಕ್ಕಿದ್ದು ಈ ಕಲ್ಕತ್ತಾ-ಬಾಂಗ್ಲಾ ಪಯಣ. ಮೊದಮೊದಲು ಏನೂ ತಿಳಿಯದಿದ್ದರೂ ನಂತರದ ದಿನಗಳಲ್ಲಿ ನನಗೆ ಅವನ ದಂಧೆಯ ಒಂದು ಮಜಲಿನ ಪರಿಚಯವಾಯಿತು. ಹಾಗೆಯೇ ನನ್ನ ಮನದಲ್ಲಿ ಕೊರೆಯುತ್ತಿದ್ದ ಎರಡು ಪ್ರಶ್ನೆಗಳಿಗೆ ಉತ್ತರವೂ ದೊರಕಿತ್ತು.

ರಾತ್ರೋರಾತ್ರಿ ನಮ್ಮ ಗುಂಪಿನಲ್ಲಿ ಪ್ರತ್ಯಕ್ಷರಾಗುವ ಮಕ್ಕಳೆಲ್ಲರೂ ದೇಶದ ವಿವಿಧ ಭಾಗಗಳಿಂದ ಅಪಹರಿಸಲ್ಪಟ್ಟವರು ಅಂದುಕೊಂಡಿದ್ದೆವು ಈವರೆಗೆ. ಆದರೆ ಅದು ಅರ್ಧಸತ್ಯವಷ್ಟೇ ಎಂಬುದು ಈಗ ಗೋಚರವಾಗತೊಡಗಿತ್ತು. ಕೆಲವು ಮಕ್ಕಳನ್ನು ಅವರ ಹೆತ್ತವರಿಂದ ಬೇರಾಗಿಸಿ ಅಪಹರಿಸಿ ತರುತ್ತಿದ್ದುದು ನಿಜವೇ. ಅವರಲ್ಲಿ ಹೆಚ್ಚಿನ ಮಕ್ಕಳನ್ನು ರೈಲ್ವೇ ನಿಲ್ದಾಣ ಹಾಗೂ ಮೇಲಾ(ಜಾತ್ರೆ)ಗಳಲ್ಲಿ ಅಪಹರಿಸಿ ತರಲಾಗಿತ್ತು. ದೋಶೆರಾದ ದುರ್ಗಾಪೂಜಾ ಸಂದರ್ಭದಲ್ಲಿ ಹಾಗೂ ಜಾತ್ರಾಗಳು ನಡೆಯುವ ಸಂದರ್ಭದಲ್ಲಿ ವಿಪರೀತ ಜನಜಂಗುಳಿ ಇರುವಾಗ ಇಂತಹ ಅಪಹರಣಗಳು ಹೆಚ್ಚು. ಹಾಗೆಯೇ ಮನೆ, ಶಾಲೆಗಳಿಂದ ಅಪಹರಿಸಲ್ಪಟ್ಟ ಮಕ್ಕಳೂ ಇದ್ದರು. ನವಜಾತ ಶಿಶುಗಳನ್ನು ಆಸ್ಪತ್ರೆಯಿಂದಲೇ ಅಪಹರಿಸಿ ತರುತ್ತಿದ್ದರು ರಾಕಾನ ಚೇಲಾಗಳು. ಕೆಲವು ಆಯ್ದ ಹೆರಿಗೆ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿಂದ ಮಕ್ಕಳನ್ನು ಕರೆತರುತ್ತಿದ್ದರು. ಹಾಗೆಯೇ ಕೆಲವು ಅನಾಥಾಶ್ರಮದ ಮಕ್ಕಳು, ಹೆತ್ತವರಿಂದಲೇ ಮಾರಲ್ಪಟ್ಟವರೂ ಇದ್ದರು.

ಆದರೆ ಈ ಬಾಂಗ್ಲಾ ಪ್ರಯಾಣ ಇನ್ನೊಂದು ಸತ್ಯವನ್ನು ನನ್ನೆದುರು ತೆರೆದಿಟ್ಟಿತ್ತು‌......

ನಮ್ಮ ಗುಂಪಿನಲ್ಲಿನ ಮುಕ್ಕಾಲು ಪಾಲು ಭಿಕ್ಷುಕರು ಅಶ್ರಫ್ ನಂತೆ ನೆರೆಯ ಬಾಂಗ್ಲಾದೇಶದವರು ........! 
ಹೌದು.... ನಮ್ಮ ಗುಂಪಿನಲ್ಲಿ ಇದ್ದ ಹೆಚ್ಚಿನವರು ಬಾಂಗ್ಲಾದೇಶಿ ವಲಸಿಗರು ಎಂಬ ಸತ್ಯ ಇಲ್ಲಿ ತಿಳಿಯಿತು. ಕೆಲವರು ಉದ್ಯೋಗವನ್ನು ಅರಸಿ ಭಾರತಕ್ಕೆ ಬಂದು ಬೇರಾವ ಉದ್ಯೋಗವೂ ದೊರಕದೆ ಭಿಕ್ಷಾಟನೆಗೆ ಇಳಿದು ರಾಕಾನ ಕಪಿಮುಷ್ಠಿಯಲ್ಲಿ ಸಿಲುಕಿದವರಾದರೇ ಹೆಚ್ಚಿನವರು ಕಳ್ಳಸಾಗಣೆಯ ಮೂಲಕ ಭಾರತಕ್ಕೆ ಕಾಲಿಟ್ಟವರು. ಬಾಂಗ್ಲಾದೇಶದಿಂದ ಇಲ್ಲಿಗೆ ಅಕ್ರಮವಾಗಿ ಮಾನವ ಸಾಗಾಣಿಕೆ ಮಾಡುವ ಒಂದು ವ್ಯವಸ್ಥಿತ ಜಾಲವೇ ರಾಕಾನ ನಿಯಂತ್ರಣದಲ್ಲಿದೆ...... ಮತ್ತು ನಾನು ಯಾವ ಕಾರ್ಪೋರೇಟ್ ಕಂಪನಿಗೂ ಕಡಿಮೆ ಇಲ್ಲದ ಈ ಜಾಲದ ಒಂದು ಭಾಗವಾಗಿದ್ದೇನೆ. ಆಳಕ್ಕಿಳಿದು ನೋಡಿದಂತೆಲ್ಲಾ ಹಲವು ವಿಚಾರಗಳು ನನಗೆ ಸ್ಪಷ್ಟವಾದವು.

ರಾಕಾನ ಕೆಲ ಚೇಲಾಗಳು ಬಾಂಗ್ಲಾದೇಶದಲ್ಲಿ ಇದ್ದುಕೊಂಡು ಮಕ್ಕಳು ಹಾಗೂ ವಯಸ್ಕ ಹೆಣ್ಣುಗಳಿರುವ ಬಡ ಕುಟುಂಬಗಳನ್ನು ಗುರುತಿಸುತ್ತಾರೆ. ಇದು ಇವರ ಜಾಲದ ಮೊದಲ ಹಂತ. ಅಂತಹ ಕುಟುಂಬಗಳೇ ಇವರ ಲಕ್ಷ್ಯ. ಹಾಗೆ ಆಯ್ದ ಕುಟುಂಬದವರಿಗೆ ಭಾರತದಲ್ಲಿ ನೌಕರಿ ಕೊಡಿಸುವ ಭರವಸೆಯೊಂದಿಗೆ ಒಂದಿಷ್ಟು ಹಣದ ಆಮಿಷ ತೋರಿಸಿ ಅವರ ಸಮ್ಮತಿ ಪಡೆಯುವುದು ಎರಡನೇ ಹಂತ. ಹೆಚ್ಚಿನ ಸಂದರ್ಭಗಳಲ್ಲಿ ಮನೆಕೆಲಸವೋ ಇಲ್ಲಾ ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನೋ ಕೊಡಿಸುತ್ತೇವೆ ಎಂದು ನಂಬಿಸುತ್ತಾರೆ. ಕಿತ್ತು ತಿನ್ನುವ ಬಡತನ, ಒಂದು ಹೊತ್ತಿನ ತುತ್ತಿಗೂ ತತ್ವಾರವಿರುವ ಮನೆಯವರು ಇವರ ಈ ಪ್ರಸ್ತಾಪ ನಿರಾಕರಿಸುವ ಸಾಧ್ಯತೆ ಕಡಿಮೆ. ಜೊತೆಗೆ ಹೆಚ್ಚಿನವರು ಅಶಿಕ್ಷಿತರಾದ್ದರಿಂದ ಇಂತಹ ಖೂಳರ ಧೂರ್ತ ಜಾಲಗಳ ಅರಿವಾಗುವುದು ದೂರದ ಮಾತು. ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ವಿಶ್ವಾಸಾರ್ಹವಾಗಿ ಮಾತನಾಡಿ ಮನೆಯವರ ನಂಬಿಕೆ ಗೆದ್ದರೆ ಕೆಲಸ ಮುಗಿದಂತೆಯೇ. ಆ ಮಕ್ಕಳು ಹಾಗೂ ಮಹಿಳೆಯರನ್ನು ದಾಖಲೆಗಳಿಲ್ಲದೇ ಅಕ್ರಮವಾಗಿ ಸರಕು ಸಾಗಣೆ ವಾಹನಗಳಲ್ಲಿ ತುಂಬಿಸಿ ಕಲ್ಕತ್ತೆಗೆ ರವಾನಿಸಲಾಗುತ್ತದೆ. 

ಹಾಗೆ ಇಲ್ಲಿಗೆ ಬರುವ ವಾಹನಗಳು ಮರಳಿ ಬಾಂಗ್ಲಾದೇಶಕ್ಕೆ ಹೋಗುವಾಗ ರಟ್ಟಿನ ಪೆಟ್ಟಿಗೆಗಳಲ್ಲಿ ಹಾಗೂ ಗೋಣಿ ಚೀಲಗಳಲ್ಲಿ ಸೀಲ್ ಮಾಡಲ್ಪಟ್ಟ ಸರಕುಗಳನ್ನು ಹೊತ್ತೊಯ್ಯುತ್ತವೆ. ಇದೇ ಪೆಟ್ಟಿಗೆ ಮತ್ತು ಚೀಲಗಳನ್ನೇ ನಾನು ಕಲ್ಕತ್ತೆಯಲ್ಲಿ ವಾಹನಕ್ಕೆ ಏರಿಸಿ ರಟ್ಟಿನ ಪೆಟ್ಟಿಗೆಯನ್ನು ಢಾಕಾದ ಗೋಡೋನ್ ಒಂದರಲ್ಲೂ ಹಾಗೂ ಗೋಣಿ ಚೀಲಗಳನ್ನು ಕಾಲೀರ್ ನಲ್ಲಿಯೂ ಇಳಿಸುತ್ತಿದ್ದೆ.

ಹಾಗೆ ಕಲ್ಕತ್ತೆಯಿಂದ ಢಾಕಾಗೆ ರವಾನೆಯಾಗುತ್ತಿದ್ದ ರಟ್ಟಿನ ಪೆಟ್ಟಿಗೆಗಳಲ್ಲಿ ಏನಿರುತ್ತಿತ್ತು ಎಂಬುದು ಆಗ ನನಗೆ ತಿಳಿಯಲಿಲ್ಲ. ಆದರೆ ಆ ಪೆಟ್ಟಿಗೆಗಳೊಂದಿಗೆ ಇರುವ ಗೋಣಿ ಚೀಲಗಳಲ್ಲಿ ಇರುತ್ತಿದ್ದುದ್ದು ನಮ್ಮ ಗುಂಪಿನವರು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ 'ರೇಜ್ಕಿ'ಯ ಟಾಕಾಗಳು...........!! 

ಇದೂ ನನಗೆ ವಿಪರೀತ ಅಚ್ಚರಿ ತಂದ ವಿಚಾರವಾಗಿತ್ತು. ಇಲ್ಲವಾದರೆ ಆ ರೇಜ್ಕಿಯ ಟಾಕಾಗಳನ್ನು ಬಾಂಗ್ಲಾದೇಶಕ್ಕೆ ಯಾಕೆ ಸಾಗಿಸಬೇಕು? ಇದರ ಹಿನ್ನೆಲೆ ಶೋಧಿಸುತ್ತಾ ಹೋದಂತೆ ನನ್ನನ್ನು ಬಹುವಾಗಿ ಕಾಡಿದ್ದ ಇನ್ನೊಂದು ಪ್ರಶ್ನೆಗೆ ಉತ್ತರ ದೊರಕಿತ್ತು.

ನಾವು ರೇಜ್ಕಿಯ ಟಾಕಾಗಳನ್ನು ಬೇಡುವುದಕ್ಕೆ ಒಂದು ನಿಯಮವಿದೆ. ಈ ರೇಜ್ಕಿಯ ಹಣದ ಸಿಂಹಪಾಲು ಒಂದು ಅಥವಾ ಎರಡು ರುಪಾಯಿಯ ನಾಣ್ಯದ ರೂಪದಲ್ಲೇ ಇರಬೇಕು. ಭಿಕ್ಷೆಯನ್ನು ಯಾರಾದರೂ ನೋಟಿನ ರೂಪದಲ್ಲಿ ನೀಡಿದರೆ ಅವರನ್ನು ಕಾಡಿ ಬೇಡಿಯಾದರೂ ಅದನ್ನು ಚಿಲ್ಲರೆಗೆ ಬದಲಾಯಿಸಲು ನಮಗೆ ಹೇಳುತ್ತಿದ್ದರು ರಾಕಾನ ಮಂದಿ. ಆಗೆಲ್ಲ ಇವರಿಗೆ ಚಿಲ್ಲರೆಯೇ ಯಾಕೆ ಬೇಕು? ನೋಟಿಗೂ ಅಷ್ಟೇ ಮೌಲ್ಯವಿದೆಯಲ್ಲ. ಮತ್ತೇಕೆ ಚಿಲ್ಲರೆ ಕಾಸಿಗೆ ಸಾಯುತ್ತಾರೆ ಇವರು... ಎಂಬೆಲ್ಲಾ ಪ್ರಶ್ನೆಗಳು ತಲೆಯನ್ನು ಆವರಿಸುತ್ತಿದ್ದವು. ಅದರ ಹಿಂದಿನ ಮರ್ಮ ಈಗ ಅರಿವಾಗತೊಡಗಿತ್ತು. ಈ ರೇಜ್ಕಿಯ ನಾಣ್ಯಗಳನ್ನು ಹಾಗೂ ರಟ್ಟಿನ ಪೆಟ್ಟಿಗೆಗಳನ್ನು ಬಾಲೂರ್ ಘಾಟ್- ಬೋನ್ಗಾ ಮಾರ್ಗವಾಗಿ ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಸಾಗಣೆ ಮಾಡುತ್ತಿದ್ದರು ಈ ದುರುಳರು. ಹಾಗೆ ಬಾಂಗ್ಲಾದೇಶ ತಲುಪುವ ಈ ರೇಜ್ಕಿಯನ್ನು ಕಾಲೀರ್ ನಲ್ಲಿರುವ ಬ್ಲೇಡ್ ತಯಾರಿಕಾ ಕಾರ್ಖಾನೆಗಳು ಖರೀದಿಮಾಡುತ್ತವೆ. ಬ್ಲೇಡ್ ತಯಾರಿಕೆಗೆ ಕಚ್ಚಾ ಸರಕಾಗಿ ಈ ನಾಣ್ಯಗಳು ಬಳಕೆಯಾಗುತ್ತಿದ್ದವು. ಒಂದು ನಾಣ್ಯದಿಂದ ಎರಡು ಬ್ಲೇಡುಗಳು ತಯಾರಾಗುತ್ತವೆ. ಒಂದಿನಿತು ಶ್ರಮವಿಲ್ಲದೇ ಸಂಪಾದಿಸಿದ ರೇಜ್ಕಿಗಳನ್ನು ಬ್ಲೇಡು ತಯಾರಿಕಾ ಕಂಪನಿಗಳಿಗೆ ಮಾರುವ ಮೂಲಕ ಹಣವನ್ನು ಸಂಪಾದಿಸುತ್ತಿದ್ದಾನೆ. ರಾಕಾನ ಸಂಪತ್ತಿನ ಒಂದು ಸಣ್ಣ ಮೂಲ ನಾವು ಹಗಲಿಡೀ ಬಸವಳಿದು ಬೇಡಿ ತರುವ ರೇಜ್ಕಿಗಳು ಕೂಡಾ.....!!

ಬಾಂಗ್ಲಾದಿಂದ ಕಲ್ಕತ್ತೆಗೆ ಮನುಜರನ್ನು ಸಾಗಣೆ ಮಾಡುವ ವಾಹನಗಳು ಕಲ್ಕತ್ತೆಯಿಂದ ಬಾಂಗ್ಲಾದೇಶಕ್ಕೆ ಹಿಂದಿರುಗುವಾಗ ಸರಕುಗಳು ಅಥವಾ ಜಾನುವಾರುಗಳ ನಡುವೆ ಅಡಗಿಸಿ ರೇಜ್ಕಿಯನ್ನು ಕೊಂಡೊಯ್ಯುತ್ತವೆ. ಆದರೆ ಆ ರಟ್ಟಿನ ಪೆಟ್ಟಿಗೆಗಳಲ್ಲಿ ಏನಿತ್ತೋ ತಿಳಿಯಲು ಸಾಧ್ಯವಾಗಲಿಲ್ಲ. ಹಾಗೆ ಕರೆತಂದ ಬಾಂಗ್ಲಾದೇಶಿಗರೇ ನಮ್ಮ ಭಿಕ್ಷುಕ ಗುಂಪಿನಲ್ಲಿ ಅಧಿಕವಾಗಿರುವುದು. ಬಹುಶಃ ಅಶ್ರಫ್ ಕೂಡಾ ಹೀಗೆಯೇ ಇಲ್ಲಿಗೆ ಬಂದಿರಬಹುದು. ಅವನಾಗ ಬಹಳ ಚಿಕ್ಕವನಿದ್ದನಂತೆ. ಏನೋ ಒಂದಿಷ್ಟು ಮಸುಕು ಮಸುಕಾದ ಚಿತ್ರಗಳ ಹೊರತು ಬೇರೇನೂ ನೆನಪಾಗದು ಎನ್ನುತ್ತಾನೆ.

ಈ ಸಮಯದಲ್ಲೇ ನಾನು ಇನ್ನೊಂದು ಅಂಶವನ್ನು ಗಮನಿಸಿದ್ದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಕರೆತರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ವಯಸ್ಕ ಮಹಿಳೆಯರು. ಕೆಲವೊಮ್ಮೆಯಂತೂ ಮುಕ್ಕಾಲುಪಾಲು ಹುಡುಗಿಯರೇ. ಆದರೆ ಅವರ್ಯಾರೂ ನಮ್ಮ ಬಿಡಾರಗಳಲ್ಲಿ ಇರುತ್ತಿರಲಿಲ್ಲ. ಢಾಕಾದಿಂದ ಅವರನ್ನು ಕರೆತಂದು ನಮ್ಮ ಬಿಡಾರದಲ್ಲೇ ಇಳಿಸುತ್ತಿದ್ದುದು ನಿಜವೇ ಆದರೂ ಸಂಜೆಯೊಳಗೇ ಇನ್ನೊಂದು ವಾಹನದಲ್ಲಿ ಆ ಹೆಣ್ಣುಗಳನ್ನು ಬೇರೆಡೆಗೆ ಕರೆದೊಯ್ದುಬಿಡುತ್ತಿದ್ದರು. ಆ ನಂತರದಲ್ಲಿ ಎಂದೂ ಆ ಹೆಣ್ಣುಗಳು ಅಲ್ಲಿ ಕಂಡದ್ದಿಲ್ಲ. ಅವರ ಮನೆಯವರಿಗೆ ಆಶ್ವಾಸನೆ ನೀಡಿದಂತೆ ನೌಕರಿ ಕೊಡಿಸಿರಬಹುದೇನೋ ಎಂದು ಒಮ್ಮೊಮ್ಮೆ ಅನಿಸುತ್ತಿತ್ತಾದರೂ ರಾಕಾ ಇಂತಹ ಒಳ್ಳೆಯ ಕೆಲಸಗಳನ್ನು ಖಂಡಿತಾ ಮಾಡಲಾರ, ಬೇರೇನೋ ವಿಷಯವಿದೆ ಎಂದು ಬುದ್ಧಿ ಪದೇಪದೇ ಎಚ್ಚರಿಸುತ್ತಿತ್ತು. 

ನನಗೆ ಹಾಗನಿಸಿದ್ದಕ್ಕೂ ಕಾರಣವಿಲ್ಲದಿಲ್ಲ. ರಾಕಾ ಎನ್ನುವವ ಅಕ್ಷರಶಃ ರಕ್ಕಸನೇ. ಗುಂಪಿನಲ್ಲಿರುವ ಮುಗ್ಧ ಮಕ್ಕಳನ್ನೂ ಬಿಡುವವನಲ್ಲ ಆತ. ಇನ್ನು ಉಳಿದವರ ಬಿಟ್ಟಾನೆ? ಗಂಡು ಮಕ್ಕಳನ್ನು ಹೋಟೆಲ್ಲುಗಳಲ್ಲಿ ಕ್ಲೀನಿಂಗ್ ಕೆಲಸಕ್ಕೋ ಇಲ್ಲಾ ಲಘು ಕಾರ್ಖಾನೆಗಳ ಕೆಲಸಕ್ಕೋ ಹಾಕಿದರೆ, ಹೆಣ್ಣು ಮಕ್ಕಳನ್ನು ಮನೆಕೆಲಸಕ್ಕೆ ಹಾಕುತ್ತಾರೆ. ಮನೆಕೆಲಸಕ್ಕೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಕೆಲಸದವರನ್ನು ಪೂರೈಸುವ ಏಜೆನ್ಸಿಯೊಂದನ್ನು ಹೊಂದಿದ್ದಾನೆ ರಾಕಾ. ಅದರ ಮೂಲಕ ಈ ಮಕ್ಕಳನ್ನು ಸಿರಿವಂತ ಕುಟುಂಬಗಳಿಗೆ ಮನೆಕೆಲಸದವರನ್ನಾಗಿ ಕಳಿಸುತ್ತಾನೆ. ಅವರ ಪರವಾಗಿ ತಿಂಗಳ ಪಗಾರವನ್ನು ತಾನೇ ವಸೂಲಿ ಮಾಡುತ್ತಾನೆ. ಆ ಪುಟ್ಟ ಮಕ್ಕಳ ಸ್ಥಿತಿ ಅಧೋಗತಿಯೇ. ಚಿಕ್ಕ ವಯಸ್ಸಿನಲ್ಲಿ ಇಡೀ ಮನೆಯ ಕೆಲಸಗಳನ್ನೆಲ್ಲಾ ನಿರ್ವಹಿಸಬೇಕು ಆ ಪುಟ್ಟ ಕೈಗಳು. ಇಲ್ಲವಾದರೆ ಮನೆಯೊಡೆಯರ ಹೊಡೆತ, ಬೈಗುಳ...... 

ಶೋಷಣೆಗೆ ಅದೆಷ್ಟು ಮುಖಗಳು........?

ತಮ್ಮ ಮನೆಯ ಅದೇ ವಯಸ್ಸಿನ ಮಕ್ಕಳನ್ನು ಅದೆಷ್ಟು ಜತನವಾಗಿ, ಕಾಲು ನೆಲಕ್ಕೆ ಸೋಕದಂತೆ ಬೆಳೆಸುತ್ತಾರೆ. ಆದರೆ ಮನೆಕೆಲಸಕ್ಕೆಂದು ಬರುವ ಮಗುವಿನ ಮೇಲೆ ಅದೆಷ್ಟು ದಬ್ಬಾಳಿಕೆ? 

ಅದು ನಿಮ್ಮ ಮಗುವಾಗಿರದಿರಬಹುದು.......
ಆದರೆ ಅದೂ ಮಗುವೇ ಅಲ್ಲವೇ.......?
ಅದರ ಕೈಗಳೂ ನಿಮ್ಮ ಮಗುವಿನಷ್ಟೇ ಮೃದು ಕೋಮಲವಲ್ಲವೇ......?
ಅದರ ಮನಸ್ಸೂ ಸೂಕ್ಷ್ಮವಲ್ಲವೇ......?
ಅದಕ್ಕೂ ಒಂದಿನಿತು ಮಮತೆ, ಅಂತಃಕರಣದ ಅಗತ್ಯವಿದೆ ಎಂಬ ಅತೀ ಸರಳ ವಿಚಾರ ಅದೇಕೆ ಇವರ ಅರಿವಿಗೆ ಬರುವುದೇ ಇಲ್ಲ....? 

ಇದು ಉತ್ತರ ಸಿಗದ ಪ್ರಶ್ನೆಯೇನೋ? ಅಶ್ರಫಿಯಲ್ಲಿ ಈ ವಿಚಾರಗಳನ್ನು ಹೇಳಿದಾಗಲೆಲ್ಲಾ ಅವನು ನನ್ನ ಮಾತುಗಳನ್ನು ಒಪ್ಪುತ್ತಾನಾದರೂ ಇಂತಹ ವಿಚಾರಗಳಲ್ಲಿ ತಲೆಹಾಕದೇ ಸುಮ್ಮನಿರುವ ಸಲಹೆ ನೀಡುತ್ತಿದ್ದ. ಇಂತಹ ವಿಚಾರಗಳ ಬಗ್ಗೆ ಕೆದಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನನಗೆ ಅಪಾಯವಾಗುವುದು ಅವನಿಗೆ ಸುತಾರಾಂ ಹಿಡಿಸದ ವಿಚಾರ. ಅವನು ಪದೇ ಪದೇ ನನಗೆ ಬುದ್ಧಿ ಹೇಳಿ, ನನ್ನ ಕುತೂಹಲವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹೇಳುತ್ತಿದ್ದ. ಅವನೇನೋ ಹೇಳುತ್ತಿದ್ದ. ನಾನು ಕೇಳಬೇಕಲ್ಲ....?
ಅದೆಂಥಾ ಹುಚ್ಚೋ, ಅದು ನನ್ನನ್ನು ಎತ್ತ ಸೆಳೆಯಲಿತ್ತೋ...... ಆದರೆ ನಾನಂತೂ ರಾಕಾನ ವ್ಯವಹಾರದ ತಳಬುಡ ಶೋಧಿಸುವ ಜಿದ್ದಿಗೆ ಬಿದ್ದಾಗಿತ್ತು. ಈಗ ತಿಳಿದದ್ದು ಅತ್ಯಲ್ಪ. ಇದಕ್ಕೂ ಮಿಗಿಲಾದ ರಹಸ್ಯಗಳಿವೆ ಎಂಬುದಂತೂ ನಿಚ್ಚಳ. ಆದರೆ ಅದನ್ನು ತಿಳಿಯುವುದು ಹೇಗೆ ಎಂಬುದೇ ನನ್ನ ಮುಂದಿದ್ದ ದೊಡ್ಡ ಪ್ರಶ್ನೆ. ಹೇಗಾದರೂ ಮಾಡಿ ರಾಕಾನ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಬೇಕು ಎಂಬ ಯೋಚನೆಯಲ್ಲಿ ನಾನು ಮುಳುಗಿದ್ದಾಗಲೇ...........

ಅದೊಂದು ಸಂಜೆ ರಾಕಾ ನನ್ನನ್ನು ಭೇಟಿಯಾಗಿದ್ದ.....!!

ಇಲ್ಲಿಯವರೆಗೆ ಯಾರೊಬ್ಬರನ್ನೂ ವೈಯಕ್ತಿಕವಾಗಿ ಭೇಟಿ ಮಾಡದ ರಾಕಾ......
ಇಡೀ ಕಲ್ಕತ್ತೆಯನ್ನು ಕಿರು ಬೆರಳಿನಲ್ಲಿ ಕುಣಿಸಬಲ್ಲ ತಾಕತ್ತಿರುವ ರಾಕಾ......
ಪಶ್ಚಿಮ ಬಂಗಾಳದ ರಾಜಕೀಯದ ನೀಲಿನಕ್ಷೆ ಬದಲಾಯಿಸಬಲ್ಲ ರಾಕಾ......

ದಿ ಗ್ರೇಟ್ ರಾಜನಾಥ್ ಕೀರ್ತನಿಯಾ......

ನನ್ನನ್ನು ಮತ್ತು ಕೇವಲ 'ನನ್ನನ್ನು' ಭೇಟಿಯಾಗಲು ಬಂದಿದ್ದ.....!!

ಅರಸುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತೇ.......?

ಸಶೇಷ

ಟಿಪ್ಪಣಿಗಳು:
ಮಾಹಿತಿ ಮೂಲ:

೧.http://iyouthmagblog.blogspot.com/2017/10/the-streets-of-kolkata-world-beyond.html?m=1

೨.ವಿಕಿಪೀಡಿಯ

೩. ಬಾಂಗ್ಲಾದೇಶದಿಂದ ಅಕ್ರಮವಾಗಿ ಮಾನವ ಕಳ್ಳಸಾಗಾಣಿಕೆ ಮಾಡುವ ಬಗ್ಗೆ ಮತ್ತು ಅಪಹರಿಸಿದ ಹೆಣ್ಣು ಮಕ್ಕಳನ್ನು ಶ್ರೀಮಂತ ಕುಟುಂಬಗಳಿಗೆ ಮನೆಕೆಲಸಗಾರರಾಗಿ ಕಳಿಸುವ ಬಗ್ಗೆ ಹಿಂದಿಯ crime patrol ನ ಹಲವಾರು ಸಂಚಿಕೆಗಳು ಬಂದಿವೆ. ಅವುಗಳಿಂದ ಕಲೆ ಹಾಕಿದ ಕೆಲವು ಮಾಹಿತಿಗಳನ್ನು ಈ ಸಂಚಿಕೆಯಲ್ಲಿ ಬಳಸಿಕೊಂಡಿದ್ದೇನೆ.

ಅಗ್ನಿ ತರಂಗಿಣಿ 5

ಸಿಯಾ..... ದಿ ರೆಬೆಲ್ !!

ಚಾಚಿ ನನ್ನನ್ನು ಎದೆಗಾನಿಸಿಕೊಂಡು ತನ್ನ ಮನದ ಅಳಲನ್ನೆಲ್ಲಾ ಹೊರಹಾಕಿ ಕಣ್ಣೀರಾದರೆ, ಅವಳ ಬತ್ತದ ಕಣ್ಣೀರಿಗೆ ಸಾಕ್ಷಿಯಾಗಿಯೂ ನಗುತ್ತಿದ್ದೆ ನಾನು. ಆ ಮುಂಜಾವು ಹಾಗೆ ಮಾಯಿಯ ಅಗಲುವಿಕೆ ಮತ್ತು ಚಾಚಿಯ ಕಂಬನಿ ಧಾರೆಯೊಂದಿಗೆ ಕರಗಿತ್ತು. ಮನೆಯ ನಾಲ್ವರು ಹಿರಿಯ ಸದಸ್ಯರು ಮಾಯಿಯ ಅಂತ್ಯಸಂಸ್ಕಾರದಲ್ಲಿ ತೊಡಗಿಸಿಕೊಂಡಿದ್ದರೆ, ಚಾಚಿ ನನ್ನ ಬಿಟ್ಟು ಸರಿಯಲಿಲ್ಲ. ಆದರೆ ಇವೆಲ್ಲದರ ನಡುವೆ ಹೈರಾಣಾಗಿ ಕುಳಿತಿದ್ದು ಮಾತ್ರ ನನ್ನ ಸೌತೇಲಿ ಮಾಯಿ....

ಅವಳು ಬಾಪೂವಿನ ಲುಗಾಯಿಯಾಗಿ ಈ ಮನೆಗೆ ಬಂದು ಸುಮಾರು ಎರಡು ತಿಂಗಳುಗಳಾಗಿತ್ತಷ್ಟೇ. ಈ ಅಲ್ಪ ಸಮಯದಲ್ಲೇ ತನ್ನ ಭವಿಷ್ಯ ಹೇಗಿರಬಹುದೆಂಬ ಅಂದಾಜು ಸಿಕ್ಕಿ ಹೋಗಿತ್ತು ಅವಳಿಗೆ. ಆ ಭಯವೇ ಅತಿಯಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಹೆದರಿದವಳ ಮೇಲೆ ಹಾವೆಸೆದಂತೆ ಎದುರಾಗಿದ್ದು ಮಾಯಿಯ ಮರಣ ಹಾಗೂ ನನ್ನ ಜನನ..... ನಮ್ಮಿಬ್ಬರ ಪರಿಸ್ಥಿತಿ ಆಕೆಯನ್ನು ಕಂಗೆಡಿಸಿತ್ತು. ಮಂಕಾಗಿ ಒಂದು ಮೂಲೆಯಲ್ಲಿ ಕುಳಿತುಬಿಟ್ಟಿದ್ದಳು ಆಕೆ.

ಆ ದಿನ ಅಪರಾಹ್ನ ಕಳೆದು ಸಂಧ್ಯೆ ಮೆಲ್ಲಗೆ ಕಾಲಿಡುವವರೆಗೂ ಮನೆ ನೀರವ ಮೌನದೊಳಗೇ ಮುಳುಗಿತ್ತು. ದಾದಿ, ದಾದಾ, ಚಾಚೂ ಹಾಗೂ ಬಾಪೂ ಯಾವ ತಕರಾರಿಲ್ಲದೇ ಮಾಯಿಯ ಶವಕ್ಕೆ ಮುಕ್ತಿ ಕಾಣಿಸಿದ ನಿರಾಳತೆಯೊಂದಿಗೆ ಅಷ್ಟೇ ನಿಶ್ಯಬ್ದವಾಗಿ ಈ ರಾತ್ರಿ ನನಗೊಂದು ಗತಿ ಕಾಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದರು. ಚಾಚಿ ನನ್ನ ಭವಿಷ್ಯವನ್ನು ವಿಧಿಗೆ ಬಿಟ್ಟು, ಮೌನದ ಸೆರಗಲ್ಲಿ ನಿರ್ಲಿಪ್ತವಾಗಿ ಉಳಿದಿದ್ದಳು. ಸೌತೇಲಿ ಮಾಯಿ ಮಾತ್ರಾ ಸುಸ್ತು, ಗೊಂದಲ, ಭಯ, ಆತಂಕಗಳ ಮೂಸೆಯಲ್ಲಿ ಚಡಪಡಿಸುತ್ತಿದ್ದಳು.....

ಹೀಗಿದ್ದ ಮನೆ ಅದೇ ಸಂಜೆಯ ಒಂದು ಕ್ಷಣದಲ್ಲಿ ಮಾಯಿಯ ಸಾವಿನ ಸೂತಕ ಮರೆತು ಸಂಭ್ರಮಿಸಿತ್ತು......

ಕಾರಣ ಸೌತೇಲಿ ಮಾಯಿ ತಾಯಿಯಾಗುವ ಸೂಚನೆ ನೀಡಿದ್ದಳು....

ಮನೆಯಲ್ಲಿನ ನಾಲ್ವರ ಸಂಭ್ರಮ ಮುಗಿಲುಮುಟ್ಟಿತ್ತು. ಜೊತೆಗೇ ಲಾಲಾನ ಆಗಮನದ ನಿರೀಕ್ಷೆಯೂ ಗರಿಗೆದರಿ ನರ್ತಿಸತೊಡಗಿತ್ತು. ಮಾಯಿಯ ಹಠಾತ್ ನಿರ್ಗಮನ ಅವರನ್ನು ಕಿಂಚಿತ್ತೂ ಕಾಡಲಿಲ್ಲ. ಆ ಕೂಡಲೇ ಭೈರವ್ ಬಾಬಾನಿಗೆ ಕರೆಹೋಗಿತ್ತು. ಆತ ತಕ್ಷಣವೇ ಬಂದಿದ್ದ. ಬರಲೇಬೇಕು ಕೂಡಾ.... ಎಷ್ಟೆಂದರೂ ಹಣ ಹಾಗೂ ಪ್ರತಿಷ್ಟೆ ತಾನೇ ಜಗವನ್ನು ಆಳುವುದು?

ಬಾಬಾನಿಗೆ ಬೆಳಗ್ಗಿನಿಂದ ನಡೆದ ಘಟನೆಗಳೆಲ್ಲವನ್ನೂ ವಿವರಿಸಿ ಆತನ ಭವಿಷ್ಯವಾಣಿಗಾಗಿ ಕಾಯತೊಡಗಿದರು.

ಭೈರವ್ ಬಾಬಾ ಚೋಟಿ ಮಾಯಿಯ ಕೈ ರೇಖೆಗಳ‌ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಆಕೆ ಮಾತ್ರ ತನ್ನ ಗ್ರಹಗತಿಗಳ ಬಗ್ಗೆ, ಭವಿಷ್ಯದ ಬಗ್ಗೆ ಯೋಚನೆಗೆ ಬಿದ್ದಿದ್ದಳು.

ನನ್ನನ್ನು ಮಡಿಲಲ್ಲಿ ಇರಿಸಿಕೊಂಡಿದ್ದ ಚಾಚಿ ಎಂದಿನಂತೆ ನಿರ್ಲಿಪ್ತೆಯಾದರೂ 'ಹೆಣ್ಣೊಂದು ಹುಟ್ಟದಿರಲಿ‌' ಎಂಬುದೊಂದೇ ಬೇಡಿಕೆ ಅವಳದು. 

ಉಳಿದ ನಾಲ್ವರ ಗಮ್ಯ ಒಂದೇ.‌..... ಲಾಲಾ...... 

ಚಾತಕ ಪಕ್ಷಿಗಳಂತೆ ಭೈರವ್ ಬಾಬಾನ ಮಾತಿಗಾಗಿ ಕಾತರಿಸಿ ಕುಳಿತ್ತಿದ್ದರು.....

ಹಲವು ಕ್ಷಣಗಳ ಗಹನ ಧ್ಯಾನ ಕಳೆದು ಅದೇಕೋ ನನ್ನ ಬಳಿ ಬಂದು ಇನ್ನೂ ಸರಿಯಾಗಿ ಒಡಮೂಡದ ನನ್ನ ಕೈ ರೇಖೆಗಳ ಪರಿಶೀಲನೆಗೆ ತೊಡಗಿದ್ದ. 

ತುಸು ಸಮಯದ ಪರಿಶೀಲನೆಯ ನಂತರ ನಿಶ್ಯಬ್ದತೆಯ ಎದೆಯಾಳವನ್ನು ಸೀಳಿಕೊಂಡು ನನ್ನ ಬದುಕಿನ ದಿಕ್ಕನ್ನೇ ಬದಲಿಸುವ ಭವಿಷ್ಯ ನುಡಿದಿದ್ದ ಬಾಬಾ.....

"ಥಾರೀ ಚೋರಿ ಅಚ್ಛೀ ಶಗುನ್ ಲೇಕರ್ ಆಯೀ ಹೆ. ಇಸ್ ಬಾರ್ ಸಬ್ ಶುಭ್ ಹೀ ಹೋಗಾ. ಯೇ ಲಾಲಿ ಕೆ ಸಾಥ್ ಮಾ ಲಾಲಾ ಭೀ ಆವೇಗಾ.... ಇಸೇ ಮಾರ್ನಾ ಮತ್...."(ನಿನ್ನ ಮಗಳು ಒಳ್ಳೆಯ ಶಕುನ ಹೊತ್ತು ತಂದಿದ್ದಾಳೆ. ಈ ಸಲ ಎಲ್ಲವೂ ಶುಭವೇ. ಈ ಲಾಲಿಯ ಜೊತೆಯಲ್ಲಿ ಲಾಲಾನ ಆಗಮನವೂ ಆಗುತ್ತದೆ. ಇವಳನ್ನು ಕೊಲ್ಲಬೇಡ) ಎಂದು ಯಾರೂ ನಿರೀಕ್ಷಿಸಿರದ ಸುಗ್ರೀವಾಜ್ಞೆ ಹೊರಡಿಸಿಬಿಟ್ಟ.‌....! 

ಅಷ್ಟೇ......!!

ಬೆಳಗಿನಿಂದ ಮೌನವೇ ತಾಂಡವವಾಡಿದ್ದ ಆ ಮನೆಯ ತುಂಬಾ ಸಂತಸ ಹೊನಲಾಗಿ ಹರಿಯತೊಡಗಿತು. ದಾದಾ, ದಾದಿ, ಚಾಚಾ ಮತ್ತು ಬಾಪೂನ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲಕ್ಕಿಂತ ದೊಡ್ಡ ನಿರಾಳತೆ ಚೋಟಿ ಮಾಯಿಗೆ. ಭವಿಷ್ಯತ್ತಿನ ಭಯದ ಕಬಂಧ ಬಾಹುಗಳಲ್ಲಿ ಸಿಲುಕಿ ಕ್ಷಣಕ್ಷಣಕ್ಕೂ ಸಾಯುತ್ತಿದ್ದವಳನ್ನು ಬಾಬಾನ ಒಂದು ವಾಣಿ ಬದುಕಿಸಿತ್ತು. ಅವಳೊಂದಿಗೆ ನನ್ನನ್ನೂ.... ಆ ಘಳಿಗೆಯಲ್ಲಿ ಕೊಂಚ ನಿರಾಳವಾಗಿ ಉಸಿರಾಡಿದ್ದಳಾಕೆ. ಆದರೆ ಚಾಚಿಯ ಮನದ ಭಾವನೆಗಳು ಮಾತ್ರ ಖುದ್ದು ಅವಳದೇ ಗ್ರಹಿಕೆಗೂ ನಿಲುಕದಷ್ಟು ಗೋಜಲಾಗಿದ್ದವು. ನಾನು ಸಾವನ್ನು ಜಯಿಸಿದೆನೆಂದು ಸಂತಸ ಪಡಬೇಕೋ ಇಲ್ಲಾ ನನ್ನ ಮುಂದಿನ ಹೋರಾಟದ ಬದುಕನ್ನು ನೆನೆದು ಸಂತಾಪ ಸೂಚಿಸಬೇಕೋ ಎಂಬ ಉತ್ತರ ಸಿಗದ ಪ್ರಶ್ನೆಯ ಬೆನ್ನು ಬಿದ್ದು ಮೌನಿಯಾಗಿದ್ದಳಾಕೆ‌. 

ಲಾಲಾನ ಆಗಮನವೆಂದರೆ ಭಗವಂತನ ಆಗಮನವಷ್ಟೇ..... ಬರಲಿರುವ ಭಗವಂತನನ್ನು, ಕುಲ ತಿಲಕನನ್ನು ಸ್ವಾಗತಿಸಲು  ಏನೆಲ್ಲಾ ತಯಾರಿಯಾಗಬೇಕೆಂದು ಆಗಿನಿಂದಲೇ ಚರ್ಚೆಗಳು ಆರಂಭವಾದವು. ನಿರೀಕ್ಷೆಗೂ ಮೀರಿದಷ್ಟು ಫಲ ತಾಂಬೂಲ ಭಕ್ಷೀಸುಗಳು ಬಾಬಾನ ಪದತಲಕ್ಕೆ ಸಮರ್ಪಣೆಯಾದವು. ಕೈ ತುಂಬಾ ಸಿಕ್ಕ ಭಕ್ಷೀಸಿನಿಂದ ಸಂತೃಪ್ತನಾಗಿ ಆಶೀರ್ವದಿಸಿ ತೆರಳಿದ ಆತ.

ಅವನು ನೀಡಿದ ಶುಭಸುದ್ದಿಯ ಮುಂದೆ ನಾನು ಸತ್ತರೆಷ್ಟು, ಬಿಟ್ಟರೆಷ್ಟು? ಅವನ ಮಾತೇ ಅಂತಿಮ ಇಡೀ ಶಾಮ್ಲಿಯಲ್ಲಿ. ಲಾಲಾನ ಆಗಮನದ ಸಂಭ್ರಮದ ಮುಂದೆ ಬೇರೆಲ್ಲವೂ ಗೌಣವಾಗಿತ್ತು. 'ಬಾಬಾ ಹೇಳಿದಂತೆ ಕೊಲ್ಲುವುದು ಬೇಡ, ಮನೆಕೆಲಸ ಮಾಡಿಕೊಂಡು ಯಾವುದೋ ಮೂಲೆಯಲ್ಲಿ ಬಿದ್ದಿರಲಿ' ಎಂದು ನಿರ್ಧಾರವಾಯಿತು.... 

ಲಾಲಾನ ಆಗಮನದ ಸಂತೋಷವನ್ನು ಹಂಚಿಕೊಳ್ಳಲು ಮರುದಿನ ಫೇಣಿ, ಮಲಾಯಿ ಮಕ್ಕನ್, ಚಂಚಂ ಇತ್ಯಾದಿ ಮಿಠಾಯಿಗಳ ಸಮೇತ ದಾವತ್ ಕರೆ ರಾತ್ರೋರಾತ್ರಿ ಊರಿನ ಪ್ರತೀ ಮನೆಯನ್ನೂ ತಲುಪಿತು. ನನ್ನ ಮಾಯಿ ಎಂಬುವವಳೊಬ್ಬಳು ಈ ದಿನ ಬೆಳಿಗ್ಗೆ ಜೀವ ತೆತ್ತಿದ್ದಾಳೆ ಎಂಬ ಕುರುಹೂ ಇಲ್ಲದಂತೆ ಮನೆ ಜಗಮಗಿಸತೊಡಗಿತ್ತು.

ಹೀಗೆ ಚೋಟಿ ಮಾಯಿಯ ದಯೆಯಿಂದ ಬದುಕುವ ಅವಕಾಶವೊಂದು ಲಭಿಸಿತ್ತು ನನಗೆ. ಆದರೆ ನನ್ನ ಇಚ್ಛಾನುಸಾರ ಜೀವಿಸುವ ಹಕ್ಕು ಖಂಡಿತಾ ನನ್ನ ಪಾಲಿಗಿರಲಿಲ್ಲ. ನನಗೆ ಆಯ್ಕೆಯ ಅವಕಾಶವಿರಲಿಲ್ಲ. ನನ್ನ ಬದುಕು ಪಂಜರದ ಪಕ್ಷಿಯಾಗಿಯೇ ಎಂದು ನಾನು ಜನಿಸಿದಾಗಲೇ ನಿರ್ಧರಿತವಾಗಿತ್ತು.

ಆದರೆ.......

ನಾನು ಯಾವ ಕಾರಣಕ್ಕೂ ಪಂಜರದ ಪಕ್ಷಿಯಾಗಲಾರೆ. ಮಾಯಿ, ಚಾಚಿಯರಂತೆ ಎಲ್ಲವನ್ನೂ ಸಹಿಸಲಾರೆ.  ರೆಕ್ಕೆಗಳನ್ನು ಚಾಚಿ ಮುಗಿಲೆತ್ತರಕ್ಕೆ ಹಾರಿ ಈ ಲೋಕದ ಕಟ್ಟುಪಾಡುಗಳ ಕೈಗೆ ದೂರ ಸಾಗಬೇಕು ನಾನು. ನನ್ನ ಧ್ವನಿಯಡಗಿಸಲು ಯತ್ನಿಸುವವರ ದನಿಯುಡುಗಿಸಬೇಕು ನಾನು......

ದಿನಗಳು, ಸಂವತ್ಸರಗಳು ಯಾರ ಅಪ್ಪಣೆಯಿಲ್ಲದೇ ಉರುಳುತ್ತವೆ. ಅವುಗಳನ್ನು ಯಾವ ಪಂಜರದಲ್ಲಿ ಬಂಧಿಸಿಡಲಾದೀತು? ಸಮಯ ಯಾರಿಗೂ ತಲೆಬಾಗದು.  ಬಾಬಾನ ಭವಿಷ್ಯದಂತೆಯೇ ಮನೆಗೆ ಲಾಲಾನ ಆಗಮನವಾಗಿತ್ತು. ಮನೆಯವರ ಸಂತಸಕ್ಕೆ ಮೇರೆಯೇ ಇರಲಿಲ್ಲ. ವಂಶವನ್ನು ಬೆಳಗಿಸುವವ ಎಂಬರ್ಥದಲ್ಲಿ ದಾದಿ ಅವನಿಗೆ ಕುಲ್ದೀಪ್ ಎಂದು ನಾಮಕರಣ ಮಾಡಿದ್ದರು. ಅವನ ಆಗಮನದಿಂದ ಮನೆಯ ಬಹುದೊಡ್ಡ ಕೊರತೆ ನೀಗಿತ್ತು. ಮನೆಯವರ ಕಣ್ಮಣಿಯಾಗಿದ್ದ ಅವನು ಕಡೆಗಣ್ಣಲ್ಲಿ ತೋರಿದ್ದನ್ನು ತಲೆಯ ಮೇಲಿಟ್ಟು ನೆಡೆಸುತ್ತಿದ್ದರು. 

ಆದರೆ ನಾನು.....?

ನಾನು ಆ ಮನೆಯಲ್ಲಿ ಅನಗತ್ಯ ಹೊರೆಯಾಗಿದ್ದೆ ಹಾಗೂ ಮನೆಯವರ ನಡವಳಿಕೆ ಅದನ್ನು ನನಗೆ ಪ್ರತಿಕ್ಷಣವೂ ನೆನಪಿಸುತ್ತಿತ್ತು. ಬೆಳಿಗ್ಗೆ ಬೇಗನೇ ಎದ್ದು ಅಂಗಳ ಗುಡಿಸುವುದರೊಂದಿಗೆ ನನ್ನ ದಿನ ಆರಂಭವಾಗುತ್ತಿತ್ತು. ನಂತರ ಮನೆಯನ್ನೂ ಗುಡಿಸಿ, ಒರೆಸುವಷ್ಟರಲ್ಲಿ ಚಾಚಿ ಕೊಟ್ಟಿಗೆಯ ಕೆಲಸ ಮುಗಿಸಿರುತ್ತಿದ್ದಳು. ಆನಂತರ ಇಬ್ಬರೂ ರಸೋಯಿ ಘರ್(ಅಡುಗೆ ಕೋಣೆ) ಹೊಕ್ಕರೆ ಮಧ್ಯಾಹ್ನದ ತನಕ ಅಲ್ಲೇ ನಮ್ಮ ವಾಸ. ಲಾಲಾನನ್ನು ಹಡೆಯುವಳೆಂದು ಬಾಬಾ ಭವಿಷ್ಯ ನುಡಿದಂದಿನಿಂದ ಚೋಟಿ ಮಾಯಿಗೆ ರಸೋಯಿ ಕೆಲಸದಿಂದ ಸಂಪೂರ್ಣ ವಿನಾಯ್ತಿ ದೊರಕಿತ್ತು. ಚಾಚಿಯೊಬ್ಬಳೇ ಅಡುಗೆ ಸಂಭಾಳಿಸಬೇಕಿತ್ತು.  ಈಗೀಗ ನಾನು ಅವಳೊಂದಿಗೆ ಕೈ ಜೋಡಿಸತೊಡಗಿದ್ದೆ. ಎಲ್ಲರ ಊಟ ಮುಗಿದು ನಾವಿಬ್ಬರೂ ಒಂದಿಷ್ಟು ಹೊಟ್ಟೆಗಿಳಿಸಿ ಪಾತ್ರೆಗಳನ್ನು ತೊಳೆದು ಮುಗಿಸುವಷ್ಟರಲ್ಲಿ ಸೂರ್ಯ ಅಸ್ತಮಿಸಲು ತಯಾರಿರುತ್ತಿದ್ದ. ಆಗೊಂದರೆಘಳಿಗೆ ವಿರಮಿಸಲು ಸಮಯ ಸಿಕ್ಕರೆ ಪುಣ್ಯ. ನಂತರ ಮತ್ತೆ ರಾತ್ರಿಗಾಗಿ ರೋಟಿ ಸುಡುವ ಕಾರ್ಯಕ್ರಮ ಆರಂಭವಾಗಿಬಿಡುತ್ತಿತ್ತು. ನಾನು ಬೇಲನ್ ನಲ್ಲಿ ರೋಟಿ ಲಟ್ಟಿಸಿದರೆ ಚಾಚಿ ಅದನ್ನು ಅರೆ ಬೇಯಿಸಿ ನಂತರ ತಂದೂರಿ ಮಟ್ಕಾದೊಳಗೆ ಅದನ್ನು ಎರಡೂ ಬದಿ ಬೇಯಿಸುತ್ತಿದ್ದಳು. ಇದೆಲ್ಲಾ ಮುಗಿದು, ರಸೋಯಿ ಶುಚಿರುಚಿಯಾಗಿಸಿ ಹಾಸಿಗೆಗೆ ತಲೆ ಸೋಕುವಾಗ ಮಧ್ಯರಾತ್ರಿಯೇ.... ಮರುದಿನ ಮತ್ತದೇ.....

ಹೀಗೇ ಎಳೆಯುತ್ತಿತ್ತು ಬಾಳಬಂಡಿ..... 

ಚಿಕ್ಕಂದಿನಿಂದಲೇ ಪರಕೀಯತೆಯ ಅಸುರಕ್ಷಿತ ಭಾವವೊಂದು ನನ್ನೊಂದಿಗೇ ಬೆಳೆಯತೊಡಗಿತ್ತು. ನಾನು ಬೆಳೆದು, ಬುದ್ಧಿ ಬಲಿತು, ಮನಸ್ಸು ಸುತ್ತಲಿನ ಘಟನೆಗಳ ವಿಶ್ಲೇಷಣೆಗೆ ತೊಡಗುವಷ್ಟು ಪ್ರಬುದ್ಧವಾಗುವ ಸಮಯಕ್ಕೆ ಆ ಭಾವ ಇನ್ನೂ ಬಲವಾಗಿ ಬೇರೂರಿಬಿಟ್ಟಿತು ನನ್ನಲ್ಲಿ. ಅದು ನನ್ನೊಳಗೆ ಅಸಹನೆಯೊಂದನ್ನು ಸೃಷ್ಟಿಸಿತ್ತು. ಕುಲ್ದೀಪ್ ಹಾಗೂ ನನ್ನ ನಡುವೆ ಮನೆಯವರು ತೋರುತ್ತಿದ್ದ ತಾರತಮ್ಯ ನನ್ನ ಅಸಹನೆಯನ್ನು ಇನ್ನಷ್ಟು ಬಲಗೊಳಿಸುತ್ತಿತ್ತು.

ದಾದಾ ಹಾಗೂ ಚಾಚೂವಿನ ಚೂಪು ನೋಟದಿಂದ ನಾನು ಸದಾ ದೂರವೇ.... ದಾದಿ ಹಾಗೂ ಬಾಪುವಿನದ್ದೂ ಅದೇ ತಿರಸ್ಕಾರದ ನೋಟವಾದರೂ ಅದ್ಯಾಕೋ ನಾನು ಅವರಿಬ್ಬರಿಗೂ ಹತ್ತಿರವಾಗಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಿದ್ದಂತೂ ಸುಳ್ಳಲ್ಲ. ಕುಲ್ದೀಪ್ ದಾದಿಯ ತೊಡೆಯೇರಿ ಕುಳಿತು ಅವರ ಗೂಂಗಟ್ ಎಳೆಯುವಾಗ, ಅವರು ಅವನನ್ನು ಮುದ್ದುಗರೆಯುವಾಗ, ಆ ದೊಡ್ಡ ಅಂಗಳದ ತುಂಬಾ ಓಡುವ ಅವನ ಬೆನ್ನತ್ತಿ ಅಕ್ಕರೆಯಲ್ಲಿ ತುತ್ತಿಡುವಾಗೆಲ್ಲಾ ನನ್ನನ್ನೂ ದಾದಿ ಹಾಗೇ ರಮಿಸಿ ಮುದ್ದಿಸಬೇಕೆಂಬ ಅದಮ್ಯ ಬಯಕೆ.... ಬಾಪೂ ಹೆಮ್ಮೆಯಿಂದ ಅವನನ್ನು ಹೆಗಲ ಮೇಲೇರಿಸಿಕೊಂಡು ಮೇಲಾ(ಜಾತ್ರೆ) ಸುತ್ತಾಡಿಸುವಾಗ, ಅವನನ್ನು ಬೆನ್ನ ಮೇಲೇರಿಸಿಕೊಂಡು ಘೋಡಾ ಸವಾರಿ ಮಾಡಿಸುವಾಗ ಅವನ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳುವ ಆಸೆ. ಹಠಹಿಡಿದು ದಾದಿಯ ಬೆನ್ನು ಬಿದ್ದಾಗೆಲ್ಲ, 'ಏ ಚೋರೀ, ಚಲ್ ದಫಾ ಹೋಜಾ, ಡಾಯನ್ ಕಹೀ ಕೀ' ಎಂಬರ್ಥದ ಬೈಗುಳಗಳೇ ದಕ್ಕಿದ್ದು. ಆಸೆಪಟ್ಟು ಬಾಪೂ ಬಳಿ ಸಾರಿದಾಗೆಲ್ಲ ನನಗೆ ದೊರಕಿದ್ದು ತಿರಸ್ಕಾರ ಹಾಗೂ ಬೈಗುಳಗಳು ಮಾತ್ರ. ಹಾಗೇ ಒಂದಷ್ಟು ಬಾರಿ ಥಪ್ಪಡ್, ಪಿಟಾಯಿ ಸೇವೆಗಳಾದ ನಂತರ ನಾನೇ ಅವರಿಬ್ಬರಿಂದಲೂ ದೂರ ನಿಲ್ಲತೊಡಗಿದೆ. 

ಜೊತೆಗೆ ಇನ್ನೊಂದು ಹೊಡೆತ ಬಿದ್ದಿದ್ದು  ಚೋಟಿಮಾಯಿಯ ಕಡೆಯಿಂದ. ಕುಲ್ದೀಪನ ಆಗಮನದ ನಂತರ ಸ್ವಲ್ಪ ಸ್ವಲ್ಪ ಬದಲಾಗಿದ್ದ ಚೋಟಿ ಮಾಯಿಯ ನಡವಳಿಕೆ ಕುಲ್ಜೀತ್ ಹುಟ್ಟಿದ ನಂತರ ಸಂಪೂರ್ಣವಾಗಿ ಬದಲಾಗಿತ್ತು. ಮುಂಚೆಲ್ಲಾ ಅಕ್ಕರೆ, ಮಮತೆ ತೋರುತ್ತಿದ್ದವಳು ನಿಧಾನವಾಗಿ ನನ್ನೆಡೆಗೊಂದು ಅಸಡ್ಡೆ, ಅನಾದರವನ್ನು ಬೆಳೆಸಿಕೊಳ್ಳತೊಡಗಿದ್ದಳು. ಮುಂಚೆ ಇದ್ದ ಮಮಕಾರ, ಅಂತಃಕರಣಗಳಿಗೆಲ್ಲಾ ತಿಲಾಂಜಲಿ ಇಟ್ಟು ನನ್ನ ಕಂಡೊಡನೆ ಹೀಯಾಳಿಸುವ, ಸಿಡಿಮಿಡಿಗುಟ್ಟುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಳಾಕೆ. ಇದಕ್ಕೆ ಕಾರಣ ಪ್ರಾಯಶಃ ಇಬ್ಬರು ಗಂಡುಮಕ್ಕಳು ಹುಟ್ಟಿದ ನಂತರ ಮನೆಯಲ್ಲಿ ಅವಳಿಗೆ ಸಿಕ್ಕ ಗೌರವ, ಅಧಿಕಾರಗಳಿರಬಹುದು. ಆದರೆ ಚಾಚಿಯನ್ನು ಬಿಟ್ಟರೆ ಅವಳನ್ನೇ ಕೊಂಚ ಹೆಚ್ಚೇ ಎನಿಸುವಷ್ಟು ಹಚ್ಚಿಕೊಂಡಿದ್ದ ನನಗೆ ಅವಳ ವರ್ತನೆ ತೀವ್ರತರನಾದ ಆಘಾತವನ್ನು ತಂದಿತ್ತು. ಈ ನಿರ್ಲಕ್ಷ್ಯ, ಅನಾದರ ಹೆಚ್ಚುತ್ತಾ ಹೋದಂತೆಲ್ಲಾ ನಾನು ಚೋಟಿ ಮಾಯಿಯಿಂದ ದೂರವಾಗುತ್ತಾ ಬಂದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಅಂತರಾಳವನ್ನು ಕದಡಿ ರಾಡಿಯಾಗಿಸಿ, ನನ್ನೊಳಗೆ ಅಚ್ಚಳಿಯದ ಭಯವೊಂದನ್ನು ಸೃಷ್ಟಿಸಿದ್ದು.......

ಚಾಚಿಯ ಹೆಣ್ಣು ಮಗುವಿನ ಕೊಲೆ.....

ಹೌದು ಕೊಲೆಯೇ ಅದು.....

ಚಾಚಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮರುಘಳಿಗೆಯೇ ಚಾಚೂ ಅದನ್ನು ಉಸಿರುಗಟ್ಟಿಸಿ ಕೊಂದಿದ್ದ.... ಮನೆಯ ಹಿಂಭಾಗದ ಕುರುಚಲು ಕಾಡಿನೊಳಗೆ ಒಂದು ಗುಂಡಿ ತೋಡಿ ಆ ನನ್ನ ತಂಗಿಯನ್ನು ಮಣ್ಣಾಗಿಸುವಾಗ

"ಲಾಲೀ ಲಡ್ಕೀ ತೂ ಜಾ..... 

ಔರ್ ಲಾಲಾ ಲಡ್ಕಾ ತು ಲೇ ಆ....." 

(ಓ ಹೆಣ್ಣೇ ನೀನು ವಾಪಾಸು ಹೋಗು.....

ಗಂಡು ಮಗನನ್ನು ವಾಪಾಸು ತಾ...)

ಎಂಬ ಮಂತ್ರ ಪಠಿಸಿ ಮಣ್ಣಾಗಿಸಿದ್ದರು.

ಚಾಚಿ ಮಗುವಿನ ಮುಖವನ್ನೂ ಕಾಣಲಿಲ್ಲ.... ಪ್ರಸವ ವೇದನೆಯಿಂದ ಸುಸ್ತಾಗಿ ಮಲಗಿದ್ದ ಅವಳಿಗೆ ಎಚ್ಚರವಾಗುವ ಸಮಯಕ್ಕೆ ಎಲ್ಲವೂ ಮುಗಿದಿತ್ತು. ಅವಳು ಮಗುವಿಗಾಗಿ ಅಕ್ಕಪಕ್ಕ ತಡಕಾಡಿ ಮೌನವಾಗಿ ಕಣ್ಣೀರು ಸುರಿಸಿದ್ದೇ ಬಂತು. ಅಂದಿನಿಂದ ಬಹಳ ದಿನಗಳವರೆಗೆ ಭಯದ ನೆರಳಿನಲ್ಲಿಯೇ ಇದ್ದೆ. ನನ್ನನ್ನು ಯಾವುದೋ ಕಾಣದ ಕೈಗಳು ಉಸಿರುಗಟ್ಟಿಸಿದಂತಹ ಕನಸು ಪದೇ ಪದೇ ಬೀಳುತ್ತಿತ್ತು. ಭಯದಲ್ಲಿ ಚಾಚಿಯನ್ನು ಅಪ್ಪಿ ಮಲಗುತ್ತಿದ್ದೆ. ನನ್ನ ಭಯ ಓಡಿಸಿ ಧೈರ್ಯ ನೀಡುವ ಚೇತನ ಅವಳಾದರೆ, ಮಗಳ ಕಳೆದುಕೊಂಡು ಬರಿದಾದ ಅವಳೊಡಲಿನ ಬೇಗೆಯ ಸಂತೈಸುವ ಕೈ ನಾನಾದೆ. ಆಕೆ ನನ್ನ ಹೆತ್ತ ತಾಯಿಯಲ್ಲ, ನಾನು ಅವಳ ಒಡಲಲ್ಲಿ ನವಮಾಸ ಇದ್ದ ಮಗಳಲ್ಲ ಎನ್ನುವುದೊಂದನ್ನು ಹೊರತುಪಡಿಸಿದರೇ ನಾವಿಬ್ಬರೂ ತಾಯಿ ಮಕ್ಕಳೇ.... ನಾನಾಕೆಯನ್ನು ಮಾಯಿ ಎಂದು ಕರೆಯುತ್ತಿದ್ದೆ. ಅವಳು ನನ್ನ ಬಿಟಿಯಾ ರಾನಿ ಎನ್ನುತ್ತಿದ್ದಳು.

ಈ ಎಲ್ಲಾ ಘಟನೆಗಳೂ ನನ್ನ ಬದುಕೆಂಬ ಯಜ್ಞದಲ್ಲಿ ಸಮಿದೆಗಳಾಗಿದ್ದವಾ ....? ಗೊತ್ತಿಲ್ಲ. ಆದರೆ ಒಂದಂತೂ ನನಗೆ ನಿಚ್ಚಳವಾಗಿತ್ತು. ನನ್ನ ಬದುಕಿನಲ್ಲಿ ನನಗೆಂದು ಇರುವುದು ಚಾಚಿ ಮಾತ್ರಾ.

ಹೌದು.... ಈ ಬರಡು ಬೆಂಗಾಡಿನಂತಹ ಬಾಳಿನಲ್ಲಿ ಓಯಸಿಸ್ ನಂತೆ ಇದ್ದದ್ದು ಚಾಚಿಯೊಬ್ಬಳೇ... ಮನೆಯ ತುಂಬಾ ಸದಸ್ಯರಿದ್ದರೂ ನನಗೆ ಮರೀಚಿಕೆಯಾಗಿದ್ದು ಪ್ರೀತಿ, ಮಮತೆ. ಆದರೆ ಅವರೆಲ್ಲರ ಪ್ರೀತಿಯನ್ನೂ ಸೇರಿಸಿ ಅಂಕೆಯಿಲ್ಲದ ಪ್ರೀತಿ, ಮಮತೆಯ ವರ್ಷಧಾರೆ ಹರಿಸಿ ನನ್ನನ್ನು ಸಲಹಿದವಳು ಚಾಚಿಯೇ. ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾದವಳು, ನೋವಿಗೆ ಮದ್ದಾದವಳು, ಅಳಲಿಗೆ ಕಿವಿಯಾದವಳು ಅವಳೇ.... 

ನನಗಿನ್ನೂ ನೆನಪಿದೆ. ಕುಲ್ದೀಪನ ನಾಮ್ಕರಣ್ ಬಹಳ ಸಂಭ್ರಮದಿಂದ ನಡೆದಿತ್ತು. ರಾಶಿ ರಾಶಿ ಜನರು ನೋಟುಗಳ ಮಾಲೆ ಮಾಡಿ ಅವನ ಕುತ್ತಿಗೆಗೇರಿಸಿದ್ದರು. ಆದರೆ ಅದೇ ಮನೆಯಲ್ಲಿದ್ದ ನನಗೆ ಒಂದು ಹೆಸರು ನೀಡುವ ಯೋಚನೆಯೂ ಯಾರಿಗೂ ಇರಲಿಲ್ಲ. ಎರಡು ವರ್ಷಗಳ ತನಕವೂ 'ಚೋರಿ ಆಜಾ ಇದರ್'(ಏ ಹುಡುಗಿ ಬಾ ಇಲ್ಲಿ), 'ಏ ಚೋಕ್ರಿ... ಜಾಡೂ ಪೋಛಾ  ಕರ್ನಾ'(ಏ ಹುಡುಗಿ ನೆಲ ಗುಡಿಸಿ ಒರೆಸು), 'ಅರೆ ಓ ಲಡ್ಕೀ ಬರ್ತನ್ ಧೋನಾ'(ಅರೇ ಹುಡುಗಿ, ಪಾತ್ರೆ ತೊಳೆ) ಹೀಗೇ ಮನಸ್ಸಿಗೆ ತೋಚಿದಂತೆ ಸಂಬೋಧಿಸುತ್ತಿದ್ದರು ನನ್ನನ್ನು. 

ಒಮ್ಮೆ ಕೇಳಿದ್ದೆ ಚಾಚಿಯಲ್ಲಿ... ಎಲ್ಲರೂ ನಿನ್ನನ್ನು ಕಜರೀ ಎಂದೇಕೆ ಕರೆಯುವರು ಎಂದು. ಅವಳಿಗೋ ಆಶ್ಚರ್ಯ. ಅದೇ ಅಚ್ಚರಿಯ ನೋಟದಲ್ಲಿ ಹೇಳಿದ್ದಳು... 

"ಕಜರೀ ಮ್ಹಾರಿ ನಾಮ್ ಹೆ ಬಿಟಿಯಾ ರಾನಿ...."   ಎಂದಿದ್ದಳಾಕೆ‌

"ಫಿರ್ ಮ್ಹಾರೇ ಕೋ ಕಾಹೆ ಸಬ್ ಚೋರಿ, ಚೋಕರಿ, ಲಡ್ಕೀ ಕಹ್ಕೇ ಬುಲಾವೇ...?" ನನ್ನ ಅನುಮಾನ ಹೇಳಿದೆ. ಆಗ ಅರಿವಾಗಿತ್ತು ಚಾಚಿಗೆ ಈ ಮಗಳಿಗೆ ಒಂದು ನಾಮಧೇಯವೇ ಇಲ್ಲವೆಂದು...... ಆ ದಿನವೆಲ್ಲಾ ಯೋಚಿಸಿ, ಚಿಂತಿಸಿ ಮರುದಿನ ವೇಳೆ, ಘಳಿಗೆ ನೋಡಿ ದೇವರ ಕೋಣೆಯಲ್ಲಿ ಭಗವಂತನಿಗೊಂದು ದೀಪ ಬೆಳಗಿ.....

"ಸೀತಾ ಮಯ್ಯಾ ಕೀ ಜೈಸೀ ಸೂರತ್, ತ್ಯಾಗ್ ಔರ್ ಸೆಹನ್ಶೀಲತಾ ಕೀ ಮೂರತ್..... ಮ್ಹಾರೀ ಬಿಟಿಯಾ ರಾನಿ....... ಸಿಯಾ ಬನೇಗೀ ಮಾಯಿ ಕೀ ತಾಕತ್..... ಸಿಯಾ ಸಿಯಾ ಸಿಯಾ....." ಎಂದು ನನ್ನ ಕಿವಿಯಲ್ಲಿ ಮೂರು ಬಾರಿ ಅರುಹಿದಳು.....

ಹೀಗೆ ನಡೆದಿತ್ತು ನನ್ನ ನಾಮಕರಣ......

ಮರುದಿನದಿಂದ ನನ್ನನ್ನು ಚೋರಿ, ಚೋಕರೀ, ಲಡ್ಕೀ ಅಂದವರಿಗೆಲ್ಲಾ ಹಮ್ಮಿನಿಂದ ಜೋರಿನಲ್ಲಿ ಹೇಳಿದ್ದೆ.....

"ಮ್ಹಾರೀ ನಾಮ್ ಸಿಯಾ ಹೇ.... ಐಸಾ ಹೀ ಬುಲಾನಾ...."

ನನ್ನ ಈ ವರಸೆ ಕಂಡು ಮನೆಯವರು ಒಂದು ಸಾರಿ ಬೆಚ್ಚಿದ್ದು ಸುಳ್ಳಲ್ಲ. ಆದರೆ ನನಗೊಂದು ಹೆಸರು ದೊರೆತ ಖುಷಿಯ ಮುಂದೆ ಅವರ ಪ್ರತಿಕ್ರಿಯೆಗಳೆಲ್ಲಾ ಗೌಣವೇ..... 'ಸಿಯಾ' ಎಂದೇ ಕರೆಯದ ಹೊರತು ತಿರುಗಿಯೂ ನೋಡುತ್ತಿರಲಿಲ್ಲ ನಾನು. ಹಾಗಾಗಿ ಅವರೆಲ್ಲರಿಗೂ ನನ್ನನ್ನು ಸಿಯಾ ಎಂದೇ ಕರೆಯುವುದು ಅನಿವಾರ್ಯವಾಯಿತು. ಇದರಿಂದ ನನಗೂ ಒಂದು ವಿಚಾರ ಸ್ಪಷ್ಟವಾಯಿತು. ಇಲ್ಲಿ ನನ್ನ ಇಚ್ಛಾನುಸಾರ ಜೀವಿಸಬೇಕೆಂದರೆ ನಾನು ಹೋರಾಡಲೇಬೇಕು.... ತಿರುಗಿಬಿದ್ದು ಹಠ ಹಿಡಿಯದೇ ಹೋದರೆ ಈ ಸಮಾಜ ನನ್ನನ್ನು ಪಾತಾಳಕ್ಕೆ ತಳ್ಳುತ್ತದೆ.... ಬಹುಶಃ ಆ ಕ್ಷಣದಿಂದಲೇ ನನ್ನೊಳಗೆ ಭಾಗೀ (ಬಂಡಾಯಗಾರ್ತಿ)ಯೊಬ್ಬಳು ಮೆಲ್ಲಗೆ ಕದಲಲಾರಂಭಿಸಿದ್ದಳು ಅನ್ನಿಸುತ್ತದೆ. ಹೇಗೂ ಭವಿಷ್ಯತ್ತಿನಲ್ಲಿ ನನ್ನ ಬದುಕಿನ ತುಂಬಾ ಬಂಡಾಯವೇ ಇತ್ತಲ್ಲ......

ಭಗವಂತನ ದಯೆಯಿಂದ ಕಾಯಿಲೆ ಕಸಾಲೆಗಳೆಂದೂ ನನ್ನನ್ನು ಕಾಡಲಿಲ್ಲ. ಆ ಮಟ್ಟಿಗಂತೂ ಗಟ್ಟಿಪಿಂಡವೇ ನಾನು‌. ಹಾಗಾಗಿ ಔಷಧಿ, ಆಸ್ಪತ್ರೆಗಳ ವಿಚಾರದಲ್ಲಿ ಮನೆಯವರೊಂದಿಗೆ ಕದನಕ್ಕೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಲಿಲ್ಲ.

ನನ್ನ ಮೊದಲ ಅಧಿಕೃತ ಹೋರಾಟಕ್ಕೆ ಕಾರಣವಾದದ್ದು ಓದು.......

ಮನೆಯೇ ಒಂದು ಪಂಜರವಾಗಿದ್ದ ನನಗೆ ಪಂಜರದಿಂದ ಹೊರಹಾರುವುದೇ ಬದುಕಿನ ಗಮ್ಯವೆನಿಸಿಬಿಟ್ಟಿತ್ತು. ಚಾಚಿ ನಾನು ತೊದಲು ನುಡಿಯಲು ಆರಂಭಿಸಿದಂದಿನಿಂದಲೇ ಮುಂದೆ ನಾನು ಎದುರಿಸಬೇಕಾದ ಸನ್ನಿವೇಶಗಳ ಬಗ್ಗೆ, ಬರಬಹುದಾದ ಅಡೆತಡೆಗಳ ಬಗ್ಗೆ ತನಗೆ ತಿಳಿದಂತೆ ಸೂಕ್ಷ್ಮವಾಗಿ ತಿಳಿಹೇಳುತ್ತಾ ಬಂದಿದ್ದಳು. ಹಾಗಾಗಿ ನಾನು ನನ್ನ ವಯಸ್ಸಿನ ಇತರೆ ಮಕ್ಕಳಿಗಿಂತ ಭಿನ್ನವಾಗಿ ಹಾಗೂ ಗಂಭೀರವಾಗಿ ಯೋಚಿಸತೊಡಗಿದ್ದೆ. ಆ ದಿನಗಳಲ್ಲೇ ಈ ಪಂಜರದಿಂದ ಹೊರಬಂದು ಹಾರಬೇಕೆಂದರೆ ನನ್ನ ಚಿಂತನೆಯ ರೆಕ್ಕೆಗಳು ಶಕ್ತಿಶಾಲಿಯಾಗಿರಬೇಕು ಎಂದು ಬಲವಾಗಿ ಅನಿಸತೊಡಗಿದ್ದು. ಚಿಂತನೆಗಳು ಪ್ರಭಾವಶಾಲಿಯಾಗಲು ಇದ್ದ ಒಂದೇ ದಾರಿ ಶಿಕ್ಷಣ.....

ಶಾಲೆಗೆ ಹೋಗುವ ಹಾಗೂ ಕಲಿಯುವ ಹಂಬಲ ಗಟ್ಟಿಯಾಗಿ ಬೇರೂರತೊಡಗಿತ್ತು.

ಆದರೆ...... 

ನನಗಿಂತ ಕಿರಿಯವನಾದ ಕುಲ್ದೀಪ್ ಶಾಲೆಗೆ ಹೋಗತೊಡಗಿದ್ದ. ಆದರೆ ನನ್ನನ್ನು ಶಾಲೆಗೆ ಕಳಿಸುವ ಪ್ರಸ್ತಾಪವೇ ಬರುತ್ತಿರಲಿಲ್ಲ. ನೋಡುವಷ್ಟು ನೋಡಿ ಚಾಚಿಯಲ್ಲಿ ನನ್ನ ಮನದಾಸೆ ಹೇಳಿದ್ದೆ. ನನ್ನ ಮಾತಿಗೆ ನಿಟ್ಟುಸಿರು ಬಿಟ್ಟಳು ಅವಳು....

"ಇದೆಂತಹಾ ಆಸೆ ಸಿಯಾ ಬಿಟಿಯಾ? ಇಲ್ಲಿ ಹೆಣ್ಣು ಮಕ್ಕಳಿಗೆ ಕಲಿಕೆ ವರ್ಜ್ಯ. ಅವರಿಗೆ ಮನೆಯ ಕೆಲಸ ಬೊಗಸೆಯ ಕಲಿಕೆ ಮಾತ್ರವೇ ಮುಖ್ಯ" ಎಂದಿದ್ದಳು. ನನಗೆ ಅವಳ ಮಾತುಗಳಿಂದ ವಿಪರೀತ ನಿರಾಸೆಯಾಯಿತು. ಇಷ್ಟಕ್ಕೂ ನನಗೆಂದು ಇದ್ದವಳು ಅವಳೊಬ್ಬಳೇ. ಅವಳೂ ನನ್ನ ಆಸೆಗೆ ತಣ್ಣೀರೆರಚುತ್ತಿರುವಳೆಂಬ ಬೇಸರ, ಸಿಟ್ಟು ಎಲ್ಲವೂ ಕಣ್ಣೀರ ರೂಪದಲ್ಲಿ ಹೊರಬಂದಿತ್ತು. ಅದೇನೆನಿಸಿತೋ ಚಾಚಿಗೆ.... ಆ ದಿನ ಸಂಜೆ ಮನೆಯವರೆಲ್ಲಾ ಹಜಾರದಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತುಕತೆಯಲ್ಲಿ ತೊಡಗಿದ್ದರು. ಪುಟಾಣಿ ಕುಲ್ಜೀತ್ ದಾದಿಯ ಮಡಿಲಲ್ಲಿ ಮಲಗಿದ್ದ. ಎರಡನೇ ಇಯತ್ತೆಯ ಕುಲ್ದೀಪ್ ಶಾಲಾ ಪುಸ್ತಕಗಳನ್ನು ಹಿಡಿದು ಸಪ್ಪೆ ಮೋರೆಯಲ್ಲಿ ಕುಳಿತ್ತಿದ್ದ. ಓದು, ಬರಹ ಎಳ್ಳಷ್ಟೂ ಹಿಡಿಸದ ಅವನಿಗೆ ಶಾಲೆಗೆ ಹೋಗುವ ಭಾಗ್ಯವಿತ್ತು. ಅದೇ ಅದಕ್ಕಾಗಿಯೇ ಕಾತರಿಸುತ್ತಿದ್ದ ನನಗೆ ಅಡುಗೆ ಮನೆಯೇ ಪಂಜರ...... ಎಂತಹ ವಿಪರ್ಯಾಸ.......

ಇಂತಹ ಸಂದರ್ಭದಲ್ಲಿ ಚಾಚಿ ನನ್ನ ಪರ ವಕಾಲತ್ತು ವಹಿಸಿ ನನ್ನನ್ನು ಶಾಲೆಗೆ ಕಳುಹಿಸುವ ಮಾತನಾಡಿದ್ದಳು. ಯಾರಾದರೂ ಬಾಯ್ತೆರುವ ಮೊದಲೇ ಚಾಚಾನ ಹಸ್ತದ ಅಚ್ಚು ಚಾಚಿಯ ಕೆನ್ನೆಯ ಮೇಲಿತ್ತು. 'ಒಂದು ಗಂಡು ಮಗುವನ್ನು ಹಡೆಯುವ ಯೋಗ್ಯತೆ ಇಲ್ಲ. ಇದರ ನಡುವೆ ಈ ಶನಿಯ ಉಸಾಬರಿ ಬೇರೆ' ಎಂದು ವಾಚಾಮಗೋಚರವಾಗಿ ಬೈಯತೊಡಗಿದ್ದ. ಅವನು ಮಾಡಿದ್ದು, ಹೇಳಿದ್ದು ಎಲ್ಲವೂ ಸರಿಯೇ ಎಂಬ ಭಾವ ಮನೆಯವರ ಮುಖದಲ್ಲಿದ್ದರೆ ಚಾಚುವಿನ ಜೋರುದನಿಗೆ ಕುಲ್ದೀಪ್ ಬೆಪ್ಪಾಗಿ ಕೂತಿದ್ದ ಹಾಗೂ ಮಲಗಿದ್ದ ಕುಲ್ಜೀತ್ ಗಾಬರಿಯಲ್ಲಿ ಅಳತೊಡಗಿದ್ದ. ಚೋಟಿ ಮಾಯಿ ಚಾಚಿಯೆಡೆಗೆ ತಿರಸ್ಕಾರದ ನೋಟವೊಂದನ್ನು ಬೀರಿ ಅಳುತ್ತಿದ್ದ ಕುಲ್ಜೀತನನ್ನು ಎತ್ತಿಕೊಂಡು ಒಳನಡೆದಿದ್ದಳು. ದಾದಿ, ದಾದ, ಬಾಪೂ ಕೂಡಾ ಚಾಚಿಯನ್ನು ನಿಂದಿಸತೊಡಗಿದ್ದರು. ನನಗೆ ಸಹಿಸಲಾಗಲಿಲ್ಲ.

ನಾನು ಓದಲೇ ಬೇಕೆಂದು, ಶಾಲೆಗೆ ಕಳಿಸದಿದ್ದರೆ ಉಪವಾಸ ಹಿಡಿದು ಸಾಯುವೆನೆಂದು ಚೀರಿ ಹೇಳಿದ್ದೆ.

"ಜಿತ್ನಾ ಜಲ್ದೀ ಹೋ ಸಕೇ ಉತ್ನಾ ಜಲ್ದೀ ಮರ್ ಜಾ ತೂ... ಇತ್ತೂ ಸೀ ಚೋಕರಿ ತೇರಿ ಜಬಾನ್ ಕಿತ್ನಾ ಲಂಬಾ ಚಲಾವತ್ ಹೇ ರೇ...? ಭಾಗೀ ಕಯ್ಕೀ..." (ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಯಿ. ಇಷ್ಟುದ್ದದ ಹುಡುಗಿ, ನಿನ್ನ ನಾಲಿಗೆ ಅದೆಷ್ಟು ಉದ್ದವಾಗಿದೆ?) ಎಂದು ಎರಡೇಟು ಹಾಕಿದ್ದಳು ದಾದಿ...

ನನ್ನನ್ನು ತಪ್ಪಿಸಲು ಹೋಗಿ ಚಾಚಿಗೆ ಸರಿಯಾಗಿಯೇ ಹೊಡೆತಗಳು ಬಿದ್ದಿದ್ದವು. ಜೊತೆಗೆ ಅಶ್ಲೀಲ ಮಾತಿನ ಪ್ರಹಾರಗಳೂ ಸೇರಿ ನಾವಿಬ್ಬರೂ ಜರ್ಜರಿತವಾಗಿದ್ದೆವು. ಎಲ್ಲರೆಡೆಗೆ ರೋಷ ಉಕ್ಕಿತ್ತು. ಚಾಚಿಯನ್ನು ಕರೆದುಕೊಂಡು ಒಳ ನಡೆದಿದ್ದ ನನ್ನ ಮನಸ್ಸು ಕಠೋರವಾಗತೊಡಗಿತ್ತು. ನಾನು ಉಪವಾಸವಿದ್ದು ಸತ್ತರೆ ನನಗೆ ನಷ್ಟವೇ ಹೊರತು ಬೇರೇನೂ ಬದಲಾಗದು, ನನ್ನ ಬದುಕಿಗಾಗಿ ನಾನೇ ಬಂಡೇಳಬೇಕು ಎಂಬ ನಿರ್ಧಾರ ಬಲವಾಗತೊಡಗಿತ್ತು. ದಾದಿ ಹೇಳಿದಂತೆ ಭಾಗಿ(ಬಂಡಾಯಗಾರ್ತಿ) ಯಾಗಬೇಕು ನಾನು. ನನ್ನ ಹಕ್ಕಿಗೆ ನಾನೇ ಹೋರಾಡಬೇಕು. ಆದರೆ ಹೋರಾಟದ ವಿಧಾನ ಜಾಣ್ಮೆಯಿಂದ ಕೂಡಿರಬೇಕು. ಕೋಪದಿಂದ ಕೂಗಾಡಿ, ಚೀರಾಡುವುದು ವ್ಯರ್ಥ. ಇದಕ್ಕೆ ಬೇರೆಯೇ ಮಾರ್ಗ ಹುಡುಕಬೇಕೆಂದು ತೀರ್ಮಾನಿಸಿದೆ. ಒಂದಿಷ್ಟು ದಿನ ಯೋಚಿಸಿ ಮಾರ್ಗವೊಂದನ್ನು ಕಂಡುಕೊಂಡೆ. 

ನಮ್ಮೂರ ಶಾಲೆ ಮನೆಯಿಂದ ಮೂರು ಮೈಲಿಗಳ ದೂರದಲ್ಲಿತ್ತು. ನಮ್ಮ ಜಮೀನು ದಾಟಿ, ಮುಂದಿದ್ದ ಸಣ್ಣ ಬೆಟ್ಟದಂತಹ ಹುಲ್ಲುಗಾವಲಿನ ಅಂಚಿಗೆ ಶಾಲೆಯ ಆವರಣ ಕಾಣಿಸುತ್ತದೆ. ಆ ಹುಲ್ಲುಗಾವಲಿನ ಜಮೀನೂ ದಾದೂವಿನದ್ದೇ. ನಾವು ಜಾನುವಾರಿಗೆ ಹುಲ್ಲನ್ನು ಒಟ್ಟುಮಾಡಲು ಅಲ್ಲಿಗೇ ಬರುತ್ತಿದ್ದೆವು. ಜೊತೆಗೆ ಸಣ್ಣ ಮರಗಳಿಂದ ಒಣ ಲಕಡಿಗಳನ್ನೂ ಉರುವಲಿಗಾಗಿ ಸಂಗ್ರಹಿಸುತ್ತಿದ್ದೆವು. 

ನಾನು ಬೆಳಿಗ್ಗೆ ಬೇಗನೆ ಎದ್ದು ನನ್ನ ಪಾಲಿನ ಕೆಲಸಗಳನ್ನೆಲ್ಲಾ ಮುಗಿಸಿ, ಚಾಚಿಗೆ ಅಡುಗೆ ಮನೆಯ ಕೆಲಸದಲ್ಲಿ ಸ್ವಲ್ಪ ಕೈ ಜೋಡಿಸಿ ಹತ್ತರ ಸುಮಾರಿಗೆ ಹುಲ್ಲಿಗೆಂದು ಹೋಗಲಾರಂಭಿಸಿದೆ. ಹಾಗೆ ಹೋಗುವವಳು ಹುಲ್ಲುಗಾವಲಿನ ಬೇಲಿ ದಾಟಿ ಶಾಲೆಯ ಹಿಂಭಾಗಕ್ಕೆ ಹೋಗಿ ಯಾವುದೋ ತರಗತಿಯ ಕಿಟಕಿಯ ಬಳಿ ಕುಳಿತು ಮಾಸ್ಟರ್ ಹೇಳುತ್ತಿದ್ದುದ್ದನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ಮಧ್ಯಾಹ್ನದ ಹೊತ್ತಿಗೆ ಒಂದಿಷ್ಟು ಹುಲ್ಲು ಕೊಯ್ದು ಜೋಡಿಸಿ ಮನೆಗೆ ವಾಪಾಸಾಗುತ್ತಿದ್ದೆ.

ಆದರೆ ಮಧ್ಯಾಹ್ನದ ತರುವಾಯ ಶಾಲೆಗೆ ಹೋಗಲಾಗುತ್ತಿರಲಿಲ್ಲ ನನಗೆ. ಜೊತೆಗೆ ದಿನಕ್ಕೊಂದು ತರಗತಿ, ಬೇರೆ ಬೇರೆ ಪಾಠ ಏನೊಂದೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ.... ಹೀಗೆ ನಡೆದಿತ್ತು.

ಅದೊಂದು ದಿನ ಸಂಜೆ ಕೊಟ್ಟಿಗೆಯಲ್ಲಿ ಹಸುಗಳಿಗೆ ಹುಲ್ಲು ಹಾಕುತ್ತಿದ್ದಾಗ ಕುಲ್ದೀಪ್ ಅಲ್ಲಿಗೆ ಬಂದು, 

"ನೀನು ದಿನಾ ಹುಲ್ಲಿಗೆ ಹೋಗುವೆನೆಂದು ಹೇಳಿ ಶಾಲೆಯ ಪಾಠ ಕೇಳೋದು ನನಗೆ ಗೊತ್ತು ಸಿಯಾ ದೀ..." ಎಂದುಬಿಟ್ಟಿದ್ದ. ಇದರ ನಿರೀಕ್ಷೆಯೇ ಇಲ್ಲದ ನಾನು ಏನು ಉತ್ತರಿಸಬೇಕೆಂದು ತಿಳಿಯದೇ ಕಂಗಾಲಾಗಿದ್ದೆ. ನಾನು ಮಾತನಾಡುವ ಮುನ್ನವೇ ಅವನೇ ಹೇಳಿದ್ದ.

"ಸಿಯಾ ದೀ... ನಾನು ಯಾರ ಹತ್ತಿರವೂ ಹೇಳುವುದಿಲ್ಲ. ಚಿಂತಿಸಬೇಡ. ಆದರೆ ನೀನು ನನಗೊಂದು ಸಹಾಯ ಮಾಡಬೇಕು. ನನಗೆ ಶಾಲೆಗೆ ಹೋಗುವುದೇ ಇಷ್ಟವಿಲ್ಲ. ನನ್ನ ತರಗತಿಯ ಹಿಂದೆ ಕುಳಿತು ನೀನು ದಿನಾ ಪಾಠ ಕೇಳು. ಮತ್ತೆ ಅವರು ಒಂದು ರಾಶಿ ಬರವಣಿಗೆಯನ್ನು ಮನೆಗೆಲಸವೆಂದು ಕೊಡುತ್ತಾರೆ. ನೀನು ನನಗೆ ಅದನ್ನೆಲ್ಲಾ ಬರೆದುಕೊಡು. ನಿನಗೆ ಇಷ್ಟವಾದದ್ದು ತಾನೇ ಓದುವುದು, ಬರೆಯುವುದು....." 

ಹೀಗೊಂದು ಕರಾರು ತಂದಿದ್ದ ಕುಲ್ದೀಪ್ ಮೇಲೆ ಪ್ರಪ್ರಥಮ ಬಾರಿಗೆ ಅತಿಯಾದ ಪ್ರೀತಿಯುಕ್ಕಿತ್ತು. ತಮ್ಮನಾದರೂ ನನ್ನ, ಅವನ ಒಡನಾಟ ಕಡಿಮೆಯೇ. ಅವನೊಂದಿಗೆ ಆಟವಾಡಲು ಬಿಡುತ್ತಿರಲಿಲ್ಲ ನನಗೆ. ಹಾಗಾಗಿ ನಾವಿಬ್ಬರೂ ದೂರದೂರವೇ. ಇಂದ್ಯಾಕೋ ಅವನು ಅತೀವ ಪ್ರಿಯ ತಮ್ಮನೆನಿಸಿಬಿಟ್ಟ. ಸಂತೋಷದಿಂದಲೇ ಅವನ ಮಾತಿಗೆ ಒಪ್ಪಿದ್ದೆ.

ಅಲ್ಲಿಂದ ಆರಂಭವಾಗಿತ್ತು ನನ್ನ ಕಲಿಕೆಯ ಪರ್ವ. ಹಗಲು ಸಾಧ್ಯವಾದಷ್ಟು ಹೊತ್ತು ಕುಲ್ದೀಪನ ತರಗತಿಯ ಹಿಂದೆ ಕುಳಿತು ಪಾಠ ಕೇಳಿಸಿಕೊಳ್ಳುತ್ತಿದ್ದೆ. ರಾತ್ರಿ ಎಲ್ಲರೂ ಪಡಸಾಲೆಯಲ್ಲಿ ಕುಳಿತು ಹರಟೆ ಹೊಡೆಯುವಾಗ ಕುಲ್ದೀಪನ ಮನೆಕೆಲಸಗಳನ್ನು ಮುಗಿಸುತ್ತಿದ್ದೆ. ಇದು ಚಾಚಿಯೊಬ್ಬಳಿಗೆ ತಿಳಿದಿತ್ತು. ಅವಳು ಖುಷಿ ಪಟ್ಟಿದ್ದಳು ಕೂಡಾ...... ಗಣಿತ ಕೊಂಚ ಕಠಿಣವೆನಿಸುತ್ತಿದ್ದದ್ದು ಬಿಟ್ಟರೆ ಉಳಿದವು ಸುಲಭವೆನಿಸಿತ್ತು. ಮನೆಯವರೆಲ್ಲಾ ಹಗಲಿಡೀ ಮನೆಯಿಂದ ಹೊರಗೆ ಬೀಡಾಡಿಯಂತೆ ತಿರುಗುತ್ತೀಯಾ ಎಂದು ಬೈದು, ದಬಾಯಿಸುತ್ತಿದ್ದರು. ನಾನು ಯಾವುದಕ್ಕೂ ಜಗ್ಗಲಿಲ್ಲ ಹಾಗೂ ಬಗ್ಗಲಿಲ್ಲ. ಎಲ್ಲಾ ತಂತ್ರಗಳನ್ನು ಪ್ರಯೋಗಿಸಿಯೂ ನನ್ನನ್ನು ನಿಯಂತ್ರಣದಲ್ಲಿ ಇಡಲಾಗದಾದಾಗ 'ಗಂಡುಬೀರಿ, ಭಾಗೀ....' ಎಂಬಿತ್ಯಾದಿ ಬಿರುದುಗಳೊಂದಿಗೆ ನನ್ನನ್ನು ಬಿಂಬಿಸಿ ಕೈ ಬಿಟ್ಟರು.... ನಾನು ತಲೆಕೆಡಿಸಿಕೊಳ್ಳಲೇ ಇಲ್ಲ. ಅಂತಹ ಅಗತ್ಯವೂ ನನಗೆ ಕಾಣಲಿಲ್ಲ.

ಕುಲ್ದೀಪ್ ನಾಲ್ಕನೇ ಈಯತ್ತೆಯಲ್ಲಿದ್ದಾಗ ನಮ್ಮಿಬ್ಬರ ಈ ಕರಾರು ಮನೆಯವರಿಗೆ ತಿಳಿದುಬಿಟ್ಟಿತ್ತು. ಮೊದಲು ಒಂದಿಷ್ಟು ಬೈದು, ಹೊಡೆದರಾದರೂ ಕುಲ್ದೀಪ್ ತನಗೆ ಬರೆಯಲು ಇಷ್ಟವಿಲ್ಲ, ಕೈ ನೋಯುವುದು ಎಂದೆಲ್ಲಾ ಅತ್ತೂ ಕರೆದು ಸಮಜಾಯಿಷಿ ನೀಡಿ, 'ತಾನು ತರಗತಿಗಳಿಗೆ ಹೋಗುವೆ, ಸಿಯಾ ದೀ ಮನೆಕೆಲಸ ಬರೆದು ಕೊಡಲಿ' ಎಂದು ಮನೆಯವರನ್ನು ಒಪ್ಪಿಸಿದ. ಮನೆಯ ಗಂಡು  ಮಗ ನೋವಿನಿಂದ ಕಣ್ಣೀರು ಹಾಕುವುದು ಮನೆಗೆ ಶ್ರೇಯಸ್ಸಲ್ಲವೆಂದು ಅವನು ಹೇಳಿದ್ದಕ್ಕೆಲ್ಲಾ ಮನೆಯವರು ಒಪ್ಪಿದರು. ಕುಲ್ಜೀತನ ಬರವಣಿಗೆಯ ಕೆಲಸಗಳನ್ನೂ ನನಗೇ ಒಪ್ಪಿಸಿದರಾದರೂ ಅವನು ಸುತಾರಾಂ ಒಪ್ಪಲಿಲ್ಲ. ಕುಲ್ದೀಪನಂತಲ್ಲ ಅವನು. ಅವನಿಗೆ ಓದು, ಬರಹದಲ್ಲಿ ಆಸಕ್ತಿಯಿತ್ತು. ಹಾಗಾಗಿ ತನ್ನ ಕೆಲಸ ತಾನೇ ಮಾಡಿಕೊಳ್ಳುವೆನೆಂದ.

ಹೀಗೆ ನನ್ನ ಓದು, ಬರವಣಿಗೆ ಎಲ್ಲರ ಅನುಮತಿಯಿಂದ ಸಾಗಿತ್ತು. ಹೇಗೋ ಒಂದು ವಿಧದಲ್ಲಿ ದೇವರು ನನ್ನ ಆಸೆಗೆ ಮಾರ್ಗ ತೋರಿದ್ದ. ಕುಲ್ದೀಪನ ಎಲ್ಲಾ ಶಾಲಾ ಸಂಬಂಧಿತ ಚಟುವಟಿಕೆಗಳನ್ನು ನಾನೇ ಮಾಡುತ್ತಿದ್ದೆ. ಜೊತೆಗೆ ಕುಲ್ಜೀತ್ ಕೂಡಾ ತನಗೆ ಅರ್ಥವಾಗದ ವಿಚಾರಗಳನ್ನು ನನ್ನ ಬಳಿ ಕೇಳುತ್ತಿದ್ದ. ಜೊತೆಗೆ ನನಗೆ ತಿಳಿಯದ ಗಣಿತದ ಸಮಸ್ಯೆಗಳನ್ನು ಹೇಳಿಕೊಡುತ್ತಿದ್ದ ಕೂಡಾ. ಹೀಗೆ ನಮ್ಮ ಮೂವರ ನಡುವೆ ಮನೆಯವರು ಬಯಸದ ಬಂಧವೊಂದು ಏರ್ಪಟ್ಟಿತ್ತು. ಅದರಲ್ಲೂ ಕುಲ್ಜೀತ್ ನನಗೆ ಅತ್ಯಂತ ಆಪ್ತನಾದ. ಕುಲ್ದೀಪ್ ಕೊಂಚ ಒರಟನಾದರೆ ಕುಲ್ಜೀತ್ ಮೃದು ಭಾವದವನು. ನನ್ನ ಸಮಸ್ಯೆಗಳನ್ನು, ನೋವುಗಳನ್ನು ಅರ್ಥೈಸಿಕೊಳ್ಳುವ ಹೆಂಗರುಳಿತ್ತು ಅವನಿಗೆ. ತನಗೆ ತಿಳಿದಂತೆ ಸಾಂತ್ವನಿಸುತ್ತಿದ್ದ, ಪ್ರೋತ್ಸಾಹಿಸುತ್ತಿದ್ದ. ಇದು ಮನೆಯವರಿಗೆ ಸಹಿಸಲಾರದ ವಿಚಾರವಾಗಿತ್ತು. ಈ ವಿಚಾರಕ್ಕೆ ಆಗಾಗ ನನಗೆ ಬೈಗುಳ, ಹೊಡೆತಗಳು, ಮಕ್ಕಳನ್ನು ಹಾಳುಗೆಡವುತ್ತಿರುವೆನೆಂಬ ಶಾಪಗಳು ಸಾಮಾನ್ಯವಾಗಿತ್ತು. ಆದರೆ ಇವೆಲ್ಲಾ ಅಭ್ಯಾಸವಾಗಿದ್ದ ನನಗೆ ಏನೂ ಅನ್ನಿಸುತ್ತಲೇ ಇರಲಿಲ್ಲ. ಗಟ್ಟಿ ಚಮ್ಮಡಿಯವಳಾಗಿ ಬದಲಾಗಿ ಹಲವು ವರ್ಷಗಳೇ ಆಗಿತ್ತು. ಹೀಗೆ ಸಾಗಿತ್ತು ನಮ್ಮ ಬದುಕು......

ಹೇಗೋ ಎಲ್ಲವನ್ನೂ ಸಂಭಾಳಿಸಿಕೊಂಡು ಧೈರ್ಯದಿಂದ ಪಂಜರದ ಹೊರಗೆ ಹಾರುವುದೇ ಧ್ಯೇಯವೆಂದುಕೊಂಡು  ಮುನ್ನಡೆಯುತ್ತಿದ್ದ ನನ್ನ ರೆಕ್ಕೆಗಳನ್ನು ಘಾಸಿಗೊಳಿಸಿ, ಆತ್ಮವಿಶ್ವಾಸವನ್ನು ಪಾತಾಳಕ್ಕೆ ನೂಕಿದ್ದು ಚಾಚಿಯ ಸಾವು.

ನನಗೆ ಹದಿನೈದು ವರ್ಷಳಾಗಿದ್ದಾಗ ಹಲವು ವರ್ಷಗಳ ಬಳಿಕ ಮತ್ತೆ ಗರ್ಭಿಣಿಯಾಗಿದ್ದಳು ಚಾಚಿ. ಈ ವರ್ಷಗಳಲ್ಲಿ ಚಾಚಾನೂ ಬಾಪೂವಿನಂತೆ ಇನ್ನೊಬ್ಬ ಹೆಣ್ಣನ್ನು ಮದುವೆಯಾಗಲು ಪ್ರಯತ್ನಿಸಿದ್ದನಾದರೂ ಹೆಣ್ಣುಗಳ ಕೊರತೆ ತೀವ್ರವಾಗಿ, ಅವನಿಗೆ ವಧು ಸಿಕ್ಕಿರಲಿಲ್ಲ. ಈಗ ಚಾಚಿ ಮತ್ತೆ ಗರ್ಭಿಣಿಯಾಗಿದ್ದು ಅವನ ಗಂಡು ಮಗುವಿನ ಕನಸಿಗೆ ರೆಕ್ಕೆ ಮೂಡಿದಂತಾಗಿತ್ತು. ಆದರೆ ಈ ವಿಚಾರ ನನಗೆ ದಿಗಿಲು ತಂದಿತ್ತು. ಒಂದು ವೇಳೆ ಗಂಡು ಮಗು ಜನಿಸಿದರೆ ಚಾಚಿಯೂ ಚೋಟಿಮಾಯಿಯಂತೆ ನನ್ನನ್ನು ದೂರ ತಳ್ಳುತ್ತಾಳೆ ಎಂಬ ಭಯವೇ ಹಿರಿದಾಗಿತ್ತು ನನಗೆ.

ಆ ಕಾಲಕ್ಕಾಗಲೇ ಆಕ್ರಮಣಶೀಲವಲ್ಲದ ತಂತ್ರಜ್ಞಾನಗಳು(non invasive techniques) ಅಭಿವೃದ್ಧಿಗೊಂಡಿದ್ದವು. ಮುಜ್ಜಫರ್ ನಗರದಲ್ಲೇ ಶ್ರವಣಾತೀತ ಧ್ವನಿತರಂಗ(ultrasonography) ತಂತ್ರಜ್ಞಾನ ಹೊಂದಿದ ಕೆಲವು ದವಾಖಾನೆಗಳು ತಲೆಯೆತ್ತಿದ್ದವು. ಜೊತೆಗೆ ಶಾಮ್ಲಿ ವಲಯವೂ ದೊಡ್ಡ ನಗರವಾಗಿ ಬೆಳೆಯುವತ್ತ ಹೆಜ್ಜೆ ಇಟ್ಟಿತ್ತು. ನಗರೀಕರಣದೊಂದಿಗೆ ಮುಜ್ಜಫರ್ ನಗರದಲ್ಲಿ ಲಭ್ಯವಿದ್ದ ಸವಲತ್ತುಗಳು ನಿಧಾನವಾಗಿ ಶಾಮ್ಲಿಯ ಹಳ್ಳಿಗಳಿಗೂ ವಿಸ್ತರಿಸತೊಡಗಿತ್ತು. ಮುಜ್ಜಫರ್ ನಗರದಿಂದ ವಾರದಲ್ಲಿ ಎರಡು ದಿನ ಸಂಚಾರಿ ದವಾಖಾನೆಗಳು(mobile clinic) ಶಾಮ್ಲಿಯ ಹಳ್ಳಿಗಳಿಗೂ ಬರುತ್ತಿದ್ದವು. ಈ ಸಂಚಾರಿ ದವಾಖಾನೆಗಳು ಶ್ರವಣಾತೀತ ಧ್ವನಿತರಂಗ ಪರೀಕ್ಷೆಯ ಮೂಲಕ ಭ್ರೂಣ ಲಿಂಗಪತ್ತೆ ಸೌಲಭ್ಯವನ್ನು ಹಳ್ಳಿಹಳ್ಳಿಗಳಿಗೂ ಒದಗಿಸಲು ಶುರುವಿಟ್ಟಿದ್ದವು. ಹಾಗಾಗಿ ಹೆಣ್ಣು ಶಿಶು ಹತ್ಯೆ ಹೆಣ್ಣು ಭ್ರೂಣ ಹತ್ಯೆಯಾಗಿ ಬದಲಾಗತೊಡಗಿತ್ತು. ಈಗ ಹೆಣ್ಣು ಮಗುವಿಗೆ ನವಮಾಸಗಳು ತಾಯಿಯ ಉದರದಲ್ಲಿರುವ ಭಾಗ್ಯವೂ ಇರಲಿಲ್ಲ. ಭ್ರೂಣ ಹೆಣ್ಣೆಂದು ತಿಳಿದೊಡನೆ ಗರ್ಭಪಾತ ಮಾಡಿಸಿಬಿಡುತ್ತಿದ್ದರು. ಅದೇ ಗಂಡು ಮಗುವಿನ ಭ್ರೂಣ ಕಂಡುಬಂದರೆ, 'ಗುಲಾಬ್ ಕಾ ಫೂಲ್'(a rose is blooming) , 'ತಾಲೀ ಬಜಾವೋ' (celebrate) ಎಂಬ ಸಂಕೇತಗಳ ವಿನಿಮಯವಾಗುತ್ತಿತ್ತು.

ಈ ಬಾರಿ ಚಾಚಿ ಗರ್ಭಿಣಿಯಾಗಿದ್ದಾಗ ಅಂತಹುದೇ ಸಂಚಾರಿ ದವಾಖಾನೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿಸಿದ್ದರು ದಾದಾ, ದಾದಿ ಹಾಗೂ ಚಾಚೂ. ಪರೀಕ್ಷೆಯ ಫಲಿತಾಂಶ ಮತ್ತೆ ನಕಾರಾತ್ಮಕವಾಗಿತ್ತು. ಕೂಡಲೇ ಗರ್ಭಪಾತ ಮಾಡಿಸಿ ಮನೆಗೆ ಕರೆತಂದಿದ್ದರು. ಅದೇನಾಯಿತೋ ಚಾಚಿಗೆ ವಿಪರೀತ ರಕ್ತಸ್ರಾವವಾಗತೊಡಗಿತು. ಮೊದಲ ಹಾಗೂ ಕೊನೆಯ ಬಾರಿಗೆ ಆ ರಾತ್ರಿ ಮನೆಯವರನ್ನೆಲ್ಲಾ ಗೋಗರೆದಿದ್ದೆ ಅವಳನ್ನು ಆಸ್ಪತ್ರೆಗೆ ಸೇರಿಸಲು. ಒಂದಿನಿತೂ ಕರುಣೆಯಿಲ್ಲದೇ ಎಲ್ಲರೂ ತಮ್ಮ ತಮ್ಮ ಕೋಣೆ ಸೇರಿ ಪವಡಿಸಿದ್ದರು. ನಾನು, ಕುಲ್ದೀಪ್ ಹಾಗೂ ಕುಲ್ಜೀತ್ ಮಾತ್ರ ಇಡೀ ರಾತ್ರಿ ಚಾಚಿಯ ಪಕ್ಕ ಎಚ್ಚರವಾಗಿ ಕುಳಿತು ಕಣ್ಣೀರು ಸುರಿಸಿದ್ದೆವು. ಮರುದಿನಕ್ಕೂ ರಕ್ತಸ್ರಾವ ನಿಲ್ಲಲಿಲ್ಲ. ಚಾಚಿಯ ನರಳುವಿಕೆ ಕ್ಷೀಣವಾಗತೊಡಗಿತು. ತೀವ್ರ ನಿತ್ರಾಣಳಾದ ಚಾಚಿ ಪ್ರಜ್ಞಾಶೂನ್ಯಳಾದವಳು ಮತ್ತೆಂದೂ ಕಣ್ಣು ತೆರೆಯಲೇ ಇಲ್ಲ.

ಮಾಯಿ ಸತ್ತಾಗ ನಾನು ಅನಾಥಳಾಗಿದ್ದೆನೋ ಇಲ್ಲವೋ ಇಂದು ಮಾತ್ರ ನಾನು ಅಕ್ಷರಶಃ ಅನಾಥಳಾಗಿದ್ದೆ......

ನನ್ನ ಚಾಚಿ...... 

ನನಗಾಗಿ ಬದುಕಿದವಳು, ಎಲ್ಲರ ಪ್ರೀತಿ, ಮಮತೆಯನ್ನು ತುಂಬಿ ಕೊಟ್ಟವಳು, ನನಗಾಗಿ ಹೊಡೆತ ತಿಂದವಳು, ನನ್ನ ಹಕ್ಕುಗಳಿಗಾಗಿ ಪ್ರಶ್ನಿಸಿದವಳು, ನನ್ನ ಏಳಿಗೆ ಕಂಡು ಸಂತಸಪಟ್ಟವಳು, ನನ್ನ ನೋವುಗಳಿಗೆ ಸಾಂತ್ವನವಾದವಳು, ನನ್ನ ಬದುಕಿನ ಗಮ್ಯ ತೋರಿದವಳು, ನನ್ನನ್ನು ಗಟ್ಟಿಗೊಳಿಸಿದವಳು, ನನ್ನೊಂದಿಗೆ ನಕ್ಕವಳು, ನನಗಾಗಿ ಅತ್ತವಳು......... ಇನ್ನೆಂದೂ ಇಲ್ಲದಂತೆ ನನ್ನನ್ನು ಶಾಶ್ವತವಾಗಿ ತೊರೆದಿದ್ದಳು.

ಇರುವಷ್ಟು ಜನ್ಮಗಳು ಅವಳ ಪಾದಗಳಡಿಗೆ ಧೂಳಾದರೂ ಅವಳ ಋಣ ತೀರಿಸಲು ನನ್ನಿಂದಾಗದು....... 

ಮನದ ತುಂಬಾ ಬಿರುಗಾಳಿಯೇ ಎದ್ದಿತ್ತು. ಆದರೆ ಅದ್ಯಾಕೋ ಮನದಲ್ಲೇ ಸತ್ತ ಭಾವಗಳಿಗೆ ಕಣ್ಣ ಹನಿಗಳ ಮುಕ್ತಿ ದೊರೆಯಲೇ ಇಲ್ಲ.......

ನಾ ಅಳಲಿಲ್ಲ...... ಹೆಸರಿಗೊಂದು ಕಣ್ಣ ಹನಿಯೂ ಕಣ್ಣಂಚಿನಿಂದ ಜಾರಲೇ ಇಲ್ಲ.......

ಮನೆಯ ತುಂಬಾ ಜನ ಸೇರಿದ್ದರು. ಬದುಕಿದ್ದಾಗ ಚಾಚಿಯ ನೋವಿಗೆ ಕುರುಡರಾದವರು ಅವಳು ಸತ್ತ ನಂತರ ಕಂಬನಿ ಹರಿಸಲು ಬಂದಿದ್ದರು.

ಕಣ್ಣೆದುರು ಚಾಚೂ ಹಣೆಹಣೆ ಬಡಿದುಕೊಂಡು ಅಳುತ್ತಿದ್ದ...... ಅಲ್ಲಾ...... ಅಳುವ ನಟನೆ ಮಾಡುತ್ತಿದ್ದ.

ಅದೆಲ್ಲಿತ್ತೋ ಸಿಟ್ಟು.......

ಬಾಗಿಲ ಮೂಲೆಯಲ್ಲಿದ್ದ ದಾದಿಯ ಊರುಗೋಲು ಕಣ್ಣಿಗೆ ಬಿದ್ದಿತ್ತು. ಸೀದಾ ಹೋಗಿ ಅದನ್ನು ತೆಗೆದುಕೊಂಡು ಬಂದವಳೇ ಅಕ್ಕಪಕ್ಕ ಹಿಂದೆಮುಂದೆ ನೋಡದೇ ಚಾಚೂವಿಗೆ ಬಾರಿಸತೊಡಗಿದ್ದೆ.

ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಿಯಾಗಿದ್ದರು. ಇದು ಅವರಿಗೆ ಅನಿರೀಕ್ಷಿತ...... ಇಂತಹದ್ದೊಂದು ಘಟನೆ ಇಡೀ ಶಾಮ್ಲಿಯ ಇತಿಹಾಸದಲ್ಲೇ ನಡೆದಿರಲಿಲ್ಲ. 

ಒಂದಿಷ್ಟು ಜನ ಬಂದು ನನ್ನ ಹಿಡಿದು, ಎಳೆದಿದ್ದರಿಂದ ಚಾಚಾನ ಜೀವ ಉಳಿದಿತ್ತು. ಇಲ್ಲವಾದರೇ ಆತನ ತಲೆ ಒಡೆಯುವುದು ಖಚಿತವಿತ್ತು......

ಯಾರ ಮುಖ ನೋಡುವುದೂ ಸಹ್ಯವೆನಿಸದೇ ಕೋಣೆಗೆ ನಡೆದು ಕದವಿಕ್ಕಿಕೊಂಡಿದ್ದೆ. ಮನೆ, ಮನಸ್ಸು ನನ್ನ ಜಗತ್ತು ಎಲ್ಲವೂ ಖಾಲಿಯಾಗಿತ್ತು.

ನಂತರದ ದಿನದಲ್ಲಿ ನಾನು ವಿಪರೀತ ಮೌನಿಯಾದೆ.... ನನ್ನ ವರ್ತನೆ ಎಲ್ಲರಿಗೂ ಸಂಕೀರ್ಣ ಎನಿಸುವಷ್ಟು ಏಕಾಂಗಿಯಾದೆ. ತಪ್ಪು ಎನಿಸಿದ್ದನ್ನು ಎಲ್ಲರೆದರೂ ನೇರಾನೇರ ವಿರೋಧಿಸುವಷ್ಟು ತೀಕ್ಷ್ಣಳಾದೆ.

ಭೈರೋನ್ ಗ್ರಾಮದಲ್ಲಿ ನನ್ನ ಗುರುತು 'ಬಾಗೀ ಸಿಯಾ' ಎಂದು ಬದಲಾಯಿತು‌. ನಾನು ಸಮುದಾಯದಿಂದ ಹೊರಗಿನವಳಾಗಿ ಗುರುತಿಸಲ್ಪಡತೊಡಗಿದೆ......

ಹಲವು ನೋವುಗಳೊಂದಿಗೆ, ಹೋರಾಟದ ಬದುಕಿನೊಂದಿಗೆ,ಬಂಡಾಯಗಾರ್ತಿಯ ಪಟ್ಟದೊಂದಿಗೆ ನನ್ನ ಬಾಲ್ಯ ಕಳೆದಿತ್ತು. ತಾರುಣ್ಯದ ದಿನಗಳ ಹೊಸ್ತಿಲಲ್ಲಿ ನಿಂತಿದ್ದ ನನ್ನ ಬದುಕಿನಲ್ಲಿ ಊಹೆಗೂ ಮೀರಿದ ಘಟನೆಗಳು ನಡೆಯಲಿದ್ದವು. ಇಲ್ಲಿಯವರೆಗಿನ ಹೋರಾಟಕ್ಕೂ ಮೀರಿದ ಮಹಾಯುದ್ಧ ನನಗಾಗಿ ಕಾದು ಕುಳಿತಿತ್ತು........

ಸಶೇಷ

ಟಿಪ್ಪಣಿಗಳು:

ಆಕ್ರಮಣಶೀಲವಲ್ಲದ ತಂತ್ರಗಳು(Non Invasive Techniques): ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಜ್ಞಾನ(pre natal diagnostic techniques)ದ ಎರಡನೇ ಹಾಗೂ ಆಧುನಿಕ ವಿಧಾನವೇ ಆಕ್ರಮಣಶೀಲವಲ್ಲದ ತಂತ್ರಗಳು. ಈ ವಿಧಾನದಲ್ಲಿ ದೇಹದ ಒಳ ಭಾಗಕ್ಕೆ ಯಾವುದೇ ಬಾಹ್ಯ ಸಲಕರಣೆಗಳನ್ನು ಬಳಸದೇ, ಹೊರಗಿನಿಂದಲೇ ದೇಹದ ಒಳಭಾಗವನ್ನು ಪರೀಕ್ಷಿಸುತ್ತಾರೆ. 

ಇದರ ಪ್ರಮುಖ ಪ್ರಕಾರವೇ ಶ್ರವಣಾತೀತ ಧ್ವನಿತರಂಗ ಪರೀಕ್ಷೆ (Ultrasonography). ಈ ವಿಧಾನದಲ್ಲಿ ಧ್ವನಿ ತರಂಗಗಳ ಸಹಾಯದಿಂದ ಭ್ರೂಣದ ಚಿತ್ರಗಳನ್ನು ನೋಡಬಹುದು. ಸಾಮಾನ್ಯವಾಗಿ ಗರ್ಭಧಾರಣೆಯ ಹತ್ತು ವಾರಗಳ ನಂತರ ಈ ಪರೀಕ್ಷೆ ಮಾಡಲಾಗುತ್ತದೆ. ಗರ್ಭದ ಚಿತ್ರಣ, ಅದರ ಗಾತ್ರ, ಹೃದಯ ಬಡಿತ ಹಾಗೂ ಅಂಗಾಂಗಗಳ ಗಾತ್ರದ ಆಧಾರದ ಮೇಲೆ ಭ್ರೂಣದ ಬೆಳವಣಿಗೆಯನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ಭ್ರೂಣದ ಜನನಾಂಗದ ಬಾಹ್ಯ ರೂಪದಿಂದ ಅದರ ಲಿಂಗವನ್ನು ನಿರ್ಧರಿಸುತ್ತಾರೆ. ಆಕ್ರಮಣಶೀಲ ತಂತ್ರಗಳ ಹೋಲಿಕೆಯಲ್ಲಿ ಈ ವಿಧಾನ ಬಹಳ ಅಗ್ಗವಾಗಿದ್ದು ಸಾಮಾನ್ಯವಾಗಿ ಕೈಗೆಟುಕುವ ದರದಲ್ಲಿ ಈ ಪರೀಕ್ಷೆ ಲಭ್ಯವಿದೆ. ಇದರ ಮೂಲ ಉದ್ದೇಶವೂ ಭ್ರೂಣದ ಅನುವಂಶಿಕ ಅಸ್ವಸ್ಥತೆ ಮತ್ತು ವಿರೂಪತೆಯನ್ನು ಗುರುತಿಸುವುದಾದರೂ ಲಿಂಗತ್ವ ಪತ್ತೆಗೆ ದುರುಪಯೋಗವಾಗುತ್ತಿರುವುದೇ ಹೆಚ್ಚು.

ಜನರ ಉಪಯೋಗಕ್ಕಾಗಿ ಅಭಿವೃದ್ಧಿ ಪಡಿಸಿದ ಈ ultrasonography ತಂತ್ರಜ್ಞಾನ ಭ್ರಷ್ಟ ವೈದ್ಯರ ಹಣದ ಹಪಾಹಪಿಗೆ ಬಳಕೆಯಾಗುತ್ತಿರುವುದು ವಿಷಾದನೀಯ. ಪ್ರಸವಪೂರ್ವ ಲಿಂಗ ಪತ್ತೆ ಕಾನೂನು ಪ್ರಕಾರ ಅಪರಾಧವಾಗಿದ್ದರೂ ಕಾನೂನುಬಾಹಿರವಾಗಿ ಈ ಕಾರ್ಯದಲ್ಲಿ ನಿರತವಾಗಿರುವ ಅಸಂಖ್ಯಾತ ಖಾಸಗಿ ಕ್ಲಿನಿಕ್ ಗಳಿವೆ. ಭ್ರೂಣದ ಲಿಂಗ ಪತ್ತೆ ಮಾಡಿ, ಹೆಣ್ಣಾದರೆ ಅಲ್ಲೇ ಗರ್ಭಪಾತ ಮಾಡಿಸಿ ಕೈತುಂಬಾ ಹಣ ಗಳಿಸುವುದನ್ನೇ ದಂಧೆ ಮಾಡಿಕೊಂಡಿರುವವರ ಗುಂಪುಗಳೇ ಇವೆ. ಇವರೆಲ್ಲಿ ಹೆಚ್ಚಿನವರು ಅಸಲಿಗೆ ವೈದ್ಯರೇ ಆಗಿರುವುದಿಲ್ಲ. ವೈದ್ಯಕೀಯ ವಿಭಾಗ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಒಂದಿಷ್ಟು ತರಬೇತಿ ಪಡೆದು ವೈದ್ಯರೆಂಬ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಕ್ಲಿನಿಕ್ ನಡೆಸುತ್ತಾರೆ. 

ಕೆಲವು ಘಟನೆಗಳಲ್ಲಿ ಗಂಡು ಭ್ರೂಣವನ್ನೂ ಹೆಣ್ಣೆಂದು ಹೇಳಿ ಗರ್ಭಪಾತ ಮಾಡಿಸಿ ದುಡ್ಡು ಮಾಡಿದ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಓದಿದ್ದೇನೆ. ಉತ್ತರ ಪ್ರದೇಶದ ಖಾಸಗಿ ಕ್ಲಿನಿಕಿನ ನಕಲಿ ವೈದ್ಯ ದಂಪತಿಗಳಿಬ್ಬರು ಭ್ರೂಣ ಹತ್ಯೆಯನ್ನೇ ದಂಧೆ ಮಾಡಿಕೊಂಡು ವ್ಯವಸ್ಥಿತವಾಗಿ ಅದನ್ನು ನಡೆಸುತ್ತಿದ್ದ ಬಗ್ಗೆ ಸಿರೀಸ್ ಒಂದನ್ನು ನೋಡಿದ್ದೆ. ಗಂಡು ಭ್ರೂಣವಾದರೆ ತಾಯಿಯ ಫೈಲಿನ ಮೇಲೆ ಪೆನ್ಸಿಲ್ಲಿನಲ್ಲಿ 6 ಎಂದೂ(6 ಇಂಗ್ಲೀಷಿನ b ಅಕ್ಷರವನ್ನು ಹೋಲುವುದರಿಂದ... boy ಎಂಬರ್ಥದಲ್ಲಿ) ಅದೇ ಹೆಣ್ಣಾದರೆ 9 ಎಂದೂ (9 ಇಂಗ್ಲೀಷಿನ g ಅಕ್ಷರವನ್ನು ಹೋಲುವುದರಿಂದ.... girl ಎಂಬರ್ಥದಲ್ಲಿ) ಬರೆದು ಆ ಮೂಲಕ ಸೂಚ್ಯವಾಗಿ ಮಗುವಿನ ಲಿಂಗವನ್ನು ಪೋಷಕರಿಗೆ ತಿಳಿಸಿ ಗರ್ಭಪಾತ ಮಾಡಿಸುವ ವ್ಯವಸ್ಥಿತ ಜಾಲ ಈ ದಂಪತಿಗಳು. ಕೊನೆಗೆ ಪೋಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯ, ಈ ದಂಪತಿಗಳು ಗರ್ಭಪಾತ ಮಾಡಿಸಿದ ಭ್ರೂಣಗಳಲ್ಲಿ ಹಲವಾರು ಗಂಡುಭ್ರೂಣಗಳೂ ಇದ್ದವು ಎಂಬುದು.

ಮಾಹಿತಿ ಕೃಪೆ:

http://www.legalserviceindia.com/legal/article-777-the-evil-of-female-foeticide-in-india-causes-consequences-and-prevention.html

https://www.youthkiawaaz.com/2017/10/uttar-pradeshs-missing-girls-choked-to-death-drowned-or-simply-abandoned-to-die/

https://www.indiatoday.in/india/story/gender-bias-kills-over-200-000-girls-in-india-each-year-lancet-1234138-2018-05-15

https://m.timesofindia.com/india/Female-feticide-rampant-in-UP-Census-2011/articleshow/20340672.cms

https://pdfs.semanticscholar.org>

https://www.sascv.org>ijcjs

https://www.researchgate.net/publication/215590009_'Death_Before_Birth'_-_A_Study_on_Female_Foeticide_in_India

https://www.researchgate.net/publication/328064213_Born_to_Die_Female_infanticide_and_Feticide_An_Analysis_of_India

ಇದರೊಂದಿಗೆ ಅಮೀರ್ ಖಾನ್ ಅವರ ಸತ್ಯಮೇವ ಜಯತೇ ಯ ಸಂಚಿಕೆಗಳು, ಎಂದೋ ವೃತ್ತಪತ್ರಿಕೆಗಳಲ್ಲಿ ಓದಿದ ಮಾಹಿತಿಗಳು, ಕೆಲವು ಸ್ನೇಹಿತರಿಂದ ಕೇಳಿ ತಿಳಿದ ಮಾಹಿತಿಗಳು ಎಲ್ಲವನ್ನೂ ವಿಮರ್ಶಿಸಿ ಹೆಣೆದ ಕಥೆ ಇದು. ನೀಡಿದ ಮಾಹಿತಿಗಳೆಲ್ಲವೂ ನಿಜವೇ. ಕಥೆಯ ಪಾತ್ರಗಳ ಹೆಣಿಗೆ ಹಾಗೂ ಬೆಳವಣಿಗೆ ಮಾತ್ರ ನನ್ನ ಕಲ್ಪನೆ.

ಧನ್ಯವಾದಗಳು

ಅಗ್ನಿ ತರಂಗಿಣಿ 4

ಪಿಂಜರೇ ಕಿ ಚಿಡಿಯಾ….. ಜೋ ಕಭೀ ನ ಉಡಿಯಾ….

ಹೀಗೆ ಆ ಕೊರೆವ ಚಳಿಯಲ್ಲಿ ಮಾಯಿಯ ಆಸರೆಯಿಲ್ಲದೆ ನನ್ನ ಬದುಕಿನ ಹೋರಾಟ ಆರಂಭವಾಗಿತ್ತು.......

ಅಮ್ಮನ ಗರ್ಭಗುಡಿಯಿಂದ ಹೊರಬಿದ್ದಿದ್ದೆ. ಆದರೆ ಈಗ್ಯಾಕೋ ವಾಪಾಸು ಅವಳೊಡಲಿಗೇ ಓಡುವ ತವಕ. ಸಾಧ್ಯವಾದೀತೇ.....? 

ಇಷ್ಟು ತಿಂಗಳುಗಳ ಕಾಲ ಯಾವ ಚಿಂತೆಗಳಿಲ್ಲದೇ ಮಾಯಿಯೊಡಲೊಳಗೆ ಬೆಚ್ಚಗಿದ್ದು ಈಗಿನ್ನೂ ಕಣ್ತೆರೆದ ಹಸುಗೂಸು..... ಆ ಮಾಘದ ಚಳಿ ತಡೆಯಲಾದೀತೇ? ನನಗೆ ಗೊತ್ತಿದ್ದುದು ಒಂದೇ ಭಾಷೆ..... ಅಳುವಿನ ಭಾಷೆ.

ಚಳಿ ತಾಳಲಾರದೇ ಇದ್ದ ಶಕ್ತಿಯನ್ನೆಲ್ಲಾ ಬಳಸಿ ಕೂಗತೊಡಗಿದೆ. ಆ ಕೂಡಲೇ ಚಾಚಿ ಓಡಿಬಂದು ತನ್ನ ಕೈಯಿಂದ ನನ್ನ ಬಾಯಿ ಮುಚ್ಚಿ ಗಟ್ಟಿಯಾಗಿ ಎದೆಗವಚಿಕೊಂಡಳು. ನನಗೆ ಯಾವುದೋ ರಕ್ಷಣೆ ದೊರೆತಂತಹ ಭಾವ... ಅವಳ ಮಡಿಲೂ ಬೆಚ್ಚಗಿತ್ತು. ಇದು ನನ್ನ ಮಾಯಿಯ ಮಡಿಲಲ್ಲ ಎಂಬುದು ತಿಳಿಯುತ್ತಿತ್ತಾದರೂ ಆ ಅಪ್ಪುಗೆಯಲ್ಲಿ ಏನೋ ಸುರಕ್ಷತೆಯ ಭರವಸೆ, ನಿರಾಳತೆ..... 

ಆದರೆ ಅವಳು ಗಾಬರಿಯಾಗಿದ್ದಳು. ಭಯದಿಂದ ಪದೇಪದೇ ಸುತ್ತಮುತ್ತ ನೋಟಹರಿಸುತ್ತಿದ್ದಳು. ಭಯ ಬೀಳದೇ ಇನ್ನೇನು ಮಾಡಿಯಾಳು? ಬೆಳಕು ಹರಿಯಲು ಇನ್ನೂ ಎರಡು ಜಾವಗಳಿತ್ತು‌....

ಎರಡು ಸುದೀರ್ಘ ಜಾವಗಳು......!!

ಒಂದು ವೇಳೆ ನನ್ನ ಅಳು ಮನೆಯೊಳಗೆ ಸುಖ ನಿದ್ರೆಯಲ್ಲಿ ಲೀನರಾಗಿರುವ ಯಾರದೇ ಕಿವಿಯ ಪರದೆಯನ್ನು ತಲುಪಿದರೂ ಸೂರ್ಯ ರಶ್ಮಿಯು ಭುವಿ ಸೋಕುವ ಮುನ್ನಿನ ಈ ಎರಡು ಜಾವಗಳಲ್ಲೇ ನನ್ನ ಅಂತ್ಯವಾಗುತ್ತದೆ ಎಂಬುದನ್ನು ಅರಿಯದಷ್ಟು ಮೂಢಳಲ್ಲ ಆಕೆ. ಎಷ್ಟೆಂದರೂ ಇದು ಅವಳ ಸ್ವಾನುಭವವಲ್ಲವೇ....? ಆಕೆ ಕೊನೆಯ ಪಕ್ಷ ಬೆಳಕು ಹರಿಯುವವರೆಗಾದರೂ ನನ್ನನ್ನು ಬದುಕಿಸಿಕೊಳ್ಳಲೇಬೇಕು ಎಂಬ ಹುಕಿಗೆ ಬಿದ್ದಿದ್ದಳು.

ಚಾಚಿ ಏನೋ ಯೋಚಿಸಿದವಳಂತೆ ನನ್ನನ್ನು ತನ್ನೆದೆಗೆ ಒತ್ತಿಕೊಂಡೇ ಹಿಂಬಾಗಿಲಿನಿಂದ ಮನೆಯೊಳಗೆ ನಡೆದಳು. ಅವಳ ಒಂದು ಕೈ ನನ್ನ ಬಾಯನ್ನು ಮುಚ್ಚಿತ್ತು. ಸದ್ದಾಗದಂತೆ ಒಂದು ಕೋಣೆಯತ್ತ ನಡೆದಳು... ಅವಳದೇ ಕೋಣೆಯದು...

ಚಾಚೂ ಈ ಲೋಕದ ಪರಿವೆಯೇ ಇಲ್ಲದೆ ಪವಡಿಸಿದ್ದ. ಅವನ ಗೊರಕೆಯ ಕರ್ಕಶ ಸದ್ದು ಕೋಣೆಯನ್ನು ದಾಟಿ ಮನೆಯನ್ನೇ ಆವರಿಸಿತ್ತು. ಕೆಲಸ, ಕಾರ್ಯ ಏನೂ ಇಲ್ಲ... ಜಮೀನಿನ ಕೆಲಸ ಮಾಡಲು ಆಳುಗಳು, ಮನೆಕೆಲಸಕ್ಕೆ ಹೇಗೂ ಲುಗಾಯಿ(ಹೆಂಡತಿ)ಯೇ ಬಿಟ್ಟಿಬಿದ್ದಿದ್ದಾಳೆ.

ಇನ್ನೇನು ಕೆಲಸ...? ಉಣ್ಣುವುದು, ಬೀದಿ ಬೀದಿ ಸುತ್ತುವುದು, ಮನೆಯಲ್ಲಿ ಹೆಂಡತಿಯ ಪ್ರಾಣ ಹಿಂಡುವುದು.... ಎಂಥಾ ಸುಖ ಲೋಲುಪದ ಜೀವನ....

ನಲ್ವತ್ತರ ಈ ಗಂಡಸಿಗೆ ಹದಿನೆಂಟರ ಚಾಚಿ ಲುಗಾಯೀ....

ಚಾಚಿ ಸದ್ದಾಗದಂತೆ ಒಂದು ತೆಳು ಸೀರೆ ಹಾಗೂ ಎಸೆಯಲೆಂದು ಇಟ್ಟ ಹಳೆಯ ದಪ್ಪನೆಯ ಚಾದರ್ ಒಂದನ್ನು ತೆಗೆದುಕೊಂಡು ಕೋಣೆಯ ಬಾಗಿಲೆಳೆದುಕೊಂಡು ಕಳ್ಳ ನಡಿಗೆಯಲ್ಲಿ ಅಡುಗೆ ಕೋಣೆಗೆ ಬಂದಿದ್ದಳು. ಹಾಲಿಗೆ ಒಂದಿಷ್ಟು ಕಾದಾರಿದ ನೀರು ಬೆರೆಸಿ ಒಂದು ಪಾತ್ರೆಯಲ್ಲಿ ಹಿಡಿದು ಹಿಂಬಾಗಿಲಿನಿಂದ ಹೊರಬಂದಿದ್ದಳು. ಮತ್ತೆ ನಾವಿಬ್ಬರೂ ಮಾಯಿ ಇದ್ದಲ್ಲಿಗೆ ಬಂದಿದ್ದೆವು. ತಂದ ಸೀರೆಯನ್ನು ಹರಿದು ಒಂದು ಭಾಗವನ್ನು ಮಡಚಿ ಅಲ್ಲೇ ನೆಲದ ಮೇಲೆ ಹಾಸಿದಳು. ಇನ್ನೊಂದು ಭಾಗವನ್ನು ನನಗೆ ಸುತ್ತಿ ಹಾಸಿದ ಸೀರೆಯ ತುಂಡಿನ ಮೇಲೆ ನನ್ನ ಮಲಗಿಸಿದಳು. ಮೇಲೆ ದಪ್ಪ ಚಾದರ ಹೊದಿಸಿದಳು. ಒಂದು ಬಟ್ಟೆಯ ಚೂರನ್ನು ಹಾಲಿನ ಪಾತ್ರೆಗೆ ಅದ್ದಿ ನನ್ನ ಬಾಯಿಗೆ ಹಿಂಡತೊಡಗಿದಳು....

ನನಗೆ ನಿಜಕ್ಕೂ ಹಸಿವಾಗಿತ್ತು. ಒಂದಿಷ್ಟು ಹಾಲು ಹೊಟ್ಟೆಗಿಳಿದಾಗ ನೆಮ್ಮದಿ ಎನಿಸಿತು. ಚಾಚಿ ನನ್ನ ಎತ್ತಿ ತೋಳ ಮೇಲೆ ಹಾಕಿಕೊಂಡು ಮೆದುವಾಗಿ ಬೆನ್ನು ನೀವತೊಡಗಿದಳು. ನಾನಲ್ಲೇ ನಿದ್ದೆ ಹೋದೆ ಮುಂದಿನ ಹೋರಾಟದ ಚಿಂತೆ ಇಲ್ಲದೇ.....  ನಿದ್ರಿಸಿರುವುದು ಖಚಿತವಾದ ಮೇಲೆ ನನ್ನ ಕೆಳಗೆ ಮಲಗಿಸಿ ಚಾದರ ಹೊದಿಸಿದಳು‌. 

ನನ್ನ ತಲೆಯನ್ನು ಮೆದುವಾಗಿ ಸವರಿ ಎದ್ದು ಅಲ್ಲೇ ಶತಪಥ ಹಾಕತೊಡಗಿದವಳು ವ್ಯಾಕುಲಳಾಗಿದ್ದಳು. ಆಗೀಗ ಮಾಯಿಯ ಶವವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳಿಗೆ ಮಾಯಿಯ ಸಾವು ದೊಡ್ಡ ಆಘಾತವನ್ನೇ ತಂದಿತ್ತು.

ಆದರೆ ಈಗಾಗಲೇ ಲೋಕದ ಬಂಧ ಕಳಚಿದ ಮಾಯಿಗಿಂತಲೂ, ಅಸುನೀಗಲು ಕ್ಷಣಗಳ ಗಣನೆಯಲ್ಲಿದ್ದ ನಾನೇ ಆಕೆಗೆ ಮುಖ್ಯವಾಗಿದ್ದೆನೆಂದು ತೋರುತ್ತದೆ. ಅವಳ ತಲೆಯಲ್ಲಿ ಅದೆಷ್ಟು ವಿಚಾರಗಳಿದ್ದವೋ, ಅವಳ ಮನದೊಳಗೆ ಅದೇನು ವೇದನೆಯಿತ್ತೋ ಬಲ್ಲವರ್ಯಾರು...? ಪ್ರಾಯಶಃ ಈ ರಾತ್ರಿ ಕಳೆದು ಬೆಳಕಾಗದಿರಲಿ, ಮನೆಯವರು ಎದ್ದು ನನ್ನ ನೋಡದಿರಲಿ ಎಂಬ ಪ್ರಾರ್ಥನೆ ಅವಳದಿತ್ತೇನೋ....

ನಮ್ಮ ಕೋರಿಕೆಗಳೆಲ್ಲಾ ಸ್ವೀಕೃತವಾಗಿ ಈಡೇರುವಂತಿದ್ದರೆ ಬದುಕು ಆನಂದ ಸಾಗರವೇ..... ಆದರೆ ಎಂದಾದರೂ ಹಾಗಾದೀತೇ? ಊಹೆಗೆ ನಿಲುಕದ್ದು, ಕಲ್ಪನೆಗಳನ್ನು ಮೀರಿದ್ದೇ ಬದುಕಲ್ಲವೇ.....?

ಕತ್ತಲು ಕರಗಿ ಬೆಳಕು ಸುರಿದೇ ಸುರಿದಿತ್ತು. ಬೆಳಗಿನ ಎಳೆಬಿಸಿಲು ಯಮುನಾ ತಟದ ಸಮೃದ್ಧ ನೆಲವನ್ನು ಸೋಕುವ ಹೊತ್ತಿಗೆ ಭಾರವಾದ ಮನದಿಂದ ಎಲ್ಲವನ್ನೂ ವಿಧಾತನ ಕೈಗೊಪ್ಪಿಸಿ ನಾಟಕದ ಅಂಕದ ಪರದೆ ಸರಿಸಲು ತಯಾರಾದಳು ಚಾಚಿ. ನನ್ನ ಮೈ ಮೇಲೆ ಹೊದಿಸಿದ್ದ ಬೆಚ್ಚನೆ ಚಾದರವನ್ನು, ಸುತ್ತಿದ್ದ, ಹಾಸಿದ್ದ ಬಟ್ಟೆಗಳನ್ನು ತೆಗೆದು ಅನತಿ ದೂರದಲ್ಲಿದ್ದ ಕುರುಚಲು ಪೊದೆಗಳ ನಡುವೆಲ್ಲೋ ಬಿಸುಟು ಬಂದಳು. ಹಾಲಿನ ಪಾತ್ರೆಯನ್ನು ಬಚ್ಚಲಿಗೊಯ್ದಳು. ಆ ನಸುಕಿನಲ್ಲಿ ಆಕೆ ಅಲ್ಲಿದ್ದಳು ಎಂಬುದಕ್ಕೆ ಒಂದು ಕುರುಹೂ ಉಳಿಯದಂತೆ ಎಲ್ಲವನ್ನೂ ಸರಿಪಡಿಸಿದವಳು, ಮತ್ತೆ ಚಳಿಗೆ ಮೈಯೊಡ್ಡಿ ಅಳುತ್ತಿದ್ದ ನನ್ನ ಎದೆಗೊತ್ತಿಕೊಂಡು, ನೊಸಲಿಗೊಂದು ಮುತ್ತಿಟ್ಟು ತುಂಬಿದ ಕಂಗಳೊಂದಿಗೆ ನನ್ನನ್ನು ನಿರ್ಜೀವವಾಗಿದ್ದ ಮಾಯಿಯ ಪಕ್ಕದಲ್ಲಿ ಮಲಗಿಸಿ ಮತ್ತೆ ತಿರುಗಿನೋಡದೇ ಮನೆಯೊಳಗೆ ಓಡಿದ್ದಳು.

ಇಷ್ಟು ಸಮಯದ ತನಕ ನನ್ನನ್ನು ಆವರಿಸಿದ್ದ ಸುರಕ್ಷತಾ ಭಾವ ಈಗಿರಲಿಲ್ಲ. ಪಕ್ಕದಲ್ಲೇ ಮಾಯಿಯಿದ್ದರೂ ತಣ್ಣನೆಯ ಕೊರಡಾಗಿದ್ದ ಅವಳ ಇರುವಿಕೆಯ ಅರಿವು ನನಗಾಗಲೇ ಇಲ್ಲ. ಇದ್ದವಳೊಬ್ಬಳು ಚಾಚಿಯೂ ಹೀಗೆ ನನ್ನ ಒಬ್ಬಂಟಿಯಾಗಿಸಿ ಸರಿದಿದ್ದಳು. 

ಈಗಲೂ ನನ್ನ ಸಾಥಿಯಾಗಿದ್ದು ಅದೇ ಅಳು.... ಏನೂ ತೋಚದೇ ಅಬೋಧಳಾಗಿ ಅಳತೊಡಗಿದೆ. ಉಸಿರು ಬಿಗಿ ಹಿಡಿದು ಇದನ್ನೇ ನಿರೀಕ್ಷಿಸುತ್ತಿದ್ದ ಚಾಚಿ ನನ್ನ ಅಳುವಿನ ಸದ್ದು ಕೇಳಿದೊಡನೆಯೇ ಮನೆಯವರನ್ನು ಎಬ್ಬಿಸಿದ್ದಳು. 

ಕುಲತಿಲಕನ ನಿರೀಕ್ಷೆಯಲ್ಲಿದ್ದ 'ರಾಜ ಮನೆತನ'ದ ಸದಸ್ಯರೆಲ್ಲರೂ, 'ಎಲ್ಲಿಯಾದರೂ ಬಾಬಾನ ಭವಿಷ್ಯವಾಣಿ ಸುಳ್ಳಾಗಿ ಲಾಲಾ ಹುಟ್ಟಿರಬಹುದೇ' ಎಂಬ ಆಸೆಯಲ್ಲಿ ಕೊಟ್ಟಿಗೆಯತ್ತ ದೌಡಾಯಿಸಿದ್ದರು. ನನ್ನ ಕಂಡದ್ದೇ ಅವರ ಮುಖದಲ್ಲಿ ನಿರಾಶೆ, ಕ್ರೋಧ, ತಿರಸ್ಕಾರ ಸ್ಪಷ್ಟವಾಗಿತ್ತು.... 

ಭ್ರಮನಿರಸನಗೊಂಡ ಮಹಾನುಭಾವರ ಗಮನ ಸೆಳೆದ ಚಾಚಿ ಅಳುತ್ತಲೇ ನಿರ್ಜೀವಗೊಂಡ ಮಾಯಿಯನ್ನು ತೋರಿಸಿದಳು...

ನನ್ನ ದಾದಿ ಮಾಯಿಯ ಮೂಗಿನ ಬಳಿ ಬೆರಳಿಟ್ಟು ಪರೀಕ್ಷಿಸಿ ಸಾವನ್ನು ಖಚಿತಪಡಿಸಿದ್ದಳು.

"ಏಕ್ ಔರ್ ಚೋಕರಿ ಪೈದಾ ಕರ್ಕೇ ಚಲೀ ಗಯೀ. ಇಸ್ಸೇ ಅಚ್ಛಾ ಪೆಹಲೇ ಹೀ ಮರೀ ಹೋತೀ......" ಅದೆಷ್ಟು ನಿಕೃಷ್ಟವಾಗಿ ಎಂದಿದ್ದ ಅಪ್ಪನೆಂಬ ಪುರುಷೋತ್ತಮ....?

ಹೆಣ್ಣು ಮಗುವಿನ ಜನನಕ್ಕೆ ಕೇವಲ ತಾಯಿ ಮಾತ್ರ ಕಾರಣ..... ಅದರ ತೆಗಳಿಕೆ, ತಿರಸ್ಕಾರ ಎಲ್ಲಾ ಅವಳೊಬ್ಬಳಿಗೇ. ಅದೇ ಗಂಡು ಮಗುವಿನ ಜನನಕ್ಕೆ ಪುರುಷ ಮಾತ್ರ ಕಾರಣ. ಅದರ ಶ್ರೇಯ, ಹೊಗಳಿಕೆಯೆಲ್ಲಾ ಮೀಸೆ ತಿರುವಿ ಮೆರೆವ ಗಂಡಸಿಗೆ. ಹೆಣ್ಣಿನ ಪಾತ್ರವಿಲ್ಲ ಅದರಲ್ಲಿ....... ವೈಜ್ಞಾನಿಕತೆಗೇ ಸವಾಲಾಗಬಲ್ಲ ಇಂತಹದೊಂದು ನಿಯಮ ನಮ್ಮ ಸಮಾಜದಲ್ಲಿ ಬಹು ಪುರಾತನ ಕಾಲದಿಂದ ಚಾಲ್ತಿಯಲ್ಲಿದೆ. ಅದೇ ಸಮಾಜದ ಪ್ರತಿನಿಧಿ ನನ್ನಪ್ಪ. ಅವನ ಮಾತನ್ನು ಅನುಮೋದಿಸಿದ್ದು ಇನ್ನೆರಡು ಪುರುಷ ಸಿಂಹಗಳು ಹಾಗೂ ಒಬ್ಬಳು ಹೆಣ್ಣು....

ನನ್ನ ದಾದಿ.... 

ಚಾಚಿಯದು ಮೌನದ ಮುಸುಕಿನೊಳಗಿನ ಅಗೋಚರ ವೇದನೆ. ಬಾಯ್ತೆರೆದು ವಿರೋಧಿಸಲೂ ಆಗದ, ವಿಷಾದವನ್ನು ವ್ಯಕ್ತಪಡಿಸಲೂ ಆಗದ ಅಸಹಾಯಕತೆ.... 

ಇನ್ನು ಉಳಿದವಳು ಬಾಪುವಿನ 'ನಯೀ ನವ್ವೇಲಿ ಲುಗಾಯಿ', ನನ್ನ ಸೌತೇಲಿ ಮಾಯಿ.... ಆಕೆಯೂ ಚಾಚಿಯಂತೆ ಹದಿನೆಂಟರ ಪ್ರಾಯದವಳೇ‌. ನನ್ನ ಬಾಪೂ ಅವಳಿಗಿಂತ ಮೂರುವರೆಪಟ್ಟು ಹಿರಿಯವ. ಆದರೆ ಆಕೆಯ ಹೆತ್ತವರಿಗೆ ಬಾಪೂವಿನ ದೌಲತ್ ಎದುರಿಗೆ ಅವನ ವಯಸ್ಸು ನಗಣ್ಯ. ಅದಕ್ಕೂ ಮಿಗಿಲಾಗಿ ಅವರಿಗೆ ಈ ಚೋರಿಯನ್ನು ಮನೆಯಿಂದ ಸಾಗಹಾಕಿದರೆ ಸಾಕಿತ್ತು. ಯಾವ ತಲೆಮಾಸಿದವನ ತಲೆಗೆ ಕಟ್ಟಿದೆವು ಎಂಬುದು ಅವರಿಗೆ ಮುಖ್ಯವಲ್ಲ. ಹೆಣ್ಣೆಂಬ ಪ್ರಾರಬ್ಧ ಮನೆಯಿಂದ ಹೊರಹೋದರೆ ಅಷ್ಟೇ ಸಾಕು ಅವರಿಗೆ. ಇದು ನಮ್ಮಲ್ಲಿ ಬಹಳ ಸಾಮಾನ್ಯವಾದ ಸಂಗತಿ ಬಿಡಿ....

ಪಾಪ.... ತನ್ನ ಎದುರು ನಡೆಯುತ್ತಿರುವ ಘಟನೆ ಅವಳಿಗೆ ಅವಳ ಭವಿಷ್ಯವನ್ನು ಕಣ್ಣೆದುರಿಗೆ ತಂದಿರಬೇಕು. ತನಗೂ ಹೆಣ್ಣು ಕೂಸು ಹುಟ್ಟಿದರೆ?? ಎಂಬ ಭಯಕ್ಕೆ ಬಿಳಚಿಕೊಂಡು ಅರಕ್ತಳಾಗಿ ನಿಂತಿದ್ದಳಾಕೆ. 

ದಾದಿ ನನ್ನೆಡೆಗೆ ನಿಕೃಷ್ಟವಾಗಿ ನೋಡುತ್ತಾ, "ಅಬ್ ಇಸ್ಕಾ ಕಾ ಕರೇ....? ಏ ತೇರಿ ಪುರಾನಿ ಲುಗಾಯೀ ಕೆ ಸಾಥ್ ಮಾ ಇಸ್ ಚೋರಿ ಕೋ ಭೀ ದಫ್ನಾಯೇ ಕಾ? ಯಾ ರಾತ್ ಕೀ ಟಂಡೀ ಪಡ್ನೆ ತಕ್ ಇಂತಜಾರ್ ಕರೇ?" ಎಂದು ಬಾಪೂವನ್ನು ಕೇಳಿದ್ದಳು!! 

(ಈಗ ಇದನ್ನೇನು ಮಾಡೋದು? ಈ ನಿನ್ನ ಹಳೆ ಹೆಂಡತಿಯೊಂದಿಗೆ ಈ ಹೆಣ್ಣನ್ನೂ ಮಣ್ಣು ಮಾಡೋಣವೇ? ಇಲ್ಲಾ ರಾತ್ರಿಯ ಚಳಿ ಬೀಳುವವರೆಗೆ ಕಾಯುವುದೋ?)

ಬಾಪೂ, ಚಾಚಾ ಹಾಗೂ ದಾದ ಯೋಚನೆಗೆ ಬಿದ್ದಿದ್ದರು. ಮಾಯಿಯೊಂದಿಗೆ ನನ್ನನ್ನೂ ಮಣ್ಣು ಮಾಡುವುದು ಅವರಿಗೆ ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಈ ಊರಲ್ಲಿ ಇಂತಹವು ಸರ್ವೇಸಾಮಾನ್ಯವಾಗಿ ನಡೆಯುತ್ತವೆ. ಆದರೆ ಈ ಹಗಲಿನಲ್ಲಿ ಕೆಲಸ ಕೊಂಚ ಕಠಿಣವೆಂದು ತೋರಿತು ಅವರಿಗೆ. ಯಾವುದೇ ಎಗ್ಗಿಲ್ಲದೇ ಹೆಣ್ಣುಶಿಶುಗಳ ನರಮೇಧ ನಡೆಯುತ್ತಿದ್ದರೂ ಅದು ಕಾನೂನು ಪ್ರಕಾರ ಅಪರಾಧವೆಂದು ನಮ್ಮ ದೇಶದ ನ್ಯಾಯಸಂಹಿತೆ ಹೇಳುತ್ತದಲ್ಲ..... ಅದೇ ತೊಂದರೆಯಾಗಿದ್ದು. ಮೊದಲೇ ಬಾಪು ಕಾಪ್ ಪಂಚಾಯತಿನ ಸರಪಂಚನಾಗಲು ಎಲ್ಲಾ ವಿಧದಲ್ಲೂ ಪ್ರಯತ್ನಿಸುತ್ತಿದ್ದ. ಅದು ಮನೆಯ ಉಳಿದಿಬ್ಬರು ಗಂಡಸರು ಹಾಗೂ ದಾದಿಯ ಬಯಕೆಯೂ ಕೂಡ. ಆದರೆ ಅದೇ ಸರ್ಪಂಚ್ ಹುದ್ದೆಯ ಆಕಾಂಕ್ಷಿಗಳು ಇನ್ನೂ ಕೆಲವರಿದ್ದರು. ಈಗ ಹೀಗೆ ಮಗಳನ್ನು ಜೀವಂತ ಸಮಾಧಿ ಮಾಡಿರುವರೆಂಬ ವಿಷಯ ಅವರಿಗೆ ತಿಳಿದರೆ ಅದರಿಂದ ಬಾಪುವಿನ ಆಸೆ ಮಣ್ಣಾಗುವ ಸಾಧ್ಯತೆಯೇ ಹೆಚ್ಚು. ಸುಮ್ಮನೆ ಇಲ್ಲಸಲ್ಲದ ರಗಳೆ ಯಾಕೆಂದು ಮಾಯಿಯೊಂದಿಗೆ ನನ್ನನ್ನೂ ಮಣ್ಣು ಮಾಡುವ ಯೋಚನೆ ಕೈ ಬಿಟ್ಟರು. ಈಗ ಮಾಯಿಯನ್ನು ಮಣ್ಣು ಮಾಡುವುದೆಂದೂ, ರಾತ್ರಿಯಲ್ಲಿ ತಂಡಿ ಬಿದ್ದ ಮೇಲೆ ನನಗೊಂದು ಗತಿ ಕಾಣಿಸುವುದೆಂದೂ ನಿರ್ಧಾರವಾಯಿತು.

ಅಲ್ಲಿಗೆ ನನ್ನ ಮರಣ ಶಾಸನ ತಯಾರಾಗಿದೆ ಎಂದು ಚಾಚಿಗೂ, ಸೌತೇಲಿ ಮಾಯಿಗೂ ತಿಳಿದು ಹೋಯಿತು. ಇಬ್ಬರೂ ಮೌನವಾಗಿ ರೋಧಿಸುತ್ತಿದ್ದರಾದರೂ ಬಾಯ್ತೆರೆದು ವಿರೋಧಿಸುವ, ತಡೆಯುವ ಧೈರ್ಯ, ಹಕ್ಕು ಎರಡೂ ಅವರಿಗಿಲ್ಲ. ನನ್ನ ಮಾಯಿ ಒಂದು ವೇಳೆ ಜೀವಂತವಿದ್ದರೆ ಅವಳಿಂದಲೂ ನನ್ನನ್ನು ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ.... ಏಕೆಂದರೆ ಇದು 'ಮರ್ದೊಂಕಾ ಫೈಸಲಾ'... ಅದರ ಬಗ್ಗೆ ಚಕಾರವೆತ್ತುವಹಾಗಿಲ್ಲ ಔರತ್...

ದಾದಿ ಚಾಚಿಯನ್ನು ಕರೆದು ನನ್ನನ್ನು ರಾತ್ರಿಯ ತನಕ ಗೋದಾಮಿನಲ್ಲಿ ಇರಿಸಲು ಸೂಚಿಸಿದಳು. ಚಾಚಿ ನನ್ನನ್ನು ‌ಎತ್ತಿಕೊಂಡು ಗೋದಾಮಿನತ್ತ ಹೆಜ್ಜೆಗಳನ್ನು ಕಿತ್ತಿಟ್ಟ ಹಾಗೆ ಮಾಯಿ ನನ್ನ ಕಣ್ಣಂಚಿನಿಂದ ದೂರ ದೂರ ಸರಿಯತೊಡಗಿ ಕೊನೆಗೊಮ್ಮೆ ಮಾಯವಾದಳು....

ಹಾಗವಳು ಲಗುಬಗೆಯಿಂದ ನನ್ನ ಗೋದಾಮಿಗೆ ಕರೆತಂದವಳು ಅಲ್ಲೊಂದಿಷ್ಟು ಸ್ವಚ್ಛಗೊಳಿಸಿ ಬೇರೊಂದು ಚಾದರ್ ಹಾಸಿ ಮಲಗಿಸಿದಳು. ಮತ್ತೊಂದಿಷ್ಟು ಹಾಲು ತಂದು ನನ್ನ ಉದರ ಪೋಷಣೆ ಮಾಡಿದಳು..... ಇವಳ ಋಣ ಈ ಜನ್ಮದಲ್ಲಿ ತೀರುವುದುಂಟೇ....? ಈಗವಳು ಕೊಂಚ ನಿರಾಳ. ಏಕೆಂದರೆ ಇನ್ನು ರಾತ್ರಿಯಾಗುವವರೆಗೆ ಅವರ್ಯಾರೂ ಈ ಕಡೆಗೆ ತಲೆ ಕೂಡಾ ಹಾಕುವುದಿಲ್ಲ ಎಂಬುದು ಖಚಿತವಾಗಿತ್ತು ಅವಳಿಗೆ. ಆದರೆ ಆ ನಿರಾಳತೆಯ ಬೆನ್ನಿಗೇ ವಿಷಾದ ಆವರಿಸಿತು. ತಾನೇನೇ ಮಾಡಿದರೂ ಈ ರಾತ್ರಿಯವರೆಗೆ ಮಾತ್ರವೇ ಈ ಹಾಲುಗಲ್ಲದ ಕಂದಮ್ಮನ ಬದುಕು..... 

ಮಾಯಿಯನ್ನು ಮಣ್ಣುಮಾಡಲು ನೆರೆಕೆರೆಯವರೆಲ್ಲಾ ಮನೆಯಂಗಳದಲ್ಲಿ ಸೇರುತ್ತಿದ್ದರು. ಹೆರಿಗೆಯಲ್ಲಿ ಸಾವು ಉಸಿರಾಟದಷ್ಟೇ ಸಹಜ ಸಾಮಾನ್ಯ ಎಂಬಂತಾಗಿರುವ ಈ ಊರಿನಲ್ಲಿ ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇನ್ನು ಹುಟ್ಟಿದ ಮಗುವಿನ ಬಗ್ಗೆ ಕೇಳುವ ಮಾತೆಲ್ಲಿಯದು? ಇಷ್ಟಕ್ಕೂ ಲಾಲಾ ಜನಿಸಿದ್ದರೆ ಈಗಾಗಲೇ ಊರಿಗೆಲ್ಲ ಮೀಠಾ ಸಮಾರಾಧನೆಯಾಗಿರುತ್ತಿತ್ತು... ಹಾಗಾಗಿಲ್ಲವೆಂದರೆ ಅನಿಷ್ಟದ ಲಾಲಿಯೇ ಜನಿಸಿರುವುದು ಎಂಬುದು ಅರ್ಥೈಸಿಕೊಂಡ ಸತ್ಯ. ಹಾಗಾಗಿ ಎಲ್ಲರೂ ಲಾಲಿಯ ಮನೆಯವರನ್ನು ಸಮಾಧಾನಿಸುತ್ತಾರಷ್ಟೇ. ಯಾವುದೋ ಸಾವಿನ ಮನೆಯಲ್ಲಿ ಶೋಕಾಚರಣೆ ಮಾಡಿ ಆ ಮನೆಯವರನ್ನು ಸಂತೈಸಿದಂತೆ......!!

ಇಲ್ಲೂ ಅದೇ ಕಾರ್ಯಕ್ರಮ ನಡೆಯುತ್ತಿತ್ತು. ಬಂದವರೆಲ್ಲರೂ ಬಾಪೂವಿನ ನಯೀ ದುಲ್ಹನ್ ಈ ಬಾರಿ ಲಾಲಾನನ್ನು ಹೆರುವಳೆಂದು ಭವಿಷ್ಯ ನುಡಿಯುತ್ತಾ ಸಾಂತ್ವನ ಹೇಳುತ್ತಿದ್ದರು. ನನ್ನ ಮಾಯಿ ನರಳಿ ನರಳಿ ಸತ್ತ ದುಃಖವಾಗಲೀ, ಜನಿಸಿದೊಡನೆ ಮಾಯಿಯ ಕಳೆದುಕೊಂಡು ಈ ರಾತ್ರಿಗೆ ಬದುಕಿನ ಯಾತ್ರೆ ಮುಗಿಸಲಿರುವ ನನ್ನ ವೇದನೆಯಾಗಲೀ, ಸೌತೇಲಿ ಮಾಯಿಯ ಮನದಲ್ಲಿ ತೀವ್ರವಾಗಿದ್ದ 'ಒಂದು ವೇಳೆ ನನಗೂ ಹೆಣ್ಣು ಕೂಸೇ ಜನಿಸಿದರೆ...?' ಎಂಬ ಭಯವಾಗಲೀ, ಚಾಚಿಯ ಗಾಢ ವಿಷಾದವಾಗಲೀ ಈ ಹಾಳು ಜನರನ್ನು ಸೋಕಲೇ ಇಲ್ಲ......

ಮಾಯಿಯ ಅಂತಿಮಯಾತ್ರೆ ಹೊರಟು, ಬಂದ ಜನರೆಲ್ಲಾ ಚದುರಿದರೂ ಚಾಚಿ ನನ್ನ ಬಿಟ್ಟು ಆಚೀಚೆ ಕದಲಲಿಲ್ಲ. ಎಲ್ಲಾ ಗದ್ದಲ ಕರಗಿ ನೀರವ ಮೌನವೊಂದು ಮನೆ ತುಂಬಾ ತಾಂಡವವಾಡಿದ ಆ ಕ್ಷಣದಲ್ಲಿ......

ಆಗ ಅವಳು ಇಷ್ಟರವರೆಗೆ ತಡೆಹಿಡಿದಿದ್ದ ದುಃಖ ದುಗುಡವೆಲ್ಲಾ ಒಮ್ಮೆಗೆ ಪ್ರವಾಹವಾಗಿ ಭೋರ್ಗರೆದು ಉಕ್ಕಿತು. ಬಿಕ್ಕಿ ಬಿಕ್ಕಿ ಅಳತೊಡಗಿದ ಚಾಚಿಯನ್ನು ಸಾಂತ್ವನಿಸಲು ಇದ್ದ ಒಂದೇ ಒಂದು ಹಸ್ತ ಇಹಲೋಕದ ಯಾತ್ರೆ ಮುಗಿಸಿ ತೆರಳಿಯಾಗಿತ್ತು...... ಅತ್ತು ಅತ್ತು ಕಣ್ಣೀರು ಪೂರಾ ಬತ್ತಿದ ಮೇಲೆ ನನ್ನೆಡೆಗೆ ಒಂದು ಶುಷ್ಕ ನಗು ಬೀರಿದವಳನ್ನು ಕಂಡು ನಾನೂ ನಕ್ಕೆ....

ನನ್ನ ನಗು ಕಂಡು ಅವಳಿಗೇನೆನಿಸಿತೋ.... ತನ್ನ ತೋಳಿಗೇರಿಸಿಕೊಂಡವಳೇ ಇನ್ನಿಲ್ಲದ ಅಪ್ಯಾಯಮಾನತೆಯಿಂದ ನನ್ನ ತಲೆ, ಬೆನ್ನನ್ನು ಮೆದುವಾಗಿ ಸವರಿ ಎದೆಗೊತ್ತಿಕೊಂಡಳು..... 

ಹಾಗೆ ಎದೆಗಾನಿಸಿಕೊಂಡೇ ಇಡೀ ಜನುಮದ ಮಾತುಕತೆಯನ್ನೆಲ್ಲಾ ಶಶಿಯ ಆಗಮನದೊಳಗೆ ಮುಗಿಸುವ ಹುಚ್ಚಿಗೆ ಬಿದ್ದಂತೆ ನನ್ನೊಂದಿಗೆ ಮಾತಿಗಿಳಿದಿದ್ದಳು ನನ್ನ ಯಶೋಧಾ ಮಾಯಿ .......

"ನೀ ಯಾಕೆ ನಿನ್ನಮ್ಮನಂತೆ, ನನ್ನಂತೆ ಹೆಣ್ಣಾಗಿ ಹುಟ್ಟಿದೆ ಲಾಲೀ....?  ಈ ರಾತ್ರಿ ಚಂದಿರ ಮೂಡುವವರೆಗೆ ಮಾತ್ರವೇ ನಿನ್ನ ಆಯುಷ್ಯ. ಆನಂತರ ನಿನಗೆ ಈ ನರಕದಿಂದ ಮುಕ್ತಿಯೇನೋ ದೊರಕಿ ಬಿಡುತ್ತದೆ. ಇಲ್ಲಿ ಹೆಣ್ಣು ಸಾಯಲೆಂದೇ ಹುಟ್ಟುವವಳು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಆ ಸಾವನ್ನು ಆಹ್ವಾನಿಸಲು ಆಯ್ದುಕೊಳ್ಳುವ ವಿಧಾನಗಳು ಅದೆಷ್ಟು ಘೋರವಾಗಿರುವುದೆಂದು ನಿನಗೆ ತಿಳಿದಿಲ್ಲ. ನನಗೆ ಗೊತ್ತು ಅದೆಷ್ಟು ಭೀಭತ್ಸವೆಂದು..... ನಿನ್ನ ಉಸಿರು ನಿನ್ನ ಕಾಯದಿಂದ ದೂರಾಗುವ ಪ್ರತಿ ಕ್ಷಣವೂ ನಿನ್ನ ಅರಿವಿಗೆ ಬರುವಷ್ಟು ಬರ್ಬರ ಸಾವದು..... ನಮ್ಮನ್ನು ನೆಮ್ಮದಿಯಾಗಿ ಸಾಯಲೂ ಬಿಡದಂತೆ ಚಿತ್ರವಿಚಿತ್ರ ನರಕಯಾತನೆಗಳ ನೀಡಿ ಕೊಲ್ಲುತ್ತಾರೆ ಈ 'ನಾಗರೀಕ ಜನ'. ಕತ್ತು ಹಿಸುಕಿ, ಗೋಣು ಮುರಿದು ಸಾಯಿಸಿದರೆ ನಿನ್ನ ಪುಣ್ಯ. ಅದೇ ಆದಷ್ಟು ನೆಮ್ಮದಿಯ ಸಾವು......

ಆದರೆ ಈ ಮತಿಹೀನ ದಾನವರಿಗೆ ಅಷ್ಟಕ್ಕೇ ಸಮಾಧಾನವೆಲ್ಲಿಯದು? ಅದಕ್ಕಾಗಿಯೇ ಹಲವು ಹೀನಾಯ ತಂತ್ರಗಳನ್ನು ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ತಲೆತಲಾಂತರದಿಂದ ರೂಢಿಸಿಟ್ಟಿದ್ದಾರೆ. ಈ ಸಾವೇ ಅನ್ಯಾಯ.... ಅದರೊಟ್ಟಿಗೆ ಇನ್ನಷ್ಟು ಕ್ರೌರ್ಯ ಮೆರೆವ ಹಂಬಲ...

ಇವರು ಅದೆಷ್ಟೆಲ್ಲಾ ಹಿಂಸೆ ನೀಡಿ ಹೆಣ್ಣು ಕೂಸ ಹತ್ಯೆಗೈವರೆಂದು ನಿನಗೆ ಗೊತ್ತೇನು ಮಗಳೇ....? 

ಆ ಎಳೆಯ ಕಂದನಿಗೆ ವಿಷಪ್ರಾಶನ ಮಾಡುವಾಗ ಇವರ ಕೈ ಕಿಂಚಿತ್ತೂ ನಡುಗುವುದಿಲ್ಲ. ಅವಳನ್ನು ನದಿಯಲ್ಲಿ ತೇಲಿ ಬಿಡುವಾಗ ಮನಃಸಾಕ್ಷಿ ಪ್ರಶ್ನಿಸುವುದಿಲ್ಲ. ಉಸಿರಾಡುವ ಎಳೆ ಜೀವವ ಜೀವಂತ ಹುಗಿದು ಮಣ್ಣು ಮುಚ್ಚುವಾಗ ಪಾಪಪ್ರಜ್ಞೆ ಕಾಡುವುದಿಲ್ಲ. ಹನಿ ನೀರೂ ನೀಡದೇ ಹಸಿವಿನಿಂದಲೇ ಸಾಯುವಂತೆ ಮಾಡುವಾಗ ನರಕದ ಭಯ ಇವರನ್ನು ಹೆದರಿಸುವುದಿಲ್ಲ. ಆಗಷ್ಟೇ ಜನಿಸಿದ ಕೂಸಿನ ಬಾಯಿ ತುಂಬಾ ಉಪ್ಪನ್ನೋ ಅಫೀಮನ್ನೋ ಇಲ್ಲಾ ತಂಬಾಕನ್ನೋ ತುಂಬಿ ಉಸಿರುಗಟ್ಟಿಸುವಾಗ ಆ ಉಸಿರಿನ ಸಂಕಟ ಇವರನ್ನು ದಹಿಸುವುದಿಲ್ಲ. ಪೀಲೀ ಕನೇರ್ ಬೀಜವನ್ನು (ಹಳದಿ ಅಥವಾ ದೀಪ ಕಣಗಿಲೆಯ ಬೀಜ) ಹಾಲಿಗೆ ಬೆರೆಸಿ ಅವಳ ಕೊಲ್ಲುವಾಗ ಅಂತಃಕರಣ ಬಾಧಿಸುವುದಿಲ್ಲ. ಹಸಿಯಾದ ದಪ್ಪನೆ ತೌಲಿಯಾ(ಟವೆಲ್)ದಿಂದ ಅವಳ ಮುಖವನ್ನು ಮುಚ್ಚಿ ಉಸಿರುಗಟ್ಟಿಸುವಾಗ ಅದು ತಮ್ಮಂತೆಯೇ ಒಂದು ಜೀವ ಎಂದು ನೆನಪಾಗುವುದಿಲ್ಲ.... ಅವಳನ್ನು ಜೀವಂತವಾಗಿ ಮಣ್ಣಿನ ಮಡಿಕೆಯೊಳಗಿಟ್ಟು ಮುಚ್ಚಿ, ಮುಚ್ಚಲ ಅತ್ತಿತ್ತ ಸರಿಯದಂತೆ ನಾದಿದ ಹಿಟ್ಟನ್ನು ಅದರ ಸುತ್ತ ಹಚ್ಚಿ ಮಣ್ಣು ಮಾಡುವಷ್ಟು ಕ್ರೂರಿಗಳಿವರು... 

ಇಷ್ಟಕ್ಕೂ ನಿಲ್ಲುವುದಿಲ್ಲ ಇವರ ಹಾಳು ನಂಬಿಕೆಗಳು, ಆಚರಣೆಗಳು... ಸತ್ತ ಮೇಲೂ ನಮ್ಮನ್ನು ನೆಮ್ಮದಿಯಾಗಿರಲು ಬಿಡರು ಇವರು....

ಹೀಗೆ ಕೊಂದ ಹೆಣ್ಣು ಮಗುವನ್ನು ಊರ ಹೊರಗೆ ಇಡುತ್ತಾರೆ. ಸಿಯಾರ್(ನರಿ) ಬಂದು ಎತ್ತೊಯ್ಯಲೀ ಎಂದು. ಹಾಗೆ ಸಿಯಾರ್ ಆ ಹೆಣವನ್ನು ಹೊತ್ತೊಯ್ದರೆ ಅದು ಗಂಡು ಮಗುವಿನ ಆಗಮನದ ಶುಭ ಸಂಕೇತವಂತೆ.... 

ಕಿಂಚಿತ್ ಕರುಣೆಯಿಲ್ಲದೇ ಸಾಯಿಸಿದ ಮೇಲೆ ಅವಳ ಶವದ ತುಟಿಗಳ ನಡುವೆ ಚೂರು ಬೆಲ್ಲವಿರಿಸಿ, ಕೈಯಲ್ಲಿ ಹತ್ತಿಯ ಉಂಡೆಯನ್ನು ಇಟ್ಟು ಮಣ್ಣು ಮಾಡುವಾಗ ಒಂದಿನಿತೂ ನಾಚಿಕೆ ಇಲ್ಲದೆ,

'ಗೂರ್ ಖಾಯೆ, ಪೂನೀ ಕುತ್ತೆಯಾ

ಆಪ್ ನ ಆಯೇ, ಭಾಯ್ ಆನ್ ಗುತ್ತೆಯಾ '

ಎಂಬ ದೋಹಾ ಪಠಿಸುತ್ತಾರೆ.

ಇದೆಲ್ಲವನ್ನೂ ಒಂದಿನಿತೂ ವೇದನೆಯಿಲ್ಲದೆ ಅತ್ಯಂತ ಸಂತಸದಿಂದ ಮಾಡುತ್ತಾರೆ ಇವರು. ಹೆಣ್ಣು ಮಗುವನ್ನು ಕೊಂದರೆ ಮುಂದಿನ ಮಗು ಖಂಡಿತಾ ಗಂಡಾಗಿರುತ್ತದೆ ಎಂಬ ಹುಚ್ಚು ನಂಬಿಕೆ ಈ ಮೂರ್ಖ ಜನರದ್ದು. ಒಂದು ವೇಳೆ ಅದೂ ಹೆಣ್ಣಾದರೆ ಅವಳನ್ನೂ ಕೊಂದು ಮತ್ತೆ ಗಂಡು ಮಗು ಜನಿಸುವುದೆಂದು ನಂಬುವುದು.... ಒಟ್ಟಿನಲ್ಲಿ ಇವರ ಆಚಾರ್ ವಿಚಾರ್ ಗಳಿಗೆ ಹರಕೆಯ ಕುರಿಯಾಗುವುದು ಮಾತ್ರ ಹೆಣ್ಣು ಮಗಳು.... 

ಹೆಣ್ಣು ಮಗು ಮನೆಗೆ ಕೆಡುಕನ್ನು ಹೊತ್ತು ತರುತ್ತಾಳಂತೆ. ಮೊದಲನೇ ಹೆಣ್ಣು ಮಗು ದುರಾದೃಷ್ಟ, ಎರಡನೇಯದು ವಿಪತ್ತು, ಮೂರನೆಯದೂ ಹೆಣ್ಣಾದರೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತ ಮಹಾದುರಂತವೇ ಸರಿ......

ಅದೆಷ್ಟು ಮುದ್ದಾಗಿ, ನಿಶ್ಚಿಂತೆಯಿಂದ ನಗುತ್ತಿರುವೆ ಲಾಲಿ ನೀನು...... ಇವತ್ತು ರಾತ್ರಿ ನಿನಗಾಗಿ ಕಾದಿರುವ ಮರಣದ ಪರಿಯ ಅರಿವಿದೆಯೇನು ನಿನಗೆ....? ಪಾಪ ನಿನಗೆಲ್ಲಿಂದ ತಿಳಿಯಬೇಕು? ಇವತ್ತು ರಾತ್ರಿ ಚಳಿ ಬಿದ್ದ ಕೂಡಲೆ ಯಾವುದೇ ಹೊದಿಕೆ ಇಲ್ಲದೇ ನಿನ್ನನ್ನು ಮನೆಯ ಹಿಂದಿನ ಆಂಗನ್(ಅಂಗಳ)ನಲ್ಲಿ ಹಾಕುತ್ತಾರೆ..... ಈ ಶಿಶಿರದ ಚಳಿಯನ್ನು ನಮಗೇ ತಡೆಯಲಾಗದು. ಇನ್ನು ನೀನು ತಡೆಯಬಲ್ಲೆಯಾ? ರಾತ್ರಿ ಬೆಳಗಿನವರೆಗೆ ಆ ಕೊರೆವ ಚಳಿಯಲ್ಲಿ ಅತ್ತೂ ಕರೆದು ಚಳಿ ಸಹಿಸಲಾಗದೇ ನರಳಿ ನಿನ್ನ ಒಂದು ದಿನದ ಬದುಕು ಸಮಾಪ್ತಿಯಾಗುತ್ತದೆ. ಈಗ ಹೀಗೆ ಕೈಕಾಲಾಡಿಸಿ ನಗುತ್ತಿರುವ ನೀನು ನಾಳೆ ಬೆಳಗಿನ ಜಾವಕ್ಕೆ ನಿರ್ಜೀವ ಕೊರಡಾಗಿರುತ್ತೀಯಾ ಮಗಳೇ..... ಯಾಕೆ ಹುಟ್ಟಿದೆ ಹೆಣ್ಣಾಗಿ.....?

ನಾನು ಎಂದಿಗೂ ಭಗವಂತನನ್ನು ಬೇಡುವುದು ಒಂದೇ....

'ಹೇ ಭಗವಾನ್..... ಅಗಲೇ ಜನಮ್ ಮೋಹೇ ಪೈದಾ ನ ಕಿಜೋ.....' ಎಂದು. ಈ ಜನ್ಮದಲ್ಲಿ ಕಂಡದ್ದೇ ಸಾವಿರ ಜನ್ಮಗಳಿಗೆ ಸಾಕಾಗಿದೆ. ಹೆಣ್ಣಾಗಿ ಹುಟ್ಟಲೇ ಬಾರದು ಲಾಲೀ.... ಹುಟ್ಟಿದರೂ ಬದುಕಿ ಉಳಿಯಬಾರದು.....

ಬದುಕಿ ಉಳಿದರೆ ಏನೆಲ್ಲಾ ಅನುಭವಿಸಬೇಕು ನಿನಗೆ ತಿಳಿದಿದೆಯೇನು.....?

ನನ್ನಪ್ಪ ದಲ್ಲಾಳಿಯೋರ್ವನಿಗೆ ನನ್ನ ಮಾರಿದ. ಆ ದಲ್ಲಾಳಿಯಿಂದ ನಿನ್ನ ಚಾಚೂವಿಗೆ ಬಿಕರಿಯಾದೆ ನಾನು... ನನ್ನ ಓರಗೆಯ ಕೆಲ ಹೆಣ್ಣುಗಳು ವೇಶ್ಯಾಗಾರಕ್ಕೆ ಮಾರಲ್ಪಟ್ಟಿದ್ದಾರೆ. ಅಂತಹ ಬದುಕು ನನ್ನದಾಗಲಿಲ್ಲ ಎಂಬುದಷ್ಟೇ ನನ್ನ ಅದೃಷ್ಟ. ಹಲವರಿಗೆ ಸೆರಗು ಹಾಸುವ ಬದಲು ಒಬ್ಬನಿಗೇ ನನ್ನನ್ನು ಒಡ್ಡಿಕೊಂಡಿರುವೆನಷ್ಟೇ.... ಅದರ ಹೊರತು ಈ ಎರಡರ ನಡುವೆ ಅಂತಹ ವ್ಯತ್ಯಾಸವೇನೂ ಕಾಣದು. ಇಲ್ಲಿಯವರೆಗಿನ ನನ್ನ ಬದುಕಿನಲ್ಲಿ ಪ್ರದೇಶ ಹಾಗೂ ವ್ಯಕ್ತಿಗಳ ಚಹರೆಯ ಹೊರತು ಬೇರೇನೂ ಬದಲಾವಣೆಗಳಿಲ್ಲ ಮಗಳೇ.... 

ಅಪ್ಪನ ಹಂಗಿನ ಮಾಯ್ಕಾದಲ್ಲಿದ್ದಾಗಲೂ, ತಲೆಹಿಡುಕ ದಲ್ಲಾಳಿಯ  'ಹೆಣ್ಣು ಮಾರಾಟದ ಅಂಗಡಿ' ಯ ಪ್ರದರ್ಶನದ ಗೊಂಬೆಯಾಗಿದ್ದಾಗಲೂ, ಈಗ ನಿನ್ನ ಚಾಚೂವಿನ ಕೈಗೊಂಬೆಯಾಗಿರುವಾಗಲೂ ನಾನು ಪಂಜರದ ಪಕ್ಷಿಯೇ........ 

ಎಂದಿಗೂ ಹಾರದ ಪಂಜರದ ಪಕ್ಷಿಗಳು ನಾವು. ಈ ಪಂಜರದಿಂದ ಹೊರಬಂದು ಹಾರುವ ಆಸೆ ನಮಗಿದ್ದರೂ ಅದನ್ನು ಒಪ್ಪಿಕೊಂಡು, ಗೌರವಿಸುವ ವಿಶಾಲ ಮನಸ್ಥಿತಿ ಈ ಜನರಿಗಿಲ್ಲ. ಹೆದರಿಸಿ, ಬೆದರಿಸಿ ಸೊಲ್ಲೆತ್ತದಂತೆ ದಮನಿಸಿ ಪಂಜರದಲ್ಲೇ ಇರಿಸಲು ನೋಡುತ್ತಾರೆ. ಒಂದು ವೇಳೆ ಅದೆಲ್ಲಾ ಮಿತಿಗಳನ್ನೂ ಮೀರಿ ಹಾರಲು ಪ್ರಯತ್ನಿಸಿದರೆ ನಮ್ಮ ರೆಕ್ಕೆಗಳನ್ನೇ ಕತ್ತರಿಸಿಬಿಡುತ್ತಾರೆ ಈ ಕಟುಕರು.....

ಇಂತಹ ಜನರ ಮಧ್ಯೆ ನೀನು ಸಾಯದೇ ಬದುಕು ಎಂದು ಹಾರೈಸಲೇ....? ಹಾಗೊಂದು ವೇಳೆ ಬದುಕಿದರೆ ನೀ ನೋಡಬೇಕಾದ ನರಕ, ಹೆಣ್ಣಾಗಿ ಹುಟ್ಟಿದ್ದಕ್ಕೆ ಅನುಭವಿಸಬೇಕಾದ ವೇದನೆ ಏನೆಂಬುದನ್ನು ನನಗಿಂತ ಚೆನ್ನಾಗಿ ಬಲ್ಲವರ್ಯಾರು? ನೀನು ಈ ರಾತ್ರಿ ಯಮ ಯಾತನೆ ಪಟ್ಟು ಕೊರೆವ ಚಳಿಯಲ್ಲಿ ನರಳಿ ಸತ್ತು ನಿನ್ನ ಮಾಯಿಯ ಮಡಿಲು ಸೇರಿಬಿಡು ಎಂದು ಹಾರೈಸಲು ಒಡಲ ಸಂಕಟ ಒಪ್ಪದು..... ಆದರೆ ನೀನು ಬದುಕಿ ಉಳಿದರೆ ನಿನ್ನ ಮಾಯಿ, ಚಾಚಿಯರಂತೆ ಪಂಜರದ ಪಕ್ಷಿಯಾಗಿ ಪ್ರತೀ ಕ್ಷಣ ನರಕ ಅನುಭವಿಸಬೇಕು... ಯಾವ ಕ್ಷಣದಲ್ಲಿ ಎಂತಹ ಆಪತ್ತು ಹೊಂಚು ಹಾಕಿ ಕುಳಿತಿದೆಯೋ ಎಂಬ ಭಯದಲ್ಲೇ ಬದುಕಬೇಕು.... ಅದಕ್ಕಿಂತ ಈ ರಾತ್ರಿ ನರಳಿ ಸಾಯುವುದೇ ಸುಖ ಮಗಳೇ........" 

ಕೈಸಾ ನಸೀಬಾ ಜಗ್ ಮೆ ಹರ್ ಬಿಟಿಯಾ ಪಾಯೇ......

ಅಪನಾ ಜಿನ್ಹೆ ಸಮ್ಜತ್ ಹೆ ಬನೇ ವೂ ಪರಾಯೇ......

ಬಾಬುಲ್ ಕಾ ಅಂಗನಾ ಚೂಟಾಯ್ ಮಯ್ಯಾ ಕಾ ಅಚರಾ.....

ಭೋಲಿ ಚಿರೈಯಾ ಪಾವೇ ಬಸ್ ಇಕ್ ಪಿಂಜರಾ....

ಫಿರ್ ಭಿ ಎ ಸಬ್ ಸಮಜಾವೇ ತಡಪಾ ನಾ ಕಿಜೋ.....

ಜೋ ಅಬ್ ಕಿಯೇ ಹೋ ಧಾತಾ ಐಸಾ ನಾ ಕಿಜೋ.....

ಅಗಲೇ ಜನಮ್ ಮೋಹೇ ಬಿಟಿಯಾ ನ ಕಿಜೋ.....

ಚಾಚಿಯ ಮನದ ಭಾವನೆಗಳ ಅಣೆಕಟ್ಟು ಒಡೆದು ಹಿಡಿದಿಟ್ಟಿದ್ದ ಗತದ ವೇದನೆಗಳೆಲ್ಲಾ ಪ್ರವಾಹೋಪಾದಿಯಲ್ಲಿ ಹರಿದಿತ್ತು. ಅವಳೆಲ್ಲಾ ಮಾತುಗಳಿಗೂ ನನ್ನ ನಿಷ್ಕಲ್ಮಶ ನಗುವೊಂದೇ ಉತ್ತರವಾಗಿತ್ತು....... ಅವಳು ಪದೇ ಪದೇ ನನ್ನ ಮೈದಡವಿ, ತಲೆ ಸವರಿ ಎದೆಗೊತ್ತಿಕೊಂಡು ಹನಿಗಣ್ಣಾಗುತ್ತಿದ್ದಳು. 'ಇಂದು ರಾತ್ರಿಯೇ ಸತ್ತು ನಿನ್ನಮ್ಮನ ಸೇರಿಕೋ ಮಗಳೇ.... ಬದುಕಿ ಈ ಪಂಜರದಲ್ಲಿ ನನ್ನಂತೆ ಬಂಧಿಯಾಗುವ ನರಕ ನಿನಗೆ ಬೇಡ' ಎಂದು ಹರಸುತ್ತಿದ್ದಳು.....

ಆದರೆ.......

ಆ ಕ್ಷಣಕ್ಕೆ ಚಾಚಿಯನ್ನೂ ಸೇರಿ ಮನೆಯ ಯಾವ ಸದಸ್ಯನಿಗೂ ತಿಳಿಯದ ವಿಚಾರವೆಂದರೆ.....

ಅಷ್ಟು ಸುಲಭದ ಸಾವನ್ನು ವಿಧಾತ ನನ್ನ ಹಣೆಯಲ್ಲಿ ಬರೆದಿರಲಿಲ್ಲ...... 

ನಾನು ಎದುರಿಸಬೇಕಾದ ಪರೀಕ್ಷೆಗಳು ಬಹಳವಿತ್ತು....... ಆ ಪರೀಕ್ಷೆಗಳನ್ನು ಎದುರಿಸಿ ಬಡಿದಾಡಲು ನಾನು ಬದುಕುಳಿಯಲಿದ್ದೆ......

ಆ ರಾತ್ರಿಗೆ ನಿಗದಿಯಾಗಿದ್ದ ನನ್ನ ಹನನದ ಮುಹೂರ್ತ ಶಾಶ್ವತವಾಗಿ ರದ್ದಾಗಲಿತ್ತು.......!!! 

ಹಾಗೂ ಆ ರದ್ದತಿಗೆ ಬಾಪೂವಿನ ನಯೀ ಲುಗಾಯೀ, ನನ್ನ ಸೌತೇಲಿ ಮಾಯಿ ಕಾರಣಕರ್ತೆಯಾಗಲಿದ್ದಳು......!!!!!

ಸಶೇಷ

ಟಿಪ್ಪಣಿಗಳು:

ದೇಶದ ಎಲ್ಲೆಡೆ ಹೆಣ್ಣು ಶಿಶುವನ್ನು ಹತ್ಯೆಗೈಯಲು ಹಲವು ವಿಧಾನಗಳನ್ನು ಅನುಸರಿಸಲಾಗುತ್ತಿತ್ತು. ಮಣ್ಣು ಮಾಡುವ ವಿಧಾನದಲ್ಲಿ ಕೊಂಚ ವ್ಯತ್ಯಾಸಗಳಿದ್ದರೂ ಹತ್ಯೆಗೆ ಬಳಸುತ್ತಿದ್ದ ವಿಧಾನಗಳು ಸಾಮಾನ್ಯವಾಗಿ ಒಂದೇ ತೆರನಾದವು.

* ಹಳದಿ ಕಣಗಿಲೆ/ದೀಪ ಕಣಗಿಲೆ(Yellow oleander shrub) ಯ ಬೀಜದ ಪುಡಿಯನ್ನು ಹಾಲಿಗೆ ಬೆರೆಸಿ ಕುಡಿಸುವುದು.

* ಎಕ್ಕದ ಗಿಡ(calotropis) ದ ಹಾಲನ್ನು ಕುಡಿಸುವುದು.

* ಭತ್ತದ ಕೆಲವು ಕಾಳುಗಳನ್ನು ಬಿಸಿ ನೀರು ಅಥವಾ ಹಾಲಿನೊಂದಿಗೆ ಕೊಡುವುದು.

* ತಂಬಾಕಿನ ಪುಡಿಯನ್ನು ತಿನ್ನಿಸುವುದು.

* ಕ್ರಿಮಿನಾಶಕಗಳನ್ನು ಕುಡಿಸುವುದು.

* ಬಾಯಿ,ಮೂಗು ಮುಚ್ಚಿ ಉಸಿರುಟ್ಟಿಸುವುದು.

* ಒದ್ದೆ ಮಾಡಿದ ದಪ್ಪ ಟವೆಲ್ಲಿನಿಂದ ಮುಖವನ್ನು ಮುಚ್ಚಿ ಉಸಿರುಗಟ್ಟಿಸುವುದು.

* ಚಳಿಗಾಲದಲ್ಲಿ ಯಾವುದೇ ಹೊದಿಕೆಯಿಲ್ಲದೆ ಮಗುವನ್ನು ಅಂಗಳದಲ್ಲಿ ಮಲಗಿಸುವುದು..... ಇತ್ಯಾದಿ ವಿಧಾನಗಳನ್ನು ಅನುಸರಿಸುತ್ತಿದ್ದರು.

ಹೆಣ್ಣು ಶಿಶು ಹುಟ್ಟಿದೊಡನೆ ಮಡಿಕೆಯೊಳಗೆ ಹಾಕಿ ಮುಚ್ಚಿ, ತೆರೆಯಲು ಸಾಧ್ಯವಾಗದಂತೆ ಗೋಧಿ ಹಿಟ್ಟಿನ ಕಣಕ(ಮಿಶ್ರಣ) ವನ್ನು  ಸುತ್ತ ಹಚ್ಚಿ, ಮುಚ್ಚಲ ತೆರೆಯಲು ಸಾಧ್ಯವಾಗದಂತೆ ಸೀಲ್ ಮಾಡಿ, ಜೀವಂತ ಸಮಾಧಿ ಮಾಡುವ ಸಂಪ್ರದಾಯ ಗುಜರಾತ್ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು.

ಪಂಜಾಬಿನ ಬೇಡಿ ಕತ್ರೀಸ್ ರಜಪೂತ ಪಂಗಡದಲ್ಲಿ ಹೆಣ್ಣು ಶಿಶು ಹತ್ಯೆ ಅತೀ ಹೆಚ್ಚು. ಹಾಗಾಗಿ ಈ ಪಂಗಡಕ್ಕೆ 'ಕುಡೀ ಮಾರ್' ಪಂಗಡ (killer of daughters) ಎಂಬ ವಿಶೇಷಣವೇ ಅಂಟಿಕೊಂಡಿದೆ. 

ಇವರು ಶಿಶುವನ್ನು ಹತ್ಯೆಗೈದ ನಂತರ ಅದರ ತುಟಿಗಳ ನಡುವೆ ಚೂರು ಬೆಲ್ಲವಿರಿಸಿ, ಕೈಯಲ್ಲಿ ಹತ್ತಿಯ ಉಂಡೆಯನ್ನು ಇಟ್ಟು,

'ಗೂರ್ ಖಾಯೆ, ಪೂನೀ ಕುತ್ತೆಯಾ

ಆಪ್ ನ ಆಯೇ, ಭಾಯ್ ಆನ್ ಗುತ್ತೆಯಾ '

(ನಿನ್ನ ಪಾಲಿನ ಬೆಲ್ಲವನ್ನು ತಿಂದು, ಹತ್ತಿಯನ್ನು ಹೊಸೆಯುತ್ತಿರು...

ನೀನು ವಾಪಾಸಾಗಬೇಡ, ನಿನ್ನ ಬದಲಾಗಿ ತಮ್ಮನನ್ನು/ಗಂಡು ಮಗುವನ್ನು ಕಳಿಸು) 

ಎಂಬ ದೋಹಾವನ್ನು ಪಠಿಸುತ್ತಾ ಶವವನ್ನು ಮಣ್ಣು ಮಾಡುವ ಸಂಪ್ರದಾಯ ಈ ಪಂಗಡದಲ್ಲಿದೆ.

ಮಾಹಿತಿ ಕೃಪೆ: ಅಂತರ್ಜಾಲ

ಧನ್ಯವಾದಗಳು......

ಅಗ್ನಿ ತರಂಗಿಣಿ 3

ಅಗಲೇ ಜನಮ್ ಮೋಹೇ ಬಿಟಿಯಾ ನಾ ಕೀಜೋ…...

ಹೆರಿಗೆಯೆಂದರೆ ಹೆಣ್ಣಿಗೆ ಮರುಹುಟ್ಟು ಎನ್ನುತ್ತಾರೆ ಬಲ್ಲವರು. ಕೂಸ ಹಡೆಯುವಾಗ ತಾಯಿ ಸತ್ತು ಬದುಕುವಳಂತೆ. ನನ್ನ ಈ ಭೂಮಿಗೆ ತರುವಾಗ ನನ್ನ ಮಾಯಿ ಸತ್ತು ಬದುಕಿದಳಾ ಎಂಬುದು ಮುಂದೆ ನಿಮಗೇ ತಿಳಿಯುತ್ತದೆ.... ಆದರೆ ನಾನು ಮಾತ್ರ ಅವಳೊಡಲಿಗೆ ಬಿದ್ದ ಕ್ಷಣದಿಂದಲೇ ಮರಣದೊಂದಿಗೆ ಸೆಣಸುತ್ತಲೇ ಜೀವಿಸಿದ್ದೆ. ನನ್ನ ಪಾಡು ನೋಡಿ ಮರಣದ ಹೃದಯವೇ ದ್ರವಿಸಿತೇನೋ.... 
ಮರಣವೇ ಕರುಣೆದೋರಿ ದಯೆ ಪಾಲಿಸಿದ ಜನನದಂತೆ ನಾನು ಹುಟ್ಟಿದೆ....

'ಹುಟ್ಟೆಂದರೆ ಸಂಭ್ರಮದ ಹಬ್ಬ. ಅದಕ್ಕೇಕೆ ಇಷ್ಟೊಂದು ಜಂಜಾಟ......?' ಎಂಬ ಪ್ರಶ್ನೆ ಸುಳಿದಾಡಬಹುದು ನಿಮ್ಮ ಮಸ್ತಿಷ್ಕದಲ್ಲಿ. 

ಹೌದು......
ಹುಟ್ಟೆಂದರೆ ಸಂಭ್ರಮದ ಹಬ್ಬವೇ.......
ಆದರೆ ಎಲ್ಲರ ಪಾಲಿಗೂ ಅಲ್ಲವಲ್ಲ.......!!
ನಿಮ್ಮಲ್ಲಿ ಹೇಗೋ ಎಂತೋ....... ತಿಳಿದಿಲ್ಲ ನನಗೆ.......
ಆದರೆ ಇಲ್ಲಿ......?
ಇಲ್ಲಿ ಅದು ಕೇವಲ ಗಂಡಿನ ಪಾಲು........
ಜನನದ ಸಂಭ್ರಮ, ಸಂತೋಷ, ಹಬ್ಬ ಎಲ್ಲವೂ ಕೇವಲ ಅವನ ಹಕ್ಕು......

ನನಗೆ ಹುಟ್ಟು ಸಂಭ್ರಮವಲ್ಲ........
ಅದೊಂದು ಯುದ್ಧ.......
ಬದುಕಿಗಾಗಿ, ಜೀವಕ್ಕಾಗಿ ನನ್ನ ಯುದ್ಧ.....

ಏಕೆಂದರೆ ನಾನು ಮಗನಲ್ಲ........ 
ನಾನು ಮಗಳು.........!

ನಾನು ಹೆಣ್ಣು......!

ಈ ದೇಶದಲ್ಲಿ, ಅದರಲ್ಲೂ ನಾನು ಹುಟ್ಟಿದ ಪ್ರದೇಶದಲ್ಲಿ ಹೆಣ್ಣೆಂದರೆ.........

ಅಮ್ಮನ ಗರ್ಭದಲ್ಲೇ ಚಿವುಟಲ್ಪಡುವವಳು......!
ಜನಿಸಿದ ಮರು ಘಳಿಗೆಯೇ ಕೊಲ್ಲಲ್ಪಡುವವಳು....!
ಆರೋಗ್ಯ, ಓದು ಬರಹದ ಸೌಲಭ್ಯಗಳಿಂದ ವಂಚಿತಳಾಗುವವಳು.......!
ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿಯ ಹಕ್ಕನ್ನು ಕಳೆದುಕೊಂಡವಳು......!
ಸಣ್ಣ ವಯಸ್ಸಿಗೇ ಮದುವೆಯ ಬೇಡಿಯಿಂದ ಬಂಧಿಸಲ್ಪಡುವವಳು......!
ಪದೇ ಪದೇ ಗರ್ಭ ಧರಿಸಿ ಕಾಲಕ್ರಮೇಣ ಮಕ್ಕಳ ಹಡೆವ ಯಂತ್ರವಾಗಿ ಬದಲಾಗುವವಳು.....!
ಹಣಕ್ಕಾಗಿ ಮಾರಲ್ಪಡುವವಳು, ಉಪಯೋಗಕ್ಕಾಗಿ ಖರೀದಿಸಲ್ಪಡುವವಳು......!
ನಿರಂತರ ದೌರ್ಜನ್ಯಕ್ಕೆ ಒಳಗಾಗಿ ಕಡೆಗೊಮ್ಮೆ ಸಾಯುವವಳು......!

ಇವರ ಪಾಲಿಗೆ ಹೆಣ್ಣೆಂದರೆ ಹೊಣೆಗಾರಿಕೆ, ಬಾಧ್ಯತೆ, ಅಗತ್ಯವಿಲ್ಲದ ಹೊರೆ, ಪೋಷಿಸಲೊಂದು ಅನಗತ್ಯ ಉದರ..... ಅವಳು 'ಪರಾಯಾ ಧನ್'.....

ಅದೇ ಗಂಡು ಮಗ........? ಅವನು ಆಸ್ತಿ, ಸಂಪತ್ತು.... ಯೋಗ್ಯತೆ ಇರಲೀ ಇಲ್ಲದಿರಲೀ, ಅರಸನ ಪಟ್ಟ ಕಟ್ಟಿಟ್ಟ ಬುತ್ತಿ ಅವನಿಗೆ.... 'ಆಖಿ಼ರ್ ವಹೀ ತೋ ಹೇ, ಜೋ ವಂಶ್ ಕೋ ಆಗೇ ಬಢಾಯೇಗಾ....'. ಅವನಿಲ್ಲದಿದ್ದರೆ ಇವರ 'ರಾಜವಂಶ'ವೇ ಕೊನೆಯಾಗುವುದಲ್ಲ? ಇವರ ಚಿತೆಗೆ ಅವ ಕೊಳ್ಳಿ ಇಟ್ಟು ಕಳಿಸದಿದ್ದರೆ ಇವರಿಗೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲವಲ್ಲ..... ಅವನು ತನ್ನ ಕೈಯಾರೆ ಶ್ರಾದ್ಧ ಮಾಡಿ ಪಿಂಡ ಪ್ರಧಾನಿಸದಿದ್ದರೆ ಇವರ ಆತ್ಮ ಮುಕ್ತಿ ಸಿಗದೇ ಅಂಡಲೆಯುವುದಿಲ್ಲವೇ.......?

ಅದೇ ಅವ'ಳು' ಹುಟ್ಟಿದರೇ.....? ಅವಳನ್ನು ಪೋಷಿಸಿ, ರಾಶಿ ಹಣ ಖರ್ಚು ಮಾಡಿ, ದಹೇಜ್ (ವರದಕ್ಷಿಣೆ) ನೀಡಿ ಮಾಯ್ಕಾದಿಂದ(ತವರಿನಿಂದ) ಸಾಗಹಾಕಬೇಕು. ಜೊತೆಗೆ ಮಗಳಿಂದ ವಂಶವೃದ್ಧಿಯಾಗದು, ಸ್ವರ್ಗ ಪ್ರಾಪ್ತಿಯಾಗದು, ಮುಕ್ತಿ ದೊರಕದು.......

ಸತ್ತ ಮೇಲೆ ಸಿಗುವ ಸ್ವರ್ಗದ ಆಸೆಗೆ ಅವಳ ಬದುಕನ್ನೇ ನರಕವಾಗಿಸುವುದು ನ್ಯಾಯವೇ....? ನಿಮ್ಮ ಆಸೆಗಳ ಪೂರೈಕೆಗೆ ಅವಳ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ಹಕ್ಕು ನಿಮಗ್ಯಾರು ಕೊಟ್ಟಿದ್ದು? ಅವಳ ದಗ್ಧ ಮನದ ಸಂಕಟದ ಉರಿಶಾಪ ತಟ್ಟದೇ ಬಿಟ್ಟಿತೇ ನಿಮಗೇ.......?

ಈ ಪ್ರಶ್ನೆಗಳನ್ನು ಸ್ವಗತದಲ್ಲಿ ಅದೆಷ್ಟು ಬಾರಿ ಕೇಳಿಕೊಂಡಿರುವೆನೋ ನನಗೇ ತಿಳಿದಿಲ್ಲ....... ಈ ಜನರ ಅಮಾನುಷ ಕೃತ್ಯಗಳನ್ನು ನೊಡಿದಾಗಲೆಲ್ಲಾ ಇದೇ ಪ್ರಶ್ನೆಗಳು ಮತ್ತೆ ಮತ್ತೆ ನನ್ನ ತಲೆಯಲ್ಲಿ ಗಿರಕಿ ಹೊಡೆಯುವುದು......

ನನ್ನದು ಉತ್ತರಪ್ರದೇಶದ ಮುಜ್ಜಫರ್ ನಗರ ಜಿಲ್ಲೆಯ ಶಾಮ್ಲಿ ವಲಯದ ಭೈರೋನ್ ಗ್ರಾಮ. ಅದು ಉತ್ತರಪ್ರದೇಶ ಹಾಗೂ ಹರಿಯಾಣಾದ ಗಡಿಗ್ರಾಮ. ನಮಗೂ ಹರಿಯಾಣಕ್ಕೂ ಗಡಿಯಾಗಿದ್ದುದ್ದು ಸೊಬಗಿನಿಂದ ಬಳುಕುವ ಯಮುನೆ ಮಾತ್ರ. ಶಾಂತಳಾಗಿ ಹರಿಯುವ ಯಮುನೆಯನ್ನು ದಾಟಿದರೆ ಪಾಣಿಪತ್, ಕರ್ನಾಲ್, ಘರೌಂದಾ ಪಟ್ಟಣಗಳು ಹರಿಯಾಣಾ ರಾಜ್ಯಕ್ಕೆ ಸ್ವಾಗತ ಕೋರುತ್ತವೆ.

ಮುಜ್ಜಫರ್ ನಗರಕ್ಕೆ ದೊಡ್ಡ ಇತಿಹಾಸವೇ ಇದೆ. ತೈಮೂರ್ ಕಾಲದಿಂದ ಹಿಡಿದು, ಮೊಘಲರ ಆಳ್ವಿಕೆ, ಬ್ರಿಟೀಷರ ಕಾಲಘಟ್ಟದಲ್ಲೂ ಈ ನಗರ ಬಹಳ ಪ್ರಾಮುಖ್ಯತೆ ಪಡೆದಿತ್ತು.(ಸ್ವಾತಂತ್ರ್ಯ ಪೂರ್ವದಲ್ಲಿ ಮುಜ್ಜಫರ್ ನಗರ ಉತ್ತರ ಪಶ್ಚಿಮೀ ಪ್ರಾಂತ್ಯದ ಭಾಗವಾಗಿತ್ತು) ಹಲವು ಐತಿಹಾಸಿಕ ಸ್ಥಳಗಳೂ ಇಲ್ಲಿವೆ. ಗತದಲ್ಲಿ ಪ್ರಭಾವಿಯಾಗಿ ಮೆರೆದ ಈ ವಲಯ ವರ್ತಮಾನದಲ್ಲಿ ಕೊಲೆ, ಸುಲಿಗೆ, ದರೋಡೆ, ದೌರ್ಜನ್ಯಗಳಿಗೆ ಕುಖ್ಯಾತಿ ಪಡೆದಿದ್ದು ವಿಪರ್ಯಾಸವಲ್ಲದೇ ಮತ್ತೇನು? 

ಅದರಲ್ಲೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಇಲ್ಲಿ ಕೊನೆ ಮೊದಲಿಲ್ಲ. ಅವಳು ತಾಯ ಗರ್ಭದಲ್ಲಿ ಕುಡಿಯೊಡೆದಲ್ಲಿಂದಲೇ ಆರಂಭವಾಗುತ್ತದೆ ಅವಳ ಅಸ್ತಿತ್ವವನ್ನೇ ಅಳಿಸಿ ಹಾಕುವ ಹುನ್ನಾರ. ಆಗ ಭ್ರೂಣದ ಲಿಂಗ ಪತ್ತೆಗೆ ಸರಿಯಾದ ತಂತ್ರಜ್ಞಾನ ಇರಲಿಲ್ಲವಾದ್ದರಿಂದ ಹಳ್ಳಿ ಮದ್ದುಗಳ ಮೊರೆ ಹೋಗುತ್ತಿದ್ದರು ಗರ್ಭಪಾತಕ್ಕೆ. ಆದರೆ ಈ ಹಳ್ಳಿಮದ್ದುಗಳು ತಾಯಿಯ ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆ ಹೆಚ್ಚಿದ್ದರಿಂದ ಜನನದವರೆಗೆ ಬದುಕುವ ಅದೃಷ್ಟವಿತ್ತು ಹೆಣ್ಣು ಕೂಸಿಗೆ.......

ಅಷ್ಟೇ........

ಹುಟ್ಟಿದ ಮರುಕ್ಷಣವೇ ಕೂಸಿನ ಹಣೆಬರಹ ನಿರ್ಧರಿತವಾಗುತ್ತದೆ.......

ಗಂಡಾದರೆ ಊರ ತುಂಬಾ ಮಲಾಯಿ ಮಕ್ಕನ್, ಚಂಚಂ ಮಿಠಾಯಿ ಹಂಚಿ ಸಂಭ್ರಮಾಚರಣೆ .........

ಅದೇ ಹೆಣ್ಣಾದರೆ......... !!
ಆ ಕಂದನ ಅಳು ಗಂಟಲಿನಿಂದ ಹೊರಬರುವ ಮೊದಲೇ ಉಸಿರು ನಿಲ್ಲುವುದು ವಾಡಿಕೆ....! ಹೆಣ್ಣು ಶಿಶು ಹತ್ಯೆ ಎಂಬುದು ಇಲ್ಲಿ ಬಕರೀ ಹಲಾಲ್ ಮಾಡುವಷ್ಟೇ ಸಾಮಾನ್ಯವಾದ ಸಂಗತಿ. 

ಇದು ಕೇವಲ ನನ್ನೂರು ಅಥವಾ ರಾಜ್ಯದ ಕಥೆಯಲ್ಲ. ನಮ್ಮ ಉತ್ತರಪ್ರದೇಶವೂ ಸೇರಿ ನೆರೆಯ ಹರ್ಯಾಣ, ಪಂಜಾಬ್, ರಾಜಸ್ಥಾನ, ಬಿಹಾರ........ ನನಗೆ ತಿಳಿದಿರುವಂತೆ ಈ ಪಂಚರಾಜ್ಯಗಳ ಇಡೀ ಹೆಣ್ಣು ಸಂತತಿಯ ವ್ಯಥೆ ಇದು.‌ ಅದರಲ್ಲೂ ಉತ್ತರಪ್ರದೇಶ, ಹರ್ಯಾಣ ಮತ್ತು ಪಂಜಾಬಿನಲ್ಲಿ ಹೆಣ್ಣಾಗಿ ಜನಿಸುವ ನರಕ ಯಾವ ಜೀವಿಗೂ ಬರಬಾರದು. ಇಲ್ಲಿಯ ಸಮಾಜ ಆಕೆ ಹುಟ್ಟಿದ ಕ್ಷಣದಿಂದ ಹಿಡಿದು ಬದುಕಿನ ಪ್ರತಿಯೊಂದು ಮಜಲುಗಳಲ್ಲೂ ಹೆಣ್ಣನ್ನು ಬಹಳ ಕಠೋರ ಹಾಗೂ ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತದೆ. ಈ ಪುರುಷಪ್ರಧಾನ ಸಮಾಜದ ಕಣ್ಣಿನಲ್ಲಿ ಅವಳು ಕೇವಲ ಒಂದು ವಸ್ತುವಷ್ಟೇ..... 

ಅಂದಹಾಗೆ ಈ ಶಿಶು ಹತ್ಯೆ ಇಂದು ನಿನ್ನೆಯಿಂದ ಆರಂಭವಾದ ಪರಿಪಾಠವಲ್ಲ. ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದ, ತಲೆಮಾರಿನಿಂದ ತಲೆಮಾರಿಗೆ ಕಲಿಸಿಕೊಟ್ಟ 'ಅತ್ಯುತ್ತಮ' ಸಂಪ್ರದಾಯ.....

ರಾಜಮನೆತನಗಳ ಆಳ್ವಿಕೆಯ ಕಾಲದಲ್ಲೇ ಹೆಣ್ಣು ಶಿಶು ಹತ್ಯೆ ಈ ಪಂಚರಾಜ್ಯಗಳಲ್ಲಿ ಸಾಮಾನ್ಯವಾಗಿತ್ತು ಎನ್ನುತ್ತದೆ ಇತಿಹಾಸ. ಹೆಣ್ಣುಮಗು ಜನಿಸಿದೊಡನೇ ಒಂದೋ ಅದರ ಬಾಯಿಗೆ ದನದ ಸೆಗಣಿ ತುಂಬಿಸಿ ಇಲ್ಲವಾದರೆ ಮುಖವನ್ನು ಹಾಲಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿಸುವ ವಿಧಾನವನ್ನು ಅನುಸರಿಸಲಾಗುತ್ತಿತ್ತಂತೆ. ಆ ಸಮಯದಿಂದ ಹಿಡಿದು ಭಾರತ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಾಗಲೂ ಯಾವುದೇ ಎಗ್ಗಿಲ್ಲದೆ ಈ ಸಂಪ್ರದಾಯ ಮುಂದುವರೆಯಿತು. ಇದನ್ನು ತಡೆಯಲು ಬ್ರಿಟೀಷರು ೧೮೭೦ರಲ್ಲಿ ಹೆಣ್ಣು ಶಿಶು ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಫಲಕಾರಿಯಾಗಲಿಲ್ಲ. ಮುಂಚೆ ಹುಟ್ಟಿದೊಡನೆ ಹೆಣ್ಣು ಮಗುವನ್ನು ಕೊಲ್ಲುತ್ತಿದ್ದವರು ಈ ಕಾಯ್ದೆ ಬಂದ ನಂತರ ಒಂದೆರಡು ವರ್ಷ ಆ ಮಕ್ಕಳನ್ನು ಸರಿಯಾದ ಪೋಷಣೆ, ಕಾಳಜಿ ಇಲ್ಲದೇ ಸೊರಗಿ ಬದುಕಲು ಬಿಟ್ಟು ನಂತರ ಕೊಲ್ಲುವ ವ್ಯವಸ್ಥೆ ಆರಂಭವಾಯಿತಷ್ಟೇ.... ೧೯೦೬ರಲ್ಲಿ ಈ ಕಾನೂನು ಹಿಂಪಡೆಯಲ್ಪಟ್ಟ ನಂತರ ಮತ್ತೆ ಹಳೆಯ ಸಂಪ್ರದಾಯದ ಪುನರಾವರ್ತನೆ ಆರಂಭವಾಗಿದ್ದು ಈಗ ನನ್ನ ಜನನ ಕಾಲದವರೆಗೂ ಈ ಶಿಶು ಹತ್ಯೆ ಹಾಗೇ ಮುಂದುವರೆದಿದೆ ಎಂದರೆ ನಮ್ಮ ವ್ಯವಸ್ಥೆ ಅದೆಷ್ಟು ಕುಲಗೆಟ್ಟು ಹೋಗಿದೆ ಎಂದು ನೀವೇ ಅಂದಾಜಿಸಿ....

ಇಂತಹ ಪ್ರದೇಶದಲ್ಲಿ ಹಾಗೂ ಸಂದರ್ಭದಲ್ಲಿ ನಾನು ಜನಿಸಿದ್ದು. ನಮ್ಮದು ಹಿಂದೂ ರಜಪೂತ ಸಮುದಾಯದ ಚಾಂದೇಲ್ ಪಂಗಡ. ನನ್ನ ದಾದಾ ದಾದಿಗೆ ಇಬ್ಬರು ಗಂಡು ಮಕ್ಕಳು... ನನ್ನ ಬಾಬೂಜಿ ಹಿರಿಯವರು, ಚಾಚಾ ಎರಡನೇಯವರು. ಬಹುಶಃ ಇವರಿಗಿಂತ ಮುಂಚೆಯೋ ಇಲ್ಲಾ ನಂತರವೋ ಹೆಣ್ಣು ಕೂಸುಗಳು ಹುಟ್ಟಿ, ಬದುಕಿನ ಹೋರಾಟದಲ್ಲಿ ಸೋತು ಸತ್ತಿರಬಹುದು ಎಂಬುದು ನನ್ನ ಬಲವಾದ ಸಂಶಯ. ನಮ್ಮದು ಭೈರೋನ್ ಗ್ರಾಮದಲ್ಲಿನ ಕೆಲವೇ ಕೆಲವು ಅನುಕೂಲಸ್ಥ ಕುಟುಂಬಗಳಲ್ಲಿ ಒಂದು. ವಂಶಪಾರಂಪರ್ಯವಾಗಿ ಬಂದ ಜಮೀನು ಬಹಳವಿತ್ತು. ಗೇಹೂ(ಗೋಧಿ), ಚಾವಲ್(ಅಕ್ಕಿ), ಹಾಗೂ ಮಕ್ಕಾ(ಜೋಳ)ದ ಜೊತೆಗೆ ಗನ್ನಾ(ಕಬ್ಬು)ವನ್ನು ಬೆಳೆಯುವ ಜಮೀನು ಯಮುನೆಯ ದಯೆಯಿಂದ ಫಲವತ್ತಾಗಿತ್ತು. ಹಣಕಾಸಿನ ಕೊರತೆಯೇನೂ ಇರಲಿಲ್ಲ. ಅದಲ್ಲದೇ ದಾದಾ ಗ್ರಾಮದ ಪಂಚಾಯತ್ತಿನ ಸದಸ್ಯರಾಗಿದ್ದವರು. ಈಗ ಆ ಹುದ್ದೆ ಬಾಪೂವಿಗೆ ಲಭಿಸಿತ್ತು. ಮುಂದೆ 'ಸರಪಂಚ'ನಾಗುವ ಆಸಕ್ತಿ ಬೇರೆ... ಹಾಗಾಗಿ ನಮ್ಮ ಕುಟುಂಬವೆಂದರೆ ಎಲ್ಲರಿಗೂ ಗೌರವವೇ......

ಇನ್ನು ನನ್ನ ಮಾಯಿ ಮತ್ತು ಚಾಚಿಯ ಬಗ್ಗೆ ಏನು ಹೇಳಲಿ? ಹೇಳಲು ಉಳಿದಿರುವುದಾದರೂ ಏನು.....?

ಅವರಿಗೆ ಮಾತನಾಡುವ ಹಕ್ಕಿಲ್ಲ.... ಮನೆಯ ಗಂಡಸರು ಮತ್ತು ಅವರ ಸಾಸೂಮಾ ಹೇಳಿದ್ದಕ್ಕೆಲ್ಲಾ ಕುರಿಯಂತೆ ತಲೆಯಾಡಿಸುವುದು, ಏನಕ್ಕೂ ಎದುರಾಡದಿರುವುದು, ಮನೆಕೆಲಸವನ್ನೆಲ್ಲಾ ಅಚ್ಚುಕಟ್ಟಾಗಿ ಪೂರೈಸುವುದು, ತಮ್ಮ ಗಂಡಂದಿರ ದೈಹಿಕ ಕಾಮನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದು, ಮಕ್ಕಳನ್ನು ಹೆರುವುದು, ಗಂಡಾದರೆ ಅವನ ಚಾಕರಿ ಮಾಡುವುದು, ಹೆಣ್ಣಾದರೆ...... ತಾನು ಹೆತ್ತೆನೆಂಬುದನ್ನೇ ಮರೆತು ಇನ್ನೊಮ್ಮೆ ಹೆರಲು ತಯಾರಾಗುವುದು....... 
ಎಲ್ಲೋ ಸಮಯ ಸಿಕ್ಕಾಗ ಮನೆಯ ಪಡಸಾಲೆಯಲ್ಲಿ ಕುಳಿತು ಘೂಂಗಟ್ ಪರದೆಯ ಒಳಗಿನಿಂದಲೇ ಆಗಸವನ್ನು ದಿಟ್ಟಿಸುತ್ತಾ, ಕಳೆದುಕೊಂಡ ಹೆಣ್ಣುಮಕ್ಕಳನ್ನು ನೆನೆಯುತ್ತಾ ನಿಟ್ಟುಸಿರಾಗಿ ಭಗವಂತನಿಗೊಂದು ಬೇಡಿಕೆ ಸಲ್ಲಿಸುವುದು......

"ಅಗಲೇ ಜನಮ್ ಮೋಹೆ ಬಿಟಿಯಾ ನಾ ಕಿಜೋ.....
ಬಿಟಿಯಾ ಜೋ ಕಿಜೋ ತೋ, ಯೆ ದೇಶ್ ನ ದಿಜೋ......"

(ಮುಂದಿನ ಜನ್ಮದಲ್ಲಿ ನನ್ನ ಮಗಳಾಗಿ(ಹೆಣ್ಣಾಗಿ) ಸೃಷ್ಟಿಸಬೇಡ. ಹೆಣ್ಣಾಗಿಯೇ ಸೃಷ್ಟಿಸುವುದಾದರೇ ಈ ದೇಶದಲ್ಲಂತೂ ಹುಟ್ಟಿಸಲೇಬೇಡ.....)

ಇಷ್ಟೇ ಅವರ ಜೀವನ.........

ಇಂತಹ ಮನೆಯಲ್ಲಿನ ಮೂವರು ಗಂಡಸರಿಗೆ ಮತ್ತು ದಾದಿಗೆ ಇದ್ದದ್ದು ಒಂದೇ ಚಿಂತೆ...... ಅದು ಇನ್ನೂ ಮನೆಗೊಬ್ಬ 'ಲಾಲಾ'(ಗಂಡು ಮಗು) ನ ಆಗಮನವಾಗದ ಕುರಿತು...... ಇಪ್ಪತ್ತು ವರುಷದ ನನ್ನ ಮಾಯಿ ಈ ಹಿಂದೆ ಎರಡು ಬಾರಿ ಗರ್ಭಿಣಿಯಾದಾಗಲೂ ಹುಟ್ಟಿದ್ದು ಲಾಲಿ(ಹೆಣ್ಣು ಮಗು)ಯರು. ಹದಿನೆಂಟರ ಚಾಚಿಯೂ ಒಂದು ಚೋರಿಯನ್ನೇ ಹೆತ್ತಿದ್ದು......

'ಆ ಮೂವರು ಲಾಲಿಯರು ಈಗೆಲ್ಲಿ.......?' ಎಂದು ಮಾತ್ರ ಕೇಳಬೇಡಿ.........

ಈ ಮನೆಯಲ್ಲಿ ಮೂವರು ಲಾಲಿಯರು ಹುಟ್ಟಿದ್ದರು ಎಂಬುದು ಎಷ್ಟು ಸತ್ಯವೋ ಈಗ ಅವರಲ್ಲಿ ಒಬ್ಬರೂ ಬದುಕಿಲ್ಲ ಎಂಬುದೂ ಅಷ್ಟೇ ಸತ್ಯ.

ಈಗ ಮಾಯಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು. ನನ್ನ ಬಾಪೂ, ಚಾಚಾ, ದಾದಾ, ದಾದಿ ಎಲ್ಲರಿಗೂ ಇದ್ದದ್ದು ಒಂದೇ ನಿರೀಕ್ಷೆ...... ಈ ಬಾರಿಯಾದರೂ 'ವಂಶ್ ಕೀ ಚಿರಾಗ್' ನ ಆಗಮನವಾಗಲೀ ಎಂದು. ಬಹುಶಃ ಚಾಚಿಗೂ ಅದೇ ನಿರೀಕ್ಷೆ ಇತ್ತೇನೋ.... ಆ ಮೂಲಕವಾದರೂ ತಮ್ಮಿಬ್ಬರಿಗೂ ಒಂದಿನಿತು ನೆಮ್ಮದಿ ದೊರಕಲಿ ಎಂಬ ಅಭಿಲಾಷೆ ಇರಬಹುದು..... ಈಗಾಗಲೇ ಎರಡು ಹೆಣ್ಣು ಹೆತ್ತು ಮನೆಯವರ ಅವಕೃಪೆಗೆ ಪಾತ್ರಳಾಗಿದ್ದ ಮಾಯಿಗೂ 'ಒಮ್ಮೆ ಗಂಡು ಹುಟ್ಟಿ ಈ ನರಕದಿಂದ ಮುಕ್ತಿ ದೊರೆತರೆ ಸಾಕಪ್ಪಾ...' ಎನಿಸಿರಬಹುದಾ? ನನಗಂತೂ ತಿಳಿದಿಲ್ಲ. ಆದರೆ ಅವರೆಲ್ಲಾ ಆಸೆ, ನಿರೀಕ್ಷೆಗಳಿಗೆ ತಣ್ಣೀರೆರಚುವಂತೆ ಭ್ರಮನಿರಸನಗೊಳಿಸಲು ಅಮ್ಮನೊಡಲಲ್ಲಿ ಪವಡಿಸಿದ್ದೆ ನಾನು. ಆದರೆ ಇದರಲ್ಲಿ ನನ್ನ ತಪ್ಪೇನು......? 

ಬರಲಿರುವುದು ಅದೃಷ್ಟ ಹೊತ್ತು ತರುವ ಮಗನೋ, ಇಲ್ಲಾ ಹಿಂದಿನ ಎರಡು ಸಲದಂತೆ ದುರಾದೃಷ್ಟವೇ ಮೈವೆತ್ತ ಮಗಳೋ ಎಂದು ತಿಳಿವ ತವಕ ಅವರಿಗೆಲ್ಲಾ.....

ಪ್ರಸವ ಪೂರ್ವ ರೋಗನಿರ್ಣಯ ತಂತ್ರಗಳು (pre natal diagnostic techniques) ಲಭ್ಯವಿತ್ತಾದರೂ ಆ ಕಾಲದಲ್ಲಿ ಈಗಿನಂತೆ ಗಲ್ಲಿಗೊಂದು ಶ್ರವಣಾತೀತ ಧ್ವನಿ ತರಂಗ ಪರೀಕ್ಷೆಯ (ultrasonography) ಕೇಂದ್ರಗಳು ಇರಲಿಲ್ಲ. ಆ ತಂತ್ರಜ್ಞಾನ ಭಾರತಕ್ಕೆ ಇನ್ನೂ ಕಾಲಿಟ್ಟಿರಲಿಲ್ಲ. ಆಗ ಇದ್ದದ್ದು ಆಕ್ರಮಣಶೀಲ ತಂತ್ರಗಳು(invasive techniques) ಮಾತ್ರಾ. ಬಹಳ ಸಂಕೀರ್ಣವಾದ ಈ ತಂತ್ರಜ್ಞಾನದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿತ್ತು. ಆ ಕಾಲಕ್ಕೆ ಇವು ಅತೀ ದುಬಾರಿಯೂ ಕೂಡಾ..... ಎಲ್ಲಕ್ಕಿಂತಲೂ ಹೆಚ್ಚಾಗಿ ಆಗ ಈ ಸೌಲಭ್ಯ ಹೊಂದಿದ್ದ ಆಸ್ಪತ್ರೆಗಳು ಇದ್ದಿದ್ದು ಪಂಜಾಬ್ ಹಾಗೂ ಹರಿಯಾಣಾದ ಒಂದೆರೆಡು ಶಹರಗಳಲ್ಲಿ ಮಾತ್ರವೇ.

ಹಾಗಾಗಿ ಬಾಪೂ ಮತ್ತು ದಾದಾ ಆ ಯೋಜನೆಯನ್ನೇ ಕೈ ಬಿಟ್ಟಿದ್ದರು. ಅದಕ್ಕೆ ಬದಲಾಗಿ ಇನ್ನೊಂದು ಸುಲಭದ ಮಾರ್ಗೋಪಾಯ ಕಂಡುಹಿಡಿದ್ದಿದ್ದರು.......

ಅದೇ ಭೈರವ್ ಬಾಬಾ ಕೀ ಭವಿಷ್ಯವಾಣಿ.........

ಭೈರವ್ ಬಾಬಾ..... ಕೇವಲ ನಮ್ಮ ಗ್ರಾಮ ಮಾತ್ರವಲ್ಲ, ಇಡೀ ಶಾಮ್ಲೀಯಲ್ಲೇ ಚಿರಪರಿಚಿತ ಹೆಸರದು. ಅವನೊಬ್ಬ ಸ್ವಯಂ ಘೋಷಿತ ದೇವಮಾನವ. ಅದೇನೋ ಒಂದಷ್ಟು ತಂತ್ರ ಮಂತ್ರ ವಿದ್ಯೆ ಕಲಿತು ಸುತ್ತ ಹತ್ತೂರಿನ ಜನರನ್ನು ತನ್ನ ಕಿರು ಬೆರಳಲ್ಲಿ ಕುಣಿಸುತ್ತಿದ್ದ. ಶಾಮ್ಲಿಯ ಬೇರೆ ಬೇರೆ ಪ್ರಾಂತ್ಯಗಳಿಂದ ಜನ ಕಷ್ಟ ಪರಿಹಾರಕ್ಕಾಗಿ ಅವನ ಬಳಿ ದಾಂಗುಡಿ ಇಡುತ್ತಿದ್ದರು. ಅವುಗಳಲ್ಲಿ ಮುಕ್ಕಾಲು ಪ್ರತಿಶತ ಜನರ ಸಮಸ್ಯೆ....... ಹೆಣ್ಣು ಸಂತಾನ.... 

ಅದೇನು ಅವನ ಅದೃಷ್ಟವೋ ಇಲ್ಲಾ ಹೆಣ್ಣು ಭ್ರೂಣಗಳ ದುರಾದೃಷ್ಟವೋ ತಿಳಿಯದು ...... ಅವನ ಭವಿಷ್ಯ ವಾಣಿಗಳೆಲ್ಲ ಸಾಮಾನ್ಯವಾಗಿ ನಿಜವಾಗುತ್ತಿದ್ದವು. ಹಾಗಾಗಿ ಅವನ ಮಾತೆಂದರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ವೇದವಾಕ್ಯ. 

ನನ್ನ ದಾದಾ ಮತ್ತು ಬಾಪೂ ಒಟ್ಟಾಗಿ ಭೈರವ್ ಬಾಬಾನನ್ನು ಮನೆಗೆ ಕರೆಸಿದ್ದರು. ಅವನು ಮಾಯಿಯ ಕೈ ನೋಡಿ, ಗ್ರಹಗತಿ ಲೆಕ್ಕಹಾಕಿ, ಕವಡೆ ಇಟ್ಟು ಈ ಬಾರಿಯೂ ಹೆಣ್ಣೇ ಹುಟ್ಟುವುದೆಂದು ಭವಿಷ್ಯ ನುಡಿದಿದ್ದ...... ಅದನ್ನು ಕೇಳಿ ಎಲ್ಲರ ಮುಖಗಳೂ ಬಿಳುಚಿಕೊಂಡರೇ ಮಾಯಿ ವಿಪರೀತ ಭಯ ಪಟ್ಟಿದ್ದಳು. ಅಮ್ಮನ ಒಡಲೊಳಗೆ ಬೆಚ್ಚಗೆ ಮಲಗಿದ್ದ ನನಗೆ ಈ ಲೋಕ ಹೀಗೆ ಸ್ವಾಗತ ಕೋರಿತ್ತು. 

ಬಾಬಾ ಬಂದು ಹೋದ ಮೇಲೆ ಮನೆಯಲ್ಲಿ ಮಾಯಿಯ ಪರಿಸ್ಥಿತಿ ಶೋಚನೀಯವಾಯಿತು‌. ಅಲ್ಲಿಯತನಕ ಗಂಡು ಹೆರುವಳು ಎಂಬ ನಿರೀಕ್ಷೆಯಲ್ಲಿ ತೋರುತ್ತಿದ್ದ ಪ್ರೀತ್ಯಾದರಗಳೆಲ್ಲಾ ಒಮ್ಮೆಗೆ ನಿಂತು ಹೋದವು. ಹಳೆಯ ದಿನಚರಿ ಮತ್ತೆ ಮರುಕಳಿಸಿತು. ಅವಳಿಗೆ ಕ್ಷಣ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ದುಡಿತ. 

ಅದರೊಂದಿಗೆ ನಾನು ಹೆಣ್ಣೆಂದು ಬಾಬಾ ಭವಿಷ್ಯ ನುಡಿದೊಡನೆ ಅದ್ಯಾವುದೋ ಹಳ್ಳಿ ಮದ್ದುಗಳನ್ನು ಕುಡಿಸಿ ಅಮ್ಮನೊಡಲಲ್ಲೇ ನನ್ನ ಚಿವುಟಿ ಹಾಕಲು ಕೆಲವು ಪ್ರಯತ್ನಗಳಾಗಿತ್ತು. ನನ್ನ ಉಸಿರು ಗಾಳಿಯ ಸೋಕದಂತೆ, ನನ್ನ ಕೊರಳು ದನಿ ಎತ್ತದಂತೆ, ನಾ ಕಣ್ತೆರೆದು ಜಗವನ್ನು ಕಾಣದಂತೆ ಮಾಡಲು ಅದೆಷ್ಟು ಹವಣಿಸಿದ್ದರು....? 

ಅದಕ್ಕೇ ಹೇಳಿದ್ದು ನಮಗೆ ಹುಟ್ಟು ಒಂದು ಕದನವೆಂದು.... ಯುದ್ಧದಲ್ಲಿ ಜಯಿಸಿದರೆ ಮಾತ್ರವೇ ಕಣ್ತೆರೆದು ಜಗ ಕಾಣುವ ಅವಕಾಶ. ಹಾಗೊಂದು ವೇಳೆ ಸಾವನ್ನು ಜಯಿಸಿ ಜನಿಸಿದರೆ ಆನಂತರದ ಬದುಕೇ ರಣರಂಗ......
ಮಗ ಜನಿಸಿದರೆ ಆತ ಎಲ್ಲರ ಮೇಲೂ ರಾಜ್ಯಭಾರ ನಡೆಸುತ್ತಾನೆ....
ಅದೇ ಮಗಳು ಜನಿಸಿದರೆ ಅವಳು ಬದುಕಿನ ಹೋರಾಟಕ್ಕೆ ಸಜ್ಜಾಗುತ್ತಾಳೆ....
ಇಬ್ಬರೂ ಮಕ್ಕಳೇ...... ಆದರೆ ಅವ'ನು' ಮತ್ತು ಅವ'ಳು' ನಡುವಿನ ವ್ಯತ್ಯಾಸ ಅದೆಷ್ಟು ಅಗಾಧ........!!

ಆದರೆ ಪಾಪ ನನ್ನ ಮಾಯಿ......... ಆ ಮದ್ದುಗಳನ್ನು ಕುಡಿದಂತೆ ನಟಿಸಿ ಉಗುಳುತ್ತಿದ್ದಳು. ಐದು ತಿಂಗಳು ತುಂಬಿದ ಮೇಲೆ ಆ ತರದ ಪ್ರಯತ್ನಗಳು ನಿಂತವು. ಹುಟ್ಟಿದ ಕೂಡಲೇ ಹನನ ಮಾಡಿದರಾಯಿತು ಎಂದುಕೊಂಡರೇನೋ......?

ಆದರೆ ಮಾಯಿಯ ಸಮಸ್ಯೆಗಳೇನೂ ಕೊನೆಯಾಗಲಿಲ್ಲ. ಬದಲಿಗೆ ಅವು ಇನ್ನೂ ವಿಪರೀತವಾದವು. ಈ ನಡುವೆಯೇ ಅವಳ ಕಲ್ಪನೆಗೂ ಮೀರಿದ ಘಟನೆಯೊಂದು ನಡೆಯಿತು.

ಅವಳಿಗೆ ಏಳು ತಿಂಗಳುಗಳಾಗಿದ್ದಾಗ ಬಾಪೂ ಇನ್ನೊಬ್ಬ ಹೆಣ್ಣನ್ನು ರಾಜಾರೋಷವಾಗಿ ಮದುವೆಯಾಗಿ ಮನೆಗೆ ಕರೆತಂದಿದ್ದ..........!!

ಲಾಲಾನನ್ನು ಹಡೆಯಲು ಅಸಮರ್ಥಳಾದ ನೀನು ಇನ್ನು ಮುಂದೆ ನನ್ನ ಹೆಂಡತಿಯಲ್ಲವೆಂದು, ತಾಳಿ ಕಟ್ಟಿದ ತಪ್ಪಿಗೆ ಜೀವನ ಪರ್ಯಂತ ಮೂರು ಹೊತ್ತು ಊಟ ಹಾಕಿ ಸಾಕುವೆನೆಂದೂ ದೊಡ್ಡ ಉಪಕಾರ ಮಾಡುವವನಂತೆ ನುಡಿದಿದ್ದ...... ಹಾಗೂ ಆ ಕ್ಷಣವೇ ಮಾಯಿ ಮತ್ತು ನಾನು ಇಬ್ಬರೂ ಮನೆಯಿಂದ ಹೊರದೂಡಲ್ಪಟ್ಟಿದ್ದವು. ಮನೆಯ ಹಿಂಬದಿಯ ಕೊಟ್ಟಿಗೆಯ ಬದಿಯಲ್ಲಿನ ಪುಟ್ಟ ಜಾಗದಲ್ಲಿ ನಾವು ಜೀವನ ಕಳೆಯಬೇಕಿತ್ತು. 

'ಆ ಕ್ಷಣದಲ್ಲಿ ಮಾಯಿಯ ಮನಸ್ಸಿಗೆ ಅದೆಂತಹ ಆಘಾತವಾಗಿರಬಹುದು? ಅವಳ ಅಂತರಂಗದಲ್ಲಿ ಅದೆಷ್ಟು ಭಾವನೆಗಳ ಬಿರುಗಾಳಿ ಸುಳಿಸುಳಿದು ಅಂತರಂಗದ ಕೊಳವನ್ನು ರಾಡಿಯಾಗಿಸಿರಬಹುದು.....?' ಈ ಉತ್ತರ ಸಿಗದ ಪ್ರಶ್ನೆಯನ್ನು ನಾನು ಅದೆಷ್ಟು ಬಾರಿ ಕೇಳಿಕೊಂಡಿರುವೆನೋ....... 

ಆನಂತರದ ದಿನಗಳಲ್ಲಿ ಆಕೆ ಕಲ್ಲಾಗಿದ್ದಳು. ಅವಳ ಉಸಿರಾಟವೊಂದರ ಹೊರತು ಬೇರ್ಯಾವ ಭಾವಗಳೂ ಅವಳಲ್ಲಿ ಉಳಿದಿರಲಿಲ್ಲವೇನೋ.... ನನ್ನೊಂದಿಗೆ ಮಾತನಾಡುತ್ತಿರಲಿಲ್ಲ, ಉದರದ ಮೇಲೆ ಕೈಯಾಡಿಸಿ ನನ್ನ ಚಲನೆಯ ಗತಿಯ ಅನುಭೂತಿಯನ್ನು ಅನುಭವಿಸುತ್ತಿರಲಿಲ್ಲ. ಅವರೇನು ತಿನ್ನಲು ಕೊಡುತ್ತಿದ್ದರೋ ಅದರ ಶುಚಿ, ರುಚಿಯ ಹಂಗಿಲ್ಲದೇ ತಿನ್ನುತ್ತಿದ್ದಳು.... ಒಮ್ಮೊಮ್ಮೆ ಮನೆಯವರ ಕಣ್ತಪ್ಪಿಸಿ ಚಾಚಿ ಬಂದು ಅವಳಿಗೊಂದಿಷ್ಟು ಬೆನ್ನು, ಸೊಂಟ ನೀವಿ ಏನಾದರೂ ತಿನ್ನಲು ಕೊಟ್ಟು ಹೋಗುತ್ತಾಳೆ. ಪಾಪ... ಆಕೆಯಾದರೂ ಏನು ಮಾಡಿಯಾಳು? ಅವಳೂ ಪಂಜರದ ಪಕ್ಷಿಯೇ ಅಲ್ಲವೇ....... 

ಒಟ್ಟಿನಲ್ಲಿ ಮಾಯಿ ವಿರಾಗಿನಿಯಂತಾಗಿದ್ದಳು. ಆದರೆ ನೀರವ ರಾತ್ರಿಗಳ ಕೊರೆವ ಚಳಿಯಲ್ಲಿ ಅವಳ ಕಣ್ಣೀರು ಮಾತ್ರ ಅಕ್ಷಯವಾಗಿ ಹರಿಯುತ್ತದೆ.....

ಮನೆಯಿಂದ ಹೊರಹಾಕಿದರೂ ಅವಳ ಮೇಲಿನ ಕೆಲಸದ ಹೊರೆಯಂತೂ ಒಂದಿನಿತೂ ಕಮ್ಮಿ ಇರಲಿಲ್ಲ. ಈಗ ಆಕೆ ಅಕ್ಷರಶಃ ಈ ಮನೆಯ ಕೆಲಸದ ಆಳಾಗಿದ್ದಳು ಎಂದರೆ ತಪ್ಪಾಗಲಾರದೇನೋ..... ಎಂಟು ತಿಂಗಳ ಗರ್ಭಿಣಿ ಬಾವಿಯಿಂದ ನೀರೆಳೆಯುವಾಗ, ಭಾರೀ ನೀರ ಕೊಡವನ್ನು ಸೊಂಟದ ಮೇಲಿಟ್ಟುಕೊಂಡು ನಡೆವಾಗ ಉಸಿರು ಸಿಕ್ಕಿಹಿಡಿದಂತಾಗುತ್ತಿತ್ತು ಅವಳಿಗೆ..... ಆಗೆಲ್ಲಾ ನನಗೂ ಯಮ ಯಾತನೆಯಾಗುತ್ತಿತ್ತು... ಉದರದಲ್ಲೇ ಒದ್ದಾಡುತ್ತಿದ್ದೆ. ಅವಳು ತನ್ನ ದುರ್ದೆಸೆ ನೆನೆದು ಕಣ್ಣೀರಿಡುವಾಗಲೆಲ್ಲಾ ಅವಳ ಕಣ್ಣೊರೆಸಬೇಕೆಂದು ತಳಮಳಿಸಿದ್ದೇನೆ. ಸಾಧ್ಯವಾಗದೇ ಪರಿತಪಿಸಿದ್ದೇನೆ. ಅವಳು ದೇವರ ನೆನೆದು, 'ಬಾಬಾ ಹೇಳಿದಂತೆ ಆಗದೆ ನನಗೆ ಗಂಡು ಕೂಸೇ ಹುಟ್ಟಲಿ' ಅಂತ ಬೇಡಿಕೊಂಡಾಗಲೆಲ್ಲಾ, 'ನಿನ್ನ ಉದರದಲ್ಲಿರುವುದು ಲಾಲಿಯೇ' ಎಂದು ಚೀರಿದ್ದೇನೆ...... ಆದರೆ ಅದ್ಯಾವುದೂ ಅವಳನ್ನು ತಲುಪಲಿಲ್ಲ. 

ನಾನೂ ಭಗವಂತನನ್ನು ಕೇಳಿಕೊಳ್ಳುತ್ತೇನೆ....... 

"ಮ್ಹಾರಿ ಮಾ ಕೋ ದೂಜಿ ಚೋರಿ ನಾ ದಿಜೋ.....
ಅಗಲೇ ಜನಮ್ ಮೋಹೆ ಬಿಟಿಯಾ ನಾ ಕಿಜೋ......"

(ನನ್ನಮ್ಮನಿಗೆ ಇನ್ನೊಂದು ಹೆಣ್ಣುಮಗುವ ಕೊಡಬೇಡ, ಮುಂದಿನ ಜನುಮದಲ್ಲಿ ನನ್ನ ಹೆಣ್ಣಾಗಿ ಸೃಷ್ಟಿಸಬೇಡ.....)

ಇಂತಹ ತೀರದ ವೇದನೆಗಳ ನಡುವೆಯೇ ನಾನು ನನ್ನ ಹೋರಾಟಕ್ಕೆ ಶ್ರೀಕಾರ ಹಾಕುವ ಸಮಯ ಬಂದೇಬಿಟ್ಟಿತು........ ನನಗೆ ಖಂಡಿತಾ ಈ ಹಾಳು ಪ್ರಪಂಚಕ್ಕೆ ಕಾಲಿಟ್ಟು ಅಮ್ಮನಂತೆ ಜೀವನ ಸವೆಸುವ ಆಸೆಯಿಲ್ಲ.... ಆದರೇನು ಮಾಡಲೀ? ಇದೇ ನನ್ನ ಲಲಾಟದಲ್ಲಿ ಬರೆದಿರುವುದು......

ಅದು ಶಿಶಿರ ಋತುವಿನ ಮಾಘ ಮಾಸ..... ವಿಪರೀತ ಚಳಿ... ನಾನೇನೋ ಮಾಯಿಯ ಒಡಲೊಳಗೆ ಬೆಚ್ಚಗೆ ಆಟವಾಡಿಕೊಂಡಿದ್ದೆ.... ಅಮ್ಮನ ಗರ್ಭ ಅದೆಷ್ಟು ಬೆಚ್ಚಗೆ, ಅಲ್ಲಿರುವಷ್ಟು ನೆಮ್ಮದಿ, ರಕ್ಷಣೆ ಇನ್ನೆಲ್ಲಿ? ಆದರವಳು ಆ ಚಳಿಯಲ್ಲಿ ನಡುಗುತ್ತಿದ್ದಳು. ಇದ್ದದ್ದೊಂದು ಹೊದಿಕೆ. ಅದೋ ನಾಲ್ಕು ಕಡೆಗಳಿಂದಲೂ ತೆರೆದಿದ್ದ ಕೊಟ್ಟಿಗೆ... ತಲೆಯ ಮೇಲೊಂದು ಸೂರು ಮಾತ್ರವೇ ಇದ್ದದ್ದು... ಶಿಶಿರದಲ್ಲಿ ಯಮುನೆಯ ಬದಿಯಿಂದ ಬೀಸುವ ಕುಳಿರ್ಗಾಳಿಯ ಬಿರುಸು ಹೆಚ್ಚಿರುತ್ತದೆ. ಹಾಗೇ ಅತೀ ಶೀತವೂ...... ಬೆಳಗಿನ ಜಾವದ ವಿಪರೀತ ಚಳಿಗೆ ಅವಳಿಗೆ ಉಸಿರಾಡಲು ತೊಂದರೆಯಾಗತೊಡಗಿತು. ಅವಳು ಉಸಿರು ಹಿಡಿಯತೊಡಗಿದಂತೆಲ್ಲಾ ನನಗೂ ಹಿಂಸೆಯಾಗಿ ಒದ್ದಾತೊಡಗಿದೆ. ತಲೆಯನ್ನು ಮುಂದಾಗಿಸಿ ನನ್ನ ಸುರಕ್ಷಾ ಕವಚದಿಂದ ಹೊರಬರಲು ಪ್ರಯತ್ನಿಸತೊಡಗಿದೆ. ಉಸಿರಾಟದ ಏರುಪೇರಿನೊಂದಿಗೆ ನನ್ನ ಒದ್ದಾಟವೂ ಸೇರಿ ಮಾಯಿ ನರಳತೊಡಗಿದ್ದಳು. ಆದರೆ ಜೋರಾಗಿ ಬಾಯ್ತೆರೆದು ಕೂಗಲಾರದಷ್ಟು ಬಾಧೆ ಕೊಡತೊಡಗಿತ್ತು ಕೊರೆವ ಚಳಿ. ಏನೂ ಮಾಡಲು ತೋಚದೇ ಪಕ್ಕದಲ್ಲಿದ್ದ ಕೈಗೆ ಸಿಕ್ಕ ತಟ್ಟೆ, ಲೋಟ, ಕಲ್ಲುಗಳನ್ನೆಲ್ಲಾ ಎಸೆಯತೊಡಗಿದಳು.... 

ಪಾಪ ಚಾಚಿಗೆ ಇವಳದ್ದೇ ಯೋಚನೆಯಾಗಿತ್ತೇನೋ..... ಮನೆಯ ಹಿಂಬಾಗಿಲಿನಿಂದ ಸದ್ದಾಗದಂತೆ ನಿಧಾನವಾಗಿ ನಮ್ಮೆಡೆಗೆ ಬಂದಿದ್ದಳು.... ಮಾಯಿಯ ಪರಿಸ್ಥಿತಿ ನೋಡಿ ಗಾಬರಿಯಿಂದ ಮನೆಯೊಳಗೆ ಓಡಿದ್ದಳು. ನಾನಾಗಲೇ ಶತ ಪ್ರಯತ್ನ ಪಟ್ಟು ಎಲ್ಲೆಡೆ ಹಾದಿ ಹುಡುಕಿ ತಲೆಯಿಂದ ಗುದ್ದಿ ಕೊನೆಗೊಮ್ಮೆ ಹೊರಹೋಗುವ ಹಾದಿ ಸಿಕ್ಕಿಯೇ ಬಿಟ್ಟಿತ್ತು... 

ಆದರೆ........ 

ನಾನು ನನ್ನ ಸಂಪೂರ್ಣ ಶಕ್ತಿ ಬಳಸಿ ಅವಳ ಗರ್ಭವೆಂಬ ಸ್ವರ್ಗದಿಂದ ಈ ನರಕ ಪ್ರವೇಶಿಸುವುದಕ್ಕೂ, ಅವಳು ಈ ನರಕದ ಯಾನ ಮುಗಿಸಿ ಮುಕ್ತಿಯ ನೆಮ್ಮದಿ ಪಡೆಯುವುದಕ್ಕೂ ಸರಿಹೋಯಿತು.......

ನನ್ನ ಜನನ ಮಾಯಿಯ ಮರಣ ಎರಡೂ ಒಂದೇ ಆಗಿ ಹೋಯಿತು......

ಚಾಚಿ ಬಿಸಿನೀರು ಹಿಡಿದು ಬರುವ ಸಮಯಕ್ಕೆ ಎಲ್ಲಾ ಮುಗಿದಿತ್ತು...... ಮಾಯಿಯ ತೆರೆದ ಕಣ್ಣುಗಳಲ್ಲಿ ಜನ್ಮದ ವೇದನೆಯಿತ್ತು. ಈಗ ಅವಳು ಏರುತ್ತಿರುವ ಚಳಿಯ ಹಂಗಿಲ್ಲದೆ ನಿಶ್ಚಲಳಾಗಿ ಬಿದ್ದಿದ್ದರೆ, ಇಷ್ಟು ಸಮಯ ಅವಳ ಬೆಚ್ಚಗಿನ ಉದರದಲ್ಲಿ ಹಾಯಾಗಿದ್ದ ನಾನು ಚಳಿಯ ಹೊಡೆತ ತಾಳಲಾರದೇ ಚೀರುತ್ತಿದ್ದೆ....... ಅಮ್ಮನ ಬೆಚ್ಚನೆಯ ಮಡಿಲಿಗಾಗಿ ಅರಸುತ್ತಿದ್ದೆ.... 

ಆದರೆ ಆ ಮಡಿಲು ಬದುಕಿನಲ್ಲಿ ನನಗೆಂದೂ ಸಿಗದ ಮರೀಚಿಕೆಯಾಗಿತ್ತು.......

ಹೀಗೆ ಆ ಕೊರೆವ ಚಳಿಯಲ್ಲಿ ಮಾಯಿಯ ಆಸರೆಯಿಲ್ಲದೆ ನನ್ನ ಬದುಕಿನ ಹೋರಾಟ ಆರಂಭವಾಗಿತ್ತು.......

ಇದು ಕೇವಲ ಆರಂಭ ಅಷ್ಟೇ........
ಕಾಣಬೇಕಾದದ್ದು, ಅನುಭವಿಸಬೇಕಾದದ್ದು ಇನ್ನೂ ಬಹಳಷ್ಟಿತ್ತು..........

ಸಶೇಷ

ಟಿಪ್ಪಣಿಗಳು:

Female Infanticide Prevention Act of 1870(Act VIII): ವಸಾಹತುಶಾಹಿ ಭಾರತದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಉತ್ತರ ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಯಾವುದೇ ಮುಚ್ಚುಮರೆ, ಅಡೆತಡೆಯಿಲ್ಲದೆ ಅವ್ಯಾಹತವಾಗಿ ನಡೆದಿತ್ತು. ಇದನ್ನು ಗಮನಿಸಿದ ಬ್ರಿಟೀಷರು ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ೧೮೭೦ರಲ್ಲಿ Female Infanticide Prevention Act ಅಥವಾ Act VIII ಅನ್ನು ಜಾರಿಗೆ ತಂದರು. ಹೆಣ್ಣು ಶಿಶು ಹತ್ಯೆಗೆ‌ ಕುಖ್ಯಾತವಾಗಿದ್ದ ಉತ್ತರ ಪಶ್ಚಿಮೀ ಪ್ರಾಂತ್ಯ(ಈಗಿನ ಉತ್ತರ ಪ್ರದೇಶ), ಔಧ್ ಹಾಗೂ ಪಂಜಾಬ್ ಪ್ರಾಂತ್ಯಗಳಲ್ಲಿ ಈ ಕಾಯಿದೆಯನ್ನು ಮೊಟ್ಟಮೊದಲಿಗೆ ಜಾರಿಗೊಳಿಸಲಾಯಿತು. ನಂತರ ಅಗತ್ಯತೆಯ ಅನುಸಾರ ಬೇರೆ ರಾಜ್ಯಗಳಿಗೆ ವಿಸ್ತರಿಸುವ ಯೋಜನೆಯಿತ್ತು. 
ಪಂಗಡ ಕೇಂದ್ರಿತವಾದ ಈ ಕಾಯಿದೆಯ ಅನುಸಾರ ಯಾವ ಪಂಗಡಗಳಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ ೪೦ಕ್ಕಿಂತ ಕಡಿಮೆ ಹೆಣ್ಣುಮಕ್ಕಳಿರುವರೋ ಆ ಪಂಗಡವನ್ನು ಹೆಣ್ಣು ಶಿಶು ಹತ್ಯೆಯ ಅಪರಾಧಿ ಎಂದು ಘೋಷಿಸಲಾಗುತ್ತಿತ್ತು. ಹೆಣ್ಣುಮಕ್ಕಳ ಪ್ರಮಾಣ ಶೇಕಡಾ ೨೫ಕ್ಕಿಂತಲೂ ಕಡಿಮೆ ಇದ್ದ ಪಂಗಡಗಳನ್ನು ಅತೀ ಗಂಭೀರ ಅಪರಾಧಿಗಳೆಂದು ಪರಿಗಣಿಸಲಾಗುತ್ತಿತ್ತು. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿತ್ತು.

ಅಂಕಿ ಅಂಶಗಳ ಆಧಾರದಲ್ಲಿ ನೋಡುವುದಾದರೆ ಈ ಕಾಯಿದೆ ಯಶಸ್ವಿಯಾಯಿತು ಎಂದೇ ಹೇಳಬೇಕು. ಆ ಕಾಯಿದೆ ಜಾರಿಯ ನಂತರ ಉತ್ತರ ಪಶ್ಚಿಮೀ ಪ್ರಾಂತ್ಯಗಳು, ಪಂಜಾಬ್ ಹಾಗೂ ಔಧ್ ಪ್ರಾಂತ್ಯಗಳಲ್ಲಿ ಹೆಣ್ಣು ಶಿಶು ಹತ್ಯೆ ಗಣನೀಯವಾಗಿ ಕಡಿಮೆಯಾಯಿತು. ಅದೂ ಅಲ್ಲದೇ ಆಗ್ರಾ ಮತ್ತು ಔಧ್ ಸಂಯುಕ್ತ ಪ್ರಾಂತ್ಯಗಳ ಸರ್ಕಾರ ಈ ನಿಯಮ ಇನ್ನು ಅಗತ್ಯವಿಲ್ಲ ಎಂದು ಒತ್ತಡ ಹಾಕಿತ್ತು. ಹಾಗಾಗಿ ೧೯೦೫ರಲ್ಲಿ ಈ ಕಾಯಿದೆಯನ್ನು ಹಿಂಪಡೆಯಲಾಯಿತು.
ಆದರೆ ವಾಸ್ತವವಾಗಿ ಈ ಕಾಯಿದೆ ಜಾರಿಗೆ ಬಂದ ನಂತರವೂ ಹೆಣ್ಣು ಶಿಶು ಹತ್ಯೆ ಹಾಗೆಯೇ ಮುಂದುವರೆದಿತ್ತು. ವ್ಯತ್ಯಾಸವೆಂದರೆ ನವಜಾತ ಶಿಶುಗಳನ್ನು ಕೊಲ್ಲುವ ಬದಲು ಆ ಮಕ್ಕಳನ್ನು ಒಂದರಿಂದ ಎರಡು ವರ್ಷದವರೆಗೆ ಬದುಕಲು ಬಿಡಲಾಗುತ್ತಿತ್ತು. ಆ ಸಮಯದಲ್ಲಿ ಆ ಮಕ್ಕಳಿಗೆ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು, ಪೌಷ್ಟಿಕ ಆಹಾರವನ್ನು ಒದಗಿಸುತ್ತಿರಲಿಲ್ಲ. ಸಣ್ಣ ಮಗುವಿನ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಪದೇ ಪದೇ ಕಾಯಿಲೆಗೊಳಗಾಗಿ ಈ ಮಕ್ಕಳು ಅಸುನೀಗುತ್ತಿದ್ದವು. ಒಂದು ವೇಳೆ ಅಷ್ಟಾಗಿಯೂ ಅವು ಬದುಕಿದರೆ ಬೇರೆ ಬೇರೆ ವಿಧಾನಗಳನ್ನು ಬಳಸಿ ಅವರನ್ನು ಕೊಲ್ಲವಾಗುತ್ತಿತ್ತು.


ಆಕ್ರಮಣಶೀಲ ತಂತ್ರಗಳು (Invasive Techniques): ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಜ್ಞಾನ(pre natal diagnostic techniques)ದಲ್ಲಿ ಎರಡು ವಿಧಗಳಿವೆ. 
I. ಆಕ್ರಮಣಶೀಲ ತಂತ್ರಗಳು 
II. ಆಕ್ರಮಣಶೀಲವಲ್ಲದ ತಂತ್ರಗಳು 

ದೇಹದ ಒಳಭಾಗದಲ್ಲಿ ಟ್ಯೂಬ್, ಬಲೂನ್ ಅಥವಾ ಇನ್ಯಾವುದಾದರೂ ಪರಿಕರಗಳನ್ನು ಬಳಸಿ ಪರೀಕ್ಷಿಸುವ ತಂತ್ರಗಳೇ ಆಕ್ರಮಣಶೀಲ ತಂತ್ರಗಳು. ಇವು ಆಕ್ರಮಣಶೀಲವಲ್ಲದ ತಂತ್ರಗಳ ಅಭಿವೃದ್ಧಿಗೆ ಮುಂಚೆ ಬಳಸಲ್ಪಡುತ್ತಿದ್ದವು. ಈಗ ಇವುಗಳ ಬಳಕೆ ಬಹಳ ಕಡಮೆ.

ಇದರಲ್ಲಿ ಎರಡು ವಿಧಗಳಿವೆ;
ಮೊದಲನೇಯದು Amniocentesis: ಈ ವಿಧಾನದಲ್ಲಿ ತಾಯಿಯ ಗರ್ಭಚೀಲದ ಆಮ್ನಿಯೋಟಿಕ್ ದ್ರವವನ್ನು ಸಿರೀಂಜ್ ಮೂಲಕ ತೆಗೆದು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯನ್ನು ಗರ್ಭಧಾರಣೆಯ ಹದಿನಾರು ವಾರಗಳು ಮುಗಿದ ನಂತರ ಮಾಡಲಾಗುತ್ತದೆ.

ಎರಡನೇಯದು chronic villi biopsy: ಇಲ್ಲಿ ಮಾಸುಚೀಲದ(ಭ್ರೂಣದ ಹೊರಪೊರೆ) ಜೀವಕೋಶ ಅಥವಾ ಅಂಗಾಂಶವನ್ನು ತೆಗೆದು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯನ್ನು ಗರ್ಭಧಾರಣೆಯ ಆರರಿಂದ ಹದಿಮೂರನೇ ವಾರಗಳ ನಡುವಲ್ಲಿ ಮಾಡಲಾಗುತ್ತದೆ.

ಈ ಎರಡೂ ಪರೀಕ್ಷೆಗಳ ಮೂಲ ಉದ್ದೇಶ ಅನುವಂಶಿಕ ಅಸ್ವಸ್ಥತೆ ಮತ್ತು ವಿರೂಪತೆಯನ್ನು (genetic disorder and deformities) ಪತ್ತೆಹಚ್ಚುವುದಾದರೂ ಈ ಎರಡೂ ಪರೀಕ್ಷೆಗಳಲ್ಲಿ ಮಗುವಿನ ಲಿಂಗ ಪತ್ತೆ ಮಾಡಬಹುದು. 
ಆದರೆ ಈ ಎರಡಕ ವಿಧಾನಗಳಲ್ಲೂ ಸಿರೀಂಜ್ ನಂತಹ ಸಲಕರಣೆಗಳು ಬಳಕೆಯಾಗುವುದರಿಂದ ಭ್ರೂಣಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ವಿಪರೀತ ರಕ್ತಸ್ರಾವ, ಗರ್ಭಪಾತದ ಆಗುವ ಸಂಭವವೂ ಇರುತ್ತದೆ.

೧೯೭೧ರಲ್ಲಿ ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಯಿತು(The Medical Termination of Pregnancy Act). ಆ ಸಮಯದಲ್ಲೇ ಪ್ರಸವಪೂರ್ವ ರೋಗನಿರ್ಣಯ ತಂತ್ರಜ್ಞಾನ ಇಲ್ಲಿ ಆರಂಭವಾಯಿತು. ಆಗ ಆಕ್ರಮಣಶೀಲ ತಂತ್ರಗಳು ಮಾತ್ರವೇ ಲಭ್ಯವಿತ್ತು. ಗರ್ಭಪಾತವನ್ನು ಕಾನೂನುಬದ್ಧಗೊಳಿಸುವುದರ ಹಿಂದೆ ಬಹಳಷ್ಟು ಕಾರಣಗಳಿದ್ದವು. ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದ ಮಹಿಳೆಯರಿಗೆ ಸಹಾಯಮಾಡುವ ಮಾನವೀಯ ಉದ್ದೇಶ, ಆರೋಗ್ಯ ಸಂಬಂಧಿ ಉದ್ದೇಶಗಳು ಇನ್ನೂ ಹಲವು ಕಾರಣಗಳಿದ್ದರೂ ಏರುತ್ತಿರುವ ಜನಸಂಖ್ಯೆಯ ನಿಯಂತ್ರಣ ಇದರ ಹಿಂದಿನ ಮೂಲ ಉದ್ದೇಶವಾಗಿತ್ತು.
ಆದರೆ ಜನ ಇದರ ದುರುಪಯೋಗ ಪಡೆದು ಭ್ರೂಣದ ಲಿಂಗ ಪತ್ತೆ ಮಾಡಿಸಿ, ಹೆಣ್ಣಾದರೆ ಗರ್ಭಪಾತ ಮಾಡಿಸಿಕೊಳ್ಳಲು ಆರಂಭಿಸಿದರು. ಹೀಗೆ ಒಳ್ಳೆಯ ಉದ್ದೇಶಗಳಿಗಾಗಿ ಜಾರಿಗೆ ತಂದ ಕಾಯ್ದೆ, ತಂತ್ರಜ್ಞಾನಗಳು ಹೆಣ್ಣುಭ್ರೂಣ ಹತ್ಯೆಯ ಸಾಧನಗಳಾಗಿ ಮಾರ್ಪಾಡಾದವು.

ಈ ಸಂಚಿಕೆಯಲ್ಲಿ ಬರೆದಿರುವ ಎಲ್ಲಾ ವಿಚಾರಗಳೂ ನಿಜವೇ. ೧೨೮೦ರ ಕಾಲಘಟ್ಟದಲ್ಲಿ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ರಾಜಸ್ಥಾನ, ಬಿಹಾರ್, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಬಹಳ ಸಾಮಾನ್ಯವಾಗಿದ್ದ ಆಚರಣೆ ಇದು. ಇಂದಿಗೂ ಈ ಕೆಲವು ರಾಜ್ಯಗಳಲ್ಲಿ ಹೆಣ್ಣೆಂದರೆ ಮೂಗೆಳೆಯುವವರೇ..... ಲಿಂಗಾನುಪಾತ 900ಕ್ಕೂ ಕಡಿಮೆ ಇರುವ ಹಲವು ಜಿಲ್ಲೆಗಳು ಈ ಮೇಲಿನ ರಾಜ್ಯಗಳಲ್ಲಿವೆ. ಪಂಜಾಬ್ ಹಾಗೂ ಹರಿಯಾಣಾದ ರಾಜ್ಯವಾರು ಲಿಂಗಾನುಪಾತವೇ 900ಕ್ಕೂ ಕಡಿಮೆ ಎಂದರೆ ನೀವು ನಂಬಲೇಬೇಕು. ಇನ್ನು ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅತೀ ಹೆಚ್ಚು..

ವಾಸ್ತವಿಕವಾಗಿರಲಿ ಎಂಬ ಉದ್ದೇಶದಿಂದಲೇ ಉತ್ತರಪ್ರದೇಶದ ಮುಜ್ಜಫರ್ ನಗರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಜ್ಜಫರ್ ನಗರ ಜಿಲ್ಲೆಯಲ್ಲಿ ಲಿಂಗಾನುಪಾತ ಬಹಳ ಕಡಿಮೆ ಇದೆ. ಶಾಮ್ಲಿ ವಲಯ ಆಗ ಮುಜ್ಜಫರ್ ನಗರದ ಭಾಗವಾಗಿತ್ತು. ಪ್ರಸ್ತುತ ಶಾಮ್ಲಿ ಜಿಲ್ಲಾ ಕೇಂದ್ರ. ಗ್ರಾಮದ ಹೆಸರು ಮಾತ್ರ ಕಾಲ್ಪನಿಕವಾದದ್ದು.

ವೈದ್ಯಕೀಯ ಸಂಬಂಧಿ ಮಾಹಿತಿಗಳನ್ನು ನೀಡಿದ, ನನ್ನೆಲ್ಲಾ ಕಿರಿಕಿರಿಯ ಕೊರೆತಗಳನ್ನು ಸಮಾಧಾನದಿಂದ ಸಹಿಸಿ ಬರೆಯಲು ಸ್ಪೂರ್ತಿ ನೀಡಿದ ಆರಿದ್ರಾ ಅವರಿಗೆ ಅನಂತ ಧನ್ಯವಾದಗಳು.... 🙏🙏

ಮಾಹಿತಿ ಕೃಪೆ: 
ವಿಕಿಪೀಡಿಯ
ಅಂತರ್ಜಾಲ

ಅಗ್ನಿ ತರಂಗಿಣಿ 2

ಕೋಲ್ಕತ್ತಾ…….. ಆಮಿ ತುಮಾಕೆ ಭಾಲೋಬಾಷಿ….!!         
  
ಅದೆಷ್ಟು ವಿಲಕ್ಷಣ ಈ ಲೋಕ........ 

ಕಲ್ಲಿನ ನಾಗ ಶಿಲೆಗೆ ಕರ ಮುಗಿದು ಹಾಲೆರೆಯುತ್ತಾರೆ. ಅದೇ ನಿಜದ ನಾಗರ ಕಂಡರೆ ಬಡಿದು ಕೊಲ್ಲುತ್ತಾರೆ. 
ಪರಮೇಶ್ವರನು ಭಿಕ್ಷಾಟನೆ ಮಾಡುತ್ತಿದ್ದ ಎನ್ನುತ್ತಲೇ ಅವನನ್ನು ಪೂಜಿಸುವ ಜನರು ನಿಜದ ಭಿಕ್ಷುಕರನ್ನು ಅದೆಷ್ಟು ತಿರಸ್ಕಾರದಿಂದ ನೋಡುತ್ತಾರೆ......

ನಮ್ಮ ಯೋಚನೆಗಳಲ್ಲಿ ಏಕಿಷ್ಟು ವಿರೋಧಾಭಾಸ.....? ನನಗಂತೂ ತಿಳಿದಿಲ್ಲ.......

ಒಂದು ಕಾಲಕ್ಕೆ ಭಿಕ್ಷುಕ ವೃತ್ತಿ ಸಮಾಜದ ಗೌರವಕ್ಕೆ ಪಾತ್ರವಾಗಿತ್ತಂತೆ. ವೇದಕಾಲದ ಗುರುಕುಲ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಭಿಕ್ಷಾನ್ನವನ್ನು ಸಂಗ್ರಹಿಸಿ, ಹಂಚಿಕೊಂಡು ಉಣ್ಣುತ್ತಿದ್ದರಂತೆ. ಆದರೆ ಈಗ......? 

ಈಗ ಹೆಚ್ಚಿನವರ ಪ್ರಕಾರ ಭಿಕ್ಷಾಟನೆ ಎಂಬುದೊಂದು ಲಾಭದಾಯಕ ಉದ್ಯೋಗ, ಮೈ ಬಗ್ಗಿಸಿ ಕಷ್ಟಪಟ್ಟು ದುಡಿಯಲಾಗದ ಸೋಮಾರಿಗಳ ಹಣ ಸಂಪಾದನೆಯ ಸುಲಭ ಮಾರ್ಗ, ಸಮಾಜಕ್ಕೆ ಅಂಟಿದ ಶಾಪ, ಕಾನೂನುಬಾಹಿರ ಚಟುವಟಿಕೆ, ಶಿಕ್ಷಾರ್ಹ ಅಪರಾಧ........

ಭಿಕ್ಷುಕರನ್ನು ಕಂಡೊಡನೆ ಎಲ್ಲರಿಗೂ ಸಾಮಾನ್ಯವಾಗಿ ಭಿಕ್ಷುಕ ಕುಳಿತುಕೊಳ್ಳುವ ಗೋಣಿ ಚೀಲದ ಕೆಳಗೆ ಸಾವಿರಾರು ರೂಪಾಯಿಗಳಿರುವ 'ಪುಷ್ಪಕ ವಿಮಾನ' ಸಿನಿಮಾದ ಜನಪ್ರಿಯ ದೃಶ್ಯವೇ ಕಣ್ಮುಂದೆ ಬರುತ್ತದೆ.

ಹೌದು... ಭಿಕ್ಷಾಟನೆಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಂಡು ಅದರಿಂದಲೇ ಒಬ್ಬ ಮಧ್ಯಮ ವರ್ಗದ ಸಾಮಾನ್ಯ ನೌಕರನಿಗಿಂತಲೂ ಹೆಚ್ಚು ಆದಾಯ ಸಂಪಾದಿಸುವ ನಕಲಿ ಭಿಕ್ಷುಕರು ಇದ್ದಾರೆ. ಆದರೆ ಅವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ವಿಪರ್ಯಾಸವೆಂದರೆ ಆ ಬೆರಳೆಣಿಕೆಯಷ್ಟು ಮಂದಿಯ ಕೋರೈಸುವಿಕೆಯ ಹಿಂದೆ ಅಸಲಿ ಭಿಕ್ಷುಕರ ಕಥೆ ವ್ಯಥೆಗಳು ಭೂಗತವಾಗುತ್ತವೆ.

ಈ ಭಿಕ್ಷುಕರ ಲೋಕ ಜನಸಾಮಾನ್ಯರ ರಂಗುರಂಗಿನ ಲೋಕಕ್ಕಿಂತ ವಿಭಿನ್ನ. ಇದೊಂದು ಊಹಾತೀತವಾದ ಜಾಲ... ಜನರ ಪ್ರಕಾರ ಭಿಕ್ಷುಕರೆಂದರೆ ನಗರದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಇಲ್ಲಾ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಏನೇನೋ ನಾಟಕವಾಡಿ ಅವರಿಂದ ಚಿಲ್ಲರೆ ವಸೂಲಿ ಮಾಡುವ ಶನಿಗಳು. ಆದರೆ ಅವರ ಅಸಲೀ ಬದುಕು......!!?

ಮೈ ಬಗ್ಗಿಸಿ ದುಡಿದು ಸಂಪಾದಿಸಲಾಗದೇ ಈ ವೃತ್ತಿ ಹಿಡಿಯುವವರು ಬಹಳ ಕಡಿಮೆ. ಬಹುತೇಕ ಭಿಕ್ಷುಕರು ಭಿಕ್ಷಾಟನೆ ಮಾಫಿಯಾದ ಹಿಡಿತದಲ್ಲಿ ಸಿಲುಕಿ ನಲುಗುವವರು. ಅದರಲ್ಲೂ ಮಕ್ಕಳದ್ದು ಸಿಂಹಪಾಲು. ಅದು ಬಿಟ್ಟರೆ ಅಂಗವಿಕಲರದ್ದು....... ಇವರಲ್ಲಿ ಹೆಚ್ಚಿನವರು ಹುಟ್ಟು ಅಂಗವಿಕಲರಲ್ಲ, ಮಾಫಿಯಾದ ಹಣದ ಹಪಹಪಿಗೆ ತಮ್ಮ ಅಂಗಾಂಗಗಳನ್ನು ಊನವಾಗಿಸಿಕೊಂಡವರು ಎಂಬುದು ಗಮನಿಸಬೇಕಾದ ಸಂಗತಿ..... ಇಲ್ಲಿ ಸಿಲುಕಿಕೊಂಡ ಹೆಣ್ಣುಮಕ್ಕಳ ಪಾಡಂತೂ ಹೇಳಲಾಗದು.... ಆದರೆ ಇದ್ಯಾವುದನ್ನೂ ಯಾರೂ ಗಮನಿಸುವುದಿಲ್ಲವಲ್ಲ.......!

'ನಿನಗೇಕೆ ಇಷ್ಟು ಅಧಿಕಪ್ರಸಂಗ...? ಅದೆಲ್ಲಾ ನಿನಗೇಕೆ' ಎಂದಿರಾ.....?

ಅದಕ್ಕೂ ಕಾರಣವಿದೆ. ನಾನೂ ಅದೇ ತಿರಸ್ಕೃತ ಪಂಗಡದ ಸದಸ್ಯನಷ್ಟೇ........

ಹೌದು..........

ಅದು ಈಗ ಕೋಲ್ಕತ್ತಾ ಎಂದು ಕರೆಯಲ್ಪಡುವ ಆಗಿನ ಕಲ್ಕತ್ತಾ ........ ಅಲ್ಲೇ ನಾನು ಜಗತ್ತನ್ನು ಅರಿಯುವ ಪ್ರಯತ್ನ ಮಾಡಿದ್ದು... ನನ್ನ ಸಂಪೂರ್ಣ ಬಾಲ್ಯ ಹಾಗೂ ಯೌವ್ವನದ ಹಲವು ವರ್ಷಗಳಿಗೆ, ನನ್ನ ಬದುಕಿನ ಕೆಲವು ಪ್ರಮುಖ ತಿರುವುಗಳಿಗೆ ಸಾಕ್ಷಿಯಾಗಿರುವುದು ಅದೇ ಕಲ್ಕತ್ತಾ.......

ಈ ಜಗತ್ತಿಗೆ ನಾನು ಕಾಲಿಟ್ಟಿದ್ದೇ ಭಿಕ್ಷುಕ ಎಂಬ ಹಣೆಪಟ್ಟಿಯೊಂದಿಗೆ. ನನಗೆ ಬುದ್ದಿ ಬಂದಾಗಿನಿಂದಲೂ ಆ ಗುಂಪಿನೊಂದಿಗೇ ಭಿಕ್ಷೆ ಬೇಡಿ ಬೆಳೆದಿದ್ದು. ನನ್ನ ಹೆತ್ತವಳ್ಯಾರೋ ನನಗಂತೂ ತಿಳಿದಿಲ್ಲ. ಕಾಳೀಘಾಟಿನ ಆದಿಗಂಗೆಯ ತಟದಲ್ಲಿ ನನ್ನನ್ನು ಬಿಸುಟು ಹೋಗಿದ್ದರೆಂದು ಬಿರ್ಜೂ ಚಾಚ ಹೇಳುತ್ತಿದ್ದ. ಆ ಬಗ್ಗೆ ನನಗೆ ಬೇಸರವಿಲ್ಲ . ಏಕೆಂದರೆ ಅಲ್ಲಿದ್ದವರೆಲ್ಲರೂ ನನ್ನಂತವರೇ........ ಹೆತ್ತವರಿಗೆ (ಹೆತ್ತವಳಿಗೆ) ಬೇಡವಾದವರು, ಸಮಾಜದಿಂದ ತಿರಸ್ಕೃತರಾದವರು, ಇಲ್ಲಾ ಅಪಹರಿಸಲ್ಪಟ್ಟು ತಮ್ಮ ಪ್ರೀತಿ ಪಾತ್ರರಿಂದ ದೂರಾದವರು............ ಹತ್ತು ಹಲವು ರೀತಿಯ ಜನರಿದ್ದರು ಆ ಜಗತ್ತಿನಲ್ಲಿ. ಜೊತೆಗಿರುವವರೆಲ್ಲ ಸಂತೋಷದ ಹೊನಲಲ್ಲಿ ಮುಳುಗಿ ನಾನೊಬ್ಬನೇ ನೋವುಣ್ಣುತ್ತಿದ್ದವನಾಗಿದ್ದರೆ ಆಗ ವಿಪರೀತ ದುಃಖವಾಗುತ್ತಿತ್ತೇನೋ...... ಆದರೆ ಎಲ್ಲರೂ ದಿಕ್ಕು ದೆಸೆಯಿಲ್ಲದ ಅಬ್ಬೇಪಾರಿಗಳೆಂದಾಗ ವೈಯಕ್ತಿಕ ಬೇಸರದ ಮಾತೆಲ್ಲಿಂದ? ಅದು ಮನುಷ್ಯನ ಸಹಜ ಸ್ವಭಾವವೇ ಅಲ್ಲವೇ....? 

ಅಬಾಲವೃದ್ಧರಾದಿಯಾಗಿ ಎಲ್ಲಾ ವಯಸ್ಸಿನವರೂ ನಮ್ಮ ಗುಂಪಿನೊಳಗಿದ್ದರು. ಭಿಕ್ಷೆ ಬೇಡಲು ವಯಸ್ಸಿನ ರಿಯಾಯಿತಿಯಿರಲಿಲ್ಲ. ಹೊಡೆತ, ಬಡಿತ, ಅವಹೇಳನ, ಉಪವಾಸಗಳೆಲ್ಲಾ ನಮ್ಮ ದೈನಂದಿನ ಬದುಕಿನ ಭಾಗ. ಚಿಕ್ಕಮಕ್ಕಳೆಂಬ ಕಾರಣಕ್ಕೆ ಯಾವುದೇ ರಿಯಾಯಿತಿ ಸಿಗುವುದಿಲ್ಲ. ಮೊದಮೊದಲು ಹೊಡೆತಗಳು, ಬರೆಗಳು ಎಳೆಯ ಮೈಯನ್ನು ಅಲಂಕರಿಸಿದಾಗ ಸಹಿಸಲಸಾಧ್ಯವಾದ ನೋವಾಗುತ್ತಿತ್ತು. ಅದ್ಯಾವಾಗ ಅವುಗಳ ಅಭ್ಯಾಸವಾಗಿ ಹೋಯಿತೋ ತಿಳಿಯದು. ಅದೇನೋ ಹೇಳುತ್ತಾರಲ್ಲ.... ಬದುಕಿನಷ್ಟು ಒಳ್ಳೆಯ ಗುರು ಇನ್ಯಾರೂ ಇಲ್ಲವೆಂದು. ಬದುಕೆಂಬ ಗುರು ಪರಿಸ್ಥಿತಿಗಳೆಂಬ ಕಲಿಕಾ ಮಾದರಿಗಳ ಮೂಲಕ ನಾವು ಬೇಡವೇ ಬೇಡ ಎಂದು ದೂರ ತಳ್ಳುವ ಕಷ್ಟಗಳನ್ನು ಎದುರಿಸಿ ಬದುಕುವ ಕಲೆಯನ್ನು ಕಲಿಸುತ್ತದೆ. ನನ್ನಂತಾ ಅಸಂಖ್ಯಾತ ಭಿಕ್ಷುಕರ ಕಥೆಯೂ ಹಾಗೆಯೇ...... ಕಾಲಕ್ರಮೇಣ ಬಾಸುಂಡೆಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಅವುಗಳನ್ನು ನಮ್ಮ ದೇಹದ ಅವಿಭಾಜ್ಯ ಅಂಗಗಳನ್ನಾಗಿಸಿಕೊಂಡುಬಿಡುತ್ತೇವೆ. ನಮ್ಮ ಚರ್ಮವೂ ಎಮ್ಮೆಯ ಚರ್ಮದಂತೆ ಗಡುಸಾಗಿಬಿಡುತ್ತದೆ.

ನಮ್ಮ ತರಹವೇ ಭಿಕ್ಷೆ ಬೇಡುವ ಒಟ್ಟು ಇಪ್ಪತ್ಮೂರು ಗುಂಪುಗಳಿದ್ದವು. ಪ್ರತೀ ಗುಂಪಿನಲ್ಲೂ ಮುನ್ನೂರಕ್ಕಿಂತ ಅಧಿಕ ಜನರಿದ್ದರು. ಈ ಎಲ್ಲಾ ಗುಂಪುಗಳಿಗೆ ಒಬ್ಬನೇ ಗ್ಯಾಂಗ್ ಲೀಡರ್........ ರಾಕಾ.......... ಅವನೇ ಒಬ್ಬ 'ನಿರ್ಲೋಜ್ಜ್ ಅಧೋಮ್ ಶೊಯ್ತಾನ್'..... ಜೊತೆಗೆ ಅವನಂತಹ ಒಂದಷ್ಟು ಚೇಲಾಗಳು ಬೇರೆ.......ಅವನ ಬಗ್ಗೆ ಮುಂದೆ ಹೇಳುವೆ ಬಿಡಿ....... ನಾವು ಹಗಲಿಡೀ ಈ ಚೇಲಾಗಳು ಹೇಳಿದ ಬೇರೆ ಬೇರೆ ಜಾಗಗಳಲ್ಲಿ ಭಿಕ್ಷೆ ಬೇಡಬೇಕಿತ್ತು. ಹೆಚ್ಚು ವಿದೇಶಿಗರು ಭೇಟಿ ನೀಡುವ ಜಾಗಗಳು, ಜನನಿಬಿಡ ಪ್ರದೇಶಗಳೇ ಇವರ ಟಾರ್ಗೆಟ್. ಪಾರ್ಕ್ ಸ್ಟ್ರೀಟ್, ರಬೀಂದ್ರ ಸರೋವರ್, ನಂದನ್, ವೈದಾನ್, ವಿಕ್ಟೋರಿಯಾ ಮೆಮೋರಿಯಲ್, ಹೌರಾ ಬ್ರಿಡ್ಜ್ ಇಂತಹ ಪ್ರವಾಸಿ ತಾಣಗಳ ಆಸುಪಾಸಲ್ಲೇ ನಮ್ಮ ಕಾರ್ಯಕ್ಷೇತ್ರ...... 

ನಮ್ಮ ಗುಂಪುಗಳಲ್ಲಿ ಹಲವು ಬಗೆಯ ಜನರಿದ್ದಾರೆ. ಕೆಲವರು ನನ್ನಂತೆ ದಿಕ್ಕುದೆಸೆಯಿಲ್ಲದ ಕೂಸುಗಳು. ಆಗಾಗ ಈ ಗುಂಪಿಗೆ ಹೊಸ ಮುಖಗಳ ಸೇರ್ಪಡೆಯಾಗುತ್ತಿರುತ್ತದೆ. ಹಾಗೇ ರಾತ್ರೋರಾತ್ರಿ ಪ್ರತ್ಯಕ್ಷರಾಗುವವರೆಲ್ಲಾ ಚಿಕ್ಕ ವಯಸ್ಸಿನವರೇ........ ಇನ್ನೂ ತಿಂಗಳು ತುಂಬದ ಕೂಸುಗಳೂ ಇರುತ್ತವೆ..... ಆದರೆ ಅವರು ನಮ್ಮಂತೆ ಅನಾಥರಲ್ಲ. ಅವರು ತಮ್ಮ ಅಪ್ಪ ಅಮ್ಮನನ್ನು ನೆನಪಿಸಿಕೊಂಡು ಅಳುತ್ತಾರೆ. ಮೊದಮೊದಲು 'ಇದ್ದಕ್ಕಿದ್ದಂತೆ ಇವರು ಎಲ್ಲಿಂದ ಪ್ರತ್ಯಕ್ಷರಾಗುತ್ತಾರೆ? ಅಪ್ಪ ಅಮ್ಮ ಇದ್ದೂ ಇಲ್ಲಿಗ್ಯಾಕೆ ಬಂದಿದ್ದಾರೆ' ಎಂದೆಲ್ಲಾ ಯೋಚನೆಯಾಗುತ್ತಿತ್ತು ನನಗೆ. ಆಮೇಲೆ ತಿಳಿಯಿತು ಇವರನ್ನೆಲ್ಲಾ ಅಪಹರಿಸಿ ತರುತ್ತಾರೆಂದು... ಅದು ತಿಳಿದ ದಿನ ಮಾತ್ರ ಯಾಕೋ ತುಂಬಾ ಬೇಸರವಾಗಿತ್ತು ನನಗೆ.... 

ಹೀಗೆ ಅಪಹರಿಸಿ ತರುವ ಮಕ್ಕಳಲ್ಲಿ ಮೂರು ವರ್ಷ ದಾಟಿದವರನ್ನು ನಮ್ಮೊಂದಿಗೆ ಭಿಕ್ಷೆ ಬೇಡಲು ಕಳಿಸುತ್ತಾರೆ. ಅದಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳನ್ನು ನಮ್ಮ ಗುಂಪಿನಲ್ಲಿರುವ ಹೆಂಗಸರಿಗೆ ಜೊತೆಮಾಡುತ್ತಾರೆ. ಆ ತರಹ ಕೂಸುಗಳನ್ನು ಹೊತ್ತ ಹೆಂಗಸರಿಗೆ ಜನ ಜಾಸ್ತಿ ಭಿಕ್ಷೆ ಹಾಕುತ್ತಾರೆ...... ಆ ಮಕ್ಕಳಿಗೆ ಅದೇನೋ ಕುಡಿಸುತ್ತಾರೆ...... ಅದು ಕುಡಿದರೇ ಅವು ಅಳುವುದೂ ಇಲ್ಲ, ಏಳುವುದೂ ಇಲ್ಲ.... ಇಡೀ ದಿನ ಆ ಹೆಂಗಸರ ಕಂಕುಳಲ್ಲಿ ಸುಮ್ಮನೆ ಮಲಗಿರುತ್ತವೆ.... ಅದೇನೋ ನನಗೂ ತಿಳಿದಿರಲಿಲ್ಲ ಆಗ.... ಆದರೆ ಅದು ಆ ಕೂಸುಗಳ ದೇಹಕ್ಕೆ ಒಗ್ಗುವುದಿಲ್ಲ ಎಂಬುದು ಮಾತ್ರ ಅರಿವಾಗುತ್ತಿತ್ತು. ಕೆಲವು ಕಂದಮ್ಮಗಳು ಎರಡೇ ದಿನದಲ್ಲಿ ಉಸಿರಾಡುವುದನ್ನೇ ನಿಲ್ಲಿಸಿದಾಗ ಬಿರ್ಜೂ ಚಾಚ ಅತ್ತು ಅವುಗಳನ್ನು ಮಣ್ಣು ಮಾಡಿದ್ದು ನನಗೆ ನೆನಪಿದೆ.....

ಇನ್ನು ವಯಸ್ಕರದ್ದು ಬೇರೆಯೇ ಕಥೆ.... ಗಂಡಸರಲ್ಲಿ ವಯಸ್ಸಾದ ಮುದುಕರ ಸಂಖ್ಯೆಯೇ ಹೆಚ್ಚು... ಅವರಲ್ಲೂ ಬಹುಪಾಲು ಅಂಗಾಂಗ ಊನಗೊಂಡವರು, ಕುರುಡರು, ಮೂಗರು..... ಅವರು ಬಸ್ಸು ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಬೇಡುತ್ತಿದ್ದರು. ಅವರಲ್ಲಿ ಹಾಡಲು ಕಲಿತವರಿಗೆ ಭಿಕ್ಷೆ ಹೆಚ್ಚು ಬೀಳುವುದು... ಬಿರ್ಜೂ ಚಾಚಾನೂ ಸುಶ್ರಾವ್ಯವಾಗಿ ಹಾಡುತ್ತಿದ್ದ......

ರಾಕಾ ಗುಂಪಿನಲ್ಲಿದ್ದ ಹೆಂಗಸರಿಗೆ ಜಾಸ್ತಿ ಪ್ರಾಮುಖ್ಯತೆ ಕೊಡುತ್ತಿದ್ದ...... ಅವರು ಹಗಲೆಲ್ಲಾ ನಮ್ಮಂತೆ ಭಿಕ್ಷೆ ಬೇಡುತ್ತಿದ್ದರಾದರೂ ರಾತ್ರಿ ಅವರಲ್ಲಿ ಹೆಚ್ಚಿನವರನ್ನು ಅವನ ಚೇಲಾಗಳು ಅದೆಲ್ಲಿಗೋ ಒಯ್ಯುತ್ತಾರೆ.... ವಯಸ್ಸಾದ ಮುದುಕಿಯರು, ಸಣ್ಣ ಹುಡುಗಿಯರು ಮಾತ್ರವೇ ನಮ್ಮೊಂದಿಗೆ ಬಿಡಾರದಲ್ಲಿ ಉಳಿಯುತ್ತಿದ್ದುದು. ಉಳಿದ ಹೆಂಗಸರೆಲ್ಲಾ ರಾತ್ರಿ ಕಳೆದು ಬೆಳಕು ಹರಿಯುವಾಗ ವಾಪಾಸಾಗುತ್ತಿದ್ದರು. 'ಅವರು ರಾತ್ರಿಯೆಲ್ಲಾ ಎಲ್ಲಿರುತ್ತಾರೆ......?' ಎಂಬ ನನ್ನ ಪ್ರಶ್ನೆಗೂ ಉತ್ತರವಿಲ್ಲ.
ಕೆಲವೊಮ್ಮೆ ಲಿಂಗ ಬೇಧವಿಲ್ಲದೆ ಗುಂಪಿನ ಹಲವರು ನಾಪತ್ತೆಯಾಗಿಬಿಡುತ್ತಿದ್ದರು. ಅವರು ಎಲ್ಲಿಗೆ ಹೋದರೆಂಬುದೂ ಚಿದಂಬರ ರಹಸ್ಯವೇ... ಒಟ್ಟಿನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು..... ಉತ್ತರ ಸಿಗದ ಹನುಮಂತನ ಬಾಲದಂತ‌ಹ ಪ್ರಶ್ನೆಗಳೊಂದಿಗೆ ನಾನೂ ಅಶ್ರಫ್ ಬಡಿದಾಡುತ್ತಿದ್ದೆವು. ನನ್ನ ತಲೆಯಲ್ಲಿದ್ದ ಪ್ರಶ್ನೆಗಳು ಸಾಲದೇನೋ ಎಂಬಂತೆ ಅವನು ಅದಕ್ಕೆ ಇನ್ನೊಂದಿಷ್ಟನ್ನು ಜೋಡಿಸುತ್ತಿದ್ದ.

ಅರೇ........!! ನೋಡಿ, ಅದೆಷ್ಟು ಮರೆವು ನನಗೆ..... ನಿಮಗೆ ನನ್ನ ಅಶ್ರಫ್ ಸಾಬಿಯ ಬಗ್ಗೆ ಹೇಳಲೇ ಇಲ್ಲವಲ್ಲ.......!!! ಅಶ್ರಫ್ ಮತ್ತು ನಾನು ಶೋಲೆಯ ಜೈ ಮತ್ತು ವೀರು..... 
'ಯೇ ದೋಸ್ತೀ.... ಹಮ್ ನಹೀ ತೋಡೇಂಗೇ...' ಅಂತ ಕೈ ಕೈ ಮಿಲಾಯಿಸಿಕೊಂಡು ನಾವಿಬ್ಬರೂ ಅಲೆದಾಡದ ಗಲ್ಲಿಗಳಿಲ್ಲ ಕಲ್ಕತ್ತೆಯಲ್ಲಿ...... ಬಂಗಾಳಕೊಲ್ಲಿಯಿಂದ ಕಲ್ಕತ್ತೆಗುಂಟ ಬೀಸುವ ಸುಳಿಗಾಳಿಗೂ ನಮ್ಮ ಸ್ನೇಹ ಚಿರಪರಿಚಿತ..... ನಮ್ಮ ಗುಂಪಿನಲ್ಲಿ ಸುಮಾರು ಮಕ್ಕಳಿದ್ದರೂ ನನಗೆ ಆಪ್ತ ಸ್ನೇಹಿತ ಎಂದರೆ ಅದು ಅಶ್ರಫ್ ಮಾತ್ರ.... 

ನಮ್ಮ ಭಿಕ್ಷುಕರ ಗುಂಪಿನಲ್ಲಿ ಇರುವ ಬಹುತೇಕರು ಬಾಂಗ್ಲಾದೇಶದವರು. 'ಅವರು ಕಲ್ಕತ್ತೆಗೆ ಹೇಗೆ ಬಂದಿರಬಹುದು' ಎಂಬ ಪ್ರಶ್ನೆ ಆಗ ನನ್ನ ತಲೆಯಲ್ಲಿ ಇರಲಿಲ್ಲ. ಏಕೆಂದರೆ ಬಾಂಗ್ಲಾದೇಶವೆಂಬುದು ಬೇರೆ ದೇಶ ಅನ್ನುವುದೇ ನನ್ನ ತಲೆಯಲ್ಲಿರಲಿಲ್ಲ ಆಗ.... ಆ ಗುಂಪಿನೊಂದಿಗೆ ಬಂದವನು ಅಶ್ರಫ್. ನನ್ನದೇ ವಯಸ್ಸಿನವ..... ಆದರೆ ಸ್ವಭಾವ? ನನಗೂ ಅವನಿಗೂ ಅಜಗಜಾಂತರ..... 

ನಾನೋ ಆ ವಯಸ್ಸಿಗೇ ಖದೀಮ ಕಳ್ಳ. ರಾಕಾನ ಚೇಲಾಗಳಿಗೇ ಕಣ್ತಪ್ಪಿಸಿ ಮಣ್ಣುಮುಕ್ಕಿಸುತ್ತಿದ್ದ ನಾನೆಂದರೆ ರಾಕಾನಿಗೆ ಒಂಚೂರು.... ಚೂರೇ ಚೂರು ಆಸಕ್ತಿ.... ಅದನ್ನೇ ಬಳಸಿಕೊಂಡು ಉಳಿದ ಹುಡುಗರ ಕಣ್ಣುಗಳಲ್ಲಿ ಡಾನ್ ಆಗಿ ಮೆರೆಯುತ್ತಿದೆ ನಾನು. ಅವರ ಕೈಯಲ್ಲಿ ಸೇವೆಗಳನ್ನು ಮಾಡಿಸಿಕೊಳ್ಳುವುದು, ಏನೋ ನಾನೇ ದೊಡ್ಡ ಭಾಯ್ ಎಂಬಂತೆ ಚಮಕ್ ಕೊಡುವ ಶೋಕಿಗಳೆಲ್ಲ ತುಸು ಜಾಸ್ತಿಯೇ ಇತ್ತು. ನಾನು ಹೆದರುತ್ತಿದ್ದದ್ದು ಬಿರ್ಜೂ ಚಾಚಾನಿಗೆ ಮಾತ್ರವೇ.....

ಆದರೆ ಅಶ್ರಫ್ ನನಗೆ ತದ್ವಿರುದ್ಧ. ಮೃದು ಮಾತಿನ ಭಾವುಕ. ಜೋರಾಗಿ ದನಿಯೇರಿಸಿ ಮಾತನಾಡಲೇ ಬರದು ಅವನಿಗೆ. ನಮಗೆ ರಾತ್ರಿ ಒಂದೇ ಹೊತ್ತು ಊಟದ ಭಾಗ್ಯವಿದದ್ದು. ಅದೂ ಒಂದು ಹಿಡಿ ಅನ್ನ ಹಾಗೂ ರುಚಿಯಿಲ್ಲದ ದಾಲ್. ನಮ್ಮ ಹುಡುಗರ ಗುಂಪುಗಳಲ್ಲಿ ಅದಕ್ಕಾಗಿ ಹೊಡೆದಾಟಗಳು ಸರ್ವೇಸಾಮಾನ್ಯ. ಎಷ್ಟೆಂದರೂ ಹಸಿವು ಎಲ್ಲಕ್ಕೂ ಮಿಗಿಲಲ್ಲವೇ......? ಪಾಪದವನ ಕೈಯಿಂದ ತಾಟನ್ನು ಕಸಿಯುವುದು ಸುಲಭವಾದ್ದರಿಂದ ಆ ಜಗಳಗಳಲ್ಲಿ ಸಾಮಾನ್ಯ ಮಿಕ ಅಶ್ರಫ್. ಒಂದು ದಿನ ಇದು ನನ್ನ ಕಣ್ಣಿಗೆ ಬಿದ್ದು ಆ ಹುಡುಗರಿಗೆ ನಾಲ್ಕು ಕೊಟ್ಟೆ ನೋಡಿ........ ಆ ಏಟುಗಳು ಅಶ್ರಫ್ ಹಾಗೂ ನನ್ನ ಸ್ನೇಹಕ್ಕೆ ಮುನ್ನುಡಿ ಬರೆದವು. ಅಲ್ಲಿಂದ ಈ 'ಜೈ ವೀರೂ' ಜೋಡಿ ಮಾಡಿದ ಮೋಡಿ ಕಲ್ಕತ್ತೆಯ ಇತಿಹಾಸದಲ್ಲಿದೆ. 

ಭಿಕ್ಷೆ ಬೇಡಲು ಕಳಿಸುವ ಮೊದಲು ನಮಗೂ ಅಂದರೆ ಮೂರು ವರ್ಷದ ಮೇಲ್ಪಟ್ಟ ಮಕ್ಕಳೆಲ್ಲರಿಗೂ ದೇವರ ಪ್ರಸಾದದಂತೆ ಅದೇನೋ ಗುಳಿಗೆಯೊಂದನ್ನು ನುಂಗಿಸುತ್ತಿದ್ದರು. ಅದನ್ನು ನುಂಗಿದರೆ ಮುಗಿಯಿತು.... ಅದೇನೋ ಅಮಲು.... ಮನವೆಲ್ಲಾ ಹಗುರ.... ಆದರೆ ಮೊಗವೆಲ್ಲಾ ಬಾಡಿ ಬಸವಳಿದು ಹೋದಂತಾಗುವುದು... ನಮ್ಮ ದೇಹದ ಅಂಗಾಗಳಾವುವೂ ನಮ್ಮ ಮಾತನ್ನೇ ಕೇಳುವುದಿಲ್ಲವೆಂದು ಧಿಕ್ಕರಿಸುತ್ತವೆ.... ಕಾಲೆಳೆದು ಹಾಕಲೂ ಸಂಕಟ.... ವಿಚಿತ್ರವಾದ ವಿವರಿಸಲಾಗದಂತಹ ಅನುಭವವದು..... ಸಂತೋಷವೋ, ದುಃಖವೋ ಅರಿಯಲಾರದಂತಹ ಸ್ಥಿತಿ..... ಒಟ್ಟಿನಲ್ಲಿ ಅದನ್ನು ತಿಂದರೆ ಮೈ ಮೇಲೆ ಹಿಡಿತ ತಪ್ಪುತ್ತಿತ್ತು. ನೋಡುವವರಿಗೆ ಮರುಕವುಕ್ಕುವಂತೆ ಕಾಣುತ್ತಿದ್ದವು ನಾವು.... ಆಗ ಭಿಕ್ಷೆ ಹೆಚ್ಚು ಬೀಳುತ್ತಿತ್ತು....... 

ಆದರೆ ನಾನು ಆ ಗುಳಿಗೆ ತಿಂದಂತೆ ಮಾಡಿ ನಾಲಿಗೆಯ ತಳದಲ್ಲಿ ಇಟ್ಟುಕೊಂಡು ನಂತರ ಉಗಿದುಬಿಡುತ್ತಿದ್ದೆ. ಅದೇ ಅಭ್ಯಾಸವನ್ನು ಅಶ್ರಫಿಗೂ ಕಲಿಸಿದ್ದೆ. ಇಬ್ಬರೂ ಗುಳಿಗೆ ತಿಂದವರಂತೆ ನಟನೆ ಮಾಡುತ್ತಾ, ಕಾಲೆಳೆದುಕೊಂಡು ಹೋಗುವಂತೆ ಮಾಡಿ ಗುಳಿಗೆ ನುಂಗಿದವರಿಗಿಂತ ಚೆನ್ನಾಗಿ ನಟಿಸುತ್ತಿದ್ದೆವು. ಸಮಯ ಸಾಧಿಸಿ ರಾಕಾನ ಚೇಲಾಗಳ ಕಣ್ತಪ್ಪಿಸಿ ಒಂದಿಷ್ಟು 'ರೇಜ್ಕಿ'ಯ ಟಾಕಾಗಳನ್ನು ಅಬೇಸ್ ಮಾಡಿಕೊಂಡು ಬಿಡುತ್ತಿದ್ದೆ ನಾನು...... ಒಂದಿಷ್ಟು ಟಾಕಾಗಳು ಸಂಗ್ರಹವಾದ ಮೇಲೆ ಸಂಜೆ ಬಿಡಾರಕ್ಕೆ ವಾಪಾಸಾದ ನಂತರ ಎಲ್ಲರ ಕಣ್ತಪ್ಪಿಸಿ ಅಶ್ರಫ್ ನೊಂದಿಗೆ ಪರಾರಿಯಾಗುತ್ತಿದ್ದೆ..... 

ಎಲ್ಲಿಗೆ ಎಂದಿರಾ.......?

ನಗರ ಸಂಚಾರಕ್ಕೆ...........!!

ಹೌದು........ 

ಕಲ್ಕತ್ತೆಯ ಸಂಚಾರ............ 

ಕಲ್ಕತ್ತೆಯೆಂದರೆ ನಿಮಗೆ ಎಲ್ಲ ನಗರಗಳಂತೆಯೇ ಒಂದು ನಗರವಷ್ಟೇ..... 

ಆದರೆ ನನಗೆ........

ನನಗೆ ಕಲ್ಕತ್ತಾ ಕೇವಲ ನಗರವಲ್ಲ...... ಅದು ನನ್ನ ಎದೆಬಡಿತ......

ಏನೆಂದು ಬಣ್ಣಿಸುವುದು ಆ ನಗರವನ್ನು......... ಅದರ ರಫ್ತಾರನ್ನೂ.....

ಏ ಶಹೋರ್ ಪ್ರಂತೋ
ಕೋಲ್ಕತ್ತಾ ಪ್ರಂತೋ
ರುಪೋಶೀ ಅನಂತೋ
ಕೋಲ್ಕತ್ತಾ ನಾಮ್ ಜಾರ್
ತೋಲೇ ಪ್ರಾಣೇ ಜೋಂಕಾರ್
ಹೋಷಿ ಗಾನೇ ಕೊತ್ತೋನಾ.......
ಜಿಬೋಂತೋ ಜಿಬೋಂತೋ ಜಿಬೋಂತೋ........

(ಹೆಸರ ಉಲ್ಲೇಖ ಮಾತ್ರದಿಂದಲೇ ಎದೆಬಡಿತ ಏರಿಸುವ, ನಗು ಹಾಗೂ ನಾದದಿಂದಲೇ ಬದುಕಿಗೆ ಜೀವಂತಿಕೆಯ ಉಲ್ಲಾಸ ತುಂಬುವ ಕೋಲ್ಕತ್ತ ಎಂಬ ಅನಂತ ರೂಪಸಿಯ ಸರಹದ್ದಿದು......)

ಹೌದು...... ಆಕೆ ಅನಂತ ರೂಪಸಿಯೇ........ ರಾತ್ರಿಯ ನೀರವತೆಯಲ್ಲಿ ಅವಳ ಅಂದವನ್ನು ಕಣ್ತುಂಬಿಕೊಳ್ಳುವುದೇ ಒಂದು ಧ್ಯಾನ ನನಗೆ.......
ಹೂಗ್ಲಿ ನದಿಯ ದಂಡೆಯಲ್ಲಿ ಹಗಲೆಲ್ಲಾ ಗಂಭೀರೆಯಾಗಿರುವ ಅವಳು ಶಶಿಯ ಬೆಳ್ಳಿಯ ಬೆಡಗಿನಲ್ಲಿ ಚಂಚಲೆ......

ಶಮೋಯೇರ್ ಶಿಮಾನಾಯ್
ತೊಮಾಕೆ ಬಾಂದಾ ಕಿ ಜಾಯ್
ಹಜಾ಼ರ್ ಬಾಛೋರ್ ತುಮಿ ಪಿಛೋನಿ ಫಿಲೇ
ಪಾಯಿ ಪಾಯಿ ಕೊತೊ ಪೋತ್ ಪಿರಿಯೆ ಇಲೆ
ಜುಗ್ ಥೇಕೆ ಜೋಲೆಚೋ........
ಜುಗಂತೋ ಜುಗಂತೋ ಜುಗಂತೋ..........

(ಹಲವು ಸಂವತ್ಸರಗಳನ್ನು ಹಿಂದೆ ಹಾಕಿ, ಹಂತಹಂತವಾಗಿ ಹಲವು ಹಾದಿಗಳಲ್ಲಿ ಪಯಣಿಸಿ, ಯುಗ ಯುಗಾಂತರಗಳಿಗೆ ಸಾಗುವ ನಿನ್ನನ್ನು ಸಮಯದಿಂದ ಬಂಧಿಸಲು ಸಾಧ್ಯವಿಲ್ಲ)

ಬ್ರೀಟಿಷರ ಕಾಲದ ಆ ಕಟ್ಟಡಗಳು, ಸಣ್ಣಸಣ್ಣ ಗಲ್ಲಿಗಳು, ಕಾಳಿಘಾಟಿನಲ್ಲಿ ನೆಲೆನಿಂತು ಕಲ್ಕತ್ತೆಯನ್ನು ಕಾಯುವ ಕಾಳೀ ಮಾತೆ..... ಆ ಸಡಗರ ಸಂಭ್ರಮದ ದುರ್ಗಾ ಪೂಜಾ, ಪೋಯ್ಲಾ ಬೋಯ್ಶಾಖ್(ಪೆಹೆಲಾ ಬೈಶಾಖ್)..... ಅಬೇಸ್ ಮಾಡಿದ ಟಾಕಾಗಳ ಕೃಪೆಯಿಂದ ರುಚಿ ನೋಡಿದ ಸೊಂದೇಶ್, ಮಿಷ್ಟಿ ದೋಯ್, ಬೇಗುನಿ ಹಾಗೂ ಪುಚ್ಕೆಗಳು........ ಓಹ್......!!

ಕೆ ಬೊಲೇ ತೊಮಾಕೇ ಉಗೋ ಮೃತೋ ನೊಗೋರಿ
ಮಿಚಿಲ್ ಶೊಹೋರ್ ಬಾಲೆಹ್ಹೇ ಶುಂದೋರಿ
ನಾ ನಾ ಶೇತೋ ಶುದ್ದು ನಾಯ್
ತುಮಿ ಇತಿಹಾಸ್ ಸೃಷ್ಟಿರ್ ಇತಿಕಥಾ
ಕೋಲ್ಕತ್ತಾ ಕೋಲ್ಕತ್ತಾ ಕೋಲ್ಕತ್ತಾ
ನಾಮೇ ಕೊತೋ ಜಾದೂ
ಅಫುರಂತೋ ಅಫುರಂತೋ ಅಫುರಂತೋ.........

(ಮೃತ ನಗರ, ಪ್ರತಿಭಟನೆಗಳ ನಗರ ಎಂಬುದು ನಿನ್ನ ಒಂದು ಮುಖವಷ್ಟೇ..... ಓಹ್ ಸುಂದರಿಯೇ..., ಇತಿಹಾಸದ ಪುಟಗಳನ್ನು ಸಮಾಪ್ತಿಗೊಳಿಸುವ ಕೊನೆಯ ಪದ ನೀನು.... ಓಹ್ ಕೋಲ್ಕತ್ತಾ...., ನಿನ್ನ ಹೆಸರ ಮಾಯೆ ಅನಂತ....)

ಶುಂದೋರಿಯಂತೂ ಹೌದೇ ಹೌದು ನನ್ನ ಕೋಲ್ಕತ್ತಾ..... 
ಶರತ್ಕಾಲದ ಆರಂಭದೊಂದಿಗೆ ಶುರುವಾಗಿ ಮುಂಗಾರಿನ ಆಗಮನಕ್ಕೆ ಮುಂಚೆ ಕೊನೆಗೊಳ್ಳುವ ಜಾತ್ರಾ(ಯಾತ್ರಾ)ದ ಜಾದೂವಿಗೆ ಮರುಳಾಗದವರುಂಟೇ? ನಾಲ್ಕು ಗಂಟೆಗಳ ಜಾನಪದ ನಾಟಕ, ಅದರೊಳಗಿನ ಜನಪದ ಹಾಡು, ಕುಣಿತಗಳ ಮೇಳ, ಜಾತ್ರಾದ ಆರಂಭಕ್ಕೂ ಮುನ್ನಿನ ಒಂದು ಗಂಟೆಗಳ ಸಂಗೀತ ಕಛೇರಿ...... ಆಹ್..... ಜಾತ್ರಾದ ಸೊಬಗಿಗೇ ಅದೇ ಸರಿಸಾಟಿ....

ನಿಯೋನೇರ್ ಅಲೆಯಾಯ್
ತೊಮಾಕೇ ಚೆನಾ ನಾ ಜಾಯ್
ಮನುಷೇರ್ ಮೃಗೊಯಾಯ್ ಮನುಷ್ ಕಾಂದೇ
ಬಾಚಾರ್ ಲೊಡಾಯ್ ನಿಯೆ ಪ್ರೋತಿಜೋಗಿತ
ಜೊನ್ಮೇರ್ ರಿನ್ ಶೋದ್ ಮೃತ್ಯು ದಿಯೆ
ಹೊ಼ಷಿ ಆರ್ ಕನ್ನರ್ ಗೊಲ್ಪೋಕೊಥಾ
ದಿನ್ ಥೇಕೆ ಜೋಲೇಜೋ........
ದಿನಂತೋ ದಿನಂತೋ ದಿನಂತೋ........

(ಇರುಳಿನ ನಿಯಾನ್ ದೀಪಗಳ ಪ್ರಭೆಯಲ್ಲಿ ನಿನ್ನನ್ನು ಗುರುತಿಸಲಸಾಧ್ಯ. ಇಲ್ಲಿ ಜನರು ಸತ್ತವರಿಗಾಗಿ ಕಂಬನಿ ಮಿಡಿಯುತ್ತಾರೆ, ಉಳಿವಿಗಾಗಿ ಹೋರಾಡುತ್ತಾರೆ. ಜನ್ಮಕ್ಕೆ ಋಣ ಸಂದಾಯ ಮಾಡುವಂತೆ ಅವರು ಸಾವಿಗೆ ಬಲಿಯಾಗುತ್ತಾರೆ. ಮುಂಜಾನೆಯಿಂದ ಮುಸ್ಸಂಜೆಯವರೆಗಿನ ನಿನ್ನ ಪಯಣದ ನೋವು ನಲಿವುಗಳೇ ನಮ್ಮ ಕಥನ.....)

ಆಗ ನನ್ನ ಬದುಕಿಗೊಂದು ಗೊತ್ತು ಗುರಿ ಇರಲಿಲ್ಲ. ಭಿಕ್ಷುಕನೊಬ್ಬನ ಬದುಕಿಗೆಂತಹ‌ ಗಮ್ಯ ಅಲ್ಲವೇ...? ಆದರೂ ಕೆಲವೊಮ್ಮೆ ಅಶ್ರಫ್ 'ನಮ್ಮ ಭವಿಷ್ಯವೇನು ಭಾಯ್' ಎಂದಾಗಲೆಲ್ಲ ಅರಿಯದ ತಳಮಳ.... ಆಗೆಲ್ಲಾ ನನ್ನನ್ನು ಸಾಂತ್ವನಿಸಿದ್ದು ಈ ಕಲ್ಕತ್ತೆಯೇ..... ನನ್ನ ಪಾಲಿಗೆ ಕಲ್ಕತ್ತೆಯೆಂದರೆ ಸಮಸ್ಯೆಗಳನ್ನು ಮೆಟ್ಟಿನಿಂತು ಬೆಳೆಯುವ ಅಪರಿಮಿತ ಆತ್ಮವಿಶ್ವಾಸ.... ಬರಡಾದ ನೆಲವನ್ನೂ ಚಿಗುರಿಸಬಲ್ಲ ಚೈತನ್ಯದ ಒರತೆ....... ಕಷ್ಟಗಳ ಹೆಡೆಮುರಿ ಕಟ್ಟಿ ಬದುಕಲು ಕಲಿ ಎಂದು ಬೋಧಿಸುವ ಗುರು.....

ರಾತ್ರಿಯ ನೀರವ ಮೌನದಲ್ಲಿ ಹೌರಾ ಸೇತುವೆಯೇರಿ ಆಗಸದೆಡೆಗೆ ಮುಖಮಾಡಿ ನಿಂತರೆ, ಹೂಗ್ಲಿಯ ಸಾಗರಸಂಗಮದ ಕಡೆಯಿಂದ ಬೀಸುವ ಕಡಲ್ಗಾಳಿ ನನ್ನ ತಳಮಳಗಳನ್ನೆಲ್ಲಾ ಸರಿಸಿ ಮನಸ್ಸಿಗೆ ತಂಪೆರೆಯುತ್ತಿತ್ತು......
ಆಗಾಗ ಜೊತೆಯಾಗುವ ಮುಸಲ ಧಾರೆಯ ಸಿಂಚನ ಬೇರೆ....

ಆ ನೀರವ ರಾತ್ರಿಗಳಲ್ಲಿ ಆಗಸಕ್ಕೆ ಮುಖಮಾಡಿ ಜೋರಾಗಿ ಕಿರುಚಿ ಹೇಳುತ್ತಿದ್ದೆ..........

"ಕೋಲ್ಕತ್ತಾ........ಆಮಿ ತುಮಾಕೆ ಭಾಲೋಬಾಷಿ..!
ಆಮಿ ಶೊತ್ತಿ ಬೋಲ್ಚೀ......!!!" (ಕೋಲ್ಕತ್ತಾ, ಐ ಲವ್ ಯೂ, ನಾನು ಸತ್ಯವನ್ನು ನುಡಿಯುತ್ತಿರುವೆ)

ಅದು ನನ್ನೆಲ್ಲಾ ದುಃಖ ದುಮ್ಮಾನಗಳನ್ನು ಆಲಿಸಿ ಸಾಂತ್ವನಿಸುತ್ತಿದ್ದ ನನ್ನ ಕಲ್ಕತ್ತೆಗೆ, ಅವಳ ಸಾಂಗತ್ಯಕ್ಕೆ ನಾನು ಸಲ್ಲಿಸುತ್ತಿದ್ದ ಒಲವಿನ ಕಾಣಿಕೆ.........!! ಅವಳು ನನ್ನ ಬದುಕಿನ ಅವಿಭಾಜ್ಯ ಅಂಗವೇ......

ಹಾಗೆ ಅಶ್ರಫ್ ಎಂಬ ಗೆಳೆಯ ಹಾಗೂ ಕಲ್ಕತ್ತಾ ಎಂಬ ರೂಪಸಿಯ ಸಾನಿಧ್ಯದಲ್ಲಿ ನನ್ನ ಬಾಲ್ಯ ಕಳೆದು ಯೌವ್ವನದ ದಿನಗಳು ಕಾಲಿಟ್ಟಿತ್ತು........

ಯೌವ್ವನದ ಬಿಸಿ ರಕ್ತ ಬಂಡಾಯದ ಕಿಚ್ಚೊಂದನ್ನು ನಿಧಾನವಾಗಿ ನನ್ನೊಳಗೆ ಉರಿಸಲಿತ್ತು.... ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯುವ ಕಾಲ ಸನ್ನಿಹಿತವಾಗಿತ್ತು...... ನನ್ನ ಗೊತ್ತು ಗುರಿಯಿಲ್ಲದ ಬದುಕು ಒಂದು ಗಮ್ಯವನ್ನು ಕಾಣಲಿತ್ತು...... ಇಡೀ ಜಗತ್ತಿಗೆ ನಾನ್ಯಾರು ಎಂದು ತಿಳಿಯುವ ಸಮಯ ಹತ್ತಿರದಲ್ಲಿತ್ತು.....

ಸಶೇಷ

ಭಿಕ್ಷೆಯ ಮೂಲಕ ಸಂಗ್ರಹಿಸಲಾಗುವ ನಾಣ್ಯಗಳನ್ನು ರೇಜ್ಕಿ ಎಂದು ಕರೆಯಲಾಗುತ್ತದೆ. ಟಾಕಾ ಬಾಂಗ್ಲಾದೇಶದ ಅಧಿಕೃತ ಕರೆನ್ಸಿಯ ಹೆಸರು. ಆದರೆ ಪಶ್ಚಿಮ ಬಂಗಾಳ, ತ್ರಿಪುರಾ ಹಾಗೂ ಇನ್ನಿತರ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ರೂಪಾಯಿಯನ್ನು 'ಟಾಕಾ' ಎಂದು ಕರೆಯುವುದು ರೂಢಿ.

ಸೋಂದೇಶ್ ಹಾಲು ಮತ್ತು ಸಕ್ಕರೆ ಬಳಸಿ ತಯಾರಿಸುವ ಬೆಂಗಾಲಿಗಳ ಪ್ರಸಿದ್ಧ ಸಿಹಿತಿಂಡಿ.

ಮಿಷ್ಟಿ ದೋಯ್ ಅಥವಾ ಮಿಷ್ಟಿ ದಹಿ ಬಹುತೇಕ ಎಲ್ಲರಿಗೂ ಚಿರಪರಿಚಿತ. ಹಾಲು, ಮೊಸರು ಹಾಗೂ ಸಕ್ಕರೆ ಬಳಸಿ ತಯಾರಿಸುವ ಇದನ್ನು ಸಣ್ಣ ಮಡಿಕೆಯ ಲೋಟಗಳಲ್ಲಿ ಸರ್ವ್ ಮಾಡುವುದು ರೂಢಿ.   
ಬೇಗುನಿ ಬದನೆಕಾಯಿಯನ್ನು ಕಡಲೇಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಮಾಡುವ ಖಾದ್ಯ(ಬದನೇಕಾಯಿ ಬಜ್ಜಿ) ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧ.

                       
ಪುಚ್ಕೆಗಳೆಂದರೇ ನಮ್ಮ ನೆಚ್ಚಿನ ಗೋಲ್ಗಪ್ಪಾ... ಅದನ್ನೇ ಬೆಂಗಾಲಿಗರು ಪುಚ್ಕೇ ಎನ್ನುತ್ತಾರೆ.

ಜಾತ್ರಾ/ಯಾತ್ರಾ ಪಶ್ಚಿಮ ಬಂಗಾಳದ ಸುಪ್ರಸಿದ್ಧ ಜಾನಪದ ರಂಗಕಲೆ. ಇದರ ಆರಂಭ ಶ್ರೀ ಚೈತನ್ಯರ ಭಕ್ತಿ ಚಳುವಳಿಯೊಂದಿಗೆ ಬೆರೆತಿದೆ. ಇದು ಬಂಗಾಳವಲ್ಲದೇ ಈಶಾನ್ಯ ರಾಜ್ಯಗಳು, ಓಡಿಸ್ಸಾ ಹಾಗೂ ಬಾಂಗ್ಲಾದೇಶದಲ್ಲೂ ಪ್ರಸಿದ್ಧ. ಮೊದಮೊದಲು ಹಳ್ಳಿಗಳಿಗೆ ಸೀಮಿತವಾಗಿದ್ದ ಜಾತ್ರಾವನ್ನು ನಗರದ ಚೌಕಟ್ಟಿಗೆ ತಂದಿದ್ದು ಬೆಂಗಾಲಿ ನವೋದಯ. ಹಾಗೆಯೇ ಆರಂಭದಲ್ಲಿ ಪೌರಾಣಿಕ ಕಥನಗಳಿಗೆ ಸೀಮಿತವಾದದ್ದು ನಂತರ ಸಾಮಾಜಿಕ ವಿಚಾರಗಳನ್ನು ಹೊತ್ತ ಜಾತ್ರಾಗಳೂ ಆರಂಭವಾದವು. ಇವುಗಳಿಗೆ ಚಲನಚಿತ್ರದಂತೆ ಪೋಸ್ಟರ್ಗಳಿರುತ್ತವೆ. ಮುಂಚೆ ಈ ಕಲಾ ಪ್ರಕಾರ ಗಂಡಸರಿಗೆ ಮಾತ್ರ ಸೀಮಿತವಾಗಿತ್ತು. ಹೆಣ್ಣಿನ ಪಾತ್ರವನ್ನೂ ಗಂಡಸರೇ ಪೋಷಿಸುತ್ತಿದ್ದರು. ಈಗ ಹೆಣ್ಣುಮಕ್ಕಳೂ ಜಾತ್ರಾದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. 

                
ಜಾತ್ರಾ ಎಂದರೆ ಪಯಣ ಎಂಬ ಅರ್ಥವಿದೆ.‌ ಈ ವಿಶಿಷ್ಟ ನಾಲ್ಕು ಗಂಟೆಗಳ ನಾಟಕದ ಮುಂಚೆ ಸಾಮಾನ್ಯವಾಗಿ ಒಂದು ಗಂಟೆಗಳ ಸಂಗೀತ ಕಛೇರಿ ಇರುತ್ತದೆ. ಇದು ನಾಟಕಕ್ಕೆ ವೀಕ್ಷಕರನ್ನು ಸೆಳೆಯಲು ಸಹಕಾರಿ. ಜಾತ್ರಾದ ಪ್ರದರ್ಶನವು ನಾಟಕೀಯ ದೀರ್ಘ ಸ್ವಗತಗಳು, ಹಾಡು, ಯುಗಳ ನೃತ್ಯಗಳಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಜಾನಪದ ಸಂಗೀತದಿಂದ ಕೂಡಿದ ಈ ನೃತ್ಯಗಳು ನಾಟಕ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಬದಲಾಗುವಾಗ ಹಾಗೂ ನಾಟಕದ ಮುಕ್ತಾಯದಲ್ಲಿ ಇರುತ್ತವೆ. 
ಈ ಜಾತ್ರಾ ಕಲಾವಿದರು ಸೆಪ್ಟೆಂಬರ್ ತಿಂಗಳಿನಿಂದ ಮುಂಗಾರು ಆರಂಭವಾಗುವವರೆಗೆ ರಾಜ್ಯದಾದ್ಯಂತ ಬೇರೆ ಬೇರೆ ಜಾಗಗಳಲ್ಲಿ ಪ್ರದರ್ಶನ ನೀಡುತ್ತಾರೆ.
ಜಾತ್ರಾ ಪ್ರದರ್ಶನವು ಉತ್ತರ ಪ್ರದೇಶದ ನೌಟಂಕಿ, ಮಹಾರಾಷ್ಟ್ರದ ತಮಾಷಾ, ಗುಜಾರಿತನ ಭಾವೈ ಕಲೆಗಳಿಗೆ ಬಹುವಾಗಿ ಹೋಲುತ್ತದೆ.
ಮಾಹಿತಿಗಳ ಕೃಪೆ: ಅಂತರ್ಜಾಲ

ಕೋಲ್ಕತ್ತಾ ವಿವರಣೆಯ ಬೆಂಗಾಲಿ ಹಾಡಿನ ರಚನೆ, ಸಾಹಿತ್ಯ ಹಾಗೂ ಗಾಯನ: ಶ್ರೀಯುತ ಭೂಪೇನ್ ಹಜಾ಼ರಿಕಾ

ಕನ್ನಡ ಭಾವಾನುವಾದ ಕೃಪೆ: ಅಂತರ್ಜಾಲ