ಲೇಬಲ್ಗಳು
ಸೋಮವಾರ, ಜೂನ್ 8, 2020
ವಿಮುಕ್ತೆ
ಶನಿವಾರ, ಜೂನ್ 6, 2020
ಅನೂಹ್ಯ 5
ಏನಾಗಿದೆ ಈ ಯುವ ಜನಾಂಗಕ್ಕೆ? ಜೀವನ ಇಷ್ಟೊಂದು ಅಗ್ಗವೇ? ಬದುಕು ಹಸನಾಗಿಸಲು, ಸಾಧಿಸಲು ಅವಕಾಶಗಳಿಗೇನು ಕೊರತೆ? ಸಾಧಿಸಲು ಮನಸಿದ್ದವನು ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾನೆ. ಇರುವುದೊಂದೇ ಬದುಕು. ಅದನ್ನು ಈ ರೀತಿ ಸಮಾಪ್ತಿಗೊಳಿಸುವುದೇ?
ಇದೇ ಯೋಚನೆಯಲ್ಲೇ ಕಾರು ನಿಲ್ಲಿಸಿ ಮನೆ ಪ್ರವೇಶಿಸಿದವಳನ್ನು ಅಬ್ಬರದ ವಿದೇಶಿ ಸಂಗೀತ ಸ್ವಾಗತಿಸಿತು. ಅವಳಿಗೆ ಕಿವಿ ಮುಚ್ಚುವಂತಾಯಿತು. ತಟ್ಟನೆ ಹೊಳೆಯಿತು......
ಇಂದು ಅವಳಮ್ಮ ಮಾಲಿನಿ ರಾವ್ ಅವರ ಹುಟ್ಟುಹಬ್ಬ. ಅದಕ್ಕೆ ಈ ಪಾರ್ಟಿ.
ಸಾಮಾನ್ಯ ಜನರ ಹುಟ್ಟುಹಬ್ಬ ಎಂದರೆ ದೇವಸ್ಥಾನದಲ್ಲೊಂದು ಪೂಜೆ, ಹಿರಿಯರ ಆಶೀರ್ವಾದ, ಕಿರಿಯರ ಕೇಕ್, ಭರ್ಜರಿ ಊಟ ಇಷ್ಟರಲ್ಲಿ ಮುಗಿಯುತ್ತದೆ. ಆದರೆ ಈ ಮನೆಯಲ್ಲಿ ಇರುವವರು ಮೂರೂ ಬಿಟ್ಟವರು. ಇವರ ಪಾರ್ಟಿಗಳ ಉದ್ದೇಶವೇ ಬೇರೆ. ಬಿಸಿನೆಸ್ ಡೀಲ್ ಗಳು, ಶ್ರೀಮಂತಿಕೆಯ ಹುಚ್ಚು ಆಡಂಬರ ಇನ್ನೂ ಏನೇನೋ.....
ಸಾಮಾನ್ಯರ ದೇಹದಲ್ಲಿ ರಕ್ತ ಹರಿಯುತ್ತದೆ. ಅವರು ಸಮಾಜಕ್ಕೆ, ನಿಂದನೆಗೆ ಹೆದರುತ್ತಾರೆ. ಮೂರೂ ಬಿಟ್ಟವರ ದೇಹದಲ್ಲಿ ದುಡ್ಡು ಹರಿಯುತ್ತದೆ. ಅವರು ಸಮಾಜವನ್ನೇ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ. ನಿಂದಕರನ್ನು ಹೆದರಿಸಿ ಅಂಕೆಯಲ್ಲಿ ಇಟ್ಟುಕೊಳ್ಳುತ್ತಾರೆ.
ತನ್ನ ರೂಮಿನತ್ತ ಹೊರಟವಳು ನಿಂತು ಹಾಲ್ ನಲ್ಲಿ ಒಮ್ಮೆ ಇಣುಕಿದಳು.
ಒಳಗಿನ ದೃಶ್ಯ ನಯನಮನೋಹರ..........!ರಂಗುರಂಗಿನ ಭ್ರಮಾ ಲೋಕ..........!
ಪರಮಾತ್ಮನನ್ನು ಒಳಗಿಳಿಸಿ ವಿದೇಶಿ ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದವರಿಗೆ ಮೈಮೇಲೆ ಪ್ರಜ್ಞೆ ಇರಲಿಲ್ಲ. ಯಾರ ಗಂಡನೋ, ಇನ್ಯಾರ ಹೆಂಡತಿಯೋ ಯಾವುದರ ಪರಿವೆಯೂ ಇಲ್ಲ. ಇಲ್ಲಿ ವಯಸ್ಸಿನ ಭೇದವಿಲ್ಲ......
ಪ್ರಪಂಚವೇ ದೇವರು ಮಾಡಿರೋ ಬಾರು ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಕುಡಿಯೋನೆ ಇಲ್ಲಿ ಓನರು ದೇವ್ರೇನೇ ಇಲ್ಲಿ ಸರ್ವರೂ
ಹೆಚ್ಚಾದ್ರೆ ಎಲ್ಲ ಬೀಗರು ರಿಚ್ಚಾದ್ರೆ ಭೂಮಿಪುತ್ರರು
ಜಾತಿ ಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರೂ...
ಇಂಥವರನ್ನು ನೋಡಿಯೇ ಬರೆದಿರಬೇಕು.
ಅವಳ ಕಣ್ಣುಗಳು ಅಪ್ರಯತ್ನವಾಗಿ ಮಾಲಿನಿಯವರನ್ನು ಹುಡುಕಿದವು. ಯಾರೋ ಮಧ್ಯವಯಸ್ಕನ ಕೈ ಹಿಡಿದು ಕುಣಿಯುತ್ತಿದ್ದಾಕೆ ಕಣ್ಣಿಗೇ ಬಿದ್ದೇ ಬಿದ್ದಳು.
ಈಕೆ.......... ಈಕೆ ತನ್ನ ತಾಯಿಯೇ? ಮೇಕಪ್ಪಿನ ಛಾಯೆಯಡಿ ಕಳೆದುಹೋದ ಮುಖವನ್ನು ಗುರುತಿಸಲು ಪ್ರಯತ್ನಿಸಿ ಸೋತಳು. ತೀರಾ ಅಪರಿಚಿತರಂತೆ ಕಂಡರು.
ಮತ್ತೆ ತಿರುಗಿ ನೋಡಿದೆ ದಢದಢನೆ ಮೆಟ್ಟಿಲೇರಿ ಕೋಣೆಗೆ ಬಂದು ಕುಸಿದಳು. ತಲೆ ಸಿಡಿಯತೊಡಗಿತು. ಬಟ್ಟೆಯನ್ನೂ ಬದಲಾಯಿಸದೇ ಮಂಚಕ್ಕೆ ಒರಗಿದಳು.
ಅವಳ ತಂದೆ ಸತ್ಯಂ ರಾವ್ ದೇಶದ ಸಿರಿವಂತ ಉದ್ಯಮಿಗಳಲ್ಲೊಬ್ಬರು. ತಂದೆ ಸ್ಥಾಪಿಸಿ ಬೆಳೆಸಿದ ಉದ್ಯಮ ಅವರ ಮರಣಾನಂತರ ಏಕೈಕ ವಾರಸ್ದಾರರಾದ ರಾವ್ ಅವರಿಗೆ ಒಲಿದಿತ್ತು. ಅದನ್ನು ಇನ್ನೂ ಎತ್ತರಕ್ಕೆ ಬೆಳೆಸಿ ದೇಶಾದ್ಯಂತ ಘಟಕಗಳನ್ನು ಸ್ಥಾಪಿಸಿದ್ದರು. ಕೇಂದ್ರ ಸಚಿವ ಮಹೇಶ್ವರ್ ಪಾಟೀಲರ ತಂಗಿ ಮಾಲಿನಿಯನ್ನು ಮದುವೆಯಾದ ಮೇಲೆ ಶ್ರೀಮಂತಿಕೆಯೊಂದಿಗೆ ರಾಜಕೀಯ ಪ್ರಭಾವಳಿಯೂ ಸೇರಿ ಅವರನ್ನು ಅತ್ಯಂತ ಪ್ರಭಾವಿ ವ್ಯಕ್ತಿಯನ್ನಾಗಿಸಿತು.
ಆದರೆ ತಂದೆಯ ಕಾಲದಲ್ಲಿದ್ದ ಮಾನವೀಯ ಮೌಲ್ಯಗಳು ಮೂಲೆಗುಂಪಾಗಿದ್ದೂ ಸತ್ಯಂ ಅವರ ಕಾಲದಲ್ಲೇ. ಹಣ ಗಳಿಕೆಯೊಂದೇ ಅವರ ಧ್ಯೇಯವಾಯಿತು. ಅವರ ಗಳಿಕೆಯ ಮೂಲದಲ್ಲಿ ಸಕ್ರಮಕ್ಕಿಂತ ಅಕ್ರಮವಾದುದೇ ಹೆಚ್ಚು ಅನ್ನುವುದು ನೂರಕ್ಕೆ ನೂರು ಸತ್ಯ.
ಇನ್ನು ಮಾಲಿನಿ ಸಮಾಜ ಸೇವೆ, ಪಾರ್ಟಿ, ಮಹಿಳಾ ಸಂಘಟನೆಗಳು ಹೀಗೆ ಹತ್ತು ಹಲವು ಕೆಲಸ ಹಚ್ಚಿಕೊಂಡಾಕೆ.ಇಂಥಾ ದಂಪತಿಗಳ ಸುಪುತ್ರಿ ಸಮನ್ವಿತಾ. ಮಾಲಿನಿ ಹೆತ್ತಿದ್ದು ಬಿಟ್ಟರೆ, ಅವಳು ಬೆಳದಿದ್ದೆಲ್ಲಾ ಆಯಾಗಳ ಕೈಯಲ್ಲಿ. ಗಂಡ ಮಕ್ಕಳು ಅಂತ ಮನೆ ನಿಭಾಯಿಸಲು ತಾನೇನು ಕೆಳವರ್ಗದ ಮಹಿಳೆಯಲ್ಲ ಅನ್ನೋದು ಮಹಿಳಾ ಸಬಲೀಕರಣಕ್ಕಾಗಿ ಭಾಷಣ ಬಿಗಿಯುವ ಮಾಲಿನಿಯವರ ಅಭಿಪ್ರಾಯ. ಹಾಗೆ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಕೂರುವುದು ತಮ್ಮ ಅಂತಸ್ತಿಗೆ ತಕ್ಕುದಲ್ಲ ಅನ್ನೋದು ಅವರ ದೃಷ್ಟಿಕೋನ.
ಲಂಡನ್ನಿನ ಪ್ರತಿಷ್ಠಿತ ಬೋರ್ಡಿಂಗ್ ಸ್ಕೂಲ್ ಸೇರಿದಾಗ ಅವಳಿಗೆ ಐದು ವರ್ಷ. ಅವಳ ತಾಯ್ತಂದೆಯರ ಪ್ರಕಾರ ಭಾರತದಲ್ಲಿ ವಿದ್ಯಾಭ್ಯಾಸ ಮಾಡುವುದು ಅವರ ಅಂತಸ್ತಿಗೆ ಕುಂದು. ಪೂರ್ತಿ ವಿದ್ಯಾರ್ಥಿ ಜೀವನ ಅಲ್ಲೇ ಕಳೆದಿತ್ತು. ಹಣದ ಕೊರತೆ ಅವಳನ್ನೆಂದೂ ಕಾಡಲಿಲ್ಲ. ಆದರೆ ಅಷ್ಟು ವರ್ಷಗಳಲ್ಲಿ ಅವಳು ಅವರನ್ನು ಭೇಟಿಯಾದ್ದು ಆರೇಳು ಸಲ ಇರಬಹುದು. ಭೇಟಿಯಾದಗಲೂ ಐದು-ಹತ್ತು ನಿಮಿಷಗಳ ಔಪಚಾರಿಕ ಮಾತುಕತೆಯಷ್ಟೇ. ಮೊದಮೊದಲ ಬೇಸರ, ದುಃಖ ನಂತರ ಅಭ್ಯಾಸವಾಯಿತು. ಎಂದೂ ಅವಳಿಗೆ ಅವರ ಮೇಲೆ ಆತ್ಮೀಯತೆ ಬೆಳೆಯಲೇ ಇಲ್ಲ.
ಓದಿನಲ್ಲಿ ಬುದ್ದಿವಂತಳಾಗಿದ್ದ ಸಮನ್ವಿತಾಳ ಮೆಡಿಕಲ್, ಇಂಟರ್ನ್ಶಿಪ್ ಮುಗಿದ ಕೂಡಲೇ ಲಂಡನ್ನಿನ ಎರಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅವಳಿಗೆ ಉದ್ಯೋಗದ ಅವಕಾಶ ಅರಸಿ ಬಂತು. ರಾವ್ ಅವರಿಗಂತೂ ಮಗಳು ಅಲ್ಲೇ ವೈದ್ಯೆಯಾಗಲಿರುವುದು ಅತೀವ ಸಂತಸ. ಎಷ್ಟಾದರೂ ಮಗಳು ವಿದೇಶದಲ್ಲಿ ವೈದ್ಯೆ ಎಂದು ಹೇಳಿಕೊಳ್ಳೋದು ಸ್ಟೇಟಸ್ ಸಿಂಬಲ್ ಅಲ್ಲವೇ? ಆದರೆ ಅಲ್ಲಿನ ಎಲ್ಲಾ ಅವಕಾಶಗಳನ್ನು ತಿರಸ್ಕರಿಸಿ ಸಮನ್ವಿತಾ ಭಾರತಕ್ಕೆ ಬಂದಿಳಿದ್ದಿದ್ದಳು. ರಾವ್ ದಂಪತಿಗಳಿಗೆ ಮಗಳ ಮೇಲೆ ಅಪಾರ ಕೋಪ ಬಂದರೂ ದಂಡಿಸುವಷ್ಟು ಸಲಿಗೆ, ಆತ್ಮೀಯತೆ ಇರಲಿಲ್ಲ. ಇನ್ನು ಈ ಬಗ್ಗೆ ಯೋಚಿಸಿ ಫಲವಿಲ್ಲವಂದು ತಿಳಿದ ಮೇಲೆ ತಾವೇ ಸ್ವತಃ ಒಂದು ಆಸ್ಪತ್ರೆ ಯಾಕೆ ತೆರೆಯಬಾರದೆಂಬ ಯೋಚನೆ ಬಂದಿದ್ದೇ ಅವರ ತಲೆ ವೇಗವಾಗಿ ಕೆಲಸ ಮಾಡತೊಡಗಿತು. ಶ್ರೀಮಂತ ರೋಗಿಗಳಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ತೆರೆದರೆ ಒಂದು ಕಡೆಯಿಂದ ದುಡ್ಡೂ ಸಂಪಾದನೆ, ಜೊತೆಗೆ ಖ್ಯಾತಿಯೂ ಸಿಗುತ್ತದೆ ಎನಿಸಿದ್ದೇ ಸಂತೋಷದಿಂದ ತಮ್ಮ ಯೋಚನೆಯನ್ನು ಮಗಳ ಮುಂದಿಟ್ಟಿದ್ದರು ಅವಳು ಕುಣಿಯುತ್ತಾ ಒಪ್ಪಿಕೊಳ್ಳಬಹುದೆಂದು.
ಆದರೆ ಸಮನ್ವಿತಾ ಒಂದೇ ಏಟಿಗೆ ನಿರಾಕರಿಸಿದ್ದಳು. ಒಪ್ಪಿಸಲು ಶತ ಪ್ರಯತ್ನ ಮಾಡಿ ಸೋತಿದ್ದಾಯಿತೇ ಹೊರತು ಅವಳ ನಿರ್ಧಾರ ಒಂದಿಂಚು ಚಲಿಸಲಿಲ್ಲ. ಈ ಯೋಜನೆಯೂ ಮಣ್ಣು ಮುಕ್ಕಿದ ನಂತರ ಅವರ ಬಳಿ ಇದ್ದದ್ದು ಒಂದೇ ಆಯ್ಕೆ. ದೇಶದ ಯಾವುದಾದರೊಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಮಗಳು ವೈದ್ಯೆಯಗಬೇಕು. ಅದೇನು ಕಷ್ಟವಾಗಿ ಕಾಣಲಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಯಾವಾಗ ಸಮನ್ವಿತಾ, ಡಾ. ಮೀರಾ ಅವರ ಧನ್ವಂತರಿ ಆಸ್ಪತ್ರೆಯಲ್ಲಿ ಜೂನಿಯರ್ ಆಗಿ ಸೇರಿಕೊಂಡಿದ್ದು ತಿಳಿಯಿತೋ ರಾವ್ ಕೆಂಡಾಮಂಡಲವಾಗಿದ್ದರು. ಅದು ಸಮಾಜದ ಅತೀ ಬಡವರ್ಗದ ಜನರಿಗಾಗಿ ಮೀರಾ ಅವರೇ ಸ್ಥಾಪಿಸಿದ ಧರ್ಮಾಸ್ಪತ್ರೆ. ರಾವ್ ದಂಪತಿಗಳ ಸಮಾಜಸೇವೆಯ ಪ್ರಕಾರವೇ ಬೇರೆ. ಕೋಟಿಗಟ್ಟಲೆ ಹಣ ಸುರಿದು ವಿದೇಶದಲ್ಲಿ ವಿದ್ಯಾಭ್ಯಾಸ ಕೊಡಿಸಿದ ಮಗಳು ಇಂಥಾ ಹುಚ್ಚು ಕೆಲಸ ಮಾಡುವುದೇ?? ಅವರ ತಲೆ ಬಿಸಿಯಾಗಿತ್ತು.
ಮಗಳು ಮನೆಗೆ ಬರುವುದನ್ನೇ ಕಾಯುತ್ತಾ ಕೂತಿದ್ದವರು ಅವಳು ಬಂದೊಡನೆ, "ಸಮನ್ವಿತಾ, ವಾಟ್ ಯು ಥಿಂಕ್ ಆಫ್ ಯುವರ್ ಸೆಲ್ಫ್? ನಾಳೆಯೇ ಅಲ್ಲಿಗೆ ರೆಸಿಗ್ನೇಷನ್ ಲೆಟರ್ ಕಳ್ಸು. ಜಸ್ಟ್ ಗೋ ಎಂಡ್ ಮೀಟ್ ಡಾ. ಬಲರಾಂ ಟುಮಾರೋ. ಅವ್ರ ಹಾಸ್ಪಿಟಲ್ ಬೆಸ್ಟ್ ಇನ್ ಇಂಡಿಯಾ. ಒಳ್ಳೆ ಸ್ಯಾಲರಿ. ನಾನೆಲ್ಲ ಅರೇಂಜ್ ಮಾಡಿದ್ದೀನಿ. ಗೋ ಎಂಡ್ ಜಾಯ್ನ್ ದೇರ್" ಅಂದಿದ್ದರು.
"ಥ್ಯಾಂಕ್ಸ್ ಫಾರ್ ಯುವರ್ ಕನ್ಸರ್ನ್ ಡ್ಯಾಡ್. ಆದ್ರೆ ಮೀರಾ ಅವರ ಧ್ಯೇಯೋದ್ದೇಶಗಳು, ಸಮಾಜದ ಬಗ್ಗೆ ಅವರಿಗಿರೋ ಕಾಳಜಿ ನನಗಿಷ್ಟ ಆಗಿದೆ. ವೆರಿ ಹ್ಯಾಪಿ ಟು ವರ್ಕ್ ವಿಥ್ ಹರ್.
"ನೀನು ಕೆಲ್ಸ ಮಾಡದೇ ಮನೇಲೇ ಇದ್ರೂ ತೊಂದರೆ ಇಲ್ಲ. ಇಂಥಾ ಹುಚ್ಚು ಬೇಡ. ನಿನಗಷ್ಟು ಸೋಶಿಯಲ್ ವರ್ಕ್ ಮಾಡ್ಬೇಕು ಅಂತಿದ್ರೆ ನಿನ್ನ ಮಮ್ಮಿ ಆರ್ಗನೈಜೇಷನ್ ಸೇರ್ಕೊ. ಆದರೆ ಧರ್ಮಾಸ್ಪತ್ರೆನ ಮರ್ತು ಬಿಡು."
"ಇಲ್ಲ ಡ್ಯಾಡ್. ಈ ವಿಷಯದಲ್ಲಿ ನೀವು ಇಂಟರ್ಫಿಯರ್ ಆಗ್ಬೇಡಿ" ಖಚಿತವಾಗಿ ನುಡಿದಾಗ ಅವರ ಕೋಪ ನೆತ್ತಿಗೇರಿತು. ತಾನೇನು ಮಾತನಾಡುತ್ತಿದ್ದೇನೆ ಎಂಬ ಅರಿವಿಲ್ಲದೇ ಕಿರುಚತೊಡಗಿದರು.
"ಕೋಟಿಗಟ್ಟಲೆ ಡೊನೇಷನ್ ಕೊಟ್ಟು ಫಾರಿನ್ ನಲ್ಲಿ ಓದಿಸಿದ್ದು ಆ ಧರ್ಮಾಸ್ಪತ್ರೆಲೀ ಸೇವೆ ಮಾಡೋಕಲ್ಲ. ಮರ್ಯಾದೆಯಿಂದ ಹೇಳಿದ್ ಕೇಳ್ಕೊಂಡು ಬಿದ್ದಿರು." ಆಜ್ಞಾಪಿಸುವ ದನಿಯಲ್ಲಿ ಹೇಳಿದ್ದೇ ಅವಳ ಸ್ವಾಭಿಮಾನ ಹೆಡೆಯೆತ್ತಿತ್ತು.
"ಐದು ವರ್ಷದ ಮಗಳನ್ನು ಬೋರ್ಡಿಂಗ್ ಸ್ಕೂಲಲ್ಲಿ ಬಿಟ್ಟಂತಲ್ಲ ಇದು. ನಿಮ್ಮನ್ನು ಬಿಟ್ಟು ಬದುಕೋದು ಕಲಿತು ಬಹಳ ವರ್ಷಗಳಾಯ್ತು. ನನಗೆ ಬುದ್ದಿ ಹೇಳೋ, ಆಜ್ಞಾಪಿಸೋ ಅಥವಾ ದಂಡಿಸೋ ಹಕ್ಕು, ಅಧಿಕಾರ, ಆತ್ಮೀಯತೆ, ಸಲಿಗೆ ಯಾವುದೂ ನಿಮ್ಗಿಲ್ಲ. ನನ್ನ ಬಗ್ಗೆ ಅಷ್ಟೊಂದು ಯೋಚ್ಸೋ ಅಗತ್ಯವೂ ಇಲ್ಲ. ನನ್ನ ನಿರ್ಧಾರಗಳನ್ನು ನಾನೇ ತಗೋಬಲ್ಲೇ. ಇನ್ಯಾವತ್ತೂ ನನ್ನ ಬದುಕಲ್ಲಿ ಹಸ್ತಕ್ಷೇಪ ಮಾಡಬೇಡಿ" ಬಿರುಸಾಗಿ ನುಡಿದು ಮೆಟ್ಟಿಲೇರಿದ್ದಳು.
ಇಷ್ಟು ವರ್ಷಗಳಲ್ಲಿ ಯಾರೂ ಅವರೊಂದಿಗೆ ಹೀಗೆ ಮಾತಾಡಿರಲಿಲ್ಲ. ಇಂದು ಮಗಳಿಂದ ಇಂಥಾ ಅವಕಾಶ ಒದಗಿತ್ತು. ಇದಕ್ಕೆ ತಾನೇ ಕಾರಣವೆಂದು ಆಗಲೂ ಒಪ್ಪಲಿಲ್ಲ ರಾವ್. ಈಗಲೂ ಒಪ್ಪಲಾರರು. ಆದರೆ ಬೈಯಲು ನಾಲಿಗೆಯೇಳದು. ದಂಡಿಸೋ ಅಧಿಕಾರ, ಆತ್ಮೀಯತೆ ಇಲ್ಲವೆಂದು ಮೊದಲೇ ಹೇಳಿದ್ದಳಲ್ಲ.
ಎಂದೂ ಧ್ವನಿಯೇರಿಸದ ಮಗಳು ಇಂದೇಕೆ ಹೀಗೆ ಮಾತಾಡಿದಳೆಂದು ಒಮ್ಮೆ ಯೋಚಿಸಿ, ಅವಳ ಬಳಿ ಕೂತು ಮಾತಾಡಿದ್ದರೆ ಬಹುಶಃ ಅವಳ ಸಮಸ್ಯೆಯ ಅರಿವಾಗುತ್ತಿತ್ತೇನೋ? ಆದರೆ ಅಷ್ಟು ಸಮಯ ಅವರ ಬಳಿ ಎಲ್ಲಿ? ಅಂದಿನಿಂದ ಮತ್ತಷ್ಟು ಮೌನಿಯಾಗಿದ್ದಳು ಸಮನ್ವಿತಾ. ನೆನಪುಗಳು ಕಾಡತೊಡಗಿದಾಗ ಮಗ್ಗುಲಾದಳು.
ಪಾರ್ಟಿ ಇನ್ನೂ ನಡೆದೇ ಇತ್ತು. ಮತ್ತೆ ತಾಯಿಯ ನೆನಪಾಯಿತು. 'ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಳಾರಳು........' ಎಲ್ಲೋ ಓದಿದ ನೆನಪಾಯಿತು. ಮಾಲಿನಿ ತನ್ನ ಸ್ವಂತ ತಾಯಿಯೇ? ಒಮ್ಮೆ ಆತ್ಮೀಯವಾಗಿ ಮಾತಾಡಿಸಿದ್ದಿಲ್ಲ. ಪ್ರೀತಿಯಿಂದ ತಲೆ ಸವರಿದ ನೆನಪಿಲ್ಲ.....
ಇದ್ದಕ್ಕಿದ್ದಂತೆ ಮಂಗಳಾ ನೆನಪಾದರು. ಅದೆಷ್ಟು ಅಕ್ಕರೆ ಮಕ್ಕಳೆಂದರೆ. ನವ್ಯಾಳನ್ನೂ ಸ್ವಂತ ಮಗಳಂತೆ ಕಾಣುವ ಹೆಂಗರುಳು. ತಾನೂ ಅವರಿಗೆ ಮಗಳಂತೆಯೇ. ಹೆತ್ತವರ ಪ್ರೀತಿ ಸವಿದದ್ದೇ ಅಲ್ಲಿ. ಆ ಪುಟ್ಟ ಮನೆಯಲ್ಲಿ ಸಿಗುವ ಪ್ರೀತಿ, ಅಕ್ಕರೆ ಆನಂದ ಈ ಬಂಗಾರದ ಪಂಜರದಲ್ಲಿ ಎಂದೂ ಸಿಗದು. ಹೊರಜಗತ್ತಿಗೆ ಇಲ್ಲೇನು ಕೊರತೆ ಕಾಣದು. ಅದು ಅಂತರಂಗದ ಕಣ್ಣಿಗೆ ಮಾತ್ರ ಗ್ರಹಿಕೆಯಾಗುವಂಥದ್ದು. ಕಿಶೋರ್ ತನ್ನಷ್ಟು ಸಿರಿವಂತನಲ್ಲ. ಆದರೆ ಅವನ ಬಳಿಯಿರುವ ಸಂಪತ್ತು ತನ್ನಲಿಲ್ಲ. ಹಣದಿಂದ ಎಲ್ಲವನ್ನೂ ಕೊಳ್ಳಬಹುದೇ? ಎಷ್ಟೇ ಹಣವಿದ್ದರೂ ಸಾವನ್ನು ಗೆಲ್ಲಬಹುದೇ? ಹಣವಂತರಿಗೆ ಮುಪ್ಪಾಗದೇ?
ಮಿಸ್ಟರ್ ರಾವ್ ತಮ್ಮ ಪೂರ್ತಿ ಸಂಪತ್ತು ಸುರಿದರೂ ತನ್ನ ಬಾಲ್ಯದ ಒಂದು ದಿನವಾದರೂ ವಾಪಾಸಾದೀತೇ..?
ನನ್ನ ಬಾಲ್ಯ.........
ಎಲ್ಲಾ ಇದ್ದೂ ಯಾರೂ ಇಲ್ಲದ ಅನಾಥತ್ವದ ಬಾಲ್ಯ........
ಅಂದಿಗೂ ಇಂದಿಗೂ ಏನಿದೆ ವ್ಯತ್ಯಾಸ?
ದಟ್ಟ ಕಾನನದಲ್ಲಿ ಒಬ್ಬಂಟಿ...........ಜೋರಾಗಿ ಅಳಬೇಕೆನಿಸುವುದು. ಆದರೆ ಅಳಲಾರೆ. ಅತ್ತರೂ ತನಗೆ ತಾನೇ ಸಾಂತ್ವನಿಸಿಕೊಳ್ಳಬೇಕು. ನಕ್ಕರೂ ನನ್ನ ನೋಡಿ ನಾನೇ ಖುಷಿ ಪಡಬೇಕು. ಇಂಥಾ ಬಾಳು ಯಾರಿಗೆ ಬೇಕು?
ಇಲ್ಲೇ ನಾಕ, ಇಲ್ಲಿಯೇ ನರಕ
ಎಲ್ಲಾ ಈ ಭುವಿಯಲ್ಲೇ
ಬಾಳುವ ಕಲೆಯಾ, ಬಾಳಿನ ಬೆಲೆಯ
ತಿಳಿದವನ ಕೈಯಲ್ಲೇ
ಕೊಲ್ಲುವ ನೆನಪುಗಳು ನಡುವೆ ಕಷ್ಟದಿಂದ ನಿದ್ರಿಸಲು ಪ್ರಯತ್ನಿಸಿದಳು
ಮುಂದುವರೆಯುತ್ತದೆ
ಗುರುವಾರ, ಜೂನ್ 4, 2020
Where's your ಮುಂದಿನ ನಿಲ್ದಾಣ.....!!
ಮೃತ್ಯುಂಜಯ
ಅನೂಹ್ಯ 4
"ಯಾಕಮ್ಮ ಬಂಗಾರಿ, ಏನೇನೋ ಯೋಚನೆ ಮಾಡಿ ಮನಸ್ಸಿಗೆ ಯಾಕಿಷ್ಟು ಹಿಂಸೆ ಮಾಡ್ಕೋಳ್ತೀ? ಎಷ್ಟು ಸಾರಿ ಹೇಳಿದ್ದೀನಿ, ಹಳೆದೆಲ್ಲಾ ಮರ್ತು ಬಿಡು ಅಂತ. ನೋಡು ಪುಟ್ಟಾ, ಸುಮ್ಮನೆ ಏನೇನೋ ನೆನಸ್ಕೊಂಡು ಈಗಿನ ನೆಮ್ಮದಿ ಹಾಳ್ಮಾಡ್ಕೋಬೇಡ್ವೋ" ಎಂದ ಸಾಂತ್ವನಿಸುತ್ತಾ.
ಅವಳು ನಿಧಾನವಾಗಿ ಕಣ್ಣೀರೊರೆಸಿಕೊಂಡಳು. ಕಿಟಕಿಯ ಬಳಿ ನಿಂತು ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿದಳು. ಹಾಯೆನಿಸಿತು. ಆಗಸದಲ್ಲಿನ ಮೋಡಗಳು ಗಾಳಿ ಬೀಸುವ ದಿಕ್ಕಿನಲ್ಲಿ ರಭಸವಾಗಿ ದಿಗಂತದೆಡೆಗೆ ಸರಿಯುತ್ತಿವೆ. ಮೋಡಗಳೆಲ್ಲಾ ಚದುರಿದರೆ ನೀಲಾಕಾಶದಲ್ಲಿ ಜೋತ್ಸ್ನೆಯ ಜ್ಯೋತಿರ್ಲಹರಿ. ಅದೇ ಮೋಡ ಮುಸುಕಿದರೇ ಕಾರಿರುಳು. ಅವ್ಯಕ್ತ ಭಾವವೊಂದು ಅವಳ ಮುಖದಲ್ಲಿ ಹಾದುಹೋಯಿತು.
"ಹಳೆಯದನ್ನು ನಾನೆಂದೂ ನೆನಪಿಟ್ಟುಕೊಂಡಿಲ್ಲ ಕಿಶೋರ್. ಅಲ್ಲಿ ಜೀವ ಹಿಂಡುವ ಯಾತನೆಯ ಹೊರತು ನೆನಪಿನಲ್ಲಿಡುವಂಥ ಒಂದು ಅಣುವೂ ಇಲ್ಲ. ನನ್ನ ಕೊಲ್ಲುತ್ತಿರೋದು ನನ್ನ ಅತೀತದ ಮೇಲೆ ವರ್ತಮಾನದಲ್ಲಿ ಹರಡಿರುವ ತೆರೆ. ನಾನೆಷ್ಟು ಪ್ರಯತ್ನಿಸಿದರೂ ನನ್ನ ಇಂದಿನಿಂದ ನಿನ್ನೆಯ ನೆರಳನ್ನು ತೊಡೆಯಲಾಗದೆ ಸೋತಿದ್ದೇನೆ"
"ನವ್ಯಾ, ನಿನ್ನ ಅತೀತದಿಂದ ಬಹುದೂರ ಸಾಗಿದ್ದೀಯ. ಮತ್ತೆ ತಿರುಗಿ ನೋಡಬೇಡ. ಅದರಿಂದ ಸಿಗುವುದು ನೋವು ಮಾತ್ರ"
"ಕಿಶೋರ್, ನೀವು ಈ ಮದುವೆಗೆ ಮೊದಲೇ ಎಲ್ಲವನ್ನೂ ಮನೆಯಲ್ಲಿ ಹೇಳಿಬಿಡ್ಬೇಕಿತ್ತು. ಅವರಿಗೆಲ್ಲಾ ನನ್ನ ಮೇಲೆ ಇರೋ ನಂಬಿಕೆ ನನ್ನ ಮನಸ್ಸನ್ನ ಚುಚ್ಚಿ ಘಾಸಿಗೊಳಿಸುತ್ತೆ. ಎಲ್ಲರಿಗೂ ಮೋಸ ಮಾಡ್ತಿದ್ದೀನಿ ಅನ್ಸುತ್ತೆ"
"ನಾನು ಹೇಳುವ ಪ್ರಯತ್ನ ಮಾಡಿದ್ದೆ ನವ್ಯಾ. ಆದರೆ ಯಾಕೋ ಸಾಧ್ಯವೇ ಆಗ್ಲಿಲ್ಲ. ಹೇಳಿದ್ರೆ ಖಂಡಿತ ಈ ಮದ್ವೆ ಆಗ್ತಿರ್ಲಿಲ್ಲ"
"ಆಗ ಇಷ್ಟೆಲ್ಲಾ ಸಮಸ್ಯೆನೇ ಆಗ್ತಿರ್ಲಿಲ್ಲಾ. ಹೋಗಿ ಹೋಗಿ ನನ್ನಂಥವಳನ್ನು ಮದ್ವೆ ಆಗೋಂಥ ಹುಚ್ಚು ನಿಮಗ್ಯಾಕೆ ಬಂತೋ? "
"ನವ್ಯಾ, ಸಾಕ್ಮಾಡು. ಇನ್ನೊಂದು ಮಾತಾಡ್ಬೇಡ. ಪ್ರೀತಿ ಅನ್ನೋದು ಕುಲ ಗೋತ್ರ ಹಿನ್ನೆಲೆ ತಿಳಿದು ಹುಟ್ಟೋದಲ್ಲ. ಅದು ನದಿಯಂತೆ. ಒಂದುಕಡೆ ತಡೆ ಇದ್ರೆ ಪಥ ಬದಲಿಸಿ ಬೇರೆ ಹಾದಿಯಲ್ಲಿ ಹರಿಯುತ್ತೆ. ಮನುಷ್ಯ ಅದಕ್ಕೆ ಅಣೆಕಟ್ಟು ಕಟ್ಟಿ ಕ್ಷಣಕಾಲ ಹಿಡಿದಿಡಬಹುದೇ ಹೊರತು ಶಾಶ್ವತವಾಗಿ ಅದನ್ನು ಬಂಧಿಸೋಕಾಗೋಲ್ಲ. ಅದೇ ಪ್ರೀತಿಯ ರೀತಿ. ನಾನು ಯಾವುದೇ ಕಾರಣಕ್ಕೂ ನಿನ್ನ ಕಳ್ಕೊಳೋಕೆ ತಯಾರಿಲ್ಲ. ಸತ್ಯ ಗೊತ್ತಾದ್ರೂ, ಯಾರು ನಿನ್ನ ಜೊತೆ ಇದ್ರೂ ಇಲ್ದಿದ್ರೂ ನಾನು ಮಾತ್ರ ನನ್ನ ಕೊನೆ ಉಸಿರಿರೋ ತನಕ ನಿನ್ನ ಜೊತೆ ಇರ್ತೀನಿ. ಇದು ನನ್ನ ಪ್ರಾಮಿಸ್" ಒಂದೇ ಏಟಿಗೆ ಹೇಳಿ ಸುಮ್ಮನಾದ. ಅವಳೂ ಮೌನವಾಗಿ ಕೂತಳು. ಇಬ್ಬರ ನಡುವೆ ನೀರವತೆ ಬಿದ್ದುಕೊಂಡಿತು.
ಮೌನ ಅಸಹನೀಯವೆನಿಸಿದಾಗ ತಾನೇ ಮೌನ ಮುರಿಯುತ್ತಾ, "ನಿನ್ನ ನೋವು ಏನೂಂತ ನನಗೆ ಅರ್ಥ ಆಗುತ್ತೆ ನವ್ಯಾ. ಆಗಸದಲ್ಲಿ ಮೋಡ ತುಂಬಿದಾಗ ಕತ್ತಲು ಕವಿಯುತ್ತೆ. ಆದ್ರೆ ಆ ಕತ್ತಲೇ ಶಾಶ್ವತ ಅಲ್ಲ. ಒಮ್ಮೆ ಹನಿ ಒಡೆದು ಮಳೆ ಬಿದ್ದ ಮೇಲೆ ಮತ್ತೆ ಬೆಳಕು ಬಂದೇ ಬರುತ್ತೆ. ಕಾಯ್ಬೇಕು ಅಷ್ಟೇ. ನೀನೇನೂ ಯೋಚನೆ ಮಾಡಬೇಡ. ನಾಳೆನೇ ಇಬ್ರೂ ಸಮ್ಮು ಹತ್ರ ಮಾತಾಡಿ ಏನು ಮಾಡಬಹುದೋ ನೋಡೋಣ" ಭರವಸೆ ನೀಡಿದ.
"ಸರಿ ತುಂಬಾ ಹೊತ್ತಾಯ್ತ. ಮಲಗು ಇನ್ನು" ಎಂದು ಅವಳನ್ನು ಮಲಗಿಸಿ, ಹಲವು ಯೋಚನೆಗಳ ಭಂಡಾರವಾಗಿದ್ದ ತಲೆಯನ್ನು ಶಾಂತಗೊಳಿಸಿ ಮಲಗಲು ಪ್ರಯತ್ನಿಸಿದ.
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗ;
ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ,ತೊಳೆದೀತು ಒಳಗು ಹೊರಗ......
ಸೋದೆ ಮಳೆ ಮನದ ಒಳ ಹೊರಗನ್ನು ತೊಳೆಯುವುದೋ, ಇಲ್ಲಾ ಬಿರುಗಾಳಿಗೆ ಬಾಳೆ ನೌಕೆ ಮುಳುಗುವುದೋ????? ಕಾಲವೇ ಉತ್ತರಿಸಬೇಕು.......
ಮುಂದುವರೆಯುತ್ತದೆ
ಮಂಗಳವಾರ, ಜೂನ್ 2, 2020
ಯಯಾತಿ
ಸೋಮವಾರ, ಜೂನ್ 1, 2020
ಅನೂಹ್ಯ 3
"ಅದು...... ಅಪ್ಪಾ...., ಅವಳಿಗೆ ಯಾರೂ ಇಲ್ಲ. ಅವಳ ತಂದೆ-ತಾಯಿ ಆಕ್ಸಿಡೆಂಟ್ ಆಗಿ ತೀರಿಕೊಂಡಿದ್ದಾರೆ. ಅವಳು ಇಲ್ಲಿಯವಳಲ್ಲ. ಪಶ್ಚಿಮ ಬಂಗಾಳದವಳು. ಅವಳಪ್ಪ- ಅಮ್ಮ ಹೋದ್ಮೇಲೆ ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದಿದ್ದು. ಈಗ ಇಲ್ಲೇ ಇದ್ದಾಳೆ. ಇಲ್ಲಿನ ಭಾಷೆ, ರೀತಿ ರಿವಾಜು ಕಲ್ತಿದ್ದಾಳೆ" ಸತ್ಯ-ಸುಳ್ಳು ಎರಡೂ ಬೆರೆಸಿ ಹೇಳಿದವನು ತಾಯಿಯ ಕಡೆ ವಾರೆ ನೋಟ ಹರಿಸಿದ.
"ಬೇಡ ಕಣೋ ಕಿಶೋರ, ಇದು ನಂಗ್ಯಾಕೋ ಸರಿ ಕಾಣ್ತಿಲ್ಲ" ಬಿಕ್ಕುತ್ತಲೇ ನುಡಿದರು ಮಂಗಳಾ. ಅವರು ಬಳಿ ಬಂದು ಅವರ ಕೈ ಹಿಡಿದು, "ಅಮ್ಮಾ, ನವ್ಯಾ ತುಂಬಾ ಒಳ್ಳೆ ಹುಡುಗಿ. ನಿನ್ನ ಸ್ವಂತ ತಾಯಿ ಥರಾ ನೋಡ್ಕೊಳ್ತಾಳೆ. ತುಂಬಾ ಸರಳ ಮೃದು ಸ್ವಭಾವದವಳಮ್ಮ. ಖಂಡಿತ ಎಲ್ಲರಿಗೂ ಹೊಂದಿಕೊಂಡು ಹೊಗ್ತಾಳೆ. ಪ್ಲೀಸ್, ಒಪ್ಕೊ ಅಮ್ಮ" ಅಂದ.
"ಹೌದು ಮಂಗಳಾ, ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತ ಗಾದೆಯೇ ಇಲ್ವಾ. ನನ್ನ ಮಗ ಹಾಗೆಲ್ಲಾ ಯೋಚಿಸದೆ ಹೆಜ್ಜೆ ಇಡೋಲ್ಲ" ಅಂದ ಗಂಡನ ಮಾತು ಸರಿಯೆನಿಸಿತು ಅವರಿಗೂ. ಆದರೂ ಅಸಮಾಧಾನ ಇದ್ದೇ ಇತ್ತು.
"ಎಲ್ಲಾ ಸರಿ, ಅವಳು ಏನು ಕೆಲಸ ಮಾಡುತ್ತಿದ್ದಾಳೆ? ಇರೋದು ಎಲ್ಲಿ?" ಕೇಳಿದರು ಸತ್ಯನಾರಾಯಣ.
"ನವ್ಯಾ ನಮ್ಮ ಸಮ್ಮು ಕ್ಲೋಸ್ ಫ್ರೆಂಡ್. ಅವಳು ಕೆಲ್ಸ ಮಾಡೋ ಆಸ್ಪತ್ರೆಯಲ್ಲೇ ಅಕೌಂಟ್ ಸೆಕ್ಷನ್ನಲ್ಲಿ ಇದ್ದಾಳೆ. ಆಸ್ಪತ್ರೆ ಹತ್ರ ಒಂದ್ಕಡೆ ಪೇಯಿಂಗ್ ಗೆಸ್ಟ್ ಆಗಿದ್ದಾಳೆ"
ಸಮನ್ವಿತಾ ಫ್ರೆಂಡ್ ಅಂದ ಕೂಡಲೇ ಮಂಗಳಾ ಪೂರ್ತಿ ಮೆತ್ತಗಾದರು. ಸಮನ್ವಿತಾಳಂದರೆ ಆ ಮನೆಯಲ್ಲಿ ಎಲ್ಲರಿಗೂ ಅತೀವ ಅಕ್ಕರೆ. ಕಿಶೋರನಿಗೆ "ಆಶ್ರಯ" NGO ದಲ್ಲಿ ಅವಳ ಪರಿಚಯವಾಗಿತ್ತು. ಅವಳೂ ಅವನಂತೆ ಆಶ್ರಯದ ಸಕ್ರಿಯ ಕಾರ್ಯಕರ್ತೆ. ಶ್ರೀಮಂತ ಉದ್ಯಮಿ ಸತ್ಯಂ ರಾವ್ ರ ಏಕೈಕ ಸಂತಾನ. ವೃತ್ತಿಯಿಂದ ವೈದ್ಯೆ. ಓದಿದ್ದೆಲ್ಲಾ ವಿದೇಶದಲ್ಲಾದರೂ ವೃತ್ತಿಗೆ ತಾಯ್ನಾಡನ್ನೇ ಆಯ್ದುಕೊಂಡವಳು.
ಇಬ್ಬರ ಆಸಕ್ತಿ ಅಭಿರುಚಿ ಒಂದೇ ತೆರನಾಗಿ ಇದ್ದುದರಿಂದ ಆತ್ಮೀಯ ಸ್ನೇಹಿತರಾದರು. ವಾರಕ್ಕೊಮ್ಮೆ ಕಿಶೋರನ ಮನೆಗೆ ವಿಸಿಟ್ ಹಾಕುವುದು ಅವಳ ಅಭ್ಯಾಸ. ಅಷ್ಟು ಶ್ರೀಮಂತ ಮನೆತನವಾದರೂ ಸ್ವಲ್ಪವೂ ಬಿಂಕ ಬಿಗುಮಾನವಿಲ್ಲದ ಹುಡುಗಿ ಮಂಗಳಾಗೆ ಅಚ್ಚುಮೆಚ್ಚು. ಅವಳ ಮಾತೂ ಹಿತ ಮಿತ. ತಮ್ಮಿಬ್ಬರು ಮಕ್ಕಳಿಗಿಂತ ಅವರಿಗೆ ಸಮನ್ವಿತಾಳ ಮೇಲೆಯೇ ಒಂದು ಹಿಡಿ ಪ್ರೀತಿ ಜಾಸ್ತಿ ಎಂದರೆ ತಪ್ಪಲ್ಲ.
ಇಂತಿಪ್ಪ ಸಮನ್ವಿತಾಳ ಸ್ನೇಹಿತೆ ಅಂದ್ರೆ ಹುಡುಗಿ ಒಳ್ಳಯವಳೇ ಇರ್ಬೇಕು ಅಂದುಕೊಂಡವರ ಮನ ನಿರಾಳವಾಯಿತು. ತಾಯ್ತಂದೆಯರು ಇಲ್ಲವಾದರೇನು, ಬೇರೆ ಪ್ರದೇಶದವಳಾದರೇನು.... ಹುಡುಗಿಯ ಗುಣ ನಡತೆ ಉತ್ತಮವಾಗಿದ್ದು ನಮಗೆ ಹೊಂದಿಕೊಂಡರೆ ಸಾಕೆಂದು ನಿರ್ಧರಿಸಿಬಿಟ್ಟಿದ್ದರು.
ಮರುದಿನ ಕಿಶೋರ್ ಮತ್ತು ಸಮನ್ವಿತಾಳ ಜೊತೆಗೆ ಬಂದ ನವ್ಯಾಳನ್ನು ನೋಡಿ ಅವರ ಅಸಮಾಧಾನ ಹೇಳಹೆಸರಿಲ್ಲದಂತೆ ಮಾಯವಾಗಿತ್ತು. ಅವಳ ನಿಷ್ಕಲ್ಮಶ ಮುಖ, ಮೆದುಮಾತು ಅವರಿಗೆ ಹಿಡಿಸಿತ್ತು. ಆ ಕಣ್ಣಿನಾಳದಲ್ಲಿ ಅವ್ಯಕ್ತ ನೋವೊಂದು ಹೆಪ್ಪುಗಟ್ಟಿದಂತಿತ್ತು. ತಾಯ್ತಂದೆಯರನ್ನು ಕಳೆದುಕೊಂಡ ಆಘಾತಕ್ಕಿರಬಹುದೆಂದು ಊಹಿಸಿದ್ದರು. ಮೃದುವಾಗಿ ತಲೆ ಸವರಿದ್ದರು.
"ಅಮ್ಮ, ನನಗೆ ಫ್ರೆಂಡ್ಸ್ ಅಂತ ಇರೋದು ಇವರಿಬ್ರೇ. ನವ್ಯಾ ಖಂಡಿತ ಈ ಮನೆಗೆ ಒಳ್ಳೇ ಸೊಸೆ ಆಗ್ತಾಳೆ. ನನ್ನ ಮಾತಿನ ಮೇಲೆ ನಂಬಿಕೆ ಇಡಿ" ಸಮನ್ವಿತಾ ಅವರ ಕೈ ಹಿಡಿದು ಹೇಳಿದ್ದಳು.
ಅದೇ ತಿಂಗಳಿನಲ್ಲಿ ಸರಳವಾಗಿ ಕಿಶೋರ-ನವ್ಯಾ ವಿವಾಹ ನೆರವೇರಿತು. ಕಿಶೋರನ ಮನದನ್ನೆಯಾಗಿ, ಮಂಗಳಾ- ಸತ್ಯನಾರಾಯಣ ಅವರ ಮುದ್ದಿನ ಸೊಸೆಯಾಗಿ, ಕಾರ್ತಿಕ್ ನ ಅಕ್ಕರೆಯ ಅತ್ತಿಗೆಯಾಗಿ ಆ ಮನೆ ಹೊಕ್ಕಿದ್ದಳು ನವ್ಯಾ.
ಅಂದಿನಿಂದ ಅವಳಿಲ್ಲದೆ ಆ ಮನೆಯಲ್ಲಿ ಯಾವ ಕೆಲಸವೂ ಆಗದು ಅನ್ನುವಷ್ಟು ಆವರಿಸಿಕೊಂಡಳು. ಅವಳ ಮೆಲು ಮಾತು, ಹಿರಿಯರ ಬಗೆಗಿನ ಕಾಳಜಿ ಮಂಗಳಾರಿಗೆ ಬಲು ಹಿಡಿಸಿತ್ತು. 'ಯಾವ ಪುಣ್ಯಾತ್ಗಿತ್ತೀ ಹೆತ್ತ ಮಗಳೋ, ಮಹಾಲಕ್ಷ್ಮೀ ಥರಾ ನಮ್ಮನೆಗೆ ಬಂದಿದ್ದಾಳೆ. ನಾವು ಜನ್ಮ ಪೂರ್ತಿ ಹುಡುಕಿದರೂ ಇಂಥ ಸೊಸೆ ಸಿಗ್ತಿರ್ಲಿಲ್ಲ. ಕಿಶೋರ ಪುಣ್ಯ ಮಾಡಿದ್ದ' ಅಂತ ದೇವರಿಗೆ ಕೈ ಮುಗಿಯತ್ತಿದ್ದರು.
ಕಾರ್ತಿಕ್ ಗಂತೂ ಅತ್ತಿಗೆ ಎಂದರೆ ಅಚ್ಚುಮೆಚ್ಚು. ಅಪ್ಪ ಅಮ್ಮನೊಂದಿಗೆ ಹರಟಲು ಅವನಿಂದಾಗದು. ಇನ್ನು ಇಡೀ ಮನೆಯಲ್ಲಿ ಅವನು ಹೆದರೋದು ಕಿಶೋರನಿಗೆ. ಅವನ ಬಳಿ ಸಲಿಗೆ ಕಡಿಮೆ. ಹಾಗಾಗಿ ನವ್ಯಾಳೆ ಅವನಿಗೆ ವಾಕಿಂಗ್ ನಿಂದ ಹಿಡಿದು ಹರಟೆ ಹೊಡೆಯುವ ತನಕ ಜೊತೆಗಾತಿ.
********************
ವಾಕಿಂಗ್ ಮುಗಿಸಿ ನವ್ಯಾ, ಕಾರ್ತಿಕ್ ಮನೆಗೆ ಹಿಂದಿರುಗಿದಾಗ ಕತ್ತಲಾಗಿತ್ತು. ಮಂಗಳಾ ಅಡುಗೆ ಕೆಲಸದಲ್ಲಿ ಇದ್ದದ್ದು ಕಂಡು ನವ್ಯಾ ಅತ್ತ ಕಡೆ ಹೋದಳು. ರೂಮಿಗೆ ಹೂರಟ ಕಾರ್ತಿಕ್ ನ ಹಾಲ್ ನಲ್ಲಿದ್ದ ಕಿಶೋರ ಕರೆದು ಪಕ್ಕದಲ್ಲಿ ಕೂರಿಸಿಕೊಂಡ.
"ಹೇಗೆ ನಡಿತಿದೆ ಕಾಲೇಜು? ನೀನು ಓದಿನ ಕಡೆ ಗಮನ ಕೊಡ್ತಾ ಇಲ್ಲಾ ಅಂತ ಅಮ್ಮ ಅಂತಿದ್ರು" ಎಂದು ಕೇಳಿದ.
"ಹಾಗೇನೂ ಇಲ್ಲ ಅಣ್ಣ. ಮುಂದಿನ ವಾರ ಕಾಲೇಜ್ ಡೇ. ಅದ್ರ ಪ್ರಾಕ್ಟೀಸ್ ನಡೀತಿದೆ. ಹಾಗಾಗಿ ಕ್ಲಾಸ್ ಇರೋಲ್ಲ ಅಷ್ಟೇ" ಎಂದ ಮನದಲ್ಲೇ ಅಮ್ಮನಿಗೆ ಬೈಯುತ್ತಾ.
"ನೋಡು ಕಾರ್ತಿ, ಈ ವಯಸ್ಸಲ್ಲಿ ಸುತ್ತಾಟ, ಹುಡುಗಾಟದಲ್ಲಿ ಆಸಕ್ತಿ ಜಾಸ್ತಿ ಇರೋದು ಸಹಜ. ಆದರೆ ಎಲ್ಲವೂ ಒಂದು ಮಿತಿಯಲ್ಲೇ ಇರಲಿ. ಓದಿನ ಬಗ್ಗೆ ಹೆಚ್ಚಿನ ಗಮನ ಇರಲಿ" ಅಂದಾಗ ತಲೆ ತಗ್ಗಿಸಿದ.
"ಸರಿಯಾಗಿ ಕೇಳು ಅವನನ್ನು.ನಾನು ಕೇಳಿದ್ರೆ ನಿಂಗಿದೆಲ್ಲ ಅರ್ಥ ಆಗೋಲ್ಲ ಸುಮ್ನಿರು ಅಂತ ಬಾಯಿ ಮುಚ್ಸ್ತಾನೆ" ಸಾರಿನ ಪಾತ್ರೆಯನ್ನು ಡೈನಿಂಗ್ ಟೇಬಲ್ ಮೇಲೆ ಇಡುತ್ತಾ ಗೊಣಗಿದರು ಮಂಗಳಾ.
"ಮಾತೃಶ್ರೀ ಮಂಗಳಮ್ಮನೋರೇ, ಅದನ್ನು generation gap ಅಂತಾರೆ" ಕಾರ್ತಿಕ್ ನಾಟಕೀಯವಾಗಿ ಹೇಳಿದ.
"ನೀನೋ, ನಿನ್ನ ಇಂಗ್ಲೀಷೋ, ನನಿಗೆ ಒಂದೂ ಅರ್ಥ ಆಗಲ್ಲಪ್ಪ"
"ನಿನಗೆ ತುಂಬಾ ವಯಸ್ಸಾಗಿದೆ, ಓಲ್ಡ್ ಮಾಡೆಲ್, ಶಿಲಾಯುಗದ ಕಾಲದೋಳು ಅಂತ ನಿನ್ ಮಗ ಹೇಳ್ತಿದ್ದಾನೆ ಕಣೇ" ಸತ್ಯನಾರಾಯಣ ಕಾಲೆಳೆದಾಗ ಎಲ್ಲರೂ ನಕ್ಕರು.
"ನೀವೊಬ್ರು ಬಾಕಿ ಇದ್ರಿ ಇವನ ಕಪಿಸೇನೆಲಿ" ನಸುಮುನಿದವರು "ಈ ಮನೆಗೊಂದು ಪುಟ್ಟ ಕಂದ ಬಂದು ನಾನು ಅಜ್ಜಿ ಆಗೋವರೆಗೂ ನನಿಗೆ ವಯಸ್ಸಾಗಿದೆ ಅಂತ ನಾನು ಒಪ್ಪಿಕೊಳ್ಳೊಲ್ಲ" ಅಂದವರ ಮಾತನ್ನು ಸತ್ಯನಾರಾಯಣ, ಕಾರ್ತಿಕ್ ಅನುಮೋದಿಸಿದರು.
"ಸರಿ ಸರಿ, ಮಾತು ಜಾಸ್ತಿ ಆಯ್ತು. ಎಲ್ಲಾ ಊಟಕ್ಕೇಳಿ" ಮಂಗಳಾ ಅಂದಾಗ ಸತ್ಯನಾರಾಯಣ, ಕಾರ್ತಿಕ್ ಎದ್ದರು.
ಕಿಶೋರ್ ಮೆಲ್ಲನೆ ಮಡದಿಯತ್ತ ನೋಟ ಹರಿಸಿದ. ಕೃತಕ ನಗು ಮೊಗದಲ್ಲಿ ಹರಡಿ ನಿಂತಿದ್ದವಳ ಮನದ ಭಾವನೆಗಳನ್ನು ಅಳೆಯಲಾಗಲಿಲ್ಲ ಅವನಿಗೆ.
ಮುಂದುವರೆಯುವುದು