ಸೋಮವಾರ, ಜೂನ್ 22, 2020

ಅನೂಹ್ಯ 13

ಯಾಂತ್ರಿಕವಾಗಿ ಕಾರು ಚಲಾಯಿಸುತ್ತಿದ್ದರೂ ನನ್ನ ತಲೆತುಂಬಾ ಯೋಚನೆಗಳು ಕಾರಿಗಿಂತ ವೇಗವಾಗಿ ಓಡುತ್ತಿದ್ದವು. ಕಿಶೋರನ ಪ್ರಸ್ತಾಪಕ್ಕೆ ನವ್ಯಾ ಹೇಗೆ ಪ್ರತಿಕ್ರಿಯಿಸಬಹುದು? ಅವಳ ಹಿನ್ನೆಲೆ ತಿಳಿದ ಮೇಲೆ ಇವನು ಅವಳನ್ನು ಒಪ್ಪಬಹುದೇ? ಇದೇ ಎರಡು ಪ್ರಶ್ನೆಗಳು ಕಣ್ಮುಂದೆ ಬೃಹದಾಕಾರವಾಗಿ ಕುಣಿಯುತ್ತಿದ್ದವು. ಆದರೆ ಇದ್ಯಾವುದರ ಪರಿವೆ ಇಲ್ಲದೆ ಅವನು ನಿರಾಳನಾಗಿದ್ದ.

ನವ್ಯಾಳ ರೂಮಿನ ಬಳಿ ಕಾರು ನಿಲ್ಲಿಸಿದಾಗ ಅವನೇ ಮೊದಲು ಇಳಿದ. ನಾನು ನಿಧಾನವಾಗಿ ಇಳಿದು ರೂಮಿನತ್ತ ಹೊರಟವಳು ತಟ್ಟನೇ ನಿಂತು,

"ಕಿಶೋರ್, ಅದೇನೇ ಆದ್ರೂ ನಾನು ನವ್ಯಾನ ಯಾವ ವಿಚಾರದಲ್ಲೂ ಒತ್ತಾಯ ಮಾಡೋಲ್ಲ. ಅವಳ ನಿರ್ಧಾರ ಏನೇ ಆಗಿದ್ರು ನಾನು ಅದನ್ನು ಗೌರವಿಸ್ತೀನಿ. ಹಾಗಾಗಿ ಅವ್ಳು ನಿನ್ನ ಪ್ರಸ್ತಾಪನ ನಿರಾಕರಿಸಿದ್ರೆ ನಾನು ಒತ್ತಾಯ ಮಾಡಿ ಅವ್ಳನ್ನ ಒಪ್ಸೋಲ್ಲ ಅನ್ನೋ ಮಾತು ಯಾವತ್ತೂ ನೆನಪಿರಲಿ." ಅಂದಾಗ ಸರಿಯೆಂದು ತಲೆಯಾಡಿಸಿ ನನ್ನ ಹಿಂಬಾಲಿಸಿದ.

ಕರೆಗಂಟೆಯ ಸದ್ದಿಗೆ ಬಾಗಿಲು ತೆರೆದವಳು "ಎಲ್ಲೇ ಹೋಗಿದ್ದೆ? ಆಸ್ಪತ್ರೆ ಎಲ್ಲಾ ಹುಡ್ಕಿದೆ ಗೊತ್ತಾ. ಒಂದು ಫೋನ್ ಮಾಡೋದಲ್ವಾ? ಇವತ್ತು ಮನೆಗೆ ಹೋಗ್ತೀನಿ ಅಂದಿದ್ದೆ. ಇಷ್ಟೊತ್ತಿಗೆ ಬಂದ್...." ಇನ್ನೇನೋ ಹೇಳಲಿದ್ದವಳು ಕಿಶೋರ್ ಕಂಡೊಡನೆ ಮಾತು ನಿಲ್ಲಿಸಿದಳು.

"ನಿನ್ಹತ್ರ ತುಂಬಾ ಮುಖ್ಯವಾದ ವಿಷಯ ಮಾತಾಡ್ಲಿಕ್ಕಿದೆ. ಅದಕ್ಕೆ ಬಂದೆ. ಒಳಗೆ ಕೂತು ಮಾತಾಡೋಣ. ಬಾ ಕಿಶೋರ್ ಒಳಗೆ" ನವ್ಯಾ ಸರಿದಾಗ ಅವನೊಂದಿಗೆ ಒಳ ನಡೆದೆ. ಅವಳಿಗೆ ವಿಪರೀತ ಅಚ್ಚರಿಯಾಗಿತ್ತು ಕಿಶೋರನ ಆಗಮನದಿಂದ. ಅದು ಅವಳ ಕಣ್ಣುಗಳಲ್ಲಿ ಸ್ಪಷ್ಟವಾಗಿತ್ತು. ಕಾಫೀ ತರುತ್ತೇನೆಂದಾಗ ಇಬ್ಬರೂ ಬೇಡವೆಂದವು.

ಪ್ರಾಯಶಃ ನಮ್ಮಿಬ್ಬರಿಗೂ ಏನೋ ವಿಚಾರ ಮಾತನಾಡಲಿದೆ ಎಂದುಕೊಂಡಳೇನೋ "ಸರಿ ನೀವಿಬ್ಬರೂ ಮಾತಾಡಿ, ನಾನು ಒಳಗಿರುತ್ತೇನೆ"  ಎಂದು ಹೊರಡಲನುವಾದಳು. ನಾನು ಏನು ಹೇಳುವುದೆಂದು ಯೋಚಿಸುವ ಮೊದಲೇ ಅವನು, "ನಿಂತ್ಕೊಳ್ಳಿ ನವ್ಯಾ, ನಾವು ನಿಮ್ಹತ್ರನೇ ಮಾತಾಡೋಕೆ ಬಂದಿರೋದು" ಅಂದುಬಿಟ್ಟಿದ್ದ.

ಅವಳು ಕಕ್ಕಾಬಿಕ್ಕಿಯಾಗಿ ನನ್ನತ್ತ ನೋಡಿದಳು. 

"ನನ್ಹತ್ರನಾ? ನನ್ಹತ್ರ ಮಾತಾಡೋ ವಿಚಾರ ಏನಿದೆ?" ಗೊಂದಲದಲ್ಲಿ ಕೇಳಿದಳು.

"ನಿಮ್ಗೆ ಸಂಬಂಧಿಸಿದ ವಿಚಾರ ನಿಮ್ಹತ್ರನೇ ಮಾತಾಡ್ಬೇಕಲ್ವಾ? ನಾನು ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಮಾತಾಡಲು ಪ್ರಯತ್ನಿಸಿ ಸೋತು ಮನೆಯಲ್ಲೇ ಮಾತಾಡೋಣ ಅಂತ ಇಲ್ಲಿಗೆ ಬಂದೆ" ಅವನಂದಾಗ,

"ನಾನು ನಿಮ್ಮನ್ನು ಮೂರ್ನಾಲ್ಕು ಸರ್ತಿ ಆಸ್ಪತ್ರೆಲಿ ನೋಡಿದ್ದು. ಹೇಳಿಕೊಳ್ಳುವಂತ ಆತ್ಮೀಯತೆ, ಪರಿಚಯ, ಸ್ನೇಹ ನಮ್ಮ ಮಧ್ಯೆ ಇಲ್ಲ. ಇಂಥದ್ರಲ್ಲಿ ನನ್ನ ಹತ್ರ, ಅದೂ ಮನೆಗೆ ಬಂದು ಮಾತಾಡುವಂತ ವಿಷಯ ನಿಮ್ಗೇನಿದೆ?" ಕೇಳಿದಳು ಕಸಿವಿಸಿಯಿಂದ.

ಇನ್ನು ಹೀಗೇ ಬಿಟ್ಟರೆ ಸರಿಹೋಗದೆನಿಸಿ ನಾನೇ ಮಧ್ಯಪ್ರವೇಶಿಸಿ, "ಒಂದ್ನಿಮಿಷ ಇಬ್ರೂ ಸುಮ್ನಿರಿ. ನವ್ಯಾ ಬಾ ಕೂತ್ಕೋ ಇಲ್ಲಿ" ಅವಳ ಕೈ ಹಿಡಿದು ಕೂರಿಸಿ, "ಕಿಶೋರ್ ಗೆ ಮಾತಾಡೋಕೆ ಬಿಡು.ಅವ್ನು ಏನ್ ಹೇಳ್ತಾನೆ ಅಂತ ಪೂರ್ತಿ ಕೇಳು. ಆಮೇಲೆ ನಿನ್ಗೇನ್ ಅನ್ಸುತ್ತೋ ಹೇಳು" ಸಲಹೆ ಕೊಟ್ಟೆನಾದರೂ ಅವನ ಪ್ರಸ್ತಾಪ ಕೇಳಿದೊಡನೆಯೇ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಾಳೆಂದು ನನಗೆ ಗೊತ್ತಿತ್ತು.

"ಸರಿ ಅದೇನೋ ಹೇಳಿ" ಕೇಳಿದಳು ಸಮಾಧಾನದಿಂದ.

ಅವನು ಅರೆ ಘಳಿಗೆ ಮೌನವಾಗಿದ್ದ. ಎಲ್ಲಿಂದ ಮಾತು ಆರಂಭಿಸಬೇಕು,ಹೇಗೆ ಹೇಳಬೇಕೆಂದು ಪೂರ್ವ ತಯಾರಿ ನಡೆಸಿದ್ದಂತೆ ಕಾಣಿಸಿತು. ಅವಳು ಶಾಂತವಾಗಿದ್ದಂತೆ ಕಂಡರೂ ಮನ ಗೊಂದಲದ ಗೂಡಾಗಿತ್ತು.

ಇದ್ದಕ್ಕಿದ್ದಂತೆ ಅವಳೆದುರು ಕೂತು, "ನವ್ಯಾ, ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಸ್ತೀನಿ. ಕಣ್ಣ್ರೆಪ್ಪೆ ತರ ಜೋಪಾನ ಮಾಡ್ತೀನಿ. ನನ್ನ ಮದ್ವೆ ಮಾಡ್ಕೋತೀಯ? ತುಂಬಾ ಯೋಚ್ಸಿ ತಗೊಂಡಿರೋ ನಿರ್ಧಾರ. ನನ್ನಲ್ಲಿ ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಪ್ಲೀಸ್ ಆಗೋಲ್ಲ ಅಂತ ಮಾತ್ರಾ ಹೇಳ್ಬೇಡ." ಅವಳ ಕೈಗಳನ್ನು ಹಿಡಿದು ಬಿನ್ನವಿಸಿದ್ದ.

ಇದನ್ನು ಅವಳೆಂದೂ ನಿರೀಕ್ಷಿಸಿರಲಿಲ್ಲ. ಅವಳಿಗೊಂದು ರೀತಿ ಆಘಾತವಾಗಿತ್ತು. "ನವ್ಯಾ ಮಾತಾಡಮ್ಮ" ಎಂಬ ಅವನ ಕರೆಗೆ ಎಚ್ಚೆತ್ತವಳು ತನ್ನ ಕೈ ಅವನ ಹಿಡಿತದಲ್ಲಿರುವುದನ್ನು ನೋಡಿ ಕೆಂಡ ಸೋಕಿದವಳಂತೆ ತಟ್ಟನೆ ಕೈ ಹಿಂತೆಗೆದುಕೊಂಡವಳು, " ನೋಡಿ, ನನಗೆ ತಿಳಿದ ಮಟ್ಟಿಗೆ ನಿಮ್ಮ ಮನಸ್ಸಲ್ಲಿ ಈ ರೀತಿ ಭಾವನೆಗಳು ಹುಟ್ಟೋ ತರ ನಾನ್ಯಾವತ್ತೂ ನಡ್ಕೊಂಡಿಲ್ಲ. ಹಾಗೊಂದು ವೇಳೆ ತಿಳಿದೇ ನನ್ನಿಂದ ಏನಾದ್ರೂ ಅಂಥ ತಪ್ಪಾಗಿದ್ರೆ ದಯವಿಟ್ಟು ಕ್ಷಮಿಸಿ. ಆದರೆ ನಿಮ್ಮ ಪ್ರಸ್ತಾಪಕ್ಕೆ ನನ್ನ ನೇರವಾದ ನಿರಾಕರಣೆ ಇದೆ. ಇದು ಯಾವತ್ತಿಗೂ ಸಾಧ್ಯವಿಲ್ಲ. ಕ್ಷಮಿಸಿ"  ಅಲ್ಲಿಂದ ಎದ್ದು ಹೋಗಲು ತವಕಿಸಿದಳು.

ಆದರೆ ಅವನು ಶತಾಯಗತಾಯ ಅವಳನ್ನು ಒಪ್ಪಿಸಿಯೇ ತೀರಬೇಕೆಂದು ನಿರ್ಧರಿಸಿಬಿಟ್ಟಿದ್ದ. ಅವಳನ್ನು ತಡೆದು,

"ಯಾಕೆ ಸಾಧ್ಯವಿಲ್ಲ? ಬೇರೆ ಯಾರನ್ನಾದರೂ ಇಷ್ಟಪಟ್ಟಿದ್ದೀಯಾ?" ಕೇಳಿದ.

"ಆಗೋಲ್ಲ ಅಂದ್ರೆ ಆಗೋಲ್ಲ ಅಷ್ಟೇ. ನನ್ನ ಪಾಡಿಗೆ ನನ್ನ ಬಿಡಿ" ಕೈ ಮುಗಿದಳು.

"ಸಾಧ್ಯವಿಲ್ಲ ಅಂದ್ರೆ ಯಾಕೆ ಅಂತ ಅದಕ್ಕೊಂದು ಗಟ್ಟಿಯಾದ ಸ್ಪಷ್ಟ ಕಾರಣಕೊಡು. ಆಗ ನೋಡೋಣ." ಅವನ ಮಾತಿನ ವರಸೆಗೆ ಅವಳು ಗಲಿಬಿಲಿಗೊಂಡಳು. "ನನ್ನ ಮದ್ವೆಯಾಗೋಕೆ ಏನು ಸಮಸ್ಯೆ ಅಂತ ಹೇಳು ಸಾಕು. ಆಮೇಲೆ ನಾನು ಒತ್ತಾಯ ಮಾಡೋಲ್ಲ" ಮತ್ತೆ ಕೇಳಿದ್ದ.

ಅವನ ಪ್ರಶ್ನೆಗೆ ಹೇಗೆ ಉತ್ತರಿಸಬೇಕೋ ತಿಳಿಯದೇ ಅವಳು ನನ್ನತ್ತ ನೋಟಹರಿಸಿದಳು. ಅವಳ ಈಗಿನ ಮನೋವಿಪ್ಲವ ನನ್ನಷ್ಟು ಚೆನ್ನಾಗಿ ಬಲ್ಲವರಾರು? 

"ಅವಳು ಸಾಧ್ಯವಿಲ್ಲ ಅನ್ನೋಕೆ ಕಾರಣ ಕೊಡೋಕೆ ಮುಂಚೆ ನೀನು ಅವಳನ್ನೇ ಮದ್ವೆ ಆಗ್ಬೇಕಂತ ಹಠ ಹಿಡಿಯೋಕೆ ಕಾರಣ?" ಅವಳ ಪರವಾಗಿ ನಾನೇ ಕೇಳಿದ್ದೆ.

"ಗೆಳತಿಗೋಸ್ಕರ ಗೆಳೆಯನಿಗೇ ಪಾಟಿಸವಾಲು" ಅವನು ನಸುನಕ್ಕ. "ಕಾರಣ ಕೊಡಲಾರೆ ಸಮನ್ವಿತಾ. ಹಾಗೊಂದು ವೇಳೆ ಕೊಟ್ಟರೆ ಆ ನವಿರಾದ ಭಾವಕ್ಕೆ ಚ್ಯುತಿಯಾದೀತು. ಕೆಲವು ಭಾವಗಳೇ ಹಾಗೆ…. ವಿವರಣೆಗೆ ನಿಲುಕದವು..... ಪ್ರೀತಿಯೂ ಅಂಥದೇ ನವಿರಾದ ಎಳೆಗಳ ಕುಸುರಿ...... ಆ ಕುಸುರಿಯ ಕಸೂತಿ ಯಾವ ಘಳಿಗೆಯಲ್ಲಿ, ಯಾರ ಬದುಕಿನ ಪತ್ತಲದಲ್ಲಿ ಚಿತ್ತಾರ ಮೂಡಿಸುವುದೋ ಬಲ್ಲವರಾರು? ಅದೊಂದು ದಿವ್ಯ ಅನುಭೂತಿಯಷ್ಟೇ....... ಅದಕ್ಕೆ ಎಂದಿಗೂ ಕಾರಣ ಕೊಡಲಾಗದು. ನಿನ್ನ ಗೆಳತಿಯೊಂದಿಗಿನ ನನ್ನ ಪರಿಚಯ ಅತ್ಯಲ್ಪವಾದರೂ ಆ ಅಲ್ಪದಲ್ಲೇ ಅಗಾಧ ಪ್ರೇಮದ ಅಮೃತವಾಹಿನಿಯೊಂದು ಸುಪ್ತವಾಗಿ ಹರಿದಿರುವುದರ ಮರ್ಮ ನನಗೂ ತಿಳಿಯದು. ಆದರೆ ಈ ಸೆಲೆ ಎಂದೂ ಬರಡಾಗದು. ಮೇಲ್ಮುಖಕ್ಕೆ ಗೋಚರವಾಗದಿದ್ದರೂ ಅಂತರಾಳದಲ್ಲಿ ಗುಪ್ತಗಾಮಿನಿಯಾಗಿ ನನ್ನಿಡೀ ಜೀವಕ್ಕೆ ಚೈತನ್ಯ ತುಂಬುವುದು ಅವಳೇ ಎಂಬುದು ನನಗೀಗ ಸ್ಪಷ್ಟ." 

ಅವನ ಮಾತಿನ ಲಹರಿಗೆ ನಾನು ನಿರುತ್ತರಳಾದೆ. ಅವು ಕೇವಲ ಮೇಲ್ನೋಟದ ಮಾತುಗಳಲ್ಲ. ಬಹಳ ಚಿಂತಿಸಿ ಮಥಿಸಿದ ನಿರ್ಧಾರಗಳೆನಿಸಿತು. ಅದಲ್ಲದೇ ಕಿಶೋರನನ್ನು ನನ್ನಷ್ಟು ಬಲ್ಲವರಾರು? ಅವನೆಂದೂ ಸುಳ್ಳಾಡಲಾರ. ಆದರೆ ಅವನ ಅರಿವಿಗೆ ಬಾರದ ಅತೀತವೆಂಬ ಕಟುಸತ್ಯವೊಂದು ಅವಳ ಬೆನ್ನು ಹತ್ತಿದ ಬೇತಾಳದಂತೆ ಹೀಗೇಕೆ ಕಾಡುತ್ತಿದೆ? ಹೇಳಿ ಬಿಡಲೇ ಅವನಿಗೆಲ್ಲ?

"ಏನ್ರೀ? ತಲೆ ಕೆಟ್ಟಿದ್ಯಾ? ಏನು ಹೇಳ್ತಿದ್ದೀರಿ ಅನ್ನೋ ಪ್ರಜ್ಞೆ ಇದ್ಯಾ ನಿಮಗೆ?" ನನ್ನ  ಯೋಚನೆಗಳ ಸರಪಳಿ ತುಂಡರಿಸುವಂತೆ ಕೋಪದಲ್ಲಿ ಕೇಳಿದ್ದಳು ನವ್ಯಾ.

"ನನ್ಗೆ ಹುಚ್ಚೂ ಹಿಡ್ದಿಲ್ಲ, ತಲೆಯೂ ಕೆಟ್ಟಿಲ್ಲ. ಬಹಳ‌ ಯೋಚಿಸಿಯೇ ಹೇಳ್ತಿದ್ದೀನಿ. ನಾನು ನಿನ್ನ ತುಂಬಾ ಪ್ರೀತಿಸ್ತೀನಿ. ಯಾವುದೇ ಕಾರಣಕ್ಕೂ ನಿನ್ನ ಕಳ್ಕೊಳೋಕೆ ನಾನು ತಯಾರಿಲ್ಲ."

"ನನ್ನ ಬಗ್ಗೆ ಏನ್ರೀ ಗೊತ್ತು ನಿಮ್ಗೆ? ನಾನು ಯಾರು? ಹಿಂದೆ ಏನಾಗಿದ್ದೆ? ಏನು ಗೊತ್ತು? ಏನು ತಿಳಿದಿದೆ ನಿಮ್ಗೆ ನನ್ನ ಬಗ್ಗೆ?" ಕಂಪಿಸುವ ಧ್ವನಿಯಲ್ಲಿ ತಲೆ ಹಿಡಿದುಕೊಂಡು ಚೀರಿದ್ದಳು ಹುಚ್ಚಿಯಂತೆ. 

ನಾನು ಬೆಚ್ಚಿ ಅವಳನ್ನು ಸಮಾಧಾನಿಸುತ್ತಾ, "ಕಿಶೋರ್, ನಾನಾಗ್ಲೇ ಹೇಳಿದ್ದೆ. ಅವಳ ನಿರ್ಧಾರವೇ ಅಂತಿಮ. ನಾನು ಒತ್ತಾಯ ಮಾಡೋಲ್ಲ ಅಂತ. ಅವಳಿಗೆ ಇಷ್ಟ ಇಲ್ಲ ಅಂತ ಆಯ್ತಲ್ಲಾ. ಪ್ಲೀಸ್ ನೀನು ಹೊರಟ್ಬಿಡು." ಹೇಳಿದೆ.

ಅವನು ಹೊರಡಲಿಲ್ಲ. ಬದಲಾಗಿ ಅವಳೆದುರು ಕುಳಿತು ಮೆಲ್ಲಗೆ ಮುಂದಲೆ ಸವರಿ, "ನನ್ಗೆ ನಿನ್ನ ಬಗ್ಗೆ ಎಲ್ಲವೂ ಗೊತ್ತು. ನೀನು ಎಲ್ಲಿದ್ದೆ, ಇವ್ಳು ನಿನ್ನ ಎಲ್ಲಿಂದ ಕರ್ಕೊಂಡು ಬಂದ್ಲು, ನೀನ್ಯಾಕೆ ಇಷ್ಟು ಮೌನವಾಗಿರುತ್ತೀ, ಎಲ್ಲವೂ‌ ಗೊತ್ತು ನವ್ಯಾ...." 

ಮಗುವನ್ನು ಸಾಂತ್ವನಿಸಿ ರಮಿಸುವ ತಾಯಿಯಂತೆ ಅವನು ಹೇಳುತ್ತಿದ್ದರೆ ನನಗೆ ಪ್ರಪಂಚವೇ ನನ್ನ ಸುತ್ತ ತಿರುಗುತ್ತಿರುವಂತೆ ಭಾಸವಾಯಿತು. ಅವಳೋ ಬಿಕ್ಕುವುದನ್ನು ಮರೆತು ಎವೆಯಿಕ್ಕದೆ ಅವನ್ನನ್ನೇ ನೋಡುತ್ತಿದ್ದಳು....

ನಾನು ಗೊಂದಲದಲ್ಲಿ ಬಿದ್ದಿದ್ದೆ. ನಾನಂತೂ ಹೇಳಿಲ್ಲ. ಅವಳು ಹೇಳಿಕೊಳ್ಳುವ ಪ್ರಮೇಯವೇ ಇಲ್ಲ. ಮತ್ತೆ ಹೇಗೆ ತಿಳಿಯಿತು ಇವನಿಗೆ?

"ನಿನ್ಗೆ.... ನಿನ್ಗೆ ಹೇಗೆ ಗೊತ್ತಾಯ್ತು? ಯಾರು ಹೇಳಿದ್ರು?" ಗೊಂದಲ ಪರಿಹರಿಸಿಕೊಳ್ಳಲು ಕೇಳಿದ್ದೆ.

"ಯಾರೋ ಯಾಕೆ ಹೇಳ್ಬೇಕು? ನಾನೂ ಆಶ್ರಯದಲ್ಲಿ ಇದ್ದೀನಿ ಅನ್ನೋದನ್ನ ಮರ್ತುಬಿಟ್ಯಾ? ನವ್ಯಾ ಅಲ್ಲಿಗೆ ಬಂದ ದಿನದಿಂದಲೇ ನನಗೆಲ್ಲಾ ತಿಳಿದಿತ್ತು ಸಮಾ. ಸಾಮಾನ್ಯವಾಗಿ ಯಾರೊಂದಿಗೂ ಬೆರೆಯದ ನೀನು ವೈಯಕ್ತಿಕವಾಗಿ ಅಷ್ಟೊಂದು ಆಸಕ್ತಿವಹಿಸಿ ಬಿಡಿಸಿಕೊಂಡಾಕೆಯ ವ್ಯಕ್ತಿತ್ವ ಹೇಗಿರಬಹುದೆಂಬ ಅನ್ನೋ ಕುತೂಹಲ ಬಹಳವಿತ್ತು. ಆ ಕುತೂಹಲದಿಂದಲೇ ಅವಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ್ದು. ಅದ್ಯಾವಾಗ ಒಲುಮೆ ಒಡಮೂಡಿತೋ ತಿಳಿಯದು" ಸರಳವಾಗಿ ಹೇಳಿದ್ದ.

ಛೇ...ನನ್ನ ಬುದ್ಧಿಗಿಷ್ಟು! ಅವನು ನನ್ನಂತೆ ಆಶ್ರಯದ ಒಡನಾಡಿ ಎನ್ನುವುದೇ ಮರೆತೆ. ಅಂದರೆ..… ಇವನಿಗೆಲ್ಲಾ ತಿಳಿದಿದೆ.

"ಅವಳ ಬಗ್ಗೆ ಎಲ್ಲಾ ತಿಳಿದೂ....." ನಾನು ತಡವರಿಸಿದಾಗ,

"ಯಾಕೆ ನಿಲ್ಲಿಸ್ದೆ? ಮದ್ವೆಯಾಗುವ ನಿರ್ಧಾರ ಮಾಡಿದೀಯಾ ಅಂತ ತಾನೇ ನಿನ್ನ ಪ್ರಶ್ನೆ?" ಅವನೇ ಮಾತು ಪೂರ್ತಿ ಮಾಡಿದಾಗ ನಾನು

"ಹಾಗಲ್ವೋ. ಸಾಮಾನ್ಯ ಜನರ ಯೋಚನಾ ಮಟ್ಟದ ಆಧಾರದಲ್ಲಿ ನಾನು ಕೇಳಿದ್ದು. ಅದೆಷ್ಟೇ ಮುಂದುವರೆದಿರುವ ಪ್ರಗತಿಪರರಾದರೂ ಓರ್ವ ವೇಶ್ಯೆಯ ಸಂಗಾತಿಯಾಗುವುದೆಂದರೇ ಈ ಸಮಾಜ ಅವನನ್ನು ನೋಡುವ ರೀತಿಯೇ ಬೇರೆ ಕಿಶೋರ್. ನೀನೇ ಯೋಚಿಸಿ ನೋಡು" ಆಲೋಚಿಸಿ ನುಡಿದಿದ್ದೆ.

ಅಷ್ಟರವರೆಗೆ ಸುಮ್ಮನೆ ಅಳುತ್ತಿದ್ದ ನವ್ಯಾ ಕೂಡಾ "ಹೌದು ಕಿಶೋರ್, ವೇದಿಕೆ ಹತ್ತಿ ಸುಧಾರಣೆಯ ದೊಡ್ಡ ಮಾತುಗಳನ್ನಾಡುವುದು ಬೇರೆ. ಅಂತಹವರನ್ನು ಈ ಸಮಾಜ ಪರಿವರ್ತನೆಯ ಹರಿಕಾರರೆಂದು ಗೌರವಿಸುತ್ತದೆ. ಆದರೆ ವಿಪರ್ಯಾಸವೆಂದರೆ ಆ ಸುಧಾರಣೆಯನ್ನು ನಿಜ ಜೀವನದಲ್ಲಿ ಮಾಡಿತೋರಿದರೆ ಅವರನ್ನು ಇದೇ ಸಮಾಜ ಬಹಿಷ್ಕರಿಸುತ್ತದೆ. ಇವರು ಸಮುದಾಯದಲ್ಲಿ ಬದುಕಲು ಯೋಗ್ಯತೆ ಇಲ್ಲದವರು ಎಂದು ಜರಿಯುತ್ತದೆ. ಈ ಆದರ್ಶಗಳೆಲ್ಲಾ ಮಾತಿನಲ್ಲಷ್ಟೇ ಚೆಂದ. ಆಚರಣೆಗೆ ತಂದರೆ ನಿಮ್ಮೊಂದಿಗೆ ನಿಮ್ಮ ಇಡೀ ಕುಟುಂಬ ಜನರ ಬಾಯಿಗೆ ಸಿಕ್ಕು ಮೂರಾಬಟ್ಟೆಯಾಗುತ್ತೆ. ದಯವಿಟ್ಟು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ" ಅವಳ ಮಾತಿನಲ್ಲಿ ವಿನಂತಿಯಿತ್ತು.

ಅವನು ಕೆಲಹೊತ್ತು ಮಾತಾಡಲಿಲ್ಲ. ನಂತರ ನಮ್ಮೆಡೆ ತಿರುಗಿ ಗಂಭೀರವಾಗಿ, "ಸಮಾಜ? ಯಾವುದು ಸಮಾಜ? ಎಲ್ಲಿದೆ ಸಮಾಜ? ಅಂಥ ಮಾದರಿ ಸಮಾಜವೊಂದು ಇದ್ದಿದ್ರೆ ನಿನ್ನದೇನೂ ತಪ್ಪೇ ಇಲ್ಲದಿದ್ರೂ ಹೀಗೆ ತಲೆ ತಗ್ಗಿಸಿ ಅಳೋ ಪ್ರಮೇಯ ಬರ್ತಿರ್ಲಿಲ್ಲ ನವ್ಯಾ. ಅಷ್ಟು ನೈತಿಕ ಮೌಲ್ಯಗಳು ಈ ದರಿದ್ರ ಸಮಾಜದಲ್ಲಿ ಇದ್ದಿದ್ರೆ ಯಾವ ಹೆಣ್ಣ್ಮಗಳೂ ವೇಶ್ಯೆಯ ಹಣೆಪಟ್ಟಿ ಹೊತ್ಕೋತಿರ್ಲಿಲ್ಲ ಅಲ್ವಾ?ನಾವು ಹೇಗಿದ್ರೂ ಜನ ನೂರು ಕೊಂಕು ಮಾತಾಡ್ತಾರೆ. 'ಕುಛ್ ತೋ ಲೋಗ್ ಕಹೇಂಗೇ, ಲೋಗೋಂಕಾ ಕಾಮ್ ಹೆ ಕೆಹನಾ' ಅಂತಾರಲ್ಲ ಹಾಗೆ. ತನ್ನ ಅಗತ್ಯಕ್ಕೆ ತಕ್ಕಂತೆ ನೀತಿ ನಿಯಮಗಳನ್ನು ಬೇಕಾಬಿಟ್ಟಿ ಬದ್ಲಾಯಿಸೋ ಈ ಗೋಸುಂಬೆ ಹೊಣೆಗೇಡಿ ಸಮಾಜಕ್ಕೆ ನಾನ್ಯಾವತ್ತೂ ಬೆಲೆ ಕೊಟ್ಟಿಲ್ಲ, ಮುಂದೆ ಕೊಡೋದು ಇಲ್ಲ. ನನಗೆ ಬದುಕಿನ ಮೌಲ್ಯಗಳು ಮುಖ್ಯವೇ ಹೊರತು ಸಮುದಾಯದ ಕಟ್ಟುಪಾಡುಗಳಲ್ಲ. ಆ ಮೌಲ್ಯಗಳು ನಿನ್ನಲ್ಲಿವೆ ನವ್ಯಾ. ರಕ್ತ ಹೀರುವ ಸಮಾಜದ ಕ್ರೌರ್ಯದ ನಡುವೆ ನಲುಗಿದರೂ ಅದನ್ನು ಮೀರುವ ಜೀವನಪ್ರೀತಿ ನಿನ್ನಲ್ಲಿದೆ. ಅದೇ ನನಗಿಷ್ಟವಾಗಿದ್ದು. ನನಗೆ ನಿನ್ನ ಒಪ್ಪಿಗೆ ಬೇಕೇ ಹೊರತು ಸಮಾಜ ನಿನಗೆ ಕೊಡುವ ಕ್ಯಾರೆಕ್ಟರ್ ಸರ್ಟಿಫಿಕೇಟ್ ಅಗತ್ಯವಿಲ್ಲ" ಅವನು ನಿರ್ಧಾರದಲ್ಲಿ ಕತ್ತಿಯಲುಗಿನ ಹರಿತವಿತ್ತು.

ನವ್ಯಾ ಗೊಂದಲದಲ್ಲಿದ್ದಳು. ಆದರೆ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನವ್ಯಾಳ ಬರಡು ಬಾಳಿನಲ್ಲಿ ಪ್ರೀತಿಯ ಸೆಲೆಯೊಡೆದಿದೆ. ಅದೂ ಕಿಶೋರನಂತ ಸಂಗಾತಿ….! ಅದಕ್ಕೂ ಮುಖ್ಯವಾಗಿ ಅವನಿಗೆ ಅವಳ ಹಿನ್ನೆಲೆ ತಿಳಿದಿದೆ ಹಾಗೂ ಅದರ ಬಗ್ಗೆ ಅವನಿಗೆ ತಿರಸ್ಕಾರವಿಲ್ಲ...... ನವ್ಯಾಳಿಗೂ ಆಂತರ್ಯದಲ್ಲಿ ಅವನ ಮೇಲೆ ಒಲವಿದೆ, ಅವನ ಮತ್ತವನ ಕುಟುಂಬ ತನ್ನಿಂದಾಗಿ ತಲೆ ತಗ್ಗಿಸಬಾರದೆಂದು ಹೀಗೆಲ್ಲಾ ಮಾಡುತ್ತಿದ್ದಾಳೆಂಬುದು ನನಗೆ ಸ್ಪಷ್ಟವಾಗತೊಡಗಿತ್ತು.

ನಾನಾಗಲೇ ನಿರ್ಧರಿಸಿಬಿಟ್ಟಿದ್ದೆ. ಅದೇನೇ ಆಗಲಿ ನವ್ಯಾಳನ್ನು ಒಪ್ಪಿಸಿಯೇ ತೀರುತ್ತೇನೆ, ಶತಾಯಗತಾಯ ಈ ಮದುವೆ ನಡೆಯಲೇ ಬೇಕೆಂದು.

ಅವಳು ಬಡಪೆಟ್ಟಿಗೆ ಒಪ್ಪಲಿಲ್ಲ. ಆದರೆ ಕಿಶೋರನೊಂದಿಗೆ ನಾನೂ ಕೈಜೋಡಿಸಿದ್ದೆನಲ್ಲ?  ಕಲಿತ ಬುದ್ಧಿಯನ್ನಲ್ಲಾ ಉಪಯೋಗಿಸಿ ಕೊನೆಗೂ ಅವಳ ಮನವೊಲಿಸಿದ್ದೆವು. ನವ್ಯಾ ಕೊನೆಯವರೆಗೂ ಮನೆಯವರಿಗೆ ಸತ್ಯ ವಿಷಯ ಹೇಳಿ ಎಂದು ಹಠ ಹಿಡಿದರೂ ಕೊನೆಗೆ ನಮ್ಮಿಬ್ಬರ ವಿನಂತಿಗೆ ತಲೆಬಾಗಿದ್ದಳು. ಅವನು ಮನೆಯವರಿಗೆ ಮದುವೆಗೆ ಮೊದಲೇ ಎಲ್ಲಾ ವಿಷಯ ಹೇಳಲಿ ಎಂದು ನಾನೂ ಬಯಸಿದ್ದೆನಾದರೂ ಅದ್ಯಾಕೋ ಪರಿಸ್ಥಿತಿ ನಮ್ಮ ಕೈ ಹಿಡಿಯಲಿಲ್ಲ. ಅವನು ಮನೆಯವರಿಗೆ ಅರ್ಧಸತ್ಯ ಮಾತ್ರ ಹೇಳಿ ಉಳಿದದ್ದು ಬಚ್ಚಿಟ್ಟ. ಮದುವೆಯಾಗಿ ಆ ಗೂಡು ಸೇರಿದ ನವ್ಯಾ ಆ ನಂದಗೋಕುಲದ ಅಕ್ಕರೆಯ ಸದಸ್ಯೆಯಾದಳು.

ಹೀಗೆ ಗಾಢಾಂಧಕಾರ ಕೂಪದಿಂದ ಹೊರಬಿದ್ದ ಮಸಣದ ಹೂವೊಂದು ನಂದಗೋಕುಲದ ಬೃಂದಾವನವನ್ನು ಸೇರಿತ್ತು. ಅಂದು ನನಗೆ ನವ್ಯಾ ತನ್ನ ಮಾ ಬಾಬಾನ ಮಡಿಲು ಸೇರಿದಷ್ಟೇ ನೆಮ್ಮದಿಯಾಗಿತ್ತು........

ಆದರೆ ಮುಚ್ಚಿಟ್ಟ ಸತ್ಯ ಅವಳನ್ನು ಈ ಮಟ್ಟಿಗೆ ದಹಿಸಬಹುದೆಂದು, ಅದೇ ಕೊರಗನ್ನು ಹಚ್ಚಿಕೊಂಡು ಹೀಗವಳು ನೆಮ್ಮದಿ ಕೆಡಿಸಿಕೊಳ್ಳಬಹುದೆಂದು ನಾನಾಗಲೀ, ಕಿಶೋರನಾಗಲೀ ಊಹಿಸಿರಲಿಲ್ಲ.

ಈ ಸಮಸ್ಯೆ ಹರಿಯುವ ಬಗೆ ಹೇಗೆ? ನವ್ಯಾ ಹಠ ಹಿಡಿದಂತೆ ಮದುವೆಗೆ ಮುನ್ನವೇ ಹೇಳಿದ್ದರೆ ಇಂದು ಹೀಗೆ ಪರದಾಡಬೇಕಿರಲಿಲ್ಲ. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಈಗ ಮನೆಯವರೆಲ್ಲಾ ಅವಳನ್ನು ಪ್ರೀತ್ಯಾದರಗಳಿಂದ ಮೀಯಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ಸತ್ಯ ತಿಳಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಅದನ್ನು ಅರಗಿಸಿಕೊಳ್ಳುವುದು ಸುಲಭವೇ? ಅವರಿಗೆ ಆಘಾತವಾಗಬಹುದು. ಒಂದು ವೇಳೆ....... ಅವರು ನವ್ಯಾಳನ್ನು ತಿರಸ್ಕರಿಸಿದರೇ.......?! ಅದನ್ನು ನೆನೆಸಲೇ ಭಯವಾಗುತ್ತಿದೆ..... ನವ್ಯಾ ಇದನ್ನು ಹೇಗೆ ಸ್ವೀಕರಿಸಬಹುದು?

ಸಮನ್ವಿತಾಳ ಯೋಚನೆ ಅದರ ಸುತ್ತಲೇ ಗಿರಕಿಹೊಡೆಯುತಿತ್ತು.

ಇದೇ ಯೋಚನೆಯಲ್ಲಿ ಎಷ್ಟೋ ಹೊತ್ತು ಮುಳುಗಿದ್ದವಳನ್ನು ಫೋನ್ ಕರೆ ವಾಸ್ತವಕ್ಕೆ ಕರೆತಂದಿತು. ಕಿಶೋರ್, ನವ್ಯಾ ಹೋಗಿ ಬಹಳ ಹೊತ್ತಾಗಿತ್ತು. ಕತ್ತಲಾವರಿಸಿ ಹೋಟೆಲ್ಲಿನಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಎಮರ್ಜೆನ್ಸಿ ಕೇಸ್ ಇದೆ ಎಂಬ ಮಾಹಿತಿ ಸಿಕ್ಕಾಗ ಎದ್ದು ಆಸ್ಪತ್ರೆಯತ್ತ ಹೊರಟ ಸಮನ್ವಿತಾಳ ತಲೆ ತುಂಬಾ ನವ್ಯಾಳೇ ಇದ್ದಳು.

       ******** ಮುಂದುವರೆಯುತ್ತದೆ**********



ಅನೂಹ್ಯ 12

ಈ ನಡುವೆಯೇ ಯಾರದೋ ಹೃದಯದಲ್ಲಿ ಪ್ರೀತಿಯ ಮೊಳಕೆಯೊಂದು ಕುಡಿಯೊಡೆದಿತ್ತೆಂದು ಆ ಕ್ಷಣಕ್ಕೆ ನನಗೆ ತಿಳಿಯಲಿಲ್ಲ. ಆದರೆ ಬಹುಬೇಗ ಆ ಪ್ರೀತಿಯ ಘಮಲು ನನ್ನ ಕಣ್ಣ್ಮುಂದೆಯೇ ವ್ಯಾಪಿಸತೊಡಗಿತು. ಹಾಗೂ ಶೀಘ್ರವಾಗಿ ನನ್ನ ಕಣ್ಮುಂದೆಯೇ ತೆರೆದುಕೊಂಡಿತು ಕೂಡಾ.

ಕಿಶೋರ್ ನನಗೆ ಅಪರಿಚಿತನೇನಲ್ಲ. ನವ್ಯಾಳನ್ನು ಕಾಣುವ ಮುಂಚಿನಿಂದಲೂ ಅವನು ನನಗೆ ಸ್ನೇಹಿತ. 

ನನಗೆ ಸ್ನೇಹಿತರು ಬಹಳ ಕಡಿಮೆ. ಹೇಳಬೇಕೆಂದರೆ ಈವರೆಗೆ ನನಗಿರುವುದು ಇವರಿಬ್ಬರೇ ಸ್ನೇಹಿತರು. ನಾನು ಮಿತಭಾಷಿ. ಕಾಡು ಹರಟೆ ನನ್ನಿಂದಾಗದು.

ಕಿಶೋರ್ ಮತ್ತು ನನ್ನ ಸ್ನೇಹ‌ಕ್ಕೆ ಬುನಾದಿ ಹಾಕಿದ್ದು ಆಶ್ರಯ ಸಂಸ್ಥೆ. ಅಲ್ಲೇ ಅವನ ಪರಿಚಯವಾದದ್ದು. ಅವನ ಓರಗೆಯವರಂತೆ ಮೂರು ಹೊತ್ತು ಹುಡುಗಿಯರು, ಮೊಬೈಲ್, ಪಬ್, ಪಾರ್ಟಿ ಎಂದು ತಿರುಗುವ ಪೈಕಿಯಲ್ಲ. ಅವನಿಗೆ ಒಂದು ನಿರ್ದಿಷ್ಟ ಗುರಿ ಇತ್ತು. ಬದುಕಿನ ಬಗೆಗಿನ ಅವನ ಆಸ್ಥೆ, ಪರರ ಬಗೆಗಿನ ಆದರ, ಸಮಾಜದ ಬಗ್ಗೆ ಅವನಿಗಿದ್ದ ಕಾಳಜಿ ನನ್ನನ್ನು ಅತಿಯಾಗಿ ಪ್ರಭಾವಿಸಿದ್ದು. ನಮ್ಮಿಬ್ಬರ ಅಭಿರುಚಿಗಳು ಒಂದೇ ತೆರನಾದವು. ಹಾಗಾಗಿಯೇ ಬಹುಶಃ ನಮ್ಮ ಸ್ನೇಹ ಗಟ್ಟಿಯಾಯಿತೇನೋ.

ಅವನ ಮನೆಗೂ ವಾರದಲ್ಲೊಮ್ಮೆ ನನ್ನ ಭೇಟಿ ಖಾಯಂ. ಅಲ್ಲಿ ನನಗೆ ಅತೀ ಪ್ರಿಯವಾದರು ಅವನಮ್ಮ ಮಂಗಳಾ. ಮಿಸ್ಸೆಸ್ ಮಾಲಿನಿ ರಾವ್ ಅವರಿಗೂ ಮಂಗಳಮ್ಮನಿಗೂ ಎಷ್ಟು ವ್ಯತ್ಯಾಸ. ಮಾಲಿನಿಯವರನ್ನು ನಾನೆಂದೂ "ಅಮ್ಮ" ಎಂದು ಸಂಬೋಧಿಸಲೇ ಇಲ್ಲ. ಆಕೆಯೂ ಆ ಬಗ್ಗೆ ಎಂದೂ ಯೋಚಿಸಲಿಲ್ಲ. ಆದರೆ ಮಂಗಳಾರನ್ನು ನೋಡಿದ ಕೂಡಲೆ ಒಂದಿನಿತೂ ಪ್ರಯಾಸವಿಲ್ಲದೇ ಅಮ್ಮಾ ಎಂದಿದ್ದೆ. ಅದೇ ನನ್ನ ಮನದಲ್ಲಿದ್ದ ಅಮ್ಮನ ಚಿತ್ರ. ಅಂದಿನಿಂದ ಆಕೆ ನನ್ನಮ್ಮನೇ ಆದರು. ಸತ್ಯನಾರಾಯಣ ಅವರಂತು ತಂದೆಗಿಂತ ಸ್ನೇಹಿತರಂತೆ ಕಾರ್ತಿ ಹಾಗೂ ಕಿಶೋರನಿಗೆ. ಅಷ್ಟೊಂದು ನಿಕಟವಾಗಿದ್ದರು ಅವರು ಮಕ್ಕಳೊಂದಿಗೆ. ಇನ್ನು ಕಾರ್ತಿಕ್ ಚೂಟಿ.ಯಾವಾಗಲೂ ಹಾಸ್ಯ ಚಟಾಕಿ. ಹಾಗಾಗಿ ಅವನ ಮನೆಯವರೆಲ್ಲಾ ನನಗೆ ಆತ್ಮೀಯರೇ….‌.

ಅದೇನೇ ಇದ್ದರೂ ಅವನು ಧನ್ವಂತರಿಗೆ ಎಂದೂ ಬಂದವನೇ ಅಲ್ಲ. ನಮ್ಮಿಬ್ಬರ ಭೇಟಿ ಒಂದೋ ಆಶ್ರಯದಲ್ಲಿ ಇಲ್ಲಾ ಅವನ ಮನೆಯಲ್ಲಿ. 

ಆದರೆ ಅದೇನು ವಿಧಿ ಲಿಖಿತವೋ ಇಲ್ಲಾ ಆಕಸ್ಮಿಕವೋ ಸಣ್ಣದಾಗಿ ಶುರುವಾದ ಜ್ವರ ಮಂಗಳಮ್ಮನವರನ್ನು ಬಳಲಿಸಿ ಬಿಟ್ಟಿತ್ತು. ಎರಡು ದಿನವಾದರೂ ಜ್ವರ ಇಳಿಯದೇ ನೀರೂ ಹೊಟ್ಟೆಯಲ್ಲಿ ನಿಲ್ಲದೇ ವಾಂತಿಯಾಗತೊಡಗಿದಾಗ ಹೌಹಾರಿದ ಕಿಶೋರ್ ನನಗೆ ಕರೆ ಮಾಡಿದ್ದ. ಕೂಡಲೇ ಆಸ್ಪತ್ರೆಗೆ ಕರೆತರಲು ಸೂಚಿಸಿದ್ದೆ. ಎಲ್ಲಾ ಪರೀಕ್ಷಿಸಿ ರಿಪೋರ್ಟ್ ಬಂದಾಗ ಡೆಂಗ್ಯೂದ ಲಕ್ಷಣಗಳು ಖಚಿತವಾಗಿತ್ತು. ಧನ್ವಂತರಿಯಲ್ಲೇ ಅಡ್ಮಿಟ್ ಆಗಿದ್ದಾಗ ಕಿಶೋರ್ ದಿನವೂ ಬರುತ್ತಿದ್ದ. ನಾನೂ ಸಮಯ ಸಿಕ್ಕಾಗಲೆಲ್ಲ ಅಮ್ಮನ ವಾರ್ಡಿಗೆ ಹೋಗಿ ಮಾತಾಡಿಸಿ ಬರುತ್ತಿದ್ದೆ.

ಆ ದಿನ ಅಮ್ಮನ ರಿಪೋರ್ಟುಗಳನ್ನು ನೋಡಿ ಡಾ.ಮೀರಾ "ನಾರ್ಮಲ್ ಇದೆ. ನಾಳೆ ಡಿಸ್ಚಾರ್ಜ್ ಮಾಡೋಣ. ಮೆಡಿಸಿನ್ ಮತ್ತೆ ಪಥ್ಯ ಕಂಟಿನ್ಯೂ ಮಾಡಿ. ಒಂದು ವಾರ ಬಿಟ್ಟು ಚೆಕ್ಅಪ್ ಗೆ ಕರ್ಕೊಂಡು ಬನ್ನಿ" ಅಂದಿದ್ದರು. ಆಗ ಕಿಶೋರ್ ಇರಲಿಲ್ಲ. ಸಂಜೆ ಆಸ್ಪತ್ರೆಗೆ ಬಂದವನು ಅಮ್ಮನ ಆರೋಗ್ಯ ಹಾಗೇ ಡಿಸ್ಚಾರ್ಜ್ ಬಗ್ಗೆ ವಿಚಾರಿಸಲು ನನ್ನ ಕ್ಯಾಬಿನ್ ಗೆ ಬಂದಿದ್ದ. 

ನಾನು ಮೀರಾ ಮೇಡಂ ಹೇಳಿದ್ದನೆಲ್ಲಾ ತಿಳಿಸಿ ಡಿಸ್ಚಾರ್ಜ್ ಪ್ರೋಸೀಜ಼ರ್ ಗಳ ಬಗ್ಗೆಯೂ ಹೇಳಿದ್ದೆ. ಮೆಡಿಸಿನ್ ಪಥ್ಯದ ಬಗ್ಗೆ ವಿವರಿಸುತ್ತಿದ್ದಾಗ ನವ್ಯಾ ಬಂದಿದ್ದಳು. ನನ್ನ ಕೆಲಸದ ಅವಧಿ ನಿರ್ದಿಷ್ಟವಲ್ಲ. ಆದರೆ ಅವಳದು ಫಿಕ್ಸೆಡ್. ಅವಳ ಕೆಲಸದ ಸಮಯ ಮುಗಿದು ಮನೆಗೆ ಹೊರಡುವ ಮುನ್ನ ಒಂದು ಬಾರಿ ನನ್ನನ್ನು ಕಂಡು ಮನೆಗೆ ಬರುವೆನೋ ಇಲ್ಲವೋ ಕೇಳಿ ಮಾತಾಡಿಸಿ ಹೋಗುವುದು ಅವಳ ಅಭ್ಯಾಸ. ಹಾಗೆಯೇ ಅಂದೂ ಬಂದಿದ್ದಳು.

ಇವನನ್ನು ಕಂಡು ಕ್ಯಾಬಿನ್ ಇಂದ ವಾಪಾಸಾಗಲು ಹೊರಟವಳನ್ನು ತಡೆದು ನಾನೇ ಇಬ್ಬರನ್ನೂ ಪರಸ್ಪರ ಪರಿಚಯಿಸಿದ್ದೆನಲ್ಲವೇ? ನನ್ನಿಂದಾಗಿ ಪರಸ್ಪರ ಭೇಟಿಯಾದ ಇವರಿಬ್ಬರ ಬದುಕಿನ ಹಾದಿಗಳು ಭವಿಷ್ಯದಲ್ಲಿ ಸೇರಲಿವೆ ಎಂಬ ಕನಿಷ್ಟ ಕಲ್ಪನೆಯೂ ಆಗ ನನಗಿರಲಿಲ್ಲ.

ದಿನ ಕಳೆದಂತೆ ಮಂಗಳಮ್ಮ ಚೇತರಿಸಿಕೊಂಡರೂ ಬಹಳ ಬೇಗ ಸುಸ್ತಾಗುತ್ತಿದ್ದರಿಂದ ಆಗಾಗ ಆಸ್ಪತ್ರೆಗೆ ಎಡತಾಕಬೇಕಾಯಿತು. ಈ ಸಮಯದಲ್ಲಿ ಅವನು ಯಾರೊಂದಿಗೂ ಹೆಚ್ಚು ಬೆರೆಯದ ನವ್ಯಾಳ ಮೇಲೆ ಆಸಕ್ತಿ ಬೆಳೆಸಿಕೊಂಡನಾ? ನನಗೂ ತಿಳಿಯದು.....

ಅದೊಂದು ಮಧ್ಯಾಹ್ನ  ಕರೆ ಮಾಡಿದವನು " ಸಮಾ, ನಿನ್ಹತ್ರ ತುಂಬಾ ಮುಖ್ಯವಾದ ವಿಷಯವೊಂದನ್ನು ಮಾತಾಡೋದಿದೆ. ಮನೆ ಅಥವಾ ಆಸ್ಪತ್ರೆಯಲ್ಲಿ ಮಾತಾಡೋಕಾಗಲ್ಲ. ಸಂಜೆ ಹೊರಗೆಲ್ಲಾದ್ರೂ ಸಿಗ್ತೀಯಾ? " ಎಂದಿದ್ದ.

"ಇವತ್ತೇ ಸಿಗ್ಬೇಕೇನೋ? ತುಂಬಾ ಕೆಲ್ಸ ಇದೆ. ನಾಳೆ ಆಗೋಲ್ವಾ?" ಕೇಳಿದ ತಕ್ಷಣವೇ "ಏನೇ ಕೆಲ್ಸ ಇದ್ರೂ ಆಮೇಲೆ ಮಾಡ್ಕೋಮ್ಮ. ತುಂಬಾ ಜರೂರು. ಪ್ಲೀಸ್ ಸಮಾ" ಅಂದಾಗ "ಸರಿ ಎಲ್ಲಿ ಸಿಗ್ಲಿ?" ಕೇಳಿದ್ದೆ.

"ನಾಲ್ಕೂವರೆ ಹೊತ್ತಿಗೆ ಗಾಂಧಿ ಪಾರ್ಕ್ ಹತ್ರ ಇರು. ನಾನೂ ಬರ್ತೀನಿ" ಸರಿಯೆಂದು ಕರೆ ಕಡಿತಗೊಳಿಸಿದೆ. 

'ಏನು ಮಾತಾಡಬೇಕಾಗಿದೆ ಇವನಿಗೆ? ಅಮ್ಮನ ಆರೋಗ್ಯ ನಾರ್ಮಲ್ ಆಗಿದೆ. ತೊಂದರೆಯೇನಿಲ್ಲ. ಕೆಲವು ದಿನಗಳಿಂದ ಇವನ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಎಂದೇಕೆ ಅನಿಸುತ್ತಿದೆ? ಏನೋ ಹೇಳಬೇಕೆಂದು ಬಹಳ ಪ್ರಯತ್ನಿಸಿ ಸೋಲುತ್ತಿದ್ದಾನೆಯೇ?' ಇಂಥಾ ಯೋಚನೆಗಳಲ್ಲೇ ಸ್ವಲ್ಪ ಬೇಗನೇ ಹೊರಟು ಗಾಂಧಿ ಪಾರ್ಕಿನತ್ತ ಗಾಡಿ ಚಲಾಯಿಸಿದೆ.

ಆಶ್ಚರ್ಯವೆಂದರೆ ಅವನು ನನಗಿಂತ ಮೊದಲೇ ಬಂದು ಕಾಯುತ್ತಿದ್ದ. ಟೈಮ್ ಸೆನ್ಸ್ ಇಲ್ಲವೆಂದು ನನ್ನಿಂದ ಯಾವತ್ತೂ ಬೈಸಿಕೊಳ್ಳುತ್ತಿದ್ದವ ಇಂದು ನನಗಿಂತ ಮುಂಚೆ ಬಂದು ಕಾದಿರುವನೆಂದರೆ ಬಹಳ ಮುಖ್ಯವಾದ ವಿಚಾರವೇ ಇರಬೇಕು ಎಂದು ಅವನ ಬಳಿ ಸಾಗಿದೆ. 

ಲೋಕವನ್ನೇ ಮರೆತು ಗಹನವಾದ ಯೋಚನೆಯಲ್ಲಿದ್ದವನಿಗೆ ನನ್ನ ಆಗಮನದ ಅರಿವಾಗಲಿಲ್ಲ. 

"ಏನ್ ಸರ್ ಅಂಥಾ ತಲೆ ಹೋಗೋ ವಿಚಾರ. ಹೇಳಿದ್ರೆ ತಿಳ್ಕೊಂಡು ನಾವು ಸ್ವಲ್ಪ ಜ್ಞಾನ ಸಂಪಾದಿಸ್ತೀವಪ್ಪ"  ತಮಾಷೆಯಾಗಿ ಕೇಳಿದೆ.

"ಓಹ್, ಬಂದ್ಯಾ ನೀನು. ಸಾರಿ ಮಾ, ಏನೋ ಯೋಚನೇಲಿ ನಂಗೊತ್ತಾಗ್ಲಿಲ್ಲ" ಎಂದ.

"ಅದೇನು ಘನಂದಾರಿ ಕೆಲಸ ಇದೆ ಅಂತ ಈಗ ನನ್ನ ಕರ್ಸಿದ್ದು. ನಾಳೆ ಬರ್ತೀನಿ ಅಂದ್ರೂ ಕೇಳ್ಲಿಲ್ಲ?. ಇರೋ ಕೆಲ್ಸಾ ಬಿಟ್ಟು ಓಡೋಡಿ ಬಂದ್ರೆ ನೀನೋ ಪಕ್ಕದಲ್ಲಿ ಜ್ವಾಲಾಮುಖಿ ಸಿಡಿದರೂ ಗೊತ್ತಾಗದಿರುವಷ್ಟು ಯೋಚನೆ ಮಾಡ್ತಿದ್ದೀ. ಏನು ಸಮಾಚಾರ? " ಕೇಳಿದೆ.

ಅವನೇನೂ ಮಾತಾಡಲಿಲ್ಲ. ನಾನು ಅವನೇ ಮಾತಾಡಲಿ ಎಂದು ಕಾದೆ. ಎಷ್ಟಾದರೂ ಮಾತನಾಡಲಿಕ್ಕಿದೆ ಅಂತ ಕರೆಸಿದ್ದು ಅವನೇ ತಾನೇ?

ನಮ್ಮಿಬ್ಬರ ನಡುವೆ ಮೌನ ತಾಂಡವವಾಡಿತು. ಅವನ ನೋಟ ದಿಗಂತದಲ್ಲಿದ್ದರೆ, ನಾನು ಬೆಂಚಿನ ಮೇಲೆ ಕುಳಿತು ಅಲ್ಲೇ ಆಡುತ್ತಿದ್ದ ಮಕ್ಕಳನ್ನು ನೋಡತೊಡಗಿದೆ. ಸಮಯ ಸರಿಯತೊಡಗಿತು. 

ಅವನು ತುಟಿ ಎರಡು ಮಾಡುವ ಲಕ್ಷಣ ಕಾಣದಿದ್ದರೂ ನನ್ನ ತಲೆಕೆಡುವ ಎಲ್ಲಾ ಲಕ್ಷಣಗಳು ಗೋಚರಿಸಿದವು. ಇನ್ನು ನನ್ನ ತಾಳ್ಮೆ ತಪ್ಪುವುದು ಖಚಿತವೆನಿಸಿದಾಗ ಸೀದಾ ಎದ್ದು ಅವನ ಮುಂದೆ ನಿಂತು, "ಮೌನವ್ರತ ಮಾಡೋಕೆ ಕಂಪನಿಗೆ ನಾನೇ ಬೇಕಿತ್ತಾ? ಅರ್ಜೆಂಟ್ ಮಾತಾಡ್ಬೇಕು ಬಾ ಅಂತ ಕರ್ಸಿ ಆಕಾಶ ನೋಡ್ಕೊಂಡು ಕೂತ್ಕೊಂಡ್ಬಿಟ್ರೆ? ಬಾಯ್ಬಿಟ್ಟು ಹೇಳಿದ್ರೆ ತಾನೇ ಅರ್ಥ ಆಗೋದು. ನೋಡು ಕಿಶೋರ್, ಏನಾದ್ರೂ ಹೇಳೋದಿದ್ರೆ ಹೇಳು. ಇಲ್ಲಾ ನಾನು ಹೊರಟೆ" ಸಿಟ್ಟಿನಿಂದ ಹೊರಟವಳನ್ನು ಹಿಂಬಾಲಿಸಿ "ಸಮಾ ಪ್ಲೀಸ್ ನಿಲ್ಲು. ಹೋಗ್ಬೇಡಾ" ಅಂದ.

"ಮತ್ತೇನೋ ನಿಂದು. ನಾನೂ ಬಂದಲ್ಲಿಂದ ನೋಡ್ತಿದ್ದೀನಿ. ಏನೋ ಹೇಳ್ಬೇಕು ಅಂತ ಸುಮ್ನೆ ನಿಂತಿದ್ದೀ. ನನ್ಗೇನು ಫೇಸ್ ರೀಡಿಂಗ್, ಮೈಂಡ್ ರೀಡಿಂಗ್ ಎಲ್ಲಾ ಬರುತ್ತಾ? ಅದೇನ್ ಹೇಳ್ಬೇಕು ಅಂತಿದ್ದೀಯೋ ಬೇಗ ಹೇಳು" ರೇಗಿದೆ.

"ತುಂಬಾ ದಿನಗಳಿಂದ ನಿಂಗೆ ಹೇಳ್ಬೇಕು ಅಂದ್ಕೋತಿದ್ದೀನಿ ಆದ್ರೆ ಆಗ್ತಿಲ್ಲ. ಅದು ನಾ....."

"ನೆಟ್ಟಗೆ ವಿಷಯಕ್ಕೆ ಬಂದರೆ ಸರಿ. ಅದೂ, ಇದೂ, ನಾನೂ, ನೀನೂ ಅಂತ ರಾಗ ಎಳದ್ಯೋ... ಅಷ್ಟೇ… ಚೆನ್ನಾಗಿರೋಲ್ಲ ಮತ್ತೆ"

"ನಾನು ನಿನ್ನ ಫ್ರೆಂಡ್ ನ ಮದ್ವೆ ಮಾಡ್ಕೋಬೇಕು ಅಂತ ನಿರ್ಧಾರ ಮಾಡಿದ್ದೀನಿ. ನೀನು ಅವಳ್ಹತ್ರ ಮಾತಾಡಿ ಒಪ್ಸಬೇಕು."

ಸಿಟ್ಟಿನಲ್ಲಿ ಬೈಯಲು ಸರ್ವತಯಾರಿಯೊಂದಿಗೆ ನಿಂತಿದ್ದ ನನಗೆ ಮೊದಲು ಅವನ ಮಾತು ಅರ್ಥವಾಗಲಿಲ್ಲ. ಮತ್ತೆ ಮತ್ತೆ ಅವನ ಮಾತನ್ನು ಮೆಲುಕು ಹಾಕಿದೆ. ಯಾವಾಗ ಅವನ ಮಾತಿನ ಇಂಗಿತ ಅರಿವಾಯಿತೋ ನಾನು ನಿಂತಲ್ಲೇ ಕಂಪಿಸಿದೆ. ಎಲ್ಲಾ ಅಯೋಮಯವೆನಿಸಿ "ನೀನೇನು ಹೇಳ್ದೆ ಮತ್ತೆ ಹೇಳು. ನನಗೆ ಸರಿಯಾಗಿ ಅರ್ಥ ಆಗ್ತಿಲ್ಲ. ನನ್ನ ಫ್ರೆಂಡ್ ಅಂದ್ರೆ?" ಅನುಮಾನ ಪರಿಹರಿಸಿಕೊಳ್ಳಲು ಕೇಳಿದೆ.

"ಎಂಥಾ ಪ್ರಶ್ನೆ? ಎಷ್ಟು ಜನ ಫ್ರೆಂಡ್ಸ್ ಇದ್ದಾರೆ ನಿಂಗೆ? ಇರೋದೇ ಇಬ್ರು.." ಗೊಣಗಿದವನು "ಸಮನ್ವಿತಾ, ಮನೆಲೀ ಮದ್ವೆ ಮಾಡ್ಕೋ ಅಂತ ಒತ್ತಾಯ ಮಾಡ್ತಿದ್ದಾರೆ. ಕೆಲವು ಪ್ರಪೋಸಲ್ಸ್ ಕೂಡಾ ಬಂದಿದೆ. ನಾನು ನವ್ಯಾನ ಇಷ್ಟಪಟ್ಟಿದ್ದೀನಿ. ಅವಳ ಹತ್ರ ಈ ಬಗ್ಗೆ ನೀನು ಮಾತಾಡು ಅಂತ ಹೇಳ್ತಿದ್ದೀನಿ. ಅವಳಿಗೆ ಅತ್ಯಂತ ಆತ್ಮೀಯ ಬಂಧು ಅಂತ ಇರೋದು ನೀನೊಬ್ಳೇ." 

ಅತೀ ಸ್ಪಷ್ಟವಾಗಿ ಇನ್ನೊಂದು ಪ್ರಶ್ನೆಗೆ ಅವಕಾಶವಿಲ್ಲದಂತೆ ಹೇಳಿದ್ದ. ನಾನು ಮತ್ತೆ ಬೆಂಚಿನ ಮೇಲೆ ಕುಳಿತು ಸುಧಾರಿಸಿಕೊಳ್ಳತೊಡಗಿದೆ. ಕಳೆದ ಕೆಲವು ದಿನಗಳಿಂದ ಇವನ ಒದ್ದಾಟ, ಗೊಂದಲಗಳನ್ನು ಗಮನಿಸಿದ್ದೆ. ಇಂದು ಕರೆ ಮಾಡಿ ಮಾತಾಡಬೇಕೆಂದಾಗ ಏನೋ ಗಹನವಾದ ವಿಚಾರವಿರಬೇಕೆಂದು ಲೆಕ್ಕ ಹಾಕಿದ್ದೆ ಕೂಡಾ.

ಆದರೆ......

ಇವನು ಈ ರೀತಿ ನೇರವಾಗಿ ನವ್ಯಾಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸುವನೆಂಬ ಚಿಕ್ಕ ಕಲ್ಪನೆಯೂ ಸಹ ನನಗಿರಲಿಲ್ಲ. ಅಸಲಿಗೆ ಹೆಚ್ಚೆಂದರೆ ಮೂರ್ನಾಲ್ಕು ಬಾರಿ ಭೇಟಿಯಾಗಿರುವ ನವ್ಯಾಳನ್ನು ಇವನು ಪ್ರೀತಿಸುತ್ತಿದ್ದೇನೆ ಎನ್ನುತ್ತಿರುವುದೇ ವಿಚಿತ್ರವೆನಿಸಿತು. ಹೇಗೆ ಸಾಧ್ಯ? ಅವಳೋ ಮಹಾ ಮೌನಿ. ಇವನು ಅವಳನ್ನು ಇಷ್ಟು ಪಟ್ಟಿದ್ದು ಹೇಗೆ?

ಪ್ರಶ್ನೆಗಳ ದಾಳಿಗೆ ನನ್ನ ತಲೆ ಛಿದ್ರವಾಗತೊಡಗಿದಾಗ, ಅರೇ... ಯಾಕಿಷ್ಟು ಗೊಂದಲ....ಎದುರಿಗೇ ಇದ್ದಾನಲ್ಲ  ನೇರವಾಗಿ ಕೇಳೋಣ ಅನಿಸಿ "ನೀನು ನವ್ಯಾನ ಪ್ರೀತಿಸ್ತಿದ್ದೀಯಾ? ಹೇಗೆ ಸಾಧ್ಯ? ಅವಳನ್ನು ನೀನು ನೋಡಿರೋದೇ ನಿನ್ನೆ ಮೊನ್ನೆ. ಅದೂ ಒಂದೆರಡ್ಮೂರು ಸಲ ಇರ್ಬಹುದು. ಮಾತಾಡ್ಸಿದ್ದಂತು ನಾನು ನೋಡಿಲ್ಲ. ಮತ್ತೆ..... ಪ್ರೀತಿ....? ಅದೂ ಮದ್ವೆಯಾಗುವಷ್ಟು ಪ್ರೀತಿ? ನಂಗೊಂದೂ ಅರ್ಥವಾಗ್ತಿಲ್ಲ ಕಿಶೋರ್" ನನ್ನ ಧ್ವನಿಯಲ್ಲಿ ತೀರದ ಅಚ್ಚರಿಯಿತ್ತು.

"ಯಾಕೆ? ಒಂದೆರಡ್ ಸರಿ ನೋಡಿರೋರ್ನ ಪ್ರೀತಿಸ್ಬಾರ್ದು ಅಂತ ರೂಲ್ಸ್ ಏನಾದ್ರೂ ಇದ್ಯಾ?" ಅಂತ ನಕ್ಕವನು ಗಂಭೀರವಾಗಿ "ನಿನ್ನ ಪ್ರಶ್ನೆಗಳಿಗೆ ಉತ್ತರಿಸೋದು ತುಂಬಾ ಕಷ್ಟ ಕಣೇ. ನೀನು ಹೇಳಿದ್ದೆಲ್ಲಾ ನಿಜವೇ. ನನ್ನ ಅವಳ ಪರಿಚಯವೇ ತೀರಾ ಇತ್ತೀಚಿನದು. ನಾನು ಹತ್ರ ಹೋದಷ್ಟು ಅವಳು ದೂರಾಗ್ತಾಳೆ. ಮಾತಾಡ್ಸೋಕೆ ಪ್ರಯತ್ನಿಸಿದ್ರೂ ಅವಳು ಮೌನ ಮುರ್ಯೋಲ್ಲ. ಇನ್ಫಾಕ್ಟ್ ಅವಳು ಇದ್ವರ್ಗೂ ನನ್ಹತ್ರ ಮಾತಾಡೇ ಇಲ್ಲ. ಆದ್ರೂ ಅವಳೂಂದ್ರೆ ನಂಗಿಷ್ಟ....... ಯಾಕೇ?? ನಂಗೂ ಗೊತ್ತಿಲ್ಲ...... ಪ್ರೀತಿ ಯಾರ ಮೇಲೆ,ಯಾಕೆ, ಯಾವಾಗ ಹುಟ್ಟುತ್ತೆ ಅನ್ನೋದೇ ನಿಗೂಢ ಅಂತಾ ಯಾರೋ ಪುಣ್ಯಾತ್ಮರು ಹೇಳಿಲ್ವಾ. ನನ್ನ ಪ್ರೀತಿನೂ ಹಾಗೇ ಅಂದ್ಕೊ."

"ನೀನು ನವ್ಯಾ ಹತ್ರ ಇದ್ರ ಬಗ್ಗೆ ಮಾತಾಡಿದ್ದೀಯಾ" ನಾನು ಹಣೆಯುಜ್ಜಿ ಕೇಳಿದ್ದೆ. 

"ಆಗ್ಲೇ ಹೇಳಿದ್ನಲ್ಲ. ನಾನು ಮಾತಾಡ್ಸೋಕೆ ಟ್ರೈ ಮಾಡಿ ಸೋತಿದ್ದೀನಮ್ಮ. ನಾನು ಇದ್ದ ಜಾಗದಲ್ಲಿ ಅವಳ ನೆರಳೂ ಬೀಳೋಕೆ ಬಿಡೋದಿಲ್ಲ. ಹಾಗೆ ಮಾಯ ಆಗ್ತಾಳೆ ನಿನ್ನ ನವ್ಯಾ"

ಕಿಶೋರ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವನಂತವರು ಬಹಳ ಅಪರೂಪ. ತನ್ನ ಜವಾಬ್ದಾರಿಗಳನ್ನು ಅರಿತವ. ಒಳ್ಳೆಯ ಮಗ, ಅಣ್ಣ, ಗೆಳೆಯ ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ಮನುಷ್ಯ. ಇಷ್ಟೆಲ್ಲಾ ಆದವನು ನಾಳೆ ಖಂಡಿತಾ ಒಳ್ಳೆಯ ಗಂಡನೂ ಆಗಿರುತ್ತಾನೆ. ನವ್ಯಾಳನ್ನು ಕಣ್ರೆಪ್ಪೆಯಂತೆ ಜೋಪಾನ ಮಾಡಬಲ್ಲ. ಓಹ್ ದೇವರೇ!! ನವ್ಯಾಳಿಗಾಗಿ ಎಂಥಾ ವರನನ್ನು ಕಳಿಸಿದ್ದಿ.... ಇವನ ಕೈಯಲ್ಲಿ ಅವಳ ಭವಿಷ್ಯ ಸುಭದ್ರ.. ಅವಳ ಭವಿಷ್ಯದ ಬಗ್ಗೆ ನನಗಿದ್ದ ಎಲ್ಲಾ ಚಿಂತೆಗಳನ್ನೂ ದೂರ ಮಾಡಿದೆ..... ಅವಳ ಹಳೆಯ ನೋವುಗಳೆಲ್ಲಾ ಇಲ್ಲಿಗೇ ಕೊನೆ..... ಹೀಗೇ ಖುಷಿಯ ಕಲ್ಪನೆಯ ಕುದುರೆಯೇರಿದವಳಿಗೆ ಹಠಾತ್ತನೆ ನೆನಪಾಯಿತು..............

ಇದು...... ಈ ಮದುವೆ......ಸಾಧ್ಯವಿಲ್ಲ....... ಕಾರಣ.... ನವ್ಯಾಳ ಅತೀತ.....!! ಅದನ್ನು ಹೇಗೆ ಮರೆತೆ? 

ಕಿಶೋರ್ ಒಳ್ಳೆಯವನೇ ಇರಬಹುದು. ಅವನಿಗೆ ಸಮಾಜಸೇವೆಯಲ್ಲಿ ಆಸಕ್ತಿ ಇರಬಹುದು. ಪರರಿಗೆ ಬುದ್ದಿ ಹೇಳಿ, ಸಹಾಯಮಾಡಿ  ಸಮಾಜವನ್ನು ಸರಿಪಡಿಸುವುದು ಸುಲಭ. ಆದರೆ ಆ ನಿಯಮಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಷ್ಟು ಬದ್ಧತೆ ಯಾರಿಗಿದೆ? ಯಾವ ಗಂಡಸು ಓರ್ವ ವೇಶ್ಯೆಯನ್ನು ತನ್ನ ಹೆಂಡತಿಯೆಂದು ಸಮಾಜಕ್ಕೆ ಪರಿಚಯಿಸಬಲ್ಲ? ಪರರ ಕೊಂಕು ನುಡಿಗಳನ್ನೂ, ಕಿಡಿನೋಟಗಳನ್ನೂ ಸಹಿಸಬಲ್ಲ? ಛೇ... ಇದೆಂಥಾ ಅವಸ್ಥೆ? ಇವನಿಂದ ಅವಳ ಹಿನ್ನೆಲೆ ಮುಚ್ಚಿಟ್ಟರೇ? ಊಹೂಂ... ಅದು ತಪ್ಪು. ಇವನಿಗೆಲ್ಲಾ ಹೇಳಿಬಿಡೋಣ. ಆಗ ಅವನೇ ನಿರ್ಧಾರಗಳನ್ನು ಬದಲಿಸುತ್ತಾನೆ..... 

ಆದರೆ.... ನವ್ಯಾಳಿಗೇ ತಿಳಿಸದೇ ಅವಳ ಪೂರ್ವಾಪರಗಳನ್ನು ಇವನಿಗೆ ಹೇಳಲೇ?

ಕಿಶೋರ್ ನನ್ನ ಬಳಿ ಎಲ್ಲಾ ಹೇಳಿ ನನಗೆ ಯೋಚಿಸಲು ಸಮಯ ಕೊಟ್ಟಂತೆ ಸುಮ್ಮನೆ ಕೂತಿದ್ದ. ಆದರೆ ನನ್ನ ತಲೆಸಿಡಿಯತೊಡಗಿತು. ಏನು ಮಾಡಲೀ ಎಂದರಿವಾಗದ ಅತಂತ್ರ ಸ್ಥಿತಿ.ಏನೇ ಹೇಳುವುದಾದರೂ ಮುಚ್ಚಿಡುವುದಾದರೂ ಅದು ನವ್ಯಾಳದೇ ನಿರ್ಧಾರ. ನಾನವಳಿಗೆ ಗೆಳತಿಯಾಗಿ ಸಹಾಯ, ಸಲಹೆ ನೀಡಬಹುದೇ ಹೊರತು, ಇದು ಅವಳ ಜೀವನದ ಪ್ರಶ್ನೆ.. ಅವಳೇ ನಿರ್ಧರಿಸಬೇಕು ಎಂಬ ದೃಢನಿಶ್ಚಯಕ್ಕೆ ಬಂದದ್ದೆ ಎದ್ದು ಕಿಶೋರನೆದುರು ನಿಂತು

"ಒಂದು ವೇಳೆ ಅವ್ಳು ನಿನ್ಹತ್ರ ಮಾತಾಡಿದರೇ ಇದ್ನೆಲ್ಲಾ ಅವಳಿಗೆ ವಿವರಿಸಿ ಅರ್ಥ ಮಾಡಿಸ್ಬಲ್ಲೇ ಅನ್ನೋ ನಂಬಿಕೆ ನಿನಗಿದ್ಯಾ?" ಗಂಭೀರವಾಗಿ ಕೇಳಿದೆ.

"ಅವಳು ನನ್ಹತ್ರ ಮಾತಾಡಿದ್ರೆ ನಿನ್ನ ಹೀಗೆ‌ ತಲೆತಿಂತಿರ್ಲಿಲ್ವೇ. ಅವಳ್ಹತ್ರನೇ ಎಲ್ಲಾ ವಿಷಯ ಹೇಳಿ ಒಪ್ಪಿಸ್ತಿದ್ದೆ" ಅವನ ಧ್ವನಿಯಲ್ಲಿ ವಿಶ್ವಾಸವಿತ್ತು.

"ಸರಿ ನಡಿ ಹಾಗಾದ್ರೆ ಅವ್ಳ ಮನೆಗೇ ಹೋಗೋಣ. ನಿಮ್ಮಿಬ್ಬರ ಬದುಕು ನೀವೇ ಮಾತಾಡಿ ನಿರ್ಧರಿಸಿ" ಎಂದೆ.

ಅವನು ಮರು ನುಡಿಯದೇ ನನ್ನ ಹಿಂಬಾಲಿಸಿದ........

ಹೀಗೊಂದು ಪರೀಕ್ಷೆ ನವ್ಯಾಳ ಬಾಳಲ್ಲಿ ಆರಂಭವಾಗಿತ್ತು.....

                  ಮುಂದುವರೆಯುತ್ತದೆ



ಅನೂಹ್ಯ 11

ನಾನು ವಾಪಾಸು ಹೊರಟಿದ್ದೆನಷ್ಟೇ........

ಬಂದು ನನ್ನ ಕೈಹಿಡಿದವಳೇ ಇನ್ನಿಲ್ಲದ ಅಪ್ಯಾಯಮಾನತೆಯಿಂದ ಆಗ ಕೇಳಿದ್ದಳವಳು............

"ಸಮಾ, ಯಾಕೆ ನನ್ನ ಮೇಲೆ ನಿನಗಿಷ್ಟು ಕಾಳಜಿ?  ನಾನೇ ಆ ಕಮಲಾಬಾಯಿ ಕೋಠಿಯಿಂದ ಹೊರಬರೋ ಆಸೆ ಬಿಟ್ಟಿದ್ದೆ. ಯಾಕೆ ನಂಗೋಸ್ಕರ ಇಷ್ಟು ರಿಸ್ಕ್ ತಗೋತಿದ್ದೀಯ? ನಾಳೆ ನನ್ನಿಂದಾಗಿ ನೀನೂ ಸಾವಿರ ಮಾತು ಕೇಳ್ಬೇಕಾಗುತ್ತೆ. ಅದೆಲ್ಲಾ ಬೇಡ ಕಣೇ" ಹನಿಗಣ್ಣಾಗಿದ್ದಳು.

ಅವಳ ಕೇಳಿಕೆಗೆ ಹೇಗೆ ಉತ್ತರಿಸುವುದು......?

ಅರೆಕ್ಷಣ ಆತ್ಮಾವಲೋಕನ ಮಾಡಿಕೊಂಡೆ.

"ನವ್ಯಾ, ನಾನು ನಿನ್ನ ಸ್ಟೇಷನ್ನಿಂದ ನಮ್ಮನೆಗೆ ಕರ್ಕೊಂಡು ಹೋಗ್ಲಿಲ್ಲ. ಇಲ್ಲಿಗೆ ಬಂದ್ವಿ. ನೀನು ಈ ಹಿಂದೆ ವೇಶ್ಯೆಯಾಗಿದ್ದೆ. ಆ ಕಾರಣ ನಿನ್ನ ಮನೇಲಿ ಪರಿಚಯ ಮಾಡ್ಸೋಕಾಗಲ್ಲ ಅಂತ ಇಲ್ಲಿಗೆ ತಂದು ಬಿಟ್ಟಿದ್ದೀನಿ ಅಂತ ನಿನಗನಿಸಬಹುದು. ನಿನ್ನ ಯೋಚ್ನೆ ತಪ್ಪಲ್ಲ. ಆದ್ರೆ ನಿಜ ಏನಂದ್ರೆ ಆ ಮನೆಗೆ ನನ್ನ ಶತ್ರುಗಳನ್ನೂ ನಾನು ಕರ್ಯೋಲ್ಲ. ಇನ್ನು ನಿನ್ನನ್ನು ಕರೆಯಬಲ್ಲೆನೇ......? ನನ್ನನ್ನು ನೋಡಿದವರ ಮನಸ್ಸಿನಲ್ಲಿ ಮೊದಲು ಮೂಡೋ ಭಾವ, 'ಅಬ್ಬಾ ಎಂಥಾ ಅದೃಷ್ಟವಂತೆಯಪ್ಪ ಈಕೆ' ಅನ್ನುವುದು. ಆದರೆ ನನ್ನ ಅದೃಷ್ಟದ ಕಥೆ ಅನುಭವಿಸಿದವರಿಗೆ ಮಾತ್ರವೇ ಗೊತ್ತಾಗೋದು. ಶ್ರೀಮಂತಿಕೆಯ ಮದ ನೆತ್ತಿಗೇರಿರೋ ಅಪ್ಪ ಅಮ್ಮನ ಒಬ್ಬಳೇ ಮಗಳು ನಾನು. ಅವರಿಬ್ಬರಿಗೂ ದುಡ್ಡಿನ ಹೊರತು ಬೇರೇನೂ ಕಾಣಲ್ಲ. ಆ ದುಡ್ಡು ನನಗೆ ಬೇಕಿಲ್ಲ. ಆ ಮನೆಯಲ್ಲಿ ಮನುಷ್ಯರು ವಾಸ ಇಲ್ಲ. ಬರೀ ಧನಪಿಪಾಸುಗಳಿವೆ. ನನಗೆ ಯಾವತ್ತೂ ಅನ್ಸೋದು ನನಗೊಬ್ಬ ಅಕ್ಕ/ ಅಣ್ಣನೋ ಇಲ್ಲ ತಮ್ಮ/ತಂಗಿನೋ ಇರ್ಬೇಕಿತ್ತು ಕಷ್ಟ ಸುಖ ಹಂಚ್ಕೊಳ್ಳೋಕೆ, ಏನಿಲ್ಲಾಂದ್ರೂ ಕಡೇ ಪಕ್ಷ ಒಬ್ಬರಿಗೊಬ್ರು ಸಮಾಧಾನ ಮಾಡ್ಕೊಳ್ಳೋಕೆ ಅಂತ. ನಾನ್ಯಾಕೆ, ಯಾರಿಗೋಸ್ಕರ ಬದುಕ್ಬೇಕು ಅಂತ ಯೋಚ್ಸೋಷ್ಟು ಡಿಪ್ರೆಸ್ ಆಗಿದ್ದೆ. ಆ ಸಮಯದಲ್ಲೇ ನಾನು ನಿನ್ನ ನೋಡಿದ್ದು. ನಿನ್ನ ನೋಡಿದ ಕೂಡಲೇ ಅದ್ಯಾಕೋ ನೀನು ನನ್ನ ಒಡಹುಟ್ಟಿದವಳೇನೋ ಅನ್ನೋ ಭಾವನೆ ಮೂಡಿಬಿಟ್ಟಿತು. ನಿನ್ ಜೊತೆ ಮಾತಾಡ್ತಾ, ನಿನ್ನ ಅರ್ಥ ಮಾಡ್ಕೋತಾ ಹೋದಂತೆ ನನ್ನ ಸಮಸ್ಯೆಗಳೆಲ್ಲಾ ಮರೀತಾ ಹೋದ್ವು. ನೀನು ಅಷ್ಟೆಲ್ಲ ಪಾಡುಪಟ್ಟೂ ಹೋರಾಡ್ತಿರೋವಾಗ ನಾನ್ಯಾವ ಲೆಕ್ಕ ಅನ್ನಿಸ್ತು. ನಾನು ನಿಂಗೋಸ್ಕರ ರಿಸ್ಕ್ ತಗೊಂಡಿರೋದಲ್ಲ. ನಾನಿವತ್ತು ಹೀಗಿರೋದೇ ನಿನ್ನಿಂದ ನವ್ಯಾ. ನಾನು ನಿನಗಿಂತ ಒಳ್ಳೆ ಪರಿಸ್ಥಿತಿಯಲ್ಲಿ ಇದ್ದೂ ನಿರಾಶವಾದಿಯಾಗಿದ್ದೆ. ಆದ್ರೆ ನೀನು ಅಂತ ಹೀನ ಪರಿಸ್ಥಿತಿಯಲ್ಲೂ ಆಶಾವಾದಿಯಾಗಿದ್ದೆ. ಅದೇ ನನ್ನ ಪ್ರೇರೇಪಿಸಿದ್ದು ನನ್ನ ಯೋಚನಾ ವಿಧಾನವನ್ನು ಬದಲಾಯಿಸಿಕೊಳ್ಳೋಕೆ. ನಿನ್ನ ಅಲ್ಲಿಂದ ಹೊರಗೆ ಕರ್ಕೊಂಡು ಬರೋ ಪ್ರಯತ್ನದಲ್ಲಿ ನನ್ನೊಳಗೆ ನಾನು ಸೃಷ್ಟಿಸಿಕೊಂಡಿದ್ದ ಪಂಜರದಿಂದ ನನಗೂ ಮುಕ್ತಿ ಸಿಕ್ಕಿತು. ನೀನು ಹೊರಗೆ ಬಂದಾಗ ನಿನ್ನ ಕಣ್ಣಲ್ಲಿ ಮೂಡೋ ಸಂತೋಷದಲ್ಲಿ ನನ್ನ ಅಸ್ತಿತ್ವ ಹುಡುಕಬೇಕೆಂಬ ಆಸೆ ನಂದು" ಸಣ್ಣಗೆ ನಕ್ಕೆ. ಅವಳಲ್ಲಿ ಹೇಳಿಕೊಂಡು ಮನಸ್ಸು ಹಗುರವಾದಂತೆನಿಸಿತು.

ನಿಟ್ಟುಸಿರು ಬಿಟ್ಟು ಅವಳೆಡೆಗೆ ತಿರುಗಿದೆ. ಅವಳ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. "ಸಾರಿ ನವ್ಯಾ ಬೇಜಾರು ಮಾಡಿದ್ನಾ? ಯಾಕೋ ಎಲ್ಲಾ ಹೇಳ್ಕೋಬೇಕು ಅನ್ನಿಸ್ತು. ಅಳ್ಬೇಡ್ವೇ ಪ್ಲೀಸ್" ಎಂದೆ.

ಅವಳು ಕಣ್ಣೀರೊರೆಸಿಕೊಂಡವಳೇ ನನ್ನ ಕೈ ಹಿಡಿದು "ಮಾ ಬಾಬಾ ಹೋದ್ಮೇಲೆ ನಂಗೆ ದೇವರ ಮೇಲೆ ನಂಬಿಕೆಯೇ ಹೋಗಿತ್ತು. ಇವತ್ತು ಆ ನಂಬಿಕೆ ಮರಳಿ ಬಂದಿದೆ. ಭಗವಂತ ನನಗಾಗಿಯೇ ಈ ಪುಟ್ಟ ದೇವತೆಯನ್ನು ಸೃಷ್ಟಸಿದ್ದಾನೆ. ನಾನು ಕಳ್ಕೊಂಡಿರೋ ಸಂತೋಷನೆಲ್ಲಾ ತಂದು ಬೊಗಸೆಗೆ ಸುರಿಯೋಕೆ.  ಹಾಗಾಗಿಯೇ ನೀನು ನನ್ನ ಆ ನರಕದಿಂದ ಹೊರತಂದಿದ್ದು. ಅಲ್ಲಿಂದ ಹೊರಗೆ ಕಾಲಿಟ್ಟ ಕೂಡಲೇ ನಂಗೆ ಎಷ್ಟು ಖುಷಿಯಾಯ್ತು ಗೊತ್ತಾ ಸಮಾ….. ಆ ಬಿಡುಗಡೆಯ ಭಾವವಿದೆಯಲ್ಲ......... ಅಹಾ....... ಬಂಧಮುಕ್ತಿಯ ಆಸೆಯೇ ಇಲ್ಲದೇ ಜನ್ಮಾಂತರಗಳಿಂದ ಪಂಜರದಲ್ಲಿದ್ದ ಹಕ್ಕಿಯೊಂದು ಬಿಡುಗಡೆ ಪಡೆದು ಮರಳಿ ನಭಕ್ಕೇರಿದಂತಹ ಆ ಭಾವ......... ಸೆರೆಯಲ್ಲಿ ಮರಣದಂಡನೆಗೆ ಗುರಿಯಾಗಿ ಅಂತಿಮ ದಿನಗಳ ಎಣಿಕೆಯಲ್ಲಿದ್ದವನಿಗೆ ಅನಿರೀಕ್ಷಿತವಾಗಿ ಬಿಡುಗಡೆಯಾದರೆ ಹೇಗಿರಬಹುದು ಅವನ ಭಾವಲೋಕ....... ಆ ಖುಷಿಗೆ ಎಣೆಯುಂಟೇ?ಹಾಗೇ ಅನ್ನಿಸ್ತಿದೆ ನನಗೆ. ಕೃತಜ್ಞತೆ ಅನ್ನೋ ಪದ ತುಂಬಾ ಸಣ್ಣದು. ನೀನಿಲ್ಲದೇ ಇದ್ದಿದ್ರೆ........  ಪ್ರಾಯಶಃ ನನ್ನ ಬದುಕು ಬೆಂಕಿಯಲ್ಲಿ ಸುಟ್ಟು ಕರಕಲಾಗ್ತಿತ್ತೇನೋ " ಅನ್ನುತ್ತಾ ತಬ್ಬಿಕೊಂಡಳು.

ಅವಳ ಆ ಕ್ಷಣದ ಪ್ರತಿಕ್ರಿಯೆ ಇದೆಯಲ್ಲ.....

ಅದು ನನಗೆ ನೀಡಿದ ಸಂತಸವನ್ನು, ಅವಳ ಅಪ್ಪುಗೆ ನೀಡಿದ ಸಾಂತ್ವನವನ್ನು ನಾನು ಖಂಡಿತಾ ಪದಗಳಲ್ಲಿ ವರ್ಣಿಸಲಾರೆ..... ಆ ಭಾವವನ್ನು ವಿವರಿಸಬಲ್ಲ ಒಂದು...‌.  ಒಂದೇ ಒಂದು ಪದವೂ ಜಗದಲಿಲ್ಲ.

ಅವಳ ಈ ನೆಮ್ಮದಿಯನ್ನೇ ತಾನೇ ನಾನು ಬಯಸಿದ್ದು......... ಎದೆಯ ಮೇಲಿನ ಭಾರ ಇಳಿದಂತಾ ಭಾವ.........

ಅವಳೇ ನನ್ನ ಸಮಾಧಾನಿಸಿ ಕಳಿಸಿದ್ದಳು ಅಂದು.

ಅವಳು ಆಶ್ರಯ ಸಂಸ್ಥೆಗೆ ಬಹುಬೇಗ ಹೊಂದಿಕೊಂಡಿದ್ದಳು. ಅಲ್ಲಿನ ಕೆಲಸ ಕಾರ್ಯಗಳನ್ನು ಬಹಳ ಆಸ್ತೆಯಿಂದ ಮಾಡುತ್ತಿದ್ದಳು. ಈ ವಾತಾವರಣ ಅವಳಿಗೆ ನೆಮ್ಮದಿ ನೀಡಿದ್ದಂತು ಸತ್ಯ. ನಾನು ದಿನವೂ ಅವಳನ್ನು ಭೇಟಿಯಾಗುತ್ತಿದ್ದೆ. ಯಾವುದೇ ವಿಷಯದ ಹಂಗಿಲ್ಲದೇ ಗಂಟೆಗಟ್ಟಲೆ ಹರಟುತ್ತಿದ್ದೆವು. ಈ ನಡುವೆ ಅವಳ ಕೆಲಸದ ವಿಷಯ ನನ್ನ ತಲೆ ಕೊರೆಯುತ್ತಿತ್ತು. 

ಒಂದು ಸಂಜೆ ಅವಳೇ ಮೆಲ್ಲಗೆ ನನ್ನಲ್ಲಿ ಕೇಳಿದ್ದಳು "ಇಲ್ಲಿನ ವಾತಾವರಣದಲ್ಲಿ ಸಮಯ ಹೋಗುವುದೇ ತಿಳಿಯುವುದಿಲ್ಲ. ಆದರೂ...... ಸಮಾ, ನೀನು ತಪ್ಪು ತಿಳಿಯಲ್ಲ ಅಂದ್ರೆ..... ನನಗೊಂದು ಕೆಲಸ ಹುಡುಕಬಹುದಾ? ಒಂದು ಕೆಲಸ ಅಂತಿದ್ರೆ ಅದೊಂದು ಸ್ವಾತಂತ್ರ್ಯ ಕೊಡುತ್ತೆ. ನಾನಿಲ್ಲಿ ಖುಷಿಯಾಗಿಲ್ಲ ಅಂತಲ್ಲ. ಆದ್ರೆ ಎಷ್ಟು ದಿನ ಅಂತ ಹೀಗೆ ಇರೋದು....‌" 

"ಇಲ್ಲಾ ನವ್ಯಾ, ನಾನೂ ಆ ಹುಡುಕಾಟದಲ್ಲೇ ಇದ್ದೀನಿ. ವಿದ್ಯಾಭ್ಯಾಸದ ದಾಖಲೆಗಳಿಲ್ಲದೇ ಯಾರೂ ಕೆಲಸ ಕೊಡಲಾರರು. ಹಿಂದುಮುಂದು ನೋಡದೆ ಯಾರ್ಯಾರ‌ ಬಳಿಯೋ ನಿನ್ನನ್ನು ಕೆಲಸಕ್ಕೆ ಕಳಿಸಲಾಗದು. ಕೆಲವು ಕಡೆ ನೋಡಿದೆ ಆದ್ರೆ ನಂಗಿಷ್ಟ ಆಗ್ಲಿಲ್ಲ ಕಣೇ. ಸ್ವಲ್ಪ ಸಮಯ ಕೊಡು. ನಾನು ವ್ಯವಸ್ಥೆ ಮಾಡ್ತೀನಿ" ಅಂದಿದ್ದೆ. ಆದರೆ ನನಗ್ಯಾವ ದಾರಿಯೂ ಕಾಣುತ್ತಿರಲಿಲ್ಲ. ಅದೇ ಯೋಚನೆಯಲ್ಲೇ ಮುಳುಗಿದ್ದ ನನ್ನನ್ನು ಸರಿಯಾಗಿ ಗಮನಿಸಿದ್ದರು ಮೀರಾ.

"ಎರಡು ದಿನದಿಂದ ನೋಡ್ತಿದ್ದೀನಿ. ನಿನ್ನ ಗಮನ ಇಲ್ಲಿಲ್ಲ. ಏನಾದ್ರೂ ಸಮಸ್ಯೆ ಇದ್ಯಾ?" ಕೇಳಿದ್ದರು. ಅವರಿಗೆ ಹೇಳಬೇಕೆನಿಸಿತು. ಅವರು ಬೇರೆಯವರ ನೋವಿಗೆ ಸ್ಪಂದಿಸುವ ಗುಣ ಹೊಂದಿದಾಕೆ. ಏನಾದರೂ ಸಹಾಯ ಮಾಡಬಹುದು ಎನಿಸಿದಾಗ ಅವರಿಗೆ ಸಂಕ್ಷಿಪ್ತವಾಗಿ ಅವಳ ಬಗ್ಗೆ ವಿವರಿಸಿದೆ. ತುಂಬಾ ತೊಂದರೆಯಲ್ಲಿದ್ದಳು ಎಂದೆನಾದರೂ ಎಲ್ಲಿ, ಏನು ಮಾಡುತ್ತಿದ್ದಳೆಂದು ಹೇಳಲಿಲ್ಲ. ಅವರೂ ಕೇಳಲಿಲ್ಲ. ಈಗ ಅವಳಿಗೆ ಕೆಲಸ ಹುಡುಕಬೇಕಾಗಿದೆ ಆದರೆ ಅವಳ ವಿದ್ಯಾಭ್ಯಾಸ ಕಡಿಮೆ ಮತ್ತದರ ದಾಖಲೆಗಳೂ ಇಲ್ಲ ಎಂದೆ. ಅವರಿಗೆ ನನ್ನ ಸಮಸ್ಯೆ ಅರ್ಥವಾಗಿತ್ತು. 

ಸ್ವಲ್ಪ ಯೋಚಿಸಿದವರೇ "ನೀನು ನಾಳೆ ಅವಳನ್ನು ಇಲ್ಲಿಗೆ ಕರೆತಾ. ಅಕೌಂಟ್ ಸೆಕ್ಷನ್ನಲ್ಲಿ ವರ್ಕ್ ಲೋಡ್ ಜಾಸ್ತಿ ಇದೆ ಅಂತಿದ್ರು. ಹೇಗೂ ಕಲಿಯೋದರಲ್ಲಿ ಚುರುಕು ಅಂತೀಯಲ್ಲ. ಒಂದು ತಿಂಗಳು ಟ್ರೈನಿಂಗ್ ಕೊಟ್ಟು ನೋಡೋಣ. ಕೆಲಸ ಗೊತ್ತಾದ್ರೆ ಅಲ್ಲೇ ಮುಂದುವರೀಲೀ ಇಲ್ಲಾ ಆಮೇಲೆ ಬೇರೆ ನೋಡೋಣ" ಅಂದಿದ್ದರು. ನನಗಂತೂ ವಿಪರೀತ ಖುಷಿ. ನವ್ಯಾ ಇಲ್ಲೇ ನನ್ನ ಜೊತೆಯೇ ಇರ್ತಾಳೆ ಅನ್ನೋ ನೆಮ್ಮದಿ ಬೇರೆ.

ಮರುದಿನದಿಂದಲೇ ನವ್ಯಾ ಧನ್ವಂತರಿಯ ಅಕೌಂಟ್ ಡಿಪಾರ್ಟ್ಮೆಂಟ್ ಸೇರಿದಳು. ಕಲಿಯುವ ಅಪಾರ ಆಸಕ್ತಿ ಇತ್ತವಳಿಗೆ. ಕೆಲವೇ ದಿನಗಳಲ್ಲೇ ಕೆಲಸದಲ್ಲಿ ಪರ್ಫೆಕ್ಟ್ ಅಂತ ಸರ್ಟಿಫಿಕೇಟ್ ತೆಗೆದುಕೊಂಡುಬಿಟ್ಟಿತ್ತು ಹುಡುಗಿ. ಅವತ್ತು ಅನಿಸಿತ್ತು ಇವಳು ಆ ನರಕದೊಳಗೆ ಸಿಕ್ಕಕೊಳ್ಳದೇ ಇದ್ದಿದ್ದರೆ ಖಂಡಿತಾ ಬಹಳ ಸಾಧಿಸುತ್ತಿದ್ದಳು ಎಂದು.

ಹೀಗೆ ನವ್ಯಾ ಧನ್ವಂತರಿ ಬಳಗಕ್ಕೆ ಸೇರಿದ್ದಳು. ನಂತರದ ದಿನಗಳಲ್ಲಿ ಆಸ್ಪತ್ರೆಗೆ ಹತ್ತಿರವೇ ಒಂದು ಪುಟ್ಟ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾಯಿತು. ನಾನು ಮಿಸ್ಟರ್ ಸತ್ಯಂ ರಾವ್ ಅವರ ಬಂಗಲೆಯ ಕಡೆ ಹೋಗುವುದೂ ಕಡಿಮೆ ಆಯಿತು. ವಾರದಲ್ಲಿ ಮೂರ್ನಾಲ್ಕು ದಿನ ಇಲ್ಲೇ ನನ್ನ ವಾಸ್ತವ್ಯ. ನಮ್ಮಿಬ್ಬರ ಅವ್ಯಾಹತ ಕಾಡುಹರಟೆಗಳಲ್ಲಿ, ಪರಸ್ಪರ ಅಕ್ಕರೆಯ ಆಸರೆಯಲ್ಲಿ, ಇಬ್ಬರು ಪಾಕಪ್ರವೀಣೆಯರ ನಳಪಾಕದಲ್ಲಿ, ಕೊನೆಮೊದಲಿಲ್ಲದ ಸಂವಾದಗಳಲ್ಲಿ, ಹುಚ್ಚು ಅಲೆದಾಟಗಳಲ್ಲಿ ಸಮಯ ಅಂಕೆಗೆ ಸಿಗದಂತೆ ಸರಿಯುತ್ತಿತ್ತು........

ಈ ನಡುವೆ ಯಾರದೋ ಹೃದಯದಲ್ಲಿ ಪ್ರೀತಿಯ ಮೊಳಕೆಯೊಂದು ಕುಡಿಯೊಡೆದಿತ್ತೇ???? 

ಆ ಕ್ಷಣಕ್ಕೆ ನನಗೆ ತಿಳಿಯಲಿಲ್ಲ..... ಅವಳಿಗೋ ಅದರ ಪರಿವೆಯೇ ಇರಲಿಲ್ಲ.....

ಆದರೆ ಬಹುಬೇಗ ಆ ಪ್ರೀತಿಯ ಘಮಲು ನನ್ನ ಕಣ್ಣ್ಮುಂದೆಯೇ ವ್ಯಾಪಿಸಿದಾಗ........

ಅವನು ನನ್ನೆದುರಲ್ಲೇ ನಿಂತು ಅವಳ ಮೇಲೆ ತನಗಿರುವ ಪ್ರೇಮವನ್ನೂ, ಅವಳೊಂದಿಗಿನ ತನ್ನ ಭವಿಷ್ಯದ ಕನಸುಗಳ ಮೆರವಣಿಗೆಯನ್ನೂ ಹಂಚಿದಾಗ......... 

ಅವನ ಅದಮ್ಯ ಪ್ರೇಮಕ್ಕೆ ಕೈ ಮುಗಿಯಲೋ ಇಲ್ಲಾ ಅವಳ ಹಿನ್ನೆಲೆಯೆಂಬ ಪ್ರೇತಕ್ಕೆ ತಲೆಬಾಗಲೋ ಎಂದು ಅರಿವಾಗದೇ ಬೆಚ್ಚಿದ್ದೆ............

ಹಾಗೆ ಶುರುವಾಗಿತ್ತು ಒಂದು ಪ್ರೇಮ ಪರ್ವ..........

                 ಮುಂದುವರೆಯುತ್ತದೆ



ಅನೂಹ್ಯ 10

ನಾನು ಆ ದಿನ ಅತೀವ ಸಂತಸದಲ್ಲಿದ್ದೆ. ಇಂದು ನನ್ನ ಗೆಳತಿ ಹೊರಬರುತ್ತಾಳೆ ನರಕ ಸದೃಶ ಬದುಕಿನಿಂದ.......

ಅವಳು ಹೊರಬಂದಾಗ ಅವಳಿಗಾಗುವ ಸಂತೋಷ,  ಅವಳ ಕಣ್ಣುಗಳಲ್ಲಿ ಕಾಣಬಹುದಾದ ಬಿಡುಗಡೆಯ ನೆಮ್ಮದಿಯ ನಿರೀಕ್ಷೆಯಲ್ಲಿ ನಾನು ಕಾತರಳಾಗಿದ್ದೆ....... 

ಆ ಕ್ಷಣ ಕೊನೆಗೂ ಬಂದೇ ಬಿಟ್ಟಿತ್ತು.....

ಪೋಲೀಸರು ಕಮಲಾಬಾಯಿಯ (ರೂಬಿಯ ಮಾಲೀಕೆ) ಕೋಠಿಗೆ ರೈಡ್ ಮಾಡಲು ಹೊರಟಾಗ ನಾನೂ ಅವರೊಂದಿಗೆ‌ ಹೋಗಲು ತುದಿಗಾಲಲ್ಲಿ ನಿಂತಿದ್ದೆ. ಆದರೆ ಅವರು ಹಾಗೆಲ್ಲಾ ಕರೆದೊಯ್ಯಲಾಗದು ಎಂದಾಗ ಸ್ಟೇಷನ್ ನಲ್ಲೇ ಕಾಯುತ್ತಾ ಉಳಿಯಬೇಕಾಯಿತು. ಅಲ್ಲಿ ಇನ್ನೊಂದಿಷ್ಟು ಜನರಿದ್ದರು. ಅವರೂ ಕೂಡಾ ನನ್ನಂತೇ ಯಾರದೋ ನಿರೀಕ್ಷೆಯಲ್ಲಿದ್ದಂತೆ ಕಂಡಿತು. ಅವರ ಗುಂಪಿನಲ್ಲಿ ಹೆಂಗಸರು, ಮಕ್ಕಳು ಕೂಡಾ ಇದ್ದರು. ಅವರ ಮುಖಗಳಲ್ಲಿ ನೋವು ಬೆರೆತ ಕಾತುರತೆಯಿತ್ತು. ಹೆಂಗಸರು ಮೌನವಾಗಿ ಕಣ್ಣೀರು ಸುರಿಸುವಂತೆಯೂ ಅನಿಸಿತು. ಯಾಕೋ ಅಲ್ಲಿರಲು ಮನಸ್ಸಾಗದೆ ಹೊರಬಂದು ನಿಂತಿದ್ದೆ.

ಸಮಯ ಬಹಳ ನಿಧಾನವಾಗಿ ಸಾಗಿತ್ತು ಆ ದಿನ......

ದೇವರೇ, ಎಲ್ಲಾ ಸುಗಮವಾಗಿ ನಡೆಯಲಿ ಎಂದು ಅದೆಷ್ಟು ಬಾರಿ ಕೇಳಿಕೊಂಡೆನೋ ನನಗೇ ತಿಳಿಯದು.

ಕೊನೆಗೂ ಪೋಲಿಸ್ ವ್ಯಾನ್ ಬಂದೇ ಬಂದಿತು. ಪೋಲೀಸ್ ವ್ಯಾನ್ ಬಂದೊಡನೆ ನಾನು ಒಂದೇ ಏಟಿಗೆ ಹಾರಿಬಂದಿದ್ದೆ ಅವಳನ್ನು ಸ್ವಾಗತಿಸಲು. ಆದರೆ ಅವಳೊಂದಿಗಿದ್ದ ಇನ್ನೂ ನಾಲ್ವರು ಹುಡುಗಿಯರನ್ನು ಕಂಡು ನನಗೆ ಅಚ್ಚರಿಯಾಗಿತ್ತು. ಈ ಹುಡುಗಿಯರನ್ನೂ ಅಲ್ಲೇ ನೋಡಿದ್ದ ನೆನಪಾಯಿತು. 

ನನ್ನ ಕಣ್ಣಲ್ಲಿನ ಅಚ್ಚರಿ ಗಮನಿಸಿದ ಎಸ್.ಐ "ಇವರನ್ನೂ ರೂಬಿಯೊಂದಿಗೇ ಬಿಡಿಸಿಕೊಂಡು ಬಂದಿದ್ದೇವೆ ಅಲ್ಲಿಂದಲೇ" ಎಂದಾಗ ನನಗೆ ಇನ್ನಷ್ಟು ಆಶ್ಚರ್ಯ. ಈ ಹುಡುಗಿಯರನ್ನು ಯಾರು ಹುಡುಕುತ್ತಿರಬಹುದು? ಕಂಪ್ಲೈಂಟ್ ಕೊಟ್ಟವರ್ಯಾರು?  ಹುಡುಗಿಯರನ್ನು ಅಷ್ಟು ಸುಲಭವಾಗಿ ಈ ಕೋಠಿಗಳಿಂದ ಹೊರತರಲು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತಿತ್ತು. ಇದು ಹೇಗಾಯ್ತು? ಅರ್ಥವಾಗಲಿಲ್ಲ. ಪ್ರಶ್ನಾರ್ಥಕವಾಗಿ ಅವರತ್ತ ನೋಡಿದ್ದೆ.

"ನೋಡಿ, ministry of Home affairs ಅವರು anti human trafficking cell ಅಂತಾ ಒಂದು ಹೊಸ ವಿಂಗ್ ತೆರೆದಿದ್ದಾರೆ. ಮಕ್ಕಳು ಹಾಗೂ ಹುಡುಗಿಯರ ಅಪಹರಣ ಅಥವಾ ನಾಪತ್ತೆ ಪ್ರಕರಣಗಳಲ್ಲಿ ಯಾವುದೇ ವೈಯಕ್ತಿಕ ಕಾರಣ ಸಿಗದಿದ್ದರೆ ಮತ್ತು ಅವು human trafficking ಗೆ ಸಂಬಂಧಿಸಿವೆ ಅಂತ ಅನಿಸಿದರೆ ಆ ಕೇಸಿನ ಫೈಲುಗಳು ನೇರವಾಗಿ anti human trafficking cell ನ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗುತ್ತವೆ.ದೇಶದ ಪ್ರತಿಯೊಂದು ಪೋಲಿಸ್ ಠಾಣೆಯಲ್ಲೂ ಈ anti human trafficking cell ನ ಒಂದು ವಿಭಾಗವಿರುತ್ತೆ. ಹಾಗಾಗಿ ಯಾವುದೇ ಕೇಸಿನ ಫೈಲ್ ಈ cellನಲ್ಲಿ ಅಪ್ಲೋಡ್ ಆದಾಗ ಅದರ ಮಾಹಿತಿ ದೇಶದ ಎಲ್ಲಾ ಪೋಲೀಸ್ ಠಾಣೆಗಳಿಗೆ ನೇರವಾಗಿ ರವಾನೆಯಾಗುತ್ತದೆ. ನಾವು ಯಾವುದೇ ವೇಶ್ಯಾಗಾರಗಳನ್ನು ರೈಡ್ ಮಾಡಲು ಹೊರಡುವಾಗ ಈ cell ನಲ್ಲಿ ಅಪ್ಲೋಡ್ ಆಗಿರೋ ನಾಪತ್ತೆಯಾದ ಹುಡುಗಿಯರ ಮಾಹಿತಿಯನ್ನು ಇಟ್ಟುಕೊಂಡಿರುತ್ತೇವೆ. ಅದರಲ್ಲಿ ಯಾರಾದರೂ ರೈಡ್ ಮಾಡಿದಲ್ಲಿ ಸಿಕ್ಕರೆ ಅವರನ್ನೂ ಬಿಡಿಸಿಕೊಂಡು ಬರುತ್ತೇವೆ" ಎಸ್.ಐ ದೀರ್ಘವಾಗಿ ವಿವರಿಸಿದರು. 

ನನಗೆ ಈ ಬಗ್ಗೆ ತಿಳಿದಿರಲಿಲ್ಲ. ಸರಿಯಾಗಿ ನಿರ್ವಹಿಸಿದರೆ ಬಹಳ ಪರಿಣಾಮಕಾರಿಯಾಗಬಲ್ಲ ವ್ಯವಸ್ಥೆ ಇದು. ವೈಯಕ್ತಿಕ ಕಂಪ್ಲೈಂಟ್ ದಾಖಲಾಗದಿದ್ದರೂ, ದೇಶದ ಯಾವುದೋ ಒಂದು ಭಾಗದಿಂದ ಅಪಹರಿಸಲ್ಪಟ್ಟು human trafficking ನ ಕರಿನೆರಳಿಗೆ ಸಿಲುಕಿದ ಎಷ್ಟೋ ಅಮಾಯಕ ಮಕ್ಕಳು ಹಾಗೂ ಯುವತಿಯರು ಯಾವುದೇ ಮೂಲೆಯಲ್ಲಿದ್ದರೂ ಈ ವ್ಯವಸ್ಥೆಯಿಂದ ಅವರನ್ನು ಹುಡುಕುವುದು ಸುಲಭವಾಗುತ್ತದೆ ಎನಿಸಿತು. 

ಐವರನ್ನು ಹಾಗೂ ನನ್ನನ್ನು ಠಾಣೆಯೊಳಗೆ ಬರಹೇಳಿ ಎಸ್.ಐ ಒಳನಡೆದಾಗ ನನ್ನ ಯೋಚನೆಯಿಂದ ಹೊರಬಂದೆ. ಐವರೂ ವ್ಯಾನ್ ನಿಂದ ಇಳಿಯುತ್ತಿದ್ದರು. ಆ ನಾಲ್ವರು ಹುಡುಗಿಯರ ಮುಖದಲ್ಲಿ ನರಕದಿಂದ ಹೊರಬಂದ ನೆಮ್ಮದಿಯೊಂದಿಗೆ ಮುಂದೇನು ಎಂಬ ಯೋಚನೆಯೂ ಮಿಳಿತವಾಗಿತ್ತು. 

ಆಗ ನೆನಪಾಯಿತು..... ಒಳಗೆ ಅಳುತ್ತಿದ್ದ ಹೆಂಗೆಳೆಯರು...... ಬಹುಶಃ ಈ ಹುಡುಗಿಯರ ಮನೆಯವರಿರಬೇಕು.

ಅವರು ಒಳನಡೆದಾಗ ನಾನು ನನ್ನ ಗೆಳತಿಯ ಬಳಿ ನೆಡೆದೆ. ಅವಳು ಭಾವತೀವ್ರತೆಗೆ ಒಳಗಾಗಬಹುದೆಂಬುದು ನನ್ನ ಅನಿಸಿಕೆಯಾಗಿತ್ತು.

ಅದೇ ನಿರೀಕ್ಷೆಯಲ್ಲಿಯೇ ಅವಳನ್ನು ಸಮಾಧಾನಿಸಲು ತಯಾರಾಗಿದ್ದೆ ಕೂಡಾ. 

ಆದರೆ... ಅವಳು ನನ್ನ ಕಂಡು ನಸುನಕ್ಕಳಷ್ಟೇ. ಆ ಕ್ಷಣ ಅವಳು ಅಳಲಿಲ್ಲ, ಬಿಕ್ಕಲಿಲ್ಲ, ಖುಷಿಯಿಂದ ಕುಣಿದಾಡಲೂ ಇಲ್ಲ. ನಿರ್ಲಿಪ್ತಳಂತೆ ಕಂಡಿದ್ದಳು.

ಅವಳನ್ನು ನೋಡಿ ನನಗೇ ಅಚ್ಚರಿಯಾಗಿತ್ತು.

ಬಹುಶಃ ತಾನು ಆ ಕಸಾಯಿಖಾನೆಯಿಂದ ಹೊರಬರುವೆನೆಂಬ ಆಸೆಯನ್ನೇ ಕೈ ಬಿಟ್ಟಿದ್ದ ಅವಳಿಗೆ ಹೊರಬಂದಾಗ ಆದ ಸಂತೋಷಕ್ಕೆ ಶಾಕ್ ಆಗಿರಬಹುದು ಎಂದುಕೊಂಡೆ. ಅವಳ ಕೈ ಹಿಡಿದು ಒಳಗೆ ಕರೆದೊಯ್ದೆ.

ಪೋಲಿಸ್ ಠಾಣೆಯಲ್ಲಿ ಕೆಲವು ಅಗತ್ಯ ಪ್ರೊಸೀಜ಼ರ್ ಗಳನ್ನು ಮುಗಿಸಬೇಕಿತ್ತು. ನಾನು ಅವಳೊಂದಿಗೆ ಎಸ್.ಐ ಕ್ಯಾಬಿನ್ ಕಡೆ ಹೋಗುವಾಗ ಆ ನಾಲ್ವರು ಹುಡುಗಿಯರು ತಮ್ಮ ಜೀವಮಾನದ ಹಿಂಸೆ, ನೋವನ್ನೆಲ್ಲಾ  ಹೊರಹಾಕುವಂತೆ ತಮ್ಮ ‌ತಾಯಂದಿರ ತೆಕ್ಕೆಯಲ್ಲಿ ಅಳುತ್ತಿದ್ದರು.

ನಾನು ಅವಳೊಂದಿಗೆ ಎಸ್.ಐ ಕ್ಯಾಬಿನ್ ಹೊಕ್ಕಿದ್ದೆ. ಅವರಿಗೆ ಅವಳ ವಿವರಗಳು ಬೇಕಿದ್ದವು. ಅವರು ಹೆಸರೇನೆಂದು ಕೇಳಿದಾಗ ನಾನು ಅವಳು ಬಾಯ್ತೆರೆಯುವ ಮುನ್ನವೇ "ನವ್ಯಾ" ಎಂದಿದ್ದೆ.

ಅವಳು ತಬ್ಬಿಬ್ಬಾಗಿ ನನ್ನೆಡೆ ನೋಡಿದ್ದಳು. ಅವರು ಅವಳ ಇತರೆ ವಿವರಗಳನ್ನು ಬರೆದುಕೊಂಡು "ಮೇಡಂ, ನೀವು ಇವರ ಗಾರ್ಡಿಯನ್ ಆಗಿ ಎಲ್ಲಾ ಜವಾಬ್ದಾರಿ ತಗೋತೀರಾ ಅಂತ ಎ.ಸಿ.ಪಿ ಸರ್ ಹೇಳಿದ್ರೂ" ಅಂದಾಗ ನಾನು ಹೌದೆಂದು ತಲೆಯಾಡಿಸಿದೆ. ಅವರು ಒಂದು ಸಹಿ ಹಾಕಿಸಿ " ಇಷ್ಟೇ. ಎಲ್ಲಾ ಪ್ರೊಸೀಜ಼ರ್ ಮುಗೀತು. ನೀವಿನ್ನು ಹೊರಡಿ" ಅಂದರು. ನಾನು ನವ್ಯಾಳೊಂದಿಗೆ ಹೊರಬಂದೆ.

ಆ ನಾಲ್ವರು ಹುಡುಗಿಯರು ನಮ್ಮನ್ನು ಕಂಡೊಡನೆ ಓಡಿಬಂದರು. ನವ್ಯಾಳನ್ನು ಅಪ್ಪಿಕೊಂಡು ಅಳತೊಡಗಿದರು. ಅವಳ ಕಣ್ಣುಗಳು ಮಂಜಾದರೂ ಕೆನ್ನೆ ಮೇಲೆ ಇಳಿಯದಂತೆ ತಡೆದಳು. ಐವರೂ ಒಬ್ಬರನ್ನೊಬ್ಬರು ಸಾಂತ್ವನಿಸುವಂತೆ ಕಂಡಿತು. ಅಷ್ಟರಲ್ಲೇ ಅವರನ್ನು ಎಸ್.ಐ ಒಳಗೆ ಕರೆದರು. ಆ ನಾಲ್ವರು ನನ್ನೆಡೆಗೆ ಒಂದು ಕೃತಜ್ಞತೆಯ ನೋಟಬೀರಿ ಅವಳಿಗೆ ಕೈಬೀಸಿ ಹೊರಟರು. ಅವರ ಕುಟುಂಬದವರೂ ನನಗೆ ಕೈ ಮುಗಿದಾಗ ನನಗೇನೂ ಅರ್ಥವಾಗಲಿಲ್ಲ. ಎಲ್ಲಾ ಅಯೋಮಯವೆನಿಸಿತು. 

ಅವಲ್ಲೊಬ್ಬರು ನನ್ನ ಬಳಿ ಬಂದು, 

"ನೀ ಮಾಡಿರೋ ಉಪಕಾರ ಹ್ಯಾಂಗ ತೀರ್ಸಬೇಕೋ ಗೊತ್ತಿಲ್ಲೇ ನಮ್ಮವ್ವ. ಆರ್ ವರ್ಸದಿಂದ ಶ್ಯಾನೆ ತಿರ್ಗೀವೇ ತಾಯಿ. ನಾವ್ ಮಗಿನ ಮಾರಿ ಮತ್ತ್ ಕಾಣ್ತೀವ ಅನ್ನು ಆಸೀನ ಬುಟ್ಟಿದ್ವಿ ಕನವ್ವ. ನೀ ಯಾರೋ ಆ ತಾಯಿ ಯಲ್ಲವ್ವನಂಗೆ ಬಂದು ಕೊನಿಗೂ ಜೀವ ಹೋಗೂ ಮುಂದಾ ಮಗಿನ ಮಾರಿ ನೋಡೋಹಂಗಾತು ಮಗಾ" ಅಂತ ನನ್ನ ಕೈಯನ್ನು ಕಣ್ಣಿಗೊತ್ತಿದ್ದರು.

ನಾನು ಏನು ಹೇಳಬೇಕೆಂದು ತಿಳಿಯದೆ ಮೌನವಾದೆ. ಆದರೆ ಅವರ ಕಣ್ಣಲ್ಲಿನ ಆ ಭಾವ ಮಾತ್ರ ನನ್ನ ಜೀವಮಾನದಲ್ಲಿ ಮರೆಯಲಾರೆ. "ಸರ್ ಒಳಗೆ ಕರೀತಿದ್ದಾರೆ ಹೋಗಿ. ಎಲ್ಲಾ ಮುಗಿಸಿ ಅವ್ರನ್ನ ಮನೆಗೆ ಕರ್ಕೊಂಡು ಹೋಗಿ" ಅಂದು ನವ್ಯಾಳೊಂದಿಗೆ ಹೊರಟೆ. 

ಅವಳು ಎರಡು ಹೆಜ್ಜೆ ನನ್ನೊಂದಿಗೆ ಬಂದವಳೇ ಮತ್ತೆ ನಿಂತು ಅವರನ್ನು ಕರೆದು "ಸರ್, ನಿಮ್ಮ ಮಕ್ಕಳು ತುಂಬಾ ನೋವು ತಿಂದಿದ್ದಾರೆ. ಅವ್ರನ್ನ ಆದಷ್ಟು ಚೆನ್ನಾಗಿ ನೋಡ್ಕೋಳಿ. ಒಬ್ಬೊಬ್ಬರನ್ನೇ ಬಿಡಬೇಡಿ. ಯಾರನ್ನೂ ನಂಬಿ ಹೆಣ್ಮಕ್ಕಳನ್ನು ಕಳಿಸಬೇಡಿ. ಅವ್ರು ತುಂಬಾ ಹತ್ರದವರಾದರೂ ಹೆಣ್ಮಕ್ಕಳ ವಿಷಯದಲ್ಲಿ ಜಾಗ್ರತೆ ಮಾಡಿ. ಹಾಗೇ........ ಸಾಧ್ಯವಾದ್ರೆ ನೀವಿರೋ ಊರು ಬಿಟ್ಟು ಬೇರೆ ಕಡೆ ಹೋಗಿ ಸರ್. ಜನರ ನಾಲಿಗೆ ತುಂಬಾ ಹರಿತವಾಗಿರುತ್ತೆ. ಅದು ಕೊಡೋ ನೋವು ಬೇರೆಲ್ಲಕ್ಕಿಂತ ಭಯಂಕರವಾಗಿರುತ್ತೆ. ಆ ಯಾತನೆ ಈವರೆಗೆ ಅವರು ಸಹಿಸಿದಕ್ಕಿಂತಲೂ ಭೀಕರವಾಗಿರುತ್ತೆ" ಅಂದು ಹೊರನಡೆದಾಗ ನಾನು ಮೌನಗೌರಿಯಾಗಿ ಅವಳನ್ನು ಹಿಂಬಾಲಿಸಿದ್ದೆ. 

ಆ ಮಾತುಗಳನ್ನು ನಾನೂ ನವ್ಯಾಳ ವಿಷಯದಲ್ಲಿ ಅನ್ವಯಿಸಿಕೊಳ್ಳಬೇಕಿತ್ತು…...

ಕಾರ್ ಪಾರ್ಕ್ ಮಾಡಿದಲ್ಲಿಗೆ ನಡೆಯುವಾಗ "ಅದ್ಯಾಕೆ ನನ್ನ ಹೆಸರು ನವ್ಯಾ ಅಂದೆ" ಕೇಳಿದಳು. ನಾನು ಕಿರುನಗುತ್ತಾ "ನಿನ್ನ ಮಾ ಬಾಬಾ ಇಟ್ಟಿರೋ ಹೆಸರು ನೀನು ಹೇಳೋಲ್ಲ. ರೂಬಿ ಅಂತ ನಿನ್ನ ಕರ್ಯೋಕೆ ನಂಗಿಷ್ಟ ಇಲ್ಲ, ಕೇಳೋಕೆ ನಿಂಗೂ ಇಷ್ಟ ಇಲ್ಲ ಅಂತ ನಂಗೊತ್ತು. ಇವತ್ತಿಂದ, ಈ ಕ್ಷಣದಿಂದ ನಿನ್ನ ಹಳೆಯ ಬದುಕಿನ ಪೊರೆ ಕಳಚಿದೆ ಅಂದ್ಕೋ. ಈಗಿನಿಂದ ನೀನು ಹೊಸ ಪ್ರಪಂಚಕ್ಕೆ, ಹೊಸ ಬದುಕಿಗೆ ಕಾಲಿಡ್ತಿದ್ದೀಯ. ಹೊಸ ಬದುಕಿಗೆ ಹೊಸ ಹೆಸರು…. ನವ್ಯಾ….. ನಂದೇ ಸೆಲೆಕ್ಷನ್. ಯಾಕೆ ಚೆನ್ನಾಗಿಲ್ವಾ ಹೆಸರು?" ಕೇಳಿದೆ. 

"ಚೆನ್ನಾಗಿದೆ" ತಲೆ ಆಡಿಸಿದಳು.

ಕಾರು ವೇಗವಾಗಿ ಚಲಾಯಿಸತೊಡಗಿದೆ. ಅವಳು ಸುತ್ತ ನೋಡುತ್ತಿದ್ದರೂ ತಲೆಯಲ್ಲಿ ನೂರಾರು ಯೋಚನೆಗಳಿದ್ದವೆಂದು ನನಗೂ ತಿಳಿದಿತ್ತು. ನಾನೂ  

ಅವಳ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೆ.

ಅವಳನ್ನು ಅಲ್ಲಿಂದ ಹೊರಗೇನೋ ಕರೆತಂದಿದ್ದೆ. ಆದರೆ ಇಲ್ಲಿ ಅವಳ ಬದುಕನ್ನು ಕಟ್ಟಿಕೊಡುವುದು ಸುಲಭದ ಸವಾಲಲ್ಲ. ಮೊದಲೇ ಸೂಕ್ಷ್ಮ ಮನಸ್ಸಿನವಳು. ಅವಳಲ್ಲಿ ಧೈರ್ಯ ತುಂಬಿ, ಈ ವಾತಾವರಣಕ್ಕೆ ಅವಳನ್ನು ಒಗ್ಗಿಸಬೇಕಿತ್ತು. ಮೊದಲಿಗೆ ಅವಳನ್ನು ಇರಿಸುವುದೆಲ್ಲಿ? ನನ್ನ ಮನೆಗೆ ಕರೆದೊಯ್ಯಲು ಸಾಧ್ಯವೇ ಇರಲಿಲ್ಲ. ನಾನೇ ಪರಕೀಯಳು ಎನಿಸುವಲ್ಲಿ ಇವಳನ್ನು ಹೇಗಿರಿಸಲಿ? 

ಅವಳಿಗೆ ಏನಾದರೊಂದು ಕೆಲಸ ನೋಡಬೇಕಿತ್ತು. ಕೈ ತುಂಬಾ ಕೆಲಸವಿದ್ದರೆ ಚಿಂತೆಗೆ ಜಾಗವಿರುವುದಿಲ್ಲ. ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಒಂದು ಬಗೆಯ ಧೈರ್ಯವನ್ನು ನೀಡುತ್ತದೆ. ಮೊದಲು ಇವಳಿಗೊಂದು ಕೆಲಸ ಹುಡುಕಬೇಕು. ನಂತರ ಅದಕ್ಕೆ ಸರಿಯಾಗುವಂತೆ ಒಂದು ಪುಟ್ಟ ಮನೆ ನೋಡಿದರಾಯಿತು. ಅಲ್ಲಿಯವರೆಗೆ ಇವಳನ್ನು "ಆಶ್ರಯ"ದಲ್ಲಿ ಇರಿಸಲು ನಿರ್ಧರಿಸಿದ್ದೆ.

ದಾರಿಯಲ್ಲಿ ಶಾಪಿಂಗ್ ಮಾಲ್ ಒಂದು ಕಂಡಾಗ ನವ್ಯಾಳಿಗೆ ಬಟ್ಟೆ ಕೊಳ್ಳಬೇಕೆಂದು ನೆನಪಾಗಿ ಅಲ್ಲಿಗೆ ಕರೆದೊಯ್ದೆ. ಅವಳು "ನಂಗೇನೂ ಗೊತ್ತಾಗೋಲ್ಲ. ನೀನೇ ನೋಡಮ್ಮ" ನನಗೇ ಬಿಟ್ಟಳು. ನಾನೇ ಒಂದಷ್ಟು ಉಡುಪುಗಳನ್ನು ಆರಿಸಿ ಪ್ಯಾಕ್ ಮಾಡಿಸಿದೆ. ಇನ್ನೊಂದಿಷ್ಟು ಅಗತ್ಯ ವಸ್ತುಗಳನ್ನು ಖರೀದಿಸಿದೆ. ಹೊಟ್ಟೆ ಚುರುಗುಟ್ಟತೊಡಗಿದಾಗ ಊಟದ ನೆನಪಾಯಿತು. ಹೋಟೆಲೊಂದನ್ನು ಹೊಕ್ಕೆವು. ಮೆನು ನೋಡುವ ತೊಂದರೆಯನ್ನೇ ತಗೊಳ್ಳದೇ ಎರಡು ಮೀಲ್ಸ್ ಹೇಳಿದೆ. 

"ನವ್ಯಾ, ಬೇರೆನಾದ್ರೂ ಬೇಕಾ?" ಊಟ ಮಾಡುತ್ತಾ ಕೇಳಿದೆ. ಉತ್ತರ ಬರದಾಗ ಅವಳತ್ತ ನೋಡಿದೆ. ಅವಳ ನೋಟ ಎದುರಿನ ಟೇಬಲ್ ಮೇಲಿದೆ ಅನಿಸಿದಾಗ ಮೆಲ್ಲಗೆ ಆ ನೋಟವನ್ನು ಹಿಂಬಾಲಿಸಿತು ನನ್ನ ಕಣ್ಗಳು...

ಎದುರಿನ ಟೇಬಲ್ ನಲ್ಲಿ ಮೂವರು ಹುಡುಗಿಯರು ಲೋಕವನ್ನೇ ಮರೆತು ಹರಟುತ್ತಿದ್ದರು. ನಡುವೆ ಸೆಲ್ಫೀ ಬೇರೆ. ಊಟದ ಮೇಲೆ ಗಮನವೇ ಇರಲಿಲ್ಲ. ಇವಳ್ಯಾಕೆ ಇವರನ್ನು ಹೀಗೆ ಗಮನಿಸುತ್ತಿದ್ದಾಳೆ? ಯೋಚಿಸಿದೆ. ಅವರ ಮಾತನ್ನು ಗಮನವಿಟ್ಟು ಕೇಳಿದಾಗ ಗೊತ್ತಾಯಿತು.

ಆ ಹುಡುಗಿಯರು ಬೆಂಗಾಲಿ ಮಾತಾಡುತ್ತಿದ್ದರು.

ಎಷ್ಟೆಂದರೂ ಅವಳ ಮಾತೃಭಾಷೆ......... ಅದರ ಸೊಗಡೇ ಬೇರೆ....... ಅವಳ ಕಣ್ಣಲ್ಲಿ ಸಂತೋಷ ಕಂಡು ನಕ್ಕು  ಕೇಳಿದ್ದೆ ಅವರು ಏನು ಮಾತಾಡ್ತಿದ್ದಾರೆ ಎಂದು. "ಹೀಗೆ ಒಣಹರಟೆ" ಅಂದಳು. "ನೀನೂ ಸೇರ್ಕೋತೀಯಾ ಹರಟೆಗೆ" ಕೇಳಿದಾಗ ಇಲ್ಲಾ ಎಂಬಂತೆ ತಲೆಯಾಡಿಸಿದ್ದಳು.

ಊಟ ಮುಗಿಸಿ ನೇರವಾಗಿ ಆಶ್ರಯಕ್ಕೆ ಕರೆದೊಯ್ದಿದ್ದೆ. ಅಲ್ಲಿ ಅವಳಿಗೆಲ್ಲಾ ವ್ಯವಸ್ಥೆ ಮಾಡಿಸಿ "ಸಧ್ಯಕ್ಕೆ ಇಲ್ಲಿರು ನವ್ಯಾ. ಇಲ್ಲಿರೋರೆಲ್ಲಾ ನಂಗೊತ್ತು. ಇಲ್ಲೇನು ತೊಂದರೆ ಇಲ್ಲಾ. ನೀನು ಸ್ನಾನ ಮಾಡಿ, ವಿಶ್ರಾಂತಿ ತಗೋ. ಬೇಜಾರ್ ಮಾಡ್ಕೋಬೇಡ. ನಂಗೆ ನೈಟ್ ಡ್ಯೂಟಿ ಇದೆ. ಮುಗಿಸ್ಕೊಂಡು ಬೆಳಿಗ್ಗೆ ಸೀದಾ ಇಲ್ಲಿಗೆ ಹಾಜರ್. ನಾಳೆ ಮಾತಾಡೋಣ ಒಕೆ ನಾ" ಎಂದು ಹೊರಟಿದ್ದೆನಷ್ಟೇ.

ಬಂದು ನನ್ನ ಕೈಹಿಡಿದವಳೇ ಇನ್ನಿಲ್ಲದ ಅಪ್ಯಾಯಮಾನತೆಯಿಂದ ಆಗ ಕೇಳಿದ್ದಳವಳು............

                    ಮುಂದುವರೆಯುತ್ತದೆ



ಅನೂಹ್ಯ 9

ಆ ಇಳಿಸಂಜೆಯಲ್ಲಿ ಹೀಗೆ ಶುರುವಾಗಿತ್ತು ನಮ್ಮ ಗೆಳೆತನ. ಅದು ಸ್ನೇಹವೋ ,ಇಲ್ಲ ಅವಳ ಮೇಲೆ ಉದಯಿಸಿದ ಕರುಣೆಯೋ, ಅವಳ‌ ಹಾಡಿನ ಮೇಲಿನ ಪ್ರೀತಿಯೋ, ಅವಳ ಮುಗುಳ್ನಗೆಯ ಸೆಳೆತವೋ, ಇಲ್ಲಾ ಈ ಜಗತ್ತಿನಲ್ಲೇ ನನ್ನಷ್ಟು ನೋವಿನ ಜೀವನ ಇನ್ಯಾರದ್ದು ಇಲ್ಲ ಎಂದುಕೊಂಡಿದ್ದ ನನ್ನ ನಂಬಿಕೆ ಸುಳ್ಳಾದ ಅಚ್ಚರಿಯೋ ನನಗೇ ತಿಳಿಯದು. ಒಟ್ಟಿನಲ್ಲಿ ನನಗೇ ತಿಳಿಯದೇ ಅವಳ ಬಗ್ಗೆ ನನ್ನಲ್ಲೊಂದು ಅಕ್ಕರೆ ಉದಯಿಸಿತ್ತು.

ವಾರದಲ್ಲಿ ಒಂದೆರಡು ಬಾರಿ ಆಕೆಯನ್ನು ಭೇಟಿಯಾಗುತ್ತಿದ್ದೆ. ಬಹುಶಃ ಆಕೆಗೂ ನನ್ನೊಂದಿಗಿನ ಮಾತುಕತೆ ಇಷ್ಟವಾಗಿತ್ತು. ಬಹಳಷ್ಟು ವಿಷಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು. ಆ ದಿನಗಳಲ್ಲಿ ನನಗಾಕೆ ಮತ್ತಷ್ಟು ಅರ್ಥವಾಗತೊಡಗಿದ್ದಳು.

ಆಕೆ ಪಶ್ಚಿಮ ಬಂಗಾಳದ ಬಾರಾಸಾತ್ ಹತ್ತಿರದವಳು. ಅಪ್ಪ ಅಮ್ಮನ ಒಬ್ಬಳೇ ಮಗಳು. ಕಿತ್ತು ತಿನ್ನುವ ಬಡತನವಿದ್ದರೂ ಹೆತ್ತವರ ಅಪರಿಮಿತ ಪ್ರೀತಿಯ ಸವಿಯುಂಡವಳು. ತಾಯ್ತಂದೆ ಇಬ್ಬರೂ ದಿನಮಜೂರಿ ಕಾರ್ಮಿಕರು. ಕೆಲಸ ಸಿಕ್ಕಿದರೆ ಒಪ್ಪತ್ತೂಟ, ಇಲ್ಲವಾದರೇ ಅದೂ ನಸೀಬಿಲ್ಲ. ಆದರೂ ಆ ಜೀವಗಳ ಕನಸಿಗೆ ಬರವಿರಲಿಲ್ಲ. ಆ ಕನಸುಗಳೆಲ್ಲಾ ಮಗಳ ಕುರಿತೇ. ಆಕೆ

ನಮ್ಮಂತಾಗಬಾರದು…. ಓದಬೇಕವಳು…. ಅವಳ ಬದುಕು ಹಸನಾಗಬೇಕೆಂಬ ಹಂಬಲ. ಸಾಲ ಸೋಲ ಮಾಡಿ ಮಗಳನ್ನು ಶಾಲೆಯ ಮೆಟ್ಟಿಲು ಹತ್ತಿಸಿದ್ದರು. ಇವಳೂ ಓದುವುದರಲ್ಲಿ ಚುರುಕಿದ್ದುದು ತಾಯ್ತಂದೆಯರ ಕನಸಿಗೆ ರೆಕ್ಕೆ ಮೂಡಿದಂತಾಗಿರಬಹುದು. ಶಾಲೆಯಲ್ಲಿ ಯಾವಾಗಲೂ ತಾನೇ ತರಗತಿಗೆ ಪ್ರಥಮಳಾಗಿರುತ್ತಿದ್ದೆ. ಅವಾಗೆಲ್ಲ ಮಾ ಮತ್ತೆ ಬಾಬಾನ ಸಂತೋಷಕ್ಕೆ ಎಣೆಯೇ ಇರ್ತಿರ್ಲಿಲ್ಲ ಅಂತ ಹೇಳೋವಾಗ ಅವಳ ಕಣ್ಣಲ್ಲಿ ಕೋಟಿ ನಕ್ಷತ್ರಗಳು. ಅವಳು ಕಲಿಕೆಯಲ್ಲಿ ಬಹಳ ಚುರುಕು ಅನ್ನೋದು ನನ್ನ ಗ್ರಹಿಕೆಗೂ ಬಂದಿತ್ತು. ಬೆಂಗಾಲಿ ಜೊತೆಗೆ ಹಿಂದಿ ಸಲೀಸು. ಇಂಗ್ಲೀಷು ಕೂಡಾ ತಕ್ಕಮಟ್ಟಿಗೆ. ಇಲ್ಲಿ ಬಂದ ನಂತರ ಕನ್ನಡ ಮಾತನಾಡಲು ಕಲಿತಿದ್ದಳು ಬರುವ ಗಿರಾಕಿಗಳ ಅಲ್ಪಸ್ವಲ್ಪ ಮಾತಿನ ಜೊತೆ ಇಲ್ಲಿದ್ದ ಕನ್ನಡದ ಹೆಣ್ಣುಗಳಿಂದ. ಸ್ವಲ್ಪ ಬೆಂಗಾಲಿ ಛಾಯೆ ಕಂಡರೂ ಸ್ಪಷ್ಟ ಕನ್ನಡ ಮಾತಾಡುತ್ತಾಳೆ. 

ಅವಳ ಬಾಬಾ ಪೋಹ್ಲಾ ಬೋಯ್ಶಾಖ್( ಪೆಹೆಲಾ ಬೈಶಾಖ್ - ಬೆಂಗಾಲಿ ಹೊಸವರ್ಷ) ನಲ್ಲಿ ಕೊಡಿಸಿದ ಸೊಂದೇಶ್(ಒಂದು ಬಗೆಯ ಸಿಹಿತಿಂಡಿ) ನೆನಪು ಇನ್ನೂ ಅವಳ ಮನದಲ್ಲಿದೆ.

ಹೀಗೇ ಸುಂದರವಾಗಿದ್ದ ಬದುಕು ಅವಳ ಬಾಬಾನ ಸಾವಿನ ನಂತರ ಅಂದಗೆಡತೊಡಗಿತ್ತು. ಬಾಬಾ ತೀರಿ ವರ್ಷದೊಳಗೇ ಅವಳಮ್ಮನೂ ಅವರದೇ ಹಾದಿ ಹಿಡಿದು ಇಹಯಾತ್ರೆ ಮುಗಿಸಿದಾಗ ಅವಳ ಬದುಕೇ ಶೂನ್ಯವಾಯಿತು. ದೂರದ ಸಂಬಂಧಿಯೊಬ್ಬರು ಅವಳನ್ನು ತಮ್ಮೊಂದಿಗೆ ಕರೆದೊಯುತ್ತೇನೆಂದಾಗ 'ಬರುವುದಿಲ್ಲ' ಎನ್ನುವ ಆಯ್ಕೆ ಅವಳಿಗಿರಲಿಲ್ಲ. ತನ್ನ ಹಿಂದಿನ ಸಂತಸದ ಬದುಕು ಇನ್ನು ಸಿಗದೆಂಬ ಅರಿವಿದ್ದರೂ ತನ್ನ ಭವಿಷ್ಯ ಎಷ್ಟು ಹೀನಾಯವಾಗಿರಬಹುದೆಂಬ ಕಲ್ಪನೆ ಅವಳಿಗಾಗ ಇರಲಿಲ್ಲ. ಆದರೆ ಕರೆದೊಯ್ದವರ ಉದ್ದೇಶ‌ ಏನೆಂದು ಅವಳಿಗೆ ಅಲ್ಲಿ ಹೋದ ಎರಡೇ ದಿನದಲ್ಲಿ ತಿಳಿದುಹೋಗಿತ್ತು. ಅವಳಿಗೆ ಇಪ್ಪತೈದು ಸಾವಿರ ರೂಪಾಯಿಗಳ ಬೆಲೆ ಕಟ್ಟಿ ಗುರುತು ಪರಿಚಯವಿಲ್ಲದ ದಲ್ಲಾಳಿಯೊಬ್ಬನಿಗೆ ಮಾರಾಟ ಮಾಡಿದ್ದ. ಆ ದಲ್ಲಾಳಿ ಅವಳನ್ನು ಇಲ್ಲಿಗೆ ತಂದಿದ್ದ. ಅಲ್ಲಿಂದ ಮುಂದೆಲ್ಲವೂ ಯಾತನಾ ಪರ್ವವೇ. 

ಇದೆಲ್ಲವನ್ನೂ ಆಕೆ ನನ್ನ ಬಳಿ ಹೇಳಿಕೊಂಡಿದ್ದಳು. ಅವಳ ನೋವಿಗೆ ನಾನು ಕಿವಿಯಾಗುತ್ತಾ ಹೋದಂತೆಲ್ಲಾ ನನ್ನ ನೋವು ತೃಣವಾಗತೊಡಗಿತು. 

ಈ ವಯಸ್ಸಿಗೇ ಈಕೆ ಅನುಭವಿಸಿರುವ ನೋವಿನ ಆಳವೆಷ್ಟು‌‌…...? ಅದನ್ನೂ ಮೀರಿದ ಅವಳ ಜೀವನಪ್ರೀತಿಗೆ ಸಾಟಿಯುಂಟೇ….?

ಯಾರದೋ ತಪ್ಪಿಗೆ ನಾನೇಕೆ ಸಾಯಲಿ? ನಾನು ಖಂಡಿತಾ ಸಾಯಲಾರೆ ಅನ್ನುವವಳೀಕೆ......

ಅದೆಂಥದೋ ಮಮಕಾರ ನನಗವಳ ಮೇಲೆ....

ಅದ್ಯಾವ ಜನುಮದ ಬಂಧುವೇನೋ ಅನಿಸತೊಡಗಿತ್ತು. ಹೊರಜಗತ್ತಿಗೆ ಈ ಸಮನ್ವಿತಾ ಗಂಭೀರೆ. ಆದರವಳೊಂದಿಗೆ ನನ್ನಷ್ಟು ವಾಚಾಳಿ ಮತ್ತೊಬ್ಬರಿಲ್ಲ ಅನ್ನುವಂತಿರುತ್ತಿತ್ತು ನನ್ನ ವರ್ತನೆ.

ಈ ಇಡೀ ಜಗದಲ್ಲಿ ನನ್ನ ಅಂತರಂಗ ಬಲ್ಲಾಕೆ ಅವಳೊಬ್ಬಳೇ..... ನನ್ನ ಆತ್ಮದಂತಹ ಗೆಳತಿ...... ಅವಳಿಗೆ ನನ್ನ ನೋವೆಲ್ಲಾ ಗೊತ್ತು. 

ಒಮ್ಮೆ ಹೇಳಿದ್ದೆ ಅವಳಲ್ಲಿ......

ನಿನ್ನ ಬದುಕಿನ ಮುಂದೆ ನನ್ನ ನೋವೆಲ್ಲಾ ತೃಣವೆನಿಸಿತು ಗೆಳತಿ, ನೀ ಕಾಣುವವರೆಗೂ ಜಗದಲ್ಲಿ ನನ್ನಂಥ ದುರಾದೃಷ್ಟವಂತೆ ಬೇರ್ಯಾರೂ ಇಲ್ಲವೆಂದೇ ನನ್ನ ಭಾವನೆಯಾಗಿತ್ತೆಂದು. ಅದಕ್ಕವಳು ನಸುನಕ್ಕು ಎಂಥಾ ಚೆಂದದ ಉತ್ತರ ಕೊಟ್ಟಿದ್ದಳು..........

"ಅದು ಸಹಜವೇ ಸಮಾ. ಪರರ ಎದೆಗೆ ತಾಕಿದ ಶೂಲಕ್ಕಿಂತ ಯಾವತ್ತೂ ನಮ್ಮ ಕಾಲಿಗೆ ಚುಚ್ಚಿದ ಮುಳ್ಳಿನ ನೋವೇ ಹೆಚ್ಚು. ಪರರ ನೋವಿಗೆ ಸ್ಪಂದಿಸಬಹುದಷ್ಟೇ. ಆದರೆ ಅದು ಅನುಭವಕ್ಕೆ ಸಿಕ್ಕುವುದು, ಅದರಾಳ ಅರಿವಾಗುವುದು ನಮಗೆ ನೋವಾದಾಗ ಮಾತ್ರ. ನನಗೂ ಹಾಗೆಯೇ ನನ್ನ ನೋವೇ ಅಧಿಕ ಎನ್ನಿಸುತ್ತಿತ್ತು. ಆದರೆ ಇಲ್ಲಿ ಇತರೆ ಹುಡುಗಿಯರ ಕಥೆ ಕೇಳಿದಾಗ ಅನಿಸಿತು. ಈ ಜಗದಲ್ಲಿ ನೋವಿಲ್ಲದ ಜೀವವಿಲ್ಲ. ಪ್ರತಿ ಜೀವಿಯೂ ಹುಟ್ಟಿನೊಂದಿಗೆ ನೋವು ನಲಿವಿನ ಬುತ್ತಿ ಹೊತ್ತೇ ಬರುತ್ತದೆ. ನೋವು ನಲಿವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಅವರವರ ಕರ್ಮಫಲದಂತೆ ಇವುಗಳ ಹಂಚಿಕೆ. ಯಾರು ತನಗಿಂತ ಅಧಿಕ ಯಾತನೆಯಲ್ಲಿರುವವರನ್ನು ಕಂಡು ಇವರಿಗಿಂತ ನನ್ನ ಬದುಕೇ ಚೆನ್ನ ಎಂದುಕೊಳ್ಳುವನೋ ಅವನು ಜೀವನದಲ್ಲಿ ನೆಮ್ಮದಿಯಾಗಿರುತ್ತಾನೆ. ಏಕೆಂದರೆ ಆತ ದೇವರು ತನಗೆ ಕೊಟ್ಟ ಶಾಪಗಳಿಗಿಂತ ನೀಡಿದ ವರಗಳನ್ನು ಯಾವಾಗಲೂ ನೆನೆಯುತ್ತಾನೆ."

ಅಂದು ಅವಳ ತಿಳುವಳಿಕೆಗೆ ನಿಜವಾಗಿಯೂ ಬೆರಗಾಗಿದ್ದೆ. ನಾನು ಅವಳಿಗಿಂತ ಬುದ್ಧಿವಂತೆ, ಮೇಧಾವಿ ಅನ್ನುವುದನ್ನು ಯಾರು ಬೇಕಾದರೂ ಒಪ್ಪಬಲ್ಲರು. ಅದಕ್ಕೆ ದಾಖಲೆಯಾಗಿ ನನ್ನ ವಿದ್ಯಾರ್ಹತೆ, ಸಾಧನೆಗಳ ಸರ್ಟಿಫಿಕೇಟುಗಳೂ ಇವೆ. ಆದರೆ ಅವಳದು ನನ್ನಂತೆ ಕೇವಲ ಕೋಶಜ್ಞಾನವಲ್ಲ. ಅದು ಜೀವನಾನುಭವದ ಮೂಸೆಯಿಂದ ದೊರೆತ ಪಾಠ. ಯಾವ ವಿಶ್ವವಿದ್ಯಾಲಯಗಳಲ್ಲೂ ದೊರೆಯದ್ದು. ಬದುಕಿಗಿಂತ ಮಿಗಿಲಾದ ಗುರುವ್ಯಾರು ಜಗದಲ್ಲಿ???

ಅಂದೇ ನಿರ್ಧರಿಸಿದ್ದೆ ಇದು ಇವಳಿರುವ ಜಾಗವೇ ಅಲ್ಲ. ಇವಳು ಈ ನರಕದಿಂದ ಹೊರಬರಲೇಬೇಕು. ನನ್ನೊಡನೆ ಇರಬೇಕು ನನ್ನ ಅಮ್ಮನಂತೆ, ಅಕ್ಕನಂತೆ, ಆತ್ಮಬಂಧುವಿನಂತೆ ಎಂದು. 

ಯೋಚಿಸದಿರು ಗೆಳತೀ.... ಈ ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ನಿನ್ನ ಕನಸು, ಆಸೆಯನ್ನು ನಾನು ಖಂಡಿತಾ ನೆರವೇರಿಸುವೆ. ನಾನೇ ಹಣತೆಯಾಗುವೆ. ದಾರಿತೋರುವೆ ಹೊಸದಿಗಂತಕ್ಕೆ, ನವ ಮನ್ವಂತರಕೆ. ಇದೇ ನನ್ನ ಉಡುಗೊರೆ ನಿನಗೆ. ನಿನ್ನ ಅದಮ್ಯ ಜೀವನೋತ್ಸಾಹಕೆ....

ಗೆಳತೀ..... ಹೌದು..... ನಾನು ಅವಳನ್ನೆಂದೂ ರೂಬೀ ಎಂದು ಸಂಭೋದಿಸಲೇ ಇಲ್ಲ. ನನ್ನ ಮನಸ್ಸು ಆ ಹೆಸರನ್ನು ಉಚ್ಚರಿಸಲು ಯಾಕೋ ಮನಸ್ಸು ಮಾಡಲಿಲ್ಲ. ನಾನವಳನ್ನು ಭೇಟಿಯಾದಗಲೆಲ್ಲಾ ಗೆಳತಿ ಎಂದೇ ಕರೆದದ್ದು.....‌

                       **************

ಆಗಿನಿಂದಲೇ ಕಾರ್ಯೋನ್ಮುಖಳಾಗಿದ್ದೆ ನನ್ನ ಗೆಳತಿಯನ್ನು ಬಿಡುಗಡೆಗೊಳಿಸಲು. ನನ್ನ NGO ಹಾಗೇ ಪೋಲಿಸ್ ಇಲಾಖೆಯಲ್ಲಿದ್ದ ಸ್ನೇಹಿತ ವಿಕ್ರಂ ನ ಸಹಾಯ ಪಡೆದೆ. ನಕಲಿ ಅಪ್ಪ ಅಮ್ಮನ ಸೃಷ್ಟಿಸಿ ಅವರ ಕೈಯಲ್ಲಿ ಮಗಳು ಕಾಣೆಯಾಗಿರುವಳೆಂದು ಕಂಪ್ಲೈಂಟ್ ಕೊಡಿಸಿದೆ. ಇದೇ ಜಾಗದಲ್ಲಿರುವಳೆಂದು ಸುಳಿವೂ ಕೊಡಿಸಿದೆ. ರೈಡ್ ಆಯಿತು. ಅದಕ್ಕೂ ಹೆಚ್ಚಾಗಿ ನನ್ನ ಅಪ್ಪನ ಹೆಸರು ಹಾಗೂ ಹಣ ಸಹಾಯ ಮಾಡಿತೆನ್ನುವುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಪ್ರಥಮ ಬಾರಿಗೆ ಮಿಸ್ಟರ್. ಸತ್ಯಂ ರಾವ್ ಅವರ ಹಣ ಮತ್ತು ಹೆಸರಿನ ಪವರ್ ಬಗ್ಗೆ ಅತೀವ ಸಂತಸವಾಗಿತ್ತು. ಬಹುಶಃ ಅವೆರಡೂ ಒಳ್ಳೆಯ ಉದ್ದೇಶವೊಂದಕ್ಕೆ ಬಳಕೆಯಾದದ್ದು ಇದೇ ಮೊದಲಿರಬೇಕು.

ನಾನು ಆ ದಿನ ಅತೀವ ಸಂತಸದಲ್ಲಿದ್ದೆ. ಇಂದು ನನ್ನ ಗೆಳತಿ ಹೊರಬರುತ್ತಾಳೆ ನರಕ ಸದೃಶ ಬದುಕಿನಿಂದ.......

ಅವಳು ಹೊರಬಂದಾಗ ಅವಳಿಗಾಗುವ ಸಂತೋಷವನ್ನು,  ಅವಳ ಕಣ್ಣುಗಳಲ್ಲಿ ಕಾಣಬಹುದಾದ ಬಿಡುಗಡೆಯ ನೆಮ್ಮದಿಯ ನಿರೀಕ್ಷೆಯಲ್ಲಿ ನಾನು ಕಾತರಳಾಗಿದ್ದೆ....... 

ಆ ಕ್ಷಣ ಕೊನೆಗೂ ಬಂದೇ ಬಿಟ್ಟಿತ್ತು.....



ಅನೂಹ್ಯ 8

ಇಂಥಾ ನಿಶಾಲೋಕದಲ್ಲಿಯೇ ನಾನವಳನ್ನು ಮೊದಲು ಕಂಡದ್ದು......

ಇವಳ ಬದುಕಿನ ದಾರುಣತೆಯ ಮುಂದೆಯೇ ನನ್ನ ಬದುಕಿನ ಕೊರತೆ ಕನಿಷ್ಠ ಎನಿಸಿದ್ದು......

ಕೆಲವು ಸಮಾಜಮುಖಿ ಸಹೃದಯರ ಕಾಳಜಿಯಿಂದ ಇತ್ತೀಚೆಗೆ ಇಂತಹ ಕೆಂಪುದೀಪದ ಪ್ರದೇಶಗಳಲ್ಲಿ (red light areas) ವೈದ್ಯಕೀಯ ಶಿಬಿರಗಳು ನಡೆಯುತ್ತಿದೆ. ಈ ಶಿಬಿರಗಳ ಬಗ್ಗೆ ವೇಶ್ಯಾಗೃಹದ ಮಾಲಕಿಯರಿಗೂ ಸ್ವಲ್ಪ ಮಟ್ಟಿಗೆ ಆಸಕ್ತಿ. ಏಕೆಂದರೆ ಈ ಶಿಬಿರಗಳಿಂದ ಅವರ ಬಳಿ ಇರುವ "ಮಾಲು" ಆರೋಗ್ಯವಾಗಿದೆಯೋ ಇಲ್ಲ ದೇಹ ರೋಗದ ಗೂಡಾಗಿದೆಯೋ ಎಂದು ತಿಳಿಯುವುದಲ್ಲ...... ಒಂದುವೇಳೆ ರೋಗದ ಸುಳಿವು ಸಿಕ್ಕರೆ ಅಷ್ಟೇ...... ಆಕೆ ಬೀದಿಹೆಣವೇ.

ಇಂಥಾ ವೈದ್ಯಕೀಯ ಶಿಬಿರವೊಂದನ್ನು ಆಶ್ರಯ ಸಂಘಟನೆ ವತಿಯಿಂದ ನಡೆಸಿದ್ದಾಗಲೇ ನಾನಾಕೆಯನ್ನು ಮೊದಲ ಬಾರಿ ಕಂಡಿದ್ದು.

ಸಂಜೆಯಾಗಿತ್ತು..... ಬೆಳಗ್ಗಿನಿಂದ ಎಷ್ಟು ಹೆಣ್ಣು ಜೀವಗಳ ಮೌನರೋಧನೆ ಕಂಡೆನೋ ಲೆಕ್ಕವಿಲ್ಲ. ಒಬ್ಬೊಬ್ಬರದ್ದು ಒಂದೊದು ವ್ಯಥೆ. ಜೀವ ಚೈತನ್ಯವಿಲ್ಲದ ನಿಸ್ಸಾರ ಬದುಕು.......

ನೋಡಿ ನನ್ನ ಮೈ ನಡುಗಿತ್ತು. ತಾಯ್ತಂದೆಯರ ಪ್ರೀತಿ ಇಲ್ಲದಿದ್ದರೂ ಇವರಿಗಿಂತ ನನ್ನ ಬದುಕೇವಾಸಿ ಎಂದು ಪ್ರಥಮ ಬಾರಿಗೆ ಅನಿಸಿತ್ತು ಅಂದು. ವೇದನೆಯಿಂದ ತಲೆಭಾರವೆನಿಸಿ ಒಂದು ಕಪ್ ಕಾಫಿ ಕುಡಿಯೋಣವೆಂದು ಫ್ಲಾಸ್ಕ್ ನತ್ತ ಕೈಚಾಚುವಾಗಲೇ ಕೇಳಿಸಿತ್ತು ಅವಳ ಕೊರಳ ಇಂಚರ.......

ಜೀನಾ ಯಹಾ ಮರ್ನಾ ಯಹಾ

ಇಸಕೆ ಸಿವಾ ಜಾನಾ ಕಹಾ

ಜೀ ಚಾಹೆ ಜಬ್ ಹಮ್ ಕೊ ಆವಾಜ಼್ ದೋ

ಹಮ್ ಹೆ ವಹೀ ಹಮ್ ಥೇ ಜಹಾ

ಅಪನೀ ಯಹೀ ದೋನೋ ಜಹಾ

ಇಸಕೆ ಸಿವಾ ಜಾನಾ ಕಹಾ......

ತೀರಾ ಹತ್ತಿರದಲ್ಲೇ ಎಲ್ಲೋ ಸಣ್ಣ ದನಿಯಲ್ಲಿ ಗುನುಗುನಿಸುತ್ತದ್ದಂತೆ......

ಬದುಕೂ ಇಲ್ಲೇ ಸಾವೂ ಇಲ್ಲೇ....... ಎಂಥಹಾ ಗೀತೆ..... ಈ ಹೆಣ್ಮಕ್ಕಳ ಬದುಕಿಗೆ ಎಷ್ಟು ಸಾಮ್ಯವಾಗುತ್ತದೆ ಸಾಹಿತ್ಯ.....

ಯಾಕೋ ಹಾಡುಗಾರ್ತಿಯ ಇನಿದನಿಯೊಳಗಿನ ಭಾವ ತೀವ್ರವಾಗಿ ಸೆಳೆದಿತ್ತು. ಕಾಫಿ ಮರೆತು ಗಾನ ಲಹರಿಯ ಹಿಂಬಾಲಿಸಿ ಹೊರಟವಳ ಕಣ್ಣಿಗೆ ಬಿದ್ದದ್ದು ಅನತಿ ದೂರದಲ್ಲಿ ಮರವೊಂದರ ಬುಡದಲ್ಲಿ ಕೂತು ನೀಲಿಬಾನಿನಲ್ಲಿನ ಬಾನಾಡಿಗಳೆಡೆ ದೃಷ್ಟಿ ನೆಟ್ಟು ತನಗೆ ತಾನೇ ಹಾಡಿಕೊಳ್ಳುತ್ತಿದ್ದಾಕೆ. ಅದ್ಯಾಕೋ ಅವಳನ್ನು ಮಾತಾಡಿಸಬೇಕೆಂಬ ಅದಮ್ಯ ಹಂಬಲ ಹುಟ್ಟಿತ್ತು ನನ್ನಲ್ಲಿ. ಅವಳತ್ತ ನಡೆದಿದ್ದೆ.

ನನ್ನದೇ ವಯಸ್ಸಿನವಳಿರಬೇಕು. ಬಹಳ ಮುದ್ದಾಗಿದ್ದಾಳೆ. ಸುಶ್ರಾವ್ಯ ಕಂಠ. ಬಹುಶಃ ಈ ನರಕದ ಹೊರಗಿದ್ದಿದ್ದರೆ ಅತ್ಯುತ್ತಮ ಗಾಯಕಿಯಾಗಬಹುದಿತ್ತೇನೋ…. ಇಲ್ಲಾ ಅಮ್ಮನ ಬೆಚ್ಚನೆ ಮಡಿಲಲ್ಲಿ, ಇನಿಯನ ಒಲವಿನಾಸರೆಯಲ್ಲಿ ಇರುತ್ತಿದ್ದಳೇನೋ?

ಹಾಡು ಅದಾಗಲೇ ನಿಂತು ನನ್ನನ್ನೇ ದಿಟ್ಟಿಸುತ್ತಿದ್ದಳ ತುಟಿಯಂಚಿನಲ್ಲಿ ಕಂಡೂ ಕಾಣದ ಮಂದಹಾಸವೊಂದಿತ್ತು. 

"ಹಲೋ, ನಾನು ಸಮನ್ವಿತಾ ಅಂತ. ನಿಮ್ಮ ಹೆಸರು?"

ನನ್ನ ಪ್ರಶ್ನೆಗೆ ಜೋರಾಗಿ ನಕ್ಕಳಾಕೆ. ನಾನು ಅಚ್ಚರಿಯಿಂದ ಅವಳನ್ನೇ ನಿರುಕಿಸುತ್ತಿದ್ದೆ. ಅವಳ ನಗು ಅವ್ಯಾಹತವಾಗಿ ಸಾಗಿತ್ತು. ಹುಚ್ಚುಗಿಚ್ಚು ಹಿಡಿದಿರಬಹುದೇ ಈಕೆಗೆ? ಮನ ಖೇದಗೊಂಡಿತು.

"ಯಾಕೆ ಏನಾಯ್ತು?" ಮತ್ತೆ ಕೇಳಿದ್ದೆ. ಕಷ್ಟಪಟ್ಟು ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುತ್ತಾ "ಯಾರ್ರೀ ಮೇಡಂ ನೀವು? ನನ್ನ ಹೆಸರು ಕೇಳ್ತಿದ್ದೀರಿ" ಅಂದಿದ್ದಳು.

"ಯಾಕೆ ಕೇಳಬಾರದೇ?" 

"ಕೇಳ್ಬಾರ್ದೂ ಅಂತೇನಿಲ್ಲ, ಆದರೆ ಇದುವರೆಗೂ ಇಲ್ಲ್ಯಾರೂ ಹೆಸರು ಕೇಳಿರಲಿಲ್ಲ. ಇಲ್ಲಿಗೆ ಬರೋರು ಕೇಳೋದೇ ಬೇರೆ.... ಹೆಸರು ಕೇಳೋ ಮನಸ್ಸು, ಆಸಕ್ತಿ ಯಾರಿಗೂ ಇರೋಲ್ಲ. ಅದಕ್ಕೆ ನಗು ಬಂತು" ಮತ್ತೆ ನಕ್ಕಳಾಕೆ. ಕೊನೆಯಿಲ್ಲದ ವಿಷಾದವೊಂದು ಆಕೆಯ ನಗುವಿನಲ್ಲಿ ನರಳಿತು.

"ಯಾರೂ ಕೇಳಿರಲಿಲ್ಲ.ಆದ್ರೂ ನಾನು ಕೇಳ್ತಿದ್ದೀನಿ ಹೇಳಿ ನಿಮ್ಮ ಹೆಸರೇನು?"

"ಇಲ್ಲಿ ಎಲ್ಲರೂ ನನ್ನ ರೂಬಿ ಅಂತ ಕರೀತಾರೆ"

"ಅಂದ್ರೆ?" ಅರ್ಥವಾಗದೇ ಕೇಳಿದೆ.

"ಅಂದ್ರೆ ನನ್ನ ಮಾಲಕೀನ್ ಇಲ್ಲಿ ಬರೋ ಗಿರಾಕಿಗಳಿಗೆಲ್ಲಾ ನನ್ನ ರೂಬಿ ಅಂತಾ ಪರಿಚಯಿಸ್ತಾಳೆ"

"ನೀನು ಹುಟ್ಟಿದ್ದು ಇಲ್ಲೇ ಏನು?" ಆಕೆಯ ತಾಯಿಯೂ ಇಲ್ಲೇ ಇರುವಳಾ ಎಂಬ ಅನುಮಾನದಿಂದ ಕೇಳಿದೆ.

"ಇಲ್ಲಾ, ನನಗೆ ಸುಮಾರು ಹದಿನೈದು ವರ್ಷಗಳಿದ್ದಾಗ ಇಲ್ಲಿಗೆ ಬಂದದ್ದು"

"ಹಾಗಾದರೆ ಇಲ್ಲಿಗೆ ಬರುವ ಮೊದಲು ನಿನಗೊಂದು ಚೆಂದದ ಹೆಸರಿದ್ದಿರಬಹುದಲ್ಲ. ನಿನ್ನ ತಂದೆತಾಯಿ ಇಟ್ಟಿದ್ದು?" ಅಕ್ಕರೆಯಿಂದ ಕೇಳಿದ್ದೆ.

ಈ ಬಾರಿಯೂ ಆಕೆ ಸಣ್ಣಗೆ ನಕ್ಕಳು. ಬಹುಶಃ ಮನೆಯವರ ನೆನಪಿನಿಂದಿರಬಹುದು. ನಗುವಿನ ಗರ್ಭದಿಂದ ಅಳು ಉಕ್ಕಿರಬೇಕು. ಕಣ್ಣೀರು ಸುರಿಯತೊಡಗಿತು. ಅವಳ ಅವಸ್ಥೆ ನೋಡಿ 'ಛೇ ನಾನೀ ಪ್ರಶ್ನೆ ಕೇಳಬಾರದಿತ್ತು' ಎನಿಸಿತು. ಏನೂ ಹೇಳಲು ತೋಚದೇ ಸುಮ್ಮನಾದೆ.

"ಹೌದು. ಇದಕ್ಕೂ ಹಿಂದೆ ನನಗೊಂದು ಚೆಂದದ ಹೆಸರಿತ್ತು. ಆ ಹೆಸರಿನಲ್ಲಿ ನನ್ನ ಬದುಕಿನ ಅತ್ಯಂತ ಸುಂದರ, ಅಮೂಲ್ಯ ಕ್ಷಣಗಳಿವೆ. ನನ್ನಮ್ಮನ ಮಮತೆಯ ಬುತ್ತಿಯಿದೆ. ನನ್ನಪ್ಪನ ಬೆಚ್ಚನೆಯ ಆಸರೆಯಿದೆ. ನನ್ನ ಭವಿಷ್ಯದ ಬಗೆಗಿನ ಅವರ ಅಗಣಿತ ಕನಸುಗಳಿವೆ. ನನ್ನ ಕಳೆದ ದಿನಗಳ ಅಸ್ತಿತ್ವವಿದೆ. ನಾನೆಂದು ಇಲ್ಲಿಗೆ ಕಾಲಿಟ್ಟೆನೋ ಅಂದೇ ಆ ಹೆಸರಿನಾಕೆ ಸತ್ತಳು. ಆ ಹೆಸರು ಇನ್ನೆಂದಿಗೂ ಯಾರಿಗೂ ಹೇಳಲಾರೆ. ಅದು ನನ್ನೊಡನೆ ಮಣ್ಣಾಗುತ್ತದೆ. ಇಲ್ಲಿರುವಾಕೆ ರೂಬಿ ಅಷ್ಟೇ" ತುಸು ಸಮಯದ ಬಳಿಕ ಸ್ಪಷ್ಟ ದನಿಯಲ್ಲಿ ಆಕೆಯೆಂದಿದ್ದಳು.

"ಬಹಳ ಚೆನ್ನಾಗಿ ಹಾಡುತ್ತೀರಿ" ವಿಷಯಾಂತರಿಸಿ ಹೇಳಿದ್ದೆ. ಮತ್ತೆ ಅದೇ ಮೆಲುನಗೆ ಅವಳ ತುಟಿಯನ್ನು ಅಲಂಕರಿಸಿತ್ತು.

"ನಾನಿಲ್ಲಿ ಬಂದು ಎಷ್ಟು ಸಮಯವಾಗಿದೆಯೋ ತಿಳಿಯದು. ಬಂದ ಹೊಸತರಲ್ಲಿ ದಿನಗಳನ್ನು ಲೆಕ್ಕವಿಡುತ್ತಿದ್ದೆ. ಏಕೆಂದರೆ ನಾನಾಗಲೇ ಎರಡು ನಿರ್ಧಾರಗಳನ್ನು ಮಾಡಿದ್ದೆ . ಒಂದು ಇವರೇನೇ ಮಾಡಿದರೂ ನಾನು ಈ ಕೆಲಸ ಮಾಡುವುದಿಲ್ಲ, ಎರಡನೇಯದಾಗಿ ನಾನು ಇಲ್ಲಿಂದ ಹೊರಹೋಗಿಯೇ ತೀರುತ್ತೇನೆ ಅಂತ. ಆದರೆ ಬಹಳ ಬೇಗ ಈ ಎರಡೂ ನನ್ನ ಭ್ರಮೆಗಳಷ್ಟೇ ಎಂಬುದು ನನಗೆ ಸ್ಪಷ್ಟವಾಯಿತು. ಇಲ್ಲಿಂದ ಹೊರಹೋಗಲಂತೂ ಸಾಧ್ಯವೇ ಇಲ್ಲ. ಹಾಗೂ ಈ ವೃತ್ತಿ ಮಾಡುವುದು ಬಿಡುವುದು ನನ್ನ ಆಯ್ಕೆಯಲ್ಲ , ಅನಿವಾರ್ಯತೆ…... ಅಂದಿನಿಂದ ದಿನಗಳ ಎಣಿಕೆ ಬಿಟ್ಟೆ. ಒಮ್ಮೊಮ್ಮೆ ಬದುಕಿ ಉಳಿಯಲು ಏನಿದೆ? ಯಾರಿದ್ದಾರೆ ಎನಿಸುತ್ತಿರುತ್ತದೆ. ಆದರೆ ನಾನು ಸಾಯಲಾರೆ. ನನ್ನದಲ್ಲದ ತಪ್ಪಿಗೆ ನಾನ್ಯಾಕೆ ಸಾಯಬೇಕು? ಇಂತಹ ಸ್ಥಿತಿಯಲ್ಲಿ ಬದುಕಲೂ ಏನಾದರೊಂದು ಮನಸ್ಸು ತಿಳಿಗೊಳಿಸುವ ಸಾಧನ ಬೇಕಲ್ಲವೇ? ಅದೇ ಹಾಡು. ನನ್ನ ಮನಸ್ಸಿನ ಭಾರ ಕಳೆಯುವವರೆಗೂ, ಸಾಯುವ ಯೋಚನೆ ಮರೆಯುವವರೆಗೂ ಹಾಡುತ್ತೇನೆ"  ಮತ್ತೊಮ್ಮೆ ನಕ್ಕಳಾಕೆ.

ಆ ಇಳಿಸಂಜೆಯಲ್ಲಿ ಹೀಗೆ ಶುರುವಾಗಿತ್ತು ನಮ್ಮ ಗೆಳೆತನ. ಅದು ಸ್ನೇಹವೋ, ಇಲ್ಲ ಅವಳ ಮೇಲೆ ಉದಯಿಸಿದ ಕರುಣೆಯೋ, ಅವಳ‌ ಹಾಡಿನ ಮೇಲಿನ ಪ್ರೀತಿಯೋ, ಅವಳ ಮುಗುಳ್ನಗೆಯ ಸೆಳೆತವೋ, ಇಲ್ಲಾ ಈ ಜಗತ್ತಿನಲ್ಲೇ ನನ್ನಷ್ಟು ನೋವಿನ ಜೀವನ ಇನ್ಯಾರದ್ದು ಇಲ್ಲ ಎಂದುಕೊಂಡಿದ್ದ ನನ್ನ ನಂಬಿಕೆ ಸುಳ್ಳಾದ ಅಚ್ಚರಿಯೋ ನನಗೇ ತಿಳಿಯದು. ಒಟ್ಟಿನಲ್ಲಿ ನನಗೇ ತಿಳಿಯದೇ ಅವಳ ಬಗ್ಗೆ ನನ್ನಲ್ಲೊಂದು ಅಕ್ಕರೆ ಉದಯಿಸಿತ್ತು.

ಮುಂದುವರೆಯುತ್ತದೆ



ಭಾನುವಾರ, ಜೂನ್ 21, 2020

ಅನೂಹ್ಯ 7

ಇದು ನಿಶಾ ಲೋಕ….. ನಿಶಾಚರಿಗಳ ಲೋಕ…..

ಇಡೀ ಭೂಲೋಕಕ್ಕೆ ಮೂಡಣದಿಂದೇರುವ ಸೂರ್ಯನೊಂದಿಗೆ ಬೆಳಗು, ಪಡುವಣಕೆ ವಾಲುವ ಸೂರ್ಯನೊಂದಿಗೆ ಬೈಗು. ಬೆಳಕಿನ ರಂಗೋಲಿಯೊಂದಿಗೆ ಆರಂಭವಾಗುವ ಚಟುವಟಿಕೆ ಸಂಧ್ಯೆಯ ಗೋಧೂಳಿ ರಂಗಿನೊಂದಿಗೆ ಸಮಾಪ್ತಿಗೊಳ್ಳುತ್ತದೆ.

ಆದರೆ ಈ ನಿಶೆಯ ಲೋಕ ಕಣ್ತೆರೆಯುವುದೇ ಸಂಧ್ಯೆಯೊಂದಿಗೆ. ಸಂಧ್ಯೆ ಜಾರಿ ರಜನಿಯ ಆಗಮನದೊಂದಿಗೆ ಚಟುವಟಿಕೆ ಗರಿಗೆದರುತ್ತವೆ. ಚಂದ್ರಿಕೆಯ ಕಾಂತಿ ಪಸರಿಸುತ್ತಾ ಹೋದಂತೆ, ರಾತ್ರಿರಾಣಿಯ ನಶೆಯೇರಿ ಉತ್ತುಂಗ ತಲುಪಿ, ಮೂಡಣದರವಿಯ ಹೊಳಪಿನೊಂದಿಗೆ ಅಂತ್ಯವಾಗುತ್ತದೆ.

ಸಾಮಾನ್ಯ ಲೋಕದ ಜನರು ಜೀವನೋಪಾಯಕ್ಕಾಗಿ ಹತ್ತು ಹಲವು ಬಗೆಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಲವಾರು ವಿಧದ ವೃತ್ತಿಗಳಿವೆ ಅಲ್ಲಿ. ಆದರೆ ಈ ನಿಶಾಲೋಕಲ್ಲಿ ಅಸ್ತಿತ್ವದಲ್ಲಿರುವುದು ಒಂದೇ ವೃತ್ತಿ........... ವೇಶ್ಯಾವೃತ್ತಿ. ವೃತ್ತಿಗಿಂತ ಇದನ್ನು ದಂಧೆ ಅನ್ನುವುದೇ ಸೂಕ್ತ.

ಇದರ ಕಾರ್ಯನಿರ್ವಹಣೆ ಸಾಮಾನ್ಯರ ಲೋಕದ ಮಾರುಕಟ್ಟೆಯಂತೆಯೇ.....

ಮಾರುಕಟ್ಟೆಯಲ್ಲಿ ವರ್ತಕರು, ಗ್ರಾಹಕರು, ಕ್ರಯಕ್ಕೆ ಮಾರಾಟವಾಗುವ ವಸ್ತುಗಳು, ಮಧ್ಯವರ್ತಿಗಳು ಹಾಗೂ ಇದರ ಸೂಕ್ತ ನಿರ್ವಹಣೆಗೆ ಯೂನಿಯನ್ ಗಳು, ಪೋಲೀಸ್ ವ್ಯವಸ್ಥೆ ಇರುತ್ತದೆ.

ವೇಶ್ಯಾವಾಟಿಕೆಯಲ್ಲಿಯೂ ಇವರೆಲ್ಲ ಇರುತ್ತಾರೆ. ಇಲ್ಲಿ ವೇಶ್ಯಾಗೃಹದ ಮಾಲೀಕರೇ ವರ್ತಕರು, ಗಿರಾಕಿಗಳು ಗ್ರಾಹಕರು, ಹೆಣ್ಣಿನ ದೇಹವೇ ಮಾರಾಟದ ಸರಕು, ದಲ್ಲಾಳಿಗಳು, ತಲೆಹಿಡುಕರೇ ಮಧ್ಯವರ್ತಿಗಳು, ಇನ್ನು ವ್ಯವಸ್ಥೆ ನಿರ್ವಹಣೆ, ವ್ಯಾಜ್ಯ ಪರಿಹಾರ ಮಾಡುವುದು ಮಾಲೀಕರು ಸಾಕಿದ ಗೂಂಡಾಗಳು....

ಅಂದಹಾಗೆ ಈ ದಂಧೆಗೆ ಸುದೀರ್ಘ ಇತಿಹಾಸವಿದೆ. ಆ ಕಾಲದ ಗೆಜ್ಜೆಪೂಜೆ, ದೇವದಾಸಿ ಪದ್ದತಿಯಿಂದ ಹಿಡಿದು ಇಂದಿನ ಸ್ಪಾ, ಮಸಾಜ್ ಪಾರ್ಲರ್ ವರೆಗೆ ಇದು ಹರಡಿಕೊಂಡಿದೆ. ಈ ದಂಧೆ ನಿರ್ಮೂಲನೆಗೆ ಸಾವಿರಾರು ರೀತಿಯ ಪ್ರಯತ್ನಗಳಾಗಿದ್ದರೂ ಹಲವು ರೀತಿಗಳಲ್ಲಿ ಅಸ್ತಿತ್ವದಲ್ಲಿ ಇದ್ದೇ ಇದೆ.

ಇಲ್ಲಿ ಮಾನ ಮರ್ಯಾದೆ, ನ್ಯಾಯ ಅನ್ಯಾಯ, ಸರಿ ತಪ್ಪುಗಳ ಮಂಥನವಿಲ್ಲ. ತಪ್ಪೆಲ್ಲಾ ಸರಿಯೇ.  ಈ ದಂಧೆಯ ರೀತಿನೀತಿಗಳು ಕಠೋರ. ಅತೀಕ್ರೂರ. ಇಲ್ಲಿ ಕೇವಲ ಹಣಕ್ಕೆ ಬೆಲೆಯೇ ಹೊರತು ಜೀವಕ್ಕಲ್ಲ. ಇಷ್ಟ ಕಷ್ಟಗಳ ಪ್ರಶ್ನೆ ಇಲ್ಲಿಲ್ಲ. ಇಲ್ಲಿ ಹೆಣ್ಣುಗಳಿಗೆ ಒಳಬರುವ ಹಾದಿಗಳು ಹಲವು. ಆದರೆ ಹೊರಹೋಗುವುದು ಕಷ್ಟಸಾಧ್ಯ ಅಥವಾ ಅಸಾಧ್ಯವೇ ಅನ್ನಬಹುದು.

ಇನ್ನು ಈ ನರಕದಲ್ಲಿ ಸಿಕ್ಕಿ ನರಳುವ ಒಬ್ಬೊಬ್ಬಳದ್ದೂ ಒಂದೊಂದು ಕಥೆ..... ಇಲ್ಲಿನ ಹೆಚ್ಚಿನ ಹೆಣ್ಣುಗಳು ಇಷ್ಟಪಟ್ಟು ಈ ಅಂಧಕಾರ ಕೂಪದಲ್ಲಿ ಕಾಲಿರಿಸುವುದಿಲ್ಲ. ಒಂದಿಲ್ಲೊಂದು ಅನಿವಾರ್ಯತೆಗೆ, ಮೋಸದ ಜಾಲಕ್ಕೆ ಸಿಲುಕಿ ಈ ದಂಧೆಯ ಪಾಲಾಗುತ್ತಾರೆ. ಪ್ರೀತಿ ಪ್ರೇಮದ ಸೋಗಿನಲ್ಲಿ, ಕೆಲಸದ ಆಮಿಷವೊಡ್ಡಿ, ಅಪಹರಿಸಿ ಅಥವಾ ಕೆಲವರಂತೂ ತಮ್ಮ ಸ್ವಂತದವರಿಂದಲೇ ಮಾರಾಟವಾಗಿ ಈ ಪಾಪಕೂಪ ಸೇರುತ್ತಾರೆ.

ಇಲ್ಲಿ ಬಂದು ನಂತರ ಶುರುವಾಗುತ್ತದೆ ನರಕದ ತರಹೇವಾರಿ ಚಿತ್ರಹಿಂಸೆಗಳು....

ಮೊದಲು ದಂಧೆಗೆ ಒಪ್ಪುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತದೆ. ಒಪ್ಪಿದರೆ ಸರಿ.. ಇಲ್ಲವೆಂದರೆ ಉಪವಾಸ ಕೆಡವುತ್ತಾರೆ, ಮೈಮೇಲೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ, ಅದೂ ಕೆಲಸಮಾಡದ ಪಕ್ಷದಲ್ಲಿ ಕೊನೆಯ ಅಸ್ತ್ರ... ಗೂಂಡಾಗಳಿಂದ ನಿರಂತರ ಅತ್ಯಾಚಾರ...

ಅವಳು ಎಷ್ಟು ಸಹಿಸಬಲ್ಲಳು...... 

ಈ ಸಮಾಜ ಮೊದಲೇ ಹೆಣ್ಣಿಗೆ ಅಬಲೆ, ಕೋಮಲೆ ಎಂಬ ವಿಶೇಷ ಬಿರುದು ಕೊಟ್ಟಿದೆಯಲ್ಲವೇ?????

ಕೊನೆಗೊಮ್ಮೆ ಹಿಂಸೆಯನ್ನೂ ತಾಳಲಾರದೇ,  ಅದರಿಂದ ತಪ್ಪಿಸಿಕೊಂಡು ಹೊರಬರುವ ದಾರಿಯೂ ಕಾಣದೇ ತನ್ನ ಭಾವನೆಗಳನ್ನು ಕೊಂದುಕೊಂಡು, ಜೀವಚ್ಛವವಾಗಿ ಶರಣಾಗಿ ಈ ದಂಧೆಯಲ್ಲಿ ಮಾರಾಟವಾಗುವ ದೇಹವಾಗಿಬಿಡುತ್ತಾಳೆ.

ಅಲ್ಲಿಂದ ಆರಂಭವಾಗುತ್ತದೆ ಭೀಭತ್ಸ ಪರ್ವ......  ಕೊನೆಮೊದಲಿಲ್ಲದ ಕಾಮಯಾತ್ರೆ........

ರಾತ್ರಿಗಳಲ್ಲಿ ಅಗಣಿತ ಕಾಮಾತುರರು...... ಅದಕ್ಕೆ ಲೆಕ್ಕವಿಲ್ಲ.

ಹಗಲಿನಲ್ಲಿ ಆಗಸದೆಡೆಗೆ ಶೂನ್ಯನೋಟ....., ಹಗಲಲ್ಲಾದರೂ ಕ್ಷಣ ವಿಶ್ರಾಂತಿ ಸಿಕ್ಕಿತಲ್ಲ ಎಂಬ ಸಣ್ಣ ಸಾಂತ್ವನ... ಹಾಗೇ ಮತ್ತೆ ರಾತ್ರಿಯಾಗುವುದಲ್ಲಾ ಎಂಬ ನೋವಿನ ನಿಟ್ಟುಸಿರು..... ಅಷ್ಟೇ ದಿನಚರಿ...

ವಿಪರ್ಯಾಸವೆಂದರೆ ಈ ವೇಶ್ಯಾವಾಟಿಕೆ ನಡೆಸುವಾಕೆಯೂ ಹೆಣ್ಣೇ..... ಮತ್ತು ಆಕೆಯೂ ಕೂಡಾ ಒಂದು ಕಾಲದಲ್ಲಿ ಇತರ ಹೆಣ್ಣುಗಳಂತೆ ಮಾರಾಟದ ಸರಕಾಗಿಯೇ ಈ ದಂಧೆಯನ್ನು ಪ್ರವೇಶಿಸಿರುತ್ತಾಳೆ. ಆದರೂ ತನ್ನ ಕಣ್ಣೆದುರು ಅಂಗಲಾಚುವ, ನರಳುವ ಇನ್ನೊಂದು ತನ್ನಂತಹದೇ ಜೀವವನ್ನು ಕಂಡು ಅವಳಿಗೆ ಮರುಕವುಕ್ಕದು. ಬಹುಶಃ ಆ ನರಕದ ಸಾಂಗತ್ಯದಲ್ಲಿ ಅವಳ ಭಾವನೆಗಳು ಬರಡಾಗಿರಬಹುದು..........

ಇನ್ನು ಯಾರೋ ಒಬ್ಬಳು ಈ ಹಿಂಸೆಯೆಲ್ಲ ಸಹಿಸಿ, ಧೈರ್ಯಗೂಡಿಸಿ, ಶತಪ್ರಯತ್ನ ಪಟ್ಟು ಈ ನರಕದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದಳೆಂದರೆ ಅದನ್ನೂ ಈ ನೀಚರು ಸಹಿಸರು... ಆಕೆಯನ್ನು ಹಿಡಿದು ತರಲು ಭೂಮಿ ಆಕಾಶ ಒಂದುಗೂಡಿಸುತ್ತಾರೆ. ಕೆಲವು ಪೊಲೀಸ್ ಅಧಿಕಾರಿಗಳು, ಪುಡಾರಿಗಳು, ಸಮಾಜದ ಕೆಲವು ಖ್ಯಾತನಾಮರು ಈ ದಂಧೆಯ ಬೆನ್ನಿಗಿರುತ್ತಾರೆ. ಅಷ್ಟು ಪ್ರಭಾವಶಾಲಿ ವ್ಯವಸ್ಥೆಯಿದು.

ಇವರ ಕೈಗೆ ಆಕೆ ಸಿಕ್ಕರೆ ಮುಗಿಯಿತು. ಒಂದೋ ಸಾವು ಇಲ್ಲವಾದರೇ ಮತ್ತೆಂದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತೆ ಆಕೆಯ ಕಾಲು ಮುರಿದು ಶಾಶ್ವತ ಅಂಗವಿಕಲೆಯನ್ನಾಗಿಸುತ್ತಾರೆ.

ಇನ್ನು ಪೋಲಿಸ್ ರೈಡ್ ಮಾಡಿದಾಗ ಬಚಾವಾಗುವ ಹುಡುಗಿಯರದ್ದು ಇನ್ನೊಂದು ಕಥೆ.  ಅತ್ತ ಮನೆಗೂ ಹೋಗಲಾರದೇ, ಇತ್ತ ಸಮಾಜದೊಂದಿಗೆ ಬೆರೆಯಲೂ ಆಗದೇ, ಬೇರೆ ವೃತ್ತಿಯನ್ನೂ ಹಿಡಿಯಲಾಗದೇ ಹೆಚ್ಚಿನವರು ಮತ್ತದೇ ಕೆಲಸಕ್ಕೆ ತೊಡಗುತ್ತಾರೆ. ಕೇವಲ ಬೆರಳೆಣಿಕೆಯಷ್ಟು ಹೆಣ್ಣುಗಳು ಮಾತ್ರ ಮತ್ತೆ ತಮ್ಮ ಮನೆ ಸೇರುವಲ್ಲಿ ಅಥವಾ NGOಗಳ ಮುಖಾಂತರ ಪುನರ್ವಸತಿ ಕೇಂದ್ರದಲ್ಲಿ ಸ್ವವೃತ್ತಿ ತರಬೇತಿ ಪಡೆದು ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ

ಈ ದಂಧೆಯಲ್ಲಿ ಹುಡುಗಿಯರಿಗೆ ಮಾರುಕಟ್ಟೆ ಇರುವುದು ದೇಹದಲ್ಲಿ ಕಸುವಿರುವವರೆಗೆ ಮಾತ್ರ. ವಯಸ್ಸಾಗಿ ಮುಪ್ಪು ಆವರಿಸಿದ ಮೇಲೆ ಈ ಹೆಣ್ಣುಗಳ ಸ್ಥಿತಿ ಕಸಾಯಿಖಾನೆಗೆ ಒಯ್ಯುವ ಮೂಕ ಪಶುವಿನಂತೆಯೇ. ಆ ಸಮಯಕ್ಕಾಗಲೇ ದೇಹ ರೋಗದ ಗೂಡಾಗಿರುತ್ತದೆ. ಆಗ ಇವರನ್ನು ಕೇಳುವವರಿಲ್ಲ. ಯಾರಿಗಾದರೂ ಮಾರುತ್ತಾರೆ ಅಥವಾ ನಿರ್ದಾಕ್ಷಿಣ್ಯವಾಗಿ ಬೀದಿಗೆ ದೂಡುತ್ತಾರೆ.  ಕೊನೆಗೊಮ್ಮೆ ಬೀದಿಹೆಣವಾಗಿ ಬದುಕಿನಯಾನ ಮುಗಿಸುತ್ತಾರೆ.

ಹೀಗಿರುತ್ತದೆ ಇವರ ಜೀವನ. 

ಇಂಥಾ ಶೋಷಣೆಗೆ ಕಾರಣರಾರು…? ಹೇಳುವುದು ಕಷ್ಟ. ಇದು ಬಹಳ ಪುರಾತನ ಕಾಲದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ವ್ಯವಸ್ಥೆ. ಮೇಲ್ನೋಟಕ್ಕೆ ಹಲವಾರು ಕಾರಣಗಳಿದ್ದರೂ ಇದರ ಮೂಲದಲ್ಲಿರುವುದು ನಮ್ಮ ಸಮಾಜವೇ ಅರ್ಥಾತ್ ನಾವೇ….. "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ" ಎಂದಿದ್ದೂ ಇದೇ ವ್ಯವಸ್ಥೆ, " ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ. ಆಕೆ ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಯವ್ವನದಲ್ಲಿ ಪತಿಯ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕು" ಅಂದದ್ದೂ ಅದೇ ವ್ಯವಸ್ಥೆ. ಹೆಣ್ಣು ಹುಟ್ಟುವ ಮುಂಚೆಯೇ ಕೊಲ್ಲಲು ಹವಣಿಸುವವರೂ ಅವರೇ, ಮತ್ತೆ ಗಂಡಿಗೆ ಮದುವೆ ಮಾಡಲು ಹೆಣ್ಣು ಸಿಗುತ್ತಿಲ್ಲ ಎಂದು ಹಪಹಪಿಸುವವರೂ ಅವರೇ‌. ಹೆಣ್ಣನ್ನು ದೇವದಾಸಿ ಮಾಡುವವರೂ ಇವರೇ, ಆಕೆಯನ್ನು ಭೋಗದ ವಸ್ತು ಎಂದು ಭಾವಿಸುವವರೂ ಇವರೇ........

ಹೀಗಿದೆ ನಮ್ಮ ಸಮಾಜ.....

ಇಂಥಾ ನಿಶಾಲೋಕದಲ್ಲಿಯೇ ನಾನವಳನ್ನು ಮೊದಲು ಕಂಡದ್ದು......

ಇವಳ ಬದುಕಿನ ದಾರುಣತೆಯ ಮುಂದೆಯೇ ನನ್ನ ಬದುಕಿನ ಕೊರತೆ ಕನಿಷ್ಠ ಎನಿಸಿದ್ದು......

              ***ಮುಂದುವರೆಯುತ್ತದೆ***