ಭಾನುವಾರ, ಜೂನ್ 21, 2020

ಸ್ನೇಹ ಪ್ರೇಮ

ಪುಸ್ತಕದ ಹೆಸರು : ಸ್ನೇಹ - ಪ್ರೇಮ                  

ತೆಲುಗು ಮೂಲ : ಯಂಡಮೂರಿ ವೀರೇಂದ್ರನಾಥ್ 

ಅನುವಾದಕರು : ರಾಜಾ ಚೆಂಡೂರ್            

ಪ್ರಕಾಶಕರು : ಹಂಸಧ್ವನಿ ಪ್ರಕಾಶನ, ಬೆಂಗಳೂರು  

ಪ್ರಥಮ ಮುದ್ರಣ : 1986                          

ಪುಟಗಳು : 135

"ಮಾನಸಿಕವಾಗಿ ಕೃಷ್ಣನ ವರಿಸಿದ ರಾಧೆ ಕೆಟ್ಟವಳೇ? ವಿವಾಹವಾಗದೇ ಕರ್ಣನ ಹಡೆದ ಕುಂತಿ ಕೆಟ್ಟವಳೇ?" ಎಂಬೆರಡು ಭಾವ ಸೂಕ್ಷ್ಮ ಪ್ರಶ್ನೆಗಳನ್ನಿಟ್ಟುಕೊಂಡು ನಾಲ್ಕು ವಿಭಿನ್ನ ಮನಸ್ಸತ್ವಗಳ ಮುಖೇನ ಬದುಕಿನ ಪರಿಧಿಯೊಳಗಣ ಸ್ನೇಹ, ಪ್ರೇಮ, ವಾಂಛೆಗಳ ಮೇಲಾಟದ ಬಗ್ಗೆ ವಿಶ್ಲೇಷಿಸುವ ಕಿರು ಕಾದಂಬರಿಯಿದು. 

ಸ್ನೇಹ, ಪ್ರೇಮಕ್ಕೆಲ್ಲಾ ವಿವಾಹವೇ ಮೆಟ್ಟಿಲೆನ್ನುವ ರಾಧಾ, ಪ್ರೇಮವೆನ್ನುವುದಕ್ಕೆ ಅಸ್ತಿತ್ವವೇ ಇಲ್ಲವೆನ್ನುವ ಜಯಾ, ಒಂದು ರಾತ್ರಿಯ ನಿಕಟತ್ವದಿಂದ ಪ್ರೇಮದಲ್ಲಿ ಬೀಳುವ ಪಾರ್ಥಸಾರಥಿ, ಸ್ನೇಹ ಪ್ರೇಮಗಳೆಲ್ಲಾ ಕೇವಲ ದೈಹಿಕ ಸಾಮೀಪ್ಯ ಸಾಧನೆಗಾಗಿ ಎಂಬ ಮನೋಭಾವದ ಕೃಷ್ಣ. ಈ ನಾಲ್ಕು ಪಾತ್ರಗಳ ಭಿನ್ನ ವಿಚಾರಧಾರೆಗಳ ಮೂಲಕ ಗಂಡು ಹೆಣ್ಣಿನ ನಡುವಿನ ಸ್ನೇಹ - ಪ್ರೇಮದ ಮೂಲವೇನು? ದೈಹಿಕ ಸಾಮೀಪ್ಯವೇ ಸ್ನೇಹ/ಪ್ರೇಮದಲ್ಲಿ ಆತ್ಮೀಯತೆಯನ್ನು ಬೆಸೆಯುವ ಸಾಧನವೇ ಎಂಬಂತಹ ಸೂಕ್ಷ್ಮ ಪ್ರಶ್ನೆಗಳಿಗೆ ನೈತಿಕತೆಯ ನೆಲೆಗಟ್ಟಿನಲ್ಲಿ ಉತ್ತರ ನೀಡಲು ಯತ್ನಿಸುತ್ತದೆ ಈ ಕಾದಂಬರಿ. 

ಮದುವೆಗೆ ಮುನ್ನವೇ ದೈಹಿಕ ಸಾಮೀಪ್ಯ ಎನ್ನುವ ಸ್ತ್ರೀ ಮೋಹಿ ಕೃಷ್ಣ ರಾಧಾಳ ಸ್ನೇಹ ಬಯಸುತ್ತಾನೆ. ಸ್ನೇಹ, ಪ್ರೇಮಗಳೆಲ್ಲಾ ವಿವಾಹದ ಚೌಕಟ್ಟಿನಲ್ಲೇ ಎಂಬ ಚಿಂತನೆಯ ರಾಧಾ ಆತನ ಸ್ನೇಹವನ್ನು ನಿರಾಕರಿಸುತ್ತಾಳೆ. ಇದರಿಂದ ಕಂಗೆಡುವ ಕೃಷ್ಣ ಅವಳದೇ ಹಾದಿಯಲ್ಲಿ ಸಾಗಿ ವಿವಾಹದ ನಾಟಕವಾಡಿ ತನ್ನ ಕಾರ್ಯಸಾಧಿಸಿಕೊಂಡು ರಾಧಾಳಿಗೆ ಆಘಾತ ನೀಡುತ್ತಾನೆ. ಶೀಲ, ಪಾವಿತ್ರ್ಯತೆ ಮುಂತಾದ ಪರಿಕಲ್ಪನೆಗಳಿಂದ ಮಾರು ದೂರ ನಿಲ್ಲುವ ಜಯಾಳ ಪ್ರಕಾರ ಪ್ರೇಮವೆಂಬುದು ವಾಂಛೆಯ ಮೇಲೆ ಹೊದಿಸಿದ ನವಿರಾದ ಆತ್ಮವಂಚನೆಯ ಪರದೆಯಷ್ಟೇ. ಆಕೆ ಆ ಪರದೆಯಿಲ್ಲದೇ ನೇರಾನೇರ ತನಗಿಷ್ಟ ಬಂದಂತೆ ಬದುಕುವವಳು. ಹಾಗಾಗಿಯೇ ಪಾರ್ಥಸಾರಥಿಯೊಂದಿಗಿನ ಸಂಬಂಧ ಆಕೆಗೆ ಕ್ಯಾಶುಯಲ್ ಎನ್ನಿಸುತ್ತದೆ. ಆದರೆ ವಯಸ್ಸು ಮೀರುತ್ತಿದ್ದರೂ ಏಕಾಂಗಿಯಾಗಿ ಒಂಟಿತನದ ಬೇಗೆಯಿಂದ ನರಳುವ ಪಾರ್ಥಸಾರಥಿಯವರಿಗೆ ಆಕೆಯ ಸಾಮೀಪ್ಯದಲ್ಲಿ ದೈಹಿಕ ಆನಂದಕ್ಕಿಂತ ಮಾನಸಿಕ ಆಸರೆ ಸಿಕ್ಕಂತೆ ಭಾಸವಾಗುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಹಿನ್ನೆಲೆ ತಿಳಿದಿದ್ದೂ ಆಕೆಯನ್ನು ವಿವಾಹವಾಗಲು ಬಯಸುತ್ತಾರೆ ಅವರು. ಕೃಷ್ಣನಿಂದ ನಂಬಿಕೆದ್ರೋಹಕ್ಕೊಳಗಾದ ರಾಧಾಳ ನಡೆಯೇನು, ಅವರಿಬ್ಬರ 'ವಿವಾಹವಲ್ಲದ' ವಿವಾಹ ಅಸ್ತಿತ್ವ ಕಳೆದುಕೊಂಡಿತೇ, ಜಯಾ ಸಾರಥಿಯವರನ್ನು ವಿವಾಹವಾಗುವಳೇ ಎಂಬುದೇ ಕಥಾ ಸಾರ.

ಟ್ರಬಲ್ ಷಟ್ಟರ್ಸ್ ಸಂಸ್ಥೆಯ ಪ್ರೆಸಿಡೆಂಟ್ ಆಪತ್ಭಾಂದವ ಟಿ.ಎಸ್, ತನ್ನ ಹುಚ್ಚು ವಿಚಾರಧಾರೆಗಳಿಗೆ ಕ್ರಾಂತಿಕಾರಿ ವೇಷ ತೊಡಿಸಿ ಚಿತ್ರವಿಚಿತ್ರ ಯೋಜನೆಗಳನ್ನು ಹೆಣೆಯುವ ಮಾಡಿಸಂ(ಮ್ಯಾಡಿಸಂ) ಸಂಸ್ಥೆಯ ಪರಶುರಾಮ್ ಪಾತ್ರಗಳಿಗೂ ಕೂಡಾ ಕಥೆಯಲ್ಲಿ ಪ್ರಾಮುಖ್ಯತೆಯಿದೆ. ತಮ್ಮ ವಿಚಿತ್ರ ವ್ಯಕ್ತಿತ್ವ, ಲಘು ಹಾಸ್ಯ ಲೇಪಿತ ಮಾತುಗಳಿಂದಾಗಿ ಈ ಎರಡೂ ಪಾತ್ರಗಳು ನೆನಪಿನಲ್ಲುಳಿಯುತ್ತವೆ. ಆಲ್ ಇಂಡಿಯಾ ರೇಡಿಯೋ ಸ್ಥಾಪನೆ, ಅದರ ಕಾರ್ಯನಿರ್ವಹಣೆ, ಅಲ್ಲಿನವರ ಕೆಲಸದ ವೈಖರಿಯ ಬಗೆಗಿನ ಸಂಪೂರ್ಣ ವಿವರಣೆಯೂ ಈ ಕಾದಂಬರಿಯಲ್ಲಿದೆ.

ಪರಸ್ಪರ ವಿರುದ್ಧ ಚಿಂತನೆಗಳ ರಾಧಾ ಹಾಗೂ ಜಯಾರಲ್ಲಿ ಯಾರ ಚಿಂತನೆಗಳು ಸರಿಯಾದುದು ಎಂಬುದನ್ನು ಲೇಖಕರು ಓದುಗರ ತರ್ಕಕ್ಕೇ ಬಿಟ್ಟಿದ್ದಾರೆ. ಯಾವುದೇ ಪೂರ್ವಾಗ್ರಹವಿಲ್ಲದೇ ಯೋಚಿಸಿ ನೋಡಿದರೆ ಬಹುಶಃ ಇಬ್ಬರ ಚಿಂತನೆಗಳೂ ಸಂಪೂರ್ಣ ಸರಿ/ತಪ್ಪಲ್ಲವೇನೋ ಎನ್ನಿಸಿತು. ಮಾಮೂಲಿ ಯಂಡಮೂರಿ ಅವರ ಶೈಲಿಗಿಂತ ಕೊಂಚ ಭಿನ್ನವೆನಿಸುವ ಕಾದಂಬರಿ ಒಮ್ಮೆ ಓದಲಡ್ಡಿಯಿಲ್ಲ.

ಅಕ್ಷರಯಜ್ಞ ೧ & ೨

ಪುಸ್ತಕದ ಹೆಸರು : ಅಕ್ಷರಯಜ್ಞ ಭಾಗ 1 & 2    

ತೆಲುಗು ಮೂಲ : ಸೂರ್ಯದೇವರ ರಾಮ್ ಮೋಹನರಾವ್                                

ಅನುವಾದಕರು : ಶ್ರೀಮತಿ ಸರಿತಾ ಜ್ಞಾನಾನಂದ 

ಪ್ರಕಾಶಕರು : ಭಾಗ 1 - ಸ್ನೇಹಾ ಪಬ್ಲಿಷಿಂಗ್ ಹೌಸ್ (2012 ಮುದ್ರಿತ), ಭಾಗ 2 - ಬನಶಂಕರಿ ಪ್ರಿಂಟರ್ಸ್ (1992 ಮುದ್ರಿತ)                                     

ಪುಟಗಳು : 200 + 216                                  

ಬೆಲೆ : 120 + (ಈಗ ಎರಡನೇ ಭಾಗದ ಬೆಲೆ ಕೂಡಾ ಪ್ರಾಯಶಃ 120ರೂಪಾಯಿಗಳೇ ಇರಬೇಕು)

ಸೂರ್ಯದೇವರ ಅವರ ಈ ಕಾದಂಬರಿ ವಿಶ್ವ ಉದ್ಯಮ ವಲಯದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಬಿಸಿನೆಸ್ ಎಂಪೈರ್ ಒಂದು ಎದುರಿಸುವ ಅನಿರೀಕ್ಷಿತ ಸಮಸ್ಯೆ, ಅದರ ಪರಿಣಾಮ, ಸಮಸ್ಯೆಯ ಮೂಲ ಮುಂತಾದವುಗಳನ್ನು ಕೆದಕುತ್ತಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ಜಾಹೀರಾತು ಲೋಕದ ಒಳಸುಳಿಗಳು, ಕೌತುಕಗಳನ್ನು ತೆರೆದಿಡುತ್ತಾ ಸಾಗುತ್ತದೆ. ಎರಡು ಭಾಗಗಳಲ್ಲಿರುವ ಈ ಕಾದಂಬರಿಯ ಮೊದಲ ಭಾಗ ಉದ್ಯಮ ಜಗತ್ತು ಹಾಗೂ ಜಾಹೀರಾತು ವಲಯಕ್ಕಿರುವ ಅವಿನಾಭಾವ ಸಂಬಂಧ, ಇವೆರಡು ಒಂದಕ್ಕೊಂದು ಪೂರಕ/ಮಾರಕವಾಗಿ ಕಾರ್ಯನಿರ್ವಹಿಸುವ ರೀತಿ, ಬ್ರಾಂಡ್ ವಾರ್, ಜಾಹೀರಾತು ಲೋಕಕ್ಕೆ ಅತ್ಯಗತ್ಯವಾದ ಸೃಜನಾತ್ಮಕ ಚಿಂತನೆ ಮೊದಲಾದವುಗಳ ಬಗ್ಗೆ ಸೂಕ್ಷ್ಮವಾಗಿ ಹೇಳಿದರೆ ಎರಡನೇ ಭಾಗದಲ್ಲಿ ಕಥೆಗೆ ಪ್ರಾಧಾನ್ಯತೆ ದೊರಕಿದೆ. 

ವಾಣಿಜ್ಯ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರಭಾವಿ ಸಂಸ್ಥೆ ಜೆ.ಜೆ ಬಿಸ್ನೆಸ್ ಎಂಪೈರ್ ನ ಮಾಲೀಕ, ಇಂಡಸ್ಟ್ರಿಯಲ್ ಎಂಪರರ್ ಎನಿಸಿಕೊಂಡಿರುವ ಜೆ.ಜೆ ಸೋಲನ್ನು ಎಂದಿಗೂ ಸಹಿಸದ ವ್ಯಕ್ತಿ. ಗೆಲುವನ್ನೇ ಜೀವನ ಧ್ಯೇಯವನ್ನಾಗಿಸಿಕೊಂಡ ವೃದ್ಧ ಜೆ.ಜೆ ಗೆ ತನ್ನ ಮೊಮ್ಮಗಳಾದ ಮೌನಿಕಾಳನ್ನು ತನ್ನ ಸಾಮ್ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡಿ ತಾನು ವಿಶ್ರಾಂತಿ ಪಡೆಯಬೇಕೆಂಬ ಹಂಬಲ. ಹಾಗಾಗಿಯೇ ಮೌನಿಕಾಳನ್ನು ಜೆ.ಜೆ ಎಂಪೈರಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಿಸಿ ಅವಳಿಗೆ ವ್ಯವಹಾರದ ಒಳ ಹೊರಗುಗಳನ್ನು ಪರಿಚಯಿಸುವ ಕೆಲಸ ಆರಂಭಿಸುತ್ತಾನೆ. ಆದರೆ ಮೌನಿಕಾ ಇ.ಡಿ ಯಾಗಿ ನೇಮಕಗೊಂಡ ತಿಂಗಳೊಳಗೇ ಜೆ.ಜೆ ಕಂಪನಿ ಇಟಲಿಯ ಫಿಯೆಟ್ ಕಂಪನಿಯ ಕೊಲ್ಯಾಬರೇಷನ್ ನಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ವ್ಯಾನ್ ಗಳು ಮಾರಾಟವಾಗದೇ ಗೋಡೌನಿನಲ್ಲಿ ಉಳಿದು ಅನಿರೀಕ್ಷಿತವಾಗಿ ಸೋಲಿನ ರುಚಿ ಕಾಣಬೇಕಾಗುತ್ತದೆ. ಈ ಸೋಲು ತನ್ನ ಅಸ್ತಿತ್ವಕ್ಕೆ, ಕಾರ್ಯಕ್ಷಮತೆಗೆ, ಸಾಮರ್ಥ್ಯಕ್ಕೆ ಸವಾಲೆಸೆಯುವಂತೆ ಕಾಣುತ್ತದೆ ಮೌನಿಕಾಳಿಗೆ. ಹಾಗಾಗಿಯೇ ತಾತನ ಆರು ತಿಂಗಳ ಗಡುವನ್ನು ಒಪ್ಪಿಕೊಂಡು ಈ ಸೋಲಿನ ತಳಬುಡ ಶೋಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಆ ಮೂಲಕ ಸೋಲನ್ನು ಗೆಲುವಾಗಿ ಪರಿವರ್ತಿಸುವ ಪಣ ತೊಡುವಾಕೆ ಜೆ.ಜೆ ಎಂಪೈರಿಗೆ ಅತ್ಯಂತ ನಿಷ್ಠ ಸಲಹೆಗಾರ, ಜೆ.ಜೆಯ ಪರಮಾಪ್ತ ರಮಣಯ್ಯನ ಸಹಕಾರ ಪಡೆಯುತ್ತಾಳೆ.

ರಮಣಯ್ಯನ ಮುಖಾಂತರ ಮಾರ್ಕೆಟಿಂಗ್ ಡೈರೆಕ್ಟರ್ ಸಿಂಘಾನಿಯಾನ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ ಎಂಬುದನ್ನು ಅರಿಯುವ ಮೌನಿಕಾಳಿಗೆ ಮಾರ್ಕೆಟಿಂಗ್ ಸೆಕ್ಷನ್ನಿನಲ್ಲಿ ಮುಂಚೆ ಸೇಲ್ಸ್ ಮ್ಯಾನೇಜರ್ ಆಗಿದ್ದು ಸಿಂಘಾನಿಯಾನ ಕಿರುಕುಳದಿಂದ ರಾಜೀನಾಮೆ ಕೊಟ್ಟು ಹೋದ ಮಾಥುರ್ ಎಂಬ ಪ್ರತಿಭಾನ್ವಿತ ಯುವಕನ ಬಗ್ಗೆ ಮಾಹಿತಿ ದೊರಕುತ್ತದೆ. ತನ್ನ ಸಮಸ್ಯೆಯನ್ನು ಪರಿಹರಿಸಲು ಕೇವಲ ಮಾಥುರ್ ನಿಂದ ಮಾತ್ರ ಸಾಧ್ಯ ಎಂದು ನಿರ್ಧರಿಸಿ ಅವನನ್ನು ಹುಡುಕುವ ಕಾರ್ಯ ಆರಂಭಿಸುತ್ತಾಳೆ.

ರವಿ ಮಾಥುರ್ ಬುದ್ಧಿ, ಪ್ರತಿಭೆ, ಕ್ರಿಯಾತ್ಮಕ ಚಿಂತನೆಗಳೆಲ್ಲವನ್ನೂ ಭರಪೂರ್ಣವಾಗಿ ಹೊಂದಿದ್ದೂ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಭಾರದ್ವಾಜ್, ಅವನ ಮಗಳು ವೀನಸ್ ಹಾಗೂ ತನ್ನ ಅತ್ತಿಗೆ ಪ್ರಮೀಳಾಳ ಕಾರಣ ಹಲವು ತೊಂದರೆ ಅನುಭವಿಸಿ, ಜೆ.ಜೆ ಎಂಪೈರಿನ ಕೆಲಸವನ್ನೂ ಬಿಟ್ಟು ಕುಡಿತದ ದಾಸನಾಗಿ ಬದುಕುತ್ತಿರುವವನು. ಇಂತಹ ಮಾಥುರ್ ಕಠಿಣ ಸನ್ನಿವೇಶವೊಂದರಲ್ಲಿ ತನ್ನ ಜೀವನ ವಿಧಾನವನ್ನು ಬದಲಿಸಿಕೊಂಡು ತಾನೂ ಸಂಪಾದಿಸಬೇಕೆಂಬ ಜಿದ್ದಿಗೆ ಬೀಳುತ್ತಾನೆ. ಹಿಂದೊಮ್ಮೆ ತಾನು ಪ್ರಜ್ಞೆಯೇ ಇಲ್ಲದಂತೆ ಕುಡಿದು ಬಿದ್ದಿದ್ದಾಗ ತನ್ನನ್ನು ಉಪಚರಿಸಿದ ಗಂಗಾಧರರಾಯರ 'ಕಲ್ಪನಾ ಅಡ್ವರ್ಟೈಸರ್ಸ್' ಎಂಬ ಹಾಳುಬಿದ್ದ ಕಂಪನಿಯನ್ನು ಪುನಶ್ಚೇತನಗೊಳಿಸಿ ಆ ಮೂಲಕ ತನ್ನ ವೈರಿ ಭಾರದ್ವಾಜನಿಗೆ ಬುದ್ಧಿ ಕಲಿಸಲು ನಿರ್ಧರಿಸುತ್ತಾನೆ. ಗಂಗಾಧರರಾಯರ ಅಡ್ವರ್ಟೈಸಿಂಗ್ ಏಜೆನ್ಸಿ ಅಧೋಗತಿ ತಲುಪಿದ್ದೂ ಭಾರದ್ವಾಜನಿಂದಲೇ ಎಂಬುದು ತಿಳಿದ ನಂತರವಂತೂ ಅವನ ನಿರ್ಧಾರ ಇನ್ನೂ ಬಲವಾಗುತ್ತದೆ. ಗಂಗಾಧರರಾಯನ ಮಗ ಭಾರ್ಗವ ಮಾಥುರ್ ಗೆ ಒತ್ತಾಸೆಯಾಗಿ ನಿಲ್ಲುತ್ತಾನೆ. ಇವೆಲ್ಲಾ ವಿಚಾರಗಳೂ ಮೌನಿಕಾಳಿಗೆ ತಿಳಿಯುತ್ತದೆ. ಶ್ರೀಮಂತರ ಬಗ್ಗೆ ಅಪಾರ ತಿರಸ್ಕಾರ ಹೊಂದಿರುವ ಮಾಥುರ್ ತಾನು ಯಾರೆಂಬ ಸತ್ಯ ತಿಳಿದರೆ ದಾಸ್ತಾನಿರುವ ವ್ಯಾನುಗಳನ್ನು ಮಾರಲು ಸಹಾಯ ಮಾಡುವುದಿರಲಿ ತನ್ನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ ಎಂಬುದನ್ನು ಗ್ರಹಿಸುವ ಮೌನಿಕಾ ಮಧ್ಯಮ ವರ್ಗದ ನಿರುದ್ಯೋಗಿ ಯುವತಿಯ ಸೋಗಿನಲ್ಲಿ ಮಾಥುರ್ ಆಗಿನ್ನೂ ಆರಂಭಿಸಿದ್ದ 'ಮೆಡಿಸನ್ ಅವೆನ್ಯೂ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಮೂರನೇ ಪಾಲುದಾರಳಾಗಿ ಅವರೊಂದಿಗೆ ಸೇರಿಕೊಳ್ಳುತ್ತಾಳೆ.

ಮಾಥುರ್ ತನ್ನ ಬುದ್ಧಿಮತ್ತೆಯಿಂದ ಹಂತಹಂತವಾಗಿ ಪ್ರಚಾರರಂಗದಲ್ಲಿ ಮೇಲೇರುತ್ತಾ ಹೋಗುತ್ತಾನೆ. ಜೊತೆಗೇ ತನ್ನ ವೈರಿ ಭಾರದ್ವಾಜನಿಗೆ ಏಟು ನೀಡುವ ಯಾವ ಅವಕಾಶವನ್ನೂ ಬಿಡದೇ ಬಳಸಿಕೊಂಡು ನಷ್ಟದ ರುಚಿ ತೋರಿಸುತ್ತಾನೆ. ಇತ್ತ ಜಾಣ್ಮೆಯಲ್ಲಿ ಮಾಥುರನಿಂದ ತನ್ನ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ಮೌನಿಕಾ ರಮಣಯ್ಯನ ನೇತೃತ್ವದಲ್ಲಿ 'ಎಂ.ಎಂ ಅಡ್ವರ್ಟೈಸಿಂಗ್ ಏಜೆನ್ಸಿ' ಸ್ಥಾಪಿಸಿ ಮಾಥುರ್ ನೀಡಿದ ಸೃಜನಾತ್ಮಕ ಉಪಾಯಗಳ ಬಲದಿಂದ ಗೋಡೌನಿನಲ್ಲಿದ್ದ ಎಲ್ಲಾ ವ್ಯಾನುಗಳನ್ನೂ ಮಾರಾಟವಾಗುವಂತೆ ಮಾಡುತ್ತಾಳೆ. ಇದು ಜೆ.ಜೆ ಎಂಪೈರಿನ ಪ್ರಚಾರದ ಹೊಣೆಹೊತ್ತ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಗೆ ಪ್ರಬಲವಾದ ಆಘಾತ ನೀಡುತ್ತದೆ. ಇದರಿಂದಾಗಿ ಕೆಂಡಾಮಂಡಲವಾಗುವ ವೀನಸ್ ತಮ್ಮ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ಮುರಿದ ಬಗ್ಗೆ ಮೌನಿಕಾಳನ್ನು ಪ್ರಶ್ನಿಸುತ್ತಾಳೆ. ಜೆ.ಜೆ ಕಂಪನಿಯ ವ್ಯಾನುಗಳು ಮಾರಾಟವಾಗದೇ ಉಳಿಯಲು ಕ್ವೀನ್ಸ್ ಏಜೆನ್ಸಿಯ ಕಳಪೆ ಪ್ರಚಾರವೇ ಕಾರಣ ಎಂದು ನೇರವಾಗಿ ಆಪಾದಿಸುವ ಮೌನಿಕಾ ಕ್ವೀನ್ಸ್ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ರದ್ದುಪಡಿಸುತ್ತಾಳೆ. 


ಆರಂಭದಲ್ಲಿ ಮಾಥುರ್ ನ ಬುದ್ಧಿವಂತಿಕೆ, ದೂರದೃಷ್ಟಿ, ಎಂತಹ ಕ್ಲಿಷ್ಟ ಸಮಸ್ಯೆಯನ್ನಾದರೂ ಕ್ಷಣದೊಳಗೆ ಪರಿಹರಿಸಬಲ್ಲ ಅವನ ಕುಶಾಗ್ರಮತಿಯ ಬಗ್ಗೆ ಗೌರವತಾಳುವ ಮೌನಿಕಾ ಕ್ರಮೇಣ ಅವನಲ್ಲಿ ಅನುರಕ್ತಳಾಗುತ್ತಾಳೆ. ತನ್ನ ಅಸಲೀ ಅಸ್ತಿತ್ವವನ್ನು ಮರೆಮಾಚಿ ಆತನಿಗೆ ಮೋಸಮಾಡುತ್ತಿದ್ದೇನೆಂಬ ಭಾವ ತೀವ್ರವಾಗಿ ಆಕೆಯನ್ನು ಕಾಡತೊಡಗುತ್ತದೆ. ಇತ್ತ ಮಾಥುರ್ ಮನ ಕೂಡಾ ಮೌನಿಕಾಳೆಡೆಗಿದೆ ಎಂಬುದು ಭಾರ್ಗವನಿಗೆ ತಿಳಿದ ವಿಚಾರ. ಆದರೆ ತಾನು ಮಾಥುರ್ ನ ಹೆಂಡತಿಯೆಂದು ಆಗೀಗ ಪ್ರತ್ಯಕ್ಷಳಾಗುವ ವೀನಸ್, ಅವಳ ಮಾತಿಗೆ ವಿರೋಧ ಸೂಚಿಸದೇ ಸುಮ್ಮನಿರುವ ಮಾಥುರ್ ಅವನಿಗೆ ಯಕ್ಷಪ್ರಶ್ನೆ. 

ವೀನಸ್ ಹಾಗೂ ಮಾಥುರ್ ಗೆ ವಿವಾಹವಾಗಿತ್ತೇ, ಆಗಿದ್ದರೆ ಅವರಿಬ್ಬರೂ ಏಕೆ ದೂರವಾದರು, ಭಾರದ್ವಾಜನ ಮೇಲೆ ಮಾಥುರನಿಗೆ ಏಕಷ್ಟು ದ್ವೇಷ, ಭಾರದ್ವಾಜನಿಗೇಕೆ ಜೆ.ಜೆ ಎಂಪೈರ್ ಮೇಲೆ ಕಣ್ಣು ಎಂಬೆಲ್ಲಾ ಪ್ರಶ್ನೆಗಳ ಜೊತೆಗೆ ಮೌನಿಕಾ ಜೆ.ಜೆ ಎಂಪೈರಿನ ಉತ್ತರಾಧಿಕಾರಿಯಾಗುವಳೇ, ಅವಳ ಪ್ರೇಮ ಸಫಲವಾಗುವುದೇ ಎಂಬುದನ್ನು ಪುಸ್ತಕ ಓದಿಯೇ ತಿಳಿಯಬೇಕು.

ಮಾಥುರ್ ಎಂಬುದು ಕೇವಲ ಪಾತ್ರವಾಗದೇ ಲೇಖಕರ ಸೃಜನಾತ್ಮಕ ಚಿಂತನೆಗಳ ಮೂರ್ತರೂಪವೆನಿಸುತ್ತದೆ. ಅಷ್ಟು ಚೆನ್ನಾಗಿದೆ ಪಾತ್ರ ಪೋಷಣೆ. ಮೌನಿಕಾ ತನ್ನ ಏಕಾಗ್ರತೆ, ಸಾಧಿಸುವ ಛಲ ಹಾಗೂ ಜೀವನದ ಬಗೆಗಿನ ತನ್ನ ನಿಲುವಿನ ಕಾರಣ ಸದಾ ನೆನಪಿನಲ್ಲಿ ಉಳಿಯುತ್ತಾಳೆ. ಕಥೆಯ ಕೊನೆಯಲ್ಲಿ ಅಜ್ಜ ಹಾಗೂ ಮೊಮ್ಮಗಳ ನಡುವಿನ ಮಾತುಕತೆ ಬಹಳ ಅರ್ಥಪೂರ್ಣವಾಗಿದೆ. ವೀನಸ್ ಪಾತ್ರ ಮುಂದಾಲೋಚನೆಯಿಲ್ಲದ ಜಾಣ್ಮೆ, ಅಹಂಕಾರ, ನಿರ್ಲಕ್ಷ್ಯತನಕ್ಕೆ ಪ್ರತಿರೂಪವೆನಿಸುತ್ತದೆ. ರಮಣಯ್ಯನ ನಿಷ್ಠೆ, ಗಂಗಾಧರರಾಯರ ಸತ್ಯಸಂಧತೆ, ಭಾರ್ಗವನ ಸ್ನೇಹಪರತೆ, ಭಾರದ್ವಾಜನ ಕಪಟ, ಪ್ರಮೀಳಾ ರಾಣಿಯ ದಾಷ್ಟೀಕತೆ ಹೀಗೆ ಪ್ರತೀ ಪಾತ್ರವೂ ಅಚ್ಚಳಿಯದೆ ಮನದಲ್ಲಿ ಉಳಿಯುತ್ತದೆ. ಕಥೆಯ ಕೊನೆಯಲ್ಲಂತೂ ಊಹಾತೀತ ಅಚ್ಚರಿಗಳ ರಾಶಿಯೇ ಇದೆ.

ಈ ಕಾದಂಬರಿಯಲ್ಲಿ ಅಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಜಾಹೀರಾತಿನ ಪ್ರಾಮುಖ್ಯತೆಯನ್ನು ವಿವರಿಸಿರುವ ಪರಿ ನನಗೆ ಬಹಳ ಇಷ್ಟವಾಯಿತು. ಬಹುಜನ ಸ್ವಾಮ್ಯ ಹಾಗೂ ಕೆಲಜನ ಸ್ವಾಮ್ಯ ಮಾರುಕಟ್ಟೆಗಳೇ ಪ್ರಧಾನವಾಗಿರುವ ಇಂದಿನ ಉದ್ಯಮರಂಗದಲ್ಲಿ ಜಾಹೀರಾತು ಸೃಷ್ಟಿಸುವ ಸಂಚಲನವನ್ನು ಬಹಳ ಚೆನ್ನಾಗಿ ಪ್ರಸ್ತುತಪಡಿಸಿದ್ದಾರೆ ಲೇಖಕರು. ಅಡ್ವರ್ಟೈಸಿಂಗ್ ಪರಿಕಲ್ಪನೆಗಳು, ಬ್ರಾಂಡ್ ವಾರ್, ಮೋಡಿ ಮಾಡುವ ಪ್ರಚಾರದ ಸಾಲುಗಳು ಕಾದಂಬರಿಯುದ್ದಕ್ಕೂ ಕಾಣುತ್ತವೆ. ವಾಣಿಜ್ಯ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯವರಿಗೆ ಅಧ್ಯಯನದ ದೃಷ್ಟಿಯಿಂದ ಈ ಪುಸ್ತಕ ಬಹಳ ಖುಷಿ ಕೊಡಬಹುದು. ಈ ಬಗ್ಗೆ ತಿಳಿಯದವರೂ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ಓದಿ ಆನಂದಿಸಬಹುದಾದ ಒಂದು ಉತ್ತಮ ಕಾದಂಬರಿ ಅಕ್ಷರಯಜ್ಞ.

ಸಂಹಾರ - ಪುಸ್ತಕ ವಿಮರ್ಶೆ

ಪುಸ್ತಕದ ಹೆಸರು       : ಸಂಹಾರ                    

ತೆಲುಗು ಮೂಲ        : ಯರ್ರಂಶೆಟ್ಟಿಸಾಯಿ 

ಅನುವಾದ              : ರಾಜಾ ಚೆಂಡೂರ್  

ಪ್ರಕಾಶಕರು             : ಸ್ನೇಹಾ ಎಂಟರ್ಪ್ರೈಸಸ್,ಬೆಂಗಳೂರು                        

ಪ್ರಥಮ ಮುದ್ರಣ     : 1994                        

ತೃತೀಯ ಮುದ್ರಣ    : 2019                    

ಪುಟಗಳು                : 204                              

ಬೆಲೆ                       :150 ರೂ      

ತೆಲುಗು ಕಾದಂಬರಿಕಾರರೆಂದೊಡನೆ ತಟ್ಟನೆ ನನ್ನ ತಲೆಗೆ ಬರುವುದು ಯಂಡಮೂರಿ ವೀರೇಂದ್ರನಾಥ್. ಯಂಡಮೂರಿ ಅವರ ಕಾದಂಬರಿಗಳ ಬಗ್ಗೆ ನನ್ನದು ಎಂದಿಗೂ ತೀರದ ಸೆಳೆತ. ಕಾಲೇಜು ದಿನಗಳಲ್ಲಿ ಓದಿದ್ದ ಸೂರ್ಯದೇವರ ರಾಂಮೋಹನ್ ಅವರ ಕೆಲ ಕೃತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ತೆಲುಗು ಲೇಖಕರೂ ಹೆಚ್ಚುಕಡಿಮೆ ಅಪರಿಚಿತರೇ ನನ್ನ ಪಾಲಿಗೆ. ಇತ್ತೀಚಿಗೆ ಗೆಳತಿ ರೂಪಾ ಮಂಜುನಾಥ್ ಅವರಿಂದಾಗಿ ತೆಲುಗು ಅನುವಾದಿತ ಸಾಹಿತ್ಯದೆಡೆಗೆ ಆಸಕ್ತಿ ಮೂಡತೊಡಗಿದ್ದು. ಯಂಡಮೂರಿ, ಸೂರ್ಯದೇವರಾ ಅವರೊಂದಿಗೆ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಚಲ್ಲಾ ಸುಬ್ರಮಣ್ಯಂ ಮೊದಲಾದ ಸಾಹಿತಿಗಳ ಕೃತಿಗಳನ್ನು ಓದಲಾರಂಭಿಸಿದ್ದು. 


'ಸಂಹಾರ'... ಇದು ಇನ್ನೊರ್ವ ತೆಲುಗು ಕಾದಂಬರಿಕಾರ ಯರ್ರಂ ಶೆಟ್ಟಿಸಾಯಿ ಅವರ ಕಾದಂಬರಿ. ರಾಜಾ ಚೆಂಡೂರ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನು ಓದಿದ ಯರ್ರಂಶೆಟ್ಟಿಸಾಯಿ ಅವರ ಮೊದಲ ಕಾದಂಬರಿಯಿದು. ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆಯ ಹಲವು ಆಯಾಮಗಳನ್ನು ತೋರುವ ಈ ಕಥೆಯು ಇಂತಹ ಅರಾಜಕತೆ ಸಾಮಾನ್ಯನೊಬ್ಬನ ಬದುಕನ್ನು ನುಚ್ಚುನೂರಾಗಿಸುವ ಪರಿಯನ್ನು ತೆರೆದಿಡುತ್ತದೆ. ವ್ಯವಸ್ಥೆಯ ಪ್ರತೀ ಹಂತದಲ್ಲೂ ಭ್ರಷ್ಟರೇ ತುಂಬಿರುವಾಗ ನಿಷ್ಠಾವಂತ ವ್ಯಕ್ತಿಯೇ ಗುಂಪಿಗೆ ಸೇರದ ಪದವಾಗಿ ಅನುಭವಿಸುವ ಕಷ್ಟನಷ್ಟಗಳನ್ನು ಸಂಹಾರ ಚಿತ್ರಿಸುತ್ತದೆ.

ಐವತ್ತೆರಡು ವರ್ಷದ ಮಧ್ಯಮವರ್ಗೀಯ ರಾಮಚಂದ್ರಮೂರ್ತಿ ಕಥಾನಾಯಕ. ಮಡದಿ ಸೀತಾ ಹಾಗೂ ಅಡುಗೆಯ ನಟರಾಜನೊಂದಿಗೆ ವಾಸ. ತನ್ನ ನೀತಿಯುತ ಸಿದ್ಧಾಂತಗಳ ಕಾರಣದಿಂದಾಗಿ ತನ್ನ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವುದಷ್ಟೇ ಅಲ್ಲದೇ ಲಂಚ ತೆಗೆದುಕೊಂಡ ಆರೋಪದಲ್ಲಿ ಭ್ರಷ್ಟಾಚಾರಿಯ ಪಟ್ಟ ಹೊತ್ತು ಸಸ್ಪೆನ್ಷನ್ ಬಹುಮಾನ ಪಡೆದಿರುವ ವ್ಯಕ್ತಿ. ಈ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಯಂ ನಿವೃತ್ತಿ ತೆಗೆದುಕೊಂಡರೂ ಕೇಸ್ ಮುಗಿಯದೇ ಅವನಿಗೆ ಬರಬೇಕಾದ ಸೆಟಲ್ಮೆಂಟ್ ಹಣ, ಪಿಂಚಣಿ ಎಲ್ಲವೂ ತಡೆಹಿಡಿಯಲ್ಪಟ್ಟಿದೆ. ವರ್ಷಗಳ ಹಿಂದೆಯೇ ಅವನ ಒಬ್ಬಳೇ ಮಗಳು ಸರಿತಾ ಆಸಿಡ್ ದಾಳಿಗೆ ತುತ್ತಾಗಿ ಅಸುನೀಗಿದ್ದಾಳೆ.  ಆ ಏರಿಯಾದ ಎಂಎಲ್ಎ ಮಾರ್ತಾಂಡನ ಮಗ ಮಹಿಪಾಲ ತನಗೆ ನೀಡಿದ ಕಿರುಕುಳದ ಬಗ್ಗೆ ಪೋಲೀಸರಿಗೆ ದೂರು ನೀಡಿದಳೆಂಬ ಕಾರಣಕ್ಕೆ ಅವನೇ ತನ್ನ ಗೂಂಡಾ ಸಹಚರರೊಂದಿಗೆ ಸೇರಿ ಸರಿತಾಳ ಮೇಲೆ ಆಸಿಡ್ ಎರಚಿರುವುದು ತಿಳಿದಿದ್ದರೂ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲಾಗದೇ ಸೋತು ಹೋಗಿದ್ದಾನೆ ಮೂರ್ತಿ. ಕಾರಣ ಮಹಿಪಾಲನ ಅಪ್ಪನಿಗಿರುವ ಹಣ ಹಾಗೂ ಜನಬಲ. ಅಧಿಕಾರಬಲದ ಮುಂದೆ ತನ್ನ ಹೋರಾಟ ಸಾಗದೆಂದು ಕೋರ್ಟಿನಲ್ಲಿ ಸಾಕ್ಷಾಧಾರಗಳ ಕೊರತೆಯಿಂದ ಕೇಸು ಬಿದ್ದು ಹೋದಾಗಲೇ ತಿಳಿದುಕೊಂಡಿದ್ದಾನೆ. ಜೀವನ ನಿರ್ವಹಣೆಗಾಗಿ ಮನೆಯಲ್ಲಿನ ವಸ್ತುಗಳನ್ನೇ ಮಾರಬೇಕಾದಂತಹ ದುಸ್ಥಿತಿ. ಸಮಸ್ಯೆಗಳ ನಡುವಲ್ಲೂ ಮೂರ್ತಿ ದಂಪತಿಗಳ ಬದುಕಿನಲ್ಲಿ ನಗುವಿಗೆ ಕೊರತೆಯಿಲ್ಲ ಎಂದರೆ ಅದಕ್ಕೆ ಕಾರಣ ನಟರಾಜನ ಹಾಸ್ಯಪ್ರಜ್ಞೆ. ತನ್ನ ಸ್ವಾರಸ್ಯಕರ ಮಾತಿನ ಲಹರಿಯಿಂದ ಸೀತಮ್ಮನ ಕೋಪವನ್ನೂ ಕರಗಿಸಬಲ್ಲ ಚತುರನವನು. 

ಹೀಗೆ ಮನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟಿದ್ದಾಗಲೇ ನಟರಾಜ ಮೂರ್ತಿ ಹಾಗೂ ಸೀತಾರಿಗೆ ಪೇಯಿಂಗ್ ಗೆಸ್ಟ್ ಒಬ್ಬರಿಗೆ ಮನೆಯ ಒಂದು ಭಾಗವನ್ನು ಬಾಡಿಗೆ ಕೊಟ್ಟು ಆ ಮೂಲಕ ಒಂದಿಷ್ಟು ವರಮಾನ ಸಂಪಾದಿಸುವ ಬಗ್ಗೆ ಹೇಳುತ್ತಾನೆ. ಇದು ದಂಪತಿಗಳಿಗೆ ಒಪ್ಪಿಗೆಯಾಗುತ್ತದೆ ಕೂಡಾ. ಮೊದಲಿಗೆ ಸಿನಿಮಾ ನಟ ರೇವಂತ್ ಪೇಯಿಂಗ್ ಗೆಸ್ಟಾಗಿ ಬರುತ್ತಾನಾದರೂ ಅವನ ಕುಡಿತದ ಚಟ ತಂದೊಡ್ಡುವ ಸಮಸ್ಯೆಗಳ ಕಾರಣ ಮೂರ್ತಿ ದಂಪತಿಗಳು ಪೇಚಿಗೆ ಸಿಲುಕುತ್ತಾರೆ. ಅಷ್ಟರಲ್ಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ಅವನು ಮೂರ್ತಿಯ ಮನೆ ಖಾಲಿ ಮಾಡಿ ಹೊರಡುತ್ತಾನೆ. ಆ ನಂತರದಲ್ಲಿ ಪೇಯಿಂಗ್ ಗೆಸ್ಟಾಗಿ ಬರುವವಳೇ ಪತ್ರಕರ್ತೆ ಸರಿತಾ. ಕಾಕತಾಳೀಯವಾಗಿ ಮೂರ್ತಿ ದಂಪತಿಗಳ ಮಗಳು ಸರಿತಾಳಿಗೂ ಈ ಸರಿತಾಳಿಗೂ ಹೆಸರಿನಂತೆಯೇ ಚಹರೆಯಲ್ಲೂ ಬಹಳಷ್ಟು ಸಾಮ್ಯತೆಯಿರುತ್ತದೆ. ತಮ್ಮ ಗತಿಸಿದ ಮಗಳೇ ಮತ್ತೆ ಸಿಕ್ಕಂತೆ ಸಂಭ್ರಮಿಸುವ ಮೂರ್ತಿ ಹಾಗೂ ಗೀತಾ ಸರಿತಾಳೊಂದಿಗೆ ಭಾವನಾತ್ಮಕ ನಂಟನ್ನು ಬೆಳೆಸಿಕೊಳ್ಳುತ್ತಾರೆ. ಅವರ ನೋವಿನ ಹಿನ್ನೆಲೆ ತಿಳಿದ ಸರಿತಾ ಕೂಡಾ ಅವರನ್ನು ಅಕ್ಕರೆಯಿಂದ ಹಚ್ಚಿಕೊಳ್ಳುತ್ತಾಳೆ. ನಟರಾಜ ತನ್ನ ಹಳೆಯ ರಿಕಾರ್ಡ್ ಡ್ಯಾನ್ಸ್ ಕಂಪನಿ ಮತ್ತೆ ಆರಂಭವಾದ ಕಾರಣ ಮೂರ್ತಿಯವರ ಮನೆಯನ್ನು ಬಿಟ್ಟು ಹೊರಡುತ್ತಾನೆ.

ಈ ಸಂದರ್ಭದಲ್ಲೇ ಮೂರ್ತಿಯ ಮನೆಯ ರಸ್ತೆಯ ಸರ್ಕಲ್ಲಿನಲ್ಲಿ ಸರಳ ಎಂಬಾಕೆಯನ್ನು ಕೆಲ ಗೂಂಡಾಗಳು ಪೆಟ್ರೋಲ್ ಹಾಕಿ ಸಜೀವವಾಗಿ ದಹಿಸುತ್ತಾರೆ. ಇದಕ್ಕೆ ಸರಿತಾಳ ಪ್ರಿಯಕರ ಸುಧೀರ್ ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾನೆ. ಇದರ ಹಿನ್ನೆಲೆ ಶೋಧಿಸ ಹೊರಡುವ ಸರಿತಾಳಿಗೆ ಸಹಾಯ ಮಾಡಿದ ಕಾರಣಕ್ಕೆ ಸುಧೀರ್ ಕೊಲ್ಲಲ್ಪಡುತ್ತಾನೆ. ಈ ಎರಡೂ ಕೊಲೆಗಳ ಹಿಂದಿರುವುದು ಮಾರ್ತಾಂಡನ ಮಗ ಡಿಸಿಪಿ ಮಹಿಪಾಲ್ ಎಂಬುದು ಖಚಿತವಾಗುತ್ತದೆ. ಈ ವಿಚಾರ ತಿಳಿದು ಮೂರ್ತಿ ದಂಪತಿಗಳ ಭಯ ಇನ್ನಷ್ಟು ಹೆಚ್ಚುತ್ತದೆ. ಈ ಸರಿತಾಳ ಸ್ಥಿತಿ ಕೂಡಾ ತಮ್ಮ ಮಗಳು ಸರಿತಾಳಂತಾಗಬಾರದೆಂದು ಅವಳಿಗೆ ತಿಳಿಹೇಳಲು ಪ್ರಯತ್ನಿಸುತ್ತಾರೆ. ಆದರೆ ಆಕೆ ಹಿಂದೆಗೆಯುವುದಿಲ್ಲ. ಕಡೆಗೆ ಅವರ ಭಯವೇ ನಿಜವಾಗಿ ಪತ್ರಕರ್ತೆ ಸರಿತಾ ಕೂಡಾ ಆಸಿಡ್ ನಲ್ಲಿ ಸುಟ್ಟು ಕರಕಲಾಗಿ ಕೊನೆಯುಸಿರೆಳೆಯುತ್ತಾಳೆ. 

ಅಲ್ಲಿಗೆ ಮೂರ್ತಿಯ ಸಹನೆ ಸಾಯುತ್ತದೆ ಆಕ್ರೋಶ ಭುಗಿಲೇಳುತ್ತದೆ. ಇನ್ನು ತಮಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ, ಕಳೆದುಕೊಂಡ ಬಹುಮೂಲ್ಯ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸ ಮಾತ್ರವೇ ಬಾಕಿ ಉಳಿದಿರುವುದು ಎಂದು ನಿರ್ಧರಿಸಿದ ಘಳಿಗೆ ತನ್ನ ಯೌವ್ವನದ ದಿನಗಳಲ್ಲಿನ ಸಿಟ್ಟು, ಪ್ರತೀಕಾರದ ಛಾಯೆ ಅವನಲ್ಲಿ ಮತ್ತೆ ಜಾಗೃತವಾಗುತ್ತದೆ. ಜಾಣತನ, ಹಣ ಹಾಗೂ ದೈಹಿಕ ಬಲದಿಂದ ಮೂರ್ತಿ ತನ್ನ ಪ್ರತೀಕಾರವನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆಯ ತಿರುಳು. 

ಸರಳ ಭಾಷೆಯ ಈ ಸೇಡಿನ ಕಥನದ ವೈಶಿಷ್ಟ್ಯತೆ ಇರುವುದು ನಿರೂಪಣಾ ಶೈಲಿಯಲ್ಲಿ. ಇಡೀ ಕಥೆಯ ಮುಕ್ಕಾಲು ಭಾಗ ಸಂಭಾಷಣೆಯಲ್ಲಿಯೇ ಇದೆ. ಹರಿತವಾದ ಹಾಸ್ಯ ವ್ಯಂಗ್ಯ ಮಿಶ್ರಿತ ಸಂಭಾಷಣೆಯೇ ಈ ಕಾದಂಬರಿಯ ಹೈಲೈಟ್. ಸಂಭಾಷಣಾ ಪ್ರಧಾನವಾದ್ದರಿಂದ ವೇಗವಾಗಿ ಓದಿಸಿಕೊಳ್ಳುತ್ತದೆ ಈ ಕಥೆ. ಅದರಲ್ಲೂ ನಟರಾಜನ ಸಂಭಾಷಣೆಗಳು ನಗುವನ್ನು ಉಕ್ಕಿಸುವುದರೊಂದಿಗೆ ಹಲವೆಡೆ ನಮ್ಮ ವ್ಯವಸ್ಥೆಯ ದೋಷಕ್ಕೆ ಚಾಟಿ ಬೀಸುತ್ತವೆ. ಅದರೊಂದಿಗೆ ಅವಕಾಶವಾದಿ ರೇವಂತ್, ಭ್ರಮೆಗಳನ್ನೇ ನಂಬುವ, ಅದನ್ನೇ ಸತ್ಯವೆನ್ನುವ ವಿಲಕ್ಷಣ ವ್ಯಕ್ತಿತ್ವದ ಶಾಂತಿ, ಸಮಾನತೆಯ ಬಗ್ಗೆ ಚಿಂತಿಸುತ್ತಾ ವರದಕ್ಷಿಣೆ ನೀಡದೇ ಮದುವೆಯಾಗುವ ಕನಸು ಕಾಣುತ್ತಾ ಅತ್ತ ಕನಸೂ ಕೈಗೂಡದೇ ಇತ್ತ ದೈಹಿಕ ಕಾಮನೆಗಳನ್ನೂ ಅದುಮಿಡಲಾಗದೇ ತಳಮಳಿಸುವ ಅವಿವಾಹಿತೆ ಉಮಾದೇವಿ, ಮಸ್ತಾನ್ ಮೊದಲಾದ ಅಲ್ಪಾವಧಿ ಪಾತ್ರಗಳೂ ನೆನಪಿಪಲ್ಲಿ ಉಳಿಯುತ್ತವೆ. 

'ಬಾಳೊಂದು ನಂದನ, ಅನುರಾಗ ಬಂಧನ' ಗೀತೆಯಿಂದ ಆರಂಭವಾಗಿ ಅದೇ ಗೀತೆಯೊಂದಿಗೆ ಅಂತ್ಯವಾಗುವ ಕಥೆ ಈ ಅನೀತಿಯ ಲೋಕದಲ್ಲಿ ಕೈ ಮುಗಿದರೆ ಬೆಲೆಯಿಲ್ಲ ಕೈ ಎತ್ತಿದರೆ ಮಾತ್ರವೇ ವ್ಯಕ್ತಿಗೆ ಬೆಲೆ ಎಂದು ಸಾರುತ್ತದೆ.

(ನನ್ನ ಬಳಿಯಿರುವುದು 2019ರಲ್ಲಿ ಮುದ್ರಣಗೊಂಡಿರುವ ಪ್ರತಿ. ಹಳೆಯ ಪ್ರತಿಗಳು ಹೇಗೋ ಎಂತೋ ಆದರೆ ಈ ಪ್ರತಿಯಲ್ಲಿ ಮಾತ್ರ ಮುದ್ರಾರಾಕ್ಷಸನ ಹಾವಳಿ ವಿಪರೀತವಾಗಿದೆ. ಬಹಳಷ್ಟು ಕಡೆಗಳಲ್ಲಿ ಪದಗಳು ಬದಲಾಗಿವೆ. ಹಾಗೆ ಹಲವೆಡೆ ಪದಗಳು, ಕೆಲವೆಡೆ ಸಂಪೂರ್ಣ ವಾಕ್ಯಗಳೇ ಮಾಯವಾಗಿವೆ. ಓದುವಾಗ ಅಡಚಣೆ ಎನ್ನಿಸಿದ್ದು ಸುಳ್ಳಲ್ಲ)

ಕೆನ್ನೆ ಮೇಲೊಂದು ಸಿಹಿ ಮುತ್ತು

ಇಂದು ತಾಯಂದಿರ ದಿನದ ಸಂಭ್ರಮ. ನಮ್ಮೆಲ್ಲಾ ದಿನಗಳೂ ಅವಳದೇ ಉಡುಗೊರೆಯಾದ ಕಾರಣ ಅವಳಿಗೊಂದು ದಿನದ ಚೌಕಟ್ಟು ಸಮುದ್ರಕ್ಕೆ ಅಣೆಕಟ್ಟು ಕಟ್ಟಿದಂತೆಯೇ ಸೈ. ಹಾಗಿದ್ದೂ ಅವಳಿಗಾಗಿ ಮೀಸಲಾದ ಈ ದಿನದಂದು ನನ್ನನ್ನು ಸದಾ ಕಾಡುವ ಚಲನಚಿತ್ರವೊಂದರ ಕುರಿತು ಒಂದಿಷ್ಟು ಅನಿಸಿಕೆ ಹಂಚಿಕೊಳ್ಳಬೇಕೆನಿಸುತ್ತಿದೆ.

ಚಿತ್ರ ಮಾಂತ್ರಿಕ ಮಣಿರತ್ನಂ, ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಕಾಂಬಿನೇಷನ್ ನಲ್ಲಿ 2002ರಲ್ಲಿ ತೆರೆಗೆ ಬಂದ ಈ ತಮಿಳು ಚಿತ್ರವೇ 'ಕನ್ನತ್ತಿಲ್ ಮುತ್ತಮಿಟ್ಟಾಲ್'. ಕಾಡಿ ಕಂಗೆಡಿಸುವ ಕಥಾಹಂದರ, ಮನವನ್ನು ಆರ್ದ್ರಗೊಳಿಸುವ ಸಹಜ ನಟನೆ, ಕಣ್ಣಂಚಿನಲ್ಲಿ ಹನಿಗಳನ್ನು ಸಾಂದ್ರಗೊಳಿಸುವ ಸಾಹಿತ್ಯ, ಭಾವಗಳೇ ಮೇಳೈಸಿದ ಸಂಗೀತ....... ಇವೆಲ್ಲವುಗಳ ಸಂಕಲಿತ ಸಂಪುಟ ಕನ್ನತ್ತಿಲ್ ಮುತ್ತಮಿಟ್ಟಾಲ್.

'ಸುಜಾತಾ' ಎಂಬ ಕಾವ್ಯನಾಮದಿಂದಲೇ ಖ್ಯಾತರಾದ ಸಾಹಿತಿ ಎಸ್. ರಂಗರಾಜನ್ ಅವರ 'ಅಮುದಾವುಂ ಅವನುಂ' ಎಂಬ ಸಣ್ಣ ಕಥೆ ಆಧಾರಿತವಾದ ಈ ಚಿತ್ರ ತಾನು ದತ್ತು ಪುತ್ರಿಯೆಂಬ ಸತ್ಯ ತಿಳಿದು ತನ್ನ ಹೆತ್ತಮ್ಮನನ್ನು ಹುಡುಕಿಹೊರಡುವ ಅಮುದಾ ಎಂಬ ಒಂಬತ್ತು ವರ್ಷದ ಶ್ರೀಲಂಕನ್ ತಮಿಳು ಬಾಲಕಿಯ ಕಥೆಯನ್ನು ಶ್ರೀಲಂಕಾ ಆಂತರಿಕ ಯುದ್ಧದ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. 

ಚಿತ್ರ ಆರಂಭವಾಗುವುದು ತಮಿಳರ ಪ್ರಾಬಲ್ಯದ ಶ್ರೀಲಂಕಾದ ಮಾಂಗುಳಂ ಗ್ರಾಮದ ಶ್ಯಾಮಾ ಹಾಗೂ ದೀಲೀಪನ್ ಅವರ ವಿವಾಹದಿಂದ. ದೀಲೀಪನ್ ಆ ಗ್ರಾಮದ ಇತರ ಯುವಕರೊಂದಿಗೆ ತಮಿಳರ ಸ್ವಾತಂತ್ರಕ್ಕಾಗಿ ಹೋರಾಡುವ ಗುಂಪಿನಲ್ಲಿ ಸಕ್ರಿಯನಾಗಿರುವಾತ. ಶ್ಯಾಮಾಳ ಸಾಂಸಾರಿಕ ಜೀವನ ಸುಗಮವಾಗಿ ಸಾಗುತ್ತಿದ್ದಾಗಲೇ ಶ್ರೀಲಂಕಾ ಸೇನೆಯು ಮಾಂಗುಳಂನಲ್ಲಿ ಕಾರ್ಯಾಚರಣೆಗೆ ಬಂದಿರುವುದು ತಿಳಿದು ದೀಲೀಪನ್ ದಟ್ಟ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ತಮಿಳರ ಪ್ರಾಂತ್ಯದ ಮೇಲೆ ಸೇನಾ ಕಾರ್ಯಾಚರಣೆ ತೀವ್ರವಾಗತೊಡಗಿ ಹೆಚ್ಚಿನ ತಮಿಳರು ಸುರಕ್ಷಿತ ತಾಣ ಅರಸಿ ಭಾರತದತ್ತ ವಲಸೆ ಹೊರಡುತ್ತಾರೆ. ಗರ್ಭಿಣಿ ಶ್ಯಾಮಾ ಇತ್ತ ದೀಲೀಪನ್ ಬಗ್ಗೆ ಸುದ್ದಿಯೂ ತಿಳಿಯದೇ ಅತ್ತ ಭಾರತಕ್ಕೂ ಹೋಗುವ ಮನವಿಲ್ಲದೇ ತೊಳಲಾಡುವಾಗ ಅವಳ ಮನೆಯವರು, ಸಂಬಂಧಿಕರು ಮಗುವಿನ ಭವಿಷ್ಯದ ದೃಷ್ಟಿಯಿಂದ ವಲಸೆ ಹೋಗುವುದೇ ಸೂಕ್ತವೆಂದು ಅವಳನ್ನು ಒಪ್ಪಿಸುತ್ತಾರೆ. ಹಲವರೊಂದಿಗೆ ರಾಮೇಶ್ವರಂಗೆ ತೆರಳುವ ಶ್ಯಾಮಾಳಿಗೆ ಪ್ರಯಾಣ ಮಧ್ಯದಲ್ಲಿ ದೀಲೀಪನ್ ಕಾಡಿನಲ್ಲಿ ಗುಂಡೇಟಿನಿಂದ ಗಾಯಗೊಂಡಿರುವನೆಂದು ತಿಳಿಯುತ್ತದೆ. ರಾಮೇಶ್ವರಂನ ನಿರಾಶ್ರಿತ ಶಿಬಿರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡುವ ಶ್ಯಾಮಾ ತನ್ನ ಪತಿ ಹಾಗೂ ತನ್ನ ಜನರ ಹೋರಾಟದಲ್ಲಿ ಜೊತೆಯಾಗುವ ಉದ್ದೇಶದಿಂದ ಮಗುವನ್ನು ಶಿಬಿರದಲ್ಲೇ ತೊರೆದು ತನ್ನ ತಾಯ್ನೆಲಕ್ಕೆ ವಾಪಾಸಾಗುತ್ತಾಳೆ.

ಇದೆಲ್ಲಾ ನಡೆದು ಒಂಬತ್ತು ವರ್ಷಗಳ ತರುವಾಯ ಕಥೆ ಚೆನ್ನೈಗೆ ಹೊರಳುತ್ತದೆ. 'ಇಂದಿರಾ' ಎಂಬ ಕಾವ್ಯನಾಮದಲ್ಲಿ ಬರೆಯುವ ಖ್ಯಾತ ಲೇಖಕ ತಿರುಸೆಲ್ವನ್ ಹಾಗೂ ಇಂದಿರಾ ದಂಪತಿಗಳ ಮುದ್ದಿನ ಮಗಳು ಅಮುದಾ. ಅಪ್ಪ, ಅಮ್ಮ, ಇಬ್ಬರು ತಮ್ಮಂದಿರು, ಅಜ್ಜ ಇವರೆಲ್ಲರ ತುಂಬು ಪ್ರೀತಿ, ಮಮತೆಯಲ್ಲಿ ನಲಿಯುವ ಅಮುದಾಳ ಒಂಬತ್ತನೇಯ ಹುಟ್ಟುಹಬ್ಬ ಅವಳ ಈ ಸುಂದರ ಪ್ರಪಂಚದ ಬುನಾದಿಯನ್ನೇ ಕೆಡವುವ ಸತ್ಯವೊಂದಕ್ಕೆ ಅವಳನ್ನು ಮುಖಾಮುಖಿಯಾಗಿಸುತ್ತದೆ. ಈ ಮುಂಚೆಯೇ ನಿರ್ಧರಿಸಿದಂತೆ ಜನ್ಮದಿನದ ಸಂತಸದಲ್ಲಿ ಮುಳುಗಿರುವ ಮಗಳಿಗೆ ಅವಳು ತಮ್ಮ ಸ್ವಂತ ಮಗಳಲ್ಲ, ತಾವಾಕೆಯನ್ನು ರಾಮೇಶ್ವರಂನ ನಿರಾಶ್ರಿತ ಶಿಬಿರದಿಂದ ದತ್ತು ತೆಗೆದುಕೊಂಡು ಸಾಕಿದೆವೆಂಬ ಸತ್ಯವನ್ನು ತಿಳಿಸುತ್ತಾನೆ ತಿರು. ತಂದೆಯ ಮಾತುಗಳು ಅಮುದಾಳ ಎಳೆಯ ಮನವನ್ನು ವಿಪರೀತ ಘಾಸಿಗೊಳಿಸುತ್ತವೆ. 

ತನ್ನ ಹೆತ್ತ ತಾಯಿ ಯಾರು, ಎಲ್ಲಿದ್ದಾಳೆ ಎಂದು ಮನೆಯವರನ್ನೆಲ್ಲಾ ಪ್ರಶ್ನಿಸತೊಡಗುತ್ತಾಳೆ ಅಮುದಾ. ಆಗ ಅವಳಿಗೆ ಒಂಬತ್ತು ವರ್ಷಗಳ ಹಿಂದಿನ ಕಥೆ ತಿಳಿಯುತ್ತದೆ. ರಾಮೇಶ್ವರಂನಲ್ಲಿ ತನ್ನಕ್ಕನೊಂದಿಗೆ ವಾಸಿಸುವ ತಿರು ಆಗಿನ್ನೂ ಲೇಖಕನಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಅವನ ಪಕ್ಕದ ಮನೆಯಲ್ಲಿ ವಾಸಿಸುವ ಇಂದಿರಾಳಿಗೆ ಅವನ ಮೇಲೆ ಒಲವು. ತಿರು ಅಲ್ಲಿನ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿ ಅಲ್ಲಿರುವ ಜನರನ್ನು ಮಾತನಾಡಿಸಿ ಅವರ ಬದುಕು ಬವಣೆಗಳಿಗೆ ಅಕ್ಷರ ರೂಪ ನೀಡುವ ಹವ್ಯಾಸ ಉಳ್ಳವನು. ಇಂತಹದೇ ಒಂದು ಭೇಟಿಯಲ್ಲಿ ಆತ ಶ್ಯಾಮಾ ತೊರೆದು ಹೋದ ಹಸುಗೂಸನ್ನು ಕಂಡು ಆ ಮಗುವಿನ ಮೇಲೆ ಒಂದು ಕಥೆಯನ್ನು ಬರೆಯುತ್ತಾನೆ. ಆ ಕಥೆಯನ್ನು ಓದಿ ಮಗುವನ್ನು ನೋಡಬೇಕೆಂದು ಹಠ ಹಿಡಿದು ಅವನೊಂದಿಗೆ ಶಿಬಿರಕ್ಕೆ ಬರುವ ಇಂದಿರಾ ಆ ಮಗುವಿಗೆ ಅಮುದಾ ಎಂಬ ಹೆಸರನ್ನಿಡುವುದಲ್ಲದೇ ಅವನ ಮನದಲ್ಲಿ ಆ ಮಗುವನ್ನು ದತ್ತು ಪಡೆಯಬೇಕೆಂಬ ಭಾವದ ಉಗಮಕ್ಕೆ ಕಾರಣರಾಗುತ್ತಾಳೆ. ಮಗುವನ್ನು ದತ್ತು ಪಡೆಯಲು ಆತ ನಿರ್ಧರಿಸಿ ಆ ಬಗ್ಗೆ ಶಿಬಿರದಲ್ಲಿ ವಿಚಾರಿಸಿದಾಗ ಅವಿವಾಹಿತರಿಗೆ ಮಗುವನ್ನು ದತ್ತು ನೀಡುವುದಿಲ್ಲ ಎಂಬ ವಿಚಾರ ಆತನಿಗೆ ತಿಳಿಯುತ್ತದೆ. ಬೇರೆ ದಾರಿ ಕಾಣದೆ ಮಗುವನ್ನು ದತ್ತು ಪಡೆಯುವ ಉದ್ದೇಶದಿಂದ ಇಂದಿರಾಳೊಂದಿಗೆ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ ತಿರು. ತಿರುವಿನ ಮೇಲಿನ ಪ್ರೇಮದೊಂದಿಗೆ ಅಮುದಾಳ ಮೇಲೂ ಮಮಕಾರವುಳ್ಳ ಇಂದಿರಾ ತಿರುವಿನ ಪ್ರಸ್ತಾಪವನ್ನು ಒಪ್ಪುವುದರೊಂದಿಗೆ ಇಬ್ಬರೂ ವಿವಾಹವಾಗಿ ಅಮುದಾಳನ್ನು ದತ್ತು ಪಡೆಯುತ್ತಾರೆ.

ಈ ವಿಚಾರ ತಿಳಿದ ನಂತರವೂ ಅಮುದಾಳ ಮನಸ್ಸು ಶಾಂತವಾಗುವುದಿಲ್ಲ. ಇಷ್ಟು ವರ್ಷ ತಾನು ತನ್ನದೆಂದುಕೊಂಡ ಬಂಧಗಳ್ಯಾವವೂ ತನ್ನವಲ್ಲ ಎಂಬ ಸತ್ಯವನ್ನು ‌ಹೇಗೆ ನಿಭಾಯಿಸುವುದೆಂದು ಅರಿಯದ ಆ ಪುಟ್ಟ ಜೀವ ಕೋಪವನ್ನೇ ಆಸರೆಯಾಗಿಸಿಕೊಂಡು ಇಷ್ಟು ದಿನ ತನ್ನವರೆಂದುಕೊಂಡವರಿಂದ ಅದರಲ್ಲೂ ಮುಖ್ಯವಾಗಿ ತಾಯಿ ಇಂದಿರಾಳಿಂದ ಅಂತರ ಕಾಯ್ದುಕೊಳ್ಳತೊಡಗುತ್ತದೆ.  ಅಪ್ಪನೊಂದಿಗೆ ಮಾಮೂಲಾಗಿಯೇ ವರ್ತಿಸುವ ಅಮುದಾಳ ಮನ ಅದೇಕೋ ಅಮ್ಮನೊಂದಿಗೆ ಅದೇ ತೆರನಾದ ಬಾಂಧವ್ಯವನ್ನು ಹಿಂದಿನಂತೆಯೇ ಮುಂದುವರೆಸಲು ಒಂಡಂಬಡುವುದಿಲ್ಲ. ಇಂದಿರಾಳ ಮೇಲೆ ಹೇಳಲಾರದ ಕೋಪ,  ಕಾರಣವಿಲ್ಲದ ಸಿಡಿಮಿಡಿಯನ್ನು ವ್ಯಕ್ತಪಡಿಸತೊಡಗುತ್ತಾಳೆ. ತನ್ನೀ ವರ್ತನೆಯಿಂದ ತನ್ನಮ್ಮನ ಮನಸ್ಸಿಗೆಷ್ಟು ನೋವಾಗುತ್ತಿದೆ, ಆಕೆ ಒಳಗೊಳಗೇ ಅದೆಷ್ಟು ಯಾತನೆಯನ್ನು ಅನುಭವಿಸುತ್ತಿದ್ದಾಳೆಂಬುದನ್ನು ಗ್ರಹಿಸುವಷ್ಟು ಪ್ರಬುದ್ಧ ವಯಸ್ಸಲ್ಲ ಆಕೆಯದ್ದು. ಆಕೆಯ ಮನದ ತುಂಬಾ ಇರುವುದು ಒಂದೇ ವಿಚಾರ. ಆದಷ್ಟು ಬೇಗ ತನ್ನ ಹೆತ್ತಮ್ಮನನ್ನು ಕಾಣಬೇಕು, ಆಗಿನ್ನೂ ಕಣ್ತೆರೆದು ಜಗ ಕಾಣುತ್ತಿದ್ದ ತನ್ನನ್ನು ತೊರೆದು ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತೆಂದು ಆಕೆಯನ್ನು ಪ್ರಶ್ನಿಸಬೇಕು ಎಂಬುದಷ್ಟೇ ಆಕೆಯ ಗುರಿ.

ಹೆತ್ತವಳನ್ನು ಕಾಣಬೇಕೆಂಬ ಆಸೆ ದಿನೇ ದಿನೇ ಅಮುದಾಳಲ್ಲಿ ಬಲವಾಗತೊಡಗುತ್ತದೆ. ಒಮ್ಮೆ ಇದೇ ಉದ್ದೇಶದಿಂದ ಮನೆಯವರಿಗೆ ತಿಳಿಯದಂತೆ ತನಗಿಂತ ಕೊಂಚ ಹಿರಿಯನಾದ ಅತ್ತೆಯ ಮಗನೊಂದಿಗೆ ರಾಮೇಶ್ವರಂಗೆ ಪ್ರಯಾಣಬೆಳೆಸಿ ಅಲ್ಲಿನ ಅನಾಥಾಲಯದಲ್ಲಿ ತನ್ನಮ್ಮನ ಬಗೆಗಿನ ಮಾಹಿತಿ ಕಲೆಹಾಕಲು ಯತ್ನಿಸುತ್ತಾಳೆ‌. ಮಕ್ಕಳಿಬ್ಬರೂ ರಾಮೇಶ್ವರಂನಲ್ಲಿರುವ ವಿಚಾರ ತಿಳಿದು ಅವರನ್ನು ಹಿಂಬಾಲಿಸಿ ಬರುವ ಮನೆಯವರನ್ನು ಅಮುದಾಳ ಹಠ ಕಂಗಾಲಾಗಿಸುತ್ತದೆ. ಬೇರೆ ದಾರಿ ಕಾಣದ ತಿರು ಅಮುದಾಳ ಹೆತ್ತಮ್ಮನನ್ನು ಹುಡುಕಿ ಅವಳನ್ನು ಭೇಟಿಮಾಡಿಸಲು ಶ್ರೀಲಂಕಾಕ್ಕೆ ಹೊರಡಲು ನಿರ್ಧರಿಸುತ್ತಾನೆ. ಉಳಿದಿಬ್ಬರು ಮಕ್ಕಳನ್ನು ತಾತನ ಸುಪರ್ದಿನಲ್ಲಿ ಬಿಟ್ಟು ಪತ್ನಿ ಹಾಗೂ ಮಗಳೊಂದಿಗೆ ಶ್ರೀಲಂಕೆಗೆ ಬರುವ ತಿರುಸೆಲ್ವನ್ ಗೆ ಅಲ್ಲಿ ತಂಗುವ ವ್ಯವಸ್ಥೆಗೆ ಹಾಗೂ ಈ ಹುಡುಕಾಟಕ್ಕೆ ಅವನ ಸಿಂಹಳೀ ಸ್ನೇಹಿತ ಡಾ. ಹೆರಾಲ್ಡ್ ವಿಕ್ರಮಸಿಂಘೆ ನೆರವಾಗುತ್ತಾನೆ. ಶ್ರೀಲಂಕಾಕ್ಕೆ ಬಂದ ನಂತರದಲ್ಲಂತೂ ಇಂದಿರಾಳೆಡೆಗಿನ ಅಮುದಾಳ ವರ್ತನೆ ಬಹಳಷ್ಟು ಕಠೋರವಾಗುತ್ತದೆ. ಆಕೆಯ ಪ್ರತೀ ಮಾತನ್ನು ವಿರೋಧಿಸುವುದನ್ನು ರೂಢಿಸಿಕೊಳ್ಳುತ್ತಾಳೆ. ತನ್ನನ್ನು ವೈರಿಯೆಂಬಂತೆ ಕಾಣುವ ಮಗಳ ನಡವಳಿಕೆ ಇಂದಿರಾಳಲ್ಲಿ ಹೇಳತೀರದ ಸಂಕಟವನ್ನುಂಟುಮಾಡುತ್ತದೆ. 


ಆದರೆ ಇಲ್ಲಿಯವರೆಗೆ ಶಾಂತಿ, ನೆಮ್ಮದಿಗಳ ಪರಿಧಿಯಲ್ಲೇ ಜೀವಿಸಿದ್ದ ಪುಟ್ಟ ಅಮುದಾ ತನ್ನಮ್ಮನನ್ನು ಅರಸುವ ಈ ಪಯಣದಲ್ಲಿ ಯುದ್ಧದ ಭೀಕರತೆಗೆ ಸಾಕ್ಷಿಯಾಗುತ್ತಾಳೆ. ತನ್ನೊಂದಿಗೆ ಮಾತಾನಾಡುತ್ತಾ ಕುಳಿತ್ತಿದ್ದ ವ್ಯಕ್ತಿ ತನ್ನ ಕಣ್ಣೆದುರೇ ಮಾನವ ಬಾಂಬರ್ ಆಗಿ ಬಾಂಬ್ ಸ್ಪೋಟಿಸಿಕೊಳ್ಳುವ ಸನ್ನಿವೇಶ ಆಕೆಯೊಳಗೆ ವಿಚಿತ್ರ ದಿಗಿಲನ್ನು ಸೃಷ್ಟಿಸುತ್ತದೆ. ಅಮುದಾಳ ಹೆತ್ತ ತಾಯಿಯ ಹೆಸರು ಶ್ಯಾಮಾ ಹಾಗೂ ಅವಳ ಊರು ಮಾಂಗುಳಂ ಎಂಬ ಮಾಹಿತಿಯನ್ನೇ ಆಧಾರವಾಗಿಸಿಕೊಂಡು ಮಾಂಗುಳಂ ಎಂಬ ಹೆಸರಿನ ಎರಡು ಹಳ್ಳಿಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಶ್ರೀಲಂಕಾದ ತಮಿಳಿರ ಬವಣೆಗಳ ಪ್ರತ್ಯಕ್ಷ ದರ್ಶನವಾಗುತ್ತದೆ. ಹೀಗೇ ಒಮ್ಮೆ ತಿರು ಹಾಗೂ ವಿಕ್ರಮಸಿಂಘೆ ಸಮೀಪದ ಕಾಡೊಂದರ ಬಳಿ ವಿಹಾರಕ್ಕೆಂದು ತೆರಳಿದಾಗ LTTEನ ಬಂಡಾಯಗಾರರ ಕೈಯಲ್ಲಿ ಸಿಕ್ಕಿಬೀಳುತ್ತಾರೆ. ತಿರುಸೆಲ್ವನ್ ಆ ಕೂಡಲೇ ಒಂದು ತಮಿಳು ಕವಿತೆ ಹೇಳುತ್ತಾನೆ. ಆಗ ಆ ಗುಂಪಿನ ನಾಯಕ ಪಸುಪತಿ ಅವನನ್ನು ಇಂದಿರಾ ಎಂದು ಗುರ್ತಿಸುತ್ತಾನೆ. ಶ್ಯಾಮಾಳ ಬಗ್ಗೆ ಅವರಿಗೆ ತಿಳಿದಿರಬಹುದೆಂಬ ಆಸೆಯಿಂದ ತಿರು ತಾವು ಶ್ರೀಲಂಕಾಕ್ಕೆ ಬಂದ ಉದ್ದೇಶವನ್ನು ವಿವರಿಸುತ್ತಾನೆ. ವಾಸ್ತವದಲ್ಲಿ ಶ್ಯಾಮಾಳ ಸಹೋದರನಾದ ಪಸುಪತಿ ತಾನು ಮರುದಿನ ಶ್ಯಾಮಾಳನ್ನು ಅಮುದಾಳ ಭೇಟಿಗೆ ಕರೆತರುವುದಾಗಿ ಭರವಸೆ ನೀಡುತ್ತಾನೆ.  

ಮರುದಿನ ನಾಲ್ವರೂ ಪಸುಪತಿ ಹೇಳಿದ ಸ್ಥಳದಲ್ಲಿ ಶ್ಯಾಮಾಳ ಭೇಟಿಗೆ ಕಾದಿರುವಾಗಲೇ ಆ ಪ್ರದೇಶದಲ್ಲೇ ಅವಿತಿದ್ದ ಬಂಡುಕೋರರು ಹಾಗೂ ಸೈನ್ಯದ ನಡುವೆ ಹೋರಾಟವೇರ್ಪಟ್ಟು ಬಾಂಬ್ ಹಾಗೂ ಗುಂಡುಗಳ ಅವಿರತ ಮೊರೆತ ಆರಂಭವಾಗುತ್ತದೆ. ಕಣ್ಣೆದುರೇ ಹೊತ್ತಿ ಉರಿಯುತ್ತಿರುವ ಕಟ್ಟಡ, ನಿರ್ಜೀವವಾಗುತ್ತಿರುವ ಮನುಜರು, ಗುಂಡಿನ ಮೊರೆತ ಪುಟ್ಟ ಅಮುದಳ ಕಣ್ಣಲ್ಲಿ ಅಚ್ಚಳಿಯದಂತೆ ಮೂಡತೊಡಗುತ್ತದೆ. ಇದೇ ಸಂದರ್ಭದಲ್ಲಿ ಅವಳೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಇಂದಿರಾಳ ತೋಳಿಗೆ ಗುಂಡು ತಗಲುತ್ತದೆ. ಹೇಗೋ ನಾಲ್ವರೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ತನ್ನ ಹಠದಿಂದಲೇ ಅಮ್ಮನಿಗೆ ಹೀಗಾಯಿತು ಎಂದರಿತ ಅಮುದಾ ಇಂದಿರಾಳಲ್ಲಿ ತನ್ನೆಲ್ಲಾ ವರ್ತನೆಗಳಿಗೂ ಸೇರಿಯೋ ಎಂಬಂತೆ ಕ್ಷಮೆ ಕೋರುತ್ತಾಳೆ. ಯುದ್ಧದ ಕ್ರೌರ್ಯದಲ್ಲಿ ಬದುಕಿನ ಇನ್ನೊಂದು ಮುಖವನ್ನು ಕಂಡು ಘಾಸಿಗೊಂಡ ಮಗುವಿನ ಮನ ಚೆನ್ನೈನಲ್ಲಿಯ ಶಾಂತ ನೆಲೆಗೆ, ಮನುಜನೇ ಮನುಜನನ್ನು ಕೊಲ್ಲುವ ಜಾಗದಿಂದ ಸಮುದ್ರದ ಪ್ರಶಾಂತ ತೀರಕ್ಕೆ ಹಿಂದಿರುಗಲು ಬಯಸುತ್ತದೆ. ಮನೆಗೆ ವಾಪಾಸಾಗೋಣ ಎಂದು ಅವಳೇ ಅಪ್ಪ ಅಮ್ಮನನ್ನು ಹೊರಡಿಸುತ್ತಾಳೆ. ಮರುದಿನ ಮೂವರೂ ವಿಕ್ರಮಸಿಂಘೆಯೊಂದಿಗೆ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪಸುಪತಿ ಭೇಟಿಯಾಗಲು ಹೇಳಿದ್ದ ಪ್ರದೇಶದ ರಸ್ತೆಯಲ್ಲೇ ಹೋಗಲು ಸೂಚಿಸುವ ಇಂದಿರಾ ಈ ದಿನವಾದರೂ ಶ್ಯಾಮಾ ಬರಬಹುದೆಂಬ ಆಸೆಯಿಂದ ಆ ಜಾಗದಲ್ಲಿ ಕೆಲವು ಕ್ಷಣ ಕಾಯೋಣವೆಂದು ಸೂಚಿಸುತ್ತಾಳೆ. ಅವಳ ನಿರೀಕ್ಷೆಯಂತೇ ಶ್ಯಾಮಾ ಬರುತ್ತಾಳೆ. 

ತನ್ನ ಹೆತ್ತಮ್ಮನನ್ನು ಕಂಡಾಗ ಅವಳೊಡನೆ ಏನೆಲ್ಲಾ ಪ್ರಶ್ನೆ ಕೇಳಬೇಕೆಂದು ಎಷ್ಟೋ ತಯಾರಿ ಮಾಡಿಕೊಂಡಿದ್ದ ಅಮುದಾ ಶ್ಯಾಮಾ ಎದುರಾದಾಗ ಮಾತನಾಡುವಲ್ಲಿ ಸೋಲುತ್ತಾಳೆ. ನಡೆದ ಎಲ್ಲಾ ಘಟನೆಗಳಿಂದ ಜರ್ಝರಿತವಾದ ಆಕೆ ಹಿಂಜರಿಕೆಯಿಂದ ಇಂದಿರಾಳ ಮಡಿಲಿನಲ್ಲಿ ಹುದುಗಿಕೊಳ್ಳುತ್ತಾಳೆ. ಕಡೆಗೆ ಇಂದಿರಾಳೇ ಆಕೆಯನ್ನು ಸಂತೈಸಿ ಅವಳು ತಯಾರಿಸಿದ್ದ ಇಪ್ಪತ್ತು ಪ್ರಶ್ನೆಗಳನ್ನು ಕೇಳುವಂತೆ ಓಲೈಸುತ್ತಾಳೆ. ಮಗು ಪ್ರಶ್ನೆಗಳನ್ನು ಕೇಳುತ್ತಾ ಹೋದಂತೆ ಹನಿಗಣ್ಣಾಗುವುದರ ಹೊರತು ಬೇರ್ಯಾವ ಉತ್ತರವನ್ನೂ ಕೊಡಲಾರದೇ ಹೋಗುತ್ತಾಳೆ ಶ್ಯಾಮಾ. ತನ್ಯಾವ ಪ್ರಶ್ನೆಗಳಿಗೂ ಹೆತ್ತಮ್ಮ ಉತ್ತರವನ್ನು ಕೊಡಲಾರಳೆಂಬುದನ್ನು ಅರಿತ ಅಮುದಾ ಪ್ರಶ್ನೆಗಳನ್ನು ನಿಲ್ಲಿಸುತ್ತಾಳೆ. ಭೇಟಿ ಮುಗಿದು ಹೊರಟು ನಿಂತಾಗ 'ನೀನೂ ನಮ್ಮೊಂದಿಗೆ ಈ ಕ್ರೌರ್ಯ ತುಂಬಿದ ಜಾಗದಿಂದ ನಮ್ಮ ಶಾಂತಿಯೇ ಮೈವೆತ್ತ ಸುಂದರ ಊರಿಗೆ ಬಾ' ಎಂದು ಅಕ್ಕರೆಯಿಂದ ಕರೆಯುವ ಮಗಳ ಮಾತಿಗೆ ದ್ರವಿಸುವ ತಾಯಿ 'ನಾನು ಜನಿಸಿದ ಈ ನೆಲದ ಪ್ರತಿಯಾಗಿ ತನ್ನ ಕರ್ತವ್ಯವಿನ್ನೂ ಮುಗಿದಿಲ್ಲ. ಮುಂದೊಮ್ಮೆ ಇಲ್ಲೂ ಶಾಂತಿ ನೆಲೆಯೂರುತ್ತದೆ. ಆ ದಿನ ನೀನು ಇಲ್ಲಿಗೇ ವಾಪಾಸಾಗುವೆಯಂತೆ' ಎಂದುತ್ತರಿಸಿ ಆರ್ದ್ರ ಮನದೊಂದಿಗೆ ತೆರಳುವುದರೊಂದಿಗೆ ಚಿತ್ರ ಮುಗಿಯುತ್ತದೆ. ಆದರೆ ಚಿತ್ರ ಸೃಷ್ಟಿಸುವ ಭಾವಗಳು ಮನದಲ್ಲಿ ಚಿರಸ್ಥಾಯಿಯಾದಂತೆ ಭಾಸವಾಗುತ್ತದೆ. ಕೇವಲ ಚಿತ್ರವನ್ನು ನೋಡಿಯೇ ಅನುಭವಿಸಬಹುದಾದ ಹಲವು ಸನ್ನಿವೇಶಗಳು ಸದಾ ಕಾಡುತ್ತವೆ.

ತಿರು, ಇಂದಿರಾ ಹಾಗೂ ಅಮುದಾ ಆಗಿ ಮಾಧವನ್, ಸಿಮ್ರನ್ ಹಾಗೂ ಬೇಬಿ ಕೀರ್ತನಾ ಪಾತ್ರವನ್ನೇ ಜೀವಿಸಿದ್ದಾರೆ. ಅದರಲ್ಲೂ ಸಿಮ್ರನ್ ಹಾಗೂ ಕೀರ್ತನಾ ಇಬ್ಬರಿಗಾಗಿಯೇ ಈ ಪಾತ್ರಗಳನ್ನು ರಚಿಸಿದಂತಿದೆ. ಮಾತಿಗಿಂತ ಹೆಚ್ಚಾಗಿ ಕಣ್ಣು ಹಾಗೂ ದೇಹಭಾಷೆಯಲ್ಲೇ ಭಾವನೆಗಳನ್ನು ಅಭಿವ್ಯಕ್ತಿಸಿರುವ ಕೀರ್ತನಾ ಈ ಚಿತ್ರದಲ್ಲಿನ ನಟನೆಗಾಗಿ 2003ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಶ್ಯಾಮಾ ಆಗಿ ನಂದಿತಾ ದಾಸ್ ಹಾಗೂ ವಿಕ್ರಮಸಿಂಘೆಯಾಗಿ ಪ್ರಕಾಶ್ ರಾಜ್ ಅವರದ್ದೂ ಮನೋಜ್ಞ ಅಭಿನಯ. 

ಭಾವಗಳ ಕಡಲಿನಂತಹ ಸಂಗೀತ, ಸದಾ ಕಾಡುವ ಸಾಲುಗಳು ಈ ಚಿತ್ರದ ಇನ್ನೊಂದು ಹೈಲೈಟ್. ಮಗಳಿಂದ ಪರಿತ್ಯಕ್ತಳಾಗುವ ಭಯದಲ್ಲಿರುವ ತಾಯಿಯೊಬ್ಬಳ ಮನದ ತಾಕಲಾಟಗಳಿಗೆ ಕನ್ನಡಿ ಹಿಡಿಯುವ 'ಒರು ದೈವಂ ತಂದ ಪೂವೇ ಕಣ್ಣಿಲ್ ತೇಡಲ್ ಎನ್ನ ತಾಯೇ', ಶಾಂತಿಯೇ ಮೈವೆತ್ತಂತಹ 'ವೆಳ್ಳೈ ಪೂಕ್ಕಳ್ ಉಲಗಂ ಎಂಗುಂ ಮಲರುಮೇ', ಸಿಂಹಳೀ ಸಾಹಿತ್ಯದ 'ಸಿನ್ಯೋರೇ', ನಿರಾಶ್ರಿತರ ಮನದ ದನಿಯಂತಿರುವ 'ವಿಡೆ ಕೊಡು ಎಂಗಳ್ ನಾಡೇ'..... ಹೀಗೆ ಪ್ರತೀ ಗೀತೆ, ಅದರ ಸಾಹಿತ್ಯ ಚಲನಚಿತ್ರದಷ್ಟೇ ಕಾಡುತ್ತದೆ. ಚಿತ್ರವನ್ನು ಇನ್ನಷ್ಟು ಭಾವಪೂರ್ಣಗೊಳಿಸುವಲ್ಲಿ ಈ ಹಾಡುಗಳು ಬಹುಮುಖ್ಯ ಪಾತ್ರ ವಹಿಸಿವೆ. 

ಅತ್ಯುತ್ತಮ ತಮಿಳು ಚಿತ್ರ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಗೀತ ಸಾಹಿತ್ಯ ಸೇರಿದಂತೆ ಒಟ್ಟು ಆರು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಚಿತ್ರ ಆರು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಿಗೂ ಭಾಜನವಾಗಿದೆ. 

ಒಟ್ಟಿನಲ್ಲಿ ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ ಅರ್ಥಪೂರ್ಣ ಸಿನಿಮಾ ಕನ್ನತ್ತಿಲ್ ಮುತ್ತಮಿಟ್ಟಾಲ್. ಅಮೆಜಾನ್ ಪ್ರೈಮ್ ಹಾಗೂ ಯೂ ಟ್ಯೂಬ್ ನಲ್ಲಿಯೂ ಲಭ್ಯವಿದೆ. ಸಮಯ ಸಿಕ್ಕಾಗ ಒಮ್ಮೆ ನೋಡಿ. ಖಂಡಿತಾ ನಿಮಗೂ ಇಷ್ಟವಾಗುತ್ತದೆ. (ಈ ಚಿತ್ರ 'ಅಮೃತಾ' ಎಂಬ ಹೆಸರಿನಲ್ಲಿ ತೆಲುಗಿಗೂ ಡಬ್ ಆಗಿದೆ.)

ಧನ್ಯವಾದಗಳು 😊☺️🙏



ನೀ ಇಲ್ಲವಾದರೆ ನಾ....


'ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ       ನಿನ್ನ ಜೊತೆ ಇಲ್ಲದೆ ಮಾತಿಲ್ಲದೆ ಮನ ವಿಭ್ರಾಂತ

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ
ಚಿನ್ನ ನೀನಿಲ್ಲದೆ ದಿಮ್ಮೆನ್ನುತಿದೆ ರಮ್ಯೋದ್ಯಾನ......'

ಪ್ರತೀ ಸಂಜೆಯೂ ಇದೇ ಸಂಧ್ಯಾರಾಗ ಹೃದಯದ್ದು.... ಇಳಿಸಂಜೆಯ ಏಕಾಂತದಲ್ಲಿ, ನಟ್ಟಿರುಳ ನೀರವತೆಯಲ್ಲಿ ಬಿಟ್ಟೂ ಬಿಡದೆ ದಾಳಿಯಿಡುವ ನೆನಪುಗಳ ಮೆರವಣಿಗೆ ಹಿತವೇ ನನಗೆ. ಕಾಡುವ ನಿನ್ನ ಅನುಪಸ್ಥಿತಿಯಲ್ಲಿ ನನ್ನ ಜೀವಕ್ಕೆ ಚೈತನ್ಯದ ಒರತೆ ಆ ನೆನಪುಗಳೇ ತಾನೇ?

ಈ ಘಳಿಗೆ ಏನು ಮಾಡುತ್ತಿರುವೆ ಹುಡುಗಾ ನೀನು.....?
ಕೊರೆವ ಚಳಿಯಲ್ಲೂ ಕೊರಡಿನಂತೆ ನಿಂತು ಸರಹದ್ದನ್ನು ಕಾಯುತ್ತಿರುವೆಯಾ? ಇಲ್ಲಾ ಶತ್ರುಗಳ ದಾಳಿಗೆ ಎದೆಯೊಡ್ಡಿ ಕಾದಾಡುತ್ತಿರುವೆಯಾ? ಇಲ್ಲವೇ ಕೊಂಚ ವಿರಮಿಸಿಕೊಳ್ಳುತ್ತಾ ನಮ್ಮನ್ನು ನೆನೆಯುತ್ತಿರುವೆಯಾ? ವಾರಗಳೇ ಉರುಳಿವೆ ನಿನ್ನ ಧ್ವನಿ ಕೇಳದೇ.... ತಿಂಗಳುಗಳೇ ಕಳೆದಿವೆ ನಿನ್ನ ನಗುಮೊಗ ಕಾಣದೇ. ಕ್ಷೇಮವಾಗಿರುವೆಯಲ್ಲವೇ ನೀನು? ನೀನು ಸುರಕ್ಷಿತವಾಗಿರುವೆ ಎಂಬ ನಂಬಿಕೆಯ ಭರವಸೆಯಲ್ಲಿಯೇ ನಮ್ಮ ಬದುಕು......

ಅಬ್ಬಾ...... ಅದೆಷ್ಟು ಬದಲಾಗಿರುವೆ ನಾನು. ಇದು ನಾನೇ ಹೌದೇ ಅನ್ನುವ ಅಚ್ಚರಿ ನನಗೇ ಉಂಟಾಗುತ್ತದೆ ಒಮ್ಮೊಮ್ಮೆ. ಒಂದು ಕಾಲದಲ್ಲಿ ಹೇಗಿತ್ತು ನನ್ನ ಜೀವನಶೈಲಿ.  ಸ್ಥಿತಿವಂತ ಅಪ್ಪ ಅಮ್ಮನ ಏಕೈಕ ಸಂತಾನ ನಾನು. ಅತೀವ ಮುದ್ದಿನಿಂದ ಬೆಳೆದ ಕೊಂಚ ಹಠಮಾರಿ ಹೆಣ್ಣು. ಮನೆಯ ಕೆಲಸ, ಬೊಗಸೆಗಳೆಲ್ಲ ಎಂದಿಗೂ ನನ್ನ ಆದ್ಯತೆಯಾಗಿರಲಿಲ್ಲ. ಮೆಲುಮಾತು, ನಯ ನಾಜೂಕುಗಳಿಗೂ ನನಗೂ ದೂರದೂರದವರೆಗೂ ಯಾವುದೇ ಸಂಬಂಧವಿರಲಿಲ್ಲ. ಅಪ್ಪ ಅಮ್ಮನನ್ನು ಬಿಟ್ಟರೆ ಗೆಳೆಯರು, ನಗರ ಸಂಚಾರ, ಮೋಜು ಮಸ್ತಿ ಇಷ್ಟೇ ಜೀವನ ಎಂದುಕೊಂಡಾಕೆ. ಮೂಗಿನ ತುದಿಯಲ್ಲೇ ಕೋಪ, ಜವಾಬ್ದಾರಿಗಳಿಂದ ದೂರ ಓಡುವ ಪರಮ ಬೇಜವಾಬ್ದಾರಿಯ ಹೆಣ್ಣು. ಅಪ್ಪ ಅಮ್ಮನ ಚೆಲುವನ್ನು ಧಾರಾಳವಾಗಿ ಪಡೆದಿದ್ದ ನನಗೆ ನನ್ನ ಸೌಂದರ್ಯದ ಬಗ್ಗೆ ಎಲ್ಲೋ ಸ್ವಲ್ಪ ಅಹಂಕಾರವೂ ಇತ್ತು.

ಹಾಗಂತ ನಾನೇನು ದಾರಿತಪ್ಪಿದ ಮಗಳಲ್ಲ. ಅಪ್ಪ ಅಮ್ಮ ನೀಡಿದ ಸ್ವಾತಂತ್ರ್ಯವನ್ನು ಎಂದೂ ದುರುಪಯೋಗ ಪಡಿಸಿಕೊಂಡವಳಲ್ಲ. ಒಂದು ಮಿತಿಯನ್ನು ನನಗೆ ನಾನೇ ವಿಧಿಸಿಕೊಂಡು ಆ ಮಿತಿಯೊಳಗೆ ಸ್ವಚ್ಛಂದವಾಗಿ ಬದುಕುತ್ತಿದ್ದವಳು ನಾನು. ಅರಿಯದ ನಾಳೆಗಳ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲದೇ ಈ ಕ್ಷಣದ ಬದುಕನ್ನು ಈಗಲೇ ಉತ್ಕಟವಾಗಿ ಜೀವಿಸಿಬಿಡಬೇಕು ಎಂಬ ಬಯಕೆಯ ಹುಡುಗಿ. ಪರಸ್ಪರ ಸಾಮೀಪ್ಯವಿಲ್ಲದ, ಕಾಯುವಿಕೆಯ ಭಾವದಲ್ಲೇ ಒಲವ ಸುಧೆ ಹರಿಸುವಂತಹ ಪ್ರೀತಿ ಇರುವುದೇ ಸುಳ್ಳು ಎನ್ನುತ್ತಿದ್ದೆ ನಾನು........ ನೀನು ನನ್ನ ಬದುಕನ್ನು ಪ್ರವೇಶಿಸುವವರೆಗೆ........

ನೀ ನನ್ನ ನೋಡಲು ಬಂದ ದಿನ ನನ್ನ ನೆನಪಿನಾಳದಲ್ಲಿ ಇಂದಿಗೂ ಹಚ್ಚಹಸಿರಾಗಿದೆ. ನನಗಂತೂ ಮೊದಲ ನೋಟಕ್ಕೆ ಇಷ್ಟವಾಗಿದ್ದೆ ನೀನು. ಯಾರಾದರೂ ಇಷ್ಟ ಪಡುವಂತಹ ವ್ಯಕ್ತಿತ್ವ ನಿನ್ನದು. ಆದರೆ ಆ ದಿನಗಳಲ್ಲಿ ವ್ಯಕ್ತಿತ್ವ, ಗುಣ, ನಡವಳಿಕೆಯಂತಹ ಗಂಭೀರ ವಿಚಾರಗಳು ನನ್ನ ತಲೆಗೇ ಹೋಗುತ್ತಲೇ ಇರಲಿಲ್ಲ ಬಿಡು. ನನಗೆ ನಿನ್ನ ಹ್ಯಾಂಡ್ಸಮ್ ಪರ್ಸನಾಲಿಟಿ ಹಿಡಿಸಿತ್ತು. ಜೊತೆಗೆ ನೀನು ಆರ್ಮಿ ಮ್ಯಾನ್ ಎಂಬುದೂ ಹೆಮ್ಮೆಯ ವಿಷಯವಾಗಿತ್ತು ನನಗೆ. ಅದಷ್ಟೇ ಸಾಕಿತ್ತು ನನಗೆ ನಿನ್ನ ಒಪ್ಪಲು. ಆದರೆ ಯೋಧನೊಬ್ಬನ ಮಡದಿಯಾಗುವವಳ ಮಾನಸಿಕವಾಗಿ ಅದೆಷ್ಟು ಸದೃಢಳಾಗಿರಬೇಕು, ಅವಳ ಭಾವಪ್ರಪಂಚ ಹೇಗಿರುತ್ತದೆ ಎಂಬ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ ನಾನು. ನೀನೂ ನನ್ನನ್ನು ಒಪ್ಪಿದಾಗ ನನ್ನ ರೂಪ ಲಾವಣ್ಯದ ಬಗ್ಗೆ ಇನ್ನಷ್ಟು ಹಮ್ಮುಂಟಾಗಿತ್ತು ನನಗೆ.

ಅಪ್ಪ ಹಾಗೆ ಯಾರನ್ನೂ ನಂಬುವವರಲ್ಲ. ಅದರಲ್ಲೂ ಅವರ ಮುದ್ದಿನ ಅರಗಿಣಿಯಾದ ನನ್ನ ವಿಷಯದಲ್ಲಂತೂ ಅತೀವ ಕಾಳಜಿ ಅವರದು. ನನ್ನ ಮದುವೆಗಾಗಿ ಬಂದ ಪ್ರಸ್ತಾಪಗಳಲ್ಲಿ ಅವರು ಅಳಿಯನನ್ನು ಹುಡುಕುತ್ತಿರಲಿಲ್ಲ. ಬದಲಾಗಿ ಮಗನನ್ನು ಅರಸುತ್ತಿದ್ದರು. ಹಾಗಾಗಿಯೇ ಎಷ್ಟೋ ಪ್ರಸ್ತಾಪಗಳು ತಿರಸ್ಕೃತಗೊಂಡಿದ್ದವು. ಅಂತಹ ಅಪ್ಪ ಮದುವೆ ದಿನ ನನ್ನ ಕೈಯನ್ನು ನಿನ್ನ ಹಸ್ತದೊಳಗಿರಿಸಿ,
"ಒಬ್ಬಳೇ ಮಗಳು.... ನಮ್ಮ ಕಣ್ಬೆಳಕು. ಬಹಳ ಮುದ್ದಿನಿಂದ ಬೆಳೆದವಳು. ಹುಡುಗು ಬುದ್ದಿ. ಬದುಕಿನ ಬಗ್ಗೆ ಗಂಭೀರತೆ ಕೊಂಚ ಕಡಿಮೆ. ಅವಳ ಬದುಕನ್ನು ನಮ್ಮಷ್ಟೇ ಕಾಳಜಿ ಮಾಡುವ ಕೈಗಳಲ್ಲಿ ಇರಿಸಿರುವೆ ಎಂಬ ನಿಶ್ಚಿಂತೆ ನನಗಿದೆ" ಎಂದು ಹೇಳಿದ್ದು ನನಗಿನ್ನೂ ನೆನಪಿದೆ. ಆ ಕ್ಷಣ ನಿನ್ನ ಬಗೆಗೊಂದು ಅಚ್ಚರಿ ಭರಿತ ಹೆಮ್ಮೆ ಮೂಡಿತ್ತು. ನೀನಾದರೂ ಅಷ್ಟೇ. ಅಪ್ಪನ ಮಾತುಗಳನ್ನು ಎಂದೂ ಸುಳ್ಳಾಗಿಸಲಿಲ್ಲ.

ಮದುವೆಯವರೆಗೆ ನನ್ನದೇ ಲೋಕದಲ್ಲಿ ವಿಹರಿಸುತ್ತಿದ್ದವಳಿಗೆ ಮದುವೆಯ ನಂತರದ ಬದಲಾವಣೆಗೆ ಒಗ್ಗಿಕೊಳ್ಳಲು ಉಸಿರುಗಟ್ಟಿದಂತಾಗಿದ್ದು ಸುಳ್ಳಲ್ಲ ಹುಡುಗಾ. ನಿನ್ನ ಕುಟುಂಬದವರೆಲ್ಲರೂ ಸಂಸ್ಕಾರವಂತರೇ. ಎಂದೂ ನನಗೆ ನೋವು ಕೊಟ್ಟವರಲ್ಲ. ಆದರೆ ಅಪ್ಪ ಅಮ್ಮನ ಮುಚ್ಚಟೆಯಲ್ಲಿ ಬೆಳೆದ ನನ್ನನ್ನು ಒಮ್ಮೆಲೆ ಬದಲಾದ ಬದುಕು, ಹೆಗಲೇರಿದ ಹೊಸ ಜವಾಬ್ದಾರಿಗಳು ದಿಗಿಲಿಗೆ ನೂಕಿತ್ತು. ನಿನ್ನ ಮಡದಿಯಾಗುವ ಬಗ್ಗೆ ಮಾತ್ರ ಯೋಚಿಸಿದ್ದ ನನಗೆ ನಿನ್ನ ಹೆತ್ತವರಿಗೆ ಸೊಸೆಯಾಗಿ, ನಿನ್ನ ತಮ್ಮನಿಗೆ ಅತ್ತಿಗೆಯಾಗಿ ಜವಾಬ್ದಾರಿ ನಿಭಾಯಿಸುವುದು ಕ್ಲಿಷ್ಟಕರವಾಗಿತ್ತು. ಬಹುಶಃ ಮದುವೆಯ ಆರಂಭಿಕ ಹಂತದಲ್ಲಿ ಪ್ರತೀ ಹೆಣ್ಣೂ ಇಂತಹದೊಂದು ಸವಾಲಿಗೆ ಮುಖಾಮುಖಿಯಾಗಿಯೇ ಇರುತ್ತಾಳೆ. ಮದುವೆ ಎಂಬ ಮೂರುಗಂಟಿನ ನಂಟು ಅವಳ ಬದುಕಿನಲ್ಲಿ ತರುವ ಬದಲಾವಣೆಗಳನ್ನು ಅರಗಿಸಿಕೊಂಡು ನಿಭಾಯಿಸಲು ಅವಳಿಗೆ ಅಗತ್ಯವಾಗಿ ಬೇಕಾಗುವುದು ಒಂದಿಷ್ಟು ಸಮಯ ಹಾಗೂ ಕೈ ಹಿಡಿದವನ ಭರವಸೆಯ ಸಹಕಾರ....... ಅದೇ ನನ್ನ ಪಾಲಿಗೆ ಇಲ್ಲವಾಗಿದ್ದು. ಮದುವೆಯಾಗಿ ಸ್ವಲ್ಪ ಸಮಯಕ್ಕೇ ರಜೆ ಮುಗಿದು ನೀನು ಕರ್ತವ್ಯಕ್ಕೆ ವಾಪಾಸಾಗಿದ್ದೆ. ಆ ನಿನ್ನ ಅನುಪಸ್ಥಿತಿ ನನ್ನನ್ನು ಅತಿಯಾಗಿ ಕಾಡಿತ್ತು. ಬಹುಶಃ ನೀನು ಸದಾಕಾಲ ನನ್ನ ಜೊತೆಗಿದ್ದರೆ ನಿನ್ನ ಬೆಂಬಲದಿಂದ ಎಲ್ಲವನ್ನೂ ಕಷ್ಟಪಡದೇ, ಗೊಂದಲಗಳಿಲ್ಲದೇ ನಿಭಾಯಿಸುತ್ತಿದ್ದೆನೇನೋ.... ಆದರೆ ನೀನು ದೇಶಕ್ಕಾಗಿ ನಿನ್ನನ್ನು ಮುಡಿಪಿಟ್ಟವನು. ಸದಾ ನನ್ನೊಂದಿಗಿರಲು ನಿನಗಾದರೂ ಎಲ್ಲಿಂದ ಸಾಧ್ಯವಿತ್ತು?
ವೈವಾಹಿಕ ಬದುಕಿನ ಸವಿಗನಸುಗಳನ್ನು ಹೆಣೆಯುವ ಆ ಸಮಯದಲ್ಲಿ ನೀನಿರದೇ ಹೋದುದು ನನ್ನನ್ನು ಕಲ್ಪನಾ ಪ್ರಪಂಚದಿಂದ ವಾಸ್ತವಕ್ಕೆ ದೂಕಿತ್ತು. ಯಾವ ಸಂಬಂಧವನ್ನು ನಿಭಾಯಿಸಲಿ, ಹೇಗೆ ನಿಭಾಯಿಸಲಿ ಎಂಬ ಗೊಂದಲ...... ಯಾಕೆ ಬೇಕಿತ್ತು ಈ ಮದುವೆಯೆಂಬ ಜಂಜಾಟ ಎನ್ನುವ ತನಕವೂ ಯೋಚನೆ ಬಂದಿದ್ದಿದೆ.

ಆದರೆ ಒತ್ತಡಗಳ ಸಂಘರ್ಷದಲ್ಲಿ ಹೈರಾಣಾಗಿದ್ದ ನನ್ನ ಕೈ ಹಿಡಿದು ನಡೆಸಿದ್ದು ಮಾತ್ರ.......  ನೀನೇ......

ಮೇರುವಿನೆತ್ತರದ ವ್ಯಕ್ತಿತ್ವದವನು ನೀನು. ನಿನ್ನ ಯೋಚನೆ, ಚಿಂತನೆಗಳೆಲ್ಲ ಮೇಲ್ಮಟ್ಟದ್ದು. ನಿನ್ನ ಪ್ರತೀ ಮಾತಿಗೂ ಒಂದು ತೂಕವಿರುತ್ತದೆ. ಇಂತಹ ನೀನು ಅದ್ಯಾಕೆ ನನ್ನನ್ನು ಇಷ್ಟಪಟ್ಟು ಒಪ್ಪಿದೆಯೋ ಇಂದಿಗೂ ಅರ್ಥವಾಗದ ಚಿದಂಬರ ರಹಸ್ಯ ನನ್ನ ಪಾಲಿಗೆ. ಎಷ್ಟು ಬಾರಿ ನಿನ್ನಲ್ಲಿ ಈ ಪ್ರಶ್ನೆ ಕೇಳಿದ್ದೇನೆಯೋ ಲೆಕ್ಕವಿಲ್ಲ. 'ನೋಡಿದ ಕೂಡಲೇ ಮನಸಿಗೆ ಬಂದವಳು, ನನ್ನ ಹೃದಯದ ಮಿಡಿತವಾದವಳು, ಆತ್ಮಸಂಗಾತಿ ಎನಿಸಿದವಳು ನೀನೊಬ್ಬಳೇ ಕಣೇ ಹುಡುಗಿ' ಎನ್ನುವೆ ಪ್ರತೀ ಬಾರಿ....

ಅದೇನೇ ಆದರೂ ನನ್ನ ಪಾಲಿಗೆ ನೀನೆಂದರೆ ನಾನು.... ನಾನು ನನಗೆಷ್ಟು ಆಪ್ತಳೋ ಅಷ್ಟೇ ಆಪ್ತ ನನಗೆ ನೀನು.  ದೂರವಿದ್ದೂ ಮನಕ್ಕೆ ಅತೀ ಸಮೀಪವಾದವನು, ಆಗೀಗ ಮಾಡುವ ಕರೆಗಳ ಮೂಲಕವೇ ನಮ್ಮ ನಡುವಿನ ಭೌತಿಕ ಅಂತರಕ್ಕೆ ಭಾವಗಳ ಸೇತುವೆ ಕಟ್ಟಿದವನು, ಒಲವ ಮಳೆ ಸುರಿಸಿ ಒಲುಮೆಯಲಿ ತೋಯಿಸಿದವನು.......

ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲಾರೆ ಎಂಬ ನನ್ನ ಭಯವನ್ನು ಹೋಗಲಾಡಿಸಿ ನನ್ನಲ್ಲಿ ಭರವಸೆ ತುಂಬಿದವನು ನೀನು. ಅದೆಷ್ಟು ಸಹನೆ ನಿನಗೆ? ಭೂಮಿ ತೂಕದ ಸಹನೆ ಎಂಬ ಪದಕ್ಕೆ ಅನ್ವರ್ಥ ನೀನು. ನಾನೆಷ್ಟೇ ಕಿರುಚಿ, ಸಿಟ್ಟು ತೋರಿದರೂ ಅದೇ ನಿಷ್ಕಲ್ಮಶ ನಗುವಿನೊಂದಿಗೆ ಅಮ್ಮನಂತೆ ನನ್ನ ಮೇಲೆ ಮಮತೆಯ ಹೊಳೆ ಹರಿಸಿದವನು, ಅಪ್ಪನಂತೆ ನನ್ನ ಕಾಳಜಿ ಮಾಡಿದವನು, ಗೆಳೆಯನಂತೆ ನನಗೆ ಬೆನ್ನೆಲುಬಾಗಿ ನಿಂತವನು, ಗುರುವಿನಂತೆ ತಿದ್ದಿದವನು...... ಇನಿಯನಾಗಿ ಒಲವ ಮಳೆ ಸುರಿಸುವುದರಲ್ಲಿಯಂತೂ ನಿನಗೆ ಸಾಟಿ ಯಾರಿಲ್ಲ ಬಿಡು..... ಆ ನಿನ್ನ ಕಾಡಿಸುವಿಕೆಯ ಚೇಷ್ಟೆಗಳು ನೆನೆದಾಗಲೆಲ್ಲಾ ತುಟಿಯಂಚಿನಲ್ಲಿ ಹೂನಗೆಯನ್ನರಳಿಸುತ್ತವೆ......

ನಿನ್ನ ಈ ಪರಿಯಿಂದಲೇ ಜವಾಬ್ದಾರಿಗಳನ್ನು, ಸಂಬಂಧಗಳನ್ನೂ ನಿಭಾಯಿಸಲು ಕಲಿತಿದ್ದು ನಾನು. ನನಗೇ ಅರಿವಿಲ್ಲದ ನನ್ನ ಸಾಮರ್ಥ್ಯಗಳನ್ನು ಪರಿಚಯಿಸಿ ಕೊಟ್ಟವನು ನೀನು. ನನ್ನಿಂದ ಎಲ್ಲವೂ ಸಾಧ್ಯ ಎಂಬ ಭರವಸೆಯನ್ನು ನೀಡಿದ್ದು ನೀನು. ಒಬ್ಬ ಬೇಜವಾಬ್ದಾರಿ ಕೊಂಚ ಗರ್ವಿಷ್ಟ ಹುಡುಗಿ ಅದ್ಯಾವಾಗ ಬದಲಾದಳೋ, ಪ್ರಿಯನ ಒಲುಮೆಗೆ ಒಡತಿಯಾಗುವುದರ ಜೊತೆಗೆ ಅದ್ಯಾವ ಕ್ಷಣದಲ್ಲಿ ಅತ್ತೆ ಮಾವನ ಪ್ರೀತಿಯ ಸೊಸೆಯಾಗಿ, ಮೈದುನನ ಅಕ್ಕರೆಯ ಅತ್ತಿಗೆಯಾಗಿ, ಪರಿಪೂರ್ಣ ಗೃಹಿಣಿಯಾಗಿ ಬದಲಾದಳೋ ಖುದ್ದು ಅವಳರಿವಿಗೇ ಬರಲಿಲ್ಲ. ನೀನು ನನ್ನೊಂದಿಗೆ ಕಳೆದ ಕ್ಷಣಗಳು ಕಡಿಮೆಯೇ ಆದರೂ ಆ ಅಲ್ಪ ಸಮಯದಲ್ಲೇ ನೀ ನನ್ನನ್ನು ಆವರಿಸಿದ ಪರಿಗೆ ಏನೆನ್ನಲ್ಲಿ? ಅದ್ಯಾವ ಕ್ಷಣದಲ್ಲಿ ನೀನೇ ನಾನಾಗಿ, ನಾನೇ ನೀನಾಗಿ, ನೀನು ನನ್ನ ಅಸ್ತಿತ್ವವಾಗಿಬಿಟ್ಟೆಯೋ ಅರಿವೇ ಆಗಲಿಲ್ಲ ನನಗೆ.

ಈಗ ನಿನ್ನ ಪತ್ನಿಯಾಗಿ ನನ್ನ ಪಾಲಿನ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸಲೀಸಾಗಿ ನಿರ್ವಹಿಸುತ್ತಿರುವೆ ನಾನು. ಎಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ಸನ್ನಿವೇಶಗಳನ್ನು ಎದುರಿಸುವುದನ್ನು ನಿನ್ನಿಂದಲೇ ಕಲಿತಿರುವೆ. ಮಾವ ರಾತ್ರೋರಾತ್ರಿ ಪಾರ್ಶ್ವವಾಯುವಿನ ಹೊಡೆತಕ್ಕೆ ಸಿಲುಕಿದಾಗ ನೀನು ಸೀಕ್ರೆಟ್ ಮಿಷನ್ ನ ಭಾಗವಾಗಿ ಇಂಡೋ ಚೈನಾ ಗಡಿಯಲ್ಲೆಲ್ಲೋ ಕಾದಾಡುತ್ತಿದ್ದೆ. ಎಲ್ಲರೂ ಕಂಗಾಲಾದಾಗಲೂ ನಾನು ಧೈರ್ಯಗೆಡದೆ ಎಲ್ಲವನ್ನೂ ನಿಭಾಯಿಸಿದ್ದೆ.

ಚಿಂಟು ಕಾಲೇಜಿನಲ್ಲಿ ಅಪಾತ್ರರ ಸಂಗ ಬೆಳೆಸಿ ಸಿಗರೇಟು, ಶರಾಬು, ಹುಡುಗಿಯರು ಎಂದು ಸುತ್ತುತ್ತಿರುವ ವಿಚಾರ ಕಿವಿಗೆ ಬಿದ್ದಾಗ ಅದೆಷ್ಟು ಯಾತನೆಯಾಗಿತ್ತು ನನಗೆ... ಈ ವಿಚಾರ ತಿಳಿದರೆ ನಿನಗೆ, ಅತ್ತೆ ಮಾವನಿಗೆ ಹೇಗಾಗಬಹುದು ಎಂಬ ಚಿಂತೆಯೇ ನನ್ನನ್ನು ಹೈರಾಣಾಗಿಸಿತ್ತು. ಅತ್ತೆ ಮಾವನ ಮುಂದೆಯೂ ಈ ವಿಚಾರ ಮಾತನಾಡುವಂತಿರಲಿಲ್ಲ.
ಮರುದಿನ ಮಧ್ಯಾಹ್ನ ಚಿಂಟುವಿನ ಕಾಲೇಜಿನತ್ತ ನಡೆದಿದ್ದೆ. ಕಾಲೇಜು ರಸ್ತೆಯಲ್ಲಿ ಸಿಗರೇಟು ಹೊಗೆಯುಗುಳುತ್ತಾ, ಹುಡುಗಿಯರನ್ನು ಛೇಡಿಸುತ್ತಿದ್ದವನ ಕೆನ್ನೆಗೆರಡು ಬಿಗಿದು ಹತ್ತಿರದ ಪಾರ್ಕಿಗೆ ಎಳೆತಂದಿದ್ದೆ. ನನ್ನೆತ್ತರಕ್ಕೆ ಬೆಳೆದು ನಿಂತವನಿಗೆ ಕೋಪದ ಭರದಲ್ಲಿ ಹೊಡೆದಿದ್ದಕ್ಕೆ ನನಗೇ ನೋವಾಗಿತ್ತು. ತಲೆತಗ್ಗಿಸಿ ನಿಂತವನನ್ನು ಕಂಡು ಅವನಿಗೆ ಹೇಗೆ, ಏನು ವಿವರಿಸಬೇಕೋ ಅರಿವಾಗದೇ ಹೋಗಿತ್ತು. ಈಗ ನೀನಿರಬೇಕಿತ್ತು ಚಿಂಟೂವಿಗೆ ತಿಳಿಹೇಳಲು ಎನಿಸಿಬಿಟ್ಟಿತು. ಎಲ್ಲಾ ವಿಚಾರ ನಿನ್ನಲ್ಲಿ ಹೇಳಿಕೊಂಡು ನಿನ್ನ ಮಡಿಲ ಸಾಂತ್ವನದಲ್ಲಿ ನಿರಾಳವಾಗಲು ಮನ ರಚ್ಚೆ ಹಿಡಿದಿತ್ತು. ಆದರದು ಸಾಧ್ಯವೇ...? ಯಾಕೋ ತಡೆಯಲಾರದೇ ಕಂಬನಿ ಜಾರತೊಡಗಿತ್ತು. ಎಂದೂ ಮನೆಯವರೆದುರು ಕಣ್ಣೀರು ತೋರಗೊಟ್ಟವಳಲ್ಲ ನಾನು. ಸದಾ ನಿನ್ನ ಕುಶಲದ ಚಿಂತೆಯಲ್ಲಿರುವವರನ್ನು ನನ್ನ ಅಳು ಇನ್ನಷ್ಟು ದುರ್ಬಲವಾಗಿಸುತ್ತದೆ ಎಂಬುದನ್ನು ಬಲ್ಲೆ. ಆದರೆ ಅಂದೆಕೋ ಹರಿವ ಕಣ್ಣೀರನ್ನು ತಡೆಯಲಾರದಷ್ಟು ದುರ್ಬಲಳಾಗಿಬಿಟ್ಟಿದ್ದೆ. ನನ್ನ ಅಳುವನ್ನು ಕಂಡು ಬೆದರಿ ಚಿಂಟು ತಾನೂ ಅಳತೊಡಗಿದಾಗಲೇ ವಾಸ್ತವದ ಅರಿವಾಗಿದ್ದು ನನಗೆ. ನನ್ನ ನಾನು ನಿಯಂತ್ರಿಸಿಕೊಂಡು ಅವನನ್ನು ಬಳಿಯಲ್ಲಿ ಕೂಡಿಸಿಕೊಂಡು ಅಮ್ಮನಂತೆ ಸಮಾಧಾನಿಸಿದ್ದೆ. ಹಿರಿಯಕ್ಕನಂತೆ ಸೂಕ್ಷ್ಮವಾಗಿ ಅವನು ಹೋಗುತ್ತಿರುವ ಹಾದಿ ತಪ್ಪೆಂದು ಬುದ್ಧಿ ಹೇಳಿದ್ದೆ. ಅಪ್ಪ ಅಮ್ಮ, ಅಣ್ಣನ ಬಗ್ಗೆ ಯೋಚಿಸಲಿಲ್ಲವೇ ನೀನು ಎಂದು ಗದರಿಸಿದ್ದೆ ಕೂಡಾ. ಬಾರಿ ಬಾರಿ ಕ್ಷಮೆ ಕೇಳಿದವನು ಇನ್ನೆಂದೂ ಇಂತಹ ಕೆಲಸಗಳನ್ನು ಮಾಡುವುದಿಲ್ಲವೆಂದು ಮಾತು ಕೊಟ್ಟಿದ್ದ. ಯಾವುದೋ ಆಕರ್ಷಣೆಯಲ್ಲಿ ಬಿದ್ದಿದ್ದನಷ್ಟೇ.... ಒಳ್ಳೆಯ ಹುಡುಗ ಅವನು... ಕೊಟ್ಟ ಮಾತನ್ನು ಉಳಿಸಿಕೊಂಡ ಕೂಡಾ.... ಅವನು ತನ್ನ ಸ್ನೇಹಿತರ ಬಳಗ ಬದಲಿಸಿ, ಓದಿನೆಡೆಗೆ ಮತ್ತೆ ಆಸಕ್ತಿ ಬೆಳೆಸಿಕೊಂಡಾಗ ಅದೆಷ್ಟು ಸಂತೋಷವಾಗಿತ್ತು ಗೊತ್ತೇ.... ನೀನು ಶತ್ರುಗಳ ಮೇಲೆ ಯುದ್ಧ ಗೆದ್ದಾಗ ಆಗುವುದಲ್ಲ ಅಂತಹದೇ ಸಂಭ್ರಮ ನನ್ನಲ್ಲಿ......

ಅತ್ತೆ ಮಾವನ ಆರೈಕೆ, ಆಸ್ಪತ್ರೆ ಹಾಗೂ ಔಷಧೋಪಚಾರಗಳು, ಚಿಂಟೂವಿನ ಓದು, ಸ್ನೇಹಿತರು, ಸಂಗ, ಸಹವಾಸಗಳು ಎಲ್ಲವನ್ನೂ ಅತ್ಯಂತ ಪ್ರೀತಿಯಿಂದ, ಅಕ್ಕರಾಸ್ಥೆಯಿಂದ ನಿಭಾಯಿಸುತ್ತೇನೆ ನಾನು. ಮದುವೆಗೆ ಮುನ್ನ ಒಂದು ಕಡ್ಡಿ ಎತ್ತಿ ಬದಿಗಿರಿಸದವಳು ಈಗ ಇಡೀ ಮನೆಯನ್ನು ನಿಭಾಯಿಸುತ್ತೇನೆ. ದಿನಸಿಯಿಂದ ಹಿಡಿದು ಅಡುಗೆಯ ತನಕ ಎಲ್ಲವೂ ನನ್ನದೇ....ಇಂದು ಊರಿಗೆ ಊರೇ ಹೇಳುತ್ತದೆ 'ಕುಟುಂಬದ ಜವಾಬ್ದಾರಿ ನಿರ್ವಹಿಸುವುದನ್ನು ಇವಳ ನೋಡಿ ಕಲಿಯಬೇಕು' ಎಂದು‌. ಅಪ್ಪ ಅಮ್ಮನಿಗೂ ಆಶ್ಚರ್ಯ ಇದು ನಮ್ಮ ಮಗಳೇನಾ ಎಂದು.....!!

ಈ ಕೆಲಸಗಳೆಲ್ಲವೂ ನನಗೆ ಅತೀವ ಸಂತಸ ನೀಡುತ್ತವೆ. ಏಕೆಂದರೆ ಇವೆಲ್ಲವೂ ನಾನು ನೀನಾಗಿ, ನೀನೇ ನಾನಾಗಿರುವ ಕ್ಷಣಗಳು. ಆದ ಕಾರಣದಿಂದಲೇ ಅತ್ತೆಮಾವ ನನ್ನಲ್ಲಿ ನಿನ್ನನ್ನು ಕಾಣುತ್ತಾರೆ. ಚಿಂಟೂಗೆ ಅಣ್ಣನ ಅನುಪಸ್ಥಿತಿ ಕಾಡುವುದಿಲ್ಲ. ಇದಕ್ಕಿಂತ ಹೆಚ್ಚು ನನಗೇನು ಬೇಕು ಹೇಳು? ನಿನ್ನ ಇಲ್ಲದಿರುವಿಕೆಯಲ್ಲೂ ನಿನ್ನ ಇರುವನ್ನು ಅನುಭವಿಸಿ ಖುಷಿಪಡುತ್ತೇವೆ ನಾವು.....

ಪರಸ್ಪರ ಸಾಮೀಪ್ಯವಿಲ್ಲದ, ಕಾಯುವಿಕೆಯ ಭಾವದಲ್ಲೇ ಒಲವ ಸುಧೆ ಹರಿಸುವಂತಹ ಪ್ರೀತಿ ಇರುವುದೇ ಸುಳ್ಳು ಎನ್ನುತ್ತಿದ್ದ ನನಗೆ ಈಗ ಕಾಯುವಿಕೆಯೇ ಅತ್ಯಾಪ್ತ. ನಿನ್ನ ಪರವಾಗಿ, ನಿನ್ನ ಜವಾಬ್ದಾರಿಗಳನ್ನು ನಿಭಾಯಿಸುವ ಪ್ರತೀ ಘಳಿಗೆಯಲ್ಲೂ ನಿನ್ನ ಅಗೋಚರ ಸಾಮೀಪ್ಯದ ಭಾವವಿರುತ್ತದೆ ನನ್ನಲ್ಲಿ. ಆ ಸಾಮೀಪ್ಯದ ಸವಿಯನ್ನು ಅನುಭವಿಸುತ್ತಾ ನಿನ್ನ ಸಾಂಗತ್ಯಕ್ಕಾಗಿ ಕಾಯುವುದು ಬಹಳ ಹಿತವೆನಿಸಿಬಿಟ್ಟಿದೆ. ನನ್ನ ಹಾಗೆ ನೀನೂ ಅಲ್ಲಿ ನನ್ನ ಸಾಮೀಪ್ಯದ ಭಾವದಲ್ಲಿ ಬಂಧಿಯಾಗಿರುವೆ ಎಂಬುದು ತಿಳಿದಿದೆ ಈ ಹೃದಯಕ್ಕೆ ‌‌...... ಆದರೂ..... ನಿನ್ನ ನೋಡಿ ಕಣ್ತುಂಬಿಕೊಳ್ಳುವ ಆಸೆ ನಮಗೆಲ್ಲಾ. ಎಷ್ಟು ಸಮಯವಾಗಿಹೋಯ್ತು‌ ನಿನ್ನ ಮೊಗ ಕಾಣದೇ? ಎಂದು ಬರುವೆ ನೀನು?

ನಿನಗೆ ಗೊತ್ತೇನು? ನಮ್ಮ ಪ್ರೀತಿಯ ಕುಡಿ ನನ್ನುದರದಲ್ಲಿ ಚಿಗುರೊಡೆಯುತ್ತಿದೆ. ಇನ್ನೂ ಯಾರಲ್ಲೂ ಹೇಳಿಲ್ಲ ನಾನು. ನಮ್ಮ ದಾಂಪತ್ಯದ ಸಾರ್ಥಕತೆಯ ಈ ಸಂತೋಷವನ್ನು ನಿನ್ನೊಂದಿಗೇ ಮೊದಲು ಹಂಚಿಕೊಳ್ಳಬೇಕು ಎಂಬ ಪುಟ್ಟ ಆಸೆ. ಆ ಘಳಿಗೆ ನಿನ್ನ ಮೊಗದಲ್ಲಿ ಸ್ಫುರಿಸುವ ಸಂತೋಷದಲ್ಲಿ ಭಾಗಿಯಾಗುವ ನನ್ನ ಆಸೆಯನ್ನು ನೆರವೇರಿಸುವೆಯಾ.....? ನನಗಂತೂ ಮಗಳೇ ಬೇಕು.... ನಿನಗೂ ನನ್ನ ತರ ಇರೋ ಮಗಳೇ ಬೇಕು ಅಂತ ಆಸೆ ಅಲ್ವಾ......?
ಮತ್ತೆ ಈಗಲೇ ಹೇಳುತ್ತಿದ್ದೀನಿ....... ನಮ್ಮ ಮಗಳು ಹುಟ್ಟುವಾಗ ನನ್ನ ಬದಿಯಲ್ಲೇ ಇರಬೇಕು ನೀನು‌. ಅವಳು ಈ ಜಗತ್ತಿನಲ್ಲಿ ಮೊದಲು ಕಾಣುವ ವ್ಯಕ್ತಿ, ಅವಳ ಹೀರೋ ಅವಳಪ್ಪನೇ ಆಗಿರಬೇಕು ಗೊತ್ತಾಯಿತಲ್ಲ.....

ಏನು ಅಷ್ಟೊಂದು ಯೋಚನೆ ಮಾಡ್ತೀದ್ದೀ? ಓಹ್....... ನನ್ನ ಹೆರಿಗೆ ಸಮಯದಲ್ಲಿ ನಿನಗೆ ನನ್ನ ಬಳಿ ಇರಲು ಆಗುವುದೋ ಇಲ್ಲವೋ ಅನ್ನುವ ಚಿಂತೆಗೆ ಬಿದ್ದೆಯಾ....? ಚೋ.... ಚ್ವೀಟ್ ನೀನು....   ನಿನ್ನ ಸಮಸ್ಯೆ ನನಗೆ ಅರ್ಥ ಆಗೋಲ್ಲವೆ ಹುಡುಗಾ? ನೀನು ನನ್ನ ಬಳಿ ಇರಬೇಕು ಅನ್ನೋ ಆಸೆ ಇದೆಯಾದರೂ ನಿನ್ನ ಕರ್ತವ್ಯಗಳ ಅರಿವೂ ನನಗಿದೆ. ನನ್ನ ಬಳಿ ನೀನಿಲ್ಲದಿದ್ದರೂ ನಿನ್ನ ಮನಸು, ಹೃದಯ ಸದಾ ಕಾಲ ನನ್ನ ಬಳಿಯಲ್ಲೇ ಇರುತ್ತೆ. ಅದೆಂದೂ ನನ್ನಿಂದ ದೂರಾಗದು‌‌......

ನೀನೇನೂ ಯೋಚಿಸಬೇಡ. ಅತ್ತೆ, ಮಾವ, ಚಿಂಟುವಿನ ಜೊತೆಗೆ ನನ್ನನ್ನೂ, ನನ್ನೊಳಗಿನ ನಿನ್ನನ್ನೂ, ನಮ್ಮ ಮಗಳನ್ನೂ ಜೋಪಾನ ಮಾಡುವೆ ನಾನು. ಆ ಬಗ್ಗೆ ನಿಶ್ಚಿಂತೆಯಾಗಿ ನಿನ್ನ ಕರ್ತವ್ಯಗಳೆಡೆಗೆ ಗಮನ ಹರಿಸು. ತಿಂಗಳುಗಟ್ಟಲೆ ನಿನ್ನ ಕರೆ ಬಾರದಿದ್ದರೂ, ವರ್ಷಗಟ್ಟಲೆ ನಿನ್ನ ಮೊಗ ಕಾಣದಿದ್ದರೂ ನೀನು ಕ್ಷೇಮವಾಗಿರುವೆ ಎಂಬ ಭಾವವನ್ನು ನಿನ್ನ ಉಸಿರಿನ ಮಂದಾನಿಲ ಹೊತ್ತು ನನ್ನ ಬಳಿ ತರುತ್ತಿದ್ದರೆ ನನಗಷ್ಟೇ ಸಾಕು...... ಆ ಮಂದಾನಿಲವನ್ನು ಉಸಿರಾಡುತ್ತಲೇ ನಿನ್ನೊಳಗೆ ಐಕ್ಯಳಾಗಬಲ್ಲೆ ನಾನು....

ಆದರೆ.........

ಆ ಮಂದಾನಿಲದಲ್ಲಿ ನಿನ್ನ ಉಸಿರಾಟದ ಕುರುಹುಗಳು ಕಾಣದ ದಿನವನ್ನು ಮಾತ್ರ ಎಂದೂ ನನಗಾಗಿ ತರಬೇಡ ಗೆಳೆಯಾ........ ಅದನ್ನು ಮಾತ್ರ ನಾನು ಸಹಿಸಲಾರೆ. ನೀನು ಆಗಾಗ ಮನೆಗೆ ಬಾರದಿದ್ದರೂ ತೊಂದರೆಯಿಲ್ಲ..... ಆದರೆ ದಯವಿಟ್ಟು ತ್ರಿವರ್ಣ ಧ್ವಜವನ್ನು ಹೊದ್ದ ಪೆಟ್ಟಿಗೆಯೊಳಗೆ ಶಾಶ್ವತವಾಗಿ ವಿರಮಿಸಿ ನೀ ನನ್ನ ದ್ವಾರಕ್ಕೆ  ಬರಬೇಡ....... ಇದೊಂದೇ ಬೇಡಿಕೆ ನನ್ನದು....'

ಹೀಗಂದುಕೊಳ್ಳುತ್ತಲೇ ಮಲಗಿದಲ್ಲೇ ಮಗ್ಗುಲಾದಳು ಅವಳು......

ಬೀಸಿ ಬಂದು ಸೋಕಿದ ತಂಗಾಳಿಯ ಪಿಸುಮಾತುಗಳನ್ನು ಆಲಿಸಿದಂತೆ ಬಸ್ಸಿನ ಸೀಟಿಗೊರಗಿ ಕಿಟಕಿಯಿಂದಾಚೆ ನೋಡುತ್ತಿದ್ದ ಅವನ ತುಟಿಯಂಚಿನಲ್ಲಿ ನವಿರಾದ ಮಂದಹಾಸವೊಂದು ಅರಳಿತು. ಹೃದಯದ ತುಂಬಾ ಹರುಷದ ಬುಗ್ಗೆಗಳು.‌.... ಬೀಸುವ ಗಾಳಿಯ ತುಂಬಾ ತನ್ನವಳ ಮನದ ಮಾತುಗಳ ಸಂದೇಶದ ಕಂಪಿದೆ ಎಂದು ಅವನೂ ಬಲ್ಲ...... ಅದನ್ನೇ ತನ್ಮಯವಾಗಿ ಆಲಿಸುತ್ತಾ ಸಂತಸಗೊಂಡ ಮನ ಮನದನ್ನೆಯೊಂದಿಗೆ ಸ್ವಗತಕ್ಕಿಳಿದಿತ್ತು.....

'ಕೇಳೇ ಹುಡುಗಿ..... ನೀ ಸನಿಹದಲಿಲ್ಲ ಎಂಬೊಂದು ಕೊರತೆ ಬಿಟ್ಟರೆ ಆರಾಮಾಗಿರುವೆ ನಾನು. ಇಷ್ಟಕ್ಕೂ ನನ್ನೆಲ್ಲಾ ಜವಾಬ್ದಾರಿಗಳನ್ನು ನನಗಿಂತಲೂ ಸಮರ್ಥವಾಗಿ ನೀನು ನಿರ್ವಹಿಸುತ್ತಿರುವಾಗ ನನಗ್ಯಾವ ಚಿಂತೆ ಹೇಳು. ನಾನು ದೇಶ ಕಾಯುವ ಯೋಧನಾದರೆ ನೀನು ನನ್ನ ಕಾಯುವ ಯೋಧೆ. ನನ್ನ ಬದುಕಿನ ಹೋರಾಟದ ಜವಾಬ್ದಾರಿಯನ್ನು ನೀನು ವಹಿಸಿಕೊಂಡಿರುವುದರಿಂದಲೇ ನಾನು ನಿಶ್ಚಿಂತನಾಗಿ ಮಾತೃಭೂಮಿಯ ಸೇವೆಗಾಗಿ ಹೋರಾಡುತ್ತಿರುವೆ. ಅಂದ ಮೇಲೆ ನೀ ನನ್ನ ಬೆನ್ನಿಗಿದ್ದರೆ ಮಾತ್ರವೇ ನನ್ನ ಬದುಕಿಗೆ, ಅಸ್ತಿತ್ವಕ್ಕೆ ಬೆಲೆಯಲ್ಲವೇನೇ ಚೆಲುವೆ. ಅದೆಷ್ಟು ಧೈರ್ಯವಂತೆ ಹಾಗೂ ಪ್ರಬುದ್ಧೆ ನೀನು? ಮನೆಯ ಯಾವ ಸಮಸ್ಯೆಗಳೂ ನನ್ನತ್ತ ಸುಳಿದು ಕಂಗೆಡಿಸದಂತೆ ಅದೆಷ್ಟು ಚೆನ್ನಾಗಿ ಎಲ್ಲವನ್ನೂ ನಿರ್ವಹಿಸಿಬಿಡುವೆ.... ಪದೇ ಪದೇ ಕೇಳುವೆಯಲ್ಲ ಅದೇಕೆ ನನ್ನ ಒಪ್ಪಿ ಮದುವೆಯಾದಿರಿ ಎಂದು. ನಿನ್ನ ಮೊದಲ ಬಾರಿಗೆ ಕಂಡಾಗಲೇ ನಿನ್ನ ತುಂಟ ಕಣ್ಣುಗಳ ಆಳದಲ್ಲಿ ಒಂದು ಜವಾಬ್ದಾರಿಯುತ ಪ್ರಬುದ್ಧತೆಯನ್ನು ಗುರುತಿಸಿದ್ದೆ. ಅದಕ್ಕೇ ಸೋತಿದ್ದು ನಾನು. ಯೋಧನ ಮಡದಿ ಕೂಡಾ ಯೋಧಳೇ. ಒಬ್ಬ ಯೋಧನಿಗಿರುವಷ್ಟೇ ದೃಢಮನಸ್ಕತೆ ಅವನ ಮಡದಿಗೂ ಇರಬೇಕು. ನಿಜ ಹೇಳಬೇಕೆಂದರೆ ಮಡದಿ ತನ್ನ ಕೌಟುಂಬಿಕ ಕರ್ತವ್ಯಗಳನ್ನು ನಿಭಾಯಿಸುವಳೆಂಬ ಧೈರ್ಯವೇ ಯೋಧನ ಶಕ್ತಿ. ಅಂತಹ ಧೀಶಕ್ತಿಯನ್ನು ನಿನ್ನಲ್ಲಿ ಗುರುತಿಸಿದ್ದೆ ನಾನು. ನನ್ನ ನಂಬಿಕೆಯನ್ನು ಎಂದೂ ಸುಳ್ಳಾಗಿಸಲಿಲ್ಲ ನೀನು.

ಅಪ್ಪ ಅಮ್ಮನಿಗೆ ಮಗನಾಗಿ, ಚಿಂಟುವಿಗೆ ಅಣ್ಣನಂತೆ ನನ್ನ ಜವಾಬ್ದಾರಿಗಳೆಲ್ಲವನ್ನೂ ಅಕ್ಕರೆಯಿಂದ ನಿನ್ನದಾಗಿಸಿಕೊಂಡಿರುವ ನಿನ್ನ ಋಣ ನಾನು ತೀರಿಸಲುಂಟೇ....? ನೀನಿರದೇ ಹೋಗಿದ್ದರೆ ಈ ಬದುಕು ಎಂತಿರುತ್ತಿತ್ತೋ ಊಹಿಸಲೂ ಆಗದು ನನಗೆ. ನನಗಾಗಿ, ನಮಗಾಗಿ ಇಷ್ಟೆಲ್ಲಾ ಮಾಡುವ ನಿನಗಾಗಿ ಒಂದಿಷ್ಟು ಸಮಯ ಕೊಡಲೂ ಸಾಧ್ಯವಾಗದ ಸ್ಥಿತಿ ನನ್ನದು. ಆದರೂ ನನ್ನ ಬಗ್ಗೆ ಯಾವುದೇ ದೂರುಗಳಿಲ್ಲ ನಿನ್ನಲ್ಲಿ. ಅದೆಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವೆ ನನ್ನನ್ನು..... ನನ್ನ ಮುದ್ದು ನೀನು....

ಅದ್ಯಾಕೋ ನಿನ್ನ ನೋಡಬೇಕೆಂಬ ತುಡಿತ ಬಲವಾಗಿತ್ತು. ನೀನು ನನ್ನಲ್ಲಿ ಏನೋ ಹಂಚಿಕೊಳ್ಳಲು ಬಯಸಿರುವೆಯೆಂಬ ಭಾವವನ್ನು ತಂಗಾಳಿ ಪದೇ ಪದೇ ಹೊತ್ತು ತರುತ್ತಿತ್ತು. ಅದಕ್ಕೆ ರಜೆ ಪಡೆದು ಹೊರಟುಬಿಟ್ಟೆ ಹುಡುಗಿ..... ನಿನ್ನ ಪ್ರೀತಿಗೆ ಬದಲಾಗಿ ನೀಡಲು ನನ್ನ ಬಳಿ ಸಮಯದಷ್ಟು ಮೌಲ್ಯವಾದುದು ಬೇರೇನೂ ಇಲ್ಲ. ಯೋಧನ ಮಡದಿಗೆ ಅವನ ಸಮಯ ಹಾಗೂ ಸಾಮೀಪ್ಯದಷ್ಟು ಸಂತಸ ತರುವ ಉಡುಗೊರೆ ಬೇರ್ಯಾವುದಿದೆ ಅಲ್ಲವೇ...?

ಇನ್ನೇನು ನಿಮಿಷಗಳ ಅಂತರವಷ್ಟೇ..... ನಾನು ನಿನ್ನ ಅಂಗಳದಲ್ಲಿರುವೆ. ನಿನಗೆ ಹೇಳಿಲ್ಲ ನಾ ಬರುವ ವಿಚಾರ. ನನ್ನ ಎದುರಲ್ಲಿ ಕಂಡು ಸಂತಸದಿಂದ ಅರಳುವ ಆ ಕಣ್ಣುಗಳನ್ನು, ತುಟಿಯಂಚಿನಲ್ಲಿ ಅರಳುವ ಮಂದಹಾಸವನ್ನೂ, ನಿನ್ನ ಸಂತಸವನ್ನೂ ಕಣ್ತುಂಬಿಕೊಳ್ಳಬೇಕು ನಾನು. ಅಪ್ಪನ ಆತ್ಮೀಯ ಅಪ್ಪುಗೆಯನ್ನೂ, ಅಮ್ಮನ ಮಮತೆಯನ್ನೂ, ಚಿಂಟುವಿನ ಅಕ್ಕರೆಯನ್ನೂ ಆನಂದಿಸಬೇಕು. ನಿಮ್ಮೆಲ್ಲರ ಸಂತೋಷವನ್ನೂ, ಅಚ್ಚರಿಯನ್ನೂ ಜತನದಿಂದ ನನ್ನ ನೆನಪುಗಳ ಬುತ್ತಿಗೆ ಸೇರಿಸಬೇಕು........'

ಎಂದೆಲ್ಲಾ ಯೋಚಿಸುತ್ತಲೇ ಬಸ್ಸಿಳಿದು ಐದು ನಿಮಿಷಗಳ ಹಾದಿ ಕ್ರಮಿಸಿ ತನ್ನ ಮನೆಯೆದುರು ನಿಂತಿದ್ದ ಅವನು. ತನ್ನ ಪಾಲಿನ ಸ್ವರ್ಗವನ್ನು ಕಣ್ತುಂಬಿಕೊಳ್ಳುತ್ತಲೇ ಗೇಟನ್ನು ತೆರೆದು ಒಳಗಡಿಯಿಟ್ಟ......

ಗೇಟಿನ ಶಬ್ದಕ್ಕೆ  'ಈ ಹೊತ್ತಿನಲ್ಲಿ ಯಾರಿರಬಹುದು' ಎಂದುಕೊಳ್ಳುತ್ತಲೇ ತಲೆಗೂದಲನ್ನು ತುರುಬಾಗಿಸಿಕೊಳ್ಳುತ್ತಾ ಬಾಗಿಲಿಗೆ ಬಂದವಳ ಕಾಲ ಅರಘಳಿಗೆ ಅಲ್ಲೇ ಸ್ಥಂಭಿಸಿದಂತಿತ್ತು. ಎಚ್ಚೆತ್ತವಳ ಕಣ್ಣುಗಳಲ್ಲಿ ಕೋಟಿ ನಕ್ಷತ್ರಗಳ ಪ್ರಭಾವಳಿ. ಹಾರುವ ನಡಿಗೆಯಲ್ಲಿ ಅವನ ಬಳಿ ಸಾರಿದವಳನ್ನು ಹಗುರವಾಗಿ ಬಳಸಿ ನೆತ್ತಿಗೆ ಮುತ್ತಿಕ್ಕಿದ.

ತನ್ನೆದೆಗೆ ಒರಗಿದವಳನ್ನು ಇನ್ನಷ್ಟು ಬಲವಾಗಿ ಅಪ್ಪಿ ನಿಧಾನವಾಗಿ ಮನೆಯೊಳಗೆ ಹೆಜ್ಜೆಯಿಟ್ಟನವನು ತನ್ನವಳೊಂದಿಗೆ...........

ತನ್ನವರನ್ನು ಕಾಣುವ ಕಾತರದಿಂದ.........

ಪೂರ್ಣ ಚಂದಿರ ಬೆಳದಿಂಗಳ ಚಪ್ಪರದೊಂದಿಗೆ ಇಡೀ ಭುವಿಯನ್ನು ರಜತ ಪ್ರಭೆಯಲ್ಲಿ ಆವರಿಸಿಕೊಳ್ಳುವ ವೇಳೆಗೆ ಆ ಮನೆಯಲ್ಲಿ ಸಂಭ್ರಮ ಹೊನಲಾಗಿ ಹರಿಯುತ್ತಿತ್ತು..........

****************

ಗುರುವಾರ, ಜೂನ್ 18, 2020

ರೂಪದರ್ಶಿ....

ಪುಸ್ತಕದ ಹೆಸರು       : ರೂಪದರ್ಶಿ

ಲೇಖಕರು               : ಕೆ.ವಿ‌. ಅಯ್ಯರ್

ಪ್ರಕಾಶಕರು             : ಮುರಳಿ ಪ್ರಕಾಶನ,ಬೆಂಗಳೂರು

ಪ್ರಥಮ ಮುದ್ರಣ     : 1950

ಪುಟಗಳು                : VIII+292

ಬೆಲೆ                       :190 ರೂ      


ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳಲ್ಲಿ ಕೆ.ವಿ ಅಯ್ಯರ್ ಕೂಡಾ ಒಬ್ಬರು. ವೃತ್ತಿಯಿಂದ ಒಬ್ಬ ಅತ್ಯುತ್ತಮ ದೇಹದಾರ್ಢ್ಯ ಪಟು, ದೈಹಿಕ ಶಿಕ್ಷಣ ತಜ್ಞರಾಗಿದ್ದ ಅಯ್ಯರ್ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಕಾದಂಬರಿ, ಕಥಾಸಂಕಲನಗಳಷ್ಟೇ ಅಲ್ಲದೇ ಟಿ.ಪಿ ಕೈಲಾಸಂ ಅವರ ಪ್ರಭಾವದಿಂದಾಗಿ ನಾಟಕಗಳಲ್ಲೂ ಆಸಕ್ತಿಬೆಳೆಸಿಕೊಂಡವರು ಅಯ್ಯರ್. 'ಶಾಂತಲಾ', 'ರೂಪದರ್ಶಿ' ಹಾಗೂ  'ಸಮುದ್ಯತಾ' ಕನ್ನಡ ಸಾಹಿತ್ಯದ ಕ್ಲಾಸಿಕ್ ಶ್ರೇಣಿಯ ಕೃತಿಗಳೆಂದರೆ ಅತಿಶಯೋಕ್ತಿಯಲ್ಲ.

'ರೂಪದರ್ಶಿ' ಲೇಖಕರೇ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ 1942ರಲ್ಲಿ 'Reader's Digest' ಎಂಬ ಅಮೇರಿಕನ್ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ 'The face of Judas inscariot' ಎಂಬ ಸಣ್ಣ ಕಥೆಯನ್ನು ಆಧಾರವಾಗಿರಿಸಿಕೊಂಡು ಬೆಳೆಸಿದ ಕಾದಂಬರಿ. ಅದನ್ನು ಓದಿ ಈ ಕಥಾವಸ್ತುವನ್ನು ಎಂಟು ಹತ್ತು ಪುಟಗಳ ಸಣ್ಣ ಕಥೆಯಾಗಿ ಬರೆಯಬಹುದು ಎಂದುಕೊಂಡಿದ್ದರಂತೆ ಅವರು. ಆದರೆ ಬರೆಯಲು ತೊಡಗಿಸಿಕೊಂಡ ನಂತರ ಆ ಮುಕ್ಕಾಲು ಪುಟದ ಕಥೆ ಈ ರೂಪತಾಳಿತು ಎಂದಿದ್ದಾರೆ ಅಯ್ಯರ್. ಹಾಗೆಯೇ 'ನಾನು ಯಾವೊಂದು ಉದ್ದೇಶದಿಂದಲೂ ಈ ಕಥೆಯನ್ನು ಬರೆಯಲಿಲ್ಲ. ಇದು ಏನು ಸಾಧಿಸಬಲ್ಲದೆಂಬುದನ್ನೂ ನಾನು ಅರಿಯೆ.' ಎಂದಿದ್ದಾರೆ. ಆದರೆ ಈ ಕಥೆಯನ್ನು ಓದಿ ಮುಗಿಸಿದ ನಂತರ ನಮ್ಮ ಮನದಲ್ಲಿ ಉಂಟಾಗುವ ತಳಮಳಗಳು, ಮಸ್ತಿಷ್ಕದಲ್ಲಿ ಉದ್ಭವಿಸುವ ಪ್ರಶ್ನೆಗಳಿಂದ ಈ ಕಥೆಯ ಉದ್ದೇಶ ಹಾಗೂ ಅದು ಏನನ್ನು ಸಾಧಿಸಿದೆ ಎಂಬುದು ಓದುಗರಿಗೇ ಸ್ಪಷ್ಟವಾಗುತ್ತದೆ. 

ಅಯ್ಯರ್ ಅವರ ಮೇರುಕೃತಿಗಳಲ್ಲಿ ಒಂದಾದ 'ರೂಪದರ್ಶಿ' ಬದುಕಿನ ವಿವಿಧ ಮುಖಗಳನ್ನು ಹಾಗೂ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಅನ್ವೇಷಿಸುತ್ತಾ ಸಾಗುತ್ತದೆ. ಇಡೀ ಕಥನ ಇಟಲಿಯ ಪರಿಸರದಲ್ಲಿ ನಡೆಯುತ್ತದಾದರೂ ಕಥೆಯೊಳಗಿನ ಪಾತ್ರಗಳು, ಅವುಗಳ ಸಂಘರ್ಷಗಳು ನಮ್ಮದೇ ಎನ್ನಿಸಿಬಿಡುವುದು ಈ ಕೃತಿಯ ವೈಶಿಷ್ಟ್ಯ. ಮುಗ್ಧತೆ, ಪ್ರೀತಿ, ಮಮತೆಯೊಂದಿಗೇ ಕ್ರೌರ್ಯ, ದ್ವೇಷ, ದುರಾಸೆ, ವಂಚನೆ, ಹಣದೊಂದಿಗೆ ಬದಲಾಗುವ ಮನುಜನ ವಿಚಾರಧಾರೆ…. ಹೀಗೆ ಹತ್ತು ಹಲವು ಭಾವಗಳ ಹೂರಣ ಇಲ್ಲಿದೆ.

ಇಟಲಿಯ ಫ್ಲಾರೆನ್ಸ್ ನಗರದಲ್ಲೊಂದು ಭವ್ಯವಾದ ಮನಮೋಹಕ ಕ್ರಿಸ್ತದೇವಾಲಯ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣವಾದ ನಂತರ ಅಲ್ಲಿನ ಧರ್ಮದರ್ಶಿಗಳು ಸಭೆ ಸೇರಿ ಆ ಭವ್ಯ ದೇವಾಲಯದಲ್ಲಿ ಏಸುಕ್ರಿಸ್ತನ ಸಂಪೂರ್ಣ ಜೀವನಚರಿತ್ರೆಯನ್ನು ಸೊಗಸಾಗಿ ಚಿತ್ರಿಸಬೇಕೆಂದು ನಿರ್ಧರಿಸಿ ತಮ್ಮದೇ ಊರಿನ ಜಗದ್ವಿಖ್ಯಾತ ಚಿತ್ರಕಾರ ಮೈಕೆಲ್ ಆಂಜೆಲೋನನ್ನು ಈ ಕಾರ್ಯಕ್ಕಾಗಿ ಆರಿಸುತ್ತಾರೆ. ಪರಮ ದೈವ ಭಕ್ತನಾದ ಮೈಕೆಲ್ ಬಲು ಸಂತೋಷದಿಂದ ಈ ಕಾರ್ಯವನ್ನು ಒಪ್ಪಿಕೊಂಡು ಒಂದಿಷ್ಟು ಒಪ್ಪಂದಗಳ ಆಧಾರದಲ್ಲಿ ತನ್ನ ಕೆಲಸವನ್ನು ಆರಂಭಿಸುತ್ತಾನೆ. ಕ್ರಿಸ್ತನ ಆದಿಪರ್ವಕ್ಕೆ ಸಂಬಂಧಿತ ಮೂರು ಚಿತ್ರಗಳನ್ನು ಅತ್ಯಂತ ಸುಂದರವಾಗಿ ಬರೆದ ನಂತರ ಈಗ ಅವನಿಗೆ ಬಾಲ ಏಸುವನ್ನು ಚಿತ್ರಿಸಬೇಕಿರುತ್ತದೆ. ಏನೇ ಮಾಡಿದರೂ ಅವನ ಮನದಲ್ಲಿ ಮೂಡಿದ ಚಿತ್ರವನ್ನು ಕುಂಚದಲ್ಲಿ ಮೂಡಿಸುವಲ್ಲಿ ಸೋಲುತ್ತಾನೆ ಮೈಕೆಲ್. ಇಂತಹ ಸನ್ನಿವೇಶದಲ್ಲಿ ತನ್ನ ಮನದ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯನ್ನು ಹುಡುಕಿ ಹೊರಡುತ್ತಾನೆ. ಊರೂರು ಅಲೆದ ನಂತರ ಕೊನೆಗೆ ಪೀಸಾ ನಗರದಲ್ಲಿಯ ತನ್ನ ಸ್ನೇಹಿತ ಬೆನೆಟ್ಟೋನನ್ನು ಭೇಟಿಯಾಗಲು ಹೋದಾಗ ಅಲ್ಲಿಯ ಭಿಕಾರಿ ಮಕ್ಕಳ ನಡುವಿವಲ್ಲಿ ಒಬ್ಬ ಬಾಲಕ ಮೈಕೆಲ್ ಕಣ್ಣಿಗೆ ಬೀಳುತ್ತಾನೆ. ಅತೀ ಸೌಮ್ಯ ಮುಖಮುದ್ರೆಯ ಆ ಬಾಲಕನಲ್ಲಿ ಬಾಲಕ್ರಿಸ್ತನಲ್ಲಿ ಇದ್ದಿರಬಹುದಾದ ವರ್ಚಸ್ಸು ಕಾಣುತ್ತದೆ. ಜೊತೆಗೆ ಸ್ವಲ್ಪ ಹೊತ್ತಿನಲ್ಲೇ ಆ ಬಾಲಕನ ಹೃದಯವಂತಿಕೆಯ ಅರಿವೂ ಆಗುತ್ತದೆ. ತನ್ನ ಮನದಲ್ಲಿ ರೂಪುಗೊಂಡಿದ್ದ ಬಾಲಕ್ರಿಸ್ತನೇ ಜೀವಂತವಾಗಿ ತನ್ನೆದುರು ನಿಂತಂತೆ ಎನ್ನಿಸಿ ಮೈಕೆಲ್ ಅವನನ್ನೇ ತನ್ನ ರೂಪದರ್ಶಿಯನ್ನಾಗಿ ಆರಿಸಿಕೊಳ್ಳುತ್ತಾನೆ. ತಂದೆ ತಾಯಿಯಿಲ್ಲದೇ ಅಜ್ಜಿಯ ಆಶ್ರಯದಲ್ಲಿ ಬೆಳೆದ ಆ ಬಾಲಕನೇ ಅರ್ನೆಸ್ಟೋ. ಮೈಕೆಲ್ ಬೆನೆಟ್ಟೋನೊಂದಿಗೆ ಅರ್ನೆಸ್ಟೋನ ಅಜ್ಜಿಯನ್ನು ಭೇಟಿಯಾಗಿ ಅವಳನ್ನು ಒಪ್ಪಿಸಿ ಅವರಿಬ್ಬರನ್ನೂ ಕರೆದುಕೊಂಡು ಫ್ಲಾರೆನ್ಸ್ ನಗರಕ್ಕೆ ವಾಪಾಸಾಗುತ್ತಾನೆ. ಅರ್ನೆಸ್ಟೋನನ್ನು ರೂಪದರ್ಶಿಯಾಗಿಸಿ ಬಾಲಕ್ರಿಸ್ತನ ಐದು ಚಿತ್ರಗಳನ್ನು ಬರೆದು ಪೂರ್ಣವಾಗಿಸುತ್ತಾನೆ. ಬಲು ಸುಂದರವಾಗಿ ಮೂಡಿದ್ದ ಚಿತ್ರಗಳನ್ನು ಕಂಡು ಪ್ರಸನ್ನರಾದ ಧರ್ಮದರ್ಶಿ ಸಂಘದವರು ರೂಪದರ್ಶಿಯಾದ ಅರ್ನೆಸ್ಟೋಗೆ ಬಟ್ಟೆಬರೆ, ಸಾಕಷ್ಟು ಹಣವನ್ನು ಕೊಟ್ಟು ಗೌರವಿಸುತ್ತಾರೆ. ಅರ್ನೆಸ್ಟೋ ಮತ್ತು ಅವನ ಅಜ್ಜಿ ಪೀಸಾ ನಗರಕ್ಕೆ ಹಿಂದಿರುಗುತ್ತಾರೆ. ಅದರೊಂದಿಗೆ ಅವರ ಬಡತನದ ಬದುಕೂ ಬದಲಾಗಿ ಸುಭೀಕ್ಷವಾದ ಜೀವನ ಅವರದಾಗುತ್ತದೆ. ಆದರೆ ಈ ಬದಲಾವಣೆಯಿಂದಾಗಿ ವೃದ್ಧೆಯ ಮನಸ್ಥಿತಿ ಬದಲಾಗುತ್ತದೆ. ಮುಂಚೆ ಬಡತನದಲ್ಲೂ ನೆಮ್ಮದಿಯಿಂದ ಬದುಕಿದಾಕೆಯ ಮನಸ್ಸು ಇಲ್ಲಸಲ್ಲದ ಯೋಚನೆಗಳ ಗೂಡಾಗುತ್ತದೆ. ತುದಿಮೊದಲಿಲ್ಲದ ಆಸೆಗಳ ಗೂಡಾಗುತ್ತದೆ ಆಕೆಯ ಮೆದುಳು. 

ಇತ್ತ ಮೈಕೆಲ್ ಏಸುವಿನ ಜೀವನಸಂಬಂಧಿ ಉಳಿದ ಚಿತ್ರಗಳನ್ನು ರಚಿಸುವಲ್ಲಿ ನಿರತನಾಗುತ್ತಾನೆ. ಹಲವು ಚಿತ್ರಗಳನ್ನು ರಚಿಸಿ ಕ್ರಿಸ್ತನ ಅಂತಿಮ ದಿನಗಳ ಚಿತ್ರರಚನೆಗೆ ಕೈ ಹಾಕುತ್ತಾನೆ. ಇಲ್ಲಿ ಅವನು ಯೇಸುವಿನ ಆಪ್ತಶಿಷ್ಯರಲ್ಲಿ ಒಬ್ಬನಾಗಿದ್ದುಕೊಂಡು ವಿಶ್ವಾಸಘಾತ ಮಾಡಿ ಶತ್ರುಗಳಿಗೆ ಏಸುವನ್ನು ತೋರಿದ 'ಜುದಾಸ'ನ ಚಿತ್ರವನ್ನು ಬರೆಯಬೇಕಾಗಿ ಬರುತ್ತದೆ. ಗುರು ದ್ರೋಹಿ, ಕಪಟಿಯಾದ ಜುದಾಸ ಅದೆಷ್ಟು ಕ್ರೂರವಾಗಿದ್ದಿರಬಹುದು ಎಂಬುದನ್ನು ಊಹಿಸಿ ಚಿತ್ರಿಸುವಲ್ಲಿ ಸೋಲುತ್ತಾನೆ ಮೈಕೆಲ್. ಎಷ್ಟೇ ಪ್ರಯತ್ನಿಸಿದರೂ ಪೈಶಾಚಿಕ ಭಾವದ ಜುದಾಸನ ರೂಪವನ್ನು ಚಿತ್ರಿಸಲಾಗದೇ ಅವನ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯ ಹುಡುಕಾಟಕ್ಕೆ ತೊಡಗುತ್ತಾನೆ. ಆದರೆ ಈ ನಡುವೆ ತನ್ನ ಪರಮಾಪ್ತ ಸ್ನೇಹಿತ ಬೆನೆಟ್ಟೋ ಮರಣದ ವಾರ್ತೆ ತಿಳಿದು ರೋಂ ನಗರಕ್ಕೆ ಧಾವಿಸುತ್ತಾನೆ ಮೈಕೆಲ್. ಬೆನೆಟ್ಟೋನ ಹಿಂದೆಯೇ ಅವನ ಹೆಂಡತಿಯೂ ಇಹಲೋಕ ತ್ಯಜಿಸಿ ಅವರ ಇಬ್ಬರು ಮಕ್ಕಳು ಅನಾಥರಾಗುತ್ತಾರೆ. ಆ ಮಕ್ಕಳ ಭವಿಷ್ಯದ ಬಗ್ಗೆ ಸಕಲ ವ್ಯವಸ್ಥೆ ಮಾಡಲು ವ್ಯಾಟಿಕನ್ ನಗರಕ್ಕೆ ಬಂದೆ ಪೋಪರನ್ನು ಭೇಟಿಯಾಗುತ್ತಾನೆ ಮೈಕೆಲ್. ಅವರ ಬಳಿ ಮಾತನಾಡಿ ಆ ಇಬ್ಬರು ಮಕ್ಕಳ ಜೀವನಕ್ಕೊಂದು ವ್ಯವಸ್ಥೆ ಮಾಡಿ ಇನ್ನೇನು ಫ್ಲಾರೆನ್ಸ್ ಗೆ ಹಿಂದಿರುಗಬೇಕೆನ್ನುವಾಗ ಪೋಪರು ಅವನಿಗೆ ಅಮೃತಶಿಲೆಯ ಸಮಾಧಿ ಹಾಗೂ ಇನ್ನೂ ಬಹಳಷ್ಟು ಚಿತ್ರ, ವಿಗ್ರಹಗಳನ್ನು ರಚಿಸಲು ಹೇಳುತ್ತಾರೆ. ಹಾಗಾಗಿ ಮುಂದಿನ ಹಲವು ವರ್ಷಗಳು ಅದೇ ಕೆಲಸದಲ್ಲಿ ವ್ಯಸ್ತನಾಗುತ್ತಾನೆ ಮೈಕೆಲ್. ಈ ಸಮಯದಲ್ಲಿ ಬೆನೆಟ್ಟೋವಿನ ಮಗ ವಿದ್ಯಾಭ್ಯಾಸ ಮುಗಿಸಿ ವ್ಯಾಟಿಕನ್ನಿನಲ್ಲಿ ಕೆಲಸ ಹಿಡಿದರೆ, ಮಗಳು ಲೀಸಾ ಮದುವೆಯಾಗಿ ತನ್ನ ಗಂಡ ಟಾಯೆಟ್ ನೊಂದಿಗೆ ಕರಾರಾ ನಗರಕ್ಕೆ ಹೊರಟುಹೋಗಿರುತ್ತಾಳೆ. 

ಕೊನೆಗೂ ಮೈಕೆಲ್ ವ್ಯಾಟಿಕನ್ನಿನಲ್ಲಿ ಕೈಗೆತ್ತಿಕೊಂಡ ಕೆಲಸ ಮುಗಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಫ್ಲಾರೆನ್ಸಿನ ಧರ್ಮದರ್ಶಿಗಳು ಇಲ್ಲಿನ ಕೆಲಸ ಸಂಪೂರ್ಣ ಗೊಳಿಸುವಂತೆ ಅವನನ್ನು ಕೇಳಿಕೊಳ್ಳುತ್ತಾರೆ. ವಯಸ್ಸಾಗಿ, ಕಣ್ಣಿನ ದೃಷ್ಟಿ ಮಂದವಾಗಿದ್ದ ಮೈಕೆಲ್ ಸಾವಿರ ಕಾರಣಗಳನ್ನು ಹೇಳಿದರೂ ಕೇಳದೇ ಅವನನ್ನು ಒಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇನ್ನೊಮ್ಮೆ ಮೈಕೆಲ್ ನಿಂದ 'ಜುದಾಸ'ನಿಗಾಗಿ ರೂಪದರ್ಶಿಯ ಹುಡುಕಾಟ ಆರಂಭವಾಗುತ್ತದೆ. ಹೀಗೇ ಹುಡುಕುತ್ತಿರುವಾಗ ಎಂಪೊಲಿ ಎಂಬ ಸಣ್ಣ ಗ್ರಾಮದಲ್ಲಿ ಅತ್ಯಂತ ವಿಕಾರ ರೂಪದ, ಕಡುಕ್ರೂರ ಕಪಟ ಮನಸ್ಥಿತಿಯ ಗ್ಯಾರಿಬಾಲ್ಡಿ ಎಂಬ ವ್ಯಕ್ತಿ ಎದುರಾಗುತ್ತಾನೆ. ಜುದಾಸನ ಚಿತ್ರಕ್ಕೆ ಇವನೇ ಸರಿಯಾದ ರೂಪದರ್ಶಿಯೆಂದು ನಿರ್ಧರಿಸಿ ಬಹಳಷ್ಟು ಪ್ರಯತ್ನ ಹಾಗೂ ಆಮಿಷದ ನಂತರ ಅವನನ್ನು ಒಪ್ಪಿಸಿ ಫ್ಲಾರೆನ್ಸ್ ಕರೆತರುವಲ್ಲಿ ಯಶಸ್ವಿಯಾಗುತ್ತಾನೆ ಮೈಕೆಲ್. 

ಯಾವಾಗ ಗ್ಯಾರಿಬಾಲ್ಡಿ ಫ್ಲಾರೆನ್ಸ್ ನಗರದ ಆ ಕ್ರಿಸ್ತಾಲಯದೊಳಗೆ ಕಾಲಿಟ್ಟು ಅಲ್ಲಿನ ಬಾಲಕ್ರಿಸ್ತನ ಚಿತ್ರಗಳನ್ನು ಕಾಣುತ್ತಾನೋ ಆಗ ಅವನ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಅವನ ಅಸಂಬದ್ಧ ಮಾತುಗಳನ್ನು ಕೇಳಿ ಮೈಕೆಲ್ ಅಚ್ಚರಿಗೊಳ್ಳುತ್ತಾನೆ. ಆದರೆ ಮೈಕೆಲ್ ನಿಗೆ ಆಘಾತವಾಗುವಂತಹ ಸತ್ಯ ಗ್ಯಾರಿಬಾಲ್ಡಿಯ ಬಾಯಿಂದ ಹೊರಬರುತ್ತದೆ. ಅಂದಿನ ಅರ್ನೆಸ್ಟೋವೇ ಇಂದಿನ ಗ್ಯಾರಿಬಾಲ್ಡಿಯಾಗಿರುತ್ತಾನೆ. ಬಾಲಕ್ರಿಸ್ತನ ಅಭೂತಪೂರ್ವ ವರ್ಚಸ್ಸುಳ್ಳ ದಯಾಗುಣದ ಸುಂದರ ಮೂರ್ತಿಯಾಗಿದ್ದ ಅರ್ನೆಸ್ಟೋ ಜುದಾಸನ ಅಪರಾವತಾರದಂತಹ ಕಟುಕ ಗ್ಯಾರಿಬಾಲ್ಡಿಯಾಗಿ ಬದಲಾದುದ್ದಾದರೂ ಏಕೆ ಎಂಬುದನ್ನು ಓದಿಯೇ ತಿಳಿಯಬೇಕು. ವ್ಯಕ್ತಿಯ ಆತ್ಮದ ಮುಗ್ಧತೆಯ ಕೊಲೆಯಾಗಿ ಆತ್ಮವೇ ಇರದ ದೇಹದೊಳಗೆ ದಾನವತ್ವ ಬೆಳೆಯಲು ಸಮಾಜ ಹೇಗೆ ಕಾರಣೀಭೂತವಾಗುತ್ತದೆ ಎಂಬುದನ್ನು ಅರ್ನೆಸ್ಟೋ ಗ್ಯಾರಿಬಾಲ್ಡಿಯಾದ ಪ್ರಕ್ರಿಯೆಯು ವಿವರಿಸುತ್ತದೆ. ಅವನು ಅನುಭವಿಸಿದ ಯಾತನೆಗಳು ಮನಕಲುಕುತ್ತವೆ.

ಇಡೀ ಕಾದಂಬರಿಯಲ್ಲಿ ಮೈಕೆಲ್ ಹಾಗೂ ಅರ್ನೆಸ್ಟೋ/ಗ್ಯಾರಿಬಾಲ್ಡಿ ಪಾತ್ರಗಳನ್ನೇ ಕೇಂದ್ರವಾಗಿಸಿಕೊಂಡರೂ ಮನುಷ್ಯನ ಹಲವು ಮುಖಗಳನ್ನು ಅನಾವರಣಗೊಳಿಸುವ ಪಾತ್ರಗಳು ಕಥೆಯುದ್ದಕ್ಕೂ ಇವೆ. ದುಶ್ಚಟಗಳ ದಾಸನಾದ ಗಂಡನ ದೌರ್ಜನ್ಯಕ್ಕೆ ಸಿಲುಕಿ ನಲುಗಿದರೂ ಅವನನ್ನು ಬದಲಾಯಿಸಲು ಹೆಣಗುವ ಪರಿಶುದ್ಧ ಮನದ ಲೀನಾ, ಮಮತೆಯೇ ಮೈವೆತ್ತ ಲಿಸ್ಸಾತಾಯಿ ಮತ್ತು ನನ್ನೆಟ್ಟಿ, ಬಡತನದಲ್ಲೂ ನೆಮ್ಮದಿಯಿಂದಿದ್ದು ಸಿರಿವಂತಿಕೆ ಬಂದೊಡನೆ ಲೋಭಿಯಾಗತೊಡಗಿದ ಅರ್ನೆಸ್ಟೋನ ಅಜ್ಜಿ,  ವಿಷಯಲಂಪಟ ಟಾಯಿಟ್, ಹೃದಯಹೀನ ಧೂರ್ತ ಜಿಯೋವನಿ ಹೀಗೇ ಹಲವು ಪಾತ್ರಗಳ ಮೂಲಕ ಮನುಷ್ಯನ ಮನದ ಹಲವು ಭಾವಗಳನ್ನು ಕಟ್ಟಿಕೊಟ್ಟಿದ್ದಾರೆ ಲೇಖಕರು. 

'ಪ್ರಪಂಚದ ಬಹುಪಾಲು ಜನರೆಲ್ಲರೂ ಜುದಾಸನಂತಹವರೇ. ವ್ಯತ್ಯಾಸವೆಂದರೆ ಇವರು ಒಳಗೆ ಜುದಾಸರಾಗಿದ್ದರೂ ಹೊರಗೆ ಅದನ್ನು ತೋರ್ಪಡಿಸದೇ ಕುರಿಯ ಚರ್ಮವನ್ನು ಹೊದ್ದ ತೋಳಗಳಂತೆ ಇರುತ್ತಾರೆ' ಎಂಬ ಸಾಲು ಈ ಜಗತ್ತಿನ ವಿಲಕ್ಷಣ ವಾಸ್ತವವನ್ನು ಎತ್ತಿ ಹಿಡಿಯುತ್ತದೆ. 'ನಾಲ್ಕು ಜನರ ಮುಂದೆ ಧೈರ್ಯವಾಗಿ ಮಾಡಲಾಗದ ಕೆಲಸವನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟುಕೊಂಡು ಮಾಡಬಾರದು. ಇದು ಆತ್ಮವಂಚನೆ' ಎಂಬ ಸಾಲುಗಳಲ್ಲಿ ಆತ್ಮಾವಲೋಕನದ ಹಾದಿಯಿದೆ. ಈ ರೀತಿಯ ಹಲವು ಸನ್ನಿವೇಶಗಳು, ಸಾಲುಗಳು ಇಲ್ಲಿವೆ. ಕಾದಂಬರಿಯ ಕೊನೆಯಲ್ಲಿ ಮೈಕೆಲ್ ನಿಗೆ "ಹಣದ ಆಸೆ ತೋರಿಸಿ ನೀನು ನಮ್ಮನ್ನು ಹೆಣವಾಗಿಸಿದೆ" ಎನ್ನುವ ಅರ್ನೆಸ್ಟೋನ ಮಾತು ಓದುಗರಿಗೂ ನಿಜವೆನಿಸಿಬಿಡುತ್ತದೆ. ಒಂದೇ ಜೀವಿತಾವಧಿಯಲ್ಲಿ ಬಾಲಕ್ರಿಸ್ತ ಹಾಗೂ ಜುದಾಸ ಎಂಬ ಎರಡು ತದ್ವಿರುದ್ದ ಭಾವಗಳಿಗೆ ರೂಪದರ್ಶಿಯಾಗಿ ಅರ್ನೆಸ್ಟೋ/ ಗ್ಯಾರಿಬಾಲ್ಡಿಯ ಸಾವಿನೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಆದರೆ ಮನದೊಳಗೆ ಹುಟ್ಟಿಕೊಳ್ಳುವ ಸಾವಿರಾರು ಪ್ರಶ್ನೆಗಳಲ್ಲಿ, ಚಿಂತನೆಗಳಲ್ಲಿ ಅರ್ನೆಸ್ಟೋ ಜೀವತಳೆದಂತೆ ಭಾಸವಾಗುತ್ತದೆ.

ಒಟ್ಟಿನಲ್ಲಿ ಒಮ್ಮೆ ಓದಲೇಬೇಕಾದ ವಿಭಿನ್ನ ಕಥಾಹಂದರದ ವಿಶಿಷ್ಟ ಕೃತಿಯಿದು. ಒಮ್ಮೆ ಓದಿದರೆ ಅದೇ ಮತ್ತೆ ಮತ್ತೆ ಓದಿಸಿಕೊಳ್ಳುವುದು ಸುಳ್ಳಲ್ಲ.

ನಿರಾಶ್ರಿತ

ನಾ ಯಾರೆಂದು ತಿಳಿದಿಲ್ಲ ನಿಮಗೆಲ್ಲ...
ಮುಂದೆ ತಿಳಿವ ಬಗೆಯೂ ಅರಿವಿಲ್ಲ...
ನಾ ಈಗಿನ್ನೂ ಜಗವ ಅರಿಯ ಹೊರಟಿದ್ದೆ ಕಣ್ಣಗಲಿಸಿ....
ಆದರೆ ಈ ಜಗ ಎನಗೆ ಕೊಟ್ಟ ನಾಮಧೇಯ....

"ನಿರಾಶ್ರಿತ"

ನಾ ನಿರಾಶ್ರಿತನಂತೆ......
ಯಾವುದೋ ನಿರಾಶ್ರಿತ ಶಿಬಿರದಲ್ಲಿ ಅಲೆವೆನಂತೆ ನನ್ನಪ್ಪ ಅಮ್ಮನೊಂದಿಗೆ....
ಹೋದಲ್ಲೆಲ್ಲ 'ನೀ ನಿರಾಶ್ರಿತ, ಇಲ್ಲಿರುವ ಹಕ್ಕು ನಿನಗಿಲ್ಲ, ತೊಲಗು ಇಲ್ಲಿಂದ ' ಎನ್ನುವರು...
ಹುಚ್ಚು ನಾಯಿಯಂತೆ ಅಟ್ಟಿಸುವರು.....
ಮಾತೃಭೂಮಿಗೂ ಸಲ್ಲದೇ ಪರದೇಶಕ್ಕೂ ಸಲ್ಲದೇ... ಕಡೆಗೊಮ್ಮೆ ಭುವಿಯ ಎಲ್ಲೋ ಒಂದೆಡೆ 
ಬದುಕ ಅರಸಿ ಹೊರಟೆವು ಸವಾರಿ ಕಳ್ಳಮಾರ್ಗದಲಿ

ಆದರೆ ವಿಧಿಯೋ ಕಡು ಕ್ರೂರಿ.... 
ಬದುಕೇ ಕಸಿದ ಇನ್ನೂ ಜಗ ತಿಳಿಯದ ಹಸುಳೆಯೆಂಬ ಕನಿಕರವಿಲ್ಲದೇ....
ಯಾವುದೋ ಯುದ್ಧ ಭೂಮಿಯ ನಡುವಲ್ಲಿಯೋ ಇಲ್ಲಾ ಯಾವುದೋ ನದಿ ತಟದಲ್ಲೋ ನಿರ್ಜೀವವಾಗಿ ನಿಶ್ಚಲನಾಗಿರುವೆ ನಾನು.......

ಆಗ ಬೀಳುವುದು ಜಗದ ಗಮನ ನನ್ನೆಡೆ.....
ನನ್ನ ಬವಣೆಗೆ ಮರುಗುವುದು ನಿಮ್ಮ ಹೃದಯ....
ದಿನಪತ್ರಿಕೆಗಳಲ್ಲಿ, ವಾರ್ತೆಗಳ ತುಂಬಾ ರಾರಾಜಿಸುತ್ತಿವೆ ನನ್ನ ಶವ.......
ಇದು ಕ್ರೌರ್ಯದ ಪರಮಾವಧಿಯೆಂಬ ನಿಮ್ಮ ಹಾರಾಟ, ಚೀರಾಟಗಳು
ನನಗಾಗಿ ನೀವು ಮಾಡುವ ಮೊಂಬತ್ತಿ ಮೆರವಣಿಗೆಗಳು......

ಆದರೇನು ಮಾಡಲಿ..... ಇದ ನೋಡಲು ನಾನು ಬದುಕಿಲ್ಲವಲ್ಲ......

ಅಯ್ಯೋ ಮೂಢ ಜನರೇ......
ಈ ಕಾಳಜಿ ನಾನು ಸತ್ತ ಮೇಲೆ ಬಂದಿತೇ ನಿಮಗೆ.....

ನನ್ನ ನಿರಾಶ್ರಿತನೆಂದು ಹಂಗಿಸಿ ಓಡಿಸಿದಿರಿ ಜಗದ ಮೂಲೆಮೂಲೆಗೆ......
ಅಣಕವಾಡಿದಿರಿ ನಾ ಜನಿಸಿದ್ದೇ ಅಪರಾಧವೆಂಬಂತೆ.....
ಜಾತಿ, ಧರ್ಮ, ವರ್ಗ, ವರ್ಣವೆಂದು ಭೇದ ಮಾಡಿದಿರಿ ನನ್ನ.......
ನನ್ನ ಬದುಕು ಕಸಿವ ಹಕ್ಕು ಕೊಟ್ಟವರಾರು ನಿಮಗೆ....

ಒಂದು ಮಾತು ನೆನಪಿರಲಿ ನನ್ನ ನಿರಾಶ್ರತನೆಂದು ಕರೆಯುವ ಮುನ್ನ.....

ನೀವೂ ನಿರಾಶ್ರಿತರೇ ಇಲ್ಲಿ.....
ಎಲ್ಲರೂ ನಿರಾಶ್ರಿತರೇ ಈ ಭುವಿಯಲ್ಲಿ....
ಈ ಧರಿತ್ರಿ ಕರುಣೆಯಲಿ ಆಶ್ರಯವಿತ್ತಿರುವಳು ನಿಮಗೆ....
ಅವಳು ನಿಮ್ಮಂತೆ ಭೇದವೆಣಿಸಿದ್ದರೆ ನೀವು ಇಂದು ನಿರಾಶ್ರಿತರೇ......

ಇಂದು ಮಡಿದಿರುವುದು ನಾನಲ್ಲ.......
ಇದು ಮಾನವೀಯತೆಯ ಮರಣ ನಿಮ್ಮ ಕೈಯಿಂದ.....

ಇಂತೀ ನಿಮ್ಮ ದ್ವೇಷಕ್ಕೊಳಗಾದ ಅನಾಥ ಶವ