ಧಾರಾವಾಹಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಧಾರಾವಾಹಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 5

ಸಿಯಾ..... ದಿ ರೆಬೆಲ್ !!

ಚಾಚಿ ನನ್ನನ್ನು ಎದೆಗಾನಿಸಿಕೊಂಡು ತನ್ನ ಮನದ ಅಳಲನ್ನೆಲ್ಲಾ ಹೊರಹಾಕಿ ಕಣ್ಣೀರಾದರೆ, ಅವಳ ಬತ್ತದ ಕಣ್ಣೀರಿಗೆ ಸಾಕ್ಷಿಯಾಗಿಯೂ ನಗುತ್ತಿದ್ದೆ ನಾನು. ಆ ಮುಂಜಾವು ಹಾಗೆ ಮಾಯಿಯ ಅಗಲುವಿಕೆ ಮತ್ತು ಚಾಚಿಯ ಕಂಬನಿ ಧಾರೆಯೊಂದಿಗೆ ಕರಗಿತ್ತು. ಮನೆಯ ನಾಲ್ವರು ಹಿರಿಯ ಸದಸ್ಯರು ಮಾಯಿಯ ಅಂತ್ಯಸಂಸ್ಕಾರದಲ್ಲಿ ತೊಡಗಿಸಿಕೊಂಡಿದ್ದರೆ, ಚಾಚಿ ನನ್ನ ಬಿಟ್ಟು ಸರಿಯಲಿಲ್ಲ. ಆದರೆ ಇವೆಲ್ಲದರ ನಡುವೆ ಹೈರಾಣಾಗಿ ಕುಳಿತಿದ್ದು ಮಾತ್ರ ನನ್ನ ಸೌತೇಲಿ ಮಾಯಿ....

ಅವಳು ಬಾಪೂವಿನ ಲುಗಾಯಿಯಾಗಿ ಈ ಮನೆಗೆ ಬಂದು ಸುಮಾರು ಎರಡು ತಿಂಗಳುಗಳಾಗಿತ್ತಷ್ಟೇ. ಈ ಅಲ್ಪ ಸಮಯದಲ್ಲೇ ತನ್ನ ಭವಿಷ್ಯ ಹೇಗಿರಬಹುದೆಂಬ ಅಂದಾಜು ಸಿಕ್ಕಿ ಹೋಗಿತ್ತು ಅವಳಿಗೆ. ಆ ಭಯವೇ ಅತಿಯಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಹೆದರಿದವಳ ಮೇಲೆ ಹಾವೆಸೆದಂತೆ ಎದುರಾಗಿದ್ದು ಮಾಯಿಯ ಮರಣ ಹಾಗೂ ನನ್ನ ಜನನ..... ನಮ್ಮಿಬ್ಬರ ಪರಿಸ್ಥಿತಿ ಆಕೆಯನ್ನು ಕಂಗೆಡಿಸಿತ್ತು. ಮಂಕಾಗಿ ಒಂದು ಮೂಲೆಯಲ್ಲಿ ಕುಳಿತುಬಿಟ್ಟಿದ್ದಳು ಆಕೆ.

ಆ ದಿನ ಅಪರಾಹ್ನ ಕಳೆದು ಸಂಧ್ಯೆ ಮೆಲ್ಲಗೆ ಕಾಲಿಡುವವರೆಗೂ ಮನೆ ನೀರವ ಮೌನದೊಳಗೇ ಮುಳುಗಿತ್ತು. ದಾದಿ, ದಾದಾ, ಚಾಚೂ ಹಾಗೂ ಬಾಪೂ ಯಾವ ತಕರಾರಿಲ್ಲದೇ ಮಾಯಿಯ ಶವಕ್ಕೆ ಮುಕ್ತಿ ಕಾಣಿಸಿದ ನಿರಾಳತೆಯೊಂದಿಗೆ ಅಷ್ಟೇ ನಿಶ್ಯಬ್ದವಾಗಿ ಈ ರಾತ್ರಿ ನನಗೊಂದು ಗತಿ ಕಾಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದರು. ಚಾಚಿ ನನ್ನ ಭವಿಷ್ಯವನ್ನು ವಿಧಿಗೆ ಬಿಟ್ಟು, ಮೌನದ ಸೆರಗಲ್ಲಿ ನಿರ್ಲಿಪ್ತವಾಗಿ ಉಳಿದಿದ್ದಳು. ಸೌತೇಲಿ ಮಾಯಿ ಮಾತ್ರಾ ಸುಸ್ತು, ಗೊಂದಲ, ಭಯ, ಆತಂಕಗಳ ಮೂಸೆಯಲ್ಲಿ ಚಡಪಡಿಸುತ್ತಿದ್ದಳು.....

ಹೀಗಿದ್ದ ಮನೆ ಅದೇ ಸಂಜೆಯ ಒಂದು ಕ್ಷಣದಲ್ಲಿ ಮಾಯಿಯ ಸಾವಿನ ಸೂತಕ ಮರೆತು ಸಂಭ್ರಮಿಸಿತ್ತು......

ಕಾರಣ ಸೌತೇಲಿ ಮಾಯಿ ತಾಯಿಯಾಗುವ ಸೂಚನೆ ನೀಡಿದ್ದಳು....

ಮನೆಯಲ್ಲಿನ ನಾಲ್ವರ ಸಂಭ್ರಮ ಮುಗಿಲುಮುಟ್ಟಿತ್ತು. ಜೊತೆಗೇ ಲಾಲಾನ ಆಗಮನದ ನಿರೀಕ್ಷೆಯೂ ಗರಿಗೆದರಿ ನರ್ತಿಸತೊಡಗಿತ್ತು. ಮಾಯಿಯ ಹಠಾತ್ ನಿರ್ಗಮನ ಅವರನ್ನು ಕಿಂಚಿತ್ತೂ ಕಾಡಲಿಲ್ಲ. ಆ ಕೂಡಲೇ ಭೈರವ್ ಬಾಬಾನಿಗೆ ಕರೆಹೋಗಿತ್ತು. ಆತ ತಕ್ಷಣವೇ ಬಂದಿದ್ದ. ಬರಲೇಬೇಕು ಕೂಡಾ.... ಎಷ್ಟೆಂದರೂ ಹಣ ಹಾಗೂ ಪ್ರತಿಷ್ಟೆ ತಾನೇ ಜಗವನ್ನು ಆಳುವುದು?

ಬಾಬಾನಿಗೆ ಬೆಳಗ್ಗಿನಿಂದ ನಡೆದ ಘಟನೆಗಳೆಲ್ಲವನ್ನೂ ವಿವರಿಸಿ ಆತನ ಭವಿಷ್ಯವಾಣಿಗಾಗಿ ಕಾಯತೊಡಗಿದರು.

ಭೈರವ್ ಬಾಬಾ ಚೋಟಿ ಮಾಯಿಯ ಕೈ ರೇಖೆಗಳ‌ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಆಕೆ ಮಾತ್ರ ತನ್ನ ಗ್ರಹಗತಿಗಳ ಬಗ್ಗೆ, ಭವಿಷ್ಯದ ಬಗ್ಗೆ ಯೋಚನೆಗೆ ಬಿದ್ದಿದ್ದಳು.

ನನ್ನನ್ನು ಮಡಿಲಲ್ಲಿ ಇರಿಸಿಕೊಂಡಿದ್ದ ಚಾಚಿ ಎಂದಿನಂತೆ ನಿರ್ಲಿಪ್ತೆಯಾದರೂ 'ಹೆಣ್ಣೊಂದು ಹುಟ್ಟದಿರಲಿ‌' ಎಂಬುದೊಂದೇ ಬೇಡಿಕೆ ಅವಳದು. 

ಉಳಿದ ನಾಲ್ವರ ಗಮ್ಯ ಒಂದೇ.‌..... ಲಾಲಾ...... 

ಚಾತಕ ಪಕ್ಷಿಗಳಂತೆ ಭೈರವ್ ಬಾಬಾನ ಮಾತಿಗಾಗಿ ಕಾತರಿಸಿ ಕುಳಿತ್ತಿದ್ದರು.....

ಹಲವು ಕ್ಷಣಗಳ ಗಹನ ಧ್ಯಾನ ಕಳೆದು ಅದೇಕೋ ನನ್ನ ಬಳಿ ಬಂದು ಇನ್ನೂ ಸರಿಯಾಗಿ ಒಡಮೂಡದ ನನ್ನ ಕೈ ರೇಖೆಗಳ ಪರಿಶೀಲನೆಗೆ ತೊಡಗಿದ್ದ. 

ತುಸು ಸಮಯದ ಪರಿಶೀಲನೆಯ ನಂತರ ನಿಶ್ಯಬ್ದತೆಯ ಎದೆಯಾಳವನ್ನು ಸೀಳಿಕೊಂಡು ನನ್ನ ಬದುಕಿನ ದಿಕ್ಕನ್ನೇ ಬದಲಿಸುವ ಭವಿಷ್ಯ ನುಡಿದಿದ್ದ ಬಾಬಾ.....

"ಥಾರೀ ಚೋರಿ ಅಚ್ಛೀ ಶಗುನ್ ಲೇಕರ್ ಆಯೀ ಹೆ. ಇಸ್ ಬಾರ್ ಸಬ್ ಶುಭ್ ಹೀ ಹೋಗಾ. ಯೇ ಲಾಲಿ ಕೆ ಸಾಥ್ ಮಾ ಲಾಲಾ ಭೀ ಆವೇಗಾ.... ಇಸೇ ಮಾರ್ನಾ ಮತ್...."(ನಿನ್ನ ಮಗಳು ಒಳ್ಳೆಯ ಶಕುನ ಹೊತ್ತು ತಂದಿದ್ದಾಳೆ. ಈ ಸಲ ಎಲ್ಲವೂ ಶುಭವೇ. ಈ ಲಾಲಿಯ ಜೊತೆಯಲ್ಲಿ ಲಾಲಾನ ಆಗಮನವೂ ಆಗುತ್ತದೆ. ಇವಳನ್ನು ಕೊಲ್ಲಬೇಡ) ಎಂದು ಯಾರೂ ನಿರೀಕ್ಷಿಸಿರದ ಸುಗ್ರೀವಾಜ್ಞೆ ಹೊರಡಿಸಿಬಿಟ್ಟ.‌....! 

ಅಷ್ಟೇ......!!

ಬೆಳಗಿನಿಂದ ಮೌನವೇ ತಾಂಡವವಾಡಿದ್ದ ಆ ಮನೆಯ ತುಂಬಾ ಸಂತಸ ಹೊನಲಾಗಿ ಹರಿಯತೊಡಗಿತು. ದಾದಾ, ದಾದಿ, ಚಾಚಾ ಮತ್ತು ಬಾಪೂನ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲಕ್ಕಿಂತ ದೊಡ್ಡ ನಿರಾಳತೆ ಚೋಟಿ ಮಾಯಿಗೆ. ಭವಿಷ್ಯತ್ತಿನ ಭಯದ ಕಬಂಧ ಬಾಹುಗಳಲ್ಲಿ ಸಿಲುಕಿ ಕ್ಷಣಕ್ಷಣಕ್ಕೂ ಸಾಯುತ್ತಿದ್ದವಳನ್ನು ಬಾಬಾನ ಒಂದು ವಾಣಿ ಬದುಕಿಸಿತ್ತು. ಅವಳೊಂದಿಗೆ ನನ್ನನ್ನೂ.... ಆ ಘಳಿಗೆಯಲ್ಲಿ ಕೊಂಚ ನಿರಾಳವಾಗಿ ಉಸಿರಾಡಿದ್ದಳಾಕೆ. ಆದರೆ ಚಾಚಿಯ ಮನದ ಭಾವನೆಗಳು ಮಾತ್ರ ಖುದ್ದು ಅವಳದೇ ಗ್ರಹಿಕೆಗೂ ನಿಲುಕದಷ್ಟು ಗೋಜಲಾಗಿದ್ದವು. ನಾನು ಸಾವನ್ನು ಜಯಿಸಿದೆನೆಂದು ಸಂತಸ ಪಡಬೇಕೋ ಇಲ್ಲಾ ನನ್ನ ಮುಂದಿನ ಹೋರಾಟದ ಬದುಕನ್ನು ನೆನೆದು ಸಂತಾಪ ಸೂಚಿಸಬೇಕೋ ಎಂಬ ಉತ್ತರ ಸಿಗದ ಪ್ರಶ್ನೆಯ ಬೆನ್ನು ಬಿದ್ದು ಮೌನಿಯಾಗಿದ್ದಳಾಕೆ‌. 

ಲಾಲಾನ ಆಗಮನವೆಂದರೆ ಭಗವಂತನ ಆಗಮನವಷ್ಟೇ..... ಬರಲಿರುವ ಭಗವಂತನನ್ನು, ಕುಲ ತಿಲಕನನ್ನು ಸ್ವಾಗತಿಸಲು  ಏನೆಲ್ಲಾ ತಯಾರಿಯಾಗಬೇಕೆಂದು ಆಗಿನಿಂದಲೇ ಚರ್ಚೆಗಳು ಆರಂಭವಾದವು. ನಿರೀಕ್ಷೆಗೂ ಮೀರಿದಷ್ಟು ಫಲ ತಾಂಬೂಲ ಭಕ್ಷೀಸುಗಳು ಬಾಬಾನ ಪದತಲಕ್ಕೆ ಸಮರ್ಪಣೆಯಾದವು. ಕೈ ತುಂಬಾ ಸಿಕ್ಕ ಭಕ್ಷೀಸಿನಿಂದ ಸಂತೃಪ್ತನಾಗಿ ಆಶೀರ್ವದಿಸಿ ತೆರಳಿದ ಆತ.

ಅವನು ನೀಡಿದ ಶುಭಸುದ್ದಿಯ ಮುಂದೆ ನಾನು ಸತ್ತರೆಷ್ಟು, ಬಿಟ್ಟರೆಷ್ಟು? ಅವನ ಮಾತೇ ಅಂತಿಮ ಇಡೀ ಶಾಮ್ಲಿಯಲ್ಲಿ. ಲಾಲಾನ ಆಗಮನದ ಸಂಭ್ರಮದ ಮುಂದೆ ಬೇರೆಲ್ಲವೂ ಗೌಣವಾಗಿತ್ತು. 'ಬಾಬಾ ಹೇಳಿದಂತೆ ಕೊಲ್ಲುವುದು ಬೇಡ, ಮನೆಕೆಲಸ ಮಾಡಿಕೊಂಡು ಯಾವುದೋ ಮೂಲೆಯಲ್ಲಿ ಬಿದ್ದಿರಲಿ' ಎಂದು ನಿರ್ಧಾರವಾಯಿತು.... 

ಲಾಲಾನ ಆಗಮನದ ಸಂತೋಷವನ್ನು ಹಂಚಿಕೊಳ್ಳಲು ಮರುದಿನ ಫೇಣಿ, ಮಲಾಯಿ ಮಕ್ಕನ್, ಚಂಚಂ ಇತ್ಯಾದಿ ಮಿಠಾಯಿಗಳ ಸಮೇತ ದಾವತ್ ಕರೆ ರಾತ್ರೋರಾತ್ರಿ ಊರಿನ ಪ್ರತೀ ಮನೆಯನ್ನೂ ತಲುಪಿತು. ನನ್ನ ಮಾಯಿ ಎಂಬುವವಳೊಬ್ಬಳು ಈ ದಿನ ಬೆಳಿಗ್ಗೆ ಜೀವ ತೆತ್ತಿದ್ದಾಳೆ ಎಂಬ ಕುರುಹೂ ಇಲ್ಲದಂತೆ ಮನೆ ಜಗಮಗಿಸತೊಡಗಿತ್ತು.

ಹೀಗೆ ಚೋಟಿ ಮಾಯಿಯ ದಯೆಯಿಂದ ಬದುಕುವ ಅವಕಾಶವೊಂದು ಲಭಿಸಿತ್ತು ನನಗೆ. ಆದರೆ ನನ್ನ ಇಚ್ಛಾನುಸಾರ ಜೀವಿಸುವ ಹಕ್ಕು ಖಂಡಿತಾ ನನ್ನ ಪಾಲಿಗಿರಲಿಲ್ಲ. ನನಗೆ ಆಯ್ಕೆಯ ಅವಕಾಶವಿರಲಿಲ್ಲ. ನನ್ನ ಬದುಕು ಪಂಜರದ ಪಕ್ಷಿಯಾಗಿಯೇ ಎಂದು ನಾನು ಜನಿಸಿದಾಗಲೇ ನಿರ್ಧರಿತವಾಗಿತ್ತು.

ಆದರೆ.......

ನಾನು ಯಾವ ಕಾರಣಕ್ಕೂ ಪಂಜರದ ಪಕ್ಷಿಯಾಗಲಾರೆ. ಮಾಯಿ, ಚಾಚಿಯರಂತೆ ಎಲ್ಲವನ್ನೂ ಸಹಿಸಲಾರೆ.  ರೆಕ್ಕೆಗಳನ್ನು ಚಾಚಿ ಮುಗಿಲೆತ್ತರಕ್ಕೆ ಹಾರಿ ಈ ಲೋಕದ ಕಟ್ಟುಪಾಡುಗಳ ಕೈಗೆ ದೂರ ಸಾಗಬೇಕು ನಾನು. ನನ್ನ ಧ್ವನಿಯಡಗಿಸಲು ಯತ್ನಿಸುವವರ ದನಿಯುಡುಗಿಸಬೇಕು ನಾನು......

ದಿನಗಳು, ಸಂವತ್ಸರಗಳು ಯಾರ ಅಪ್ಪಣೆಯಿಲ್ಲದೇ ಉರುಳುತ್ತವೆ. ಅವುಗಳನ್ನು ಯಾವ ಪಂಜರದಲ್ಲಿ ಬಂಧಿಸಿಡಲಾದೀತು? ಸಮಯ ಯಾರಿಗೂ ತಲೆಬಾಗದು.  ಬಾಬಾನ ಭವಿಷ್ಯದಂತೆಯೇ ಮನೆಗೆ ಲಾಲಾನ ಆಗಮನವಾಗಿತ್ತು. ಮನೆಯವರ ಸಂತಸಕ್ಕೆ ಮೇರೆಯೇ ಇರಲಿಲ್ಲ. ವಂಶವನ್ನು ಬೆಳಗಿಸುವವ ಎಂಬರ್ಥದಲ್ಲಿ ದಾದಿ ಅವನಿಗೆ ಕುಲ್ದೀಪ್ ಎಂದು ನಾಮಕರಣ ಮಾಡಿದ್ದರು. ಅವನ ಆಗಮನದಿಂದ ಮನೆಯ ಬಹುದೊಡ್ಡ ಕೊರತೆ ನೀಗಿತ್ತು. ಮನೆಯವರ ಕಣ್ಮಣಿಯಾಗಿದ್ದ ಅವನು ಕಡೆಗಣ್ಣಲ್ಲಿ ತೋರಿದ್ದನ್ನು ತಲೆಯ ಮೇಲಿಟ್ಟು ನೆಡೆಸುತ್ತಿದ್ದರು. 

ಆದರೆ ನಾನು.....?

ನಾನು ಆ ಮನೆಯಲ್ಲಿ ಅನಗತ್ಯ ಹೊರೆಯಾಗಿದ್ದೆ ಹಾಗೂ ಮನೆಯವರ ನಡವಳಿಕೆ ಅದನ್ನು ನನಗೆ ಪ್ರತಿಕ್ಷಣವೂ ನೆನಪಿಸುತ್ತಿತ್ತು. ಬೆಳಿಗ್ಗೆ ಬೇಗನೇ ಎದ್ದು ಅಂಗಳ ಗುಡಿಸುವುದರೊಂದಿಗೆ ನನ್ನ ದಿನ ಆರಂಭವಾಗುತ್ತಿತ್ತು. ನಂತರ ಮನೆಯನ್ನೂ ಗುಡಿಸಿ, ಒರೆಸುವಷ್ಟರಲ್ಲಿ ಚಾಚಿ ಕೊಟ್ಟಿಗೆಯ ಕೆಲಸ ಮುಗಿಸಿರುತ್ತಿದ್ದಳು. ಆನಂತರ ಇಬ್ಬರೂ ರಸೋಯಿ ಘರ್(ಅಡುಗೆ ಕೋಣೆ) ಹೊಕ್ಕರೆ ಮಧ್ಯಾಹ್ನದ ತನಕ ಅಲ್ಲೇ ನಮ್ಮ ವಾಸ. ಲಾಲಾನನ್ನು ಹಡೆಯುವಳೆಂದು ಬಾಬಾ ಭವಿಷ್ಯ ನುಡಿದಂದಿನಿಂದ ಚೋಟಿ ಮಾಯಿಗೆ ರಸೋಯಿ ಕೆಲಸದಿಂದ ಸಂಪೂರ್ಣ ವಿನಾಯ್ತಿ ದೊರಕಿತ್ತು. ಚಾಚಿಯೊಬ್ಬಳೇ ಅಡುಗೆ ಸಂಭಾಳಿಸಬೇಕಿತ್ತು.  ಈಗೀಗ ನಾನು ಅವಳೊಂದಿಗೆ ಕೈ ಜೋಡಿಸತೊಡಗಿದ್ದೆ. ಎಲ್ಲರ ಊಟ ಮುಗಿದು ನಾವಿಬ್ಬರೂ ಒಂದಿಷ್ಟು ಹೊಟ್ಟೆಗಿಳಿಸಿ ಪಾತ್ರೆಗಳನ್ನು ತೊಳೆದು ಮುಗಿಸುವಷ್ಟರಲ್ಲಿ ಸೂರ್ಯ ಅಸ್ತಮಿಸಲು ತಯಾರಿರುತ್ತಿದ್ದ. ಆಗೊಂದರೆಘಳಿಗೆ ವಿರಮಿಸಲು ಸಮಯ ಸಿಕ್ಕರೆ ಪುಣ್ಯ. ನಂತರ ಮತ್ತೆ ರಾತ್ರಿಗಾಗಿ ರೋಟಿ ಸುಡುವ ಕಾರ್ಯಕ್ರಮ ಆರಂಭವಾಗಿಬಿಡುತ್ತಿತ್ತು. ನಾನು ಬೇಲನ್ ನಲ್ಲಿ ರೋಟಿ ಲಟ್ಟಿಸಿದರೆ ಚಾಚಿ ಅದನ್ನು ಅರೆ ಬೇಯಿಸಿ ನಂತರ ತಂದೂರಿ ಮಟ್ಕಾದೊಳಗೆ ಅದನ್ನು ಎರಡೂ ಬದಿ ಬೇಯಿಸುತ್ತಿದ್ದಳು. ಇದೆಲ್ಲಾ ಮುಗಿದು, ರಸೋಯಿ ಶುಚಿರುಚಿಯಾಗಿಸಿ ಹಾಸಿಗೆಗೆ ತಲೆ ಸೋಕುವಾಗ ಮಧ್ಯರಾತ್ರಿಯೇ.... ಮರುದಿನ ಮತ್ತದೇ.....

ಹೀಗೇ ಎಳೆಯುತ್ತಿತ್ತು ಬಾಳಬಂಡಿ..... 

ಚಿಕ್ಕಂದಿನಿಂದಲೇ ಪರಕೀಯತೆಯ ಅಸುರಕ್ಷಿತ ಭಾವವೊಂದು ನನ್ನೊಂದಿಗೇ ಬೆಳೆಯತೊಡಗಿತ್ತು. ನಾನು ಬೆಳೆದು, ಬುದ್ಧಿ ಬಲಿತು, ಮನಸ್ಸು ಸುತ್ತಲಿನ ಘಟನೆಗಳ ವಿಶ್ಲೇಷಣೆಗೆ ತೊಡಗುವಷ್ಟು ಪ್ರಬುದ್ಧವಾಗುವ ಸಮಯಕ್ಕೆ ಆ ಭಾವ ಇನ್ನೂ ಬಲವಾಗಿ ಬೇರೂರಿಬಿಟ್ಟಿತು ನನ್ನಲ್ಲಿ. ಅದು ನನ್ನೊಳಗೆ ಅಸಹನೆಯೊಂದನ್ನು ಸೃಷ್ಟಿಸಿತ್ತು. ಕುಲ್ದೀಪ್ ಹಾಗೂ ನನ್ನ ನಡುವೆ ಮನೆಯವರು ತೋರುತ್ತಿದ್ದ ತಾರತಮ್ಯ ನನ್ನ ಅಸಹನೆಯನ್ನು ಇನ್ನಷ್ಟು ಬಲಗೊಳಿಸುತ್ತಿತ್ತು.

ದಾದಾ ಹಾಗೂ ಚಾಚೂವಿನ ಚೂಪು ನೋಟದಿಂದ ನಾನು ಸದಾ ದೂರವೇ.... ದಾದಿ ಹಾಗೂ ಬಾಪುವಿನದ್ದೂ ಅದೇ ತಿರಸ್ಕಾರದ ನೋಟವಾದರೂ ಅದ್ಯಾಕೋ ನಾನು ಅವರಿಬ್ಬರಿಗೂ ಹತ್ತಿರವಾಗಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಿದ್ದಂತೂ ಸುಳ್ಳಲ್ಲ. ಕುಲ್ದೀಪ್ ದಾದಿಯ ತೊಡೆಯೇರಿ ಕುಳಿತು ಅವರ ಗೂಂಗಟ್ ಎಳೆಯುವಾಗ, ಅವರು ಅವನನ್ನು ಮುದ್ದುಗರೆಯುವಾಗ, ಆ ದೊಡ್ಡ ಅಂಗಳದ ತುಂಬಾ ಓಡುವ ಅವನ ಬೆನ್ನತ್ತಿ ಅಕ್ಕರೆಯಲ್ಲಿ ತುತ್ತಿಡುವಾಗೆಲ್ಲಾ ನನ್ನನ್ನೂ ದಾದಿ ಹಾಗೇ ರಮಿಸಿ ಮುದ್ದಿಸಬೇಕೆಂಬ ಅದಮ್ಯ ಬಯಕೆ.... ಬಾಪೂ ಹೆಮ್ಮೆಯಿಂದ ಅವನನ್ನು ಹೆಗಲ ಮೇಲೇರಿಸಿಕೊಂಡು ಮೇಲಾ(ಜಾತ್ರೆ) ಸುತ್ತಾಡಿಸುವಾಗ, ಅವನನ್ನು ಬೆನ್ನ ಮೇಲೇರಿಸಿಕೊಂಡು ಘೋಡಾ ಸವಾರಿ ಮಾಡಿಸುವಾಗ ಅವನ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳುವ ಆಸೆ. ಹಠಹಿಡಿದು ದಾದಿಯ ಬೆನ್ನು ಬಿದ್ದಾಗೆಲ್ಲ, 'ಏ ಚೋರೀ, ಚಲ್ ದಫಾ ಹೋಜಾ, ಡಾಯನ್ ಕಹೀ ಕೀ' ಎಂಬರ್ಥದ ಬೈಗುಳಗಳೇ ದಕ್ಕಿದ್ದು. ಆಸೆಪಟ್ಟು ಬಾಪೂ ಬಳಿ ಸಾರಿದಾಗೆಲ್ಲ ನನಗೆ ದೊರಕಿದ್ದು ತಿರಸ್ಕಾರ ಹಾಗೂ ಬೈಗುಳಗಳು ಮಾತ್ರ. ಹಾಗೇ ಒಂದಷ್ಟು ಬಾರಿ ಥಪ್ಪಡ್, ಪಿಟಾಯಿ ಸೇವೆಗಳಾದ ನಂತರ ನಾನೇ ಅವರಿಬ್ಬರಿಂದಲೂ ದೂರ ನಿಲ್ಲತೊಡಗಿದೆ. 

ಜೊತೆಗೆ ಇನ್ನೊಂದು ಹೊಡೆತ ಬಿದ್ದಿದ್ದು  ಚೋಟಿಮಾಯಿಯ ಕಡೆಯಿಂದ. ಕುಲ್ದೀಪನ ಆಗಮನದ ನಂತರ ಸ್ವಲ್ಪ ಸ್ವಲ್ಪ ಬದಲಾಗಿದ್ದ ಚೋಟಿ ಮಾಯಿಯ ನಡವಳಿಕೆ ಕುಲ್ಜೀತ್ ಹುಟ್ಟಿದ ನಂತರ ಸಂಪೂರ್ಣವಾಗಿ ಬದಲಾಗಿತ್ತು. ಮುಂಚೆಲ್ಲಾ ಅಕ್ಕರೆ, ಮಮತೆ ತೋರುತ್ತಿದ್ದವಳು ನಿಧಾನವಾಗಿ ನನ್ನೆಡೆಗೊಂದು ಅಸಡ್ಡೆ, ಅನಾದರವನ್ನು ಬೆಳೆಸಿಕೊಳ್ಳತೊಡಗಿದ್ದಳು. ಮುಂಚೆ ಇದ್ದ ಮಮಕಾರ, ಅಂತಃಕರಣಗಳಿಗೆಲ್ಲಾ ತಿಲಾಂಜಲಿ ಇಟ್ಟು ನನ್ನ ಕಂಡೊಡನೆ ಹೀಯಾಳಿಸುವ, ಸಿಡಿಮಿಡಿಗುಟ್ಟುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಳಾಕೆ. ಇದಕ್ಕೆ ಕಾರಣ ಪ್ರಾಯಶಃ ಇಬ್ಬರು ಗಂಡುಮಕ್ಕಳು ಹುಟ್ಟಿದ ನಂತರ ಮನೆಯಲ್ಲಿ ಅವಳಿಗೆ ಸಿಕ್ಕ ಗೌರವ, ಅಧಿಕಾರಗಳಿರಬಹುದು. ಆದರೆ ಚಾಚಿಯನ್ನು ಬಿಟ್ಟರೆ ಅವಳನ್ನೇ ಕೊಂಚ ಹೆಚ್ಚೇ ಎನಿಸುವಷ್ಟು ಹಚ್ಚಿಕೊಂಡಿದ್ದ ನನಗೆ ಅವಳ ವರ್ತನೆ ತೀವ್ರತರನಾದ ಆಘಾತವನ್ನು ತಂದಿತ್ತು. ಈ ನಿರ್ಲಕ್ಷ್ಯ, ಅನಾದರ ಹೆಚ್ಚುತ್ತಾ ಹೋದಂತೆಲ್ಲಾ ನಾನು ಚೋಟಿ ಮಾಯಿಯಿಂದ ದೂರವಾಗುತ್ತಾ ಬಂದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಅಂತರಾಳವನ್ನು ಕದಡಿ ರಾಡಿಯಾಗಿಸಿ, ನನ್ನೊಳಗೆ ಅಚ್ಚಳಿಯದ ಭಯವೊಂದನ್ನು ಸೃಷ್ಟಿಸಿದ್ದು.......

ಚಾಚಿಯ ಹೆಣ್ಣು ಮಗುವಿನ ಕೊಲೆ.....

ಹೌದು ಕೊಲೆಯೇ ಅದು.....

ಚಾಚಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮರುಘಳಿಗೆಯೇ ಚಾಚೂ ಅದನ್ನು ಉಸಿರುಗಟ್ಟಿಸಿ ಕೊಂದಿದ್ದ.... ಮನೆಯ ಹಿಂಭಾಗದ ಕುರುಚಲು ಕಾಡಿನೊಳಗೆ ಒಂದು ಗುಂಡಿ ತೋಡಿ ಆ ನನ್ನ ತಂಗಿಯನ್ನು ಮಣ್ಣಾಗಿಸುವಾಗ

"ಲಾಲೀ ಲಡ್ಕೀ ತೂ ಜಾ..... 

ಔರ್ ಲಾಲಾ ಲಡ್ಕಾ ತು ಲೇ ಆ....." 

(ಓ ಹೆಣ್ಣೇ ನೀನು ವಾಪಾಸು ಹೋಗು.....

ಗಂಡು ಮಗನನ್ನು ವಾಪಾಸು ತಾ...)

ಎಂಬ ಮಂತ್ರ ಪಠಿಸಿ ಮಣ್ಣಾಗಿಸಿದ್ದರು.

ಚಾಚಿ ಮಗುವಿನ ಮುಖವನ್ನೂ ಕಾಣಲಿಲ್ಲ.... ಪ್ರಸವ ವೇದನೆಯಿಂದ ಸುಸ್ತಾಗಿ ಮಲಗಿದ್ದ ಅವಳಿಗೆ ಎಚ್ಚರವಾಗುವ ಸಮಯಕ್ಕೆ ಎಲ್ಲವೂ ಮುಗಿದಿತ್ತು. ಅವಳು ಮಗುವಿಗಾಗಿ ಅಕ್ಕಪಕ್ಕ ತಡಕಾಡಿ ಮೌನವಾಗಿ ಕಣ್ಣೀರು ಸುರಿಸಿದ್ದೇ ಬಂತು. ಅಂದಿನಿಂದ ಬಹಳ ದಿನಗಳವರೆಗೆ ಭಯದ ನೆರಳಿನಲ್ಲಿಯೇ ಇದ್ದೆ. ನನ್ನನ್ನು ಯಾವುದೋ ಕಾಣದ ಕೈಗಳು ಉಸಿರುಗಟ್ಟಿಸಿದಂತಹ ಕನಸು ಪದೇ ಪದೇ ಬೀಳುತ್ತಿತ್ತು. ಭಯದಲ್ಲಿ ಚಾಚಿಯನ್ನು ಅಪ್ಪಿ ಮಲಗುತ್ತಿದ್ದೆ. ನನ್ನ ಭಯ ಓಡಿಸಿ ಧೈರ್ಯ ನೀಡುವ ಚೇತನ ಅವಳಾದರೆ, ಮಗಳ ಕಳೆದುಕೊಂಡು ಬರಿದಾದ ಅವಳೊಡಲಿನ ಬೇಗೆಯ ಸಂತೈಸುವ ಕೈ ನಾನಾದೆ. ಆಕೆ ನನ್ನ ಹೆತ್ತ ತಾಯಿಯಲ್ಲ, ನಾನು ಅವಳ ಒಡಲಲ್ಲಿ ನವಮಾಸ ಇದ್ದ ಮಗಳಲ್ಲ ಎನ್ನುವುದೊಂದನ್ನು ಹೊರತುಪಡಿಸಿದರೇ ನಾವಿಬ್ಬರೂ ತಾಯಿ ಮಕ್ಕಳೇ.... ನಾನಾಕೆಯನ್ನು ಮಾಯಿ ಎಂದು ಕರೆಯುತ್ತಿದ್ದೆ. ಅವಳು ನನ್ನ ಬಿಟಿಯಾ ರಾನಿ ಎನ್ನುತ್ತಿದ್ದಳು.

ಈ ಎಲ್ಲಾ ಘಟನೆಗಳೂ ನನ್ನ ಬದುಕೆಂಬ ಯಜ್ಞದಲ್ಲಿ ಸಮಿದೆಗಳಾಗಿದ್ದವಾ ....? ಗೊತ್ತಿಲ್ಲ. ಆದರೆ ಒಂದಂತೂ ನನಗೆ ನಿಚ್ಚಳವಾಗಿತ್ತು. ನನ್ನ ಬದುಕಿನಲ್ಲಿ ನನಗೆಂದು ಇರುವುದು ಚಾಚಿ ಮಾತ್ರಾ.

ಹೌದು.... ಈ ಬರಡು ಬೆಂಗಾಡಿನಂತಹ ಬಾಳಿನಲ್ಲಿ ಓಯಸಿಸ್ ನಂತೆ ಇದ್ದದ್ದು ಚಾಚಿಯೊಬ್ಬಳೇ... ಮನೆಯ ತುಂಬಾ ಸದಸ್ಯರಿದ್ದರೂ ನನಗೆ ಮರೀಚಿಕೆಯಾಗಿದ್ದು ಪ್ರೀತಿ, ಮಮತೆ. ಆದರೆ ಅವರೆಲ್ಲರ ಪ್ರೀತಿಯನ್ನೂ ಸೇರಿಸಿ ಅಂಕೆಯಿಲ್ಲದ ಪ್ರೀತಿ, ಮಮತೆಯ ವರ್ಷಧಾರೆ ಹರಿಸಿ ನನ್ನನ್ನು ಸಲಹಿದವಳು ಚಾಚಿಯೇ. ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾದವಳು, ನೋವಿಗೆ ಮದ್ದಾದವಳು, ಅಳಲಿಗೆ ಕಿವಿಯಾದವಳು ಅವಳೇ.... 

ನನಗಿನ್ನೂ ನೆನಪಿದೆ. ಕುಲ್ದೀಪನ ನಾಮ್ಕರಣ್ ಬಹಳ ಸಂಭ್ರಮದಿಂದ ನಡೆದಿತ್ತು. ರಾಶಿ ರಾಶಿ ಜನರು ನೋಟುಗಳ ಮಾಲೆ ಮಾಡಿ ಅವನ ಕುತ್ತಿಗೆಗೇರಿಸಿದ್ದರು. ಆದರೆ ಅದೇ ಮನೆಯಲ್ಲಿದ್ದ ನನಗೆ ಒಂದು ಹೆಸರು ನೀಡುವ ಯೋಚನೆಯೂ ಯಾರಿಗೂ ಇರಲಿಲ್ಲ. ಎರಡು ವರ್ಷಗಳ ತನಕವೂ 'ಚೋರಿ ಆಜಾ ಇದರ್'(ಏ ಹುಡುಗಿ ಬಾ ಇಲ್ಲಿ), 'ಏ ಚೋಕ್ರಿ... ಜಾಡೂ ಪೋಛಾ  ಕರ್ನಾ'(ಏ ಹುಡುಗಿ ನೆಲ ಗುಡಿಸಿ ಒರೆಸು), 'ಅರೆ ಓ ಲಡ್ಕೀ ಬರ್ತನ್ ಧೋನಾ'(ಅರೇ ಹುಡುಗಿ, ಪಾತ್ರೆ ತೊಳೆ) ಹೀಗೇ ಮನಸ್ಸಿಗೆ ತೋಚಿದಂತೆ ಸಂಬೋಧಿಸುತ್ತಿದ್ದರು ನನ್ನನ್ನು. 

ಒಮ್ಮೆ ಕೇಳಿದ್ದೆ ಚಾಚಿಯಲ್ಲಿ... ಎಲ್ಲರೂ ನಿನ್ನನ್ನು ಕಜರೀ ಎಂದೇಕೆ ಕರೆಯುವರು ಎಂದು. ಅವಳಿಗೋ ಆಶ್ಚರ್ಯ. ಅದೇ ಅಚ್ಚರಿಯ ನೋಟದಲ್ಲಿ ಹೇಳಿದ್ದಳು... 

"ಕಜರೀ ಮ್ಹಾರಿ ನಾಮ್ ಹೆ ಬಿಟಿಯಾ ರಾನಿ...."   ಎಂದಿದ್ದಳಾಕೆ‌

"ಫಿರ್ ಮ್ಹಾರೇ ಕೋ ಕಾಹೆ ಸಬ್ ಚೋರಿ, ಚೋಕರಿ, ಲಡ್ಕೀ ಕಹ್ಕೇ ಬುಲಾವೇ...?" ನನ್ನ ಅನುಮಾನ ಹೇಳಿದೆ. ಆಗ ಅರಿವಾಗಿತ್ತು ಚಾಚಿಗೆ ಈ ಮಗಳಿಗೆ ಒಂದು ನಾಮಧೇಯವೇ ಇಲ್ಲವೆಂದು...... ಆ ದಿನವೆಲ್ಲಾ ಯೋಚಿಸಿ, ಚಿಂತಿಸಿ ಮರುದಿನ ವೇಳೆ, ಘಳಿಗೆ ನೋಡಿ ದೇವರ ಕೋಣೆಯಲ್ಲಿ ಭಗವಂತನಿಗೊಂದು ದೀಪ ಬೆಳಗಿ.....

"ಸೀತಾ ಮಯ್ಯಾ ಕೀ ಜೈಸೀ ಸೂರತ್, ತ್ಯಾಗ್ ಔರ್ ಸೆಹನ್ಶೀಲತಾ ಕೀ ಮೂರತ್..... ಮ್ಹಾರೀ ಬಿಟಿಯಾ ರಾನಿ....... ಸಿಯಾ ಬನೇಗೀ ಮಾಯಿ ಕೀ ತಾಕತ್..... ಸಿಯಾ ಸಿಯಾ ಸಿಯಾ....." ಎಂದು ನನ್ನ ಕಿವಿಯಲ್ಲಿ ಮೂರು ಬಾರಿ ಅರುಹಿದಳು.....

ಹೀಗೆ ನಡೆದಿತ್ತು ನನ್ನ ನಾಮಕರಣ......

ಮರುದಿನದಿಂದ ನನ್ನನ್ನು ಚೋರಿ, ಚೋಕರೀ, ಲಡ್ಕೀ ಅಂದವರಿಗೆಲ್ಲಾ ಹಮ್ಮಿನಿಂದ ಜೋರಿನಲ್ಲಿ ಹೇಳಿದ್ದೆ.....

"ಮ್ಹಾರೀ ನಾಮ್ ಸಿಯಾ ಹೇ.... ಐಸಾ ಹೀ ಬುಲಾನಾ...."

ನನ್ನ ಈ ವರಸೆ ಕಂಡು ಮನೆಯವರು ಒಂದು ಸಾರಿ ಬೆಚ್ಚಿದ್ದು ಸುಳ್ಳಲ್ಲ. ಆದರೆ ನನಗೊಂದು ಹೆಸರು ದೊರೆತ ಖುಷಿಯ ಮುಂದೆ ಅವರ ಪ್ರತಿಕ್ರಿಯೆಗಳೆಲ್ಲಾ ಗೌಣವೇ..... 'ಸಿಯಾ' ಎಂದೇ ಕರೆಯದ ಹೊರತು ತಿರುಗಿಯೂ ನೋಡುತ್ತಿರಲಿಲ್ಲ ನಾನು. ಹಾಗಾಗಿ ಅವರೆಲ್ಲರಿಗೂ ನನ್ನನ್ನು ಸಿಯಾ ಎಂದೇ ಕರೆಯುವುದು ಅನಿವಾರ್ಯವಾಯಿತು. ಇದರಿಂದ ನನಗೂ ಒಂದು ವಿಚಾರ ಸ್ಪಷ್ಟವಾಯಿತು. ಇಲ್ಲಿ ನನ್ನ ಇಚ್ಛಾನುಸಾರ ಜೀವಿಸಬೇಕೆಂದರೆ ನಾನು ಹೋರಾಡಲೇಬೇಕು.... ತಿರುಗಿಬಿದ್ದು ಹಠ ಹಿಡಿಯದೇ ಹೋದರೆ ಈ ಸಮಾಜ ನನ್ನನ್ನು ಪಾತಾಳಕ್ಕೆ ತಳ್ಳುತ್ತದೆ.... ಬಹುಶಃ ಆ ಕ್ಷಣದಿಂದಲೇ ನನ್ನೊಳಗೆ ಭಾಗೀ (ಬಂಡಾಯಗಾರ್ತಿ)ಯೊಬ್ಬಳು ಮೆಲ್ಲಗೆ ಕದಲಲಾರಂಭಿಸಿದ್ದಳು ಅನ್ನಿಸುತ್ತದೆ. ಹೇಗೂ ಭವಿಷ್ಯತ್ತಿನಲ್ಲಿ ನನ್ನ ಬದುಕಿನ ತುಂಬಾ ಬಂಡಾಯವೇ ಇತ್ತಲ್ಲ......

ಭಗವಂತನ ದಯೆಯಿಂದ ಕಾಯಿಲೆ ಕಸಾಲೆಗಳೆಂದೂ ನನ್ನನ್ನು ಕಾಡಲಿಲ್ಲ. ಆ ಮಟ್ಟಿಗಂತೂ ಗಟ್ಟಿಪಿಂಡವೇ ನಾನು‌. ಹಾಗಾಗಿ ಔಷಧಿ, ಆಸ್ಪತ್ರೆಗಳ ವಿಚಾರದಲ್ಲಿ ಮನೆಯವರೊಂದಿಗೆ ಕದನಕ್ಕೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಲಿಲ್ಲ.

ನನ್ನ ಮೊದಲ ಅಧಿಕೃತ ಹೋರಾಟಕ್ಕೆ ಕಾರಣವಾದದ್ದು ಓದು.......

ಮನೆಯೇ ಒಂದು ಪಂಜರವಾಗಿದ್ದ ನನಗೆ ಪಂಜರದಿಂದ ಹೊರಹಾರುವುದೇ ಬದುಕಿನ ಗಮ್ಯವೆನಿಸಿಬಿಟ್ಟಿತ್ತು. ಚಾಚಿ ನಾನು ತೊದಲು ನುಡಿಯಲು ಆರಂಭಿಸಿದಂದಿನಿಂದಲೇ ಮುಂದೆ ನಾನು ಎದುರಿಸಬೇಕಾದ ಸನ್ನಿವೇಶಗಳ ಬಗ್ಗೆ, ಬರಬಹುದಾದ ಅಡೆತಡೆಗಳ ಬಗ್ಗೆ ತನಗೆ ತಿಳಿದಂತೆ ಸೂಕ್ಷ್ಮವಾಗಿ ತಿಳಿಹೇಳುತ್ತಾ ಬಂದಿದ್ದಳು. ಹಾಗಾಗಿ ನಾನು ನನ್ನ ವಯಸ್ಸಿನ ಇತರೆ ಮಕ್ಕಳಿಗಿಂತ ಭಿನ್ನವಾಗಿ ಹಾಗೂ ಗಂಭೀರವಾಗಿ ಯೋಚಿಸತೊಡಗಿದ್ದೆ. ಆ ದಿನಗಳಲ್ಲೇ ಈ ಪಂಜರದಿಂದ ಹೊರಬಂದು ಹಾರಬೇಕೆಂದರೆ ನನ್ನ ಚಿಂತನೆಯ ರೆಕ್ಕೆಗಳು ಶಕ್ತಿಶಾಲಿಯಾಗಿರಬೇಕು ಎಂದು ಬಲವಾಗಿ ಅನಿಸತೊಡಗಿದ್ದು. ಚಿಂತನೆಗಳು ಪ್ರಭಾವಶಾಲಿಯಾಗಲು ಇದ್ದ ಒಂದೇ ದಾರಿ ಶಿಕ್ಷಣ.....

ಶಾಲೆಗೆ ಹೋಗುವ ಹಾಗೂ ಕಲಿಯುವ ಹಂಬಲ ಗಟ್ಟಿಯಾಗಿ ಬೇರೂರತೊಡಗಿತ್ತು.

ಆದರೆ...... 

ನನಗಿಂತ ಕಿರಿಯವನಾದ ಕುಲ್ದೀಪ್ ಶಾಲೆಗೆ ಹೋಗತೊಡಗಿದ್ದ. ಆದರೆ ನನ್ನನ್ನು ಶಾಲೆಗೆ ಕಳಿಸುವ ಪ್ರಸ್ತಾಪವೇ ಬರುತ್ತಿರಲಿಲ್ಲ. ನೋಡುವಷ್ಟು ನೋಡಿ ಚಾಚಿಯಲ್ಲಿ ನನ್ನ ಮನದಾಸೆ ಹೇಳಿದ್ದೆ. ನನ್ನ ಮಾತಿಗೆ ನಿಟ್ಟುಸಿರು ಬಿಟ್ಟಳು ಅವಳು....

"ಇದೆಂತಹಾ ಆಸೆ ಸಿಯಾ ಬಿಟಿಯಾ? ಇಲ್ಲಿ ಹೆಣ್ಣು ಮಕ್ಕಳಿಗೆ ಕಲಿಕೆ ವರ್ಜ್ಯ. ಅವರಿಗೆ ಮನೆಯ ಕೆಲಸ ಬೊಗಸೆಯ ಕಲಿಕೆ ಮಾತ್ರವೇ ಮುಖ್ಯ" ಎಂದಿದ್ದಳು. ನನಗೆ ಅವಳ ಮಾತುಗಳಿಂದ ವಿಪರೀತ ನಿರಾಸೆಯಾಯಿತು. ಇಷ್ಟಕ್ಕೂ ನನಗೆಂದು ಇದ್ದವಳು ಅವಳೊಬ್ಬಳೇ. ಅವಳೂ ನನ್ನ ಆಸೆಗೆ ತಣ್ಣೀರೆರಚುತ್ತಿರುವಳೆಂಬ ಬೇಸರ, ಸಿಟ್ಟು ಎಲ್ಲವೂ ಕಣ್ಣೀರ ರೂಪದಲ್ಲಿ ಹೊರಬಂದಿತ್ತು. ಅದೇನೆನಿಸಿತೋ ಚಾಚಿಗೆ.... ಆ ದಿನ ಸಂಜೆ ಮನೆಯವರೆಲ್ಲಾ ಹಜಾರದಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತುಕತೆಯಲ್ಲಿ ತೊಡಗಿದ್ದರು. ಪುಟಾಣಿ ಕುಲ್ಜೀತ್ ದಾದಿಯ ಮಡಿಲಲ್ಲಿ ಮಲಗಿದ್ದ. ಎರಡನೇ ಇಯತ್ತೆಯ ಕುಲ್ದೀಪ್ ಶಾಲಾ ಪುಸ್ತಕಗಳನ್ನು ಹಿಡಿದು ಸಪ್ಪೆ ಮೋರೆಯಲ್ಲಿ ಕುಳಿತ್ತಿದ್ದ. ಓದು, ಬರಹ ಎಳ್ಳಷ್ಟೂ ಹಿಡಿಸದ ಅವನಿಗೆ ಶಾಲೆಗೆ ಹೋಗುವ ಭಾಗ್ಯವಿತ್ತು. ಅದೇ ಅದಕ್ಕಾಗಿಯೇ ಕಾತರಿಸುತ್ತಿದ್ದ ನನಗೆ ಅಡುಗೆ ಮನೆಯೇ ಪಂಜರ...... ಎಂತಹ ವಿಪರ್ಯಾಸ.......

ಇಂತಹ ಸಂದರ್ಭದಲ್ಲಿ ಚಾಚಿ ನನ್ನ ಪರ ವಕಾಲತ್ತು ವಹಿಸಿ ನನ್ನನ್ನು ಶಾಲೆಗೆ ಕಳುಹಿಸುವ ಮಾತನಾಡಿದ್ದಳು. ಯಾರಾದರೂ ಬಾಯ್ತೆರುವ ಮೊದಲೇ ಚಾಚಾನ ಹಸ್ತದ ಅಚ್ಚು ಚಾಚಿಯ ಕೆನ್ನೆಯ ಮೇಲಿತ್ತು. 'ಒಂದು ಗಂಡು ಮಗುವನ್ನು ಹಡೆಯುವ ಯೋಗ್ಯತೆ ಇಲ್ಲ. ಇದರ ನಡುವೆ ಈ ಶನಿಯ ಉಸಾಬರಿ ಬೇರೆ' ಎಂದು ವಾಚಾಮಗೋಚರವಾಗಿ ಬೈಯತೊಡಗಿದ್ದ. ಅವನು ಮಾಡಿದ್ದು, ಹೇಳಿದ್ದು ಎಲ್ಲವೂ ಸರಿಯೇ ಎಂಬ ಭಾವ ಮನೆಯವರ ಮುಖದಲ್ಲಿದ್ದರೆ ಚಾಚುವಿನ ಜೋರುದನಿಗೆ ಕುಲ್ದೀಪ್ ಬೆಪ್ಪಾಗಿ ಕೂತಿದ್ದ ಹಾಗೂ ಮಲಗಿದ್ದ ಕುಲ್ಜೀತ್ ಗಾಬರಿಯಲ್ಲಿ ಅಳತೊಡಗಿದ್ದ. ಚೋಟಿ ಮಾಯಿ ಚಾಚಿಯೆಡೆಗೆ ತಿರಸ್ಕಾರದ ನೋಟವೊಂದನ್ನು ಬೀರಿ ಅಳುತ್ತಿದ್ದ ಕುಲ್ಜೀತನನ್ನು ಎತ್ತಿಕೊಂಡು ಒಳನಡೆದಿದ್ದಳು. ದಾದಿ, ದಾದ, ಬಾಪೂ ಕೂಡಾ ಚಾಚಿಯನ್ನು ನಿಂದಿಸತೊಡಗಿದ್ದರು. ನನಗೆ ಸಹಿಸಲಾಗಲಿಲ್ಲ.

ನಾನು ಓದಲೇ ಬೇಕೆಂದು, ಶಾಲೆಗೆ ಕಳಿಸದಿದ್ದರೆ ಉಪವಾಸ ಹಿಡಿದು ಸಾಯುವೆನೆಂದು ಚೀರಿ ಹೇಳಿದ್ದೆ.

"ಜಿತ್ನಾ ಜಲ್ದೀ ಹೋ ಸಕೇ ಉತ್ನಾ ಜಲ್ದೀ ಮರ್ ಜಾ ತೂ... ಇತ್ತೂ ಸೀ ಚೋಕರಿ ತೇರಿ ಜಬಾನ್ ಕಿತ್ನಾ ಲಂಬಾ ಚಲಾವತ್ ಹೇ ರೇ...? ಭಾಗೀ ಕಯ್ಕೀ..." (ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಯಿ. ಇಷ್ಟುದ್ದದ ಹುಡುಗಿ, ನಿನ್ನ ನಾಲಿಗೆ ಅದೆಷ್ಟು ಉದ್ದವಾಗಿದೆ?) ಎಂದು ಎರಡೇಟು ಹಾಕಿದ್ದಳು ದಾದಿ...

ನನ್ನನ್ನು ತಪ್ಪಿಸಲು ಹೋಗಿ ಚಾಚಿಗೆ ಸರಿಯಾಗಿಯೇ ಹೊಡೆತಗಳು ಬಿದ್ದಿದ್ದವು. ಜೊತೆಗೆ ಅಶ್ಲೀಲ ಮಾತಿನ ಪ್ರಹಾರಗಳೂ ಸೇರಿ ನಾವಿಬ್ಬರೂ ಜರ್ಜರಿತವಾಗಿದ್ದೆವು. ಎಲ್ಲರೆಡೆಗೆ ರೋಷ ಉಕ್ಕಿತ್ತು. ಚಾಚಿಯನ್ನು ಕರೆದುಕೊಂಡು ಒಳ ನಡೆದಿದ್ದ ನನ್ನ ಮನಸ್ಸು ಕಠೋರವಾಗತೊಡಗಿತ್ತು. ನಾನು ಉಪವಾಸವಿದ್ದು ಸತ್ತರೆ ನನಗೆ ನಷ್ಟವೇ ಹೊರತು ಬೇರೇನೂ ಬದಲಾಗದು, ನನ್ನ ಬದುಕಿಗಾಗಿ ನಾನೇ ಬಂಡೇಳಬೇಕು ಎಂಬ ನಿರ್ಧಾರ ಬಲವಾಗತೊಡಗಿತ್ತು. ದಾದಿ ಹೇಳಿದಂತೆ ಭಾಗಿ(ಬಂಡಾಯಗಾರ್ತಿ) ಯಾಗಬೇಕು ನಾನು. ನನ್ನ ಹಕ್ಕಿಗೆ ನಾನೇ ಹೋರಾಡಬೇಕು. ಆದರೆ ಹೋರಾಟದ ವಿಧಾನ ಜಾಣ್ಮೆಯಿಂದ ಕೂಡಿರಬೇಕು. ಕೋಪದಿಂದ ಕೂಗಾಡಿ, ಚೀರಾಡುವುದು ವ್ಯರ್ಥ. ಇದಕ್ಕೆ ಬೇರೆಯೇ ಮಾರ್ಗ ಹುಡುಕಬೇಕೆಂದು ತೀರ್ಮಾನಿಸಿದೆ. ಒಂದಿಷ್ಟು ದಿನ ಯೋಚಿಸಿ ಮಾರ್ಗವೊಂದನ್ನು ಕಂಡುಕೊಂಡೆ. 

ನಮ್ಮೂರ ಶಾಲೆ ಮನೆಯಿಂದ ಮೂರು ಮೈಲಿಗಳ ದೂರದಲ್ಲಿತ್ತು. ನಮ್ಮ ಜಮೀನು ದಾಟಿ, ಮುಂದಿದ್ದ ಸಣ್ಣ ಬೆಟ್ಟದಂತಹ ಹುಲ್ಲುಗಾವಲಿನ ಅಂಚಿಗೆ ಶಾಲೆಯ ಆವರಣ ಕಾಣಿಸುತ್ತದೆ. ಆ ಹುಲ್ಲುಗಾವಲಿನ ಜಮೀನೂ ದಾದೂವಿನದ್ದೇ. ನಾವು ಜಾನುವಾರಿಗೆ ಹುಲ್ಲನ್ನು ಒಟ್ಟುಮಾಡಲು ಅಲ್ಲಿಗೇ ಬರುತ್ತಿದ್ದೆವು. ಜೊತೆಗೆ ಸಣ್ಣ ಮರಗಳಿಂದ ಒಣ ಲಕಡಿಗಳನ್ನೂ ಉರುವಲಿಗಾಗಿ ಸಂಗ್ರಹಿಸುತ್ತಿದ್ದೆವು. 

ನಾನು ಬೆಳಿಗ್ಗೆ ಬೇಗನೆ ಎದ್ದು ನನ್ನ ಪಾಲಿನ ಕೆಲಸಗಳನ್ನೆಲ್ಲಾ ಮುಗಿಸಿ, ಚಾಚಿಗೆ ಅಡುಗೆ ಮನೆಯ ಕೆಲಸದಲ್ಲಿ ಸ್ವಲ್ಪ ಕೈ ಜೋಡಿಸಿ ಹತ್ತರ ಸುಮಾರಿಗೆ ಹುಲ್ಲಿಗೆಂದು ಹೋಗಲಾರಂಭಿಸಿದೆ. ಹಾಗೆ ಹೋಗುವವಳು ಹುಲ್ಲುಗಾವಲಿನ ಬೇಲಿ ದಾಟಿ ಶಾಲೆಯ ಹಿಂಭಾಗಕ್ಕೆ ಹೋಗಿ ಯಾವುದೋ ತರಗತಿಯ ಕಿಟಕಿಯ ಬಳಿ ಕುಳಿತು ಮಾಸ್ಟರ್ ಹೇಳುತ್ತಿದ್ದುದ್ದನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ಮಧ್ಯಾಹ್ನದ ಹೊತ್ತಿಗೆ ಒಂದಿಷ್ಟು ಹುಲ್ಲು ಕೊಯ್ದು ಜೋಡಿಸಿ ಮನೆಗೆ ವಾಪಾಸಾಗುತ್ತಿದ್ದೆ.

ಆದರೆ ಮಧ್ಯಾಹ್ನದ ತರುವಾಯ ಶಾಲೆಗೆ ಹೋಗಲಾಗುತ್ತಿರಲಿಲ್ಲ ನನಗೆ. ಜೊತೆಗೆ ದಿನಕ್ಕೊಂದು ತರಗತಿ, ಬೇರೆ ಬೇರೆ ಪಾಠ ಏನೊಂದೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ.... ಹೀಗೆ ನಡೆದಿತ್ತು.

ಅದೊಂದು ದಿನ ಸಂಜೆ ಕೊಟ್ಟಿಗೆಯಲ್ಲಿ ಹಸುಗಳಿಗೆ ಹುಲ್ಲು ಹಾಕುತ್ತಿದ್ದಾಗ ಕುಲ್ದೀಪ್ ಅಲ್ಲಿಗೆ ಬಂದು, 

"ನೀನು ದಿನಾ ಹುಲ್ಲಿಗೆ ಹೋಗುವೆನೆಂದು ಹೇಳಿ ಶಾಲೆಯ ಪಾಠ ಕೇಳೋದು ನನಗೆ ಗೊತ್ತು ಸಿಯಾ ದೀ..." ಎಂದುಬಿಟ್ಟಿದ್ದ. ಇದರ ನಿರೀಕ್ಷೆಯೇ ಇಲ್ಲದ ನಾನು ಏನು ಉತ್ತರಿಸಬೇಕೆಂದು ತಿಳಿಯದೇ ಕಂಗಾಲಾಗಿದ್ದೆ. ನಾನು ಮಾತನಾಡುವ ಮುನ್ನವೇ ಅವನೇ ಹೇಳಿದ್ದ.

"ಸಿಯಾ ದೀ... ನಾನು ಯಾರ ಹತ್ತಿರವೂ ಹೇಳುವುದಿಲ್ಲ. ಚಿಂತಿಸಬೇಡ. ಆದರೆ ನೀನು ನನಗೊಂದು ಸಹಾಯ ಮಾಡಬೇಕು. ನನಗೆ ಶಾಲೆಗೆ ಹೋಗುವುದೇ ಇಷ್ಟವಿಲ್ಲ. ನನ್ನ ತರಗತಿಯ ಹಿಂದೆ ಕುಳಿತು ನೀನು ದಿನಾ ಪಾಠ ಕೇಳು. ಮತ್ತೆ ಅವರು ಒಂದು ರಾಶಿ ಬರವಣಿಗೆಯನ್ನು ಮನೆಗೆಲಸವೆಂದು ಕೊಡುತ್ತಾರೆ. ನೀನು ನನಗೆ ಅದನ್ನೆಲ್ಲಾ ಬರೆದುಕೊಡು. ನಿನಗೆ ಇಷ್ಟವಾದದ್ದು ತಾನೇ ಓದುವುದು, ಬರೆಯುವುದು....." 

ಹೀಗೊಂದು ಕರಾರು ತಂದಿದ್ದ ಕುಲ್ದೀಪ್ ಮೇಲೆ ಪ್ರಪ್ರಥಮ ಬಾರಿಗೆ ಅತಿಯಾದ ಪ್ರೀತಿಯುಕ್ಕಿತ್ತು. ತಮ್ಮನಾದರೂ ನನ್ನ, ಅವನ ಒಡನಾಟ ಕಡಿಮೆಯೇ. ಅವನೊಂದಿಗೆ ಆಟವಾಡಲು ಬಿಡುತ್ತಿರಲಿಲ್ಲ ನನಗೆ. ಹಾಗಾಗಿ ನಾವಿಬ್ಬರೂ ದೂರದೂರವೇ. ಇಂದ್ಯಾಕೋ ಅವನು ಅತೀವ ಪ್ರಿಯ ತಮ್ಮನೆನಿಸಿಬಿಟ್ಟ. ಸಂತೋಷದಿಂದಲೇ ಅವನ ಮಾತಿಗೆ ಒಪ್ಪಿದ್ದೆ.

ಅಲ್ಲಿಂದ ಆರಂಭವಾಗಿತ್ತು ನನ್ನ ಕಲಿಕೆಯ ಪರ್ವ. ಹಗಲು ಸಾಧ್ಯವಾದಷ್ಟು ಹೊತ್ತು ಕುಲ್ದೀಪನ ತರಗತಿಯ ಹಿಂದೆ ಕುಳಿತು ಪಾಠ ಕೇಳಿಸಿಕೊಳ್ಳುತ್ತಿದ್ದೆ. ರಾತ್ರಿ ಎಲ್ಲರೂ ಪಡಸಾಲೆಯಲ್ಲಿ ಕುಳಿತು ಹರಟೆ ಹೊಡೆಯುವಾಗ ಕುಲ್ದೀಪನ ಮನೆಕೆಲಸಗಳನ್ನು ಮುಗಿಸುತ್ತಿದ್ದೆ. ಇದು ಚಾಚಿಯೊಬ್ಬಳಿಗೆ ತಿಳಿದಿತ್ತು. ಅವಳು ಖುಷಿ ಪಟ್ಟಿದ್ದಳು ಕೂಡಾ...... ಗಣಿತ ಕೊಂಚ ಕಠಿಣವೆನಿಸುತ್ತಿದ್ದದ್ದು ಬಿಟ್ಟರೆ ಉಳಿದವು ಸುಲಭವೆನಿಸಿತ್ತು. ಮನೆಯವರೆಲ್ಲಾ ಹಗಲಿಡೀ ಮನೆಯಿಂದ ಹೊರಗೆ ಬೀಡಾಡಿಯಂತೆ ತಿರುಗುತ್ತೀಯಾ ಎಂದು ಬೈದು, ದಬಾಯಿಸುತ್ತಿದ್ದರು. ನಾನು ಯಾವುದಕ್ಕೂ ಜಗ್ಗಲಿಲ್ಲ ಹಾಗೂ ಬಗ್ಗಲಿಲ್ಲ. ಎಲ್ಲಾ ತಂತ್ರಗಳನ್ನು ಪ್ರಯೋಗಿಸಿಯೂ ನನ್ನನ್ನು ನಿಯಂತ್ರಣದಲ್ಲಿ ಇಡಲಾಗದಾದಾಗ 'ಗಂಡುಬೀರಿ, ಭಾಗೀ....' ಎಂಬಿತ್ಯಾದಿ ಬಿರುದುಗಳೊಂದಿಗೆ ನನ್ನನ್ನು ಬಿಂಬಿಸಿ ಕೈ ಬಿಟ್ಟರು.... ನಾನು ತಲೆಕೆಡಿಸಿಕೊಳ್ಳಲೇ ಇಲ್ಲ. ಅಂತಹ ಅಗತ್ಯವೂ ನನಗೆ ಕಾಣಲಿಲ್ಲ.

ಕುಲ್ದೀಪ್ ನಾಲ್ಕನೇ ಈಯತ್ತೆಯಲ್ಲಿದ್ದಾಗ ನಮ್ಮಿಬ್ಬರ ಈ ಕರಾರು ಮನೆಯವರಿಗೆ ತಿಳಿದುಬಿಟ್ಟಿತ್ತು. ಮೊದಲು ಒಂದಿಷ್ಟು ಬೈದು, ಹೊಡೆದರಾದರೂ ಕುಲ್ದೀಪ್ ತನಗೆ ಬರೆಯಲು ಇಷ್ಟವಿಲ್ಲ, ಕೈ ನೋಯುವುದು ಎಂದೆಲ್ಲಾ ಅತ್ತೂ ಕರೆದು ಸಮಜಾಯಿಷಿ ನೀಡಿ, 'ತಾನು ತರಗತಿಗಳಿಗೆ ಹೋಗುವೆ, ಸಿಯಾ ದೀ ಮನೆಕೆಲಸ ಬರೆದು ಕೊಡಲಿ' ಎಂದು ಮನೆಯವರನ್ನು ಒಪ್ಪಿಸಿದ. ಮನೆಯ ಗಂಡು  ಮಗ ನೋವಿನಿಂದ ಕಣ್ಣೀರು ಹಾಕುವುದು ಮನೆಗೆ ಶ್ರೇಯಸ್ಸಲ್ಲವೆಂದು ಅವನು ಹೇಳಿದ್ದಕ್ಕೆಲ್ಲಾ ಮನೆಯವರು ಒಪ್ಪಿದರು. ಕುಲ್ಜೀತನ ಬರವಣಿಗೆಯ ಕೆಲಸಗಳನ್ನೂ ನನಗೇ ಒಪ್ಪಿಸಿದರಾದರೂ ಅವನು ಸುತಾರಾಂ ಒಪ್ಪಲಿಲ್ಲ. ಕುಲ್ದೀಪನಂತಲ್ಲ ಅವನು. ಅವನಿಗೆ ಓದು, ಬರಹದಲ್ಲಿ ಆಸಕ್ತಿಯಿತ್ತು. ಹಾಗಾಗಿ ತನ್ನ ಕೆಲಸ ತಾನೇ ಮಾಡಿಕೊಳ್ಳುವೆನೆಂದ.

ಹೀಗೆ ನನ್ನ ಓದು, ಬರವಣಿಗೆ ಎಲ್ಲರ ಅನುಮತಿಯಿಂದ ಸಾಗಿತ್ತು. ಹೇಗೋ ಒಂದು ವಿಧದಲ್ಲಿ ದೇವರು ನನ್ನ ಆಸೆಗೆ ಮಾರ್ಗ ತೋರಿದ್ದ. ಕುಲ್ದೀಪನ ಎಲ್ಲಾ ಶಾಲಾ ಸಂಬಂಧಿತ ಚಟುವಟಿಕೆಗಳನ್ನು ನಾನೇ ಮಾಡುತ್ತಿದ್ದೆ. ಜೊತೆಗೆ ಕುಲ್ಜೀತ್ ಕೂಡಾ ತನಗೆ ಅರ್ಥವಾಗದ ವಿಚಾರಗಳನ್ನು ನನ್ನ ಬಳಿ ಕೇಳುತ್ತಿದ್ದ. ಜೊತೆಗೆ ನನಗೆ ತಿಳಿಯದ ಗಣಿತದ ಸಮಸ್ಯೆಗಳನ್ನು ಹೇಳಿಕೊಡುತ್ತಿದ್ದ ಕೂಡಾ. ಹೀಗೆ ನಮ್ಮ ಮೂವರ ನಡುವೆ ಮನೆಯವರು ಬಯಸದ ಬಂಧವೊಂದು ಏರ್ಪಟ್ಟಿತ್ತು. ಅದರಲ್ಲೂ ಕುಲ್ಜೀತ್ ನನಗೆ ಅತ್ಯಂತ ಆಪ್ತನಾದ. ಕುಲ್ದೀಪ್ ಕೊಂಚ ಒರಟನಾದರೆ ಕುಲ್ಜೀತ್ ಮೃದು ಭಾವದವನು. ನನ್ನ ಸಮಸ್ಯೆಗಳನ್ನು, ನೋವುಗಳನ್ನು ಅರ್ಥೈಸಿಕೊಳ್ಳುವ ಹೆಂಗರುಳಿತ್ತು ಅವನಿಗೆ. ತನಗೆ ತಿಳಿದಂತೆ ಸಾಂತ್ವನಿಸುತ್ತಿದ್ದ, ಪ್ರೋತ್ಸಾಹಿಸುತ್ತಿದ್ದ. ಇದು ಮನೆಯವರಿಗೆ ಸಹಿಸಲಾರದ ವಿಚಾರವಾಗಿತ್ತು. ಈ ವಿಚಾರಕ್ಕೆ ಆಗಾಗ ನನಗೆ ಬೈಗುಳ, ಹೊಡೆತಗಳು, ಮಕ್ಕಳನ್ನು ಹಾಳುಗೆಡವುತ್ತಿರುವೆನೆಂಬ ಶಾಪಗಳು ಸಾಮಾನ್ಯವಾಗಿತ್ತು. ಆದರೆ ಇವೆಲ್ಲಾ ಅಭ್ಯಾಸವಾಗಿದ್ದ ನನಗೆ ಏನೂ ಅನ್ನಿಸುತ್ತಲೇ ಇರಲಿಲ್ಲ. ಗಟ್ಟಿ ಚಮ್ಮಡಿಯವಳಾಗಿ ಬದಲಾಗಿ ಹಲವು ವರ್ಷಗಳೇ ಆಗಿತ್ತು. ಹೀಗೆ ಸಾಗಿತ್ತು ನಮ್ಮ ಬದುಕು......

ಹೇಗೋ ಎಲ್ಲವನ್ನೂ ಸಂಭಾಳಿಸಿಕೊಂಡು ಧೈರ್ಯದಿಂದ ಪಂಜರದ ಹೊರಗೆ ಹಾರುವುದೇ ಧ್ಯೇಯವೆಂದುಕೊಂಡು  ಮುನ್ನಡೆಯುತ್ತಿದ್ದ ನನ್ನ ರೆಕ್ಕೆಗಳನ್ನು ಘಾಸಿಗೊಳಿಸಿ, ಆತ್ಮವಿಶ್ವಾಸವನ್ನು ಪಾತಾಳಕ್ಕೆ ನೂಕಿದ್ದು ಚಾಚಿಯ ಸಾವು.

ನನಗೆ ಹದಿನೈದು ವರ್ಷಳಾಗಿದ್ದಾಗ ಹಲವು ವರ್ಷಗಳ ಬಳಿಕ ಮತ್ತೆ ಗರ್ಭಿಣಿಯಾಗಿದ್ದಳು ಚಾಚಿ. ಈ ವರ್ಷಗಳಲ್ಲಿ ಚಾಚಾನೂ ಬಾಪೂವಿನಂತೆ ಇನ್ನೊಬ್ಬ ಹೆಣ್ಣನ್ನು ಮದುವೆಯಾಗಲು ಪ್ರಯತ್ನಿಸಿದ್ದನಾದರೂ ಹೆಣ್ಣುಗಳ ಕೊರತೆ ತೀವ್ರವಾಗಿ, ಅವನಿಗೆ ವಧು ಸಿಕ್ಕಿರಲಿಲ್ಲ. ಈಗ ಚಾಚಿ ಮತ್ತೆ ಗರ್ಭಿಣಿಯಾಗಿದ್ದು ಅವನ ಗಂಡು ಮಗುವಿನ ಕನಸಿಗೆ ರೆಕ್ಕೆ ಮೂಡಿದಂತಾಗಿತ್ತು. ಆದರೆ ಈ ವಿಚಾರ ನನಗೆ ದಿಗಿಲು ತಂದಿತ್ತು. ಒಂದು ವೇಳೆ ಗಂಡು ಮಗು ಜನಿಸಿದರೆ ಚಾಚಿಯೂ ಚೋಟಿಮಾಯಿಯಂತೆ ನನ್ನನ್ನು ದೂರ ತಳ್ಳುತ್ತಾಳೆ ಎಂಬ ಭಯವೇ ಹಿರಿದಾಗಿತ್ತು ನನಗೆ.

ಆ ಕಾಲಕ್ಕಾಗಲೇ ಆಕ್ರಮಣಶೀಲವಲ್ಲದ ತಂತ್ರಜ್ಞಾನಗಳು(non invasive techniques) ಅಭಿವೃದ್ಧಿಗೊಂಡಿದ್ದವು. ಮುಜ್ಜಫರ್ ನಗರದಲ್ಲೇ ಶ್ರವಣಾತೀತ ಧ್ವನಿತರಂಗ(ultrasonography) ತಂತ್ರಜ್ಞಾನ ಹೊಂದಿದ ಕೆಲವು ದವಾಖಾನೆಗಳು ತಲೆಯೆತ್ತಿದ್ದವು. ಜೊತೆಗೆ ಶಾಮ್ಲಿ ವಲಯವೂ ದೊಡ್ಡ ನಗರವಾಗಿ ಬೆಳೆಯುವತ್ತ ಹೆಜ್ಜೆ ಇಟ್ಟಿತ್ತು. ನಗರೀಕರಣದೊಂದಿಗೆ ಮುಜ್ಜಫರ್ ನಗರದಲ್ಲಿ ಲಭ್ಯವಿದ್ದ ಸವಲತ್ತುಗಳು ನಿಧಾನವಾಗಿ ಶಾಮ್ಲಿಯ ಹಳ್ಳಿಗಳಿಗೂ ವಿಸ್ತರಿಸತೊಡಗಿತ್ತು. ಮುಜ್ಜಫರ್ ನಗರದಿಂದ ವಾರದಲ್ಲಿ ಎರಡು ದಿನ ಸಂಚಾರಿ ದವಾಖಾನೆಗಳು(mobile clinic) ಶಾಮ್ಲಿಯ ಹಳ್ಳಿಗಳಿಗೂ ಬರುತ್ತಿದ್ದವು. ಈ ಸಂಚಾರಿ ದವಾಖಾನೆಗಳು ಶ್ರವಣಾತೀತ ಧ್ವನಿತರಂಗ ಪರೀಕ್ಷೆಯ ಮೂಲಕ ಭ್ರೂಣ ಲಿಂಗಪತ್ತೆ ಸೌಲಭ್ಯವನ್ನು ಹಳ್ಳಿಹಳ್ಳಿಗಳಿಗೂ ಒದಗಿಸಲು ಶುರುವಿಟ್ಟಿದ್ದವು. ಹಾಗಾಗಿ ಹೆಣ್ಣು ಶಿಶು ಹತ್ಯೆ ಹೆಣ್ಣು ಭ್ರೂಣ ಹತ್ಯೆಯಾಗಿ ಬದಲಾಗತೊಡಗಿತ್ತು. ಈಗ ಹೆಣ್ಣು ಮಗುವಿಗೆ ನವಮಾಸಗಳು ತಾಯಿಯ ಉದರದಲ್ಲಿರುವ ಭಾಗ್ಯವೂ ಇರಲಿಲ್ಲ. ಭ್ರೂಣ ಹೆಣ್ಣೆಂದು ತಿಳಿದೊಡನೆ ಗರ್ಭಪಾತ ಮಾಡಿಸಿಬಿಡುತ್ತಿದ್ದರು. ಅದೇ ಗಂಡು ಮಗುವಿನ ಭ್ರೂಣ ಕಂಡುಬಂದರೆ, 'ಗುಲಾಬ್ ಕಾ ಫೂಲ್'(a rose is blooming) , 'ತಾಲೀ ಬಜಾವೋ' (celebrate) ಎಂಬ ಸಂಕೇತಗಳ ವಿನಿಮಯವಾಗುತ್ತಿತ್ತು.

ಈ ಬಾರಿ ಚಾಚಿ ಗರ್ಭಿಣಿಯಾಗಿದ್ದಾಗ ಅಂತಹುದೇ ಸಂಚಾರಿ ದವಾಖಾನೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿಸಿದ್ದರು ದಾದಾ, ದಾದಿ ಹಾಗೂ ಚಾಚೂ. ಪರೀಕ್ಷೆಯ ಫಲಿತಾಂಶ ಮತ್ತೆ ನಕಾರಾತ್ಮಕವಾಗಿತ್ತು. ಕೂಡಲೇ ಗರ್ಭಪಾತ ಮಾಡಿಸಿ ಮನೆಗೆ ಕರೆತಂದಿದ್ದರು. ಅದೇನಾಯಿತೋ ಚಾಚಿಗೆ ವಿಪರೀತ ರಕ್ತಸ್ರಾವವಾಗತೊಡಗಿತು. ಮೊದಲ ಹಾಗೂ ಕೊನೆಯ ಬಾರಿಗೆ ಆ ರಾತ್ರಿ ಮನೆಯವರನ್ನೆಲ್ಲಾ ಗೋಗರೆದಿದ್ದೆ ಅವಳನ್ನು ಆಸ್ಪತ್ರೆಗೆ ಸೇರಿಸಲು. ಒಂದಿನಿತೂ ಕರುಣೆಯಿಲ್ಲದೇ ಎಲ್ಲರೂ ತಮ್ಮ ತಮ್ಮ ಕೋಣೆ ಸೇರಿ ಪವಡಿಸಿದ್ದರು. ನಾನು, ಕುಲ್ದೀಪ್ ಹಾಗೂ ಕುಲ್ಜೀತ್ ಮಾತ್ರ ಇಡೀ ರಾತ್ರಿ ಚಾಚಿಯ ಪಕ್ಕ ಎಚ್ಚರವಾಗಿ ಕುಳಿತು ಕಣ್ಣೀರು ಸುರಿಸಿದ್ದೆವು. ಮರುದಿನಕ್ಕೂ ರಕ್ತಸ್ರಾವ ನಿಲ್ಲಲಿಲ್ಲ. ಚಾಚಿಯ ನರಳುವಿಕೆ ಕ್ಷೀಣವಾಗತೊಡಗಿತು. ತೀವ್ರ ನಿತ್ರಾಣಳಾದ ಚಾಚಿ ಪ್ರಜ್ಞಾಶೂನ್ಯಳಾದವಳು ಮತ್ತೆಂದೂ ಕಣ್ಣು ತೆರೆಯಲೇ ಇಲ್ಲ.

ಮಾಯಿ ಸತ್ತಾಗ ನಾನು ಅನಾಥಳಾಗಿದ್ದೆನೋ ಇಲ್ಲವೋ ಇಂದು ಮಾತ್ರ ನಾನು ಅಕ್ಷರಶಃ ಅನಾಥಳಾಗಿದ್ದೆ......

ನನ್ನ ಚಾಚಿ...... 

ನನಗಾಗಿ ಬದುಕಿದವಳು, ಎಲ್ಲರ ಪ್ರೀತಿ, ಮಮತೆಯನ್ನು ತುಂಬಿ ಕೊಟ್ಟವಳು, ನನಗಾಗಿ ಹೊಡೆತ ತಿಂದವಳು, ನನ್ನ ಹಕ್ಕುಗಳಿಗಾಗಿ ಪ್ರಶ್ನಿಸಿದವಳು, ನನ್ನ ಏಳಿಗೆ ಕಂಡು ಸಂತಸಪಟ್ಟವಳು, ನನ್ನ ನೋವುಗಳಿಗೆ ಸಾಂತ್ವನವಾದವಳು, ನನ್ನ ಬದುಕಿನ ಗಮ್ಯ ತೋರಿದವಳು, ನನ್ನನ್ನು ಗಟ್ಟಿಗೊಳಿಸಿದವಳು, ನನ್ನೊಂದಿಗೆ ನಕ್ಕವಳು, ನನಗಾಗಿ ಅತ್ತವಳು......... ಇನ್ನೆಂದೂ ಇಲ್ಲದಂತೆ ನನ್ನನ್ನು ಶಾಶ್ವತವಾಗಿ ತೊರೆದಿದ್ದಳು.

ಇರುವಷ್ಟು ಜನ್ಮಗಳು ಅವಳ ಪಾದಗಳಡಿಗೆ ಧೂಳಾದರೂ ಅವಳ ಋಣ ತೀರಿಸಲು ನನ್ನಿಂದಾಗದು....... 

ಮನದ ತುಂಬಾ ಬಿರುಗಾಳಿಯೇ ಎದ್ದಿತ್ತು. ಆದರೆ ಅದ್ಯಾಕೋ ಮನದಲ್ಲೇ ಸತ್ತ ಭಾವಗಳಿಗೆ ಕಣ್ಣ ಹನಿಗಳ ಮುಕ್ತಿ ದೊರೆಯಲೇ ಇಲ್ಲ.......

ನಾ ಅಳಲಿಲ್ಲ...... ಹೆಸರಿಗೊಂದು ಕಣ್ಣ ಹನಿಯೂ ಕಣ್ಣಂಚಿನಿಂದ ಜಾರಲೇ ಇಲ್ಲ.......

ಮನೆಯ ತುಂಬಾ ಜನ ಸೇರಿದ್ದರು. ಬದುಕಿದ್ದಾಗ ಚಾಚಿಯ ನೋವಿಗೆ ಕುರುಡರಾದವರು ಅವಳು ಸತ್ತ ನಂತರ ಕಂಬನಿ ಹರಿಸಲು ಬಂದಿದ್ದರು.

ಕಣ್ಣೆದುರು ಚಾಚೂ ಹಣೆಹಣೆ ಬಡಿದುಕೊಂಡು ಅಳುತ್ತಿದ್ದ...... ಅಲ್ಲಾ...... ಅಳುವ ನಟನೆ ಮಾಡುತ್ತಿದ್ದ.

ಅದೆಲ್ಲಿತ್ತೋ ಸಿಟ್ಟು.......

ಬಾಗಿಲ ಮೂಲೆಯಲ್ಲಿದ್ದ ದಾದಿಯ ಊರುಗೋಲು ಕಣ್ಣಿಗೆ ಬಿದ್ದಿತ್ತು. ಸೀದಾ ಹೋಗಿ ಅದನ್ನು ತೆಗೆದುಕೊಂಡು ಬಂದವಳೇ ಅಕ್ಕಪಕ್ಕ ಹಿಂದೆಮುಂದೆ ನೋಡದೇ ಚಾಚೂವಿಗೆ ಬಾರಿಸತೊಡಗಿದ್ದೆ.

ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಿಯಾಗಿದ್ದರು. ಇದು ಅವರಿಗೆ ಅನಿರೀಕ್ಷಿತ...... ಇಂತಹದ್ದೊಂದು ಘಟನೆ ಇಡೀ ಶಾಮ್ಲಿಯ ಇತಿಹಾಸದಲ್ಲೇ ನಡೆದಿರಲಿಲ್ಲ. 

ಒಂದಿಷ್ಟು ಜನ ಬಂದು ನನ್ನ ಹಿಡಿದು, ಎಳೆದಿದ್ದರಿಂದ ಚಾಚಾನ ಜೀವ ಉಳಿದಿತ್ತು. ಇಲ್ಲವಾದರೇ ಆತನ ತಲೆ ಒಡೆಯುವುದು ಖಚಿತವಿತ್ತು......

ಯಾರ ಮುಖ ನೋಡುವುದೂ ಸಹ್ಯವೆನಿಸದೇ ಕೋಣೆಗೆ ನಡೆದು ಕದವಿಕ್ಕಿಕೊಂಡಿದ್ದೆ. ಮನೆ, ಮನಸ್ಸು ನನ್ನ ಜಗತ್ತು ಎಲ್ಲವೂ ಖಾಲಿಯಾಗಿತ್ತು.

ನಂತರದ ದಿನದಲ್ಲಿ ನಾನು ವಿಪರೀತ ಮೌನಿಯಾದೆ.... ನನ್ನ ವರ್ತನೆ ಎಲ್ಲರಿಗೂ ಸಂಕೀರ್ಣ ಎನಿಸುವಷ್ಟು ಏಕಾಂಗಿಯಾದೆ. ತಪ್ಪು ಎನಿಸಿದ್ದನ್ನು ಎಲ್ಲರೆದರೂ ನೇರಾನೇರ ವಿರೋಧಿಸುವಷ್ಟು ತೀಕ್ಷ್ಣಳಾದೆ.

ಭೈರೋನ್ ಗ್ರಾಮದಲ್ಲಿ ನನ್ನ ಗುರುತು 'ಬಾಗೀ ಸಿಯಾ' ಎಂದು ಬದಲಾಯಿತು‌. ನಾನು ಸಮುದಾಯದಿಂದ ಹೊರಗಿನವಳಾಗಿ ಗುರುತಿಸಲ್ಪಡತೊಡಗಿದೆ......

ಹಲವು ನೋವುಗಳೊಂದಿಗೆ, ಹೋರಾಟದ ಬದುಕಿನೊಂದಿಗೆ,ಬಂಡಾಯಗಾರ್ತಿಯ ಪಟ್ಟದೊಂದಿಗೆ ನನ್ನ ಬಾಲ್ಯ ಕಳೆದಿತ್ತು. ತಾರುಣ್ಯದ ದಿನಗಳ ಹೊಸ್ತಿಲಲ್ಲಿ ನಿಂತಿದ್ದ ನನ್ನ ಬದುಕಿನಲ್ಲಿ ಊಹೆಗೂ ಮೀರಿದ ಘಟನೆಗಳು ನಡೆಯಲಿದ್ದವು. ಇಲ್ಲಿಯವರೆಗಿನ ಹೋರಾಟಕ್ಕೂ ಮೀರಿದ ಮಹಾಯುದ್ಧ ನನಗಾಗಿ ಕಾದು ಕುಳಿತಿತ್ತು........

ಸಶೇಷ

ಟಿಪ್ಪಣಿಗಳು:

ಆಕ್ರಮಣಶೀಲವಲ್ಲದ ತಂತ್ರಗಳು(Non Invasive Techniques): ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಜ್ಞಾನ(pre natal diagnostic techniques)ದ ಎರಡನೇ ಹಾಗೂ ಆಧುನಿಕ ವಿಧಾನವೇ ಆಕ್ರಮಣಶೀಲವಲ್ಲದ ತಂತ್ರಗಳು. ಈ ವಿಧಾನದಲ್ಲಿ ದೇಹದ ಒಳ ಭಾಗಕ್ಕೆ ಯಾವುದೇ ಬಾಹ್ಯ ಸಲಕರಣೆಗಳನ್ನು ಬಳಸದೇ, ಹೊರಗಿನಿಂದಲೇ ದೇಹದ ಒಳಭಾಗವನ್ನು ಪರೀಕ್ಷಿಸುತ್ತಾರೆ. 

ಇದರ ಪ್ರಮುಖ ಪ್ರಕಾರವೇ ಶ್ರವಣಾತೀತ ಧ್ವನಿತರಂಗ ಪರೀಕ್ಷೆ (Ultrasonography). ಈ ವಿಧಾನದಲ್ಲಿ ಧ್ವನಿ ತರಂಗಗಳ ಸಹಾಯದಿಂದ ಭ್ರೂಣದ ಚಿತ್ರಗಳನ್ನು ನೋಡಬಹುದು. ಸಾಮಾನ್ಯವಾಗಿ ಗರ್ಭಧಾರಣೆಯ ಹತ್ತು ವಾರಗಳ ನಂತರ ಈ ಪರೀಕ್ಷೆ ಮಾಡಲಾಗುತ್ತದೆ. ಗರ್ಭದ ಚಿತ್ರಣ, ಅದರ ಗಾತ್ರ, ಹೃದಯ ಬಡಿತ ಹಾಗೂ ಅಂಗಾಂಗಗಳ ಗಾತ್ರದ ಆಧಾರದ ಮೇಲೆ ಭ್ರೂಣದ ಬೆಳವಣಿಗೆಯನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ಭ್ರೂಣದ ಜನನಾಂಗದ ಬಾಹ್ಯ ರೂಪದಿಂದ ಅದರ ಲಿಂಗವನ್ನು ನಿರ್ಧರಿಸುತ್ತಾರೆ. ಆಕ್ರಮಣಶೀಲ ತಂತ್ರಗಳ ಹೋಲಿಕೆಯಲ್ಲಿ ಈ ವಿಧಾನ ಬಹಳ ಅಗ್ಗವಾಗಿದ್ದು ಸಾಮಾನ್ಯವಾಗಿ ಕೈಗೆಟುಕುವ ದರದಲ್ಲಿ ಈ ಪರೀಕ್ಷೆ ಲಭ್ಯವಿದೆ. ಇದರ ಮೂಲ ಉದ್ದೇಶವೂ ಭ್ರೂಣದ ಅನುವಂಶಿಕ ಅಸ್ವಸ್ಥತೆ ಮತ್ತು ವಿರೂಪತೆಯನ್ನು ಗುರುತಿಸುವುದಾದರೂ ಲಿಂಗತ್ವ ಪತ್ತೆಗೆ ದುರುಪಯೋಗವಾಗುತ್ತಿರುವುದೇ ಹೆಚ್ಚು.

ಜನರ ಉಪಯೋಗಕ್ಕಾಗಿ ಅಭಿವೃದ್ಧಿ ಪಡಿಸಿದ ಈ ultrasonography ತಂತ್ರಜ್ಞಾನ ಭ್ರಷ್ಟ ವೈದ್ಯರ ಹಣದ ಹಪಾಹಪಿಗೆ ಬಳಕೆಯಾಗುತ್ತಿರುವುದು ವಿಷಾದನೀಯ. ಪ್ರಸವಪೂರ್ವ ಲಿಂಗ ಪತ್ತೆ ಕಾನೂನು ಪ್ರಕಾರ ಅಪರಾಧವಾಗಿದ್ದರೂ ಕಾನೂನುಬಾಹಿರವಾಗಿ ಈ ಕಾರ್ಯದಲ್ಲಿ ನಿರತವಾಗಿರುವ ಅಸಂಖ್ಯಾತ ಖಾಸಗಿ ಕ್ಲಿನಿಕ್ ಗಳಿವೆ. ಭ್ರೂಣದ ಲಿಂಗ ಪತ್ತೆ ಮಾಡಿ, ಹೆಣ್ಣಾದರೆ ಅಲ್ಲೇ ಗರ್ಭಪಾತ ಮಾಡಿಸಿ ಕೈತುಂಬಾ ಹಣ ಗಳಿಸುವುದನ್ನೇ ದಂಧೆ ಮಾಡಿಕೊಂಡಿರುವವರ ಗುಂಪುಗಳೇ ಇವೆ. ಇವರೆಲ್ಲಿ ಹೆಚ್ಚಿನವರು ಅಸಲಿಗೆ ವೈದ್ಯರೇ ಆಗಿರುವುದಿಲ್ಲ. ವೈದ್ಯಕೀಯ ವಿಭಾಗ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಒಂದಿಷ್ಟು ತರಬೇತಿ ಪಡೆದು ವೈದ್ಯರೆಂಬ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಕ್ಲಿನಿಕ್ ನಡೆಸುತ್ತಾರೆ. 

ಕೆಲವು ಘಟನೆಗಳಲ್ಲಿ ಗಂಡು ಭ್ರೂಣವನ್ನೂ ಹೆಣ್ಣೆಂದು ಹೇಳಿ ಗರ್ಭಪಾತ ಮಾಡಿಸಿ ದುಡ್ಡು ಮಾಡಿದ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಓದಿದ್ದೇನೆ. ಉತ್ತರ ಪ್ರದೇಶದ ಖಾಸಗಿ ಕ್ಲಿನಿಕಿನ ನಕಲಿ ವೈದ್ಯ ದಂಪತಿಗಳಿಬ್ಬರು ಭ್ರೂಣ ಹತ್ಯೆಯನ್ನೇ ದಂಧೆ ಮಾಡಿಕೊಂಡು ವ್ಯವಸ್ಥಿತವಾಗಿ ಅದನ್ನು ನಡೆಸುತ್ತಿದ್ದ ಬಗ್ಗೆ ಸಿರೀಸ್ ಒಂದನ್ನು ನೋಡಿದ್ದೆ. ಗಂಡು ಭ್ರೂಣವಾದರೆ ತಾಯಿಯ ಫೈಲಿನ ಮೇಲೆ ಪೆನ್ಸಿಲ್ಲಿನಲ್ಲಿ 6 ಎಂದೂ(6 ಇಂಗ್ಲೀಷಿನ b ಅಕ್ಷರವನ್ನು ಹೋಲುವುದರಿಂದ... boy ಎಂಬರ್ಥದಲ್ಲಿ) ಅದೇ ಹೆಣ್ಣಾದರೆ 9 ಎಂದೂ (9 ಇಂಗ್ಲೀಷಿನ g ಅಕ್ಷರವನ್ನು ಹೋಲುವುದರಿಂದ.... girl ಎಂಬರ್ಥದಲ್ಲಿ) ಬರೆದು ಆ ಮೂಲಕ ಸೂಚ್ಯವಾಗಿ ಮಗುವಿನ ಲಿಂಗವನ್ನು ಪೋಷಕರಿಗೆ ತಿಳಿಸಿ ಗರ್ಭಪಾತ ಮಾಡಿಸುವ ವ್ಯವಸ್ಥಿತ ಜಾಲ ಈ ದಂಪತಿಗಳು. ಕೊನೆಗೆ ಪೋಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯ, ಈ ದಂಪತಿಗಳು ಗರ್ಭಪಾತ ಮಾಡಿಸಿದ ಭ್ರೂಣಗಳಲ್ಲಿ ಹಲವಾರು ಗಂಡುಭ್ರೂಣಗಳೂ ಇದ್ದವು ಎಂಬುದು.

ಮಾಹಿತಿ ಕೃಪೆ:

http://www.legalserviceindia.com/legal/article-777-the-evil-of-female-foeticide-in-india-causes-consequences-and-prevention.html

https://www.youthkiawaaz.com/2017/10/uttar-pradeshs-missing-girls-choked-to-death-drowned-or-simply-abandoned-to-die/

https://www.indiatoday.in/india/story/gender-bias-kills-over-200-000-girls-in-india-each-year-lancet-1234138-2018-05-15

https://m.timesofindia.com/india/Female-feticide-rampant-in-UP-Census-2011/articleshow/20340672.cms

https://pdfs.semanticscholar.org>

https://www.sascv.org>ijcjs

https://www.researchgate.net/publication/215590009_'Death_Before_Birth'_-_A_Study_on_Female_Foeticide_in_India

https://www.researchgate.net/publication/328064213_Born_to_Die_Female_infanticide_and_Feticide_An_Analysis_of_India

ಇದರೊಂದಿಗೆ ಅಮೀರ್ ಖಾನ್ ಅವರ ಸತ್ಯಮೇವ ಜಯತೇ ಯ ಸಂಚಿಕೆಗಳು, ಎಂದೋ ವೃತ್ತಪತ್ರಿಕೆಗಳಲ್ಲಿ ಓದಿದ ಮಾಹಿತಿಗಳು, ಕೆಲವು ಸ್ನೇಹಿತರಿಂದ ಕೇಳಿ ತಿಳಿದ ಮಾಹಿತಿಗಳು ಎಲ್ಲವನ್ನೂ ವಿಮರ್ಶಿಸಿ ಹೆಣೆದ ಕಥೆ ಇದು. ನೀಡಿದ ಮಾಹಿತಿಗಳೆಲ್ಲವೂ ನಿಜವೇ. ಕಥೆಯ ಪಾತ್ರಗಳ ಹೆಣಿಗೆ ಹಾಗೂ ಬೆಳವಣಿಗೆ ಮಾತ್ರ ನನ್ನ ಕಲ್ಪನೆ.

ಧನ್ಯವಾದಗಳು

ಅಗ್ನಿ ತರಂಗಿಣಿ 4

ಪಿಂಜರೇ ಕಿ ಚಿಡಿಯಾ….. ಜೋ ಕಭೀ ನ ಉಡಿಯಾ….

ಹೀಗೆ ಆ ಕೊರೆವ ಚಳಿಯಲ್ಲಿ ಮಾಯಿಯ ಆಸರೆಯಿಲ್ಲದೆ ನನ್ನ ಬದುಕಿನ ಹೋರಾಟ ಆರಂಭವಾಗಿತ್ತು.......

ಅಮ್ಮನ ಗರ್ಭಗುಡಿಯಿಂದ ಹೊರಬಿದ್ದಿದ್ದೆ. ಆದರೆ ಈಗ್ಯಾಕೋ ವಾಪಾಸು ಅವಳೊಡಲಿಗೇ ಓಡುವ ತವಕ. ಸಾಧ್ಯವಾದೀತೇ.....? 

ಇಷ್ಟು ತಿಂಗಳುಗಳ ಕಾಲ ಯಾವ ಚಿಂತೆಗಳಿಲ್ಲದೇ ಮಾಯಿಯೊಡಲೊಳಗೆ ಬೆಚ್ಚಗಿದ್ದು ಈಗಿನ್ನೂ ಕಣ್ತೆರೆದ ಹಸುಗೂಸು..... ಆ ಮಾಘದ ಚಳಿ ತಡೆಯಲಾದೀತೇ? ನನಗೆ ಗೊತ್ತಿದ್ದುದು ಒಂದೇ ಭಾಷೆ..... ಅಳುವಿನ ಭಾಷೆ.

ಚಳಿ ತಾಳಲಾರದೇ ಇದ್ದ ಶಕ್ತಿಯನ್ನೆಲ್ಲಾ ಬಳಸಿ ಕೂಗತೊಡಗಿದೆ. ಆ ಕೂಡಲೇ ಚಾಚಿ ಓಡಿಬಂದು ತನ್ನ ಕೈಯಿಂದ ನನ್ನ ಬಾಯಿ ಮುಚ್ಚಿ ಗಟ್ಟಿಯಾಗಿ ಎದೆಗವಚಿಕೊಂಡಳು. ನನಗೆ ಯಾವುದೋ ರಕ್ಷಣೆ ದೊರೆತಂತಹ ಭಾವ... ಅವಳ ಮಡಿಲೂ ಬೆಚ್ಚಗಿತ್ತು. ಇದು ನನ್ನ ಮಾಯಿಯ ಮಡಿಲಲ್ಲ ಎಂಬುದು ತಿಳಿಯುತ್ತಿತ್ತಾದರೂ ಆ ಅಪ್ಪುಗೆಯಲ್ಲಿ ಏನೋ ಸುರಕ್ಷತೆಯ ಭರವಸೆ, ನಿರಾಳತೆ..... 

ಆದರೆ ಅವಳು ಗಾಬರಿಯಾಗಿದ್ದಳು. ಭಯದಿಂದ ಪದೇಪದೇ ಸುತ್ತಮುತ್ತ ನೋಟಹರಿಸುತ್ತಿದ್ದಳು. ಭಯ ಬೀಳದೇ ಇನ್ನೇನು ಮಾಡಿಯಾಳು? ಬೆಳಕು ಹರಿಯಲು ಇನ್ನೂ ಎರಡು ಜಾವಗಳಿತ್ತು‌....

ಎರಡು ಸುದೀರ್ಘ ಜಾವಗಳು......!!

ಒಂದು ವೇಳೆ ನನ್ನ ಅಳು ಮನೆಯೊಳಗೆ ಸುಖ ನಿದ್ರೆಯಲ್ಲಿ ಲೀನರಾಗಿರುವ ಯಾರದೇ ಕಿವಿಯ ಪರದೆಯನ್ನು ತಲುಪಿದರೂ ಸೂರ್ಯ ರಶ್ಮಿಯು ಭುವಿ ಸೋಕುವ ಮುನ್ನಿನ ಈ ಎರಡು ಜಾವಗಳಲ್ಲೇ ನನ್ನ ಅಂತ್ಯವಾಗುತ್ತದೆ ಎಂಬುದನ್ನು ಅರಿಯದಷ್ಟು ಮೂಢಳಲ್ಲ ಆಕೆ. ಎಷ್ಟೆಂದರೂ ಇದು ಅವಳ ಸ್ವಾನುಭವವಲ್ಲವೇ....? ಆಕೆ ಕೊನೆಯ ಪಕ್ಷ ಬೆಳಕು ಹರಿಯುವವರೆಗಾದರೂ ನನ್ನನ್ನು ಬದುಕಿಸಿಕೊಳ್ಳಲೇಬೇಕು ಎಂಬ ಹುಕಿಗೆ ಬಿದ್ದಿದ್ದಳು.

ಚಾಚಿ ಏನೋ ಯೋಚಿಸಿದವಳಂತೆ ನನ್ನನ್ನು ತನ್ನೆದೆಗೆ ಒತ್ತಿಕೊಂಡೇ ಹಿಂಬಾಗಿಲಿನಿಂದ ಮನೆಯೊಳಗೆ ನಡೆದಳು. ಅವಳ ಒಂದು ಕೈ ನನ್ನ ಬಾಯನ್ನು ಮುಚ್ಚಿತ್ತು. ಸದ್ದಾಗದಂತೆ ಒಂದು ಕೋಣೆಯತ್ತ ನಡೆದಳು... ಅವಳದೇ ಕೋಣೆಯದು...

ಚಾಚೂ ಈ ಲೋಕದ ಪರಿವೆಯೇ ಇಲ್ಲದೆ ಪವಡಿಸಿದ್ದ. ಅವನ ಗೊರಕೆಯ ಕರ್ಕಶ ಸದ್ದು ಕೋಣೆಯನ್ನು ದಾಟಿ ಮನೆಯನ್ನೇ ಆವರಿಸಿತ್ತು. ಕೆಲಸ, ಕಾರ್ಯ ಏನೂ ಇಲ್ಲ... ಜಮೀನಿನ ಕೆಲಸ ಮಾಡಲು ಆಳುಗಳು, ಮನೆಕೆಲಸಕ್ಕೆ ಹೇಗೂ ಲುಗಾಯಿ(ಹೆಂಡತಿ)ಯೇ ಬಿಟ್ಟಿಬಿದ್ದಿದ್ದಾಳೆ.

ಇನ್ನೇನು ಕೆಲಸ...? ಉಣ್ಣುವುದು, ಬೀದಿ ಬೀದಿ ಸುತ್ತುವುದು, ಮನೆಯಲ್ಲಿ ಹೆಂಡತಿಯ ಪ್ರಾಣ ಹಿಂಡುವುದು.... ಎಂಥಾ ಸುಖ ಲೋಲುಪದ ಜೀವನ....

ನಲ್ವತ್ತರ ಈ ಗಂಡಸಿಗೆ ಹದಿನೆಂಟರ ಚಾಚಿ ಲುಗಾಯೀ....

ಚಾಚಿ ಸದ್ದಾಗದಂತೆ ಒಂದು ತೆಳು ಸೀರೆ ಹಾಗೂ ಎಸೆಯಲೆಂದು ಇಟ್ಟ ಹಳೆಯ ದಪ್ಪನೆಯ ಚಾದರ್ ಒಂದನ್ನು ತೆಗೆದುಕೊಂಡು ಕೋಣೆಯ ಬಾಗಿಲೆಳೆದುಕೊಂಡು ಕಳ್ಳ ನಡಿಗೆಯಲ್ಲಿ ಅಡುಗೆ ಕೋಣೆಗೆ ಬಂದಿದ್ದಳು. ಹಾಲಿಗೆ ಒಂದಿಷ್ಟು ಕಾದಾರಿದ ನೀರು ಬೆರೆಸಿ ಒಂದು ಪಾತ್ರೆಯಲ್ಲಿ ಹಿಡಿದು ಹಿಂಬಾಗಿಲಿನಿಂದ ಹೊರಬಂದಿದ್ದಳು. ಮತ್ತೆ ನಾವಿಬ್ಬರೂ ಮಾಯಿ ಇದ್ದಲ್ಲಿಗೆ ಬಂದಿದ್ದೆವು. ತಂದ ಸೀರೆಯನ್ನು ಹರಿದು ಒಂದು ಭಾಗವನ್ನು ಮಡಚಿ ಅಲ್ಲೇ ನೆಲದ ಮೇಲೆ ಹಾಸಿದಳು. ಇನ್ನೊಂದು ಭಾಗವನ್ನು ನನಗೆ ಸುತ್ತಿ ಹಾಸಿದ ಸೀರೆಯ ತುಂಡಿನ ಮೇಲೆ ನನ್ನ ಮಲಗಿಸಿದಳು. ಮೇಲೆ ದಪ್ಪ ಚಾದರ ಹೊದಿಸಿದಳು. ಒಂದು ಬಟ್ಟೆಯ ಚೂರನ್ನು ಹಾಲಿನ ಪಾತ್ರೆಗೆ ಅದ್ದಿ ನನ್ನ ಬಾಯಿಗೆ ಹಿಂಡತೊಡಗಿದಳು....

ನನಗೆ ನಿಜಕ್ಕೂ ಹಸಿವಾಗಿತ್ತು. ಒಂದಿಷ್ಟು ಹಾಲು ಹೊಟ್ಟೆಗಿಳಿದಾಗ ನೆಮ್ಮದಿ ಎನಿಸಿತು. ಚಾಚಿ ನನ್ನ ಎತ್ತಿ ತೋಳ ಮೇಲೆ ಹಾಕಿಕೊಂಡು ಮೆದುವಾಗಿ ಬೆನ್ನು ನೀವತೊಡಗಿದಳು. ನಾನಲ್ಲೇ ನಿದ್ದೆ ಹೋದೆ ಮುಂದಿನ ಹೋರಾಟದ ಚಿಂತೆ ಇಲ್ಲದೇ.....  ನಿದ್ರಿಸಿರುವುದು ಖಚಿತವಾದ ಮೇಲೆ ನನ್ನ ಕೆಳಗೆ ಮಲಗಿಸಿ ಚಾದರ ಹೊದಿಸಿದಳು‌. 

ನನ್ನ ತಲೆಯನ್ನು ಮೆದುವಾಗಿ ಸವರಿ ಎದ್ದು ಅಲ್ಲೇ ಶತಪಥ ಹಾಕತೊಡಗಿದವಳು ವ್ಯಾಕುಲಳಾಗಿದ್ದಳು. ಆಗೀಗ ಮಾಯಿಯ ಶವವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳಿಗೆ ಮಾಯಿಯ ಸಾವು ದೊಡ್ಡ ಆಘಾತವನ್ನೇ ತಂದಿತ್ತು.

ಆದರೆ ಈಗಾಗಲೇ ಲೋಕದ ಬಂಧ ಕಳಚಿದ ಮಾಯಿಗಿಂತಲೂ, ಅಸುನೀಗಲು ಕ್ಷಣಗಳ ಗಣನೆಯಲ್ಲಿದ್ದ ನಾನೇ ಆಕೆಗೆ ಮುಖ್ಯವಾಗಿದ್ದೆನೆಂದು ತೋರುತ್ತದೆ. ಅವಳ ತಲೆಯಲ್ಲಿ ಅದೆಷ್ಟು ವಿಚಾರಗಳಿದ್ದವೋ, ಅವಳ ಮನದೊಳಗೆ ಅದೇನು ವೇದನೆಯಿತ್ತೋ ಬಲ್ಲವರ್ಯಾರು...? ಪ್ರಾಯಶಃ ಈ ರಾತ್ರಿ ಕಳೆದು ಬೆಳಕಾಗದಿರಲಿ, ಮನೆಯವರು ಎದ್ದು ನನ್ನ ನೋಡದಿರಲಿ ಎಂಬ ಪ್ರಾರ್ಥನೆ ಅವಳದಿತ್ತೇನೋ....

ನಮ್ಮ ಕೋರಿಕೆಗಳೆಲ್ಲಾ ಸ್ವೀಕೃತವಾಗಿ ಈಡೇರುವಂತಿದ್ದರೆ ಬದುಕು ಆನಂದ ಸಾಗರವೇ..... ಆದರೆ ಎಂದಾದರೂ ಹಾಗಾದೀತೇ? ಊಹೆಗೆ ನಿಲುಕದ್ದು, ಕಲ್ಪನೆಗಳನ್ನು ಮೀರಿದ್ದೇ ಬದುಕಲ್ಲವೇ.....?

ಕತ್ತಲು ಕರಗಿ ಬೆಳಕು ಸುರಿದೇ ಸುರಿದಿತ್ತು. ಬೆಳಗಿನ ಎಳೆಬಿಸಿಲು ಯಮುನಾ ತಟದ ಸಮೃದ್ಧ ನೆಲವನ್ನು ಸೋಕುವ ಹೊತ್ತಿಗೆ ಭಾರವಾದ ಮನದಿಂದ ಎಲ್ಲವನ್ನೂ ವಿಧಾತನ ಕೈಗೊಪ್ಪಿಸಿ ನಾಟಕದ ಅಂಕದ ಪರದೆ ಸರಿಸಲು ತಯಾರಾದಳು ಚಾಚಿ. ನನ್ನ ಮೈ ಮೇಲೆ ಹೊದಿಸಿದ್ದ ಬೆಚ್ಚನೆ ಚಾದರವನ್ನು, ಸುತ್ತಿದ್ದ, ಹಾಸಿದ್ದ ಬಟ್ಟೆಗಳನ್ನು ತೆಗೆದು ಅನತಿ ದೂರದಲ್ಲಿದ್ದ ಕುರುಚಲು ಪೊದೆಗಳ ನಡುವೆಲ್ಲೋ ಬಿಸುಟು ಬಂದಳು. ಹಾಲಿನ ಪಾತ್ರೆಯನ್ನು ಬಚ್ಚಲಿಗೊಯ್ದಳು. ಆ ನಸುಕಿನಲ್ಲಿ ಆಕೆ ಅಲ್ಲಿದ್ದಳು ಎಂಬುದಕ್ಕೆ ಒಂದು ಕುರುಹೂ ಉಳಿಯದಂತೆ ಎಲ್ಲವನ್ನೂ ಸರಿಪಡಿಸಿದವಳು, ಮತ್ತೆ ಚಳಿಗೆ ಮೈಯೊಡ್ಡಿ ಅಳುತ್ತಿದ್ದ ನನ್ನ ಎದೆಗೊತ್ತಿಕೊಂಡು, ನೊಸಲಿಗೊಂದು ಮುತ್ತಿಟ್ಟು ತುಂಬಿದ ಕಂಗಳೊಂದಿಗೆ ನನ್ನನ್ನು ನಿರ್ಜೀವವಾಗಿದ್ದ ಮಾಯಿಯ ಪಕ್ಕದಲ್ಲಿ ಮಲಗಿಸಿ ಮತ್ತೆ ತಿರುಗಿನೋಡದೇ ಮನೆಯೊಳಗೆ ಓಡಿದ್ದಳು.

ಇಷ್ಟು ಸಮಯದ ತನಕ ನನ್ನನ್ನು ಆವರಿಸಿದ್ದ ಸುರಕ್ಷತಾ ಭಾವ ಈಗಿರಲಿಲ್ಲ. ಪಕ್ಕದಲ್ಲೇ ಮಾಯಿಯಿದ್ದರೂ ತಣ್ಣನೆಯ ಕೊರಡಾಗಿದ್ದ ಅವಳ ಇರುವಿಕೆಯ ಅರಿವು ನನಗಾಗಲೇ ಇಲ್ಲ. ಇದ್ದವಳೊಬ್ಬಳು ಚಾಚಿಯೂ ಹೀಗೆ ನನ್ನ ಒಬ್ಬಂಟಿಯಾಗಿಸಿ ಸರಿದಿದ್ದಳು. 

ಈಗಲೂ ನನ್ನ ಸಾಥಿಯಾಗಿದ್ದು ಅದೇ ಅಳು.... ಏನೂ ತೋಚದೇ ಅಬೋಧಳಾಗಿ ಅಳತೊಡಗಿದೆ. ಉಸಿರು ಬಿಗಿ ಹಿಡಿದು ಇದನ್ನೇ ನಿರೀಕ್ಷಿಸುತ್ತಿದ್ದ ಚಾಚಿ ನನ್ನ ಅಳುವಿನ ಸದ್ದು ಕೇಳಿದೊಡನೆಯೇ ಮನೆಯವರನ್ನು ಎಬ್ಬಿಸಿದ್ದಳು. 

ಕುಲತಿಲಕನ ನಿರೀಕ್ಷೆಯಲ್ಲಿದ್ದ 'ರಾಜ ಮನೆತನ'ದ ಸದಸ್ಯರೆಲ್ಲರೂ, 'ಎಲ್ಲಿಯಾದರೂ ಬಾಬಾನ ಭವಿಷ್ಯವಾಣಿ ಸುಳ್ಳಾಗಿ ಲಾಲಾ ಹುಟ್ಟಿರಬಹುದೇ' ಎಂಬ ಆಸೆಯಲ್ಲಿ ಕೊಟ್ಟಿಗೆಯತ್ತ ದೌಡಾಯಿಸಿದ್ದರು. ನನ್ನ ಕಂಡದ್ದೇ ಅವರ ಮುಖದಲ್ಲಿ ನಿರಾಶೆ, ಕ್ರೋಧ, ತಿರಸ್ಕಾರ ಸ್ಪಷ್ಟವಾಗಿತ್ತು.... 

ಭ್ರಮನಿರಸನಗೊಂಡ ಮಹಾನುಭಾವರ ಗಮನ ಸೆಳೆದ ಚಾಚಿ ಅಳುತ್ತಲೇ ನಿರ್ಜೀವಗೊಂಡ ಮಾಯಿಯನ್ನು ತೋರಿಸಿದಳು...

ನನ್ನ ದಾದಿ ಮಾಯಿಯ ಮೂಗಿನ ಬಳಿ ಬೆರಳಿಟ್ಟು ಪರೀಕ್ಷಿಸಿ ಸಾವನ್ನು ಖಚಿತಪಡಿಸಿದ್ದಳು.

"ಏಕ್ ಔರ್ ಚೋಕರಿ ಪೈದಾ ಕರ್ಕೇ ಚಲೀ ಗಯೀ. ಇಸ್ಸೇ ಅಚ್ಛಾ ಪೆಹಲೇ ಹೀ ಮರೀ ಹೋತೀ......" ಅದೆಷ್ಟು ನಿಕೃಷ್ಟವಾಗಿ ಎಂದಿದ್ದ ಅಪ್ಪನೆಂಬ ಪುರುಷೋತ್ತಮ....?

ಹೆಣ್ಣು ಮಗುವಿನ ಜನನಕ್ಕೆ ಕೇವಲ ತಾಯಿ ಮಾತ್ರ ಕಾರಣ..... ಅದರ ತೆಗಳಿಕೆ, ತಿರಸ್ಕಾರ ಎಲ್ಲಾ ಅವಳೊಬ್ಬಳಿಗೇ. ಅದೇ ಗಂಡು ಮಗುವಿನ ಜನನಕ್ಕೆ ಪುರುಷ ಮಾತ್ರ ಕಾರಣ. ಅದರ ಶ್ರೇಯ, ಹೊಗಳಿಕೆಯೆಲ್ಲಾ ಮೀಸೆ ತಿರುವಿ ಮೆರೆವ ಗಂಡಸಿಗೆ. ಹೆಣ್ಣಿನ ಪಾತ್ರವಿಲ್ಲ ಅದರಲ್ಲಿ....... ವೈಜ್ಞಾನಿಕತೆಗೇ ಸವಾಲಾಗಬಲ್ಲ ಇಂತಹದೊಂದು ನಿಯಮ ನಮ್ಮ ಸಮಾಜದಲ್ಲಿ ಬಹು ಪುರಾತನ ಕಾಲದಿಂದ ಚಾಲ್ತಿಯಲ್ಲಿದೆ. ಅದೇ ಸಮಾಜದ ಪ್ರತಿನಿಧಿ ನನ್ನಪ್ಪ. ಅವನ ಮಾತನ್ನು ಅನುಮೋದಿಸಿದ್ದು ಇನ್ನೆರಡು ಪುರುಷ ಸಿಂಹಗಳು ಹಾಗೂ ಒಬ್ಬಳು ಹೆಣ್ಣು....

ನನ್ನ ದಾದಿ.... 

ಚಾಚಿಯದು ಮೌನದ ಮುಸುಕಿನೊಳಗಿನ ಅಗೋಚರ ವೇದನೆ. ಬಾಯ್ತೆರೆದು ವಿರೋಧಿಸಲೂ ಆಗದ, ವಿಷಾದವನ್ನು ವ್ಯಕ್ತಪಡಿಸಲೂ ಆಗದ ಅಸಹಾಯಕತೆ.... 

ಇನ್ನು ಉಳಿದವಳು ಬಾಪುವಿನ 'ನಯೀ ನವ್ವೇಲಿ ಲುಗಾಯಿ', ನನ್ನ ಸೌತೇಲಿ ಮಾಯಿ.... ಆಕೆಯೂ ಚಾಚಿಯಂತೆ ಹದಿನೆಂಟರ ಪ್ರಾಯದವಳೇ‌. ನನ್ನ ಬಾಪೂ ಅವಳಿಗಿಂತ ಮೂರುವರೆಪಟ್ಟು ಹಿರಿಯವ. ಆದರೆ ಆಕೆಯ ಹೆತ್ತವರಿಗೆ ಬಾಪೂವಿನ ದೌಲತ್ ಎದುರಿಗೆ ಅವನ ವಯಸ್ಸು ನಗಣ್ಯ. ಅದಕ್ಕೂ ಮಿಗಿಲಾಗಿ ಅವರಿಗೆ ಈ ಚೋರಿಯನ್ನು ಮನೆಯಿಂದ ಸಾಗಹಾಕಿದರೆ ಸಾಕಿತ್ತು. ಯಾವ ತಲೆಮಾಸಿದವನ ತಲೆಗೆ ಕಟ್ಟಿದೆವು ಎಂಬುದು ಅವರಿಗೆ ಮುಖ್ಯವಲ್ಲ. ಹೆಣ್ಣೆಂಬ ಪ್ರಾರಬ್ಧ ಮನೆಯಿಂದ ಹೊರಹೋದರೆ ಅಷ್ಟೇ ಸಾಕು ಅವರಿಗೆ. ಇದು ನಮ್ಮಲ್ಲಿ ಬಹಳ ಸಾಮಾನ್ಯವಾದ ಸಂಗತಿ ಬಿಡಿ....

ಪಾಪ.... ತನ್ನ ಎದುರು ನಡೆಯುತ್ತಿರುವ ಘಟನೆ ಅವಳಿಗೆ ಅವಳ ಭವಿಷ್ಯವನ್ನು ಕಣ್ಣೆದುರಿಗೆ ತಂದಿರಬೇಕು. ತನಗೂ ಹೆಣ್ಣು ಕೂಸು ಹುಟ್ಟಿದರೆ?? ಎಂಬ ಭಯಕ್ಕೆ ಬಿಳಚಿಕೊಂಡು ಅರಕ್ತಳಾಗಿ ನಿಂತಿದ್ದಳಾಕೆ. 

ದಾದಿ ನನ್ನೆಡೆಗೆ ನಿಕೃಷ್ಟವಾಗಿ ನೋಡುತ್ತಾ, "ಅಬ್ ಇಸ್ಕಾ ಕಾ ಕರೇ....? ಏ ತೇರಿ ಪುರಾನಿ ಲುಗಾಯೀ ಕೆ ಸಾಥ್ ಮಾ ಇಸ್ ಚೋರಿ ಕೋ ಭೀ ದಫ್ನಾಯೇ ಕಾ? ಯಾ ರಾತ್ ಕೀ ಟಂಡೀ ಪಡ್ನೆ ತಕ್ ಇಂತಜಾರ್ ಕರೇ?" ಎಂದು ಬಾಪೂವನ್ನು ಕೇಳಿದ್ದಳು!! 

(ಈಗ ಇದನ್ನೇನು ಮಾಡೋದು? ಈ ನಿನ್ನ ಹಳೆ ಹೆಂಡತಿಯೊಂದಿಗೆ ಈ ಹೆಣ್ಣನ್ನೂ ಮಣ್ಣು ಮಾಡೋಣವೇ? ಇಲ್ಲಾ ರಾತ್ರಿಯ ಚಳಿ ಬೀಳುವವರೆಗೆ ಕಾಯುವುದೋ?)

ಬಾಪೂ, ಚಾಚಾ ಹಾಗೂ ದಾದ ಯೋಚನೆಗೆ ಬಿದ್ದಿದ್ದರು. ಮಾಯಿಯೊಂದಿಗೆ ನನ್ನನ್ನೂ ಮಣ್ಣು ಮಾಡುವುದು ಅವರಿಗೆ ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಈ ಊರಲ್ಲಿ ಇಂತಹವು ಸರ್ವೇಸಾಮಾನ್ಯವಾಗಿ ನಡೆಯುತ್ತವೆ. ಆದರೆ ಈ ಹಗಲಿನಲ್ಲಿ ಕೆಲಸ ಕೊಂಚ ಕಠಿಣವೆಂದು ತೋರಿತು ಅವರಿಗೆ. ಯಾವುದೇ ಎಗ್ಗಿಲ್ಲದೇ ಹೆಣ್ಣುಶಿಶುಗಳ ನರಮೇಧ ನಡೆಯುತ್ತಿದ್ದರೂ ಅದು ಕಾನೂನು ಪ್ರಕಾರ ಅಪರಾಧವೆಂದು ನಮ್ಮ ದೇಶದ ನ್ಯಾಯಸಂಹಿತೆ ಹೇಳುತ್ತದಲ್ಲ..... ಅದೇ ತೊಂದರೆಯಾಗಿದ್ದು. ಮೊದಲೇ ಬಾಪು ಕಾಪ್ ಪಂಚಾಯತಿನ ಸರಪಂಚನಾಗಲು ಎಲ್ಲಾ ವಿಧದಲ್ಲೂ ಪ್ರಯತ್ನಿಸುತ್ತಿದ್ದ. ಅದು ಮನೆಯ ಉಳಿದಿಬ್ಬರು ಗಂಡಸರು ಹಾಗೂ ದಾದಿಯ ಬಯಕೆಯೂ ಕೂಡ. ಆದರೆ ಅದೇ ಸರ್ಪಂಚ್ ಹುದ್ದೆಯ ಆಕಾಂಕ್ಷಿಗಳು ಇನ್ನೂ ಕೆಲವರಿದ್ದರು. ಈಗ ಹೀಗೆ ಮಗಳನ್ನು ಜೀವಂತ ಸಮಾಧಿ ಮಾಡಿರುವರೆಂಬ ವಿಷಯ ಅವರಿಗೆ ತಿಳಿದರೆ ಅದರಿಂದ ಬಾಪುವಿನ ಆಸೆ ಮಣ್ಣಾಗುವ ಸಾಧ್ಯತೆಯೇ ಹೆಚ್ಚು. ಸುಮ್ಮನೆ ಇಲ್ಲಸಲ್ಲದ ರಗಳೆ ಯಾಕೆಂದು ಮಾಯಿಯೊಂದಿಗೆ ನನ್ನನ್ನೂ ಮಣ್ಣು ಮಾಡುವ ಯೋಚನೆ ಕೈ ಬಿಟ್ಟರು. ಈಗ ಮಾಯಿಯನ್ನು ಮಣ್ಣು ಮಾಡುವುದೆಂದೂ, ರಾತ್ರಿಯಲ್ಲಿ ತಂಡಿ ಬಿದ್ದ ಮೇಲೆ ನನಗೊಂದು ಗತಿ ಕಾಣಿಸುವುದೆಂದೂ ನಿರ್ಧಾರವಾಯಿತು.

ಅಲ್ಲಿಗೆ ನನ್ನ ಮರಣ ಶಾಸನ ತಯಾರಾಗಿದೆ ಎಂದು ಚಾಚಿಗೂ, ಸೌತೇಲಿ ಮಾಯಿಗೂ ತಿಳಿದು ಹೋಯಿತು. ಇಬ್ಬರೂ ಮೌನವಾಗಿ ರೋಧಿಸುತ್ತಿದ್ದರಾದರೂ ಬಾಯ್ತೆರೆದು ವಿರೋಧಿಸುವ, ತಡೆಯುವ ಧೈರ್ಯ, ಹಕ್ಕು ಎರಡೂ ಅವರಿಗಿಲ್ಲ. ನನ್ನ ಮಾಯಿ ಒಂದು ವೇಳೆ ಜೀವಂತವಿದ್ದರೆ ಅವಳಿಂದಲೂ ನನ್ನನ್ನು ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ.... ಏಕೆಂದರೆ ಇದು 'ಮರ್ದೊಂಕಾ ಫೈಸಲಾ'... ಅದರ ಬಗ್ಗೆ ಚಕಾರವೆತ್ತುವಹಾಗಿಲ್ಲ ಔರತ್...

ದಾದಿ ಚಾಚಿಯನ್ನು ಕರೆದು ನನ್ನನ್ನು ರಾತ್ರಿಯ ತನಕ ಗೋದಾಮಿನಲ್ಲಿ ಇರಿಸಲು ಸೂಚಿಸಿದಳು. ಚಾಚಿ ನನ್ನನ್ನು ‌ಎತ್ತಿಕೊಂಡು ಗೋದಾಮಿನತ್ತ ಹೆಜ್ಜೆಗಳನ್ನು ಕಿತ್ತಿಟ್ಟ ಹಾಗೆ ಮಾಯಿ ನನ್ನ ಕಣ್ಣಂಚಿನಿಂದ ದೂರ ದೂರ ಸರಿಯತೊಡಗಿ ಕೊನೆಗೊಮ್ಮೆ ಮಾಯವಾದಳು....

ಹಾಗವಳು ಲಗುಬಗೆಯಿಂದ ನನ್ನ ಗೋದಾಮಿಗೆ ಕರೆತಂದವಳು ಅಲ್ಲೊಂದಿಷ್ಟು ಸ್ವಚ್ಛಗೊಳಿಸಿ ಬೇರೊಂದು ಚಾದರ್ ಹಾಸಿ ಮಲಗಿಸಿದಳು. ಮತ್ತೊಂದಿಷ್ಟು ಹಾಲು ತಂದು ನನ್ನ ಉದರ ಪೋಷಣೆ ಮಾಡಿದಳು..... ಇವಳ ಋಣ ಈ ಜನ್ಮದಲ್ಲಿ ತೀರುವುದುಂಟೇ....? ಈಗವಳು ಕೊಂಚ ನಿರಾಳ. ಏಕೆಂದರೆ ಇನ್ನು ರಾತ್ರಿಯಾಗುವವರೆಗೆ ಅವರ್ಯಾರೂ ಈ ಕಡೆಗೆ ತಲೆ ಕೂಡಾ ಹಾಕುವುದಿಲ್ಲ ಎಂಬುದು ಖಚಿತವಾಗಿತ್ತು ಅವಳಿಗೆ. ಆದರೆ ಆ ನಿರಾಳತೆಯ ಬೆನ್ನಿಗೇ ವಿಷಾದ ಆವರಿಸಿತು. ತಾನೇನೇ ಮಾಡಿದರೂ ಈ ರಾತ್ರಿಯವರೆಗೆ ಮಾತ್ರವೇ ಈ ಹಾಲುಗಲ್ಲದ ಕಂದಮ್ಮನ ಬದುಕು..... 

ಮಾಯಿಯನ್ನು ಮಣ್ಣುಮಾಡಲು ನೆರೆಕೆರೆಯವರೆಲ್ಲಾ ಮನೆಯಂಗಳದಲ್ಲಿ ಸೇರುತ್ತಿದ್ದರು. ಹೆರಿಗೆಯಲ್ಲಿ ಸಾವು ಉಸಿರಾಟದಷ್ಟೇ ಸಹಜ ಸಾಮಾನ್ಯ ಎಂಬಂತಾಗಿರುವ ಈ ಊರಿನಲ್ಲಿ ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇನ್ನು ಹುಟ್ಟಿದ ಮಗುವಿನ ಬಗ್ಗೆ ಕೇಳುವ ಮಾತೆಲ್ಲಿಯದು? ಇಷ್ಟಕ್ಕೂ ಲಾಲಾ ಜನಿಸಿದ್ದರೆ ಈಗಾಗಲೇ ಊರಿಗೆಲ್ಲ ಮೀಠಾ ಸಮಾರಾಧನೆಯಾಗಿರುತ್ತಿತ್ತು... ಹಾಗಾಗಿಲ್ಲವೆಂದರೆ ಅನಿಷ್ಟದ ಲಾಲಿಯೇ ಜನಿಸಿರುವುದು ಎಂಬುದು ಅರ್ಥೈಸಿಕೊಂಡ ಸತ್ಯ. ಹಾಗಾಗಿ ಎಲ್ಲರೂ ಲಾಲಿಯ ಮನೆಯವರನ್ನು ಸಮಾಧಾನಿಸುತ್ತಾರಷ್ಟೇ. ಯಾವುದೋ ಸಾವಿನ ಮನೆಯಲ್ಲಿ ಶೋಕಾಚರಣೆ ಮಾಡಿ ಆ ಮನೆಯವರನ್ನು ಸಂತೈಸಿದಂತೆ......!!

ಇಲ್ಲೂ ಅದೇ ಕಾರ್ಯಕ್ರಮ ನಡೆಯುತ್ತಿತ್ತು. ಬಂದವರೆಲ್ಲರೂ ಬಾಪೂವಿನ ನಯೀ ದುಲ್ಹನ್ ಈ ಬಾರಿ ಲಾಲಾನನ್ನು ಹೆರುವಳೆಂದು ಭವಿಷ್ಯ ನುಡಿಯುತ್ತಾ ಸಾಂತ್ವನ ಹೇಳುತ್ತಿದ್ದರು. ನನ್ನ ಮಾಯಿ ನರಳಿ ನರಳಿ ಸತ್ತ ದುಃಖವಾಗಲೀ, ಜನಿಸಿದೊಡನೆ ಮಾಯಿಯ ಕಳೆದುಕೊಂಡು ಈ ರಾತ್ರಿಗೆ ಬದುಕಿನ ಯಾತ್ರೆ ಮುಗಿಸಲಿರುವ ನನ್ನ ವೇದನೆಯಾಗಲೀ, ಸೌತೇಲಿ ಮಾಯಿಯ ಮನದಲ್ಲಿ ತೀವ್ರವಾಗಿದ್ದ 'ಒಂದು ವೇಳೆ ನನಗೂ ಹೆಣ್ಣು ಕೂಸೇ ಜನಿಸಿದರೆ...?' ಎಂಬ ಭಯವಾಗಲೀ, ಚಾಚಿಯ ಗಾಢ ವಿಷಾದವಾಗಲೀ ಈ ಹಾಳು ಜನರನ್ನು ಸೋಕಲೇ ಇಲ್ಲ......

ಮಾಯಿಯ ಅಂತಿಮಯಾತ್ರೆ ಹೊರಟು, ಬಂದ ಜನರೆಲ್ಲಾ ಚದುರಿದರೂ ಚಾಚಿ ನನ್ನ ಬಿಟ್ಟು ಆಚೀಚೆ ಕದಲಲಿಲ್ಲ. ಎಲ್ಲಾ ಗದ್ದಲ ಕರಗಿ ನೀರವ ಮೌನವೊಂದು ಮನೆ ತುಂಬಾ ತಾಂಡವವಾಡಿದ ಆ ಕ್ಷಣದಲ್ಲಿ......

ಆಗ ಅವಳು ಇಷ್ಟರವರೆಗೆ ತಡೆಹಿಡಿದಿದ್ದ ದುಃಖ ದುಗುಡವೆಲ್ಲಾ ಒಮ್ಮೆಗೆ ಪ್ರವಾಹವಾಗಿ ಭೋರ್ಗರೆದು ಉಕ್ಕಿತು. ಬಿಕ್ಕಿ ಬಿಕ್ಕಿ ಅಳತೊಡಗಿದ ಚಾಚಿಯನ್ನು ಸಾಂತ್ವನಿಸಲು ಇದ್ದ ಒಂದೇ ಒಂದು ಹಸ್ತ ಇಹಲೋಕದ ಯಾತ್ರೆ ಮುಗಿಸಿ ತೆರಳಿಯಾಗಿತ್ತು...... ಅತ್ತು ಅತ್ತು ಕಣ್ಣೀರು ಪೂರಾ ಬತ್ತಿದ ಮೇಲೆ ನನ್ನೆಡೆಗೆ ಒಂದು ಶುಷ್ಕ ನಗು ಬೀರಿದವಳನ್ನು ಕಂಡು ನಾನೂ ನಕ್ಕೆ....

ನನ್ನ ನಗು ಕಂಡು ಅವಳಿಗೇನೆನಿಸಿತೋ.... ತನ್ನ ತೋಳಿಗೇರಿಸಿಕೊಂಡವಳೇ ಇನ್ನಿಲ್ಲದ ಅಪ್ಯಾಯಮಾನತೆಯಿಂದ ನನ್ನ ತಲೆ, ಬೆನ್ನನ್ನು ಮೆದುವಾಗಿ ಸವರಿ ಎದೆಗೊತ್ತಿಕೊಂಡಳು..... 

ಹಾಗೆ ಎದೆಗಾನಿಸಿಕೊಂಡೇ ಇಡೀ ಜನುಮದ ಮಾತುಕತೆಯನ್ನೆಲ್ಲಾ ಶಶಿಯ ಆಗಮನದೊಳಗೆ ಮುಗಿಸುವ ಹುಚ್ಚಿಗೆ ಬಿದ್ದಂತೆ ನನ್ನೊಂದಿಗೆ ಮಾತಿಗಿಳಿದಿದ್ದಳು ನನ್ನ ಯಶೋಧಾ ಮಾಯಿ .......

"ನೀ ಯಾಕೆ ನಿನ್ನಮ್ಮನಂತೆ, ನನ್ನಂತೆ ಹೆಣ್ಣಾಗಿ ಹುಟ್ಟಿದೆ ಲಾಲೀ....?  ಈ ರಾತ್ರಿ ಚಂದಿರ ಮೂಡುವವರೆಗೆ ಮಾತ್ರವೇ ನಿನ್ನ ಆಯುಷ್ಯ. ಆನಂತರ ನಿನಗೆ ಈ ನರಕದಿಂದ ಮುಕ್ತಿಯೇನೋ ದೊರಕಿ ಬಿಡುತ್ತದೆ. ಇಲ್ಲಿ ಹೆಣ್ಣು ಸಾಯಲೆಂದೇ ಹುಟ್ಟುವವಳು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಆ ಸಾವನ್ನು ಆಹ್ವಾನಿಸಲು ಆಯ್ದುಕೊಳ್ಳುವ ವಿಧಾನಗಳು ಅದೆಷ್ಟು ಘೋರವಾಗಿರುವುದೆಂದು ನಿನಗೆ ತಿಳಿದಿಲ್ಲ. ನನಗೆ ಗೊತ್ತು ಅದೆಷ್ಟು ಭೀಭತ್ಸವೆಂದು..... ನಿನ್ನ ಉಸಿರು ನಿನ್ನ ಕಾಯದಿಂದ ದೂರಾಗುವ ಪ್ರತಿ ಕ್ಷಣವೂ ನಿನ್ನ ಅರಿವಿಗೆ ಬರುವಷ್ಟು ಬರ್ಬರ ಸಾವದು..... ನಮ್ಮನ್ನು ನೆಮ್ಮದಿಯಾಗಿ ಸಾಯಲೂ ಬಿಡದಂತೆ ಚಿತ್ರವಿಚಿತ್ರ ನರಕಯಾತನೆಗಳ ನೀಡಿ ಕೊಲ್ಲುತ್ತಾರೆ ಈ 'ನಾಗರೀಕ ಜನ'. ಕತ್ತು ಹಿಸುಕಿ, ಗೋಣು ಮುರಿದು ಸಾಯಿಸಿದರೆ ನಿನ್ನ ಪುಣ್ಯ. ಅದೇ ಆದಷ್ಟು ನೆಮ್ಮದಿಯ ಸಾವು......

ಆದರೆ ಈ ಮತಿಹೀನ ದಾನವರಿಗೆ ಅಷ್ಟಕ್ಕೇ ಸಮಾಧಾನವೆಲ್ಲಿಯದು? ಅದಕ್ಕಾಗಿಯೇ ಹಲವು ಹೀನಾಯ ತಂತ್ರಗಳನ್ನು ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ತಲೆತಲಾಂತರದಿಂದ ರೂಢಿಸಿಟ್ಟಿದ್ದಾರೆ. ಈ ಸಾವೇ ಅನ್ಯಾಯ.... ಅದರೊಟ್ಟಿಗೆ ಇನ್ನಷ್ಟು ಕ್ರೌರ್ಯ ಮೆರೆವ ಹಂಬಲ...

ಇವರು ಅದೆಷ್ಟೆಲ್ಲಾ ಹಿಂಸೆ ನೀಡಿ ಹೆಣ್ಣು ಕೂಸ ಹತ್ಯೆಗೈವರೆಂದು ನಿನಗೆ ಗೊತ್ತೇನು ಮಗಳೇ....? 

ಆ ಎಳೆಯ ಕಂದನಿಗೆ ವಿಷಪ್ರಾಶನ ಮಾಡುವಾಗ ಇವರ ಕೈ ಕಿಂಚಿತ್ತೂ ನಡುಗುವುದಿಲ್ಲ. ಅವಳನ್ನು ನದಿಯಲ್ಲಿ ತೇಲಿ ಬಿಡುವಾಗ ಮನಃಸಾಕ್ಷಿ ಪ್ರಶ್ನಿಸುವುದಿಲ್ಲ. ಉಸಿರಾಡುವ ಎಳೆ ಜೀವವ ಜೀವಂತ ಹುಗಿದು ಮಣ್ಣು ಮುಚ್ಚುವಾಗ ಪಾಪಪ್ರಜ್ಞೆ ಕಾಡುವುದಿಲ್ಲ. ಹನಿ ನೀರೂ ನೀಡದೇ ಹಸಿವಿನಿಂದಲೇ ಸಾಯುವಂತೆ ಮಾಡುವಾಗ ನರಕದ ಭಯ ಇವರನ್ನು ಹೆದರಿಸುವುದಿಲ್ಲ. ಆಗಷ್ಟೇ ಜನಿಸಿದ ಕೂಸಿನ ಬಾಯಿ ತುಂಬಾ ಉಪ್ಪನ್ನೋ ಅಫೀಮನ್ನೋ ಇಲ್ಲಾ ತಂಬಾಕನ್ನೋ ತುಂಬಿ ಉಸಿರುಗಟ್ಟಿಸುವಾಗ ಆ ಉಸಿರಿನ ಸಂಕಟ ಇವರನ್ನು ದಹಿಸುವುದಿಲ್ಲ. ಪೀಲೀ ಕನೇರ್ ಬೀಜವನ್ನು (ಹಳದಿ ಅಥವಾ ದೀಪ ಕಣಗಿಲೆಯ ಬೀಜ) ಹಾಲಿಗೆ ಬೆರೆಸಿ ಅವಳ ಕೊಲ್ಲುವಾಗ ಅಂತಃಕರಣ ಬಾಧಿಸುವುದಿಲ್ಲ. ಹಸಿಯಾದ ದಪ್ಪನೆ ತೌಲಿಯಾ(ಟವೆಲ್)ದಿಂದ ಅವಳ ಮುಖವನ್ನು ಮುಚ್ಚಿ ಉಸಿರುಗಟ್ಟಿಸುವಾಗ ಅದು ತಮ್ಮಂತೆಯೇ ಒಂದು ಜೀವ ಎಂದು ನೆನಪಾಗುವುದಿಲ್ಲ.... ಅವಳನ್ನು ಜೀವಂತವಾಗಿ ಮಣ್ಣಿನ ಮಡಿಕೆಯೊಳಗಿಟ್ಟು ಮುಚ್ಚಿ, ಮುಚ್ಚಲ ಅತ್ತಿತ್ತ ಸರಿಯದಂತೆ ನಾದಿದ ಹಿಟ್ಟನ್ನು ಅದರ ಸುತ್ತ ಹಚ್ಚಿ ಮಣ್ಣು ಮಾಡುವಷ್ಟು ಕ್ರೂರಿಗಳಿವರು... 

ಇಷ್ಟಕ್ಕೂ ನಿಲ್ಲುವುದಿಲ್ಲ ಇವರ ಹಾಳು ನಂಬಿಕೆಗಳು, ಆಚರಣೆಗಳು... ಸತ್ತ ಮೇಲೂ ನಮ್ಮನ್ನು ನೆಮ್ಮದಿಯಾಗಿರಲು ಬಿಡರು ಇವರು....

ಹೀಗೆ ಕೊಂದ ಹೆಣ್ಣು ಮಗುವನ್ನು ಊರ ಹೊರಗೆ ಇಡುತ್ತಾರೆ. ಸಿಯಾರ್(ನರಿ) ಬಂದು ಎತ್ತೊಯ್ಯಲೀ ಎಂದು. ಹಾಗೆ ಸಿಯಾರ್ ಆ ಹೆಣವನ್ನು ಹೊತ್ತೊಯ್ದರೆ ಅದು ಗಂಡು ಮಗುವಿನ ಆಗಮನದ ಶುಭ ಸಂಕೇತವಂತೆ.... 

ಕಿಂಚಿತ್ ಕರುಣೆಯಿಲ್ಲದೇ ಸಾಯಿಸಿದ ಮೇಲೆ ಅವಳ ಶವದ ತುಟಿಗಳ ನಡುವೆ ಚೂರು ಬೆಲ್ಲವಿರಿಸಿ, ಕೈಯಲ್ಲಿ ಹತ್ತಿಯ ಉಂಡೆಯನ್ನು ಇಟ್ಟು ಮಣ್ಣು ಮಾಡುವಾಗ ಒಂದಿನಿತೂ ನಾಚಿಕೆ ಇಲ್ಲದೆ,

'ಗೂರ್ ಖಾಯೆ, ಪೂನೀ ಕುತ್ತೆಯಾ

ಆಪ್ ನ ಆಯೇ, ಭಾಯ್ ಆನ್ ಗುತ್ತೆಯಾ '

ಎಂಬ ದೋಹಾ ಪಠಿಸುತ್ತಾರೆ.

ಇದೆಲ್ಲವನ್ನೂ ಒಂದಿನಿತೂ ವೇದನೆಯಿಲ್ಲದೆ ಅತ್ಯಂತ ಸಂತಸದಿಂದ ಮಾಡುತ್ತಾರೆ ಇವರು. ಹೆಣ್ಣು ಮಗುವನ್ನು ಕೊಂದರೆ ಮುಂದಿನ ಮಗು ಖಂಡಿತಾ ಗಂಡಾಗಿರುತ್ತದೆ ಎಂಬ ಹುಚ್ಚು ನಂಬಿಕೆ ಈ ಮೂರ್ಖ ಜನರದ್ದು. ಒಂದು ವೇಳೆ ಅದೂ ಹೆಣ್ಣಾದರೆ ಅವಳನ್ನೂ ಕೊಂದು ಮತ್ತೆ ಗಂಡು ಮಗು ಜನಿಸುವುದೆಂದು ನಂಬುವುದು.... ಒಟ್ಟಿನಲ್ಲಿ ಇವರ ಆಚಾರ್ ವಿಚಾರ್ ಗಳಿಗೆ ಹರಕೆಯ ಕುರಿಯಾಗುವುದು ಮಾತ್ರ ಹೆಣ್ಣು ಮಗಳು.... 

ಹೆಣ್ಣು ಮಗು ಮನೆಗೆ ಕೆಡುಕನ್ನು ಹೊತ್ತು ತರುತ್ತಾಳಂತೆ. ಮೊದಲನೇ ಹೆಣ್ಣು ಮಗು ದುರಾದೃಷ್ಟ, ಎರಡನೇಯದು ವಿಪತ್ತು, ಮೂರನೆಯದೂ ಹೆಣ್ಣಾದರೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತ ಮಹಾದುರಂತವೇ ಸರಿ......

ಅದೆಷ್ಟು ಮುದ್ದಾಗಿ, ನಿಶ್ಚಿಂತೆಯಿಂದ ನಗುತ್ತಿರುವೆ ಲಾಲಿ ನೀನು...... ಇವತ್ತು ರಾತ್ರಿ ನಿನಗಾಗಿ ಕಾದಿರುವ ಮರಣದ ಪರಿಯ ಅರಿವಿದೆಯೇನು ನಿನಗೆ....? ಪಾಪ ನಿನಗೆಲ್ಲಿಂದ ತಿಳಿಯಬೇಕು? ಇವತ್ತು ರಾತ್ರಿ ಚಳಿ ಬಿದ್ದ ಕೂಡಲೆ ಯಾವುದೇ ಹೊದಿಕೆ ಇಲ್ಲದೇ ನಿನ್ನನ್ನು ಮನೆಯ ಹಿಂದಿನ ಆಂಗನ್(ಅಂಗಳ)ನಲ್ಲಿ ಹಾಕುತ್ತಾರೆ..... ಈ ಶಿಶಿರದ ಚಳಿಯನ್ನು ನಮಗೇ ತಡೆಯಲಾಗದು. ಇನ್ನು ನೀನು ತಡೆಯಬಲ್ಲೆಯಾ? ರಾತ್ರಿ ಬೆಳಗಿನವರೆಗೆ ಆ ಕೊರೆವ ಚಳಿಯಲ್ಲಿ ಅತ್ತೂ ಕರೆದು ಚಳಿ ಸಹಿಸಲಾಗದೇ ನರಳಿ ನಿನ್ನ ಒಂದು ದಿನದ ಬದುಕು ಸಮಾಪ್ತಿಯಾಗುತ್ತದೆ. ಈಗ ಹೀಗೆ ಕೈಕಾಲಾಡಿಸಿ ನಗುತ್ತಿರುವ ನೀನು ನಾಳೆ ಬೆಳಗಿನ ಜಾವಕ್ಕೆ ನಿರ್ಜೀವ ಕೊರಡಾಗಿರುತ್ತೀಯಾ ಮಗಳೇ..... ಯಾಕೆ ಹುಟ್ಟಿದೆ ಹೆಣ್ಣಾಗಿ.....?

ನಾನು ಎಂದಿಗೂ ಭಗವಂತನನ್ನು ಬೇಡುವುದು ಒಂದೇ....

'ಹೇ ಭಗವಾನ್..... ಅಗಲೇ ಜನಮ್ ಮೋಹೇ ಪೈದಾ ನ ಕಿಜೋ.....' ಎಂದು. ಈ ಜನ್ಮದಲ್ಲಿ ಕಂಡದ್ದೇ ಸಾವಿರ ಜನ್ಮಗಳಿಗೆ ಸಾಕಾಗಿದೆ. ಹೆಣ್ಣಾಗಿ ಹುಟ್ಟಲೇ ಬಾರದು ಲಾಲೀ.... ಹುಟ್ಟಿದರೂ ಬದುಕಿ ಉಳಿಯಬಾರದು.....

ಬದುಕಿ ಉಳಿದರೆ ಏನೆಲ್ಲಾ ಅನುಭವಿಸಬೇಕು ನಿನಗೆ ತಿಳಿದಿದೆಯೇನು.....?

ನನ್ನಪ್ಪ ದಲ್ಲಾಳಿಯೋರ್ವನಿಗೆ ನನ್ನ ಮಾರಿದ. ಆ ದಲ್ಲಾಳಿಯಿಂದ ನಿನ್ನ ಚಾಚೂವಿಗೆ ಬಿಕರಿಯಾದೆ ನಾನು... ನನ್ನ ಓರಗೆಯ ಕೆಲ ಹೆಣ್ಣುಗಳು ವೇಶ್ಯಾಗಾರಕ್ಕೆ ಮಾರಲ್ಪಟ್ಟಿದ್ದಾರೆ. ಅಂತಹ ಬದುಕು ನನ್ನದಾಗಲಿಲ್ಲ ಎಂಬುದಷ್ಟೇ ನನ್ನ ಅದೃಷ್ಟ. ಹಲವರಿಗೆ ಸೆರಗು ಹಾಸುವ ಬದಲು ಒಬ್ಬನಿಗೇ ನನ್ನನ್ನು ಒಡ್ಡಿಕೊಂಡಿರುವೆನಷ್ಟೇ.... ಅದರ ಹೊರತು ಈ ಎರಡರ ನಡುವೆ ಅಂತಹ ವ್ಯತ್ಯಾಸವೇನೂ ಕಾಣದು. ಇಲ್ಲಿಯವರೆಗಿನ ನನ್ನ ಬದುಕಿನಲ್ಲಿ ಪ್ರದೇಶ ಹಾಗೂ ವ್ಯಕ್ತಿಗಳ ಚಹರೆಯ ಹೊರತು ಬೇರೇನೂ ಬದಲಾವಣೆಗಳಿಲ್ಲ ಮಗಳೇ.... 

ಅಪ್ಪನ ಹಂಗಿನ ಮಾಯ್ಕಾದಲ್ಲಿದ್ದಾಗಲೂ, ತಲೆಹಿಡುಕ ದಲ್ಲಾಳಿಯ  'ಹೆಣ್ಣು ಮಾರಾಟದ ಅಂಗಡಿ' ಯ ಪ್ರದರ್ಶನದ ಗೊಂಬೆಯಾಗಿದ್ದಾಗಲೂ, ಈಗ ನಿನ್ನ ಚಾಚೂವಿನ ಕೈಗೊಂಬೆಯಾಗಿರುವಾಗಲೂ ನಾನು ಪಂಜರದ ಪಕ್ಷಿಯೇ........ 

ಎಂದಿಗೂ ಹಾರದ ಪಂಜರದ ಪಕ್ಷಿಗಳು ನಾವು. ಈ ಪಂಜರದಿಂದ ಹೊರಬಂದು ಹಾರುವ ಆಸೆ ನಮಗಿದ್ದರೂ ಅದನ್ನು ಒಪ್ಪಿಕೊಂಡು, ಗೌರವಿಸುವ ವಿಶಾಲ ಮನಸ್ಥಿತಿ ಈ ಜನರಿಗಿಲ್ಲ. ಹೆದರಿಸಿ, ಬೆದರಿಸಿ ಸೊಲ್ಲೆತ್ತದಂತೆ ದಮನಿಸಿ ಪಂಜರದಲ್ಲೇ ಇರಿಸಲು ನೋಡುತ್ತಾರೆ. ಒಂದು ವೇಳೆ ಅದೆಲ್ಲಾ ಮಿತಿಗಳನ್ನೂ ಮೀರಿ ಹಾರಲು ಪ್ರಯತ್ನಿಸಿದರೆ ನಮ್ಮ ರೆಕ್ಕೆಗಳನ್ನೇ ಕತ್ತರಿಸಿಬಿಡುತ್ತಾರೆ ಈ ಕಟುಕರು.....

ಇಂತಹ ಜನರ ಮಧ್ಯೆ ನೀನು ಸಾಯದೇ ಬದುಕು ಎಂದು ಹಾರೈಸಲೇ....? ಹಾಗೊಂದು ವೇಳೆ ಬದುಕಿದರೆ ನೀ ನೋಡಬೇಕಾದ ನರಕ, ಹೆಣ್ಣಾಗಿ ಹುಟ್ಟಿದ್ದಕ್ಕೆ ಅನುಭವಿಸಬೇಕಾದ ವೇದನೆ ಏನೆಂಬುದನ್ನು ನನಗಿಂತ ಚೆನ್ನಾಗಿ ಬಲ್ಲವರ್ಯಾರು? ನೀನು ಈ ರಾತ್ರಿ ಯಮ ಯಾತನೆ ಪಟ್ಟು ಕೊರೆವ ಚಳಿಯಲ್ಲಿ ನರಳಿ ಸತ್ತು ನಿನ್ನ ಮಾಯಿಯ ಮಡಿಲು ಸೇರಿಬಿಡು ಎಂದು ಹಾರೈಸಲು ಒಡಲ ಸಂಕಟ ಒಪ್ಪದು..... ಆದರೆ ನೀನು ಬದುಕಿ ಉಳಿದರೆ ನಿನ್ನ ಮಾಯಿ, ಚಾಚಿಯರಂತೆ ಪಂಜರದ ಪಕ್ಷಿಯಾಗಿ ಪ್ರತೀ ಕ್ಷಣ ನರಕ ಅನುಭವಿಸಬೇಕು... ಯಾವ ಕ್ಷಣದಲ್ಲಿ ಎಂತಹ ಆಪತ್ತು ಹೊಂಚು ಹಾಕಿ ಕುಳಿತಿದೆಯೋ ಎಂಬ ಭಯದಲ್ಲೇ ಬದುಕಬೇಕು.... ಅದಕ್ಕಿಂತ ಈ ರಾತ್ರಿ ನರಳಿ ಸಾಯುವುದೇ ಸುಖ ಮಗಳೇ........" 

ಕೈಸಾ ನಸೀಬಾ ಜಗ್ ಮೆ ಹರ್ ಬಿಟಿಯಾ ಪಾಯೇ......

ಅಪನಾ ಜಿನ್ಹೆ ಸಮ್ಜತ್ ಹೆ ಬನೇ ವೂ ಪರಾಯೇ......

ಬಾಬುಲ್ ಕಾ ಅಂಗನಾ ಚೂಟಾಯ್ ಮಯ್ಯಾ ಕಾ ಅಚರಾ.....

ಭೋಲಿ ಚಿರೈಯಾ ಪಾವೇ ಬಸ್ ಇಕ್ ಪಿಂಜರಾ....

ಫಿರ್ ಭಿ ಎ ಸಬ್ ಸಮಜಾವೇ ತಡಪಾ ನಾ ಕಿಜೋ.....

ಜೋ ಅಬ್ ಕಿಯೇ ಹೋ ಧಾತಾ ಐಸಾ ನಾ ಕಿಜೋ.....

ಅಗಲೇ ಜನಮ್ ಮೋಹೇ ಬಿಟಿಯಾ ನ ಕಿಜೋ.....

ಚಾಚಿಯ ಮನದ ಭಾವನೆಗಳ ಅಣೆಕಟ್ಟು ಒಡೆದು ಹಿಡಿದಿಟ್ಟಿದ್ದ ಗತದ ವೇದನೆಗಳೆಲ್ಲಾ ಪ್ರವಾಹೋಪಾದಿಯಲ್ಲಿ ಹರಿದಿತ್ತು. ಅವಳೆಲ್ಲಾ ಮಾತುಗಳಿಗೂ ನನ್ನ ನಿಷ್ಕಲ್ಮಶ ನಗುವೊಂದೇ ಉತ್ತರವಾಗಿತ್ತು....... ಅವಳು ಪದೇ ಪದೇ ನನ್ನ ಮೈದಡವಿ, ತಲೆ ಸವರಿ ಎದೆಗೊತ್ತಿಕೊಂಡು ಹನಿಗಣ್ಣಾಗುತ್ತಿದ್ದಳು. 'ಇಂದು ರಾತ್ರಿಯೇ ಸತ್ತು ನಿನ್ನಮ್ಮನ ಸೇರಿಕೋ ಮಗಳೇ.... ಬದುಕಿ ಈ ಪಂಜರದಲ್ಲಿ ನನ್ನಂತೆ ಬಂಧಿಯಾಗುವ ನರಕ ನಿನಗೆ ಬೇಡ' ಎಂದು ಹರಸುತ್ತಿದ್ದಳು.....

ಆದರೆ.......

ಆ ಕ್ಷಣಕ್ಕೆ ಚಾಚಿಯನ್ನೂ ಸೇರಿ ಮನೆಯ ಯಾವ ಸದಸ್ಯನಿಗೂ ತಿಳಿಯದ ವಿಚಾರವೆಂದರೆ.....

ಅಷ್ಟು ಸುಲಭದ ಸಾವನ್ನು ವಿಧಾತ ನನ್ನ ಹಣೆಯಲ್ಲಿ ಬರೆದಿರಲಿಲ್ಲ...... 

ನಾನು ಎದುರಿಸಬೇಕಾದ ಪರೀಕ್ಷೆಗಳು ಬಹಳವಿತ್ತು....... ಆ ಪರೀಕ್ಷೆಗಳನ್ನು ಎದುರಿಸಿ ಬಡಿದಾಡಲು ನಾನು ಬದುಕುಳಿಯಲಿದ್ದೆ......

ಆ ರಾತ್ರಿಗೆ ನಿಗದಿಯಾಗಿದ್ದ ನನ್ನ ಹನನದ ಮುಹೂರ್ತ ಶಾಶ್ವತವಾಗಿ ರದ್ದಾಗಲಿತ್ತು.......!!! 

ಹಾಗೂ ಆ ರದ್ದತಿಗೆ ಬಾಪೂವಿನ ನಯೀ ಲುಗಾಯೀ, ನನ್ನ ಸೌತೇಲಿ ಮಾಯಿ ಕಾರಣಕರ್ತೆಯಾಗಲಿದ್ದಳು......!!!!!

ಸಶೇಷ

ಟಿಪ್ಪಣಿಗಳು:

ದೇಶದ ಎಲ್ಲೆಡೆ ಹೆಣ್ಣು ಶಿಶುವನ್ನು ಹತ್ಯೆಗೈಯಲು ಹಲವು ವಿಧಾನಗಳನ್ನು ಅನುಸರಿಸಲಾಗುತ್ತಿತ್ತು. ಮಣ್ಣು ಮಾಡುವ ವಿಧಾನದಲ್ಲಿ ಕೊಂಚ ವ್ಯತ್ಯಾಸಗಳಿದ್ದರೂ ಹತ್ಯೆಗೆ ಬಳಸುತ್ತಿದ್ದ ವಿಧಾನಗಳು ಸಾಮಾನ್ಯವಾಗಿ ಒಂದೇ ತೆರನಾದವು.

* ಹಳದಿ ಕಣಗಿಲೆ/ದೀಪ ಕಣಗಿಲೆ(Yellow oleander shrub) ಯ ಬೀಜದ ಪುಡಿಯನ್ನು ಹಾಲಿಗೆ ಬೆರೆಸಿ ಕುಡಿಸುವುದು.

* ಎಕ್ಕದ ಗಿಡ(calotropis) ದ ಹಾಲನ್ನು ಕುಡಿಸುವುದು.

* ಭತ್ತದ ಕೆಲವು ಕಾಳುಗಳನ್ನು ಬಿಸಿ ನೀರು ಅಥವಾ ಹಾಲಿನೊಂದಿಗೆ ಕೊಡುವುದು.

* ತಂಬಾಕಿನ ಪುಡಿಯನ್ನು ತಿನ್ನಿಸುವುದು.

* ಕ್ರಿಮಿನಾಶಕಗಳನ್ನು ಕುಡಿಸುವುದು.

* ಬಾಯಿ,ಮೂಗು ಮುಚ್ಚಿ ಉಸಿರುಟ್ಟಿಸುವುದು.

* ಒದ್ದೆ ಮಾಡಿದ ದಪ್ಪ ಟವೆಲ್ಲಿನಿಂದ ಮುಖವನ್ನು ಮುಚ್ಚಿ ಉಸಿರುಗಟ್ಟಿಸುವುದು.

* ಚಳಿಗಾಲದಲ್ಲಿ ಯಾವುದೇ ಹೊದಿಕೆಯಿಲ್ಲದೆ ಮಗುವನ್ನು ಅಂಗಳದಲ್ಲಿ ಮಲಗಿಸುವುದು..... ಇತ್ಯಾದಿ ವಿಧಾನಗಳನ್ನು ಅನುಸರಿಸುತ್ತಿದ್ದರು.

ಹೆಣ್ಣು ಶಿಶು ಹುಟ್ಟಿದೊಡನೆ ಮಡಿಕೆಯೊಳಗೆ ಹಾಕಿ ಮುಚ್ಚಿ, ತೆರೆಯಲು ಸಾಧ್ಯವಾಗದಂತೆ ಗೋಧಿ ಹಿಟ್ಟಿನ ಕಣಕ(ಮಿಶ್ರಣ) ವನ್ನು  ಸುತ್ತ ಹಚ್ಚಿ, ಮುಚ್ಚಲ ತೆರೆಯಲು ಸಾಧ್ಯವಾಗದಂತೆ ಸೀಲ್ ಮಾಡಿ, ಜೀವಂತ ಸಮಾಧಿ ಮಾಡುವ ಸಂಪ್ರದಾಯ ಗುಜರಾತ್ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು.

ಪಂಜಾಬಿನ ಬೇಡಿ ಕತ್ರೀಸ್ ರಜಪೂತ ಪಂಗಡದಲ್ಲಿ ಹೆಣ್ಣು ಶಿಶು ಹತ್ಯೆ ಅತೀ ಹೆಚ್ಚು. ಹಾಗಾಗಿ ಈ ಪಂಗಡಕ್ಕೆ 'ಕುಡೀ ಮಾರ್' ಪಂಗಡ (killer of daughters) ಎಂಬ ವಿಶೇಷಣವೇ ಅಂಟಿಕೊಂಡಿದೆ. 

ಇವರು ಶಿಶುವನ್ನು ಹತ್ಯೆಗೈದ ನಂತರ ಅದರ ತುಟಿಗಳ ನಡುವೆ ಚೂರು ಬೆಲ್ಲವಿರಿಸಿ, ಕೈಯಲ್ಲಿ ಹತ್ತಿಯ ಉಂಡೆಯನ್ನು ಇಟ್ಟು,

'ಗೂರ್ ಖಾಯೆ, ಪೂನೀ ಕುತ್ತೆಯಾ

ಆಪ್ ನ ಆಯೇ, ಭಾಯ್ ಆನ್ ಗುತ್ತೆಯಾ '

(ನಿನ್ನ ಪಾಲಿನ ಬೆಲ್ಲವನ್ನು ತಿಂದು, ಹತ್ತಿಯನ್ನು ಹೊಸೆಯುತ್ತಿರು...

ನೀನು ವಾಪಾಸಾಗಬೇಡ, ನಿನ್ನ ಬದಲಾಗಿ ತಮ್ಮನನ್ನು/ಗಂಡು ಮಗುವನ್ನು ಕಳಿಸು) 

ಎಂಬ ದೋಹಾವನ್ನು ಪಠಿಸುತ್ತಾ ಶವವನ್ನು ಮಣ್ಣು ಮಾಡುವ ಸಂಪ್ರದಾಯ ಈ ಪಂಗಡದಲ್ಲಿದೆ.

ಮಾಹಿತಿ ಕೃಪೆ: ಅಂತರ್ಜಾಲ

ಧನ್ಯವಾದಗಳು......

ಅಗ್ನಿ ತರಂಗಿಣಿ 3

ಅಗಲೇ ಜನಮ್ ಮೋಹೇ ಬಿಟಿಯಾ ನಾ ಕೀಜೋ…...

ಹೆರಿಗೆಯೆಂದರೆ ಹೆಣ್ಣಿಗೆ ಮರುಹುಟ್ಟು ಎನ್ನುತ್ತಾರೆ ಬಲ್ಲವರು. ಕೂಸ ಹಡೆಯುವಾಗ ತಾಯಿ ಸತ್ತು ಬದುಕುವಳಂತೆ. ನನ್ನ ಈ ಭೂಮಿಗೆ ತರುವಾಗ ನನ್ನ ಮಾಯಿ ಸತ್ತು ಬದುಕಿದಳಾ ಎಂಬುದು ಮುಂದೆ ನಿಮಗೇ ತಿಳಿಯುತ್ತದೆ.... ಆದರೆ ನಾನು ಮಾತ್ರ ಅವಳೊಡಲಿಗೆ ಬಿದ್ದ ಕ್ಷಣದಿಂದಲೇ ಮರಣದೊಂದಿಗೆ ಸೆಣಸುತ್ತಲೇ ಜೀವಿಸಿದ್ದೆ. ನನ್ನ ಪಾಡು ನೋಡಿ ಮರಣದ ಹೃದಯವೇ ದ್ರವಿಸಿತೇನೋ.... 
ಮರಣವೇ ಕರುಣೆದೋರಿ ದಯೆ ಪಾಲಿಸಿದ ಜನನದಂತೆ ನಾನು ಹುಟ್ಟಿದೆ....

'ಹುಟ್ಟೆಂದರೆ ಸಂಭ್ರಮದ ಹಬ್ಬ. ಅದಕ್ಕೇಕೆ ಇಷ್ಟೊಂದು ಜಂಜಾಟ......?' ಎಂಬ ಪ್ರಶ್ನೆ ಸುಳಿದಾಡಬಹುದು ನಿಮ್ಮ ಮಸ್ತಿಷ್ಕದಲ್ಲಿ. 

ಹೌದು......
ಹುಟ್ಟೆಂದರೆ ಸಂಭ್ರಮದ ಹಬ್ಬವೇ.......
ಆದರೆ ಎಲ್ಲರ ಪಾಲಿಗೂ ಅಲ್ಲವಲ್ಲ.......!!
ನಿಮ್ಮಲ್ಲಿ ಹೇಗೋ ಎಂತೋ....... ತಿಳಿದಿಲ್ಲ ನನಗೆ.......
ಆದರೆ ಇಲ್ಲಿ......?
ಇಲ್ಲಿ ಅದು ಕೇವಲ ಗಂಡಿನ ಪಾಲು........
ಜನನದ ಸಂಭ್ರಮ, ಸಂತೋಷ, ಹಬ್ಬ ಎಲ್ಲವೂ ಕೇವಲ ಅವನ ಹಕ್ಕು......

ನನಗೆ ಹುಟ್ಟು ಸಂಭ್ರಮವಲ್ಲ........
ಅದೊಂದು ಯುದ್ಧ.......
ಬದುಕಿಗಾಗಿ, ಜೀವಕ್ಕಾಗಿ ನನ್ನ ಯುದ್ಧ.....

ಏಕೆಂದರೆ ನಾನು ಮಗನಲ್ಲ........ 
ನಾನು ಮಗಳು.........!

ನಾನು ಹೆಣ್ಣು......!

ಈ ದೇಶದಲ್ಲಿ, ಅದರಲ್ಲೂ ನಾನು ಹುಟ್ಟಿದ ಪ್ರದೇಶದಲ್ಲಿ ಹೆಣ್ಣೆಂದರೆ.........

ಅಮ್ಮನ ಗರ್ಭದಲ್ಲೇ ಚಿವುಟಲ್ಪಡುವವಳು......!
ಜನಿಸಿದ ಮರು ಘಳಿಗೆಯೇ ಕೊಲ್ಲಲ್ಪಡುವವಳು....!
ಆರೋಗ್ಯ, ಓದು ಬರಹದ ಸೌಲಭ್ಯಗಳಿಂದ ವಂಚಿತಳಾಗುವವಳು.......!
ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿಯ ಹಕ್ಕನ್ನು ಕಳೆದುಕೊಂಡವಳು......!
ಸಣ್ಣ ವಯಸ್ಸಿಗೇ ಮದುವೆಯ ಬೇಡಿಯಿಂದ ಬಂಧಿಸಲ್ಪಡುವವಳು......!
ಪದೇ ಪದೇ ಗರ್ಭ ಧರಿಸಿ ಕಾಲಕ್ರಮೇಣ ಮಕ್ಕಳ ಹಡೆವ ಯಂತ್ರವಾಗಿ ಬದಲಾಗುವವಳು.....!
ಹಣಕ್ಕಾಗಿ ಮಾರಲ್ಪಡುವವಳು, ಉಪಯೋಗಕ್ಕಾಗಿ ಖರೀದಿಸಲ್ಪಡುವವಳು......!
ನಿರಂತರ ದೌರ್ಜನ್ಯಕ್ಕೆ ಒಳಗಾಗಿ ಕಡೆಗೊಮ್ಮೆ ಸಾಯುವವಳು......!

ಇವರ ಪಾಲಿಗೆ ಹೆಣ್ಣೆಂದರೆ ಹೊಣೆಗಾರಿಕೆ, ಬಾಧ್ಯತೆ, ಅಗತ್ಯವಿಲ್ಲದ ಹೊರೆ, ಪೋಷಿಸಲೊಂದು ಅನಗತ್ಯ ಉದರ..... ಅವಳು 'ಪರಾಯಾ ಧನ್'.....

ಅದೇ ಗಂಡು ಮಗ........? ಅವನು ಆಸ್ತಿ, ಸಂಪತ್ತು.... ಯೋಗ್ಯತೆ ಇರಲೀ ಇಲ್ಲದಿರಲೀ, ಅರಸನ ಪಟ್ಟ ಕಟ್ಟಿಟ್ಟ ಬುತ್ತಿ ಅವನಿಗೆ.... 'ಆಖಿ಼ರ್ ವಹೀ ತೋ ಹೇ, ಜೋ ವಂಶ್ ಕೋ ಆಗೇ ಬಢಾಯೇಗಾ....'. ಅವನಿಲ್ಲದಿದ್ದರೆ ಇವರ 'ರಾಜವಂಶ'ವೇ ಕೊನೆಯಾಗುವುದಲ್ಲ? ಇವರ ಚಿತೆಗೆ ಅವ ಕೊಳ್ಳಿ ಇಟ್ಟು ಕಳಿಸದಿದ್ದರೆ ಇವರಿಗೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲವಲ್ಲ..... ಅವನು ತನ್ನ ಕೈಯಾರೆ ಶ್ರಾದ್ಧ ಮಾಡಿ ಪಿಂಡ ಪ್ರಧಾನಿಸದಿದ್ದರೆ ಇವರ ಆತ್ಮ ಮುಕ್ತಿ ಸಿಗದೇ ಅಂಡಲೆಯುವುದಿಲ್ಲವೇ.......?

ಅದೇ ಅವ'ಳು' ಹುಟ್ಟಿದರೇ.....? ಅವಳನ್ನು ಪೋಷಿಸಿ, ರಾಶಿ ಹಣ ಖರ್ಚು ಮಾಡಿ, ದಹೇಜ್ (ವರದಕ್ಷಿಣೆ) ನೀಡಿ ಮಾಯ್ಕಾದಿಂದ(ತವರಿನಿಂದ) ಸಾಗಹಾಕಬೇಕು. ಜೊತೆಗೆ ಮಗಳಿಂದ ವಂಶವೃದ್ಧಿಯಾಗದು, ಸ್ವರ್ಗ ಪ್ರಾಪ್ತಿಯಾಗದು, ಮುಕ್ತಿ ದೊರಕದು.......

ಸತ್ತ ಮೇಲೆ ಸಿಗುವ ಸ್ವರ್ಗದ ಆಸೆಗೆ ಅವಳ ಬದುಕನ್ನೇ ನರಕವಾಗಿಸುವುದು ನ್ಯಾಯವೇ....? ನಿಮ್ಮ ಆಸೆಗಳ ಪೂರೈಕೆಗೆ ಅವಳ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ಹಕ್ಕು ನಿಮಗ್ಯಾರು ಕೊಟ್ಟಿದ್ದು? ಅವಳ ದಗ್ಧ ಮನದ ಸಂಕಟದ ಉರಿಶಾಪ ತಟ್ಟದೇ ಬಿಟ್ಟಿತೇ ನಿಮಗೇ.......?

ಈ ಪ್ರಶ್ನೆಗಳನ್ನು ಸ್ವಗತದಲ್ಲಿ ಅದೆಷ್ಟು ಬಾರಿ ಕೇಳಿಕೊಂಡಿರುವೆನೋ ನನಗೇ ತಿಳಿದಿಲ್ಲ....... ಈ ಜನರ ಅಮಾನುಷ ಕೃತ್ಯಗಳನ್ನು ನೊಡಿದಾಗಲೆಲ್ಲಾ ಇದೇ ಪ್ರಶ್ನೆಗಳು ಮತ್ತೆ ಮತ್ತೆ ನನ್ನ ತಲೆಯಲ್ಲಿ ಗಿರಕಿ ಹೊಡೆಯುವುದು......

ನನ್ನದು ಉತ್ತರಪ್ರದೇಶದ ಮುಜ್ಜಫರ್ ನಗರ ಜಿಲ್ಲೆಯ ಶಾಮ್ಲಿ ವಲಯದ ಭೈರೋನ್ ಗ್ರಾಮ. ಅದು ಉತ್ತರಪ್ರದೇಶ ಹಾಗೂ ಹರಿಯಾಣಾದ ಗಡಿಗ್ರಾಮ. ನಮಗೂ ಹರಿಯಾಣಕ್ಕೂ ಗಡಿಯಾಗಿದ್ದುದ್ದು ಸೊಬಗಿನಿಂದ ಬಳುಕುವ ಯಮುನೆ ಮಾತ್ರ. ಶಾಂತಳಾಗಿ ಹರಿಯುವ ಯಮುನೆಯನ್ನು ದಾಟಿದರೆ ಪಾಣಿಪತ್, ಕರ್ನಾಲ್, ಘರೌಂದಾ ಪಟ್ಟಣಗಳು ಹರಿಯಾಣಾ ರಾಜ್ಯಕ್ಕೆ ಸ್ವಾಗತ ಕೋರುತ್ತವೆ.

ಮುಜ್ಜಫರ್ ನಗರಕ್ಕೆ ದೊಡ್ಡ ಇತಿಹಾಸವೇ ಇದೆ. ತೈಮೂರ್ ಕಾಲದಿಂದ ಹಿಡಿದು, ಮೊಘಲರ ಆಳ್ವಿಕೆ, ಬ್ರಿಟೀಷರ ಕಾಲಘಟ್ಟದಲ್ಲೂ ಈ ನಗರ ಬಹಳ ಪ್ರಾಮುಖ್ಯತೆ ಪಡೆದಿತ್ತು.(ಸ್ವಾತಂತ್ರ್ಯ ಪೂರ್ವದಲ್ಲಿ ಮುಜ್ಜಫರ್ ನಗರ ಉತ್ತರ ಪಶ್ಚಿಮೀ ಪ್ರಾಂತ್ಯದ ಭಾಗವಾಗಿತ್ತು) ಹಲವು ಐತಿಹಾಸಿಕ ಸ್ಥಳಗಳೂ ಇಲ್ಲಿವೆ. ಗತದಲ್ಲಿ ಪ್ರಭಾವಿಯಾಗಿ ಮೆರೆದ ಈ ವಲಯ ವರ್ತಮಾನದಲ್ಲಿ ಕೊಲೆ, ಸುಲಿಗೆ, ದರೋಡೆ, ದೌರ್ಜನ್ಯಗಳಿಗೆ ಕುಖ್ಯಾತಿ ಪಡೆದಿದ್ದು ವಿಪರ್ಯಾಸವಲ್ಲದೇ ಮತ್ತೇನು? 

ಅದರಲ್ಲೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಇಲ್ಲಿ ಕೊನೆ ಮೊದಲಿಲ್ಲ. ಅವಳು ತಾಯ ಗರ್ಭದಲ್ಲಿ ಕುಡಿಯೊಡೆದಲ್ಲಿಂದಲೇ ಆರಂಭವಾಗುತ್ತದೆ ಅವಳ ಅಸ್ತಿತ್ವವನ್ನೇ ಅಳಿಸಿ ಹಾಕುವ ಹುನ್ನಾರ. ಆಗ ಭ್ರೂಣದ ಲಿಂಗ ಪತ್ತೆಗೆ ಸರಿಯಾದ ತಂತ್ರಜ್ಞಾನ ಇರಲಿಲ್ಲವಾದ್ದರಿಂದ ಹಳ್ಳಿ ಮದ್ದುಗಳ ಮೊರೆ ಹೋಗುತ್ತಿದ್ದರು ಗರ್ಭಪಾತಕ್ಕೆ. ಆದರೆ ಈ ಹಳ್ಳಿಮದ್ದುಗಳು ತಾಯಿಯ ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆ ಹೆಚ್ಚಿದ್ದರಿಂದ ಜನನದವರೆಗೆ ಬದುಕುವ ಅದೃಷ್ಟವಿತ್ತು ಹೆಣ್ಣು ಕೂಸಿಗೆ.......

ಅಷ್ಟೇ........

ಹುಟ್ಟಿದ ಮರುಕ್ಷಣವೇ ಕೂಸಿನ ಹಣೆಬರಹ ನಿರ್ಧರಿತವಾಗುತ್ತದೆ.......

ಗಂಡಾದರೆ ಊರ ತುಂಬಾ ಮಲಾಯಿ ಮಕ್ಕನ್, ಚಂಚಂ ಮಿಠಾಯಿ ಹಂಚಿ ಸಂಭ್ರಮಾಚರಣೆ .........

ಅದೇ ಹೆಣ್ಣಾದರೆ......... !!
ಆ ಕಂದನ ಅಳು ಗಂಟಲಿನಿಂದ ಹೊರಬರುವ ಮೊದಲೇ ಉಸಿರು ನಿಲ್ಲುವುದು ವಾಡಿಕೆ....! ಹೆಣ್ಣು ಶಿಶು ಹತ್ಯೆ ಎಂಬುದು ಇಲ್ಲಿ ಬಕರೀ ಹಲಾಲ್ ಮಾಡುವಷ್ಟೇ ಸಾಮಾನ್ಯವಾದ ಸಂಗತಿ. 

ಇದು ಕೇವಲ ನನ್ನೂರು ಅಥವಾ ರಾಜ್ಯದ ಕಥೆಯಲ್ಲ. ನಮ್ಮ ಉತ್ತರಪ್ರದೇಶವೂ ಸೇರಿ ನೆರೆಯ ಹರ್ಯಾಣ, ಪಂಜಾಬ್, ರಾಜಸ್ಥಾನ, ಬಿಹಾರ........ ನನಗೆ ತಿಳಿದಿರುವಂತೆ ಈ ಪಂಚರಾಜ್ಯಗಳ ಇಡೀ ಹೆಣ್ಣು ಸಂತತಿಯ ವ್ಯಥೆ ಇದು.‌ ಅದರಲ್ಲೂ ಉತ್ತರಪ್ರದೇಶ, ಹರ್ಯಾಣ ಮತ್ತು ಪಂಜಾಬಿನಲ್ಲಿ ಹೆಣ್ಣಾಗಿ ಜನಿಸುವ ನರಕ ಯಾವ ಜೀವಿಗೂ ಬರಬಾರದು. ಇಲ್ಲಿಯ ಸಮಾಜ ಆಕೆ ಹುಟ್ಟಿದ ಕ್ಷಣದಿಂದ ಹಿಡಿದು ಬದುಕಿನ ಪ್ರತಿಯೊಂದು ಮಜಲುಗಳಲ್ಲೂ ಹೆಣ್ಣನ್ನು ಬಹಳ ಕಠೋರ ಹಾಗೂ ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತದೆ. ಈ ಪುರುಷಪ್ರಧಾನ ಸಮಾಜದ ಕಣ್ಣಿನಲ್ಲಿ ಅವಳು ಕೇವಲ ಒಂದು ವಸ್ತುವಷ್ಟೇ..... 

ಅಂದಹಾಗೆ ಈ ಶಿಶು ಹತ್ಯೆ ಇಂದು ನಿನ್ನೆಯಿಂದ ಆರಂಭವಾದ ಪರಿಪಾಠವಲ್ಲ. ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದ, ತಲೆಮಾರಿನಿಂದ ತಲೆಮಾರಿಗೆ ಕಲಿಸಿಕೊಟ್ಟ 'ಅತ್ಯುತ್ತಮ' ಸಂಪ್ರದಾಯ.....

ರಾಜಮನೆತನಗಳ ಆಳ್ವಿಕೆಯ ಕಾಲದಲ್ಲೇ ಹೆಣ್ಣು ಶಿಶು ಹತ್ಯೆ ಈ ಪಂಚರಾಜ್ಯಗಳಲ್ಲಿ ಸಾಮಾನ್ಯವಾಗಿತ್ತು ಎನ್ನುತ್ತದೆ ಇತಿಹಾಸ. ಹೆಣ್ಣುಮಗು ಜನಿಸಿದೊಡನೇ ಒಂದೋ ಅದರ ಬಾಯಿಗೆ ದನದ ಸೆಗಣಿ ತುಂಬಿಸಿ ಇಲ್ಲವಾದರೆ ಮುಖವನ್ನು ಹಾಲಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿಸುವ ವಿಧಾನವನ್ನು ಅನುಸರಿಸಲಾಗುತ್ತಿತ್ತಂತೆ. ಆ ಸಮಯದಿಂದ ಹಿಡಿದು ಭಾರತ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಾಗಲೂ ಯಾವುದೇ ಎಗ್ಗಿಲ್ಲದೆ ಈ ಸಂಪ್ರದಾಯ ಮುಂದುವರೆಯಿತು. ಇದನ್ನು ತಡೆಯಲು ಬ್ರಿಟೀಷರು ೧೮೭೦ರಲ್ಲಿ ಹೆಣ್ಣು ಶಿಶು ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಫಲಕಾರಿಯಾಗಲಿಲ್ಲ. ಮುಂಚೆ ಹುಟ್ಟಿದೊಡನೆ ಹೆಣ್ಣು ಮಗುವನ್ನು ಕೊಲ್ಲುತ್ತಿದ್ದವರು ಈ ಕಾಯ್ದೆ ಬಂದ ನಂತರ ಒಂದೆರಡು ವರ್ಷ ಆ ಮಕ್ಕಳನ್ನು ಸರಿಯಾದ ಪೋಷಣೆ, ಕಾಳಜಿ ಇಲ್ಲದೇ ಸೊರಗಿ ಬದುಕಲು ಬಿಟ್ಟು ನಂತರ ಕೊಲ್ಲುವ ವ್ಯವಸ್ಥೆ ಆರಂಭವಾಯಿತಷ್ಟೇ.... ೧೯೦೬ರಲ್ಲಿ ಈ ಕಾನೂನು ಹಿಂಪಡೆಯಲ್ಪಟ್ಟ ನಂತರ ಮತ್ತೆ ಹಳೆಯ ಸಂಪ್ರದಾಯದ ಪುನರಾವರ್ತನೆ ಆರಂಭವಾಗಿದ್ದು ಈಗ ನನ್ನ ಜನನ ಕಾಲದವರೆಗೂ ಈ ಶಿಶು ಹತ್ಯೆ ಹಾಗೇ ಮುಂದುವರೆದಿದೆ ಎಂದರೆ ನಮ್ಮ ವ್ಯವಸ್ಥೆ ಅದೆಷ್ಟು ಕುಲಗೆಟ್ಟು ಹೋಗಿದೆ ಎಂದು ನೀವೇ ಅಂದಾಜಿಸಿ....

ಇಂತಹ ಪ್ರದೇಶದಲ್ಲಿ ಹಾಗೂ ಸಂದರ್ಭದಲ್ಲಿ ನಾನು ಜನಿಸಿದ್ದು. ನಮ್ಮದು ಹಿಂದೂ ರಜಪೂತ ಸಮುದಾಯದ ಚಾಂದೇಲ್ ಪಂಗಡ. ನನ್ನ ದಾದಾ ದಾದಿಗೆ ಇಬ್ಬರು ಗಂಡು ಮಕ್ಕಳು... ನನ್ನ ಬಾಬೂಜಿ ಹಿರಿಯವರು, ಚಾಚಾ ಎರಡನೇಯವರು. ಬಹುಶಃ ಇವರಿಗಿಂತ ಮುಂಚೆಯೋ ಇಲ್ಲಾ ನಂತರವೋ ಹೆಣ್ಣು ಕೂಸುಗಳು ಹುಟ್ಟಿ, ಬದುಕಿನ ಹೋರಾಟದಲ್ಲಿ ಸೋತು ಸತ್ತಿರಬಹುದು ಎಂಬುದು ನನ್ನ ಬಲವಾದ ಸಂಶಯ. ನಮ್ಮದು ಭೈರೋನ್ ಗ್ರಾಮದಲ್ಲಿನ ಕೆಲವೇ ಕೆಲವು ಅನುಕೂಲಸ್ಥ ಕುಟುಂಬಗಳಲ್ಲಿ ಒಂದು. ವಂಶಪಾರಂಪರ್ಯವಾಗಿ ಬಂದ ಜಮೀನು ಬಹಳವಿತ್ತು. ಗೇಹೂ(ಗೋಧಿ), ಚಾವಲ್(ಅಕ್ಕಿ), ಹಾಗೂ ಮಕ್ಕಾ(ಜೋಳ)ದ ಜೊತೆಗೆ ಗನ್ನಾ(ಕಬ್ಬು)ವನ್ನು ಬೆಳೆಯುವ ಜಮೀನು ಯಮುನೆಯ ದಯೆಯಿಂದ ಫಲವತ್ತಾಗಿತ್ತು. ಹಣಕಾಸಿನ ಕೊರತೆಯೇನೂ ಇರಲಿಲ್ಲ. ಅದಲ್ಲದೇ ದಾದಾ ಗ್ರಾಮದ ಪಂಚಾಯತ್ತಿನ ಸದಸ್ಯರಾಗಿದ್ದವರು. ಈಗ ಆ ಹುದ್ದೆ ಬಾಪೂವಿಗೆ ಲಭಿಸಿತ್ತು. ಮುಂದೆ 'ಸರಪಂಚ'ನಾಗುವ ಆಸಕ್ತಿ ಬೇರೆ... ಹಾಗಾಗಿ ನಮ್ಮ ಕುಟುಂಬವೆಂದರೆ ಎಲ್ಲರಿಗೂ ಗೌರವವೇ......

ಇನ್ನು ನನ್ನ ಮಾಯಿ ಮತ್ತು ಚಾಚಿಯ ಬಗ್ಗೆ ಏನು ಹೇಳಲಿ? ಹೇಳಲು ಉಳಿದಿರುವುದಾದರೂ ಏನು.....?

ಅವರಿಗೆ ಮಾತನಾಡುವ ಹಕ್ಕಿಲ್ಲ.... ಮನೆಯ ಗಂಡಸರು ಮತ್ತು ಅವರ ಸಾಸೂಮಾ ಹೇಳಿದ್ದಕ್ಕೆಲ್ಲಾ ಕುರಿಯಂತೆ ತಲೆಯಾಡಿಸುವುದು, ಏನಕ್ಕೂ ಎದುರಾಡದಿರುವುದು, ಮನೆಕೆಲಸವನ್ನೆಲ್ಲಾ ಅಚ್ಚುಕಟ್ಟಾಗಿ ಪೂರೈಸುವುದು, ತಮ್ಮ ಗಂಡಂದಿರ ದೈಹಿಕ ಕಾಮನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದು, ಮಕ್ಕಳನ್ನು ಹೆರುವುದು, ಗಂಡಾದರೆ ಅವನ ಚಾಕರಿ ಮಾಡುವುದು, ಹೆಣ್ಣಾದರೆ...... ತಾನು ಹೆತ್ತೆನೆಂಬುದನ್ನೇ ಮರೆತು ಇನ್ನೊಮ್ಮೆ ಹೆರಲು ತಯಾರಾಗುವುದು....... 
ಎಲ್ಲೋ ಸಮಯ ಸಿಕ್ಕಾಗ ಮನೆಯ ಪಡಸಾಲೆಯಲ್ಲಿ ಕುಳಿತು ಘೂಂಗಟ್ ಪರದೆಯ ಒಳಗಿನಿಂದಲೇ ಆಗಸವನ್ನು ದಿಟ್ಟಿಸುತ್ತಾ, ಕಳೆದುಕೊಂಡ ಹೆಣ್ಣುಮಕ್ಕಳನ್ನು ನೆನೆಯುತ್ತಾ ನಿಟ್ಟುಸಿರಾಗಿ ಭಗವಂತನಿಗೊಂದು ಬೇಡಿಕೆ ಸಲ್ಲಿಸುವುದು......

"ಅಗಲೇ ಜನಮ್ ಮೋಹೆ ಬಿಟಿಯಾ ನಾ ಕಿಜೋ.....
ಬಿಟಿಯಾ ಜೋ ಕಿಜೋ ತೋ, ಯೆ ದೇಶ್ ನ ದಿಜೋ......"

(ಮುಂದಿನ ಜನ್ಮದಲ್ಲಿ ನನ್ನ ಮಗಳಾಗಿ(ಹೆಣ್ಣಾಗಿ) ಸೃಷ್ಟಿಸಬೇಡ. ಹೆಣ್ಣಾಗಿಯೇ ಸೃಷ್ಟಿಸುವುದಾದರೇ ಈ ದೇಶದಲ್ಲಂತೂ ಹುಟ್ಟಿಸಲೇಬೇಡ.....)

ಇಷ್ಟೇ ಅವರ ಜೀವನ.........

ಇಂತಹ ಮನೆಯಲ್ಲಿನ ಮೂವರು ಗಂಡಸರಿಗೆ ಮತ್ತು ದಾದಿಗೆ ಇದ್ದದ್ದು ಒಂದೇ ಚಿಂತೆ...... ಅದು ಇನ್ನೂ ಮನೆಗೊಬ್ಬ 'ಲಾಲಾ'(ಗಂಡು ಮಗು) ನ ಆಗಮನವಾಗದ ಕುರಿತು...... ಇಪ್ಪತ್ತು ವರುಷದ ನನ್ನ ಮಾಯಿ ಈ ಹಿಂದೆ ಎರಡು ಬಾರಿ ಗರ್ಭಿಣಿಯಾದಾಗಲೂ ಹುಟ್ಟಿದ್ದು ಲಾಲಿ(ಹೆಣ್ಣು ಮಗು)ಯರು. ಹದಿನೆಂಟರ ಚಾಚಿಯೂ ಒಂದು ಚೋರಿಯನ್ನೇ ಹೆತ್ತಿದ್ದು......

'ಆ ಮೂವರು ಲಾಲಿಯರು ಈಗೆಲ್ಲಿ.......?' ಎಂದು ಮಾತ್ರ ಕೇಳಬೇಡಿ.........

ಈ ಮನೆಯಲ್ಲಿ ಮೂವರು ಲಾಲಿಯರು ಹುಟ್ಟಿದ್ದರು ಎಂಬುದು ಎಷ್ಟು ಸತ್ಯವೋ ಈಗ ಅವರಲ್ಲಿ ಒಬ್ಬರೂ ಬದುಕಿಲ್ಲ ಎಂಬುದೂ ಅಷ್ಟೇ ಸತ್ಯ.

ಈಗ ಮಾಯಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು. ನನ್ನ ಬಾಪೂ, ಚಾಚಾ, ದಾದಾ, ದಾದಿ ಎಲ್ಲರಿಗೂ ಇದ್ದದ್ದು ಒಂದೇ ನಿರೀಕ್ಷೆ...... ಈ ಬಾರಿಯಾದರೂ 'ವಂಶ್ ಕೀ ಚಿರಾಗ್' ನ ಆಗಮನವಾಗಲೀ ಎಂದು. ಬಹುಶಃ ಚಾಚಿಗೂ ಅದೇ ನಿರೀಕ್ಷೆ ಇತ್ತೇನೋ.... ಆ ಮೂಲಕವಾದರೂ ತಮ್ಮಿಬ್ಬರಿಗೂ ಒಂದಿನಿತು ನೆಮ್ಮದಿ ದೊರಕಲಿ ಎಂಬ ಅಭಿಲಾಷೆ ಇರಬಹುದು..... ಈಗಾಗಲೇ ಎರಡು ಹೆಣ್ಣು ಹೆತ್ತು ಮನೆಯವರ ಅವಕೃಪೆಗೆ ಪಾತ್ರಳಾಗಿದ್ದ ಮಾಯಿಗೂ 'ಒಮ್ಮೆ ಗಂಡು ಹುಟ್ಟಿ ಈ ನರಕದಿಂದ ಮುಕ್ತಿ ದೊರೆತರೆ ಸಾಕಪ್ಪಾ...' ಎನಿಸಿರಬಹುದಾ? ನನಗಂತೂ ತಿಳಿದಿಲ್ಲ. ಆದರೆ ಅವರೆಲ್ಲಾ ಆಸೆ, ನಿರೀಕ್ಷೆಗಳಿಗೆ ತಣ್ಣೀರೆರಚುವಂತೆ ಭ್ರಮನಿರಸನಗೊಳಿಸಲು ಅಮ್ಮನೊಡಲಲ್ಲಿ ಪವಡಿಸಿದ್ದೆ ನಾನು. ಆದರೆ ಇದರಲ್ಲಿ ನನ್ನ ತಪ್ಪೇನು......? 

ಬರಲಿರುವುದು ಅದೃಷ್ಟ ಹೊತ್ತು ತರುವ ಮಗನೋ, ಇಲ್ಲಾ ಹಿಂದಿನ ಎರಡು ಸಲದಂತೆ ದುರಾದೃಷ್ಟವೇ ಮೈವೆತ್ತ ಮಗಳೋ ಎಂದು ತಿಳಿವ ತವಕ ಅವರಿಗೆಲ್ಲಾ.....

ಪ್ರಸವ ಪೂರ್ವ ರೋಗನಿರ್ಣಯ ತಂತ್ರಗಳು (pre natal diagnostic techniques) ಲಭ್ಯವಿತ್ತಾದರೂ ಆ ಕಾಲದಲ್ಲಿ ಈಗಿನಂತೆ ಗಲ್ಲಿಗೊಂದು ಶ್ರವಣಾತೀತ ಧ್ವನಿ ತರಂಗ ಪರೀಕ್ಷೆಯ (ultrasonography) ಕೇಂದ್ರಗಳು ಇರಲಿಲ್ಲ. ಆ ತಂತ್ರಜ್ಞಾನ ಭಾರತಕ್ಕೆ ಇನ್ನೂ ಕಾಲಿಟ್ಟಿರಲಿಲ್ಲ. ಆಗ ಇದ್ದದ್ದು ಆಕ್ರಮಣಶೀಲ ತಂತ್ರಗಳು(invasive techniques) ಮಾತ್ರಾ. ಬಹಳ ಸಂಕೀರ್ಣವಾದ ಈ ತಂತ್ರಜ್ಞಾನದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿತ್ತು. ಆ ಕಾಲಕ್ಕೆ ಇವು ಅತೀ ದುಬಾರಿಯೂ ಕೂಡಾ..... ಎಲ್ಲಕ್ಕಿಂತಲೂ ಹೆಚ್ಚಾಗಿ ಆಗ ಈ ಸೌಲಭ್ಯ ಹೊಂದಿದ್ದ ಆಸ್ಪತ್ರೆಗಳು ಇದ್ದಿದ್ದು ಪಂಜಾಬ್ ಹಾಗೂ ಹರಿಯಾಣಾದ ಒಂದೆರೆಡು ಶಹರಗಳಲ್ಲಿ ಮಾತ್ರವೇ.

ಹಾಗಾಗಿ ಬಾಪೂ ಮತ್ತು ದಾದಾ ಆ ಯೋಜನೆಯನ್ನೇ ಕೈ ಬಿಟ್ಟಿದ್ದರು. ಅದಕ್ಕೆ ಬದಲಾಗಿ ಇನ್ನೊಂದು ಸುಲಭದ ಮಾರ್ಗೋಪಾಯ ಕಂಡುಹಿಡಿದ್ದಿದ್ದರು.......

ಅದೇ ಭೈರವ್ ಬಾಬಾ ಕೀ ಭವಿಷ್ಯವಾಣಿ.........

ಭೈರವ್ ಬಾಬಾ..... ಕೇವಲ ನಮ್ಮ ಗ್ರಾಮ ಮಾತ್ರವಲ್ಲ, ಇಡೀ ಶಾಮ್ಲೀಯಲ್ಲೇ ಚಿರಪರಿಚಿತ ಹೆಸರದು. ಅವನೊಬ್ಬ ಸ್ವಯಂ ಘೋಷಿತ ದೇವಮಾನವ. ಅದೇನೋ ಒಂದಷ್ಟು ತಂತ್ರ ಮಂತ್ರ ವಿದ್ಯೆ ಕಲಿತು ಸುತ್ತ ಹತ್ತೂರಿನ ಜನರನ್ನು ತನ್ನ ಕಿರು ಬೆರಳಲ್ಲಿ ಕುಣಿಸುತ್ತಿದ್ದ. ಶಾಮ್ಲಿಯ ಬೇರೆ ಬೇರೆ ಪ್ರಾಂತ್ಯಗಳಿಂದ ಜನ ಕಷ್ಟ ಪರಿಹಾರಕ್ಕಾಗಿ ಅವನ ಬಳಿ ದಾಂಗುಡಿ ಇಡುತ್ತಿದ್ದರು. ಅವುಗಳಲ್ಲಿ ಮುಕ್ಕಾಲು ಪ್ರತಿಶತ ಜನರ ಸಮಸ್ಯೆ....... ಹೆಣ್ಣು ಸಂತಾನ.... 

ಅದೇನು ಅವನ ಅದೃಷ್ಟವೋ ಇಲ್ಲಾ ಹೆಣ್ಣು ಭ್ರೂಣಗಳ ದುರಾದೃಷ್ಟವೋ ತಿಳಿಯದು ...... ಅವನ ಭವಿಷ್ಯ ವಾಣಿಗಳೆಲ್ಲ ಸಾಮಾನ್ಯವಾಗಿ ನಿಜವಾಗುತ್ತಿದ್ದವು. ಹಾಗಾಗಿ ಅವನ ಮಾತೆಂದರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ವೇದವಾಕ್ಯ. 

ನನ್ನ ದಾದಾ ಮತ್ತು ಬಾಪೂ ಒಟ್ಟಾಗಿ ಭೈರವ್ ಬಾಬಾನನ್ನು ಮನೆಗೆ ಕರೆಸಿದ್ದರು. ಅವನು ಮಾಯಿಯ ಕೈ ನೋಡಿ, ಗ್ರಹಗತಿ ಲೆಕ್ಕಹಾಕಿ, ಕವಡೆ ಇಟ್ಟು ಈ ಬಾರಿಯೂ ಹೆಣ್ಣೇ ಹುಟ್ಟುವುದೆಂದು ಭವಿಷ್ಯ ನುಡಿದಿದ್ದ...... ಅದನ್ನು ಕೇಳಿ ಎಲ್ಲರ ಮುಖಗಳೂ ಬಿಳುಚಿಕೊಂಡರೇ ಮಾಯಿ ವಿಪರೀತ ಭಯ ಪಟ್ಟಿದ್ದಳು. ಅಮ್ಮನ ಒಡಲೊಳಗೆ ಬೆಚ್ಚಗೆ ಮಲಗಿದ್ದ ನನಗೆ ಈ ಲೋಕ ಹೀಗೆ ಸ್ವಾಗತ ಕೋರಿತ್ತು. 

ಬಾಬಾ ಬಂದು ಹೋದ ಮೇಲೆ ಮನೆಯಲ್ಲಿ ಮಾಯಿಯ ಪರಿಸ್ಥಿತಿ ಶೋಚನೀಯವಾಯಿತು‌. ಅಲ್ಲಿಯತನಕ ಗಂಡು ಹೆರುವಳು ಎಂಬ ನಿರೀಕ್ಷೆಯಲ್ಲಿ ತೋರುತ್ತಿದ್ದ ಪ್ರೀತ್ಯಾದರಗಳೆಲ್ಲಾ ಒಮ್ಮೆಗೆ ನಿಂತು ಹೋದವು. ಹಳೆಯ ದಿನಚರಿ ಮತ್ತೆ ಮರುಕಳಿಸಿತು. ಅವಳಿಗೆ ಕ್ಷಣ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ದುಡಿತ. 

ಅದರೊಂದಿಗೆ ನಾನು ಹೆಣ್ಣೆಂದು ಬಾಬಾ ಭವಿಷ್ಯ ನುಡಿದೊಡನೆ ಅದ್ಯಾವುದೋ ಹಳ್ಳಿ ಮದ್ದುಗಳನ್ನು ಕುಡಿಸಿ ಅಮ್ಮನೊಡಲಲ್ಲೇ ನನ್ನ ಚಿವುಟಿ ಹಾಕಲು ಕೆಲವು ಪ್ರಯತ್ನಗಳಾಗಿತ್ತು. ನನ್ನ ಉಸಿರು ಗಾಳಿಯ ಸೋಕದಂತೆ, ನನ್ನ ಕೊರಳು ದನಿ ಎತ್ತದಂತೆ, ನಾ ಕಣ್ತೆರೆದು ಜಗವನ್ನು ಕಾಣದಂತೆ ಮಾಡಲು ಅದೆಷ್ಟು ಹವಣಿಸಿದ್ದರು....? 

ಅದಕ್ಕೇ ಹೇಳಿದ್ದು ನಮಗೆ ಹುಟ್ಟು ಒಂದು ಕದನವೆಂದು.... ಯುದ್ಧದಲ್ಲಿ ಜಯಿಸಿದರೆ ಮಾತ್ರವೇ ಕಣ್ತೆರೆದು ಜಗ ಕಾಣುವ ಅವಕಾಶ. ಹಾಗೊಂದು ವೇಳೆ ಸಾವನ್ನು ಜಯಿಸಿ ಜನಿಸಿದರೆ ಆನಂತರದ ಬದುಕೇ ರಣರಂಗ......
ಮಗ ಜನಿಸಿದರೆ ಆತ ಎಲ್ಲರ ಮೇಲೂ ರಾಜ್ಯಭಾರ ನಡೆಸುತ್ತಾನೆ....
ಅದೇ ಮಗಳು ಜನಿಸಿದರೆ ಅವಳು ಬದುಕಿನ ಹೋರಾಟಕ್ಕೆ ಸಜ್ಜಾಗುತ್ತಾಳೆ....
ಇಬ್ಬರೂ ಮಕ್ಕಳೇ...... ಆದರೆ ಅವ'ನು' ಮತ್ತು ಅವ'ಳು' ನಡುವಿನ ವ್ಯತ್ಯಾಸ ಅದೆಷ್ಟು ಅಗಾಧ........!!

ಆದರೆ ಪಾಪ ನನ್ನ ಮಾಯಿ......... ಆ ಮದ್ದುಗಳನ್ನು ಕುಡಿದಂತೆ ನಟಿಸಿ ಉಗುಳುತ್ತಿದ್ದಳು. ಐದು ತಿಂಗಳು ತುಂಬಿದ ಮೇಲೆ ಆ ತರದ ಪ್ರಯತ್ನಗಳು ನಿಂತವು. ಹುಟ್ಟಿದ ಕೂಡಲೇ ಹನನ ಮಾಡಿದರಾಯಿತು ಎಂದುಕೊಂಡರೇನೋ......?

ಆದರೆ ಮಾಯಿಯ ಸಮಸ್ಯೆಗಳೇನೂ ಕೊನೆಯಾಗಲಿಲ್ಲ. ಬದಲಿಗೆ ಅವು ಇನ್ನೂ ವಿಪರೀತವಾದವು. ಈ ನಡುವೆಯೇ ಅವಳ ಕಲ್ಪನೆಗೂ ಮೀರಿದ ಘಟನೆಯೊಂದು ನಡೆಯಿತು.

ಅವಳಿಗೆ ಏಳು ತಿಂಗಳುಗಳಾಗಿದ್ದಾಗ ಬಾಪೂ ಇನ್ನೊಬ್ಬ ಹೆಣ್ಣನ್ನು ರಾಜಾರೋಷವಾಗಿ ಮದುವೆಯಾಗಿ ಮನೆಗೆ ಕರೆತಂದಿದ್ದ..........!!

ಲಾಲಾನನ್ನು ಹಡೆಯಲು ಅಸಮರ್ಥಳಾದ ನೀನು ಇನ್ನು ಮುಂದೆ ನನ್ನ ಹೆಂಡತಿಯಲ್ಲವೆಂದು, ತಾಳಿ ಕಟ್ಟಿದ ತಪ್ಪಿಗೆ ಜೀವನ ಪರ್ಯಂತ ಮೂರು ಹೊತ್ತು ಊಟ ಹಾಕಿ ಸಾಕುವೆನೆಂದೂ ದೊಡ್ಡ ಉಪಕಾರ ಮಾಡುವವನಂತೆ ನುಡಿದಿದ್ದ...... ಹಾಗೂ ಆ ಕ್ಷಣವೇ ಮಾಯಿ ಮತ್ತು ನಾನು ಇಬ್ಬರೂ ಮನೆಯಿಂದ ಹೊರದೂಡಲ್ಪಟ್ಟಿದ್ದವು. ಮನೆಯ ಹಿಂಬದಿಯ ಕೊಟ್ಟಿಗೆಯ ಬದಿಯಲ್ಲಿನ ಪುಟ್ಟ ಜಾಗದಲ್ಲಿ ನಾವು ಜೀವನ ಕಳೆಯಬೇಕಿತ್ತು. 

'ಆ ಕ್ಷಣದಲ್ಲಿ ಮಾಯಿಯ ಮನಸ್ಸಿಗೆ ಅದೆಂತಹ ಆಘಾತವಾಗಿರಬಹುದು? ಅವಳ ಅಂತರಂಗದಲ್ಲಿ ಅದೆಷ್ಟು ಭಾವನೆಗಳ ಬಿರುಗಾಳಿ ಸುಳಿಸುಳಿದು ಅಂತರಂಗದ ಕೊಳವನ್ನು ರಾಡಿಯಾಗಿಸಿರಬಹುದು.....?' ಈ ಉತ್ತರ ಸಿಗದ ಪ್ರಶ್ನೆಯನ್ನು ನಾನು ಅದೆಷ್ಟು ಬಾರಿ ಕೇಳಿಕೊಂಡಿರುವೆನೋ....... 

ಆನಂತರದ ದಿನಗಳಲ್ಲಿ ಆಕೆ ಕಲ್ಲಾಗಿದ್ದಳು. ಅವಳ ಉಸಿರಾಟವೊಂದರ ಹೊರತು ಬೇರ್ಯಾವ ಭಾವಗಳೂ ಅವಳಲ್ಲಿ ಉಳಿದಿರಲಿಲ್ಲವೇನೋ.... ನನ್ನೊಂದಿಗೆ ಮಾತನಾಡುತ್ತಿರಲಿಲ್ಲ, ಉದರದ ಮೇಲೆ ಕೈಯಾಡಿಸಿ ನನ್ನ ಚಲನೆಯ ಗತಿಯ ಅನುಭೂತಿಯನ್ನು ಅನುಭವಿಸುತ್ತಿರಲಿಲ್ಲ. ಅವರೇನು ತಿನ್ನಲು ಕೊಡುತ್ತಿದ್ದರೋ ಅದರ ಶುಚಿ, ರುಚಿಯ ಹಂಗಿಲ್ಲದೇ ತಿನ್ನುತ್ತಿದ್ದಳು.... ಒಮ್ಮೊಮ್ಮೆ ಮನೆಯವರ ಕಣ್ತಪ್ಪಿಸಿ ಚಾಚಿ ಬಂದು ಅವಳಿಗೊಂದಿಷ್ಟು ಬೆನ್ನು, ಸೊಂಟ ನೀವಿ ಏನಾದರೂ ತಿನ್ನಲು ಕೊಟ್ಟು ಹೋಗುತ್ತಾಳೆ. ಪಾಪ... ಆಕೆಯಾದರೂ ಏನು ಮಾಡಿಯಾಳು? ಅವಳೂ ಪಂಜರದ ಪಕ್ಷಿಯೇ ಅಲ್ಲವೇ....... 

ಒಟ್ಟಿನಲ್ಲಿ ಮಾಯಿ ವಿರಾಗಿನಿಯಂತಾಗಿದ್ದಳು. ಆದರೆ ನೀರವ ರಾತ್ರಿಗಳ ಕೊರೆವ ಚಳಿಯಲ್ಲಿ ಅವಳ ಕಣ್ಣೀರು ಮಾತ್ರ ಅಕ್ಷಯವಾಗಿ ಹರಿಯುತ್ತದೆ.....

ಮನೆಯಿಂದ ಹೊರಹಾಕಿದರೂ ಅವಳ ಮೇಲಿನ ಕೆಲಸದ ಹೊರೆಯಂತೂ ಒಂದಿನಿತೂ ಕಮ್ಮಿ ಇರಲಿಲ್ಲ. ಈಗ ಆಕೆ ಅಕ್ಷರಶಃ ಈ ಮನೆಯ ಕೆಲಸದ ಆಳಾಗಿದ್ದಳು ಎಂದರೆ ತಪ್ಪಾಗಲಾರದೇನೋ..... ಎಂಟು ತಿಂಗಳ ಗರ್ಭಿಣಿ ಬಾವಿಯಿಂದ ನೀರೆಳೆಯುವಾಗ, ಭಾರೀ ನೀರ ಕೊಡವನ್ನು ಸೊಂಟದ ಮೇಲಿಟ್ಟುಕೊಂಡು ನಡೆವಾಗ ಉಸಿರು ಸಿಕ್ಕಿಹಿಡಿದಂತಾಗುತ್ತಿತ್ತು ಅವಳಿಗೆ..... ಆಗೆಲ್ಲಾ ನನಗೂ ಯಮ ಯಾತನೆಯಾಗುತ್ತಿತ್ತು... ಉದರದಲ್ಲೇ ಒದ್ದಾಡುತ್ತಿದ್ದೆ. ಅವಳು ತನ್ನ ದುರ್ದೆಸೆ ನೆನೆದು ಕಣ್ಣೀರಿಡುವಾಗಲೆಲ್ಲಾ ಅವಳ ಕಣ್ಣೊರೆಸಬೇಕೆಂದು ತಳಮಳಿಸಿದ್ದೇನೆ. ಸಾಧ್ಯವಾಗದೇ ಪರಿತಪಿಸಿದ್ದೇನೆ. ಅವಳು ದೇವರ ನೆನೆದು, 'ಬಾಬಾ ಹೇಳಿದಂತೆ ಆಗದೆ ನನಗೆ ಗಂಡು ಕೂಸೇ ಹುಟ್ಟಲಿ' ಅಂತ ಬೇಡಿಕೊಂಡಾಗಲೆಲ್ಲಾ, 'ನಿನ್ನ ಉದರದಲ್ಲಿರುವುದು ಲಾಲಿಯೇ' ಎಂದು ಚೀರಿದ್ದೇನೆ...... ಆದರೆ ಅದ್ಯಾವುದೂ ಅವಳನ್ನು ತಲುಪಲಿಲ್ಲ. 

ನಾನೂ ಭಗವಂತನನ್ನು ಕೇಳಿಕೊಳ್ಳುತ್ತೇನೆ....... 

"ಮ್ಹಾರಿ ಮಾ ಕೋ ದೂಜಿ ಚೋರಿ ನಾ ದಿಜೋ.....
ಅಗಲೇ ಜನಮ್ ಮೋಹೆ ಬಿಟಿಯಾ ನಾ ಕಿಜೋ......"

(ನನ್ನಮ್ಮನಿಗೆ ಇನ್ನೊಂದು ಹೆಣ್ಣುಮಗುವ ಕೊಡಬೇಡ, ಮುಂದಿನ ಜನುಮದಲ್ಲಿ ನನ್ನ ಹೆಣ್ಣಾಗಿ ಸೃಷ್ಟಿಸಬೇಡ.....)

ಇಂತಹ ತೀರದ ವೇದನೆಗಳ ನಡುವೆಯೇ ನಾನು ನನ್ನ ಹೋರಾಟಕ್ಕೆ ಶ್ರೀಕಾರ ಹಾಕುವ ಸಮಯ ಬಂದೇಬಿಟ್ಟಿತು........ ನನಗೆ ಖಂಡಿತಾ ಈ ಹಾಳು ಪ್ರಪಂಚಕ್ಕೆ ಕಾಲಿಟ್ಟು ಅಮ್ಮನಂತೆ ಜೀವನ ಸವೆಸುವ ಆಸೆಯಿಲ್ಲ.... ಆದರೇನು ಮಾಡಲೀ? ಇದೇ ನನ್ನ ಲಲಾಟದಲ್ಲಿ ಬರೆದಿರುವುದು......

ಅದು ಶಿಶಿರ ಋತುವಿನ ಮಾಘ ಮಾಸ..... ವಿಪರೀತ ಚಳಿ... ನಾನೇನೋ ಮಾಯಿಯ ಒಡಲೊಳಗೆ ಬೆಚ್ಚಗೆ ಆಟವಾಡಿಕೊಂಡಿದ್ದೆ.... ಅಮ್ಮನ ಗರ್ಭ ಅದೆಷ್ಟು ಬೆಚ್ಚಗೆ, ಅಲ್ಲಿರುವಷ್ಟು ನೆಮ್ಮದಿ, ರಕ್ಷಣೆ ಇನ್ನೆಲ್ಲಿ? ಆದರವಳು ಆ ಚಳಿಯಲ್ಲಿ ನಡುಗುತ್ತಿದ್ದಳು. ಇದ್ದದ್ದೊಂದು ಹೊದಿಕೆ. ಅದೋ ನಾಲ್ಕು ಕಡೆಗಳಿಂದಲೂ ತೆರೆದಿದ್ದ ಕೊಟ್ಟಿಗೆ... ತಲೆಯ ಮೇಲೊಂದು ಸೂರು ಮಾತ್ರವೇ ಇದ್ದದ್ದು... ಶಿಶಿರದಲ್ಲಿ ಯಮುನೆಯ ಬದಿಯಿಂದ ಬೀಸುವ ಕುಳಿರ್ಗಾಳಿಯ ಬಿರುಸು ಹೆಚ್ಚಿರುತ್ತದೆ. ಹಾಗೇ ಅತೀ ಶೀತವೂ...... ಬೆಳಗಿನ ಜಾವದ ವಿಪರೀತ ಚಳಿಗೆ ಅವಳಿಗೆ ಉಸಿರಾಡಲು ತೊಂದರೆಯಾಗತೊಡಗಿತು. ಅವಳು ಉಸಿರು ಹಿಡಿಯತೊಡಗಿದಂತೆಲ್ಲಾ ನನಗೂ ಹಿಂಸೆಯಾಗಿ ಒದ್ದಾತೊಡಗಿದೆ. ತಲೆಯನ್ನು ಮುಂದಾಗಿಸಿ ನನ್ನ ಸುರಕ್ಷಾ ಕವಚದಿಂದ ಹೊರಬರಲು ಪ್ರಯತ್ನಿಸತೊಡಗಿದೆ. ಉಸಿರಾಟದ ಏರುಪೇರಿನೊಂದಿಗೆ ನನ್ನ ಒದ್ದಾಟವೂ ಸೇರಿ ಮಾಯಿ ನರಳತೊಡಗಿದ್ದಳು. ಆದರೆ ಜೋರಾಗಿ ಬಾಯ್ತೆರೆದು ಕೂಗಲಾರದಷ್ಟು ಬಾಧೆ ಕೊಡತೊಡಗಿತ್ತು ಕೊರೆವ ಚಳಿ. ಏನೂ ಮಾಡಲು ತೋಚದೇ ಪಕ್ಕದಲ್ಲಿದ್ದ ಕೈಗೆ ಸಿಕ್ಕ ತಟ್ಟೆ, ಲೋಟ, ಕಲ್ಲುಗಳನ್ನೆಲ್ಲಾ ಎಸೆಯತೊಡಗಿದಳು.... 

ಪಾಪ ಚಾಚಿಗೆ ಇವಳದ್ದೇ ಯೋಚನೆಯಾಗಿತ್ತೇನೋ..... ಮನೆಯ ಹಿಂಬಾಗಿಲಿನಿಂದ ಸದ್ದಾಗದಂತೆ ನಿಧಾನವಾಗಿ ನಮ್ಮೆಡೆಗೆ ಬಂದಿದ್ದಳು.... ಮಾಯಿಯ ಪರಿಸ್ಥಿತಿ ನೋಡಿ ಗಾಬರಿಯಿಂದ ಮನೆಯೊಳಗೆ ಓಡಿದ್ದಳು. ನಾನಾಗಲೇ ಶತ ಪ್ರಯತ್ನ ಪಟ್ಟು ಎಲ್ಲೆಡೆ ಹಾದಿ ಹುಡುಕಿ ತಲೆಯಿಂದ ಗುದ್ದಿ ಕೊನೆಗೊಮ್ಮೆ ಹೊರಹೋಗುವ ಹಾದಿ ಸಿಕ್ಕಿಯೇ ಬಿಟ್ಟಿತ್ತು... 

ಆದರೆ........ 

ನಾನು ನನ್ನ ಸಂಪೂರ್ಣ ಶಕ್ತಿ ಬಳಸಿ ಅವಳ ಗರ್ಭವೆಂಬ ಸ್ವರ್ಗದಿಂದ ಈ ನರಕ ಪ್ರವೇಶಿಸುವುದಕ್ಕೂ, ಅವಳು ಈ ನರಕದ ಯಾನ ಮುಗಿಸಿ ಮುಕ್ತಿಯ ನೆಮ್ಮದಿ ಪಡೆಯುವುದಕ್ಕೂ ಸರಿಹೋಯಿತು.......

ನನ್ನ ಜನನ ಮಾಯಿಯ ಮರಣ ಎರಡೂ ಒಂದೇ ಆಗಿ ಹೋಯಿತು......

ಚಾಚಿ ಬಿಸಿನೀರು ಹಿಡಿದು ಬರುವ ಸಮಯಕ್ಕೆ ಎಲ್ಲಾ ಮುಗಿದಿತ್ತು...... ಮಾಯಿಯ ತೆರೆದ ಕಣ್ಣುಗಳಲ್ಲಿ ಜನ್ಮದ ವೇದನೆಯಿತ್ತು. ಈಗ ಅವಳು ಏರುತ್ತಿರುವ ಚಳಿಯ ಹಂಗಿಲ್ಲದೆ ನಿಶ್ಚಲಳಾಗಿ ಬಿದ್ದಿದ್ದರೆ, ಇಷ್ಟು ಸಮಯ ಅವಳ ಬೆಚ್ಚಗಿನ ಉದರದಲ್ಲಿ ಹಾಯಾಗಿದ್ದ ನಾನು ಚಳಿಯ ಹೊಡೆತ ತಾಳಲಾರದೇ ಚೀರುತ್ತಿದ್ದೆ....... ಅಮ್ಮನ ಬೆಚ್ಚನೆಯ ಮಡಿಲಿಗಾಗಿ ಅರಸುತ್ತಿದ್ದೆ.... 

ಆದರೆ ಆ ಮಡಿಲು ಬದುಕಿನಲ್ಲಿ ನನಗೆಂದೂ ಸಿಗದ ಮರೀಚಿಕೆಯಾಗಿತ್ತು.......

ಹೀಗೆ ಆ ಕೊರೆವ ಚಳಿಯಲ್ಲಿ ಮಾಯಿಯ ಆಸರೆಯಿಲ್ಲದೆ ನನ್ನ ಬದುಕಿನ ಹೋರಾಟ ಆರಂಭವಾಗಿತ್ತು.......

ಇದು ಕೇವಲ ಆರಂಭ ಅಷ್ಟೇ........
ಕಾಣಬೇಕಾದದ್ದು, ಅನುಭವಿಸಬೇಕಾದದ್ದು ಇನ್ನೂ ಬಹಳಷ್ಟಿತ್ತು..........

ಸಶೇಷ

ಟಿಪ್ಪಣಿಗಳು:

Female Infanticide Prevention Act of 1870(Act VIII): ವಸಾಹತುಶಾಹಿ ಭಾರತದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಉತ್ತರ ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಯಾವುದೇ ಮುಚ್ಚುಮರೆ, ಅಡೆತಡೆಯಿಲ್ಲದೆ ಅವ್ಯಾಹತವಾಗಿ ನಡೆದಿತ್ತು. ಇದನ್ನು ಗಮನಿಸಿದ ಬ್ರಿಟೀಷರು ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ೧೮೭೦ರಲ್ಲಿ Female Infanticide Prevention Act ಅಥವಾ Act VIII ಅನ್ನು ಜಾರಿಗೆ ತಂದರು. ಹೆಣ್ಣು ಶಿಶು ಹತ್ಯೆಗೆ‌ ಕುಖ್ಯಾತವಾಗಿದ್ದ ಉತ್ತರ ಪಶ್ಚಿಮೀ ಪ್ರಾಂತ್ಯ(ಈಗಿನ ಉತ್ತರ ಪ್ರದೇಶ), ಔಧ್ ಹಾಗೂ ಪಂಜಾಬ್ ಪ್ರಾಂತ್ಯಗಳಲ್ಲಿ ಈ ಕಾಯಿದೆಯನ್ನು ಮೊಟ್ಟಮೊದಲಿಗೆ ಜಾರಿಗೊಳಿಸಲಾಯಿತು. ನಂತರ ಅಗತ್ಯತೆಯ ಅನುಸಾರ ಬೇರೆ ರಾಜ್ಯಗಳಿಗೆ ವಿಸ್ತರಿಸುವ ಯೋಜನೆಯಿತ್ತು. 
ಪಂಗಡ ಕೇಂದ್ರಿತವಾದ ಈ ಕಾಯಿದೆಯ ಅನುಸಾರ ಯಾವ ಪಂಗಡಗಳಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ ೪೦ಕ್ಕಿಂತ ಕಡಿಮೆ ಹೆಣ್ಣುಮಕ್ಕಳಿರುವರೋ ಆ ಪಂಗಡವನ್ನು ಹೆಣ್ಣು ಶಿಶು ಹತ್ಯೆಯ ಅಪರಾಧಿ ಎಂದು ಘೋಷಿಸಲಾಗುತ್ತಿತ್ತು. ಹೆಣ್ಣುಮಕ್ಕಳ ಪ್ರಮಾಣ ಶೇಕಡಾ ೨೫ಕ್ಕಿಂತಲೂ ಕಡಿಮೆ ಇದ್ದ ಪಂಗಡಗಳನ್ನು ಅತೀ ಗಂಭೀರ ಅಪರಾಧಿಗಳೆಂದು ಪರಿಗಣಿಸಲಾಗುತ್ತಿತ್ತು. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿತ್ತು.

ಅಂಕಿ ಅಂಶಗಳ ಆಧಾರದಲ್ಲಿ ನೋಡುವುದಾದರೆ ಈ ಕಾಯಿದೆ ಯಶಸ್ವಿಯಾಯಿತು ಎಂದೇ ಹೇಳಬೇಕು. ಆ ಕಾಯಿದೆ ಜಾರಿಯ ನಂತರ ಉತ್ತರ ಪಶ್ಚಿಮೀ ಪ್ರಾಂತ್ಯಗಳು, ಪಂಜಾಬ್ ಹಾಗೂ ಔಧ್ ಪ್ರಾಂತ್ಯಗಳಲ್ಲಿ ಹೆಣ್ಣು ಶಿಶು ಹತ್ಯೆ ಗಣನೀಯವಾಗಿ ಕಡಿಮೆಯಾಯಿತು. ಅದೂ ಅಲ್ಲದೇ ಆಗ್ರಾ ಮತ್ತು ಔಧ್ ಸಂಯುಕ್ತ ಪ್ರಾಂತ್ಯಗಳ ಸರ್ಕಾರ ಈ ನಿಯಮ ಇನ್ನು ಅಗತ್ಯವಿಲ್ಲ ಎಂದು ಒತ್ತಡ ಹಾಕಿತ್ತು. ಹಾಗಾಗಿ ೧೯೦೫ರಲ್ಲಿ ಈ ಕಾಯಿದೆಯನ್ನು ಹಿಂಪಡೆಯಲಾಯಿತು.
ಆದರೆ ವಾಸ್ತವವಾಗಿ ಈ ಕಾಯಿದೆ ಜಾರಿಗೆ ಬಂದ ನಂತರವೂ ಹೆಣ್ಣು ಶಿಶು ಹತ್ಯೆ ಹಾಗೆಯೇ ಮುಂದುವರೆದಿತ್ತು. ವ್ಯತ್ಯಾಸವೆಂದರೆ ನವಜಾತ ಶಿಶುಗಳನ್ನು ಕೊಲ್ಲುವ ಬದಲು ಆ ಮಕ್ಕಳನ್ನು ಒಂದರಿಂದ ಎರಡು ವರ್ಷದವರೆಗೆ ಬದುಕಲು ಬಿಡಲಾಗುತ್ತಿತ್ತು. ಆ ಸಮಯದಲ್ಲಿ ಆ ಮಕ್ಕಳಿಗೆ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು, ಪೌಷ್ಟಿಕ ಆಹಾರವನ್ನು ಒದಗಿಸುತ್ತಿರಲಿಲ್ಲ. ಸಣ್ಣ ಮಗುವಿನ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಪದೇ ಪದೇ ಕಾಯಿಲೆಗೊಳಗಾಗಿ ಈ ಮಕ್ಕಳು ಅಸುನೀಗುತ್ತಿದ್ದವು. ಒಂದು ವೇಳೆ ಅಷ್ಟಾಗಿಯೂ ಅವು ಬದುಕಿದರೆ ಬೇರೆ ಬೇರೆ ವಿಧಾನಗಳನ್ನು ಬಳಸಿ ಅವರನ್ನು ಕೊಲ್ಲವಾಗುತ್ತಿತ್ತು.


ಆಕ್ರಮಣಶೀಲ ತಂತ್ರಗಳು (Invasive Techniques): ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಜ್ಞಾನ(pre natal diagnostic techniques)ದಲ್ಲಿ ಎರಡು ವಿಧಗಳಿವೆ. 
I. ಆಕ್ರಮಣಶೀಲ ತಂತ್ರಗಳು 
II. ಆಕ್ರಮಣಶೀಲವಲ್ಲದ ತಂತ್ರಗಳು 

ದೇಹದ ಒಳಭಾಗದಲ್ಲಿ ಟ್ಯೂಬ್, ಬಲೂನ್ ಅಥವಾ ಇನ್ಯಾವುದಾದರೂ ಪರಿಕರಗಳನ್ನು ಬಳಸಿ ಪರೀಕ್ಷಿಸುವ ತಂತ್ರಗಳೇ ಆಕ್ರಮಣಶೀಲ ತಂತ್ರಗಳು. ಇವು ಆಕ್ರಮಣಶೀಲವಲ್ಲದ ತಂತ್ರಗಳ ಅಭಿವೃದ್ಧಿಗೆ ಮುಂಚೆ ಬಳಸಲ್ಪಡುತ್ತಿದ್ದವು. ಈಗ ಇವುಗಳ ಬಳಕೆ ಬಹಳ ಕಡಮೆ.

ಇದರಲ್ಲಿ ಎರಡು ವಿಧಗಳಿವೆ;
ಮೊದಲನೇಯದು Amniocentesis: ಈ ವಿಧಾನದಲ್ಲಿ ತಾಯಿಯ ಗರ್ಭಚೀಲದ ಆಮ್ನಿಯೋಟಿಕ್ ದ್ರವವನ್ನು ಸಿರೀಂಜ್ ಮೂಲಕ ತೆಗೆದು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯನ್ನು ಗರ್ಭಧಾರಣೆಯ ಹದಿನಾರು ವಾರಗಳು ಮುಗಿದ ನಂತರ ಮಾಡಲಾಗುತ್ತದೆ.

ಎರಡನೇಯದು chronic villi biopsy: ಇಲ್ಲಿ ಮಾಸುಚೀಲದ(ಭ್ರೂಣದ ಹೊರಪೊರೆ) ಜೀವಕೋಶ ಅಥವಾ ಅಂಗಾಂಶವನ್ನು ತೆಗೆದು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯನ್ನು ಗರ್ಭಧಾರಣೆಯ ಆರರಿಂದ ಹದಿಮೂರನೇ ವಾರಗಳ ನಡುವಲ್ಲಿ ಮಾಡಲಾಗುತ್ತದೆ.

ಈ ಎರಡೂ ಪರೀಕ್ಷೆಗಳ ಮೂಲ ಉದ್ದೇಶ ಅನುವಂಶಿಕ ಅಸ್ವಸ್ಥತೆ ಮತ್ತು ವಿರೂಪತೆಯನ್ನು (genetic disorder and deformities) ಪತ್ತೆಹಚ್ಚುವುದಾದರೂ ಈ ಎರಡೂ ಪರೀಕ್ಷೆಗಳಲ್ಲಿ ಮಗುವಿನ ಲಿಂಗ ಪತ್ತೆ ಮಾಡಬಹುದು. 
ಆದರೆ ಈ ಎರಡಕ ವಿಧಾನಗಳಲ್ಲೂ ಸಿರೀಂಜ್ ನಂತಹ ಸಲಕರಣೆಗಳು ಬಳಕೆಯಾಗುವುದರಿಂದ ಭ್ರೂಣಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ವಿಪರೀತ ರಕ್ತಸ್ರಾವ, ಗರ್ಭಪಾತದ ಆಗುವ ಸಂಭವವೂ ಇರುತ್ತದೆ.

೧೯೭೧ರಲ್ಲಿ ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಯಿತು(The Medical Termination of Pregnancy Act). ಆ ಸಮಯದಲ್ಲೇ ಪ್ರಸವಪೂರ್ವ ರೋಗನಿರ್ಣಯ ತಂತ್ರಜ್ಞಾನ ಇಲ್ಲಿ ಆರಂಭವಾಯಿತು. ಆಗ ಆಕ್ರಮಣಶೀಲ ತಂತ್ರಗಳು ಮಾತ್ರವೇ ಲಭ್ಯವಿತ್ತು. ಗರ್ಭಪಾತವನ್ನು ಕಾನೂನುಬದ್ಧಗೊಳಿಸುವುದರ ಹಿಂದೆ ಬಹಳಷ್ಟು ಕಾರಣಗಳಿದ್ದವು. ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದ ಮಹಿಳೆಯರಿಗೆ ಸಹಾಯಮಾಡುವ ಮಾನವೀಯ ಉದ್ದೇಶ, ಆರೋಗ್ಯ ಸಂಬಂಧಿ ಉದ್ದೇಶಗಳು ಇನ್ನೂ ಹಲವು ಕಾರಣಗಳಿದ್ದರೂ ಏರುತ್ತಿರುವ ಜನಸಂಖ್ಯೆಯ ನಿಯಂತ್ರಣ ಇದರ ಹಿಂದಿನ ಮೂಲ ಉದ್ದೇಶವಾಗಿತ್ತು.
ಆದರೆ ಜನ ಇದರ ದುರುಪಯೋಗ ಪಡೆದು ಭ್ರೂಣದ ಲಿಂಗ ಪತ್ತೆ ಮಾಡಿಸಿ, ಹೆಣ್ಣಾದರೆ ಗರ್ಭಪಾತ ಮಾಡಿಸಿಕೊಳ್ಳಲು ಆರಂಭಿಸಿದರು. ಹೀಗೆ ಒಳ್ಳೆಯ ಉದ್ದೇಶಗಳಿಗಾಗಿ ಜಾರಿಗೆ ತಂದ ಕಾಯ್ದೆ, ತಂತ್ರಜ್ಞಾನಗಳು ಹೆಣ್ಣುಭ್ರೂಣ ಹತ್ಯೆಯ ಸಾಧನಗಳಾಗಿ ಮಾರ್ಪಾಡಾದವು.

ಈ ಸಂಚಿಕೆಯಲ್ಲಿ ಬರೆದಿರುವ ಎಲ್ಲಾ ವಿಚಾರಗಳೂ ನಿಜವೇ. ೧೨೮೦ರ ಕಾಲಘಟ್ಟದಲ್ಲಿ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ರಾಜಸ್ಥಾನ, ಬಿಹಾರ್, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಬಹಳ ಸಾಮಾನ್ಯವಾಗಿದ್ದ ಆಚರಣೆ ಇದು. ಇಂದಿಗೂ ಈ ಕೆಲವು ರಾಜ್ಯಗಳಲ್ಲಿ ಹೆಣ್ಣೆಂದರೆ ಮೂಗೆಳೆಯುವವರೇ..... ಲಿಂಗಾನುಪಾತ 900ಕ್ಕೂ ಕಡಿಮೆ ಇರುವ ಹಲವು ಜಿಲ್ಲೆಗಳು ಈ ಮೇಲಿನ ರಾಜ್ಯಗಳಲ್ಲಿವೆ. ಪಂಜಾಬ್ ಹಾಗೂ ಹರಿಯಾಣಾದ ರಾಜ್ಯವಾರು ಲಿಂಗಾನುಪಾತವೇ 900ಕ್ಕೂ ಕಡಿಮೆ ಎಂದರೆ ನೀವು ನಂಬಲೇಬೇಕು. ಇನ್ನು ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅತೀ ಹೆಚ್ಚು..

ವಾಸ್ತವಿಕವಾಗಿರಲಿ ಎಂಬ ಉದ್ದೇಶದಿಂದಲೇ ಉತ್ತರಪ್ರದೇಶದ ಮುಜ್ಜಫರ್ ನಗರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಜ್ಜಫರ್ ನಗರ ಜಿಲ್ಲೆಯಲ್ಲಿ ಲಿಂಗಾನುಪಾತ ಬಹಳ ಕಡಿಮೆ ಇದೆ. ಶಾಮ್ಲಿ ವಲಯ ಆಗ ಮುಜ್ಜಫರ್ ನಗರದ ಭಾಗವಾಗಿತ್ತು. ಪ್ರಸ್ತುತ ಶಾಮ್ಲಿ ಜಿಲ್ಲಾ ಕೇಂದ್ರ. ಗ್ರಾಮದ ಹೆಸರು ಮಾತ್ರ ಕಾಲ್ಪನಿಕವಾದದ್ದು.

ವೈದ್ಯಕೀಯ ಸಂಬಂಧಿ ಮಾಹಿತಿಗಳನ್ನು ನೀಡಿದ, ನನ್ನೆಲ್ಲಾ ಕಿರಿಕಿರಿಯ ಕೊರೆತಗಳನ್ನು ಸಮಾಧಾನದಿಂದ ಸಹಿಸಿ ಬರೆಯಲು ಸ್ಪೂರ್ತಿ ನೀಡಿದ ಆರಿದ್ರಾ ಅವರಿಗೆ ಅನಂತ ಧನ್ಯವಾದಗಳು.... 🙏🙏

ಮಾಹಿತಿ ಕೃಪೆ: 
ವಿಕಿಪೀಡಿಯ
ಅಂತರ್ಜಾಲ

ಮಂಗಳವಾರ, ಜೂನ್ 30, 2020

ಅನೂಹ್ಯ ಪಯಣ

ಇದು ನನ್ನ ಮೊದಲ ಕಾದಂಬರಿ. ನಾನೆಂದಿಗೂ ಕಾಲೇಜು ಅಸೈನ್ಮೆಂಟುಗಳನ್ನು ಬಿಟ್ಟು ಬೇರೇನನ್ನೂ ಬರೆದವಳಲ್ಲ. ಓದುವ ಹುಚ್ಚು ಬಹಳವಾದರೂ ಎಂದೂ ಬರೆಯುವ ಬಗ್ಗೆ ಯೋಚಿಸಿರಲಿಲ್ಲ. ಸುಮ್ಮನೆ ಮನೆಯಲ್ಲಿ ಕುಳಿತು ವ್ಯರ್ಥ ಕಾಲಹರಣ ಮಾಡುವ ಬದಲು ಏನಾದರೂ ಬರೆಯಬಹುದಲ್ಲಾ ಅನ್ನುವ ಯೋಚನೆ ಬಂದಾಗ ಬರೆಯಲಾರಂಭಿಸಿದ ಕಥೆ ಅನೂಹ್ಯ.

ಏನು ಬರೆಯಲಿ ಎಂದು ಯೋಚಿಸಿದಾಗ ಮೊದಲು ತಲೆಗೆ ಬಂದ ವಿಷಯವಿದು.... ಒಂದು ಪುಟ್ಟ ಕಥೆ, ಕವನ ಏನೋ ಗೀಚುವ ಬದಲು ಇಂತಹ ವಿಷಯವನ್ನಿಟ್ಟುಕೊಂಡು ಕಾದಂಬರಿ ಬರೆಯಬೇಕು ಎಂದು ಅದೇಕೆ ಅನಿಸಿತೋ ನನಗೂ ತಿಳಿಯದು. ಒಮ್ಮೊಮ್ಮೆ ನನಗೇ ಹುಚ್ಚು ಎನಿಸಿದ್ದಿದೆ. ಮೊದಲ ಪ್ರಯತ್ನಕ್ಕೆ ಇಂತಹ ವಿಷಯ, ವಿಸ್ತಾರವಾದ ಪರಿಕಲ್ಪನೆ ಬೇಕಾ ಅಂತ. ಆದರೆ ನನ್ನ ಮನಸ್ಸು ಕೇಳಲೇ ಇಲ್ಲ. ಇದರ ನಡುವಿನಲ್ಲೇ ಕೆಲವು ಸಣ್ಣ ಕಥೆ, ಕವನ, ಹಾಸ್ಯ ಬರಹಗಳನ್ನು ಬರೆದಿರುವೆನಾದರೂ ಒಟ್ಟಾರೆಯಾಗಿ ನನ್ನ ಮೊದಲ ಬರಹ ಅನೂಹ್ಯ.

ಬರವಣಿಗೆಯ ಬಗ್ಗೆ ಏನೇನೂ ಅನುಭವವಿರಲಿಲ್ಲ. ಹತ್ತು ಸಂಚಿಕೆಗಳಲ್ಲಿ ಮುಗಿಯಬಹುದು ಅಂದುಕೊಂಡಿದ್ದೆ. ಈಗ ಹಿಂತಿರುಗಿ ನೋಡಿದರೆ ನನಗೇ ಅಚ್ಚರಿಯಾಗುತ್ತದೆ.

ಇನ್ನು ಕಥೆಯ ವಿಷಯಕ್ಕೆ ಬರುವುದಾದರೇ, ಬರವಣಿಗೆ ಓದುಗರ ಚಿಂತನೆಗಳನ್ನು ಓರೆಗೆ ಹಚ್ಚಬೇಕು ಎಂದು ಆಶಿಸುವವಳು ನಾನು. ಹಾಗಾಗಿಯೇ ನನ್ನ ಸುತ್ತಮುತ್ತಲಿನ ಸಮಾಜದಲ್ಲಿ ನಾನು ಕಂಡ ವಿಶಿಷ್ಟ ವ್ಯಕ್ತಿತ್ವಗಳನ್ನು ಆಯ್ದುಕೊಂಡು ಈ ಕಥೆ ರಚಿಸಿದ್ದು.‌ ಇದರಲ್ಲಿಯ ಎಲ್ಲಾ ಪಾತ್ರಗಳೂ ನಮ್ಮ ನಡುವಿನವೇ (ವೈಭವ್ ಹೊರತುಪಡಿಸಿ). ಬಹಳವಾಗಿ ಕಾಡಿದಂತಹ ಕೆಲ ವ್ಯಕ್ತಿತ್ವಗಳು, ಕೇಳಿದ ಕೆಲವೊಂದು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಅದಕ್ಕೊಂದಿಷ್ಟು ಕಲ್ಪನೆ, ಆಶಯ ಬೆರೆಸಿ ಹೆಣೆದ ಕಥೆಯಿದು. ಕಥೆಯಲ್ಲಿ ವೇದನೆ, ವಾಸ್ತವದ ಕ್ರೌರ್ಯತೆಯೇ ಮೇಲಾಗಿದ್ದಾಗ ಅದಕ್ಕೊಂದಿಷ್ಟು ವಿರಾಮ ನೀಡಲು ಪೂರ್ವಯೋಜನೆ ಇಲ್ಲದೇ ಸೃಷ್ಟಿಸಿದ ಪಾತ್ರ ವೈಭವನದು.

ಕೊನೆಯದಾಗಿ ಹಾಗೂ ಬಹಳ ಮುಖ್ಯವಾಗಿ……. ಈ ಕಥೆಯ ಮುಕ್ತಾಯ ಸುಖಾಂತ್ಯವಾಗಿದ್ದು ಹಲವರಿಗೆ ಇಷ್ಟವಾದರೂ ಕೆಲವರಿಗೆ ವಾಸ್ತವಕ್ಕೆ ದೂರ ಎನ್ನಿಸಬಹುದು. ಅದಕ್ಕೆ ನನ್ನದೊಂದು ಸಣ್ಣ ಸ್ಪಷ್ಟೀಕರಣ.

ಹೌದು…. ವಾಸ್ತವದಲ್ಲಿ ನವ್ಯಾಳ ಪರಿಸ್ಥಿತಿಯಲ್ಲಿರುವ ಹೆಣ್ಣುಮಕ್ಕಳನ್ನು ಕುಟುಂಬ, ಸಮಾಜ ಎರಡೂ ಧಿಕ್ಕರಿಸುವುದು ನೂರಕ್ಕೆ ತೊಂಬತ್ತು ಪ್ರತಿಶತ ಸತ್ಯ. ಎಲ್ಲೋ ಲಕ್ಷಕ್ಕೊಬ್ಬರು ಆ ಹೆಣ್ಣಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಸಿಗಬಹುದು. ಇನ್ನು ಲೋಕದ ಜನರ ಮಾತಂತೂ ಬೇಡವೇ ಬೇಡ. ಹೊಲಸು ನಾಲಿಗೆಯನ್ನು ಮನಬಂದಂತೆ ಹರಿಯಬಿಡುತ್ತಾರೆ.

ಆದರೆ ನಾನು ಈ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ಆದರೂ ಬದಲಾವಣೆಯ ಆಶಯದೊಂದಿಗೆ ಬರೆದಿರುವೆ. ಈ ವಾಸ್ತವ ಬದಲಾಗಲೀ, ಅಂತಹ ನೊಂದ ಹೆಣ್ಣುಮಕ್ಕಳ ಬಾಳೂ ಬೆಳಗಲಿ ಎಂಬ ಆಶಯ ನನ್ನದು. ತಮ್ಮದಲ್ಲದ ತಪ್ಪಿಗೆ ಜೀವಂತವಾಗಿಯೇ ನರಕ ದರ್ಶನ ಮಾಡಿದ್ದಾರೆ ಇಂತಹ ಹೆಣ್ಣುಮಕ್ಕಳು. ಅವರನ್ನು ಸಾಂತ್ವನಿಸಬೇಕಲ್ಲವೇ ನಾವು…..? ಸಾಂತ್ವನಿಸದಿದ್ದರೂ ಚಿಂತೆಯಿಲ್ಲ ಕಡೇಪಕ್ಷ ಅವರ ಬಗ್ಗೆ ಕೇವಲವಾಗಿ ಮಾತನಾಡದೇ ಸುಮ್ಮನಿರಬಹುದಲ್ಲವೇ? ನಮ್ಮಂತೆಯೇ ಗೌರವಯುತವಾಗಿ ಬಾಳುವ ಹಕ್ಕು ಅವರಿಗೂ ಇದೆ ಎಂಬುದನ್ನೇಕೆ ಅರ್ಥೈಸಿಕೊಳ್ಳುವುದಿಲ್ಲ ನಾವುಗಳು…..?

ಇದನ್ನೆಲ್ಲ ಅರಿತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಒಟ್ಟಾಗಿ ಪ್ರಯತ್ನಿಸೋಣ ಎಂಬ ಆಶಯದಿಂದ ಬರೆದ ಕಥೆಯಿದು. ಹಾಗಾಗಿ ವಾಸ್ತವದಲ್ಲಿ ಕಷ್ಟಸಾಧ್ಯವಾದ ಅಂತ್ಯವನ್ನು ನಾನು ಕಥೆಯಲ್ಲಿ ಸಾಧ್ಯವಾಗಿಸಿದ್ದೇನೆ ಮುಂದೊಂದು ದಿನ ಈ ಕಥೆಯ ಅಂತ್ಯವೇ ವಾಸ್ತವವಾಗಲೀ ಎಂಬ ಆಶಯದಿಂದ.

ಈ ಕಥೆಯ ಓದುಗರಿಗೆ ಧನ್ಯವಾದಗಳೊಂದಿಗೆ ಒಂದು ಸಣ್ಣ ಕೋರಿಕೆ…... ಇದನ್ನು ಕಥೆಯೆಂದು ಓದಿ ಇಲ್ಲಿಗೇ ಮರೆತುಬಿಡಬೇಡಿ. ಇಲ್ಲಿ ಪ್ರಸ್ತಾಪವಾಗಿರುವ ವಿಚಾರದ ಬಗ್ಗೆ ಚಿಂತಿಸಿ, ಸಾಧ್ಯವಾದರೆ ಕೆಟ್ಟದ್ದನ್ನು ಬದಲಿಸಿ, ಒಳ್ಳೆಯ ವಿಚಾರ ಯೋಚನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಷ್ಟು ವೈಶಾಲ್ಯತೆಯನ್ನು ತೋರೋಣ. ಈ ಕಥೆಯನ್ನು ಓದಿ ಕಡೆಯ ಪಕ್ಷ ಒಬ್ಬ ವ್ಯಕ್ತಿಯಾದರೂ ತನ್ನ ಚಿಂತನಾ ವಿಧಾನವನ್ನು ಬದಲಾಯಿಸಿಕೊಂಡರೆ ನನ್ನ ಬರವಣಿಗೆ ಸಾರ್ಥಕವಾದಂತೆ. ಈ ಬಗ್ಗೆ ಯೋಚಿಸುವಿರಲ್ಲ.......?

ಇನ್ನೇನು ಹೇಳಲಿ.... ಇಲ್ಲಿಗೆ ಭಾವನೆಗಳನ್ನು ಬಸಿದು ಕೊಂಚ ಹಗುರವಾದ, ಈ ಪಯಣ ಮುಗಿಯಿತು ಎಂದು ಒಂದಿಷ್ಟು ಭಾರವಾದ ಮನದಿಂದ ಈ ಕಥೆಗೆ ವಿದಾಯ ಹೇಳುತ್ತಿರುವೆ. ನನ್ನೀ ಪ್ರಯತ್ನವನ್ನು ಮೆಚ್ಚಿ ಆಶೀರ್ವದಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.


ಬದಲಾವಣೆಯ ಆಶಯದೊಂದಿಗೆ......

ನೀತಾ ಸುಧೀರ್😊☺️



ಅನೂಹ್ಯ 43

ನವ್ಯಾಳ ಧೈರ್ಯದಿಂದಾಗಿ ಸತ್ಯ ಹೊರಬಿದ್ದಿತ್ತು. ತಪ್ಪು ಕಲ್ಪನೆಗಳು ದೂರಾಗಿತ್ತು. ಸಂಬಂಧಗಳ ಬೆಸುಗೆ ಇನ್ನಷ್ಟು ಗಟ್ಟಿಯಾಗಿತ್ತು. 

ನವ್ಯಾ ಬದುಕಿನ ಅತೀ ದೊಡ್ಡ ಹಾಗೂ ನಿರ್ಣಾಯಕ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಳು........

ನವ್ಯಾಳ ಬದುಕನ್ನು ಹಸನಾಗಿ ಕಟ್ಟಿಕೊಡುವ ಸಮನ್ವಿತಾಳ ಆಸೆ ಕೊನೆಗೂ ಈಡೇರಿತ್ತು.....

ಈಗ ಪ್ರಶ್ನೆಯಿದ್ದುದು ಸಮಾಜದ ಬಗ್ಗೆ......

"ನವ್ಯಾ….. ಇನ್ನು ನೀನು ನೋಯುವ, ಹೆದರುವ ಅಗತ್ಯವಿಲ್ಲ. ನೀನು ಗಟ್ಟಿಯಾಗಿರಬೇಕು. ನೀನೊಬ್ಬಳೇ ಅಲ್ಲ….. ನಾವೆಲ್ಲರೂ ಈ ಸಮಾಜವನ್ನೆದುರಿಸಲು ಸನ್ನದ್ಧರಾಗಿರಬೇಕು. ನನಗನಿಸಿದಂತೆ ಈ ವಿಷಯ ಹೊರಗೆ ತಿಳಿಯುವ ಸಾಧ್ಯತೆ ಕಡಿಮೆ. ಒಂದು ವೇಳೆ ನವ್ಯಾಳ ಹಿನ್ನೆಲೆ ತಿಳಿದ ವಿಘ್ನಸಂತೋಷಿ ಕಿಡಿಗೇಡಿಗಳ್ಯಾರಾದರೂ ಆ ಬಗ್ಗೆ ಕೆದಕಿ ವದಂತಿ ಹಬ್ಬಿಸಿದರೇ ಮಾತ್ರವೇ ವಿಷಯ ಬಹಿರಂಗವಾಗುವುದು. ಹಾಗಾಗದಿರಲೀ ಎಂದೇ ಆಶಿಸೋಣ…… ಒಂದು ವೇಳೆ ಹಾಗೆ ನಡೆದರೇ...... ಆಗ ಮುಂದಿನ ಸನ್ನಿವೇಶಗಳನ್ನು ಎದುರಿಸಲು ನಾವು ಒಗ್ಗಟ್ಟಾಗಿ ತಯಾರಿರಬೇಕು. ಹೆಚ್ಚೇನಿಲ್ಲ..... ಯಾರು ಏನೇ ಕೊಂಕಾಡಿದರೂ, ಕುಹಕ ಮಾಡಿದರೂ, ನಮ್ಮ ಚಾರಿತ್ರ್ಯ ವಧೆ ಮಾಡಿದರೂ ಅದನ್ನು ತಲೆಗೆ ಹಾಕಿಕೊಳ್ಳದಷ್ಟು ಸ್ಥಿತಪ್ರಜ್ಞರಾಗಿರಬೇಕು. ನವ್ಯಾಳ ಬಗ್ಗೆ ಬಲ್ಲವರು ಅವಳ ಬಗ್ಗೆ ಎಂದೂ ಸದರವಾಗಿ ಮಾತನಾಡಲಾರರು. ಆದರೂ ಆಡುವ ಜನರ ಬಾಯಿ ಮುಚ್ಚಿಸಲಾಗದು. ನಾವು ಹೇಗೇ ಬದುಕಿದರೂ ಆಡಿಕೊಳ್ಳುವವರು, ಟೀಕಿಸುವವರೂ ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಪಾಡಿಗೆ ನಾವಿರಬೇಕು. ಇದು ಕಷ್ಟವಾದರೂ ಅಸಾಧ್ಯವೇನಲ್ಲ. ನಾವೇನೆಂಬುದು ನಮಗೆ ತಿಳಿದಿದ್ದರೆ ಸಾಕು. ಅದನ್ನು ಲೋಕದೆದರು ರುಜುವಾತು ಪಡಿಸುವ ಅಗತ್ಯವಿಲ್ಲ. ನಮ್ಮ ಆತ್ಮಸಾಕ್ಷಿಗೆ ನಾವು ನಿಷ್ಠರಾಗಿರಬೇಕಷ್ಟೇ..... " ರಾತ್ರಿ ಪೂರಾ ಯೋಚಿಸಿ ನಿರ್ಧರಿಸಿದ್ದನ್ನು ಮನೆಯವರಿಗೆ ಮುಖ್ಯವಾಗಿ ನವ್ಯಾಳಿಗೆ ತಿಳಿಸಿ ಹೇಳಿದರು ಸತ್ಯನಾರಾಯಣ. 

ಅವರ ಮಾತುಗಳು ಎಲ್ಲರಿಗೂ ಸರಿಯೆನಿಸಿತು. ನವ್ಯಾಳತ್ತ ನೋಡಿ,

"ನಮ್ಮೆಲ್ಲರಿಗಿಂತಲೂ ಮುಖ್ಯವಾಗಿ ನೀನು ಬದಲಾಗಬೇಕು ಮಗೂ.... ನೀನು ಗಟ್ಟಿಗಿತ್ತಿಯಾಗಬೇಕು. ಹೆದರಕೂಡದು. ಸಮಯ ಬಂದರೆ ಎಲ್ಲರನ್ನು ಎದುರಿಸಲು ಸಿದ್ಧವಾಗಿರಬೇಕು. ಎರಡು ವಿಷಯಗಳು ಯಾವತ್ತೂ ನಿನ್ನ ತಲೆಯಲ್ಲಿರಲಿ. ಒಂದು ನಡೆದುಹೋದದ್ದರಲ್ಲಿ ನಿನ್ನದೇನೂ ತಪ್ಪಿಲ್ಲ. ಎರಡನೇಯದಾಗಿ ನಿನ್ನ ಕುಟುಂಬ ನಿನ್ನ ಜೊತೆಗಿದೆ. ಇದರ ಹೊರತು ಬೇರೇನನ್ನೂ ಯೋಚಿಸಬೇಡ…..." ಅವಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಹೇಳಿದರು. ಅವಳೊಬ್ಬಳು ಸಮಸ್ಯೆಯನ್ನು ಎದುರಿಸಿ ನಿಂತರೆ ಉಳಿದಿದ್ದು ಹೇಗೋ ಸಂಭಾಳಿಸಬಹುದೆಂಬ ಅನಿಸಿಕೆ ಅವರದು.

ಆದರೆ ನವ್ಯಾಳ ಉತ್ತರ ಅವರೆಣಿಕೆಗೂ ಮೀರಿತ್ತು. ಅವರ ಮಾತುಗಳನ್ನು ಕೇಳಿ ನಕ್ಕಳು ಹುಡುಗಿ…... ಆ ನಗುವಿನಲ್ಲಿ ಇದ್ದಿದ್ದು ಅಸಹ್ಯವೋ, ಕುಹಕವೋ, ಇಲ್ಲಾ ಹೃದಯಹೀನ ಲೋಕದ ಬಗೆಗಿನ ತಿರಸ್ಕಾರವೋ ಹೇಳುವುದು ಕಷ್ಟ.

"ಈ ಬಗ್ಗೆ ಚಿಂತಿಸಬೇಡಿ ಅಪ್ಪಾ. ಈ ಲೋಕ ನನ್ನ ಬಗ್ಗೆ ಏನಂದುಕೊಳ್ಳುತ್ತೇ? ಜನ ನನ್ನ ಬಗ್ಗೆ ಏನು ಮಾತಾಡ್ತಾರೆ? ಅನ್ನೋದು ನನಗ್ಯಾವತ್ತೂ ಮುಖ್ಯವಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ನಾನು ನನ್ನ ಸಂಬಂಧಿಯಿಂದಲೇ ಮೋಸಹೋಗಿ ಮಾರಾಟವಾದಾಗ ಈ ಜನರ್ಯಾರೂ ನನ್ನ ಸಹಾಯಕ್ಕೆ ಬರ್ಲಿಲ್ಲ. ಎಷ್ಟು ಜನರ ಕೈ ಕಾಲು ಹಿಡಿದಿದ್ದೆ ಅಂದು? ಆ ನರಕದಲ್ಲಿ ಇವರೂ ನಮ್ಮಂತೆ ಜೀವವಿರುವ ಮನುಷ್ಯರು ಎಂಬ ಕನಿಕರವೂ ಇಲ್ಲದೇ ಮೃಗಗಳಿಗಿಂತ ಕಡೆಯಾಗಿ ಮೈಮೇಲೆ ಎರಗುತ್ತಿದ್ದ ನರರೂಪಿ ರಾಕ್ಷಸರಿಂದ ಬಿಡಿಸಿ ಎಂದು ಚೀತ್ಕರಿಸಿ ಬೊಬ್ಬಿಡುವಾಗಲೂ ಈ ಪ್ರಜ್ಞಾವಂತ ಜನರ ಸಮಾಜ ಸಹಾಯಹಸ್ತ ಚಾಚಲಿಲ್ಲ. ಅಷ್ಟೇಕೆ? ಅಲ್ಲಿ ಬರುವ ಗಿರಾಕಿಗಳಲ್ಲಿ  ಹಲವು ಮಂದಿ ಈ ಸಮಾಜದ ಗಣ್ಯಾತಿಗಣ್ಯರು….... ಇಂತಹವರ ಮುಖವಾಡದ ಹಿಂದಿನ ಅಸಲಿ ಮುಖವನ್ನು, ಆ ಮುಖದ ಹಿಂದಿರುವ ಕ್ರೌರ್ಯವನ್ನು ನಾನು ಕಂಡಿದ್ದೇನೆ. ಸಮಾಜದ ಸ್ವಾಸ್ಥ್ಯ ಕಾಪಾಡುವ, ನ್ಯಾಯವನ್ನು ಕಾಯುವ, ಜನರನ್ನು ರಕ್ಷಿಸುವ ಹೊಣೆ ಹೊತ್ತ ಹಲವರು ಕತ್ತಲು ಕವಿದೊಡನೇ ತಮ್ಮ ಮುಖವಾಡ ಕಳಚಿ ಅದೇ ವೇಶ್ಯಾಗೃಹಗಳಿಗೆ ಬಂದು ಅಮಾಯಕ ಹೆಣ್ಣುಗಳ ಮೇಲೆರಗಿ ಹೊರಳಾಡುತ್ತಾರೆ. ಇನ್ನು ಜನಸೇವೆಯೇ ಜನಾರ್ಧನ ಸೇವೆ ಎಂದು ಪ್ರಜಾಸೇವೆಯ ಕೈಂಕರ್ಯದಲ್ಲಿ ತೊಡಗಿಕೊಳ್ಳುವ ಹಲವು ಪುಢಾರಿಗಳು, ಪ್ರಖ್ಯಾತ ಉದ್ಯಮಿಗಳು, ಅತೀ ಸಿರಿವಂತರು ಬೆಲೆವೆಣ್ಣುಗಳನ್ನು ತಮ್ಮ‌ ಖಾಸಗಿ ಗೆಸ್ಟ್ ಹೌಸುಗಳಿಗೆ ಕರೆಸಿಕೊಂಡು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಾರೆ. ಕೆಲವೊಮ್ಮೆಯಂತೂ ಅವರುಗಳ ವಿಕೃತಿಗಳಿಗೆ ಮೇರೆಯೇ ಇರುವುದಿಲ್ಲ. ಹತ್ತು, ಹದಿನೈದು ಜನರು ಒಟ್ಟಿಗೇ ಹುಚ್ಚುನಾಯಿಗಳಂತೆ ಮೈಮೇಲೆ ಎರಗುವುದೂ ಇದೆ. ಒಮ್ಮೊಮ್ಮೆ ಹೀಗೆ ಗೆಸ್ಟ್ ಹೌಸುಗಳಿಗೆ ಹೋದ ಹೆಣ್ಣುಗಳು ಜೀವಂತ ಮರಳುವುದೇ ಇಲ್ಲ….... 

ಹೌದು.......

ಆಕೆ ಬೆಲೆವೆಣ್ಣೇ ಇರಬಹುದು....... 

ಮೈ ಮಾರಿ ಹೊಟ್ಟೆ ಹೊರೆಯುವುದು ಅವಳ ವೃತ್ತಿಯೇ ಆಗಿರಬಹುದು…... 

ಆದರೆ ಅವಳಿಗೂ ಒಂದು ಮನಸ್ಸಿಲ್ಲವೇ? ಒಂದು ಹೃದಯವಿಲ್ಲವೇ? ಆಕೆಗೂ ನಿಮ್ಮಂತೆ ಜೀವವಿಲ್ಲವೇ…...? ತಮ್ಮ ಮನೆಯ ಸಾಕುನಾಯಿ ಕಳೆದುಹೋದರೆ ಕಂಪ್ಲೈಂಟ್ ಮಾಡುವ, ಹುಡುಕಿಕೊಡಿ ಎಂದು ಮಾಧ್ಯಮಗಳಲ್ಲಿ ಗೋಗರೆಯುವ, ಹುಡುಕಿಕೊಟ್ಟರೆ ಸಾವಿರಾರು ರೂಪಾಯಿ ಬಹುಮಾನ ಘೋಷಿಸುವ ಜನರಿದ್ದಾರೆ ಇಲ್ಲಿ. ಅದೇ ತಮ್ಮಂತೆ ಜೀವವಿರುವ, ಭಾವನೆಗಳಿರುವ ಹೆಣ್ಣೊಬ್ಬಳು ರಾತ್ರೋರಾತ್ರಿ ಕಣ್ಮುಚ್ಚಿ ತೆರೆಯುವುದರೊಳಗೆ ಈ ಲೋಕವನ್ನೇ ತೊರೆದರೂ ಕನಿಷ್ಠ ಅದರ ಸುಳಿವೂ ಸಿಗುವುದಿಲ್ಲ ಯಾರಿಗೂ.

ಒಬ್ಬ ಹುಡುಗಿ ಕಾಣೆಯಾಗಿದ್ದಾಳೆ, ಬಹುಶಃ ಬದುಕಿಯೇ ಇಲ್ಲವೇನೋ...... ಆದರೆ ಆ ಬಗ್ಗೆ ಯಾರಿಗೂ ಏನೂ ಚಿಂತೆಯಿಲ್ಲ ಎಂದರೆ ಅಮಾನವೀಯವಲ್ಲವೇ......? ಈ ಜಗಕ್ಕೆ ಆ ವೇದನೆಯ ಅರಿವಿಲ್ಲದಿರಬಹುದು. ಆದರೆ ನನಗಿದೆ. ನಾನದನ್ನು ಅನುಭವಿಸಿದ್ದೇನೆ. ನನ್ನ ಜೊತೆಗಿದ್ದ ಹಲವು ಹುಡುಗಿಯರು ಹೀಗೆ ಹೇಳಹೆಸರಿಲ್ಲದೇ ಅದೃಶ್ಯರಾಗಿದ್ದನ್ನು ಕಂಡಿದ್ದೇನೆ. ಹಿಂದಿನ ದಿನದವರೆಗೆ ಅವರು ಬದುಕಿದ್ದರೆಂಬ ಅಸ್ತಿತ್ವವೂ ಇಲ್ಲದಂತೆ, ಇಂತಹ‌ ಹೆಣ್ಣೊಬ್ಬಳು ಎಂದೋ ಒಂದು ಕಾಲದಲ್ಲಿ ಈ ಭೂಮಿಯಲ್ಲಿ ಜೀವಿತವಿದ್ದಳು ಎಂಬ ಕುರುಹೂ ಸಿಗದಂತೆ ಆಕೆ ಮಾಯವಾದಾಗ ಅವಳ ಬಗ್ಗೆ ವಿಚಾರಿಸಲು ಈ ಸಮಾಜ ಬರಲಿಲ್ಲ. ಅಂದಿಗೇ ನನ್ನ ಹಾಗೂ ಈ ಸಮಾಜದ ಋಣ ತೀರಿತು. ಈಗ ನನ್ನ ಪಾಲಿಗೆ ಈ ಸಮಾಜ ಅಸ್ತಿತ್ವದಲ್ಲಿಲ್ಲ. ನಾನಲ್ಲಿ ಅನುಭವಿಸಿದ ನರಕದೆದುರು ಈ ಜನ, ಇವರ ಚುಚ್ಚುನುಡಿಗಳು ತೃಣ ಸಮಾನ.

ಅದರಲ್ಲೂ ಈ ಚಾರಿತ್ರ್ಯ ಹರಣ ಮಾಡುವ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವವರು ಹೆಂಗಸರು ಎಂಬುದು ದೊಡ್ಡ ವಿಪರ್ಯಾಸ. ಒಬ್ಬ ಹೆಣ್ಣಾಗಿ ಆಕೆಯೇ ಇನ್ನೊಬ್ಬಳ ನೋವಿನಾಳವನ್ನು ಅರಿಯದೇ ಹೋಗುತ್ತಾಳೆ... 'ನೀನು ವೇಶ್ಯೆ ಅಂತ ಊರಲ್ಲಿರೋ ಗಂಡಸರೆಲ್ಲಾ ಆಡಿಕೊಳ್ಳುತ್ತಿದ್ದಾರೆ' ಎಂದು ಹಂಗಿಸುವವರು 'ಅವಳು ವೇಶ್ಯೆಯೆಂದು ನಿನಗೆ ಹೇಗೆ ಗೊತ್ತು? ನೀನೂ ಅವಳ ಗಿರಾಕಿಯೇನು?' ಎಂಬ ಪ್ರಶ್ನೆಯನ್ನು ಗಂಡಸರಿಗೆ ಎಂದೂ ಕೇಳುವುದಿಲ್ಲ‌ ಯಾಕೆ? 'ಅವನು ಏನು ಬೇಕಾದರೂ ಮಾಡ್ತಾನೆ. ಎಷ್ಟು ಹೆಂಗಸರೊಂದಿಗೆ ಬೇಕಾದರೂ ಸಂಬಂಧ ಇಟ್ಕೋತಾನೆ. ಏಕೆಂದರೆ ಅವನು ಗಂಡಸು. ಆದ್ರೆ ನೀನು ಹೆಂಗಸು….. ಹೆಂಗಸಾಗಿ ಇಂತಹ ಜಾರಿಣಿಯ ಕೆಲಸ ಮಾಡಲು ನಾಚಿಕೆ ಆಗೋಲ್ವಾ ನಿನಗೆ' ಎಂಬ ಉತ್ತರ ಈ ಸಮಾಜದ್ದಾಗಿದ್ದರೆ ನನ್ನ ಧಿಕ್ಕಾರವಿರಲೀ ಈ ಸಮಾಜಕ್ಕೆ...... ಧಿಕ್ಕಾರವಿರಲಿ ನಿಮ್ಮ ಕೀಳು ಯೋಚನೆಗೆ....... ಇಂತಹ ತುಚ್ಛ ಯೋಚನೆಯುಳ್ಳ ಜನರ ಬಗ್ಗೆ, ಜಗದ ಬಗ್ಗೆ ನಾನೆಂದೂ ಚಿಂತಿಸಲಾರೆ. ಇವರಿಗೆ ನನ್ನ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. 

ನನ್ನ ಬಗ್ಗೆ ಮಾತಾಡಲು, ಬೈಯಲು ಅಧಿಕಾರ ಇರುವುದು ಸಮನ್ವಿತಾಳಿಗೆ ಮತ್ತು ಈ ಮನೆಯವರಿಗೆ ಮಾತ್ರ. ಏಕೆಂದರೆ ಇಷ್ಟು ವಿಶಾಲ ಪ್ರಪಂಚದಲ್ಲಿ ನನ್ನನ್ನು ಅಕ್ಕರೆಯಿಂದ ಆದರಿಸಿ ಪ್ರೀತಿ ತೋರಿದವರು ನೀವುಗಳು ಮಾತ್ರವೇ. ನಿಮ್ಮ ಋಣ ಹಿರಿದಾಗಿದೆ ನನ್ನ ಮೇಲೆ. ನಿಮ್ಮ ಕಣ್ಣುಗಳಲ್ಲಿ ನನ್ನ ಬಗ್ಗೆ ಅಸಹ್ಯ, ಬೇಸರ,ತಿರಸ್ಕಾರ ಕಂಡರೆ ಮಾತ್ರ ನಾನು ಸಹಿಸಲಾರೆ. ನೀವು ನನ್ನನ್ನು ಕ್ಷಮಿಸಿ ಒಪ್ಪಿದಿರಲ್ಲ. ನನಗಷ್ಟೇ ಸಾಕು...... ಇನ್ಯಾರಿಗೂ ಹೆದರಲಾರೆ ನಾನು......" ದೃಢವಾಗಿತ್ತು ಅವಳ ನಿಲುವು.

ಅವಳೇ ಅಷ್ಟು ಧೈರ್ಯವಾಗಿದ್ದು ಕಂಡು ಮನೆಯವರಿಗೆ ನೆಮ್ಮದಿ ಎನಿಸಿತು‌. ಅವರೂ ನಿರಾಳ....

"ಆದರೆ ಕಾರ್ತಿಕ್.....?"  ಅನುಮಾನದಿಂದ ಕೇಳಿದಳು ಸಮನ್ವಿತಾ.

"ಇನ್ನು ಈ ಮನೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಬೇಡ. ಇಂದು ಇಲ್ಲಿ ನಡೆದದ್ದು ನಮ್ಮ ನಡುವೆಯಷ್ಟೇ ಇರುತ್ತದೆ. ಹಾಗೆ ಈ ಮಾತುಕತೆಯನ್ನು ನಾವು ಇಂದು ಇಲ್ಲಿಯೇ ಮರೆಯುತ್ತೇವೆ ಕೂಡಾ. ಈ ಬಗ್ಗೆ ಕಾರ್ತೀಯನ್ನೂ ಒಳಗೊಂಡು ಇನ್ಯಾರಿಗೂ ಏನನ್ನೂ ಹೇಳುವ, ಸಮಜಾಯಿಷಿ ನೀಡುವ ಅಗತ್ಯವಿಲ್ಲ. ಅಷ್ಟು ಪ್ರಮುಖವಾದ ವಿಚಾರವೂ ಇದಲ್ಲ. ನವ್ಯಾ ನಮ್ಮ ಮಗಳಷ್ಟೇ….. ಇನ್ನೆಂದೂ ಈ ವಿಚಾರ ಪ್ರಸ್ತಾಪವಾಗಬಾರದು" ಕಟ್ಟುನಿಟ್ಟಾಗಿ ನುಡಿದರು ಮಂಗಳಾ. ಸತ್ಯನಾರಾಯಣರು ಸಹ ಮಡದಿಯ ಮಾತನ್ನು ಅನುಮೋದಿಸಿ, "ಹೌದು. ಕಾರ್ತೀಗೆ ಹೇಳುವ ಅಗತ್ಯವಿಲ್ಲ. ಮುಂದೆಂದಾದರೂ ತಿಳಿದರೆ ಅವನ ನಿರ್ಧಾರವೂ ನಮ್ಮಂತೆಯೇ ಇರುತ್ತೆ ಅನ್ನೋ ಭರವಸೆ ನನಗಿದೆ" ಎಂದರು.

ಈ ಕರಾರು ಎಲ್ಲರಿಗೂ ಒಪ್ಪಿಗೆಯಾಯಿತು ಕೂಡಾ.

ನವ್ಯಾಳ ಇಷ್ಟು ವರ್ಷಗಳ ಹೋರಾಟದ ಬದುಕಿಗೆ ಇಂದು ನಿಜ ಅರ್ಥದಲ್ಲಿ ಗೆಲುವು ಸಿಕ್ಕಿತ್ತು. ಆ ಸಂತೋಷವನ್ನು ಅವಳಿಗಿಂತಲೂ ಹೆಚ್ಚಾಗಿ ಅನುಭವಿಸಿದ್ದು ಸಮನ್ವಿತಾ. ಗೆಳತಿಯ ಸಂತೋಷ ಕಂಡು ತಾನೂ ಸಂಭ್ರಮಿಸಿದಳು. ಅವಳನ್ನು ಆಲಂಗಿಸಿಕೊಂಡವಳು, "ದಯವಿಟ್ಟು ಇನ್ನಾದರೂ ನಗೋದನ್ನು ಕಲಿ.... ಇಷ್ಟು ವರ್ಷ ನಿನ್ನ ಕಳಾಹೀನ ಮುಖ ನೋಡಿದಾಗಲೆಲ್ಲಾ ನಿನಗೊಂದು ಒಳ್ಳೆಯ ಬದುಕನ್ನು ಕಟ್ಟಿಕೊಡಬೇಕೆಂಬ ನನ್ನ ಪ್ರಯತ್ನಕ್ಕೆ ಯಾಕೆ ಯಶಸ್ಸು ಸಿಗ್ತಾನೇ ಇಲ್ಲ ಅಂತ ಬೇಜಾರಾಗೋದು. ಇವತ್ತು ನಿನ್ನ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಕ್ಕಿದೆ. ಈಗ ಸಂತೋಷ ತಾನೇ? ಇನ್ನು ಜನರಿಗೆ ಗೊತ್ತಾದ್ರೆ ಹಾಗೆ ಮಾತಾಡ್ತಾರೆ, ಹೀಗೆ ಚುಚ್ಚಿ ಮಾತಾಡ್ತಾರೆ ಅಂತ ಯೋಚಿಸ್ಕೊಂಡು ಕೂತ್ಕೋಳ್ಳಲ್ಲ ಅಲ್ವಾ?" ಕೇಳಿದಳು.

"ಖಂಡಿತಾ ಇಲ್ಲಾ ಸಮಾ..... ಇನ್ಯಾವ ಬೇಸರವೂ ಇಲ್ಲ, ನೋವೂ ಇಲ್ಲ. ಸಮಾ..... ಥ್ಯಾಂಕ್ಯೂ ಫಾರ್ ಎವ್ವೆರಿಥಿಂಗ್....... ಥ್ಯಾಂಕ್ಸ್ ಅನ್ನೋದು ಬಹಳ ಚಿಕ್ಕ ಪದ. ನೀನು ಯಾರು? ನನ್ನ ಬದುಕಲ್ಲಿ ನೀನ್ಯಾಕೆ ಬಂದೆ? ನಿನಗ್ಯಾಕೆ ನನ್ನ ಮೇಲೆ ಈ ಪರಿಯ ಅಕ್ಕರೆ….? ಊಹ್ಮೂಂ...... ನಂಗೊತ್ತಿಲ್ಲ. ಆದ್ರೆ ನನ್ನ ಈ ಬದುಕು ನೀನು ನೀಡಿದ ಕಾಣಿಕೆ ಅನ್ನೋದು ಮಾತ್ರ ನನಗೆ ಗೊತ್ತು. ನೀನು ನನಗೆ ಸಿಕ್ಕಿರಲಿಲ್ಲ ಅಂದ್ರೇ ಅದೇ ನರಕದಲ್ಲಿ ಹೆಣಗಿ ಅಸ್ತಿತ್ವವಿಲ್ಲದ ಅನಾಥ ಶವವಾಗಿರ್ತಿದ್ದೆನೇನೋ...... ಅಂತಹ ಹೀನ ಸ್ಥಿತಿಗೆ ತಲುಪದಂತೆ ತಡೆದು ಚೆಂದದ ಬದುಕೊಂದನ್ನು ನನಗಾಗಿ ರೂಪಿಸಿಕೊಟ್ಟಿದ್ದಕ್ಕೆ ಉಸಿರಿರುವವರೆಗೂ ನಿನಗೆ ಅಭಾರಿ ಕಣೇ…..." ಗದ್ಗದಿತಳಾಗಿ ನುಡಿದಳು.

"ಇಂತಹ ಹುಡುಗಿನ ನನ್ನ ಜೊತೆಗಾತಿಯಾಗಿ ದಯಪಾಲಿಸಿದ್ದಕ್ಕೆ ನಾನೂ ನಿನಗೆ ಅಭಾರಿ......." ಕಿಶೋರನೂ ಮಡದಿಯೊಂದಿಗೆ ದನಿಗೂಡಿಸಿದ.

"ನಾವಿಬ್ರೂ ಕೂಡಾ ನಿನಗೆ ಚಿರ ಋಣಿಗಳೇ ಸಮನ್ವಿತಾ....." ಮಂಗಳಮ್ಮ ಪತಿಯನ್ನು ಒಡಗೂಡಿಸಿಕೊಂಡು ನುಡಿದರು.

"ಆದ್ರೆ ಇಷ್ಟೊಳ್ಳೆಯ ಮಾಣಿಕ್ಯಗಳನ್ನು ನಮಗಾಗಿ ದಯಪಾಲಿಸಿದ್ದಕ್ಕೆ ಆ ಭಗವಂತನಿಗೆ ನಾನು, ನೀನು ಎಷ್ಟು ಋಣಿಯಾಗಿದ್ರೂ ಸಾಲದು ಮಂಗಳಾ.  ನಿಜಕ್ಕೂ ಈ ದಿನ ಬಲು ಶುಭದಾಯಕ…... ಎಲ್ಲ ಸಮಸ್ಯೆಗಳು ನಮ್ಮ ಮಟ್ಟಿಗೆ ಬಗೆಹರಿದು, ಮನಗಳು ತಿಳಿಯಾಗಿರುವ ಖುಷಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರೋಣ. ಇನ್ನು ಮುಂದೆ ಯಾವುದೇ ವಿಘ್ನಗಳೂ ಬರದಿರಲಿ ಅಂತ ಭಗವಂತನಲ್ಲಿ ಬೇಡಿಕೊಂಡು ಹೊರಗೇ ತಿಂಡಿ ಮುಗಿಸಿಕೊಂಡು ಬರೋಣ. ಸಮನ್ವಿತಾ ನೀನು ಇವತ್ತು ರಜೆ ತಗೋ ಮಗಳೇ…..." ಸತ್ಯನಾರಾಯಣರು ಹೇಳಿದರು‌.

ಹಾಗೆ ತಿಳಿಯಾದ ಮನದೊಂದಿಗೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಟರು ಎಲ್ಲರೂ ಹೊಸ ಬದುಕಿನ ಹೊಸ್ತಿಲಲ್ಲಿ ಭಗವಂತನ ಅನುಗ್ರಹವನ್ನು ಆಶಿಸಿ...... 

             ***************************

ಮೇಲಿನ ಬಾಲ್ಕನಿಯಲ್ಲಿ ನಿಂತು ಎದುರಿನ ಉದ್ಯಾನವನ್ನೇ ದಿಟ್ಟಿಸುತ್ತಿದ್ದಳು ಸಮನ್ವಿತಾ….... ಅವನು ಅಷ್ಟೇ ತದೇಕಚಿತ್ತದಿಂದ ಅವಳನ್ನೇ ದಿಟ್ಟಿಸುತ್ತಿದ್ದ........

ಅವಳೊಂದು ಮುಗಿಯದ ಸೋಜಿಗ ಅವನ ಪಾಲಿಗೆ. ನೋಡಿದಷ್ಟೂ ತೀರದ ಗುಂಗು ಅವಳದು.....

ತುಸು ಸಮಯದ ನಂತರ ಅವನೆಡೆ ನೋಟ ಹರಿಸಿದವಳು ಅವನ ನೋಟ ತನ್ನಲ್ಲೇ ಇರುವುದು ಕಂಡು ನಸುನಕ್ಕಳು.

"ಏನು ಮಿಸ್ಟರ್ ಶರ್ಮಾ? ಹಾಗೆ ನೋಡ್ತಿದ್ದೀರಾ? ನನ್ನ ಚಿತ್ರ ಬರೆಯುವ ಯೋಚನೆ ಏನಾದ್ರೂ ಇದೆಯಾ ಹೇಗೆ?" ತಮಾಷೆಯಾಗಿ ಕೇಳಿದಳು.

ಅವನೇನೂ ಉತ್ತರಿಸಲಿಲ್ಲ.

ಸುಂದರ ಆಹ್ಲಾದಕರ ಸಂಜೆಯದು. ಹಕ್ಕಿಗಳ ಚಿಲಿಪಿಲಿ ಇಂಚರದ ಕಲರವ ಹಿತವಾಗಿತ್ತು.

ಆದರೆ ಅವನಿಗೆ ಅವಳ ಸಾಮೀಪ್ಯ ಎಲ್ಲಕ್ಕಿಂತಲೂ ಹೆಚ್ಚು ಹಿತವಾಗಿತ್ತು......

ಆ ದಿನ ಬೆಳಿಗ್ಗೆಯೇ ಅವಳನ್ನು ಮನೆಗೆ ಕರೆತಂದಿದ್ದ. ಅವಳಿಗೂ ಅವನ ಬಳಿ ಮನೆಯಲ್ಲಿ ನಡೆದಿದ್ದನೆಲ್ಲಾ ವಿಶದವಾಗಿ ವಿವರಿಸಬೇಕಿದ್ದರಿಂದ ಕರೆದ ಕೂಡಲೇ ಬರಲೊಪ್ಪಿದ್ದಳು. ಆದರೆ ಅವಳಿಗೆ ತಿಳಿದಿರದ ವಿಷಯ……. ಕಿಶೋರ್ ಮತ್ತು ನವ್ಯಾ ಹಿಂದಿನ ದಿನವೇ ಅವನಿಗೆ ಕರೆ ಮಾಡಿ ಈ ಮೀಟಿಂಗಿಗೆ ಅಡಿಪಾಯ ಹಾಕಿರುವುದು ಎಂದು. ಹೇಳಿದ ಮಾತು ಕೇಳದ ವೈದ್ಯೆಯನ್ನು ದಾರಿಗೆ ತರಬೇಕಿತ್ತಲ್ಲ‌.....

ಅವನೇ ಹೋಗಿ ಅವಳನ್ನು ಕರೆತಂದಿದ್ದರೂ ಬೆಳಗ್ಗಿನಿಂದ ಅವಳು, ಮೃದುಲಾ ಹಾಗೂ ಆಕೃತಿಯ ಮಾತಿನ ನಡುವೆ ಅಪ್ಪ ಮಗ ಮೂಕ ಪ್ರೇಕ್ಷಕರಾಗಿದ್ದು ವಿಧಿ ವಿಲಾಸವೇ ಸರಿ. ಸಂಜೆಯ ತನಕ ಇವರ ಬಿಡುವಿಲ್ಲದ ಹರಟೆಯಿಂದ ಬೇಸತ್ತವನು, "ಅಲ್ಲಾ, ಇಷ್ಟು ದಿನ ಆದ್ಮೇಲೆ ಏನೋ ದೇವರ ದಯೆಯಿಂದ ಒಂದು ದಿನ ಫ್ರೀಯಾಗಿ ಸಿಕ್ಕಿದ್ದಾರೆ ನಮ್ಮ ಡಾಕ್ಟ್ರು. ಒಂದಿಷ್ಟು ಮಾತಾಡೋಣ ಅಂತ ಕರ್ಕೊಂಡು ಬಂದ್ರೆ…. ಅಬ್ಬಬ್ಬಾ, ನೀವಿಬ್ಬರೂ ಅಮ್ಮ ಮಗಳು ಅದೇನು 24/7 ನ್ಯೂಸ್ ಚಾನೆಲ್ ತರ ನಾನ್ ಸ್ಟಾಪ್ ಬಡ್ಕೋತ ಇದ್ದೀರಲ್ಲ…... ಅದೇನು ಬಾಯಾ ಇಲ್ಲಾ ಬೊಂಬಾಯಾ.....? ಈಗೇನು ನಮ್ಮ ಡಾಕ್ಟ್ರನ್ನ ಬಿಡ್ತೀರಾ ಇಲ್ಲಾ ನಾನೇ ಅವರನ್ನು ಮನೆಯಿಂದ ಹೊರಗೆ ಕರ್ಕೊಂಡು ಹೋಗ್ಲಾ......?" ಧಮ್ಕಿ ಹಾಕಿ ಕೇಳಿದ.

"ಅಬ್ಬಬ್ಬಾ.... ಅಮ್ಮಾ.... ಸಮ್ ಒನ್ ಈಸ್ ಜಲಸ್. ಇರ್ಲೀ ಇರ್ಲೀ.... ನಡೀಲೀ. ನೋಡೋಣ. ಎಲ್ಲಿತನಕ ನಡಿಯುತ್ತೇ ಅಂತ..... " ಎಂದು ಅಣಕಿಸಿ ಎದ್ದು ಹೋದಳು ಆಕೃತಿ.

"ನೀನುಂಟು, ನಿನ್ನ ಡಾಕ್ಟ್ರುಂಟು….. ಕರ್ಕೊಂಡು ಹೋಗಪ್ಪಾ ಮಗನೇ......." ಕೈ ಮುಗಿದು ರೂಮಿಗೆ ಹೊರಟರು ಮೃದುಲಾ.

"ನೋಡಪ್ಪಾ, ಅಂತೂ ಇಂತೂ ಈಗ ಬಿಡುಗಡೆ ಕೊಟ್ಟಿದ್ದಾರೆ. ಅವರಿಬ್ಬರೂ ಮತ್ತೆ ದಂಡೆತ್ತಿ ಬರೋದ್ರೊಳಗೆ ಮಾತನಾಡಿ ಮುಗಿಸು…...." ಬೆನ್ನುತಟ್ಟಿ ಕಿವಿಮಾತು ಹೇಳಿದರು ಸಚ್ಚಿದಾನಂದ್.

ಅಪ್ಪನಿಗೆ ಧನ್ಯವಾದ ಸಲ್ಲಿಸಿ ಅವಳ ಕೈ ಹಿಡಿದು ಟೆರೇಸಿಗೆ ಕರೆತಂದಿದ್ದ. ಕರೆತಂದಿದ್ದು ಮಾತನಾಡಲೆಂದಾದರೂ ಬಂದಲ್ಲಿಂದ ಒಂದಕ್ಷರ ಮಾತನಾಡಿರಲಿಲ್ಲ ಅವನು…. 

"ಈಗೇನು? ಹೀಗೇ ಸ್ಟಾಚ್ಯೂ ಆಗಿರ್ತೀರಾ? ಸರಿ ಹಾಗಿದ್ರೆ ನಾನು ಕೆಳಗೆ ಹೋಗ್ತೀನಿ...." ಹೊರಟವಳ ಕೈ ಹಿಡಿದು ತನ್ನೆದುರು ಕೂಡಿಸಿಕೊಂಡ.

"ನಿನ್ನ ನೋಡ್ತಾ ಇದ್ರೆ ಮಾತಾಡ್ಬೇಕು ಅಂತ ಅನ್ನಿಸೋಲ್ಲ. ಸುಮ್ಮನೆ ಹೀಗೆ ನೋಡ್ತಾ ಕುತ್ಕೊಂಡು ಬಿಡೋಣ ಅನ್ಸುತ್ತೆ ಹುಡುಗಿ…..." ಬೀಸುತ್ತಿದ್ದ ಕುಳಿರ್ಗಾಳಿಗೆ ಹಾರಾಡುತ್ತಿದ್ದ ಅವಳ ಮುಂಗುರುಳನ್ನು ಕಿವಿಯ ಹಿಂಬದಿ ಸರಿಸುತ್ತಾ ನುಡಿದವನು,

"ನೀನಿವತ್ತು ತುಂಬಾ ಅಂದ್ರೆ ತುಂಬಾ……... ಖುಷಿಯಾಗಿದ್ದೀ. ಅದಕ್ಕೇ ಸಂತೋಷದಿಂದ ಹೊಳೆಯುತ್ತಿರೋ ಈ ನಿನ್ನ ಮುಖವನ್ನೇ ನೋಡುತ್ತಿದ್ದೆ. 'ನವ್ಯಾಳ ಸಮಸ್ಯೆ ಪರಿಹಾರ ಆಯ್ತು , ಹೇಗೆ ಏನು ಅಂತ ಆಮೇಲೆ ಹೇಳ್ತೀನಿ' ಅಂತ ಮೆಸೇಜ್ ಹಾಕಿದ್ದೆ. ಈಗ ಹೇಳು. ನೀನಿಷ್ಟು ಖುಷಿಯಾಗಿರುವಂತಹದ್ದು ಏನಾಯ್ತು ಅಂತ" ಸರಿಯಾಗಿ ಕುಳಿತು ಕೇಳಿದ.

ಅವಳು ಎಲ್ಲವನ್ನೂ ವಿವರಿಸುತ್ತಾ ಹೋದಂತೆ ಅವನ ಮೊಗದಲ್ಲಿ ನಿರಾಳತೆಯ ನಗು ಹರಡತೊಡಗಿತು. ಎದೆಯ ಮೇಲಿದ್ದ ಭಾರ ಇಳಿದಂತಹ ಭಾವ…..

"ದಟ್ಸ್ ರಿಯಲೀ ಗ್ರೇಟ್ ನ್ಯೂಸ್. ಈಗ ನವ್ಯಾಳ ಮನಸ್ಸಿಗೆ ಸಮಾಧಾನವಾಗಿರುತ್ತೆ‌. ಯಾವುದೇ ಕೆಲಸವನ್ನು ಒಳ್ಳೆಯ ಉದ್ದೇಶದಿಂದ, ಒಳ್ಳೆಯ ಮನಸ್ಸಿನಿಂದ ಮಾಡಿದರೆ ಅದಕ್ಕೆ ಯಶಸ್ಸು ಸಿಕ್ಕೇ ಸಿಗುತ್ತದೆ ಸಮನ್ವಿತಾ. ಸ್ವಲ್ಪ ತಡವಾಗಬಹುದು, ಒಂದಿಷ್ಟು ಗೊಂದಲ ಗೋಜಲುಗಳಾಗಬಹುದು. ಆದರೆ ಅಂತಿಮವಾಗಿ ಎಲ್ಲವೂ ಒಳ್ಳೆಯದಾಗುತ್ತದೆ. ನೀನು ಅಷ್ಟು ಅಕ್ಕರೆ ಆಸಕ್ತಿಯಿಂದ ನವ್ಯಾಳ ಬದುಕನ್ನು ರೂಪಿಸಲು ಪ್ರಯತ್ನಿಸಿದ್ದಕ್ಕೆ, ನವ್ಯಾಳ ನೋವಿಗೆ, ತೊಳಲಾಟಕ್ಕೆ….. ಎಲ್ಲಕ್ಕೂ ಇವತ್ತು ಸಾರ್ಥಕ್ಯ ಸಿಕ್ಕಿತು ನೋಡು. ಆಮ್ ರಿಯಲೀ ಹ್ಯಾಪಿ ಎಂಡ್ ಆಮ್ ಪ್ರೌಡ್ ಆಫ್ ಯು ಡಿಯರ್....." ಮನದುಂಬಿ ಹೇಳಿದ.

"ನನಗೂ ತುಂಬಾ ಸಂತೋಷವಾಗಿದೆ ಅಭಿ. ಇದೆಲ್ಲಾ ಇಲ್ಲಿಗೆ ಮುಗಿಯಲೀ ಅನ್ನೋ ಹಾರೈಕೆಯೊಂದೇ ಈಗ. ಮುಂದೆಂದಾದರೂ ಈ ವಿಚಾರ ಹೊರಲೋಕಕ್ಕೆ ಗೊತ್ತಾದರೂ ಅದನ್ನು ಎದುರಿಸುವೆ ಅನ್ನೋ ಧೈರ್ಯ ಇದೆ ಅವಳಲ್ಲಿ…... ಆದರೆ ಅಂತಹ ಸಂದರ್ಭ ಎಂದಿಗೂ ಬಾರದಿರಲೀ ಅನ್ನೋದೇ ನನ್ನಾಸೆ....." 

ಅವಳ ಮಾತುಗಳಿಗೆ ನಸುನಕ್ಕವನು ಅಲ್ಲಿಂದ ಎದ್ದು ಬಾಲ್ಕನಿಯ ಅಂಚಿಗೆ ಎರಡೂ ಕೈಯೂರಿ ಆಗಸವನ್ನು ದಿಟ್ಟಿಸತೊಡಗಿದ. ಅವಳೂ ಅವನನ್ನು ಹಿಂಬಾಲಿಸಿ ಬಂದು ಅಲ್ಲೇ ಕಟ್ಟೆಗೊರಗಿ ನಿಂತಳು. ತುಸು ಮೌನದ ನಂತರ ಮಾತನಾಡಿದ ಅವನು.

"ಹಾಗೆಯೇ ಆಶಿಸೋಣ ಸಮಾ.... ಒಂದು ವೇಳೆ ಗೊತ್ತಾದರೂ ಏನೀಗ? ಯಾರಿಗೆ, ಯಾಕಾಗಿ ಭಯಪಡಬೇಕು ಸಮನ್ವಿತಾ...? ಈ ಸಮಾಜ, ಕಟ್ಟುಪಾಡುಗಳು, ನೀತಿ ನಿಯಮಗಳಿಗಾ? ಇವುಗಳಿಗೇಕೆ ಹೆದರಬೇಕು? ಇವ್ಯಾವೂ ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿ ಮಾನವ ಮಾತ್ರ. ಉಳಿದವುಗಳೆಲ್ಲವೂ ನಮ್ಮದೇ‌ ಸೃಷ್ಟಿ. ನಮ್ಮನ್ನು ಒಂದು ನೈತಿಕತೆಯ ಚೌಕಟ್ಟಿನೊಳಗೆ ನಿರ್ಬಂಧಿಸಿಕೊಳ್ಳಲು ನಾವೇ‌ ಸೃಷ್ಟಿಸಿಕೊಂಡ ನಿಯಮಗಳು ಇವು. ಆದರೆ ಕಾಲಕ್ರಮೇಣ ಅವು ನಮ್ಮ ಬದುಕನ್ನೇ ಹಾಳುಗೆಡವುವ ಅಸ್ತ್ರಗಳಾಗಿದ್ದು ಕೆಲವು ಹೊಣೆಗೇಡಿ, ಅನುಕೂಲಸಿಂಧು ಹಿತಾಸಕ್ತಗಳ ಕೈಚಳಕದಿಂದಾಗಿ. ಅವರು ತಮ್ಮ ಆಸಕ್ತಿಗೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡರು. ಬೇಕಾದವರನ್ನು ಬಚಾಯಿಸಿ, ದುರ್ಬಲರನ್ನು ದಮನಿಸಿ ಕಾಲಡಿಗೆ ಹಾಕಿಕೊಂಡರಷ್ಟೇ. ಅದೆಷ್ಟೋ ಕೊಲೆ, ಸುಲಿಗೆಗಳನ್ನೂ, ಅನಾಚಾರಗಳನ್ನು ಮಾಡಿದ ಪಾಪಿಗಳು ಒಂದಿನಿತೂ ಪಾಪಪ್ರಜ್ಞೆಯಿಲ್ಲದೇ ಗಣ್ಯವ್ಯಕ್ತಿಗಳಾಗಿ ನಮ್ಮ ಸಮಾಜವನ್ನೇ ಆಳುತ್ತಿಲ್ಲವೇ…...? ಈ ನೀತಿ ನಿಯಮಗಳಿರುವುದು ಪಾಪದವರಿಗೆ ಮಾತ್ರ. ಇಂತಹ ಮಾನವನಿರ್ಮಿತ ಪಕ್ಷಪಾತಿ ನಿಯಮ, ಕಟ್ಟುಪಾಡುಗಳಿಂದ ನಮ್ಮ ಬದುಕುಗಳೇ ಹಾಳಾಗುತ್ತಿವೆ ಎಂದಾಗ ಅದನ್ನು ಮುರಿದರೇನು ತಪ್ಪು? ತಪ್ಪಿಲ್ಲ ಸಮಾ…… ಅಂತಹ ಬದಲಾವಣೆ ಒಳ್ಳೆಯದು ಹಾಗೂ ಆ ಬದಲಾವಣೆ ನಮ್ಮಿಂದಲೇ ಮೊದಲು ಆರಂಭವಾಗಬೇಕು. ಅಕ್ಕಪಕ್ಕದವರು, ಸಮಾಜ ಎಷ್ಟು ಬದಲಾಗಿದೆ ಎಂದು ಭಾಷಣ ಬಿಗಿಯುವ ಮೊದಲು ನಾವು ಬದಲಾಗಬೇಕು. ಬದಲಾವಣೆ ಆರಂಭವಾಗುವುದೇ 'ನನ್ನಿಂದ'. ನಾನು ಬದಲಾದರೆ ನನ್ನ ಮಕ್ಕಳಿಗೂ ಆ ಬದಲಾವಣೆ ಹರಡುತ್ತದೆಯಲ್ಲವೇ…..? ಆ ಮೂಲಕ ಮುಂದಿನ ಪೀಳಿಗೆಯ ಯೋಚನೆ, ಚಿಂತನೆಗಳು ಬದಲಾಗುವುದಿಲ್ಲವೇ?  ನಿಧಾನವಾಗಿಯಾದರೂ ಸಮಾಜವೂ ಬದಲಾಗುತ್ತದೆಯಲ್ಲವೇ......? ಯಾವ ನೀತಿ, ನಿಯಮ, ಕಟ್ಟುಪಾಡುಗಳೂ ಮಾನವೀಯ ಮೌಲ್ಯಗಳಿಗಿಂತ ಹಿರಿದಾದುದಲ್ಲ. ಎಲ್ಲಕ್ಕಿಂತಲೂ ಮಿಗಿಲಾದುದು ಮಾನವೀಯತೆಯಲ್ಲವೇ? ಆ ಮಾನವೀಯ ಮೌಲ್ಯಗಳ ಉಳಿಕೆಗಾಗಿ ಇಂದು ನಾವು ಬದಲಾವಣೆಯೆಡೆಗೆ ಹೆಜ್ಜೆಯಿಟ್ಟರೆ ನಾಳೆ‌ ನಮ್ಮ ಮುಂದಿನ ಪೀಳಿಗೆಗಾದರೂ ಸಮಾಜ ಬದಲಾಗುತ್ತದೆ ಸಮಾ......." 

ಅವನ ಮಾತುಗಳನ್ನೇ ಮೋಡಿಗೊಳಗಾದಂತೆ ಕೇಳುತ್ತಿದ್ದಳು ಸಮನ್ವಿತಾ. 'ಮಾನವೀಯತೆಗಿಂತ ಮಿಗಿಲಾದುದು ಏನಿದೆ ಜಗದಲ್ಲಿ' ಎಷ್ಟು ಸತ್ಯವಾದ ಮಾತು. ಆದರೂ ನಾವೇಕೆ ಅದನ್ನು ಅರಿತುಕೊಂಡು 'ಜೀವಿಸು, ಜೀವಿಸಲು ಬಿಡು' ಎಂಬ ತತ್ವವನ್ನು ಅಳವಡಿಸಿಕೊಳ್ಳುವುದಿಲ್ಲ…..? ಅದೇಕೆ ನಾವು 'ನಾನು, ನನ್ನದು' ಎಂಬ ಸಂಕುಚಿತ ಯೋಚನೆಯಿಂದ 'ನಾವು, ನಮ್ಮದು' ಎಂಬ ವಿಶ್ವಮಾನವತ್ವದ ಕಲ್ಪನೆಗೆ ಬದಲಾಯಿಸುವುದಿಲ್ಲ......? ಆದರೂ ಅಭಿ ಹೇಳಿದಂತೆ ನಾವು ಬದಲಾಗಿ, ನಮ್ಮ ಮಕ್ಕಳ ಯೋಚನಾ ಶೈಲಿಯನ್ನು ಬದಲಾಯಿಸಿದರೆ ಬಹುಶಃ ಮುಂದಿನ ಪೀಳಿಗೆಗಾದರೂ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ....? ಈಗ ಅಭಿ, ಕಿಶೋರ, ಮಂಗಳಮ್ಮ, ಸತ್ಯನಾರಾಯಣರಂತಹವರು ಸಮಾಜದ ಹಂಗನ್ನು ಮೀರಿ ಯೋಚಿಸುತ್ತಿಲ್ಲವೇ? ಇಂತಹ ಹಲವರು ನಮ್ಮ ನಡುವೆ ಇದ್ದಾರಲ್ಲವೇ…...? ಹಾಗೆಯೇ ಮುಂದೊಮ್ಮೆ ಸಮಾಜದ ಚಿಂತನಾ ಶೈಲಿ ಅನುಕೂಲಸಿಂಧುತ್ವದಿಂದ ಮಾನವೀಯತೆಯೆಡೆಗೆ ಬದಲಾಗಬಹುದು ಎನಿಸಿತವಳಿಗೆ.

ಎಷ್ಟೋ ಹೊತ್ತು ಹಾಗೆಯೇ ನಿಂತಿದ್ದರು ಇಬ್ಬರೂ ಮೌನವಾಗಿ. ಆದರೆ ಆ ಮೌನದಲ್ಲೂ ಹಲವು ಮಾತುಗಳಿದ್ದವು…….. ಅವರಿಬ್ಬರಿಗೆ ಮಾತ್ರ ವೇದ್ಯವಾಗುವಂತಹದ್ದು.....

ಬಹಳ ಸಮಯದ ನಂತರ ನಿಧಾನವಾಗಿ ಅವಳ ಬಳಿ ಸಾರಿದವನು ಹಿಂದಿನಿಂದ ಅವಳ ನಡು ಬಳಸಿ ಭುಜಕ್ಕೆ ತನ್ನ ಗದ್ದವನ್ನೊತ್ತಿದ. ಈ ಚರ್ಯೆಗೆ ನಕ್ಕು ಅವನ ತಲೆಗೂದಲನ್ನು ಕೆದರಿದಳು ಹುಡುಗಿ.....

"ಯು ನೋ? ಮೊದಲು ನಿನ್ನನ್ನು ಪೋಲಿಸ್ ಸ್ಟೇಷನಲ್ಲಿ ನೋಡಿದಾಗ, ನಿನ್ನ ಬಗ್ಗೆ ತಿಳಿದಾಗ ಆಶ್ಚರ್ಯ ಆಗಿತ್ತು. ಆಮೇಲೆ ಹಲವು ತಿಂಗಳು ಯಾವುದೇ ಸ್ಪಷ್ಟ ಉದ್ದೇಶವಿಲ್ಲದೇ ಮನಸ್ಸು ನಿನ್ನ ಹುಡುಕುವ ಪಣ ತೊಟ್ಟಾಗ ಅದ್ಯಾಕೆ ಇಂತಹ ಹುಚ್ಚು ಸೆಳೆತ ನಿನ್ನ ಮೇಲೆ ಅಂತ ತುಂಬಾ ಸಲ ಅನ್ನಿಸಿದೆ. ಅದಕ್ಕೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿನ್ನ ಹುಡುಕೋದು ನಿಲ್ಲಿಸಿಬಿಟ್ಟೆ. ಬಟ್…… ಸೀ ದಿ ಡೆಸ್ಟಿನೀ..........ನೀನೆ ನನ್ನೆದುರು ಬಂದೆ. ಊಹೆಗೂ ಮೀರಿ ವಿಧಿ ನಮ್ಮಿಬ್ಬರನ್ನು ಅನೂಹ್ಯವಾಗಿ ಬೆಸೆಯಿತು‌. ಎಂಡ್ ಫೈನಲೀ....... ಯು ಆರ್ ಮೈನ್ ಎಂಡ್ ಆಮ್ ಆಲ್ ಯುವರ್ಸ್. ವೆರಿ ಫಾರ್ಚುನೇಟ್ ಟು ಹ್ಯಾವ್ ಯು ಬೈ ಮೈ ಸೈಡ್ ಸಮಾ…..." ಅವನ ಮಾತಿಗೆ ನಕ್ಕಳು.

"ನಾನೂ ಬಹಳ ಅದೃಷ್ಟವಂತೆಯೇ ಅಂತ ತೀರಾ ಇತ್ತೀಚೆಗೆ ಅನ್ನಿಸೋಕೆ ಶುರುವಾಗಿದೆ ಅಭಿ. ಕಿಶೋರ್ ನಂತಹ ಒಳ್ಳೆಯ ಗೆಳೆಯ, ನವ್ಯಾಳಂತಹ ಗೆಳತಿ, ನನ್ನ ಸ್ವಂತ ಮಗಳ ಹಾಗೆ ನೋಡೋ ಅವನ ಹೆತ್ತವರು, ಕಾರ್ತೀಯಂತಹ ಪುಟ್ಟ ತಮ್ಮ....... ಜೊತೆಗೆ ನಿಮ್ಮ ಅಪ್ಪ, ಅಮ್ಮ, ಆಕೃತಿ........ ಎಂಡ್ ಮೋಸ್ಟ್ ಇಂಪಾರ್ಟೆಂಟ್, ನೀವು........ ನನಗೆ ಯಾವತ್ತೂ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್ ಅವರನ್ನು ನೋಡಿ ಭಯ ಆಗೋದು. ಇವರಂತಹ ಮೌಲ್ಯಗಳೇ ಇಲ್ಲದ ಹಣದ ಆಧಾರದ ಬದುಕು ನನ್ನದೂ ಆಗುತ್ತೇನೋ ಅಂತ. ಮದುವೆ ಅಂದ್ರೆನೇ ಭಯ ಅನ್ನಿಸಿದ್ದು ಇದೆ.ಬ ಬಟ್...... ಮೇ ಬೀ ಮಿಸ್ಟರ್ ರಾವ್ ಅವರು ನನ್ನ ತಂದೆ ಅನ್ನಿಸಿಕೊಂಡಿದ್ದಕ್ಕೆ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಅಂದ್ರೆ ತಮ್ಮ ಸ್ವಾರ್ಥಕ್ಕಾಗಿ ಈ ಮದುವೆಯ ಪ್ಲಾನ್ ಮಾಡಿದ್ದು. ಅವರ ಸ್ವಾರ್ಥವೇ ಮುಖ್ಯವಾಗಿದ್ದರೂ ಇಟ್ ಬ್ರಾಟ್ ಮಿ ಟು ಯೂ....... ನೀವು, ನಿಮ್ಮನೆಯವರನ್ನು ನೋಡಿದ ಮೇಲೆಯೇ ಹಣವಂತರು ಹೀಗೂ ಇರ್ತಾರೆ ಅಂತ ನನಗೆ ತಿಳಿದಿದ್ದು. ಯು ಆರ್ ದಿ ಬೆಸ್ಟ್ ಥಿಂಗ್ ಎವರ್ ಹ್ಯಾಪನ್ಡ್ ಟು ಮೀ......" ಹಾಗೇ ಅವನ ಎದೆಗೊರಗಿದಳು ಸಮನ್ವಿತಾ.

ಆಗಸದ ತುಂಬಾ ಜೋತ್ಸ್ನೆ ತಂಬೆಳರು ಸುರಿದು ಆ ಜೋಡಿಗೆ ಶುಭ ಹಾರೈಸಿದಳು. ನೀನು ಬಾಲ್ಯದಿಂದ  ಕಳೆದುಕೊಂಡು, ಹಂಬಲಿಸಿದ ಹಿಡಿಪ್ರೀತಿಯನ್ನು ಅನಂತವಾಗಿಸಿ ನಿನ್ನ ಮಡಿಲಿಗೆ ಸುರಿದ್ದಿದ್ದೇನೆಂದು ಆ ಭಗವಂತ ಆಶೀರ್ವದಿಸಿದನಾ.......? ತಿಳಿಯದು.

          *****************************

ಇದೆಲ್ಲವೂ ಘಟಿಸಿ ವರ್ಷಗಳೇ ಉರುಳಿವೆ. ನವ್ಯಾ ಈಗ ಆತ್ಮವಿಶ್ವಾಸದ ಖನಿ. ಅವಳ ನಡೆ ನುಡಿಗಳಲ್ಲಿ ಸಂತೋಷ, ಆತ್ಮಸ್ಥೈರ್ಯ ತುಂಬಿತುಳುಕುತ್ತದೆ. ಆ ಮನೆಯನ್ನೆಲ್ಲಾ ಜೀವಸೆಲೆಯಂತೆ ಆವರಿಸಿಕೊಂಡಿದ್ದಾಳೆ ಅವಳು. ಅವಳ ಹಾಗೂ ಕಿಶೋರನ ದಾಂಪತ್ಯ ಲತೆಯೂ ಕುಡಿಯೊಡೆದಿದೆ. ಪುಟ್ಟ ಸೌಪರ್ಣಿಕಾ ತನ್ನ ಪುಟಾಣಿ ಹೆಜ್ಜೆಗಳಿಂದ ಆ ಇಡೀ ಮನೆಯನ್ನೇ ನಂದನವಾಗಿಸಿದ್ದಾಳೆ......

ಮಂಗಳಾ ಹಾಗೂ ಸತ್ಯನಾರಾಯಣರಿಗೆ ಮೊಮ್ಮಗಳನ್ನು ಆಡಿಸಲು ಇಪ್ಪತ್ನಾಲ್ಕು ಗಂಟೆಯೂ ಸಾಲುವುದಿಲ್ಲ. ಕಾರ್ತಿಕನಿಗಂತೂ ಅತ್ತಿಗೆಯೊಂದಿಗೆ ಪುಟ್ಟ ಸೌಪರ್ಣಿಕಾಳ ಕಂಪನಿಯೂ ಸಿಕ್ಕಿದೆ. ಅವನು ಓದು ಮುಗಿಸಿ ನೌಕರಿ ಗಿಟ್ಟಿಸಿದ್ದಾನೆ ಎಂಬುದು ಅತೀ ಸಂತೋಷದ ಹಾಗೂ ತಲೆಬಿಸಿ ಕಡಿಮೆ ಮಾಡುವ ವಿಷಯ ಮಂಗಳಮ್ಮನಿಗೆ. ಜೊತೆಗೆ ಇವನಿಗೂ ಕೆಲಸ ಕೊಡುವವರು ಭೂಲೋಕದಲ್ಲಿ ಇದ್ದಾರಾ ಎಂಬ ಅಚ್ಚರಿಯೂ......

ಹಾಗೆಯೇ ನವ್ಯಾಳ ಬಗ್ಗೆ ಈವರೆಗೂ ಯಾರ ಕೊಂಕು ನುಡಿಗಳೂ ಬಂದಿಲ್ಲ. ಅದು ಹಾಗೆ ಇರಲಿ ಎಂದು ಆಶಿಸೋಣ......

ಡಾಕ್ಟರ್ ಸಮನ್ವಿತಾ ಈಗ ಅಧಿಕೃತವಾಗಿ ಸಮನ್ವಿತಾ ಶರ್ಮಾ ಆಗಿದ್ದಾರೆ. ಸಚ್ಚಿದಾನಂದ ಹಾಗೂ ಮೃದುಲಾರ ಮುದ್ದಿನ ಮಗಳಾಗಿ, ಆಕೃತಿಯ ಅಕ್ಕರೆಯ ಒಡನಾಟದಲ್ಲಿ, ಅಭಿಯ ಪ್ರೀತಿಯ ಸಾಂಗತ್ಯದಲ್ಲಿ ಬಾಲ್ಯದಿಂದ ಹಪಹಪಿಸಿದ ಕುಟುಂಬದ ಪ್ರೀತಿಯಲ್ಲಿ ಸಂಪೂರ್ಣ ಸುಖಿ ಅವಳು. ಇವರ ನಡುವೆ ನಾನೇ ಮನೆ ಅಳಿಯನಂತಾಗಿರುವೆ ಎಂಬ ಅಳಲು ಅಭಿಯದ್ದು. ಅವನದೆಲ್ಲಾ ನಾಟಕವೇ ಬಿಡಿ....... ಅಣ್ಣ ಅಪ್ಪನನ್ನು ಮೀರಿಸುವ ಅಮ್ಮಾವ್ರ ಗಂಡ ಆಗಿದ್ದಾನೆ ಎಂದು ಅಣಕಿಸುತ್ತಾಳೆ ಆಕೃತಿ. 'ನಮ್ಮ ಡಾಕ್ಟ್ರು ಅಷ್ಟು ಜೋರಿಲ್ಲ' ಅನ್ನೋ ಜಾಣ ಸಮಜಾಯಿಷಿ ಕಲಾವಿದನದ್ದು‌‌.‌

ಮೀರಾ ಅವರು ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡು ಸಂಜೀವಿನಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದ್ದಾರೆ. 

ಮಾಲಿನಿ ರಾವ್ ಸತ್ಯಂ ಅವರಿಂದ ಡೈವೋರ್ಸ್ ಪಡೆದು ಅಣ್ಣನ ಮನೆಗೆ ಹೋಗಿ ನೆಲೆಸಿದ್ದಾರೆ. ಸತ್ಯಂ ಹೆಂಡತಿಗೆ ಪರಿಹಾರ ಕೊಟ್ಟ ನಂತರ ಅಳಿದುಳಿದ ಚೂರು ಪಾರು ಹಣದಲ್ಲಿ ಅವರ ಅಂದಕಾಲತ್ತಿಲ್ ವೈಭವದ ಪ್ರತೀಕದಂತಿರುವ ರಾವ್ ಮ್ಯಾನ್ಶನಲ್ಲಿ ಒಬ್ಬರೇ ಕೂತು ಕುಡಿಯುತ್ತಾರೆ. ಇಷ್ಟಾದರೂ ಅವರ ಅಹಂಕಾರವೇನೂ ಇಳಿದಿಲ್ಲ. ಅವರೆಂದೂ ಬದಲಾಗರು ಬಿಡಿ…...

ಇನ್ನು ಚೈತಾಲಿ ಅಭಿಯ ಆಫೀಸಿನ ಕೆಲಸದಲ್ಲಿ ಸಂತೋಷವಾಗಿ ತೊಡಗಿಕೊಂಡು ವೈಯಿಂದ ಒಂದು ಕಿಲೋಮೀಟರ್ ಡಿಸ್ಟೆನ್ಸಿನಲ್ಲಿ ಇದ್ದಾಳೆ. ನಮ್ಮ ವೈ ಚೈ ಸಿಗೋಲ್ಲ ಅಂತ ಖಚಿತವಾಗಿ ದೇವದಾಸ್ ಆಗಿ ಹಾಡ್ತಾ ಇರ್ತಾನೆ. ಆಗಾಗ ಅಭಿಯ ಮನೆಗೂ ಹಾಜರಿ ಹಾಕಿ ಕುಕ್ಕರಿನಲ್ಲಿ ಮೂರು ವಿಶಲ್ ಹಾಕಿಸಿ ಟೀ ಮಾಡ್ತಾ ಇರ್ತಾನೇ...... ಆದರೆ ಅದನ್ನು ಕುಡಿಯುವ ಧೈರ್ಯವನ್ನು ಇದುವರೆಗೂ ಯಾರೂ ಮಾಡಿಲ್ಲವೆನ್ನಿ.

ವಾರಕ್ಕೊಮ್ಮೆ ಶರ್ಮಾ ಪರಿವಾರ ಕಿಶೋರನ ಮನೆಗೆ ಹೋಗುವುದು, ಇಲ್ಲಾ ಅವರು ಇಲ್ಲಿಗೆ ಬರುವುದು ಪರಿಪಾಠವಾಗಿದೆ. ಆಗ ಇಡೀ ಜಗತ್ತಿನ ಕಾಡು ಹರಟೆಗೆಲ್ಲಾ ಪ್ರಾಮುಖ್ಯತೆ ಸಿಗುತ್ತದೆ. ಭಯಂಕರ ಕಾದಾಟಗಳಾಗುವುದೂ ಉಂಟು. ಮುಖ್ಯವಾಗಿ ಅಭಿ ಮತ್ತು ಆಕೃತಿಯ ನಡುವೆ….. ಅಭಿಗೆ ನವ್ಯಾಳ ರೂಪದಲ್ಲಿ ಇನ್ನೊಬ್ಬ ತಂಗಿ ದೊರಕಿದ್ದಾಳಲ್ಲ ಈಗ…. ಆಕೃತಿಯೊಂದಿಗೆ ಜಗಳವಾದಾಗಲೆಲ್ಲಾ ಹೊಸ ತಂಗಿ ಅಣ್ಣನ ಪಕ್ಷ ವಹಿಸಿ ಎಲ್ಲರ ಬಾಯಿ ಮುಚ್ಚಿಸುತ್ತಾಳೆ. ಅದಕ್ಕೆ ನವ್ಯಾಳೆಂದರೇ ವಿಶೇಷ ಪ್ರೀತಿ ಅವನಿಗೆ.......

ಕೊನೆಯದಾಗಿ ಒಂದು ಮಾತು......

ನಿಮಗೂ ದಿನನಿತ್ಯದ ಬದುಕಿನಲ್ಲಿ ನವ್ಯಾ ಹಾಗೂ ಸಮನ್ವಿತಾಳಂತಹ ಹಲವು ಹೆಣ್ಣುಮಕ್ಕಳು ಸಿಗಬಹುದು.

ನವ್ಯಾಳಂತಹವರು ಎದುರು ಸಿಕ್ಕರೆ ಅವಳ ಹಿನ್ನೆಲೆ ಕೆದಕಿ ಅವಮಾನಿಸಬೇಡಿ. ಕುಹಕವಾಡಿ ನೋಯಿಸಬೇಡಿ...... ಸಾಧ್ಯವಾದರೆ ಅವರ ಹೋರಾಟಕ್ಕೊಂದು ಮೆಚ್ಚುಗೆ ನೀಡಿ, ಅವರ ಆತ್ಮಸ್ಥೈರ್ಯಕ್ಕೊಂದು ಸಲಾಂ ಹೇಳಿ. ಇಲ್ಲವಾದರೇ ಸುಮ್ಮನಿದ್ದುಬಿಡಿ.

ಸಮನ್ವಿತಾಳಂತಹವರು ಸಿಕ್ಕರೆ ಊರಿನ ಚಿಂತೆ ನಿಮಗೇಕೆ ಎಂದು ಜರಿಯಬೇಡಿ…... ಸಾಧ್ಯವಾದರೆ ಅವರಿಂದ ಒಂದಿಷ್ಟು ಕಲಿಯಿರಿ. ಅವರ ಜೊತೆ ಕೈಜೋಡಿಸಿ. ಇಲ್ಲವಾದರೇ ಸುಮ್ಮನಿದ್ದುಬಿಡಿ.

ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ

ಧನ್ಯವಾದಗಳೊಂದಿಗೆ🙏🙏🙏

                           ಮುಕ್ತಾಯ



ಅನೂಹ್ಯ 42

ಪತಿಯ ಹರಿತವಾದ ಮಾತುಗಳು ಮಂಗಳಾರ ವಿವೇಕವನ್ನು ಜಾಗೃತಗೊಳಿಸಿತ್ತು. ಮನಸ್ಸು ಆತ್ಮವಿಮರ್ಶೆಗೆ ಇಳಿದಿತ್ತು. ಆಳವಾಗಿ ಯೋಚಿಸಿದಷ್ಟೂ ನನ್ನ ಮನೆ, ನನ್ನ ಕುಟುಂಬ ಎಂದು ಸದಾ ತಮ್ಮ ಒಳಿತನ್ನೇ ಬಯಸುವ ಸೊಸೆಯ ಎದುರು, ಮಗನ ಉದಾತ್ತ ಯೋಚನೆಯೆದುರು, ಸಮನ್ವಿತಾಳ ನೈತಿಕ ಮೌಲ್ಯಗಳೆದುರು, ಪರಿಸ್ಥಿತಿ ಅರ್ಥೈಸಿಕೊಂಡ ಗಂಡನೆದುರು ತಾವು ತೀರಾ ಕುಬ್ಜರಾದಂತೆ ಎನಿಸಿತು. 

ಹೆತ್ತವರಿಂದ ಮಗನನ್ನು ದೂರ ಮಾಡಬಾರದೆಂಬ ಕಾರಣಕ್ಕೆ ಹಿಂದೂ ಮುಂದೂ ಯೋಚಿಸದೇ ಸತ್ಯ ನುಡಿದುಬಿಟ್ಟಳೆಂದರೆ ಅದೆಷ್ಟು ಪ್ರೀತಿ ವಿಶ್ವಾಸವಿರಬೇಕು ಅವಳಿಗೆ ನಮ್ಮ ಮೇಲೆ....?  ಅವಳೆಂದೂ ನನ್ನನ್ನು ಅತ್ತೆಯ ರೀತಿ ಕಾಣಲೂ ಇಲ್ಲ ಹಾಗೆ ಸಂಬೋಧಿಸಲೂ ಇಲ್ಲ. 'ಅಮ್ಮಾ' ಎಂದೇ ಕರೆಯುತ್ತಿದ್ದುದು. ಮಗಳಿಗೆ ಅಮ್ಮನ ಮೇಲಿರುವಂತಹ ಕಾಳಜಿ, ಅಕ್ಕರೆ ಅವಳಿಗೆ ನನ್ನ ಮೇಲೆ….. 

ಇಂತಹ ಪ್ರೀತ್ಯಾದರಕ್ಕೆ ತಾನು ಯೋಗ್ಯಳೇ?

ಅವರ ಅಂತರಾತ್ಮ ಗಹಗಹಿಸಿತು....

'ನೀನೆಂತಹಾ ಯೋಗ್ಯೆ...?

ಎಂತಹ ಗಟ್ಟಿ ಗುಂಡಿಗೆಯವರಾದರೂ ಹೇಳಲು ಸಾವಿರ ಬಾರಿ ಯೋಚಿಸಿ ಹೆದರುವಂತಹ ಸತ್ಯವನ್ನು ಅರೆಘಳಿಗೆ ಯೋಚಿಸದೇ ನುಡಿದವಳನ್ನು ಹೇಗೆ ನಡೆಸಿಕೊಂಡೆ? ನೀನು ಮಾತನಾಡಿ, ಬೈದಿದ್ದರೂ ಸಹಿಸುತ್ತಿತ್ತು ಆ ನೊಂದ ಜೀವ…... ಆದರೆ ನೀನು….? ಮೌನವೆಂಬ ಕಡು ಕ್ರೂರ ಶಿಕ್ಷೆ ವಿಧಿಸಿರುವೆ ಆ ಬಸವಳಿದ ಮನಕ್ಕೆ. ಆಡಿದ ಮಾತುಗಳು, ಬೈಗುಳಗಳು ಕಾಲಕ್ರಮೇಣ ಮನದ ಭಿತ್ತಿಯಿಂದ ಮರೆಯಾಗಬಹುದೇನೋ..... ಈ ಜಗದಲ್ಲಿಯೇ ಸಹಿಸಲಸಾಧ್ಯವಾದ ಶಿಕ್ಷೆ ಎಂದರೆ ನಮ್ಮ ಪ್ರೀತಿಪಾತ್ರರ ಕಡು ಮೌನವಲ್ಲವೇ.....? ಅದು ನಮ್ಮನ್ನು ಕುಗ್ಗಿಸಿ ಆತ್ಮಬಲವನ್ನೇ ಕಸಿಯುವುದಿಲ್ಲವೇ? ಅಂತಹ ಶಿಕ್ಷೆಯನ್ನು ನೀನು ನವ್ಯಾಳಿಗೆ ವಿಧಿಸಿಲ್ಲವೇ?

'ನೀನು ನನ್ನ ಮಗಳಂತೆ' ಅನ್ನುತ್ತಲೇ ಅವಳನ್ನು ಕ್ಷಣಾರ್ಧದಲ್ಲಿ ಪರಕೀಯಳನ್ನಾಗಿಸಿಬಿಟ್ಟೆಯಲ್ಲ…..? ಇನ್ನೆಂದೂ ಅವಳನ್ನು ಮಗಳೆಂದು ಕರೆಯಬೇಡ. ಆ ಯೋಗ್ಯತೆ ನಿನಗಿಲ್ಲ. 'ಅಕ್ಕಪಕ್ಕದವರು ಏನೆನ್ನುವರೋ? ಲೋಕ ಎಷ್ಟು ಆಡಿಕೊಳ್ಳುವುದೋ? ಸಂಪಾದಿಸಿದ ಗೌರವಕ್ಕೆ ಎಲ್ಲಿ ಕುಂದಾಗುವುದೋ?' ಎಂದೆಲ್ಲಾ ಯೋಚಿಸಿದ ನಿನಗೆ ಇಷ್ಟು ವರ್ಷ ಜೊತೆಗಿದ್ದ 'ಮಗಳಂತಹ' ಸೊಸೆಯ ಎದೆಯಲ್ಲಿ ಎಂತಹ ಜ್ವಾಲಾಮುಖಿ ಸ್ಫೋಟಗೊಂಡಿದೆ? ಅವಳು ಬದುಕಲ್ಲಿ ಎಷ್ಟು ನೊಂದಿದ್ದಾಳೆ? ಅವಳಿಗೆ ಈಗ ನಿನ್ನ ಅಗತ್ಯ ಎಷ್ಟಿದೆ ಎಂಬ ಯೋಚನೆಗಳೇ ಬರಲಿಲ್ಲವಲ್ಲ....... ಅದಕ್ಕೇ ತಾನೇ ಹೇಳುವುದು, ಮಗಳು ಮಗಳೇ, ಸೊಸೆ ಸೊಸೆಯೇ ಎಂದು.....?

ಪುಣ್ಯ...... ದೇವರು ನಿನಗೆ ಮಗಳ ಭಾಗ್ಯವನ್ನು ದಯಪಾಲಿಸಲಿಲ್ಲ. ಅದೃಷ್ಟವಂತರಿಗೆ ಮಾತ್ರವೇ ಹೆಣ್ಣು ಮಗಳು ಜನಿಸುವುದು. ಆ ಅದೃಷ್ಟದ ಮಾತು ಬಿಡು. ನಿನಗೆ ಹೆಣ್ಣು ಮಗಳ ತಾಯಿಯಾಗುವ ಯೋಗ್ಯತೆಯಿಲ್ಲ. ಇನ್ನು ಮುಂದೆ ಪರರ ಭಾವನೆಗಳನ್ನು ಅರಿಯುವ ಸೂಕ್ಷ್ಮ, ಉದಾತ್ತ ಚಿಂತನೆಯ ಮನಸ್ಸು ನನ್ನದೆಂದು ಯಾರಲ್ಲೂ ಹೇಳಬೇಡ........ ಮೇಲ್ನೋಟಕ್ಕೆ ಹಾಗೆ ತೋರಿಸಿಕೊಂಡರೂ ಆಂತರ್ಯದಲ್ಲಿ ನೀನೂ ಇತರರಂತೆ ಸಂಕುಚಿತ ಮನೋಭಾವದ ಸ್ವಾರ್ಥಿಯೇ.....‌...

ನಿನ್ನ ಗಂಡನನ್ನು ನೋಡು…..... ಅವರು ನವ್ಯಾಳನ್ನು ಮಗಳೆಂದು ಕರೆದದ್ದು ಮನಸ್ಸಿನಿಂದ. ಹಾಗಾಗಿಯೇ ಈಗ ಮಗಳ ಕಷ್ಟ ಕಾಲದಲ್ಲಿ ಅವಳಿಗೆ ಒತ್ತಾಸೆಯಾಗಿ ನಿಂತು ಅವಳ ನೋವಿನ ಬಗ್ಗೆ, ಅದನ್ನು ಶಮನಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಅದೇ ನೀನು….....? ಸೊಸೆಯನ್ನು ಕೇವಲ ಬಾಯ್ಮಾತಿಗೆ ಮಗಳೆಂದು ಕರೆದೆಯೇ ಹೊರತು ಅವಳನ್ನೆಂದೂ ಮಗಳನ್ನಾಗಿ ಸ್ವೀಕರಿಸಲೇ ಇಲ್ಲ ನೀನು. 

ಅದೇ ನಿನಗೊಬ್ಬ ಮಗಳಿದ್ದು, ಆಕೆಯನ್ನು ಯಾರೋ ಇಂತಹ ನರಕ ಕೂಪಕ್ಕೆ ತಳ್ಳಿದ್ದರೇ….....? ಆಕೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಮಡಿಲಿನಾಸರೆಗಾಗಿ ಓಡಿ ಬಂದಿದ್ದರೇ…...? ಆಗಲೂ ಹೀಗೇ ಜನರ ಕುಹಕ, ಸಮಾಜ, ಮಾನ ಮರ್ಯಾದೆ, ಗೌರವವೆಂದು ಮಗಳೊಂದಿಗೆ ವ್ಯವಹರಿಸುತ್ತಿದ್ದೆಯಾ?' 

ದಿಗ್ಗನೆದ್ದು ಕೂತರು ಮಂಗಳಮ್ಮ. ಪತಿಯ ಕಟು ನುಡಿಗಳಿಗಿಂತಲೂ ಹೆಚ್ಚು ಘಾಸಿಗೊಳಿಸಿತು ಅಂತರಾತ್ಮದ ಪ್ರಶ್ನೆ. ತಾನು ಹೆತ್ತ ಮಗಳು ನವ್ಯಾಳ ಸ್ಥಿತಿಯಲ್ಲಿದ್ದರೆ….... ಅವಳನ್ನೂ ಹೀಗೇ ನಡೆಸಿಕೊಳ್ಳುತ್ತಿದ್ದೆನೇ…....?

ಖಂಡಿತಾ ಇಲ್ಲಾ……. ಆಗ ಈ ಸಮಾಜ, ಜನರ ಕಿಡಿನೋಟ, ಕುಹಕ, ಬಹಿಷ್ಕಾರದ ಭಯ ಯಾವುದೂ ತಡೆಯುತ್ತಿರಲಿಲ್ಲ ನನ್ನನ್ನು. ಅಷ್ಟೆಲ್ಲಾ ವೇದನೆ ಅನುಭವಿಸಿ ಒಮ್ಮೆ ಹೊಕ್ಕರೆ ಹೊರಬರಲಾರದ ನರಕದಿಂದ ಹೇಗೋ ಹೊರಬಂದ ಮಗಳನ್ನು ಇಡೀ ಜಗತ್ತನ್ನೇ ಎದುರು ಹಾಕಿಕೊಂಡಾದರೂ ಕಣ್ರೆಪ್ಪೆಯಂತೆ ಜೋಪಾನ ಮಾಡುತ್ತಿದ್ದೆ. ಅವಳ ಸ್ಥಿತಿಗೆ ಕಾರಣರಾದ ನೀಚರು ಸಿಕ್ಕರೆ ಕೈಯಾರೆ ಕೊಂದುಬಿಡುತ್ತಿದ್ದೆ. 

'ಅಲ್ಲಿಗೆ ಒಪ್ಪಿದೆಯಲ್ಲಾ... ನವ್ಯಾ ಮಗಳಲ್ಲವೆಂದು? ಕಡು ಸ್ವಾರ್ಥಿ…...' ಅಂತರಾತ್ಮ ಪಾತಾಳಕ್ಕೆ ನೂಕಿ ಗುಡುಗಿತು.

ಅಯ್ಯೋ…… ಖಂಡಿತಾ ಇಲ್ಲಾ. ಅವಳು ನನ್ನ ಮಗಳೇ.....! ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತಲೂ ಹೆಚ್ಚು. ಏಕೆ ಹೀಗೆ ಮಾಡಿಬಿಟ್ಟೆ ನಾನು? ಪಾಪ…. ನವ್ಯಾಳ ಮನಸ್ಥಿತಿ ಏನಾಗಿರಬಹುದು? ನೆನಸಲೂ ಭಯವಾಗುತ್ತಿದೆಯಲ್ಲಾ.......  ಇಲ್ಲ ಇಲ್ಲಾ..... ಇನ್ನೆಂದೂ ನಿನ್ನನ್ನು ಒಂಟಿಯಾಗಿಸಲಾರೆ. ಈ ಸಮಾಜ, ಜನರೆಲ್ಲಾ ಹಾಳಾಗಲೀ. ಅವರ್ಯಾರೂ ನಿನಗಿಂತಲೂ ಮುಖ್ಯವಲ್ಲ ನನಗೆ. ಮಗಳ ಬದುಕಿಗಿಂತ ಹೆಚ್ಚು ಯಾವುದಿದೆ? ನೀನೇ ಮುಖ್ಯ ನನಗೆ….‌

ತಮ್ಮ ಸ್ಪಂದನರಹಿತ ಯೋಚನಾಶೈಲಿಗೆ ಅಂತರಾತ್ಮ ನೀಡಿದ ವಜ್ರಾಘಾತಕ್ಕೆ ತತ್ತರಿಸಿದರು. ಉಕ್ಕಿ ಬಂದ ಕಣ್ಣೀರನ್ನು ತಡೆಯಲೂ ಪ್ರಯತ್ನಿಸದೇ ಕೋಣೆಯಿಂದ ಹೊರಬಂದರು. ಅವರ ತಲೆಯಲ್ಲಿದ್ದುದ್ದು ಒಂದೇ...... ನವ್ಯಾ......!

ಹಜಾರದ ಸೋಫಾದಲ್ಲಿ ದೀರ್ಘಾಲೋಚನೆಯಲ್ಲಿ ಮುಳುಗಿದ್ದರು ಸತ್ಯನಾರಾಯಣ. ಮಹಡಿಗೆ ಸಾಗುವ ಮೆಟ್ಟಿಲಿನ ಬದಿಯಲ್ಲಿ ಸುಮ್ಮನೆ ಗೋಡೆ ನೋಡುತ್ತಾ ಕುಳಿತ ಸಮನ್ವಿತಾಳ ಮಡಿಲಿನಲ್ಲಿ ಮುದುರಿ ಮಲಗಿದ್ದ 'ಮಗಳು' ಕಂಡಳು. ಇನ್ನೂ ಬಿಕ್ಕುತ್ತಲೇ ಇದ್ದಳೆಂಬುದು ಅವಳ ಉಸಿರ ಏರಿಳಿತಗಳಿಂದಲೇ ಸ್ಪಷ್ಟವಾಗಿತ್ತು.

ಅವರಿಬ್ಬರ ಬಳಿ ಸಾಗಿದವರು ಬೇರೇನೂ ಯೋಚಿಸದೇ ಸಮನ್ವಿತಾಳ ಮಡಿಲಿನಲ್ಲಿದ್ದ ನವ್ಯಾಳನ್ನು ಎಬ್ಬಿಸಿ ತಮ್ಮ ಎದೆಗಾನಿಸಿಕೊಂಡರು. ಅಷ್ಟೇ ಸಾಕಾಯ್ತು ಅವಳ ಮನದ ಬೇಗುದಿ ಶಮನವಾಗಲು…... ಅವರನ್ನು ಗಟ್ಟಿಯಾಗಿ ತಬ್ಬಿ ಮಧ್ಯಾಹ್ನದಿಂದ ತಾನು ಅನುಭವಿಸಿದ ಯಾತನೆಯನ್ನೆಲ್ಲಾ ವಿವರಿಸುವಂತೆ ಮತ್ತೆ ಅಳತೊಡಗಿದಳು. 

ಅವಳ ಕಣ್ಣಿನ ಪ್ರತೀ ಹನಿಯ ಹಿಂದಿನ ಭಾವವೂ ಅರಿವಾಗದೇ ಆ ತಾಯಿ ಹೃದಯಕ್ಕೆ.....? ಅವರ ಹಸ್ತದ ಆ ಅಮೃತ ಸ್ಪರ್ಶ ಮಗಳ ಇಷ್ಟು ವರ್ಷಗಳ ಒಡಲುರಿಗೆ ತಂಪೆರೆಯದೇ.....? ಇಬ್ಬರಿಗೂ ಮಾತು ಬೇಡವಾಗಿತ್ತು. ಅಮ್ಮನ ಭದ್ರತೆಯ ಅಪ್ಪುಗೆಯಲ್ಲಿನ ಸಾಂತ್ವನ ಮಗಳಿಗೆ ಹರುಷ ತಂದರೆ, ಮಗಳು ನನ್ನ ಮಮತೆಯ ಆಸರೆಯಲ್ಲಿ ಭದ್ರವಾಗಿದ್ದಾಳೆ ಎಂಬ ನೆಮ್ಮದಿ ತಾಯಿಗೆ......

ತಮ್ಮ ಮಾತುಗಳನ್ನು ಬಹಳ ಬೇಗನೆ ಅರ್ಥೈಸಿಕೊಂಡು ಆಗುತ್ತಿದ್ದ ತಪ್ಪನ್ನು ತಿದ್ದಿಕೊಂಡ ಮಡದಿಯ ಬಗ್ಗೆ ಹೆಮ್ಮೆಯಾಯಿತು ಸತ್ಯನಾರಾಯಣರಿಗೆ. ಅವರ ಮೇಲಿದ್ದ ಅಲ್ಪಸ್ವಲ್ಪ ಅಸಮಾಧಾನ ಹೇಳಹೆಸರಿಲ್ಲದಂತೆ ಮಾಯವಾಯಿತು. ಈಗ ಸಮಾಜಕ್ಕೆ ಏನೆಂದು ಉತ್ತರಿಸುವುದೆಂಬ ಚಿಂತೆ ಅಷ್ಟಾಗಿ ಕಾಡಲಿಲ್ಲ ಅವರನ್ನು. ಬದುಕಿನಲ್ಲಿ ನೆಮ್ಮದಿಯೆಂಬುದು ಕೌಟುಂಬಿಕ ಸಂಬಂಧಗಳ ಮೇಲೆ ನಿಂತಿರುತ್ತದೆ. ಸಂಬಂಧಗಳಲ್ಲಿ ಪರಸ್ಪರ ಗೌರವ, ಪ್ರೀತಿ, ನಂಬಿಕೆಗಳಿದ್ದರೆ ಬದುಕೇ ನಂದನ. ಅದರ ಮುಂದೆ ಅಕ್ಕಪಕ್ಕದವರು, ಜನ, ಲೋಕದ ನಿಂದನೆಗಳೆಲ್ಲವೂ ಗೌಣವೇ.

ಸಮನ್ವಿತಾ ಕಾಣದ ದೇವರಿಗೆ ಅದೆಷ್ಟು ವಂದಿಸಿದಳೋ...... ಇಂದು ನವ್ಯಾಳ‌ ಬದುಕನ್ನು ಸರಿಯಾದ ದಡಕ್ಕೆ ತಲುಪಿಸಿದೆ ಅನ್ನುವ ನಿರಾಳ ಭಾವ ಆವರಿಸಿತು ಅವಳನ್ನು. ಒಂದು ವೇಳೆ ಈ ಮನೆ ನವ್ಯಾಳನ್ನು ಸ್ವೀಕರಿಸದಿದ್ದರೆ ತಾನೇ ಅವಳ ಜವಾಬ್ದಾರಿ ವಹಿಸಿಕೊಳ್ಳುವೆನೆಂದು ನಿರ್ಧರಿಸಿದ್ದಳಾದರೂ ಆಗ ನವ್ಯಾ ಸಂತೋಷವಾಗಿರುತ್ತಿರಲಿಲ್ಲ ಎಂಬುದು ಸಮಾಳಿಗೆ ತಿಳಿದ ವಿಷಯ. ಅಂತಹ ಸ್ಥಿತಿ ಎದುರಾದರೆ ಭಾವನೆಗಳನ್ನೇ ತನ್ನ ಸುತ್ತ ಬೇಲಿಯಾಗಿಸಿಕೊಂಡು ಅದರೊಳಗೆ ಅವಳೊಂದು ದ್ವೀಪವಾಗಿಬಿಡುವ ಭಯ ಸಮನ್ವಿತಾಳನ್ನು ಕಾಡತೊಡಗಿತ್ತು. ಆದರೆ ನವ್ಯಾಳ ಬಾಳನ್ನು ಹಸನಾಗಿಸಬೇಕೆಂಬ ಇವಳ ಛಲಕ್ಕೆ, ಕಿಶೋರನ ಒಲುಮೆಗೆ, ನವ್ಯಾಳ ನಿಷ್ಕಲ್ಮಶ ಮನಸ್ಸಿಗೆ ವಿಧಾತನೂ ತಲೆಬಾಗಿ ಹರಸಿದನೇನೋ..... 

ಸಮನ್ವಿತಾಳ ಕಣ್ಣಿಂದ ಹನಿಯೊಂದು ಬಿಡುಗಡೆ ಪಡೆದು ಭೂಶಾಯಿಯಾಯಿತು. ಎಲ್ಲಾ ತಲ್ಲಣಗಳಿಂದ ಅವಳನ್ನು ಮುಕ್ತಗೊಳಿಸುವಂತೆ...... ಹಿಂದಿನಿಂದ ಕೈಯೊಂದು ಭುಜ ಬಳಸಿದಾಗ ತಿರುಗಿದಳು. ಸತ್ಯನಾರಾಯಣರು….. ಕಂಬನಿದುಂಬಿದ ಅಕ್ಷಿಗಳೊಂದಿಗೆ ಅವರ ಭುಜಕ್ಕೊರಗಿದಳು. ಅವಳನ್ನು ಸಮಾಧಾನಿಸುವಂತೆ ತಲೆದಡವಿದವರು, "ನಿನ್ನ ನೋಡಿದರೆ ಹೆಮ್ಮೆ ಎನಿಸುತ್ತೆ ಮಗಳೇ….. ನಿನ್ನಂತಹ ಮಗಳನ್ನು ಪಡೆದ ಹೆತ್ತವರು ಜಗತ್ತಿನಲ್ಲೇ ಅತೀ ಪುಣ್ಯವಂತರು..." ಎಂದರು.

ಅವರ ಮಾತಿಗೆ ಕಣ್ಣೀರಿನ ನಡುವೆಯೇ ನಕ್ಕಳವಳು. "ಅವರು ಪುಣ್ಯವಂತರೋ ಇಲ್ಲಾ ನಾನೇ ಅದೃಷ್ಟಹೀನಳೋ ಹೇಳೋದು ಕಷ್ಟ ಅಪ್ಪ….." ಎಂದಳು.

"ಎರಡೂ ಅಲ್ಲ. ನಿನ್ನಪ್ಪ ಅಮ್ಮ ಕೈ ಚೆಲ್ಲಿದ ಭಾಗ್ಯದಿಂದಾಗಿ ನಾನು, ಮಂಗಳಾ ಹಾಗೇ ಶರ್ಮಾ ದಂಪತಿಗಳು ಅದೃಷ್ಟಶಾಲಿಗಳಾದ್ವಿ....." ನಕ್ಕು ನುಡಿದವರ ಎದೆಗೊರಗಿ ಮತ್ತೆ ಕಣ್ಣೀರಾದಳು ಹುಡುಗಿ.

ಹಾಗೆ ಆ ನಸುಕಿನಲ್ಲಿ ಇಬ್ಬರು ಬಂಗಾರದಂತಹ ಹೆಣ್ಣು ಮಕ್ಕಳ ಹೆತ್ತವರೆನಿಸಿಕೊಳ್ಳುವ ವರ ಪಡೆದು ಭಾಗ್ಯವಂತರಾದರು ಸತ್ಯನಾರಾಯಣ ಹಾಗೂ ಮಂಗಳಾ.

ನಾಲ್ವರ ಮನದ ಬೇಗುದಿ ಇಳಿದು ಮನಗಳು ಶುಭ್ರ ಆಗಸದಷ್ಟು ಹಗುರಾದ ಸಮಯಕ್ಕೆ....... 

ಜಗತ್ತಿನ ಬೇಗುದಿಯನ್ನೆಲ್ಲಾ ತನ್ನಲ್ಲೇ ಹೊತ್ತು, ಸಂಪೂರ್ಣ ಕದಡಿದ ಚಿತ್ತ ಸ್ವಾಸ್ಥ್ಯದೊಂದಿಗೆ, ದೇಹವನ್ನು ಹೊರಲಾರದಷ್ಟು ನಿಶ್ಯಕ್ತಿ ಆವರಿಸಿದ್ದ ಕಾಲುಗಳನ್ನು ಎಳೆದುಕೊಂಡು, ಇನ್ನೇನು ನಿಂತೇ ಬಿಡುತ್ತೇನೆಂದು ಹಠ ಹಿಡಿಯುತ್ತಿದ್ದ ಎದೆಬಡಿತದೊಂದಿಗೆ ಗುದ್ದಾಡುತ್ತಾ ಮನೆಗೆ ಬಂದಿದ್ದ ಕಿಶೋರ್.

ತೆರೆದ ಬಾಗಿಲಿನಿಂದ ಒಳ ಪ್ರವೇಶಿಸಿದವನು ಸ್ತಂಭೀಭೂತನಾಗಿದ್ದ. ಅರೆಕ್ಷಣ ತಾನು ಕಾಣುತ್ತಿರುವುದು ಕನಸಿರಬಹುದೇನೋ ಎನಿಸಿತು. ಬೇರೆಯವರ ಮನೆಗೆ ಬಂದಿರುವೆನಾ ಎಂಬ ಅನುಮಾನವೂ ಕಾಡದಿರಲಿಲ್ಲ. ಕಣ್ಣುಜ್ಜಿಕೊಂಡು ನೋಡಿದ….. ಇಲ್ಲ...... ಅವನದೇ ಮನೆ. ಇರುವ ನಾಲ್ಕು ಮುಖಗಳೂ ಅವನ ಮನಕ್ಕೆ ಅತ್ಯಂತ ಆಪ್ತವಾದುವು. ಆದರೆ......

ಮನೆಯ ಪರಿಸ್ಥಿತಿ ಅವನೆಣಿಕೆಗೆ ಸಂಪೂರ್ಣ ವಿರುದ್ಧವಾಗಿತ್ತು. 'ಅಪ್ಪ ಅಮ್ಮ ನನ್ನ ಮೇಲೆ ಮುನಿಸಿಕೊಂಡಿರುತ್ತಾರೆ. ಅವರನ್ನು ಸಮಾಧಾನಿಸುವುದೆಂತು? ಅವರು ನವ್ಯಾಳನ್ನು ಬಿಟ್ಟುಬಿಡಲು ಹೇಳಬಹುದು. ಅದು ಅವಳಿಗೂ ಒಪ್ಪಿಗೆಯಿರಬಹುದು. ನಾನು ಮನೆಬಿಟ್ಟು ಅವಳೊಂದಿಗೆ ಇರುವೆನೆಂದರೆ ಅಪ್ಪ ಅಮ್ಮನಿಗಿಂತ ಮೊದಲು ಅವಳೇ ವಿರೋಧಿಸುತ್ತಾಳೆ. ಹೇಗೆ ಸಮಾಧಾನಿಸಲಿ ಎಲ್ಲರನ್ನು? ಎಲ್ಲಕ್ಕೂ ಮಿಗಿಲಾಗಿ ನಾನು ಹೋಗುವವರೆಗೆ ನವ್ಯಾ ಮನೆಯಲ್ಲಿರುವಳಾ?' ಎಂದೆಲ್ಲಾ ಯೋಚಿಸಿ ಹೈರಾಣಾಗಿದ್ದ. 

ಇಲ್ಲಿ ನೋಡಿದರೇ…... ಅಪ್ಪ ಸಮನ್ವಿತಾ ಏನೋ ಮಾತನಾಡುತ್ತಿದ್ದರೇ ಅಮ್ಮ, ಅವರ ಮಡಿಲಲ್ಲಿ ಮಲಗಿದ್ದ ನವ್ಯಾ ಇಬ್ಬರೂ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಬಾಗಿಲ ಬಳಿ ಸದ್ದಾದಾಗ ನಾಲ್ವರೂ ತಿರುಗಿದರು.

ಇವನನ್ನು ನೋಡಿದ್ದೇ ಮಂಗಳಮ್ಮ ಮುಖ ತಿರುಗಿಸಿ ಕುಳಿತುಬಿಟ್ಟರು. ಅಪ್ಪ ಹಾಗೂ ಸಮಾಳ ನಿರಾಳ ಮುಖಭಾವ ಅವನ ಬೆಂದ ಮನಸ್ಸಿಗೆ ಕೊಂಚ ಸಮಾಧಾನ ನೀಡಿತು. ನಿಧಾನವಾಗಿ ಮಡದಿಯ ಬಳಿ ಬಂದಿದ್ದ. ನವ್ಯಾ ಅವನನ್ನು ನೋಡದೇ ನೆಲದತ್ತ ನೋಟ ಹರಿಸಿ,

"ಕ್ಷಮಿಸಿ ಕಿಶೋರ್, ನಿಮ್ಮ ಈ ರೀತಿಯ ನಿರ್ಧಾರ ನಾನು ಊಹಿಸಿರಲಿಲ್ಲ. ಅದು ನನಗೆ ಬೇಕಾಗಿಯೂ ಇರಲಿಲ್ಲ. ಸಮಸ್ಯೆಗೊಂದು ಪರಿಹಾರ ಬೇಕಿತ್ತೇ ಹೊರತು ಸಮಸ್ಯೆಯಿಂದ ದೂರ ಓಡುವುದು ಬೇಕಾಗಿರಲಿಲ್ಲ ನನಗೆ. ಓಡಿದರೂ ಎಷ್ಟು ದೂರ ಓಡಬಹುದಿತ್ತು? ಒಂದಲ್ಲಾ ಒಂದು ದಿನ ಸಮಸ್ಯೆ ನಮ್ಮ ಮುಂದೆಯೇ ಬರ್ತಿತ್ತು ಅಲ್ವಾ? ಅದಕ್ಕೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ನಾನೇ ಕಂಡುಹುಡುಕಲು ನಿರ್ಧರಿಸಿದೆ. ಎಲ್ಲಾ ಹೇಳ್ಬಿಟ್ಟೆ. ಇಷ್ಟು ವರ್ಷಗಳಿಂದ ಮನಸ್ಸು ಸುಡುತ್ತಿದ್ದ ಎಲ್ಲವನ್ನೂ ಹೇಳಿದೆ. ಮತ್ತೆ ನಿಮ್ಗೆ ಗೊತ್ತಾ....... ಅಪ್ಪ, ಅಮ್ಮ ನನಗೆ ಬೈಯಲಿಲ್ಲ. ಮನೆಯಿಂದ ಹೊರಗೂ ಹಾಕ್ಲಿಲ್ಲ. ಅವ್ರು ನನ್ನ ಪರಿಸ್ಥಿತಿನ ಅರ್ಥ ಮಾಡ್ಕೊಂಡ್ರು. ನಾವು ಇನ್ನೆಲ್ಲಿಗೂ ಓಡೋ ಅಗತ್ಯ ಇಲ್ಲ ಕಿಶೋರ್…..." ಅವಳ ಧ್ವನಿಯಲ್ಲಿ ಅವನು ಈವರೆಗೆ ಎಂದೂ ಕೇಳದ ಆನಂದವಿತ್ತು. ಅತ್ತೂ ಅತ್ತು ಕೆಂಪಡರಿದ್ದ ಮುಖವೂ ಅವಳಲ್ಲಿ ಸ್ಪುರಿಸುತ್ತಿದ್ದ ಸಂತೋಷವನ್ನು ಕುಂಠಿತಗೊಳಿಸಿರಲಿಲ್ಲ. ಇಷ್ಟು ವರ್ಷಗಳಲ್ಲಿ ಅವಳ ಇಂತಹ ಸಂಭ್ರಮಕ್ಕೆ ಮೊದಲ ಬಾರಿಗೆ ಸಾಕ್ಷಿಯಾಗಿದ್ದರು ಎಲ್ಲರೂ…...

ಅವಳನ್ನು ಹಗುರವಾಗಿ ತಬ್ಬಿದ ಕಿಶೋರ್, "ನೀನು ನನ್ನ ಕ್ಷಮಿಸು ನವ್ಯಾ. ನಾನು ನಿನ್ನ ಮನದ ಹೊಯ್ದಾಟವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಸತ್ಯ ತಿಳಿದರೆ ಈ ಜಗತ್ತೇ ನಮ್ಮ ವಿರುದ್ಧ ನಿಂತು ನಿನ್ನ ನನ್ನಿಂದ ದೂರ ಮಾಡುತ್ತೆ ಅಂತ ಅನ್ನಿಸಿಬಿಡ್ತು. ನಿನ್ನ ಕಳೆದುಕೊಂಡು ಬದುಕೋ ಶಕ್ತಿ ನನಗಿಲ್ಲ. ಮನೆಯಲ್ಲೂ ಒಪ್ಪಲ್ಲ ಅನ್ನಿಸ್ತು. ಇತ್ತೀಚಿನ ನಿನ್ನ ವರ್ತನೆ, ನೀನು ಇಡೀ ರಾತ್ರಿ ನಿದ್ದೆ ಇಲ್ಲದೇ ಆಕಾಶ ನೋಡ್ತಾ ಸಮಯ ಕಳೆಯುತ್ತಿದ್ದದ್ದು, ಆ ನಿನ್ನ ಕನಸುಗಳು….... ನನ್ನ ಕೈಲಿ ನಿನ್ನ ಸಂಕಟ ನೋಡೋಕಾಗ್ಲಿಲ್ಲ. ಹೀಗೇ ಬಿಟ್ಟರೆ ನೀನು ಮಾನಸಿಕ ರೋಗಿ ಆಗ್ತಿಯೇನೋ ಅನ್ನಿಸೋಕೆ ಶುರುವಾಯ್ತು. ಮನೆಯಲ್ಲಿ ಸತ್ಯ ಹೇಳೋಕೆ ಧೈರ್ಯ ಬರ್ಲಿಲ್ಲ. ಹಾಗೆ ನಿನ್ನ ಹಿಂಸೆನೂ ನೋಡೋಕಾಗ್ಲಿಲ್ಲ. ಅದಕ್ಕೆ ಸ್ವಲ್ಪ ಸಮಯ ಮನೆಯಿಂದಲೇ ನಿನ್ನ ದೂರ ಇಡೋಣ. ಆಮೇಲೆ ಏನು ಮಾಡೋದು ಅಂತ ವಿಚಾರ ಮಾಡೋಣ ಅನ್ನಿಸ್ತು. ಅದಕ್ಕೆ ಹೀಗೆ ಮಾಡಿದೆ. ಆದರೆ ಇದ್ರಿಂದಾಗಿಯೇ ನೀನು ಮನೆಯವರಿಗೆ ಎಲ್ಲಾ ಸತ್ಯ ಹೇಳೋ ರಿಸ್ಕ್ ತಗೋತಿಯಾ ಅಂತ ಅನ್ನಿಸ್ಲಿಲ್ಲಾ….. ಆದ್ರೂ ನಾನು ವಾಪಾಸಾಗೋವರೆಗೂ ಕಾಯೋದು ಬಿಟ್ಟು ಒಬ್ಬಳೇ ಎಲ್ಲಾ ಹೇಳಿದ್ಯಲ್ಲಾ......" ಆಕ್ಷೇಪಿಸುತ್ತಲೇ ಅವಳನ್ನು ಸಮಾಧಾನಿಸಿದ.

ತನ್ನನ್ನು ತಾನು ಸಂಭಾಳಿಸಿಕೊಂಡ ನವ್ಯಾ ಅವನಿಂದ ಬಿಡಿಸಿಕೊಂಡು ಮಂಗಳಾರತ್ತ ಕೈ ತೋರಿದಳು‌ 'ಅಮ್ಮನನ್ನು ಸಮಾಧಾನಿಸಿ' ಎನ್ನುವಂತೆ…...

ಈಗ ಅವನಿಗೆ ನಿಜಕ್ಕೂ ಭಯವಾಯಿತು. ಅಪ್ಪನೊಂದಿಗಾದರೂ ಮಾತನಾಡಿ ವಿವರಿಸಬಲ್ಲನೇನೋ ಆದರೆ ಅಮ್ಮ….... ಇಂತಹ ಗಹನವಾದ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದು ಅವರಿಗೆ ದೊಡ್ಡ ಆಘಾತವನ್ನೇ ನೀಡಿದೆಯೆಂಬ ಅರಿವು ಅವನಿಗಿತ್ತು. ಈಗ ಹೇಗೆ ಅವರನ್ನು ಎದುರಿಸಲೀ ಏನೆಂದು ಸಮಾಧಾನಿಸಲೀ ಎಂಬುದೇ ಅರಿವಾಗಲಿಲ್ಲ ಅವನಿಗೆ.

ಅಪ್ಪನನ್ನು ನೋಡಿದ. 'ಏನೂ ಆಗದು. ನಿಧಾನಕ್ಕೆ ಮಾತನಾಡಿ ವಿವರಿಸು' ಎಂಬಂತಿತ್ತು ಅವರ ಮುಖಭಾವ. "ಅವ್ರು ನಿನ್ನಮ್ಮ ಕಣೋ….. ತಪ್ಪು ಮಾಡಿದ್ದೀ. ಒಪ್ಪಿಕೊಂಡು ಕ್ಷಮೆ ಕೇಳು. ಕ್ಷಮಿಸುತ್ತಾರೆ" ಮೆಲುವಾಗಿ ಹೇಳಿದಳು ಗೆಳತಿ.

ಬೇರೆಡೆ ಮುಖಮಾಡಿ ಕುಳಿತ ಅಮ್ಮನ ಬಳಿಗೆ ಬಂದು ಅವರ ಕಾಲ ಬಳಿಯಲ್ಲಿ ಕುಳಿತು, ಅವರ ಎರಡೂ ಕೈಗಳನ್ನು ಹಿಡಿದು ಎದೆಗೊತ್ತಿಕೊಂಡ.

"ಅಮ್ಮಾ....." ಮೆಲುವಾಗಿ ಕರೆದವನ ಧ್ವನಿ ಆರ್ದ್ರವಾಗಿತ್ತು. ಆದರೆ ಮಂಗಳಮ್ಮ ಪ್ರತಿಕ್ರಿಯಿಸಲಿಲ್ಲ‌.

"ಅಮ್ಮಾ, ನೀನು ನನ್ನಮ್ಮ ಅಲ್ವಾ…...? ನಾನು ಚಿಕ್ಕವನು. ಏನೋ ಗೊತ್ತಿಲ್ದೇ ತಪ್ಪು ಮಾಡ್ತಾ ಇರ್ತೀನಿ. ನೀನು ಎಲ್ಲಾ ತಿಳಿದವಳು. ಮಾಡಿರೋ ತಪ್ಪಿಗೆ ಒಂದೆರಡು ಏಟು ಹಾಕು. ಆ ಅಧಿಕಾರ ನಿನಗಿದೆ. ಆದ್ರೆ ಏಟು ಹಾಕಿದ್ಮೇಲೆ ಕ್ಷಮಿಸಿ ಬಿಡಮ್ಮ. ನಾನು ನೋಡು ಅದೆಷ್ಟು ದಡ್ಡ ಅಂತ….. ನೀನು ಕಲಿಸಿರೋ ವಿದ್ಯೆ, ಬುದ್ಧಿ, ಆದರ್ಶಗಳನ್ನೇ ನಾನು ಅಳವಡಿಸಿಕೊಂಡಿರೋದು. ಚಿಕ್ಕಂದಿನಿಂದಲೂ ನೀನು ನನ್ನಮ್ಮ ಅಂತ ಹೇಳ್ಕೊಳ್ಳೋಕೆ ನಂಗೆ ತುಂಬಾ ಹೆಮ್ಮೆ. ಈ ದೇಹ, ವ್ಯಕ್ತಿತ್ವ ಎರಡೂ ನಿನ್ನದೇ ಪ್ರತಿಬಿಂಬ. ತಾಯಿಯಂತೆ ಮಗು ಅಲ್ವೇನಮ್ಮಾ….. ಮತ್ತೆ ಅದ್ಹೇಗೆ ನೀನು ನವ್ಯಾನ ಒಪ್ಪಲ್ಲ, ಮನೆಯಿಂದ ಹೊರಗೆಹಾಕ್ತೀ ಅಂತೆಲ್ಲಾ ಭ್ರಮಿಸಿದೆ ನಾನು? ತುಂಬಾ ಕೆಟ್ಟದಾಗಿ ಯೋಚಿಸಿಬಿಟ್ಟೆ ಅಮ್ಮಾ. ದಯವಿಟ್ಟು ನನ್ನ ಕ್ಷಮಿಸ್ತೀಯಾ....." ಅವನು ಮುಂದೇನು ಹೇಳಲಿದ್ದನೋ...... ಆದರೆ ಮಂಗಳಮ್ಮ ಅವನ ಮಾತುಗಳನ್ನು ಅಲ್ಲೇ ತಡೆದಿದ್ದರು. ಮಗನ ಮಾತುಗಳು ಮತ್ತೊಮ್ಮೆ ಅವರಿಗೇ ಅವರ ಯೋಚನೆಗಳ ಬಗ್ಗೆ ಅಸಹ್ಯ ಹುಟ್ಟುವಂತೆ ಮಾಡಿದ್ದವು.

"ನಾನಲ್ಲ ಕಿಶೋರಾ, ನೀನೆ ನನ್ನ ಕ್ಷಮಿಸಪ್ಪಾ. ನಾನು ನೀನು ಭ್ರಮಿಸಿದ ಹಾಗೇ ಯೋಚಿಸಿಬಿಟ್ಟೆ ಕಣೋ. ಅದೇನಾಗಿತ್ತೋ ನನ್ನ ಬುದ್ಧಿಗೆ.... ಬಹಳ ಕೆಟ್ಟದಾಗಿ ಯೋಚಿಸಿಬಿಟ್ಟೆ ಮಗೂ. ನಿಮ್ಮಪ್ಪಾಜಿ ನನ್ನ ಯೋಚನೆಗಳ ಹಾದಿ ಬದಲಿಸದಿದ್ದಿದ್ರೆ ಈ ಮಗೂನಾ ಮನೆಯಿಂದಲೇ ಹೊರಹಾಕ್ತಿದ್ದೆನೇನೋ.... ಅಷ್ಟರಲ್ಲಿ ನಿಮ್ಮಪ್ಪ ನನ್ನ ತಪ್ಪನ್ನು ನನಗೆ ಅರಿಕೆ ಮಾಡಿಸಿದರು. ನೀನು ನನ್ನ ಪ್ರತಿಬಿಂಬ ಅಲ್ಲಪ್ಪಾ….. ನಿನ್ನ ಯೋಚನೆಗಳು ಬಹಳ ಎತ್ತರದವು. ನಾನು ಓದಿದ ವಿದ್ಯೆ, ಬುದ್ಧಿ, ಆದರ್ಶಗಳನ್ನು ನಿನಗೆ ಹೇಳಿಕೊಟ್ಟೆನೇ ಹೊರತು ನಾನು ಅವುಗಳನ್ನು ಸರಿಯಾಗಿ ಅರ್ಥೈಸಿ ಅಳವಡಿಸಿಕೊಳ್ಳಲಿಲ್ಲ. ಅದೇ ನೀನು ನಾನು ಹೇಳಿದ್ದವುಗಳನ್ನು ನಿನ್ನ ನಡೆ, ನುಡಿ, ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡೆ ಕಿಶೋರಾ.... ನೀನೇ ನನ್ನ ಕ್ಷಮಿಸು ಮಗೂ. ಹಾಗೆಯೇ ನೀನೂ ಸಾಧ್ಯವಾದರೇ ಈ ಅಮ್ಮನನ್ನು ಕ್ಷಮಿಸಿಬಿಡು ಮಗಳೇ...... ನಿನ್ನನ್ನೂ ಅನುಮಾನಿಸಿದೆ ಸಮನ್ವಿತಾ.... ನಿಮ್ಮಷ್ಟು ಎತ್ತರಕ್ಕೆ ಯೋಚಿಸಲಾರದೇ ಹೋದೆ. ಎಲ್ಲರೂ ಕ್ಷಮಿಸಿ ನನ್ನನ್ನು" ಹನಿಗಣ್ಣಾಗಿ ನುಡಿದರು.

ತಮ್ಮ ಪೂರ್ವಾಗ್ರಹ ಪೀಡಿತ ಯೋಚನೆಯ ಬಗ್ಗೆ ಖೇದದ ಜೊತೆಗೇ ಈಗಿನ ಯುವ ಪೀಳಿಗೆ ತಮ್ಮಂತೆ ಗೊಡ್ಡು ಸಂಪ್ರದಾಯ, ಕಟ್ಟುಪಾಡು, ಕಂದಾಚಾರಗಳಿಗೆ ಸೊಪ್ಪು ಹಾಕದೆ ಸರಿ ತಪ್ಪುಗಳನ್ನು ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುವುದನ್ನು ಕಂಡು ಹೆಮ್ಮೆಯೆನಿಸಿತು ಮಂಗಳಾರಿಗೆ.

"ಅಮ್ಮಾ..... ದಯವಿಟ್ಟು ಹೀಗೆಲ್ಲಾ ಮಾತಾಡ್ಬೇಡಿ" ಅವರ ತೋಳಿಗೊರಗಿ ನವ್ಯಾ ಹೇಳಿದರೆ, ಕಿಶೋರ್ ಅಮ್ಮನ ಮಡಿಲಿಗೆ ತಲೆಯೊರಗಿಸಿದ್ದ. 

"ನಾನು ಅಪ್ಪನ ಮಗಳು....." ಸಮನ್ವಿತಾ ಸತ್ಯನಾರಾಯಣರ ಹೆಗಲಿಗೊರಗಿ ನುಡಿದಾಗ  ಉಳಿದವರೂ ನಕ್ಕರು.

ಅಂದಿನ ನಸುಕು ಆ ಮನೆ ಮನಗಳಲ್ಲಿ ಸಂತೋಷವನ್ನು ಹೊನಲಾಗಿಸಿತ್ತು…...

ತಪ್ಪು ಮಾಡುವುದು ಮನುಜನ ಸಹಜ ಗುಣ. ಆ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ಸಾತ್ವಿಕ ಮನದ ಗುಣ. ತಪ್ಪು ಮಾಡಿದಾಗ ಕ್ಷಮೆ ಕೇಳಿದರೆ ಮನಸ್ಸು ಹಗುರಾಗುತ್ತದೆ. ಕ್ಷಮೆ ಕೇಳಲು ವಯಸ್ಸಿನ ಹಂಗಿಲ್ಲ. 'ನಾವು ಹಿರಿಯರು, ಕಿರಿಯರೆದುರು ಕ್ಷಮೆ ಕೇಳಿದರೆ ಸಣ್ಣವರಾಗುತ್ತೇವೆ' ಎಂಬುದು ತಪ್ಪುಕಲ್ಪನೆಯಷ್ಟೇ. ಕ್ಷಮೆ ಕೇಳಲೂ ಧೈರ್ಯ ಬೇಕು. ಮಾಡಿದ ತಪ್ಪಿಗೆ ಕ್ಷಮೆ ಕೇಳಿ ತಿದ್ದಿಕೊಳ್ಳುವವರು ದೊಡ್ಡವರಾಗುತ್ತಾರೆ. ಹೇಗೆ ಕ್ಷಮಿಸುವವನು ದೊಡ್ಡವನೋ ಹಾಗೆಯೇ ಕ್ಷಮೆ ಕೇಳುವ ಮನಸ್ಸುಳ್ಳವನೂ ಎತ್ತರದ ವ್ಯಕ್ತಿತ್ವದವನಲ್ಲವೇ…..?

ಮಂಗಳಾ ಕೋಪದ ಭರದಲ್ಲಿ ವಿವೇಚನೆ ಮರೆತು ಕೆಟ್ಟದಾಗಿ ಯೋಚಿಸಿದ್ದು ನಿಜವಾದರೂ ಗಂಡನ ಮಾತುಗಳಿಂದ ಎಚ್ಚೆತ್ತುಕೊಂಡರು. ಆತ್ಮವಿಮರ್ಶೆ ಮಾಡಿಕೊಂಡರು. ತಮ್ಮ ಯೋಚನೆ ತಪ್ಪೆನಿಸಿದಾಗ ಯಾವುದೇ ಹಿಂಜರಿಕೆಯಿಲ್ಲದೇ ಕ್ಷಮೆ ಕೇಳಿ ಹಿರಿತನ ಉಳಿಸಿಕೊಂಡರು.

ಸತ್ಯ ಹೊರಬಿದ್ದಿತ್ತು. ತಪ್ಪು ಕಲ್ಪನೆಗಳು ದೂರಾಗಿತ್ತು. ಸಂಬಂಧಗಳ ಬೆಸುಗೆ ಇನ್ನಷ್ಟು ಗಟ್ಟಿಯಾಗಿತ್ತು. 

ನವ್ಯಾ ಬದುಕಿನ ಅತೀ ದೊಡ್ಡ ಹಾಗೂ ನಿರ್ಣಾಯಕ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಳು........

ನವ್ಯಾಳ ಬದುಕನ್ನು ಹಸನಾಗಿ ಕಟ್ಟಿಕೊಡಬೇಕೆಂಬ ಸಮನ್ವಿತಾಳ ಆಸೆ ಕೊನೆಗೂ ಈಡೇರಿತ್ತು........

ಈಗ ಸಭ್ಯ ಸಮಾಜವನ್ನು ಎದುರಿಸುವ ಬಗ್ಗೆ ಒಗ್ಗಟ್ಟಾಗಿ ಯೋಚಿಸಬೇಕಿತ್ತು........

        ********ಮುಂದುವರೆಯುತ್ತದೆ**********