'ಈ ಮಟ್ಟಿಗೆ ಇನ್ನೊಬ್ಬರ ಮನದೊಳಗೆ ಇಳಿದು ಭಾವಗಳನ್ನು ಅಕ್ಷರಕ್ಕಿಳಿಸಲು ಹೇಗೆ ಸಾಧ್ಯ? ಅದೂ ಓದುಗನ ಅಂತರಾಳವನ್ನು ಬಗೆಯುವಷ್ಟು ಭಾವತೀವ್ರತೆಯಿಂದ?' - "ಶಿಕಾರಿ" ಕಾದಂಬರಿಯ ಪ್ರತಿ ಪುಟವನ್ನು ಮಗಚುವಾಗಲೂ ಮನದೊಳಗೆ ಮೂಡಿದ ಇಂತದೊಂದು ಪ್ರಶ್ನೆಗೆ "ಛೇದ" ಎನ್ನುವ ನೂರಿಪ್ಪತ್ತು ಪುಟಗಳ ಕಿರುಹೊತ್ತಿಗೆಯನ್ನು ಮುಗಿಸುವ ಹೊತ್ತಿಗೆ ದೊರೆತ ಉತ್ತರವಿದು. ಚಿತ್ತಾಲರು ಖಂಡಿತಾ ಲೇಖನಿ ಹಿಡಿದು ಹಾಳೆಯ ಮೇಲೆ ಬರೆದ ಲೇಖಕರಲ್ಲ. ಮನುಜನ ಯೋಚನೆಗಳ ದಿಕ್ಕು ದಾರಿಯ ಜಾಡು ಹಿಡಿದು ಅದನ್ನು ಓದುಗರ ಮನೋಭಿತ್ತಿಯಲ್ಲಿ ಚಿತ್ರಿಸಿದವರು. ಇವರ ಬರವಣಿಗೆ ಆದಿಯಿಂದ ಅಂತ್ಯದ ತನಕ ನಮ್ಮೊಂದಿಗೆ ಸಂವಾದಿಸುತ್ತದೆ, ಅಂತರ್ಮಥನಕ್ಕೆ ಕಡಗೋಲಾಗುತ್ತದೆ. ಓದುಗನಿಗೆ ಈ ಮಟ್ಟದ Introspection Theropy ನಾ ಕಂಡಿದ್ದು ಚಿತ್ತಾಲರ ಬರವಣಿಗೆಯಲ್ಲೇ.
ಕೊಲೆಯೊಂದರಿಂದ ತೆರೆದುಕೊಳ್ಳುವ ಈ ಕಥನ ನಮ್ಮೊಳಗಿನ ಭಾವಸಂಘರ್ಷಗಳು, ಸಂಕೀರ್ಣ ಸ್ವರೂಪದ ಮಾನವ ಸಂಬಂಧಗಳು, ನಮ್ಮ ಬದುಕಿನ ಪರಿಧಿಯೊಳಗಿನ ವ್ಯಕ್ತಿಗಳ ಬಗ್ಗೆ ನಾವೇ ನಿರ್ಮಿಸಿಕೊಳ್ಳುವ ಹಾಗೂ ಪದೇಪದೇ ಬದಲಾಗುವ ಅಭಿಪ್ರಾಯಗಳು, ಹೇಳಲೇಬೇಕೆಂದುಕೊಂಡು ಮನದೊಳಗೇ ಉಳಿಸಿಕೊಳ್ಳುವ ಸಾವಿರ ಮಾತುಗಳು, ಹೇಳಬಾರದೆಂದುಕೊಂಡೂ ಅರಿವಿಗೆ ಬರುವ ಮುನ್ನವೇ ಮಾತಾಗುವ ಪದಗಳು, ಏನೋ ಹೇಳಬೇಕೆಂದು ಹೊರಟು ಇನ್ನೇನನ್ನೋ ಹೇಳಿ ಮುಗಿಸುವ ರೀತಿ .......... ಹೀಗೆ ನಮ್ಮದೆ ಹಲವು ಪ್ರತಿಬಿಂಬಗಳಿಗೆ ಕನ್ನಡಿ ಹಿಡಿಯುತ್ತದೆ.
ಪ್ರತಿ ಪಾತ್ರದ ಮನಸ್ಸು ಹೊಕ್ಕಂತೆ ಆ ಪಾತ್ರದ ಭಾವಲೋಕದ ಕದ ತೆರೆಯುವ ಚಿತ್ತಾಲರ ಬರವಣಿಗೆಯಲ್ಲಿ ಬೆಹರಾಮ್ ಮತ್ತು ಅಗರ್ವಾಲ್ ನಡುವಿನ ಭಾವಸೂಕ್ಷ್ಮ ಹಾಗೂ ಸಂಕೀರ್ಣ ಬಾಂಧವ್ಯ ಅನಾವರಣವಾಗಲು ಕರುಣಾಕರನ್ ಮತ್ತು ವಾಸುದೇವನ್ ಮೆಟ್ಟಿಲುಗಳಾಗುತ್ತಾರೆ. ಶಿರೀನ್ ಮತ್ತು ಆಕೆಯ ತಾಯಿ ಅನಪೇಕ್ಷಿತವಾಗಿ ಸೃಷ್ಟಿಯಾಗುವ ಸನ್ನಿವೇಶದ ಇತರೆ ಸಾಧ್ಯತೆಗಳ ಅವಲೋಕನಕ್ಕೆ ದಾರಿಯಾದರೆ ಪಾರ್ವತಿಯ ನಡೆನುಡಿ ಒಂದು ಬಗೆಯ ಗೌಪ್ಯತೆಯನ್ನು ಕಾಯುತ್ತದೆ. ಕೊನೆಯಲ್ಲಿ ಅಗರ್ವಾಲನೊಡನೆ ಫೋನಿನಲ್ಲಿ ಸಂಭಾಷಿಸಿ ತನ್ನ ಮನದೊಳಗೆ ಹೆಪ್ಪುಗಟ್ಟಿದ್ದ ವರ್ಷಗಳ ಬೇಗುದಿಯನ್ನೆಲ್ಲಾ ಕಕ್ಕಲು ಬೆಳಕನ್ನು ಆರಿಸಿ ಕತ್ತಲನ್ನು ಆಶ್ರಯಿಸುವ ಬೆಹರಾಮನ ವರ್ತನೆ ಅಷ್ಟೂ ವರ್ಷಗಳು ಅವನು ಕತ್ತಲಿನಲ್ಲೇ ಇದ್ದನೆಂಬ ಸತ್ಯಕ್ಕೆ ಸಮರ್ಥ ರೂಪಕವಾಗಿದೆ.
ಒಟ್ಟಿನಲ್ಲಿ ಬರಹಗಾರನೊಬ್ಬನ method writing ಓದುಗನ ಮನಃಪಟಲದಲ್ಲಿ method acting ಕೌಶಲ್ಯದಲ್ಲಿ ಬಿತ್ತರವಾಗುವ ರೀತಿಗೆ ಸಮರ್ಥ ಉದಾಹರಣೆ "ಛೇದ".
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ