ಮಂಗಳವಾರ, ಜೂನ್ 16, 2020

ನೀ ರಾಧೆಯ ಶ್ಯಾಮನಾದರೆ ನಾನ್ಯಾರು ಹೇಳೋ ಮಾಧವ......


"ಪ್ರಯಾಣಿಕರ ಗಮನಕ್ಕೆ, ಗಾಡಿ ಸಂಖ್ಯೆ 11302, ಬೆಂಗಳೂರಿನಿಂದ ಸೊಲ್ಲಾಪುರ, ಧರ್ಮಾವರಂ ಮಾರ್ಗವಾಗಿ ಮುಂಬೈಗೆ ತೆರಳಲಿರುವ ಉದ್ಯಾನ್ ಎಕ್ಸ್ ಪ್ರೆಸ್ ಪ್ಲಾಟ್ ಫಾರ್ಮ್ ನಂಬರ್ ನಾಲ್ಕಕ್ಕೆ ಆಗಮಿಸಿದೆ..." ಎಂಬ ಪ್ರಕಟಣೆ ಕೇಳಿ ಎದ್ದವಳು ತನ್ನ ಪುಟ್ಟ ಲಗೇಜ್ ಬ್ಯಾಗನ್ನು ಹಿಡಿದು ನಾಲ್ಕನೇ ಪ್ಲಾಟ್ ಫಾರ್ಮಿನತ್ತ ನಿಧಾನವಾಗಿ ಹೆಜ್ಜೆ ಹಾಕಿದಳು . ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಿದ್ದರಿಂದ ನೂಕುನುಗ್ಗಲಿನಲ್ಲಿ ಸೀಟಿಗಾಗಿ ಗುದ್ದಾಡುವ ಅಗತ್ಯವಿರಲಿಲ್ಲ. ಅಸಲಿಗೆ ಅವಳಿಗೆ ರೈಲಿನಲ್ಲಿ ಹೋಗುವ ಅನಿವಾರ್ಯತೆಯೇ ಇರಲಿಲ್ಲ. ಫ್ಲೈಟಿನಲ್ಲಿ ಹೋಗೆಂದಿದ್ದರು ತಂದೆ. ಆದರೆ ಅವಳೇ ನಿರಾಕರಿಸಿದ್ದಳು. ಅವಳಿಗೆ ಈ ಪ್ರಯಾಣವೇ ಬೇಕಿತ್ತು.... 

ಹಿಂದೊಮ್ಮೆ ಇದೇ ರೈಲಿನ ಪ್ರಯಾಣದಲ್ಲಿ ಕಥೆಯೊಂದು ಆರಂಭವಾಗಿತ್ತು. ಈಗ ಆ ಕಥೆಯಿಂದ ನಿರ್ಗಮಿಸುವ ಮುನ್ನ ಮತ್ತೊಮ್ಮೆ ಅದೇ ಕಥೆಯೊಳಗೆ ಆದಿಯಿಂದ ಅಂತ್ಯದವರೆಗೆ ಪಯಣಿಸಬಯಸಿದ್ದಳಾಕೆ....... 

ಇನ್ನೆಂದೂ ತಾನು ಆ ಕಥೆಯ ಪುಟವಾಗಲಾರೆ ಎಂಬುದು ಅವಳಿಗೆ ತಿಳಿದಿತ್ತು.... ಎಷ್ಟೆಂದರೂ ಅರ್ಧ ಬರೆದ ಕಥೆಯಿಂದ ಮಧ್ಯದಲ್ಲೇ ನಿರ್ಗಮಿಸುವ ನಿರ್ಧಾರ ಅವಳದೇ ಅಲ್ಲವೇ......

ಫಸ್ಟ್ ಕ್ಲಾಸ್ ಎಸಿ ಕಂಪಾರ್ಟ್ಮೆಂಟ್ ಭಾಗಶಃ ಖಾಲಿಯಾಗಿತ್ತು. ತನ್ನ ಬರ್ತ್ ನಲ್ಲಿ ಇದ್ದೊಂದು ಲಗೇಜ್ ಬ್ಯಾಗಿನೊಂದಿಗೆ ಆಸೀನಳಾದಳು. ವ್ಯಾನಿಟಿ ಬ್ಯಾಗಿನಲ್ಲಿದ್ದ ಟಿಕೆಟ್ ತೆಗೆದು ಮತ್ತೊಮ್ಮೆ ಖಾತರಿಪಡಿಸಿಕೊಂಡಳು. ಅದನ್ನು ಮತ್ತೆ ಬ್ಯಾಗಿಗೆ ಸೇರಿಸುವ ಮುನ್ನ ಪ್ಯಾಸೆಂಜರ್ ನೇಮ್ ಎಂಬಲ್ಲಿ ದಪ್ಪ ಅಕ್ಷರಗಳಲ್ಲಿ ನಮೂದಾಗಿದ್ದ ಹೆಸರನ್ನೇ ನೋಡಿದಳು.

ವಿದಿಶಾ ವಿಹಾರಿ......

ಸಣ್ಣನೆಯ ಮುಗುಳ್ನಗು ಅರಳಿತು. ಆ ಹೆಸರನ್ನೇ ಅಪ್ಯಾಯಮಾನವಾಗಿ ಸವರಿದಳು. ಟಿಕೇಟನ್ನು ಜತನದಿಂದ ಬ್ಯಾಗಿನೊಳಗೆ ಸೇರಿಸಿದಳು. ರೈಲು ನಿಧಾನವಾಗಿ ಚಲಿಸಲಾರಂಭಿಸಿತು. ನಿದ್ರೆಯಂತೂ ಅವಳೊಂದಿಗೆ ಮುನಿಸಿಕೊಂಡು ಬಹಳ ದಿನಗಳಾಗಿತ್ತು. ಸಮಯ ಕಳೆದಂತೆ ರೈಲು ನಗರ ವಲಯವನ್ನು ದಾಟಿ ತನ್ನ ವೇಗ ಹೆಚ್ಚಿಸಿಕೊಳ್ಳುತ್ತಾ ಕತ್ತಲನ್ನು ಸೀಳಿಕೊಂಡು ಸಾಗತೊಡಗಿತು. ಆ ವೇಗದಲ್ಲಿ ಹಿಂದೆ ಹಿಂದೆ ಸಾಗುತ್ತಿರುವಂತೆ ತೋರುವ ಗಿಡಮರಗಳನ್ನೇ ನೋಡುತ್ತಾ ಕುಳಿತಳು. ಅದರೊಂದಿಗೆ ಅವಳ ನೆನಪುಗಳೂ ಹಿಂದಕ್ಕೆ ಚಲಿಸತೊಡಗಿದವು.

ವಿದಿಶೆ ನಿರ್ಗಮಿಸಲು ತಯಾರಾಗಿರುವ ಕಥೆಯೂ ಇದೇ ಉದ್ಯಾನ್ ಎಕ್ಸ್ ಪ್ರೆಸ್ಸಿಂದಲೇ ಆರಂಭಗೊಂಡಿತ್ತು.....

****************

ವಿದಿಶಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಮೊದಲಿಂದಲೂ ಬಹಳ ಚುರುಕಾದ ಹುಡುಗಿ. ಅವಳ ತಂದೆ ಡಾ.ಚಿದಂಬರ್ ಅಗ್ನಿಹೋತ್ರಿ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ನ್ಯೂರೋಸೈನ್ಸ್ ವಿಭಾಗದ ಮುಖ್ಯಸ್ಥರು. ಅಮ್ಮ ಶಾಲ್ಮಲಾ ಗೃಹಿಣಿ. ಅವಳು ಓದಿದ್ದು ಇಲ್ಲೇ ಆದರೂ ಕರ್ಮಭೂಮಿಯಾಗಿ ಸಿಕ್ಕಿದ್ದು ಮುಂಬೈ ಎಂಬ ಮಾಯಾನಗರಿ. ಚಿಕ್ಕಂದಿನಿಂದಲೂ ರೇಖೆಗಳೊಂದಿಗೆ ಸಂಗ ಬೆಳೆಸಿಕೊಂಡವಳು... ಕಾರ್ಟೂನ್ ರಚನೆಯ ಮೇಲೆ ಮುಂಚಿನಿಂದಲೂ ಬಹಳ ಆಸಕ್ತಿ ಇತ್ತವಳಿಗೆ. ಹಾಗಾಗಿಯೇ ಉನ್ನತ ಶಿಕ್ಷಣಕ್ಕೆ ಲಲಿತಕಲೆಯನ್ನು (ಫೈನ್ ಆರ್ಟ್ಸ್) ಆಯ್ದುಕೊಂಡು ಸ್ಟೋರಿ ಬೋರ್ಡಿಂಗ್(ಕಾರ್ಟೂನ್ ಅಥವಾ ಚಿತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಕ್ರಮಬದ್ಧವಾಗಿ ವಿನ್ಯಾಸಗೊಳಿಸುವ ಕಲೆ) ನಲ್ಲಿ ವಿಶೇಷ ಪರಿಣಿತಿ ಪಡೆದಿದ್ದಳು. ಅದರೊಂದಿಗೆ ಸ್ವ ಆಸಕ್ತಿಯಿಂದ ಆನಿಮೇಷನ್ಗೆ ಸಂಬಂಧಪಟ್ಟ ಹಲವಾರು ತರಬೇತಿ ಶಿಬಿರಗಳಲ್ಲೂ ಪಾಲ್ಗೊಂಡಿದ್ದಳು. ಕಾಲೇಜಿನಲ್ಲಿದ್ದಾಗಲೇ ಪತ್ರಿಕೆಗಳಿಗೆ ಹಾಗೂ ಜಾಹೀರಾತು ಕಂಪನಿಯೊಂದಕ್ಕೆ ಕೆಲವು ಸ್ಟೋರಿಬೋರ್ಡ್ ತಯಾರಿಸಿಕೊಟ್ಟಿದ್ದಳು. ಅಂತಿಮ ವರ್ಷದ ಪ್ರೊಜೆಕ್ಟಿಗಾಗಿ 'ಮೈರಾ' ಎಂಬ ಕಾರ್ಟೂನ್ ಪಾತ್ರವನ್ನು ತಾನೇ ಸ್ವತಃ ಸೃಷ್ಟಿಸಿ ವಿನ್ಯಾಸಗೊಳಿಸಿದ್ದಳು. ಅದು ಬೆಸ್ಟ್ ಪ್ರಾಜೆಕ್ಟ್ ಆಗಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇವಳ ಪ್ರತಿಭೆ ಗಮನಿಸಿ ಮುಂಬೈ ಮೂಲದ "ವಿ ಕ್ರಿಯೇಟ್" ಎಂಬ ಕಂಪನಿ ಅವಳನ್ನು ಆಹ್ವಾನಿಸಿದಾಗ ಸಂತೋಷದಲ್ಲಿ ಒಪ್ಪಿಕೊಂಡಿದ್ದಳು. ಹೀಗೆ ಆರಂಭವಾಗಿತ್ತು ಅವಳ ಮುಂಬೈ ಯಾನ.

ಮುಂಬೈಗೆ ಬಂದು ಕಂಪೆನಿ ಸೇರಿದ ನಂತರ ಹಿಂತಿರುಗಿ ನೋಡಲಿಲ್ಲ ವಿದಿಶಾ. ತನ್ನ ಸೃಜನಶೀಲತೆ, ಆವಿಷ್ಕಾರ, ಪ್ರತಿಭೆ, ಸಾಮರ್ಥ್ಯದ ಬಲದಿಂದ ಹಂತಹಂತವಾಗಿ ವೃತ್ತಿರಂಗದಲ್ಲಿ ಮೇಲೇರಿದ್ದಳು. ಎರಡೇ ವರ್ಷಗಳಲ್ಲಿ 'ಮೈರಾ ಕ್ರಿಯೇಷನ್ಸ್' ಎಂಬ ತನ್ನದೇ ಹೊಸ ಸಂಸ್ಥೆ ಆರಂಭಿಸಿದ್ದಳು. ಪತ್ರಿಕೆಗಳು, ಜಾಹೀರಾತು ಏಜೆನ್ಸಿಗಳಲ್ಲದೇ, ಕಾರ್ಟೂನ್ ಟಿ.ವಿ ಹಾಗೂ ಚಲನಚಿತ್ರ ತಯಾರಕರು, ಗೇಮ್ ಡಿಸೈನಿಂಗ್ ಕಂಪನಿಗಳವರೆಗೂ 'ಮೈರಾ'ದ ಸೇವೆ ವಿಸ್ತರಿಸಿತ್ತು. ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು. ಪೋವೈಯಲ್ಲಿ ಫ್ಲಾಟ್ ಖರೀದಿಸಿದ್ದಳು. ಅಲ್ಲಿಯೇ ಅವಳ ವಾಸ. ಪಾದರಸದಂತೆ ಚುರುಕಾಗಿ ಓಡಾಡುತ್ತಾ ಎಲ್ಲವನ್ನೂ ನಿಭಾಯಿಸುತ್ತಾಳೆ ವಿದಿಶಾ. ಅವಳಿಗೆ ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೇ, ಧೃತಿಗೆಡದೆ ಯೋಚಿಸುವಷ್ಟು ಮನೋಬಲವಿತ್ತು. ಸದಾ ತುಟಿಯಂಚಿನಲ್ಲಿ ಮಾಸದ ಮುಗುಳ್ನಗೆ ಸೂಸುವಾಕೆ ಕೋಪಗೊಳ್ಳುವುದು ಅತ್ಯಪರೂಪ. 

ಎಷ್ಟೇ ಕೆಲಸದೊತ್ತಡವಿದ್ದರೂ ಬಿಡುವು ಮಾಡಿಕೊಂಡು ತಿಂಗಳಿಗೊಮ್ಮೆ ಬೆಂಗಳೂರಿಗೆ ಬರುತ್ತಿದ್ದಳು ಅಪ್ಪ‌ ಅಮ್ಮನನ್ನು ನೋಡಲು. ಒಬ್ಬಳೇ ಮಗಳು ತಮ್ಮೊಂದಿಗೇ ಇರಲಿ ಎಂಬ ಆಸೆ ಶಾಲ್ಮಲಾರಿಗೆ. ಕಂಪನಿಯನ್ನು ಬೆಂಗಳೂರಿಗೆ ವರ್ಗಾಯಿಸು ಎಂಬ ಪಟ್ಟು ಆಕೆಯದ್ದು. ಬಂದಾಗೆಲ್ಲಾ ಅದನ್ನೇ ಹೇಳುತ್ತಿದ್ದರಾಕೆ. ಆದರೆ ಅದಷ್ಟು ಸುಲಭವೇ? ಮುಂಬೈಯಲ್ಲಾದರೆ ಅವಳ ಏಜೆನ್ಸಿಗೆ ಅದರದೇ ಆದ ಮಾರುಕಟ್ಟೆ ಇತ್ತು. ಈಗ ಇಲ್ಲಿಗೆ ವರ್ಗಾಯಿಸಬೇಕೆಂದರೆ ಅಲ್ಲಿನ ಕ್ಲೈಂಟ್ ಗಳ ಅನುಮತಿ, ಇಲ್ಲಿಯ ಮಾರುಕಟ್ಟೆ ವಿಶ್ಲೇಷಣೆ ಎಲ್ಲಾ ಆಗಬೇಕಿತ್ತು. ಹಾಗಾಗಿಯೇ ಮುಂದೆ ಹಾಕುತ್ತಿದ್ದಳಾದರೂ ಸಧ್ಯದಲ್ಲಿ ಬೆಂಗಳೂರಿಗೆ ಕಂಪನಿ ವರ್ಗಾಯಿಸುವ ಯಾವುದೇ ಯೋಚನೆಯಿರಲಿಲ್ಲ ವಿದಿಶೆಗೆ.

ನಾಲ್ಕು ವರ್ಷಗಳ ಹಿಂದಿನ ಮಾತು....

ಅಪ್ಪ ಅಮ್ಮನನ್ನು ಭೇಟಿಯಾಗಲೆಂದು ಇದೇ ಉದ್ಯಾನ್ ಎಕ್ಸ್ ಪ್ರೆಸ್ಸಿನಲ್ಲಿ ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದಳು ವಿದಿಶಾ. ಅಮ್ಮನಿಗೊಂದು ಕರೆ ಮಾಡಿ ತಾನು ಹೊರಟಿರುವೆನೆಂದು ತಿಳಿಸಿ, ಒಂದಿಷ್ಟು ಹರಟೆ ಹೊಡೆದ ನಂತರ ಮೊಬೈಲಿನ ಜಂಜಾಟ ಬೇಡವೆಂದು ಬದಿಗಿರಿಸಿದ್ದಳು. ಸಿಡ್ನಿ ಷೆಲ್ಡನ್ ನ "ಟೆಲ್ ಮಿ ಯುವರ್ ಡ್ರೀಮ್ಸ್" ಓದಲಾರಂಭಿಸಿದವಳು ಆಶ್ಲೇ ಪೀಟರ್ಸನ್, ಟೋನಿ ಪ್ರಿಸ್ಕಾಟ್ ಹಾಗೂ ಅಲೆಟ್ ಪೀಟರ್ಸ್ ಪಾತ್ರಗಳಲ್ಲಿ ಕಳೆದೇಹೋಗಿದ್ದಳು. ಬಾಹ್ಯಪ್ರಪಂಚದ ಪರಿವಿರಲಿಲ್ಲ ಅವಳಿಗೆ. ಬಹಳ ರೋಚಕವಾಗಿ ಸಾಗುತ್ತಿದ್ದ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಕೊಲೆಗಳ ಮೇಲೆ ಕೊಲೆಗಳು.... ಮೂವರಲ್ಲಿ ಯಾರು ಕೊಲೆಗಳನ್ನು ಮಾಡಿರಬಹುದೆಂಬ ಕುತೂಹಲದಲ್ಲಿ ಉಸಿರು ಬಿಗಿ ಹಿಡಿದು ಓದುತ್ತಿದ್ದವಳ ಏಕಾಗ್ರತೆಗೆ ಭಂಗ ತರುವಂತೆ ಕೇಳಿಸಿತ್ತು ಅವನ ಧ್ವನಿ......

"ಅವಳೇ ಎಲ್ಲಾ ಕೊಲೆಗಳನ್ನು ಮಾಡಿದ್ದು......." 

ಪುಸ್ತಕದಿಂದ ತಲೆಎತ್ತಿ ಧ್ವನಿಯ ಮೂಲ ಹುಡುಕಿ ಎದುರು ನೋಡಿದಳು ತೀಕ್ಷ್ಣ ನೋಟದಲ್ಲಿ. ಅಷ್ಟೇ ಚೂಪಾದ ನೋಟದಲ್ಲೇ ಅವನೂ ಅವಳನ್ನೇ ದಿಟ್ಟಿಸುತ್ತಿದ್ದ. ಯಾರೋ ಅಪರಿಚಿತ. ಇದುವರೆಗೂ ಅವನನ್ನು ಎಲ್ಲೂ ನೋಡಿದ ನೆನಪಿರಲಿಲ್ಲ ಅವಳಿಗೆ.

"ಆಶ್ಲೇ ಪೀಟರ್ಸನ್ ಇದ್ದಾಳಲ್ಲಾ..... ಅವಳೇ ಎಲ್ಲರನ್ನೂ ಸಾಯ್ಸಿರೋದು. ಆಕ್ಚುಲಿ ಏನು ಗೊತ್ತಾ? ಆಶ್ಲೇ, ಅಲೆಟ್, ಟೋನಿ ಮೂವರೂ ಒಬ್ಬಳೇ. ಅವ್ಳಿಗೆ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಇರುತ್ತೆ..." ಅವನು ಹೇಳುತ್ತಿದ್ದ.

"ರೀ ಮಿಸ್ಟರ್, ಯಾರ್ರೀ ನೀವು? ಏನೋ ನಾವಿಬ್ಬರೂ ಬಹಳ ದಿನಗಳಿಂದ ಪರಿಚಿತರು ಅನ್ನೋ ರೀತಿ ಮಾತಾಡ್ತಿದ್ದಿರಲ್ಲಾ?" ಗದರಿಸಿ ಕೇಳಿದ್ದಳು. ಅವಳಿಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಬರದೇ ಇರುತ್ತದೆಯೇ? ಅಷ್ಟು ಆಸಕ್ತಿಯಲ್ಲಿ ಯಾರು ಕೊಲೆ ಮಾಡಿರಬಹುದು ಅನ್ನೋ ಕುತೂಹಲದಲ್ಲಿ ಓದುತ್ತಿದ್ದವಳಿಗೆ ಅರ್ಧ ಕಥೆಯನ್ನೇ ಹೇಳಿ ಓದಿನ ಸ್ವಾರಸ್ಯವನ್ನೇ ಕೆಡಿಸಿದ್ದ.

"ಹಲೋ, ನಾನು ಹೃಷಿಕೇಶ್ ವಿಹಾರಿ" ಎಂದು ಕೈ ಚಾಚಿದ್ದ. ಆದರೆ ಅವಳ ಸಿಟ್ಟು ಇಳಿದಿರಲಿಲ್ಲ. ಮುಖ ತಿರುಗಿಸಿದಳು.

"ಈಗ ನಾನು ಕಥೆ ಹೇಳಿ ನಿಮ್ಮ ಕುತೂಹಲನ ಮಣ್ಣುಪಾಲು ಮಾಡಿದ್ದಕ್ಕೆ ನಿಮಗೆ ಕೋಪ ಬಂದಿರೋದು ನ್ಯಾಯವೇ. ಆದರೆ ನನ್ನ ಸೇಫ್ಟಿಗೆ ಹಾಗೆ ಮಾಡಲೇ ಬೇಕಾಯ್ತು" ಎಂದಿದ್ದ.

"ನಿಮ್ಮ ಸೇಫ್ಟಿನಾ?" ಅಚ್ಚರಿಯಿಂದ ಕೇಳಿದ್ದಳು.

"ಮತ್ತೆ? ಈಗ ನೀವು ಅಷ್ಟು ಕುತೂಹಲದಲ್ಲಿ ಉಸಿರು ಬಿಗಿ ಹಿಡಿದು ಓದಿ, ಅವಳೇ ಎಲ್ಲಾ ಕೊಲೆ ಮಾಡಿದ್ದು ಅಂತ ಗೊತ್ತಾದಾಗ ಆ ಶಾಕಿಗೆ ನಿಮ್ಮ ಬಿಗಿಹಿಡಿದ ಉಸಿರು ನಿಂತು ಹೋದರೆ??? ಆಗ ಪೋಲೀಸ್ ಬಂದು ನನ್ನ ಅರೆಸ್ಟ್ ಮಾಡೋರು...... ನಾನೇ ತಾನೆ ನಿಮ್ಮ ಏಕೈಕ ಸಹ ಪ್ರಯಾಣಿಕ. ಅಕ್ಕ ಪಕ್ಕ ಎಲ್ಲಾ ಖಾಲಿ ಹೊಡೀತಿದೆ. ಮತ್ತೆ ನಾನು ಜೈಲಿಗೋದ್ರೆ ನಮ್ಮಪ್ಪ ಅಮ್ಮ ಎಲ್ಲಾ ಪಾಪ ಅಲ್ವಾ?" ಅವನ ಮಾತು ಕೇಳಿ ನಕ್ಕಳು ವಿದಿಶೆ.

"ಅಬ್ಬಾ, ಅಂತೂ ನಿಮ್ಮ ಸಿಟ್ಟು ಕಡಿಮೆ ಆಯ್ತಲ್ಲ. ಅದೆಷ್ಟು ಸಿಟ್ಟು ಮಾಡ್ಕೋತೀರಿ ನೀವು?"

"ನನಗೆ ಕೋಪ ಬರೋದು ಬಹಳ ಕಡಿಮೆ. ಅಷ್ಟು ಆಸಕ್ತಿಯಿಂದ ಓದೋವಾಗ ಡಿಸ್ಟರ್ಬ್ ಮಾಡಿದ ಅಪರಿಚಿತ ವ್ಯಕ್ತಿ ಮೇಲೆ ಯಾರಿಗಾದರೂ ಸಿಟ್ಟು ಬಂದೇ ಬರುತ್ತೆ"

"ಹೇ ಸ್ಟ್ರೇಂಜರ್... ನಾನು ಹೃಷಿಕೇಶ್ ವಿಹಾರಿ. ಆಗಲೇ ಒಮ್ಮೆ ಪರಿಚಯ ಮಾಡ್ಕೊಂಡೆ. ನೀವು....?"

"ಹಲೋ, ನಾನು ವಿದಿಶಾ ಅಗ್ನಿಹೋತ್ರಿ. ಹೌದು.... ನೀವು ಕರ್ನಾಟಕದವರಾ? ನಾನು ಕನ್ನಡದವಳು ಅಂತ ಹೇಗೆ ಗೊತ್ತಾಯ್ತು?" ಕೇಳಿದಳು.

"ಅಯ್ಯೋ, ನೀವು ಕನ್ನಡದವರು ಅಂತ ಗೊತ್ತಾಗಿಯೇ ಅಗೋ... ಅಲ್ಲಿ ಕೂತಿದ್ದವನು ಇಲ್ಲಿಗೆ ಬಂದಿದ್ದು. ನೀವು ಆಗ್ಲೇ ನಿಮ್ಮಮ್ಮನ ಹತ್ರ ಫೋನಲ್ಲಿ ಮಾತಾಡ್ತಿದ್ರಲ್ಲ....ಹಾಗೆ ಗೊತ್ತಾಯ್ತು. ನಾನು ಮುಂಬೈಯಲ್ಲೇ ಹುಟ್ಟಿ ಬೆಳೆದಿದ್ದು. ಆದ್ರೆ ಅಪ್ಪ ಅಮ್ಮ ಕರ್ನಾಟಕದವರು. ಮನೆಯಲ್ಲಿ ಕನ್ನಡನೇ ಮಾತಾಡೋದು. ಈಗ ಬೆಂಗಳೂರಿನ ಚಿಕ್ಕಪ್ಪನ ಮನೆಗೆ ಹೊರಟಿರೋದು ಅಜ್ಜಿ ತಾತನ್ನ ಮೀಟ್ ಮಾಡೋಕೆ.... ಒಬ್ಬನೇ ಕುಳಿತು ಬೇಸರವಾಗಿತ್ತು. ನನಿಗಂತೂ ಮಾತಾಡದೇ ಸುಮ್ಮನಿರಲು ಬರೋದಿಲ್ಲ. ಏನಪ್ಪಾ ಮಾಡ್ಲಿ ಅಂತ ಯೋಚಿಸ್ತಾ ಇದ್ದೆ. ನೀವು ಕನ್ನಡದಲ್ಲಿ ಮಾತಾಡಿದ್ದು ಕೇಳಿ ಖುಷಿಯಾಗಿ ಪರಿಚಯ ಮಾಡ್ಕೊಳ್ಳೋಣ ಅಂತ ಬಂದೆ. ಆದ್ರೆ ನೀವು ಪುಸ್ತಕದಿಂದ ಹೊರಬರೋ ಸೂಚನೆ ಕಾಣ್ಲಿಲ್ಲ. ಹಾಗಾಗಿ ನಿಮ್ಮನ್ನು ಎಚ್ಚರಿಸೋಕೆ ಈ ಪ್ಲಾನ್..." ನಕ್ಕು ನುಡಿದಿದ್ದ. 

"ಸೋ ನೀವೂ ಮುಂಬೈವಾಸಿಯಾ?" ಕೇಳಿದ್ದವನಿಗೆ ತನ್ನ ಹಾಗೂ ತನ್ನ ಕುಟುಂಬದವರ ಬಗ್ಗೆ ಏಕೆ ಹೇಳಿದಳೋ ವಿದಿಶಾಳಿಗೂ ತಿಳಿಯದು. ಆದರೆ ಅವನು, ಅವನ ಆತ್ಮೀಯತೆ ಅವನೊಂದಿಗೆ ಮಾತನಾಡಲು ಪ್ರೇರೇಪಿಸಿರಬಹುದೇನೋ.....

ಅವನೂ ತನ್ನ ಹಾಗೂ ತನ್ನ ಕುಟುಂಬದ ಬಗ್ಗೆ ಅವಳಲ್ಲಿ ಹೇಳಿದ್ದ. ಅನಂತ್ ವಿಹಾರಿ ಹಾಗೂ ನಿರ್ಮಲಾ ದಂಪತಿಗಳ ಒಬ್ಬನೇ ಮಗ ಹೃಷಿ. ಅವನ ತಂದೆ IFS ಅಧಿಕಾರಿ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಅವರ ನಿಯೋಜನೆ. ನಿರ್ಮಲಾ ಗೃಹಿಣಿ. ಅಪ್ಪ ಅಮ್ಮನಿಗೆ ಮಗನೂ ನಾಗರೀಕ ಸೇವೆಗಳ ಪರೀಕ್ಷೆ ಬರೆಯಲಿ ಎಂಬ ಆಸೆ. ಆದರೆ ಅದನ್ನೆಂದೂ ಒತ್ತಾಯವಾಗಿ ಅವನ ಮೇಲೆ ಹೇರಲಿಲ್ಲ ಅವರು. ಅವನೂ ಭಿನ್ನವಾದ ಹಾದಿಯನ್ನೇ ಆಯ್ದಕೊಂಡಿದ್ದ. ಫೋಟೋಗ್ರಫಿಯಲ್ಲಿನ ಆಸಕ್ತಿಯನ್ನೇ ಕಲಿಕೆಯನ್ನಾಗಿ ಬದಲಾಯಿಸಿಕೊಂಡಿದ್ದ. ವಿಶ್ವದ ಪ್ರತಿಷ್ಠಿತ ಫೋಟೋಗ್ರಾಫಿ ಕೇಂದ್ರಗಳಲ್ಲಿ ಒಂದಾದ ಮುಂಬೈನ "ಸರ್ ಜೆಜೆ ಸ್ಕೂಲ್ ಆಫ್ ಅಪ್ಲೈಡ್ ಆರ್ಟ್ಸ್" ನಲ್ಲಿ ಮೆರಿಟ್ ಸೀಟ್ ಗಿಟ್ಟಿಸಿಕೊಂಡು, ಫೋಟೋಗ್ರಫಿಯನ್ನು ವಿಶೇಷ ಪರಿಣಿತಿ ವಿಷಯವಾಗಿ ಆಯ್ದುಕೊಂಡು ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಡಿಗ್ರಿ ಪಡೆದಿದ್ದ. ಜೊತೆಗೆ ಸ್ವಿಟ್ಜರ್ಲ್ಯಾಂಡ್ ನ "ವಿವೇ ಸ್ಕೂಲ್ ಆಫ್ ಫೋಟೋಗ್ರಫಿ" ಯಲ್ಲಿ ಒಂದು ವರ್ಷದ ವಿಶೇಷ ತರಬೇತಿ ಪಡೆದಿದ್ದ. ಪ್ರತಿಷ್ಟಿತ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಫೆಲೋಶಿಪ್ ಪಡೆಯುವ ಕನಸು ಅವನದು. 'ವೈಲ್ಡ್ ಲೈಫ್' ವಿಭಾಗದಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಪಡೆದಿದ್ದರೂ, ಕ್ರಿಯೇಟಿವ್, ಫೈನ್ ಆರ್ಟ್ ಹಾಗೂ ಟ್ರಾವೆಲಿಂಗ್ ಫೋಟೋಗ್ರಫಿಯೆಡೆಗೆ ಜಾಸ್ತಿ ಒಲವು ಅವನಿಗೆ. ಯಾವಾಗಲೂ ಕ್ಯಾಮರಾ ಹೆಗಲಿನಲ್ಲಿಯೇ.

ಈಗಲೂ ಕ್ಯಾಮರಾ ಹೆಗಲಲ್ಲೇ ಇತ್ತು . 

ಹೀಗೆ ಆ ಪ್ರಯಾಣದಿಂದ ಆರಂಭವಾಗಿತ್ತು ಈ ಕಥೆ...... ತಾನು ತೆಗೆದ ಫೋಟೋಗಳನ್ನೆಲ್ಲಾ ಅವಳಿಗೆ ತೋರಿಸಿದ್ದ. ಅವಳಿಗೆ ತನ್ನ ಪೆನ್ ಮತ್ತು ಬುಕ್ ಕೊಟ್ಟು ತನ್ನ ಆಲ್ ಟೈಂ ಫೇವರಿಟ್ ಟಾಮ್ ಎಂಡ್ ಜೆರ್ರೀ ಕಾರ್ಟೂನ್ ಗಳನ್ನು ಬರೆಸಿಕೊಂಡಿದ್ದ. ಅವಳು ಬರೆದುಕೊಟ್ಟ ಖುಷಿಗೆ ಅವಳದೊಂದಷ್ಟು ಫೋಟೋಗಳನ್ನು ತೆಗೆದು ಮುಂಬೈಗೆ ವಾಪಾಸಾದ ಮೇಲೆ ಅಚ್ಚು ಹಾಕಿಸಿ ಕೊಡುವೆನೆಂದಿದ್ದ. ಮೊಬೈಲ್ ಸಂಖ್ಯೆಗಳು ಹಾಗೂ ಮನೆಯ ವಿಳಾಸಗಳು ವಿನಿಮಯಗೊಂಡವು.

ರೈಲು ಯಾನದಿಂದ ಪರಿಚಿತರಾದವರು ನಂತರದ ದಿನಗಳಲ್ಲಿ ಆತ್ಮೀಯರಾದರು. ಜಂಗಮವಾಣಿಯ ಕರೆಗಳು ದೂರವನ್ನು ಸಮೀಪಗೊಳಿಸಿತು. ವಿದಿಶಾಳಿಗೆ ಅವನ ನೇರ ಮಾತು, ಕಪಟವಿಲ್ಲದ ನಿಷ್ಕಳಂಕ ಮನಸ್ಸು ಹಿಡಿಸಿದರೆ ಅವನಿಗೆ ಅವಳ ಪ್ರತಿಭೆ, ಬರಿಗೈಯಲ್ಲಿ ಬಂದು ಮುಂಬೈಯಂತಹ ನಗರದಲ್ಲಿ ಸ್ವಂತ ಉದ್ಯಮವೊಂದನ್ನು ಸ್ಥಾಪಿಸಿ, ನಿರ್ವಹಿಸುತ್ತಿರುವ ಅವಳ ಸ್ಥೈರ್ಯ ಒಂದು ಅದ್ಬುತ. ಎಲ್ಲಕ್ಕಿಂತ ಇಬ್ಬರೂ ಫೈನ್ ಆರ್ಟ್ಸ್ ಓದಿದ ಸೃಜನಶೀಲ ಚಿಂತಕರು. ಮಾತನಾಡಲು ಸಾವಿರ ವಿಷಯಗಳಿದ್ದವು ಇಬ್ಬರಲ್ಲಿ. ಅವಳ ಕಂಪನಿಗೆ ಅವನು ಭೇಟಿ ನೀಡುತ್ತಿದ್ದ. ಅವನ ಎಕ್ಸಿಬಿಷನ್ನುಗಳಿಗೆ ಅವಳ ಹಾಜರಿ ಇರುತ್ತಿತ್ತು. ಒಟ್ಟಿನಲ್ಲಿ ರೈಲಿನಲ್ಲಿನ ಅಪರಿಚಿತರು ನೋಡುನೋಡುತ್ತಲೇ ಪರಮಾಪ್ತ ಸ್ನೇಹಿತರಾದರು.

ವಿದಿಶೆ ಅವನನ್ನು ತನ್ನ ತಾಯ್ತಂದೆಯರಿಗೆ ಪರಿಚಯಿಸಿದ್ದಳು. ಬೆಂಗಳೂರಿಗೆ ಬಂದಾಗಲೆಲ್ಲಾ ಅಗ್ನಿಹೋತ್ರಿಯವರ ಮನೆಗೂ ತಪ್ಪದೇ ಹಾಜರಾಗುತ್ತಿದ್ದ ಹೃಷಿ. ಹಾಗೆಯೇ ಅವನ ಅಪ್ಪ ಅಮ್ಮನಿಗೂ ವಿದಿಶೆ ಚಿರಪರಿಚಿತೆಯಾಗಿದ್ದಳು. ನಿರ್ಮಲಾರಿಗಂತೂ ಅಚ್ಚುಮೆಚ್ಚು ವಿದಿಶೆ....

ಈ ಒಡನಾಟ ನಿಧಾನವಾಗಿ ವಿದಿಶೆಯೊಳಗೊಂದು ಪುಳಕವನ್ನು ಸೃಷ್ಟಿಸತೊಡಗಿತ್ತು. ಹೃಷಿಯೆಡೆಗಿನ ಅವಳ ಭಾವನೆಗಳು ನಿಚ್ಚಳವಾದ ರೂಪ ಪಡೆಯತೊಡಗಿತ್ತು. ಅವಳ ಮೇಲಿನ ಅವನ ಮೆಚ್ಚುಗೆ, ಆತ್ಮೀಯತೆ, ಕಾಳಜಿ, ಸ್ನೇಹ ಸಹಜ ಸಲುಗೆ, ಪುಟ್ಟ ಆಲಿಂಗನ ಎಲ್ಲಕ್ಕೂ ಅವಳ ಮನ ಪ್ರೀತಿಯ ಹೆಸರಿಟ್ಟಿತು. ಅವಳ ಮನಸ್ಸನ್ನು ಅವನೇ ಆವರಿಸಿಕೊಂಡಿದ್ದ. ಅವನ ಕಣ್ಣುಗಳಲ್ಲಿ, ಮನದಲ್ಲಿ ಅವಳೆಡೆಗೆ ಒಸರುವ ಭಾವನೆಗಳಿಗೆಲ್ಲ ಒಲವೆಂದು ಹೆಸರಿಟ್ಟು, ಪ್ರೀತಿಸಿ ಸಂಭ್ರಮಿಸತೊಡಗಿದ್ದಳು ವಿದಿಶೆ....

ಅವನ್ನಲ್ಲಿ ಅದನ್ನೆಲ್ಲಾ ಹೇಳಿಕೊಳ್ಳಬೇಕೆಂಬ ಆಸೆ, ತುಡಿತ... ಆದರೆ ಅರಿಯದ ಸಂಕೋಚವೊಂದು ನಾಚಿಕೆಯ ರೂಪತಾಳಿ ಅವಳನ್ನು ಬಾಧಿಸುತ್ತಿತ್ತು...... 

ಅವಳ ತುಡಿತಗಳ ಅರಿವು ಹೃಷಿಗೆ ಆಗಲೇ ಇಲ್ಲ. ಆದರೆ ಶಾಲ್ಮಲಾರಿಗೆ ಮಗಳ ಆಂತರ್ಯ ಅರಿವಾಗತೊಡಗಿತ್ತು. ಒಮ್ಮೆ ನೇರವಾಗಿಯೇ ಕೇಳಿದ್ದರು ವಿದಿಶೆಯನ್ನು. ಅವಳಿಗೆ ಹೆತ್ತವರೊಂದಿಗೆ ಮುಚ್ಚಿಡುವ ಅಗತ್ಯವಿರಲಿಲ್ಲ. ತಾನವನನ್ನು ಇಷ್ಟಪಡುತ್ತಿರುವೆನೆಂದು ಒಪ್ಪಿಕೊಂಡಿದ್ದಳು. ಚಿದಂಬರ್ ಹಾಗೂ ಶಾಲ್ಮಲಾರಿಗೂ ಸಂತೋಷವೇ. ಹೃಷಿಯನ್ನು ಹತ್ತಿರದಿಂದ ನೋಡಿ ಬಲ್ಲವರು. ಒಳ್ಳೆಯ ಹುಡುಗ, ಉತ್ತಮ ಮನೆತನದವನು, ತಮಗೂ ಮಗನಂತೆ ಹೊಂದಿಕೊಂಡಿರುವ, ಇರುವ ಒಬ್ಬಳೇ ಮಗಳ ಭವಿಷ್ಯ ಅವನ ಕೈಯಲ್ಲಿ ಭದ್ರವೆನಿಸಿತ್ತು. ಮುಂಬೈಗೆ ತೆರಳಿ ಅವನ ಮನೆಯವರೊಂದಿಗೆ ಮಾತನಾಡಿ ಮದುವೆಯ ವಿಷಯ ಪ್ರಸ್ತಾಪಿಸೋಣ ಎಂದ ಹೆತ್ತವರನ್ನು ಅವಳೇ ತಡೆದಿದ್ದಳು.

"ಈಗ್ಲೇ ಬೇಡ ಅಮ್ಮಾ. ನಾನು ಹೃಷಿನ ತುಂಬಾ ಪ್ರೀತಿಸ್ತೀನಿ. ಆದರೆ ಅವನ ಹತ್ತಿರ ಅದನ್ನು ಎಂದೂ ಹೇಳಿಕೊಂಡಿಲ್ಲ. ಅವನೂ ನನ್ನ ಇಷ್ಟ ಪಡುತ್ತಾನೆ ಅನ್ನಿಸುತ್ತೆ. ಆದ್ರೂ ಅವನ ಹತ್ತಿರ ಮಾತಾಡದೇ ನಾವೇ ನಿರ್ಧರಿಸೋದು ತಪ್ಪಾಗುತ್ತೆ. ಮೊದಲು ನಾನು ಅವನ ಬಳಿ ಮಾತನಾಡಿ ಆಮೇಲೆ ಮುಂದಿನ ಯೋಚನೆ ಮಾಡುವ" ಯೋಚಿಸಿ ನುಡಿದಿದ್ದಳು. ಮಗಳ ಮಾತು ಹೆತ್ತವರಿಗೂ ಸರಿ ಎನಿಸಿತ್ತು.

ಆದರೆ ಆ ಸಂದರ್ಭ ಒದಗಿ ಬರಲೇ ಇಲ್ಲ. ಈ ಮಾತುಕತೆಯಾಗಿ ವಾರಗಳ ನಂತರ ಅನಂತ್ ಹಾಗೂ ನಿರ್ಮಲಾರೇ ವಿದಿಶೆಯ ಮನೆಗೆ ವಿವಾಹ ಪ್ರಸ್ತಾಪದೊಂದಿಗೆ ಬಂದಿದ್ದರು. ಮಗಳ ಮನದಿಂಗಿತ ಅರಿತಿದ್ದ ಅಗ್ನಿಹೋತ್ರಿ ದಂಪತಿಗಳಿಗೆ ಈ ಪ್ರಸ್ತಾಪ ನಿರಾಕರಿಸಲು ಯಾವ ಕಾರಣಗಳೂ ಇರಲಿಲ್ಲ. 

"ಮಕ್ಕಳು ಒಪ್ಪಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದಿದ್ದರವರು. ನಿರ್ಮಲಾರ ಸಂತಸಕ್ಕೆ ಪಾರವೇ ಇರಲಿಲ್ಲ. 

ಬೆಂಗಳೂರಿನಲ್ಲಿದ್ದ ಮೈದುನನ ಮನೆಯಲ್ಲಿ ಎರಡು ದಿನ ಉಳಿದವರು ಪಂಡಿತರನ್ನು ಕರೆಸಿ ಜಾತಕ ತೋರಿಸಿ, ನಿಶ್ಚಿತಾರ್ಥಕ್ಕೆ ಮುಂದಿನ ತಿಂಗಳಿನಲ್ಲಿ ಹಾಗೂ ಮದುವೆಗೆ ಮೂರು ತಿಂಗಳುಗಳ ನಂತರದ ಮುಹೂರ್ತವನ್ನು ನಿಗದಿಪಡಿಸಿಯೇ ಬಿಟ್ಟರು ನಿರ್ಮಲಾ. 

ಆದರೆ ಹೃಷಿಯೇ ಇರಲಿಲ್ಲ...... 

ವರ್ಕ್ ಶಾಪ್ ಒಂದರಲ್ಲಿ ಭಾಗವಹಿಸಲು ಬರ್ಲಿನ್ ನಗರಕ್ಕೆ ತೆರಳಿದ್ದ. ಅವನ ಅನುಪಸ್ಥಿತಿಯಲ್ಲಿ ಮದುವೆಯಂತಹ ಪ್ರಮುಖ ನಿರ್ಧಾರ ಸರಿಯೆನಿಸಲಿಲ್ಲ ವಿದಿಶಾಳಿಗೆ. ನಿರ್ಮಲಾರ ಆತುರಾತುರದ ನಿರ್ಧಾರಗಳು ಅವಳನ್ನು ಅಚ್ಚರಿಗೆ ದೂಡಿದವು. ಜೀವನ ಪೂರ್ತಿ ಜೊತೆಗೆ ಹೆಜ್ಜೆ ಹಾಕಬೇಕಾದವರು ನಾವು. ತಾನೆಂದೂ ನೇರವಾಗಿ ಅವನಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿಲ್ಲ. ಮದುವೆಯ ನಿರ್ಧಾರಕ್ಕೆ ಮುನ್ನ ಅವನೊಂದಿಗೆ ಒಮ್ಮೆ ಮಾತನಾಡಬೇಕಿತ್ತು ಎಂದು ಬಲವಾಗಿ ಅನಿಸಿತವಳಿಗೆ. 

"ಹೃಷಿಕೇಶ್ ಬರುವವರೆಗೂ ಕಾದರಾಗದೇ? ಮದುವೆ ದಿನ ನಿಗದಿಪಡಿಸುವಾಗ ಹುಡುಗನೇ ಇಲ್ಲದಿದ್ದರೆ ಹೇಗೆ?" ಶಾಲ್ಮಲಾ ಹೇಳಿದ್ದರು. ವಿದಿಶೆಯೂ ತಾಯಿಯೊಂದಿಗೆ ದನಿಗೂಡಿಸಿ, "ಹೌದು ಆಂಟಿ, ಅವನು ವಾಪಾಸಾದ ನಂತರ ಮದುವೆಗೆ ದಿನ ನಿಶ್ಚಯಿಸಿ. ಅಷ್ಟರಲ್ಲಿ ನಾನೂ ಒಮ್ಮೆ ಅವನೊಂದಿಗೆ ಈ ವಿವಾಹದ ಬಗ್ಗೆ ಮಾತನಾಡುವೆ" ಎಂದು ನಿರ್ಮಲಾರ ಬಳಿ ಹೇಳಿದ್ದಳು.

ಆದರೆ ನಿರ್ಮಲಾರಿಗೆ ಅಷ್ಟು ಕಾಯುವ ವ್ಯವಧಾನವಿರಲಿಲ್ಲ. ಆಕೆಗೆ ಮಗ ವಿದೇಶದಿಂದ ವಾಪಾಸಾಗುವುದರೊಳಗೆ ಎಲ್ಲಾ ನಿಷ್ಕರ್ಷೆಯಾಗಬೇಕಿತ್ತು. "ಅವನಿಗೂ ನೀನೆಂದರೆ ಇಷ್ಟವೇ ವಿದಿ. ಸದಾ ನಿನ್ನದೇ ವಿಷಯ ಅವನ ಬಾಯಲ್ಲಿ. ನಿನ್ನನ್ನೇ ಧ್ಯಾನಿಸುವ ಸದಾ ಕಾಲ. ಅವನಿಗೆ ಕೇಳದೇ ಇಲ್ಲಿಯತನಕ ಬರುವೆನೇ ನಾನು? ಅವನು ನಿನ್ನ ಒಪ್ಪಿರುವುದರಿಂದಲೇ ನಾವು ಅವನ ಪರವಾಗಿ ಇಲ್ಲಿಗೆ ಬಂದಿರುವುದು....." ಎಂದಿದ್ದರು ಪತಿಯೆಡೆಗೆ ನೋಡುತ್ತಾ. ಅನಂತ್ ಬೇರೆಡೆ ನೋಟ ಹೊರಳಿಸಿದ್ದರು. ಅವರ ಮುಖದಲ್ಲೊಂದು ವೇದನೆಯ‌ ಗೆರೆ ಸ್ಪಷ್ಟವಾಗಿತ್ತು. ಆದರೆ ನಿರ್ಮಲಾರ ಹೊರತು ಇನ್ಯಾರೂ ಅದನ್ನು ಗಮನಿಸಲಿಲ್ಲ.

ಮುಂಗಾರಿನ ಮೊದಲ ವರ್ಷಧಾರೆಗೆ ಗರಿಬಿಚ್ಚಿ ನರ್ತಿಸುವ ನವಿಲಂತಾಗಿತ್ತು ವಿದಿಶಾಳ ಮನ. ಹೃದಯದ ಬಡಿತ ವೇಗ ಪಡೆದಿತ್ತು. ಪ್ರೇಮ ಸಾಫಲ್ಯವಾಗಿ, ಅದಕ್ಕೆ ಮನೆಯವರ ಒಪ್ಪಿಗೆಯ ಮುದ್ರೆ ಬಿದ್ದು, ವಿವಾಹ ನಿಗದಿಯಾದರೆ ಆ ಪ್ರೇಮಿಗೆ ಸ್ವರ್ಗವೇ ಸಿಕ್ಕಂತೆ ಅಲ್ಲವೇ? ಅವಳ ಸಂತಸ, ಸಂಭ್ರಮ ಮೊಗದ ಕಾಂತಿಯಲ್ಲಿ ಸ್ಪುರಿಸುತ್ತಿತ್ತು. ಮದುವೆ ದಿನ ನಿಶ್ಚಯಿಸಿದ ಸಂಭ್ರಮದಲ್ಲಿ ಅಲ್ಲಿಯೇ ಸಿಹಿಯೂಟ ಮುಗಿಸಿ ತಮ್ಮ ಮನೆಯೆಡೆಗೆ ಹೊರಟರು ಅಗ್ನಿಹೋತ್ರಿಗಳು. 

ಅತ್ತ ವಿದಿಶೆ ಬಣ್ಣ ಬಣ್ಣದ ಸಿಹಿ ಕನಸುಗಳನ್ನು ಕಟ್ಟುವುದರಲ್ಲಿ ನಿರತಳಾಗಿದ್ದರೆ ಇತ್ತ ಮುಂಬೈಗೆ ವಾಪಾಸಾದ ಅನಂತ್ ಮಡದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿದಿಶೆಯ ಪ್ರೇಮಪೂರಿತ ನಯನಗಳು ಅವರನ್ನು ಜರ್ಜರಿತಗೊಳಿಸಿತ್ತು. ಆದರೆ ನಿರ್ಮಲಾ ತಾವು ಮಾಡಿದ್ದೇ ಸರಿ ಎಂದು ವಾದಿಸಿದ್ದರು.

"ನಿರ್ಮಲಾ, ಮನ್ಮಯಿ ಒಳ್ಳೆಯ ಹುಡುಗಿ. ನೀನೇಕೆ ಅವಳ ಬಗ್ಗೆ ಇಷ್ಟು ಮುನಿದಿರುವೆ? ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ವಿಧಿಸುವ, ಪೂರ್ವಾಗ್ರಹ ಪೀಡಿತ ಯೋಚನೆ ಏಕೆ? ನೀನು ಹೃಷಿಯೊಂದಿಗೆ ವಿದಿಶಾಳ ಬದುಕನ್ನೂ ಹಾಳುಗೆಡವಲು ಹೊರಟಿರುವೆ. ಆ ಹುಡುಗಿಯ ತಪ್ಪಾದರೂ ಏನು? " ಗದ್ಗದಿತರಾಗಿ ಕೇಳಿದ್ದರು ಅನಂತ್.

"ಅನಂತ್, ಮನ್ಮಯಿ ಬಗ್ಗೆ ಮಾತನಾಡಲು ನನಗಿಷ್ಟವಿಲ್ಲ. ಇನ್ನು ವಿದಿಶಾ, ಹೃಷಿಯ ಬಗ್ಗೆ...... ಈಗ ನಿಮಗೆ ಹಾಗನ್ನಿಸಬಹುದು ಅನಂತ್, ಆದರೆ ಇದೆಲ್ಲ ಸ್ವಲ್ಪ ಸಮಯವಷ್ಟೇ. ವಿದಿಶಾ ಒಳ್ಳೆಯ ಹುಡುಗಿ. ಮೇಲಾಗಿ ಹೃಷಿಯ ಆಪ್ತ ಸ್ನೇಹಿತೆ. ಅವಳಿಗೆ ನೋವು ಕೊಡಲಾರ ಅವನು. ನೀವು ನೋಡುತ್ತಿರಿ. ಎಷ್ಟು ಚೆನ್ನಾಗಿ ಹೊಂದಿಕೊಂಡು ಬಾಳುತ್ತಾರೆ ಇಬ್ಬರೂ ಅಂತ. ಇನ್ನು ಈ ಬಗ್ಗೆ ಯಾವುದೇ ಮಾತುಗಳು ಬೇಡ" ಕಟ್ಟುನಿಟ್ಟಾಗಿ ಹೇಳಿ ಎದ್ದು ಹೋಗಿದ್ದರು ನಿರ್ಮಲಾ.

"ಈಗ ನಿನಗೇನೂ ಅರ್ಥವಾಗದು. ಮುಂದೊಂದು ದಿನ ನಿನ್ನೀ ನಿರ್ಧಾರಕ್ಕೆ ಬಹಳ ಪಶ್ಚಾತ್ತಾಪ ಪಡುವ ಸಂದರ್ಭ ಬರುತ್ತದೆ. ಆದರೆ ಆಗ ಯಾರ ಬದುಕು ಎಷ್ಟು ಹಾಳಾಗಿರುವುದೋ ದೇವರೇ ಬಲ್ಲ" ಹೆಂಡತಿ ಹೋದ ದಾರಿಯನ್ನೇ ನೋಡುತ್ತಾ ಮನದಲ್ಲೇ ಅಂದುಕೊಂಡಿದ್ದರು ಅನಂತ್.

*********************

ಎಲ್ಲವೂ ನಿರ್ಮಲಾರ ಎಣಿಕೆಯಂತೆಯೇ ನಡೆದಿತ್ತು. ಹೃಷಿಯ ಮಡದಿಯಾಗಿ ಸೇರಕ್ಕಿ ಚೆಲ್ಲಿ ಬಲಗಾಲಿಟ್ಟು ಅಗಣಿತ ಕನಸುಗಳೊಂದಿಗೆ ಅವನ ಮನೆಯನ್ನು ಪ್ರವೇಶಿಸಿದ್ದಳು ವಿದಿಶೆ. ದೇವರಿಗೆ ದೀಪ ಬೆಳಗಿ ಮಗನೊಂದಿಗೆ ತಮ್ಮ ಕಾಲಿಗೆರಗಿದವಳನ್ನು ಕಂಡು ಅನಂತ್ ಕಣ್ತುಂಬಿತ್ತು. ಅವಳ ಮುಖದ ನಗು ಸದಾಕಾಲ ಹಾಗೆ ಉಳಿಯಲಿ ಎಂದು ಹಾರೈಸಿತು ಅವರ ಮನ. ನಿರ್ಮಲಾ ಖುಷಿಯಿಂದ ಅವಳನ್ನು ಆಲಂಗಿಸಿಕೊಂಡಾಗ ಅವನು ಮಾತಿಲ್ಲದೇ ಸರಿದು ಹೋಗಿದ್ದ. ಪಿಚ್ಚೆನಿಸಿತು ವಿದಿಶೆಗೆ. 

"ಮದುವೆಯ ಓಡಾಟದಲ್ಲಿ ಸುಸ್ತಾಗಿದ್ದಾನೆ" ಸಮಜಾಯಿಷಿ ನೀಡಿದರು ಆಕೆ. ಸಣ್ಣಗೆ ನಕ್ಕಳು ವಿದಿಶೆ. ಆದರೆ ಮನದ ಮೂಲೆಯಲ್ಲಿ ಎಲ್ಲೋ ಅಪಸ್ವರದ ತಂತುವೊಂದು ಮಿಡಿಯತೊಡಗಿತ್ತು. ಈ ವಿವಾಹ ನಿಗದಿಯಾದಲ್ಲಿಂದ ಹೃಷಿ ಬದಲಾಗಿದ್ದು ಅವಳ ಗಮನಕ್ಕೆ ಬಂದಿತ್ತು. ಈ ಮೂರು ತಿಂಗಳಲ್ಲಿ ಅವನು ಅವಳನ್ನು ಭೇಟಿಯಾಗಿರಲಿಲ್ಲ. ಸಂದೇಶಗಳಿಗೂ ಸರಿಯಾದ ಪ್ರತಿಕ್ರಿಯೆ ಇರಲಿಲ್ಲ. ಕರೆ ಮಾಡಿದರೆ ಅದೂ ಇದೂ ಮಾತನಾಡಿ, ಕೆಲಸದಲ್ಲಿರುವೆನೆಂದು ಹೇಳಿ ಫೋನಿಡುತ್ತಿದ್ದ. ಅವನ ಚಟುವಟಿಕೆಗಳ ಬಗ್ಗೆ ಅರಿವಿದ್ದ ಅವಳೂ ಅನ್ಯಥಾ ಭಾವಿಸಲಿಲ್ಲ. ಆದರೆ ಮದುವೆಯ ಶಾಸ್ತ್ರಗಳಲ್ಲೂ ಅವನು ಮನಸ್ಪೂರ್ವಕವಾಗಿ ಭಾಗವಹಿಸದಾದಾಗ ಗೊಂದಲಕ್ಕೆ ಬಿದ್ದಿದ್ದಳು ವಿದಿಶೆ. ಅವಳೊಂದಿಗೂ ಮುಖ ಕೊಟ್ಟು ಮಾತನಾಡಲು ಹಿಂತೆಗೆಯುತ್ತಿದ್ದ ಪರಿ ಸೋಜಿಗ ಹುಟ್ಟಿಸಿತ್ತು. ಈಗ ಅವನ ನಡವಳಿಕೆ ಮತ್ತಷ್ಟು ಸಂಶಯಾಸ್ಪದ.

ನಿರ್ಮಲಾ ಅವಳನ್ನು ಹೃಷಿಯ ಕೋಣೆಗೆ ಕರೆದೊಯ್ದು, ಫ್ರೆಶ್ ಆಗಿ ಊಟಕ್ಕೆ ಕೆಳ ಬರಲು ತಿಳಿಸಿ ಹೋದರು. ಅವನ ಸುಳಿವಿರಲಿಲ್ಲ. ತನ್ನಿನಿಯನ ಕೋಣೆಯನ್ನೇ ಅವಲೋಕಿಸಿದಳು. ಅವನ ಅಭಿರುಚಿಗೆ ತಕ್ಕಂತೆ ಸುಂದರವಾಗಿತ್ತು. ಆಳೆತ್ತರದ ರಾಧಾಕೃಷ್ಣರ ಸುಂದರ ಮೂರ್ತಿ ಮನಸೆಳೆಯಿತು. ಅವಳಿಗಿಷ್ಟ ರಾಧಾಕೃಷ್ಣರ ದೈವಿಕ ಪ್ರೇಮ... ಅವಳ ಹಾಗೂ ಹೃಷಿಯ ಪ್ರೇಮವೂ ಹಾಗೆಯೇ.....!! ನಸುನಗು ಮೂಡಿತು ಮೊಗದಲ್ಲಿ.....

ಗೋಡೆಯ ತುಂಬಾ ಅವನೇ ತೆಗೆದ ಫೋಟೋಗಳು.... ಚಂದವಾಗಿ ವಿನ್ಯಾಸಗೊಳಿಸಿ ಜೋಡಿಸಿದ್ದ. ಅದರ ಮಧ್ಯದಲ್ಲಿ ತನ್ನದೇ ಭಾವಚಿತ್ರ ಕಂಡಾಗ ಮನ ಹೂವಾಯಿತು. ತಮ್ಮ ಮೊದಲನೇ ಭೇಟಿಯಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ಸಿನಲ್ಲಿ ತೆಗೆದ ಫೋಟೋ....ಅದರ ಸುತ್ತ ಅವಳೇ ಬರೆದು ಕೊಟ್ಟಿದ್ದ ಟಾಮ್ ಎಂಡ್ ಜೆರ್ರೀ ಕಾರ್ಟೂನ್.... ಅವಳ ಗೊಂದಲ, ಬೇಸರ ಎಲ್ಲಾ ಹೇಳಹೆಸರಿಲ್ಲದಂತೆ ಓಡಿತ್ತು.

"ವಿದಿ, ಊಟಕ್ಕೆ ಬಾರಮ್ಮಾ...." ಅತ್ತೆಯ ಕೂಗು ಕೇಳಿ ತನ್ನ ಸಂತಸದ ಲಹರಿಯನ್ನು ಅಲ್ಲೇ ನಿಲ್ಲಿಸಿ ಬೇಗಬೇಗನೆ ಬಟ್ಟೆ ಬದಲಿಸಿ, ಫ್ರೆಶ್ ಆಗಿ ಕೆಳಗೋಡಿದ್ದಳು. ಇಬ್ಬರನ್ನೂ ಒಟ್ಟಿಗೆ ಕೂರಿಸಿ ಬಡಿಸಿದ್ದರು. ಆಗಲೂ ಮಾತನಾಡಲಿಲ್ಲ ಅವನು. ಊಟವಾದ ಮೇಲೆ ಅಡುಗೆಮನೆಯಲ್ಲಿ ಒಂದಿಷ್ಟು ಹರಟಿದಳು ಅತ್ತೆಯೊಂದಿಗೆ. ಅಪ್ಪ ಅಮ್ಮನಿಗೆ ಕರೆ ಮಾಡಿ ಮಾತನಾಡಿದಳು.

ಅವಳ ಕೈಯಲ್ಲಿ ಹಾಲಿನ ಲೋಟ ಕೊಟ್ಟು ಕೋಣೆಗೆ ಕಳಿಸುವ ಮುನ್ನ, "ವಿದಿ ಪುಟ್ಟಾ, ಅವನು ಮದುವೆ, ಓಡಾಟ ಅಂತ ಸುಮಾರು ದಿನದಿಂದ ಸುಸ್ತಾಗಿದ್ದಾನೆ. ಸರಿ ಊಟ, ತಿಂಡಿ, ನಿದ್ರೆ ಬೇರೆ ಇಲ್ಲ. ಆ ಸಿಟ್ಟಲ್ಲಿ ಏನಾದರೂ ಹೇಳಿದರೆ ಬೇಸರಿಸಬೇಡ ಮಗಳೇ" ಎಂದಿದ್ದರು ನಿರ್ಮಲಾ. ಸರಿಯೆಂದು ತಲೆಯಾಡಿಸಿ ಕೋಣೆಗೆ ಬಂದಿದ್ದಳು. 

ರಾಧಾಕೃಷ್ಣ ವಿಗ್ರಹವನ್ನೇ ತದೇಕಚಿತ್ತನಾಗಿ ನೋಡುತ್ತಿದ್ದವನು ವಿದಿಶಾಳ ಆಗಮನದ ಅರಿವಾಗಿ ತಿರುಗಿದ್ದ. ಕೈಯಲ್ಲಿದ್ದ ಹಾಲನ್ನು ಅವನೆಡೆಗೆ ಚಾಚಿ ನಸುನಕ್ಕಳು.

"ನನಗೆ ಬೇಡ ವಿದಿ, ನೀನು ಕುಡಿ.ತುಂಬಾ ಸುಸ್ತಾಗಿದೆ. ನಾನು ಮಲಗ್ತೀನಿ" ಎಂದವ ಅವಳ ಪ್ರತಿಕ್ರಿಯೆಗೂ ಕಾಯದೇ ಪಕ್ಕದ ಸ್ಟಡೀ ರೂಮಿಗೆ ಹೋಗಿ ಬಾಗಿಲೆಳೆದು ಕೊಂಡಿದ್ದ. ಹಾಲಿನ ಗ್ಲಾಸ್ ಕೈಯಲ್ಲಿಯೇ ಇತ್ತು ಅಣಕಿಸುವಂತೆ. ಅವಳಿಗೂ ಕುಡಿಯುವ ಮನಸ್ಸಾಗಲಿಲ್ಲ. ಅಲ್ಲೇ ಟೇಬಲ್ಲಿನ ಮೇಲೆ ಮುಚ್ಚಿಟ್ಟು ಮಲಗಿದಳು. ಸುಸ್ತಾಗಿದ್ದ ದೇಹ, ಮನಸ್ಸನ್ನು ನಿದ್ರೆ ಬೇಗನೆ ಅಪ್ಪಿತು.

ಸೂರ್ಯನ ಕಿರಣಗಳು ಅವಳನ್ನು ಸವರಿದಾಗ ಎಚ್ಚರವಾಗಿತ್ತು. ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಸೀರೆಯುಟ್ಟು ತಯಾರಾಗಿ ಪಕ್ಕದ ರೂಮಿನಲ್ಲಿ ಇಣುಕಿದ್ದಳು. ಹೃಷಿ ಇರಲಿಲ್ಲ. ಕೆಳಗೆ ಹೋಗಿರಬಹುದೇನೋ ಎಂದುಕೊಂಡಳು. ಲೋಟದಲ್ಲಿದ್ದ ಹಾಲು ಒಡೆದಿತ್ತು. ಮನಸ್ಸುಗಳು ಒಡೆಯುವ ಸೂಚನೆಯಾಗಿತ್ತಾ.....? ಅದನ್ನು ವಾಷ್ ಬೇಸಿನ್ನಿಗೆ ಚೆಲ್ಲಿ ಖಾಲಿ ಲೋಟ ಹಿಡಿದು ಕೆಳಬಂದಿದ್ದಳು.

ಅಡುಗೆ ಕೋಣೆಯಲ್ಲಿದ್ದ ಅತ್ತೆಯ ಜೊತೆ ಸೇರಿದ್ದಳು ಉಪಹಾರದ ತಯಾರಿಗೆ. ತಿಂಡಿ ಮುಗಿದು ಊಟವಾಗಿ ಸಂಜೆಯ ಟೀ ಸಮಯ ಸರಿದು, ರಾತ್ರಿಯ ಊಟಕ್ಕೂ ನಲ್ಲನ ಸುಳಿವಿಲ್ಲ. ಬೇಸರವೆನಿಸಿತು ಅವಳಿಗೆ. ಕೆಲಸದ ಮೇಲೆ ಹೋಗಿರುವನೆಂದರು ಅತ್ತೆ. ಆದರೆ ಮಾವನ ಮುಖದಲ್ಲೇನೋ ನೋವು ಪ್ರತಿಫಲಿಸಿತ್ತು.

ರೂಮಿಗೆ ಬಂದು ನೆಪಕ್ಕೊಂದು ಪುಸ್ತಕ ಹಿಡಿದು ಕಾ‌ದು ಕುಳಿತಳು. ಅವಳಿಗೆ ನಿದ್ರೆಯ ಜೊಂಪು ಹತ್ತುವವರೆಗೂ ಅವನು ಬಂದಿರಲಿಲ್ಲ. ಬೆಳಿಗ್ಗೆ ಎಚ್ಚರವಾದಾಗ ಗಕ್ಕನೆ ಎದ್ದು ಪಕ್ಕದ ಕೋಣೆಯಲ್ಲಿ ನೋಡಿದಳು... 

ಊಹೂಂ...... ಇಲ್ಲ......

ಮತ್ತೆ ಅಂದೂ ಅದೇ ಪುನರಾವರ್ತನೆ...... ವಾರಪೂರ್ತಿ ಹೀಗೆ ಕಳೆಯುವುದರಲ್ಲಿ ಸೋತು ಹೋದಳು ವಿದಿಶೆ. ಇಡೀ ವಾರದಲ್ಲಿ ಅಪರೂಪಕ್ಕೆ ನಾಲ್ಕು ಬಾರಿ ಸಿಕ್ಕಿದ್ದ. ಒಂದು ನಗುವಿಲ್ಲ, ಮಾತಿಲ್ಲ, ಕಥೆಯಿಲ್ಲ... ಕಲ್ಲನ್ನೂ ಮಾತನಾಡಿಸಬಲ್ಲ ಮಹಾ ಮಾತುಗಾರ ಮೌನ ತಳೆದಿದ್ದ... ಇನ್ನೂ ಸುಮ್ಮನಿರಲು ಸಾಧ್ಯವಿಲ್ಲವೆನಿಸಿತು ವಿದಿಶೆಗೆ....

ಅಂದು ಪಟ್ಟು ಹಿಡಿದು ಕಾಯ್ದು ಕೂತಿದ್ದಳು. ಅವನು ಕೋಣೆಗೆ ಬಂದಾಗ ಮುಂಜಾನೆ ಎರಡರ ಜಾವ... ಹಾಸಿಗೆಗೊರಗಿ ಕುಳಿತ್ತಿದ್ದವಳನ್ನು ಕಂಡು ಬೆಚ್ಚಿದ್ದ. ಅವನು ಬಾಯ್ತೆರೆಯುವ ಮುನ್ನವೇ ಬಳಿಬಂದು ಅವನ ಕೈ ಹಿಡಿದವಳು,

"ನನ್ನಿಂದ ಏನಾದ್ರೂ ತಪ್ಪಾಗಿದೆಯಾ ರಿಷಿ? ಒಂದು ವಾರದಿಂದ ನಿನ್ನ ವರ್ತನೆ ನಂಗೆ ಹುಚ್ಚು ಹಿಡಿಸ್ತಿದೆ. ಕೊನೆ ಪಕ್ಷ ಯಾಕೆ ಹೀಗೆ ಮಾಡ್ತಿದ್ಯಾ ಅಂತಾದ್ರೂ ಹೇಳೋ..." ಆರ್ತಳಾಗಿ ಕೇಳಿದವಳ ಕಣ್ಣಲ್ಲಿ ನೀರಿತ್ತು. ಅವನ ಮನ ದ್ರವಿಸಿತ್ತು. ತನ್ನ ಜೀವದ ಗೆಳತಿ, ಪರಮಾಪ್ತ ಸ್ನೇಹಿತೆ ತನ್ನಿಂದಾಗಿ ಕಣ್ಣೀರು ಸುರಿಸುವುದು ಕಂಡು ಚಲಿಸಿ ಹೋಗಿದ್ದ. ಅಲ್ಲೇ ಸೋಫಾದ ಮೇಲೆ ದೊಪ್ಪನೆ ಕುಸಿದವನು, " ನೀನು ನನ್ನ ಮದುವೆಯಾಗೋಕೆ‌ ಒಪ್ಪಿಕೋಬಾರದಿತ್ತು ವಿದಿ.... ಅಟ್ಲೀಸ್ಟ್ ಅದಕ್ಕೆ ಮುಂಚೆ‌ 'ನಿಂಗೆ ಈ ಮದುವೆ ಇಷ್ಟಾನಾ ಹೃಷಿ' ಅಂತ ನನ್ನನ್ನು ಒಂದು ಮಾತು ಕೇಳಬೇಕು ಅನ್ನಿಸಲೇ ಇಲ್ವಾ ನಿನಗೆ" ಎಂದುಬಿಟ್ಟ.

ವಿದಿಶೆ ನಿಸ್ತೇಜಳಾದಳು. ಅವನಿಂದ ಇಂತಹ ಮಾತನ್ನು ನಿರೀಕ್ಷಿಸಿರಲಿಲ್ಲ ಆಕೆ. ತಲೆ ತಿರುಗಿದಂತೆ ಅನಿಸಿದಾಗ ಕಷ್ಟಪಟ್ಟು ಗೋಡೆಗೆ ಒರಗಿದವಳು ಅಲ್ಲೇ ಕುಸಿದಳು. ನೆಲ ಸೇರುವ ಮುನ್ನವೇ ಹಿಡಿದುಕೊಂಡ. ನಿಧಾನಕ್ಕೆ ನಡೆಸಿಕೊಂಡು ಬಂದು ಮಂಚಕ್ಕೆ ಒರಗಿಸಿ ಅವಳೆದುರು ಕುಳಿತಿದ್ದ.

"ಹೃಷಿ..... ನಾನು...... ನಾನೆಂದರೆ..... ನಿನಗಿಷ್ಟ ಇಲ್ಲವೇ?" ಹೃದಯ ಕೈಯಲ್ಲಿ ಹಿಡಿದು ಕೇಳಿದ್ದಳು. ಅವನು ಉತ್ತರಿಸದಾದ....

'ನಿನ್ನೊಳು ಅನುರಾಗವಿಲ್ಲ' ಎನ್ನುವ ಮಾತೊಂದ ನುಡಿಯಬೇಡವೋ ನಲ್ಲ......

ನಿನ್ನ ಧ್ಯಾನದೊಳು ಲೀನವಾಗುವ ಪರವಶತೆಯ ಹೊರತು ಬೇರೇನೂ ನನಗೆ ಸಲ್ಲ......

ಈ ನಿನ್ನ ಕಾಷ್ಠ ಮೌನದ ಇರಿತ ಕೊಲ್ಲುತಿಹುದೆನ್ನನು.....

ಹಿಡಿಪ್ರೀತಿ ಬಯಸಿರುವೆ ಉಸಿರೇ...ನೀಡಿ ಉಳಿಸೆನ್ನನು.....

"ಮದುವೆ ನಿಶ್ಚಯ ಮಾಡಲು ಅತ್ತೆ ಗಡಿಬಿಡಿ ಮಾಡಿದಾಗಲೇ ನಾನು ಹೇಳಿದ್ದೆ. 'ಹೃಷಿ ಬರುವವರೆಗೆ ಕಾಯೋಣ, ನಾನೊಮ್ಮೆ ಅವನ ಬಳಿ ಮಾತನಾಡುವೆ' ಎಂದು. ಆದರೆ ಅವರು ನೀನೇ ಒಪ್ಪಿ ಅವರನ್ನು ಕಳಿಸಿರುವೆ ಎಂದರು. ನೀನೀಗ ಹೀಗೆ ಹೇಳುತ್ತಿರುವೆ. ಯಾವುದು ಸತ್ಯ ಹೇಳಿಬಿಡೋ ಹೃಷಿ.... ನನ್ನ ಕರೆಗಳಿಗೆ, ಸಂದೇಶಗಳಿಗೂ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ ನೀನು. ಇಷ್ಟು ದಿನದ ಮೌನ ಸಾಕಾಗಿದೆ.... ಈಗ ನನ್ನೆದುರು ಕುಳಿತಿರುವವನು ನನ್ನ ಹೃಷಿಯೇ ಹೌದಾ? ಅನ್ನುವ ಅನುಮಾನ.... ತುಂಬಾ ಭಯವಾಗುತ್ತಿದೆ ಕಣೋ.... ಪ್ಲೀಸ್ ಮಾತಾಡು, ಏನಾದ್ರೂ ಹೇಳೋ..." ಗೋಗರೆದಳು.

"ಈ ಮದುವೆ ಖಂಡಿತಾ ನನಗಿಷ್ಟವಿರಲಿಲ್ಲ ವಿದಿ......!!"

ಅಂತೂ ಅವನು ಮೌನ ಮುರಿದಿದ್ದ ಅವಳಿಚ್ಛೆಯಂತೆ.......

ಆದರೆ ಅವನಾಡಿದ ಮಾತು......? 

ಅದಕ್ಕಿಂತಲೂ ಅವನ ಮೌನವೇ ಸಹನೀಯವಿತ್ತಲ್ಲವೇ ವಿದಿಶೆಗೆ?

ತುಸು ಮೌನದ ನಂತರ, ಅವಳ ಕಾಲ ಬುಡದಲ್ಲಿ ಕುಳಿತು ಕೈಗಳನ್ನು ಹಿಡಿದುಕೊಂಡವನು ಮಾತು ಮುಂದುವರೆಸಿದ್ದ.

"ನೀನು ನನ್ನ ಜೀವದ ಗೆಳತಿ, ಬದುಕು ನೀಡಿದ ವರ, ನನ್ನ ಬೆಸ್ಟ್ ಫ್ರೆಂಡ್ ನೀನು. ಆದರೆ ನನ್ನ ಬಾಳಸಂಗಾತಿಯನ್ನಾಗಿ ಮಾತ್ರ ನಿನ್ನನ್ನು ಸ್ವೀಕರಿಸಲಾರೆ ವಿದಿ....... ನನ್ನ ಹೃದಯ ಮಂದಿರದಲ್ಲಾಗಲೇ ಇನ್ನೊಬ್ಬಳನ್ನು ಪ್ರತಿಷ್ಟಾಪಿಸಿಬಿಟ್ಟಿರುವೆ. ನನ್ನುಸಿರು ನಿಲ್ಲುವವರೆಗೂ ಅವಳ ಪ್ರತಿಮೆ ಅಲ್ಲಿಂದ ಕದಲದು. ಸಾಧ್ಯವಾದಲ್ಲಿ ನನ್ನನ್ನು ಕ್ಷಮಿಸಿಬಿಡು ಗೆಳತೀ....." ಅವಳ ಕೈಗಳನ್ನು ಕಣ್ಣಿಗೊತ್ತಿ ನುಡಿದಿದ್ದ.

ಅವಳೇನು ಹೇಳಿಯಾಳು? ಕನಸು ಒಡೆದಿತ್ತು....... ನುಚ್ಚುನೂರಾಗಿದ್ದ ಹೃದಯದ ಚೂರುಗಳು ಒಂದೆಡೆ ರಾಶಿ ಹಾಕಲಾರದಷ್ಟು ದೂರದೂರ ಹರಡಿದ್ದವು......

'ತಪ್ಪು ನಿನ್ನದೇ.....!!' ಮನ ಸಾರಿ ಸಾರಿ ಹೇಳಿತು.

'ಹೌದು, ತಪ್ಪು ನನ್ನದೇ. ಅವನೆಂದೂ ನನ್ನ ಪ್ರೀತಿಸುವೆನೆಂದು ಹೇಳಲಿಲ್ಲ. ಅವನ ಶುದ್ಧ ಸ್ನೇಹವನ್ನು ಪ್ರೇಮವೆಂದು ಭ್ರಮಿಸಿದವಳು ನಾನೇ ಅಲ್ಲವೇ..... ನನ್ನ ಪ್ರೇಮವನ್ನು ಅವನ ಬಳಿ ಹೇಳಲೂ ಇಲ್ಲ. ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ....ಆದರೂ ಅತ್ತೆಯೇಕೆ ಹೀಗೆ ಮಾಡಿದರು?' ಜರ್ಜರಿತ ಮನಸ್ಸು ಮನ ಮಂಥನದಲ್ಲಿ ತೊಡಗಿತು. 

ಅವಳ ಪ್ರಶ್ನೆಗಳಿಗೆಲ್ಲ ಉತ್ತರವೆಂಬಂತೆ ಮಾತನಾಡಿದ್ದ ಹೃಷಿ.....,

ತನ್ನ ಪ್ರೇಮ ಕಥೆಯನ್ನು ಹೇಳಿದ್ದ......

ಆ ಕಥೆಯಲ್ಲಿ ವಿದಿಶೆಯಿರಲಿಲ್ಲ.......!!!! 

ಅಲ್ಲಿದ್ದವಳು ಮನ್ಮಯಿ........

ಮನ್ಮಯಿ...

ಆ ಹೆಸರು ಕೇಳಿದ್ದೇ ತಲೆ ಎತ್ತಿದಳು ವಿದಿಶೆ.....

ಅವಳು ಮನ್ಮಯಿಯ ಹೆಸರನ್ನು ಅವನ ಬಾಯಲ್ಲಿ ಬಹಳಷ್ಟು ಬಾರಿ ಕೇಳಿದ್ದಳು. ವಿದಿಶೆಯ ಬಳಿ ಮಾತನಾಡುವಾಗ ಆಗಾಗ ಮನ್ಮಯಿಯ ವಿಷಯ ಬಂದುಹೋಗುತ್ತಿತ್ತು. ಅವಳು ಅವನ ಸ್ನೇಹಿತೆ ಎಂದೇ ಭಾವಿಸಿದ್ದಳು. ಆ ಬಗ್ಗೆ ಎಂದೂ ಹೆಚ್ಚು ಗಮನ ಹರಿಸಿರಲಿಲ್ಲ.

ಈಗ..... 

ಅದೇ ಮನ್ಮಯಿ......

ಮನ್ಮಯಿ........ ಹೃಷಿಕೇಶನ ಮನದರಸಿ, ಒಲವಿನೊಡತಿ, ಪ್ರೀತಿ, ಜಗತ್ತು.... ಎಲ್ಲವೂ ಅವಳೇ...... ಅವರಿಬ್ಬರದ್ದು ಆರು ವರ್ಷಗಳ ಪರಿಚಯ. 

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವಳು. ಕುಡಿತ, ಜಗಳ, ಹೊಡೆದಾಟಗಳನ್ನೇ ಬದುಕಾಗಿಸಿಕೊಂಡಿದ್ದ ಅವಳಪ್ಪ ತನ್ನ ಹೆಂಡತಿಯನ್ನೇ ಕೊಲೆಗೈದು ಜೀವಾವಧಿ ಶಿಕ್ಷೆಯೊಂದಿಗೆ ಜೈಲಿನಲ್ಲಿ ಆರಾಮಾಗಿದ್ದ. ಆದರೆ ನಿಜ ಅರ್ಥದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು ಮನ್ಮಯಿ. ಕೊಲೆಗಾರನ ಮಗಳೆಂಬ ಪಟ್ಟ ಹೊತ್ತು, ಒಂಟಿ ಹೆಣ್ಣು ಈ 'ಸಜ್ಜನರ ಸಮಾಜ'ದಲ್ಲಿ ಬದುಕುವುದು ಸುಲಭವೇ? ಮೊದಲು ಹೊಟ್ಟೆ ಹೊರೆಯಲೊಂದು ಉದ್ಯೋಗ ಬೇಕಿತ್ತು. ಉದ್ಯೋಗ ಕೊಡಲೇನೋ ಹಲವರು ನಾ ಮುಂದು ತಾ ಮುಂದು ಎಂದು ಬರುವರು. ಆದರೆ ಅವರ ಉದ್ದೇಶಗಳು ಹಸಿದ ಕಣ್ಣುಗಳ ಕಾಮನೆಯಲ್ಲಿ ಸ್ಪಷ್ಟ.... ಅಂತಹವರಿಂದ ತಪ್ಪಿಸಿಕೊಂಡು ಒಂದು ಸುರಕ್ಷಿತ ತಾಣದ ನಿರೀಕ್ಷೆಯಲ್ಲಿದ್ದವಳಿಗೆ ದೇವರು ದಾರಿ ತೋರಿದ್ದ. ತಾಯಿ ಕಲಿಸಿದ್ದ ಚೂರುಪಾರು ಸಂಗೀತ ಕೈ ಹಿಡಿದಿತ್ತು. 'ಮಾಝೀ಼ ಆಯೀ' ಎಂಬ ಅನಾಥ ಮಕ್ಕಳ ಆಶ್ರಮದಲ್ಲಿ ಮಕ್ಕಳಿಗೆ ಸಂಗೀತ ಪಾಠ ಹೇಳುವ ಕೆಲಸ ಮನಕ್ಕೂ ತೃಪ್ತಿ ನೀಡಿತ್ತು. ಇವಳ ಹಿನ್ನೆಲೆ ತಿಳಿದವರು ಅಲ್ಲೇ ಉಳಿದುಕೊಳ್ಳಲೂ ವ್ಯವಸ್ಥೆ ಮಾಡಿಕೊಟ್ಟು ಉಪಕರಿಸಿದ್ದರು. 

ಆ ಅನಾಥಾಶ್ರಮದ ಹದಿನೈದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರದ ವತಿಯಿಂದ ನಾಲ್ಕು ದಿನಗಳ ಛಾಯಾಗ್ರಹಣದ ತರಬೇತಿ ಶಿಬಿರ ಏರ್ಪಡಿಸಿದ್ದಾಗ ತರಬೇತುದಾರರಾಗಿ ಹೋಗಿದ್ದವರಲ್ಲಿ ಹೃಷಿಯೂ ಇದ್ದ. ಅಲ್ಲಿಂದಲೇ ಮನ್ಮಯಿಯ ಪರಿಚಯವಾಗಿದ್ದು ಅವನಿಗೆ. ಆ ಪರಿಚಯವನ್ನು ಅವಳು ಕೇವಲ ಪರಿಚಯವನ್ನಾಗಿಯೇ ಉಳಿಸಲು ಬಯಸಿದ್ದಳು. ಸಮಾಜದ ಅರಿವಿದ್ದ ಪ್ರಾಜ್ಞೆ. ಜಗತ್ತಿನ ಕಠೋರ ನೀತಿ ನಿಯಮಗಳ ಅರಿವಿತ್ತು ಅವಳಿಗೆ.

ಆದರೆ ಪ್ರೀತಿಗೆ ಇದ್ಯಾವುದರ ಹಂಗಿದೆ? ಮೊದಲ ಪರಿಚಯದಲ್ಲೇ ಅವನ ಮನದಾಳಕ್ಕೆ ಲಗ್ಗೆ ಹಾಕಿದ್ದಳಾಕೆ. ಅವನದು ಮೊದಲ ನೋಟದ ಪ್ರೀತಿಯಾದರೂ ಅವಳ ಬಗ್ಗೆ ತಿಳಿಯುತ್ತಾ ಹೋದಂತೆಲ್ಲಾ ಅವಳಲ್ಲಿ ಅನುರಕ್ತನಾಗಿದ್ದ ಹೃಷಿ. ಅವಳ ಗಾಂಭೀರ್ಯ, ತಿಳುವಳಿಕೆ, ಹಿಡಿತ ತಪ್ಪದ ನಡವಳಿಕೆ ಎಲ್ಲವೂ ಅತಿಯಾಗಿ ಪ್ರಭಾವಿಸಿದ್ದವು ಅವನನ್ನು. ಮನ್ಮಯಿ ಅವನನ್ನು ದೂರ ತಳ್ಳಲು ಶತ ಪ್ರಯತ್ನಿಸಿ ಕಡೆಗೂ ಅವನ ಪ್ರೇಮಕ್ಕೆ ತಲೆಬಾಗಲೇ ಬೇಕಾಯಿತು. ಹೀಗೆ ಏಕಮುಖ ಪ್ರೇಮ ದ್ವಿಮುಖ ಪ್ರೇಮವಾಗಿ ಬದಲಾಗಿತ್ತು. ಮನ್ಮಯಿಯನ್ನು ತಾಯ್ತುಂದೆಯರಿಗೂ ಪರಿಚಯಿಸಿದ್ದ ಸ್ನೇಹಿತೆಯೆಂದು. ಅವರೂ ಆದರಿಸಿದ್ದರು ಸಂತಸದಲ್ಲೇ. ಎಲ್ಲವೂ ಸರಿಯಾಗಿತ್ತು.

ಬದುಕಿನ ಹಳಿ ತಪ್ಪಲಾರಂಭಿಸಿದ್ದು ಆರು ತಿಂಗಳ ಹಿಂದೆ ನಿರ್ಮಲಾ ಮಗನ ಮದುವೆ ಮಾತೆತ್ತಿದಾಗ... ಅಪ್ಪ ಅಮ್ಮನಿಗೆ ನೇರವಾಗಿ ಮನ್ಮಯಿಯನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿದ್ದ. ಮನ್ಮಯಿಯ ಹಿನ್ನೆಲೆ ಕೇಳಿ ನಿರ್ಮಲಾ ಕೆಂಡಾಮಂಡಲವಾಗಿದ್ದರು. ಅಪ್ಪ ಮಗ ಅವರಿಗೆ ತಿಳಿ ಹೇಳಲು ಪ್ರಯತ್ನಿಸಿ ಸೋತಿದ್ದೊಂದೇ ಲಾಭ. ಕ್ರಿಮಿನಲ್ ಒಬ್ಬನ ಮಗಳು ಈ ಮನೆಯ ಸೊಸೆಯಾಗುವುದು ಸುತಾರಾಂ ಇಷ್ಟವಿಲ್ಲ ಅವರಿಗೆ. ಹೃಷಿ ತನ್ನ ಹಠ ಬಿಡಲು ತಯಾರಿರಲಿಲ್ಲ. ಮದುವೆಯಾದರೆ ಅವಳನ್ನೇ ಎಂದು ಪಟ್ಟು ಹಿಡಿದ. ಇದರ ಪರಿಣಾಮವಾಗಿದ್ದು ಮಾತ್ರ ಮನ್ಮಯಿಯ ಮೇಲೆ. ಅವಳನ್ನು ಭೇಟಿಯಾಗಿ ವಾಚಾಮಗೋಚರವಾಗಿ ಬೈದು ಇನ್ನೆಂದೂ ತನ್ನ ಮಗನ ಹಿಂದೆ ಮುಂದೆ ಸುತ್ತ ಬೇಡವೆಂದು ಕಟ್ಟಪ್ಪಣೆ ಮಾಡಿಬಿಟ್ಟರು ನಿರ್ಮಲಾ. ಅವಳೋ ಮೊದಲೇ ಸೂಕ್ಷ್ಮ ಮನಸ್ಸಿನವಳು..... ಅವರ ಮಾತಿನಲ್ಲೂ ಹುರುಳಿದೆ ಎನಿಸಿತ್ತು ಅವಳಿಗೆ. 

"ಇನ್ನೆಂದೂ ನನ್ನ ಭೇಟಿಯಾಗಬೇಡ. ಹಾಗೇನಾದರೂ ಹಿಂದೆ ಬಂದರೆ ನಾನು ಈ ಕೆಲಸ, ಊರು ಎರಡೂ ಬಿಡಬೇಕಾಗುತ್ತದೆ ಹೃಷಿ. ಇದೊಂದು ಮಾತು ನಡೆಸಿಕೊಡು" ಎಂದುಬಿಟ್ಟಳು. ಪ್ರೀತಿಯಂತೂ ಕೈಗೂಡಲಿಲ್ಲ ಕನಿಷ್ಠ ಪ್ರೀತಿಸಿದವಳಾದರೂ ಕಣ್ಮುಂದೆ ಇರಲೀ ಎಂದು ಅವಳ ಮಾತಿಗೆ ಒಪ್ಪಿದ್ದ. ಅದೇ ಬೇಸರಕ್ಕೆ ದೇಶಬಿಟ್ಟು ಜರ್ಮನಿಗೆ ಹೋಗಿ ಕುಳಿತ್ತಿದ್ದ. ಹೀಗೆ ಬಿಟ್ಟರೆ ಮಗ ಕೈ ತಪ್ಪುವನೆಂದು ಅರಿತಿದ್ದ ನಿರ್ಮಲಾರಿಗೆ ಮಗನ ಮದುವೆ ಮಾಡಿಬಿಟ್ಟರೆ ಕಾಲಾಂತರದಲ್ಲಿ ಎಲ್ಲವೂ ಸರಿಹೋಗುವುದು ಎನಿಸಿತ್ತು. ಮಗನಿಗೆ ವಿದಿಶೆಯಷ್ಟು ತಕ್ಕ ಜೋಡಿ ಬೇರ್ಯಾರೂ ಇಲ್ಲ ಎಂಬುದು ಅವರ ಅಭಿಮತ. ಕೂಡಲೇ ಕಾರ್ತಗತರಾಗಿದ್ದರು. ವಿದಿಶಾಳ ಮನೆಯವರ ಬಳಿ ಮಾತನಾಡಿ ಅವರ ಒಪ್ಪಿಗೆ ಸಿಕ್ಕ ಕೂಡಲೇ ಅಲ್ಲೇ ನಿಂತು ಎಲ್ಲವನ್ನೂ ನಿಗದಿಗೊಳಿಸಿದ್ದರು. ಅದಕ್ಕಾಗಿಯೇ 'ಹೃಷಿ ಬಂದ ಮೇಲೆ ನಿರ್ಧರಿಸುವ' ಎಂಬ ವಿದಿಶಾಳ ಮಾತುಗಳಿಗೆ ಪುರಸ್ಕಾರ ಸಿಗಲಿಲ್ಲ.

ಹೃಷಿ ಜರ್ಮನಿಯಿಂದ ಹಿಂದಿರುಗುವುದರೊಳಗೆ ಪರಿಸ್ಥಿತಿ ಅವನ ಊಹೆಗೂ ನಿಲುಕದಷ್ಟು ಕೈ ಮೀರಿತ್ತು. ತಾಯಿಯ ಬಳಿ ಜಗಳವಾಡಿದ. ಆದರೆ ಆಕೆ ಊಟ, ನೀರು ಬಿಟ್ಟು ಆಸ್ಪತ್ರೆ ಸೇರಿ ಮಗನನ್ನು ಒಪ್ಪಿಸುವಲ್ಲಿ ಸಫಲರಾದರು. ಹೀಗೆ ನಡೆದಿತ್ತು ಅವಳ ಮದುವೆ.

ಹೃಷಿಯ ಮಾತುಗಳು ಮುಗಿದಿದ್ದವು. ಸತ್ಯ ಕಣ್ಣೆದುರಿಗಿತ್ತು. ಅವಳಿಗೆ ಮಾತನಾಡಲು ಏನೂ ಉಳಿದಿರಲಿಲ್ಲ. ಮುಂದಿನ ಬಾಳ ಹಾದಿ ಕಗ್ಗತ್ತಲಲ್ಲಿ ಅಗೋಚರ..... ಅಳಬೇಕೆನಿಸಿತು.. ಆದರೆ ಕಣ್ಣೀರಿಗೂ ಕೋಪವೇನೋ ಅವಳ ಮೇಲೆ.... ಬಹುಶಃ ಅದಕ್ಕೂ ಅವಳು ಪ್ರೀತಿ ಕಸಿದ ಖಳನಾಯಕಿ ಎನಿಸಿರಬೇಕು.... ಜೋರಾಗಿ ನಕ್ಕಳು... ಆಗ ಉದುರಿದ್ದವು ಮುತ್ತಿನಂತಹ ಕಣ್ಣ ಹನಿಗಳು....

"ಕ್ಷಮಿಸು ವಿದಿ, ಗೆಳತಿಯಂತೆ ಆದರಿಸಬಲ್ಲೆ. ಅಂದಿಗೂ, ಇಂದಿಗೂ, ಇನ್ನೆಂದಿಗೂ ಆ ಸ್ಥಾನ ನಿನ್ನದೇ.... ನಿನ್ನೊಂದಿಗೆ ಮಾತು ಬಿಟ್ಟು ಮುನಿಸಿಕೊಳ್ಳಲಾರೆ.... ಮುಂಚಿನಂತೆಯೇ ಇರುವೆ ನಿನ್ನೊಂದಿಗೆ.... ಆದರೆ......."

"ಆದರೆ ಹೆಂಡತಿಯ ಹುದ್ದೆಯೊಂದನ್ನು ಬಯಸಬೇಡ. ಪತಿಯ ಪ್ರೀತಿಯನ್ನು ನಿರೀಕ್ಷಿಸಬೇಡ......." ಅವಳೇ ಮಾತನ್ನು ಪೂರ್ಣಗೊಳಿಸಿದ್ದಳು. ಉಸಿರೆಳೆದುಕೊಂಡು ಅವಳ ತಲೆದಡವಿ ಪಕ್ಕದ ಕೋಣೆಗೆ ಹೋಗಿಬಿಟ್ಟಿದ್ದ.

ಎದುರಿಗಿದ್ದ ರಾಧಾಕೃಷ್ಣರ ವಿಗ್ರಹ ಅಣಕಿಸಿದಂತಾಯಿತು. ಬೆಳಕು ಹರಿದು ಅವನೆದ್ದು ಬರುವವರೆಗೂ ಅದನ್ನೆ ದಿಟ್ಟಿಸುತ್ತಾ ಹಾಗೇ ಕುಳಿತ್ತಿದ್ದಳು ಕಲ್ಲಾದ ಅಹಲ್ಯೆಯಂತೆ...

ಅವನದೂ ಅದೇ ಸ್ಥಿತಿ..... ಇಡೀ ರಾತ್ರಿ ಬಿಟ್ಟ ಕಂಗಳಿಂದ ತಾರಸಿ ದಿಟ್ಟಿಸುವುದು.... ಅಲ್ಲೆಲ್ಲೋ ತುಸು ಮೈಲುಗಳ ದೂರದಲ್ಲಿ ಇನ್ನೊಬ್ಬಳಿಹಳು.... ಹಾಗೇ ಕುಳಿತು ರಾತ್ರಿ ಬೆಳಗು ಮಾಡುವವಳು.... ತಪ್ಪು ಯಾರದೋ.... ಶಿಕ್ಷೆ ಮಾತ್ರ ಮೂವರ ಪಾಲಾಗಿತ್ತು.

ವಿದಿಶೆಯ ಬದಲಾದ ನಡವಳಿಕೆ, ಚೈತನ್ಯ ಕಳೆದುಕೊಂಡ ಚಟುವಟಿಕೆಗಳು ನಿರ್ಮಲಾರಿಗೆ ಸತ್ಯ ದರ್ಶನ ಮಾಡಿಸಿತ್ತು. ಕೊನೆಗೆ ಆಫೀಸಿನ ಕೆಲಸಗಳನ್ನು ಮನವಿಟ್ಟು ಮಾಡಲಾಗದಾಗ ನಿಡುಸುಯ್ದಳು ವಿದಿಶೆ. ತಾನು ಕಂಪನಿಯನ್ನೂ ಬೆಂಗಳೂರಿಗೆ ಶಿಫ್ಟ್ ಮಾಡಿ ಅಪ್ಪ ಅಮ್ಮನ ಬಳಿ ಹೋಗುವೆನೆಂದಿದ್ದಳು. ತುಸು ಸಮಯ ನೀಡಿದರೆ ಎಲ್ಲವೂ ಸರಿಯಾಗುವುದೆಂದು ಸಮಾಧಾನಿಸಿ ಉಳಿಸಿಕೊಂಡರು ನಿರ್ಮಲಾ. ಮಗನನ್ನು ಬೈದು, ಬೇಡಿ, ಗೋಗರೆದು ಎಲ್ಲವೂ ಆಯಿತು. ಫಲಿತಾಂಶ ಶೂನ್ಯ. ತಾಯಿಯೊಂದಿಗೆ ಮಾತನ್ನೇ ನಿಲ್ಲಿಸಿದ್ದ. 

ಅತ್ತೆ ಹೇಳಿದಂತೆ ಸಮಯ ನೀಡಿದರೆ ತನ್ನನ್ನು ಸ್ವೀಕರಿಸುವನೆಂದು ಆಸೆಯಿಂದ ಕಾದಳು ವಿದಿಶೆ. ಒಂದೆರೆಡು ದಿನವಲ್ಲ..... ಸುದೀರ್ಘ ಎರಡು ಸಂವತ್ಸರಗಳು.... 730 ದಿನಗಳೆಂದರೆ ಸಾಮಾನ್ಯವಲ್ಲ... ಅದೂ ನಿದಿರೆ ರಹಿತ ರಾತ್ರಿಗಳೊಂದಿಗೆ, ಅನುಮತಿ ಬಯಸದೆ ಕಣ್ಣಿಂದ ಜಾರುವ ಹನಿಗಳೊಂದಿಗೆ.....

ಅವನೇನು ವಿದಿಶೆಯನ್ನು ನಿರ್ಲಕ್ಷಿಸುತ್ತಿರಲಿಲ್ಲ. ಹಿಂದಿನಂತೆಯೇ ಮಾತನಾಡುತ್ತಿದ್ದ, ಹೊರಗೆ ಕರೆದೊಯ್ಯುತ್ತಿದ್ದ, ಅದೇ ಸ್ನೇಹಿತನ ಆದರ ತೋರುತ್ತಿದ್ದ.... ಎಲ್ಲವೂ ಸರಿಯೇ.... ಆದರೆ ಅದರಲ್ಲಿ ಯಾಂತ್ರಿಕತೆ ಇತ್ತೇ ಹೊರತು ಜೀವಂತಿಕೆ ಇರಲಿಲ್ಲ. ಅವನು ಅತ್ಯದ್ಭುತವಾಗಿ ನಟಿಸತೊಡಗಿದ್ದ. ಅವಳಿಗದು ತಿಳಿಯುತ್ತಿತ್ತು.... ಅವನು ಪ್ರೀತಿಸದಿದ್ದರೂ ಅವಳು ಪ್ರೀತಿಸಿದಳಲ್ಲವೇ ಉಸಿರಿಗಿಂತ ಮಿಗಿಲಾಗಿ...... ಅವನ ನಟನೆಯ ಬದುಕು ತಿಳಿಯಲಾರಳೇ......? ಅವನ ಮನಸ್ಸು ಮನ್ಮಯಿಯಲ್ಲೇ ಇತ್ತು. ಅದೆಂದೂ ತನ್ನ ಬಳಿ ಸೇರದೆಂಬ ಸತ್ಯವೂ ನಿಚ್ಚಳವಾಗತೊಡಗಿತ್ತು....

ಈ ದಿನಗಳಲ್ಲಿಯೇ ರಾಧಾಪ್ರಿಯೆ ವಿದಿಶೆಗೆ ಮೊದಲಬಾರಿಗೆ ರುಕ್ಮಿಣಿಯ ಅಂತರಾಳ ವಿಶದವಾಗತೊಡಗಿತ್ತು. ಕೃಷ್ಣನೊಂದಿಗೆ ಭೌತಿಕವಾಗಿ ಇದ್ದೂ ಅವನ ಒಲವನ್ನು ಪಡೆಯಲಾರದೇ ಹೋದಳು ರುಕ್ಮಿಣಿ.....

ಅದೇ ರಾಧೆ ಕೃಷ್ಣನಿಂದ ದೂರವಿದ್ದೂ ಅವನೊಲವಿಗೆ ಅರಸಿಯಾದಳು..... ಲೋಕಕ್ಕೆ ರಾಧಾಕೃಷ್ಣರ ಪ್ರೇಮವೇ ಮಾದರಿ, ದೈವಿಕ ಪ್ರೀತಿ ... ಜನ್ಮಾಷ್ಟಮಿಯ ಸಡಗರದಲ್ಲಿ ರಾಧೆ ಕೃಷ್ಣರಂತೆ ವೇಷ ಧರಿಸಿ ನಲಿಯುವರು....... ಆದರೆ ರುಕ್ಮಿಣಿ ಎಲ್ಲಿಹಳು? ಬಹುಶಃ ಅವಳಲ್ಲೂ ನನ್ನಂತೆ ಸಾವಿರ ಪ್ರಶ್ನೆಗಳಿರಬಹುದು....ಏನಾದಳು ರುಕ್ಮಿಣಿ?

ಸಾವಿರ ಸಾವಿರ ಪ್ರಶ್ನೆಗಳು ಮನವನ್ನು ಘಾಸಿಗೊಳಿಸಿದರು ಹೃಷಿಕೇಶನದ್ದು ಅದೇ ಸಹಜ ಜೀವಂತ ನಟನೆ...

ನೋಡಿ ಸಾಕಾದಳು ವಿದಿಶಾ. ಎಲ್ಲರ ಬದುಕೂ ಹಳಿಗೆ ಬರಲಂತೂ ಸಾಧ್ಯವಿರಲಿಲ್ಲ. ಆದರೆ ಜೀವನಪರ್ಯಂತ ರಂಗದ ಮೇಲಿನ ನಾಟಕದಂತಹ ಬದುಕು ಬೇಡವಾಗಿತ್ತು ಅವಳಿಗೆ. ದೃಢ ನಿರ್ಧಾರವನ್ನು ಕೈಗೊಂಡಿದ್ದಳು. ಅದರ ಸಲುವಾಗಿಯೇ ಬೆಂಗಳೂರಿಗೆ ಬಂದಿದ್ದಳು. ಬಂದಿದ್ದ ಕೆಲಸ ಪೂರ್ಣಗೊಳಿಸಿ ಈ ನಾಟಕಕ್ಕೆ ತೆರೆಯೆಳೆಯಲು ಮುಂಬೈಗೆ ಹೊರಟಿದ್ದಳು‌. ರೈಲು ಮುಂಬೈ ನಗರವನ್ನು ಪ್ರವೇಶಿಸಿತ್ತು. ಪಾತ್ರವನ್ನು ಕಳಚುವ ಸಮಯ ಹತ್ತಿರದಲ್ಲಿತ್ತು.... 

*****************

ಹೃಷಿಕೇಶ್ ಮನೆಗೆ ಬಂದಾಗ ಮಧ್ಯರಾತ್ರಿ ಕಳೆದಿತ್ತು. ಅವನು ಆದಷ್ಟು ಮನೆಯಿಂದ ದೂರವಿರಲು ಬಯಸುತ್ತಿದ್ದ. ವಿದಿಶಾಳ ಎದುರು ಎಷ್ಟೇ ನಟಿಸಿದರೂ ಮನಸ್ಸು ಜೀವಂತಿಕೆಯನ್ನು ಕಳೆದುಕೊಂಡು ವರ್ಷಗಳೇ ಕಳೆದಿತ್ತು. ಮನ್ಮಯೀ ಇಲ್ಲದ ಬದುಕಿಗೆ ಅಸ್ತಿತ್ವವಿರಲಿಲ್ಲ. ಅದಕ್ಕೂ ಹೆಚ್ಚಾಗಿ ಅವಳೂ ಅವನಿಂದ ದೂರಾಗಿ ನೀರಿನಿಂದ ಹೊರಬಿದ್ದ ಮೀನಿನಂತೆ ನರಳುತ್ತಿರುವಾಗ ಅವನಿಗೆಲ್ಲಿಯ ನೆಮ್ಮದಿ? ದಿನಂಪ್ರತಿ ಅವಳ ಕಣ್ಣಿಗೆ ಬೀಳದೇ ದೂರದಿಂದ ಅವಳನ್ನು ನೋಡಿ ಕಣ್ತುಂಬಿಕೊಳ್ಳುವುದೇ ಬದುಕಾಗಿತ್ತು. ಜೊತೆಗೆ ಮೇಲ್ನೋಟಕ್ಕೆ ತನ್ನಂತೆಯೇ ನಟಿಸುತ್ತಾ ಆಂತರ್ಯದಲ್ಲಿ ದಿನೇ ದಿನೇ ಮೇಣದಂತೆ ಕರಗಿ ಇಲ್ಲವಾಗುತ್ತಿರುವ ಗೆಳತಿಯೊಬ್ಬಳು ಕಣ್ಣೆದುರಿಗೇ ಇದ್ದಳು.... ಅವನ ಮನ ಇಬ್ಬರನ್ನೂ ಸಂತೈಸಲಾರದ ಸ್ಥಿತಿಯಲ್ಲಿ ಸ್ವತಃ ಸಾಂತ್ವನ ಬಯಸಿತ್ತು.

ಇಂದು ಅವನ ಫೈನ್ ಆರ್ಟ್ ಫೋಟೋಗ್ರಾಫ್ ಗಳ ಪ್ರದರ್ಶನವಿತ್ತು. ಇಡೀ ದಿನ ಅದರಲ್ಲೇ ಮುಳುಗಿದ್ದ. ಮನ್ಮಯಿಯನ್ನೂ ನೋಡಿರಲಿಲ್ಲ. ಅವನ ಚೇತನವೆಲ್ಲಾ ಉಡುಗಿತ್ತು. ಕಾಲೆಳೆದುಕೊಂಡು ಮನೆಯೊಳಗೆ ಬಂದಾಗ ಹಾಲ್ ನಿಶ್ಯಬ್ದವಾಗಿತ್ತು. ತಾಯ್ತಂದೆಯರ ಕೋಣೆಯಿಂದ ಮೆಲುನುಡಿಗಳು ಅಸ್ಪಷ್ಟವಾಗಿ ಕೇಳಿಬರುತ್ತಿತ್ತು. ಆ ಬಗ್ಗೆ ಆಸಕ್ತಿಯಿಲ್ಲದೇ ಸೀದಾ ಕೋಣೆಗೆ ಬಂದಿದ್ದ.

ಎದುರಿನಲ್ಲಿ ಕಂಡ ವಿದಿಶಾಳನ್ನು ನೋಡಿ ಕಣ್ಣರಳಿಸಿದ....

"ಯಾವಾಗ ಬಂದೆ ವಿದಿ?" ಎಂದವನಿಗೆ, "ನಾನು ಬೆಳಿಗ್ಗೆಯೇ ಬಂದೆ. ನೀನಿರಲಿಲ್ಲ. ಎಷ್ಟು ಹೊತ್ತಿನಿಂದ ಕಾಯುತ್ತಿರುವೆ ಗೊತ್ತೇನು?" ಎಂದವಳ ಧ್ವನಿಯಲ್ಲಿ ವರ್ಷಗಳ ಹಿಂದೆ ರೈಲಿನಲ್ಲಿ ಭೇಟಿಯಾದ ವಿದಿಶಾ ಕಂಡಾಗ ನಸುನಕ್ಕು ಕೆನ್ನೆ ಹಿಂಡಿದ. 

"ಏನಿವತ್ತು, ತುಂಬಾ ಸಂತೋಷವಾಗಿದ್ದೀಯಲ್ಲ...." ಅವಳು ನಸುನಕ್ಕಳು ಮನದಾಳ ಮರೆಮಾಚಿ.... ಅವನನ್ನೇ ಎವೆಯಿಕ್ಕದೇ ನೋಡಿದವಳ ನಡವಳಿಕೆ ವಿಚಿತ್ರವೆನಿಸಿತು. 

"ವಿದಿ, ಆರ್ ಯು ಆಲ್ ರೈಟ್? ಯಾಕೆ ಹಾಗೆ ನೋಡುತ್ತಿರುವೆ?" 

"ನನ್ನ ಬೆಸ್ಟ್ ಫ್ರೆಂಡ್ ಎಷ್ಟು ಚೆನ್ನಾಗಿ ನಟಿಸ್ತಾನೆ ಅಂತ ನೋಡಿದೆ. ಅಳ್ಬೇಕು ಅನ್ನಿಸಿದರೂ ನಗುವುದನ್ನು, ಮನದಲ್ಲಿ ಇಲ್ಲದಿರೋ ಸಂತೋಷವನ್ನು ಮುಖದಲ್ಲಿ ಅರಳಿಸುವುದನ್ನು ಎಲ್ಲಿಂದ ಕಲಿತೆ ಹೃಷಿ....?"

"ನಿನ್ನಿಂದಲೇ ಕಲಿತಿರುವೆ ವಿದಿ, ನೀನೂ ಅದನ್ನೇ ತಾನೇ ಮಾಡೋದು....?"

"ಸರಿಯೇ....... ಈ ಮದುವೆಯಿಂದಾದ ಒಂದೇ ಒಂದು ಲಾಭವೆಂದರೆ ಇಬ್ಬರೂ ಮುಖವಾಡ ಹಾಕಿ ಬದುಕುವುದನ್ನು ಕಲಿತುಬಿಟ್ಟೆವು ಹೃಷಿ. ನಾನು ಒಂದಲ್ಲಾ ಒಂದು ದಿನ ನೀ ಮುಖವಾಡ ಕಳಚಿ ಅದೇ ಹಳೆಯ ಹೃಷಿಯಾಗಿ ನನ್ನ ಸ್ವೀಕರಿಸುವೆ ಎಂದು ಕಾದೆ.... ಆದರೆ ನೀನು ಮುಖವಾಡವನ್ನೇ ಬದುಕಿನುದ್ದಕ್ಕೂ ತೊಟ್ಟು ನಟಿಸಲು ನಿರ್ಧರಿಸಿರುವೆ..... ಸಾಕಾಯಿತು ಹೃಷಿ ಈ ನಟನೆಯ ಬದುಕು. ಇನ್ನಾಗದು. ನಾನು ಬೆಂಗಳೂರಿಗೆ ಶಾಶ್ವತವಾಗಿ ವಾಪಾಸಾಗಲು ನಿರ್ಧರಿಸಿರುವೆ.... ನನ್ನ ಕಂಪನಿಯನ್ನು ಅಲ್ಲಿಗೇ ಶಿಫ್ಟ್ ಮಾಡಿಕೊಂಡಿರುವೆ....."

"ವಿದಿಶಾ....!!!" ಅವಳ ಈ ನಡೆಯನ್ನು ನಿರೀಕ್ಷಿಸದವನಿಗೆ ಆಘಾತವಾಗಿತ್ತು.

"ವಿದಿ ಪ್ಲೀಸ್, ಡೋಂಟ್ ಡೂ ದಿಸ್... ನೀನು ನನ್ನ ಬೆಸ್ಟ್ ಫ್ರೆಂಡ್. ನೀನು ಹೀಗೆ ನನ್ನಿಂದಾಗಿ ಊರು ಬಿಟ್ಟು ಹೋಗೋದೂ ನನಗೆ ಖಂಡಿತಾ ಇಷ್ಟವಿಲ್ಲ. ನಿನ್ನ ಸ್ನೇಹ ಇಲ್ಲದೇ ನನಗೆ ಬದುಕೋಕಾಗಲ್ವೇ......" 

"ಹಾಗಿದ್ರೆ ನಿನ್ನ ಈ ತೋರಿಕೆಯ ನಟನೆಯ ಮುಖವಾಡ ಕಳಚಿ ನನ್ನನ್ನು ಒಪ್ಪಿಕೊಳ್ಳುವೆಯಾ ಹೃಷಿ.....?"

"ವಿದೀ.......!! ನೀನು ಹಾಗೂ ಮನ್ಮಯಿ ಇಬ್ಬರೂ ನನ್ನ ಬದುಕಿನಲ್ಲಿ ಉಸಿರಿನಂತೆ ಬೆರೆತಿರುವವರು. ನೀನು ಸ್ನೇಹ ಸುಧೆಯಾದರೆ ಅವಳು ಪ್ರೇಮಧಾರೆ. ನೀವಿಬ್ಬರೂ ಇದ್ದರೆ ಮಾತ್ರ ನನ್ನ ಬದುಕಿಗೊಂದು ಅರ್ಥ. ಆದರೆ ನಿಮ್ಮಿಬ್ಬರ ಸ್ಥಾನವನ್ನು ಎಂದಿಗೂ ಅದಲು ಬದಲು ಮಾಡಲಾಗದು. ದಯವಿಟ್ಟು ನನ್ನ ಅರ್ಥ ಮಾಡ್ಕೋ...... "

"ನನಗೆ ಗೊತ್ತು ಹೃಷಿ.... ಅದಕ್ಕೇ ನಾನು ಹೊರಟಿರುವುದು. ಈ ಜಾಗ ಮನ್ಮಯಿಯದ್ದು..... ಅವಳು ಬರಬೇಕೆಂದರೆ ನಾನು ತೆರವು ಮಾಡಲೇಬೇಕಲ್ಲವೇ...?" 

"ಇಲ್ಲ ವಿದಿ, ಆ ಅದೃಷ್ಟ ನಮಗಿಲ್ಲ. ಅಮ್ಮ ಮನ್ಮಯಿಯನ್ನು ಒಪ್ಪಲಾರರು...."

"ಅವರು ಒಪ್ಪಿದ್ದಾರೆ ಹೃಷಿ. ಆ ದಿನ ಒಬ್ಬ ತಾಯಿಯಾಗಿ ತಮ್ಮ ದೃಷ್ಟಿಕೋನದಲ್ಲಿ ಮಾತ್ರ ಯೋಚಿಸಿ, ನಿನ್ನ ಮನದ ಭಾವನೆಗಳನ್ನು ಅರಿಯದ್ದಕ್ಕೆ ದೊಡ್ಡ ಶಿಕ್ಷೆಯನ್ನೇ ಅನುಭವಿಸಿದ್ದಾರೆ. ಆ ಬಗ್ಗೆ ಅವರಿಗೆ ಪಶ್ಚಾತ್ತಾಪವಿದೆ. ಅವರನ್ನು ಕ್ಷಮಿಸಿಬಿಡು. ಬಾ ಕೆಳಗೆ ಹೋಗೋಣ..... ನಿನಗೊಂದು ಸರ್ಪ್ರೈಸ್ ಇದೆ....." ಅವನ ಕೈ ಹಿಡಿದು ಮಹಡಿಯಿಂದ ಕೆಳಗೆ ಬಂದಳು.

ಅವಳನ್ನೇ ಹಿಂಬಾಲಿಸಿ ಬಂದವನು ಅಲ್ಲೇ ನಿಂತು ಬಿಟ್ಟ.....

ಅಲ್ಲಿ ಮನ್ಮಯಿ ನಿಂತಿದ್ದಳು ನಿರ್ಮಲಾರೊಂದಿಗೆ....... ಅವನಿಗೆ ನಂಬಲೇ ಕಷ್ಟವಾಯಿತು. ಅಲ್ಲಿಂದ ಹೆಜ್ಜೆ ಕಿತ್ತಿಡಲಿಲ್ಲ. ವಿದಿಶೆಯೇ ಅವನ ಕೈ ಹಿಡಿದು ಮನ್ಮಯಿಯ ಬಳಿಗೆ ಕರೆತಂದವಳು ಅವನ ಕೈಯನ್ನು ಮನ್ಮಯಿಯ ಸುಪರ್ದಿಗೆ ನೀಡಿ,

"ನಿನ್ನ ಬದುಕನ್ನು ನಿನಗೇ ಮರಳಿಸಿರುವೆ ಮನ್ಮಯಿ. ನಿನ್ನ ಕಥೆಯಲ್ಲಿ ಅಪ್ಪಣೆಯಿಲ್ಲದೇ ಪ್ರವೇಶಿಸಿ ತೊಂದರೆ ಕೊಟ್ಟಿರುವೆ. ಕ್ಷಮಿಸುವೆಯಲ್ಲ? ನನ್ನವನಾಗಿದ್ದೂ ಎಂದೂ ನನ್ನವನಾಗದ ನಿನ್ನವನನ್ನು ನಿನಗೇ ಒಪ್ಪಿಸಿರುವೆ.... ಹಿತೈಷಿಯಾಗಿ ಹಾರೈಸುವೆನೇ ಹೊರತು ಇನ್ನೆಂದೂ ನಿಮ್ಮ ಕಥೆಯ ಮಧ್ಯೆ ಅಡಚಣೆಯಾಗಿ ಬರಲಾರೆ..... ಇಲ್ಲಿಗೆ ನನ್ನ ಪಾತ್ರ ಮುಗಿಯಿತು. ನಾ ಹೋಗಿ ಬರುವೇ......" ಬಾಗಿಲೆಡೆಗೆ ಹೊರಟವಳನ್ನು ನಿಲ್ಲಿಸುವ ಹಕ್ಕು ಯಾರಿಗಿತ್ತು?

ಒಂದು ಕ್ಷಣ ನಿಂತವಳು ಒಮ್ಮೆಲೇ ಅವನೆಡೆಗೆ ಧಾವಿಸಿ ಬಿಗಿದಪ್ಪಿದಳು......

ಒಂದು ಕೊನೆಯ ಬಾರಿಗೆಂಬಂತೆ...... 

ಅವಳ ತಲೆ ಸವರಿ ನೆತ್ತಿ ಚುಂಬಿಸಿದವನನ್ನು ತಲೆಯೆತ್ತಿ ನೋಡಿದಳು... ಕಣ್ಣೀರಿನೊಂದಿಗೆ ಕಲೆಸಿಹೋಗಿ ಅವನ ಬಿಂಬ ಅಸ್ಪಷ್ಟ.....

'ನೀನು ಅಂದು ಆ ರೈಲಿನಲ್ಲಿ ಪ್ರಯಾಣಿಸಬಾರದಿತ್ತು ಹೃಷಿ... ಬಂದರೂ ನನ್ನ ಕಣ್ಣಿಗೆ ಬೀಳಬಾರದಿತ್ತು. ನಾವಿಬ್ಬರೂ ಅಪರಿಚಿತರಾಗಿಯೇ ಉಳಿಯಬೇಕಿತ್ತು.....' ಮನ ಚೀರಿ ಚೀರಿ ಕೂಗುತ್ತಿತ್ತು.

"ಹೋಗ್ತೀನಿ ಹೃಷಿ....." ಎಂದವಳೆ ತಿರುಗಿ ನೋಡದೇ ಬಂದು ನಿಂತಿದ್ದ ಕ್ಯಾಬ್ ಹತ್ತಿ ಹೊರಟು ಹೋದಳು ವಿದಿಶೆ........

ಜೊತೆಗಿದ್ದರೂ ನಿನ್ನ ಸೇರದಾದೆ ನಾನು.....

ದೂರವಿದ್ದರೂ ನಿನ್ನಲ್ಲೇ ಲೀನವಾದಳು ಅವಳು.....

ಲೋಕವೆಲ್ಲಾ ಪೂಜಿಸುವುದು ನಿಮ್ಮ ಪ್ರೇಮವ ರಾಧಾಕೃಷ್ಣರದು ದೈವಿಕ ಪ್ರೇಮವೆಂದು.......

ನೀ ರಾಧೆಯ ಶ್ಯಾಮನಾದರೆ ನಾನ್ಯಾರು ಹೇಳೋ ಮಾಧವ.....

ಈ ರುಕ್ಮಿಣಿಯ ಅಳಲಿಗೆ ಕಿವುಡಾದೆ ಏಕೆ ಕೇಶವ.....

ಮುಕ್ತಾಯ

ಶನಿವಾರ, ಜೂನ್ 13, 2020

ವಧು ಬೇಕಾಗಿದ್ದಾಳೆ........

ಹೋಯ್.... ಇವತ್ತು ಒಂದು ಭಯಾನಕ ದಾರುಣ ಘಟನೆ ಸಂಭವಿಸಿರುವುದು ಗೊತ್ತುಂಟಾ ನಿಮಗೆ... ಗೊತ್ತಿಲ್ದಿದ್ರೆ ನಾ ಹೇಳ್ತೆ ಕೇಳಿ....

ಇವತ್ತು.... ನಾವು(ಅಂದ್ರೆ ನಾನು) MBBS (ಮನೆ ಬಿಟ್ಟ್ ಬೀದಿ ಸುತ್ತ್) ಫಿನಿಶ್ ಮಾಡಿ ನಮ್ಮ ಪರ್ಮನೆಂಟ್ ಅಡ್ರೆಸ್ ಒಳಗೆ(ನಮ್ಮನೆ ಒಳಗೆ ಕಣ್ರಪ್ಪಾ) ಕಾಲಿಡ್ತಿದ್ದಂಗೆ ಕಂಡಿತ್ತು ಆ ದಾರುಣ ಹೃದಯ ವಿದ್ರಾವಕ ಸನ್ನಿವೇಶ.....

ಚೊರೆರಾಯನಪುರ ಎಂಬ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದಷ್ಟು ದೊ.....ಡ್ಡ ಊರಿನಲ್ಲಿ ಮಾಮಲ್ಲ(ಬಹಳ ದೊಡ್ಡ) ಕಿರಿಕ್ ಪಾರ್ಟಿ, ಭಯಂಕರ ಪೆಟ್ಟಿಷ್ಟ್, ಅಂಡೆಪಿರ್ಕೀಸು ಎಂದು ವಿಶ್ವವಿಖ್ಯಾತಿ ಪಡೆದ ನಮ್ಮ ಪಿತಾಜಿ ಮ್ಯಾಚ್ ಮೇಕರ್ ಮ್ಯಾರೇಜ್ ಬ್ರೋಕರ್ ಗುಂಡೂರಾಯರು ಲೈಫಲ್ಲಿ ಫಸ್ಟ್ ಟೈಮು ಒಂದು ಕೈಯಲ್ಲಿ ಎಳನೀರಿಗೆ ಗ್ಲೂಕೋಸ್ ಸೇರ್ಸಿಕೊಂಡು, ಪಕ್ಕದಲ್ಲಿ  ಪೌಷ್ಟಿಕ ಆಹಾರ ಅಂಗನವಾಡಿ ಫುಡ್ಡಿನಲ್ಲಿ ತಯಾರಿಸಿದ ಲಡ್ಡು ಹಿಡ್ಕೊಂಡು ಫೀಲಿಂಗಲ್ಲಿ ಸೀಲಿಂಗ್ ನೋಡ್ತಾ ಕೂತಿದ್ರು. 

ಅಯ್ಯೋ ಕರ್ಮವೇ.....!! ಇದೆಂತಹ ಹೃದಯವಿದ್ರಾವಕ ದಾರುಣ ಘಟನೆ ಅಂತ ನೀವು ಕೇಳ್ಬೋದು. ಆದ್ರೆ ಒಂದ್ಸಾರಿ ನಮ್ಮ ಪಿತಾಮಹರ ಹಿಸ್ಟರಿ ಜಿಯಾಗ್ರಫಿ ಗೊತ್ತಾದ್ರೆ ಆ ಪ್ರಶ್ನೆ ಕೇಳಲ್ಲ ನೀವು.

ಐತಿಹಾಸಿಕ ಪ್ರತೀತಗಳ ಪ್ರಕಾರ ನಮ್ಮೂರಿನ ಹೆಸರು ಮುಂಚೆ ಹರಿರಾಯನಪುರ ಅಂತ ಇತ್ತಂತೆ. ಯಾವಾಗ ನಮ್ಮ ಗುಂಡಪ್ಪ ಒಂಬತ್ತನೇ ಮನೆಯ ಶನಿಯಾಗಿ ಭೂಮಿಗೆ ಅಟ್ಕಾಯಿಸ್ಕೊಂಡ್ನೋ ಆಗಿಂದ ಹರಿರಾಯನಪುರ ಚೊರೆರಾಯನಪುರ ಆಯ್ತು ಅಂತ ಪ್ರತೀತಿ. ಈಗ ನೀವೇ ಲೆಕ್ಕ ಹಾಕಿ. ಎಂತಾ ಯದ್ವಾತದ್ವಾ ಗ್ರೇಟ್ ಪೀಸ್ ಅವ್ನು ಅಂತ. ಈ ಪುರಾತತ್ವ ಇಲಾಖೆಯವರು ಚೊರೆ ಅನ್ನೋದು ಮೊದಲು ಹುಟ್ಟಿದ್ದಾ ಇಲ್ಲ ನಮ್ಮ ಜನಕ ಹುಟ್ಟಿದ ಮೇಲೆ ಚೊರೆ ಹುಟ್ಟಿದ್ದಾ ಅಂತ ಇನ್ನೂ ಡಿಸ್ಕವರಿ ಮಾಡ್ತಿದ್ದಾರೆ. ಅದೆಂತಹ ಗಟ್ಟಿ ತಲೆಯ ಮನುಷ್ಯನಾದ್ರೂ ಸರಿಯೇ ನಮ್ಮಪ್ಪ ಕೇವಲ ತನ್ನ ಚೊರೆಯ ಬಲದಿಂದಲೇ ಅವರ ಬುರುಡೆಲೀ ಬೋರ್ವೆಲ್ ಕೊರ್ದು, ಸುರಂಗ ತೋಡಿ, ಪೈಪ್ಲೈನ್ ಹಾಕ್ಬಿಡ್ತಾನೆ.... ಈಗ ಗೊತ್ತಾಯ್ತಲ್ಲ ನಮ್ಮ ಪಿತಾಜಿ ಪವರ್ರು.

ಇಂತಿಪ್ಪ ನಮ್ಮಪ್ಪ ಗುಂಡಪ್ಪ ಹೀಗೆ ಗ್ಲುಕೋಸ್ ಏರ್ಸಿಕೊಂಡ್ರೇ ಅದು ಭಯಂಕರ ದಾರುಣ ಹೃದಯವಿದ್ರಾವಕ ಸಂಗತಿಯೇ ತಾನೇ....?
ನಮ್ಮ ಹಾರ್ಟೂ ಡೈರೀಮಿಲ್ಕ್ ಸಿಲ್ಕ್ ತರ ಮೆಲ್ಟಾಯ್ತು.
"ಏನಾಯ್ತು ತಂದೆ ನಿಮಗೆ" ಅಂತ ಕೇಳ್ದೆ.

"ಅಯ್ಯೋ, ಏನೂಂತ ಹೇಳ್ಲೋ..... ಇವತ್ತು ಬೆಳ್ಳಂಬೆಳಿಗ್ಗೆ ಅದ್ಯಾವ ದರಬೇಸಿ ಮುಸುಡು ನೋಡಿದ್ನೋ..... ನನಗೊಂದು ಹುಡುಗಿ ಹುಡುಕಿಕೊಡಿ ಅಂತ ಒಬ್ಬ ಬಂದಿದ್ದ ಕಣ್ಲಾ..... ಅಯ್ಯೋ ಅಯ್ಯೋ..... ಅವನಿಗ್ ಆಪತ್ತ್ ಬಂದ್ ಚಾಪೆಲ್ ಸುತ್ಕೊಂಡ್ಹೋಗ, ಅವನಿಗೆ ಬರ್ಬಾರ್ದು ಬರ, ನೆಗ್ದ್ ಬಿದ್ದ್ ನೆಲ್ಲಿಕಾಯಾಗೋಗ......" ಅಂತ ಶುರುಹಚ್ಚ್ಕೊಂಡ್ರು ನೋಡಿ ಪಿತಾಜೀ... ಥೂಥೂಥೂಥೂ... ಅದೇನ್ ಬಾಯಾ ಇಲ್ಲ ಬಚ್ಚಲು ಮೋರಿಯಾಂತ ಡೌಟಾಯ್ತು.

ಆದ್ರೂ ನಂಗ್ ಭಯಂಕರ ಕ್ಯೂರಿಯಾಸಿಟಿ ಮಾರಾಯ್ರೇ.... ಅಲ್ಲ ನಮ್ಮಪ್ಪ ಎಂಥಾ ಅಂಡೆದುರ್ಸು.... ಇವನಂಥಾ ಇವ್ನಿಗೇ ಈ ರೇಂಜಿಗೆ ಬೋರ್ವೆಲ್ ಕೊರ್ದಿದ್ದಾನೆ ಅಂದ್ರೆ ಅವ್ನಿನ್ನೆಂತಾ ಹೆಲ್ಮೆಟ್ಟ್ ಪಾರ್ಟಿ ಇರ್ಬಹುದು.

"ಅದೇ ಏನಾಯ್ತು ಪಿತಾಮಹ" ಅಂತ ಸಂದರ್ಭ ಸಹಿತ ವಿವರಣೆ ಕೇಳಿದೆ..

"ಅಲ್ಲಾ ಕಣ್ಲಾ.... ನನಗೆ ಹುಡುಗಿ ಹುಡ್ಕೊಡೀ ಅಂತ ಬಂದ. ನಾನೂ ಕೇಳ್ದೇ. ಎಂತಾ ವಧು ಬೇಕಪ್ಪಾ ನಿಂಗೆ ಬೇಕೂಫಾ ಅಂತ. ನಂದು ಒಂದು ಲಿಸ್ಟಿದೆ. ಆ ಲಿಸ್ಟಲ್ಲಿರೋ ಎಲ್ಲಾ ಗುಣಲಕ್ಷಣಗಳು ಇರೋ ಹುಡುಗಿ ಬೇಕು ಅಂದ. ಅದೇನಪ್ಪಾ ಲಿಸ್ಟೂ ಅಂದೆ. ಅವನ ದೊಡ್ಡ ಚೀಲದಿಂದ ಶೆಟ್ರಂಗಡಿ ಸಾಮಾನಿನ ಲಿಸ್ಟ್ ತರ ಉದ್ದ ಚೀಟಿ ತೆಗ್ದು ಓದೋಕೆ ಶುರು ಮಾಡ್ದಾ ನೋಡು..... ಥೊಕ್...... ಬೆಳಿಗ್ಗೆ ಕುಡ್ದ ಕಾಪಿ ಪವರ್ರೂ ಸಾಲ್ದಷ್ಟು ಮಂಡೆಬೇನೆ ಶುರುವಾತು" ಎಂದ ಗುಂಡಪ್ಪ.

"ಅದೇನು ಅಂತಾ ಕಂಡೀಷನ್ನುಗಳು...." ನಮ್ಮ ಪೂಜ್ಯ ತಂದೆಯವರ ಒಂದು ಹಂಡೆ ಕಾಫಿಗಿಂತ ಪವರ್ಫುಲ್ ತಲೆಬೇನೆ ದಯಪಾಲಿಸಿದ ಲಿಸ್ಟಿನ ಬಗ್ಗೆ ನಾನೂ ಆಸಕ್ತಿಯಿಂದ ಕೇಳಿದೆ.

"ಮೊದಲನೆಯದಾಗಿ ಹುಡುಗಿ ಹಾಲ್ಬಿಳುಪು ಇಲ್ಲಾ ಕೇದಿಗೆಯ ಬಣ್ಣದವಳಾಗಿರಬೇಕು ಅಂದ್ನಪ್ಪ. ನಾನೂ ಚೆನ್ನಾಗಿರೋ ಒಂದಷ್ಟು ಹುಡುಗಿಯರ ಫೋಟೋ ತೋರ್ಸಿದೆ. ಅದ್ನೆಲ್ಲಾ ನೋಡಿ ನಿಮ್ಗೇನ್ ಕಣ್ಣ್ ಐಬಾ ಅಂತ ಕೇಳ್ತಾನೆ ಐನಾತೀ. ಏ ಯಾಕಲಾ ಹೆಂಗೈತೆ ಮೈಗೆ ಅಂತ ಕೇಳ್ದೇ. ಅದಕ್ಕೆ ಅವ್ನ ಬ್ಯಾಗಿಂದ ಒಂದ್ ಪ್ಯಾಕೆಟ್ಟು ನಂದಿನಿ ಹಾಲು ಇನ್ನೊಂದು ಕೇದಿಗೆ ಹೂವಾ ತೆಗ್ದು, ನೋಡ್ರೀ ಮಿಸ್ಟರ್ ಇವ್ರಲ್ಲಿ ಯಾರಾದ್ರೂ ಈ ಎರಡು ಕಲರ್ರಿಗೆ ಮ್ಯಾಚ್ ಆಗ್ತಿದ್ದಾರಾ ಅಂತ ಕೇಳ್ಬಿಡೋದಾ? ಅಯ್ಯೋ ನಿನ್ನ.... ಲೇ ಯಾವ ಹುಡ್ಗಿ ಈ ಬಣ್ಣ ಇರ್ತಾಳಲಾ ಅಂತ ಕೇಳ್ದೆ. ಏ.... ಬಿಡಿ ಸ್ವಾಮಿ, ನಾನೆಷ್ಟು ಪಿಕ್ಚರ್ ನೋಡಿಲ್ಲ, ಎಂತೆಂಥಾ ಕಥೆ ಕಾದಂಬರಿ ಓದಿಲ್ಲಾ. ಎಲ್ಲಾದ್ರಲ್ಲೂ ಹೀರೋಯಿನ್ನು ಹಾಲ್ಬಿಳುಪು ಇಲ್ಲಾ ಕೇದಿಗೆ ಬಣ್ಣನೇ ಇರೋದು ಅಂತ ಲಾಯರ್ ಪಿ.ಎಸ್.ಡಿ(ಸಿ.ಎಸ್.ಪಿ) ತರಾ ವಾದಕ್ಕೇ ನಿಂತ ಕಣ್ಲಾ. ನಂಗೆ ಇವ್ನಾರೋ ತಿಕ್ಕಲು ಅಂತ ಗೊತ್ತಾಗೋಯ್ತು.

ನೋಡಲಾ, ಅದೆಲ್ಲಾ ವ್ಯಾಕರಣದ ಅಲಂಕಾರ. ಉಪಮಾನ, ಉಪಮೇಯ, ರೂಪಕ. ಹಾಲ್ಬಿಳುಪು ಇಲ್ಲಾ ಕೇದಿಗೆ ಬಣ್ಣ ಅಂದ್ರೆ ಹುಡುಗಿ ಬೆಳ್ಳಗೆ ಚೆನ್ನಾಗಿದ್ದಾಳೆ ಅಂತ ಅಷ್ಟೇ. ಈ ಹಾಲಿನ ತರ ಬಿಳಿ ಇದ್ರೆ ಗೋಡೆಗೆ ಸುಣ್ಣ ಬಳ್ದಂಗಿರಲ್ವೇನ್ಲಾ? ನಿಜ ಜೀವನದಲ್ಲೇನಿದ್ರೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮಾತ್ರ ಇರೋದು ಅಂತ  ನಿಧಾನಕ್ಕೆ ಕೂಡಿಸಿ ಅವ್ನಿಗೆ ಅರ್ಥ ಆಗೋಹಾಗೆ ಹೇಳೋಕೆ ನೋಡ್ದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎಲ್ಲಾ ಚಂದನ ಚಾನೆಲ್ನಲ್ಲಿ ಕಾಣೆಯಾದವರ ವಿವರದ್ದು ಅಂದ  ಆಸಾಮಿದು ಒಂದೇ ಹಠ. ಅದೇ ಕಲರ್ ಬೇಕು ಅಂತ. ನನ್ಗೂ ನೋಡಿ ಸಾಕಾಯ್ತು. ನೋಡಪ್ಪಾ,ನಿಂಗೆ ಹಾಲ್ಬಿಳುಪು ಹುಡುಗಿನೇ ಬೇಕು ಅಂದ್ರೆ ಅಮಾಸೆ ರಾತ್ರಿ ಹನ್ನೆರಡು ಗಂಟೆಗೆ ಮಸಾಣಕ್ಕೆ ಹೋಗು. ಮೋಹಿನಿ ಇರ್ತಾಳೆ. ಅವ್ಳು ಕಲರ್ ಪಕ್ಕಾ ಇದೇ ಬಿಳಿ ಇರುತ್ತೆ. ಇನ್ನು ಈ ಕೇದಿಗೆ ಕಲರ್ ಬೇಕು ಅಂದ್ರೆ ಒಂದಾ ನಿನ್ಗೆ ಜಾಂಡೀಸ್ ಬರ್ಬೇಕು ಇಲ್ಲಾ ಅವ್ಳಿಗೆ ಜಾಂಡೀಸ್ ಇರ್ಬೇಕು. ಇಬ್ಬರಿಗೂ ಜಾಂಡೀಸ್ ಇದ್ರೆ ದೇವ್ರು ಮಾಡಿದ ಜೋಡಿ ಆಯ್ತದೆ. ಇನ್ನು ಹಾಲ್ಬಿಳುಪು, ಕೇದಿಗೆ ಎರಡೂ ಕಲರ್ ಇರೋಳ್ನೇ ಮದ್ವೆ ಆಗ್ಬೇಕು ಅಂದ್ರೆ ನೀನು ಬಾಳೆಹಣ್ಣನ್ನ ಮದ್ವೆ ಆಗ್ಬೇಕು. ಸಿಪ್ಪೆ ಕೇದಿಗೆ, ಹಣ್ಣು ಹಾಲ್ಬಿಳುಪು ಇರ್ತದೆ ಅಂದೆ.

ಸರಿ ಸಿವಾ ಮುಂದಿನ ಗುಣಲಕ್ಷಣ ಏನಪ್ಪಾ ಅಂದೆ. ಅವಳ ಮುಖ ಹುಣ್ಣಿಮೆ ಚಂದ್ರನಂತೆ ಇರ್ಬೇಕು ಅಂದ. ಅಂದ್ರೆ ಅವ್ಳು ತಿಂಗಳಲ್ಲಿ ಒಂದೆ ಸಲ ಕಾಣಿಸ್ಕೋಬೇಕಾ, ಇಲ್ಲಾ ಅವ್ಳ ಮುಖದಲ್ಲಿ ಕಲೆ ಇರ್ಬೇಕಾ, ಇಲ್ಲಾ ಮುಖ ಚಂದ್ರನಷ್ಟು ಗುಂಡಗಿರ್ಬೇಕಾ ಅಂತ ಕೇಳ್ದೆ. ಸಿಕ್ಕಾಕ್ಕೊಂಡ ಕಳ್ಳ. ಅವ್ನಿಗೆ ಡೌಟಾಯ್ತು. ಮೂರರಲ್ಲಿ ಯಾವ್ದು ಅಂತ‌. ಸರಿ ಅದು ಬಿಡಿ ಆಮೇಲೆ ನೋಡುವ ಮುಂದಿನದ್ದು ಕೇಳಿ ಅಂದ. ಅದೇನೇನ್ ಇದೆ ಎಲ್ಲಾ ಒದರಿ ಸಾಯಿ ಅಂದೆ. ಲಿಸ್ಟು ಹೇಳ್ದಾ ನೋಡ್ಲಾ...... ಬಿಲ್ಲಿನಂತೆ ಹುಬ್ಬು, ಕಮಲದ ಎಸಳಿನ ಕಣ್ಣು, ಸಂಪಿಗೆ ಮೂಗು, ದಾಳಿಂಬೆ ಹಲ್ಲು, ಶಂಖದ ಕಿವಿ, ಹವಳದ ತುಟಿ, ಬಾದಾಮಿ ಗಲ್ಲ.... ಅಬ್ಬಾ ಅಬ್ಬಾ... ಅದೇನು ಲಿಸ್ಟಾ... ದಾಳಿಂಬೆ ಹಲ್ಲು ಕೆಂಪು ಕಲರ್ ಇರ್ಬೇಕಾ? ಅಂತ ಕೇಳ್ದೆ. ದಾಳಿಂಬೆನೇ ಹಲ್ಲಾಗಿರ್ಬೇಕು ಅಂದ. ನಿನ್ಗೆ ಹಿಡಿಂಬೆಯೇ ಆಗ್ಬೇಕಪ್ಪಾ, ಮುಗಿತಲ್ಲಪ್ಪ ನಿನ್ನ ಲಿಸ್ಟು ಅಂದೆ. ಇನ್ನೊಂಚೂರು ಉಂಟು ಅಂದ. ಇನ್ನೆಂತ ಸಾವು ಉಳ್ದಿರೋದು ಅಂದೆ. ಮತ್ತೆ ಹುಡುಗಿ ಪುಟ್ಟ್ಗೌರಿ ತರ ಹುಲಿ ಜೊತೆ ಫೈಟ್ ಮಾಡೋ ಧೈರ್ಯಸ್ಥೆ, ಮಂಗಳಗೌರಿ ತರ ದೇವಸ್ಥಾನದ ಕಂಬಕ್ಕೆ ತಲೆ ಚಚ್ಚಿಕೊಂಡು ಗಂಡನ ಪ್ರಾಣ ಉಳಿಸೋ ದೇವತೆ, ಸನ್ನಿಧಿ ತರ ಮನೆಯವ್ರಿಗೆಲ್ಲಾ ಕಾಫಿ,ಟೀ ಸಪ್ಲೈ ಮಾಡಿ, ಮನೆಯವರ ಬಟ್ಟೆನೆಲ್ಲಾ ಒಗ್ದು ಇಸ್ತ್ರೀ ಮಾಡಿ, ಚಂದ್ರಿಕಾನಿಂದ ಮನೆಯವ್ರನೆಲ್ಲಾ ಸೇವ್ ಮಾಡೋ ಸದ್ಗೃಹಸ್ತೆ ಆಗಿರ್ಬೇಕು ಅಂದ‌. ನಂಗೆ ನವರಂಧ್ರಗಳಲ್ಲೂ ಉರಿ ಹತ್ಕೊಂಡು, 'ಲೇ ಮೂದೇವಿ, ನಿಂಗೆ ಹುಡುಗಿ ಹುಡ್ಕೋಕೆ ರಾಮ್ ಜೀ ಮತ್ತೆ ಮೈಸೂರ್ ಮಂಜನೇ ಆಗ್ಬೇಕು. ಹೋಗ್ಲಾ ಕಲರ್ಸ್ ಕನ್ನಡ ಆಫೀಸಿಗೆ' ಅಂತ ಒದ್ದು ಕಳ್ಸಿ ಬರೋವಾಗ ಎನರ್ಜಿ ಪೂರಾ ಖಾಲಿಯಾಗಿ ಇಲ್ಲಿ ಪೌಷ್ಟಿಕ ಆಹಾರ ತಿಂತಾ ಕೂತೀನಿ ನೋಡ್ಲಾ." ಎಂದು ತಮ್ಮ ಸುದೀರ್ಘ ಸಂದರ್ಭ ಸಹಿತ ವಿವರಿಸಿ ಮುಗಿಸಿದರು ಪಿತಾಮಹ.

ಇದನ್ನೆಲ್ಲ ಕೇಳಿ ನಂಗೊಂದು ಡೌಟು ಬಂತು.
"ಪಿತ್ತಾಜೀ.....ನಿಮ್ಮ ಆಫೀಸಿಗೆ ಬಂದು ಇಷ್ಟೆಲ್ಲಾ ಲಿಸ್ಟು ಕೊಟ್ಟವನ ಹೆಸರು ವೈಭವ್ ಅಂತಲಾ...."

ಇದು ಕೇಳಿದ್ದೇ ನಮ್ಮಪ್ಪನಿಗೆ ಕುಡೀತಿದ್ದ ಎನರ್ಜಿ ಡ್ರಿಂಕ್ ನೆತ್ತಿಗೆ ಹತ್ತಿ, "ಲೇ ಹೌದು ಕಣ್ಲಾ.. ನಿಂಗೆಂಗೆ ಗೊತ್ತಾಯ್ತು. ಅದೇನೋ ಡಿಟೆಕ್ಟಿವ್ ಬೇರೆ ಅಂತೆ ಅವ್ನು. ಎಲ್ಲಾ ಕಥೆ, ಕಾದಂಬರಿ, ಸಿನಿಮಾದಲ್ಲೂ ಏಕಕಾಲಕ್ಕೆ ಸುತ್ತುತ್ತಿರೋ ಆ ಹಾಲ್ಬಿಳುಪು, ಕೇದಿಗೆ ಬಣ್ಣ, ಬಿಲ್ಲು ಹುಬ್ಬು, ಸಂಪಿಗೆ ಮೂಗು, ಹವಳ ತುಟಿ, ಕಮಲ ಕಣ್ಣು, ಶಂಖ ಕಿವಿ, ಬಾದಾಮಿ ಗಲ್ಲ, ದಾಳಿಂಬೆ ಹಲ್ಲಿನ ಹುಡುಗಿ ಯಾರೂ ಅಂತ ಕಂಡ್ಹಿಡಿ ಅಂತ ಅದ್ಯಾವನೋ ಗುಜುರಿ ಇನ್ಸ್ಪೆಕ್ಟರ್ ಹೇಳಿದ್ನಂತೆ ಅದಕ್ಕೆ ಬಂದಿದ್ದೀನಿ ಅಂದ" ಎಂದರು ಗುಂಡಪ್ಪ.

"ಅಲ್ಲಿಗೆ ಸರಿಹೋಯ್ತು.... ಅಲ್ಲಾ ಪಿತಾಮಹ, ಆ ತ್ರಿಮೂರ್ತಿಗಳೇ ಅವನ ಕಾಟ ತಾಳೋಕಾಗ್ದೇ ತಮ್ಮ ಅಡ್ರೆಸ್ ಚೇಂಜ್ ಮಾಡಿದ್ದಾರೇ. ನೀವು ಹೋಗಿ ಹೋಗಿ ಅವನತ್ರ ತಗ್ಲಾಕ್ಕೊಂಡ್ರಲ್ಲಾ" ಅಂತ ಬಾಯ್ಮಾತಿಗೆ ಹೇಳಿ ನಮ್ಮ ಜನಕನಂತಹ ಜನಕನ ತಲೆಯನ್ನೇ ಎಗ್ ಬುರ್ಜಿ ಮಾಡಿದ ವೈಭವನಿಗೆ ಮನದಲ್ಲೇ ಶಭಾಷ್ಗಿರಿ ಕೊಡುತ್ತಾ ಮಾತಾನ್ನಪೂರ್ಣೆಯನ್ನು ಹುಡುಕಿಹೊರಟೆ.

ನನ್ನ ಮರೆತ ನೀನು..... ನಿನ್ನೊಳಗಿನ ನಾನು....

ನೀನೆಂಬ ವಾಕ್ಯದೊಳಗಿನ ಪುಟ್ಟ ಪದ ನಾನು
ಕಂಡಿಕೆಗಳ ಸಂಗದಲ್ಲಿ ಮೈ ಮರೆತಿರುವೆ ನೀನು

ನೀನೆಂಬ ಸಂಪುಟದ ಪರಿವಿಡಿ ನಾನು
ಪುಟಗಳ ಸಾಮೀಪ್ಯದೊಳು ಹಿತವಾಗಿಹೆ ನೀನು

ನೀನೆಂಬ ಆಗಸದೊಳು ತೇಲುವ ಮೇಘ ನಾನು
ಬೆಳದಿಂಗಳ ಬೆಡಗಿಗೆ ಮನಸೋತಿಹೆ ನೀನು

ನೀನೆಂಬ ಶರಧಿಯಾಳದಲ್ಲಿ ಹುದುಗಿದ ಮುತ್ತು ನಾನು
ಅಲೆಗಳ ಚಿನ್ನಾಟದಲಿ ಸರಸಿಯಾಗಿಹೆ ನೀನು

ನೀನೆಂಬ ನಿನಗೆ ಬಿಂದು ನಾನು....
ನಿನ್ನೊಳಗಿನ ನನಗೆ ಸಿಂಧು ನೀನು.....


ಶುಕ್ರವಾರ, ಜೂನ್ 12, 2020

ಮನ್ವಂತರ

ಇದೆಂತಹ ಪ್ರಶ್ನೆ ಕೇಳಿಬಿಟ್ಟಿತು ನನ್ನ ಪುಟ್ಟ ಕಂದ!!!!
ಇದು ಈ ಹಾಲುಗಲ್ಲದ ಕಂದಮ್ಮನ ಬಾಯಿಯಿಂದ ಬರುವ ಪ್ರಶ್ನೆಯೇ? ಈಗಿನ್ನೂ ಎರಡನೇ ತರಗತಿಯಲ್ಲಿರುವ ಮುಗ್ಧತೆ ಮಾಸದ ಜೀವವದು.
ಈ ಜಗದ ಸೌಂದರ್ಯ-ಕ್ರೌರ್ಯಗಳೆರಡರ ಅರಿವೂ ಇಲ್ಲದ ಆ ಹಸುಳೆಯ ಮನದಲ್ಲಿ ಇಂತಹ ವಿಚಾರವೊಂದು ನುಸುಳಿದ್ದಾದರೂ ಹೇಗೆ?
ನನ್ನ ತಲೆ ತುಂಬಾ ಸಾವಿರ ಯೋಚನೆಗಳು ಕೊರೆಯತೊಡಗಿದವು.

ನನ್ನ ಕೆಲಸದ ಒತ್ತಡದಲ್ಲಿ ಇವನ ಮೇಲೆ ಗಮನ ಕಡಿಮೆಯಾಗುತ್ತಿದೆಯೇ?
ಮತ್ತೊಮ್ಮೆ ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. 

ಹೌದು ಎಂದಿತು ಅಂತರಾತ್ಮ.......

ಆದರೇನು ಮಾಡಲಿ? ಉದ್ಯೋಗ ನನ್ನ ಆಯ್ಕೆಯಲ್ಲ, ಅದು ನನ್ನ ಅನಿವಾರ್ಯತೆ. ನಮ್ಮದೇನು ಸಿರಿವಂತ ಕುಟುಂಬವಲ್ಲ. ನನ್ನವರು ಖಾಸಗಿ ಕಂಪೆನಿಯೊಂದರಲ್ಲಿ ದುಡಿಯುವುದು.ಬೆಂಗಳೂರಿನಂತಹ ಶಹರದಲ್ಲಿ ಒಬ್ಬರ ದುಡಿಮೆಯಿಂದ ಜೀವನ ಸಾಗಿಸುವುದು ಕಷ್ಟಸಾಧ್ಯವಾದ ಮಾತು. ಬಾಡಿಗೆ, ಕರೆಂಟ್ ಬಿಲ್ಲು, ನೀರಿನ ಬಿಲ್ಲು, ದಿನವಹಿ ಖರ್ಚು, ಮಗನ ಶಾಲೆ ಎಲ್ಲ ನಡೆಯಬೇಕಲ್ಲ. ಹಾಗಾಗಿ ನಾನೂ ಉದ್ಯೋಗಕ್ಕೆ ಹೋಗಲೇಬೇಕಾಯ್ತು.

ಆದರೆ ಎಲ್ಲಾ ದುಡಿಯುವ ಮಹಿಳೆಯರಂತೆಯೇ ನನ್ನದೂ ಅಡಕತ್ತರಿಯಲ್ಲಿ ಸಿಕ್ಕಿದಂತಹ ಪರಿಸ್ಥಿತಿ......
ಮನೆ - ಉದ್ಯೋಗ ಎರಡನ್ನೂ ಒಟ್ಟಿಗೇ ಸಂಭಾಳಿಸಬೇಕು.

ಹೆರಿಗೆ ರಜೆಯ ನಂತರ ಕೆಲಸಕ್ಕೆ ಮರಳಿದಾಗ ಒಂದೈದು ತಿಂಗಳು ಅಮ್ಮ, ಇನ್ನೊಂದಾರು ತಿಂಗಳು ಅತ್ತೆ ಬಂದಿದ್ದರು. ಆದರೆ ಅವರಿಗೂ ಅವರದೇ ಆದ ಜವಾಬ್ದಾರಿಗಳಿವೆ. ಮನೆ, ಗದ್ದೆ, ತೋಟ ಎಲ್ಲ ಬಿಟ್ಟು ಇಲ್ಲಿ ಎಷ್ಟು ದಿನ ಉಳಿಯಲಾದೀತು ಅವರಿಗೆ?
ಅದೂ ಅಲ್ಲದೇ ಈ ನಗರದ ತೋರಿಕೆಯ ಜೀವನ ಒಂದು ಚೂರೂ ಹಿಡಿಸದು‌ ಅವರಿಗೆ. ಹಳ್ಳಿಯ ಜನ ಇಡೀ ಊರಿನವರೆಲ್ಲಾ ತಮ್ಮ ಬಂಧು ಬಳಗ ಎನ್ನುವವರು. ಒಬ್ಬರಿಗೆ ಏನಾದರೂ ತೊಂದರೆಯಾದರೆ ಇಡೀ ಊರೇ ಒಟ್ಟಾಗಿ ಹೆಗಲು ಕೊಡುವಂತಹ ಮನಸ್ಥಿತಿಯಲ್ಲಿ ಇರುವವರು. ಈ ನಗರದಲ್ಲಿಯ ನಾಲ್ಕು ಗೋಡೆಗಳ ನಡುವೆ ಹುದುಗಿ ಆಚೀಚೆ ಮನೆಯಲ್ಲಿರುವವರು ಬದುಕಿದ್ದಾರೋ ಇಲ್ಲ ಸತ್ತಿರುವರೋ ಎಂದೂ ತಿಳಿಯದೇ ಜೀವನ ನಡೆಸುವ ಪರಿ ಅವರಿಗೆ ಹಿಡಿಸದು. ಇಲ್ಲಿಗೆ ಬಂದರೆ ಜೈಲಿನಲ್ಲಿದ್ದಂತೆ ಚಡಪಡಿಸುತ್ತಾರೆ. ಹಳ್ಳಿಗೆ ವಾಪಾಸಾದ ಮೇಲೆಯೇ ನೆಮ್ಮದಿ ಅವರಿಗೆ.

ಹಾಗೆ ಅವರು ಹೋದ ನಂತರ ನಾನೇ ಎಲ್ಲವನ್ನು ನಿಭಾಯಿಸಬೇಕಾಯಿತು. ಸ್ವಲ್ಪ ಸಮಯ ಕೆಲಸದಾಕೆ ಒಬ್ಬಳನ್ನು ನೇಮಿಸಿಕೊಂಡೆವಾದರೂ ಅದು ಖರ್ಚಿನ ಬಾಬ್ತಾಯಿತು. ಹಾಗಾಗಿ ನಾನೇ ಮನೆ ಹಾಗೂ ಮಗನನ್ನು ಸಂಭಾಳಿಸಿದ್ದೆ ಪತಿಯ ಸಹಕಾರದೊಂದಿಗೆ. ಎರಡೂವರೆ ವರ್ಷಕ್ಕೆಲ್ಲಾ ಪ್ಲೇ ಹೋಮ್, ಕಿಂಡರ್ ಗಾರ್ಡನ್ ಎಂದು ಆ ಮಗುವನ್ನು ನನ್ನಿಂದ ದೂರಗೊಳಿಸಿದ್ದಕ್ಕೆ ಬೇಸರವಿತ್ತಾದರೂ ಬೇರಾವ ಉಪಾಯವೂ ಇರಲಿಲ್ಲ ನನ್ನ ಬಳಿ. ಆದರೂ ಆಫೀಸ್ ಮುಗಿಸಿ ಮನೆಗೆ ಬಂದ ನಂತರ ಅವನೊಂದಿಗೆ ಆದಷ್ಟು ಸಮಯ ಕಳೆದು ಒಂದು ಸುರಕ್ಷತೆಯ ಭಾವ ಕಟ್ಟಿಕೊಡಲು ಸಾಕಷ್ಟು ಪ್ರಯತ್ನಿಸಿದ್ದವು ನಾವಿಬ್ಬರು. ನಂತರ ಶಾಲೆಗೆ ದಾಖಲಾದ ಮೇಲೆ ಸ್ನೇಹಿತರು, ಆಟ, ಪಾಠ, ಹೊಂವರ್ಕ್ ಎಂದು ಸಮಯ ಸರಿಯುತ್ತಿತ್ತು. ದಿನಂಪ್ರತಿ ಅವನ ಎಲ್ಲಾ ಚಟುವಟಿಕೆಗಳ ಮೇಲೆ ಗಮನವಿರಿಸುತ್ತೇನೆ. ಆದರೂ ಹೀಗೇಕಾಯಿತು?

ಕಳೆದೆರಡು ದಿನಗಳಿಂದ ಅವನ ವರ್ತನೆಯಲ್ಲಿ ಏನೋ ಬದಲಾವಣೆಯಾಗಿದೆ ಎಂದು ಭಾಸವಾಗಿತ್ತು ನನಗೆ. ಆಟ ಕಡಿಮೆಯಾಗಿತ್ತು. ಬಹಳ ಚೂಟಿಯಾಗಿದ್ದವ ತುಂಬಾ ಮೌನವಾಗಿದ್ದ. ಏನೋ ಯೋಚನೆ ಮಾಡುತ್ತಿರುತ್ತಿದ್ದ. ಆದರೆ ಈ ವಾರವಿಡೀ ಆಡಿಟಿಂಗ್. ಅದರ ತಲೆಬಿಸಿಯಲ್ಲಿ ಇದ್ದದ್ದರಿಂದ ಅವನನ್ನು ನಾವಿಬ್ಬರೂ ಸರಿಯಾಗಿ ಗಮನಿಸಲಿಲ್ಲವೇನೋ? ನನ್ನನ್ನು ನಾನೇ ಹಳಿದುಕೊಂಡೆ.

ಆದರೆ ಇವತ್ತು......

ಅಡುಗೆ ಮಾಡುತ್ತಿದ್ದಾಗ ಆಗಷ್ಟೇ ನಿದ್ದೆಯಿಂದ ಎದ್ದು ಬಂದು ಕಾಲನ್ನು ತಬ್ಬಿದ್ದವನನ್ನು ಎತ್ತಿ ಮುದ್ದಿಸಿದ್ದೆ. ಆಗ ಹೆಗಲಿನ ಸುತ್ತ ಕೈ ಹಾಕಿ ಕೇಳಿತ್ತು ನನ್ನ ಕಂದ...
"ಮಮ್ಮಾ ಟೆಲಲಿಸ್ಟ್ ಅಂದ್ರೇನು?" ಅವನ ತೊದಲು ಪ್ರಶ್ನೆ ನನ್ನನ್ನು ಬೆಚ್ಚಿಬೀಳಿಸಿತ್ತು. ಪ್ರಶ್ನೆಯೊಂದಿಗೆ ದಾಳಿಯಿಟ್ಟ ಹಲವು ಯೋಚನೆಗಳೊಂದಿಗೆ ಬಡಿದಾಡುತ್ತಿದ್ದ ನನ್ನನ್ನು ಮತ್ತೆ ಅವನೇ ಎಚ್ಚರಿಸಿದ್ದ..

"ಹೇಳಮ್ಮಾ" ಗೋಗರೆಯುತ್ತಿದ್ದವನನ್ನು ಅಲ್ಲೇ ಕಟ್ಟೆಯ ಮೇಲೆ ಕೂರಿಸಿ,
"ಇದನ್ಯಾರು ಕೇಳಿದ್ದು ಪುಟ್ಟುಮರಿ ನಿನ್ಹತ್ರ?" ರಮಿಸಿ ಕೇಳಿದೆ.

"ಸ್ಕೂಲಲ್ಲಿ ನನ್ನ ಬೆಸ್ಟ್ ಫ್ರೆಂಡ್ ಇದ್ದಾನಲ್ಲ ಅವನ ಹತ್ರ ಬೇರೆ ಫ್ರೆಂಡ್ಸ್ ಯಾರೂ ಮಾತಾಡ್ತಿಲ್ಲ ಒಂದು ವಾರದಿಂದ. ನಾನೂ ಮಾತಾಡ್ಬಾರದು ಅಂತ ಉಳಿದ ಫ್ರೆಂಡ್ಸ್ ಎಲ್ಲಾ ಹೇಳಿದ್ರು. ಅವನ ಜಾತಿ ಬೇರೆದಂತೆ. ಅವನ ಜಾತಿಯೋರು ಟೆಲಲಿಸ್ಟ್ ಬಾಂಬ್ ಹಾಕ್ತಾರಂತೆ. ಇನ್ನೂ ಏನೇನೋ ಹೇಳಿದ್ರು. ನನಗೆ ಅರ್ಥ ಆಗಿಲ್ಲ. ನಾನು ಅವನತ್ರ ಮಾತಾಡಿದ್ರೇ ನನ್ಹತ್ರ ಯಾರೂ ಮಾತಾಡಲ್ವಂತೆ" ಅವನು ಗಿಣಿಮರಿಯಂತೆ ಉಲಿಯುತ್ತಿದ್ದರೆ ನನಗೆ ತಲೆ ಸುತ್ತತೊಡಗಿತು.

"ಆದ್ರೆ ಅವ್ನು ನನ್ನ ಬೆಸ್ಟ್ ಫ್ರೆಂಡ್ ಪಾಪ ಅಲ್ವಾ ಅಮ್ಮ. ಅವನೊಬ್ನೇ ಲಾಸ್ಟ್ ಬೆಂಚಲ್ಲಿ ಬೇಜಾರಲ್ಲಿ ಕೂತಿರ್ತಾನೆ. ನಂಗೂ ಬೇಜಾರಾಗುತ್ತೆ ಮಮ್ಮಾ. ಅವ್ನ ಮಮ್ಮಿ ನಂಗೆ ಯಾವಾಗ್ಲೂ ಎಷ್ಟು ಚಂದ ಬಿರಿಯಾನಿ ಮಾಡಿ ಕೊಡ್ತಾರೆ. ಅಂಕಲ್ ಪೇರೆಂಟ್ಸ್ ಮೀಟಿಂಗಿಗೆ ಬಂದಾಗೆಲ್ಲ ಚಾಕ್ಲೇಟ್ ಕೊಡ್ತಾರೆ. ಮತ್ತೆ ನಾನ್ಯಾಕೆ ಅವನತ್ರ ಮಾತಾಡ್ಬಾರದು?
ಟೆಲಲಿಸ್ಟ್ ಅಂದ್ರೆ ಏನು? ಜಾತಿ ಅಂದ್ರೇನು? ಅವನು ಯಾವ ಜಾತಿ? ನಾವು ಯಾವ ಜಾತಿ?" ಅವನ ಪುಟ್ಟ ಮನದಲ್ಲಿದ್ದ ಗೊಂದಲಗಳೆಲ್ಲಾ ಪ್ರಶ್ನೆಗಳ ರೂಪತಳೆದು ಅವ್ಯಾಹತವಾಗಿ ದಾಳಿ ನೆಡೆಸಿದ್ದವು. ಆದರೆ‌ ನಾನು ಉತ್ತರಿಸುವ ಚೈತನ್ಯ ಕಳೆದುಕೊಂಡಿದ್ದೆ.....

"ಹೋಗು ಅಮ್ಮ, ನಾನೇನು ಕೇಳಿದ್ರೂ ಆನ್ಸರ್ ಮಾಡಲ್ಲ. ಬ್ಯಾಡ್ ಮಮ್ಮಾ ನೀನು" ಕೋಪದಿಂದ ಮುಖವೂದಿಸಿದ ಅವನ ಪರಿ ಕಂಡು ಅವನಿಗೆ ಏನು ಉತ್ತರಿಸಬೇಕೋ ತಿಳಿಯದಾದೆ.

"ಅದು ಹಾಗಲ್ಲ ಕಂದಾ, ನಿನ್ನ ಪ್ರಶ್ನೆಗೆ ಸರಿಯಾದ ಉತ್ತರ ನನ್ನ ಹತ್ರನೇ ಇಲ್ಲ. ನಾನು ಉತ್ತರ ಹುಡುಕಿ ಆಮೇಲೆ ನಿನ್ಗೆ ಹೇಳ್ತಿನಿ ಓಕೆನಾ?" ಕೇಳಿದೆ. ಸರಿಯೆಂದು ತಲೆಯಾಡಿಸಿದವನ ಬೆನ್ನುದಡವಿ ಹಾರ್ಲಿಕ್ಸ್ ಕೊಟ್ಟು ಆಟವಾಡಲು ಕಳಿಸಿದೆ...

ಇಲ್ಲದಿದ್ದರೂ ಅವನ ಪ್ರಶ್ನೆಗಳಿಗೆ ಮೊದಲು ನಾನು ಉತ್ತರ ಹುಡುಕಿಕೊಳ್ಳಬೇಕಿತ್ತು. ಅವನು ಕೇಳಿದ ಪ್ರಶ್ನೆಗಳೇ ಹಾಗಿತ್ತು. ಇಂತಹ‌ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು? ಈ ಪ್ರಶ್ನೆಗಳಿಗೆ ಒಂದೇ ತೆರನಾದ ಉತ್ತರ ಇರುವುದಿಲ್ಲ. ಅವರವರ ಭಾವಕ್ಕೆ ತಕ್ಕಂತೆ ಉತ್ತರಗಳು ಬದಲಾಗುತ್ತದೆ.

ಆಧುನಿಕ ಯುಗದ ಅಗಣಿತ ನ್ಯೂಸ್ ಚಾನೆಲ್ಲುಗಳು, ಅವರ ಪ್ರೈಮ್ ಟೈಮ್, ಬ್ರೇಕಿಂಗ್ ನ್ಯೂಸುಗಳ ಹಾವಳಿ, ಫೇಸ್ಬುಕ್, ವಾಟ್ಸಾಪ್, ಹಾಳು ಮೂಳುಗಳು ಮಕ್ಕಳ ಬಾಲ್ಯದ ಮುಗ್ಧತೆಯನ್ನೇ ಕಸಿಯುತ್ತಿವೆಯೇ?

ಈ ಆಧುನಿಕ ಸಮೂಹ ಸಂವಹನ ಮಾಧ್ಯಮಗಳ ಟಿ. ಆರ್. ಪಿ, ರೇಟಿಂಗ್ ಹೆಚ್ಚಿಸಿಕೊಳ್ಳುವ ಭರಾಟೆಯಲ್ಲಿ ನೈತಿಕ ಜವಾಬ್ದಾರಿ, ಸಾಮಾಜಿಕ ಕಳಕಳಿ, ಸಾಮರಸ್ಯವೆಂಬುದು ಮೂಲೆಗುಂಪಾಗಿದೆ. ಸಿಕ್ಕದ್ದೆಲ್ಲಾ ಬ್ರೇಕಿಂಗ್ ನ್ಯೂಸೇ... ವಿಷಯದ ಸತ್ಯಾಸತ್ಯತೆ ಪರಿಶೀಲಿಸುವುದು, ಅದನ್ನು ಯಾರ ಮನಸ್ಸಿಗೂ ಘಾಸಿಯಾಗದಂತೆ ಸಹಜವಾಗಿ ಪ್ರಸ್ತುತಪಡಿಸುವುದು ಇದನ್ನೆಲ್ಲಾ ಹೆಚ್ಚಿನ ಚಾನೆಲ್ಲುಗಳು ಮರೆತೇ ಬಿಟ್ಟಿವೆ. ಈಗಿನ ಮಕ್ಕಳೋ... ಅವರಿರುವುದೇ ಒಂದೋ ಟಿ.ವಿಯ ಮುಂದೆ, ಇಲ್ಲಾ ಮೊಬೈಲ್ ಫೋನ್ ಒಳಗೆ.... ಅವರ ಮುಗ್ಧ ಮನಸ್ಸುಗಳಲ್ಲಿ ಇಂತಹ ವಿಚಾರಗಳು ಯೋಚನಾವಲಯಕ್ಕೆ ದಕ್ಕಿದ ರೂಪವನ್ನು ಪಡೆದುಕೊಳ್ಳುತ್ತವೆ....

ಅದರೊಂದಿಗೆ ದೊಡ್ಡವರೆನಿಸಿಕೊಂಡ ನಾವೂ ಆ ನ್ಯೂಸ್ ಗಳ ಮೇಲೆ ನಮ್ಮ ಮೂಗಿನ ನೇರದ ಕಾಮೆಂಟುಗಳನ್ನು ಮಾಡುತ್ತೇವೆ. ಇದೆಲ್ಲವನ್ನೂ ಮಕ್ಕಳು ಗಮನಿಸುತ್ತಾರೆ. ಅವರ ಮುಗ್ಧ ಮನದಲ್ಲಿ ನಮ್ಮ ಮಾತುಗಳು ಮೂಡಿಸುವ ಪ್ರಭಾವ?? ಅದರ ಬಗ್ಗೆ ನಾವೆಷ್ಟು ಯೋಚಿಸುತ್ತಿದ್ದೇವೆ?

ಇದೇ ಪ್ರಶ್ನೆಗಳು ಯಾರೋ ವಯಸ್ಕರ ಬಾಯಿಂದ ಬಂದಿದ್ದರೆ ಒಂದು ಬಗೆ. ಆದರೆ ಎರಡನೇ ತರಗತಿಯ ಮಕ್ಕಳ ತಲೆಯಲ್ಲಿ ಇಂಥಾ ಯೋಚನೆಗಳು.... ಹಾಗಾದರೆ ಈ ವಿಚಾರಕ್ಕೆ ಆ ಎಳೆಯ ತಲೆಗಳಲ್ಲಿ ಸಿಕ್ಕಿರುವ ಪ್ರಾಮುಖ್ಯತೆ ಎಂತಹದು? ಅದೆಷ್ಟು ಗೊಂದಲಗಳಿರಬಹುದು ಅವರಲ್ಲಿ..
ಆ ಸ್ನೇಹಿತರಿಂದ ಬೇರ್ಪಟ್ಟ ಮಗುವಿನ ಪಾಡೇನು? ತಾನು ಎಲ್ಲರಿಂದ ದೂರವಾದಂತಹ ಪರಕೀಯ ಭಾವವೊಂದು ಕಾಡದೇ ಆ ಹಸುಳೆಯನ್ನು? ಆ ಮಗುವಿನ ಭಾವವಲಯದಲ್ಲೊಂದು ಅಸಹನೆಯ ಭಾವ ಸುಳಿದಾಡದೇ? ಒಂದು ವೇಳೆ ಆ ಭಾವ ಹೆಮ್ಮರವಾದರೆ???? ಭವಿಷ್ಯತ್ತಿನಲ್ಲಿ ಮತ್ತದೇ ಜಗಳ, ಕದನ.......

ಇದು ಹೀಗೆ ಮುಂದುವರೆದರೆ ಈ ಮಕ್ಕಳೂ ಮುಂದೆ ರೋಗಗ್ರಸ್ತ ಯೋಚನೆಗಳನ್ನು ತುಂಬಿಕೊಂಡ ನಾಗರೀಕರಾಗಿ ತಯಾರಾಗುತ್ತಾರೆ. ಇದೇ ಜಗಳ, ದೊಂಬಿ, ಕದನಗಳನ್ನೇ ನಾವು ನಮ್ಮ ಮುಂದಿನ ತಲೆಮಾರಿಗೆ ಉಡುಗೊರೆಯಾಗಿ ಕೊಡುವುದೇ? ನಾವು ಹೊಡೆದಾಡಿಕೊಂಡು ಸಾಯುತ್ತಿದ್ದೇವೆ, ನೀವೂ ಅದನ್ನೇ ಮುಂದುವರೆಸಿ ಎಂದು ಸುಮ್ಮನಿದ್ದುಬಿಡುವುದೇ? ನಮ್ಮ ಪೀಳಿಗೆಯಂತೂ ಭೇದ ಭಾವಗಳ ಸುಳಿಗೆ ಸಿಕ್ಕು ಮನುಷ್ಯತ್ವವೆಂಬ ನೌಕೆಯು ಜಾತಿ,ಧರ್ಮ,ವರ್ಗ, ವರ್ಣಗಳೆಂಬ ಕೆಸರಲ್ಲಿ ಮುಳುಗತೊಡಗಿದೆ...... ಭವಿಷ್ಯತ್ತಿನ ಮಾನವೀಯತೆಯ ಭರವಸೆಯ ನೌಕೆಯನ್ನೂ ಈಗಿನಿಂದಲೇ ಹಾಳುಗೆಡವಲು ಹವಣಿಸುವುದು ಸರಿಯೇ??? ನಾವು ಹಾಳಾಗಿರುವುದು ಸಾಲದೆಂದು ಭವಿಷ್ಯದ ಭರವಸೆಯ ಕುಡಿಗಳನ್ನೂ ಚಿವುಟುವುದು ಯಾವ ನ್ಯಾಯ?

ಈಗ ಇವನಿಗೆ ಏನೆಂದು ಉತ್ತರಿಸಲಿ? ಹೇಗೆ ಅವನ ಮನದಲ್ಲಿರುವ ಗೊಂದಲಗಳನ್ನು ಪರಿಹರಿಸಲಿ? ಪ್ರಪಂಚದಲ್ಲಿ ಯಾರ ಪ್ರಶ್ನೆಗಳಿಗಾದರೂ ಉತ್ತರಿಸಿ ಸಮಾಧಾನಿಸಬಹುದೇನೋ. ಆದರೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಒಂದು ಉತ್ತರಕ್ಕೆ ಹತ್ತು ಪ್ರಶ್ನೆಗಳು ತಯಾರಾಗಿರುತ್ತವೆ ಆ ಪುಟ್ಟ ಮೆದುಳಲ್ಲಿ. ಹೊಡೆದು, ಬಡಿದು ಹೇಳಿಕೊಡಲಾಗದು ಇದನ್ನೆಲ್ಲಾ. ಉತ್ತರಿಸುವ ಪ್ರಕಾರದಲ್ಲಿ ಸ್ವಲ್ಪ ಎಡವಿದರೂ ಗೊಂದಲಗಳು ಹೆಚ್ಚಾಗಿ ಪರಿಣಾಮ ಘೋರ. ಅದರಲ್ಲೂ ಇದು ಬಹಳ‌ ಸೂಕ್ಷ್ಮ ವಿಚಾರ.ಅವನು ಇವನ ಆಪ್ತಮಿತ್ರ. ಒಡಹುಟ್ಟಿದ ಸಹೋದರರಂತಹ ಅವಿನಾಭಾವ ಒಡನಾಟವಿದೆ ಆ ಎರಡು ಮುಗ್ಧ ಜೀವಗಳ ನಡುವೆ. ಹೇಗೆ ವಿವರಿಸಿ ಹೇಳುವುದು ಆ ಮುಗ್ಧ ಮನಕ್ಕೆ ಘಾಸಿಯಾಗದಂತೆ??? ಎಂದು ಯೋಚಿಸುತ್ತಾ ಕಿಟಕಿಯಿಂದ ಮನೆಯ ಹೊರಗೆ ನೋಡತೊಡಗಿದೆ.

ಬಾಂದಳದಲ್ಲಿ ನಿಶಾದೇವಿಯ ಮಡಿಲಿಗೆ ಜಾರಲು ತವಕಿಸುತ್ತಿರುವ ರವಿಯ ಕಿರಣಗಳಿಗೆ ಭೇದಭಾವದ ಹಂಗಿಲ್ಲ. ಹಾರಾಡುವ ಬಾನಾಡಿಗಳಿಗೆ, ಭೂಲೋಕದ ಸಕಲ ಜೀವಜಂತುಗಳಿಗೆ ಜಾತಿ, ಮತ, ವರ್ಗ, ವರ್ಣಗಳೆಂಬ ಸಾವಿರ ಕಟ್ಟಳೆಗಳಿಲ್ಲ....ಮಾನವನೆಂಬ ಪ್ರಾಣಿಯೊಂದನ್ನು ಹೊರತುಪಡಿಸಿ.... ಜಗದ ಎಲ್ಲಾ ನೀತಿ, ನಿಯಮ, ಕಟ್ಟುಪಾಡುಗಳಿರುವುದು ಮನುಜನಿಗೆ. ವಿಪರ್ಯಾಸವೆಂದರೆ ಅದನ್ನು ಸೃಷ್ಟಿಸಿಕೊಂಡಿರುವವರೂ ನಾವೇ.

ನನ್ನದೇ ಯೋಚನೆಯೊಳಗೆ ಮುಳುಗಿದ್ದವಳನ್ನು ಮತ್ತೆ ಎಚ್ಚರಿಸಿದ್ದು ಆಟ ಮುಗಿಸಿ ಮನೆಗೆ ಬಂದ ಮಗನೇ..
"ಅಮ್ಮಾ, ಆಟ ಆಡೋಕೆ ಬೇಜಾರು" ಬಂದು ಮಡಿಲೇರುತ್ತಾ ಹೇಳಿದವನ ತಲೆ ಸವರಿ ಸ್ನಾನಕ್ಕೆ ಕರೆದೊಯ್ದೆ. ಸ್ನಾನ ಮುಗಿಯುವ ವೇಳೆಗೆ ಅವನ ಅಪ್ಪನೂ ಬಂದಿದ್ದರಿಂದ ಅವರ ಹೆಗಲೇರಿದ. ಅಪ್ಪ ಬಂದ ಮೇಲೆ ಅವರದ್ದೇ ಬಾಲ ಅವನು. ಊಟಮಾಡಿಸಿ ಅವನನ್ನು ಮಲಗಿಸಿದೆ. ನಾಳೆ ಭಾನುವಾರವಾದ್ದರಿಂದ ಸ್ವಲ್ಪ ನಿರಾಳ.

ನಾವಿಬ್ಬರೂ ಊಟಕ್ಕೆ ಕುಳಿತಾಗ ಮನೆಯವರಿಗೆ ಇವತ್ತಿನ ಘಟನೆ ವಿವರಿಸಿದೆ. ಅವರೂ ದಂಗಾದರು ಪುಟ್ಟ ಮಕ್ಕಳ ಯೋಚನಾ ಲಹರಿಗೆ. ಇದೇ ವಿಷಯ ಚರ್ಚಿಸುತ್ತಾ ಬಹಳ ಹೊತ್ತು ಕುಳಿತೆವು. ಆದರೆ ಮಗುವಿಗೆ ಉತ್ತರಿಸುವ ಪರಿ ತಿಳಿಯಲಿಲ್ಲ.

ಮರುದಿನ ಬೆಳಿಗ್ಗೆ ಮನೆಯ ಮುಂದಿದ್ದ ಪುಟ್ಟ ಕೈತೋಟದಲ್ಲಿದ್ದ ಗಿಡಗಳ ಆರೈಕೆಗೆ ತೊಡಗಿದ್ದೆ. ಇದು ಭಾನುವಾರದ ಕೆಲಸ. ಅಂದು ಮಾತ್ರ ಸಾಧ್ಯವಾಗುವುದು. "ಅಮ್ಮಾ" ಎಂದು ಕಣ್ಣು ಹೊಸಕಿ ಕೊಳ್ಳುತ್ತಾ ಬಂದಿದ್ದ ನನ್ನ ರಾಜಕುಮಾರ. ಅವನಿಗೊಂದು ಗುಡ್ ಮಾರ್ನಿಂಗ್ ಹೇಳಿ ಅಲ್ಲೇ ಕಟ್ಟೆಯ ಮೇಲೆ ಕೂರಿಸಿ ಕೆಲಸ ಮುಂದುವರೆಸಿದೆ. ಕೆಲವು ಗಿಡಗಳಿಗೆ ಹುಳುವಿನ ಕಾಟ... ನಾನು ಗಿಡದ ಹುಳು ಹಿಡಿದ ಭಾಗಗಳನ್ನು ತೆಗೆಯುತ್ತಿದ್ದುದ್ದನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದವನು " ಅಮ್ಮಾ ಅದ್ಯಾಕೆ ಆ ಎಲೆಗಳನೆಲ್ಲಾ ತೆಗೀತಿದ್ದೀಯಾ?" ಎಂದ.

ಮಗ ನಿನ್ನೆ ಕೇಳಿದ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದೆಂದು ಯೋಚಿಸುತ್ತಿದ್ದವಳಿಗೆ ತಟ್ಟನೆ ಉಪಾಯವೊಂದು ಹೊಳೆಯಿತು. ಅವನನ್ನು ಆ ಗಿಡದ ಬಳಿ ಕರೆದೊಯ್ದು ಅದರ ಮೇಲೆ ಹರಿಯುತ್ತಿದ್ದ ಹುಳುಗಳನ್ನು ತೋರಿಸಿದೆ.
"ಇಲ್ಲಿ ನೋಡು ಪುಟ್ಟುಮರಿ, ಗಿಡದ ಕೆಲವು ಎಲೆಗಳಿಗೆ ಹುಳು ಹಿಡಿದಿದೆ. ಇದನ್ನು ತೆಗೆಯದೇ ಹೋದರೆ ಈ ಹುಳುಗಳು ಇಡೀ ಗಿಡವನ್ನೇ ಆವರಿಸಿ ಗಿಡವೇ ಸಾಯುತ್ತೆ. ಅದೇ ಹುಳು ಹಿಡಿದ ಭಾಗಗಳನ್ನು ತೆಗೆದರೆ ಗಿಡ ಚೆನ್ನಾಗಿ ಬೆಳೆದು ಶುದ್ಧವಾದ ಗಾಳಿಯನ್ನು, ನೆರಳನ್ನು ನೀಡುತ್ತದೆ ಅಲ್ವಾ." ಎಂದಾಗ ಹೌದೆಂದು ತಲೆಯಾಡಿಸಿದ.

ಅವನನ್ನು ನನ್ನ ಮಡಿಲಲ್ಲಿ ಕೂರಿಸಿಕೊಂಡೆ. " ಮಗೂ ನಾನು, ನೀನು, ಅಪ್ಪ, ನಿನ್ನ ಸಹಪಾಠಿ ಸ್ನೇಹಿತರು, ನಾವೆಲ್ಲರೂ ಈ ಗಿಡದ ಎಲೆಗಳಿದ್ದಂತೆ. ನಾವು ಹಿರಿಯರು ಈ ದೊಡ್ಡ ದೊಡ್ಡ ಎಲೆಗಳಂತೆ, ವಯಸ್ಸಾಗಿರುವವರು, ಉದುರಲು ತಯಾರಾಗಿರುವವರು. ನೀವು ಅಂದರೆ ಮಕ್ಕಳು ಈ ಚಿಗುರಿನಂತೆ. ಈಗಿನ್ನೂ ಕಣ್ತೆರೆಯುತ್ತಿರುವ ನಾಳೆಯ ಭರವಸೆಯ ಕುಡಿಗಳು. ಭವಿಷ್ಯ ನಿಂತಿರುವುದು ಈ ಚಿಗುರಿನ ಮೇಲೆ.

ಈ ಜಾತಿ, ಮತ, ವರ್ಗ, ವರ್ಣಗಳೆಂದು ಬೇಧಭಾವ ಮಾಡುವುದು, ಹೊಡೆದಾಡುವುದು, ಟೆರರಿಸಂ ಅಂದ್ರೆ ಭಯೋತ್ಪಾದನೆ ಎಂಬುದೆಲ್ಲಾ ಗಿಡಕ್ಕೆ ರೋಗ ತರುವ ಹುಳುಗಳಿದ್ದಂತೆ. ಇವು ನಮ್ಮ ಯೋಚನೆಗಳೆಂಬ ಎಲೆಗಳನ್ನು ಮುರುಟಿಸಿ ಮೆದುಳಿಗೆ ರೋಗ ಹರಡಲು ಪ್ರಯತ್ನಿಸುತ್ತವೆ.

ಕೆಲವು ಹಿರಿಯರು ಈ ಹುಳುವಿನ ದಾಳಿಗೆ ಸಿಕ್ಕಿ ತಾವು ಪ್ರಭಾವಿತರಾಗುವುದಲ್ಲದೇ ಮಕ್ಕಳಿಗೂ ಅದೇ ರೋಗಗ್ರಸ್ತ ಯೋಚನೆಗಳನ್ನು ಹಂಚುತ್ತಾರೆ. ಮಗುವಿನ ಯೋಚನೆಗಳಿಗೆ ಹುಳು ಹಿಡಿದು ಮೆದುಳು ಕಹಿ ಚಿಂತನೆಗಳ ಆಗರವಾಗುತ್ತದೆ. ಆಗ ಚಿಗುರಿನ ಸಹಿತ ಇಡೀ ಗಿಡ ರೋಗಗ್ರಸ್ತವಾಗಿ ಕಹಿ ಹಂಚತೊಡಗುತ್ತದೆ.

ಇನ್ನು ಕೆಲವು ಹಿರಿಯರು ಆ ಹುಳುವಿನ ದಾಳಿಗೆ ಸಿಲುಕದೇ ಇಗೋ ಈ ಹಸಿರು ಎಲೆಯಂತೆ ತಾವೂ ರೋಗ ಅಂಟಿಸಿಕೊಳ್ಳದೇ, ಮಕ್ಕಳಿಗೂ ಅಂಟಗೊಡದೇ ಕೇವಲ ಒಳ್ಳೆಯ ಯೋಚನೆಗಳನ್ನು ಮಾತ್ರ ಹಂಚುತ್ತಾರೆ.ಆಗ ಮಗುವಿನ ಯೋಚನೆಗಳು ಸಿಹಿಯಾಗಿ ಉದಾತ್ತ ಚಿಂತನೆಗಳು ಹರಡುತ್ತವೆ..." ಮುಂದೆ ನನ್ನ ಮಾತನ್ನು ತಡೆದು ಅವನೇ ಹೇಳಿದ..

"ಆಗ ಗಿಡದ ಎಲೆ, ಚಿಗುರು ಎಲ್ಲಾ ಹಸಿರಾಗಿ ಚೆಂದ ಇರುತ್ತೆ. ಗಿಡಕ್ಕೆ ಕಾಯಿಲೆನೇ ಬರೋಲ್ಲ. ಅದು ಒಳ್ಳೆ ಗಾಳಿ ನೆರಳು ಕೊಡುತ್ತೆ. ಹಸಿರು ಇದ್ರೆನೇ ನೋಡೋಕೆ ಚೆಂದ ಮಮ್ಮಾ" ಚಪ್ಪಾಳೆ ತಟ್ಟುತ್ತಾ ಹೇಳಿದವನನ್ನು ಅಪ್ಪಿಕೊಂಡೆ.

"ಕರೆಕ್ಟ್ ಕಂದಾ. ನೀನು ನಿನ್ನ ಫ್ರೆಂಡ್ಸ್ ಎಲ್ಲಾರೂ ಗಿಡದ ಚಿಗುರುಗಳು. ನಾವು ದೊಡ್ಡವರು ಹೇಗೂ ಉದುರುವ ಎಲೆಗಳು... ಆದರೆ ನಿಮ್ಮಂತಹ ಚಿಗುರಿಗೆ ಈ ರೀತಿಯ ಹುಳುಗಳು ಹಿಡಿದ್ರೆ ಭವಿಷ್ಯದಲ್ಲಿ ಇಡೀ ಮರವೇ ವಿಷಕಾರಿಯಾಗುತ್ತೆ. ಹಾಗಾಗಿ ಈ ಹುಳುಗಳನ್ನೆಲ್ಲಾ ಈಗ್ಲೇ ತಲೆ ಅನ್ನೋ ಎಲೆಯಿಂದ ಕಿತ್ತು ಬಿಸಾಕಬೇಕು. ಆಗಲೇ ಈ ಚಿಗುರು ಚೆನ್ನಾಗಿ ಬಲಿತು ನಾಳೆ ಒಳ್ಳೆಯ ಮರವಾಗೋದು. ತಿಳೀತಾ?" ಕೇಳಿದೆ.

"ಹೂಂ ಅಮ್ಮಾ, ನಾನು ಹಸಿರೆಲೆ ತರ ಈ ಹುಳಗಳನ್ನೆಲ್ಲಾ ತಲೆಗೆ ಹತ್ತಿಸ್ಕೊಳ್ಳೋಲ್ಲ. ಹಾಗೆ ನನ್ನ ಫ್ರೆಂಡ್ಸ್ ಗಳಿಗೂ ಹತ್ತೋಕೆ ಬಿಡಲ್ಲ. ನಾವೆಲ್ಲಾ ಒಳ್ಳೆ ಗಾಳಿ ಕೊಡೋ ಹಸಿರು ಮರ ಆಗ್ತೀವಿ. ನಾವು ರೋಗದ ಮರ ಆಗೋಲ್ಲ. ಎಲ್ಲಾ ಕಡೆ ಹಸಿರು ಮರನೇ ಇರ್ಬೇಕು...." ಚಪ್ಪಾಳೆ ತಟ್ಟಿ ನನ್ನ ಕೆನ್ನೆಗೆ ಮುತ್ತಿಟ್ಟು "ಲವ್ ಯು ಅಮ್ಮ" ಎಂದು ಖುಷಿಯಿಂದ ಒಳಗೆ ಓಡಿದವನನ್ನೇ ನೋಡಿದೆ.... ನಾಳಿನ ಭರವಸೆಯ ಭವಿಷ್ಯದ ಒಂದು ಸೆಳಹು ಕಂಡಂತಾಗಿ ನಾನೂ ನಿರಾಳವಾದೆ.

ಒಳಗೆ ಎಫ್. ಎಂ ನಿಂದ ಅರ್ಥಪೂರ್ಣವಾದ ಹಾಡೊಂದು ತೇಲಿ ಬರುತ್ತಿತ್ತು.

ಪಂಚೀ ನದಿಯಾ ಪವನ್ ಕೇ ಜೋ಼ಂಕೇ
ಕೋಯಿ ಸರ್ಹದ್ ನಾ ಇನ್ಹೇ ರೋಕೇ
ಸರ್ಹದ್ ಇನ್ಸಾನೋ ಕೆ ಲಿಯೆ ಹೈ
ಸೋಚೋ ತುಮ್ ನೆ ಔರ್ ಮೈನೆ
ಕ್ಯಾ ಪಾಯಾ ಇನ್ಸಾನ್ ಹೋಕೆ.......

ಗುರುವಾರ, ಜೂನ್ 11, 2020

ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ....

ಹೆಣ್ಣಿನ ಶೋಷಣೆಗೆ ಎಷ್ಟು ಮುಖಗಳು.....?
ಒಂದು? ಹತ್ತು? ಸಾವಿರ........?
ಬಹುಶಃ ಈ ಪ್ರಶ್ನೆಗೆ ಸಮರ್ಪಕ ಉತ್ತರ ಎಂದೂ ದೊರಕದು. ಏಕೆಂದರೆ ಸ್ತ್ರೀ ಶೋಷಣೆಗೆ ಅಗಣಿತ ಮುಖಗಳು, ಅಸಂಖ್ಯ ಆಯಾಮಗಳಿವೆ. ಮಹಾಕಾವ್ಯಗಳಿಂದ ಹಿಡಿದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ, ದಾಖಲಾಗದೇ ಉಳಿದ ಹೆಣ್ಣಿನ ಕಣ್ಣೀರು, ನೋವಿನ ನಿಟ್ಟುಸಿರುಗಳನ್ನು ಲೆಕ್ಕ ಇಟ್ಟವರ್ಯಾರು? ಸ್ತ್ರೀ ಶೋಷಣೆ ಎಂಬುದು ಅನಾದಿಕಾಲದಿಂದ ನಮ್ಮ ಸಮಾಜದಲ್ಲಿ ಬೇರು ಬಿಟ್ಟು ಭ್ರಷ್ಟ ವ್ಯವಸ್ಥೆಯಿಂದ ಪೋಷಣೆ ಪಡೆದು ಬಲಿಷ್ಠವಾಗಿ ಬೆಳೆದು ರೆಂಬೆ ಕೊಂಬೆಗಳಾಗಿ ಟಿಸಿಲೊಡೆದಿರುವ ವಿಷವೃಕ್ಷ. ಇನ್ನು ವರ್ತಮಾನದಲ್ಲಂತೂ ಟಿವಿಯ ಬ್ರೇಕಿಂಗ್ ನ್ಯೂಸಿನಿಂದ ಹಿಡಿದು ವೃತ್ತ ಪತ್ರಿಕೆಯ ತಲೆಬರಹದ ತನಕ ಕಣ್ಣಿಗೆ ರಾಚುವ ಬಹುಪಾಲು ಸುದ್ದಿಗಳು ಇದಕ್ಕೆ ಸಂಬಂಧಪಟ್ಟಿದ್ದೇ. ಇಂತಹ ಸುದ್ದಿಗಳ ಪುನರಾವರ್ತನೆಯಾಗದಿರಲಿ ಎಂಬ ಆಶಯದಲ್ಲಿ ನಮ್ಮ ಚಿಂತನೆಗಳನ್ನು ಶುದ್ಧೀಕರಿಸುವ ಪ್ರಾಮಾಣಿಕ ಪ್ರಯತ್ನ ಈ 'ಶುದ್ಧಿ'.


ಹಾಗೆ ನೋಡಿದರೆ ಈ ಸಿನಿಮಾದಲ್ಲಿ ಇದುವರೆಗೂ ಯಾರೂ ಹೇಳದಂತಹ ನವೀನ ವಿಚಾರವೇನೂ ಇಲ್ಲ. ಸ್ತ್ರೀಯರ ಮೇಲಿನ ದೌರ್ಜನ್ಯವನ್ನೇ ತಿರುಳಾಗಿಸಿಕೊಂಡ ಪ್ರತೀಕಾರದ ಹಲವು ಸಿನಿಮಾಗಳು ಈಗಾಗಲೇ ಬಂದಿವೆ. ಜೊತೆಗೆ ಈ ಸಿನಿಮಾದ ಕಥೆಯಲ್ಲಿನ ಹೆಚ್ಚಿನ ಅಂಶಗಳು ನಮ್ಮ ದೇಶದಲ್ಲಿ ನಡೆದ ಹಲವು ನೈಜ ಘಟನೆಗಳ ಮರುಸೃಷ್ಟಿಯಷ್ಟೇ. 2012ರಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯ ಪ್ರಕರಣ ಹಾಗೂ ಅದರ ನಂತರ ವಿಪರೀತ ಚರ್ಚೆಗೆ ಗ್ರಾಸವಾದ ಬಾಲ ನ್ಯಾಯಿಕ ಕಾಯಿದೆ (juvenile justice act), 2013ರ ಬೆಂಗಳೂರಿನ ಎಟಿಎಂ ಹಲ್ಲೆ ಪ್ರಕರಣ, ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಕರಾವಳಿಯಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ನೈತಿಕ ಪೋಲಿಸ್ ಗಿರಿ, ಮಾದಕ ದ್ರವ್ಯದ ಚಟಕ್ಕೆ ಬಿದ್ದು ನಶೆಯಲ್ಲಿ ತೇಲುತ್ತಿರುವ ಯುವವರ್ಗ, ಸಣ್ಣಪುಟ್ಟ ಗಲ್ಲಿಗಳಲ್ಲೂ ದೊರಕುವ ಅಕ್ರಮ ಶಸ್ತ್ರಾಸ್ತ್ರಗಳು, ತಪ್ಪಿತಸ್ಥರನ್ನು ಶಿಕ್ಷೆಯಿಂದ ಬಚಾವು ಮಾಡಲು ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರುವ ವ್ಯವಸ್ಥೆ, ಮಿತಿಮೀರುತ್ತಿರುವ ಕ್ರೌರ್ಯ, ಅವಸಾನವಾಗುತ್ತಿರುವ ಮಾನವೀಯ ಮೌಲ್ಯಗಳು...... ಇಂತಹ ಹತ್ತು ಹಲವು ವಾಸ್ತವಿಕ ಘಟನೆಗಳೇ ಈ ಸಿನಿಮಾದ ಹೂರಣ.

ಒಂದು ಕೊಲೆಯ ತನಿಖೆಯ ಮೂಲಕ ಆರಂಭವಾಗುವ ಸಿನಿಮಾ ನಂತರದಲ್ಲಿ ಆಗಷ್ಟೇ ವಿದೇಶದಿಂದ ಭಾರತಕ್ಕೆ ಆಗಮಿಸಿದ ಕ್ಯಾರೋಲಿನ್ ಸ್ಮಿತ್ ಎಂಬ ಮಹಿಳೆಯ ಮೇಲೆ ಕೇಂದ್ರೀಕೃತವಾಗುತ್ತದೆ. ಆಕೆಯ ನಿಗೂಢ ನಡೆಗಳು, ಭೇಟಿ ನೀಡುವ ಪ್ರದೇಶಗಳು/ಭೇಟಿಯಾಗುವ ವ್ಯಕ್ತಿಗಳು, ಅವಳಿಗೆ ಬರುವ ಅಜ್ಞಾತ ಕರೆಗಳು, ದುಃಸ್ವಪ್ನವಾಗಿ ಕಾಡುವ ಅಸ್ಪಷ್ಟ ಚಹರೆಗಳು ಅವಳ ಬಗೆಗೊಂದು ಸಂಶಯವನ್ನು ಸೃಷ್ಟಿಸಿದರೆ ಆಕೆಯ ಮುಖದಲ್ಲಿ ಹೆಪ್ಪುಗಟ್ಟಿರುವ ಗುರುತಿಸಲಾಗದ ಭಾವಗಳು ವೀಕ್ಷಕರ ಮನದಲ್ಲಿ ವಿಪ್ಲವವನ್ನೆಬ್ಬಿಸುತ್ತವೆ. ಆ ಭಾವವನ್ನು ಗ್ರಹಿಸಿ ಏನನ್ನೋ ಕಲ್ಪಿಸುವ ಹೊತ್ತಿಗೆ ಮತ್ತೆ ಕಥೆ ಬೇರೊಂದು ಮಜಲಿಗೆ ಹೊರಳುತ್ತದೆ. ಮಹಿಳಾ ಶೋಷಣೆಯ ವಿರುದ್ಧ ದನಿಯೆತ್ತಿ ಬೀದಿ ನಾಟಕಗಳ ಮುಖೇನ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಜ್ಯೋತಿ ಹಾಗೂ ದಿವ್ಯ ಎಂಬ ಇಬ್ಬರು ಯುವ ಪತ್ರಕರ್ತೆಯರ ಸಾಮಾಜಿಕ ಕಾಳಜಿಗೆ ಚಿತ್ರ ತೆರೆದುಕೊಳ್ಳುತ್ತದೆ. ಹೀಗೆ ಪದೇ ಪದೇ ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಘಟನೆಗಳೊಂದಿಗೆ ಸಾಗುವ ಕಥೆ ನೋಡುಗನನ್ನು ಆಗೀಗ ಗೊಂದಲಕ್ಕೆ ಕೆಡವುತ್ತದೆ. ಹಾಗೆ ಗೊಂದಲ ಸೃಷ್ಟಿಸುತ್ತಲೇ ನಮ್ಮಲ್ಲಿ ಒಂದು ಕುತೂಹಲವನ್ನು ಸೃಷ್ಟಿಸುತ್ತದೆ. ಇವೆಲ್ಲಾ ಕುತೂಹಲಗಳಿಗೆ ಉತ್ತರ ಸಿಗುವುದು, ಗೊಂದಲಗಳು ಸಂಪೂರ್ಣ ಪರಿಹಾರವಾಗುವುದು ಕೊನೆಯ ಹತ್ತು ನಿಮಿಷಗಳಲ್ಲಿ.

ಈ ಸಿನಿಮಾ ನೋಡುಗರನ್ನು ಆವರಿಸಿಕೊಳ್ಳುವುದು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಘಟನೆಗಳಿಗೆ ಸಂಬಂಧ ಕಲ್ಪಿಸಿರುವ ರೀತಿ ಹಾಗೂ ಅದನ್ನು ಚಿತ್ರಕಥೆಯ ಸೂತ್ರಕ್ಕೆ ಅಳವಡಿಸಿರುವ ಶೈಲಿಯಿಂದ. ಎಲ್ಲರಿಗೂ ತಿಳಿದಿರುವ ವಿಚಾರಗಳನ್ನು ಹೇಳುತ್ತಲೇ ಚಿತ್ರದ ಕೇಂದ್ರದಲ್ಲೊಂದು ಕೌತುಕವನ್ನಿಟ್ಟು, ಪ್ರತೀ ಹಂತದಲ್ಲೂ ವೀಕ್ಷಕರೊಳಗೆ ಆ ಬಗ್ಗೆ ಒಂದು ಗೊಂದಲವನ್ನು ಸೃಷ್ಟಿಸುತ್ತ ಇಡೀ ಚಿತ್ರವನ್ನು ನಿರೂಪಿಸಿರುವ ಪರಿಯನ್ನು ಮೆಚ್ಚಲೇಬೇಕು. ಚಿತ್ರದ ಅಂತಿಮ ಘಟ್ಟದವರೆಗೂ ಯಾರು ಯಾರಿಗಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ, ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಸುಳಿವು ದೊರಕುವುದಿಲ್ಲ. ಕೊನೆಯವರೆಗೂ ನಮ್ಮ ಊಹೆಗಳಿಗೆ ಸ್ಥಾನಕಲ್ಪಿಸಿ ಕ್ಲೈಮ್ಯಾಕ್ಸ್ ನಲ್ಲಿ ನಮ್ಮೆಲ್ಲಾ ಕಲ್ಪನೆಗಳನ್ನು ತಿರುವುಮುರುವಾಗಿಸಿ ಚಿತ್ರ ಕೊನೆಗೊಳ್ಳುತ್ತದೆ. ಈ ಇಡೀ ಸಸ್ಪೆನ್ಸ್ ಸೃಷ್ಟಿಯಾಗಿರುವುದು ಕೇವಲ ಚಿತ್ರದ ಘಟನಾವಳಿಗಳ ಕಾಲಕ್ರಮದ ಮೇಲೆ ಎಂಬುದು ಗಮನಾರ್ಹ ಸಂಗತಿ. 

ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಬೀದಿ ನಾಟಕದ ರೂಪದಲ್ಲಿ ಕಥೆಯೊಳಗೆ ತೋರಿಸಿದ್ದಾರೆ ನಿರ್ದೇಶಕರು. ಕೆಲವೇ ಕೆಲವು ಕ್ಷಣಗಳಲ್ಲಿ ಹಲವು ವಿಚಾರಗಳನ್ನು ನೋಡುಗರಿಗೆ ದಾಟಿಸುವ ಬೀದಿ ನಾಟಕಗಳ ಸಾಮರ್ಥ್ಯವನ್ನೂ ಈ ಸಣ್ಣ ಚುಟುಕು ದೃಶ್ಯಗಳು ತೋರುತ್ತವೆ. ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರು ರಂಗಭೂಮಿ ಹಾಗೂ ಕಿರುತೆರೆಯ ಹಿನ್ನೆಲೆಯವರು. ಕ್ಯಾರೋಲಿನ್, ಜ್ಯೋತಿ ಹಾಗೂ ದಿವ್ಯಾ ಪಾತ್ರದಲ್ಲಿ ಲಾರೆನ್ ಸ್ಪಾರ್ಟಾನೋ, ನಿವೇದಿತಾ ಹಾಗೂ ಅಮೃತಾ ಕರಗಡ ನೆನಪಿನಲ್ಲುಳಿಯುತ್ತಾರೆ. ಇವರೊಂದಿಗೆ ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ್ ಮಾಧ್ಯಮಿಕ, ಸಂಚಾರಿ ವಿಜಯ್, ಅಜಯ್ ರಾಜ್, ನಾಗಾರ್ಜುನ ರಾಜಶೇಖರ್ ಮುಂತಾದವರು ಪೋಷಕ ಪಾತ್ರದಲ್ಲಿದ್ದಾರೆ. ವಾಸುಕಿ ವೈಭವ್ ಕೂಡಾ ಒಂದು ದೃಶ್ಯದಲ್ಲಿ ಮುಖ ತೋರಿ ಮರೆಯಾಗುತ್ತಾರೆ.

ಈ ಚಿತ್ರದ ನಿರ್ದೇಶಕ ಆದರ್ಶ್ ಈಶ್ವರಪ್ಪ ಹಾಲಿವುಡ್ ಗರಡಿಯಲ್ಲಿ ಪಳಗಿರುವವರು ಎಂಬುದಕ್ಕೆ ಶುದ್ಧಿಯ ತಂತ್ರಗಾರಿಕೆಯೇ ನಿದರ್ಶನ. ಒಂದಕ್ಕೊಂದು ತಾಳೆಯಾಗದ ನಾನ್ ಲೀನಿಯರ್ ನಿರೂಪಣೆ, ಇಡೀ ಕಥೆ ನಮ್ಮ ಸಮ್ಮುಖದಲ್ಲೇ ನಡೆಯುತ್ತಿದೆ ಎನ್ನುವಷ್ಟು ನೈಜತೆಯಿಂದ ನೋಡುಗನನ್ನು ಒಳಗೊಳ್ಳುವ ಛಾಯಾಗ್ರಹಣದಿಂದಾಗಿ ಹಾಲಿವುಡ್ ಚಿತ್ರವನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಕತ್ತಲಿನ ಗಾಢತೆಯ ಮೂಲಕವೇ ಕಥೆಯ ಹೊಳಹುಗಳನ್ನು ಕೆದಕುವ ಆಂಡ್ರಿಯೋ ಅವರ ಛಾಯಾಗ್ರಹಣ, ನಿಶ್ಯಬ್ದತೆಯ ಅಂತರಾಳವನ್ನು ಕಲುಕುತ್ತಲೇ ಸನ್ನಿವೇಶಗಳ ತೀವ್ರತೆಯನ್ನು ನೋಡುಗರ ಮನಸ್ಸಿಗೆ ದಾಟಿಸುವಂತಹ ಜೆಸ್ಸಿ ಕ್ಲಿಂಟನ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾವನ್ನು ತಾಂತ್ರಿಕವಾಗಿ ಸಶಕ್ತಗೊಳಿಸಿದೆ.

ಸ್ತ್ರೀ ಶೋಷಣೆಯ ಹತ್ತು ಹಲವು ಆಯಾಮಗಳನ್ನು ತೋರುತ್ತಲೇ ನೋಡುಗನ ಚಿಂತನೆಗಳನ್ನು ಕೆಣಕುತ್ತಾ, ಪದೇ ಪದೇ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾ ಯೋಚನೆಗೆ ತಳ್ಳುವ ಸಿನಿಮಾ ಇದು. ಇದೇ ಅಂತರಂಗ ಶುದ್ಧಿ ಇದುವೇ ಬಹಿರಂಗ ಶುದ್ಧಿ ಎಂಬಂತೆ ಯಾವುದನ್ನೂ ವೈಭವೀಕರಿಸದೇ ನಿಶ್ಯಬ್ದವಾಗಿಯೇ ಮನಶುದ್ಧಿ ಹಾಗೂ ಆತ್ಮಶುದ್ಧಿಗೆ ಮೂಲವಾದ ಚಿಂತನೆಗಳ ಶುದ್ಧೀಕರಣಕ್ಕೆ ಇಂಬು ಕೊಡುವ ಈ ಸಿನಿಮಾ Netflixನಲ್ಲಿ ಲಭ್ಯವಿದೆ. ವ್ಯವಸ್ಥೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸುವ ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ ಸಿನಿಮಾ ಇದು.

ಬುಧವಾರ, ಜೂನ್ 10, 2020

ಉಳಿದವರು ಕಂಡಂತೆ

ಮದುವೆ ಮನೆಯ ವಾಲಗದ ಸದ್ದು ಇಡೀ ಊರನ್ನೇ ಆವರಿಸಿದಂತಿತ್ತು. ಕಲ್ಯಾಣ ಮಂಟಪದ ಮುಂಭಾಗ ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟು, ನವಶೋಭೆಯಿಂದ ಕಂಗೊಳಿಸುತ್ತಿತ್ತು. ಊರಿನ ಮುಕ್ಕಾಲು ಪಾಲು ಮಂದಿ ಅಲ್ಲೇ ಇದ್ದರು. ಅದೇ ಹಳ್ಳಿಗಳ ವಿಶೇಷತೆ. ಯಾರ ಮನೆಲೀ ಏನೇ ಸಮಾರಂಭ ನಡೆದರೂ ತಮ್ಮ ಮನೆಯದೇ ಕೆಲಸ ಅನ್ನೋವಷ್ಟು ಆತ್ಮೀಯತೆ ಅಲ್ಲಿರುತ್ತೆ. ಮತ್ತದು ಸೋಗಿನ ಆತ್ಮೀಯತೆಯಲ್ಲ.
ಊರಿನ ಗೌರವಾನ್ವಿತ ವ್ಯಕ್ತಿಯಾದ ಶಂಕರಯ್ಯನವರ ಮಗಳ ಮದುವೆ. ಹೇಳಿಕೊಳ್ಳುವಷ್ಟು ಸ್ಥಿತಿವಂತರಲ್ಲದಿದ್ದರೂ ಧರ್ಮಭೀರು ಮನುಷ್ಯ. ಬಹಳ ಮೃದು ಸ್ವಭಾವದವರು. ಶಂಕರಯ್ಯನವರು ತಮ್ಮ ಈ ಸ್ವಭಾವದಿಂದಲೇ ಊರಿನಲ್ಲಿ ಗೌರವ ಸಂಪಾದಿಸಿದವರು.
ಇವರ ಪತ್ನಿ ಮೀನಾಕ್ಷಮ್ಮ ಗೃಹಿಣಿ. ಬರುವ ಮಿತ ಆದಾಯದಲ್ಲೇ ಲಕ್ಷಣವಾಗಿ ಸಂಸಾರ ತೂಗಿಸುತ್ತಾರೆ. ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿಯವಳು ಕಾವೇರಿ. ವಿಧವೆ. ಮದುವೆಯಾಗಿ ಎರಡು ವರ್ಷಗಳ ನಂತರ ಗಂಡ ಕೆರೆಯಲ್ಲಿ ಮುಳುಗಿ ಸತ್ತಾಗ ಆರು ತಿಂಗಳ ಕೂಸನ್ನು ಹಿಡಿದು ತವರಿಗೆ ಬಂದವಳು ಇಲ್ಲೇ ಇದ್ದಾಳೆ.
ಈಗ ನಡೆಯುತ್ತಿರುವುದು ಎರಡನೇ ಮಗಳು ಕವನಳ ಮದುವೆ. ಎರಡನೇ ವರ್ಷದ ಬಿ.ಎ ವಿದ್ಯಾರ್ಥಿನಿ. ಶಂಕರಯ್ಯನವರಿಗೆ ಸಧ್ಯ ಮಗಳ ಮದುವೆ ಯೋಚನೆಯೇ ಇರಲಿಲ್ಲ. ಆದರೆ ಗಂಡಿನ ಮನೆಯವರು ಮನೆಬಾಗಿಲಿಗೆ ಬಂದು ಹೆಣ್ಣು ಕೇಳಿದ್ದರು. ಹುಡುಗ ಮೋಹನ್ ಇಂಜಿನಿಯರ್. ಮಸ್ಕತ್ ನಲ್ಲಿ ಕೆಲಸ. ತಂದೆ ತಾಯಿಗೆ ಒಬ್ಬನೇ ಮಗ. ಎಲ್ಲರ ವಾಸವೂ ಅಲ್ಲೇ. ಹಣಕಾಸಿಗೇನೂ ಕೊರತೆಯಿಲ್ಲ.ಜಾತಕವೂ ಸರಿ ಬಂದಿತ್ತು. ಮೋಹನನೂ ಕವನಳನ್ನು ಒಪ್ಪಿದ್ದ. ಶಂಕರಯ್ಯನವರಿಗೆ ಮಗಳನ್ನು ಅಷ್ಟು ದೂರ ಕಳಿಸಲು ಇಷ್ಟವಿರಲಿಲ್ಲ. ಆದರೆ ಮೋಹನ್ ಹಾಗೂ ಅವನ ತಾಯ್ತಂದೆಯರ ಒಳ್ಳೆಯ ಗುಣ ಅವರ ಮನಕ್ಕೆ ಹಿಡಿಸಿತ್ತು.
ಹಾಗಾಗಿ ಒಪ್ಪುವ ಮನಸ್ಸು ಮಾಡಿದ್ದರು. ಇನ್ನು ವರದಕ್ಷಿಣೆ ವರೋಪಚಾರದ ಮಾತೇ ಬೇಡ. ನಮಗೆ ಹಣಕ್ಕೇನೂ ಕೊರತೆಯಿಲ್ಲ. ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಧಾರೆಗೈದರೆ ಸಾಕೆಂದು ಬೀಗರು ಹೇಳಿದಾಗ ಶಂಕರಯ್ಯ, ಮೀನಾಕ್ಷಮ್ಮ ಮಗಳ ಅದೃಷ್ಟಕ್ಕೆ ಬೀಗಿದ್ದರು. ಹೀಗೆ ನಿಶ್ಚಯವಾಗಿತ್ತು ಕವನಳ ಮದುವೆ.

ಅರಿಶಿಣ ಎಣ್ಣೆ ಶಾಸ್ತ್ರ, ವರಪೂಜೆ ಸಾಂಗವಾಗಿ ನೆರವೇರಿತು. ಧಾರೆಗೆ ವರ ತಯಾರಾಗಿ ನಿಂತು ವಧುವಿನ ನಿರೀಕ್ಷಣೆಯಲ್ಲಿದ್ದ. ಮುಹೂರ್ತದ ಸಮಯವಾಯಿತು. ಬೇಗ ಹೆಣ್ಣನ್ನು ಕರ್ಕೊಂಡು ಬನ್ನಿ ಅಂತ ಪುರೋಹಿತರ ಗಲಾಟೆ ಬೇರೆ.
ಹೊತ್ತು ಸರಿಯುತ್ತಿದ್ದರೂ ವಧು ಬರುವ ಲಕ್ಷಣಗಳು ಕಾಣಲಿಲ್ಲ.....

ಅಷ್ಟರಲ್ಲೇ ವಧುವಿನ ಕೋಣೆಯಿಂದ ಕಾವೇರಿ ಗಾಬರಿಯಲ್ಲಿ ಓಡಿಬಂದು ತಂದೆ ತಾಯಿಯ ಬಳಿಯಲ್ಲಿ ಏನೋ ಉಸುರಿದಳು. ಅವರಿಬ್ಬರೂ ಕುಸಿದು ಕುಳಿತರು.

ಕಾವೇರಿಯ ಮಗ ಲೋಹಿತ್ ಹೊರಗಿನಿಂದ ಬಂದವನೇ, "ಅಮ್ಮಾ, ಎಲ್ಲಾ ಕಡೆ ನೋಡಿದೆ ಚಿಕ್ಕಿ ಎಲ್ಲೂ ಕಾಣ್ತಿಲ್ಲ" ಅಂದಾಗ ಇದ್ದಕ್ಕಿದ್ದಂತೆ ಮದುವೆ ಮನೆಯಲ್ಲಿ ಗಲಿಬಿಲಿ ಶುರುವಾಯಿತು. ಗುಸುಗುಸು ಪಿಸುಮಾತುಗಳು ಓಲಗದ ಸದ್ದು ಮೀರಿ ಹಬ್ಬತತೊಡಗಿದವು.

"ಅಯ್ಯೋ, ಹುಡುಗಿ ಕಾಣ್ತಿಲ್ವಂತೆ ಕಣ್ರೀ. ಇದೆಂಥಾ ಚೆಂದ? ಮದ್ವೆ ಮನೆಯಿಂದ ಹೇಳ್ದೇ ಕೇಳ್ದೆ ಹೋಗೋದೂಂದ್ರೆ ಏನರ್ಥ?" ಅಂದರು ಒಬ್ಬ ಹಿರಿಯರು.

" ಈಗಿನ ಕಾಲದ ಹುಡುಗೀರೋ, ಅವರ ಶೋಕಿಗಳೋ. ಎಲ್ಲಾ ಹದ್ದು ಮೀರಿ ಹೋಗಿದ್ದಾರೆ. ಮನೆಯವರು, ಹಿರಿಯರು ಅನ್ನೋ ಭಯಭಕ್ತಿ ಇಲ್ಲ." ಇನ್ನೊಬ್ಬರ ಉವಾಚ.

" ಹೌದೌದು. ನಮ್ಮ ಕಾಲದಲ್ಲೇ ಸರಿ ಇತ್ತು. ಹೆಣ್ಣು ಮಕ್ಕಳಿಗೆ ಶಾಲೆ ಓದೆಲ್ಲಾ ಯಾಕ್ಬೇಕು? ಮನೆಕೆಲಸ ಅಚ್ಚುಕಟ್ಟಾಗಿ ಕಲಿಸಿದ್ರೆ ಸಾಕಪ್ಪ. ಓದಿ ಮೆಡಲ್ ತಗೊಂಡು ಏನು ಯಜಮಾನಿಕೆ ಮಾಡೋಕಿದೆ? ಅಷ್ಟಲ್ಲದೆ ಹಿರೀಕರು ಗಾದೆ ಮಾಡಿದ್ರಾ, ಅಪ್ಪ ದುಡಿಬೇಕು ಅವ್ವ ಹಡೀಬೇಕು ಅಂತ" ತೊಂಬತ್ತು ಮಳೆಗಾಲ ಕಂಡ ಅಜ್ಜಮ್ಮ‌ ತಮ್ಮ ಗಾದೆಗಳ ಸಂಗ್ರಹದಿಂದ ಅಣಿಮುತ್ತೊಂದನ್ನು ತೆಗೆದರು.

ಶಂಕರಯ್ಯ ಗರಬಡಿದವರಂತೆ ಕೂತಿದ್ದರೆ ಮೀನಾಕ್ಷಮ್ಮ ಕಣ್ಣಿಗೆ ಸೆರಗು ಹಚ್ಚಿ ಅಳುತ್ತಿದ್ದರು. ಕಾವೇರಿ ಏನೂ ತೋಚದೆ ತಾಯಿಯನ್ನು ಸಮಾಧಾನಿಸುತ್ತಿದ್ದಳು.

ಇದೆಲ್ಲದರ ಮಧ್ಯೆ ಕವನಳ ಸ್ನೇಹಿತರು ಗಲಿಬಿಲಿಯಲ್ಲಿ ಹುಡುಕುತ್ತಿದ್ದರು. ಪಿಸುಮಾತುಗಳು, ಕಣ್ಸನ್ನೆಯಲ್ಲಿ ಏನೋ ಗುಟ್ಟಿದ್ದಂತೆ ಕಂಡಿತು.

ಮೀನಾಕ್ಷಮ್ಮನ ಅಣ್ಣ ನರಹರಿರಾಯರು "ಏನು ಹುಡುಗ್ರಾ. ಭಾರೀ ಪಂಚಾಯಿತಿ ನೆಡ್ಸಿದಂಗೆ ಕಾಣುತ್ತೆ. ಅವಳೆಲ್ಲಿ ಹೋಗಿದ್ದಾಳೆ ಗೊತ್ತಾ? ನಿಮ್ಗೆ ಹೇಳಿ ಹೋದಳಾ? ಇಲ್ಲಾ ನೀವೇ ಕಳ್ಸಿದ್ರಾ?" ಕೇಳೇಬಿಟ್ಟರು

ಮುಖ ಮುಖ ನೋಡಿಕೊಂಡರೇ ಹೊರತು ಒಬ್ಬರೂ ಉಸಿರೆತ್ತಲಿಲ್ಲ. ಮನೆಯವರ ಅನುಮಾನ ಬಲವಾಯಿತು.

"ಅರೆ! ನಿಮ್ಮೊಂದಿಗೆ ಇನ್ನೊಬ್ಬ ಹುಡುಗನಿದ್ದ ಅಲ್ವೇ? ಎಲ್ಲವನು ಕಾಣ್ತಿಲ್ಲ" ಸೂಕ್ಷ್ಮವಾಗಿ ಗಮನಿಸಿ ಕೇಳಿದಳು ಕಾವೇರಿ.

ಹುಡುಗರ ತಲೆ ಇನ್ನಷ್ಟು ತಗ್ಗಿತು. ಕಣ್ಣುಗಳು ನೆಲ ದಿಟ್ಟಿಸುತ್ತಿದ್ದವು. ಇವರ ನಡವಳಿಕೆಯಿಂದಲೇ ಮೀನಾಕ್ಷಮ್ಮ ಇವರಿಗೇನೋ ತಿಳಿದಿದೆ ಆದರೆ ಮುಚ್ಚಿಡ್ತಿದ್ದಾರೆ ಅಂತ ಗ್ರಹಿಸಿಬಿಟ್ಟರು.

"ಅಪ್ಪಾ, ಬೆಳಿಗ್ಗೆ ಕವನ ಇವ್ರನ್ನೆಲ್ಲ ನನ್ನ ಕಾಲೇಜಿನ ಗೆಳೆಯರು ಅಂತ ಪರಿಚಯಿಸಿದಾಗ ಇನ್ನೊಬ್ಬ ಹುಡುಗ ಇದ್ದ. ಅವನೀಗ ಕಾಣ್ತಿಲ್ಲ" ಅಂದಳು ಮಗಳು.

ಇಷ್ಟಾದ ಮೇಲೆ ಕೇಳಬೇಕೆ? ಮದುವೆಗೆ ಬಂದ ಅತಿಥಿಗಳ ಕಲ್ಪನೆಯ ಕುದುರೆಗೆ ರೆಕ್ಕೆ ಮೂಡಿತು. ಅವರು ತಮ್ಮ ವಿಚಾರ ಲಹರಿಗಳನ್ನು ಪಸರಿಸತೊಡಗಿದರು.

" ಅದೇನ್ ಹುಡುಗ್ರೋ ಏನ್ ಕಥೆನೋ. ಹೈಸ್ಕೂಲು ಮೆಟ್ಟಿಲು ಹತ್ತೊದೇ ತಡ, ಲೋಕ ಕಾಣಲ್ಲ. ಹೆತ್ತೋರ ಹೊಟ್ಟೆ ಉರ್ಸೋಕಂತಾನೆ ಕಾಯ್ತಿರ್ತಾವೆ ಪಾಪಿಮುಂಡೇವು"

" ಆ ಹಾಳ್ ಮೊಬೈಲ್ ಫೋನು ಬಂತು ನೋಡಿ. ಅಲ್ಲಿಂದಾನೇ ಎಲ್ಲಾ ಅವಾಂತರ ಶುರುವಾಗಿದ್ದು. ಫೇಸ್ಬುಕ್ , ವಾಟ್ಸಾಪ್ , ಸ್ಕೈಪ್ ಹಾಳು ಮೂಳು ಅಂತ ಮೂರ್ಹೊತ್ತೂ ಅದ್ರಲ್ಲೇ ಸಾಯ್ತಾವೆ."

" ಸರಿಯಾಗಿ ಹೇಳಿದ್ರಿ ನೋಡಿ. ಟಿ.ವಿ, ಮೊಬೈಲು, ಶಾಪಿಂಗ್ , ಫ್ರೆಂಡ್ಸ್ ಅಂತ ಮುಂಡಾಮೋಚ್ತು."

" ಕಾಲೇಜಿಗೆ ಹೋಗೋದು, ಲವ್ವು-ಗಿವ್ವು ಅಂತ ಮರಸುತ್ತೋದು, ಮನೆಯವ್ರ ಮಾತು ಕೇಳ್ದೇ ಓಡ್ಹೋಗಿ ಮದ್ವೆ ಆಗೋದು, ಮೂರು ದಿನದಲ್ಲಿ ಡೈವೋರ್ಸ್ ಕೊಡೋದು. ಮದ್ವೆ ಅಂದ್ರೆ ಹುಡುಗಾಟಿಕೆ ಆಗೋಗಿದೆ"

ಅಭಿಪ್ರಾಯಗಳು, ಟೀಕೆ-ಟಿಪ್ಪಣಿಗಳು ಅವ್ಯಾಹತವಾಗಿ ಸಾಗಿದವು.

ಇತ್ತ ಕವನಳ ಮನೆಯವರು ಅವಳ ಸ್ನೇಹಿತರ ಬಾಯಿ ಬಿಡಿಸುವ ಪ್ರಯತ್ನದಲ್ಲಿದ್ದರು. ಆದರೆ ಇವರ ಯಾವ ಪ್ರಶ್ನೆಗಳಿಗೂ ಗೆಳೆಯರ ಬಳಗದಿಂದ ಉತ್ತರವಿಲ್ಲ. ಇದನ್ನು ನೋಡಿ ನರಹರಿರಾಯರ ಮಗ ಶ್ರೀಕಂಠನಿಗೆ ನಖಶಿಖಾಂತ ಸಿಟ್ಟೇರಿತು.ಬಂದವನೇ ಒಬ್ಬ ಹುಡುಗನ ಕುತ್ತಿಗೆ ಪಟ್ಟಿ ಹಿಡಿದು ನಾಲ್ಕು ಬಾರಿಸಲು ತಯಾರಾದಾಗ ಹುಡುಗಿಯರು ನಡುಗಿದರು.
ಅವರಲ್ಲೊಬ್ಬಳು "ಅದೂ.... ಚೇತನ್ ಕೂಡಾ ಕಾಣ್ತಿಲ್ಲ" ಭಯದಲ್ಲಿ ಒದರಿಬಿಟ್ಟಳು.
"ಕವನ, ಚೇತನ್ ಇಬ್ರೂ ಒಟ್ಟಿಗೆ ಹೋಗಿದ್ದು ನಾನು ನೋಡಿದೆ" ಇನ್ನೊಬ್ಬನೆಂದ.

ಇದನ್ನು ಕೇಳಿದ್ದೇ ಮದುವೆ ಮನೆ ರಣರಂಗವಾಗುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿದವು. ಇಷ್ಟರವರೆಗೆ ಯುವಜನಾಂಗಕ್ಕೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದವರ ಫೋಕಸ್ ಸಡನ್ನಾಗಿ ಜಾತಿ, ಕುಲದ ಮರ್ಯಾದೆಯ ರಕ್ಷಣೆಗೆ ಶಿಫ್ಟ್ ಆಯಿತು.

"ಯಾರೋ ಅವನು ಚೇತನ್? ಯಾರ ಮಗ? ಮನೆ ಎಲ್ಲಿ? ಯಾವ ಜಾತಿ? ಎಷ್ಟು ಧೈರ್ಯ ನಮ್ಮ ಹುಡುಗೀನ ಓಡ್ಸಿಕೊಂಡು ಹೋಗೋಕೆ. ಹುಡುಕ್ರೋ ನನ್ಮಗನ್ನ ಹುಟ್ಲಿಲ್ಲಾ ಅನ್ಸಿಬಿಡೋಣ"

"ನಾವು ಸುಮ್ನಿದ್ರೆ ಈ ಹುಡುಗ್ರು ಮಿತಿಮೀರ್ತಾರೆ. ಮದ್ವೆ ಮನೆಯಿಂದ ಹುಡುಗಿನ ಕರ್ಕೊಂಡು ಹೋಗೋಷ್ಟು ಧೈರ್ಯ? ಹೀಗೇ ಬಿಟ್ರೆ ಆಗಲ್ಲ. ಹಿಡಿದುತಂದು ಸಿಗ್ದು ಊರಬಾಗ್ಲಿಗೆ ತೋರಣ ಕಟ್ಟಿ. ಇನ್ಯಾರೂ ಈ ತರ ಹಲ್ಕಾ ಕೆಲಸ ಮಾಡಬಾರ್ದು"

" ನಡಿರೋ ಹುಡ್ಕೋಣ. ಎಷ್ಟುದೂರ ಹೋಗಿರ್ತಾರೆ?"

"ಮೊದ್ಲು ಒಂದು ಪೋಲೀಸ್ ಕಂಪ್ಲೈಂಟ್ ಕೊಡ್ರೋ ಓಡ್ಹೋಗಿದ್ದಾರೆ ಅಂತ"

" ಹುಡ್ಕೊಂಡು ಹೋಗೋಣ. ದಾರಿಲ್ಲೇ ಸ್ಟೇಷನ್ ಇದ್ಯಲ್ಲಾ. ಅಲ್ಲೇ ಕಂಪ್ಲೈಂಟ್ ಕೊಡೋಣ"

ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರ ನೆತ್ತರೂ ಕುದಿಯುತ್ತಿತ್ತು. ಓಡಿಹೋದವರ ಗೋಣುಮುರಿಯಲು ಎಲ್ಲರೂ ಪಣತೊಟ್ಟರು.
ಅದಕ್ಕೆ ಅಡಿಪಾಯ ಹಾಕುವಂತೆ ಓಡಿಹೋದವರನ್ನು ಹುಡುಕಿ ಸಿಗಿದು ತೋರಣಕಟ್ಟಲು ಕತ್ತಿ, ಮಚ್ಚು, ಕೊಡಲಿಗಳನ್ನು ಹಿಡಿದು ಊರಿನ ಗಂಡ್ಹೈಕಳು ತಂಡಗಳಲ್ಲಿ ಅಷ್ಟ ದಿಕ್ಕುಗಳಲ್ಲಿ ಹೊರಟರು.

ಅವರಿಬ್ಬರೂ ಅಂತಹವರಲ್ಲ ಅಂತ ಹೇಳುತ್ತಿದ್ದ ಗೆಳೆಯರ ಬಳಗದ ಕೂಗು ಅರಣ್ಯರೋಧನವಾಯಿತು.

ಮೀನಾಕ್ಷಮ್ಮನ ಗೋಳು ಹೇಳತೀರದು. ಮಗಳನ್ನು ಶಪಿಸಿ ಎದೆ ಬಡಿದುಕೊಂಡು ಅಳುತ್ತಿದ್ದರು.
ಶಂಕರಯ್ಯ ಭೂಮಿಗಿಳಿದು ಹೋಗಿದ್ದರು. ಎಂದೂ ತಮ್ಮ ಮಾತು ಮೀರದ ಮುದ್ದಿನ ಮಗಳು....
"ಅಪ್ಪಾ ನೀವು ಯಾರನ್ನ ತೋರ್ಸಿ ಮದುವೆಯಾಗೂ ಅಂತಿರೋ ಇನ್ನೊಂದು ಮಾತಿಲ್ದೇ ತಾಳಿ ಕಟ್ಟಿಸ್ಕೋತೀನಿ. ನನಗೆ ಯಾರು ಸರಿ ಅಂತ ನಿಮ್ಗಲ್ದೇ ಇನ್ಯಾರಿಗೆ ಗೊತ್ತಿರುತ್ತೆ" ಅಂತಿದ್ದವಳು ಇದೇನು ಮಾಡಿದ್ಲು. ಇಲ್ಲಾ.. ಆ ಹುಡುಗನೇ ಇವಳ ತಲೆ ಕೆಡಿಸಿರಬೇಕು. ಇಷ್ಟು ವರ್ಷ ಎಷ್ಟು ಮರ್ಯಾದೆಯಿಂದ ಬಾಳಿದೋರು ನಾವು. ಇನ್ನು ಹೇಗೆ ಲೋಕಕ್ಕೆ ಮುಖ ತೋರಿಸೋದು..... ಇಂಥಾ ಹತ್ತಾರು ಯೋಚನೆಗಳು ಅವರನ್ನು ಮುತ್ತಿದ್ದವು.

ತಾಯ್ತಂದೆಯರೊಂದಿಗೆ ಮಾತಾಡುತ್ತಿದ್ದ ಮೋಹನ್ ಅವರ ಬಳಿ ಬಂದಾಗ ಅವನಿಗೆ ಮುಖತೋರಿಸಲಾಗದೇ ತಲೆತಗ್ಗಿಸಿದರು.
ಅಯ್ಯೋ, ಇವನಿಗೇನು ಹೇಳಲಿ? ಮಂಟಪದಲ್ಲಿ ಮದುವೆ ಮುರಿದು ಬೀಳುವುದೆಂದರೆ ಯಾರಿಗಾದರೂ ಅವಮಾನಕರ ವಿಷಯ. ಛೇ... ಎಂಥಾ ಪರಿಸ್ಥಿತಿ ತಂದಿಟ್ಟಳು ಕವನ...... ಅವರು ಯೋಚಿಸುತ್ತಲೇ ಮೋಹನನ ಕೈ ಹಿಡಿದು "ದಯವಿಟ್ಟು ನಮ್ಮನ್ನು ಕ್ಷಮಿಸ್ಬಿಡಪ್ಪಾ. ನನ್ನ ಮಗಳು ತುಂಬಾ ಒಳ್ಳೆಯವಳು. ಅವನೇ ತಲೆಕೆಡ್ಸಿರಬೇಕು ಕೇಡಿ. ಅದೇನೇ ಆದ್ರೂ ಇದರಿಂದ ತುಂಬಾ ಅವಮಾನ ಆಗಿದ್ದು ನಿಂಗೆ" ಅವರ ಗಂಟಲುಕಟ್ಟಿತು.

"ಮಾವ ನೀವ್ಯಾಕೆ ಕ್ಷಮೆ ಕೇಳ್ತಿದ್ದೀರಾ? ಇದ್ರಲ್ಲಿ ನಿಮ್ಮ ತಪ್ಪೇನಿಲ್ಲ ಬಿಡಿ" ಮೋಹನ್ ಅಂದಾಗ ಎಷ್ಟು ಸಂಸ್ಕಾರವಂತ ಹುಡುಗನಪ್ಪಾ ಅಂದುಕೊಂಡರು ಮದುವೆ ಮನೆಯಲ್ಲಿ ಉಳಿದವರು.

ಮೋಹನ ಮಾತು ಮುಂದುವರೆಸುತ್ತಾ " ಮಾವ, ಆಗಿದ್ದು ಆಗ್ಹೋಯ್ತು. ಏನೂ ಮಾಡೋಕಾಗಲ್ಲ. ಆದ್ರೆ ಮಂಟಪದಲ್ಲಿ ಮದ್ವೆ ನಿಂತ್ರೆ ಅವಮಾನದ ಜೊತೆಗೆ ಅಶುಭವೂ ಕೂಡಾ. ಅದಕ್ಕೆ ನಾನು ಅಪ್ಪ ಅಮ್ಮನ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬಂದಿದ್ದೀನಿ. ನೀವು ಒಪ್ಪಿದ್ರೆ ನಾನು ಕಾವೇರಿನ ಮದ್ವೆ ಮಾಡ್ಕೋತೀನಿ. ಲೋಹಿತ್ ನ ನನ್ನ ಸ್ವಂತ ಮಗನ ತರ ನೋಡ್ಕೋತೀನಿ" ನೇರವಾಗಿ ಕೇಳಿದಾಗ ಮದುವೆ ಮನೆಯಲ್ಲಿದ್ದವರೆಲ್ಲಾ ಆಶ್ಚರ್ಯದಿಂದ ಅವನತ್ತ ನೋಡಿದರು.

ಕಾವೇರಿ ಈ ಅನಿರೀಕ್ಷಿತ ಪ್ರಸ್ತಾಪಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದಳು.
ಮೀನಾಕ್ಷಮ್ಮನ ಸ್ಥಿತಿಯೂ ಹಾಗೇ ಇತ್ತು.

ಶಂಕರಯ್ಯ ಸಾವರಿಸಿಕೊಂಡು "ಏನು ಮಾತಾಡ್ತಿದ್ದೀಯ ಮೋಹನ. ಅವಳು ಗಂಡ ಸತ್ತ ವಿಧವೆ. ಅವಳನ್ನು ಮದ್ವೆ....... ಅದ್ಹೇಗಪ್ಪ. ಜನ ಸಾವಿರ ಮಾತಾಡ್ತಾರೆ" ಅಂದರು.

"ಜನರ ಮಾತಿಗೆ ನಾನು ತಲೆಕೆಡ್ಸಿಕೊಳ್ಳೋಲ್ಲ ಮಾವ. ನನ್ನ ಲೈಫ್ ನಂದು. ಕಾವೇರಿ ಒಳ್ಳೆಯ ಗುಣದವಳು. ನಮಗಷ್ಟೇ ಸಾಕು.ನನಗೆ ನಮ್ಮನೆಯೋರಿಗೆ ಏನೂ ತೊಂದ್ರೆ ಇಲ್ಲ. ನೀವೆಲ್ಲಾ ಒಪ್ಪಿದ್ರೆ ಸಾಕು" ಅಂದಾಗ ಅವನಪ್ಪ ಅಮ್ಮನೂ ಅದನ್ನು ಅನುಮೋದಿಸಿದರು. "ನೀವು ಮೂವರು ಮಾತಾಡಿ ಒಳ್ಳೆ ನಿರ್ಧಾರಕ್ಕೆ ಬನ್ನಿ. ನಿಮ್ಗೆ ಒಪ್ಪಿಗೆ ಅಂದ್ರೆ ಇವತ್ತೇ ಮದುವೆ ಮುಗ್ಸೋಣ" ಮೋಹನನ ತಾಯಿ ಹೇಳಿದಾಗ ಮದುವೆಗೆ ಬಂದವರೆಲ್ಲಾ ಮೋಹನ್ ಮತ್ತವನ ಮನೆಯವರ ಚಿನ್ನದಂಥಾ ಗುಣಕ್ಕೆ ಸೋತರು. ಬಂಗಾರದಂತಹ ಹುಡುಗ, ಕವನಳಿಗೆ ಅದೃಷ್ಟವಿಲ್ಲ, ಹುಚ್ಚು ಅವಳಿಗೆ ಅಂತ ಎಲ್ಲಾ ಮಾತಾಡಿಕೊಂಡರು.

ಕಾವೇರಿ " ಅಪ್ಪಾ, ನಂಗೇನೂ ತಿಳೀತಿಲ್ಲ. ನೀವೇ ನಿರ್ಧಾರ ಮಾಡಿ" ಅಂತ ಅವರಿಗೇ ವಹಿಸಿದಳು. ಮೀನಾಕ್ಷಮ್ಮ, ಶಂಕರಯ್ಯ ವಿಚಾರ ವಿಮರ್ಶೆ ನಡೆಸಿ ಅವರಿಗೆ ಸಮ್ಮತವೆಂದರೆ, ಮಗಳಿಗೊಂದು ಒಳ್ಳೆಯ ಬದುಕು ಸಿಗುವುದಾದರೇ ಯಾಕಾಗಬಾರದು. ಮಾಡಿಕೊಡೋಣವೆಂದು ನಿರ್ಧರಿಸಿದರು.

ಮತ್ತೆ ಮದುವೆ ಮನೆಯಲ್ಲಿ ಓಲಗದ ಸದ್ದು ಆರಂಭವಾಯಿತು.
ಈ ಬಗ್ಗೆ ಜಂಗಮವಾಣಿಯಿಂದ ಮಾಹಿತಿ ತಿಳಿದು, ಇಂಥಾ ವಿಧವಾ ವಿವಾಹದ ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಲೆಂದು ಓಡಿದವರನ್ನು ಹುಡುಕಹೋಗಿದ್ದ ಗಂಡಸರೂ ವಾಪಾಸಾದರು. ಮದುವೆ ಮುಗಿದಮೇಲೆ ಹುಡುಕಿ ಸಿಗಿಯುವ ಎಂದುಕೊಂಡರು.
ಕಾವೇರಿ ಸರ್ವಾಲಂಕಾರದೊಂದಿಗೆ ವಧುವಾಗಿ ಮಂಟಪಕ್ಕೆ ಕಳೆತಂದಳು.

ಮಂತ್ರಘೋಷ, ಮಂಗಳವಾದ್ಯಗಳ ನಡುವೆ ಮಾಂಗಲ್ಯಧಾರಣೆಗೆ ವೇದಿಕೆ ಸಜ್ಜಾಗಿತ್ತು.

ಆದರೆ ಅಷ್ಟರಲ್ಲಿ ಎಲ್ಲರ ಅಚ್ಚರಿಗೆಂಬಂತೆ ಚಲನಚಿತ್ರಗಳಲ್ಲಿ ಎಲ್ಲಾ ಮುಗಿದ ಮೇಲೆ ರಂಗಪ್ರವೇಶ ಮಾಡುತ್ತಿದ್ದ ಪೋಲೀಸರು ತಾಳಿ ಕಟ್ಟೋಕು ಮುಂಚೆನೇ ಬಂದಿದ್ದಲ್ಲಾ ಮಾರ್ರೆ!!!!!
ಅದಲ್ಲದೇ ತಮ್ಮೊಟ್ಟಿಗೆ ಓಡಿಹೋದವರನ್ನೂ ಕರೆತರಬೇಕೇ???

ತಣ್ಣಗಾದ ರಕ್ತ ಮತ್ತೆ ಕುದಿಯತೊಡಗಿತು. ಕೈ ಕತ್ತಿ, ಮಚ್ಚು, ಕೊಡಲಿಗಳನ್ನು ಹುಡುಕತೊಡಗಿತು.

ಕಾವೇರಿಗೆ ಈಗೇನು ಮಾಡಬೇಕೆಂಬ ಗೊಂದಲ... ಶಂಕರಯ್ಯ, ಮೀನಾಕ್ಷಮ್ಮ ಉಳಿದವರಿಗೆ ‌ಸಿಟ್ಟು.....

ಇಂತಿಪ್ಪ ಸಮಯದಲ್ಲಿ ಇರೋ ಟೆನ್ಷನ್ ಸಾಲ್ದು ಅಂತ ಪೋಲೀಸರು ಹೋಗಿ ಮೋಹನ, ಅವನಪ್ಪ ಅಮ್ಮನ್ನ ಹಿಡ್ದು ಸಮಾ ನಾಲ್ಕು ಕೊಟ್ಟಿದ್ದಲ್ಲ ಮಾರ್ರೆ ಕೆನ್ನೆಗೆ!!!!!
ಮದ್ವೆ ಮನೆಲ್ಲಿದ್ದೋರ ಮಂಡೆಬೆಚ್ಚ ಆಗದೇ ಇರುತ್ತಾ???

ನರಹರಿರಾಯರು, " ಅಯ್ಯೋ ಸರ್, ಮೋಹನ್ ನ ಯಾಕೆ ಹೋಡೀತೀರಾ? ಇವರಿಬ್ರೂ ಇದ್ದಾರೆ ನೋಡಿ ಇವರನ್ನ ಹೋಡೀರೀ" ಕಿರುಚಿದರು.

"ಅಯ್ಯೋ ಸುಮ್ನಿರೀ ಯಜಮಾನ್ರೇ. ಇವ್ನು ಮೋಹನನೂ ಅಲ್ಲ ಮುರಾರಿನೂ ಅಲ್ಲ. ಇವನ ನಿಜ ನಾಮಧೇಯ ಹರಿದಾಸ್ ಸಾಳ್ವಿ ಅಂತ. ಈ ಲೋಫರ್ ಗಳನ್ನು ನಮ್ಮಿಡೀ ಡಿಪಾರ್ಟ್ಮೆಂಟೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡ್ಕುತಿದೆ. ಇವನಿದಾನಲ್ಲ ಈ ಲಫಂಗ ಇವ್ನ ಬಿಸಿನೆಸ್ ಇದು. ಬಡ ಕುಟುಂಬದ ಹೆಣ್ಣ್ಮಕ್ಕಳನ್ನು ಮದ್ವೆ ಮಾಡ್ಕೊಂಡು ಅರಬ್ ದೇಶಗಳಿಗೆ ಅವ್ರನ್ನ ಮಾರೋದು. ಇವರಿಬ್ರೂ ಇವನ ಪಾರ್ಟ್ನರ್ ಗಳು. ಬೇರೆ ಬೇರೆ ರಾಜ್ಯಗಳಲ್ಲಿ ಇವನ ಮೇಲೆ ಸುಮಾರು ಕಂಪ್ಲೈಂಟ್ ಗಳಿವೆ. ಎಲ್ಲೂ ಸಿಕ್ಕಿರ್ಲಿಲ್ಲ. ಇವತ್ತು ಇವರಿಬ್ಬರ ಸಮಯಪ್ರಜ್ಞೆಯಿಂದ ಸಿಕ್ಕಿಹಾಕೊಂಡ ನೋಡಿ" ಎಸ್. ಐ ಹೇಳಿದಾಗ ಮದ್ವೆ ಮನೆ ಸ್ಥಬ್ದವಾಯಿತು.

"ಹೌದಪ್ಪಾ, ನನಗೂ ಚೇತನ್ ಹೇಳಿದ್ಮೇಲೆ ಗೊತ್ತಾಗಿದ್ದು. ನಿಮಗೆಲ್ಲಾ ಹೇಳಿ ಮದ್ವೆ ನಿಲ್ಲಿಸೋಣ ಅಂದೆ. ಆದ್ರೆ ಆಗ ಈ ಮೋಹನ್ ಮತ್ತವನ ಚೇಲಾಗಳು ತಪ್ಪಿಸ್ಕೊಂಡು ಬಿಡ್ತಾರೆ. ನೀನಿರು ಬೇಗ ಹೋಗಿ ಪೋಲೀಸ್ ಕರ್ಕೋಂಡು ಬರ್ತೀನಿ ಅಂದ. ಅಷ್ಟೊತ್ತಿಗೆ ಅಕ್ಕ ನನ್ನ ಮಂಟಪಕ್ಕೆ ಕರ್ರ್ಯೋಕೆ ಅಂತ ಬರೋದು ಕಾಣಿಸ್ತು. ಇಲ್ಲಿದ್ರೆ ಮದುವೆ ಮಾಡ್ಸಿಬಿಡ್ತಾರೆ. ಏನ್ ಮಾಡೋದು ಗೊತ್ತಾಗ್ದೇ ನಾನೂ ಅವನ್ ಜೊತೆ ಹೋದೆ" ಕವನ ಹೇಳುತ್ತಿದ್ದರೆ ಕಾವೇರಿ ಬೆವರತೊಡಗಿದಳು. ಒಂದು ವೇಳೆ ತನ್ನ ಮದುವೆಯಾಗಿಬಿಟ್ಟಿದ್ದರೆ....... ತನ್ನ , ಲೋಹಿತನ ಗತಿ ಏನಾಗುತಿತ್ತು? ಮಗನನ್ನು ಗಟ್ಟಿಯಾಗಿ ಹಿಡಿದುಕೊಂಡಳು.

ಚೇತನ್ ಶಂಕರಯ್ಯನವರ ಬಳಿ ಬಂದು " ನಾನು ಈ ರಾಸ್ಕಲ್ ನ ನೋಡಿದ ಕೂಡ್ಲೇ ಗುರ್ತಿಸ್ದೆ ಅಂಕಲ್.ಇವ್ನು ನಮ್ಮ ಸಂಬಂಧಿಕರ ಮಗಳೊಬ್ಬಳನ್ನ ಮದ್ವೆಯಾಗಿ ಕರ್ಕೊಂಡು ಹೋದವನು ನಾಪತ್ತೆಯಾಗ್ಬಿಟ್ಟ. ಅವಳೆಲ್ಲಿ ಅಂತಾ ಯಾರಿಗೂ ಗೊತ್ತಿಲ್ಲ. ಹುಡುಕೀ ಸಾಕಾಯ್ತು. ಪೋಲಿಸ್ ಕಂಪ್ಲೈಂಟ್ ಕೊಟ್ಟಾಗ್ಲೇ ಗೊತ್ತಾಗಿದ್ದು ಇವನೆಂಥಾ ನೀಚ ಅಂತ. ಅವಳಿನ್ನೂ ಸಿಕ್ಕಿಲ್ಲ. ಅಲ್ಲೂ ಇವರಿಬ್ರೇ ಇವ್ನ ಅಪ್ಪ ಅಮ್ಮ ಅಂತ ಬಂದಿದ್ರೂ. ನಾವು ಹಿಂದೆ ಮುಂದೆ ವಿಚಾರಿಸ್ದೇ, ಇವರ ಮಾತಿಗೆ ಮರುಳಾಗಿ ಮದ್ವೆ ಮಾಡಿದ್ವಿ. ಈಗ ಎಲ್ಲಾ ಕಣ್ಣೀರು ಹಾಕೋದೇ ಆಗಿದೆ. ಇವರನ್ನು ಇಲ್ಲಿ ನೋಡಿದ ಕೂಡಲೇ ನಂಗೊತ್ತಾಯ್ತು. ಇವರು ನಿಮ್ಗೂ ಮದ್ವೆ ಹೆಸರಲ್ಲಿ ಮೋಸಮಾಡ್ತಿದ್ದಾರೆ ಅಂತ. ಇವ್ರುನ್ನ ಹಿಡಿಯೋಕೆ ಹೀಗೆ ಮಾಡ್ಬೇಕಾಯ್ತು." ವಿವರಿಸಿದ.

ಪೋಲೀಸರು ಹರಿದಾಸ್ ಸಾಳ್ವಿ ಉರುಫ್ ಮೋಹನ್ ಮತ್ತವನ ನಕಲಿ ಅಪ್ಪ ಅಮ್ಮನನ್ನು ಬಂಧಿಸಿ ಕರೆದೊಯ್ಯುತ್ತಿದ್ದರೆ, ಇಲ್ಲಿಯವರೆಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಂಧು ಮಿತ್ರರು ಇಂಗು ತಿಂದ ಮಂಗನಂತಾಗಿದ್ದರು.

ಓಡಿಹೋದವರನ್ನು ಹಿಡಿದು ಸಿಗಿದು ತೋರಣ ಕಟ್ಟಲು ಶಸ್ತ್ರಾಸ್ತ್ರಗಳೊಂದಿಗೆ ತಯಾರಾಗಿದ್ದವರು ತಮ್ಮ ಚಿಂತನೆಗೆ ನಾಚಿ ಶಸ್ತ್ರತ್ಯಾಗ ಮಾಡಿ ಮನೆಗಳತ್ತ ಹೊರಟರು.

ಶಂಕರಯ್ಯ, ಮೀನಾಕ್ಷಮ್ಮ ಮಾತ್ರ ದಿಗ್ಬ್ರಾಂತರಾಗಿದ್ದರು. ಪೂರ್ವಾಪರ ವಿಚಾರಿಸದೇ ತರಾತುರಿಯಲ್ಲಿ ಮದುವೆ ನಿಶ್ಚಯಿಸಿದ್ದಕ್ಕೆ ತಮ್ಮನ್ನು ತಾವೇ ಹಳಿದುಕೊಂಡರು. ಆದರೂ ಕೊನೆಗಳಿಗೆಯಲ್ಲಿ ಮಗಳು ಬಾಳು ಹಾಳಾಗುವುದು ತಪ್ಪಿಸಿದ ಚೇತನ್ ಗೂ ಹಾಗೂ ದೇವರಿಗೂ ಕೋಟಿ ನಮನ ಸಲ್ಲಿಸಿ ನಿಟ್ಟುಸಿರು ಬಿಟ್ಟರು.

********ಮುಕ್ತಾಯ********


ಮಂಗಳವಾರ, ಜೂನ್ 9, 2020

ಅನೂಹ್ಯ 6

ರಾತ್ರಿಯೆಲ್ಲಾ ಕಾಡುವ ನೆನಪುಗಳೊಂದಿಗೆ ಹೋರಾಡಿದವಳಿಗೆ ಬೆಳಗಿನ ಜಾವವೇ ಸ್ವಲ್ಪ ಜೊಂಪು ಹತ್ತಿದ್ದು. ಎಚ್ಚರವಾದಾಗ ಗಡಿಯಾರ ಒಂಬತ್ತರ ಅಂಕಿ ತೋರುತ್ತಿತ್ತು. ತಲೆ ಭಾರವೆನಿಸಿತು  ಅವಳಿಗೆ. 'ಸುಮ್ಮನೆ ಮಲಗಿಬಿಡಲೇ?' ಎನಿಸಿದರೂ ಮನೆಯಲ್ಲಿ ಉಳಿದರೆ ತಲೆಭಾರ ಇನ್ನೂ ಹೆಚ್ಚಾಗುವದೆನಿಸಿ ಎದ್ದು ಬಾತ್ ರೂಮಿನತ್ತ ನಡೆದಳು.

ಲಗುಬಗೆಯಲ್ಲಿ ಸ್ನಾನ ಮುಗಿಸಿ ಹೊರಬಂದಾಗ ಲವಲವಿಕೆ ಮೂಡಿತ್ತು. ಯಾವುದೋ ಹಾಡು ಗುನುಗುತ್ತಾ ಉಡುಪು ಧರಿಸಿ, ಹೆರಳು ಬಾಚಿ , ಹಣೆಗೊಂದು ಬಿಂದಿ ಇಟ್ಟು ಹಾಲ್ ಗೆ ಬಂದಳು.

ಮನೆ ರಾತ್ರಿಯ ಪಾರ್ಟಿ ಸುಳಿವಿಲ್ಲದಂತೆ ನಿಶ್ಯಬ್ದವಾಗಿತ್ತು. ಮಾಲಿನಿ ಹಾಲ್ ನಲ್ಲಿದ್ದ ಸೋಫಾದಲ್ಲಿಯೇ ಮಲಗಿದ್ದರು. ಬಹುಶಃ ನಶೆ ಹೆಚ್ಚಾಗಿರಬಹುದು ಎಂದುಕೊಂಡಳು. ಮುಖದ ಮೇಕಪ್ ಬೆವರಿನೊಂದಿಗೆ ಬೆರೆತು ಅಸಹ್ಯವಾಗಿ ಕಾಣುತ್ತಿತ್ತು. ಮೇಕಪ್ಪಿನಡಿಗೆ ಮುಚ್ಚಿ ಹೋಗಿದ್ದ ಮುಖದ ನೆರಿಗೆಗಳು ಕಾಣುತ್ತಿತ್ತು. ಕಣ್ಣಿಗೆ ಬಳಿದುಕೊಂಡ ಐ ಲೈನರ್, ಮಸ್ಕರಾ ಕಣ್ಣಿನ ಸುತ್ತಲೂ ಹರಡಿ ಅಸಹ್ಯ ಬರಿಸುವಂತಿತ್ತು. ಪ್ರೇತಕಳೆ....... ತೊಟ್ಟ ಬಟ್ಟೆ ಅಸ್ತವ್ಯಸ್ತ. ಆಕೆಗೆ ಮೈಮೇಲೆ ಪ್ರಜ್ಞೆ ಇರಲಿಲ್ಲ. ಅಸಹ್ಯಕ್ಕೂ ಮೀರಿದ ಭಾವವೊಂದು ಮಿನುಗಿತು ಸಮನ್ವಿತಾಳಲ್ಲಿ. 

ಸುಮ್ಮನೇ ಡೈನಿಂಗ್ ಟೇಬಲ್ ಹತ್ತಿರ ಹೋದಳು. ಕೆಲಸದವನು ತಿಂಡಿ ಬಡಿಸಿದ. ತರಹೇವಾರಿ ಅಡುಗೆ....  ರುಚಿಯೂ ಇತ್ತು. ಆದರೆ ತಿನ್ನಲು ಮನಸ್ಸಾಗಲಿಲ್ಲ.  ತಿನ್ನದೇ ಎದ್ದು ಕೈ ತೊಳೆಯಲು ಹೊರಟಾಗ ಅಡಿಗೆಯವನು ಗಾಬರಿಯಾದ.

"ಚಿಕ್ಕಮ್ಮಾವ್ರೇ, ಅಡಿಗೆ ಸರಿಯಾಗಿಲ್ವಾ?" ಕೇಳಿಯೇಬಿಟ್ಟ. ಒದ್ದೆ ಕೈ ಒರೆಸುತ್ತಿದ್ದವಳು ನಕ್ಕಳು.

"ಅಡಿಗೆ ಚೆನ್ನಾಗಿದೆ ಆದ್ರೆ ತಿನ್ನೋ ಮನಸಿಲ್ಲ ಅಷ್ಟೇ" ಕಾರ್ ಕೀ ತೆಗೆದುಕೊಂಡು ಹೊರಟವಳ ಮನದಲ್ಲೊಂದು ದೃಢನಿಶ್ಚಯವಿತ್ತು. ''ತಿನ್ನಲು ಮನಸ್ಸೂ ಬೇಕಾ' ಅಡಿಗೆಯವನು ತಲೆಕೆರೆದುಕೊಂಡು ಯೋಚಿಸುವಷ್ಟರಲ್ಲಿ ಕಾರು ಕಾಂಪೌಂಡ್ ದಾಟಿ ಮುಂದೆ ಹೋಯಿತು.

         *****************************

"ಧನ್ವಂತರಿ" ಬರೀ ಆಸ್ಪತ್ರೆಯೆಂದರೆ ತಪ್ಪಾಗುತ್ತದೆ. ಅದು ಡಾ. ಮೀರಾ ಅವರ ಕನಸಿನ ಕೂಸು. ಬಡ ರೋಗಿಗಳ ಪಾಲಿನ ಆಶಾಕಿರಣ.

ಮೀರಾ ಉತ್ತಮ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ನಲವತೈದರ ಆಸುಪಾಸಿನ ಅವಿವಾಹಿತೆ. ಹಣ ಗುಣ ಎರಡರಲ್ಲೂ ಸಿರಿವಂತರು. ಅವರ ತಂದೆ ಸೇನೆಯಲ್ಲಿ ಮೇಜರ್ ಜನರಲ್ ಆಗಿದ್ದವರು. ತಾಯಿ ಅಧ್ಯಾಪಕಿ. ಚಿಕ್ಕಂದಿನಿಂದಲೂ ಶಿಸ್ತಿನಲ್ಲಿ ಬೆಳೆದಾಕೆ. ತಂದೆತಾಯಿ ಇಬ್ಬರೂ ಮಾನವೀಯ ಮೌಲ್ಯಗಳನ್ನು ಧಾರೆಯೆರೆದಿದ್ದರು. ವೃತ್ತಿ ಜೀವನದ ಆರಂಭದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ದುಡಿದರೂ ಅಲ್ಲಿನ ಅಕ್ರಮ, ಕುಸಿಯುತ್ತಿರುವ ಮೌಲ್ಯಗಳು, ಹಣಗಳಿಕೆಯ ಹಪಾಹಪಿ ಆಕೆಗೆ ಹಿಡಿಸಲಿಲ್ಲ. ತಾವೇ ಒಂದು ಆಸ್ಪತ್ರೆ ಯಾಕೆ ತೆರೆಯಬಾರದೆಂಬ ಯೋಚನೆ ಬಂತು. ತಂದೆ ತಾಯಿ ಕೂಡಾ  ಬೆನ್ನುತಟ್ಟಿದ್ದರು. ಸಮಾಜದ ಬಗ್ಗೆ ಕಾಳಜಿ ಇದ್ದ ಕೆಲ ದಾನಿಗಳೂ ಪ್ರೋತ್ಸಾಹಿಸಿದರು. ಅದರ ಫಲವೇ ಧನ್ವಂತರಿ. ಇಲ್ಲಿ ಎಲ್ಲಾ ರೀತಿಯ ಆಧುನಿಕ ಶಸ್ತ್ರಚಿಕಿತ್ಸಾ ಪರಿಕರಗಳು, ಸುಸಜ್ಜಿತ ಲ್ಯಾಬೋರೇಟರಿ, ಡ್ರಗ್ ಹೌಸ್ಗಳೊಂದಿಗೆ ಸಿಬ್ಬಂದಿಗಳಿಗಾಗಿ ಸ್ಟಾಫ್ ಕ್ವಾಟ್ರಸ್ , ಕ್ಯಾಂಟಿನ್ ಸೌಲಭ್ಯಗಳೂ ಇವೆ.

ಆದರೆ ಇಲ್ಲಿ ಬಡವ-ಬಲ್ಲಿದ ಭೇದವಿಲ್ಲ. ಎಲ್ಲರಿಗೂ ಒಂದೇ ತೆರನಾದ ಚಿಕಿತ್ಸೆ. ಹಾಗೆಯೇ ಸೇವಾ ಮನೋಭಾವ ಉಳ್ಳವರಿಗೆ ಮಾತ್ರ ಇಲ್ಲಿ ವೃತ್ತಿಯ ಅವಕಾಶ.

             *************************

ಸಮನ್ವಿತಾ ಆ ದಿನ ಎರಡು ಡೆಲಿವರಿ ಕೇಸ್ ಇದ್ದಿದ್ದರಿಂದ ಮಧ್ಯಾಹ್ನದ ನಂತರವೇ ಬಿಡುವಾಗಿದ್ದು. ಸಂಜೆ ಕಿಶೋರ್ ನ ಬೇರೆ ಭೇಟಿಯಾಗಬೇಕಿತ್ತು.  ಹಸಿವೆನಿಸಿದಾಗ ಬೆಳಿಗ್ಗೆ ತಿಂಡಿತಿನ್ನದ್ದು ನೆನಪಾಗಿ ಕ್ಯಾಂಟೀನಿನಲ್ಲಿ ಊಟಮಾಡಿ ಮೀರಾ ಅವರನ್ನು ಹುಡುಕಿಕೊಂಡು ಹೊರಟಳು. ತಮ್ಮ ಕ್ಯಾಬಿನ್ ನಲ್ಲಿ ಕುಳಿತು ಕೇಸ್ ಹಿಸ್ಟರಿ ನೋಡುತ್ತಿದ್ದವರು "ಒಳಗೆ ಬರಬಹುದಾ ಡಾಕ್ಟರ್" ಎಂಬ ಸ್ವರ ಬಂದತ್ತ ತಿರುಗಿದರು.

"ಧಾರಾಳವಾಗಿ ಬರಬಹುದು"  ಅಂದಾಗ ಒಳ ಬಂದು ಅವರೆದುರು ಕುಳಿತವಳನ್ನೇ ಪರೀಕ್ಷಿಸುತ್ತಾ

"ಹೇ ಲಿಟಲ್ ಪ್ರಿನ್ಸೆಸ್, ಯಾಕೆ ಒಂಥರಾ ಇದ್ದಿ? ಹುಷಾರಿಲ್ವಾ?" ಕೇಳಿದರು.

"ಹಾಗೇನಿಲ್ಲ. ನಾನು ಆರಾಮಾಗಿದ್ದೀನಿ. ನಿಮ್ಹತ್ರ ಸ್ವಲ್ಪ ಮಾತಾಡ್ಬೇಕಿತ್ತು"

"ಸ್ವಲ್ಪ ಯಾಕೆ? ಪೂರ್ತಿ ಮಾತಾಡು ಏನದು"

"ಮೇಡಂ, ನನಗೆ ಒಂದು ಸ್ಟಾಫ್ ಕ್ವಾಟ್ರಸ್ ಬೇಕು. ನಾನು ಇಲ್ಲಿಗೇ ಶಿಫ್ಟ್ ಆಗೋಣ ಅಂತಿದ್ದೀನಿ" ಸಮನ್ವಿತಾ ನಿಧಾನವಾಗಿ ಹೇಳಿದಾಗ ಮೀರಾ ಹುಬ್ಬೇರಿಸಿದರು. 

"ಖಂಡಿತಾ ಸಿಗುತ್ತೆ. ಆದ್ರೆ ಯಾಕೆ ಅಂತ ಕೇಳಬಹುದಾ. ಐ ಮೀನ್ ನಿಮ್ಮನೆ ಹತ್ತಿರದಲ್ಲೇ ಇದೆ."

"ಅಲ್ಲಿ ಇರೋಕೆ ಆಗ್ತಾ ಇಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ"

"ಸರಿ, ನನಗೆ ಒಂದು ವಾರ ಸಮಯ ಕೊಡು. ಅರೇಂಜ್ ಮಾಡ್ತೀನಿ " ಮತ್ತೇನು ಕೇಳಲಿಲ್ಲ ಮೀರಾ.

"ಥ್ಯಾಂಕ್ಸ್ ಮೇಡಂ" ಎಂದು ಹೊರಹೋದಳು ಸಮನ್ವಿತಾ.

ಮೀರಾರಿಗೆ ರಾವ್ ಅವರ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಅವರ ಅಕ್ರಮ ವ್ಯವಹಾರಗಳು, ತೋರಿಕೆಯ ಜೀವನ, ಬೌದ್ಧಿಕ ದಿವಾಳಿತನ ಎಲ್ಲಾ ಗೊತ್ತಿತ್ತು. ಮೊದಲಬಾರಿ ಸಮನ್ವಿತಾ ಮೀರಾ ಬಳಿ ಧನ್ವಂತರಿಯಲ್ಲಿ ವೈದ್ಯೆಯಾಗುವ ಇಚ್ಚೆ ವ್ಯಕ್ತಪಡಿಸಿದಾಗ ಅವರಿಗೆ ಅಚ್ಚರಿಯಾಗಿತ್ತು. ವಿದೇಶದಲ್ಲಿ ವ್ಯಾಸಂಗ ಮಾಡಿರುವ ರಾವ್ ಅವರ ಮಗಳು ಇಲ್ಲಿ ಕೆಲಸ ಮಾಡುವುದೇ? ಅದನ್ನೇ ಕೇಳಿದ್ದರೂ ಕೂಡಾ. "ಅಲ್ವೇ ಹುಡುಗಿ, ನಿಮ್ಮಪ್ಪ ನಿನ್ಗೆ ಒಂದು ಆಸ್ಪತ್ರೆನೇ ಕಟ್ಸಿಕೊಡ್ತಾರೆ ಕೇಳಿದ್ರೆ. ಹೋಗಿ ಹೋಗಿ ಇಲ್ಲಿ ಕೆಲ್ಸ ಮಾಡ್ತೀನಿ ಅಂತೀಯಲ್ಲ? ಏನಿದೆ ಇಲ್ಲಿ"

"ಮೆಡಿಕಲ್ ನಾನು ಇಷ್ಟಪಟ್ಟು ಆಯ್ದುಕೊಂಡು ಓದಿದ್ದು. ಇಂಟರ್ನ್ಶಿಪ್ ಕೂಡಾ ಅಷ್ಟೇ ಶ್ರದ್ಧೆಯಿಂದ ಮಾಡಿದ್ದೀನಿ. ಆದರೂ ಏನೋ ಕೊರತೆ ಅನ್ನಿಸೋದು. ಕಳೆದ ಎರಡು ದಿನಗಳಿಂದ ನಾನು ಇಲ್ಲಿಗೆ ಬರ್ತಿದ್ದೀನಿ. ಯಾಕೋ ಗೊತ್ತಿಲ್ಲ. ಇಲ್ಲಿ ಬಂದಾಗಲೆಲ್ಲಾ ಅದೇನೋ ಸಂತೋಷ, ಆತ್ಮತೃಪ್ತಿ  ಸಿಗುತ್ತೆ. ಈ ಎರಡು ದಿನಗಳಲ್ಲಿ ಸಿಕ್ಕ ನೆಮ್ಮದಿ ನನಗೆ ಯಾವತ್ತೂ ಸಿಕ್ಕಿರಲಿಲ್ಲ" ಅಂದ ಹುಡುಗಿಯ ಕಣ್ಣುಗಳಲ್ಲಿ ಸಂತೋಷವಿತ್ತು. ಆ ಮಾತುಗಳಿಂದಲೇ ಮೀರಾ ಪ್ರಭಾವಿತರಾಗಿದ್ದು ಹಾಗೂ ಸಮನ್ವಿತಾ ಧನ್ವಂತರಿಯ ಸದಸ್ಯಳಾದದ್ದು. ಅವಳು ಮೀರಾ ನಂಬಿಕೆಯನ್ನು ಉಳಿಸಿಕೊಂಡಿದ್ದಳು. ಅವಳೆಂದರೆ ಅದೇನೋ ಅಕ್ಕರೆ ಮೀರಾಗೆ.

ಸಮನ್ವಿತಾಳನ್ನು ಕಂಡಾಗಲೆಲ್ಲ ಅವರಿಗೆ ಅನಿಸುವುದು "ದಿಸ್ ಗರ್ಲ್ ಡಿಸರ್ವ್ಡ್ ಬೆಟರ್ ಫ್ಯಾಮಿಲಿ"

              ****************************

ಕಿಶೋರ್, ನವ್ಯಾ ಇಬ್ಬರು ಹಿಲ್ ವ್ಯೂ ರೆಸಾರ್ಟ್ ಗೆ ಬಂದಾಗ ಸಮನ್ವಿತಾ ಆಗಲೇ ಬಂದು ಕೂತಿದ್ದಳು. ಇವರನ್ನು ಕಂಡು ಕೈ ಬೀಸಿ ನಕ್ಕವಳತ್ತ ನಡೆದರು.

"ಬಂದು ತುಂಬಾ ಹೊತ್ತಾಯ್ತಾ?" ಕೇಳಿದ.

"ಹತ್ತು ನಿಮಿಷವಾಯಿತು ಅಷ್ಟೇ. ಏನು ಮೇಡಂ... ಗಂಡ ಹೆಂಡತಿ ಸೇರಿ ಅರ್ಜೆಂಟ್ ಮೀಟಿಂಗ್ ಕರ್ದಿದ್ದೀರಾ. ಏನು ವಿಷಯ?" ಛೇಡಿಸಿದಳು.

"ಮೊದ್ಲು ಕಾಫಿ ತಗೋಳೋಣ. ಆಮೇಲೆ ಮಾತು" ಕಾಫಿಗೆ ಹೇಳಿದ ಕಿಶೋರ್. ತಂಗಾಳಿ ಹಿತವಾಗಿ ಬೀಸುತ್ತಿತ್ತು. ಕಾಫಿ ಕುಡಿಯುವವರೆಗೂ ಯಾರೂ ಮಾತಾಡಲಿಲ್ಲ. ಕಾಫಿ ಮುಗಿದ ಮೇಲೂ ಇಬ್ಬರೂ ಬಾಯ್ತೆರೆಯುವ ಸೂಚನೆ ಕಾಣದಾಗ "ನೀವಿಬ್ಬರೂ ಹೀಗೆ ಕೂತ್ರೆ ನಾನೇನು ಅಂತ ಅರ್ಥ ಮಾಡ್ಕೋಬೇಕು?" ಅಂದಳು.

ಕಿಶೋರ್ ಹಿಂದಿನ ರಾತ್ರಿಯ ಘಟನೆ ವಿವರಿಸಿ "ಈ ತರ ದಿನ ಇವ್ಳು ಹಿಂಸೆ ಪಡೋದು ನನ್ಕೈಲಿ ನೋಡೋಕಾಗಲ್ಲ. ನೀನೇ ಏನಾದ್ರೂ ಪರಿಹಾರ ಹೇಳಮ್ಮ" ಎಂದು ನಿಡುಸುಯ್ದ.

ಕ್ಷಣಕಾಲ ಸುಮ್ಮನಿದ್ದವಳು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ಮಾತಿಗಾರಂಭಿಸಿದಳು ಸಮನ್ವಿತಾ. "ನವ್ಯಾ, ನೀನು ಬದುಕಿನ ಬಹುಮೂಲ್ಯ ಸಮಯವನ್ನು ನೋವಿನಲ್ಲೇ ಜೀವಿಸಿದ್ದೀಯ. ಆ ಕಳೆದ ದಿನಗಳು ನಿನ್ನನ್ನು  ಅತಿಯಾಗಿ ಪ್ರಭಾವಿಸಿವೆ. ನಿನ್ನ ಬದುಕಿನಲ್ಲಿ ಸಂತೋಷದ ಕ್ಷಣಗಳು ಬರೋಕೆ ಸಾಧ್ಯವೇ ಇಲ್ಲ ಅಂತ ನೀನೇ ನಿರ್ಧರಿಸಿಬಿಟ್ಟಿದ್ದೀಯ. ಅದರಿಂದಲೇ ಇವೆಲ್ಲ ಸಮಸ್ಯೆ. ಒಮ್ಮೆ ಮನಸಿನ ಬಾಗಿಲು ತೆರೆದು ಬಂದಿರುವ ಸಂತೋಷದ ಕ್ಷಣಗಳನ್ನು ಆಸ್ವಾದಿಸು. ಎಲ್ಲಾ ಸರಿ ಹೋಗುತ್ತೆ"

"ನೀನು ಹೇಳ್ತಿರೋದು ನಿಜವೇ ಸಮಾ. ಹಿಂದೆ ನನ್ನ ಬದುಕಿನಲ್ಲಿ ಕಳೆದುಕೊಳ್ಳಲು ಇದ್ದುದ್ದಾದರೂ ಏನು? ಪ್ರಾಣವೊಂದಿತಷ್ಟೇ. ಅದು ಹೋದರೂ ಚಿಂತೆಯಿರಲಿಲ್ಲ. ಆದರೆ ಈಗ? ಈಗ ನನ್ನ ಅತೀತ ತಿಳಿದ್ರೆ ನಾನು ಕಳ್ಕೊಳ್ಳೋದು ಬೆಲೆ ಕಟ್ಟಲಾಗದ್ದು"

"ಅದ್ಕೆ ಹೇಳ್ತಿರೋದು ನವ್ಯಾ, ಹಳೇದ್ನ  ಮರ್ತು ಹೊಸದನ್ನು ಸ್ವಾಗತಿಸು ಅಂತ" ಕಿಶೋರ್ ಹೇಳಿದ.

"ಹೆಸರು ಬದಲಾದರೆ ಹಣೆಬರಹ ಬದ್ಲಾಗುತ್ತಾ? ನಾನು ಮರೆತ ಮಾತ್ರಕ್ಕೆ ನನ್ನ ಅತೀತ ಸುಳ್ಳಾಗದು. ಒಂದು ವೇಳೆ ನಾವು ಮುಚ್ಚಿಟ್ಟ ಸತ್ಯ ಇನ್ಯಾರ ಮೂಲಕವೋ ಮನೆಯಲ್ಲಿ ಗೊತ್ತಾದ್ರೆ?"

"ಹಾಗೆ ಗೊತ್ತಾದ ದಿನ ನೋಡ್ಕೊಳ್ಳೋಣ. ಆಗ ಏನೇ ಆದ್ರೂ ನಾನು ನಿನ್ನ ಜೊತೆ ಇರ್ತೀನಿ ನವ್ಯಾ" ಕಿಶೋರನೆಂದ.

"ಹಾಗೆ ಯಾರೋ ಮೂರನೇ ವ್ಯಕ್ತಿಯಿಂದ ವಿಷಯ ತಿಳಿದರೆ ಮನೆಯವರಿಗಾಗುವ ನೋವಿನ ಆಳವನ್ನು ಎಂದಾದರೂ ಗ್ರಹಿಸಿದ್ದೀರಾ? ಆ ಸತ್ಯದ ತೀವ್ರತೆಗಿಂತ ಇಷ್ಟು ವರ್ಷದಿಂದ ಮಗ ಸೊಸೆ ನಮಗೆ ಸುಳ್ಳು ಹೇಳಿದ್ರಲ್ಲಾ, ಯಾರೋ ಮೂರನೇ ವ್ಯಕ್ತಿಯಿಂದ ಸತ್ಯ ತಿಳಿಯೋ ಹಾಗಾಯ್ತಲ್ಲ ಅನ್ನೋ ನೋವೇ ಹೆಚ್ಚು ತೀವ್ರವಾಗಿರುತ್ತೆ"

ಸಮನ್ವಿತಾ ಕೂಡಾ "ನವ್ಯಾ ಹೇಳ್ತೀರೋದು ಸತ್ಯನೇ ಕಿಶೋರ್. ಗೊತ್ತಾಗೋ ಸತ್ಯಕ್ಕಿಂತಲೂ ನೀವಿಬ್ರೂ ಅದ್ನ ಮುಚ್ಚಿಟ್ರಿ ಅನ್ನೋದೇ ಅವ್ರನ್ನ ತುಂಬಾ ಕಾಡುತ್ತೆ. ಅದೆಂಥಾ ಸತ್ಯಾನೇ ಆದ್ರೂ ಮನೆಯವರಿಂದ ಗೊತ್ತಾಗೋದಕ್ಕೂ, ಯಾರೋ ಹೊರ್ಗಿನವರಿಂದ ತಿಳಿಯೋಕೂ ತುಂಬಾ ವ್ಯತ್ಯಾಸವಿದೆ" ಅಂದಳು.

"ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಮನಸ್ಸನ್ನ ನಾನು ಸಮಾಧಾನಿಸಲಾಗದೆ ಹೋಗ್ತಿದ್ದೀನಿ. ಪ್ರತಿ ಬಾರಿ ಅಪ್ಪಾಜಿ, ಅಮ್ಮಾ, ಕಾರ್ತಿಕ್ ನ ನೋಡಿದಾಗಲೂ 'ಇಷ್ಟೊಂದು ಪ್ರೀತಿ, ಕಾಳಜಿ ಮಾಡೋ ಜೀವಗಳಿಗೆ ಎಷ್ಟೊಂದು ಮೋಸ ಮಾಡ್ತಿದ್ದೀ, ಎಂಥಾ ದ್ರೋಹಿ ನೀನು' ಅಂತ ನನ್ನ ಅಂತರಾತ್ಮ ಚೀರುತ್ತೆ. ಮಾಡಿರೋ ತಪ್ಪನ್ನು ಯಾರ ಮುಂದೆ ಬೇಕಾದರೂ ಸಮರ್ಥಿಸಿಕೊಳ್ಳಬಹುದು. ದೇವರ ಮೇಲೆ ಪ್ರಮಾಣಿಸಿಯೂ ಸುಳ್ಳು ಹೇಳಬಹುದು. ಆದರೆ ಮನಃಸಾಕ್ಷಿಗೆ ಸುಳ್ಳು ಹೇಳಿ ಸಮಾಧಾನಿಸೋಕಾಗೋಲ್ಲ. ಬದುಕಿನಲ್ಲಿ ಅತೀ ಘೋರವಾದ ಸ್ಥಿತಿ ಅಂದ್ರೆ ಕನ್ನಡಿಯಲ್ಲಿನ ನಮ್ಮ ಪ್ರತಿಬಿಂಬವನ್ನು ನಾವೇ ದಿಟ್ಟಿಸಿ ನೋಡೋಕಾಗ್ದೆ ಇರೋದು. ಈಗ ನಾನಿರೋದು ಅದೇ ಸ್ಥಿತಿಯಲ್ಲಿ‌...."   ನವ್ಯಾಳ ಮಾತಿನ ತೀವ್ರತೆಗೆ ಇಬ್ಬರೂ ಸ್ಥಬ್ದರಾದರು.

ಇದೆಂಥಾ ಸುಳಿ. ಇದರಿಂದ ಪಾರಾಗುವ ದಾರಿ ಹೇಗೆ? ಯೋಚಿಸಿದಷ್ಟೂ ಕಗ್ಗಂಟಾಯಿತೇ ಹೊರತು ಪರಿಹಾರ ಕಾಣದಾಯಿತು.

'ಛೇ.. ನನ್ನಿಂದ ಯಾರಿಗೂ ನೆಮ್ಮದಿ ಇಲ್ಲ. ಆದಿಅಂತ್ಯವಿಲ್ಲದ ನರಕದಲ್ಲಿ ಮುಳುಗಿದ್ದವಳನ್ನು ಕೈ ಹಿಡಿದು ಬೆಳಕಿನೆಡೆಗೆ ತಂದ ಕೋಲ್ಮಿಂಚು ಸಮನ್ವಿತಾ. ಆನಂತರ ಕಿಶೋರನ ಪರಿಚಯ. ಖಾಲಿ ಹಾಳೆಯಂಥ ನನ್ನ ಬಾಳಲ್ಲಿ ಇವರಿಬ್ಬರೂ ತುಂಬಿದ ಬಣ್ಣಗಳೆಷ್ಟು? ಇವರಿಬ್ಬರೂ ನನ್ನೆರಡು ಕಣ್ಣುಗಳಂತೆ. ಒಬ್ಬಳು ಬದುಕು ಕೊಟ್ಟವಳು ಇನ್ನೊಬ್ಬ ಅಸ್ತಿತ್ವ ಕೊಟ್ಟವನು. ಆದರೆ ತಾನು ನೀಡಿದ್ದು ಬರೀ ನೋವೇ.....' ಹೀಗೇ ಸಾಗಿದ್ದ ನವ್ಯಾಳ ವಿಚಾರಲಹರಿಯನ್ನು ತುಂಡರಿಸಿದ್ದು ಸಮನ್ವಿತಾ.

"ನವ್ಯಾ ಏಳು ತುಂಬಾ ತಡವಾಗಿದೆ. ಕಿಶೋರ್ ಹೊರಡೋಣ್ವಾ?" ಎಲ್ಲರೂ ಎದ್ದರು. ಅವರಿಬ್ಬರೂ ಹೊರಟ ನಂತರ ತಾನೂ ಮನೆಗೆ ಬಂದಳು.  ಒಳಗೆ  ಹೋಗಲು ಮನಸ್ಸಾಗದೇ ಹೊರಗೆ ಲಾನ್ ನಲ್ಲಿ ಕುಳಿತಳು.

ಸುಖ್ ಕೀ ಕಲಿಯಾ ದುಃಖ್ ಕೆ ಕಾಂಟೆ

ಮನ್ ಸಬ್ ಕಾಮ್ ಆಧಾರ್

ಮನ್ ಸೆ ಕೋಯಿ ಬಾತ್ ಚುಪೆ ನಾ

ಮನ್ ಕೆ ನೈನ್ ಹಜಾ಼ರ್

ಜಗ್ ಸೆ ಚಾಹೇ ಭಾಗ್ ಲೆ ಕೋಯೀ

ಮನ್ ಸೆ ಭಾಗ್ ಪಾಯೇ 

ಮನವೆಂಬುದು ಎಷ್ಟು ಪ್ರಬಲ..... ಮನದ ನಡೆಗಳು, ಮನದೊಳಗಿನ ಭಾವನೆಗಳು ಅನೂಹ್ಯ. ಅವನ್ನು ಓದಲಾಗದು. ನವ್ಯಾಳದ್ದು ಪರಿಹಾರ ಕಾಣದ ಸಮಸ್ಯೆಯೆನಿಸಿತು ಸಮನ್ವಿತಾಳಿಗೆ.

ನವ್ಯಾ .......!!

ಹಳೆಯದ್ದೆಲ್ಲಾ ಮರೆತು ಹೊಸ ಜೀವನದ ಆರಂಭ ಹೊಸತರಿಂದಲೇ ಆಗಲಿ ಎಂದು ತಾನೇ ಇಟ್ಟ ಹೆಸರು. ಇಂದಿನ ನವ್ಯಾಳಿಗೆ ನಾಳಿನ ಬಗ್ಗೆ ಕನಸುಗಳಿವೆ. ತಡೆಯೊಡ್ಡುತ್ತಿರುವ ಅತೀತವೆಂಬ ಅಡ್ಡಿ ಇದ್ದರೂ ಅದರಿಂದ ಪಾರಾಗಿ ತನ್ನ ಬದುಕನ್ನು ಉಳಿಸಿಕೊಳ್ಳಲು ಬಯಸುತ್ತಿರುವ ಜೀವನ್ಮುಖಿ ಈಕೆ.

ಆದರೆ ಅತೀತದಲ್ಲಿದ್ದಾಕೆ...........?

ಅವಳು ನಿರ್ಲಿಪ್ತೆ, ಬದುಕಿನ ಬಗ್ಗೆ ಆಕೆಗಿದ್ದುದು ದಿವ್ಯ ನಿರ್ಲಕ್ಷ್ಯ

ಅಂದಿಗೂ ಇಂದಿಗೂ ಬದಲಾಗದ್ದು ಅವಳ ತುಟಿಯಂಚಿನ ಆ ಮುಗುಳ್ನಗೆ.....

ಹೌದು....... ಅವಳ ದುಃಖ ಇತರರಿಗೆ ತಿಳಿಯದು......

ಕಾರಣ ಅದೇ ಮುಗುಳ್ನಗೆ.....

ಕರ್ಣನ ಕವಚ ಕುಂಡಲಗಳಂತೆಯೇ ಅವಳ ಆ ನಗು ಅಭೇದ್ಯ........!!

ಕಷ್ಟ ಸುಖ ಎರಡರಲ್ಲೂ ಅವಳ ಜೊತೆಗಾತಿ.

ಆ ನಗುವೇ ಅಲ್ಲವೇ ಈ ಸಮನ್ವಿತಾಳನ್ನು ಸೆಳೆದದ್ದು......

ಅವಳ ಮನ ಬೇಡವೆಂದರೂ ಕೇಳದೆ ನವ್ಯಾಳ ಅತೀತದೆಡೆ ಓಡತೊಡಗಿತು..

ಸುಶ್ರಾವ್ಯ ಕಂಠದ ಮಧುರಗಾನ ಮನವನ್ನು ಆವರಿಸತೊಡಗಿತು......

 **** ಮುಂದೆ........ ನವ್ಯಾಳ ಅತೀತ.........****