ಶನಿವಾರ, ಮೇ 30, 2020

ಅನೂಹ್ಯ 2

ಸತ್ಯನಾರಾಯಣರದ್ದು ಮೇಲು ಮಧ್ಯಮ ವರ್ಗದ ಕುಟುಂಬ. ಅವರು ಸಾರಿಗೆ ಇಲಾಖೆಯಲ್ಲಿದ್ದು ನಿವೃತ್ತರಾದರು. ಉದ್ಯೋಗದಲ್ಲಿದ್ದಾಗಲೇ ಸ್ವಂತ ಮನೆ ಕಟ್ಟಿಸಿದ್ದರು. ಇನ್ನು ಮಂಗಳಾ ಅಲ್ಪತೃಪ್ತೆ. ದುಂದುವೆಚ್ಚದಿಂದ ಮಾರುದೂರ. ಹಾಗಾಗಿ ಇಬ್ಬರದ್ದೂ ಅನ್ಯೋನ್ಯ ದಾಂಪತ್ಯ ಎನ್ನಲಡ್ಡಿಯಿಲ್ಲ.

             

ಇವರಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡವನು ಕಿಶೋರ್. ಓದಿನಲ್ಲಿ ಜಾಣ. ಮೃದುಮನಸು. ಮೊದಲಿಂದಲೂ ಸಮಾಜ ಸೇವೆಯಲ್ಲಿ ಆಸಕ್ತಿ. ಯಾರೇ ಕಷ್ಟದಲ್ಲಿದ್ದರೂ ಕೈಲಾದಷ್ಟು ಸಹಾಯ ಮಾಡುತ್ತಾನೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ಜೊತೆಗೆ " ಆಶ್ರಯ" ಎಂಬ NGO ದ ಸಕ್ರಿಯ ಕಾರ್ಯಕರ್ತ.
 

ಇನ್ನು ಚಿಕ್ಕವನು ಕಾರ್ತಿಕ್. ಬಿ.ಕಾಂ ಓದುತ್ತಿದ್ದಾನೆ. ಕಿಶೋರ್ ಎಷ್ಟು ಮೃದುವೋ ಇವನು ಅಷ್ಟೇ ಜೋರಿನವ. ಗೆಳೆಯರ ‌ಬಳಗ ಹೆಚ್ಚು. ಅವರೊಂದಿಗೆ ಬೈಕಿನಲ್ಲಿ ಊರು ಸುತ್ತೋದು, ಕ್ರಿಕೆಟ್ ಆಡೋದು, ಟಿವಿಯಲ್ಲಿ ಮ್ಯಾಚ್ ನೋಡೋದು ಅಷ್ಟೇ ಇವನ ಕೆಲಸ ಪುಸ್ತಕ ಮುಟ್ಟೋಲ್ಲ ಅನ್ನೋದು ಮಂಗಳಾ ಅವರ ಫಿರ್ಯಾದು. ಆದರೆ ಅವನೇನು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 

 

ಕಿಶೋರನಿಗೆ ಕೆಲಸ ಸಿಕ್ಕಿದ ನಂತರ ವಿವಾಹದ ಪ್ರಸ್ತಾಪಗಳು ಬರತೊಡಗಿತು. ಸತ್ಯನಾರಾಯಣರಿಗೂ ಮಗನಿಗೆ ಮದುವೆ ಮಾಡಲು ಇದೇ ಸಕಾಲ ಎನಿಸಿತು. ಕೆಲವು ಕಡೆ ಹೆಣ್ಣು ನೋಡುವ ಶಾಸ್ತ್ರವನ್ನು ಮಾಡಿಯಾಗಿತ್ತು. ಆದರೆ ಅವನು ಯಾವ ಸಂಬಂಧಕ್ಕೂ ಸುಮುಖನಾಗದ್ದು ಸಮಸ್ಯೆಯಾಯಿತು. ಇದು ಇನ್ನೂ ಹೀಗೆ ಮುಂದುವರೆದರೆ ಕಷ್ಟವೆಂದು ಅರಿತ ಮಂಗಳಾ 'ಕಿಶೋರನೊಂದಿಗೆ ನೇರವಾಗಿ ಮಾತನಾಡಿ' ಎಂಬ ಸಲಹೆ ಕೊಟ್ಟರು. ಸತ್ಯನಾರಾಯಣರಿಗೂ ಅದೇ ಸರಿಯೆನಿಸಿತು. 

ಆ ರಾತ್ರಿ ಊಟವಾದ ಬಳಿಕ "ಕಿಶೋರ ನಿನ್ಹತ್ರ ಸ್ವಲ್ಪ ಮಾತಾಡ್ಬೇಕು ಬಾ" ವರಾಂಡದತ್ತ ನಡೆದವರನ್ನು ಮೌನವಾಗಿ ಹಿಂಂಬಾಲಸಿದ್ದ. ಮಂಗಳಾ ಕೂಡ ಅಲ್ಲೇ ಒಂದೆಡೆ ಕೂತರು.  

"ಏನಪ್ಪಾ ವಿಷಯ? ಏನೋ ಯೋಚಿಸುತ್ತ ಇರೋ ಹಾಗಿದೆ" 

"ನಿನ್ನ ಬಗ್ಗೇನೇ ಕಣೋ. ಈಗ ನಿನಗೆ ಮದುವೆ ಮಾಡಲು ಸರಿಯಾದ ಸಮಯ. ನಿನಗೆ ಮದುವೆಯಾದ್ರೆ ನಮ್ಮ ಜವಾಬ್ದಾರಿ ಕಡಿಮೆಯಾಗುತ್ತೆ. ನಮ್ಗೂ ವಯಸ್ಸಾಯ್ತ. ಕಾರ್ತಿಕ್ ಅಂತೂ ಹೇಳಿದ ಮಾತು ಕೇಳೋಲ್ಲ. ಸೊಸೆ ಬಂದ್ರೆ ಈ ಮನೆ ಜವಾಬ್ದಾರಿ ಅವಳಿಗೆ ವಹಿಸಿ ನಾನು, ನಿನ್ನಮ್ಮ ತೀರ್ಥಯಾತ್ರೆ ಹೋಗೋಣ ಅಂತ" ಮಡದಿಯ ಮುಖ ನೋಡಿ ನಕ್ಕರು. 

ತಂದೆಯ ಮಾತು ಕೇಳಿ ಮೌನವಾಗಿ ಆಕಾಶ ನೋಡುತ್ತಾ ನಿಂತ ಕಿಶೋರ್. ಉತ್ತರ ಬರದಾಗ ಮತ್ತೆ ಅವರೇ ಮಾತು ಮುಂದುವರಿಸಿ "ಒಂದೆರೆಡು ಸಂಬಂಧಗಳು ನಮ್ಮ ಮನಸ್ಸಿಗೆ ಬಂದಿದ್ವು. ಆದ್ರೆ ನಿನಗೆ ಹಿಡಿಸಲಿಲ್ಲ. ಜೀವನ ಪೂರ್ತಿ ಜೊತೆಗೆ ಇರ್ಬೇಕಾದವರು ನೀವೇ....., ಹಾಗಾಗಿ ನಿನ್ಗೆ ‌ಎಂಥ ಹುಡುಗಿ ಬೇಕೋ ಹೇಳು. ಅಂತಹವಳನ್ನೇ ಹುಡುಕೋಣ. ಆದ್ರೆ ಈ ವರ್ಷ ಮದುವೆ ಆಗ್ಲೇ ಬೇಕು" ಅಂದವರ ಮಾತಿನಲ್ಲಿ ಒತ್ತಾಯವಿತ್ತು.

ಅರೆ ಘಳಿಗೆ ಮೌನವಾಗಿದ್ದವನು ಇಂದು ಎಲ್ಲಾ ಇತ್ಯರ್ಥವಾಗಿ ಬಿಡಲಿ ಎಂದು ನಿಶ್ಚಯಿಸಿ ತಂದೆಯೆಡೆಗೆ ತಿರುಗಿದವನು "ಅಪ್ಪಾ ನಾನೊಂದು ಹುಡ್ಗಿನ ಇಷ್ಟ ಪಟ್ಟೀದ್ದೀನಿ. ಅವಳನ್ನೇ ಮದುವೆ ಆಗ್ಬೇಕು ಅಂತ ತೀರ್ಮಾನಿಸಿದ್ದೀನಿ" ಎಂದ ಅವರ ಮುಖದ ಭಾವನೆಗಳನ್ನು ಅಳೆಯುತ್ತಾ.
             

ಅಷ್ಟು ಹೊತ್ತು ಸುಮ್ಮನೆ ಕೂತಿದ್ದ ಮಂಗಳಾ, ಈ ಮಾತು ಕೇಳಿದ್ದೇ "ಏನೋ ಇದು ಕಿಶೋರ, ನೀನು ಈ ರೀತಿ ಮಾಡ್ತೀಯಾ ಅಂತ ನಾನು ಅಂದುಕೊಂಡಿರಲಿಲ್ಲ" ಎಂದರು ಕಣ್ಣಲ್ಲಿ ನೀರು ತುಂಬಿಕೊಂಡು.

ಸತ್ಯನಾರಾಯಣರಿಗೆ ಇಂಥದ್ದೊಂದು ಅನುಮಾನ ಇದ್ದರೂ ಮಗನ ಬಾಯಿಂದಲೇ ಬರಲಿ ಎಂದು ಸುಮ್ಮನಿದ್ದರು. ವಿಶಾಲ ಮನೋಭಾವದ ಅವರಿಗೆ ಇದರಲ್ಲಿ ತಪ್ಪೇನೂ ಕಾಣಿಸಲಿಲ್ಲ. ಎಲ್ಲಕ್ಕಿಂತ ಅವರಿಗೆ ಮಗನ ಮೇಲೆ ಅದಮ್ಯ ನಂಬಿಕೆ. 

"ಸರಿ. ಹುಡುಗಿ ಯಾರು? ನಾಳೆನೇ ಅವಳ ಮನೆಗೆ ಹೋಗಿ ಅವಳ ತಂದೆ-ತಾಯಿ ಹತ್ರ ಮಾತಾಡೋಣ. ಅವಳ ಮನೆಲೀ ನಿನ್ನ ಬಗ್ಗೆ ಗೊತ್ತಿದ್ಯಾ?" ಮಗನನ್ನು ಪ್ರಶ್ನಿಸಿದರು. 

"ಏನ್ರೀ ಇದು? ಅವನೇನೊ ಹೇಳ್ತಾನೆ ಅಂದ್ರೆ ಬೈದು ಬುದ್ಧಿ ಹೇಳೋದು ಬಿಟ್ಟು ನೀವೂ ಅವನ್ಹಂಗೆ ಕುಣೀತೀರಲ್ಲ. ಅವಳು ಯಾವ ಜನಾನೋ, ಯಾವ ಕುಲಾನೋ. ಸಂಬಂಧಿಕರ ಮುಂದೆ ನಮ್ಮ ಮಾನ ಹೋಗುತ್ತೆ" ಉರಿದು ಬಿದ್ದರು ಮಂಗಳಾ. 

"ನೀನು ಸುಮ್ಮನೆ ಇದ್ದು ಬಿಡು ಮಂಗಳಾ. ಮದ್ವೆ ಮಾಡ್ಕೊಂಡು ಜೀವನ ನಡೆಸಬೇಕಾಗಿರೋನು ಅವ್ನು. ಆದರ್ಶ ದಾಂಪತ್ಯದ ತಳಹದಿ ಪರಸ್ಪರ ಪ್ರೀತಿ ಅಭಿಮಾನ ಆದರವೇ ಹೊರತು ಜಾತಿ ಕುಲ ಗೋತ್ರ ಅಲ್ಲ. ನೀನು ಹೇಳಪ್ಪಾ. ಅವಳ ತಂದೆ-ತಾಯಿ ನಿನ್ನ ಒಪ್ಪಿದ್ದಾರ?"

'ತಂದೆಯ ಮಾತುಗಳಿಗೆ ಹೇಗೆ ಉತ್ತರಿಸುವುದು, ಹೇಗೆ ಹೇಳಿದರೆ ಸರಿಯಾದೀತು? ಅಮ್ಮ ಒಪ್ಪಿಯಾಳ......?' ಎಂದೆಲ್ಲಾ ಯೋಚಿಸತೂಡಗಿದ ಕಿಶೋರ.


ಮುಂದುವರೆಯುತ್ತದೆ

          ‌
            


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ