ಬುಧವಾರ, ಡಿಸೆಂಬರ್ 4, 2024

ಅಂದೊಂದಿತ್ತು ಕಾಲ......

ಬಾಲ್ಯ...... ಪ್ರತೀ ವ್ಯಕ್ತಿಯೂ ತನ್ನ ಜೀವಿತಾವಧಿಯಲ್ಲಿ ಪದೇಪದೇ ಮೆಲುಕು ಹಾಕುವ, ಆ ಕ್ಷಣಗಳು ಮರಳಿ ಸಿಗಬಾರದೇ ಎಂದು ಹಂಬಲಿಸುವ ಕಾಲಘಟ್ಟ. ಚಿಂತೆಗಳ ಹಂಗಿಲ್ಲದೇ ಬಾನಾಡಿಯಂತೆ ಸ್ವಚ್ಛಂದವಾಗಿ ವಿಹರಿಸುವ ರಮ್ಯಕಾಲವದು. ಆ ಬಾಲ್ಯವೆಂಬ ಹೊತ್ತಿಗೆಯಲ್ಲಿನ ಒಂದು ಬಹುಮೂಲ್ಯ ಅಧ್ಯಾಯ ಅಜ್ಜಿಮನೆಯೆಂಬ ಮಾಯಾಲೋಕ.

ವಾರ್ಷಿಕ ಪರೀಕ್ಷೆಯ ಗೊಡವೆ ಕಳೆದು ಬೇಸಿಗೆ ರಜೆ ಕಾಲಿಟ್ಟಿತೆಂದರೆ ಸಾಕು.... ಪ್ರತಿ ಸಂಜೆ ತಡಬೆಯೇರಿ ನಿಂತು ಅಜ್ಜನ ದಾರಿ ಕಾಯುವುದೇ ನಿತ್ಯಕಾಯಕ. ಎಂದು ಯಾವ ಬಸ್ಸೇರಿ ಅಜ್ಜ ಬಂದಾನೋ, ಎಂದು ನಾವು ಮೂವರು ಅಜ್ಜಿಯೂರಿಗೆ ಹೋಗಿ ತಲುಪಿಯೇವೋ ಎಂಬ ನಿರೀಕ್ಷೆ. ಕೊನೆಗೊಮ್ಮೆ ನಮ್ಮ ನಿರೀಕ್ಷೆ ಫಲಿಸಿ ಅಜ್ಜ ಬಿಳಿ ಪಂಜೆ, ಬಿಳಿ ಷರಟಿನಲ್ಲಿ ತಡಬೆಯೆದುರು ನಿಂತನೆಂದರೆ ನಮ್ಮಿಬ್ಬರನ್ನು ಹಿಡಿಯುವವರುಂಟೇ. ಅಜ್ಜ ಮನೆಯ ಜಗಲಿಯೇರುವ ಮುನ್ನವೇ 'ಅಜ್ಜಾ......ಯಾವಾಗ ಕರ್ಕೊಂಡು ಹೋಗ್ತೀ ನಮ್ಮನ್ನ' ಎನ್ನುವುದೊಂದೇ ನಮ್ಮ ವರಾತ. ವರ್ಷಕ್ಕೊಮ್ಮೆ ಮಗಳ ಮನೆಗೆ ಬಂದಿಳಿಯುವ ಅಜ್ಜನದೋ ಅಲ್ಲಿನ ನೆಂಟರಿಷ್ಟರನ್ನೆಲ್ಲಾ ಒಮ್ಮೆ ಮಾತನಾಡಿಸುವ ರಿವಾಜು. ಎರಡ್ಮೂರು ದಿನಗಳ ಅಜ್ಜನ ತಿರುಗಾಟ ನಮ್ಮ ಪಾಲಿಗೆ ಯುಗ ಯುಗಗಳ ಹೆಣಗಾಟ. ಕೊನೆಗೊಮ್ಮೆ 'ನಾಳೆ ಬೆಳಗ್ಗಿನ ಮೊದಲ ಬಸ್ಸಿಗೇ ಹೊರಟು ಬಿಡೋದು' ಎಂದು ಅಮ್ಮ ಅಜ್ಜ ಉದ್ಘೋಷಿಸಿದ ಕ್ಷಣ ನಮ್ಮ ಅಂಗೈಯೊಳಗೆ ಆಕಾಶ. ಬ್ಯಾಗಿಗೆ ಬಟ್ಟೆಬರೆ ತುರುಕುವ ಸಂಭ್ರಮ.... ಆ ಸಂಭ್ರಮಕ್ಕೆ ವಿಘ್ನ ತರುವಂತೆ ಬೇಸಿಗೆ ರಜೆಯ ಹೋಂವರ್ಕ್ ಎಂಬ ಪೆಡಂಭೂತ.... ಆ ಭೂತದ ಭಯವನ್ನೂ ಮೆಟ್ಟಿ ನಿಲ್ಲುವ ಅಜ್ಜಿ ಮನೆಯೆಂಬ ಅಯಸ್ಕಾಂತೀಯ ಅವಧೂತ.... 

ನಾಳೆ ಅಜ್ಜಿ ಮನೆಗೆ ಹೊರಡುವುದೆಂದರೆ ಈ ರಾತ್ರಿ ನಿದ್ರೆ ನೈವೇದ್ಯವೇ ಸೈ. ಯಾವಾಗ ಹೊತ್ತು ಹರಿದು ಬೆಳಕಾಗುವುದೋ, ಯಾವಾಗ ನಾವು ಬಸ್ಸೇರಿ ಪಯಣ ಶುರುವಾಗುವುದೋ ಎಂಬುದೊಂದೇ ಯೋಚನೆ. ನಾಲ್ಕು ಬಸ್ಸುಗಳನ್ನು ಬದಲಿಸುವ ಪಯಣದಲ್ಲಿ ಕಿಟಕಿ ಸೀಟು ಗಿಟ್ಟಿಸಿಕೊಳ್ಳುವ ಧಾವಂತ ಹಾಗೂ ಕಿಟಕಿ ಸೀಟು ನನಗೇ ಬೇಕೆಂಬ ಹಠದ ಹೋರಾಟದ ಜೊತೆಗೆ ದಾರಿಯುದ್ದಕ್ಕೂ ಎಲ್ಲೆಲ್ಲಿ ಏನೇನು ಕುಲುಕಲು ತಿಂಡಿಗಳನ್ನು ಅಜ್ಜನಿಂದ ತೆಗೆಸಿಕೊಳ್ಳಬೇಕು ಎಂಬ ಲೆಕ್ಕಾಚಾರ, ಹಳೆ ನಗರದ ಬಸ್ಟಾಂಡಿನಲ್ಲಿನ ಹೋಟೆಲಿನಲ್ಲಿ ಐಸ್ಕ್ರಿಂ ಸಿಗುವುದೋ ಇಲ್ಲವೋ ಎಂಬ ಚಿಂತೆ...... ವಿವಿಧ ಯೋಚನೆಗಳ ಜಾಲವನ್ನು ಬಿಡಿಸಿಕೊಳ್ಳುತ್ತಾ ಕೊನೆಗೂ ನಿಟ್ಟೂರಿನಲ್ಲಿ ಬಸ್ಸಿನಿಂದ ಹೆಜ್ಜೆ ಹೊರಗಿಟ್ಟೆವೆಂದರೆ ಅದೆಂತಹ ಸಂತೋಷ. ನಿಟ್ಟೂರಿನಿಂದ ನವಿಲ್ಕೊಡಿಗೆಯ ಆ ಕಾಲ್ನಡಿಗೆಯ ಹಾದಿಯ ಸೊಬಗ ಬಣ್ಣಿಸಲು ಪದಗಳುಂಟೇ? ಹಸಿರ ರಾಶಿಯ ನಡುವಣ ಮಣ್ಣಿನ ಹಾದಿ........ ಹಾದಿಯ ಇಕ್ಕೆಲಗಳಲ್ಲಿ ನೆಲ್ಲಿ, ಬುರುಗ, ಮುಳ್ಹಣ್ಣು, ಈಚಲಹಣ್ಣು ಮೊದಲಾದವುಗಳ ಸಮೃದ್ಧ ರಾಶಿ........ ಲಕ್ಮನೆಗೊಂದು ತಿರುವು, ಕಬ್ಬಿನಕುಡಿಗೆಗಿನ್ನೊಂದು ಹಾದಿ..... ಎಲ್ಲವನ್ನು ಕಣ್ಣರಳಿಸಿ ನೋಡುತ್ತಾ ಅಜ್ಜಿಮನೆಯ ಸಮೀಪ ಬಂದೆವೆಂದರೆ ಕಣ್ಣೋಟದ ಪರಿಧಿಯುದ್ದಕ್ಕೂ ಚಾಚಿಕೊಂಡ ಶರಾವತಿಯ ನೀಲ ಪತ್ತಲ......
ಈ ಸಲ ನೀರು ಹೋದಸಲಕ್ಕಿಂತ ಹೆಚ್ಚಿದೆಯೋ ಇಲ್ಲ ಕಡಿಮೆಯೋ, ಮುಳುಗಡೆ ಸೇತುವೆ ಕಾಣುವಷ್ಟು ನೀರಿಳಿದಿದೆಯೋ ಇಲ್ಲವೋ, ಸೇತುವೆ ದಾಟಿ ಮುಂದೆ ಹೋಗುವ ಅವಕಾಶ ಈ ಬೇಸಿಗೆ ರಜೆಯಲ್ಲಿ ಶರಾವತಿ ದಯಪಾಲಿಸಿಯಾಳೋ ಇಲ್ಲವೋ ಎಂಬೆಲ್ಲ ಶಂಕೆಗಳು ಮನದೊಳಗೆ ಸುಳಿಯುವುದರಲ್ಲಿ ಅಜ್ಜಿ ಮನೆಯ ಕೆಳ ಅಂಗಳ ನಮ್ಮೆದುರು ಪ್ರತ್ಯಕ್ಷ. ಕೆಳ ಅಂಗಳಕ್ಕೆ ಎದುರಾಗಿದ್ದುದು ಅಜ್ಜನ ತಳಿಕೋಣೆ. ಕಟ್ಟೆಯ ಎತ್ತರದ ಗೋಡೆಯ ಮೇಲೆ ಮರದ ತಳಿಗಳನ್ನೇ ವಿಶಾಲ ಗೋಡೆಯಂತೆ ಒಳಗೊಂಡ, ಮನೆಗೆ ಯಾರೇ ಬಂದರೂ ಮೊದಲು ಕಾಣುವ ತಳಿಕೋಣೆ ಆಗ ನಮ್ಮೆಲ್ಲರ ಆಟದ ಹಾಟ್ ಸ್ಪಾಟ್. ಕೆಳ ಅಂಗಳ ಬಳಸಿ ಐದಾರು ಮೆಟ್ಟಿಲುಗಳನ್ನೇರಿದರೆ ಮೇಲಂಗಳ. ಅಂಗಳದ ಎದುರೊಂದು ಟಿವಿ ಡಿಶ್, ಡಿಶ್ ನೇರಕ್ಕೆ ಎದುರಿನ ಕಡಿಮಾಡು. ಕಡಿಮಾಡಿನ ಎರಡೂ ಬದಿ ಅಡಿಕೆ ಸಂಗ್ರಹಣೆಗಾಗಿಟ್ಟ ಬಿದಿರಿನ ತಟ್ಟಿಯ ಸಂಗ್ರಹಗಾರಗಳು ಮತ್ತೊಂದು ದೊಡ್ಡ ಮರದ ಪತ್ತಾಸು. ಇವುಗಳ ನಡುವೆ ಮನೆಯ ಹಜಾರ ಪ್ರವೇಶಿಸುವ ಮೆಟ್ಟಿಲುಗಳು. ಮೆಟ್ಟಿಲನ್ನೇರಿದರೆ ಉದ್ದದ ಹಜಾರ. ಈ ಹಜಾರದಲ್ಲೇ ಸದಾ ನಮ್ಮ ಸಂಚಾರ...... ಯಾಕೆ ಎಂದಿರಾ? ಕನ್ನಡಿ ಎಂಬ ದೇವಿ ಹಾಗೂ ಟಿವಿ ಎಂಬ ಮಾಯಾವಿ ಇದ್ದದ್ದೇ ಈ ಹಜಾರದಲ್ಲಲ್ಲವೇ...... ಅಲ್ಲಿಂದ ಮತ್ತೆ ಮಧ್ಯದಲ್ಲಿನ ಮೂರ್ನಾಲ್ಕು ಮೆಟ್ಟಿಲೇರಿದರೆ ನಡುಮನೆ,ಅದರ ಬಲಭಾಗಕ್ಕೊಂದು ಕೋಣೆ, ಆ ಕೋಣೆಯ ಬದಿಯಲ್ಲೇ ದೇವರ ಗೂಡು. ಈ ಕೋಣೆಯ ಮೂಲೆಯಲ್ಲೊಂದು ಕಪಾಟು. ಆ ಕಪಾಟಿನೊಳಗೋ ಆ ಕಾಲದ ಶ್ರೇಷ್ಠ ಹಿಂದಿ ಗೀತೆಗಳ ಕ್ಯಾಸೆಟ್ಟುಗಳ ರಾಶಿ. ಕಪಾಟು ಮತ್ತು ದೇವರ ಗೂಡಿನ ನಡುವಿನ ಜಾಗದಲ್ಲಿ ಮಂಚದ ಮೇಲೆ ರಾಶಿ ರಾಶಿ ಹಾಸಿಗೆ, ತೆಳು ಹೊದಿಕೆಗಳು ಹಾಗೂ ಕಂಬಳಿಗಳು. ಕೋಣೆಗೆ ಅಂಟಿಕೊಂಡಂತೆ ಬಲಭಾಗಲ್ಲೊಂದು ಸಣ್ಣ ಕಡಿಮಾಡು, ಅದರಾಚೆಗೊಂದು ಸಣ್ಣ ಅಂಗಳ ಅದರೆದುರು, ಕಡಿಮಾಡಿಗೆ ಅಂಟಿಕೊಂಡ ಉದ್ದಾನುದ್ದ ಕೊಟ್ಟಿಗೆ.

ನಡು ಮನೆಯಿಂದ ಮತ್ತೆ ಏಳೆಂಟು ಮೆಟ್ಟಿಲು ಇಳಿದರೆ ರಸಮನೆ...... ಅಷ್ಟುದ್ದ ಅಗಲದ ಅಡುಗೆ ಕೋಣೆ ಮತ್ತೆಂದೂ ಕಂಡ ನೆನಪಿಲ್ಲ ನನಗೆ. ಬಲಭಾಗದಲ್ಲಿ ಉದ್ದಕಟ್ಟೆ, ಎಡಮೂಲೆಯ ಕೆಳಬದಿಯಲ್ಲಿ ಒಲೆ, ಅಡುಗೆಮನೆಗೆ ಶೋಭೆಯಂತಿದ್ದ ಮರದ ಪಾತ್ರೆ ಸಂಗ್ರಹಣಗಾರಗಳು, ಕಪಾಟು ಮೆಟ್ಟಿಲಿನ ಬಲಕ್ಕಾದರೆ, ಮೆಟ್ಟಿಲ ಎಡಕ್ಕೆ ದೊಡ್ಡ ಊಟದ ಮೇಜು, ಅದರ ಮೇಲೊಂದು ರೇಡಿಯೋ, ಅದರಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆ, ಚಿತ್ರಗೀತೆಗಳು ಎಲ್ಲಕ್ಕೂ ಪ್ರಮುಖವಾಗಿ ಕ್ರಿಕೆಟ್ ಕಾಮೆಂಟರಿಗಳು ....... ಇನ್ನೊಂದು ಬದಿಯಲ್ಲಿದ್ದ ರುಬ್ಬುವ ಕಲ್ಲು, ಆ ಕಲ್ಲಿನಲ್ಲಿ ತಯಾರಾಗುತ್ತಿದ್ದ ರಾಗಿ, ಎಳ್ಳು, ಹೆಸರು ಮೊದಲಾದವುಗಳ ಶರಬತ್ತು...... ನಾವು ಹೆಣ್ಮಕ್ಕಳೆಲ್ಲ ಸೇರಿ ಅರೆಯುತ್ತಿದ್ದ ಮದರಂಗಿ........ ಅಡುಗೆ ಮನೆಯ ಹೊರಗೆ ಮತ್ತೊಂದು ದೊಡ್ಡ ಕಡಿಮಾಡು. ಅಲ್ಲೇ ಬಚ್ಚಲು, ಪಾತ್ರೆ ಬಟ್ಟೆ ತೊಳೆಯುವ ಕಲ್ಲು, ನೀರೊಲೆ, ಸೌದೆ ಕೊಟ್ಟಿಗೆ. 24*7 ಸದಾ ಸುರಿಯುತ್ತಲೇ ಇರುತ್ತಿದ್ದ ನೀರು, ಹಂಡೆಯಲ್ಲಿ ಸದಾ ಸಿದ್ಧವಿರುತ್ತಿದ್ದ ಬಿಸಿ ನೀರು, ಕೊಟ್ಟಿಗೆಯಲ್ಲಿನ ಲೆಕ್ಕವಿಲ್ಲದಷ್ಟು ದನಕರುಗಂಟಿಗಳು, ಅಂಕೆಯಿಲ್ಲದ ಆಟ ಬೆಟ್ಟಗುಡ್ಡಗಳ ಅಲೆದಾಟ, ಕೋಡೆಗದ್ದೆಯಲ್ಲಿನ ಎಳೆ ಸವತೇ ಕಳ್ಳತನ, ಹಿನ್ನೀರ ಹರವಿನುದ್ದ ನಿರಂತರ ಸಂ'ಶೋಧನೆ'.......... 

ಅಜ್ಜಿಮನೆಯೆಂಬ ಅಯಸ್ಕಾಂತದ ಸೆಳೆತಕ್ಕೆ ಸಿಕ್ಕಲು ಇನ್ನೇನು ಬೇಕು? ಬೇಸಿಗೆ ರಜೆಗಳಲ್ಲಿ ನಾವು ಮಾಡುತ್ತಿದ್ದ ಮೋಜು ಮಸ್ತಿ ಮುಂದಿನ ಒಂದಿಡೀ ವರ್ಷದ ಕಾಯುವಿಕೆಗೆ ದಿವ್ಯೌಷಧವಾಗಿತ್ತು. ಗುಡ್ಡದ ಬದಿಯಲ್ಲೊಂದು ಆಡಮನೆ ಕಟ್ಟಿಸಿ ಮೆರೆದ್ದಿದ್ದೆಷ್ಟು? ಅಂಗಳದ ಮೂಲೆಯಲ್ಲಿ ಮಣ್ಣಿನ ಒಲೆ ಹಚ್ಚಿ ಅಡುಗೆ ಮಾಡಿದ್ದೆಷ್ಟು? ಬಾದಾಮಿ ಕಾಯಿಗಳನ್ನು ಜಜ್ಜಿ ತಿಂದದೆಷ್ಟು? ಪೇರಲೆ ಹುಳಿಗಾಯಿಗಳನ್ನು ಉರುಳಿಸಿದ್ದೆಷ್ಟು? ಚಿಕ್ಕು ಪನ್ನೇರಲಗಳನ್ನು ಬಡಚಿದ್ದೆಷ್ಟು? ಗೇರು ಮರದಡಿಯಲ್ಲಿನ ಪೀಠಗಳನ್ನು ಆಯ್ದದ್ದೆಷ್ಟು? ತೋಟದಲ್ಲಿನ ಅಡಿಕೆ ಮರಗಳ ಸುತ್ತಳತೆ ಮಾಡಿದ್ದೆಷ್ಟು? ಅಂಗಳದಲ್ಲಿ ಒಣಗಿಸುತ್ತಿದ್ದ ಹಪ್ಪಳ ಸಂಡಿಗೆಗಳ ಕಳ್ಳತನವೆಷ್ಟು..........? ಹೀಗೇ ಮೆಲುಕುಹಾಕುತ್ತಾ ಸಾಗಿದರೆ ಎಂದಿಗೂ ಮುಗಿಯಲಾರದಷ್ಟು ನೆನಹುಗಳ ಕಣಜವಿದೆ ಮನದ ಖಜಾನೆಯೊಳಗೆ. ಪದಗಳಲ್ಲಿ ಸೆರೆಹಿಡಿದು ವಾಕ್ಯಗಳೆಂಬ ಸರಪಳಿಯಲ್ಲಿ ಬಂಧಿಸಲಾದೀತೇ ಆ ನೆನಹುಗಳ?

ಈ ನೆನಪುಗಳೆಲ್ಲದರ ಕೇಂದ್ರದಲ್ಲಿದ್ದದ್ದು ವರ್ಷಕ್ಕೊಮ್ಮೆ ಬರುವ ಅಜ್ಜನೆಂಬ ಮಾಯಾವಿ ಮತ್ತೆ ಆತನಿಗಿಂತ ಮುಖ್ಯವಾಗಿ ಶರಾವತಿಯ ಹಿನ್ನೀರಿನ ಆ ವಿಶಾಲ ಮನೆಯ ಬಾಗಿಲಲ್ಲೇ ನಮ್ಮನ್ನು ಎದುರುಗೊಳ್ಳುತ್ತಿದ್ದ ಅಜ್ಜಿಯೆಂಬ ಅದ್ಭುತ. ಅಜ್ಜಿಯಿಲ್ಲದೇ ಅಜ್ಜಿ ಮನೆಗೇನು ಸೊಗಸು ಅಲ್ಲವೇ? ಅಜ್ಜಿಯೆಂದರೆ ಒಂಥರಾ ಯಕ್ಷಿಣಿಯಂತೆ. ಮನೆಯ ಸಕಲ ಕಾರ್ಯಕಲಾಪಗಳ ರೂವಾರಿ ಆಕೆ. ಮನೆಯ ದೈನಂದಿನ ಚಟುವಟಿಕೆಗಳ ಜೀವನಾಡಿಯಾಗಿದ್ದುಕೊಂಡೇ ಅಡುಗೆ ಕೋಣೆಯ ದಿನಸಿ ಸಾಮಾನುಗಳ ದಾಸ್ತಾನು ವಿವರದಿಂದ ಹಿಡಿದು ತೋಟದ ಕೆಲಸದಾಳುಗಳ ಊಟೋಪಚಾರ ಮೇಲುಸ್ತುವಾರಿ, ಕೊಟ್ಟಿಗೆಯ ಸದಸ್ಯರ ಸ್ವಾಸ್ಥ್ಯ, ಹಿತ್ತಲು ಕೋಡೆಗದ್ದೆಗಳಲ್ಲಿನ ಕಾಯಿಪಲ್ಲೆಗಳ ಯೋಗಕ್ಷೇಮ, ವಾಟೆಹುಳಿ ಸಂಸ್ಕರಣೆ, ಹಪ್ಪಳ ಬಾಳಕಗಳ ಕಾಯಕ, ಗೇರುಬೀಜಗಳ ವಿಲೇವಾರಿ....... ಆಕೆ ವಹಿಸುತ್ತಿದ್ದ ಪಾತ್ರಗಳಿಗೆ ಸೀಮೆಯಿತ್ತೇನು? 


ನಾವು ಮೊಮ್ಮಕ್ಕಳ ಕಣ್ಣಿಗೆ ಅಜ್ಜಿ ಒಮ್ಮೆ ನಾಯಕಿಯಾದರೆ ಮಗದೊಮ್ಮೆ ಖಳನಾಯಕಿ. ಬೆಳ್ಳಂಬೆಳಿಗ್ಗೆ ದೊಡ್ಡ ತಪ್ಪಲೆಯಲ್ಲಿ ಹಬೆಯಾಡುವ ಬೆಲ್ಲದ ಕಾಫಿಯ ರುಚಿ ನಾಲಿಗೆಯಲ್ಲಿ ಮೆರೆವಾಗ ಅಜ್ಜಿ ಅಮೃತಮಯಿ. ದೋಸೆಯ ಹಿಟ್ಟನ್ನು ಎದುರಿಟ್ಟುಕೊಂಡು ಒಲೆಯೆದುರು ಅಜ್ಜಿ ಕೂತಳೆಂದರೆ ಸಾಕ್ಷಾತ್ ಅನ್ನಪೂರ್ಣೆಯೇ. ಆದರೆ ಆಟವಾಡಲು ಬಿಡದಂತೆ ಬೆನ್ನು ಬಿದ್ದು ಸ್ನಾನಕ್ಕೆ ಅಟ್ಟುವಾಗ, ತಲೆತುಂಬಾ ಎಣ್ಣೆ ಸುರಿದು ಮೆತ್ತುವಾಗ, ಇಳಿಸಂಜೆಯ ಹೊಳೆಬದಿಯ ತಿರುಗಾಟಗಳಿಗೆ ಅಡ್ಡಿಯಾದಾಗಲೆಲ್ಲ ಅಜ್ಜಿಯೊಬ್ಬ ಗುಮ್ಮನೆನಿಸಿದ್ದೂ ಇದೆ. ಒಟ್ಟಿನಲ್ಲಿ ಆಕೆಯೊಂದು ಅಚ್ಚರಿ ಅಷ್ಟೇ.

ನಿಜ ಹೇಳಬೇಕೆಂದರೆ ನಮ್ಮ ಬದುಕಿನ ಮೊತ್ತಮೊದಲ ಆದಾಯ ಗಳಿಕೆಯ ರೂವಾರಿಯೂ ಆಕೆಯೇ. ಬೇಸಿಗೆ ರಜೆಗಳಲ್ಲಿ ಮನೆಗೆ ಬರುತ್ತಿದ್ದ ಮೊಮ್ಮಕ್ಕಳಿಗೆಲ್ಲ ಬೆಳ್ಳಂಬೆಳಿಗ್ಗೆ ಗೇರುಬೀಜ ಸಂಗ್ರಹಿಸುವ ಕಾಯಕ ಕಲಿಸಿದ್ದ ಅಜ್ಜಿ ರಜೆ ಮುಗಿಸಿ ಹಿಂದಿರುಗುವಾಗ ನಮ್ಮನಮ್ಮ ಪೂಂಜಿಯ ಹಣವನ್ನು ಕೈಗಿತ್ತು ಅದರ ಮೇಲೊಂದಿಷ್ಟು ಅಜ್ಜಿ ಕಾಣಿಕೆಯನ್ನೂ ಕೊಟ್ಟು ಕಳಿಸುತ್ತಿದ್ದ ದಿನಗಳಲ್ಲಿ ಅದೆಷ್ಟು ಉತ್ಸಾಹ, ಸಂತೋಷವಿತ್ತು. 

ಕಾಲ ಕಳೆಯಿತು..... ಬಾಲ್ಯ ಗತಕಾಲದ ಪದರದಲ್ಲಿ ಕಳೆದುಹೋಯಿತು. ನಾವು ಬೆಳೆದಂತೆ ಬದುಕಿನ ರೀತಿ ನೀತಿಗಳೂ ಬೆಳೆದು ಬದಲಾದವು. ಓಡುವ ಬದುಕಿನ ಸಾವಿರ ಆಕರ್ಷಣೆಗಳ ಸಿಕ್ಕಿನೊಳಗೆ ಅಜ್ಜಿ ಮನೆಯ ಸೆಳೆತ ಕಿರಿದಾಯಿತು. ವರ್ಷಕ್ಕೊಮ್ಮೆ ಅಜ್ಜಿ ಮನೆಯಲ್ಲಿ ಒಟ್ಟಾಗಿ ತಿಂಗಳುಗಟ್ಟಲೇ ಕೂಡಿ ಆಡುತ್ತಿದ್ದ ಸಂಬಂಧಗಳು ಯಾವುದೋ ಸಭೆ ಸಮಾರಂಭಗಳ ಒಂದೆರಡು ಗಂಟೆಯ ಉಭಯ ಕುಶಲೋಪರಿಯಲ್ಲಿ ಸಮಾಪ್ತವಾಗತೊಡಗಿದವು. ಕೈಹಿಡಿಸಿ ಊರಿಗೆ ಕರೆದೊಯ್ಯಲು ಬರುತ್ತಿದ್ದ ಅಜ್ಜ ಅಂತರ್ಧಾನನಾದ. ಚಿಕ್ಕಿಯಂದಿರ ಮದುವೆಯಾಯಿತು. ಸದಾ ಗಲಗಲ ಎನ್ನುತ್ತಿದ್ದ ಅಜ್ಜಿಮನೆಯ ಸ್ವರೂಪ ಬದಲಾಯಿತು. ಹಳೆಯ ವಿಶಾಲ ಹಜಾರ ಕಡಿಮಾಡುಗಳ ಮನೆ ಇಂದು ಆಧುನಿಕ ಸ್ವರೂಪ ಪಡೆದುಕೊಂಡಿದೆ. ಕೊಟ್ಟಿಗೆ ತುಂಬಿಕೊಂಡಿರುತ್ತಿದ್ದ ಮಲ್ನಾಡುಗಿಡ್ಡಗಳ ಸ್ಥಾನವನ್ನು ಬೆರಳೆಣಿಕೆಯ ಜಾತಿಹಸುಗಳು ಆಕ್ರಮಿಸಿಕೊಂಡಿವೆ. ಪೇರಲೆ, ಚಿಕ್ಕು ಪನ್ನೇರಲಗಳೆಲ್ಲೋ ಬಲ್ಲೆಯೊಳಗೆ ಅಸ್ತವಾಗಿವೆ. ಶರಾವತಿಯ ಹಿನ್ನೀರಿನ ಬದಿಯಲ್ಲಿನ ಬೇಸಿಗೆ ಕಾಲದ ಕೋಡೆಗದ್ದೆಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ. ನೀರಿಳಿದಾಗ ಆಕೆಯ ಒಡಲಲ್ಲಿ ಗೋಚರಿಸುವ ಗತಕಾಲದ ಮೂಕಾವಶೇಷಗಳನ್ನು ವೀಕ್ಷಿಸಲು ಈಗಲ್ಲಿ ಹಾದಿಯಿಲ್ಲ. ಮನೆಯ ಮುಂಬದಿ ಹಿಂಬದಿಯ ಸಣ್ಣಪುಟ್ಟ ಗುಡ್ಡಗಳಲ್ಲಿ ಓಡಾಡುವವರಿಲ್ಲದೇ ಕಾಲುಹಾದಿಗಳೆಲ್ಲ ಸುಳಿವಿಲ್ಲದಂತೆ ಮರೆಯಾಗಿವೆ.


ಇಷ್ಟೆಲ್ಲಾ ಆದರೂ ಆ ಮನೆಯೆಡೆಗೆ ತಣ್ಣಗೆ ಸೆಳೆಯುತ್ತಿದ್ದ ಒಂದು ಸೆಳೆತವೆಂದರೆ ಅಜ್ಜಿ....... ಅಂದಿನ ಮನೆಯ ಮಹಾಸಾಮ್ರಾಜ್ಞಿ ಈಕೆಯೇನಾ ಎನ್ನುವಷ್ಟು ಮಟ್ಟಿಗೆ ತಣ್ಣಗಾಗಿದ್ದ ಅಜ್ಜಿ ಗತಕಾಲದ ನೆನಹುಗಳಲ್ಲಿಯೇ ಉಳಿದುಹೋಗಿದ್ದಳು. ಇಂದಿನ ಬದಲಾದ ಕಾಲಕ್ಕೆ ಬರಲು ಆಕೆಗೆ ಇಷ್ಟವಿರಲಿಲ್ಲ ಬಹುಶಃ. ಆಗೆಲ್ಲ ಬೆಳಗೆದ್ದರೆ ನಮ್ಮನ್ನೆಲ್ಲ ಸ್ನಾನಕ್ಕೆ ಅಟ್ಟುತ್ತಿದ್ದಾಕೆ ಈಗ ತಾನಾಯಿತು ತನ್ನ ಪಾಡಾಯಿತು ಎಂಬಂತೆ ತಣ್ಣಗೆ ಸ್ನಾನ ಮುಗಿಸಿ ವರಾಂಡದ ಕುರ್ಚಿಯಲ್ಲೋ ಇಲ್ಲಾ ದಿವಾನದಲ್ಲೋ ಕುಳಿತುಬಿಡುತ್ತಿದ್ದಳು. ನಮ್ಮಲ್ಲಿ ಯಾರನ್ನೇ ನೋಡಿದರೂ ಮುಗ್ದ ಮಗುವಿನಂತೆ ಒಂದು ಚಂದದ ನಿಷ್ಕಲ್ಮಶ ನಗು ನೀಡಿದಳೆಂದರೆ ಮುಗಿಯಿತು. 'ನಾ ಯಾರು ಹೇಳು? ಯಾರ ಮಗಳು?' ಎಂದರೆ ನೆನಪಿನ ಬುತ್ತಿಯ ಗಂಟು ಬಿಚ್ಚುತ್ತಿರಲಿಲ್ಲ. ಹಳೆಯ ಜೀವನ್ಮುಖಿ ನೆನಪುಗಳಲ್ಲೇ ಜೀವಿಸಿದ್ದಳು ಬಹುಶಃ. ಆದರೂ ಆ ನಗುವಿದೆಯಲ್ಲ..... ಎಂಥಾ ನಿರುಮ್ಮಳ ನಗುವದು...... ಅದರ ಮುಂದೆ ಬೇರ್ಯಾವ ನೆನಪುಗಳು, ಗುರುತುಗಳು ಬೇಕೆನಿಸುವುದಿಲ್ಲ. 
ಬಾಲ್ಯಕಾಲದಂತೆ ಸದಾ ಅಲ್ಲೇ ಉಳಿವ ಹಪಾಹಪಿ ಇಲ್ಲದಿದ್ದರೂ ಯಾವಾಗ ಊರಿನ ಕಡೆಗೆ ಹೋದರೂ ಅಜ್ಜಿಮನೆಗೊಮ್ಮೆ ಹೋಗಿ ಬರಬೇಕೆನ್ನಲು ಆಕೆಯೊಂದು ನೆಪವಾಗಿದ್ದಳು......

ಈಗ ಆ ನೆಪವಿಲ್ಲ........ ಸದ್ದಿಲ್ಲದೇ ಆಕೆ ಸರಿದುಹೋಗಿದ್ದಾಳೆ. ಆ ನಗು ಇನ್ನು ನೆನಪುಗಳಲ್ಲಿ ಮಾತ್ರವೇ..... ಬಾಲ್ಯಕಾಲದ ಮಧುರ ಜ್ಞಾಪಕಗಳಂತೆಯೇ ಆಕೆಯೂ ಇನ್ನು ಬರೀ ನೆನಪು ಮಾತ್ರ. ಅಜ್ಜಿಯಿಲ್ಲದ ಅಜ್ಜಿಮನೆಗೆ ಹೋಗಲು ಇನ್ಯಾವ ನೆಪಗಳಾದರೂ ಸಿಗಬಹುದೇ.......? ಗೊತ್ತಿಲ್ಲ.‌

ಬಾಲ್ಯದಲ್ಲಿ ಆ ಮನೆಯ ಸುತ್ತಲೂ ಹಲವು ಬಗೆಯ ಹೂವಿನ ಗಿಡಗಳ ರಾಶಿ. ಆ ರಾಶಿ ಹೂಗಿಡಗಳಲ್ಲಿ ಎದುರಿನ ಅಂಗಳದ ಬಲಮೂಲೆಯಲ್ಲಿದ್ದ ಮಂಗಳೂರು ಮಲ್ಲಿಗೆ ಬಳ್ಳಿಗೆ ಪಟ್ಟದರಸಿಯ ಸ್ಥಾನಮಾನ. ಆ ಮಲ್ಲಿಗೆಯ ಗಂಧದೊಂದಿಗೆ ಸುತ್ತಮುತ್ತಲಿದ್ದ ಹತ್ತು ಹಲವು ಹೂಗಳ ಕಂಪು ಸೇರಿ ಶರಾವತಿಯ ಹಿನ್ನೀರಿನ ಮೇಲಿಂದ ಬೀಸುತ್ತಿದ್ದ ಮಂದಾನಿಲದಲ್ಲಿ ಅದೊಂದು ಬಗೆಯ ವಿಶಿಷ್ಟ ನರುಗಂಪು. ಆ ಸುವಾಸನೆಯನ್ನು ಆಘ್ರಾಣಿಸಿದಷ್ಟೂ ಸಾಲದು. ಇಂದಿಗೂ ಆ ಕಂಪು ನನ್ನ ನಾಸಿಕದ ಗ್ರಹಿಕೆಯಲ್ಲಿ ಸ್ಥಾಯಿಯಾಗಿದೆ. 

ಆ ಗಂಧ ಈಗ ಅಲ್ಲಿಲ್ಲ. ಅದರ ಸುಳಿವೂ ಇಲ್ಲ. ನಮ್ಮ ಮುಂದಿನ ಪೀಳಿಗೆಗೆ ಆ ಘಮಲಿನ ಮಧುರತೆಯನ್ನು, ನಮ್ಮ ಬಾಲ್ಯದ ಸಿರಿವಂತಿಕೆಯನ್ನು ದಾಟಿಸುವ ಹಾದಿಯಿಲ್ಲ. ಬಹುಶಃ ನಮ್ಮ ಉಸಿರಿನೊಂದಿಗೆ ಈ ನೆನಪುಗಳ ಅಸ್ತಿತ್ವವೂ ಕೊನೆಯಾದೀತು.

ಅಣೆಕಟ್ಟೆಂಬ ಸರಪಳಿಯಲ್ಲಿ ಬಂಧಿಯಾಗಿ ಗತಕಾಲದ ಜೀವಂತಿಕೆಯಿಂದ ಇಂದಿನ ತೋರಿಕೆಯ ತನಕ ಎಲ್ಲಕ್ಕೂ ನಿರ್ಲಿಪ್ತ ಸಾಕ್ಷಿಯಂತೆ ನಿಂತಿರುವ ಶರಾವತಿಗಾದರೂ ಆ ಘಮಲಿನ ನೆನಪಿರಬಹುದೇ.......? ಆ ಕಂಪು ಎಂದಿಗಾದರೂ ಮರಳಿ ಆಘ್ರಾಣಿಸಲು ದೊರಕಬಹುದೇ........?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ