ಚಿಟ್ಟೆ ಹೆಜ್ಜೆ
ನೀಲಿ ಬಾನ ಭಿತ್ತಿಯಲಿ ಭಾವಗಳ ಬಣ್ಣೀರು.....
ಲೇಬಲ್ಗಳು
ಗುರುವಾರ, ಏಪ್ರಿಲ್ 10, 2025
ದಯವಿರಬೇಕು ಸಕಲ ಪ್ರಾಣಿಗಳಲಿ
ಮಹಾವೀರ ಜಯಂತಿಯ ಈ ಶುಭ ಸಂದರ್ಭದಂದು ಸುಮಾರಷ್ಟು ಸದ್ಧರ್ಮ ಬಂಧುಗಳ ವಾಟ್ಸಾಪ್ ಸ್ಟೇಟಸ್ಸಿನಲ್ಲಿ ಮಹಾವೀರರ ವಾಣಿ ಅನುರಣಿಸಿದ್ದು ಕಂಡು ಖುಷಿಯ ಜೊತೆಜೊತೆಗೆ ಒಂದು ಪ್ರಶ್ನೆ ತಲೆಯೊಳಗೆ ಓಡಾಡ್ತಿದೆ. ಅಹಿಂಸಾ ಪರಮೋ ಧರ್ಮಃ ಎಂಬ ಜೈನ ಧರ್ಮದ ಮೂಲಭೂತ ಸಿದ್ಧಾಂತವನ್ನ ಧರ್ಮಾತೀತವಾಗಿ ಹಲವು ಮಹಾನ್ ಚೇತನಗಳು ಪುನರುಚ್ಚರುವುದಿದೆ. ಬಸವಣ್ಣನವರ ಇದೇ ಅರ್ಥವನ್ನು ಧ್ವನಿಸುವ 'ದಯವೇ ಧರ್ಮದ ಮೂಲವಯ್ಯ ದಯವಿರಬೇಕು ಸಕಲ ಪ್ರಾಣಿಗಳಲಿ' ಎಂಬ ಸಾಲು ಬಹು ಪ್ರಸಿದ್ಧವಾದುದು. ವಿಪರ್ಯಾಸ ಹೆಚ್ಚಿನವರ ಅಹಿಂಸೆ, ದಯೆಯ ಪರಿಧಿಯಲ್ಲಿ ಮನುಷ್ಯನೆಂಬ ಪ್ರಾಣಿ ಗುಂಪಿಗೆ ಸೇರದ ಪದವಾಗಿ ಉಳಿಯುತ್ತಿದ್ದಾನೆ. ಸಕಲ ಪ್ರಾಣಿಗಳಿಗೆ ದಯೆ ತೋರುವ ಧರ್ಮ ಪಾಲಕರು ತಮ್ಮ ಅಕ್ಕಪಕ್ಕದ ಬಂಧುಬಾಂಧವರ ವಿಚಾರದಲ್ಲಿ ಆ ದಯೆ ತೋರುವುದು ಕಡಿಮೆ. ಬೇರೆಲ್ಲಾ ಪ್ರಾಣಿಗಳ ಮೇಲೆ ದಯೆ ತೋರಿದವರಿಗೂ ತಮ್ಮದೇ ಕುಟುಂಬ, ಬಂಧು, ಸ್ನೇಹಿತ ಅಥವಾ ತಮ್ಮಂತಹ ಇನ್ನೊಬ್ಬ ಮನುಜನಿಗೆ ದಯೆ ಕರುಣೆ ತೋರುವುದು ವರ್ಜ್ಯ. ಸಕಲ ಪ್ರಾಣಿ, ಪಕ್ಷಿ, ಸಸ್ಯ, ಕ್ರಿಮಿ, ಕೀಟಗಳಿಗೆ ದಯೆ ತೋರಿಸಿ ಮನುಜನೆಂಬ ಪ್ರಾಣಿಯನ್ನು ಮಾತ್ರ ಲೆಕ್ಕದಿಂದ ಹೊರಗಿಡುವ ಇಂತಹ ಅಹಿಂಸಾ ವಿರೋಧಾಭಾಸವನ್ನು ಮಹಾವೀರ ತೀರ್ಥಂಕರರು ಬೋಧಿಸಿರಲಿಲ್ಲ ಎಂಬುವುದು ನನ್ನ ಭಾವನೆ. ಪರರ ಭಾವನೆಗಳಿಗೆ ಘಾಸಿಯಾಗದಂತೆ ಅಥವಾ ಸಾಧ್ಯವಾದಷ್ಟು ಕಡಿಮೆ ಘಾಸಿಯಾಗುವಂತೆ ನಡೆಯುವುದು ಮಾನವಧರ್ಮ. ಸಸ್ಯಾಹಾರ ಸೇವನೆ, ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳಿಗೆ ಹಾನಿ ಮಾಡದಿರುವಿಕೆ, ಮಂತ್ರಪಠಣ, ಪೂಜಾಪಾಠಗಳಲ್ಲ ಅಹಿಂಸಾ ಧರ್ಮ. ನಾನು ಹಾಗೂ ನನ್ನದು ಅನ್ನುವ ಪರಿಧಿಯಿಂದ ಹೊರಗಿರುವ ಪರರ ಬಗೆಗೂ ತಾದಾತ್ಮ್ಯಾನುಭೂತಿ (empathy) ಇರುವುದೇ ನಿಜವಾದ ಅಹಿಂಸೆ. ಮಾತಿಗಿಂತ ಕೃತಿಯಲ್ಲಿ ನಿಜವಾದ ಅಹಿಂಸೆಯನ್ನು ಅಳವಡಿಸಿಕೊಂಡಲ್ಲಿ ಅದುವೇ ನಿಜದ ಮಹಾವೀರ ಜಯಂತಿ.
ಸೋಮವಾರ, ಡಿಸೆಂಬರ್ 23, 2024
ಹಸುರು ಹೊನ್ನು
"ಹಸುರು ಹೊನ್ನು" ತಿರುಳಿಗೆ ಅನ್ವರ್ಥ ಶೀರ್ಷಿಕೆ. ನನ್ನ ಹಾಗೂ ವಿಜ್ಞಾನದ್ದು ಸದಾ ಛತ್ತೀಸ್ ಕಾ ಆಖಡಾ. ಅದರಲ್ಲೂ ಭೌತ ಮತ್ತು ರಸಾಯನ ಶಾಸ್ತ್ರಗಳದ್ದು ಚರಮ ಸೀಮೆ. ಇದ್ದುದರಲ್ಲಿ ಜೀವಶಾಸ್ತ್ರವೊಂದೇ ಒಂದಿಷ್ಟು ಕೈ ಹಿಡಿಯುವುದೆನ್ನಿ. ವಿಜ್ಞಾನದ ನಂಟೇ ಹತ್ತನೇ ತರಗತಿವರೆಗೆ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಎಂಬ ವರ್ಗೀಕರಣವಿಲ್ಲದೇ ಜೀವಶಾಸ್ತ್ರ ಎಂಬೊಂದೇ ವಿಷಯ ಓದಿದ ನನಗೆ ಈ ವರ್ಗೀಕರಣದ ಒಂದಿಷ್ಟು ಸ್ಪಷ್ಟನೆ ಸಿಕ್ಕಿದ್ದು ಮಾಸ್ಟರ್ ಡಿಗ್ರಿ ಅವಧಿಯಲ್ಲಿ. ನಮ್ಮ ಡಿಪಾರ್ಟ್ಮೆಂಟು ಹಾಗೂ ಪ್ರಾಣಿಶಾಸ್ತ್ರ ವಿಭಾಗ ಒಂದೇ ಬಿಲ್ಡಿಂಗಿನಲ್ಲಿದ್ದ ಕಾರಣ ಈ ಸ್ಪಷ್ಟನೆ ಸಿಕ್ಕಿತೆನ್ನಿ.
ಇಂತಹ ನನಗೆ ಮತ್ತೆ ಜೀವವಿಜ್ಞಾನ ಯಾನ ಮಾಡುವ ಅವಕಾಶ ಈ ಪುಸ್ತಕದಿಂದ ಒದಗಿಬಂತು. ಕೆಲವಷ್ಟು ಪರಿಚಿತ ಸಸ್ಯಗಳ ಸಂಪೂರ್ಣ ಹಿನ್ನೆಲೆಯ ಜೊತೆಗೆ ಹಲವಷ್ಟು ಹೊಸ ಹೊಸ ಸಸ್ಯ ಪ್ರಭೇದಗಳ ಪರಿಚಯವಾಯಿತು. ಮಲೆನಾಡಿನಲ್ಲಿ ದಿನನಿತ್ಯ ನಾವು ನೋಡುವ, ಕಳೆಯೆಂದೋ ಅಥವಾ ಉಪಯೋಗವಿಲ್ಲದ್ದೆಂದೋ ಭಾವಿಸುವ ಹಲವು ಸಸ್ಯಗಳ ಆರೋಗ್ಯ ಸಂಬಂಧಿ ಹಾಗೂ ರಾಸಾಯನಿಕ ಉಪಯೋಗಗಳ ಬಗ್ಗೆಯೂ ಒಂದಿಷ್ಟು ಜ್ಞಾನ ದಕ್ಕಿತು. ವೈಜ್ಞಾನಿಕ ಆಧಾರದಲ್ಲಿ ಮಾಹಿತಿಗಳನ್ನು ತುಂಬಿಸಿಕೊಂಡ ಹೊತ್ತಿಗೆಯಾದರೂ ಬಿ ಜಿ ಎಲ್ ಸ್ವಾಮಿಯವರ ಸ್ವಾರಸ್ಯಕರ ನಿರೂಪಣಾ ಶೈಲಿಯಿಂದ ಪುಸ್ತಕ ಆರಾಮವಾಗಿ ಓದಿಸಿಕೊಳ್ಳುತ್ತದೆ. ಪಠ್ಯ ಪುಸ್ತಕ ಓದಿದ ಅನುಭವ ಕೊಡದೆಯೇ ಪಠ್ಯಕ್ಕಿಂತ ಆಳವಾದ ಮಾಹಿತಿಗಳನ್ನು ಮನದಟ್ಟು ಮಾಡಿಸುವ ಶೈಲಿ ಮುದ ಕೊಡುತ್ತದೆ. ಜೊತೆಗೆ ಸಸ್ಯಗಳ ನಿಖರ ಸ್ವರೂಪ ತಿಳಿಯಲು ಸ್ವಾಮಿಯವರೇ ರಚಿಸಿದ ರೇಖಾಚಿತ್ರಗಳು ಪುಸ್ತಕದುದ್ದಕ್ಕೂ ಇವೆ.
ಸಸ್ಯ ಜಗತ್ತಿನ ಪರ್ಯಟನೆಯೊಂದಿಗೇ ಪ್ರಾಧ್ಯಾಪಕನ ಬದುಕಿನ ಜಂಜಾಟಗಳನ್ನೂ ಅಷ್ಟೇ ವಿನೋದದಲ್ಲಿ ಅಕ್ಷರಗಳಿಗಿಳಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. ಪ್ರಾಂಶುಪಾಲರು ಹಾಗೂ ಕಛೇರಿ ಸಿಬ್ಬಂದಿಗಳೊಂದಿಗಿನ 'ಮಧುರಾನುಬಂಧ', ಫೀಲ್ಡ್ ವಿಸಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಒದಗುವ 'ಅಪೂರ್ವ' ತಲೆಶೂಲೆಗಳು, ಪ್ರಯಾಣದ 'ಸುಖಾನುಭವ'....... ಎಲ್ಲವನ್ನೂ ಸ್ವಾಮಿಯವರ ಲಘು ಹಾಸ್ಯ ಶೈಲಿಯಲ್ಲಿ ಓದುವುದೇ ಚೆಂದ. ಜೊತೆಗೆ ಪ್ರತೀ ಸಸ್ಯದ ವಿವರಣೆಯಲ್ಲೂ ವೇದೋಪನಿಷತ್ತುಗಳಲ್ಲಿ ಆ ಸಸ್ಯದ ಬಗ್ಗೆ ಸಿಗಬಹುದಾದ ಒಕ್ಕಣೆಗಳು, ಕನ್ನಡ, ತಮಿಳು, ತೆಲುಗು ಕವಿಗಳು ಅದನ್ನು ತಮ್ಮ ಕಾವ್ಯಗಳಲ್ಲಿ ಹೇಗೆ ನಿರೂಪಿಸಿರುವರೆಂಬ ಲಾಲಿತ್ಯಮಯ ಮಾಹಿತಿಗಳನ್ನು ಕೂಡಾ ಸ್ವಾಮಿಯವರು ನೀಡುತ್ತಾರೆ. ಕನ್ನಡದಷ್ಟೇ ಅಧಿಕಾರಯುತವಾಗಿ ತಮಿಳು ಸಾಹಿತ್ಯದ ಬಗ್ಗೆ, ನಟ್ರಿಣೈ, ಕುರುಂತೊಗೈ , ಶಿಲಪ್ಪದಿಗಾರಂ, ಅಗನಾನೂರು಼ ಮೊದಲಾದ ಸಂಗಂ ಸಾಹಿತ್ಯದ ಕ್ಲಾಸಿಕ್ ಕೃತಿಗಳನ್ನೂ ಉಲ್ಲೇಖಿಸಿರುವುದು ಅವರ ಓದಿನ ಹರವಿಗೆ, ವಿಸ್ತಾರಕ್ಕೆ ಸಾಕ್ಷಿ. ಯಾವುದೇ ಪೂರ್ವ ಜ್ಞಾನವಿಲ್ಲದೇ ಸಸ್ಯಶಾಸ್ತ್ರದ ಬಗ್ಗೆ ಒಂದಿಷ್ಟು ತಿಳುವಳಿಕೆ ಪಡೆಯಲಿಚ್ಚಿಸುವವರಿಗೆ ಈ ಪುಸ್ತಕ ಉತ್ತಮ ಆಯ್ಕೆ.
(ಅಂದಹಾಗೆ ಈ ಪುಸ್ತಕದ ಎರಡು ಅಧ್ಯಾಯಗಳು - 'ಮಾಧವೀಲತೆ' ಮತ್ತು 'ಸಾರ್ಕೆಂಡ್ರಾ' ನಮಗೆ ಪದವಿಪೂರ್ವ ಕಾಲೇಜಿನ ಕನ್ನಡ ಪಠ್ಯದ ಭಾಗವಾಗಿತ್ತು ಕೂಡಾ)
ಬುಧವಾರ, ಡಿಸೆಂಬರ್ 4, 2024
ಅಂದೊಂದಿತ್ತು ಕಾಲ......
ಬಾಲ್ಯ...... ಪ್ರತೀ ವ್ಯಕ್ತಿಯೂ ತನ್ನ ಜೀವಿತಾವಧಿಯಲ್ಲಿ ಪದೇಪದೇ ಮೆಲುಕು ಹಾಕುವ, ಆ ಕ್ಷಣಗಳು ಮರಳಿ ಸಿಗಬಾರದೇ ಎಂದು ಹಂಬಲಿಸುವ ಕಾಲಘಟ್ಟ. ಚಿಂತೆಗಳ ಹಂಗಿಲ್ಲದೇ ಬಾನಾಡಿಯಂತೆ ಸ್ವಚ್ಛಂದವಾಗಿ ವಿಹರಿಸುವ ರಮ್ಯಕಾಲವದು. ಆ ಬಾಲ್ಯವೆಂಬ ಹೊತ್ತಿಗೆಯಲ್ಲಿನ ಒಂದು ಬಹುಮೂಲ್ಯ ಅಧ್ಯಾಯ ಅಜ್ಜಿಮನೆಯೆಂಬ ಮಾಯಾಲೋಕ.


ವಾರ್ಷಿಕ ಪರೀಕ್ಷೆಯ ಗೊಡವೆ ಕಳೆದು ಬೇಸಿಗೆ ರಜೆ ಕಾಲಿಟ್ಟಿತೆಂದರೆ ಸಾಕು.... ಪ್ರತಿ ಸಂಜೆ ತಡಬೆಯೇರಿ ನಿಂತು ಅಜ್ಜನ ದಾರಿ ಕಾಯುವುದೇ ನಿತ್ಯಕಾಯಕ. ಎಂದು ಯಾವ ಬಸ್ಸೇರಿ ಅಜ್ಜ ಬಂದಾನೋ, ಎಂದು ನಾವು ಮೂವರು ಅಜ್ಜಿಯೂರಿಗೆ ಹೋಗಿ ತಲುಪಿಯೇವೋ ಎಂಬ ನಿರೀಕ್ಷೆ. ಕೊನೆಗೊಮ್ಮೆ ನಮ್ಮ ನಿರೀಕ್ಷೆ ಫಲಿಸಿ ಅಜ್ಜ ಬಿಳಿ ಪಂಜೆ, ಬಿಳಿ ಷರಟಿನಲ್ಲಿ ತಡಬೆಯೆದುರು ನಿಂತನೆಂದರೆ ನಮ್ಮಿಬ್ಬರನ್ನು ಹಿಡಿಯುವವರುಂಟೇ. ಅಜ್ಜ ಮನೆಯ ಜಗಲಿಯೇರುವ ಮುನ್ನವೇ 'ಅಜ್ಜಾ......ಯಾವಾಗ ಕರ್ಕೊಂಡು ಹೋಗ್ತೀ ನಮ್ಮನ್ನ' ಎನ್ನುವುದೊಂದೇ ನಮ್ಮ ವರಾತ. ವರ್ಷಕ್ಕೊಮ್ಮೆ ಮಗಳ ಮನೆಗೆ ಬಂದಿಳಿಯುವ ಅಜ್ಜನದೋ ಅಲ್ಲಿನ ನೆಂಟರಿಷ್ಟರನ್ನೆಲ್ಲಾ ಒಮ್ಮೆ ಮಾತನಾಡಿಸುವ ರಿವಾಜು. ಎರಡ್ಮೂರು ದಿನಗಳ ಅಜ್ಜನ ತಿರುಗಾಟ ನಮ್ಮ ಪಾಲಿಗೆ ಯುಗ ಯುಗಗಳ ಹೆಣಗಾಟ. ಕೊನೆಗೊಮ್ಮೆ 'ನಾಳೆ ಬೆಳಗ್ಗಿನ ಮೊದಲ ಬಸ್ಸಿಗೇ ಹೊರಟು ಬಿಡೋದು' ಎಂದು ಅಮ್ಮ ಅಜ್ಜ ಉದ್ಘೋಷಿಸಿದ ಕ್ಷಣ ನಮ್ಮ ಅಂಗೈಯೊಳಗೆ ಆಕಾಶ. ಬ್ಯಾಗಿಗೆ ಬಟ್ಟೆಬರೆ ತುರುಕುವ ಸಂಭ್ರಮ.... ಆ ಸಂಭ್ರಮಕ್ಕೆ ವಿಘ್ನ ತರುವಂತೆ ಬೇಸಿಗೆ ರಜೆಯ ಹೋಂವರ್ಕ್ ಎಂಬ ಪೆಡಂಭೂತ.... ಆ ಭೂತದ ಭಯವನ್ನೂ ಮೆಟ್ಟಿ ನಿಲ್ಲುವ ಅಜ್ಜಿ ಮನೆಯೆಂಬ ಅಯಸ್ಕಾಂತೀಯ ಅವಧೂತ....
ನಾಳೆ ಅಜ್ಜಿ ಮನೆಗೆ ಹೊರಡುವುದೆಂದರೆ ಈ ರಾತ್ರಿ ನಿದ್ರೆ ನೈವೇದ್ಯವೇ ಸೈ. ಯಾವಾಗ ಹೊತ್ತು ಹರಿದು ಬೆಳಕಾಗುವುದೋ, ಯಾವಾಗ ನಾವು ಬಸ್ಸೇರಿ ಪಯಣ ಶುರುವಾಗುವುದೋ ಎಂಬುದೊಂದೇ ಯೋಚನೆ. ನಾಲ್ಕು ಬಸ್ಸುಗಳನ್ನು ಬದಲಿಸುವ ಪಯಣದಲ್ಲಿ ಕಿಟಕಿ ಸೀಟು ಗಿಟ್ಟಿಸಿಕೊಳ್ಳುವ ಧಾವಂತ ಹಾಗೂ ಕಿಟಕಿ ಸೀಟು ನನಗೇ ಬೇಕೆಂಬ ಹಠದ ಹೋರಾಟದ ಜೊತೆಗೆ ದಾರಿಯುದ್ದಕ್ಕೂ ಎಲ್ಲೆಲ್ಲಿ ಏನೇನು ಕುಲುಕಲು ತಿಂಡಿಗಳನ್ನು ಅಜ್ಜನಿಂದ ತೆಗೆಸಿಕೊಳ್ಳಬೇಕು ಎಂಬ ಲೆಕ್ಕಾಚಾರ, ಹಳೆ ನಗರದ ಬಸ್ಟಾಂಡಿನಲ್ಲಿನ ಹೋಟೆಲಿನಲ್ಲಿ ಐಸ್ಕ್ರಿಂ ಸಿಗುವುದೋ ಇಲ್ಲವೋ ಎಂಬ ಚಿಂತೆ...... ವಿವಿಧ ಯೋಚನೆಗಳ ಜಾಲವನ್ನು ಬಿಡಿಸಿಕೊಳ್ಳುತ್ತಾ ಕೊನೆಗೂ ನಿಟ್ಟೂರಿನಲ್ಲಿ ಬಸ್ಸಿನಿಂದ ಹೆಜ್ಜೆ ಹೊರಗಿಟ್ಟೆವೆಂದರೆ ಅದೆಂತಹ ಸಂತೋಷ. ನಿಟ್ಟೂರಿನಿಂದ ನವಿಲ್ಕೊಡಿಗೆಯ ಆ ಕಾಲ್ನಡಿಗೆಯ ಹಾದಿಯ ಸೊಬಗ ಬಣ್ಣಿಸಲು ಪದಗಳುಂಟೇ? ಹಸಿರ ರಾಶಿಯ ನಡುವಣ ಮಣ್ಣಿನ ಹಾದಿ........ ಹಾದಿಯ ಇಕ್ಕೆಲಗಳಲ್ಲಿ ನೆಲ್ಲಿ, ಬುರುಗ, ಮುಳ್ಹಣ್ಣು, ಈಚಲಹಣ್ಣು ಮೊದಲಾದವುಗಳ ಸಮೃದ್ಧ ರಾಶಿ........ ಲಕ್ಮನೆಗೊಂದು ತಿರುವು, ಕಬ್ಬಿನಕುಡಿಗೆಗಿನ್ನೊಂದು ಹಾದಿ..... ಎಲ್ಲವನ್ನು ಕಣ್ಣರಳಿಸಿ ನೋಡುತ್ತಾ ಅಜ್ಜಿಮನೆಯ ಸಮೀಪ ಬಂದೆವೆಂದರೆ ಕಣ್ಣೋಟದ ಪರಿಧಿಯುದ್ದಕ್ಕೂ ಚಾಚಿಕೊಂಡ ಶರಾವತಿಯ ನೀಲ ಪತ್ತಲ......
ಈ ಸಲ ನೀರು ಹೋದಸಲಕ್ಕಿಂತ ಹೆಚ್ಚಿದೆಯೋ ಇಲ್ಲ ಕಡಿಮೆಯೋ, ಮುಳುಗಡೆ ಸೇತುವೆ ಕಾಣುವಷ್ಟು ನೀರಿಳಿದಿದೆಯೋ ಇಲ್ಲವೋ, ಸೇತುವೆ ದಾಟಿ ಮುಂದೆ ಹೋಗುವ ಅವಕಾಶ ಈ ಬೇಸಿಗೆ ರಜೆಯಲ್ಲಿ ಶರಾವತಿ ದಯಪಾಲಿಸಿಯಾಳೋ ಇಲ್ಲವೋ ಎಂಬೆಲ್ಲ ಶಂಕೆಗಳು ಮನದೊಳಗೆ ಸುಳಿಯುವುದರಲ್ಲಿ ಅಜ್ಜಿ ಮನೆಯ ಕೆಳ ಅಂಗಳ ನಮ್ಮೆದುರು ಪ್ರತ್ಯಕ್ಷ. ಕೆಳ ಅಂಗಳಕ್ಕೆ ಎದುರಾಗಿದ್ದುದು ಅಜ್ಜನ ತಳಿಕೋಣೆ. ಕಟ್ಟೆಯ ಎತ್ತರದ ಗೋಡೆಯ ಮೇಲೆ ಮರದ ತಳಿಗಳನ್ನೇ ವಿಶಾಲ ಗೋಡೆಯಂತೆ ಒಳಗೊಂಡ, ಮನೆಗೆ ಯಾರೇ ಬಂದರೂ ಮೊದಲು ಕಾಣುವ ತಳಿಕೋಣೆ ಆಗ ನಮ್ಮೆಲ್ಲರ ಆಟದ ಹಾಟ್ ಸ್ಪಾಟ್. ಕೆಳ ಅಂಗಳ ಬಳಸಿ ಐದಾರು ಮೆಟ್ಟಿಲುಗಳನ್ನೇರಿದರೆ ಮೇಲಂಗಳ. ಅಂಗಳದ ಎದುರೊಂದು ಟಿವಿ ಡಿಶ್, ಡಿಶ್ ನೇರಕ್ಕೆ ಎದುರಿನ ಕಡಿಮಾಡು. ಕಡಿಮಾಡಿನ ಎರಡೂ ಬದಿ ಅಡಿಕೆ ಸಂಗ್ರಹಣೆಗಾಗಿಟ್ಟ ಬಿದಿರಿನ ತಟ್ಟಿಯ ಸಂಗ್ರಹಗಾರಗಳು ಮತ್ತೊಂದು ದೊಡ್ಡ ಮರದ ಪತ್ತಾಸು. ಇವುಗಳ ನಡುವೆ ಮನೆಯ ಹಜಾರ ಪ್ರವೇಶಿಸುವ ಮೆಟ್ಟಿಲುಗಳು. ಮೆಟ್ಟಿಲನ್ನೇರಿದರೆ ಉದ್ದದ ಹಜಾರ. ಈ ಹಜಾರದಲ್ಲೇ ಸದಾ ನಮ್ಮ ಸಂಚಾರ...... ಯಾಕೆ ಎಂದಿರಾ? ಕನ್ನಡಿ ಎಂಬ ದೇವಿ ಹಾಗೂ ಟಿವಿ ಎಂಬ ಮಾಯಾವಿ ಇದ್ದದ್ದೇ ಈ ಹಜಾರದಲ್ಲಲ್ಲವೇ...... ಅಲ್ಲಿಂದ ಮತ್ತೆ ಮಧ್ಯದಲ್ಲಿನ ಮೂರ್ನಾಲ್ಕು ಮೆಟ್ಟಿಲೇರಿದರೆ ನಡುಮನೆ,ಅದರ ಬಲಭಾಗಕ್ಕೊಂದು ಕೋಣೆ, ಆ ಕೋಣೆಯ ಬದಿಯಲ್ಲೇ ದೇವರ ಗೂಡು. ಈ ಕೋಣೆಯ ಮೂಲೆಯಲ್ಲೊಂದು ಕಪಾಟು. ಆ ಕಪಾಟಿನೊಳಗೋ ಆ ಕಾಲದ ಶ್ರೇಷ್ಠ ಹಿಂದಿ ಗೀತೆಗಳ ಕ್ಯಾಸೆಟ್ಟುಗಳ ರಾಶಿ. ಕಪಾಟು ಮತ್ತು ದೇವರ ಗೂಡಿನ ನಡುವಿನ ಜಾಗದಲ್ಲಿ ಮಂಚದ ಮೇಲೆ ರಾಶಿ ರಾಶಿ ಹಾಸಿಗೆ, ತೆಳು ಹೊದಿಕೆಗಳು ಹಾಗೂ ಕಂಬಳಿಗಳು. ಕೋಣೆಗೆ ಅಂಟಿಕೊಂಡಂತೆ ಬಲಭಾಗಲ್ಲೊಂದು ಸಣ್ಣ ಕಡಿಮಾಡು, ಅದರಾಚೆಗೊಂದು ಸಣ್ಣ ಅಂಗಳ ಅದರೆದುರು, ಕಡಿಮಾಡಿಗೆ ಅಂಟಿಕೊಂಡ ಉದ್ದಾನುದ್ದ ಕೊಟ್ಟಿಗೆ.
ನಡು ಮನೆಯಿಂದ ಮತ್ತೆ ಏಳೆಂಟು ಮೆಟ್ಟಿಲು ಇಳಿದರೆ ರಸಮನೆ...... ಅಷ್ಟುದ್ದ ಅಗಲದ ಅಡುಗೆ ಕೋಣೆ ಮತ್ತೆಂದೂ ಕಂಡ ನೆನಪಿಲ್ಲ ನನಗೆ. ಬಲಭಾಗದಲ್ಲಿ ಉದ್ದಕಟ್ಟೆ, ಎಡಮೂಲೆಯ ಕೆಳಬದಿಯಲ್ಲಿ ಒಲೆ, ಅಡುಗೆಮನೆಗೆ ಶೋಭೆಯಂತಿದ್ದ ಮರದ ಪಾತ್ರೆ ಸಂಗ್ರಹಣಗಾರಗಳು, ಕಪಾಟು ಮೆಟ್ಟಿಲಿನ ಬಲಕ್ಕಾದರೆ, ಮೆಟ್ಟಿಲ ಎಡಕ್ಕೆ ದೊಡ್ಡ ಊಟದ ಮೇಜು, ಅದರ ಮೇಲೊಂದು ರೇಡಿಯೋ, ಅದರಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆ, ಚಿತ್ರಗೀತೆಗಳು ಎಲ್ಲಕ್ಕೂ ಪ್ರಮುಖವಾಗಿ ಕ್ರಿಕೆಟ್ ಕಾಮೆಂಟರಿಗಳು ....... ಇನ್ನೊಂದು ಬದಿಯಲ್ಲಿದ್ದ ರುಬ್ಬುವ ಕಲ್ಲು, ಆ ಕಲ್ಲಿನಲ್ಲಿ ತಯಾರಾಗುತ್ತಿದ್ದ ರಾಗಿ, ಎಳ್ಳು, ಹೆಸರು ಮೊದಲಾದವುಗಳ ಶರಬತ್ತು...... ನಾವು ಹೆಣ್ಮಕ್ಕಳೆಲ್ಲ ಸೇರಿ ಅರೆಯುತ್ತಿದ್ದ ಮದರಂಗಿ........ ಅಡುಗೆ ಮನೆಯ ಹೊರಗೆ ಮತ್ತೊಂದು ದೊಡ್ಡ ಕಡಿಮಾಡು. ಅಲ್ಲೇ ಬಚ್ಚಲು, ಪಾತ್ರೆ ಬಟ್ಟೆ ತೊಳೆಯುವ ಕಲ್ಲು, ನೀರೊಲೆ, ಸೌದೆ ಕೊಟ್ಟಿಗೆ. 24*7 ಸದಾ ಸುರಿಯುತ್ತಲೇ ಇರುತ್ತಿದ್ದ ನೀರು, ಹಂಡೆಯಲ್ಲಿ ಸದಾ ಸಿದ್ಧವಿರುತ್ತಿದ್ದ ಬಿಸಿ ನೀರು, ಕೊಟ್ಟಿಗೆಯಲ್ಲಿನ ಲೆಕ್ಕವಿಲ್ಲದಷ್ಟು ದನಕರುಗಂಟಿಗಳು, ಅಂಕೆಯಿಲ್ಲದ ಆಟ ಬೆಟ್ಟಗುಡ್ಡಗಳ ಅಲೆದಾಟ, ಕೋಡೆಗದ್ದೆಯಲ್ಲಿನ ಎಳೆ ಸವತೇ ಕಳ್ಳತನ, ಹಿನ್ನೀರ ಹರವಿನುದ್ದ ನಿರಂತರ ಸಂ'ಶೋಧನೆ'..........
ಅಜ್ಜಿಮನೆಯೆಂಬ ಅಯಸ್ಕಾಂತದ ಸೆಳೆತಕ್ಕೆ ಸಿಕ್ಕಲು ಇನ್ನೇನು ಬೇಕು? ಬೇಸಿಗೆ ರಜೆಗಳಲ್ಲಿ ನಾವು ಮಾಡುತ್ತಿದ್ದ ಮೋಜು ಮಸ್ತಿ ಮುಂದಿನ ಒಂದಿಡೀ ವರ್ಷದ ಕಾಯುವಿಕೆಗೆ ದಿವ್ಯೌಷಧವಾಗಿತ್ತು. ಗುಡ್ಡದ ಬದಿಯಲ್ಲೊಂದು ಆಡಮನೆ ಕಟ್ಟಿಸಿ ಮೆರೆದ್ದಿದ್ದೆಷ್ಟು? ಅಂಗಳದ ಮೂಲೆಯಲ್ಲಿ ಮಣ್ಣಿನ ಒಲೆ ಹಚ್ಚಿ ಅಡುಗೆ ಮಾಡಿದ್ದೆಷ್ಟು? ಬಾದಾಮಿ ಕಾಯಿಗಳನ್ನು ಜಜ್ಜಿ ತಿಂದದೆಷ್ಟು? ಪೇರಲೆ ಹುಳಿಗಾಯಿಗಳನ್ನು ಉರುಳಿಸಿದ್ದೆಷ್ಟು? ಚಿಕ್ಕು ಪನ್ನೇರಲಗಳನ್ನು ಬಡಚಿದ್ದೆಷ್ಟು? ಗೇರು ಮರದಡಿಯಲ್ಲಿನ ಪೀಠಗಳನ್ನು ಆಯ್ದದ್ದೆಷ್ಟು? ತೋಟದಲ್ಲಿನ ಅಡಿಕೆ ಮರಗಳ ಸುತ್ತಳತೆ ಮಾಡಿದ್ದೆಷ್ಟು? ಅಂಗಳದಲ್ಲಿ ಒಣಗಿಸುತ್ತಿದ್ದ ಹಪ್ಪಳ ಸಂಡಿಗೆಗಳ ಕಳ್ಳತನವೆಷ್ಟು..........? ಹೀಗೇ ಮೆಲುಕುಹಾಕುತ್ತಾ ಸಾಗಿದರೆ ಎಂದಿಗೂ ಮುಗಿಯಲಾರದಷ್ಟು ನೆನಹುಗಳ ಕಣಜವಿದೆ ಮನದ ಖಜಾನೆಯೊಳಗೆ. ಪದಗಳಲ್ಲಿ ಸೆರೆಹಿಡಿದು ವಾಕ್ಯಗಳೆಂಬ ಸರಪಳಿಯಲ್ಲಿ ಬಂಧಿಸಲಾದೀತೇ ಆ ನೆನಹುಗಳ?
ಈ ನೆನಪುಗಳೆಲ್ಲದರ ಕೇಂದ್ರದಲ್ಲಿದ್ದದ್ದು ವರ್ಷಕ್ಕೊಮ್ಮೆ ಬರುವ ಅಜ್ಜನೆಂಬ ಮಾಯಾವಿ ಮತ್ತೆ ಆತನಿಗಿಂತ ಮುಖ್ಯವಾಗಿ ಶರಾವತಿಯ ಹಿನ್ನೀರಿನ ಆ ವಿಶಾಲ ಮನೆಯ ಬಾಗಿಲಲ್ಲೇ ನಮ್ಮನ್ನು ಎದುರುಗೊಳ್ಳುತ್ತಿದ್ದ ಅಜ್ಜಿಯೆಂಬ ಅದ್ಭುತ. ಅಜ್ಜಿಯಿಲ್ಲದೇ ಅಜ್ಜಿ ಮನೆಗೇನು ಸೊಗಸು ಅಲ್ಲವೇ? ಅಜ್ಜಿಯೆಂದರೆ ಒಂಥರಾ ಯಕ್ಷಿಣಿಯಂತೆ. ಮನೆಯ ಸಕಲ ಕಾರ್ಯಕಲಾಪಗಳ ರೂವಾರಿ ಆಕೆ. ಮನೆಯ ದೈನಂದಿನ ಚಟುವಟಿಕೆಗಳ ಜೀವನಾಡಿಯಾಗಿದ್ದುಕೊಂಡೇ ಅಡುಗೆ ಕೋಣೆಯ ದಿನಸಿ ಸಾಮಾನುಗಳ ದಾಸ್ತಾನು ವಿವರದಿಂದ ಹಿಡಿದು ತೋಟದ ಕೆಲಸದಾಳುಗಳ ಊಟೋಪಚಾರ ಮೇಲುಸ್ತುವಾರಿ, ಕೊಟ್ಟಿಗೆಯ ಸದಸ್ಯರ ಸ್ವಾಸ್ಥ್ಯ, ಹಿತ್ತಲು ಕೋಡೆಗದ್ದೆಗಳಲ್ಲಿನ ಕಾಯಿಪಲ್ಲೆಗಳ ಯೋಗಕ್ಷೇಮ, ವಾಟೆಹುಳಿ ಸಂಸ್ಕರಣೆ, ಹಪ್ಪಳ ಬಾಳಕಗಳ ಕಾಯಕ, ಗೇರುಬೀಜಗಳ ವಿಲೇವಾರಿ....... ಆಕೆ ವಹಿಸುತ್ತಿದ್ದ ಪಾತ್ರಗಳಿಗೆ ಸೀಮೆಯಿತ್ತೇನು?
ನಾವು ಮೊಮ್ಮಕ್ಕಳ ಕಣ್ಣಿಗೆ ಅಜ್ಜಿ ಒಮ್ಮೆ ನಾಯಕಿಯಾದರೆ ಮಗದೊಮ್ಮೆ ಖಳನಾಯಕಿ. ಬೆಳ್ಳಂಬೆಳಿಗ್ಗೆ ದೊಡ್ಡ ತಪ್ಪಲೆಯಲ್ಲಿ ಹಬೆಯಾಡುವ ಬೆಲ್ಲದ ಕಾಫಿಯ ರುಚಿ ನಾಲಿಗೆಯಲ್ಲಿ ಮೆರೆವಾಗ ಅಜ್ಜಿ ಅಮೃತಮಯಿ. ದೋಸೆಯ ಹಿಟ್ಟನ್ನು ಎದುರಿಟ್ಟುಕೊಂಡು ಒಲೆಯೆದುರು ಅಜ್ಜಿ ಕೂತಳೆಂದರೆ ಸಾಕ್ಷಾತ್ ಅನ್ನಪೂರ್ಣೆಯೇ. ಆದರೆ ಆಟವಾಡಲು ಬಿಡದಂತೆ ಬೆನ್ನು ಬಿದ್ದು ಸ್ನಾನಕ್ಕೆ ಅಟ್ಟುವಾಗ, ತಲೆತುಂಬಾ ಎಣ್ಣೆ ಸುರಿದು ಮೆತ್ತುವಾಗ, ಇಳಿಸಂಜೆಯ ಹೊಳೆಬದಿಯ ತಿರುಗಾಟಗಳಿಗೆ ಅಡ್ಡಿಯಾದಾಗಲೆಲ್ಲ ಅಜ್ಜಿಯೊಬ್ಬ ಗುಮ್ಮನೆನಿಸಿದ್ದೂ ಇದೆ. ಒಟ್ಟಿನಲ್ಲಿ ಆಕೆಯೊಂದು ಅಚ್ಚರಿ ಅಷ್ಟೇ.
ನಿಜ ಹೇಳಬೇಕೆಂದರೆ ನಮ್ಮ ಬದುಕಿನ ಮೊತ್ತಮೊದಲ ಆದಾಯ ಗಳಿಕೆಯ ರೂವಾರಿಯೂ ಆಕೆಯೇ. ಬೇಸಿಗೆ ರಜೆಗಳಲ್ಲಿ ಮನೆಗೆ ಬರುತ್ತಿದ್ದ ಮೊಮ್ಮಕ್ಕಳಿಗೆಲ್ಲ ಬೆಳ್ಳಂಬೆಳಿಗ್ಗೆ ಗೇರುಬೀಜ ಸಂಗ್ರಹಿಸುವ ಕಾಯಕ ಕಲಿಸಿದ್ದ ಅಜ್ಜಿ ರಜೆ ಮುಗಿಸಿ ಹಿಂದಿರುಗುವಾಗ ನಮ್ಮನಮ್ಮ ಪೂಂಜಿಯ ಹಣವನ್ನು ಕೈಗಿತ್ತು ಅದರ ಮೇಲೊಂದಿಷ್ಟು ಅಜ್ಜಿ ಕಾಣಿಕೆಯನ್ನೂ ಕೊಟ್ಟು ಕಳಿಸುತ್ತಿದ್ದ ದಿನಗಳಲ್ಲಿ ಅದೆಷ್ಟು ಉತ್ಸಾಹ, ಸಂತೋಷವಿತ್ತು.
ಕಾಲ ಕಳೆಯಿತು..... ಬಾಲ್ಯ ಗತಕಾಲದ ಪದರದಲ್ಲಿ ಕಳೆದುಹೋಯಿತು. ನಾವು ಬೆಳೆದಂತೆ ಬದುಕಿನ ರೀತಿ ನೀತಿಗಳೂ ಬೆಳೆದು ಬದಲಾದವು. ಓಡುವ ಬದುಕಿನ ಸಾವಿರ ಆಕರ್ಷಣೆಗಳ ಸಿಕ್ಕಿನೊಳಗೆ ಅಜ್ಜಿ ಮನೆಯ ಸೆಳೆತ ಕಿರಿದಾಯಿತು. ವರ್ಷಕ್ಕೊಮ್ಮೆ ಅಜ್ಜಿ ಮನೆಯಲ್ಲಿ ಒಟ್ಟಾಗಿ ತಿಂಗಳುಗಟ್ಟಲೇ ಕೂಡಿ ಆಡುತ್ತಿದ್ದ ಸಂಬಂಧಗಳು ಯಾವುದೋ ಸಭೆ ಸಮಾರಂಭಗಳ ಒಂದೆರಡು ಗಂಟೆಯ ಉಭಯ ಕುಶಲೋಪರಿಯಲ್ಲಿ ಸಮಾಪ್ತವಾಗತೊಡಗಿದವು. ಕೈಹಿಡಿಸಿ ಊರಿಗೆ ಕರೆದೊಯ್ಯಲು ಬರುತ್ತಿದ್ದ ಅಜ್ಜ ಅಂತರ್ಧಾನನಾದ. ಚಿಕ್ಕಿಯಂದಿರ ಮದುವೆಯಾಯಿತು. ಸದಾ ಗಲಗಲ ಎನ್ನುತ್ತಿದ್ದ ಅಜ್ಜಿಮನೆಯ ಸ್ವರೂಪ ಬದಲಾಯಿತು. ಹಳೆಯ ವಿಶಾಲ ಹಜಾರ ಕಡಿಮಾಡುಗಳ ಮನೆ ಇಂದು ಆಧುನಿಕ ಸ್ವರೂಪ ಪಡೆದುಕೊಂಡಿದೆ. ಕೊಟ್ಟಿಗೆ ತುಂಬಿಕೊಂಡಿರುತ್ತಿದ್ದ ಮಲ್ನಾಡುಗಿಡ್ಡಗಳ ಸ್ಥಾನವನ್ನು ಬೆರಳೆಣಿಕೆಯ ಜಾತಿಹಸುಗಳು ಆಕ್ರಮಿಸಿಕೊಂಡಿವೆ. ಪೇರಲೆ, ಚಿಕ್ಕು ಪನ್ನೇರಲಗಳೆಲ್ಲೋ ಬಲ್ಲೆಯೊಳಗೆ ಅಸ್ತವಾಗಿವೆ. ಶರಾವತಿಯ ಹಿನ್ನೀರಿನ ಬದಿಯಲ್ಲಿನ ಬೇಸಿಗೆ ಕಾಲದ ಕೋಡೆಗದ್ದೆಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ. ನೀರಿಳಿದಾಗ ಆಕೆಯ ಒಡಲಲ್ಲಿ ಗೋಚರಿಸುವ ಗತಕಾಲದ ಮೂಕಾವಶೇಷಗಳನ್ನು ವೀಕ್ಷಿಸಲು ಈಗಲ್ಲಿ ಹಾದಿಯಿಲ್ಲ. ಮನೆಯ ಮುಂಬದಿ ಹಿಂಬದಿಯ ಸಣ್ಣಪುಟ್ಟ ಗುಡ್ಡಗಳಲ್ಲಿ ಓಡಾಡುವವರಿಲ್ಲದೇ ಕಾಲುಹಾದಿಗಳೆಲ್ಲ ಸುಳಿವಿಲ್ಲದಂತೆ ಮರೆಯಾಗಿವೆ.